ಬೆಂಗಳೂರು: ಬಿಜೆಪಿ ನಾಯಕರ ಮೆಟ್ರೋ ಹಾಗೂ ಬೈಕ್ ಪ್ರಯಾಣ ಕೇವಲ ಒಂದು ದಿನದ ರಾಜಕೀಯ ನಾಟಕ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕರ ಮೆಟ್ರೋ ಪ್ರಯಾಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇದೆಲ್ಲ ಕೇವಲ ಪ್ರಚಾರಕ್ಕಾಗಿ ಮಾಡುತ್ತಿರುವ ನಾಟಕ. ಪ್ರತಿದಿನ ಮೆಟ್ರೋ ಹತ್ತಿದರೆ ನಾವು ಸಹ ಒಪ್ಪುತ್ತೇವೆ. ಒಬ್ಬ ಮಂತ್ರಿ ಮೆಟ್ರೋ ಹತ್ತುವುದು, ಮತ್ತೊಬ್ಬ ಬೈಕ್ನಲ್ಲಿ ಸಂಚರಿಸುವುದು ಒಂದು ದಿನದ ಪ್ರದರ್ಶನ ಮಾತ್ರ” ಎಂದು ಟೀಕಿಸಿದರು.
ನಿಜವಾಗಿಯೂ ಸಾರ್ವಜನಿಕ ಸಾರಿಗೆ ಬಗ್ಗೆ ಕಾಳಜಿ ಇದ್ದರೆ ಪ್ರತಿದಿನ ಬಿಎಂಟಿಸಿ ಬಸ್ ಬಳಸಲಿ. ನಮ್ಮ ಸರ್ಕಾರದ ಶಕ್ತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿ ಎಂದು ಸವಾಲು ಹಾಕಿದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಉಲ್ಲೇಖಿಸಿದ ಅವರು, ವಿಜಯೇಂದ್ರ ಮೆಟ್ರೋ ಹತ್ತುವ ಪರಿಸ್ಥಿತಿ ಏಕೆ ಬಂತು? ಅದಕ್ಕೆ ಕಾರಣ ಯಾರು? ಈ ಪ್ರಶ್ನೆಗೆ ಉತ್ತರ ಸಿಗಬೇಕು ಎಂದು ಪ್ರಶ್ನಿಸಿದರು.
ಎಸ್ಐಆರ್ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಇದು ಬಿಜೆಪಿ ಪರ ಅನುಕೂಲವಾಗುವಂತೆ ರೂಪಿಸಿರುವ ವ್ಯವಸ್ಥೆ ಎಂದು ಆರೋಪಿಸಿದರು. ಎಸ್ಐಆರ್ ಸಂಪೂರ್ಣ ಅಸಂವಿಧಾನಿಕವಾಗಿದೆ. ನಮಗೆ ಎಸ್ಐಆರ್ ವಿರೋಧವಿಲ್ಲ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸಬೇಕು,” ಎಂದು ಹೇಳಿದರು.
ಉದಾಹರಣೆಯಾಗಿ ತಮ್ಮ ಹೆಸರನ್ನೇ ಉಲ್ಲೇಖಿಸಿದ ಅವರು, ನನ್ನ ಹೆಸರು ಪ್ರಿಯಾಂಕ್. ಅದರಲ್ಲಿ ಸಣ್ಣ ವ್ಯತ್ಯಾಸ ಬಂದರೂ ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹೋಗುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲೂ ವೈಸ್ ಅಡ್ಮಿರಲ್ ಒಬ್ಬರ ಮತ ಅಳಿಸಲಾಗಿತ್ತು. ಇದರಿಂದ ಅನೇಕರು ಮತದಾನ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

