Home Blog

ಆಂಬ್ಯುಲೆನ್ಸ್‌ಗಾಗಿ ಕಾಯಲಿಲ್ಲ; ಬಸ್ಸನ್ನೇ ಆಂಬ್ಯುಲೆನ್ಸ್ ಮಾಡಿದ ಸಿಬ್ಬಂದಿ! ಮಂಗಳೂರಿನಲ್ಲಿ ಮಾನವೀಯತೆಯ ಅಪರೂಪದ ಉದಾಹರಣೆ

0

ಮಂಗಳೂರು: ರಸ್ತೆ ಮಧ್ಯೆ ಪ್ರಜ್ಞಾಹೀನರಾಗಿ ಬಿದ್ದಿದ್ದ ತಾಯಿ ಮತ್ತು ಮಗುವಿನ ಜೀವ ಉಳಿಸಲು ಸಿಟಿ ಬಸ್ ಸಿಬ್ಬಂದಿ ತೋರಿದ ಮಾನವೀಯತೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಯಾಣಿಕರನ್ನು ಕೆಳಗಿಳಿಸಿ, ತಮ್ಮ ಬಸ್ಸನ್ನೇ ತುರ್ತು ವಾಹನವಾಗಿ ಬಳಸಿದ ಚಾಲಕ ಮತ್ತು ನಿರ್ವಾಹಕ ಇಬ್ಬರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಮರಕಡ ಜಂಕ್ಷನ್ ಬಳಿ ನಡೆದ ಅಪಘಾತದಲ್ಲಿ ತಾಯಿ ಮತ್ತು ಪುಟ್ಟ ಮಗು ಮತ್ತೊಂದು ಬಸ್ಸಿನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳದಲ್ಲಿದ್ದವರು ಆತಂಕಗೊಂಡಿದ್ದ ವೇಳೆ, ರೂಟ್ ನಂ.13Bರ ‘ಮಾಸ್ಟರ್’ ಬಸ್ ಸಿಬ್ಬಂದಿ ತಕ್ಷಣ ಸ್ಪಂದಿಸಿದ್ದಾರೆ.

ಚಾಲಕ ದಯಾನಂದ್ ಹಾಗೂ ನಿರ್ವಾಹಕ ಸಂದೀಪ್ ಯಾವುದೇ ವಿಳಂಬ ಮಾಡದೇ ಗಾಯಾಳುಗಳನ್ನು ತಮ್ಮ ಬಸ್ಸಿಗೆ ಹತ್ತಿಸಿಕೊಂಡು ನೇರವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಮಯವನ್ನು ವ್ಯರ್ಥ ಮಾಡದೇ ತೆಗೆದುಕೊಂಡ ಈ ನಿರ್ಧಾರವೇ ಜೀವ ರಕ್ಷಣೆಗೆ ಕಾರಣವಾಗಿದೆ ಎನ್ನಲಾಗಿದೆ.

ಸಾಮಾನ್ಯ ಕರ್ತವ್ಯವನ್ನು ಮೀರಿ ಮಾನವೀಯತೆಯನ್ನು ಮೆರೆದಿರುವ ಈ ಇಬ್ಬರು ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಕಾರ್ಯ ವೈರಲ್ ಆಗಿದೆ. “ಸೇವೆಯೇ ಧರ್ಮ” ಎಂಬುದನ್ನು ಅವರು ತಮ್ಮ ಕೃತಿಯಿಂದ ಸಾಬೀತುಪಡಿಸಿದ್ದಾರೆ.

