Home Blog Page 2

ಗುಣಮಟ್ಟ ಇಲ್ಲದಿದ್ದರೆ ಬಿಲ್ ಇಲ್ಲ! ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಕ್ರೀಡಾ ಇಲಾಖೆಯಡಿ ಕೈಗೊಳ್ಳಲಾಗುತ್ತಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ತೃಪ್ತಿಕರವಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಕ್ರೀಡಾಂಗಣ ನಿರ್ವಹಣಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ಅನುದಾನವನ್ನು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು. ಕಾಮಗಾರಿ ಪೂರ್ಣಗೊಂಡಿದೆ ಎಂಬ ಕಾರಣಕ್ಕೆ ಮಾತ್ರ ಪಾವತಿ ಮಾಡದೆ, ಗುಣಮಟ್ಟ, ನಿರ್ಮಾಣದ ಸ್ಥಿರತೆ ಹಾಗೂ ಸಾರ್ವಜನಿಕ ಬಳಕೆಗೆ ಯೋಗ್ಯವಾಗಿರುವುದನ್ನು ಪರಿಶೀಲಿಸಿದ ಬಳಿಕವೇ ಅಂತಿಮ ಪಾವತಿಗೆ ಅನುಮೋದನೆ ನೀಡಬೇಕು ಎಂದು ತಿಳಿಸಿದರು.

ಜಿಲ್ಲೆಯ ಕ್ರೀಡಾಂಗಣಗಳು ಕೇವಲ ಕ್ರೀಡಾ ಸ್ಪರ್ಧೆಗಳಿಗೆ ಸೀಮಿತವಾಗದೆ, ಪ್ರತಿನಿತ್ಯ ಸಾರ್ವಜನಿಕರ ವಾಯುವಿಹಾರ, ಯುವಕರ ದೈಹಿಕ ವ್ಯಾಯಾಮ ಹಾಗೂ ಕ್ರೀಡಾಪಟುಗಳ ತರಬೇತಿಗೆ ಪೂರಕವಾಗುವಂತೆ ಅಭಿವೃದ್ಧಿಪಡಿಸಬೇಕು. ಕ್ರೀಡಾಂಗಣಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ಹಾಗೂ ಬೆಳಕಿನಂತಹ ಮೂಲಸೌಲಭ್ಯಗಳ ನಿರ್ವಹಣೆಗೆ ಆದ್ಯತೆ ನೀಡುವಂತೆ ಸೂಚಿಸಿದರು.

ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಮಕ್ಕಳಿಗೂ ಸರ್ಕಾರದ ಕ್ರೀಡಾ ಸೌಲಭ್ಯಗಳು ಸಮರ್ಪಕವಾಗಿ ತಲುಪಬೇಕು. ಉತ್ತಮ ಮೂಲಸೌಕರ್ಯ ಹಾಗೂ ತರಬೇತಿಯ ಮೂಲಕ ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಕ್ರೀಡಾಂಗಣಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ, ಬಾಕಿ ಉಳಿದಿರುವ ಕಾಮಗಾರಿಗಳು, ನಿರ್ವಹಣಾ ಸ್ಥಿತಿ ಹಾಗೂ ಲಭ್ಯವಿರುವ ಸೌಲಭ್ಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.

ತಾಲೂಕು ಮಟ್ಟದ ಕ್ರೀಡಾಂಗಣಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಆಯಾ ತಾಲೂಕುಗಳ ಕ್ರೀಡಾಂಗಣಗಳ ಉಸ್ತುವಾರಿಯನ್ನು ಸಂಬಂಧಿತ ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳಿಗೆ ವಹಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಸಭೆಯ ಆರಂಭದಲ್ಲಿ ವಿಷಯವಾರು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಎಸ್.ಎಸ್. ಕಲ್ಮನಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ, ಸಿಪಿಐ ಎಲ್.ಕೆ. ಜೂಲಕಟ್ಟಿ, ಜಿಲ್ಲಾ ಕ್ರೀಡಾಂಗಣ ನಿರ್ವಹಣಾ ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

“ಕಾಮಗಾರಿ ಪೂರ್ಣಗೊಂಡಿದೆ ಎಂಬ ಕಾರಣಕ್ಕೆ ಬಿಲ್ ಬಿಡುಗಡೆ ಮಾಡಬೇಡಿ, ಅಧಿಕಾರಿಗಳು ಖುದ್ದು ಪರಿಶೀಲಿಸಿದ ಬಳಿಕವೇ ಪಾವತಿಗೆ ಅನುಮೋದನೆ ನೀಡಿ.”

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ

ನಶೆ ತೊರೆದು ರಾಷ್ಟ್ರ ನಿರ್ಮಾಣದತ್ತ ಹೆಜ್ಜೆಯಿಡಿ: ಲೋಕೇಶ್ ಕುಮಾರ್

0

ವಿಜಯಸಾಕ್ಷಿ ಸುದ್ದಿ, ಗದಗ: ಯುವಕರು ರಾಷ್ಟ್ರದ ಶಕ್ತಿ ಮತ್ತು ಭವಿಷ್ಯದ ಆಶಾಕಿರಣ. ನಶೆಯಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಿದಾಗ ಮಾತ್ರ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಸಾಧ್ಯ ಎಂದು ಮೈ ಭಾರತ್ ಕೇಂದ್ರದ ಡೆಪ್ಯುಟಿ ಡೈರೆಕ್ಟರ್ ಲೋಕೇಶ್ ಕುಮಾರ್ ಹೇಳಿದರು.

ನಗರದ ಆದರ್ಶ ಶಿಕ್ಷಣ ಸಮಿತಿಯ ಸುವರ್ಣ ಮಹೋತ್ಸವ ಭವನದಲ್ಲಿ ಮೈ ಭಾರತ್ ಕೇಂದ್ರ, ಗದಗ ಹಾಗೂ ಎಎಸ್‌ಎಸ್ ಪದವಿ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ‘ನಶಾ ಮುಕ್ತ ಯುವ–ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮದ್ಯಪಾನ, ಧೂಮಪಾನ ಹಾಗೂ ವಿವಿಧ ಮಾದಕ ವಸ್ತುಗಳ ವ್ಯಸನ ಯುವಜನರನ್ನು ಆಕರ್ಷಿಸುತ್ತಿದ್ದು, ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೊತೆಗೆ ಶಿಕ್ಷಣ, ಉದ್ಯೋಗ ಹಾಗೂ ಕುಟುಂಬದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಯುವಕರು ಕ್ರೀಡೆ, ಯೋಗ, ವ್ಯಾಯಾಮ ಹಾಗೂ ಸಾಮಾಜಿಕ ಸೇವೆಯಂತಹ ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವ್ಯಸನಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಕುಟುಂಬ, ಶಿಕ್ಷಣ ಸಂಸ್ಥೆಗಳು, ಸರ್ಕಾರ ಹಾಗೂ ಸಮಾಜದ ಸಹಭಾಗಿತ್ವ ಅಗತ್ಯ. ಪೋಷಕರು ಮಕ್ಕಳೊಂದಿಗೆ ಉತ್ತಮ ಸಂವಹನ ಬೆಳೆಸಬೇಕು. ಶಿಕ್ಷಕರು ಉತ್ತಮ ಮೌಲ್ಯಗಳನ್ನು ಬೆಳೆಸಲು ಪ್ರೇರೇಪಿಸಬೇಕು. “ನಶಾ ಮುಕ್ತ ಯುವ–ಬಲಿಷ್ಠ ಭಾರತ” ಎಂಬ ಗುರಿಯನ್ನು ಪ್ರತಿಯೊಬ್ಬ ಯುವಕ-ಯುವತಿ ತಮ್ಮ ಜೀವನದ ಧ್ಯೇಯವಾಗಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಚಿತ್ರಕಲೆ, ಜನಪದ ಗೀತೆ, ಶಾಸ್ತ್ರೀಯ ನೃತ್ಯ, ನಾಟಕ, ರೀಲ್ಸ್, ಘೋಷವಾಕ್ಯ, ಬರವಣಿಗೆ, ಕವಿತೆ ಹಾಗೂ ಭಾಷಣ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳು ನಡೆದವು. ಜಿಲ್ಲೆಯ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಸ್ಪರ್ಧೆಗೆ ಶುಭ ಹಾರೈಸಲಾಯಿತು.

ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎ.ಡಿ. ಗೋಡಕಿಂಡಿ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿ.ಟಿ. ನಾಯ್ಕರ್, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ. ಬಿ.ಪಿ. ಜೈನರ, ಮೈ ಭಾರತ್ ಕಚೇರಿಯ ರವಿ ಹೊಂಬಾಳಿ ಹಾಗೂ ತೀರ್ಪುಗಾರರಾದ ವೀರೇಂದ್ರಗೌಡ ಪಾಟೀಲ, ಶ್ರೀನಿವಾಸ್ ಬಡಿಗೇರ್, ರೇವತಿ ಗೌಳಿ, ನಾಗರಾಜ ಸುರಳಿಕೇರಿ, ಡಾ. ವಿ.ಟಿ. ನಾಯ್ಕರ್, ಪ್ರೊ. ಪರಶುರಾಮ ಕಟ್ಟಿಮನಿ ಸೇರಿದಂತೆ ವಿವಿಧ ಕಾಲೇಜುಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ನಶೆಯಿಂದ ದೂರವಿರುವ ಪ್ರತಿಯೊಬ್ಬ ಯುವಕ ತನ್ನ ಕುಟುಂಬಕ್ಕೂ, ಸಮಾಜಕ್ಕೂ ಹಾಗೂ ರಾಷ್ಟ್ರಕ್ಕೂ ಅಮೂಲ್ಯ ಆಸ್ತಿಯಾಗುತ್ತಾನೆ.”

– ಲೋಕೇಶ್ ಕುಮಾರ್, ಡೆಪ್ಯುಟಿ ಡೈರೆಕ್ಟರ್, ಮೈ ಭಾರತ್ ಕೇಂದ್ರ, ಗದಗ

ಕಾರ್ಗಿಲ್ ವೀರರಿಗೆ ಗೌರವ ನಮನ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: “ದೇಶ ನನಗೆ ಏನು ಕೊಟ್ಟಿದೆ ಎಂದು ಕೇಳುವುದಕ್ಕಿಂತ, ದೇಶಕ್ಕಾಗಿ ನಾನು ಏನು ಕೊಡುಗೆ ನೀಡಿದ್ದೇನೆ ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ದೇಶಸೇವೆಗೆ ಸದಾ ಸಿದ್ಧರಾಗಿರುವ ಮನೋಭಾವವನ್ನು ಯುವಕರು ಬೆಳೆಸಿಕೊಳ್ಳಬೇಕು” ಎಂದು ಕಾರ್ಗಿಲ್ ಯುದ್ಧದಲ್ಲಿ ಸೇವೆ ಸಲ್ಲಿಸಿದ ಮಾಜಿ ಯೋಧ ಎ.ಬಿ. ಹೆಸರೂರ ಹೇಳಿದರು.

ಪಟ್ಟಣದ ಎಫ್.ಎಂ. ಡಬಾಲಿ ಪದವಿಪೂರ್ವ ಮಹಾವಿದ್ಯಾಲಯದ ರೇಂಜರ್ಸ್ ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಹಾಗೂ ಪೋಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶ ಸೇವೆ ಸಲ್ಲಿಸುವ ಅವಕಾಶ ದೊರೆತದ್ದು ತಮ್ಮ ಬದುಕಿನ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ತಾಯಿಯಷ್ಟೇ ತಾಯ್ನಾಡೂ ಅಮೂಲ್ಯವಾಗಿದ್ದು, ಅದರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಇಂಡಿಯನ್ ಏರ್ ಫೋರ್ಸ್‌ನಲ್ಲಿ 20 ವರ್ಷ ಸೇವೆ ಸಲ್ಲಿಸಿದ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಡಿ.ಪಿ. ಪವಾರ್ ಮಾತನಾಡಿ, ತಾಯ್ನಾಡಿನ ಸೇವೆ ಸಲ್ಲಿಸಿದ ಬಳಿಕ ಶಿಕ್ಷಣ ಕ್ಷೇತ್ರದಲ್ಲಿಯೂ ಸೇವೆ ಮಾಡುವ ಅವಕಾಶ ದೊರೆತಿರುವುದು ತಮ್ಮ ಬದುಕಿನ ಸೌಭಾಗ್ಯವಾಗಿದೆ. ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಯೋಧರಾದ ಎ.ಬಿ. ಹೆಸರೂರ ಹಾಗೂ ಡಿ.ಪಿ. ಪವಾರ್ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ದಿನಾಚರಣೆಯ ಅಂಗವಾಗಿ ಗಂಗವ್ವ ಬಸಪ್ಪ ಬಡ್ಡೆಪ್ಪನವರ ಅವರನ್ನೂ ಸನ್ಮಾನಿಸಲಾಯಿತು.

ರೇಂಜರ್ಸ್ ಘಟಕದ ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮಿ ಡೊಳ್ಳಿನ, ಸ್ನೇಹಾ ಮುಳುಗುಂದ ಹಾಗೂ ಚೈತ್ರಾ ಲಮಾಣಿ ಕಾರ್ಗಿಲ್ ವಿಜಯ ದಿವಸದ ಮಹತ್ವ ಕುರಿತು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಕುಟುಂಬ ಮೌಲ್ಯಗಳ ಅರಿವು ಮೂಡಿಸುವ ಉದ್ದೇಶದಿಂದ “ವಂಶವೃಕ್ಷ” ವಿಷಯದ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ವಿಜಯಲಕ್ಷ್ಮಿ ಡೊಳ್ಳಿನ ಪ್ರಥಮ, ಅಪ್ಸಾನಾ ತಹಸೀಲ್ದಾರ್ ದ್ವಿತೀಯ ಹಾಗೂ ಸುಮಯ್ಯ ಡಾಲಾಯತ್ ತೃತೀಯ ಸ್ಥಾನ ಪಡೆದರು. ಲಿಂಗಮ್ಮ ಮಾದರ ಮತ್ತು ಸಿಮ್ರಾನ್ ಒಂಟಿಯವರ ಸಮಾಧಾನಕರ ಬಹುಮಾನ ಪಡೆದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಭಜಂತ್ರಿ ಮಾತನಾಡಿ, ದೇಶದ ಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಯುವಜನರಲ್ಲಿ ರಾಷ್ಟ್ರಪ್ರೇಮ ಮತ್ತು ಸೇವಾ ಮನೋಭಾವ ಬೆಳೆಸುವ ಇಂತಹ ಕಾರ್ಯಕ್ರಮಗಳು ಅತ್ಯಂತ ಅರ್ಥಪೂರ್ಣವಾಗಿವೆ ಎಂದರು.

