Home Blog

IPL 2026: ಸೂಪರ್ ಓವರ್ ಥ್ರಿಲ್ಲರ್‌ನಲ್ಲಿ ಕೆಕೆಆರ್ ಗೆ ಗೆಲುವು: ಗೆಲ್ಲೋ ಪಂದ್ಯ ಕೈ ಚೆಲ್ಲಿದ ಲಕ್ನೋ!

0

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ‘ಸೂಪರ್’ ಜಯ ಸಾಧಿಸಿ ಪ್ಲೇಆಫ್‌ ರೇಸ್‌ನಲ್ಲಿ ಜೀವಂತವಾಗಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 7 ವಿಕೆಟ್‌ ನಷ್ಟಕ್ಕೆ 155 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಲಕ್ನೋ ತಂಡ 8 ವಿಕೆಟ್‌ ಕಳೆದುಕೊಂಡು ಸಮಬಲ ಸಾಧಿಸಿ ಪಂದ್ಯವನ್ನು ಟೈಗೆ ತಳ್ಳಿತು. ಕೊನೆಯ ಓವರ್‌ನಲ್ಲಿ 17 ರನ್‌ ಬೇಕಿದ್ದಾಗ ರೋಚಕ ಕ್ಷಣಗಳು ನಿರ್ಮಾಣವಾದವು. ನಿರ್ಣಾಯಕ ಕ್ಷಣದಲ್ಲಿ ನೋಬಾಲ್‌ಗಳ ಸಹಾಯದಿಂದ ಸಮೀಕರಣ ಬದಲಾಗಿದ್ದು, ಕೊನೆಯ ಎಸೆತಕ್ಕೆ 7 ರನ್‌ ಅಗತ್ಯವಿದ್ದಾಗ ಶಮಿ ಸಿಕ್ಸರ್‌ ಸಿಡಿಸಿ ಪಂದ್ಯವನ್ನು ಡ್ರಾಗೆ ಕೊಂಡೊಯ್ದರು.

ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ತಂಡ ಸಂಪೂರ್ಣ ವೈಫಲ್ಯ ಅನುಭವಿಸಿತು. ನಿಕೊಲಸ್ ಪೂರನ್ ಮೊದಲ ಎಸೆತದಲ್ಲೇ ಔಟಾದರೆ, ನಂತರ ರಿಷಬ್ ಪಂತ್ ಸಿಂಗಲ್‌ ಮಾತ್ರ ಕಲೆಹಾಕಿದರು. ಐಡೆನ್ ಮಾರ್ಕ್ರಾಮ್ ದೊಡ್ಡ ಶಾಟ್‌ಗೆ ಮುಂದಾಗಿ ವಿಕೆಟ್ ಒಪ್ಪಿಸಿದರು. ಈ ವೇಳೆ ಸುನಿಲ್ ನರೈನ್ ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡಿ ಎರಡು ವಿಕೆಟ್‌ ಕಬಳಿಸಿ ಲಕ್ನೋ ತಂಡವನ್ನು ಕೇವಲ 1 ರನ್‌ಗೆ ಸೀಮಿತಗೊಳಿಸಿದರು. ಗೆಲುವಿಗೆ 2 ರನ್ ಗುರಿ ಪಡೆದ ಕೆಕೆಆರ್ ಪರ ರಿಂಕು ಸಿಂಗ್ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಪಂದ್ಯದಲ್ಲಿ ಲಕ್ನೋ ತಂಡದ ಬ್ಯಾಟಿಂಗ್‌ ಮಿಶ್ರ ಪ್ರದರ್ಶನ ಕಂಡಿತು. ಐಡೆನ್ ಮಾರ್ಕ್ರಾಮ್ 31, ನಾಯಕ ರಿಷಬ್ ಪಂತ್ 42, ಆಯುಷ್ ಬದೋನಿ 24, ಹಿಮ್ಮತ್ ಸಿಂಗ್ 19 ರನ್ ಗಳಿಸಿದರೂ, ಇತರ ಆಟಗಾರರ ವೈಫಲ್ಯ ತಂಡಕ್ಕೆ ಹೊಡೆತ ನೀಡಿತು. ಮತ್ತೊಂದೆಡೆ ಕೆಕೆಆರ್ ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿದರೂ, ಕ್ಯಾಮರೂನ್ ಗ್ರೀನ್ ಮತ್ತು ರಿಂಕು ಸಿಂಗ್ ಜೋಡಿ ತಂಡವನ್ನು ಪುನಶ್ಚೇತನಗೊಳಿಸಿತು. ಗ್ರೀನ್ 34 ರನ್ ಗಳಿಸಿದರೆ, ರಿಂಕು ಸಿಂಗ್ 51 ಎಸೆತಗಳಲ್ಲಿ 83 ರನ್ ಸಿಡಿಸಿ ತಂಡದ ಮೊತ್ತ 150ರ ಗಡಿ ದಾಟಲು ನೆರವಾದರು. ವಿಶೇಷವಾಗಿ ಕೊನೆಯ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ ಸಿಡಿಸಿದ ರಿಂಕು ಅವರ ಸ್ಫೋಟಕ ಆಟವೇ ಪಂದ್ಯದಲ್ಲಿ ತಿರುವು ತಂದಿತು.

