Home Blog Page 27

ಅಗತ್ಯತೆ ಅನುಸಾರ ವಿದ್ಯಾರ್ಥಿನಿಲಯಗಳ ಸ್ಥಾಪನೆಗೆ ಕ್ರಮ: ಸಚಿವ ಶಿವರಾಜ್ ಎಸ್. ತಂಗಡಗಿ

ಬೆಂಗಳೂರು: ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಒಟ್ಟು 14 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಗಳ ಬೇಡಿಕೆಯನುಸಾರ ಅಗತ್ಯತೆ ಅನುಸಾರ ವಿದ್ಯಾರ್ಥಿ ನಿಲಯಗಳ ಸ್ಥಾಪನೆಗೆ ಕ್ರಮ ವಹಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ತಿಳಿಸಿದರು.

ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನಸಭಾ ಸದಸ್ಯ ದೊಡ್ಡನಗೌಡ ಹನುಮಗೌಡ ಪಾಟೀಲ ಇವರು ಕಳೆದ 3 ವರ್ಷಗಳಿಂದ ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಮಂಜೂರು ಮಾಡಲಾಗಿರುವ ವಸತಿ ನಿಲಯಗಳ ಬಗ್ಗೆ , ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಾಗಿ ಹಿಂದುಳಿದ ವರ್ಗಗಳ ಜನರು ವಾಸವಾಗಿದ್ದು, ಹೆಚ್ಚುವರಿಯಾಗಿ ಹಿಂದುಳಿದ ವರ್ಗಗಳ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳನ್ನು ಮಂಜೂರು ಮಾಡುವಂತೆ ಕೋರಿದರು.

ಈ ಸಮಯದಲ್ಲಿ ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕುಷ್ಟಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 10 ಮೆಟ್ರಿಕ್ ಪೂರ್ವ ಹಾಗೂ ನಾಲ್ಕು ಮೆಟ್ರಿಕ್ ನಂತರದ ಒಟ್ಟು 14 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಕಳೆದ ಮೂರು ವರ್ಷದಲ್ಲಿ ಒಟ್ಟು 250 ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿನಿಲಯಗಳ ಬೇಡಿಕೆ ಇದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಬೇಡಿಕೆ ಹಾಗೂ ಅಗತ್ಯತೆ ಅನುಸಾರ ವಿದ್ಯಾರ್ಥಿನಿಲಯಗಳನ್ನು ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಹೃದಯಾಘಾತಕ್ಕೆ ಮತ್ತೊಂದು ಬಲಿ: ಕೋಲಾರದಲ್ಲಿ ಹೆಡ್ ಕಾನ್ಸ್ಟೇಬಲ್ ಸಾವು!

ಕೋಲಾರ: ಹೃದಯಾಘಾತದಿಂದ ಪೊಲೀಸ್ ಮುಖ್ಯಪೇದೆಯೊಬ್ಬರು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ತಾಲೂಕಿನ ಸೀಸಂದ್ರ ಗ್ರಾಮದ ವೆಂಕಟರಮಣಪ್ಪ (50) ಮೃತ ದುರ್ದೈವಿ. ಅವರು ಕರ್ನಾಟಕ ಪೊಲೀಸ್ ಇಲಾಖೆಯ ಕೆಜಿಎಫ್ ಜಿಲ್ಲಾ ವ್ಯಾಪ್ತಿಯ ಊರಿಗಾಂ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇತ್ತೀಚೆಗೆ ತೂಕ ಕಡಿಮೆ ಮಾಡುವ ಉದ್ದೇಶದಿಂದ ವೆಂಕಟರಮಣಪ್ಪ ಡಯಟ್ ಹಾಗೂ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಇಂದು ಮುಂಜಾನೆ ತಮ್ಮ ಮನೆಯಲ್ಲಿ ಹೃದಯಾಘಾತಕ್ಕೊಳಗಾದ ಅವರು, ತಕ್ಷಣ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಈ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಮತ್ತು ಸಹೋದ್ಯೋಗಿಗಳಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಅತಿಥಿ ಶಿಕ್ಷಕಿಗೆ ಲೈಂಗಿಕ ದೌರ್ಜನ್ಯ: ಖಾಯಂ ಶಿಕ್ಷಕನ ವಿರುದ್ಧ ಕೇಸ್ ರದ್ದು ಮಾಡಲು ಹೈಕೋರ್ಟ್ ನಿರಾಕರಣೆ

