Home Blog Page 25

ಕೊಪ್ಪಳ ಗ್ಯಾಂಗ್ ರೇಪ್ ಪ್ರಕರಣ: 3 ಅಪರಾಧಿಗಳಿಗೆ ಮರಣದಂಡನೆ, ಕುಟುಂಬಗಳು ಬೀದಿಗೆ!

0

ಕೊಪ್ಪಳ: ಕುಡಿದ ಅಮಲಿನಲ್ಲಿ, ಗಾಂಜಾ ಮತ್ತಿನಲ್ಲಿ 100 ರೂ. ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಮಹಿಳೆಯರ ಮೇಲೆ ಗ್ಯಾಂಗ್ ರೇಪ್ ನಡೆಸಿ, ಓರ್ವನನ್ನು ಕೊಲೆ ಮಾಡಿದ ಭೀಕರ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಕೊಪ್ಪಳದಲ್ಲಿ ನಡೆದ ವಿದೇಶಿ ಮಹಿಳೆ ಮೇಲಿನ ಈ ದುರಂತ ಪ್ರಕರಣಕ್ಕೆ ಗಂಗಾವತಿ ನ್ಯಾಯಾಲಯ ಕಠಿಣ ತೀರ್ಪು ನೀಡಿದ್ದು, 3 ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

ಕಳೆದ ವರ್ಷ ಮಾ.06ರಂದು ನಡೆದ ಈ ಅಮಾನವೀಯ ಘಟನೆಯಲ್ಲಿ ಸಂತ್ರಸ್ತರಿಗೆ ನ್ಯಾಯ ದೊರೆತಿದೆ. ಆದರೆ ಅಪರಾಧಿಗಳ ಕುಟುಂಬಗಳು ಮಾತ್ರ ಸಂಕಷ್ಟದಲ್ಲಿ ಮುಳುಗಿವೆ. ಬಳ್ಳಾರಿ ಜೈಲಿನಲ್ಲಿ ಬಂಧಿತರಾಗಿರುವ ಆರೋಪಿಗಳನ್ನು ನೋಡಲು ಹೋಗುವ ಸ್ಥಿತಿಯಲ್ಲೂ ಅವರ ಕುಟುಂಬಸ್ಥರು ಇಲ್ಲದಂತಾಗಿದೆ.

ಶಿಕ್ಷೆ ಘೋಷಣೆಯಾದ ಬಳಿಕ ಶರಣಬಸವ ತಂದೆ ಮನನೊಂದು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಅಕ್ಕಪಕ್ಕದವರು ಕಾಪಾಡಿದರೆಂದು ಶರಣಬಸವ ತಾಯಿ ಕಣ್ಣೀರಿಡುತ್ತಿದ್ದಾರೆ.

ಪ್ರಮುಖ ಆರೋಪಿ ಮಲ್ಲಯ್ಯ ಅಲಿಯಾಸ್ ಹಂದಿ ಮಲ್ಲನ ಪರಿಸ್ಥಿತಿ ಇನ್ನಷ್ಟು ದಯನೀಯವಾಗಿದೆ. ಈತನಿಗೆ 4 ತಿಂಗಳ ಮಗು ಇದೆ. ಪತ್ನಿ ತನ್ನ ತಾಯಿಯೊಂದಿಗೆ ಗುಡಿಸಲಿನಲ್ಲಿ ವಾಸವಿದ್ದು, 4 ತಿಂಗಳ ಮಗುವಿನ ಜೊತೆ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ.

ಅಪರಾಧಿಗಳಿಗೆ ಶಿಕ್ಷೆ ಜಾರಿಯಾಗಿದೆ. ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಹೋಗುವ ಅವಕಾಶವಿದೆ. ಆದರೆ ಕೂಲಿ ಕೆಲಸ ಮಾಡಿದರೆ ಮಾತ್ರ ಹೊಟ್ಟೆ ತುಂಬುವ ಪರಿಸ್ಥಿತಿಯಲ್ಲಿರುವ ಕುಟುಂಬಗಳಿಗೆ ಇದೀಗ ನರಕ ದರ್ಶನವಾಗಿದೆ. ಕುಡಿತ ಮತ್ತು ಗಾಂಜಾ ಮತ್ತದಲ್ಲಿ ಮಾಡಿದ 1 ಕೃತ್ಯದಿಂದ 3 ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಪ್ರೇಮಕ್ಕೆ ಬಲಿಯಾದ ಮನೆಕೆಲಸದಾಕೆ: 20 ಸಾವಿರ ಸಾಲಕ್ಕಾಗಿ 3.4 ಲಕ್ಷ ಚಿನ್ನ ಕಳವು!

