Home Blog

ಡಾ. ರಾಜ್ ಕುಮಾರ್ ಹಾದಿಯಲ್ಲಿ ನೇತ್ರದಾನ ಮಾಡಿ ಮಾನವೀಯತೆ ಮೆರೆದ ಕೆ. ಭಾಗ್ಯರಾಜ್!

ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಹಾಗೂ ಚಿತ್ರಕಥೆಗಾರ ಕೆ. ಭಾಗ್ಯರಾಜ್ ಅವರು ಶನಿವಾರ ಚೆನ್ನೈನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. 73 ವರ್ಷದ ಭಾಗ್ಯರಾಜ್ ಅವರ ಅಗಲಿಕೆ ತಮಿಳು ಚಿತ್ರರಂಗ ಸೇರಿದಂತೆ ದೇಶದ ಸಿನಿಪ್ರೇಮಿಗಳಿಗೆ ಆಘಾತ ಉಂಟುಮಾಡಿದೆ.

ತಮ್ಮ ವಿಭಿನ್ನ ಕಥಾಹಂದರ ಹಾಗೂ ಚಿತ್ರಕಥೆಗಳ ಮೂಲಕ ‘ಚಿತ್ರಕಥೆಯ ರಾಜ’ ಎಂದೇ ಖ್ಯಾತಿ ಪಡೆದಿದ್ದ ಅವರು, ಸಾವಿನ ಬಳಿಕವೂ ನೇತ್ರದಾನದ ಮೂಲಕ ಮಾನವೀಯತೆಯ ಮಾದರಿಯಾಗಿದ್ದಾರೆ.

ಬಾಳಿರುವಾಗಲೇ ತಮ್ಮ ನೇತ್ರಗಳನ್ನು ದಾನ ಮಾಡುವುದಾಗಿ ಕೆ. ಭಾಗ್ಯರಾಜ್ ಪ್ರತಿಜ್ಞೆ ಮಾಡಿದ್ದರು. ಅವರ ನಿಧನದ ಬಳಿಕ ಕುಟುಂಬಸ್ಥರು ಅವರ ಅಂತಿಮ ಇಚ್ಛೆಯನ್ನು ಗೌರವಿಸಿ ತಕ್ಷಣವೇ ಕಣ್ಣಿನ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ. ಬಳಿಕ ವೈದ್ಯರ ತಂಡವು ಅವರ ನಿವಾಸಕ್ಕೆ ಭೇಟಿ ನೀಡಿ ಕಾರ್ನಿಯಾ ಸಂಗ್ರಹಿಸುವ ಮೂಲಕ ನೇತ್ರದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಭಾಗ್ಯರಾಜ್ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂತಾಪ ಸೂಚಿಸಿದ್ದಾರೆ. ಭಾಗ್ಯರಾಜ್ ಅವರ ನೇತ್ರದಾನದ ನಿರ್ಧಾರವನ್ನು ಶ್ಲಾಘಿಸಿರುವ ಅವರು, ಮರಣಾನಂತರವೂ ಮತ್ತೊಬ್ಬರ ಬದುಕಿಗೆ ಬೆಳಕಾಗಬೇಕು ಎಂಬ ಅವರ ಮಾನವೀಯ ಚಿಂತನೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿರುವ ಗಣ್ಯರು ನೇತ್ರದಾನ ಮಾಡಿದಾಗ ಅದು ಸಮಾಜದಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 1 ಲಕ್ಷದಿಂದ 2 ಲಕ್ಷ ಜನರಿಗೆ ಕಾರ್ನಿಯಾ ಕಸಿ ಅಗತ್ಯವಿದ್ದರೂ, ಕೇವಲ 45ರಿಂದ 50 ಸಾವಿರ ಕಾರ್ನಿಯಾಗಳು ಮಾತ್ರ ಲಭ್ಯವಾಗುತ್ತಿವೆ ಎಂದು ತಮಿಳಿಸೈ ಸೌಂದರರಾಜನ್ ಕಳವಳ ವ್ಯಕ್ತಪಡಿಸಿದ್ದಾರೆ.

ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯಿಂದ ಅಚ್ಚಳಿಯದ ಛಾಪು ಮೂಡಿಸಿದ್ದ ಕೆ. ಭಾಗ್ಯರಾಜ್, ಜೀವನದ ಕೊನೆಯ ಕ್ಷಣದಲ್ಲಿಯೂ ನೇತ್ರದಾನದ ಮೂಲಕ ಮಾನವೀಯತೆಯ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ. ಅವರ ಈ ಕಾರ್ಯವು ಸಮಾಜದಲ್ಲಿ ನೇತ್ರದಾನದ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವಂತಾಗಿದೆ.

ಮೊಹರಂ ಮೆರವಣಿಗೆ ವೇಳೆ ವಿಷದ ಮಾತ್ರೆ ಹಂಚಿಕೆ ಸಂಚು: ಮುಂಬೈನಲ್ಲಿ ದೊಡ್ಡ ಪ್ರಕರಣ ಭೇದಿಸಿದ ಪೊಲೀಸರು!