ಬೆಂಗಳೂರು: ಅತಿಥಿ ಶಿಕ್ಷಕಿಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಆರೋಪಿ ಲಿಂಗರಾಜು ನಾಯಕ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ವಜಾಗೊಳಿಸಿ, ಪ್ರಕರಣದ ಸಂಪೂರ್ಣ ವಿಚಾರಣೆ ನಡೆಯಬೇಕು ಎಂದು ಸೂಚಿಸಿದೆ.

ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಇದು ಸಮ್ಮತಿಯ ಸಂಬಂಧವಲ್ಲ, ಬಲವಂತದ ಲೈಂಗಿಕ ದೌರ್ಜನ್ಯವಾಗಿದೆ ಎಂದು ಸ್ಪಷ್ಟಪಡಿಸಿದೆ. ಆರೋಪಿಯು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಮೊದಲು ನಗ್ನ ಚಿತ್ರಗಳನ್ನು ಪಡೆದು ನಂತರ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೀಠ ಗಮನಿಸಿದೆ.

ಉದ್ಯೋಗ ಕಳೆದುಕೊಳ್ಳುವ ಭಯ ಹಾಗೂ ಸಾರ್ವಜನಿಕ ಅವಮಾನ ಭೀತಿಯಿಂದ ಸಂತ್ರಸ್ತೆಯನ್ನು ಒತ್ತಾಯಿಸಿ ದೌರ್ಜನ್ಯ ನಡೆಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಈ ಹಂತದಲ್ಲಿ ಪ್ರಕರಣ ರದ್ದುಪಡಿಸಲು ಅವಕಾಶ ಇಲ್ಲ ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ:

2023ರಲ್ಲಿ ಶಿವಮೊಗ್ಗದ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ ಮಹಿಳೆಯೊಂದಿಗೆ ಆರೋಪಿ ಪರಿಚಯ ಬೆಳೆಸಿಕೊಂಡಿದ್ದನು. ಬಳಿಕ ಕಚೇರಿಗೆ ಕರೆಯಿಸಿಕೊಂಡು ದೌರ್ಜನ್ಯ ಎಸಗಿದ್ದು, ಕೆಲಸದಿಂದ ತೆಗೆಸುವುದಾಗಿ ಬೆದರಿಸಿ ನಗ್ನ ಚಿತ್ರಗಳನ್ನು ಕಳುಹಿಸಲು ಒತ್ತಾಯಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ಚಿತ್ರಗಳನ್ನು ಆಧಾರ ಮಾಡಿಕೊಂಡು ಹಲವು ಸ್ಥಳಗಳಲ್ಲಿ ದೌರ್ಜನ್ಯ ಮುಂದುವರಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಆರ್ಥಿಕ ಸಂಕಷ್ಟದಿಂದ ವಿಷಯವನ್ನು ಬಹಿರಂಗಪಡಿಸದಿದ್ದರೂ, ಬಳಿಕ ಪತಿಗೆ ಮಾಹಿತಿ ನೀಡಿ ದೂರು ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದು, ಅದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದನು.

