Home Blog

ಕಾಲೇಜು ವಿದ್ಯಾರ್ಥಿಗಳ ಭೀಕರ ಕೃತ್ಯ: ಕಾರು ಹತ್ತಿಸಿ ಸಹಾಯಕ ಲೇಬರ್ ಇನ್ಸ್ಪೆಕ್ಟರ್ ಕೊಲೆ!

0

ತಮಿಳುನಾಡು: ತಮಿಳುನಾಡಿನ ಗಡಿಭಾಗದ ನಗರ ಹೊಸೂರು ನಲ್ಲಿ ಘನಘೋರ ಘಟನೆ ನಡೆದಿದೆ. ಮದ್ಯದ ನಶೆಯಲ್ಲಿ ವಾಹನ ಚಲಾಯಿಸಿದ್ದ ಕಾಲೇಜು ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ವ್ಯಕ್ತಿಯೊಬ್ಬರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆಯಲ್ಲಿ 54 ವರ್ಷದ ಶಿವಮೂರ್ತಿ ಮೃತಪಟ್ಟಿದ್ದಾರೆ. ಅವರು ಹೊಸೂರಿನ ಅಣ್ಣೈ ಅರವಿಂದ್ ನಗರ ನಿವಾಸಿಯಾಗಿದ್ದು, ಅಸಿಸ್ಟೆಂಟ್ ಲೇಬರ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಮನೆಯ ಮುಂದೆ ಬೈಕ್ ನಿಲ್ಲಿಸಿದ್ದ ಶಿವಮೂರ್ತಿ ಅವರ ವಾಹನಕ್ಕೆ ಕಾರಿನಲ್ಲಿ ಬಂದ ಮೂವರು ವಿದ್ಯಾರ್ಥಿಗಳು ಮೊದಲು ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಶಿವಮೂರ್ತಿ ಹಾಗೂ ಅವರ ಕುಟುಂಬಸ್ಥರು ಹೊರಬಂದು ಪ್ರಶ್ನಿಸಿದ್ದು, ಪರಸ್ಪರ ವಾಗ್ವಾದ ನಡೆದಿದೆ.

ವಾಗ್ವಾದದ ಬಳಿಕ ಆರೋಪಿಗಳು ಏಕಾಏಕಿ ಕಾರನ್ನು ಮುಂದೆ ಚಲಾಯಿಸಿ ಶಿವಮೂರ್ತಿ ಅವರ ಮೇಲೆ ಹರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಶಿವಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಶಿವಮೂರ್ತಿ ಅವರ ಮಗ, ಸೊಸೆ ಹಾಗೂ ಮೊಮ್ಮಗ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ಸ್ಥಳದಲ್ಲಿದ್ದವರ ಕಿರುಚಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಕರಣ ಸಂಬಂಧ ಆದಿತ್ಯ (20), ರಿತಿಕ್ ಕುಮಾರ್ (19) ಮತ್ತು ಹರೀಶ್ (19) ಎಂಬ ಮೂವರು ಆರೋಪಿಗಳನ್ನು ಹೊಸೂರು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಹೊಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿದ್ದು, ಮದ್ಯದ ನಶೆಯಲ್ಲಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ರಶ್ಮಿಕಾ ಮಂದಣ್ಣ-ವಿಜಯ್ ಧರಿಸಿದ್ದ ಚಿನ್ನದ ಬೆಲೆ ಎಷ್ಟು ಕೋಟಿ ರೂಪಾಯಿ? ಇಲ್ಲಿದೆ ಮಾಹಿತಿ

0

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆ ಅದ್ದೂರಿಯಾಗಿ ನಡೆದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ರಾಜರ ಥೀಮ್‌ನಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಇಬ್ಬರೂ ಧರಿಸಿದ ಆಭರಣಗಳ ಬೆಲೆ ಇದೀಗ ಎಲ್ಲರ ಗಮನ ಸೆಳೆದಿದೆ.

