Home Blog Page 3

15 ವರ್ಷಗಳ ಕಾಯುವಿಕೆ ಅಂತ್ಯ? ನಿವೇಶನ ವಿತರಣೆಗೆ ವೇಗ!

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣ ಪಂಚಾಯತಿ ವತಿಯಿಂದ 2012ರಿಂದ ಕಡುಬಡವರು ಹಾಗೂ ನಿರ್ಗತಿಕರಿಗೆ ಹಂಚಿಕೆಯಾಗಬೇಕಿದ್ದ ನಿವೇಶನಗಳ ವಿತರಣೆ ವಿಳಂಬವಾಗಿರುವುದನ್ನು ಖಂಡಿಸಿ ಮಹಿಳೆಯರು ಪಟ್ಟಣ ಪಂಚಾಯತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೆದ, ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಿವೇಶನ ಹಂಚಿಕೆ ಪ್ರಕ್ರಿಯೆ ಇದೀಗ ಚುರುಕುಗೊಂಡಿದೆ ಎಂದು ತಿಳಿಸಿದರು.

ಸುಮಾರು 4 ಸಾವಿರ ಅರ್ಜಿಗಳ ಪೈಕಿ 373 ಫಲಾನುಭವಿಗಳ ತಾತ್ಕಾಲಿಕ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದೆ. ಉಸ್ತುವಾರಿ ಸಚಿವರ ಸೂಚನೆಯಂತೆ ಜಿಲ್ಲಾಧಿಕಾರಿ, ಆಡಳಿತಾಧಿಕಾರಿ ಹಾಗೂ ಅಧಿಕಾರಿಗಳು ಸರ್ವೇ ಕಾರ್ಯ ಕೈಗೊಂಡಿದ್ದು, ನಿವೇಶನ ರಹಿತ ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಹೇಳಿದರು.

ಆಗಸ್ಟ್ 15ರಂದು ಉಸ್ತುವಾರಿ ಸಚಿವರಿಂದ ಹಕ್ಕುಪತ್ರ ವಿತರಣೆ ಮಾಡುವ ಕುರಿತು ಚರ್ಚೆ ನಡೆದಿದ್ದು, ಪಟ್ಟಣದ ಹಿರಿಯರ ಸಮ್ಮುಖದಲ್ಲಿ ಅಂತಿಮ ನಿರ್ಧಾರ ಕೈಗೊಂಡು ಅರ್ಹ ಕುಟುಂಬಗಳಿಗೆ ನಿವೇಶನ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಳಗುಂದ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪೂರಮಠ ಹಾಗೂ ಪೊಲೀಸ್ ಸಿಬ್ಬಂದಿ ಬಂದುಬಸ್ತ್ ಕೈಗೊಂಡಿದ್ದು, ಪ್ರತಿಭಟನೆ ಶಾಂತಿಯುತವಾಗಿ ಅಂತ್ಯವಾಯಿತು.

ವರ್ಷಕ್ಕೆ ಎರಡು ಬಾರಿ ರಕ್ತದಾನ ಮಾಡಿ: ಡಾ. ದತ್ತಾತ್ರೇಯ

ವಿಜಯಸಾಕ್ಷಿ ಸುದ್ದಿ, ಗದಗ: ರಕ್ತದಾನವು ಕೇವಲ ಮತ್ತೊಬ್ಬರ ಜೀವ ಉಳಿಸುವ ಪುಣ್ಯದ ಕೆಲಸವಲ್ಲ, ಅದು ದಾನಿಯ ಆರೋಗ್ಯಕ್ಕೂ ವರದಾನ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ವರ್ಷಕ್ಕೆ ಕನಿಷ್ಠ ಎರಡು ಬಾರಿ ರಕ್ತದಾನ ಮಾಡುವ ಸಂಕಲ್ಪ ಮಾಡಬೇಕು ಎಂದು ರಕ್ತ ತಪಾಸಕ ಡಾ. ದತ್ತಾತ್ರೇಯ ವೈಕುಂಠೆ ಕರೆ ನೀಡಿದರು.

ನಗರದ ಶಾಸ್ತ್ರಿ ಮಹಿಳಾ ಬಿ.ಎಡ್ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಜೆಡಿಎಸ್ ಶಿಕ್ಷಣ ಸಂಸ್ಥೆ ಗದಗ ಹಾಗೂ ಭಾವಸಾರ ವಿಷನ್ ಇಂಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ಬಿ.ಎಡ್ ಪ್ರಶಿಕ್ಷಣಾರ್ಥಿಗಳಿಗಾಗಿ ಆಯೋಜಿಸಿದ್ದ ‘ಪೌರತ್ವ ತರಬೇತಿ ಹಾಗೂ ಉಚಿತ ರಕ್ತ ತಪಾಸಣಾ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತದಾನದ ವೈಜ್ಞಾನಿಕ ಮಹತ್ವವನ್ನು ವಿವರಿಸಿದ ಅವರು, “ಇಂದು ವಿಜ್ಞಾನ ಎಷ್ಟೇ ಮುಂದುವರೆದರೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ನಾವು ರಕ್ತದಾನ ಮಾಡಿದಾಗ ದೇಹದಲ್ಲಿ ಹೊಸ ರಕ್ತಕಣಗಳ ಉತ್ಪತ್ತಿ ಚುರುಕುಗೊಳ್ಳುತ್ತದೆ. ಇದರಿಂದ ದೇಹದ ಚಯಾಪಚಯ ಕ್ರಿಯೆ ಸುಧಾರಿಸಿ ಆರೋಗ್ಯ ಉತ್ತಮವಾಗುತ್ತದೆ,” ಎಂದರು.

ಪ್ರತಿಯೊಬ್ಬರೂ ತಮ್ಮ ರಕ್ತದ ಗುಂಪಿನ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿರಬೇಕು. ಅಪಘಾತ ಹಾಗೂ ತುರ್ತು ಚಿಕಿತ್ಸೆಯ ಸಂದರ್ಭಗಳಲ್ಲಿ ಇದು ಜೀವ ಉಳಿಸಲು ನೆರವಾಗುತ್ತದೆ ಎಂದು ಅವರು ಹೇಳಿದರು.

