Home Blog

ಸಿಎಂ–ಕೇಂದ್ರ ಸಚಿವರ ಜಟಾಪಟಿ: ಸಾಮಾಜಿಕ ನ್ಯಾಯ ವಿಚಾರದಲ್ಲಿ ಸಿದ್ದರಾಮಯ್ಯ ಪರ ಪರಮೇಶ್ವರ್ ಬ್ಯಾಟಿಂಗ್

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ನಡುವಿನ ಜಟಾಪಟಿಯ ನಡುವೆ, ಸಾಮಾಜಿಕ ನ್ಯಾಯದ ವಿಚಾರದಲ್ಲಿ ಸಿಎಂ ನಿಲುವುಗಳನ್ನು ಗೃಹಸಚಿವ G. ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.

“ಸಿದ್ದರಾಮಯ್ಯರು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದಾರೆ. ಅವರ ಸಂಪೂರ್ಣ ರಾಜಕೀಯ ಜೀವನವೇ ಸಾಮಾಜಿಕ ನ್ಯಾಯದ ಸಿದ್ಧಾಂತದಡಿ ಸಾಗಿದದ್ದು. ಇದರಲ್ಲಿ ಹೊಸದೇನೂ ಇಲ್ಲ. ಅವರ ರಾಜಕೀಯ ಅಡಿಪಾಯವೇ ಸಾಮಾಜಿಕ ನ್ಯಾಯ,” ಎಂದು ಅವರು ಸಿಎಂ ಪರವಾಗಿ ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯರು ಮೊದಲಿಗೆ ಜೆಡಿಎಸ್ ಪಕ್ಷದಲ್ಲಿ ಇದ್ದು, ಅಧ್ಯಕ್ಷರಾಗಿದ್ದರು. ನಂತರ ಅವರನ್ನು ಪಕ್ಷದಿಂದ ಹೊರಹಾಕಲಾಯಿತು. ಅವರಿಬ್ಬರ ನಡುವಿನ ವಾಕ್ಸಮರದ ಬಗ್ಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆ ಸಂದರ್ಭಗಳಲ್ಲಿ ಏನಾಯಿತೋ ನಮಗೆ ತಿಳಿದಿಲ್ಲ ಎಂದು ಪರಮೇಶ್ವರ್ ಹೇಳಿದರು.

ಇದೇ ವೇಳೆ, ಪವರ್ ಶೇರಿಂಗ್ ಗೊಂದಲದ ನಡುವೆಯೇ ‘ದಲಿತ ಸಿಎಂ’ ವಿಚಾರ ಪ್ರಸ್ತಾಪಿಸಿದ ಸಿಎಂ ಆಪ್ತ ಸಚಿವ ಮಹದೇವಪ್ಪ ವಿರುದ್ಧ ಡಿ.ಕೆ. ಸುರೇಶ್ ಸೇರಿದಂತೆ ಕೆಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ದಲಿತರನ್ನು ಮುಖ್ಯಮಂತ್ರಿ ಮಾಡುವುದು ಕಾಂಗ್ರೆಸ್ ಪಕ್ಷವೇ. ಯಾವಾಗ ದಲಿತ ಸಿಎಂ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ವಿಪಕ್ಷಗಳು ತಮ್ಮ ದೋಷಗಳನ್ನು ಮುಚ್ಚಿಕೊಳ್ಳಲು ದಲಿತ ಸಿಎಂ ವಿಚಾರವನ್ನು ಮುಂದಿಟ್ಟಿವೆ ಎಂದು ತಿರುಗೇಟು ನೀಡಿದರು.

ಬೆಂಗಳೂರಿನಲ್ಲಿ ಸೈಬರ್ ವಂಚನೆ: ಸ್ನೇಹಿತನ ಖಾತೆ ಬಳಸಿ ₹7 ಕೋಟಿ ವರ್ಗಾವಣೆ

0

ಬೆಂಗಳೂರು: ಸ್ನೇಹಿತನ ಬ್ಯಾಂಕ್ ಖಾತೆಯನ್ನು ದುರುಪಯೋಗಪಡಿಸಿಕೊಂಡು ಬರೋಬ್ಬರಿ 7 ಕೋಟಿ ರೂ. ಸೈಬರ್ ವಂಚನೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆಯುಷ್ ಎಂಬಾತ ತನ್ನ ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ ಎಂದು ಹೇಳಿ,

ವಿದ್ಯಾರ್ಥಿಯೊಬ್ಬರಿಂದ ಖಾತೆ ವಿವರಗಳನ್ನು ಪಡೆದುಕೊಂಡಿದ್ದಾನೆ. ಸ್ನೇಹಿತನ ಮೇಲೆ ನಂಬಿಕೆ ಇಟ್ಟು ವಿದ್ಯಾರ್ಥಿ ತನ್ನ ಪಾಸ್‌ಬುಕ್, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಸಿಮ್ ಕಾರ್ಡ್ ನೀಡಿದ್ದಾನೆ ಎಂದು ತಿಳಿದುಬಂದಿದೆ.

