Home Blog

Gadaga Breaking: ಪ್ಲಾಸ್ಟಿಕ್ ಪೈಪ್, ಕಿರಾಣಿ ಸಾಮಗ್ರಿ ಸಂಗ್ರಹಿಸಿದ್ದ ಗೋಡೌನ್‌ಗೆ ಬೆಂಕಿ: ಲಕ್ಷಾಂತರ ರೂ. ನಷ್ಟ

0

ಗಜೇಂದ್ರಗಡ: ಪಟ್ಟಣದ ಜವಳಿ ಪ್ಲಾಟ್ ಪ್ರದೇಶದಲ್ಲಿ ಪ್ಲಾಸ್ಟಿಕ್ ಪೈಪ್ ಹಾಗೂ ಕಿರಾಣಿ ಸಾಮಗ್ರಿ ಸಂಗ್ರಹಿಸಿಟ್ಟಿದ್ದ ಗೋಡೌನ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

ಮಹೇಶ್ ಪಾಟೀಲ್ ಅವರಿಗೆ ಸೇರಿದ ಗೋಡೌನ್‌ನಲ್ಲಿ ಪ್ಲಾಸ್ಟಿಕ್ ಪೈಪ್‌ಗಳು ಹಾಗೂ ಕಿರಾಣಿ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿತ್ತು. ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಗೋಡೌನ್‌ನಲ್ಲಿದ್ದ ಹಳೆಯ ಪ್ಲಾಸ್ಟಿಕ್ ವಸ್ತುಗಳು ಹಾಗೂ ಪೈಪ್‌ಗಳಿಗೆ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲೇ ಇಡೀ ಗೋಡೌನ್‌ಗೆ ವ್ಯಾಪಿಸಿದೆ.

ಬೆಂಕಿಯ ತೀವ್ರತೆಗೆ ದಟ್ಟ ಕಪ್ಪು ಹೊಗೆ ಆವರಿಸಿದ್ದು, ಇಡೀ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗೋಡೌನ್‌ನಲ್ಲಿದ್ದ ಪ್ಲಾಸ್ಟಿಕ್ ವಸ್ತುಗಳು ಹಾಗೂ ಕಿರಾಣಿ ಸ್ಟಾಕ್ ಬೆಂಕಿಗೆ ಆಹುತಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಬೆಂಕಿ ಮತ್ತಷ್ಟು ಪ್ರದೇಶಕ್ಕೆ ವ್ಯಾಪಿಸುವುದನ್ನು ತಡೆಯಲಾಗಿದೆ.

ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್ ಸೇರಿದಂತೆ ವಿವಿಧ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಯುತ್ತಿದ್ದು, ಬೆಂಕಿ ಅವಘಡದ ನಿಖರ ಕಾರಣ ತನಿಖೆಯಿಂದಷ್ಟೇ ಹೊರಬರಬೇಕಿದೆ.

ಮನೆ ಫ್ರೆಶ್ ಆಗಿರಲಿ ಅಂತ ರೂಮ್ ಫ್ರೆಶ್ನರ್ ಬಳಸುತ್ತೀರಾ? ಆದರೆ ಪದೇ ಪದೇ ಬಳಸಿದ್ರೆ ಏನಾಗುತ್ತೆ ಗೊತ್ತಾ?

0

ಮನೆ, ಆಫೀಸ್ ಅಥವಾ ಕಾರಿನಲ್ಲಿ ಸ್ವಲ್ಪ ವಾಸನೆ ಬಂದರೂ ಸಾಕು, ರೂಮ್ ಫ್ರೆಶ್ನರ್ ಸ್ಪ್ರೇ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ಕ್ಷಣಮಾತ್ರಕ್ಕೆ ಆಹ್ಲಾದಕರ ಪರಿಮಳ ಸಿಗುತ್ತದೆಯಾದರೂ, ಇದರಲ್ಲಿರುವ ರಾಸಾಯನಿಕಗಳು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ರೂಮ್ ಫ್ರೆಶ್ನರ್‌ನಲ್ಲಿ ಏನಿರುತ್ತೆ?
ಗಾಳಿಯನ್ನು ತಾಜಾಗೊಳಿಸುವ ಸುಗಂಧ ರಾಸಾಯನಿಕಗಳು ಇದರಲ್ಲಿ ಇರುತ್ತವೆ. ಸ್ಪ್ರೇ ಮಾಡಿದಾಗ ಈ ಕಣಗಳು ಗಾಳಿಯಲ್ಲಿ ಕೆಲ ಕಾಲ ಉಳಿದು, ಉಸಿರಾಟದ ಮೂಲಕ ದೇಹ ಪ್ರವೇಶಿಸುತ್ತವೆ. ಇದರ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

ಆಗಬಹುದಾದ ಅಡ್ಡ ಪರಿಣಾಮಗಳು

  • ಕಣ್ಣು, ಮೂಗು, ಗಂಟಲಿಗೆ ಕಿರಿಕಿರಿ
  • ತಲೆನೋವು, ತಲೆತಿರುಗುವಿಕೆ
  • ಮಕ್ಕಳು-ವೃದ್ಧರಿಗೆ ಉಸಿರಾಟದ ತೊಂದರೆ
  • ಅಸ್ವಸ್ಥತೆ

