Home Blog

‘ಹಬ್ಬದ ಹೆಸರಿನಲ್ಲಿ ಹಿಂಸೆ’: ಹರಿಯಾಣದಲ್ಲಿ ಗೋವಿಗೆ ಮದ್ಯ ಕುಡಿಸಿದ ವಿಡಿಯೋ ವೈರಲ್

0

ಹರಿಯಾಣ: ಹೋಳಿ ಸಂಭ್ರಮದ ನಡುವೆ ಅಮಾನವೀಯ ಘಟನೆೊಂದು ಬೆಳಕಿಗೆ ಬಂದಿದೆ. ಹರಿಯಾಣದಲ್ಲಿ ಕೆಲವರು ಕುಡಿದ ಮತ್ತಿನಲ್ಲಿ ಗೋವಿಗೆ ಬಲವಂತವಾಗಿ ಮದ್ಯ ಕುಡಿಸಿ, ಬಳಿಕ ಅದರಿಂದ ಗಾಡಿ ಎಳೆಯಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಹಸುವಿನ ಬಾಯಿಯನ್ನು ಬಲವಂತವಾಗಿ ತೆರೆದು ಮದ್ಯ ಸುರಿಸುತ್ತಿರುವುದು ಕಂಡುಬರುತ್ತದೆ. ಇತರರು ಅದನ್ನು ವೀಕ್ಷಿಸುತ್ತಾ ನಗುತ್ತಿರುವ ದೃಶ್ಯವೂ ಗಮನ ಸೆಳೆಯುತ್ತಿದೆ. ಬಳಿಕ ಗಾಡಿಯ ಮೇಲೆ ಜನರು ನಿಂತುಕೊಂಡು ಹಸುವಿನಿಂದ ಬಂಡಿ ಎಳೆಯಿಸುವ ದೃಶ್ಯ ವೈರಲ್ ಆಗಿದೆ.

‘StreetdogsofBombay’ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೆಯಾಗಿರುವ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ.

ಹೋಳಿ ಹಬ್ಬವು ಒಳ್ಳೆಯದರ ಜಯದ ಸಂಕೇತ. ಮಾರ್ಚ್ 2ರಂದು ಹೋಳಿಕಾ ದಹನ್ ಹಾಗೂ ಮಾರ್ಚ್ 3ರಂದು ಬಣ್ಣಗಳ ಹಬ್ಬವಾಗಿ ಆಚರಿಸಲಾಗುತ್ತಿದೆ. ಗುಜಿಯಾ, ಮಾಲ್ಪುವಾ, ಥಂಡೈ ಮುಂತಾದ ಸಾಂಪ್ರದಾಯಿಕ ಆಹಾರಗಳೊಂದಿಗೆ ಸಂಭ್ರಮಿಸುವ ಹಬ್ಬದಲ್ಲಿ ಇಂತಹ ಪ್ರಾಣಿ ಹಿಂಸಾಚಾರ ನಡೆದಿರುವುದು ಸಮಾಜದಲ್ಲಿ ಆತಂಕ ಹುಟ್ಟಿಸಿದೆ.

ಪ್ರಾಣಿ ಹಿಂಸೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿದೆ.

ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ: ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹ

0

ಗಜೇಂದ್ರಗಡ: ತಾಲ್ಲೂಕಿನ ಗುಳಗುಳಿ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿದ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿವಿಧ ದಲಿತ ಸಂಘಟನೆಗಳು ಆರೋಪಿಗಳ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿವೆ.

ಆದಿಜಾಂಬವ ಯುವ ಬ್ರಿಗೇಡ್ ಬೆಳಗಾವಿ ವಿಭಾಗೀಯ ಸಂಚಾಲಕ ಮಂಜುನಾಥ ಎಂ. ಬುರಡಿ ಪ್ರತಿಕ್ರಿಯಿಸಿ, “ಡಾ. ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬರಿಗೂ ಆರಾಧ್ಯ ವ್ಯಕ್ತಿ. ಇಂತಹ ಮಹನೀಯರಿಗೆ ಅವಮಾನ ಮಾಡಿರುವುದು ಖಂಡನೀಯ. ತಪ್ಪಿತಸ್ಥರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಅಮಾನುಷ ಘಟನೆಗಳು ಮರುಕಳಿಸದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು,” ಎಂದು ಒತ್ತಾಯಿಸಿದರು.

