Home Blog Page 2187

ಜಿಲ್ಲೆಯಲ್ಲಿ 71 ಜನರಿಗೆ ಸೋಂಕು; 259 ಜನರು ಗುಣಮುಖ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಶನಿವಾರ ದಿ 19 ರಂದು 71 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

71 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 8291 ಕ್ಕೇರಿದೆ. ಇಂದು 259 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 7217 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 955 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿಗೆ ಒಳಗಾಗಿ ಇದುವರೆಗೆ 119 ಜನರು ಮೃತಪಟ್ಟಿದ್ದಾರೆ.

ಗದಗ-27, ಮುಂಡರಗಿ-08, ನರಗುಂದ-06, ರೋಣ-12, ಶಿರಹಟ್ಟಿ-15 , ಹೊರಜಿಲ್ಲೆ 03 ಸೇರಿದಂತೆ 71 ಜನರಿಗೆ ಸೋಂಕು ತಗುಲಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು….

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಬಾಲಾಜಿ ಕಾಂಪೌಂಡ್, ತಿಗಡಿಕೇರಿ ಓಣಿ, ಕುರಬರ ಓಣಿ, ಮುಳಗುಂದ ರಸ್ತೆ, ಎಸ್.ಎಂ.ಕೆ.ನಗರ, ಖಾನತೋಟ, ಶಿವಾನಂದ ನಗರ, ಮಸಾರಿ, ವೀರನಾರಾಯಣ ದೇವಸ್ಥಾನದ ಹತ್ತಿರ, ಕೇಶವ ನಗರ, ಕೆ.ಎಸ್.ಆರ್.ಟಿ.ಸಿ. ಕಾಲೋನಿ, ರಾಧಾಕೃಷ್ಣ ಕಾಲೋನಿ, ಟ್ಯಾಗೋರ ರಸ್ತೆ, ಜಿಮ್ಸ್ ಸಾಯಿಬಾಬಾ ದೇವಸ್ಥಾನದ ಹತ್ತಿರ,

ಗದಗ ತಾಲೂಕಿನ ಮುಳಗುಂದ, ಹುಲಕೋಟಿ, ಲಿಂಗದಾಳ, ಲಕ್ಕುಂಡಿ, ಹಿರೇಹಂದಿಗೋಳ,

ಮುಂಡರಗಿ ತಾಲೂಕಿನ ಹೆಸರೂರ, ಡಂಬಳ, ನರಗುಂದ ಪಟ್ಟಣದ ವಿದ್ಯಾಗಿರಿ, ಮಾರುತಿ ನಗರ, ನರಗುಂದ ತಾಲೂಕಿನ ಶಿರೋಳ, ವಾಸನ, ಕೊಣ್ಣೂರ,

ರೋಣ ತಾಲೂಕಿನ ಕುರಹಟ್ಟಿ, ಅಬ್ಬಿಗೇರಿ, ಬೆಳವಣಕಿ, ಕೊತಬಾಳ, ಗಜೇಂದ್ರಗಡ, ಮಲ್ಲಾಪುರ, ನರೇಗಲ್, ಗೋಗೇರಿ,

ಶಿರಹಟ್ಟಿ ತಾಲೂಕಿನ ಶೆಟ್ಟಿಕೇರಿ, ಸೇವಾಲಾಲ ಮಂದಿರದ ಹತ್ತಿರ, ಹುಲ್ಲೂರ, ಗುಡ್ಡಾಪುರ, ಛಬ್ಬಿ, ಮ್ಯಾಗೇರಿ, ಖಾನಾಪುರ,
ಲಕ್ಷ್ಮೇಶ್ವರ ಪಟ್ಟಣದ ವಿನಾಯಕ ನಗರ, ಬಸ್ತಿಬಣ,

ಕೊವಿಡ್ ಕಳವಳ: ಮುಂದಿನ ವಾರಕ್ಕೇ ಕಲಾಪ ಬಂದ್?

