Home Blog

ಖಾಲಿ ನಿವೇಶನದಲ್ಲಿ ಪಾರ್ಕಿಂಗ್ ಕೊಟ್ರೆ 35 ವರ್ಷ ಟ್ಯಾಕ್ಸ್ ಫ್ರೀ ಅಂತೆ! ರಾಜ್ಯ ಸರ್ಕಾರದ ನೀತಿಗೆ ವ್ಯಾಪಕ ವಿರೋಧ

ಬೆಂಗಳೂರು: ಖಾಲಿ ನಿವೇಶನಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ನೀಡಿದರೆ 15ರಿಂದ 35 ವರ್ಷಗಳವರೆಗೆ ಆಸ್ತಿ ತೆರಿಗೆ ವಿನಾಯಿತಿ ನೀಡುವ ರಾಜ್ಯ ಸರ್ಕಾರದ ಹೊಸ ಪಾರ್ಕಿಂಗ್ ನೀತಿ ಚರ್ಚೆಗೆ ಕಾರಣವಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಸಂಚಾರ ಪೊಲೀಸರು ಸೇರಿ ರೂಪಿಸುತ್ತಿರುವ “ಪಾರ್ಕಿಂಗ್ ನೀತಿ–2026” ಕರಡು ಪ್ರಕಟವಾಗುವ ಮುನ್ನವೇ ಈ ಯೋಜನೆಗೆ ಸಂಬಂಧಿಸಿದಂತೆ ಆಸ್ತಿ ಮಾಲೀಕರಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಸರ್ಕಾರದ ಪ್ರಸ್ತಾವನೆಯ ಪ್ರಕಾರ, ಖಾಲಿ ನಿವೇಶನಗಳಲ್ಲಿ ಮಲ್ಟಿ-ಸ್ಟೋರಿ ಅಥವಾ ಆಟೋಮೇಟೆಡ್ ಪಾರ್ಕಿಂಗ್ ನಿರ್ಮಿಸಿದರೆ ದೀರ್ಘಾವಧಿಯ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಆದರೆ ಇದರಿಂದ ತಮ್ಮ ಖಾಸಗಿ ಜಾಗದ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಭೀತಿ ಇದೆ ಎಂದು ಕೆಲ ಮಾಲೀಕರು ಆರೋಪಿಸಿದ್ದಾರೆ.

ಇನ್ನು ಕೆಲವರು ಈ ಯೋಜನೆಯನ್ನು ಬೆಂಬಲಿಸುತ್ತಿದ್ದು, ವರ್ಷಗಳಿಂದ ಬಳಕೆಯಾಗದೇ ಇರುವ ನಿವೇಶನಗಳಿಂದ ಆದಾಯ ಪಡೆಯಲು ಇದು ಉತ್ತಮ ಅವಕಾಶ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದ ಈ ಯೋಜನೆ ಜಾರಿಗೆ ಬಂದರೆ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಸಿಗುವ ಜೊತೆಗೆ ಖಾಸಗಿ ಮಾಲೀಕರಿಗೂ ದೀರ್ಘಾವಧಿ ಆದಾಯದ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಯೋಜನೆ ಕುರಿತು ಅಂತಿಮ ತೀರ್ಮಾನ ಹೊರಬರುವ ಮುನ್ನವೇ ಚರ್ಚೆಗಳು ಜೋರಾಗಿದೆ.

ಕೆಆರ್ ಸರ್ಕಲ್‌ನಲ್ಲಿ ಭೀಕರ ಅಪಘಾತ: ಎರಡು BMTC ಬಸ್‌ಗಳ ನಡುವೆ ಡಿಕ್ಕಿ, ವಾಹನಗಳು ಜಖಂ

ಬೆಂಗಳೂರು: ಕೆಆರ್ ಸರ್ಕಲ್ ಬಳಿ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಇಂದಿರಾನಗರ ಕಡೆಯಿಂದ ಬಂದ ಎಲೆಕ್ಟ್ರಿಕ್ ಬಸ್ ಮತ್ತೊಂದು ಬಸ್‌ಗೆ ಹಿಂಬದಿಯಿಂದ ಗುದ್ದಿದ ಪರಿಣಾಮ ಎರಡು ಬಸ್‌ಗಳ ಮುಂಭಾಗ ಹಾಗೂ ಹಿಂಭಾಗ ಸಂಪೂರ್ಣವಾಗಿ ಜಖಂ ಆಗಿವೆ.

