Home Blog Page 3094

ಎಐಟಿಯುಸಿ ಕಾರ್ಮಿಕ ಸಂಘಟನೆಯಿಂದ ಶೇಖರಗೌಡರಿಗೆ ಬೆಂಬಲ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು

ಏಪ್ರಿಲ್ 2021ರಲ್ಲಿ ನಡೆಯಲಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿ ಶೇಖರಗೌಡ ಮಾಲಿಪಾಟೀಲರನ್ನು ಬೆಂಬಲಿಸಿದೆ ಎಂದು ಎಐಟಿಯುಸಿ ಹಾಗೂ ರಾಜ್ಯ ಕೆ ಎಸ್ ಆರ್ ಟಿ ಸಿ ಸ್ಟ್ಯಾಪ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಅನಂತ ಸುಬ್ಬರಾವ್ ಘೋಷಿಸಿದ್ದಾರೆ.
ಬೆಂಗಳೂರಿನ ಕೇಂದ್ರ ಕಚೇಯಲ್ಲಿ ಕೆ ಎಸ್ ಆರ್ ಟಿ ಸಿ, ಬಿ ಎಂ ಟಿ ಸಿ ನೌಕರರ ಸಭೆಯಲ್ಲಿ ಶೇಖರಗೌಡ ಅವರಿಗೆ ಪುಷ್ಪಗುಚ್ಚ ನೀಡಿ ಸ್ವಾಗತಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಅನೇಕ ಕಾರಣಗಳಿಂದ ಅನ್ಯಾಯಕ್ಕೆ ಒಳಗಾಗಿದೆ. ಅವರಿಗೆ ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಸಿಕ್ಕಬೇಕಾದ ಸ್ಥಾನಮಾನ ಸಿಕ್ಕಿಲ್ಲ.

105 ವರ್ಷವಾದರೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಲ್ಲಿನವರು ಒಬ್ಬರೂ ಅಧ್ಯಕ್ಷರಾಗಿಲ್ಲ. ಈ ಸಾರಿ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಅನುಭವಿ, ಪ್ರಾಮಾಣಿಕ ಸಜ್ಜನ ಶೇಖರಗೌಡ ಮಾಲಿಪಾಟೀಲರು ಸ್ಪರ್ಧಿಸುತ್ತಿದ್ದು ಅವರನ್ನು ಗೆಲ್ಲಿಸಬೇಕು. ಸಾಹಿತ್ಯ ಪರಿಷತ್ತು ಕನ್ನಡಿಗರ ಆಶಯಗಳನ್ನು ಈಡೇರಿಸುವ ಸಂಸ್ಥೆಯಾಗಿ ಎತ್ತರಕ್ಕೆ ಬೆಳೆಯಬೇಕು ಎಂದು ಆಶಯ‌ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕೆ ಎಸ್ ಆರ್ ಟಿ ಸಿ ನೌಕರರ ಸಹಕಾರ ಸಂಘದ ಅಧ್ಯಕ್ಷ ವೆಂಕಟೇಶ್, ಬೆಂಗಳೂರು ನಗರ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ. ತಿಮ್ಮೇಶ್, ಸಾಹಿತಿ ಆರ್ ಜಿ‌ ಹಳ್ಳಿ ನಾಗರಾಜ, ದ್ವಾರನಕುಂಟೆ ಪಾತಣ್ಣ, ಉಪನ್ಯಾಸಕರಾದ ಡಾ. ಕಾಂತರಾಜಪುರ ಸುರೇಶ, ಡಾ. ವಸಂತಕುಮಾರ ಉಪಸ್ಥಿತರಿದ್ದರು.

ಕತ್ತೆಗೂ ಬಂತು ಕಾಲ, ಹಾಲಿಗೂ ಬಂತು ಬೆಲೆ! ಕತ್ತೆ ಹಾಲು ಮಾರಾಟ ಜೋರು

ವಿಜಯಸಾಕ್ಷಿ ಸುದ್ದಿ, ಕಂಪ್ಲಿ

ಕಳೆದ ಎರಡು ದಿನಗಳಿಂದ ಪಟ್ಟಣದ ವಿವಿಧ ವಾರ್ಡುಗಳಲ್ಲಿ, ಬೀದಿಗಳಲ್ಲಿ ಕತ್ತೆ ಹಾಲು ಮಾರಾಟ ಜೋರಾಗಿ ನಡೆದಿದ್ದು, ಕೆಲವರು ಸಾರ್ವಜನಿಕರು ಈ ಕತ್ತೆ ಹಾಲನ್ನು ಕೊಂಡು ಮಕ್ಕಳಿಗೆ ಕುಡಿಸಿದರೆ ಇನ್ನು ಕೆಲವರು ಇದನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

ದೂರದ ಆಂದ್ರ ಪ್ರದೇಶದ ನಿಜಾಮಾಬಾದ್‍ನಿಂದ ಆಗಮಿಸಿರುವ ಸುಮಾರು 5-6 ಕುಟುಂಬಗಳು ಪಟ್ಟಣದ ಕುರುಗೋಡು ರಸ್ತೆಯ ಸಾಯಿಬಾಬ ಉದ್ಯಾನದ ಬಳಿಯಲ್ಲಿ ಟೆಂಟು ಹಾಕಿದ್ದಾರೆ. ಇವರೊಂದಿಗೆ ಸುಮಾರು 20 ಅಧಿಕ ಸಂಖ್ಯೆಯಲ್ಲಿ ಕತ್ತೆಗಳನ್ನು ಸಹ ತೆಗೆದುಕೊಂಡು ಬಂದಿದ್ದು, ಪ್ರತಿದಿನ ಬೆಳಿಗ್ಗೆ ಕತ್ತೆಯ ಹಾಲವನ್ನು ಕರೆದು ಅದನ್ನು ಸಣ್ಣ ಬಾಟಲಿಗಳಲ್ಲಿ ಸಂಗ್ರಹಿಸಿಕೊಂಡು ಜೊತೆಗೆ 30 ಮಿ.ಮೀ.ಸಣ್ಣ ಬಾಟಲಿಯೊಂದಿಗೆ ಕತ್ತೆಗಳ ಜೊತೆ ಬೀದಿ ಬೀದಿ ಸುತ್ತುತ್ತಾ ಕತ್ತೆ ಹಾಲು ಮಾರಾಟ ಮಾಡುತ್ತಿದ್ದಾರೆ.

