ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಎರಡನೇ ಹಂತದ ಪ್ರಚಾರದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮಾಲ್ಪುರದಲ್ಲಿ ರ್ಯಾಲಿಯನ್ನು ನಡೆಸಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, “ಕಳೆದ 15 ವರ್ಷಗಳಲ್ಲಿ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಮಹಿಳೆಯರ ಸುರಕ್ಷತೆ ಗಂಭೀರವಾಗಿ ಕುಸಿದಿದೆ. ಆರ್ಜಿ ಕರ್, ಸಂದೇಶಖಾಲಿ, ಕೊಲ್ಕತ್ತಾ ಕಾನೂನು ಕಾಲೇಜು ಹಾಗೂ ದುರ್ಗಾಪುರ ಕಾಲೇಜು ಸೇರಿದಂತೆ ಹಲವಾರು ಘಟನೆಗಳು ರಾಜ್ಯದ ಸ್ಥಿತಿಯನ್ನು ತೋರಿಸುತ್ತವೆ” ಎಂದು ಆರೋಪಿಸಿದರು.
“ಮಮತಾ ದೀದಿ ಮಹಿಳೆಯರಿಗೆ ಸಂಜೆ 7 ಗಂಟೆಯ ನಂತರ ಮನೆಗಳಿಂದ ಹೊರಗೆ ಹೋಗಬೇಡಿ ಎಂದು ಹೇಳಿರುವುದು ದುರದೃಷ್ಟಕರ. ಆದರೆ ಬಿಜೆಪಿ ಅಧಿಕಾರದಲ್ಲಿರುವ ಯಾವುದೇ ರಾಜ್ಯದಲ್ಲಿ ಮಹಿಳೆಯರ ಮೇಲೆ ಇಂತಹ ನಿರ್ಬಂಧವಿಲ್ಲ. ಮೇ 5 ನಂತರ ಬಂಗಾಳದಲ್ಲಿ ಮಹಿಳೆಯರು ಭಯವಿಲ್ಲದೆ ಹೊರಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ” ಎಂದು ಭರವಸೆ ನೀಡಿದರು.
ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ ಅವರು, “ಯಾವುದೇ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಮೊದಲ ಹಂತದ ಮತದಾನದ ಫಲಿತಾಂಶದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅಮಿತ್ ಶಾ, ಬಿಜೆಪಿ 110ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ. ಜೊತೆಗೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಗೆ ತರುವುದಾಗಿ ಪುನರುಚ್ಚರಿಸಿದ್ದಾರೆ.

