Home Blog

ಕೇಂದ್ರದ ಸುತ್ತೋಲೆಯಿಂದ ರಾಜ್ಯದಲ್ಲಿ ಪ್ಯಾರಾ ಮೆಡಿಕಲ್ ಕಾಲೇಜುಗಳು ಮುಚ್ಚುವ ಆತಂಕ: ಸಚಿವ ಶರಣಪ್ರಕಾಶ್ ಪಾಟೀಲ್

ಬೆಂಗಳೂರು: ರಾಷ್ಟ್ರೀಯ ಅಲೈಡ್ ಹಾಗೂ ಹೆಲ್ತ್ ಕೇರ್ ಪ್ರೊಫೆಶನ್ಸ್ ಆಯೋಗ (ಎನ್‌ಸಿಎಹೆಚ್‌ಪಿ) ಹೊರಡಿಸಿರುವ ಹೊಸ ಸುತ್ತೋಲೆಯಿಂದ ರಾಜ್ಯದಲ್ಲಿ ಪ್ಯಾರಾ ಮೆಡಿಕಲ್ ಕಾಲೇಜುಗಳು ಮುಚ್ಚುವ ಆತಂಕ ಎದುರಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಕಳವಳ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್‌ನ ಶೂನ್ಯ ವೇಳೆಯಲ್ಲಿ ಸದಸ್ಯ ಐವನ್ ಡಿಸೋಜಾ ಈ ವಿಷಯ ಪ್ರಸ್ತಾಪಿಸಿದರು. ಪ್ಯಾರಾ ಮೆಡಿಕಲ್ ಕೋರ್ಸ್ ಸೇರಲು ಬಯಸುವ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದುವರೆಗೆ ಎಸ್‌ಎಸ್‌ಎಲ್‌ಸಿ ನಂತರ ವೈದ್ಯಕೀಯ ಕ್ಷೇತ್ರದ ತರಬೇತಿ ಪಡೆಯಲು ಅವಕಾಶವಿತ್ತು.

ಆದರೆ ಇನ್ನುಮುಂದೆ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ತೇರ್ಗಡೆಯಾದವರಿಗೆ ಮಾತ್ರ ಪ್ರವೇಶ ನೀಡುವಂತೆ ನಿಯಮ ರೂಪಿಸಿರುವುದು ಹೊಸ ಶೈಕ್ಷಣಿಕ ಸಮಸ್ಯೆಗೆ ಕಾರಣವಾಗಲಿದೆ ಎಂದು ಅವರು ಹೇಳಿದರು.

ಎನ್‌ಸಿಎಹೆಚ್‌ಪಿ ಆಯೋಗವು ಜನವರಿ 2ರಂದು ಯುಜಿಸಿಗೆ ಪತ್ರ ಬರೆದು, ದೇಶಾದ್ಯಂತ ಪ್ಯಾರಾ ಮೆಡಿಕಲ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯ ಎಂದು ತಿಳಿಸಿದೆ. ಈ ನಿಯಮವನ್ನು 2026-27ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ತರಲು ಸೂಚಿಸಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ 32 ಸರ್ಕಾರಿ ಹಾಗೂ 608 ಖಾಸಗಿ ಸೇರಿ ಒಟ್ಟು 640 ಪ್ಯಾರಾ ಮೆಡಿಕಲ್ ಶಿಕ್ಷಣ ಸಂಸ್ಥೆಗಳಿವೆ. ಹೊಸ ನಿಯಮ ಜಾರಿಯಾದರೆ 450 ರಿಂದ 500 ಕಾಲೇಜುಗಳಿಗೆ ಅರ್ಹ ಅಭ್ಯರ್ಥಿಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಐವನ್ ಡಿಸೋಜಾ ಆತಂಕ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಶರಣ್ ಪ್ರಕಾಶ್ ಪಾಟೀಲ್, ಎನ್‌ಸಿಎಹೆಚ್‌ಪಿ ಸುತ್ತೋಲೆಯಿಂದ ರಾಜ್ಯದ ಪ್ಯಾರಾ ಮೆಡಿಕಲ್ ಕಾಲೇಜುಗಳಿಗೆ ಸಮಸ್ಯೆ ಉಂಟಾಗುವ ಭೀತಿ ಇದೆ ಎಂದು ಹೇಳಿದರು. ಈಗಾಗಲೇ ಈ ನಿಯಮದ ಬಗ್ಗೆ ಆಯೋಗದ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಲಾಗಿದೆ. ನಿಯಮದಲ್ಲಿ ಸರಳೀಕರಣ ಮಾಡುವ ಕುರಿತು ಸಭೆ ಕರೆದು ಚರ್ಚಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಹೋಟೆಲ್ ಉದ್ಯಮಕ್ಕೆ ಮತ್ತೊಂದು ಶಾಕ್: ಸದ್ಯಕ್ಕೆ ಹೋಟೆಲ್ʼಗಳಿಗೆ ಗ್ಯಾಸ್ ಪೂರೈಕೆ ಇಲ್ಲ – ಸಚಿವ ಕೆ.ಹೆಚ್. ಮುನಿಯಪ್ಪ

ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮದಿಂದ ತತ್ತರಿಸಿರುವ ಹೋಟೆಲ್ ಉದ್ಯಮಕ್ಕೆ ಕರ್ನಾಟಕ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಸದ್ಯಕ್ಕೆ ಹೋಟೆಲ್‌ಗಳಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.

ತೈಲ ಪೂರೈಕೆ ಕಂಪನಿಗಳೊಂದಿಗೆ ಇಂದು ನಡೆದ ಮಹತ್ವದ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಎರಡನೇ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಬರೆಯುತ್ತಿದ್ದಾರೆ ಎಂದು ಹೇಳಿದರು. ಪರಿಸ್ಥಿತಿ ಗಂಭೀರವಾಗಿದ್ದು, ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಸೆಕ್ರೆಟರಿ, ಕಮಿಷನರ್ ಹಾಗೂ ತೈಲ ಕಂಪನಿಗಳ ಮುಖ್ಯಸ್ಥರೊಂದಿಗೆ ಸುಮಾರು ಒಂದು ಗಂಟೆ ಕಾಲ ಸಭೆ ನಡೆಯಿತು. ಗ್ರಾಹಕರು ಅನಾವಶ್ಯಕ ಆತಂಕಕ್ಕೆ ಒಳಗಾಗಬಾರದು. ಗ್ಯಾಸ್ ಡಬಲ್ ಬುಕ್ಕಿಂಗ್ ಮಾಡಬೇಡಿ ಹಾಗೂ ಮಿತವಾಗಿ ಬಳಕೆ ಮಾಡುವಂತೆ ಸಚಿವರು ಸಾರ್ವಜನಿಕರಿಗೆ ಮನವಿ ಮಾಡಿದರು.

ಹಡಗುಗಳ ಸಂಚಾರ ಈಗಾಗಲೇ ಆರಂಭವಾಗಿದ್ದು, ಅಗತ್ಯ ಸೇವಾ ವಲಯಗಳಿಗೆ ಗ್ಯಾಸ್ ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ. ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ಏರ್‌ಲೈನ್ಸ್ ಹಾಗೂ ರೈಲ್ವೆ ಕ್ಯಾಂಟೀನ್‌ಗಳಿಗೆ ಶೇ.100ರಷ್ಟು ಸಿಲಿಂಡರ್ ಪೂರೈಕೆ ಮಾಡಲು ಒಪ್ಪಿಗೆ ನೀಡಲಾಗಿದೆ.

ಪ್ರತಿದಿನ ಸುಮಾರು 6,500 ಸಿಲಿಂಡರ್ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇದರಲ್ಲಿ 4,200 ಸಿಲಿಂಡರ್‌ಗಳನ್ನು ಅಗತ್ಯ ಸೇವಾ ವಲಯಕ್ಕೆ ಪೂರೈಕೆ ಮಾಡಲು ನಿರ್ಧರಿಸಲಾಗಿದೆ. ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಇಂದಿರಾ ಕ್ಯಾಂಟೀನ್‌ಗಳಿಗೆ ಸುಮಾರು 4,200 + 1,200 ಸಿಲಿಂಡರ್‌ಗಳನ್ನು ನೀಡಲಾಗುತ್ತದೆ.