ರೇಂಜರ್ಸ್ ಘಟಕದ ಲೀಡರ್ ಹಾಗೂ ಕಾರ್ಯಕ್ರಮದ ಆಯೋಜಕಿ ಸುಧಾ ಹುಚ್ಚಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಐದು ವರ್ಷಗಳಿಂದ ರೇಂಜರ್ಸ್ ಘಟಕ ವಿದ್ಯಾರ್ಥಿಗಳಲ್ಲಿ ಶಿಸ್ತು, ಪ್ರಾಮಾಣಿಕತೆ, ಸೇವಾ ಮನೋಭಾವ ಮತ್ತು ರಾಷ್ಟ್ರಪ್ರೇಮ ಬೆಳೆಸುವ ನಿಟ್ಟಿನಲ್ಲಿ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎನ್. ಹನುಮರಡ್ಡಿ, ಪಿ.ಎನ್. ಕುಲಕರ್ಣಿ, ಎಂ.ಎಂ. ನದಾಫ್, ವೈ.ಎಸ್. ಪಂಗಣ್ಣವರ, ಪಿ.ವಿ. ಹೊಸೂರು, ನೀಲಕಂಠ ಕಂಕನವಾಡಿ, ರೇಂಜರ್ಸ್ ಘಟಕದ ವಿದ್ಯಾರ್ಥಿನಿಯರು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ದೇಶಕ್ಕಾಗಿ ಸೇವೆ ಸಲ್ಲಿಸುವುದೇ ಪ್ರತಿಯೊಬ್ಬ ಭಾರತೀಯನ ಅತ್ಯುನ್ನತ ಕರ್ತವ್ಯ. ಯುವಕರು ರಾಷ್ಟ್ರಪ್ರೇಮವನ್ನು ಜೀವನದ ಮೌಲ್ಯವನ್ನಾಗಿ ಬೆಳೆಸಿಕೊಳ್ಳಬೇಕು.”

– ಎ.ಬಿ. ಹೆಸರೂರ, ಕಾರ್ಗಿಲ್ ಯುದ್ಧದ ಮಾಜಿ ಯೋಧ

ಜಾನಕಿ ಹಾಡುಗಳ ಸುಮಧುರ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಚಿತ್ರರಂಗದಲ್ಲಿ ಹಾಡುಗಳು ಕೇವಲ ಮನರಂಜನೆಯ ಮಾಧ್ಯಮವಲ್ಲ. ಅವು ಭಾವಾಭಿವ್ಯಕ್ತಿ, ಕಥಾನಿರೂಪಣೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಪ್ರಮುಖ ಸಾಧನಗಳಾಗಿವೆ. ನಾಲ್ಕು ದಶಕಗಳಿಗೂ ಅಧಿಕ ಚಿತ್ರಗೀತೆಗಳಿಗೆ ದನಿಯಾಗಿ ಎಸ್. ಜಾನಕಿ ಅವರು ಜನಮನದಲ್ಲಿ ಅಚ್ಚಳಿಯದ ಸ್ಥಾನ ಗಳಿಸಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗಾನಕೋಗಿಲೆ ಎಸ್. ಜಾನಕಿ ಅವರ ಸ್ಮರಣಾರ್ಥ ಆಯೋಜಿಸಿದ್ದ ‘ಸಂಗೀತ ಸಂಜೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚಿತ್ರಗೀತೆಗಳು ಸಿನಿಮಾಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಅನೇಕ ಚಿತ್ರಗಳಿಗೆ ಹೆಸರು ಹಾಗೂ ಅಪಾರ ಜನಪ್ರಿಯತೆ ತಂದುಕೊಟ್ಟಿವೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಹಾಡುವ ಮೂಲಕ ಎಸ್. ಜಾನಕಿ ಅವರು ಸಂಗೀತಾಸಕ್ತರ ಭಾವಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಉಪನಿರ್ದೇಶಕ ಎಸ್.ಡಿ. ಗಾಂಜಿ ಮಾತನಾಡಿ, ಹಾಡುಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಜನಪದ ಗೀತೆಗಳು ಗ್ರಾಮೀಣ ಬದುಕಿನ ಮೌಲ್ಯಗಳನ್ನು ಉಳಿಸಿ ಬೆಳೆಸಿವೆ. ಗಾಯನ, ನೃತ್ಯ ಹಾಗೂ ದೃಶ್ಯ ಸಂಯೋಜನೆಯ ಮೂಲಕ ಚಿತ್ರಗೀತೆಗಳು ಪ್ರೇಕ್ಷಕರಿಗೆ ವಿಶಿಷ್ಟ ಅನುಭೂತಿಯನ್ನು ನೀಡುತ್ತವೆ ಎಂದು ಹೇಳಿದರು.

ಅದ್ವೈತ ಶಿವಪೂರ ಕೊಳಲು ವಾದನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಕಲಾವಿದರಾದ ಶ್ರೀನಿವಾಸ ಕುಲಕರ್ಣಿ, ಶಿಲ್ಪಾ ಕುರಹಟ್ಟಿ ಹಾಗೂ ರಾಹುಲ ರಾಠೋಡ ಅವರು ಎಸ್. ಜಾನಕಿ ಹಾಡಿದ ಜನಪ್ರಿಯ ಗೀತೆಗಳನ್ನು ಪ್ರಸ್ತುತಪಡಿಸಿ ಸಂಗೀತಾಸಕ್ತರ ಮೆಚ್ಚುಗೆ ಗಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮೂವರು ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.

ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ರಾಹುಲ ಗಿಡ್ನಂದಿ ವಂದಿಸಿದರು.

ಕಾರ್ಯಕ್ರಮದಲ್ಲಿ ಡಾ. ಜಿ.ಬಿ. ಪಾಟೀಲ, ಶಶಿಕಾಂತ ಕೊರ್ಲಹಳ್ಳಿ, ವಿ.ಎಸ್. ದಲಾಲಿ, ಶೈಲಶ್ರೀ ಕಪ್ಪರದ, ಸಿ.ಎಂ. ಮಾರನಬಸರಿ, ರತ್ನಾ ಪುರಂತರ, ಶೈಲಜಾ ಗಿಡ್ನಂದಿ, ರಾಜಶೇಖರ ಕರಡಿ ಸೇರಿದಂತೆ ಸಾಹಿತ್ಯಾಸಕ್ತರು ಹಾಗೂ ಸಂಗೀತ ಪ್ರೇಮಿಗಳು ಉಪಸ್ಥಿತರಿದ್ದರು.

“ಚಿತ್ರಗೀತೆಗಳು ಕೇವಲ ಮನರಂಜನೆಯ ಸಾಧನವಲ್ಲ, ಭಾವನೆಗಳ ಸೇತುವೆಯಾಗಿವೆ. ಎಸ್. ಜಾನಕಿ ತಮ್ಮ ಗಾಯನದ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದಿದ್ದಾರೆ.”

– ವಿವೇಕಾನಂದಗೌಡ ಪಾಟೀಲ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಯಶಸ್ವಿಗೊಳಿಸಿ: ಡಾ. ಕಲ್ಮೇಶ ಹಾವೇರಿಪೇಠ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಆಗಸ್ಟ್ 22 ಹಾಗೂ 23ರಂದು ಆಯೋಜಿಸಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ–2026ವನ್ನು ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಹಾಗೂ ತಂತ್ರಜ್ಞರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಮಂಡಳಿಯ ಕಾರ್ಯಾಧ್ಯಕ್ಷ ಡಾ. ಕಲ್ಮೇಶ ಹಾವೇರಿಪೇಠ ಕರೆ ನೀಡಿದರು.

ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪೂರ್ವಭಾವಿ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಚಲನಚಿತ್ರೋತ್ಸವದ ಯಶಸ್ವಿ ಆಯೋಜನೆಗಾಗಿ ವಿವಿಧ ಕಾರ್ಯಕಾರಿ ಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳ ಹಂಚಿಕೆ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಡಳಿಯ ಅಧ್ಯಕ್ಷ ಮಂಜುನಾಥ ಹಗೇದಾರ ಮಾತನಾಡಿ, ಮಂಡಳಿ ಇನ್ನಷ್ಟು ಕ್ರಿಯಾಶೀಲವಾಗಲು ಪ್ರತಿಯೊಬ್ಬ ಸದಸ್ಯರ ಸಹಕಾರ ಅಗತ್ಯ. ನಾಲ್ಕು ನೂರಕ್ಕೂ ಹೆಚ್ಚು ನಿರ್ಮಾಪಕರು ಸಂಘದ ಸದಸ್ಯರಾಗಿದ್ದು, ಚಿತ್ರ ನಿರ್ಮಾಣಕ್ಕೆ ಮಂಡಳಿ ಅಗತ್ಯ ಸಹಕಾರ ನೀಡಲಿದೆ. ಈಗಾಗಲೇ ಹಲವು ಸದಸ್ಯರು ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದು, ನೋಂದಾಯಿತ ಸದಸ್ಯರಿಗೆ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಚಲನಚಿತ್ರ ಸಹನಿರ್ದೇಶಕ ದೀಪಕ ಇಂಡಿ, ನಿರ್ದೇಶಕ ಶಾಂತಕುಮಾರ ಪಾಟೀಲ, ಕಲಾವಿದ ಜೂನಿಯರ್ ರಾಜಕುಮಾರ ಪ್ರಕಾಶ ರಾಜಕುಮಾರ ಬಡ್ನಿ, ದ್ಯಾಪೂರ ಸರ್, ರಾಜೀವಸಿಂಗ್ ಹಲವಾಯಿ, ಪ್ರೇಮಾ ನಡುವಿನಮನಿ, ವಿಕ್ರಮ್ ಕುಮಠಾ, ಜೂನಿಯರ್ ಉಪೇಂದ್ರ ಬಾಬು ಸೇರಿದಂತೆ ವಿಜಯಪುರ, ಬಾಗಲಕೋಟ, ಬೆಳಗಾವಿ, ಇಂಡಿ ಮತ್ತಿತರ ಭಾಗಗಳಿಂದ ಆಗಮಿಸಿದ್ದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಹಾಗೂ ತಂತ್ರಜ್ಞರು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಹಂಚಿಕೊಂಡರು.

ಮಂಡಳಿಯಿಂದ ಸದಸ್ಯರಿಗೆ ಕಲ್ಪಿಸಲಾಗುತ್ತಿರುವ ವಿವಿಧ ಸೌಲಭ್ಯಗಳ ಕುರಿತು ಪ್ರಧಾನ ಕಾರ್ಯದರ್ಶಿ ರಾಹುಲ್ ದತ್ತಪ್ರಸಾದ ಮಾಹಿತಿ ನೀಡಿದರು.

ಇದೇ ವೇಳೆ ಡಾ. ಕಲ್ಮೇಶ ಹಾವೇರಿಪೇಠ ಅವರ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಶುಭ ಕೋರಲಾಯಿತು.

ಸಲಹಾ ಮಂಡಳಿ ಸದಸ್ಯರಾದ ಅನಿಶ್ ಭರೂದವಾಲೆ, ಮಮ್ಮಿಗಟ್ಟಿ ಹಾಗೂ ಡಾ. ಪ್ರಭು ಗಂಜಿಹಾಳ ಚಿತ್ರೋತ್ಸವದ ಮಹತ್ವ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಭು ಹಂಚಿನಾಳ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಅರವಿಂದ ಮುಳಗುಂದ ವಂದಿಸಿದರು.

“ಉತ್ತರ ಕರ್ನಾಟಕದ ಚಿತ್ರರಂಗದ ಬೆಳವಣಿಗೆಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಹತ್ವದ ವೇದಿಕೆಯಾಗಿದ್ದು, ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು.”

– ಡಾ. ಕಲ್ಮೇಶ ಹಾವೇರಿಪೇಠ, ಕಾರ್ಯಾಧ್ಯಕ್ಷರು

ಗುರುಭಕ್ತಿ, ನಾಮಸ್ಮರಣೆ ಬದುಕಿನ ನಿಜವಾದ ದಾರಿ: ಡಾ. ಎಸ್.ಬಿ. ಶೆಟ್ಟರ

0

ವಿಜಯಸಾಕ್ಷಿ ಸುದ್ದಿ, ಗದಗ: ಗುರುನಲ್ಲಿ ಸಂಪೂರ್ಣ ಶರಣಾಗತಿ, ನಿರಂತರ ನಾಮಸ್ಮರಣೆ ಹಾಗೂ ಆತ್ಮಜ್ಞಾನವೇ ಮನುಷ್ಯನ ಬದುಕಿನ ನಿಜವಾದ ದಾರಿಯಾಗಿದೆ. ಕಾಯ, ವಾಚ, ಮನಸ್ಸಿನ ತ್ರಿಕರಣ ಶುದ್ಧಿಯೊಂದಿಗೆ ಪರಮಾತ್ಮನ ನಾಮಸ್ಮರಣೆ ಮಾಡಿದಾಗ ಮಾತ್ರ ಮಾಯೆಯನ್ನು ಜಯಿಸಲು ಸಾಧ್ಯ ಎಂದು ಚಿಂತಕ ಹಾಗೂ ವೈದ್ಯ ಡಾ. ಎಸ್.ಬಿ. ಶೆಟ್ಟರ ಹೇಳಿದರು.

ಗುರುಪೂರ್ಣಿಮೆ ಅಂಗವಾಗಿ ಗದಗ-ಬೆಟಗೇರಿ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ವತಿಯಿಂದ ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಶ್ರೀ ಸಾಯಿ ಸಚ್ಚರಿತ್ರೆ’ ಪ್ರವಚನ ಮಾಲಿಕೆ-8ರಲ್ಲಿ ಅವರು ಮಾತನಾಡಿದರು.

ಭಕ್ತಿ, ತಾಳ್ಮೆ ಹಾಗೂ ಸಂಪೂರ್ಣ ಶರಣಾಗತಿ ಹೊಂದಿದವರನ್ನು ಸದ್ಗುರು ಎಂದಿಗೂ ಕೈಬಿಡುವುದಿಲ್ಲ. ಸಂಕಷ್ಟಗಳು ಎಷ್ಟೇ ದೊಡ್ಡದಾಗಿದ್ದರೂ ಗುರುಕೃಪೆಯಿಂದ ಅವು ದೂರವಾಗುತ್ತವೆ. ಸಾಯಿಬಾಬಾರ ಲೀಲೆಗಳು ಭಕ್ತರಲ್ಲಿ ಆತ್ಮವಿಶ್ವಾಸ, ನಂಬಿಕೆ ಹಾಗೂ ಸತ್ಸಂಕಲ್ಪವನ್ನು ಬೆಳೆಸುತ್ತವೆ ಎಂದು ಹೇಳಿದರು.

ಸಾಯಿಬಾಬಾರವರು ತಮ್ಮ ಮಹಾಸಮಾಧಿಯ ಸಮಯವನ್ನು ಮುಂಚಿತವಾಗಿಯೇ ಸೂಚಿಸಿದ್ದರು. ವಿಜಯದಶಮಿಯಂದು ಲಕ್ಷ್ಮೀಬಾಯಿಗೆ ಒಂಬತ್ತು ರೂಪಾಯಿಗಳನ್ನು ದಕ್ಷಿಣೆಯಾಗಿ ನೀಡಿ ನವವಿಧ ಭಕ್ತಿಯ ಸಂದೇಶ ಸಾರಿದ ಅವರು, ಬಳಿಕ ತಮ್ಮ ದೇಹವನ್ನು ಬೂಟಿವಾಡಾದಲ್ಲಿ ಸಮಾಧಿ ಮಾಡುವಂತೆ ಭಕ್ತರಿಗೆ ಸೂಚಿಸಿದ್ದರು ಎಂದು ವಿವರಿಸಿದರು.

