Home Blog

ಕಾನೂನು ಸುವ್ಯವಸ್ಥೆಗೂ ಜಿಡಿಪಿಗೂ ನೇರ ಸಂಬಂಧವಿದೆ: ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು: ಸೈಬರ್ ಅಪರಾಧಗಳು ಸೇರಿದಂತೆ ನಾನಾ ಅಪರಾಧಗಳಲ್ಲಿ ನಮ್ಮ ರಾಜ್ಯ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದ್ದು ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು.

ಕೋರಮಂಗಲದ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ “ಪೊಲೀಸ್ ಧ್ವಜ ದಿನಾಚರಣೆ” ಕಾರ್ಯಕ್ರಮದಲ್ಲಿ “ಮುಖ್ಯಮಂತ್ರಿಗಳ ಪದಕ” ಪ್ರದಾನ ಮಾಡಿ ಮಾತನಾಡಿದರು.

ಯಾವುದೇ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆಯಾ ಠಾಣಾಧಿಕಾರಿಯ ಗಮನಕ್ಕೆ ಬರದಂತೆ ಯಾವುದೇ ಅಪರಾಧಗಳು, ಕೆಟ್ಟ ವ್ಯವಹಾರಗಳು ನಡೆಯಲು ಸಾಧ್ಯವಿಲ್ಲ ಎನ್ನುವುದು ನನ್ನ ನಂಬಿಕೆ ಎಂದರು.

ಹಲವು ರೀತಿಯ ಅಪರಾಧ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿ ಶಿಕ್ಷೆ ಪ್ರಮಾಣದಲ್ಲಿ ಕರ್ನಾಟಕ ರಾಜ್ಯ ಮುಂದಿದೆ. ಇದಕ್ಕಾಗಿ ಪೊಲೀಸ್ ಇಲಾಖೆಯನ್ನು ಅಭಿನಂದಿಸುವ ಜೊತೆಗೆ ಪ್ರಮಾಣ ಹೆಚ್ಚಾಗಿರುವ ಅಪರಾಧಗಳ ನಿಯಂತ್ರಣದಲ್ಲೂ ನಾವು ಶ್ರಮ ಹಾಕಬೇಕಿದೆ ಎಂದು ಸೂಚಿಸಿದರು.

ಸೈಬರ್ ಅಪರಾಧಗಳು ಸೇರಿದಂತೆ ನಾನಾ ರೀತಿಯ ಅಪರಾಧಗಳನ್ನು ತಡೆಯಲು ತಂತ್ರಜ್ಞಾನದ ಅವಕಾಶ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಯದ ಮಿತಿ ಇಲ್ಲದಂತೆ ದಿನದ 24 ಗಂಟೆಯೂ ಕರ್ತವ್ಯಪ್ರಜ್ಞೆ ಇಟ್ಟುಕೊಂಡು ಕೆಲಸ ಮಾಡುವುದರಿಂದ ಸಮಾಜದಲ್ಲಿ ನೆಮ್ಮದಿ ಮತ್ತು ಸೌಹಾರ್ದತೆ ನೆಲೆಸಿದೆ ಎಂದರು.

ಮಹಿಳೆಯರು, ಮಕ್ಕಳು ಮತ್ತು ದುರ್ಬಲರು ಹಾಗೂ ಅಸಹಾಯಕರ ನಮ್ಮ ಸರ್ಕಾರ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದೆ. ಪೊಲೀಸರೂ ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದರು.

ರಾಜ್ಯದ ಆರ್ಥಿಕ ಬೆಳವಣಿಗೆಗೂ, ಜಿಡಿಪಿ ಪ್ರಗತಿಗೂ ರಾಜ್ಯದ ಕಾನೂನು ಸುವ್ಯವಸ್ಥೆಗೂ ನೇರಾ ನೇರಾ ಸಂಬಂಧ ಇರುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಿದರೆ ಆರ್ಥಿಕತೆಗೂ ದೊಡ್ಡ ಕೊಡುಗೆ ಕೊಟ್ಟಂತಾಗುತ್ತದೆ ಎಂದರು.

ಕರ್ನಾಟಕ ಡ್ರಗ್ಸ್ ಮುಕ್ತ ರಾಜ್ಯ ಆಗಬೇಕು ಎನ್ನುವ ಗುರಿ ನಮ್ಮ ಸರ್ಕಾರದ್ದಾಗಿದೆ. ಇದು ಪೊಲೀಸ್ ಇಲಾಖೆಯ ಗುರಿಯೂ ಆಗಬೇಕಿದೆ ಎಂದರು.