ಜೊತೆಗೆ ಅಗತ್ಯ ಸೇವಾ ವಲಯಕ್ಕೆ 5,200 ಸಿಲಿಂಡರ್ ಹಾಗೂ ಆಟೋಗಳಿಗೆ 2,250 ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಆದರೆ ಸದ್ಯಕ್ಕೆ ಹೋಟೆಲ್‌ಗಳಿಗೆ ಗ್ಯಾಸ್ ಪೂರೈಕೆ ಇರುವುದಿಲ್ಲ. ಹೋಟೆಲ್ ಮಾಲೀಕರು ತಾತ್ಕಾಲಿಕವಾಗಿ ಎಲೆಕ್ಟ್ರಿಕ್ ಸ್ಟವ್ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಮಾಡಿದ್ದಾರೆ.

ಹುಡುಗಿ ಜೊತೆಗಿನ ವಿಡಿಯೋ ಚಿತ್ರೀಕರಣ ಆರೋಪ: ಸಿನಿಮೀಯ ಶೈಲಿಯಲ್ಲಿ ಯುವಕನ ಕಿಡ್ನಾಪ್ – ಮೂವರು ಬಂಧನ

ಬೆಂಗಳೂರು:ಹುಡುಗಿಯೊಬ್ಬಳ ಜೊತೆಗಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ ಎಂಬ ಆರೋಪದ ಮೇಲೆ ಯುವಕನನ್ನು ಸಿನಿಮೀಯ ಶೈಲಿಯಲ್ಲಿ ಕಿಡ್ನಾಪ್ ಮಾಡಿದ ಘಟನೆ ಮಹಾದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೂಲತಃ ಅಸ್ಸಾಂ ರಾಜ್ಯದವರಾದ ಶಬ್ಬೀರ್ ಅಲಿಯಾಸ್ ಸಾದಿರ್ ಖಾ ಬೆಂಗಳೂರಿನ ಜ್ಯೂಸ್ಅಂ ಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಜೀದ್ ಎಂಬಾತ ಹುಡುಗಿಯೊಬ್ಬಳ ಜೊತೆ ಇದ್ದಾಗ, ಸಾದಿರ್ ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ತಿಳಿದ ಸಜೀದ್ ತೀವ್ರ ಆಕ್ರೋಶಗೊಂಡು, ಸಾದಿರ್ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದಾನೆ.

ಸಾದಿರ್ ತನ್ನ ಸ್ನೇಹಿತನ ಮನೆ ಬಳಿ ಇದ್ದಾಗ, ಆಟೋದಲ್ಲಿ ಬಂದ ಸಜೀದ್ ಮತ್ತು ಆತನ ನಾಲ್ವರು ಸಹಚರರು ಸಾದಿರ್‌ನನ್ನು ಬಲವಂತವಾಗಿ ಅಪಹರಿಸಿದ್ದಾರೆ. ಜನನಿಬಿಡ ಪ್ರದೇಶದಲ್ಲೇ ಈ ಕಿಡ್ನಾಪ್ ನಡೆದಿದ್ದು, ನಂತರ ಆರೋಪಿಗಳು ಸಾದಿರ್‌ನನ್ನು ರಾಮಮೂರ್ತಿನಗರದ ಕಡೆಗೆ ಕರೆದೊಯ್ದಿದ್ದಾರೆ.

ದಾರಿಯುದ್ದಕ್ಕೂ ಬೆದರಿಕೆ ಹಾಕಿದ ಆರೋಪಿಗಳು, ಸಾದಿರ್‌ನ ಮೊಬೈಲ್‌ನಲ್ಲಿದ್ದ ವಿಡಿಯೋವನ್ನು ಬಲವಂತವಾಗಿ ಡಿಲೀಟ್ ಮಾಡಿಸಿದ್ದಾರೆ. ಬಳಿಕ ಸಾದಿರ್‌ನನ್ನು ಬಿಟ್ಟು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಕಿಡ್ನಾಪ್‌ನಿಂದ ತಪ್ಪಿಸಿಕೊಂಡ ಸಾದಿರ್ ತಕ್ಷಣವೇ ಮಹಾದೇವಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಪೊಲೀಸರ ಕಾರ್ಯಾಚರಣೆಯಲ್ಲಿ ಮುಖ್ಯ ಆರೋಪಿ ಸಜೀದ್, ಸುಬ್ರಮಣಿ ಹಾಗೂ ಓರ್ವ ಅಪ್ರಾಪ್ತನನ್ನು ಬಂಧಿಸಲಾಗಿದೆ. ಈ ಕಿಡ್ನಾಪ್ ಪ್ರಕರಣದಲ್ಲಿ ಒಟ್ಟು ಐವರು ಭಾಗಿಯಾಗಿದ್ದು, ಉಳಿದ ಇಬ್ಬರು ಆರೋಪಿಗಳಾದ ವಿನ್ಸೆಟ್ ಮತ್ತು ಚಿಂಟುಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಬಂಧಿತರಿಂದ ಕಿಡ್ನಾಪ್‌ಗೆ ಬಳಸಿದ್ದ ಆಟೋವನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಮಹಾದೇವಪುರ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.