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಸದ್ಯ ನಡೆಯುತ್ತಿರುವ ಸಂಸತ್ ಮುಂಗಾರು ಅಧಿವೇಶನ ಬರುವ ವಾರದ ಮಧ್ಯದಲ್ಲೇ ಕೊನೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಕೊವಿಡ್ ಆತಂಕವೇ ಕಾರಣವಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿ 30 ಸಂಸದರು ಕೊವಿಡ್ ಬಾಧಿತರಾಗಿ ಕಲಾಪದಿಂದ ಹೊರಗಿದ್ದಾರೆ.

ಬಿಜೆಪಿಯ ವಿನಯ ಸಹಸ್ರಬುದ್ಧೆ ವಿಷಯವೇ ಈಗ ಹಲವು ಸಂಸದರನ್ನು ಚಿಂತೆಗೀಡು ಮಾಡಿದೆ. ಕಳೆದ ವಾರ ಕಲಾಪ ಆರಂಭಕ್ಕೂ ಮುನ್ನ ಸಹಸ್ರಬುದ್ಧೆ ಅವರ ಕೊವಿಡ್ ಟೆಸ್ಟ್ ನೆಗೆಟಿವ್ ಬಂದಿತ್ತು. ಈ ವಾರದ ಕಲಾಪದಲ್ಲಿ ಟ್ರೇಜರಿ ಬೆಂಚ್‌ನಿಂದ ಅವರೂ ಮಾತನಾಡಿದ್ದರು. ಶುಕ್ರವಾರವೂ ಅವರು ಮಾತಾನಾಡಬೇಕಿತ್ತು. ಆದರೆ ಅವರು ಗುರುವಾರ ಸಂದೇಶವೊಂದನ್ನು ಕಳಿಸಿ, ತಲೆನೋವು ಮತ್ತು ಆಯಾಸದ ಕಾರಣಕ್ಕೆ ಪರೀಕ್ಷೆ ಮಾಡಿಸಿದಾಗ ನನಗೆ ಕೊವಿಡ್ ದೃಢಪಟ್ಟಿದೆ ಎಂದಿದ್ದಾರೆ.

ಈ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಟಿಎಂಸಿಯ ಡೆರೆಕ್ ಒ ಬ್ರೇನ್, ಕಲಾಪದಲ್ಲಿ ಸಹಸ್ರಬುದ್ಧೆಯವರ ಸಮೀಪದ ಸೀಟುಗಳಲ್ಲಿ ಕುಳಿತವರು ಮತ್ತು ಅವರ ಸಂಪರ್ಕಕ್ಕೆ ಬಂದವರು ಸ್ವಯಂ ಐಸೊಲೇಷನ್‌ಗೆ ಒಳಗಾಗಿ. ಸಹಸ್ರಬುದ್ಧೆ  ಸೆಂಟ್ರಲ್ ಹಾಲ್ ಮತ್ತು ಹೌಸ್ ಲಾಬಿಯಲ್ಲೂ ಸಮಯ ಕಳೆದಿರುವ ಸಾಧ್ಯತೆ ಇದೆ. ಈ ಬಗ್ಗೆಯೂ ಗಮನ ಹರಿಸಿ’ ಎಂದಿದ್ದಾರೆ.

ಕೊವಿಡ್ ಕಾಲದಲಿ ರೂಪಿಸಿದ 11 ಮಸೂದೆ/ತಿದ್ದುಪಡಿ ಮಸೂದೆಗಳಿಗೆ ಬರುವ ವಾರದ ಮಧ್ಯದೊಳಗೆ ಅಂಗೀಕಾರ ಪಡೆದ ನಂತರ ಸಂಸತ್ ಕಲಾಪವನ್ನು ಸ್ಥಗಿತಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಹಾಗೇನಾದರೂ ಆದರೆ ಸರ್ಕಾರ ದೊಡ್ಡ ಟೀಕೆಗಳನ್ನು ಎದುರಿಸಬೇಕಿದೆ.

