Home Blog

Assembly Elections: ಮತ ಚಲಾಯಿಸಲು ಕೇರಳಕ್ಕೆ ತೆರಳುವಾಗ ಅಪಘಾತ: ವ್ಯಕ್ತಿಯ ಸ್ಥಿತಿ ಗಂಭೀರ

0

ಹಾಸನ: ಕೇರಳ ವಿಧಾನಸಭಾ ಚುನಾವಣೆಗೆ ಮತ ಚಲಾಯಿಸಲು ತೆರಳುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಮಳಲಿ ಬೈಪಾಸ್ ಬಳಿ ನಡೆದಿದೆ.

ಅಪಘಾತದಲ್ಲಿ ಅಬ್ದುಲ್ ಖಾದರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು ಮತದಾನಕ್ಕಾಗಿ ಕಾರಿನಲ್ಲಿ ಕೇರಳಕ್ಕೆ ತೆರಳುತ್ತಿದ್ದರು.

ಈ ವೇಳೆ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು, ರಸ್ತೆಯಿಂದ ಕೆಳಗೆ ಹಾರಿ ಸುಮಾರು 25 ಅಡಿ ದೂರದಲ್ಲಿ ನಿಂತಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಗಾಯಾಳುವಿಗೆ ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಅತಿ ವೇಗವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Karnataka 2nd PUC Result: ವಿದ್ಯಾರ್ಥಿಗಳೇ ಇಲ್ಲಿ ಕೇಳಿ, ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ!

ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಲಭ್ಯವಾಗಿದೆ. ನಾಳೆ, ಏಪ್ರಿಲ್ 9ರಂದು ದ್ವಿತೀಯ ಪಿಯುಸಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಜೆ ವೇಳೆಗೆ ಫಲಿತಾಂಶದ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈಗಾಗಲೇ ಎಲ್ಲಾ ತಾಂತ್ರಿಕ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ರಾಜ್ಯದಾದ್ಯಂತ 1,217 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳು ತಮ್ಮ ಅಂಕಗಳಿಂದ ತೃಪ್ತರಾಗದಿದ್ದರೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

ಫಲಿತಾಂಶದೊಂದಿಗೆ ಮರುಮೌಲ್ಯಮಾಪನ, ಮರುಎಣಿಕೆ ಹಾಗೂ ಉತ್ತರಪತ್ರಿಕೆಯ ಸ್ಕ್ಯಾನ್ ಪ್ರತಿಗೆ ಸಂಬಂಧಿಸಿದ ದಿನಾಂಕಗಳನ್ನು ನಂತರ ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ನೋಂದಣಿ ಸಂಖ್ಯೆ ನಮೂದಿಸಿ ಫಲಿತಾಂಶವನ್ನು ಪರಿಶೀಲಿಸಬಹುದು. ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್‌ಔಟ್ ತೆಗೆದುಕೊಳ್ಳುವ ಅವಕಾಶವೂ ಲಭ್ಯವಿದೆ.

Gold & Silver Price: ಇರಾನ್-ಇಸ್ರೇಲ್ ಕದನ ವಿರಾಮದ ಬಳಿಕ ಚಿನ್ನ-ಬೆಳ್ಳಿ ಬೆಲೆ ಭಾರೀ ಏರಿಕೆ!

ಬೆಂಗಳೂರು: ಸತತ ಮೂರು ವಾರಗಳ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಮತ್ತೆ ಭಾರೀ ಏರಿಕೆ ಕಂಡಿದೆ. ಇರಾನ್–ಅಮೆರಿಕ–ಇಸ್ರೇಲ್ ನಡುವಿನ ಯುದ್ಧ ಪರಿಸ್ಥಿತಿ ಹಾಗೂ ಕದನ ವಿರಾಮ ಘೋಷಣೆ ಬೆನ್ನಲ್ಲೇ ಮೌಲ್ಯ ಲೋಹಗಳ ದರಗಳಲ್ಲಿ ಏರಿಳಿತ ಮುಂದುವರಿದಿದೆ.

ಏಪ್ರಿಲ್ 8ರಂದು 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹15,382 ಆಗಿದ್ದು, 10 ಗ್ರಾಂ ಚಿನ್ನ ₹1,53,820ಕ್ಕೆ ತಲುಪಿದೆ. ಏಪ್ರಿಲ್ 7ರೊಂದಿಗೆ ಹೋಲಿಸಿದರೆ 1 ಗ್ರಾಂಗೆ ₹398 ಮತ್ತು 10 ಗ್ರಾಂಗೆ ₹3,980 ಏರಿಕೆಯಾಗಿದೆ.

ಇದೇ ರೀತಿ 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹14,100 ಆಗಿದ್ದು, 10 ಗ್ರಾಂ ₹1,41,000ಕ್ಕೆ ಏರಿದೆ. ಇದರಲ್ಲಿ 1 ಗ್ರಾಂಗೆ ₹365 ಮತ್ತು 10 ಗ್ರಾಂಗೆ ₹3,650 ಹೆಚ್ಚಳವಾಗಿದೆ.

18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, 1 ಗ್ರಾಂ ₹11,537 ಹಾಗೂ 10 ಗ್ರಾಂ ₹1,15,370 ಆಗಿದೆ. ಈ ವರ್ಗದಲ್ಲೂ 1 ಗ್ರಾಂಗೆ ₹299 ಮತ್ತು 10 ಗ್ರಾಂಗೆ ₹2,990 ಏರಿಕೆಯಾಗಿದೆ.

ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯಲ್ಲೂ ಜಿಗಿತ ಕಂಡಿದೆ. 1 ಗ್ರಾಂ ಬೆಳ್ಳಿ ₹260 ಆಗಿದ್ದು, 1 ಕೆಜಿ ಬೆಳ್ಳಿ ₹2,60,000ಕ್ಕೆ ತಲುಪಿದೆ. ಹಿಂದಿನ ದಿನ ₹2,50,000 ಇದ್ದ ಬೆಲೆ ₹10,000 ಏರಿಕೆಯಾಗಿದೆ.

ಮಧ್ಯಪ್ರಾಚ್ಯದ ಉದ್ವಿಗ್ನತೆ ಮತ್ತು ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳಿಂದ ಚಿನ್ನ-ಬೆಳ್ಳಿ ಬೆಲೆಯಲ್ಲಿ ಇನ್ನೂ ಏರಿಳಿತ ಮುಂದುವರಿಯುವ ಸಾಧ್ಯತೆ ಇದೆ.

ಬಾಗಲಕೋಟೆಯಲ್ಲಿ ಘೋರ ದುರಂತ: ಪ್ರೇಯಸಿ ಆತ್ಮಹತ್ಯೆ ಬಳಿಕ ಪ್ರಿಯಕರನೂ ನೇಣಿಗೆ ಶರಣು!

0

ಬಾಗಲಕೋಟೆ: ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಪ್ರಿಯಕರನೂ ನೇಣಿಗೆ ಶರಣಾದ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿಯ ಅಸ್ಕಿ ಗ್ರಾಮ ಹಾಗೂ ಬನಹಟ್ಟಿ ನಗರದಲ್ಲಿ ನಡೆದಿದೆ.

ಪವಿತ್ರಾ ಒಂಟಿ (19) ಮತ್ತು ಕಾರ್ತಿಕ್ ನಾಯಕ್ (19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳಾಗಿದ್ದಾರೆ. ಪವಿತ್ರಾ ಬನಹಟ್ಟಿಯ ಕೆಹೆಚ್ಡಿಸಿ ಕಾಲೋನಿ ನಿವಾಸಿಯಾಗಿದ್ದು, ಕಾರ್ತಿಕ್ ಅಸ್ಕಿ ಗ್ರಾಮದ ನಿವಾಸಿಯಾಗಿದ್ದಾನೆ.

ಮಂಗಳವಾರ ಇವರಿಬ್ಬರ ನಡುವೆ ವೈಮನಸ್ಸಿನಿಂದ ಜಗಳ ನಡೆದಿದ್ದು, ಇದರಿಂದ ಮನನೊಂದು ಪವಿತ್ರಾ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

ಈ ವಿಷಯ ತಿಳಿದ ಬಳಿಕ ಮನನೊಂದು ಕಾರ್ತಿಕ್ ಕೂಡ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪಾಕಿಗೆ ಮುಖಭಂಗ: ಲೆಬನಾನ್ ಮೇಲೆ ದಾಳಿ ಮುಂದುವರಿಯಲಿದೆ – ಇಸ್ರೇಲ್

0

ಇಸ್ರೇಲ್: ಅಮೆರಿಕ–ಇರಾನ್ ನಡುವೆ ಘೋಷಿಸಲಾದ ಕದನ ವಿರಾಮ ವಿಚಾರದಲ್ಲಿ ಪಾಕಿಸ್ತಾನಕ್ಕೆ ಮುಖಭಂಗವಾಗಿದ್ದು, ಲೆಬನಾನ್ ಮೇಲೆ ದಾಳಿ ಮುಂದುವರಿಸುವುದಾಗಿ ಇಸ್ರೇಲ್ ಸ್ಪಷ್ಟಪಡಿಸಿದೆ.

ಪಾಕಿಸ್ತಾನದ ಪ್ರಧಾನಿ ಷರೀಫ್‌ ಅವರು, ಕದನ ವಿರಾಮವು ಕೇವಲ ಅಮೆರಿಕ ಮತ್ತು ಇರಾನ್ ನಡುವಷ್ಟೇ ಅಲ್ಲದೆ ಲೆಬನಾನ್ ಸೇರಿದಂತೆ ಇತರ ಸಂಘರ್ಷ ಪ್ರದೇಶಗಳಿಗೂ ಅನ್ವಯಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದರು.

ಆದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಈ ಹೇಳಿಕೆಯನ್ನು ತಿರಸ್ಕರಿಸಿ, ಕದನ ವಿರಾಮವು ಕೇವಲ ಅಮೆರಿಕ–ಇರಾನ್ ಸಂಘರ್ಷಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸ್ಪಷ್ಟಪಡಿಸಿದರು. ಲೆಬನಾನ್ನಲ್ಲಿ ಹಿಜ್ಬುಲ್ಲಾ ವಿರುದ್ಧ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್ ವಿರುದ್ಧದ ದಾಳಿಗಳನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಇಸ್ರೇಲ್ ಬೆಂಬಲ ವ್ಯಕ್ತಪಡಿಸಿದೆ. ಇರಾನ್ ಪರಮಾಣು, ಕ್ಷಿಪಣಿ ಮತ್ತು ಭಯೋತ್ಪಾದನಾ ಬೆದರಿಕೆಯನ್ನು ತಡೆಯುವ ಅಮೆರಿಕದ ಪ್ರಯತ್ನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಇಸ್ರೇಲ್ ಹೇಳಿದೆ.

ಮುಂದಿನ ಮಾತುಕತೆಗಳಲ್ಲಿ ಅಮೆರಿಕ, ಇಸ್ರೇಲ್ ಹಾಗೂ ಅದರ ಮಿತ್ರ ರಾಷ್ಟ್ರಗಳ ಭದ್ರತಾ ಗುರಿಗಳನ್ನು ಸಾಧಿಸಲು ಬದ್ಧರಾಗಿರುವುದಾಗಿ ತಿಳಿಸಲಾಗಿದ್ದು, ಈ ಎರಡು ವಾರಗಳ ಕದನ ವಿರಾಮ ಲೆಬನಾನ್ ಪ್ರದೇಶವನ್ನು ಒಳಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಶಿವಮೊಗ್ಗ: ತುಂಗಾ ನದಿಯಲ್ಲಿ ಮುಳುಗಿ ಕಣ್ಮರೆಯಾಗಿದ್ದ ಯುವಕನ ಶವ ಪತ್ತೆ!

0

ಶಿವಮೊಗ್ಗ: ತುಂಗಾ ನದಿಯಲ್ಲಿ ಈಜಲು ಹೋಗಿ ಕಣ್ಮರೆಯಾಗಿದ್ದ ಯುವಕನ ಶವ ಪತ್ತೆಯಾಗಿರುವ ಘಟನೆ ತೀರ್ಥಹಳ್ಳಿ ತಾಲೂಕಿನಲ್ಲಿಯಾಗಿದೆ.

ಮೃತ ಯುವಕನನ್ನು ಸೀಬಿನಕೆರೆ ಗ್ರಾಮದ ಅಕ್ಷಯ್ (26) ಎಂದು ಗುರುತಿಸಲಾಗಿದೆ. ಏಪ್ರಿಲ್ 7ರ ಸಂಜೆ ಕಲ್ಲುಬಂಡೆಯ ಮೇಲೆ ಮೊಬೈಲ್, ಚಪ್ಪಲಿ ಹಾಗೂ ಬಟ್ಟೆಗಳನ್ನು ಇಟ್ಟು ನದಿಗೆ ಇಳಿದಿದ್ದ ಅಕ್ಷಯ್, ಬಳಿಕ ಕಾಣೆಯಾಗಿದ್ದರು.

ಘಟನೆಯ ಮಾಹಿತಿ ತಿಳಿದ ಕೂಡಲೇ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ನದಿಗೆ ಇಳಿದಿದ್ದ ಸ್ಥಳದ ಸಮೀಪದಲ್ಲೇ ಕೆಲವೇ ಅಡಿ ದೂರದಲ್ಲಿ ಶವ ಪತ್ತೆಯಾಗಿದೆ.

ಮೃತದೇಹವನ್ನು ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ನಿಮಗೆ ಗೊತ್ತೇ..? ದೇಹದಲ್ಲಿ ಪ್ಲೇಟ್‌ಲೆಟ್‌ʼಗಳು ಕಡಿಮೆಯಾಗುವುದಕ್ಕೆ ಈ ರೋಗಗಳೇ ಕಾರಣ!

0

ಮಾನವ ದೇಹದಲ್ಲಿ ರಕ್ತಸ್ರಾವವನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುವ ಪ್ಲೇಟ್‌ಲೆಟ್‌ಗಳ ಪ್ರಮಾಣ ಕಡಿಮೆಯಾದರೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಪ್ರತಿ ಮೈಕ್ರೋಲೀಟರ್ ರಕ್ತದಲ್ಲಿ 1.5 ಲಕ್ಷದಿಂದ 4.5 ಲಕ್ಷ ಪ್ಲೇಟ್‌ಲೆಟ್‌ಗಳು ಇರಬೇಕು. ಈ ಪ್ರಮಾಣ ಕಡಿಮೆಯಾದರೆ ಅದನ್ನು ನಿರ್ಲಕ್ಷಿಸುವಂತಿಲ್ಲ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಪ್ಲೇಟ್‌ಲೆಟ್‌ಗಳ ಪ್ರಮಾಣ 1.5 ಲಕ್ಷಕ್ಕಿಂತ ಕಡಿಮೆಯಾದರೆ ಅಪಾಯದ ಸೂಚನೆಯಾಗಿದ್ದು, 50 ಸಾವಿರಕ್ಕಿಂತ ಕಡಿಮೆಯಾದರೆ ಗಂಭೀರ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. 20 ಸಾವಿರಕ್ಕಿಂತ ಕಡಿಮೆಯಾದರೆ ಒಳಾಂಗಿಕ ರಕ್ತಸ್ರಾವದ ಅಪಾಯ ಹೆಚ್ಚಾಗುತ್ತದೆ, ಇದು ಜೀವಕ್ಕೆ ಅಪಾಯಕಾರಿಯೂ ಆಗಬಹುದು.

ಪ್ಲೇಟ್‌ಲೆಟ್‌ ಕಡಿಮೆಯಾಗಲು ಕಾರಣಗಳು:
ಪ್ಲೇಟ್‌ಲೆಟ್‌ಗಳ ಪ್ರಮಾಣ ಕಡಿಮೆಯಾಗಲು ಹಲವಾರು ಕಾರಣಗಳಿವೆ. ಮುಖ್ಯವಾಗಿ ವೈರಲ್ ಸೋಂಕುಗಳಾದ ಡೆಂಗ್ಯೂ, ಚಿಕನ್‌ಗುನ್‌ಯಾ ಮತ್ತು ಮಲೇರಿಯಾ, ಟೈಫಾಯ್ಡ್, ಲಿವರ್ ಸಮಸ್ಯೆಗಳು (ಸಿರೋಸಿಸ್), ಬೋನ್ ಮ್ಯಾರೋ ಸಮಸ್ಯೆಗಳು, ಕ್ಯಾನ್ಸರ್ ಹಾಗೂ ಕೀಮೋಥೆರಪಿ, ಆಟೋಇಮ್ಯೂನ್ ರೋಗಗಳು ಪ್ರಮುಖ ಕಾರಣಗಳಾಗಿವೆ.

ಲಕ್ಷಣಗಳು ಹೇಗಿರುತ್ತವೆ?:
ಪ್ಲೇಟ್‌ಲೆಟ್‌ಗಳ ಕೊರತೆಯಾದಾಗ ದೇಹದಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಣ್ಣ ಗಾಯವಾದರೂ ರಕ್ತಸ್ರಾವ ಬೇಗ ನಿಲ್ಲದಿರುವುದು, ಚರ್ಮದ ಮೇಲೆ ಕೆಂಪು ಅಥವಾ ನೇರಳೆ ಚುಕ್ಕೆಗಳು ಕಾಣಿಸಿಕೊಳ್ಳುವುದು, ಮೂಗು ಅಥವಾ ಹಲ್ಲಿನ ಮಸೂರಿನಿಂದ ರಕ್ತಸ್ರಾವವಾಗುವುದು ಪ್ರಮುಖ ಲಕ್ಷಣಗಳಾಗಿವೆ. ಮಹಿಳೆಯರಲ್ಲಿ ಪೀರಿಯಡ್ಸ್ ವೇಳೆ ಹೆಚ್ಚು ರಕ್ತಸ್ರಾವವಾಗುವುದು, ದಣಿವು, ದುರ್ಬಲತೆ ಮತ್ತು ತಲೆಸುತ್ತು ಕೂಡ ಕಾಣಿಸಬಹುದು.

ಮುನ್ನೆಚ್ಚರಿಕೆ ಕ್ರಮಗಳು:
ಪ್ಲೇಟ್‌ಲೆಟ್‌ಗಳ ಪ್ರಮಾಣ ಕಡಿಮೆಯಾಗದಂತೆ ತಡೆಯಲು ಕೆಲ ಸರಳ ಕ್ರಮಗಳನ್ನು ಅನುಸರಿಸಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ಸೊಳ್ಳೆಗಳಿಂದ ದೂರವಿರುವುದು,

ಪೌಷ್ಟಿಕ ಆಹಾರ ಸೇವಿಸುವುದು ಮತ್ತು ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ಯಾವುದೇ ಜ್ವರ ಅಥವಾ ದುರ್ಬಲತೆಯನ್ನು ನಿರ್ಲಕ್ಷಿಸದೇ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರ ಸಲಹೆಯಿಲ್ಲದೆ ಔಷಧಿಗಳನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮ.

ಹೂ ಮಾರಾಟಕ್ಕೆ ಮಹಿಳೆಯರ ಜಗಳ: ರಸ್ತೆಗೆ ಮಲ್ಲಿಗೆ ಹೂ ಬಿಸಾಕಿ ರಂಪಾಟ! VIDEO ನೋಡಿ!

ಬೆಂಗಳೂರು: ಹನುಮಂತನಗರದಲ್ಲಿ ಹೂ ಮಾರಾಟದ ವಿಚಾರಕ್ಕೆ ಇಬ್ಬರು ಮಹಿಳೆಯರ ನಡುವೆ  ಜಗಳ ನಡೆದ ಘಟನೆ ಬೆಳಕಿಗೆ ಬಂದಿದೆ.

ಅಂಗಡಿ ಮುಂದೆ ಮಲ್ಲಿಗೆ ಹೂ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಪ್ರಶ್ನಿಸಿದ ಮತ್ತೊಬ್ಬ ಮಹಿಳೆ ಕಿರಿಕ್ ಆರಂಭಿಸಿದ್ದಾಳೆ.

ವಿವಾದ ತೀವ್ರಗೊಂಡ ವೇಳೆ, ಇನ್ನೋರ್ವ ಮಹಿಳೆ ಮಲ್ಲಿಗೆ ಹೂವನ್ನು ರಸ್ತೆಗೆ ಬಿಸಾಕಿ ಉದ್ಧಟತನ ತೋರಿದ್ದಾಳೆ. “ಪೊಲೀಸರಿಗಾದರೂ ಹೇಳು, ಯಾರಿಗಾದರೂ ಹೇಳು” ಎಂದು ರಂಪಾಟ ನಡೆಸಿದ ದೃಶ್ಯಗಳು ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿವೆ.

ಈ ಜಡೆ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ವಿಡಿಯೋದಲ್ಲಿ ನಗು… ವಾಸ್ತವದಲ್ಲಿ ದುಃಖ? ನಟಿ ಸುಭಾಷಿಣಿ ಸಾವು ಮಿಸ್ಟರಿ – ಪತಿ ಜೊತೆ ಕಾಲ್ ಬಳಿಕ ಶಾಕಿಂಗ್‌ ನಿರ್ಧಾರ!

ತಮಿಳು ಕಿರುತೆರೆ ನಟಿ ಸುಭಾಷಿಣಿ ಬಾಲಸುಬ್ರಮಣಿಯಂ ಅವರ ಅಕಾಲಿಕ ನಿಧನ ಈಗ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಏಪ್ರಿಲ್ 6ರಂದು ಚೆನ್ನೈನಲ್ಲಿ ನಡೆದ ಈ ಘಟನೆ ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗುತ್ತಿದ್ದರೂ, ಇದರ ಹಿಂದೆ ಇರುವ ನಿಜವಾದ ಕಾರಣ ಇನ್ನೂ ಮಿಸ್ಟರಿಯಾಗಿಯೇ ಉಳಿದಿದೆ.

ಶ್ರೀಲಂಕಾದಿಂದ ಚೆನ್ನೈಗೆ ಬಂದು ಅವಕಾಶಗಳಿಗಾಗಿ ಹೋರಾಡಿದ ಸುಭಾಷಿಣಿ, ‘ಕಯಲ್’ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ್ದರು. ಆದರೆ, ಯಶಸ್ಸಿನ ನಡುವೆಯೇ ಅವರ ವೈಯಕ್ತಿಕ ಜೀವನದಲ್ಲಿ ಏನೋ ಗಂಭೀರ ಸಮಸ್ಯೆಗಳು ನಡೆದಿದ್ದವೆಯೇ ಎಂಬ ಅನುಮಾನಗಳು ಹೆಚ್ಚುತ್ತಿವೆ.

ಸಾವಿಗೆ ಮುನ್ನ ಅವರು ತಮ್ಮ ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದರು ಎಂಬ ಮಾಹಿತಿ ಹೊರಬಿದ್ದಿದ್ದು, ಆ ವೇಳೆ ಏನಾದರೂ ಜಗಳ ನಡೆದಿತ್ತೇ ಎಂಬ ಪ್ರಶ್ನೆ ತಲೆದೋರಿದೆ. ಈ ಘಟನೆ ಅವರ ಮನಸ್ಥಿತಿಗೆ ಪರಿಣಾಮ ಬೀರಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಆದರೆ, ಈ ಪ್ರಕರಣದಲ್ಲಿ ಹೆಚ್ಚು ಚರ್ಚೆಗೆ ಕಾರಣವಾದುದು ಅವರ ಕೊನೆಯ ವಿಡಿಯೋ. ಕೇವಲ ಎರಡು ದಿನಗಳ ಹಿಂದಷ್ಟೇ ಹಂಚಿಕೊಂಡ ಆ ವಿಡಿಯೋದಲ್ಲಿ ಸುಭಾಷಿಣಿ ತುಂಬಾ ಖುಷಿಯಾಗಿ ಕಾಣಿಸಿಕೊಂಡಿದ್ದರು. ಈ ವಿರುದ್ಧ ಚಿತ್ರಣವೇ ಇದೀಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

“ನಗು ಮುಖದ ಹಿಂದೆ ನೋವು ಮರೆಮಾಡಲಾಗಿತ್ತೇ?” ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಸೆಲೆಬ್ರಿಟಿಗಳ ಜೀವನದ ಮತ್ತೊಂದು ಕತ್ತಲೆ ಮುಖ ಈ ಘಟನೆಯಿಂದ ಹೊರಬಂದಂತಾಗಿದೆ.

ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಸುಭಾಷಿಣಿ ಅವರ ಸಾವಿನ ಅಸಲಿ ಕಾರಣ ಮುಂದಿನ ದಿನಗಳಲ್ಲಿ ಬಹಿರಂಗವಾಗುವ ನಿರೀಕ್ಷೆ ಇದೆ.

ಪ್ಯಾನ್ ಇಂಡಿಯಾ ಸ್ಟಾರ್ ಯಶ್ ‘ವಿಲನ್’ ಆಗಲು ಕಾರಣವೇನು? 4000 ಕೋಟಿ ‘ರಾಮಾಯಣ’ದಲ್ಲಿ ರಾವಣನ ಹೊಸ ಮುಖ!

ಭಾರತದ ಅತಿದೊಡ್ಡ ಬಜೆಟ್ ಸಿನಿಮಾ ‘ರಾಮಾಯಣ’ ಈಗಾಗಲೇ ಸಿನಿ ಲೋಕವನ್ನು ಕಾದು ಕುಳಿತಿದೆ. 4000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ದ್ವಿಭಾಗೀಯ ಚಿತ್ರ, ತಾಂತ್ರಿಕವಾಗಿ ಹಾಗೂ ಕಲಾತ್ಮಕವಾಗಿ ಹೊಸ ಮಾನದಂಡಗಳನ್ನು ಸ್ಥಾಪಿಸಲು ಸಜ್ಜಾಗಿದೆ.

ಈ ಭವ್ಯ ಯೋಜನೆಯಲ್ಲಿ ರಣ್ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ನಟಿಸುತ್ತಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ, ‘ಕೆಜಿಎಫ್’ ಮೂಲಕ ಹೀರೋ ಇಮೇಜ್ ಗಟ್ಟಿಗೊಳಿಸಿರುವ ಯಶ್, ವಿಲನ್ ಪಾತ್ರಕ್ಕೆ ಒಪ್ಪಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ಈ ಪ್ರಶ್ನೆಗೆ ಉತ್ತರ ನೀಡಿರುವ ನಿರ್ದೇಶಕ ನಿತೇಶ್ ತಿವಾರಿ, ‘ನಾವು ರಾವಣನನ್ನು ಕೇವಲ ದುಷ್ಟನಾಗಿ ತೋರಿಸುವುದಿಲ್ಲ. ಆತ ಒಂದು ಬಹುಮುಖ ವ್ಯಕ್ತಿತ್ವ – ಜ್ಞಾನ, ಭಕ್ತಿ, ಅಹಂಕಾರ ಮತ್ತು ಶಕ್ತಿ ಎಲ್ಲವೂ ಸೇರಿ ಇಂತಹ ಪಾತ್ರವನ್ನು ನಿಭಾಯಿಸಲು ಯಶ್ ಅವರಂತಹ ನಟನೇ ಬೇಕು’ ಎಂದು ಹೇಳಿದ್ದಾರೆ.

ಚಿತ್ರದ ಕಥೆಯಲ್ಲಿನ ಈ ವಿಭಿನ್ನ ನಿರೂಪಣೆ ಯಶ್ ಅವರನ್ನು ಸೆಳೆದಿದ್ದು, ಅದೇ ಕಾರಣಕ್ಕೆ ಅವರು ಈ ಪಾತ್ರಕ್ಕೆ ಒಪ್ಪಿಕೊಂಡಿದ್ದಾರೆ. ರಣ್ಬೀರ್ ಕಪೂರ್ ಕೂಡ ಈ ಹೊಸ ದೃಷ್ಟಿಕೋನವನ್ನು ಮೆಚ್ಚಿಕೊಂಡಿದ್ದಾರೆ ಎಂಬುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಇನ್ನೊಂದೆಡೆ, ಯಶ್ ಈ ಚಿತ್ರದ ಸಹ ನಿರ್ಮಾಪಕರಾಗಿರುವುದು ಅವರ ಬದ್ಧತೆಯನ್ನು ತೋರಿಸುತ್ತದೆ. ತಾರಾಗಣದಲ್ಲಿ ಸನ್ನಿ ಡಿಯೋಲ್, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ಲಾರಾ ದತ್ತ ಸೇರಿದಂತೆ ಹಲವು ಪ್ರಮುಖ ಕಲಾವಿದರು ಇದ್ದಾರೆ.

ಎ.ಆರ್. ರೆಹಮಾನ್ ಮತ್ತು ಹಾನ್ಸ್ ಜೀಮರ್ ಸಂಗೀತ ನೀಡುತ್ತಿರುವುದು ಚಿತ್ರದ ಮಟ್ಟವನ್ನು ಹಾಲಿವುಡ್ ಮಟ್ಟಕ್ಕೆ ಏರಿಸುತ್ತಿದೆ. ಐಮ್ಯಾಕ್ಸ್‌ನಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾ ಈ ದೀಪಾವಳಿಗೆ ಬಿಡುಗಡೆಯಾಗಲಿದ್ದು, ಮುಂದಿನ ವರ್ಷ ಎರಡನೇ ಭಾಗ ಬಿಡುಗಡೆಯಾಗಲಿದೆ.

ಒಟ್ಟಿನಲ್ಲಿ, ‘ರಾಮಾಯಣ’ ಕೇವಲ ಸಿನಿಮಾ ಅಲ್ಲ — ಇದು ಭಾರತೀಯ ಸಿನಿರಂಗದ ಹೊಸ ಯುಗದ ಆರಂಭ ಎನ್ನುವ ಮಾತುಗಳು ಕೇಳಿಬರುತ್ತಿವೆ.

error: Content is protected !!