Home Blog

MSP ಅಡಿಯಲ್ಲಿ ತೊಗರಿ ಖರೀದಿ ಅವಧಿ ಇನ್ನೂ ಒಂದು ತಿಂಗಳು ವಿಸ್ತರಣೆ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ತೊಗರಿ ಖರೀದಿ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಇಂದು ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಚಿವರು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಚರ್ಚೆ ನಡೆಸಿದರು. ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕನಿಷ್ಠ ಬೆಂಬಲ ಬೆಲೆ (MSP) ಸಮೀಪದಲ್ಲಿರುವುದರಿಂದ ರೈತರ ಹಿತದೃಷ್ಟಿಯಿಂದ ಖರೀದಿ ಅವಧಿ ವಿಸ್ತರಣೆ ಅಗತ್ಯ ಎಂದು ರಾಜ್ಯ ಸರ್ಕಾರ ಮನವಿ ಮಾಡಿತ್ತು.

ಮಾರ್ಚ್ 31, 2026ರಂದು ಮುಕ್ತಾಯಗೊಂಡಿದ್ದ ಖರೀದಿ ಅವಧಿಯನ್ನು ಇನ್ನೂ ಒಂದು ತಿಂಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ. ಈ ನಿರ್ಧಾರದಿಂದ ರಾಜ್ಯದ ಸಾವಿರಾರು ರೈತರಿಗೆ ಅನುಕೂಲವಾಗುವುದರ ಜೊತೆಗೆ ತೊಗರಿ ಬೆಲೆ ಸ್ಥಿರತೆ ಕಾಪಾಡಲು ಸಹಕಾರಿ ಆಗಲಿದೆ ಎಂದು ಸಚಿವರು ಹೇಳಿದರು.

2025-26ನೇ ಸಾಲಿನ MSP ಯೋಜನೆಯಡಿ ತೊಗರಿ ಖರೀದಿ ಕುರಿತು ಚರ್ಚೆಯ ವೇಳೆ, ರಾಜ್ಯದಲ್ಲಿ ಹೆಚ್ಚಿನ ಉತ್ಪಾದನೆ ಇರುವುದರಿಂದ ಹೆಚ್ಚಿನ ರೈತರಿಗೆ ಅವಕಾಶ ಕಲ್ಪಿಸುವ ಅಗತ್ಯವಿದೆ ಎಂದು ತಿಳಿಸಲಾಯಿತು. ಈಗಾಗಲೇ 98,610 ರೈತರು ನೋಂದಾಯಿಸಿಕೊಂಡಿದ್ದರೂ, ಕೇವಲ 12,834 ರೈತರು ಮಾತ್ರ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂಬುದನ್ನು ಸಚಿವರು ಗಮನಕ್ಕೆ ತಂದರು.

ಇದೇ ವೇಳೆ ಕಡಲೆ ಖರೀದಿ ಕುರಿತಾಗಿಯೂ ಚರ್ಚೆ ನಡೆದಿದ್ದು, ಈಗಾಗಲೇ 7.43 ಲಕ್ಷ ಕ್ವಿಂಟಾಲ್ ಕಡಲೆ ಖರೀದಿಸಲಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಇನ್ನೂ 58 ಸಾವಿರ ಕ್ವಿಂಟಾಲ್ ಖರೀದಿಗೆ ಅನುಮತಿ ನೀಡುವ ಜೊತೆಗೆ ಖರೀದಿ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದ ಕಡಲೆ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಮಹಿಳಾ ಮೀಸಲಾತಿಗೆ ವಿರೋಧವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು:ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 2023ರಲ್ಲಿಯೇ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಅಂಗೀಕಾರವಾಗಿದೆ. ಸಾಂವಿಧಾನಿಕ ತಿದ್ದುಪಡಿ ತಂದಿದ್ದರಿಂದ ಅದು ವಿಫಲವಾಯಿತು.

ಕ್ಷೇತ್ರ ಮಾರುವಿಂಗಡನೆ ಮಾಡದೆಯೇ ಮಹಿಳಾ ಮೀಸಲಾತಿ ಒಂದೇ ಮಂಡನೆಯಾಗಿದ್ದರೆ ಅಂಗೀಕಾರವಾಗುತ್ತಿತು. ರಾಜಕೀಯಕ್ಕಾಗಿ ಕ್ಷೇತ್ರ ಮರುವಿಂಗಡನೆ ಮತ್ತು ಮಹಿಳಾ ಮೀಸಲಾತಿಯನ್ನು ಒಟ್ಟಿಗೆ ತಂದಿದ್ದರಿಂದ ಮಹಿಳಾ ಮೀಸಲಾತಿ ಮಸೂದೆ ವಿಫಲವಾಗಿದೆ ಎಂದರು. ಕೇಂದ್ರ ಸರ್ಕಾರ ಇದರಲ್ಲಿ ರಾಜಕೀಯ ಮಾಡಿದ್ದಾರೆ ಎಂದರು.

ಕೆ. ಎನ್.ರಾಜಣ್ಣ ಅವರೊಂದಿಗೆ ಮಾತನಾಡಿದ್ದೇನೆ

ಮಾಜಿ ಸಚಿವ ಕೆ. ಎನ್.ರಾಜಣ್ಣ ಅವರು ಮುಖ್ಯಮಂತ್ರಿಗಳ ಕುರಿತು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ರಾಜಣ್ಣ ಅವರೊಂದಿಗೆ ಮಾತನಾಡಲಾಗಿದೆ ಎಂದರು.

