Home Blog

ಆದರ್ಶ ಶಿಕ್ಷಕ ಬಿ.ಎ. ಮುಳ್ಳಳ್ಳಿ ಅವರಿಗೆ ಕಸಾಪದಿಂದ ಗುರುವಂದನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮಾಜವನ್ನು ತಿದ್ದಿ ರೂಪಿಸುವ ಶಿಕ್ಷಕರು ಸಮಾಜದ ದೊಡ್ಡ ಆಸ್ತಿಯಾಗಿದ್ದಾರೆ. ಗಡಿಯಲ್ಲಿ ಸೈನಿಕರು ದೇಶವನ್ನು ಕಾಯ್ದರೆ, ರೈತರು ಅನ್ನ ನೀಡುತ್ತಾರೆ. ಆದರೆ ತರಗತಿಯ ನಾಲ್ಕು ಗೋಡೆಗಳ ನಡುವೆ ಶಿಕ್ಷಕರು ದೇಶದ ಭವಿಷ್ಯವನ್ನು ನಿರ್ಮಿಸುತ್ತಾರೆ ಎಂದು ಯುವ ಮುಖಂಡ ಸುನೀಲ ಗಂಗಣ್ಣ ಮಹಾಂತಶೆಟ್ಟರ ಹೇಳಿದರು.

ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ‘ಮಾಸದ ಮಾತು’ ಕಾರ್ಯಕ್ರಮ ಸರಣಿಯ 40ನೇ ಕಾರ್ಯಕ್ರಮವಾಗಿ ಶನಿವಾರ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಹಿರಿಯ ಗುರುಚೇತನ: ಸಂವಾದ-ಸಮ್ಮಾನ’ ಕಾರ್ಯಕ್ರಮದಲ್ಲಿ ಸಾರ್ಥಕ 94 ಸಂವತ್ಸರಗಳನ್ನು ಪೂರೈಸಿದ ಆದರ್ಶ ಶಿಕ್ಷಕ ಬಿ.ಎ. ಮುಳ್ಳಳ್ಳಿ ಅವರನ್ನು ಗೌರವಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ ವಿದ್ಯಾಗುರುಗಳನ್ನು ಸನ್ಮಾನಿಸುವುದು ನಮ್ಮ ಸೌಭಾಗ್ಯ. ಬಿ.ಎ. ಮುಳ್ಳಳ್ಳಿ ಅವರು ಅಂದಿನ ಕಾಲದಲ್ಲಿಯೇ ಶ್ರೇಷ್ಠ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದರು.

ಮುಖ್ಯ ಅತಿಥಿ ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಕೆ. ಹವಾಲ್ದಾರ ಮಾತನಾಡಿ, ನಾಡಿಗೆ ವಿ.ಪಿ. ಬಳಿಗಾರ ಅವರಂತಹ ಶ್ರೇಷ್ಠ ಐಎಎಸ್ ಅಧಿಕಾರಿಗಳನ್ನು ನೀಡಿದ ಶ್ರೇಯಸ್ಸು ಹಿರಿಯ ಗುರು ಬಿ.ಎ. ಮುಳ್ಳಳ್ಳಿ ಅವರಿಗೆ ಸಲ್ಲುತ್ತದೆ ಎಂದರು.

ವಿಶ್ರಾಂತ ಶಿಕ್ಷಣ ಸಂಯೋಜಕ ಐ.ಎಸ್. ಮಡಿವಾಳರ ಮಾತನಾಡಿ, ಅಪಾರ ಶಿಷ್ಯ ಬಳಗ ಹೊಂದಿರುವ ಮುಳ್ಳಳ್ಳಿ ಗುರುಗಳು ಮಾದರಿ ಶಿಕ್ಷಕರಾಗಿದ್ದಾರೆ. 94ರ ಹರೆಯದಲ್ಲಿಯೂ ಅವರ ಜೀವನೋತ್ಸಾಹ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.

ಲಕ್ಷ್ಮೇಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ನೀಲಪ್ಪ ಹತ್ತಿ ಗುರುವಂದನಾ ನುಡಿಗಳನ್ನಾಡಿದರು. ಕಸಾಪ ಹಾಗೂ ಶಿಷ್ಯ ಬಳಗದ ವತಿಯಿಂದ ಬಿ.ಎ. ಮುಳ್ಳಳ್ಳಿ ಅವರಿಗೆ ಗೌರವ ಸನ್ಮಾನ ಸಲ್ಲಿಸಲಾಯಿತು.

ಕಸಾಪದ ಈರಣ್ಣ ಗಾಣಿಗೇರ ಸ್ವಾಗತಿಸಿದರು. ಶಂಕರ ಶಿಳ್ಳಿನ ಹಾಗೂ ಎನ್.ಪಿ. ಪ್ಯಾಟಿಗೌಡ್ರ ಕಾರ್ಯಕ್ರಮ ನಿರ್ವಹಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ನಿರೂಪಿಸಿದರು. ಶಿಕ್ಷಕ ರಾಜಣ್ಣ ಮುಳ್ಳಳ್ಳಿ ವಂದಿಸಿದರು. ವಿ.ಎಂ. ಹೂಗಾರ ಗುರುವಂದನಾ ಗೀತೆ ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಗಣ್ಯ ವ್ಯಾಪಾರಸ್ಥ ಶಿವು ವಡಕಣ್ಣವರ, ಈರಣ್ಣ ಬೆಳವಗಿ, ಪ್ರಿಯಾಂಕ ಮುಳ್ಳಳ್ಳಿ, ಶಿಕ್ಷಕಿ ವೀಣಾ ಜಾಧವ, ಪ್ರವೀಣಕುಮಾರ ಮುಳ್ಳಳ್ಳಿ, ದೇವೇಂದ್ರಗೌಡ ಪಾಟೀಲ, ನಾಗನಗೌಡ ಪಾಟೀಲ, ರವಿ ತಂತ್ರಿ ಸೇರಿದಂತೆ ಗಣ್ಯರು ಹಾಗೂ ಶಿಷ್ಯ ಬಳಗದವರು ಉಪಸ್ಥಿತರಿದ್ದರು.

