Home Blog

ಲಗ್ನಪತ್ರಿಕೆ ಕೊಡಲು ಹೋದ ಯುವಕ ಜಾತ್ರೆಯಲ್ಲಿ ದುರ್ಮರಣ!

ಬೆಂಗಳೂರು: ಮದುವೆ ಸಂಭ್ರಮಕ್ಕೆ ತೆರಳಿದ್ದ ಯುವಕನೊಬ್ಬ ಜಾತ್ರೆಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಬೆಂಗಳೂರು ನಗರದ ಹುಳಿಮಾವುನಲ್ಲಿ ನಡೆದಿದೆ.

ಬನಶಂಕರಿ ನಿವಾಸಿ ಅಕ್ಷತ್ ಮೃತ ದುರ್ದೈವಿ. ಏಪ್ರಿಲ್ 29ರಂದು ವಿವಾಹವಾಗಬೇಕಿದ್ದ ಹಿನ್ನೆಲೆಯಲ್ಲಿ ಸಂಬಂಧಿಕರಿಗೆ ಲಗ್ನಪತ್ರಿಕೆ ನೀಡಲು ಯುವಕ ಹುಳಿಮಾವಿನಲ್ಲಿನ ಸಂಬಂಧಿಕರ ಮನೆಗೆ ತೆರಳಿದ್ದನು. ಈ ವೇಳೆ ಜಾತ್ರೆ ನಡೆಯುತ್ತಿದ್ದುದರಿಂದ ಸಂಬಂಧಿಕರು ಬೆಳಿಗ್ಗೆ ಹೋಗುವಂತೆ ಹೇಳಿ ಅಲ್ಲಿಯೇ ಉಳಿಸಿಕೊಂಡಿದ್ದರು.

ಇದರಂತೆ ಯುವಕ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವಕ್ಕೆ ತೆರಳಿ ಪಲ್ಲಕ್ಕಿ ನೋಡುತ್ತ ನಿಂತಿದ್ದಾಗ, ಪಲ್ಲಕ್ಕಿ ಹೊತ್ತ ಟ್ರಾಕ್ಟರ್ ಚಾಲಕನ ಅಜಾಗರೂಕತೆಯಿಂದ ಆತನ ಮೇಲೆ ವಾಹನ ಹರಿದುಹೋಗಿದೆ. ಗಂಭೀರವಾಗಿ ಗಾಯಗೊಂಡ ಅಕ್ಷತ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.

ಘಟನೆಯ ಬಳಿಕ ಟ್ರಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ದುರ್ಘಟನೆ ನಡೆದಿದ್ದರೂ ದೇವಾಲಯದ ಟ್ರಸ್ಟಿಗಳು ಸ್ಥಳಕ್ಕೆ ಆಗಮಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನಾ ಸ್ಥಳಕ್ಕೆ ಬೆಂಗಳೂರು ದಕ್ಷಿಣ ಸಂಚಾರಿ ವಿಭಾಗದ ಡಿಸಿಪಿ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ರಾಕ್ಟರ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ. ಪ್ರಾಥಮಿಕವಾಗಿ ಚಾಲಕ ಅಚಾನಕ್ ಬ್ರೇಕ್ ಹಾಕಿದ ವೇಳೆ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ರೀ-ಎಗ್ಜಾಮ್ ವೇಳಾಪಟ್ಟಿ ಬಿಡುಗಡೆ!

ಬೆಂಗಳೂರು: ರಾಜ್ಯದಲ್ಲಿ 2025-26ನೇ ಸಾಲಿನ ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಯ ಫಲಿತಾಂಶವನ್ನು ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ.

ಇದರೊಂದಿಗೆ ಫೇಲಾದ ವಿದ್ಯಾರ್ಥಿಗಳಿಗೆ ಎರಡನೇ ಪರೀಕ್ಷೆಯ ದಿನಾಂಕವನ್ನು ಸಹ ಘೋಷಿಸಲಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ದ್ವಿತೀಯ ಪಿಯುಸಿ ಪರೀಕ್ಷೆ-2 ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪರೀಕ್ಷೆಗಳು ಏಪ್ರಿಲ್ 30ರಿಂದ ಮೇ 13ರವರೆಗೆ ನಡೆಯಲಿವೆ. ಈ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಫಲಿತಾಂಶವನ್ನು ಸುಧಾರಿಸಿಕೊಳ್ಳಲು ಮತ್ತೊಂದು ಅವಕಾಶ ಕಲ್ಪಿಸಲಾಗಿದೆ.

