Home Blog

ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR: ಆರೋಪ ಏನು?

ಬೆಂಗಳೂರು: ಬೆದರಿಕೆ ಮತ್ತು ನಿಂದನೆ ಆರೋಪದಡಿ ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ವಿರುದ್ಧ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಎಂಬುವವರು ನೀಡಿದ ದೂರು ಆಧಾರದ ಮೇಲೆ BNS 351(2), 352 ಸೆಕ್ಷನ್ ಅಡಿ ರಜತ್ ಮತ್ತು ಕಿರಣ್ ವಿರುದ್ಧ ಪ್ರಕರಣ ದಾಖಲಾಗಿದ್ದು, ರಜತ್ ಎ1, ಎ2 ಆರೋಪಿ ಕಿರಣ್ ಎಂಬುವರನ್ನ ಮಾಡಲಾಗಿದೆ.

ಫೋನ್ ಕರೆ ಮುಖಾಂತರ ಬೆದರಿಕೆ ಹಾಕಿರೋ ಆರೋಪ ಮಾಡಿ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಡಾಗ್ ಸತೀಶ್ ಸ್ನೇಹವನ್ನು ಬಿಡಬೇಕೆಂದು ಬೆದರಿಕೆ ಹಾಕಿದ್ದಾರೆ. ದೂರುದಾರರ ಕಾರಿನ ಪೋಟೋ ಕಳಿಸಿ ಮೆಸೇಜ್ ಮೂಲಕ ಇದು ರಜತ್‌ ಬುಜ್ಜಿ… ಕಾಲ್‌ ಮಾಡ್ತಾ ಇದೀನಿ.. ವಾಪಸ್‌ ಕಾಲ್‌ ಮಾಡ್ತೀರಾ? ಇಲ್ವಾ ನಾವೇ ಒಳಗೆ ಹಾಕಿಸಬೇಕಾ ಎಂದು ಬೆದರಿಕೆ ಹಾಕಲಾಗಿದೆ.

ಅಷ್ಟೇ ಅಲ್ಲದೆ ಕಾನ್ಫರೆನ್ಸ್ ಕಾಲ್‌ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಸದ್ಯ ಕರೆಯಲ್ಲಿ ಮಾತನಾಡಿರೋದು ರಜತ್ ಅಥವಾ ಬೇರೆ ವ್ಯಕ್ತಿ ಎಂಬುವುದರ ಪರಿಶೀಲನೆ ನಡೆಸಲಾಗುತ್ತಿದೆ.

ಸದ್ಯ, ಕರೆ ಮಾಡಿದವರು ರಜತ್ ಎಂದು ಖಚಿತಪಡಿಸಲು ತನಿಖೆ ನಡೆಯುತ್ತಿದೆ. ಕೆ.ಆರ್. ಪುರಂ ಪೊಲೀಸರು ರಜತ್ ಮತ್ತು ಕಿರಣ್ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ಮೂಲಕ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗಂಟಲು ನೋವು, ತೂಕ ನಷ್ಟ, ಕಿವಿ ನೋವು ಬರುತ್ತಾ? ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಯಾಕೆ ಗೊತ್ತಾ?

0

ಸ್ವ-ಔಷಧಿ ಬಳಕೆ ಹೆಚ್ಚುತ್ತಿದ್ದು, ಗಂಟಲು ನೋವು ಅಥವಾ ತೀವ್ರ ಗಂಟಲು ಸಮಸ್ಯೆಗಳಿಗೆ ಮನೆಮದ್ದುಗಳು ಅಥವಾ ತಾವೇ ಔಷಧಿ ಬಳಸುತ್ತಿರುವುದರಿಂದ ಗಂಭೀರ ಸಮಸ್ಯೆ ನಿರ್ಲಕ್ಷಿಸಲಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಕೆಲವೊಂದು ಗಂಟಲು ಸಮಸ್ಯೆಗಳು ಗಂಟಲು ಕ್ಯಾನ್ಸರ್ ಆರಂಭದ ಲಕ್ಷಣಗಳಾಗಿರಬಹುದು.

ತಜ್ಞರ ಪ್ರಕಾರ, ಎಂಜಲು ನುಂಗಲು ತೊಂದರೆ, ಕುತ್ತಿಗೆಯಲ್ಲಿ ಗಡ್ಡೆ ಅಥವಾ ಊತ, ಗಂಟಲು ನೋವು, 2–3 ವಾರಕ್ಕಿಂತ ಹೆಚ್ಚು ಇರುವ ಗಂಟಲು ಒರಟಾಗುವಿಕೆ, ವಿವರಿಸಲಾಗದ ತೂಕ ನಷ್ಟ ಅಥವಾ ಕಿವಿ ನೋವು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಜಾಗರೂಕರಾಗಬೇಕಾದವರು: ತಂಬಾಕು ಬಳಕೆದಾರರು, ಮದ್ಯಪಾನ ಸೇವಕರು, HPV ಸೋಂಕಿಗೆ ಒಳಗಾದವರು, ಕೆಟ್ಟ ಮೌಖಿಕ ನೈರ್ಮಲ್ಯ ಹೊಂದಿರುವವರು ಮತ್ತು ರಾಸಾಯನಿಕ ವಾತಾವರಣದಲ್ಲಿ ಕೆಲಸ ಮಾಡುವವರು.