ವಿಬಿಜಿ-ರಾಮ್-ಜಿ ಯೋಜನೆಯಡಿ ವರ್ಷಕ್ಕೆ 125 ದಿನ ಉದ್ಯೋಗ : ಇಒ ಶ್ರೀಧರ್ ಚಿನಗುಂಡಿ

0

ವಿಜಯಸಾಕ್ಷಿ ಸುದ್ದಿ, ನರಗುಂದ: ತಾಲೂಕಿನ ಬೆನಕನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕದಾಳ ಗ್ರಾಮದಲ್ಲಿ ವಿಬಿಜಿ-ರಾಮ್-ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾಮಗಾರಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಕಾಮಗಾರಿ ಸ್ಥಳದಲ್ಲಿದ್ದ ಕೂಲಿಕಾರ್ಮಿಕರೊಂದಿಗೆ ಸಂವಾದ ನಡೆಸಿದ ಅವರು, ಯೋಜನೆಯಡಿ ದೊರೆಯುವ ಸೌಲಭ್ಯಗಳು, ಕೂಲಿ ಪಾವತಿ ಹಾಗೂ ಹಾಜರಾತಿ ನಿಯಮಗಳ ಕುರಿತು ಮಾಹಿತಿ ನೀಡಿದರು. ಯೋಜನೆಯಡಿ ದಿನಕ್ಕೆ ₹382 ಕೂಲಿ ನಿಗದಿಯಾಗಿದ್ದು, ನಿಗದಿತ ಅಳತೆಗೆ ಅನುಗುಣವಾಗಿ ಕೆಲಸ ಮಾಡಿದರೆ ಪೂರ್ಣ ಕೂಲಿ ದೊರೆಯಲಿದೆ. ಕೆಲಸದ ಅಳತೆಯಲ್ಲಿ ವ್ಯತ್ಯಾಸವಾದರೆ ಅದಕ್ಕೆ ಅನುಗುಣವಾಗಿ ಕೂಲಿ ಮೊತ್ತದಲ್ಲೂ ವ್ಯತ್ಯಾಸವಾಗಲಿದೆ ಎಂದು ಸ್ಪಷ್ಟಪಡಿಸಿದರು.

ನಿರಂತರವಾಗಿ ಕೆಲಸ ಒದಗಿಸುವಂತೆ ಕಾರ್ಮಿಕರು ಮನವಿ ಮಾಡಿದರು. ಈ ವೇಳೆ ವೈಯಕ್ತಿಕವಾಗಿ ಇಒ ಅವರನ್ನು ಭೇಟಿಯಾದ ಕಾರ್ಮಿಕರು ನಮೂನೆ-6 ಸಲ್ಲಿಸಿದ ಬಳಿಕ 15 ದಿನಗಳಲ್ಲಿ ಕೆಲಸ ದೊರೆಯದಿದ್ದರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಒ, ಮೊದಲು ನಮೂನೆ-6 ಸಲ್ಲಿಸುವಂತೆ ಸೂಚಿಸಿ, 15 ದಿನಗಳೊಳಗೆ ಕೆಲಸ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿಯಿಂದ ಕೆಲಸ ನೀಡಲು ಸಾಧ್ಯವಾಗದಿದ್ದರೆ ಯೋಜನೆಯ ನಿಯಮದಂತೆ ನಿರುದ್ಯೋಗ ಭತ್ಯೆ ನೀಡುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಯೋಜನೆಯಡಿ ನಿರಂತರವಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮ ವಹಿಸಲಾಗುತ್ತಿದ್ದು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾಮಗಾರಿ ಸ್ಥಳದಲ್ಲಿ ದಿನದ ಎರಡೂ ಹಾಜರಾತಿಗಳಿಗೆ ಕಾರ್ಮಿಕರು ಕಡ್ಡಾಯವಾಗಿ ಹಾಜರಾಗಬೇಕು. ಒಂದು ಹಾಜರಾತಿಗೆ ಮಾತ್ರ ಹಾಜರಾಗಿ ಮತ್ತೊಂದಕ್ಕೆ ಗೈರಾದರೆ ಕೂಲಿ ಪಾವತಿಯಲ್ಲಿ ತೊಂದರೆಯಾಗಲಿದೆ. ಆದ್ದರಿಂದ ಎರಡೂ ಹಾಜರಾತಿಗಳನ್ನು ಕಡ್ಡಾಯವಾಗಿ ನೀಡುವಂತೆ ಸೂಚಿಸಿದರು.

ವಿಬಿಜಿ-ರಾಮ್-ಜಿ ಯೋಜನೆಯಡಿ ವರ್ಷಕ್ಕೆ 125 ದಿನಗಳವರೆಗೆ ಉದ್ಯೋಗ ಒದಗಿಸುವ ಅವಕಾಶವಿದ್ದು, ಅರ್ಹ ಕೂಲಿಕಾರ್ಮಿಕರಿಗೆ ವರ್ಷದಲ್ಲಿ 125 ದಿನಗಳವರೆಗೆ ಕೆಲಸ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀಧರ್ ಚಿನಗುಂಡಿ ತಿಳಿಸಿದರು.

ಈ ಸಂದರ್ಭದಲ್ಲಿ ಬೆನಕನಕೊಪ್ಪ ಗ್ರಾಪಂ ಪಿಡಿಒ ವಿ.ಆರ್. ರಾಯನಗೌಡರ, ವಿಬಿಜಿ-ರಾಮ್-ಜಿ ಸಿಬ್ಬಂದಿ ಹನುಮಂತ ಡಂಬಳ, ಲಿಂಗರಾಜ ಮುದಿಗೌಡರ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

ಅಳತೆಗೆ ಅನುಗುಣವಾಗಿ ನಿಗದಿತ ಪ್ರಮಾಣದ ಕೆಲಸ ಮಾಡಿದರೆ ಕಾರ್ಮಿಕರಿಗೆ ಪೂರ್ಣ ಕೂಲಿ ದೊರೆಯಲಿದೆ. ನಮೂನೆ-6 ಸಲ್ಲಿಸಿದ 15 ದಿನಗಳೊಳಗೆ ಕೆಲಸ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸಾಧ್ಯವಾಗದಿದ್ದರೆ ನಿಯಮಾನುಸಾರ ನಿರುದ್ಯೋಗ ಭತ್ಯೆ ನೀಡುವ ಕುರಿತು ಕ್ರಮ ಕೈಗೊಳ್ಳುತ್ತೇವೆ.

— ಶ್ರೀಧರ್ ಚಿನಗುಂಡಿ, ತಾಲೂಕು ಪಂಚಾಯಿತಿ ಇಒ

SIR ಪ್ರಕ್ರಿಯೆ ಬಳಿಕವೂ ವೋಟರ್ ಐಡಿ ಕ್ಯಾನ್ಸಲ್ ನೋಟಿಸ್; ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ!

