Home Blog

“ನಿನ್ನನ್ನ ಇಲ್ಲಿಯೇ ಕೊಂದು ಬಿಡುತ್ತೇನೆ” – ಸಿಎಂ ಕನಸಿನ ಯೋಜನೆಗೆ ವಿರೋಧವಾಗಿ ಅಧಿಕಾರಿಗೆ ಜೀವ ಬೆದರಿಕೆ

0

ಮೈಸೂರು: ಜಿಲ್ಲೆಯಲ್ಲಿ ಕಾನೂನು ಕೈಯಲ್ಲಿ ಹಿಡಿದಿರುವ ವ್ಯಕ್ತಿಯೊಬ್ಬ ಸರ್ಕಾರಿ ಅಧಿಕಾರಿಗಳಿಗೆ ನೇರವಾಗಿ ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ನಿಂಹಾನ್ಸ್ ಮಾದರಿಯ ಆಸ್ಪತ್ರೆ ನಿರ್ಮಾಣಕ್ಕೆ ಗುರುತಿಸಿರುವ ಜಾಗವೇ ಇದೀಗ ಗಲಾಟೆಗೆ ಕಾರಣವಾಗಿದೆ.

ಮೈಸೂರು ತಾಲ್ಲೂಕಿನ ಗುಡಮಾದನಹಳ್ಳಿ ಗ್ರಾಮದಲ್ಲಿ ಸರ್ಕಾರ ಸ್ವಾಧೀನಕ್ಕೆ ಪಡೆಯಬೇಕಾದ 20 ಎಕರೆ ಜಮೀನಿನ ಪರಿಶೀಲನೆಗಾಗಿ ಗ್ರಾಮ ಆಡಳಿತಾಧಿಕಾರಿ ಜಿ. ಭವ್ಯ ಹಾಗೂ ಗ್ರಾಮ ಸಹಾಯಕ ನವೀನ್ ಕುಮಾರ್ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಜಾಗದಲ್ಲಿ ಅಕ್ರಮವಾಗಿ ಅಡಿಕೆ ತೋಟ ಬೆಳೆಸಿದ್ದ ಜಿಎಂ ಪುಟ್ಟಸ್ವಾಮಿ ಎಂಬಾತ ತೀವ್ರವಾಗಿ ಕೋಪಗೊಂಡು ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸಿದ್ದಾನೆ.

“ಯಾರ ಅನುಮತಿ ತೆಗೆದುಕೊಂಡು ಜಮೀನು ಮಂಜೂರು ಮಾಡಿದ್ದೀರಿ? ಮೊದಲು ತಹಸೀಲ್ದಾರ್ ತಲೆ ತೆಗೆಯಬೇಕು. ನಿನ್ನನ್ನ ಇಲ್ಲಿಯೇ ಕೊಂದು ಹಾಕುತ್ತೇನೆ” ಎಂದು ನೇರವಾಗಿ ಜೀವ ಬೆದರಿಕೆ ಹಾಕಿದ್ದಾನೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪರಿಸ್ಥಿತಿಯನ್ನು ಭಯಾನಕ ಮಟ್ಟಕ್ಕೆ ತಳ್ಳಿದ್ದಾನೆ.

ಘಟನೆಯ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದ್ದರೂ, ಪುಟ್ಟಸ್ವಾಮಿ ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಿಸಿದ್ದಾನೆ ಎಂಬ ಗಂಭೀರ ಆರೋಪವೂ ಇದೆ. ಸರ್ಕಾರಿ ಕರ್ತವ್ಯ ನಿರ್ವಹಣೆಯಲ್ಲಿದ್ದ ಅಧಿಕಾರಿಗಳ ಮೇಲೆ ನಡೆದ ಈ ದೌರ್ಜನ್ಯ ಇದೀಗ ಭಾರೀ ಆತಂಕಕ್ಕೆ ಕಾರಣವಾಗಿದೆ.