ಚಿತ್ರದುರ್ಗದಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಣೆ ಲಾರಿ‌ ಪೊಲೀಸರ ವಶಕ್ಕೆ! ಚಾಲಕ ಅರೆಸ್ಟ್

ಚಿತ್ರದುರ್ಗ: ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಉಪಾಧ್ಯ ಹೋಟೆಲ್ ಬಳಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಬಡಾವಣೆ ಠಾಣಾ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ಶಿವಮೊಗ್ಗದಿಂದ ಚಿತ್ರದುರ್ಗ ಮೂಲಕ ತುಮಕೂರು ಕಡೆಗೆ ಹೊರಟಿದ್ದ ಲಾರಿಯನ್ನು ಸ್ಥಳೀಯರು ಅನುಮಾನದ ಆಧಾರದ ಮೇಲೆ ತಡೆದಿದ್ದಾರೆ. ಉಪಾಧ್ಯ ಹೋಟೆಲ್ ಬಳಿ ಲಾರಿಯನ್ನು ನಿಲ್ಲಿಸಲು ಯತ್ನಿಸುವ ವೇಳೆ ಚಾಲಕ ನಿಯಂತ್ರಣ ಕಳೆದುಕೊಂಡು ಹೋಟೆಲ್ ಬೋರ್ಡ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಈ ವೇಳೆ ಲಾರಿಯಿಂದ ಪಡಿತರ ಅಕ್ಕಿ ಚೀಲಗಳು ಕೆಳಗೆ ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಹಾಗೂ ಹೋಟೆಲ್ ಮಾಲೀಕರು ಲಾರಿಯನ್ನು ತಡೆಯಲು ಮುಂದಾಗಿದ್ದಾರೆ. ಘಟನೆ ಬಳಿಕ ಲಾರಿಯನ್ನು ತೆಗೆದುಕೊಂಡು ಹೋಗಲು ಚಾಲಕ ಪ್ರಯತ್ನಿಸಿದರೂ, ಸ್ಥಳೀಯ ನಿವಾಸಿಗಳು ಕಾರನ್ನು ಅಡ್ಡಗಟ್ಟಿ ಲಾರಿಯನ್ನು ತಡೆದಿದ್ದಾರೆ.

ತಕ್ಷಣವೇ ಚಿತ್ರದುರ್ಗದ ಬಡಾವಣೆ ಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಘಟನಾ ಸ್ಥಳಕ್ಕೆ ಬಂದ ಪೊಲೀಸರು ಲಾರಿಯನ್ನು ಸಂಪೂರ್ಣವಾಗಿ ವಶಕ್ಕೆ ಪಡೆದು ಚಾಲಕನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಶಾಲೆ ಬಿಸಿಯೂಟಕ್ಕೂ ಗ್ಯಾಸ್ ಕೊರತೆ: ಸೌದೆ ಒಲೆಯಲ್ಲೇ ಅಡುಗೆ ಮಾಡಿದ ಸಿಬ್ಬಂದಿ!

ಚಿಕ್ಕಮಗಳೂರು: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಿಂದ ಉಂಟಾದ ಗ್ಯಾಸ್ ಕೊರತೆಯ ಪರಿಣಾಮ ಶಾಲೆಗಳ ಬಿಸಿಯೂಟ ಯೋಜನೆ ಮೇಲೂ ಬೀರಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ಯಾಸ್ ಸಿಲಿಂಡರ್ ಸಿಗದೆ ಸಿಬ್ಬಂದಿ ಅಡುಗೆ ಮಾಡಲು ಪರದಾಡಿದ್ದಾರೆ.

