Home Blog Page 3044

ದೇಶದಲ್ಲಿ ಕೊರೊನಾ ಸ್ಥಿತಿ ಹೇಗಿದೆ? ಒಂದೇ ದಿನದಲ್ಲಿ ಎಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ?

ವಿಜಯಸಾಕ್ಷಿ ಸುದ್ದಿ, ನವದೆಹಲಿ

ದೇಶದ ಬಹುತೇಕ ರಾಜ್ಯಗಳಲ್ಲಿ ಈಗಾಗಲೇ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಆದರೂ ಕೊರೊನಾ ಅಲೆ ತಗ್ಗುತ್ತಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 2,76,070 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 2,57,72,400ಕ್ಕೆ ಏರಿಕೆಯಾಗಿದೆ.

24 ಗಂಟೆಗಳಲ್ಲಿ ದೇಶದಲ್ಲಿ 3,874 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಇಲ್ಲಿಯವರೆಗೆ 2,87,122 ಜನ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 31,29,878 ಸಕ್ರಿಯ ಪ್ರಕರಣಗಳಿವೆ. 2,23,55,440 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 18,70,09,792 ಮಂದಿ ಮುಂಜಾಗ್ರತಾ ಕ್ರಮವಾಗಿ ವಾಕ್ಸಿನ್ ಪಡೆದುಕೊಂಡಿದ್ದಾರೆ.

ಸಿಎಂ ಪುತ್ರನ ಮೇಲೆ ಎಫ್ಐಆರ್ ದಾಖಲಿಸುವಂತೆ ಕಾಂಗ್ರೆಸ್ ನಿಂದ ಮನವಿ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಜಿಲ್ಲೆಯ ನಂಜನಗೂಡು ದೇವಸ್ಥಾನದಲ್ಲಿ ಕೊರೊನಾ ಸಂದರ್ಭದಲ್ಲಿಯೇ ಸಿಎಂ ಅವರ ಪುತ್ರ ಬಿ.ವೈ. ವಿಜಯೇಂದ್ರ ಪೂಜೆ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ.

ಬಿ.ವೈ. ವಿಜಯೇಂದ್ರ ಅವರು ಕುಟುಂಬ ಸಮೇತ ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ. ವಿಜಯೇಂದ್ರ ಹಾಗೂ ಕುಟುಂಬಸ್ಥರು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ವಿಜಯೇಂದ್ರ ಅವರ ವಿರುದ್ಧ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ -2005, ಸೆಕ್ಷನ್ 51ರ ಸ್ಪಷ್ಟ ಉಲ್ಲಂಘನೆಯಾಗಿದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ 2020ರ ಸ್ಪಷ್ಟ ಉಲ್ಲಂಘನೆಯಾಗಿದೆ. ಸರ್ಕಾರದ ಅಧಿಕಾರಿಗಳು ಹೊರಡಿಸಿರುವ ಆದೇಶ ಐಪಿಸಿ 188ರ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದರೊಂದಿಗೆ ದೇವಸ್ಥಾನದ ಆಡಳಿತ ಮಂಡಳಿ, ಸರ್ಕಾರಿ ಸಿಬ್ಬಂದಿ ಹಾಗೂ ಪುರೋಹಿತ ವರ್ಗವನ್ನು ಕೂಡಲೇ ಅಮಾನತು ಮಾಡಬೇಕು. ಅವರ ವಿರುದ್ಧ ಕೂಡ ಎಫ್ಐಆರ್ ದಾಖಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್, ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಕಾಲುವೆಯ ನೀರಿನಲ್ಲಿಯೇ ತೇಲಾಡುತ್ತಿವೆ ಪಿಪಿಇ ಕಿಟ್!

ವಿಜಯಸಾಕ್ಷಿ ಸುದ್ದಿ, ಮೈಸೂರು

ಸ್ಮಶಾನದಲ್ಲಿ ಸೋಂಕಿತರ ಶವ ಸಂಸ್ಕಾರದ ನಂತರ ಸಂಸ್ಕರಣೆಗೊಳಿಸದೆ ಪಿಪಿಇ ಕಿಟ್ ಗಳನ್ನು ಕಾಲುವೆಯಲ್ಲಿ ಎಸೆಯುತ್ತಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇದು ಆಸ್ಪತ್ರೆ ಸಿಬ್ಬಂದಿಯ ಪಿಪಿಇ ಕಿಟ್ ಅವಾಂತರ. ಸ್ಮಶಾನದಲ್ಲಿ ಸೋಂಕಿತರ ಶವ ಸಂಸ್ಕಾರದ ನಂತರ ಈ ಪಿಪಿಇ ಕಿಟ್ ಗಳನ್ನು ಸಂಸ್ಕರಿಸಬೇಕು. ಆದರೆ, ಕಾರ್ಯ ಇಲ್ಲಿ ನಡೆಯುತ್ತಿಲ್ಲ. ಹೀಗಾಗಿ ಇವು ಸಾರ್ವಜನಿಕರು ಬಳಸುವ ನೀರಿನ ನಾಲೆಯಲ್ಲಿ ತೇಲಾಡುತ್ತಿವೆ.