0

ಮುಂಬೈ: ಮೊಹರಂ ಮೆರವಣಿಗೆ ಸಂದರ್ಭದಲ್ಲಿ ಜನರಿಗೆ ವಿಷದ ಮಾತ್ರೆಗಳನ್ನು ಹಂಚಿ ಅನಾಹುತ ಸೃಷ್ಟಿಸಲು ಯತ್ನಿಸಿದ ದೊಡ್ಡ ಸಂಚೊಂದನ್ನು ಮುಂಬೈ ಪೊಲೀಸರು ಭೇದಿಸಿದ್ದಾರೆ.

ಡೊಂಗ್ರಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿ ಕಾರ್ಯಾಚರಣೆ ನಡೆಸಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪುಣೆಯ ನಿವಾಸಿ ಫಯಾಜ್ ಪ್ರೇಮ್‌ಜಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ನೋವು ನಿವಾರಕ ಮಾತ್ರೆಗಳು ಎಂದು ಹೇಳಿ, ವಾಸ್ತವದಲ್ಲಿ ಇಲಿ ಪಾಷಾಣ ಮಿಶ್ರಿತ ವಿಷಕಾರಿ ಮಾತ್ರೆಗಳನ್ನು ಜನರಿಗೆ ಹಂಚುತ್ತಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆತನ ಬಳಿಯಿಂದ ಸುಮಾರು 14,900 ವಿಷಕಾರಿ ಕ್ಯಾಪ್ಸೂಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೊಹರಂ ಮೆರವಣಿಗೆ ಸಂದರ್ಭದಲ್ಲಿ ವಿಷದ ಮಾತ್ರೆ ಸೇವಿಸಿದ ವ್ಯಕ್ತಿಯೊಬ್ಬರು ವಾಂತಿ–ಭೇದಿಯಿಂದ ಅಸ್ವಸ್ಥಗೊಂಡ ನಂತರ ಈ ಸಂಚಿನ ಬಗ್ಗೆ ಮಾಹಿತಿ ಪೊಲೀಸರಿಗೆ ದೊರೆತಿದೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಯ ಚಟುವಟಿಕೆಗಳು ಬಯಲಾಗಿವೆ.

ಆತನ ಚೀಲದಲ್ಲಿ ಸಂಗ್ರಹಿಸಿದ್ದ ವಿಷಕಾರಿ ಕ್ಯಾಪ್ಸೂಲ್‌ಗಳನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣದ ಕುರಿತು ತೀವ್ರ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

9 ಮತ್ತು 10ನೇ ತರಗತಿಗಳಿಗೆ ಪಿಯು ಉಪನ್ಯಾಸಕರ ನಿಯೋಜನೆಗೆ ಭಾರಿ ವಿರೋಧ!

ಹಗರಿಬೊಮ್ಮನಹಳ್ಳಿ: ಸರ್ಕಾರಿ ಪ್ರೌಢಶಾಲೆಗಳ 9 ಮತ್ತು 10ನೇ ತರಗತಿಗಳಿಗೆ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಬೋಧನೆಗೆ ನಿಯೋಜಿಸುವ ರಾಜ್ಯ ಸರ್ಕಾರದ ಕರಡು ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘದ ನೂತನ ಜಿಲ್ಲಾಧ್ಯಕ್ಷ ಗೂಳಪ್ಪ ಹುಲಿಮನಿ ಆಗ್ರಹಿಸಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿ ಪ್ರಾಚಾರ್ಯರು ಹಾಗೂ ಸರ್ಕಾರಿ-ಅನುದಾನಿತ ಕಾಲೇಜುಗಳ ಉಪನ್ಯಾಸಕರು ಪತ್ರ ಚಳುವಳಿ ನಡೆಸಿ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ, ಹೊಸ ಕರಡು ನಿಯಮಗಳ ಪ್ರಕಾರ ಪಿಯು ಉಪನ್ಯಾಸಕರನ್ನು ನೇರ ನೇಮಕಾತಿ ಅಥವಾ ಬಡ್ತಿಯ ಮೂಲಕ ಪ್ರೌಢಶಾಲೆಗಳ 9 ಮತ್ತು 10ನೇ ತರಗತಿಗಳಿಗೆ ಬೋಧನೆಗೆ ಕಡ್ಡಾಯವಾಗಿ ನಿಯೋಜಿಸುವ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಪಿಯು ಉಪನ್ಯಾಸಕರು ಗ್ರೂಪ್–‘ಬಿ’ ಹಾಗೂ ಪ್ರೌಢಶಾಲಾ ಶಿಕ್ಷಕರು ಗ್ರೂಪ್–‘ಸಿ’ ವೃಂದಕ್ಕೆ ಸೇರಿದವರಾಗಿದ್ದು, ಇಬ್ಬರಿಗೂ ಪ್ರತ್ಯೇಕ ನೇಮಕಾತಿ ಹಾಗೂ ಸೇವಾ ನಿಯಮಗಳಿವೆ. ಇಂತಹ ಸಂದರ್ಭದಲ್ಲಿ ಪಿಯು ಉಪನ್ಯಾಸಕರಿಗೆ ಹೆಚ್ಚುವರಿ ಹೈಸ್ಕೂಲ್ ಬೋಧನೆ ಜವಾಬ್ದಾರಿ ನೀಡುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಥಮ ಮತ್ತು ದ್ವಿತೀಯ ಪಿಯುಸಿ ಹಂತವು ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಪ್ರಮುಖವಾಗಿದ್ದು, ಉಪನ್ಯಾಸಕರ ಸಂಪೂರ್ಣ ಸಮಯ ಅಗತ್ಯವಿದೆ. 9 ಮತ್ತು 10ನೇ ತರಗತಿಗಳಿಗೆ ಅವರನ್ನು ನಿಯೋಜಿಸಿದರೆ ಪಿಯು ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಯಿತು.