ಜನ್ಮದಿನ, ವಿವಾಹ ವಾರ್ಷಿಕೋತ್ಸವ ಹಾಗೂ ಹಬ್ಬ-ಹರಿದಿನಗಳಂತಹ ಸಂದರ್ಭಗಳಲ್ಲಿ ರಕ್ತದಾನ ಮಾಡುವ ಸಂಸ್ಕೃತಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಡಾ. ಎಸ್.ಬಿ. ಹೊನ್ನಗುಡಿ ಮಾತನಾಡಿ, “ಶಿಕ್ಷಕಿಯರಾಗುವ ನೀವು ಸಮಾಜಕ್ಕೆ ಮಾದರಿಯಾಗಬೇಕು. ನಿಮ್ಮ ಒಂದು ಯೂನಿಟ್ ರಕ್ತ ಮೂರು ಜೀವಗಳನ್ನು ಉಳಿಸಬಲ್ಲದು,” ಎಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.

ಶಿಬಿರದಲ್ಲಿ ಡಾ. ದತ್ತಾತ್ರೇಯ ವೈಕುಂಠೆ ಅವರು 95 ಬಿ.ಎಡ್ ಪ್ರಶಿಕ್ಷಣಾರ್ಥಿಗಳ ರಕ್ತದ ಗುಂಪು ತಪಾಸಣೆ ನಡೆಸಿ, ಬಳಿಕ ರಕ್ತದ ಗುಂಪು ನಮೂದಿಸಿದ ಗುರುತಿನ ಚೀಟಿಗಳನ್ನು ವಿತರಿಸಿದರು.

ಮುಖ್ಯ ಅತಿಥಿಗಳಾಗಿ ಡಾ. ಹರೀಶ ವೈಕುಂಠೆ, ನಾಗರಾಜ ವಾದೋನೆ ಭಾಗವಹಿಸಿದ್ದರು. ವೇದಿಕೆಯಲ್ಲಿ ಡಾ. ಡಿ.ಎಂ. ನದಾಫ್, ವಿ.ಕೆ. ಅರಳಿಮಠ, ಗಂಗಾಧರ, ಆರ್.ಎ. ಕೆರೂರ, ಸತೀಶ, ಈಶ್ವರ, ಶ್ರೀಮತಿ ಎನ್.ಎಂ. ಮಟ್ಟಿ ಉಪಸ್ಥಿತರಿದ್ದರು.

ಪ್ರೊ. ಎಂ. ಸಂದೀಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಭಾಗ್ಯ ಚೂರಿಮಠ ಹಾಗೂ ಭುವನೇಶ್ವರಿ ಕಮಡೊಳ್ಳಿ ಸಂದರ್ಭೋಚಿತವಾಗಿ ಮಾತನಾಡಿದರು. ಸವಿತಾ ಮತ್ತು ತಂಡ ಪ್ರಾರ್ಥಿಸಿದರು. ಅನುರಾಧಾ ಬೆಟಗೇರಿ ಹಾಗೂ ಗೌರಮ್ಮ ಮಜ್ಜಿಗುಡ್ಡ ಕಾರ್ಯಕ್ರಮ ನಿರೂಪಿಸಿದರು. ನೀಲಮ್ಮ ಐದನಾಳ ವಂದಿಸಿದರು.

“ಶಾಲಾ ಹಂತದಲ್ಲೇ ಮಕ್ಕಳಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ರಕ್ತದ ಗುಂಪಿನ ಮಹತ್ವ ಹಾಗೂ ರಕ್ತದಾನದ ಅಗತ್ಯವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು.” 

ಡಾ. ದತ್ತಾತ್ರೇಯ ವೈಕುಂಠೆ

ಹೆದ್ದಾರಿಯಲ್ಲಿ ಜೈನ ಮುನಿಗಳ ಜೀವಕ್ಕೆ ಕಂಟಕ: ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಮನವಿ

ವಿಜಯಸಾಕ್ಷಿ ಸುದ್ದಿ, ಗದಗ: ಜೈನ ಮುನಿಗಳು ಹಾಗೂ ಸಾಧ್ವಿಯರ ಮೇಲೆ ಇತ್ತೀಚೆಗೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಗದಗ ಜಿಲ್ಲಾ ಜೈನ ಸಮಾಜ, ಅಹಿಂಸೆಯ ಸಂದೇಶ ಹೊತ್ತು ದೇಶಾದ್ಯಂತ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುವ ಜೈನ ತಪಸ್ವಿಗಳಿಗೆ ತಕ್ಷಣ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿತು.

ನಗರದ ಗುಜ್ಜರ ಬಸ್ತಿಯಿಂದ ಶುಕ್ರವಾರ ಆರಂಭವಾದ ಶಾಂತ ಹಾಗೂ ಮೌನ ಬೃಹತ್ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು. ಮೆರವಣಿಗೆಯಲ್ಲಿ ಜೈನ ಸಮಾಜದ ನೂರಾರು ಸದಸ್ಯರು ಭಾಗವಹಿಸಿ ತಪಸ್ವಿಗಳ ರಕ್ಷಣೆಗೆ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