ಇಲ್ಲಿಯ ಕೆ.ಆರ್. ಮಿಲ್ ಹತ್ತಿರದ ಕಾಲುವೆ ಬಳಿ 20ಕ್ಕೂ ಹೆಚ್ಚು ಪಿಪಿಇ ಕಿಟ್ ಪತ್ತೆಯಾಗಿವೆ. ಆಸ್ಪತ್ರೆ ಸಿಬ್ಬಂದಿಯ ಈ ಬೇಜವಾಬ್ದಾರಿಯಿಂದಾಗಿ ಸಾರ್ವಜನಿಕರು ಆತಂಕದೊಂದಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರ ಕೊವಿಡ್ ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಕೆಲವು ಸ್ಮಶಾನಗಳನ್ನ ಆಯ್ಕೆ ಮಾಡಿದೆ. ಈ ಕಾಲುವೆ ಹತ್ತಿರ ಕ್ರೈಸ್ತ ಧರ್ಮದ ಶವ ಸಂಸ್ಕಾರಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಈ ಜಾಗ ಪುಟ್ಟದಾಗಿದೆ. ಜಿಲ್ಲೆಯಲ್ಲಿ ಎಲ್ಲಿಯೇ ಕ್ರೈಸ್ತರು ಸಾವನ್ನಪ್ಪಿದರೆ ಅವರನ್ನು ಇಲ್ಲಿಯೇ ತಂದು ಸಂಸ್ಕಾರ ಮಾಡಲಾಗುತ್ತದೆ.

ಬೆಲವತ್ತ ಗ್ರಾಮದಲ್ಲಿಯೇ ಸಾಕಷ್ಟು ಜನ ಕ್ರೈಸ್ತರಿದ್ದಾರೆ. ಈ ಸ್ಮಶಾನವನ್ನು ನಮ್ಮ ಗ್ರಾಮದ ಸ್ಮಶಾನಕ್ಕೆ ಮೀಸಲಿಡಬೇಕು. ಕೂಡಲೇ ಸರ್ಕಾರ ನಿರ್ಧಾರ ಕೈ ಬಿಡಬೇಕು. ಕೊವಿಡ್ ನಿಂದ ಮೃತಪಟ್ಟವರನ್ನು ಇಲ್ಲಿಗೆ ತಂದು ಶವಸಂಸ್ಕಾರ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ. ಇಲ್ಲಿ ಸೂಕ್ತ ರೀತಿಯ ಕ್ರಮಗಳನ್ನು ಸರ್ಕಾರ ಕೈಗೊಂಡಿಲ್ಲ. ಮಕ್ಕಳು, ಜಾನುವಾರುಗಳು ಈ ನೀರಿನಲ್ಲಿ ಆಟ ಆಡುತ್ತಿದ್ದಾರೆ. ಅಂತಹ ನೀರಿಗೆ ಪಿಪಿಇ ಕಿಟ್ ಗಳನ್ನು ಬಿಸಾಡಲಾಗುತ್ತಿದೆ. ಹೀಗಾಗಿ ಮಕ್ಕಳಿಗೆ ರೋಗ ಹರಡುವ ಭೀತಿ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸ್ಥಳಕ್ಕೆ ಮೇಟಗಳ್ಳಿ ಪೊಲೀಸರು, ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನೀರಿನಲ್ಲಿ ತೇಲುತ್ತಿದ್ದ ಪಿಪಿಇ ಕಿಟ್ ತೆರವುಗೊಳಿಸಿದ್ದಾರೆ.

ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಕಲ್ಲು ಎಸೆದ ಕಿಡಿಗೇಡಿಗಳು!

ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ

ಕೊರೊನಾ ಸಂದರ್ಭದಲ್ಲಿ ಖಾಲಿ ಕುಳಿತುಕೊಳ್ಳಲಾರದ ಕಿಡಿಗೇಡಿಗಳು ಮಧ್ಯರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಗಳನ್ನು ಪುಡಿ ಪುಡಿ ಮಾಡಿ ವಿಕೃತಿ ಮೆರೆದಿದ್ದಾರೆ. ನಗರದ ಸಿದ್ದಯ್ಯ ರಸ್ತೆ ಹಾಗೂ ಎಂಕೆಕೆ ರಸ್ತೆಯಲ್ಲಿನ ಮನೆಗಳ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಆಟೋಗಳ ಗ್ಲಾಸ್ ಗಳನ್ನು ಒಡೆದು ಕಿಡಿಗೇಡಿಗಳು ಪುಡಿ ಪುಡಿ ಮಾಡಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಕಿಡಿಗೇಡಿಗಳು ಇಂತಹ ಕೃತ್ಯ ಎಸಗಿದ್ದಕ್ಕೆ ಪೊಲೀಸರಿಗೆ ತಲೆನೋವು ಉಂಟಾಗಿದೆ. ಸ್ಥಳಕ್ಕೆ ಸಚಿವ ಈಶ್ವರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಕಿಡಿಗೇಡಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಈ ಘಟನೆಯಲ್ಲಿ 11 ಕಾರು ಹಾಗೂ 1 ಆಟೋ ದ್ವಿಚಕ್ರ ವಾಹನ ಜಖಂ ಆಗಿವೆ. ಅಲ್ಲದೇ, ಕಾಡಾ ಅಧ್ಯಕ್ಷರ ಕಾರು ಕೂಡ ಜಖಂ ಆಗಿದೆ. ಸ್ಥಳಕ್ಕೆ ದೊಡ್ಡಪೇಟೆ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅನುಮಾನ ವ್ಯಕ್ತಪಡಿಸಿ ಈಗಾಗಲೇ ಇಬ್ಬರು ಯುವಕರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇಂತಹ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ರಾಜಸ್ಥಾನದ ಮಾಜಿ ಸಿಎಂ ಮಹಾಮಾರಿಗೆ ಬಲಿ!

