Home Blog Page 3081

ಮೀಸಲಾತಿ ಕಲ್ಪಿಸಿ ಸಮಾಜಕ್ಕೆ ಶಕ್ತಿ ನೀಡಿ: ಮೋಹನ್ ಮಾಳಶೆಟ್ಟಿ

ಫೆ.21ರಂದು ಬೆಂಗಳೂರಿನಲ್ಲಿ ಪಂಚಮಸಾಲಿ ಸಮಾವೇಶ:
ಜಿಲ್ಲೆಯಿಂದ ಸುಮಾರು 30,000 ಜನರು ಭಾಗಿ

ವಿಜಯಸಾಕ್ಷಿ ಸುದ್ದಿ, ಗದಗ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಈಗಾಗಲೇ ಪಾದಯಾತ್ರೆ ನಡೆಯುತ್ತಿದ್ದು, ಫೆ.21ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಜಿಲ್ಲೆಯಿಂದ ಸುಮಾರು 30 ಸಾವಿರ ಜನರು ಭಾಗಿಯಾಗುವ ನಿರೀಕ್ಷೆ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೂಡಲಸಂಗಮದಿಂದ ಬಸವಜಯ ಮೃತ್ಯುಂಜಯ ಶ್ರೀಗಳು ಪಾದಯಾತ್ರೆ ಹಮ್ಮಿಕೊಂಡಿದ್ದು, ಅದಕ್ಕೆ ಹರಿಹರ ಗುರುಪೀಠದ ವಚನಾನಂದ ಶ್ರೀಗಳು ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಪಾದಯಾತ್ರೆ ಬೆಂಗಳೂರು ಸಮೀಪಿಸಿದ್ದು, ಫೆ.21 ರಂದು 2ಎ ಮೀಸಲಾತಿ ಕಲ್ಪಿಸಿ ಪಂಚಮಸಾಲಿ ಸಮಾಜಕ್ಕೆ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಶಕ್ತಿ ತುಂಬುವಂತೆ ಆಗ್ರಹಿಸಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಉಭಯ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಸಭೆ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾವೇಶಕ್ಕೆ ರಾಜ್ಯಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಪಂಚಮಸಾಲಿ ಸಮಾಜದ ಜನರು ಆಗಮಿಸಲಿದ್ದು, ಜಿಲ್ಲೆಯಿಂದ ಜನರನ್ನು ಕರೆದುಕೊಂಡು ಹೋಗಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘದಿಂದ ಬೆಟಗೇರಿಯಿಂದ 5 ಬಸ್, 25 ಕ್ರಶರ್‌ಗಳ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಜಿಲ್ಲೆಯ ಲಕ್ಷ್ಮೇಶ್ವರ, ಗಜೇಂದ್ರಗಡ, ಶಿರಹಟ್ಟಿ, ರೋಣ ಸೇರಿದಂತೆ ವಿವಿಧ ಭಾಗಗಳಿಂದ ಜನರು ಸಮಾವೇಶಕ್ಕೆ ಹೋಗಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಮೋಹನ್ ಮಾಳಶೆಟ್ಟಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅನೀಲ್ ಪಾಟೀಲ್, ಸಿದ್ದು ಪಲ್ಲೇದ, ಅಯ್ಯಪ್ಪ ಅಂಗಡಿ, ಮಲ್ಲಿಕಾರ್ಜುನ ಹಿರೇಕೊಪ್ಪ, ಮಹೇಶ್, ಶಿವನಗೌಡ ಇದ್ದರು.

ಭಾವೈಕ್ಯತೆ ದಿನವೆಂದು ಆಚರಿಸಿ, ಭವನ ನಿರ್ಮಿಸಿ: ಮಲ್ಲಿಕಾರ್ಜುನ ಐಲಿ ಆಗ್ರಹ

ಫೆ.21ರಂದು ಲಿಂ.ಡಾ.ತೋಂಟದ ಸಿದ್ಧಲಿಂಗಶ್ರೀಗಳ ಜನ್ಮದಿನ
ಅಂದು ಬಾವೈಕ್ಯತೆ ಯಾತ್ರೆ, ಹಲವು ಪುಸ್ತಕಗಳ ಬಿಡುಗಡೆ