0

ಬೆಂಗಳೂರು: ಪ್ರಿಯಕರನ ಸಾಲ ತೀರಿಸಲು ಆಂಟಿಯೇ ಕಳ್ಳಿಯಾಗಿ 3.4 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣ ಕಳವು ಮಾಡಿರುವ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುಸಾಪಾಳ್ಯದಲ್ಲಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿತೆಯನ್ನು ಪ್ರಮೀಳಾ ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯಕರ ಸುಧಾಕರ್ ಪರಾರಿಯಾಗಿದ್ದಾನೆ. ಕಳವು ಮಾಡಿದ ಚಿನ್ನಾಭರಣವನ್ನು ಮಾರಾಟ ಮಾಡಿ ಬಂದ ಹಣವನ್ನು ಪ್ರಿಯಕರನಿಗೆ ನೀಡಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಮೀಳಾಗೆ ಮದುವೆಯಾಗಿ ಗಂಡ ಬಿಟ್ಟಿದ್ದರೆ, ಸುಧಾಕರ್‌ಗೆ ಮದುವೆಯಾಗಿ 2 ಮಕ್ಕಳಿದ್ದಾರೆ. ಬೊಮ್ಮನಹಳ್ಳಿಯ ಗಾರ್ಮೆಂಟ್ಸ್‌ನಲ್ಲಿ ಇಬ್ಬರು ಕೆಲಸ ಮಾಡುವಾಗ ಪರಿಚಯವಾಗಿ ಪ್ರೀತಿಯಾಗಿತ್ತು. ನಂತರ ಪ್ರಮೀಳಾ ಗಾರ್ಮೆಂಟ್ಸ್ ಕೆಲಸ ಬಿಟ್ಟು ಖಾಸಗಿ ಅಪಾರ್ಟ್ಮೆಂಟ್‌ನಲ್ಲಿ ಮನೆಕೆಲಸಕ್ಕೆ ಸೇರಿದ್ದಳು.

ಸಂಕ್ರಾಂತಿ ಹಬ್ಬದ ವೇಳೆ ಸುಧಾಕರ್ 20 ಸಾವಿರ ರೂ. ಸಾಲ ತೀರಿಸಲು ಕೇಳಿದ್ದ. ಪ್ರಿಯಕರನಿಗಾಗಿ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿ, ಅದನ್ನು ಬೊಮ್ಮನಹಳ್ಳಿಯ ಚಿನ್ನದ ಅಂಗಡಿಯಲ್ಲಿ ಮಾರಾಟ ಮಾಡಿ ಹಣ ನೀಡಿದ್ದಳು.

ಸುಮಾರು 1 ತಿಂಗಳ ಬಳಿಕ ಮನೆ ಮಾಲೀಕರಿಗೆ ಚಿನ್ನ ಕಳವು ಆಗಿರುವುದು ಗೊತ್ತಾಗಿ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದರು. ಆರಂಭದಲ್ಲಿ ತನಗೇನು ಗೊತ್ತಿಲ್ಲವೆಂದು ಪ್ರಮೀಳಾ ನಾಟಕವಾಡಿದ್ದಳು. ಆದರೆ ಪೊಲೀಸ್ ವಿಚಾರಣೆಯ ವೇಳೆ ಅಸಲಿ ಸತ್ಯ ಬಾಯಿಬಿಟ್ಟಿದ್ದಳು.

ಪೊಲೀಸರು ಆರೋಪಿತೆಯಿಂದ ಒಟ್ಟು 3.4 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಪರಾರಿಯಾಗಿರುವ ಸುಧಾಕರ್ ಬಂಧನಕ್ಕಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನ ವಿದ್ಯುತ್‌ ವ್ಯತ್ಯಯ; ಈ ಏರಿಯಾಗಳಲ್ಲಿ 8 ತಾಸು ಇರಲ್ಲ ಪವರ್‌!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ಮತ್ತು ನಾಳೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಪವರ್ ಕಟ್ ಇರಲಿದೆ. ಕೆಎಂಎಫ್, ವೈಎನ್‌ಕೆ ನ್ಯೂ ಟೌನ್ 208, 407, ‘ಬಿ’ ಸೆಕ್ಟರ್, ಸಿಬಿ ಸಾಂದ್ರ, ಅಲ್ಲಾಳಸಂದ್ರ, ಶಾರದನಗರ, ಜನಪ್ರಿಯ, ಅನ್ರಿಯಾ, ಮಾರುತಿನಗರ, ಕೋಗಿಲು, ಬಿಬಿ ರಸ್ತೆ ಯಲಹಂಕ ಇತ್ಯಾದಿ.ಬಾಗಲೂರು ಕ್ರಾಸ್, ವೆಂಕಟಾಲ್, ನಿಟ್ಟೆ ಕಾಲೇಜು, ಬಿಎಸ್‌ಎಫ್, ಐಎಎಫ್, ಇಂಟರ್‌ನ್ಯಾಶನಲ್ ಸ್ಕೂಲ್, ಕಾಗೆನ್‌ಅಡ್ಯಾನ್‌ಕಾಲೇಜ್, ರಾಯಣ್ಣನ ಶಾಲೆ ಪಾಲನಹಳ್ಳಿ, ದ್ವಾರಖಾನಗರ,

