Home Blog Page 283

ಬೆಂಗಳೂರಿನ ಮಹತ್ವದ ಮೂಲಸೌಕರ್ಯ ಯೋಜನೆಗಳಿಗೆ ಶೀಘ್ರ ಅನುಮತಿ ಕೋರಿ ಕೇಂದ್ರ ಸಚಿವರಿಗೆ ಡಿಕೆಶಿ ಮನವಿ!

0

ನವದೆಹಲಿ: ಬೆಂಗಳೂರಿನ ಮಹತ್ವದ ನಗರಾಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುಮತಿ ಹಾಗೂ ಬೆಂಬಲ ಕೋರಿ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಅವರಿಗೆ ಪತ್ರ ಬರೆದಿದ್ದಾರೆ.

ದೆಹಲಿಯಲ್ಲಿ ಮಂಗಳವಾರ ಸಚಿವ ಮನೋಹರ್ ಲಾಲ್ ಅವರನ್ನು ಭೇಟಿ ಮಾಡಿದ ಶಿವಕುಮಾರ್ ಅವರು, ಮೆಟ್ರೋ 2ನೇ ಹಂತದ ಪರಿಷ್ಕೃತ ವೆಚ್ಚಕ್ಕೆ ಒಪ್ಪಿಗೆ, ಮೆಟ್ರೋ 3ಎ ಹಂತದ ಯೋಜನೆಗೆ ಅನುಮೋದನೆ, RRTS ಯೋಜನೆಗೆ ಬೆಂಬಲ ಹಾಗೂ ಮಿಟ್ಟಗಾನಹಳ್ಳಿ ಕೆರೆ ಬಳಿ ಲೆಗಸಿ ಲೀಚೇಟ್ ತ್ಯಾಜ್ಯ ವಿಲೇವಾರಿ ಯೋಜನೆಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದರು.

ಪತ್ರದಲ್ಲಿ ಏನಿದೆ?

ಬೆಂಗಳೂರು ದೇಶದ ಪ್ರಮುಖ ಮಹಾನಗರವಾಗಿದ್ದು, ಹಲವು ನಗರಾಭಿವೃದ್ಧಿ ಯೋಜನೆಗಳು ಪ್ರಗತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಬಾಕಿ ಪ್ರಸ್ತಾವನೆಗಳಿಗೆ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಶೀಘ್ರ ಅನುಮತಿ ನೀಡಬೇಕು ಎಂದು ಅವರು ಕೋರಿದ್ದಾರೆ.

ಮೆಟ್ರೋ 2ನೇ ಹಂತದ ಯೋಜನೆಯ ಪರಿಷ್ಕೃತ ಪೂರ್ಣಗೊಳಿಸುವ ವೆಚ್ಚ ₹26,405 ಕೋಟಿಯಿಂದ ₹40,425 ಕೋಟಿಗೆ ಏರಿಕೆಯಾಗಿದ್ದು, ಇದಕ್ಕೆ ರಾಜ್ಯ ಸರ್ಕಾರವು 2025 ಜೂನ್ 5ರಂದು ಅನುಮೋದನೆ ನೀಡಿದೆ. ಈ ಪ್ರಸ್ತಾವನೆಯನ್ನು 2025 ಜೂನ್ 9ರಂದು ಕೇಂದ್ರಕ್ಕೆ ಸಲ್ಲಿಸಲಾಗಿದ್ದು, ತಕ್ಷಣ ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದಾರೆ.

ಇನ್ನು ಮೆಟ್ರೋ 3ಎ ಹಂತದ ಯೋಜನೆ ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿ.ಮೀ ಉದ್ದವಿದ್ದು, 28 ನಿಲ್ದಾಣಗಳನ್ನು ಒಳಗೊಂಡಿದೆ. ಇದರಲ್ಲಿ 22.14 ಕಿ.ಮೀ ಮೇಲ್ಸೇತುವೆ ಹಾಗೂ 14.45 ಕಿ.ಮೀ ಸುರಂಗ ಮಾರ್ಗವಿದ್ದು, ಒಟ್ಟು ವೆಚ್ಚವನ್ನು ₹28,405 ಕೋಟಿ ಎಂದು ಅಂದಾಜಿಸಲಾಗಿದೆ. ಈ ಯೋಜನೆಗೆ ರಾಜ್ಯ ಸರ್ಕಾರವು 2025 ಜನವರಿ 10ರಂದು ಒಪ್ಪಿಗೆ ನೀಡಿದ್ದು, ಜನವರಿ 15ರಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರದ ಅನುಮೋದನೆ ಇನ್ನೂ ಬಾಕಿ ಇರುವುದರಿಂದ ಶೀಘ್ರ ಅನುಮತಿ ನೀಡುವಂತೆ ಡಿಸಿಎಂ ಮನವಿ ಮಾಡಿದ್ದಾರೆ.

