Home Blog Page 3096

ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ ರಾಜೀನಾಮೆ ನೀಡಲಿ: ಮಾಲತಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಅಮಾನುಷವಾಗಿ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದರೂ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಮತ್ತು ಇಂತಹ ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆಧಿತ್ಯನಾಥ ರಾಜೀನಾಮೆ ನೀಡಬೇಕು ಎಂದು ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಮಾಲತಿ ನಾಯಕ್ ಆಗ್ರಹಿಸಿದರು.

ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ನಗರದ ಅಶೋಕ ವೃತ್ತದಲ್ಲಿ ಉತ್ತರಪ್ರದೇಶದ ಮನೀಷಾ ವಾಲ್ಮೀಕಿ ಅತ್ಯಾಚಾರ ಕೊಲೆ ವಿರುದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಪಟ್ಟಂತಹ ಸಾಕ್ಷಿ ನಾಶ‌ ಮಾಡಿದ ಅಲ್ಲಿನ ಸರಕಾರವನ್ನು ವಜಾಗೊಳಿಸಲು ಒತ್ತಾಯಿಸಿದರು.

ಮನಿಷಾ ವಾಲ್ಮೀಕಿಯ ಮನೆಯವರಿಗೆ ಕೊನೆಯ ಕ್ಷಣದಲ್ಲಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದೇ ಏಕಾಏಕಿ ಸುಟ್ಟು ಹಾಕಿರುವುದು ಈ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ. ಕಳೆದ 6 ವರ್ಷಗಳಿಂದ ದಲಿತರ ಮೇಲೆ ನಿರಂತವಾಗಿ ಈ ರೀತಿಯ ಘಟನೆ ನಡೆಯುತ್ತಿದ್ದರೂ ಅವನ್ನು ತಡೆಗಟ್ಟುವಲ್ಲಿ ಕೇಂದ್ರ , ಮತ್ತು ರಾಜ್ಯ ಸರಕಾರ ವಿಫಲವಾಗಿದೆ. ಈ ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡರ ಯಮನೂರಪ್ಪ ನಾಯಕ ಮಾತನಾಡಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ಅಲ್ಪಸಂಖ್ಯಾತರನ್ನು ಗುರಿ ಮಾಡಿದೆ. ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇದರ ಬಗ್ಗೆ ಜನತೆ ಜಾಗರೂಕರಾಗಬೇಕು, ಯೋಗಿ ಆದಿತ್ಯನಾಥ ಠಾಕೂರರ ರಕ್ತ ಬಿಸಿಯಾಗಿದೆ ಎಂದು ಹಗುರವಾಗಿ ಮಾತನಾಡುತ್ತಾರೆ. ಅಲ್ಪಸಂಖ್ಯಾತರ ಮತ್ತು ದಲಿತರ ರಕ್ತದ ಬಿಸಿಯನ್ನು ತೋರಿಸಬೇಕಾಗುತ್ತೆ ಎಂದು ಎಂದು ಎಚ್ಚರಿಸಿದರು.

ರಾಜ್ಯ ಕಾಂಗ್ರೆಸ್ ಪ್ಯಾನಲಿಸ್ಟ್ ಶೈಲಜಾ ಹಿರೇಮಠ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ ಭಾವಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕಾಟನ್‌ ಪಾಶಾ, ಪ್ರಸನ್ನ ಗಡಾದ, ರವಿ ಕುರಗೋಡ, ಮಾನವಿ ಪಾಶಾ,  ಶ್ರೀನಿವಾಸ ಪಂಡಿತ್, ಮಲ್ಲು ಪೂಜಾರ್, ಸಲೀಂ ಅಳವಂಡಿ, ಪರಶುರಾಮ, ದ್ಯಾಮಣ್ಣ ಚಿಲವಾಡಗಿ, ಗಂಗಾ ಚಿಕ್ಕೆನಕೊಪ್ಪ , ಕೆಪಿಸಿಸಿ ಸಂಚಾಲಕಿ ಕಿಶೋರಿ ಬೂದನೂರ, ನಾಗವೇಣಿ ಬಡಿಗೇರ್ ಜಿಲ್ಲಾ ಮಹಿಳಾ ಸಹ ಕಾರ್ಯದರ್ಶಿ, ರೇಣುಕಾ ಅಹುಲ್ ಜಿಲ್ಲಾ ಮಹಿಳಾ ಕಾರ್ಯದರ್ಶಿ, ಶಶಿಕಲಾ B ಗೌಡರ್ ಜಿಲ್ಲಾ ಮಹಿಳಾ ಕಾರ್ಯದರ್ಶಿ, ರೇಷ್ಮಾ, ರಜಿಯಾ ಮನಿಯಾರ್, ಸಿದ್ದಮ್ಮ ಅಬ್ಬೆಗೇರಮಠ, ಮಹಾದೇವಿ ಕುರಿ, ಸಿದ್ದಮ್ಮ ಸಿಂದೋಗಿ, ನಜ್ಮುನ್ನಿಸಾ, ಅಮೀನಠ ಬೀ, ನೇತರಾವತಿ, ಸುನೀತಾ, ಅಕ್ಕಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಅಂಚೆ ಕಚೇರಿ ‘ಉಳಿತಾಯ ಖಾತೆ’ಯ ಇತ್ತೀಚಿನ ಬಡ್ಡಿ ದರ, PPF, SSY, NSC, FD ದ ಬಗ್ಗೆ ಇಲ್ಲಿದೆ ಮಾಹಿತಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಅಂಚೆ ಕಚೇರಿ ಯೋಜನೆಗಳು ಬಡ್ಡಿ ದರಗಳು ಅಂಚೆ ಕಚೇರಿ ಯೋಜನೆಯು ಪ್ರತಿಯೊಂದು ವರ್ಗಕ್ಕೂ ವಿವಿಧ ರೀತಿಯ ಯೋಜನೆಗಳನ್ನು ಒದಗಿಸುತ್ತದೆ.

ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯೊಂದಿಗೆ ನಿಶ್ಚಿತ ಠೇವಣಿ, ಆವರ್ತ ಠೇವಣಿ (ಅಂಚೆ ಕಚೇರಿ ಆರ್ ಡಿ), ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (POPPF), ಅಂಚೆ ಕಚೇರಿ ಹಿರಿಯ ನಾಗರಿಕ ಯೋಜನೆ (POSCS), ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ ವೈ) ಮುಂತಾದ ಯೋಜನೆಗಳಲ್ಲಿ ಹೂಡಿಕೆ ಬಡ್ಡಿ ದರಗಳ ಬಗ್ಗೆ ತಿಳಿಯಿರಿ.

ಅಂಚೆ ಕಚೇರಿ ಯೋಜನೆಗಳು ಬಡ್ಡಿ ದರಗಳು: ಅಂಚೆ ಕಚೇರಿಯ ಯೋಜನೆಯು ಪ್ರತಿಯೊಂದು ವರ್ಗಕ್ಕೂ ವಿವಿಧ ಯೋಜನೆಗಳನ್ನು ಒದಗಿಸುತ್ತದೆ. ನೀವು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಮಾಡಬಹುದು ಮತ್ತು ನಿಶ್ಚಿತ ಠೇವಣಿ, ಆವರ್ತಠೇವಣಿ (ಪೋಸ್ಟ್ ಆಫೀಸ್ ಆರ್ ಡಿ), ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (POPPF), ಅಂಚೆ ಕಚೇರಿ ಹಿರಿಯ ನಾಗರಿಕ ಯೋಜನೆ (POSCS), ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ ವೈ) ಮುಂತಾದ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಗಳಲ್ಲಿ ಉತ್ತಮ ಆದಾಯವನ್ನು ಪಡೆಯುವಿರಿ.

ಅಂಚೆ ಕಚೇರಿಯ ಉಳಿತಾಯ ಖಾತೆ: ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿ ಹೇಳ್ಬೇಕು ಅಂದ್ರೆ, ಮೊದಲೆಯದಾಗಿ ಇದರಲ್ಲಿ ನೀವು ವರ್ಷಕ್ಕೆ 4% ಬಡ್ಡಿಯನ್ನ ಪಡೆಯುತ್ತೀರಿ. ಗ್ರಾಹಕರು 500 ರೂಪಾಯಿ ಕನಿಷ್ಠ ಬ್ಯಾಲೆನ್ಸ್ ನೊಂದಿಗೆ ಉಳಿತಾಯ ಖಾತೆ ತೆರೆಯಬಹುದು. ಆದರೆ, ನೀವು ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ 500 ರೂಪಾಯಿಗಳಿಗಿಂತ ಕಡಿಮೆ ಇರಿಸಿದ್ರೆ, ಹಣಕಾಸು ವರ್ಷದ ಕೊನೆಯಲ್ಲಿ 100 ರೂಪಾಯಿ ದಂಡವನ್ನು ವಿಧಿಸಲಾಗುತ್ತೆ.