ಕೋಟ್ಯಂತರ ಮಹಿಳೆಯರಿಗೆ ಕಾಂಗ್ರೆಸ್ ದ್ರೋಹ ಬಗೆದಿದೆ: ಆರ್.ಅಶೋಕ್

ಬೆಂಗಳೂರು: ಮಹಿಳಾ ಮೀಸಲಿಗೆ ತಡೆವೊಡ್ಡಿದ ಕಾಂಗ್ರೆಸ್ ಕೋಟ್ಯಂತರ ಮಹಿಳೆಯರಿಗೆ ದ್ರೋಹ ಬಗೆದಿದೆ. ಮಹಿಳೆಯರ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್ ಅನ್ನು ದೇಶದ ಜನ ಕ್ಷಮಿಸುವುದಿಲ್ಲ. ಮುಂಬರುವ ರಾಜ್ಯಗಳ ಚುನಾವಣೆಯಲ್ಲಿ ಜನರು ಬುದ್ಧಿ ಕಲಿಸಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಹೇಳಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಹಿಳಾ ಮೀಸಲು ಮಸೂದೆಗೆ ಸೋಲಾಗಿದ್ದು ಸಾಮಾನ್ಯ ವಿಚಾರ ಅಲ್ಲ. ಇದು ರಾಜಕೀಯ ಪಕ್ಷಗಳ ಪಿತೂರಿ, ನಿರ್ಲಕ್ಷ್ಯ, ಮಹಿಳಾ ವಿರೋಧಿ ಭಾವನೆಯ ಸ್ಪಷ್ಟ ಸಂಕೇತ ಎಂದರು.

ದೇಶದ ಇತಿಹಾಸದಲ್ಲೇ ಮಹಿಳೆಯರಿಗೆ ಅವರ ಹಕ್ಕನ್ನು ಸಂವಿಧಾನದತ್ತವಾಗಿ ಕೊಡುವ ತೀರ್ಮಾನವನ್ನು ನರೇಂದ್ರ ಮೋದಿ ಅವರು ಮಾಡಿದ್ದರು. ಆದರೆ ಇದಕ್ಕೆ ಕಾಂಗ್ರೆಸ್ ಬೆಂಬಲ ನೀಡದೆ ಕೋಟ್ಯಂತರ ಮಹಿಳೆಯರ ಕನಸುಗಳ ಮೇಲೆ ಹೊಡೆತ ನೀಡಿತು. ಇದು ಕೇವಲ ಮಸೂದೆ ವಿಫಲತೆ ಅಲ್ಲ. ಮಹಿಳೆಯರ ಹಕ್ಕನ್ನು ನಿರ್ಲಕ್ಷ್ಯ ಮಾಡುವ ಕಾಂಗ್ರೆಸ್ ಅನ್ನು ಜನ ಕ್ಷಮಿಸುವುದಿಲ್ಲ ಎಂದು ವಿವರಿಸಿದರು.

ಮಹಿಳಾ ಮೀಸಲು ಮಸೂದೆ ಸರ್ವಾನುಮತದಿಂದ ಬೆಂಬಲ ಸಿಗಬೇಕಿತ್ತು. ಆದರೆ ಬೆಂಬಲ ನೀಡದೆ ವಿಧಾನಸಭೆಗೆ ಸಂಸತ್ತಿಗೆ ಹೋಗುತ್ತೇವೆ ಎಂಬ ಮಹಿಳೆಯರ ಕನಸನ್ನು ನುಚ್ಚು ನೂರು ಮಾಡಿದೆ. ಮಹಿಳೆಯರ ಶಾಪ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ತಟ್ಟದೇ ಬಿಡುವುದಿಲ್ಲ ಎಂದರು. ಕಳೆದ 70 ವರ್ಷಗಳಿಂದ ಅಧಿಕಾರ ನಡೆಸಿದ ಕಾಂಗ್ರೆಸ್,

ಮಹಿಳೆಯ ಹಕ್ಕಿನ ಬಗ್ಗೆ ವೇದಿಕೆಗಳಲ್ಲಿ ದೊಡ್ಡ ದೊಡ್ಡ ಭಾಷಣ ಮಾಡಿತು. ಆದರೆ ಕಾರ್ಯರೂಪಕ್ಕೆ ತರಲಿಲ್ಲ. ಮೀಸಲು ಮಸೂದೆಗೆ ಬೆಂಬಲ ಕೊಡುವ ಧೈರ್ಯ ಇಲ್ಲದ ಮೇಲೆ ಮಹಿಳೆಯರ ಬಗ್ಗೆ ಮಾತನಾಡುವ ಅಧಿಕಾರವೂ ಕಾಂಗ್ರೆಸ್‍ಗೆ ಇಲ್ಲ. ಆದ್ದರಿಂದ ಮಹಿಳಾ ಕಾಂಗ್ರೆಸ್ ಘಟಕವನ್ನು ರದ್ದು ಮಾಡಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್ಸಿಗರೇ ಇನ್ನೆಷ್ಟು ಕಾಲ ದಿನ, ವರ್ಷ ಮಹಿಳೆಯರನ್ನು ಕೇವಲ ಮತದಾರರಾಗಿ ಬಳಸುತ್ತೀರಿ. ಮಹಿಳೆಯರು ದುರ್ಬಲರು ಎಂದುಕೊಂಡು ನೆಹರು, ಇಂದಿರಾ, ಸೋನಿಯಾ ರಾಜ್ಯಭಾರ ಮಾಡಿದ್ದರಲ್ಲ. ಆಗ ನಿಮಗೆ ಅವರ ಶಕ್ತಿ ಬಗ್ಗೆ ತಿಳಿಯಲಿಲ್ಲವೇ ಎಂದರು. ಮಹಿಳಾ ಮೀಸಲಿಗೆ ಮೋದಿ ಅವರು ಮುಂದಾದರೆ ವಿರೋಧಿಸಿ ಹೀನ ಕಾರ್ಯ ಮಾಡಿದ್ದೀರಿ. ಇದು ಕಾಂಗ್ರೆಸ್ ರಕ್ತದಲ್ಲೇ ಇರುವ ವಿರೋಧಿ ನೀತಿ ಎಂದು ನುಡಿದರು.

