Home Blog

ಅಮೆರಿಕದಲ್ಲಿ ಅಕ್ರಮ ವಾಸ: 30 ಭಾರತೀಯ ಟ್ರಕ್ ಚಾಲಕರ ಬಂಧನ, ಗಡೀಪಾರಿಗೆ ಸಿದ್ಧತೆ

ನ್ಯೂಯಾರ್ಕ್: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದು ವಾಣಿಜ್ಯ ಟ್ರಕ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಸುಮಾರು 30 ಭಾರತೀಯರನ್ನು ಫೆಡರಲ್ ಅಧಿಕಾರಿಗಳು ಬಂಧಿಸಿದ್ದು, ಶೀಘ್ರದಲ್ಲೇ ಅವರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಇಲಾಖೆ (CBP) ತಿಳಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಅಧಿಕಾರಿಗಳು, ಮೇ 11ರಿಂದ 15ರವರೆಗೆ ಅರಿಜೋನಾದ ಯುಮಾ ಗಡಿ ವಲಯದಲ್ಲಿ ನಡೆಸಲಾದ ‘ಆಪರೇಷನ್ ಚೆಕ್‌ಮೇಟ್’ ಕಾರ್ಯಾಚರಣೆಯ ವೇಳೆ ಒಟ್ಟು 52 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಬಂಧಿತರ ಪೈಕಿ 36 ಮಂದಿ ವಾಣಿಜ್ಯ ಸೆಮಿ-ಟ್ರಕ್‌ಗಳನ್ನು ಚಾಲನೆ ಮಾಡುತ್ತಿರುವುದು ಪತ್ತೆಯಾಗಿದೆ.

ಈ 36 ಟ್ರಕ್ ಚಾಲಕರಲ್ಲಿ 30 ಮಂದಿ ಭಾರತೀಯ ಮೂಲದವರಾಗಿದ್ದು, ಉಳಿದವರು ಮೆಕ್ಸಿಕೊ, ಎಲ್‌ ಸಾಲ್ವಡಾರ್ ಮತ್ತು ರಷ್ಯಾ ದೇಶಗಳಿಗೆ ಸೇರಿದವರಾಗಿದ್ದಾರೆ. ಇವರಲ್ಲಿ ಕೆಲವರು ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ವಾಷಿಂಗ್ಟನ್ ಹಾಗೂ ವರ್ಜೀನಿಯಾ ರಾಜ್ಯಗಳಲ್ಲಿ ನೀಡಲಾದ ವಾಣಿಜ್ಯ ಚಾಲನಾ ಪರವಾನಗಿಗಳನ್ನು ಹೊಂದಿದ್ದರೆ, ಕೆಲವರ ಬಳಿ ಯಾವುದೇ ಮಾನ್ಯ ಚಾಲನಾ ಪರವಾನಗಿಯೂ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಬಂಧಿತರ ಪೈಕಿ ಹಲವರು ಹಿಂದಿನ ಆಡಳಿತದ ಅವಧಿಯಲ್ಲಿ ಪಡೆದಿದ್ದ ಉದ್ಯೋಗ ದೃಢೀಕರಣ ದಾಖಲೆಗಳನ್ನು ಬಳಸಿಕೊಂಡು ಅಮೆರಿಕದಲ್ಲಿ ಉಳಿದುಕೊಂಡಿರುವುದು ಪತ್ತೆಯಾಗಿದೆ. ಆದರೆ ಆ ದಾಖಲೆಗಳ ಮಾನ್ಯತೆ ಈಗ ಮುಕ್ತಾಯಗೊಂಡಿರುವುದಾಗಿ ತಿಳಿಸಲಾಗಿದೆ.

ಫೆಡರಲ್ ಕಾನೂನುಗಳ ಪ್ರಕಾರ ಎಲ್ಲ ಬಂಧಿತರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಗಡೀಪಾರು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

‘ಆಪರೇಷನ್ ಚೆಕ್‌ಮೇಟ್’ ಕಾರ್ಯಾಚರಣೆಯ ಉದ್ದೇಶ ಅಮೆರಿಕದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ಹಾಗೂ ವಾಣಿಜ್ಯ ವಾಹನಗಳನ್ನು ಚಾಲನೆ ಮಾಡುತ್ತಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವುದಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದ್ದು, ಅಪಾಯಕಾರಿಯಾಗಿ ವಾಹನ ಚಾಲನೆ ಮಾಡುವ ಅಕ್ರಮ ವಲಸಿಗರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುಮಾ ಗಡಿ ವಲಯದ ಹಂಗಾಮಿ ಮುಖ್ಯ ಗಡಿ ಗಸ್ತು ಅಧಿಕಾರಿ ಡಸ್ಟಿನ್ ಕೌಡ್ಲ್ ಪ್ರತಿಕ್ರಿಯಿಸಿ, “ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ಉಂಟುಮಾಡುವ ಅಕ್ರಮ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವುದು ನಮ್ಮ ಆದ್ಯತೆ. ಸಮುದಾಯಗಳ ಸುರಕ್ಷತೆ ಹಾಗೂ ರಸ್ತೆ ಅಪಘಾತಗಳನ್ನು ತಡೆಗಟ್ಟಲು ನಮ್ಮ ಅಧಿಕಾರಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ವಾಣಿಜ್ಯ ಟ್ರಕ್ ಹಾಗೂ ಬಸ್‌ಗಳನ್ನು ಚಾಲನೆ ಮಾಡಲು ಅರ್ಹತೆ ಇಲ್ಲದ ವಿದೇಶಿ ನಾಗರಿಕರಿಗೆ ಪರವಾನಗಿ ಸಿಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.

ಕಾರಿನಲ್ಲಿ ಗರ್ಭಿಣಿ ಪತ್ನಿ ಇದ್ದಾಳೆಂದು ನಡುರಸ್ತೆಯಲ್ಲಿ ಯುವಕನ ಡ್ರಾಮಾ: ಪೊಲೀಸರ ತನಿಖೆಯಲ್ಲಿ ಬಯಲಾಯ್ತು ಸತ್ಯ!