ಘಟನೆಯ ವೇಳೆ ಬಸ್‌ನ ಮುಂಭಾಗದಲ್ಲಿ ಕೂತಿದ್ದ ಮಹಿಳೆಯ ಕಾಲು ಸಿಕ್ಕಿಕೊಂಡು ಪರದಾಡಿದ ಘಟನೆ ನಡೆದಿದೆ. ತಕ್ಷಣ ಸ್ಥಳೀಯರು ಹಾಗೂ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಕೆಆರ್ ಸರ್ಕಲ್ ಪ್ರದೇಶದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಹಾವೇರಿ! ಕರ್ತವ್ಯದ ವೇಳೆ ಹುತಾತ್ಮರಾದ ನೌಕಾಪಡೆಯ ಯೋಧ!

ಹಾವೇರಿ: ಕರ್ತವ್ಯದ ವೇಳೆ ಭಾರತೀಯ ನೌಕಾಪಡೆಯ ಯೋಧ ಹುತಾತ್ಮರಾದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಉಪ್ಪುಣಸಿ ಗ್ರಾಮದ ನಿವಾಸಿ ಯಶೋಧರ ವಡ್ಡರ್ (29) ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಫೈರಿಂಗ್ ತರಬೇತಿ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

ಯಶೋಧರ ವಡ್ಡರ್ ಅವರು 2016ರಲ್ಲಿ ನೌಕಾಪಡೆಗೆ ಸೇರ್ಪಡೆಯಾಗಿ ಕಳೆದ 10 ವರ್ಷಗಳಿಂದ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಹುತಾತ್ಮ ಯೋಧನ ಪಾರ್ಥಿವ ಶರೀರ ಸ್ವಗ್ರಾಮ ಉಪ್ಪುಣಸಿಗೆ ಆಗಮಿಸಿದ್ದು, ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆಗಳು ನಡೆಯುತ್ತಿವೆ.

ದೇಶ ಸೇವೆಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋಧನ ನಿಧನಕ್ಕೆ ಗ್ರಾಮಸ್ಥರು, ಬಂಧು-ಬಳಗ ಹಾಗೂ ವಿವಿಧ ಸಂಘಟನೆಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸಿಸಿಬಿ ಮೆಗಾ ಆಪರೇಷನ್: 30ಕ್ಕೂ ಹೆಚ್ಚು ರೌಡಿಶೀಟರ್ ಮನೆಗಳ ಮೇಲೆ ದಾಳಿ!

ಬೆಂಗಳೂರು: ನಗರದಲ್ಲಿ ಅಪರಾಧ ಚಟುವಟಿಕೆಗಳ ವಿರುದ್ಧ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಸಿಸಿಬಿ ಡಿಸಿಪಿ ಶ್ರೀಹರಿಬಾಬು ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಬೆಂಗಳೂರು ಪೂರ್ವ ಮತ್ತು ಈಶಾನ್ಯ ವಿಭಾಗಗಳಲ್ಲಿ 30ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆಗಳ ಮೇಲೆ ಏಕಾಏಕಿ ಶೋಧ ನಡೆಸಲಾಗಿದೆ.

ಇಂದಿರಾನಗರದ ರೌಡಿಶೀಟರ್ ಪ್ರಭಾಕರ್ ಎಂಬಾತನ ಮನೆಯಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ವಶಪಡಿಸಿಕೊಂಡ ಮಾರಕಾಸ್ತ್ರಗಳ ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಅಪರಾಧ ಹಿನ್ನೆಲೆ ಹೊಂದಿರುವವರಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ.