ವಿಜಯಸಾಕ್ಷಿ ಸುದ್ದಿ, ಜೈಪುರ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ರಾಜಸ್ಥಾನದ ಮಾಜಿ ಸಿಎಂ ಜಗನ್ನಾಥ್ ಪಹಾಡಿಯಾ(89) ಇಂದು ಮಹಾಮಾರಿಗೆ ಬಲಿಯಾಗಿದ್ದಾರೆ. 1980-81 ರಲ್ಲಿ ಇವರು ರಾಜಸ್ಥಾನದ ಸಿಎಂ ಆಗಿದ್ದರು. ಆನಂತರ ಹರಿಯಾಣ ಹಾಗೂ ಬಿಹಾರದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು.
ಮಾಜಿ ಸಿಎಂ ಅವರ ಸಾವಿನ ಕುರಿತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‍ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಅಲ್ಲದೇ, ಸಂತಾಪ ಸೂಚಿಸಿದ್ದಾರೆ.

ರಾಜ್ಯ ಸರ್ಕಾರ ಗುರುವಾರ ಒಂದು ದಿನ ಶೋಕಾಚರಣೆಯನ್ನು ಕೂಡ ಘೋಷಿಸಿದೆ. ಅಲ್ಲದೇ ಎಲ್ಲಾ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗಿದ್ದು, ರಾಷ್ಟ್ರಧ್ವಜವನ್ನು ಅರ್ಧದಷ್ಟು ಹಾರಿಸಲಾಗುತ್ತಿದೆ.
ಪಹಾಡಿಯಾ ಅವರಿಗೆ ಸಂತಾಪ ಸೂಚಿಸಲು ಇಂದು ಮಧ್ಯಾಹ್ನ 12ಕ್ಕೆ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಅಂದೇ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುತ್ತದೆ ಎನ್ನಲಾಗಿದೆ.

ಕೊರೊನಾ ತಾಂಡವ; ಮೈಮರೆತು ಓಕುಳಿ ಆಡಿದ ಜನ, ಮೌನ ವಹಿಸಿದ ಆಡಳಿತ!

ವಿಜಯಸಾಕ್ಷಿ ಸುದ್ದಿ, ಗದಗ

ಇಡೀ ದೇಶವೇ ಮಹಾಮಾರಿಗೆ ನಲುಗುತ್ತಿದೆ. ಸಾವಿನ ಸುದ್ದಿಗಳು ದೇಶಾದ್ಯಂತ ಆತಂಕ ಸೃಷ್ಟಿಸುತ್ತಿವೆ. ಹೀಗಾಗಿ ಎಲ್ಲೆಡೆ ಲಾಕ್ ಡೌನ್ ಜಾರಿಯಾಗಿದೆ. ಹೊರಗೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ, ಜೀವ ಉಳಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಆದರೆ, ಈ ಗ್ರಾಮಸ್ಥರ ಉಡಾಫೆಗೆ ಏನನ್ನಬೇಕು? ಎನ್ನುವುದೇ ತಿಳಿಯುತ್ತಿಲ್ಲ.

ಕೊರೊನಾ ತೊಲಗಿಸಲು ಸರ್ಕಾರ, ಅಧಿಕಾರಿಗಳು, ವಾರಿಯರ್ಸ್ ಸಾಕಷ್ಟು ಶ್ರಮಿಸುತ್ತಿದ್ದಾರೆ.

ಜಿಲ್ಲೆಯ ನರಗುಂದ ತಾಲೂಕಿನ ಬನಹಟ್ಟಿ ಗ್ರಾಮದ ಜನರು ಜವಬ್ದಾರಿ ಮರೆತು ಓಕಳಿಯಾಟ ಆಡಿದ್ದಾರೆ.

ಗ್ರಾಮದಲ್ಲಿನ ಹನುಮಂತ ದೇವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಹಿನ್ನೆಲೆಯಲ್ಲಿ ಗ್ರಾಮದ ತುಂಬೆಲ್ಲ ಜನರು ಹನುಮಂತ ದೇವರ ಓಕುಳಿ ಆಡಿದ್ದಾರೆ. ಓರ್ವ ಮಹಿಳೆ ಕೈಯಲ್ಲಿ ದೊಣ್ಣೆ ಹಿಡಿದಿರುತ್ತಾಳೆ. ನೀರು ಎರಚುವವರಿಗೆ ಅವಳು ದೊಣ್ಣೆಯಿಂದ ಹೊಡೆಯುತ್ತಾಳೆ. ಹೀಗೆ ಜನ ತಮ್ಮ ಜೀವದ ಹಂಗು ತೊರೆದು, ಕೊರೊನಾ ಭಯವಿಲ್ಲದೆ ಓಕಳಿ ಆಡಿದ್ದಾರೆ. ಈ ಓಕಳಿ ನೋಡಲು ಜನ ಸಾಗರವೇ ಇತ್ತು.