ಬೆಂಗಳೂರು: ನಗರದಲ್ಲಿ ರಾಜ್ಯಪಾಲರ ವಿಐಪಿ ಸಂಚಾರದ ವೇಳೆ ಟ್ರಾಫಿಕ್ ತಡೆದ ಕಾರಣ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಅಡ್ಡಿಯಾಗಿದೆ ಎಂದು ಆರೋಪಿಸಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದ ಯುವಕನ ಪ್ರಕರಣ ಇದೀಗ ಸಂಪೂರ್ಣ ಹೊಸ ತಿರುವು ಪಡೆದುಕೊಂಡಿದೆ.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಎಎಲ್ (HAL) ಠಾಣೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪ್ರತಿಭಟನೆ ನಡೆಸಿದ್ದ ಮೋಹಿತ್ ಎಂಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲೇ ಘಟನೆ ಕುರಿತು ಹೇಳಲಾಗಿದ್ದ ‘ಗರ್ಭಿಣಿ ಪತ್ನಿ’ ವಿಚಾರವೇ ಸುಳ್ಳು ಎಂದು ಪೊಲೀಸರು ದೃಢಪಡಿಸಿದ್ದಾರೆ.

ವಿಚಾರಣೆ ವೇಳೆ ಮೋಹಿತ್ ನೀಡಿದ ಹೇಳಿಕೆಯ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಆತ ಕಾರಿನಲ್ಲಿ ಒಬ್ಬನೇ ಪ್ರಯಾಣಿಸುತ್ತಿದ್ದ. ವಿಐಪಿ ಮೂವ್‌ಮೆಂಟ್ ಹಿನ್ನೆಲೆಯಲ್ಲಿ ಇಸ್ರೋ ಜಂಕ್ಷನ್‌ನಲ್ಲಿ ಸುಮಾರು 15 ನಿಮಿಷ ಟ್ರಾಫಿಕ್‌ನಲ್ಲಿ ಸಿಲುಕಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.

ಟ್ರಾಫಿಕ್ ವಿಳಂಬದಿಂದ ಕೋಪಗೊಂಡು ತುರ್ತು ಪರಿಸ್ಥಿತಿ ಇದೆ ಎಂಬಂತೆ ತೋರಿಸಲು ತಾನು ಪತ್ನಿ ಗರ್ಭಿಣಿ ಎಂದು ಸುಳ್ಳು ಹೇಳಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾಗಿ ಆತ ಸ್ಪಷ್ಟಪಡಿಸಿದ್ದಾನೆ. ಪೊಲೀಸರ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಅಥವಾ ಉದ್ದೇಶ ಇರಲಿಲ್ಲವೆಂದು ಸಹ ಆತ ಹೇಳಿಕೆ ನೀಡಿದ್ದಾನೆ.

ಸದ್ಯಕ್ಕೆ ಮೋಹಿತ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ. ಪೊಲೀಸರು ಆತನಿಂದ ಲಿಖಿತ ಹೇಳಿಕೆ ಪಡೆದು ಕಠಿಣ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಸಾರ್ವಜನಿಕರು ಇಂತಹ ಘಟನೆಗಳಲ್ಲಿ ದೃಢೀಕರಿಸದ ಮಾಹಿತಿಯನ್ನು ನಂಬಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಇರಾನ್ ಜೊತೆ ಮಾತುಕತೆ ತ್ವರಿತಗತಿಯಲ್ಲಿ ಮುಂದುವರಿದಿದೆ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ, ಇರಾನ್ ಜೊತೆ ನಡೆಯುತ್ತಿರುವ ಮಾತುಕತೆಗಳು ವೇಗವಾಗಿ ಸಾಗುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಕದನ ವಿರಾಮ ಉಲ್ಲಂಘನೆಯ ಆರೋಪಗಳು ಕೇಳಿಬರುತ್ತಿದ್ದರೂ, ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜತಾಂತ್ರಿಕ ಪ್ರಯತ್ನಗಳು ಮುಂದುವರಿದಿವೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ‘ಟ್ರೂತ್ ಸೋಶಿಯಲ್’ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇಸ್ಲಾಮಿಕ್ ಗಣರಾಜ್ಯ ಇರಾನ್ ಜೊತೆಗಿನ ಮಾತುಕತೆಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಕಡಿಮೆ ಮಾಡುವ ಉದ್ದೇಶದಿಂದ ಎರಡೂ ದೇಶಗಳ ಅಧಿಕಾರಿಗಳು ಸಂವಾದ ನಡೆಸುತ್ತಿರುವಾಗಲೇ, ಹಲವು ದಾಳಿಗಳು ನಡೆಯುತ್ತಿರುವುದು ಕದನ ವಿರಾಮದ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಿರಂತರ ದಾಳಿಗಳಿಂದ ಯುದ್ಧವಿರಾಮ ಪದೇಪದೇ ಹಿನ್ನಡೆ ಅನುಭವಿಸುತ್ತಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ಮಾತುಕತೆಗಳು ಅಂತಿಮ ಒಪ್ಪಂದದ ಹಂತಕ್ಕೆ ಎಷ್ಟು ಹತ್ತಿರದಲ್ಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಯಾವುದೇ ಹೊಸ ದಾಳಿ ಸಂವಾದ ಪ್ರಕ್ರಿಯೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿರುವುದಾಗಿ ಟ್ರಂಪ್ ತಿಳಿಸಿದ್ದಾರೆ. “ನೆತನ್ಯಾಹು ಅವರೊಂದಿಗೆ ನಡೆದ ಚರ್ಚೆ ಅತ್ಯಂತ ಫಲಪ್ರದವಾಗಿತ್ತು. ಬೈರುತ್‌ಗೆ ತೆರಳಲು ಸಜ್ಜಾಗಿದ್ದ ಸೈನಿಕರನ್ನು ಹಿಂತಿರುಗಿಸಲಾಗಿದೆ. ಅಲ್ಲಿಗೆ ಯಾವುದೇ ಪಡೆಗಳನ್ನು ಕಳುಹಿಸಲಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಹೆಜ್ಬೊಲ್ಲಾ ಪ್ರತಿನಿಧಿಗಳೊಂದಿಗೂ ಸಂಪರ್ಕ ಸಾಧಿಸಿರುವುದಾಗಿ ತಿಳಿಸಿರುವ ಟ್ರಂಪ್, “ಎಲ್ಲ ರೀತಿಯ ದಾಳಿಗಳನ್ನು ನಿಲ್ಲಿಸಲು ಅವರು ಒಪ್ಪಿಕೊಂಡಿದ್ದಾರೆ. ಇಸ್ರೇಲ್ ಅವರ ಮೇಲೆ ದಾಳಿ ನಡೆಸುವುದಿಲ್ಲ ಮತ್ತು ಅವರು ಕೂಡ ಇಸ್ರೇಲ್ ವಿರುದ್ಧ ದಾಳಿ ನಡೆಸುವುದಿಲ್ಲ ಎಂಬ ಭರವಸೆ ನೀಡಿದ್ದಾರೆ” ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಎನ್‌ಬಿಸಿ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದ ಟ್ರಂಪ್, ಮಾತುಕತೆಗಳನ್ನು ಸ್ಥಗಿತಗೊಳಿಸುವ ಕುರಿತು ಯಾವುದೇ ಅಧಿಕೃತ ಮಾಹಿತಿ ತಮಗೆ ಲಭ್ಯವಾಗಿಲ್ಲ ಎಂದು ತಿಳಿಸಿದ್ದರು. ಅವರು ಮಾತುಕತೆ ಮುಗಿಸಲು ನಿರ್ಧರಿಸಿದರೂ ಅದು ಅವರ ಆಯ್ಕೆ ಎಂದು ಹೇಳಿದ್ದರು.

ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಪರಸ್ಪರ ದಾಳಿಗಳು ನಡೆದಿರುವ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳಿನಿಂದ ಜಾರಿಯಲ್ಲಿದ್ದ ಕದನ ವಿರಾಮ ಒಪ್ಪಂದಕ್ಕೆ ಧಕ್ಕೆ ಉಂಟಾಗಿದೆ. ಯುದ್ಧವಿರಾಮ ಜಾರಿಯಲ್ಲಿದ್ದರೂ, ಲೆಬನಾನ್ ಪ್ರದೇಶದಲ್ಲಿ ಇಸ್ರೇಲ್ ತನ್ನ ಸೇನಾ ಕಾರ್ಯಾಚರಣೆಗಳನ್ನು ಮುಂದುವರಿಸಿದೆ.

ವಾರಾಂತ್ಯದಲ್ಲಿ ಇಸ್ರೇಲ್ ಪಡೆಗಳು ಲೆಬನಾನ್ ಒಳಭಾಗದಲ್ಲಿ ಹಲವು ಕಾರ್ಯಾಚರಣೆಗಳನ್ನು ನಡೆಸಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಸೂಕ್ಷ್ಮಗೊಳಿಸಿವೆ. ಸೋಮವಾರ ಹೆಜ್ಬೊಲ್ಲಾ ಪ್ರಭಾವಿತ ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ದಾಳಿ ನಡೆಸಲು ನೆತನ್ಯಾಹು ಆದೇಶ ನೀಡಿದ್ದಾರೆ ಎನ್ನಲಾಗಿದೆ.

ಬೇರೆ ಪುರಾವೆಗಳಿಲ್ಲದಿದ್ದರೆ DNA ಪರೀಕ್ಷೆ ಅಗತ್ಯ: ಪಿತೃತ್ವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟನೆ

ನವದೆಹಲಿ: ಪಿತೃತ್ವಕ್ಕೆ ಸಂಬಂಧಿಸಿದ ವಿವಾದಗಳಲ್ಲಿ ಡಿಎನ್‌ಎ ಪರೀಕ್ಷೆಯ ಮಹತ್ವದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಸತ್ಯಾಂಶವನ್ನು ತಿಳಿಯಲು ಡಿಎನ್‌ಎ ಪರೀಕ್ಷೆಯೇ ಏಕೈಕ ಮಾರ್ಗವಾಗಿದ್ದು, ಬೇರೆ ಯಾವುದೇ ದೃಢವಾದ ಪುರಾವೆಗಳು ಲಭ್ಯವಿಲ್ಲದಿದ್ದರೆ ನ್ಯಾಯಾಲಯಗಳು ಡಿಎನ್‌ಎ ಪರೀಕ್ಷೆಗೆ ಆದೇಶಿಸಬಹುದೆಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ತಾನು ಜೈವಿಕವಾಗಿ ಯಾರ ಮಗ ಎಂಬುದನ್ನು ತಿಳಿದುಕೊಳ್ಳಲು ಕಾನೂನು ಹೋರಾಟ ನಡೆಸುತ್ತಿರುವ 26 ವರ್ಷದ ಯುವಕನ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್.ಕೆ. ಸಿಂಗ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣದಲ್ಲಿ ಪಿತೃತ್ವವನ್ನು ನಿರ್ಧರಿಸಲು ಡಿಎನ್‌ಎ ಪರೀಕ್ಷೆ ನಡೆಸುವಂತೆ ಛತ್ತೀಸ್‌ಗಢದ ಬಸ್ನಾ ನ್ಯಾಯಾಲಯ ಮತ್ತು ಹೈಕೋರ್ಟ್ ನೀಡಿದ್ದ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೆಳ ನ್ಯಾಯಾಲಯಗಳ ಆದೇಶವನ್ನು ಎತ್ತಿಹಿಡಿದಿದೆ.

ಪ್ರತಿವಾದಿಯಾಗಿರುವ ವ್ಯಕ್ತಿ, ತನ್ನನ್ನು ಡಿಎನ್‌ಎ ಮಾದರಿ ನೀಡುವಂತೆ ಬಲವಂತಪಡಿಸಲಾಗದು ಹಾಗೂ ಈ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆಯ ಅಗತ್ಯವಿಲ್ಲ ಎಂದು ವಾದಿಸಿದ್ದರು. ಆದರೆ ನ್ಯಾಯಾಲಯ, ಪ್ರಕರಣದ ತೀರ್ಮಾನಕ್ಕೆ ಡಿಎನ್‌ಎ ಪರೀಕ್ಷೆಯ ಫಲಿತಾಂಶವೇ ನಿರ್ಣಾಯಕವಾಗಿರುವಾಗ ಅದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ನ್ಯಾಯಪೀಠದ ಪ್ರಕಾರ, ಡಿಎನ್‌ಎ ಪರೀಕ್ಷೆಗೆ ಆದೇಶ ನೀಡಬೇಕೇ ಎಂಬುದನ್ನು ನಿರ್ಧರಿಸುವಾಗ ನ್ಯಾಯಾಲಯವು ಒಂದು ಪ್ರಮುಖ ಅಂಶವನ್ನು ಪರಿಗಣಿಸಬೇಕು. ಅಂದರೆ, ಡಿಎನ್‌ಎ ಪರೀಕ್ಷೆಯ ಮೂಲಕವೇ ಸತ್ಯಾಂಶವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆಯೇ ಮತ್ತು ಅದಕ್ಕೆ ಪರ್ಯಾಯವಾದ ಯಾವುದೇ ಪುರಾವೆಗಳು ಲಭ್ಯವಿಲ್ಲವೇ ಎಂಬುದನ್ನು ಪರಿಶೀಲಿಸಬೇಕು ಎಂದು ತಿಳಿಸಿದೆ.

