Home Blog

2014ರ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ಎಂಟು ವಾರಗಳಲ್ಲಿ ವಿಚಾರಣೆ ಪೂರ್ಣಗೊಳಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು: 2014ರಲ್ಲಿ ಬೆಂಗಳೂರಿನ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ಇನ್ನೂ ಪೂರ್ಣಗೊಳ್ಳದಿರುವುದಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದ ವಿಚಾರಣೆಯನ್ನು ಮುಂದಿನ ಎಂಟು ವಾರಗಳೊಳಗೆ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಗಡುವು ವಿಧಿಸಿದೆ.

ಸಂತ್ರಸ್ತ ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದ್ದು, ತ್ವರಿತ ವಿಚಾರಣೆಯ ಹಕ್ಕು ಸಂವಿಧಾನದ 21ನೇ ವಿಧಿಯ ಅವಿಭಾಜ್ಯ ಅಂಗವಾಗಿದೆ ಎಂದು ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಪೋಕ್ಸೊ ಪ್ರಕರಣಗಳು ಆದಷ್ಟು ಬೇಗ ಅಂತಿಮ ಹಂತ ತಲುಪಬೇಕು ಎಂದು ಕಾನೂನಿನ ಆಶಯವಾಗಿದೆ. ಇಂತಹ ಪ್ರಕರಣಗಳಲ್ಲಿ ಪದೇಪದೆ ವಿಚಾರಣೆಯನ್ನು ಮುಂದೂಡುವ ಪ್ರವೃತ್ತಿ ಖಂಡನೀಯವಾಗಿದ್ದು, ಉಭಯ ಪಕ್ಷಗಳು ವಿಚಾರಣಾ ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳಲು ಸಹಕರಿಸಬೇಕು ಎಂದು ಸೂಚಿಸಿದೆ.

ಪ್ರಕರಣವನ್ನು ಹಲವು ವರ್ಷಗಳ ಕಾಲ ವಿವಿಧ ನೆಪಗಳಲ್ಲಿ ಮುಂದೂಡಿರುವ ಕ್ರಮವನ್ನು ನ್ಯಾಯಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರು ಹಾಗೂ ಸೆಷನ್ಸ್ ನ್ಯಾಯಾಲಯ ಹೆಚ್ಚು ಜಾಗರೂಕತೆಯಿಂದ ನಡೆದುಕೊಳ್ಳಬೇಕಿತ್ತು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಕಲಂ 164ರ ಅಡಿಯಲ್ಲಿ ಬಾಲಕಿ ಮ್ಯಾಜಿಸ್ಟ್ರೇಟ್ ಎದುರು ದಾಖಲಿಸಿದ್ದ ಹೇಳಿಕೆಯ ಪ್ರತಿಯಲ್ಲಿ ಬಾಲಕಿ ಹಾಗೂ ಮ್ಯಾಜಿಸ್ಟ್ರೇಟ್ ಅವರ ಸಹಿ ಇಲ್ಲ ಎಂಬ ಕಾರಣ ನೀಡಿ, ಸಂಬಂಧಿತ ಮ್ಯಾಜಿಸ್ಟ್ರೇಟ್‌ಗೆ ಸಮನ್ಸ್ ಜಾರಿಗೊಳಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: 2014ರ ಜುಲೈ 14ರಂದು ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಜಿಮ್ನಾಸ್ಟಿಕ್ಸ್ ತರಗತಿ ಮುಗಿದ ಬಳಿಕ ಆರು ವರ್ಷದ ಬಾಲಕಿಯ ಮೇಲೆ ಇಬ್ಬರು ತರಬೇತುದಾರರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಜಿಮ್ನಾಸ್ಟಿಕ್ಸ್ ತರಬೇತುದಾರರನ್ನು ಬಂಧಿಸಿ, ಭಾರತೀಯ ದಂಡ ಸಂಹಿತೆಯ ಕಲಂ 376, 202 ಹಾಗೂ ಪೋಕ್ಸೊ ಕಾಯ್ದೆಯ ಕಲಂ 4, 6 ಮತ್ತು 21ರ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣ ದೇಶಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿದ್ದು, ಶಾಲಾ ಆವರಣಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕಡ್ಡಾಯ ಸಿಸಿಟಿವಿ ಅಳವಡಿಕೆ ಸೇರಿದಂತೆ ಹಲವು ಕಠಿಣ ಮಾರ್ಗಸೂಚಿಗಳನ್ನು ಸರ್ಕಾರ ಜಾರಿಗೆ ತರಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಆದಿ ಶಂಕರಾಚಾರ್ಯರ ಕುರಿತು ವಿವಾದಾತ್ಮಕ ಹೇಳಿಕೆ: ಕ್ಷಮೆಯಾಚಿಸಿದ್ದ ಹರಿಕಥೆ ಕಲಾವಿದೆ, ಶಿರೂರು ಮಠದಿಂದಲೂ ಸ್ಪಷ್ಟನೆ