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಶ್ರೀಗಳು ಭಾವೈಕ್ಯತೆಗಾಗಿ ಸಲ್ಲಿಸಿದ ಸೇವೆ ಪರಿಗಣಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಹಲವು ಪ್ರಶಸ್ತಿಗಳು ದೊರೆತಿದ್ದು, ಶ್ರೀಗಳ ಹೆಸರಿನಲ್ಲಿ ಫೆ.21ರಂದು ರಾಜ್ಯ ಸರಕಾರ ಭಾವೈಕ್ಯತೆ ದಿನವೆಂದು ಆಚರಿಸಬೇಕು ಎಂದು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಒತ್ತಾಯಿಸಿದರು.

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರಕಾರ ಪ್ರತಿವರ್ಷ ಡಾ.ತೋಂಟದ ಸ್ವಾಮೀಜಿಗಳ ಹೆಸರಿನಲ್ಲಿ ಭಾವೈಕ್ಯತೆ ಪ್ರಶಸ್ತಿ ನೀಡಬೇಕು. ಅಲ್ಲದೇ, ನಗರದಲ್ಲಿ ಭಾವೈಕ್ಯತೆ ಭವನ ನಿರ್ಮಿಸಬೇಕೆಂದು ಆಗ್ರಹಿಸಿದ ಅವರು, ಶ್ರೀಗಳ ಆಶಯದಂತೆ ಭವನ ಕಟ್ಟಲು ನಗರದ ಹೃದಯ ಭಾಗದಲ್ಲಿರುವ ಜಾತ್ರೆಯ ಬಯಲು ಜಾಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಪುಸ್ತಕ ಬಿಡುಗಡೆ ಸಮಾರಂಭದ ಸಾನಿಧ್ಯವನ್ನು ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು. ಅದರಂತೆ ಮುಂಡರಗಿ ತೋಂಟದಾರ್ಯ ಶಾಖಾಮಠದ ನಿಜಗುಣಾನಂದಪ್ರಭು, ಶಿರೋಳದ ಗುರುಬಸವ, ಭೈರನಟ್ಟಿಯ ಶಾಂತಲಿಂಗ, ಸಂಡೂರಿನ ಪ್ರಭು, ಅರಸಿಕೆರೆಯ ಶಾಂತಲಿಂಗ, ಆಳಂದದ ಕೋರಣೇಶ್ವರ, ಯಶವಂತನಗರದ ಗಂಗಾಧರ ಮಹಾಸ್ವಾಮಿಗಳು ಹಾಗೂ ತೋಂಟದಾರ್ಯ ಮಠದ ಮಹಾಂತದೇವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಈ ಸಂದರ್ಭದಲ್ಲಿ ಲಿಂ.ಡಾ.ತೋಂಟದ ಶ್ರೀಗಳ ಕುರಿತು ಡಾ.ಜಗದೀಶ ಕೊಪ್ಪ ಹಾಗೂ ಪ್ರೊ.ಶಶಿಧರ ತೋಡಕರ ಸಂಪಾದಿಸಿದ ’ಸಮಾಜಮುಖಿ’,
ಪ್ರೊ.ಮಲ್ಲಿಕಾರ್ಜುನ ಹುಲಗಬಾಳಿ ರಚಿಸಿದ ‘ಸನ್ನಿಧಾನ’, ವೀರನಗೌಡ ಮರಿಗೌಡರ ರಚಿಸಿದ ‘ವಿಶ್ವ ಮಾನವ’, ಜಿ.ವಿ ಹಿರೇಮಠ ರಚಿಸಿದ ‘ಡಂಬಳದ ತೋಂಟದ ಅರ್ಧನಾರೀಶ್ವರ ಶಿವಯೋಗಿಗಳು’ ಎಂಬ ಕೃತಿಗಳನ್ನು ನಿವೃತ್ತ ಗೃಹ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ ಬಿಡುಗಡೆಗೊಳಿಸುವರು ಎಂದು ಮಲ್ಲಿಕಾರ್ಜುನ ಐಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ದಾನಯ್ಯ ಗಣಾಚಾರಿ, ಚಂದ್ರು ಚವ್ಹಾಣ, ಗಂಗಾಧರ ಹಿರೇಮಠ, ಕೊಟ್ರೇಶ ಮೆಣಸಿನಕಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಫೆ.21ರಂದು ಭಾವೈಕ್ಯತೆ ಯಾತ್ರೆ
ತ್ರಿವಿಧ ದಾಸೋಹಿ ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 72ನೇ ಜಯಂತಿ ಅಂಗವಾಗಿ ಭಾವೈಕ್ಯತಾ ದಿನಾಚರಣೆ ಹಾಗೂ ಶ್ರೀಗಳ ಕುರಿತ ಗ್ರಂಥಗಳ ಬಿಡುಗಡೆ ಸಮಾರಂಭವು ಫೆ.21 ರಂದು ಭಾನುವಾರ ಬೆ.11 ಗಂಟೆಗೆ ನಗರದ ತೋಂಟದಾರ್ಯ ಸಂಸ್ಥಾನ ಮಠದಲ್ಲಿ ಜರುಗಲಿದೆ. ಇದರ ಅಂಗವಾಗಿ ಅಂದು ಬೆ. 9 ಗಂಟೆಗೆ ಬಸವೇಶ್ವರ ಪುತ್ಥಳಿಯಿಂದ ಶ್ರೀಮಠದವರೆಗೆ ಭಾವೈಕ್ಯತಾ ಯಾತ್ರೆ ನಡೆಯಲಿದೆ ಎಂದು ಮಲ್ಲಿಕಾರ್ಜುನ ಐಲಿ ಮಾಹಿತಿ ನೀಡಿದರು.