ಈ ಪ್ರಕರಣದಲ್ಲಿ ಯುವಕನು ತಾನು ಪ್ರತಿವಾದಿಯ ಮಗ ಎಂದು ಘೋಷಿಸುವಂತೆ ಹಾಗೂ ಅವರ ಆಸ್ತಿಯಲ್ಲಿ ಹಕ್ಕು ನೀಡುವಂತೆ ಸಿವಿಲ್ ಮೊಕದ್ದಮೆ ಹೂಡಿರುವುದರಿಂದ ಪಿತೃತ್ವದ ಪ್ರಶ್ನೆ ಪ್ರಕರಣದ ಕೇಂದ್ರಬಿಂದುವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸತ್ಯ ತಿಳಿಯುವ ಹಕ್ಕು ಮುಖ್ಯ

ಗೌಪ್ಯತೆಯ ಹಕ್ಕಿನ ವಿಚಾರವನ್ನೂ ಪರಿಗಣಿಸಿದ ನ್ಯಾಯಪೀಠ, ಪ್ರತಿವಾದಿಯ ವೈಯಕ್ತಿಕ ಹಕ್ಕುಗಳಿಗಿಂತಲೂ ತನ್ನ ಜೀವನಪೂರ್ತಿ ಕಾಡುತ್ತಿರುವ ಪಿತೃತ್ವದ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕೆಂಬ ಯುವಕನ ಹಕ್ಕು ಈ ಪ್ರಕರಣದಲ್ಲಿ ಹೆಚ್ಚು ಮಹತ್ವದ್ದಾಗಿದೆ ಎಂದು ಹೇಳಿದೆ.

ಬಾಲ್ಯದಿಂದಲೂ ತನ್ನ ತಾಯಿ ಪ್ರತಿವಾದಿಯೇ ತಂದೆ ಎಂದು ಹೇಳುತ್ತಾ ಬಂದಿದ್ದು, ಆದರೆ ಆ ವ್ಯಕ್ತಿ ಅದನ್ನು ನಿರಾಕರಿಸುತ್ತಿರುವ ಕಾರಣ ಯುವಕನು ಸತ್ಯ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಈ ಪ್ರಶ್ನೆಗೆ ಉತ್ತರ ದೊರೆಯದಿದ್ದರೆ, ಅವನಿಗೆ ಸಿಗಬೇಕಾದ ಕಾನೂನುಬದ್ಧ ಹಕ್ಕುಗಳಿಂದ ವಂಚಿತನಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ

ಅರ್ಜಿದಾರ ಯುವಕನ ಪ್ರಕಾರ, 1999ರ ಸೆಪ್ಟೆಂಬರ್ 10ರಂದು ತನ್ನ ತಾಯಿ ಮತ್ತು ಪ್ರತಿವಾದಿ ವ್ಯಕ್ತಿಯ ನಡುವಿನ ಸಂಬಂಧದಿಂದ ತಾನು ಜನಿಸಿದ್ದಾನೆ. ಬಾಲ್ಯದಿಂದಲೂ ತಾಯಿ ಇದೇ ವ್ಯಕ್ತಿಯೇ ತನ್ನ ತಂದೆ ಎಂದು ಹೇಳುತ್ತಾ ಬಂದಿದ್ದರೂ, ಪ್ರತಿವಾದಿ ಪಿತೃತ್ವವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.

ಈ ಹಿಂದೆ ಯುವಕನ ತಾಯಿ ದಾಖಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ ಪ್ರತಿವಾದಿ ಖುಲಾಸೆಗೊಂಡಿದ್ದರು. ನಂತರ ಹಲವು ವರ್ಷಗಳ ಕಾಲ ಜೀವನಾಂಶ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಎರಡೂ ಕುಟುಂಬಗಳ ನಡುವೆ ಕಾನೂನು ಹೋರಾಟ ನಡೆದಿತ್ತು.

ಬಳಿಕ ಯುವಕನು ತನ್ನ ಪಿತೃತ್ವವನ್ನು ಕಾನೂನುಬದ್ಧವಾಗಿ ಘೋಷಿಸುವಂತೆ ಹಾಗೂ ಆಸ್ತಿಯಲ್ಲಿ ಪಾಲು ನೀಡುವಂತೆ ಸಿವಿಲ್ ದಾವೆ ಹೂಡಿದ್ದ. ಪ್ರಕರಣದ ಸತ್ಯಾಂಶ ನಿರ್ಧರಿಸಲು ಡಿಎನ್‌ಎ ಪರೀಕ್ಷೆಯೇ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಪರೀಕ್ಷೆಗೆ ಆದೇಶಿಸಿದ್ದವು. ಇದೀಗ ಸುಪ್ರೀಂ ಕೋರ್ಟ್ ಕೂಡ ಆ ಆದೇಶವನ್ನು ಎತ್ತಿಹಿಡಿದು, ಡಿಎನ್‌ಎ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಪ್ರಕರಣದ ಮುಂದಿನ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದೆ.

“ಮಧು ಅಭಿಷೇಕದ ನಂತರ ರಾಜಕೀಯ ಪಥ ಬದಲಾಯಿತೇ? ನಿಜವಾಯ್ತು ಪಂಚಮುಖಿ ದೇವಾಲಯದ ‘ಭವಿಷ್ಯ ನುಡಿ’

0

ರಾಯಚೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿರುವ ಬೆನ್ನಲ್ಲೇ, ರಾಯಚೂರು ತಾಲೂಕಿನ ಪಂಚಮುಖಿ ಆಂಜನೇಯ ದೇವಸ್ಥಾನ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದೆ. ಡಿ.ಕೆ. ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ದೇವಾಲಯದ ಹಿಂದಿನ ಭವಿಷ್ಯ ನುಡಿಗಳು ಮತ್ತೆ ಚರ್ಚೆಗೆ ಬಂದಿವೆ.