ಸುಕನ್ಯಾ ಸಮೃದ್ಧಿ ಯೋಜನೆ (ಎಸ್.ಎಸ್.ವೈ): ಹೆಣ್ಣುಮಕ್ಕಳ ಸುರಕ್ಷಿತ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ತರಲಾಗಿದೆ. ಇದರಲ್ಲಿ ನೀವು ವಾರ್ಷಿಕ 7.6 ಪ್ರತಿಶತ ಬಡ್ಡಿಯನ್ನ ಪಡೆಯುತ್ತೀರಿ. ಈ ಯೋಜನೆಯ ಪೋಷಕರು ಕೇವಲ 14 ವರ್ಷಮಾತ್ರ ಹೂಡಿಕೆ ಮಾಡ್ಬೇಕು. ಇದಾದ ನಂತರ 21 ವರ್ಷವಿದ್ದಾಗ ಪಕ್ವತೆಯನ್ನ ಸಾಧಿಸುತ್ತೆ. 14 ವರ್ಷಗಳ ನಂತರ, ಮುಚ್ಚುವ ಮೊತ್ತದ ಮೇಲಿನ ಬಡ್ಡಿಯು ವಾರ್ಷಿಕ 7.6% ಆಗುತ್ತದೆ. ಇದರಲ್ಲಿ ನೀವು 250 ರೂಪಾಯಿಗಳಿಗೆ ಒಂದು ಖಾತೆ ತೆರೆಯಬಹುದು. ಕನಿಷ್ಠ 1000 ರೂ., ಗರಿಷ್ಠ 1.5 ಲಕ್ಷ ರೂ.ಗಳ ಹೂಡಿಕೆ ಯನ್ನು ಪ್ರತಿ ವರ್ಷ ಮಾಡಬಹುದು. ಗ್ರಾಹಕರು SSYನಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನವನ್ನ ಸಹ ಪಡೆಯುತ್ತಾರೆ.

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್): ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ, ನಿಮಗೆ ವಾರ್ಷಿಕ ಶೇ.7.1ಬಡ್ಡಿ ದರ ದೊರೆಯುತ್ತದೆ. ಈ ಆರ್ಥಿಕ ವರ್ಷದಲ್ಲಿ ಕನಿಷ್ಠ 500 ಮತ್ತು ಗರಿಷ್ಠ 1.5 ಲಕ್ಷ ರೂ. ಪ್ರೌಢಿಮೆಯ ಅವಧಿ 15 ವರ್ಷಗಳು. ಪಿಪಿಎಫ್ ಖಾತೆಯಲ್ಲಿ ಕಡಿತವನ್ನ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80c ಅಡಿಯಲ್ಲಿ ಕ್ಲೇಮ್ ಮಾಡಬಹುದು. ಅದರ ಮೇಲೆ ಪಾವತಿಸಿದ ಬಡ್ಡಿಯು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC): ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ) ಕೂಡ ಉತ್ತಮ ಹೂಡಿಕೆಯ ಆಯ್ಕೆಯಾಗಿದೆ. ಈ ಯೋಜನೆಯ ಮೆಚ್ಯುರಿಟಿ ಅವಧಿ 5 ವರ್ಷಗಳು. ಎನ್ ಎಸ್ ಸಿ ಮೇಲಿನ ಪ್ರಸ್ತುತ ಬಡ್ಡಿದರಶೇ.6.8 ಮತ್ತು ವಾರ್ಷಿಕ ಬಡ್ಡಿಯನ್ನ ಚಕ್ರಾ೦ಗಿಕವಾಗಿ ಮಾಡಲಾಗುತ್ತದೆ.

ಅಂಚೆ ಕಚೇರಿ ನಿಶ್ಚಿತ ಠೇವಣಿ: ಪೋಸ್ಟ್ ಆಫೀಸ್ ಫಿಕ್ಸೆಡ್ ಡಿಪಾಸಿಟ್ (ಪೋಸ್ಟ್ ಆಫೀಸ್ ಎಫ್ ಡಿ) ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆದಾರರಿಗೆ ಶೇ.5.8ರ ಬಡ್ಡಿ ಸಿಗಲಿದೆ. ಅಂಚೆ ಕಚೇರಿಯ ನಿಶ್ಚಿತ ಠೇವಣಿಗೆ 1-3 ವರ್ಷಗಳ ಅವಧಿಗೆ ಶೇ.5.5ರ ಬಡ್ಡಿ ಇದೆ. 5 ವರ್ಷಗಳ ನಿಶ್ಚಿತ ಠೇವಣಿಯಲ್ಲಿ ಶೇ.6.7ರಷ್ಟು ಬಡ್ಡಿ ಇದೆ. ಹೂಡಿಕೆದಾರರಿಗೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80 ಸಿ ಅಡಿಯಲ್ಲಿ 5 ವರ್ಷಗಳ ನಿಶ್ಚಿತ ಠೇವಣಿ ಮೇಲೆ ತೆರಿಗೆ ವಿನಾಯಿತಿ ಸಿಗಲಿದೆ.