ಅಂಕೋಲಾದಲ್ಲಿ ಭೀಕರ ಬಸ್ ಅಪಘಾತ; ಸೀಬರ್ಡ್ ಲಕ್ಸುರಿ ಬಸ್ ಪಲ್ಟಿ, ಓರ್ವ ಸಾವು-21 ಮಂದಿಗೆ ಗಾಯ

ಕಾರವಾರ/ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, 21 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 9 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಬಳ್ಳಾರಿಯಿಂದ ಗೋವಾ ಕಡೆಗೆ ತೆರಳುತ್ತಿದ್ದ ಸೀಬರ್ಡ್ ಸಂಸ್ಥೆಗೆ ಸೇರಿದ ಖಾಸಗಿ ಲಕ್ಸುರಿ ಬಸ್, ಕಂಚಿನಬಾಗಿಲು (ಅಡ್ಲೂರು) ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ಪಲ್ಟಿಯಾಗಿದೆ.

ಚಾಲಕನಿಗೆ ನಿದ್ರೆ ತೂಕಡಿಸಿದ ಪರಿಣಾಮ ಬಸ್ ಮೇಲಿನ ನಿಯಂತ್ರಣ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ವೇಗವಾಗಿ ಸಂಚರಿಸುತ್ತಿದ್ದ ಬಸ್ ಹೆದ್ದಾರಿಯ ಮಧ್ಯಭಾಗದಲ್ಲೇ ಉರುಳಿಬಿದ್ದ ಪರಿಣಾಮ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.

ಅಪಘಾತದ ನಂತರ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳ ಉದ್ದನೆಯ ಸರತಿ ನಿರ್ಮಾಣವಾಗಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಂಕೋಲಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಸ್ಸಿನ ಕಿಟಕಿ ಗಾಜುಗಳನ್ನು ಒಡೆದು ಒಳಗಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದರು.

ಗಾಯಗೊಂಡ 21 ಮಂದಿಯನ್ನು ತಕ್ಷಣವೇ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇವರಲ್ಲಿ ತಲೆ ಮತ್ತು ಎದೆ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದ 9 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಕ್ರಿಮ್ಸ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಬಳಿಕ ಪೊಲೀಸರು ಬೃಹತ್ ಕ್ರೇನ್ ಸಹಾಯದಿಂದ ಅಪಘಾತಕ್ಕೀಡಾದ ಬಸ್ಸನ್ನು ಹೆದ್ದಾರಿಯಿಂದ ತೆರವುಗೊಳಿಸಿದರು. ಇದಾದ ನಂತರ ವಾಹನ ಸಂಚಾರವನ್ನು ಪುನಃ ಸುಗಮಗೊಳಿಸಲಾಯಿತು. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.

ನಟ ಅಜಿತ್‌ ಕುಮಾರ್‌ಗೆ ಮಾತೃವಿಯೋಗ:ಮೂರು ವರ್ಷಗಳಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಸ್ಟಾರ್

ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ ಅವರು ಶನಿವಾರ ಮುಂಜಾನೆ ನಿಧನರಾಗಿದ್ದು, ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಅವರು ಕೊನೆಯುಸಿರೆಳೆದಿದ್ದು, ಅವರಿಗೆ 84 ವರ್ಷ ವಯಸ್ಸಾಗಿತ್ತು.

2023ರಲ್ಲಿ ತಂದೆ ಪಿ. ಸುಬ್ರಮಣ್ಯಂ ಮಣಿ ಅವರನ್ನು ಕಳೆದುಕೊಂಡಿದ್ದ ಅಜಿತ್ ಕುಮಾರ್, ಇದೀಗ ತಾಯಿಯ ಅಗಲಿಕೆಯಿಂದ ಮತ್ತೊಂದು ದೊಡ್ಡ ವೈಯಕ್ತಿಕ ನಷ್ಟವನ್ನು ಎದುರಿಸುತ್ತಿದ್ದಾರೆ. ಕುಟುಂಬದ ಎಲ್ಲ ಸದಸ್ಯರಿಗೆ ಆಧಾರವಾಗಿದ್ದ ಮೋಹಿನಿ ಮಣಿ ಅವರ ನಿಧನವು ಭರಿಸಲಾಗದ ದುಃಖವನ್ನುಂಟುಮಾಡಿದೆ.