ಸಿಲಿಂಡರ್ ಸರಬರಾಜಾಗದ ಹಿನ್ನೆಲೆ ಶಾಲೆಯ ಸಿಬ್ಬಂದಿ ಸೌದೆ ಬಳಸಿ ಬಯಲಲ್ಲೇ ಬಿಸಿಯೂಟ ಸಿದ್ಧಪಡಿಸಿದ್ದಾರೆ. ಕಳೆದ ಐದು ದಿನಗಳಿಂದ ಗ್ಯಾಸ್ ಇಲ್ಲದೆ ಸೌದೆ ಬಳಸಿ ಅಡುಗೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಶಾಲೆಯಲ್ಲಿ ಸುಮಾರು 60 ರಿಂದ 70 ವಿದ್ಯಾರ್ಥಿಗಳು ಇದ್ದು, ಗ್ಯಾಸ್ ಇಲ್ಲದೆ ಸೌದೆಯಲ್ಲಿ ಅಷ್ಟು ಮಕ್ಕಳಿಗೆ ಅಡುಗೆ ಮಾಡುವುದು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಸೂಚನೆಯಿದ್ದರೂ ಗ್ಯಾಸ್ ಏಜೆನ್ಸಿ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ನಡುವೆ ಪರೀಕ್ಷೆ ಸಮಯವಾಗಿರುವುದರಿಂದ ಶಿಕ್ಷಕರು ಮಕ್ಕಳಿಗೆ ಅಭ್ಯಾಸ ಮಾಡಿಸುತ್ತಿದ್ದು, ಅಡುಗೆ ಸಮಸ್ಯೆಯನ್ನು ಸಹ ಎದುರಿಸುವುದು ಕಷ್ಟಕರವಾಗಿದೆ ಎಂದು ತಿಳಿಸಿದ್ದಾರೆ. ತಕ್ಷಣ ಶಾಲೆಗೆ ಗ್ಯಾಸ್ ಸೌಲಭ್ಯ ಕಲ್ಪಿಸಬೇಕೆಂದು ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ಉಡುಪಿಯಲ್ಲಿ LPG ಟ್ಯಾಂಕರ್ ಪಲ್ಟಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಅಸ್ತವ್ಯಸ್ತ

0

ಉಡುಪಿ: ಮಧ್ಯಪ್ರಾಚ್ಯ ಯುದ್ಧದಿಂದ ಗ್ಯಾಸ್ ಅಭಾವದ ಪರಿಸ್ಥಿತಿ ನಿರ್ಮಾಣವಾಗಿರುವ ನಡುವೆಯೇ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಎಲ್‌ಪಿಜಿ ಗ್ಯಾಸ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ನಡೆದಿದೆ.

ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟ್ಯಾಂಕರ್ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಗುಚಿ ಬಿದ್ದಿದೆ. ಇದರ ಪರಿಣಾಮ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಘಟನೆಯ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಟ್ಯಾಂಕರ್‌ನಲ್ಲಿ ಅನಿಲ ಸೋರಿಕೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಿರಂತರವಾಗಿ ನೀರು ಹಾಯಿಸಲಾಯಿತು.

ಮಂಗಳೂರಿನಿಂದ ಮತ್ತೊಂದು ಟ್ಯಾಂಕರ್ ತರಿಸಿ ಅನಿಲವನ್ನು ವರ್ಗಾಯಿಸುವ ಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ! ನ‌ಗರದಲ್ಲಿ ದರಗಳು ಹೀಗಿವೆ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಏರಿಳಿತದ ಪರಿಣಾಮ ಚಿನ್ನ ಮತ್ತು ಬೆಳ್ಳಿ ದರದಲ್ಲೂ ಬದಲಾವಣೆ ಕಂಡುಬರುತ್ತಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಗುಡ್ ರಿಟರ್ನ್ಸ್ ವರದಿ ಮಾಡಿದೆ.