ಅತಿಯಾದ ಬಳಕೆ ಎಷ್ಟು ಅಪಾಯಕಾರಿ?
ಅಸ್ತಮಾ, ಅಲರ್ಜಿ ಇರುವವರಲ್ಲಿ ಬಲವಾದ ಸ್ಪ್ರೇ ವಾಸನೆ ಕೆಮ್ಮು, ಎದೆ ಬಿಗಿತ, ಉಸಿರಾಟದ ತೊಂದರೆ ಹೆಚ್ಚಿಸಬಹುದು. ಮುಚ್ಚಿದ, ಚಿಕ್ಕ ಕೋಣೆಗಳಲ್ಲಿ ರಾಸಾಯನಿಕ ಕಣಗಳು ಹೆಚ್ಚು ಹೊತ್ತು ಗಾಳಿಯಲ್ಲಿ ಉಳಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಸ್ಪ್ರೇ ಮಾಡಿದ ಬಳಿಕ ಕಿಟಕಿ-ಬಾಗಿಲು ತೆರೆದಿಡುವುದು ಉತ್ತಮ.

ಪಾಲಿಸಬೇಕಾದ ಮುನ್ನೆಚ್ಚರಿಕೆಗಳು

  • ಅತಿಯಾದ ಬಳಕೆ ಬೇಡ
  • ಮುಖ, ಕಣ್ಣು, ಚರ್ಮದ ಮೇಲೆ ನೇರ ಸಿಂಪಡಣೆ ಮಾಡಬಾರದು
  • ಅಡುಗೆ ಮನೆ ಮತ್ತು ಮಕ್ಕಳ ಸುತ್ತಮುತ್ತ ಬಳಸುವಾಗ ಎಚ್ಚರ ಅಗತ್ಯ
  • ಬಳಕೆಯ ಬಳಿಕ ಕೆಮ್ಮು, ಕಣ್ಣಿನ ಕಿರಿಕಿರಿ, ತಲೆನೋವು ಅಥವಾ ಉಸಿರಾಟದ ತೊಂದರೆ ಕಂಡರೆ ತಕ್ಷಣ ಬಳಕೆ ನಿಲ್ಲಿಸಿ

ಪದೇ ಪದೇ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಕಿಟಕಿ ತೆರೆಯುವುದು, ಮನೆ ಸ್ವಚ್ಛವಾಗಿಟ್ಟುಕೊಳ್ಳುವುದೇ ವಾಸನೆ ನಿವಾರಣೆಗೆ ಸುರಕ್ಷಿತ ಮಾರ್ಗ.

ಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಸಿಎಂ ದಿಢೀರ್ ಭೇಟಿ; ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಡಿಕೆಶಿ!

0

ರಾಮನಗರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ಕನಕಪುರಕ್ಕೆ ಆಗಮಿಸಿದ್ದು, ಮಾರ್ಗಮಧ್ಯೆ ಬಿಸಿಎಂ ಹಾಸ್ಟೆಲ್‌ಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಬೆಂಗಳೂರಿನಿಂದ ಕನಕಪುರಕ್ಕೆ ತೆರಳುತ್ತಿದ್ದ ವೇಳೆ ಯಾವುದೇ ಪೂರ್ವ ಸೂಚನೆ ನೀಡದೆ ಹಾಸ್ಟೆಲ್‌ಗೆ ಭೇಟಿ ನೀಡಿದ ಸಿಎಂ, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಹಾಸ್ಟೆಲ್‌ನಲ್ಲಿ ಊಟ, ವಸತಿ ಸೇರಿದಂತೆ ವಿವಿಧ ವ್ಯವಸ್ಥೆಗಳ ಬಗ್ಗೆ ವಿದ್ಯಾರ್ಥಿಗಳಿಂದಲೇ ಮಾಹಿತಿ ಪಡೆದರು.

ಬಳಿಕ ಹಾಸ್ಟೆಲ್‌ನಲ್ಲೇ ವಿದ್ಯಾರ್ಥಿಗಳೊಂದಿಗೆ ಮುದ್ದೆ ಊಟ ಸವಿದರು. ಕೆಲಕಾಲ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳು ಹಾಗೂ ಹಾಸ್ಟೆಲ್‌ನಲ್ಲಿನ ವ್ಯವಸ್ಥೆಗಳ ಬಗ್ಗೆ ವಿಚಾರಿಸಿದರು.

ಇಂದು ಕನಕಪುರದಲ್ಲಿ ಕುಟುಂಬದ ಖಾಸಗಿ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ಕನಕಪುರದ ನಿವಾಸದಲ್ಲಿ ವಾಸ್ತವ್ಯ ಹೂಡಿದರು.