ಮಹಿಳಾ ಮೀಸಲಾತಿ ಮಸೂದೆ ಸೋಲು: ಕಾಂಗ್ರೆಸ್ಸಿಗೆ ಮುಖಭಂಗ ಕಾದಿದೆ – ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಕಾಂಗ್ರೆಸ್ಸಿನ ಮಹಿಳಾ ವಿರೋಧಿ ಕ್ರಮದಿಂದ ಮುಂದಿನ ದಿನಗಳಲ್ಲಿ ಆ ಪಕ್ಷಕ್ಕೆ ಮುಖಭಂಗ ಆಗಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಜೀ ಅವರು ಹೇಳುವ ಘೋಷವಾಕ್ಯ ‘ಸಬ್ ಕಾ ಸಾಥ್…’ ಸತ್ಯ ಎಂದು ಎಲ್ಲರಿಗೂ ಮನವರಿಕೆ ಆಗಿರಬೇಕು ಎಂದು ವಿಶ್ಲೇಷಿಸಿದರು.

ಇಂಡಿ ಒಕ್ಕೂಟದ ಬ್ರದರ್ಸ್‍ಗೆ ಸಿಸ್ಟರ್‍ಗಳ ಬಗ್ಗೆ ಗೌರವ ಇಲ್ಲ ಎಂದು ಟೀಕಿಸಿದರು. ಕುತಂತ್ರದಿಂದ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದೆ. ದಲಿತರು, ಹಿಂದುಳಿದವರನ್ನು, ಮುಸ್ಲಿಂ ಹೆಣ್ಮಕ್ಕಳನ್ನು ಕಾಂಗ್ರೆಸ್ ಪಕ್ಷ ಶೋಷಣೆ ಮಾಡಿತ್ತು ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಪಕ್ಷ ಇರುವುದೇ ದೇಶವನ್ನು ಪೋಷಣೆ ಮಾಡಲಿಕ್ಕಲ್ಲ. ಶೋಷಣೆ ಮಾಡಲಿಕ್ಕೆ ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ ಎಂದರು.

ಶೇ 50ರಷ್ಟಿರುವ ಮಹಿಳೆಯರಿಗೆ ಮೀಸಲಾತಿ ಕೊಡುವ ಕಾಂಗ್ರೆಸ್ ಪ್ರಯತ್ನವು ‘ತೊಟ್ಟಿಲು ತೂಗುವುದೂ ಅವರೇ.. ಮಗುವನ್ನು ಗಿಲ್ಲುವುದು ಅವರೇ’ ಎಂಬಂತಿತ್ತು ಎಂದು ದೂರಿದರು. ಮಸೂದೆಗೆ ಕಾಂಗ್ರೆಸ್, ಅವರ ಮಿತ್ರ ಪಕ್ಷಗಳಿಂದ ಆದ ಸೋಲು ದೇಶದಲ್ಲಿರುವ ಶೇ 50 ಮಹಿಳೆಯರಿಗೆ ಮಾಡಿದ ದ್ರೋಹ, ಅನ್ಯಾಯ, ಶೋಷಣೆ ಎಂದು ತಿಳಿಸಿದರು.

ಮಹಿಳಾ ಮೀಸಲಾತಿಯ ಬಿಲ್ ಸೋಲು ಕಾಂಗ್ರೆಸ್ಸಿನ ಗೆಲುವು ಎಂದು ಸಂಭ್ರಮಿಸುತ್ತಿದ್ದಾರೆ. ಬಿಜೆಪಿ, ಎನ್‍ಡಿಎಗೆ ಮುಖಭಂಗ ಎನ್ನುತ್ತಿದ್ದಾರೆ. ಇದು ಬಿಜೆಪಿಯ ಮುಖಭಂಗವೂ ಅಲ್ಲ; ಬಿಜೆಪಿಯ ಸೋಲೂ ಅಲ್ಲ. ಕಾಂಗ್ರೆಸ್ ವ್ಯವಸ್ಥಿತವಾಗಿ ಮಾಡಿಕೊಂಡು ಬಂದ ಮಹಿಳಾ ಮುಖಭಂಗವನ್ನು ಇವತ್ತೂ ಮಾಡಿದ್ದೀರಿ ಎಂದು ಟೀಕಿಸಿದರು.

ಮಹಿಳಾ ಮೀಸಲಾತಿಗೆ ಸೋಲಾಗಬೇಕೆಂಬ ನಿಮ್ಮ ಮನಸ್ಥಿತಿ ಇತ್ತು. ಆ ಸೋಲನ್ನು ಮಹಿಳೆಯರಿಗೆ ಉಣಿಸಿದ್ದೀರಿ ಎಂದು ಆಕ್ಷೇಪಿಸಿದರು. ನೀವು ಮಹಿಳಾ ಸಬಲೀಕರಣಕ್ಕಾಗಿ ಗ್ಯಾರಂಟಿ ತಂದಿದ್ದಲ್ಲವೇ? ಮತ್ತೊಂದು ಕಡೆಯಿಂದ ಶೋಷಣೆ ಆಗುತ್ತಿದೆ. ಅವರಿಗೆ ನಿಮ್ಮ 2 ಸಾವಿರ ರೂ. ಬೇಕಾಗಿರುವುದಲ್ಲ. ಈ ದೇಶದ ಸಂಸತ್ತಿನಲ್ಲಿ ಕುಳಿತು ಕಾನೂನು ರಚನೆ, ನ್ಯಾಯನೀತಿ ನಿರೂಪಣೆಯಲ್ಲಿ ಗಂಡಸರಂತೆ ಸರ್ವರಿಗೂ ಸಮಾನ ಹಕ್ಕು ಬೇಕೆಂದು ಅವರ ಅಪೇಕ್ಷೆ.

