ನವದೆಹಲಿ: ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ, ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ನಾಯಕತ್ವದ ಮೂಲಕ ಗಮನ ಸೆಳೆದಿದ್ದಷ್ಟೇ ಅಲ್ಲದೆ, ತಂಡದ ಆಯ್ಕೆ ವಿಚಾರದಲ್ಲೂ ತಮ್ಮ ನಿಲುವಿಗೆ ಬದ್ಧರಾಗಿದ್ದರು. ಇದೀಗ 2003ರ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ನಡೆದ ಟೀಂ ಇಂಡಿಯಾ ಆಯ್ಕೆ ಸಭೆಯ ಕುತೂಹಲಕಾರಿ ಘಟನೆಯೊಂದನ್ನು ಗಂಗೂಲಿ ಹಂಚಿಕೊಂಡಿದ್ದಾರೆ.
ಅನಿಲ್ ಕುಂಬ್ಳೆ ಅವರನ್ನು 2003ರ ಆಸ್ಟ್ರೇಲಿಯಾ ಪ್ರವಾಸದ ತಂಡದಿಂದ ಕೈಬಿಡಲು ಆಯ್ಕೆಗಾರರು ನಿರ್ಧರಿಸಿದ್ದರು. ಆದರೆ ಗಂಗೂಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಕುಂಬ್ಳೆ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವಂತೆ ಪಟ್ಟು ಹಿಡಿದಿದ್ದರು. ಅಷ್ಟೇ ಅಲ್ಲದೆ, ಅವರ ಹೆಸರನ್ನು ತಂಡದಲ್ಲಿ ಸೇರಿಸದಿದ್ದರೆ ಸೆಲೆಕ್ಷನ್ ಶೀಟ್ಗೆ ಸಹಿ ಹಾಕುವುದಿಲ್ಲ ಎಂದು ಆಯ್ಕೆಗಾರರಿಗೆ ಸ್ಪಷ್ಟವಾಗಿ ತಿಳಿಸಿದ್ದರು.
ಕೆಲ ತಿಂಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೌರವ್ ಗಂಗೂಲಿ, ಆ ಘಟನೆಯ ಸಂಪೂರ್ಣ ವಿವರವನ್ನು ಹಂಚಿಕೊಂಡಿದ್ದಾರೆ. 2003ರ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಹೈದರಾಬಾದ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ಭಾರತ ಗೆದ್ದಿತ್ತು. ಅದೇ ರಾತ್ರಿ ಸುಮಾರು 11.30ಕ್ಕೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡಲು ಹೋಟೆಲ್ನಲ್ಲಿ ಸಭೆ ಕರೆಯಲಾಗಿತ್ತು.
ತಾವು ಸಭೆಯ ಕೊಠಡಿಗೆ ಪ್ರವೇಶಿಸಿದಾಗಲೇ ಆಯ್ಕೆಗಾರರು ಅನಿಲ್ ಕುಂಬ್ಳೆ ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿರುವುದು ತಿಳಿಯಿತು ಎಂದು ಗಂಗೂಲಿ ಹೇಳಿದ್ದಾರೆ. ಈ ವೇಳೆ ತಮ್ಮೊಂದಿಗೆ ಇದ್ದ ಅಂದಿನ ಕೋಚ್ ಜಾನ್ ರೈಟ್ ಕೂಡ ಆತಂಕಗೊಂಡಿದ್ದರು. ಆಯ್ಕೆಗಾರರು ಯಾವುದೇ ಕಾರಣಕ್ಕೂ ಕುಂಬ್ಳೆ ಅವರನ್ನು ತಂಡಕ್ಕೆ ಸೇರಿಸಲು ಸಿದ್ಧರಿರಲಿಲ್ಲ ಎಂದು ಗಂಗೂಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗಂಗೂಲಿ, ಕುಂಬ್ಳೆ ಅವರನ್ನು ತಂಡದಿಂದ ಕೈಬಿಟ್ಟರೆ ಬಹುಶಃ ಅವರು ಮತ್ತೆ ಟೀಂ ಇಂಡಿಯಾ ಪರ ಆಡಲು ಸಾಧ್ಯವಾಗದೇ ಹೋಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು. ಭಾರತದ ಪ್ರಮುಖ ಪಂದ್ಯ ಗೆಲ್ಲಿಸುವ ಬೌಲರ್ ಆಗಿದ್ದ ಕುಂಬ್ಳೆ ಅವರನ್ನು ಯಾವುದೇ ಕಾರಣಕ್ಕೂ ಆಸ್ಟ್ರೇಲಿಯಾ ಪ್ರವಾಸದಿಂದ ಕೈಬಿಡಬಾರದು ಎಂದು ಆಯ್ಕೆಗಾರರ ಮುಂದೆ ಗಂಗೂಲಿ ವಾದಿಸಿದ್ದರು.