ಪರೀಕ್ಷೆ-2 ಬಹುತೇಕ ವಿಷಯಗಳಿಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿದ್ದು, ಕೆಲವು ತಾಂತ್ರಿಕ ಹಾಗೂ ವೃತ್ತಿಪರ ವಿಷಯಗಳಿಗೆ ಮಧ್ಯಾಹ್ನ ವೇಳೆಯಲ್ಲಿ ಪರೀಕ್ಷೆಗಳು ನಿಗದಿಯಾಗಿವೆ. ಈ ಬಾರಿ ಮೂರನೇ ಪರೀಕ್ಷೆ (Exam-3) ನಡೆಸುವುದಿಲ್ಲ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ.

ಪರೀಕ್ಷೆ-2 ವೇಳಾಪಟ್ಟಿ:
ಏಪ್ರಿಲ್ 30 – ಕನ್ನಡ, ಅರೇಬಿಕ್
ಮೇ 02 – ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ರಸಾಯನಶಾಸ್ತ್ರ
ಮೇ 04 – ಇಂಗ್ಲೀಷ್
ಮೇ 05 – ವ್ಯವಹಾರ ಅಧ್ಯಯನ, ಗೃಹಶಾಸ್ತ್ರ, ಶಿಕ್ಷಣಶಾಸ್ತ್ರ
ಮೇ 06 – ಅರ್ಥಶಾಸ್ತ್ರ, ಜೀವಶಾಸ್ತ್ರ
ಮೇ 07 – ಇತಿಹಾಸ, ಗಣಿತ, ಭೌತಶಾಸ್ತ್ರ
ಮೇ 08 – ರಾಜ್ಯಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
ಮೇ 09 – ಹಿಂದಿ
ಮೇ 11 – ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 12 – ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೂಗರ್ಭಶಾಸ್ತ್ರ, ಮೂಲ ಗಣಿತ
ಮೇ 13 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮೇ 13 (ಮಧ್ಯಾಹ್ನ) – ಹಿಂದೂಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್, ಯಂತ್ರಾಂಶ, ಉಡುಪು ತಯಾರಿಕೆ, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ & ವೆಲ್‌ನೆಸ್

ಇದೇ ವೇಳೆ, ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 28ರಿಂದ ಮಾರ್ಚ್ 12ರವರೆಗೆ ರಾಜ್ಯಾದ್ಯಂತ 1217 ಕೇಂದ್ರಗಳಲ್ಲಿ ನಡೆದಿತ್ತು. ಒಟ್ಟು 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಸೈನ್ಸ್ ವಿಭಾಗದಲ್ಲಿ 2.92 ಲಕ್ಷ, ವಾಣಿಜ್ಯದಲ್ಲಿ 2.11 ಲಕ್ಷ ಹಾಗೂ ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡ: ತಪ್ಪಿದ ಭಾರೀ ದುರಂತ

0

ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನ  ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–1 ಬಿ ಒಳಗೆ ಇಂದು ಸಂಜೆ ಬೆಂಕಿ ಅವಘಡ ಸಂಭವಿಸಿದೆ.

ಟರ್ಮಿನಲ್‌ನ ನೆಲ ಮಹಡಿಯಲ್ಲಿ ಇರುವ ಕೇಬಲ್ ಟ್ರೇಗಳು ಮತ್ತು ಸ್ವಿಚ್ ಬಾಕ್ಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮುಂಬೈ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ರವೀಂದ್ರ ಅಂಬಲ್ಗೇಕರ್ ತಿಳಿಸಿದ್ದಾರೆ.

ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಅಗ್ನಿಶಾಮಕ ದಳ, ಪೊಲೀಸರು ಹಾಗೂ ವಾರ್ಡ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು. ತ್ವರಿತ ಕಾರ್ಯಾಚರಣೆಯಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

ಬೆಂಕಿ ಟರ್ಮಿನಲ್‌ನ ನೆಲ ಮಹಡಿಗೆ ಮಾತ್ರ ಸೀಮಿತವಾಗಿದ್ದು, ಹೆಚ್ಚಿನ ಹಾನಿ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಈ ಘಟನೆ ಹಿನ್ನೆಲೆಯಲ್ಲಿ ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಉಂಟಾದರೂ, ಪರಿಸ್ಥಿತಿ ಇದೀಗ ನಿಯಂತ್ರಣದಲ್ಲಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆ ಅಗಲೀಕರಣ ವೇಳೆ ದುರಂತ: ಗುಡ್ಡ ಕುಸಿದು ಮೂವರು ಕಾರ್ಮಿಕರು ದುರ್ಮರಣ!

