Home Blog

ಬಿಜೆಪಿ ನಾಯಕರ ಮೆಟ್ರೋ-ಬೈಕ್ ಪ್ರಯಾಣ ಒಂದು ದಿನದ ನಾಟಕ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ಬಿಜೆಪಿ ನಾಯಕರ ಮೆಟ್ರೋ ಹಾಗೂ ಬೈಕ್ ಪ್ರಯಾಣ ಕೇವಲ ಒಂದು ದಿನದ ರಾಜಕೀಯ ನಾಟಕ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ನಾಯಕರ ಮೆಟ್ರೋ ಪ್ರಯಾಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇದೆಲ್ಲ ಕೇವಲ ಪ್ರಚಾರಕ್ಕಾಗಿ ಮಾಡುತ್ತಿರುವ ನಾಟಕ. ಪ್ರತಿದಿನ ಮೆಟ್ರೋ ಹತ್ತಿದರೆ ನಾವು ಸಹ ಒಪ್ಪುತ್ತೇವೆ. ಒಬ್ಬ ಮಂತ್ರಿ ಮೆಟ್ರೋ ಹತ್ತುವುದು, ಮತ್ತೊಬ್ಬ ಬೈಕ್‌ನಲ್ಲಿ ಸಂಚರಿಸುವುದು ಒಂದು ದಿನದ ಪ್ರದರ್ಶನ ಮಾತ್ರ” ಎಂದು ಟೀಕಿಸಿದರು.

ನಿಜವಾಗಿಯೂ ಸಾರ್ವಜನಿಕ ಸಾರಿಗೆ ಬಗ್ಗೆ ಕಾಳಜಿ ಇದ್ದರೆ ಪ್ರತಿದಿನ ಬಿಎಂಟಿಸಿ ಬಸ್ ಬಳಸಲಿ. ನಮ್ಮ ಸರ್ಕಾರದ ಶಕ್ತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿ ಎಂದು ಸವಾಲು ಹಾಕಿದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಉಲ್ಲೇಖಿಸಿದ ಅವರು, ವಿಜಯೇಂದ್ರ ಮೆಟ್ರೋ ಹತ್ತುವ ಪರಿಸ್ಥಿತಿ ಏಕೆ ಬಂತು? ಅದಕ್ಕೆ ಕಾರಣ ಯಾರು? ಈ ಪ್ರಶ್ನೆಗೆ ಉತ್ತರ ಸಿಗಬೇಕು ಎಂದು ಪ್ರಶ್ನಿಸಿದರು.

ಎಸ್‌ಐಆರ್ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಇದು ಬಿಜೆಪಿ ಪರ ಅನುಕೂಲವಾಗುವಂತೆ ರೂಪಿಸಿರುವ ವ್ಯವಸ್ಥೆ ಎಂದು ಆರೋಪಿಸಿದರು. ಎಸ್‌ಐಆರ್ ಸಂಪೂರ್ಣ ಅಸಂವಿಧಾನಿಕವಾಗಿದೆ. ನಮಗೆ ಎಸ್‌ಐಆರ್ ವಿರೋಧವಿಲ್ಲ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸಬೇಕು,” ಎಂದು ಹೇಳಿದರು.

ಉದಾಹರಣೆಯಾಗಿ ತಮ್ಮ ಹೆಸರನ್ನೇ ಉಲ್ಲೇಖಿಸಿದ ಅವರು, ನನ್ನ ಹೆಸರು ಪ್ರಿಯಾಂಕ್. ಅದರಲ್ಲಿ ಸಣ್ಣ ವ್ಯತ್ಯಾಸ ಬಂದರೂ ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹೋಗುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲೂ ವೈಸ್ ಅಡ್ಮಿರಲ್ ಒಬ್ಬರ ಮತ ಅಳಿಸಲಾಗಿತ್ತು. ಇದರಿಂದ ಅನೇಕರು ಮತದಾನ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಕೇವಲ 10 ನಿಮಿಷ ಸುರಿದ ಮಳೆಗೆ ಸಾವಿರಾರು ಎಕರೆ ಭತ್ತ, 4 ಎಕರೆ ಟೊಮೆಟೊ ಬೆಳೆ ಸಂಪೂರ್ಣ ನಾಶ

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಕಳೆದ ರಾತ್ರಿ ಕೇವಲ ಹತ್ತು ನಿಮಿಷ ಸುರಿದ ಭಾರಿ ಗಾಳಿ-ಮಳೆ ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಚನ್ನಗಿರಿ ತಾಲೂಕಿನ ಬಸವಪಟ್ಟಣ ಹಾಗೂ ಶೃಂಗಾರ ಬಾಗು ತಾಂಡದಲ್ಲಿ 20ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮತ್ತು ಹಲವು ಬೃಹತ್ ಮರಗಳು ನೆಲಕ್ಕುರುಳಿವೆ.

