Home Blog Page 3016

ಗಣಿತ ಅಂದ್ರೆ ಬಾಲಕಿ ನಯನಾಗೆ ಥಕಧಿಮಿತ

0

-ಫಟಾಫಟ್ ಲೆಕ್ಕ, ಹೇಳೋದೆಲ್ಲ ಪಕ್ಕ.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಈ ಬಾಲಕಿಯ ಟ್ಯಾಲೆಂಟ್ ನೋಡಿ ನಿಮಗೆ ಅಚ್ಚರಿ ಆಗುತ್ತೆ, ಗಣಿತದಲ್ಲಂತೂ ಮಾಸ್ಟರ್ ಮೈಂಡ್ ಏನೇ ಲೆಕ್ಕ ಕೇಳಿದ್ರೂ ಥಟ್ ಅಂತ ಉತ್ತರಿಸುತ್ತಾಳೆ 1000 ವರೆಗಿನ ಮಗ್ಗಿಗಳನ್ನು ನಿರರ್ಗಳವಾಗಿ ಹೇಳುತ್ತಾಳೆ.

ಹೌದು! ಕೊಪ್ಪಳದ ಪೊಲೀಸಪ್ಪನ ಮಗಳೊಬ್ಬಳು ಇಡೀ ಪೊಲೀಸ್ ಇಲಾಖೆ ಹಾಗೂ ಕೊಪ್ಪಳದ ಜನರ ಗಮನ ಸೆಳೆಯುತ್ತಿದ್ದಾಳೆ. ಹೆಸರು ನಯಾನ, ಪೊಲೀಸ್ ಗೋಸಲಪ್ಪ ಗೂಳಿ ಎಂಬುವವರ ಮಗಳು. ಸದ್ಯ 3ನೇ ತರಗತಿಯಲಿ ಓದುತ್ತಿದ್ದ ಈ ಬಾಲಕಿ ಕ್ಯಾಲ್ಕುಲೇಟರ್ ಇದ್ದಂತೆ ಗುಣಕಾರ, ಸಂಕಲನ, ವ್ಯವಕಲನ, ಭಾಗಕಾರ ಲೆಕ್ಕಗಳನ್ನು ಹಾಗೂ ಎರಡರ ಮಗ್ಗಿಗಳನ್ನು ಫಟ್ ಫಟ್ ಅಂತಾ ಹೇಳುತ್ತಾಳೆ.

ಮುನಿರಾಬಾದ್ ಐ ಆರ್ ಬಿ ಪೊಲೀಸ್ ಗೋಸಲಪ್ಪರ ಅವರ ಈ ಪೋರಿಯ ಗಣಿತವನ್ನು ಕಂಡು ಎಲ್ಲರು ಆಚ್ಚರಿ ಪಡುತ್ತಾರೆ. ನಿಜಕ್ಕೂ ಈ ಬಾಲಕಿಯ ಮೆಮೊರಿ ಅದ್ಭುತ.