ತುಂಬಾ ಸೇವನೆಯಾದ ತಂಬಾಕು ಮತ್ತು ಮದ್ಯಪಾನ ತ್ಯಜಿಸುವುದು, ಉತ್ತಮ ಮೌಖಿಕ ನೈರ್ಮಲ್ಯ ಕಾಪಾಡಿಕೊಳ್ಳುವುದು, HPV ಲಸಿಕೆ ಪಡೆಯುವುದು, ಹಾಗೂ ಗಂಭೀರ ಲಕ್ಷಣಗಳಿಗೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯ. ಆರಂಭಿಕ ಪತ್ತೆ ಮತ್ತು ತ್ವರಿತ ಚಿಕಿತ್ಸೆ ಹಲವಾರು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

T20 ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ವಿಶ್ವ ದಾಖಲೆ ಬರೆದ ಭಾರತ-ಇಂಗ್ಲೆಂಡ್ ಪಂದ್ಯ!

0

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 2026 ರ ಟಿ20 ವಿಶ್ವಕಪ್ ಎರಡನೇ ಸೆಮಿಫೈನಲ್ ಪಂದ್ಯವು ಕ್ರಿಕೆಟ್ ಇತಿಹಾಸದಲ್ಲಿ ಹಲವಾರು ದಾಖಲೆಗಳಿಗೆ ಸಾಕ್ಷಿಯಾಗಿದೆ.

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಒಟ್ಟಾರೆಯಾಗಿ 499 ರನ್‌ಗಳ ಅತಿ ಹೆಚ್ಚು ಮೊತ್ತ ಕಲೆಹಾಕಿ, ಟಿ20 ವಿಶ್ವಕಪ್‌ನ ನಾಕೌಟ್ ಸುತ್ತಿನಲ್ಲಿ ಭಾರತೀಯ ತಂಡದ ಅತಿದೊಡ್ಡ ಸ್ಕೋರ್ ದಾಖಲೆ ನಿರ್ಮಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 253 ರನ್ ಗಳಿಸಿತು. ಈ ಮೂಲಕ ಟೀಂ ಇಂಡಿಯಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ನಾಕೌಟ್ ಸುತ್ತಿನಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ದಾಖಲೆಯನ್ನು ಬರೆಯಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೂಡ ಗೆಲುವಿಗಾಗಿ ಹೋರಾಟ ನಡೆಸಿತ್ತಾದರೂ 246 ರನ್‌ಗಳಿಸಲಷ್ಟೇ ಶಕ್ತವಾಗಿ 7 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ಈ ಪಂದ್ಯ ರನ್​ಗಳ ವಿಚಾರದಲ್ಲಿ ದಾಖಲೆ ಬರೆಯುವುದರ ಜೊತೆಗೆ ವೀಕ್ಷಣೆಯ ವಿಚಾರದಲ್ಲೂ ವಿಶ್ವದಾಖಲೆ ನಿರ್ಮಿಸಿದೆ.. ಐಸಿಸಿ ಅಧ್ಯಕ್ಷ ಜಯ್ ಶಾ ಪ್ರಕಟಿಸಿರುವಂತೆ, ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಪಂದ್ಯವನ್ನು 65.2 ಮಿಲಿಯನ್ ವೀಕ್ಷಕರು ವೀಕ್ಷಿಸಿದ್ದಾರೆ. ಇದು 2024 ರ ಯುನೈಟೆಡ್ ಸ್ಟೇಟ್ಸ್ ಪಂದ್ಯದಲ್ಲಿ ನಿರ್ಮಿಸಿದ ದಾಖಲೆಯನ್ನು ಮುರಿದಿದೆ’ ಎಂದು ಬರೆದುಕೊಂಡಿದ್ದಾರೆ..

ಟೀಂ ಇಂಡಿಯಾ 19 ಸಿಕ್ಸರ್‌ಗಳನ್ನು, ಇಂಗ್ಲೆಂಡ್ 15 ಸಿಕ್ಸರ್‌ಗಳನ್ನು ಬಾರಿಸಿ, ಒಟ್ಟಾರೆ 34 ಸಿಕ್ಸರ್‌ಗಳೊಂದಿಗೆ ಅತಿ ಹೆಚ್ಚು ಸಿಕ್ಸರ್ ದಾಖಲೆ ನಿರ್ಮಿಸಿತು. ಜೊತೆಗೆ, ಒಟ್ಟು 73 ಬೌಂಡರಿಗಳೊಂದಿಗೆ ಈ ಪಂದ್ಯವು ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಬೌಂಡರಿಗಳ ದಾಖಲೆ ಕೂಡ ನಿರ್ಮಿಸಿತು. ಹೀಗಾಗಿ, 2026 ರ ಸೆಮಿಫೈನಲ್ ಟಿ20 ಕ್ರಿಕೆಟ್ ಐತಿಹಾಸಿಕ ಕ್ಷಣಗಳಲ್ಲಿ ಒಂದಾಗಿ ಉಳಿಯಲಿದೆ.