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್‌ನಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯ ವೇಳೆ ಭಾರೀ ದುರ್ಘಟನೆ ಸಂಭವಿಸಿದ್ದು, ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಮೃತರನ್ನು ರಾಘವೇಂದ್ರ (37), ರಾಜು (30) ಮತ್ತು ಶಬ್ಬೀರ್ (40) ಎಂದು ಗುರುತಿಸಲಾಗಿದೆ.

ಕುಂದಾಪುರ–ಶಿವಮೊಗ್ಗ ಹೆದ್ದಾರಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯ ಸಂದರ್ಭ ಈ ಘಟನೆ ನಡೆದಿದ್ದು, ಒಬ್ಬ ಹೊರ ರಾಜ್ಯದ ಕಾರ್ಮಿಕ ಸಹಿತ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸುಮಂತ ಮತ್ತು ಪರಮೇಶ್ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ತಕ್ಷಣ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ ರಾತ್ರಿ ಸಮಯದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಹೊಸನಗರ ತಹಶೀಲ್ದಾರ್ ಭರತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ದುರ್ಘಟನೆಯ ಪರಿಣಾಮವಾಗಿ ಕುಂದಾಪುರ–ಶಿವಮೊಗ್ಗ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್: ಕಾರವಾರದಲ್ಲಿ ಮೀನುಗಾರಿಕಾ ಚಟುವಟಿಕೆ ಸಂಪೂರ್ಣ ಸ್ತಬ್ಧ

ಕಾರವಾರ: ಮಧ್ಯಪ್ರಾಚ್ಯ ಯುದ್ಧ ಸಂಘರ್ಷ ಹಾಗೂ ಹವಾಮಾನ ಬದಲಾವಣೆಯ ಪರಿಣಾಮವಾಗಿ ಮೀನುಗಾರರ ಆರ್ಥಿಕ ಚಟುವಟಿಕೆ ಮೇಲೆ ಭಾರೀ ಹೊಡೆತ ಬಿದ್ದಿದ್ದು, ಕಾರವಾರದಲ್ಲಿ ಮೀನುಗಾರಿಕೆ ಬಹುತೇಕ ಸ್ಥಗಿತಗೊಂಡಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಕೋಲ್ ಬಂದರಿನಲ್ಲಿ ಬೋಟುಗಳು ಲಂಗರು ಹಾಕಿರುವ ದೃಶ್ಯ ಕಂಡುಬರುತ್ತಿದ್ದು, ಮೀನುಗಾರಿಕಾ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದೆ.

ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ವಿದೇಶಗಳಿಗೆ ಮೀನು ರಫ್ತು ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಮೀನುಗಳ ದರ ಕುಸಿತ ಕಂಡಿದೆ. ಮತ್ತೊಂದೆಡೆ ಹವಾಮಾನ ಬದಲಾವಣೆಯಿಂದ ಸಮುದ್ರ ಅಬ್ಬರ ಹೆಚ್ಚಾಗಿ, ಆಳ ಸಮುದ್ರಕ್ಕೆ ತೆರಳಿದ್ದ ಬೋಟುಗಳು ಮರಳಿ ಬಂದರಿನಲ್ಲಿ ನಿಂತಿವೆ. ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಬೇಟೆ ನಿರೀಕ್ಷಿಸಿದ್ದ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದೇ ವೇಳೆ ಕಮರ್ಷಿಯಲ್ ಸಿಲಿಂಡರ್ ಕೊರತೆಯಿಂದ ಆಳ ಸಮುದ್ರ ಮೀನುಗಾರಿಕೆಗೂ ತೊಂದರೆ ಉಂಟಾಗಿದ್ದು, ದೀರ್ಘಕಾಲದ ಸಮುದ್ರ ಪ್ರಯಾಣಕ್ಕೂ ಅಡಚಣೆ ಎದುರಾಗಿದೆ. ಕಳೆದ ಒಂದು ವಾರದಿಂದ ಅರಬ್ಬಿ ಸಮುದ್ರದಲ್ಲಿ ಗಂಟೆಗೆ ಸುಮಾರು 30 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರಿಕೆ ಇನ್ನಷ್ಟು ಕುಂಠಿತವಾಗಿದೆ.