ನಮ್ಮ ಮೆಟ್ರೋದಲ್ಲಿ ನೆಟ್‌ವರ್ಕ್ ಸಮಸ್ಯೆ: ಆನ್‌ಲೈನ್ ಸೇವೆಗಳು ಸ್ಥಗಿತ, ಪ್ರಯಾಣಿಕರಿಗೆ ಸಂಕಷ್ಟ!

ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನೆಟ್‌ವರ್ಕ್ ಸಮಸ್ಯೆ ತೀವ್ರಗೊಂಡಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೆಟ್ರೋ ಒಳಭಾಗದಲ್ಲಿ ಮೊಬೈಲ್ ಸಿಗ್ನಲ್ ಸಿಗದೇ ಆನ್‌ಲೈನ್ ವ್ಯವಹಾರಗಳು ಅಸ್ತವ್ಯಸ್ತವಾಗಿವೆ.

ಲಕ್ಷಾಂತರ ಮಂದಿ ಪ್ರತಿದಿನ ಪ್ರಯಾಣಿಸುವ ಮೆಟ್ರೋದಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ವಿಶೇಷವಾಗಿ ಆರ್.ವಿ ರಸ್ತೆ ಮೆಟ್ರೋ ಸ್ಟೇಷನ್, ಜಯನಗರ ಸೇರಿದಂತೆ ಹಲವೆಡೆ ಸಿಗ್ನಲ್ ಸಮಸ್ಯೆ ತಲೆದೋರಿದೆ.

ಈ ಹಿನ್ನೆಲೆಯಲ್ಲಿ BMRCL ಪ್ರಯಾಣಿಕರಿಗೆ ನೋಟಿಸ್ ನೀಡಿದ್ದು, ಮೆಟ್ರೋ ನಿಲ್ದಾಣದ ಒಳಗೆ ಆನ್‌ಲೈನ್ ಪೇಮೆಂಟ್, ಬುಕ್ಕಿಂಗ್ ಅಥವಾ ಕಾರ್ಡ್ ಲೋಡಿಂಗ್ ಮಾಡಲು ಸಾಧ್ಯವಿಲ್ಲದ ಕಾರಣ, ಸ್ಟೇಷನ್ ಹೊರಗಡೆ ಈ ಕಾರ್ಯಗಳನ್ನು ಮುಗಿಸಿಕೊಳ್ಳುವಂತೆ ಸೂಚಿಸಿದೆ.

