ಕಾರವಾರ: ಮಧ್ಯಪ್ರಾಚ್ಯ ಯುದ್ಧ ಸಂಘರ್ಷ ಹಾಗೂ ಹವಾಮಾನ ಬದಲಾವಣೆಯ ಪರಿಣಾಮವಾಗಿ ಮೀನುಗಾರರ ಆರ್ಥಿಕ ಚಟುವಟಿಕೆ ಮೇಲೆ ಭಾರೀ ಹೊಡೆತ ಬಿದ್ದಿದ್ದು, ಕಾರವಾರದಲ್ಲಿ ಮೀನುಗಾರಿಕೆ ಬಹುತೇಕ ಸ್ಥಗಿತಗೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಕೋಲ್ ಬಂದರಿನಲ್ಲಿ ಬೋಟುಗಳು ಲಂಗರು ಹಾಕಿರುವ ದೃಶ್ಯ ಕಂಡುಬರುತ್ತಿದ್ದು, ಮೀನುಗಾರಿಕಾ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದೆ.
ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ವಿದೇಶಗಳಿಗೆ ಮೀನು ರಫ್ತು ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಮೀನುಗಳ ದರ ಕುಸಿತ ಕಂಡಿದೆ. ಮತ್ತೊಂದೆಡೆ ಹವಾಮಾನ ಬದಲಾವಣೆಯಿಂದ ಸಮುದ್ರ ಅಬ್ಬರ ಹೆಚ್ಚಾಗಿ, ಆಳ ಸಮುದ್ರಕ್ಕೆ ತೆರಳಿದ್ದ ಬೋಟುಗಳು ಮರಳಿ ಬಂದರಿನಲ್ಲಿ ನಿಂತಿವೆ. ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಬೇಟೆ ನಿರೀಕ್ಷಿಸಿದ್ದ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದೇ ವೇಳೆ ಕಮರ್ಷಿಯಲ್ ಸಿಲಿಂಡರ್ ಕೊರತೆಯಿಂದ ಆಳ ಸಮುದ್ರ ಮೀನುಗಾರಿಕೆಗೂ ತೊಂದರೆ ಉಂಟಾಗಿದ್ದು, ದೀರ್ಘಕಾಲದ ಸಮುದ್ರ ಪ್ರಯಾಣಕ್ಕೂ ಅಡಚಣೆ ಎದುರಾಗಿದೆ. ಕಳೆದ ಒಂದು ವಾರದಿಂದ ಅರಬ್ಬಿ ಸಮುದ್ರದಲ್ಲಿ ಗಂಟೆಗೆ ಸುಮಾರು 30 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರಿಕೆ ಇನ್ನಷ್ಟು ಕುಂಠಿತವಾಗಿದೆ.
ದರ ಕುಸಿತ ಮತ್ತು ನಿರಂತರ ಸಮಸ್ಯೆಗಳ ಹಿನ್ನೆಲೆಯಲ್ಲಿ ಮೀನುಗಾರರು ಬೋಟುಗಳನ್ನು ಬಂದರಿನಲ್ಲಿ ನಿಲ್ಲಿಸಿದ್ದು, ಹೊರರಾಜ್ಯಗಳಿಂದ ಬಂದ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಆರಂಭಿಸಿದ್ದಾರೆ. ಜೂನ್ 1ರಿಂದ ಆರಂಭವಾಗಬೇಕಿದ್ದ ಮೀನುಗಾರಿಕೆ ಬಂದ್ ಅವಧಿ ಮುಂಚಿತವಾಗಿಯೇ ಪ್ರಾರಂಭವಾಗುವ ಆತಂಕವೂ ಮೀನುಗಾರರಲ್ಲಿ ಮೂಡಿದೆ. ಒಟ್ಟಿನಲ್ಲಿ ಕಾರವಾರ ಸೇರಿದಂತೆ ಜಿಲ್ಲೆಯ ಬಂದರುಗಳಲ್ಲಿ ಮೀನುಗಾರಿಕೆ ಚಟುವಟಿಕೆ ಕುಂಠಿತಗೊಂಡಿದ್ದು, ಮೀನುಗಾರರು ಗಂಭೀರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