ನಿಮ್ಮ ಪುಡಿಗಾಸು, ಬಸ್ಸಿನಲ್ಲಿ ಹೋಗಲು ಅವಕಾಶ- ಇವು ಸಬಲೀಕರಣ ಅಲ್ಲ ಎಂದು ತಿಳಿಸಿದರು.
ರಾಜ್ಯದ ಮಹಿಳೆಯರೇ.. ನಿಮಗೆ ಈ ಗ್ಯಾರಂಟಿಯೇ ಸಾಕೇ? ಸಮಾನ ಹಕ್ಕುಗಳ ಗ್ಯಾರಂಟಿ ಬೇಕೇ ಎಂದು ತೀರ್ಮಾನ ಮಾಡಿ. ಕಾಂಗ್ರೆಸ್ ಯಾವತ್ತೂ ಮಹಿಳಾಪರ ಅಲ್ಲ ಎಂದರು. ಡಾ. ಬಾಬಾ ಸಾಹೇಬರ ಪರಿಶ್ರಮದಿಂದ ಮಹಿಳೆಯರಿಗೆ ಮತದಾನದ ಹಕ್ಕು ಕೊಡಲಾಗಿತ್ತು ಎಂದು ನೆನಪಿಸಿದರು.

ಕಾಂಗ್ರೆಸ್ ಪಕ್ಷದಂತೆ ಡಿಎಂಕೆ ಇತಿಹಾಸ ದೊಡ್ಡದಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

ಪೊನ್ನೇರಿ: ಕಾಂಗ್ರೆಸ್ ಪಕ್ಷ ದೊಡ್ಡ ಇತಿಹಾಸ ಹೊಂದಿರುವಂತೆ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಕೂಡ ದೊಡ್ಡ ಇತಿಹಾಸ ಹೊಂದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ತಮಿಳುನಾಡಿನ ಪೊನ್ನೇರಿಯಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ಮುಂದಿನ ಒಂದು ವಾರದಲ್ಲಿ ತಮಿಳುನಾಡಿನ ವಿಧಾನಸಭೆ ಚುನಾವಣೆ ಮುಕ್ತಾಯಗೊಳ್ಳಲಿದೆ. ಇಡೀ ದೇಶ ನಿಮ್ಮ ತೀರ್ಪಿಗಾಗಿ ಎದುರುನೋಡುತ್ತಿದೆ ಎಂದು ಹೇಳಬಯಸುತ್ತೇನೆ. ನಾನು ಇಂದು ಕಾಂಗ್ರೆಸ್ ಪಕ್ಷದ ಪರವಾಗಿ ಬಂದಿದ್ದು, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಹಾಗೂ ಅದರ ಮೈತ್ರಿ ಪಕ್ಷಗಳು ಅಧಿಕಾರಕ್ಕೆ ಬಂದಾಗೆಲ್ಲ ಸಮಾಜದ ಎಲ್ಲಾ ವರ್ಗದ ಜನ ಅಧಿಕಾರಕ್ಕೆ ಬಂದಂತೆ” ಎಂದು ತಿಳಿಸಿದರು.

“ಡಿಎಂಕೆ ತಮಿಳುನಾಡಿನ ಸಂಸ್ಕೃತಿ, ಭಾವನೆ ಕಾಪಾಡಿಕೊಂಡು ಬಂದಿದೆ. ಕಾಂಗ್ರೆಸ್ ಹಾಗೂ ಡಿಎಂಕೆ ನಡುವೆ 40 ವರ್ಷಗಳ ಐತಿಹಾಸಿಕ ಮೈತ್ರಿ ಹೊಂದಿದ್ದು, ಈ ಮೈತ್ರಿ ದೇಶ ಹಾಗೂ ತಮಿಳುನಾಡನ್ನು ಮುನ್ನಡೆಸಿಕೊಂಡು ಹೋಗುತ್ತಿದೆ. ಬ್ರಿಟೀಷರು ನೂರಾರು ವರ್ಷಗಳ ಕಾಲ ಈ ದೇಶವನ್ನು ಆಳಿದರು. ನಾವು ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಮಾತೃಭಾಷೆ ಯಾವುದು ಎಂದು ನಮೂದಿಸುತ್ತೇವೆ.

ನಾನು ಕರ್ನಾಟಕದವನಾಗಿದ್ದು ನನ್ನ ಮಾತೃಭಾಷೆ ಕನ್ನಡ, ಇದು ತಮಿಳುನಾಡು ನಿಮ್ಮ ಮಾತೃಭಾಷೆ ತಮಿಳು, ಕೇರಳಿಗರ ಮಾತೃಭಾಷೆ ಮಲಯಾಳಂ, ಆಂಧ್ರಪ್ರದೇಶದವರದ್ದು ತೆಲುಗು, ಮಹಾರಾಷ್ಟ್ರದವರದ್ದು ಮರಾಠಿ. ಬ್ರಿಟೀಷರ ಕಾಲದಿಂದಲೂ ಮಾತೃಭಾಷೆಗೆ ಗೌರವ ನೀಡುತ್ತಾ ಬಂದಿದ್ದೇವೆ” ಎಂದು ತಿಳಿಸಿದರು.

“ಬಿಜೆಪಿ ಹಾಗೂ ಎನ್ ಡಿಎ ಸರ್ಕಾರ ನೀವು ನಿಮ್ಮ ಮಾತೃಭಾಷೆ ಮರೆತು ಹಿಂದಿ ಭಾಷೆ ಕಲಿಯಬೇಕು ಎಂದು ಒತ್ತಡ ಹೇರುತ್ತಿದೆ. ನಮ್ಮ ಮಾತೃಭಾಷೆಗೆ ಆಗುವ ಅಗೌರವವನ್ನು ನಾವು ಸಹಿಸುವುದಿಲ್ಲ. ಹೀಗಾಗಿ ಸ್ಟಾಲಿನ ಹಾಗೂ ದಕ್ಷಿಣ ಭಾರತದ ರಾಜ್ಯಗಳ ನಾಯಕರೆಲ್ಲರೂ ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

“ಕಳೆದ ಹತ್ತು ದಿನಗಳಿಂದ ತಮಿಳುನಾಡಿನಲ್ಲಿ ನಾನು ಚುನಾವಣಾ ಪ್ರಚಾರ ಮಾಡುತ್ತಿದ್ದು, ನಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇನೆ. ಸ್ಟಾಲಿನ ಅವರ ನೇತೃತ್ವದ ಡಿಎಂಕೆ ಹಾಗೂ ಮೈತ್ರಿ ಪಕ್ಷಗಳ ಸರ್ಕಾರ ಜನಸಾಮಾನ್ಯರ ಹಕ್ಕು, ತಮಿಳುನಾಡಿನ ಹಿತವನ್ನು ರಕ್ಷಣೆ ಮಾಡಿಕೊಂಡು ಬಂದಿದೆ” ಎಂದು ತಿಳಿಸಿದರು.

