Home Blog Page 3035

ಅಸಂಘಟಿತ ವರ್ಗಕ್ಕೆ ಪ್ಯಾಕೇಜ್‌ ಘೋಷಿಸಲು ದಲಿತ ಮುಖಂಡ ಮೈಲಾರಪ್ಪ ಚಳಮರದ ಒತ್ತಾಯ

ದುಡಿಯುವ ವರ್ಗ ಹಸಿವಿನಿಂದ ಕಂಗಾಲು

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರ ಜೀವ ಉಳಿಸಲು ದುಡಿಯುತ್ತಿರುವ ಅಸಂಘಟಿತ ವರ್ಗಕ್ಕೆ ಸರ್ಕಾರ ಪ್ಯಾಕೇಜ್‌ ಘೋಷಿಸಬೇಕು ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ ರಾಜ್ಯ ಉಪಾಧ್ಯಕ್ಷ ಮೈಲಾರಪ್ಪ ಚಳಮರದ ಒತ್ತಾಯಿಸಿದ್ದಾರೆ.

ಕೊರೊನಾ ಎರಡನೇ ಅಲೆ ಅಪಾಯಕಾರಿಯಾಗಿದೆ. ಹಳ್ಳಿ ಹಳ್ಳಿಗೂ ಸೋಂಕು ವ್ಯಾಪಿಸಿದೆ. ಸಾವು, ನೋವು ನಿತ್ಯ ನಡೆಯುತ್ತಿವೆ. ಸೋಂಕು ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ದುಡಿಯುವ ವರ್ಗ ಹಸಿವಿನಿಂದ ಕಂಗಾಲಾಗಿದೆ. ಸರ್ಕಾರ ಕೂಡಲೇ ದುಡಿಯುವ ವರ್ಗಕ್ಕೆ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಟಿ.ವಿಗಳಲ್ಲಿ ಪ್ರಸಾರವಾಗುವ ಸಾವು, ನೋವು, ಶವ ಸುಡುವ ದೃಶ್ಯ ನೋಡುತ್ತಿರುವ ಸಾರ್ವಜನಿಕರು ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಜ್ವರ, ಕೆಮ್ಮು, ನೆಗಡಿ, ಸುಸ್ತು ಕಾಣಿಸಿಕೊಂಡರೂ ಮೆಡಿಕಲ್ ಸ್ಟೋರ್‌ಗಳಲ್ಲಿ ಮಾತ್ರೆ ನುಂಗಿ ಮನೆಯಲ್ಲಿ ಉಳಿದು ಸೋಂಕು ಹಬ್ಬಿಸುತ್ತಿರುವ ಘಟನೆಗಳು ನಡೆಯುತ್ತಿವೆ ಎಂದರು.

ಕೊರೊನಾ ಸೇನಾನಿಗಳು ಪಟ್ಟಣದಲ್ಲಿ ಕೂರದೆ ಹಳ್ಳಿ, ಹಳ್ಳಿ ಸುತ್ತಿ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಬೇಕಿದೆ. ಫ್ಯಾಕ್ಟರಿಗಳಲ್ಲಿ ದುಡಿಯುತ್ತಿದ್ದ ಅಸಂಘಟಿತ ಕಾರ್ಮಿಕರು, ಕೊರೊನಾ ಕಂಟಕದಿಂದ ಪಾರಾಗಲು ಗ್ರಾಮೀಣ ಪ್ರದೇಶಕ್ಕೆ ಬಂದಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ಅನ್ನಕ್ಕೆ ಮಾರ್ಗ ಮಾಡಬೇಕಿದೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಭೂರಹಿತ ಕೂಲಿಕಾರರ ಸ್ಥಿತಿ, ತೀರಾ ಸಂಕಟಕ್ಕೆ ಸಿಲುಕಿದೆ. ಪ್ಯಾಕೇಜ್‌ ನೀಡುವ ಮೂಲಕ ಅನ್ನದ ಮಾರ್ಗ ತೋರಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಹೇಳಿದರು.