ಪಶು ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಆಗ್ರಹಿಸಿ ಕರವೇ ಕಾರ್ಯಕರ್ತರ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಲಕ್ಷ್ಮೇಶ್ವರ: ಕಳೆದ ನಾಲ್ಕು ವರ್ಷಗಳಿಂದ ಪಶು ವೈದ್ಯರು ಇಲ್ಲದೇ ಜಾನುವಾರುಗಳು ಸಾವನ್ನಪ್ಪುತ್ತಿದ್ದ ಕೂಡಲೇ ಪಶು ವೈದ್ಯರನ್ನು ನಿಯೋಜಿಸುವಂತೆ ಒತ್ತಾಯಿಸಿ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಕರವೇ‌ ಹಾಗೂ ಶ್ರೀರಾಮಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗ್ರಾಮದ ‌ಬಜಾರ್ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೂಡಲೇ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ಈಗಾಗಲೇ ವೈದ್ಯರ ನೇಮಕಗೊಳಿಸಲು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಇದುವರೆಗೂ ಪಶು ವೈದ್ಯರ ನೇಮಕ ಮಾಡಿಲ್ಲ. ಇದರಿಂದಾಗಿ ರೈತರಿಗೆ ಸಮಸ್ಯೆ ಆಗಿದ್ದು,ಅನಾರೋಗ್ಯ ಕ್ಕೀಡಾದ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪತ್ತಿವೆ. ಇದನ್ನು ಮನಗಂಡು ಅಧಿಕಾರಿಗಳು ವೈದ್ಯರ ನೇಮಕಗೊಳಿಸಬೇಕು. ಇನ್ನೂ ಹದಿನೈದು ದಿನಗಳಲ್ಲಿ ಶಿಗ್ಲಿ ಗ್ರಾಮದ ಪಶು ಆಸ್ಪತ್ರೆಗೆ ವೈದ್ಯರನ್ನು ನೇಮಕಗೊಳಸದೇ ಇದ್ದರೆ ತಹಸೀಲ್ದಾರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕರವೇ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ನಾಗೇಶ್ ಅಮರಾಪೂರ, ಉಪಾಧ್ಯಕ್ಷ ಸುರೇಶ್, ಶಿಗ್ಲಿ ಗ್ರಾಮ ಘಟಕದ ಲುಕಮಾನ್ ಬೆಟಗೇರಿ, ಶ್ರೀರಾಮಸೇನಾ ಅಧ್ಯಕ್ಷ ಸಾಗರ ಅರಳಿಹಳ್ಳಿ, ಮಾಂತೇಶ್ ಅಡರಕಟ್ಟಿ ಸೇರಿದಂತೆ ಗ್ರಾಮದ ನೂರಾರು ರೈತರು ಪಾಲ್ಗೊಂಡಿದ್ದರು.

ಸುಗರ್ ಫ್ಯಾಕ್ಟರಿ ಸೆಕ್ಯೂರಿಟಿ ಗಾರ್ಡ್ ಹತ್ಯೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಮನೆಯಲ್ಲಿ ಮಲಗಿದ್ದ ವೇಳೆ ಸೆಕ್ಯೂರಿಟಿ ಗಾರ್ಡ್ ನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಮುಂಡರಗಿ ತಾಲೂಕಿನ ಗಂಗಾಪೂರ ಗ್ರಾಮದಲ್ಲಿ ಈ ದುರ್ಘಟನೆ ಮಧ್ಯರಾತ್ರಿ ನಡೆದಿದ್ದು ಈಗ ಬೆಳಕಿಗೆ ಬಂದಿದೆ.

ಗಂಗಾಪೂರ ಗ್ರಾಮದ ಬಳಿ ಇರುವ ವಿಜಯನಗರ ಸಕ್ಕರೆ ಕಾರ್ಖಾನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಫಕ್ಕೀರೇಶ್ ತಳವಾರ (32) ಕೊಲೆಗೀಡಾದ ದುರ್ದೈವಿ.

ಸುದ್ದಿ ತಿಳಿದ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವ ಕಾರಣಕ್ಕಾಗಿ ಈ ಕೊಲೆ ನಡೆದಿರಬಹುದು ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆಗೀಡಾದ ಫಕ್ಕಿರೇಶ್ ನ ಪತ್ನಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಡಾ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ; 3 ಜಿಲ್ಲೆ ಬಿಜೆಪಿ ಮುಖಂಡರ ಜಾತಿ ಲೆಕ್ಕಾಚಾರ, ಲಾಭಿ!

0

-ಬಿಯಸ್ಕೆ
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಬಸನಗೌಡ ತುರವಿಹಾಳ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದ ಬೆನ್ನಲ್ಲೆ 3 ಜಿಲ್ಲೆಯ ಬಿಜೆಪಿ ಮುಖಂಡರು ತೆರವಾದ ಅಧಿಕಾರ ಹಿಡಿಯಲು ಪೈಪೋಟಿ ಆರಂಭಿಸಿದ್ದಾರೆ.