ಲಂಚ ಪಡೆಯುವಾಗ ರೆಡ್‌ ಹ್ಯಾಂಡ್‌ ಆಗಿ ಲೋಕಾ ಬಲೆಗೆ ಬಿದ್ದ ತಹಸೀಲ್ದಾರ್ ಕಚೇರಿಯ FDA

0

ಕಲಬುರಗಿ: ಜಿಲ್ಲೆಯ ಕಮಲಾಪುರ ತಹಸೀಲ್ದಾರ್ ಕಚೇರಿಯಲ್ಲಿ ಭಾರೀ ಲಂಚ ಪ್ರಕರಣ ಬೆಳಕಿಗೆ ಬಂದಿದೆ. ತಹಸೀಲ್ದಾರ್ ಕಚೇರಿಯ ಎಫ್‌ಡಿಎ ಶಶಿಕುಮಾರ್, ಜಮೀನು ದಾಖಲೆಗಳನ್ನು ನೀಡುವ ಪ್ರಕರಣದಲ್ಲಿ ಹತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ, ಲೋಕಾ ಇನ್ಸಪೆಕ್ಟರ್ ಅರುಣ್ ಕುಮಾರ್ ಮುರಗುಂಡಿ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದೆ.

ಶಶಿಕುಮಾರ್ ಹಣವನ್ನು ಕಿಶನ್ ರಾಠೋಡ್ ಅವರಿಂದ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್‌ನಲ್ಲಿ ಪತ್ತೆಯಾಗಿದ್ದಾರೆ. ಅಧಿಕಾರಿಗಳ ದಾಳಿ ಮೂಲಕ ಸ್ಥಳದಲ್ಲೇ ಲಂಚದ ಹಣ ವಶಪಡಿಸಿಕೊಂಡು, ಶಶಿಕುಮಾರ್ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಈ ದಾಳಿ, ಕಮಲಾಪುರ ತಹಸೀಲ್ದಾರ್ ಕಚೇರಿಯಲ್ಲಿ ನಡೆಯುತ್ತಿದ್ದ ಲಂಚ ಪಡೆಯುವ ಚಟುವಟಿಕೆ ಮತ್ತು ಅಧಿಕಾರಿಗಳ ಭ್ರಷ್ಟಾಚಾರ ಕುರಿತು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.

ಮೃತ ರಾಜಶೇಖರ್ ಮನೆಗೆ ಭೇಟಿ, 10 ಲಕ್ಷ ಪರಿಹಾರ: ಸಿಬಿಐ ತನಿಖೆ ಮಾಡಿಸಿ: ಬಿ.ವೈ.ವಿಜಯೇಂದ್ರ ಆಗ್ರಹ

0

ಬಳ್ಳಾರಿ: ಮುಖ್ಯಮಂತ್ರಿಗಳು ರಾಜಶೇಖರ್ ಸಾವಿನ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ಚೆಲ್ಲಾಟ ಆಡದೇ ಸಮಗ್ರ ತನಿಖೆ ಮಾಡಿಸಬೇಕು. ಬಡ ಕುಟುಂಬಕ್ಕೆ ನ್ಯಾಯ ಸಿಗಲು ಸಿಬಿಐ ತನಿಖೆ ಮಾಡಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಇಂದು ಮೃತ ರಾಜಶೇಖರ್ ಅವರ ಮನೆಗೆ ಭೇಟಿ ನೀಡಿದಾಗ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರೇ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರರನ್ನು ಕೊಲೆ ಮಾಡಿದ್ದಾರೆ. ಅವರೇ ಗುಂಡು ಹಾರಿಸಿದ್ದರಿಂದ ಪ್ರಾಣ ಕಳಕೊಂಡಿದ್ದಾರೆ ಎಂದು ಆರೋಪಿಸಿದರು.

