Home Blog Page 271

ಸಹಕಾರಿ ಸಂಘಗಳು ರಾಜಕೀಯ ಬದಿಗಿಟ್ಟು ಬೆಳೆಯುವಂತಾಗಲಿ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುವ ಮೂಲಕ ಕೃಷಿ ಹಾಗೂ ಕೃಷಿ ಉಪ ಕಸಬುಗಳಿಗೆ ಸಹಕಾರಿ ಸಂಘಗಳ ಮೂಲಕ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ವಿತರಿಸುತ್ತಿದ್ದು, ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ. ಗ್ರಾಮದಲ್ಲಿ ಸಹಕಾರಿ ಸಂಘಗಳ ಬೆಳವಣಿಗೆಯಿಂದ ಗ್ರಾಮೀಣ ಜನರ ಜೀವನ ಹಸನಾಗುವುದು ಎಂದು ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ಗದಗ ತಾಲೂಕಿನ ಮುಳಗುಂದ ಸಮೀಪದ ಸೊರಟೂರು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ 500 ಮೆಟ್ರಿಕ್ ಟನ್ ಸಾಮರ್ಥ್ಯದ ಗೋಡಾನ್ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಸಚಿವರು ಮಾತನಾಡಿದರು.

ಗ್ರಾಮದಲ್ಲಿನ ಸಹಕಾರಿ ಸಂಘಗಳು ರಾಜಕೀಯ ಹೊರತುಪಡಿಸಿ ಸ್ಪರ್ಧಾತ್ಮಕ ಮನೋಭಾವದಿಂದ ಬೆಳೆಯುವಂತಾಗಬೇಕು. ಅಂದಾಗ ಮಾತ್ರ ಸಹಕಾರಿ ಚಳುವಳಿಗೆ ಬಲ ಬಂದಂತಾಗುತ್ತದೆ ಎಂದರು.

ರೈತರು ಹಾಗೂ ಬಡ ಕೃಷಿಕರು ಹೆಚ್ಚಿನ ಬಡ್ಡಿಯಲ್ಲಿ ಸಾಲವನ್ನು ಪಡೆದು ಕೃಷಿ ಮಾಡುವುದು ಇಂದಿನ ದಿನಮಾನಗಳಲ್ಲಿ ಲಾಭದಾಯಕವಲ್ಲ. ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರ ಬಡವರ ಪರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಆ ಎಲ್ಲ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ಸೊರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲ ನಾಲ್ಕು ಸಹಕಾರಿ ಸಂಘಗಳಿಗೆ ಸೌಲಭ್ಯ ಕಲ್ಪಿಸಲಾಗುವುದು. ಶತಮಾನ ಪೂರೈಸಿರುವ ಸೊರಟೂರು ಸಹಕಾರಿ ಸಂಘ ಮಲ್ಲಪ್ಪ ಕಲ್ಲಗುಡಿ ಅವರ ನೇತೃತ್ವದಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸುತ್ತಿದ್ದು, ಇನ್ನಷ್ಟು ಬೆಳವಣಿಗೆ ಹೊಂದಬೇಕು ಎಂದರು.

ಮುಖಂಡರಾದ ಭದ್ರೇಶ ಕುಸುಲಾಪೂರ ಮಾತನಾಡಿ, ಗ್ರಾಮೀಣ ಸಹಕಾರಿ ಸಂಘಗಳ ಬೆಳವಣಿಗೆಗೆ ಸಚಿವ ಎಚ್.ಕೆ. ಪಾಟೀಲರ ಸಹಾಯದಿಂದ ಎಲ್ಲ ಸಂಘಗಳು ವಿವಿಧ ಸೌಲಭ್ಯಗಳನ್ನು ರೈತರಿಗೆ ನೀಡುತ್ತಿದ್ದು, ಸೊರಟೂರಿನ ಒಟ್ಟು ನಾಲ್ಕು ಸಹಕಾರಿ ಸಂಘಗಳು ಸ್ಥಾಪನೆಯಾಗಿವೆ. ಆ ಸಂಘಗಳು ಬೆಳವಣಿಗೆ ಹೊಂದಲು ಅನುದಾನವನ್ನು ಒದಗಿಸಬೇಕು ಎಂದರು.

ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಸೊರಟೂರು ಸಹಕಾರಿ ಸಂಘದ ಅಧ್ಯಕ್ಷ ಮಲ್ಲಪ್ಪ ಕಲ್ಲಗುಡಿ ಮಾತನಾಡಿ, ಸದ್ಯ 47 ಲಕ್ಷ ರೂ ವಿಶೇಷ ಅನುದಾನದಡಿಯಲ್ಲಿ 500 ಮೆಟ್ರಿಕ್ ಟನ್ ಸಾಮರ್ಥ್ಯದ ಗೋಡಾನ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದೆ. ಮುಂದಿನ ದಿನಗಳಲ್ಲಿ 1 ಕೋಟಿ ರೂಪಾಯಿ ನೆಪೆಡ್ ಸಂಸ್ಥೆಯ ವಿಶೇಷ ಅನುದಾನದಡಿಯಲ್ಲಿ ದೊಡ್ಡ ಪ್ರಮಾಣದ ಗೋಡಾನ್ ನಿರ್ಮಾಣದ ಗುರಿ ಹೊಂದಲಾಗಿದೆ. ಗದಗ ತಾಲೂಕಿನ ಎಲ್ಲ ಸಹಕಾರಿ ಸಂಘಗಳು ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಚಿವ ಎಚ್.ಕೆ. ಪಾಟೀಲ ಹಾಗೂ ಡಿ.ಆರ್. ಪಾಟೀಲರ ಮಾರ್ಗದರ್ಶನದಲ್ಲಿ ಸಹಕಾರಿ ಸಂಘಗಳು ಜನೋಪಯೋಗಿ ಕೆಲಸ ಮಾಡುತ್ತಿವೆ ಎಂದರು.

ಈ ಸಂದರ್ಭದಲ್ಲಿ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಸಿದ್ದು ಪಾಟೀಲ, ಪ್ರಮೋದ ಇನಾಮದಾರ, ಸಹಕಾರಿ ಸಂಘದ ಉಪಾಧ್ಯಕ್ಷರಾದ ಪರಸಪ್ಪ ಮಲ್ಲಾರಿ, ಫಕೀರಪ್ಪ ಮಟ್ಟಿ, ಪರಶುರಾಮ ಹೂಗಾರ, ರಾಮಣ್ಣ ತಳವಾರ, ಮಹಾಂತೇಶ್ ಹಳ್ಳಿ, ಮುರುಗೇಶ್ ಕುಸುಲಾಪೂರ, ಚನ್ನಪ್ಪ ಕುಸುಲಾಪೂರ, ಮೆಹಬೂಬಸಾಬ ಬಾಬುಖಾನವರ, ನೀಲವ್ವ ಪಾಟೀಲ, ಚೆನ್ನವ್ವ ತಳವಾರ, ಬಸವರಾಜ ಗಾಣಿಗೇರ, ಶರೀಫಸಾಬ ಅತ್ತಿಕಟ್ಟಿ, ವೀರೇಶ ಬೋಳ್ನವರ, ಮಂಜು ಗದುಗಿನ, ತಿರಕಪ್ಪ ಬೋಳ್ನವರ, ವೆಂಕನಗೌಡ ಪಾಟೀಲ, ಮಾನಪ್ಪ ಲಮಾಣಿ, ಮೇಲಗಿರಿಗೌಡ ಪಾಟೀಲ, ಜಯಶ್ರೀ ಬಂಕಾಪುರ, ಮೆಹಬೂಬಸಾಬ ಯಕಲಾಸಪೂರ, ಶಿವಮೂರ್ತಿ ಕರಿಗೌಡ್ರ, ರಾಮಣ್ಣ ಶಲಿಯಪ್ಪನವರ, ಅಡಿವೆಪ್ಪ ಕನ್ನೂರ, ಮಹದೇವಪ್ಪ ಹಡಪದ ಮುಂತಾದವರು ಇದ್ದರು.

ಕೆಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಪ್ಪ ಕಲ್ಲಗುಡಿ ಮಾತನಾಡಿ, ಧಾರವಾಡದ ಕೆಸಿಸಿ ಬ್ಯಾಂಕ್ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಸಂದರ್ಭದಲ್ಲಿ ಸಚಿವರಾದ ಎಚ್.ಕೆ. ಪಾಟೀಲ ಹಾಗೂ ಡಿ.ಆರ್. ಪಾಟೀಲರ ವಿಶೇಷ ಕಾಳಜಿಯಿಂದ ಪಟ್ಟಣದ ಅರ್ಬನ್ ಬ್ಯಾಂಕ್ ಫೆಡರೇಷನ್ ವತಿಯಿಂದ 48 ಕೋಟಿ ರೂಗಳ ಠೇವಣಿಯನ್ನು ಇಡುವ ಮೂಲಕ ಧಾರವಾಡ ಕೆಸಿಸಿ ಬ್ಯಾಂಕ್ ಪುನಶ್ಚೇತನಗೊಳಿಸುವಲ್ಲಿ ಸಹಾಯ ಮಾಡಿದ್ದರು. ಇಂದು ಧಾರವಾಡ ಕೆಸಿಸಿ ಬ್ಯಾಂಕ್ ಇಷ್ಟು ಎತ್ತರದಲ್ಲಿ ಬೆಳೆಯಲು ಹಾಗೂ ಏಷ್ಯಾ ಖಂಡದಲ್ಲಿ ಮೊದಲು ಸ್ಥಾಪನೆಯಾದ ಕಣಗಿನಹಾಳ ಸಹಕಾರಿ ಸಂಘ ಪುನಶ್ಚೇತನಗೊಳ್ಳಲು ಎಚ್.ಕೆ. ಪಾಟೀಲರು ಮಾಡಿದ ಸಹಾಯ ಮರೆಯಲು ಸಾಧ್ಯವಿಲ್ಲ ಎಂದರು.

ರಾಜ್ಯದ ತಲಾ ಆದಾಯದಲ್ಲಿ ದಕ್ಷಿಣ ಕರ್ನಾಟಕ ಮುಂದಿದ್ದು, ಉತ್ತರ ಕರ್ನಾಟಕ ಅತ್ಯಂತ ಹಿಂದಿದೆ. ಗದಗ ಜಿಲ್ಲೆಯಲ್ಲಿ ಪ್ರತಿ ವ್ಯಕ್ತಿಯ ತಲಾ ಆದಾಯ 1 ಲಕ್ಷ 94 ಸಾವಿರ ರೂ ಇದೆ. ನಾವು ಅವರಂತೆ ತಲಾ ಆದಾಯ ಹೆಚ್ಚಿಸಲು ಗ್ರಾಮೀಣ ಭಾಗದಲ್ಲಿ ರೈತರು ಹೆಚ್ಚು ಹೈನೋದ್ಯಮವನ್ನು ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಸೊರಟೂರಿನ 4 ಸಹಕಾರಿ ಸಂಘಗಳು ಎರಡು ವರ್ಷದಲ್ಲಿ 500 ಜನರಿಗೆ ಹೈನುಗಾರಿಕೆ ಕೈಗೊಳ್ಳಲು ಸಾಲ ಸೌಲಭ್ಯ ನೀಡಿದೆ. ಸುಧಾರಿತ ಹೈನುಗಾರಿಕೆ ಕೈಗೊಳ್ಳಲು ಸಹಕಾರಿ ಸಂಘಗಳು ರಚನಾತ್ಮಕ ಕೆಲಸ ಮಾಡಬೇಕು ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಡಾ. ಅಂಬೇಡ್ಕರ್‌ರ ಮೇಲಿನ ಅಸಹಿಷ್ಣುತೆ ದೂರವಾಗಲಿ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮಹಾತ್ಮ ಗಾಂಧಿ ಸರ್ಕಲ್‌ನಲ್ಲಿ ವಿವಿಧ ದಲಿತ ಸಂಘಟನೆಗಳ ವತಿಯಿಂದ ಮನುಸ್ಮೃತಿ ದಹನ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ವೆಂಕಟೇಶಯ್ಯ ಮಾತನಾಡಿ, ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಇನ್ನೂ ದಲಿತರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಮುನ್ನುಡಿ ಬರೆದು ಭಾರತವನ್ನು ಅಂಧಕಾರಕ್ಕೆ ತಳ್ಳಿದ್ದ ಮನುಸ್ಮೃತಿಯನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಸುಟ್ಟುಹಾಕಿ 98 ವರ್ಷಗಳಾದವು ಎಂದರು.

ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಸತೀಶ ಹುಲಿ ಮಾತನಾಡಿ, ಸಮ ಸಮಾಜ ನಿರ್ಮಾಣದ ಕನಸು ಹೊತ್ತು, ಸಮಾನತೆ, ಸಹೋದರತೆ, ಭ್ರಾತೃತ್ವದ ಆಶಯದೊಂದಿಗೆ ಸಂವಿಧಾನವನ್ನು ರೂಪಿಸಿಕೊಂಡೆವು. ಈ ಸಂವಿಧಾನ ರಚನೆಗೆ ಬಾಬಾ ಸಾಹೇಬರ ಕೊಡುಗೆ ಅಗಾಧ. ಆದರೆ ಸಂವಿಧಾನ ಸಮರ್ಪಣೆಯಾದ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಮುಖವಾಣಿ ‘ಆರ್ಗನೈಸರ್’ ಪತ್ರಿಕೆಯು ನಮ್ಮ ಸಂವಿಧಾನದ ಮೇಲೆ ಅಸಹನೆಯನ್ನು ಹೊರಹಾಕಿತ್ತು ಎಂದು ಸ್ಮರಿಸಿದರು.