ಪರೀಕ್ಷಾರ್ಥಿಗಳು ಎಷ್ಟೇ ಗೋಗರೆದರೂ ಜೆಇಇ ಮತ್ತು ನೀಟ್ ಪರೀಕ್ಷೆ ನಡೆಸಿದ ಸರ್ಕಾರ, ಈಗ ಯಾಕೆ ಹಿಂದೇಟು ಹಾಕಿತು ಎಂಬ ಪ್ರಶ್ನೆ ಏಳಲಿವೆ. ಮೋದಿ ವಿರುದ್ಧ ಇನ್ನೂ ದೊಡ್ಡ ಪ್ರಮಾಣದ ಟ್ವಿಟರ್ ಟ್ರೆಂಡ್‌ಗಳು ಶುರುವಾಗಲಿವೆ.

ಕೊಟ್ಟ ಮಾತಿಗೆ ತಪ್ಪಿದ ಸರಕಾರದ ವಿರುದ್ಧ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಕೊರೋನಾ ವಾರಿಯರ್ಸ್‌ ಎಂದು ಕರೆಯಲ್ಪಡುವ ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರು ಎರಡು ತಿಂಗಳ ಹಿಂದೆ 20 ದಿನಗಳ ಕಾಲ ನಡೆಸಿದ ಪ್ರತಿಭಟನೆಯಿಂದಾಗಿ ಎರಡು ಮೂರು ದಿನಗಳಲ್ಲಿ ವೇತನ ಹೆಚ್ಚಿಸುವುದಾಗಿ ಭರವಸೆ ನೀಡಿದ್ದ ಸರಕಾರ ಮಾತು ತಪ್ಪಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ಶರಣು ಗಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 21ರಿಂದ ನಡೆಯುವ ಅಧಿವೇಶನದಲ್ಲಿ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಎಲ್ಲ ಆಶಾ ಕಾರ್ಯಕರ್ತೆಯರು ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಸಂಘಟನೆಯ ಕಾರ್ಯದರ್ಶಿ ಕೌಶಲ್ಯ ಹಿರೇಗೌಡರ್, ಶರಣು ಪಾಟೀಲ ಇತರರು ಇದ್ದರು.

ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರಕ್ಕೂ ಪರದಾಟ!

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ನಗರದ ಗೌರಿಅಂಗಳ ಪ್ರದೇಶದ ನಿವಾಸಿಯೊಬ್ಬರು ಕೋವಿಡ್-19‌ನಿಂದಾಗಿ ಮೃತಪಟ್ಟಿದ್ದು, ಅವರ ಶವಸಂಸ್ಕಾರಕ್ಕೆ ಪರದಾಡಿದ ಘಟನೆ ಶುಕ್ರವಾರ ಕೊಪ್ಪಳದ ಗವಿಮಠ ಹಿಂಭಾಗದ ರುದ್ರ ಭೂಮಿಯಲ್ಲಿ‌ ಜರುಗಿದೆ.
ಆರೋಗ್ಯ‌ ಇಲಾಖೆ ಸಿಬ್ಬಂದಿ ಸರಕಾರದ ನಿಯಮ, ಮಾರ್ಗಸೂಚಿಗಳನ್ವಯ ಶವವನ್ನು ರುದ್ರಭೂಮಿಗೆ ತಂದಿದ್ದಾರೆ. ಕಳೆದೆರಡು ದಿನಗಳಿಂದ ನಗರದಲ್ಲಿ ಭಾರೀ ಮಳೆಯಾಗುತ್ತಿದ್ದು, ಶುಕ್ರವಾರವೂ ವರ್ಷಧಾರೆ ಜೋರಾಗಿಯೇ ಇತ್ತು. ರಸ್ತೆಯಿಂದ ರುದ್ರಭೂಮಿ ಸಮತಟ್ಟಾಗಿದ್ದರೆ ಅಥವಾ ಮಳೆ ನೀರಿನ ಹರಿವಿಗೆ ಸಮರ್ಪಕ ಮಾರ್ಗವಿದ್ದರೆ ಬಹುಶಃ ಶವಸಂಸ್ಕಾರಕ್ಕೆ ತೊಂದರೆ ಆಗುತ್ತಿರಲಿಲ್ಲವೇನೋ? ಆದರೆ ರುದ್ರಭೂಮಿಯು ರಸ್ತೆಯ ಕೆಳಭಾಗದಲ್ಲಿರುವುದರಿಂದ ಮಳೆ ನೀರೆಲ್ಲ ರುದ್ರಭೂಮಿಯೊಳಗೆ ಪ್ರವೇಶಿಸಿ ಶವ ಸುಡುವುದಕ್ಕಾಗಿ ಕಟ್ಟಿಗೆ ಹಾಕಲು ಸ್ಥಳ ಇಲ್ಲದಂತಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಪರದಾಡಬೇಕಾಯಿತು.
ಈ ಘಟನೆಯನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸರಕಾರ ಗಮನಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ವೀರಣ್ಣ ಸೊಂಡೂರು ಅವರು, ಇತ್ತಿಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಕಂದಾಯ ಸಚಿವ ಆರ್.ಅಶೋಕ್ ಅವರು ಸ್ಮಶಾನಗಳಿಗೆ ಜಾಗ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಇದು‌ ಒಂದು ಕಡೆಗಿರಲಿ, ಇದ್ದ ಸ್ಮಶಾನವನ್ನೇ ಉಳಿಸಿಕೊಳ್ಳುವತ್ತ ಜಿಲ್ಲಾಡಳಿತ ಗಮನ ಹರಿಸಲಿ ಎಂದರು.