ದರ ಕುಸಿತ ಮತ್ತು ನಿರಂತರ ಸಮಸ್ಯೆಗಳ ಹಿನ್ನೆಲೆಯಲ್ಲಿ ಮೀನುಗಾರರು ಬೋಟುಗಳನ್ನು ಬಂದರಿನಲ್ಲಿ ನಿಲ್ಲಿಸಿದ್ದು, ಹೊರರಾಜ್ಯಗಳಿಂದ ಬಂದ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಆರಂಭಿಸಿದ್ದಾರೆ. ಜೂನ್ 1ರಿಂದ ಆರಂಭವಾಗಬೇಕಿದ್ದ ಮೀನುಗಾರಿಕೆ ಬಂದ್ ಅವಧಿ ಮುಂಚಿತವಾಗಿಯೇ ಪ್ರಾರಂಭವಾಗುವ ಆತಂಕವೂ ಮೀನುಗಾರರಲ್ಲಿ ಮೂಡಿದೆ. ಒಟ್ಟಿನಲ್ಲಿ ಕಾರವಾರ ಸೇರಿದಂತೆ ಜಿಲ್ಲೆಯ ಬಂದರುಗಳಲ್ಲಿ ಮೀನುಗಾರಿಕೆ ಚಟುವಟಿಕೆ ಕುಂಠಿತಗೊಂಡಿದ್ದು, ಮೀನುಗಾರರು ಗಂಭೀರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

 

ದ್ವಿತೀಯ ಪಿಯುಸಿ ರಿಸಲ್ಟ್: ಈ ಬಾರಿಯೂ ಬಾಲಕಿಯರೇ ಮೇಲುಗೈ! ಯಾವ ಜಿಲ್ಲೆ ಫಸ್ಟ್, ಯಾವುದು ಲಾಸ್ಟ್? ಇಲ್ಲಿದೆ ವಿವರ

ಬೆಂಗಳೂರು:-  ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಪ್ರಕಟಗೊಂಡಿದೆ. ನಂತರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಸುದ್ದಿಗೋಷ್ಠಿಯ ಮೂಲಕ ಫಲಿತಾಂಶ ಘೋಷಿಸಿದ್ದಾರೆ.

ಈ ಬಾರಿ ದಾಖಲೆ ಮಟ್ಟದ ಫಲಿತಾಂಶ ಕಂಡುಬಂದಿದ್ದು, 7,10,363 ವಿದ್ಯಾರ್ಥಿಗಳಲ್ಲಿ 6,32,200 ಮಂದಿ ಪರೀಕ್ಷೆಗೆ ಹಾಜರಾಗಿ, 5,46,698 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇಕಡಾ 86.48 ರಷ್ಟು ರಿಸಲ್ಟ್ ಬಂದಿದೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಇದರೊಂದಿಗೆ ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ.

ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಶೇಕಡಾ 88.07 ವಿದ್ಯಾರ್ಥಿನಿಯರು ಪಾಸಾದರೆ, ಶೇಕಡಾ 83.65 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ವಿಭಾಗಾವಾರು ಫಲಿತಾಂಶ ಹೀಗಿದೆ:

ವಿಜ್ಞಾನ – ಶೇ.91.69,
ವಾಣಿಜ್ಯ – ಶೇ.88.04,
ಕಲಾ – ಶೇ.72.86.

ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು, ಶೇಕಡಾ 96.39 ಫಲಿತಾಂಶ ಸಾಧಿಸಿದೆ.

ದಕ್ಷಿಣ ಕನ್ನಡ ಶೇಕಡಾ 96.35 ಫಲಿತಾಂಶದೊಂದಿಗೆ ಎರಡನೇ ಸ್ಥಾನದಲ್ಲಿದೆ.

ಯಾದಗಿರಿ ಶೇಕಡಾ 71.21 ಫಲಿತಾಂಶದಿಂದ ರಾಜ್ಯದಲ್ಲಿ ಕೊನೆಯ ಸ್ಥಾನವನ್ನು ಪಡೆದಿದೆ.