ಪದಕ ವಿಜೇತರೆಲ್ಲರಿಗೂ ಶುಭಾಶಯ ಕೋರಿದ ಮುಖ್ಯಮಂತ್ರಿಗಳು, ಇವರ ಕಾರ್ಯ ಮತ್ತು ವೃತ್ತಿಪರತೆ ಇತರರಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸಿದರು. ಗೃಹ ಸಚಿವರಾದ ಜಿ.ಪರಮೇಶ್ವರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಅವರುಗಳು ಉಪಸ್ಥಿತರಿದ್ದರು.‌

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಸಮೀರ್ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿ, ಕಾಲ್ಪನಿಕ ವಿಚಾರಗಳನ್ನು ಆಧರಿಸಿ ಕೃತಕ ಬುದ್ಧಿಮತ್ತೆಯ ನೆರವಿನಿಂದ ವಿಡಿಯೋ ಸಿದ್ಧಪಡಿಸಿ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಯೂಟ್ಯೂಬರ್ ಎಂ.ಡಿ. ಸಮೀರ್ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಮೀರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ತನಿಖೆಗೆ ತಡೆ ನೀಡುವುದರ ಜೊತೆಗೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಲಾಗಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಯೂಟ್ಯೂಬ್ ಚಾನೆಲ್ ತೆರೆಯುವಾಗ ಸಮೀರ್‌ನ ವಿಡಿಯೋ ಕಾಣಿಸಿಕೊಂಡಿದ್ದು, ಅದರಲ್ಲಿ ಸುಳ್ಳು ಮಾಹಿತಿಯನ್ನು ಹಂಚಲಾಗಿದೆ ಎಂದು ಹೇಳಲಾಗಿದೆ. ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದು, ಸಮೀರ್ ಸಾರ್ವಜನಿಕರ ನೆಮ್ಮದಿಯನ್ನು ಭಂಗಪಡಿಸಿದ್ದಾನೆ ಎಂದು ಆರೋಪಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, “ಸುಮ್ಮನೆ ಇರಲು ಆಗುವುದಿಲ್ಲವೇ? ಯಾರ ನೆಮ್ಮದಿ ಹಾಳಾಗಿದೆ ಎಂಬುದು ತಿಳಿದಿದೆ. ಅದು ಸಾರ್ವಜನಿಕರದು ಅಲ್ಲ. ಅವರದೇ ನೆಮ್ಮದಿ ಯಾಕೆ ನೆಮ್ಮದಿ ಅಲ್ಲ?” ಎಂದು ಪ್ರಶ್ನಿಸಿದೆ.

ಇನ್ನೊಂದೆಡೆ, ಸರ್ಕಾರಿ ವಕೀಲರು ವಾದ ಮಂಡಿಸಿ, ಇದು ಸ್ವಯಂಪ್ರೇರಿತ ಪ್ರಕರಣವಲ್ಲ, ಧರ್ಮಸ್ಥಳ ಪ್ರಕರಣದ ತನಿಖೆಗೆ ಸಂಬಂಧಪಟ್ಟದ್ದಾಗಿದೆ ಎಂದು ಹೇಳಿದರು. ಸಾಕ್ಷಿದಾರರ ರಕ್ಷಣೆ ಸಂಬಂಧಿತ ಪ್ರಕರಣವಾಗಿದ್ದು, ಅದರಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಸಮೀರ್ ವಿಡಿಯೋ ನಿರ್ಮಿಸಿದ್ದಾರೆ. ಕೆಲವು ಶವಗಳನ್ನು ಹೂಳಲಾಗಿದೆ ಹಾಗೂ ಕೆಲವು ಸಂಸ್ಕಾರ ಮಾಡಲಾಗಿದೆ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ ಎಂದು ತಿಳಿಸಿದರು.

ಸಮೀರ್ ವಿರುದ್ಧ ಈಗಾಗಲೇ ಐದು ಪ್ರಕರಣಗಳು ದಾಖಲಾಗಿವೆ. ತನಿಖೆ ಮುಂದುವರಿದರೆ ಸತ್ಯ ಬಹಿರಂಗವಾಗಲಿದೆ. ಇದೇ ಮೊದಲ ಬಾರಿ ಅಲ್ಲ, ಸಾರ್ವಜನಿಕರನ್ನು ದಾರಿ ತಪ್ಪಿಸಿ ದ್ವೇಷದ ವಾತಾವರಣ ನಿರ್ಮಿಸುವ ಕೆಲಸವನ್ನು ಸಮೀರ್ ಮಾಡಿದ್ದಾನೆ ಎಂದು ಸರ್ಕಾರಿ ವಕೀಲರು ಪೀಠಕ್ಕೆ ಮಾಹಿತಿ ನೀಡಿದರು.

