Home Blog

ಕಾಂಗ್ರೆಸ್‌ಗೆ ಆಘಾತ; ರಾಯಚೂರಿನ ಮಾಜಿ ಶಾಸಕ ಸೈಯದ್ ಯಾಸಿನ್ ನಿಧನ!

ರಾಯಚೂರು: ಮಾಜಿ ಶಾಸಕ ಹಾಗೂ ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್ ಅವರ ಅಳಿಯ ಸೈಯದ್ ಯಾಸಿನ್ (70) ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.

ಸೈಯದ್ ಯಾಸಿನ್ ಅವರು ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಆರು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು. 1999 ಮತ್ತು 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2008ರ ಚುನಾವಣೆಯಲ್ಲಿ ರಾಯಚೂರು ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದ ಏಕೈಕ ಮುಸ್ಲಿಂ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮೃತರು ಪತ್ನಿ, ನಾಲ್ವರು ಪುತ್ರರು, ಕುಟುಂಬಸ್ಥರು ಹಾಗೂ ಅಪಾರ ಬಂಧು-ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.

ಸೈಯದ್ ಯಾಸಿನ್ ಅವರ ಅಂತ್ಯಕ್ರಿಯೆ ಇಂದು ಸಂಜೆ ರಾಯಚೂರು ನಗರದ ಕಮಲಿವಾಲೆ ಬಾಬಾ ಕಬರಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಎ. ವಸಂತ ಕುಮಾರ್ ಸೇರಿದಂತೆ ಹಲವು ಗಣ್ಯರು ಸೈಯದ್ ಯಾಸಿನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಕರ್ನಾಟಕದಲ್ಲಿ ಜಾನಕಿ ಅಮ್ಮನ ಸ್ಮಾರಕ ನಿರ್ಮಾಣವಾಗಬೇಕು; ಹಂಸಲೇಖ ಮನವಿ!

ಮೈಸೂರು: ಕರುನಾಡಿನ ಮಣ್ಣಲ್ಲಿ ಖ್ಯಾತ ಗಾಯಕಿ ಎಸ್‌. ಜಾನಕಿ ಅವರು ಕೊನೆಯುಸಿರೆಳೆದಿದ್ದು, ಅವರ ನೆನಪಿಗಾಗಿ ಕರ್ನಾಟಕದಲ್ಲಿ ಸ್ಮಾರಕ ನಿರ್ಮಾಣವಾಗಬೇಕು ಎಂದು ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹಂಸಲೇಖ, “ಜಾನಕಿ ಅಂದ್ರೆ ಸೀತೆ, ಸೀತೆ ಅಂದ್ರೆ ನಮಗೆ ಗೀತೆ. ಅವರ ಆಸೆ ಕರುನಾಡಿನಲ್ಲಿತ್ತು. ಅವರ ಸ್ಮಾರಕ ನಿರ್ಮಾಣವಾಗಬೇಕು. ಈ ವಿಚಾರವನ್ನು ಸಂಬಂಧಪಟ್ಟವರ ಗಮನಕ್ಕೆ ತರೋಣ” ಎಂದು ಹೇಳಿದರು.

ಎಸ್‌. ಜಾನಕಿ ಅವರದ್ದು ಪರಿಪೂರ್ಣ ಜೀವನವಾಗಿದ್ದು, 88 ವರ್ಷಗಳನ್ನು ಪೂರೈಸಿದ್ದಾರೆ. ಅವರು ದೇವರ ಭಕ್ತರಾಗಿದ್ದರು. ಸಂಗೀತವೇ ದೇವರು, ಸಂಗೀತ ಎಲ್ಲ ದೇವರಿಗೂ ಪ್ರಿಯವಾದದ್ದು ಎಂದು ಹಂಸಲೇಖ ಹೇಳಿದರು.

ಮೈಸೂರು ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಜಾನಕಿ ಅವರ ಸ್ಮಾರಕ ನಿರ್ಮಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್‌. ಜಾನಕಿ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಜುಲೈ 11ರಂದು ನಿಧನರಾಗಿದ್ದರು. ಚಿಕಿತ್ಸೆಗೆ ದಾಖಲಾಗಿದ್ದ ಅವರು, ಮಗನ ನಿಧನದ ಬಳಿಕ ಮೈಸೂರಿನ ಬೋಗಾದಿಯಲ್ಲಿರುವ ಆಪ್ತರ ಮನೆಯಲ್ಲಿ ವಾಸವಾಗಿದ್ದರು.

80ರ ದಶಕದಲ್ಲಿ ತಮ್ಮ ಸುಮಧುರ ಕಂಠದಿಂದ ಅಪಾರ ಜನಪ್ರಿಯತೆ ಗಳಿಸಿದ್ದ ಜಾನಕಿ ಅವರನ್ನು “ಭಾರತದ ನೈಟಿಂಗೇಲ್” ಎಂದೇ ಕರೆಯಲಾಗುತ್ತಿತ್ತು. ಸುಮಾರು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಅವರು, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಆಂಧ್ರಪ್ರದೇಶದಲ್ಲಿ ಜನಿಸಿದ್ದರೂ ಕರ್ನಾಟಕದ ಮೇಲೆ ವಿಶೇಷ ಪ್ರೀತಿ ಹೊಂದಿದ್ದ ಜಾನಕಿ ಅವರು ಕನ್ನಡದಲ್ಲೇ ಅತಿ ಹೆಚ್ಚು ಗೀತೆಗಳನ್ನು ಹಾಡಿದ್ದರು. ಅವರು 4 ರಾಷ್ಟ್ರೀಯ ಪ್ರಶಸ್ತಿ, 33 ರಾಜ್ಯ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದರು.

ಬ್ಯಾಗ್‌ನಲ್ಲಿ ಬಂತು ₹4 ಕೋಟಿ ಡ್ರಗ್ಸ್! ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ಬಂಧನ

ದೇವನಹಳ್ಳಿ: ವಿದೇಶದಿಂದ ಅಕ್ರಮವಾಗಿ ತಂದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಕಸ್ಟಮ್ಸ್ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನ ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ 12.07 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ವಶಪಡಿಸಿಕೊಂಡ ಮಾದಕ ವಸ್ತುವಿನ ಮೌಲ್ಯ ಸುಮಾರು 4 ಕೋಟಿ 22 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಪ್ರಯಾಣಿಕರ ತಪಾಸಣೆ ವೇಳೆ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಬ್ಯಾಗ್ ಪರಿಶೀಲಿಸಿದಾಗ ಮಾದಕ ವಸ್ತು ಪತ್ತೆಯಾಗಿದೆ. ಈ ಸಂಬಂಧ ಆರೋಪಿಯನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಿ ತನಿಖೆ ಮುಂದುವರಿಸಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತು ಸಾಗಾಟ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಸ್ಟಮ್ಸ್ ಅಧಿಕಾರಿಗಳು ಹಲವು ಕಾರ್ಯಾಚರಣೆ ನಡೆಸಿದ್ದಾರೆ.

ಜೂನ್ 26ರಂದು ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನ ಬ್ಯಾಗ್‌ನಲ್ಲಿ ₹2.086 ಕೋಟಿ ಮೌಲ್ಯದ 5.960 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿತ್ತು. ಮತ್ತೊಂದು ಪ್ರಕರಣದಲ್ಲಿ ₹5.58 ಕೋಟಿ ಮೌಲ್ಯದ 6.98 ಕೆಜಿ ಮೆಸ್ಕಲಿನ್ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು.

ಇದೇ ರೀತಿ ಜೂನ್ 17ರಂದು ₹5.43 ಕೋಟಿ ಮೌಲ್ಯದ 15.520 ಕೆಜಿ ಹೈಡ್ರೋಪೋನಿಕ್ ಗಾಂಜಾ ಹಾಗೂ ಜೂನ್ 29ರಂದು ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನಿಂದ 8 ಕೆಜಿ ತೂಕದ ₹2.80 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿತ್ತು.

ಕೌಟುಂಬಿಕ ಕಲಹಕ್ಕೆ ಬಲಿಯಾದ ‘ಅಳಿಯ’: ತವರು ಸೇರಿದ್ದ ಹೆಂಡ್ತಿ ಕರೆತರಲು ಹೋದವನ ಬರ್ಬರ ಕೊಲೆ!

0

ವಿಜಯಪುರ: ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಬಾಬುಸಾಬ್ ಜಮಾದಾರ್ (35) ಎಂದು ಗುರುತಿಸಲಾಗಿದೆ.

ಐದು ವರ್ಷಗಳ ಹಿಂದೆ ಬಾಬುಸಾಬ್ ಅವರು ತಮ್ಮ ಸ್ವಂತ ಸಹೋದರಿ ಮೀನಾಕ್ಷಿ ಅವರ ಮಗಳು ಸೌಂದರ್ಯಳನ್ನು ವಿವಾಹವಾಗಿದ್ದರು. ಕಳೆದ ಐದು ತಿಂಗಳಿಂದ ದಂಪತಿ ನಡುವೆ ಕಲಹ ಉಂಟಾಗಿ ಸೌಂದರ್ಯ ತವರು ಮನೆಯಲ್ಲಿ ವಾಸವಾಗಿದ್ದಳು.

ನಿನ್ನೆ ರಾತ್ರಿ ಪತ್ನಿಯನ್ನು ವಾಪಸ್ ಕರೆದುಕೊಂಡು ಹೋಗಲು ಬಾಬುಸಾಬ್, ತಮ್ಮ ಸ್ನೇಹಿತ ಅಪ್ಪಾಲಾಲ ಮಕಾಸಿ ಜೊತೆ ಹಲಸಂಗಿಗೆ ಬಂದಿದ್ದರು. ಈ ವೇಳೆ ನಡೆದ ಮಾತಿನ ಚಕಮಕಿ ಗಲಾಟೆಗೆ ತಿರುಗಿದೆ ಎನ್ನಲಾಗಿದೆ.

ಸೌಂದರ್ಯಳ ತಾಯಿ ಮೀನಾಕ್ಷಿ, ಸಹೋದರ ವಿಕಾಸ್ ಹಾಗೂ ರಫೀಕ್ ಸೇರಿ ಬಾಬುಸಾಬ್ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಬುಸಾಬ್ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅವರ ಸ್ನೇಹಿತ ಅಪ್ಪಾಲಾಲ ಮಕಾಸಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಳಿಕ ಆರೋಪಿತರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಇನ್ಸ್‌ಪೆಕ್ಟರ್ ಪರಶುರಾಮ ಮನಗೂಳಿ ಹಾಗೂ ಝಳಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓವರ್‌ಲೋಡ್ ಎಂ-ಸ್ಯಾಂಡ್, ಮರಳು ಸಾಗಣೆ ಮೇಲೆ ಪೊಲೀಸ್‌ ದಾಳಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಮೂಲಕ ಮಿತಿಮೀರಿದ (ಓವರ್‌ಲೋಡ್) ಎಂ-ಸ್ಯಾಂಡ್ ಹಾಗೂ ಮರಳು ಸಾಗಣೆ ಮಾಡುತ್ತಿದ್ದ ವಾಹನಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ 3 ಟಿಪ್ಪರ್‌ಗಳು ಹಾಗೂ 1 ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ಮಧ್ಯರಾತ್ರಿಯಿಂದ ಶನಿವಾರ ನಸುಕಿನವರೆಗೆ ನಡೆದ ಕಾರ್ಯಾಚರಣೆಯಲ್ಲಿ, ಅಡರಕಟ್ಟಿ ಗ್ರಾಮದಿಂದ ಸುಮಾರು 5 ಟನ್ ಅಧಿಕ ಮರಳು ಸಾಗಿಸುತ್ತಿದ್ದ ಲಾರಿ, ಮಾಗಡಿ, ಹುಲ್ಲೂರು ಹಾಗೂ ಬೆಳ್ಳಟ್ಟಿ ಗ್ರಾಮಗಳಿಂದ ಹೆಚ್ಚುವರಿ ಎಂ-ಸ್ಯಾಂಡ್ ಹೊತ್ತೊಯ್ಯುತ್ತಿದ್ದ ಮೂರು ಟಿಪ್ಪರ್‌ಗಳನ್ನು ತಡೆದು ವಶಪಡಿಸಿಕೊಳ್ಳಲಾಯಿತು.

ಓವರ್‌ಲೋಡ್ ಸಾಗಣೆ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಗಳಿಗೆ ಮಾಹಿತಿ ನೀಡಲಾಗಿದೆ.

ಕಾರ್ಯಾಚರಣೆಯಲ್ಲಿ ಪಿಎಸ್‌ಐ ನಾಗರಾಜ ಗಡದ, ಕ್ರೈಂ ಪಿಎಸ್‌ಐ ಟಿ.ಕೆ. ರಾಥೋಡ್ ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ: ಬಸವರಾಜ ಬೊಮ್ಮಾಯಿ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಗದಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಶೇ.50ಕ್ಕೂ ಹೆಚ್ಚು ತಾಲೂಕುಗಳು ಬರದ ಸಂಕಷ್ಟದಲ್ಲಿದ್ದರೂ ಸರ್ಕಾರ ಯಾವುದೇ ಕಾರ್ಯಯೋಜನೆ ರೂಪಿಸಿಲ್ಲ. ಗದಗ ಜಿಲ್ಲೆಯಲ್ಲಿ ಕೇವಲ ಶೇ.30ರಷ್ಟು ಮಾತ್ರ ಬಿತ್ತನೆಯಾಗಿದ್ದು, ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ ಎನ್‌ಡಿಆರ್‌ಎಫ್ ನಿಧಿಯಿಂದ ರೈತರಿಗೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕೃಷಿ ಇಲಾಖೆ ನಿಷ್ಕ್ರಿಯವಾಗಿದ್ದು, ರೈತರಿಗೆ ಪರ್ಯಾಯ ಬೆಳೆ ಕುರಿತು ಯಾವುದೇ ಮಾರ್ಗದರ್ಶನ ಸಿಕ್ಕಿಲ್ಲ. ಗದಗ ನಗರದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದ್ದು, ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ನೇಮಿಸಿ 15 ದಿನಗಳಾದರೂ ಅವರು ಜಿಲ್ಲೆಗೆ ಭೇಟಿ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಬೊಮ್ಮಾಯಿ, ಸಂಕಷ್ಟದ ಸಮಯದಲ್ಲಿ ಜನರೊಂದಿಗೆ ನಿಲ್ಲದ ಸರ್ಕಾರ ಬೇಜವಾಬ್ದಾರಿಯಾಗಿದೆ ಎಂದು ಟೀಕಿಸಿದರು.

ಅಘೋರ ಹೋಮಕ್ಕೆ ಪೂರ್ಣಾಹುತಿ; ಮಂಗಲ ಭವನ ನಿರ್ಮಾಣಕ್ಕೆ ಚಾಲನೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಹೊಂದಿಕೊಂಡಂತೆ ನಿರ್ಮಾಣವಾಗಲಿರುವ ಶ್ರೀ ದತ್ತ ಮಂಗಲ ಭವನ ಕಾಮಗಾರಿ ಯಶಸ್ವಿಯಾಗಲೆಂದು ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶನಿವಾರ ಅಘೋರ ಹೋಮ ಹಾಗೂ ಪೂರ್ಣಾಹುತಿ ನೆರವೇರಿಸಲಾಯಿತು.

ಹೋಮದ ಪೂರ್ಣಾಹುತಿ ಬಳಿಕ ಮಾತನಾಡಿದ ಅರ್ಚಕ ಶ್ರೀವಲ್ಲಭಭಟ್ಟ ಸದರಜೋಷಿ, ಯಾವುದೇ ದೇವಸ್ಥಾನದ ಜೀರ್ಣೋದ್ಧಾರ ಅಥವಾ ಧಾರ್ಮಿಕ ಕಟ್ಟಡ ನಿರ್ಮಾಣದಂತಹ ಕಾರ್ಯಗಳಿಗೆ ಮುನ್ನ ಅಘೋರ ಹೋಮ ನೆರವೇರಿಸುವುದು ಶಾಸ್ತ್ರಸಮ್ಮತವಾಗಿದೆ ಎಂದು ಹೇಳಿದರು.

ಶ್ರೀ ದತ್ತ ಮಂಗಲ ಭವನ ಸಮಿತಿಯ ಗೌರವಾಧ್ಯಕ್ಷ ಡಾ. ಜಿ.ಕೆ. ಕಾಳೆ ಮಾತನಾಡಿ, ಶ್ರೀ ಗುರುದತ್ತಾತ್ರೇಯರ ಪ್ರೇರಣೆಯಿಂದ ಮಂಗಲ ಭವನ ನಿರ್ಮಾಣದ ಸಂಕಲ್ಪ ಕೈಗೊಂಡಿದ್ದು, ಭಕ್ತರ ಸಹಕಾರದಿಂದ ಈ ಕಾರ್ಯ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಶ್ವನಾಥಭಟ್ಟ ವೈದ್ಯ, ಅರುಣ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ನಾಗೇಶಭಟ್ಟ ಗ್ರಾಮಪುರೋಹಿತ, ಪ್ರಶಾಂತ ಗ್ರಾಮಪುರೋಹಿತ, ಡಾ. ನಾಗರಾಜ ಗ್ರಾಮಪುರೋಹಿತ, ಶ್ರೀಪಾದಭಟ್ಟ ಜೋಷಿ, ಪ್ರಕಾಶ ಕುಲಕರ್ಣಿ, ಬಿ.ಎಲ್. ಕುಲಕರ್ಣಿ ಸೇರಿದಂತೆ ದತ್ತಭಕ್ತ ಮಂಡಳಿಯ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಶ್ರೀಪಾದ ಕುಲಕರ್ಣಿ ದಂಪತಿ ಪೂರ್ಣಾಹುತಿ ಅರ್ಪಿಸಿದರು.

ತಾಯಿಹಾಲಿಗೆ ಪರ್ಯಾಯವೇ ಇಲ್ಲ: ಮಕ್ಕಳ ತಜ್ಞ ಡಾ. ಶಿವನಗೌಡ್ರ ಜೋಳದರಾಶಿ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಯಿಹಾಲೇ ನವಜಾತ ಶಿಶುಗಳಿಗೆ ಅತ್ಯುತ್ತಮ ಆಹಾರವಾಗಿದ್ದು, ಮಕ್ಕಳ ಆರೋಗ್ಯಕರ ಬೆಳವಣಿಗೆ ಹಾಗೂ ಬುದ್ಧಿವಿಕಾಸಕ್ಕೆ ಅದಕ್ಕಿಂತ ಉತ್ತಮ ಪರ್ಯಾಯವಿಲ್ಲ ಎಂದು ಮಕ್ಕಳ ತಜ್ಞ ಡಾ. ಶಿವನಗೌಡ್ರ ಜೋಳದರಾಶಿ ಹೇಳಿದರು.

ಬೆಟಗೇರಿಯ ಸೇವಾ ಭಾರತಿ ಟ್ರಸ್ಟ್ (ರಿ) ಅಮೂಲ್ಯ (ಪಿ) ವಿಶೇಷ ದತ್ತು ಸ್ವೀಕಾರ ಕೇಂದ್ರದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಆಯಾಗಳಿಗೆ ನವಜಾತ ಶಿಶುಗಳ ಆರೈಕೆ ಕುರಿತು ವಿಶೇಷ ತರಬೇತಿ ನೀಡಿ ಅವರು ಮಾತನಾಡಿದರು.

ಪೌಡರ್ ಹಾಲಿನಲ್ಲಿ ಪೌಷ್ಟಿಕಾಂಶಗಳಿದ್ದರೂ ಅದು ತಾಯಿಹಾಲಿಗೆ ಸಮನಾಗುವುದಿಲ್ಲ. ತಾಯಿ ಇಲ್ಲದಿರುವುದು, ತಾಯಿಗೆ ಆರೋಗ್ಯ ಸಮಸ್ಯೆ ಇರುವುದು ಅಥವಾ ವಿಶೇಷ ವೈದ್ಯಕೀಯ ಕಾರಣಗಳಿದ್ದಾಗ ಮಾತ್ರ ವೈದ್ಯರ ಸಲಹೆಯಂತೆ ಪೌಡರ್ ಹಾಲು ಬಳಸಬೇಕು ಎಂದು ಅವರು ತಿಳಿಸಿದರು.

ವೈದ್ಯರ ಸಲಹೆ ಇಲ್ಲದೆ ಮೆಡಿಕಲ್ ಅಂಗಡಿಗಳಿಂದ ಪೌಡರ್ ಹಾಲು ಖರೀದಿಸಿ ಮಕ್ಕಳಿಗೆ ನೀಡುವುದು ಸೂಕ್ತವಲ್ಲ. ಪೌಡರ್ ಹಾಲನ್ನು ಸಾಮಾನ್ಯ ಆಹಾರವೆಂದು ಪರಿಗಣಿಸದೆ ಔಷಧಿಯಂತೆ ವೈದ್ಯರ ಸೂಚನೆಯ ಮೇರೆಗೆ ಮಾತ್ರ ಬಳಸಬೇಕು ಎಂದು ಅವರು ಸಲಹೆ ನೀಡಿದರು. ದತ್ತು ಸ್ವೀಕಾರ ಕೇಂದ್ರದ ಆಯಾಗಳು ಮಕ್ಕಳನ್ನು ತಾಯಿಯಂತೆ ಆರೈಕೆ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದತ್ತು ಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಮಾತನಾಡಿ, ದತ್ತು ಕೇಂದ್ರದ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಮಾರ್ಗದರ್ಶನದಲ್ಲಿ ಡಾ. ಶಿವನಗೌಡ್ರ ಅವರ ಸೇವೆ ಅಮೂಲ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಡಾ. ಶಿವನಗೌಡ್ರ ಜೋಳದರಾಶಿ ಮತ್ತು ಶ್ವೇತಾ ಜೋಳದರಾಶಿ ದಂಪತಿ ಕೇಂದ್ರದ ಆಯಾಗಳನ್ನು ಉಡುಗೊರೆ ನೀಡಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಡಾ. ತೇಜಸ್ವಿನಿ ಹಿರೇಮಠ, ರತ್ನಾ ಜೋಳದರಾಶಿ, ನಾಗವೇಣಿ ಕಟ್ಟಿಮನಿ, ಲಲಿತಾಬಾಯಿ ಮೇರವಾಡೆ, ನರಸಿಂಹ ಕಾಮಾರ್ತಿ, ಗುರುಸಿದ್ಧಪ್ಪ ಕೊಣ್ಣೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ತಾಯಿಹಾಲು ಪ್ರಕೃತಿಯ ಅಮೂಲ್ಯ ಕೊಡುಗೆ. ವೈದ್ಯರ ಸಲಹೆಯಿಲ್ಲದೆ ಪೌಡರ್ ಹಾಲು ಬಳಸಬಾರದು. ತಾಯಿಹಾಲೇ ಮಗುವಿನ ಆರೋಗ್ಯ, ರೋಗನಿರೋಧಕ ಶಕ್ತಿ ಮತ್ತು ಬುದ್ಧಿವಿಕಾಸಕ್ಕೆ ಭದ್ರ ಅಡಿಪಾಯ ಹಾಕುತ್ತದೆ.”

– ಡಾ. ಶಿವನಗೌಡ್ರ ಜೋಳದರಾಶಿ, ಮಕ್ಕಳ ತಜ್ಞ

ಶಿವಯೋಗಿ ಶ್ರೀಗಳ ಆರೋಗ್ಯ ವಿಚಾರಿಸಿದ ಕಲ್ಲಯ್ಯಜ್ಜ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಅಂತೂರು-ಬೆಂತೂರು ಗ್ರಾಮದಲ್ಲಿ ಲೋಕಕಲ್ಯಾಣಕ್ಕಾಗಿ 33 ದಿನಗಳ ಕಾಲ ಶಿವಯೋಗ ಸಮಾಧಿ ಅನುಷ್ಠಾನ ಕೈಗೊಂಡಿದ್ದ ಪೂಜ್ಯ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಆರೋಗ್ಯವನ್ನು ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪರಮಪೂಜ್ಯ ಡಾ. ಕಲ್ಲಯ್ಯಜ್ಜನವರು ಭೇಟಿ ನೀಡಿ ವಿಚಾರಿಸಿದರು.

ಈ ವೇಳೆ ರಾಚೋಟೇಶ್ವರ ಮಹಾಸ್ವಾಮಿಗಳ ದರ್ಶನ ಪಡೆದು ಆಶೀರ್ವಾದ ಹಾಗೂ ಶ್ರೀರಕ್ಷೆ ಸ್ವೀಕರಿಸಿದ ಕಲ್ಲಯ್ಯಜ್ಜನವರು, ಪರಮಾತ್ಮನ ಕೃಪೆಯಿಂದ ಶ್ರೀಗಳು ಶೀಘ್ರ ಸಂಪೂರ್ಣ ಗುಣಮುಖರಾಗಲಿ. ಸಮಾಜದಲ್ಲಿ ಸುಖ, ಶಾಂತಿ ಮತ್ತು ಲೋಕಕಲ್ಯಾಣ ನೆಲೆಸಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ನಿಂಗನಗೌಡ ಎಸ್. ಮಾಲಿಪಾಟೀಲ, ರಾಹುಲ್ ತೆರದಾಳ, ಮಾರ್ಕಂಡಯ್ಯ ಆಟೋದ, ಬಸಯ್ಯ ಕೊಪ್ಪಳ, ಮುತ್ತು ಶಾಸ್ತ್ರಿ ಹಿರೇಕೊಪ್ಪ, ಮಾಂತೇಶ ಹಿರೇಮಠ, ಬಸಯ್ಯ ಹಿರೇಮಠ, ಪ್ರಶಾಂತ್ ರೋಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜು.13ಕ್ಕೆ ಎಸ್‌ಡಿಪಿಐ ನಾಯಕರ ಸಮಾವೇಶ

0

ವಿಜಯಸಾಕ್ಷಿ ಸುದ್ದಿ, ಗದಗ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ಜುಲೈ 13ರಂದು ಬೆಳಿಗ್ಗೆ 11.30ಕ್ಕೆ ನಗರದ ಕನಕ ಭವನದಲ್ಲಿ ಮಧ್ಯ ಕರ್ನಾಟಕ ಭಾಗದ ನಾಯಕರ ಮಹತ್ವದ ಸಮಾವೇಶ ನಡೆಯಲಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಅವರಿಗೆ ಅಂದು ಮುಳುಗುಂದ ನಾಕಾ ವೃತ್ತದಲ್ಲಿ ಅದ್ದೂರಿ ಸ್ವಾಗತ ಕೋರಲಾಗುವುದು. ಸಮಾವೇಶದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಮೊಹಮ್ಮದ್ ಶಫಿ, ರಾಷ್ಟ್ರೀಯ ಕಾರ್ಯದರ್ಶಿ ಯು. ಮೊಹಿದ್ದೀನ್, ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ಹನ್ನಾನ್, ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ರಾಜ್ಯ ಕಾರ್ಯದರ್ಶಿ ಅಪ್ಸರ್ ಕೆ.ಆರ್. ನಗರ ಹಾಗೂ ರಾಜ್ಯ ಸಮಿತಿ ಸದಸ್ಯ ಫಯಾಜ್ ಅರಿಹಂತ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮಧ್ಯಾಹ್ನ 1.30ಕ್ಕೆ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ನೇತೃತ್ವದಲ್ಲಿ ಸುದ್ದಿಗೋಷ್ಠಿಯೂ ನಡೆಯಲಿದೆ ಎಂದು ತಿಳಿಸಿದರು.

ಈ ವೇಳೆ ಎಸ್‌ಐಆರ್ (Special Intensive Revision) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ ಅಪ್ಸರ್ ಕೊಡ್ಲಿಪೇಟೆ, ಇದು ಮತದಾರರ ಹಕ್ಕಿಗೆ ಧಕ್ಕೆ ತರುವ ಕ್ರಮವಾಗಿದ್ದು, ಸರ್ಕಾರ ಕೂಡಲೇ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ಮತದಾರರ ಪಟ್ಟಿಯ ಪರಿಷ್ಕರಣೆ ಅಗತ್ಯವಿದ್ದರೂ ನೈಜ ಮತದಾರರ ಹೆಸರುಗಳನ್ನು ಕೈಬಿಡಬಾರದು ಎಂದು ಒತ್ತಾಯಿಸಿದರು.

ಬಿಎಲ್‌ಒಗಳ ಮೇಲಿನ ಹೆಚ್ಚುವರಿ ಕೆಲಸದ ಒತ್ತಡದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಅವರು, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಜನರು ಜನವಿರೋಧಿ ನೀತಿಗಳಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಪ್ಸರ್ ಕೆ.ಆರ್. ನಗರ, ಜಿಲ್ಲಾ ಅಧ್ಯಕ್ಷ ಬಿಲಾಲ್ ಗೋಕಾವಿ, ಜಿಲ್ಲಾ ಉಪಾಧ್ಯಕ್ಷ ಹಿದಾಯತುಲ್ಲಾ ಕಾಗದಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಫ್ಫಾನ್ ತರಫ್ದರ್, ಗದಗ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮುಸ್ತಾಕ್ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.