ಬಾಬಾರವರ ದೇಹತ್ಯಾಗದ ಸಂದರ್ಭದಲ್ಲಿ ಅವರ ದೇಹದಿಂದ ಹೊರಹೊಮ್ಮಿದ ಜ್ಯೋತಿ ನಾಲ್ಕು ಭಾಗಗಳಾಗಿ ವಿಭಜನೆಗೊಂಡು ಗುರುಸ್ಥಾನ, ದ್ವಾರಕಾಮಾಯಿ, ಚಾವಡಿ ಹಾಗೂ ಬೂಟಿವಾಡಾಕ್ಕೆ ತೆರಳಿದೆಯೆಂಬ ಪರಂಪರಾಗತ ನಂಬಿಕೆಯನ್ನು ಉಲ್ಲೇಖಿಸಿದ ಅವರು, ಇಂದಿಗೂ ಈ ನಾಲ್ಕು ಪವಿತ್ರ ಸ್ಥಳಗಳಲ್ಲಿ ಬಾಬಾರವರ ಸಾನ್ನಿಧ್ಯವನ್ನು ಭಕ್ತರು ಅನುಭವಿಸುತ್ತಿದ್ದಾರೆ ಎಂದರು.

ಭಕ್ತನ ಶ್ರದ್ಧೆ ಮತ್ತು ನಂಬಿಕೆಯ ಮೇಲೆಯೇ ಸಾಯಿಬಾಬಾರವರ ಅನುಗ್ರಹ ಅವಲಂಬಿತವಾಗಿದೆ. ಗುರುವಿನ ಮೇಲೆ ಅಚಲ ವಿಶ್ವಾಸ ಹೊಂದಿದವರಿಗೆ ದೈವಾನುಗ್ರಹ ದೊರೆಯುತ್ತದೆ ಎಂದು ಹೇಳಿದ ಅವರು, ಸಂತಾನ ಭಾಗ್ಯವಿಲ್ಲದ ದಂಪತಿಗೆ ಸಾಯಿಬಾಬಾರವರು ಆಶೀರ್ವದಿಸಿದ ಸಚ್ಚರಿತ್ರೆಯ ಪ್ರಸಂಗವನ್ನು ಉದಾಹರಿಸಿದರು.

ಪ್ರವಚನದ ಅಂತ್ಯದಲ್ಲಿ ಆದಿ ಶಂಕರಾಚಾರ್ಯರ ನಿರ್ವಾಣ ಷಟ್ಕ ಶ್ಲೋಕಗಳನ್ನು ಉಲ್ಲೇಖಿಸಿ, “ನಾನು ಯಾರು?” ಎಂಬ ಆತ್ಮವಿಚಾರವೇ ಆತ್ಮಸಾಕ್ಷಾತ್ಕಾರಕ್ಕೆ ದಾರಿಯಾಗಿದೆ. ದೇಹ ನಶ್ವರವಾದರೂ ಆತ್ಮ ಶಾಶ್ವತವಾಗಿದ್ದು, ಭಕ್ತಿ, ಪ್ರೀತಿ, ಧ್ಯಾನ, ವೈರಾಗ್ಯ ಹಾಗೂ ಆತ್ಮಜ್ಞಾನವೇ ಆಧ್ಯಾತ್ಮಿಕ ಬದುಕಿನ ಮೂಲಾಧಾರಗಳಾಗಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಸಾದದ ಭಕ್ತಿ ಸೇವೆ ಸಲ್ಲಿಸಿದ ಡಾ. ನಿರಜ ಶೆಟ್ಟರ, ಡಾ. ಎಸ್.ಡಿ. ಯರಗೇರಿ, ರುದ್ರಪ್ಪ ಅರಳಿ, ಚೇತನ ಧನ್ನೂರಹಿರೇಮಠ, ಗಂಗಾಧರ ಅಬ್ಬಿಗೇರಿ, ಮಲ್ಲಿಕಾರ್ಜುನ ಸರ್ವಿ, ಪೂಜಾ ಗೌರಿಪುರ, ವಿಜಯಮಹಾಂತೇಶ ಕೋಟಿ, ಗಾಯತ್ರಿ ಕಾತರಕಿ, ಬಸವರಾಜ ಚಿನ್ನಾಪೂರ ಹಾಗೂ ರತ್ನಾ ಮುಗಳಿ ಅವರನ್ನು ಸನ್ಮಾನಿಸಲಾಯಿತು.

ಮಹೇಶಗೌಡ ತಲೆಗೌಡ್ರ ಸ್ವಾಗತಿಸಿದರು. ಸದಾಶಿವಪ್ಪ ವಾಲಿ ವಂದಿಸಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಇಂದು ಗುರುಪೂರ್ಣಿಮೆ ವಿಶೇಷ ಆಚರಣೆ

ಜುಲೈ 29ರಂದು ಗುರುಪೂರ್ಣಿಮೆ ಅಂಗವಾಗಿ ಬೆಳಿಗ್ಗೆ 6 ಗಂಟೆಗೆ ಕಾಕಡ ಆರತಿ, ಬಳಿಕ ಮಂಗಳಸ್ನಾನ, ರುದ್ರಾಭಿಷೇಕ ಹಾಗೂ ಅಲಂಕಾರ ಪೂಜೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಪಂಚಾರತಿ, ಪುಷ್ಪಾರ್ಚನೆ ಹಾಗೂ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 5 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸೂರ್ಯಾಸ್ತದ ಬಳಿಕ ಧೂಪಾರತಿ, ಪಲ್ಲಕ್ಕಿ ಉತ್ಸವ ಹಾಗೂ ರಾತ್ರಿ 10 ಗಂಟೆಗೆ ಶೇಜಾರತಿ ನಡೆಯಲಿದೆ.

“ಗುರುನಲ್ಲಿ ಸಂಪೂರ್ಣ ಶರಣಾಗತಿ, ನಿರಂತರ ನಾಮಸ್ಮರಣೆ ಮತ್ತು ಆತ್ಮಜ್ಞಾನವೇ ಮನುಷ್ಯನ ಬದುಕಿನ ನಿಜವಾದ ದಾರಿ.”

– ಡಾ. ಎಸ್.ಬಿ. ಶೆಟ್ಟರ, ಚಿಂತಕ ಹಾಗೂ ವೈದ್ಯ

ಪತ್ರಿಕೋದ್ಯಮ ಕೇವಲ ವೃತ್ತಿಯಲ್ಲ, ಅದು ಸಾಮಾಜಿಕ ಜವಾಬ್ದಾರಿ: ಅರುಣ ಕುಲಕರ್ಣಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪತ್ರಿಕೋದ್ಯಮ ಕೇವಲ ವೃತ್ತಿಯಲ್ಲ, ಅದು ಸಮಾಜದ ಮೇಲಿನ ಮಹತ್ತರ ಜವಾಬ್ದಾರಿಯಾಗಿದೆ. ಪತ್ರಕರ್ತರು ಸತ್ಯ, ನಿಷ್ಪಕ್ಷಪಾತ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಅಳವಡಿಸಿಕೊಂಡು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹಿರಿಯ ಪತ್ರಕರ್ತ ಅರುಣ ಕುಲಕರ್ಣಿ ಹೇಳಿದರು.

ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹಿರೆಅಳಗುಂಡಿಯ ಚನ್ನು ಪಾಟೀಲ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ 1843ರ ಜುಲೈ 1ರಂದು ಮಂಗಳೂರಿನಲ್ಲಿ ಪ್ರಕಟವಾಗಿದ್ದು, ಅದರ ಸ್ಮರಣಾರ್ಥವಾಗಿ ಪ್ರತಿ ವರ್ಷ ಜುಲೈ 1ರಂದು ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತದೆ. ಕನ್ನಡದ ಮೊದಲ ಪತ್ರಿಕೆಯನ್ನು ಹರ್ಮನ್ ಮೊಗ್ಲಿಂಗ್ ಆರಂಭಿಸಿದ್ದರು ಎಂದು ಅವರು ತಿಳಿಸಿದರು.

ಪತ್ರಿಕಾ ದಿನಾಚರಣೆಯ ಉದ್ದೇಶ ಪತ್ರಕರ್ತರ ಸೇವೆಯನ್ನು ಗೌರವಿಸುವುದು, ಪತ್ರಿಕೋದ್ಯಮದ ಇತಿಹಾಸವನ್ನು ಸ್ಮರಿಸುವುದು ಹಾಗೂ ಸತ್ಯನಿಷ್ಠ, ನಿಷ್ಪಕ್ಷಪಾತ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ಉತ್ತೇಜನ ನೀಡುವುದಾಗಿದೆ ಎಂದು ಹೇಳಿದರು.