ಈ ಹಿನ್ನೆಲೆಯಲ್ಲಿ ಕರಡು ಅಧಿಸೂಚನೆಯನ್ನು ಹಿಂಪಡೆಯಬೇಕು ಹಾಗೂ ಪಿಯು ಉಪನ್ಯಾಸಕರನ್ನು ಕೇವಲ ಪಿಯು ತರಗತಿಗಳ ಬೋಧನೆಗೆ ಮಾತ್ರ ಬಳಸಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಎಂ.ಕೆ. ದುರುಗಪ್ಪ, ಬೇಟೆ ಮಾರುತಿ, ಎನ್. ಸಾಬುದ್ದೀನ್ ಸಾಹೇಬ್, ಟಿ. ಮಲ್ಲಿಕಾರ್ಜುನ, ಎಸ್. ಮಹೇಶ್, ಬಿ.ಜೆ. ರಾಘವೇಂದ್ರ, ಬಿ. ಚಿರಂಜೀವಿ ಆಚಾರಿ, ಜೆ.ಬಿ. ನಾಗರಾಜ, ವಿಶ್ವನಾಥ್, ಬಸವರಾಜ್, ಸಿದ್ದಪ್ಪ, ನಿತಿನ್, ಗುರು ಬಸವರಾಜ, ಉಮಾ, ಅನ್ನಪೂರ್ಣ ಸೇರಿದಂತೆ ಹಲವು ಉಪನ್ಯಾಸಕರು ಉಪಸ್ಥಿತರಿದ್ದರು.

ಈ 5 ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು: ಚಾಣಕ್ಯ ಕೊಟ್ಟ ಕಾರಣಗಳು ಇಲ್ಲಿದೆ!

ನೆಮ್ಮದಿ, ಸುರಕ್ಷಿತ ಮತ್ತು ಯಶಸ್ವಿ ಜೀವನಕ್ಕಾಗಿ ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಅನೇಕ ಮಹತ್ವದ ಸಲಹೆಗಳನ್ನು ನೀಡಿದ್ದಾರೆ.

ಅವರ ಪ್ರಕಾರ, ಕೆಲವು ವೈಯಕ್ತಿಕ ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಭವಿಷ್ಯದಲ್ಲಿ ತೊಂದರೆ, ನಷ್ಟ ಹಾಗೂ ಅನಗತ್ಯ ಸಮಸ್ಯೆಗಳನ್ನು ತಂದೊಡ್ಡಬಹುದು.

ಚಾಣಕ್ಯರ ಹೇಳಿಕೆಯಂತೆ, ಕೆಲವೊಂದು ರಹಸ್ಯಗಳನ್ನು ಎಷ್ಟೇ ಆಪ್ತರಿದ್ದರೂ ಸಹ ಗುಪ್ತವಾಗಿಯೇ ಇಟ್ಟುಕೊಳ್ಳುವುದು ಉತ್ತಮ. ಅಂತಹ ಪ್ರಮುಖ ವಿಷಯಗಳು ಯಾವುವು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

1. ಆರ್ಥಿಕ ಸ್ಥಿತಿ:

ನಿಮ್ಮ ಆದಾಯ, ಬ್ಯಾಂಕ್ ಬ್ಯಾಲೆನ್ಸ್ ಅಥವಾ ಆರ್ಥಿಕ ಸಂಕಷ್ಟಗಳ ಬಗ್ಗೆ ಎಲ್ಲರಿಗೂ ಹೇಳಬಾರದು. ಇದರಿಂದ ಅನಗತ್ಯ ಸಹಾಯ ಬೇಡಿಕೆಗಳು ಹೆಚ್ಚಾಗಬಹುದು ಮತ್ತು ಕೆಲವರು ನಿಮ್ಮ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ.

2. ಕುಟುಂಬದ ಸಮಸ್ಯೆಗಳು:

ಮನೆಯ ಒಳಗಿನ ಜಗಳಗಳು ಅಥವಾ ಭಿನ್ನಾಭಿಪ್ರಾಯಗಳನ್ನು ಹೊರಗಿನವರೊಂದಿಗೆ ಹಂಚಿಕೊಳ್ಳುವುದು ಸೂಕ್ತವಲ್ಲ. ಇದರಿಂದ ಗೌರವ ಕಡಿಮೆಯಾಗುವ ಸಾಧ್ಯತೆ ಇದೆ ಹಾಗೂ ನಿಮ್ಮ ವೈಯಕ್ತಿಕ ವಿಷಯಗಳು ಬೇರೆಯವರ ಕೈಯಲ್ಲಿ ಚರ್ಚೆಯ ವಿಷಯವಾಗಬಹುದು.