ಸಂಸತ್ತಿನಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಗೆಲುವು ಸಿಕ್ಕಿದೆ

“ನಿನ್ನೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಡನೆ ಮಾಡಿತ್ತು. ಮಹಿಳಾ ಮೀಸಲಾತಿಗೆ ನಾವೆಲ್ಲರೂ ಬೆಂಬಲ ನೀಡುತ್ತೇವೆ. ಆದರೆ ಕ್ಷೇತ್ರ ಪುನರ್ ವಿಂಗಡಣೆ ಹೆಸರಿನಲ್ಲಿ ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಕ್ಷೇತ್ರಗಳನ್ನು ಕಡಿಮೆ ಮಾಡುವ ಷಡ್ಯಂತ್ರವನ್ನು ನಾವು ವಿರೋಧಿಸುತ್ತೇವೆ.

ಕೇಂದ್ರ ಸರ್ಕಾರದ ಈ ನೀತಿ ವಿರುದ್ಧ ಸ್ಟಾಲಿನ್ ಅವರು ಧ್ವನಿ ಎತ್ತಿದ್ದು, ಇಡಿಯಾ ಮೈತ್ರಿಕೂಟದ ಎಲ್ಲಾ ನಾಯಕರು ಸೇರಿ ಈ ಮಸೂದೆಯನ್ನು ಮಣಿಸಿದ್ದೇವೆ. ಇದು ಪ್ರಜಾಪ್ರಭುತ್ವದ ಗೆಲುವಾಗಿದ್ದು, ಇದಕ್ಕಾಗಿ ಹೋರಾಟ ಮಾಡಿದ ತಮಿಳುನಾಡಿನ ಸಂಸದರಿಗೆ ನಾನು ಅಭಿನಂದಿಸುತ್ತೇನೆ” ಎಂದರು.

“ಈ ದೇಶದ ಭವಿಷ್ಯ ಇಂಡಿಯಾ ಮೈತ್ರಿಕೂಟದ ಜತೆಗಿದೆ. ತಮಿಳುನಾಡಿನ ಭವಿಷ್ಯ ನಿಮ್ಮ ಕೈಯಲ್ಲಿದೆ. ಸ್ಟಾಲಿನ್ ಅವರ ನಾಯಕತ್ವದಲ್ಲಿ ತಮಿಳುನಾಡಿನ ಜನರ ಹಿತವನ್ನು ಕಾಪಾಡಲಾಗುವುದು. ಎನ್ಡಿಎ ಹಾಗೂ ಎಐಎಡಿಎಂಕೆ ದುರಾಡಳಿತದಿಂದ ತಮಿಳುನಾಡನ್ನು ರಕ್ಷಣೆ ಮಾಡಿ ಈ ರಾಜ್ಯವನ್ನು ಸಮೃದ್ಧವಾಗಿ ಮುನ್ನಡೆಸಲಾಗುತ್ತಿದೆ. ತಮಿಳುನಾಡು ಈಗ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದು, ನೀವೆಲ್ಲರೂ ಸ್ಟಾಲಿನ್ ಅವರನ್ನು ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮರುಆಯ್ಕೆ ಮಾಡಬೇಕು” ಎಂದು ಕರೆ ನೀಡಿದರು.

“ದೇಶವನ್ನು ಒಗ್ಗೂಡಿಸುವ ಭಾರತ ಜೋಡೋ ಯಾತ್ರೆಯನ್ನು ಮೊದಲು ಉದ್ಘಾಟನೆ ಮಾಡಿದ್ದು ಸ್ಟಾಲಿನ್ ಅವರು. ನಮ್ಮ ಸಹೋದರ ರಾಹುಲ್ ಗಾಂಧಿ ಮುಂದಿನ ಪ್ರಧಾನಮಂತ್ರಿಯಾಗಬೇಕು ಎಂದು ಹೇಳಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿ ನಿಂತಿರುವ ಸ್ಟಾಲಿನ್ ಅವರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ಧನ್ಯವಾದ ತಿಳಿಸುತ್ತೇನೆ” ಎಂದರು.

ಬೆಲೆ ಏರಿಕೆಯಿಂದ ಜನರನ್ನು ರಕ್ಷಿಸಲು ಗ್ಯಾರಂಟಿ ಯೋಜನೆ

“ಕರ್ನಾಟಕದಲ್ಲಿ ನಾವು ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆವು. ಅಧಿಕಾರಕ್ಕೆ ಬಂದ ನಂತರ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ. ಬಡ ಮಹಿಳೆಯರಿಗೆ ಮಾಸಿಕ 2 ಸಾವಿರ, ಉಚಿತ ಬಸ್ ಪ್ರಯಾಣ, 200 ಯೂನಿಟ್ ವರೆಗೂ ಉಚಿತ ವಿದ್ಯುತ್, 10 ಕೆ.ಜಿ ಅಕ್ಕಿ, ನಿರುದ್ಯೋಗ ಭತ್ಯೆ ನೀಡುತ್ತಿದ್ದೇವೆ. ಬಿಜೆಪಿ ಟೀಕಿಸಿದ್ದ ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ.

