ಕೊಪ್ಪಳ: ಪರಿಹಾರ ಹಣದ ವಿಚಾರವಾಗಿ ನಡೆದ ಗಲಾಟೆ ವೇಳೆ ರೈತರ ಶರ್ಟ್ ಕಾಲರ್ ಹಿಡಿದು ಎಳೆದಾಡಿ ಪಿಎಸ್ಐ ದರ್ಪ ತೋರಿದ್ದಾನೆ ಎಂಬ ಆರೋಪ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುತ್ತೂರ ಗ್ರಾಮದಲ್ಲಿ ಕೇಳಿಬಂದಿದೆ.
ಬೇವೂರ ಪೊಲೀಸ್ ಠಾಣೆಯ ಪಿಎಸ್ಐ ಗುರುರಾಜ್ ಅವರು ರೈತರಾದ ಪ್ರಕಾಶ್, ಶ್ರೀಕಾಂತ್ ಹಾಗೂ ವಿಜಯರೆಡ್ಡಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶುಕ್ರವಾರ ಸುಮಾರು 10 ಎಕರೆ ಜಮೀನಿನಲ್ಲಿ ಹೈ-ಟೆನ್ಶನ್ ವಿದ್ಯುತ್ ಮಾರ್ಗದ ನಾಲ್ಕು ಕಂಬಗಳನ್ನು ಅಳವಡಿಸುವ ಸಂಬಂಧ ಪರಿಹಾರ ಮೊತ್ತದ ವಿಚಾರವಾಗಿ ವಿವಾದ ಉಂಟಾಗಿತ್ತು. ರೈತರು 1.20 ಕೋಟಿ ರೂ. ಪರಿಹಾರ ನೀಡುವಂತೆ ಒತ್ತಾಯಿಸಿದ್ದು, ಅಳವಡಿಕೆ ಸಿಬ್ಬಂದಿ 40 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದರು ಎನ್ನಲಾಗಿದೆ.
ಪರಿಹಾರ ಮೊತ್ತದ ವಿಚಾರದಲ್ಲಿ ಒಪ್ಪಂದವಾಗದ ಹಿನ್ನೆಲೆಯಲ್ಲಿ ಜಮೀನಿನಲ್ಲಿ ವಾಗ್ವಾದ ಮತ್ತು ಗಲಾಟೆ ನಡೆದಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಪಿಎಸ್ಐ ಗುರುರಾಜ್ ಅವರು ಮೂವರು ರೈತರ ಶರ್ಟ್ ಕಾಲರ್ ಹಿಡಿದು ಎಳೆದುಕೊಂಡು ಹೋಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೇ ಪಿಎಸ್ಐ ಗುರುರಾಜ್ ಅವರು ಈ ಹಿಂದೆ ಕುಕನೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ದಲಿತ ಮುಖಂಡನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಅಮಾನತುಗೊಂಡಿದ್ದರು ಎನ್ನಲಾಗಿದೆ. ಕೆಲವೇ ದಿನಗಳ ಹಿಂದೆ ಬೇವೂರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದ ಅವರು, ಇದೀಗ ಮತ್ತೆ ರೈತರೊಂದಿಗೆ ಅನುಚಿತ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಘಟನೆ ಕುರಿತು ಉನ್ನತ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುವಂತೆ ರೈತರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

