ಬಾಗಲಕೋಟೆ: ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರ ನಡೆಸಿದ ಮಾಜಿ ಸಂಸದ ಪ್ರತಾಪ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರ ಹೆಸರಷ್ಟೇ ಹಿಂದೂ ಆಗಿದ್ದು, ಅವರ ನಡೆ–ನುಡಿಯಲ್ಲಿ ಹಿಂದೂ ಧರ್ಮದ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಪ್ರತಾಪಸಿಂಹ ಆರೋಪಿಸಿದರು. ಯುಗಾದಿ ಹಾಗೂ ದೀಪಾವಳಿ ದಿನಗಳಲ್ಲಿ ಮಾಂಸಾಹಾರ ಸೇವನೆ ವಿಷಯದಲ್ಲಿಯೂ ಟೀಕಿಸಿದರು.
ಇದೀಗ ಕಾಂಗ್ರೆಸ್ ನಾಯಕರು ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದ ಅವರು, ನಾಗಮಂಗಲದಲ್ಲಿ ಗಣೇಶ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ ನಡೆದಾಗ ಅದನ್ನು ಸಣ್ಣ ಘಟನೆ ಎಂದು ಸಿಎಂ ಹೇಳಿದ್ದನ್ನು ಪ್ರಶ್ನಿಸಿದರು. ಮದ್ದೂರು, ಅಣ್ಣಮ್ಮ ಜಾತ್ರೆ ಹಾಗೂ ಶಿವಾಜಿ ಜಯಂತಿ ಸಂದರ್ಭಗಳಲ್ಲಿ ನಡೆದ ಕಲ್ಲು ತೂರಾಟ ಘಟನೆಗಳ ವೇಳೆ ಸರ್ಕಾರದ ಪ್ರತಿಕ್ರಿಯೆ ಏನು ಎಂಬುದರ ಬಗ್ಗೆ ಕೂಡ ಪ್ರಶ್ನೆ ಎತ್ತಿದರು.
ಕಾಂಗ್ರೆಸ್ ನಾಯಕರು ನಿಜವಾದ ಹಿಂದುಗಳಾಗಿದ್ದರೆ ಇಂತಹ ಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದರು ಎಂದು ಹೇಳಿದರು. ಇದಲ್ಲದೆ, ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೂ ಪ್ರತಾಪಸಿಂಹ ಟೀಕಿಸಿದರು. ರಾಜ್ಯದಲ್ಲಿ ಸಾಲದ ಪ್ರಮಾಣ ಹೆಚ್ಚಾಗಿದ್ದು, ಪ್ರತಿ ಮಗುವಿನ ತಲೆಮೇಲೆ ಸುಮಾರು ₹1.17 ಲಕ್ಷ ಸಾಲವಿದೆ ಎಂದು ಅವರು ಹೇಳಿದರು. ಒಟ್ಟು ರಾಜ್ಯ ಸಾಲ ₹8.25 ಲಕ್ಷ ಕೋಟಿ ತಲುಪಿದೆ ಎಂದು ಆರೋಪಿಸಿದರು.
ಕೆಂಗಲ್ ಹನುಮಂತಯ್ಯರಿಂದ ಬಸವರಾಜ್ ಬೊಮ್ಮಾಯಿ ಅವರವರೆಗೆ ಎಲ್ಲಾ ಮುಖ್ಯಮಂತ್ರಿಗಳಿಗಿಂತ ಹೆಚ್ಚು ಸಾಲವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಆರೋಪಿಸಿ, “ಸಾಲಾರಾಮಯ್ಯ” ಎಂದು ವ್ಯಂಗ್ಯವಾಡಿದರು.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ರಸ್ತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯಲ್ಲಿಯೂ ಸುಧಾರಣೆ ಕಂಡಿಲ್ಲ ಎಂದು ಪ್ರತಾಪಸಿಂಹ ಆರೋಪಿಸಿದರು.