ಅವಧಿ ಮೀರಿ ಅಂಗಡಿ ತೆರದರೆ 25 ಸಾವಿರ ದಂಡ; ಪವಾರ

ವಿಜಯಸಾಕ್ಷಿ ಸುದ್ದಿ, ನರಗುಂದ

ಮಹಾಮಾರಿ ಕೊರೊನಾ ತಡೆಗಟ್ಟಲು ಸರಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು. ಒಂದು ವೇಳೆ ಅವಧಿ ಮೀರಿ ಅಂಗಡಿ ತೆರದರೆ 25 ಸಾವಿರದಿಂದ 50 ಸಾವಿರದವರೆಗೆ ದಂಡ ವಿಧಿಸಿ ಕೇಸ್ ಹಾಕಲಾಗುವುದು ಎಂದು ಗ್ರಾಮದ ವರ್ತಕರಿಗೆ ನರಗುಂದ ಠಾಣೆಯ ಎಎಸ್ ಐ ವಿ ಜಿ ಪವಾರ್ ಎಚ್ಚರಿಕೆ ನೀಡಿದರು.

ಅವರು ತಾಲೂಕಿನ ಚಿಕ್ಕನರಗುಂದ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಎಚ್ಚರಿಕೆ ನೀಡಿದರು.

ಗ್ರಾಮದಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅನಗತ್ಯವಾಗಿ ವಾಹನಗಳನ್ನು ತೆಗೆದುಕೊಂಡು ಓಡಾಡದಂತೆ ಮನವಿ ಮಾಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರಡ್ಡಿ, ತಾ.ಪಂ.ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ, ಗ್ರಾ.ಪಂ ಪಿ.ಡಿ.ಓ ಶೈನಾಜ್ ಮುಜಾವರ್, ಗ್ರಾ.ಪಂ ಸದಸ್ಯ ಬಾಪು ಹಿರೇಗೌಡ್ರ, ಗ್ರಾ.ಪಂ ಸಿಬ್ಬಂದಿಗಳು ಇದ್ದರು.

ಚಿಕ್ಕನರಗುಂದದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ವಿಜಯಸಾಕ್ಷಿ ಸುದ್ದಿ, ನರಗುಂದ

ತಾಲೂಕಿನ ಚಿಕ್ಕನರಗುಂದ ಗ್ರಾ.ಪಂ.ಕಾರ್ಯಾಲಯದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಆಚರಿಸಲಾಯಿತು.

ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ ಮಾತನಾಡಿ, ಶ್ರೇಷ್ಠ ಶಿವಶರಣೆ, ಯೋಗಿ ವೇಮನರ ಮನ ಪರಿವರ್ತನೆ ಮಾಡಿದ ಮಹಾತಾಯಿ ಸಿರಿತನ ಬಂದ ಕಾಲಕ್ಕೆ ಮೈಮರೆತು ಹಿಗ್ಗದೇ, ದಾನದರ್ಮ ಮಾಡುವದರ ಮೂಲಕ ತನ್ನ ಬಳಗದವರು ದಾನ ಗುಣಗಳನ್ನು ಬೆಳಸಿಕೊಳ್ಳಬೇಕು ಎಂದು ಸಾರಿದ ಹೇಮರಡ್ಡಿ ಮಲ್ಲಮ್ಮನವರ ಜೀವನದ ಮೌಲ್ಯಗಳು ಮನುಕುಲಕ್ಕೆ ಅದರಲ್ಲೂ ಸ್ತ್ರೀಕುಲಕ್ಕೆ ಅಮೂಲ್ಯ ಕಾಣಿಕೆಗಳಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಬಾಪು ಹಿರೇಗೌಡ್ರ, ಶರಣಪ್ಪ ಹಳೇಮನಿ, ಪಿಡಿಓ ಶೈನಾಜ್ ಮುಜಾವರ್, ಈರಣ್ಣ ಬ್ಯಾಳಿ, ಮಹಾದೇವಪ್ಪ ಹಳಕಟ್ಟಿ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬೈಕ್ ಸೀಜ್ ಆಗುತ್ತದೆ ಎಂದು ಸೈಕಲ್ ಏರಿ ಬಂದ ಆಸಾಮಿಗಳು!