ಸಾರ್ವಜನಿಕ ಜೀವನದಿಂದ ದೂರವಿರಲು ಇಷ್ಟಪಡುತ್ತಿದ್ದ ಈ ಕುಟುಂಬ, ವೈಯಕ್ತಿಕ ವಿಚಾರಗಳನ್ನು ಸದಾ ಖಾಸಗಿಯಾಗಿಯೇ ಉಳಿಸಿಕೊಂಡಿತ್ತು. ಆದರೂ ಅಜಿತ್ ಅವರ ಜನಪ್ರಿಯತೆಯಿಂದಾಗಿ ಕುಟುಂಬದ ಪ್ರತಿಯೊಂದು ಬೆಳವಣಿಗೆ ಅಭಿಮಾನಿಗಳ ಗಮನ ಸೆಳೆಯುತ್ತಿತ್ತು.

ಮೋಹಿನಿ ಮಣಿ ಅವರ ನಿಧನದ ಸುದ್ದಿ ಹೊರಬಿದ್ದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪದ ಮಹಾಪೂರ ಹರಿದುಬಂದಿದ್ದು, ಸಾವಿರಾರು ಅಭಿಮಾನಿಗಳು ಆತ್ಮಕ್ಕೆ ಶಾಂತಿ ಕೋರಿ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕುಟುಂಬದ ಆಪ್ತ ಮೂಲಗಳ ಪ್ರಕಾರ ಅಂತ್ಯಸಂಸ್ಕಾರವನ್ನು ಅತ್ಯಂತ ಸರಳ ಹಾಗೂ ಖಾಸಗಿ ರೀತಿಯಲ್ಲಿ ನಡೆಸಲಾಗುತ್ತದೆ.

‘ಧರ್ಮಕ್ಕಿಂತ ಮಾನವೀಯತೆ ದೊಡ್ಡದು’! ಬಕ್ರೀದ್ ಹಬ್ಬದಂದು ಗೋಶಾಲೆಗೆ ಮೇವು ದೇಣಿಗೆ ನೀಡಿದ ಮುಸ್ಲಿಂ ಕುಟುಂಬ

ಕಲಬುರಗಿ: ಬಕ್ರೀದ್ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದ ಮುಸ್ಲಿಂ ಕುಟುಂಬವೊಂದು ಗೋಶಾಲೆಗೆ ಮೇವು ದೇಣಿಗೆ ನೀಡುವ ಮೂಲಕ ಸೌಹಾರ್ದತೆಯ ಸಂದೇಶ ರವಾನಿಸಿದೆ. ಮುಸ್ಲಿಂ ಮುಖಂಡ ಸೈಯದ್ ಜಾಫರ್ ಉಲ್ ಹಸನ್ ಅವರು ಸುಮಾರು 25 ಸಾವಿರ ರೂಪಾಯಿ ಮೌಲ್ಯದ ಮೇವನ್ನು ಗೋಶಾಲೆಗೆ ನೀಡಿದ್ದು, ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ತಮ್ಮ ತಂದೆ, ತಾಯಿ ಹಾಗೂ ಸಹೋದರಿಯ ಸ್ಮರಣಾರ್ಥ ಈ ದೇಣಿಗೆ ನೀಡಲಾಗಿದ್ದು, ಗೋವುಗಳ ಹಸಿವು ನೀಗಿಸುವ ಕಾರ್ಯದಲ್ಲಿ ಪಾಲ್ಗೊಂಡಿರುವುದು ಗಮನಾರ್ಹವಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಕಂಬಳೇಶ್ವರ ಸೊಮಶೇಖರ ಶಿವಾಚಾರ್ಯರು, ಹಬ್ಬದ ದಿನವೇ ಗೋಶಾಲೆಗೆ ನೆರವು ನೀಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ಸಮಾಜದಲ್ಲಿ ಧರ್ಮದ ಹೆಸರಿಗಿಂತ ಮಾನವೀಯತೆ, ಕರುಣೆ ಮತ್ತು ಪ್ರಾಣಿದಯೆ ಮುಖ್ಯ ಎಂಬುದನ್ನು ಈ ಕುಟುಂಬ ಸಾಬೀತುಪಡಿಸಿದೆ ಎಂದು ಹೇಳಿದರು.

ಗೋಶಾಲೆಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಕುಟುಂಬದ ಸೇವಾ ಮನೋಭಾವವನ್ನು ಕೊಂಡಾಡಿ ಅಭಿನಂದಿಸಿದರು.

ಏಷ್ಯನ್ ಗೇಮ್ಸ್ ಟ್ರಯಲ್ಸ್ʼನಲ್ಲಿ ಭಾಗವಹಿಸಲು ವಿನೇಶ್ ಫೋಗಟ್ʼಗೆ ಸುಪ್ರೀಂ ಕೋರ್ಟ್ ಅನುಮತಿ

ನವದೆಹಲಿ: ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ 2026ರ ಏಷ್ಯನ್ ಕ್ರೀಡಾಕೂಟದ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಮೇ 30 ಮತ್ತು 31ರಂದು ನಡೆಯಲಿರುವ ಆಯ್ಕೆ ಟ್ರಯಲ್ಸ್‌ನಲ್ಲಿ ಫೋಗಟ್ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ.

ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಅಲೋಕ್ ಆರಾಧೆ ಅವರಿದ್ದ ಪೀಠ ಈ ಮಹತ್ವದ ಆದೇಶ ನೀಡಿತು.

ವಿಚಾರಣೆ ವೇಳೆ ನ್ಯಾಯಪೀಠ, “ವಿನೇಶ್ ಫೋಗಟ್ ಪ್ರಕರಣ ಸಾಮಾನ್ಯ ಕ್ರೀಡಾಪಟುಗಳ ಪ್ರಕರಣದಂತಿಲ್ಲ. ಅವರು ಹಲವು ಬಾರಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಆದ್ದರಿಂದ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವರನ್ನು ತಡೆಯುವುದಿಲ್ಲ” ಎಂದು ಸ್ಪಷ್ಟಪಡಿಸಿತು.

ಇದೇ ವೇಳೆ ಕ್ರೀಡಾ ವಿಷಯಗಳಲ್ಲಿ ನ್ಯಾಯಾಲಯಗಳ ಹಸ್ತಕ್ಷೇಪದ ಕುರಿತು ಪೀಠ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು. “ಕ್ರೀಡಾ ನಿಯಮಗಳು ಎಲ್ಲರಿಗೂ ಒಂದೇ ಆಗಿರುತ್ತವೆ. ಅವುಗಳನ್ನು ಪಾಲಿಸುವ ಜವಾಬ್ದಾರಿ ಕ್ರೀಡಾಪಟುಗಳದ್ದಾಗಿದೆ. ಪ್ರತಿಯೊಂದು ಕ್ರೀಡಾ ವಿಚಾರವೂ ನ್ಯಾಯಾಲಯಕ್ಕೆ ಬರಬಾರದು. ಇಂತಹ ಸಮಸ್ಯೆಗಳಿಗೆ ಸಾಂಸ್ಥಿಕ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಬಲವಾಗಿರಬೇಕು” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಆದಾಗ್ಯೂ, ಫೋಗಟ್ ಅವರ ಡೋಪಿಂಗ್ ಪರೀಕ್ಷೆಗಳ ದಾಖಲೆಗಳು ಲಭ್ಯವಿಲ್ಲದಿರುವ ಬಗ್ಗೆ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಜೊತೆಗೆ ಅವರು ಡಿಸೆಂಬರ್ 2024ರಲ್ಲಿ ವಿಶ್ರಾಂತಿ ಪಡೆದು, ಆಗಸ್ಟ್ 2025ರಲ್ಲಿ ಪುನಃ ಕ್ರೀಡಾಕ್ಷೇತ್ರಕ್ಕೆ ಮರಳಿರುವ ಅಂಶವನ್ನೂ ನ್ಯಾಯಾಲಯ ಪರಿಗಣಿಸಿತು.

