Home Blog

ಹಗರಿಬೊಮ್ಮನಹಳ್ಳಿಯಲ್ಲಿ ಪೊಲೀಸರ ಸೋಗಿನಲ್ಲಿ ಚಿನ್ನದ ಉಂಗುರ ದೋಚಿದ ಖದೀಮರು!

0

ಹಗರಿಬೊಮ್ಮನಹಳ್ಳಿ: ಪಟ್ಟಣದ ಎಪಿಎಂಸಿ ಬಳಿ ಪೊಲೀಸರ ಸೋಗಿನಲ್ಲಿ ಬಂದ ಇಬ್ಬರು ಖದೀಮರು 1.5 ಗ್ರಾಂ ತೂಕದ ಚಿನ್ನದ ಉಂಗುರ ಲಪಟಾಯಿಸಿರುವ ಘಟನೆ ನಡೆದಿದೆ.

ಚಿಂತ್ರಪಳ್ಳಿ ಗ್ರಾಮದ ನಿವಾಸಿ ಕೆ.ಎಂ. ಗಂಗಾಧರ ಅವರು ಭಾನುವಾರ ತಮ್ಮ ಅಮ್ಮನ ಮನೆಯಲ್ಲಿ ಎರಡು ಸೈಕಲ್ ರಿಪೇರಿ ಮಾಡಿಸಿಕೊಂಡು ಮಕ್ಕಳಿಗೆ ನೀಡಿ ಮನೆಗೆ ಬರಲು ಸೂಚಿಸಿ, ಚಿಂತ್ರಪಳ್ಳಿಯಿಂದ ಹಗರಿಬೊಮ್ಮನಹಳ್ಳಿಗೆ ಬಂದಿದ್ದರು.

ಈ ವೇಳೆ ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿರುವುದನ್ನು ಗಮನಿಸಿದ ಇಬ್ಬರು ಖದೀಮರು ಅವರನ್ನು ನಿಲ್ಲಿಸಿ, “ನಾವು ಪೊಲೀಸರು, ತ್ರಿಬಲ್ ರೈಡ್ ಮಾಡುವುದು ತಪ್ಪು” ಎಂದು ಹೇಳಿ ಮಾತಿನಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಗಂಗಾಧರ ಅವರು “ನಮ್ಮ ಊರು ಹತ್ತಿರವೇ ಇದೆ, ಸೈಕಲ್ ರಿಪೇರಿಗಾಗಿ ಬಂದಿದ್ದೇವೆ” ಎಂದು ತಿಳಿಸಿದರೂ, ಖದೀಮರು ಮಾತಿನ ಚತುರತೆಯಿಂದ ಮಂಕುಬೂದಿ ಎರಚಿದ್ದಾರೆ.

ಗಂಗಾಧರ ಅವರ ಕೈಯಲ್ಲಿದ್ದ 1.5 ಗ್ರಾಂ ತೂಕದ ಚಿನ್ನದ ಉಂಗುರವನ್ನು ಗಮನಿಸಿದ ಖದೀಮರು, “ಇಂತಹ ಬಂಗಾರವನ್ನು ಕಾಣುವಂತೆ ಹಾಕಿಕೊಳ್ಳಬಾರದು, ಜೇಬಿನಲ್ಲಿ ಇಟ್ಟುಕೊಳ್ಳಿ” ಎಂದು ಸಲಹೆ ನೀಡಿದ್ದಾರೆ. ಅವರು ಉಂಗುರವನ್ನು ತೆಗೆದು ಜೇಬಿನಲ್ಲಿ ಇಡಲು ಮುಂದಾದಾಗ, “ಹೀಗೆ ಇಟ್ಟರೆ ಬೀಳಬಹುದು, ಪೇಪರ್‌ನಲ್ಲಿ ಸುತ್ತಿ ಕೊಡುತ್ತೇವೆ” ಎಂದು ಹೇಳಿ, ಪೇಪರ್‌ನಲ್ಲಿ ಸುತ್ತಿದಂತೆ ಮಾಡಿ ಕಲ್ಲನ್ನು ಇಟ್ಟು ಹಿಂತಿರುಗಿಸಿದ್ದಾರೆ.

ಸ್ವಲ್ಪ ಹೊತ್ತಿನ ನಂತರ ಪೇಪರ್ ತೆರೆಯುತ್ತಿದ್ದಂತೆ ಕಲ್ಲು ಕಾಣಿಸಿಕೊಂಡಿದ್ದು, ಗಂಗಾಧರ ಅವರು ಬೆಚ್ಚಿಬಿದ್ದು ತಕ್ಷಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಇದೇ ರೀತಿಯ ಮೋಸದ ಘಟನೆಗಳು ಬಸವೇಶ್ವರ ಬಜಾರ್ ಪ್ರದೇಶದಲ್ಲಿ ಮಹಿಳೆಯೊಬ್ಬರನ್ನು ಗುರಿಯಾಗಿಸಿಕೊಂಡು ಹಾಗೂ ಗಾಳೆಮ್ಮನ ಗುಡಿ ಸಮೀಪ ಮಡಿವಾಳರ ಅಂಬಣ್ಣ ಎಂಬುವರಿಗೆ ನಡೆದಿರುವುದು ತಿಳಿದು ಬಂದಿದೆ. ಪಟ್ಟಣದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವ ಜೊತೆಗೆ ಸಾರ್ವಜನಿಕರೂ ಜಾಗೃತರಾಗಿರಬೇಕೆಂದು ಮನವಿ ಮಾಡಲಾಗಿದೆ.

ಅಪರಿಚಿತರನ್ನು ಪೊಲೀಸರಂತೆ ನಂಬಬೇಡಿ; ಅವರ ಗುರುತಿನ ಚೀಟಿ ಪರಿಶೀಲಿಸಿ. ಸಾರ್ವಜನಿಕ ಸ್ಥಳಗಳಲ್ಲಿ ಚಿನ್ನಾಭರಣಗಳನ್ನು ಪ್ರದರ್ಶನದಂತೆ ಧರಿಸುವುದನ್ನು ತಪ್ಪಿಸಿ. ಶಂಕಾಸ್ಪದ ವರ್ತನೆ ಕಂಡುಬಂದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

 

ಕೊಟ್ಟೂರಿನಲ್ಲಿ ಮಹಾಶಿವರಾತ್ರಿ ಸಡಗರ-ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಕೊಟ್ಟೂರು: ಮಹಾಶಿವರಾತ್ರಿ ಅಂಗವಾಗಿ ಕೊಟ್ಟೂರಿನಲ್ಲಿ ಭಕ್ತಿ, ಭಾವನೆ ಮತ್ತು ಭಕ್ತರ ಹರಿವಿನ ನಡುವೆ ಧಾರ್ಮಿಕ ಸಡಗರ ಮನೆಮಾಡಿತು. ಬುಧವಾರದ ಮಹಾಶಿವರಾತ್ರಿಯಂದು ಮಹಿಳೆಯರು ಮತ್ತು ಪುರುಷರು ಸೇರಿ ಗದ್ದಿಕಲ್ಲೇಶ್ವರ ಈಶ್ವರ ಲಿಂಗಮೂರ್ತಿಗೆ ಪೂಜಾ–ಅಭಿಷೇಕ ನೆರವೇರಿಸಿ ಭಕ್ತಿ ಸಮರ್ಪಿಸಿದರು.

ಮಹಾಶಿವರಾತ್ರಿ ಹಬ್ಬವು ಕೊಟ್ಟೂರಿನಲ್ಲಿ ನಡೆಯುತ್ತಿರುವ ಕೊಟ್ಟೂರೇಶ್ವರ ಜಾತ್ರೆಯ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿತು. ಪಟ್ಟಣದಾದ್ಯಂತ “ಓಂ ನಮಃ ಶಿವಾಯ” ಮಂತ್ರಘೋಷ, ಶಿವನಾಮ ಜಪ, ಭಕ್ತಿಗೀತೆಗಳ ನಾದ ಮೊಳಗುತ್ತಾ ಭಕ್ತರ ಮನಸ್ಸಿಗೆ ಆಧ್ಯಾತ್ಮಿಕ ಮುದ ನೀಡಿತು.

ಬೆಳಗಿನ ಜಾವವೇ ಶ್ರೀ ಕೊಟ್ಟೂರೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ ನೆರವೇರಿಸಿ ಶಿವರಾತ್ರಿ ಆಚರಣೆ ಆರಂಭವಾಯಿತು. ಸಾವಿರಾರು ಭಕ್ತರು ಉದ್ದನೆಯ ಸಾಲಿನಲ್ಲಿ ನಿಂತು ದರ್ಶನ ಪಡೆದು ಹರಕೆ ತೀರಿಸಿದರು. ಶ್ರೀಸ್ವಾಮಿಯ ಮೂರು ಪ್ರಮುಖ ಮಠಗಳಾದ ಹಿರೇಮಠ, ತೊಟ್ಟಿಲು ಮಠ ಹಾಗೂ ಗಚ್ಚಿನಮಠಗಳಿಗೆ ಭಕ್ತರು ದಂಡು ದಂಡಾಗಿ ತೆರಳಿ ಪೂಜೆ ಸಲ್ಲಿಸಿದರು.

ಪಟ್ಟಣದ ಪ್ರಮುಖ ಶಿವಕ್ಷೇತ್ರಗಳಾದ ಗದ್ದಿಕಲ್ಲೇಶ್ವರ, ಮಳೆಮಲ್ಲೇಶ್ವರ, ಸಿರಿಮಠಲಿಂಗೇಶ್ವರ, ಚಂದ್ರಮೌಳೇಶ್ವರ, ಮಾರ್ಕಂಡೇಶ್ವರ, ೧೦೮ ಶಿವಲಿಂಗಗಳ ದೇವಸ್ಥಾನ, ಸೋಮಲಿಂಗೇಶ್ವರ, ರಾಮಲಿಂಗೇಶ್ವರ, ಹ್ಯಾಳ್ಯಾ ಸಮೀಪದ ಪಂಪಾಪತೇಶ್ವರ ಹಾಗೂ ಅಂಬಳಿಯ ಕಲ್ಲೇಶ್ವರ ಗುಡಿಗಳಿಗೆ ಬೆಳಗ್ಗಿನಿಂದಲೇ ಭಕ್ತರು ಭೇಟಿ ನೀಡಿ ರುದ್ರಾಭಿಷೇಕ, ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡರು. ಕುಟುಂಬ ಸಮೇತರಾಗಿ ಆಗಮಿಸಿದ ಭಕ್ತರು ಹಾಲು, ಬಿಲ್ವಪತ್ರೆ, ಫಲ–ಪುಷ್ಪ ಸಮರ್ಪಿಸಿ ಶಿವನ ಆರಾಧನೆ ನಡೆಸಿದರು.

ಗದ್ದಿಕಲ್ಲೇಶ್ವರ ದೇವಸ್ಥಾನದಲ್ಲಿ ರಾತ್ರಿಯಿಡೀ ಮಹಾರುದ್ರಾಭಿಷೇಕ ಕೈಂಕರ್ಯಗಳ ಸಿದ್ಧತೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದವು. ಭಜನೆ, ಶಿವಕೀರ್ತನೆಗಳ ಮೂಲಕ ಭಕ್ತರಲ್ಲಿಯ ಆಧ್ಯಾತ್ಮಿಕ ಉತ್ಸಾಹ ಇನ್ನಷ್ಟು ಹೆಚ್ಚಿತು.

ತಾಲೂಕಿನ ಉಜ್ಜಯಿನಿ ಸದ್ದರ್ಮ ಪೀಠದಲ್ಲೂ ಮಹಾಶಿವರಾತ್ರಿ ಸಂಭ್ರಮ ವಿಶೇಷವಾಗಿ ಕಂಡುಬಂತು. ಸದ್ದರ್ಮ ಪೀಠದ ಒಡೆಯ ಮಹಾಮರುಳಸಿದ್ದ ಸ್ವಾಮಿಯ ಲಿಂಗಮೂರ್ತಿಗೆ ವಿಶೇಷ ಪೂಜಾ–ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಮರುಳಸಿದ್ದೇಶ್ವರ ಸ್ವಾಮಿಯ ಮೂಲಮೂರ್ತಿಗೆ ಕ್ಷೀರಾಭಿಷೇಕ ಸೇರಿದಂತೆ ವಿವಿಧ ಪೂಜೆಗಳನ್ನು ಸಲ್ಲಿಸಿದರು.

ಒಟ್ಟಾರೆ, ಕೊಟ್ಟೂರಿನಲ್ಲಿ ಮಹಾಶಿವರಾತ್ರಿ ಹಬ್ಬ ಭಕ್ತರ ನಂಬಿಕೆ, ಭಕ್ತಿ ಹಾಗೂ ಧಾರ್ಮಿಕ ಏಕತೆಯ ಸಂಕೇತವಾಗಿ ಅದ್ಧೂರಿಯಾಗಿ ಜರುಗಿತು.

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ನಡೆ ಖಂಡನೀಯ: ದುರಗಪ್ಪ ಆರೋಪ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದ ಲಕ್ಷ್ಮೇಶ್ವರ ತಾಲೂಕು ೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಶಿರಹಟ್ಟಿ ಮತಕ್ಷೇತ್ರದ ೨೦೨೩ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರು ಹಾಗೂ ದಲಿತ ಸಮುದಾಯದ ಯುವ ನಾಯಕಿ ಶ್ರೀಮತಿ ಸುಜಾತ ಎನ್. ದೊಡ್ಡಮನಿ ಅವರ ಹೆಸರನ್ನು ಸೇರಿಸದಿರುವುದು ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ದುರಗಪ್ಪ ಎಲ್ ಹರಿಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ಸಮಾಜಸೇವಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಹೆಸರನ್ನು ಸೇರಿಸಲಾಗಿದೆ. ಆದರೆ ಸುಜಾತ ದೊಡ್ಡಮನಿ ಅವರ ಹೆಸರನ್ನು ಕೈಬಿಟ್ಟಿರುವುದು ಏಕೆ ಎಂಬುದನ್ನು ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಈಶ್ವರ ಎಸ್. ಮಡ್ಲೇರಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಾಹಿತ್ಯ ಸಮ್ಮೇಳನಗಳು ಜಾತ್ಯಾತೀತ ಮತ್ತು ವ್ಯಕ್ತಿರಹಿತವಾಗಿರಬೇಕು. ಸುಜಾತ ದೊಡ್ಡಮನಿ ಅವರು ಶಿರಹಟ್ಟಿ ಮತಕ್ಷೇತ್ರದ ನಗರ ಹಾಗೂ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಭಾವಿ ನಾಯಕಿಯ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಸೇರಿಸದಿರುವುದಕ್ಕೆ ಪ್ರಮುಖ ಕಾರಣವೇನು ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಜಾತ್ಯಾತೀತ ನಾಯಕಿ ಸುಜಾತ ದೊಡ್ಡಮನಿ ಅವರ ಹೆಸರನ್ನು ಕೈಬಿಟ್ಟು ಅವಮಾನ ಮಾಡಿರುವುದು ಅವರ ಅಭಿಮಾನಿಗಳು ಹಾಗೂ ದಲಿತ ಸಮುದಾಯಕ್ಕೆ ನೋವುಂಟು ಮಾಡಿದೆ. ಸುಜಾತ ದೊಡ್ಡಮನಿ ಅವರ ಅಭಿಮಾನಿಗಳ ಬಳಗ ಮತ್ತು ದಲಿತ ಸಮುದಾಯದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಲಕ್ಷ್ಮೇಶ್ವರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಈಶ್ವರ ಮಡ್ಲೇರಿ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ದುರಗಪ್ಪ ಎಲ್ ಹರಿಜನ ಎಚ್ಚರಿಕೆ ನೀಡಿದ್ದಾರೆ.

ಹಿಂದೂ ಬಾಂಧವರು ಕಾರ್ಯಕ್ರಮ ಯಶಸ್ವಿಗೊಳಿಸಿ

0
  • ವಿಜಯಸಾಕ್ಷಿ ಸುದ್ದಿ, ಗದಗ: ಫೆಬ್ರವರಿ 19ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಭವ್ಯವಾಗಿ ನಡೆಯಲಿದೆ ಎಂದು ಜಯಂತ್ಯುತ್ಸವ ಸಮಿತಿಯ ಮಾಜಿ ಅಧ್ಯಕ್ಷ ಜಗದೀಶ್ ಎಸ್.ಪಿ ತಿಳಿಸಿದರು.

    ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ನಾರಾಯಣ ಹೊನ್ನಾಳ ಹಾಗೂ ಯಲ್ಲಪ್ಪ ಕಾಂಬ್ಳೇಕರ ಅವರ ಭಾವಚಿತ್ರಗಳನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುವುದು ಎಂದರು.

    ಮೆರವಣಿಗೆಯಲ್ಲಿ 17 ಅಡಿ ಎತ್ತರದ ಪ್ರಭು ಶ್ರೀರಾಮ, ಸಹಸ್ರಾರ್ಜುನ, ಮಹರ್ಷಿ ವಾಲ್ಮೀಕಿ, ವೀರಮಾತೆ ಕಿತ್ತೂರ ರಾಣಿ ಚೆನ್ನಮ್ಮ, ಪಾಂಡುರಂಗ ವಿಠ್ಠಲ ಸೇರಿದಂತೆ ಅನೇಕ ಮಹಾನ್ ಪುರುಷರ ಹಾಗೂ ದಾರ್ಶನಿಕರ ಮೂರ್ತಿಗಳು ಭಾಗವಹಿಸಲಿವೆ. ಜಿಲ್ಲೆಯ ಎಲ್ಲ ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

    ಮುಖಂಡ ಅನಿಲ ಅಬ್ಬಿಗೇರಿ ಮಾತನಾಡಿ, ಕಳೆದ 10 ವರ್ಷಗಳಿಂದ ಶಿವಾಜಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಬಾರಿ ಸೇವಾಲಾಲ್ ಜಯಂತಿಯನ್ನೂ ಜೊತೆಯಾಗಿ ಆಚರಿಸಲಾಗುತ್ತಿದೆ. ರಾಚೋಟೇಶ್ವರ ದೇವಸ್ಥಾನದಿಂದ ಆರಂಭವಾಗುವ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. ದಿಕ್ಸೂಚಿ ಭಾಷಣಕಾರರಾಗಿ ಶ್ರೀ ಸೋಮಲಿಂಗ ಮಹಾಸ್ವಾಮೀಜಿ ಆಗಮಿಸಲಿದ್ದು, ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಅವರು ಸೇವಾಲಾಲ್ ಹಾಗೂ ಶಿವಾಜಿ ಮಹಾರಾಜರ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.

    ಕರ್ನಾಟಕ ರಾಜ್ಯ ವಿವಿಧ ಹಿಂದೂ ಸಂಘಟನೆಗಳ ಸಂಚಾಲಕ ರಾಜು ಖಾನಪ್ಪನವರ ಮಾತನಾಡಿ, ಹಿಂದೂ ಸಂಘಟನೆಗೆ ಶಕ್ತಿ ತುಂಬುವ ಉದ್ದೇಶದಿಂದ ಹೋರಾಟ ಮತ್ತು ಭಕ್ತಿಯೊಂದಿಗೆ ಜಯಂತಿ ಆಚರಿಸಲಾಗುತ್ತಿದೆ. ಮೆರವಣಿಗೆ ಆರಂಭಕ್ಕೂ ಮುನ್ನ ಗಜಾನನ ಸಮಿತಿಯಿಂದ 1,500 ಜನರಿಗೆ ಪ್ರಸಾದ, 10ರಿಂದ 12 ಸಾವಿರ ಜನರಿಗೆ ಊಟ, 10 ಸಾವಿರ ಜನರಿಗೆ ಪ್ರಸಾದ ಹಾಗೂ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಮರಾಠ ಹಾಗೂ ಲಂಬಾಣಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. 30ರಿಂದ 50 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲರೂ ಕುಟುಂಬ ಸಮೇತವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

    ಈ ಸಂದರ್ಭದಲ್ಲಿ ಅಜ್ಜಣ್ಣ ಮಲ್ಲಾಡದ, ಕಿಸನ್ ಮೇರವಾಡೆ, ಮಹೇಶ್ ರೋಖಡೆ, ಕೃಷ್ಣಪ್ಪ ಲಮಾಣಿ, ರಾಜು ಗದ್ದಿ, ಸುನಿಲ್ ಮುಳ್ಳಾಳ, ವಿರೂಪಾಕ್ಷಪ್ಪ ಹೆಬ್ಬಳ್ಳಿ, ರಾಜು ಮುಧೋಳ, ಕುಮಾರ ನಡಗೇರಿ, ಕಿರಣ್ ಹಿರೇಮಠ, ಕೃಷ್ಣ ಪವಾರ್, ತುಕಾರಾಮ್ ಲಮಾಣಿ, ವಿಶಾಲ್ ಗೋಕಾವಿ ಮುಂತಾದವರು ಉಪಸ್ಥಿತರಿದ್ದರು.

    ಸಂತ ಶ್ರೀ ಸೇವಾಲಾಲ್ ಮಹಾರಾಜರು ಕೇವಲ ಲಂಬಾಣಿ ಸಮುದಾಯಕ್ಕೆ ಸೀಮಿತವಾಗಿರದೆ ಹಿಂದೂತ್ವಕ್ಕಾಗಿ ಹೋರಾಟ ಮಾಡಿ ಜಾಗೃತಿ ಮೂಡಿಸಿದವರು. ಈ ಬಾರಿ ಶಿವಾಜಿ ಜಯಂತಿಯ ಜೊತೆಗೆ ಸೇವಾಲಾಲ್ ಮಹಾರಾಜರ ಜಯಂತಿ ಆಚರಿಸುತ್ತಿರುವುದು ಸಂತೋಷದ ವಿಷಯವಾಗಿದೆ.

    ಪರಮೇಶ ನಾಯಕ್.
    ಅಧ್ಯಕ್ಷರು, ಸೇವಾಲಾಲ್ ಹಾಗೂ ಶಿವಾಜಿ ಜಯಂತ್ಯುತ್ಸವ ಸಮಿತಿ.

ಅಧಿಕಾರಿಗಳು ಜನ ಮಿತ್ರರಾಗಿದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿನ ಕಟ್ಟಕಡೆಯ ವ್ಯಕ್ತಿಯ ಅಭಿಪ್ರಾಯವನ್ನು ಗ್ರಾಮ ಸಭೆಗಳ ಮೂಲಕ ಮೇಲಿನ ಹಂತಕ್ಕೆ ಕೊಂಡೊಯ್ಯಬೇಕು. ಗ್ರಾಮ ಸಭೆಗಳಲ್ಲಿನ ಅಭಿಪ್ರಾಯಗಳನ್ನು ಯೋಜನೆ ರೂಪದಲ್ಲಿ ಜಾರಿಗೆ ತರುವ ಕಾರ್ಯವಾಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನಪ್ರತಿನಿಧಿಗಳು ಜನರ ಅಭಿಪ್ರಾಯದಂತೆ ಯೋಜನೆಗಳನ್ನು ರೂಪಿಸಬೇಕಾಗಿದೆ. ಗ್ರಾಮ ಸ್ವರಾಜ್ಯ ಹಾಗೂ ಪಂಚಾಯತ್ ರಾಜ್ ಕಾನೂನು ಜಾರಿಗೆ ತರುವುದರಲ್ಲಿ ಗದಗ ಜಿಲ್ಲೆಯ ಪಾತ್ರ ಬಹುಮುಖ್ಯವಾಗಿದೆ. ಗ್ರಾಮ ಮಟ್ಟದಿಂದಲೇ ಯೋಜನೆಗಳನ್ನು ರೂಪಿಸುವ ಕಾನೂನಿದೆ. ಈ ಕಾನೂನು ಸಮರ್ಪಕವಾಗಿ ಅನುಷ್ಠಾನವಾದಲ್ಲಿ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ಕೆಳಹಂತದಿಂದ ಮೇಲಿನ ಹಂತದವರೆಗೆ ಯೋಜನೆಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರುವ ಕಾರ್ಯದಲ್ಲಿ ಜಿಲ್ಲೆ ಯಾವುದೇ ಕಾರಣಕ್ಕೂ ಹಿಂದುಳಿಯಬಾರದು. ಯೋಜನೆಗಳನ್ನು ರೂಪಿಸುವಲ್ಲಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಡುವೆ ಸಂಘರ್ಷವಿದ್ದು, ದೇಶದಲ್ಲಿ ಜನರ ಅಭಿಪ್ರಾಯದಂತೆ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ.

ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಶೇಂಗಾ, ಮಾವು ಸೇರಿದಂತೆ ಇತರೆ ಬೆಳೆಗಳ ಇಳುವರಿ ಕಡಿಮೆಯಾಗುತ್ತಿರುವ ಕುರಿತು ಕಾರಣ ತಿಳಿದುಕೊಂಡು ಮಾಹಿತಿ ನೀಡುವುದರ ಜೊತೆಗೆ ಜಿಲ್ಲೆಯ ಮೂಲಭೂತ ಅವಶ್ಯಕತೆಗಳು, ಶಾಲೆಗಳಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕುರಿತು ವಿವರವಾದ ಮಾಹಿತಿ ಕ್ರೋಢೀಕರಿಸಿ ಪ್ರಸ್ತಾವನೆಯನ್ನು ಸಲ್ಲಿಸಲು ಸಚಿವರಾದ ಎಚ್.ಕೆ. ಪಾಟೀಲ ಸೂಚಿಸಿದರು.

ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಜನರ ಭಾವನೆಗಳು ಯೋಜನೆಯ ರೂಪದಲ್ಲಿ ಜಾರಿಯಾಗಬೇಕು. ಜನರ ಮಾತಿಗೆ ಗೌರವ ದೊರಕುವ ನಿಟ್ಟಿನಲ್ಲಿ ಅಧಿಕಾರಿ ವರ್ಗ ಕಾರ್ಯ ನಿರ್ವಹಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿಪ್ರಾಯ ಪಡೆದು ಯೋಜನೆ ರೂಪಿಸುವ ಕಾನೂನು ಗದಗ ಜಿಲ್ಲೆಯಿಂದಲೇ ಪ್ರಾರಂಭಿಸಲಾಗಿದ್ದು, ಈ ಕಾನೂನನ್ನು ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಾರ್ಯವಾಗಬೇಕಾಗಿದೆ ಎಂದರು.

ಗ್ರಾಮಸಭೆಗಳ ಮೂಲಕ ಆಯ್ಕೆ ಮಾಡುವ ಯೋಜನೆಗಳನ್ನು ಆದ್ಯತೆ ಮೂಲಕ ಅನುಷ್ಠಾನಕ್ಕೆ ಕ್ರಮ ವಹಿಸಿ, ಆಯಾ ಯೋಜನೆಗಳನ್ನು ಗ್ರಾಮ ಪಂಚಾಯಿತಿ ಮೂಲಕವೇ ಅನುಷ್ಠಾನಗೊಳಿಸುವ ಕಾರ್ಯವಾಗಬೇಕು. ಯೋಜನೆಗಳ ತಯಾರಿಕೆಯಲ್ಲಿ ಗ್ರಾಮೀಣ ವಾರ್ಡ್ ಸಭೆ, ಗ್ರಾಮ ಸಭೆ, ಗ್ರಾಮ ಅಭಿವೃದ್ಧಿ ಯೋಜನೆ ಮೂಲಕ ಕೆಳಮಟ್ಟದಿಂದಲೇ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಯೋಜನಾ ಸಮಿತಿ ಸದಸ್ಯರುಗಳಾದ ಕೃಷ್ಣಾ ಪರಾಪೂರ, ಬರಕತ್ ಅಲಿಮುಲ್ಲಾ ಅಬ್ದುಲ್, ಚಂದ್ರಶೇಖರಗೌಡ ಕರಿಸೋಮನಗೌಡ, ವಿಜಯಕುಮಾರ ನೀಲಗುಂದ, ರಾಚಯ್ಯ ಮಾಲಗಿತ್ತಿ, ರಾಜೇಸಾಬ ಸಾಂಗ್ಲಿಕರ, ರಾಜಶೇಖರ ಮಾಲಗಿತ್ತಿ, ಸುರೇಶ ಕಟ್ಟಿಮನಿ, ರಾಜೇಸಾಬ ಬೆಟಗೇರಿ, ರಾಜೇಶ್ವರಿ ವೀರನಗೌಡ್ರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ರಮಣದೀಪ ಚೌದರಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಜಿಲ್ಲಾ ಅಂಕಿ ಸಂಖ್ಯೆ ಸಂಗ್ರಹಣಾಧಿಕಾರಿ ಎ.ಎ. ಕಂಬಾಳಿಮಠ 2026-27ನೇ ಸಾಲಿನ ಜಿಲ್ಲಾ ವಾರ್ಷಿಕ ಕರಡು ಯೋಜನೆಯನ್ನು ಮಂಡಿಸಿದರು.

ಅಧಿಕಾರಿಗಳು ಜನ ಮಿತ್ರರಾಗಿದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. ಯೋಜನೆಗಳನ್ನು ರೂಪಿಸುವ ಸಂದರ್ಭದಲ್ಲಿ ಗ್ರಾಮಸಭೆ, ಜನಪ್ರತಿನಿಧಿಗಳ ಸಲಹೆಗಳನ್ನು ಪಡೆಯಬೇಕಾಗಿದೆ. ಗ್ರಾಮ ಪಂಚಾಯಿತಿಗಳ ಮೂಲಕ ಆದ್ಯತೆ ಪ್ರಕಾರ ಯೋಜನೆಗಳ ಪಟ್ಟಿಯನ್ನು ತಯಾರಿಸಬೇಕು. ವಿವಿಧ ಯೋಜನೆಗಳಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಗ್ರಾಮಸಭೆ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವ ಮಾದರಿ ಕಾರ್ಯವನ್ನು ಮಾಡಿದಲ್ಲಿ ಗ್ರಾಮಸಭೆಗೆ ಹೆಚ್ಚಿನ ಮಹತ್ವ ನೀಡಿದಂತಾಗುತ್ತದೆ.

  • ಎಚ್.ಕೆ. ಪಾಟೀಲ.
    ಜಿಲ್ಲಾ ಉಸ್ತುವಾರಿ ಸಚಿವರು.

ಸಾಂಪ್ರದಾಯಿಕ ಕೃಷಿ ಇಂದಿನ ಅಗತ್ಯ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾವಯವ ಕೃಷಿ ರೈತ ಸಮುದಾಯಕ್ಕೆ ಸಂಜೀವಿನಿಯಾಗಿದ್ದು, ರೈತರು ರಾಸಾಯನಿಕ ಕೃಷಿಯಿಂದ ದೂರ ಸರಿದು ಸಾವಯವ, ಸಾಂಪ್ರದಾಯಿಕ ಕೃಷಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಲಕ್ಷ್ಮೇಶ್ವರದ ಸಾವಯವ ಪ್ರಗತಿ ರೈತ ಬಸವರಾಜ ಬೆಂಡಿಗೇರಿ ಹೇಳಿದರು.

ಯಳವತ್ತಿ ಗ್ರಾಮದಲ್ಲಿ ಜರುಗಿದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕೃಷಿಗೋಷ್ಠಿಯಲ್ಲಿ ಸಾವಯವ ಕೃಷಿ ಮಹತ್ವ ಕುರಿತು ಅವರು ಮಾತನಾಡಿದರು.

ಹಸಿರು ಕ್ರಾಂತಿಯ ನಂತರ ನಮ್ಮ ಪುರಾತನ ಕೃಷಿ ಪದ್ಧತಿಗೆ ಹೊಡೆತ ಬಿದ್ದಿದೆ. ರಾಸಾಯನಿಕ ಗೊಬ್ಬರ ಇಲ್ಲದೆ ಇಂದು ಕೃಷಿ ಇಲ್ಲ ಎನ್ನುವಷ್ಟರಮಟ್ಟಿಗೆ ರೈತರು ಹೊಂದಿಕೊಂಡುಬಿಟ್ಟಿದ್ದಾರೆ. ಆದರೆ ನಿರಂತರವಾಗಿ ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಬಿತ್ತನೆ ಭೂಮಿ ಬರಡಾಗುವ ಪರಿಸ್ಥಿತಿ ಬಂದಿದೆ. ಬಿತ್ತನೆ ಭೂಮಿಯೇ ಹಾಳಾದರೆ ಮುಂದೆ ಕೃಷಿಗೆ ದೊಡ್ಡ ಪೆಟ್ಟು ಬೀಳುವ ಅಪಾಯ ಇದೆ. ಕಾರಣ ಈಗಿನಿಂದಲೇ ರೈತರು ಸಾವಯವ ಕೃಷಿಗೆ ಮಹತ್ವ ನೀಡಬೇಕು ಎಂದು ತಿಳಿಸಿದರು.

ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ಮಹಿಳಾ ಚಿಂತಕಿ ಮಾಲಾದೇವಿ ದಂಧರಗಿ, ಇಂದಿಗೂ ಸಮಾಜದಲ್ಲಿ ಮಹಿಳೆಯರ ಶೋಷಣೆ ತಪ್ಪಿಲ್ಲ. ಹೆಸರಿಗಷ್ಟೇ ಸಮಾನತೆ ಎನ್ನುತ್ತಾರೆ. ಆದರೆ ಎಲ್ಲ ಕ್ಷೇತ್ರಗಳಲ್ಲೂ ಈಗಲೂ ಹೆಣ್ಣಿನ ಶೋಷಣೆ, ನಿರ್ಲಕ್ಷ್ಯ ನಡೆದೇ ಇದೆ. ಅದರಲ್ಲೂ ರಾಜಕೀಯ ರಂಗದಲ್ಲಂತೂ ಶೋಷಣೆ ಇನ್ನಷ್ಟು ಹೆಚ್ಚಾಗಿದೆ. ಮಹಿಳೆ ಮನಸ್ಸು ಮಾಡಿದರೆ ಯಾವುದೇ ಕ್ಷೇತ್ರದಲ್ಲಾದರೂ ಪ್ರಗತಿ ಸಾಧಿಸಬಲ್ಲಳು. ಆದರೆ ಅದಕ್ಕೆ ಸಮಾಜದ ಪ್ರೋತ್ಸಾಹ, ಸಹಕಾರ ಅಗತ್ಯ ಎಂದರು.

ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳ ಸಾಹಿತ್ಯದ ಅಗತ್ಯತೆ ಕುರಿತು ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳ ಸಾಹಿತ್ಯವೂ ಬಹಳ ಮಹತ್ವದ್ದು. 20ನೇ ಶತಮಾನದ ಪಂಜೆ ಮಂಗೇಶರಾಯರು ಮಕ್ಕಳ ಸಾಹಿತ್ಯದ ಜನಕರು. ಮಕ್ಕಳ ಕವಿಗಳು, ಬರಹಗಾರರು ಸ್ವತಃ ಮಕ್ಕಳೇ ಆದಾಗ ಮಾತ್ರ ಅವರಿಂದ ಉತ್ತಮ ಮಕ್ಕಳ ಸಾಹಿತ್ಯ ರಚನೆ ಆಗಲು ಸಾಧ್ಯ. ದರ‍್ಗಸಿಂಹನ ಪಂಚತಂತ್ರ ಕಥೆಗಳು ವಿಶ್ವದ ಶ್ರೇಷ್ಠ ಮಕ್ಕಳ ಸಾಹಿತ್ಯದ ರಚನೆಯಾಗಿದೆ. ಇಂಗ್ಲೀಷ್‌ನ ವ್ಯಾಮೋಹದಿಂದಾಗಿ ಇಂದು ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಾಹಿತ್ಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಮಕ್ಕಳು ಕನಿಷ್ಠ ಎಸ್‌ಎಸ್‌ಎಲ್‌ಸಿವರೆಗಾದರೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವ ವ್ಯವಸ್ಥೆ ಬರಬೇಕು ಎಂದು ತಿಳಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷರಾದ ಲಲಿತಕ್ಕ ಕೆರಿಮನಿ, ಪರ್ಣಾಜಿ ಖರಾಟೆ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಬಿ.ಎಸ್. ಬಾಳೇಶ್ವರಮಠ ಆಶಯ ನುಡಿ ಹೇಳಿದರು. ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಉದ್ಘಾಟನಾ ನುಡಿಗಳನ್ನಾಡಿದರು.
ಈ ವೇಳೆ ಫಕ್ಕೀರೇಶ ಮ್ಯಾಟಣ್ಣವರ, ಕೋಟೆಪ್ಪ ರ‍್ದಿ, ಶಕುಂತಲಾ ಹೊರಟ್ಟಿ, ಲತಾ ತಟ್ಟಿ, ಶಕುಂತಲಾ ಅಳಗವಾಡಿ, ಸಿದ್ಧಲಿಂಗೇಶ ರಗಟಿ, ಡಿ.ವೈ. ಹುನಗುಂದ ಮತ್ತಿತರರು ಇದ್ದರು. ಶೇಖರ ಚಿಕ್ಕಣ್ಣವರ, ಆರ್.ಎಫ್. ಕಪ್ಪತ್ತನವರ, ನಾಗರಾಜ ಶಿಗ್ಲಿ, ಫಕ್ಕಿರೇಶ ಚಕಾರದ ನಿರೂಪಿಸಿದರು.

ಡಿಡಿಪಿಐ ಆರ್.ಎಸ್. ಬುರುಡಿ ಮಾತನಾಡಿ, ಇಂದು ಸಾವಯವ ಕೃಷಿಯ ಅಗತ್ಯ ಇದೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆಯನ್ನು ರೈತರು ಕಡಿಮೆ ಮಾಡಬೇಕು. ಸಾವಯವ ಕೃಷಿಯಿಂದ ವಿಷಮುಕ್ತ ಆಹಾರ ಬೆಳೆದರೆ ದೇಶದ ಜನರ ಆರೋಗ್ಯಕ್ಕೂ ಒಳ್ಳೆಯದಾಗುತ್ತದೆ. ಕೃಷಿ ಭೂಮಿ ಸಕಲ ಜೀವರಾಶಿಗಳ ಬದುಕಿನ ಆಧಾರವಾಗಿದ್ದು, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಬಗೆಗಿನ ಚಿಂತನೆ ಅಗತ್ಯ ಎಂದು ತಿಳಿಸಿದರು.

ಲಂಬಾಣಿ ಸಮುದಾಯ ಸ್ವಾಭಿಮಾನದ ಸಂಕೇತ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಜಾಗತಿಕ ಯುಗದಲ್ಲಿ ಶಿಕ್ಷಣ ಬಹು ಮುಖ್ಯವಾಗಿದ್ದು, ಲಂಬಾಣಿ ಜನಾಂಗ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದರ ಮೂಲಕ ಉತ್ತಮ ಸಮಾಜ, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವಂತೆ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಕರೆ ನೀಡಿದರು.

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಸಂತ ಸೇವಾಲಾಲರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಕೃತಿ, ನಾಗರಿಕ ಪ್ರಜ್ಞೆ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದನ್ನು ನಾವು ತಾಂಡಾಗಳಲ್ಲಿ ಕಾಣಬಹುದಾಗಿದೆ. ಲಂಬಾಣಿ ಸಮುದಾಯ ಬಹುದೊಡ್ಡ ಸಮುದಾಯ. ದೇಶದಲ್ಲಿ ಸುಮಾರು 12 ಕೋಟಿಯಷ್ಟು ಜನಸಂಖ್ಯೆ ಹೊಂದಿದೆ. ಜಿಲ್ಲೆಯಲ್ಲಿ ಅನೇಕ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಿದೆ. ಇತ್ತೀಚೆಗೆ 19 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಿ ಹಕ್ಕುಪತ್ರ ವಿತರಿಸಲಾಗಿದೆ ಎಂದರು.

ಲಂಬಾಣಿ ಸಮುದಾಯವು ಇಂದಿಗೂ ಸಹ ತಮ್ಮ ಸಂಸ್ಕೃತಿಯನ್ನು ಬಿಟ್ಟುಕೊಡದೆ ಅದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಸಂತಸದ ವಿಷಯವಾಗಿದ್ದು, ಇದಕ್ಕೆ ಸಂತ ಸೇವಾಲಾಲರು ಪ್ರೇರಣೆಯಾಗಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನಪ್ರಾತಿನಿಧ್ಯ ವ್ಯವಸ್ಥೆಯಡಿ ಲಂಬಾಣಿ ಸಮುದಾಯ ತಮ್ಮದೇ ಆದ ವ್ಯವಸ್ಥೆಯನ್ನು ಹೊಂದಿದೆ. ತಮ್ಮ ಸಮುದಾಯದ ಹಿರಿಯರಿಗೆ ನೀಡುವ ಗೌರವ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಲಂಬಾಣಿ ಸಮುದಾಯ ಕೊಟ್ಟ ಮಾತನ್ನು ಉಳಿಸಿಕೊಳ್ಳುವ, ಸ್ವಾಭಿಮಾನದ ಸಂಕೇತಕ್ಕೆ ಮಾದರಿಯಾದ ಸಮುದಾಯವಾಗಿದ್ದು, ಪ್ರತಿ ವರ್ಷವು ಇದೇ ರೀತಿ ಒಗ್ಗಟ್ಟಿನಿಂದ ಸಂತ ಸೇವಾಲಾಲರ ಜಯಂತಿ ಕಾರ್ಯಕ್ರಮವನ್ನು ಆಚರಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ. ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ, ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಹಿರಿಯರಾದ ಶಿವಪ್ಪ ನಾಯಕ ಸೇರಿದಂತೆ ಸಮಾಜದ ಗಣ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

ಬಾಬು ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ಅಲಕೋಡ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಹರಿಲಾಲ ಪವಾರ ಸಂತ ಸೇವಾಲಾಲರ ಕುರಿತು ಉಪನ್ಯಾಸ ನೀಡಿ, ಮುಂಬರುವ ದಿನಗಳಲ್ಲಿ ಸಂತ ಸೇವಾಲಾಲರ ಜಯಂತಿಯನ್ನು ರಾಷ್ಟ್ರದ್ಯಂತ ಆಚರಿಸಲು ಹಾಗೂ ಲಂಬಾಣಿ ಸಮುದಾಯಕ್ಕೆ ಉತ್ತಮ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ವಲಸೆ ಹೋಗುವುದನ್ನು ತಪ್ಪಿಸಬಹುದಾಗಿದೆ ಎಂದರು.

ಅವ್ಯವಸ್ಥೆಗಳ ಆಗರವಾದ ಪುರಸಭೆ ಮಳಿಗೆಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರಿನ ಪುರಸಭೆಗೆ ವಾಣಿಜ್ಯ ಮಳಿಗೆಗಳ ಸಂಕೀರ್ಣ ಅವ್ಯವಸ್ಥೆ, ಅಧ್ವಾನದ ಆಗರವಾಗಿದೆ. ಪಟ್ಟಣದ ಹೊಸ ಬಸ್‌ನಿಲ್ದಾಣದ ಹತ್ತಿರ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆಯಡಿ ಸುಮಾರು 25 ವರ್ಷಗಳ ಹಿಂದೆ ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. ಈ ವಾಣಿಜ್ಯ ಮಳಿಗೆಯಲ್ಲಿ ಒಟ್ಟು 29 ಮಳಿಗೆಗಳಿದ್ದು, ಇದರಲ್ಲಿ 25 ಮಳಿಗೆಗಳನ್ನು 20 ವರ್ಷದ ಲೀಜ್ ಆಧಾರದ ಮೇಲೆ ಮತ್ತು 4 ಮಳಿಗೆಗಳನ್ನು 12 ವರ್ಷದ ಲೀಜ್ ಆಧಾರದ ಮೇಲೆ ನೀಡಲಾಗಿದೆ.

ಟೆಂಡರ್ ಪಡೆದವರು ಯಾವುದೇ ಮಾರ್ಗಸೂಚಿಗಳನ್ನು ಪಾಲಿಸದೇ ಅಂಗಡಿಗಳನ್ನು ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳ ನಿಯಂತ್ರಣದಲ್ಲಿರುವ ಐಡಿಎಸ್‌ಎಂಟಿ ಮಳಿಗೆಗಳು ಅವರ ಸೂಚನೆಯಂತೆ ನಡೆಯುತ್ತವೆ. ಆದರೆ ಇಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೂ ತರದೆ, ಪುರಸಭೆಯ ಯಾವುದೇ ಅನುಮತಿಯೂ ಇಲ್ಲದೆ, ಯಾರದೋ ಹಿತಾಸಕ್ತಿಯಿಂದಾಗಿ ಮಳಿಗೆಯಲ್ಲಿ ಕಾನೂನು ಬಾಹಿರವಾಗಿ ನಡೆದುಕೊಳ್ಳಲಾಗುತ್ತಿದೆ. 20 ವರ್ಷಗಳಿಂದ ಯಾವ ಅವಧಿಯ ಚುನಾಯಿತ ಮಂಡಳಿ ಮತ್ತು ಅಧಿಕಾರಿಗಳು ಈ ಬಗ್ಗೆ ಚಕಾರವೆತ್ತದಿರುವುದು ಅಚ್ಚರಿಗೆ ಕಾರಣವಾಗಿದೆ.

ಸಂಕೀರ್ಣದಲ್ಲಿ ಮಾಂಸಾಹಾರಿ ಹೋಟೆಲ್, ಎಗ್ ರೈಸ್ ಅಂಗಡಿಗಳಿರುವುದರಿಂದ ಪಾನಮತ್ತರು ಮದ್ಯ ಸೇವಿಸಿ ಈ ಅಂಗಡಿಗಳ ಮುಂದೆ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿರುತ್ತಾರೆ. ಇದರಿಂದಾಗಿ ಈ ವಾಣಿಜ್ಯ ಮಳಿಗೆಯಲ್ಲಿನ ಎಸ್‌ಬಿಐನ ಎಟಿಎಂ, ಔಷಧಿ ಅಂಗಡಿ, ಬೇಕರಿ ಹಾಗೂ ಹೂವು-ಹಣ್ಣು ಮಾರಾಟ ಮಳಿಗೆಗಳಿಗೆ ಬರುವ ಮಹಿಳೆಯರು, ಮಕ್ಕಳು, ಸಂಪ್ರದಾಯಸ್ಥರು ಭಯದಿಂದಲೇ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಾಡಿಗೆಯಿಂದ ಲಕ್ಷಾಂತರ ರೂಪಾಯಿ ಪುರಸಭೆಗೆ ಸಂದಾಯವಾಗುತ್ತಿದ್ದರೂ ಕಳೆದ 15 ವರ್ಷಗಳಿಂದ ಇಲ್ಲಿನ ಮಳಿಗೆಗಳ ಸ್ಥಿತಿ ಅಧೋಗತಿಗೆ ತಲುಪಿದೆ. ಇದು ಪುರಸಭೆಯ ಜವಾಬ್ದಾರಿಯನ್ನು ಪ್ರಶ್ನಿಸುವಂತಾಗಿದೆ.

ಸಂಕೀರ್ಣದ ಮುಂದೆ ನಾಲ್ಕೈದು ತಳ್ಳುಗಾಡಿಯ ಎಗ್‌ರೈಸ್, ಟಿಫನ್, ಚಹಾದ ಅಂಗಡಿಗಳಿಗೆ ಪರವಾನಿಗೆ ಕೊಟ್ಟಿದ್ದಾರೆ. ಇಲ್ಲಿನ ವ್ಯಾಪಾರಸ್ಥರು ತ್ಯಾಜ್ಯವನ್ನು ಚರಂಡಿಗೆ ಹಾಕುವುದರಿಂದ ಈ ಪ್ರದೇಶ ಗಬ್ಬು ನಾರುತ್ತಿದೆ. ಇಲ್ಲಿ ಕ್ಷಣ ಹೊತ್ತು ನಿಲ್ಲಲು ಆಗುವುದಿಲ್ಲ. ಆದರೂ ಸಂಬಂಧಿಸಿದ ಪುರಸಭೆ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ. ಸರ್ಕಾರದ ನಿಯಮದ ಪ್ರಕಾರ ವಾಣಿಜ್ಯ ಮಳಿಗೆಯ ಕಟ್ಟಡದಲ್ಲಿ ಮಾಂಸ, ಎಗ್ ರೈಸ್ ಮಾರಾಟ ನಿಷಿದ್ಧ. ಆದರೆ ಇಲ್ಲಿ ಸರ್ಕಾರದ ಆದೇಶಕ್ಕೆ ಯಾವುದೇ ಕಿಮ್ಮತ್ತು ಇಲ್ಲ.