 

ರಾಯಚೂರು: 700 ಕುರಿಗಳ ಶೆಡ್ ಬೆಂಕಿಗಾಹುತಿ – 2 ಕೋಟಿ ರೂ. ನಷ್ಟ!

ರಾಯಚೂರು: ಸಿಂಧನೂರು ತಾಲ್ಲೂಕಿನ ಮುಕ್ಕುಂದ ಗ್ರಾಮದ ಹೊರ ಭಾಗದಲ್ಲಿ 700 ಕುರಿಗಳ ಶೆಡ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ನಿನ್ನೆ ರಾತ್ರಿ 2:30 ಗಂಟೆಗೆ ಬೆಂಕಿ ತಗುಲಿದ್ದು, ಇಡೀ ಶೆಡ್ ಸುಟ್ಟು ಕರಕಲಾಗಿವೆ‌‌. ಇನ್ನೇನು ಕೆಲವೇ ದಿನಗಳಲ್ಲಿ ಮರಿ ಹಾಕಬೇಕಿದ್ದ ಕುರಿಗಳು ಗರ್ಭದಲ್ಲಿರುವ ಮರಿ ಸಮೇತ ಸುಟ್ಟುಹೋಗಿವೆ.

ಹೇಮಲತಾ ಮಧುಸೂದನ್ ಎನ್ನುವವರು ಸುಮಾರು 1 ಕೋಟಿ ರೂ ವೆಚ್ಚದಲ್ಲಿ ಶೆಡ್ ನಿರ್ಮಿಸಿದ್ದರು. ಇದರ 47 ಲಕ್ಷ ರೂ ಕೇಂದ್ರ ಸರ್ಕಾರದ ಸಬ್ಸಿಡಿ ಸಹಿತ, ಉಳಿದ ಹಣವನ್ನು ಸಾಲದಿಂದ ಭರಿಸಿದ್ದಾರೆ. ಶೆಡ್‌ನಲ್ಲಿ ಸುಮಾರು 700 ಕುರಿಗಳನ್ನು ಸಾಕಾಣಿಕೆ ಮಾಡಲಾಗುತ್ತಿತ್ತು, 6 ಕಾರ್ಮಿಕರು ಅವುಗಳ ಆರೈಕೆಗೆ ನಿಯೋಜಿತರಾಗಿದ್ದರು.

ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಮತ್ತು ಸ್ಥಳೀಯರ ಸಹಾಯದಿಂದ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ. ಶೆಡ್​ನಲ್ಲಿ 700ಕ್ಕೂ ಹೆಚ್ಚು ಕುರಿಗಳ ಪೈಕಿ 525 ಕುರಿಗಳಿಗೆ ವಿಮೆ ಇದೆ.  ಅವಘಡದಿಂದ ಸುಮಾರು 2 ಕೋಟಿ ರೂ. ನಷ್ಟ ಸಂಭವಿಸಿದ್ದು, ಶೆಡ್ ಮಾಲೀಕರ ಸಂಬಂಧಿ ಪದ್ಮಾನಾಯ್ಡು ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಮುಂದುವರಿಯುತ್ತಿದೆ.

 

ವಾಕಿಂಗ್ ಹೋದ ಮಹಿಳೆಗೆ ಆಪತ್ತು: 25 ಅಡಿ ಗುಂಡಿಗೆ ಬಿದ್ದು ಪರದಾಟ, ಪತ್ತೆ ಮಾಡಿದ್ದು ಹೇಗೆ ಗೊತ್ತಾ!?

ಬೆಂಗಳೂರು: ವಾಕಿಂಗ್ ಹೋಗಿದ್ದ 56 ವರ್ಷದ ಮಹಿಳೆ ನಗರದಲ್ಲಿನ ನಾಗರಭಾವಿ ಪಾರ್ಕ್ ಸಮೀಪದ ಸುಮಾರು 25 ಅಡಿ ಆಳದ ಗುಂಡಿಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ವೇಳೆ, ಚಂದ್ರಲೇಔಟ್ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