ಈ ದೇವಸ್ಥಾನದಲ್ಲಿ ಹಿಂದಿನಿಂದಲೂ ನಡೆದಿರುವ ಘಟನೆಗಳು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸುತ್ತಿವೆ. ಗುಂಡೂರಾವ್, ಬಂಗಾರಪ್ಪ, ವೀರಪ್ಪ ಮೊಯ್ಲಿ ಮತ್ತು ಯಡಿಯೂರಪ್ಪ ಅವರು ಇಲ್ಲಿ ಪೂಜೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿಗಳಾದ ಉದಾಹರಣೆಗಳನ್ನು ದೇವಾಲಯದ ಮೂಲ ಅರ್ಚಕರು ಉಲ್ಲೇಖಿಸುತ್ತಿದ್ದಾರೆ.

ಇದೇ ರೀತಿಯಲ್ಲಿ 2025ರ ಅಕ್ಟೋಬರ್‌ನಲ್ಲಿ ಡಿಸಿಎಂ ಆಗಿದ್ದ ಡಿ.ಕೆ. ಶಿವಕುಮಾರ್ ಅವರು ಪತ್ನಿಯೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ‘ಮಧು ಅಭಿಷೇಕ’ ಹಾಗೂ 42 ಶ್ಲೋಕಗಳ ವಿಶೇಷ ಪೂಜೆ ನೆರವೇರಿಸಿದ್ದರು. ಆ ವೇಳೆಲೇ ಅವರ ಭವಿಷ್ಯ ಕುರಿತು ದೇವಾಲಯದ ಅರ್ಚಕರು ನೀಡಿದ್ದ ಹೇಳಿಕೆಗಳು ಈಗ ಮತ್ತೆ ಸದ್ದು ಮಾಡುತ್ತಿವೆ.

“ಪಂಚಮುಖಿ ಪ್ರಾಣದೇವರ ಆಶೀರ್ವಾದದಿಂದಲೇ ಇಷ್ಟಾರ್ಥಗಳು ಈಡೇರುತ್ತವೆ” ಎಂದು ಹೇಳಿದ್ದ ಅರ್ಚಕರು, ಇದೀಗ ಡಿಕೆಶಿ ಸಿಎಂ ಆಗಿರುವುದನ್ನು ದೈವ ಸಂಕೇತವಾಗಿ ನೋಡುತ್ತಿದ್ದಾರೆ. ದೇವಸ್ಥಾನದಲ್ಲಿ ಭಕ್ತರು ಸಂಭ್ರಮಾಚರಣೆ ನಡೆಸುತ್ತಿದ್ದು, ವಿಶೇಷ ಪೂಜೆಗಳು ಮುಂದುವರಿದಿವೆ.

ರಾಮ್ ಚರಣ್ ಜೊತೆ ಕಾಣಿಸಿಕೊಳ್ಳುವ ಈ ವ್ಯಕ್ತಿಗೆ ದಿನಕ್ಕೆ ₹4 ಲಕ್ಷ? ‘ಪೆದ್ದಿ’ ಪ್ರಚಾರದ ಹಿಂದಿನ ಸೀಕ್ರೆಟ್ ಬಯಲು!

‘ಪೆದ್ದಿ’ ಸಿನಿಮಾ ಬಿಡುಗಡೆಗೂ ಮುನ್ನ ರಾಮ್ ಚರಣ್ ಅವರ ಪ್ರತಿಯೊಂದು ಸಾರ್ವಜನಿಕ ಕಾರ್ಯಕ್ರಮದಲ್ಲೂ ಮತ್ತೊಬ್ಬ ವ್ಯಕ್ತಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಎತ್ತರದ ದೇಹ, ಕಪ್ಪು ಸೂಟ್, ಕಠಿಣ ಭದ್ರತೆ ಹಾಗೂ ಸ್ಟೈಲಿಶ್ ಹಾಜರಾತಿಯಿಂದ ವೈರಲ್ ಆಗಿರುವ ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಅಂತರರಾಷ್ಟ್ರೀಯ MMA ಫೈಟರ್ ಕೆವಿನ್ ಕುಂಟಾ.

ಗಾಂಬಿಯಾ ಮೂಲದ ಕೆವಿನ್ ಸದ್ಯ ಇಟಲಿಯಲ್ಲಿ ನೆಲೆಸಿದ್ದು, ವೃತ್ತಿಪರ ಫೈಟರ್ ಆಗಿ ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. ದೈಹಿಕ ಸಾಮರ್ಥ್ಯ ಮತ್ತು ಭದ್ರತಾ ಕೌಶಲ್ಯಗಳಿಂದ ಗುರುತಿಸಿಕೊಂಡಿರುವ ಅವರನ್ನು ‘ಪೆದ್ದಿ’ ಚಿತ್ರದ ಪ್ರಚಾರ ಅಭಿಯಾನಕ್ಕಾಗಿ ರಾಮ್ ಚರಣ್ ತಂಡ ವಿಶೇಷವಾಗಿ ಆಯ್ಕೆ ಮಾಡಿಕೊಂಡಿದೆ ಎನ್ನಲಾಗಿದೆ.

ಚಿತ್ರರಂಗದ ವಲಯಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಕೆವಿನ್ ಅವರಿಗೆ ದಿನಕ್ಕೆ 2 ಲಕ್ಷದಿಂದ 4 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ. ಈ ಮೊತ್ತವೇ ಈಗ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ರಾಮ್ ಚರಣ್ ಎಲ್ಲೇ ತೆರಳಿದರೂ ಕೆವಿನ್ ಅವರ ಸುತ್ತ ಭದ್ರತಾ ವಲಯ ನಿರ್ಮಿಸುತ್ತಾರೆ. ಅಭಿಮಾನಿಗಳ ಗುಂಪು, ಮಾಧ್ಯಮಗಳ ದಟ್ಟಣೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ನಡುವೆಯೂ ನಟನಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ.

ಇನ್ನೊಂದೆಡೆ, ‘ಪೆದ್ದಿ’ ಚಿತ್ರದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ಹಾಗೂ ಭಾರಿ ತಾರಾಗಣದೊಂದಿಗೆ ನಿರ್ಮಾಣವಾಗಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಜೂನ್ 4ರಂದು ಪ್ರೇಕ್ಷಕರ ಮುಂದೆ ಬರಲಿದೆ. ‘ಪೆದ್ದಿ’ ಚಿತ್ರದ ಪ್ರಚಾರದಷ್ಟೇ ರಾಮ್ ಚರಣ್ ಅವರ ಬಾಡಿಗಾರ್ಡ್ ಕೆವಿನ್ ಕುಂಟಾ ಕೂಡ ಈಗ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ.