ಭಾರೀ ಗಾಳಿಯ ರಭಸಕ್ಕೆ ದೊಡ್ಡ ಮರಗಳು ಮನೆಗಳ ಮೇಲೆಯೇ ಬಿದ್ದ ಪರಿಣಾಮ ಹಲವಾರು ಮನೆಗಳಿಗೆ ಹಾನಿಯಾಗಿದೆ. ನಿನ್ನೆ ಸಂಜೆದಿಂದಲೇ ಎರಡು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಗ್ರಾಮಸ್ಥರು ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ.

ಕೇವಲ ಹತ್ತು ನಿಮಿಷಗಳ ಗಾಳಿ-ಮಳೆಯ ಅಬ್ಬರದಿಂದಲೇ ಎರಡು ಗ್ರಾಮಗಳಲ್ಲಿ ಭಾರೀ ಅವಾಂತರ ಉಂಟಾಗಿದ್ದು, ಕೂಲಿ ಕೆಲಸವನ್ನೇ ಅವಲಂಬಿಸಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹಾನಿಗೊಳಗಾದವರಿಗೆ ತಕ್ಷಣ ಪರಿಹಾರ ನೀಡುವಂತೆ ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇನ್ನೊಂದೆಡೆ ಬಸವಪಟ್ಟಣ ಗ್ರಾಮದಲ್ಲಿ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಅಡಿಕೆ, ತೆಂಗು ಹಾಗೂ ಟೊಮೆಟೊ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ರೈತನೊಬ್ಬ ಸಾಲ ಮಾಡಿ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ಎಕರೆಗೆ ₹1 ಲಕ್ಷದಿಂದ ₹1.5 ಲಕ್ಷವರೆಗೆ ವೆಚ್ಚ ಮಾಡಿದ್ದರೂ, ಕೊಯ್ಲಿಗೆ ಸಿದ್ಧವಾಗಿದ್ದ ಬೆಳೆ ಹಾಳಾಗಿದೆ.

ಬೆಳೆ ಸಂಪೂರ್ಣ ನೆಲಕ್ಕೆ ಬಿದ್ದಿರುವುದರಿಂದ ಟೊಮೆಟೊ ಕೊಳೆಯುವ ಆತಂಕ ರೈತರನ್ನು ಕಾಡುತ್ತಿದೆ. ಬಿರು ಬೇಸಿಗೆಯ ನಡುವೆಯೂ ಟ್ಯಾಂಕರ್ ಹಾಗೂ ಬೋರ್‌ವೆಲ್ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದ ರೈತರು, ಈಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿರುವುದರಿಂದ ಕಣ್ಣೀರಿಡುತ್ತಿದ್ದಾರೆ.

IPL 2026: ‘ಗೆಲ್ಲಲೇಬೇಕು, ಗೆಲ್ಲುತ್ತೇವೆ’: ಆರ್ ಸಿಬಿಗೆ ಶ್ರೇಯಸ್ ಅಯ್ಯರ್ ಖಡಕ್ ಎಚ್ಚರಿಕೆ!

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್-19ರ ಪ್ಲೇಆಫ್ ಪೈಪೋಟಿ ತೀವ್ರ ಹಂತ ತಲುಪಿದ್ದು, ಇಂದು ನಡೆಯಲಿರುವ 61ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಗಳ ಭವಿಷ್ಯವನ್ನು ನಿರ್ಧರಿಸಲಿದೆ.

ಈ ಮಹತ್ವದ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್, ಆರ್‌ಸಿಬಿಗೆ ನೇರ ಎಚ್ಚರಿಕೆ ನೀಡಿದ್ದು, ತಮ್ಮ ತಂಡ ಗೆಲುವಿಗೆ ಸಂಪೂರ್ಣ ಸಜ್ಜಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಜಯ ಸಾಧಿಸಿದರೆ 18 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶ ಖಚಿತವಾಗಲಿದೆ. ಮತ್ತೊಂದೆಡೆ, ಪ್ಲೇಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಪಂಜಾಬ್ ಕಿಂಗ್ಸ್ ಗೆಲುವು ಅನಿವಾರ್ಯವಾಗಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೋತು ಸತತ ಐದು ಸೋಲುಗಳ ಆಘಾತದಲ್ಲಿದ್ದರೂ, ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ತಂಡ ಸಂಪೂರ್ಣ ಸಿದ್ಧವಾಗಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ನಾವು ಆರ್‌ಸಿಬಿ ವಿರುದ್ಧ ಆಡಲು ಇನ್ನೂ ಕಾಯಲು ಸಾಧ್ಯವಿಲ್ಲ. ಎಲ್ಲದರಿಗೂ ಸಿದ್ಧವಾಗಿಯೇ ಕಣಕ್ಕಿಳಿಯುತ್ತೇವೆ. ಈ ಪಂದ್ಯದಲ್ಲಿ ಗೆಲ್ಲಲೇಬೇಕು, ಗೆಲ್ಲುತ್ತೇವೆ ಎಂದು ಹೇಳುವ ಮೂಲಕ ಪ್ಲೇಆಫ್ ಪ್ರವೇಶಿಸುವ ತಮ್ಮ ತಂಡದ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಪಂದ್ಯದಲ್ಲಿ ಅಝ್ಮತುಲ್ಲಾ ಒಮರ್ಜಾಯ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ 200ಕ್ಕೂ ಅಧಿಕ ರನ್ ಕಲೆಹಾಕಿದ್ದರೂ, ಬೌಲಿಂಗ್ ವೈಫಲ್ಯದಿಂದ ಮುಂಬೈ ಇಂಡಿಯನ್ಸ್ ಎದುರು ಸೋಲು ಅನುಭವಿಸಿತ್ತು.