ನೆಟ್‌ವರ್ಕ್ ಇಲ್ಲದ ಕಾರಣ ಓಲಾ, ಊಬರ್ ಬುಕ್ಕಿಂಗ್ ಸೇರಿದಂತೆ ಹಲವು ಆನ್‌ಲೈನ್ ಸೇವೆಗಳು ಸ್ಥಗಿತಗೊಂಡಿದ್ದು, ಪ್ರಯಾಣಿಕರು ಸ್ಟೇಷನ್ ಹೊರಗೆ ಬಂದು ನೆಟ್‌ವರ್ಕ್ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸಮಸ್ಯೆ ಕುರಿತು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ತಕ್ಷಣವೇ ನೆಟ್‌ವರ್ಕ್ ವ್ಯವಸ್ಥೆ ಸುಧಾರಿಸುವಂತೆ ಆಗ್ರಹಿಸುತ್ತಿದ್ದಾರೆ.

IPL 2026: ತವರಲ್ಲೇ ಸೈಲೆಂಟ್ ಆದ ಚೆನ್ನೈ; ಗುಜರಾತ್​ಗೆ 8 ವಿಕೆಟ್​ ಜಯ

0

ಐಪಿಎಲ್ 2026ರ 37ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು MA ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಭರ್ಜರಿ ಜಯ ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಪವರ್‌ಪ್ಲೇನಲ್ಲಿ ಕೇವಲ 28 ರನ್ ಗಳಿಸಿದ CSK ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಒಳಗಾಯಿತು. ನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ಶಿವಂ ದುಬೆ ನಡುವೆ 59 ರನ್‌ಗಳ ಜೊತೆಯಾಟ ನಡೆದರೂ, ಇತರೆ ಬ್ಯಾಟರ್‌ಗಳಿಂದ ದೊಡ್ಡ ಕೊಡುಗೆ ಬರಲಿಲ್ಲ. ಅಂತಿಮವಾಗಿ CSK 20 ಓವರ್‌ಗಳಲ್ಲಿ 158 ರನ್‌ಗಳಿಗೆ ಸೀಮಿತವಾಯಿತು. ಗಾಯಕ್ವಾಡ್ ಅಜೇಯ 74 ರನ್ ಗಳಿಸಿ ತಂಡದ ಪರ ಟಾಪ್ ಸ್ಕೋರರ್ ಆಗಿದ್ದರು.

ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಉತ್ತಮ ಆರಂಭ ಕಂಡಿತು. ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಮೊದಲ ವಿಕೆಟ್‌ಗೆ 58 ರನ್‌ಗಳ ಜೊತೆಯಾಟ ನೀಡಿದರು. ಗಿಲ್ 33 ರನ್ ಗಳಿಸಿ ಔಟಾದ ಬಳಿಕ ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಆಟವನ್ನು ನಿಯಂತ್ರಿಸಿದರು. ಸುದರ್ಶನ್ 46 ಎಸೆತಗಳಲ್ಲಿ 87 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದರೆ, ಬಟ್ಲರ್ ಅಜೇಯ 39 ರನ್ ಗಳಿಸಿದರು.

ಅಂತಿಮವಾಗಿ ಗುಜರಾತ್ ಟೈಟಾನ್ಸ್ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಜಯದೊಂದಿಗೆ ಗುಜರಾತ್ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದರೆ, ಚೆನ್ನೈ ಸೂಪರ್ ಕಿಂಗ್ಸ್ 6ನೇ ಸ್ಥಾನಕ್ಕೆ ಕುಸಿದಿದೆ.

ಬಿರುಗಾಳಿ ಮಳೆಗೆ ಹಾರಿಬಂದ ತಗಡು ಟ್ರಾನ್ಸ್‌ಫಾರ್ಮರ್‌ಗೆ ಅಪ್ಪಳಿಸಿ ಆತಂಕ: ತಪ್ಪಿದ ಭಾರೀ ಅನಾಹುತ

0

ಗದಗ: ಗಜೇಂದ್ರಗಡ ತಾಲೂಕಿನ ನರೇಗಲ್ಲ ಸಮೀಪದ ಬೂದಿಹಾಳ ಗ್ರಾಮದಲ್ಲಿ ರವಿವಾರ ಸಂಜೆ ಬೀಸಿದ ಬಿರುಗಾಳಿ ಮಳೆಯಿಂದ ಸಂಭವಿಸಬಹುದಾದ ಭಾರೀ ಅನಾಹುತವು ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ನಡೆದಿದೆ.