ವಿಜಯಸಾಕ್ಷಿ ಸುದ್ದಿ, ಗದಗ

ಸೈಕಲ್ ಏರಿದವನೇ ಮಹಾ ಶೂರ ಎಂದು ಜಿಲ್ಲೆಯಲ್ಲಿ ಜನ ಮಾತನಾಡಿಕೊಳ್ಳುವಂತಾಗಿದೆ. ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗಿರುವುದರಿಂದಾಗಿ ಸರ್ಕಾರ, ಲಾಕ್ ಡೌನ್ ಘೋಷಣೆ ಮಾಡಿದೆ. ಹೀಗಾಗಿ ವಾಹನಗಳನ್ನು ರಸ್ತೆಗೆ ಇಳಿಸದಂತೆ ಸರ್ಕಾರ ಖಡಕ್ ವಾರ್ನಿಂಗ್ ಮಾಡಿದೆ. ಇದರಿಂದಾಗಿ ಜನರು ಸೈಕಲ್ ನ ಮೊರೆ ಹೋಗಿದ್ದಾರೆ.

ಹೀಗಾಗಿ ನಗರದ ಬಹುತೇಕ ಕಡೆ ಸೈಕಲ್ ಗಳದ್ದೇ ದರ್ಬಾರ್ ಎನ್ನುವಂತಾಗಿದೆ. ಸೈಕಲ್ ಏರಿ ಮಾರುಕಟ್ಟೆಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಇನ್ನೊಂದೆಡೆ ವ್ಯಾಪಾರಸ್ಥರು ಕೂಡ ಸೈಕಲ್ ಏರಿ ಮಾರುಕಟ್ಟೆಗೆ ಬಂದಿದ್ದಾರೆ.

ಬೈಕ್ ಭೀತಿಯ ಹಿನ್ನೆಲೆಯಲ್ಲಿ ಈ ಜನರು ಸೈಕಲ್ ಏರಿ ಬಂದಿದ್ದಾರೆ. ಆದರೆ, ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಹೀಗಾಗಿ ಅವರನ್ನೂ ಒಳಗೆ ಬಿಡಲಿಲ್ಲ. ನಾಮಜೋಶಿ ರಸ್ತೆ, ಟಾಂಗಾ ಕೂಟ, ಹಳೆಯ ಬಸ್ ನಿಲ್ದಾಣದ ಬಳಿ ಸೈಕಲ್ ಸವಾರರು ಸೈಕಲ್ ಸವಾರರು ಎಂಟ್ರಿ ಕೊಟ್ಟಿದ್ದರು.

ಹಿರಿಯ ನಟ ರಾಜಾರಾಂ ಮಹಾಮಾರಿಗೆ ಬಲಿ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ರಾಜಾರಾಂ ಅವರು ಮಹಾಮಾರಿಗೆ ಬಲಿಯಾಗಿದ್ದಾರೆ.
ರಾಜಾರಾಂ (84) ಅವರು ಸಿನಿಮಾ, ಧಾರಾವಾಹಿ ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಇವರು ಸಿನಿಮಾಗಿಂತ ಹೆಚ್ಚಾಗಿ ರಂಗಭೂಮಿಯಲ್ಲಿಯೇ ಸಕ್ರೀಯರಾಗಿದ್ದರು.

ಕೊರೊನಾ ಸೋಂಕು ಧೃಡವಾಗಿತ್ತು ಎಂದು ತಿಳಿದು ಬಂದಿದೆ. ಆದರೆ, ಮನೆಯವರು ಮಾತ್ರ ಈ ಕುರಿತು ಬಹಿರಂಗ ಪಡಿಸಿಲ್ಲ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

ಇವರು 1971ರಿಂದ ಇಲ್ಲಿಯವರೆಗೆ 62 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಿನಿರಂಗದಲ್ಲಿ ರಾಜಕುಮಾರ್ ಸೇರಿದಂತೆ ಬಹುತೇಕ ಎಲ್ಲ ನಾಯಕರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ನೂರಾರು ನಾಟಕಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದರು. ಸದ್ಯ ಇವರ ಸಾವಿಗೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