ಎನ್. ಮೂರ್ತಿ ಬಣದ ಜಿಲ್ಲಾ ಅಧ್ಯಕ್ಷ ಡಿ.ಜಿ. ಕಟ್ಟಿಮನಿ ಮಾತನಾಡಿ, “ಅಂಬೇಡ್ಕರ್ ಅವರು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪ್ರತೀಕ. ದಲಿತಕೇರಿಯಲ್ಲಿ ನಡೆದಿರುವ ಈ ಕೃತ್ಯ ಮಾನವೀಯ ಮೌಲ್ಯಗಳಿಗೆ ವಿರುದ್ಧ. ಆರೋಪಿಗಳಿಗೆ ಉದಾಹರಣೀಯ ಶಿಕ್ಷೆ ಆಗಬೇಕು,” ಎಂದು ಹೇಳಿದರು.

ಘಟನೆ ತಿಳಿದ ತಕ್ಷಣ ತಹಶೀಲ್ದಾರ ಕಿರಣಕುಮಾರ್ ಕುಲಕರ್ಣಿ, ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ ವಿಜಯಕುಮಾರ್ ನಾಯಕ ಹಾಗೂ ಪಿಎಸ್‌ಐ ಪ್ರಕಾಶ್ ಡಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಸೋಮು ನಾಗರಾಜ್, ದುರುಗೇಶ್ ಹಿರೇಮನಿ, ಪುಂಡಲೀಕ್ ಮಾದರ, ಯಮನಪ್ಪ ಪುರ್ತಿಗೇರಿ, ಯಮನೂರಪ್ಪ ಅಬ್ಬಿಗೇರಿ, ಅಶೋಕ್ ಮಾದರ, ಹಣಮಂತ ಪೂಜಾರ್, ಮಹೇಶ ಕುರಬನಹಳ, ಭೀಮಪ್ಪ ದೊಡ್ಡಮನಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಇರಾನ್ ವಿರುದ್ಧ ಯುದ್ಧ ಇನ್ನೂ 4-5 ವಾರ ಮುಂದುವರಿಕೆ; ಶರಣಾಗದಿದ್ದರೆ ಭೀಕರ ದಾಳಿ – ಟ್ರಂಪ್ ಎಚ್ಚರಿಕೆ

0

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿದಂತೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಕಳೆದ ಐದು ವಾರಗಳಿಂದ ಇರಾನ್ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆದಿದ್ದು, ಈಗಾಗಲೇ ಕಾರ್ಯಾಚರಣೆ ಆರಂಭವಾಗಿದೆ. ಅಗತ್ಯವಿದ್ದರೆ ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.

ಇರಾನ್ ವಿರುದ್ಧದ ಈ ಯುದ್ಧ ಇನ್ನೂ ನಾಲ್ಕು ರಿಂದ ಐದು ವಾರಗಳವರೆಗೆ ಮುಂದುವರಿಯಲಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದರು. “ಇರಾನ್ ತನ್ನ ಶಸ್ತ್ರಾಸ್ತ್ರಗಳನ್ನು ಶರಣಾಗಿಸಬೇಕು. ಇಲ್ಲದಿದ್ದರೆ ಜಗತ್ತು ಹಿಂದೆಂದೂ ನೋಡಿರದ ಮಟ್ಟದ ಕಾರ್ಯಾಚರಣೆ ನಡೆಯಲಿದೆ,” ಎಂದು ಎಚ್ಚರಿಸಿದರು.

ಇರಾನ್ ಜಾಗತಿಕ ಭಯೋತ್ಪಾದನೆಯ ಪ್ರಾಯೋಜಕ ರಾಷ್ಟ್ರ ಎಂದು ಆರೋಪಿಸಿದ ಟ್ರಂಪ್, “ಇರಾನ್ ಅಮೆರಿಕದ ಮೇಲೆ ದಾಳಿ ಮಾಡಲು ಯತ್ನಿಸಿತ್ತು. ನಾನು ಜನರಲ್ ಸೊಲೈಮಾನಿಯನ್ನು ಕೊಂದೆ,” ಎಂದು ಹೇಳಿದರು. ಇತ್ತಿಚೆಗೆ ನಡೆದ ದಾಳಿಗಳಲ್ಲಿ ಇರಾನಿನ 10 ಯುದ್ಧನೌಕೆಗಳನ್ನು ನಾಶಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇರಾನ್ ಮಾಧ್ಯಮ ವರದಿ ಪ್ರಕಾರ, ದಾಳಿಗಳಲ್ಲಿ ಕನಿಷ್ಠ 555 ಜನರು ಸಾವನ್ನಪ್ಪಿದ್ದು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಿನಾಬ್‌ನಲ್ಲಿ ಬಾಲಕಿಯರ ಶಾಲೆಯ ಮೇಲೆ ನಡೆದ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಸುಮಾರು 115 ಜನರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಹೊರಬಂದಿದೆ.

ಇದಕ್ಕೆ ಪ್ರತಿಯಾಗಿ ಅಮೆರಿಕ ಸೇನೆ ಮೂರು ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ದೃಢಪಡಿಸಿದೆ.

ಇಸ್ರೇಲ್ ಹಾಗೂ ಹೆಜ್ಬೊಲ್ಲಾ ನಡುವಿನ ಸಂಘರ್ಷವೂ ತೀವ್ರಗೊಂಡಿದೆ. ಲೆಬನಾನ್ ದಕ್ಷಿಣ ಭಾಗದಲ್ಲಿ ಇಸ್ರೇಲಿ ದಾಳಿಯಿಂದ 31 ಮಂದಿ ಸಾವನ್ನಪ್ಪಿದ್ದು, 149 ಮಂದಿ ಗಾಯಗೊಂಡಿದ್ದಾರೆ.

ಇದೇ ವೇಳೆ ಯುಎಇಯ ದುಬೈ ಮತ್ತು ಅಬುಧಾಬಿಯಲ್ಲಿ ನಡೆದ ದಾಳಿಯಲ್ಲಿ ಒಬ್ಬ ಪಾಕಿಸ್ತಾನಿ, ಒಬ್ಬ ನೇಪಾಳಿ ಮತ್ತು ಒಬ್ಬ ಬಾಂಗ್ಲಾದೇಶಿ ಸೇರಿ ಮೂವರು ಮೃತಪಟ್ಟಿದ್ದಾರೆ.

ಯುದ್ಧದ ತೀವ್ರತೆಯನ್ನು ಹೆಚ್ಚಿಸುವ ಮುನ್ನವೇ ಟ್ರಂಪ್, “ಇರಾನಿನ ನಾಗರಿಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಮನೆಯೊಳಗೆ ಇರಬೇಕು,” ಎಂದು ಮನವಿ ಮಾಡಿದ್ದಾರೆ. ಇರಾನ್ ಶರಣಾಗುವವರೆಗೆ ದಾಳಿ ನಿಲ್ಲುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.

ಬೆಂಗಳೂರಿನ ಗಾಯತ್ರಿ ನಗರದ ಮನೆಯಲ್ಲಿ ಭೀಕರ ಅಗ್ನಿ ಅವಘಡ: ಮಹಿಳೆ ಸಾವು

ಬೆಂಗಳೂರು: ಬೆಂಗಳೂರು ನಗರದ ಗಾಯತ್ರಿ ನಗರದಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ 53 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

ಕಂಟ್ರ್ಯಾಕ್ಟರ್ ರಮೇಶ್ ಬಾಬು ಅವರ ನಾಲ್ಕು ಅಂತಸ್ತಿನ ಮನೆಯಲ್ಲಿ ಮೂರನೇ ಮಹಡಿಯ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅವಘಡದಲ್ಲಿ ರಮೇಶ್ ಬಾಬು ಅವರ ಪತ್ನಿ ಸವಿತಾ ದುರ್ಮರಣ ಹೊಂದಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಮೇಶ್ ಬಾಬು, ಅವರ ತಾಯಿ ಸಣ್ಣಮ್ಮ ಹಾಗೂ ಮಗನನ್ನು ರಕ್ಷಿಸಿದ್ದಾರೆ. ಗಾಯಗೊಂಡವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಎಸಿಪಿ ವೇಣುಗೋಪಾಲ್ ಹಾಗೂ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

“ಗುರಿ ಈಡೇರುವವರೆಗೆ ಯುದ್ಧ ನಿಲ್ಲಲ್ಲ” – ಇರಾನ್ ವಿರುದ್ಧ ಟ್ರಂಪ್ ಕಠಿಣ ಎಚ್ಚರಿಕೆ

0

ವಾಷಿಂಗ್ಟನ್: ಇರಾನ್ ವಿರುದ್ಧದ ಕಾರ್ಯಾಚರಣೆ ಗುರಿ ಈಡೇರುವವರೆಗೆ ನಿಲ್ಲುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಇನ್ನಷ್ಟು ಅಮೆರಿಕ ಸೈನಿಕರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಅವರು ತಿಳಿಸಿದ್ದಾರೆ.

ಟ್ರೂತ್ ಸೋಷಿಯಲ್ನಲ್ಲಿ ಹಂಚಿಕೊಂಡಿರುವ ವಿಡಿಯೋ ಸಂದೇಶದಲ್ಲಿ ಟ್ರಂಪ್, ಇರಾನ್ ವಿರುದ್ಧದ ಯುದ್ಧವನ್ನು “ಅಸ್ತಿತ್ವವಾದದ ಬೆದರಿಕೆ”ಗೆ ಪ್ರತಿಕ್ರಿಯೆ ಎಂದು ವಿವರಿಸಿದ್ದಾರೆ.