ಇತರ ಪ್ರಮುಖ ಜಿಲ್ಲೆಗಳ ಫಲಿತಾಂಶ ಹೀಗಿದೆ:

  1. ಉಡುಪಿ – 96.39%
  2. ದಕ್ಷಿಣ ಕನ್ನಡ – 96.35%
  3. ಕೊಡಗು – 92.34%
  4. ವಿಜಯಪುರ – 92%
  5. ಉತ್ತರ ಕನ್ನಡ – 91.78%
  6. ಬೆಂಗಳೂರು ಗ್ರಾಮಾಂತರ – 91.00%
  7. ಚಿಕ್ಕಮಗಳೂರು – 90.80%
  8. ಬೆಂಗಳೂರು ದಕ್ಷಿಣ – 90.55%
  9. ಚಿಕ್ಕಬಳ್ಳಾಪುರ – 90.24%
  10. ಬೆಂಗಳೂರು ಉತ್ತರ – 90.05%
  11. ಹಾಸನ – 89.71%
  12. ಮಂಡ್ಯ – 88.85%
  13. ರಾಮನಗರ – 87.90%
  14. ಕೋಲಾರ – 87.38%
  15. ಶಿವಮೊಗ್ಗ – 87.62%
  16. ತುಮಕೂರು – 86.89%
  17. ಕೊಪ್ಪಳ – 86.80%
  18. ಚಾಮರಾಜನಗರ – 84.68%
  19. ಮೈಸೂರು – 84.80%
  20. ಬೀದರ್ – 84.61%
  21. ಬಾಗಲಕೋಟೆ – 84.12%
  22. ಹಾವೇರಿ – 84.11%
  23. ಧಾರವಾಡ – 83.31%
  24. ಚಿಕ್ಕೋಡಿ – 83.10%
  25. ದಾವಣಗೆರೆ – 81.99%
  26. ಬೆಳಗಾವಿ – 80.32%
  27. ಚಿತ್ರದುರ್ಗ – 79.12%
  28. ಬಳ್ಳಾರಿ – 78.69%
  29. ಕಲಬುರಗಿ – 76.97%
  30. ಗದಗ – 76.65%
  31. ರಾಯಚೂರು – 74.09%
  32. ಯಾದಗಿರಿ – 71.21%.

ಚಾಮರಾಜನಗರ: ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಾಮಿ ಅರೆಸ್ಟ್!

ಚಾಮರಾಜನಗರ: ಮಹಿಳೆಯರ ಒಳ ಉಡುಪುಗಳನ್ನು ಕದ್ದು ವಿಕೃತಿ ಮೆರೆಯುತ್ತಿದ್ದ ಕಾಮುಕನನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಮೃತ್‌ ಬಿನ್ ಮಹೇಶ್ (24) ಬಂಧಿತ ಆರೋಪಿ. ಆರೋಪಿಯು ಮಹಿಳೆಯಂತೆ ಬಟ್ಟೆ ಧರಿಸಿ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಹೌಸಿಂಗ್ ಬೋರ್ಡ್ ಕಾಲೊನಿ, ಇಂದಿರಾನಗರ ಮತ್ತು ಕರಿನಂಜನಪುರ ಬಡಾವಣೆಗಳಲ್ಲಿ ಮಧ್ಯರಾತ್ರಿ ವೇಳೆ ಮನೆಯ ಮುಂಭಾಗದಲ್ಲಿ ಒಗೆದು ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ. ಈ ಬಗ್ಗೆ  ಬಂದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು.

ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದೇವೆ. ಈ ವಿಶೇಷ ತಂಡದ ಪತ್ತೆ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕ ಮುತ್ತುರಾಜು.ಎಂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ನೀವು ಈ ಕೆಲಸಗಳನ್ನು ಮಾಡೋ ಮುನ್ನ ನೂರು ಬಾರಿ ಯೋಚಿಸಿ, ಪಶ್ಚಾತಾಪ ಪಡ್ತೀರಾ ಎಚ್ಚರ!

0

ಜೀವನದಲ್ಲಿ ಯಶಸ್ಸು ಸಾಧಿಸಲು ಎಚ್ಚರಿಕೆಯಿಂದ ನಡೆದುಕೊಳ್ಳುವುದು ಬಹಳ ಮುಖ್ಯ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ.