ನಾವು ಇವತ್ತು ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ- ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಜನಾರ್ಧನ ರೆಡ್ಡಿ, ಪ್ರಮುಖರು ಸೇರಿ ಬಡ ಕುಟುಂಬದವರನ್ನು ಭೇಟಿ ಮಾಡಿದ್ದೇವೆ. ಅವರ ತಾಯಿಯನ್ನೂ ಭೇಟಿ ಮಾಡಿದ್ದೇವೆ. ಅವರಿಗೆ 10 ಲಕ್ಷ ಪರಿಹಾರ ಕೊಟ್ಟಿದ್ದೇವೆ ಎಂದರು. ಆದರೆ, ಯಾವುದೇ ಪರಿಹಾರದಿಂದ ನ್ಯಾಯ ಕೊಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಬಿ.ಶ್ರೀರಾಮುಲು ಅವರು ಮಾತನಾಡಿ, ರಾಜಶೇಖರರ ಸಾವಿನ ಸಂದರ್ಭದಲ್ಲಿ ಅನೇಕ ಜನರಲ್ಲಿ ಗೊಂದಲ ಇತ್ತು. ಬಿಜೆಪಿಯವರಿಂದ ಕೊಲೆ ಆಗಿದೆ ಎಂದು ತಿಳಿಸುವ ಕೆಲಸ ಮಾಡಿದ್ದರು. ಈ ಕೊಲೆ ಕಾಂಗ್ರೆಸ್ಸಿನವರಿಂದಲೇ ಆಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದ ಎಲ್ಲ ವಿಡಿಯೋಗಳನ್ನು ನಾವು ಕೊಟ್ಟಿದ್ದೇವೆ ಎಂದು ತಿಳಿಸಿದರು. ಸಾವು ಯಾರಿಂದ ಎಂಬ ವಿಷಯದಲ್ಲಿ ಗೊಂದಲ ಇದ್ದ ಕಾರಣ ಕೂಡಲೇ ಇಲ್ಲಿ ಬಂದಿರಲಿಲ್ಲ. ಇದೀಗ ಪರಿಹಾರದ ಹಣವನ್ನು ಚೆಕ್ ಮೂಲಕ ಮೃತರ ತಾಯಿಗೆ ಕೊಡಲಾಗಿದೆ ಎಂದು ವಿವರಿಸಿದರು.

ಲಕ್ಕುಂಡಿಯಲ್ಲಿ ಎರಡನೇ ದಿನವೂ ಮುಂದುವರೆದ ಉತ್ಕನನ: ಪ್ರಾಚೀನ ಕಾಲದ ಶಿಲಾಕೃತಿ ಪತ್ತೆ

0

ಗದಗ: ಲಕ್ಕುಂಡಿಯ ಶ್ರೀ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ಎರಡನೇ ದಿನವೂ ಪ್ರಾಚೀನ ಶಿಲಾಕೃತಿಯ ಪತ್ತೆಗೆ ಕಾರಣವಾಗಿದೆ. ಒಂಬತ್ತರ ಅಡಿ ಭೂರಿದ ಕೂಡಲೇ ಈ ಶಿಲಾಕೃತಿ ಹೊರಬಂದಿದ್ದು, ಪುರಾತತ್ವ ತಜ್ಞರು ಅದನ್ನು ಪರಿಶೀಲಿಸುತ್ತಿದ್ದಾರೆ. ಶೀಘ್ರದಲ್ಲೇ ಶಿಲಾಕೃತಿ ಎಷ್ಟು ಹಳೆಯದು ಎಂಬುದು ಸ್ಪಷ್ಟವಾಗಲಿದೆ.

ಉತ್ಖನನ ಸ್ಥಳವು ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಆದೇಶದಂತೆ, ಕಾರ್ಯಕ್ಕೆ ವ್ಯತ್ಯಯ ಉಂಟಾಗದಂತೆ ಫೋಟೋ ಮತ್ತು ವೀಡಿಯೋಗ್ರಾಫಿ ಮಾಡುವುದನ್ನು ನಿರ್ಬಂಧಿಸಲಾಗಿದೆ.