ತಿರುಮಲ ನಗರ, ಅತ್ತೂರು ಬಡಾವಣೆ 1ನೇ ಅಡ್ಡರಸ್ತೆಯಿಂದ 10ನೇ ಅಡ್ಡರಸ್ತೆ, ಎಸ್ಕಾರ್ಟ್ಸ್ ಬಡಾವಣೆ, ದೊಡ್ಡಬೆಟ್ಟಹಳ್ಳಿ, ಟಿಪ್ಪು ವೃತ್ತ, ಚಿಕ್ಕಬೆಟ್ಟಹಳ್ಳಿ, ಕಾವೇರಿ ಬಡಾವಣೆ, ಗಿರಿಧಾಮನಗರ, ಎಎಂಎಸ್ ಬಡಾವಣೆ, ವ್ಯತ್ಯಾಸ ಬಡಾವಣೆ, ಜೆಲ್ಲಿ ಯಂತ್ರ, ಎಂ.ಎಸ್. ಪಾಳ್ಯ, ಶಿಕ್ಷಕರ ಬಡಾವಣೆ, ಬೆಲ್ 6ನೇ ಬ್ಲಾಕ್, ಎಚ್‌ಎಂಟಿ 3ನೇ ಬ್ಲಾಕ್, ಎಚ್‌ಎಂಟಿ 4ನೇ ಬ್ಲಾಕ್, ಎಚ್‌ಎಂಟಿ 6ನೇ ಬ್ಲಾಕ್ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್‌ ಇರುವುದಿಲ್ಲ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಕೋರಿದೆ.

ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣ; ಇಂದಿನ ಹವಾಮಾನ ವರದಿ ಹೀಗಿದೆ!

0

ಬೆಂಗಳೂರು:- ಕಳೆದ ಹಲವಾರು ದಿನಗಳಿಂದ ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ ಆವರಿಸಿದ್ದು, ಇಂದೂ ಸಹ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹತ್ತಾರು ದಿನಗಳಿಂದ ರಾಜ್ಯದಲ್ಲಿ ಒಣ ಹವೆ ಆವರಿಸಿದೆ. ಇನ್ನೂ ಕೆಲ ದಿನಗಳ ಕಾಲ ಇದೇ ವಾತಾವರಣ ಮುಂದುವರೆಯಬಹುದು. ದಕ್ಷಿಣ ಒಳನಾಡಿನ ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ , ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.

ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು-ಚಪ್ಪಲಿ ತೂರಾಟ; ಬಾಗಲಕೋಟೆಯಲ್ಲಿ ಉದ್ವಿಗ್ನ ಸ್ಥಿತಿ!

0

ಬಾಗಲಕೋಟೆ: ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಹಳೆಯ ಕಿಲ್ಲಾ ಓಣಿಯಲ್ಲಿ ದುಷ್ಕರ್ಮಿಗಳಿಂದ ಕಲ್ಲು-ಚಪ್ಪಲಿ ತೂರಾಟ ನಡೆದಿದೆ.

ಘಟನೆಯಲ್ಲಿ ಹಿಂದೂ ಕಾರ್ಯಕರ್ತ ಪ್ರಕಾಶ್ ಅರಕೇರಿ ತಲೆಗೆ ಗಾಯವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳದಲ್ಲಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಈ ವೇಳೆ ತರಕಾರಿ ಮಾರುಕಟ್ಟೆಯ ಮೂರು ತಳ್ಳುಗಾಡಿಗಳಿಗೆ ಬೆಂಕಿ ಹಚ್ಚಲಾಗಿದೆ.

ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ತಕ್ಷಣವೇ ಬೆಂಕಿ ನಂದಿಸಿ, ವ್ಯಾಪಾರಿಗಳಿಗೆ ಸಹಾಯ ಮಾಡಿದ್ದಾರೆ. ವ್ಯಾಪಾರಿ ಜನ್ನತಬಿ ದೊಡ್ಡಮನಿ ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಕಲ್ಲೆಸೆದವರ ಬಂಧನ ಮತ್ತು ಐಜಿಪಿ ಆಗಮಿಸುವಂತೆ ಆಗ್ರಹಿಸಿದ್ದಾರೆ. ಪೊಲೀಸರ ಮನವೊಲಿಸಿ ಪ್ರತಿಭಟನೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ದುರಂತದ ಬಳಿಕ ಹಳೆ ಬಾಗಲಕೋಟೆ, ನವನಗರ, ವಿದ್ಯಾಗಿರಿ ಪ್ರದೇಶಗಳಲ್ಲಿ ನಿನ್ನೆ ಮಧ್ಯರಾತ್ರಿ–ಇಂದು ಮಧ್ಯರಾತ್ರಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಆದೇಶದಂತೆ, ಸಾರ್ವಜನಿಕ ಸ್ಥಳದಲ್ಲಿ 4 ಕ್ಕಿಂತ ಹೆಚ್ಚು ಜನ ಸೇರಿ ಓಡಾಡಲು, ಅಪಾಯಕಾರಿ ಶಸ್ತ್ರಾಸ್ತ್ರ ಬಳಕೆ, ಅನುಮತಿ ಇಲ್ಲದೆ ಸಭೆ/ಧರಣಿ ನಡೆಸಲು ನಿಷೇಧಿಸಲಾಗಿದೆ.

