ಬೆಂಗಳೂರು: ರಾಷ್ಟ್ರೀಯ ಅಲೈಡ್ ಹಾಗೂ ಹೆಲ್ತ್ ಕೇರ್ ಪ್ರೊಫೆಶನ್ಸ್ ಆಯೋಗ (ಎನ್ಸಿಎಹೆಚ್ಪಿ) ಹೊರಡಿಸಿರುವ ಹೊಸ ಸುತ್ತೋಲೆಯಿಂದ ರಾಜ್ಯದಲ್ಲಿ ಪ್ಯಾರಾ ಮೆಡಿಕಲ್ ಕಾಲೇಜುಗಳು ಮುಚ್ಚುವ ಆತಂಕ ಎದುರಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಕಳವಳ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ನ ಶೂನ್ಯ ವೇಳೆಯಲ್ಲಿ ಸದಸ್ಯ ಐವನ್ ಡಿಸೋಜಾ ಈ ವಿಷಯ ಪ್ರಸ್ತಾಪಿಸಿದರು. ಪ್ಯಾರಾ ಮೆಡಿಕಲ್ ಕೋರ್ಸ್ ಸೇರಲು ಬಯಸುವ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದುವರೆಗೆ ಎಸ್ಎಸ್ಎಲ್ಸಿ ನಂತರ ವೈದ್ಯಕೀಯ ಕ್ಷೇತ್ರದ ತರಬೇತಿ ಪಡೆಯಲು ಅವಕಾಶವಿತ್ತು.
ಆದರೆ ಇನ್ನುಮುಂದೆ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ತೇರ್ಗಡೆಯಾದವರಿಗೆ ಮಾತ್ರ ಪ್ರವೇಶ ನೀಡುವಂತೆ ನಿಯಮ ರೂಪಿಸಿರುವುದು ಹೊಸ ಶೈಕ್ಷಣಿಕ ಸಮಸ್ಯೆಗೆ ಕಾರಣವಾಗಲಿದೆ ಎಂದು ಅವರು ಹೇಳಿದರು.
ಎನ್ಸಿಎಹೆಚ್ಪಿ ಆಯೋಗವು ಜನವರಿ 2ರಂದು ಯುಜಿಸಿಗೆ ಪತ್ರ ಬರೆದು, ದೇಶಾದ್ಯಂತ ಪ್ಯಾರಾ ಮೆಡಿಕಲ್ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯ ಎಂದು ತಿಳಿಸಿದೆ. ಈ ನಿಯಮವನ್ನು 2026-27ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ತರಲು ಸೂಚಿಸಲಾಗಿದೆ.
ಪ್ರಸ್ತುತ ರಾಜ್ಯದಲ್ಲಿ 32 ಸರ್ಕಾರಿ ಹಾಗೂ 608 ಖಾಸಗಿ ಸೇರಿ ಒಟ್ಟು 640 ಪ್ಯಾರಾ ಮೆಡಿಕಲ್ ಶಿಕ್ಷಣ ಸಂಸ್ಥೆಗಳಿವೆ. ಹೊಸ ನಿಯಮ ಜಾರಿಯಾದರೆ 450 ರಿಂದ 500 ಕಾಲೇಜುಗಳಿಗೆ ಅರ್ಹ ಅಭ್ಯರ್ಥಿಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಐವನ್ ಡಿಸೋಜಾ ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಶರಣ್ ಪ್ರಕಾಶ್ ಪಾಟೀಲ್, ಎನ್ಸಿಎಹೆಚ್ಪಿ ಸುತ್ತೋಲೆಯಿಂದ ರಾಜ್ಯದ ಪ್ಯಾರಾ ಮೆಡಿಕಲ್ ಕಾಲೇಜುಗಳಿಗೆ ಸಮಸ್ಯೆ ಉಂಟಾಗುವ ಭೀತಿ ಇದೆ ಎಂದು ಹೇಳಿದರು. ಈಗಾಗಲೇ ಈ ನಿಯಮದ ಬಗ್ಗೆ ಆಯೋಗದ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಲಾಗಿದೆ. ನಿಯಮದಲ್ಲಿ ಸರಳೀಕರಣ ಮಾಡುವ ಕುರಿತು ಸಭೆ ಕರೆದು ಚರ್ಚಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