0

ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಹರಿಕಥೆ ಕಾರ್ಯಕ್ರಮದಲ್ಲಿ ಆದಿ ಶಂಕರಾಚಾರ್ಯರ ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಹರಿಕಥೆ ಕಲಾವಿದೆ ವಿಡಿಯೊ ಮೂಲಕ ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ. ಈ ವಿವಾದಕ್ಕೆ ಉಡುಪಿ ಮಠ ಅಥವಾ ಶಿರೂರು ಮಠದ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಉಂಟುಮಾಡುವ ಉದ್ದೇಶ ತಮ್ಮದಾಗಿರಲಿಲ್ಲ ಎಂದು ಹೇಳಿದ್ದಾರೆ.

“ಯಾವುದೇ ಮಧ್ವ ಮಠದವರು ಈ ರೀತಿಯ ಹೇಳಿಕೆ ನೀಡುವಂತೆ ನಮಗೆ ಸೂಚಿಸಿಲ್ಲ. ಪುಸ್ತಕದಲ್ಲಿದ್ದ ಮಾಹಿತಿಯನ್ನು ಉಲ್ಲೇಖಿಸಿ ಹೇಳಿದ್ದೇವೆ. ನಮ್ಮ ಮಾತಿನಿಂದ ಬೇರೆ ಮತದವರು ಅಥವಾ ಮಠದವರಿಗೆ ನೋವಾಗಿದ್ದರೆ ಹೃತ್ಪೂರ್ವಕ ಕ್ಷಮೆ ಕೋರುತ್ತೇವೆ” ಎಂದು ಕಲಾವಿದೆ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ಕುರಿತು ಶಿರೂರು ಮಠವೂ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅಂಕಿತಾ ನಾಯಕ್ ಹಾಗೂ ಗೌರಿ ಪಾಂಡುರಂಗಿ ಅವರಿಗೆ ಭರತನಾಟ್ಯ ಕಾರ್ಯಕ್ರಮ ನಡೆಸಲು ಮಾತ್ರ ಅನುಮತಿ ನೀಡಲಾಗಿತ್ತು. ಕಾರ್ಯಕ್ರಮದ ಮಧ್ಯೆ ‘ಭಕ್ತ ಪ್ರಹ್ಲಾದ’ ಹರಿಕಥೆ ನಡೆಸಲಾಗಿದ್ದು, ಆ ವೇಳೆ ಆದಿ ಶಂಕರಾಚಾರ್ಯರ ಕುರಿತು ಅಕ್ಷೇಪಾರ್ಹ ಹೇಳಿಕೆ ನೀಡಿರುವುದು ಮಠದ ಗಮನಕ್ಕೆ ಬಂದಿದೆ ಎಂದು ತಿಳಿಸಿದೆ.

ಸಂಬಂಧಪಟ್ಟ ಇಬ್ಬರು ಕಲಾವಿದೆಯರಿಗೆ ತಕ್ಷಣ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಅವರು ಕ್ಷಮೆ ಕೋರಿದ್ದು, ನಡೆದ ಘಟನೆಯ ಬಗ್ಗೆ ಶಿರೂರು ಮಠ ವಿಷಾದ ವ್ಯಕ್ತಪಡಿಸಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ರಾಜಾಂಗಣದಲ್ಲಿ ನಡೆದ ಹರಿಕಥೆ ಕಾರ್ಯಕ್ರಮದಲ್ಲಿ ಆಚಾರ್ಯ ಮಾಧ್ವರ ಪ್ರಸಂಗ ವಿವರಿಸುವ ವೇಳೆ ಜಗದ್ಗುರು ಆದಿ ಶಂಕರಾಚಾರ್ಯರ ಕುರಿತು ಅವಹೇಳನಕಾರಿ ಉಲ್ಲೇಖ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೀಗ ಕಲಾವಿದೆಯ ಕ್ಷಮೆಯಾಚನೆ ಹಾಗೂ ಮಠದ ಸ್ಪಷ್ಟನೆಯೊಂದಿಗೆ ಪ್ರಕರಣ ಹೊಸ ತಿರುವು ಪಡೆದಿದೆ.

Gold-Silver Price Today: ಇಂದು ಮತ್ತೆ ಇಳಿಕೆ ಕಂಡ ಬಂಗಾರ! ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟು?

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಅಮೆರಿಕ–ಇರಾನ್ ಸಂಘರ್ಷ, ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆ ಹಾಗೂ ಅಮೆರಿಕದ ಸುಂಕ ನೀತಿಗಳ ಪರಿಣಾಮ ತೈಲ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಳಿಕೆ ದಾಖಲಾಗಿದೆ.

