Home Blog

ಲಂಡನ್ʼನಲ್ಲಿ ಪಾನ್ ಉಗುಳಿದ ಇಬ್ಬರು ಭಾರತೀಯರಿಗೆ ₹1.7 ಲಕ್ಷ ದಂಡ!

0

ಲಂಡನ್: ರಸ್ತೆಯಲ್ಲಿ ಪಾನ್ ಉಗುಳಿದ ಪ್ರಕರಣದಲ್ಲಿ ಭಾರತೀಯ ಮೂಲದ ಇಬ್ಬರು ವ್ಯಕ್ತಿಗಳಿಗೆ ತಲಾ ಸುಮಾರು ₹1.7 ಲಕ್ಷ ದಂಡ ವಿಧಿಸಿರುವ ಘಟನೆ ಲಂಡನ್ ನಲ್ಲಿ ನಡೆದಿದೆ.

ಮೊದಲ ಪ್ರಕರಣದಲ್ಲಿ, ಎಡ್ಗ್ವೇರ್ ನಿವಾಸಿಯಾದ ಅಕ್ಷಿತ್ಕುಮಾರ್ ಭದ್ರೆ ಪಟೇಲ್ (31) ಅವರಿಗೆ ವಾಯುವ್ಯ ಲಂಡನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 1,391 ಯುರೋ ದಂಡ ವಿಧಿಸಿದೆ.

ಜೂನ್ 11, 2025 ರಂದು ಕಿಂಗ್ಸ್ಬರಿ ಪ್ರದೇಶದ ರಸ್ತೆಯಲ್ಲಿ ಪಾನ್ ಉಗುಳಿದ ಹಿನ್ನೆಲೆಯಲ್ಲಿ ಅವರಿಗೆ ಮೊದಲಿಗೆ 100 ಯುರೋ ದಂಡ ವಿಧಿಸಲಾಗಿತ್ತು. ಆದರೆ, ಅವರು ದಂಡ ಪಾವತಿಸದೇ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆಯ ವೇಳೆ ಸಹ ಹಾಜರಾಗದ ಕಾರಣ, ನ್ಯಾಯಾಲಯವು ಹೆಚ್ಚಿನ ದಂಡ ವಿಧಿಸಿದೆ.

ಇನ್ನೊಂದು ಪ್ರಕರಣದಲ್ಲಿ, ರುಯಿಸ್ಲಿಪ್ ನಿವಾಸಿ ಹಿತೇಶ್ ಪಟೇಲ್ (32) ಅವರಿಗೂ ಇದೇ ಪ್ರಮಾಣದ 1,391 ಯುರೋ (ಸುಮಾರು ₹1.7 ಲಕ್ಷ) ದಂಡ ವಿಧಿಸಲಾಗಿದೆ. ಜೂನ್ 12, 2025 ರಂದು ವೆಂಬ್ಲಿ ಹಿಲ್ ರಸ್ತೆಯಲ್ಲಿ ಪಾನ್ ಉಗುಳಿದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿತ್ತು. ಅವರು ಸಹ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಅನುಪಸ್ಥಿತಿಯಲ್ಲೇ ವಿಚಾರಣೆ ನಡೆಸಿ ದಂಡ ವಿಧಿಸಿದೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟು: ರಾಜತಾಂತ್ರಿಕತೆಗೆ ಮರಳುವಂತೆ ಪ್ರಧಾನಿ ಮೋದಿ ಒತ್ತಾಯ

0

ನವದೆಹಲಿ: ಮಧ್ಯ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಿದ ಮೋದಿ, ಉದ್ವಿಗ್ನತೆಯನ್ನು ಕಡಿಮೆ ಮಾಡಲು ತುರ್ತು ಕ್ರಮ ಅಗತ್ಯವಿದೆ ಮತ್ತು ರಾಜತಾಂತ್ರಿಕ ಮಾರ್ಗಗಳಿಗೆ ಮರಳುವುದು ಮುಖ್ಯವೆಂದು ಹೇಳಿದ್ದಾರೆ. ಈ ಕುರಿತು ಅವರು ಎಕ್ಸ್ (ಹಳೆಯ ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬಲಪಡಿಸಲು ಪರಸ್ಪರ ಸಮನ್ವಯವನ್ನು ಮುಂದುವರಿಸುವ ಬಗ್ಗೆ ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.