ಈ ಸೋಲನ್ನು ಒಪ್ಪಿಕೊಂಡ ಶ್ರೇಯಸ್ ಅಯ್ಯರ್, “ಆ ಸೋಲನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ. ತಂಡದ ಮೇಲೆ ಒತ್ತಡ ಇರುವುದು ನಿಜ. ಆದರೆ ಇಂತಹ ಒತ್ತಡದ ಕ್ಷಣಗಳಲ್ಲೇ ಶ್ರೇಷ್ಠ ಪ್ರದರ್ಶನ ಹೊರಬರುತ್ತದೆ” ಎಂದು ಹೇಳಿದ್ದಾರೆ.

ವಿಜಯ್ ಸಿಎಂ ಆಗಿದ್ದಕ್ಕೆ ನನಗೆ ಅಸೂಯೆ ಇಲ್ಲ: ಟೀಕೆಗಳಿಗೆ ತಲೈವಾ ರಜನಿಕಾಂತ್ ತಿರುಗೇಟು

ಚೆನ್ನೈ: ನಟ ವಿಜಯ್ ಮುಖ್ಯಮಂತ್ರಿ ಆಗಿರುವುದನ್ನು ನೋಡಿ ತಮಗೆ ಯಾವುದೇ ಅಸೂಯೆ ಇಲ್ಲ ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ. ತಮ್ಮ ವಿರುದ್ಧ ಕೇಳಿಬಂದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ರಾಜಕೀಯದಲ್ಲಿ ಇಲ್ಲ. ಅಂತಹ ಕೀಳು ಮನೋಭಾವದ ವ್ಯಕ್ತಿಯೂ ಅಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯ ಬಳಿಕ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರನ್ನು ರಜನಿಕಾಂತ್ ಭೇಟಿಯಾಗಿದ್ದದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಭೇಟಿಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಹಲವು ಟೀಕೆಗಳು ಕೇಳಿಬಂದಿದ್ದವು.

ಈ ಹಿನ್ನೆಲೆಯಲ್ಲಿ ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಜನಿಕಾಂತ್, ತಮ್ಮ ಭೇಟಿ ಹಾಗೂ ವಿಜಯ್ ಮುಖ್ಯಮಂತ್ರಿ ಆಗಿರುವ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದರು.

ನಾನೇಕೆ ವಿಜಯ್ ಬಗ್ಗೆ ಅಸೂಯೆಪಡಬೇಕು? ನಾನು ರಾಜಕೀಯದಲ್ಲೇ ಇಲ್ಲ. ಬಹುಶಃ ಕಮಲ್ ಹಾಸನ್ ಮುಖ್ಯಮಂತ್ರಿ ಆಗಿದ್ದರೆ ಅಸೂಯೆಯಾಗುತ್ತಿತ್ತೇನೋ,” ಎಂದು ಹಾಸ್ಯಚಟಾಕಿ ಮೂಲಕ ಪ್ರತಿಕ್ರಿಯಿಸಿದರು.

ಟೀಕೆಗಳಿಗೆ ಪ್ರತಿಕ್ರಿಯಿಸದಿದ್ದರೆ ಅವು ಸತ್ಯವೆಂದು ಒಪ್ಪಿಕೊಂಡಂತಾಗುತ್ತದೆ ಎಂದು ಹೇಳಿದ ಅವರು, ಚುನಾವಣಾ ಫಲಿತಾಂಶಗಳ ಬಳಿಕ ಸ್ಟಾಲಿನ್ ಅವರನ್ನು ಸ್ನೇಹಿತನಾಗಿ ಮಾತ್ರ ಭೇಟಿ ಮಾಡಿದ್ದಾಗಿ ತಿಳಿಸಿದರು.