ಡಿಎಸ್‌ಎಸ್ ಮುಖಂಡ ಬಸವರಾಜ ಕೆ. ಪೂಜಾರ ಮಾತನಾಡಿ, ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಆರ್‌ಎಸ್‌ಎಸ್ ಮತ್ತು ಬಿಜೆಪಿಯು ಅಂದಿನಿಂದ ಇಂದಿನವರೆಗೂ ಆಂತರಿಕವಾಗಿಯೂ ಬಹಿರಂಗವಾಗಿಯೂ ಡಾ. ಅಂಬೇಡ್ಕರ್ ಅವರ ಮೇಲೆ, ಸಂವಿಧಾನದ ಮೇಲೆ ಅಸಹಿಷ್ಣುತೆಯನ್ನು ಹೊರಹಾಕುತ್ತಲೇ ಬಂದಿದೆ. ಬಾಬಾ ಸಾಹೇಬರು ಮನುಸ್ಮೃತಿಯನ್ನು ದಹಿಸಿದ ದಿನವಾದ ಡಿಸೆಂಬರ್ 25ರಂದು ಸಾಂಕೇತಿಕವಾಗಿ ಪಾಲಿಸಿ, ಡಾ. ಅಂಬೇಡ್ಕರ್ ಹೋರಾಟವನ್ನು ಮುಂದುವರಿಸೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಪ್ರಕಾಶ ಕೇಲೂರ, ವಾಸುದೇವ ಹುಣಸೀಮರದ, ಗುರುರಾಜ ಭಜಂತ್ರಿ, ವಿದ್ಯಾಧರ ದೊಡ್ಡಮನಿ, ಎಸ್.ಎನ್. ಬಳ್ಳಾರಿ ಗುರುಗಳು, ಶಿವಾನಂದ ಗೋಗೇರಿ, ಫಕ್ಕೀರಪ್ಪ ಭಜಂತ್ರಿ, ಮಲ್ಲಪ್ಪ ಸಣ್ಣಕ್ಕಿ, ಬಸವರಾಜ ಸತ್ಯಮ್ಮನವರ, ಪ್ರಕಾಶ ಕಾಳೆ, ಪರಮೇಶ ಕಾಳೆ, ಶಂಭು ಕಾಳೆ, ಪ್ರಕಾಶ ಕಾಳೆ ಹೊಂಬಳ, ಮಂಜು ಹುಣಸೀಮರದ, ಶ್ರೀನಿವಾಸ ಬಾಗಲಕೋಟ, ಸಿದ್ದಣ್ಣ ಮೇಳೆನ್ನವರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

ದಲಿತ ಮುಖಂಡ ರಮೇಶ ಬಾಳಮ್ಮನವರ ಮಾತನಾಡುತ್ತ, ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ದಲಿತ, ಸಮಾನಮನಸ್ಕ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.

ಬೀದಿ ಬದಿ ವ್ಯಾಪಾರಸ್ಥರ ಹಕ್ಕುಗಳು ರಕ್ಷಣೆಯಾಗಲಿ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಸ್ಥರ ಸಂಘ ಸಿಐಟಿಯು ಸಂಯೋಜಿತ ಗಜೇಂದ್ರಗಡ ತಾಲೂಕಾ ಸಮಿತಿಯು ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳ ರಕ್ಷಣೆಗಾಗಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಮೆರವಣಿಗೆ, ತಾಲೂಕು ಸಮ್ಮೇಳನ ಹಮ್ಮಿಕೊಂಡಿತು.

ಬಹಿರಂಗ ಸಭೆಯನ್ನು ಸಂಘದ ಗೌರವಾಧ್ಯಕ್ಷ ಮತ್ತು ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ಬಾಲು ರಾಠೋಡ ಉದ್ಘಾಟಿಸಿ ಮಾತನಾಡಿ, ಇಂದು ನಡೆದ ಬೃಹತ್ ಮೆರವಣಿಗೆಯು ನಮ್ಮ ಹಕ್ಕುಗಳಿಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ. ಈ ಮೂಲಕ ಜನರ ಮಧ್ಯೆ ಚರ್ಚೆಯನ್ನು ಹುಟ್ಟುಹಾಕಿದ ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಸ್ಥರ ಸಂಘವು ಗಜೇಂದ್ರಗಡದಲ್ಲಿ 2014ರಿಂದಲೇ ಕಾರ್ಯ ನಿರ್ವಹಿಸುತ್ತಿದ್ದು, ಅನೇಕ ಹೋರಾಟಗಳನ್ನು ಮಾಡಿದೆ ಎಂದರು.

ಯುವ ಮುಖಂಡ ಎಫ್.ಎಫ್. ತೋಟದ ಮಾತನಾಡಿ, ಈ ಸಮ್ಮೇಳನ ಅಚ್ಚುಕಟ್ಟಾಗಿ ನಡೆಯುತ್ತಿದೆ. ಸಮ್ಮೇಳನದ ಮೂಲಕ ಮತ್ತೆ ಹೊಸ ಬೇಡಿಕೆಗಳ ಆಧಾರದಲ್ಲಿ ಹೋರಾಟಗಳನ್ನು ರೂಪಿಸಿ ನ್ಯಾಯ ಪಡೆಯಿರಿ. ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದರು.

ತಾಲೂಕು ಉಪಾಧ್ಯಕ್ಷ ಮಾಂಡ್ರೆ, ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಗಣೇಶ್ ರಾಥೋಡ್, ಬೀದಿಬದಿ ವ್ಯಾಪಾರಸ್ಥರ ಸಂಘಟನೆಯ ತಾಲೂಕು ಅಧ್ಯಕ್ಷ ಎಸ್.ಬಿ. ದಿಂಡವಾಡ್ ಮಾತನಾಡಿದರು. ಪೀರು ರಾಠೋಡ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯ ಮೇಲೆ ಸಿಐಟಿಯು ಮುಖಂಡರಾದ ಮೈಬು ಹವಾಲ್ದಾರ್, ಕಟ್ಟಡ ಕಾರ್ಮಿಕರ ಸಂಘದ ತಾಲೂಕಾಧ್ಯಕ್ಷ ಅಂದಪ್ಪ ಕುರಿ, ಎಸ್.ಎಫ್. ಜಿಲ್ಲಾಧ್ಯಕ್ಷ ಚಂದ್ರು ರಾಥೋಡ್, ಪಿವಿಸಿ ಕಮಿಟಿಯ ಸದಸ್ಯ ಚೌಡಮ್ಮ ಯಲ್ಪು, ರಾಜು ಮಾಂಡ್ರೆ, ಮಂಜುಳಾ ಪಮ್ಮಾರ, ಚಂದ್ರಶೇಖರ ರಾಠೋಡ, ಅಂಬರೀಶ್ ಚವ್ಹಾಣ, ಕಳಕಪ್ಪ ಮಾಳೋತ್ತರ, ಕೆ.ಸಿ. ಗೋಡೇಕಾರ, ಉಮೇಶ ನಾವಡೆ, ಸುನೀಲ್ ಕುಂಬಾರ, ಮುತ್ತಣ್ಣ ರಾಠೋಡ, ಅನ್ವರಬಾಸ್ ಹಿರೇಕೋಪ್ಪ, ಮೈಬುಬ ಹವಾಲ್ದಾರ್, ವಿಷ್ಣು ಚಂದುಕರ, ಗಂಗಾಧರ್ ಸತ್ಯಣವರ, ಸಬೀನಾ ಮುಧೋಳ, ದೇವಕ್ಕ ರಾಠೋಡ, ರೇಣವ್ವ ರಾಠೋಡ ಮುಂತಾದವರಿದ್ದರು.