ಜೊತೆಗೆ ಮನೆ ಮನೆಗೆ ತೆರಳುವ ಇವರು ಈ ಕತ್ತೆ ಹಾಲನ್ನು ಮಕ್ಕಳಿಗೆ ಹಾಕಿದರೆ, ವಿವಿಧ ದೈಹಿಕ ಕಾಯಿಲೆಗಳು ದೂರಾಗುತ್ತವೆ, ದಮ್ಮು ಕೆಮ್ಮು ಬರುವುದಿಲ್ಲವೆಂದು ಸಾರ್ವಜನಿಕರನ್ನು ಮನವೊಲಿಸುತ್ತಿದ್ದಾರೆ. ಇವರ ಮಾತುಗಳನ್ನು ಕೇಳುವ ಕೆಲವರು ಹಾಲನ್ನು ಕೊಂಡರೆ ಇನ್ನು ಕೆಲವರು ಕತ್ತೆ ಹಾಲಾ ಎಂದು ಮೂಗು ಮುರಿಯುತ್ತಾರೆ.

ಕತ್ತೆ ಹಾಲು ಮಾರಲು ಬಂದ ರಾಜಮ್ಮ ಎನ್ನುವ ಮಹಿಳೆಯನ್ನು ಮಾತನಾಡಿಸಿದಾಗ ತೆಲುಗಿನಲ್ಲಿ ಮಾತನಾಡಿದ ಅವರು, ನಾವು ದೂರದ ನಿಜಾಮಾಬಾದನಿಂದ ಬಂದಿದ್ದು, ಅತ್ಯಂತ ಅಧಿಕ ಪ್ರಮಾಣದಲ್ಲಿ ರೋಗ ನಿರೋಧ ಶಕ್ತಿಯನ್ನು ಹೊಂದಿರುವ ಹಾಲನ್ನು ಸೇವಿಸುವುದರಿಂದ ಮಕ್ಕಳಿಗೆ ಯಾವುದೇ ರೀತಿಯ ರೋಗಗಳು ಬರುವುದಿಲ್ಲವೆಂದು ತಿಳಸಿದರು.

30.ಮಿ.ಮೀ.ಹಾಲನ್ನು 100 ರೂ.ಗಳಿಗೆ ಮಾರುತ್ತೇವೆ ಎಂದರು. ಕೆಲವು ದಿನ ಪಟ್ಟಣದಲ್ಲಿ ಹಾಲು ಮಾರಿ ನಂತರ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ಹಾಲು ಮಾರುತ್ತೇವೆ ಎಂದು ರಾಜಮ್ಮ ತಿಳಿಸಿದರು.

ನಿಜಾಮಾಬಾದಿನಿಂದ ಪುರುಷರು, ಮಹಿಳೆಯರು ಸೇರಿ ಸುಮಾರು 30 ಜನ ಆಗಮಿಸಿದ್ದು, ಪ್ರತಿದಿನ ಬೆಳಿಗ್ಗೆ ಹಾಲು ಮಾರಲು ತೆರಳಿ ಸಂಜೆಗೆ ನಾವು ವಾಸಿಸುವ ಪ್ರದೇಶಕ್ಕೆ ಆಗಮಿಸುತ್ತೇವೆ ಎಂದರು.

ಮರಾಠಾ ಅಭಿವೃದ್ದಿ ನಿಗಮ ಸ್ಥಾಪನೆಯಲ್ಲಿ ರಾಜಕೀಯ ಸ್ವಾರ್ಥವಿಲ್ಲ: ಬಿ.ಶ್ರೀರಾಮುಲು

ವಿಜಯಸಾಕ್ಷಿ ಸುದ್ದಿ, ಕಂಪ್ಲಿ: ನಮ್ಮ ರಾಜ್ಯದಲ್ಲಿ ಅನಾದಿ ಕಾಲದಿಂದಲೂ ವಾಸಿಸುತ್ತಿರುವ ಮರಾಠರು ಈ ರಾಜ್ಯದ ಅವಿಭಾಜ್ಯ ಅಂಗವಾಗಿದ್ದು, ಈ ಸಮುದಾಯದ ಅಭಿವೃದ್ಧಿಗಾಗಿ ಮರಾಠಾ ಸಮುದಾಯ ಅಭಿವೃದ್ದಿ ನಿಗಮ ಸ್ಥಾಪನೆಗೆ ಮುಂದಾಗಲಾಗಿದೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಸ್ವಾರ್ಥವಿಲ್ಲವೆಂದು ಸರ್ಕಾರದ ತೀರ್ಮಾನವನ್ನು ಸಮಾಜ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಸಮರ್ಥಿಸಿಕೊಂಡರು.

ರವಿವಾರ ಪಟ್ಟಣಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಮರಾಠರು ಕನ್ನಡಕ್ಕೆ ಆದ್ಯತೆ ಕೊಡುತ್ತಾ ಬಂದಿದ್ದಾರೆ. ಮರಾಠಿಗರ ಕಿರುಕುಳವನ್ನು ಖಂಡಿಸುತ್ತಿದ್ದಾರೆ. ಅವರು ರಾಜ್ಯದ ಅವಿಭಾಜ್ಯ ಅಂಗವಾಗಿದ್ದಂತೆ. ರಾಜಕೀಯಕ್ಕಾಗಿ ನಿಗಮ ಮಾಡಿಲ್ಲ. ಅವರು ಕನ್ನಡ ಉಳಿಸಬೇಕೆಂದು ತಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದಿಸುತ್ತಿದ್ದಾರೆ. ಕನ್ನಡ ಪರ ಹೋರಾಟಗಳ್ನು ಮಾಡುತ್ತಾ ಬಂದಿದ್ದಾರೆ. ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ,ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸೌಕರ್ಯಗಳು ದೊರಕಲು ಮರಾಠ ಸಮುದಾಯ ಅಭಿವೃದ್ದಿ ನಿಗಮ ಸ್ಥಾಪಿಸಲಾಗಿದೆ ಎಂದರು.