ಜುಲೈ 14, 2026ರಂದು ಚಿನ್ನ ಖರೀದಿದಾರರಿಗೆ ಕೊಂಚ ನೆಮ್ಮದಿ ಸಿಕ್ಕಿದ್ದು, 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

ಇಂದಿನ ದರದಂತೆ 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 11 ರೂಪಾಯಿ ಇಳಿಕೆಯಾಗಿ 14,280 ರೂಪಾಯಿಗೆ ತಲುಪಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 110 ರೂಪಾಯಿ ಇಳಿಕೆಯಾಗಿ 1,42,800 ರೂಪಾಯಿಯಾಗಿದೆ.

22 ಕ್ಯಾರೆಟ್ ಚಿನ್ನದ ದರವೂ ಇಳಿಕೆಯಾಗಿದ್ದು, 1 ಗ್ರಾಂಗೆ 10 ರೂಪಾಯಿ ಕಡಿಮೆಯಾಗಿ 13,090 ರೂಪಾಯಿಗೆ ತಲುಪಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 100 ರೂಪಾಯಿ ಇಳಿಕೆಯಾಗಿ 1,30,900 ರೂಪಾಯಿಯಾಗಿ ದಾಖಲಾಗಿದೆ.

ಇನ್ನು ಬೆಂಗಳೂರಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಪ್ರತಿ ಗ್ರಾಂ ದರ 14,280 ರೂಪಾಯಿಯಾಗಿದ್ದು, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಪ್ರತಿ ಗ್ರಾಂ ಬೆಳ್ಳಿ 235 ರೂಪಾಯಿಯಲ್ಲೇ ಸ್ಥಿರವಾಗಿದ್ದು, ಒಂದು ಕೆಜಿ ಬೆಳ್ಳಿಯ ಬೆಲೆ 2,35,000 ರೂಪಾಯಿಯಾಗಿ ಮುಂದುವರಿದಿದೆ.

ಜಾಗತಿಕ ಆರ್ಥಿಕ ಬೆಳವಣಿಗೆಗಳು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳ ನಡುವೆ ಚಿನ್ನದ ದರದಲ್ಲಿ ದಿನನಿತ್ಯ ಬದಲಾವಣೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ಆಭರಣ ಖರೀದಿಸಲು ಯೋಜಿಸುತ್ತಿರುವವರು ಇಂದಿನ ಇಳಿಕೆಯನ್ನು ಗಮನಿಸಿ ಖರೀದಿ ನಿರ್ಧಾರ ಕೈಗೊಳ್ಳಬಹುದಾಗಿದೆ.

‘ದೀಪಿಕಾ ನನ್ನನ್ನು ಪ್ರಪೋಸ್ ಮಾಡಿದ್ದರು’ ಎಂದಿದ್ದ ಮುಜಮ್ಮಿಲ್ ಇಬ್ರಾಹಿಂ: ವೈರಲ್ ವಿಡಿಯೋ ಬಗ್ಗೆ ನಟನ ಸ್ಪಷ್ಟನೆ

ಮುಂಬೈ: ನಟಿ ದೀಪಿಕಾ ಪಡುಕೋಣೆ ಕುರಿತು ನೀಡಿದ್ದ ಹಳೆಯ ಸಂದರ್ಶನದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿ ವಿವಾದ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ನಟ ಮುಜಮ್ಮಿಲ್ ಇಬ್ರಾಹಿಂ ಮೌನ ಮುರಿದಿದ್ದಾರೆ. ವೈರಲ್ ಆಗಿರುವ ವಿಡಿಯೊ ಸಂಪೂರ್ಣ ಸಂಭಾಷಣೆಯಲ್ಲ, ತಮ್ಮ ಹೇಳಿಕೆಯನ್ನು ತಪ್ಪಾಗಿ ಕತ್ತರಿಸಿ ಪ್ರಸಾರ ಮಾಡಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

2025ರಲ್ಲಿ ನೀಡಿದ್ದ ಸಂದರ್ಶನದಲ್ಲಿ, ದೀಪಿಕಾ ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ತಮಗೆ ಪ್ರಪೋಸ್ ಮಾಡಿದ್ದರು ಎಂದು ಮುಜಮ್ಮಿಲ್ ಹೇಳಿದ್ದರು. ಆಗ ದೀಪಿಕಾ ಮಾಡೆಲ್ ಆಗಿದ್ದು, ತಾವು ಉದಯೋನ್ಮುಖ ನಟರಾಗಿದ್ದ ಕಾರಣ ಆ ಪ್ರಸ್ತಾಪವನ್ನು ಸ್ವೀಕರಿಸಿರಲಿಲ್ಲ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಯ ತುಣುಕುಗಳು ಇತ್ತೀಚೆಗೆ ಮತ್ತೆ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಸ್ಪಷ್ಟನೆ ನೀಡಿರುವ ಮುಜಮ್ಮಿಲ್, ಎಡಿಟ್ ಮಾಡಲಾದ ಕ್ಲಿಪ್‌ಗಳು ತಮ್ಮ ಮಾತಿನ ನಿಜವಾದ ಅರ್ಥವನ್ನು ಬದಲಾಯಿಸಿವೆ ಎಂದು ಹೇಳಿದ್ದಾರೆ.