ಪ್ರಾಸ್ತಾವಿಕವಾಗಿ ತಾಲೂಕು ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ, ಗಜೇಂದ್ರಗಡ ನಗರವು ವ್ಯಾಪಾರಸ್ಥರ ಕೇಂದ್ರವಾಗಿದ್ದು, ವ್ಯಾಪಾರ ಬೆಳೆಯುತ್ತಲೇ ಇದೆ. ನಗರದಲ್ಲಿನ ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ಬದುಕು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಅವರಿಗೆ ನೀಡಬೇಕಾದ ಕಾನೂನುಬದ್ಧ ಸೌಲಭ್ಯಗಳನ್ನು ನೀಡದಿದ್ದಾಗ ಬೀದಿಗೆ ಇಳಿದು ನ್ಯಾಯಯುತವಾಗಿ ಹೋರಾಟ ಮಾಡಿ ಕೆಲವು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘದ ನೇತೃತ್ವದಲ್ಲಿ ಸಾಧ್ಯವಾಗಿದೆ ಎಂದರು.

ಸಕಲರ ಹಿತ ಬಯಸುವುದೇ ಮಾನವ ಧರ್ಮ: ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಾನವರ ಕಲ್ಯಾಣವನ್ನು ತನ್ನ ಜೀವನದ ಗುರಿಯಾಗಿಸಿಕೊಂಡು ಜಗತ್ತಿನ ಎಲ್ಲ ಜೀವರಾಶಿಗಳು ನೆಮ್ಮದಿಯಿಂದ ಜೀವನ ಸಾಗಿಸಬೇಕು ಎಂಬ ಸಂದೇಶ ಸಾರಿದ ಏಕೈಕ ವ್ಯಕ್ತಿ ಏಸು ಕ್ರಿಸ್ತರಾಗಿದ್ದಾರೆ ಎಂದು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಹೇಳಿದರು.

ಅವರು ಪಟ್ಟಣದ ಮುಕ್ತಿನಗರದಲ್ಲಿರುವ ಬ್ಲೆಸಿಂಗ್ ಗಾಸ್ಪೆಲ್ ಪ್ರೇಯರ್ ಚರ್ಚ್‌ನಲ್ಲಿ ಗುರುವಾರ ಕ್ರಿಸ್‌ಮಸ್ ಅಂಗವಾಗಿ ಏಸು ಕ್ರಿಸ್ತನ ಜನ್ಮದಿನವನ್ನು ಕೇಕ್ ಕತ್ತರಿಸಿ ಶುಭಕೋರಿ ಮಾತನಾಡಿದರು.

ಜಗತ್ತಿನಲ್ಲಿ ವಾಸ ಮಾಡುತ್ತಿರುವ ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುವುದೇ ನಿಜವಾದ ಧರ್ಮ. ದೇವನೊಬ್ಬ ನಾಮ ಹಲವು ಎನ್ನುವಂತೆ ಏಸುಕ್ರಿಸ್ತ ಕೂಡಾ ದೇವರ ಅವತಾರವಾಗಿದ್ದಾರೆ. ನೊಂದ, ಎಲ್ಲರಿಂದ ನಿರ್ಲಕ್ಷಿಸಲ್ಪಟ್ಟ, ರೋಗರುಜಿನಗಳಿಗೆ ಒಳಗಾಗಿರುವ ಎಲ್ಲರನ್ನು ನನ್ನ ಭಕ್ತರು ಎಂದು ಏಸುಕ್ರಿಸ್ತರು ಹೇಳಿದ್ದರು. ಅವರು ಸಮಾಜಕ್ಕೆ ಕೊಟ್ಟ ಸಂದೇಶಗಳು ಶ್ರೇಷ್ಠವಾಗಿದ್ದು, ಎಲ್ಲರೂ ನನ್ನವರೆಂಬ ಭಾವ ಬೆಳೆಸಿಕೊಳ್ಳುವಂತೆ ಅವರು ಉತ್ತಮ ಸಂದೇಶ ಸಾರಿದ್ದರು ಎಂದು ಹೇಳಿದರು.

ಚರ್ಚ್ನ ಫಾದರ್ ರೆ. ಜಿ.ಎಂ.ನಾಯಕ್ ಮಾತನಾಡಿ, ಏಸುಕ್ರಿಸ್ತನ ಸಂದೇಶಗಳು ಸರ್ವರಿಗೂ ಏಳಿಗೆಯನ್ನು ಬಯಸುವವಾಗಿವೆ. ಬಡವ, ಬಲ್ಲಿದ, ಜಾತಿ, ವಿಜಾತಿ ಯಾವುದನ್ನೂ ನೋಡದೆ ಮನುಷ್ಯನನ್ನಾಗಿ ನೋಡು ಎನ್ನುವ ತತ್ವವನ್ನು ಇಡೀ ಜಗತ್ತಿಗೆ ಏಸುಕ್ರಿಸ್ತರು ತೋರಿಸಿಕೊಟ್ಟಿದ್ದಾರೆ. ಎಲ್ಲ ಧರ್ಮಗಳು ಒಳ್ಳೆಯದನ್ನು ಬಯಸುವಂತೆ ಹೇಳುತ್ತವೆ, ನಮ್ಮ ನೆರಹೊರೆಯ ಪರಸ್ಪರರನ್ನು ಪ್ರೀತಿಸದ ಹೊರತು ಮನುಕುಲದ ಉದ್ಧಾರ ಸಾಧ್ಯವಿಲ್ಲ ಎಂಬುದು ಏಸುಕ್ರಿಸ್ತನ ನುಡಿಯಾಗಿತ್ತು ಎಂದರು.

ಈ ಸಂದರ್ಭದಲ್ಲಿ ಯಶೋಧಾ ನಾಯಕ್, ರಾಮಪ್ಪ ಗಡದವರ, ವಿಜಯ ಕರಡಿ, ಈರಣ್ಣ ಅಂಕಲಕೋಟಿ, ಎಂ.ಕೆ. ಕಳ್ಳಿಮಠ ದಂಪತಿಗಳು, ಡಿ.ಎಂ. ಪೂಜಾರ, ಪ್ರೀತಂ ಮತ್ತು ಪ್ರವೀಣ ಸೇರಿದಂತೆ ಅನೇಕರು ಇದ್ದರು. ವಿವಿಧ ಭಾಗಗಳಿಂದ ನೂರಾರು ಭಕ್ತರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಬಟ್ಟೆ, ಸಿಹಿ ತಿನಿಸು ಇತ್ಯಾದಿಗಳನ್ನು ವಿತರಿಸಲಾಯಿತು.