ಯಾರೂ ಶಿಕ್ಷಣದಿಂದ ವಂಚಿತರಾಗಬಾರದು: ರಾಜಕುಮಾರ ಅಗಡಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮಾಜದಲ್ಲಿ ಉತ್ತಮ ಶಿಕ್ಷಣ ಪಡೆಯುವದು ಎಲ್ಲರ ಹಕ್ಕಾಗಿದೆ. ಶಿಕ್ಷಣ ಎನ್ನುವದು ಜಗತ್ತಿನ ಅತಿದೊಡ್ಡ ಶಕ್ತಿ. ಇದರಿಂದ ಯಾರೂ ವಂಚಿತರಾಗಬಾರದು. ವಿದ್ಯೆಗೆ ಬಡವ-ಬಲ್ಲಿದ, ಎಂಬ ಬೇಧವಿಲ್ಲ. ಮಕ್ಕಳು ಉತ್ತಮ ಶಿಕ್ಷಣ ಪಡೆದು ದೇಶದ ಶ್ರೇಷ್ಠ ನಾಗರಿಕರಾಗಬೇಕು ಎಂದು ಬೆಂಗಳೂರಿನ ಉದ್ಯಮಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.1ರ ಹಳೆಯ ವಿದ್ಯಾರ್ಥಿ ರಾಜಕುಮಾರ ಅಗಡಿ ಅಭಿಪ್ರಾಯಪಟ್ಟರು.

ಅವರು ಪಟ್ಟಣದಲ್ಲಿ ಸುಮಾರು 60-65 ವರ್ಷಗಳ ಹಿಂದೆ ತಾವು ಪ್ರಾಥಮಿಕ ಶಿಕ್ಷಣ ಪಡೆದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.1ಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ಶಾಲೆಯನ್ನು ಸಂಪೂರ್ಣವಾಗಿ ವೀಕ್ಷಿಸಿ ನಂತರ ಶಾಲೆಯ ವತಿಯಿಂದ ನೀಡಲಾದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ತಾವು ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಸೌಲಭ್ಯಗಳ ಕೊರತೆ, ಮನೆಯಲ್ಲಿ ಆರ್ಥಿಕ ಸಮಸ್ಯೆ, ಶೈಕ್ಷಣಿಕ ಸಮಸ್ಯೆ ಇತ್ಯಾದಿಗಳಿಂದ ಅನೇಕರು ಶಿಕ್ಷಣ ವಂಚಿತರಾಗುತ್ತಿದ್ದರು. ಆದರೆ ಇದೀಗ ಸೌಲಭ್ಯಗಳು ಸಾಕಷ್ಟು ದೊರೆಯುತ್ತಿದ್ದು ಅದರಂತೆ ಮಕ್ಕಳು ವಿದ್ಯಾಭ್ಯಾಸ ಮಾಡುವದಕ್ಕೆ ಆದ್ಯತೆ ನೀಡುವದು ಅವಶ್ಯವಾಗಿದೆ. ಪ್ರಾಥಮಿಕ ಶಾಲೆ ನಂ.1 ಈಗ ಸಾಕಷ್ಟು ಬದಲಾವಣೆಯಾಗಿದೆ, ವಿದ್ಯೆ ನೀಡಿದ ಗುರುವನ್ನು, ಕಲಿತ ಶಾಲೆಯನ್ನು ಎಂದಿಗೂ ಮರೆಯಬಾರದು ಎನ್ನುವ ನಿಟ್ಟಿನಲ್ಲಿ ಈ ಶಾಲೆಗೆ ಭೇಟಿ ನೀಡಿದ್ದು, ಮುಂದಿನ ದಿನಗಳಲ್ಲಿ ಈ ಶಾಲೆಗೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ. ನಾನು ಕಲಿತ ಶಾಲೆಯಲ್ಲಿಯೇ ನನಗೆ ಗೌರವ ದೊರೆತಿರುವದು ಹೆಮ್ಮೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜಕುಮಾರ ಅವರ ಸಹೋದರಿ ಹಾಗೂ ಹಳೆಯ ವಿದ್ಯಾರ್ಥಿನಿ ಶುಭಾವತಿ, ಅವರ ಧರ್ಮಪತ್ನಿ, ಶೋಭಾ ಅಗಡಿ, ಕವಿತಾ ಮಂದನಾ, ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಶಿರಬಡಗಿ, ಎಂ.ಆರ್. ಪಾಟೀಲ, ದಿಗಂಬರ ಪೂಜಾರ, ಗಿರೀಶ ಅಗಡಿ, ಮುಖ್ಯೋಪಾಧ್ಯಾಯ ಡಿ.ಎನ್. ದೊಡ್ಡಮನಿ, ಶಿಕ್ಷಕರಾದ ಎಸ್ತೇರ್ ಪೀಟರ್, ರಾಜೇಶ್ವರಿ ಅಡರಕಟ್ಟಿ, ಸವಿತಾ ಬೋಮಲೆ, ಅಕ್ಷತಾ ಕಾಟೇಗಾರ, ಆಯೇಷಾ ನದಾಫ್, ಎಸ್.ಎಸ್. ಮಹಾಲಿಂಗಶೆಟ್ಟರ ಮುಂತಾದವರಿದ್ದರು.