ಈ ವೇಳೆ ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿ; ರಸ್ತೆಗೆ ಬಿದ್ದ ಸವಾರರ ಮೇಲೆ ಬಸ್ ಹರಿದು ಇಬ್ಬರು ಸಾವು

0

ಚಿಕ್ಕಮಗಳೂರು: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ, ರಸ್ತೆಗೆ ಬಿದ್ದ ಸವಾರರ ಮೇಲೆ ಸರ್ಕಾರಿ ಬಸ್ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಡೂರು ತಾಲೂಕಿನ ಹಳೇಹಟ್ಟಿ ಗೇಟ್ ಬಳಿ ನಡೆದಿದೆ.

ಮೃತರನ್ನು ಮೂಲತಃ ರಾಜಸ್ಥಾನ ಮೂಲದವರು ಎಂದು ಗುರುತಿಸಲಾಗಿದ್ದು, ಅವರ ಹೆಸರು ಹಾಗೂ ವಿಳಾಸ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಮೃತರ ಗುರುತು ಪತ್ತೆಹಚ್ಚಲು ಮಾಹಿತಿ ಕಲೆಹಾಕುತ್ತಿದ್ದಾರೆ.

ಕಡೂರಿನಿಂದ ಚಿಕ್ಕಮಗಳೂರು ಮಾರ್ಗವಾಗಿ ತೆರಳುತ್ತಿದ್ದ ಬೈಕ್ ಹಾಗೂ ಎದುರಿನಿಂದ ಬಂದ ಮತ್ತೊಂದು ಬೈಕ್ ನಡುವೆ ಹಳೇಹಟ್ಟಿ ಗೇಟ್ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಸವಾರರು ರಸ್ತೆಗೆ ಬಿದ್ದಿದ್ದಾರೆ.

ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಸರ್ಕಾರಿ ಬಸ್ ರಸ್ತೆ ಮೇಲೆ ಬಿದ್ದಿದ್ದ ಸವಾರರ ಮೇಲೆ ಹರಿದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಮತ್ತೊಂದು ಬೈಕ್‌ನಲ್ಲಿದ್ದ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಖರಾಯಪಟ್ಟಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಗಣೇಶ ಹಬ್ಬದ ಖರೀದಿಗೆ ಕೆಆರ್ ಮಾರ್ಕೆಟ್‌ನಲ್ಲಿ ಜನವೋ ಜನ; ಹೂವು-ಹಣ್ಣುಗಳ ಬೆಲೆ ಏರಿಕೆ!

0

ಬೆಂಗಳೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ.

ನಗರದ ಕೆಆರ್ ಮಾರ್ಕೆಟ್‌ನಲ್ಲಿ ಹೂವು, ಹಣ್ಣು ಹಾಗೂ ಹಬ್ಬಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಖರೀದಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.

ಹಬ್ಬದ ಹಿನ್ನೆಲೆಯಲ್ಲಿ ಹೂವು, ತೋರಣ ಸೇರಿದಂತೆ ಹಲವು ವಸ್ತುಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿದೆ. ಬೆಲೆ ಏರಿಕೆಯ ನಡುವೆಯೂ ಜನರು ಹಬ್ಬದ ಸಿದ್ಧತೆಗಾಗಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ಸೇವಂತಿಗೆ ಹೂವು ಕೆ.ಜಿ.ಗೆ ₹350, ತಾವರೆ ಹೂವು ಜೋಡಿಗೆ ₹50 ಹಾಗೂ ಬಟನ್ ಗುಲಾಬಿ ಕೆ.ಜಿ.ಗೆ ₹350 ಇದೆ. ಮಿಕ್ಸ್ ಹೂವು ಕೆ.ಜಿ.ಗೆ ₹300ರಿಂದ ₹400ರ ವರೆಗೆ ಮಾರಾಟವಾಗುತ್ತಿದೆ.

ಕನಕಾಂಬರ ಮೊಳಕ್ಕೆ ₹50 ಹಾಗೂ ಕೆ.ಜಿ.ಗೆ ₹2,000, ಮಲ್ಲಿಗೆ ಮೊಳಕ್ಕೆ ₹50 ಹಾಗೂ ಕೆ.ಜಿ.ಗೆ ₹1,000 ದರವಿದೆ. ತುಳಸಿ ತೋರಣ ಮೊಳಕ್ಕೆ ₹60, ಮಾವಿನ ಎಲೆ ಕಟ್ಟು ₹10ರಿಂದ ₹30 ಹಾಗೂ ಬಾಳೆ ದಿಂಡು ಜೋಡಿಗೆ ₹50ರಿಂದ ₹80ರ ವರೆಗೆ ಇದೆ.

ಹಣ್ಣುಗಳ ದರ ಎಷ್ಟು?

ಸೇಬು ಕೆ.ಜಿ.ಗೆ ₹200ರಿಂದ ₹300, ದಾಳಿಂಬೆ ₹100ರಿಂದ ₹250, ಸಪೋಟ ₹150ರಿಂದ ₹200 ಹಾಗೂ ದ್ರಾಕ್ಷಿ ₹120ರಿಂದ ₹150ರ ವರೆಗೆ ಮಾರಾಟವಾಗುತ್ತಿದೆ.