ಇದಕ್ಕೂ ಮೊದಲು, ಉದ್ವಿಗ್ನತೆಯನ್ನು ಶಮನಗೊಳಿಸುವ ಪ್ರಯತ್ನಗಳ ಭಾಗವಾಗಿ ಮೋದಿ ಅವರು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಹಾಗೂ ಒಮಾನ್ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅಲ್ ಸೈದ್ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ.

ನವೀಕರಿಸಬಹುದಾದ ಇಂಧನದಲ್ಲಿ ಭಾರತಕ್ಕೆ ಭಾರೀ ಸಾಧನೆ: ಜಗತ್ತಿನಲ್ಲಿ 3ನೇ ಸ್ಥಾನ – ಪ್ರಹ್ಲಾದ್ ಜೋಶಿ

0

ನವದೆಹಲಿ: ಸೌರಶಕ್ತಿ ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತವು ಜಗತ್ತಿನಲ್ಲಿ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಇದು ಊಹಿಸಲಸಾಧ್ಯವಾದ ಮಹತ್ವದ ಸಾಧನೆಯಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

WION ವರ್ಲ್ಡ್ ಪಲ್ಸ್ ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, 2030ರೊಳಗೆ 500 ಗಿಗಾವಾಟ್ (GW) ನವೀಕರಿಸಬಹುದಾದ ಇಂಧನ ಗುರಿ ಸಾಧಿಸಲು ಭಾರತ ವೇಗವಾಗಿ ಸಾಗುತ್ತಿದೆ ಎಂದರು. ಶುದ್ಧ ಇಂಧನ ಕ್ಷೇತ್ರದಲ್ಲಿ ದೇಶವು ಅಭೂತಪೂರ್ವ ಬೆಳವಣಿಗೆ ಸಾಧಿಸುತ್ತಿದೆ ಎಂದು ಹೇಳಿದರು.

ಭಾರತದ ಮಾಡ್ಯೂಲ್ ಹಾಗೂ ಉತ್ಪಾದನಾ ಸಾಮರ್ಥ್ಯವು ಗಣನೀಯವಾಗಿ ವೃದ್ಧಿಯಾಗಿದೆ. ದೇಶದ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 35 ಗಿಗಾವಾಟ್‌ಗೆ ತಲುಪಿದ್ದು, 55 ಲಕ್ಷ ಸ್ಥಾಪನೆಗಳ ಮೂಲಕ ನಿರ್ವಹಿಸಲಾಗುತ್ತಿದೆ. ಇದರಲ್ಲಿ 31 ಲಕ್ಷ ಮನೆಗಳು ಒಳಗೊಂಡಿವೆ ಎಂದು ವಿವರಿಸಿದರು.

ಇದೇ ವೇಳೆ, PM ಸೂರ್ಯಘರ್ ಮತ್ತು PM ಕುಸುಮ್ ಯೋಜನೆಗಳ ಅಡಿಯಲ್ಲಿ 23 ಲಕ್ಷ ಸೌರಶಕ್ತಿ ಆಧಾರಿತ ನೀರಾವರಿ ಪಂಪುಗಳನ್ನು ಸ್ಥಾಪಿಸಲಾಗಿದೆ. ಇದು ಒಂದು ದಶಕದ ಹಿಂದೆ ಊಹಿಸಲಾಗದ ಮೈಲುಗಲ್ಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವು ಮಹತ್ತರ ಪರಿವರ್ತನೆ ಕಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯುಗಾದಿ ದಿನವೇ ದೇವಾಲಯದ ಮುಂದೆ ವಾಮಾಚಾರ: ಸ್ಥಳೀಯರ ಆತಂಕ

ಚಿಕ್ಕಮಗಳೂರು: ಯುಗಾದಿ ಹಬ್ಬದ ದಿನವೇ ದೇವಾಲಯದ ಎದುರು ವಾಮಾಚಾರ ನಡೆಸಿರುವ ಘಟನೆ ಕಳಸ ತಾಲೂಕಿನ ಕಂಚಿನಕೆರೆ ಗ್ರಾಮದಲ್ಲಿ ನಡೆದಿದೆ.