ಶತಾಯುಷಿ ಕಮಲಮ್ಮ ಹಿರೇಗೌಡ್ರ (105) ನಿಧನ

0

ಕೊಪ್ಪಳ: ತಾಲೂಕಿನ ಕಾತರಕಿ ಗ್ರಾಮದ ಕಮಲಮ್ಮ (105)ಹೀರೇಗೌಡ್ರ ಅವರು ಶನಿವಾರ ನಿಧನರಾದರು. ಅವರು ಕೊವಿಡ್-19 ನಿಂದ ಗುಣಮುಖರಾಗಿದ್ದರು. ಆದರೆ ಇತ್ತಿಚೆಗೆ ಅವರು ಆಹಾರ ತ್ಯಜಿಸಿದ್ದರು.
ಮೃತರು ಏಳು ಪುತ್ರಿಯರು, ಐವರು ಪುತ್ರರು ಸೇರಿದಂತೆ ನೂರಾರು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಜಿಪಂ ಮಾಜಿ ಅಧ್ಯಕ್ಷ ಎಚ್.ಎಲ್.ಹಿರೇಗಾಡ್ರ ಹಾಗೂ ಎಪಿಎಂಸಿ ಸದಸ್ಯ ವೆಂಕನಗೌಡ ಅವರ ತಾಯಿಯವರಾಗಿದ್ದಾರೆ.
ಕೊಪ್ಪಳದಲ್ಲಿ ಪುತ್ರ ಶಂಕರಗೌಡ ಅವರ ನಿವಾಸದಲ್ಲಿ ನಿಧನವಾಗಿದ್ದಾರೆ .
ಶನಿವಾರ ಸಂಜೆ 4 ಗಂಟೆಗೆ ಕಾತರಕಿ ಗ್ರಾಮದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಶನಿವಾರ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ: ಮುಂಬೈಗಿಂತ 2 ಸಾವಿರ ದುಬಾರಿ, ದೆಹಲಿಗಿಂತ 1,400 ರೂ ಸಸ್ತಾ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ 54,710 ರೂ. ಇದೆ. ಮುಂಬೈನಲ್ಲಿ ಕನಿಷ್ಠ 51,580 ರೂ. ಇದೆ.

ಬೆಂಗಳೂರು, ಮೈಸೂರು, ಮಂಗಳೂರು: 22 ಕ್ಯಾರಟ್: 48,880 ರೂ.,24 ಕ್ಯಾರಟ್: 53,320 ರೂ.
ಹುಬ್ಬಳ್ಳಿ: 22 ಕ್ಯಾರಟ್: 48,638 ರೂ., 24 ಕ್ಯಾರಟ್: 53,060 ರೂ.