ಹಿಂದೂಗಳಿಗೆ ಸೇವಾಲಾಲರ ಆಧ್ಯಾತ್ಮಿಕತೆ, ಶಿವಾಜಿ ಶೌರ್ಯ ಅಗತ್ಯವಿದೆ: ಸೋಮಲಿಂಗ ಶ್ರೀಗಳು

ವಿಜಯಸಾಕ್ಷಿ ಸುದ್ದಿ, ಗದಗ: ಶಿವಾಜಿ ಮಹಾರಾಜರು ಕೇವಲ ಯುದ್ಧ ಮಾಡಿ ಹಿಂದೂ ಸಾಮ್ರಾಜ್ಯ ಕಟ್ಟಲಿಲ್ಲ. ಆಧ್ಯಾತ್ಮಿಕತೆಯ ಮೂಲಕವೂ ಕಟ್ಟಿದ್ದಾರೆ. ಸಂತ ಸೇವಾಲಾಲರ ಆಧ್ಯಾತ್ಮಿಕತೆ, ಶಿವಾಜಿ ಮಹಾರಾಜರ ಶೌರ್ಯದಿಂದ ಹಿಂದೂಗಳು ಹಿಂದೂಗಳಾಗಿ ಉಳಿಯಲು ಸಾಧ್ಯವಾಗಿದೆ. ಕೆಲವು ಮಠಾಧೀಶರು ಹಿಂದೂ ದೇವರುಗಳಿಗೆ ಅವಮಾನ ಮಾಡುತ್ತಿದ್ದಾರೆ. ಅವರಿಗೆ ಸೇವಾಲಾಲರ ಆಧ್ಯಾತ್ಮಿಕತೆ ಉಪಯೋಗಕ್ಕೆ ಬರುವುದಿಲ್ಲ. ಶಿವಾಜಿ ಮಹಾರಾಜರಂತಹ ಪರಾಕ್ರಮ ಬೇಕಾಗಿದೆ ಎಂದು ವಿಜಯಪುರ ಜಿಲ್ಲೆಯ ಶಂಕರಲಿಂಗ ಗುರುಪೀಠದ ಶ್ರೀ ಸೋಮಲಿಂಗ ಶ್ರೀಗಳು ನುಡಿದರು.

ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಿಂದೂ ಸಂಘಟನೆಗಳ ಒಕ್ಕೂಟ, ಶಿವ ರಾಮಕೃಷ್ಣ ಸೇವಾ ಟ್ರಸ್ಟ್ ಗದಗ, ದಲಿತ ಮಿತ್ರ ಮೇಳ ಹಾಗೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಿತಿ-2026 ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 399ನೇ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಪಠ್ಯಪುಸ್ತಕದಲ್ಲಿ ಕೇವಲ ಅಪ್ಜಲಖಾನ್, ಬಾಬರ್, ಅಕ್ಬರ್ ಚರಿತ್ರೆ ತೋರಿಸಲಾಗಿದೆ. ಆದರೆ, ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ತೋರಿಸಲಿಲ್ಲ. ಮುಸಲ್ಮಾನ ದೊರೆಗಳು 6 ಸಾವಿರಕ್ಕೂ ಹೆಚ್ಚು ಮಂದಿರಗಳನ್ನು ಕೆಡವಿ ಮಸೀದಿಗಳಾಗಿ ಪರಿವರ್ತನೆ ಮಾಡಿದರು. ಇಂತಹ ಇತಿಹಾಸದ ಘಟನೆಗಳಿಂದ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಸನಾತನ ಸಂಸ್ಕೃತಿಗೆ ತನ್ನದೇ ಆದ ಇತಿಹಾಸವಿದೆ. ಮಕ್ಕಳಿಗೆ ಶಿವಾಜಿ ಮಹಾರಾಜ, ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮ, ಬಸವಣ್ಣನವರ ಇತಿಹಾಸ ತಿಳಿಸಬೇಕಿದೆ ಎಂದರು.