“ನಾನು ಮಾತನಾಡಿದ ಸಂದರ್ಭ, ನನ್ನ ಗೌರವದ ಭಾವನೆ ಹಾಗೂ ಹಿಂಜರಿಕೆ ಎಲ್ಲವೂ ಎಡಿಟಿಂಗ್‌ನಲ್ಲಿ ಕಣ್ಮರೆಯಾಗಿವೆ. ನನ್ನ ಜೀವನದಲ್ಲಿ ಭೇಟಿಯಾದ ಎಲ್ಲರ ಬಗ್ಗೆಯೂ ಗೌರವದಿಂದಲೇ ಮಾತನಾಡಿದ್ದೇನೆ. ಈಗಲೂ ಅದೇ ನಿಲುವು ಮುಂದುವರಿದಿದೆ” ಎಂದು ಅವರು ತಿಳಿಸಿದ್ದಾರೆ.

ಇದೀಗ ದೀಪಿಕಾ ಪಡುಕೋಣೆ ತಮ್ಮ ವೃತ್ತಿಜೀವನ ಹಾಗೂ ಕುಟುಂಬ ಜೀವನದಲ್ಲಿ ತೊಡಗಿಸಿಕೊಂಡಿದ್ದು, 2018ರಲ್ಲಿ ರಣವೀರ್ ಸಿಂಗ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ದುವಾ ಎಂಬ ಪುತ್ರಿ ಇದ್ದಾಳೆ.

ಭಾರತ ಹಿಂದೂ ರಾಷ್ಟ್ರವಾದರೂ ಮುಸ್ಲಿಮರು, ಕ್ರೈಸ್ತರಿಗೆ ಯಾವುದೇ ಅಪಾಯವಿಲ್ಲ: ಬಾಬಾ ರಾಮ್ ದೇವ್

0

ನವದೆಹಲಿ: ಭಾರತ ಹಿಂದೂ ರಾಷ್ಟ್ರವಾದರೂ ಮುಸ್ಲಿಮರು ಹಾಗೂ ಕ್ರೈಸ್ತರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದು ಯೋಗಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಹಾಗೂ ಎಐಎಂಐಎಂ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಾಬಾ ರಾಮ್‌ದೇವ್, “ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಕಂಡು ಯಾರೂ ಆತಂಕಪಡುವ ಅಗತ್ಯವಿಲ್ಲ. ಒಂದು ವೇಳೆ ಭಾರತ ಹಿಂದೂ ರಾಷ್ಟ್ರವಾದರೂ ಇಲ್ಲಿನ ಮುಸ್ಲಿಮರು ಮತ್ತು ಕ್ರೈಸ್ತರಿಗೆ ಯಾವುದೇ ಅಪಾಯವಿರುವುದಿಲ್ಲ” ಎಂದು ಹೇಳಿದರು.

“ಧರ್ಮಗಳು ಬೇರೆಬೇರೆಯಾಗಿರಬಹುದು. ಆದರೆ ನಮ್ಮ ಪೂರ್ವಜರು ಒಂದೇ. ನಮ್ಮೆಲ್ಲರ ಡಿಎನ್‌ಎ ಒಂದೇ ಆಗಿದೆ. ನಿಮ್ಮ ಪೂರ್ವಜರ ಸಂಪ್ರದಾಯಗಳನ್ನು ಅನುಸರಿಸಿ. ಗಡ್ಡ ಇಟ್ಟುಕೊಳ್ಳುವುದೋ ಅಥವಾ ಕ್ಷೌರ ಮಾಡಿಸಿಕೊಳ್ಳುವುದೋ, ಯಾವ ಉಡುಪು ಧರಿಸಬೇಕೋ ಅದು ನಿಮ್ಮ ವೈಯಕ್ತಿಕ ಆಯ್ಕೆ. ಆದರೆ ನಿಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಳ್ಳಿ” ಎಂದು ಅವರು ಅಭಿಪ್ರಾಯಪಟ್ಟರು.

ಬಾಬಾ ರಾಮ್‌ದೇವ್ ಅವರ ಈ ಹೇಳಿಕೆ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಪ್ರತಿಕ್ರಿಯಿಸಿ, “ಎಲ್ಲರೂ ಸನಾತನಿಗಳೇ ಆಗಿದ್ದರೆ ದೇಶದಲ್ಲಿ ವಿಭಜನೆಯ ವಾತಾವರಣ ಏಕೆ ನಿರ್ಮಿಸಲಾಗುತ್ತಿದೆ? ಎಲ್ಲರನ್ನೂ ಒಂದೇ ಎಂದು ಹೇಳುವವರು ಮುಸ್ಲಿಮರ ವಿರುದ್ಧ ದ್ವೇಷದ ಭಾವನೆ ಏಕೆ ಮೂಡಿಸುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.

