Home Blog

ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಕಳೆದ ಬಾರಿಗಿಂತ ದೊಡ್ಡ ಅಂತರದ ಗೆಲುವು: ಡಿ.ಕೆ. ಶಿವಕುಮಾರ್

ಬೆಂಗಳೂರು: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದ ಮತಕ್ಕಿಂತ ಈ ಬಾರಿಯ ಉಪಚುನಾವಣೆಯಲ್ಲಿ ಹೆಚ್ಚು ಮತ ಬೀಳಲಿದ್ದು, ನಮ್ಮ ಅಭ್ಯರ್ಥಿಗಳು ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ” ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.

ಉಪಚುನಾವಣೆ ಪ್ರಚಾರದ ಬಗ್ಗೆ ಕೇಳಿದಾಗ, “ದಾವಣಗೆರೆ ಹಾಗೂ ಬಾಗಲಕೋಟೆಯ ಉಪಚುನಾವಣೆ ಪ್ರಚಾರ ಮಾಡಿ ಬಂದಿದ್ದೇನೆ. ನಮ್ಮ ಕಾರ್ಯಕರ್ತರು ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಮನೆ ಮನೆಗೆ ಹೋಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ.

ಗ್ಯಾರಂಟಿ ಫಲಾನುಭವಿಗಳಲ್ಲಿ ಕಳೆದ ಬಾರಿ ಬಿಜೆಪಿಗೆ ಮತ ಹಾಕಿರುವವರೂ ಕೂಡ ಈ ಬಾರಿ ಕಾಂಗ್ರೆಸ್ ಗೆ ಮತ ಹಾಕುವುದಾಗಿ ತಿಳಿಸಿದ್ದಾರೆ. ಬೇಲೆ ಏರಿಕೆಯಾಗುತ್ತಿರುವ ಪರಿಸ್ಥಿತಿಯಲ್ಲಿ ಗ್ಯಾರಂಟಿ ಯೋಜನೆ ಎಷ್ಟು ನೆರವಾಗುತ್ತಿವೆ ಎಂದು ಸ್ಮರಿಸುತ್ತಿದ್ದಾರೆ. ಇವುಗಳನ್ನು ಉಳಿಸಿಕೊಳ್ಳಲು ಜನ ತೀರ್ಮಾನಿಸಿದ್ದಾರೆ” ಎಂದು ತಿಳಿಸಿದರು.

ಕೇರಳ ಚುನಾವಣಾ ಪ್ರಚಾರಕ್ಕೆ ತೆರಳುತ್ತಿರುವ ಬಗ್ಗೆ ಕೇಳಿದಾಗ, “ಕೇರಳ ಚುನಾವಣೆ ಪ್ರಚಾರಕ್ಕೆ ಎರಡು ದಿನ ಪ್ರವಾಸ ಮಾಡಬೇಕಾಗಿದ್ದು, ಅಲ್ಲಿ ಪ್ರವಾಸ ಮಾಡಿ ಬಂದ ಬಳಿಕ, ಇಲ್ಲಿ ದಾವಣಗೆರೆ ಅಥವಾ ಬಾಗಲಕೋಟೆಗೆ ತೆರಳುತ್ತೇನೆ” ಎಂದು ತಿಳಿಸಿದರು.

ರಾಜ್ಯದಲ್ಲಿ ಗ್ಯಾಸ್ ಅಭಾವದ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಕೇಳಿದಾಗ, “ಆಟೋ ಚಾಲಕರಿಗೆ ಇದರಿಂದ ಬಹಳ ತೊಂದರೆಯಾಗುತ್ತಿದೆ. ಇದರಿಂದ ಸಂಚಾರ ವ್ಯವಸ್ಥೆಗೆ ಪರಿಣಾಮ ಬೀರುತ್ತಿದೆ. ಜತೆಗೆ ಹೊಟೇಲ್ ಕ್ಷೇತ್ರವು ಸಮಸ್ಯೆ ಎದುರಿಸುತ್ತಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಬೇಕು” ಎಂದು ಆಗ್ರಹಿಸಿದರು.

ಆಟೋ ಚಾಲಕರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿರುವ ಬಗ್ಗೆ ಕೇಳಿದಾಗ, “ಅನಿಲ ಪೂರೈಕೆ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿಲ್ಲ. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಕೇಂದ್ರ ಸರ್ಕಾರ ಸರಿಯಾಗಿ ಮುಂಜಾಗ್ರತೆ, ನೀತಿ ರೂಪಿಸಬೇಕಿತ್ತು. ಈ ವಿಚಾರದಲ್ಲಿ ವಿಫಲವಾಗಿದೆ. ಈ ವಿಚಾರವಾಗಿ ಬಿಜೆಪಿಯವರು ಈವರೆಗೂ ಯಾಕೆ ಮಾತನಾಡುತ್ತಿಲ್ಲ. ನಮ್ಮಿಂದ ತೊಂದರೆಯಾಗಿದೆ ಎಂದು ಒಪ್ಪಿಕೊಂಡು ಜನರ ಬಳಿ ಕ್ಷಮೆ ಕೋರಬೇಕು” ಎಂದು ತಿಳಿಸಿದರು.