ರೈಲು ಹೊರಡುವ ಐದು ನಿಮಿಷ ಮುಂಚೆ ಟಿಕೆಟ್‌ ಕಾಯ್ದಿರಿಸಲು ಅವಕಾಶ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ರೈಲು ಪ್ರಯಾಣಿಕರು ಇನ್ನು ಮುಂದೆ ರೈಲು ಹೊರಡಲು ಕೇವಲ ಐದು ನಿಮಿಷ ಇರುವಾಗಲೂ ಟಿಕೆಟ್‌ ಕಾಯ್ದಿರಿಸಬಹುದಾಗಿದೆ. ರೈಲ್ವೆ ಇಲಾಖೆಯು ಹಳೆಯ ಪದ್ಧತಿಯನ್ನೇ ಮುಂದುವರಿಸಲು ತೀರ್ಮಾನಿಸಿದ್ದು, ಇದು ಅಕ್ಟೋಬರ್‌ 10ರಿಂದಲೇ ಜಾರಿಯಾಗಲಿದೆ.

‘ಈ ಹಿಂದೆ ಇದ್ದಂತೆಯೇ ರೈಲು ಹೊರಡಲು 30ರಿಂದ 5 ನಿಮಿಷ ಮುಂಚಿತವಾಗಿ ಪ್ರಯಾಣಿಕರ ಎರಡನೇ ಮೀಸಲು ಪಟ್ಟಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ’ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಕೊವಿಡ್‌-19 ಹಿನ್ನೆಲೆಯಲ್ಲಿ ವಿಶೇಷ ರೈಲುಗಳ ಸಂಚಾರ ಆರಂಭಿಸಿದಾಗ ರೈಲು ಹೊರಡಲು ಎರಡು ಗಂಟೆ ಇದ್ದಂತೆ ಪ್ರಯಾಣಿಕರ ಎರಡನೇ ಮೀಸಲು ಪಟ್ಟಿ ಬಿಡುಗಡೆ ಮಾಡಲಾಗುತ್ತಿತ್ತು.

‘ರೈಲು ಹೊರಡಲು ಕನಿಷ್ಠ ನಾಲ್ಕು ಗಂಟೆ ಮುಂಚಿತವಾಗಿ ಮೊದಲ ಪಟ್ಟಿ ತಯಾರಿಸಲಾಗುತ್ತದೆ. ಟಿಕೆಟ್‌ ರದ್ದತಿಯಿಂದಾಗಿ ಆಸನಗಳು ಖಾಲಿ ಇದ್ದರೆ ಎರಡನೇ ಪಟ್ಟಿ ಸಿದ್ಧಪಡಿಸುವವರೆಗೂ ಬುಕಿಂಗ್‌ ಕೌಂಟರ್‌ಗಳಲ್ಲಿ ಅಥವಾ ಆನ್‌ಲೈನ್‌ ಮೂಲಕ ಟಿಕೆಟ್‌ ಕಾಯ್ದಿರಿಸಬಹುದು’ ಎಂದು ಪ್ರಕಟಣೆ ತಿಳಿಸಿದೆ.

ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಅಕ್ಟೋಬರ್‌ 15ರಿಂದ ನವೆಂಬರ್‌ 30ರವರೆಗೆ ದೇಶದ ವಿವಿಧ ಭಾಗಗಳಿಗೆ ಸುಮಾರು 200 ರೈಲುಗಳ ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ಉದ್ದೇಶಿಸಿದೆ.

ನೂರು ಕೋಟಿ ದಾಟಿದ ರಾಮಮಂದಿರದ ದೇಣಿಗೆ!

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ಆ.5ರಂದು ರಾಮಮಂದಿರದ ಭೂಮಿಪೂಜೆ ನಡೆದ ಬಳಿಕ ₹100 ಕೋಟಿಗೂ ಅಧಿಕ ದೇಣಿಗೆ ಸಂಗ್ರಹವಾಗಿದೆ ಎಂದು ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಮಾಹಿತಿ ನೀಡಿದೆ.

ವಿದೇಶಗಳಿಂದಲೂ ದೇಣಿಗೆ ಬಂದಿದ್ದು, ಇವುಗಳನ್ನು ಇನ್ನಷ್ಟೇ ಲೆಕ್ಕಹಾಕಬೇಕಾಗಿದೆ. ಜೊತೆಗೆ 200 ಕೆ.ಜಿ ಬೆಳ್ಳಿ ಹಾಗೂ ಇತರೆ ಬೆಲೆಬಾಳುವ ವಸ್ತುಗಳು ದೇಣಿಗೆಯಾಗಿ ಬರುತ್ತಿವೆ’ ಎಂದು ಟ್ರಸ್ಟ್‌ನ ಪ್ರಕಾಶ್‌ ಗುಪ್ತಾ ತಿಳಿಸಿದರು.