ಕ್ಷಿಪಣಿಗಳು ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಇರಾನ್ ಆಡಳಿತವು ಪ್ರತಿಯೊಬ್ಬ ಅಮೆರಿಕನ್ನಿಗೂ ಭೀಕರ ಅಪಾಯವೆಂದು ಅವರು ಆರೋಪಿಸಿದರು. ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನು ದೃಢಪಡಿಸಿರುವ ಟ್ರಂಪ್, “ಅವನು ಅನೇಕ ಅಮೆರಿಕನ್ನರು ಮತ್ತು ಮುಗ್ಧ ಜನರ ಸಾವಿಗೆ ಕಾರಣವಾದ ನೀಚ ವ್ಯಕ್ತಿ” ಎಂದು ಕಟುವಾಗಿ ಟೀಕಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ ಟ್ರಂಪ್ ಹೇಳಿಕೆ ಜಾಗತಿಕ ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಇರಾನ್–ಇಸ್ರೇಲ್ ಯುದ್ಧದ ಪರಿಣಾಮ: ಭಾರತೀಯರ ವಾಪಸಾತಿಗೆ ಇಂಡಿಗೋ 10 ವಿಶೇಷ ವಿಮಾನಗಳು ಜೆದ್ದಾಗೆ

0

ನವದೆಹಲಿ: ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತೀವ್ರಗೊಂಡಿರುವುದರಿಂದ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಕೇಂದ್ರ ಸರ್ಕಾರ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.

ನಾಗರಿಕ ವಿಮಾನಯಾನ ಸಚಿವಾಲಯದ ಮಾಹಿತಿ ಪ್ರಕಾರ, ಪರ್ಯಾಯ ವಾಯುಪ್ರದೇಶಗಳ ಮೂಲಕ ಭಾರತೀಯರನ್ನು ಕರೆತರಲು ಕ್ರಮ ಕೈಗೊಳ್ಳಲಾಗಿದೆ. IndiGo ಏರ್ಲೈನ್ಸ್‌ನ 10 ವಿಶೇಷ ವಿಮಾನಗಳು ಮಂಗಳವಾರ ಜೆದ್ದಾಗೆ ತೆರಳಿ ಭಾರತೀಯರನ್ನು ಕರೆತರಲಿವೆ.

ಜೆದ್ದಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಇಂಡಿಗೋ ಸಮನ್ವಯದಲ್ಲಿದ್ದು, ಯಾವ ವಾಯುಮಾರ್ಗದ ಮೂಲಕ ಸುರಕ್ಷಿತ ಕಾರ್ಯಾಚರಣೆ ನಡೆಸಬಹುದು ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ವಿಮಾನಗಳನ್ನು ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ನಿರ್ಬಂಧಿತ ವಾಯುಪ್ರದೇಶದ ಬದಲಿಗೆ ಪರ್ಯಾಯ ಮಾರ್ಗಗಳ ಮೂಲಕ ದೀರ್ಘ ಹಾಗೂ ಅತಿ ದೀರ್ಘ ದೂರದ ವಿಮಾನ ಸೇವೆಗಳನ್ನು ಹಂತ ಹಂತವಾಗಿ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ವಿಮಾನಗಳು ಮತ್ತು ಸಿಬ್ಬಂದಿಯ ಮರುಸ್ಥಾಪನೆ ಪ್ರಕ್ರಿಯೆಯೂ ಮುಂದುವರಿದಿದೆ.

ಭಾರತ ಮತ್ತು ಗಲ್ಫ್ ರಾಷ್ಟ್ರಗಳ ನಡುವೆ ಸಂಚರಿಸುವ ವಿದೇಶಿ ವಿಮಾನ ಸಂಸ್ಥೆಗಳೂ ಮಿತ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಪ್ರಯಾಣಿಕರಿಗೆ ಪಾರದರ್ಶಕ ಮಾಹಿತಿ ನೀಡುವುದು, ರೀಫಂಡ್ ಮತ್ತು ಮರುನಿಗದಿ ಸೌಲಭ್ಯ ಒದಗಿಸುವುದು ಸೇರಿದಂತೆ ಅಗತ್ಯ ಸೇವೆಗಳನ್ನು ಕಲ್ಪಿಸಲು ಸೂಚಿಸಲಾಗಿದೆ.

ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ತಮ್ಮ ವಿಮಾನಗಳ ಸ್ಥಿತಿಯನ್ನು ಸಂಬಂಧಿತ ಏರ್ಲೈನ್ಸ್‌ಗಳ ಅಧಿಕೃತ ಮೂಲಗಳಿಂದ ಪರಿಶೀಲಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.