ಪತ್ರಕರ್ತರು ಸತ್ಯ ಮತ್ತು ನಿಖರತೆ, ನಿಷ್ಪಕ್ಷಪಾತತೆ, ಸಾಮಾಜಿಕ ಹೊಣೆಗಾರಿಕೆ, ಜನರ ಧ್ವನಿಗೆ ಧ್ವನಿಯಾಗುವುದು, ಸುಳ್ಳು ಸುದ್ದಿಯಿಂದ ದೂರವಿರುವುದು, ನೈತಿಕತೆ, ಗೌಪ್ಯತೆ, ಕಾನೂನಿಗೆ ಗೌರವ ಹಾಗೂ ಸಂವೇದನಾಶೀಲ ವರದಿಗಾರಿಕೆ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿ 15 ರಾಜ್ಯಮಟ್ಟದ ದಿನಪತ್ರಿಕೆಗಳು ಹಾಗೂ 200ಕ್ಕೂ ಹೆಚ್ಚು ಜಿಲ್ಲಾ ಮಟ್ಟದ ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಮಾಧ್ಯಮಗಳು ಕಾರ್ಯನಿರ್ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.

ಪತ್ರಕರ್ತ ನಿಂಗರಾಜ ಬೇವಿನಕಟ್ಟಿ ಮಾತನಾಡಿ, ಸೈನಿಕರು ದೇಶದ ನಿಜವಾದ ಹೀರೋಗಳಾಗಿದ್ದು, ಅವರ ತ್ಯಾಗ ಮತ್ತು ಸೇವೆಯಿಂದಲೇ ದೇಶದ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದು ಹೇಳಿದರು.

ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸಂಗನಾಳ ಮಾತನಾಡಿ, ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ತಮ್ಮನ್ನು ಸನ್ಮಾನಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುತ್ತಣ್ಣ ಪಲ್ಲೇದ ಮಾತನಾಡಿ, ಪತ್ರಕರ್ತರು ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ಪತ್ರಿಕಾ ದಿನಾಚರಣೆಯೊಂದಿಗೆ ನಿವೃತ್ತ ಸೈನಿಕರನ್ನು ಗೌರವಿಸಿರುವುದು ಚನ್ನು ಪಾಟೀಲ ಫೌಂಡೇಷನ್‌ನ ಸಮಾಜಮುಖಿ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಬ್ರಹ್ಮಕುಮಾರಿ ಸವಿತಕ್ಕ ಮಾತನಾಡಿ, ಪರೋಪಕಾರದ ಗುಣದಿಂದ ಜೀವನ ಸಾರ್ಥಕವಾಗುತ್ತದೆ. ಇಂತಹ ಸಮಾಜಮುಖಿ ಕಾರ್ಯಕ್ರಮಕ್ಕೆ ತಮ್ಮ ಸಂಸ್ಥೆ ಸಾಕ್ಷಿಯಾಗಿರುವುದು ಸಂತಸದ ಸಂಗತಿ ಎಂದರು.

ವೇದಿಕೆಯಲ್ಲಿ ನಿವೃತ್ತ ಸೈನಿಕರ ಸಂಘದ ಗೌರವಾಧ್ಯಕ್ಷ ಶರಣಪ್ಪ ನಾಶಿಪುಡಿ ಉಪಸ್ಥಿತರಿದ್ದರು.

ಚನ್ನು ಪಾಟೀಲ ಫೌಂಡೇಷನ್‌ನ ಸಂಸ್ಥಾಪಕ ಉಮೇಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಶಿವಕುಮಾರ ದಡ್ಡೂರ ಕಾರ್ಯಕ್ರಮ ನಿರೂಪಿಸಿದರು. ಉಮೇಶ ಪಾಟೀಲ ಸ್ವಾಗತಿಸಿದರು.

“ಪತ್ರಿಕೋದ್ಯಮ ಕೇವಲ ವೃತ್ತಿಯಲ್ಲ; ಅದು ಸಮಾಜದ ಮೇಲಿನ ಜವಾಬ್ದಾರಿ. ಸತ್ಯ, ನಿಷ್ಪಕ್ಷಪಾತ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಅಳವಡಿಸಿಕೊಂಡು ಪತ್ರಕರ್ತರು ತಮ್ಮ ಕರ್ತವ್ಯ ನಿರ್ವಹಿಸಬೇಕು.”

– ಅರುಣ ಕುಲಕರ್ಣಿ, ಹಿರಿಯ ಪತ್ರಕರ್ತ

ಡಾ. ನಿಂಗು ಸೊಲಗಿ ಹೆಗಲಿಗೆ ಸಮ್ಮೇಳನದ ಹೊಣೆ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗದಗ ಜಿಲ್ಲಾ ಘಟಕದ ಆಶ್ರಯದಲ್ಲಿ ಆಗಸ್ಟ್ 1ರಂದು ಗದಗ ತಾಲೂಕಿನ ಹೊಸಳ್ಳಿ ಗ್ರಾಮದ ಜಗದ್ಗುರು ಬೂದೀಶ್ವರ ಮಠದ ಆವರಣದಲ್ಲಿ ನಡೆಯಲಿರುವ ಗದಗ ಜಿಲ್ಲಾ ದ್ವಿತೀಯ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಿಲ್ಲೆಯ ಹಿರಿಯ ಮಕ್ಕಳ ಸಾಹಿತಿ, ಚಿಂತಕ ಡಾ. ನಿಂಗು ಸೊಲಗಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಶನಿವಾರ ಸಂಜೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ನಿಯೋಗವು ಮುಂಡರಗಿಯಲ್ಲಿರುವ ಡಾ. ನಿಂಗು ಸೊಲಗಿ ಅವರ ನಿವಾಸಕ್ಕೆ ಭೇಟಿ ನೀಡಿ, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಧಿಕೃತ ಆಹ್ವಾನ ಪತ್ರ ನೀಡಿ ಗೌರವಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗಾರ, ಬಸವಾದಿ ಶರಣರ ವಿಚಾರಧಾರೆ ಹಾಗೂ ನೈತಿಕ ಮೌಲ್ಯಗಳನ್ನು ಬಾಲಮನಸ್ಸುಗಳಲ್ಲಿ ಬಿತ್ತುವ ಪವಿತ್ರ ಕಾರ್ಯವನ್ನು ಮಕ್ಕಳ ಶರಣ ಸಾಹಿತ್ಯ ಸಮ್ಮೇಳನಗಳು ಯಶಸ್ವಿಯಾಗಿ ನಿರ್ವಹಿಸುತ್ತಿವೆ. ಬಳಗಾನೂರಿನಲ್ಲಿ ಮೊದಲ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಬಳಿಕ ಇದೀಗ ಎರಡನೇ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದರು.

ಡಾ. ನಿಂಗು ಸೊಲಗಿ ಅವರು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಕ, ಸಾಹಿತಿ, ಸಂಶೋಧಕ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದು, ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಹತ್ತಕ್ಕೂ ಹೆಚ್ಚು ಕವನ ಸಂಕಲನಗಳು ಹಾಗೂ ಸಂಪಾದಿತ ಕೃತಿಗಳನ್ನು ನೀಡಿದ್ದಾರೆ. ಮಕ್ಕಳ ರಂಗಭೂಮಿ ಕುರಿತು ಸಂಶೋಧನೆ ನಡೆಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. 2014ರಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ ಎಂದು ವಿವರಿಸಿದರು.