ಪ್ರತಾಪಗೌಡ ಪಾಟೀಲ್ ಗೆ ಬಿಜೆಪಿ ಟಿಕೇಟ್ ಪಕ್ಕಾ ಎಂಬುದನ್ನು ಅರಿತ ಮಸ್ಕಿ ವಿಧಾನಸಭೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಸನಗೌಡ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಆಗೋದು ಬಹುತೇಕ ಖಚಿತವಾಗಿದೆ.
ಇದರ ಬೆನ್ನಲ್ಲೆ ಕೊಪ್ಪಳ-ರಾಯಚೂರು-ಬಳ್ಳಾರಿ ಜಿಲ್ಲೆಯ ಬಿಜೆಪಿ ವಲಯದಲ್ಲಿ, ಮುನಿರಾಬಾದ್ ತುಂಗಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಕಾಡಾ-CADA)ದ ಅಧ್ಯಕ್ಷ ಸ್ಥಾನ ಯಾರಿಗೆ? ಎಂಬ ಚರ್ಚೆ ಆರಂಭವಾಗಿದೆ.

ಕೊಪ್ಪಳ ಜಿಲ್ಲೆಯ ಕಾರಟಗಿ ಮತ್ತು ಗಂಗಾವತಿ ತಾಲೂಕಿನಲ್ಲಂತೂ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಕಳೆದ‌ ಸುಮಾರು 7 ವರ್ಷದ ಹಿಂದೆ ‌ಗಿರೇಗೌಡ ಅವರು ಕಾಡಾ ಅಧ್ಯಕ್ಷರಾಗಿದ್ದರು. ನಂತರ ಕೊಪ್ಪಳ ಜಿಲ್ಲೆಗೆ ಕಾಡಾ ಅಧ್ಯಕ್ಷ ಸ್ಥಾನ ಒಲಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಕೊಪ್ಪಳ ಜಿಲ್ಲೆಗೆ ಸ್ಥಾನ ನೀಡಬೇಕು ಎಂಬ ಮಾತು ಕೇಳಿ ಬಂದಿದೆ.

ಈ ಕಾರಣಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಆಕಾಂಕ್ಷಿಗಳ ಪಟ್ಟಿ ಸಹಜವಾಗಿಯೇ ಹೆಚ್ಚಾಗಿದೆ.
ಕುರ್ಚಿ ಮೇಲೆ ಕಣ್ಣಿಟ್ಟಿರುವ‌ ಬಿಜೆಪಿಯ 2ನೇ ಹಂತದ ನಾಯಕರು ನೇರವಾಗಿ ತಮ್ಮ ಮನಸ್ಸಿನ ಆಸೆಯನ್ನು ಹೈಕಮಾಂಡ್ ಮುಂದೆ ಹೇಳಿಕೊಳ್ಳುತ್ತಿಲ್ಲ. ಬದಲಾಗಿ ತಮ್ಮ ಬೆಂಬಲಿಗರಿಂದ ಫೇಸ್ ಬುಕ್ ಮತ್ತು ವಾಟ್ಸಾಪ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆ ಮುಂದಿಡುತ್ತಿದ್ದಾರೆ.
ಕೆಲ ಮುಖಂಡರು ಜಾತಿ ಲೆಕ್ಕಾಚಾರ, ಹಲವರು ಪಕ್ಷಕ್ಕೆ ಸೇವೆ ಸಲ್ಲಿಸಿದ ಮಾನದಂಡದ ಮೇಲೆ ಹುದ್ದೆ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಮಾಜಿ ಮಂತ್ರಿ ನಾಗಪ್ಪ ಸಾಲೋಣಿ, ಬಿಜೆಪಿ ‌ಮುಖಂಡರಾದ ತಿಪ್ಪೇರುದ್ರಸ್ವಾಮಿ, ನಾಗರಾಜ ಬಿಲ್ಗಾರ್, ಚನ್ನಬಸವ ಸುಂಕದ, ಯರಕಲ್ ಗುರುಸಿದ್ದಪ್ಪ ಸೇರಿ ಸುಮಾರು 10 ಮುಖಂಡರ ಹೆಸರುಗಳು ಕೇಳಿಬರುತ್ತಿವೆ.