ಪ್ರಕರಣದ ಹಿನ್ನೆಲೆ

ಮಾತೃತ್ವದ ಕಾರಣದಿಂದ ದೀರ್ಘಕಾಲ ಕುಸ್ತಿಯಿಂದ ದೂರ ಉಳಿದಿದ್ದ ವಿನೇಶ್ ಫೋಗಟ್, ಬಳಿಕ ಪುನರಾಗಮನ ಮಾಡಿದ್ದರು. ಆದರೆ ಭಾರತೀಯ ಕುಸ್ತಿ ಒಕ್ಕೂಟ ಜಾರಿಗೆ ತಂದಿದ್ದ ಹೊಸ ಆಯ್ಕೆ ನೀತಿಯ ಪ್ರಕಾರ, ಅವರು ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅರ್ಹರಲ್ಲ ಎಂದು ಘೋಷಿಸಲಾಗಿತ್ತು.

ಈ ನಿರ್ಧಾರವನ್ನು ಪ್ರಶ್ನಿಸಿ ವಿನೇಶ್ ಫೋಗಟ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅವರ ಪರವಾಗಿ ತೀರ್ಪು ನೀಡಿದ್ದರಿಂದ, ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತ್ತು. ಈ ಆದೇಶವನ್ನು ಪ್ರಶ್ನಿಸಿ ಡಬ್ಲ್ಯುಎಫ್‌ಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ವಿಚಾರಣೆ ವೇಳೆ ಏಷ್ಯನ್ ಗೇಮ್ಸ್ ಪ್ರಾಧಿಕಾರ ನಿಗದಿಪಡಿಸಿದ್ದ ಗಡುವಿನ ವಿಚಾರವನ್ನೂ ಭಾರತೀಯ ಕುಸ್ತಿ ಒಕ್ಕೂಟ ನ್ಯಾಯಾಲಯದ ಗಮನಕ್ಕೆ ತಂದಿತು. ಆದರೂ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಫೋಗಟ್‌ಗೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದೂಡಿದೆ.

ಗಿಲ್ ಶತಕದ ಅಬ್ಬರಕ್ಕೆ ರಾಜಸ್ಥಾನ್ ಔಟ್: RCB ವಿರುದ್ಧ ಫೈನಲ್ʼಗೆ ಎಂಟ್ರಿ ಕೊಟ್ಟ ಗುಜರಾತ್ ಟೈಟಾನ್ಸ್

ಚಂಡೀಗಢ: ನಾಯಕ ಶುಭಮನ್ ಗಿಲ್ ಅವರ ಅದ್ಭುತ ಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ 2026ರ ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಮೇ 31ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಸೆಣಸಲಿದೆ.

ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗಿಲ್ ಕೇವಲ 53 ಎಸೆತಗಳಲ್ಲಿ 104 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಗಿಲ್ ಹೆಸರಿಗೆ ಐತಿಹಾಸಿಕ ದಾಖಲೆ

ಈ ಶತಕದೊಂದಿಗೆ ಶುಭಮನ್ ಗಿಲ್ ಐಪಿಎಲ್ ಪ್ಲೇಆಫ್ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಹಿಂದೆ 2016ರ ಕ್ವಾಲಿಫೈಯರ್-2 ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನಾಯಕನಾಗಿದ್ದ ಡೇವಿಡ್ ವಾರ್ನರ್ ಅಜೇಯ 93 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇತ್ತೀಚೆಗಷ್ಟೇ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಕೂಡ ಕ್ವಾಲಿಫೈಯರ್-1 ಪಂದ್ಯದಲ್ಲಿ ಅಜೇಯ 93 ರನ್ ಗಳಿಸಿದ್ದರು. ಇದೀಗ 104 ರನ್ ಸಿಡಿಸಿದ ಗಿಲ್, ಈ ಇಬ್ಬರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಪ್ಲೇಆಫ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ನಾಯಕರು