ಭಕ್ತರ ಅನುಕೂಲಕ್ಕಾಗಿ ಅಯೋಧ್ಯೆಯಲ್ಲಿ ನಗರದ ಒಂದು ಭಾಗದಿಂದ ರಾಮಮಂದಿರದ ಆವರಣಕ್ಕೆ ರೋಪ್‌ವೇ ನಿರ್ಮಾಣದ ಚಿಂತನೆಯೂ ಇದ್ದು, ಈ ಕುರಿತು ಯುರೋಪ್‌ ಮೂಲದ ಕಂಪನಿಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಮಂದಿರ ನಿರ್ಮಾಣ ಚಟುವಟಿಕೆಯೂ ಚುರುಕು ಪಡೆದಿದೆ’ ಎಂದು ಅಯೋಧ್ಯೆ ಮಹಾನಗರ ಪಾಲಿಕೆ ಆಯುಕ್ತ ವಿಶಾಲ್‌ ಸಿಂಗ್‌ ತಿಳಿಸಿದರು.

ದೇವಾಲಯದ ಜಾಗ ಒತ್ತುವರಿ ಪ್ರಶ್ನಿಸಿದ ಅರ್ಚಕನನ್ನೇ ಸುಟ್ಟುಹಾಕಿದ ದುಷ್ಕರ್ಮಿಗಳು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಜೈಪುರ: ಭೂಮಿ ವಿವಾದ ಸಂಬಂಧ ದೇವಾಲಯದ ಅರ್ಚಕನನ್ನು ಜೀವಂತವಾಗಿ ಸುಟ್ಟಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ. ಸುಟ್ಟ ಗಾಯಗಳಿಂಡ ಬಳಲುತ್ತಿದ್ದ ಅರ್ಚಕ ಕಳೆದ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಕರೌಲಿ ಜಿಲ್ಲೆಯ ಸಪೋತ್ರಾದಲ್ಲಿ ನಡೆದ ಘಟನೆಯಲ್ಲಿ ದೇವಾಲಯದ ಅರ್ಚಕ ಬಾಬುಲಾಲ್ (50) ಸಾವಿಗೀಡಾಗಿದ್ದಾರೆ. ಇವರ ಮೇಲೆ ಒಂದೇ ಕುಟುಂಬದ ಆರು ಮಂದಿ ಸೇರಿ ಬೆಂಕಿ ಹಚ್ಚಿದ್ದಾರೆಂದು ಸಾವಿಗೆ ಮುನ್ನ ನೀಡಿದ ಹೇಳಿಕೆಯಲ್ಲಿ ಬಾಬುಲಾಲ್ ವಿವರಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಕೈಲಾಶ್ ಮೀನಾನ ಬಂಧನವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಆರು ತಂಡಗಳನ್ನು ರಚಿಸಲಾಗಿದೆ. ಇತರೆ ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಕರೌಲಿಯ ಎಸ್ಪಿ ಮೃದೂಲ್ ಕಚ್ವಾ ಹೇಳಿದ್ದಾರೆ. ಇದೇ ವೇಳೆ ಕೈಲಾಶ್ ಮೀನಾ ಅವರ ಇಡೀ ಕುಟುಂಬ ಈ ಘಟನೆಗೆ ಕಾರಣವಾಗಿದೆ ಎಂದು ಅರ್ಚಕರ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವಾಲಯದ ಅರ್ಚಕರಿಗೆ ಸುಮಾರು 5.2 ಎಕರೆ ಜಮೀನು ಇದ್ದು ಗ್ರಾಮದ ರಾಧಾ ಕೃಷ್ಣ ದೇವಾಲಯದ ಟ್ರಸ್ಟ್‌ಗೆ ಸೇರಿದ ಜಮೀನು ಇದಾಗಿದೆ. ಆದರೆ ಈ ಭೂಮಿಯನ್ನು ಪ್ರಧಾನ ಅರ್ಚಕರ ಕುಟುಂಬಕ್ಕೆ ನೀಡಲಾಗಿತ್ತು.

ಚೆನ್ನೈಗೆ ಸೋಲು: ಧೋನಿ ಮಗಳಿಗೆ ಅತ್ಯಾಚಾರ ಬೆದರಿಕೆ!