3. ಅವಮಾನ ಅಥವಾ ದ್ರೋಹ:

ಯಾರಾದರೂ ನಿಮಗೆ ಮಾಡಿದ ದ್ರೋಹ ಅಥವಾ ಅವಮಾನವನ್ನು ಎಲ್ಲರಿಗೂ ಹೇಳುವುದು ನಿಮ್ಮ ಪ್ರತಿಷ್ಠೆಗೆ ಹಾನಿ ಮಾಡಬಹುದು. ಇದರಿಂದ ನೀವು ದುರ್ಬಲರಾಗಿ ಕಾಣುವ ಸಾಧ್ಯತೆಯೂ ಇರುತ್ತದೆ.

4. ವೈಯಕ್ತಿಕ ದುಃಖ ಮತ್ತು ದೌರ್ಬಲ್ಯ:

ನಿಮ್ಮ ಭಯ, ದುಃಖ ಅಥವಾ ದೌರ್ಬಲ್ಯಗಳನ್ನು ಎಲ್ಲರಿಗೂ ಹೇಳುವುದು ಅಪಾಯಕಾರಿಯಾಗಬಹುದು. ಕೆಲವರು ಇದನ್ನು ನಿಮ್ಮ ವಿರುದ್ಧ ಬಳಸುವ ಸಾಧ್ಯತೆ ಇದೆ.

5. ಭವಿಷ್ಯದ ಯೋಜನೆಗಳು:

ನಿಮ್ಮ ದೊಡ್ಡ ಕನಸುಗಳು ಮತ್ತು ಯೋಜನೆಗಳನ್ನು ಅವು ಪೂರ್ಣಗೊಂಡ ನಂತರವೇ ಹಂಚಿಕೊಳ್ಳುವುದು ಉತ್ತಮ. ಮೊದಲೇ ಹೇಳಿದರೆ ಅಡ್ಡಿಗಳು ಅಥವಾ ನಕಾರಾತ್ಮಕ ಪ್ರಭಾವ ಎದುರಾಗಬಹುದು.

6. ವೈಯಕ್ತಿಕ ಸಂಬಂಧಗಳು:

ನಿಮ್ಮ ಪ್ರೀತಿ ಮತ್ತು ವೈಯಕ್ತಿಕ ಸಂಬಂಧಗಳನ್ನು ಎಲ್ಲರಿಗೂ ಹೇಳುವುದನ್ನು ತಪ್ಪಿಸುವುದು ಉತ್ತಮ. ಕೆಲವರು ಅದನ್ನು ಹಾಳುಮಾಡಲು ಅಥವಾ ತಪ್ಪಾಗಿ ಬಳಸಲು ಪ್ರಯತ್ನಿಸಬಹುದು.

ಚಾಣಕ್ಯರ ಪ್ರಕಾರ, ಮೌನ ಮತ್ತು ಗೌಪ್ಯತೆ ಜೀವನದಲ್ಲಿ ಯಶಸ್ಸು ಮತ್ತು ಸ್ಥಿರತೆಯನ್ನು ನೀಡುವ ಪ್ರಮುಖ ಅಂಶಗಳಾಗಿವೆ.

 

ಬೆಂಗಳೂರಿನಲ್ಲಿ ರೌಡಿಯ ಬರ್ಬರ ಹತ್ಯೆ! ಹಳೆ ದ್ವೇಷಕ್ಕೆ ಹರಿದ ನೆತ್ತರು

0

ಬೆಂಗಳೂರು: ನಿನ್ನೆ ಸಂಜೆ ಜೆಪಿ ನಗರ ಐಜಿ ಸರ್ಕಲ್ ಬಳಿ ರೌಡಿಶೀಟರ್ ಒಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ ಘಟನೆ ನಡೆದಿದೆ.

ಸಂಜೆ ಟೀ ಕುಡಿದು ಮನೆಗೆ ಹೋಗುತ್ತಿದ್ದ ರಾಜು ಅಲಿಯಾಸ್ ಹಲ್ಮುರ್ಕ್ ರಾಜಾ ಮೇಲೆ ದುಷ್ಕರ್ಮಿಗಳು ಜನಸಂದಣಿ ನಡುವೆ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ರಾಜು ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಮೃತ ರಾಜು ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಸುಮಾರು 10 ವರ್ಷಗಳ ಹಿಂದೆ ಬನಶಂಕರಿಯಲ್ಲಿ ನಡೆದ ರೌಡಿ ಕುಟ್ಟಿ ಅಲಿಯಾಸ್ ಸ್ಟ್ಯಾಂಡ್ ಕುಟ್ಟಿ ಕೊಲೆ ಪ್ರಕರಣದಲ್ಲಿಯೂ ಅವನು ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಅವನು ಜೈಲು ಶಿಕ್ಷೆ ಅನುಭವಿಸಿದ್ದನು.