ನಂತರ ವಿದ್ಯಾರ್ಥಿಗೆ ಬ್ಯಾಂಕ್‌ನಿಂದ ಕರೆ ಬಂದು, ಅವರ ಖಾತೆಯ ಮೂಲಕ ಸೈಬರ್ ವಂಚನೆ ನಡೆದಿದ್ದು 7 ಕೋಟಿ ರೂ. ಹಣ ವರ್ಗಾವಣೆಯಾಗಿದೆ ಎಂದು ಮಾಹಿತಿ ನೀಡಲಾಗಿದೆ. ತಕ್ಷಣವೇ ಬ್ಯಾಂಕ್ ಅಧಿಕಾರಿಗಳು ವಿದ್ಯಾರ್ಥಿಯ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ.

ಈ ಸಂಬಂಧ ವಂಚನೆಗೊಳಗಾದ ವಿದ್ಯಾರ್ಥಿ ಉತ್ತರ ವಿಭಾಗ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆಯುಷ್ ಹಾಗೂ ಇತರರು ಸೇರಿಕೊಂಡು ಈ ವಂಚನೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ವಂಚನೆಗೊಳಗಾದ ವಿದ್ಯಾರ್ಥಿ ಮತ್ತು ಆಯುಷ್ ಕಳೆದ ಒಂದು ವರ್ಷದಿಂದ ಸ್ನೇಹಿತರಾಗಿದ್ದರು ಎಂದು ತಿಳಿದುಬಂದಿದೆ.

ಹಾಸನದಲ್ಲಿ ಭೀಕರ ಅಪಘಾತ: ಬುಲೆಟ್ ಬೈಕ್‌ʼನಿಂದ ಬಿದ್ದು ಯುವತಿ ಸಾವು! ಇನ್ನೋರ್ವಳ ಸ್ಥಿತಿ ಗಂಭೀರ

0

ಹಾಸನ: ಹಂಪ್ಸ್ ಗಮನಿಸದೇ ಬುಲೆಟ್ ಬೈಕ್ ಚಲಾಯಿಸುವ ವೇಳೆ ಸಂಭವಿಸಿದ ಅಪಘಾತದಲ್ಲಿ ಓರ್ವ ಯುವತಿ ಮೃತಪಟ್ಟಿದ್ದು, ಮತ್ತೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ನಗರದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಸತ್ಯಮಂಗಲ ಬಡಾವಣೆಯ ಪ್ರಿಯಾ (23) ಮೃತ ಯುವತಿ ಎಂದು ಗುರುತಿಸಲಾಗಿದೆ. ಮತ್ತೋರ್ವ ಯುವತಿ ಸ್ವಾತಿ (24) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಿಯಾ ಖಾಸಗಿ ಕಾಲೇಜಿನಲ್ಲಿ ಎಂಸಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು.

ಸ್ವಾತಿಗೆ ಕಳೆದ ನವೆಂಬರ್ ತಿಂಗಳಲ್ಲಿ ಮದುವೆಯಾಗಿತ್ತು ಎಂದು ತಿಳಿದುಬಂದಿದೆ. ಇಬ್ಬರೂ ಹೆಲ್ಮೆಟ್ ಧರಿಸದೇ ಬುಲೆಟ್ ಬೈಕ್‌ನಲ್ಲಿ ಜಾಲಿ ರೈಡ್‌ಗೆ ತೆರಳಿದ್ದರು. ಪ್ರಿಯಾ ಬೈಕ್ ಚಲಾಯಿಸುತ್ತಿದ್ದು, ಸ್ವಾತಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದಳು. ಈ ವೇಳೆ ರಸ್ತೆಯ ಹಂಪ್ಸ್ ಗಮನಿಸದೇ ಇಬ್ಬರೂ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ.

ಅಪಘಾತದ ಪರಿಣಾಮ ಪ್ರಿಯಾ ಸ್ಥಳದಲ್ಲೇ ಮೃತಪಟ್ಟಿದ್ದು, ಸ್ವಾತಿಗೆ ಗಂಭೀರ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಸ್ವಾತಿಯನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಸೂಪರ್-8ರಲ್ಲಿ ಟೀಮ್ ಇಂಡಿಯಾ ಸೋಲು: ಪವರ್‌ ಪ್ಲೇ ವೈಫಲ್ಯವೇ ಮುಖ್ಯ ಕಾರಣ ಎಂದ ಸೂರ್ಯಕುಮಾರ್!