ಮಹಿಳೆ ಮನೆಗೆ ಸಮಯಕ್ಕೆ ಮರಳದಿರುವುದರಿಂದ ಮಗ ಆತಂಕಗೊಂಡು 112 ಸಹಾಯವಾಣಿಗೆ ಕರೆ ಮಾಡಿದ. ಪೊಲೀಸರು ಮಹಿಳೆಯ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿ ಪಾರ್ಕ್ ಬಳಿ ಹುಡುಕಾಟ ನಡೆಸಿದ್ದು, ಸ್ಥಳೀಯ ಸಾರ್ವಜನಿಕರ ಸಹಾಯದಿಂದ 25 ಅಡಿ ಆಳದ ಗುಂಡಿಯಿಂದ ಮಹಿಳೆಯನ್ನು ಮೇಲಕ್ಕೆತ್ತಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಗುಂಡಿ ಅಗೆದು ಹಾಗೆ ಬಿಟ್ಟಿರುವವರು ಯಾರು ಎಂಬುದನ್ನು ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರೋಚಕ ಕಾರ್ಯಚರಣೆ ಹಾಗೂ ಪೊಲೀಸರು ತೋರಿದ ತ್ವರಿತ ಪ್ರತಿಭಾವಂತಿಕೆಯನ್ನು ಕುಟುಂಬದವರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ತಲೆ ಸ್ನಾನದ ವೇಳೆ ಮಾಡುವ ಸಾಮಾನ್ಯ ತಪ್ಪುಗಳು ಕೂದಲು ಬೇರು ದುರ್ಬಲಗೊಳಿಸುತ್ತವೆ!

0

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚುತ್ತಿರುವುದು ಗಮನ ಸೆಳೆಯುತ್ತಿದೆ.

ಅದೆಷ್ಟೇ ಆರೈಕೆ ಮಾಡಿದರೂ, ಹಲವರಿಗೆ ಕೂದಲು ಉದುರಲು ಕಡಿಮೆಯಾಗುತ್ತಿಲ್ಲ. ತಜ್ಞರು ಹೇಳಿರುವಂತೆ, ಇದರ ಪ್ರಮುಖ ಕಾರಣಗಳು ತಪ್ಪಾದ ಆಹಾರ, ಜೀವನಶೈಲಿ ಮತ್ತು ತಲೆ ಸ್ನಾನದ ತಪ್ಪು ಅಭ್ಯಾಸಗಳು. ಕೆಲವೊಮ್ಮೆ ಸ್ನಾನದ ವೇಳೆ ಮಾಡುವ ಸಣ್ಣ ತಪ್ಪುಗಳು ಕೂಡ ಕೂದಲಿನ ಬೇರುಗಳನ್ನು ದುರ್ಬಲಗೊಳಿಸಿ ಉದುರುವಿಕೆಗೆ ಕಾರಣವಾಗುತ್ತವೆ.

ತಲೆ ಸ್ನಾನದ ವೇಳೆ ಸಾಮಾನ್ಯ ತಪ್ಪುಗಳು:

  1. ವಿವಿಧ ಶಾಂಪೂ ಬಳಕೆ: ಜನರು ವಿಭಿನ್ನ ಶಾಂಪೂಗಳನ್ನು ಪ್ರಯತ್ನಿಸುತ್ತಾರೆ. ತಪ್ಪಾದ ಶಾಂಪೂ ಆರೈಕೆಗೆ ಹಾನಿ ಮಾಡುತ್ತದೆ, ಕೂದಲು ಶಷ್ಕವಾಗುತ್ತದೆ ಮತ್ತು ಒಡೆಯುವಿಕೆ ಹೆಚ್ಚುತ್ತದೆ. ಶಾಂಪೂ ಹಚ್ಚುವ ಮೊದಲು ಕೂದಲನ್ನು ಮಸಾಜ್ ಮಾಡಿ, ರಕ್ತ ಸಂಚಲನೆಯನ್ನು ಹೆಚ್ಚಿಸುವುದು ಉತ್ತಮ.
  2. ಆತುರವಾಗಿ ತೊಳೆಯುವುದು: ಹುರಿದುಂಬಿ ತೊಳೆಯುವುದರಿಂದ ಶಾಂಪೂ ಸರಿಯಾಗಿ ಕುಳಿತುಕೊಳ್ಳದೆ, ಕೂದಲು ಭಾರವಾಗುತ್ತದೆ, ಜಿಡ್ಡಾಗಿ ಮತ್ತು ನಿರ್ಜೀವವಾಗಿ ಕಾಣುತ್ತದೆ.
  3. ಶಾಂಪೂ/ಕಂಡಿಷನರ್ ತಪ್ಪು ಬಳಕೆ: ಶಾಂಪೂ ನೇರವಾಗಿ ನೆತ್ತಿಗೆ ಹಾಕಬಾರದು; ಸ್ವಲ್ಪ ನೀರಿನೊಂದಿಗೆ ಬೆರೆಸಿ ಬಳಸಿ. ಕಂಡಿಷನರ್ ಬೇರುಗಳಿಗೆ ಹಚ್ಚಬಾರದು, ಕೇವಲ ಕೂದಲಿನ ಉದ್ದಕ್ಕೆ ಮಾತ್ರ ಹಚ್ಚಬೇಕು. ಬೇರುಗಳಿಗೆ ಹಚ್ಚಿದರೆ, ಕೂದಲು ಜಿಡ್ಡಾಗುತ್ತದೆ ಮತ್ತು ಕಿರುಚೀಲ ಮುಚ್ಚುತ್ತದೆ.
  4. ಬಲವಾಗಿ ಒಣಗಿಸುವುದು: ಸ್ನಾನದ ನಂತರ ಕೂದಲನ್ನು ಟವೆಲ್‌ನಿಂದ ಬಲವಾಗಿ ಒಣಗಿಸುವುದು ಹೊರಪೊರೆ ಹಾನಿಗೊಳಗಾಗುತ್ತದೆ. ಬದಲಾಗಿ, ಮೃದುವಾದ ಹತ್ತಿ ಅಥವಾ ಮೈಕ್ರೋಫೈಬರ್ ಟವೆಲ್ ಬಳಸಿ ನೀರಿನಾಂಶ ತೆಗೆದುಕೊಳ್ಳುವುದು ಉತ್ತಮ.
  5. ಕೂದಲನ್ನು ಹೆಚ್ಚಾಗಿ ತೊಳೆಯುವುದು: ವಾರಕ್ಕೆ ಎರಡು–ಮೂರು ಬಾರಿ ಮಾತ್ರ ತೊಳೆಯುವುದು ಸೂಕ್ತ. ಹೆಚ್ಚು ತೊಳೆಯುವ ಮೂಲಕ ನೈಸರ್ಗಿಕ ಎಣ್ಣೆ ಕಳೆದುಹೋಗುತ್ತದೆ, ಕೂದಲು ಒಣಗುತ್ತದೆ ಮತ್ತು ಬೇರು ದುರ್ಬಲವಾಗುತ್ತದೆ.
  6. ಒದ್ದೆ ಕೂದಲನ್ನು ಬಾಚುವುದು: ಸ್ನಾನದ ನಂತರ ತಕ್ಷಣ ಕೂದಲನ್ನು ಒದ್ದೆ ಮಾಡುವುದರಿಂದ ಬೇರು ದುರ್ಬಲಗೊಳ್ಳುತ್ತದೆ. ಮೊದಲು ನೈಸರ್ಗಿಕವಾಗಿ ಒಣಗಲು ಬಿಡಿ, ನಂತರ ಅಗಲವಾದ ಹಲ್ಲಿನ ಬಾಚಣಿಗೆಯನ್ನು ಬಳಸಿ ಬಾಚಬೇಕು.

