Home Blog

ಮಂತ್ರಾಲಯ ದರ್ಶನ ಮುಗಿಸಿ ವಾಪಸಾಗುತ್ತಿದ್ದ ವೇಳೆ ದುರಂತ – ಚಳ್ಳಕೆರೆಯಲ್ಲಿ ಕಾರು-ಲಾರಿ ಡಿಕ್ಕಿ, ಮೂವರು ಸಾವು

0

ಚಿತ್ರದುರ್ಗ: ಮಂತ್ರಾಲಯದಲ್ಲಿ ರಾಘವೇಂದ್ರಸ್ವಾಮಿ ದರ್ಶನ ಮುಗಿಸಿ ವಾಪಸಾಗುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ನಡೆದಿದೆ.

ಹಿರೆಹಳ್ಳಿ ಟೋಲ್ ಸಮೀಪ ಕಾರು ಹಾಗೂ ಲಾರಿಯ ನಡುವೆ ಭಾರೀ ಡಿಕ್ಕಿ ಸಂಭವಿಸಿದೆ. ಮಂತ್ರಾಲಯದಿಂದ ತಿಪಟೂರು ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ.

ಈ ಅಪಘಾತ ಚಳ್ಳಕೆರೆ ವ್ಯಾಪ್ತಿಯ ತಳಕು ಪೊಲೀಸ್ ಠಾಣೆ ಹದ್ದಿನಲ್ಲಿ ನಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಅಪಘಾತದ ಶಬ್ದ ಕೇಳಿ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ಮುಂದಾದರು. ಬಳಿಕ ತಳಕು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತರ ಗುರುತು ಹಾಗೂ ಹೆಚ್ಚಿನ ವಿವರಗಳನ್ನು ಸಂಗ್ರಹಿಸುವ ಕಾರ್ಯ ಮುಂದುವರೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಈ ದುರ್ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಪತ್ರಿಕೋದ್ಯಮಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರ: ಕೆ. ವಿ. ಪ್ರಭಾಕರ್

0

ಗದಗ: ಗದಗ ಜಿಲ್ಲೆ ಕಲೆ, ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು ಹೊಂದಿದ್ದು, ಪತ್ರಿಕೋದ್ಯಮಕ್ಕೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್ ಅಭಿಪ್ರಾಯಪಟ್ಟರು.

ನಗರದ ಹಾತಲಗೇರಿ ರಸ್ತೆಯಲ್ಲಿರುವ ರತ್ನಾಕರವಾಣಿ ಕನ್ನಡ ದಿನಪತ್ರಿಕೆ ಕಾರ್ಯಾಲಯಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ಅವ್ವ ದತ್ತಿ ನಿಧಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಅಂಗವಾಗಿ ಗದಗ ನಗರಕ್ಕೆ ಆಗಮಿಸಿರುವುದಾಗಿ ತಿಳಿಸಿದರು. ಗದಗ ಐತಿಹಾಸಿಕ ತಾಣವಾಗಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಿಲ್ಲೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತರ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಸಮಾಜ ಸುಧಾರಣೆಯಲ್ಲಿ ಮಾಧ್ಯಮದ ಪಾತ್ರವನ್ನು ಅವರು ಸಮಗ್ರವಾಗಿ ಅರಿತುಕೊಂಡಿದ್ದು, ಆ ನಿಟ್ಟಿನಲ್ಲಿ ಪತ್ರಕರ್ತರಿಗೆ ಅಗತ್ಯ ಗೌರವ ನೀಡುತ್ತಿದ್ದಾರೆ ಎಂದು ಹೇಳಿದರು.

ಮಾಧ್ಯಮ ಸಲಹೆಗಾರನಾಗಿ ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಸರ್ಕಾರ ಹೆಚ್ಚಿನ ಮಹತ್ವ ನೀಡಿದ್ದು, ಯಾವುದೇ ಕಾರಣಕ್ಕೂ ಜಿಲ್ಲಾ ಪತ್ರಿಕೆಗಳ ಜಾಹೀರಾತು ಕಡಿತವಾಗಬಾರದೆಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಯೋಜನೆ ಜಾರಿಗೆ ತಂದಿದ್ದು, ವಿಶೇಷ ಆರೋಗ್ಯ ಯೋಜನೆ ಕುರಿತು ಚರ್ಚೆ ನಡೆಯುತ್ತಿದೆ. ಸರ್ಕಾರ ಸದಾ ಪತ್ರಿಕೆಗಳ ಬೆಂಬಲಕ್ಕೆ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಹಿರಿಯರಿಂದ ಅಭಿನಂದನೆ