ಬೆಂಕಿಯುಂಡೆಯಾದ ಶಾಸಕ ಬಂಡಿ: ಬೆವರಿದ ಇಒ, ಪಿಡಿಒಗಳು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ: ನರೇಗಾ ವೇತನ ಪಾವತಿಗೆ ಮೀನಮೇಷ ಮಾಡುವ, ಪಂಚಾಯತಿಗೆ ಸರಿಯಾಗಿ ಕರ್ತವ್ಯಕ್ಕೆ ಬಾರದ, ಗ್ರಾಮಸ್ಥರಿಗೆ ಸ್ಪಂದಿಸದ ಪಿಡಿಒಗಳ ವಿರುದ್ಧ ಕ್ರಮಕ್ಕೆ ಗ್ರಾಪಂ ಆಡಳಿತಾಧಿಕಾರಿಗಳು  ವರದಿ ನೀಡಿ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

ಪಟ್ಟಣದ ತಾಲೂಕಾ ಪಂಚಾಯತಿಯಲ್ಲಿ ನಡೆದ ರೋಣ ಮತ್ತು ಗಜೇಂದ್ರಗಡ ತಾಲೂಕಿನ ಗ್ರಾಮ ಪಂಚಾಯತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಸಕರ ಆಕ್ರೋಶಕ್ಕೆ ತಪ್ಪು  ಮಾಡಿದ ಪಿಡಿಒ, ಆಡಳಿತಾಧಿಕಾರಿ ಮತ್ತು ಇಒಗಳು ಬೆವರಿ ಹೋದರು.
 
ಗ್ರಾಮ ಪಂಚಾಯತಿಗಳಿಗೆ ಪಿಡಿಒಗಳು ಸರಿಯಾಗಿ ಬರುತ್ತಿಲ್ಲ ಎನ್ನುವ ದೂರುಗಳಿವೆ. ಅಲ್ಲದೆ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಮಸ್ಥರು ದೂರವಾಣಿ ಮೂಲಕ ಪಿಡಿಒಗಳ ಸಂಪರ್ಕಿಸಲು ಪ್ರಯತ್ನಿಸಿದರೆ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಪಿಡಿಒಗಳ ಕಣ್ಣಾಮುಚ್ಚಾಲೆ ಆಟ ತಾ.ಪಂ ಕಾರ್ಯ ನಿರ್ವಾಹಕರಿಗೆ ಹಾಗೂ ಗ್ರಾ.ಪಂ ಆಡಳಿತಾಧಿಕಾರಿಗಳಿಗೆ ಕಾಣುತ್ತಿಲ್ಲವೆ ಎಂದು ಆಕ್ರೋಶಗೊಂಡರು.

ಸಭೆಯಲ್ಲಿ ಇದ್ದ ತಾ.ಪಂ  ಇಒ ಸಂತೋಷಕುಮಾರ ಪಾಟೀಲ, ‘ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಪಿಡಿಒಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ’ ಎಂದು ಉತ್ತರಿಸಿದರು. ಇದಕ್ಕೆ  ಮತ್ತೆ  ಆಕ್ರೋಶಗೊಂಡ ಶಾಸಕ ಕಳಕಪ್ಪ ಬಂಡಿ, ನೋಟಿಸ್ ನೀಡಿ ಸುಮ್ಮನಾಗುವುದಲ್ಲ, ಪಂಚಾಯತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಗಮನ ನೀಡದ ಪಿಡಿಒಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ತಾ.ಪಂ ಇಒಗೆ ಎಚ್ಚರಿಸಿದರು.
 