ಗಡಿ ಭಾಗದಲ್ಲಿ ಇಂದಿಗೂ ಮರಾಠಿ ನಾಮಫಲಕಗಳು ಇರುವ ಬಗ್ಗೆ ಪ್ರಶ್ನಿಸಿದಾಗ ಈ ಬಗ್ಗೆ ಸರ್ಕಾರ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಲಿದೆ. ಮಹಾರಾಷ್ಟ್ರಿಗರು ತಲೆ ಕೆಳಗೆ ಮಾಡಿ ಕಾಲು ಮೇಲೆ ಮಾಡಿದರೂ ನಮ್ಮ ಭಾಗದ ರಾಗಿಕಾಳಿನಷ್ಟು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಮರಾಠಿಗರ ಪುಂಡಾಟಿಕೆ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಕರ್ನಾಟಕದಲ್ಲಿನ ಮರಾಠಿಗರನ್ನು ರಕ್ಷಣೆ ಮಾಡುವುದು ನಮ್ಮ ಜವಬ್ದಾರಿ. ಗಡಿಭಾಗದಲ್ಲಿ ಸಂಪೂರ್ಣ ಕನ್ನಡ ಜಾರಿಗಾಗಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದೆ ಜೆ.ಶಾಂತಾ, ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ಪುರಸಭೆ ಸದಸ್ಯರು, ಮುಖಂಡರಾದ ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ಎನ್.ಪುರುಷೋತ್ತಮ, ಜ್ಯೋತಿ,ರಬಿಯಾ, ಉಷಾ, ಸಂಜಯ ಬೆಟಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕರ್ನಾಟಕ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷರಾಗಿ ಕಾಂತಿಲಾಲ್ ಬನ್ಸಾಲಿ ನೇಮಕ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಬಿಜೆಪಿಯು ಹಿರಿಯ ಮುಖಂಡ ಕಾಂತಿಲಾಲ್ ಬನ್ಸಾಲಿ ಅವರನ್ನು ಕರ್ನಾಟಕ ದ್ರಾಕ್ಷರಸ ಮಂಡಳಿಯ ಅಧ್ಯಕ್ಷರನ್ನಾಗಿ ಸರಕಾರ ನೇಮಿಸಿ‌ ಆದೇಶ ಹೊರಡಿಸಿದೆ.

ತೋಟಗಾರಿಕೆ ಇಲಾಖೆಯ ಆಧೀನ ಕಾರ್ಯದರ್ಶಿ ಟಿ ವಿ ಸುನಂದಮ್ಮ ಈ ಕುರಿತು ನೇಮಕಾತಿ ಆದೇಶ ಹೊರಡಿಸಿದ್ದಾರೆ.

ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷರಾಗಿ ನೇಮಕವಾಗಿರುವ ಕಾಂತಿಲಾಲ್ ಬನ್ಸಾಲಿ ಅವರನ್ನು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅಭಿನಂದಿಸಿದ್ದು, ಗದಗ ಜಿಲ್ಲೆಯ ಮೊದಲ ಬಿಜೆಪಿ ಅಧ್ಯಕ್ಷರಾಗಿ ಪಕ್ಷವನ್ನು ತಳಹಂತದಲ್ಲಿ ಸಂಘಟಿಸಿದ್ದ ಕಾಂತಿಲಾಲ್ ಬನ್ಸಾಲಿ ಅವರನ್ನು ಸರಕಾರ ಗುರುತಿಸಿ ಅಧ್ಯಕ್ಷರನ್ನಾಗಿ ನೇಮಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಹುಲಕೋಟಿಗಿನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ: ಅನಿಲ್ ವಾಗ್ದಾಳಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

‘ದೇಶದಲ್ಲಿ ಕಾಂಗ್ರೆಸ್ ಎಪ್ಪತ್ತು ವರ್ಷ ಆಡಳಿತ ಮಾಡಿದರೂ ಸಹಿತ ಗ್ರಾಮ ಸ್ವರಾಜ್ ಹಾಗೂ ಮಹಾತ್ಮಾ ಗಾಂಧಿಯವರ ತತ್ವ ಸಿದ್ದಾಂತಗಳನ್ನು ಮಾತನಾಡಿದರೆ ಹೊರತು ಗಾಂಧಿಯವರ ಕನಸು ನನಸು ಮಾಡಲಿಲ್ಲ’ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಅವರು ಆರೋಪಿಸಿದರು.

ನಗರದ ರಾಯಲ್ ವಿಲ್ಲಾ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಗ್ರಾಮೀಣ ಮಟ್ಟದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹದಿಮೂರು, ಹದಿನಾಲ್ಕು ಮತ್ತು ಹದಿನೈದನೆಯ ಹಣಕಾಸಿನಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಕೋಟಿ ರೂ. ಅನುದಾನ ನೀಡುತ್ತಿದ್ದಾರೆ ಎಂದರು.

ಇದನ್ನೂ ಓದಿ ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ; ಜಿಲ್ಲೆಯಲ್ಲಿ ರಂಗೇರಿದ ಚುನಾವಣಾ ಕಣ

ಹಿಂದಿನ ಸರ್ಕಾರದಲ್ಲಿ ಗದಗನ ಶಾಸಕರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಈ ವೇಳೆ ಬಯಲು ಮುಕ್ತ ಶೌಚಾಲಯಕ್ಕೆ ವಿಶೇಷ ಪ್ರಶಸ್ತಿ ಪಡೆದರು. ಆದರೆ, ಯಾವ ರೀತಿ ಪಡೆದರೋ ಗೊತ್ತಿಲ್ಲ, ಹೆಂಗ ದಾಖಲೆ ಕೊಟ್ಟರೋ ಒಟ್ಟಿನಲ್ಲಿ ಪ್ರಶಸ್ತಿ ಪಡೆದರು. ಆದರೆ, ಅವರ ಹುಲಕೋಟಿ ಭಾಗದಲ್ಲಿ ಹೋದರೆ ಯಾವ ಪರಿಸ್ಥಿತಿ ಇದೆ ಎನ್ನುವುದು ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.

ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಅವರು ಮಾಡಿರುವ ಒಂದೇ ಒಂದು ಕೆಲಸ ಶುದ್ಧ ನೀರಿನ ಘಟಕ ಹಾಕಿರುವುದು. ಅವರು ಮನಸ್ಸು ಮಾಡಿದ್ದರೆ ಹುಲಕೋಟಿಗಷ್ಟೇ ತೆಗೆದುಕೊಂಡು ಹೋದ ತುಂಗಭದ್ರಾ ನೀರನ್ನು ಗದಗ ವಿಧಾನಸಭಾ ಕ್ಷೇತ್ರದಲ್ಲಿ ಬರುವ 12 ಗ್ರಾಪಂ ವ್ಯಾಪ್ತಿಯ ಇತರೆ ಗ್ರಾಮಗಳಲ್ಲಿರುವ ಕೆರೆಗಳನ್ನು ತುಂಬಿಸಬಹುದಿತ್ತು. ಅವರಿಗೆ ಆ ಬಗ್ಗೆ ಇಚ್ಛಾಶಕ್ತಿ ಇಲ್ಲ. ಸುಮ್ಮನೆ ಶುದ್ಧ ನೀರಿನ ಹರಿಕಾರ ಅಂತಾ ಹೆಸರು ತಗೊಂಡರು ಎಂದು ಶಾಸಕ ಎಚ್.ಕೆ.ಪಾಟೀಲ್ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಇತ್ತೀಚೆಗೆ ಡಿ.ಆರ್.ಪಾಟೀಲ್ ಅವರ ಬಗ್ಗೆ ಗೌರವ ಬರುತ್ತಿದೆ. ಬೇರೆ ಪಕ್ಷದಲ್ಲಿದ್ದರೂ ಬಿಜೆಪಿ ಪಕ್ಷದ ಹಾಗೂ ಸ್ವಾಮಿ ವಿವೇಕಾನಂದರ ತತ್ವ ಸಿದ್ಧಾಂತ ಪಾಲಿಸುತ್ತಿದ್ದಾರೆ. ಅವರಿಗೆ ಗಾಂಧೀಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆ ಇದೆ ಎಂದ ಅವರು, ಗಾಂಧಿಜೀಯವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಗದುಗಿನ ಭಾಗದ ಹುಲಕೋಟಿ ಮತ್ತು ಕುರ್ತಕೋಟಿಗೆ ಇನ್ನೂ ಸ್ವಾತಂತ್ರ್ಯ ಬಂದಿಲ್ಲ. ಹಾಗಾಗಿ ಇಲ್ಲಿ ಸ್ವಾತಂತ್ರ್ಯ ಕೊಡಿಸುವ ಕೆಲಸವನ್ನು ನೀವೇ ಮುಂದೆ ನಿಂತು ಮಾಡಬೇಕು ಎಂದರು.

ಹುಲಕೋಟಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಆಗಬೇಕೆಂದು ಉತ್ಸಾಹದಲ್ಲಿದ್ದು, ಅವರಿಗೆ ಭಯ ಹುಟ್ಟಿಸಲಾಗುತ್ತಿದೆ. ಇದನ್ನು ನಿಲ್ಲಿಸಬೇಕು. ಚುನಾವಣೆಯಲ್ಲಿ ಸೋಲು ಗೆಲುವು ಇದ್ದದ್ದೇ. ಸೋಲು ಬಂದಾಗ ಒಪ್ಪಿಕೊಳ್ಳಬೇಕು. ಗೆಲವಾದಾಗ ಕೆಲಸ ಮಾಡಿ ತೋರಿಸಬೇಕು.

ಈ ಭಾಗದ ಬಹಳಷ್ಟು ಕಾರ್ಯಕರ್ತರು ಚುನಾವಣೆಗೆ ನಿಲ್ಲುವ ಉತ್ಸಾಹದಲ್ಲಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಬೇಕು. ಹುಲಕೋಟಿ ಮಿಲ್ ನಲ್ಲಿ ಕೆಲಸ ಮಾಡುವ ಸುಮಾರು 200 ರಿಂದ 300 ಜನ ಹುಲಕೋಟಿಯವರಲ್ಲ, ಇಲ್ಲಿ ವಾಸವೂ ಆಗಿಲ್ಲ. ಯಾವತ್ತೂ ಮಿಲ್ ಬಂದ್ ಆಗಿವೆಯೋ ಅವತ್ತೇ ಊರ ಬಿಟ್ಟು ಹೋಗಿದ್ದರೂ ಅವರ ಹೆಸರು ಮತದಾರರ ಪಟ್ಟಿಯಲ್ಲಿದ್ದು, ತೆಗೆದು ಹಾಕುವ ಕೆಲಸವಾಗಿಲ್ಲ. ಅಲ್ಲದೇ, ಅಸುಂಡಿ, ಶ್ಯಾಗೋಟಿ, ದುಂದೂರ ಗ್ರಾಮದವರ ಮತ ಹುಲಕೋಟಿಯಲ್ಲಿದ್ದು, ಇವೆಲ್ಲಾ ಬಂದ್ ಆಗಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಗ್ರಾ.ಪಂ.ಚುನಾವಣೆ ಮಾಡುವುದಕ್ಕೆ ಮುಕ್ತವಾದ ಅವಕಾಶ ಕಲ್ಪಿಸಿ ಕೊಡಬೇಕು. ಗದಗ ವಿಧಾನಸಭಾ ಮತಕ್ಷೇತ್ರದ 12 ಗ್ರಾಮ ಪಂಚಾಯತಿಗಳಲ್ಲಿ ಈ ಬಾರಿ ಬಿಜೆಪಿ 10 ಗ್ರಾ.ಪಂ.ಗಳಲ್ಲಿ ಜಯ ಸಾಧಿಸಲಿದೆ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಮೋಹನ್ ಮಾಳಶೆಟ್ಟಿ, ಹಿರಿಯ ಮುಖಂಡ ಕಾಂತಿಲಾಲ್ ಬನ್ಸಾಲಿ, ನಗರಸಭೆಯ ಮಾಜಿ ಸದಸ್ಯ ರಾಘವೇಂದ್ರ ಯಳವತ್ತಿ, ಮಾಧವ ಗಣಾಚಾರಿ, ಮುಖಂಡರಾದ ದ್ಯಾಮಣ್ಣ ಮುಳಗುಂದ, ಭದ್ರೇಶ್ ಕುಸ್ಲಾಪೂರ , ರವಿ ವಗ್ಗನವರ ಸೇರಿದಂತೆ ಗ್ರಾಮೀಣ ಭಾಗದ ಕಾರ್ಯಕರ್ತರು ಇದ್ದರು.

ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ; ಜಿಲ್ಲೆಯಲ್ಲಿ ರಂಗೇರಿದ ಚುನಾವಣಾ ಕಣ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಜಿಲ್ಲೆಯಲ್ಲಿ ಗ್ರಾ‌.ಪಂ. ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಬಿಜೆಪಿ ಪ್ರಯತ್ನ ನಡೆಸಿವೆ. ಎರಡೂ ಪಕ್ಷಗಳ ನಾಯಕರು ಮೇಲಿಂದ ಮೇಲೆ ಸಭೆ ಏರ್ಪಡಿಸಿ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸುತ್ತಿವೆ. ಈ ನಿಟ್ಟಿನಲ್ಲಿ ಬಿಜೆಪಿ ನಗರದ ರಾಯಲ್ ವಿಲ್ಲಾ ಹೋಟೆಲ್ ನಲ್ಲಿ ಚುನಾವಣಾ ಪೂರ್ವಭಾವಿ ಸಭೆ ನಡೆಸಿತು.

ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಡಿ.7 ರಿಂದ ಮೊದಲ ಹಂತದ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಪ್ರಾರಂಭವಾಗಲಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರಲಿದ್ದು, ಪ್ರಚಾರದ ಭರಾಟೆ ಶುರುವಾಗಲಿದೆ.

ಪಕ್ಷದ ಚಿಹ್ನೆಯಲ್ಲಿ ಚುನಾವಣೆ ‌ನಡೆಯದಿದ್ದರೂ, ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಿ ಭವಿಷ್ಯದ ಮುಂದಿನ ನಾಯಕರನ್ನಾಗಿಸಲು ರಾಜಕೀಯ ಪಕ್ಷಗಳು ತಂತ್ರ ಪ್ರತಿತಂತ್ರ ರೂಪಿಸುತ್ತಿವೆ. ಈ ಮೂಲಕ ತಳಮಟ್ಟದಲ್ಲಿ ಪಕ್ಷ ಸಂಘಟಿಸಿ ಬಲಪಡಿಸಲು ಯತ್ನಸುತ್ತಿವೆ.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದರೆ, ಮುಂದಿನ ವರ್ಷ ನಡೆಯುವ ತಾಲ್ಲೂಕು ಪಂಚಾಯತ ಮತ್ತು ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಸುಲಭವಾಗಿ ಜಯಭೇರಿ ಬಾರಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಇದರಿಂದಾಗಿ ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸಲೀಸಾಗಿ ಗೆಲ್ಲಬಹುದು ಎಂಬ ಚಿಂತನೆಯಲ್ಲಿದ್ದಾರೆ.
ಬಾಜಪ ಮುಖಂಡರು ಗ್ರಾ.ಪಂ.ಚುನಾವಣೆಯಲ್ಲಿ ಕಾರ್ಯಕರ್ತರನ್ನು ಗೆಲ್ಲಿಸಿ ಜಿಲ್ಲೆಯಲ್ಲಿ ಪಾರುಪತ್ಯ ಮೆರೆಯಲು ಹವಣಿಸುತ್ತಿದ್ದಾರೆ. ಇದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿದೆ.

ಇದರ ಭಾಗವಾಗಿ ಜಿಲ್ಲಾ ಬಿಜೆಪಿ ನಗರದ ಡಿಸಿ ಕಚೇರಿ ಮುಂದಿರುವ ರಾಯಲ್ ವಿಲ್ಲಾ ಹೋಟೆಲ್ ನಲ್ಲಿ ಗದಗ ವಿಧಾನಸಭಾ ಕ್ಷೇತ್ರದ ಗ್ರಾ.ಪಂ.ಚುನಾವಣೆಯ ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಹಾಗೂ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ಸಭೆ ಜರುಗಿತು. ಇದರಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ವಿವಿಧ ಬಿಜೆಪಿ ಘಟಕಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

ಸಭೆಯಲ್ಲಿ ಚುನಾವಣಾ ಗೆಲುವಿಗಾಗಿ ರಣತಂತ್ರ ರೂಪಿಸಿದ್ದು, ಅಭ್ಯರ್ಥಿಗಳ ಆಯ್ಕೆ, ಪಕ್ಷ ಸಂಘಟನೆ, ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚಿಸಲಾಯಿತು. ಚುನಾವಣೆ ಹೊತ್ತಿನಲ್ಲಿ ಗ್ರಾಮೀಣ ಭಾಗದಲ್ಲಾಗುತ್ತಿರುವ ಸ್ಥಳೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಅಲ್ಲದೇ, ಗೆಲುವಿಗಾಗಿ ಯಾವೆಲ್ಲಾ ತಂತ್ರ ರೂಪಿಸಬಹುದು ಎಂಬುದರ ಬಗ್ಗೆ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಯಿತು.

ಮತ್ತೊಂದೆಡೆ ಕಾಂಗ್ರೆಸ್ ಕೂಡಾ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು ಎಂದು ಪಣ ತೊಟ್ಟಿದೆ. ಮೊನ್ನೆಯಷ್ಟೇ ಶಾಸಕ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿತ್ತು. ಅಲ್ಲದೇ, ಗ್ರಾ.ಪಂ.ಚುನಾವಣೆಯ ಜವಾಬ್ದಾರಿಯನ್ನು ಮಾಜಿ ಶಾಸಕ ಡಿ.ಆರ್.ಪಾಟೀಲ್ ಅವರಿಗೆ ವಹಿಸಲಾಗಿದೆ ಎಂದು ಹೇಳಲಾಗಿದೆ.

ಸದ್ಯ ಜಿಲ್ಲೆಯಲ್ಲಿ ಚುನಾವಣಾ ಚಟುವಟಿಕೆಗಳು ಬಲು ಜೋರಾಗಿದ್ದು, ಗೆಲುವಿನ ಕುದುರೆ ಯಾರಾಗುತ್ತಾರೆ ಎಂಬುದನ್ನ ಕಾದು ನೋಡಬೇಕು.

ರೈತರ ಹೋರಾಟಕ್ಕೆ ಎಸ್‌.ಆರ್.ಹಿರೇಮಠ ಬೆಂಬಲ; ಗಣಿಧಣಿಗಳ ವಿರುದ್ಧ ವಾಗ್ದಾಳಿ

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ದೆಹಲಿಯಲ್ಲಿ ನಡೆಯುತ್ತಿರುವ ರೈತ ವಿರೋಧಿ ಕಾಯ್ದೆ ವಿರುದ್ಧದ ಹೋರಾಟಕ್ಕೆ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಬೆಂಬಲ ಸೂಚಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ವಿರೋಧಿ ಕಾಯ್ದೆಯನ್ನು ವಿರೋಧದ ಮಧ್ಯೆ ಅಂಗೀಕರಿಸಿದ್ದು ರೈತರಿಗೆ ‌ಮಾಡಿದ ಅನ್ಯಾಯವಾಗಿದೆ. ಡಿಸೆಂಬರ್ 8ರ ಭಾರತ್ ಬಂದ್ ಗೆ ಬೆಂಬಲ ನೀಡಿ ರಾಜ್ಯದಲ್ಲಿ ಬಂದ್ ಮಾಡುತ್ತೇವೆ ಎಂದರು.