ಅಮಾವಾಸ್ಯೆ ಹಿನ್ನೆಲೆ ಕಳೆದ ರಾತ್ರಿ ದುಷ್ಕರ್ಮಿಗಳು ಕಾಲಭೈರವೇಶ್ವರನ ಗುಡಿಯ ಮುಂಭಾಗದಲ್ಲಿ ವಾಮಾಚಾರ ನಡೆಸಿದ್ದಾರೆ. ದೇವಸ್ಥಾನದ ಎದುರು ದೊಡ್ಡ ಕಲ್ಲುಗಳನ್ನು ವೃತ್ತಾಕಾರವಾಗಿ ಇಟ್ಟು, ಅದರ ಮಧ್ಯಭಾಗದಲ್ಲಿ ಕೃತ್ಯ ಎಸಗಲಾಗಿದೆ. ಅರಿಶಿನ, ಕುಂಕುಮ, ನಿಂಬೆಹಣ್ಣು, ತೆಂಗಿನಕಾಯಿ, ಕುಂಬಳಕಾಯಿ ಹಾಗೂ ನಾಣ್ಯಗಳನ್ನು ಬಳಸಿರುವುದು ಕಂಡುಬಂದಿದೆ.

ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕಳಸದ ಕಳಸೇಶ್ವರ ಸ್ವಾಮಿ ದೇವಸ್ಥಾನ ವ್ಯಾಪ್ತಿಗೆ ಸೇರಿದ ಕಾಲಭೈರವೇಶ್ವರನ ಗುಡಿ ಅತ್ಯಂತ ಪುರಾತನವಾಗಿದೆ. ಪ್ರತಿವರ್ಷ ಕಳಸೇಶ್ವರ ದೇವಸ್ಥಾನದ ಗಿರಿಜಾ ಕಲ್ಯಾಣ ರಥೋತ್ಸವ ಇದೇ ಮಾರ್ಗವಾಗಿ ಸಾಗುತ್ತದೆ.

ಕಳೆದ ವರ್ಷವೂ ಯುಗಾದಿ ಹಬ್ಬದ ಮುನ್ನಾದಿನ ದೇವಸ್ಥಾನದಲ್ಲಿ ಕಳ್ಳತನ ನಡೆದಿತ್ತು. ಇದೀಗ ಹಬ್ಬದ ದಿನವೇ ಜನಸಂಚಾರ ಹೆಚ್ಚಿರುವ ಪ್ರದೇಶದಲ್ಲಿ ಇಂತಹ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಸಹೋದರಿ ಜವರಮ್ಮ ನಿಧನ: ಕುಟುಂಬದಲ್ಲಿ ಶೋಕ

ಹಾಸನ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಅವರ ಸಹೋದರಿ ಜವರಮ್ಮ ಅವರು ಇಂದು ನಿಧನರಾಗಿದ್ದಾರೆ. 88 ವರ್ಷದ ಜವರಮ್ಮ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಜವರಮ್ಮ ಅವರ ನಿಧನದಿಂದ ಕುಟುಂಬದಲ್ಲಿ ಶೋಕ ವಾತಾವರಣ ನಿರ್ಮಾಣವಾಗಿದೆ. ತಂಗಿಯ ಅಗಲಿಕೆಗೆ ದೇವೇಗೌಡರು ಕಂಬನಿ ಮಿಡಿದಿದ್ದಾರೆ. ಅವರ ಅಂತ್ಯ ಸಂಸ್ಕಾರ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಸವನಾಯಕನಹಳ್ಳಿಯಲ್ಲಿ ನೆರವೇರಿತು.