ಮನವಿಯಲ್ಲಿ, “ಶತಮಾನಗಳಿಂದ ಜೈನ ಸಾಧು-ಸಾಧ್ವಿಯರು ಅಹಿಂಸೆ, ಶಾಂತಿ ಹಾಗೂ ಆಧ್ಯಾತ್ಮಿಕ ಶಿಸ್ತಿನ ಸಂದೇಶದೊಂದಿಗೆ ದೇಶಾದ್ಯಂತ ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ ಇಂದು ಹೆದ್ದಾರಿಗಳಲ್ಲೇ ಅವರ ಜೀವ ಅಪಾಯಕ್ಕೆ ಸಿಲುಕುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಜೈನ ತಪಸ್ವಿಗಳು, ಗ್ರಾಮೀಣರು ಹಾಗೂ ಕಾಲ್ನಡಿಗೆ ಪ್ರಯಾಣಿಕರಿಗಾಗಿ ಪ್ರತ್ಯೇಕ ಸುರಕ್ಷಿತ ಪಾದಚಾರಿ ಕಾರಿಡಾರ್ ನಿರ್ಮಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಇದೇ ವೇಳೆ “ಸನ್ಯಾಸಿ ದಾಟುವಿಕೆ ವಲಯ” ಎಂಬ ಶಾಶ್ವತ ಎಚ್ಚರಿಕೆ ಫಲಕಗಳ ಅಳವಡಿಕೆ, ವಾಹನಗಳ ವೇಗ ನಿಯಂತ್ರಣ, ಅಪಘಾತ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ತನಿಖೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಜೈನ ಮುನಿಗಳು ಹೆಚ್ಚಾಗಿ ವಿಹಾರ ಮಾಡುವ ಬೆಳಿಗ್ಗೆ 4ರಿಂದ 8 ಗಂಟೆ ಹಾಗೂ ಸಂಜೆ 5ರಿಂದ 6.30ರ ಅವಧಿಯಲ್ಲಿ ಹೆದ್ದಾರಿಗಳಲ್ಲಿ ವಿಶೇಷ ಪೊಲೀಸ್ ಗಸ್ತು ಹಾಗೂ ಮೇಲ್ವಿಚಾರಣೆ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಆರ್‌ಟಿಓ ಮೂಲಕ ಚಾಲನಾ ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ “ಬರಿಗಾಲಿನ ತಪಸ್ವಿಗಳ ಸುರಕ್ಷತೆ” ಕುರಿತು ಜಾಗೃತಿ ಮಾಡ್ಯೂಲ್ ಸೇರಿಸಬೇಕೆಂದೂ ಆಗ್ರಹಿಸಲಾಗಿದೆ.

ಶ್ವೇತಾಂಬರ ಮೂರ್ತಿಪೂಜಕ ಸಮಾಜದ ಅಧ್ಯಕ್ಷ ಇಂದ್ರಕುಮಾರ ಬಾಫಣಾ, ವರ್ಧಮಾನ ಸ್ಥಾನಕವಾಸಿ ಸಮಾಜದ ಅಧ್ಯಕ್ಷ ರೂಪಚಂದಜೀ ಪಾಲರೇಚಾ, ತೇರಾಪಂಥ ಸಮಾಜದ ಅಧ್ಯಕ್ಷ ಖೀಮಚಂದ ಬನ್ಸಾಲಿ, ಕೆಡಿಒ ಜೈನ ಮಹಾಜನ್ ಸಮಾಜದ ಅಧ್ಯಕ್ಷ ವಿಜಯ ಲೂಥಿಯಾ, ದಿಗಂಬರ ಜೈನ ಸಮಾಜದ ಅಧ್ಯಕ್ಷ ಪದ್ಮರಾಜ ಕುಲಕರ್ಣಿ ಸೇರಿದಂತೆ ಸಮಾಜದ ಮುಖಂಡರು, ಮಹಿಳಾ ಹಾಗೂ ಯುವಕ ಮಂಡಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಸರ್ಕಾರಕ್ಕೆ ರವಾನಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರಮುಖ ಬೇಡಿಕೆಗಳು

  • ಜೈನ ಮುನಿಗಳಿಗಾಗಿ ಸುರಕ್ಷಿತ ಪಾದಚಾರಿ ಕಾರಿಡಾರ್ ನಿರ್ಮಾಣ
  • “ಸನ್ಯಾಸಿ ದಾಟುವಿಕೆ ವಲಯ” ಎಚ್ಚರಿಕೆ ಫಲಕ ಅಳವಡಿಕೆ
  • ಹೆದ್ದಾರಿಗಳಲ್ಲಿ ವೇಗ ನಿಯಂತ್ರಣ ಕ್ರಮ
  • ಅಪಘಾತ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ತನಿಖೆ
  • ವಿಶೇಷ ಪೊಲೀಸ್ ಗಸ್ತು ವ್ಯವಸ್ಥೆ
  • ಚಾಲನಾ ಪರವಾನಗಿಯಲ್ಲಿ ಜಾಗೃತಿ ಮಾಡ್ಯೂಲ್ ಸೇರ್ಪಡೆ

ಶಿರಹಟ್ಟಿ ರಾಜಕೀಯದಲ್ಲಿ ರವಿಕಾಂತ ಅಂಗಡಿ ಹೆಸರು ಸದ್ದು!

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಶಿರಹಟ್ಟಿ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗುವ ಬೆಳವಣಿಗೆಯಲ್ಲಿ, ವಕೀಲ ಹಾಗೂ ಹೋರಾಟಗಾರ ರವಿಕಾಂತ ಅಂಗಡಿ ಅವರು ಚುನಾವಣಾ ಕಣಕ್ಕಿಳಿಯಬೇಕು ಎಂದು ಶಿರಹಟ್ಟಿ ತಾಲೂಕು ವಕೀಲರ ಸಂಘ ಆಗ್ರಹಿಸಿದೆ.

ಪಟ್ಟಣದ ವಕೀಲರ ಸಂಘದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ವೈ. ಗೊಬ್ಬರಗುಂಪಿ, “ಶಿರಹಟ್ಟಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ದೀರ್ಘಕಾಲದಿಂದ ಹೋರಾಟ ನಡೆಸುತ್ತಿರುವ ವಕೀಲ ರವಿಕಾಂತ ಅಂಗಡಿ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು,” ಎಂದು ಒತ್ತಾಯಿಸಿದರು.

ರವಿಕಾಂತ ಅಂಗಡಿ ಅವರು ಹಲವು ವರ್ಷಗಳಿಂದ ಜನಪರ ಹಾಗೂ ರೈತಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದು, ಶಿರಹಟ್ಟಿ, ಮುಂಡರಗಿ ಹಾಗೂ ಲಕ್ಷ್ಮೇಶ್ವರ ಭಾಗದ ರೈತರ ಜಮೀನು ರಕ್ಷಣೆ, ರೈತರ ಹಕ್ಕುಗಳ ಪರ ಹೋರಾಟ, ಸಾಮಾಜಿಕ ನ್ಯಾಯ ಹಾಗೂ ಪರಿಸರ ಸಂರಕ್ಷಣೆಯಂತಹ ವಿಚಾರಗಳಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

ಸಾಮಾನ್ಯ ಜನರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಗುಣ, ಕಾನೂನು ಕ್ಷೇತ್ರದಲ್ಲಿನ ಅನುಭವ ಹಾಗೂ ಜನಸೇವೆಯ ಬದ್ಧತೆಯಿಂದ ರವಿಕಾಂತ ಅಂಗಡಿ ಅವರು ಸಾರ್ವಜನಿಕರ ವಿಶ್ವಾಸ ಗಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹೊಸ ಚಿಂತನೆ ಹಾಗೂ ಪರಿಣಾಮಕಾರಿ ನಾಯಕತ್ವ ನೀಡುವ ಸಾಮರ್ಥ್ಯ ಅವರಲ್ಲಿದೆ ಎಂದು ಅಭಿಪ್ರಾಯಪಟ್ಟರು.