ನಾವು ಕೊಟ ಮಾತಿನಂತೆ ನಡೆದು ನಮ್ಮ ಭರವಸೆಗಳಿಗೆ ಬದ್ಧವಾಗಿದ್ದೇವೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಹಾಗೂ ಸ್ಟಾಲಿನ್ ಅವರು ಸೇರಿ ಮನೆ ಯಜಮಾನಿಗೆ 2 ಸಾವಿರ ಆರ್ಥಿಕ ನೆರವು ನೀಡಲಾಗುವುದು. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆರವಾಗಲು ಅಗತ್ಯವಸ್ತುಗಳ ಖರೀದಿಗೆ 8 ಸಾವಿರ ಮೊತ್ತದ ಕೂಪನ್ ವಿತರಣೆ ಮಾಡಲಾಗುವುದು. ತಮಿಳುನಾಡಿನ ಬೆನ್ನೆಲುಬು ಕೃಷಿ. ರೈತರಿಗೆ ಮೀಟರ್ ರಹಿತ ಪಂಪ್ ಸೆಟ್ ನೀಡಲಾಗುವುದು. ಇದರೊಂದಿಗೆ ರೈತರಿಗೆ ನೀರು ಹಾಗೂ ವಿದ್ಯುತ್ ನೀಡಲಾಗುವುದು.

ವಿಕಲಚೇತನರು, ಹಿರಿಯ ನಾಯಕರಿಗೆ 2 ಸಾವಿರ ಪಿಂಚಣಿ ಹೆಚ್ಚಳ ಮಾಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ವಸತಿರಹಿತರಿಗೆ 10 ಲಕ್ಷ ಮನೆಗಳನ್ನು ವಿತರಣೆ ಮಾಡಲು ತೀರ್ಮಾನಿಸಲಾಗಿದೆ. ತಮಿಳುನಾಡಿನ ಇತಿಹಾಸದಲ್ಲೇ 10 ಲಕ್ಷ ಮನೆ ನೀಡುವ ಸಂಕಲ್ಪ ಬೇರೆ ಯಾವುದೇ ಸರ್ಕಾರ ಮಾಡಿಲ್ಲ. ಇಂದಿರಾ ಗಾಂಧಿ ಅವರು ನಮಗೆ ಈ ಹಸ್ತದ ಗುರುತನ್ನು ನೀಡಿದೆ. ತಮಿಳುನಾಡಿನ ಜನ ನಿಮ್ಮ ಕೈಯಿಂದ ಹಸ್ತದ ಗುರುತಿಗೆ ಮತ ಹಾಕಿ. ಈ ಹಸ್ತ ನಿಮ್ಮ ಹಾಗೂ ರಾಜ್ಯದ ಹಿತ ಕಾಪಾಡಲಿದೆ” ಎಂದು ತಿಳಿಸಿದರು.

“ಅನೇಕ ಮಹಾನ್ ನಾಯಕರು ಈ ರಾಜ್ಯವನ್ನು ಆಳಿದ್ದಾರೆ. ಈಗ ಸ್ಟಾಲಿನ್ ಅವರು ಅದನ್ನು ಮಂದುವರಿಸಿಕೊಂಡು ಹೋಗುತ್ತಿದ್ದು, ನಮ್ಮ ಮೈತ್ರಿಕೂಟದ ಎಲ್ಲಾ 20 ಪಕ್ಷಗಳು ಒಟ್ಟಾಗಿ ಕೆಲಸ ಮಾಡಲಿದ್ದು, ಡಿಎಂಕೆ ನೇತೃತ್ವದ ಈ ಮೈತ್ರಿಕೂಟ ಮೂರನೇ ಎರಡರಷ್ಟು ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ರಾಜ್ಯದ ಭವಿಷ್ಯ ಡಿಎಂಕೆ ಮೈತ್ರಿಕೂಟದ ಜತೆಗಿದ್ದು, ನೀವು ನಿಮ್ಮ ಮತ ನೀಡಿ ಆಶಿರ್ವಾದ ಮಾಡಿ” ಎಂದು ಮನವಿ ಮಾಡಿದರು.

ವಾಲ್ಪರೈ ಘಾಟ್‌ನಲ್ಲಿ ಭೀಕರ ದುರಂತ: ಟಿಟಿ ಪಲ್ಟಿಯಾಗಿ ಪ್ರವಾಸಕ್ಕೆ ಹೋಗಿದ್ದ 9 ಮಂದಿ ಸಾವು

ಚೆನ್ನೈ: ವಾಲ್ಪರೈ ಘಾಟ್ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಸೇರಿ 9 ಮಂದಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಮೃತರನ್ನು ಅಜಿತಾ (54), ರಾಮ್ಲಾ (52), ಸುಹ್ರಾ (43), ಆಶಾ (41), ಮಜೀರ್ (43), ಸಜಿತಾ (45), ಶಕೀಲಾ (37), ರುಕಿಯಾ (39) ಮತ್ತು ಹಿಶಾಮ್ (12) ಎಂದು ಗುರುತಿಸಲಾಗಿದೆ. ಇವರು ಮಲಪ್ಪುರಂ ಜಿಲ್ಲೆಯ ಪಾಂಗ್‌ನ ಪಲ್ಲಿಪರಂಬು ಸರ್ಕಾರಿ ಎಲ್‌ಪಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಯಾಗಿದ್ದರು.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಎಲ್ಲರೂ ಸೇರಿಕೊಂಡು ಪ್ರವಾಸಕ್ಕಾಗಿ ತಮಿಳುನಾಡಿಗೆ ತೆರಳಿದ್ದರು. ವಾಪಸ್ಸಾಗುವ ವೇಳೆ ಸಂಜೆ ಸುಮಾರು 5 ಗಂಟೆಗೆ ಘಾಟ್‌ನಲ್ಲಿ ವಾಹನ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ.