ಮೂಸಂಬಿ ಹಾಗೂ ಕಿತ್ತಳೆ ಕೆ.ಜಿ.ಗೆ ₹80ರಿಂದ ₹100 ಮತ್ತು ಬಾಳೆಹಣ್ಣು ₹80ರಿಂದ ₹150ರ ವರೆಗೆ ಇದೆ.

ತರಕಾರಿ ದರವೂ ಹೀಗಿದೆ

ಈರುಳ್ಳಿ ಕೆ.ಜಿ.ಗೆ ₹60ರಿಂದ ₹70, ಹಸಿಮೆಣಸಿನಕಾಯಿ ₹40ರಿಂದ ₹60, ಬೀಟ್‌ರೂಟ್ ₹50ರಿಂದ ₹60 ಹಾಗೂ ಬೆಳ್ಳುಳ್ಳಿ ₹200ರಿಂದ ₹250ರ ವರೆಗೆ ಇದೆ.

ನಿಂಬೆಹಣ್ಣು ಒಂದಕ್ಕೆ ₹8ರಿಂದ ₹15, ನುಗ್ಗೆಕಾಯಿ ಒಂದಕ್ಕೆ ₹10ರಿಂದ ₹15, ಕ್ಯಾಪ್ಸಿಕಂ ಕೆ.ಜಿ.ಗೆ ₹50ರಿಂದ ₹70 ಹಾಗೂ ಬಟಾಣಿ ₹140ರಿಂದ ₹160ರ ವರೆಗೆ ಮಾರಾಟವಾಗುತ್ತಿದೆ.

ದಿನಸಿ ವಸ್ತುಗಳ ದರ

ಬೆಲ್ಲ ಕೆ.ಜಿ.ಗೆ ₹50ರಿಂದ ₹55, ತೊಗರಿಬೇಳೆ ₹160ರಿಂದ ₹170, ಹುರಿಗಡಲೆ ₹150ರಿಂದ ₹180 ಹಾಗೂ ಕಡಲೆಬೀಜ ₹100ರಿಂದ ₹140ರ ವರೆಗೆ ಇದೆ.

ಸಕ್ಕರೆ ಕೆ.ಜಿ.ಗೆ ₹60ರಿಂದ ₹80, ಚಿರೋಟಿ ರವೆ ₹90ರಿಂದ ₹100, ಮೈದಾ ಹಿಟ್ಟು ₹45ರಿಂದ ₹50 ಹಾಗೂ ಕಡಲೆಕಾಳು ₹90ರಿಂದ ₹100ರ ವರೆಗೆ ಮಾರಾಟವಾಗುತ್ತಿದೆ.

ಅಡುಗೆ ಎಣ್ಣೆ ಲೀಟರ್‌ಗೆ ₹190ರಿಂದ ₹210ರ ವರೆಗೆ ಇದ್ದು, ದರವು ಆಯಾ ಬ್ರ್ಯಾಂಡ್‌ಗಳನ್ನು ಅವಲಂಬಿಸಿದೆ.

ಒಟ್ಟಾರೆ, ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕೆಆರ್ ಮಾರ್ಕೆಟ್‌ನಲ್ಲಿ ಜನಸಂದಣಿ ಹೆಚ್ಚಾಗಿದ್ದು, ಹೂವು, ಹಣ್ಣು, ತರಕಾರಿ ಹಾಗೂ ದಿನಸಿ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ. ಬೆಲೆ ಏರಿಕೆಯ ನಡುವೆಯೂ ಹಬ್ಬದ ಸಂಭ್ರಮಕ್ಕೆ ಮಾತ್ರ ಯಾವುದೇ ಕೊರತೆಯಾಗಿಲ್ಲ.

ಗಣೇಶನ ಜೊತೆ ಮೂಷಿಕನಿಗೂ ಗೌರವ; ಉತ್ತರ ಕರ್ನಾಟಕದಲ್ಲಿ ನಡೆಯುವ ವಿಶೇಷ ಆಚರಣೆ!

0

ಗಣೇಶ ಚತುರ್ಥಿ ಅಂದಾಕ್ಷಣ ಗಣಪತಿ ಮೂರ್ತಿ, ಮೋದಕ, ಕಡುಬು, ಪೂಜೆ ಮತ್ತು ಆರತಿ ನೆನಪಾಗುತ್ತದೆ.

ಆದರೆ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಗಣೇಶ ಚತುರ್ಥಿಯ ಸಂಭ್ರಮ ಇಲ್ಲಿಗೇ ಮುಗಿಯುವುದಿಲ್ಲ. ಚತುರ್ಥಿಯ ಮರುದಿನ ಗಣೇಶನ ವಾಹನವಾದ ಮೂಷಿಕನಿಗೂ ವಿಶೇಷವಾಗಿ ಪೂಜೆ ಸಲ್ಲಿಸುವ ಸಂಪ್ರದಾಯ ಕೆಲವು ಸಮುದಾಯಗಳಲ್ಲಿ ಕಂಡುಬರುತ್ತದೆ.

ಈ ದಿನ ಕೆಲವರು ಮಣ್ಣಿನಿಂದ ಮೂಷಿಕನ ಮೂರ್ತಿ ಅಥವಾ ಪ್ರತಿಕೃತಿ ತಯಾರಿಸಿ ಪೂಜೆ ಮಾಡುತ್ತಾರೆ. ಹೂವು, ಅರಿಶಿನ, ಕುಂಕುಮ, ನೈವೇದ್ಯ ಸೇರಿದಂತೆ ಕುಟುಂಬದ ಸಂಪ್ರದಾಯದಂತೆ ಪೂಜಾ ವಿಧಿಗಳನ್ನು ನೆರವೇರಿಸಲಾಗುತ್ತದೆ.

ಸಾಮಾನ್ಯವಾಗಿ ಗಣೇಶನ ಪೂಜೆಯಲ್ಲಿಯೇ ಮೂಷಿಕನಿಗೂ ನೈವೇದ್ಯ ಅರ್ಪಿಸುವ ಪದ್ಧತಿ ಇದೆ. ಆದರೆ ಕೆಲವು ಕಡೆ ಚತುರ್ಥಿಯ ನಂತರದ ದಿನವನ್ನೇ ಮೂಷಿಕನಿಗೆ ಮೀಸಲಿಟ್ಟು ವಿಶೇಷ ಆಚರಣೆ ನಡೆಸಲಾಗುತ್ತದೆ. ಗಣೇಶನ ಜೊತೆ ಸದಾ ಇರುವ ಆತನ ವಾಹನಕ್ಕೂ ಗೌರವ ಸಲ್ಲಿಸುವ ಭಾವನೆ ಈ ಸಂಪ್ರದಾಯದ ಹಿಂದಿದೆ ಎಂದು ಸ್ಥಳೀಯ ನಂಬಿಕೆಗಳು ಹೇಳುತ್ತವೆ.

ಮಣ್ಣಿನ ಮೂರ್ತಿಗೆ ವಿಶೇಷ ಸ್ಥಾನ:

ಕೆಲವು ಕುಟುಂಬಗಳಲ್ಲಿ ಈ ಆಚರಣೆಗೆ ಮಣ್ಣಿನ ಮೂರ್ತಿಗೆ ವಿಶೇಷ ಸ್ಥಾನವಿದೆ. ಮಣ್ಣಿನಿಂದ ಮೂಷಿಕನ ರೂಪ ತಯಾರಿಸಿ, ಅದನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ. ಗಣೇಶ ಚತುರ್ಥಿಯಲ್ಲಿ ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಪರಂಪರೆಯೊಂದಿಗೆ ಈ ಆಚರಣೆಗೂ ಸಂಬಂಧವಿದೆ.

ನೈವೇದ್ಯದಲ್ಲೂ ವಿಶೇಷತೆ:

ಉತ್ತರ ಕರ್ನಾಟಕದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಹೋಳಿಗೆ, ಕಡುಬು, ಹುಗ್ಗಿ ಸೇರಿದಂತೆ ಹಲವು ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಆದರೆ ಕೆಲವು ಸಮುದಾಯಗಳಲ್ಲಿ ಮೂಷಿಕನ ದಿನದ ಆಚರಣೆಯಲ್ಲಿ ನೈವೇದ್ಯಕ್ಕೂ ವಿಶೇಷತೆ ಕಂಡುಬರುತ್ತದೆ.

ಹುಬ್ಬಳ್ಳಿ ಸೇರಿದಂತೆ ಬಯಲುಸೀಮೆಯ ಕೆಲವು ನಗರ ಮತ್ತು ಗ್ರಾಮಗಳಲ್ಲಿ ಸಾವಜಿ, ಮರಾಠ ಸೇರಿದಂತೆ ಕೆಲವು ಸಮುದಾಯಗಳಲ್ಲಿ ಚತುರ್ಥಿಯ ಮರುದಿನ ಮಾಂಸಾಹಾರಿ ಖಾದ್ಯಗಳನ್ನು ಗಣೇಶನ ವಾಹನವಾದ ಮೂಷಿಕನಿಗೆ ಅರ್ಪಿಸುವ ಸಂಪ್ರದಾಯವಿದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ತಾವು ಸೇವಿಸುವ ಆಹಾರವನ್ನೇ ದೇವರಿಗೂ ಅರ್ಪಿಸಬೇಕು ಎಂಬ ನಂಬಿಕೆಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ.

ಆದರೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಅಥವಾ ಎಲ್ಲ ಗಣೇಶ ಭಕ್ತರಲ್ಲೂ ಈ ಆಚರಣೆ ಇದೆ ಎಂದು ಹೇಳಲು ಸಾಧ್ಯವಿಲ್ಲ. ಇದು ಕೆಲವು ನಿರ್ದಿಷ್ಟ ಸಮುದಾಯಗಳು ಮತ್ತು ಕುಟುಂಬಗಳಲ್ಲಿ ಉಳಿದುಕೊಂಡಿರುವ ಸ್ಥಳೀಯ ಸಂಪ್ರದಾಯವಾಗಿದೆ.

ಮೂಷಿಕನಿಗೂ ಯಾಕೆ ಇಷ್ಟೊಂದು ಗೌರವ?

ಗಣೇಶನ ವಾಹನವಾಗಿರುವ ಮೂಷಿಕನಿಗೆ ಹಿಂದೂ ಪೌರಾಣಿಕ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ. ದೊಡ್ಡ ದೇಹದ ಗಣಪತಿಗೆ ಚಿಕ್ಕ ಮೂಷಿಕ ವಾಹನವಾಗಿರುವುದು ಕೂಡ ಕುತೂಹಲಕಾರಿ ಸಂಕೇತವಾಗಿದೆ. ದೊಡ್ಡದು-ಚಿಕ್ಕದು ಎಂಬ ಭೇದವಿಲ್ಲದೆ ಎಲ್ಲರಿಗೂ ಸ್ಥಾನವಿದೆ ಎಂಬ ಆಧ್ಯಾತ್ಮಿಕ ಅರ್ಥದೊಂದಿಗೆ ಇದನ್ನು ಕೆಲವರು ವಿವರಿಸುತ್ತಾರೆ.

ಹೀಗಾಗಿ ಗಣೇಶನ ಜೊತೆ ಆತನ ವಾಹನಕ್ಕೂ ನೈವೇದ್ಯ ಅರ್ಪಿಸಿ ಗೌರವ ಸಲ್ಲಿಸುವ ಈ ವಿಭಿನ್ನ ಆಚರಣೆ, ಉತ್ತರ ಕರ್ನಾಟಕದ ಸ್ಥಳೀಯ ಸಂಸ್ಕೃತಿ ಮತ್ತು ಹಬ್ಬದ ವೈವಿಧ್ಯತೆಯನ್ನು ಪರಿಚಯಿಸುವ ಒಂದು ವಿಶೇಷ ಸಂಪ್ರದಾಯವಾಗಿದೆ.

Breaking News: ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ಬಂದಿದ್ದ ಪೇದೆ ಹೃದಯಾಘಾತದಿಂದ ಸಾವು!

0

ಚಿಕ್ಕಬಳ್ಳಾಪುರ: ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಚಿಂತಾಮಣಿ ನಗರದ ವೆಂಕಟಗಿರಿಕೋಟೆ ಕಾಲೋನಿ ನಿವಾಸಿ ಐರಾಜು (40) ಮೃತ ಪೊಲೀಸ್ ಪೇದೆ. ರಾತ್ರಿ ಕರ್ತವ್ಯ ಮುಗಿಸಿಕೊಂಡು ಚಿಂತಾಮಣಿಯಲ್ಲಿರುವ ತಮ್ಮ ಮನೆಗೆ ವಾಪಸ್ ಆಗಿದ್ದ ಐರಾಜು ಅವರಿಗೆ ಇಂದು ಮುಂಜಾನೆ ಸುಮಾರು 5.30ರ ವೇಳೆಗೆ ಹಠಾತ್ ಹೃದಯಾಘಾತ ಸಂಭವಿಸಿದೆ.

ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತ ಐರಾಜು ಅವರು ಪತ್ನಿ ಹಾಗೂ ಮೂವರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಕರ್ತವ್ಯನಿಷ್ಠ ಪೊಲೀಸ್ ಪೇದೆಯ ಅಕಾಲಿಕ ನಿಧನಕ್ಕೆ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಚಿಂತಾಮಣಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ. ಐರಾಜು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪೊಲೀಸ್ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.

‘ಗಣೇಶ ಮೆರವಣಿಗೆಗೆ ನಿರ್ಬಂಧ’ ಆರೋಪ: ಟಿ. ನರಸೀಪುರದಲ್ಲಿ ಇನ್ಸ್‌ಪೆಕ್ಟರ್ ವಿರುದ್ಧ ಬಿಜೆಪಿ ಪ್ರತಿಭಟನೆ

0

ಮೈಸೂರು: ಗಣೇಶ ಪ್ರತಿಷ್ಠಾಪನೆ ಹಾಗೂ ಮೆರವಣಿಗೆಗೆ ಸಂಬಂಧಿಸಿದಂತೆ ಟಿ. ನರಸೀಪುರದಲ್ಲಿ ರಾಜಕೀಯ ವಾಕ್ಸಮರ ಜೋರಾಗಿದೆ.

ಗಣೇಶೋತ್ಸವದ ವೇಳೆ ಇನ್ಸ್‌ಪೆಕ್ಟರ್ ನೀಡಿದ ಎಚ್ಚರಿಕೆಯ ಮಾತುಗಳು ವಿವಾದಕ್ಕೆ ಕಾರಣವಾಗಿದ್ದು, ಹಿಂದೂ ಕಾರ್ಯಕರ್ತರಿಗೆ ಧಮ್ಕಿ ಹಾಕಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಇನ್ಸ್‌ಪೆಕ್ಟರ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಇದರ ಬೆನ್ನಲ್ಲೇ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ಖಂಡಿಸಿ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಪ್ರತಾಪ್ ಸಿಂಹ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟಿ. ನರಸೀಪುರದಲ್ಲಿ ರಾಜಕೀಯ ವಾತಾವರಣ ಕಾವೇರಿದೆ.