ಶಿರಹಟ್ಟಿ ಮತಕ್ಷೇತ್ರದ ಜನರು ಅಭಿವೃದ್ಧಿಪರ ಹಾಗೂ ಜನರ ನಡುವೆ ನಿರಂತರ ಸಂಪರ್ಕ ಹೊಂದಿರುವ ನಾಯಕತ್ವ ನಿರೀಕ್ಷಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರವಿಕಾಂತ ಅಂಗಡಿ ಅವರು ಚುನಾವಣೆಗೆ ಸ್ಪರ್ಧಿಸಬೇಕು ಎಂಬುದು ಕ್ಷೇತ್ರದ ಜನರ ಆಶಯವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಎ.ವಿ. ಮಾನೆ, ಕಾರ್ಯದರ್ಶಿ ಎ.ಎ. ಬೇವಿನಗಿಡದ, ಜಂಟಿ ಕಾರ್ಯದರ್ಶಿ ಮಹೇಶ ದಾನಪ್ಪಗೌಡರ, ಖಜಾಂಚಿ ಶ್ರೀಮತಿ ಬಂಡಿವಡ್ಡರ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.

ಜನರ ಪರ ಹೋರಾಟಕ್ಕೆ ಸದಾ ಸಿದ್ಧ

ಸಭೆಯಲ್ಲಿ ಮಾತನಾಡಿದ ವಕೀಲ ರವಿಕಾಂತ ಅಂಗಡಿ, “ನಾನು ಜನರ ಹಾಗೂ ರೈತರ ಸಮಸ್ಯೆಗಳ ಪರ ಸಾಕಷ್ಟು ಹೋರಾಟಗಳನ್ನು ನಡೆಸಿದ್ದೇನೆ. ಮುಂದೆಯೂ ಜನಪರ ಹಾಗೂ ರೈತಪರ ಕಾರ್ಯಗಳಿಗೆ ಸದಾ ಸಿದ್ಧನಿದ್ದೇನೆ. ಎಲ್ಲರ ಆಶಯದಂತೆ ಸ್ಪರ್ಧಿಸುವ ಅವಕಾಶ ದೊರೆತಲ್ಲಿ ಜನರ ಸೇವೆಗೆ ಇನ್ನಷ್ಟು ಬಲ ದೊರೆಯುತ್ತದೆ,” ಎಂದು ಹೇಳಿದರು.

₹4 ಕೋಟಿ ಕಾಮಗಾರಿ, ನೀರು ಮಾತ್ರ ಇಲ್ಲ: ಜೆಜೆಎಂ ವಿರುದ್ಧ ಲಕ್ಕುಂಡಿ ಗ್ರಾಮಸಭೆಯಲ್ಲಿ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯ ಅಸಮರ್ಪಕ ಕಾಮಗಾರಿ, ಕುಡಿಯುವ ನೀರಿನ ತಾರತಮ್ಯ ಪೂರೈಕೆ ಹಾಗೂ ಗ್ರಾಮ ಅಭಿವೃದ್ಧಿ ವಿಚಾರಗಳು ಲಕ್ಕುಂಡಿ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾದವು.

ಅನ್ನದಾನೀಶ್ವರ ಸಭಾಭವನದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಹಿಳೆಯರು ಹಾಗೂ ಯುವಕರು ಆಕ್ರೋಶ ವ್ಯಕ್ತಪಡಿಸಿ, “ಗ್ರಾಮದ 5 ವಾರ್ಡ್‌ಗಳಿಗೆ ಮಾತ್ರ ಸಮರ್ಪಕ ನೀರು ಪೂರೈಕೆಯಾಗುತ್ತಿದೆ. 6, 7, 8, 9 ಹಾಗೂ 10ನೇ ವಾರ್ಡ್‌ಗಳಿಗೆ 8ರಿಂದ 12 ದಿನಕ್ಕೊಮ್ಮೆ ನೀರು ಬರುತ್ತಿದ್ದು ಜನರು ಹಾಗೂ ಜಾನುವಾರುಗಳು ಸಂಕಷ್ಟ ಅನುಭವಿಸುತ್ತಿವೆ,” ಎಂದು ದೂರಿದರು.

ತಾ.ಪಂ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ ಹಾಗೂ ಎನ್.ಐ. ಕಿರಿಟಗೇರಿ ಮಾತನಾಡಿ, “ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ನೀರು ಮಾತ್ರ ಬರುತ್ತಿಲ್ಲ. ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು,” ಎಂದು ಎಚ್ಚರಿಸಿದರು.

ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದ ಶರಣು ಗೋಗೇರಿ ಮಾತನಾಡಿ, “101 ದೇವಸ್ಥಾನ ಹಾಗೂ ಭಾವಿಗಳನ್ನು ಹೊಂದಿರುವ ಲಕ್ಕುಂಡಿಯನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಶಾಸಕ ಎಚ್. ಕೆ. ಪಾಟೀಲ ಹಾಗೂ ಶಾಸಕ ಸಿ. ಸಿ. ಪಾಟೀಲ ಶ್ರಮಿಸುತ್ತಿದ್ದಾರೆ. ಗ್ರಾಮವನ್ನು ಸ್ವಚ್ಛ ಹಾಗೂ ಸುಂದರವಾಗಿ ಉಳಿಸಿ ಪ್ರವಾಸಿಗರನ್ನು ಸೆಳೆಯಲು ಗ್ರಾಮಸ್ಥರು ಸಹಕರಿಸಬೇಕು,” ಎಂದು ಮನವಿ ಮಾಡಿದರು.