ಡೆಸ್ಟಿನೇಷನ್ ವೆಡ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ದಂಪತಿ, ರಾಜಸ್ಥಾನದ ಉದಯಪುರದಲ್ಲಿ ವೈಭವಶಾಲಿಯಾಗಿ ಮದುವೆಯಾದರು ಎನ್ನಲಾಗುತ್ತಿದೆ. ಮದುವೆಯ ಥೀಮ್ ರಾಜಮನೆತನದ ಶೈಲಿಯಲ್ಲಿ ಇದ್ದ ಕಾರಣ, ವಿಜಯ್ ದೇವರಕೊಂಡ ರಾಜನಂತೆ ಮತ್ತು ರಶ್ಮಿಕಾ ಮಂದಣ್ಣ ಯುವರಾಣಿಯಂತೆ ಮೆರಗಿನಿಂದ ಕಂಗೊಳಿಸಿದ್ದಾರೆ ಎಂಬ ಮಾತು ಹರಿದಾಡುತ್ತಿದೆ.

ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಇಬ್ಬರೂ ಧರಿಸಿದ ಚಿನ್ನದ ಸರಗಳು, ಬಳೆಗಳು ಮತ್ತು ಡೈಮಂಡ್ ಆಭರಣಗಳು ವಿಶೇಷವಾಗಿ ಗಮನ ಸೆಳೆದಿವೆ. ವರದಿಗಳ ಪ್ರಕಾರ, ರಶ್ಮಿಕಾ ಸುಮಾರು 1.5 ರಿಂದ 2 ಕೆಜಿ ಚಿನ್ನ ಧರಿಸಿದ್ದರು ಎನ್ನಲಾಗುತ್ತಿದೆ. ವಿಜಯ್ ದೇವರಕೊಂಡ ಕೂಡ ಬಹಳ ಪ್ರಮಾಣದ ಚಿನ್ನಾಭರಣಗಳನ್ನು ಧರಿಸಿದ್ದರು ಎಂದು ಹೇಳಲಾಗುತ್ತಿದೆ.

ಒಂದು ಕೆಜಿ ಚಿನ್ನದ ಬೆಲೆ ಒಂದೂವರೆ ಕೋಟಿ ರೂಪಾಯಿ ಇದ್ದು, ಡೈಮಂಡ್ ಹಾಗೂ ವಿನ್ಯಾಸ ವೆಚ್ಚ ಸೇರಿ ರಶ್ಮಿಕಾ ಮತ್ತು ವಿಜಯ್ ಧರಿಸಿದ ಆಭರಣಗಳ ಒಟ್ಟು ಮೌಲ್ಯ 7 ಕೋಟಿಗೂ ಅಧಿಕವಾಗಿರಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ ರಶ್ಮಿಕಾ ಧರಿಸಿದ ಆಭರಣಗಳ ಮೌಲ್ಯ ಸುಮಾರು 5 ಕೋಟಿ ರೂಪಾಯಿ ಹಾಗೂ ವಿಜಯ್ ಧರಿಸಿದ ಆಭರಣಗಳ ಮೌಲ್ಯ 2 ಕೋಟಿ ರೂಪಾಯಿ ಇರಬಹುದು ಎಂಬ ಚರ್ಚೆ ನಡೆಯುತ್ತಿದೆ.

ಆದರೆ, ಈ ಕುರಿತು ದಂಪತಿ ಅಥವಾ ಅವರ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯಷ್ಟೇ ಇದಾಗಿದ್ದು, ಅಧಿಕೃತ ದೃಢೀಕರಣ ಇನ್ನಷ್ಟೇ ಬೇಕಾಗಿದೆ.