ಈ ನಿರ್ಧಾರವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೈಗೊಳ್ಳಲಾಯಿತು. ಸಭೆಯಲ್ಲಿ ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಮಕ್ಕಳ ಭವಿಷ್ಯ ರೂಪಿಸಲು ಮುಂದಾಗಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಕ್ಷಕ ವೃತ್ತಿ ಬಹು ಪವಿತ್ರವಾದ ವೃತ್ತಿಯಾಗಿದ್ದು, ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ್ ಅಭಿಪ್ರಾಯಪಟ್ಟರು.

ಅವರು ಎಸ್‌ಟಿಪಿಎಂಬಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆದ 21ನೇ ವರ್ಷದ ವಾರ್ಷಿಕೋತ್ಸವ `ಏಕವಂಶೀಯತ: ಫೋಲ್ಡ್’ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ತಾಯಿ ಪಾರ್ವತಿ ಮಕ್ಕಳ ಬಳಗ ಸಂಸ್ಥೆಯ ಉಪಾಧ್ಯಕ್ಷೆ ಜಯಲಕ್ಷ್ಮಿ ಮಹಾಂತಶೆಟ್ಟರ ಹಾಗೂ ಕಾರ್ಯದರ್ಶಿ ಜಯಲಕ್ಷ್ಮಿ ಗಡ್ಡದೇವರಮಠ ಮಾತನಾಡಿ, ವಿದ್ಯಾರ್ಥಿಗಳು ಗುರು-ಹಿರಿಯರ ಮಾತುಗಳನ್ನು ಕೇಳಿ ಬದುಕಿನಲ್ಲಿ ಸನ್ಮಾರ್ಗದಲ್ಲಿ ಸಾಗಿ ಜೀವನದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ಸಾಗಬೇಕು. ಶ್ರಮಪಟ್ಟು ಓದಿ ಸಾಮಾನ್ಯರ ಗುಂಪಿನಿಂದ ಸಾಧಕರ ಗುಂಪಿಗೆ ಸೇರಬೇಕು. ಅದಕ್ಕಾಗಿ ಯೋಜನಾಬದ್ಧವಾಗಿ ರೂಪು-ರೇಷೆಗಳನ್ನು ಹಾಕಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಪಾಲಕ ಪ್ರತಿನಿಧಿಯಾಗಿ ವಿಜಯಾ ಕೆಂಚನಗೌಡ ಮಾತನಾಡಿದರು. ಮುಖ್ಯೋಪಾಧ್ಯಾಯ ಪ್ರಭುಗೌಡ ಯಕಿಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಸ್ವಾತಿ ಉದಯ ಪೈ ಶಾಲೆ ನಡೆದು ಬಂದ ದಾರಿ, ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಸಾಧನೆಯ ಕುರಿತು ವರದಿ ಮಂಡಿಸಿದರು.

ಸಂಸ್ಥೆಯ ಅಧ್ಯಕ್ಷೆ ಸುವರ್ಣ ಬಾಯಿಬಹದ್ದೂರ ದೇಸಾಯಿ, ಶಾರಕ್ಕಾ ಮಹಾಂತಶೆಟ್ಟರ, ರೋಹಿಣಿಬಾಯಿ ಬಹದ್ದೂರದೇಸಾಯಿ, ಇಸಿಓ ರಾಘವೇಂದ್ರ ಜೋಶಿ, ಸಿಆರ್‌ಪಿ ಶ್ರೀನಿವಾಸ್ ಮತ್ತೂರ, ಡಾ. ಶಿವಾನಂದ ಹೂವಿನ ಉಪಸ್ಥಿತರಿದ್ದರು.

ನಂತರ ಶಾಲಾ ವಿದ್ಯಾರ್ಥಿಗಳಿಂದ ಶಿವನ ಭಕ್ತಿಯ ಪರಿ, ಯಕ್ಷಗಾನ, ಮೋಹಿನಿ ಅಟ್ಟಂ, ಭರತನಾಟ್ಯದಂತಹ ನೃತ್ಯ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ದೇಸಾಯಿ, ರೂಪಾ ನವಲೆ, ವೀಣಾ ಜಾಮನೂರ, ಲೀಲಾವತಿ ಬೆಳಗಟ್ಟಿ, ಸಿಮ್ರಾನ ನಾಡಗೆರ, ಆಶಾ ಜಾದವ, ಪವಿತ್ರಾ ಕಾರಬಾರಿ, ಶಿವಯೋಗಿ ವಾಲಿಶೆಟ್ಟರ, ಶ್ವೇತಾ ಅರಳಿ ಸೇರಿದಂತೆ ಶಿಕ್ಷಕಿಯರು, ಸಿಬ್ಬಂದಿಗಳು, ಪಾಲಕರು ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಮಹಾರಾಜಪೇಟ ಸ್ವಾಗತಿಸಿದರು. ಮಂಜುಳಾ ಪಾಟೀಲ ನಿರೂಪಿಸಿದರು, ವಿನಾಯಕ್ ದೊಡ್ಡಮನಿ ವಂದಿಸಿದರು.