ಮಾಸ್ಕ್ ಧರಿಸಿ, 6 ಅಡಿ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರ, ತಜ್ಞರು ಹಾಗೂ ವೈದ್ಯರು ಜನರಿಗೆ ಕೈ ಮುಗಿದು ಇನ್ನೂ ಬೇಡಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲಿಯ ಜನ ಅವುಗಳಿಗೆ ಡೋಂಟ್ ಕೇರ್ ಎಂದಿದ್ದಾರೆ. ಯಾವುದೇ ಮಾಸ್ಕ್, ದೈಹಿಕ ಅಂತರ ಕಾಯ್ದುಕೊಳ್ಳದೆ ಮೈಮರೆತು ಓಕುಳಿಯಲ್ಲಿ ಮಿಂದೆದಿದ್ದಾರೆ.

ದೇಶದ ತುಂಬೆಲ್ಲ ಮಹಾಮಾರಿ ಸಿಕ್ಕ ಸಿಕ್ಕವರನ್ನೆಲ್ಲ ಬಲಿ ಪಡೆಯುತ್ತಿದೆ. ಜನರು ಭಯದಿಂದಾಗಿ ಮನೆಯಿಂದಲೇ ಹೊರಗೆ ಬರುತ್ತಿಲ್ಲ. ಆದರೆ, ಇಲ್ಲಿಯ ಜನ ಮಾತ್ರ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಆದರೆ, ಜನ ಇಷ್ಟೊಂದು ಮೈಮರೆತು ಓಕುಳಿ ಆಡಿದರೂ ಗ್ರಾಪಂ ಸದಸ್ಯರು, ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಮಾತ್ರ ನಿರ್ಲಕ್ಷ್ಯ ವಹಿಸಿ,ಮೌನದಿಂದ ಕುಳಿತಿದೆ.

ಈ ಘಟನೆ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಧಿಕಾರಿಗಳ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಓಕುಳಿ ನೋಡಿದರೆ ಬಹುಶಃ ಕೊರೊನಾವೇ ಹೆದರಿ ಓಡಿ ಹೋಗಿರಬಹುದೇನೊ ಅನ್ನುವಷ್ಟರ ಮಟ್ಟಿಗೆ ಈ ಜನ ವರ್ತಿಸಿದ್ದಾರೆ.

ಮಹಿಳೆಯನ್ನು ಮಂಚಕ್ಕೆ ಕರೆದ ಬಿಜೆಪಿ ಮುಖಂಡನಿಗೆ ಪೊಲೀಸರ ರಾಜಾತಿಥ್ಯ!

ವಿಜಯಸಾಕ್ಷಿ ಸುದ್ದಿ, ಗದಗ

ಆತ ಗ್ರಾಮ ಪಂಚಾಯತಿ ಸದಸ್ಯೆಯ ಪತಿ, ಬಿಜೆಪಿ ಮುಖಂಡ. ಹತ್ತಾರು ಹಳ್ಳಿಗಳ ಸಂಘಟಕ ಬೇರೆ. ಸಚಿವರ ಕ್ಷೇತ್ರದ ಪ್ರಭಾವಿ ಅಂದರೆ ಕೇಳಬೇಕೇ? ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಗ್ರಾಮ ಪಂಚಾಯತಿಯ ಪಂಪ್ ಮೆಕ್ಯಾನಿಕ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆಡಳಿತ ಮಂಡಳಿ ಆತನನ್ನು ಸಸ್ಪೆಂಡ್ ಮಾಡಿತ್ತು.

ಮೊದಲೇ ಬಡತನ. ಕೆಲಸವಿಲ್ಲದೆ, ಸಂಬಳ ಬಾರದೆ ಸಂಸಾರ ನೌಕೆ ಸಾಗಿಸಲು ಕಷ್ಟ ಆಗಿದೆ. ಸಸ್ಪೆಂಡ್ ರದ್ದು ಮಾಡಿಸಿ ಕೆಲಸಕ್ಕೆ ತಗೊಳ್ಳಿ ಅಂತ ಕಂಡ ಕಂಡ ಸದಸ್ಯರನ್ನು ಕೇಳಿದರೂ ಒಂದಿಷ್ಟು ದಿನ ಎಲ್ಲರೂ ಸತಾಯಿಸಿದ್ದಾರೆ.

ಗ್ರಾ.ಪಂ. ಅಂಗಳದಲ್ಲೇ ಠಳಾಯಿಸುತ್ತಿದ್ದ ಈ ಮುಖಂಡ ಕಂಡಿದ್ದಾನೆ. ಪಂಪ್ ಮೆಕ್ಯಾನಿಕ್ ಹಾಗೂ ಆತನ ಪತ್ನಿ, ಪಿಡಿಒ ಅವರಿಗೆ ಹೇಳಿ ವಾಪಸ್ ಕೆಲಸಕ್ಕೆ ತಗೋರಿ' ಅಂದಾರ. ಆಗ ಬಿಜೆಪಿ ಲೀಡರ್,ಆಯಿತು, ನೋಡೋಣ’ ಎಂದು ಹೇಳಿದ್ದಾರೆ. ಅದ್ಯಾಕೋ ಸರಕಾರವೇ ಇವನ ಕೈಯಲ್ಲಿದೆ ಅಂದುಕೊಂಡ ದಂಪತಿ ಈತನ ಹಿಂದೆ ಬಿದ್ದಿದ್ದಾರೆ.