ಸ್ಥಳೀಯರು ಹೇಳುವಂತೆ, ಲಕ್ಕುಂಡಿ ಮೊದಲು ಏಳು ಗ್ರಾಮಗಳ ಅಗ್ರಹಾರವಾಗಿತ್ತು. ವಿಜಯನಗರ ಅರಸರ ಆಡಳಿತದ ನಂತರ ಜನರು ಇಲ್ಲಿ ನೆಲೆಸಿದರು. ಈ ಪ್ರದೇಶದಲ್ಲಿ ನಾಣ್ಯ ತಯಾರಿಕೆ, ಕಲ್ಲಿನ ವಿಗ್ರಹಗಳು, ಬೆಳ್ಳಿ, ಬಂಗಾರ, ಮುತ್ತು ಮತ್ತು ಹವಳ ತುಣುಕುಗಳು ಅನೇಕ ವರ್ಷಗಳಿಂದ ಸಿಗುತ್ತಲೇ ಬಂದಿವೆ. ಈ ಪತ್ತೆಯು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಮತ್ತೆ ಬೆಳಕಿಗೆ ತರಲಿದೆ ಮತ್ತು ಭಕ್ತರು ಹಾಗೂ ಸ್ಥಳೀಯರು ಉತ್ಕಟ ಆಸಕ್ತಿಯಿಂದ ಈ ಕಾರ್ಯವನ್ನು ವೀಕ್ಷಿಸುತ್ತಿದ್ದಾರೆ.

ಲಕ್ಕುಂಡಿಯಲ್ಲಿ ಉತ್ಖನನ ವಿರುದ್ಧ ಜನರ ಆಕ್ರೋಶ: ‘ಜಾತ್ರೆಗೆ ಅವಕಾಶ ಕೊಡದಿದ್ರೆ ಉಗ್ರ ಹೋರಾಟ’ ಎಚ್ಚರಿಕೆ!

0

ಗದಗ: ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಎರಡನೇ ದಿನಕ್ಕೂ ಕಾಲಿಟ್ಟ ಉತ್ಖನನ ಕಾರ್ಯದ ವಿರುದ್ಧ ವೀರಭದ್ರೇಶ್ವರ ಭಕ್ತರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರಾತತ್ತ್ವ ಇಲಾಖೆಯ ಶಿಫಾರಸ್ಸಿನ ಮೇರೆಗೆ ಈ ಪ್ರದೇಶವನ್ನು ಸೂಕ್ಷ್ಮ ವಲಯ ಎಂದು ಘೋಷಿಸಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಆದೇಶದಂತೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

“ಇದೇ ಸ್ಥಳದಲ್ಲಿ ನಾವು ಅಗ್ನಿಕುಂಡ ಮಾಡ್ತಿದ್ವಿ” ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾರ್ಚ್ 20ರಿಂದ ನಡೆಯಲಿರುವ ವೀರಭದ್ರೇಶ್ವರ ಜಾತ್ರೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಸರ್ಕಾರದ ಈ ಕ್ರಮ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ.

ಸುಮಾರು 45 ವರ್ಷಗಳ ಇತಿಹಾಸ ಹೊಂದಿರುವ ಜಾತ್ರೆಗೆ ಅಡ್ಡಿ ಬಂದರೆ ಹೋರಾಟ ಖಚಿತ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. “ಈಗಾಗಲೇ ಮೌಖಿಕವಾಗಿ ಮನವಿ ಮಾಡಿದ್ದೇವೆ. ಸರ್ಕಾರ ಸ್ಪಂದಿಸಿದ್ರೆ ಸರಿ, ಇಲ್ಲದಿದ್ರೆ ಬೀದಿಗೆ ಇಳಿಯುತ್ತೇವೆ” ಎಂಬುದು ಗ್ರಾಮಸ್ಥರ ಕಠಿಣ ನಿಲುವಾಗಿದೆ.

ಬೈಕ್–ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ವಿದ್ಯಾರ್ಥಿಗಳು ಸಾವು..!

0

ದೇವನಹಳ್ಳಿ: ಬೈಕ್–ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಬೈಚಾಪುರ–ಬೆಟ್ಟಕೋಟೆ ಮಧ್ಯೆ ನಡೆದಿದೆ.

ದೇವನಹಳ್ಳಿಯಿಂದ ಬೂದಿಗೆರೆ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರು ವಿದ್ಯಾರ್ಥಿಗಳು, ನಿಯಂತ್ರಣ ತಪ್ಪಿ ಮೊದಲು ಡಿವೈಡರ್‌ಗೆ ಡಿಕ್ಕಿ ಹೊಡೆದು, ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಗೆ ಢಿಕ್ಕಿ ಹೊಡೆದಿದ್ದಾರೆ.