17ನೇ ರಾಷ್ಟ್ರೀಯ ಸೈಕ್ಲಿಂಗ್ ಕ್ರೀಡಾಕೂಟ: ಸೈಕಲ್ ಜಾಥಾಗೆ ಚಾಲನೆ

ವಿಜಯಸಾಕ್ಷಿ ಸುದ್ದಿ, ಗದಗ

17ನೇ ರಾಷ್ಟ್ರೀಯ ಸಿನಿಯರ್, ಜ್ಯೂನಿಯರ್ ಹಾಗೂ ಸಬ್ ಜ್ಯೂನಿಯರ್ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಶಿಪ್ ಕ್ರೀಡಾಕೂಟವು ಇಂದಿನಿಂದ ಫೆ.೨೧ ರವರೆಗೆ ಗದಗ ತಾಲೂಕಿನ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ನಡೆಯುತ್ತಿವೆ.

ಈ ಹಿನ್ನೆಲೆಯಲ್ಲಿ ಇಂದು ನಗರದ ಕೆ.ಎಚ್. ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೈಕಲ್ ಜಾಥಾಗೆ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರು ಸೈಕಲ್ ಜಾಥಾಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಸೈಕಲ್ ಜಾಥಾದಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಪಂ ಸಿಇಒ ಭರತ್ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಡಿಎಫ್ಒ ಸೂರ್ಯಸೇನ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಬಿ.ವಿಶ್ವನಾಥ್, ಸೈಕ್ಲಿಂಗ್ ತರಬೇತುದಾರ ಅನಂತ ದೇಸಾಯಿ ಸೇರಿದಂತೆ ನೂರಾರು ಸೈಕ್ಲಿಸ್ಟ್ ಗಳು ಭಾಗಿಯಾಗಿದ್ದರು.

ಜಿಲ್ಲಾ ಕ್ರೀಡಾಂಗಣದಿಂದ ಅಸುಂಡಿ ಗ್ರಾಮದ ಕುವೆಂಪು ಶಾಲೆಯವರೆಗೆ ಸೈಕಲ್ ಜಾಥಾ ನಡೆಯಿತು.