ಆದರೂ ಆಯ್ಕೆಗಾರರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದಾಗ, ಗಂಗೂಲಿ ಮತ್ತಷ್ಟು ಕಠಿಣ ನಿಲುವು ತಾಳಿದರು. ಕುಂಬ್ಳೆ ಅವರ ಹೆಸರನ್ನು ತಂಡಕ್ಕೆ ಸೇರಿಸದಿದ್ದರೆ ಸೆಲೆಕ್ಷನ್ ಶೀಟ್ಗೆ ತಾವು ಸಹಿ ಹಾಕುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.
ಕುಂಬ್ಳೆ ಭಾರತದ ಅತಿ ದೊಡ್ಡ ಮ್ಯಾಚ್ ವಿನ್ನರ್ ಎಂದ ಗಂಗೂಲಿ
ಅನಿಲ್ ಕುಂಬ್ಳೆ ಅವರ ಕೊಡುಗೆಯನ್ನು ಸ್ಮರಿಸಿದ ಸೌರವ್ ಗಂಗೂಲಿ, ಭಾರತೀಯ ಕ್ರಿಕೆಟ್ನ ಕಳೆದ 20-25 ವರ್ಷಗಳ ಇತಿಹಾಸದಲ್ಲಿ ಕುಂಬ್ಳೆ ಅವರಿಗಿಂತ ದೊಡ್ಡ ಮ್ಯಾಚ್ ವಿನ್ನರ್ ಮತ್ತೊಬ್ಬರಿಲ್ಲ ಎಂದು ಶ್ಲಾಘಿಸಿದ್ದಾರೆ.
ಸಚಿನ್ ತೆಂಡುಲ್ಕರ್, ವೇಗವಾಗಿ 300 ವಿಕೆಟ್ಗಳ ಗಡಿ ದಾಟಿದ ರವಿಚಂದ್ರನ್ ಅಶ್ವಿನ್ ಹಾಗೂ ಈ ಕಾಲದ ಪ್ರಮುಖ ರನ್ ಸ್ಕೋರರ್ ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ ಭಾರತಕ್ಕೆ ಕುಂಬ್ಳೆ ಅವರಿಗಿಂತ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಆಟಗಾರ ಮತ್ತೊಬ್ಬರಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ಗಂಗೂಲಿ ನಿರ್ಧಾರ ಸರಿ ಎಂದು ಸಾಬೀತುಪಡಿಸಿದ ಕುಂಬ್ಳೆ
ಇತ್ತ, ಆಯ್ಕೆಗಾರರು ಕುಂಬ್ಳೆ ಅವರನ್ನು ತಂಡಕ್ಕೆ ಸೇರಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಒಂದು ವೇಳೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕುಂಬ್ಳೆ ವಿಫಲರಾದರೆ, ಅವರಿಗಿಂತ ಮೊದಲು ತಂಡದಿಂದ ಹೊರಬೀಳುವ ವ್ಯಕ್ತಿ ಸೌರವ್ ಗಂಗೂಲಿ ಆಗಿರುತ್ತಾರೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು.
ಆದರೆ ಪ್ರವಾಸದಲ್ಲಿ ಅನಿಲ್ ಕುಂಬ್ಳೆ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು, ಆ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ 80ಕ್ಕೂ ಅಧಿಕ ವಿಕೆಟ್ಗಳನ್ನು ಕಬಳಿಸಿದ್ದರು. ಇದರೊಂದಿಗೆ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಸ್ಪಿನ್ನರ್ ಎಂಬ ವಿಶೇಷ ದಾಖಲೆಯನ್ನೂ ನಿರ್ಮಿಸಿದ್ದರು ಎಂದು ಗಂಗೂಲಿ ತಿಳಿಸಿದ್ದಾರೆ.
ಹೀಗಾಗಿ 2003ರ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಸೌರವ್ ಗಂಗೂಲಿ ತೆಗೆದುಕೊಂಡಿದ್ದ ಕಠಿಣ ನಿರ್ಧಾರ, ಅನಿಲ್ ಕುಂಬ್ಳೆ ಅವರ ವೃತ್ತಿಜೀವನದ ಮಹತ್ವದ ತಿರುವಾಗಿ ಪರಿಣಮಿಸಿತು. ನಾಯಕನಾಗಿ ಆಟಗಾರನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆಯ್ಕೆಗಾರರ ವಿರುದ್ಧವೂ ನಿಂತಿದ್ದ ಗಂಗೂಲಿ ಅವರ ಈ ನಡೆ ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ.