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಸತತವಾಗಿ ಸೋಲುತ್ತಿದೆ. ಅದಕ್ಕಿಂತ ಆಘಾತಕಾರಿ ಸುದ್ದಿಯೊಂದು ಸಾಮಾಜಿಕ ತಾಣದಲ್ಲಿ ಕೇಳಿಬಂದಿದೆ. ಧೋನಿ ಕಳಪೆಯಾಟವಾಡಿದ್ದಕ್ಕೆ ಅವರ 5 ವರ್ಷದ ಪುಟ್ಟ ಮಗಳು ಜಿವಾರನ್ನು ಅತ್ಯಾಚಾರ ಮಾಡಬೇಕು ಎಂದು ಹೇಳುವ ವಿಕೃತಿಯೂ ಪ್ರಕಟವಾಗಿದೆ. ಇದೆಲ್ಲ ಆಗಿದ್ದು ಬುಧವಾರ ಚೆನ್ನೈ ಕಿಂಗ್ಸ್‌ ತಂಡ ಕೋಲ್ಕತ ವಿರುದ್ಧ ಸೋತ ನಂತರ.

ಬರೀ 5 ವರ್ಷದ, ಪುಟ್ಟ ಕೈ, ಪುಟ್ಟ ಕಾಲುಗಳನ್ನಿಟ್ಟುಕೊಂಡು ಈಗಷ್ಟೇ ಹೆಜ್ಜೆ ಹಾಕುವುದನ್ನು ಕಲಿಯುತ್ತಿರುವ, ತೊದಲು ಮಾತನಾಡುತ್ತಿರುವಆಮಗುವನ್ನು ಅತ್ಯಾ ಚಾರ ಮಾಡಬೇಕು ಎಂಬ ಮಟ್ಟಿಗೆ ಆಕ್ರೋಶ ವ್ಯಕ್ತವಾಗಿದೆ. ಇದು ಕ್ರಿಕೆಟ್‌ ಮೇಲಿನ ಪ್ರೀತಿಯೋ? ನಮ್ಮಲ್ಲಿಡಗಿರುವ ನರರಾಕ್ಷಸ ತನವೋ? ಹೀಗೆಂದು ಸಾಮಾಜಿಕ ತಾ ದಲ್ಲಿಭಾರೀಚರ್ಚೆಗಳು ಶುರುವಾಗಿವೆ.

ಮಿ.ವಿಜಯ್‌ ಎಂಬಾತ ಹೀಗೆಂದು ಕ್ರೂರವಾಗಿ ಹೇಳಿದ್ದರ ಸ್ಕ್ರೀನ್‌ಶಾಟನ್ನು ಆಯುಷ್‌ ವರ್ಮ ಎನ್ನುವವರು ಟ್ವೀಟ್‌ ಮಾಡಿದ್ದಾರೆ. ಮಾಮೂಲಿಯಾಗಿ ತಮ್ಮ ಮೆಚ್ಚಿನ ತಂಡ ಸೋತಾಗ ಅಭಿಮಾನಿಗಳು ಬೈಯುವುದು, ಅಸಹನೆ ವ್ಯಕ್ತಪಡಿಸುವುದು, ವಾಚಾಮಗೋಚರ ಹೀಗಳೆಯುವುದು ಇದ್ದಿದ್ದೇ. ಈ ಮಟ್ಟಕ್ಕೆ ಪ್ರತಿಕ್ರಿಯಿಸಿದ್ದು ಎಂತಹವರಿಗೂ ಬೇಸರ ತರಿಸುತ್ತದೆ.

ಬಹುಶಃ ಇದು ಸಾಮಾಜಿಕ ತಾಣದ ಪರಿಣಾಮ ಎಂದರೂ ಅಚ್ಚರಿಯಿಲ್ಲ. ಯಾವ ರೀತಿಯ ಮಾತುಗಳನ್ನಾದರೂ ಎಗ್ಗಿಲ್ಲದೇ ಆಡುವುದಕ್ಕೆ ಸಾಮಾಜಿಕ ತಾಣಗಳು ಅವಕಾಶ ಮಾಡಿಕೊಡುತ್ತವೆ. ಹಾಗಾಗಿಯೇ ಈ ರೀತಿಯ ಮಾತುಗಳುಕೇಳಿ ಬರುತ್ತಿವೆ.

ಚೆನ್ನೈ ತಂಡದಲ್ಲಿರುವುದೆಂದರೆ ಸರ್ಕಾರಿ ನೌಕರಿ: ಸೆಹ್ವಾಗ್ ವ್ಯಂಗ್ಯ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲವು ಬ್ಯಾಟ್ಸ್‌ಮನ್‌ಗಳು ತಮ್ಮದು ‘ಸರ್ಕಾರಿ ನೌಕರಿ’ ಅಂದುಕೊಂಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ವ್ಯಂಗ್ಯ ಮಾಡಿದ್ದಾರೆ.

ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ 168 ರನ್‌ಗಳ ಗೆಲುವಿನ ಗುರಿಯನ್ನು ಮುಟ್ಟುವಲ್ಲಿ ವಿಫಲವಾಗಿದ್ದ ಚೆನ್ನೈ ತಂಡದ ಕೆಲವು ಬ್ಯಾಟ್ಸ್‌ಮನ್‌ಗಳ ಮೇಲೆ ವೀರೂ ಚಾಟಿ ಬೀಸಿದ್ದಾರೆ.

‘ಸುಲಭವಾಗಿ ಜಯಿಸಬೇಕಾದ ಗುರಿ ಅದಾಗಿತ್ತು. ಆದರೆ ಕೇದಾರ್ ಜಾಧವ್ ಹೆಚ್ಚು ಡಾಟ್ ಬಾಲ್ ಆಡಿದ್ದರು. ಆದ್ದರಿಂದ ರವೀಂದ್ರ ಜಡೇಜಾಗೆ ಹೆಚ್ಚು ಅವಕಾಶ ಸಿಗಲಿಲ್ಲ’ ಎಂದು ಸೆಹ್ವಾಗ್ ಇಂಗ್ಲಿಷ್ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಆ ಪಂದ್ಯದಲ್ಲಿ ಕೇದಾರ್ 12 ಎಸೆತಗಳಲ್ಲಿ ಏಳು ರನ್ ಗಳಿಸಿದ್ದರು.

‘ಸಿಎಸ್‌ಕೆಯಲ್ಲಿರುವುದು ಸರ್ಕಾರಿ ನೌಕರಿ ಎಂದು ಕೆಲವರು ಭಾವಿಸಿದಂತಿದೆ. ಚೆನ್ನಾಗಿ ಆಡಲಿ ಬಿಡಲಿ ವೇತನವಂತೂ ಸಿಗುತ್ತದೆ ಎಂಬ ಭಾವನೆಯಲ್ಲಿದ್ದಾರೆ’ ಎಂದು ಸೆಹ್ವಾಗ್ ಹೇಳಿದ್ದಾರೆ.

ಹೋದ ವಾರ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿಯೂ ಚೆನ್ನೈ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು.

10.10.2020 ಮದುವೆಗೆ ಭಾರೀ ಡಿಮಾಂಡ್‌!

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಭಾರತದಲ್ಲಿ ಅಮೃತ ಸಿದ್ಧಿಯೋಗದಂಥ ವಿಶೇಷ ದಿನಗಳಲ್ಲಿ ಹೆಚ್ಚು ಮದುವೆಗಳು, ಗೃಹಪ್ರವೇಶಗಳು ನಡೆಯುವುದು ವಾಡಿಕೆ. ಇಂಥ ಯಾವುದೇ ಧಾರ್ಮಿಕ ಕಾರಣವಿಲ್ಲದಿದ್ದರೂ ಸಿಂಗಾಪುರದಲ್ಲಿ ಅ.10ರಂದು 876 ಮದುವೆಗಳು ಜರಗಲಿದ್ದು, ಈ ವಿಷಯ ಖುದ್ದು ಅಲ್ಲಿನ ಜನರೇ ಹುಬ್ಬೇರಿಸುವಂತೆ ಮಾಡಿದೆ.

ಸಿಂಗಾಪುರದ ರಿಜಿಸ್ಟ್ರಿ ಆಫ್ ಮ್ಯಾರೇಜಸ್‌ (ಆರ್‌ಒಎಂ) ಹಾಗೂ ರಿಜಿಸ್ಟ್ರಿ ಆಫ್ ಮುಸ್ಲಿಂ ಮ್ಯಾರೇಜಸ್‌ (ಆರ್‌ಒಎಂಎಂ) ಕಚೇರಿಗಳಿಗೆ 876 ವಿವಾಹ ನೋಂದಣಿ ಅರ್ಜಿಗಳು ಬಂದಿದ್ದು, ಅ. 10ರಂದು ಅತೀ ಹೆಚ್ಚು ಮದುವೆಗಳು ಜರಗಲಿರುವುದಕ್ಕೆ ಸಾಕ್ಷಿಯಾಗಿದೆ.

ಇದರ ಹಿಂದಿನ ಕಾರಣವನ್ನು ಸಿಂಗಾಪುರದ ವೆಡ್ಡಿಂಗ್‌ ಪ್ಲಾನರ್ಸ್‌ ಹಾಗೂ ಅಲ್ಲಿನ ಸಂಪ್ರದಾಯದ ಪುರೋಹಿತರು ಬಹಿರಂಗಪಡಿಸಿದ್ದಾರೆ.