ಮಾರ್ಚ್ 16, 2026ರ ಸೋಮವಾರದಂದು 24 ಕ್ಯಾರೆಟ್ ಚಿನ್ನದ 10 ಗ್ರಾಂ ದರದಲ್ಲಿ 490 ರೂಪಾಯಿ ಇಳಿಕೆ ಕಂಡುಬಂದಿದ್ದು, ಬೆಲೆ 1,59,170 ರೂಪಾಯಿಗೆ ತಲುಪಿದೆ. ಇದೇ ವೇಳೆ 1 ಗ್ರಾಂ ಚಿನ್ನದ ಬೆಲೆ 49 ರೂಪಾಯಿ ಇಳಿಕೆ ಆಗಿ 15,917 ರೂಪಾಯಿಗೆ ದಾಖಲಾಗಿದೆ.

ಇನ್ನು 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 45 ರೂಪಾಯಿ ಇಳಿಕೆ ಕಂಡು 14,590 ರೂಪಾಯಿಗೆ ತಲುಪಿದ್ದು, 10 ಗ್ರಾಂ ಚಿನ್ನದ ದರ 1,45,900 ರೂಪಾಯಿಗೆ ಇಳಿಕೆಯಾಗಿದೆ.

ಬೆಳ್ಳಿ ದರದಲ್ಲಿಯೂ ಗಮನಾರ್ಹ ಕುಸಿತ ಕಂಡುಬಂದಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ಸುಮಾರು 5 ಸಾವಿರ ರೂಪಾಯಿ ಇಳಿಕೆ ಆಗಿ 2,70,000 ರೂಪಾಯಿಗೆ ತಲುಪಿದೆ.

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇರಾನ್-ಅಮೆರಿಕ ಸಂಘರ್ಷದ ನಡುವೆ ಡಾಲರ್ ಮೌಲ್ಯದ ಏರಿಳಿತದ ಪರಿಣಾಮ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಭಾರಿ ಚಲನೆ ಕಂಡುಬರುತ್ತಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

 

ತ್ರಿಬಲ್ ರೈಡಿಂಗ್, ನೋ ಹೆಲ್ಮೆಟ್: ‘ಹುಲಿ ಹುಲಿ’ ಅಂತಾ ವಿಡಿಯೋ ಮಾಡಿದ್ದ ರೀಲ್ಸ್ ಮಂಜುಗೆ ಖಾಕಿ ಕ್ಲಾಸ್!

ದೇವನಹಳ್ಳಿ: ದೊಡ್ಡಬಳ್ಳಾಪುರದಲ್ಲಿ ಹೆಲ್ಮೆಟ್ ಧರಿಸದೇ ತ್ರಿಬಲ್ ರೈಡ್ ಮಾಡಿಕೊಂಡು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡವರಿಗೆ ಪೊಲೀಸರೇ ಶಾಕ್ ನೀಡಿದ್ದಾರೆ.

ಬೈಕ್ ಮೇಲೆ ಮೂವರು ಸೇರಿ ‘ಹುಲಿ ಹುಲಿ’ ಹಾಡಿಗೆ ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ರೀಲ್ಸ್ ಮಂಜು, ಗಂಗಾರಂಗ ಮತ್ತು ಸವಿತಾ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಹೆಲ್ಮೆಟ್ ಧರಿಸದೇ ಸಂಚರಿಸಿದ್ದಲ್ಲದೇ, ಒಂದೇ ಬೈಕ್‌ನಲ್ಲಿ ಮೂವರು ಪ್ರಯಾಣಿಸಿ ಸಂಚಾರ ನಿಯಮ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ರೀಲ್ಸ್ ಮಂಜುವನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು. ಬಳಿಕ ನಿಯಮ ಉಲ್ಲಂಘನೆ ಸಂಬಂಧ ಒಂದು ಸಾವಿರ ರೂಪಾಯಿ ದಂಡ ವಿಧಿಸಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಮುಂದಿನ ದಿನಗಳಲ್ಲಿ ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾಮಾಜಿಕ ಜಾಲತಾಣಕ್ಕಾಗಿ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ರೀಲ್ಸ್ ಮಾಡಬಾರದು ಎಂದು ಪೊಲೀಸರು ಸೂಚಿಸಿದ್ದಾರೆ.

ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

 

ಉಡುಪಿ: ಕಟಪಾಡಿಯಲ್ಲಿ ಎಲ್‌ಪಿಜಿ ಟ್ಯಾಂಕರ್ ಪಲ್ಟಿ; ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ!

ಉಡುಪಿ: ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಎಲ್‌ಪಿಜಿ ಗ್ಯಾಸ್ ಸಾಗಿಸುತ್ತಿದ್ದ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.

ಕಾಮಗಾರಿ ನಡೆಯುತ್ತಿದ್ದ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಕಾಪು ತಾಲೂಕಿನ ಕಟಪಾಡಿ ಭಾಗದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟ್ಯಾಂಕರ್ ಸಂಚರಿಸುತ್ತಿದ್ದಾಗ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಗ್ಯಾಸ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಟ್ಯಾಂಕರ್‌ನಲ್ಲಿ ಅನಿಲ ಸೋರಿಕೆ ಆಗಿದೆಯೇ ಎಂಬುದನ್ನು ಅಧಿಕಾರಿಗಳು ನಿಖರವಾಗಿ ಪರಿಶೀಲಿಸಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರು. ಘಟನೆ ನಡೆದ ತಕ್ಷಣ ಸುತ್ತಮುತ್ತಲಿನ ಪ್ರದೇಶದಲ್ಲಿ ಎಚ್ಚರಿಕೆ ವಹಿಸಲಾಗಿದ್ದು, ಜನರಲ್ಲಿ ಆತಂಕ ಮೂಡಿತ್ತು.

ಘಟನೆಯ ಪರಿಣಾಮ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಬಳಿಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಸಂಚಾರವನ್ನು ಹಂತ ಹಂತವಾಗಿ ಸಾಮಾನ್ಯಗೊಳಿಸಲಾಯಿತು. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಗ್ಯಾಸ್ ಅಭಾವ ಹೆಚ್ಚಳ: ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ! ದಂಧೆಕೋರರ ವಿರುದ್ದ ದಾಖಲಾಯ್ತು FIR

ಬೆಂಗಳೂರು: ಕರ್ನಾಟಕದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಕೊರತೆ ತೀವ್ರಗೊಂಡಿದ್ದು, ಅದರ ಪರಿಣಾಮವಾಗಿ ಬೆಂಗಳೂರಿನ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಕಾರ್ಯಾಚರಣೆಗೆ ದೊಡ್ಡ ಹೊಡೆತ ಬಿದ್ದಿದೆ.

ವಿಶೇಷವಾಗಿ ತೈಲ ಮತ್ತು ಅನಿಲ ಪೂರೈಕೆಯ ಅಡಚಣೆಯಿಂದ ಹಲವು ಹೋಟೆಲ್‌ಗಳು ತಮ್ಮ ಸೇವೆಗಳನ್ನು ಸೀಮಿತಗೊಳಿಸುವಂತಾಗಿದ್ದು, ಕೆಲವು ಕಡೆ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನ ಹಲವೆಡೆ, ವಿಶೇಷವಾಗಿ ಬನಶಂಕರಿ ಮತ್ತು ಮಲ್ಲೇಶ್ವರಂ ಭಾಗಗಳ ಹೋಟೆಲ್‌ಗಳಲ್ಲಿ ಗ್ರಾಹಕರ ಸಂಖ್ಯೆ ಕೂಡ ಕುಸಿದಿದೆ.