1971ರಲ್ಲಿ ಕೃಷ್ಣಸ್ವಾಮಿ ನಿರ್ದೇಶಕ ಪಾಪಪುಣ್ಯ ಸಿನಿಮಾ ರಾಜಾರಾಂ ಅವರ ಅಭಿನಯದ ಮೊದಲ ಸಿನಿಮಾವಾಗಿತ್ತು. ಸರೋಜಾ ದೇವಿ, ಕಲ್ಯಾಣ್ ಕುಮಾರ್ ಅಶ್ವತ್ಥ್ ಪ್ರಮುಖ ಪಾತ್ರದಲ್ಲಿದ್ದರು. ವಿಧಾನಸೌಧದಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡಿಕೊಂಡೇ ಸಿನಿಮಾ ಹಾಗೂ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು ರಾಜಾರಾಂ.

ಕೋವಿಡ್ ನಿರ್ವಹಣೆಯ ಹೊಣೆ ಹೊತ್ತ ಸಚಿವರೊಂದಿಗೆ ಸಭೆ ನಡೆಸಿದ ಸಿಎಂ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ನಿರ್ವಹಣೆಯ ಹೊಣೆ ಹೊತ್ತಿರುವ ಐವರು ಸಚಿವರು ಮತ್ತು ಅಧಿಕಾರಿಗಳ ಜೊತೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಇಂದು ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಸೋಂಕು ನಿರ್ವಹಣಾ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಸಚಿವರುಗಳಿಗೆ ನೀಡಿರುವ ಜವಾಬ್ದಾರಿಯಂತೆ ಎಲ್ಲಿಯೂ ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಜನರು ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಬೇಕು. ತುರ್ತು ಅಗತ್ಯವಿರುವ ರೋಗಿಗಳಿಗೆ ಬೆಡ್ ಹಂಚಿಕೆಗೆ ಕ್ರಮವಹಿಸಬೇಕು. ರೆಮಿಡಿಸಿವಿಯರ್ ಡ್ರಗ್ ಪೂರೈಕೆ ಅಗತ್ಯತೆಗನುಸಾರವಾಗಿ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.

ಅಲ್ಲದೇ, ಖಾಸಗಿ ಆಸ್ಪತ್ರೆ ಗಳಲ್ಲಿನ ಬೆಡ್ ಗಳ ಮೇಲೆ ನಿಗಾ ಇಡಬೇಕು. ಅಲ್ಲದೆ ಆಕ್ಸಿಜನ್, ರೆಮಿಡಿಸಿವಿಯರ್ ಹಾಗೂ ಬೆಡ್ ಸೇರಿದಂತೆ ಇತರೆ ವಿಷಯಗಳಲ್ಲಿ ಅಕ್ರಮ ಉಂಟಾದರೆ ಕೂಡಲೇ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.
ವಾರ್ ರೂಮ್ ಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಹಂತ ಹಂತವಾಗಿ ವೈದ್ಯಕೀಯ ಕಾಲೇಜುಗಳಿಗೆ ಮತ್ತು ಆಸ್ಪತ್ರೆ ಗಳಿಗೆ ಆಕ್ಸಿಜನ್ ಜನರೇಟರ್ ಪ್ಲಾಂಟ್ ಹಾಕಲು ಈಗಿನಿಂದಾನೆ ಕೆಲಸ ಶುರು ಮಾಡಲು ಸೂಚಿಸಲಾಯಿತು. ಮೂರನೇ ಅಲೆಗೆ ಈಗಿನಿಂದಲೇ ಸಿದ್ಧರಾಗಬೇಕು ಎಂದು ಸೂಚಿಸಿದ್ದಾರೆ.