ಎಐಎಂಐಎಂ ವಕ್ತಾರ ವಾರಿಸ್ ಪಠಾಣ್ ಕೂಡ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಭಾರತವು ಸಂವಿಧಾನದ ಆಶಯಗಳ ಪ್ರಕಾರವೇ ನಡೆಯುವ ದೇಶ. ಭಾರತ ಯಾವುದೇ ಕಾರಣಕ್ಕೂ ಹಿಂದೂ ರಾಷ್ಟ್ರವಾಗುವುದಿಲ್ಲ. ಮುಸ್ಲಿಮರು ಯಾರ ಬೆದರಿಕೆಗೂ ಹೆದರುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, “ನಾವು ಸಂವಿಧಾನದ ಚೌಕಟ್ಟಿನೊಳಗೆ ಬದುಕುತ್ತೇವೆ ಮತ್ತು ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇವೆ. ಸಂವಿಧಾನವನ್ನು ಗೌರವಿಸಿ, ಅದರ ಮಿತಿಯೊಳಗೆ ಮಾತನಾಡಬೇಕು. ಸಮಾಜದಲ್ಲಿ ದ್ವೇಷ ಹರಡುವಂತಹ ಹೇಳಿಕೆಗಳನ್ನು ನಿಲ್ಲಿಸಬೇಕು” ಎಂದು ವಾರಿಸ್ ಪಠಾಣ್ ಆಗ್ರಹಿಸಿದ್ದಾರೆ.

ಹಾಲಿವುಡ್‌ಗೆ ಮತ್ತೊಂದು ಆಘಾತ: ‘ಜುರಾಸಿಕ್ ಪಾರ್ಕ್’ ದಂತಕಥೆ ಸ್ಯಾಮ್ ನೀಲ್ ನಿಧನ

ಸಿಡ್ನಿ: ‘ಜುರಾಸಿಕ್ ಪಾರ್ಕ್’ ಸರಣಿಯ ಡಾ. ಅಲನ್ ಗ್ರಾಂಟ್ ಪಾತ್ರದ ಮೂಲಕ ಕೋಟ್ಯಂತರ ಸಿನಿಪ್ರಿಯರ ಮನ ಗೆದ್ದಿದ್ದ ನ್ಯೂಜಿಲೆಂಡ್ ನಟ ಸ್ಯಾಮ್ ನೀಲ್ 78ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸಿಡ್ನಿಯಲ್ಲಿ ಕುಟುಂಬದವರ ಸಮ್ಮುಖದಲ್ಲಿ ಅವರು ಕೊನೆಯುಸಿರೆಳೆದಿದ್ದು, ಅಧಿಕೃತ ಇನ್‌ಸ್ಟಾಗ್ರಾಮ್ ಪ್ರಕಟಣೆಯ ಮೂಲಕ ಕುಟುಂಬ ಈ ಸುದ್ದಿಯನ್ನು ಖಚಿತಪಡಿಸಿದೆ.

ಕುಟುಂಬದ ಹೇಳಿಕೆಯ ಪ್ರಕಾರ, ಸ್ಯಾಮ್ ನೀಲ್ ಅವರ ಸಾವು ಹಠಾತ್ ಹಾಗೂ ಅನಿರೀಕ್ಷಿತವಾಗಿತ್ತು. ಆದರೆ ಅವರು ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾಗಿದ್ದರು. ಅವರಿಗೆ ಚಿಕಿತ್ಸೆ ನೀಡಿದ ಸೇಂಟ್ ವಿನ್ಸೆಂಟ್ಸ್ ಪ್ರೈವೇಟ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಕುಟುಂಬ ಕೃತಜ್ಞತೆ ಸಲ್ಲಿಸಿದ್ದು, ತಮ್ಮ ಗೌಪ್ಯತೆಯನ್ನು ಗೌರವಿಸುವಂತೆ ಮನವಿ ಮಾಡಿದೆ.

ಅಪರೂಪದ ರಕ್ತದ ಕ್ಯಾನ್ಸರ್ ವಿರುದ್ಧ ಹಲವು ವರ್ಷ ಹೋರಾಡಿದ್ದ ಸ್ಯಾಮ್ ನೀಲ್, ಇಮ್ಯುನೊಥೆರಪಿ ಸೇರಿದಂತೆ ವಿಶೇಷ ಚಿಕಿತ್ಸೆಯ ಬಳಿಕ ಈ ವರ್ಷ ಕ್ಯಾನ್ಸರ್ ಮುಕ್ತರಾಗಿರುವುದಾಗಿ ತಿಳಿಸಿದ್ದರು. ಆದರೆ ಆರೋಗ್ಯ ಸುಧಾರಿಸಿದ್ದ ಕೆಲವೇ ತಿಂಗಳಲ್ಲಿ ಅವರು ನಿಧನರಾಗಿರುವುದು ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ.