ಸಿ.ವಿ. ರಾಮನ್ ಅಪ್ರತಿಮ ವಿಜ್ಞಾನಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರಾಮನ್ ಪರಿಣಾಮದ ಮೂಲಕ ಜಗತ್ತಿನ ಗಮನ ಸೆಳೆದು ನೋಬಲ್ ಪಾರಿತೋಷಕಕ್ಕೆ ಪಾತ್ರರಾದ ಸರ್ ಸಿ.ವಿ. ರಾಮನ್ ಅಪ್ರತಿಮ ವಿಜ್ಞಾನಿ. ಅವರು ನಮ್ಮ ದೇಶದ ವೈಜ್ಞಾನಿಕ ಕಣ್ಮಣಿ ಎಂದು ಮುಖ್ಯ ಶಿಕ್ಷಕ ಮಂಜುನಾಥ ಗ್ರಾಮಪುರೋಹಿತ ಹೇಳಿದರು.

ಪಟ್ಟಣದ ಡಾ. ಕೆ.ಬಿ. ಧನ್ನೂರ ಪಿಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಲಾದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಸರ್ ಸಿ.ವಿ. ರಾಮನ್‌ರವರ ಬಾಲ್ಯ, ಜೀವನ, ನಡೆದು ಬಂದ ದಾರಿಯ ಬಗ್ಗೆ ವಿವರಿಸಿದ ಮಂಜುನಾಥ ಅವರು ಅವರ ಸಂಶೋಧನೆಗಳ ಪರಿಚಯ ಮಾಡಿಕೊಟ್ಟರು. ರಾಮನ್ ಪರಿಣಾಮದ ಮೂಲಕ ಅವರು ಹೇಗೆ ಜಗತ್ಪ್ರಸಿದ್ಧಿಯಾದರು ಎಂಬುದನ್ನು ವಿವರಿಸಿದರು.

ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಸುರೇಶ ಮಲ್ಲನಗೌಡರ ಮಾತನಾಡಿ, ನೀವು ನಿಮ್ಮಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಬಿಡುವಿನ ಸಮಯದಲ್ಲಿ ವೈಜ್ಞಾನಿಕ ಲೇಖನಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಎನ್.ಎಂ. ತಹಸೀಲ್ದಾರ, ವಿ.ಜೆ. ಜೋಗಿ, ಆರ್.ಜೆ. ನಾಗಠಾಣ, ಅಶ್ವಿನಿ ಹಡಪದ, ಕವಿತಾ, ಅಕ್ಷತಾ, ನಿರಂಜನ, ಪುಷ್ಪಾ ಹಿರೇವಡೆಯರ, ಎಂ.ವಿ. ವಾಲ್ಮೀಕಿ, ಬಿ.ಎಫ್. ನೀರಲಗಿ, ಎಂ.ಜಿ. ಮಸ್ಕಿ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮನುಕುಲಕ್ಕೆ ಶಾಂತಿ ಮಂತ್ರ ಕಲಿಸಿದವರು ಕನಕದಾಸರು

ವಿಜಯಸಾಕ್ಷಿ ಸುದ್ದಿ, ಗದಗ: ನಾಡಿನ ಪುಣ್ಯದ ಫಲವಾಗಿ ಕನಕದಾಸರು ಜನಿಸಿ ಬಂದಿದ್ದಾರೆ. ನೂರಾರು ದಾರ್ಶನಿಕರಲ್ಲಿ ಕನಕದಾಸರು ಎದ್ದು ಕಾಣುತ್ತಾರೆ ಎಂದು ಕನಕಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಸಾಹಿತಿಗಳಾದ ಡಾ. ಲಿಂಗದಳ್ಳಿ ಹಾಲಪ್ಪ ಹೇಳಿದರು.

