ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಜನರಿಗೆ ಶ್ರವಣ ಹಾಗೂ ಮಾತಿನ ಸಮಸ್ಯೆಗಳಿಗೆ ತಾಲೂಕು ಮಟ್ಟದಲ್ಲೇ ಚಿಕಿತ್ಸೆ ಮತ್ತು ಪರೀಕ್ಷೆ ದೊರೆಯುವಂತೆ ಮಾಡಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ರಾಜ್ಯದ 50 ತಾಲೂಕು ಆಸ್ಪತ್ರೆಗಳಲ್ಲಿ ಶ್ರವಣ-ಮಾತಿನ ಚಿಕಿತ್ಸಾ ಸೇವೆ ಆರಂಭಿಸಲು ಸರ್ಕಾರ ಆದೇಶಿಸಿದೆ.
ಇದರ ಭಾಗವಾಗಿ ಪ್ರತಿ ತಾಲೂಕು ಆಸ್ಪತ್ರೆಗೆ ಅಗತ್ಯವಿರುವ ಆಡಿಯಾಲಜಿ ಉಪಕರಣಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ. ಪ್ರತಿ ಆಸ್ಪತ್ರೆಗೆ ಸುಮಾರು ₹40.78 ಲಕ್ಷ ಮೌಲ್ಯದ ಉಪಕರಣ ಒದಗಿಸಲು ನಿರ್ಧರಿಸಲಾಗಿದ್ದು, ಒಟ್ಟು ₹20.39 ಕೋಟಿ ವೆಚ್ಚವಾಗಲಿದೆ.
50 ಆಡಿಯಾಲಜಿಸ್ಟ್ಗಳ ನೇಮಕ:
ಪ್ರತಿ ತಾಲೂಕು ಆಸ್ಪತ್ರೆಗೆ ಒಬ್ಬ ಆಡಿಯಾಲಜಿಸ್ಟ್ರನ್ನು ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ. ಆಡಿಯಾಲಜಿಸ್ಟ್ಗಳಿಗೆ ತಿಂಗಳಿಗೆ ₹30 ಸಾವಿರ ಗೌರವಧನ ನೀಡಲಾಗುತ್ತದೆ. 50 ಆಡಿಯಾಲಜಿಸ್ಟ್ಗಳಿಗೆ ವಾರ್ಷಿಕವಾಗಿ ಸುಮಾರು ₹1.80 ಕೋಟಿ ವೆಚ್ಚವಾಗಲಿದೆ.
ಈ ಸೇವೆ ಆರಂಭವಾಗುವುದರಿಂದ ಗ್ರಾಮೀಣ ಪ್ರದೇಶದ ಜನರು ಕಿವಿ ಮತ್ತು ಶ್ರವಣ ಸಮಸ್ಯೆಗಳ ಪರೀಕ್ಷೆ ಹಾಗೂ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಗಳಿಗೆ ತೆರಳುವ ಅಗತ್ಯ ಕಡಿಮೆಯಾಗಲಿದೆ.
ಅಗತ್ಯ ಆಡಿಯಾಲಜಿ ಉಪಕರಣಗಳ ಖರೀದಿಯನ್ನು ಕರ್ನಾಟಕ ರಾಜ್ಯ ಔಷಧಿ ನಿಗಮದ (KSMSCL) ಮೂಲಕ ನಡೆಸಲು ಸೂಚಿಸಲಾಗಿದೆ. KTPP ಕಾಯ್ದೆ ಮತ್ತು ನಿಯಮಗಳಂತೆ ಟೆಂಡರ್ ಪ್ರಕ್ರಿಯೆ ಮೂಲಕ ಉಪಕರಣಗಳನ್ನು ಖರೀದಿಸಲು ಸರ್ಕಾರ ನಿರ್ದೇಶನ ನೀಡಿದೆ.
ಟೆಲಿ-ICU ಸೇವೆಗೂ ವಿಸ್ತರಣೆ:
ರಾಜ್ಯದಲ್ಲಿ ಟೆಲಿ-ICU ಯೋಜನೆಯನ್ನು ವಿಸ್ತರಿಸಲು ಕೂಡ ಸರ್ಕಾರ ಕ್ರಮ ಕೈಗೊಂಡಿದೆ. 43 ಪೈಲಟ್ ಕೇಂದ್ರಗಳಲ್ಲಿ ಟೆಲಿ-ICU ಸೇವೆ ಜಾರಿಗೆ ತರಲು ನಿರ್ಧರಿಸಲಾಗಿದೆ.