ಐದು ದಶಕಗಳಿಗೂ ಅಧಿಕ ಕಾಲದ ಸಿನಿ ಪಯಣದಲ್ಲಿ ‘ಜುರಾಸಿಕ್ ಪಾರ್ಕ್’, ‘ದಿ ಪಿಯಾನೋ’, ‘ದಿ ಹಂಟ್ ಫಾರ್ ರೆಡ್ ಅಕ್ಟೋಬರ್’, ‘ಪೊಸೆಷನ್’, ‘ಪೀಕಿ ಬ್ಲೈಂಡರ್ಸ್’ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪಾರ ಗೌರವ ಗಳಿಸಿದ್ದರು.

ಕಾವೇರಿ ಒಡಲು ಬರಿದಾಗುತ್ತಿದೆಯಾ? ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಒಳಹರಿವು ಭಾರೀ ಕುಸಿತ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಹಳೇ ಮೈಸೂರು ಭಾಗದ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ.

ಕೆಲವು ದಿನಗಳ ಹಿಂದೆ ಸುರಿದ ಉತ್ತಮ ಮಳೆಯಿಂದಾಗಿ ಕೆಆರ್‌ಎಸ್ ಡ್ಯಾಂನ ಒಳಹರಿವು 12 ಸಾವಿರ ಕ್ಯೂಸೆಕ್‌ ಗಡಿ ದಾಟಿತ್ತು. ಆದರೆ ಮಳೆ ಕಡಿಮೆಯಾಗುತ್ತಿದ್ದಂತೆ ಜುಲೈ 13ರಂದು ಒಳಹರಿವು 7,500 ಕ್ಯೂಸೆಕ್‌ಗೆ ಇಳಿದಿತ್ತು. ಇದೀಗ ಮತ್ತಷ್ಟು ಕುಸಿತ ಕಂಡಿದ್ದು, ಜಲಾಶಯಕ್ಕೆ ಕೇವಲ 3,685 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 92.54 ಅಡಿ ನೀರು ಸಂಗ್ರಹವಾಗಿದೆ. 49.452 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 17.509 ಟಿಎಂಸಿ ಅಡಿ ನೀರಿದೆ.

ಕುಡಿಯುವ ನೀರಿನ ಅಗತ್ಯಕ್ಕಾಗಿ ಸದ್ಯ 623 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಒಟ್ಟು ಸಾಮರ್ಥ್ಯದ ಅರ್ಧಕ್ಕಿಂತಲೂ ಕಡಿಮೆ ನೀರು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿರುವ ಸಂದರ್ಭದಲ್ಲಿ ರೈತರಲ್ಲಿ ಆತಂಕ ಹೆಚ್ಚಾಗಿದೆ.

ಮುಂದಿನ ದಿನಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದರೆ ಮಾತ್ರ ಜಲಾಶಯದ ಒಳಹರಿವು ಹೆಚ್ಚಾಗುವ ನಿರೀಕ್ಷೆಯಿದೆ.

 

ತುಂಗಭದ್ರಾ ನೀರು ಪೈಪ್‌ಲೈನ್‌ಗೆ ಕಲ್ಲು ತುಂಬಿದ ಕಿಡಿಗೇಡಿಗಳು! ಕೆಲಕಾಲ ನೀರು ಸರಬರಾಜು ವ್ಯತ್ಯಯ

0
ಗದಗ: ಗದಗ-ಬೆಟಗೇರಿ ಅವಳಿ ನಗರಕ್ಕೆ ತುಂಗಭದ್ರಾ ಜಲಾಶಯದಿಂದ ಕುಡಿಯುವ ನೀರು ಪೂರೈಸುವ ಮುಖ್ಯ ಪೈಪ್‌ಲೈನ್‌ಗೆ ಕಿಡಿಗೇಡಿಗಳು ಕಲ್ಲು ತುಂಬಿದ ಪರಿಣಾಮ ಕೆಲಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾದ ಘಟನೆ ಗದಗ ತಾಲೂಕಿನ ಅಡವಿಸೋಮಾಪುರ ಗ್ರಾಮದ ಬಳಿ ನಡೆದಿದೆ.
ಕಿಡಿಗೇಡಿಗಳು ಪೈಪ್ ಒಳಗೆ ಕಲ್ಲು ತುಂಬಿದ್ದರಿಂದ ನೀರಿನ ಹರಿವಿಗೆ ಅಡ್ಡಿಯಾಗಿದ್ದು, ಸಮಸ್ಯೆ ಉಂಟಾಗಿದೆ. ವಿಷಯ ತಿಳಿಯುತ್ತಿದ್ದಂತೆ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ನಗರಸಭೆ ಇಂಜಿನಿಯರ್ ಲಕ್ಷ್ಮಣ ಜೋಗದಂಡಕರ್ ಹಾಗೂ ಇನ್ಸ್‌ಪೆಕ್ಟರ್ ಸಿದ್ದರಾಮೇಶ್ವರ ಗಡೇದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ನಗರಸಭೆ ಸಿಬ್ಬಂದಿಯಿಂದ ಪೈಪ್‌ನೊಳಗಿದ್ದ ಕಲ್ಲುಗಳನ್ನು ತೆರವುಗೊಳಿಸಿ ನೀರು ಸರಬರಾಜು ವ್ಯವಸ್ಥೆಯನ್ನು ಪುನಃ ಸರಿಪಡಿಸಲಾಯಿತು.
ಸಾರ್ವಜನಿಕರ ಕುಡಿಯುವ ನೀರಿನ ವ್ಯವಸ್ಥೆಗೆ ಅಡ್ಡಿಪಡಿಸಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಂತ್ರಿಕ ದೋಷ ಶಂಕೆ: ಬೆಂಕಿಗೆ ಆಹುತಿಯಾದ ಪವನ ವಿದ್ಯುತ್ ಯಂತ್ರ!