ಸಿಎಂ ದಾವಣಗೆರೆಯಲ್ಲಿ ಪ್ರಚಾರ ಮಾಡಲು ಹೇಳಿದ್ದು, ವೇಣುಗೋಪಾಲ್ ಅವರು ಕೇರಳದಲ್ಲಿ ಪ್ರಚಾರ ಮಾಡಲು ಹೇಳುತ್ತಿದ್ದಾರೆ ಎಂದು ಕೇಳಿದಾಗ, “ನನಗೆ ಈ ವಿಚಾರವಾಗಿ ಗೊತ್ತಿಲ್ಲ. ಯಾರು ಇರಲಿ, ಇಲ್ಲದಿರಲಿ ನಮ್ಮ ಕರ್ತವ್ಯ ನಾವು ಮಾಡುತ್ತೇವೆ” ಎಂದು ತಿಳಿಸಿದರು.

SSLC ಗ್ರೇಡಿಂಗ್ ವಿವಾದ: ರಾಜ್ಯಪಾಲರ ವಿರುದ್ಧ ಟಿ.ಎನ್. ನಾರಾಯಣಗೌಡ ವಾಗ್ದಾಳಿ

ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಕುರಿತು ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎನ್. ನಾರಾಯಣಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಾರಾಯಣಗೌಡ, “ಹಿಂದಿ ಸಾಮ್ರಾಜ್ಯಶಾಹಿ ಲಾಬಿಯ ಪರವಾಗಿ ಮಾತನಾಡುತ್ತಿರುವುದು ಸ್ಪಷ್ಟ. ಕನ್ನಡಿಗರ ತೆರಿಗೆ ಹಣದಿಂದ ನಡೆಯುವ ರಾಜಭವನದಲ್ಲಿ ಇದ್ದು, ತಿಂದ ಮನೆಗೆ ಕನ್ನ ಹಾಕಬೇಡಿ” ಎಂದು ಕಿಡಿಕಾರಿದ್ದಾರೆ.

ರಾಜ್ಯಪಾಲರು ಬರೆದಿರುವ ಪತ್ರದ ಬಗ್ಗೆ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಅವರು, “ಈ ರೀತಿಯ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತದ್ದು. ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರು ಎಂಬುದನ್ನು ಮರೆತಿದ್ದಾರೆ” ಎಂದು ಟೀಕಿಸಿದರು.

ಮುಂದುವರೆದು, “ಜನರಿಂದ ನೇರವಾಗಿ ಆಯ್ಕೆಯಾದ ಪ್ರತಿನಿಧಿಯಲ್ಲದ ರಾಜ್ಯಪಾಲರಿಗೆ ದೈನಂದಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ನೈತಿಕ ಅಥವಾ ಸಾಂವಿಧಾನಿಕ ಅಧಿಕಾರವಿಲ್ಲ” ಎಂದು ಹೇಳಿದರು. ಈ ರೀತಿಯ ನಡೆ ಮುಂದುವರೆದರೆ “ಗಂಟುಮೂಟೆ ಕಟ್ಟಿಕೊಂಡು ತಮ್ಮ ರಾಜ್ಯಕ್ಕೆ ಹಿಂತಿರುಗುವಂತೆ ಹೇಳಬೇಕಾಗುತ್ತದೆ” ಎಂದು ನಾರಾಯಣಗೌಡ ತೀವ್ರ ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಒಬ್ಬರೇ ಮಾಡಿದ ಸಾಲ 5 ಲಕ್ಷ ಕೋಟಿಗೂ ಹೆಚ್ಚು: ಸಿ.ಟಿ.ರವಿ ಆಕ್ಷೇಪ

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಬ್ಬರೇ ಮಾಡಿದ ಸಾಲ 5 ಲಕ್ಷ ಕೋಟಿಗೂ ಹೆಚ್ಚು ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆಕ್ಷೇಪಿಸಿದ್ದಾರೆ.

ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ರಾಜ್ಯದ ಒಟ್ಟು ಸಾಲ 8 ಲಕ್ಷದ 32 ಸಾವಿರ ಕೋಟಿ ಆಗಿದೆ. ಅದರಲ್ಲಿ ಸಿದ್ದರಾಮಯ್ಯನವರು ಒಬ್ಬರೇ ಮಾಡಿದ ಸಾಲ 5 ಲಕ್ಷ ಕೋಟಿಗೂ ಹೆಚ್ಚು ಎಂದು ಗಮನ ಸೆಳೆದರು. 2023-24ರಲ್ಲಿ 90,280 ಕೋಟಿ, 2024-25ರಲ್ಲಿ 1 ಲಕ್ಷದ 7 ಸಾವಿರ ಕೋಟಿ, 2025-26ರಲ್ಲಿ 1 ಲಕ್ಷದ 16 ಸಾವಿರ ಕೋಟಿ, 2026-27ರಲ್ಲಿ 1 ಲಕ್ಷದ 32 ಸಾವಿರ ಕೋಟಿ ರೂ. ಎಂದು ವಿವರಿಸಿದರು.