ತಜ್ಞರ ಸಲಹೆಗಳು:

  • ಕೂದಲನ್ನು ಮೃದುವಾಗಿ ತೊಳೆಯುವುದು, ಸೂಕ್ತ ಶಾಂಪೂ ಮತ್ತು ಕಂಡಿಷನರ್ ಬಳಕೆ, ಟವೆಲ್‌ನಿಂದ ಬಲವಾಗಿ ಒಣಗಿಸುವುದನ್ನು ತಪ್ಪಿಸುವುದು.
  • ವಾರದಲ್ಲಿ  2–3 ಬಾರಿ ತಲೆ ಸ್ನಾನ ಮಾಡುವುದು, ನೈಸರ್ಗಿಕ ಎಣ್ಣೆ ಉಳಿಸಿಕೊಳ್ಳುವುದು.
  • ಆರೋಗ್ಯಕರ ಆಹಾರ, ಯೋಗ/ವ್ಯಾಯಾಮ, ಸಕಾರಾತ್ಮಕ ಜೀವನಶೈಲಿ ಸಹ ಕೂದಲಿನ ಆರೋಗ್ಯಕ್ಕೆ ಪ್ರಮುಖ.

ಈ ಸರಿಯಾದ ತಲೆ ಸ್ನಾನ ಅಭ್ಯಾಸ ಮತ್ತು ಆರೈಕೆ ಪಾಲನೆ ಮಾಡುವುದರಿಂದ ಕೂದಲು ಉದುರುವಿಕೆ ಕಡಿಮೆ ಮಾಡಬಹುದು, ಕೂದಲು ಹಗುರ, ತಾಜಾ ಮತ್ತು ಬಲವಂತವಾಗಿರುತ್ತದೆ.

 

ಸಿದ್ದರಾಮಯ್ಯರ 17ನೇ ಬಜೆಟ್ ಸರ್ವಾಂಗೀಣ ಅಭಿವೃದ್ಧಿಗೆ ದಾರಿ: ಸಚಿವ ಎಂ.ಬಿ ಪಾಟೀಲ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ದಾಖಲೆಯ 17ನೇ ಬಜೆಟ್ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಕೋನ, ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕ ಅಸಮತೋಲನ ನಿವಾರಣೆಯ ಸಮಗ್ರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತಕ್ಕೆ ಈ ಬಜೆಟ್ ಉಜ್ವಲ ಸಾಕ್ಷಿಯಾಗಿದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರು ಬಜೆಟ್ ಗಾತ್ರವನ್ನು 4.48 ಲಕ್ಷ ಕೋಟಿ ರೂ.ಗೆ ಏರಿಸಿರುವುದು ರಚನಾತ್ಮಕ ಕ್ರಮವಾಗಿದ್ದು, ಅದಕ್ಕೆ ತಕ್ಕಂತೆ ಬಂಡವಾಳ ವೆಚ್ಚವನ್ನೂ ಘೋಷಿಸಿದ್ದಾರೆ ಎಂದು ಹೇಳಿದರು.

ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದ್ದು, ಅಪಾರ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.

ರೈತ ಕಲ್ಯಾಣ, ಕೈಗಾರಿಕಾ ಪ್ರಗತಿ, ಪ್ರವಾಸೋದ್ಯಮ, ನೀರಾವರಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರಿಂದ ಸುಸ್ಥಿರ ಬೆಳವಣಿಗೆಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದರು.

ಅದೇ ವೇಳೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಗತ್ಯವಾದ ಭೂಸ್ವಾಧೀನಕ್ಕಾಗಿ ಪ್ರತಿ ಎಕರೆ ಕೃಷಿ ಜಮೀನಿಗೆ 30 ಲಕ್ಷ ರೂ. ಹಾಗೂ ತರಿ ಜಮೀನಿಗೆ 40 ಲಕ್ಷ ರೂ. ನಿಗದಿಪಡಿಸಿರುವುದು ರೈತರಿಗೆ ಸಂದ ಜಯವಾಗಿದೆ ಎಂದು ತಿಳಿಸಿದರು. ಜೊತೆಗೆ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ಅಭಿಪ್ರಾಯಪಟ್ಟರು.

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್: ಒಳ್ಳೆಯ ನಿರ್ಧಾರ ಎಂದ ಸಚಿವ ಲಾಡ್

ಬೆಂಗಳೂರು: ರಾಜ್ಯದಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣ ಬಳಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, ತನ್ನ ಬಜೆಟ್‌ನಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ಮತ್ತು ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸುವ ನಿರ್ಧಾರ ಕೈಗೊಂಡಿದೆ. ಈ ಕ್ರಮವನ್ನು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸ್ವಾಗತಿಸಿದ್ದಾರೆ.

ಬೆಂಗಳೂರಿನ ಕೆಂಗಲ್ ಗೇಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಆರೋಗ್ಯ ಮತ್ತು ಮಾನಸಿಕ ಬೆಳವಣಿಗೆಗೆ ಈ ನಿರ್ಧಾರ ಸಹಾಯಕವಾಗುತ್ತದೆ ಎಂದು ಹೇಳಿದರು.

ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ವ್ಯಸನವು ಸಮಾಜದಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿದೆ. “ಇಂದು ಮಕ್ಕಳಷ್ಟೇ ಅಲ್ಲ, ದೊಡ್ಡವರೂ ಸಹ ದಿನಕ್ಕೆ ಏಳು-ಎಂಟು ಗಂಟೆಗಳಷ್ಟು ಸ್ಕ್ರೀನ್ ಟೈಮ್ ಬಳಸುತ್ತಿದ್ದಾರೆ. ನಮ್ಮ ಸ್ಕ್ರೀನ್ ಟೈಮ್ ಕೂಡ ಏಳೆಂಟು ಗಂಟೆ ಆಗುತ್ತಿದೆ. ಇದು ಒಳ್ಳೆಯ ಪ್ರವೃತ್ತಿಯಲ್ಲ,” ಎಂದು ಹೇಳಿದರು.

ಆದ್ದರಿಂದ ಮೊಬೈಲ್ ಬಳಕೆಗೆ ಕಡ್ಡಾಯವಾಗಿ ನಿಯಮಿತ ಮಿತಿಯನ್ನು ಇರಿಸಿಕೊಳ್ಳಬೇಕು. ಮಕ್ಕಳಿಗೆ ಮಾತ್ರವಲ್ಲದೆ ಎಲ್ಲರೂ ತಮ್ಮ ಮೊಬೈಲ್ ಬಳಕೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಗತ್ಯ ಎಂದು ಸಚಿವ ಸಂತೋಷ್ ಲಾಡ್ ಸಲಹೆ ನೀಡಿದರು.

ಕಾಂಗ್ರೆಸ್ ಪಕ್ಷದ ಕ್ಯಾಬಿನೆಟ್, ಸ್ಟೇಟ್ ದರ್ಜೆ ಆಸಾಮಿಗಳ ಕಿಸೆಗೆ ಸಾಲದ ಹಣ ಹೋಗುತ್ತಿದೆ; HDK ಆರೋಪ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಸಾಲ ಮಾಡಿ ಕಾಂಗ್ರೆಸ್ ನಾಯಕರನ್ನು ಸಾಕುತ್ತಿದೆ. ಸರಕಾರವು ಕಾಂಗ್ರೆಸ್ಸಿಗರಿಗೆ ಗಂಜಿ ಕೇಂದ್ರವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; ರಾಜ್ಯದ್ದು ಈಗ ₹4.48 ಲಕ್ಷ ಕೋಟಿ ಗಾತ್ರದ ಬಜೆಟ್ ಆಗಿದ್ದು ರಾಜ್ಯದ ಈಗಿನ ಒಟ್ಟು ಸಾಲ ₹8.24 ಲಕ್ಷ ಕೋಟಿ ಆಗಿದೆ. ಈ ಸಾಲ ಕಳೆದ ವರ್ಷದಿಂದ ಈ ವರ್ಷಕ್ಕೆ ₹1.16 ಲಕ್ಷ ಕೋಟಿಯಿಂದ ₹1.32 ಲಕ್ಷ ಕೋಟಿಗೆ ಏರಿದೆ!! ಮುಂದಿನ ವರ್ಷಕ್ಕೆ ₹9 ಲಕ್ಷ ಕೋಟಿ ಮೀರುವುದು ಗ್ಯಾರಂಟಿ. ಈ ಸಾಲದ ಗ್ಯಾರಂಟಿ ಭೀತಿ ಹುಟ್ಟಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸಾಲದ ದುಡ್ಡು ಕಾಂಗ್ರೆಸ್ಸಿಗರ ಕಿಸೆಗೆ ಹೋಗಿ ಸೇರುತ್ತಿದೆ:

ಸಾಲ ಮಾಡುತ್ತಿದ್ದೀರಿ, ಸರಿ. ಅದನ್ನು ಏನಕ್ಕೆ ಬಳಕೆ ಮಾಡುತ್ತಿದ್ದೀರಿ? ಸಾಲಕ್ಕೆ ತಕ್ಕಂತೆ ಬಂಡವಾಳ ವೆಚ್ಚವೂ ಆಗಬೇಕಲ್ಲವೇ? ದುರಂತವೆಂದರೆ, ಬಂಡವಾಳ ವೆಚ್ಚ ಎಲ್ಲಿದೆಯೋ ಕಳೆದ ಮೂರು ವರ್ಷಗಳಿಂದ ಅಲ್ಲೇ ಇದೆ. ಇವರು ಸಾಲ ಮಾಡಿ ಮೋಜು ಮಾಡುತ್ತಿದ್ದಾರೆ. ಸಾಲದ ಮೇಲೆ ಸಾಲ ಮಾಡಿ 140ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರಿಗೆ ಕ್ಯಾಬಿನೆಟ್ ದರ್ಜೆ, ಸ್ಟೇಟ್ ಮಿನಿಸ್ಟರ್ ದರ್ಜೆ ದಯಪಾಲಿಸಿ ಪೊಗದಸ್ತಾಗಿ ಸಾಕುತ್ತಿದ್ದಾರೆ. ಅನುತ್ಪಾದಕ ವೆಚ್ಚಕ್ಕೆ ಹಣ ಪೋಲಾಗುತ್ತಿದ್ದು,

ಈ ಸರಕಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರವಾಗಿದೆ. ಸಾಲದ ದುಡ್ಡು ಅವರ ಕಿಸೆಗೆ ಹೋಗಿ ಸೇರುತ್ತಿದೆ. ವೋಟು ಕೊಟ್ಟ ಮಹಾಪಾಪಕ್ಕೆ ಜನತೆಯನ್ನು ಶಾಶ್ವತವಾಗಿ ಸಾಲದ ಕೂಪಕ್ಕೆ ನೂಕುವ ಧಾರುಣ ಬಜೆಟ್ ಇದಾಗಿದೆ ಎಂದು ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂಬರುವ ಸರಕಾರಗಳಿಗೆ ಕಾಂಗ್ರೆಸ್ ಸರಕಾರ ಸೃಷ್ಟಿಸುವ ಸಾಲ ಗುಂಡಿಯನ್ನು ಮುಚ್ಚುವುದೇ ಕೆಲಸ ಆಗಲಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಸ್ಲೋಗನ್ ರಾಮಯ್ಯ ಎಂದು ಲೇವಡಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಸ್ಲೋಗನ್ ರಾಮಯ್ಯ’ ಎಂದು ಮೂದಲಿಸಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಬಜೆಟ್ಟಿನ ಸುದೀರ್ಘ ಪ್ರಲಾಪ ಆಲಿಸಿದೆ. ಅವರಿಗೆ 17ನೇ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ. ದಾಖಲೆ ಮಾಡಲು ಹೋಗಿ ರಾಜ್ಯದ ಆರ್ಥಿಕತೆಯನ್ನು ದಿಕ್ಕಾಪಾಲಾಗಿಸಿದ್ದಾರೆ ಸಿದ್ದರಾಮಯ್ಯನವರು ಎಂದು ಕಿಡಿಕಾರಿದ್ದಾರೆ.