ಈ ವೇಳೆ ಶಿವಪ್ಪ ನಾಯಕ್, ವಿಜಯಕುಮಾರ ಗಡ್ಡಿ, ಲಕ್ಷ್ಮಣ್ ಸಂತರು, ಮಹೇಶ್ ರೋಖಡೆ, ಸೋಮು ಗುಡಿ, ಸಹದೇವ ಗಣಾಚಾರಿ, ಕೆ.ಸಿ. ಮಲ್ಲಾಪೂರ, 2025ರ ಸಮಿತಿಯ ವಿರೂಪಾಕ್ಷಪ್ಪ ಹೆಬ್ಬಳ್ಳಿ, ಸುರೇಶ್ ಲಮಾಣಿ, ರಾಜಣ್ಣ ಮಲ್ಲಾಡದ, ರವಿಕಾಂತ್ ಅಂಗಡಿ, ವೆಂಕಟೇಶ್ ರಾಥೋಡ್, ಮೋಹನ್ ಗ್ವಾರಿ, ಶರತರಾವ್ ಹುಯಿಲಗೋಳ, ಅಜ್ಜಣ್ಣ ಮಲ್ಲಾಡದ, ರಾಜು ಮುಧೋಳ, ಅವಿನಾಶ್ ಜೈನ್, ಮಂಜು ಗಜಾಕೋಶ, ಫಕ್ಕಿರಸಾಬ್ ಬಾಂಡಗೆ, ಕುಮಾರ ನಡಗೇರಿ, ಐ.ಎಸ್. ಪೂಜಾರ, ರವಿ ಕರಬಸಣ್ಣನವರ, ಅನಿಲ ಅಬ್ಬಿಗೇರಿ, ಬಸವರಾಜ ಹುಬ್ಬಳ್ಳಿ, ಸಂತೋಷ್ ಪವಾರ, ದೇವು ಲಮಾಣಿ, ವಿಠ್ಠಲ ತೋಟದ, ವಿಠ್ಠಲ ಬಾಂಡಗೆ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮ ಯಶಸ್ವಿಗೊಳಿಸಲು ಸಾಕಷ್ಟು ಪೂರ್ವತಯಾರಿ ನಡೆಸಲಾಗಿತ್ತು. ಎಲ್ಲ ಹಿಂದೂ ಬಾಂಧವರು ಸ್ವಇಚ್ಛೆಯಿಂದ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ್ದಾರೆ. ನಮ್ಮತನವನ್ನು ನಾವು ಕಾಪಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಬೇರೆಯವರ ನೋವಿಗೆ ನಾವು ಸ್ಪಂದಿಸಬೇಕಿದೆ. ರಾಜು ಖಾನಪ್ಪನವರ ಹಿಂದೂತ್ವಕ್ಕಾಗಿ ನಿರಂತರ ಜಾಗೃತಿ, ಹೋರಾಟ ಮಾಡುತ್ತಾ ಬಂದಿದ್ದಾರೆ. ನಾವೆಲ್ಲರೂ ಅವರಿಗೆ ಬೆನ್ನೆಲುಬಾಗಿ ನಿಲ್ಲೋಣ.

  • ಜಗದೀಶ್ ಎಸ್.ಪಿ.
    ಜಯಂತ್ಯುತ್ಸವದ ಮಾಜಿ ಅಧ್ಯಕ್ಷ.

“ಹಿಂದೂಗಳು ಹಿಂದೂಗಳಾಗಿಯೇ ಉಳಿಯಲು ಛತ್ರಪತಿ ಶಿವಾಜಿ ಮಹಾರಾಜರು ಪ್ರಮುಖ ಕಾರಣೀಕರ್ತರಾಗಿದ್ದಾರೆ. ಆದರೆ, ಇಂದು ಅದೇ ಹಿಂದೂಗಳಲ್ಲಿ ಜಾತಿ ಎಂಬ ವಿಷಬೀಜ ಹೊಕ್ಕಿರುವುದು ದುರಂತದ ಸಂಗತಿಯಾಗಿದೆ. ಮಹಾಪುರುಷರಿಗೆ ಯಾವುದೇ ಜಾತಿಗಳು ಇರಲಿಲ್ಲ. ಯುವಕರು ಹಿಂದೂ ಸಂಘಟನೆಗಳನ್ನು ಅಪ್ಪಿಕೊಂಡು ಸಮಾಜವನ್ನು ಒಂದುಗೂಡಿಸಬೇಕು. ಮಹಿಳೆಯರು ಹಿಂದೂ ಸಂಘಟನೆಯಲ್ಲಿ ಪಾಲ್ಗೊಳ್ಳಬೇಕಿದೆ”

  • ರಾಜು ಖಾನಪ್ಪನವರ.
    ಕ.ರಾ.ಹಿಂ ಸಂಘಟನೆಗಳ ಒಕ್ಕೂಟದ
    ರಾಜ್ಯ ಸಂಚಾಲಕ.

ಮಹಾಶಿವರಾತ್ರಿ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಗದಗ ಇವರ ವತಿಯಿಂದ ಮಹಾಶಿವರಾತ್ರಿಯ ಅಂಗವಾಗಿ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶ್ರದ್ಧಾ ಸ್ವರ ಸಂಗೀತ ವೆಲ್ಫೇರ್ ಟ್ರಸ್ಟ್ ಸಂಸ್ಥೆಯ ಮಕ್ಕಳು ಯಶಸ್ವಿಯಾಗಿ ಭಾಗವಹಿಸಿ ಸಂಗೀತ ಹಾಗೂ ಭರತನಾಟ್ಯ ಕಾರ್ಯಕ್ರಮವನ್ನು ಪ್ರದರ್ಶಿಸಿದರು.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಉದ್ಘಾಟಿಸಿ ಮಾತನಾಡಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಮೌಲ್ಯ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಡಿ.ಆರ್. ಪಾಟೀಲ್, ಬಿ.ಬಿ. ಅಸೂಟಿ, ಬಿ.ಕೆ. ಜಯಂತಿ ಅಕ್ಕನವರು, ಬಿ.ಕೆ. ಸಾವಿತ್ರಿ ಅಕ್ಕನವರು, ಅಕ್ಬರಸಾಬ್ ಬಬರ್ಚಿ ಮುಂತಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷರಾದ ಜ್ಯೋತಿ ಉಜ್ವಲ್ ಕಬಾಡಿ, ಭರತನಾಟ್ಯ ಶಿಕ್ಷಕಿ ವರ್ಷಾ ಕಲಕಂಬಿ ನೇತೃತ್ವದಲ್ಲಿ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಶ್ರದ್ಧಾ ಕಬಾಡಿ, ಅಪೂರ್ವ, ವೈಷ್ಣವಿ, ವೇದಾ, ಸ್ಪೂರ್ತಿ, ವೈಷ್ಣವಿ ಗುಳೇದಗುಡ್ಡ ಹಾಗೂ ಮೇಧಾ ಭಾಗವಹಿಸಿದ್ದರು.