ಹಿರಿಯ ವರದಿಗಾರ ಅನಂತ್ ಕಾರ್ಕಳ ಮಾತನಾಡಿ, “ಕೆ. ವಿ. ಪ್ರಭಾಕರ್ ಅವರು ಮಾಧ್ಯಮ ಸಲಹೆಗಾರರಾದ ಬಳಿಕ ಮಾಧ್ಯಮ ಹಾಗೂ ಪತ್ರಿಕೆಗಳ ಸಮಸ್ಯೆಗಳ ಕುರಿತು ಸಮಗ್ರ ಅಧ್ಯಯನ ನಡೆಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕೆ ಸ್ಪಂದಿಸುವಂತೆ ಮಾಡಿದ್ದಾರೆ. ಅವರ ಕಾರ್ಯ ಶ್ಲಾಘನೀಯ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿಂಗಪ್ಪ ಚವಡಿ, ಎಚ್. ಎಂ. ಶರೀಫನವರ್, ರಾಮಕೃಷ್ಣ ರೊಳ್ಳಿ, ಶರಣು ದೊಡ್ಡೂರ, ಪ್ರಕಾಶ್ ಕರಿ, ಸಂಜೀವ್ ಪಾಂಡ್ರೆ, ಗಣೇಶ್ ಪೈ, ರಮೇಶ್ ಭಜಂತ್ರಿ, ದೇವಪ್ಪ ಲಿಂಗದಾಳ, ಗಿರೀಶ್ ಕಮ್ಮಾರ್, ವಿನಯ್ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಕೆ. ವಿ. ಪ್ರಭಾಕರ್ ಅವರು ಮಾಧ್ಯಮ ಸಲಹೆಗಾರರಾದ ನಂತರ ಸರ್ಕಾರ ಮತ್ತು ಮಾಧ್ಯಮದ ನಡುವೆ ಸಮನ್ವಯ ಹೆಚ್ಚಾಗಿದೆ. ಮಾಧ್ಯಮ ಕ್ಷೇತ್ರಕ್ಕೆ ಅವರದೇ ಆದ ವಿಶೇಷ ಕೊಡುಗೆ ಇದೆ. ರತ್ನಾಕರವಾಣಿ ಕನ್ನಡ ದಿನಪತ್ರಿಕೆ ಕಾರ್ಯಾಲಯಕ್ಕೆ ಆಗಮಿಸಿ ಶುಭ ಹಾರೈಸಿರುವುದು ಸಂತಸ ತಂದಿದೆ.”

— ಜಗದೀಶ್ ಎಸ್. ಪಿ.
ಸಂಪಾದಕರು, ರತ್ನಾಕರವಾಣಿ ಕನ್ನಡ ದಿನಪತ್ರಿಕೆ

ಕುಡಿಯುವ ನೀರಿಲ್ಲದೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ!

0

ವಿಜಯಸಾಕ್ಷಿ ಸುದ್ದಿ, ಕೊಟ್ಟೂರು: ತಾಲೂಕು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲದೆ ಪ್ರಯಾಣಿಕರು ದಿನನಿತ್ಯ ತೊಂದರೆ ಅನುಭವಿಸುವಂತಾಗಿದೆ. ಈ ನಿರ್ಲಕ್ಷ್ಯದಿಂದ ಬೇಸತ್ತು ಸಾರ್ವಜನಿಕರು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸರ್ಕಾರಿ ಬಸ್ ತಂಗುದಾಣವಾಗಿದ್ದರೂ ಶುದ್ಧ ಕುಡಿಯುವ ನೀರಿನ ಘಟಕವೇ ಇಲ್ಲದಿರುವುದು ಆಶ್ಚರ್ಯಕಾರಿಯಾಗಿದೆ. ದೂರದ ಊರುಗಳಿಂದ ಬರುವ ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ಅನೇಕ ಪ್ರಯಾಣಿಕರು ನೀರಿನ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.

ಸ್ಥಿತಿವಂತರು ಹಾಗೂ ಮಧ್ಯಮ ವರ್ಗದವರು ಹಣ ನೀಡಿ ಅಂಗಡಿಗಳಲ್ಲಿ ಸಿಗುವ ಬಾಟಲ್ ನೀರನ್ನು ಖರೀದಿಸಿ ದಾಹ ತೀರಿಸಿಕೊಳ್ಳುವ ಪರಿಸ್ಥಿತಿ ಇದೆ. ಆದರೆ ಹಳ್ಳಿಗಳಿಂದ ಕೂಲಿ ಕೆಲಸಕ್ಕಾಗಿ ಪಟ್ಟಣಕ್ಕೆ ಬರುವ ಬಡ ಕಾರ್ಮಿಕರು ದುಡ್ಡು ಕೊಟ್ಟು ನೀರು ಖರೀದಿಸಲು ಸಾಧ್ಯವಾಗದೆ ಸಣ್ಣಪುಟ್ಟ ಹೋಟೆಲ್‌ಗಳನ್ನು ಅವಲಂಬಿಸುವಂತಾಗಿದೆ.

ಹಲವು ವರ್ಷಗಳಿಂದಲೂ ಈ ಸಮಸ್ಯೆ ಮುಂದುವರಿದಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಇನ್ನಾದರೂ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡು ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಪ್ರಯಾಣಿಕರ ಮೂಲಭೂತ ಅಗತ್ಯವನ್ನು ಪೂರೈಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಗೃಹಲಕ್ಷ್ಮಿ ಹಣ ದೇವಾಲಯ ನಿರ್ಮಾಣಕ್ಕೆ ದೇಣಿಗೆ: ತಿಮ್ಮಾಪುರ ಮಹಿಳೆಯರ ಅಭೂತಪೂರ್ವ ನಿರ್ಧಾರ!

0

ಗದಗ: ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಸಾಮಾಜಿಕ–ಆಧ್ಯಾತ್ಮಿಕ ಬದ್ಧತೆಯೊಂದು ಗಮನಸೆಳೆಯುವ ಘಟನೆ ನಡೆದಿದೆ. ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಜಮಾದ ರೂ.2000 ನೆರವು ಮೊತ್ತವನ್ನು ಗ್ರಾಮದಲ್ಲಿನ ಶ್ರೀ ರೇಣುಕಾದೇವಿ ಎಲ್ಲಮ್ಮನ ದೇವಸ್ಥಾನ ಕಟ್ಟಡ ಕಾಮಗಾರಿಗೆ ದೇಣಿಗೆಯಾಗಿ ನೀಡುವ ನಿರ್ಧಾರವನ್ನು ಗ್ರಾಮ ಮಹಿಳೆಯರು ಕೈಗೊಂಡಿದ್ದಾರೆ.