ಅಲ್ಲದೆ, ಸುಬ್ರಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣದಲ್ಲಿಯೂ ಅವನ ಹೆಸರು ಕೇಳಿಬಂದಿದೆ. ರಾಜು ದಕ್ಷಿಣ ಬೆಂಗಳೂರಿನ ರೌಡಿ ಅರಸಯ್ಯನ ಗುಂಪಿನಲ್ಲಿದ್ದನೆಂದು ಪೊಲೀಸರು ಶಂಕಿಸಿದ್ದಾರೆ.

ಹಳೆಯ ವೈಷಮ್ಯವೇ ಈ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಪ್ರಾಥಮಿಕವಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಸಂಜೆ ಸುಮಾರು 5:30ಕ್ಕೆ ನಡೆದಿದೆ.

ಘಟನೆಯ ಬಳಿಕ ಜೆಪಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಟ್ ಸಂತೋಷ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ತುಮಕೂರಿನಲ್ಲಿ ಆಹಾರ ವಿಷಬಾಧೆ ಶಂಕೆ: 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು!

ತುಮಕೂರು: ದೇವರ ಮಹೋತ್ಸವ ಹಾಗೂ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಊಟ ಸೇವಿಸಿದ ಬಳಿಕ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಕೆ. ಸೇವಾಲಾಲಪುರದಲ್ಲಿ ಗುರುವಾರ ನಡೆದ ಸತ್ತಿ ದೇವರ ಮಹೋತ್ಸವ ಹಾಗೂ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಈ ಅನಾಹುತ ಸಂಭವಿಸಿದೆ. ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಊಟ ಸೇವಿಸಿದ ಬಳಿಕ ಅನೇಕರು ವಾಂತಿ ಮತ್ತು ಭೇದಿ ಲಕ್ಷಣಗಳಿಂದ ಬಳಲಿದ್ದಾರೆ. ಕೆಲವರಿಗೆ ಗುರುವಾರ ರಾತ್ರಿಯೇ ಆರೋಗ್ಯ ಸಮಸ್ಯೆ ಆರಂಭವಾದರೆ, ಇನ್ನು ಕೆಲವರಿಗೆ ಮರುದಿನ ಬೆಳಗ್ಗೆ ತೀವ್ರ ಅಸ್ವಸ್ಥತೆ ಕಂಡುಬಂದಿದೆ.

ಮಕ್ಕಳು ಸೇರಿದಂತೆ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ತಕ್ಷಣವೇ ಅವರನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆಹಾರ ವಿಷಬಾಧೆ ಶಂಕೆ ವ್ಯಕ್ತವಾಗಿದೆ. ಘಟನೆಯ ಕುರಿತು ಆರೋಗ್ಯ ಇಲಾಖೆ ಹಾಗೂ ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ.

KERC ಅನುಮೋದನೆ ಇಲ್ಲದೆ ಮೇಲ್ವಿಚಾರಣಾ ಶುಲ್ಕ ಪರಿಷ್ಕರಿಸುವ ಅಧಿಕಾರ KPTCL ಗೆ ಇಲ್ಲ; ಹೈಕೋರ್ಟ್

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಅನುಮೋದನೆ ಇಲ್ಲದೆ ಸ್ವಯಂ ಪ್ರೇರಿತವಾಗಿ ವಿದ್ಯುತ್ ಕಾಮಗಾರಿಗಳನ್ನು ನಿರ್ವಹಿಸುವ ಗ್ರಾಹಕರಿಂದ ವಸೂಲಿ ಮಾಡುವ ಮೇಲ್ವಿಚಾರಣಾ ಶುಲ್ಕವನ್ನು ಪರಿಷ್ಕರಿಸುವ ಅಧಿಕಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ (ಕೆಪಿಟಿಸಿಎಲ್) ಇಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಮಹಾರಾಷ್ಟ್ರ ಮೂಲದ ಅನುಷ್ಕಾ ರಿಯಾಲ್ಟಿ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯ ಪೀಠ, ಕೆಪಿಟಿಸಿಎಲ್ ಹೊರಡಿಸಿದ್ದ 1.2 ಕೋಟಿ ರೂಪಾಯಿ ಬೇಡಿಕೆ ನೋಟಿಸ್ ಅನ್ನು ರದ್ದುಗೊಳಿಸಿದೆ. ಅಲ್ಲದೆ, ಕೆಇಆರ್‌ಸಿ ನಿಗದಿಪಡಿಸಿರುವ ನಿಯಮಾವಳಿಗಳ ಪ್ರಕಾರವೇ ಮೇಲ್ವಿಚಾರಣಾ ಶುಲ್ಕವನ್ನು ಪಾವತಿಸುವಂತೆ ನಿರ್ದೇಶನ ನೀಡಿದೆ.