ಶಾಸಕರು ಹಾಗೂ ಸಚಿವರು ಕೊರೊನಾ ಹತೋಟಿಗೆ ಬರುವವರೆಗೂ ತಮ್ಮ ತಮ್ಮ ಕ್ಷೇತ್ರಗಳಲ್ಲಿಯೇ ವಾಸ್ತವ್ಯೂ ಹೂಡಬೇಕು ಎಂದು ಹೇಳಿದ್ದಾರೆ.

ಲಾಠಿ ಬೀಸದಂತೆ ನೋಡಿಕೊಳ್ಳಿ ಎಂದ ಕಮಲ್ ಪಂಥ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಅಟ್ಟಹಾಸ ತಪ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಈಗಾಗಲೇ ಸರ್ಕಾರ, ಲಾಕ್ ಡೌನ್ ಘೋಷಿಸಿದೆ. ಆದರೆ, ರಸ್ತೆಗಳಿದವರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಇದರಿಂದಾಗಿ ಹಲವರು ಪೊಲೀಸ್ ಇಲಾಖೆಯ ಮೇಲೆ ಆಕ್ರೋಶ ವ್ಯಕ್ಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ ಕಮಲ್ ಪಂತ್‍ ಅವರು ಸಾರ್ವಜನಿಕರ ಮೇಲೆ ಪೊಲೀಸರು ಯಾವುದೇ ರೀತಿಯ ಬಲಪ್ರಯೋಗ ಮಾಡಬಾರದು ಸೂಚಿಸಿದ್ದಾರೆ.

ಈ ಕುರಿತು ಕಮಲ್ ಪಂತ್‍ ಅವರು, ತಮ್ಮ ಟ್ವೀಟರ್ ಖಾತೆಯಲ್ಲಿ, ಒಂದು ವೇಳೆ ಸಾರ್ವಜನಿಕರು ಲಾಕ್ ಡೌನ್ ಮಾರ್ಗಸೂಚಿ ಉಲ್ಲಂಘಿಸಿದರೆ ಮಾತ್ರ ಕಾನೂನಿನಡಿ ಕೈಗೊಳ್ಳಬೇಕು. ಬೇರೆ ಯಾವುದೇ ರೀತಿಯ ಬಲಪ್ರಯೋಗ ಮಾಡಬಾರದು ಎಂಬ ಸೂಚನೆ ನೀಡಿದ್ದಾರೆ.

ಜನರು ಮನೆಯಲ್ಲಿಯೇ ಇರೆ. ಸುರಕ್ಷಿತವಾಗಿರಿ. ಕೊರೊನ ಹರಡುವುದನ್ನು ತಡೆಯಲು ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡುವ ಮೂಲಕ ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಇಂದು ದಾಖಲೆ ಬರೆದ ಸೋಂಕಿಗೆ ಬಲಿಯಾದವರ ಸಂಖ್ಯೆ ಎಷ್ಟು ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮಹಾಮಾರಿಯ ಅಟ್ಟಹಾಸ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಂದಿನಿಂದ ಲಾಕ್ ಡೌನ ಘೋಷಿಸಿದೆ. ಇಂದು ಸೋಂಕಿತರ ಸಂಖ್ಯೆ ಸಮಾಧಾನಕರವಾಗಿದ್ದರೂ ಸಾವಿನ ಸಂಖ್ಯೆ ಆತಂಕ ಸೃಷ್ಟಿಸುತ್ತಿದೆ. ಇಂದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕೊಂಚ ಇಳಿಕೆಯಾಗಿದ್ದು, 39,305 ಹೊಸ ಪ್ರಕರಣಗಳು ವರದಿಯಾಗಿವೆ. ಆದರೆ, ಸಾವಿನ ಸಂಖ್ಯೆ ಮಾತ್ರ ದಾಖಲೆ ಬರೆದಿದೆ.

ಇಂದು ರಾಜ್ಯದಲ್ಲಿ 596 ಜನ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 19,372ಕ್ಕೆ ಏರಿಕೆ ಕಂಡಿದೆ. ಇಂದು 32,188 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 16,747 ಹೊಸ ಪ್ರಕರಣಗಳು ವರದಿಯಾಗಿದ್ದು, 374 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,52,454 ಸಕ್ರಿಯ ಪ್ರಕರಣಗಳಿವೆ.

