ಶಿವಮೊಗ್ಗ: ಪೊಲೀಸರಿಂದ ತಪ್ಪಿಸಿಕೊಳ್ಳಲು ರೌಡಿಶೀಟರ್ ಒಬ್ಬ ಹಳ್ಳದ ನೀರಿನಲ್ಲಿ ಸುಮಾರು ಅರ್ಧಗಂಟೆ ಮುಳುಗಿ ಅಡಗಿದ್ದ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಮಹಾಭಾರತದ ಯುದ್ಧದ ಕೊನೆಯ ದಿನ ಪಾಂಡವರಿಂದ ತಪ್ಪಿಸಿಕೊಳ್ಳಲು ದುರ್ಯೋಧನ ವೈಶಂಪಾಯನ ಸರೋವರದಲ್ಲಿ ಅಡಗಿದ್ದ ಪ್ರಸಂಗವನ್ನು ನೆನಪಿಸುವಂತಿರುವ ಈ ಘಟನೆ ಇದೀಗ ಗಮನ ಸೆಳೆದಿದೆ.
ಭದ್ರಾವತಿಯ ರೌಡಿಶೀಟರ್ ದಿಲೀಪ್ ಅಲಿಯಾಸ್ ಕರಿಯಾ ನೀರಿನಲ್ಲಿ ಅಡಗಿದ್ದ ವ್ಯಕ್ತಿ. ಈತನ ವಿರುದ್ಧ ಕಳ್ಳತನ, ಕೊಲೆ ಯತ್ನ ಸೇರಿದಂತೆ 16 ಪ್ರಕರಣಗಳಿವೆ. ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಮೂರು ಬಾರಿ ವಾರಂಟ್ ಜಾರಿಯಾಗಿತ್ತು. ಹೀಗಾಗಿ ಸೆಪ್ಟೆಂಬರ್ 2ರಂದು ನ್ಯೂ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ ಆತನ ಬಂಧನಕ್ಕೆ ತೆರಳಿದ್ದರು.
ಪೊಲೀಸರು ಬರುತ್ತಿರುವ ಮಾಹಿತಿ ತಿಳಿದ ದಿಲೀಪ್ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಭಂಡಾರಹಳ್ಳಿಯ ಹಳ್ಳದ ಬಳಿ ಆತ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದರೂ ದಿಲೀಪ್ ಪತ್ತೆಯಾಗಿರಲಿಲ್ಲ.
ಈ ವೇಳೆ ಹಳ್ಳದಲ್ಲಿ ಕಳೆ ಸರಿದಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಅನುಮಾನಗೊಂಡ ನ್ಯೂ ಟೌನ್ ಠಾಣೆಯ ಸಬ್ಇನ್ಸ್ಪೆಕ್ಟರ್ ರಮೇಶ್ ಹಾಗೂ ಸಿಬ್ಬಂದಿ ಪ್ರಸನ್ನ ಹಳ್ಳಕ್ಕೆ ಇಳಿದು ಪರಿಶೀಲನೆ ನಡೆಸಿದ್ದಾರೆ. ನೀರಿನ ಅಡಿಯಿಂದ ಗುಳ್ಳೆಗಳು ಬರುತ್ತಿರುವುದು ಗಮನಕ್ಕೆ ಬಂದಿದ್ದು, ಪೊಲೀಸರು ಸುತ್ತುವರಿದು ದಿಲೀಪ್ ಅಲಿಯಾಸ್ ಕರಿಯಾನನ್ನು ಹಿಡಿದಿದ್ದಾರೆ.
ಬಳಿಕ ಹಳ್ಳದಲ್ಲೇ ಆತನ ಕೈಗೆ ಕೋಳ ತೊಡಿಸಿ ದಂಡೆಯ ಮೇಲೆ ಕರೆತರಲಾಗಿದೆ. ನ್ಯೂ ಟೌನ್ ಠಾಣೆ ಪೊಲೀಸರ ಕಾರ್ಯಾಚರಣೆಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