ಅಪಘಾತದ ತೀವ್ರತೆಗೆ ದೇಹಗಳು ಛಿದ್ರ ಛಿದ್ರವಾಗಿ ಬಿದ್ದಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಹುಣಸಮಾರೇನಹಳ್ಳಿ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸರು ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಅಪಘಾತದಿಂದಾಗಿ ಸ್ಥಳದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಮಂಡ್ಯ: 11 ತಿಂಗಳ ಬಂಡೂರು ಕುರಿ 1.35 ಲಕ್ಷ ರೂ.ಕ್ಕೆ ಮಾರಾಟ!

0

ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ 11 ತಿಂಗಳ ಬಂಡೂರು ಕುರಿ 1,35,000 ರೂಪಾಯಿಗಳ ದಾಖಲೆ ಮೊತ್ತದಲ್ಲಿ ಮಾರಾಟವಾಗಿದೆ.

ಕುರಿ ಮಾರಾಟವು ಯುವ ರೈತ ಉಲ್ಲಾಸ್ಗೌಡಗೆ ಸೇರಿದ ಬಂಡೂರು ಟಗರನ್ನು ಬೆಂಗಳೂರು ಮೂಲದ ಇಂಜಿನಿಯರ್ ಹರೀಶ್ ಖರೀದಿ ಮಾಡಿದ್ದು, ಈ ಮೊತ್ತವನ್ನು ಉಲ್ಲಾಸ್ಗೆ ಹಣವಾಗಿ ನೀಡಲಾಯಿತು. ಬಳಿಕ ಬಂಡೂರು ಟಗರನ್ನು ಹರೀಶ್ ಅವರಿಗೆ ಹಸ್ತಾಂತರಿಸಲಾಗಿದೆ.

ಕುರಿ ಸಾಕಾಣಿಕೆ ಮಾಡುತ್ತಿರುವ ಹರೀಶ್ ಬಂಡೂರು ತಳಿಯನ್ನು ಅಭಿವೃದ್ಧಿಪಡಿಸಲು ಉಲ್ಲಾಸ್ ಬಳಿ ಬಂಡೂರು ಟಗರನ್ನು ಖರೀದಿ ಮಾಡಿದ್ದು, ಬಳಿಕ ಉಲ್ಲಾಸ್‌ಗೆ ಹಣ ನೀಡಿ ಸನ್ಮಾನ ಮಾಡಿದ್ದಾರೆ. ನಂತರ ಬಂಡೂರು ಟಗರನ್ನು ಹರೀಶ್ ಅವರಿಗೆ ಹಸ್ತಾಂತರ ಮಾಡಲಾಗಿದೆ.

 

ಕೊರ್ಲಹಳ್ಳಿ ಗ್ರಾಮದಲ್ಲಿ ನಿಗೂಢ ಗೆಜ್ಜೆ ಶಬ್ದ: “ದೈವದ ಲೀಲೆ”ಯೆಂದ ಗ್ರಾಮಸ್ಥರು!

0

ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಚಮತ್ಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕತ್ತಲಾಗುತ್ತಿದ್ದಂತೆ ಗ್ರಾಮದೆಲ್ಲೆಡೆ ನಿಗೂಢವಾಗಿ ಗೆಜ್ಜೆ ಶಬ್ದ ಕೇಳಿಸುತ್ತಿದ್ದು, ಇದು ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

ಕಳೆದ ಎರಡು ಮೂರು ದಿನಗಳಿಂದ ರಾತ್ರಿ ಸಮಯದಲ್ಲಿ ಇಡೀ ಗ್ರಾಮಕ್ಕೆ ಕೇಳಿಸುತ್ತಿರುವ ಗೆಜ್ಜೆ ಶಬ್ದವು ಜನರ ನಿದ್ದೆಗೆಡಿಸಿದೆ. ವಿಶೇಷವಾಗಿ ದೇವಿಯ ಮೂರ್ತಿ ಇಟ್ಟಿರುವ ಸ್ಥಳದಿಂದಲೇ ಈ ಶಬ್ದ ಬರುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಗ್ರಾಮದಲ್ಲಿ ಇದ್ದ ದುರ್ಗಮ್ಮ ದೇವಿಯ ಮೂರ್ತಿ ಭಗ್ನಗೊಂಡಿತ್ತು. ಇದರಿಂದಾಗಿ ಗ್ರಾಮಸ್ಥರು ಹೊಸ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದರು. ಮೂರ್ತಿಯನ್ನು ಸಿದ್ಧಪಡಿಸಿ, ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಇಟ್ಟುಕೊಳ್ಳಲಾಗಿತ್ತು. ಮೂರ್ತಿಗೆ ಬಣ್ಣ ಹಚ್ಚುವುದು ಮಾತ್ರ ಬಾಕಿಯಿದ್ದು, ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗಿ ಪ್ರತಿಷ್ಠಾಪನೆ ಮಾಡುವ ತಯಾರಿ ನಡೆಯುತ್ತಿದೆ.