ಟಿಟಿ ವಾಹನವು 13ನೇ ಹೇರ್‌ಪಿನ್ ತಿರುವಿನಿಂದ ನಿಯಂತ್ರಣ ತಪ್ಪಿ 9ನೇ ತಿರುವಿನವರೆಗೆ ಉರುಳಿಬಿದ್ದಿದ್ದು, ಅಪಘಾತದ ತೀವ್ರತೆಗೆ ವಾಹನ ಸಂಪೂರ್ಣ ನಾಶವಾಗಿದೆ. ಪರಿಣಾಮವಾಗಿ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇನ್ನುಳಿದಂತೆ ವಾಹನ ಚಾಲಕ ಸೇರಿ ನಾಲ್ವರನ್ನು ಪೊಲ್ಲಾಚಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮೃತರ ಅಂತಿಮ ದರ್ಶನ ಇಂದು ಅಂಬಲಪ್ಪರಂಬ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದ್ದು, ಶಿಕ್ಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳು ಮತ್ತು ಪೋಷಕರು ದುಃಖದಲ್ಲಿ ಮುಳುಗಿದ್ದಾರೆ.

ವಿಪಕ್ಷ ತಪ್ಪು ಮಾಡಿದೆ, ಅದರ ಪರಿಣಾಮ ಎದುರಿಸಲೇಬೇಕು: ಮಹಿಳಾ ಮೀಸಲಾತಿ ಮಸೂದೆ ಸೋಲಿಸಿದ್ದಕ್ಕೆ ಮೋದಿ ಬೇಸರ

0

ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗದೆ ಸೋತ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.

ಮಸೂದೆಗೆ ಬೆಂಬಲ ನೀಡದೆ ವಿರೋಧ ಪಕ್ಷ ತಪ್ಪು ಮಾಡಿದ್ದು, ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಮ್ಮ ಸಂಪುಟ ಸಭೆಯಲ್ಲಿ ತಿಳಿಸಿದ್ದಾರೆ. ಸರ್ಕಾರದ ಕ್ರಮಗಳ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದ ನಡುವೆಯೇ ಈ ಮಹತ್ವದ ಮಸೂದೆ ಸಂಸತ್ತಿನಲ್ಲಿ ಅಗತ್ಯ ಬೆಂಬಲ ಪಡೆಯಲು ವಿಫಲವಾಗಿದೆ.

ಸಂವಿಧಾನ (131ನೇ ತಿದ್ದುಪಡಿ) ಮಸೂದೆಯು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶ ಹೊಂದಿತ್ತು. ಆದರೆ, ಲೋಕಸಭೆಯಲ್ಲಿ ಅಂಗೀಕಾರಕ್ಕೆ ಬೇಕಾದ ಮೂರನೇ ಎರಡರಷ್ಟು ಬಹುಮತ ದೊರಕಲಿಲ್ಲ.

ಗುರುವಾರ ನಡೆದ ದೀರ್ಘ ಚರ್ಚೆಯ ಬಳಿಕ ಮತದಾನ ನಡೆದಿದ್ದು, ಮಸೂದೆಗೆ 298 ಮತಗಳು ಪರವಾಗಿ ಬಿದ್ದರೆ, 230 ಸದಸ್ಯರು ವಿರೋಧಿಸಿದರು. ಈ ಹಿನ್ನೆಲೆಯಲ್ಲಿ ಮಸೂದೆ ಅಂಗೀಕಾರವಾಗಲಿಲ್ಲ.

ವಿರೋಧ ಪಕ್ಷದ ಈ ನಿಲುವಿನಿಂದ ದೇಶದ ಮಹಿಳೆಯರು ನಿರಾಸೆಯಾಗಿದ್ದಾರೆ. ಈ ವಿಚಾರವನ್ನು ದೇಶದ ಪ್ರತಿಯೊಂದು ಹಳ್ಳಿ-ಹಳ್ಳಿಗೂ ತಲುಪಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮಹಿಳಾ ಮೀಸಲು ಮಸೂದೆ ಹಿನ್ನಡೆ: ವಿಪಕ್ಷಗಳ ವಿರುದ್ಧ ಅಮಿತ್ ಶಾ ವಾಗ್ದಾಳಿ

ನವದೆಹಲಿ: ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಹಾಗೂ ಲೋಕಸಭಾ ಕ್ಷೇತ್ರಗಳ ಹೆಚ್ಚಳಕ್ಕೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಹಿನ್ನಡೆಯಾದ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಪಕ್ಷಗಳ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ.

“2029ರ ಲೋಕಸಭಾ ಚುನಾವಣೆಯಷ್ಟೇ ಅಲ್ಲ, ಮುಂದಿನ ಎಲ್ಲಾ ಚುನಾವಣೆಯಲ್ಲಿಯೂ ವಿಪಕ್ಷಗಳು ಮಹಿಳೆಯರ ಕೋಪವನ್ನು ಎದುರಿಸಬೇಕಾಗುತ್ತದೆ. ಕ್ಷೇತ್ರಗಳಿಗೆ ಹೋದಾಗ ತಾಯಂದಿರು ಮತ್ತು ಸಹೋದರಿಯರ ಅಸಮಾಧಾನವನ್ನು ಕಾಣಬೇಕಾಗುತ್ತದೆ. ಮಹಿಳೆಯರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ,” ಎಂದು ಹೇಳಿದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಾದರೆ, ನಮಗೆ ದೇಶದ ಜನರ ಪ್ರತಿನಿಧಿತ್ವ ಮತ್ತು ಆಡಳಿತದಲ್ಲಿ ಅವರ ನಿಜವಾದ ಪಾಲ್ಗೊಳ್ಳುವಿಕೆ ಮುಖ್ಯ. ದಶಕಗಳ ಕಾಲ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಜಾತಿ ಆಧಾರಿತ ಜನಗಣತಿ ಹಾಗೂ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯನ್ನು ನಿರಂತರವಾಗಿ ವಿರೋಧಿಸಿದೆ” ಎಂದು ಆರೋಪಿಸಿದರು.

ಲೋಕಸಭೆಯಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ 2026, ಸಂವಿಧಾನ (131ನೇ ತಿದ್ದುಪಡಿ) ಮಸೂದೆ 2026 ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ 2026 ಕುರಿತು ನಡೆದ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ, ಈ ಮಸೂದೆಗಳಿಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿ ಮತ ಚಲಾಯಿಸಿದ್ದವು.