ನಮ್ಮ ಸ್ನೇಹ ರಾಜಕೀಯವನ್ನು ಮೀರಿದೆ. ಅದನ್ನು ರಾಜಕೀಯವಾಗಿ ಅರ್ಥೈಸುವುದು ಸರಿಯಲ್ಲ. ಆದರೆ ನಮ್ಮ ಭೇಟಿಯೇ ಅನಗತ್ಯ ಟೀಕೆಗೆ ಗುರಿಯಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.

ಕೊಳತ್ತೂರಿನಲ್ಲಿ ಸ್ಟಾಲಿನ್ ಸೋತಿದ್ದಕ್ಕೆ ಬೇಸರವಾಯಿತೇ ಹೊರತು, ವಿಜಯ್ ಮುಖ್ಯಮಂತ್ರಿ ಆಗುವುದನ್ನು ವಿರೋಧಿಸಿದ್ದೇನೆ ಎಂಬ ಅರ್ಥದಲ್ಲಿ ಕೆಲವರು ತಪ್ಪಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಈ ರಜನಿಕಾಂತ್ ಯಾರದ್ದರ ಬಗ್ಗೆಯೂ ಅನಗತ್ಯವಾಗಿ ಮಾತನಾಡುವ ಕೀಳುಮಟ್ಟದ ವ್ಯಕ್ತಿಯಲ್ಲ. ವಿಜಯ್ ಮುಖ್ಯಮಂತ್ರಿ ಆಗಿರುವುದಕ್ಕೆ ನನಗೆ ಯಾವುದೇ ಅಸೂಯೆ ಇಲ್ಲ. ಆದರೆ ಮೊದಲ ಚುನಾವಣೆಯಲ್ಲೇ ಮುಖ್ಯಮಂತ್ರಿ ಆಗಿರುವುದು ಅಚ್ಚರಿಯ ಸಂಗತಿ. ಅವರು ಗೆದ್ದ ಕೂಡಲೇ ನಾನು ಅಭಿನಂದನೆ ಸಲ್ಲಿಸಿದ್ದೇನೆ” ಎಂದು ಸ್ಪಷ್ಟಪಡಿಸಿದರು.

ಶನಿ ಅಮಾವಾಸ್ಯೆ ಸಂಭ್ರಮ; ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ಸಾಗರ

ಚಾಮರಾಜನಗರ: ಶನಿ ಅಮಾವಾಸ್ಯೆ ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡೇ ಹರಿದುಬಂದಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಶ್ರೀ ಮಲೆ ಮಹದೇಶ್ವರಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಸೇವೆಗಳಲ್ಲಿ ಭಾಗವಹಿಸಿದ್ದಾರೆ.

ನಿನ್ನೆಯಿಂದಲೇ ಭಕ್ತರ ಆಗಮನ ಹೆಚ್ಚಾಗಿದ್ದು, ಮಲೆ ಮಹದೇಶ್ವರ ಬೆಟ್ಟದ ದೇವಾಲಯ ಆವರಣ ಭಕ್ತರಿಂದ ಕಿಕ್ಕಿರಿದು ತುಂಬಿದೆ. ಬೆಳಗ್ಗಿನಿಂದಲೇ ದರ್ಶನಕ್ಕಾಗಿ ಉದ್ದ ಸಾಲಿನಲ್ಲಿ ನಿಂತ ಭಕ್ತರು ಮಾದಪ್ಪನ ದರ್ಶನ ಪಡೆದು ತಮ್ಮ ಭಕ್ತಿಭಾವ ಸಮರ್ಪಿಸಿದ್ದಾರೆ.

ಭಕ್ತರು ಚಿನ್ನದ ರಥ, ಬೆಳ್ಳಿ ರಥ, ಹುಲಿ ವಾಹನ, ರುದ್ರಾಕ್ಷಿ ಮಂಟಪ ಹಾಗೂ ಬಸವ ರಥ ಸೇರಿದಂತೆ ಹಲವು ವಿಶೇಷ ಸೇವೆಗಳನ್ನು ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥಗಳು ನೆರವೇರಲಿ ಎಂದು ಪ್ರಾರ್ಥಿಸಿದ್ದಾರೆ.

ಶನಿ ಅಮಾವಾಸ್ಯೆಯಂದು ಮಾದಪ್ಪನ ದರ್ಶನ ಪಡೆದರೆ ವಿಶೇಷ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬೆಟ್ಟಕ್ಕೆ ಆಗಮಿಸಿದ್ದಾರೆ.