ಸಂಜೆ ಸುಮಾರು 5 ಗಂಟೆಯ ವೇಳೆಗೆ ಗಾಳಿಯ ವೇಗ ತೀವ್ರಗೊಂಡಾಗ, ಒಂದು ತಗಡಿನ ಶೀಟ್ ಹಾರಿಬಂದು ನೇರವಾಗಿ ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್)ಗೆ ಅಪ್ಪಳಿಸಿತು. ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಘಟನೆಯ ವೇಳೆ ಸುತ್ತಮುತ್ತಲಿನ ನಿವಾಸಿಗಳು ಭಯಭೀತರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ತಕ್ಷಣವೇ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಹಾನಿ ಸಂಭವಿಸಿಲ್ಲ.

ಘಟನಾ ಸ್ಥಳಕ್ಕೆ ವಿದ್ಯುತ್ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕೆಲಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು.

ಬಿರುಗಾಳಿ ಸಂದರ್ಭಗಳಲ್ಲಿ ಸಡಿಲವಾಗಿರುವ ತಗಡು, ಶೀಟ್‌ಗಳು ಸೇರಿದಂತೆ ಇತರ ವಸ್ತುಗಳನ್ನು ಸುರಕ್ಷಿತವಾಗಿ ಕಟ್ಟಿಹಾಕುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಕಿಮ್ಸ್ ಆಸ್ಪತ್ರೆಗೆ ಡಿಕೆ ಶಿವಕುಮಾರ್ ಭೇಟಿ: ಸಚಿವ ಡಿ. ಸುಧಾಕರ್ ಆರೋಗ್ಯ ವಿಚಾರಣೆ!

ಬೆಂಗಳೂರು: ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಆಸ್ಪತ್ರೆಗೆ ದಾಖಲಾಗಿರುವ ಸಚಿವ ಡಿ. ಸುಧಾಕರ್ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಧಾಕರ್ ಅವರನ್ನು ಡಿಕೆ ಶಿವಕುಮಾರ್ ಭೇಟಿ ಮಾಡಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಮಾಹಿತಿಯ ಪ್ರಕಾರ, ಸಚಿವ ಡಿ. ಸುಧಾಕರ್ ಅವರು ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಪ್ರಸ್ತುತ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ವೈದ್ಯರೊಂದಿಗೆ ಚರ್ಚೆ ನಡೆಸಿ ಚಿಕಿತ್ಸೆ ಕುರಿತು ಸಂಪೂರ್ಣ ಮಾಹಿತಿ ಪಡೆದರು.

ಈ ವೇಳೆ ಶಾಸಕ ರಘುಮೂರ್ತಿ ಕೂಡ ಡಿಸಿಎಂ ಜೊತೆ ಉಪಸ್ಥಿತರಿದ್ದರು. ಆಸ್ಪತ್ರೆ ಭೇಟಿ ವೇಳೆ ಡಿಕೆ ಶಿವಕುಮಾರ್ ಅವರು ಸಚಿವ ಸುಧಾಕರ್ ಅವರ ಶೀಘ್ರ ಚೇತರಿಕೆಗಾಗಿ ಹಾರೈಸಿದ್ದು, ಕುಟುಂಬ ಸದಸ್ಯರಿಗೆ ಧೈರ್ಯ ಮತ್ತು ಬೆಂಬಲ ನೀಡಿದ್ದಾರೆ.

 

ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಭೀಕರ ಅಗ್ನಿ ಅವಘಡ: ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ!