ವಾಣಿಜ್ಯ ಸಂಕೀರ್ಣದಲ್ಲಿ ಮದ್ಯ ಮತ್ತು ಮಾಂಸದ ಅಂಗಡಿಗಳ ಕುರಿತು ಪುರಸಭೆಯವರನ್ನು ಪ್ರಶ್ನಿಸಿದಾಗ ಯಾವುದೇ ಅನುಮತಿ ಕೊಟ್ಟಿಲ್ಲವೆಂದು ಹೇಳುತ್ತಾರೆ. ಹಾಗಾದರೆ ಕಾನೂನು ಬಾಹಿರವಾಗಿ ನಡೆಯುತ್ತಿರುವ ವ್ಯಾಪಾರಕ್ಕೆ ರಕ್ಷಣೆ ಯಾರದು ಎಂಬುದಕ್ಕೆ ಜಿಲ್ಲಾಧಿಕಾರಿಗಳೇ ಉತ್ತರಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ವಾಣಿಜ್ಯ ಮಳಿಗೆಗಳಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವವನ್ನು ಪತ್ತೆಹಚ್ಚಿ ಅವರನ್ನು ಅಲ್ಲಿಂದ ತೆರವುಗೊಳಿಸಲಾಗುವುದು. ಅಲ್ಲದೆ ಮಾಂಸ ಮಾರಾಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ವ್ಯಾಪಾರಸ್ಥರು ಚರಂಡಿಯಲ್ಲಿ ಕಸ-ಮುಸುರೆ ಹಾಕದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ವರ್ಷ ಮಳಿಗೆ ಟೆಂಡರ್ ಅವಧಿ ಮುಗಿಯಲಿದ್ದು, ಮರು ಟೆಂಡರ್ ವೇಳೆ ನಿಯಮಾವಳಿಯಂತೆ ಮಳಿಗೆ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಇಲ್ಲಿ ಸಿದ್ಧಪಡಿಸಿ ಮಾರಾಟ ಮಾಡುವ ಆಹಾರದ ಗುಣಮಟ್ಟ, ಸ್ವಚ್ಛತೆ, ಕುಡಿಯುವ ನೀರು, ಡಸ್ಟ್ಬಿನ್‌ಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸುವುದಿಲ್ಲ. ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿ ಅನಧಿಕೃತ ವ್ಯಾಪಾರಸ್ಥರೇ ತುಂಬಿಕೊಂಡಿದ್ದು, ಮೂಲ ಮಾಲೀಕರೇ ಇಲ್ಲ. ನಿಯಮಾನುಸಾರ ಟೆಂಡರ್ ಪಡೆದವರು ಬೇರೆಯವರಿಗೆ ಬೇರೆ ಉದ್ದೇಶಕ್ಕೆ ಅಂಗಡಿ ಕೊಡುವಂತಿಲ್ಲ. ಅಲ್ಲದೆ ಇಡೀ ಕಟ್ಟಡದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು, ಈ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದಕ್ಕೆ ಪ್ರಭಾವಿಗಳ ಶ್ರೀರಕ್ಷೆ ಇದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಡಿ ಆರೋಪಿಸಿದ್ದಾರೆ.

ಉದ್ಯಮಿ ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣ: ಅಂತಿಮ ಹಂತದಲ್ಲಿ SIT ತನಿಖೆ 

0

ಬೆಂಗಳೂರು: ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ವಿಶೇಷ ತನಿಖಾ ತಂಡ (ಎಸ್ಐಟಿ) ಶೀಘ್ರದಲ್ಲೇ ಪೊಲೀಸ್ ಕಮಿಷನರ್‌ಗೆ ಸಮಗ್ರ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ.

ಸಿ.ಜೆ. ರಾಯ್ ಆತ್ಮಹತ್ಯೆಯ ಹಿಂದಿನ ನಿಜಾಂಶಗಳು ಎಸ್ಐಟಿ ವರದಿಯಿಂದ ಬಹಿರಂಗವಾಗುವ ಸಾಧ್ಯತೆ ಇದೆ. ಎಸ್ಐಟಿ ನಾಲ್ಕು ಪ್ರಮುಖ ಆಯಾಮಗಳಲ್ಲಿ ತನಿಖೆ ಕೈಗೊಂಡಿತ್ತು. ಐಟಿ ದಾಳಿ, ಉದ್ಯಮ ವ್ಯವಹಾರಗಳು, ವ್ಯವಹಾರದಲ್ಲಿನ ಹೂಡಿಕೆಗಳು ಹಾಗೂ ಕೌಟುಂಬಿಕ ವಿಚಾರಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಾಗಿದೆ.

ಈ ಸಂಬಂಧ ಹಲವು ದಾಖಲೆಗಳು ಮತ್ತು ಕಡತಗಳನ್ನು ಪರಿಶೀಲಿಸಿರುವ ಎಸ್ಐಟಿ, ಕಚೇರಿ ಸಿಬ್ಬಂದಿ, ಅಧಿಕಾರಿಗಳು, ಐಟಿ ಅಧಿಕಾರಿಗಳು ಹಾಗೂ ರಾಯ್ ಕುಟುಂಬದ ಸದಸ್ಯರು ಮತ್ತು ಆಪ್ತರು ಸೇರಿದಂತೆ ಹಲವರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

ರಾಯ್ ಅವರ ಆತ್ಮಹತ್ಯೆ ನಿರ್ಧಾರ ಕುಟುಂಬದ ಸದಸ್ಯರಿಗೂ ಅಚ್ಚರಿ ಮೂಡಿಸಿದೆ. ಉದ್ಯಮ ಕ್ಷೇತ್ರದಲ್ಲಿ ದಿಟ್ಟ ಮತ್ತು ಧೈರ್ಯಶಾಲಿ ನಿರ್ಧಾರಗಳಿಗೆ ಹೆಸರಾಗಿದ್ದ ರಾಯ್, ಇಂತಹ ಕಠಿಣ ಹೆಜ್ಜೆ ಏಕೆ ಇಟ್ಟರು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಅಂತಿಮ ಹಂತದ ತನಿಖೆ ಪೂರ್ಣಗೊಳಿಸಿರುವ ಎಸ್ಐಟಿ ತಂಡ ಕೆಲವೇ ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದ್ದು, ಆ ವರದಿ ಮೂಲಕವೇ ಆತ್ಮಹತ್ಯೆಯ ಹಿಂದಿನ ಸತ್ಯಾಂಶಗಳು ಬೆಳಕಿಗೆ ಬರಲಿವೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

 

ಬೆಂಗಳೂರಿನಲ್ಲಿ ಉಂಡ ಮನೆಗೆ ದ್ರೋಹ ಬಗೆದ ಖತರ್ನಾಕ್ ಕಳ್ಳಿ ಅರೆಸ್ಟ್.!‌ 

0

ಬೆಂಗಳೂರು: ಮನೆಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಮಾಲೀಕರ ಮನೆದಲ್ಲೇ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಕೋಣನಕುಂಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ದೀಪ ಎಂಬ ಮಹಿಳೆ ಬಂಧಿತಳಾಗಿದ್ದಾಳೆ.

ಕೋಣನಕುಂಟೆ ನಿವಾಸಿ ಜಗದೀಶ್ ಅವರ ಮನೆಯಲ್ಲಿ ಸುಮಾರು ಒಂದು ವರ್ಷದಿಂದ ಮನೆಕೆಲಸ ಮಾಡುತ್ತಿದ್ದಾಳೆ ಎಂದು ತಿಳಿದುಬಂದಿದೆ. ಕೆಲಸ ಮಾಡುತ್ತಿದ್ದ ಅವಧಿಯಲ್ಲೇ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಒಂದೇ ಬಾರಿ ದೊಡ್ಡ ಪ್ರಮಾಣದಲ್ಲಿ ಕಳ್ಳತನ ಮಾಡದೇ, ಆಗಾಗ ಒಂದೊಂದೇ ಚಿನ್ನದ ಆಭರಣ ಕದ್ದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಮನೆದಲ್ಲಿದ್ದ ಚಿನ್ನಾಭರಣಗಳು ಕಾಣೆಯಾಗಿರುವುದು ಗಮನಕ್ಕೆ ಬಂದ ನಂತರ ಜಗದೀಶ್ ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ವೇಳೆ ಆರೋಪಿ ದೀಪ ಕೃತ್ಯ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನದಿಂದ ಪಡೆದ ಹಣದಲ್ಲಿ ತಮಿಳುನಾಡಿನಲ್ಲಿ ಸೈಟ್ ಖರೀದಿ ಮಾಡಿರುವುದಾಗಿ ಆರೋಪಿಯು ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ. ಸದ್ಯ ಆರೋಪಿ ಬಂಧನಕ್ಕೊಳಗಾಗಿದ್ದು, ಸುಮಾರು 200 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ.

error: Content is protected !!