ದೆಹಲಿ ಅಗ್ನಿ ಅವಘಡ: ವಸತಿ ಕಟ್ಟಡದಲ್ಲಿ ಬೆಂಕಿ, 8 ಮಂದಿ ಸಾವು

0

ನವದೆಹಲಿ: ನೈಋತ್ಯ ದೆಹಲಿಯ ಪಾಲಂ ಪ್ರದೇಶದಲ್ಲಿರುವ ವಸತಿ ಕಟ್ಟಡವೊಂದರಲ್ಲಿ ಬುಧವಾರ ಬೆಳಗ್ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 8 ಮಂದಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಬೆಳಗ್ಗೆ ಸುಮಾರು 7 ಗಂಟೆಯ ಸುಮಾರಿಗೆ ಅಗ್ನಿ ಅವಘಡದ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಅಗ್ನಿಶಾಮಕ ದಳದ 30ಕ್ಕೂ ಹೆಚ್ಚು ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಕಟ್ಟಡದ ಒಳಗೆ ಇನ್ನೂ ಕೆಲವರು ಸಿಲುಕಿರುವ ಶಂಕೆಯಿದ್ದು, ಅವರನ್ನು ರಕ್ಷಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ. ಅಗ್ನಿಶಾಮಕ ಸಿಬ್ಬಂದಿಗೆ ನೆರವಾಗಲು ಪೊಲೀಸರು ಸಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಈ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ಕುರಿತು ಸಂಬಂಧಿಸಿದ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಭಾರತೀಯ ರೈಲ್ವೆಯಿಂದ “ಶ್ರೀ ರಾಮಾಯಣ ಯಾತ್ರೆ” ಪ್ರಕಟ: ದಿನಾಂಕ, ಮಾರ್ಗ, ವೆಚ್ಚದ ಸಂಪೂರ್ಣ ವಿವರ ಇಲ್ಲಿದೆ

0

ನವದೆಹಲಿ: ದೇಶದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಹೆಚ್ಚುತ್ತಿರುವ ಆಸಕ್ತಿ ನಡುವೆಯೇ, ಭಾರತೀಯ ರೈಲ್ವೆ ‘ಶ್ರೀ ರಾಮಾಯಣ ಯಾತ್ರೆ’ ಎಂಬ 17 ದಿನಗಳ ವಿಶೇಷ ರೈಲು ಪ್ರವಾಸವನ್ನು ಘೋಷಿಸಿದೆ. ಈ ಯಾತ್ರೆ ಮಾರ್ಚ್ 30ರಿಂದ ಆರಂಭವಾಗಲಿದೆ.

‘ಭಾರತ್ ಗೌರವ್ ಡಿಲಕ್ಸ್ ಎಸಿ ಟೂರಿಸ್ಟ್’ ರೈಲಿನ ಮೂಲಕ ನಡೆಯಲಿರುವ ಈ ಪ್ರವಾಸದಲ್ಲಿ ಭಗವಾನ್ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಭಾರತ ಹಾಗೂ ನೇಪಾಳದ ಪ್ರಮುಖ ತೀರ್ಥಕ್ಷೇತ್ರಗಳನ್ನು ಭೇಟಿ ನೀಡಲಾಗುತ್ತದೆ.

ಪ್ರವಾಸಿಗರ ಆರಾಮಕ್ಕಾಗಿ 1AC, 2AC ಮತ್ತು 3AC ಬೋಗಿಗಳೊಂದಿಗೆ ಆಧುನಿಕ ಅಡುಗೆಮನೆ, ರೆಸ್ಟೋರೆಂಟ್‌, ಸೆನ್ಸಾರ್ ಆಧಾರಿತ ಶೌಚಾಲಯಗಳು, ಸ್ನಾನಗೃಹಗಳು ಮತ್ತು ಫುಟ್ ಮಸಾಜರ್‌ಗಳಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಸಿಸಿಟಿವಿ ಹಾಗೂ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.