ಇನ್ಸ್‌ಪೆಕ್ಟರ್ ಹೇಳಿಕೆ ಬಗ್ಗೆ ಎಸ್‌ಪಿ ಸ್ಪಷ್ಟನೆ:

ಇನ್ನು ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಕುರಿತು ಮೈಸೂರು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಪಷ್ಟನೆ ನೀಡಿದ್ದಾರೆ.

ಈ ಬಾರಿಯ ಗಣೇಶೋತ್ಸವಕ್ಕೆ ಯಾವುದೇ ಹೊಸ ನಿಯಮಗಳನ್ನು ಜಾರಿಗೊಳಿಸಿಲ್ಲ. ಶಾಂತಿ ಸಭೆಯಲ್ಲಿ ಇನ್ಸ್‌ಪೆಕ್ಟರ್ ಮಾತನಾಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಗಣೇಶ ಮಂಡಳಿಗಳು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ ಮಾರ್ಗಗಳು ಹಾಗೂ ನಿಯಮಗಳನ್ನೇ ಈ ಬಾರಿಯೂ ಅನುಸರಿಸಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷದ ಘಟನೆಯೊಂದನ್ನು ಉಲ್ಲೇಖಿಸಿ ಇನ್ಸ್‌ಪೆಕ್ಟರ್ ಎಚ್ಚರಿಕೆ ನೀಡಿದ್ದರು. ಆದರೆ ಯಾವುದೇ ರೀತಿಯ ಹೊಸ ನಿರ್ಬಂಧಗಳನ್ನು ವಿಧಿಸಿಲ್ಲ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ.

ಹೀಗಾಗಿ ಗಣೇಶೋತ್ಸವ ಮೆರವಣಿಗೆ ವಿಚಾರದಲ್ಲಿ ಟಿ. ನರಸೀಪುರದಲ್ಲಿ ಉಂಟಾಗಿದ್ದ ಗೊಂದಲಕ್ಕೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದ್ದು, ಇದೇ ವೇಳೆ ಎರಡೂ ಬಣಗಳ ಪ್ರತಿಭಟನೆಯಿಂದ ರಾಜಕೀಯ ಚರ್ಚೆ ಮತ್ತಷ್ಟು ತೀವ್ರಗೊಂಡಿದೆ.

ಇನ್ಸ್‌ಪೆಕ್ಟರ್ ಧನಂಜಯ್ ಹೇಳಿದ್ದೇನು?

ಟಿ. ನರಸೀಪುರದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಇನ್ಸ್‌ಪೆಕ್ಟರ್ ಧನಂಜಯ್, ಗಣೇಶ ಮೆರವಣಿಗೆಯನ್ನು ಪೊಲೀಸರು ನಿಗದಿಪಡಿಸುವ ಮಾರ್ಗದಲ್ಲೇ ನಡೆಸಬೇಕು ಎಂದು ಯುವಕರಿಗೆ ಸೂಚಿಸಿದ್ದರು.

ನಿಗದಿತ ಮಾರ್ಗ ಬಿಟ್ಟು ಮಸೀದಿ ಇರುವ ರಸ್ತೆಯಲ್ಲಿ ಮೆರವಣಿಗೆ ನಡೆಸುವುದು, ಪಟಾಕಿ ಸಿಡಿಸುವುದು ಅಥವಾ ಡಿಜೆ ಹಾಕಿಕೊಂಡು ನಿಲ್ಲುವುದು ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದರು. ನಿಯಮ ಉಲ್ಲಂಘಿಸಿದರೆ ಕೇವಲ ವಾರ್ನಿಂಗ್ ನೀಡದೆ ನೇರವಾಗಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

ಅಲ್ಲದೆ, ನಿಯಮ ಮೀರಿ ಗಲಾಟೆ ಸೃಷ್ಟಿಸಿದರೆ “ಗ್ರಹಚಾರ ಬಿಡಿಸಿಬಿಡ್ತೀನಿ, ಹೇಳಲ್ಲ ಮಾಡಿ ತೋರಿಸ್ತೀನಿ” ಎಂದು ಕಠಿಣವಾಗಿ ಎಚ್ಚರಿಕೆ ನೀಡಿದ್ದರು. ಹೀಗಾಗಿ ಇದು ವಿವಾದಕ್ಕೆ ಕಾರಣವಾಗಿದೆ.

ರಸ್ತೆಗೆ ದಿಢೀರ್ ಬಂದ ಕಡವೆ: ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು, ಐವರು ಪಾರು!

0

ಶಿವಮೊಗ್ಗ: ರಸ್ತೆಗೆ ದಿಢೀರ್ ಅಡ್ಡ ಬಂದ ಕಡವೆಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಹೊಸನಗರ ತಾಲೂಕಿನ ನಗರ ಸಮೀಪದ ನೂಲಿಗ್ಗೇರಿ ಬಳಿ ನಡೆದಿದೆ.