ಪ್ರಕೃತಿ ಮನುಷ್ಯನ ಜೀವಾಳವಾಗಿದೆ: ಶಾಸಕ ಡಾ. ಚಂದ್ರು ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರಕೃತಿ ಚಿಕಿತ್ಸೆ ಎಂಬುದು ಮಾನವನ ದೇಹ, ಮನಸ್ಸು ಮತ್ತು ಆತ್ಮ ಸಮತೋಲನದ ಮೇಲೆ ಆಧಾರಿತವಾದ ನೈಸರ್ಗಿಕ ಚಿಕಿತ್ಸಾ ವಿಧಾನವಾಗಿದೆ. ಇತ್ತೀಚಿನ ದಿನಗಳಲ್ಲಿ ಬಿ.ಪಿ, ಶುಗರ್, ಹೃದಯರೋಗ ಸಾಮಾನ್ಯ ಕಾಯಿಲೆಯಾಗಿದೆ. ಅದರೊಂದಿಗೆ ಮಧುಮೇಹ ಕೂಡ ಸೇರಿಕೊಂಡಿದೆ. ಫಾಸ್ಟ್‌ಫುಡ್, ಬೇಕರಿ ತಿನಿಸುಗಳಿಂದ ದೂರವಿರಬೇಕು. ಪ್ರಕೃತಿ ಮನುಷ್ಯನ ಜೀವಾಳವೇ ಆಗಿದ್ದು, ಪ್ರಕೃತಿ ಚಿಕಿತ್ಸೆಯಿಂದ ತೊಂದರೆಯಿಲ್ಲ ಹಾಗೂ ದುಶ್ಚಟಗಳಿಂದ ದೂರವಿದ್ದಲ್ಲಿ ಉತ್ತಮ ಆರೋಗ್ಯ ನಮ್ಮದಾಗುವದರಲ್ಲಿ ಸಂಶಯವಿಲ್ಲ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಅಗಡಿ ಸನ್‌ರೈಸ್ ಹಾಸ್ಪಿಟಲ್, ಕೆ.ಎಚ್. ಪಾಟೀಲ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಸಂಸ್ಥೆ ಹುಲಕೋಟಿ, ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘ ಲಕ್ಷ್ಮೇಶ್ವರ ಮತ್ತು ಇನ್ನರ್‌ವೀಲ್ ಕ್ಲಬ್ ಲಕ್ಷ್ಮೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಅಗಡಿ ಸನ್‌ರೈಸ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಶಿಬಿರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹುಲಕೋಟಿಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞರಾದ ಡಾ. ಸತೀಶ ಹೊಂಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವನು ಪ್ರಕೃತಿಯ ಅವಿಭಾಜ್ಯ ಅಂಗ. ಪ್ರಕೃತಿಯ ಪಂಚಭೂತಗಳಾದ ಮಣ್ಣು, ನೀರು, ವಾಯು, ಅಗ್ನಿ ಮತ್ತು ಆಕಾಶ ಇವುಗಳ ಸಮತೋಲನದ ಮೇಲೆ ಮನುಷ್ಯನ ಆರೋಗ್ಯ ನಿರ್ಧಾರವಾಗುತ್ತದೆ. ಯುವ ಜನತೆ ದುಶ್ಚಟಗಳಿಂದ ದೂರ ಇರಬೇಕು. ಅಲ್ಲದೆ ವಾರಕ್ಕೆ ಒಮ್ಮೆಯಾದರೂ ಉಪವಾಸ ಮಾಡಲೇಬೇಕು. ಇದು ದೇಹದ ರಕ್ಷಣೆಗೆ ಅಗತ್ಯ. ಅದರೊಂದಿಗೆ ಮಿತಾಹಾರ ಸೇವನೆಯೇ ಆರೋಗ್ಯದ ಗುಟ್ಟು. ಪರಿಸರದಲ್ಲಿ ಮಣ್ಣು, ನೀರು, ಗಾಳಿ ಇವುಗಳು ಸರಿಯಾಗಿದ್ದಲ್ಲಿ ಆರೋಗ್ಯವು ಸರಿಯಾಗಿರುತ್ತದೆ. ಒತ್ತಡ ರಹಿತ ಜೀವನ, ಯೋಗ, ಸಾತ್ವಿಕ ಆಹಾರ ಮೈಗೂಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರಕೃತಿಯ ನಿಯಮದಿಂದ ಮನುಷ್ಯ ದೂರ ಸರಿಯುತ್ತಿರುವದರಿಂದ ರೋಗ-ರುಜಿನಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಅತಿಥಿಗಳಾಗಿ ಡಾ. ಪಿ.ಡಿ. ತೋಟದ, ಇನ್ನರ್‌ವೀಲ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷೆ ಮಾಲಾದೇವಿ ದಂದರಗಿ, ಡಾ. ಸುಜಾತಾ ಸಂಗೂರ, ಡಾ. ಎಸ್.ಜಿ. ಹೂವಿನ, ಡಾ. ಶಿವಾನಂದ ಹೂವಿನ, ಡಾ. ಬೆಳವಿಗಿ, ಡಾ. ಸಿ.ಆರ್. ಕಲಿವಾಳಮಠ, ಐ.ಎಸ್. ಮಡಿವಾಳರ, ಅಗಡಿ ಆಸ್ಪತ್ರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞೆ ಡಾ. ಶೃತಿ ಹೂವಿನ, ಚನ್ನಪ್ಪ ಕೋಲಕಾರ ಸೇರಿದಂತೆ ಅನೇಕರಿದ್ದರು. ಆಡಳಿತಾಧಿಕಾರಿ ಶ್ರೀಕಾಂತ ಪಾಟೀಲ ಸ್ವಾಗತಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಆರ್. ಲಕ್ಕುಡಿಮಠ, ಚಂಬಣ್ಣ ಬಾಳಿಕಾಯಿ, ಅಗಡಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜಶೇಖರ ಮೂಲಿಮನಿ ಮಾತನಾಡಿದರು.

ಗಾಂಧೀಜಿ, ಡಾ. ಅಂಬೇಡ್ಕರ್ ಭಾವಚಿತ್ರಗಳಿಗೆ ಅವಮಾನ ಮಾಡಿದವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಡಿಎಸ್‌ಎಸ್ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ನಾಕಾದಲ್ಲಿ ಕಳೆದ ತಿಂಗಳು ಗೋವಿನಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ಸಮಗ್ರ ರೈತ ಸಂಘಟನೆಗಳು ಸುಮಾರು 18 ದಿನಗಳ ಕಾಲ ಹೋರಾಟ ನಡೆಸಿ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಮಾಡುವಲ್ಲಿ ಸಫಲವಾಗಿತ್ತು. ಇದರಿಂದ ಎಲ್ಲ ರೈತರಿಗೂ ಅನುಕೂಲವಾಗಿದ್ದು, ಹೋರಾಟಗಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಆದರೆ, ಇದೇ ಹೋರಾಟದ ವೇದಿಕೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಗಳಿಗೆ ಅವಮಾನ ಮಾಡಿರುವುದನ್ನು ಡಿಎಸ್‌ಎಸ್ ಉಗ್ರವಾಗಿ ಖಂಡಿಸುತ್ತದೆ ಎಂದು ಮುಖಂಡರಾದ ಸುರೇಶ ನಂದೆಣ್ಣವರ, ತಾ.ಪಂ ಮಾಜಿ ಸದಸ್ಯ ಕೊಟ್ಟೆಪ್ಪ ವರ್ದಿ, ಗ್ರಾ.ಪಂ ಮಾಜಿ ಅಧ್ಯಕ್ಷ ಫಕ್ಕೀರೇಶ ಮ್ಯಾಟಣ್ಣವರ ತಿಳಿಸಿದರು.