ಇಂದು ರಾಜ್ಯದ ಬಾಗಲಕೋಟೆ 968, ಬಳ್ಳಾರಿ 973, ಬೆಳಗಾವಿ 736, ಬೆಂಗಳೂರು ಗ್ರಾಮಾಂತರ 704, ಬೆಂಗಳೂರು ನಗರ 16,747, ಬೀದರ್ 305, ಚಾಮರಾಜನಗರ 623, ಚಿಕ್ಕಬಳ್ಳಾಪುರ 599, ಚಿಕ್ಕಮಗಳೂರು 362, ಚಿತ್ರದುರ್ಗ 172, ದಕ್ಷಿಣ ಕನ್ನಡ 1,175, ದಾವಣಗೆರೆ 197, ಧಾರವಾಡ 1,006, ಗದಗ 332, ಹಾಸನ 1,800, ಹಾವೇರಿ 214, ಕಲಬುರಗಿ 988, ಕೊಡಗು 534, ಕೋಲಾರ 755, ಕೊಪ್ಪಳ 412, ಮಂಡ್ಯ 1,133, ಮೈಸೂರು 1,537, ರಾಯಚೂರು 582, ರಾಮನಗರ 337, ಶಿವಮೊಗ್ಗ 820, ತುಮಕೂರು 2,168, ಉಡುಪಿ 855, ಉತ್ತರ ಕನ್ನಡ 885, ವಿಜಯಪುರ 659 ಮತ್ತು ಯಾದಗಿರಿಯಲ್ಲಿ 727 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.

ಜನ ನರಳುತ್ತಿದ್ದಾರೆ…ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ…ಸರ್ಕಾರಕ್ಕೆ ಛೀಮಾರಿ ಹಾಕಿದ ನಟಿ ಉಮಾಶ್ರೀ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಇಂದು ಹಿರಿಯ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರ ಹುಟ್ಟುಹಬ್ಬ. ಆದರೆ, ಉಮಾಶ್ರೀ ಅವರು ಮಾತ್ರ ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕೊರೊನಾ ತೀವ್ರವಾಗಿ ಉಲ್ಭಣವಾಗಿದ್ದರಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಜನ ನೋವಿನಿಂದ ನರಳುತ್ತಿರುವ ಇಂತಹ ಸಂದರ್ಭದಲ್ಲಿ ಹುಟ್ಟು ಹಬ್ಬದಂತಹ ಸಂಭ್ರಮದ ಕ್ಷಣವನ್ನು ನಾನು ಅನುಭವಿಸುವುದಿಲ್ಲ.

ನನ್ನ ನಾಡಿನ ಜನತೆ ಇಂತಹ ಮಹಾರೋಗದಿಂದ ಮುಕ್ತರಾಗಿ, ಭವ್ಯ ಭಾರತ ನಗುಮುಖದಿಂದ ಇರಬೇಕೆನ್ನುವುದೇ ನನ್ನ ಸಂತಸ. ಇಂತಹ ಸಂದರ್ಭದಲ್ಲಿ ನನಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುವುದರಿಂದ ಖುಷಿ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಜನ ನರಳಾಡುತ್ತಿದ್ದಾರೆ.

