Home Blog

ಏರ್ ಇಂಡಿಯಾ ಫ್ಲೈಟ್ ದುರಂತಕ್ಕೆ ಖಲಿಸ್ತಾನಿ ಉಗ್ರರೇ ಕಾರಣ; ನಾಲ್ಕು ದಶಕಗಳ ಬಳಿಕ ಕೆನಡಾ ಗುಪ್ತಚರ ಸಂಸ್ಥೆಯ ಮಹತ್ವದ ಹೇಳಿಕೆ

0

ಒಟ್ಟಾವ: 1985ರಲ್ಲಿ ಸಂಭವಿಸಿದ್ದ ಏರ್ ಇಂಡಿಯಾ ಫ್ಲೈಟ್ 182 (ಕನಿಷ್ಕ) ಬಾಂಬ್ ಸ್ಫೋಟ ಪ್ರಕರಣದ ಕುರಿತು ನಾಲ್ಕು ದಶಕಗಳ ಬಳಿಕ ಕೆನಡಾದ ಗುಪ್ತಚರ ಸಂಸ್ಥೆ (ಸಿಎಸ್ಐಎಸ್) ಮಹತ್ವದ ಒಪ್ಪಿಗೆಯನ್ನು ನೀಡಿದೆ. ಈ ಭೀಕರ ವಿಮಾನ ದುರಂತದ ಹಿಂದೆ ಕೆನಡಾ ಮೂಲದ ಖಲಿಸ್ತಾನಿ ಉಗ್ರರ ಕೈವಾಡವಿತ್ತು ಎಂದು ಸಂಸ್ಥೆ ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ.

ಭಯೋತ್ಪಾದನೆ ಸಂತ್ರಸ್ತರ ರಾಷ್ಟ್ರೀಯ ಸ್ಮರಣ ದಿನದ ಅಂಗವಾಗಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಸಿಎಸ್ಐಎಸ್, ಈ ಘಟನೆಯನ್ನು “ಕೆನಡಾದ ಇತಿಹಾಸದಲ್ಲೇ ಅತ್ಯಂತ ಭೀಕರ ಭಯೋತ್ಪಾದಕ ದಾಳಿ” ಎಂದು ಬಣ್ಣಿಸಿದೆ.

ಸಂಸ್ಥೆಯ ಹೇಳಿಕೆಯ ಪ್ರಕಾರ, 1985ರ ಜೂನ್ 23ರಂದು ಕೆನಡಾದಲ್ಲೇ ಕಾರ್ಯಾಚರಣೆ ನಡೆಸುತ್ತಿದ್ದ ಖಲಿಸ್ತಾನಿ ಉಗ್ರರು ಇರಿಸಿದ್ದ ಸೂಟ್‌ಕೇಸ್ ಬಾಂಬ್ ಸ್ಫೋಟಗೊಂಡ ಪರಿಣಾಮ ಏರ್ ಇಂಡಿಯಾ ಫ್ಲೈಟ್ 182 ಪತನಗೊಂಡಿತ್ತು. ಈ ದಾಳಿಯಲ್ಲಿ ವಿಮಾನದಲ್ಲಿದ್ದ ಎಲ್ಲಾ 329 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದರು. ಮೃತರಲ್ಲಿ ಹೆಚ್ಚಿನವರು ಕೆನಡಾ ಪ್ರಜೆಗಳಾಗಿದ್ದರು ಎಂದು ಸಿಎಸ್ಐಎಸ್ ಉಲ್ಲೇಖಿಸಿದೆ.

ಇದೇ ವೇಳೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನೆ ಕೂಡ ಸಂತ್ರಸ್ತರಿಗೆ ಗೌರವ ನಮನ ಸಲ್ಲಿಸಿದ್ದು, ಕನಿಷ್ಕ ಬಾಂಬ್ ಸ್ಫೋಟವನ್ನು ದೇಶದ ಇತಿಹಾಸದಲ್ಲೇ ನಡೆದ ಅತ್ಯಂತ ಕ್ರೂರ ಭಯೋತ್ಪಾದಕ ದಾಳಿ ಎಂದು ಬಣ್ಣಿಸಿದ್ದಾರೆ. ಹಿಂಸಾತ್ಮಕ ಉಗ್ರವಾದವನ್ನು ನಿರ್ಮೂಲನೆ ಮಾಡಲು ಕೆನಡಾ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

1985ರ ಜೂನ್ 23ರಂದು ಮಾಂಟ್ರಿಯಲ್‌ನಿಂದ ಲಂಡನ್ ಮಾರ್ಗವಾಗಿ ನವದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ಫ್ಲೈಟ್ 182, ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣ ತಲುಪಲು ಸುಮಾರು 45 ನಿಮಿಷಗಳು ಬಾಕಿ ಇರುವಾಗ ಐರ್ಲೆಂಡ್ ಕರಾವಳಿ ಸಮೀಪದ ಅಟ್ಲಾಂಟಿಕ್ ಮಹಾಸಾಗರದ ಮೇಲೆ ಹಾರುತ್ತಿದ್ದ ವೇಳೆ ಸೂಟ್‌ಕೇಸ್‌ನಲ್ಲಿದ್ದ ಬಾಂಬ್ ಸ್ಫೋಟಗೊಂಡಿತ್ತು.