ಸರ್ಕಾರದ ಯೋಜನೆಗಳು ಸಕಾಲದಲ್ಲಿ ಗ್ರಾಮಸ್ಥರಿಗೆ ತಲುಪಬೇಕು  ಎನ್ನುವ ಉದ್ದೇಶದಿಂದ ಗ್ರಾ.ಪಂಗಳಲ್ಲಿ ಬಾಪೂಜಿ ಸೇವಾ ಕೇಂದ್ರ ಆರಂಭಿಸಲು ಸರ್ಕಾರ ಆದೇಶಿಸಿದೆ. ಆದರೆ ಕೆಲವು ಗ್ರಾ.ಪಂಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳು ಆರಂಭವಾಗಿಲ್ಲ. ಹೀಗಾಗಿ 7 ದಿನಗಳಲ್ಲಿ ಕಡ್ಡಾಯವಾಗಿ ಸೇವಾ ಕೇಂದ್ರಗಳನ್ನು ಆರಂಭಿಸಲು ಪಿಡಿಒಗಳು ಮುಂದಾಗಬೇಕು ಎಂದು ತಾಕೀತು ಮಾಡಿದರು.

ತಾ.ಪಂ ಇಒ ಸಂತೋಷಕುಮಾರ ಪಾಟೀಲ ಸೇರಿ 31 ಗ್ರಾ.ಪಂ ಪಿಡಿಒಗಳು, ಆಡಳಿತಾಧಿಕಾರಿಗಳು ಇದ್ದರು.

‘ಗ್ರಾಮಗಳಲ್ಲಿ ರಸ್ತೆಗಳು ಹಾಳಾಗಿ ಹೋಗಿವೆ. ಪಿಡಿಒಗಳು 10 ದಿನದಲ್ಲಿ ರಸ್ತೆಗಳ  ದುರಸ್ತಿಗೆ ಅಗತ್ಯ ಕ್ರಿಯಾ ಯೋಜನೆ ಸಿದ್ದಪಡಿಸಿ ಜಿ.ಪಂ ಸಿಒಇ ಅವರಿಗೆ ತಲುಪಿಸಬೇಕು.

-ಕಳಕಪ್ಪ ಬಂಡಿ, ಶಾಸಕರು

ಚಿನ್ನಾಭರಣ ಕಳ್ಳತನ; ಆರೋಪಿ ಬಂಧನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ ಗುರುವಾರ ರಾತ್ರಿ ಮನೆಯೊಂದಕ್ಕೆ‌ ನುಗ್ಗಿ ಮನೆಯಲ್ಲಿದ್ದ 3,16,500 ಮೌಲ್ಯದ ಚಿನ್ನಾಭರಣ ವಸ್ತುಗಳು ಮತ್ತು ನಗದು ಹಣ ದೋಚಿದ್ದ ಆರೋಪಿಯನ್ನು ಕುಕನೂರು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬಂಧಿತ ಆರೋಪಿಯನ್ನು ಶಿವಯೋಗೆಪ್ಪ ಅಲಿಯಾಸ್ ಶಿವು ತಂದೆ ಶೇಖಪ್ಪ ಸುರತಾನಿ (25) ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗ್ಗೆ ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಗ್ಯಾಂಬ್ಲಿಂಗ್ ನೆರಳು: ಪ್ಲೇಸ್ಟೋರ್‌ನಿಂದ ಪೇಟಿಎಂ ಉಚ್ಛಾಟಿಸಿದ ಗೂಗಲ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಗೂಗಲ್ ಪ್ಲೇಸ್ಟೋರ್‌ನಿಂದ ಪೇಟಿಎಂ ಆ್ಯಪ್ ಅನ್ನು ಗೂಗಲ್ ತೆಗೆದು ಹಾಕಿದೆ. ಆದರೆ ಪೇಟಿಎಂ-ಫಾರ್-ಬಿಸಿನೆಸ್, ಪೇಟಿಎಂ ಮಾಲ್, ಪೇಟಿಎಂ ಮನಿ ಆ್ಯಪ್‌ಗಳನ್ನು ತೆಗೆಯಲಾಗಿಲ್ಲ. ಈ ಕುರಿತು ಹೇಳಿಕೆ ನೀಡಿರುವ ಪೇಟಿಎಂ, ಕಾರಣವೇನು ಎಂದು ತನಿಖೆ ಮಾಡುತ್ತಿದ್ದೇವೆ ಎಂದಷ್ಟೇ ಹೇಳಿದೆ.