ಈ ಯಾತ್ರೆ ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಆರಂಭವಾಗಿ 16 ರಾತ್ರಿ ಹಾಗೂ 17 ದಿನಗಳ ಕಾಲ ನಡೆಯಲಿದೆ. ಒಟ್ಟು 7,560 ಕಿಲೋಮೀಟರ್ ಪ್ರಯಾಣದಲ್ಲಿ ಅಯೋಧ್ಯೆ, ವಾರಾಣಸಿ, ಪ್ರಯಾಗ್‌ರಾಜ್‌, ನಾಸಿಕ್‌, ಹಂಪಿ, ರಾಮೇಶ್ವರಂ ಸೇರಿದಂತೆ ಹಲವು ಪ್ರಮುಖ ಧಾರ್ಮಿಕ ತಾಣಗಳಿಗೆ ಭೇಟಿ ನೀಡಲಾಗುತ್ತದೆ.

ಜತೆಗೆ ನೇಪಾಳದ ಜನಕಪುರದಲ್ಲಿರುವ ಸೀತಾ ದೇವಿಯ ಜನ್ಮಸ್ಥಳಕ್ಕೂ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ. ಗಂಗಾ ಆರತಿ, ತ್ರಿವೇಣಿ ಸಂಗಮ ಸೇರಿದಂತೆ ಪ್ರಮುಖ ಆಧ್ಯಾತ್ಮಿಕ ಅನುಭವಗಳನ್ನೂ ಈ ಪ್ಯಾಕೇಜ್ ಒಳಗೊಂಡಿದೆ.

ಈ ಯಾತ್ರೆಗೆ ಒಟ್ಟು 150 ಪ್ರಯಾಣಿಕರಿಗೆ ಮಾತ್ರ ಅವಕಾಶವಿದ್ದು, ಟಿಕೆಟ್ ದರವು ಆಯ್ಕೆ ಮಾಡಿದ ಬೋಗಿಗಳ ಆಧಾರದ ಮೇಲೆ ನಿಗದಿಯಾಗಿದೆ. ಕನಿಷ್ಠ ದರವು ಸುಮಾರು 1.11 ಲಕ್ಷದಿಂದ ಪ್ರಾರಂಭವಾಗಿ, ಪ್ರಥಮ ದರ್ಜೆಗೆ 1.64 ಲಕ್ಷದವರೆಗೆ ಇದೆ.

ಪ್ಯಾಕೇಜ್‌ನಲ್ಲಿ ರೈಲು ಪ್ರಯಾಣ, ತ್ರೀ-ಸ್ಟಾರ್ ಹೋಟೆಲ್ ವಾಸ್ತವ್ಯ, ಸಸ್ಯಾಹಾರಿ ಊಟ, ಸ್ಥಳೀಯ ಪ್ರವಾಸಕ್ಕೆ ಎಸಿ ಬಸ್ ವ್ಯವಸ್ಥೆ, ವಿಮೆ ಹಾಗೂ ಟೂರ್ ಗೈಡ್ ಸೌಲಭ್ಯಗಳನ್ನೂ ಒಳಗೊಂಡಿವೆ ಎಂದು ಐಆರ್‌ಸಿಟಿಸಿ ತಿಳಿಸಿದೆ.

ಪೆನ್‌ಡ್ರೈವ್ ಕೇಸ್‌ಗೆ ಟ್ವಿಸ್ಟ್: 13,712 ಪುಟ ಚಾರ್ಜ್‌ಶೀಟ್, 39 ಜನರ ವಿರುದ್ಧ ಆರೋಪ – ಪ್ರಜ್ವಲ್ ಹೆಸರು ಗೈರು!

0

ಹಾಸನ: ರಾಜ್ಯವನ್ನು ನಡುಗಿಸಿದ್ದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ವಿಡಿಯೋ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. SIT 13,712 ಪುಟಗಳ ಭಾರೀ ಚಾರ್ಜ್‌ಶೀಟ್ ಸಲ್ಲಿಸಿದ್ದು, 52 ಮಂದಿಯಲ್ಲಿ 39 ಜನರ ವಿರುದ್ಧ ಆರೋಪ ಸಾಬೀತಾಗಿದೆ.