ಉಜ್ವಲ್ ಕಬಾಡಿ ಹಾರ್ಮೋನಿಯಂ ಸಾಥ್ ಮತ್ತು ಹನುಮಂತ ಮೈತ್ರಿ ತಬಲಾ ಸಾಥ್ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ಉಜ್ವಲ್ ಕಬಾಡಿ ಮುಂತಾದವರು ಉಪಸ್ಥಿತರಿದ್ದರು.

ಬೈಕ್ ಅಡ್ಡಗಟ್ಟಿದ ಮುಸ್ಲಿಂ ಯುವಕರು; ಚಿಕ್ಕಮಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ!

0

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿಗೆ ಸಂಬಂಧಿಸಿದ ಘಟನೆ ಬೆಳಕಿಗೆ ಬಂದಿದೆ.

ದಲಿತ ಕ್ರಿಶ್ಚಿಯನ್ ಅಪ್ರಾಪ್ತ ಬಾಲಕನು ಮುಸ್ಲಿಂ ಅಪ್ರಾಪ್ತ ಯುವತಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕೆಲವು ಯುವಕರು ಅಡ್ಡಗಟ್ಟಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಘಟನೆ ಚಿಕ್ಕಮಗಳೂರಿನ ಮಾರ್ಕೆಟ್ ರಸ್ತೆಯಲ್ಲಿ ನಡೆದಿದ್ದು, ಬಾಲಕನ ಸಹೋದರ ನೀಡಿದ ದೂರಿನ ಆಧಾರದಲ್ಲಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ 8 ಯುವಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದುವರೆಗೆ ಇಬ್ಬರನ್ನು ಬಂಧಿಸಲಾಗಿದೆ.

ಈ ಕುರಿತು ಚಿಕ್ಕಮಗಳೂರು ಎಸ್‌ಪಿ ಜಿತೇಂದ್ರ ಕುಮಾರ್ ದಯ್ಮಾ ಮಾತನಾಡಿ, “ಬಾಲಕ ಮತ್ತು ಬಾಲಕಿ ಇಬ್ಬರೂ ಅಪ್ರಾಪ್ತರು. ಬೈಕ್‌ನಲ್ಲಿ ತೆರಳುತ್ತಿದ್ದಾಗ ಕೆಲವರು ಅಡ್ಡಗಟ್ಟಿ ಬೆದರಿಕೆ ಹಾಕಿದ್ದು, ಮೇಲ್ನೋಟಕ್ಕೆ ಇದು ನೈತಿಕ ಪೊಲೀಸ್ ಗಿರಿಯ ಪ್ರಕರಣವಾಗಿದೆ. ಇಬ್ಬರನ್ನು ಬಂಧಿಸಿದ್ದು, ಉಳಿದವರ ಬಗ್ಗೆ ತನಿಖೆ ಮುಂದುವರಿದಿದೆ ಎಂದರು.

ಬಾಲಕನ ತಾಯಿ ಪಲ್ಲವಿ ಮಾತನಾಡಿ, ಆ ಹುಡುಗಿ ನಮ್ಮ ಮನೆಗೆ ಬರುತ್ತಿರುತ್ತಾಳೆ. ಆರೋಗ್ಯ ಸಮಸ್ಯೆಯಿಂದ ಮನೆಯಲ್ಲಿರಬೇಕೆಂದು ಕೇಳಿದ್ದು, ಬಿಡಲು ಹೋಗುತ್ತಿದ್ದಾಗ ಜ್ಯೋತಿ ಟಾಕೀಸ್ ಬಳಿ 30–40 ಜನ ಅಡ್ಡಗಟ್ಟಿದರು. ಇಬ್ಬರು ಮಾತ್ರ ಹಲ್ಲೆ ಮಾಡಿದ್ದಾರೆ. ನಮ್ಮ ಮಕ್ಕಳಲ್ಲಿ ಯಾವುದೇ ತಪ್ಪಿಲ್ಲ, ಧರ್ಮ ಆಧಾರದಲ್ಲಿ ಪ್ರಶ್ನೆ ಏರ್ಪಟ್ಟಿದೆ ಎಂದರು.

ಒಟ್ಟಾರೆ ಘಟನೆ ಬಗ್ಗೆ ಪ್ರಸ್ತುತ ತನಿಖೆ ನಡೆಯುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎನ್ನಲಾಗಿದೆ.