ಶಂಕರ ಬ್ಯಾಡಗಿ ಮಾತನಾಡಿ, 1872ರಲ್ಲಿ ಪ್ರಾರಂಭವಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.1 ಹಲವಾರು ಮಹನೀಯರ, ದಾನಿಗಳ ಸಹಕಾರದಿಂದ ಅನೇಕ ರೀತಿಯಲ್ಲಿ ಅಭಿವೃದ್ಧಿ ಹೊಂದಿದ್ದು, ಸುಮಾರು 6 ದಶಕಗಳ ಹಿಂದೆ ಕಲಿತ ಶಾಲೆಯ ಬಗ್ಗೆ ಅಭಿಮಾನದಿಂದ ಆಗಮಿಸಿದ ರಾಜಕುಮಾರ ಅಗಡಿ ಅಂತವರ ಸಹಕಾರ ಈ ಶಾಲೆಗೆ ದೊರಕಲಿ ಎಂದು ಹೇಳಿದರು.

ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಉಳ್ಳಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಅವರು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಶಾಲಾ ಕೊಠಡಿ, ಕಂಪೌಂಡ್, ಅಡುಗೆ ಕೋಣೆ, ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಈಗಾಗಲೇ ಲಕ್ಷ್ಮೇಶ್ವರದ ಎರಡು ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ ಲೋಕೋಪಯೋಗಿ, ಜಿಲ್ಲಾ ಪಂಚಾಯತ್ ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಇಲಾಖೆಗಳಿಗೆ ಸಂಬಂಧಿಸಿದ ರಸ್ತೆಗಳು ಹಾಳಾಗಿದ್ದು, ಈ ಕುರಿತು ಈಗಾಗಲೇ ಸಂಬಂಧಿಸಿದ ಸಚಿವರಿಗೆ ಅನುದಾನ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ. ಅನುದಾನ ಬಂದ ಹಾಗೆ ಆದ್ಯತೆ ಮೇರೆಗೆ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರು ಈಳಿಗೇರ, ಜಗದೀಶ ಹಂಚಿನಾಳ, ಕೃಷ್ಣ ಲಮಾಣಿ, ಶೇಖರಗೌಡ ಪಾಟೀಲ, ಪ್ರಕಾಶ ಬಾಳಿಕಾಯಿ, ರಮೇಶ ಇಟಗಿ, ಗಂಗಾಧರ ಮೆಣಸಿನಕಾಯಿ, ಶಿವು ಕರಡಿ, ಎಲ್.ಪಿ. ಲಮಾಣಿ, ಶಂಕರ ಲಮಾಣಿ, ರಾಯಪ್ಪ ಹಂಚಿನಾಳ, ಅಶೋಕ ಶಿರಹಟ್ಟಿ ಮತ್ತಿತರರು ಇದ್ದರು.

ಸ್ಕೌಟ್ಸ್-ಗೈಡ್ಸ್ ಜಾಂಬೋರೇಟ್ ಕಾರ್ಯಕ್ರಮಕ್ಕೆ ಖಡಕ್ ರೊಟ್ಟಿ ರವಾನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬೆಳಗಾವಿ ಜಿಲ್ಲೆಯ ಹೊನಗಾದ ಫೀನಿಕ್ಸ್ ಪಬ್ಲಿಕ್ ಶಾಲೆಯಲ್ಲಿ ಡಿಸೆಂಬರ್ 27ರಿಂದ ಜನವರಿ 1ರವರೆಗೆ 5 ದಿನಗಳ ಕಾಲ ನಡೆಯಲಿರುವ 29ನೇ ಕರ್ನಾಟಕ ರಾಜ್ಯ ಸ್ಕೌಟ್ಸ್-ಗೈಡ್ಸ್ ಜಾಂಬೋರೇಟ್ ಕಾರ್ಯಕ್ರಮಕ್ಕೆ ಮಂಗಳವಾರ ಪಟ್ಟಣದ ಸರ್ಕಾರಿ ಮಾದರಿ ಹೆಣ್ಣುಮಕ್ಕಳ ಶಾಲೆಯ ಆವರಣದಿಂದ ಖಡಕ್ ರೊಟ್ಟಿಗಳನ್ನು ರವಾನಿಸಲಾಯಿತು.

ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಸಿದ್ಧಗೊಂಡ ಸುಮಾರು 15 ಸಾವಿರಕ್ಕೂ ಅಧಿಕ ರೊಟ್ಟಿ ಹಾಗೂ ಚಟ್ನಿಪುಡಿಯನ್ನು ವಾಹನದ ಮೂಲಕ ರವಾನಿಸುವ ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕೀ ನಾಯ್ಕ್ ಚಾಲನೆ ನೀಡಿ ಮಾತನಾಡಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ಎಲ್ಲ ಶಾಲೆಗಳ ಪ್ರಧಾನ ಗುರುಗಳು, ಶಿಕ್ಷಕರು ವಿಶೇಷ ಆದ್ಯತೆ ನೀಡಿ 15 ಸಾವಿರಕ್ಕೂ ಅಧಿಕ ರೊಟ್ಟಿಗಳನ್ನು ಸಿದ್ಧಪಡಿಸಿ ನೀಡಿದ್ದು, ಈ ಜಾಂಬೋರೇಟ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಭೋಜನದ ಭಾಗವಾಗಿ ನಮ್ಮ ತಾಲೂಕಿನಿಂದ ರೊಟ್ಟಿಗಳನ್ನು ಉಚಿತವಾಗಿ ಕಳುಹಿಸುವ ಮೂಲಕ ನಮ್ಮ ತಾಲೂಕಿನಿಂದ ಅಲ್ಪ ಕೊಡುಗೆ ನೀಡಲು ಮುಂದಾಗಿರುವ ಸಹಕಾರವನ್ನು ಸ್ಮರಿಸುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಲಕ್ಷ್ಮೇಶ್ವರ ತಾಲೂಕು ಕಾರ್ಯದರ್ಶಿ ಕೆ.ಆರ್. ಲಮಾಣಿ, ಪ್ರಧಾನ ಗುರುಗಳಾದ ಬಸವರಾಜ ಕುಂಬಾರ, ಎಚ್.ಬಿ. ಸಣ್ಣಮನಿ, ಕ.ರಾ.ಪ್ರಾ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಡಿ.ಡಿ. ಲಮಾಣಿ, ಬಿಆರ್‌ಪಿ ಬಿ.ಎಮ್. ಯರಗುಪ್ಪಿ, ಸಿಆರ್‌ಪಿ ಶ್ರೀನಿವಾಸ್ ಮತ್ತೂರ, ಆರ್.ಎಮ್. ಶಿರಹಟ್ಟಿ, ಶಿವಾನಂದ ಚಕ್ರಸಾಲಿ, ಪಿ.ಸಿ. ಕಾಳಶೆಟ್ಟಿ, ಆರ್.ಕೆ. ಉಪನಾಳ ಹಾಗೂ ಗೊಲ್ಲರ ಹಾಜರಿದ್ದರು.

ಡಿ. 25ರಿಂದ ಗದಗ ಪ್ರೀಮಿಯರ್ ಲೀಗ್ ಕ್ರಿಕೆಟ್

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಭಾಗದ ಜನತೆ ಕಾತರದಿಂದ ಕಾಯುತ್ತಿರುವ ವೈಟ್ ಲೆದರ್‌ಬಾಲ್ ಟೂರ್ನಮೆಂಟ್ `ಗದಗ ಪ್ರೀಮಿಯರ್ ಲೀಗ್’ ಡಿ. 25ರಿಂದ ಪ್ರಾರಂಭಗೊಳ್ಳಲಿದೆ.

ಈ ಬಾರಿ ಗದಗ ಟೈಟಾನ್ಸ್ ತಂಡದ ಪರವಾಗಿ ಯುವ ನಾಯಕರಾದ ಕೆ.ಹೆಚ್. ಪಾಟೀಲರು ಮೈದಾನಕ್ಕೆ ಇಳಿಯಲಿದ್ದಾರೆ. ಬಹು ದಿನಗಳಿಂದ ಯುವಕರು, ಕ್ರಿಕೆಟ್ ಅಭಿಮಾನಿಗಳಲ್ಲಿ ಹಾಗೂ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ ಈ ಪಂದ್ಯ ಆರಂಭಗೊಳ್ಳಲಿದ್ದು ಸಂತೋಷದ ವಿಷಯವಾಗಿದೆ.

ಗದಗ-ಬೆಟಗೇರಿಯ ಎ.ಎಸ್.ಎಸ್ ಕಾಲೇಜ್ ಆಫ್ ಕಾಮರ್ಸ್ ಮೈದಾನದಲ್ಲಿ ಪಂದ್ಯಗಳು ನಡೆಯಲಿದ್ದು, ಗದಗ ನಗರದ ಯುವಕರು, ಕ್ರೀಡಾಭಿಮಾನಿಗಳು ಟೂರ್ನಮೆಂಟ್‌ಗೆ ಸಾಕ್ಷಿಯಾಗಬೇಕೆಂದು ಗದಗ-ಬೆಟಗೇರಿ ಶಹರ ಯುವ ಕಾಂಗ್ರೆಸ್ ಅಧ್ಯಕ್ಷ ಅನ್ವರ್ ನದಾಫ್ ಹಾಗೂ ಅಭಿಷಯ್ ಕ್ರಿಕೆಟ್ ಅಭಿಮಾನಿಗಳಿಗೆ ಸ್ವಾಗತ ಕೋರಿದ್ದಾರೆ.