ನಾಳೆ ಹೇಳ್ತೀನಿ… ನಾಡಿದ್ದು ಹೇಳಿ ಮಾಡಿಸ್ತೀನಿ ಅಂತ ಹೇಳುತ್ತಿದ್ದ ಬಿಜೆಪಿ ಮುಖಂಡ ಈ ದಂಪತಿಯ ಅಸಹಾಯಕತೆ ಬಳಸಿಕೊಳ್ಳುವ ಆಲೋಚನೆ ಮಾಡಿದ್ದಾನೆ.

ಆಮೇಲಾ?

ಮಹಿಳೆ ಪೋನ್ ಮಾಡಿ ಕೇಳೋದು…ಇಂವ ಹೇಳ್ತೀನಿ… ಮಾಡ್ತೀನಿ… ಮಾಡಿಸ್ತೀನಿ ಅಂತ ಹೇಳೋದು… ಹೀಗೆ ಒಂದಿಷ್ಟು ದಿನಗಳು ಕಳೆದಿವೆ. ಈ ಮುಖಂಡ ಮನಸ್ಸಿನಲ್ಲಿ ಮಂಡಿಗೆ ಮೆಲ್ಲಲು ಆರಂಭಿಸಿದ್ದ. ಮತ್ತೊಮ್ಮೆ ಕರೆ ಮಾಡಿದ ಮಹಿಳೆಗೆ ನೇರವಾಗಿ ಮಂಚ ಏರಲು ಆಫರ್ ನೀಡಿದ್ದಾನೆ. ಏನ್ರೀ… ಅಂತ ಗಾಬರಿಬಿದ್ದ ಮಹಿಳೆ ಕೊಂಚ ಸುಧಾರಿಸಿಕೊಂಡು, ಕೆಲಸ ಮಾಡಿಸಿಕೊಡಿ, ಆಮೇಲೆ ನೋಡೋಣ' ಅಂದಿದ್ದಾಳೆ. ಆಮೇಲಾ?’ ಅಂತ ಉದ್ಘಾರ ತಗೆದಿದ್ದಾನೆ ಮಹಾಶಯ.

ಬಿಜೆಪಿ ಭೂಪನ ಬೇಡಿಕೆಯಿಂದ ಮಹಿಳೆಗೆ ಕಸಿವಿಸಿಯಾಗಿದೆ. ಗಂಡನಿಗೆ ಹೇಳಿದಾಗ ಆತನೂ ದಿಗಿಲುಗೊಂಡ. ನಾಲ್ಕು ಮಂದಿ ಮುಂದ ಹೇಳಬೇಕು, ಆತನೊಂದಿಗೆ ಜಗಳ ಮಾಡಬೇಕು ಎಂದರೆ, ಆ ವ್ಯಕ್ತಿ ಪ್ರಭಾವಿ. ಸರಕಾರ, ಪೊಲೀಸರು ಆತನ ತಾಳಕ್ಕೆ ಕುಣಿದರೆ ಏನು ಗತಿ ಎಂದು ಚಿಂತಿಸಿದ ದಂಪತಿಗೆ ದಿಕ್ಕೇ ತೋಚಲಿಲ್ಲ. ಆದರೆ, ಬಿಜೆಪಿ ಮುಖಂಡ ಅಷ್ಟಕ್ಕೆ ಸುಮ್ಮನಾಗದೆ, ಪಂಪ್ ಮೆಕ್ಯಾನಿಕ್‌ಗೂ ಇದನ್ನೇ ಹೇಳಿದ್ದಾನೆ.

ಮುಖಂಡನ ಆಫರ್ ಕುರಿತು ಸಮಾಜದ ಮುಖಂಡರ ಮುಂದೆ ಈ ಪಂಪ್ ಮೆಕ್ಯಾನಿಕ್ ಅಳುಕುತ್ತಲೇ ವಿವರಿಸಿದ್ದಾನೆ. ಮುಂದಾಗಬಹುದಾದ ಅನಾಹುತದ ಕುರಿತು ವಿಚಾರಿಸಿದ ಆತನ ಹಿತೈಷಿಗಳು ಮಂಗಳವಾರ ಗ್ರಾಮೀಣ ಠಾಣೆಗೆ ಆ ಮುಖಂಡನ ವಿರುದ್ಧ ದೂರು ನೀಡಲು ಬಂದಿದ್ದಾರೆ.