ಕೇಸರಿಮಯವಾದ ಗದಗ-ಬೆಟಗೇರಿ ಅವಳಿ ನಗರ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಗುರುವಾರ ಶ್ರೀರಾಮ ಸೇನೆ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಅತ್ಯಂತ ವೈಭವದಿಂದ ಜರುಗಿತು. ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಮೂರ್ತಿಯ ಮೆರವಣಿಗೆಯು ಅವಳಿ ನಗರವನ್ನು ಕೇಸರಿಮಯವಾಗಿಸಿತ್ತು.

ಈ ಬಾರಿಯ ಮೆರವಣಿಗೆಯಲ್ಲಿ ಕೇವಲ ಶಿವಾಜಿ ಮಹಾರಾಜರಷ್ಟೇ ಅಲ್ಲದೆ, 17 ಅಡಿ ಎತ್ತರದ ಪ್ರಭು ಶ್ರೀರಾಮ, ಸಹಸ್ರಾರ್ಜುನ, ಮಹರ್ಷಿ ವಾಲ್ಮೀಕಿ, ವೀರಮಾತೆ ಕಿತ್ತೂರು ರಾಣಿ ಚನ್ನಮ್ಮ, ಸಂತ ಸೇವಾಲಾಲ್ ಹಾಗೂ ಪಾಂಡುರಂಗ ವಿಠ್ಠಲನ ಮೂರ್ತಿಗಳು ಸಾರ್ವಜನಿಕರ ಗಮನ ಸೆಳೆದವು. ಈಚೆಗಷ್ಟೇ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದವರ ಭಾವಚಿತ್ರಗಳು ಮೆರವಣಿಗೆಗೆ ಮೆರುಗು ನೀಡಿದವು. ಅಲ್ಲದೇ ನಗರದ ಪ್ರಮುಖ ವೃತ್ತಗಳು ಮತ್ತು ರಸ್ತೆಗಳಲ್ಲಿ ಕೇಸರಿ ಧ್ವಜ ಹಾಗೂ ಬಂಟಿಂಗ್‌ಗಳನ್ನು ಕಟ್ಟುವ ಮೂಲಕ ಸಂಘಟಕರು ಹಬ್ಬದ ವಾತಾವರಣ ನಿರ್ಮಿಸಿದ್ದರು.

ಮೆರವಣಿಗೆಯಲ್ಲಿ ಗದಗ ಮಾತ್ರವಲ್ಲದೆ ಹುಬ್ಬಳ್ಳಿ, ಬಾಗಲಕೋಟೆ, ಕೊಪ್ಪಳ ಮತ್ತು ಹಾವೇರಿ ಜಿಲ್ಲೆಗಳಿಂದ ಹಿಂದೂ ಸಂಘಟನೆಗಳು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಕೊರಳಲ್ಲಿ ಕೇಸರಿ ಶಾಲು, ಹಣೆಯಲ್ಲಿ ಕುಂಕುಮ ಧರಿಸಿದ್ದ ಯುವಕರು ಕಿವಿಗಡಚಿಕ್ಕುವ ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದರು. ಮೆರವಣಿಗೆಯುದ್ದಕ್ಕೂ ‘ಜೈ ಶಿವಾಜಿ’, ‘ಜೈ ಶ್ರೀರಾಮ್’ ಎಂಬ ಘೋಷಣೆಗಳು ಮೊಳಗಿದವು. ಮೆರವಣಿಗೆ ಸಾಗುವ ದಾರಿಯಲ್ಲಿ ವಿವಿಧ ಸಂಘಟನೆಗಳಿಂದ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಶಿವಾಜಿ ಜಯಂತಿ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಸಂಜೆಯವರೆಗೂ ಸಾಗಿದ ಮೆರವಣಿಗೆಯು, ಮುನ್ಸಿಪಲ್ ಮೈದಾನದಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡಿತು.

ಒಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದಲ್ಲಿ ಶಿವಾಜಿ ಮಹಾರಾಜರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಲ್ಲಿಂದ ಆರಂಭಗೊಂಡ ಮೆರವಣಿಗೆಯು ಜುಮ್ಮಾ ಮಸೀದಿ, ಬಸವೇಶ್ವರ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತದ ಮಾರ್ಗವಾಗಿ ಮುನ್ಸಿಪಲ್ ಕಾಲೇಜು ಮೈದಾನದವರೆಗೆ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಕಟ್ಟಡಗಳ ಮೇಲೇರಿ ಸಾವಿರಾರು ಜನರು ಈ ಭವ್ಯ ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಶಿವಾಜಿ ಮಹಾರಾಜರು ಸ್ವಾಭಿಮಾನದ ಪ್ರತೀಕ: ಡಿಸಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಛತ್ರಪತಿ ಶಿವಾಜಿ ಮಹಾರಾಜರು ಶಕ್ತಿಯ ಸಂಕೇತ ಹಾಗೂ ಸ್ವಾಭಿಮಾನದ ಪ್ರತೀಕ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರುಗಳ ಸಹಯೋಗದಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಛತ್ರಪತಿ ಶಿವಾಜಿ ಅಪ್ಪಟ ದೇಶಪ್ರೇಮಿಯಾಗಿದ್ದರು. ದೇಶ ಕಂಡ ಅಪ್ರತಿಮ ಸಂಘಟನಾಕಾರ. ತಾಯಿ ಜೀಜಾಬಾಯಿಯ ಪ್ರೇರಣೆಯಿಂದ ಶಿವಾಜಿ ಮಹಾರಾಜರು ಸಂಸ್ಕಾರವಂತರಾಗಿ ಆದರ್ಶ ಜೀವನ ನಡೆಸಲು ಕಾರಣವಾಯಿತು. ಜೀಜಾಬಾಯಿಯವರ ಸ್ವರಾಜ್ಯದ ಕನಸು ನನಸು ಮಾಡಿದ ಅಪ್ರತಿಮ ವೀರ ಶಿವಾಜಿ ಮಹಾರಾಜರು. ಶಿವಾಜಿ ಮಹಾರಾಜರ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಉಪನ್ಯಾಸಕರಾದ ಹಿರಿಯ ವಕೀಲ ಸುಧೀರಸಿಂಹ ಘೋರ್ಪಡೆ ಮಾತನಾಡಿ, ಶಿವಾಜಿಯವರ ತತ್ವಗಳು ಒಂದೇ ಸಮುದಾಯಕ್ಕೆ ಅಲ್ಲದೇ ಎಲ್ಲ ಸಮುದಾಯಕ್ಕೆ ಸೀಮಿತವಾಗಿವೆ. ಕ್ರಿ.ಶ 1630ರಲ್ಲಿ ಶಿವನೇರಿ ದುರ್ಗದಲ್ಲಿ ಶಿವಾಜಿ ಮಹಾರಾಜರ ಜನನವಾಗುತ್ತದೆ. ಪರಕೀಯರ ಆಳ್ವಿಕೆಯಲ್ಲಿ ಇರಬಾರದು ಎಂಬುದು ಜೀಜಾಮಾತೆಯು ಬಯಕೆಯಾಗಿತ್ತು. ಶಿವಾಜಿ ಮಹಾರಾಜರು ತಮ್ಮ 13ನೇ ವರ್ಷದಲ್ಲಿ ಸ್ವರಾಜ್ಯ ಸ್ಥಾಪನೆಯ ಕನಸು ಕಂಡು ಮಾವಳಿಯರ, ರೈತರು, ಗುಡ್ಡಗಾಡು ಜನರ ಸಂಘಟನೆಯೊಂದಿಗೆ ಮೊಘಲರ ವಶದಲ್ಲಿರುವ ಕೋಟೆಗಳನ್ನು ವಶಪಡಿಸಿಕೊಂಡರು. ಇವರು ಸಮರ್ಥ ಆಡಳಿತಗಾರರಾಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ. ಬಸವರಾಜ ಜಕ್ಕಲಿ, ಸುರೇಶ ಬೇಂದ್ರೆ, ಕೃಷ್ಣಾಜಿ ತುಕ್ಕಪ್ಪನವರ, ಮುರಿಗೆಪ್ಪ ಶೆಟ್ಟರ್, ಅಜಿತ ಘೋರ್ಪಡೆ, ಯಲ್ಲಪ್ಪ ಬೇಂದ್ರೆ ಸೇರಿದಂತೆ ಸಮಾಜದ ಹಿರಿಯರು, ಮಹಿಳೆಯರು, ಮುಖಂಡರು, ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.

ವೀರಣ್ಣ ಅಂಗಡಿ ಹಾಗೂ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ಸ್ವರಸಿಂಧು ನೃತ್ಯ ಪ್ರದರ್ಶಿಸಿದರು.

ಗೆರಿಲ್ಲಾ ಯುದ್ಧ ನೀತಿ ಅನುಸರಿಸುತ್ತಿದ್ದರು. 1674ರಲ್ಲಿ ರಾಯಗಡದಲ್ಲಿ ಶಿವಾಜಿಯವರಿಗೆ ಪಟ್ಟಾಭಿಷೇಕವಾಯಿತು. ಅವರು `ಛತ್ರಪತಿ’ ಎಂದು ಘೋಷಿಸಿಕೊಂಡರು. ಇದು ಕೇವಲ ಒಬ್ಬ ವ್ಯಕ್ತಿಯ ಪಟ್ಟಾಭಿಷೇಕವಾಗಿರಲಿಲ್ಲ, ಶತಮಾನಗಳ ಪರಕೀಯರ ಆಳ್ವಿಕೆಯ ನಂತರ ಹಿಂದೂ ಸಾಮ್ರಾಜ್ಯವೊಂದು ತಲೆ ಎತ್ತಿ ನಿಂತ ಐತಿಹಾಸಿಕ ಕ್ಷಣವಾಗಿತ್ತು ಎಂದು ಸುಧೀರಸಿಂಹ ಘೋರ್ಪಡೆ ಶಿವಾಜಿ ಮಹಾರಾಜರ ಶೌರ್ಯ, ಪರಾಕ್ರಮ ಸೇರಿದಂತೆ ಜೀವನ ಸಾಧನೆ ಕುರಿತು ವಿವರಿಸಿದರು.

error: Content is protected !!