ಚಂದ್ರನತ್ತ ಮತ್ತೆ ಮಾನವಯಾನ: 54 ವರ್ಷಗಳ ನಂತರ ನಾಸಾದ ಮಹತ್ವದ ಹೆಜ್ಜೆ

0

ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, 54 ವರ್ಷಗಳ ಬಳಿಕ ಮತ್ತೆ ಚಂದ್ರನತ್ತ ಮಾನವಸಹಿತ ಗಗನಯಾನವನ್ನು ಆರಂಭಿಸಿದೆ. ಯೋಜನೆಯಡಿಯಲ್ಲಿ ನಾಲ್ವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ.

ತಂಡದಲ್ಲಿ ಕಮಾಂಡರ್ ರೀಡ್ ವೈಸ್ಮನ್, ಪೈಲಟ್ಗಳಾದ ವಿಕ್ಟರ್ ಗ್ಲೋವರ್ ಮತ್ತು ಕ್ರಿಸ್ಟಿನಾ ಕೋಚ್, ಜೊತೆಗೆ ಕೆನಡಾದ ಗಗನಯಾತ್ರಿ ಜೆರೆಮಿ ಹ್ಯಾನ್ಸನ್ ಸೇರಿದ್ದಾರೆ.

1972ರಲ್ಲಿ ನಡೆದ ಅಪೊಲೊ 17 ಗಗನಯಾನದ ಬಳಿಕ ಇದು ಚಂದ್ರನತ್ತ ಸಾಗುತ್ತಿರುವ ಮೊದಲ ಮಾನವಸಹಿತ ಗಗನಯಾನವಾಗಿದೆ. ಯಾನಕ್ಕೆ ಭಾರಿ ಉಡಾವಣಾ ರಾಕೆಟ್ ಮತ್ತು ಒರಿಯನ್ ಬಾಹ್ಯಾಕಾಶ ನೌಕೆಯನ್ನು ಬಳಸಲಾಗಿದೆ.

ಸುಮಾರು 10 ದಿನಗಳ ಗಗನಯಾನ ಏಪ್ರಿಲ್ 1ರಂದು ಉಡಾವಣೆಯಾಗಿದ್ದು, ಏಪ್ರಿಲ್ 10 ಅಥವಾ 11ರಂದು ಭೂಮಿಗೆ ಮರಳುವ ನಿರೀಕ್ಷೆಯಿದೆ. ಪ್ರಯಾಣದಲ್ಲಿ ಗಗನಯಾತ್ರಿಗಳು ಚಂದ್ರನ ಮೇಲೆ ಇಳಿಯುವುದಿಲ್ಲ; ಬದಲಿಗೆ ಚಂದ್ರನ ಸುತ್ತ ಪ್ರದಕ್ಷಿಣೆ ಮಾಡಿ ಭೂಮಿಗೆ ವಾಪಸ್ಸಾಗುತ್ತಾರೆ.

ಗಗನಯಾನದ ಮುಖ್ಯ ಉದ್ದೇಶ ಬಾಹ್ಯಾಕಾಶ ನೌಕೆಯ ಜೀವ ರಕ್ಷಕ ವ್ಯವಸ್ಥೆಗಳ ಸುರಕ್ಷತೆಯನ್ನು ಪರೀಕ್ಷಿಸುವುದಾಗಿದೆ. ಮುಂದಿನ ದಿನಗಳಲ್ಲಿ ಮಾನವರನ್ನು ಚಂದ್ರನ ಮೇಲೆ ಇಳಿಸುವ ಮಹತ್ವದ ಯೋಜನೆಗಳಿಗೆ ಇದು ಮೊದಲ ಹಂತವಾಗಿದೆ.

ಬಕೆಟ್ ನೀರಿನಲ್ಲಿ ಮಗು ಸಾವು, ಅಪರಾಧ ಭಾವನೆಗೆ ತಾಯಿ ಆತ್ಮಹತ್ಯೆ: ಬೆಂಗಳೂರಿನಲ್ಲಿ ಮನಕಲುಕುವ ದುರಂತ

ಬೆಂಗಳೂರು: ನಗರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಬಕೆಟ್ ನೀರಿನಲ್ಲಿ ಮುಳುಗಿ ಮಗು ಮೃತಪಟ್ಟಿದ್ದು, ಮಗುವಿನ ಸಾವಿಗೆ ನಾನೇ ಕಾರಣ ಎಂಬ ಅಪರಾಧ ಪ್ರಜ್ಞೆಯಿಂದ ಮನನೊಂದ ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ.