ಗೂಗಲ್ ಕೂಡ ಖಚಿತ ಕಾರಣ ನೀಡಿಲ್ಲವಾದರೂ, ಅದರ ಬ್ಲಾಗ್‌ನಲ್ಲಿ, ‘ನಾವು ಕ್ಯಾಸಿನೊ ಅಥವಾ ಇತರ ಕಾನೂನುಬಾಹಿರ ಬೆಟ್ಟಿಂಗ್, ಜೂಜಿಗೆ ಆಸ್ಪದ ಮಾಡಿಕೊಡುವ  ಆ್ಯಪ್‌ಗಳನ್ನು ಬೆಂಬಲಿಸುವುದಿಲ್ಲ. ಯಾವುದಾದರೂ ಆ್ಯಪ್ ಅಂತಹ ಜೂಜಿನ ಸ್ಪೋರ್ಟಿಂಗ್ ವೆಬ್‌ಸೈಟ್‌ಗಳಿಗೆ ಲಿಂಕ್ ಕೊಡುತ್ತಿದ್ದರೆ ಅಂತವಕ್ಕೆ ಪ್ಲೇಸ್ಟೋರ್‌ನಲ್ಲಿ ಜಾಗವಿಲ್ಲ’ ಎಂದಿದೆ.

ಮತ್ತೆ ವಾಪಸ್ಸಾದ ಪೇಟಿಎಂ!

ಗೂಗಲ್ ಪ್ಲೇಸ್ಟೋರ್‌ನಿಂದ ಶುಕ್ರವಾರ ಹೊರ ಹಾಕಲ್ಪಟ್ಟಿದ್ದ ಪೇಟಿಎಂ ರಾತ್ರಿ ಹೊತ್ತಿಗೆ ಮತ್ತೆ ಪ್ಲೇಸ್ಟೋರ್‌ನಲ್ಲಿ ವಾಪಸ್ಸಾಗಿದೆ. ಪೇಟಿಎಂ ವಿವರಣೆ ಗೂಗಲ್‌ಗೆ ಸರಿ ಎನಿಸಿದ ಮೇಲೆ ಈ ಕ್ರಮ ತೆಗೆದುಕೊಂಡಿದೆ.

ಪೈಪ್ ಲೈನ್ ಒಡೆದು ನೀರು ಪೋಲು; ಬೆಳೆ ನಾಶದಿಂದ ರೈತ ಕಂಗಾಲು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಡರಗಿ: ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಪೋಲಾಗಿ, ಬೆಳೆ ನಾಶವಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಕನಕರಾಯನಗುಡ್ಡದ ಪಕ್ಕದಲ್ಲಿ ಈ ಘಟನೆ ನಡೆದಿದ್ದು, ಪೈಪ್ ಲೈನ್ ಒಡೆದ ಪರಿಣಾಮ, ಪಕ್ಕದಲ್ಲಿದ್ದ ಜಮೀನುಗಳಿಗೆ ನೀರು ನುಗ್ಗಿ, ಅಲ್ಲಿ ಬೆಳೆದಿದ್ದ ಟೊಮೋಟೊ, ಬದನೆಕಾಯಿ ನೀರು ಪಾಲಾಗಿದೆ.

ಹಮ್ಮಗಿ ಬ್ಯಾರೇಜ್ ನಿಂದ ಗದಗ ಬೆಟಗೇರಿ ಅವಳಿ ನಗರಕ್ಕೆ 24×7 ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ಇದಾಗಿದೆ.

ಇನ್ನು ವಿಷಯ ತಿಳಿದ ನಂತರ ಸ್ಥಳಕ್ಕೆ ಬಂದ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಪರಿಸ್ಥಿತಿ ನೋಡಿ ಸುಮ್ಮನೆ ತೆರಳಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ನಾಲ್ಕು ದಿನಗಳಿಂದಲೂ ನೀರು ಪೋಲಾಗುತ್ತಿದ್ದರೂ ಸರಿಪಡಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

error: Content is protected !!