ಈ ಎಲ್ಲ ಮುಖಂಡರ ಬೆಂಬಲಿಗರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕಾಡಾ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ತಮ್ಮದೇ ಆದ ರಾಜಕೀಯ ಹಿನ್ನೆಲೆ ಮತ್ತು ಜಾತಿ ಬಲದ ಆಧಾರದಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹಾಕುವ ಕೆಲಸ ಮಾಡುತಿದ್ದಾರೆ.
ಆದರೆ, ಕನಕಗಿರಿ- ಗಂಗಾವತಿ ಶಾಸಕರು ಮತ್ತು ಕೊಪ್ಪಳ ಸಂಸದರು ಯಾರಿಗೆ ಶಿಫಾರಸ್ಸು ಮಾಡ್ತಾರೆ, ಕಾಡಾ ಅಧ್ಯಕ್ಷ ಸ್ಥಾನದ ಅಧಿಕಾರ ಯಾರಿಗೆ ಸಿಗುತ್ತೋ ಕಾದು ನೋಡಬೇಕಿದೆ.

ಅಬಕಾರಿ ಪೊಲೀಸರ ದಾಳಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಗಾಂಜಾ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿ ಆರೋಪಿ ಸಮೇತ 10 ಸಾವಿರ ರೂ, ಮೌಲ್ಯದ ಗಾಂಜಾ ವಶಪಡಿಸಿಕೊಂಡ ಘಟನೆ ಗದಗ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಈರಪ್ಪ ಯಲ್ಲಪ್ಪ ಪೂಜಾರ ಎಂದು ಗುರುತಿಸಲಾಗಿದ್ದು, ಬಂಧಿತನ ವಿರುದ್ಧ ಎನ್ ಡಿ ಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಮನೆಯಲ್ಲೇ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಪೊಲೀಸರು ಈ ದಾಳಿ ನಡೆಸಿದ್ದರು.

ಅಬಕಾರಿ ಡಿಸಿ ಮೋತಿಲಾಲ್ ನಿರ್ದೇಶನ ಮೇರೆಗೆ ಡಿಎಎಸ್ಪಿ ಮಂಜುನಾಥ್ ಮಾಲಿಪಾಟೀಲ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಗಳಾದ ಮಲ್ಲಿಕಾರ್ಜುನ ರೆಡ್ಡಿ, ನಾರಾಯಣ ಪವಾರ್ ಸಿಬ್ಬಂದಿಗಳಾದ ಗಿರೀಶ್ ರೆಡ್ಡಿ, ಮಂಜುನಾಥ್ ಗೌಡ್, ನಜೀರಸಾಬ್, ಚಂದ್ರು ರಾಥೋಡ್ ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಜನರ ತೀರ್ಪಿನ ಮುಂದೆ ಯಾವ ಬಂಡೆಯೂ ಇಲ್ಲ, ಟಗರು ಇಲ್ಲ:ಸಚಿವ ಬಿ.ಸಿ. ಪಾಟೀಲ್