ಕೆಲಸ ಮೇಲೆ ಹೊರ ಹೋಗಿದ್ದ ಪಿಎಸ್ಐ:
ಮುಂಜಾನೆ 11 ಗಂಟೆಗೆ ದೂರು ನೀಡಲು ಬಂದವರು ಮಧ್ಯಾಹ್ನ ಎರಡು ಗಂಟೆಯ ವರೆಗೆ ಕಾದ ಮೇಲೆ ಪಿಎಸ್ಐ ಸಾಹೇಬರು ಬಂದಿದ್ದಾರೆ. ಬಿಜೆಪಿ ಮುಖಂಡನ ಪೋನ್ ಸಂಭಾಷಣೆ ಸಮೇತ ಸಾಹೇಬರ ಗಮನಕ್ಕೆ ತಂದು, `ಕಂಪ್ಲೇಂಟ್ ತಗೋರಿ’ ಅಂತ ದಂಪತಿ ಮನವಿ ಮಾಡಿದ್ದಾರೆ.

ದಂಪತಿಯ ಮಾತು ಕೇಳಿ‌ದ ಪಿಎಸ್ಐ, ತಮ್ಮ ಮೇಲಧಿಕಾರಿಗೆ ಮಾಹಿತಿ ನೀಡಿದ್ದಾರೆ. ಮೇಲಧಿಕಾರಿ ಮಾಹಿತಿ ಪಡೆದು ಠಾಣೆಗೆ ಬಂದವರೇ ಸಾಕಷ್ಟು ವಿಚಾರಣೆ ನಡೆಸಿದ್ದಾರೆ. ನೀವು ಕಂಪ್ಲೇಂಟ್ ಕೊಟ್ರ ನಿಮಗ ಮುಂದ ತೊಂದರೆ ಆಗುತ್ತ ನೋಡ್ರೀ ಅಂದಾರ. ಆದರೆ, ದಂಪತಿ ಬಗ್ಗಿಲ್ಲ. ಮೊದಲೇ ಸಚಿವರ ಕ್ಷೇತ್ರದ ಮುಖಂಡ. ಈ ರೀತಿ ಪ್ರಕರಣ ದಾಖಲಾದರೆ ನೌಕರಿ ಮಾಡೋದು ಕಷ್ಟ ಎಂದುಕೊಂಡ ಪೊಲೀಸ್ ಅಧಿಕಾರಿ ರಾಜೀ ಪಂಚಾಯತಿ ಮಾಡ್ಕೊರೀ ಅಂತ ದುಂಬಾಲು ಬಿದ್ದಾರೆ. ಸಾಕಷ್ಟು ಹೆದರಿಸಿದ್ದಾರೆ. ಆದರೂ ದಂಪತಿ ಜಗ್ಗಿಲ್ಲ.

ಆರೋಪಿಗೆ ಆತಿಥ್ಯ

ಆಮೇಲೆ ಆರೋಪಿಯಾಗಿರುವ ಬಿಜೆಪಿ ಮುಖಂಡನನ್ನು ಕರೆಸಿ, ಕುರ್ಚಿ ಮೇಲೆ ಕೂರಿಸಿ, ರಾಜಾತಿಥ್ಯ ನೀಡಿದ್ದಾರೆ. ಹೇಗಾದರೂ ಮಾಡಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ಪಡೆಯಬಾರದು ಅಂತ ನಿರ್ಧರಿಸಿದ ಪೊಲೀಸರೇ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಬರೋಬ್ಬರಿ 11 ಗಂಟೆಗಳು

ಈ ದಂಪತಿ ದೂರು ನೀಡಲು ಠಾಣೆಗೆ ಬಂದಿದ್ದು ಮುಂಜಾನೆ 11 ಗಂಟೆಗೆ. ದೂರು ದಾಖಲಾಗಿದ್ದು ರಾತ್ರಿ 10 ಗಂಟೆಗೆ. ಸತತ 11 ಗಂಟೆ ಕಾಲ ಈ ದಂಪತಿ ಠಾಣೆಯಲ್ಲಿ ಕಾದು ಸುಸ್ತಾಗಿದ್ದಾರೆ, ಮುಜುಗರ ಅನುಭವಿಸಿದ್ದಾರೆ. ಆದರೆ, ಸಾಮಾನ್ಯ ದೂರೊಂದನ್ನು ದಾಖಲಿಸಿ, ಪ್ರಪಂಚ ಗೆದ್ದವರಂತೆ ಪೊಲೀಸರು ಬೀಗಿದ್ದಾರೆ, ಬಿಜೆಪಿ ಮುಖಂಡನೂ ಮೀಸೆ ಮೇಲೆ ಕೈಯಾಡಿಸಿದ್ದಾನೆ.

ಕೊರೊನಾ; ಬುಧವಾರ ಸೋಂಕಿಗೆ ಐವರು ಸಾವು, 486 ಜನರಿಗೆ ಸೋಂಕು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಅದ್ಯಾಕೋ ಸೋಂಕು ಕಡಿಮೆಯಾಗುವಂತೆ ಕಾಣುತ್ತಿಲ್ಲ. ನಿನ್ನೆ ಐದನೂರರ ಗಡಿ ದಾಟಿದ್ದ ಸೋಂಕು ಇವತ್ತು ಕಡಿಮೆ ಇದ್ರೂ ಸಾವಿನ ಸರಣಿ ಮುಂದುವರೆದಿದೆ.

ಇವತ್ತಿನ ಜಿಲ್ಲಾಡಳಿತದ ವರದಿಯಂತೆ ಐದು ಜನ ಸೋಂಕಿಗೆ ಬಲಿಯಾಗಿದ್ದಾರೆ.