ಸಿಸಿಬಿ ತಂಡವು ಮುಂದೆಯೂ ಇಂತಹ ಕಾರ್ಯಾಚರಣೆಗಳನ್ನು ಮುಂದುವರಿಸುವುದಾಗಿ ತಿಳಿಸಿದ್ದು, ಸಮಾಜದ ಶಾಂತಿ ಕಾಪಾಡಲು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಆರೋಗ್ಯಕರ ಹೃದಯಕ್ಕೆ ಈ 5 ಮೀನುಗಳು ಬೆಸ್ಟ್ ಅಂತಾರೆ ತಜ್ಞರು! ವಾರಕ್ಕೆ 2 ಬಾರಿಯಾದ್ರೂ ತಿನ್ನಿ

ಇತ್ತೀಚಿನ ದಿನಗಳಲ್ಲಿ ತಪ್ಪಾದ ಆಹಾರ ಪದ್ಧತಿ ಮತ್ತು ವ್ಯಾಯಾಮ ಕೊರತೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದೆ.

ಇದರಿಂದ ಹೃದಯಾಘಾತ ಮತ್ತು ಸ್ಟ್ರೋಕ್ ಅಪಾಯವೂ ಹೆಚ್ಚಾಗುತ್ತದೆ. ಆದರೆ ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾದ ಮೀನುಗಳನ್ನು ಆಹಾರದಲ್ಲಿ ಸೇರಿಸಿದರೆ ಹೃದಯ ಆರೋಗ್ಯವನ್ನು ಕಾಪಾಡಬಹುದು ಎಂದು ತಜ್ಞರು ಹೇಳುತ್ತಾರೆ.

ಹೃದಯಕ್ಕೆ ಉತ್ತಮವಾದ 5 ಮೀನುಗಳು:

1. ಸಾಲ್ಮನ್ ಮೀನು:
ಒಮೆಗಾ-3 ಹೆಚ್ಚು ಇರುವ ಈ ಮೀನು ಟ್ರೈಗ್ಲಿಸರೈಡ್ ಕಡಿಮೆ ಮಾಡುತ್ತದೆ ಮತ್ತು ರಕ್ತನಾಳಗಳನ್ನು ಆರೋಗ್ಯವಾಗಿಡುತ್ತದೆ.

2. ಹಿಲ್ಸಾ ಮೀನು:
ಉತ್ತಮ ಕೊಬ್ಬು (HDL) ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.

3. ಸಾರ್ಡೀನ್ ಮೀನು:
ಕಡಿಮೆ ಬೆಲೆಯಲ್ಲೇ ಲಭ್ಯವಾಗುವ ಈ ಮೀನು ಹೃದಯ ಬಡಿತ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ.

4. ಮ್ಯಾಕೆರೆಲ್ ಮೀನು:
ಅಪಧಮನಿಗಳ ಲವಚಿಕತೆ ಕಾಪಾಡಿ ಹೃದಯ ರೋಗ ಅಪಾಯವನ್ನು ಕಡಿಮೆ ಮಾಡುತ್ತದೆ.

5. ಟ್ಯೂನ ಮೀನು:
ಹೆಚ್ಚು ಪ್ರೋಟೀನ್ ಮತ್ತು ಕಡಿಮೆ ಕ್ಯಾಲೋರಿ ಇರುವ ಈ ಮೀನು ಹೃದಯ ಸ್ನಾಯುಗಳಿಗೆ ಶಕ್ತಿ ನೀಡುತ್ತದೆ.

ಮೀನು ತಿನ್ನುವ ಲಾಭಗಳು:

  • ಹೃದಯ ಆರೋಗ್ಯ ಉತ್ತಮವಾಗುತ್ತದೆ
  • ಮೆದುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ
  • ಉರಿಯೂತ ಕಡಿಮೆಯಾಗುತ್ತದೆ
  • ಸ್ಟ್ರೋಕ್ ಅಪಾಯ ಕಡಿಮೆಯಾಗುತ್ತದೆ

ಎಷ್ಟು ತಿನ್ನಬೇಕು?
ವಾರಕ್ಕೆ 2–3 ಬಾರಿ (ಸುಮಾರು 225–350 ಗ್ರಾಂ) ಮೀನು ತಿನ್ನುವುದು ಉತ್ತಮ. ಕಡಿಮೆ ಮರ್ಕ್ಯುರಿ ಇರುವ ಮೀನುಗಳನ್ನು ಆಯ್ಕೆ ಮಾಡುವುದು ಮುಖ್ಯ.