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಜನರ ತೀರ್ಪಿನ ಮುಂದೆ ಯಾವ ಬಂಡೆಯೂ ಇಲ್ಲ, ಟಗರು ಇಲ್ಲ. ಈಗ ಆ ಬಂಡೆಗಳು, ಟಗರುಗಳು ಎಲ್ಲಿ ಹೋದವು ಎಂದು ಕೃಷಿ ಸಚಿವ ಬಿ.ಸಿ‌. ಪಾಟೀಲ್ ಪ್ರಶ್ನಿಸಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿರಾ ಮತ್ತು ಆರ್. ಆರ್. ನಗರ ಉಪಚುನಾವಣೆಯ ಫಲಿತಾಂಶ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಗೆ ಸಿಕ್ಕಿಲ್ವಾ? ಆ ಬಂಡೆ, ಈ ಬಂಡೆ, ಟಗರು ಎನ್ನುತ್ತಿದ್ದವರು ಈಗ ಎಲ್ಲಿ ಹೋದವು? ಏನಾದವು ಎಂದು ಪ್ರಶ್ನಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಕಷ್ಟದ ಸಮಯದಲ್ಲಿಯೂ ಮಾಡಿರುವ ಒಳ್ಳೆಯ ಕೆಲಸಗಳಿಂದ ಜನರು ಬಿಜೆಪಿ ಪರವಾಗಿದ್ದಾರೆ‌. ಶಿರಾ, ಆರ್. ಆರ್. ನಗರದಲ್ಲಿ ಬಿಜೆಪಿ ಮುನ್ನಡೆ ಇದೆ. ಮಧ್ಯಪ್ರದೇಶ ಹಾಗೂ ಬಿಹಾರದಲ್ಲಿಯೂ ಎನ್ಡಿಎ ಮುಂದೆ ಇದೆ‌. ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗಿದೆ ಎಂಬುದರ ಮುನ್ಸೂಚನೆ ಇದು. ಕೆಲವೇ ಕೆಲವು ಜನರ ಹಿಡಿತದಲ್ಲಿರುವ ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗಿದೆ ಎಂಬುದರ ಜ್ವಲಂತ ಉದಾಹರಣೆ ಇದು ಎಂದರು.
ಇನ್ನು ಜೆಡಿಎಸ್ ನೆಲಕಚ್ಚಿದೆ. ಆರ್. ಆರ್. ನಗರದಲ್ಲಿ ಜೆಡಿಎಸ್ ಲೆಕ್ಕಕ್ಕೂ ಇಲ್ಲ, ಠೇವಣಿಯೂ ಇಲ್ಲ. ಶಿರಾದಲ್ಲಿ ಮಾತ್ರ ಅನುಕಂಪದಿಂದ ಒಂದಿಷ್ಟು ಫೈಟ್ ನೀಡುತ್ತಿದೆ ಎಂದರು.
ಇನ್ನು ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತಿ ಆಧಾರದ ಮೇಲೆ ಅಥವಾ ಇನ್ಯಾವುದರ ಆಧಾರದ ಮೇಲೆ ಯಾರೂ ಸಹ ಎಂಟ್ರಿಯಾಗೋದು ತಪ್ಪು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ನಡೆಸಿ ಏನು ಕ್ರಮ ಕೈಗೊಳ್ಳಬೇಕು ಅದನ್ನು ಮಾಡುತ್ತಾರೆ. ಯಾರೇ ಆಗಲಿ ಕೊಲೆ ಪ್ರಕರಣದಲ್ಲಿ ಎಂಟ್ರಿಯಾಗೋದು ತಪ್ಪು ಎಂದರು.
ಇನ್ನು ಯಡಿಯೂರಪ್ಪ ಅವರು ಈ ಹಿಂದೆ ಸಿಎಂ ಆಗಿದ್ದಾಗ ಗಂಗಾವತಿ ಎಂಜಿನಿಯರಿಂಗ್ ಕಾಲೇಜ್ ಮಂಜುರಾತಿಯಾಗಿತ್ತು. ಕಾರಣಾಂತರದಿಂದ ಅದು ಸ್ಥಗಿತಗೊಂಡಿದೆ. ಈ ವರ್ಷ ಅದನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಡಿಸೆಂಬರ್ ತಿಂಗಳಿಂದ ಭತ್ತ ಖರೀದಿ ಮಾಡಲಾಗುತ್ತದೆ ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಕುಣಿಕೇರಿ ಬಾಯ್ಸ್‌ಗೆ ಟೂರ್ನಮೆಂಟ್ ಕಪ್