ಅವರು ಗುರುವಾರ ಪತ್ರಿಕಾ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಆದರೆ ಹೋರಾಟ ವೇದಿಕೆಯಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ಭಾವಚಿತ್ರಗಳನ್ನು ಅತಿಥಿಗಳು ಕೂಡುವ ಆಸನಗಳ ಹಿಂದೆ ಇಟ್ಟಿರುವುದು ಅವಮಾನದ ಸಂಗತಿಯಾಗಿದೆ. ಅಲ್ಲದೆ ವೇದಿಕೆಯಲ್ಲಿಯೇ ಮಹನೀಯರ ಭಾವಚಿತ್ರಕ್ಕೆ ಕುರ್ಚಿಯ ಮೇಲೆ ಕಾಲು ತೋರಿಸುತ್ತಾ ಕುಳಿತುಕೊಂಡಿದ್ದ ಜ್ಞಾನೋಬಾ ಬೋಮಲೆ ಮತ್ತು ಸಂಘಟಕರ ಮುಖ್ಯಸ್ಥ ಮಂಜುನಾಥ ಮಾಗಡಿ ಹಾಗೂ ಮತ್ತಿತರರ ಮೇಲೆ ದಲಿತ ಸಂಘಟನೆಗಳು ದೂರು ದಾಖಲಿಸಿದ್ದು, ಇಲ್ಲಿಯವರೆಗೂ ಯಾವುದೇ ಕ್ರಮಗಳಾಗಿಲ್ಲ ಎಂದು ಆರೋಪಿಸಿದರು.

ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿರುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನವೆಂಬರ್ 7ರಂದು ಅಸ್ಪೃಶ್ಯತಾ ಕಾಯ್ದೆ ಅನುಸಾರ ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿತ್ತು. ಪೊಲೀಸರು ಕೇವಲ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಇದುವರೆಗೂ ಅವರನ್ನು ಬಂಧಿಸುವುದಾಗಲಿ, ಕಾನೂನು ಕ್ರಮ ಜರುಗಿಸುವುದಾಗಲಿ ಮಾಡಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೂ ಸಹ ದೂರು ಸಲ್ಲಿಸಿದ್ದು ಅಲ್ಲಿಯೂ ಸಹ ಕ್ರಮವಾಗಿಲ್ಲ ಎಂದು ಆರೋಪಿಸಿದ ಅವರು, ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಇದನ್ನು ಡಿಎಸ್‌ಎಸ್ ಸಹಿಸುವುದಿಲ್ಲ. ಮುಂದಿನ 8 ದಿನದೊಳಗಾಗಿ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ತಾಲೂಕಗಳು ಎಲ್ಲ ಗ್ರಾಮ ಪಂಚಾಯಿತಿ ಎದುರಿನಲ್ಲಿ ಯಾವುದೇ ಸೂಚನೆ ನೀಡದೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರಾಮಪ್ಪ ಗಡದವರ, ಫಕ್ಕೀರೇಶ ಭಜಕ್ಕನವರ, ಜಗದೀಶ ಹುಲಿಗೆಮ್ಮನವರ, ಫಕ್ಕಿರೇಶ ನಂದೆಣ್ಣವರ, ರಾಮು ಅಡಗಿಮನಿ, ನಾಗರಾಜ ನಂದೆಣ್ಣವರ ಮುಂತಾದವರು ಹಾಜರಿದ್ದರು.

ಅದೇ ರೀತಿ ಆದರಹಳ್ಳಿಯ ಗವಿಮಠದ ಡಾ. ಕುಮಾರ ಮಹಾರಾಜರು ದಲಿತರು ಅಸ್ಪೃಶ್ಯತಾ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿರುವುದು ಸಂಘಟನೆಗಳಿಗೆ ಬಗೆದ ದ್ರೋಹವಾಗಿದೆ. ಇದೇ ಸ್ವಾಮೀಜಿಯವರು ಎಕೆ 47 ಗನ್ ಖರೀದಿಸಲು ಓಡಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ ಅವರು, ಸ್ವಾಮಿಗಳನ್ನು ಕೂಡಲೇ ಗಡಿಪಾರು ಮಾಡುವಂತೆ ಪ್ರಮುಖರು ಆಗ್ರಹಿಸಿದರು.

ಗ್ರಾಹಕರ ಪ್ರೀತಿ, ವಿಶ್ವಾಸ ಸಂಪಾದಿಸಿ: ಪುಷ್ಪ ಅಡವಿ 

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಹಿಳೆಯರು ಇಂದು ಎಲ್ಲ ರಂಗಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಆರ್ಥಿಕವಾಗಿಯೂ ಸ್ವಾವಲಂಬಿಗಳಾಗುತ್ತಿದ್ದಾರೆ. ಸ್ವಂತ ಉದ್ಯೋಗ ಮಾಡುವ ಉದ್ದೇಶವಿದ್ದವರು ಹಲವು ತರಬೇತಿಗಳನ್ನು ಪಡೆದು ಸ್ವಾವಲಂಬಿಗಳಾಗಿ ಜೀವನ ಸಾಗಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಪಟ್ಟಣದ ವರ್ಷಾ ಬ್ಯೂಟಿಪಾರ್ಲರ್‌ನವರು ಒಂದು ತಿಂಗಳ ಕಾಲ ಮಹಿಳೆಯರಿಗೆ ಉಚಿತವಾಗಿ ಬ್ಯೂಟಿಷಿಯನ್ ತರಬೇತಿಯನ್ನು ಯಶಸ್ವಿಯಾಗಿ ನೀಡಿದ್ದಾರೆ ಎಂದು ಮುಳಗುಂದದ ಸಹ್ಯಾದ್ರಿ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ಅಧ್ಯಕ್ಷ ಪ್ರಕಾಶ ಮದ್ದಿನ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಸಹ್ಯಾದ್ರಿ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ಬ್ಯೂಟಿಷಿಯನ್ ತರಬೇತಿ ಮುಕ್ತಾಯ ಸಮಾರಂಭದಲ್ಲಿ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಬ್ಯೂಟಿ ಪಾರ್ಲರ್‌ಗಳು, ಬ್ಯೂಟಿಷಿಯನ್‌ಗಳ ಸಂಖ್ಯೆ ಹೆಚ್ಚುತ್ತಿದ್ದು, ಆದಾಯದ ನಿರೀಕ್ಷೆಯಲ್ಲಿ ಗುಣಮಟ್ಟದಲ್ಲಿ ಕೊರತೆಯಾಗದಂತೆ, ಚರ್ಮಕ್ಕೆ ಹಾನಿಯಾಗದ ಸೌಂದರ್ಯವರ್ಧಕಗಳನ್ನು ಬಳಸಿಕೊಂಡು ಎಲ್ಲರಿಗೂ ಒಪ್ಪಿಗೆಯಾಗುವ ಗುಣವನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.