ಕಾರ್ ಲಾರಿ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ಇಬ್ಬರ ಸಾವು

0

ವಿಜಯಸಾಕ್ಷಿ ಸುದ್ದಿ, ಗದಗ
ಲಾರಿ ಕಾರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಮೂವರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಹುಲಕೋಟಿ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಪ್ರೇಮ ಈಶ್ವರಗೌಡ ಪಾಟೀಲ್(55) ಹಾಗೂ ಕಾರ್ ಚಾಲಕ ಅನ್ವರ್ ಎಂದು ತಿಳಿದುಬಂದಿದೆ. ಈಶ್ವರಗೌಡ ರುದ್ರಗೌಡ ಪಾಟೀಲ್, ಶಿವಾಬಾಯಿ ಮೇಲಗಿರಿಗೌಡ ಪಾಟೀಲ್, ಮಹಾರಾಜ ಮೇಲಗಿರಿಗೌಡ ಪಾಟೀಲ್ ಎಂದು ಗಾಯಾಳುಗಳಾಗಿದ್ದು , ಇವರಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕೊತ್ಸೆ ನೀಡಲಾಗುತ್ತಿದೆ.
ಮೂಲತಃ ರೋಣ ತಾಲೂಕಿನ ಮಾಳವಾಡ ಗ್ರಾಮದವರಾದ ಇವರು ಹಲವು ವರ್ಷಗಳಿಂದ ಧಾರವಾಡದಲ್ಲಿ ನೆಲೆಸಿದ್ದರು. ಇಂದು ಸ್ವಗ್ರಾಮ ಮಾಳವಾಡದಲ್ಲಿ ತಮ್ಮ ಜಮೀನಿಗೆ ಭೇಟಿ ನೀಡಿ ವಾಪಾಸು ತೆರಳುವಾಗ, ಹುಲಕೋಟಿ ಗ್ರಾಮದ ಬಳಿಯಿರುವ ರೂರಲ್ ಇಂಜಿನಿಯರಿಂಗ್ ಕಾಲೇಜು ಸಮೀಪ ಈ ದುರ್ಘಟನೆ ನಡೆದಿದೆ. ಗದಗ ಗ್ರಾಮೀಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ: ಗಂಗಾವತಿ ರೈತರ ವಿನೂತನ ಆವಿಷ್ಕಾರ

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ರೈತರು ಅಳವಡಿಸಿಕೊಳ್ಳುತ್ತಿದ್ದು ಕೂಲಿಕಾರರ ಕೊರತೆಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ಭಾಗದಲ್ಲಿ ಭತ್ತದ ಗದ್ದೆಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆಯ ಮೂಲಕ ಶೇ.50 ರಷ್ಟು ಖರ್ಚು ಉಳಿತಾಯ ಮಾಡಲಾಗುತ್ತಿದೆ.
ಒಂದು ಎಕರೆ ಭತ್ತದ
ಗದ್ದೆಗೆ ಕ್ರಿಮಿನಾಶಕ ಸಿಂಪರಣೆಗೆ ನಾಲ್ಕು ಕೂಲಿ ಕಾರ್ಮಿಕರು ಬೇಕಾಗುತ್ತದೆ. ಸಹಜವಾಗಿ ಒಂದು ಲೀಟರ್ ಕ್ರಿಮಿನಾಶಕ ಒಂದು ಎಕರೆಗೆ ಸಿಂಪರಣೆ ಮಾಡಲಾಗುತ್ತದೆ.‌ ಆದರೆ ಡ್ರೋಣ್ ಮೂಲಕ ಒಂದು ಲೀಟರ್ ನಲ್ಲಿ ಎರಡು ಎಕರೆ ಸಿಂಪರಣೆ ಸಾಧ್ಯವಿದೆ‌. ಇದರಿಂದ ಹಣ, ಸಮಯ, ಮಾನವ ಸಂಪನ್ಮೂಲ ಉಳಿಸಲು ಸಾಧ್ಯವಿದೆ.
ಈಗಾಗಲೇ ತಮಿಳುನಾಡು ಆಂಧ್ರ ಪ್ರದೇಶ ರಾಜ್ಯದ ರೈತರು ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ ಮಾಡುತ್ತಿದ್ದಾರೆ. ಡ್ರೋಣ್ ನಲ್ಲಿ 11 ಲೀಟರ್ ಕ್ರಿಮಿನಾಶಕ ಹಾಕಿ ಮೊದಲು ಜಿಪಿಎಸ್ ಮಾಡಿ ರಿಮೋಟ್ ಮೂಲಕ ಚಾಲನೆ ಮಾಡುತ್ತ ಕ್ರಿಮಿನಾಶಕ ಸಿಂಪರಣೆ ಮಾಡಲಾಗುತ್ತದೆ. ಒಂದು ಎಕರೆಗೆ 600 ರೂ.ಬಾಡಿಗೆ ಇದ್ದು 7 ನಿಮಿಷಗಳಲ್ಲಿ ಒಂದು ಎಕರೆ ಸಿಂಪರಣೆ ಮಾಡಬಹುದಾಗಿದೆ. ಇದರಿಂದ ಹಣ ಮತ್ತು ಸಮಯ ಉಳಿತಾಯವಾಗುತ್ತದೆ.
ರೈತರಿಗೆ ಉಪಯುಕ್ತ: ಡ್ರೋಣ್ ಮೂಲಕ ಭತ್ತ ಸೇರಿ ವಿವಿಧ ಬೆಳೆಗಳಿಗೆ ಕ್ರಿಮಿನಾಶಕ ಸಿಂಪರಣೆ ವೆಚ್ಚದಾಯಕವಾಗಿದ್ದು ಬೇರೆ ರಾಜ್ಯಗಳಲ್ಲಿ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ ಮಾಡಲಾಗುತ್ತಿದೆ. ಈ ಬಾರಿ ಬಾಡಿಗೆ ಆಧಾರದಲ್ಲಿ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ ಮಾಡಲಾಗುತ್ತಿದೆ ಇದರಿಂದ ಕೂಲಿ ಆಳಿನ ಕೊರತೆಯಿಂದ ಬೇಸತ್ತ ರೈತರಿಗೆ ಹಣ ಸಮಯ‌ ಉಳಿತಾಯವಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ

ಲಾರಿ-ಟ್ರ್ಯಾಕ್ಟರ್ ಅಪಘಾತ; ಲಾರಿ ಚಾಲಕ ಸಾವು

0

ವಿಜಯಸಾಕ್ಷಿ ಸುದ್ದಿ, ಕುಕನೂರು:
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವೀರಾಪುರ ಕ್ರಾಸ್ ಬಳಿ ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಹೊಡೆದಿದ್ದು, ಅಪಘಾತದ ವೇಳೆ ಚಲಿಸುತ್ತಿರುವ ಲಾರಿಯಿಂದ ಹೊರಗೆ ಹಾರಿದ ಚಾಲಕ ಸಾವನ್ನಪ್ಪಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಮೃತ ಚಾಲಕನನ್ನು ಮಣಿಕಂಠ (34) ಎಂದು ಗುರುತಿಸಲಾಗಿದೆ.

ಲಾರಿಯಿಂದ ಸುಮಾರು ‌ಅರ್ಧ ಕಿ.ಮೀ. ಹೊರಗೆ ಹಾರಿ ಹೋಗಿರೋ ಚಾಲಕ ಮಣಿಕಂಠ, ಲಾರಿ‌ಯಿಂದ ಸಿಡಿದು ಸುಮಾರು 300 ಮೀ. ದೂರಕ್ಕೆ ಬಿದ್ದಿದ್ದಾನೆ.

ಕಲ್ಲು ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ‌ ಹೊಡೆದಿದೆ.
ಟ್ರ್ಯಾಕ್ಟರ್ ರಸ್ತೆ ಕ್ರಾಸ್ ಮಾಡುವಾಗ ಅಪಘಾತ ಸಂಭವಿಸಿದ್ದು, ಕುಕನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ನಿಧನ

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಇಲ್ಲಿನ ನಿವೃತ್ತ ವಾರ್ತಾಧಿಕಾರಿ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಭೀ.ಆಕಳವಾಡಿ (70) ಫೆ.15 ಸೋಮವಾರ ನಸುಕಿನ ಪೂರ್ವದಲ್ಲಿ ರಾತ್ರಿ 1.30 ಕ್ಕೆ ಕೊಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಪಾರ್ಥಿವ ಶರೀರದ ಅಂತ್ಯಕ್ರಿಯೆ ಅವರ ಸ್ವಗ್ರಾಮ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಬೇನಾಳ ( ಆರ್.ಎಸ್ ) ಗ್ರಾಮದಲ್ಲಿ ಸೋಮವಾರ ಫೆ.15 ರಂದು ಮಧ್ಯಾಹ್ನ ಜರುಗಲಿದೆ.
ಕುಟುಂಬ ಸದಸ್ಯರ ಸಂಪರ್ಕ ಸಂಖ್ಯೆ : ಸಂಪತ್ ಕುಮಾರ್ ಆಕಳವಾಡಿ- 7795520282