ಗ್ರಾಮೀಣ ವಿಶ್ವವಿದ್ಯಾಲಯದ ಸಂಯೋಜಕ ಸೋಮಲಿಂಗ ಕರ್ಣಿ ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಮಾತನಾಡಿದರು. ನ್ಯಾಯವಾದಿ ಸುಪರ್ಣ ಬ್ಯಾಹಟ್ಟಿ ಮಹಿಳಾ ಕಾನೂನುಗಳ ಕುರಿತು ಹಾಗೂ ಸುಜಾತಾ ಶಾಸ್ತ್ರಿಮಠ ಮಹಿಳಾ ಜಾಗೃತಿ ಕುರಿತು ಮಾಹಿತಿ ನೀಡಿದರು.

ಪಿಡಿಒ ಡಾ. ಅಮೀರನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎಂ.ಎ. ಗಾಜಿ ಸ್ವಾಗತಿಸಿದರು.

ಗ್ರಾಮಸಭೆಯಲ್ಲಿ ಆಶ್ರಯ ವಸತಿ ಯೋಜನೆಯಡಿ ಜೀತ ಪದ್ಧತಿಯಿಂದ ಮುಕ್ತಿ ಪಡೆದ ಪಕ್ಕಣ್ಣ ಬೇಲೇರಿ, ಮ್ಯಾನುಯಲ್ ಸ್ಕಾವೆಂಜರ್ ಸೇವೆಯ ಮಾಯಪ್ಪ ಮುಳ್ಳಾಳ ಹಾಗೂ ವಿಜಯಲಕ್ಷ್ಮಿ ಕರಿ ಅವರನ್ನು ಫಲಾನುಭವಿಗಳಾಗಿ ಆಯ್ಕೆ ಮಾಡಲಾಯಿತು.

ಇದೇ ವೇಳೆ 2018ರಲ್ಲಿ ಆಯ್ಕೆಯಾಗಿದ್ದ ಕೆಲ ಫಲಾನುಭವಿಗಳ ಬದಲಿಗೆ ಅದೇ ಕುಟುಂಬದ ಸದಸ್ಯರನ್ನು ಮರು ಆಯ್ಕೆ ಮಾಡುವ ಠರಾವನ್ನು ಸಭೆಯಲ್ಲಿ ಓದಿ ತಿಳಿಸಲಾಯಿತು.

ಜೆಜೆಎಂ ಯೋಜನೆ ವಿರುದ್ಧ ಗರಂ

ಸುಮಾರು ₹4 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ ಎನ್ನಲಾಗುತ್ತಿರುವ ಜೆಜೆಎಂ ಕಾಮಗಾರಿಯಲ್ಲೂ ಇದುವರೆಗೂ ನೀರು ಪೂರೈಕೆ ಆರಂಭವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ವಾಲ್‌ಮನ್‌ಗೆ ಆಡಳಿತಾಧಿಕಾರಿ ತರಾಟೆ

ಈ ವೇಳೆ ನೀರು ಪೂರೈಕೆ ಮಾಡುತ್ತಿರುವ ವಾಲ್‌ಮನ್‌ರನ್ನು ಸಭೆಗೆ ಕರೆಯಿಸಿದ ಆಡಳಿತಾಧಿಕಾರಿ ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, “ಸಮರ್ಪಕ ನೀರು ಪೂರೈಕೆಗೆ ಅಗತ್ಯ ಸಂಪನ್ಮೂಲ ಒದಗಿಸಲಾಗುತ್ತಿದೆ. ಸಮಸ್ಯೆಗಳನ್ನು ತಕ್ಷಣ ಗಮನಕ್ಕೆ ತರಬೇಕು. ನಿರ್ಲಕ್ಷ್ಯ ವಹಿಸಿದರೆ ಕ್ರಮ ಅನಿವಾರ್ಯ,” ಎಂದು ಎಚ್ಚರಿಕೆ ನೀಡಿದರು.

ಸಮಾಜಕ್ಕೆ ಮಾದರಿಯಾದ ಹುಟ್ಟುಹಬ್ಬ ಆಚರಣೆ

ವಿಜಯಸಾಕ್ಷಿ ಸುದ್ದಿ, ಗದಗ: ಹುಟ್ಟುಹಬ್ಬವನ್ನು ವೈಭವವಾಗಿ ಆಚರಿಸುವ ಬದಲು ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾದ ಯುವಕನ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಶಿರಹಟ್ಟಿ ತಾಲೂಕಿನ ಅಲಗಿಲವಾಡ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಾಹಿಲ್ ಮಾಬುಸಾಬ ನದಾಫ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕುಟುಂಬಸ್ಥರು ನೋಟ್‌ಪುಸ್ತಕ, ಪೆನ್ನು ಹಾಗೂ ಅಂಕಲಿಪಿ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಟುಂಬಸ್ಥರು, “ಸರ್ಕಾರಿ ಶಾಲೆಯಲ್ಲಿ ಅನೇಕ ಬಡ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಹುಟ್ಟುಹಬ್ಬಕ್ಕೆ ಅನಗತ್ಯ ಖರ್ಚು ಮಾಡುವ ಬದಲು ಮಕ್ಕಳಿಗೆ ಕಲಿಕಾ ಸಾಮಗ್ರಿ ನೀಡುವ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ನೆರವಾಗಬೇಕು ಎಂಬ ಆಶಯದಿಂದ ಈ ಕಾರ್ಯ ಮಾಡಿದ್ದೇವೆ,” ಎಂದು ಹೇಳಿದರು.

“ನಾವೂ ಸಹ ಬಡ ಕುಟುಂಬದಿಂದ ಬಂದವರೇ ಆಗಿದ್ದು, ಖರ್ಚು ಮಾಡುವ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಸುವುದು ಉತ್ತಮ ಎಂಬ ಭಾವನೆಯಿಂದ ನಮ್ಮ ಕೈಲಾದ ಅಳಿಲು ಸೇವೆ ಸಲ್ಲಿಸಿದ್ದೇವೆ,” ಎಂದು ತಿಳಿಸಿದರು.

ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರು ಈ ಕಾರ್ಯವನ್ನು ಶ್ಲಾಘಿಸಿದ್ದು, ಗ್ರಾಮದಲ್ಲಿನ ಹಳೆಯ ವಿದ್ಯಾರ್ಥಿಗಳು ಹಾಗೂ ಸಜ್ಜನರು ಕೂಡ ಶಿಕ್ಷಣ ಸೇವೆಗೆ ಮುಂದೆ ಬರಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಖಾದರ್‌ಭಾಷಾ ಮುಂಡರಗಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರೇಮಯ್ಯ ಬಾಳಿಹಳ್ಳಿಮಠ, ಪ್ರಧಾನಗುರು ಹಾಲೇಶ ಎಸ್. ಜಕ್ಕಲಿ, ಶಿಕ್ಷಕ ನೆಮೇಶ ಯರಗುಪ್ಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಉರುಳು ಸೇವೆ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ನರೇಗಲ್ಲ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಬೆಂಬಲಿಗರು ಶನಿವಾರ ಉರುಳು ಸೇವೆ ಸಲ್ಲಿಸಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಘಟನೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

ಪಟ್ಟಣದ ಸಂತೆ ಬಜಾರದಲ್ಲಿರುವ ಆಂಜನೇಯ ದೇವಸ್ಥಾನದಿಂದ ಗ್ರಾಮದೇವಿ ದೇವಸ್ಥಾನದವರೆಗೆ ಕಾರ್ಯಕರ್ತರು ಉರುಳು ಸೇವೆ ಸಲ್ಲಿಸಿ, “ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ದೊರಕಲಿ” ಎಂದು ಸಂಕಲ್ಪ ಮಾಡಿದರು. ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹರಕೆ ಹೊತ್ತು ಪ್ರಾರ್ಥಿಸಿದರು.

ಈ ವೇಳೆ ಮಾತನಾಡಿದ ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ, “ಜಿ.ಎಸ್. ಪಾಟೀಲರು ಜಿಲ್ಲೆಯ ಹಿರಿಯ ಶಾಸಕರಾಗಿ ಎಲ್ಲರನ್ನು ಸಮಾನವಾಗಿ ಕರೆದುಕೊಂಡು ಹೋಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದ ರಾಜಕಾರಣ ಮಾಡಿದ್ದಾರೆ. ಕ್ಷೇತ್ರದಲ್ಲಿ ನಿರಂತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇಂದಿರಾ ಗಾಂಧಿಯವರೊಂದಿಗೆ ಹೆಜ್ಜೆ ಹಾಕಿದ ಅವರ ಹಿರಿತನ ಹಾಗೂ ಪಕ್ಷಕ್ಕಾಗಿ ದುಡಿದ ಸೇವೆಯನ್ನು ಗುರುತಿಸಿ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ” ಎಂದು ಎಚ್ಚರಿಸಿದರು.

ಯುವ ಮುಖಂಡರಾದ ಸದ್ದಾಂ ನಶೇಖಾನ ಹಾಗೂ ಗುಡದಪ್ಪ ಗೋಡಿ ಮಾತನಾಡಿ, “ನೆಲ-ಜಲ ಅಭಿವೃದ್ಧಿಗಾಗಿ ಸಾವಿರಾರು ಕೆರೆಗಳನ್ನು ನಿರ್ಮಿಸಿ ‘ಸಾವಿರ ಕೆರೆಗಳ ಸರದಾರ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೈತರ ಭೂಮಿ ಉಳಿಸಿ, ಯುವಕರಿಗೆ ಉದ್ಯೋಗ ಕಲ್ಪಿಸಿ, ದೀನ ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಬದುಕಿನ ದಾರಿ ತೋರಿದ ನಾಯಕರಿಗೆ ಸಚಿವ ಸ್ಥಾನ ನೀಡದೇ ಇರುವುದು ಅನ್ಯಾಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ಸಿಗಲಿ ಎಂಬ ಉದ್ದೇಶದಿಂದ ನಮ್ಮೂರಿನ ದೇವರಿಗೆ ಹರಕೆ ಹೊತ್ತು ಉರುಳು ಸೇವೆ ಸಲ್ಲಿಸಿದ್ದೇವೆ. ಈಗಲಾದರೂ ಹೈಕಮಾಂಡ್ ಸರಿಯಾದ ನಿರ್ಧಾರ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಿಂಗನಗೌಡ ಲಕ್ಕನಗೌಡ್ರ, ವೀರನಗೌಡ ಪಾಟೀಲ, ಅಲ್ಲಾಬಕ್ಷಿ ನದಾಫ್, ಸಂತೋಷ ಹನಮಸಾಗರ, ಕಳಕಪ್ಪ ಅಬ್ಬಿಗೇರಿ, ಶೇಖಪ್ಪ ಜುಟ್ಲದ, ಅಂದಾನಗೌಡ ಪಾಟೀಲ, ಕಳನಗೌಡ ಪೊಲೀಸ್ ಪಾಟೀಲ, ಕುಮಾರಸ್ವಾಮಿ ಕೋರಧಾನ್ಯಮಠ, ಶೇಖಪ್ಪ ಕೆಂಗಾರ, ಎ.ಎ. ನವಲಗುಂದ, ಸೋಮನಗೌಡ ಲಕ್ಕನಗೌಡ್ರ, ಬಾಳಪ್ಪ ಸೋಮಗೊಂಡ, ಫಕ್ರುಸಾಬ್ ರೇವಡಿಗಾರ, ಮಹ್ಮದಗೌಸ ಹೊಸಮನಿ, ಮಾಸಪ್ಪ ಕೊಂಡಿ, ವೀರಪ್ಪ ಹಾಲನ್ನವರ, ಆಶೀಫ್ ಹೊಸಮನಿ, ಸುರೇಶ ಹುನಗುಂದ, ದಾದಾಸಾಬ ನದಾಫ್, ವೀರೇಶ ಪಮ್ಮಾರ, ಪ್ರಕಾಶ ಪಾದಗಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.

“ಸಾವಿರ ಕೆರೆಗಳ ಸರದಾರ, ಜನಪರ ನಾಯಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡದೇ ಇರುವುದು ಕ್ಷೇತ್ರದ ಜನರ ಭಾವನೆಗೆ ಧಕ್ಕೆ. ಈಗಲಾದರೂ ಹೈಕಮಾಂಡ್ ನ್ಯಾಯ ಕೊಡಬೇಕು.”