  1. ಶುಭಮನ್ ಗಿಲ್ – 104 ರನ್ (ಕ್ವಾಲಿಫೈಯರ್-2, 2026 vs ರಾಜಸ್ಥಾನ್ ರಾಯಲ್ಸ್)
  2. ರಜತ್ ಪಾಟಿದಾರ್ – ಅಜೇಯ 93 ರನ್ (ಕ್ವಾಲಿಫೈಯರ್-1, 2026 vs ಗುಜರಾತ್ ಟೈಟಾನ್ಸ್)
  3. ಡೇವಿಡ್ ವಾರ್ನರ್ – ಅಜೇಯ 93 ರನ್ (ಕ್ವಾಲಿಫೈಯರ್-2, 2016 vs ಗುಜರಾತ್ ಲಯನ್ಸ್)
  4. ಶ್ರೇಯಸ್ ಅಯ್ಯರ್ – ಅಜೇಯ 87 ರನ್ (ಕ್ವಾಲಿಫೈಯರ್-2, 2025 vs ಮುಂಬೈ)
  5. ಆಡಮ್ ಗಿಲ್ಕ್ರಿಸ್ಟ್ – 85 ರನ್ (ಸೆಮಿಫೈನಲ್, 2009 vs ಡೆಲ್ಲಿ ಡೇರ್‌ಡೆವಿಲ್ಸ್)

ವೈಭವ್ ಹೋರಾಟ ವ್ಯರ್ಥ

ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ 96 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ನಾಯಕ ರಿಯಾನ್ ಪರಾಗ್ ನೇತೃತ್ವದ ರಾಜಸ್ಥಾನ್ ಪಡೆ ಅಂತಿಮವಾಗಿ ಸೋಲೊಪ್ಪಿಕೊಂಡಿತು.

5 ಸೀಸನ್‌ಗಳಲ್ಲಿ ಮೂರನೇ ಬಾರಿ ಫೈನಲ್

ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್‌ನಲ್ಲಿ ಆಡಿರುವ ಐದು ಆವೃತ್ತಿಗಳಲ್ಲಿ ಮೂರನೇ ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ.

2022ರಲ್ಲಿ ಚೊಚ್ಚಲ ಆವೃತ್ತಿಯಲ್ಲೇ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಗುಜರಾತ್, 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಫೈನಲ್‌ನಲ್ಲಿ ಸೋಲು ಕಂಡಿತ್ತು.

2025ರಲ್ಲಿ ಶುಭಮನ್ ಗಿಲ್ ನಾಯಕತ್ವದಲ್ಲಿ ಪ್ಲೇಆಫ್ ತಲುಪಿದ್ದರೂ, ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋತು ಹೊರಬಿದ್ದಿತ್ತು. ಇದೀಗ ಮತ್ತೊಮ್ಮೆ ಫೈನಲ್ ಪ್ರವೇಶಿಸಿರುವ ಗಿಲ್ ಪಡೆ, ಚೊಚ್ಚಲ ಪ್ರಶಸ್ತಿಗಾಗಿ ಕಾದಿರುವ ಆರ್‌ಸಿಬಿ ವಿರುದ್ಧ ಟ್ರೋಫಿಗಾಗಿ ಹೋರಾಟ ನಡೆಸಲಿದೆ.

ಬಸ್ ನಿಲ್ದಾಣದಲ್ಲೇ ಪುಂಡನಿಗೆ ಚಪ್ಪಲಿ ಏಟು! ಅಸಭ್ಯ ವರ್ತನೆಗೆ ಮಹಿಳೆಯ ಆಕ್ರೋಶ, ಜನರಿಂದ ಧರ್ಮದೇಟು

0

ರಾಯಚೂರು: ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಅಶ್ಲೀಲವಾಗಿ ಮಾತನಾಡಿದ್ದ ಯುವಕನಿಗೆ ಮಹಿಳೆಯೇ ಬಸ್ ನಿಲ್ದಾಣದಲ್ಲೇ ಚಪ್ಪಲಿಯಿಂದ ಥಳಿಸಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ನಡೆದಿದೆ.

ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಬಸ್‌ಗಾಗಿ ಕಾಯುತ್ತ ನಿಂತಿದ್ದ ವೇಳೆ ಯುವಕ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ ಅಶ್ಲೀಲ ಪದಗಳನ್ನು ಬಳಸಿ ಕಿರುಕುಳ ನೀಡಿದ್ದಾನೆ ಎಂದು ತಿಳಿದುಬಂದಿದೆ.

ಯುವಕನ ವರ್ತನೆಯಿಂದ ಆಕ್ರೋಶಗೊಂಡ ಮಹಿಳೆ ಸಾರ್ವಜನಿಕರ ಎದುರೇ ಆತನ ಕೆನ್ನೆಗೆ ಬಾರಿಸಿ, ಚಪ್ಪಲಿಯಿಂದ ಹೊಡೆದಿದ್ದಾರೆ. ಘಟನೆ ಗಮನಿಸಿದ ಸ್ಥಳದಲ್ಲಿದ್ದ ಪ್ರಯಾಣಿಕರು ಕೂಡ ಯುವಕನನ್ನು ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿದ್ದಾರೆ.

ಪರಿಸ್ಥಿತಿ ಕೈಮೀರಿದುದನ್ನು ಅರಿತ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆ ಲಿಂಗಸುಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಡಿಕೆಶಿ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್! ಜೂನ್ 3ರಂದು ವಿಧಾನಸೌಧ ಮೆಟ್ಟಿಲುಗಳ ಮೇಲೆ ಅಧಿಕಾರ ಸ್ವೀಕಾರ

ಬೆಂಗಳೂರು: ರಾಜ್ಯ ರಾಜಕೀಯದ ಬಹುಚರ್ಚಿತ ಬೆಳವಣಿಗೆಗೆ ಕೊನೆಗೂ ಅಂತಿಮ ಮುದ್ರೆ ಬಿದ್ದಿದ್ದು, ಡಿ.ಕೆ. ಶಿವಕುಮಾರ್ ಅವರು ಜೂನ್ 3ರಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬುಧವಾರ ಸಂಜೆ 4 ಗಂಟೆಯ ಬಳಿಕ ವಿಧಾನಸೌಧದ ಭವ್ಯ ಗ್ರ್ಯಾಂಡ್ ಸ್ಟೆಪ್‌ ಮುಂಭಾಗದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ನಾಯಕತ್ವದ ಅಂತಿಮ ಚರ್ಚೆಗಳ ಬಳಿಕ ಕಾರ್ಯಕ್ರಮದ ರೂಪುರೇಷೆಗಳು ಬಹುತೇಕ ಅಂತಿಮಗೊಂಡಿವೆ.

ಇದರ ನಡುವೆಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಡಿಕೆ ಶಿವಕುಮಾರ್ ಅವರು ರಾಜ್ಯಪಾಲರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ರಾಜ್ಯಪಾಲರು ಧರ್ಮಸ್ಥಳ ಪ್ರವಾಸಕ್ಕೆ ತೆರಳಲಿರುವ ಹಿನ್ನೆಲೆಯಲ್ಲಿ ಮುಂಚಿತವಾಗಿಯೇ ಭೇಟಿಯಾಗಿ ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.

ಡಿಕೆ ಶಿವಕುಮಾರ್ ಭೇಟಿ ಹಿನ್ನೆಲೆ ಲೋಕಭವನದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

ಮಳೆಯ ಅಬ್ಬರಕ್ಕೆ ತತ್ತರಿಸಿದ ಎರಡು ಜಿಲ್ಲೆಗಳು! ಚಿಕ್ಕಮಗಳೂರಲ್ಲಿ ಕತ್ತಲು, ಚಾಮರಾಜನಗರದಲ್ಲಿ ಮನೆಗಳೊಳಗೆ ನೀರು

ಚಾಮರಾಜನಗರ/ಚಿಕ್ಕಮಗಳೂರು: ಮುಂಗಾರು ಪೂರ್ವ ಮಳೆಯ ಆರ್ಭಟಕ್ಕೆ ರಾಜ್ಯದ ಹಲವೆಡೆ ಜನರು ಸಂಕಷ್ಟ ಎದುರಿಸುತ್ತಿದ್ದು, ಚಾಮರಾಜನಗರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆ ವ್ಯಾಪಕ ಹಾನಿ ಉಂಟುಮಾಡಿದೆ.

