ವಿಜಯಸಾಕ್ಷಿ ಸುದ್ದಿ, ಧಾರವಾಡ: ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಆಗಸ್ಟ್ 22 ಹಾಗೂ 23ರಂದು ಆಯೋಜಿಸಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ–2026ವನ್ನು ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಹಾಗೂ ತಂತ್ರಜ್ಞರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಮಂಡಳಿಯ ಕಾರ್ಯಾಧ್ಯಕ್ಷ ಡಾ. ಕಲ್ಮೇಶ ಹಾವೇರಿಪೇಠ ಕರೆ ನೀಡಿದರು.
ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪೂರ್ವಭಾವಿ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಚಲನಚಿತ್ರೋತ್ಸವದ ಯಶಸ್ವಿ ಆಯೋಜನೆಗಾಗಿ ವಿವಿಧ ಕಾರ್ಯಕಾರಿ ಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳ ಹಂಚಿಕೆ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಡಳಿಯ ಅಧ್ಯಕ್ಷ ಮಂಜುನಾಥ ಹಗೇದಾರ ಮಾತನಾಡಿ, ಮಂಡಳಿ ಇನ್ನಷ್ಟು ಕ್ರಿಯಾಶೀಲವಾಗಲು ಪ್ರತಿಯೊಬ್ಬ ಸದಸ್ಯರ ಸಹಕಾರ ಅಗತ್ಯ. ನಾಲ್ಕು ನೂರಕ್ಕೂ ಹೆಚ್ಚು ನಿರ್ಮಾಪಕರು ಸಂಘದ ಸದಸ್ಯರಾಗಿದ್ದು, ಚಿತ್ರ ನಿರ್ಮಾಣಕ್ಕೆ ಮಂಡಳಿ ಅಗತ್ಯ ಸಹಕಾರ ನೀಡಲಿದೆ. ಈಗಾಗಲೇ ಹಲವು ಸದಸ್ಯರು ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದು, ನೋಂದಾಯಿತ ಸದಸ್ಯರಿಗೆ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಚಲನಚಿತ್ರ ಸಹನಿರ್ದೇಶಕ ದೀಪಕ ಇಂಡಿ, ನಿರ್ದೇಶಕ ಶಾಂತಕುಮಾರ ಪಾಟೀಲ, ಕಲಾವಿದ ಜೂನಿಯರ್ ರಾಜಕುಮಾರ ಪ್ರಕಾಶ ರಾಜಕುಮಾರ ಬಡ್ನಿ, ದ್ಯಾಪೂರ ಸರ್, ರಾಜೀವಸಿಂಗ್ ಹಲವಾಯಿ, ಪ್ರೇಮಾ ನಡುವಿನಮನಿ, ವಿಕ್ರಮ್ ಕುಮಠಾ, ಜೂನಿಯರ್ ಉಪೇಂದ್ರ ಬಾಬು ಸೇರಿದಂತೆ ವಿಜಯಪುರ, ಬಾಗಲಕೋಟ, ಬೆಳಗಾವಿ, ಇಂಡಿ ಮತ್ತಿತರ ಭಾಗಗಳಿಂದ ಆಗಮಿಸಿದ್ದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಹಾಗೂ ತಂತ್ರಜ್ಞರು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಹಂಚಿಕೊಂಡರು.
ಮಂಡಳಿಯಿಂದ ಸದಸ್ಯರಿಗೆ ಕಲ್ಪಿಸಲಾಗುತ್ತಿರುವ ವಿವಿಧ ಸೌಲಭ್ಯಗಳ ಕುರಿತು ಪ್ರಧಾನ ಕಾರ್ಯದರ್ಶಿ ರಾಹುಲ್ ದತ್ತಪ್ರಸಾದ ಮಾಹಿತಿ ನೀಡಿದರು.
ಇದೇ ವೇಳೆ ಡಾ. ಕಲ್ಮೇಶ ಹಾವೇರಿಪೇಠ ಅವರ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಶುಭ ಕೋರಲಾಯಿತು.
ಸಲಹಾ ಮಂಡಳಿ ಸದಸ್ಯರಾದ ಅನಿಶ್ ಭರೂದವಾಲೆ, ಮಮ್ಮಿಗಟ್ಟಿ ಹಾಗೂ ಡಾ. ಪ್ರಭು ಗಂಜಿಹಾಳ ಚಿತ್ರೋತ್ಸವದ ಮಹತ್ವ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಭು ಹಂಚಿನಾಳ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಅರವಿಂದ ಮುಳಗುಂದ ವಂದಿಸಿದರು.
“ಉತ್ತರ ಕರ್ನಾಟಕದ ಚಿತ್ರರಂಗದ ಬೆಳವಣಿಗೆಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಹತ್ವದ ವೇದಿಕೆಯಾಗಿದ್ದು, ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು.”
– ಡಾ. ಕಲ್ಮೇಶ ಹಾವೇರಿಪೇಠ, ಕಾರ್ಯಾಧ್ಯಕ್ಷರು



