Home Blog

ಅಡುಗೆ ಅನಿಲದ ಕೊರತೆಯಿಂದ ಕೆಲ ಹೋಟೆಲ್‌ಗಳು ತಾತ್ಕಾಲಿಕ ಬಂದ್: KH ಮುನಿಯಪ್ಪ

ಬೆಂಗಳೂರು: ಹಳ್ಳಿಗಳಲ್ಲಿ ಗೃಹ ಬಳಕೆಯವರಿಗೆ 45 ದಿನಕ್ಕೆ 1 ಸಿಲಿಂಡರ್ ಕೊಡಲಾಗುತ್ತಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ KH ಮುನಿಯಪ್ಪ ಹೇಳಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೋಟೆಲ್‌ಗಳಿಗೆ ಹೆಚ್ಚುವರಿ ಅಡುಗೆ ಅನಿಲ ನೀಡುವ ವಿಚಾರ ಮಂಗಳವಾರ ನಡೆಯುವ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಡುಗೆ ಅನಿಲದ ಕೊರತೆಯಿಂದ ಕೆಲ ಹೋಟೆಲ್‌ಗಳು ತಾತ್ಕಾಲಿಕವಾಗಿ ಬಂದ್ ಆಗಿದೆ. ಹೋಟೆಲ್‌ಗಳಿಗೆ ಈಗಾಗಲೇ 20% ಪ್ರಮಾಣದಲ್ಲಿ ಅನಿಲ ಹಂಚಿಕೆ ಆಗುತ್ತಿದೆ, ಹಾಸ್ಪಿಟಲ್‌ಗಳಿಗೆ 100% ಲಭ್ಯವಾಗಿದೆ ಎಂದು ಸ್ಪಷ್ಟಪಡಿಸಿದರು. ಮಂಗಳವಾರ ನಿರ್ಧಾರಾತ್ಮಕ ಸಭೆ ನಡೆಯಲಿದ್ದು, ಅದರಲ್ಲಿ ಹೋಟೆಲ್‌ಗಳಿಗೆ ಹೆಚ್ಚುವರಿ ಸಿಲಿಂಡರ್‌ ನೀಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಡೊಮೆಸ್ಟಿಕ್ ಗ್ರಾಹಕರಿಗೆ ನಗರದಲ್ಲಿ 25 ದಿನಕ್ಕೆ 1 ಸಿಲಿಂಡರ್, ಹಳ್ಳಿಗಳಲ್ಲಿ 45 ದಿನಕ್ಕೆ 1 ಸಿಲಿಂಡರ್ ನೀಡಲಾಗುತ್ತಿದೆ. ವಾಣಿಜ್ಯ ಸಿಲಿಂಡರ್‌ ಸಮಸ್ಯೆ ಪರಿಹರಿಸುವಂತೆ ನಿರ್ದೇಶನ ನೀಡಲಾಗಿದೆ. ಈ ಸಂದರ್ಭದಲ್ಲಿ, ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳದ ವಿಚಾರವೂ ಚರ್ಚೆಗೆ ಒಳಪಡಿಸಲಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಡಾ. ವಿಷ್ಣುವರ್ಧನ್ ರಸ್ತೆಯಲ್ಲಿ ಕಸದ ರಾಶಿ: ವಿಡಿಯೋ ಮಾಡಿ ಅಧಿಕಾರಿಗಳ ಗಮನ ಸೆಳೆದ ಅನಿರುದ್ಧ್ ಜತ್ಕರ್!

ಬೆಂಗಳೂರು: ನಟ ಅನಿರುದ್ಧ್ ಜತ್ಕರ್ ಕಳೆದ ಐದು ವರ್ಷಗಳಿಂದ “ಸ್ವಚ್ಛತೆಗಾಗಿ ನಾನೂ ಸಹಭಾಗಿ” ಅಭಿಯಾನ ನಡೆಸುತ್ತಿದ್ದಾರೆ.

ನಗರದಲ್ಲಿ ಎಲ್ಲೆಡೆ ಬಿದ್ದ ಕಸದ ರಾಶಿಗಳನ್ನು ಗಮನಿಸಿ, ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡುತ್ತಾರೆ.

ಸಿನಿಮಾ ಮತ್ತು ಸೀರಿಯಲ್ ಕೆಲಸಗಳ ನಡುವೆ ತಮ್ಮ ಅಭಿಯಾನವನ್ನು ನಿರಂತರವಾಗಿ ಮುಂದುವರಿಸುತ್ತಿರುವ ಅವರು, ಬೆಂಗಳೂರಿನ ‘ಡಾ. ವಿಷ್ಣುವರ್ಧನ್ ರಸ್ತೆ’ಯಲ್ಲಿ ಬಿದ್ದ ಕಸದ ರಾಶಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕಸ ಹಾಕಬಾರದು ಎಂಬ ಎಚ್ಚರಿಕೆ ಇರುವ ಸ್ಥಳದಲ್ಲಿಯೇ ಜನರು ಕಸ ಸುರಿಸುತ್ತಿರುವುದನ್ನು ಅನಿರುದ್ಧ್ ಟೀಕಿಸಿದ್ದಾರೆ.

ಈ ವಿಡಿಯೋ ವೈರಲ್ ಆದ ನಂತರ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದಾರೆ.

ಕೃಷಿ ಹೊಂಡದಲ್ಲಿ ಈಜಲು ಹೋದ ನಾಲ್ಕು ಮಕ್ಕಳು ಜಲಸಮಾಧಿ: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಈಜಲು ಹೋಗಿದ್ದ ನಾಲ್ವರು ಮಕ್ಕಳು ದಾರುಣ ಅಂತ್ಯ ಕಂಡಿರುವ ಘಟನೆ ಜರುಗಿದೆ.

6 ವರ್ಷದ ಕಿರಣ್​​​, 11 ವರ್ಷದ ಬಸಮ್ಮ, 6 ವರ್ಷದ ಶರತ್, 7 ವರ್ಷದ ಹನುಮೇಶ್ ಮೃತರು. ಶಾಲೆಗೆ ರಜೆ ಇದ್ದಿದ್ದರಿಂದ ನಾಲ್ವರು ಮಕ್ಕಳು ಒಟ್ಟಾಗಿ ಈಜಲು ಹೋಗಿದ್ದರು ಎನ್ನಲಾಗಿದೆ. ಈ ವೇಳೆ ದುರಂತ ಸಂಭವಿಸಿದೆ.

ಮೃತ ಮಕ್ಕಳೆಲ್ಲರೂ ತೀರಾ ಚಿಕ್ಕ ವಯಸ್ಸಿನವರಾಗಿದ್ದು, ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ಕೊಪ್ಪಳದಲ್ಲಿ ಪೆಟ್ರೋಲ್-ಡೀಸೆಲ್ ಅಭಾವ ವದಂತಿ: ಡ್ರಮ್, ಕ್ಯಾನ್‌ ಹಿಡಿದು ಬಂಕ್‌ಗಳಿಗೆ ಮುಗಿಬಿದ್ದ ಜನ!

ಕೊಪ್ಪಳ:- ಮಧ್ಯಪ್ರಾಚ್ಯ ಸಂಘರ್ಷದಿಂದ ಪೆಟ್ರೋಲ್-ಡೀಸೆಲ್ ಸಿಗಲ್ಲ ಎಂಬ ವದಂತಿ ಹರಿದಾಡ್ತಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಂಕ್ ಗಳ ಮುಂದೆ ರಾತ್ರಿಯಿಡಿ ಕ್ಯೂ ನಿಂತು ಜನತೆ ಪೆಟ್ರೋಲ್ ಸ್ಟಾಕ್ ಮಾಡಿಕೊಳ್ತಿದ್ದಾರೆ. ಇದೀಗ ಕೊಪ್ಪಳದಲ್ಲಿಯೂ ಡ್ರಮ್, ಕ್ಯಾನ್ ಗಳಿಗೆ ಡೀಸೆಲ್, ಪೆಟ್ರೋಲ್ ಹಾಕಿಸಿಕೊಂಡು ಸ್ಟಾಕ್ ಮಾಡಲು ಮುಂದಾಗಿದ್ದಾರೆ.

ಗಂಗಾವತಿ ತಾಲ್ಲೂಕಿನ ಪೆಟ್ರೋಲ್ ಬಂಕ್‌ಗಳಿಗೆ ಜನರು ಡ್ರಮ್, ಕ್ಯಾನ್ ತಂದು, ಹೆಚ್ಚಿನ ಪ್ರಮಾಣದಲ್ಲಿ ಡಿಸೇಲ್ ತುಂಬಿಸಿಕೊಂಡಿದ್ದಾರೆ. ಪೆಟ್ರೋಲ್ ಸಿಬ್ಬಂದಿ ಯಾವುದೇ ಸಮಸ್ಯೆ ಇಲ್ಲ ಅಂತ ಹೇಳುತ್ತಿದ್ದರೂ ಜನ ಮಾತ್ರ ಅದಕ್ಕೆ ಕಿವಿಗೊಡದೆ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳುತ್ತಿದ್ದಾರೆ.

ಸ್ಥಳೀಯ ಅಧಿಕಾರಿಗಳು ಮತ್ತು ಪೆಟ್ರೋಲ್ ಬಂಕ್ ವ್ಯವಸ್ಥಾಪಕರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ, ಜನರನ್ನು ಅಗತ್ಯಕ್ಕಿಂತ ಹೆಚ್ಚಾಗಿ ಸಂಗ್ರಹಿಸಿಕೊಳ್ಳಬೇಡಿ ಎಂದು ಎಚ್ಚರಿಸುತ್ತಿದ್ದಾರೆ.

ರೋಣ ಹೊರವಲಯದಲ್ಲಿ ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ: ಸಿಲಿಂಡರ್‌ಗಳು ಚೆಲ್ಲಾಪಿಲ್ಲಿ

0

ಗದಗ: ಜಿಲ್ಲೆಯ ರೋಣ ಪಟ್ಟಣದ ಹೊರವಲಯದಲ್ಲಿ ಇಂದು ಬೆಳಗಿನ ಜಾವ ಗೃಹೋಪಯೋಗಿ ಅನಿಲ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಘಟನೆ ನಡೆದಿದೆ. ಘಟನೆ ನಂತರ ಕೆಲಕಾಲ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಭಾರತ್ ಗ್ಯಾಸ್ ಕಂಪನಿಗೆ ಸೇರಿದ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿ, ರೋಣ–ಗಜೇಂದ್ರಗಡ ರಸ್ತೆಯಲ್ಲಿ ಪಟ್ಟಣದ ಶೇಖರಯ್ಯ ಅಜ್ಜನ ಮಠದ ಸಮೀಪ ಪಲ್ಟಿಯಾಗಿದೆ. ಗಜೇಂದ್ರಗಡ ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಲಾರಿ ರಸ್ತೆ ಪಕ್ಕದ ಗುಂಡಿಗೆ ಜಾರಿದ್ದು, ಪಕ್ಕದ ಜಮೀನಿನಲ್ಲಿ ಪಲ್ಟಿಯಾಗಿದೆ. ಈ ವೇಳೆ ಲಾರಿಯಲ್ಲಿ ತುಂಬಿದ್ದ ಅನಿಲ ಸಿಲಿಂಡರ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಿಲಿಂಡರ್‌ಗಳಿಂದ ಸೋರಿಕೆ ಆಗದಿರುವುದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ತಿಳಿದು ಬಂದಿದೆ. ರೋಣ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಎಣ್ಣೆಪ್ರಿಯರೇ ಹುಷಾರ್| ಅವಧಿ ಮೀರಿದ ಮದ್ಯ ಮಾರಾಟ, ಅಧಿಕಾರಿಗಳೇ ಶಾಮೀಲು| ಸೂಪರ್ ವೈಸರ್ ಅರೆಸ್ಟ್

ರಾಮನಗರ: ಅಕ್ರಮಗಳನ್ನು ತಡೆಯಬೇಕಿದ್ದ ಅಧಿಕಾರಿಗಳೇ ಮದ್ಯ ಮಾರಾಟ ವಿಚಾರವಾಗಿ ಕಳ್ಳಾಟ ಆಡುತ್ತಿರುವ ಪ್ರಸಂಗವೊಂದು ರಾಮನಗರದಲ್ಲಿ ಬೆಳಕಿಗೆ ಬಂದಿದೆ.

ಐಜೂರು ಠಾಣೆ ಪೊಲೀಸರ ಕಾರ್ಯಾಚರಣೆ ವೇಳೆ ಹಣದಾಸೆಗೆ ಅಧಿಕಾರಿಗಳಿಂದಲೇ ಅವಧಿ ಮೀರಿದ ಮದ್ಯ ಮಾರಾಟ ನಡೆಯುತ್ತಿರೋದು ಆಘಾತ ಮೂಡಿಸಿದೆ. ನಿಗಮದ ಸೂಪರ್ ವೈಸರ್ ಸುರೇಶ್ ಮನೆಯಲ್ಲಿಯೇ ಇವು ಪತ್ತೆಯಾಗಿದ್ದು, ವಿವಿಧ ಕಂಪನಿಗಳ 20 ಬಾಕ್ಸ್​ ಮದ್ಯ ಕಂಡುಬಂದಿದೆ. ಹಲವೆಡೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಅವಧಿಮೀರಿದ ಮದ್ಯವನ್ನು ನಾಶಪಡಿಸುವ ಬದಲು ಕರ್ನಾಟಕ ಪಾನೀಯ ನಿಗಮದ ಗೋದಾಮಿನಿಂದ ಅವನ್ನು ತಂದು ಮನೆಯಲ್ಲಿ ಸಂಗ್ರಹ ಮಾಡಲಾಗಿತ್ತು. ಇವನ್ನು ಗ್ರಾಮೀಣ ಭಾಗದಲ್ಲಿ ಮಾರಲು ಪ್ಲ್ಯಾನ್ ನಡೆದಿತ್ತು ಎನ್ನಲಾಗಿದೆ.

ಅವಧಿಮೀರಿದ ಯುಬಿ ಎಕ್ಸ್ಪರ್ಟ್ ಪ್ರಿಮಿಯಂ ಸ್ಟ್ರಾಂಗ್ ಬಿಯರ್, ಕಿಂಗ್ ಫಿಶರ್, ಆಲ್ಟ್ರಾ ಪ್ರಿಮಿಯಂ ಸ್ಟ್ರಾಂಗ್ ಬಿಯರ್ ಹಾಗೂ ಮ್ಯಾಜಿಕ್ ಮೂಮೆಂಟ್ ವೋಡ್ಕಾ ಕಾಕೈಟ್​ನ ಸಿಬ್ಬಂದಿ ಸೀಜ್ ಮಾಡಿದ್ದರು. ಈಗಾಗಲೇ ಮದ್ಯದ ಅವಧಿಮೀರಿ ಮೂರ್ನಾಲ್ಕು ತಿಂಗಳು ಕಳೆದಿದ್ದು, ಸೀಜ್ ಮಾಡಿದ್ದ ಅವನ್ನು ನಾಶಪಡಿಸಲು ಅಬಕಾರಿ ಡಿಸಿ ಸೂಚಿಸಿದ್ದರು. ಹೀಗಿದ್ದರೂ ಗೋದಾಮಿನ ಸಿಸಿಟಿವಿ ಆಫ್ ಮಾಡಿಸಿ 640 ಬಾಕ್ಸ್​ಗಳಲ್ಲಿ 20 ಬಾಕ್ಸ್​ಗಳನ್ನು ನಾಶಪಡಿಸದೇ ತಂದು ಸಂಗ್ರಹ ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ.

ರಾಮನಗರದ ಅರ್ಚಕರಹಳ್ಳಿ ಬಳಿಯಿರುವ ಪಾನೀಯ ನಿಗಮದ ಗೋದಾಮಿನಿಂದ ಮದ್ಯ ಸಾಗಾಟದ ವೇಳೆ ಸೂಪರ್​ ವೈಸರ್​ ಸುರೇಶ್​ಗೆ ಗೋದಾಮು ಅಧಿಕಾರಿಗಳು, ಸಿಬ್ಬಂದಿ ಸಾಥ್ ನೀಡಿದ್ದರು. ಹಣದಾಸೆಗೆ ಕಳೆದ ಹಲವು ವರ್ಷಗಳಿಂದ ಅಕ್ರಮ ದಂಧೆ ನಡೆಯುತ್ತಿದ್ದು, ಐಜೂರು ಪೊಲೀಸರಿಂದ ಸೂಪರ್ ವೈಸರ್​ ಸುರೇಶ್(52) ಬಂಧಿಸಲಾಗಿದೆ. ಬಳಿಕ ಸ್ಟೇಷನ್ ಬೇಲ್ ನೀಡಿ ಆರೋಪಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಪ್ರಕರಣದ ಬಗ್ಗೆ ಐಜೂರು ಠಾಣೆ ಪೊಲೀಸರಿಂದ ತನಿಖೆ ಮುಂದುವರಿದಿದೆ.

IPL 2026: ತವರಿನಲ್ಲಿ ಹೈದರಾಬಾದ್ ಮಣಿಸಿ RCB ಶುಭಾರಂಭ: ಕೊಹ್ಲಿ ಸಿಡಿಲಬ್ಬರಕ್ಕೆ ಪಾಕ್ ದಾಂಡಿಗನ ವಿಶ್ವ ದಾಖಲೆ ಧೂಳೀಪಟ!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ 19ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡವನ್ನು ಸುಲಭವಾಗಿ ಮಣಿಸಿದ RCB ಗೆಲುವಿನ ಶುಭಾರಂಭ ಮಾಡಿದೆ.

ತವರಿನಲ್ಲಿ ಬಲಿಷ್ಠ ಬ್ಯಾಟಿಂಗ್‌ ವಿಭಾಗವನ್ನು ಹೊಂದಿದ್ದ ಎಸ್​ಆರ್​ಹೆಚ್ ತಂಡವನ್ನು ಮಕಾಡೆ ಮಲಗಿಸಿದ ಆರ್​ಸಿಬಿ ಕೇವಲ 15.4 ಓವರ್​ಗಳಲ್ಲಿ 202 ರನ್ ಬೆನ್ನಟ್ಟಿ ಜಯದ ನಗೆ ಬೀರಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸನ್​ರೈಸರ್ಸ್​ ಹೈದರಾಬಾದ್ 201 ರನ್ ಕಲೆಹಾಕಿತು. ಗೆಲುವಿಗೆ 202 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ, ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಸುಲಭ ಜಯ ದಾಖಲಿಸಿತು. ಈ ಮೂಲಕ ಆರ್​ಸಿಬಿ ಮೊದಲ ಪಂದ್ಯದಲ್ಲೇ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 200 ಕ್ಕೂ ಹೆಚ್ಚು ರನ್ ಚೇಸ್ ಮಾಡಿದ ದಾಖಲೆ ಬರೆಯಿತು.

ಪಂದ್ಯದಲ್ಲಿ ಆರ್​ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 69 ರನ್ ಬಾರಿಸಿ ಮಿಂಚಿದ್ದರು. ಈ 69 ರನ್​ಗಳೊಂದಿಗೆ ಕಿಂಗ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದಾರೆ.

ಇದಕ್ಕೂ ಮುನ್ನ ಆರನೇ ಸ್ಥಾನದಲ್ಲಿ ಪಾಕಿಸ್ತಾನದ ಬ್ಯಾಟರ್ ಶೊಯೆಬ್ ಮಲಿಕ್ ಕಾಣಿಸಿಕೊಂಡಿದ್ದರು. ಇದೀಗ ಮಲಿಕ್ ಅವರನ್ನು ಹಿಂದಿಕ್ಕುವಲ್ಲಿ ಕೊಹ್ಲಿ ಯಶಸ್ವಿಯಾಗಿದ್ದಾರೆ. ಶೊಯೆಬ್ ಮಲಿಕ್ ಟಿ20 ಕ್ರಿಕೆಟ್​ನಲ್ಲಿ ಈವರೆಗೆ 515 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 10665 ಎಸೆತಗಳನ್ನು ಎದುರಿಸಿರುವ ಅವರು ಒಟ್ಟು 13571 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್​ಗಳಿಸಿ ಪಾಕ್ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಇದೀಗ ಕೇವಲ 398 ಟಿ20 ಇನಿಂಗ್ಸ್​ಗಳಲ್ಲಿ ವಿರಾಟ್ ಕೊಹ್ಲಿ 13,612 ರನ್​ಗಳಿಸಿದ್ದಾರೆ. ಈ ಮೂಲಕ ಶೊಯೆಬ್ ಮಲಿಕ್ ಅವರನ್ನು ಹಿಂದಿಕ್ಕಿ ಕಿಂಗ್ ಕೊಹ್ಲಿ ಟಿ20 ರನ್ ಸರದಾರರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ.

ಅಷ್ಟೇ ಅಲ್ಲದೆ ಟಿ20 ಇತಿಹಾಸದಲ್ಲೇ ಅತೀ ಹೆಚ್ಚು ರನ್​ಗಳಿಸಿದ ವಿಶ್ವ ದಾಖಲೆ ಬರೆಯಲು ಮುನ್ನುಗ್ಗುತ್ತಿದ್ದಾರೆ.

ಗೋಲ್ಡ್ ಪ್ರಿಯರಿಗೆ ಶಾಕ್: ಚಿನ್ನದ ಬೆಲೆ ಭರ್ಜರಿ ಏರಿಕೆ, ಇಂದಿನ ದರಪಟ್ಟಿ ಇಲ್ಲಿದೆ!

0

ಈ ವಾರಾಂತ್ಯದಲ್ಲಿ ಚಿನ್ನದ ಬೆಲೆ ಭರ್ಜರಿಯಾಗಿ ಏರಿಕೆಯಾಗಿದೆ.

ಕಳೆದ 3–4 ದಿನಗಳಿಂದ ಚಿನ್ನದ ಬೆಲೆ ಸತತವಾಗಿ ಹೆಚ್ಚುತ್ತಿದ್ದು, ವಾರಾಂತ್ಯದಲ್ಲಿ ಗ್ರಾಂಗೆ ಸುಮಾರು 310 ರೂ. ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲೂ 5 ರೂ. ಏರಿಕೆ ಕಂಡು ಬಂದಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,35,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,48,090 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,35,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ: 

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,809 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,575 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,107 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ: 

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,809 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,575 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್ ಹಾವಳಿ – ವೈರಲ್ ವಿಡಿಯೋ ಬೆನ್ನಲ್ಲೇ ಅಧಿಕಾರಿಗಳ ಕ್ರಮ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೆ ಭದ್ರತಾ ಲೋಪ ಬಹಿರಂಗವಾಗಿದ್ದು, ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ.

ಇತ್ತೀಚೆಗೆ ಡಿಜಿಪಿ ಅಲೋಕ್ ಕುಮಾರ್ ಅವರ ಕಟ್ಟುನಿಟ್ಟಿನ ಕ್ರಮಗಳಿಂದ ಜೈಲಿನೊಳಗಿನ ಅಕ್ರಮಗಳಿಗೆ ಕಡಿವಾಣ ಬೀಳುವ ನಿರೀಕ್ಷೆಯಿದ್ದರೂ, ಈ ಘಟನೆ ಮತ್ತೆ ಆತಂಕ ಹುಟ್ಟಿಸಿದೆ. ವೈರಲ್ ವಿಡಿಯೋದಲ್ಲಿ ಜೈಲಿನೊಳಗೆ ಮೊಬೈಲ್, ಟಿವಿ ಹಾಗೂ ನೆಟ್‌ಫ್ಲಿಕ್ಸ್ ಸೌಲಭ್ಯಗಳಿರುವುದಾಗಿ ಹೇಳಲಾಗಿದೆ.

ವಿಡಿಯೋ ವೈರಲ್ ಆದ ತಕ್ಷಣ ಅಧಿಕಾರಿಗಳು ಜೈಲಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, 9ನೇ ಬ್ಯಾರಕ್‌ನ ಡ್ರೈನೇಜ್ ಮಾರ್ಗದಲ್ಲಿ ಹಾಲಿನ ಪ್ಯಾಕೆಟ್‌ಗಳಲ್ಲಿ ಅಡಗಿಸಿಡಲಾಗಿದ್ದ ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿದ್ದಾರೆ.

ತನಿಖೆಯಲ್ಲಿ ದರ್ಶನ್, ಅಭಿಷೇಕ್ ಮತ್ತು ಎಂಡ್ರೋಸ್ ಎಂಬ ವಿಚಾರಣಾಧೀನ ಕೈದಿಗಳು ವಿಡಿಯೋ ಚಿತ್ರೀಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಇವರು ಬೇರೆ ಬ್ಯಾರಕ್‌ಗೆ ಸ್ಥಳಾಂತರ ಮಾಡಿದ ಹಿನ್ನೆಲೆಯಲ್ಲಿ ಅಸಮಾಧಾನದಿಂದ ಉದ್ದೇಶಪೂರ್ವಕವಾಗಿ ಡಿಜಿಪಿ ಹೆಸರನ್ನು ಬಳಸಿಕೊಂಡು ವಿಡಿಯೋ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರನ್ನೂ ಕ್ವಾರಂಟೈನ್ ಸೆಲ್‌ಗೆ ಸ್ಥಳಾಂತರಿಸಲಾಗಿದೆ.

ಘಟನೆ ಬೆನ್ನಲ್ಲೇ ವಾರ್ಡರ್‌ಗಳಾದ ಶಿವಾನಂದ ಕರ್ಲಬಟ್ಟಿ, ನಿರಂಜನ ಎ. ಕಾಮತ್ ಮತ್ತು ಹನುಮಂತಪ್ಪ ಹಡಪದ್ ಅವರನ್ನು ಅಮಾನತು ಮಾಡಲಾಗಿದೆ. ಜೊತೆಗೆ ಜೈಲರ್ ವಿರುದ್ಧವೂ ಶಿಸ್ತು ಕ್ರಮಕ್ಕೆ ಸೂಚನೆ ನೀಡಲಾಗಿದೆ.

ಕಾರ್ಕಳ-ಶಿರ್ವದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಗ್ಯಾಂಗ್ ಬಯಲು – ಪೊಲೀಸರ ಮೇಲೆಯೇ ದಾಳಿ ಯತ್ನ

ಉಡುಪಿ: ಕಾರ್ಕಳ ಮತ್ತು ಶಿರ್ವ ಪ್ರದೇಶಗಳಲ್ಲಿ ನಡೆದ ಎರಡು ವಿಭಿನ್ನ ಘಟನೆಗಳಲ್ಲಿ ಪೊಲೀಸರ ಮೇಲೆ ಕಾರು ಹರಿಸಲು ಯತ್ನಿಸಿದ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಜಾಲದಲ್ಲಿ ತೊಡಗಿದ್ದ ಐವರನ್ನು ಬಂಧಿಸುವ ಮೂಲಕ ದೊಡ್ಡ ಜಾಲವನ್ನು ಪೊಲೀಸರು ಬಯಲು ಮಾಡಿದ್ದಾರೆ.

ಕಾರ್ಕಳದ ಹಂಚಿಕಟ್ಟೆ ಸಮೀಪ ಸಂಶಯಾಸ್ಪದ ಕಾರನ್ನು ತಡೆಹಿಡಿಯಲು ಯತ್ನಿಸಿದ ವೇಳೆ, ಆರೋಪಿಗಳು ವಾಹನವನ್ನು ನಿಲ್ಲಿಸದೆ ಪೊಲೀಸರ ಮೇಲೆಯೇ ಹರಿಸಲು ಯತ್ನಿಸಿದ್ದು ಗಂಭೀರ ಆರೋಪವಾಗಿದೆ.

ನಂತರ ಶಿರ್ವ ಪ್ರದೇಶದಲ್ಲಿ ಅದೇ ಕಾರನ್ನು ತಡೆಹಿಡಿಯಲು ಪೊಲೀಸರು ಪ್ರಯತ್ನಿಸಿದಾಗ ಚಾಲಕ ಅಧಿಕಾರಿಯನ್ನು ತಳ್ಳಿ ಪರಾರಿಯಾಗಲು ಯತ್ನಿಸಿದ್ದಾನೆ. ಕೊನೆಗೆ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸುಧರ್ಷನ್ ಶೆಟ್ಟಿ (29), ಕಾರ್ತವ್ಯ ಶೆಟ್ಟಿ (27), ಅರುಣ್ ಶೆಟ್ಟಿ (29), ತೇಜಸ್ (28) ಮತ್ತು ಪ್ರಜ್ವಲ್ ಶೆಟ್ಟಿ (29) ಎಂದು ಗುರುತಿಸಲಾಗಿದೆ. ತನಿಖೆಯಲ್ಲಿ ಇವರು ಸಂಘಟಿತ ಕ್ರಿಕೆಟ್ ಬೆಟ್ಟಿಂಗ್ ಮೂಲಕ ಜನರನ್ನು ವಂಚಿಸುತ್ತಿದ್ದ ಅಂಶ ಬಹಿರಂಗವಾಗಿದೆ.

ಈ ಪ್ರಕರಣವು ಅಕ್ರಮ ಬೆಟ್ಟಿಂಗ್ ಜಾಲದ ವಿರುದ್ಧ ಪೊಲೀಸರ ಕಠಿಣ ಕ್ರಮಕ್ಕೆ ಉದಾಹರಣೆಯಾಗಿದೆ.

error: Content is protected !!