ಇಂತಹ ಸಂದರ್ಭದಲ್ಲಿ ವಿಚಿತ್ರ‌ವಾಗಿ ಕೇಳಿ ಬರುತ್ತಿರುವ ಗೆಜ್ಜೆ ಶಬ್ದವನ್ನು ದೈವದ ಲೀಲೆ ಎಂದು ಗ್ರಾಮಸ್ಥರು ನಂಬಿದ್ದಾರೆ. ಇದು ದೇವಿಯ ಗೆಜ್ಜೆ ಶಬ್ದ ಎಂದು ಹೇಳಿಕೊಳ್ಳುತ್ತಿರುವ ಗ್ರಾಮಸ್ಥರು ಭಯ ಮತ್ತು ಭಕ್ತಿಭಾವ ಎರಡನ್ನೂ ಅನುಭವಿಸುತ್ತಿದ್ದಾರೆ. ರಾತ್ರಿಯಾದರೆ ಸಾಕು, ಇಡೀ ಗ್ರಾಮದಲ್ಲಿ ಗೆಜ್ಜೆ ಶಬ್ದ ಪ್ರತಿಧ್ವನಿಸುತ್ತಿದ್ದು, ಇದು ಜನರ ನಿದ್ದೆಗೆಡಿಸಿದೆ.

ಲಕ್ಕುಂಡಿಯಲ್ಲಿ ಉತ್ಖನನ ಭಾರೀ ಚುರುಕು: ಪ್ರವೇಶಕ್ಕೆ ಬ್ರೇಕ್, ಗ್ರಾಮ ಸ್ಥಳಾಂತರದ ನಿರ್ಧಾರ ಅವಶೇಷಗಳ ಮೇಲೆ ಅವಲಂಬಿತ

0

ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಚುರುಕುಗೊಂಡಿದ್ದು, ಗ್ರಾಮವನ್ನು ತಕ್ಷಣ ಸ್ಥಳಾಂತರಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸ್ಪಷ್ಟಪಡಿಸಿದ್ದಾರೆ. ಆದರೆ ಉತ್ಖನನ ವೇಳೆ ಅತ್ಯಂತ ಮಹತ್ವದ ಅವಶೇಷಗಳು ಪತ್ತೆಯಾದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದ್ದಾರೆ.

ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ 10 ಮೀಟರ್ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಉತ್ಖನನ ನಡೆಯುತ್ತಿದ್ದು, ಪುರಾತತ್ವ ಇಲಾಖೆಯ ಶಿಫಾರಸ್ಸಿನ ಮೇರೆಗೆ ಈ ಪ್ರದೇಶವನ್ನು ಸೂಕ್ಷ್ಮ ವಲಯವೆಂದು ಘೋಷಿಸಲಾಗಿದೆ. ಇದರ ಪರಿಣಾಮವಾಗಿ ಸಾರ್ವಜನಿಕ ಪ್ರವೇಶ, ವೀಡಿಯೋ ಹಾಗೂ ಫೋಟೋಗ್ರಫಿಗೆ ಜಿಲ್ಲಾಡಳಿತ ಸಂಪೂರ್ಣ ನಿಷೇಧ ವಿಧಿಸಿದೆ.