ಜೆಡಿಎಸ್ ಏಜೆಂಟ್ ಆಗಿದ್ದ ವಕೀಲ ಪೂರ್ಣಚಂದ್ರ ನೀಡಿದ ದೂರಿನ ಆಧಾರದ ಮೇಲೆ ಆರಂಭವಾದ ಈ ತನಿಖೆಯಲ್ಲಿ, ಆರೋಪಿಗಳು 70ಕ್ಕೂ ಹೆಚ್ಚು ಪೆನ್‌ಡ್ರೈವ್‌ಗಳನ್ನು ಖರೀದಿಸಿ ವಿಡಿಯೋ ಹಂಚಿಕೆ ಮಾಡಿರುವುದು ಪತ್ತೆಯಾಗಿದೆ.

277 ಸಾಕ್ಷಿಗಳ ಹೇಳಿಕೆ, ತಾಂತ್ರಿಕ ಸಾಕ್ಷ್ಯಗಳು ಮತ್ತು FSL ವರದಿ ಆಧರಿಸಿ ದೋಷಾರೋಪಣೆ ಮಾಡಲಾಗಿದೆ.

ಎ1 ನವೀನ್‌ನಿಂದ ಹಿಡಿದು ಕಾರ್ತಿಕ್, ಚೇತನ್, ಲಿಖಿತ್ ಗೌಡ ಸೇರಿ 39 ಮಂದಿಯ ವಿರುದ್ಧ ಪ್ರಕರಣ ಬಲವಾಗಿದ್ದು, ಬಿಜೆಪಿ ನಾಯಕ ಪ್ರೀತಂ ಗೌಡ ಹಾಗೂ ಇತರ ರಾಜಕೀಯ ಸಂಪರ್ಕಗಳು ಪ್ರಕರಣಕ್ಕೆ ಮತ್ತಷ್ಟು ತೂಕ ತಂದಿವೆ.

ಮಹಿಳೆಯರ ಸಮ್ಮತಿಯಿಲ್ಲದೆ ವಿಡಿಯೋ ಚಿತ್ರೀಕರಿಸಿ ಪೆನ್‌ಡ್ರೈವ್ ಮೂಲಕ ಹಂಚಿಕೆ ಮಾಡಿರುವ ಆರೋಪಗಳು ದೃಢಪಟ್ಟಿವೆ ಎಂದು SIT ಹೇಳಿದೆ.

ಆದರೆ ಇಡೀ ಪ್ರಕರಣದಲ್ಲಿ ಅತ್ಯಂತ ಕುತೂಹಲಕಾರಿ ಸಂಗತಿ ಎಂದರೆ, ಪ್ರಜ್ವಲ್ ರೇವಣ್ಣ ಅವರ ಹೆಸರು ಈ ಚಾರ್ಜ್‌ಶೀಟ್‌ನಲ್ಲಿ ಕಾಣಿಸದಿರುವುದು.

ಇದರಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮುಂದಿನ ನ್ಯಾಯಾಂಗ ಕ್ರಮಗಳತ್ತ ಎಲ್ಲರ ಗಮನ ನೆಟ್ಟಿದೆ.

ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ!

ಬೆಂಗಳೂರು: ಕರ್ನಾಟಕದಾದ್ಯಂತ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಗರಿಷ್ಠ ತಾಪಮಾನ 33°C ಮತ್ತು ಕನಿಷ್ಠ 21°C ಆಗಿರಲಿದೆ. ಬೆಂಗಳೂರಿನಲ್ಲಿ ಗರಿಷ್ಠ 32°C ಮತ್ತು ಕನಿಷ್ಠ 19°C ತಾಪಮಾನ ದಾಖಲಾಗುವ ಸಾಧ್ಯತೆ ಇದೆ.