ರೈತರ ಉತ್ಪನ್ನಗಳಿಗೆ ಉತ್ತಮ ದರ ಸಿಗಲಿ: ಸಿಆರ್‌ಪಿ ಶಿವಾನಂದ ಅಸುಂಡಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರೈತ ದೇಶದ ಬೆನ್ನೆಲುಬು. ಅವನು ಕಷ್ಟಪಟ್ಟು ದುಡಿದಾಗ ನಮಗೆಲ್ಲ ಅನ್ನ ಸಿಗುತ್ತದೆ ಎಂಬುದನ್ನು ಮರೆಯಬಾರದು. ಕಾರಣ ರೈತರು ಬೆಳೆದ ಬೆಳೆಗೆ ಯಾವಾಗಲೂ ಉತ್ತಮ ದರ ಸಿಗುವ ವ್ಯವಸ್ಥೆ ಆಗಬೇಕು. ಆಗ ಮಾತ್ರ ಒಕ್ಕಲಿಗ ಬದುಕಲು ಸಾಧ್ಯ. ಈಚಿನ ದಿನಗಳಲ್ಲಿ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದ ಕಾರಣ ಯುವಕರು ಕೃಷಿ ಕ್ಷೇತ್ರಕ್ಕೆ ಹೋಗುತ್ತಿಲ್ಲ. ಹೀಗೆಯೇ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ಆಹಾರಕ್ಕಾಗಿ ಹಾಹಾಕಾರ ಉಂಟಾಗಬಹುದು. ಮಕ್ಕಳಿಗೆ ಬಾಲ್ಯದಲ್ಲಿಯೇ ರೈತರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಎಂಜಿಎಂ ಶಾಲೆಯವರು ಹಮ್ಮಿಕೊಂಡಿರುವ ರೈತ ದಿನಾಚರಣೆ ಉತ್ತಮ ಬೆಳೆವಣಿಗೆಯಾಗಿದೆ ಎಂದು ಸಿಆರ್‌ಪಿ ಶಿವಾನಂದ ಅಸುಂಡಿ ಅಭಿಪ್ರಾಯಪಟ್ಟರು.

ಪಟ್ಟಣದ ಎಂಜಿಎಂ ಯುನಿವರ್ಸಲ್ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೈತ ಹಾಗೂ ಮಾರುಕಟ್ಟೆ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಹೇಮಂತ್ ಟಗರಿ ಮಾತನಾಡಿ, ಮಕ್ಕಳಲ್ಲಿ ಮಾರುಕಟ್ಟೆಯ ಬಗ್ಗೆ ಜ್ಞಾನ ಉಂಟಾಗಲಿ ಎಂಬ ಉದ್ದೇಶದಿಂದ ನಾವು ಶಾಲೆಯಲ್ಲಿ ಮಾರುಕಟ್ಟೆ ದಿನ ಹಮ್ಮಿಕೊಂಡಿದ್ದೇವೆ. ವಿದ್ಯೆ ಪಡೆಯುವುದರೊಂದಿಗೆ ದಿನನಿತ್ಯದ ಬದುಕಿಗೆ ಅವಶ್ಯವಿರುವ ವಾಣಿಜ್ಯ, ವ್ಯವಹಾರ, ಮಾರುಕಟ್ಟೆಗಳ ಕುರಿತು ಮಕ್ಕಳು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಮಕ್ಕಳು ಮಾರುಕಟ್ಟೆ ದಿನದ ಅಂಗವಾಗಿ ತರಕಾರಿ, ಧಾನ್ಯ ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಅನುಭವವನ್ನು ಪಡೆದರು. ಪಾಲಕರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರು. ಅರುಣ ಉಮಚಗಿ ಸ್ವಾಗತಿಸಿದರು. ಪುಷ್ಪಾ ನರೇಗಲ್ಲ ನಿರೂಪಿಸಿದರು. ಶಿಕ್ಷಕಿಯರಾದ ಪ್ರೀತಿ ಹಾಗೂ ಯೋಗಿತಾ ವಂದಿಸಿದರು.

ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಮಾಡುವುದು ಸರ್ಕಾರದ ಗುರಿ; ಸಚಿವ ಚಲುವರಾಯಸ್ವಾಮಿ