‘ಸಿನಿಮಾಗೆ ಗುಡ್‌ಬೈ’ ಎಂದಿದ್ದ ನಟನಿಗೆ ಲೋಕೇಶ್ ಕಾಲ್: ಒಂದೇ ಕ್ಷಣದಲ್ಲಿ ಬದಲಾದ ಜಯಂ ರವಿ ನಿರ್ಧಾರ!

ಚೆನ್ನೈ: ವಿಚ್ಛೇದನ ಪ್ರಕರಣ ಮತ್ತು ವೈಯಕ್ತಿಕ ವಿವಾದಗಳಿಂದ ಸುದ್ದಿಯಲ್ಲಿದ್ದ ನಟ ಜಯಂ ರವಿ, ಚಿತ್ರರಂಗದಿಂದ ತಾತ್ಕಾಲಿಕವಾಗಿ ದೂರ ಉಳಿಯುವುದಾಗಿ ಘೋಷಿಸಿದ್ದರೂ ಇದೀಗ ಭರ್ಜರಿ ಕಮ್‌ಬ್ಯಾಕ್‌ಗೆ ಸಜ್ಜಾಗಿದ್ದಾರೆ. ತಮಿಳು ಚಿತ್ರರಂಗದ ಸ್ಟಾರ್ ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಸಿನಿಮ್ಯಾಟಿಕ್ ಯೂನಿವರ್ಸ್‌ಗೆ ಸೇರ್ಪಡೆಯಾಗುವ ಮೂಲಕ ಅವರು ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಲೋಕೇಶ್ ಕನಕರಾಜ್ ಬೆಂಬಲದಲ್ಲಿ ನಿರ್ಮಾಣವಾಗುತ್ತಿರುವ ‘ಬೆಂಜ್’ ಸಿನಿಮಾದ ಪ್ರಮುಖ ಪಾತ್ರಕ್ಕೆ ಜಯಂ ರವಿ ಆಯ್ಕೆಯಾಗಿದ್ದು, ಈ ಕುರಿತು ಅಧಿಕೃತ ಘೋಷಣೆ ಹೊರಬಿದ್ದಿದೆ. “ವೆಲ್ಕಮ್ ಟು ದಿ ಯೂನಿವರ್ಸ್” ಎಂದು ಲೋಕೇಶ್ ಹಂಚಿಕೊಂಡಿರುವ ಪೋಸ್ಟ್ ಇದೀಗ ವೈರಲ್ ಆಗಿದೆ.

ಕೆಲ ದಿನಗಳ ಹಿಂದಷ್ಟೇ ತಮ್ಮ ವೈಯಕ್ತಿಕ ಜೀವನದ ಒತ್ತಡದಿಂದ ಸಿನಿಮಾಗಳಿಂದ ದೂರ ಉಳಿಯುವುದಾಗಿ ಜಯಂ ರವಿ ಘೋಷಿಸಿದ್ದರು. ವಿಚ್ಛೇದನ ಪ್ರಕ್ರಿಯೆ ಮುಗಿಯುವವರೆಗೂ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ, ಈಗಿನ ಪರಿಸ್ಥಿತಿಯಲ್ಲಿ ನಟನೆಯತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದರು.

ಸೈಬರ್ ಬುಲ್ಲಿಂಗ್, ವೈಯಕ್ತಿಕ ಆರೋಪಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ನಿಂದನೆಗಳು ತಮ್ಮ ಮೇಲೆ ಪರಿಣಾಮ ಬೀರಿವೆ ಎಂದು ರವಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಅಗತ್ಯವಿದ್ದರೆ ನಿರ್ಮಾಪಕರ ಹಣವನ್ನೂ ಹಿಂದಿರುಗಿಸಿ ವಿರಾಮ ಪಡೆಯುವುದಾಗಿ ತಿಳಿಸಿದ್ದರು.

ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ತಮಿಳು ಚಿತ್ರರಂಗದ ಅತ್ಯಂತ ಯಶಸ್ವಿ ಫ್ರಾಂಚೈಸಿಯಾಗಿರುವ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಅವಕಾಶ ಸಿಕ್ಕಿರುವುದು ಜಯಂ ರವಿ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದೆ.

ಇದರ ಜೊತೆಗೆ ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರೊಂದಿಗಿನ ಸಂಬಂಧದ ಕುರಿತ ಚರ್ಚೆಗಳೂ ಮುಂದುವರಿದಿವೆ. ಆದರೆ ವೈಯಕ್ತಿಕ ವಿವಾದಗಳ ನಡುವೆಯೇ ವೃತ್ತಿಜೀವನಕ್ಕೆ ಆದ್ಯತೆ ನೀಡಿರುವ ಜಯಂ ರವಿ, ಇದೀಗ ಮತ್ತೆ ಬಿಗ್ ಸ್ಕ್ರೀನ್‌ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.

ಶ್ರೀದೇವಿ ಹಾದಿಯಲ್ಲೇ ಜಾನ್ವಿ ಕಪೂರ್? ತೆಲುಗು ಭಾಷಣ ಸೆನ್ಸೇಶನ್!

ಹೈದರಾಬಾದ್: ಜೂನ್ 4ರಂದು ಬಿಡುಗಡೆಯಾಗಲಿರುವ ‘ಪೆದ್ದಿ’ ಚಿತ್ರದ ಪ್ರಚಾರದ ವೇಳೆ ನಟಿ ಜಾನ್ವಿ ಕಪೂರ್ ನೀಡಿರುವ ಒಂದು ಭಾಷಣ ಇದೀಗ ಟಾಲಿವುಡ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ವೇದಿಕೆಯಲ್ಲಿ ನಿರರ್ಗಳ ತೆಲುಗಿನಲ್ಲಿ ಮಾತನಾಡಿದ ಜಾನ್ವಿ, ಕೇವಲ ಸಿನಿಮಾ ಪ್ರಚಾರ ಮಾಡಲಿಲ್ಲ; ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ದೀರ್ಘಕಾಲದ ನೆಲೆ ಕಟ್ಟುವ ತಮ್ಮ ಉದ್ದೇಶವನ್ನೂ ಪರೋಕ್ಷವಾಗಿ ಬಹಿರಂಗಪಡಿಸಿದರು.