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಕ್ರೀಡೆಯಿಂದ ಹಲವು ಪ್ರಯೋಜನಗಳಿದ್ದು, ಆಟದಿಂದ ಅನಗತ್ಯ ವಿಚಾರಗಳನ್ನು ದೂರ ಮಾಡಲು ಸಾಧ್ಯ ಎಂದು ಡಿಎಸ್‌ಬಿ ಪಿಎಸ್ಐ ಅಮರೇಶ್ ಹುಬ್ಬಳ್ಳಿ ಹೇಳಿದರು.
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ದಿ.ಸಾಗರ ನಾಯಕ್ ಸ್ಮರಣಾರ್ಥ ಕರ್ನಾಟಕ ವಾರಿಯರ್ಸ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಡಿ ನಡೆದ ಎರಡು ದಿನಗಳ ಕ್ರಿಕೆಟ್ ಟೂರ್ನಮೆಂಟ್‌ನ ಸಮಾರೋಪ ಹಾಗೂ ಕಪ್ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕ್ರೀಡೆ ಅಂದಾಗ ಹುದ್ದೆ ಲೆಕ್ಕಕ್ಕೆ ಬರಲ್ಲ. ಕ್ರೀಡಾಂಗಣದಲ್ಲಿ ಎಲ್ಲರೂ ಸಮಾನರೇ. ಈ ಟೂರ್ನಮೆಂಟ್‌ನಲ್ಲಿ ಹಳ್ಳಿ ಹುಡುಗರ ಸಾಧನೆ ಮೆಚ್ಚುವಂಥದ್ದು ಎಂದು ಶ್ಲಾಘಿಸಿದರು.
ಕೆಡಬ್ಲ್ಯೂಎಸ್‌ಸಿಯ ಅಧ್ಯಕ್ಷ ವಿನೋದ್ ಚಿನ್ನಿನಾಯ್ಕರ್ ಮಾತನಾಡಿ, ಅಪಘಾತಗಳು ಅವಸರದಿಂದಲೇ ಸಂಭವಿಸುತ್ತವೆ. ಇಂಥ ಅಪಘಾತವೊಂದರಲ್ಲಿ ಅತ್ಯುತ್ತಮ ಕ್ರೀಡಾಪಟು ಸಾಗರ್ ನಾಯಕ್ ನಮ್ಮನ್ನಗಲಿದ್ದಾರೆ. ಅವರ ಸ್ಮರಣಾರ್ಥ ನಡೆಯುತ್ತಿರುವ ಈ ಪಂದ್ಯಾವಳಿಯಲ್ಲಿ ಭಾಗವಗಹಿಸಿರುವ ಕ್ರೀಡಾಪಟುಗಳು ವಾಹನ ಚಲಾಯಿಸುವಾಗ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಕ್ಲಬ್‌ನ ಗೌರವಾಧ್ಯಕ್ಷ ಬಸವರಾಜ ಕರುಗಲ್, ಮೊಯುದ್ದೀನ್, ಕೆಇಬಿ ಗಿರೀಶ್, ಗಂಗಾಧರ ನೇವಾರ, ಗಿರೀಶ್ ಮುಂಡಾದ ಮಾತನಾಡಿದರು.
ಚಂದ್ರು, ಸಿದ್ದು ಹಾಗೂ ಸೂರಿ ನೇತೃತ್ವದಲ್ಲಿ ಟೂರ್ನಮೆಂಟ್ ಅಚ್ಚುಕಟ್ಟಾಗಿ ನಡೆಯಿತು. ಈರಣ್ಣ ಕಾರ್ಯಕ್ರಮ ನಿರ್ವಹಿಸಿದರು. ಶ್ರೀನಿವಾಸ ವಂದಿಸಿದರು.

ದಿ.ಸಾಗರ ನಾಯಕ್ ಸ್ಮರಣಾರ್ಥ ನಡೆದ ಈ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಪೊಲೀಸ್, ಕೆಇಬಿ, ಕ್ಲಬ್‌ನ ಮೂರು ತಂಡಗಳು ಸೇರಿದಂತೆ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. ಕ್ಲಬ್‌ನ ಎ ತಂಡ ಹಾಗೂ ಕುಣಿಕೇರಿ ಬಾಯ್ಸ್ ತಂಡಗಳ ನಡುವೆ ನಡೆದ ಫೈನಲ್ ಮ್ಯಾಚ್‌ನಲ್ಲಿ ಕುಣಿಕೇರಿ ಬಾಯ್ಸ್ 17 ರನ್‌ಗಳಿಂದ ಕ್ಲಬ್‌ನ ಎ ತಂಡವನ್ನು ಮಣಿಸಿ, ಕಪ್ ಎತ್ತಿ ಹಿಡಿದರು. ಗ್ರಾಮೀಣ ಭಾಗದ ಪ್ರತಿಭೆಗಳೇ ತುಂಬಿರುವ ಕುಣಿಕೇರಿ ಬಾಯ್ಸ್ ತಂಡಕ್ಕೆ ಅಭಿನಂದನೆ ಮಹಾಪೂರವೇ ಹರಿದು ಬಂತು.

