Home Blog

ಕೆಎಸ್‌ಆರ್‌ಟಿಸಿ ಕನ್ನಡದ ತೇರು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಲಕ್ಷ್ಮೇಶ್ವರ ಸಾರಿಗೆ ಘಟಕದ ಹಲವು ಬಸ್ಸುಗಳು ಹಳದಿ-ಕೆಂಪು ಬಣ್ಣದೊಂದಿಗೆ ಅಲಂಕಾರಗೊಂಡಿದ್ದವು. ವಿಶೇಷವಾಗಿ ಘಟಕದ ಚಾಲಕ ಎನ್.ಜಿ. ಬೇನಾಳ ಅವರು ತಾವು ಚಾಲನೆ ಮಾಡುವ ಬಸ್ಸನ್ನು ಸಂಪೂರ್ಣವಾಗಿ ಕನ್ನಡದ ತೇರನ್ನಾಗಿಸಿದ್ದರು.

ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಕೆಂಪು-ಹಳದಿ ಬಲೂನ್, ರಿಬ್ಬನ್, ಬಾಳೆಕಂಬ ತಳಿರು-ತೋರಣಗಳಿಂದ ಸಿಂಗರಿಸಿದ್ದರು. ಬಸ್‌ನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ, ಕನ್ನಡ ಕವಿಗಳ, ಸಾಹಿತಿಗಳ ಭಾವಚಿತ್ರಗಳು, ಅಲ್ಲದೆ ಬಸ್‌ನ ಸೀಟುಗಳನ್ನು ಕೆಂಪು-ಹಳದಿ ಬಣ್ಣ ಕಾಣುವಂತೆ ಸಿಂಗರಿಸಿದ್ದರು. ಬಸ್ಸಿನ ಅಲಂಕಾರಕ್ಕೆ ಕುಟುಂಬಸ್ಥರೂ ಸಹಕಾರ ನೀಡಿದರು.

ಚಾಲಕರ ಈ ಕನ್ನಡ ಪ್ರೀತಿಗೆ ಘಟಕ ವ್ಯವಸ್ಥಾಪಕರಾದ ಸವಿತಾ ಆದಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಯಾಣಿಕರು ಬಸ್ಸಿನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಘಟಕದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಡಿ.ಎಚ್. ಸೊರಟೂರ ಕನ್ನಡ ಗೀತೆಗಳನ್ನು ಹಾಡಿ ಮನರಂಜಿಸಿದರು.

ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಲು ವಯೋಮಾನದ ಹಂಗಿಲ್ಲ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವ್ಯಕ್ತಿ ತನ್ನಲ್ಲಿನ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಲು ಅವನಿಗೆ ವಯಸ್ಸಿನ ಯಾವುದೇ ಮಿತಿ ಅಡ್ಡ ಬರುವುದಿಲ್ಲ. ಅವನಲ್ಲಿ ಮನೋ ಸಾಮರ್ಥ್ಯವಿದ್ದರೆ ಆತ ಯಾವಾಗ ಬೇಕಾದರೂ ತನ್ನಲ್ಲಿನ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಬಹುದು ಎಂದು ಅಬ್ಬಿಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗುರುನಾಥ ಅವರೆಡ್ಡಿ ಹೇಳಿದರು.

ಸಮೀಪದ ಅಬ್ಬಿಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಅಬ್ಬಿಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ರೋಣ-ಗಜೇಂದ್ರಗಡ ತಾಲೂಕಿನ 45 ವರ್ಷ ಮೇಲ್ಪಟ್ಟ ಲೆಜೆಂಡ್ಸ್ ಆಟಗಾರರ ಟೂರ್ನಿಯ ನಿಮಿತ್ತ ಅಬ್ಬಿಗೇರಿ ಲೆಜೆಂಡ್ಸ್ ತಂಡದ ಆಟಗಾರರಿಗೆ ಜರ್ಸಿ ವಿತರಣೆ ಮಾಡಿ ಅವರು ಮಾತನಾಡಿದರು.