ಭಕ್ತರ ಹೆಚ್ಚಿದ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ದೇವಾಲಯ ಆಡಳಿತ ಮಂಡಳಿ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದು, ದರ್ಶನ, ಪ್ರಸಾದ ವಿತರಣೆ ಹಾಗೂ ವಾಹನ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ವಿಶೇಷ ಕ್ರಮಗಳನ್ನು ಕೈಗೊಂಡಿದೆ.

20 ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡ ಜಿಂದಾಲ್ ಕಾರ್ಖಾನೆ; ವಸೂಲಿಗೆ ಅಧಿಕಾರಿಗಳ ಹರಸಾಹಸ

ಬಳ್ಳಾರಿ: ದೇಶದ ಎರಡನೇ ಅತಿದೊಡ್ಡ ಖಾಸಗಿ ವಲಯದ ಉಕ್ಕು ಕಂಪನಿಗಳಲ್ಲಿ ಒಂದಾದ ಜೆಎಸ್‌ಡಬ್ಲ್ಯೂ ಜಿಂದಾಲ್ ಕಾರ್ಖಾನೆ ₹20 ಕೋಟಿಗೂ ಅಧಿಕ ಆಸ್ತಿ ಮತ್ತು ಅಭಿವೃದ್ಧಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂಬ ಆರೋಪ ಕೇಳಿಬಂದಿದ್ದು, ತೆರಿಗೆ ವಸೂಲಿಗೆ ಸ್ಥಳೀಯ ಆಡಳಿತ ಹರಸಾಹಸ ಪಡುತ್ತಿದೆ.

ಸಂಡೂರು ತಾಲೂಕಿನ ತೋರಣಗಲ್ ಸಮೀಪದಲ್ಲಿರುವ ಜಿಂದಾಲ್ ಕಾರ್ಖಾನೆ ಹಲವು ವರ್ಷಗಳಿಂದ ಆಸ್ತಿ ಹಾಗೂ ಅಭಿವೃದ್ಧಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದೆ ಎಂದು ತಿಳಿದುಬಂದಿದೆ.

ತೆರಿಗೆ ಪಾವತಿಸುವಂತೆ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ, ಜಿಂದಾಲ್ ಆಡಳಿತ ಮಂಡಳಿ ಯಾವುದೇ ಸ್ಪಂದನೆ ನೀಡಿಲ್ಲ ಎನ್ನಲಾಗಿದೆ. ಇದರಿಂದ ಬಾಕಿ ತೆರಿಗೆ ವಸೂಲಿ ಮಾಡುವುದು ಸ್ಥಳೀಯ ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

1994ರಲ್ಲಿ ತೋರಣಗಲ್ ಸಮೀಪ ವಿಜಯನಗರ ಸ್ಟೀಲ್ ಲಿಮಿಟೆಡ್ ಹೆಸರಿನಲ್ಲಿ ಈ ಕಾರ್ಖಾನೆ ಸ್ಥಾಪನೆಯಾಗಿತ್ತು. ಬಳಿಕ ಇದು ವ್ಯಾಪಕವಾಗಿ ವಿಸ್ತಾರಗೊಂಡು ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬಿಣ, ಸಿಮೆಂಟ್, ಪೇಂಟ್ ಸೇರಿದಂತೆ ವಿವಿಧ ಕೈಗಾರಿಕಾ ಚಟುವಟಿಕೆಗಳನ್ನು ನಡೆಸುತ್ತಿದೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ, ಜಿಂದಾಲ್ ಕಾರ್ಖಾನೆಯ ಕಾರ್ಯವೈಖರಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರಿಗೆ ಸಮರ್ಪಕ ಉದ್ಯೋಗಾವಕಾಶ ನೀಡುವುದಿಲ್ಲ. ಈಗ ತೆರಿಗೆ ಪಾವತಿಸುವುದಕ್ಕೂ ಹಿಂದೇಟು ಹಾಕುತ್ತಿದೆ. ಇಂತಹ ನಡೆ ಒಪ್ಪಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದಾಗಿ ಶಾಸಕ ಭರತ್ ರೆಡ್ಡಿ ತಿಳಿಸಿದ್ದಾರೆ.

ಸ್ಥಳೀಯ ಆಡಳಿತ ತೆರಿಗೆ ವಸೂಲಿಗೆ ಮುಂದಿನ ಕಾನೂನು ಕ್ರಮಗಳ ಕುರಿತು ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹಾರ್ಮುಜ್ ಜಲಸಂಧಿ ದಾಟಿ ಸುರಕ್ಷಿತವಾಗಿ ಭಾರತ ತಲುಪಿದ 20,000 ಟನ್ LPG ಟ್ಯಾಂಕರ್

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ನಡುವೆಯೂ ಭಾರತಕ್ಕೆ ಎಲ್‌ಪಿಜಿ ಹಾಗೂ ಕಚ್ಚಾ ತೈಲ ಪೂರೈಕೆ ನಿರಂತರವಾಗಿ ಸಾಗುತ್ತಿರುವುದು ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ. ಮಾರ್ಷಲ್ ದ್ವೀಪಗಳ ಧ್ವಜ ಹೊಂದಿರುವ ‘ಸಿಮಿ’ ಎಲ್‌ಪಿಜಿ ಟ್ಯಾಂಕರ್ ಸುರಕ್ಷಿತವಾಗಿ ಗುಜರಾತ್‌ನ ಕಾಂಡ್ಲಾ ಸಮೀಪದ ದೀನ್‌ದಯಾಳ್ ಬಂದರನ್ನು ತಲುಪಿದೆ.

ಭಾರತದ ಇಂಧನ ಭದ್ರತೆಗೆ ಇದು ಮಹತ್ವದ ಬೆಳವಣಿಗೆಯಾಗಿದ್ದು, ಸುಮಾರು 20 ಸಾವಿರ ಟನ್ ದ್ರವ ಪ್ರೊಪೇನ್ ಮತ್ತು ಬ್ಯುಟೇನ್ ಸಾಗಿಸುತ್ತಿದ್ದ ಈ ಟ್ಯಾಂಕರ್ ಮೇ 13ರಂದು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಭಾರತ ತಲುಪಿದೆ.

ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ ಎಂಟು ಮಂದಿ ಉಕ್ರೇನ್ ಮೂಲದವರಾಗಿದ್ದರೆ, 13 ಮಂದಿ ಫಿಲಿಪೈನ್ಸ್‌ನ ಸಿಬ್ಬಂದಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಕಟ್ಟುನಿಟ್ಟಿನ ಮೇಲ್ವಿಚಾರಣೆಯಡಿ ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತ ತಲುಪಿದ 11ನೇ ಎಲ್‌ಪಿಜಿ ಟ್ಯಾಂಕರ್ ಇದಾಗಿದೆ.

ಡೈರೆಕ್ಟರ್ ಜನರಲ್ ಆಫ್ ಶಿಪ್ಪಿಂಗ್ (ಡಿಜಿ ಶಿಪ್ಪಿಂಗ್), ವಿದೇಶಾಂಗ ವ್ಯವಹಾರಗಳ ಸಚಿವಾಲಯ, ರಕ್ಷಣಾ ಸಚಿವಾಲಯ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಗಳ ಸಮನ್ವಯದೊಂದಿಗೆ ಈ ಮಾರ್ಗದಲ್ಲಿ ಹಡಗುಗಳ ಸುರಕ್ಷಿತ ಸಂಚಾರ ಖಚಿತಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮ ಜಾಗತಿಕ ಇಂಧನ ಪೂರೈಕೆ ಸರಪಳಿಯ ಮೇಲೆ ಒತ್ತಡ ಹೆಚ್ಚಾಗಿದೆ. ಕಳೆದ 75 ದಿನಗಳಿಂದ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಅಡೆತಡೆಗಳಿಂದ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಕಚ್ಚಾ ತೈಲ ಸಂಗ್ರಹದ ಮೇಲೆ ಪರಿಣಾಮ ಬೀಳತೊಡಗಿದೆ.

ಆದರೂ, ಇಂಧನ ಸಾಗಣೆ ಹಡಗುಗಳ ನಿರಂತರ ಆಗಮನದಿಂದ ದೇಶದ ಇಂಧನ ಪೂರೈಕೆಯಲ್ಲಿ ಯಾವುದೇ ತಕ್ಷಣದ ವ್ಯತ್ಯಯ ಉಂಟಾಗದಂತೆ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಮಿತವ್ಯಯಕ್ಕೆ ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಮೆಟ್ರೋದಲ್ಲಿ ಪ್ರಯಾಣಿಸಿದ ಸಚಿವ ಸೋಮಣ್ಣ – ಸಂಸದ ಪಿ.ಸಿ.ಮೋಹನ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮಿತವ್ಯಯ ಜೀವನಶೈಲಿ, ಇಂಧನ ಉಳಿತಾಯ ಹಾಗೂ ಸಾರ್ವಜನಿಕ ಸಾರಿಗೆ ಬಳಕೆಗೆ ಆದ್ಯತೆ ನೀಡುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ವಿ. ಸೋಮಣ್ಣ ಮತ್ತು ಸಂಸದ ಪಿ.ಸಿ. ಮೋಹನ್ ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ಬೆಂಗಳೂರಿನ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದವರೆಗೆ ಇಬ್ಬರೂ ನಾಯಕರು ಮೆಟ್ರೋದಲ್ಲಿ ಸಂಚರಿಸಿದರು.