ತರಬೇತುದಾರರಾದ ಪುಷ್ಪ ಅಡವಿ ಮಾತನಾಡಿ, ಬ್ಯೂಟಿಪಾರ್ಲರ್‌ಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವದು, ಗ್ರಾಹಕರ ಪ್ರೀತಿ ವಿಶ್ವಾಸ ಸಂಪಾದಿಸುವುದು, ಇನ್ನಿತರ ಪಾರ್ಲರ್‌ಗಳೊಂದಿಗೆ ಸ್ಪರ್ಧೆಗೆ ಇಳಿಯದೆ ಹೊಂದಾಣಿಕೆಯಿಂದ ಸಾಗುವದು ಅವಶ್ಯವಾಗಿದೆ. ಕಲಿತ ವಿದ್ಯೆಯು ಸಾರ್ಥಕವಾಗಬೇಕಾದರೆ ಗ್ರಾಹಕರ ಮೆಚ್ಚುಗೆ ಪಡೆಯುವದು ಅವಶ್ಯ ಎನ್ನುವದನ್ನು ತರಬೇತಿ ಪಡೆದವರು ತಿಳಿದುಕೊಂಡು ಸಾಗಬೇಕು. ಇದರಿಂದ ಸ್ವಾವಲಂಬನೆಯ ಜೀವನ ಸಾಗಿಸುವಂತಾದರೆ ತರಬೇತಿ ನೀಡಿರುವದಕ್ಕೆ ಸಾರ್ಥಕತೆ ಎನಿಸುತ್ತದೆ ಎಂದರು.

ದಶರಥ ಕೋಟೆಗೌಡ್ರ, ದಿಗಂಬರ ಪೂಜಾರ, ಶೈಲಜಾ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ತರಬೇತಿ ಪಡೆದ ಎಲ್ಲ ಮಹಿಳೆಯರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಕರ್ನಾಟಕದಲ್ಲೂ ಎಸ್‌ಐಆರ್ ಜಾರಿ ಆಗಬೇಕು: ಯತ್ನಾಳ್ ಆಗ್ರಹ

0

ವಿಜಯಪುರ: ಕರ್ನಾಟಕದಲ್ಲೂ ಎಸ್‌ಐಆರ್ ಜಾರಿ ಆಗಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಬಾಂಗ್ಲಾ ವಲಸಿಗರು, ರೊಹಿಂಗ್ಯಾಗಳು ಬಹಳ ಜನರಿದ್ದಾರೆ. ಅವರನ್ನೆಲ್ಲ ದೇಶದಿಂದ ಹೊರಹಾಕಲು ಕೇಂದ್ರ ಸರ್ಕಾರ ಕೆಲಸ ಮಾಡ್ತಿದೆ. ಅದರಂತೆ ಕರ್ನಾಟಕದಲ್ಲಿಯೂ ಎಸ್‌ಐಆರ್ ಜಾರಿ ಆಗಬೇಕು. ಎಸ್‌ಐಆರ್ ಜಾರಿಗೆ ಬಂದ ಬಳಿಕ ವಲಸಿಗರು, ರೊಹಿಂಗ್ಯಾಗಳು ಹಾಗೂ ಅವರಿಗೆ ಸಹಕಾರ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಜಯಪುರ ಜಿಲ್ಲೆಯಲ್ಲಿ ಮಾತ್ರವೇ ಇಪ್ಪತ್ತು ಸಾವಿರಕ್ಕೂ ಹೆಚ್ಚು ನಕಲಿ ಮತದಾರರು ಇದ್ದಾರೆ ಎಂದು ಆರೋಪಿಸಿದ ಯತ್ನಾಳ್, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ಒಬ್ಬ ವ್ಯಕ್ತಿ ಮೂರು ಮತದಾರರ ಗುರುತಿನ ಚೀಟಿ ಪಡೆದಿರುವುದನ್ನು ಉದಾಹರಣೆಯಾಗಿ ಉಲ್ಲೇಖಿಸಿ, ಒಂದೇ ಫೋಟೋ ಬಳಸಿ ಹೆಸರುಗಳ ಅಕ್ಷರಗಳಲ್ಲಿ ವ್ಯತ್ಯಾಸ ಮಾಡಿ ವೋಟರ್ ಐಡಿ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.

ಗದಗ-ಬೆಟಗೇರಿಯಲ್ಲಿ ಸಂಭ್ರಮದ ಕ್ರಿಸ್‌ಮಸ್!

0

ವಿಜಯಸಾಕ್ಷಿ ಸುದ್ದಿ, ಗದಗ: ಜಗತ್ತಿಗೆ ಶಾಂತಿ ಮತ್ತು ಪ್ರೀತಿಯ ಸಂದೇಶ ಸಾರಿದ ಯೇಸು ಕ್ರಿಸ್ತರ ಜನ್ಮದಿನವಾದ ‘ಕ್ರಿಸ್ ಮಸ್’ ಹಬ್ಬವನ್ನು ಗುರುವಾರ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಡಗರ- ಸಂಭ್ರಮದಿಂದ ಆಚರಿಸಲಾಯಿತು.

ಹಬ್ಬದ ಅಂಗವಾಗಿ ಗದಗ-ಬೆಟಗೇರಿಯಲ್ಲಿ ಸುಮಾರು ೧೨ ಚರ್ಚ್‌ಗಳಲ್ಲಿ ಬೆಳಗ್ಗೆ ವಿಶೇಷ ಪೂಜೆ ಹಾಗೂ ಸಾಮೂಹಿಕ ಪ್ರಾರ್ಥನೆಗಳು ಜರುಗಿದವು.

ಕ್ರೈಸ್ತ ಬಾಂಧವರು ಹೊಸ ಬಟ್ಟೆ ಧರಿಸಿ, ಕುಟುಂಬ ಸಮೇತ ಚರ್ಚ್‌ಗಳಿಗೆ ಆಗಮಿಸಿ ಪ್ರಾರ್ಥಿಸಿದರು.