ರಾಮ್ ಚರಣ್ ಜೊತೆಗೆ ನಟಿಸಿರುವ ‘ಪೆದ್ದಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಜಾನ್ವಿ, ಪ್ರೇಕ್ಷಕರನ್ನು ರಂಜಿಸುವುದೇ ತಮ್ಮ ಜೀವನದ ಉದ್ದೇಶ ಎಂದು ಹೇಳಿದರು. ಭಾಷಣದ ಪೂರ್ಣ ಅವಧಿಯಲ್ಲಿ ಅವರು ತೋರಿದ ಭಾಷಾ ಪಾಂಡಿತ್ಯ ಮತ್ತು ಆತ್ಮವಿಶ್ವಾಸ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು.

ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸಲು ಹೋರಾಟ ನಡೆಸುತ್ತಿರುವ ಜಾನ್ವಿ, ಈಗ ಪ್ಯಾನ್-ಇಂಡಿಯಾ ಸಿನಿಮಾಗಳತ್ತ ಸಂಪೂರ್ಣ ಗಮನ ಹರಿಸಿದ್ದಾರೆ. ಬಾಲಿವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದರೂ, ದಕ್ಷಿಣ ಭಾರತದ ಮಾರುಕಟ್ಟೆಯೇ ತಮ್ಮ ಭವಿಷ್ಯಕ್ಕೆ ದೊಡ್ಡ ಅವಕಾಶ ನೀಡಲಿದೆ ಎಂಬ ಲೆಕ್ಕಾಚಾರದಲ್ಲಿ ಅವರು ಮುಂದುವರಿಯುತ್ತಿದ್ದಾರೆ ಎನ್ನಲಾಗುತ್ತಿದೆ.

ತೆಲುಗು ಚಿತ್ರರಂಗದಲ್ಲಿ ಒಮ್ಮೆ ಅಗ್ರಸ್ಥಾನದಲ್ಲಿದ್ದ ಶ್ರೀದೇವಿ ಅವರ ವಾರಸುದಾರೆಯಾಗಿ ಜಾನ್ವಿ ಈಗ ಅದೇ ಹಾದಿಯಲ್ಲಿ ಸಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ತಾಯಿಯಂತೆ ಭಾಷೆ, ಸಂಸ್ಕೃತಿ ಮತ್ತು ಪ್ರೇಕ್ಷಕರನ್ನು ಅಪ್ಪಿಕೊಳ್ಳುವ ಮೂಲಕ ದಕ್ಷಿಣದಲ್ಲಿ ಶಾಶ್ವತ ಸ್ಥಾನ ನಿರ್ಮಿಸಿಕೊಳ್ಳಲು ಅವರು ಮುಂದಾಗಿದ್ದಾರೆ.

ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡರೆ, ಜಾನ್ವಿ ಕಪೂರ್ ಅವರ ವೃತ್ತಿಜೀವನದಲ್ಲಿ ಇದು ಮಹತ್ವದ ತಿರುವಾಗಲಿದೆ. ಈಗಾಗಲೇ ಹಲವು ದಕ್ಷಿಣ ಭಾರತೀಯ ನಿರ್ಮಾಪಕರು ಅವರತ್ತ ಗಮನ ಹರಿಸಿದ್ದು, ‘ಪೆದ್ದಿ’ ಫಲಿತಾಂಶದ ಬಳಿಕ ಜಾನ್ವಿಯ ಬೇಡಿಕೆ ಹೊಸ ಎತ್ತರ ತಲುಪುವ ಸಾಧ್ಯತೆ ಇದೆ.

ಸೂಟು-ಬೂಟು ಧರಿಸುತ್ತಿರುವುದಕ್ಕೆ ಸ್ಪಷ್ಟನೆ ಕೊಟ್ಟ ಸಿಎಂ ವಿಜಯ್

ಮುಖ್ಯಮಂತ್ರಿಯಾದ ಬಳಿಕ ತಮ್ಮ ಉಡುಪು ಶೈಲಿಯಿಂದಲೇ ಸುದ್ದಿಯಾಗಿದ್ದ ದಳಪತಿ ವಿಜಯ್ ಇದೀಗ ಅದೇ ವಿಚಾರಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಕಪ್ಪು-ಬಿಳಿ ಸೂಟ್ ಧರಿಸುವ ಕುರಿತು ಎದ್ದಿದ್ದ ಟೀಕೆಗಳಿಗೆ ಉತ್ತರಿಸಿದ ಅವರು, ವಿರೋಧ ಪಕ್ಷಗಳ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಿರುಚಿರಾಪಳ್ಳಿಯಲ್ಲಿ ನಡೆದ ಪಕ್ಷದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ವಿಜಯ್, “ನಾವು ಕೋಟ್ ಹಾಕಬಾರದೇ? ಅದು ಕೆಲವರ ಏಕಸ್ವಾಮ್ಯವಲ್ಲ. ನಾನು ಕಪ್ಪು-ಬಿಳಿ ಬಣ್ಣದ ಉಡುಪನ್ನು ಧರಿಸುವುದು ಪಾರದರ್ಶಕ ಆಡಳಿತದ ಸಂದೇಶಕ್ಕಾಗಿ” ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ವಿಜಯ್ ಕೋಟ್-ಸೂಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೇ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಆದರೆ ಅದಕ್ಕೆ ತೆರೆ ಎಳೆದಿರುವ ಅವರು, “ನನ್ನ ಆಡಳಿತವೂ ಈ ಉಡುಪಿನಂತೆ ಸ್ಪಷ್ಟ ಮತ್ತು ಸರಳವಾಗಿರುತ್ತದೆ” ಎಂದು ಹೇಳಿದರು.

ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ ಅವರು, “ಆರು ತಿಂಗಳು ಕಾಯುತ್ತೇವೆ ಎಂದವರು ಆರು ದಿನವೂ ಕಾಯಲಿಲ್ಲ. ಅಧಿಕಾರ ವಹಿಸಿಕೊಂಡ ಅರ್ಧ ಗಂಟೆಯಲ್ಲೇ ದೂರು ನೀಡಲು ಆರಂಭಿಸಿದರು” ಎಂದು ಟೀಕಿಸಿದರು.

“ತಮಿಳುನಾಡನ್ನು ವರ್ಷಗಳ ಕಾಲ ಆಳಿದ ಎರಡು ಪ್ರಮುಖ ಪಕ್ಷಗಳನ್ನು ಜನ ತಿರಸ್ಕರಿಸಿದ್ದಾರೆ. ನಾನು ಮುಖ್ಯಮಂತ್ರಿ ಸ್ಥಾನವನ್ನು ಅಧಿಕಾರವಾಗಿ ನೋಡುತ್ತಿಲ್ಲ. ಜನರ ಮನೆಯ ಅಣ್ಣ, ತಮ್ಮ ಹಾಗೂ ಸೇವಕನಾಗಿ ಕೆಲಸ ಮಾಡುತ್ತೇನೆ” ಎಂದು ಘೋಷಿಸಿದರು.