ಸ್ವಯಂ ನಿರ್ವಹಣೆಯಡಿ ಕೈಗೊಳ್ಳುವ ವಿದ್ಯುತ್ ಕಾಮಗಾರಿಗಳಿಗೆ ಸಂಬಂಧಿಸಿದ ಮೇಲ್ವಿಚಾರಣಾ ಶುಲ್ಕವನ್ನು ಪರಿಷ್ಕರಿಸುವ ಅಧಿಕಾರ ಕೆಪಿಟಿಸಿಎಲ್‌ಗೆ ಇಲ್ಲ. ಇಂತಹ ಶುಲ್ಕಗಳ ಪರಿಷ್ಕರಣೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅನುಮೋದನೆ ಕಡ್ಡಾಯವಾಗಿದ್ದು, ಕೆಇಆರ್‌ಸಿ ಒಪ್ಪಿಗೆ ಇಲ್ಲದೆ ಕೆಪಿಟಿಸಿಎಲ್ ಏಕಪಕ್ಷೀಯವಾಗಿ ಶುಲ್ಕ ಹೆಚ್ಚಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 39ರಿಂದ 41ರವರೆಗೆ ರಾಜ್ಯ ಪ್ರಸರಣ ಸಂಸ್ಥೆಗಳ ಕಾರ್ಯ ಮತ್ತು ಕರ್ತವ್ಯಗಳನ್ನು ಮಾತ್ರ ನಿರ್ದಿಷ್ಟಪಡಿಸಿದ್ದು, ಮೇಲ್ವಿಚಾರಣಾ ಶುಲ್ಕವನ್ನು ನಿಗದಿಪಡಿಸುವ ಅಥವಾ ಪರಿಷ್ಕರಿಸುವ ಅಧಿಕಾರವನ್ನು ಕೆಪಿಟಿಸಿಎಲ್‌ಗೆ ನೀಡಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ, ಕೆಇಆರ್‌ಸಿ ನಿಗದಿಪಡಿಸಿರುವ ಮಿತಿಯನ್ನು ಮೀರಿ ಅನುಷ್ಕಾ ರಿಯಾಲ್ಟಿ ಕಂಪನಿಗೆ 1.2 ಕೋಟಿ ರೂಪಾಯಿ ಮೇಲ್ವಿಚಾರಣಾ ಶುಲ್ಕ ವಿಧಿಸಿರುವುದು ಕಾನೂನುಬಾಹಿರವಾಗಿದೆ. ಅಧಿಕಾರವಿಲ್ಲದ ಸಂಸ್ಥೆ ಹೊರಡಿಸಿದ ಬೇಡಿಕೆ ನೋಟಿಸ್‌ಗೆ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ

ಬೆಂಗಳೂರು ನಗರದಲ್ಲಿ ಬಹುಮಹಡಿ ವಸತಿ ಯೋಜನೆ ಅಭಿವೃದ್ಧಿಪಡಿಸುತ್ತಿದ್ದ ಅನುಷ್ಕಾ ರಿಯಾಲ್ಟಿ ಸಂಸ್ಥೆ, ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಕೆಲವು ಕಾಮಗಾರಿಗಳನ್ನು ಸ್ವತಃ ನಿರ್ವಹಿಸಲು ಮುಂದಾಗಿತ್ತು. ಇಂತಹ ಸಂದರ್ಭಗಳಲ್ಲಿ ಕಾಮಗಾರಿಗಳ ಮೇಲ್ವಿಚಾರಣೆಗಾಗಿ ಕೆಪಿಟಿಸಿಎಲ್ ಶುಲ್ಕ ವಸೂಲಿ ಮಾಡಲು ಅವಕಾಶವಿದೆ.

ಕೆಇಆರ್‌ಸಿ ನಿಯಮಗಳ ಪ್ರಕಾರ, ಮೇಲ್ವಿಚಾರಣಾ ಶುಲ್ಕವು ಕಾಮಗಾರಿಯ ಅಂದಾಜು ವೆಚ್ಚದ ಶೇಕಡ 10 ಅಥವಾ ಗರಿಷ್ಠ 15 ಲಕ್ಷ ರೂಪಾಯಿ – ಇವೆರಡರಲ್ಲಿ ಯಾವುದು ಕಡಿಮೆಯೋ ಅದಕ್ಕೆ ಸೀಮಿತವಾಗಿರಬೇಕು. ಆದರೆ, ಕೆಪಿಟಿಸಿಎಲ್ 15 ಲಕ್ಷ ರೂಪಾಯಿ ಬದಲಿಗೆ 1.2 ಕೋಟಿ ರೂಪಾಯಿ ಪಾವತಿಸುವಂತೆ ಕಂಪನಿಗೆ ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಅನುಷ್ಕಾ ರಿಯಾಲ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದು, ಇದೀಗ ನ್ಯಾಯಾಲಯ ಕಂಪನಿಯ ಪರವಾಗಿ ಮಹತ್ವದ ತೀರ್ಪು ನೀಡಿದೆ.

ಸ್ವಚ್ಛ ಬೆಂಗಳೂರು ಗುರಿ; ಕಸ ಸಂಗ್ರಹಕ್ಕೆ ಜಿಬಿಎ ಹೊಸ ಪ್ಲಾನ್, ಸಂಜೆ ವೇಳೆಯಲ್ಲೂ ಟಿಪ್ಪರ್ ನಿಯೋಜನೆಗೆ ನಿರ್ಧಾರ!