ಈ ಕುರಿತು ಮಾತನಾಡಿದ ಅವರು, ಇಂಧನ ಉಳಿತಾಯ, ನಗರ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಹಾಗೂ ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಪ್ರಯಾಣ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮೆಟ್ರೋ ಪ್ರಯಾಣದ ಬಳಿಕ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ರೈಲ್ವೇ ನಿಲ್ದಾಣದವರೆಗೆ ಕೇಂದ್ರ ಸಚಿವ ಸೋಮಣ್ಣ ಮತ್ತು ಸಂಸದ ಪಿ.ಸಿ. ಮೋಹನ್ ಇವಿ ಬೈಕ್‌ನಲ್ಲಿ ಪ್ರಯಾಣಿಸಿದರು.

ಪ್ರಧಾನಿಯವರ ಮಿತವ್ಯಯ ಸಂದೇಶವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ವಿವಿಧ ರಾಜ್ಯಗಳಲ್ಲಿ ಸಾರ್ವಜನಿಕ ಸಾರಿಗೆ ಬಳಕೆ, ವಿದ್ಯುತ್ ಚಾಲಿತ ವಾಹನಗಳ ಪ್ರಚಾರ ಹಾಗೂ ಇಂಧನ ಉಳಿತಾಯದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯಿಂದ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮಿತವ್ಯಯ ಜೀವನಶೈಲಿಯನ್ನು ಅನುಸರಿಸುವಂತೆ ಕರೆ ನೀಡಿದ್ದಾರೆ.

ಯುದ್ಧದ ಪರಿಣಾಮ ತೈಲದರ ಏರಿಕೆಯಾಗುತ್ತಿರುವುದರಿಂದ ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಸುವುದು, ಇಂಧನ ವ್ಯರ್ಥವಾಗದಂತೆ ನೋಡಿಕೊಳ್ಳುವುದು ಹಾಗೂ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಹರಪನಹಳ್ಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: 25ಕ್ಕೂ ಹೆಚ್ಚು ಮನೆಗಳಿಗೆ ಹಾನಿ, ಜನಜೀವನ ಅಸ್ತವ್ಯಸ್ತ

ವಿಜಯನಗರ/ದಾವಣಗೆರೆ: ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯಿಂದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಶೃಂಗಾರ ಗ್ರಾಮದಲ್ಲಿ 25ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, ಹಲವು ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಶನಿವಾರ ರಾತ್ರಿ ಸುರಿದ ಮಳೆಗೆ ಮನೆಗಳ ಮೇಲ್ಛಾವಣಿಗಳು ಹಾಗೂ ತಗಡಿನ ಶೀಟುಗಳು ಹಾರಿ ಹೋಗಿದ್ದು, ಕೆಲವು ಮನೆಗಳ ಪಕ್ಕದಲ್ಲಿದ್ದ ಮರಗಳ ಕೊಂಬೆಗಳು ಮನೆಗಳ ಮೇಲೆ ಬಿದ್ದು ಹಾನಿ ಉಂಟುಮಾಡಿವೆ.

ಭಾರೀ ಗಾಳಿ ಮತ್ತು ಮಳೆಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಕೆಲಕಾಲ ವಿದ್ಯುತ್ ವ್ಯತ್ಯಯವೂ ಉಂಟಾಗಿದೆ ಎಂದು ತಿಳಿದುಬಂದಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇದೇ ವೇಳೆ ಉಚ್ಚಂಗಿ ಯಲ್ಲಮ್ಮ ದೇವಸ್ಥಾನ ಪ್ರದೇಶದಲ್ಲಿಯೂ ಉತ್ತಮ ಮಳೆಯಾಗಿದ್ದು, ದೇವಸ್ಥಾನದ ಮೆಟ್ಟಿಲುಗಳ ಮೇಲೆ ನೀರು ಹರಿದ ದೃಶ್ಯಗಳು ಕಂಡುಬಂದಿವೆ.

ಬೇಸಿಗೆಯ ತೀವ್ರ ಬಿಸಿಲಿನಿಂದ ಬಳಲುತ್ತಿದ್ದ ಜನರಿಗೆ ಈ ಮಳೆ ತಂಪು ತಂದಿದ್ದರೂ, ಬಿರುಗಾಳಿಯಿಂದ ಆಸ್ತಿ ಹಾನಿ ಉಂಟಾಗಿದೆ.