ಪ್ರಧಾನಿ ಮೋದಿ ರಾಜಸ್ಥಾನ–ಗುಜರಾತ್ ಭೇಟಿ: 37,000 ಕೋಟಿ ರೂ. ಯೋಜನೆಗಳ ಉದ್ಘಾಟನೆ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮುಂದಿನ ದಿನಗಳಲ್ಲಿ ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಿಗೆ ಭೇಟಿ ನೀಡಿ, 37,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ರಾಜಸ್ಥಾನದಲ್ಲಿ 16,680 ಕೋಟಿ ರೂ. ಮೌಲ್ಯದ ಯೋಜನೆಗಳ ಉದ್ಘಾಟನೆ, ನಗರಾಭಿವೃದ್ಧಿ, ಶುದ್ಧ ಕುಡಿಯುವ ನೀರು, ರಸ್ತೆ ಜಾಲ, ನೀರಾವರಿ, ಇಂಧನ ಮತ್ತು ಕೈಗಾರಿಕಾ ಮೂಲಸೌಕರ್ಯ ಕ್ಷೇತ್ರಗಳಲ್ಲಿ ನಡೆಯಲಿದೆ. ಜೊತೆಗೆ, ಜೈಪುರ–ಬಂಡಿಕುಯಿ 4-ಪಥ ಎಕ್ಸ್ಪ್ರೆಸ್‌ವೇ, ದೆಹಲಿ–ವಡೋದರಾ 8-ಪಥ ಎಕ್ಸ್ಪ್ರೆಸ್‌ವೇ, ಜೋಧ್ಪುರ 4-ಪಥ ಎತ್ತರದ ರಸ್ತೆ ಮತ್ತು ಬರಾನ್‌ನಲ್ಲಿ ಹೊಸ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಅಡಿಪಾಯ.

ರಾಜಸ್ಥಾನದಲ್ಲಿ ಐದು 220 ಕೆವಿ, ಎರಡು 400 ಕೆವಿ ಗ್ರಿಡ್ ಸಬ್ಸ್ಟೇಷನ್‌ಗಳಿಗೆ ಅಡಿಪಾಯ ಮತ್ತು 21,800ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರ ವಿತರಿಸಲಾಗುತ್ತದೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಹೆಚ್ಪಿವಿ ಲಸಿಕೆ ಅಭಿಯಾನ ಪ್ರಾರಂಭವಾಗಲಿದೆ.

ಗುಜರಾತ್ ಸನಂದ್‌ನಲ್ಲಿ 22,500 ಕೋಟಿ ರೂ. ವೆಚ್ಚದ ದೇಶದ ಮೊದಲ ದೊಡ್ಡ ಸೆಮಿಕಂಡಕ್ಟರ್ ಅಸೆಂಬ್ಲಿ ಸೌಲಭ್ಯ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಚೆನ್ನೈಗೆ ಪ್ರಯಾಣ ಮಾಡಿ, ತಮಿಳುನಾಡು ಮತ್ತು ಪುದುಚೇರಿ ಭೇಟಿಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಮಾನಸಿಕ ಖಿನ್ನತೆಗೆ ಒಳಗಾಗಿ ವೈದ್ಯ ಮಾತ್ರೆ ಸೇವಿಸಿ ಆತ್ಮಹತ್ಯೆ!

0

ಮಂಡ್ಯ: ಮಾನಸಿಕ ಖಿನ್ನತೆಗೆ ಒಳಗಾಗಿ ವೈದ್ಯ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ನಗರದ ಹರಿಪ್ರಿಯ ಹೊಟೇಲ್‌ನಲ್ಲಿ ನಡೆದಿದೆ. ಕೆ.ಆರ್.ನಗರ ಮೂಲದ ಸುಖದೇವ್ (53) ಆತ್ಮಹತ್ಯೆಗೆ ಶರಣಾದ ವೈದ್ಯನಾಗಿದ್ದು,

ಮೈಸೂರಿನ ಖಾಸಗಿ ಕ್ಲಿನಿಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ನಗರದಲ್ಲಿರುವ ಹರಿಪ್ರಿಯ ಹೊಟೇಲ್‌ನಲ್ಲಿ ರೂಂ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾಗ ಮದ್ಯ ಸೇವನೆ ಮಾಡಿ, 30 ಮಾತ್ರೆಗಳ ಔಷಧ ಸೇವಿಸಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದು ಮಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಮುಂದಿನ ಕ್ರಮಗಳನ್ನು ಪೊಲೀಸರು ಕೈಗೊಳ್ಳುತ್ತಿದ್ದಾರೆ.