ಸರ್ವಾಧ್ಯಕ್ಷರ ಆಹ್ವಾನ ಸ್ವೀಕರಿಸಿದ ಡಾ. ನಿಂಗು ಸೊಲಗಿ ಮಾತನಾಡಿ, ಕಳೆದ 33 ವರ್ಷಗಳಿಂದ ಮುಂಡರಗಿಯ ಜನರ ಪ್ರೀತಿ, ವಿಶ್ವಾಸ ಹಾಗೂ ಬೆಂಬಲವೇ ತಮ್ಮ ಸಾಹಿತ್ಯಿಕ ಪಯಣಕ್ಕೆ ಪ್ರೇರಣೆಯಾಗಿದೆ. ಸಮಾಜ ನೀಡಿದ ಗೌರವವನ್ನು ಸಮಾಜಕ್ಕೇ ಅರ್ಪಿಸುವ ಮನೋಭಾವದಿಂದ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ಅತ್ಯಂತ ವಿನಯದಿಂದ ಸ್ವೀಕರಿಸುತ್ತಿದ್ದೇನೆ ಎಂದು ಹೇಳಿದರು.

ಶಿರಹಟ್ಟಿ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಬೂದಪ್ಪ ಅಂಗಡಿ, ಕೋಶಾಧ್ಯಕ್ಷ ಡಿ.ಎಸ್. ಬಾಪುರೆ, ಗಜೇಂದ್ರಗಡ ತಾಲೂಕು ಅಧ್ಯಕ್ಷ ಬಸವರಾಜ ಕೊಟಗಿ, ಗದಗ ಗ್ರಾಮೀಣ ಘಟಕದ ಅಧ್ಯಕ್ಷ ಎಸ್.ಎಂ. ಮರಿಗೌಡ್ರ, ವೀರೇಶ ಬದಾಮಿ, ಕಳಕಯ್ಯ ಸಾಲಿಮಠ, ಬಿ.ಕೆ. ನಿಂಬಣಗೌಡ್ರ, ಪ್ರಸನ್ನ ಕೊಟಗಿ, ಕಾಶಿನಾಥ ಶಿರಬಡಗಿ, ಎಂ.ಜಿ. ಗಚ್ಚಣ್ಣವರ, ಎಸ್.ಎಂ. ಹೊಸಮಠ, ಎಸ್.ಸಿ. ಚಕ್ಕಡಿಮಠ, ಮಂಜುನಾಥ ತೆಗ್ಗಿನಮನಿ, ಮಂಜುನಾಥ ಇಟಗಿ, ಎಸ್.ಸಿ. ಹರ್ತಿ, ಎನ್.ಎಸ್. ಶೀರನಹಳ್ಳಿ, ಮಂಜುನಾಥ ಮುಧೋಳ, ಎಂ.ಎಸ್. ಶೀರನಹಳ್ಳಿ, ಸುರೇಶ್ ಭಾವಿಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

“ಸಮಾಜವೇ ನನಗೆ ಶಿಕ್ಷಣ ನೀಡಿದೆ, ಸಮಾಜವೇ ನನ್ನನ್ನು ಬೆಳೆಸಿದೆ. ಆದ್ದರಿಂದ ನನ್ನ ಜೀವನ ಮತ್ತು ಸಾಹಿತ್ಯದ ಸೇವೆ ಸಮಾಜಕ್ಕಾಗಿಯೇ ಮೀಸಲು.”

– ಡಾ. ನಿಂಗು ಸೊಲಗಿ, ಸರ್ವಾಧ್ಯಕ್ಷರು, ಗದಗ ಜಿಲ್ಲಾ ದ್ವಿತೀಯ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನ

ಅಮ್ಮ–ಅತ್ತೆ ಹೇಳಿದ್ದು ಸುಳ್ಳಲ್ಲ… ಒಳಕಲ್ಲಿನ ರುಚಿಯೇ ಬೇರೆ!

ವರು ಮನೆಯಲ್ಲಿ ಅಮ್ಮ, ಮದುವೆಯಾದ ಬಳಿಕ ಅತ್ತೆ… ಇಬ್ಬರ ಬಾಯಲ್ಲೂ ಒಂದೇ ಮಾತು – “ಒಳಕಲ್ಲಿನಲ್ಲಿ ರುಬ್ಬಿದ ಚಟ್ನಿಯ ರುಚಿಯೇ ಬೇರೆ… ಈಗಿನ ಮಿಕ್ಸಿ ಜಾರಿನ ಚಟ್ನಿಗೆ ಆ ಸೊಗಸೇ ಇಲ್ಲ!”

ಆಗ ಅವರ ಮಾತು ಕೇಳಿದಾಗ, “ಇದೇನು ಒಳಕಲ್ಲಿನ ಪುರಾಣ!” ಎಂದು ಮನಸ್ಸಿನಲ್ಲೇ ಗೊಣಗಿಕೊಳ್ಳುತ್ತಿದ್ದ ನಮ್ಮಂಥ ಹುಡುಗಿಯರು ಎಷ್ಟೋ ಜನ ಇರಬಹುದು.

ಕಾಲ ಬದಲಾಗುತ್ತಿದ್ದಂತೆ ಇಂದು ಒಳಕಲ್ಲು ಎಂದರೆ ಕೆಲವರು ಗೂಗಲ್‌ನಲ್ಲಿ ಹುಡುಕುವ ಪರಿಸ್ಥಿತಿ ಬಂದಿದೆ. ಆದರೆ ನಮ್ಮದು ಸಂಪ್ರದಾಯಿಕ ಕುಟುಂಬವಾಗಿದ್ದರಿಂದ ಮನೆಯಲ್ಲೊಂದು ಒಳಕಲ್ಲು ಇತ್ತು. ಅದನ್ನು ನಾನು ಎಂದಿಗೂ ಬಳಸಿರಲಿಲ್ಲ.

ಒಂದು ಭಾನುವಾರ ಇಡ್ಲಿಗೆ ಚಟ್ನಿ ಮಾಡಬೇಕೆಂದು ಸಿದ್ಧತೆ ಮಾಡಿಕೊಂಡಿದ್ದೆ. ಅಷ್ಟರಲ್ಲಿ ವಿದ್ಯುತ್ ಕೈಕೊಟ್ಟಿತು. ಕಾದು ಕಾದು ಬೇಸತ್ತು ಕೊನೆಗೆ ಒಳಕಲ್ಲಿನ ಮೊರೆ ಹೋದೆ.

ಕೊಬ್ಬರಿ, ಹುರಿದ ಕಡಲೆ, ಎಣ್ಣೆಯಲ್ಲಿ ಸ್ವಲ್ಪ ಹುರಿದ ಒಣ ಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ನೆನೆಸಿದ ಹುಣಸೆಹಣ್ಣು, ಚಿಟಿಕೆ ಬೆಲ್ಲ, ಸ್ವಲ್ಪ ಜೀರಿಗೆ… ಎಲ್ಲವನ್ನೂ ಹಾಕಿ ನಿಧಾನವಾಗಿ ರುಬ್ಬಲು ಆರಂಭಿಸಿದೆ.

ಅಬ್ಬಾ… ಮೊದಲ ಸುತ್ತಿನಲ್ಲೇ ಘಮಘಮ ಪರಿಮಳ ಮೂಗಿಗೆ ತಟ್ಟಿತು. ಆ ಸುವಾಸನೆ ತಡೆಯಲಾಗದೆ ಸ್ವಲ್ಪ ಚಟ್ನಿಯನ್ನು ರುಚಿ ನೋಡಿದೆ. ನಿಜಕ್ಕೂ ಅದ್ಭುತ! ನನ್ನ ಪತಿಯೂ ರುಚಿಯ ವ್ಯತ್ಯಾಸವನ್ನು ಗಮನಿಸಿ ಆಶ್ಚರ್ಯಪಟ್ಟರು.