ಇನ್ನೂ, ಜವರಮ್ಮ ಅವರು ದೇವೇಗೌಡರ ಮಗಳಾದ ಅನುಸೂಯ ಅವರನ್ನು ತಮ್ಮ ಮಗನಿಗೆ ವಿವಾಹ ಮಾಡಲು ಹಿಂದೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಆದರೆ, ದೇವೇಗೌಡರ ಮದುವೆಯ ನಂತರ ಪ್ರಸ್ತಾಪ ಮುರಿದುಬಿದ್ದ ಹಿನ್ನೆಲೆಯಲ್ಲಿ, ಸಹೋದರಸಹೋದರಿಯ ನಡುವೆ ವೈಮನಸ್ಸು ಉಂಟಾಯಿತು ಎಂದು ಮೂಲಗಳು ತಿಳಿಸಿವೆ.

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆ ಅಂತಿಮ ಹಂತಕ್ಕೆ – ಮುಂದಿನ ವಾರ ವರದಿ ಸಲ್ಲಿಕೆ

ಬೆಂಗಳೂರು: ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ವಾರದಲ್ಲಿ ತನಿಖಾ ತಂಡ ಅಂತಿಮ ವರದಿ ಸಲ್ಲಿಸುವ ಸಾಧ್ಯತೆ ಇದೆ.

ಈ ಪ್ರಕರಣದಲ್ಲಿ ಅಧಿಕಾರಿಗಳು ನಾಲ್ಕು ವಿಭಿನ್ನ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಆತ್ಮಹತ್ಯೆ ನಡೆದ ಸ್ಥಳದಿಂದ ವಿವಿಧ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಇದೀಗ ಅದರ ವರದಿಯೂ ಲಭ್ಯವಾಗಿದೆ.

ಇದಕ್ಕೆ ಜೊತೆಗೆ ಕುಟುಂಬಸ್ಥರು, ಐಟಿ ಅಧಿಕಾರಿಗಳು, ಆತ್ಮೀಯರು ಹಾಗೂ ವ್ಯವಹಾರಿಕ ಸಂಪರ್ಕ ಹೊಂದಿದವರ ಹೇಳಿಕೆಗಳನ್ನು ದಾಖಲಿಸಿ ಸಮಗ್ರ ಪರಿಶೀಲನೆ ನಡೆಸಲಾಗಿದೆ. ಈ ಎಲ್ಲಾ ಮಾಹಿತಿಗಳ ಆಧಾರದ ಮೇಲೆ ತನಿಖಾ ವರದಿ ಸಿದ್ಧಪಡಿಸಲಾಗಿದೆ.

ಆದರೆ ತನಿಖೆ ಪೂರ್ಣಗೊಂಡಿದ್ದರೂ ಆತ್ಮಹತ್ಯೆಗೆ ನಿಖರ ಕಾರಣ ಪತ್ತೆಯಾಗಿಲ್ಲ. ಪ್ರಾಥಮಿಕ ವರದಿಯಲ್ಲಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. ಆದರೆ ಆ ಖಿನ್ನತೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಕಾನ್ಫಿಡೆಂಟ್ ಗ್ರೂಪ್ ಮಾಲೀಕರಾದ ಸಿಜೆ ರಾಯ್ ಅವರು 2026 ಜನವರಿ 30ರಂದು ತಮ್ಮ ಕಚೇರಿಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದ ಸುತ್ತ ಇನ್ನೂ ಕುತೂಹಲ ಮುಂದುವರಿದಿದೆ.

ದೀರ್ಘಕಾಲ ಕುಳಿತುಕೊಳ್ಳುವುದು ಅಪಾಯಕಾರಿಯೇ? ತಜ್ಞರ ಎಚ್ಚರಿಕೆ ತಿಳಿದುಕೊಳ್ಳಿ!