0

ಬೆಂಗಳೂರು: ಹವಾಮಾನ ವೈಪರೀತ್ಯಗಳು, ಮಾರುಕಟ್ಟೆ ಸಮಸ್ಯೆಗಳು ಸೇರಿದಂತೆ ಹಲವು ಸವಾಲುಗಳನ್ನು ಕೃಷಿಕರು ಎದುರಿಸುತ್ತಿದ್ದರೂ, ಈ ಎಲ್ಲ ವ್ಯತ್ಯಾಸಗಳ ನಡುವೆಯೂ ಕೆಲ ರೈತರು ಯಶಸ್ವಿಯಾಗಿ ಕೃಷಿ ನಡೆಸುತ್ತಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮನ್ವಯ ಟ್ರಸ್ಟ್, ಫುಡ್ ಚೈನ್ ಕೃಷಿ ಸಂಸ್ಥೆ, ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಐಸಿಎಆರ್–ಕೆವಿಕೆ ದಕ್ಷಿಣ ಕನ್ನಡ ಇವರ ಸಹಯೋಗದಲ್ಲಿ ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಒತ್ತು ನೀಡಿದರೆ ಕೃಷಿ ಅಭಿವೃದ್ಧಿ ಸಾಧ್ಯ. ರೈತರು ವೈಜ್ಞಾನಿಕ, ಸಾವಯವ, ಸಮಗ್ರ ಹಾಗೂ ಸುಸ್ಥಿರ ಕೃಷಿಯ ಕಡೆ ಹೆಚ್ಚಿನ ಗಮನಹರಿಸಿ, ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಸರ್ಕಾರ ಹಾಗೂ ಕೃಷಿ ವಿಶ್ವವಿದ್ಯಾಲಯಗಳು ಸದಾ ಸಹಕಾರ ನೀಡಲಿವೆ ಎಂದು ಭರವಸೆ ನೀಡಿದರು.

ರೈತರ ಬದುಕು ಹಸನು ಮಾಡುವುದು ನಮ್ಮ ಕರ್ತವ್ಯ. ನಾನು ಕೃಷಿ ಸಚಿವನಾದ ನಂತರ ಹಲವು ಮಹತ್ವದ ಬದಲಾವಣೆಗಳನ್ನು ತಂದಿದ್ದೇನೆ. ಕಳೆದ ಎರಡು ನೆರೆ ವರ್ಷಗಳಲ್ಲಿ ರೈತರ ಬೆಳೆ ವಿಮೆಗಾಗಿ ಸರ್ಕಾರ 5,000 ಕೋಟಿ ರೂ. ಅನುದಾನ ನೀಡಿದ್ದು, ಕೃಷಿ ಯಾಂತ್ರಿಕರಣಕ್ಕೆ 1,500 ಕೋಟಿ ರೂ. ಸಹಾಯಧನ ಒದಗಿಸಲಾಗಿದೆ ಎಂದು ವಿವರಿಸಿದರು. ನಮ್ಮ ಸರ್ಕಾರ ಕೃಷಿಗೆ ಬೆಂಬಲ ನೀಡಲು, ಸಂಶೋಧನೆಗಳನ್ನು ಉತ್ತೇಜಿಸಲು ಹಾಗೂ ರೈತರಿಗೆ ಪ್ರೋತ್ಸಾಹ ನೀಡಲು ಸದಾ ಸಿದ್ಧವಾಗಿದೆ ಎಂದು ಅವರು ಹೇಳಿದರು.

ಕಾನೂನು ವ್ಯಾಪ್ತಿಗೆ ಬಾರದವರು ಸಂಸತ್ತಿನ ಬಗ್ಗೆ ಮಾತನಾಡಬಾರದು: ಮೋಹನ್ ಭಾಗವತ್ ವಿರುದ್ಧ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

0

ನವದೆಹಲಿ:- ಮೋಹನ್ ಭಾಗವತ್ ಕಾನೂನು ಬಾಹಿರ ಸಂಘಟನೆ ಮುಖ್ಯಸ್ಥ ಎಂದು ಹೇಳುವ ಮೂಲಕ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ರಾಷ್ಟ್ರ ಮಾಡುವ ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಮೋಹನ್ ಭಾಗವತ್ ಕಾನೂನು ಬಾಹಿರ ಸಂಘಟನೆ ಮುಖ್ಯಸ್ಥ ಎನ್ನುವುದು ಅಷ್ಟೇ ಸತ್ಯ. ಆರ್‌ಎಸ್‌ಎಸ್ ಸಂವಿಧಾನಿಕ ಚೌಕಟ್ಟಿನೊಳಗೆ ನೋಂದಾಯಿತ ಸಂಸ್ಥೆಯೇ ಅಲ್ಲ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ನೋಂದಾಯಿಸದೇ ಇರುವವರು ಸಂಸತ್ತಿನ ಬಗ್ಗೆ ಮಾತನಾಡುವ ಹಕ್ಕು ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.

ಹಿಂದೂ ರಾಷ್ಟ್ರ ಮಾಡಲು ಸಂವಿಧಾನ ಬದಲಾವಣೆ ಅಗತ್ಯವಿಲ್ಲ ಎಂಬ ಹೇಳಿಕೆ ಅಸಂಬದ್ಧವಾಗಿದೆ. ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಪ್ರಧಾನಿ ಹಾಗೂ ಗೃಹ ಸಚಿವರು ಮೋಹನ್ ಭಾಗವತ್ ಅವರ ಏಜೆಂಟ್‌ಗಳೇ ಎಂದು ಹರಿಪ್ರಸಾದ್ ವ್ಯಂಗ್ಯವಾಡಿದರು. ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದವರು ಸಂವಿಧಾನಕ್ಕೇ ಬದ್ಧರಾಗಿರಬೇಕು. ಮೋಹನ್ ಭಾಗವತ್‌ಗೆ Z+ ಭದ್ರತೆ ನೀಡಲಾಗಿದೆ, ದೇಶಕ್ಕಾಗಿ ಅವರ ಕೊಡುಗೆ ಏನು ಎಂಬುದನ್ನು ಸರ್ಕಾರ ಹೇಳಬೇಕು ಎಂದು ಆಗ್ರಹಿಸಿದರು.

