Home Blog

ಹಾಸನ: ದಂತ ಕಳೆದುಕೊಂಡ ಭೀಮಾ ಮತ್ತೆ ಅಟ್ಟಹಾಸಕ್ಕೆ ಸಜ್ಜು!

ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಕೋಗೋಡು ಗ್ರಾಮದಲ್ಲಿ ಎರಡು ಕಾಡಾನೆಗಳ ಚಲನವಲನ ಆತಂಕ ಮೂಡಿಸಿದೆ.

ಭೀಮಾ ಹಾಗೂ ಕ್ಯಾಪ್ಟನ್ ಮತ್ತೆ ಮುಖಾಮುಖಿಯಾಗಿದ್ದು, ಕಾಳಗಕ್ಕೆ ಸಜ್ಜಾಗಿರುವಂತೆ ಕಾಣಿಸಿಕೊಂಡಿವೆ. ಗ್ರಾಮದ ಸುತ್ತಮುತ್ತ ಅಡ್ಡಾಡುತ್ತಿದ್ದ ಈ ಎರಡು ಆನೆಗಳು ಪರಸ್ಪರ ಎದುರಾಗಿ ಕಾದಾಟಕ್ಕೆ ಮುಂದಾದರೂ, ಜನರ ಹಾಜರಾತಿಯಿಂದ ಅಲ್ಲಿಂದ ದೂರ ಸರಿದು ಒಟ್ಟಿಗೆ ನಡೆದುಕೊಂಡು ಹೋದವು. ಈ ದೃಶ್ಯ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಗಮನಾರ್ಹವಾಗಿ, ಕಳೆದ ನವೆಂಬರ್‌ನಲ್ಲಿ ಜಗಬೋರನಹಳ್ಳಿ ಗ್ರಾಮದ ಬಳಿ ನಡೆದ ಭೀಕರ ಕಾಳಗದಲ್ಲಿ ಭೀಮಾ ತನ್ನ ಒಂದು ದಂತ ಕಳೆದುಕೊಂಡಿತ್ತು. ಸಿಟ್ಟಿನಲ್ಲಿ ಮರಕ್ಕೆ ಗುದ್ದಿದ ಪರಿಣಾಮ ದಂತ ಮುರಿದು ಬಿದ್ದಿತ್ತು ಎಂದು ತಿಳಿದುಬಂದಿದೆ.

ಪ್ರಸ್ತುತ ಎರಡು ಕಾಡಾನೆಗಳ ಚಲನವಲನಗಳನ್ನು ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ನಿಗಾ ಇಟ್ಟು ಗಮನಿಸುತ್ತಿದ್ದಾರೆ. ಕೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರಲ್ಲಿ ಭೀತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

 

ಗೋಡೆ ಕೊರೆದು ಮಳಿಗೆಗೆ ನುಗ್ಗಿದ ಕಳ್ಳರು: ಕೋಟ್ಯಂತರ ರೂ.ಮೌಲ್ಯದ ಬೆಳ್ಳಿ ಲೂಟಿ!

ಬೆಂಗಳೂರು: ನಗರದಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಏರಿಕೆಯಾಗುತ್ತಿದ್ದಂತೆ ಕಳ್ಳರ ಕಾಟ ಮತ್ತೆ ಹೆಚ್ಚಾಗಿದೆ.

ದಾಸರಹಳ್ಳಿ ಎಂಟನೇ ಮೈಲಿ ಸಮೀಪದ ಹಾವನೂರಿನ ಎಂಬಿ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ಭಾರೀ ಕಳ್ಳತನ ನಡೆದಿದ್ದು, ಸುಮಾರು 1.20 ಕೋಟಿ ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು ಕದಿಯಲಾಗಿದೆ.

ಎರಡು ದಿನಗಳ ಹಿಂದೆ ನಡೆದ ಈ ಕಳ್ಳತನವನ್ನು ಅತ್ಯಂತ ಯೋಜಿತವಾಗಿ ನಡೆಸಲಾಗಿದೆ. ಕಳ್ಳರು ಮಳಿಗೆಯ ಹಿಂಭಾಗದ ಕೋಣೆಯ ಬೀಗ ಮುರಿದು ಒಳನುಗ್ಗಿ, ನಂತರ ಗೋಡೆಯನ್ನು ಕೊರೆದು ಅಂಗಡಿಗೆ ಪ್ರವೇಶಿಸಿದ್ದಾರೆ. ಈ ವೇಳೆ ಸುಮಾರು 70 ಕೆಜಿ ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ.

ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಬಾಗಲಗುಂಟೆ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳಿಗೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕಳ್ಳರು ಬಳಸಿದ ವಿಧಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ನಗರದಲ್ಲಿ ಇತ್ತೀಚೆಗೆ ಸರಣಿ ಕಳ್ಳತನಗಳು ಹೆಚ್ಚುತ್ತಿರುವುದು ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

 

ಹಾಸನದಲ್ಲಿ ಬಿರುಗಾಳಿ ಮಳೆ ಅಬ್ಬರ: ಎಕರೆಗಟ್ಟಲೆ ಬಾಳೆ ಬೆಳೆ ನಾಶ – ರೈತರ ಕಣ್ಣೀರು

ಹಾಸನ: ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯಿಂದ ಲಕ್ಷಾಂತರ ರೂ. ಮೌಲ್ಯದ ಬಾಳೆ ಬೆಳೆ ನಾಶವಾಗಿರುವ ಘಟನೆ ವರದಿಯಾಗಿದೆ.

ಅರಕಲಗೂಡು ತಾಲೂಕಿನ ಬಸವನಹಳ್ಳಿಕೊಪ್ಪಲು ಗ್ರಾಮದಲ್ಲಿ ಬಿರುಗಾಳಿಗೆ ಲೋಕೇಶ್, ಪರಮೇಶ್, ನಾಗರಾಜ್ ಸೇರಿದಂತೆ ಹಲವು ರೈತರಿಗೆ ಸೇರಿದ ಸಾವಿರಾರು ಬಾಳೆ ಗಿಡಗಳು ನೆಲಕಚ್ಚಿವೆ.

ಕಟಾವಿಗೆ ಸಿದ್ಧವಾಗಿದ್ದ ಬಾಳೆಗೊನೆಗಳು ಗಾಳಿಯ ತೀವ್ರತೆಗೆ ಮುರಿದು ಬಿದ್ದಿದ್ದು, ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಇನ್ನೂ ಒಂದು ತಿಂಗಳಲ್ಲಿ ಕೊಯ್ಲು ಮಾಡಿ ಮಾರಾಟ ಮಾಡಬೇಕಿದ್ದ ಬೆಳೆ ಹಾನಿಯಾಗಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಇದೇ ಗ್ರಾಮದ ಕೆಲ ರೈತರು ಬೆಳೆದಿದ್ದ ಮೆಕ್ಕೆಜೋಳ ಬೆಳೆ ಕೂಡ ಹಾನಿಗೊಳಗಾಗಿದ್ದು, ಎರಡು ವಾಸದ ಮನೆಗಳ ಮೇಲ್ಛಾವಣಿ ಹಾರಿಹೋಗಿವೆ. ಪ್ರಕೃತಿ ವಿಕೋಪದಿಂದ ಉಂಟಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಬೆಂಗಳೂರು ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ: ಆಸ್ತಿ ತೆರಿಗೆಗೆ 5% ರಿಯಾಯಿತಿ ಅವಧಿ ಮೇ 31ರವರೆಗೆ ವಿಸ್ತರಣೆ!

ಬೆಂಗಳೂರು: ನಗರದಲ್ಲಿನ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಆಸ್ತಿ ತೆರಿಗೆ ಪಾವತಿಯಲ್ಲಿ ನೀಡಲಾಗುತ್ತಿದ್ದ ಶೇ 5ರಷ್ಟು ರಿಯಾಯಿತಿ ಅವಧಿಯನ್ನು ಮೇ 31, 2026ರವರೆಗೆ ವಿಸ್ತರಿಸಲಾಗಿದೆ.

ಈ ನಿರ್ಧಾರದಿಂದ ಗ್ರೇಟರ್ ಬೆಂಗಳೂರು ಪ್ರದೇಶದ ಐದು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಸುಮಾರು 25 ಲಕ್ಷ ಆಸ್ತಿ ಮಾಲೀಕರಿಗೆ ನೇರ ಲಾಭವಾಗಲಿದೆ. ಸಾಮಾನ್ಯವಾಗಿ ಏಪ್ರಿಲ್ ಅಂತ್ಯಕ್ಕೆ ಈ ರಿಯಾಯಿತಿ ಅವಧಿ ಮುಕ್ತಾಯವಾಗುತ್ತಿತ್ತು.

ಆಸ್ತಿ ತೆರಿಗೆ ಪಾವತಿಯಲ್ಲಿ ಉಂಟಾದ ತಾಂತ್ರಿಕ ಗೊಂದಲಗಳು ಹಾಗೂ ಬಲ್ಕ್ ವೇಸ್ಟ್ ಜನರೇಟರ್ ವರ್ಗೀಕರಣದ ಅಸ್ಪಷ್ಟತೆ ಹಿನ್ನೆಲೆಯಲ್ಲಿ ಹಲವು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಜೊತೆಗೆ ಮೇ ತಿಂಗಳಲ್ಲಿ ಶಾಲಾ ಶುಲ್ಕ ಸೇರಿದಂತೆ ಗೃಹ ವೆಚ್ಚಗಳು ಹೆಚ್ಚಾಗುವ ಕಾರಣದಿಂದ ರಿಯಾಯಿತಿ ಅವಧಿ ವಿಸ್ತರಿಸಲು ಸಾರ್ವಜನಿಕರಿಂದ ಬೇಡಿಕೆ ವ್ಯಕ್ತವಾಗಿತ್ತು.

ಈ ಹಿನ್ನೆಲೆ ಸರ್ಕಾರ ಅವಧಿ ವಿಸ್ತರಣೆ ಮಾಡಿದ್ದು, ಇದರಿಂದ ತೆರಿಗೆ ಪಾವತಿ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ವ್ಯಕ್ತವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತೆರಿಗೆ ಸಂಗ್ರಹದಲ್ಲಿ ಸುಮಾರು 500 ಕೋಟಿ ರೂಪಾಯಿ ಕೊರತೆ ಉಂಟಾಗಿದೆ. ಕಳೆದ ವರ್ಷ ಸುಮಾರು 1,500 ಕೋಟಿ ರೂಪಾಯಿ ಸಂಗ್ರಹವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ಅವಧಿ ನೀಡುವುದರಿಂದ ಮಾಲೀಕರು ತೆರಿಗೆ ಪಾವತಿಸಲು ಮುಂದಾಗುತ್ತಾರೆ ಮತ್ತು ಪಾಲಿಕೆಯ ಆದಾಯದ ಕೊರತೆಯನ್ನು ಭಾಗಶಃ ಭರ್ತಿ ಮಾಡಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

 

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ದುರಂತ: ಇಬ್ಬರು ಇಂಜಿನಿಯರ್ ಅಮಾನತು!

ಬೆಂಗಳೂರು: ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು 7 ಮಂದಿ ಸಾವನ್ನಪ್ಪಿದ ದುರಂತಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಂಡಿದ್ದು, ಇಬ್ಬರು ಇಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ.

ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಆರ್.ಟಿ. ರುದ್ರಮುನಿ ಹಾಗೂ ಕಾರ್ಯನಿರ್ವಹಕ ಅಭಿಯಂತರ ಮೊಹಮದ್ ಜಾವೇದ್ ಅವರನ್ನು ಅಮಾನತು ಮಾಡಿ ಜಿಬಿಎ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಸಂಪೂರ್ಣ ತನಿಖೆ ನಡೆಸಲು ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, 7 ದಿನಗಳೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಈ ತನಿಖಾ ಸಮಿತಿಯಲ್ಲಿ ತಹಸೀಲ್ದಾರ್ ಸೇರಿದಂತೆ ಪಿಡಬ್ಲ್ಯುಡಿ ನಿವೃತ್ತ ಮುಖ್ಯ ಇಂಜಿನಿಯರ್ ಸೇರಿ ಒಟ್ಟು 6 ಮಂದಿ ಸದಸ್ಯರಿದ್ದಾರೆ.

ಇನ್ನೊಂದೆಡೆ, ಈ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತ ಗಂಭೀರವಾಗಿ ಪರಿಗಣಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಆಡಳಿತದ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಡೆಯ ಅಡಿಪಾಯ ದುರ್ಬಲವಾಗಿರುವುದೇ ದುರಂತಕ್ಕೆ ಪ್ರಮುಖ ಕಾರಣವಾಗಿದ್ದು, ಮಳೆಗಾಲದಲ್ಲಿ ಇಂತಹ ಅಪಾಯದ ಬಗ್ಗೆ ಅರಿವು ಇದ್ದರೂ ಸೂಕ್ತ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ಬೇಜವಾಬ್ದಾರಿ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ನಿರ್ಧರಿಸಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಬಿಎ ಮುಖ್ಯ ಆಯುಕ್ತ ಸೇರಿದಂತೆ ಪ್ರಮುಖ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡುವ ಸಾಧ್ಯತೆ ಇದೆ.

ಇದರ ಜೊತೆಗೆ ಕೆ.ಆರ್. ಸರ್ಕಲ್ ಅಂಡರ್‌ಪಾಸ್ ಪ್ರದೇಶಕ್ಕೂ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ.

 

ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಬರೋಬ್ಬರಿ 993 ರೂ. ಏರಿಕೆ! ಇಂದಿನಿಂದಲೇ ಜಾರಿ

ನವದೆಹಲಿ: ದೇಶದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ದಾಖಲಾಗಿದೆ.

ಮೇ 1ರಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು 993 ರೂಪಾಯಿ ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ ಹೊಸ ದರ 3,071.50 ರೂ.ಗೆ ತಲುಪಿದೆ.

ಇದಕ್ಕೂ ಮೊದಲು ದೆಹಲಿಯಲ್ಲಿ ಇದೇ ಸಿಲಿಂಡರ್ ದರ 2,078.50 ರೂ. ಇತ್ತು. ಆದರೆ ಇತ್ತೀಚಿನ ಪರಿಷ್ಕರಣೆಯ ನಂತರ ವಾಣಿಜ್ಯ ಬಳಕೆದಾರರಿಗೆ ಭಾರೀ ಹೊರೆ ಎದುರಾಗಿದೆ.

ಆದರೆ ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ.

ಜಾಗತಿಕ ಇಂಧನ ಬೆಲೆಗಳ ಏರಿಕೆ ಹಾಗೂ ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಸಣ್ಣ ವ್ಯಾಪಾರಿಗಳ ಮೇಲೆ ನೇರ ಆರ್ಥಿಕ ಒತ್ತಡ ಹೆಚ್ಚಲಿದ್ದು, ಆಹಾರ ಪದಾರ್ಥಗಳ ಬೆಲೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

 

ರಾಜ್ಯದಲ್ಲಿ ಆಲಿಕಲ್ಲು ಮಳೆ ಅಬ್ಬರ: 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ಬೆಂಗಳೂರು: ರಾಜ್ಯದಾದ್ಯಂತ ಕಳೆದ ಎರಡು ದಿನಗಳಿಂದ ಆಲಿಕಲ್ಲು ಸಹಿತ ಮಳೆಯ ಅಬ್ಬರ ಮುಂದುವರಿದಿದ್ದು, ಇಂದೂ ಸಹ ಕರಾವಳಿ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ದಕ್ಷಿಣ ಕರ್ನಾಟಕದ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮೈಸೂರು, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ಆಲಿಕಲ್ಲು ಸಹಿತ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಹ ಜೋರು ಮಳೆಯ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ.

ಉತ್ತರ ಒಳನಾಡಿನ ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ಕೆಲವೆಡೆ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ವರೆಗೆ ಏರಲಿದೆ ಎಂದು ಇಲಾಖೆ ತಿಳಿಸಿದೆ. ಮುಂದಿನ ಮೂರು ದಿನಗಳವರೆಗೆ ಇದೇ ರೀತಿಯ ಬಿಸಿಲು–ಮಳೆ ಮಿಶ್ರ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮಾತ್ರ ಸಾಧಾರಣ ಮಳೆಯಾಗಲಿದ್ದು, ಉಳಿದ ಭಾಗಗಳಲ್ಲಿ ಬಹುತೇಕ ಶುಷ್ಕ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

 

ಮಕ್ಕಳಿಂದ ವೃದ್ಧರ ತನಕ ಅಪಾಯ: ರಾತ್ರಿ ಉಷ್ಣತೆಯ ಬಗ್ಗೆ ತಜ್ಞರ ಎಚ್ಚರಿಕೆ!

0

ಬೇಸಿಗೆಯ ತೀವ್ರತೆ ಈಗ ದಿನದ ಬಿಸಿಲಿಗಷ್ಟೇ ಸೀಮಿತವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ರಾತ್ರಿ ವೇಳೆಯಲ್ಲೂ ಉಷ್ಣತೆ ಹೆಚ್ಚಾಗುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಸಾಮಾನ್ಯವಾಗಿ ರಾತ್ರಿ ಸಮಯವನ್ನು ಸುರಕ್ಷಿತವೆಂದು ಭಾವಿಸಲಾಗುತ್ತದೆ. ಆದರೆ ರಾತ್ರಿ ತಾಪಮಾನ ಕಡಿಮೆಯಾಗದಿದ್ದರೆ ದೇಹಕ್ಕೆ ತಣ್ಣಗಾಗಲು ಅವಕಾಶ ಸಿಗುವುದಿಲ್ಲ. ಇದರಿಂದ ದೇಹದ ಉಷ್ಣಾಂಶ ನಿಯಂತ್ರಣ ಕಷ್ಟವಾಗುತ್ತದೆ ಹಾಗೂ ಹೀಟ್ ಸ್ಟ್ರೋಕ್  ಅಪಾಯ ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಈ ಪರಿಸ್ಥಿತಿಯಲ್ಲಿ ಹೆಚ್ಚು ಅಪಾಯದಲ್ಲಿದ್ದಾರೆ. ಜೊತೆಗೆ ಈಗಾಗಲೇ ಆರೋಗ್ಯ ಸಮಸ್ಯೆ ಹೊಂದಿರುವವರು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೂ ಹೆಚ್ಚಿನ ಪರಿಣಾಮ ಉಂಟಾಗಬಹುದು. ಗಾಳಿ ಬರದ ಅಥವಾ ಮುಚ್ಚಿದ ಕೊಠಡಿಗಳಲ್ಲಿ ಮಲಗುವವರು ಕೂಡ ಅಪಾಯಕ್ಕೆ ಒಳಗಾಗಬಹುದು ಎಂದು ಹೇಳಲಾಗಿದೆ.

ಈ ಅಪಾಯವನ್ನು ತಪ್ಪಿಸಲು ರಾತ್ರಿ ವೇಳೆ ಕೊಠಡಿಯನ್ನು ಗಾಳಿಯಾಡುವಂತೆ ಇಡುವುದು ಮುಖ್ಯ. ಮಲಗುವ ಮೊದಲು ಹಾಗೂ ಮಧ್ಯರಾತ್ರಿ ನೀರು ಕುಡಿಯುವುದರಿಂದ ದೇಹ ಹೈಡ್ರೇಟ್ ಆಗಿರುತ್ತದೆ. ಹಗುರ ಮತ್ತು ಸಡಿಲ ಬಟ್ಟೆಗಳನ್ನು ಧರಿಸುವುದು, ಅಗತ್ಯವಿದ್ದರೆ ಫ್ಯಾನ್ ಅಥವಾ ಕೂಲರ್ ಬಳಸುವುದು ಸಹಾಯಕ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಹೀಟ್ ಸ್ಟ್ರೋಕ್ ಅಪಾಯ ದಿನದಲ್ಲಷ್ಟೇ ಅಲ್ಲ, ರಾತ್ರಿ ವೇಳೆಯಲ್ಲೂ ಇರುವುದರಿಂದ ಸೂಕ್ತ ಮುನ್ನೆಚ್ಚರಿಕೆ ಅಗತ್ಯ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಸಕ್ಕರೆ ಡಬ್ಬಕ್ಕೆ ಹೆಚ್ಚು ಇರುವೆಗಳು ಮುತ್ತಿಕೊಳ್ಳುತ್ತಿದ್ಯಾ!? ಹಾಗಿದ್ರೆ ಈ ಸಲಹೆ ಪಾಲಿಸಿ!

0

ಅಡುಗೆಮನೆಯಲ್ಲಿ ಸಿಹಿ ಪದಾರ್ಥಗಳಿರುವ ಕಡೆಗಳಲ್ಲಿ ಇರುವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.

ವಿಶೇಷವಾಗಿ ಸಕ್ಕರೆ ಡಬ್ಬಿಗಳು ಇರುವೆಗಳನ್ನು ಹೆಚ್ಚು ಆಕರ್ಷಿಸುತ್ತವೆ. ಡಬ್ಬಿಯನ್ನು ಎಷ್ಟೇ ಬಿಗಿಯಾಗಿ ಮುಚ್ಚಿದರೂ ಸಹ ಇರುವೆಗಳು ಒಳನುಗ್ಗಿ ಸಕ್ಕರೆಯನ್ನು ಹಾಳುಮಾಡುವ ಸಂದರ್ಭಗಳು ಹೆಚ್ಚಾಗುತ್ತಿವೆ.

ಈ ಸಮಸ್ಯೆಗೆ ಸರಳ ಮನೆಮದ್ದು ಒಂದನ್ನು ಬಳಸಬಹುದಾಗಿದೆ ಎಂದು ಹೇಳಲಾಗುತ್ತಿದೆ. ಸಕ್ಕರೆ ಡಬ್ಬಿಯೊಳಗೆ ಲವಂಗವನ್ನು ಸಣ್ಣ ಚೀಲದಲ್ಲಿ ಇಡುವುದರಿಂದ ಇರುವೆಗಳನ್ನು ದೂರವಿಡಬಹುದು. ಲವಂಗದ ಬಲವಾದ ನೈಸರ್ಗಿಕ ವಾಸನೆ ಮತ್ತು ಅದರಲ್ಲಿ ಇರುವ ಯುಜೆನಾಲ್ ಅಂಶ ಇರುವೆಗಳಿಗೆ ಅಸಹ್ಯವಾಗುತ್ತದೆ.

ಲವಂಗದ ವಾಸನೆ ಇರುವೆಗಳ ದಾರಿ ಗುರುತಿಸುವ ಸಾಮರ್ಥ್ಯವನ್ನು ಅಡ್ಡಿಪಡಿಸುತ್ತದೆ. ಇದರಿಂದ ಅವು ಸಕ್ಕರೆ ಇರುವ ಕಡೆ ಸುಳಿಯುವುದೇ ಕಡಿಮೆಯಾಗುತ್ತದೆ. ನೇರವಾಗಿ ಡಬ್ಬಿಯಲ್ಲಿ ಹಾಕಲು ಇಷ್ಟವಿಲ್ಲದಿದ್ದರೆ, 8–10 ಲವಂಗಗಳನ್ನು ಸಣ್ಣ ಪ್ಯಾಕೆಟ್‌ನಲ್ಲಿ ಇಟ್ಟು ಡಬ್ಬಿಯ ಮೂಲೆಯಲ್ಲಿ ಇಡಬಹುದು ಎಂದು ಸಲಹೆ ನೀಡಲಾಗಿದೆ.

ಲವಂಗ ಲಭ್ಯವಿಲ್ಲದ ಸಂದರ್ಭಗಳಲ್ಲಿ ದಾಲ್ಚಿನ್ನಿ ತುಂಡುಗಳನ್ನೂ ಬಳಸಬಹುದು ಎಂದು ಹೇಳಲಾಗಿದೆ. ಆದರೆ ಯಾವುದೇ ವಿಧಾನ ಬಳಸಿದರೂ ಸಕ್ಕರೆ ಡಬ್ಬಿಯನ್ನು ಸದಾ ಬಿಗಿಯಾಗಿ ಮುಚ್ಚಿಡುವುದು ಅತ್ಯಂತ ಮುಖ್ಯ, ಇಲ್ಲವಾದರೆ ಇರುವೆಗಳ ಕಾಟ ಮತ್ತೆ ಮುಂದುವರಿಯಬಹುದು ಎಂದು ತಿಳಿಸಲಾಗಿದೆ.

ತಿಮ್ಮಾಪೂರಲ್ಲಿ ಕುಡಿಯುವ ನೀರಿಗೆ ಹಾಹಾಕಾರ- ಜೆಜೆಎಂ ಯೋಜನೆ ವೈಫಲ್ಯ..! ವಾರಕ್ಕೊಮ್ಮೆ ನೀರು?

0

ಗದಗ:- ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಕುಡಿಯುವ ನೀರಿಗೆ ಪ್ರಮುಖ ಆಧಾರವಾಗಿದ್ದ ಕೆರೆ ಸಂಪೂರ್ಣ ಬತ್ತಿಹೋಗಿದ್ದು, ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಗ್ರಾಮಸ್ಥರು ತೀವ್ರ ನೀರಿನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೇಸಿಗೆಯ ತಾಪಮಾನ ಹೆಚ್ಚಾಗುತ್ತಿದ್ದಂತೆ ಸಮಸ್ಯೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲು ಜಾರಿಗೆ ತಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ (ಜೆಜೆಎಂ) ಅಡಿಯಲ್ಲಿ ತುಂಗಭದ್ರಾ ನದಿಯಿಂದ ನೀರು ಸರಬರಾಜು ಮಾಡುವ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸದೆ, ವಾರಕ್ಕೊಮ್ಮೆ ಮಾತ್ರ ನೀರು ಪೂರೈಕೆ ಆಗುತ್ತಿದೆ. ಇದರಿಂದ ಮೂರು ವಾರ್ಡುಗಳ ಗ್ರಾಮಕ್ಕೆ ಸಿಗುವ ನೀರು ಅತ್ಯಲ್ಪವಾಗಿದ್ದು, ಮನೆ ಬಳಕೆಗೂ ಹಾಗೂ ಪಶುಗಳಿಗೆ ಸಾಕಾಗುತ್ತಿಲ್ಲ.

ಗ್ರಾಮಸ್ಥರು ಹಾಗೂ ಮಹಿಳೆಯರು ಹಲವು ಬಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಲೀಲಾ ಗೂಳಪ್ಪ ಅವರ ಗಮನಕ್ಕೆ ಸಮಸ್ಯೆಯನ್ನು ತಂದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳಿಂದ ಕೇವಲ ಭರವಸೆ ಮಾತುಗಳಷ್ಟೇ ಸಿಗುತ್ತಿವೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ಯಾಂಕರ್ ಅವಲಂಬನೆ—ಬಡವರಿಗೆ ಭಾರ:

ಗ್ರಾಮದಲ್ಲಿ ಬೇರೆ ನೀರಿನ ಮೂಲಗಳಿಲ್ಲದ ಕಾರಣ ಜನರು ಖಾಸಗಿ ಟ್ಯಾಂಕರ್ ಮೂಲಕ ಸುಮಾರು ₹1500 ವೆಚ್ಚದಲ್ಲಿ ನೀರು ತರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಹೊರೆ ಆಗಿದ್ದು, ಕುಡಿಯುವ ನೀರೇ ದುಬಾರಿ ವಸ್ತುವಾಗಿ ಪರಿಣಮಿಸಿದೆ.

ಸರ್ಕಾರದ ಆದೇಶಕ್ಕೂ ಸ್ಪಂದನೆ ಇಲ್ಲ:

ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಕೊರತೆ ತಡೆಗಟ್ಟಲು ಕೋಟ್ಯಾಂತರ ರೂಪಾಯಿ ಮೀಸಲಿಟ್ಟಿದ್ದರೂ, ತಿಮ್ಮಾಪೂರ ಸೇರಿದಂತೆ ಹಲವೆಡೆ ಸಮಸ್ಯೆ ಮುಂದುವರಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರಿನ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡುವಂತೆ ಸೂಚನೆ ನೀಡಿದ್ದರೂ, ಸ್ಥಳೀಯ ಮಟ್ಟದಲ್ಲಿ ಪರಿಣಾಮಕಾರಿ ಕ್ರಮ ಕಾಣಿಸುತ್ತಿಲ್ಲ.

ಒಟ್ಟಾರೆ ಈ ಸಮಸ್ಯೆ ಇದೇ ರೀತಿಯಲ್ಲಿ ಮುಂದುವರಿದರೆ ಗ್ರಾಮಸ್ಥರ ಆಕ್ರೋಶ ತೀವ್ರವಾಗಲಿದೆ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ, ಹುಚ್ಚೀರಪ್ಪ ಜೋಗಿನ, ಶರಣಪ್ಪ ಜೋಗಿನ, ಬಾಳಪ್ಪ ಗಂಗರಾತ್ರಿ, ಹನುಮಪ್ಪ ತಳವಾರ, ಕಪತ್ತಪ್ಪ ಸೊಂಪೂರ, ರಾಯಣ್ಣ ಕಂಡ್ರಿ, ಗೀರಿಶ ಗುಡ್ಲಾನೂರ ಸೇರಿದಂತೆ ಹಲವರು ಎಚ್ಚರಿಕೆ ನೀಡಿದ್ದಾರೆ.

error: Content is protected !!