0

ಇಂದಿನ ವೇಗದ ಜೀವನಶೈಲಿಯಲ್ಲಿ ಆಫೀಸ್ ಕೆಲಸ, ಮನೆ ಕಾರ್ಯಗಳು ಹಾಗೂ ಆನ್‌ಲೈನ್ ಅಧ್ಯಯನದ ಹಿನ್ನೆಲೆಯಲ್ಲಿ ಜನರು ಹಲವು ಗಂಟೆಗಳ ಕಾಲ ನಿರಂತರವಾಗಿ ಕುಳಿತುಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಈ ಅಭ್ಯಾಸ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಪ್ರಸಿದ್ಧ ವೈದ್ಯರಾದ ಡಾ. ಅಜಯ್ ಕುಮಾರ್ ಅವರ ಪ್ರಕಾರ, ದೀರ್ಘಕಾಲ ಕುಳಿತುಕೊಳ್ಳುವುದರಿಂದ ಸ್ನಾಯುಗಳು ದುರ್ಬಲವಾಗುತ್ತವೆ ಮತ್ತು ಬೆನ್ನುಹುರಿಯ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಇದರಿಂದ ಬೆನ್ನುನೋವು ಸಾಮಾನ್ಯ ಸಮಸ್ಯೆಯಾಗುತ್ತದೆ. ಜೊತೆಗೆ ರಕ್ತ ಸಂಚಾರ ನಿಧಾನಗೊಳ್ಳುವುದರಿಂದ ಕೈ-ಕಾಲುಗಳಲ್ಲಿ ಊತ ಹಾಗೂ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಇದೇ ವೇಳೆ, ಈ ರೀತಿಯ ಜೀವನಶೈಲಿಯಿಂದ ತೂಕ ಹೆಚ್ಚಳ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಮಧುಮೇಹದಂತಹ ಸಮಸ್ಯೆಗಳ ಅಪಾಯವೂ ಹೆಚ್ಚಾಗಬಹುದು ಎಂದು ಅವರು ಹೇಳಿದ್ದಾರೆ. ಮೆಟಾಬಾಲಿಸಂ ನಿಧಾನಗೊಳ್ಳುವುದರಿಂದ ಕ್ಯಾಲೊರಿಗಳು ಸರಿಯಾಗಿ ಖರ್ಚಾಗದೇ ಆರೋಗ್ಯ ಹದಗೆಡುವ ಸಾಧ್ಯತೆ ಇದೆ.

ನಿರಂತರವಾಗಿ ಕಂಪ್ಯೂಟರ್, ಲ್ಯಾಪ್‌ಟಾಪ್ ಅಥವಾ ಮೊಬೈಲ್ ಪರದೆ ನೋಡುವುದರಿಂದ ಕಣ್ಣುಗಳಲ್ಲಿ ಉರಿ, ದಣಿವು ಮತ್ತು ದೃಷ್ಟಿ ಸಮಸ್ಯೆಗಳು ಕಾಣಿಸಬಹುದು. ಇದರ ಜೊತೆಗೆ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬಿದ್ದು, ಚಡಪಡಿಕೆ ಹಾಗೂ ಏಕಾಗ್ರತೆ ಕೊರತೆ ಉಂಟಾಗುವ ಸಾಧ್ಯತೆ ಇದೆ.

ಗಮನಿಸಬೇಕಾದ ಲಕ್ಷಣಗಳು:

  • ಬೆನ್ನುನೋವು
  • ಕಣ್ಣುಗಳಲ್ಲಿ ಉರಿ ಮತ್ತು ದಣಿವು
  • ಕೈ-ಕಾಲುಗಳಲ್ಲಿ ಊತ, ನೋವು
  • ಶಕ್ತಿ ಕೊರತೆ, ಚಡಪಡಿಕೆ, ನಿದ್ರೆ ಸಮಸ್ಯೆ
  • ತೂಕ ಹೆಚ್ಚಳ, ಸ್ನಾಯು ದುರ್ಬಲತೆ

ತಡೆಗಟ್ಟುವ ಕ್ರಮಗಳು:

  • ಪ್ರತೀ ಗಂಟೆಗೆ ಒಂದು ಸಣ್ಣ ಬ್ರೇಕ್ ತೆಗೆದುಕೊಳ್ಳುವುದು
  • ಎದ್ದು ಸ್ಟ್ರೆಚಿಂಗ್ ಅಥವಾ ಸಣ್ಣ ವಾಕ್ ಮಾಡುವುದು
  • ಸರಿಯಾದ ಸ್ಥಿತಿಯಲ್ಲಿ ಕುಳಿತುಕೊಳ್ಳುವುದು, ಪರದೆ ಕಣ್ಣು ಮಟ್ಟದಲ್ಲಿ ಇರಿಸುವುದು
  • ಸಮತೋಲನ ಆಹಾರ ಸೇವನೆ ಮತ್ತು ಸಾಕಷ್ಟು ನೀರು ಕುಡಿಯುವುದು
  • ಸ್ಟ್ಯಾಂಡಿಂಗ್ ಡೆಸ್ಕ್ ಬಳಕೆ ಅಥವಾ ನಿಯಮಿತ ವ್ಯಾಯಾಮ/ಯೋಗ ಪಾಲನೆ

ಒಟ್ಟಿನಲ್ಲಿ, ದೀರ್ಘಕಾಲ ಕುಳಿತುಕೊಳ್ಳುವ ಅಭ್ಯಾಸವನ್ನು ನಿರ್ಲಕ್ಷ್ಯ ಮಾಡದೇ, ಸಮಯಕ್ಕೆ ಸರಿಯಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಜಗದ್ಗುರು ಶಿವಾನಂದ ಮಠ ಕಟ್ಟಿದ್ದ ಶಿಕ್ಷಕ ಹಾಗೂ ಸ್ವಾಮೀಜಿ ಆತ್ಮಹತ್ಯೆ: ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

0

ರಾಯಚೂರು: ಸಿಂಧನೂರು ತಾಲೂಕಿನ ಬಸಾಪುರ ಗ್ರಾಮದಲ್ಲಿ ಸ್ವಾಮೀಜಿಯೊಬ್ಬರು ಮಠದೊಳಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಕ್ತರಲ್ಲಿ ಆತಂಕ ಮತ್ತು ಆಘಾತ ಮೂಡಿಸಿದೆ. ದೇವೇಂದ್ರಪ್ಪ(58), ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದವರು, ವೈರಾಗ್ಯ ಜೀವನವನ್ನು ಅಳವಡಿಸಿಕೊಂಡು ಶಿವಾನಂದ ಜಗದ್ಗುರು ಮಠವನ್ನು ಸ್ಥಾಪಿಸಿದ್ದರು.

ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗುಳಗುಳಿ ಗ್ರಾಮದವರಾದ ಅವರು, ಎರಡು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಧಾರ್ಮಿಕ ಜೀವನಕ್ಕೆ ತೊಡಗಿ ಮಠದಲ್ಲಿ ಪುರಾಣ, ಪ್ರವಚನಗಳನ್ನು ನಡೆಸುತ್ತಿದ್ದರು.

ಇತ್ತೀಚಿನ ಅಪಘಾತದ ನಂತರ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದು, ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಹಿನ್ನೆಲೆ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ತುರುವಿಹಾಳ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿಜಯ್ ಇಫ್ತಾರ್ ಕೂಟ: ವಿವಾದಗಳ ಬಳಿಕ ಕಟ್ಟುನಿಟ್ಟಿನ ನಿಯಮಗಳೊಂದಿಗೆ ಆಯೋಜನೆ

ತಮಿಳು ನಟ ವಿಜಯ್ ಈ ವರ್ಷದ ಇಫ್ತಾರ್ ಕೂಟವನ್ನು ಹಿಂದಿನ ವಿವಾದಗಳ ಹಿನ್ನೆಲೆ ಹೆಚ್ಚು ಜಾಗ್ರತೆಯೊಂದಿಗೆ ಆಯೋಜಿಸಿರುವುದು ಗಮನಾರ್ಹವಾಗಿದೆ. ಮಮಲ್ಲಪುರಂನಲ್ಲಿ ನಡೆದ ಈ ಕಾರ್ಯಕ್ರಮ, ನಿಯಂತ್ರಿತ ಮತ್ತು ನಿಯಮಬದ್ಧ ವ್ಯವಸ್ಥೆಯೊಂದಿಗೆ ನೆರವೇರಿತು.