ಉಡುಪಿ: ನಗರದ ಪ್ರಮುಖ ವಾಣಿಜ್ಯ ಪ್ರದೇಶವಾದ ಸಿಟಿ ಬಸ್ ನಿಲ್ದಾಣದ ಸಮೀಪದಲ್ಲಿರುವ ‘ಖಾದರ್ ಕಮರ್ಷಿಯಲ್’ ಸಂಕೀರ್ಣದಲ್ಲಿ ಇಂದು ಭಾರಿ ಅಗ್ನಿ ಅವಘಡ ಸಂಭವಿಸಿದೆ.

ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಕಟ್ಟಡದೊಳಗೆ ವ್ಯಾಪಿಸಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ಮೊದಲು ಹಾರ್ಡ್‌ವೇರ್ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿದ್ದ ಸುಡುವ ಪದಾರ್ಥಗಳಿಂದಾಗಿ ಅಗ್ನಿ ವೇಗವಾಗಿ ಹರಡಿದೆ. ನಂತರ ಪಕ್ಕದ ಮೊಬೈಲ್ ಅಂಗಡಿಗೂ ಬೆಂಕಿ ತಗುಲಿದ್ದು, ಅಂಗಡಿಗಳಲ್ಲಿದ್ದ ಬೆಲೆಬಾಳುವ ಹ್ಯಾಂಡ್‌ಸೆಟ್‌ಗಳು ಹಾಗೂ ಹಾರ್ಡ್‌ವೇರ್ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ದಟ್ಟ ಹೊಗೆ ಇಡೀ ಪ್ರದೇಶವನ್ನು ಆವರಿಸಿಕೊಂಡು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದರು. ಜನನಿಬಿಡ ಪ್ರದೇಶವಾದ ಕಾರಣ ಕಾರ್ಯಾಚರಣೆ ಸವಾಲಾಗಿದ್ದರೂ, ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿರುವುದರಿಂದ ವ್ಯಾಪಾರಿಗಳಿಗೆ ಭಾರೀ ನಷ್ಟವಾಗಿದೆ.

ಚಾರ್ಮಾಡಿ ಘಾಟಿಯಲ್ಲಿ ಖಾಸಗಿ ಬಸ್ ಪಲ್ಟಿ: 25 ಮಂದಿ ಪ್ರಯಾಣಿಕರಿಗೆ ಗಾಯ!

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟಿಯ ಅಪಾಯಕಾರಿ ನಾಲ್ಕನೇ ತಿರುವಿನಲ್ಲಿ ಖಾಸಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.

ಧರ್ಮಸ್ಥಳದಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮೂಡಿಗೆರೆಯತ್ತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿ ಸುಮಾರು 25 ಮಂದಿ ಪ್ರಯಾಣಿಕರಿದ್ದು, ಅಪಘಾತದ ರಭಸಕ್ಕೆ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಬಸ್ ಪ್ರಪಾತಕ್ಕೆ ಬೀಳದೆ ರಸ್ತೆಯಲ್ಲೇ ಪಲ್ಟಿಯಾದ ಕಾರಣ ಭಾರೀ ದುರಂತ ತಪ್ಪಿದೆ. ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗಳಿಗೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದ ತಕ್ಷಣ ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪಲ್ಟಿಯಾದ ಬಸ್ ತೆರವುಗೊಳಿಸಿ ಸಂಚಾರ ಸುಗಮಗೊಳಿಸಲಾಗಿದೆ. ಘಾಟಿ ಪ್ರದೇಶದ ಕಡಿದಾದ ತಿರುವುಗಳಲ್ಲಿ ಅತಿವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ನಿಶ್ಚಿತಾರ್ಥದ ಹಿಂದಿನ ರಾತ್ರಿ ಯುವತಿ ನಾಪತ್ತೆ: ಲವ್ ಜಿಹಾದ್ ಆರೋಪ, ಗ್ರಾಮದಲ್ಲಿ ಸಂಚಲನ

0

ಹಾವೇರಿ: ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದ ಕುಟುಂಬವೊಂದು ರಾತ್ರೋರಾತ್ರಿ ಸಂಭವಿಸಿದ ಘಟನೆದಿಂದ ಆಘಾತಕ್ಕೆ ಒಳಗಾಗಿದೆ. ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ಯುವತಿಯೊಬ್ಬಳು ಯುವಕನೊಂದಿಗೆ ನಾಪತ್ತೆಯಾಗಿರುವ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.