ಇಡೀ ರಾಜ್ಯದಲ್ಲಿ ಹಗಲು ಹಗುರ ಮಳೆಯ ಸಾಧ್ಯತೆ ಇರುವುದರಿಂದ, ಕೆಲವು ಪ್ರದೇಶಗಳಲ್ಲಿ ಸಾಯಂಕಾಲ ಅಥವಾ ರಾತ್ರಿ ವೇಳೆ ಗುಡುಗು ಸಹಿತ ಮಳೆ ಬರಬಹುದು. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ – ಬೀದರ್, ಕಲಬುರಗಿ, ರಾಯಚೂರು – ತೀವ್ರ ಬಿಸಿಲಿನ ನಡುವೆ ಕೂಡ ಗುಡುಗು ಮಳೆಯ ನಿರೀಕ್ಷೆ ಇದೆ, ಗರಿಷ್ಠ ತಾಪಮಾನ 37°C ವರೆಗೆ ಇರಬಹುದು.

ರಾಜ್ಯದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಮಳೆಯ ಸಂಭವ ಇದೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ಕೆಲವು ಭಾಗಗಳಲ್ಲಿ ಮೋಡದ ವಾತಾವರಣವಿದ್ದು, ಸಂಜೆಯ ವೇಳೆಗೆ ಮಳೆಯಾಗಬಹುದು.

ಹುಬ್ಬಳ್ಳಿ-ಧಾರವಾಡದಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಮಳೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮಲೆನಾಡು ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು, ತಾಪಮಾನವು ಇತರ ಜಿಲ್ಲೆಗಳಿಗಿಂತ ಕಡಿಮೆ ಇರಲಿದೆ. ಹಾವೇರಿ ಮತ್ತು ಚಿತ್ರದುರ್ಗ ಭಾಗಗಳಲ್ಲಿ ಹಗಲು ಬಿಸಿಲು ತೀವ್ರವಾಗಿರಲಿದ್ದು, ಸಂಜೆಯ ಹೊತ್ತಿಗೆ ಆಕಾಶ ಮೋಡದಿಂದ ಕೂಡಿರುತ್ತದೆ.

 

ಇಂದಿನಿಂದ SSLC ಪರೀಕ್ಷೆ: ವಿದ್ಯಾರ್ಥಿಗಳಿಗೆ ಶುಭ ಕೋರಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ!

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಪರೀಕ್ಷೆ SSLC ಪರೀಕ್ಷೆ-1 ಇಂದಿನಿಂದ ಆರಂಭವಾಗಿದೆ.

ಪರೀಕ್ಷೆಗೆ ಪರೀಕ್ಷಾ ಬೋರ್ಡ್ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಹದ್ದಿನ ಕಣ್ಣು ಇಡಲಾಗಿದೆ. ಈ ದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:15 ರವರೆಗೆ ಪರೀಕ್ಷೆ ನಡೆಯಲಿದೆ.

ಒಟ್ಟು 8,65,988 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಇದರಲ್ಲಿ 7,75,979 ಹೊಸ ವಿದ್ಯಾರ್ಥಿಗಳು ಮತ್ತು 62,938 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ. ಪರೀಕ್ಷೆ 2,870 ಕೇಂದ್ರಗಳಲ್ಲಿ ನಡೆಯಲಿದೆ. ಮಲ್ಲೇಶ್ವರಂ ಕರ್ನಾಟಕ ಪಬ್ಲಿಕ್ ಶಾಲೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಶಿಕ್ಷಣ ಸಚಿವ ಮಧುಬಂಗಾರಪ್ಪ ವಿದ್ಯಾರ್ಥಿಗಳಿಗೆ ಶುಭಹಾರೈಸಿ, “ಪರೀಕ್ಷೆ ಚೆನ್ನಾಗಿ ಬರೆಯಿರಿ, ಭಯಬಿಟ್ಟು ಬರೆಯಿರಿ” ಎಂದು ಸಲಹೆ ನೀಡಿದ್ದಾರೆ.