0

ಟಿ20 ವಿಶ್ವಕಪ್ ಲೀಗ್ ಹಂತದಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದಿದ್ದ ಟೀಮ್ ಇಂಡಿಯಾ, ಸೂಪರ್-8 ಸುತ್ತಿನ ಮೊದಲ ಪಂದ್ಯದಲ್ಲೇ ಸೋಲು ಕಂಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು. ಕಠಿಣ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 18.5 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮ ಭಾರತ 76 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ಸೋಲಿನ ಬಳಿಕ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, “ಪಂದ್ಯದ ಆರಂಭದಲ್ಲಿ ನಾವು ಉತ್ತಮ ಬೌಲಿಂಗ್ ಮಾಡಿದ್ದೇವೆ. ಕೇವಲ 21 ರನ್‌ಗಳಿಗೆ 3 ವಿಕೆಟ್ ಕಬಳಿಸಿ ಆರಂಭಿಕ ಆಘಾತ ನೀಡಿದ್ದೆವು. ಆದರೆ 7ರಿಂದ 15ನೇ ಓವರ್‌ವರೆಗೆ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಉತ್ತಮವಾಗಿ ಆಡಿದರು. ಕೊನೆಯ ಹಂತದಲ್ಲಿ ಮತ್ತೆ ನಮ್ಮ ಬೌಲರ್‌ಗಳು ಚೇತರಿಸಿಕೊಂಡರು. ಒಟ್ಟಾರೆ ಬೌಲಿಂಗ್ ಚೆನ್ನಾಗಿತ್ತು, ಆದರೆ ಬ್ಯಾಟಿಂಗ್‌ನಲ್ಲಿ ನಾವು ಇನ್ನಷ್ಟು ಉತ್ತಮ ಪ್ರದರ್ಶನ ನೀಡಬಹುದಿತ್ತು” ಎಂದರು.

“180-185 ರನ್ ಗುರಿಯನ್ನು ಬೆನ್ನಟ್ಟುವಾಗ ಪವರ್‌ಪ್ಲೇನಲ್ಲಿ ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ, ಆದರೆ ಕಳೆದುಕೊಳ್ಳಬಹುದು. ನಾವು ಪವರ್‌ಪ್ಲೇನಲ್ಲಿ ಹಲವು ವಿಕೆಟ್ ಕಳೆದುಕೊಂಡಿದ್ದು ದೊಡ್ಡ ಹೊಡೆತವಾಯಿತು. ಆರಂಭದಲ್ಲೇ ವಿಕೆಟ್ ಕಳೆದುಕೊಂಡರೆ ದೊಡ್ಡ ಮೊತ್ತದ ಗುರಿ ಬೆನ್ನಟ್ಟುವುದು ಕಷ್ಟ. ಇದರಿಂದ ಪಾಠ ಕಲಿತಿದ್ದೇವೆ,” ಎಂದು ಹೇಳಿದರು.

ಈ ಸೋಲಿನ ನಡುವೆಯೂ ಸಕಾರಾತ್ಮಕ ಅಂಶವಾಗಿಜಸ್​ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ಅವರ ಬೌಲಿಂಗ್ ಪ್ರದರ್ಶನವನ್ನು ಅವರು ಪ್ರಶಂಸಿಸಿದರು. ಇಬ್ಬರೂ ಸೇರಿ ಎಸೆದ 8 ಓವರ್‌ಗಳಲ್ಲಿ 5 ವಿಕೆಟ್ ಕಬಳಿಸಿ ಕೇವಲ 45 ರಿಂದ 50 ರನ್ ಮಾತ್ರ ನೀಡಿದರು.

“ಇಬ್ಬರು ಅನುಭವಿ ವೇಗಿಗಳು ತಂಡದಲ್ಲಿರುವುದು ನಮ್ಮ ಪ್ಲಸ್ ಪಾಯಿಂಟ್. ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದರೆ ಫಲಿತಾಂಶ ಬೇರೆಯಾಗಿರುತ್ತಿತ್ತು. ಮುಂದಿನ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ಉತ್ತಮ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶಿಸಿ ಕಂಬ್ಯಾಕ್ ಮಾಡುತ್ತೇವೆ. ಟೀಮ್ ಇಂಡಿಯಾ ತನ್ನ ಬ್ರಾಂಡ್ ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತದೆ,” ಎಂದು ಸೂರ್ಯಕುಮಾರ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದರು.

‘ಜನ ನಾಯಗನ್’ ಬಿಡುಗಡೆಗೆ ರಾಜಕೀಯ ಅಡ್ಡಿ? ವಿಜಯ್ ಹುಟ್ಟುಹಬ್ಬಕ್ಕೆ ರಿಲೀಸ್ ಪ್ಲಾನ್!

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್ ತಮ್ಮ ಸಿನಿ ಜೀವನದ ಅಂತಿಮ ಹಂತದಲ್ಲಿದ್ದಾರೆ. ರಾಜಕೀಯ ಪ್ರವೇಶದ ನಂತರ ಅವರು ಸಂಪೂರ್ಣವಾಗಿ ರಾಜಕಾರಣಕ್ಕೆ ಸಮರ್ಪಿತರಾಗುವ ಮೊದಲು ನಟಿಸಿದ ಕೊನೆಯ ಸಿನಿಮಾ ಜನ ನಾಯಗನ್.

ಸಂಕ್ರಾಂತಿ ವೇಳೆ ಬಿಡುಗಡೆ ಆಗಬೇಕಿದ್ದ ಈ ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಪ್ರಮಾಣ ಪತ್ರ ಸಿಗದೇ ಚಿತ್ರ ತಡೆಗೊಳಿಸಲಾಗಿದೆ. ಇದರ ಹಿಂದೆ ರಾಜಕೀಯ ಒತ್ತಡವಿದೆ ಎಂಬ ಚರ್ಚೆ ಜೋರಾಗಿದೆ.

ಪಿಂಕ್‌ವಿಲ್ಲಾ ವರದಿ ಪ್ರಕಾರ, ಸಿನಿಮಾ ಈಗ ವಿಜಯ್ ಅವರ ಜೂನ್ 22ರ ಹುಟ್ಟುಹಬ್ಬದ ಸಂಭ್ರಮದಲ್ಲಿ, ಜೂನ್ 2026ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಚುನಾವಣಾ ಹೊತ್ತಿನಲ್ಲಿ ಚಿತ್ರ ಬಿಡುಗಡೆ ಆಗಬಾರದು ಎಂಬ ಉದ್ದೇಶದಿಂದ ಕೆಲವು ಶಕ್ತಿಗಳು ತಡೆಹಿಡಿಯಲು ಪ್ರಯತ್ನಿಸುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಎಚ್. ವಿನೋತ್ ನಿರ್ದೇಶನದ ಈ ಪಕ್ಕಾ ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್, ತೆಲುಗಿನ ಭಗವಂತ ಕೇಸರಿ ರೀಮೇಕ್ ಆಗಿದ್ದರೂ, ವಿಜಯ್ ಅವರ ರಾಜಕೀಯ ಹಾದಿಗೆ ಹೊಂದುವಂತೆ ಹೆಚ್ಚುವರಿ ಅಂಶಗಳನ್ನು ಸೇರಿಸಲಾಗಿದೆ ಎನ್ನಲಾಗಿದೆ.

ವಿಜಯ್ ಅವರ ಪಕ್ಷ ತಮಿಳಗ ವೆಟ್ರಿ ಕಳಗಂ ರಾಜಕೀಯವಾಗಿ ಚುರುಕಾಗುತ್ತಿರುವ ಸಂದರ್ಭದಲ್ಲಿ, ಈ ಸಿನಿಮಾ ಪಕ್ಷದ ಅಜೆಂಡಾಗೆ ಪೂರಕವಾಗಲಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಚಿತ್ರದಲ್ಲಿ ವಿಲನ್ ಆಗಿ ಬಾಬಿ ಡಿಯೋಲ್, ನಾಯಕಿಯಾಗಿ ಪೂಜಾ ಹೆಗ್ಡೆ ಹಾಗೂ ಪ್ರಮುಖ ಪಾತ್ರದಲ್ಲಿ ಮಮಿತಾ ಬಿಜು ನಟಿಸಿದ್ದಾರೆ. ಸಂಗೀತವನ್ನು ಅನಿರುದ್ಧ್ ರವಿಚಂದ್ರನ್ ನೀಡಿದ್ದಾರೆ.

ಸದ್ಯ ಸಿಬಿಎಫ್ಸಿ ನಿರಾಕರಣೆಗೆ ವಿರೋಧವಾಗಿ ಸಲ್ಲಿಸಿದ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದು, ಚಿತ್ರವನ್ನು ರಿವ್ಯೂ ಕಮಿಟಿಗೆ ಕಳುಹಿಸಲಾಗಿದೆ. ಆದರೆ ಅಂತಿಮ ತೀರ್ಮಾನ ಇನ್ನೂ ಬಾಕಿಯಿದೆ.

‘ದಿ ವೆಡ್ಡಿಂಗ್ ಆಫ್ ವಿರೋಶ್’ – ರಶ್ಮಿಕಾ-ವಿಜಯ್ ಮದುವೆಗೆ ಅಭಿಮಾನಿಗಳೇ ಇಟ್ಟ ಹೆಸರು!

ದಕ್ಷಿಣ ಭಾರತದ ಬಹುಚರ್ಚಿತ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಸುದ್ದಿ ಕೊನೆಗೂ ಅಧಿಕೃತ ಸ್ವರೂಪ ಪಡೆದಿದೆ!

ಕಳೆದ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ, ಕಳೆದ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಬ್ಯಾಚುಲರ್ ಪಾರ್ಟಿ, ವಿದೇಶಿ ಟ್ರಿಪ್‌ಗಳು, ಶಾಪಿಂಗ್—all eyes were on them! ಆದರೆ ಇಬ್ಬರೂ ಮದುವೆ ವಿಚಾರದಲ್ಲಿ ಮೌನವಾಗಿದ್ದರು.

ಇಂದು (ಫೆಬ್ರವರಿ 22) ರಶ್ಮಿಕಾ ಮೊದಲ ಬಾರಿಗೆ ಮೌನ ಮುರಿದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಶೇಷವೇನೆಂದರೆ ತಮ್ಮ ಮದುವೆಗೆ ‘The Wedding of Virosh’ ಎಂದು ಹೆಸರಿಟ್ಟಿದ್ದಾರೆ!

ವಿಜಯ್ + ರಶ್ಮಿಕಾ = ‘ವಿರೋಶ್’ ಎಂಬ ಹೆಸರು ಅಭಿಮಾನಿಗಳ ಸೃಷ್ಟಿ. ಅದೇ ಹೆಸರನ್ನು ಮದುವೆಗೆ ಇಟ್ಟು, “ನಮ್ಮ ಅಭಿಮಾನಿಗಳ ಗೌರವಾರ್ಥವಾಗಿ ಈ ಹೆಸರನ್ನು ಇಟ್ಟಿದ್ದೇವೆ” ಎಂದು ರಶ್ಮಿಕಾ ತಿಳಿಸಿದ್ದಾರೆ. “ನೀವು ನಮ್ಮ ಒಂದು ಭಾಗ” ಎಂದು ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಮೂಲಗಳ ಪ್ರಕಾರ:

  • ಫೆಬ್ರವರಿ 22 – ಮೊದಲ ಶಾಸ್ತ್ರಗಳು

  • ಫೆಬ್ರವರಿ 24 – ಮೆಹಂದಿ

  • ಫೆಬ್ರವರಿ 25 – ಹಳದಿ

  • ಫೆಬ್ರವರಿ 26 – ಮದುವೆ

  • ಮಾರ್ಚ್ 04 – Taj Krishna ನಲ್ಲಿ ಅದ್ಧೂರಿ ರಿಸೆಪ್ಷನ್ ನಡೆಯಲಿದೆ

ಸೆಲೆಬ್ರಿಟಿ ವಲಯದಲ್ಲಿ ಈಗ ‘ವಿರೋಶ್ ವೆಡ್ಡಿಂಗ್’ವೇ ಹಾಟ್ ಟಾಪಿಕ್!

ಪ್ರತಿದಿನ ವಾಕಿಂಗ್‌ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳೇನು ಗೊತ್ತಾ..?

0

ಇಂದಿನ ಕಾರ್ಯನಿರತ ಹಾಗೂ ಒತ್ತಡದ ಜೀವನದಲ್ಲಿ ನಮಗಾಗಿ ಸಮಯ ಕಂಡುಕೊಳ್ಳುವುದು ಮತ್ತು ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳುವುದು ಸವಾಲಿನ ಕೆಲಸವಾಗಿದೆ. ಹೆಚ್ಚಿನವರು ಜಿಮ್‌ಗೆ ಹೋಗಿ ವ್ಯಾಯಾಮ ಮಾಡಿದರೆ ಮಾತ್ರ ದೇಹ ಆರೋಗ್ಯವಾಗಿರುತ್ತದೆ ಎಂದು ನಂಬುತ್ತಾರೆ.

ಆದರೆ ಪ್ರತಿದಿನ 30 ನಿಮಿಷದಿಂದ 1 ಗಂಟೆಯವರೆಗೆ ನಡೆಯುವುದರಿಂದಲೂ ದೇಹವನ್ನು ಆರೋಗ್ಯಕರವಾಗಿ ಮತ್ತು ಫಿಟ್‌ ಆಗಿ ಉಳಿಸಬಹುದು. ವ್ಯಾಯಾಮಕ್ಕೆ ಸಮಯ ಸಿಗದವರು ಪ್ರತಿದಿನ 1 ಗಂಟೆ ನಡಿಗೆ ಮಾಡುವ ಅಭ್ಯಾಸ ಬೆಳೆಸಿಕೊಂಡರೆ, ದೇಹದಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಾಣಬಹುದು. ಹಾಗಾದರೆ ನಡಿಗೆಯಿಂದ ದೊರೆಯುವ ಪ್ರಮುಖ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಪ್ರತಿದಿನ ನಡಿಗೆಯಿಂದ ಲಭಿಸುವ ಪ್ರಯೋಜನಗಳು

ರಕ್ತಪರಿಚಲನೆ ಸುಧಾರಣೆ ಮತ್ತು ಹೃದಯದ ಬಲವರ್ಧನೆ

ಪ್ರತಿದಿನ ನಡೆಯುವುದರಿಂದ ರಕ್ತಪರಿಚಲನೆ ಸುಧಾರಿಸುತ್ತದೆ. ಇದು ರಕ್ತದೊತ್ತಡವನ್ನು ಸಮತೋಲನ ದಲ್ಲಿರಿಸಲು ಸಹಕಾರಿಯಾಗುತ್ತದೆ ಹಾಗೂ ಹೃದಯವನ್ನು ಬಲಪಡಿಸುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, ಪ್ರತಿದಿನ ಅರ್ಧ ಗಂಟೆ ನಡಿಗೆಯಿಂದ ಪಾರ್ಶ್ವವಾಯು ಅಪಾಯವನ್ನು 20ರಿಂದ 40 ಶೇಕಡಾವರೆಗೆ ಕಡಿಮೆ ಮಾಡಬಹುದು.

ತೂಕ ಇಳಿಕೆಗೆ ಸಹಕಾರಿ

ಜಿಮ್‌ಗೆ ಹೋಗದೆ ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ಚುರುಕಾದ ನಡಿಗೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬಹುದು. ಒಂದು ಗಂಟೆ ವೇಗವಾಗಿ ನಡೆಯುವುದರಿಂದ ಕ್ಯಾಲೊರಿಗಳು ಸುಡುತ್ತವೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ, ಕೊಬ್ಬು ಕಡಿಮೆಯಾಗಲು ಸಹಾಯ ಮಾಡುತ್ತದೆ.

ಸ್ನಾಯುಗಳು ಮತ್ತು ಮೂಳೆಗಳ ಬಲವರ್ಧನೆ

ನಿಯಮಿತ ನಡಿಗೆಯಿಂದ ಕಾಲು, ಸೊಂಟ ಹಾಗೂ ಹೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ. ಜೊತೆಗೆ ಮೂಳೆಗಳ ಸಾಂದ್ರತೆ ಹೆಚ್ಚಿ, ಕೀಲು ನೋವು ಕಡಿಮೆಯಾಗಲು ಸಹಾಯವಾಗುತ್ತದೆ.

ಉಸಿರಾಟ ವ್ಯವಸ್ಥೆಗೆ ಲಾಭ

ವೇಗವಾಗಿ ನಡೆಯುವಾಗ ಉಸಿರಾಟದ ಪ್ರಮಾಣ ಹೆಚ್ಚುತ್ತದೆ. ಇದರಿಂದ ಆಮ್ಲಜನಕ ರಕ್ತದಲ್ಲಿ ವೇಗವಾಗಿ ಹರಿದು, ದೇಹದಿಂದ ವಿಷಪದಾರ್ಥಗಳನ್ನು ಹೊರಹಾಕಲು ನೆರವಾಗುತ್ತದೆ. ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸಿ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಮಾನಸಿಕ ಶಾಂತಿ ಮತ್ತು ಉತ್ತಮ ನಿದ್ರೆ

ನಡಿಗೆ ಮಾನಸಿಕ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಪ್ರತಿದಿನ ನಡೆಯುವವರಲ್ಲಿ ನಿದ್ರಾಹೀನತೆ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದು ಮನಸ್ಸನ್ನು ಶಾಂತವಾಗಿರಿಸಿ, ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.

ಒತ್ತಡ ನಿವಾರಣೆ

ನಡಿಗೆಯು ಎಂಡಾರ್ಫಿನ್‌ಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ, ಮನೋಭಾವವನ್ನು ಉತ್ತಮಗೊಳಿಸುತ್ತದೆ. ವಿಶೇಷವಾಗಿ ಬೆಳಗಿನ ನಡಿಗೆಯು ಮಾನಸಿಕ ಶಾಂತಿಯನ್ನು ಹೆಚ್ಚಿಸುತ್ತದೆ.

ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆ

ನಿಯಮಿತ ನಡಿಗೆಯು ಟೈಪ್ 2 ಮಧುಮೇಹ, ಕೆಲವು ವಿಧದ ಕ್ಯಾನ್ಸರ್ ಹಾಗೂ ಆಲ್ಝೈಮರ್‌ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

ಶಕ್ತಿಯ ಮಟ್ಟ ಹೆಚ್ಚಳ

ನಡಿಗೆಯು ದೇಹದಾದ್ಯಂತ ರಕ್ತಪರಿಚಲನೆ ಹಾಗೂ ಆಮ್ಲಜನಕದ ಹರಿವನ್ನು ಹೆಚ್ಚಿಸಿ, ದೇಹದ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಒಟ್ಟಿನಲ್ಲಿ, ದಿನಕ್ಕೆ ಕೇವಲ 30 ನಿಮಿಷದಿಂದ 1 ಗಂಟೆ ನಡಿಗೆ ಮಾಡುವ ಅಭ್ಯಾಸ ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಆರೋಗ್ಯಕರ ಜೀವನಕ್ಕಾಗಿ ಇಂದಿನಿಂದಲೇ ನಡಿಗೆಯನ್ನು ನಿಮ್ಮ ದಿನಚರಿಯ ಭಾಗವಾಗಿಸಿಕೊಳ್ಳಿ.

ಇಂದಿರಾನಗರದಲ್ಲಿ ಎಟಿಎಂ ದರೋಡೆಗೆ ವಿಫಲ ಯತ್ನ: ನೇಪಾಳ ಮೂಲದ ಯುವಕ ಬಂಧನ

0

ಬೆಂಗಳೂರು: ಸಿಎಂಎಸ್ ಕಂಪನಿ ಮಾಜಿ ಸಿಬ್ಬಂದಿ ಎಟಿಎಂ ದರೋಡೆ ಪ್ರಕರಣದ ಸಂಚಲನ ಇನ್ನೂ ತಣ್ಣಗಾಗುವ ಮುನ್ನವೇ ನಗರದಲ್ಲಿ ಮತ್ತೊಂದು ಎಟಿಎಂ ದರೋಡೆಗೆ ಯತ್ನ ನಡೆದಿದೆ.

ಫೆಬ್ರವರಿ 10ರಂದು ಮಧ್ಯರಾತ್ರಿ, ಬೆಂಗಳೂರು ನಗರದ ಇಂದಿರಾನಗರ ಡಬಲ್ ರೋಡ್ ಬಳಿಯ ಬ್ಯಾಂಕ್ ಆಫ್ ಬರೋಡಾ ಎಟಿಎಂಗೆ ನುಗ್ಗಿದ ಆರೋಪಿ ಶಟ್ಟರ್ ಮುಚ್ಚಿ ದರೋಡೆಗೆ ವಿಫಲ ಯತ್ನ ನಡೆಸಿದ್ದಾನೆ.

ನೇಪಾಳ ಮೂಲದ ರಾಜೇಂದ್ರ ಸಿಂಗ್ (23) ಕಟ್ಟಿಂಗ್ ಮಷೀನ್ ಬಳಸಿ ಎಟಿಎಂ ಯಂತ್ರ ಒಡೆದು ಹಣ ದೋಚಲು ಯತ್ನಿಸಿದ್ದ. ಅಲ್ಲದೆ ಸಿಸಿಟಿವಿ ಕ್ಯಾಮೆರಾಗಳನ್ನು ಬಟ್ಟೆ ಮತ್ತು ಟೇಪ್ ಬಳಸಿ ಮುಚ್ಚಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾನೆ. ಆದರೆ ಯಂತ್ರ ಒಡೆಯಲು ಸಾಧ್ಯವಾಗದೆ ಹಣ ಸಿಗದೆ ಖಾಲಿಹಸ್ತದಿಂದ ಪಾರಾಗಿದ್ದ.

ಪ್ರಕರಣ ದಾಖಲಿಸಿಕೊಂಡ ಇಂದಿರಾನಗರ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧನದ ಬಳಿಕ ಆರೋಪಿ ನಾಗಾರ್ಜುನ ಹೋಟೆಲ್‌ನ ಕಿಚನ್‌ನಲ್ಲಿ ಕೆಲಸ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ.

ನಗರದಲ್ಲಿ ಎಟಿಎಂ ದರೋಡೆ ಯತ್ನಗಳು ಮರುಕಳಿಸುತ್ತಿರುವುದು ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.

ಕಲ್ಲು ತೂರಾಟ ಪ್ರಕರಣ: ಬಂಧಿತ 7 ಮಂದಿ ಅಮಾಯಕರು, ಬಿಡುಗಡೆಗೆ ಮುಸ್ಲಿಂ ಮುಖಂಡರ ಮನವಿ

0

ಬಾಗಲಕೋಟೆ: ಕಲ್ಲು ತೂರಾಟ ಪ್ರಕರಣದಲ್ಲಿ ಬಂಧನಕ್ಕೊಳಗಾದ 8 ಜನರಲ್ಲಿ 7 ಮಂದಿ ಅಮಾಯಕರಾಗಿದ್ದು, ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮುಸ್ಲಿಂ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಶುಕ್ರವಾರ ನಡೆದ ಶಾಂತಿ ಸಭೆಗೆ ಮುಸ್ಲಿಂ ಸಮುದಾಯ ಗೈರಾಗಿದ್ದ ಹಿನ್ನೆಲೆಯಲ್ಲಿ, ಇಂದು ಬಾಗಲಕೋಟೆ ನವನಗರದ ಜಿಲ್ಲಾಡಳಿತ ಭವನದಲ್ಲಿ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರ ನೇತೃತ್ವದಲ್ಲಿ ಮರು ಶಾಂತಿ ಸಭೆ ಆಯೋಜಿಸಲಾಯಿತು. ಆದರೆ ಈ ಬಾರಿ ಹಿಂದೂ ಮುಖಂಡರು ಸಭೆಗೆ ಹಾಜರಾಗಲಿಲ್ಲ.

ಸಭೆಯಲ್ಲಿ ಮುಸ್ಲಿಂ ಸಮುದಾಯದ ಪ್ರತಿನಿಧಿಗಳು ಮಾತ್ರ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಚಿವರಿಗೆ ಮೌಖಿಕವಾಗಿ ಸಲ್ಲಿಸಿದರು. ಬಂಧಿತರಲ್ಲಿ ಒಬ್ಬ ಮಾತ್ರ ನಿಜವಾದ ಆರೋಪಿ, ಉಳಿದ 7 ಮಂದಿ ನಿರಪರಾಧಿಗಳು ಎಂದು ಅವರು ವಾದಿಸಿದರು.

ಸಭೆಯ ಬಳಿಕ ಮಾತನಾಡಿದ ಆರ್.ಬಿ. ತಿಮ್ಮಾಪೂರ, “ಜಿಲ್ಲೆಯ ಎಲ್ಲಾ ಸಮುದಾಯದ ಜನರು ಶಾಂತಿ ಮತ್ತು ಸಂಯಮ ಕಾಪಾಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬಾರದು,” ಎಂದು ಕರೆ ನೀಡಿದರು.

ಪ್ರಕರಣದ ಸುತ್ತ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆ ಗಟ್ಟಿಯಾಗಿದ್ದು, ಬಂಧಿತರ ಬಿಡುಗಡೆ ವಿಚಾರ ಇದೀಗ ಜಿಲ್ಲಾಡಳಿತದ ತೀರ್ಮಾನಕ್ಕೆ ಕಾಯುತ್ತಿದೆ.

ತಮಿಳುನಾಡು ಮಾದರಿ ಶಿಕ್ಷಕರ ನೇಮಕ ಜಾರಿಗೆ ಬರಲಿ: ಬಸವರಾಜ ಬೊಮ್ಮಾಯಿ ಆಗ್ರಹ

0

ಹಾವೇರಿ: ಒಬ್ಬ ಶಿಕ್ಷಕರು ನಿವೃತ್ತಿಯಾಗುವ ಮುನ್ನವೇ ಹೊಸ ಶಿಕ್ಷಕರ ನೇಮಕ ಮಾಡುವ ತಮಿಳುನಾಡು ಮಾದರಿಯ ವ್ಯವಸ್ಥೆ ರಾಜ್ಯದಲ್ಲೂ ಜಾರಿಯಾದರೆ ಖಾಲಿ ಹುದ್ದೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಿರಿಯ ಪ್ರಾಥಮಿಕ ಶಾಲೆ ಯ 21ನೇ ವಾರ್ಷಿಕ ಸ್ನೇಹ ಸಮ್ಮೇಳನ, ಸರಸ್ವತಿ ಪೂಜೆ, 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

“ತಾಯಿ ಮೊದಲ ಗುರು, ನಂತರ ಶಾಲೆಯ ಗುರು ಶಿಕ್ಷಣ ನೀಡುತ್ತಾರೆ. ಸಮಾಜ ಬದುಕಿನ ಪಾಠ ಕಲಿಸುತ್ತದೆ. ವಿದ್ಯಾರ್ಥಿ ಜೀವನವು ಶಾಲೆಯಲ್ಲಿ ಪಾಠ–ಪರೀಕ್ಷೆಯಾಗಿದ್ದರೆ, ಜೀವನದಲ್ಲಿ ಮೊದಲೇ ಪರೀಕ್ಷೆ ನಂತರ ಪಾಠ. ಹೀಗಾಗಿ ಪಾಠ–ಪರೀಕ್ಷೆ ನಿರಂತರ ಪ್ರಕ್ರಿಯೆ,” ಎಂದು ಅವರು ಹೇಳಿದರು.

ಗ್ರಾಮೀಣ ಮತ್ತು ನಗರ ಮಕ್ಕಳ ಶಿಕ್ಷಣದ ನಡುವಿನ ಅಂತರವನ್ನು ಉಲ್ಲೇಖಿಸಿದ ಅವರು, 5ನೇ ತರಗತಿವರೆಗೆ ಕನ್ನಡ ಮತ್ತು ನಂತರ ಇಂಗ್ಲಿಷ್ ಕಲಿಯುವ ವ್ಯವಸ್ಥೆಯಿಂದ ಗ್ರಾಮೀಣ ಮಕ್ಕಳು ಸ್ಪರ್ಧೆಯಲ್ಲಿ ಹಿಂದುಳಿಯುವ ಪರಿಸ್ಥಿತಿ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. “ಈ ಪ್ರಶ್ನೆಗೆ ಸಚಿವರು ಉತ್ತರ ಕೊಡಬೇಕು,” ಎಂದು ಅವರು ಸವಾಲು ಹಾಕಿದರು.

ರಾಜ್ಯದಲ್ಲಿ 65% ಶಾಲೆಗಳು ಹಳೆ ಮೈಸೂರು ಭಾಗದಲ್ಲಿದ್ದು, 35% ಮಾತ್ರ ಉತ್ತರ ಕರ್ನಾಟಕದಲ್ಲಿವೆ ಎಂದ ಅವರು, ಸರ್ಕಾರಿ ಶಾಲೆಗಳನ್ನು ಗಟ್ಟಿಗೊಳಿಸಿ, ಶಿಕ್ಷಕರ ನೇಮಕಾತಿಯನ್ನು ವೇಗಗೊಳಿಸಬೇಕು ಎಂದು ಒತ್ತಾಯಿಸಿದರು.

“ನಾನು ಮುಖ್ಯಮಂತ್ರಿಯಾಗಿದ್ದಾಗ 30 ಸಾವಿರ ಶಾಲಾ ಕಟ್ಟಡ ನಿರ್ಮಾಣಕ್ಕೆ ತೀರ್ಮಾನಿಸಿದ್ದೆವು. ಮೊದಲ ವರ್ಷವೇ 9 ಸಾವಿರ ಕಟ್ಟಡಗಳು ನಿರ್ಮಾಣಗೊಂಡವು. 15 ಸಾವಿರ ಶಿಕ್ಷಕರ ನೇಮಕಕ್ಕೂ ಆದೇಶ ನೀಡಿದ್ದೆವು. ಅದು ಮುಂದುವರೆಯಬೇಕು,” ಎಂದು ಬೊಮ್ಮಾಯಿ ಹೇಳಿದರು.

ತಮಿಳುನಾಡಿನಲ್ಲಿ ನಿವೃತ್ತಿಗೆ ಒಂದು ವರ್ಷ ಮುಂಚೆಯೇ ಶಿಕ್ಷಕರ ನೇಮಕ ಮಾಡಿ ತರಬೇತಿ ನೀಡುವ ವ್ಯವಸ್ಥೆಯನ್ನು ಉದಾಹರಿಸಿ, “ಆ ಮಾದರಿ ಕರ್ನಾಟಕದಲ್ಲೂ ಜಾರಿಯಾಗಬೇಕು,” ಎಂದು ಆಗ್ರಹಿಸಿದರು.

error: Content is protected !!