ಅವರ ಪ್ರಕಾರ, ಯಶಸ್ವಿ ಜೀವನವನ್ನು ನಡೆಸಲು ನಾವು ಮಾಡುವ ಪ್ರತಿಯೊಂದು ಕೆಲಸದ ಬಗ್ಗೆ ನೂರು ಬಾರಿ ಯೋಚಿಸಿ, ಸಾವಿರ ಬಾರಿ ಪರಿಶೀಲಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಆತುರದಲ್ಲಿ ಅಥವಾ ಯೋಚಿಸದೇ ಮಾಡಿದ ಯಾವುದೇ ಕ್ರಮವು ನಮ್ಮ ಭವಿಷ್ಯವನ್ನು ಹಾಳು ಮಾಡಬಹುದು.

ಮಾತನಾಡುವ ಮೊದಲು ಯೋಚಿಸಬೇಕು: ಒಮ್ಮೆ ಮಾತನಾಡಿದ ಮಾತು ಹಿಂದಕ್ಕೆ ಪಡೆಯಲಾಗುವುದಿಲ್ಲ. ಯೋಚಿಸದೆ ಹೇಳಿದ ಮಾತುಗಳಿಂದ ಇತರರಿಗೆ ನೋವು ಉಂಟಾಗಬಹುದು ಮತ್ತು ಸಂಬಂಧಗಳಿಗೆ ಹಾನಿಯಾಗಬಹುದು. ಆದ್ದರಿಂದ ಮಾತನಾಡುವ ಮೊದಲು ನೂರು ಬಾರಿ ಯೋಚಿಸುವುದು ಅಗತ್ಯ ಎಂದು ಚಾಣಕ್ಯರು ಸೂಚಿಸಿದ್ದಾರೆ.

ಕೆಟ್ಟ ಸಹವಾಸದಿಂದ ದೂರವಿರಬೇಕು: ನಮ್ಮ ಜೊತೆಯಲ್ಲಿರುವವರು ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಾರೆ. ಕೆಟ್ಟ ಸಹವಾಸವು ದಾರಿ ತಪ್ಪಿಸಬಹುದು, ಭವಿಷ್ಯವನ್ನು ಹಾಳು ಮಾಡಬಹುದು. ಸ್ನೇಹಿತರು, ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಜಾಗರೂಕರಾಗಿರುವುದು ಅತ್ಯಾವಶ್ಯಕ.

ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ: ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಪರಿಶೀಲನೆ ಇಲ್ಲದೆ, ಕುಲಂಕುಷವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಆತುರದ ನಿರ್ಧಾರಗಳು ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು.

ಕೋಪದಲ್ಲಿ ನಿರ್ಧಾರಗಳೇ ಬಾರದಿವೆ: ಕೋಪ ಬಂದಾಗ ಯೋಚನಾ ಶಕ್ತಿ ಕಡಿಮೆಯಾಗುತ್ತದೆ. ಆ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ತಪ್ಪು ಹೋಗುವ ಸಾಧ್ಯತೆ ಹೆಚ್ಚು. ಆದ್ದರಿಂದ, ಕೋಪ ಕಡಿಮೆಯಾದ ಬಳಿಕವೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ಯೋಜನೆಗಳನ್ನು ಹಂಚಿಕೊಳ್ಳಬೇಡಿ: ಉತ್ಸಾಹ ಅಥವಾ ಆತುರದಲ್ಲಿ ನಿಮ್ಮ ಗುರಿ ಮತ್ತು ಯೋಜನೆಗಳನ್ನು ಎಲ್ಲರೊಂದಿಗೆ ಹಂಚಬಾರದು. ಇದರಿಂದ ಭವಿಷ್ಯದಲ್ಲಿ ಅಡೆತಡೆ ಉಂಟಾಗಬಹುದು ಮತ್ತು ಗುರಿ ಸಾಧಿಸಲು ತೊಂದರೆ ಎದುರಿಸಬಹುದು.

ಆಚಾರ್ಯ ಚಾಣಕ್ಯರ ಸಂದೇಶ ಸ್ಪಷ್ಟ: ಯಶಸ್ಸಿನ ರಹಸ್ಯ ಎಚ್ಚರಿಕೆಯಿಂದ, ಯೋಚನೆಯಿಂದ, ಮತ್ತು ತಾಳ್ಮೆಯಿಂದ ನಡೆದುಕೊಳ್ಳುವುದು. ಪ್ರತಿಯೊಂದು ಮಾತು, ನಿರ್ಧಾರ ಮತ್ತು ಸಹವಾಸ ನಮ್ಮ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ.