ಹನೂರು ತಾಲೂಕಿನ ಗುಳ್ಯದಬಯಲು ಗ್ರಾಮದಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿದ್ದ ಆಹಾರ ಧಾನ್ಯಗಳು ಮತ್ತು ಅಗತ್ಯ ವಸ್ತುಗಳು ನೀರಿನಲ್ಲಿ ಹಾನಿಗೊಳಗಾಗಿವೆ.

ಇತ್ತ ಚಿಕ್ಕಮಗಳೂರಿನಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಹಲವು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕೋಟೆ ಬಡಾವಣೆಯಲ್ಲಿ ಮನೆಗಳ ಮೇಲ್ಛಾವಣಿ ಹಾನಿಗೊಳಗಾಗಿದ್ದು, ಹಲವು ಪ್ರದೇಶಗಳಲ್ಲಿ ಅಪಾರ ಆಸ್ತಿ ನಷ್ಟ ಉಂಟಾಗಿದೆ.

ಜಿಲ್ಲಾ ನ್ಯಾಯಾಲಯದ ಎದುರು ಸಾಲುಸಾಲು ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ನಗರದ ಅನೇಕ ಭಾಗಗಳು ಕತ್ತಲಲ್ಲಿ ಮುಳುಗಿವೆ. ಐಬಿ ಮುಂಭಾಗದ ಕಾಂಪೌಂಡ್ ಗೋಡೆಯೂ ಕುಸಿದಿದ್ದು, ನಗರದಲ್ಲಿ ವಿದ್ಯುತ್ ಪೂರೈಕೆ ಪುನಃಸ್ಥಾಪಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಮಳೆ ಮುಂದುವರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಎಚ್ಚರಿಕೆಯಿಂದಿರಲು ಸಾರ್ವಜನಿಕರಿಗೆ ಸೂಚನೆ ನೀಡಿದೆ.

ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ: ಬಿರುಗಾಳಿ, ಗುಡುಗು ಸಹಿತ ಮಳೆಯ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದ್ದು, ಕೆಲವೆಡೆ ಗುಡುಗು-ಸಿಡಿಲಿನೊಂದಿಗೆ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಮಳೆಯ ಚಟುವಟಿಕೆ ಹೆಚ್ಚಾಗಬಹುದು ಎಂದು ಇಲಾಖೆ ತಿಳಿಸಿದೆ.

ಹಾವೇರಿ, ಗದಗ, ಕೊಪ್ಪಳ, ಧಾರವಾಡ ಹಾಗೂ ರಾಯಚೂರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದ ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಕೆಲವು ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯುವ ನಿರೀಕ್ಷೆಯಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಹಲವೆಡೆ ಗುಡುಗು, ಸಿಡಿಲು ಮತ್ತು ಬಲವಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.

ಈ ಭಾಗಗಳಲ್ಲಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೈತರು ಕೃಷಿ ಚಟುವಟಿಕೆಗಳ ವೇಳೆ ಎಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ. ಜೊತೆಗೆ ಗುಡುಗು-ಸಿಡಿಲು ಮತ್ತು ಬಿರುಗಾಳಿಯ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಒಟ್ಟಾರೆ, ರಾಜ್ಯದ ದಕ್ಷಿಣ ಭಾಗಗಳಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗಲಿದ್ದು, ಕೆಲವು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಾತ್ರ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ.

error: Content is protected !!