ಉತ್ಖನನ ಕಾರ್ಯಕ್ಕೆ 5,338 ಚದರ ಮೀಟರ್ ಪ್ರದೇಶವನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಮುಂದಿನ 3 ರಿಂದ 4 ತಿಂಗಳ ಕಾಲ ನಿರಂತರ ಉತ್ಖನನ ನಡೆಯಲಿದೆ. ಮೊದಲ ದಿನ ಒಂದು ಅಡಿ ಆಳಕ್ಕೆ ಅಗೆದು ಕೆಲಸ ಆರಂಭವಾಗಿದ್ದು, ಇದೀಗ ಎರಡನೇ ದಿನದ ಕಾರ್ಯ ಮುಂದುವರೆದಿದೆ.

2003ರಲ್ಲಿ ನಡೆದ ಉತ್ಖನನದ ಬಳಿಕ ಇದೀಗ 22 ವರ್ಷಗಳ ನಂತರ ಮತ್ತೆ ಕಾರ್ಯ ಆರಂಭವಾಗಿದ್ದು, ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ಹಿನ್ನೆಲೆ ಈ ಉತ್ಖನನಕ್ಕೆ ಹೆಚ್ಚಿನ ಮಹತ್ವ ಸಿಕ್ಕಿದೆ. ವಜ್ರ, ವೈಢೂರ್ಯ, ಬಂಗಾರ ಸೇರಿದಂತೆ ಅಮೂಲ್ಯ ವಸ್ತುಗಳು ಪತ್ತೆಯಾಗುವ ಸಾಧ್ಯತೆ ಇದ್ದು, ಗ್ರಾಮದಲ್ಲಿ ಕುತೂಹಲ ಹಾಗೂ ಚರ್ಚೆ ತೀವ್ರಗೊಂಡಿದೆ.

ಬಾಂಗ್ಲಾ ವಲಸಿಗರಿಗೆ ಬೆದರಿಕೆ ಆರೋಪ: ಪುನೀತ್ ಕೆರೆಹಳ್ಳಿ ಅರೆಸ್ಟ್

0

ಬೆಂಗಳೂರು: ಹಿಂದೂ ರಾಷ್ಟ್ರ ರಕ್ಷಣಾ ಪಡೆ ಮುಖಂಡ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ. ವಲಸಿಗರಿಗೆ ಬೆದರಿಕೆ ಹಾಗೂ ಭೀತಿ ಉಂಟು ಮಾಡಿದ ಆರೋಪದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಬನ್ನೇರುಘಟ್ಟ ಹಾಗೂ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಅವರ ಬೆಂಬಲಿಗರು ಬಾಂಗ್ಲಾದೇಶ ಮೂಲದ ವಲಸಿಗರ ಮನೆಗಳಿಗೆ ನುಗ್ಗಿ, ಪೌರತ್ವ ಮತ್ತು ಗುರುತಿನ ದಾಖಲೆಗಳನ್ನು ಕೇಳಿದ್ದಾಗಿ ಆರೋಪಿಸಲಾಗಿದೆ. ಈ ವೇಳೆ ಕೆಲವರು ತಾವು ಬಾಂಗ್ಲಾದೇಶದವರು ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಬಾಂಗ್ಲಾದೇಶ ಮೂಲದವರಿಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ದೊರೆತಿರುವುದು ಹಾಗೂ ಕೆಲವರಿಗೆ ಬ್ಯಾಂಕ್ ಸಾಲವೂ ಮಂಜೂರಾಗಿದೆ. ದಾಖಲೆಗಳಿಲ್ಲದೆ ಈ ಎಲ್ಲ ಸೌಲಭ್ಯಗಳು ಹೇಗೆ ದೊರಕಿವೆ ಎಂದು ಪುನೀತ್ ಕೆರೆಹಳ್ಳಿ ಪ್ರಶ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಪ್ರಕರಣದಲ್ಲಿ ವಲಸಿಗರಿಗೆ ಭೀತಿ ಉಂಟು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಪೊಲೀಸ್ ಠಾಣೆಯ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ. ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಪುನೀತ್ ಕೆರೆಹಳ್ಳಿ ಬೆಂಬಲಿಗರು ಪೊಲೀಸ್ ಠಾಣೆಯ ಬಳಿ ಜಮಾಯಿಸಿ, ಸರ್ಕಾರ ವಿರೋಧಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

error: Content is protected !!