ಈ ವರ್ಷದ ಅಕ್ಟೋಬರ್‌ 10ನೇ ದಿನಾಂಕ ವಿಶೇಷವಾಗಿದೆ. ಆ ದಿನವನ್ನು “ಟೆನ್‌-ಟೆನ್‌-ಟ್ವೆಂಟಿ ಟ್ವೆಂಟಿ’ (10-10-2020) ಎಂದು ಸುಲಭವಾಗಿ ನೆನಪಿಟ್ಟುಕೊಳ್ಳಬಹುದು. ಹಾಗಾಗಿ, ಹೆಚ್ಚಿನ ಜೋಡಿಗಳು ಈ ದಿನಾಂಕವನ್ನೇ ಮದುವೆಗೆ ಆಯ್ಕೆ ಮಾಡಿವೆ ಎಂದು ಅವರು ಹೇಳಿದ್ದಾರೆ.

ಕೊಪ್ಪಳ ಎಸ್ಪಿ ಜಿ.ಸಂಗೀತಾ ವರ್ಗಾವಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಟಿ.ಶ್ರೀಧರ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಜಿ.ಸಂಗೀತಾ ಅವರನ್ನು ವರ್ಗಾವಣೆಗೊಳಿಸಿದೆ. ಸಂಗೀತಾ ಅವರ ವರ್ಗಾವಣೆಗೊಳ್ಳುವ ವಿಚಾರ ಕಳೆದೊಂದು ವಾರದಿಂದ ಚಾಲ್ತಿಯಲ್ಲಿತ್ತು. ನೂತನವಾಗಿ ಎಸ್ಪಿಯಾಗಿ ನೇಮಕಗೊಂಡಿರುವ ಟಿ.ಶ್ರೀಧರ್ ಅವರು ಈ ಮೊದಲು ಬೆಂಗಳೂರು ಗುಪ್ತಚರ ವಿಭಾಗದಲ್ಲಿದ್ದ ಕರ್ತವ್ಯ ನಿರ್ವಹಿಸಿದ್ದರು.

ಎಸ್ಪಿ ಜಿ.ಸಂಗೀತಾ ಮತ್ತು ಇತರ ಪೊಲೀಸ್ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಕೊನೆಗೂ ಈ ತೆರೆಮರೆಯ ಕಸರತ್ತು ಬಿಜೆಪಿ ಜನಪ್ರತಿನಿಧಿಗಳ ಅಂಗಳಕ್ಕೆ ಹೋಗಿತ್ತು. ಬಳಿಕ ಬಿಜೆಪಿ ನಾಯಕರಲ್ಲೇ ಈ ವಿಷಯವಾಗಿ ಬಣಗಳು ಹುಟ್ಟಿಕೊಂಡಿದ್ದವು. ಕೊನೆಗೂ ಒಂದು ಬಣ ಸಂಗೀತಾ ಅವರನ್ನು ಎತ್ತಂಗಡಿ ಮಾಡುವಲ್ಲಿ ಯಶಸ್ವಿಯಾಗಿದೆ.

ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ಘೋಷಿಸಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ರಾಜ್ಯದಲ್ಲಿ ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಭತ್ತದ ಬೆಳೆಯನ್ನು ರೈತರು ನಾಟಿ ಮಾಡಿದ್ದಾರೆ. ಸರ್ಕಾರ ತಕ್ಷಣ ರೈತರ ಹಿತ ಕಾಪಾಡಿ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು ಎಂದು ವಿಎಸ್‌ಎಸ್‌ಎನ್ ನಿರ್ದೇಶಕ ವಿಶ್ವನಾಥ ಮಾಲಿಪಾಟೀಲ್ ಒತ್ತಾಯಿಸಿದ್ದಾರೆ.
ಕೊರೋನಾ ಸೋಂಕಿನ ಸಂಕಷ್ಟದಲ್ಲಿಯೂ ಮಾರುಕಟ್ಟೆಯಲ್ಲಿ ಭತ್ತದ ಬೆಳೆಗೆ ಸೂಕ್ತ ಬೆಲೆ ಸಿಗುವ ಬಗ್ಗೆ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಭತ್ತದ ಬೆಳೆಗಳಿಗೆ ನಾನಾ ರೋಗಗಳು ಬರುತ್ತಿವೆ.
ಇದರಿಂದ ಈಗಾಗಲೇ ಅರ್ಧದಷ್ಟು ಬೆಳೆ ಹಾನಿಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಕೃಷಿ ಸಚಿವರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸ್ಪಂದಿಸಬೇಕು. ಜೊತೆಗೆ ಸಿಎಂ ತಕ್ಷಣವೇ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ವಿಶ್ವನಾಥ್ ಮಾಲಿಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!