ಗ್ರಾಮದ ನಿವಾಸಿ ಶಂಕ್ರಮ್ಮ ಅವರ ನಿಶ್ಚಿತಾರ್ಥ ಇಂದು (ಏಪ್ರಿಲ್ 26) ನಿಗದಿಯಾಗಿದ್ದು, ಕುಟುಂಬಸ್ಥರು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದರು. ಜೊತೆಗೆ ಮೇ 11ರಂದು ವಿವಾಹ ನಿಶ್ಚಯವಾಗಿತ್ತು. ಆದರೆ ನಿಶ್ಚಿತಾರ್ಥದ ಹಿಂದಿನ ರಾತ್ರಿ ಯುವತಿ ನಾಪತ್ತೆಯಾಗಿರುವುದು ಕುಟುಂಬಕ್ಕೆ ಭಾರೀ ಆಘಾತ ತಂದಿದೆ.

ಪೋಷಕರ ಆರೋಪದ ಪ್ರಕಾರ, ನರೇಗಲ್ ಗ್ರಾಮದ ಇಬ್ರಾಹಿಂ ನೆಗಳೂರು ಎಂಬ ಯುವಕ ಯುವತಿಯನ್ನು ಪ್ರೇರೇಪಿಸಿ ಕರೆದೊಯ್ದಿದ್ದಾನೆ ಎಂದು ಹೇಳಲಾಗಿದೆ. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಘಟನೆ ಬೆಳಕಿಗೆ ಬಂದ ತಕ್ಷಣ ಹಿಂದೂಪರ ಸಂಘಟನೆಗಳು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು “ವ್ಯವಸ್ಥಿತ ಲವ್ ಜಿಹಾದ್” ಎಂದು ಆರೋಪಿಸಿದ್ದಾರೆ. ಯುವತಿಯನ್ನು ಶೀಘ್ರ ಪತ್ತೆಹಚ್ಚಿ ಕುಟುಂಬಕ್ಕೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವತಿ ಹಾಗೂ ಆರೋಪಿಯ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

ಮಡಿಕೇರಿಯಲ್ಲಿ ಶಿಕ್ಷಕಿಯ ಆತ್ಮಹತ್ಯೆ: ವಿದ್ಯಾರ್ಥಿಗಳಿಗೆ ವಿದಾಯದ ಬಳಿಕ ಮನೆಯಲ್ಲಿ ಗುಂಡಿಕ್ಕಿಕೊಂಡು ಅಂತ್ಯ

0

ಮಡಿಕೇರಿ: ಕೊಡಗು ಜಿಲ್ಲೆಯ ಚೇರಂಬಾಣೆ ಗ್ರಾಮದಲ್ಲಿ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ದಾರುಣ ಘಟನೆಗೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳಿಗೆ ವಿದಾಯ ಹೇಳಿದ ಕೆಲವೇ ಹೊತ್ತಿನಲ್ಲಿ ಈ ದುರ್ಘಟನೆ ನಡೆದಿರುವುದು ಇನ್ನಷ್ಟು ನೋವುಂಟು ಮಾಡಿದೆ.

ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರೋಹಿಣಿ (51) ಅವರು ಜೀವನದ ಬೇಸರದಿಂದ ಮನೆಯಲ್ಲಿ ಇದ್ದ ಗನ್ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಈ ಘಟನೆ ಸ್ಥಳೀಯರಲ್ಲಿ ಮತ್ತು ಶಿಕ್ಷಣ ವಲಯದಲ್ಲಿ ತೀವ್ರ ಆಘಾತ ಉಂಟುಮಾಡಿದ್ದು, ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಶಿಕ್ಷಕಿಯನ್ನು ಕಳೆದುಕೊಂಡ ನೋವಿನಲ್ಲಿ ಮುಳುಗಿದ್ದಾರೆ.