ನಗರದ ಕನಕ ಭವನದಲ್ಲಿ ಬೆಂಗಳೂರಿನ ಶ್ರೀ ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿ ಆಯೋಜಿಸಿದ್ದ ಶ್ರೀ ಕನಕ ಸಾಹಿತ್ಯ ಸಂಭ್ರಮದ 100ನೇ ಉಪನ್ಯಾಸದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರೊ. ಸುಧಾ ಕೌಜಗೇರಿ ಮಾತನಾಡಿ, ಕನಕದಾಸರು ಸಾಹಿತ್ಯ ಕ್ಷೇತ್ರದಲ್ಲಿ ನಕ್ಷತ್ರವಾಗಿ ಬೆಳೆದವರು. 12ನೇ ಶತಮಾನದಲ್ಲಿ ಶರಣ ಸಾಹಿತ್ಯ ಬಂತು. ಕನಕದಾಸರು ಏಕಾಂಗಿಯಾಗಿ ಬೆಳೆದವರು. ಸಂತ, ಭಕ್ತ, ಕವಿ ಅಲ್ಲದೆ ಅವರೊಬ್ಬ ಮಹಾನ್ ಹೋರಾಟಗಾರರಾಗಿದ್ದಾರೆ. ಅವರ ಮುಂಡಿಗೆಗಳಿಗೆ ಈವರೆಗೂ ಉತ್ತರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ರುದ್ರಣ್ಣ ಗುಳಗುಳಿ ಅವರು ಮಾತನಾಡಿ, ಈ ಕಾರ್ಯಕ್ರಮ ಸಂಘಟಿಸುವ ಹಿಂದೆ ಸಾಕಷ್ಟು ಶ್ರಮವಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಕೈಜೋಡಿಸಿ ಕನಕದಾಸರ ಸಾಹಿತ್ಯವನ್ನು ಇನ್ನಷ್ಟು ಜನರಿಗೆ ಪರಿಚಯಿಸಬೇಕಾಗಿದೆ ಎಂದರು.

ಚಿಂತಕ ಮಂಜುನಾಥ ಹೊನ್ನನವರ ಮಾತನಾಡಿ, ದಿನನಿತ್ಯದ ಬದುಕಿನಲ್ಲಿ ಕನಕದಾಸರು ನೀಡಿದ ಜೀವನ ತತ್ವ, ಚಿಂತನೆ, ಜ್ಞಾನ ಹಸಿವಿನಿಂದ ಆತ್ಮಸ್ಥೈರ್ಯ ಬೆಳೆಯಲು ಸಾಧ್ಯ. ಇಡೀ ಜಗತ್ತಿನ ನ್ಯೂನತೆ ಕಿತ್ತಾಟವಾಗಿದೆ. ಹಾಗಾಗಿ ಅಹಂಕಾರ ಬಿಡಬೇಕು. ಮನುಕುಲಕ್ಕೆ ಶಾಂತಿ ಮಂತ್ರ ನೀಡಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ ಎಂದರು.

ಡಾ. ಹನಮಗೌಡ ಪಾಟೀಲ ಮಾತನಾಡಿ, ಕನಕ ಸಂಭ್ರಮ ಕುಟುಂಬ, ವಿಜ್ಞಾನ, ತಂತ್ರಜ್ಞಾನ ಆವಿಷ್ಕಾರ, ಧಾರ್ಮಿಕ ಪ್ರಜ್ಞೆ ವಾಸ್ತವಿಕ ಅಂಶಗಳನ್ನು ತಿಳಿಸಲು ಸಂಶೋಧಕರು ಮುಂದಾಗಬೇಕು. ಕನಕ ಸಂದೇಶ ಎಲ್ಲ ಮಾಧ್ಯಮಗಳನ್ನು ಬಳಸಿಕೊಂಡು ಜನರಿಗೆ ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುರೇಶ ಕೊಪ್ಪದ ಮಾತನಾಡಿ, ಈ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಸಮಾಜದ ಹಿರಿಯರು ಹಾಗೂ ಎಲ್ಲ ತಾಲೂಕಿನ ನೌಕರರ ಬಾಂಧವರು ಅಲ್ಲಲ್ಲಿ ಸಭೆ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಾಕಷ್ಟು ಶ್ರಮಪಟ್ಟಿದ್ದಾರೆ. ಅವರೆಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಅಧ್ಯಕ್ಷತೆ ವಹಿಸಿದ್ದರು. ವಾಸಣ್ಣ ಕುರಡಗಿ, ರವಿ ದಂಡಿನ, ಪ್ರಕಾಶ ಕರಿ ಮಾತನಾಡಿದರು. ವೇದಿಕೆ ಮೇಲೆ ರಾಜಶೇಖರ ಕಲ್ಲೂರ, ಡಿಡಿಪಿಐ ಆರ್.ಎಸ್. ಬುರಡಿ, ರಾಮಕೃಷ್ಣ ರೊಳ್ಳಿ, ನಿಂಗಪ್ಪ ಸವಣೂರ, ಮಹಾಂತೇಶ ನಿಟ್ಟಾಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ನಂತರ ಶ್ರದ್ಧಾ ಕಬಾಡಿ, ಇಷಾ ಗಣಾಚಾರಿ ಅವರಿಂದ ಭರತನಾಟ್ಯ ಜರುಗಿತು. ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ಹಂತದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಕನಕದಾಸರ ಸಾಹಿತ್ಯ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ 76ರಿಂದ 100ನೇ ಆನ್‌ಲೈನ್ ಗೂಗಲ್ ಮೀಟ್‌ನಲ್ಲಿ ಕನಕದಾಸರ ಸಾಹಿತ್ಯದ ಉಪನ್ಯಾಸ ನೀಡಿದವರಿಗೆ ಸನ್ಮಾನಿಸಲಾಯಿತು.