ಲಕ್ಷ್ಮೇಶ್ವರ ಸಮೀಪ ಕತ್ತು ಕೊಯ್ದು ಯುವಕನ ಕೊಲೆ – ಹೊಲದಲ್ಲಿ ಶವ ಪತ್ತೆ

0

ಲಕ್ಷ್ಮೇಶ್ವರ: ಸಮೀಪದ ಶಿಗ್ಲಿ ಗ್ರಾಮದ ಯುವಕನನ್ನು ಕತ್ತು ಕೊಯ್ದು ಕ್ರೂರವಾಗಿ ಹತ್ಯೆ ಮಾಡಿರುವ ದುರ್ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

ಮೃತರನ್ನು ಮಹ್ಮದ್ ಫಾರೂಕ್ ಶೇಖ್ ಸನದಿ (25) ಎಂದು ಗುರುತಿಸಲಾಗಿದೆ. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹರ್ಲಾಪೂರ ಗ್ರಾಮದ ನಿವಾಸಿ ಆಗಿರುವ ಪಾರೂಕ್ ಸದ್ಯ ಶಿಗ್ಲಿ ಗ್ರಾಮದಲ್ಲಿ ವಾಸವಾಗಿದ್ದ. ಇದೀಗ ಲಕ್ಷ್ಮೇಶ್ವರ ಸಮೀಪದ ಜಮೀನೊಂದರಲ್ಲಿ ಆತನ ಶವ ಪತ್ತೆಯಾಗಿದೆ.

ಅಪರಿಚಿತರು ಕತ್ತು ಕೊಯ್ದು ಹತ್ಯೆ ನಡೆಸಿ, ಬಳಿಕ ಶವವನ್ನು ಹೊಲದಲ್ಲಿ ಬಿಸಾಡಿರುವ ಸಾಧ್ಯತೆ ವ್ಯಕ್ತವಾಗಿದೆ. ಘಟನೆ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಹಲವು ಸುಳಿವುಗಳನ್ನು ಸಂಗ್ರಹಿಸಿರುವುದಾಗಿ ತಿಳಿದು ಬಂದಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಹತ್ಯೆಗೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಘಟನೆ ಶಿಗ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಮೂಡಿಸಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸುದ್ದಿ ತಿಳಿದ ಡಿವೈಎಸ್ಪಿ ಮುರ್ತಾಜಾ ಖಾದ್ರಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಯಚೂರು; ಬೈಕ್ ಗೆ ಡಿಕ್ಕಿ ಹೊಡೆದ ಟ್ರಕ್​; ಭೀಕರ ಅಪಘಾತಕ್ಕೆ ಮೂವರು ಯುವಕರು ಬಲಿ

0

ರಾಯಚೂರು:- ರಾಯಚೂರು ನಗರದ ಬಸವೇಶ್ವರ ವೃತ್ತದಲ್ಲಿ ಭೀಕರ ಅಪಘಾತ ಸಂಭವಿಸಿದೆ.

ಬೈಕ್​​ ಮತ್ತು ಟ್ರಕ್​ ನಡುವೆ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ಮೂವರು ಯುವಕರು ಮೃತಪಟ್ಟಿದ್ದಾರೆ. ಮೃತರನ್ನು ಮೊಹಮ್ಮದ್​​ ಅಲಿ(24), ನೂರ್ ಮೊಹಮ್ಮದ್(19) ಮತ್ತಯ ಫಯಾಜ್(26) ಎಂದು ಗುರುತಿಸಲಾಗಿದೆ. ಮೃತ ಮೂವರೂ ರಾಯಚೂರುನಗರದ ಸುಖಾಣಿ ಕಾಲೋನಿಯ ನಿವಾಸಿಗಳು ಎಂಬುದು ತಿಳಿದುಬಂದಿದೆ.