0

ಬೆಂಗಳೂರು: ಬೆಂಗಳೂರು ಹೊರವಲಯದ ಜಿಗಣಿ ಸಮೀಪದ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್‌ಐಆರ್ (SIR) ಪ್ರಕ್ರಿಯೆ ಗೊಂದಲಕ್ಕೆ ಕಾರಣವಾಗಿದ್ದು, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ SIR ಪ್ರಕ್ರಿಯೆ ಪೂರ್ಣಗೊಳಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ, ಕೆಲವರಿಗೆ ‘ನಿಮ್ಮ ವೋಟರ್ ಐಡಿ ಕ್ಯಾನ್ಸಲ್ ಆಗಿದೆ’ ಎಂದು ನೋಟಿಸ್ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಆಧಾರ್ ಕಾರ್ಡ್, ವೋಟರ್ ಐಡಿ ಸೇರಿದಂತೆ ಹಲವು ಅಧಿಕೃತ ದಾಖಲೆಗಳನ್ನು ತೋರಿಸಿದರೂ ಅಧಿಕಾರಿಗಳು ಪರಿಗಣಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಇನ್ನು 71 ವರ್ಷದ ಹಿರಿಯ ನಾಗರಿಕರಿಗೂ ಮಾರ್ಕ್ಸ್ ಕಾರ್ಡ್ ಹಾಗೂ ಜನ್ಮ ಪ್ರಮಾಣಪತ್ರ ತರುವಂತೆ ಅಧಿಕಾರಿಗಳು ಸೂಚಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ವಯಸ್ಸಿನಲ್ಲಿ ಇಂತಹ ದಾಖಲೆಗಳನ್ನು ಎಲ್ಲಿಂದ ತರಬೇಕು ಎಂದು ಹಿರಿಯ ನಾಗರಿಕರು ಪ್ರಶ್ನಿಸಿದ್ದಾರೆ.

ಮತ್ತೊಂದೆಡೆ, ಕರ್ನಾಟಕದಲ್ಲೇ ಹುಟ್ಟಿ ಬೆಳೆದಿದ್ದರೂ ತಮ್ಮ ವಿಳಾಸ ತಮಿಳುನಾಡಿಗೆ ಬದಲಾಗಿದೆ ಎಂದು ಬಿಎಲ್‌ಒ ಹಾಗೂ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಮತ್ತೊಬ್ಬ ನಿವಾಸಿ ಆರೋಪಿಸಿದ್ದಾರೆ. ಅಧಿಕಾರಿಗಳ ತಪ್ಪಿನಿಂದ ಈ ಸಮಸ್ಯೆ ಉಂಟಾಗಿದ್ದು, ಚುನಾವಣಾ ಆಯೋಗ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ವಿದೇಶದಲ್ಲಿರುವವರಿಗೆ ಸಹ ಸೂಕ್ತ ಕಾಲಾವಕಾಶ ನೀಡದೆ ನಿಗದಿತ ಸಮಯದಲ್ಲೇ SIR ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಧಿಕಾರಿಗಳು ಹಾಗೂ ಬಿಎಲ್‌ಒಗಳ ತಪ್ಪಿಗೆ ಸಾರ್ವಜನಿಕರು ಏಕೆ ತೊಂದರೆ ಅನುಭವಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಅಡಿಷನಲ್ ಎಇಆರ್‌ಒ ನಾರಾಯಣಪ್ಪ ಹಾಗೂ ಸ್ಥಳೀಯ ಅಧಿಕಾರಿಗಳನ್ನು ಗ್ರಾಮಸ್ಥರು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು. ಸರ್ಕಾರ ನೀಡಿರುವ ಅಧಿಕೃತ ದಾಖಲೆಗಳನ್ನು ಪರಿಗಣಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಮತದಾನದ ಹಕ್ಕೇ ಬೇಡ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

20 ವರ್ಷಗಳಿಂದ ದುಡಿದ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡಿ: ನಗರಸಭೆ ಮುಂದೆ ಅನಿರ್ದಿಷ್ಟಾವಧಿ ಧರಣಿ

0

ವಿಜಯಸಾಕ್ಷಿ ಸುದ್ದಿ, ಗದಗ: ಎರಡು ದಶಕಗಳಿಂದ ಮನೆ-ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ಮೂಲಕ ಗದಗ-ಬೆಟಗೇರಿ ಅವಳಿ ನಗರದ ಸ್ವಚ್ಛತೆ ಕಾಪಾಡುತ್ತಿರುವ 133 ದಲಿತ ಮಹಿಳಾ ಪೌರಕಾರ್ಮಿಕರು, ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ಅಥವಾ ನೇರ ನೇಮಕಾತಿ ನೀಡುವಂತೆ ಆಗ್ರಹಿಸಿ ನಗರಸಭೆ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ನಗರಸಭೆ ಸದಸ್ಯ ಕೃಷ್ಣಾ ಪರಾಪೂರ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ, ಬೇಡಿಕೆ ಈಡೇರುವವರೆಗೆ ಮನೆ-ಮನೆ ಕಸ ಸಂಗ್ರಹ ಹಾಗೂ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸುವುದಾಗಿ ಕಾರ್ಮಿಕರು ಎಚ್ಚರಿಸಿದ್ದಾರೆ. ಇದರಿಂದ ಅವಳಿ ನಗರದಲ್ಲಿ ಕಸದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಆತಂಕ ಎದುರಾಗಿದೆ.

2005-06ರಿಂದ ನಗರಸಭೆ ವ್ಯಾಪ್ತಿಯ ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳಿಂದ ತ್ಯಾಜ್ಯ ಸಂಗ್ರಹಿಸುವ ಕೆಲಸ ಮಾಡುತ್ತಿರುವ ಈ ಮಹಿಳಾ ಕಾರ್ಮಿಕರಿಗೆ ಆರಂಭದಲ್ಲಿ ಮನೆಗಳಿಂದ ಸಂಗ್ರಹಿಸುವ ವಂತಿಕೆಯ ಆಧಾರದಲ್ಲಿ ಪಾವತಿ ಮಾಡಲಾಗುತ್ತಿತ್ತು. ವಂತಿಕೆ ಸಂಗ್ರಹದಲ್ಲಿ ಎದುರಾದ ಸಮಸ್ಯೆಗಳ ಹಿನ್ನೆಲೆಯಲ್ಲಿ 2014ರಲ್ಲಿ ನಗರಸಭೆ ಟೆಂಡರ್ ಮೂಲಕ 133 ಕಾರ್ಮಿಕರನ್ನು ನೇಮಿಸಿಕೊಂಡು ತಿಂಗಳಿಗೆ ₹3 ಸಾವಿರ ಗೌರವಧನ ನಿಗದಿಪಡಿಸಿತ್ತು. 2017ರಲ್ಲಿ ಅದು ₹5 ಸಾವಿರಕ್ಕೆ ಏರಿಕೆಯಾಗಿದ್ದು, 2022ರಿಂದ ₹6,500 ನೀಡಲಾಗುತ್ತಿದೆ ಎಂದು ಕಾರ್ಮಿಕರು ತಿಳಿಸಿದ್ದಾರೆ.