ಇಂದಿನ 486 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 19316 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -234, ಮುಂಡರಗಿ-38, ನರಗುಂದ-18 ರೋಣ-66, ಶಿರಹಟ್ಟಿ-121, ಹೊರಜಿಲ್ಲೆಯ-09 ಸೇರಿದಂತೆ 486 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಐವರು ಮೃತಪಟ್ಟಿದ್ದು, ಮೃತರ ಸಂಖ್ಯೆ 197 ಕ್ಕೇರಿದೆ.

ರೋಣ ತಾಲೂಕಿನ ನಿವಾಸಿ 64 ವರ್ಷದ ವ್ಯಕ್ತಿ ಮೇ -13 ರೋಣ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 13 ರಂದು ಮೃತಪಟ್ಟಿದ್ದಾರೆ.

ಧಾರವಾಡ ಜಿಲ್ಲೆಯ ಅಣ್ಣಿಗೇರಿ ನಿವಾಸಿ 76 ವರ್ಷದ ವ್ಯಕ್ತಿ ಮೇ -15 ರಂದು ಜಿಮ್ಸ್ ಗೆ ದಾಖಲಾಗಿದ್ದು, ಕೋವಿಡ್ ದೃಢಪಟ್ಟಿತ್ತು, ಮೇ 16 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಯಾವಗಲ್ ನಿವಾಸಿ 87 ವರ್ಷದ ವ್ಯಕ್ತಿ ಮೇ 16 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಮೇ 17 ರಂದು ಮೃತಪಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯ ಹಳೇ ಕಂಕಾಪೂರ ನಿವಾಸಿ 62 ವರ್ಷದ ವ್ಯಕ್ತಿ ಮೇ 10ರಂದು ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಮೇ 14 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಬೆನಳ್ಳಿ ನಿವಾಸಿ 42 ವರ್ಷದ ಮಹಿಳೆ, ಮುಂಡರಗಿ ತಾಲೂಕು ಆಸ್ಪತ್ರೆಗೆ ಮೇ-13 ರಂದು ದಾಖಲಾಗಿದ್ದರು. ಇವರು ಮೇ -15 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 323 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 15954 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 3165 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 187 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಜಿಂದಾಲ್ ಗೆ ಭೂಮಿ – ಸಿಎಂಗೆ ಲೀಗಲ್ ನೊಟೀಸ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಜಿಂದಾಲ್ ಸಂಸ್ಥೆಗೆ ರಾಜ್ಯ ಸರ್ಕಾರ ಸುಮಾರು 3,667 ಎಕರೆ ಭೂಮಿ ಹಸ್ತಾಂತರ ಮಾಡಿರುವ ಕುರಿತು ವಕೀಲ ದೊರೆರಾಜು ಅವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಲೀಗಲ್ ನೊಟೀಸ್ ಜಾರಿ ಮಾಡಿದ್ದಾರೆ.

ಸರ್ಕಾರಿ ಜಮೀನನ್ನು ಖಾಸಗಿ ಸಂಸ್ಥೆಗೆ ನೀಡುವ ವಿಚಾರದ ಕುರಿತು ತರಾತುರಿಯಾಗಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ಭೂಮಿ ಹಸ್ತಾಂತರ ಮಾಡಿರುವುದು ಕಾನೂನು ಬಾಹಿರವಾಗಿದೆ. ಜಿಂದಾಲ್ ಸಂಸ್ಥೆ ಕಾನೂನುಬಾಹಿರ ಚಟುವಟಿಕೆ ನಡೆಸಿದೆ ಎಂದು ಲೋಕಾಯುಕ್ತ, ನೀಡಿರುವ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಜಿಂದಾಲ್ ಸಂಸ್ಥೆಯು ಈ ಹಿಂದೆ ಸೌತ್ ವೆಸ್ಟ್ ಕಂಪನಿ ಮೂಲಕ ನಡೆಸಿದ ಗಣಿಗಾರಿಕೆಯಿಂದ ರಾಜ್ಯ ಸರ್ಕಾರಕ್ಕೆ ರೂ. 1078 ಕೋಟಿ ನಷ್ಟವಾಗಿದ್ದರ ಬಗ್ಗೆ ಲೋಕಾಯುಕ್ತ ವರದಿ ನೀಡಿದೆ ಎಂದು ಉಲ್ಲೇಖಿಸಿದ್ದಾರೆ.

ಈ ಕುರಿತು ಹೈಕೋರ್ಟ್, ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಜಿಂದಾಲ್ ಸಂಸ್ಥೆಗೆ ಸರ್ಕಾರಿ ಭೂಮಿಯನ್ನು ನೀಡುವುದರಿಂದ ಪರಿಸರಕ್ಕೆ ಹಾನಿಯಾಗಲಿದೆ. ಹೆಚ್ಚು ಖನಿಜಾಂಶವುಳ್ಳ ಜಾಗದಲ್ಲಿ ಪ್ರತಿ ಎಕರೆಗೆ ಕೇವಲ ರೂ. 1,22,195 ನಿಗದಿಪಡಿಸಿದ್ದು, ಸರ್ಕಾರಕ್ಕೆ ದೊಡ್ಡ ನಷ್ಟವಾಗಿದೆ. ಆದ್ದರಿಂದ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.