ವಿಜಯ್ ಅವರ ಈ ಭಾಷಣ ಹಾಗೂ ಸೂಟ್‌ ಕುರಿತ ಸ್ಪಷ್ಟನೆ ಇದೀಗ ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಇನ್ನೆರಡು ದಿನ ಕಾಯಿರಿ, ಎಲ್ಲವೂ ಗೊತ್ತಾಗಲಿದೆ: ಹೊಸ ರಾಜಕೀಯ ನಡೆ ಕುರಿತು ಕುತೂಹಲ ಮೂಡಿಸಿದ ಅಣ್ಣಾಮಲೈ

ಚೆನ್ನೈ: ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ರಾಜಕೀಯ ಭವಿಷ್ಯದ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಅವರು ಬಿಜೆಪಿಗೆ ರಾಜೀನಾಮೆ ನೀಡಿ ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡಲಿದ್ದಾರೆ ಎಂಬ ಊಹಾಪೋಹಗಳು ಜೋರಾಗಿರುವ ನಡುವೆಯೇ, ಅಣ್ಣಾಮಲೈ ನೀಡಿರುವ ಪ್ರತಿಕ್ರಿಯೆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ನವದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ, “ಸ್ವಲ್ಪ ದಿನ ಕಾಯಿರಿ. ಇನ್ನೆರಡು ದಿನಗಳಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಮಾತನಾಡೋಣ. ಆಗ ಎಲ್ಲವೂ ಸ್ಪಷ್ಟವಾಗುತ್ತದೆ” ಎಂದು ಹೇಳುವ ಮೂಲಕ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಯಾವುದೇ ಸ್ಪಷ್ಟನೆ ನೀಡದೇ ಸಸ್ಪೆನ್ಸ್ ಉಳಿಸಿಕೊಂಡರು.

ಅಣ್ಣಾಮಲೈ ಅವರ ದೆಹಲಿ ಪ್ರವಾಸ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಮೂಲಗಳ ಪ್ರಕಾರ, ಅವರು ಬಿಜೆಪಿ ರಾಷ್ಟ್ರೀಯ ನಾಯಕತ್ವದೊಂದಿಗೆ ಮಹತ್ವದ ಸಭೆ ನಡೆಸಲಿದ್ದು, ಪಕ್ಷದಲ್ಲಿ ತಮ್ಮ ಮುಂದಿನ ಪಾತ್ರ ಹಾಗೂ ಭವಿಷ್ಯದ ಕಾರ್ಯತಂತ್ರಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಿರಿಯ ನಾಯಕರನ್ನು ಭೇಟಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಹೊಸ ಪಕ್ಷ ಘೋಷಣೆ ಸಾಧ್ಯತೆ?

ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಗಳ ಪ್ರಕಾರ, ಜೂನ್ 4ರಂದು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಅಣ್ಣಾಮಲೈ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಮಧುರೈ ಹಾಗೂ ಕೊಯಮತ್ತೂರು ಸೇರಿದಂತೆ ಹಲವು ನಗರಗಳಲ್ಲಿ ಅಣ್ಣಾಮಲೈ ಅವರನ್ನು “2.0 ಅವತಾರ” ಎಂದು ಬಿಂಬಿಸುವ ಬೃಹತ್ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, ಅಭಿಮಾನಿಗಳು ಮತ್ತು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ತ್ರಿಭಾಷಾ ನೀತಿ ವಿಚಾರವೂ ಚರ್ಚೆಗೆ ಕಾರಣ

ಮಾಜಿ ಐಪಿಎಸ್ ಅಧಿಕಾರಿ ಆಗಿರುವ ಅಣ್ಣಾಮಲೈ ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ತ್ರಿಭಾಷಾ ನೀತಿ ಕುರಿತು ಬಹಿರಂಗವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೀತಿಯನ್ನು ಮರುಪರಿಶೀಲಿಸುವಂತೆ ಅವರು ಒತ್ತಾಯಿಸಿದ್ದು, ಬಿಜೆಪಿ ನಾಯಕತ್ವದ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎಂಬ ಊಹಾಪೋಹಗಳಿಗೆ ಇದೂ ಕಾರಣವಾಗಿತ್ತು.

ಎಐಎಡಿಎಂಕೆ ಮೈತ್ರಿ ಬಳಿಕ ನಾಯಕತ್ವ ಬದಲಾವಣೆ

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಮುಖವಾಗಿದ್ದ ಅಣ್ಣಾಮಲೈ ಅವರ ಆಕ್ರಮಣಕಾರಿ ರಾಜಕೀಯ ಶೈಲಿ ಸಾಕಷ್ಟು ಗಮನ ಸೆಳೆದಿತ್ತು. ಆದರೆ ನಂತರ ಎಐಎಡಿಎಂಕೆ ಮತ್ತೆ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಪ್ರಮುಖ ಷರತ್ತಾಗಿದ್ದ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸಲಾಗಿತ್ತು.

ಈ ಬೆಳವಣಿಗೆಗಳ ನಡುವೆ ಅಣ್ಣಾಮಲೈ ಬಿಜೆಪಿ ತೊರೆದು ಸ್ವತಂತ್ರ ರಾಜಕೀಯ ಹಾದಿ ಹಿಡಿಯಲಿದ್ದಾರೆಯೇ ಅಥವಾ ಪಕ್ಷದ ನಾಯಕತ್ವ ಅವರನ್ನು ಮನವೊಲಿಸಿ ಬಿಜೆಪಿಯಲ್ಲೇ ಮುಂದುವರಿಸಲಿದೆಯೇ ಎಂಬ ಪ್ರಶ್ನೆಗೆ ಮುಂದಿನ ಕೆಲ ದಿನಗಳಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ. ತಮಿಳುನಾಡು ರಾಜಕೀಯದ ಗಮನ ಈಗ ಸಂಪೂರ್ಣವಾಗಿ ಅಣ್ಣಾಮಲೈ ಅವರ ಮುಂದಿನ ಹೆಜ್ಜೆಯತ್ತ ನೆಟ್ಟಿದೆ.

error: Content is protected !!