ರಾಹುಲ್​ ಗಾಂಧಿಗೆ ಕೆ ಎನ್​ ರಾಜಣ್ಣ ಪತ್ರ ಬರೆದ ವಿಚಾರ: ಡಿಕೆ. ಸುರೇಶ್ ಹೇಳಿದ್ದೇನು..?

0

ಬೆಂಗಳೂರು: ಮಗು ಅತ್ತರೆ ಯಾರು ಸಮಾಧಾನ ಮಾಡಬೇಕು? ತಂದೆ-ತಾಯಿ, ಪೋಷಕರೇ ಸಮಾಧಾನ ಮಾಡಬೇಕು. ಅದೇ ರೀತಿ ಪಕ್ಷದಲ್ಲಿ ಏನೇ ಸಮಸ್ಯೆಗಳಿದ್ದರೂ ಹೈಕಮಾಂಡ್ ಗಮನಿಸುತ್ತದೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್, ಪತ್ರದ ಕುರಿತು ಅವರನ್ನೇ ಕೇಳಬೇಕು. ಪಕ್ಷದ ವರಿಷ್ಠರನ್ನು ಭೇಟಿ ಮಾಡುವುದು ಅವರವರ ಹಕ್ಕು. ಅವರ ಪ್ರತಿಪಾದನೆ, ಅವರ ವಿಚಾರ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ನಮ್ಮ ಪಕ್ಷದಲ್ಲಿ ಮಾತನಾಡಲು ಎಲ್ಲರಿಗೂ ಸ್ವಾತಂತ್ರ್ಯ ಇದೆ. ಯಾವುದೇ ಸಮಸ್ಯೆಗಳಿದ್ದರೂ ಹೈಕಮಾಂಡ್ ಅವನ್ನು ಗಮನಿಸುತ್ತಿರುತ್ತದೆ. ಹಾಗಾಗಿಯೇ ಅವರು ಆ ಮಾತನ್ನು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ಡಿ.ಕೆ. ಶಿವಕುಮಾರ್ ಸಾಮಾನ್ಯವಾಗಿ ದೆಹಲಿಗೆ ಹೋಗುತ್ತಾರೆ. ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುತ್ತಾರೆ. ಜೊತೆಗೆ ಸಚಿವ ಪ್ರಿಯಾಂಕ್ ಅವರು ದೆಹಲಿಯಲ್ಲಿ ಸಭೆ ಕರೆದಿದ್ದು, ಆ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

ಅಧಿಕಾರ ಹಂಚಿಕೆ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಗೆ ಸಂಬಂಧಿಸಿ ಮಾತನಾಡಿದ ಡಿ.ಕೆ. ಸುರೇಶ್, ಹೈಕಮಾಂಡ್ ಹೇಳಿದಂತೆ ನಡೆಯುತ್ತದೆ. ಖರ್ಗೆಯವರ ಹೇಳಿಕೆ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ ಹೈಕಮಾಂಡ್ ತೀರ್ಮಾನವೇ ಅಂತಿಮ. ಎಐಸಿಸಿ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿ ಹೇಳಿದಂತೆ ನಾವು ನಡೆಯುತ್ತೇವೆ ಎಂದು ಹೇಳಿದರು.

ಹುಬ್ಬಳ್ಳಿ ಮರ್ಯಾದಾ ಹತ್ಯೆ ಕೇಸ್:‌ 24 ಗಂಟೆಯಲ್ಲೇ 6 ಜನ ಹಂತಕರು ಅರೆಸ್ಟ್​!

0

ಹುಬ್ಬಳ್ಳಿ: ಮರ್ಯಾದೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು 24 ಗಂಟೆಗಳ ಒಳಗಾಗಿ ಒಟ್ಟು ಆರು ಆರೋಪಿಗಳನ್ನು ಅರೆಸ್ಟ್‌ ಮಾಡಿದ್ದಾರೆ. ಫಕೀರಗೌಡ ಪಾಟೀಲ್, ಬಸನಗೌಡ ಪಾಟೀಲ್ ಮತ್ತು ಗುರಸಿದ್ದಗೌಡ ಪಾಟೀಲ್ ಎಂಬ ಮೂವರು ಇನಾಂ ವೀರಪುರ ಗ್ರಾಮದವರನ್ನು ಬಂಧಿಸಲಾಗಿದೆ.

ಬಂಧಿತರಲ್ಲಿ ಮೃತ ಯುವತಿಯ ತಂದೆಯೂ ಒಬ್ಬರಾಗಿದ್ದಾರೆ. ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಮಗಳನ್ನು ಸ್ವಂತ ತಂದೆ ಹಾಗೂ ಆತನ ಕುಟುಂಬದ ಸದಸ್ಯರು ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದ ಹೃದಯ ವಿದ್ರಾವಕ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರ ಗ್ರಾಮದಲ್ಲಿ ಭಾನುವಾರ ನಡೆದಿತ್ತು.