ಶರಣಪ್ಪ ಬೆಟಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

  • ಜಿ.ಎಸ್.ಪಿ ಸಚಿವರಾದ್ರೆ 101 ತೆಂಗಿನಕಾಯಿ ಹರಕೆ
  • ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ಸಿಗಲೆಂದು ಅಭಿಮಾನಿಗಳ ವಿಶೇಷ ಸಂಕಲ್ಪ
  • ನರೇಗಲ್ಲ ಗ್ರಾಮದೇವಿ ದುರ್ಗಾದೇವಿಗೆ 101 ತೆಂಗಿನಕಾಯಿ ಒಡೆಯುವ ಹರಕೆ
  • ಸಚಿವ ಸ್ಥಾನಕ್ಕಾಗಿ ಉರುಳು ಸೇವೆ, ಡೊಳ್ಳು ಮಜಲು ಮೂಲಕ ಪ್ರಾರ್ಥನೆ
  • “ಈ ಬಾರಿ ಜಿ.ಎಸ್.ಪಿಗೆ ಸಚಿವ ಸ್ಥಾನ ನೀಡಲೇಬೇಕು” ಎಂದು ಕಾರ್ಯಕರ್ತರ ಆಗ್ರಹ

ಜಲ್ಲಿ ದರ ಏರಿಕೆ ಅನಿವಾರ್ಯ: ಆರ್.ಸಿ. ಕಾಮಾಜಿ

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರದ ಭಾರಿ ದಂಡದ ಬರೆ, ಉತ್ಪಾದನಾ ವೆಚ್ಚದ ಏರಿಕೆ ಹಾಗೂ ಗಣಿಗಾರಿಕೆ ಕ್ಷೇತ್ರದ ಮೇಲಿನ ಕಠಿಣ ನಿಯಮಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಕ್ರಷರ್ ಉದ್ಯಮಿಗಳು ಜಲ್ಲಿ ಹಾಗೂ ಇತರೆ ನಿರ್ಮಾಣ ಸಾಮಗ್ರಿಗಳ ದರ ಹೆಚ್ಚಳಕ್ಕೆ ತೀರ್ಮಾನಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗದಗ ಜಿಲ್ಲಾ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಆರ್.ಸಿ. ಕಾಮಾಜಿ, “ಪೆಟ್ರೋಲ್, ಡೀಸೆಲ್, ವಿದ್ಯುತ್, ಕಾರ್ಮಿಕರ ವೇತನ ಸೇರಿದಂತೆ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ. ಇದರ ಜತೆಗೆ ಸರ್ಕಾರ ವಿಧಿಸುತ್ತಿರುವ ಕೋಟ್ಯಂತರ ರೂಪಾಯಿ ದಂಡ ಉದ್ಯಮದ ಬೆನ್ನೆಲುಬೇ ಮುರಿಯುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ದೇಶದ ಬೇರೆ ಯಾವುದೇ ರಾಜ್ಯದಲ್ಲಿಲ್ಲದಷ್ಟು ಕಠಿಣ ಕಾನೂನುಗಳನ್ನು ಜಾರಿಗೊಳಿಸಿ ಗಣಿಗಾರಿಕೆ ಉದ್ಯಮಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಆಡಿಟ್ ವರದಿಯನ್ನು ಕಡೆಗಣಿಸಿ ಕೆಎಸ್‌ಆರ್‌ಎಸ್‌ಎ ಮೂಲಕ ಡ್ರೋನ್ ಸರ್ವೇ ನಡೆಸಿರುವುದು ಅವೈಜ್ಞಾನಿಕ ಕ್ರಮ ಎಂದು ಟೀಕಿಸಿದರು.

“2005-06ರಿಂದ 2024ರವರೆಗಿನ ಸುಮಾರು 18 ವರ್ಷಗಳ ಹಳೆಯ ವರದಿಯನ್ನು ಆಧರಿಸಿ ಈಗಿನ ಮಾಲೀಕರಿಗೆ ‘ಒನ್ ಟೈಮ್ ಸೆಟ್ಲ್‌ಮೆಂಟ್’ ಹೆಸರಿನಲ್ಲಿ ದಂಡ ವಿಧಿಸುವುದು ಕಾನೂನುಬಾಹಿರ. ಈ ಅವಧಿಯಲ್ಲಿ ಮಾಲೀಕರು ಬದಲಾಗಿದ್ದರೂ ಹಳೆಯ ದಾಖಲೆ ಮುಂದಿಟ್ಟು ದಂಡ ಹಾಕಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಒಂದೇ ಕಚ್ಚಾ ವಸ್ತುವಿಗೆ ಎರಡು ಬಾರಿ ರಾಯಲ್ಟಿ ವಸೂಲಿ ಮಾಡುತ್ತಿದೆ. ಕ್ವಾರಿ ಮಾಲೀಕರಿಂದ ರಾಯಲ್ಟಿ ಪಡೆಯುವುದಲ್ಲದೆ, ಸರ್ಕಾರದ ಕಾಮಗಾರಿಗಳ ಗುತ್ತಿಗೆದಾರರಿಂದಲೂ ಮತ್ತೆ ರಾಯಲ್ಟಿ ವಸೂಲಿ ಮಾಡುತ್ತಿರುವುದು ಉದ್ಯಮದ ಮೇಲೆ ಹೆಚ್ಚುವರಿ ಹೊರೆ ತಂದಿದೆ ಎಂದು ದೂರಿದರು.

“ಉದ್ಯಮ ಉಳಿಸಿಕೊಳ್ಳಲು ಜಲ್ಲಿ ಹಾಗೂ ನಿರ್ಮಾಣ ಸಾಮಗ್ರಿಗಳ ದರ ಹೆಚ್ಚಳ ಅನಿವಾರ್ಯವಾಗಿದೆ. ಈ ಸಂಕಷ್ಟದ ಪರಿಸ್ಥಿತಿಯನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು” ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಡಿ. ಸುರೇಂದ್ರರೆಡ್ಡಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಕ್ರಷರ್ ಮಾಲೀಕರು ಉಪಸ್ಥಿತರಿದ್ದರು.