“ಒಬ್ಬ ವ್ಯಕ್ತಿ – ಒಂದು ಮತ – ಒಂದು ಮೌಲ್ಯ” ಎಂಬ ಸಂವಿಧಾನ ತತ್ವವನ್ನು ಜಾರಿಗೆ ತರುವುದೇ ಈ ಮಸೂದೆಗಳ ಉದ್ದೇಶ. ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೀಟುಗಳ ಸಂಖ್ಯೆ ಹೆಚ್ಚಾಗುತ್ತದೆ. ಇದನ್ನು ವಿರೋಧಿಸುವವರು ವಾಸ್ತವವಾಗಿ ಎಸ್‌ಸಿ/ಎಸ್‌ಟಿ ಪ್ರತಿನಿಧಿತ್ವವನ್ನು ವಿರೋಧಿಸುತ್ತಿದ್ದಾರೆ ಎಂದು ಅಮಿತ್ ಶಾ ಟೀಕಿಸಿದರು.

ಚಲಿಸುತ್ತಿದ್ದ ಖಾಸಗಿ ಬಸ್ʼನಲ್ಲಿ ಏಕಾಏಕಿ ಬೆಂಕಿ: ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ 18ಕ್ಕೂ ಹೆಚ್ಚು ಪ್ರಯಾಣಿಕರು ಪಾರು!

0

ಹೈದರಾಬಾದ್: ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಕೆಪಿಎಚ್ಬಿ ಪ್ರದೇಶದಲ್ಲಿ ನಡೆದಿದೆ.

ಸಿಬ್ಬಂದಿಯ ಜಾಗರೂಕತೆಯಿಂದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 18ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊತ್ತಿ ಉರಿಯುತ್ತಿದ್ದ ಬಸ್‌ನ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಶುಕ್ರವಾರ ರಾತ್ರಿ, ಶ್ರೀ ದುರ್ಗಾ ಮಹೇಶ್ವರಿ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಎಸಿ ಸ್ಲೀಪರ್ ಬಸ್ ಮಿಯಾಪುರದಿಂದ ಹೊರಟು ಆಂಧ್ರಪ್ರದೇಶದ ಪಾಲಕೊಲ್ಲು ಮಾರ್ಗವಾಗಿ ಎಸ್‌ಆರ್ ನಗರ ಕಡೆಗೆ ಸಾಗುತ್ತಿತ್ತು. ಈ ವೇಳೆ ಚಾಲಕರ ಕ್ಯಾಬಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ತಕ್ಷಣವೇ ಸಿಬ್ಬಂದಿ ಬಸ್ ನಿಲ್ಲಿಸಿ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ ಪರಿಣಾಮ ದೊಡ್ಡ ದುರಂತ ತಪ್ಪಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಟ್ರಾಫಿಕ್ ಸಿಐ ಜನಯ್ಯ ಹಾಗೂ ಅಗ್ನಿಶಾಮಕ ದಳ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಈ ಘಟನೆಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ.

ಆದರೆ ಈ ಘಟನೆ ಕಾರಣವಾಗಿ ಸ್ಥಳದಲ್ಲಿ ಕೆಲಕಾಲ ಭಾರೀ ಸಂಚಾರ ದಟ್ಟಣೆ ಉಂಟಾಯಿತು. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಮೂರು ದಿನಗಳ ಆಪರೇಷನ್‌ ಸಕ್ಸಸ್‌: ನರಹಂತಕ ಕಾಡಾನೆ ಸೆರೆ

0

ಹಾಸನ: ಕಾನಳ್ಳಿ ಅರಣ್ಯ ಪ್ರದೇಶದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದ ದೈತ್ಯಾಕಾರದ ನರಹಂತಕ ಕಾಡಾನೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ.

ಮೂರು ದಿನಗಳಿಂದ ಮುಂದುವರಿದಿದ್ದ ಕಾರ್ಯಾಚರಣೆಯಲ್ಲಿ ಇಟಿಎಫ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಯ ಹಾದಿಯನ್ನು ಪತ್ತೆಹಚ್ಚಿ, ಮುಂಜಾನೆಲೇ ಆಪರೇಷನ್ ಆರಂಭಿಸಿದರು. ಕಾಡಾನೆ ಜೊತೆ ಮತ್ತೊಂದು ‘ಕ್ಯಾಪ್ಟನ್’ ಆನೆ ಇರುವುದರಿಂದ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಿತ್ತು.

ಕುಮ್ಕಿ ಆನೆಗಳ ನೆರವಿನಿಂದ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದ ಬಳಿಕ, ಅದು ಓಡಲು ಯತ್ನಿಸಿತು. ಆದರೆ ಕಾರ್ಯಾಚರಣೆ ತಂಡ ಅದನ್ನು ಬೆನ್ನಟ್ಟಿ, ಎರಡೂ ಆನೆಗಳನ್ನು ಬೇರ್ಪಡಿಸಿತು.

ಸ್ವಲ್ಪ ದೂರ ಓಡಿದ ಬಳಿಕ ಕಾಡಾನೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ಕುಮ್ಕಿ ಆನೆಗಳು ಅದನ್ನು ಸುತ್ತುವರಿದು ಸಂಪೂರ್ಣ ನಿಯಂತ್ರಣಕ್ಕೆ ತಂದವು. ಬಳಿಕ ನೀರು ಹಾಕಿ ಆರೈಕೆ ಮಾಡಿ ಹಗ್ಗದಲ್ಲಿ ಕಟ್ಟಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆ ಬಳಿಕ ಸ್ಥಳೀಯರಲ್ಲಿ ಇದ್ದ ಭೀತಿ ದೂರವಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಈಗ ಕಾಡಾನೆಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಮುಂದುವರಿದಿದೆ.

error: Content is protected !!