ಗ್ರಾಮದ ಎಲ್ಲಾ ಫಲಾನುಭವಿಗಳು ತಮ್ಮ ಖಾತೆಗೆ ಜಮಾ ಆದ ಮೊತ್ತವನ್ನು ಸ್ವಯಂಪ್ರೇರಿತವಾಗಿ ದೇವಸ್ಥಾನದ ಅಭಿವೃದ್ಧಿಗೆ ಸಮರ್ಪಿಸಿದ್ದು, ಗ್ರಾಮದಲ್ಲಿ ಭಕ್ತಿಭಾವ ಮತ್ತು ಏಕತೆ ಮೆರೆಯಲಾಗಿದೆ. ಮಹಿಳೆಯರ ಈ ತೀರ್ಮಾನಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ದೊಡ್ಡ ಮಟ್ಟದ ಬೆಂಬಲ ಸಿಕ್ಕಂತಾಗಿದೆ.

ಗ್ರಾಮದ ಹಿರಿಯರು ಹಾಗೂ ಯುವಕರು ಮಹಿಳೆಯರ ಈ ದಾನಶೀಲತೆಯನ್ನು ಶ್ಲಾಘಿಸಿದ್ದು, ಗ್ರಾಮಾಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಮಹಿಳೆಯರ ಪಾತ್ರ ಮತ್ತಷ್ಟು ಬಲವಾಗುತ್ತಿರುವುದನ್ನು ಇದು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ದೇವಸ್ಥಾನ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಗ್ರಾಮ ಸಮಿತಿ ತಿಳಿಸಿದೆ.

ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಗದಗ ಜಿಲ್ಲೆಯ ಕಿರಣ್ ಕುಮಾರ್ ಕಟಗಿ ಆಯ್ಕೆ

0

ಗದಗ: ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ನಡೆದ ಚುನಾವಣಾ ಸಂದರ್ಭಗಳು ಹಾಗೂ ವಿವಿಧ ಜಾತ್ರೆ–ಹಬ್ಬಗಳ ಬಂದೋಬಸ್ತ್ ಕರ್ತವ್ಯಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಶ್ರೇಷ್ಠ ಸೇವೆ ಸಲ್ಲಿಸಿದ್ದಕ್ಕಾಗಿ ೨೦೨೫ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಗದಗ ಜಿಲ್ಲಾ ಬೋಧಕರು ಕಿರಣ್ ಕುಮಾರ್ ಕಟಗಿ ಅವರನ್ನು ಕರ್ನಾಟಕ ಸರ್ಕಾರ ಆಯ್ಕೆ ಮಾಡಿದೆ.

ಚುನಾವಣೆಗಳಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಕಾನೂನು–ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ಅವರು ತೋರಿದ ನಿಷ್ಠೆ, ಜವಾಬ್ದಾರಿ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಸಮರ್ಥ ನಿರ್ವಹಣೆ ಗಮನಾರ್ಹವಾಗಿದೆ. ವಿವಿಧ ಜಾತ್ರೆ ಹಾಗೂ ಹಬ್ಬಗಳ ವೇಳೆ ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಮತ್ತು ಪೊಲೀಸ್ ಇಲಾಖೆಯೊಂದಿಗೆ ಪರಿಣಾಮಕಾರಿ ಸಹಕಾರ ನೀಡುವಲ್ಲಿ ಅವರ ಸೇವೆ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಾಧನೆಗೆ ಜಿಲ್ಲಾ ಸಮದೇಶಕರು, ಗೃಹರಕ್ಷಕ ದಳದ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಕಿರಣ್ ಕುಮಾರ್ ಕಟಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಜಿಲ್ಲೆಯ ಗೃಹರಕ್ಷಕ ದಳದ ಪರವಾಗಿ ಈ ಗೌರವ ದೊರೆತಿರುವುದು ಹೆಮ್ಮೆಯ ವಿಷಯವಾಗಿದ್ದು, ಇತರರಿಗೆ ಪ್ರೇರಣೆಯಾಗಿದೆ.

ತಂದೆ-ತಾಯಿಯನ್ನು ವಾತ್ಸಲ್ಯದಿಂದ ನೋಡಿಕೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಯಿಯ ಪ್ರೀತಿಗೆ ಬೆಲೆ ಕಟ್ಟಲಾಗದು. ಹೀಗಾಗಿ ಪ್ರತಿಯೊಬ್ಬರೂ ತಮ್ಮ ತಂದೆ-ತಾಯಿಯನ್ನು ಪ್ರೀತಿ, ವಾತ್ಸಲ್ಯದಿಂದ ನೋಡಿಕೊಳ್ಳಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಹೊರವಲಯದಲ್ಲಿ ಗ್ರಾಮ ಗಂಗೋತ್ರಿ ಆವರಣದಲ್ಲಿರುವ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಲ್ಲಿ ಅವ್ವ ಸೇವಾ ಟ್ರಸ್ಟ್ ಮಾತೋಶ್ರೀ ಗಂಗವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ರಾಜ್ಯ ಮಟ್ಟದಲ್ಲಿ ಮಹಿಳಾ ಪತ್ರಕರ್ತರಿಗೆ ಸ್ಥಾಪಿಸಿರುವ ‘ದತ್ತಿ ನಿಧಿ’ ಪ್ರಶಸ್ತಿ ಪ್ರದಾನ ಹಾಗೂ `ಗ್ರಾಮೀಣಾಭಿವೃದ್ಧಿಯಲ್ಲಿ ಪತ್ರಿಕೋದ್ಯಮದ ಪಾತ್ರ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರು ಪತ್ರಿಕೆಗಳ ಮೂಲಕ ಸಮಾಜದಲ್ಲಿ ಪರಿಣಾಮ ಬೀರುತ್ತಾರೆ. ಹೀಗಾಗಿ ಪತ್ರಿಕೆಗಳ ವರದಿ, ಮಾಹಿತಿ ಹಾಗೂ ಸಮಾಜದಲ್ಲಿ ಅತ್ಯುತ್ತಮ ಸೇವೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ. ಇದಕ್ಕೊಂದು ಪ್ರತ್ಯೇಕ ಸಮಿತಿ ರಚಿಸಿದ್ದೇವೆ. ನಮ್ಮ ತಾಯಿಯ ಸ್ಮರಣೆಯ ಹಿನ್ನೆಲೆಯಲ್ಲಿ ಪ್ರತಿವರ್ಷ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದ ಪತ್ರಿಕಾ ಭವನದ ಮೊದಲ ಮಹಡಿಗೆ ಐದು ಲಕ್ಷ ರೂ. ಅನುದಾನ ನೀಡಲಾಗುವುದು ಎಂದರು.

ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಮಾತನಾಡಿ, ಅವ್ವನ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ. ಎಷ್ಟೇ ದೊಡ್ಡ ಸ್ಥಾನಕ್ಕೇರಲಿ, ತಾಯಿಗಿಂತ ದೊಡ್ಡದು ಯಾವುದೂ ಇಲ್ಲ. `ಅವ್ವ’ ನಮ್ಮೆಲ್ಲರ ಸಾಧನೆ, ಯಶಸ್ಸಿಗೆ ಸ್ಫೂರ್ತಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾಧ್ಯಕ್ಷ ರಾಜು ಎಂ.ಹೆಬ್ಬಳ್ಳಿ ಮಾತನಾಡಿ, ಸಚಿವರಾದ ಎಚ್.ಕೆ. ಪಾಟೀಲರು ಗದಗದಲ್ಲಿ ಕರ್ನಾಟಕದಲ್ಲಿಯೇ ಮಾದರಿ ಎನ್ನುವ ರೀತಿ ಪತ್ರಿಕಾ ಭವನ ನಿರ್ಮಾಣ ಮಾಡಿದ್ದಾರೆ. ಇದೀಗ ಮೊದಲ ಮಹಡಿಗೆ ಸಭಾಪತಿಗಳು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಮತ್ತು ಕೆ.ವಿ. ಪ್ರಭಾಕರ ಅವರು ಮುಖ್ಯಮಂತ್ರಿಗಳ ಮೂಲಕ ವಿಶೇಷ ಅನುದಾನ ಕೊಡಿಸುವುದರೊಂದಿಗೆ ಜಿಲ್ಲೆಯ ಕ್ಷೇಮಾಭಿವೃದ್ಧಿ ನಿಧಿಗೆ ಅನುದಾನ ಕೊಡಿಸುವಂತೆ ಮನವಿ ಮಾಡಿದರು.

ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕುಲಪತಿ (ಪ್ರ) ಹಾಗೂ ಕುಲಸಚಿವ ಪ್ರೊ. ಸುರೇಶ ನಾಡಗೌಡರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಅವ್ವ ಸೇವಾ ಟ್ರಸ್ಟ್ ಜಿಲ್ಲಾ ಸಂಚಾಲಕ ಬಸವರಾಜ ಧಾರವಾಡ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರು, ಕಾ.ನಿ.ಪ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಅರುಣಕುಮಾರ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ ಸೇರಿದಂತೆ ಸಂಘದ ಪದಾಧಿಕಾರಿಗಳು, ಜಿಲ್ಲೆಯ ಪತ್ರಕರ್ತರು, ವಿದ್ಯಾರ್ಥಿಗಳು ಇದ್ದರು.

ತನುಜಾ ನಾಯಕಗೆ ‘ದತ್ತಿ ನಿಧಿ’ ಪ್ರಶಸ್ತಿ

ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ವತಿಯಿಂದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ಸ್ಥಾಪಿಸಿರುವ ದತ್ತಿ ನಿಧಿಯ 2025-26ನೇ ಸಾಲಿನ ಪ್ರಶಸ್ತಿಯನ್ನು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಹಿರಿಯ ಉಪಸಂಪಾದಕಿ ತನುಜಾ ನಾಯಕ ಅವರಿಗೆ ನೀಡಿ ಗೌರವಿಸಲಾಯಿತು.

ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯ ವಿತರಿಸಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯು ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷ ಅಶೋಕ್ ಮಂದಾಲಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ಮಾತನಾಡಿದ ಅಶೋಕ್ ಮಂದಾಲಿ, ಗದಗ ತಾಲೂಕಿನ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅಕ್ಟೋಬರ್‌ನಿಂದ ನವೆಂಬರ್ 2025ರವರೆಗೆ 79605 ಅರ್ಜಿಗಳು ನೋಂದಣಿಯಾಗಿದ್ದು, 79179 ಫಲಾನುಭವಿಗಳಿಗೆ ಒಟ್ಟು 31.66 ಕೋಟಿ ರೂ. ಡಿಬಿಟಿ ಮೂಲಕ ಪಾವತಿಸಲಾಗಿದೆ ಎಂದು ತಿಳಿಸಿದ ಅವರು, ಬಾಕಿ ಇರುವ ಅರ್ಜಿಗಳನ್ನು ಶೀಘ್ರವೇ ಪರಿಶೀಲಿಸಿ ಅರ್ಹರಿಗೆ ಸಕಾಲದಲ್ಲಿ ಹಣ ಬಿಡುಗಡೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಯುವನಿಧಿ ಯೋಜನೆಯಡಿಯಲ್ಲಿ ಡಿಸೆಂಬರ್ 2025ರವರೆಗೆ 2,594 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, 1,081 ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗಿದೆ. ಉಳಿದ 1,513 ಅಭ್ಯರ್ಥಿಗಳು ಯೋಜನೆಯ ಷರತ್ತುಗಳ ಪ್ರಕಾರ ಹಂತ ಹಂತವಾಗಿ ಅರ್ಹರಾಗಲಿದ್ದಾರೆ ಎಂದು ವಿವರಿಸಿದರು.

ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಗದಗ ಗ್ರಾಮೀಣ ಭಾಗದಲ್ಲಿ ಜನವರಿ 2026ರವರೆಗೆ 1,80,659 ಸದಸ್ಯರಿಗೆ ಒಟ್ಟು 7,405.80 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ. ಗದಗ ನಗರ ಭಾಗದಲ್ಲಿ 1,33,542 ಸದಸ್ಯರಿಗೆ 5,240.95 ಕ್ವಿಂಟಲ್ ಅಕ್ಕಿ ವಿತರಣೆ ಮಾಡಲಾಗಿದೆ. ಯಾವುದೇ ಅರ್ಹರು ಸೌಲಭ್ಯದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಗದಗ ಗ್ರಾಮೀಣ ಭಾಗದಲ್ಲಿ 53,122 ಸ್ಥಾವರಗಳು ಅರ್ಹರಾಗಿದ್ದು, 52,951 ಸ್ಥಾವರಗಳು ನೋಂದಣಿಯಾಗಿವೆ. ಉಳಿದ ಅರ್ಹ ಗ್ರಾಹಕರನ್ನೂ ಶೀಘ್ರ ನೋಂದಣಿ ಮಾಡಿಸಿ ಯೋಜನೆಯ ಸದುಪಯೋಗ ಪಡೆಯುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಈಶ್ವರ ಹುಣಿಸಿಕಟ್ಟಿ, ಶರೀಫ ಬಿಳೆಎಲಿ, ತಾಲೂಕು ಮಟ್ಟದ ಗ್ಯಾರಂಟಿ ಸಮಿತಿಯ ಸದಸ್ಯರುಗಳಾದ ಸಾವಿತ್ರಿ ಹೂಗಾರ, ಸಂಗು ಕರೆಕಲಮಟ್ಟಿ, ಸಂಗಮೇಶ ಎಂ.ಹಾದಿಮನಿ, ರಮೇಶ್ ಹೊನ್ನಿಕಾಯ್ಕರ, ದೇವರಡ್ಡಿ ಬಿ.ತಿರ್ಲಾಪುರ, ಗಣೇಶ್ ಸಿಂಗ್ ಮಿಟಾಡೆ, ಮಲ್ಲಪ್ಪ ಎಚ್.ಬಾರಕೇರ, ಭಾಷಾ ಮಲ್ಲಸಮುದ್ರ ಹಾಗೂ ಮಲ್ಲಯ್ಯ ಕೊರವನವರ ಉಪಸ್ಥಿತರಿದ್ದರು.

ಶಕ್ತಿ ಯೋಜನೆ ಪ್ರಗತಿ ಕುರಿತು ವಿವರಿಸಿ, ಗದಗ ಘಟಕದಲ್ಲಿ 11-06-2023ರಿಂದ 24-02-2026ರವರೆಗೆ 2.85 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದು, 89.23 ಕೋಟಿ ರೂ ಮೌಲ್ಯದ ಉಚಿತ ಟಿಕೆಟ್ ವಿತರಿಸಲಾಗಿದೆ. ಬೆಟಗೇರಿ ಘಟಕದಲ್ಲಿ 1.33 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, 92.63 ಕೋಟಿ ರೂ ಮೌಲ್ಯದ ಟಿಕೆಟ್ ವಿತರಣೆಯಾಗಿದೆ ಎಂದು ಅಶೋಕ್ ಮಂದಾಲಿ ತಿಳಿಸಿದರು.

ಪತ್ರಿಕೋದ್ಯಮದ ಕನ್ನಡಿಯಲ್ಲಿ ಭಾರತದ ಹಳ್ಳಿಗಳು ಕಾಣಿಸಬೇಕು

0

ವಿಜಯಸಾಕ್ಷಿ ಸುದ್ದಿ, ಗದಗ: ತಮ್ಮ ಸುಖ ತ್ಯಾಗ ಮಾಡಿದ ತಾಯಿ-ತಂದೆ ವೃದ್ಧಾಶ್ರಮ ಕಾಣುವಂತಾಗಿರುವುದು ಬೇಸರದ ಸಂಗತಿ. ಆದರೆ ಬಸವರಾಜ ಹೊರಟ್ಟಿ ಅವರು ತಾಯಿಯ ಹೆಸರಲ್ಲಿ ಅವ್ವ ಸೇವಾ ಟ್ರಸ್ಟ್ ಸ್ಥಾಪಿಸಿ ಆ ಮೂಲಕ ಸಮಾಜದಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಕಾರಣೀಕರ್ತರಾಗಿರುವುದು ಮಾದರಿಯಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಶ್ಲಾಘಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದಲ್ಲಿ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ಮಾತೋಶ್ರೀ ಗಂಗವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ಸ್ಥಾಪಿಸಿರುವ 2025ನೇ ಸಾಲಿನ ‘ದತ್ತಿ ನಿಧಿ’ ಪ್ರಶಸ್ತಿಯನ್ನು ನಗರದ ಹೊರವಲಯದಲ್ಲಿರುವ ಗ್ರಾಮ ಗಂಗೋತ್ರಿ ಆವರಣದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತೆ ತನುಜಾ ನಾಯಕ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.

ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಈ ಕಾರ್ಯಕ್ರಮದ ನೈತಿಕ ಶಕ್ತಿಯಾಗಿದ್ದಾರೆ. ಈ ತಾಯಿಯ ಕಾಳಜಿ, ಸಂಸ್ಕಾರ ಮತ್ತು ಕನವರಿಕೆಗಳನ್ನು ಅಕ್ಷರಕ್ಕೆ ಇಳಿಸುತ್ತಾ ಇವರ ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವ ಸುನಂದಾ ನಾಯಕ ಅವರ ಆಯ್ಕೆ ಅತ್ಯಂತ ಸೂಕ್ತವಾಗಿದೆ. ಇವತ್ತಿನ ಈ ಕಾರ್ಯಕ್ರಮವೇ ಅವ್ವ ಗುರುವ್ವ ಅವರ ಸಂಸ್ಕಾರ ಮತ್ತು ಚೈತನ್ಯದ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರ ನೋಟು ನಿಷೇಧ ಜಾರಿಗೆ ತಂದಾಗ ನಗರ ಕೇಂದ್ರಿತ ಆರ್ಥಿಕತೆ, ದುಡಿಮೆ ಎಲ್ಲಾ ನೆಲಕಚ್ಚಿತು. ಆದರೆ, ಇಡೀ ದೇಶದ ಆರ್ಥಿಕತೆ ಪೂರ್ತಿ ನೆಲ ಕಚ್ಚದಂತೆ ಕಾಪಾಡಿದ್ದು ನಮ್ಮ ಗ್ರಾಮೀಣ ಆರ್ಥಿಕತೆ. ಸಾಸಿವೆ ಡಬ್ಬಿ, ಎಲೆ ಅಡಿಕೆ ಚೀಲದಲ್ಲಿ ಗ್ರಾಮೀಣ ಮಹಿಳೆಯರು ಕಾಪಿಡುವ ಉಳಿತಾಯ ಮಾಡುವ ಹಣ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳ ಬದುಕಿಗೆ ಆಸರೆ ಆಗಿದ್ದನ್ನು ನಾವು ನೆನಪಿಸಿಕೊಳ್ಳಬೇಕು. ಹೀಗಾಗಿ ಭಾರತದ ಗ್ರಾಮೀಣಾಭಿವೃದ್ಧಿಗೆ ಪತ್ರಿಕೋದ್ಯಮ ಸೇತುವೆಯಾಗಿ ಕೆಲಸ ಮಾಡಬೇಕಿದೆ ಎಂದರು.

ಮುಖ್ಯಮಂತ್ರಿಗಳು ಯಾವುದೇ ಜಿಲ್ಲೆಯ ಕೆಡಿಪಿ ಸಭೆಗಳನ್ನು ನಡೆಸುವಾಗ ಆಯಾ ಜಿಲ್ಲೆಗಳ ಗ್ರಾಮೀಣ ಬದುಕಿನ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವ ವರದಿಗಳನ್ನು ಮೊದಲು ಗಮಿಸುತ್ತಾರೆ. ಕೊರತೆಗಳ ಬಗ್ಗೆ ವರದಿಯಾಗಿದ್ದರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಳ್ಳುವುದನ್ನು ನೀವೂ ಗಮನಿಸಿರುತ್ತೀರಿ. ಕಲುಷಿತ ನೀರು ಕುಡಿದು ಸಾವನ್ನಪ್ಪಿದ ವರದಿಗಳು ಸರ್ಕಾರವನ್ನು ಎಚ್ಚರಿಸಿವೆ. ಬೆಳೆ ರೋಗದ ಬಗ್ಗೆ ಬಂದ ವರದಿಗಳು ಸಾವಿರಾರು ರೈತ ಕುಟುಂಬಗಳಿಗೆ ಪರಿಹಾರ ಒದಗಿಸಲು ನೆರವಾಗಿವೆ ಎಂದರು.

ಪತ್ರಿಕೋದ್ಯಮವು ಸಮಾಜದ ಕನ್ನಡಿಯಾಗಿದ್ದರೆ, ಆ ಕನ್ನಡಿಯಲ್ಲಿ ಭಾರತದ ಶೇ. 70 ಜನಸಂಖ್ಯೆ ಇರುವ ಹಳ್ಳಿಗಳು ಕಾಣಿಸಬೇಕು. ಹೀಗಾಗಿ ಇಂಥಾ ವಿಶ್ಲೇಷಣೆಗಳು ಜನರ ಧ್ವನಿಯಾಗಿ ಗ್ರಾಮೀಣ ಭಾರತವನ್ನು ಬೆಳೆಸಬೇಕು. ಜೊತೆಗೆ ಹಳ್ಳಿಗಳ ಕಲೆ, ಸಂಸ್ಕೃತಿ, ಭಾಷೆ ಮತ್ತು ಅಲ್ಲಿನ ಜನರ ದೈನಂದಿನ ಹೋರಾಟಗಳಿಗೂ ಕನ್ನಡಿ ಹಿಡಿಯಬೇಕು. ಈ ಕನ್ನಡಿಯಲ್ಲಿ ವಿಧಾನಸೌಧದಲ್ಲಿ ಕುಳಿತಿರುವ ಅಧಿಕಾರಿಗಳು ಮುಖ ನೋಡಿಕೊಳ್ಳಬೇಕು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾಧ್ಯಕ್ಷ ರಾಜು ಎಂ.ಹೆಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಭಾಪತಿ ಬಸವರಾಜ ಹೊರಟ್ಟಿ, ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕುಲಪತಿ (ಪ್ರ) ಹಾಗೂ ಕುಲಸಚಿವ ಪ್ರೊ. ಸುರೇಶ ನಾಡಗೌಡರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ ಬಿ.ಬಿ. ಅಸೂಟಿ, ಅವ್ವ ಸೇವಾ ಟ್ರಸ್ಟ್ ಜಿಲ್ಲಾ ಸಂಚಾಲಕ ಬಸವರಾಜ ಧಾರವಾಡ, ಪ್ರಶಸ್ತಿ ಪುರಸ್ಕೃತ ತನುಜಾ ನಾಯಕ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರು, ಕಾ.ನಿ.ಪ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಅರುಣಕುಮಾರ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ ಸೇರಿದಂತೆ ಸಂಘದ ಪದಾಧಿಕಾರಿಗಳು, ಜಿಲ್ಲೆಯ ಪತ್ರಕರ್ತರು, ವಿದ್ಯಾರ್ಥಿಗಳು ಇದ್ದರು.