ಅದಾನಿ, ಅಂಬಾನಿ ಮತ್ತು ಟಾಟಾ ಬಿರ್ಲಾಗಳೇ ದೇಶದ ಪ್ರಧಾನಿಯಾಗಿದ್ದಾರೆ ಎಂದು ರೈತ ವಿರೋಧಿ ಕಾನೂನು ತರುತ್ತಿರುವ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಂದೆ ಇಂದಿರಾ ಗಾಂಧಿಗೆ ಪಾಠ ಕಲಿಸಿದಂತೆ 2024ರಲ್ಲಿ ಜನರು ತಕ್ಕಪಾಠ ಕಲಿಸುತ್ತಾರೆ. ಆರ್ ಎಸ್ ಎಸ್ & ಸಂಘ ಪರಿವಾರದಿಂದಲೇ ಕೇಂದ್ರ ಸರ್ಕಾರ ನಡೆಯುತ್ತಿದೆ ಎಂದರು.

ಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸರ್ಕಾರ ಗಣಿಭಾಧಿತ ಪ್ರದೇಶದ ಜನರಿಗೆ ಯಾವುದೇ ಸವಲತ್ತುಗಳನ್ನು ನೀಡುತ್ತಿಲ್ಲ. ಹದಿನೈದು ಸಾವಿರ ಕೋಟಿ ಗಣಿಭಾದಿತ ಹಣ ಇದ್ದು, ಅದನ್ನು ಸಮರ್ಪಕ ಬಳಸುವಂತಹ ಕೆಲಸವಾಗಬೇಕು. ಎಂದು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅದಕ್ಕೆ ರಾಜ್ಯ ಸರ್ಕಾರ ಕೆಲ ಕಳ್ಳರನ್ನು ನೇಮಕ ಮಾಡಿದೆ. ಗಣಿ ಲೂಟಿ ಹೊಡೆದು ನೂರು ಕೋಟಿ ಮನೆ ಕಟ್ಟಿಸಿದ್ದಾರೆ. ಇಂತವರನ್ನು ಸಂಪುಟದಿಂದ ಕೈಬಿಡಬೇಕು‌. ಹಗಲು ದರೋಡೆ ಮಾಡಿ ಜನಾರ್ದನ ರೆಡ್ಡಿ ಜೈಲಿಗೆ ಹೋದರು. NMDC ಮೈನಿಂಗ್ ಕಂಪನಿಗೆ ಕಡಿಮೆ ಪ್ರೀಮಿಯಂನಲ್ಲಿ ಪ್ರೋಡೆಕ್ಷನ್ ಮಾಡಲು ಅನುಮತಿ ನೀಡಿರುವುದು ತಪ್ಪು ಎಂದು
ಸಚಿವ ಆನಂದ ಸಿಂಗ್, ಶ್ರೀರಾಮುಲು ಸೇರಿದಂತೆ ಜನಾರ್ದನ ರೆಡ್ಡಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನಿಗೆ ನಾಯಕತ್ವ ಕೈ ತಪ್ಪುವ ಭುಗಿಲು ಇರಬಹುದು: ಕೆ.ವಿರೂಪಾಕ್ಷಪ್ಪ

-ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಹೋರಾಟದ ನೇತೃತ್ವ ಆತನೇ ವಹಿಸಲಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕುರುಬ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸುವ ಹೋರಾಟ ಹೊಸತೇನಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಸಮಾಜದ ಪ್ರಶ್ನಾತೀತ ನಾಯಕ. ಸಮಾಜದ ಏಳ್ಗೆಗಿನ ಈ ಹೋರಾಟದಲ್ಲಿ ಅವರು ತೊಡಗಿಕೊಳ್ಳದಿರುವುದಕ್ಕೆ ನಾಯಕತ್ವ ಕೈ ತಪ್ಪುವ ಭೀತಿಯೇ ಕಾರಣ ಇರಬಹುದು ಎಂದು ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಕೆ.ವಿರೂಪಾಕ್ಷಪ್ಪ ಹೇಳಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಹೋರಾಟಕ್ಕೆ ಆರ್‌ಎಸ್‌ಎಸ್ ಸೇರಿದಂತೆ ಯಾರೇ ಬೆಂಬಲ ನೀಡಿದರೂ ಸ್ವಾಗತಿಸುತ್ತೇವೆ. ಇದು ಪಕ್ಷಾತೀತ ಹೋರಾಟ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಕುರುಬರ ಸಂಘದ ನೇತೃತ್ವದಲ್ಲಿ ಹೋರಾಟ ಚುರುಕುಗೊಂಡಿದ್ದು,
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಆಗ್ರಹಿಸಿ

2021ರ ಜನವರಿ 4ನೇ ತಾರೀಖು ಸಿಂಧನೂರಿನಲ್ಲಿ ಸಮಾವೇಶ, ಜನವರಿ 5ರಂದು ಕಲಬುರಗಿ, ಯಾದಗಿರಿಯಲ್ಲಿ ಸಮಾವೇಶ ನಡೆಸಿ, ಜನೇವರಿ 15ರಿಂದ ಫೆಬ್ರವರಿ 7ರವರೆಗೆ ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ.
ಆನಂತರ ಕೇಂದ್ರ ಮತ್ತು ರಾಜ್ಯ ಸರಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತವೆ ಎಂಬುದನ್ನು ನೋಡುತ್ತೇವೆ ಎಂದು ತಿಳಿಸಿದರು.

ಈ ಬೇಡಿಕೆ ಇಂದು-ನಿನ್ನೆಯದಲ್ಲ. 1868ರಲ್ಲಿಯೇ ಭಾರತದಲ್ಲಿದ್ದ ಬ್ರಿಟಿಷ್ ಸರಕಾರ ಹೊರತಂದಿರುವ the people of India ಎನ್ನುವ ಪುಸ್ತಕದಲ್ಲಿ ಕರುಬರ್, ಅಥವಾ ಕುರುಂಬರ್ ಮೂಲ ನಿವಾಸಿ ಬುಡಕಟ್ಟು ಜನಾಂಗ ಎಂಬ ಉಲ್ಲೇಖ ಇದೆ. 1976ರಲ್ಲಿ ಸಂಸತ್ ಕಡತದಿಂದ ಈ ಪದವನ್ನು ಯಾಕೆ ಕೈ ಬಿಡಲಾಗಿದೆ ಎಂಬುದು ಗೊತ್ತಾಗಿಲ್ಲ. ಅದಕ್ಕೆ ಸಂಬಂಧಿಸಿದ ದಾಖಲೆಗಳು ಸಿಗುತ್ತಿಲ್ಲ‌.