ಪರೀಕ್ಷೆಯ ವೇಳಾಪಟ್ಟಿ:

  • ಮಾರ್ಚ್ 18: ಪ್ರಥಮ ಭಾಷೆ
  • ಮಾರ್ಚ್ 23: ವಿಜ್ಞಾನ
  • ಮಾರ್ಚ್ 25: ದ್ವಿತೀಯ ಭಾಷೆ
  • ಮಾರ್ಚ್ 28: ಗಣಿತ
  • ಮಾರ್ಚ್ 30: ತೃತೀಯ ಭಾಷೆ
  • ಏಪ್ರಿಲ್ 2: ಸಮಾಜ ವಿಜ್ಞಾನ

ಪರೀಕ್ಷಾ ಭದ್ರತೆ ಕ್ರಮಗಳು:

  • ಇಡೀ ಪರೀಕ್ಷಾ ಪ್ರಕ್ರಿಯೆ ವೆಬ್‌ಕ್ಯಾಸ್ಟಿಂಗ್ ಮೂಲಕ ಮಾನಿಟರ್ ಮಾಡಲಾಗುತ್ತದೆ.
  • ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ನಿಷೇಧಾ ಪ್ರದೇಶ ಜಾರಿಯಾಗಿದ್ದು, ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿ, ಸೈಬರ್ ಸೆಂಟರ್, ಕಂಪ್ಯೂಟರ್ ಶಾಪ್ ಮುಚ್ಚಲಾಗುತ್ತದೆ.
  • ಹಿಂದಿನ ಅಕ್ರಮ ಪ್ರಕರಣಗಳಲ್ಲಿ ಭಾಗಿಯಾಗಿದ್ದವರಿಗೆ ವಿಶೇಷ ಪೊಲೀಸ್ ನಿಗಾ.
  • ಎಲ್ಲಾ ಕೇಂದ್ರಗಳಲ್ಲಿ CCTV ಕ್ಯಾಮೆರಾ ಅಳವಡಿಕೆ.
  • ಸುಳ್ಳು ಸುದ್ದಿಯನ್ನು ಹರಡುವ ಸಾಮಾಜಿಕ ಜಾಲತಾಣಗಳ ಮೇಲೆ ಗಮನ.
  • ಪ್ರಶ್ನೆ ಪತ್ರಿಕೆ ಭದ್ರತೆ, ಸಮಯಕ್ಕಿಂತ ಮೊದಲು ಓಪನ್ ಮಾಡಬಾರದು. ಉಲ್ಲಂಘನೆ ಕಂಡುಬಂದರೆ ಕಾನೂನು ಕ್ರಮ.
  • ಪರೀಕ್ಷಾ ಕೇಂದ್ರದಲ್ಲಿ ಫೋನ್, ಎಲೆಕ್ಟ್ರಾನಿಕ್ ಉಪಕರಣಗಳು ನಿಷೇಧ.
  • ಪ್ರತಿ ಕೇಂದ್ರಕ್ಕೆ ಪೊಲೀಸ್ ಭದ್ರತೆ, ಸಿಟ್ಟಿಂಗ್ ಸ್ಕ್ವಾಡ್, ಫ್ಲೈಯಿಂಗ್ ಸ್ಕ್ವಾಡ್ ನಿಯೋಜನೆ. ಜಿಲ್ಲೆಗಳಲ್ಲಿಯೂ ಎಸ್ಪಿ, ಡಿಸಿಗಳ ನೇತೃತ್ವದಲ್ಲಿ ಭದ್ರತೆ.

ಮಲಬದ್ಧತೆ ಸಮಸ್ಯೆ ಇದೆಯಾ? ಮಜ್ಜಿಗೆಯಲ್ಲಿ ಇವು ಸೇರಿಸಿ ಕುಡಿದರೆ ಸಿಗುತ್ತೆ ಪರಿಹಾರ!