ಆದರ್ಶಪ್ರಾಯ ಅವ್ವನ ಹೆಸರಿನ ಪ್ರಶಸ್ತಿಗೆ ತನುಜಾ ನಾಯಕ ಅವರನ್ನು ಆಯ್ಕೆ ಮಾಡಿರುವುದು ಹೆಚ್ಚು ಸೂಕ್ತವಾಗಿದೆ. ಮಹಿಳಾ ಸಂವೇದನೆ, ಕೌಟುಂಬಿಕ ಮೌಲ್ಯಗಳು, ಸಾಮಾಜಿಕ ಜಾಗೃತಿ ಮತ್ತು ಜೀವನ ಪ್ರೀತಿಯನ್ನು ಸಾರುವಂತಹ ಲೇಖನಗಳನ್ನು ನಿರಂತರವಾಗಿ ಬರೆಯುತ್ತಿರುವ ತನುಜಾ ನಾಯಕ ಅವರ ಸಾಮಾಜಿಕ ನೋಟ ಇವತ್ತಿನ ಕಿರಿಯ ವೃತ್ತಿ ಬಾಂಧವರಿಗೆ ಮಾದರಿಯಾಗಿದ್ದಾರೆ.

  • ಕೆ.ವಿ. ಪ್ರಭಾಕರ.
    ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು.

ಚಾಣಕ್ಯರ ದೃಷ್ಟಿಯಲ್ಲಿ ಗೌರವ ಕಳೆದುಕೊಳ್ಳುವ 3 ಮುಖ್ಯ ಅಭ್ಯಾಸಗಳು!

0

ಪ್ರತಿಯೊಬ್ಬರು ಸಮಾಜದಲ್ಲಿ ಗೌರವವನ್ನು ಪಡೆಯಲು, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಬಯಸುತ್ತಾರೆ. ಆದರೆ ಈ ಗೌರವವನ್ನು ಗಳಿಸುವುದು ಎಷ್ಟು ಕಷ್ಟವೋ, ಅದನ್ನು ಕಾಪಾಡಿಕೊಳ್ಳುವುದು ಸಹ ಅಷ್ಟೇ ಕಷ್ಟವಾಗಿದೆ ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಕೆಲವೊಮ್ಮೆ ಕೆಲವರು ತಮ್ಮ ಕೆಟ್ಟ ಅಭ್ಯಾಸಗಳಿಂದಲೇ ತಮ್ಮ ಗೌರವ ಮತ್ತು ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾರೆ.

ಆಚಾರ್ಯ ಚಾಣಕ್ಯರು ಗಮನಿಸುತ್ತಾರೆ, ಅತಿಯಾಗಿ ಮಾತನಾಡುವುದು, ಎಲ್ಲೆಡೆ ಯೋಚಿಸದೆ ವೈಯಕ್ತಿಕ ವಿಷಯಗಳು ಅಥವಾ ದೌರ್ಬಲ್ಯಗಳನ್ನು ಬಹಿರಂಗಪಡಿಸುವುದು ವ್ಯಕ್ತಿಯ ಗೌರವವನ್ನು societyಯಲ್ಲಿ ಹಾಳು ಮಾಡುತ್ತದೆ. ಹಿತಮಿತವಾಗಿ, ಬುದ್ಧಿವಂತಿಕೆಯಿಂದ ಮಾತನಾಡುವವರು ಮಾತ್ರ ಸಮಾಜದಲ್ಲಿ ಗೌರವಾನ್ವಿತರಾಗುತ್ತಾರೆ.

ಎಲ್ಲರನ್ನೂ ಮೆಚ್ಚಿಸಲು ಎಲ್ಲವನ್ನೂ ಮರೆತುಬಿಡುವುದು ಮತ್ತು ಸ್ವಾಭಿಮಾನವನ್ನು ತಳ್ಳುವುದು ಕೂಡ ಗೌರವಕ್ಕೆ ಹಾನಿ ಮಾಡುತ್ತದೆ. ಯಾರನ್ನಾದರೂ ಖಂಡಿಸದೇ ಎಲ್ಲರಿಗೂ “ಹೌದು” ಹೇಳುವವರನ್ನು society ಗಂಭೀರವಾಗಿ ಪರಿಗಣಿಸುವುದಿಲ್ಲ.

ಕೆಟ್ಟವರ ಸಹವಾಸ ಕೂಡ ವ್ಯಕ್ತಿಯ ಗೌರವಕ್ಕೆ ನಾಶಕಾರಿಯಾಗಿದೆ. ನಕಾರಾತ್ಮಕ, ದುಷ್ಟ ಸ್ವಭಾವದ ಜನರ ಜೊತೆ ಅತಿಯಾದ ಸ್ನೇಹ ಅಥವಾ ಸಹವಾಸ ಮಾಡುವವರು ಕ್ರಮೇಣ ತಮ್ಮ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ, ಸದಾ ಒಳ್ಳೆಯವರ ಜೊತೆ ಸಂಬಂಧವನ್ನು ಬೆಳೆಸುವುದು ಮತ್ತು ಕೆಟ್ಟ ಚಟಗಳು, ದುಷ್ಕಾರ್ಯಗಳಿಂದ ದೂರವಿರುವುದು ಬಹಳ ಮುಖ್ಯ.

ಗೌರವ ಕೇವಲ ಗಳಿಸುವುದಲ್ಲ, ಕಾಪಾಡಿಕೊಳ್ಳುವುದೂ ಅತಿ ಮಹತ್ವದ ಕೆಲಸ. ಮಾತು, ಸಂಬಂಧಗಳು, ಅಭ್ಯಾಸಗಳು – ಎಲ್ಲವೂ ವ್ಯಕ್ತಿಯ ಗೌರವವನ್ನು ರೂಪಿಸುತ್ತವೆ.