ಕೊಪ್ಪಳಕ್ಕೆ 4.50 ಕೋಟಿ ರೂ.ವೆಚ್ಚದಡಿ ಖೇಲೋ ಇಂಡಿಯಾ ಕ್ರೀಡಾಂಗಣ ನಿರ್ಮಾಣ

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ರಾಜ್ಯದ ಕೊಪ್ಪಳ ಸೇರಿದಂತೆ ವಿವಿಧ ನಾಲ್ಕು ಸ್ಥಳಗಳಲ್ಲಿ ಖೇಲೋ ಇಂಡಿಯಾ ಕ್ರೀಡಾಂಗಣ ನಿರ್ಮಾಣ ಮಾಡಲು ಕೇಂದ್ರ ಸರಕಾರ 19.50 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧೋದ್ದೇಶ ಭವನ ನಿರ್ಮಾಣಕ್ಕೆ 4.50 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಪ್ರಾಧಿಕಾರ ನವೆಂಬರ್ 5ರಂದು ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಖೇಲೋ ಇಂಡಿಯಾ ಕ್ರೀಡಾಂಗಣ ನಿರ್ಮಾಣಕ್ಕೆ ಬಿಡುಗಡೆಯಾದ ಹಣ ಹಾಗೂ ಸ್ಥಳಗಳ ಪಟ್ಟಿ ನೀಡಿದೆ.

ಕೈಗಾರಿಕಾ‌ ಕಂಪನಿಗಳಿಂದ ರಸ್ತೆ ಹಾಳು; ಸರಿಪಡಿಸಲು ರೈತರ ಗಡುವು

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೆಲೆಯೂರಿರುವ ನಾನಾ ಕೈಗಾರಿಕಾ ಕಂಪನಿಗಳ ವಾಹನಗಳ ಓಡಾಟದಿಂದ ರಸ್ತೆಗಳು ಹೊಂಡಗಳಂತಾಗಿದ್ದು, ಅನೇಕ ಅಪಘಾತಗಳು ಸಂಭವಿಸಿ ಸುಮಾರು ಏಳೆಂಟು‌ ಜನ ಮೃತಪಟ್ಟಿದ್ದಾರೆ. 8-10 ದಿನಗಳಲ್ಲಿ ರಸ್ತೆ ನಿರ್ಮಾಣ ಮಾಡಿಕೊಡದಿದ್ದರೆ ಗ್ರಾಮಸ್ಥರ ಸಮೇತ ರೈತ ಸಂಘಟನೆಗಳು ರಸ್ತೆ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡ ನಾಗರಾಜ ಚಳ್ಳೊಳ್ಳಿ ಎಚ್ಚರಿಸಿದರು.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,
ಭಾರಿಗಾತ್ರದ ವಾಹನ ಓಡಾಡಿ ರಸ್ತೆಗಳು ಕೆಟ್ಟಿವೆ. ಈ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಸಂಗನಗೌಡ ಪೊಲೀಸ್ ಪಾಟೀಲ ಮಾತನಾಡಿ,
ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕಿನ ಹಿರೇಕಾಸನಕಂಡಿ ಗ್ರಾಮದಿಂದ ಎನ್.ಹೆಚ್ . – 50 ರಿಂದ ಹಿರೇಬಗನಾಳ, ಚಿಕ್ಕಬಗನಾಳ, ಕರ್ಕಿಹಳ್ಳಿ, ಲಾಚನಕೆರಿ, ಕುಣಿಕೇರಿ, ಕುಣಿಕೇರಿ ತಾಂಡ, ಹಾಲವರ್ತಿ, ಗವಿಮಠ ರಸ್ತೆ, ಆಲ್ಲನಗರ, ಗಿಣಿಗೇರಿ, ಕನಕಾಪುರ ಹಾಗೂ ಹ್ಯಾಟಿ-ಮುಂಡರಗಿ ಈ ಹಳ್ಳಿಗಳ ರಸ್ತೆಗಳ ಮೇಲೆ ಭಾರಿಗಾತ್ರದ ವಾಹನಗಳು ಕಾರ್ಖಾನೆಗಳಿಗೆ 35 ರಿಂದ 45 ಟನ್‌ಗಳವರೆಗೆ ಮೈನ್ಸ್ ಮತ್ತು ಕೋಕ್‌ಗಳನ್ನು ಹೇರಿಕೊಂಡು ಹೋಗುವುದರಿಂದ ರಸ್ತೆಗಳು ಹಾಳಾಗಿವೆ. ಹಳ್ಳಿಗಳಿಗೆ ಬಸ್‌ಗಳ ಸಂಚಾರವಿಲ್ಲದೆ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗಿದೆ. ಶಾಸಕರಿಗೆ, ಸಂಸದರಿಗೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಹಾಗೂ ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಹನುಮಂತಪ್ಪ‌ ಬೆಣಕಲ್, ಎಪಿಎಂಸಿ ಸದಸ್ಯರು, ಭರಮಣ್ಣ ಸಿಂಗಟಾಲೂರ , ಬಾಳಪ್ಪ ಕುಂಬಾರ ಕೊಡದಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಅಡುಗೆ ಭಟ್ಟನ ಹೊತ್ತೊಯ್ದು ಕೊಂದು ತಿಂದ ಚಿರತೆ!