ಹೋಟೆಲ್‌ನಲ್ಲಿ ಸಂಜೆ 6 ರಿಂದ 9 ಗಂಟೆಯವರೆಗೆ ನಡೆದ ಈ ಕೂಟಕ್ಕೆ ಕೇವಲ ಆಹ್ವಾನಿತರಿಗೆ ಮಾತ್ರ ಅವಕಾಶ ಕಲ್ಪಿಸಲಾಯಿತು. ತಮಿಳುನಾಡಿನ ವಿವಿಧ ಭಾಗಗಳಿಂದ ಸುಮಾರು ಸಾವಿರ ಮಂದಿಗೆ ಆಹ್ವಾನ ನೀಡಲಾಗಿದ್ದು, ನಿಯಂತ್ರಿತ ಪ್ರವೇಶ ವ್ಯವಸ್ಥೆ ಅನುಸರಿಸಲಾಯಿತು.

ಚುನಾವಣಾ ಅವಧಿ ಮತ್ತು ಜಾರಿಯಲ್ಲಿರುವ ನೀತಿ ಸಂಹಿತೆಯನ್ನು ಪರಿಗಣಿಸಿ ಚುನಾವಣಾ ಆಯೋಗದ ಪೂರ್ವಾನುಮತಿ ಪಡೆದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಟಿವಿಕೆ ತಿಳಿಸಿದೆ. ಯಾವುದೇ ವಿವಾದ ಅಥವಾ ತಪ್ಪು ಅರ್ಥೈಸಿಕೆಗೆ ಅವಕಾಶ ನೀಡದಂತೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕಳೆದ ವರ್ಷದ ಇಫ್ತಾರ್ ಕೂಟ ವಿವಾದಕ್ಕೆ ಕಾರಣವಾಗಿದ್ದು, ಕೆಲವು ಸಂಘಟನೆಗಳು ಕಾರ್ಯಕ್ರಮದ ನಿರ್ವಹಣೆ ಮತ್ತು ಪಾವಿತ್ರ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ವಿಜಯ್ ಈ ಬಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದು ಸ್ಪಷ್ಟವಾಗಿದೆ.

ಒಟ್ಟಾರೆ, ಈ ವರ್ಷದ ಇಫ್ತಾರ್ ಕೂಟವನ್ನು ನಿಯಮಬದ್ಧವಾಗಿ ಮತ್ತು ವಿವಾದರಹಿತವಾಗಿ ನಡೆಸಲು ವಿಜಯ್ ಮತ್ತು ಅವರ ತಂಡ ಒತ್ತು ನೀಡಿರುವುದು ಕಂಡುಬರುತ್ತಿದೆ.

ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ 2 ದಿನ ಭಾರೀ ಮಳೆ: ಇಲ್ಲೆಲ್ಲಾ ಆರೆಂಜ್ ಅಲರ್ಟ್ ಘೋಷಣೆ!

ಬೆಂಗಳೂರು:- ಬೇಸಿಗೆಯ ಬಿರು ಬಿಸಿಲಿನಿಂದ ದಣಿದಿದ್ದ ರಾಜ್ಯದ ಜನರಿಗೆ ಕಳೆದ ಎರಡು ದಿನದಿಂದ ಸುರಿದ ಮಳೆ ಕೊಂಚ ನೆಮ್ಮದಿ ತಂದಿದೆ. ಇದೀಗ ಈ ಮಳೆ ಇನ್ನೂ ಎರಡು ದಿನ ಭಾರೀ ಪ್ರಮಾಣದಲ್ಲಿ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ತುಮಕೂರು, ಮಂಡ್ಯ ಮತ್ತು ಚಾಮರಾಜನಗರದಲ್ಲಿ ಮಳೆ ಆಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಇನ್ನೂ ರಾಜ್ಯದ ಹಲವಾರು ಭಾಗಗಳಲ್ಲಿ ಬುಧವಾರ ಭಾರೀ ಮಳೆಯಾಗಿದ್ದು, ವಾಹನ ಸವಾರರು ಪರದಾಟ ನಡೆಸಿದ ದೃಶ್ಯವೂ ಕಂಡು ಬಂತು.

error: Content is protected !!