ಮೃತರನ್ನು ಸಾಫ್ಟ್‌ವೇರ್ ಉದ್ಯೋಗಿ ಪ್ರತಿಭಾ (29) ಮತ್ತು ಅವರ ಪುತ್ರ ಅಗಸ್ತ್ಯ ಎಂದು ಗುರುತಿಸಲಾಗಿದೆ. ಪ್ರತಿಭಾ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಗುರುವಾರ ಸಂಜೆ ಟೆರೇಸ್ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಮೇಲಕ್ಕೆ ಹೋಗಿದ್ದಾಗ, ಈ ದುರ್ಘಟನೆ ಸಂಭವಿಸಿದೆ.

ಈ ವೇಳೆ ಆಟವಾಡುತ್ತಿದ್ದ ಮಗು ಬಚ್ಚಲು ಮನೆಗೆ ತೆರಳಿ, ನೀರಿನಿಂದ ತುಂಬಿದ್ದ ಬಕೆಟ್‌ನಲ್ಲಿ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದೆ. ಕೆಳಗೆ ಬಂದ ಪ್ರತಿಭಾಗೆ ಮಗುವಿನ ಸ್ಥಿತಿ ಕಂಡು ಆಘಾತವಾಗಿದ್ದು, ಮಗು ಸಾವನ್ನಪ್ಪಿರುವುದು ಖಚಿತವಾದ ಬಳಿಕ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ.

ರಾತ್ರಿ ಪತಿ ಮನೆಗೆ ಮರಳಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಒಳಗೆ ಪ್ರವೇಶಿಸಿದಾಗ ಪ್ರತಿಭಾ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ. ಸ್ಥಳದಲ್ಲಿ ಡೆತ್ ನೋಟ್ ಕೂಡ ಸಿಕ್ಕಿದ್ದು, “ನನ್ನ ಮಗುವಿನ ಸಾವಿಗೆ ನಾನೇ ಕಾರಣ” ಎಂದು ಅವರು ಬರೆದಿರುವುದು ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಆತ್ಮಹತ್ಯೆಗೆ ಮುನ್ನ ಅವರು ಮಾತ್ರೆ ಸೇವಿಸಿ, ಕೈ ಕತ್ತರಿಸಲು ಯತ್ನಿಸಿ, ಬಳಿಕ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ಘಟನೆ ಪೋಷಕರ ನಿರ್ಲಕ್ಷ್ಯವಲ್ಲ, ಆದರೆ ಕ್ಷಣಿಕ ಅಜಾಗರೂಕತೆ ಎಷ್ಟು ಭೀಕರ ಪರಿಣಾಮ ಉಂಟುಮಾಡಬಹುದು ಎಂಬುದಕ್ಕೆ ಮರ್ಮಾಂತಿಕ ಉದಾಹರಣೆಯಾಗಿದೆ.

“ಅವಕಾಶ ಸಿಕ್ಕರೆ ಟಿವಿಕೆ ಸೇರುತ್ತೇನೆ”: ವಿಜಯ್‌ಗೆ ನಟಿ ವಾಣಿ ಭೋಜನ್ ಓಪನ್ ಸಪೋರ್ಟ್!

ತಮಿಳುನಾಡು ವಿಧಾನಸಭಾ ಚುನಾವಣೆ ಮುನ್ನ ರಾಜಕೀಯ ಕಾವು ಜೋರಾಗಿದ್ದು, ಈ ಬಾರಿ ಸಿನಿರಂಗದ ಹಸ್ತಕ್ಷೇಪವೂ ಹೆಚ್ಚಾಗಿದೆ. ನಟ ದಳಪತಿ ವಿಜಯ್ ರಾಜಕೀಯ ಪ್ರವೇಶಿಸಿ ಟಿವಿಕೆ ಪಕ್ಷವನ್ನು ಸ್ಥಾಪಿಸಿರುವುದರಿಂದ, ಚುನಾವಣಾ ಸಮೀಕರಣಗಳು ಹೊಸ ತಿರುವು ಪಡೆದುಕೊಂಡಿವೆ.

ಈ ಮಧ್ಯೆ, ಜನಪ್ರಿಯ ನಟಿ ವಾಣಿ ಭೋಜನ್ ನೀಡಿದ ಹೇಳಿಕೆ ಇದೀಗ ವೈರಲ್ ಆಗಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜಯ್ ಬಗ್ಗೆ ತಮ್ಮ ಅಭಿಮಾನವನ್ನು ಬಹಿರಂಗಪಡಿಸಿದ್ದಾರೆ.

“ನಾನು ವಿಜಯ್ ಅವರ ದೊಡ್ಡ ಅಭಿಮಾನಿ. ಅವರ ಜೊತೆ ನಟಿಸುವ ಆಸೆ ಇತ್ತು. ಆದರೆ ಅವರು ಈಗ ರಾಜಕೀಯಕ್ಕೆ ಬಂದಿರುವುದರಿಂದ ಅದು ಸಾಧ್ಯವಾಗಲಿಲ್ಲ. ಆದರೂ ಅವರ ರಾಜಕೀಯ ಹೆಜ್ಜೆಯನ್ನು ನಾನು ಬೆಂಬಲಿಸುತ್ತೇನೆ,” ಎಂದು ಹೇಳಿದ್ದಾರೆ.

ಇನ್ನಷ್ಟು ಕುತೂಹಲ ಮೂಡಿಸಿದ ವಿಚಾರವೆಂದರೆ—ಟಿವಿಕೆ ಪಕ್ಷ ಸೇರುವ ಸಾಧ್ಯತೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಾಣಿ ಭೋಜನ್, “ಅವಕಾಶ ಸಿಕ್ಕರೆ ಖಂಡಿತವಾಗಿ ಸೇರುತ್ತೇನೆ. ಈ ಚುನಾವಣೆಯಲ್ಲಿ ನನ್ನ ಬೆಂಬಲ ವಿಜಯ್ ಅವರಿಗೆ,” ಎಂದು ನೇರವಾಗಿ ಹೇಳಿದ್ದಾರೆ.

ಈ ಹೇಳಿಕೆ ಹೊರಬಿದ್ದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಸಿನಿರಂಗದಿಂದ ರಾಜಕೀಯಕ್ಕೆ ಬೆಂಬಲ ಹೆಚ್ಚುತ್ತಿರುವ ಸೂಚನೆ ಇದಾಗಿದೆ ಎನ್ನಲಾಗುತ್ತಿದೆ.

ವಾಣಿ ಭೋಜನ್ ಈಗ ತಮಿಳು ಸಿನಿರಂಗದಲ್ಲಿ ವೇಗವಾಗಿ ಬೆಳೆಯುತ್ತಿರುವ ನಟಿಯರಲ್ಲಿ ಒಬ್ಬರಾಗಿದ್ದು, ಅವರ ಈ ರಾಜಕೀಯ ಹೇಳಿಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

‘ಸೈಜ್ ಎಷ್ಟು’ ಎಂದವನಿಗೆ ಚಪ್ಪಲಿ ತೋರಿಸಿ ಉತ್ತರ ಕೊಟ್ಟ ಅದಾ ಶರ್ಮಾ

ಬಾಲಿವುಡ್ ನಟಿ ಅದಾ ಶರ್ಮಾ ಮತ್ತೊಮ್ಮೆ ತಮ್ಮ ಧೈರ್ಯಶಾಲಿ ನಿಲುವಿನಿಂದ ಸುದ್ದಿಯಲ್ಲಿದ್ದಾರೆ. ಕನ್ನಡದ ‘ರಣ ವಿಕ್ರಮ’ ಚಿತ್ರದಿಂದ ಪರಿಚಿತವಾಗಿದ್ದ ಅವರು, ‘ದಿ ಕೇರಳ ಸ್ಟೋರಿ’ ಬಳಿಕ ತಮ್ಮ ಜನಪ್ರಿಯತೆಯನ್ನು ಹೊಸ ಮಟ್ಟಕ್ಕೆ ತೆಗೆದುಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ನೇರವಾಗಿ ಮಾತನಾಡುವ ಅದಾ, ಇತ್ತೀಚೆಗೆ ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ನಡೆಸಿದರು. ಆದರೆ, ಈ ಸಂವಾದದ ನಡುವೆ ಅಸಭ್ಯ ಪ್ರಶ್ನೆ ಒಂದೂ ಎದುರಾಯಿತು. ಒಬ್ಬ ನೆಟ್ಟಿಗ “ನಿಮ್ಮ ಸೈಜ್ ಎಷ್ಟು?” ಎಂದು ಕೇಳಿದ್ದಾನೆ. ಸಾಮಾನ್ಯವಾಗಿ ಇಂತಹ ಪ್ರಶ್ನೆಗಳನ್ನು ಕಡೆಗಣಿಸುವ ಟ್ರೆಂಡ್ ಇದ್ದರೂ, ಅದಾ ಶರ್ಮಾ ಅದನ್ನು ಬಿಟ್ಟುಬಿಡಲಿಲ್ಲ.

ಅವರು ನೀಡಿದ ಉತ್ತರ ಸರಳವಾಗಿದ್ದರೂ ತೀಕ್ಷ್ಣವಾಗಿತ್ತು—“ಸೈಜ್ 9… ನನ್ನ ಚಪ್ಪಲಿಯದ್ದು.” ಈ ಒಂದೇ ಸಾಲಿನ ಉತ್ತರದ ಮೂಲಕ, ಟ್ರೋಲ್‌ಗೆ ತಕ್ಕ ಪಾಠ ಕಲಿಸಿದಂತೆ ಆಯಿತು. ಅದಾ ಅವರ ಈ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಸಭ್ಯತೆಗೆ ತಲೆಬಾಗದ ಅವರ ನಿಲುವಿಗೆ ನೆಟ್ಟಿಗರಿಂದ ಭಾರೀ ಬೆಂಬಲ ವ್ಯಕ್ತವಾಗಿದೆ.

ತಲೆನೋವು ಬಂದಾಗ ವಾಂತಿ ಸಮಸ್ಯೆ ಕಾಡುತ್ತಿದೆಯೇ? ಈ ಟಿಪ್ಸ್ ಫಾಲೋ ಮಾಡಿ

0

ಇತ್ತೀಚಿನ ದಿನಗಳಲ್ಲಿ ಅನೇಕರು ಗ್ಯಾಸ್ ತಲೆನೋವು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಮಸ್ಯೆ ಸಾಮಾನ್ಯವಾದದ್ದಾಗಿದ್ದರೂ, ದಿನನಿತ್ಯದ ಜೀವನದಲ್ಲಿ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ತಜ್ಞರ ಪ್ರಕಾರ, ರೀತಿಯ ತಲೆನೋವಿಗೆ ಆಸ್ಪತ್ರೆ ಹೋಗುವ ಅವಶ್ಯಕತೆ ಎಲ್ಲ ಸಮಯದಲ್ಲೂ ಇರದೇ, ಕೆಲವು ಸರಳ ಮನೆಮದ್ದುಗಳಿಂದಲೇ ನಿವಾರಣೆ ಪಡೆಯಬಹುದು.

ಅಧ್ಯಯನಗಳ ಪ್ರಕಾರ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ತಲೆನೋವಿಗೆ ಕಾರಣವಾಗಬಹುದು. ಜಠರಗರುಳಿನ ಆರೋಗ್ಯವು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯೊಂದಿಗೆ ನಿಕಟವಾಗಿ ಸಂಬಂಧಿಸಿದೆ. ಕರುಳಿನ ಉರಿಯೂತದಿಂದ ಉಂಟಾಗುವ ರಾಸಾಯನಿಕಗಳು ರಕ್ತಪ್ರವಾಹದ ಮೂಲಕ ಮೆದುಳಿಗೆ ತಲುಪಿ ತಲೆನೋವನ್ನು ಉಂಟುಮಾಡುತ್ತವೆ. ಕೆಲವರಿಗೆ ವಾಕರಿಕೆ ಮತ್ತು ವಾಂತಿ ಲಕ್ಷಣಗಳೂ ಕಾಣಿಸಬಹುದು.

ಸರಿಯಾದ ಆಹಾರದ ಕೊರತೆಯಿಂದ ಅಜೀರ್ಣ, ವಾಯು ಹಾಗೂ ಮಲಬದ್ಧತೆ ಸಮಸ್ಯೆಗಳು ಉಂಟಾಗುತ್ತವೆ. ಇವುಗಳೇ ಗ್ಯಾಸ್ ತಲೆನೋವಿಗೆ ಪ್ರಮುಖ ಕಾರಣಗಳಾಗಿವೆ. ಆದರೆ, ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಸಮಸ್ಯೆಯನ್ನು ನಿಯಂತ್ರಿಸಬಹುದು.

ನಿಂಬೆ ರಸವು ಗ್ಯಾಸ್ ತಲೆನೋವಿಗೆ ಪರಿಣಾಮಕಾರಿ ಮನೆಮದ್ದು ಎಂದು ಪರಿಗಣಿಸಲಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ನಿಂಬೆಯಲ್ಲಿ ಇರುವ ವಿಟಮಿನ್ ಸಿ ದೇಹದ ಪಿಹೆಚ್ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

ಪುದೀನಾ ಚಹಾ ಕೂಡ ತಲೆನೋವನ್ನು ತಗ್ಗಿಸಲು ಸಹಕಾರಿ. ಇದು ಸ್ನಾಯುಗಳನ್ನು ಸಡಿಲಗೊಳಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಒಂದು ಕಪ್ ಪುದೀನಾ ಟೀ ಸೇವನೆ ತಕ್ಷಣದ ಪರಿಹಾರ ನೀಡಬಹುದು ಎಂದು ತಜ್ಞರು ಹೇಳುತ್ತಾರೆ.

ಮೆಗ್ನೀಸಿಯಮ್ ಸಮೃದ್ಧ ಆಹಾರಗಳನ್ನು ಆಹಾರದಲ್ಲಿ ಸೇರಿಸುವುದೂ ಮುಖ್ಯ. ಇದು ಗ್ಯಾಸ್ ತಲೆನೋವನ್ನು ಕಡಿಮೆ ಮಾಡಲು ಸಹಕಾರಿ. ಜೊತೆಗೆ, ಮಜ್ಜಿಗೆ ಸೇವನೆಯಿಂದ ಅಜೀರ್ಣ, ವಾಯು ಮತ್ತು ಗ್ಯಾಸ್ ಸಮಸ್ಯೆಗಳು ಕಡಿಮೆಯಾಗುತ್ತವೆ. ಪ್ರೋಬಯಾಟಿಕ್ಗಳುಳ್ಳ ಮಜ್ಜಿಗೆ ಜಠರ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ತುಳಸಿ ಎಲೆಗಳನ್ನು ಜಗಿದು ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳು ಕಡಿಮೆಯಾಗುತ್ತವೆ. ತುಳಸಿಯಲ್ಲಿ ಇರುವ ಗುಣಗಳು ಹೊಟ್ಟೆಯ ಉರಿಯೂತವನ್ನು ತಗ್ಗಿಸಿ, ತಲೆನೋವಿಗೂ ಪರಿಹಾರ ನೀಡುತ್ತವೆ.

ಮನೆಯಲ್ಲಿ ತುಳಸಿ ನೆಡುವಾಗ ಈ ತಪ್ಪು ಮಾಡಲೇಬೇಡಿ! ವಾಸ್ತು ತಜ್ಞರು ಹೇಳುವುದೇನು?

0

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರ ಸ್ಥಾನವಿದೆ. ಈ ಗಿಡವನ್ನು ನೆಡುವುದು ಮನೆಯಲ್ಲಿ ಶುಭ, ಸಮೃದ್ಧಿ ಮತ್ತು ದೇವಿಯ ಕೃಪೆ ತರುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ಗುರುವಾರ ಮತ್ತು ಶುಕ್ರವಾರಗಳು ತುಳಸಿ ಗಿಡವನ್ನು ನೆಡುವ ಅತ್ಯಂತ ಶ್ರೇಷ್ಠ ದಿನಗಳಾಗಿದ್ದು, ಗುರುವಾರವು ವಿಷ್ಣುವಿಗೆ ಹಾಗೂ ಶುಕ್ರವಾರವು ಲಕ್ಷ್ಮಿಗೆ ಸಮರ್ಪಿತವಾಗಿದೆ. ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ತುಳಸಿಯನ್ನು ನೆಟ್ಟು ಪೂಜಿಸುವುದರಿಂದ ಅನಂತ ಪುಣ್ಯವು ಲಭಿಸುತ್ತದೆ.

ವಾಸ್ತುಶಾಸ್ತ್ರದ ಪ್ರಕಾರ, ಸೋಮವಾರ, ಬುಧವಾರ ಮತ್ತು ಶನಿವಾರ ಹೊಸ ತುಳಸಿ ಗಿಡವನ್ನು ನೆಡುವುದು ಶ್ರೇಷ್ಠವಲ್ಲ. ಭಾನುವಾರ ಮತ್ತು ಏಕಾದಶಿ ತಿಥಿಗಳಂದು ತುಳಸಿಯನ್ನು ಸ್ಪರ್ಶಿಸುವುದರ ಅಥವಾ ಹೊಸದಾಗಿ ನೆಡುವುದರ ನಿರ್ಬಂಧವಿದೆ.

ಮನೆಯಲ್ಲಿ ತುಳಸಿ ಗಿಡ ಇದ್ದರೆ ಪ್ರತಿದಿನ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಬೆಳಿಗ್ಗೆ ಸ್ನಾನ ಮಾಡಿದ ನಂತರ ಮಾತ್ರ ಗಿಡಕ್ಕೆ ನೀರು ಅರ್ಪಿಸುವುದು ಉತ್ತಮ. ಆದರೆ ಭಾನುವಾರ ಮತ್ತು ಏಕಾದಶಿಯಂದು ನೀರು ನೀಡಬಾರದು. ಪ್ರತಿದಿನ ಸಂಜೆ ತುಳಸಿ ಕಟ್ಟೆಯ ಬಳಿ ತುಪ್ಪ ಅಥವಾ ಎಣ್ಣೆ ದೀಪ ಹಚ್ಚುವುದರಿಂದ ಮನೆಯ ವಾಸ್ತು ದೋಷ ನಿವಾರಣೆ ಆಗಿ, ಸಕಾರಾತ್ಮಕ ಶಕ್ತಿ ಆಕರ್ಷಿತವಾಗುತ್ತದೆ.

ತುಳಸಿ ಗಿಡವನ್ನು ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದು ಶ್ರೇಷ್ಠ. ಅದರ ಸುತ್ತಮುತ್ತಲಿನ ಜಾಗವು ಸದಾ ಸ್ವಚ್ಛವಾಗಿರಬೇಕು; ಪಾದರಕ್ಷೆಗಳು ಅಥವಾ ಕೊಳಕು ವಸ್ತುಗಳನ್ನು ಅಲ್ಲಿ ಇಡಬಾರದು. ಒಣಗಿದ ಗಿಡವನ್ನು ಮನೆಯಲ್ಲಿ ಇಟ್ಟುಕೊಳ್ಳದೆ ತಕ್ಷಣ ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು, ಏಕೆಂದರೆ ಅದನ್ನು ಉಳಿಸುವುದರಿಂದ ವಾಸ್ತು ದೋಷ ಉಂಟಾಗಬಹುದು.

ಈ ನಿಯಮಗಳನ್ನು ಪಾಲಿಸಿದರೆ ಮನೆಗೆ ಲಕ್ಷ್ಮಿ ಹಾಗೂ ನಾರಾಯಣರ ಆಶೀರ್ವಾದ ಸದಾ ಇರಲಿದೆ.

 

ಬೆಂಗಳೂರಿನಲ್ಲಿ ಆಂಧ್ರ ಸಾರಿಗೆ ಬಸ್ ಅಪಘಾತ: ಪ್ರಯಾಣಿಕರು ಸೇಫ್

ಬೆಂಗಳೂರು: ಬೆಂಗಳೂರಿನ ಶಿವಾನಂದ ಸರ್ಕಲ್  ಬಳಿ ವೇಗವಾಗಿ ಬಂದ ಆಂಧ್ರ ಸಾರಿಗೆ ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಘಟನೆ ನಡೆದಿದೆ.

ಅಧೋನಿಯಿಂದ ಅನಂತಪುರ ಮೂಲಕ ಬೆಂಗಳೂರಿಗೆ ಬರುತ್ತಿದ್ದ ಬಸ್, ವೇಗವಾಗಿ ಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗದ ಚಕ್ರ ಹಾಗೂ ಎಂಜಿನ್ ಕಿತ್ತು ಹೊರಬಿದ್ದಿದ್ದು, ಬಸ್ ಭಾರೀ ಹಾನಿಗೊಳಗಾಗಿದೆ.

ಅದೃಷ್ಟವಶಾತ್ ಅಪಘಾತದಲ್ಲಿ ಪ್ರಯಾಣಿಕರು ಸೇಫ್ ಆಗಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ.

ಘಟನೆಯ ಮಾಹಿತಿ ತಿಳಿದ ತಕ್ಷಣ ಹೈಗ್ರೌಂಡ್ಸ್ ಪೊಲೀಸರು ಸ್ಥಳಕ್ಕೆ ಆಗಮಿಸಿ, ಡಿವೈಡರ್‌ಗೆ ಸಿಲುಕಿರುವ ಬಸ್‌ನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ.

Breaking News: ಹಿಂಬದಿಯಿಂದ ಬಸ್ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪಾಲನಜೋಗನಹಳ್ಳಿ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಪಾಲನಜೋಗನಹಳ್ಳಿ ನಿವಾಸಿ ಪುರುಷೋತ್ತಮ (29) ಎಂದು ಗುರುತಿಸಲಾಗಿದೆ. ಅವರು ರಾಜಾನುಕುಂಟೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಬೈಕ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಮಾಹಿತಿಯ ಪ್ರಕಾರ, ದ್ವಿಚಕ್ರ ವಾಹನವನ್ನು ಓವರ್‌ಟೇಕ್ ಮಾಡಲು ಬಂದ ಕೆಎಸ್‌ಆರ್‌ಟಿಸಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರನ ಮೇಲೆ ಬಸ್ ಹರಿದ ಪರಿಣಾಮ ಪುರುಷೋತ್ತಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

error: Content is protected !!