ಬಸವೇಶ್ವರ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದ ಕಡೆ ತೆರಳುತ್ತಿದ್ದ ಬೈಕ್​​ಗೆ ಹೈದರಾಬಾದ್​​​​ ಮಾರ್ಗದಿಂದ ಮಂತ್ರಾಲಯದ ಕಡೆ ಹೊರಟಿದ್ದ ಟ್ರಕ್ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಬೈಕ್​​ನಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.

ಅಪಘಾತದ ಬಳಿಕ ಟ್ರಕ್ ಸಮೇತ ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ರಾಯಚೂರು ಟ್ರಾಫಿಕ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಬಾಗಲಗುಂಟೆ: ಬಾಡಿಗೆ ಮನೆಯಲ್ಲಿ ವ್ಯಕ್ತಿಯ ಕೊಲೆ – ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

0

ಬಾಗಲಗುಂಟೆ: ಮಂಜುನಾಥನಗರ 2ನೇ ರಸ್ತೆ, ವಿಜಯಲಕ್ಷ್ಮಿ ಲೇಔಟ್‌ನ ಬಾಡಿಗೆ ಮನೆಯಲ್ಲಿ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅನೈತಿಕ ಸಂಬಂಧ ಹಿನ್ನೆಲೆ ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಎರಡು ತಿಂಗಳ ಹಿಂದೆ ನಟರಾಜ್ ಸರಸ್ವತಿ ಇವರಿಂದ ಮೋಹನ್ ಕೃಷ್ಣ ಮತ್ತು ಊರ್ವಶಿ ಅವರಿಗೆ ಬಾಡಿಗೆ ನೀಡಲಾಗಿತ್ತು. ಇದೀಗ ಮೃತದೇಹ ಮೋಹನ್ ಕೃಷ್ಣ ಅಥವಾ ಯಾರು ಎಂಬುದು ಪರಿಶೀಲನೆಗೊಳಿಸಲಾಗುತ್ತಿದೆ. ದೇಹದ ಬಾಯಿಗೆ ಟೇಪ್ ಹಾಕಿ, ಕೈಕಾಲು ಕಟ್ಟಿರುವುದು ತನಿಖೆಯಲ್ಲಿ ದೃಢವಾಗಿದೆ.

ಕೊಳೆತ ಶವದಿಂದ ಬರುವ ದುರ್ವಾಸನೆ ಗಮನಿಸಿ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಮೃತದೇಹವನ್ನು ವಿಕ್ಟೋರಿಯಾ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪ: ವಸತಿ ಶಾಲೆ ನಡೆಸುತ್ತಿದ್ದ ದಂಪತಿ ಮೇಲೆ ಪೋಕ್ಸೋ ಕೇಸ್!

0

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ.

ಶಾಲೆಯ ಮಾಲೀಕ ಧನಂಜಯ್ ಮತ್ತು ಅವರ ಪತ್ನಿ ಶೈಲಜಾ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರೀಕ್ಷೆಗಾಗಿ ವಸತಿ ಶಾಲೆಯಲ್ಲಿ ಉಳಿದಿದ್ದ ಇಬ್ಬರು ಬಾಲಕಿಯರಿಗೆ, ಧನಂಜಯ್ ಮದ್ಯದ ಅಮಲಿನಲ್ಲಿ ರಾತ್ರಿವೇಳೆ ಕೊಠಡಿಗೆ ಹೋಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಬಾಲಕಿಯರು ಈ ವಿಚಾರವನ್ನು ಪತ್ನಿ ಶೈಲಜಾಗೆ ತಿಳಿಸಿದರೂ, ಆಕೆಯು ಗಂಡನ ಕ್ರೂರ ಕೃತ್ಯಕ್ಕೆ ಸಾಥ್ ನೀಡಿ, ಯಾವುದೇ ಸುದ್ದಿ ಹೊರಬಾರದಂತೆ ಒತ್ತಡ ಹಾಕುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.