೨ಎ ಮೀಸಲಾತಿ ಹೋರಾಟ ಸ್ವಾಗತಾರ್ಹ, ಸಿದ್ರಾಮಯ್ಯ ತಮ್ಮ ಅನುಭವವನ್ನು ಬಿಜೆಪಿ ಮೇಲೆ ಹಾಕ್ತಿದ್ದಾರೆ: ಸಚಿವ ಸಿ.ಸಿ.ಪಾಟೀಲ್ ತಿರುಗೇಟು

ವಿಜಯಸಾಕ್ಷಿ ಸುದ್ದಿ, ಗದಗ

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಅನುಭವವನ್ನು ನಮ್ಮ ಪಕ್ಷದ ಮೇಲೆ ಹಾಕುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಯಾವ ಕಡೆ ಇದ್ದಾರೆ, ಉಳಿದವರು ಯಾವ ಕಡೆ ಅದಾರೆ ಎಂಬುವುದೇ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ. ಜಿ.ಪರಮೇಶ್ವರ್ ಅಂತೂ ಇತ್ತೀಚೆಗೆ ಎಲ್ಲೂ ಕಾಣಿಸುತ್ತಿಲ್ಲ. ಬಿಜೆಪಿ ಪಕ್ಷದಲ್ಲಿ ಮನೆಯೊಂದು ಮೂರು ಬಾಗಿಲು ಆಗಿಲ್ಲ. ಮೂರು ಮನೆ ಕೂಡಿಸಿ ಇನ್ನೂ ದೊಡ್ಡದು ಮಾಡಿಕೊಳ್ಳುತ್ತೇವೆ ಎಂದು
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ. ಪಾಟೀಲ್ ತಿರುಗೇಟು ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಮೇಲಿನಂತೆ ಮಾತನಾಡಿದರು.

ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳ ಹೋರಾಟವನ್ನು ನಾನು ಸ್ವಾಗತಿಸುತ್ತೇನೆ. ಮೀಸಲಾತಿಯಂತಹ ಕ್ಲಿಷ್ಟಕರ ಸಮಸ್ಯೆಗಳನ್ನು ಬಗೆಹರಿಸಲು
ಸರಕಾರಕ್ಕೆ ಸಮಯಾವಕಾಶ ಕೊಡಬೇಕು. ಈಗಾಗಲೇ ಸಿಎಂ ಯಡಿಯೂರಪ್ಪ ಅವರು ಮೀಸಲಾತಿಗೆ ಪೂರಕವಾಗಿರುವ ಕಾನೂನಾತ್ಮಕ ಹೆಜ್ಜೆ ಇಟ್ಟಿದ್ದಾರೆ. ೨ಎ ಮೀಸಲಾತಿಗೆ ಸಂಬಂಧಿಸಿದ ವರದಿ ನೀಡುವಂತೆ ಹಿಂದುಳಿದ ವರ್ಗಗಳ ಇಲಾಖೆಗೆ ಪತ್ರ ಬರೆದಿದ್ದಾರೆ. ಸ್ವಾಮೀಜಿಗಳು ಅವಸರ ಮಾಡುವ ಅವಶ್ಯಕತೆ ‌ಇಲ್ಲ. ಪೂಜ್ಯರು ಪರಿಸ್ಥಿತಿ ಅರ್ಥೈಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಸಿಎಂ ಯಡಿಯೂರಪ್ಪ ಮಾತಿನಂತೆ ನಾನು ಮತ್ತು ಸಚಿವ ಮುರಗೇಶ ನಿರಾಣಿಯವರು ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಸ್ವಾಮೀಜಿಗಳಿಗೆ ಮನವರಿಕೆ ಮಾಡಿದ್ದೇವೆ ಎಂದು ಸಚಿವ ಸಿಸಿ ಪಾಟೀಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎಸ್ ವಿ ಸಂಕನೂರು, ದ್ರಾಕ್ಷಾರಸ‌ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ, ಗದಗ-ಬೇಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಸಂಗಮೇಶ ದುಂದೂರ, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಬಿಜೆಪಿಯ ಹಿರಿಯ ಮುಖಂಡ ಕರಿಗೌಡ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ಇದ್ದರು.

