ಹಗರಿಬೊಮ್ಮನಹಳ್ಳಿ: ಪಟ್ಟಣದ ಎಪಿಎಂಸಿ ಬಳಿ ಪೊಲೀಸರ ಸೋಗಿನಲ್ಲಿ ಬಂದ ಇಬ್ಬರು ಖದೀಮರು 1.5 ಗ್ರಾಂ ತೂಕದ ಚಿನ್ನದ ಉಂಗುರ ಲಪಟಾಯಿಸಿರುವ ಘಟನೆ ನಡೆದಿದೆ.
ಚಿಂತ್ರಪಳ್ಳಿ ಗ್ರಾಮದ ನಿವಾಸಿ ಕೆ.ಎಂ. ಗಂಗಾಧರ ಅವರು ಭಾನುವಾರ ತಮ್ಮ ಅಮ್ಮನ ಮನೆಯಲ್ಲಿ ಎರಡು ಸೈಕಲ್ ರಿಪೇರಿ ಮಾಡಿಸಿಕೊಂಡು ಮಕ್ಕಳಿಗೆ ನೀಡಿ ಮನೆಗೆ ಬರಲು ಸೂಚಿಸಿ, ಚಿಂತ್ರಪಳ್ಳಿಯಿಂದ ಹಗರಿಬೊಮ್ಮನಹಳ್ಳಿಗೆ ಬಂದಿದ್ದರು.
ಈ ವೇಳೆ ಬೈಕ್ನಲ್ಲಿ ಮೂವರು ಪ್ರಯಾಣಿಸುತ್ತಿರುವುದನ್ನು ಗಮನಿಸಿದ ಇಬ್ಬರು ಖದೀಮರು ಅವರನ್ನು ನಿಲ್ಲಿಸಿ, “ನಾವು ಪೊಲೀಸರು, ತ್ರಿಬಲ್ ರೈಡ್ ಮಾಡುವುದು ತಪ್ಪು” ಎಂದು ಹೇಳಿ ಮಾತಿನಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಗಂಗಾಧರ ಅವರು “ನಮ್ಮ ಊರು ಹತ್ತಿರವೇ ಇದೆ, ಸೈಕಲ್ ರಿಪೇರಿಗಾಗಿ ಬಂದಿದ್ದೇವೆ” ಎಂದು ತಿಳಿಸಿದರೂ, ಖದೀಮರು ಮಾತಿನ ಚತುರತೆಯಿಂದ ಮಂಕುಬೂದಿ ಎರಚಿದ್ದಾರೆ.
ಗಂಗಾಧರ ಅವರ ಕೈಯಲ್ಲಿದ್ದ 1.5 ಗ್ರಾಂ ತೂಕದ ಚಿನ್ನದ ಉಂಗುರವನ್ನು ಗಮನಿಸಿದ ಖದೀಮರು, “ಇಂತಹ ಬಂಗಾರವನ್ನು ಕಾಣುವಂತೆ ಹಾಕಿಕೊಳ್ಳಬಾರದು, ಜೇಬಿನಲ್ಲಿ ಇಟ್ಟುಕೊಳ್ಳಿ” ಎಂದು ಸಲಹೆ ನೀಡಿದ್ದಾರೆ. ಅವರು ಉಂಗುರವನ್ನು ತೆಗೆದು ಜೇಬಿನಲ್ಲಿ ಇಡಲು ಮುಂದಾದಾಗ, “ಹೀಗೆ ಇಟ್ಟರೆ ಬೀಳಬಹುದು, ಪೇಪರ್ನಲ್ಲಿ ಸುತ್ತಿ ಕೊಡುತ್ತೇವೆ” ಎಂದು ಹೇಳಿ, ಪೇಪರ್ನಲ್ಲಿ ಸುತ್ತಿದಂತೆ ಮಾಡಿ ಕಲ್ಲನ್ನು ಇಟ್ಟು ಹಿಂತಿರುಗಿಸಿದ್ದಾರೆ.
ಸ್ವಲ್ಪ ಹೊತ್ತಿನ ನಂತರ ಪೇಪರ್ ತೆರೆಯುತ್ತಿದ್ದಂತೆ ಕಲ್ಲು ಕಾಣಿಸಿಕೊಂಡಿದ್ದು, ಗಂಗಾಧರ ಅವರು ಬೆಚ್ಚಿಬಿದ್ದು ತಕ್ಷಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಇದೇ ರೀತಿಯ ಮೋಸದ ಘಟನೆಗಳು ಬಸವೇಶ್ವರ ಬಜಾರ್ ಪ್ರದೇಶದಲ್ಲಿ ಮಹಿಳೆಯೊಬ್ಬರನ್ನು ಗುರಿಯಾಗಿಸಿಕೊಂಡು ಹಾಗೂ ಗಾಳೆಮ್ಮನ ಗುಡಿ ಸಮೀಪ ಮಡಿವಾಳರ ಅಂಬಣ್ಣ ಎಂಬುವರಿಗೆ ನಡೆದಿರುವುದು ತಿಳಿದು ಬಂದಿದೆ. ಪಟ್ಟಣದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವ ಜೊತೆಗೆ ಸಾರ್ವಜನಿಕರೂ ಜಾಗೃತರಾಗಿರಬೇಕೆಂದು ಮನವಿ ಮಾಡಲಾಗಿದೆ.
ಅಪರಿಚಿತರನ್ನು ಪೊಲೀಸರಂತೆ ನಂಬಬೇಡಿ; ಅವರ ಗುರುತಿನ ಚೀಟಿ ಪರಿಶೀಲಿಸಿ. ಸಾರ್ವಜನಿಕ ಸ್ಥಳಗಳಲ್ಲಿ ಚಿನ್ನಾಭರಣಗಳನ್ನು ಪ್ರದರ್ಶನದಂತೆ ಧರಿಸುವುದನ್ನು ತಪ್ಪಿಸಿ. ಶಂಕಾಸ್ಪದ ವರ್ತನೆ ಕಂಡುಬಂದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