ಕೊಡಗು ಜಿಲ್ಲೆಯಾದ್ಯಂತ ಮಳೆ ಚುರುಕು: ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಳ!

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಉತ್ತಮ ಮಳೆಯಾಗುತ್ತಿದೆ.

ಮಳೆಯ ಜೊತೆಗೆ ಚಳಿ ವಾತಾವರಣವೂ ಹೆಚ್ಚಾಗಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ.

ಹಾರಂಗಿ ಜಲಾಶಯಕ್ಕೆ ಇಂದು ಸುಮಾರು 1,470 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ನೀರಿನ ಮಟ್ಟವೂ ನಿಧಾನವಾಗಿ ಏರಿಕೆಯಾಗುತ್ತಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 2,859 ಅಡಿ ಆಗಿದ್ದು, ಪ್ರಸ್ತುತ ಸುಮಾರು 2,832 ಅಡಿ ನೀರು ಸಂಗ್ರಹವಾಗಿದೆ.

ಜಲಾಶಯದಿಂದ ಸುಮಾರು 180 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಒಟ್ಟು ನೀರು ಸಂಗ್ರಹ ಸಾಮರ್ಥ್ಯ 8.5 ಟಿಎಂಸಿ ಆಗಿದೆ. ಪ್ರಸ್ತುತ ಸುಮಾರು 2.7 ಟಿಎಂಸಿ ನೀರು ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಭತ್ತ, ಕಾಫಿ ಸೇರಿದಂತೆ ಪ್ರಮುಖ ಬೆಳೆಗಳ ಕೃಷಿಯಲ್ಲಿ ರೈತರು ಉತ್ಸಾಹದಿಂದ ತೊಡಗಿಕೊಂಡಿದ್ದಾರೆ.

ನಿರಂತರ ಮಳೆಯ ಪರಿಣಾಮ ಕಾವೇರಿ ನದಿಯ ನೀರಿನ ಮಟ್ಟವೂ ನಿಧಾನವಾಗಿ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾದರೆ ಹಾರಂಗಿ ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಟ್ಟ ಮಕ್ಕಳು ಮಲಗಿದ್ದ ಚಾಪೆಯಲ್ಲೇ ಅಡಗಿತ್ತು ಬೃಹತ್ ನಾಗರಹಾವು! ಆಮೇಲೇನಾಯ್ತು?

ನೆಲಮಂಗಲ:- ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಸಮೀಪದ ಗುಡ್ಡದಹಳ್ಳಿಯಲ್ಲಿ ಮನೆಯೊಳಗೆ ಪುಟ್ಟ ಮಕ್ಕಳು ಮಲಗಿದ್ದ ಚಾಪೆಯ ಕೆಳಗೆ ನಾಗರಹಾವು ಅಡಗಿದ್ದ ಆತಂಕಕಾರಿ ಘಟನೆ ನಡೆದಿದೆ.

ಮಕ್ಕಳು ಮಲಗಿದ್ದ ಚಾಪೆಯ ಕೆಳಗೆ ಸುಮಾರು 5 ಅಡಿ ಉದ್ದದ ನಾಗರಹಾವು ಕಂಡುಬಂದಿದ್ದು, ಇದನ್ನು ಗಮನಿಸಿದ ಪೋಷಕರು ತಕ್ಷಣ ಗಾಬರಿಗೊಂಡಿದ್ದಾರೆ.

ತಕ್ಷಣವೇ ವನ್ಯಜೀವಿ ಸಂರಕ್ಷಣಾ ಪ್ರತಿಷ್ಠಾನದ ಉರಗ ರಕ್ಷಕ ಪ್ರಶಾಂತ್ ಅವರಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಧಾವಿಸಿ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.

ಸಮಯೋಚಿತ ಕ್ರಮದಿಂದಾಗಿ ಮಕ್ಕಳು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಹಾವನ್ನು ಹಿಡಿಯುವ ದೃಶ್ಯಗಳು ಸ್ಥಳದಲ್ಲಿ ರೋಮಾಂಚನ ಸೃಷ್ಟಿ ಮಾಡಿತ್ತು.

ಜ್ಯೋತಿಷಿ ಆರ್ಯವರ್ಧನ್ ಗೆ ಸಂಕಷ್ಟ! ದಾಖಲಾಯ್ತು ದೂರು, ಏನಿದು ವಿವಾದ?

ಬೆಂಗಳೂರು: ಜ್ಯೋತಿಷಿ ಆರ್ಯವರ್ಧನ್ ಗುರೂಜಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಅವರ ವಿರುದ್ಧ ಬೆಂಗಳೂರಿನ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂದರ್ಶನವೊಂದರಲ್ಲಿ ಲಕ್ಷ್ಮೀ ದೇವಿ ಕುರಿತು ಆರ್ಯವರ್ಧನ್ ಗುರೂಜಿ ನೀಡಿದ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹೇಳಿಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದು, ಮಹಿಳೆಯರ ಗೌರವಕ್ಕೂ ಅವಮಾನವಾಗಿದೆ ಎಂದು ಆರೋಪಿಸಿ ಕರ್ನಾಟಕ ಗೋವು ರಕ್ಷಕರ ಸೇನೆ ದೂರು ಸಲ್ಲಿಸಿದೆ.

ದೂರಿನ ಪ್ರಕಾರ, ಆರ್ಯವರ್ಧನ್ ಗುರೂಜಿ ಮಾನವ ದೇಹದ ಒಂದು ಅಂಗವನ್ನು ಉಲ್ಲೇಖಿಸಿ ವಿವಾದಾತ್ಮಕವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕರ್ನಾಟಕ ಗೋವು ರಕ್ಷಕರ ಸೇನೆ ಪರ ಸುಮನ್ ಅವರು ಶಂಕರಪುರಂ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿ, ಆರ್ಯವರ್ಧನ್ ಗುರೂಜಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ದೂರು ಸ್ವೀಕರಿಸಿರುವ ಪೊಲೀಸರು ಪ್ರಾಥಮಿಕ ಪರಿಶೀಲನೆ ಆರಂಭಿಸಿದ್ದು, ಆರ್ಯವರ್ಧನ್ ಗುರೂಜಿಗೆ ವಿಚಾರಣೆಗೆ ಹಾಜರಾಗುವಂತೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಆದರೆ, ಈ ವಿವಾದಕ್ಕೆ ಸಂಬಂಧಿಸಿದಂತೆ ಆರ್ಯವರ್ಧನ್ ಗುರೂಜಿ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ ಎನ್ನಲಾಗಿದೆ.

ತುಳಸಿ ಗಿಡವನ್ನು ಮನೆಯಲ್ಲಿ ನೆಡುವ ಮುನ್ನ ಈ ನಿಯಮಗಳನ್ನು ತಿಳಿಯಲೇಬೇಕು!

ಹಿಂದೂ ಧರ್ಮ ಮತ್ತು ವಾಸ್ತು ಶಾಸ್ತ್ರದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವಾದ ಗಿಡವಾಗಿ ಪರಿಗಣಿಸಲಾಗಿದೆ.

ತುಳಸಿ ಇರುವ ಮನೆಯಲ್ಲಿ ಶಾಂತಿ, ಸಕಾರಾತ್ಮಕ ಶಕ್ತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ತುಳಸಿ ಗಿಡವನ್ನು ಶ್ರೀಹರಿ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದುದಾಗಿ ಭಾವಿಸಲಾಗುತ್ತದೆ. ಆದ್ದರಿಂದ ಮನೆಯಲ್ಲಿನ ತುಳಸಿಯನ್ನು ನಿಯಮಿತವಾಗಿ ಪೂಜಿಸುವುದು ಧಾರ್ಮಿಕವಾಗಿ ಶುಭಕರ ಎಂದು ಹೇಳಲಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ನೆಡುವ ದಿನಗಳಿಗೂ ಮಹತ್ವ ಇದೆ. ಗುರುವಾರ, ಶುಕ್ರವಾರ ಮತ್ತು ಶನಿವಾರಗಳನ್ನು ತುಳಸಿ ನೆಡಲು ಉತ್ತಮ ದಿನಗಳೆಂದು ಪರಿಗಣಿಸಲಾಗಿದೆ. ಕಾರ್ತಿಕ ಮಾಸ ಮತ್ತು ಏಕಾದಶಿಯ ದಿನಗಳಲ್ಲಿ ತುಳಸಿ ನೆಡುವುದು ವಿಶೇಷವಾಗಿ ಮಂಗಳಕರವೆಂದು ಹೇಳಲಾಗುತ್ತದೆ.

ಆದರೆ ಸೋಮವಾರದಂದು ಹೊಸ ತುಳಸಿ ಗಿಡವನ್ನು ನೆಡಬಾರದು ಎಂಬ ನಂಬಿಕೆ ಇದೆ.

ತುಳಸಿ ಗಿಡಕ್ಕೆ ಪ್ರತಿದಿನ ಬೆಳಿಗ್ಗೆ ನೀರು ಅರ್ಪಿಸುವುದು ಮತ್ತು ಸಂಜೆ ದೀಪ ಹಚ್ಚಿ ಪ್ರಾರ್ಥಿಸುವುದು ಶುಭಕರವೆಂದು ಹೇಳಲಾಗುತ್ತದೆ. ತುಳಸಿ ಸುತ್ತಮುತ್ತಲಿನ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ಅಲ್ಲಿಗೆ ಚಪ್ಪಲಿ ಅಥವಾ ಕಸ ವಸ್ತುಗಳನ್ನು ಇಡಬಾರದು.

ಇದೇ ರೀತಿ, ಏಕಾದಶಿಯ ದಿನ ತುಳಸಿ ಎಲೆಗಳನ್ನು ಕೀಳಬಾರದು ಎಂದು ಧಾರ್ಮಿಕವಾಗಿ ಹೇಳಲಾಗುತ್ತದೆ. ತುಳಸಿ ಎಲೆಗಳನ್ನು ಶಿವಲಿಂಗಕ್ಕೆ ಅರ್ಪಿಸುವುದನ್ನು ತಪ್ಪಿಸಬೇಕು; ಆದರೆ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಅರ್ಪಿಸುವುದು ಶ್ರೇಷ್ಠವೆಂದು ನಂಬಿಕೆ ಇದೆ.

ಒಟ್ಟಿನಲ್ಲಿ, ತುಳಸಿ ಗಿಡವನ್ನು ಭಕ್ತಿಯಿಂದ ಆರಾಧಿಸಿದರೆ ಮನೆಯಲ್ಲಿ ಶಾಂತಿ ಮತ್ತು ಸಕಾರಾತ್ಮಕ ವಾತಾವರಣ ಉಳಿಯುತ್ತದೆ ಎಂಬ ನಂಬಿಕೆ ಇದೆ.

ರಾಮಮಂದಿರದ ಬೆನ್ನಲ್ಲೇ ಬದರಿನಾಥದಲ್ಲೂ ದೇಣಿಗೆ ದುರುಪಯೋಗ? ತನಿಖೆಗೆ ಆದೇಶ

ಡೆಹ್ರಾಡೂನ್: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗ ಪ್ರಕರಣದ ಬಳಿಕ ಇದೀಗ ಬದರಿನಾಥ ಧಾಮದಲ್ಲೂ ಕಾಣಿಕೆ ಹಣ ದುರುಪಯೋಗವಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ.

ಬದರಿನಾಥ–ಕೇದರನಾಥ ದೇವಸ್ಥಾನ ಸಮಿತಿ ಅಧ್ಯಕ್ಷ ಹೇಮಂತ್ ದ್ವಿವೇದಿ ಅವರು ಈ ಕುರಿತು ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆರೋಪಗಳನ್ನು ಸಮಿತಿ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.

ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಲು ವಿಶೇಷ ತನಿಖಾ ಸಮಿತಿಯನ್ನು ರಚಿಸಲು ಆದೇಶ ನೀಡಲಾಗಿದ್ದು, ಸಂಬಂಧಪಟ್ಟ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.

ದೇಣಿಗೆ ದುರುಪಯೋಗದ ಆರೋಪದ ಹಿನ್ನೆಲೆ ಧಾರ್ಮಿಕ ಸಂಸ್ಥೆಗಳ ನಿರ್ವಹಣೆ ಹಾಗೂ ಹಣಕಾಸು ಪಾರದರ್ಶಕತೆ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.