0

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚುತ್ತಿರುವುದು ವೈದ್ಯಕೀಯ ತಜ್ಞರ ಆತಂಕಕ್ಕೆ ಕಾರಣವಾಗಿದೆ. ಆಹಾರ ಪದ್ಧತಿ ಹಾಗೂ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಗಳಿಂದಾಗಿ ಈ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ.

ದೀರ್ಘಕಾಲ ಮಲಬದ್ಧತೆಯನ್ನು ನಿರ್ಲಕ್ಷಿಸಿದರೆ ಅದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಪೈಲ್ಸ್ ಸೇರಿದಂತೆ ಇತರ ಜೀರ್ಣಾಂಗ ಸಂಬಂಧಿತ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಮಲಬದ್ಧತೆ ಆರಂಭಿಕ ಹಂತದಲ್ಲೇ ಗಮನ ಹರಿಸುವುದು ಮುಖ್ಯ. ವೈದ್ಯರನ್ನು ಸಂಪರ್ಕಿಸುವ ಮೊದಲು ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದರಿಂದ ಸಮಸ್ಯೆ ನಿವಾರಣೆ ಸಾಧ್ಯ ಎಂದು ತಜ್ಞರು ತಿಳಿಸಿದ್ದಾರೆ.

ಜೀರಿಗೆ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿದ ಮಜ್ಜಿಗೆ ಸೇವನೆ ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ. ದಿನಕ್ಕೆ ಎರಡು ಬಾರಿ ಈ ಮಿಶ್ರಣ ಸೇವಿಸಿದರೆ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ ಎನ್ನಲಾಗುತ್ತಿದೆ.

ಇದರ ಜೊತೆಗೆ ಆಹಾರದಲ್ಲಿ ನಾರಿನಾಂಶ ಹೆಚ್ಚಿರುವ ಪದಾರ್ಥಗಳನ್ನು ಸೇರಿಸಿಕೊಳ್ಳುವುದು ಅಗತ್ಯ. ಹಣ್ಣುಗಳು, ತರಕಾರಿಗಳು ಹಾಗೂ ಸಾಕಷ್ಟು ನೀರು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸಿ ಮಲಬದ್ಧತೆ ಸಮಸ್ಯೆಯನ್ನು ನಿಯಂತ್ರಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಸಮಸ್ಯೆ ಮುಂದುವರಿದಲ್ಲಿ ವೈದ್ಯರ ಸಲಹೆ ಪಡೆಯುವುದು ಅನಿವಾರ್ಯವಾಗಿದೆ.

ರಾಯಚೂರು| ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ!

ರಾಯಚೂರು: ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಅರಕೇರಾ ತಾಲ್ಲೂಕಿನ ಹಾಳಜಾಡಲದಿನ್ನಿ ಗ್ರಾಮದಲ್ಲಿ ಜರುಗಿದೆ.

ರೈತ ಶರೀಫ್ ಸಾಬ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ. ಗುಡುಗು ಸಹಿತ ಮಳೆಯ ಸಂದರ್ಭದಲ್ಲಿ ಸಂಭವಿಸಿದ ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಂಗಳವಾರ ರಾತ್ರಿ ಜಿಲ್ಲೆಯಾದ್ಯಂತ ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗುತ್ತಿತ್ತು. ಈ ವೇಳೆ ಜಮೀನಿನಲ್ಲಿದ್ದ ಎತ್ತರದ ತೆಂಗಿನ ಮರಕ್ಕೆ ನೇರವಾಗಿ ಸಿಡಿಲು ಬಡಿದಿದೆ. ಸಿಡಿಲು ಬಡಿದ ತೀವ್ರತೆಗೆ ಮರಕ್ಕೆ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಮರ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಅದೃಷ್ಟವಶಾತ್ ಘಟನೆಯ ವೇಳೆ ಮರದ ಹತ್ತಿರ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

error: Content is protected !!