ಜಿ.ಪಂ. ಮಾಜಿ ಸದಸ್ಯ ಸೋಮಣ್ಣ ಹರ್ಲಾಪೂರ ಮಾತನಾಡಿ, ಕ್ರೀಡೆಗಳು ಸಾಮಾಜಿಕ ಬೆಳವಣಿಗೆಗೆ ಸಹಾಯಕವಾಗುತ್ತವೆ. ನಲವತ್ತೆತ್ತರದ ನಂತರವೂ ವ್ಯಕ್ತಿ ತಾನು ಇಚ್ಛಿಸಿದ ಆಟಗಳಲ್ಲಿ ಪಾಲ್ಗೊಂಡು ಸಂತೋಷಪಡಬಹುದು ಎಂಬುದನ್ನು ಈ ಟೂರ್ನಿ ಸಾಬೀತುಪಡಿಸಲಿದೆ ಎಂದರು.
ಈ ವೇಳೆ ಡಾ. ಆರ್.ಬಿ. ಬಸವರಡ್ಡೇರ, ಸಂಜಯ್ ರಡ್ಡೇರ, ಬಸವರಾಜ ಬಾರಕೇರ, ದೇವಪ್ಪ ಅಸುಂಡಿ, ಬಸವರಾಜ ಪಲ್ಲೇದ, ಸುರೇಶ ಬಸವರಡ್ಡೇರ, ಅಂದಪ್ಪ ವೀರಾಪೂರ, ಸುರೇಶ ಶಿರೋಳ, ಉಮೇಶ ಅವರೆಡ್ಡಿ, ಶರಣು ಯಲ್ಲಿರೆಡ್ಡಿ, ಅಂದಪ್ಪ ನೀರಲೋಟಿ, ರಾಜು ಬೆಂಗಳೂರಶೆಟ್ಟ್ರ, ಚರಂತಯ್ಯ ಬೆನಹಾಳ, ಶೇಖಪ್ಪ ಜುಟ್ಲ, ಮಳ್ಳಪ್ಪ ದ್ವಾಸಲ್, ರಫೀಕ್ ರೇವಡಿ, ಚಂದ್ರು ಅಕ್ಕಸಾಲಿ, ಸಂಜಯ್‌ಶಾಸ್ತ್ರೀ, ಉಮೇಶ ಶಿರೋಳ, ಜಗದೀಶ ಶಿರೋಳ, ಮಹೇಶ ಹರ್ಲಾಪೂರ ಇನ್ನಿತರರಿದ್ದರು.

70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಸಾಧಕರಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ 70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿದರು.

ಆಕರ್ಷಕ ಪಥಸಂಚಲನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ನಾಯಕತ್ವವನ್ನು ಲಷ್ಟಪ್ಪ ತಳವಾರ ವಹಿಸಿದ್ದರು. ನಾಗರಿಕ ಪೊಲೀಸ್ ಪಡೆಯ ನೇತೃತ್ವವನ್ನು ಸುಭಾಷ ಪಾಟೀಲ, ಗೃಹ ರಕ್ಷಕ ದಳದ ನೇತೃತ್ವವನ್ನು ಎಂ.ಎನ್. ವಸ್ತ್ರದ, ಅಗ್ನಿಶಾಮಕ ಪಡೆಯ ನೇತೃತ್ವವನ್ನು ಮಂಜುನಾಥ ಮೇಲ್ಮನಿ, ಅಬಕಾರಿ ಇಲಾಖೆಯ ಆಶಾರಾಣಿ, ಅರಣ್ಯ ಪಡೆಯ ಸಚಿನ್ ಬಿಸನಹಳ್ಳಿ, ಎನ್‌ಸಿಸಿ ಸೀನಿಯರ್ ಬಾಯ್ಸ್ ದಳದ ನೇತೃತ್ವವನ್ನು ಆಕಾಶ್ ಎಸ್.ಕೆ., ಸೇವಾದಳದ ನೇತೃತ್ವವನ್ನು ಎಸ್.ಎಂ. ಕೃಷ್ಣಾ ಪ್ರೌಢಶಾಲೆಯ ಆಯೇಶಾ, ವಿ.ಡಿ.ಎಸ್ ಗರ್ಲ್ಸ್ ಹೈಸ್ಕೂಲ್ ನೇತೃತ್ವವನ್ನು ಆಕಾಂಕ್ಷಾ, ಸೇಂಟ್ ಜಾನ್ ಪ್ರಾಥಮಿಕ ಶಾಲೆಯ ಪವನ ವಡವಳ್ಳಿ, ಮಾಜಿ ಸೈನಿಕ ತಂಡದ ಬಸವರಾಜ ಮುಂಡರಗಿ, ಎಸ್.ಎಂ. ಕೃಷ್ಣ ಪ್ರಾಥಮಿಕ ಶಾಲೆಯ ಮುಸ್ಕಾನ್ ಬಾನು, ಕೆವಿಎಸ್‌ಆರ್ ಪ್ರೌಢಶಾಲೆಯ ಸ್ಪಂದನಾ, ಸೇಂಟ್ ಜಾನ್ ಬಾಲಕರ ಪ್ರೌಢಶಾಲೆಯ ಪವನ ಸಿಂಗ ದೊಡ್ಡಮನಿ, ಎನ್‌ಸಿಸಿ ಸೀನಿಯರ್ ಗರ್ಲ್ಸ್ ತಂಡದ ನೇತೃತ್ವವನ್ನು ಸ್ಪೂರ್ತಿ ಅವರು ವಹಿಸಿದ್ದರು.

ಪಥಸಂಚಲನದಲ್ಲಿ ಇಲಾಖಾವಾರು ನಗರದ ಅಗ್ನಿಶಾಮಕ ಘಟಕ, ಅಬಕಾರಿ ತಂಡ, ಗೃಹ ರಕ್ಷಕ ದಳ, ಶಾಲಾವಾರು ಎಸ್.ಎಂ. ಕೃಷ್ಣ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಟಗೇರಿಯ ಸೇಂಟ್ ಜಾನ್ ಬಾಲಕರ ಪ್ರೌಢಶಾಲೆ, ವಿ.ಡಿ.ಎಸ್.ಟಿ. ಬಾಲಕಿಯರ ಪ್ರೌಢಶಾಲೆಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು. ಸ್ತಬ್ಧಚಿತ್ರ ಪ್ರದರ್ಶನದಲ್ಲಿ 9 ಇಲಾಖೆಯ ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದು, ಆ ಪೈಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಥಮ, ಕೆಎಸ್‌ಆರ್‌ಟಿಸಿ ದ್ವಿತೀಯ ಹಾಗೂ ಶಿಕ್ಷಣ ಇಲಾಖೆ ತೃತೀಯ ಸ್ಥಾನ ಪಡೆದರು.