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ದೇವಸ್ಥಾನದ ಅಡುಗೆ ಭಟ್ಟನನ್ನು ರಾತ್ರಿ ಹೊತ್ತೊಯ್ದ ಚಿರತೆ ಪೀಸ್ ಪೀಸ್ ಮಾಡಿ ತಿಂದು ಹಾಕಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪ ಗುರುವಾರ ನಸುಕಿನ ವೇಳೆ ಜರುಗಿದೆ.
ಆನೆಗೊಂದಿ ಬಳಿಯ ಮೇಗೋಟೆ ದುರ್ಗಾ ಬೆಟ್ಟದ ದೇಗುಲವೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ‌ ಹುಲಗೇಶ್ ಈರಪ್ಪ ಮಡ್ಡೇರ್ ನಿದ್ದೆಯಲ್ಲಿದ್ದಾಗ‌ ಬೇಟೆಗೆ ಹೊಂಚು ಹಾಕಿದ ಚಿರತೆ ಸದ್ದು‌ ಮಾಡದೇ ಹುಲಗೇಶ್‌ನನ್ನು ಸುಮಾರು ಒಂದು ಕಿ.ಮೀ ದೂರದ ಕಾಡುಪೋದೆಯೊಳಗೆ ಹೊತ್ತೊಯ್ದು ಚಿಂದಿ ಚಿಂದಿ ಮಾಡಿ ತಿಂದು ಬಿಸಾಕಿ ಪರಾರಿಯಾಗಿದೆ.
ಈ ಘಟನೆ ಬೆಳಕಿಗೆ‌ ಬರುತ್ತಿದ್ದಂತೆ ಆನೆಗೊಂದಿ ಸುತ್ತಮುತ್ತಲಿನ ಜನ ಬೆಚ್ಚಿ‌ ಬಿದ್ದಿದ್ದಾರೆ. ಈ ಭಾಗದಲ್ಲಿ ಚಿರತೆ, ಕರಡಿ ಹಾವಳಿ ವಿಪರೀತವಾಗಿದ್ದು ಅರಣ್ಯ ಇಲಾಖೆ ತುರ್ತು‌ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದು ಚಿರತೆ ಹಿಡಿಯಲು ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.

error: Content is protected !!