11 ಹಬ್ಗಳ ಮೂಲಕ 131 ಸ್ಪೋಕ್ ಆಸ್ಪತ್ರೆಗಳಿಗೆ ಟೆಲಿ-ICU ಸಂಪರ್ಕ ಕಲ್ಪಿಸಲಾಗುತ್ತದೆ. ಇದರಲ್ಲಿ 6 ವಯಸ್ಕರ ಟೆಲಿ-ICU ಹಬ್ಗಳು ಹಾಗೂ 5 SNCU ಹಬ್ಗಳ ಸ್ಥಾಪನೆಗೆ ತೀರ್ಮಾನಿಸಲಾಗಿದೆ.
ಅಲ್ಲದೆ, 94 ವಯಸ್ಕರ ಟೆಲಿ-ICU ಸ್ಪೋಕ್ ಕೇಂದ್ರಗಳು, 23 SNCU/NICU ಹಾಗೂ 14 PICU ಸ್ಪೋಕ್ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಟೆಲಿ-ICU ವ್ಯವಸ್ಥೆಯ ಮೂಲಕ ತಜ್ಞ ವೈದ್ಯರಿಂದ ರೋಗಿಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ಚಿಕಿತ್ಸೆ ಸಲಹೆ ದೊರೆಯಲಿದೆ.
ಸರ್ಕಾರಿ ಆಸ್ಪತ್ರೆಗಳ ಎಕ್ಸ್ರೇಗೆ AI ಟಚ್:
ಇದರ ಜೊತೆಗೆ ಸರ್ಕಾರಿ ಆಸ್ಪತ್ರೆಗಳ ಎಕ್ಸ್ರೇ ಸೇವೆಯನ್ನು ಡಿಜಿಟಲೀಕರಣಗೊಳಿಸಲು ಸರ್ಕಾರ ಮುಂದಾಗಿದೆ. 162 ಎಕ್ಸ್ರೇ ಯಂತ್ರಗಳನ್ನು ಡಿಜಿಟಲ್ ರೇಡಿಯೋಗ್ರಫಿ (DR) ವ್ಯವಸ್ಥೆಗೆ ಅಪ್ಗ್ರೇಡ್ ಮಾಡಲು ಗ್ರೀನ್ಸಿಗ್ನಲ್ ನೀಡಲಾಗಿದೆ.
ಈ ಯೋಜನೆಗೆ ₹40.5 ಕೋಟಿ ಅನುದಾನ ನೀಡಲಾಗಿದ್ದು, 300 mA ಹಾಗೂ 500 mA ಸಾಮರ್ಥ್ಯದ ಎಕ್ಸ್ರೇ ಯಂತ್ರಗಳನ್ನು DR ವ್ಯವಸ್ಥೆಗೆ ಪರಿವರ್ತಿಸಲಾಗುತ್ತದೆ.
ಎಕ್ಸ್ರೇ ಚಿತ್ರಗಳನ್ನು AI ತಂತ್ರಜ್ಞಾನದ ಮೂಲಕ ವಿಶ್ಲೇಷಿಸಿ ರೋಗ ಪತ್ತೆಗೆ ನೆರವಾಗುವ ವ್ಯವಸ್ಥೆ ಜಾರಿಗೆ ತರುವ ಬಗ್ಗೆಯೂ ಚಿಂತನೆ ನಡೆದಿದೆ. KDRM ಹಂತ-1 ಅಡಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಒಟ್ಟಾರೆ, ತಾಲೂಕು ಮಟ್ಟದಲ್ಲೇ ಶ್ರವಣ-ಮಾತಿನ ಚಿಕಿತ್ಸೆ, ತಜ್ಞ ವೈದ್ಯರ ಟೆಲಿ-ICU ಮಾರ್ಗದರ್ಶನ ಹಾಗೂ AI ಆಧಾರಿತ ಎಕ್ಸ್ರೇ ಸೇವೆ ಒದಗಿಸುವ ಮೂಲಕ ರಾಜ್ಯದ ಸರ್ಕಾರಿ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಮುಂದಾಗಿದೆ.

