ಬೆಂಗಳೂರು: ಕದ್ದ ಮೊಬೈಲ್ ಬಳಸಿ ರ್ಯಾಪಿಡೋ ಬುಕ್ ಮಾಡಿ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಮೊದಲು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ರಿಹ್ಯಾಬಿಲಿಟೇಶನ್ ಕೇಂದ್ರದಿಂದ ಪರಾರಿಯಾಗಿದ್ದರು. ಅಲ್ಲಿಂದಲೇ ಕೇಂದ್ರದ ಮಾಲೀಕರ ಮೊಬೈಲ್ ಕದ್ದು, ಅದನ್ನು ಬಳಸಿ ರ್ಯಾಪಿಡೋ ಸೇವೆ ಬುಕ್ ಮಾಡಿದ್ದಾರೆ.
ಹುಸ್ಕೂರು ಬಳಿ ಆಟೋ ಬುಕ್ ಮಾಡಿಕೊಂಡು, ಚಾಲಕನನ್ನು ಜೋಹಳ್ಳಿ ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಡ್ರಾಪ್ ಮಾಡಿದ ನಂತರ ಹಣ ಕೇಳಿದ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ನಾಲ್ಕು ಹಲ್ಲುಗಳು ಮುರಿದಿವೆ.
ಆ ಬಳಿಕ ಆರೋಪಿಗಳು ಆಟೋ ಮತ್ತು ಮೊಬೈಲ್ ತೆಗೆದುಕೊಂಡು ಪರಾರಿಯಾಗಿ ಮಾಲೂರಿಗೆ ತೆರಳಿದ್ದಾರೆ. ಅಲ್ಲಿ “ತಂದೆಗೆ ಆರೋಗ್ಯ ಸರಿಯಿಲ್ಲ” ಎಂಬ ನೆಪ ಹೇಳಿ ಆಟೋವನ್ನು ಅಡಮಾನ ಇಟ್ಟು ಹಣ ಪಡೆದಿದ್ದಾರೆ.
ನಂತರ ಮತ್ತೆ ಬೆಂಗಳೂರಿಗೆ ಬಂದು ಸುತ್ತಾಡುತ್ತಿದ್ದರು. ಈ ನಡುವೆ, ಆರೋಪಿಗಳು ಮೊಬೈಲ್ ಅನ್ನು ಅಗತ್ಯವಿದ್ದಾಗ ಮಾತ್ರ ಆನ್ ಮಾಡಿ, ಬಳಿಕ ಆಫ್ ಮಾಡುತ್ತಿದ್ದರು. ಘಟನೆ ಸಂಬಂಧ ಆಟೋ ಚಾಲಕ ನೀಡಿದ ದೂರಿನ ಮೇರೆಗೆ ಬಾಗಲೂರು ಪೊಲೀಸರು ತನಿಖೆ ಆರಂಭಿಸಿ, ಕಾನಿಷ್ ಸೇರಿದಂತೆ ಒಬ್ಬ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