“ಸರ್ಕಾರದ ಭಾರಿ ದಂಡ, ಡೀಸೆಲ್-ವಿದ್ಯುತ್ ದರ ಏರಿಕೆಯಿಂದ ಕ್ರಷರ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ನಷ್ಟ ತಡೆಯಲು ಜಲ್ಲಿ ದರ ಹೆಚ್ಚಳ ಅನಿವಾರ್ಯವಾಗಿದೆ.”

ಆರ್.ಸಿ. ಕಾಮಾಜಿ

ಅಧ್ಯಕ್ಷರು, ಜಿಲ್ಲಾ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಸಂಘ

ಹವಾಮಾನ ಬದಲಾವಣೆಗೆ ಸಜ್ಜಾಗಬೇಕು: ಡಾ. ಸರಿತಾ

ವಿಜಯಸಾಕ್ಷಿ ಸುದ್ದಿ, ಗದಗ: ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಜಿಲ್ಲಾಮಟ್ಟದಲ್ಲಿ ಸಮಗ್ರ ಕ್ರಿಯಾ ಯೋಜನೆ ರೂಪಿಸಿ ಕಾರ್ಯಕ್ಷಮತೆ ವರದಿ ಸಿದ್ಧಪಡಿಸಬೇಕು ಎಂದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಹಿರಿಯ ಸಮಾಲೋಚಕಿ ಡಾ. ಸರಿತಾ ಅಧಿಕಾರಿಗಳಿಗೆ ಸಲಹೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆ ಕುರಿತು ಕ್ರಿಯಾ ಯೋಜನೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹವಾಮಾನ ಬದಲಾವಣೆಯ ಇಲಾಖಾ ಕ್ರಿಯಾ ಯೋಜನೆಗಳ ಕಾರ್ಯಕ್ಷಮತೆ ಸೂಚಕಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅರ್ಥಮಾಡಿಕೊಳ್ಳಬೇಕು. ಗದಗ ಜಿಲ್ಲೆಗೆ ಸಂಬಂಧಿಸಿದ ವರದಿಯನ್ನು ಪರಿಣಾಮಕಾರಿಯಾಗಿ ಸಿದ್ಧಪಡಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಹೊಸ ತಂತ್ರಜ್ಞಾನ ಬಳಸಿ ತ್ಯಾಜ್ಯ ನಿರ್ವಹಣೆ, ತ್ಯಾಜ್ಯದಿಂದ ಇಂಧನ ಉತ್ಪಾದನೆ, ನದಿ-ಕೆರೆಗಳ ನೀರಿನ ಗುಣಮಟ್ಟ ಕಾಪಾಡುವುದು ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಹವಾಮಾನ ಬದಲಾವಣೆ ಹಾಗೂ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ ಕುರಿತು ಸುದೀರ್ಘ ಮಾಹಿತಿ ನೀಡಿದ ಡಾ. ಸರಿತಾ, ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳ ಜವಾಬ್ದಾರಿಗಳನ್ನು ವಿವರಿಸಿದರು.

ವಿಷಯ ತಜ್ಞ ಶಶಿಕುಮಾರ್ ಜಲ ಸಂಪನ್ಮೂಲ ವಲಯದ ಹವಾಮಾನ ಕ್ರಿಯಾ ಯೋಜನೆ ಕುರಿತು ಮಾಹಿತಿ ನೀಡಿದರು.

ಗದಗ ಜಿಲ್ಲೆಯ ಎನ್‌ಆರ್‌ಡಿಎಂಎಸ್ ಅಧಿಕಾರಿ ಮಂಜುನಾಥ, ಎನ್‌ಆರ್‌ಡಿಎಂಎಸ್ ಕೇಂದ್ರದ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಭಾಗವಹಿಸಿದ್ದರು.

“ಹವಾಮಾನ ಬದಲಾವಣೆಯ ಸವಾಲು ಎದುರಿಸಲು ತ್ಯಾಜ್ಯ ನಿರ್ವಹಣೆ, ಹಸಿರು ಇಂಧನ ಬಳಕೆ ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು.”

ಡಾ. ಸರಿತಾ

ಹಿರಿಯ ಸಮಾಲೋಚಕಿ, ಎಂಪ್ರಿ ಬೆಂಗಳೂರು

ಶುದ್ಧ ಗಾಳಿಗೆ ಕಪ್ಪತ್ತಗುಡ್ಡವೇ ಕಾರಣ: ವಾಯ್.ಎಸ್. ಮತ್ತೂರ

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ತೋಂಟದ ಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯ ವಾಯ್.ಎಸ್. ಮತ್ತೂರ ಅವರು ಸಸಿಗಳಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, “ಏಷ್ಯಾದಲ್ಲೇ ಅತ್ಯಂತ ಶುದ್ಧ ಗಾಳಿ ಇರುವ ಪ್ರದೇಶಗಳಲ್ಲಿ ಗದಗ ಸುತ್ತಮುತ್ತಲಿನ ಪರಿಸರವೂ ಒಂದು. ಇದಕ್ಕೆ ಪ್ರಮುಖ ಕಾರಣ ಕಪ್ಪತ್ತಗುಡ್ಡ. ಕಪ್ಪತ್ತಗುಡ್ಡವನ್ನು ಖಾಸಗಿ ಕಂಪನಿಗಳಿಂದ ನಾಶವಾಗದಂತೆ ಹಗಲು-ರಾತ್ರಿ ಉಪವಾಸ ಸತ್ಯಾಗ್ರಹ ನಡೆಸಿ ಸಂರಕ್ಷಿಸಿದ ಕೀರ್ತಿ ಪರಮಪೂಜ್ಯ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿಗಳಿಗೆ ಸಲ್ಲುತ್ತದೆ,” ಎಂದು ಹೇಳಿದರು.

“ಭೂಮಿಯನ್ನು ತಾಯಿಯಂತೆ ಗೌರವಿಸುವುದು ಹಾಗೂ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನಾವೆಲ್ಲರೂ ಪರಿಸರ ಉಳಿವಿಗಾಗಿ ಕೈಜೋಡಿಸಬೇಕು,” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಸಿ ನೆಟ್ಟು ಪರಿಸರ ಕಾಳಜಿ ಅಭಿಯಾನಕ್ಕೆ ಕೈಜೋಡಿಸಿದರು.

error: Content is protected !!