ಈಗಾಗಲೇ ಸಚಿವ ಜೆ.ಎಸ್.ಈಶ್ವರಪ್ಪ ಹಾಗೂ ಸಮಾಜದ ಶ್ರೀಗಳ ನೇತೃತ್ವದ ನಿಯೋಗ ಕೇಂದ್ರದ ಬುಡಕಟ್ಟು ಸಚಿವೆ ರೇಣುಕಾ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯದ ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ್ದು ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.

ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲಲ್ಲ.
ಸಿದ್ದರಾಮಯ್ಯ ಕುರುಬ ಸಮಾಜದ ಪ್ರಶ್ನಾತೀತ ನಾಯಕ. ಆತನ ಹೇಳಿಕೆ ಆತನಿಗೆ ಗೌರವ ತರುವಂಥದ್ದಲ್ಲ. ನಮ್ಮಲ್ಲಿ ಒಡಕಿಲ್ಲ. ಜನಸ್ಪಂದನೆ ಇದೆ. ಯಾರೊ ಕೆಲವು ಲೀಡರ್‌ಗಳು ತಮ್ಮ ಸ್ವಾರ್ಥಕ್ಕಾಗಿ ಏನೇನೋ ಮಾಡ್ತಾರೆ. ಇದು ಸಮುದಾಯದ ಜನರಿಗೆ ಬೇಕಾಗಿದೆ. ಕಾಂಗ್ರೆಸ್, ಬಿಜೆಪಿ ಸಂಬಂಧ ಇಲ್ಲ.
ಸಿದ್ದರಾಮಯ್ಯ ಅವರೇ ಬಂದು ನೇತೃತ್ವ ವಹಿಸಲಿ, ಆರ್‌ಎಸ್‌ಎಸ್ ಹೋಗುತ್ತೆ ಈಶ್ವರಪ್ಪನೂ ಹೋಗತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಕುರುಬ ಸಮುದಾಯದ ಮುಖಂಡರಾದ ವೀರನಗೌಡ ಬಳೂಟಗಿ, ಮಲ್ಲಣ್ಣ ಪಲ್ಲೇದ್, ಯಮನಪ್ಪ, ಫಕೀರಪ್ಪ ವಕೀಲರು,
ಭೀಮಪ್ಪ ಗಂಗಾವತಿ,
ಕೆ.ವಿರೂಪಾಕ್ಷಪ್ಪ
ವಿರೂಪಾಕ್ಷಪ್ಪ ಮೋರನಾಳ ಮತ್ತಿತರರು ಇದ್ದರು.

ಬಿಜೆಪಿ ಸರಕಾರ ಅಲ್ಪಸಂಖ್ಯಾತರ ವಿರೋಧಿ: ಸಿರಾಜ್ ಸಿದ್ದಾಪುರ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು ಅಧಿಕಾರಕ್ಕೆ ಬಂದ ನಂತರ ಸಂವಿಧಾನದ ಮೂಲಭೂತ ಆಶಯಗಳ ವಿರುದ್ದ ಕೆಲಸ ಮಾಡುತ್ತಿರುವದು ಅತ್ಯಂತ ವಿಷಾದನೀಯವಾಗಿದೆ. ರಾಜಕೀಯ ಕಾರಣಕ್ಕೆ ಎಲ್ಲ ಪಕ್ಷಗಳು ತಮ್ಮದೇ ಆದ ಆದ್ಯತೆಯ ಕೆಲಸ ಮಾಡುತ್ತ ಆರೋಪ, ಪ್ರತ್ಯಾರೋಪ ಮಾಡುವುದು ಸಾಮಾನ್ಯವಾದರೂ ಯಾವ ಸರಕಾರವೂ ಒಂದು ಸಮುದಾಯವನ್ನು ಇಷ್ಟೊಂದು ಅನ್ಯಾಯ ಮಾಡಿರುವದು ಇತಿಹಾಸದಲ್ಲಿ ಕಂಡು ಬರುವುದಿಲ್ಲ ಎಂದು ಮುಸ್ಲಿಂ ಚಿಂತಕರ ಚಾವಡಿಯ ಪಿಎಂ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಸಮಿತಿಯ ಸದಸ್ಯ ಸಿರಾಜ್ ಸಿದ್ದಾಪುರ ದೂರಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರ ಸರಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಅದರ ಮೂಲಕ ರಾಜ್ಯದ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬುದ್ಧ, ಪಾರ್ಸಿ ಮತ್ತು ಜೈನ ಸಮುದಾಯದ ಮೇಲೆ ತೋರಿಸಿದಷ್ಟು ತಾತ್ಸಾರ, ದ್ವೇಷ, ಅಸೂಯೆ ಅನ್ಯಾಯಗಳನ್ನು ದೇಶದ ಯಾವ ರಾಜ್ಯ ಸರಕಾರಗಳು ಕೂಡ ಮಾಡಿರುವ ಉದಾಹರಣೆ ಇಲ್ಲ. ಅವರದ್ದೇ ಪಕ್ಷದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಕೂಡ ಒಂದು ಸಮುದಾಯ ಕುರಿತ ಸರಕಾರದ ಜನಪರ, ಕಲ್ಯಾಣ ಯೋಜನೆಯ ಅನುಷ್ಠಾನದಲ್ಲಿ ಇಷ್ಟೊಂದು ದ್ವೇಷಯುತವಾಗಿ ನಡೆದುಕೊಂಡಿಲ್ಲ ಎಂದರು.

ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರಕಾರ ಬಂದ ಮೇಲೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಈ ಹಿಂದೆ ನಿಗದಿಗೊಳಿಸುತ್ತ ಬಂದಿರುವ ಅನುದಾನ ಕಡಿತಗೊಳಿಸಿದ್ದಲ್ಲದೇ ಹಲವು ಯೋಜನೆಗಳನ್ನು ನಿಲ್ಲಿಸಿದೆ. ೨೦೧೯-೨೦ನೇ ಸಾಲಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರ ಬಜೆಟ್‌ನಲ್ಲಿ ಘೋಷಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನವನ್ನು ೧೮೯೭.೦೦ ಕೋ.ರೂ. ಯಿಂದ ೧೫೭೧.೦೦ ಕೋ.ರೂ.ಗೆ ಕಡಿಮೆಗೊಳಿಸಿತು. ೨೦೨೦-೨೧ನೇ ಸಾಲಿನಲ್ಲಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರಕಾರ ಮಂಡಿಸಿದ ಬಜೆಟ್‌ನಲ್ಲಿ ೧೧೭೭.೦೦ಕೋ.ರೂ.ಗಳಷ್ಟಿದ್ದ ಅನುದಾನವನ್ನು ಮತ್ತೆ ಕಡಿತಗೊಳಿಸಿ ೧೦೫೫.೦೦ಕೋ.ರೂ.ಗಳಿಗೆ ನಿಗದಿಗೊಳಿಸಿದೆ. ಇತ್ತೀಚಿಗೆ ಮತ್ತೆ ೧೦೫೫.೦೦ ಕೋ.ರೂ.ಗಳಷ್ಟಿದ್ದ ಅನುದಾನದಲ್ಲಿ ೫೦.೦೦ ಕೋ.ರೂ. ಅನುದಾನ ಕಡಿತಗೊಳಿಸಿದೆ.
ಈಗ ಕಡಿತಗೊಳಿಸಿದ ಅನುದಾನದಲ್ಲಿ ಕಳೆದ ೫ ವರ್ಷಗಳಿಂದ ಅನುಷ್ಠಾನ ಮಾಡಲಾಗುತ್ತಿದ್ದ ಹಲವು ಜನಪರ ಕಲ್ಯಾಣ ಯೋಜನೆಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅನುಷ್ಠಾನ ಮಾಡುವುದನ್ನು ನಿಲ್ಲಿಸಿದೆ. ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಜಾರಿಗೊಳಿಸಿದ ಕಾಲೋನಿ ಅಭಿವೃದ್ದಿ ಯೋಜನೆ ಈಗಿನ ಸರಕಾರ ರದ್ದುಗೊಳಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಶಾದಿಭಾಗ್ಯ ಯೋಜನೆಯನ್ನು ಕೂಡ ರದ್ದುಗೊಳಿಸಿದೆ. ಈ ವರ್ಷ ಇವೆಲ್ಲಕ್ಕಿಂತ ಪ್ರಮುಖ ಯೋಜನೆಗಳಾದ ವಿದೇಶದಲ್ಲಿ ಉನ್ನತ ವ್ಯಾಸಂಗದ ಯೋಜನೆ, ನಾಗರೀಕ ಪರೀಕ್ಷೆ ತರಬೇತಿ ಯೋಜನೆ, ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನ, ಶುಲ್ಕ ವಿನಾಯತಿ, ವಿದ್ಯಾಸಿರಿಯಂತಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದಂತಹ ಯೋಜನೆಗಳ ೨೦೧೯-೨೦ನೇ ಸಾಲಿನ ಅನುದಾನವನ್ನು ಸರಕಾರ ಇಲ್ಲಿಯವರೆಗೆ ಬಿಡುಗಡೆಗೊಳಿಸದೇ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುವಂತಹ ಕೆಲಸ ಮಾಡುತ್ತಿರುವದು ಅಕ್ಷಮ್ಯ ಅಪರಾಧವಾಗುತ್ತದೆ ಎಂದರು.

ಈ ವೇಳೆ ಬಿ.ಪೀರ್‌ಬಾಷಾ
ಮುಸ್ಲಿಂ ಚಿಂತಕರ ಚಾವಡಿ, ರಾಜ್ಯ ಮಾರ್ಗದರ್ಶಕ ಮಂಡಳಿ ಸದಸ್ಯರು, ರಾಜಾಬಕ್ಷಿ ಎಚ್.ವಿ.
ರಾಜ್ಯ ಸಮಿತಿ ಉಪಾಧ್ಯಕ್ಷರು ಹಾಗೂ ಮುಖಂಡ ಎಸ್.ಬಿ.ಖಾದ್ರಿ ಇದ್ದರು.

ಶಿಕ್ಷಕ ದಂಪತಿಗಳ ಮನೆಗೆ ಕನ್ನ: ಲಕ್ಷಾಂತರ ರೂ ಮೌಲ್ಯದ ಚಿನಾಭರಣ ದೋಚಿ ಪರಾರಿ

ವಿಜಯಸಾಕ್ಷಿ ಸುದ್ದಿ, ರೋಣ

ಶಿಕ್ಷಕ ದಂಪತಿಗಳ ಮನೆಯ ಬಾಗಿಲಿನ ಚಿಲಕದ ಕೊಂಡಿ ಮುರಿದು ಅಪಾರ ಪ್ರಮಾಣದ ಚಿನ್ನಾಭರಣ, ನಗದು ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಹೊಳೆಆಲೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜಗದೀಶ್ ಹೂಗಾರ ಎಂಬುವವರ ಮನೆಯಲ್ಲಿ ಅಸೂಟಿ ಗ್ರಾಮದ ಮುತ್ತಪ್ಪ ಕೊಣ್ಣೂರ ಎಂಬ ಶಿಕ್ಷಕ ದಂಪತಿಗಳು ಬಾಡಿಗೆಗೆ ಇದ್ದರು. ಇಬ್ಬರೂ ಶಿಕ್ಷಕರಾಗಿರುವುದರಿಂದ ಡಿ.4 ರಂದು ಶಾಲೆಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಯಾರೋ ಖದೀಮರು ಮನೆಗೆ ಕನ್ನ ಹಾಕಿದ್ದಾರೆ.

ಬಾಗಿಲು ಚಿಲಕದ ಕೊಂಡಿ ಮುರಿದು ಒಳಗೆ ಪ್ರವೇಶಿಸಿರುವ ಕಳ್ಳರು ಮನೆಯ ಬೆಡ್ ರೂಮ್ ನ ಟ್ರೆಜುರಿಯಲ್ಲಿಟ್ಟಿದ್ದ ಅಂದಾಜು 1,21,500 ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದಾರೆ.

ಖದೀಮರು ಅರ್ಧ ತೊಲೆ ಬಂಗಾರದ ಉಂಗುರ, ಅರ್ಧ ತೊಲೆ ಕೊರಳ ಚೈನು, 2 ಗ್ರಾಂ ತೂಕದ ಎರಡು ಮಾಟಲ್ ಗಳು, ನಾಲ್ಕು ಜತೆ ಬೆಂಡಾಲಿ(ಕಿವಿಯೋಲೆ), ಡೈಮಂಡ್ ಹಳ್ಳಿನ ಬೆಂಡಾಲಿ ಸೇರಿದಂತೆ 45,000 ರೂ.ನಗದು, ಒಂದು ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದಾರೆ.

ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!