ನಗರಸಭೆಯಲ್ಲಿ ಇತ್ತೀಚೆಗೆ ನೇಮಕಗೊಂಡ ಲೋಡರ್‌ಗಳು, ಚಾಲಕರು ಹಾಗೂ ಮೊಬಿಲೈಸರ್‌ಗಳಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ನೀಡಲಾಗುತ್ತಿದೆ. ಆದರೆ 20 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ತಮ್ಮನ್ನು ಮಾತ್ರ ಕನಿಷ್ಠ ವೇತನದಿಂದ ವಂಚಿಸಲಾಗುತ್ತಿದೆ ಎಂದು ಮಹಿಳಾ ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದೇವೆ. ಬೆಲೆ ಏರಿಕೆಯ ನಡುವೆ ₹6,500 ಗೌರವಧನದಲ್ಲಿ ಕುಟುಂಬ ನಿರ್ವಹಿಸುವುದು ಕಷ್ಟವಾಗಿದೆ. ನಮ್ಮ ಸೇವೆಯನ್ನು ಪರಿಗಣಿಸಿ ಕನಿಷ್ಠ ವೇತನ ಜಾರಿಗೊಳಿಸಬೇಕು; ಸಾಧ್ಯವಾಗದಿದ್ದರೆ ನಗರಸಭೆಯಿಂದ ನೇರವಾಗಿ ವೇತನ ಪಾವತಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದೇ ವೇಳೆ ಪೌರಕಾರ್ಮಿಕರ ನೇರ ನೇಮಕಾತಿ ವಿಚಾರದಲ್ಲಿಯೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಬೇಡಿಕೆಗಳ ಕುರಿತು ಸ್ಪಷ್ಟ ಭರವಸೆ ದೊರೆಯದಿದ್ದರೆ ಹೋರಾಟ ತೀವ್ರಗೊಳಿಸಿ ಕುಟುಂಬ ಸಮೇತ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ. ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಹಾಗೂ ಶಾಸಕ ಡಾ. ಹೆಚ್.ಕೆ. ಪಾಟೀಲ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಗರದ ಸ್ವಚ್ಛತೆ ಕಾಪಾಡುವಲ್ಲಿ ಮಹಿಳಾ ಪೌರಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. 20 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ಅವರಿಗೆ ಕನಿಷ್ಠ ವೇತನ ನೀಡದೆ ಕಡಿಮೆ ಗೌರವಧನದಲ್ಲಿ ದುಡಿಸಿಕೊಳ್ಳುವುದು ನ್ಯಾಯಸಮ್ಮತವಲ್ಲ. ಕೊರೋನಾ ಸಂದರ್ಭದಲ್ಲೂ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಈ ಕಾರ್ಮಿಕರಿಗೆ ಸರ್ಕಾರದ ನಿಯಮದಂತೆ ವೇತನ ಅಥವಾ ನೇರ ನೇಮಕಾತಿ ಕಲ್ಪಿಸಬೇಕು. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು.

— ಕೃಷ್ಣಾ ಪರಾಪೂರ, ನಗರಸಭೆ ಸದಸ್ಯ

ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ನಿರ್ವಹಣಾ ಕಾಮಗಾರಿ: ಹಲವು ಪ್ರದೇಶಗಳಲ್ಲಿ ಸೆ.9ರಂದು ವಿದ್ಯುತ್ ಸ್ಥಗಿತ

0

ವಿಜಯಸಾಕ್ಷಿ ಸುದ್ದಿ, ಗದಗ: 110 ಕೆವ್ಹಿ ಮುಂಡರಗಿ, ಡಂಬಳ ಹಾಗೂ ಶಿಂಗಟಾಲೂರು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆ.9ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂನ ಕಾರ್ಯ ಮತ್ತು ಪಾಲನೆ ವಿಭಾಗ, ಗದಗ ಪ್ರಕಟಣೆಯಲ್ಲಿ ತಿಳಿಸಿದೆ.

ಡಂಬಳ ವಿದ್ಯುತ್ ಉಪಕೇಂದ್ರದಿಂದ ಹೊರಹೋಗುವ ಎಲ್ಲ 11 ಕೆವ್ಹಿ ಮಾರ್ಗಗಳು, 33 ಕೆವ್ಹಿ ವಾಟರ್‌ ಸಪ್ಲೈ ಮಾರ್ಗ ಹಾಗೂ 33 ಕೆವ್ಹಿ ಲಕ್ಕುಂಡಿ ವಿದ್ಯುತ್ ಉಪಕೇಂದ್ರದಿಂದ ಹೊರಹೋಗುವ ಎಲ್ಲ 11 ಕೆವ್ಹಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಅಲ್ಲದೆ 110 ಕೆವ್ಹಿ ಐಪಿಪಿ ಮೆ. ಸುಜಲಾನ್ ಲಿ., ಹಾರೋಗೇರಿ, ಮೆ. ಎನರ್‌ಕಾನ್ ಲಿ., ಮೆ. ಅಕಿಲಾಗ್ಯಾ ಸೋಲಾರ್ ಹಾಗೂ ಮೆ. ಚುರ್ಚಿಹಾಳ ನೀರಾವರಿ ಮಾರ್ಗಗಳಿಗೂ ವ್ಯತ್ಯಯ ಉಂಟಾಗಲಿದೆ.

ಮುಂಡರಗಿ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯಲ್ಲಿ 110 ಕೆವ್ಹಿ ಐಪಿಪಿ ಮೆ. ವಿಜಯನಗರ ಶುಗರ್ಸ್ ಲಿ., ಮೆ. ಬೀಡನಾಳ, ನೀರಾವರಿ, ಶಿಂಗಟಾಲೂರು ಹಾಗೂ ಉಪ್ಪಿನ ಬೇಟಗೇರಿ ಮಾರ್ಗಗಳು ಸೇರಿದಂತೆ ಉಪಕೇಂದ್ರದಿಂದ ಹೊರಹೋಗುವ ಎಲ್ಲ 11 ಕೆವ್ಹಿ ಮತ್ತು 33 ಕೆವ್ಹಿ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಶಿಂಗಟಾಲೂರು ವಿದ್ಯುತ್ ಉಪಕೇಂದ್ರದಿಂದ ಹೊರಹೋಗುವ ಎಲ್ಲ 11 ಕೆವ್ಹಿ ಮಾರ್ಗಗಳಲ್ಲಿಯೂ ಇದೇ ಅವಧಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮುಂಡರಗಿ, ಡಂಬಳ ಹಾಗೂ ಶಿಂಗಟಾಲೂರು ವಿದ್ಯುತ್ ವಿತರಣಾ ಕೇಂದ್ರಗಳಿಂದ ಪೂರೈಕೆಯಾಗುವ ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲ 11 ಕೆವ್ಹಿ ವಿತರಣಾ ಮಾರ್ಗಗಳಿಗೂ ವಿದ್ಯುತ್ ವ್ಯತ್ಯಯದ ಪರಿಣಾಮ ಇರಲಿದೆ. ಸಾರ್ವಜನಿಕರು ಈ ಪ್ರಕಟಣೆಯನ್ನು ಗಮನಿಸಿ ಹೆಸ್ಕಾಂನೊಂದಿಗೆ ಸಹಕರಿಸುವಂತೆ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಕಾರ್ಯ ಮತ್ತು ಪಾಲನೆ ವಿಭಾಗ, ಹುವಿಸಕಂನಿ., ಗದಗ ಅವರು ಮನವಿ ಮಾಡಿದ್ದಾರೆ.