ಸಮಿತಿಯ ರಾಜ್ಯ ಸಮನ್ವಯಾಧಿಕಾರಿ ಕೃಷ್ಣ ಖಾನಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಮಾರುತಿ ಮಡ್ಡಿ ಸ್ವಾಗತಿಸಿದರು. ಆರ್.ಜಿ. ಕೊರ್ಲಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಕೆರಿ ವಂದಿಸಿದರು.

ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಪ್ರೊ. ಎಫ್.ಟಿ. ಹಳ್ಳಿಕೇರಿ ಮಾತನಾಡಿ, ಸಂಘಟನೆ ಶ್ರದ್ಧೆ, ಶ್ರಮದಿಂದ 100ನೇ ಮಾಲಿಕೆ ಸಾಧ್ಯವಾಗಿದೆ. ಗದಗ ಜಿಲ್ಲೆ ಹಾಲಮತ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ. 1920ರಲ್ಲಿ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರಿನಲ್ಲಿ ಟ್ರೇನಿಂಗ್ ಸೆಂಟರ್ ತೆರೆದಿದ್ದರು. ಹಾಲಮತ ಚರಿತ್ರೆಯನ್ನು ಬೆಳಕಿಗೆ ತಂದ ವಿ.ಆರ್. ಹನಮಂತಯ್ಯ ಅವರನ್ನು ಹಾಲುಮತ ಪಿತಾಮಹ ಎಂದು ಕರೆಯಬಹುದು. ಸಾಹಿತ್ಯ, ಸಮಾಜ ಬೆಳವಣಿಗೆ, ಡೊಳ್ಳಿನ ಹಾಡು ಸಂಗ್ರಹಿಸಿ ಸಂಪುಟ ಹೊರತರಬೇಕು. ಮನೆ ಮನೆಗೂ ಕನಕದಾಸರ ಸಾಹಿತ್ಯ ತಲುಪಿಸಬೇಕಾಗಿದೆ. ನಮ್ಮ ಆರಾಧ್ಯ ದೈವದ ಬಗೆಗೆ ಇರುವ ಹಲವು ಗೊಂದಲ ನಿವಾರಿಸಬೇಕಾಗಿದೆ ಎಂದರು.

ಲತಾ ಬೆಟಗೇರಿ ನಿಧನ: ನೇತ್ರದಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಕೆ.ಸಿ. ರಾಣಿ ರಸ್ತೆಯ ಸಾಯಿಬಾಬಾ ಮಂದಿರದ ಬಳಿಯ ನಿವಾಸಿ ಲತಾ ರವಿ ಬೆಟಗೇರಿ (ಕುಲಕರ್ಣಿ) ರವಿವಾರ ನಿಧನರಾದರು. ಮೃತರಿಗೆ ಪತಿ ಹಾಗೂ ಬಂಧು-ಬಳಗವಿದೆ.

ಗದಗ-ಬೆಟಗೇರಿ ಲಯನ್ಸ್ ಕ್ಲಬ್‌ನ ಪ್ರೇರಣೆಯಿಂದಾಗಿ ಕುಟುಂಬಸ್ಥರು ಮೃತರ ನೇತ್ರದಾನ ಮಾಡಲು ಒಪ್ಪಿಗೆ ಸೂಚಿಸಿದ್ದರನ್ವಯ ಗದಗ ಜಿಮ್ಸ್‌ನ ನೇತ್ರ ತಜ್ಞರ ತಂಡ ನೇತ್ರದಾನ ಪ್ರಕ್ರಿಯೆ ಕೈಗೊಂಡರು.

ಈ ಸಂದರ್ಭದಲ್ಲಿ ರವಿ ಬೆಟಗೇರಿ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ, ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಖಜಾಂಚಿ ರೇಣುಕಾ ಪ್ರಸಾದ ಹಿರೇಮಠ, ರಮೇಶ ಶಿಗ್ಲಿ, ಸಂಜಯ ರುದ್ದಂ ಮುಂತಾದವರಿದ್ದರು.

error: Content is protected !!