ಬೆಂಗಳೂರು: ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ವತಿಯಿಂದ ಆಗಸ್ಟ್ 27ರಂದು ದೇಶಾದ್ಯಂತ ಬೃಹತ್ ಮಟ್ಟದಲ್ಲಿ ‘ಖೇಲೋ ಇಂಡಿಯಾ ಸಂವಾದ – ಖೇಲ್ ಕೀ ಬಾತ್, ಪ್ರಧಾನ ಮಂತ್ರಿ ಮೋದಿ ಕೆ ಸಾಥ್’ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ದೇಶದ 1,500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ನಡೆಯಲಿರುವ ವರ್ಚುವಲ್ ಸಂವಾದದಲ್ಲಿ ದೇಶದ ನೂರಾರು ಯುವಕರು ಹಾಗೂ ಕ್ರೀಡಾಪಟುಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರಿನಲ್ಲಿ ಯಲಹಂಕ ನ್ಯೂಟೌನ್ನ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಸಕ್ತರು ‘ಮೈ ಭಾರತ್’ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಧೀನದ ಮೈ ಭಾರತ್ ತಿಳಿಸಿದೆ.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಯುವ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕ್ರೀಡೆ, ಯುವ ನಾಯಕತ್ವ ಹಾಗೂ ವಿಕಸಿತ ಭಾರತ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಪ್ರಧಾನಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ಬಳಿಕ ಆಯಾ ಸ್ಥಳಗಳಲ್ಲಿ ಭೌತಿಕ ಸಂವಾದ ಕಾರ್ಯಕ್ರಮಗಳು ನಡೆಯಲಿವೆ.
ಐಐಟಿ, ಐಐಎಂ, ಎನ್ಐಟಿ, ಏಮ್ಸ್ ಸೇರಿದಂತೆ ದೇಶದ ಪ್ರಮುಖ ವೈದ್ಯಕೀಯ ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲಿವೆ.
2036ರ ಒಲಿಂಪಿಕ್ಸ್ ಮೇಲೆ ಗಮನ
ದೇಶದ ಕ್ರೀಡಾ ಭವಿಷ್ಯ ಹಾಗೂ ಮುನ್ನೆಲೆಗೆ ಬರುತ್ತಿರುವ ಯುವ ಕ್ರೀಡಾಪಟುಗಳು ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ನೇರವಾಗಿ ಹಂಚಿಕೊಳ್ಳಲು ಈ ಸಂವಾದ ವೇದಿಕೆಯಾಗಲಿದೆ.
ದೇಶದ ಕ್ರೀಡಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು, ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾ ಮೂಲಸೌಕರ್ಯ ಹಾಗೂ ತರಬೇತಿ ಸೌಲಭ್ಯಗಳನ್ನು ವಿಸ್ತರಿಸುವುದು, 2036ರ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಯುವ ನಾಯಕತ್ವವನ್ನು ಉತ್ತೇಜಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶಗಳಾಗಿವೆ.
ಇದೇ ವೇಳೆ ಕ್ರೀಡಾಸಕ್ತ ಯುವಕರಿಗೆ ಭಾರತದ ದಿಗ್ಗಜ ಕ್ರೀಡಾಪಟುಗಳೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶವೂ ಸಿಗಲಿದೆ. ದೀಪಾ ಕರ್ಮಾಕರ್, ಸೈನಾ ನೆಹ್ವಾಲ್, ಗಗನ್ ನಾರಂಗ್, ಪಿ.ಆರ್. ಶ್ರೀಜೇಶ್, ಮೇರಿ ಕೋಮ್, ಬೈಚುಂಗ್ ಭುಟಿಯಾ, ಪುಲ್ಲೇಲ ಗೋಪಿಚಂದ್, ಅಂಜು ಬಾಬಿ ಜಾರ್ಜ್, ಕರ್ಣಂ ಮಲ್ಲೇಶ್ವರಿ, ಮೀರಾಬಾಯಿ ಚಾನು ಹಾಗೂ ಪಿ.ಟಿ. ಉಷಾ ಸೇರಿದಂತೆ ಹಲವು ಕ್ರೀಡಾ ತಾರೆಯರು ತಮ್ಮ ಕ್ರೀಡಾ ಪಯಣ, ಸವಾಲುಗಳು ಮತ್ತು ಅನುಭವಗಳನ್ನು ಯುವಕರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಇವರೊಂದಿಗೆ ಸಂಸದರು, ಶಾಸಕರು, ಕೇಂದ್ರ ಸಚಿವರು ಹಾಗೂ ವಿವಿಧ ರಾಜ್ಯಗಳ ಕ್ರೀಡಾ ಸಚಿವರು ಕೂಡ ಸಂವಾದದಲ್ಲಿ ಭಾಗವಹಿಸಿ ಯುವಕರ ಸಲಹೆಗಳನ್ನು ಸ್ವೀಕರಿಸಲಿದ್ದಾರೆ.