ಬಸ್ ನಿಲ್ದಾಣದಲ್ಲಿ ರೌಡಿಸಂ ಪ್ರದರ್ಶಿಸಿದ ವಿದ್ಯಾರ್ಥಿಗೆ ಪೇದೆಯಿಂದ ಕಪಾಳಮೋಕ್ಷ

ವಿಜಯಸಾಕ್ಷಿ ಸುದ್ದಿ, ಗದಗ

ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಜಗಳವಾಗಿ ಉಡಾಳ ವಿದ್ಯಾರ್ಥಿಯೊಬ್ಬನಿಗೆ ಪೊಲೀಸಪ್ಪ ಕಪಾಳಮೋಕ್ಷ ಮಾಡಿರುವ ಘಟನೆ ನಗರದ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬಸ್ ನಿಲ್ದಾಣದಲ್ಲಿ ತನ್ನ ಪಾಡಿಗೆ ತಾನು ಕುಳಿತಿದ್ದ ವಿದ್ಯಾರ್ಥಿಗೆ ಇನ್ನೋರ್ವ ವಿದ್ಯಾರ್ಥಿ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಅಲ್ಲೇ ಇದ್ದ ನಿಯಂತ್ರಾಣಾಧಿಕಾರಿ ಸುಮ್ಮನಿದ್ದ ವಿದ್ಯಾರ್ಥಿಗೆ ಯಾಕೆ ಹೊಡೀತಿಯಾ? ಬಾ ಪೊಲೀಸ್ ಸ್ಟೇಷನ್ ಗೆ ಹೋಗೋಣವೆಂದು ಎಳೆದಾಡಿದ್ದಾರೆ.

ಖಾಸಗಿ ಕಾಲೇಜ್ ‌ಹಾಗೂ ಸರಕಾರಿ ಕಾಲೋಜಿನ ವಿದ್ಯಾರ್ಥಿಗಳಿಬ್ಬರ ಮಧ್ಯೆ ಜಗಳ ನಡೆದಿದ್ದು, ಗೊತ್ತು ಪರಿಚಯವಿಲ್ಲದ
ನಗರದ ಖಾಸಗಿ ಕಾಲೇಜು ವಿದ್ಯಾರ್ಥಿಯನ್ನು ಕರೆದು ಸರಕಾರಿ ಕಾಲೇಜಿನ ವಿದ್ಯಾರ್ಥಿ ಥಳಿಸಿದ್ದಾನೆ.

ಸುಖಾಸುಮ್ಮನೆ ಕಾರಣವಿಲ್ಲದೇ ಥಳಿಸಿದ ಸರಕಾರಿ ಕಾಲೇಜು ವಿದ್ಯಾರ್ಥಿಗೆ ಟ್ರಾಫಿಕ್ ಪೊಲೀಸರೊಬ್ಬರು ರೌಡಿಸಂ ಪ್ರದರ್ಶಿಸಿದ ಉಡಾಳ ವಿದ್ಯಾರ್ಥಿಗೆ ತಕ್ಕ ಪಾಠ ಕಲಿಸಿದ್ದಾರೆ.