ಇದೇ ನರಕದಲ್ಲಿ ಬೇಯುತ್ತಿದ್ದ ಬಾಲಕಿಯರ ಮೇಲೆ ಒತ್ತಡ ಹೇರಿದ್ದ ದಂಪತಿ, ವಸತಿ ಶಾಲೆಯಲ್ಲಿ ನಡೆದ ದೌರ್ಜನ್ಯದ ಕುರಿತು ಯಾರ ಬಳಿಯೂ ಹೇಳದಂತೆ ಒತ್ತಡ ಹೇರುತ್ತಿದ್ದರು. ಅದರಲ್ಲಿಯೂ ಪಾಲಕರಿಗೆ ಸುದ್ದಿ ಮುಟ್ಟಿಸಬಾರದೆಂದು ಸತತ 8 ದಿನ ಹೊರಗೆ ಹೋಗಲೂ ಬಿಡದೆ, ಪೋಷಕರಿಗೆ ಕರೆ ಮಾಡಲೂ ಬಿಡದೆ ಕಿರುಕುಳ ನೀಡಿದ್ದರು ಎಂದು ಬಾಲಕಿಯರು ಹೇಳಿದ್ದಾರೆ. ಅದಾದ ಬಳಿಕ ನಿನ್ನೆ ಪೋಷಕರಿಗೆ ಕರೆ ಮಾಡಿದ ಬಾಲಕಿಯರು ತಮ್ಮ ಮೇಲಾದ ದೌರ್ಜನ್ಯವನ್ನು ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೆ ಶಾಲೆ ಬಳಿ ಬಂದ ಬಾಲಕಿಯರ ಪೋಷಕರು ದಂಪತಿ ವಿರುದ್ಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ವಸತಿ ಶಾಲೆಯಲ್ಲಿ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಧನಂಜಯ್ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರಾಗಿದ್ದು, ಕುಕೃತ್ಯದಿಂದ ನೊಂದ ಬಾಲಕಿಯರಿಗೆ ಪತ್ನಿ ಸಹ ತಾಕೀತು ನೀಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಸಧ್ಯಕ್ಕೆ ಇವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕಾಲೇಜಿನ ಎಡವಟ್ಟು; ಪರೀಕ್ಷೆ ಬರೆಯಲು ಬಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಂಗಾಲು- ಆಗಿದ್ದೇನು?

0

ಯಾದಗಿರಿ: ರಾಜ್ಯದಲ್ಲಿ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿದ್ದು, 7.10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 1,217 ಕೇಂದ್ರಗಳಲ್ಲಿ ಪರೀಕ್ಷೆಗೆ ಕುಳಿತುಕೊಂಡಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಪರೀಕ್ಷೆಗೆ ಸಿಸಿ ಕ್ಯಾಮರಾ ಕಣ್ಗಾವಲು ಮತ್ತು ಬಿಗಿ ಭದ್ರತೆ ಒದಗಿಸಲಾಗಿದೆ.