ಭಾರತದ ರಾಜತಾಂತ್ರಿಕ ಯಶಸ್ಸು: ಚೋಳರ ಕಾಲದ ಅಪರೂಪದ ತಾಮ್ರ ಫಲಕಗಳನ್ನು ಹಿಂದಿರುಗಿಸಿದ ನೆದರ್ಲೆಂಡ್ಸ್

ಆಂಸ್ಟರ್‌ಡ್ಯಾಮ್: ಸಾವಿರ ವರ್ಷಗಳಷ್ಟು ಹಳೆಯದಾದ ಚೋಳರ ಕಾಲದ ಅಪರೂಪದ ತಾಮ್ರ ಫಲಕಗಳನ್ನು ನೆದರ್ಲೆಂಡ್ಸ್ ಭಾರತಕ್ಕೆ ಹಿಂದಿರುಗಿಸಿದ್ದು, ಇದನ್ನು ಭಾರತದ ರಾಜತಾಂತ್ರಿಕ ವ್ಯವಸ್ಥೆಯ ಮಹತ್ವದ ಯಶಸ್ಸಾಗಿ ಪರಿಗಣಿಸಲಾಗಿದೆ.

18ನೇ ಶತಮಾನದಲ್ಲಿ ನಾಗಪಟ್ಟಣಂ ಡಚ್ ಆಡಳಿತದ ಅಧೀನದಲ್ಲಿದ್ದ ಸಂದರ್ಭದಲ್ಲಿ, ಭಾರತದಲ್ಲಿನ ಕ್ರಿಶ್ಚಿಯನ್ ಮಿಷನ್‌ಗೆ ಸಂಬಂಧ ಹೊಂದಿದ್ದ ಫ್ಲೋರೆಂಟಿಯಸ್ ಕ್ಯಾಂಪರ್ ಈ ಐತಿಹಾಸಿಕ ಫಲಕಗಳನ್ನು ನೆದರ್ಲೆಂಡ್ಸ್‌ಗೆ ಕೊಂಡೊಯ್ದಿದ್ದರು ಎನ್ನಲಾಗಿದೆ.

ಈ ಅಪರೂಪದ ಪರಂಪರಾ ವಸ್ತುಗಳನ್ನು ಭಾರತಕ್ಕೆ ಮರಳಿ ತರಲು ಭಾರತ ಸರ್ಕಾರವು 2012ರಿಂದ ನಿರಂತರ ಪ್ರಯತ್ನ ನಡೆಸುತ್ತಿತ್ತು. ಹಲವು ಹಂತದ ರಾಜತಾಂತ್ರಿಕ ಮಾತುಕತೆಗಳ ಬಳಿಕ ಇದೀಗ ಈ ಐತಿಹಾಸಿಕ ತಾಮ್ರ ಫಲಕಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಭಾರತ-ನೆದರ್ಲೆಂಡ್ಸ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನೆದರ್ಲೆಂಡ್ಸ್‌ಗೆ ಭೇಟಿ ನೀಡಿದ್ದ ವೇಳೆ ಈ ಮಹತ್ವದ ಬೆಳವಣಿಗೆ ನಡೆದಿದೆ.

ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ಚೋಳರ ಕಾಲದ ತಾಮ್ರ ಫಲಕಗಳು ಮರಳಿ ಭಾರತಕ್ಕೆ ಬರುತ್ತಿವೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಮತ್ತು ಸಂತೋಷದ ಕ್ಷಣ. 11ನೇ ಶತಮಾನದ ಚೋಳ ತಾಮ್ರ ಫಲಕಗಳನ್ನು ನೆದರ್ಲೆಂಡ್ಸ್‌ನಿಂದ ಭಾರತಕ್ಕೆ ವಾಪಸ್ ತರಲಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ಈ ತಾಮ್ರ ಫಲಕಗಳು ಸುಮಾರು 30 ಕೆಜಿ ತೂಕವಿದ್ದು, ಒಟ್ಟು 21 ಫಲಕಗಳನ್ನು ಒಳಗೊಂಡಿವೆ. ಅವುಗಳನ್ನು ರಾಜ ಚೋಳರ ಮುದ್ರೆ ಹೊಂದಿರುವ ಕಂಚಿನ ಉಂಗುರದ ಮೂಲಕ ಜೋಡಿಸಲಾಗಿದೆ.

ಫಲಕಗಳ ಒಂದು ಭಾಗದಲ್ಲಿ ಸಂಸ್ಕೃತ ಭಾಷೆಯಲ್ಲಿಯೂ, ಮತ್ತೊಂದು ಭಾಗದಲ್ಲಿ ತಮಿಳು ಭಾಷೆಯಲ್ಲಿಯೂ ಶಾಸನ ಕೆತ್ತಲಾಗಿದೆ. ಇವು ಚೋಳರ ಆಡಳಿತ, ಸಂಸ್ಕೃತಿ ಮತ್ತು ಇತಿಹಾಸದ ಮಹತ್ವದ ದಾಖಲೆಗಳಾಗಿ ಪರಿಗಣಿಸಲಾಗುತ್ತಿವೆ.

ಈ ಹಸ್ತಾಂತರವು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

error: Content is protected !!