ಅಪ್ರಾಪ್ತೆ ಮೇಲಿನ ದೌರ್ಜನ್ಯ ಪ್ರಕರಣ: ಆರೋಪಿಗೆ 20 ವರ್ಷ ಜೈಲು, ₹7 ಲಕ್ಷ ದಂಡ!

0

ಮಂಡ್ಯ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 7 ಲಕ್ಷ ರೂ. ದಂಡ ವಿಧಿಸಿ ಮಂಡ್ಯದ ಹೆಚ್ಚುವರಿ ಸೆಷನ್ಸ್ ಮತ್ತು 2ನೇ ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದೆ.

ಮಂಡ್ಯ ನಗರದ ತಾವರಗೆರೆ ಬಡಾವಣೆಯ ನಿವಾಸಿ ವಾಯಿದ್ ಇಕ್ಬಾಲ್ ಪುತ್ರ ಅಖೀಬ್ ಆಲಂ ಉರ್ಫ್ ಶೇಖ್ ಅಖೀಬ್ ಆಲಂ ಶಿಕ್ಷೆಗೆ ಗುರಿಯಾದ ಆರೋಪಿ.

ಆರೋಪಿ ಬಾಲಕಿ ಶಾಲೆಗೆ ಹೋಗುವಾಗ ಮತ್ತು ಮರಳುವಾಗ ಅವಳನ್ನು ಹಿಂಬಾಲಿಸಿ, ಸ್ನೇಹ ಬೆಳೆಸಿ, ಪ್ರೀತಿಸುತ್ತಿದ್ದೇನೆ ಎಂದು ಹೇಳಿ ಬೆದರಿಕೆ ಹಾಕುತ್ತಿದ್ದನು. “ನನ್ನನ್ನು ಪ್ರೀತಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಒತ್ತಾಯಿಸುತ್ತಿದ್ದನು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

2023ರ ಜನವರಿ 27ರಂದು ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ಬೆಟ್ಟದ ದೇವಸ್ಥಾನದ ಹಿಂಭಾಗಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದನು.

ಈ ಘಟನೆ ಬಳಿಕ ಮನನೊಂದ ಬಾಲಕಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿ ಗರ್ಭಿಣಿಯಾಗಿದ್ದುದೂ ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಮಂಡ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ಎಚ್. ಆನಂದಕುಮಾರ್ ಅವರು ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ಬಳಿಕ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಬಿ. ದಿಲೀಪ್ ಕುಮಾರ್ ಅವರು ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 7 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಅಭಿಯೋಜಕ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದರು.

ಏಪ್ರಿಲ್ 11ರಂದು ಸಿಎಂ ಸಿದ್ದರಾಮಯ್ಯ ಬೀದರ್–ಕಲಬುರಗಿ ಪ್ರವಾಸ

ಬೀದರ್/ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಪ್ರಿಲ್ 11ರಂದು ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದಾರೆ.

ಅಂದು ಬೀದರ್‌ನಲ್ಲಿ ನಡೆಯಲಿರುವ 40ನೇ ಪತ್ರಕರ್ತರ ಸಮ್ಮೇಳನದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಬೀದರ್‌ನಿಂದ ಕಲಬುರಗಿಗೆ ಪ್ರಯಾಣಿಸಲಿದ್ದಾರೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನೂತನವಾಗಿ ನಿರ್ಮಿಸಿರುವ ಭೋಜಲಿಂಗೇಶ್ವರ ದೇವಸ್ಥಾನವನ್ನು ಅವರು ಲೋಕಾರ್ಪಣೆ ಮಾಡಲಿದ್ದಾರೆ. ನಂತರ ಸಂಜೆ 5 ಗಂಟೆಗೆ ಕೋಡಿ ಮಹಾಸಿದ್ದೇಶ್ವರ ಮಠಕ್ಕೆ ಭೇಟಿ ನೀಡಲಿದ್ದಾರೆ.

ದಿನದ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ ಬಳಿಕ, ಅವರು ರಾತ್ರಿ ಕಲಬುರಗಿಯಿಂದ ಬೆಂಗಳೂರಿಗೆ ಮರಳಲಿದ್ದಾರೆ.

error: Content is protected !!