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಹತ್ವದ ಕ್ರಮ ಕೈಗೊಂಡಿದೆ.

ಕಸದ ಸಮಸ್ಯೆ ಹೆಚ್ಚು ಕಾಣಿಸುವ ಪ್ರದೇಶಗಳನ್ನು ಗುರುತಿಸಿ, ಅಗತ್ಯವಿರುವೆಡೆ ಸಂಜೆ ವೇಳೆಯಲ್ಲೂ ಆಟೋ ಟಿಪ್ಪರ್‌ಗಳನ್ನು ನಿಯೋಜಿಸಿ ಕಸವನ್ನು ಸಮಯಕ್ಕೆ ಸರಿಯಾಗಿ ಸಂಗ್ರಹಿಸುವಂತೆ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರದ ಸ್ವಚ್ಛತೆ ಕಾಪಾಡುವುದು ಹಾಗೂ ರಸ್ತೆ ಬದಿಯಲ್ಲಿ ಕಸ ಎಸೆಯುವುದನ್ನು ತಡೆಯುವುದು ಅತ್ಯಂತ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜೊತೆಗೆ ತ್ಯಾಜ್ಯ ನಿರ್ವಹಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯವಾಗಿದ್ದು, ನಾಗರಿಕರು ಜವಾಬ್ದಾರಿಯಾಗಿ ವರ್ತಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಯಾವುದೇ ಪ್ರದೇಶದಲ್ಲಿ ಕಸ ರಾಶಿಯಾಗಿರುವುದು ಅಥವಾ ಆಟೋ ಟಿಪ್ಪರ್ ಸಮಯಕ್ಕೆ ಬಾರದಿರುವುದು ಕಂಡುಬಂದರೆ ತಕ್ಷಣ ನಿಗಮಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಮಾಹಿತಿ ಬಂದ ಕೂಡಲೇ ಸಂಬಂಧಿತ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಹರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಸ್ವಚ್ಛತಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದ್ದು, ನಾಗರಿಕರು ನಿಗಮದೊಂದಿಗೆ ಕೈಜೋಡಿಸಿದಾಗ ಮಾತ್ರ ಶಾಶ್ವತ ಪರಿಹಾರ ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ವಯಂಸೇವಕರು ಹಾಗೂ ಸಂಘಟನೆಗಳು ರಸ್ತೆ ಬದಿಯಲ್ಲಿ ಕಸ ಎಸೆಯದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ನಿಯಮ ಉಲ್ಲಂಘಿಸುವವರ ಬಗ್ಗೆ ತಕ್ಷಣ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಇದರ ಜೊತೆಗೆ, ತ್ಯಾಜ್ಯ ಸಂಗ್ರಹಣೆಯಲ್ಲಿ ತಂತ್ರಜ್ಞಾನ ಬಳಸಿ ಮೇಲ್ವಿಚಾರಣೆಯನ್ನು ಬಲಪಡಿಸಲು ಜಿಬಿಎ ಮುಂದಾಗಿದೆ. ಕಸದ ವಾಹನಗಳ ಚಲನವಲನವನ್ನು ನಿಗಾ ವಹಿಸಲು ‘ಮಾತ್ರ’ ಎಂಬ ಆ್ಯಪ್ ಅನ್ನು ಬಳಸಲಾಗುತ್ತಿದೆ. ಈ ವ್ಯವಸ್ಥೆಯನ್ನು ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.

ಈ ಆ್ಯಪ್ ಅನ್ನು ಕಸದ ವಾಹನ ಚಾಲಕರ ಮೊಬೈಲ್‌ಗಳಲ್ಲಿ ಇನ್ಸ್ಟಾಲ್ ಮಾಡಲಾಗಿದ್ದು, ಅವರು ನಿಗದಿತ ಮಾರ್ಗದಿಂದ ತಪ್ಪಿದರೆ ಅಥವಾ ನಿಯಮ ಉಲ್ಲಂಘಿಸಿದರೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಲಿದೆ. ಈ ವ್ಯವಸ್ಥೆ ಯಶಸ್ವಿಯಾದರೆ ಉಳಿದ ನಾಲ್ಕು ನಗರ ಪಾಲಿಕೆಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

T20 World Cup: ಸೆಮಿಫೈನಲ್ ಟಿಕೆಟ್ʼಗೆ ಭಾರತ-ಆಸ್ಟ್ರೇಲಿಯಾ ಕಾದಾಟ: ಪಂದ್ಯ ಯಾವಾಗ, ಎಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

0

ಲಂಡನ್: 2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶದ ದೃಷ್ಟಿಯಿಂದ ಭಾರತ ಮಹಿಳಾ ತಂಡಕ್ಕೆ ಇಂದು ಅಗ್ನಿಪರೀಕ್ಷೆ ಎದುರಾಗಿದೆ. ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದು, ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದೆ.