ನಗರದ ಆಹಾರೋದ್ಯಮದ ಮೇಲೆ ಈ ಬಿಕ್ಕಟ್ಟು ಗಂಭೀರ ಪರಿಣಾಮ ಬೀರಿದ್ದು, ಹಲವು ವರ್ಷಗಳ ಇತಿಹಾಸವಿರುವ ಖ್ಯಾತ ಉಪಾಹಾರ ಮಂದಿರಗಳೂ ಸಂಕಷ್ಟಕ್ಕೆ ಸಿಲುಕಿವೆ. ಎಲ್‌ಪಿಜಿ ಅಭಾವದಿಂದಾಗಿ ಕೆಲವು ಹೋಟೆಲ್‌ಗಳು ಪದಾರ್ಥಗಳ ಪಟ್ಟಿಯನ್ನು ಕಡಿಮೆ ಮಾಡಬೇಕಾದ ಪರಿಸ್ಥಿತಿಗೆ ತಳ್ಳಲ್ಪಟ್ಟಿವೆ. ಇನ್ನು ಕೆಲವೆಡೆ ಅಡುಗೆಗೆ ಬೇಕಾದ ಗ್ಯಾಸ್ ದೊರೆಯದೆ ಹೋಟೆಲ್‌ಗಳ ಕಾರ್ಯಾಚರಣೆಯೇ ಅಸ್ತವ್ಯಸ್ತವಾಗಿದೆ ಎಂದು ವರದಿಯಾಗಿದೆ. ಬೆಂಗಳೂರಿನ ಹೋಟೆಲ್‌ಗಳ ವ್ಯವಹಾರದಲ್ಲಿ ಸುಮಾರು 30 ಶೇಕಡಾ ಇಳಿಕೆ ಕಂಡುಬಂದಿದೆ ಎಂಬ ವರದಿಗಳು ತಿಳಿಸಿವೆ.

ಈ ಬಿಕ್ಕಟ್ಟಿನ ನಡುವೆ ಕಾಳಸಂತೆಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಅಕ್ರಮ ಮಾರಾಟವೂ ಹೆಚ್ಚಾಗಿದೆ. ಸಾಮಾನ್ಯವಾಗಿ ಸುಮಾರು 1,800 ರೂಪಾಯಿಗೆ ದೊರೆಯುವ ವಾಣಿಜ್ಯ ಸಿಲಿಂಡರ್‌ಗಳು 4,000ರಿಂದ 5,000 ರೂಪಾಯಿವರೆಗೆ ಮಾರಾಟವಾಗುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ. ಇಂತಹ ಅಕ್ರಮ ಸಂಗ್ರಹಣೆ ಮತ್ತು ಮಾರಾಟದ ವಿರುದ್ಧ ಪೀಣ್ಯ, ಚಿಕ್ಕಜಾಲ ಹಾಗೂ ಕೆಂಗೇರಿ ಭಾಗಗಳಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಹಲವು ಪ್ರಕರಣಗಳು ದಾಖಲಾಗಿವೆ. ತಪಾಸಣೆಯಲ್ಲಿ ಅನಧಿಕೃತ ಸಂಗ್ರಹಣೆ, ಅಕ್ರಮ ಮರುಪೂರೈಕೆ ಮತ್ತು ವಾಣಿಜ್ಯ ಬಳಕೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಮಟ್ಟದಲ್ಲೂ ಸಮಸ್ಯೆ ಚರ್ಚೆಗೆ ಬಂದಿದ್ದು, ವಾಣಿಜ್ಯ ಎಲ್‌ಪಿಜಿ ಪೂರೈಕೆ ಇನ್ನೂ 7ರಿಂದ 10 ದಿನಗಳಲ್ಲಿ ಹಂತ ಹಂತವಾಗಿ ಸಾಮಾನ್ಯ ಸ್ಥಿತಿಗೆ ಬರಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ. ಈ ಅವಧಿಯಲ್ಲಿ ಆಸ್ಪತ್ರೆಗಳು, ವಸತಿ ನಿಲಯಗಳು, ಶಾಲೆಗಳು ಮುಂತಾದ ಅಗತ್ಯ ಸೇವೆಗಳಿಗೆ ಆದ್ಯತೆಯ ಆಧಾರದ ಮೇಲೆ ಪೂರೈಕೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಹೋಟೆಲ್‌ಗಳು ಹಾಗೂ ಸಮಾರಂಭ ಭವನಗಳಿಗೆ ಮಾತ್ರ ತಾತ್ಕಾಲಿಕ ಸಂಕಷ್ಟ ಎದುರಾಗಲಿದೆ ಎಂಬುದು ಸರ್ಕಾರದ ಹೇಳಿಕೆ.

ಇದೇ ವೇಳೆ ಮುಖ್ಯಮಂತ್ರಿಯೂ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿರುವುದು ವರದಿಯಾಗಿದೆ. ರಾಜ್ಯದ ಜನರು, ವಿಶೇಷವಾಗಿ ಹೋಟೆಲ್ ಆಹಾರಕ್ಕೆ ಅವಲಂಬಿತರಾಗಿರುವವರು, ಈ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.

error: Content is protected !!