ಸಾಗರ ಮೂಲದ ಪ್ರಕಾಶ್ ಎಂಬವರು ಮಣಿಪಾಲಿನಿಂದ ಸಾಗರಕ್ಕೆ ಕಾರಿನಲ್ಲಿ ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ನೂಲಿಗ್ಗೇರಿ ಬಳಿ ಕಾರು ಸಾಗುತ್ತಿದ್ದಾಗ ದಿಢೀರ್ ಕಡವೆಯೊಂದು ರಸ್ತೆಗೆ ಬಂದಿದೆ.

ಕಡವೆಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಕಾರನ್ನು ರಸ್ತೆಯ ಬದಿಗೆ ತಿರುಗಿಸಲು ಯತ್ನಿಸಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಕಾಶ್ ಸೇರಿದಂತೆ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದಲ್ಲಿ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ತಡರಾತ್ರಿ ಕೋಳಿಫಾರ್ಮ್‌ಗೆ ನುಗ್ಗಿದ ಚಿರತೆ? 950ಕ್ಕೂ ಹೆಚ್ಚು ಕೋಳಿ ಮರಿಗಳು ಸಾವು!

0

ಬೆಂಗಳೂರು ಗ್ರಾಮಾಂತರ: ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ಹಾಗೂ ಅದರ ಮರಿಗಳು ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿ ಮರಿಗಳು ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸೋಮಶೆಟ್ಟಿಹಳ್ಳಿ ಗ್ರಾಮದ ಕೆಂಪೇಗೌಡ ಎಂಬುವವರಿಗೆ ಸೇರಿದ ಕೋಳಿಫಾರ್ಮ್‌ನಲ್ಲಿ 10 ಸಾವಿರಕ್ಕೂ ಅಧಿಕ ಕೋಳಿ ಮರಿಗಳನ್ನು ಸಾಕಲಾಗುತ್ತಿತ್ತು. ಎಂದಿನಂತೆ ಕೋಳಿಗಳನ್ನು ಸಾಕಾಣಿಕೆ ಮಾಡುತ್ತಿದ್ದ ರೈತ, ಬೆಳಗ್ಗೆ ಫಾರ್ಮ್‌ಗೆ ಬಂದಾಗ ಕೋಳಿ ಮರಿಗಳು ಮೃತಪಟ್ಟಿರುವುದು ಕಂಡುಬಂದಿದೆ. ಬಳಿಕ ಪರಿಶೀಲಿಸಿದಾಗ ಚಿರತೆ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ.

ತಡರಾತ್ರಿ ಸುಮಾರು 3 ಗಂಟೆಯ ವೇಳೆಗೆ ಕೋಳೂರು ಗ್ರಾಮದ ಮೀಸಲು ಅರಣ್ಯ ಪ್ರದೇಶದಿಂದ ಚಿರತೆ ಹಾಗೂ ಅದರ ಮರಿಗಳು ಕೋಳಿಫಾರ್ಮ್‌ಗೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಫಾರ್ಮ್‌ಗೆ ನುಗ್ಗಿದ ಚಿರತೆಗಳು ಕೋಳಿ ಮರಿಗಳ ಮೇಲೆ ದಾಳಿ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ದಾಳಿಯಲ್ಲಿ 950ಕ್ಕೂ ಅಧಿಕ ಕೋಳಿ ಮರಿಗಳು ಸಾವನ್ನಪ್ಪಿವೆ. ಇದರಿಂದ ರೈತ ಕೆಂಪೇಗೌಡ ಅವರಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಳಿಫಾರ್ಮ್ ಸುತ್ತಮುತ್ತಲಿನ ಪ್ರದೇಶದಲ್ಲೂ ಪರಿಶೀಲನೆ ನಡೆಸಲಾಗಿದ್ದು, ಚಿರತೆಗಳ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.

ಕೋಳೂರು ಗ್ರಾಮದ ಮೀಸಲು ಅರಣ್ಯ ಪ್ರದೇಶದಿಂದ ಚಿರತೆಗಳು ಬಂದಿರುವ ಶಂಕೆ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲೂ ಆತಂಕ ಹೆಚ್ಚಾಗಿದೆ. ಕೋಳಿಫಾರ್ಮ್ ಮೇಲೆ ನಡೆದಿರುವ ದಾಳಿಯಿಂದ ಸ್ಥಳೀಯರು ಭಯಗೊಂಡಿದ್ದು, ಚಿರತೆಗಳನ್ನು ಪತ್ತೆಹಚ್ಚಿ ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಒಟ್ಟಾರೆ, ದೊಡ್ಡಬಳ್ಳಾಪುರ ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ಕೋಳಿಫಾರ್ಮ್ ಮೇಲೆ ನಡೆದಿರುವ ಚಿರತೆ ದಾಳಿಯ ಶಂಕೆ ರೈತರಲ್ಲಿ ಆತಂಕ ಮೂಡಿಸಿದ್ದು, ಅರಣ್ಯ ಇಲಾಖೆ ಮುಂದಿನ ಕ್ರಮದತ್ತ ಗಮನಹರಿಸಿದೆ.