ಆಗ ಅಮ್ಮ ಮತ್ತು ಅತ್ತೆ ಹೇಳುತ್ತಿದ್ದ ಒಳಕಲ್ಲಿನ ಮಹತ್ವ ಎಷ್ಟು ಸತ್ಯ ಎಂಬುದು ಅರ್ಥವಾಯಿತು. ಅಷ್ಟೇ ಅಲ್ಲ, ಬೆಳಿಗ್ಗೆ ಮಾಡಿದ ಚಟ್ನಿ ಸಂಜೆವರೆಗೂ ಕೆಡದೆ ಅದೇ ರುಚಿಯನ್ನು ಉಳಿಸಿಕೊಂಡಿತ್ತು.

ಮಿಕ್ಸಿಯಲ್ಲಿ ಹೆಚ್ಚಿನ ವೇಗದಿಂದ ಉಂಟಾಗುವ ಉಷ್ಣತೆ ಮತ್ತು ಒಳಕಲ್ಲಿನಲ್ಲಿ ನಿಧಾನವಾಗಿ, ಸಹಜವಾಗಿ ರುಬ್ಬುವ ವಿಧಾನ – ಈ ಎರಡರ ನಡುವಿನ ವ್ಯತ್ಯಾಸವನ್ನು ಆ ದಿನ ಸ್ಪಷ್ಟವಾಗಿ ಅನುಭವಿಸಿದೆ.

ತಂತ್ರಜ್ಞಾನ ನಮ್ಮ ಕೆಲಸವನ್ನು ಸುಲಭ ಮಾಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಸಂಪ್ರದಾಯದ ಕೆಲವು ವಿಧಾನಗಳು ಆಹಾರದ ರುಚಿಯನ್ನು ಮಾತ್ರವಲ್ಲ, ಅದರ ಸಹಜ ಗುಣ ಮತ್ತು ಆರೋಗ್ಯವನ್ನೂ ಕಾಪಾಡುತ್ತವೆ ಎಂಬುದನ್ನು ಒಳಕಲ್ಲಿನಲ್ಲಿ ರುಬ್ಬಿದ ಆ ಚಟ್ನಿ ಮತ್ತೊಮ್ಮೆ ನೆನಪಿಸಿತು.

ಸಂಪ್ರದಾಯವನ್ನು ಉಳಿಸಿಕೊಂಡರೆ, ರುಚಿಯೂ ಉಳಿಯುತ್ತದೆ… ಆರೋಗ್ಯವೂ ಉಳಿಯುತ್ತದೆ.

– ಪವಿತ್ರ ಬಡಿಗೇರ್

KPSC ಹಗರಣದಿಂದ ವಿದ್ಯಾರ್ಥಿಗಳಿಗೆ ಅನ್ಯಾಯ; ಸಿಎಂ ಉತ್ತರಿಸಲಿ ಎಂದ ಬಿಜೆಪಿ ಸಂಸದ!

0

ನವದೆಹಲಿ: NEET ಹಗರಣದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ಮುಖ್ಯಮಂತ್ರಿ, ಕರ್ನಾಟಕದಲ್ಲಿ ನಡೆಯುತ್ತಿರುವ KPSC ಹಗರಣದ ವಿರುದ್ಧ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಗಮನಿಸುತ್ತಿಲ್ಲವೇ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ.

ಲೋಕಸಭೆಯಲ್ಲಿ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ತಡೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ತೇಜಸ್ವಿ ಸೂರ್ಯ, ಕನ್ನಡದಲ್ಲೇ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

“ಮುಖ್ಯಮಂತ್ರಿಗಳು NEET ಹಗರಣದ ವಿರುದ್ಧ ದೆಹಲಿಗೆ ಬಂದು ಪ್ರತಿಭಟನೆ ಮಾಡುತ್ತಾರೆ. ಆದರೆ KPSC ಹಗರಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮಾಡುತ್ತಿದ್ದಾರೆ. ಅವರ ನೋವು ಮುಖ್ಯಮಂತ್ರಿಗಳಿಗೆ ಕಾಣುತ್ತಿಲ್ಲವೇ?” ಎಂದು ಪ್ರಶ್ನಿಸಿದರು.

KPSC ಹಗರಣ ಪ್ರಸ್ತಾಪ:

ಇತ್ತೀಚೆಗೆ KPSC ಅಧ್ಯಕ್ಷರನ್ನು ಅಮಾನತು ಮಾಡಲಾಗಿದ್ದು, ತಮ್ಮ ಮಕ್ಕಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಆರೋಪದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

“ವೆಟರ್ನರಿ ಕಾಲೇಜಿನಲ್ಲಿ ಒಂದು ಸೀಟಿಗೆ ₹80 ಲಕ್ಷ ವಸೂಲಿ ಮಾಡಿದ ಹಗರಣವೂ ನಡೆದಿದೆ. ಅನ್ಯಾಯಕ್ಕೊಳಗಾದ ಪ್ರತಿಯೊಬ್ಬ ವಿದ್ಯಾರ್ಥಿಯ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಈ ಎಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಉತ್ತರ ನೀಡಬೇಕು” ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಬೇಕಿರುವುದು ನ್ಯಾಯಯುತ ವ್ಯವಸ್ಥೆ:

ದೇಶದ ಯುವಕರು ರಾಜಕೀಯ ಆರೋಪ-ಪ್ರತ್ಯಾರೋಪಗಳನ್ನು ಗಮನಿಸುತ್ತಿಲ್ಲ. ಅವರಿಗೆ ನ್ಯಾಯಯುತ ಪರೀಕ್ಷಾ ವ್ಯವಸ್ಥೆ ಹಾಗೂ ಶಾಶ್ವತ ಪರಿಹಾರ ಬೇಕಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

“ಪೇಪರ್ ಲೀಕ್‌ನಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಬಡ ಮತ್ತು ಸಾಮಾನ್ಯ ಕುಟುಂಬಗಳ ಮಕ್ಕಳಿಗೆ ನ್ಯಾಯಯುತ ಪರೀಕ್ಷಾ ವ್ಯವಸ್ಥೆಯೇ ಬದುಕು ಕಟ್ಟಿಕೊಳ್ಳುವ ಪ್ರಮುಖ ಅವಕಾಶ” ಎಂದು ಹೇಳಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ:

ಪ್ರಸ್ತುತ ಶಿಕ್ಷಣ ಪದ್ಧತಿ ಮಕ್ಕಳನ್ನು ಕೇವಲ ಕಂಠಪಾಠ ಮಾಡಿ ಪರೀಕ್ಷೆ ಬರೆಯುವಂತೆ ಮಾಡುತ್ತಿದೆ. ಒಂದು ದಿನದ ಮೂರು ಗಂಟೆಗಳ ಪರೀಕ್ಷೆ ವಿದ್ಯಾರ್ಥಿಯ ಇಡೀ ಭವಿಷ್ಯ ನಿರ್ಧರಿಸಬಾರದು ಎಂದು ಅಭಿಪ್ರಾಯಪಟ್ಟರು.

ಪ್ರಶ್ನೆಗಳಲ್ಲಿ ಹೊಸತನ, ಬಹುಶಿಸ್ತೀಯ ಶಿಕ್ಷಣ ವ್ಯವಸ್ಥೆ ಅಗತ್ಯವಿದೆ. ಇದೇ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 34 ವರ್ಷಗಳ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದೆ ಎಂದು ಹೇಳಿದರು.

ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ:

ಕಳೆದ ಒಂದು ವಾರದಿಂದ ವಿರೋಧ ಪಕ್ಷಗಳು ಪೇಪರ್ ಲೀಕ್ ವಿಚಾರ ಚರ್ಚೆಗೆ ಒತ್ತಾಯಿಸಿದ್ದವು. ಆದರೆ ಸರ್ಕಾರವೇ ಕಠಿಣ ಕಾನೂನು ತಿದ್ದುಪಡಿ ಮಸೂದೆ ತಂದಾಗ, ರಾಜಕೀಯ ಕಾರಣಕ್ಕಾಗಿ ವಿರೋಧ ಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದರು.