Home Blog

ಕರ್ನಾಟಕದ ವಾಯು ಗುಣಮಟ್ಟ ವರದಿ: ಇಳಿಕೆಯಾಯ್ತು ಮಾಲಿನ್ಯ, ಬೆಂಗಳೂರು ಮಂದಿಗೆ ಗುಡ್ ನ್ಯೂಸ್!

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಪ್ರೀ-ಮಾನ್ಸೂನ್ ಮಳೆ ಹಾಗೂ ಮುಂಗಾರು ಮಾರುತಗಳ ಪರಿಣಾಮದಿಂದ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು ಉತ್ತಮ ಹಾಗೂ ಸಮಾಧಾನಕರ ಮಟ್ಟದಲ್ಲಿದೆ ಎಂದು ವರದಿ ತಿಳಿಸಿದೆ.

ರಾಜಧಾನಿ ಬೆಂಗಳೂರು ನಗರದಲ್ಲಿ ಧೂಳಿನ ಕಣಗಳು ಗಣನೀಯವಾಗಿ ಇಳಿಕೆಯಾಗಿ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 45 ರಿಂದ 65ರ ನಡುವೆ ದಾಖಲಾಗಿದೆ. ಇದು ಆರೋಗ್ಯಕರ ವಾತಾವರಣವನ್ನು ಸೂಚಿಸುತ್ತದೆ.

ನಗರದ ಪ್ರಮುಖ ಪ್ರದೇಶಗಳಲ್ಲಿ ಸಿಲ್ಕ್ ಬೋರ್ಡ್ ಹಾಗೂ ಮೆಜೆಸ್ಟಿಕ್ ಭಾಗಗಳಲ್ಲಿ ವಾಹನ ದಟ್ಟಣೆಯ ಕಾರಣದಿಂದ AQI ಸ್ವಲ್ಪ ಹೆಚ್ಚಾಗಿ 60–70ರ ನಡುವೆ ದಾಖಲಾಗಿದ್ದು, ಜಯನಗರ ಮತ್ತು ಮಲ್ಲೇಶ್ವರಂ ಪ್ರದೇಶಗಳಲ್ಲಿ ಹಸಿರು ವಲಯ ಹೆಚ್ಚಿರುವ ಕಾರಣ AQI 35–45ರಷ್ಟಿದೆ. ಹೂಡಿ ಮತ್ತು ವೈಟ್‌ಫೀಲ್ಡ್ ಪ್ರದೇಶಗಳಲ್ಲಿ AQI 50–62ರ ನಡುವೆ ದಾಖಲಾಗಿದೆ.

ರಾಜ್ಯದ ಇತರೆ ನಗರಗಳಲ್ಲಿಯೂ ವಾಯು ಗುಣಮಟ್ಟ ಉತ್ತಮ ಸ್ಥಿತಿಯಲ್ಲಿದ್ದು, ಮೈಸೂರು ನಗರದಲ್ಲಿ 30–40, ಮಂಗಳೂರು 35–45, ಹುಬ್ಬಳ್ಳಿ-ಧಾರವಾಡ 50–60 ಹಾಗೂ ಕಲಬುರಗಿಯಲ್ಲಿ 65–75ರಷ್ಟು AQI ದಾಖಲಾಗಿದೆ.

ಸಾಮಾನ್ಯವಾಗಿ 0–50 AQI ಅನ್ನು ‘ಅತ್ಯಂತ ಉತ್ತಮ’ ಹಾಗೂ 51–100 ಅನ್ನು ‘ಸಮಾಧಾನಕರ’ ಎಂದು ಪರಿಗಣಿಸಲಾಗುತ್ತದೆ. ಸದ್ಯಕ್ಕೆ ರಾಜ್ಯದಲ್ಲಿ ವಾಯು ಮಾಲಿನ್ಯದಿಂದ ಯಾವುದೇ ಆರೋಗ್ಯ ತುರ್ತು ಪರಿಸ್ಥಿತಿ ಇಲ್ಲ ಎಂದು ವರದಿ ತಿಳಿಸಿದೆ.

RCB ಗೋಲ್ಡನ್ ಯುಗ: 3 ವರ್ಷಗಳಲ್ಲಿ 4 ಟ್ರೋಫಿಗಳ ಭರ್ಜರಿ ಸಾಧನೆ!

ಭಾರತೀಯ ಟಿ20 ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಗೆಲುವಿನ ಅಧ್ಯಾಯ ಮತ್ತೊಮ್ಮೆ ವಿಸ್ತರಿಸಿದೆ.

2024ರಿಂದ ಆರಂಭವಾದ ಈ ಸುವರ್ಣ ಯುಗದಲ್ಲಿ ಕೇವಲ ಮೂರು ವರ್ಷಗಳ ಅವಧಿಯಲ್ಲಿ ಆರ್ಸಿಬಿ ಒಟ್ಟು 4 ಟ್ರೋಫಿಗಳನ್ನು ಗೆದ್ದು ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

2024ರಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ (WPL)ನಲ್ಲಿ ಸ್ಮೃತಿ ಮಂಧಾನ ನೇತೃತ್ವದ ಆರ್ಸಿಬಿ ಮಹಿಳಾ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಫ್ರಾಂಚೈಸಿಗೆ ಮೊದಲ ಟ್ರೋಫಿ ತಂದುಕೊಟ್ಟಿತು. ಇದು ಆರ್ಸಿಬಿಯ ಯಶಸ್ಸಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು.

2025ರಲ್ಲಿ ನಡೆದ ಐಪಿಎಲ್‌ನಲ್ಲಿ 17 ವರ್ಷಗಳ ನಿರೀಕ್ಷೆಗೆ ಅಂತ್ಯವಿಟ್ಟು, ರಜತ್ ಪಾಟಿದಾರ್ ನೇತೃತ್ವದ ಪುರುಷರ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಮೊದಲ ಐಪಿಎಲ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು.

2026ರಲ್ಲಿ ಆರ್ಸಿಬಿ ಮಹಿಳಾ ತಂಡ ಮತ್ತೆ ಮಿಂಚಿ, ಫೆಬ್ರವರಿಯಲ್ಲಿ ನಡೆದ ರೋಮಾಂಚಕ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದಾಖಲೆಯ ರನ್ ಚೇಸ್ ಮೂಲಕ ಎರಡನೇ WPL ಕಪ್ ಗೆದ್ದುಕೊಂಡಿತು.

ಇದೇ ವರ್ಷದ ಐಪಿಎಲ್ ಸೀಸನ್‌ನಲ್ಲೂ ಆರ್ಸಿಬಿ ಪುರುಷರ ತಂಡ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಬ್ಯಾಕ್ ಟು ಬ್ಯಾಕ್ ಟ್ರೋಫಿ ಜಯದೊಂದಿಗೆ ಹೊಸ ದಾಖಲೆ ನಿರ್ಮಿಸಿದೆ.

ಈ ಮೂಲಕ ಕೇವಲ ಮೂರು ವರ್ಷಗಳಲ್ಲಿ 4 ಟ್ರೋಫಿಗಳ ಸಾಧನೆಯೊಂದಿಗೆ ಆರ್ಸಿಬಿ ತನ್ನ ಫ್ರಾಂಚೈಸಿ ಇತಿಹಾಸದಲ್ಲಿ ‘ಗೋಲ್ಡನ್ ಏರಾ’ ಆರಂಭಿಸಿದೆ.

ಕರ್ನಾಟಕದಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಾರುತಗಳು ಹಾಗೂ ಚಂಡಮಾರುತದ ಪ್ರಭಾವ ಹೆಚ್ಚಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಶೇಷವಾಗಿ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿಯೂ ಬೀಸುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.

ಶಿವಮೊಗ್ಗ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ಉಳಿದ ಭಾಗಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಕೆಲವು ಸ್ಥಳಗಳಲ್ಲಿ ಹಗುರ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಯಾದಗಿರಿ, ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.

ಮಳೆ ಹಾಗೂ ಬಿರುಗಾಳಿ ಸಂದರ್ಭಗಳಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು ಎಂದು ಹವಾಮಾನ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಇಲಾಖೆ ಸೂಚನೆ ನೀಡಿದೆ. ಗುಡುಗು-ಮಿಂಚಿನ ಸಮಯದಲ್ಲಿ ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲದಂತೆ ಎಚ್ಚರಿಕೆ ನೀಡಲಾಗಿದೆ.

“ಈ ಸಲವೂ ಕಪ್ ನಮ್ದೇ! RCBಗೆ ಸತತ 2ನೇ ಐಪಿಎಲ್ ಕಿರೀಟ

ಬೌಲರ್‌ಗಳ ಶಿಸ್ತುಬದ್ಧ ಮಾರಕ ದಾಳಿ ಹಾಗೂ ರನ್‌ ಮಷಿನ್ ವಿರಾಟ್ ಕೊಹ್ಲಿಯ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇತಿಹಾಸ ನಿರ್ಮಿಸಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ಧೂಳೀಪಟ ಮಾಡಿದ RCB ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಮುಂಬೈ ಇಂಡಿಯನ್ಸ್ (MI) ನಂತರ ಸತತ ಎರಡು ಬಾರಿ ಟ್ರೋಫಿ ಗೆದ್ದ ಮೂರನೇ ತಂಡ ಎಂಬ ಗೌರವಕ್ಕೂ RCB ಪಾತ್ರವಾಗಿದೆ. ಈ ಐತಿಹಾಸಿಕ ಗೆಲುವಿನ ನಂತರ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳಲ್ಲಿ ಸಂಭ್ರಮದ ಹೊಳೆ ಹರಿದಿದ್ದು, “ಈ ಸಲವೂ ಕಪ್ ನಮ್ದೇ” ಎಂಬ ಘೋಷಣೆ ಎಲ್ಲೆಡೆ ಮೊಳಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್, RCB ಬೌಲರ್‌ಗಳ  ದಾಳಿಗೆ ನಲುಗಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್‌ಗಳ ಸಾಧಾರಣ ಮೊತ್ತಕ್ಕೆ ಸೀಮಿತವಾಯಿತು.

ಗುರಿ ಬೆನ್ನಟ್ಟಿದ RCB 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಜಯ ಸಾಧಿಸಿತು.

ಕೊಹ್ಲಿಯ ಮಾಸ್ಟರ್ ಕ್ಲಾಸ್ ಇನ್ನಿಂಗ್ಸ್:

ಈ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ಕೇಂದ್ರಬಿಂದು. ಆರಂಭಿಕ ಆಟಗಾರನಾಗಿ ಕ್ರೀಸ್‌ಗೆ ಇಳಿದ ಕೊಹ್ಲಿ ಮೊದಲ ಓವರ್‌ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. 42 ಎಸೆತಗಳಲ್ಲಿ ಅಜೇಯ 75 ರನ್ (9 ಬೌಂಡರಿ, 3 ಸಿಕ್ಸರ್) ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ವೆಂಕಟೇಶ್ ಅಯ್ಯರ್ ಕೂಡ ಭರ್ಜರಿ ಆರಂಭ ನೀಡಿದರು. ಅಯ್ಯರ್ ಮತ್ತು ಕೊಹ್ಲಿ ಮೊದಲ ವಿಕೆಟ್‌ಗೆ 27 ಎಸೆತಗಳಲ್ಲಿ 62 ರನ್ ಜೊತೆಯಾಟವಾಡಿದರು. ಅಯ್ಯರ್ 16 ಎಸೆತಗಳಲ್ಲಿ 32 ರನ್ ಗಳಿಸಿ ಔಟಾದರು. ದೇವದತ್ ಪಡಿಕ್ಕಲ್ ಕೇವಲ 1 ರನ್‌ಗೆ ನಿರಾಸೆ ಮೂಡಿಸಿದರು.

ರಶೀದ್ ಖಾನ್ ಒಂದೇ ಓವರ್‌ನಲ್ಲಿ ರಜತ್ ಪಟೀದಾರ್ ಮತ್ತು ಕೃನಾಲ್ ಪಾಂಡ್ಯ ಅವರನ್ನು ಔಟ್ ಮಾಡಿ ಪಂದ್ಯಕ್ಕೆ ತಿರುವು ನೀಡಲು ಯತ್ನಿಸಿದರೂ, ಕೊಹ್ಲಿ ಸ್ಥಿರತೆಯಿಂದ ಆಟವನ್ನು ಹಿಡಿದಿಟ್ಟರು. ಟಿಮ್ ಡೇವಿಡ್ ಜೊತೆಗೂಡಿ 41 ರನ್‌ಗಳ ಮಹತ್ವದ ಜೊತೆಯಾಟವಾಡಿ ತಂಡವನ್ನು ಗೆಲುವಿನ ಹಾದಿಗೆ ಕರೆದೊಯ್ದರು.

ಪ್ರಮಾಣವಚನದ ದಿನವೇ ಕಾಂಗ್ರೆಸ್ ಭವನಕ್ಕೆ ಗುದ್ದಲಿ ಪೂಜೆಗೆ ಡಿಕೆಶಿ ಪ್ಲಾನ್!

ಬೆಂಗಳೂರು: ಮುಖ್ಯಮಂತ್ರಿ ಪದಗ್ರಹಣದ ದಿನವೇ ಕಾಂಗ್ರೆಸ್ ಪಕ್ಷದ ನೂತನ ಕಚೇರಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿದ್ಧತೆ ನಡೆಸಿದ್ದಾರೆ.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನವನ್ನು ಸಂಪೂರ್ಣವಾಗಿ ಹೊಸದಾಗಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಪ್ರಮಾಣವಚನ ಸ್ವೀಕಾರದ ನಂತರ ಅದೇ ಸಂಜೆ ರಾಹುಲ್ ಗಾಂಧಿ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸುವ ಯೋಜನೆ ರೂಪಿಸಲಾಗಿದೆ.

ಇದಕ್ಕೂ ಮುನ್ನ ರೇಸ್ ಕೋರ್ಸ್ ರಸ್ತೆಯ ಸ್ಥಳಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್, ಅಧಿಕಾರಿಗಳೊಂದಿಗೆ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು. ಕುರ್ಚಿಗಳ ವ್ಯವಸ್ಥೆ, ವೇದಿಕೆ ರೂಪುರೇಷೆ ಹಾಗೂ ಪ್ರಮಾಣವಚನ ಸಮಾರಂಭದ ನೇರ ಪ್ರಸಾರದ ವ್ಯವಸ್ಥೆ ಕುರಿತು ಸೂಚನೆಗಳನ್ನು ನೀಡಿದರು.

ರಾಜ್ಯದಾದ್ಯಂತ 100 ಕಾಂಗ್ರೆಸ್ ಕಚೇರಿಗಳನ್ನು ನಿರ್ಮಿಸುವ ಗುರಿಯೂ ಹೊಂದಲಾಗಿದ್ದು, ಅವುಗಳ ಶಂಕುಸ್ಥಾಪನೆ ಮುಂದಿನ ಹಂತದಲ್ಲಿ ನಡೆಯಲಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ನಿರಂತರ ಮಳೆಗೆ ಕಾಂಪೌಂಡ್ ಕುಸಿದು ಇಬ್ಬರು ಕಾರ್ಮಿಕರು ದುರ್ಮರಣ!

ನೆಲಮಂಗಲ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬೆಂಗಳೂರು ಉತ್ತರ ತಾಲೂಕಿನ ಬೊಮ್ಮಶಟ್ಟಿಹಳ್ಳಿ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ.

ಮಳೆಯ ಪರಿಣಾಮ ಕಾಂಪೌಂಡ್ ಗೋಡೆ ಕುಸಿದು ಇಬ್ಬರು ಕಾರ್ಮಿಕರು ದುರ್ಮರಣ ಹೊಂದಿದ್ದಾರೆ. ಮೃತರನ್ನು ದ್ಯಾಮಪ್ಪ ಮತ್ತು ಬಾಬುಲಾಲ್ ಎಂದು ಗುರುತಿಸಲಾಗಿದೆ.

ಘಟನೆಯು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ. ನಿರಂತರ ಮಳೆಯಿಂದಾಗಿ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಯಾರೂ ಹೂವಿನ ಹಾರ ತರಬೇಡಿ: ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಮನವಿ!

ಬೆಂಗಳೂರು: ನನಗೆ ಯಾರೂ ಹೂವಿನ ಹಾರ ಹಾಕಬೇಡಿ ಎಂದು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರ ಉತ್ಸಾಹವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ವಿವಿಧ ಕಾರಣಗಳಿಂದ ಪ್ರಮಾಣ ವಚನ ಸಮಾರಂಭಕ್ಕೆ ಹೆಚ್ಚು ಜನರನ್ನು ಆಹ್ವಾನಿಸಲು ಸಾಧ್ಯವಾಗುವುದಿಲ್ಲ. ಹೊರಗಡೆ ಬಂದು ನೋಡಿದರೂ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.

“ಯಾರೂ ನನಗೆ ಹೂವಿನ ಹಾರ ಹಾಕಬೇಡಿ. ನನಗೆ ಅಲರ್ಜಿ ಸಮಸ್ಯೆ ಇದೆ. ಕೆಲ ಹೂವಿನ ಹಾರಗಳಲ್ಲಿ ಇರುವ ಪರಾಗಧೂಳು ಹಾಗೂ ಸುಗಂಧದಿಂದ ಚರ್ಮದಲ್ಲಿ ತೊಂದರೆ ಉಂಟಾಗುತ್ತದೆ. ಆದ್ದರಿಂದ ಯಾವ ಹೂವಿನ ಹಾರವೂ ತರಬೇಡಿ ಎಂದು ನಾನು ಮನವಿ ಮಾಡಿದ್ದೇನೆ,” ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಅತಿಯಾದ ಹಾರ-ತೋರಣಗಳನ್ನು ತಪ್ಪಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಕೂಡ ಅವರು ಹೇಳಿದರು.

ನೆಲಮಂಗಲದಲ್ಲಿ ಸರಣಿ ಅಪಘಾತ: ಬೈಕ್ ತಪ್ಪಿಸಲು ಹೋಗಿ 4 ಕಾರುಗಳ ನಡುವೆ ಡಿಕ್ಕಿ!

ಬೆಂಗಳೂರು: ನಾಲ್ಕು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ನೆಲಮಂಗಲ ನಗರದ ಅರಿಶಿನಕುಂಟೆ ಫ್ಲೈ ಓವರ್ ಮೇಲೆ ಜರುಗಿದೆ.

ಬೈಕ್ ಡಿಕ್ಕಿ ತಪ್ಪಿಸಲು ಹೋಗಿ ನಾಲ್ಕು ಕಾರುಗಳ ನಡುವೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆಯಿಂದ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ವೀಕೆಂಡ್ ಹಿನ್ನೆಲೆಯಲ್ಲಿ ಬೇರೆಡೆಗೆ ತೆರಳಿದ್ದವರು ಬೆಂಗಳೂರು ಕಡೆ ಬರುವಾಗ ಈ ಅಪಘಾತ ಸಂಭವಿಸಿದೆ. ಘಟನೆ ಬೆನ್ನಲ್ಲೇ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಾಜಿನ ಬಳೆಗಳ ಮಹತ್ವ ಏನು? ಸಂಪ್ರದಾಯದಿಂದ ಆರೋಗ್ಯದವರೆಗೆ ಹಲವು ಪ್ರಯೋಜನಗಳು

ಹೆಂಗಳೆಯರಿಗೆ ಬಳೆಗಳು ಕೇವಲ ಅಲಂಕಾರವಲ್ಲ, ನಮ್ಮ ಸಂಪ್ರದಾಯದಲ್ಲಿ ಅವುಗಳಿಗೆ ವಿಶೇಷ ಸ್ಥಾನವಿದೆ. ವಿವಾಹಿತ ಮಹಿಳೆಯರು ಬಳೆಗಳನ್ನು ಧರಿಸುವುದು ವೈವಾಹಿಕ ಜೀವನದ ಸಂಕೇತವಾಗಿದ್ದು, ಸಿಂಧೂರ ಮತ್ತು ಮಂಗಳಸೂತ್ರದಂತೆಯೇ ಇದನ್ನೂ ಪವಿತ್ರತೆಯ ಗುರುತಾಗಿ ಪರಿಗಣಿಸಲಾಗುತ್ತದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ ಗಾಜಿನ ಬಳೆಗಳ ಝಣಝಣ ಶಬ್ದವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ ಎಂದು ನಂಬಿಕೆ ಇದೆ. ಜೊತೆಗೆ ಇದು ಸೌಭಾಗ್ಯದ ಸಂಕೇತವಾಗಿಯೂ ಪರಿಗಣಿಸಲಾಗಿದೆ.

ಗಾಜಿನ ಬಳೆಗಳ ಆರೋಗ್ಯ ಪ್ರಯೋಜನಗಳು:

ರಕ್ತ ಸಂಚಲನ ಸುಧಾರಣೆ:
ಬಳೆಗಳನ್ನು ಧರಿಸುವಾಗ ಕೈಮಣಿಕಟ್ಟಿನ ಚರ್ಮದೊಂದಿಗೆ ಉಂಟಾಗುವ ಸಣ್ಣ ಘರ್ಷಣೆ ರಕ್ತ ಸಂಚಲನವನ್ನು ಉತ್ತಮಗೊಳಿಸುತ್ತದೆ ಎಂದು ಹೇಳಲಾಗುತ್ತದೆ.

ಸಕಾರಾತ್ಮಕ ಶಕ್ತಿ:
ಚಿನ್ನ, ಬೆಳ್ಳಿ ಮತ್ತು ಗಾಜಿನ ಬಳೆಗಳು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಗಾಜಿನ ಬಳೆಗಳ ಶಬ್ದವು ಮನೆಯ ವಾತಾವರಣದಲ್ಲಿ ಹಿತಕರ ಶಕ್ತಿ ಹರಡುವಂತೆ ಮಾಡುತ್ತದೆ ಎಂದು ಪರಿಗಣಿಸಲಾಗುತ್ತದೆ.

ಮಾನಸಿಕ ಸಮತೋಲನ:
ಬಳೆಗಳ ಶಬ್ದವು ಮನಸ್ಸಿಗೆ ಶಾಂತಿ ನೀಡುತ್ತದೆ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಹಾಗೂ ನಕಾರಾತ್ಮಕ ಆಲೋಚನೆಗಳನ್ನು ಕಡಿಮೆ ಮಾಡುತ್ತದೆ ಎಂಬ ಅಭಿಪ್ರಾಯವಿದೆ.

ಹಾರ್ಮೋನು ಸಮತೋಲನ:
ಕೆಲವು ನಂಬಿಕೆಗಳ ಪ್ರಕಾರ, ಬಳೆಗಳನ್ನು ಧರಿಸುವುದು ಮಹಿಳೆಯ ಹಾರ್ಮೋನು ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಭಾವನಾತ್ಮಕ ಸ್ಥಿರತೆ:
ಬಳೆಗಳ ಝಣಝಣ ಶಬ್ದವು ಏಕಾಗ್ರತೆಯನ್ನು ಹೆಚ್ಚಿಸಿ ಭಾವನಾತ್ಮಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಎಂಬ ಮಾತುಗಳು ಸಹ ಇವೆ.

ಆಯಾಸ ಕಡಿತ:
ಬಳೆಗಳಿಂದ ಉಂಟಾಗುವ ಸಣ್ಣ ಚಲನೆ ಮತ್ತು ಘರ್ಷಣೆ ದೇಹದಲ್ಲಿ ಶಕ್ತಿಯ ಹರಿವು ಹೆಚ್ಚಿಸಿ ಆಯಾಸವನ್ನು ಕಡಿಮೆ ಮಾಡುತ್ತದೆ ಎಂದು ನಂಬಿಕೆ ಇದೆ.

ಒಟ್ಟಿನಲ್ಲಿ, ಗಾಜಿನ ಬಳೆಗಳು ಸಂಪ್ರದಾಯ, ನಂಬಿಕೆ ಹಾಗೂ ಸಾಂಸ್ಕೃತಿಕ ಮಹತ್ವದ ಜೊತೆಗೆ ಮಹಿಳೆಯ ಅಲಂಕಾರದಲ್ಲಿ ವಿಶೇಷ ಸ್ಥಾನ ಪಡೆದಿವೆ.

ಸತೀಶ್ ಜಾರಕಿಹೊಳಿ ವಿರುದ್ಧ ಸುಳ್ಳು ಪೋಸ್ಟ್; ದಾಖಲಾಯ್ತು ಕೇಸ್!

ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹರಡಿದ ಆರೋಪದಡಿ ಬೆಳಗಾವಿ ಜಿಲ್ಲಾ ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕರುನಾಡ ಕುರುಬ ಗೌಡ್ರು’ ಹೆಸರಿನ ಮುಖಪುಟ ಖಾತೆಯಲ್ಲಿ ಪ್ರಕಟವಾದ ಪೋಸ್ಟ್‌ನಲ್ಲಿ, ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದ್ರೋಹ ಮಾಡಿದ್ದಾರೆ ಹಾಗೂ ಅವರ ವಿರುದ್ಧ 37 ಶಾಸಕರ ಸಹಿ ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಮಾಹಿತಿ ಸಂಪೂರ್ಣ ಸುಳ್ಳಾಗಿದ್ದು, ಸಚಿವರ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಇಂತಹ ಆರೋಪಗಳನ್ನು ಸೃಷ್ಟಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಈ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಮತ್ತು ಅಶಾಂತಿ ಉಂಟುಮಾಡುವ ಪ್ರಯತ್ನ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

error: Content is protected !!