ಪ್ರಾರ್ಥನೆಯ ನಂತರ ಕ್ರೈಸ್ತ ಬಾಂಧವರು ಪರಸ್ಪರ ಕೈಕುಲುಕಿ, ಆಲಿಂಗಿಸುವ ಮೂಲಕ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಪರಸ್ಪರ ಸಿಹಿ ಹಂಚುವ ಮೂಲಕ ಸೌಹಾರ್ದತೆ ಮೆರೆದರು. ನಗರದ ಪ್ರಮುಖ ಚರ್ಚ್‌ಗಳ ಆವರಣದಲ್ಲಿ ಯೇಸುವಿನ ಜನನದ ದೃಶ್ಯವನ್ನು ಬಿಂಬಿಸುವ ‘ಗೋದಲಿಕಟ್ಟೆ’ ನೋಡುಗರ ಗಮನ ಸೆಳೆಯಿತು. ಕ್ರಿಸ್ ಮಸ್ ಹಬ್ಬದ ಅಂಗವಾಗಿ ಚರ್ಚ್‌ಗಳನ್ನು ವಿದ್ಯುತ್ ದೀಪಾಲಂಕಾರ ಹಾಗೂ ಕ್ರಿಸ್ ಮಸ್ ಟ್ರೀಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು.

ಸಾಂತಾಕ್ಲಾಸ್ ವೇಷಧಾರಿಗಳು ಮಕ್ಕಳಿಗೆ ಉಡುಗೊರೆ ನೀಡಿ ಸಂಭ್ರಮಿಸಿದರು.

ಬೆಟಗೇರಿಯ ಸೇಂಟ್ ಇಗ್ನೇಷಿಯಸ್ ಚರ್ಚ್ ಮತ್ತು ವರ್ಥ್ ಮೆಮೋರಿಯಲ್ ಚರ್ಚ್ ನಲ್ಲಿ ಕ್ರಿಸ್ ಮಸ್ ಅಂಗವಾಗಿ ನಡೆದ ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ಸಚಿವ ಬೆಚ್ ಕೆ ಪಾಟೀಲ್ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಜಗತ್ತಿನಲ್ಲಿ ಇಂದು ವಿಕೃತ ಮನಸ್ಸುಗಳಿಂದಾಗಿ ಶಾಂತಿ, ಪ್ರೀತಿ ಮತ್ತು ಭಾತೃತ್ವಕ್ಕೆ ಧಕ್ಕೆ ಬರುತ್ತಿರುವ ಸಂದರ್ಭದಲ್ಲಿ, ಯೇಸು ಕ್ರಿಸ್ತರ ಶಾಂತಿ ಸಂದೇಶಗಳ ಅನಿವಾರ್ಯತೆ ಹಿಂದಿಗಿಂತಲೂ ಹೆಚ್ಚಾಗಿದೆ. ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಎಲ್ಲ ಧರ್ಮದವರೂ ಸಮನ್ವಯದಿಂದ ಬಾಳುತ್ತಿದ್ದಾರೆ. ಯೇಸುವಿನ ಕೃಪೆಯಿಂದ ನಾಡಿನಲ್ಲಿ ಶಾಂತಿ ಮತ್ತು ಪ್ರೀತಿ ಸದಾಕಾಲ ನೆಲೆಸಲಿ. ಕ್ರಿಸ್ತರ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಶಾಂತಿ ಸ್ಥಾಪನೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯಮಟ್ಟದ ಹೆಚ್ ಎನ್, ಚೈತನ್ಯ ಶ್ರೀ ಪ್ರಶಸ್ತಿಗೆ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಪ್ರತಿ ವರ್ಷ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ ಕೊಡ ಮಾಡುವ ರಾಜ್ಯಮಟ್ಟದ ಹೆಚ್ ಎನ್ ಪ್ರಶಸ್ತಿ ಹಾಗೂ ಚೈತನ್ಯ ಶ್ರೀ ಪ್ರಶಸ್ತಿಗೆ ಗದಗ ಜಿಲ್ಲೆಯ ಇಬ್ಬರು ಸೇವಾ ಸಾಧಕರು ಆಯ್ಕೆಯಾಗಿದ್ದಾರೆ.

ಇದೇ ತಿಂಗಳ ಡಿಸೆಂಬರ್ 28, 29 ಹಾಗೂ 30ರಂದು ಯಾದಗಿರಿ ಜಿಲ್ಲೆಯಲ್ಲಿ ನಡೆಯುವ ರಾಜ್ಯಮಟ್ಟದ ಐದನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದ ಡಾ. ಮಂಜುನಾಥ್ ಮಳಿಗಿಯವರು ಎಚ್. ನರಸಿಂಹಯ್ಯನವರ ಹೆಸರಿನಲ್ಲಿ ಕೊಡ ಮಾಡುವ ಹೆಚ್ ಎನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವೃತ್ತಿಯಿಂದ ವೈದ್ಯರಾಗಿ ಸಮಾಜಮುಖಿ ಸೇವೆ ಸಲ್ಲಿಸಿದ ಇವರು ಸಮಾಜದ ಹಲವು ಆಯಾಮಗಳಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ಶ್ರೀಮತಿ ನಿರ್ಮಲಾ ಗಂಗಾಧರ ಅರಳಿಯವರು ರಾಜ್ಯಮಟ್ಟದ ಚೈತನ್ಯ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶರಣ ತತ್ವ ಚಿಂತನೆ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಲಕ್ಷ್ಮೇಶ್ವರ ತಾಲೂಕಿನ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಸಂಘಟನಾತ್ಮಕ ಕಾರ್ಯದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಇನ್ನರ್ ವಿಲ್ ಕ್ಲಬ್‌ನ ಸದಸ್ಯರಾಗಿ, ಸಿದ್ದೇಶ್ವರ ಸತ್ಸಂಗ ಬಳಗ, ರಾಜರಾಜೇಶ್ವರಿ ಸಾಂಸ್ಕೃತಿಕ ವೇದಿಕೆಯ ಸದಸ್ಯರಾಗಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.

ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್ ಅವರ ಸಾರಥ್ಯದಲ್ಲಿ ನಡೆಯುವ ಈ ಸಮ್ಮೇಳನವು ವೈಚಾರಿಕ ಚಿಂತನೆಗಳ ವೇದಿಕೆಯಾಗಿದೆ. ಮೂಢನಂಬಿಕೆಗಳನ್ನು ಮೆಟ್ಟಿನಿಂತು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಲ್ಲಿ ಮಕ್ಕಳು, ಯುವಕರು ಹಾಗೂ ಸಮಾಜದ ಪ್ರತಿಯೊಬ್ಬ ಪ್ರಜೆಗೆ ಅರಿವು ಮೂಡಿಸುವ ಸಮ್ಮೇಳನವಾಗಿದೆ.

ಪರಿಷತ್ತಿನ ರಾಜ್ಯಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್ ಹಾಗೂ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಸುಧಾ ಹುಚ್ಚಣ್ಣವರ ಪ್ರಶಸ್ತಿಗೆ ಆಯ್ಕೆಯಾದ ಮಹನೀಯರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಗದಗ ಜಿಲ್ಲಾಧ್ಯಕ್ಷರಾದ ಶ್ರೀ ವಿಜಯಕುಮಾರ್ ಬಣಕಾರ್ ಅವರು ಪ್ರಕಟಣೆಯ ಮೂಲಕ ಈ ಮಾಹಿತಿಯನ್ನು ತಿಳಿಸಿದ್ದಾರೆ.

error: Content is protected !!