ಸರ್ಕಾರದ ಈ ನಿರ್ಧಾರದ ವಿರೋಧಿಸಿ ಶಾಸಕ ಉದಯ್ ಗರುಡಾಚಾರ್, ಪೂರ್ಣಿಮ ಕೃಷ್ಣಪ್ಪ, ಅರವಿಂದ ಬೆಲ್ಲದ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಇದಕ್ಕ ಸಿಎಂ ಅವರು ಗರಂ ಆಗಿದ್ದು, ಈ ಕುರಿತು ಸ್ಪಷ್ಟನೆ ನೀಡುವಂತೆ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಅವರಿಗೆ ಸೂಚನೆ ನೀಡಿದ್ದಾರೆ. ಇದಕ್ಕೆ ಗರುಡಾಚಾರ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.

ತಮ್ಮ ಬಂಗಲೆಯನ್ನೇ ಕೋವಿಡ್ ಕೇರ್ ಸೆಂಟರ್ ಮಾಡಿದ ನಾಯಕ!

ವಿಜಯಸಾಕ್ಷಿ ಸುದ್ದಿ, ಪಾಟ್ನಾ

ಸದ್ಯ ಇಡೀ ರಾಷ್ಟ್ರದಲ್ಲಿಯೇ ಮಹಾಮಾರಿಯ ಅಟ್ಟಹಾಸ ವಿಪರೀತವಾಗಿದೆ. ಈ ಸಂದರ್ಭದಲ್ಲಿ ಪ್ರತಿಯೊಂದು ರಾಜ್ಯ ಸರ್ಕಾರಗಳು ಸ್ಥಳೀಯ ಮಟ್ಟದಲ್ಲಿ ಲಾಕ್ ಡೌನ್ ಘೋಷಿಸಿ ಕೊರೊನಾ ಹಿಮ್ಮೆಟ್ಟಿಸುವ ಕಾರ್ಯ ಮಾಡುತ್ತಿವೆ. ಇದರೊಂದಿಗೆ ಹಲವರು ಹಲವಾರು ರೀತಿಯಲ್ಲಿ ಜನರ ಸೇವೆ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ವಿಪಕ್ಷ ನಾಯಕ ಮಾತ್ರ ಸೇವೆಯಲ್ಲಿ ಜನರ ಮನ ಗೆದ್ದು ಮಾದರಿಯಾಗಿದ್ದಾರೆ.

ಪಾಟ್ನಾದ 1-ಪೊಲೊ ರಸ್ತೆಯಲ್ಲಿರುವ ತಮ್ಮ ಅಧಿಕೃತ ಸರ್ಕಾರಿ ನಿವಾಸವನ್ನು ಶಾಸಕರ ನಿಧಿಯಿಂದ ಪೂರ್ಣ ಪ್ರಮಾಣದ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ, ಬಿಹಾರ ವಿರೋಧ ಪಕ್ಷದ ನಾಯಕ ತೇಜಶ್ವಿ ಯಾದವ್ ಜನರ ಸೇವೆಗೆ ಮುಂದಾಗಿದ್ದಾರೆ.

ಬಿಹಾರ ರಾಜ್ಯದಲ್ಲಿ ಕೂಡ ಆಕ್ಸಿಜನ್ ಕೊರತೆ ತಾಂಡವವಾಡುತ್ತಿದೆ. ಇದರೊಂದಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಕೂಡ ಎದ್ದು ಕಾಣುತ್ತಿದೆ. ಹೀಗಾಗಿ ವಿರೋಧ ಪಕ್ಷದ ನಾಯಕ ಈ ರೀತಿಯ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಸರ್ಕಾರಿ ನಿವಾಸದಲ್ಲಿರುವ ಬೆಡ್ ಗಳಿಗೆ ಆಕ್ಸಿಜನ್ ಅಳವಡಿಸಲಾಗಿದ್ದು, ಔಷಧಿಗಳ ಸಂಗ್ರಹ ಮಾಡಲಾಗಿದೆ. ಈ ಕೇಂದ್ರಕ್ಕೆ ತಮ್ಮ ಶಾಸಕರ ನಿಧಿಯಿಂದ ಬೆಡ್ ಮತ್ತು ಇತರ ಎಲ್ಲ ಸೌಲಭ್ಯಗಳನ್ನು ಹೊಂದಿಸಲಾಗಿದೆ. ಇದನ್ನು ಪ್ರತ್ಯೇಕ ವಾರ್ಡ್ ಅಥವಾ ಕ್ವಾರಂಟೈನ್ ಕೇಂದ್ರವಾಗಿ ಬಳಸಿಕೊಳ್ಳಲು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ಅಷ್ಟೇ ಅಲ್ಲದೇ, ಜವಾಬ್ದಾರಿಯುತ ಪ್ರತಿಪಕ್ಷವಾಗಿ, ರೋಗಿಗಳ ಚಿಕಿತ್ಸೆಗೆ ಅಗತ್ಯವಾದ ಯಾವುದೇ ವ್ಯವಸ್ಥೆಗಳನ್ನು ಬೆಂಬಲಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ. ಸದ್ಯ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

error: Content is protected !!