ಭಾರತ ತಂಡ ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ಒಂದು ಸೋಲಿನೊಂದಿಗೆ ಆರು ಅಂಕಗಳನ್ನು ಗಳಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಆಡಿರುವ ಎಲ್ಲಾ ನಾಲ್ಕು ಪಂದ್ಯಗಳಲ್ಲೂ ಗೆದ್ದು ಎಂಟು ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.

ಸೆಮಿಫೈನಲ್ ಪ್ರವೇಶದ ಲೆಕ್ಕಾಚಾರದ ಪ್ರಕಾರ ಭಾರತಕ್ಕೆ ಈ ಪಂದ್ಯ ‘ಮಾಡು ಇಲ್ಲವೇ ಮಡಿ’ಯಂತಾಗಿದೆ. ಈಗಾಗಲೇ ಒಂದು ಸೋಲು ಕಂಡಿರುವ ಹರ್ಮನ್‌ಪ್ರೀತ್ ಕೌರ್ ಪಡೆ ಆಸ್ಟ್ರೇಲಿಯಾವನ್ನು ಮಣಿಸಿದರೆ ಮಾತ್ರ ಸೆಮಿಫೈನಲ್ ಪ್ರವೇಶದ ಅವಕಾಶ ಜೀವಂತವಾಗಿರಲಿದೆ. ಸೋಲು ಕಂಡರೆ ಟೂರ್ನಿಯಿಂದ ಹೊರಬೀಳಬೇಕಾಗುತ್ತದೆ.

ಪಂದ್ಯ ಯಾವಾಗ?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಇಂದು (ಜೂನ್ 28) ನಡೆಯಲಿದೆ.

ಪಂದ್ಯ ಎಲ್ಲಿ ನಡೆಯಲಿದೆ?

ಈ ಮಹತ್ವದ ಪಂದ್ಯ ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಪಂದ್ಯ ಆರಂಭವಾಗುವ ಸಮಯ

ಉಭಯ ತಂಡಗಳ ನಡುವಿನ ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ನೇರ ಪ್ರಸಾರ ಎಲ್ಲಿದೆ?

ಭಾರತ-ಆಸ್ಟ್ರೇಲಿಯಾ ನಡುವಿನ ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಭಾರತ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ನಂದನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಪ್ರೇಮಾ ರಾವತ್ ಹಾಗೂ ರಾಧಾ ಯಾದವ್.

ಆಸ್ಟ್ರೇಲಿಯಾ ತಂಡ

ಬೆತ್ ಮೂನಿ, ಜಾರ್ಜಿಯಾ ವೋಲ್, ಎಲಿಸ್ ಪೆರ್ರಿ, ಆಶ್ಲೀ ಗಾರ್ಡ್ನರ್, ಜಾರ್ಜಿಯಾ ವೇರ್‌ಹ್ಯಾಮ್, ನಿಕೋಲಾ ಕ್ಯಾರಿ, ಅನ್ನಾಬೆಲ್ ಸದರ್‌ಲ್ಯಾಂಡ್, ಸೋಫಿ ಮೊಲಿನಿಯಕ್ಸ್ (ನಾಯಕಿ), ಅಲಾನಾ ಕಿಂಗ್, ಕಿಮ್ ಗಾರ್ತ್, ಲೂಸಿ ಹ್ಯಾಮಿಲ್ಟನ್, ಫೋಬೆ ಲಿಚ್‌ಫೀಲ್ಡ್, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್ ಹಾಗೂ ಮೇಗನ್ ಶುಟ್.

ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಡುವ ಗುರಿಯೊಂದಿಗೆ ಭಾರತ ತಂಡ ಕಣಕ್ಕಿಳಿಯಲಿದ್ದು, ಮಹಿಳಾ ವಿಶ್ವಕಪ್‌ನ ಅತ್ಯಂತ ರೋಚಕ ಪಂದ್ಯಗಳಲ್ಲಿ ಇದೂ ಒಂದಾಗುವ ನಿರೀಕ್ಷೆಯಿದೆ.

ರಾಜ್ಯದಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಬಿರುಗಾಳಿ ಬೀಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗಗಳಲ್ಲಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ನಿರೀಕ್ಷೆಯಿರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಗಂಟೆಗೆ 30ರಿಂದ 40 ಕಿ.ಮೀ. ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳ ಹಲವೆಡೆ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಅನೇಕ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಇದರ ಜೊತೆಗೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಭಾಗದಲ್ಲಿ ಬಿರುಗಾಳಿ ಹಾಗೂ ಭಾರೀ ಮಳೆಯ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಮುದ್ರಕ್ಕೆ ತೆರಳುವ ಮೀನುಗಾರರು ಮತ್ತು ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಮನವಿ ಮಾಡಿದೆ. ತಗ್ಗು ಪ್ರದೇಶಗಳ ನಿವಾಸಿಗಳು, ವಾಹನ ಸವಾರರು ಹಾಗೂ ಪ್ರವಾಸಿಗರು ಹವಾಮಾನ ಇಲಾಖೆಯ ಮುಂದಿನ ಮಾಹಿತಿಯನ್ನು ಗಮನಿಸಿ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.