ರಂಜಿತಾ ಸಾವಿನ ಸಮಗ್ರ ತನಿಖೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ವಿಜಯನಗರ: ದಾವಣಗೆರೆಯ ಟೀಮ್ ಅಕಾಡೆಮಿ ಹಾಸ್ಟೆಲ್‌ನಲ್ಲಿ ಮೃತಪಟ್ಟಿರುವ ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ 17 ವರ್ಷದ ವಿದ್ಯಾರ್ಥಿನಿ ಬಿ. ರಂಜಿತಾ ಅವರ ಸಂಶಯಾಸ್ಪದ ಸಾವಿನ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿ ಗಂಗಾಮತ ಬೆಸ್ತ ಸಮಾಜದ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಂಜಿತಾ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದಾವಣಗೆರೆಯ ಟೀಮ್ ಅಕಾಡೆಮಿಗೆ ಸೇರಿ ಹಾಸ್ಟೆಲ್‌ನಲ್ಲಿ ವಾಸವಾಗಿದ್ದರು. ಸೆ.2ರಂದು ಸಂಜೆ ಸ್ನೇಹಿತೆಯೊಂದಿಗೆ ಹಾಸ್ಟೆಲ್‌ಗೆ ಆಗಮಿಸಿದ ಕೆಲವೇ ಸಮಯದ ಬಳಿಕ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ರಾತ್ರಿ ವಾರ್ಡನ್ ಕುಟುಂಬದವರಿಗೆ ಮಾಹಿತಿ ನೀಡಿದ್ದರು. ಘಟನೆಯ ಕುರಿತು ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದು, ಸೆ.3ರಂದು ಮೃತಳ ತಂದೆ ಭೋವಿ ನಿಂಗಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 201/2026, ಬಿಎನ್‌ಎಸ್ ಕಲಂ 103(1) ಅಡಿ ದಾಖಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಹಾಸ್ಟೆಲ್ ವಾರ್ಡನ್, ಪ್ರಾಂಶುಪಾಲರು, ಅಧ್ಯಕ್ಷರು ಸೇರಿದಂತೆ ಸಂಬಂಧಪಟ್ಟವರ ಪಾತ್ರವನ್ನು ತನಿಖೆಗೆ ಒಳಪಡಿಸಬೇಕು. ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಕರೆ ವಿವರ, ಸಂದೇಶಗಳು, ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ವರದಿಗಳನ್ನು ಪರಿಶೀಲಿಸಿ ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಿ ಸತ್ಯಾಂಶ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಗಂಗಾಮತ ಬೆಸ್ತ ಸಮಾಜದ ಅಧ್ಯಕ್ಷ ವೈ. ಯಮುನೇಶ್, ಮುಖಂಡರಾದ ಸರ್ದಾರ್ ಯಮನೂರಪ್ಪ, ನಿವೃತ್ತ ಪಿಎಸ್ಐ ಕಬ್ಬೇರ್ ರಾಮಪ್ಪ, ಮಡ್ಡಿ ವೆಂಕಪ್ಪ, ಶ್ರೀಧರ್, ಗಣೇಶ್ ಚಿಕ್ಕಕುರುವತ್ತಿ, ನಿಂಗರಾಜು ಬೆಂಡಿಗೇರಿ, ನಿಂಗಪ್ಪ ಕರಿಯಮ್ಮನವರ, ತಿರುಕಪ್ಪ ಸಿಗ್ಲಿ, ಶಿವು ಕಣಿವಿ, ಹಾಲೇಶ್ ಬೋವಿ, ನಾಗಪ್ಪ ಕಲ್ಲಮ್ಮನವರ, ರಾಜೇಶ್, ವೀರೇಶ್, ಸುರೇಶ್, ಶಶಿ, ಶಿವಕುಮಾರ್, ವೈ. ಜಂಬಯ್ಯ, ಆರ್. ಜಂಬಯ್ಯ, ಎನ್. ಅನಿಲ್, ಎಂ. ರಾಘವೇಂದ್ರ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಸಮಾಜದ ಮುಖಂಡರು ಉಪಸ್ಥಿತರಿದ್ದರು.

ರಂಜಿತಾ ಅವರ ಸಾವಿನ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ಕುಟುಂಬದ ಅನುಮಾನಗಳಿಗೆ ಉತ್ತರ ದೊರೆಯುವಂತೆ ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಬೇಕು.

— ಅಂಬಾಡಿ ನಾಗರಾಜ್, ಮಾಜಿ ಜಿಲ್ಲಾ ಅಧ್ಯಕ್ಷರು, ಗಂಗಾಮತ ಬೆಸ್ತ ಸಮಾಜ

ಗದಗ ಜಿಲ್ಲೆಯ ಸಾಧಕರಿಗೆ ಗೌರವ ಸಮಾರಂಭ: ಸೆ. 9ರಂದು ಗಣ್ಯರ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ರಾಜ್ಯದ ವಿವಿಧ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿರುವ ಗದಗ ಜಿಲ್ಲೆಯ ಗಣ್ಯರನ್ನು ಗೌರವಿಸುವ ನಿಟ್ಟಿನಲ್ಲಿ ಜಿಲ್ಲಾ ನಾಗರಿಕ ಸಮಿತಿಯಿಂದ ಸೆ. 9ರಂದು ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಸಮಾರಂಭ ನಡೆಯಲಿದ್ದು, ಪ.ಪೂ. ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ಇರಲಿದೆ. ಶಾಸಕ ಡಾ. ಹೆಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ರೋಣ ಶಾಸಕ ಜಿ.ಎಸ್. ಪಾಟೀಲ ಹಾಗೂ ರಾಜ್ಯ ವಿಧಾನ ಪರಿಷತ್ ಸಭಾಪತಿಯಾಗಿ ಆಯ್ಕೆಯಾಗಿರುವ ಸಲೀಂ ಅಹ್ಮದ್ ಅವರನ್ನು ಸನ್ಮಾನಿಸಲಾಗುವುದು. ಉನ್ನತ ಶಿಕ್ಷಣ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಹಾಗೂ ವಿಧಾನ ಪರಿಷತ್ ಉಪಸಭಾಪತಿಯಾಗಿ ಆಯ್ಕೆಯಾಗಿರುವ ಉಮಾಶ್ರೀ ಅವರನ್ನೂ ಗೌರವಿಸಲಾಗುವುದು ಎಂದು ಹೇಳಿದರು.

ವಿಧಾನಸಭೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಂಕಾಳ ವೈದ್ಯ ಹಾಗೂ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್, ಹುಬ್ಬಳ್ಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ.ಕೆ. ಆದಪ್ಪಗೌಡ್ರ ಅವರಿಗೂ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಸಿ.ಸಿ. ಪಾಟೀಲ, ಎನ್.ಹೆಚ್. ಕೋನರಡ್ಡಿ, ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯರಾದ ಪ್ರೊ. ಎಸ್.ವಿ. ಸಂಕನೂರ, ಎಫ್.ಹೆಚ್. ಜಕ್ಕಪ್ಪನವರ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಕೃಷ್ಣಾ ಪರಾಪೂರ, ಶಕುಂತಲಾ ಅಕ್ಕಿ, ಸುಜಾತಾ ದೊಡ್ಡಮನಿ, ವಾಸಣ್ಣ ಕುರಡಗಿ, ಸಿದ್ದಲಿಂಗೇಶ್ವರ ಪಾಟೀಲ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಸಿದ್ಧಲಿಂಗೇಶ್ವರ ಪಾಟೀಲ, ಸುಜಾತಾ ದೊಡ್ಡಮನಿ, ವಾಸಣ್ಣ ಕುರಡಗಿ, ಕೆ.ಎಚ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಟಿ. ಈಶ್ವರ, ಬಿ.ಬಿ. ಅಸೂಟಿ, ಫಾರೂಕ್ ಹುಬ್ಬಳ್ಳಿ ಹಾಗೂ ವಿವೇಕ ಯಾವಗಲ್ ಉಪಸ್ಥಿತರಿದ್ದರು.

ಒಂದೇ ಜಿಲ್ಲೆಯ ಇಬ್ಬರು ಜನಪ್ರತಿನಿಧಿಗಳು ವಿಧಾನ ಪರಿಷತ್ ಹಾಗೂ ವಿಧಾನಸಭೆಯ ಅಧ್ಯಕ್ಷರಾಗಿರುವುದು ಸಂತಸ ತಂದಿದೆ. ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುವ ದೊಡ್ಡ ಜವಾಬ್ದಾರಿ ಸಲೀಂ ಅಹ್ಮದ್ ಹಾಗೂ ಜಿ.ಎಸ್. ಪಾಟೀಲ ಅವರಿಗೆ ದೊರೆತಿದೆ. ಪಕ್ಷಾತೀತವಾಗಿ ಪ್ರೀತಿ, ವಿಶ್ವಾಸ ಗಳಿಸಿಕೊಂಡು ಇಬ್ಬರೂ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

— ಬಿ.ಆರ್. ಯಾವಗಲ್, ಮಾಜಿ ಸಚಿವ

ಈಶ್ವರಗೌಡ ಬಮ್ಮನಗೌಡ್ರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ವಲಯದ ಉಣಕಲ್ ಕೆಪಿಎಸ್ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಈಶ್ವರಗೌಡ ಶಂ. ಬಮ್ಮನಗೌಡ್ರ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೆ. 5ರಂದು ಧಾರವಾಡದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದವರಾದ ಈಶ್ವರಗೌಡ ಬಮ್ಮನಗೌಡ್ರ ಅವರು ಬೆಂಗಳೂರು ಹಾಗೂ ಧಾರವಾಡ ಜಿಲ್ಲೆಗಳ ವಿವಿಧ ಶಾಲೆಗಳಲ್ಲಿ ಸುಮಾರು 28 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.

ಪತ್ರಿಕಾರಂಗದ ಸವಾಲುಗಳ ನಡುವೆಯೂ ದಶಕ ಪೂರೈಸಿದ ‘ವೇರಿ ಗುಡ್ ಮಾರ್ನಿಂಗ್’ : ಎಸ್.ವಿ. ಸಂಕನೂರ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಂತ್ರಿಕತೆಯ ವೇಗದ ನಡುವೆ ಪತ್ರಿಕಾರಂಗ ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲೂ ‘ವೇರಿ ಗುಡ್ ಮಾರ್ನಿಂಗ್’ ಕನ್ನಡ ದಿನಪತ್ರಿಕೆ ಹತ್ತು ವರ್ಷಗಳಿಂದ ಜನಪರ ಹಾಗೂ ಸಾಮಾಜಿಕ ಕಾಳಜಿಯೊಂದಿಗೆ ನಿರಂತರವಾಗಿ ಪತ್ರಿಕಾ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ನಗರದ ಜಗದ್ಗುರು ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಗೌತಮ ಬುದ್ಧ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ‘ವಾಯ್ಸ್ ಆಫ್ ಗದಗ ಸೀಸನ್-2’ ಕನ್ನಡ ಚಲನಚಿತ್ರ ಗೀತೆಗಳ ರಾಜ್ಯಮಟ್ಟದ ಸ್ಪರ್ಧೆ ಹಾಗೂ ‘ವೇರಿ ಗುಡ್ ಮಾರ್ನಿಂಗ್’ ದಿನಪತ್ರಿಕೆಯ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್ ಹಾಗೂ ಡಿಜಿಟಲ್ ಮಾಧ್ಯಮಗಳ ಪ್ರಾಬಲ್ಯದ ನಡುವೆಯೂ ಸ್ಥಳೀಯ, ಜಿಲ್ಲಾ, ರಾಜ್ಯ ಹಾಗೂ ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಜನರಿಗೆ ತಲುಪಿಸುವ ಮೂಲಕ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಲೋಪಗಳನ್ನು ತಿದ್ದಿ ಸಮಾಜವನ್ನು ಎಚ್ಚರಿಸುವ ಗುರುತರ ಜವಾಬ್ದಾರಿ ಪತ್ರಿಕಾರಂಗಕ್ಕಿದ್ದು, ಸಂಪಾದಕ ದೇವಪ್ಪ ಎನ್. ಲಿಂಗದಾಳ ಅವರ ನೇತೃತ್ವದಲ್ಲಿ ‘ವೇರಿ ಗುಡ್ ಮಾರ್ನಿಂಗ್’ ಆ ಕಾರ್ಯ ಮಾಡುತ್ತಿದೆ ಎಂದರು.