ಪತ್ರಿಕೋದ್ಯಮ/ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ವೆರಿಗುಡ್ ಮಾರ್ನಿಂಗ್ ದಿನಪತ್ರಿಕೆಯ ದೇವಪ್ಪ ಲಿಂಗಧಾಳ, ಉತ್ತರ ಪ್ರಭಾ ಪ್ರಾದೇಶಿಕ ದಿನಪತ್ರಿಕೆಯ ಸಂಪಾದಕಿ ಲಕ್ಷ್ಮೀಬಾಯಿ ರವಿಕಾಂತ ಅಂಗಡಿ, ಮುಳಗುಂದದ ವಿಜಯ ಕರ್ನಾಟಕ ವರದಿಗಾರ ವೀರಪ್ಪ ಸಿದ್ದನಗೌಡ, ಗಜೇಂದ್ರಗಡ ತಾಲೂಕು ಉದಯವಾಣಿ ವರದಿಗಾರ ಡಿ.ಜಿ. ವೋಮಿನ್, ಲಕ್ಷ್ಮೇಶ್ವರ ತಾಲೂಕು ವಿಜಯವಾಣಿ ವರದಿಗಾರ ಮಲ್ಲು ಕಳಸಾಪುರ, ನರಗುಂದ ತಾಲೂಕು ಸಂಯುಕ್ತ ಕರ್ನಾಟಕ ವರದಿಗಾರ ಉಮೇಶ ಬೋಳಶೆಟ್ಟಿ, ಶಿರಹಟ್ಟಿ ತಾಲೂಕು ಸಂಜೆವಾಣಿ ವರದಿಗಾರ ಪ್ರಕಾಶ ಮೇಟಿ, ರೋಣ ತಾಲೂಕು ಹೊಳೆ ಆಲೂರ ಹೋಬಳಿ ವಿಜಯವಾಣಿ ವರದಿಗಾರ ವೀರಯ್ಯ ವಸ್ತಾದ, ಮುಂಡರಗಿ ತಾಲೂಕು ಉದಯವಾಣಿ ವರದಿಗಾರ ಹು.ಬಾ. ವಡ್ಡಟ್ಟಿ, ವಿಶ್ವವಾಣಿ ಪತ್ರಿಕೆ ಜಿಲ್ಲಾ ವರದಿಗಾರ ಮಾಳಿಂಗರಾಯ ಪೂಜಾರ, ಹಸಿರು ಕ್ರಾಂತಿ ಜಿಲ್ಲಾ ವರದಿಗಾರ ಮೌನೇಶ ಬಡಿಗೇರರನ್ನು ಸನ್ಮಾನಿಸಲಾಯಿತು.

ಕ್ರೀಡೆ ಮತ್ತು ಶಿಕ್ಷಣ ವಿಭಾಗದಲ್ಲಿ – ಮುಂಡರಗಿ ತಾಲೂಕು ಮುರಡಿ ತಾಂಡಾದ ರಮೇಶ ಬೂದಿಹಾಳ, ಗದಗ ಎ.ಎಸ್.ಎಸ್. ಕಾಮರ್ಸ್ ಕಾಲೇಜಿನ ಗುರುಪ್ರಸಾದ ಸೊನ್ನದ, ಜೆ.ಟಿ. ಕಾಲೇಜಿನ ಜ್ಞಾನೇಶ್ವರ ಗಾಯಕವಾಡ, ಗೊಜನೂರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪುನೀತ್ ರೆಡ್ಡಿ, ಹುಲಕೋಟಿಯ ರಾಜೇಶ್ವರಿ ವಿದ್ಯಾನಿಕೇತನದ ಶ್ರೀನಿವಾಸ ಆರ್. ಗುಳಗಂದಿ, ಸಂಭ್ರಮ ವಿ. ವಜ್ಜರಮಟ್ಟಿ, ಕೃಪಾ ರೊಟ್ಟಿಗವಾಡ, ನಿಖಿತಾ ವಿ. ಹೆಬಸೂರು, ರೋಶನಿ ಬಹದ್ದೂರಬಂಡಿ, ಗದಗ ಕ್ರೀಡಾ ವಸತಿ ನಿಲಯದ ಭಾಗ್ಯಾ ಕುಬೇರಪ್ಪ ಮೇಲ್ಮನಿ, ವೀರೇಶಯಲ್ಲಪ್ಪ ಶಿವಾನಂದ ಯಲಪ್ಪ, ಅರ್ಚನಾ ಫಕೀರಗೌಡ ಹಟ್ಟಿ, ಮುಳಗುಂದದ ಯಮನೂರಸಾಬ ದೊಡ್ಡಮನಿ, ಸಂಗಮೇಶ ಸಜ್ಜನ, ಹಿರೇಕೊಪ್ಪದ ದೀಪಾ ದಪ್ತಾರದಾರರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ವಿ.ಪ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಜಿಲ್ಲಾ ಮಟ್ಟದ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಎಸಿ ಗಂಗಪ್ಪ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಲೆ, ಸಾಹಿತ್ಯ, ಸಾಮಾಜಿಕ, ಆಡಳಿತ, ಕೃಷಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ – ಗದಗ ನ್ಯಾಯಾಂಗ ಇಲಾಖೆಯ ನಿವೃತ್ತ ನೌಕರ ಎ.ಎಸ್. ಮಕಾನದಾರ, ವಿವೇಕಾನಂದ ನಗರದ ಜ್ಯೋತಿ ಎಂ. ಲೋಣಿ, ಮೌಲಾನಾ ಅಲ್ಲಾಭಕ್ಷ್ ಹುಸೇನಸಾಬ ಪಲ್ಲೇದ, ಮುಂಡರಗಿ ತಾಲೂಕಿನ ನಾಗರಹಳ್ಳಿಯ ಬ್ರಹ್ಮಾನಂದ ಕಲಕೇರಿ, ದೇವೇಂದ್ರಪ್ಪ ಬಡಿಗೇರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ, ಜಿಲ್ಲಾ ಪೊಲೀಸ್ ಕಾರ್ಯಾಲಯದ ಆರ್.ಎಸ್.ಐ. ಗುರುರಾಜ ಮಹಾದೇವಪ್ಪ ಬೂದಿಹಾಳರನ್ನು ಸನ್ಮಾನಿಸಲಾಯಿತು.

ಕನ್ನಡದ ಉಳಿವಿಗೆ ಹೋರಾಡೋಣ: ರಹಮಾನ ನಮಾಜಿ

0

ವಿಜಯಸಾಕ್ಷಿ ಸುದ್ದಿ, ಡಂಬಳ: ದೇಶದಲ್ಲಿ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂತಹ ಕನ್ನಡ ಭಾಷೆಯನ್ನು ಎಲ್ಲರೂ ಉಳಿಸಿ-ಬೆಳೆಸುವ ಜತೆಗೆ, ಕನ್ನಡ ನಾಡಿನ ನೆಲ, ಜಲ, ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಧಕ್ಕೆ ಬಂದಾಗ ಎಲ್ಲರೂ ಹೋರಾಡಬೇಕಿದೆ ಎಂದು ರಹಮಾನ ನಮಾಜಿ ಹೇಳಿದರು.

ಡಂಬಳ ಗ್ರಾಮದ ಬಸವೇಶ್ವರ ವೃತ್ತದ ಬಳಿ ಶ್ರೀ ಬಸವೇಶ್ವರ ಆಟೋ ಚಾಲಕರ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಮೇಶ ಬಚನಳ್ಳಿ, ಕಾಳಿಂಗ ಒಂಟಲಭೋವಿ ಮಾತನಾಡಿ, ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದ್ದು, ಕನ್ನಡ ಸಾಹಿತ್ಯಕ್ಕೆ ಈವರೆಗೂ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಕನ್ನಡದ ಏಕೀಕರಣಕ್ಕಾಗಿ ಸಾಕಷ್ಟು ಸಾಹಿತಿಗಳು ಹೋರಾಟ ಮಾಡಿದ್ದಾರೆ. ಅವರನ್ನು ಸ್ಮರಣೆ ಮಾಡುವದರೊಂದಿಗೆ ಅವರ ಹೋರಾಟ ನಮಗೆ ದಾರಿದೀಪವಾಗಬೇಕಿದೆ ಎಂದು ಹೇಳಿದರು.

ಮುತ್ತು ಕರವೀರಮಠ, ಮಹಬೂಬ ಅತ್ತಾರ ಮಾತನಾಡಿ, ಕನ್ನಡ ಭಾಷೆಯನ್ನು ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ. ಕನ್ನಡದ ಮೇರು ಕೃತಿಗಳನ್ನು ಹೆಚ್ಚು ಓದಬೇಕು. ಕನ್ನಡ ಪದಗಳನ್ನು ಹೆಚ್ಚು ಬಳಸಿದಾಗ ಭಾಷೆ ಮತ್ತಷ್ಟು ಶ್ರೀಮಂತವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಟೋ ಚಾಲಕರಾದ ವಿನಾಯಕ ಕಾಡಸಿದ್ದೇಶ್ವರಮಠ, ರಂಗಪ್ಪ ಒಂಟಲಭೋವಿ, ಚೇತನ ಕಾಡಸಿದ್ದೇಶ್ವರಮಠ, ಬಾಬುಸಾಬ ದೌಲತ್ತದಾರ, ನಾಶೀರ ಅತ್ತಾರ ಮುಂತಾದವರಿದ್ದರು.

ರಾಜ್ಯೋತ್ಸವದ ಕುರಿತು ಉಪನ್ಯಾಸ ಇಂದು

0

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ನ. 2ರಂದು ಬೆಳಿಗ್ಗೆ 10ಕ್ಕೆ ನಡೆಯಲಿರುವ ಬಸವದಳದ 1670ನೇ ಶರಣ ಸಂಗಮದಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷ, ಶರಣ ವಿ.ಕೆ. ಕರೇಗೌಡ್ರ ವಹಿಸುವರು. ಕನ್ನಡ ಉಪನ್ಯಾಸಕ, ಶರಣ ಎಸ್.ಯು. ಸಜ್ಜನಶೆಟ್ಟರ ಉಪನ್ಯಾಸ ಮಾಡುವರು. ಅತಿಥಿಗಳಾಗಿ ಶರಣ ಎಂ.ಜಿ. ಖಂಡೆಮ್ಮನವರ ಆಗಮಿಸುವರು. ಬಸವದಳದ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಸಂಘಟಕರ ಪರವಾಗಿ ಪ್ರಕಾಶ ಅಸುಂಡಿಯವರು ವಿನಂತಿಸಿದ್ದಾರೆ.

ಭಾನುವಾರ ವಿಶ್ವಕಪ್ ಫೈನಲ್ ಫೈಟ್: ಪಂದ್ಯಕ್ಕೆ ಮಳೆಯ ಭೀತಿ- ಹೇಗಿರಲಿದೆ ಮುಂಬೈ ಹವಾಮಾನ?

0

ಬರೋಬ್ಬರಿ ಎಂಟು ವರ್ಷಗಳ ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮತ್ತೊಮ್ಮೆ ವಿಶ್ವಕಪ್ ಫೈನಲ್‌ಗೆ ತಲುಪುವ ಸಾಧನೆ ಮಾಡಿದೆ.

2017ರಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಕಂಡ ನಂತರ, ಈ ಬಾರಿ ತಮ್ಮ ಅಭಿಮಾನಿಗಳ ಎದುರು ತವರು ನೆಲದಲ್ಲಿ ವಿಶ್ವಕಪ್ ಟ್ರೋಫಿ ಎತ್ತುವ ಅಪೂರ್ವ ಅವಕಾಶ ತಂಡದ ಮುಂದೆ ಬಂದಿದೆ. ನವೆಂಬರ್ 2ರ ಭಾನುವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪ್ರಶಸ್ತಿ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ಲೀಗ್ ಹಂತದಲ್ಲಿ ಭಾರತ ದಕ್ಷಿಣ ಆಫ್ರಿಕಾದ ವಿರುದ್ಧ ಸೋಲು ಕಂಡಿದ್ದರೂ, ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಶಕ್ತಿಯುತ ಹಿಂತಿರುಗಿದೆ. ವಿಶೇಷವಾಗಿ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆಯ ರನ್ ಚೇಸ್ ಮಾಡಿ ಪ್ರೇಕ್ಷಕರ ಮನ ಗೆದ್ದಿತ್ತು. ಅದೇ ಮೈದಾನದಲ್ಲಿ ಈಗ ಅಂತಿಮ ಪೈಪೋಟಿ ನಡೆಯಲಿದ್ದು, ಆಟಗಾರ್ತಿಯರು ಆತ್ಮವಿಶ್ವಾಸದಿಂದ ತುಂಬಿದ್ದಾರೆ.

ಆದರೆ, ಈ ಉತ್ಸಾಹದ ಮಧ್ಯೆ ಮಳೆ ಅಡ್ಡಿಯ ಆತಂಕವೂ ಎದುರಾಗಿದೆ. ಹವಾಮಾನ ಇಲಾಖೆಯ ವರದಿ ಪ್ರಕಾರ, ನವೆಂಬರ್ 2ರಂದು ನವಿ ಮುಂಬೈ ಪ್ರದೇಶದಲ್ಲಿ ಬೆಳಿಗ್ಗೆ 4 ರಿಂದ 7 ಗಂಟೆಯವರೆಗೆ ಹಾಗೂ ಸಂಜೆ 5 ರಿಂದ 7 ಗಂಟೆಯವರೆಗೆ ಹಗುರ ಮಳೆ ಬೀಳುವ ಸಾಧ್ಯತೆ ಇದೆ. ಈ ಸಮಯದಲ್ಲಿ ಮಳೆ ತೀವ್ರವಾದರೆ ಪಂದ್ಯ ಆರಂಭ ವಿಳಂಬವಾಗಬಹುದು ಅಥವಾ ಓವರ್‌ಗಳನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಆದರೆ, ರಾತ್ರಿಯಿಡೀ ಮಳೆ ಬೀಳುವ ಸೂಚನೆ ಇಲ್ಲದಿರುವುದು ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನ ನೀಡುವ ವಿಚಾರವಾಗಿದೆ.

ಹವಾಮಾನ ಅನುಕೂಲವಾಗದಿದ್ದರೆ, ಐಸಿಸಿ ನವೆಂಬರ್ 3ನೇ ತಾರೀಖು ಮೀಸಲು ದಿನವನ್ನಾಗಿ ಘೋಷಿಸಿದೆ. ಭಾನುವಾರ ಪಂದ್ಯ ಪೂರ್ಣಗೊಳ್ಳದಿದ್ದರೆ, ಸೋಮವಾರ ಅದನ್ನು ಮುಗಿಸಲು ಅವಕಾಶ ನೀಡಲಾಗುತ್ತದೆ. ಆದರೆ ಈ ಎರಡು ದಿನಗಳಲ್ಲಿ ಕೂಡ ಪಂದ್ಯ ನಡೆಯದಿದ್ದರೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.

ಭಾರತೀಯ ಅಭಿಮಾನಿಗಳು ಈ ಪಂದ್ಯಕ್ಕಾಗಿ ಉಸಿರುಗಟ್ಟಿದ್ದಾರೆ. 2017ರಲ್ಲಿ ಕೈತಪ್ಪಿದ ಟ್ರೋಫಿ ಈ ಬಾರಿ ತವರು ನೆಲದಲ್ಲೇ ಗೆಲ್ಲುವ ನಿರೀಕ್ಷೆಯಲ್ಲಿ ಹಾರೈಸುತ್ತಿದ್ದಾರೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಸ್ಮೃತಿ ಮಂದಾನ ನೇತೃತ್ವದ ಯುವ ತಂಡ ವಿಶ್ವದ ಮುಂದೆ ತನ್ನ ಶಕ್ತಿ ಪ್ರದರ್ಶಿಸಲು ಸಿದ್ಧವಾಗಿದೆ.

ಬಾಯಿ ಮಾತಿನಿಂದ ಕನ್ನಡ ಉಳಿಯದು: ಅಶ್ವಿನಿ ಅಂಕಲಕೋಟಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾವಿರಾರು ವರ್ಷಗಳಷ್ಟು ಪುರಾತನವಾಗಿರುವ ನಮ್ಮ ಕನ್ನಡ ಭಾಷೆ ನಮ್ಮ ಹೆಮ್ಮೆ ಎನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ. ನವೆಂಬರ್ ತಿಂಗಳಿಗೆ ಮಾತ್ರ ಕನ್ನಡ ಅಭಿಮಾನ ಇರುವದು ಬೇಡ, ಇದು ನಿರಂತರವಾಗಿರಲಿ ಎಂದು ಪುರಸಭೆ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಅಶ್ವಿನಿ ಅಂಕಲಕೋಟಿ ಹೇಳಿದರು.

ಅವರು ಶನಿವಾರ ಪಟ್ಟಣದ ಪುರಸಭೆಯಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೇವಲ ಬಾಯಿ ಮಾತಿನಿಂದ ಕನ್ನಡ ಉಳಿಸಲು ಸಾಧ್ಯವಿಲ್ಲ. ಕನ್ನಡ ನಮ್ಮ ಉಸಿರಾಗಬೇಕು, ಕನ್ನಡವನ್ನು ಕಟ್ಟಲು ಹಿರಿಯರು ಮಾಡಿದ ಶ್ರಮವನ್ನು ಅರ್ಥಮಾಡಿಕೊಳ್ಳಬೇಕು. ರಾಜ್ಯೋತ್ಸವ ಒಂದು ದಿನಕ್ಕೆ ಆಚರಿಸಿ ಹೋಗುವುದಕ್ಕಿಂತ ಕನ್ನಡದ ಬಗ್ಗೆ ಜನರಿಗೆ, ವಿದ್ಯಾರ್ಥಿಗಳಿಗೆ ನಿತ್ಯ ಮಾಹಿತಿ ನೀಡುವ ಕಾರ್ಯ ಮಾಡಿ ಅರ್ಥಪೂರ್ಣವಾಗಿ ರಾಜ್ಯೋತ್ಸವ ಆಚರಿಸುವಂತಾಗಬೇಕು ಎಂದರು.

ಹಿರಿಯ ಸದಸ್ಯ ಪ್ರವೀಣ ಬಾಳಿಕಾಯಿ ಮಾತನಾಡಿ, ಕನ್ನಡ ಭಾಷೆಗಿರುವ ಸಾಮರ್ಥ್ಯ ಮತ್ತಾವುದೇ ಭಾಷೆಯಲ್ಲಿ ಕಾಣಲು ಸಾಧ್ಯವಿಲ್ಲ. ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಅವಧಿಯಲ್ಲಿ ಈ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ್ದು, ಹಿರಿಯರು ರಾಜ್ಯವನ್ನು ಕಟ್ಟಲು ಪಟ್ಟ ಶ್ರಮಕ್ಕೆ ತಕ್ಕಂತೆ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಪೀರದೋಷ ಆಡೂರ, ಸದಸ್ಯರಾದ ಜಯಕ್ಕ ಅಂದಲಗಿ, ಶಾಂತವ್ವ ಗುಂಜಳ, ನೀಲವ್ವ ಮೆಣಸಿನಕಾಯಿ, ಮಂಜುಳಾ ನಂದೆಣ್ಣವರ, ಮಹೇಶ ಹುಲಬಜಾರ, ಮಹಾದೇವಪ್ಪ ಅಣ್ಣಿಗೇರಿ, ಎಸ್.ಕೆ. ಹವಾಲ್ದಾರ, ನೀಲಪ್ಪ ಪೂಜಾರ, ಪ್ರಕಾಶ ಕೊಂಚಿಗೇರಿಮಠ, ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಶೋಭಾ ಬೆಳ್ಳಿಕೊಪ್ಪ, ಮಂಜುನಾಥ ಮುದಗಲ್, ಹನುಮಂತ ನಂದೆಣ್ಣವರ, ಎಸ್.ಪಿ. ಲಿಂಬಯ್ಯನಮಠ, ಸುರೇಶ ಪೂಜಾರ, ವೆಂಕಟೇಶ ರಾಮಗಿರಿ, ಎಂ.ಎಸ್. ಹೆಬ್ಬಾಳ, ನೇತ್ರಾ ಹೊಸಮನಿ ಮುಂತಾದವರು ಹಾಜರಿದ್ದರು.

ಕೊಳೆತ ಸ್ಥಿತಿಯಲ್ಲಿ ಎಂಬಿಎ ಪದವೀಧರೆ ಅನುಮಾನಾಸ್ಪದ ಸಾವು!

0

ಬೆಂಗಳೂರು:- ಬೆಂಗಳೂರಿನ ಸುಬ್ರಹ್ಮಣ್ಯ ನಗರದ ಮಿಲ್ಕ್ ಕಾಲೋನಿಯಲ್ಲಿ ಕೊಳೆತ ಸ್ಥಿತಿಯಲ್ಲಿ ದಾವಣಗೆರೆ ಮೂಲದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜರುಗಿದೆ.

25 ವರ್ಷದ ಸುಪ್ರಿಯಾ ಮೃತ ಯುವತಿ. ಎಂಬಿಎ ವ್ಯಾಸಂಗ ಮಾಡುತ್ತಿದ್ದ ಸುಪ್ರಿಯಾ ಬೈಕ್‌ ತರಬೇತಿ ಕೂಡ ಪಡೆಯುತ್ತಿದ್ದಳು. ಕಳೆದ 2 ವರ್ಷ 8 ತಿಂಗಳಿಂದ ಮಿಲ್ಕ್ ಕಾಲೋನಿಯ 3ನೇ ಮಹಡಿಯ ಬಾಡಿಗೆ ಮನೆಯಲ್ಲಿ ವಾಸವಿದ್ದಳು.

ಕಳೆದ ಎರಡು ದಿನಗಳಿಂದ ಮನೆ ಬಾಗಿಲು ಬಂದ್ ಆಗಿದ್ದ ಕಾರಣ ಅನುಮಾನಗೊಂಡ ಮನೆಮಾಲೀಕರು ಬಾಗಿಲು ತೆರೆದು ನೋಡಿದಾಗ, ಫ್ಯಾನ್‌ಗೆ ನೇಣು ಬಿಗಿದು ತುಂಡಾಗಿ ಬಿದ್ದ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆಯಾಗಿದೆ.

ಘಟನೆಯ ಮಾಹಿತಿ ಸಿಕ್ಕ ತಕ್ಷಣ ಸುಬ್ರಹ್ಮಣ್ಯನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಪೊಲೀಸರು ಯುಡಿಆರ್ ದಾಖಲಿಸಿಕೊಂಡಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ನಡೆಯುತ್ತಿದೆ.

ರಾಜ್ಯದ ಎಲ್ಲಾ ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ: ಜಮೀರ್

0

ಬಳ್ಳಾರಿ: ರಾಜ್ಯದ ಎಲ್ಲಾ ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯವಾಗಲಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ವೇದಿಕೆಯಲ್ಲಿ ಮಾತನಾಡಿದ ಅವರು, ಮುಂದಿನ 90 ದಿನಗಳೊಳಗೆ ಮದರಸಾಗಳಲ್ಲಿ ಕನ್ನಡ ಕಲಿಯುವಂತೆ ಆದೇಶ ಹೊರಡಿಸಲಾಗುವುದೆಂದು ತಿಳಿಸಿದರು. ಇದಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಅವರ ನೇತೃತ್ವದಲ್ಲಿ ಕನ್ನಡ ಪಾಠ ಕಲಿಸುವ ವ್ಯವಸ್ಥೆ ರೂಪಿಸಲಾಗಿದೆ ಎಂದು ಹೇಳಿದರು.

“ಕರ್ನಾಟಕದಲ್ಲಿದ್ದು ಕನ್ನಡ ಕಲಿಯದೇ ಇದ್ದರೆ ಅರ್ಥವಿಲ್ಲ. ಸ್ವಾತಂತ್ರ್ಯ ಪೂರ್ವದ ಉರ್ದು ಶಾಲೆಗಳಲ್ಲಿ ಮೂರು ಭಾಷೆಗಳು ಕಡ್ಡಾಯವಾಗಿದ್ದವು. ಇದೇ ಮಾದರಿಯಲ್ಲಿ ಈಗ ಕನ್ನಡವನ್ನು ಮೊದಲ ಭಾಷೆಯಾಗಿ, ಉರ್ದುವನ್ನು ಎರಡನೇ ಭಾಷೆಯಾಗಿ, ಇಂಗ್ಲಿಷ್ ಅನ್ನು ಮೂರನೇ ಭಾಷೆಯಾಗಿ ಆಯ್ಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಕನ್ನಡದ ಕಹಳೆ ಎಲ್ಲೆಡೆ ಮೊಳಗಲಿ: ಶಾಸಕ ಡಾ. ಚಂದ್ರು ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಕನ್ನಡ ಭಾಷೆ ಸಾವಿರಾರು ವರ್ಷಗಳ ದೀರ್ಘ ಇತಿಹಾಸ ಮತ್ತು ಪರಂಪರೆಯನ್ನು ಒಳಗೊಂಡು ಶ್ರೀಮಂತವಾಗಿದೆ. ಇಂತಹ ಭಾಷೆಯನ್ನು ಉಳಿಸಿ-ಬೆಳೆಸುವ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗರದ್ದಾಗಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ಶನಿವಾರ ಶಿರಹಟ್ಟಿ ಪಟ್ಟಣದ ಎಸ್.ಎಂ. ಡಬಾಳೆ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಶಿರಹಟ್ಟಿ ಇವರ ವತಿಯಿಂದ ಜರುಗಿದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಹಸೀಲ್ದಾರ ಕೆ. ರಾಘವೇಂದ್ರ ರಾವ್ ಮಾತನಾಡಿ, ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಎಂಬ ಕಾನೂನನ್ನು ಸರ್ಕಾರ ಕಡ್ಡಾಯಗೊಳಿಸಬೇಕಾಗಿದೆ. ಶಿಕ್ಷಕರು ಹಾಗೂ ಇಲಾಖೆಯು ತಾಯ್ನಾಡಿನ ಬಗ್ಗೆ ಹೆಮ್ಮೆ ಮೂಡಿಸಲು ಸದಾ ಪ್ರಯತ್ನಿಸಬೇಕು. ಆಗ ಮಾತ್ರ ಸ್ವಾಭಿಮಾನ ಸಹಜವಾಗಿ ಮೂಡುತ್ತದೆ. ಕನ್ನಡ ಭಾಷೆ ಬಗ್ಗೆ ಒಂದು ರೀತಿ ಅಸಡ್ಡೆಯಂತೂ ವ್ಯಾಪಕವಾಗಿ ಹರಡಿದೆ. ಕನ್ನಡ ನಾಡಿನ ಹಿರಿಮೆ, ಗರಿಮೆ, ಪುರಾತನ ಇತಿಹಾಸ, ನೆಲ, ಜಲ, ಇತರೆ ಸಂಪತ್ತಿನ ಬಗ್ಗೆ ಅರಿವಿರಬೇಕು. ಶಿಕ್ಷಕರು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಈ ಕುರಿತು ತಿಳುವಳಿಕೆ ನೀಡಬೇಕು ಎಂದು ಹೇಳಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಫಕ್ಕಿರೇಶ ರಟ್ಟಿಹಳ್ಳಿ, ಬಸವರಾಜ ವಡವಿ, ಶಶಿ ಪೂಜಾರ, ಸಂತೋಷ ತೋಡೇಕಾರ, ಹಸನ್ ತಹಸೀಲ್ದಾರ, ತಾ.ಪಂ ಇಒ ರಾಮಪ್ಪ ದೊಡ್ಡಮನಿ, ಬಿಇಒ ಎಚ್. ನಾಣಕೀ ನಾಯಕ, ಪಿಎಸ್‌ಐ ಈರಪ್ಪ ರಿತ್ತಿ, ಕೃಷಿ ಇಲಾಖೆಯ ರೇವಣೆಪ್ಪ ಮನಗೂಳಿ, ರಾಮಪ್ಪ ಪೂಜಾರ, ರಂಗಪ್ಪ ಕಾಂಬ್ಳೆ, ಸಂತೋಷ ಅಸ್ಕಿ ಮುಂತಾದವರು ಉಪಸ್ಥಿತರಿದ್ದರು.

ವಿಶ್ವ ಮಾನ್ಯವಾಗಿರುವ ಕನ್ನಡ ನಾಡು, ನುಡಿ, ಸಂಸ್ಕೃತಿ, ನೆಲ, ಜಲ, ಭಾಷೆಯನ್ನು ಪೋಷಿಸಿ, ಅಭಿವೃದ್ಧಿಪಡಿಸುವ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಕಂಕಣಬದ್ಧರಾಗೋಣ. ಸಾಹಿತ್ಯದ ಜೊತೆಗೆ ಇತರ ಭಾಷೆಯನ್ನು ಗೌರವಿಸೋಣ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಎಲ್ಲರೂ ಶ್ರಮಿಸೋಣ. ಕನ್ನಡದ ಕಹಳೆ ಎಲ್ಲೆಡೆ ಮೊಳಗಬೇಕು. ಕನ್ನಡ ನಾಡು, ನುಡಿಗಾಗಿ ಶ್ರಮಿಸಿದ ಎಲ್ಲ ಮಹನೀಯರ ಕೊಡುಗೆಯನ್ನು ಸ್ಮರಿಸೋಣ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

error: Content is protected !!