 ಪ್ರಕರಣದಲ್ಲಿ ಒಟ್ಟು 6 ಜನರನ್ನು  ಬಂಧಿಸಲಾಗಿದೆಪೈಕಿ  ಇಡೀ  ಕುಟುಂಬ  ಜೈಲು  ಪಾಲಾಗಿದೆ  ಎಂದು  ಹೇಳಲಾಗುತ್ತಿದೆಅತ್ತ ಗಾಯಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಇದರಲ್ಲಿ ರೇಣವ್ವಳ ಸ್ಥಿತಿ ಚಿಂತಾಜನಕವಾಗಿದ್ದು, ಇನ್ನೂ ಐವರಿಗೆ ಚಿಕಿತ್ಸೆ ಮುಂದುವರೆದಿದೆ. ಅಲ್ಲದೇ ಘಟನೆ ಹಿನ್ನೆಲೆಯಲ್ಲಿ ಮಾನ್ಯಾಳ ಗಂಡ ವಿವೇಕಾನಂದ ಗೆ ಪೊಲೀಸ್ ಭದ್ರತೆ ನೀಡಲಾಗಿದ್ದು, ಓರ್ವ ಗನ್ ಮ್ಯಾನ್ ವ್ಯವಸ್ಥೆ ಕೂಡ ಮಾಡಲಾಗಿದೆ.

ಮಾನ್ಯಾ ಮತ್ತು ವಿವೇಕಾನಂದ ಇಬ್ಬರೂ ಹುಬ್ಬಳ್ಳಿ ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದಾಗ ಇನ್ಸ್ಟಾಗ್ರಾಂ ಮೆಸೆಜ್‍ನಿಂದ ಪ್ರೀತಿ ಹುಟ್ಟಿತ್ತು. ಈ ವಿಚಾರ ಎರಡೂ ಕುಟುಂಬಕ್ಕೂ ತಿಳಿದಿತ್ತು. ಇಬ್ಬರ ಪ್ರೀತಿಗೆ ಯುವತಿಯ ಕುಟುಂಬಸ್ಥರು ವಿರೋಧಿಸಿದ್ದರು.

ಯುವತಿ ಯಾವುದೇ ಕಾರಣಕ್ಕೂ ವಿವೇಕಾನಂದನನ್ನು ಬಿಟ್ಟು ಬದುಕೋದಿಲ್ಲ ಅಂತ ಹಠ ಹಿಡಿದಿದ್ದಳಂತೆ. ವಿವೇಕಾನಂದ ಮಾನ್ಯಾಳ ಜೊತೆ ಕಳೆದ ಜೂ.19 ರಂದು ಹುಬ್ಬಳ್ಳಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದ. ಈ ಸಮಯದಲ್ಲಿ ಪೊಲೀಸರು ಎರಡು ಕುಟುಂಬ ಕರೆದು ರಾಜಿ ಪಂಚಾಯತಿ ಮಾಡಿದ್ದರು ಎನ್ನಲಾಗಿದೆ.

ಸಂತ್ರಸ್ಥೆ ಮಾನ್ಯ ಪಾಟೀಲ್ ಆಕೆಯ ತಂದೆಯ ಮುದ್ದಿನ ಮಗಳಾಗಿದ್ದಳು. ಮಗಳನ್ನು ಇಂಜಿನೀಯರ್ ಮಾಡಿ ಅಮೇರಿಕಕ್ಕೆ ಕಳುಹಿಸೋ ಚಿಂತನೆ ತಂದೆಯದಾಗಿತ್ತು. ಆದ್ರೆ ಮುದ್ದಿನ ಮಗಳು ಗ್ರಾಮದ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಳು. ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದರು.

ಮಾನ್ಯ ಲಿಂಗಾಯತ ಸಮುದಾಯಕ್ಕೆ ಸೇರಿದ್ದಳು, ವಿವೇಕಾನಂದ ದಲಿತ ಸಮುದಾಯದವನಾಗಿದ್ದ. ಜಾತಿ ದ್ವೇಷದಿಂದ ಕುಪಿತರಾದ ಮಾನ್ಯ ತಂದೆ ಪ್ರಕಾಶ್ ಗೌಡ ಪಾಟೀಲ್ ಮತ್ತು ಸಂಬಂಧಿಕರು ಗರ್ಭಿಣಿ ಮಗಳನ್ನೇ  ಹೊಡೆದು  ಕೊಂದಿದ್ದಾರೆ  ಎಂಬ ಆರೋಪ ಕೇಳಿಬಂದಿದೆಈ ಕೃತ್ಯಕ್ಕೆ ಕುಟುಂಬದ ಹಲವು ಸದಸ್ಯರು ಸಹಕರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

error: Content is protected !!