ಫೆ. 28ರಂದು ಹಿಂದೂ ಸಮಾಜೋತ್ಸವ, ಶೋಭಾಯಾತ್ರೆ

0

ವಿಜಯಸಾಕ್ಷಿ ಸುದ್ದಿ, ಗದಗ: ಹಿಂದೂ ಹಬ್ಬಗಳು ಹಾಗೂ ಮಹಾಪುರುಷರ ಜಯಂತ್ಯುತ್ಸವ ಆಚರಣೆ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸುವ ಮನಸ್ಥಿತಿ ದೇಶದಲ್ಲಿ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಾತಿ, ಮತ, ಪಂಥ, ಪ್ರಾಂತಗಳನ್ನು ಬದಿಗಿರಿಸಿ ಸಮಸ್ತ ಹಿಂದೂ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಫೆ. 28ರ ಶನಿವಾರ ಗದಗ ನಗರದಲ್ಲಿ ಭವ್ಯ ಹಿಂದೂ ಸಮಾಜೋತ್ಸವವನ್ನು ಆಯೋಜಿಸಲಾಗಿದೆ ಎಂದು ಗದಗ ಶಿವಾನಂದ ಉಪನಗರ ಹಿಂದೂ ಸಮ್ಮೇಳನ ಸಮಿತಿ ಕಾರ್ಯದರ್ಶಿ ರಾಘವೇಂದ್ರ ಹಬೀಬ ಹೇಳಿದರು.

ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಇತ್ತೀಚಿನ ದಿನಗಳಲ್ಲಿ ಹಿಂದೂಗಳನ್ನು ವಿರೋಧಿಸುವ ಮತ್ತು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಸಮಸ್ತ ಹಿಂದೂಗಳು ನಾವೆಲ್ಲ ಒಂದು ಎಂದಾದಾಗ ಸದೃಢ ಸಮಗ್ರ ಭಾರತ ನಿರ್ಮಾಣ ಸಾಧ್ಯವಾಗಲಿದ್ದು, ಸಮಾವೇಶ ಇದಕ್ಕೆ ಪೂರಕವಾಗಲಿದೆ ಎಂದರು.

ಫೆ. 28ರ ಶನಿವಾರ ಮಧ್ಯಾಹ್ನ 3 ಗಂಟೆಗೆ ಗದಗ ನಗರದ ಮುಳಗುಂದ ರಸ್ತೆಯ ಶ್ರೀ ಅಂಬಾಭವಾನಿ ದೇವಸ್ಥಾನದಿಂದ ಬೃಹತ್ ಶೋಭಾಯಾತ್ರೆ ಪ್ರಾರಂಭಗೊಳ್ಳಲಿದ್ದು, ತಾಯಿ ಭಾರತಾಂಭೆಯ ಜೊತೆಯಲ್ಲಿ ಮಹಾಪುರುಷರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು ಶೋಭಾಯಾತ್ರೆಯಲ್ಲಿ ಇರಲಿವೆ. ಶೋಭಾಯಾತ್ರೆ ಮುಳಗುಂದನಾಕಾ, ತ್ರಿಕೂಟೇಶ್ವರ ದೇವಸ್ಥಾನ, ಜೋಡಮಾರುತಿ ದೇವಸ್ಥಾನ, ಪಟೇಲ ರಸ್ತೆ, ಬಸವೇಶ್ವರ ಸರ್ಕಲ್ ಮೂಲಕ ಸಭಾಸ್ಥಳ ವೀರಶೈವ ಜನರಲ್ ಲೈಬ್ರರಿ ಬಳಿ ಸಮಾರೋಪಗೊಳ್ಳಲಿದೆ.

ನಂತರ ಸಂಜೆ 6 ಗಂಟೆಗೆ ಜರುಗುವ ಹಿಂದೂ ಸಮಾಜೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದು, ದಿಕ್ಸೂಚಿ ಭಾಷಣವನ್ನು ಜಗದೀಶ ಕಾರಂತ ಮಾಡಲಿದ್ದು, ಸಮಸ್ತ ಹಿಂದೂ ಸಮಾಜ ಬಾಂಧವರು ಶೋಭಾಯಾತ್ರೆ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ ಎಂದರು.

ಈ ಸಂದರ್ಭದಲ್ಲಿ ಅರುಣ ವೆರ್ಣೇಕರ, ಸೂರಜ ನಾಯ್ಕರ, ರಾಮಚಂದ್ರ ಪಾಲನಕರ, ರತ್ನಾ ಕುರುಗೋಡ, ಅಶ್ವಿನಿ ಜಗತಾಪ ಮುಂತಾದವರಿದ್ದರು.

ಹಿಂದೂ ಸಮಾಜೋತ್ಸವದ ಭವ್ಯ ಶೋಭಾಯಾತ್ರೆಯಲ್ಲಿ ಸಹಕುಟುಂಬ ಪರಿವಾರದೊಡನೆ ಹಾಗೂ ಸಾಂಸ್ಕೃತಿಕ ಉಡುಗೆ-ತೊಡುಗೆ ತೊಟ್ಟು ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಳ್ಳಲಿದ್ದು, ಚಿಕ್ಕಮಕ್ಕಳು ಸ್ವಾತಂತ್ರ್ಯ ಹೋರಾಟಗಾರರು ಮಹಾಪುರುಷರ ವೇಷಭೂಷಣ ಧರಿಸಿ ಪಾಲ್ಗೊಳ್ಳಲಿದ್ದಾರೆ.

  • ಅಶ್ವಿನಿ ಜಗತಾಪ.

error: Content is protected !!