ಬಡವರು ಬೀದಿಗೆ ಬಂದಿದ್ದಾರೆ. ಸರ್ಕಾರ, ಬಡವರ ನೋವು ಆಲಿಸುವ ಕೆಲಸ ಮಾಡುತ್ತಿಲ್ಲ. ಕೊರೊನಾದಿಂದ ಜನರ ಬದುಕು ಎಲ್ಲ ರೀತಿಯಿಂದಲೂ ಅಕ್ಷರಶಃ ಬೀದಿಗೆ ಬಂದಿದೆ. ಒಂದೆಡೆ ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲ. ಇನ್ನೊಂದೆಡೆ ವೆಂಟಿಲೇಟರ್, ಆಕ್ಸಿಜನ್ ಸಿಗುತ್ತಿಲ್ಲ. ಇದರಿಂದ ರೋಗಿಗಳು ಸಾಯುತ್ತಿದ್ದಾರೆ. ಆದರೂ ಸರ್ಕಾರದ ಮನ ಮಿಡುಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಲಾಕ್ ಡೌನ್ ಘೋಷಣೆ ಮಾತ್ರ ಮಾಡಿದೆ. ಆದರೆ, ದುಡಿಯುವ ವರ್ಗಕ್ಕೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಸರ್ಕಾರ ಕೂಡಲೇ ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ದುಡಿಯುವ ವರ್ಗ, ಕೂಲಿ ಕಾರ್ಮಿಕರು, ಟ್ಯಾಕ್ಸಿ, ಆಟೋ ಡ್ರೈವರ್ ಸೇರಿದಂತೆ ಅಂದೆ ದುಡಿದು ಊಟ ಮಾಡುವ ವರ್ಗದ ಹಿಂದೆ ಸರ್ಕಾರ ನಿಲ್ಲಬೇಕು. ಕೂಡಲೇ ಇಂತಹ ಜನರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ನಾಲ್ಕು ವರ್ಷದ ಮಗು ಮನೆಯಲ್ಲಿಯೇ ಆಡುತ್ತಿದೆ….ತಂದೆ – ತಾಯಿ ಮಾತ್ರ ಮಹಾಮಾರಿಗೆ ಬಲಿಯಾಗಿದ್ದಾರೆ!

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ಗಂಡ, ಹೆಂಡತಿ ಮಹಾಮಾರಿಯಿಂದ ಸಾವನ್ನಪ್ಪಿದ್ದರ ಪರಿಣಾಮ ಕೇವಲ ನಾಲ್ಕೂವರೆ ವರ್ಷದ ಹೆಣ್ಣುಮಗಳು ಅನಾಥಳಾಗಿದ್ದಾಳೆ.

ಚಾಮರಾಜನಗರ ಜಿಲ್ಲೆಯ ಕೊತ್ತಲವಾಡಿ ಗ್ರಾಮದ ಗುರುಪ್ರಸಾದ್ ಹಾಗೂ ಅವರ ಪತ್ನಿ ರಶ್ಮಿ ಅವರು ಮಹಾಮಾರಿಯಿಂದಾಗಿ ಸಾವನ್ನಪ್ಪಿದ್ದಾರೆ. ಸದ್ಯ ದಂಪತಿ ಸಾವಿನಿಂದಾಗಿ ಏನೂ ತಿಳಿಯದ ಹಾಗೂ ಲೋಕದ ಪರಿಜ್ಞಾನವೇ ಇಲ್ಲದ ಮಗು ಅನಾಥವಾಗಿದೆ.

ಇತ್ತೀಚೆಗೆ ದಂಪತಿಯಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಂಡ – ಹೆಂಡತಿ ಇಬ್ಬರೂ ಹೋಮ್ ಐಸೋಲೇಷನ್ ನಲ್ಲಿದ್ದರು. ಗುರುಪ್ರಸಾದ್ ಕಳೆದ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದರು. ಹೋಂ ಐಸೋಲೇಷನ್ ನಲ್ಲಿದ್ದ ಗುರುಪ್ರಸಾದ್ ಪತ್ನಿ ರಶ್ಮಿ ಕಳೆದ ರಾತ್ರಿ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಜ್ಜ, ಅಜ್ಜಿಗೆ ಕೂಡ ಕೋವಿಡ್ ದೃಢವಾಗಿದ್ದು, ಅವರು ಕೂಡ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಮಗು ಯಾವ ಅರಿವೂ ಇಲ್ಲದೆ, ಮನೆಯಲ್ಲಿಯೇ ಆಟವಾಡಿಕೊಂಡು ಇದೆ. ಆದರೆ, ಅಪ್ಪ – ಅಮ್ಮ ಸತ್ತಿರುವ ವಿಷಯವೇ ಗೊತ್ತಿಲ್ಲ.

error: Content is protected !!