ರೌಡಿಸಂ ಮಾಡ್ತೀಯಾ? ಗೂಂಡಾಗಿರಿ ಮಾಡ್ತೀಯಾ ಎಂದು ಕಪಾಳಮೋಕ್ಷ ಮಾಡುವ ಮೂಲಕ ತಕ್ಕ ಶಾಸ್ತಿ ಮಾಡಿದ್ದಾರೆ. ಸಂಚಾರಿ ಠಾಣೆಯ ಪೇದೆಯ ಈ ಬುದ್ದಿ ಮಾತಿಗೆ ನೆರೆದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಸಂಕಷ್ಟದಲ್ಲಿರುವ ಪತ್ರಕರ್ತರ ಕುಟುಂಬಕ್ಕೆ ನೆರವು ಮುಂದುವರಿಕೆ, ವಿವಿಗಳಲ್ಲಿ ಅಧ್ಯಯನ ಪೀಠ: ಸಿಎಂ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕಾರ್ಯನಿರತ ಪತ್ರಕರ್ತರಾಗಿದ್ದು ಅನಾರೋಗ್ಯ ಅಥವಾ ಸಾವಿಗೆ ತುತ್ತಾದ ಸಂದರ್ಭದಲ್ಲಿ ಆ ಕುಟುಂಬಕ್ಕೆ ಗರಿಷ್ಠ 5 ಲಕ್ಷ ರೂ ನೀಡುತ್ತಿರುವ ನೆರವನ್ನು ಮುಂದುವರೆಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಮ್ಮತಿಸಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಅಧ್ಯಕ್ಷರಾದ ಶಿವಾನಂದ ತಗಡೂರು ನೇತೃತ್ವದ ನಿಯೋಗದ ಮನವಿಯನ್ನು‌ ಸ್ವೀಕರಿಸಿದ ಮುಖ್ಯಮಂತ್ರಿಗಳು, ಪತ್ರಕರ್ತರ ಕಲ್ಯಾಣಕ್ಕೆ ಪೂರಕವಾದ ಬೇಡಿಕೆಗಳ ಈಡೇರಿಕೆಗೆ ಬಜೆಟ್ ನಲ್ಲಿ ಸೇರ್ಪಡೆಗೊಳಿಸುವ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಲ್ಲದೆ ಹಾಲಿ ನೀಡಲಾಗುತ್ತಿರುವ ನೆರವನ್ನು ಮುಂದುವರೆಸಲಾಗುವುದು ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ವಿಜಯಪುರ ವಿವಿಯಲ್ಲಿ ಹಿರಿಯ ಪತ್ರಕರ್ತರಾದ ಮೊಹರೆ ಹಣುಮಂತರಾಯ ಬೆಂಗಳೂರು ವಿವಿಯಲ್ಲಿ ಎಚ್.ಎಸ್.ದೊರೆಸ್ವಾಮಿ ಮತ್ತು ಧಾರವಾಡ ವಿಶ್ವವಿದ್ಯಾಲಯಗಳಲ್ಲಿ ಹಿರಿಯ ಪತ್ರಕರ್ತರಾದ ಪಾಟೀಲ್ ಪುಟ್ಟಪ್ಪ (ಪಾಪು) ಅವರ ಹೆಸರಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಆಧ್ಯಯನ‌ಪೀಠ ಸ್ಥಾಪಿಸಬೇಕೆಂಬ ಸಂಘದ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ತಾಲ್ಲೂಕು ಕೇಂದ್ರಗಳಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಹಣಕಾಸು ಸ್ಥಿತಿ ನೋಡಿ ನೆರವು, ಬಸ್ ಪಾಸ್, ಜಾಹೀರಾತು ಹಣ ಶೀಘ್ರ ಬಿಡುಗಡೆ ಸೇರಿದಂತೆ ಅನೇಕ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ನಿಯೋಗದಲ್ಲಿ ಕೆಯುಡಬ್ಲ್ಯಜೆ ಪ್ರಧಾನ ಕಾರ್ಯದರ್ಶಿ ಲೊಕೇಶ್, ನಿರ್ದೇಶಕರಾದ ಎನ್.ರವಿಕುಮಾರ್, ಜೆ.ಆರ್.ಕೆಂಚೇಗೌಡ, ಚೆಲುವರಾಜ್, ದೇವೇಂದ್ರಪ್ಪ ಕಪನೂರು, ಸೋಮಶೇಖರ ಕೆರಗೋಡು, ಮುನಿಕೃಷ್ಣಪ್ಪ, ಗಣಪತಿ ಗಂಗೊಳ್ಳಿ, ದೇವರಾಜು, ತೇಜಸ್ವಿನಿ, ರಶ್ಮಿಪಾಟೀಲ್ ಮೊದಲಾದವರಿದ್ದರು.

error: Content is protected !!