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣಗಳ ಕುರಿತು ಪೊಲೀಸರು ಸವಿಸ್ತಾರ ತನಿಖೆ ಕೈಗೊಂಡಿದ್ದಾರೆ.

ಪ್ರೇಮದ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ? ಆಶು ರೆಡ್ಡಿ ವಿರುದ್ಧ NRI ದೂರು

ಹೈದರಾಬಾದ್: ಬಿಗ್‌ಬಾಸ್ ತೆಲುಗು ಮಾಜಿ ಸ್ಪರ್ಧಿ ಹಾಗೂ ನಟಿ ಆಶು ರೆಡ್ಡಿ ವಿರುದ್ಧ ಪ್ರೇಮದ ಹೆಸರಿನಲ್ಲಿ ಭಾರೀ ಹಣ ವಂಚನೆ ಆರೋಪ ಕೇಳಿಬಂದಿದ್ದು, ಪ್ರಕರಣ ಇದೀಗ ಪೊಲೀಸರ ತನಿಖೆಗೆ ಒಳಪಟ್ಟಿದೆ.

ಸತ್ಯನಾರಾಯಣ ಎಂಬವರು ತಮ್ಮ ಮಗ ಧರ್ಮೇಂದ್ರ ಪರವಾಗಿ ನೀಡಿದ ದೂರಿನಲ್ಲಿ, 2018ರಲ್ಲಿ ಆರಂಭವಾದ ಪರಿಚಯ ಪ್ರೇಮಕ್ಕೆ ತಿರುಗಿ, ಮದುವೆಯಾಗುವುದಾಗಿ ನಂಬಿಸಿ ನಟಿ ಹಲವು ವರ್ಷಗಳ ಕಾಲ ಹಣ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಒಟ್ಟು ₹9.35 ಕೋಟಿ ಹಣವನ್ನು ವಿವಿಧ ಕಾರಣಗಳ ಮೂಲಕ ಪಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಹಣವನ್ನು ಐಷಾರಾಮಿ ಜೀವನಶೈಲಿಗೆ ಬಳಸಿಕೊಂಡಿದ್ದು, ಕಾರುಗಳು, ಚಿನ್ನ ಹಾಗೂ ಲಾಂಕೋ ಹಿಲ್ಸ್‌ನಲ್ಲಿನ ಆಸ್ತಿ ಖರೀದಿಗೆ ಉಪಯೋಗಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಜೊತೆಗೆ ಕುಟುಂಬ ಸದಸ್ಯರ ಮೇಲೂ ಹಣ ವಂಚನೆ ಆರೋಪ ಹೊರಿಸಲಾಗಿದೆ.

ಈ ನಡುವೆ ಸಂಧಾನದ ವೇಳೆ ನೀಡಿದ್ದ ಚೆಕ್‌ಗಳನ್ನು ನಾಶಪಡಿಸಿದ ಆರೋಪವೂ ಗಂಭೀರವಾಗಿದೆ. ಇದರಿಂದ ಪ್ರಕರಣ ಇನ್ನಷ್ಟು ಗಾಢವಾಗಿದೆ.

ಆದರೆ ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿರುವ ಆಶು ರೆಡ್ಡಿ, ಕಾನೂನುಬದ್ಧವಾಗಿ ಹೋರಾಟ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣವನ್ನು ಆರ್ಥಿಕ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ. ತನಿಖೆ ಮುಂದುವರಿದಿದ್ದು, ಸತ್ಯಾಂಶ ಹೊರಬೀಳುವತ್ತ ಎಲ್ಲರ ಕಣ್ಣು ನೆಟ್ಟಿದೆ.

error: Content is protected !!