ಪತ್ರಕರ್ತ ಅನಂತ ಕಾರ್ಕಳ ಮಾತನಾಡಿ, ಹಲವು ಸವಾಲುಗಳ ನಡುವೆಯೂ ‘ವೇರಿ ಗುಡ್ ಮಾರ್ನಿಂಗ್’ ಹತ್ತು ವರ್ಷಗಳ ಪಯಣ ಪೂರ್ಣಗೊಳಿಸಿರುವುದು ಸಂಪಾದಕ ದೇವಪ್ಪ ಎನ್. ಲಿಂಗದಾಳ ಹಾಗೂ ಸಿದ್ದಪ್ಪ ಎನ್. ಲಿಂಗದಾಳ ಅವರ ಪರಿಶ್ರಮದ ಫಲವಾಗಿದೆ. ಪತ್ರಿಕೆ ಜನಪ್ರಿಯವಾಗಿ ಹೊರಹೊಮ್ಮಲು ಅವರ ನಿರಂತರ ಶ್ರಮ ಕಾರಣ. ಪತ್ರಿಕೆಯ ಆರಂಭದ ದಿನಗಳಿಂದಲೂ ತಮ್ಮಿಂದಾದ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡುತ್ತಿದ್ದು, ಮುಂದೆಯೂ ಪತ್ರಿಕೆ ಶತಮಾನೋತ್ಸವ ಆಚರಿಸುವಂತಾಗಲಿ ಎಂದು ಹಾರೈಸಿದರು.

ದಶಮಾನೋತ್ಸವ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದ ಕಿತ್ತೂರು ಕರ್ನಾಟಕ ದಿನಪತ್ರಿಕೆ ಸಂಪಾದಕ ಮಂಜುನಾಥ ಅಬ್ಬಿಗೇರಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪತ್ರಿಕೆಗಳ ಸಂಪಾದಕರು ಒಗ್ಗಟ್ಟಾಗಿ ಸರ್ಕಾರ ಹಾಗೂ ವಾರ್ತಾ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ನ್ಯಾಯಯುತವಾಗಿ ಪಡೆಯಲು ಸಂಘಟಿತ ಪ್ರಯತ್ನ ನಡೆಸಬೇಕು ಎಂದು ಕರೆ ನೀಡಿದರು.

ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಿಕಾರಂಗ ಪ್ರಮುಖ ಪಾತ್ರ ವಹಿಸುತ್ತಿದ್ದು, ‘ವೇರಿ ಗುಡ್ ಮಾರ್ನಿಂಗ್’ ಶೋಷಿತ ಸಮುದಾಯದ ಸಮಸ್ಯೆಗಳಿಗೆ ಧ್ವನಿಯಾಗುತ್ತಿರುವುದು ಪ್ರಶಂಸನೀಯ ಎಂದರು.

‘ರತ್ನಾಕರವಾಣಿ’ ಸಂಪಾದಕ ಜಗದೀಶ ಪೂಜಾರ ಮಾತನಾಡಿ, ‘ವೇರಿ ಗುಡ್ ಮಾರ್ನಿಂಗ್’ ಸಂಪಾದಕರು ಸ್ವಾಭಿಮಾನದಿಂದ ತಮ್ಮ ಕಾರ್ಯವನ್ನು ಮುಂದುವರಿಸುತ್ತಿದ್ದು, ಮಾತಿಗಿಂತ ಕಾಯಕದ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಾಯ್ಸ್ ಆಫ್ ಗದಗ: ನಾಗರಾಜ ಹುಣಸಿಕಟ್ಟಿ ಪ್ರಥಮ

ರಾಜ್ಯಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ನಾಗರಾಜ ಹುಣಸಿಕಟ್ಟಿ ಪ್ರಥಮ, ಕೀರ್ತನಾ ಜರತಾರೆ ದ್ವಿತೀಯ, ಶ್ರೇಯಾ ರಂಗರೇಜ ತೃತೀಯ ಹಾಗೂ ಜಯಶ್ರೀ ರಾಜೋಳಿ ಚತುರ್ಥ ಸ್ಥಾನ ಪಡೆದರು.

ಸಂಪಾದಕ ದೇವಪ್ಪ ಎನ್. ಲಿಂಗದಾಳ ಅಧ್ಯಕ್ಷತೆ ವಹಿಸಿದ್ದರು. ಸಿದ್ದಪ್ಪ ಎನ್. ಲಿಂಗದಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ರಾಜಕರಣ್ ನಿರೂಪಿಸಿದರು. ಮಂಜುನಾಥ ಲಿಂಗದಾಳ ಸ್ವಾಗತಿಸಿದರು. ಬಲರಾಜ ಅರಬರ ವಂದಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಪತ್ರಕರ್ತ ಆನಂದ ಸಾಲಿಗ್ರಾಮ, ‘ನಾಗರಿಕ’ ಸಂಪಾದಕ ಅಜೀತ್ ಹೊಂಬಾಳಿ, ‘ಚಕ್ರವರ್ತಿ’ ಪತ್ರಿಕೆ ಸಂಪಾದಕ ಎಸ್.ಆರ್. ಬಾಂಡಗೆ, ‘ಸೂಪರ್ ವಾಣಿ’ ಸಂಪಾದಕ ಮಹಾಂತೇಶ ಮದ್ನೂರ, ದಲಿತ ಯುವ ಸೇನಾ ಸಮಿತಿ ಅಧ್ಯಕ್ಷ ವಿಜಯ್ ಎಸ್. ಮುಳಗುಂದ, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಸವರಾಜ ಕಡೇಮನಿ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ರಾಜೇಂದ್ರ ಗಡಾದ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಎಸ್.ಎನ್. ಬಳ್ಳಾರಿ, ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ ಚವ್ಹಾಣ, ನಗರಸಭೆ ಸದಸ್ಯ ಎಲ್.ಡಿ. ಚಂದಾವರಿ, ಮುಖಂಡ ಸತೀಶ್ ಎಚ್. ಹೂಲಿ, ಪ್ರೊ. ಮಲ್ಲೇಶ ಹೊಸೂರ, ರವಿ ಎಲ್. ಗುಂಜೀಕರ, ಮಲ್ಲಿಕಾರ್ಜುನ ಕಲಕಂಬಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಪತ್ರಿಕಾರಂಗ ಹಲವು ಸವಾಲುಗಳ ನಡುವೆಯೂ ‘ವೇರಿ ಗುಡ್ ಮಾರ್ನಿಂಗ್’ ಹತ್ತು ವರ್ಷಗಳಿಂದ ಜನಪರವಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಪತ್ರಿಕೆ ಇನ್ನಷ್ಟು ಅಭಿವೃದ್ಧಿ ಹೊಂದಿ ಸಾಮಾಜಿಕ ಸೇವೆಯಲ್ಲಿ ಅವಿರತವಾಗಿ ತೊಡಗಲಿ.

— ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯ

ಸಿಎಸ್ ಪರೀಕ್ಷೆಯಲ್ಲಿ ರೀತ್ ಜೈನ್‌ಗೆ 7ನೇ ರ‍್ಯಾಂಕ್

0

ವಿಜಯಸಾಕ್ಷಿ ಸುದ್ದಿ, ಗದಗ: ಆದರ್ಶ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕು. ರೀತ್ ಸಚಿನ್ ಜೈನ್ ಅವರು ಕಂಪನಿ ಕಾರ್ಯದರ್ಶಿ (ಸಿಎಸ್) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 7ನೇ ರ‍್ಯಾಂಕ್ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಆದರ್ಶ ಶಿಕ್ಷಣ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಿಎಸ್ ಪರೀಕ್ಷೆಯಲ್ಲಿ ದೇಶಕ್ಕೆ 7ನೇ ರ‍್ಯಾಂಕ್ ಗಳಿಸಿದ ಕು. ರೀತ್ ಸಚಿನ್ ಜೈನ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಆದರ್ಶ ಶಿಕ್ಷಣ ಸಮಿತಿ ಕ್ಯಾಂಪಸ್‌ನಲ್ಲಿಯೇ ತಮ್ಮ ಪದವಿಪೂರ್ವ ಹಾಗೂ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿರುವ ರೀತ್ ಜೈನ್ ಅವರ ಸಾಧನೆಯನ್ನು ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಬೋಧಕ ವೃಂದದವರು ಕೊಂಡಾಡಿದರು. ಜೈನ್ ಕುಟುಂಬಕ್ಕೂ ಸಂಸ್ಥೆಗೂ ಇರುವ ದೀರ್ಘಕಾಲದ ಸಂಬಂಧವನ್ನು ಸ್ಮರಿಸಿದ ಹಲವಾರು ಬೋಧಕ ವೃಂದದ ಸದಸ್ಯರು, ರೀತ್ ಜೈನ್ ಅವರ ಶೈಕ್ಷಣಿಕ ಸಾಧನೆ ಹಾಗೂ ಪರಿಶ್ರಮದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಪಿ.ಆರ್. ಅಡವಿಯವರು ಮಾತನಾಡಿ, ಜೈನ್ ಕುಟುಂಬದ ಶೈಕ್ಷಣಿಕ ಸಾಧನೆ ಹಾಗೂ ಸಂಸ್ಥೆಯೊಂದಿಗಿನ ಅವರ ನಂಟನ್ನು ಸ್ಮರಿಸುತ್ತಾ ರೀತ್ ಜೈನ್ ಅವರ ಸಾಧನೆಯನ್ನು ಶ್ಲಾಘಿಸಿದರು.

ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ರವೀಂದ್ರಕುಮಾರ ಕುಲಕರ್ಣಿ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿ.ಟಿ. ನಾಯ್ಕರ್ ಹಾಗೂ ಪ್ರೊ. ಶ್ರೀಮತಿ ಅಕ್ಷತಾ ಎಳ್ಳೂರು ಅವರು ರೀತ್ ಜೈನ್ ಅವರ ಕಠಿಣ ಪರಿಶ್ರಮ, ಶೈಕ್ಷಣಿಕ ಬದ್ಧತೆ ಹಾಗೂ ಸಾಧನೆಯನ್ನು ಮೆಚ್ಚಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ವಿ. ಕುಷ್ಟಗಿ ಅವರು ಕು. ರೀತ್ ಜೈನ್ ಅವರನ್ನು ಅಭಿನಂದಿಸಿ, ಅವರ ವೃತ್ತಿಪರ ಜೀವನದಲ್ಲಿಯೂ ಯಶಸ್ಸು ಮುಂದುವರಿಯಲಿ ಎಂದು ಹಾರೈಸಿದರು. ಶಿಕ್ಷಕರ ದಿನದ ಅಂಗವಾಗಿ ಬೋಧಕ ಸಿಬ್ಬಂದಿಗೆ ಶುಭಾಶಯಗಳನ್ನು ಸಲ್ಲಿಸಿದರು.

ಸಂಸ್ಥೆಯ ಕಾರ್ಯದರ್ಶಿ ಶ್ರೀ ಎ.ಡಿ. ಗೊಡಖಿಂಡಿ ಅವರು ರೀತ್ ಜೈನ್ ಹಾಗೂ ಅವರ ಕುಟುಂಬದೊಂದಿಗಿನ ತಮ್ಮ ಹಿಂದಿನ ನೆನಪುಗಳನ್ನು ಸ್ಮರಿಸಿಕೊಂಡು, ಅವರ ಗಮನಾರ್ಹ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದರು.

ಶಿಕ್ಷಕರ ಪ್ರೋತ್ಸಾಹವೇ ಯಶಸ್ಸಿನ ಬಲ

ಸನ್ಮಾನ ಸ್ವೀಕರಿಸಿ ಮಾತನಾಡಿದ ಕು. ರೀತ್ ಜೈನ್ ಅವರು ತಮ್ಮ ಕಾಲೇಜು ದಿನಗಳ ಅನುಭವಗಳು ಹಾಗೂ ನೆನಪುಗಳನ್ನು ಹಂಚಿಕೊಂಡರು. ನಿರಂತರ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಪ್ರೇರಣೆ ನೀಡಿದ ಬೋಧಕ ವೃಂದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಶಿಕ್ಷಕರಿಂದ ದೊರೆತ ಪ್ರೇರಣೆ ಹಾಗೂ ಬೆಂಬಲ ತಮ್ಮ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. ತಮ್ಮ ಸಾಧನೆಗೆ ಸಹಕರಿಸಿದ ಇಡೀ ತಂಡಕ್ಕೆ ಧನ್ಯವಾದ ಅರ್ಪಿಸಿದರು.

ಸಂಸ್ಥೆಯ ಚೇರ್ಮನ್ ಶ್ರೀ ಆನಂದ್ ಎಲ್. ಪೋತ್ನಿಸ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಿ.ಎ., ಸಿ.ಎಸ್. ಸೇರಿದಂತೆ ವಿವಿಧ ಶೈಕ್ಷಣಿಕ ಹಾಗೂ ವೃತ್ತಿಪರ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವುದು ಸಂಸ್ಥೆಗೆ ಸಂತಸ ಹಾಗೂ ಹೆಮ್ಮೆಯ ವಿಷಯವಾಗಿದೆ ಎಂದರು. ಸ್ಪರ್ಧಾತ್ಮಕ ಯುಗದಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಕೀರ್ತಿ ತರುವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಜಂಟಿ ಕಾರ್ಯದರ್ಶಿ ಶ್ರೀ ಶೈಲೇಶ್ ಬಾಗ್ಮಾರ್, ಶ್ರೀ ಎ.ವೈ. ಇಂಚಲ, ಮೂರು ಅಂಗಸಂಸ್ಥೆಗಳ ಪ್ರಾಚಾರ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.