ಸ್ಫೋಟದ ತೀವ್ರತೆಗೆ ವಿಮಾನ ಸಮುದ್ರಕ್ಕೆ ಅಪ್ಪಳಿಸಿದ್ದು, ವಿಮಾನದಲ್ಲಿದ್ದ ಎಲ್ಲ 329 ಮಂದಿ ಮೃತಪಟ್ಟಿದ್ದರು. ಮೃತರಲ್ಲಿ 268 ಕೆನಡಾ ಪ್ರಜೆಗಳು, ಅವರಲ್ಲಿ ಹೆಚ್ಚಿನವರು ಭಾರತೀಯ ಮೂಲದವರಾಗಿದ್ದು, 24 ಮಂದಿ ಭಾರತೀಯ ಪ್ರಜೆಗಳೂ ಸೇರಿದ್ದರು. ದುರಂತದ ಬಳಿಕ ಮಹಾಸಾಗರದಿಂದ ಕೇವಲ 131 ಮೃತದೇಹಗಳನ್ನು ಮಾತ್ರ ಪತ್ತೆಹಚ್ಚಲಾಗಿತ್ತು.

1984ರಲ್ಲಿ ಅಮೃತಸರದ ಸ್ವರ್ಣ ಮಂದಿರದಲ್ಲಿ ಅಡಗಿದ್ದ ಸಶಸ್ತ್ರ ಉಗ್ರರನ್ನು ಹೊರಹಾಕಲು ಭಾರತೀಯ ಸೇನೆ ನಡೆಸಿದ್ದ ‘ಆಪರೇಷನ್ ಬ್ಲೂ ಸ್ಟಾರ್’ಗೆ ಪ್ರತೀಕಾರವಾಗಿ ಖಲಿಸ್ತಾನಿ ಉಗ್ರರು ಈ ಸಂಚು ರೂಪಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ನಾಲ್ಕು ದಶಕಗಳ ಬಳಿಕ ಕೆನಡಾದ ಗುಪ್ತಚರ ಸಂಸ್ಥೆಯ ಈ ಅಧಿಕೃತ ಒಪ್ಪಿಗೆ, ಕನಿಷ್ಕ ವಿಮಾನ ದುರಂತ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.

ಫಾರ್ಮ್‌ಹೌಸ್ ಗೇಟ್ ಬಳಿ ಭೀಕರ ಸ್ಫೋಟ: ನಾಡಬಾಂಬ್ ಮೇಲೆ ಕಾಲಿಟ್ಟ ವಕೀಲನ ಸ್ಥಿತಿ ಗಂಭೀರ ಗಾಯ

0

ರಾಮನಗರ: ಹಾರೋಹಳ್ಳಿ ತಾಲೂಕಿನ ಸುಂಡಗಟ್ಟ ಗ್ರಾಮದಲ್ಲಿ ನಾಡಬಾಂಬ್ ಸ್ಫೋಟಗೊಂಡು ಬೆಂಗಳೂರಿನ ವಕೀಲ ಮೋಹನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಫಾರ್ಮ್‌ಹೌಸ್ ಗೇಟ್ ಬಳಿ ಇರಿಸಲಾಗಿದ್ದ ಸ್ಫೋಟಕದ ಮೇಲೆ ಕಾಲಿಟ್ಟಾಗ ಈ ದುರ್ಘಟನೆ ಸಂಭವಿಸಿದೆ.

ಸುಂಡಗಟ್ಟ ಗ್ರಾಮದಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಗುರುವಾರ ರಾತ್ರಿ ತಂಗಿದ್ದ ಮೋಹನ್, ಶುಕ್ರವಾರ ಬೆಳಗ್ಗೆ ಹೊರಬರುವಾಗ ಗೇಟ್ ಸಮೀಪ ಇರಿಸಿದ್ದ ನಾಡಬಾಂಬ್ ಗಮನಿಸದೆ ಅದರ ಮೇಲೆ ಕಾಲಿಟ್ಟಿದ್ದಾರೆ. ಕೂಡಲೇ ಸ್ಫೋಟ ಸಂಭವಿಸಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳು ಮೋಹನ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಕೋಡಿಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಡು ಪ್ರಾಣಿಗಳ ಬೇಟೆ ಉದ್ದೇಶದಿಂದ ನಾಡಬಾಂಬ್ ಇರಿಸಲಾಗಿರಬಹುದು ಎಂಬ ಶಂಕೆಯಡಿ ತನಿಖೆ ಮುಂದುವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಫೋಟಕವನ್ನು ಇಟ್ಟವರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

‘ಡಿಕೆಶಿ ಜೊತೆ ಬಿಸಿನೆಸ್, ಅಡ್ಡ ಮತದಾನ ಆರೋಪ ಎಲ್ಲವೂ ಸುಳ್ಳು’: ಧರ್ಮಸ್ಥಳದಲ್ಲಿ ಬಿ.ವೈ. ವಿಜಯೇಂದ್ರ ಸ್ಪಷ್ಟನೆ

0

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ರಾಜಕೀಯ ಮತ್ತು ವ್ಯವಹಾರಿಕ ಸಂಬಂಧ ಹೊಂದಿದ್ದಾರೆ ಎಂಬ ಆರೋಪಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಧರ್ಮಸ್ಥಳದಲ್ಲಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನ ಪ್ರಕರಣದಲ್ಲೂ ತಮ್ಮ ವಿರುದ್ಧ ನಡೆದಿರುವ ಅಪಪ್ರಚಾರಕ್ಕೆ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲೇ ಉತ್ತರ ನೀಡಿದ್ದಾರೆ.

ಧರ್ಮಸ್ಥಳದ ಸನ್ನಿಧಿ ಗೆಸ್ಟ್‌ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯೇಂದ್ರ, ಧರ್ಮಸ್ಥಳಕ್ಕೆ ತಾವು ಕೇವಲ ದರ್ಶನಕ್ಕಾಗಿ ಬಂದಿದ್ದು, ಯಾವುದೇ ಆಣೆ-ಪ್ರಮಾಣ ಮಾಡುವ ಉದ್ದೇಶ ಇರಲಿಲ್ಲ ಎಂದು ಹೇಳಿದರು. ಪಕ್ಷದ ಹಿರಿಯರ ಸಲಹೆಯಂತೆ ಈ ವಿಚಾರವನ್ನು ಪಕ್ಷದೊಳಗೇ ಬಗೆಹರಿಸಿಕೊಳ್ಳುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.

ಅಡ್ಡ ಮತದಾನದ ಘಟನೆ ತಮಗೂ ಹಾಗೂ ಪಕ್ಷದ ಕಾರ್ಯಕರ್ತರಿಗೂ ಆಘಾತ ತಂದಿದೆ. ಸತ್ಯ ಹೊರಬರಬೇಕು ಎಂಬ ಕಾರಣಕ್ಕೆ ಈ ಹಿಂದೆ ಆಣೆ-ಪ್ರಮಾಣದ ಬಗ್ಗೆ ಮಾತನಾಡಿದ್ದೆ. ಆದರೆ ಈಗ ಆ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಅವರೊಂದಿಗೆ ಯಾವುದೇ ರಾಜಕೀಯ ಅಥವಾ ವ್ಯಾವಹಾರಿಕ ಸಂಬಂಧ ಇಲ್ಲ. ಸಿಎಂ ಪರವಾಗಿ ಅಡ್ಡ ಮತದಾನಕ್ಕೆ ಸಹಕರಿಸಿದ್ದೇನೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು. ಮುಖ್ಯಮಂತ್ರಿಯಾಗಿರುವ ಕಾರಣ ಅವರಿಗೆ ನೀಡಬೇಕಾದ ಸಾಂಸ್ಥಿಕ ಗೌರವವನ್ನಷ್ಟೇ ನೀಡಿದ್ದೇನೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಓರ್ವ ಸಂಸದ, ಎಂಟು ಶಾಸಕರು ಹಾಗೂ ಇಬ್ಬರು ಎಂಎಲ್‌ಸಿಗಳು ಉಪಸ್ಥಿತರಿದ್ದರು. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದವರಿಗೂ ದೇವರು ಒಳ್ಳೆಯದು ಮಾಡಲಿ ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದರು.

ಆರೋಪಿ ಬದಲು ತಮ್ಮನ ಬಂಧನಕ್ಕೆ ಹೈಕೋರ್ಟ್ ಆಕ್ರೋಶ; ‘ಯೂನಿಫಾರಂ ಇದೆ ಎಂದು ಏನು ಬೇಕಾದರೂ ಮಾಡಬಹುದೇ?’ – ಪೊಲೀಸರಿಗೆ ತರಾಟೆ

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದಲ್ಲಿ ಆರೋಪಿ ಪ್ರೊಬೇಷನರಿ ಎಸ್‌ಐ ಬದಲಿಗೆ ಅವರ ಸಹೋದರನನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಕರ್ನಾಟಕ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

‘ಯೂನಿಫಾರಂ ಇದೆ ಎಂದು ಏನು ಬೇಕಾದರೂ ಮಾಡುತ್ತೀರಾ?’ ಎಂದು ಪ್ರಶ್ನಿಸಿರುವ ನ್ಯಾಯಾಲಯ, ಕಾನೂನು ಉಲ್ಲಂಘಿಸಿ ನಿರಪರಾಧಿಗಳನ್ನು ಬಂಧಿಸುವ ಪೊಲೀಸರ ವಿರುದ್ಧ ಅಮಾನತು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ದಾವಣಗೆರೆಯ ನಿವಾಸಿ ಎನ್. ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿಚಾರಣೆ ವೇಳೆ, ಪ್ರಕರಣದಲ್ಲಿ ಯಾವುದೇ ತಪ್ಪಿಲ್ಲದಿದ್ದರೂ ಆರೋಪಿಯ ಸಹೋದರನನ್ನು ಏಕೆ ಬಂಧಿಸಲಾಗಿದೆ ಎಂದು ಪ್ರಶ್ನಿಸಿದ ನ್ಯಾಯಪೀಠ, ವಿನಾಕಾರಣ ಬಂಧಿಸುವುದು ಕೆಲ ಪೊಲೀಸರಿಗೆ ಅಭ್ಯಾಸವಾಗಿರುವಂತೆ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಬಂಧನಕ್ಕೊಳಗಾಗುವ ವ್ಯಕ್ತಿಯ ಜೀವನದ ಮೇಲೆ ಅದರ ಪರಿಣಾಮ ಏನಾಗಬಹುದು ಎಂಬ ಅರಿವು ಪೊಲೀಸರಿಗೆ ಇರಬೇಕು ಎಂದು ಕೋರ್ಟ್‌ ಹೇಳಿತು.

ಬಂಧನ ಅಗತ್ಯವಿರುವ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕುವ ಪೊಲೀಸರು, ಅಗತ್ಯವಿಲ್ಲದ ಪ್ರಕರಣಗಳಲ್ಲಿ ನಿರಪರಾಧಿಗಳನ್ನು ಬಂಧಿಸಿ ಕಿರುಕುಳ ನೀಡುವುದು ಸರಿಯಲ್ಲ. ಇಂತಹ ಕ್ರಮಗಳು ಕಾನೂನು ದುರುಪಯೋಗಕ್ಕೆ ಕಾರಣವಾಗುತ್ತವೆ ಎಂದು ನ್ಯಾಯಾಲಯ ತೀಕ್ಷ್ಣವಾಗಿ ಟೀಕಿಸಿತು.

ಈ ವೇಳೆ, ತಪ್ಪಾಗಿ ಬಂಧನ ಮಾಡಿದ ಪೊಲೀಸ್ ಅಧಿಕಾರಿಯ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಸೂಚಿಸಿದ ನ್ಯಾಯಪೀಠ, ಇಂತಹ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್‌ಗಳೂ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ತಿಳಿಸಿತು. ಕಾನೂನು ಉಲ್ಲಂಘಿಸಿ ಬಂಧನ ನಡೆಸುವ ಪೊಲೀಸರ ವಿರುದ್ಧ ಅಮಾನತು ಸೇರಿದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಅನಗತ್ಯವಾಗಿ ಪ್ರೊಬೇಷನರಿ ಎಸ್‌ಐ ಅವರ ಸಹೋದರನನ್ನು ಬಂಧಿಸಿದ್ದ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಿರುವ ನ್ಯಾಯಾಲಯ, ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣದ ಹಿನ್ನೆಲೆ

ಪ್ರೊಬೇಷನರಿ ಎಸ್‌ಐ ವರುಣ್ ಕುಮಾರ್ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಮಹಿಳೆಯೊಬ್ಬರೊಂದಿಗೆ ಸ್ನೇಹ ಬೆಳೆಸಿದ್ದರು. ಬಳಿಕ ಇಬ್ಬರ ನಡುವೆ ಆತ್ಮೀಯ ಸಂಬಂಧ ಬೆಳೆದಿತ್ತು. ನಂತರ ಆ ಮಹಿಳೆಗೆ ಈಗಾಗಲೇ ವಿವಾಹವಾಗಿರುವುದು ತಿಳಿದ ಹಿನ್ನೆಲೆಯಲ್ಲಿ ವರುಣ್ ಕುಮಾರ್ ಸಂಬಂಧವನ್ನು ಕಡಿತಗೊಳಿಸಿದ್ದರು.

ಇದಾದ ಬಳಿಕ ಮಹಿಳೆ, ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರೊಬೇಷನರಿ ಎಸ್‌ಐ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ತನಿಖೆ ವೇಳೆ ಆರೋಪಿಯ ಸಹೋದರನನ್ನೂ ಬಂಧಿಸಲಾಗಿತ್ತು.

ಬಂಧನವನ್ನು ಪ್ರಶ್ನಿಸಿ ಆರೋಪಿ ಹಾಗೂ ಕುಟುಂಬ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ವಾರ ನ್ಯಾಯಾಲಯ ಪೊಲೀಸರ ಕ್ರಮವನ್ನು ಪ್ರಶ್ನಿಸಿದ ಬೆನ್ನಲ್ಲೇ ಬಂಧಿತನನ್ನು ಪೊಲೀಸರು ಬಿಡುಗಡೆ ಮಾಡಿದ್ದರು.

ಶುಕ್ರವಾರ ಲಕ್ಷ್ಮೀ ಪೂಜೆ ಹೀಗೆ ಮಾಡಿದರೆ ಧನಸಂಪತ್ತು ವೃದ್ಧಿ! ಈ ತಪ್ಪುಗಳನ್ನು ಮಾತ್ರ ಮಾಡಬೇಡಿ

0

ಹಿಂದೂ ಧರ್ಮದಲ್ಲಿ ಶುಕ್ರವಾರವನ್ನು ಅತ್ಯಂತ ಶುಭ ಮತ್ತು ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ.

ಈ ದಿನ ಸಂಪತ್ತು, ಸಮೃದ್ಧಿ ಹಾಗೂ ಐಶ್ವರ್ಯದ ಅಧಿದೇವತೆಯಾದ ಮಹಾಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಆರಾಧಿಸಿದರೆ ಮನೆಯಲ್ಲಿ ಸುಖ-ಶಾಂತಿ, ಆರ್ಥಿಕ ಅಭಿವೃದ್ಧಿ ಮತ್ತು ಸೌಭಾಗ್ಯ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ಶುಕ್ರವಾರ ಲಕ್ಷ್ಮೀ ಪೂಜೆ ಏಕೆ ವಿಶೇಷ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರವಾರವು ಶುಕ್ರ ಗ್ರಹಕ್ಕೆ ಸಂಬಂಧಿಸಿದ ದಿನವಾಗಿದೆ. ಶುಕ್ರನು ಐಶ್ವರ್ಯ, ಸೌಂದರ್ಯ, ದಾಂಪತ್ಯ ಸುಖ ಹಾಗೂ ಭೌತಿಕ ಸಮೃದ್ಧಿಯ ಕಾರಕ ಎಂದು ಹೇಳಲಾಗುತ್ತದೆ. ಈ ದಿನ ಲಕ್ಷ್ಮೀ ಪೂಜೆ ಮಾಡುವುದರಿಂದ ಶುಕ್ರನ ಅನುಗ್ರಹ ಲಭಿಸಿ, ಕುಟುಂಬದ ಯೋಗಕ್ಷೇಮ ವೃದ್ಧಿಯಾಗುತ್ತದೆ ಎನ್ನಲಾಗುತ್ತದೆ.

ಪೂಜೆಗೆ ಮುನ್ನ ಮಾಡಬೇಕಾದ ಸಿದ್ಧತೆ:

  • ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಮನೆ ಹಾಗೂ ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಿ.
  • ಮನೆಯ ಮುಖ್ಯ ಬಾಗಿಲಿನ ಬಳಿ ನೀರು ತುಂಬಿದ ಚೊಂಬು ಇಟ್ಟು ಶುಭ ದೀಪ ಹಚ್ಚಿ.
  • ಲಕ್ಷ್ಮೀ ದೇವಿಯ ವಿಗ್ರಹ ಅಥವಾ ಭಾವಚಿತ್ರವನ್ನು ಹೂವುಗಳಿಂದ ಅಲಂಕರಿಸಿ.
  • ಲಕ್ಷ್ಮೀ ದೇವಿಗೆ ಪ್ರಿಯವಾದ ಪೂಜೆ
  • ಹಸುವಿನ ತುಪ್ಪ ಅಥವಾ ಎಳ್ಳೆಣ್ಣೆಯಿಂದ ದೀಪ ಹಚ್ಚಿ.
  • ಕಮಲ ಅಥವಾ ಕೆಂಪು ಬಣ್ಣದ ಹೂವುಗಳಿಂದ ಅರ್ಚನೆ ಮಾಡಿ.
  • ಲಕ್ಷ್ಮೀ ಅಷ್ಟೋತ್ತರ ಅಥವಾ ಸಹಸ್ರನಾಮ ಪಠಿಸಿ.
  • ಹಾಲು, ಪಾಯಸ ಅಥವಾ ಸಕ್ಕರೆ ಪೊಂಗಲ್‌ ನೈವೇದ್ಯವಾಗಿ ಅರ್ಪಿಸಿ.
  • ಕೊನೆಯಲ್ಲಿ ಕುಟುಂಬದೊಂದಿಗೆ ಆರತಿ ಪಡೆದು ಪ್ರಸಾದ ಸ್ವೀಕರಿಸಿ.
  • ಲಕ್ಷ್ಮೀ ಕಟಾಕ್ಷಕ್ಕೆ ಸರಳ ಪರಿಹಾರ

ಶುಕ್ರವಾರ ಸಂಜೆ ಪ್ರದೋಷ ಕಾಲದಲ್ಲಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಎರಡು ದೀಪಗಳನ್ನು ಹಚ್ಚಿ, “ಓಂ ಶ್ರೀ ಮಹಾಲಕ್ಷ್ಮಿ ನಮಃ” ಮಂತ್ರವನ್ನು 108 ಬಾರಿ ಜಪಿಸಿದರೆ ಆರ್ಥಿಕ ಪ್ರಗತಿ ಹಾಗೂ ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಶುಕ್ರವಾರ ಈ ಕೆಲಸಗಳನ್ನು ಮಾಡಬೇಡಿ:

  • ಕಬ್ಬಿಣದ ಪಾತ್ರೆಗಳು ಅಥವಾ ಕಬ್ಬಿಣದ ವಸ್ತುಗಳನ್ನು ಖರೀದಿಸಬೇಡಿ.
  • ಪ್ರಮುಖ ಆಸ್ತಿ ಖರೀದಿ ಅಥವಾ ಮಾರಾಟವನ್ನು ಸಾಧ್ಯವಾದರೆ ತಪ್ಪಿಸಿ.
  • ಅನಗತ್ಯವಾಗಿ ಸಾಲ ನೀಡುವುದು ಅಥವಾ ಸಾಲ ಪಡೆಯುವುದನ್ನು ತಪ್ಪಿಸಿ.
  • ಮನೆ ಕೊಳಕಾಗಿ ಇಡಬೇಡಿ ಹಾಗೂ ಸಂಜೆ ದೀಪ ಹಚ್ಚಿದ ಬಳಿಕ ಕಸವನ್ನು ಹೊರಗೆ ಹಾಕಬೇಡಿ.

ಡಿ.ಕೆ. ಶಿವಕುಮಾರ್ ಜೊತೆ ಯಾವುದೇ ವ್ಯವಹಾರವಿಲ್ಲ; ಅಪಪ್ರಚಾರ ಮಾಡುವವರಿಗೆ ದೇವರೇ ಬುದ್ಧಿ ಕೊಡಲಿ: ಬಿವೈ ವಿಜಯೇಂದ್ರ

ಧರ್ಮಸ್ಥಳ: ನನ್ನ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ರೀತಿಯ ವ್ಯವಹಾರ ಅಥವಾ ಆತ್ಮೀಯತೆ ಇಲ್ಲ. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಒಬ್ಬ ರಾಜಕಾರಣಿಯಾಗಿ ನೀಡಬೇಕಾದ ಗೌರವವನ್ನು ಮಾತ್ರ ನೀಡಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದರು.

ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ ಬಳಿಕ ನೇರವಾಗಿ ಧರ್ಮಸ್ಥಳಕ್ಕೆ ಆಗಮಿಸಿದ ವಿಜಯೇಂದ್ರ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಬಳಿಕ ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಅಡ್ಡಮತದಾನಕ್ಕೆ ತಾನೇ ಕಾರಣ ಎಂಬ ರೀತಿಯಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಜೊತೆಯಾಗಿದ್ದಾರೆ ಎಂಬ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಆದರೆ ಡಿ.ಕೆ. ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ವ್ಯವಹಾರವಿಲ್ಲ. ನನ್ನ ವಿರುದ್ಧ ಅಪಪ್ರಚಾರ ಮಾಡುವವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೂ, ಅಡ್ಡಮತದಾನ ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ಹಾಗೂ ನನಗೆ ತೀವ್ರ ನೋವುಂಟು ಮಾಡಿದೆ. ಈ ಬೆಳವಣಿಗೆಯಿಂದ ಶಾಸಕಾಂಗ ಪಕ್ಷದ ಸಭೆಯನ್ನು ಧರ್ಮಸ್ಥಳದಲ್ಲೇ ನಡೆಸಿ, ಶಾಸಕರು ಆಣೆ-ಪ್ರಮಾಣ ಮಾಡಬೇಕು ಎಂದು ನಾನು ಹೇಳಿದ್ದು ನಿಜ. ಆದರೆ ಪಕ್ಷದ ಹಿರಿಯರು ನೀಡಿದ ಸಲಹೆಗೆ ಗೌರವ ನೀಡಿ ಆ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ತಿಳಿಸಿದರು.

ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ರಾಜ್ಯದಲ್ಲಿ ಉತ್ತಮ ಮಳೆ ಆಗಲಿ, ಜನರ ಸಂಕಷ್ಟ ದೂರವಾಗಲಿ ಹಾಗೂ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಜನಪರ, ಅಭಿವೃದ್ಧಿಪರ ಮತ್ತು ಹಿಂದೂಗಳ ರಕ್ಷಣೆ ಮಾಡುವ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಹಿಂದೆ 17 ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದ ಇತಿಹಾಸವನ್ನು ನೆನಪಿಸಿದರು. ಈಗಿನ ಕಾಂಗ್ರೆಸ್ ಸರ್ಕಾರ ಭ್ರಷ್ಟ, ಜನವಿರೋಧಿ ಹಾಗೂ ರೈತ ವಿರೋಧಿ ಆಡಳಿತ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಜನರು ಮತ್ತು ಬಿಜೆಪಿ ಕಾರ್ಯಕರ್ತರ ಶಕ್ತಿಯಿಂದ ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೃಹಲಕ್ಷ್ಮಿ ಯೋಜನೆಯಲ್ಲಿ ₹250 ಕೋಟಿ ಹಗರಣ? ಸಿಬಿಐ ತನಿಖೆಗೆ ಸಿ.ಟಿ. ರವಿ ಆಗ್ರಹ!

ಚಿಕ್ಕಮಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಪ್ರಕರಣವನ್ನು ತಕ್ಷಣವೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಯಾವುದೇ ತನಿಖೆಯಿಂದ ಈ ಪ್ರಕರಣದಲ್ಲಿ ನ್ಯಾಯ ಸಿಗುವುದಿಲ್ಲ ಎಂದು ಆರೋಪಿಸಿದರು. ನಕಲಿ ಖಾತೆಗಳನ್ನು ಸರ್ಕಾರ ಪತ್ತೆಹಚ್ಚಿಲ್ಲ, ಬದಲಾಗಿ ಸಿಐಜಿ ಈ ವಂಚನೆಯನ್ನು ಬಯಲಿಗೆಳೆದಿದೆ. ಒಂದೇ ಬ್ಯಾಂಕ್ ಖಾತೆಗೆ ಸಾವಿರಾರು ಫಲಾನುಭವಿಗಳ ಹಣ ವರ್ಗಾವಣೆಯಾಗಿರುವುದು ಸಾಮಾನ್ಯ ವಿಷಯವಲ್ಲ ಎಂದು ಹೇಳಿದರು.

ಈ ಪ್ರಕರಣದ ಕುರಿತು ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಿಂದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಮೌನವೂ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಟೀಕಿಸಿದರು.

ನಕಲಿ ಖಾತೆಗಳ ಮೂಲಕ ವರ್ಗಾವಣೆಯಾದ ಹಣದಲ್ಲಿ ಆಳುವವರಿಗೂ ಪಾಲು ಸಿಕ್ಕಿದೆಯೇ ಎಂಬ ಅನುಮಾನ ಮೂಡುತ್ತಿದೆ. ಗೃಹಲಕ್ಷ್ಮಿಯರ ಹೆಸರಿನಲ್ಲಿ ಸಾರ್ವಜನಿಕರ ಹಣ ಲೂಟಿ ಮಾಡಿರುವುದು ರಾಜ್ಯದ ಮಹಿಳೆಯರಿಗೆ ಮಾಡಿದ ದ್ರೋಹ ಎಂದು ಕಿಡಿಕಾರಿದರು.

ಕಾಕಾ ಪಾಟೀಲ್ ಅವರ ಪತ್ನಿ, ಶೋಭಾ ಕರಂದ್ಲಾಜೆ ಹಾಗೂ ತಮ್ಮ ಪತ್ನಿಗೂ ಗೃಹಲಕ್ಷ್ಮಿ ಯೋಜನೆಯ ಲಾಭ ದೊರೆಯುತ್ತದೆ ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ ಈಗ ಯೋಜನೆಯಲ್ಲೇ ಭ್ರಷ್ಟಾಚಾರದ ಆರೋಪ ಕೇಳಿಬಂದಿರುವುದು ಅತ್ಯಂತ ಗಂಭೀರ ವಿಚಾರ. ಸತ್ಯಾಸತ್ಯತೆ ಹೊರಬರಬೇಕಾದರೆ ಸಿಬಿಐ ತನಿಖೆಯೊಂದೇ ಸೂಕ್ತ ಮಾರ್ಗ ಎಂದು ಸಿ.ಟಿ. ರವಿ ಒತ್ತಾಯಿಸಿದರು.

ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನ ಪಡೆದ ಬಿ.ವೈ. ವಿಜಯೇಂದ್ರ: ರಾಜಕೀಯ ಬೆಳವಣಿಗೆಗಳ ನಡುವೆ ವಿಶೇಷ ಪೂಜೆ!

ಧರ್ಮಸ್ಥಳ: ದೆಹಲಿ ಪ್ರವಾಸ ಮುಗಿಸಿ ನೇರವಾಗಿ ಧರ್ಮಸ್ಥಳಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶುಕ್ರವಾರ ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ವಿಜಯೇಂದ್ರ ಅವರೊಂದಿಗೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹಾಗೂ ಕರಾವಳಿ ಭಾಗದ ಹಲವು ಬಿಜೆಪಿ ಶಾಸಕರು ಸಹ ದೇವಸ್ಥಾನಕ್ಕೆ ಭೇಟಿ ನೀಡಿದರು.

ಇತ್ತೀಚೆಗೆ ವಿಧಾನಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡಮತದಾನದ ವಿಚಾರ ರಾಜ್ಯ ಬಿಜೆಪಿಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ (ಬಿಜೆಪಿ ಸಿಎಲ್ಪಿ) ಸಭೆ ನಡೆಸಿ, ಶಾಸಕರಿಂದ ಆಣೆ-ಪ್ರಮಾಣ ಮಾಡಿಸಲು ಮೊದಲಿಗೆ ಯೋಜನೆ ರೂಪಿಸಲಾಗಿತ್ತು.

ಆದರೆ, ಪವಿತ್ರ ಕ್ಷೇತ್ರದಲ್ಲಿ ರಾಜಕೀಯ ಸಭೆ ಹಾಗೂ ಆಣೆ-ಪ್ರಮಾಣ ನಡೆಸುವ ಪ್ರಸ್ತಾಪಕ್ಕೆ ಪಕ್ಷದ ಹಿರಿಯ ನಾಯಕರಿಂದಲೇ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಯೋಜನೆಯನ್ನು ಕೈಬಿಡಲಾಯಿತು.

ಈ ಬೆಳವಣಿಗೆಯ ಬಳಿಕ ಪಕ್ಷದೊಳಗಿನ ಗೊಂದಲಕ್ಕೆ ವಿಜಯೇಂದ್ರ ಅವರನ್ನೇ ಕೆಲ ನಾಯಕರು ಹೊಣೆ ಮಾಡುತ್ತಿರುವ ಮಾತುಗಳು ಕೇಳಿಬಂದಿದ್ದವು. ಇದರ ನಡುವೆ ವಿಜಯೇಂದ್ರ ಅವರು ಎಲ್ಲಾ ಶಾಸಕರೊಂದಿಗೆ ಭೇಟಿ ನೀಡುವ ಯೋಜನೆಯನ್ನು ಕೈಬಿಟ್ಟು, ಒಬ್ಬರೇ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ರಾಜಕೀಯ ವಲಯದಲ್ಲಿ ಈ ಭೇಟಿಗೆ ವಿವಿಧ ರೀತಿಯ ವ್ಯಾಖ್ಯಾನಗಳು ಕೇಳಿಬರುತ್ತಿದ್ದು, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಹಾಗೂ ಅಡ್ಡಮತದಾನದ ಬೆಳವಣಿಗೆಗಳ ನಡುವೆಯೇ ವಿಜಯೇಂದ್ರ ದೇವರ ಮೊರೆ ಹೋಗಿರುವುದು ಗಮನ ಸೆಳೆದಿದೆ. ಆದರೆ, ಈ ಕುರಿತು ಬಿಜೆಪಿ ನಾಯಕತ್ವದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ದಾವಣಗೆರೆಯಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ವೇಳೆ ಯುವತಿ ರಂಪಾಟ: ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ!

ದಾವಣಗೆರೆ: ಮದ್ಯದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ಯುವತಿಯೊಬ್ಬಳು ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಘಟನೆ ದಾವಣಗೆರೆ ನಗರದ ಶಾಮನೂರು ರಸ್ತೆಯಲ್ಲಿ ನಡೆದಿದೆ.

ಮಾಹಿತಿಯ ಪ್ರಕಾರ, ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ ಯುವತಿ ಮದ್ಯ ಸೇವಿಸಿ ಥಾರ್ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿದ್ದಳು. ಈ ವೇಳೆ ಶಾಮನೂರು ರಸ್ತೆಯಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದ ಪೊಲೀಸರು ವಾಹನವನ್ನು ತಡೆದು ಪರಿಶೀಲನೆಗೆ ಮುಂದಾಗಿದ್ದಾರೆ.

ಇದರಿಂದ ಆಕ್ರೋಶಗೊಂಡ ಯುವತಿ ಪೊಲೀಸರೊಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐಗೆ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ.

ಘಟನೆಯ ವೇಳೆ ಯುವತಿ ನಡೆಸಿದ ರಂಪಾಟವನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನೆ ಸಂಬಂಧ ಯುವತಿಯ ವಿರುದ್ಧ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಶರಾವತಿ ಜಲವಿದ್ಯುತ್ ಕೇಂದ್ರದಲ್ಲಿ ತಾಂತ್ರಿಕ ದೋಷ: ನೀರು ನುಗ್ಗಿ ಆತಂಕ, ವಿದ್ಯುತ್ ಉತ್ಪಾದನೆ ಪುನರಾರಂಭ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಪ್ರಸಿದ್ಧ ಶರಾವತಿ ಜಲವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಗುರುವಾರ ನಿರ್ವಹಣಾ ಕಾರ್ಯದ ವೇಳೆ ತಾಂತ್ರಿಕ ದೋಷ ಉಂಟಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಆದರೆ ಕೆಪಿಸಿಎಲ್ ಅಧಿಕಾರಿಗಳ ತ್ವರಿತ ಕಾರ್ಯಾಚರಣೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ವಿದ್ಯುತ್ ಉತ್ಪಾದನೆಯನ್ನು ಹಂತ ಹಂತವಾಗಿ ಪುನರಾರಂಭಿಸಲಾಗಿದೆ.

ಲಿಂಗನಮಕ್ಕಿ ಜಲಾಶಯದ ವ್ಯಾಪ್ತಿಯಲ್ಲಿರುವ ಶರಾವತಿ ಜಲವಿದ್ಯುತ್ ಕೇಂದ್ರದ 7ನೇ ಘಟಕದಲ್ಲಿ ನಿಯಮಿತ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಡೆಯುತ್ತಿತ್ತು. ಈ ವೇಳೆ ಪೆನ್‌ಸ್ಟಾಕ್ ಪೈಪ್‌ನಲ್ಲಿದ್ದ ನೀರನ್ನು ಹೊರಹಾಕುವ ಸಂದರ್ಭದಲ್ಲಿ ಡ್ರೈನ್ ವಾಲ್ವ್‌ನಲ್ಲಿ ಏಕಾಏಕಿ ಸೋರಿಕೆ ಕಾಣಿಸಿಕೊಂಡಿದ್ದು, ಭಾರಿ ಪ್ರಮಾಣದ ನೀರು ಟರ್ಬೈನ್ ವಿಭಾಗದೊಳಗೆ ನುಗ್ಗಿದೆ.

ಡ್ರೈನ್ ವಾಲ್ವ್‌ನ ಸೋರಿಕೆಯಿಂದ ಟರ್ಬೈನ್ ಹಾಗೂ ನೆಲಮಾಳಿಗೆಯ ಭಾಗದಲ್ಲಿ ಸುಮಾರು ಒಂದೂವರೆ ಅಡಿ ಎತ್ತರದಷ್ಟು ನೀರು ಶೇಖರಣೆಯಾಗಿದ್ದು, ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಚಾಲನೆಯಲ್ಲಿದ್ದ 1, 8 ಹಾಗೂ 9ನೇ ಘಟಕಗಳ ವಿದ್ಯುತ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕೆಪಿಸಿಎಲ್ ಹಿರಿಯ ಅಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ತುರ್ತು ಕಾರ್ಯಾಚರಣೆ ಕೈಗೊಂಡಿತು. ಸೋರಿಕೆಯನ್ನು ನಿಯಂತ್ರಿಸಿದ ಬಳಿಕ ಪಂಪ್‌ಗಳ ಸಹಾಯದಿಂದ ನೆಲಮಾಳಿಗೆಯಲ್ಲಿ ಸಂಗ್ರಹವಾಗಿದ್ದ ನೀರನ್ನು ಸಂಪೂರ್ಣವಾಗಿ ಹೊರಹಾಕಲಾಯಿತು.

ನಂತರ ವಿದ್ಯುದಾಗಾರದ ಎಲ್ಲ ಘಟಕಗಳ ಸುರಕ್ಷತೆಯನ್ನು ಪರಿಶೀಲಿಸಿದ ಅಧಿಕಾರಿಗಳು ಯಾವುದೇ ದೊಡ್ಡ ಮಟ್ಟದ ಹಾನಿ ಸಂಭವಿಸಿಲ್ಲ ಎಂದು ಖಚಿತಪಡಿಸಿಕೊಂಡರು. ಇದರ ಬಳಿಕ ಸ್ಥಗಿತಗೊಳಿಸಲಾಗಿದ್ದ ಎಲ್ಲಾ ಘಟಕಗಳಲ್ಲಿ ಬುಧವಾರ ಸಂಜೆ ವೇಳೆಗೆ ಹಂತ ಹಂತವಾಗಿ ವಿದ್ಯುತ್ ಉತ್ಪಾದನೆಯನ್ನು ಪುನರಾರಂಭಿಸಲಾಗಿದೆ.

ಕೆಪಿಸಿಎಲ್ ಅಧಿಕಾರಿಗಳ ತ್ವರಿತ ಕ್ರಮದಿಂದ ಸಂಭವನೀಯ ದೊಡ್ಡ ಅನಾಹುತ ತಪ್ಪಿದ್ದು, ಜಲವಿದ್ಯುತ್ ಕೇಂದ್ರದ ಕಾರ್ಯಾಚರಣೆ ಇದೀಗ ಎಂದಿನಂತೆ ಮುಂದುವರಿದಿದೆ.