ಕರ್ನಾಟಕದ ಆರ್ಥಿಕತೆ ಹಿಂಜರಿಕೆಯತ್ತ ಸಾಗಿದೆ. ಸಿಎಜಿ ವರದಿ, ರಿಸರ್ವ್ ಬ್ಯಾಂಕ್ ಕೊಟ್ಟಿರುವ ಎಚ್ಚರಿಕೆಗಿಂತ ದೊಡ್ಡ ಆರ್ಥಿಕ ಅಪಾಯಕ್ಕೆ ಸಿಲುಕಿದೆ ಕರ್ನಾಟಕ. ಮುಂದಿನ ದಿನಗಳು ಇನ್ನೂ ದುರ್ಬರವಾಗಿವೆ. ಕಾಂಗ್ರೆಸ್ ಸರಕಾರವನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕೇಂದ್ರ ನಿಂದನೆ ಸರಿಯಲ್ಲ:

ಈ ಆಯವ್ಯಯ ಕರ್ಣಕಠೋರ ಮತ್ತು ರಾಜ್ಯಕ್ಕೆ ಭಾರ. ಏಕೆಂದರೆ, ಮುಖ್ಯಮಂತ್ರಿಗಳು ಕೇಂದ್ರದ ನಿಂದನೆಯನ್ನು ಈ ಬಾರಿಯೂ ಮುಂದುವರಿಸಿದರು, ಅದು ಅಗತ್ಯವಿರಲಿಲ್ಲ. ಒಕ್ಕೂಟ ವ್ಯವಸ್ಥೆಯ ಮೂಲತತ್ವವನ್ನೇ ಮರೆತು ತಮ್ಮ ಸರಕಾರದ ಕೆಟ್ಟ ಮಾದರಿಯನ್ನು ಪ್ರಚಾರ ಮಾಡಿಕೊಂಡು ಆತ್ಮರತಿ ಮೆರೆದಿದ್ದಾರೆ.

16ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲನ್ನು 3.61%ರಿಂದ 4.7%ಗೆ ಏರಿಸಲಾಗಿದೆ. ಇದರಿಂದ ಅನಾಮತ್ತಾಗಿ ₹11,000 ಕೋಟಿಗೂ ಹೆಚ್ಚು ಹಣ ರಾಜ್ಯಕ್ಕೆ ಹರಿದುಬರುತ್ತದೆ. ಕೇಂದ್ರದಿಂದ ಹಣ ಬರುವುದು ಕಡಿಮೆ ಆಗಿಲ್ಲ ಎಂಬುದನ್ನು ಅವರ ಬಜೆಟ್ ಪುಸ್ತಕವೇ ಹೇಳುತ್ತದೆ! ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದಾಯದ ಕೊರತೆ, ಸತತವಾಗಿ ಹೆಚ್ಚುತ್ತಿರುವ ಸಾಲದ ಪ್ರಮಾಣ ಕಳವಳಕಾರಿ. ಅನುದಾನ ಹಂಚಿಕೆಯಲ್ಲಿ ತಾಳಮೇಳವಿಲ್ಲ. ಲೆಕ್ಕಾಚಾರ ಹಳಿತಪ್ಪಿದೆ ಎಂಬುದಕ್ಕೆ ಬಜೆಟ್ ಪುಸ್ತಕವೇ ಸ್ಪಷ್ಟ ಸಾಕ್ಷಿ. ನಿರೀಕ್ಷೆಗಳನ್ನು ಸೃಷ್ಟಿಸಿ, ಅತೀವ ನಿರಾಸೆ ಉಂಟು ಮಾಡಿದ್ದಾರೆ ಮುಖ್ಯಮಂತ್ರಿಗಳು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಿದ್ದರಾಮಯ್ಯ ಬಜೆಟ್ ವಿರುದ್ಧ ಬಿಜೆಪಿ ಹೋರಾಟ: ಕೈಯಲ್ಲಿ ಖಾಲಿ ಚೊಂಬು ಹಿಡಿದು ಪ್ರತಿಭಟನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಖಾಲಿ ಚೊಂಬಿನಂತಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಇಂದು ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ಉಪ ನಾಯಕ ಅರವಿಂದ ಬೆಲ್ಲದ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಸೇರಿದಂತೆ ಮಾಜಿ ಸಚಿವರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

‘ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟ ಕಾಂಗ್ರೆಸ್ ಸರ್ಕಾರ’ ಎಂಬ ಬರಹವಿರುವ ಪೋಸ್ಟರ್‌ಗಳನ್ನು ಹಿಡಿದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೆಲವು ನಾಯಕರು ಕೈಯಲ್ಲಿ ಖಾಲಿ ಚೊಂಬು ಹಿಡಿದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.

ಈ ವೇಳೆ “ಯುವಕರಿಗೆ ಮೋಸ ಮಾಡಿದ ಸರ್ಕಾರಕ್ಕೆ ಧಿಕ್ಕಾರ”, “ಮೂರು ವರ್ಷದಲ್ಲಿ ಮೂರೂವರೆ ಲಕ್ಷ ಕೋಟಿ ಸಾಲ ಮಾಡಿದ ಸರ್ಕಾರಕ್ಕೆ ಧಿಕ್ಕಾರ”, “ಬಜೆಟ್ ಅಂದರೆ ಬಜೆಟ್ ಅಲ್ಲ, ಖಾಲಿ ಚೊಂಬಿನ ಬಜೆಟ್” ಎಂಬ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ರಾಜ್ಯದ ಜನತೆ ಹಾಗೂ ರೈತರಿಗೆ ಖಾಲಿ ಚೊಂಬು ನೀಡಿದ ಸರ್ಕಾರ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದರು.

error: Content is protected !!