ಆದರೆ, ಯಾದಗಿರಿಯಲ್ಲಿ ಕೆಲವು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಕುರಿತು ಗೊಂದಲಕ್ಕೀಡಾಗಿದ್ದಾರೆ. ಹಾಲ್ ಟಿಕೆಟ್‌ನಲ್ಲಿ ನಮೂದಿಸಿರುವ ವಿಳಾಸ ಮತ್ತು ವಾಸ್ತವಿಕ ಕೇಂದ್ರ ವಿಳಾಸ ಬೇರೆಯಾಗಿದ್ದ ಕಾರಣ, ಕೆಲ ವಿದ್ಯಾರ್ಥಿಗಳು ಸಬಾ ಪಿಯು ಕಾಲೇಜು ಕೇಂದ್ರವನ್ನು ಹುಡುಕಲು ಪರದಾಡಬೇಕಾಯಿತು. ಉದಾಹರಣೆಗೆ, ಕಾಲೇಜು ಲುಂಬಿನಿ ಪಾರ್ಕ್ ಹತ್ತಿರ ಇದ್ದರೂ, ಹಾಲ್ ಟಿಕೆಟ್‌ನಲ್ಲಿ ಗಂಜ್ ರೋಡ್ ಎಂದು ಉಲ್ಲೇಖವಾಗಿತ್ತು. ಅಂತಿಮವಾಗಿ ಸ್ಥಳೀಯರ ಸಹಾಯದಿಂದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 17ರವರೆಗೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮೊಬೈಲ್ ನಿರ್ಬಂಧ, ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ನಿಷೇಧ, ಅನಧಿಕೃತ ವ್ಯಕ್ತಿಗಳ ಪ್ರವೇಶ ನಿಷೇಧ, ಚಿತ್ರೀಕರಣ ಹಾಗೂ ಸ್ಫೋಟಕ ವಸ್ತು ನಿರ್ಬಂಧ ಸೇರಿದಂತೆ ಸಂಪೂರ್ಣ ಭದ್ರತಾ ಕ್ರಮಗಳು ಜಾರಿಗೆ ಬಂದಿವೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ. ಅವರು “ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ, ಉತ್ತಮ ಅಂಕಗಳ ಜೊತೆಗೆ ಉಜ್ವಲ ಭವಿಷ್ಯವೂ ನಿಮ್ಮದಾಗಲಿ” ಎಂದು ಸಂದೇಶ ನೀಡಿದ್ದಾರೆ.

Gadaga Crime News: ಆಸ್ತಿ ಕಲಹ; ಮಗನಿಂದಲೇ ತಂದೆಯ ಭೀಕರ ಕೊಲೆ!

0

ಲಕ್ಷ್ಮೇಶ್ವರ: ಆಸ್ತಿ ವಿಚಾರಕ್ಕೆ ಶುರುವಾದ ಗಲಾಟೆ ತಂದೆಯ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಗೋವನಾಳ ಗ್ರಾಮದಲ್ಲಿ ಜರುಗಿದೆ.

ಪಾಪಿ ಮಗನಿಂದಲೇ ತಂದೆಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಶಂಕರಗೌಡ ಕುಬೇರಗೌಡ ದ್ಯಾವನಗೌಡ್ರ (60) ಕೊಲೆಯಾದ ತಂದೆ. ಪ್ರಭು ಶಂಕರಗೌಡ ದ್ಯಾವನಗೌಡ್ರ (23) ಕೊಲೆ ಮಾಡಿದ ಪಾಪಿ ಮಗ.

ಪ್ರಾಥಮಿಕ ತನಿಖೆ ಪ್ರಕಾರ, ಕುಟುಂಬದ 2 ಎಕರೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಜಗಳವೇ ಕೊಲೆಗೆ ಕಾರಣವಾಗಿದೆ. ಘಟನೆಯ ಸಮಯದಲ್ಲಿ ಆರೋಪಿಯು ಕುಡಿದ ಮದ್ಯದಲ್ಲಿದ್ದ ಎನ್ನಲಾಗಿದೆ.

ಕೊಲೆಗೀಡಾದ ಶಂಕರಗೌಡನಿಗೆ ಪ್ರಭು ಎರಡನೇ ಪತ್ನಿಯಿಂದ ಜನಿಸಿದ ಮಗನಾಗಿದ್ದಾನೆ. ಸುಮಾರು 30 ವರ್ಷಗಳ ಹಿಂದೆ ಮೊದಲ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದರು ಎಂಬ ಸಂಗತಿಯೂ ಹೊರಬಿದ್ದಿದೆ.

ಘಟನೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ ಜಗದೀಶ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

error: Content is protected !!