0

ಗದಗ: ತಾಲೂಕಿನ ಕಣವಿಹೊಸೂರ ಗ್ರಾಮದ ಹೊರವಲಯದಲ್ಲಿ ಸ್ಥಾಪಿಸಲಾಗಿದ್ದ ಪವನ ವಿದ್ಯುತ್ ಯಂತ್ರದಲ್ಲಿ (ವಿಂಡ್‌ಮಿಲ್) ಏಕಾಏಕಿ ಬೆಂಕಿ ಕಾಣಿಸಿಕೊಂಡು, ಅದರ ರೆಕ್ಕೆಗಳು ಸುಟ್ಟು ಭಸ್ಮವಾದ ಘಟನೆ ಸೋಮವಾರ ನಡೆದಿದೆ.

ತಾಂತ್ರಿಕ ದೋಷದಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಬೆಂಕಿ ಕ್ಷಣಾರ್ಧದಲ್ಲೇ ವಿಂಡ್‌ಮಿಲ್‌ನ ಮೇಲ್ಭಾಗಕ್ಕೆ ವ್ಯಾಪಿಸಿ ರೆಕ್ಕೆಗಳು ಸಂಪೂರ್ಣ ಸುಟ್ಟುಹೋಗಿವೆ.

ಘಟನೆ ನಡೆದ ವೇಳೆ ಜಮೀನಿನಲ್ಲಿ ಯಾರೂ ಇಲ್ಲದ ಕಾರಣ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.

ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿಯಲು ಪರಿಶೀಲನೆ ನಡೆಸಲಾಗುತ್ತಿದೆ.

ತೂಕ ಇಳಿಸಬೇಕೆಂದಿದ್ದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಖಾನ ಸೇವಿಸಿ ಸಾಕು..!

0

ಇಂದಿನ ವೇಗದ ಜೀವನಶೈಲಿ, ಅನಿಯಮಿತ ದಿನಚರಿ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಯ ಪರಿಣಾಮವಾಗಿ ಸ್ಥೂಲಕಾಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತೂಕ ಇಳಿಸಿಕೊಳ್ಳಲು ಅನೇಕರು ವಿವಿಧ ವಿಧಾನಗಳನ್ನು ಅನುಸರಿಸುತ್ತಿದ್ದರೂ,

ಸರಿಯಾದ ಆಹಾರ ಕ್ರಮವಿಲ್ಲದೆ ಉತ್ತಮ ಫಲಿತಾಂಶ ಪಡೆಯುವುದು ಕಷ್ಟ. ಇಂತಹ ಸಂದರ್ಭದಲ್ಲಿ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಮಖಾನ (ಫಾಕ್ಸ್ ನಟ್) ತೂಕ ನಿಯಂತ್ರಣಕ್ಕೆ ಉತ್ತಮ ಆಹಾರಗಳಲ್ಲಿ ಒಂದಾಗಿದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಮಖಾನದಲ್ಲಿ ಉತ್ಕರ್ಷಣ ನಿರೋಧಕಗಳು (ಆಂಟಿ ಆಕ್ಸಿಡೆಂಟ್ಸ್), ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್ ಸೇರಿದಂತೆ ಹಲವು ಅಗತ್ಯ ಪೋಷಕಾಂಶಗಳಿವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ಅತಿಯಾಗಿ ಆಹಾರ ಸೇವಿಸುವುದನ್ನು ತಡೆಯುತ್ತದೆ.

ಆಯುರ್ವೇದದ ಪ್ರಕಾರ ಮಖಾನದಲ್ಲಿ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುವ ಗುಣಗಳಿದ್ದು, ತ್ವಚೆಯ ಆರೋಗ್ಯ ಕಾಪಾಡಲು ಸಹ ಸಹಕಾರಿಯಾಗಿದೆ. ಬೆಳಿಗ್ಗೆ ಸೇವಿಸಿದರೆ ಇದರ ಪ್ರಯೋಜನ ಇನ್ನಷ್ಟು ಹೆಚ್ಚಾಗುತ್ತದೆ ಎನ್ನಲಾಗಿದೆ.

ಮಖಾನದಲ್ಲಿರುವ ಪ್ರಮುಖ ಪೋಷಕಾಂಶಗಳು

ಒಂದು ಕಪ್ ಮಖಾನದಲ್ಲಿ ಸುಮಾರು 5 ಗ್ರಾಂ ಪ್ರೋಟೀನ್, 20 ಗ್ರಾಂ ಕಾರ್ಬೋಹೈಡ್ರೇಟ್, 33 ಮೈಕ್ರೋಗ್ರಾಂ ಫೋಲಿಕ್ ಆಮ್ಲ, 1.2 ಮಿಲಿಗ್ರಾಂ ಕಬ್ಬಿಣ, 52 ಮಿಲಿಗ್ರಾಂ ಕ್ಯಾಲ್ಸಿಯಂ, 430 ಮಿಲಿಗ್ರಾಂ ಪೊಟ್ಯಾಸಿಯಮ್, 198 ಮಿಲಿಗ್ರಾಂ ರಂಜಕ ಹಾಗೂ ಒಮೆಗಾ-3 ಮತ್ತು ಇತರೆ ಆರೋಗ್ಯಕರ ಕೊಬ್ಬಿನಾಂಶಗಳು ಇವೆ.

ಕಡಿಮೆ ಕ್ಯಾಲೊರಿಯೊಂದಿಗೆ ಹೆಚ್ಚಿನ ಫೈಬರ್ ಹೊಂದಿರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಹಾರವಾಗಿದೆ. ಪ್ರತಿದಿನ ಬೆಳಗ್ಗೆ ಒಂದು ಹಿಡಿ ಮಖಾನ ಸೇವಿಸುವುದು ಆರೋಗ್ಯಕ್ಕೆ ಲಾಭದಾಯಕ ಎಂದು ತಜ್ಞರು ಸಲಹೆ ನೀಡುತ್ತಾರೆ.

ಮಖಾನ ಸೇವನೆಯ ಪ್ರಮುಖ ಪ್ರಯೋಜನಗಳು

  • ಮಖಾನ ದೇಹದ ದೌರ್ಬಲ್ಯವನ್ನು ಕಡಿಮೆ ಮಾಡಿ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ದೈಹಿಕ ಆರೋಗ್ಯ ಸುಧಾರಿಸುವುದರ ಜೊತೆಗೆ ಸಂತಾನೋತ್ಪತ್ತಿ ಆರೋಗ್ಯಕ್ಕೂ ಸಹಕಾರಿ ಎಂದು ಪರಿಗಣಿಸಲಾಗಿದೆ.
  • ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಮಖಾನ ಮಧುಮೇಹ ಇರುವವರಿಗೆ ಸಹ ಪ್ರಯೋಜನಕಾರಿಯಾಗಿದೆ. ನಿಯಮಿತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ನೆರವಾಗಬಹುದು.
  • ಮಖಾನದಲ್ಲಿ ಆಂಟಿ ಆಕ್ಸಿಡೆಂಟ್ಸ್ ಅಧಿಕವಾಗಿರುವುದರಿಂದ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕರಿಂದ ಐದು ಮಖಾನ ಸೇವಿಸಿದರೆ ತ್ವಚೆಯ ಮೇಲಿನ ವಯಸ್ಸಿನ ಗುರುತುಗಳು ಕಡಿಮೆಯಾಗಲು ಸಹಕಾರಿಯಾಗುತ್ತದೆ.
  • ಮೂತ್ರಪಿಂಡದ ಆರೋಗ್ಯ ಕಾಪಾಡಲು ಮಖಾನ ಉತ್ತಮ ಆಹಾರವೆಂದು ಪರಿಗಣಿಸಲಾಗಿದೆ. ಜೊತೆಗೆ ಕಡಿಮೆ ಕ್ಯಾಲೊರಿ ಹಾಗೂ ಕ್ಯಾಲ್ಸಿಯಂ ಅಂಶ ಇರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹ ನೆರವಾಗುತ್ತದೆ.

ಮಖಾನವನ್ನು ಹೇಗೆ ಸೇವಿಸಬೇಕು?

ಮಖಾನವನ್ನು ದೇಸಿ ತುಪ್ಪದಲ್ಲಿ ಸ್ವಲ್ಪ ಹುರಿದು ಉಪ್ಪು ಮತ್ತು ಕರಿಮೆಣಸಿನ ಪುಡಿ ಸೇರಿಸಿ ಆರೋಗ್ಯಕರ ತಿಂಡಿಯಾಗಿ ಸೇವಿಸಬಹುದು. ಹಾಲು ಇಷ್ಟಪಡುವವರು ಮಖಾನವನ್ನು ಹಾಲಿನಲ್ಲಿ ಕುದಿಸಿ ಸೇವಿಸಬಹುದು. ನಿಯಮಿತವಾಗಿ ಮಿತ ಪ್ರಮಾಣದಲ್ಲಿ ಆಹಾರದಲ್ಲಿ ಸೇರಿಸಿಕೊಂಡರೆ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದು.