ಗದಗ: ರಾತ್ರಿ ವೇಳೆ ನಿಲ್ಲಿಸಿದ್ದ ಕಾರುಗಳ ಬಾಗಿಲು ಲಾಕ್ಗಳನ್ನು ಅತ್ಯಾಧುನಿಕ ಎಲೆಕ್ಟ್ರಾನಿಕ್ ಕೀ-ಪ್ರೋಗ್ರಾಮಿಂಗ್ ಸಾಧನದ ಮೂಲಕ ತೆರೆದು ಕಾರುಗಳನ್ನು ಕಳವು ಮಾಡುತ್ತಿದ್ದ ಅಂತಾರಾಜ್ಯ ಕಾರು ಕಳ್ಳರ ಜಾಲವನ್ನು ಗದಗ ಗ್ರಾಮೀಣ ಪೊಲೀಸರು ಭೇದಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಮೂವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಿದ್ದು, ಅವರಿಂದ ಎರಡು ಕಾರುಗಳು, ಕಾರು ಕಳವಿಗೆ ಬಳಸುತ್ತಿದ್ದ ವೃತ್ತಿಪರ ಕೀ-ಪ್ರೋಗ್ರಾಮಿಂಗ್ ಸಾಧನ ಸೇರಿದಂತೆ ಒಟ್ಟು ₹27.15 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ.
ಗದಗ ತಾಲೂಕಿನ ಹುಲಕೋಟಿ ಗ್ರಾಮದ ಕರ್ನಾಟಕ ಗೃಹ ಮಂಡಳಿ ಬಡಾವಣೆಯಲ್ಲಿ ಗುದ್ನಯ್ಯಸ್ವಾಮಿ ತಂದೆ ವೀರಯ್ಯ ಅಜ್ಜನವರಮಠ ಅವರಿಗೆ ಸೇರಿದ ಬಿಳಿ ಬಣ್ಣದ ಮಹೀಂದ್ರಾ ಸ್ಕಾರ್ಪಿಯೋ ಕಾರು (KA-35/N-5642) ಜುಲೈ 31ರ ರಾತ್ರಿ 11ರಿಂದ ಆಗಸ್ಟ್ 1ರ ಬೆಳಗ್ಗೆ 6.30ರ ನಡುವಿನ ಅವಧಿಯಲ್ಲಿ ಕಳವಾಗಿತ್ತು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 199/2026, ಕಲಂ 303(2) ಬಿ.ಎನ್.ಎಸ್.-2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರಿನ ಎಂಜಿನ್ ನಂ. SJF4G14119, ಚಾಸಿಸ್ ನಂ. MA1TA2SJXF2G45551 ಎಂದು ದಾಖಲಾಗಿದೆ.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ಅಂದಿನ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್, ಐಪಿಎಸ್, ಗದಗ ಹಾಗೂ ಗದಗ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ, ಗದಗ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದರಾಮೇಶ್ವರ ಗಡೇದ ಅವರ ನೇತೃತ್ವದಲ್ಲಿ ತಂಡ ಕಾರ್ಯಾಚರಣೆ ನಡೆಸಿತು.
ಆ.28ರಂದು ಬೆಳಗ್ಗೆ ಸುಮಾರು 6.30ರ ವೇಳೆಗೆ ಗದಗ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ವಿಶೇಷ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು, ಪೆಟ್ರೋಲಿಂಗ್ ಮಾಡುತ್ತ ಸಾರಿಗೆ ನಗರ ಕಡೆಗೆ ತೆರಳುತ್ತಿದ್ದಾಗ ಕಳಸಾಪುರ ಕ್ರಾಸ್ ಹತ್ತಿರ ಹೆದ್ದಾರಿಯಲ್ಲಿ ಬಿಳಿ ಬಣ್ಣದ ಗುಜರಾತ್ ಪಾಸಿಂಗ್ ಇರುವ ಕ್ರೇಟಾ ಕಾರೊಂದು ನಿಂತಿರುವುದು ಕಂಡುಬಂದಿದೆ.
ಕಾರಿನ ಬಳಿಗೆ ತೆರಳಿ ಪರಿಶೀಲಿಸಿದಾಗ ಅದರೊಳಗೆ ಇಬ್ಬರು ವ್ಯಕ್ತಿಗಳು ಮಲಗಿರುವುದು ಕಂಡುಬಂದಿದೆ. ಅವರನ್ನು ಎಬ್ಬಿಸಿ ಹೆಸರು-ವಿಳಾಸ ವಿಚಾರಿಸಿದಾಗ ಅನುಮಾನಾಸ್ಪದವಾಗಿ ಕಂಡುಬಂದಿದ್ದು, ವಾಹನದ ದಾಖಲೆಗಳನ್ನೂ ಹಾಜರುಪಡಿಸದ ಹಿನ್ನೆಲೆಯಲ್ಲಿ ಇಬ್ಬರನ್ನೂ ಠಾಣೆಗೆ ಕರೆತಂದು ಸುದೀರ್ಘ ವಿಚಾರಣೆ ನಡೆಸಲಾಗಿದೆ.
ವಿಚಾರಣೆ ವೇಳೆ ಅವರು ತಮ್ಮ ಹೆಸರು ಅರವಿಂದಕುಮಾರ ತಂದೆ ಗಂಗಾರಾಮ್ ಬಿಷ್ಣೋಯಿ (35), ಜಾತಿ ಹಿಂದೂ ಬಿಷ್ಣೋಯಿ, ವೃತ್ತಿ ಚಾಲಕ, ಸಾ. ಸಿಲ್ಲು, ತಾ. ಗುಡಾಮಾಲಾನಿ, ಜಿ. ಬಾರಮೇರ್, ರಾಜಸ್ಥಾನ, ಹಾಗೂ ರಾಮಜೀವನ್ ತಂದೆ ಕೃಷ್ಣಾರಾಮ್ ಬಿಷ್ಣೋಯಿ (30), ಜಾತಿ ಹಿಂದೂ ಬಿಷ್ಣೋಯಿ, ವೃತ್ತಿ ಕೃಷಿಕ, ಸಾ. ಕೋಜಾ, ತಾ. ಗುಡಾಮಾಲಾನಿ, ಜಿ. ಬಾರಮೇರ್, ರಾಜಸ್ಥಾನ ಎಂದು ತಿಳಿಸಿದ್ದಾರೆ.
ವಿಚಾರಣೆಯಲ್ಲಿ ಮತ್ತೋರ್ವ ಆರೋಪಿ ವಿಕಾಸ್ಕುಮಾರ @ ವಿಕ್ಕಿ ತಂದೆ ಲೇಕರಾಜ್ ಬಿಷ್ಣೋಯಿ (30), ಜಾತಿ ಹಿಂದೂ ಬಿಷ್ಣೋಯಿ, ವೃತ್ತಿ ಕೃಷಿಕ, ಸಾ. ದಾತಾ, ತಾ. ಸಾಂಚೋರ್, ಜಿ. ಜಾಲೋರ್, ರಾಜಸ್ಥಾನ ಎಂಬಾತನೂ ತಮ್ಮೊಂದಿಗೆ ಸೇರಿಕೊಂಡಿದ್ದಾನೆ ಎಂದು ಆರೋಪಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಗಳ ಹೇಳಿಕೆಯಂತೆ, ಜುಲೈ 31ರಂದು ರಾತ್ರಿ ಸುಮಾರು 1 ಗಂಟೆ ವೇಳೆಗೆ ಹುಲಕೋಟಿಗೆ ಬಂದಿದ್ದ ಅವರು Autel ಕಂಪನಿಯ Professional Key Programming Tools ಬಳಸಿ ಸ್ಕಾರ್ಪಿಯೋ ಕಾರಿನ ಡೋರ್ ಲಾಕ್ ತೆರೆಯುವ ಮೂಲಕ ಕಾರನ್ನು ಕಳವು ಮಾಡಿದ್ದಾರೆ. ಬಳಿಕ ಗ್ರಾಮಗಳ ಮಾರ್ಗವಾಗಿ ನರಗುಂದ ದಾಟಿ ಯರಗಟ್ಟಿ ಕಡೆಗೆ ತೆರಳುತ್ತಿದ್ದಾಗ ಕಾರು ಕೆಟ್ಟು ನಿಂತಿದೆ.
ಕಾರು ಸ್ಥಳದಲ್ಲೇ ನಿಲ್ಲಿಸಿ ತಾವು ತೆಗೆದುಕೊಂಡು ಬಂದಿದ್ದ ಕ್ರೇಟಾ ಕಾರಿನಲ್ಲಿ ರಾಜಸ್ಥಾನದತ್ತ ತೆರಳಿದ್ದರು. ಸುಮಾರು 5–6 ದಿನಗಳ ಹಿಂದೆ ಅರವಿಂದಕುಮಾರ ಮತ್ತು ರಾಮಜೀವನ್ ಇದೇ ಕ್ರೇಟಾ ಕಾರನ್ನು ಬಳಸಿಕೊಂಡು ಕರ್ನಾಟಕಕ್ಕೆ ಬಂದು ಈ ಹಿಂದೆ ಸ್ಕಾರ್ಪಿಯೋ ಕಾರು ಕಳವು ಮಾಡಿದ್ದರು ಎನ್ನಲಾಗಿದೆ. ಕಳವು ಮಾಡಿದ ಕಾರನ್ನು ಅರ್ಧ ದಾರಿಯಲ್ಲಿ ಬಿಟ್ಟು ಹೋಗಿದ್ದು, ನಂತರ ಅದನ್ನು ಯಾರಾದರೂ ಮೆಕ್ಯಾನಿಕ್ ಹುಡುಕಿ ಚಾಲನೆ ಮಾಡಿಕೊಂಡು ತೆಗೆದುಕೊಂಡು ಹೋಗಬಹುದು ಎಂಬ ಉದ್ದೇಶದಿಂದ ಗದಗಕ್ಕೆ ಮೆಕ್ಯಾನಿಕ್ ಹುಡುಕಲು ಬಂದಿದ್ದಾಗಿ ವಿಚಾರಣೆಯಲ್ಲಿ ತಿಳಿದು ಬಂದಿದೆ.
ಬಂಧಿತ ಆರೋಪಿಗಳಿಂದ
ಮಹೀಂದ್ರಾ ಸ್ಕಾರ್ಪಿಯೋ ಕಾರು — ಬಿಳಿ ಬಣ್ಣ, ನೋಂದಣಿ ಸಂಖ್ಯೆ KA-35/N-5642, ಎಂಜಿನ್ ನಂ. SJF4G14119, ಚಾಸಿಸ್ ನಂ. MA1TA2SJXF2G45551. ಅಂದಾಜು ಮೌಲ್ಯ ₹8.15 ಲಕ್ಷ, ಹ್ಯುಂಡೈ ಕ್ರೇಟಾ ಕಾರು — ಬಿಳಿ ಬಣ್ಣ, ನೋಂದಣಿ ಫಲಕ ಇಲ್ಲ, ಕೀ ಸಮೇತ. ಎಂಜಿನ್ ನಂ. D4FARM285428, ಚಾಸಿಸ್ ನಂ. MALPB813LRM095165. ಅಂದಾಜು ಮೌಲ್ಯ ₹18 ಲಕ್ಷ, AUTEL ಕಂಪನಿಯ ನೀಲಿ ಮತ್ತು ಕಪ್ಪು ಬಣ್ಣದ Professional Key Programming Tool — ಅಂದಾಜು ಮೌಲ್ಯ ₹1 ಲಕ್ಷ,
ಕಳ್ಳತನಕ್ಕೆ ಬಳಸಿದ್ದ ಗುಲಾಬಿ ಬಣ್ಣದ ಒಂದು ಹಾಗೂ ಹಸಿರು ಬಣ್ಣದ ಒಂದು ಸ್ಕ್ರೂ ಡ್ರೈವರ್ ಹಾಗೂ
ಆರೋಪಿಗಳು ಹಾಜರುಪಡಿಸಿದ ಸ್ಕಾರ್ಪಿಯೋ ಕಾರಿನ ನಕಲಿ ಕೀ ಸೇರಿದಂತೆ ಒಟ್ಟು ₹27,15,000 ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೋರ್ವ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ.
ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಗದಗ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದರಾಮೇಶ್ವರ ಗಡೇದ, ಪಿಎಸ್ಐಗಳಾದ ಎಸ್.ಬಿ. ಕವಲೂರ, ಪ್ರದೀಪ್ ತೋಟಗೇರ, ಸಿಬ್ಬಂದಿಗಳಾದ ಎಂ.ಬಿ. ವಡ್ಡಟ್ಟಿ, ಪ್ರಕಾಶ ಗಾಣಿಗೇರ, ಅನೀಲ ಬನ್ನಿಕೊಪ್ಪ, ಮಹೇಶ ಗೊಳಗೊಳಕಿ, ಎಂ.ಐ. ಪಾಟೀಲ, ಗುರು ಬೂದಿಹಾಳ ಹಾಗೂ ಗದಗದ ಎ.ಆರ್.ಎಸ್.ಐ. ಟೆಕ್ನಿಕಲ್ ಸೆಲ್ನ ಸಂಜು ಕೊರಡೂರ ಅವರು ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪೊಲೀಸ್ ತಂಡದ ಉತ್ತಮ ಕಾರ್ಯಕ್ಕೆ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

