ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಆಗಿರುವ ವಿಜಯ್, ನಟಿ ತ್ರಿಶಾ ಕೃಷ್ಣನ್ ಅಭಿನಯದ ‘ಕರುಪ್ಪ್’ ಸಿನಿಮಾಗೆ ವಿಶೇಷ ಅನುಮತಿ ನೀಡಿರುವುದು ಚಿತ್ರರಂಗದಲ್ಲಿ ಹಾಟ್ ಟಾಪಿಕ್ ಆಗಿದೆ. ಸೂರ್ಯ ಮತ್ತು ತ್ರಿಶಾ ನಟನೆಯ ಈ ಚಿತ್ರ ಮೇ 14ರಂದು ಬಿಡುಗಡೆಯಾಗಲಿದ್ದು, ಬೆಳಿಗ್ಗೆ 9 ಗಂಟೆಯ ಫಸ್ಟ್ ಶೋ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದೆ.
ತಮಿಳುನಾಡಿನಲ್ಲಿ ಸಾಮಾನ್ಯವಾಗಿ ಬೆಳಿಗ್ಗೆ 9 ಗಂಟೆಗೂ ಮುನ್ನ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಇರುವುದಿಲ್ಲ. ಮೊದಲ ದಿನ ಅಭಿಮಾನಿಗಳ ಅತಿರೇಕ, ಟ್ರಾಫಿಕ್ ಸಮಸ್ಯೆ ಹಾಗೂ ಭದ್ರತಾ ದೃಷ್ಟಿಯಿಂದ ಈ ನಿಯಮ ಜಾರಿಯಲ್ಲಿದೆ. ಹೆಚ್ಚಿನ ಸಿನಿಮಾಗಳ ಫಸ್ಟ್ ಶೋ ಬೆಳಿಗ್ಗೆ 11 ಅಥವಾ 12 ಗಂಟೆಯ ನಂತರವೇ ಆರಂಭವಾಗುತ್ತದೆ. ವಿಶೇಷ ಪರಿಸ್ಥಿತಿಯಲ್ಲಿ ಮಾತ್ರ ಸರ್ಕಾರದಿಂದ ಪ್ರತ್ಯೇಕ ಅನುಮತಿ ಪಡೆಯಬೇಕಾಗುತ್ತದೆ.
‘ಕರುಪ್ಪ್’ ಸಿನಿಮಾಗೆ ದಿನಕ್ಕೆ ಐದು ಶೋಗಳನ್ನು ನಡೆಸಲು ಸಹ ಸರ್ಕಾರ ಅನುಮತಿ ನೀಡಿದೆ. ಈ ವೇಳೆ ಚಿತ್ರಮಂದಿರಗಳ ಬಳಿ ಜನದಟ್ಟಣೆ ನಿಯಂತ್ರಿಸುವ ಹೊಣೆಗಾರಿಕೆಯನ್ನು ಥಿಯೇಟರ್ ಮಾಲೀಕರಿಗೆ ನೀಡಲಾಗಿದೆ.
ಈ ವಿಶೇಷ ಅನುಮತಿ ಕುರಿತು ‘ಕರುಪ್ಪ್’ ಸಿನಿಮಾ ತಂಡ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಮುಖ್ಯಮಂತ್ರಿ ವಿಜಯ್ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದೆ.
ಆರ್ಜೆ ಬಾಲಾಜಿ ನಿರ್ದೇಶನದ ‘ಕರುಪ್ಪ್’ ಸಿನಿಮಾದಲ್ಲಿ ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಸಿಕ್ಕಿರುವ ಈ ಸ್ಪೆಷಲ್ ಪರ್ಮಿಷನ್ ಇದೀಗ ಕಾಲಿವುಡ್ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