ಒಟ್ಟು 8 ವರ್ಷದಲ್ಲಿ ಅವರು ಮುಖ್ಯಮಂತ್ರಿಯಾಗಿ ಮಾಡಿದ ಸಾಲ ಶೇ 60ರಷ್ಟಿದೆ. ಕಳೆದ 30 ವರ್ಷಗಳಲ್ಲಿ ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ ಶೆಟ್ಟರ್,

ಬಸವರಾಜ ಬೊಮ್ಮಾಯಿ ಹೀಗೆ ಎಷ್ಟು ಜನ ಮುಖ್ಯಮಂತ್ರಿಗಳಿದ್ದರೋ ಅವರೆಲ್ಲ ಮಾಡಿದ ಸಾಲ ಶೇ 40 ಆಗಿತ್ತು. ಆದರೆ, ಸಿದ್ದರಾಮಯ್ಯ ಅವರೊಬ್ಬರೇ ಮಾಡಿದ ಸಾಲ ಶೇ 60ರಷ್ಟು ಎಂದು ತಿಳಿಸಿದರು. ಈಗ ಹೇಳಿ, ನಿಮ್ಮನ್ನು ಸಾಲದ ರಾಮಯ್ಯ ಎಂದು ಕರೆಯುವುದು ಸರಿಯೇ ಅಲ್ಲವೇ ಎಂದು ಪ್ರಶ್ನಿಸಿದರು.

“ನ್ಯಾಷನಲ್ ಕ್ರಶ್ ರಶ್ಮಿಕಾ ಮತ್ತೆ ಗ್ಲೋಬಲ್ ಸ್ಟೇಜ್‌ನಲ್ಲಿ: ಜಪಾನ್‌ನಲ್ಲಿ ಡಬಲ್ ಧಮಾಕಾ!”

ಪ್ಯಾನ್ ಇಂಡಿಯಾ ಸ್ಟಾರ್ ರಶ್ಮಿಕಾ ಮಂದಣ್ಣ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ! ಸರಳ ಹಿನ್ನೆಲೆಯಿಂದ ಬಂದ ಈ ನಟಿ, ಇಂದು ಭಾರತದೆಲ್ಲೆಡೆ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿಯೂ ತನ್ನದೇ ಆದ ಕ್ರೇಜ್ ನಿರ್ಮಿಸಿಕೊಂಡಿದ್ದಾರೆ.

ಇತ್ತೀಚೆಗೆ ವಿಜಯ್ ದೇವರಕೊಂಡ ಅವರೊಂದಿಗೆ ಮದುವೆಯಾದ ರಶ್ಮಿಕಾ, ವೈಯಕ್ತಿಕ ಜೀವನದ ಖುಷಿಯ ಜೊತೆಗೆ ವೃತ್ತಿ ಜೀವನದಲ್ಲೂ ಫುಲ್ ಫಾರ್ಮ್‌ನಲ್ಲಿ ಇದ್ದಾರೆ. ಅಭಿಮಾನಿಗಳಿಂದ ‘ನ್ಯಾಷನಲ್ ಕ್ರಶ್’ ಎಂದು ಕರೆಯಲ್ಪಡುವ ಈ ನಟಿ, ಈಗ ಮತ್ತೊಂದು ದೊಡ್ಡ ಸಾಧನೆ ಮೂಲಕ ಗಮನ ಸೆಳೆದಿದ್ದಾರೆ.

ಜಪಾನ್‌ನ ಟೋಕಿಯೋದಲ್ಲಿ ನಡೆಯಲಿರುವ ಕ್ರಂಚೈರೋಲ್ ಅನಿಮೆ ಅವಾರ್ಡ್ಸ್ ಸಮಾರಂಭದಲ್ಲಿ ರಶ್ಮಿಕಾ ಎರಡನೇ ಬಾರಿ ಭಾಗವಹಿಸಲಿದ್ದಾರೆ. ಈ ಮೂಲಕ, ಎರಡು ಬಾರಿ ಈ ವೇದಿಕೆಯಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಸೆಲೆಬ್ರಿಟಿ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

2024ರಲ್ಲಿ ಇದೇ ವೇದಿಕೆಯಲ್ಲಿ ಮಿಂಚಿದ್ದ ರಶ್ಮಿಕಾ, ಈ ಬಾರಿ ಹಾಲಿವುಡ್ ಸೆಲೆಬ್ರಿಟಿಗಳ ಜೊತೆಗೆ ಸ್ಟೇಜ್ ಹಂಚಿಕೊಂಡು ಪ್ರಶಸ್ತಿಗಳನ್ನು ಪ್ರದಾನಿಸಲಿದ್ದಾರೆ. ಇದು ಭಾರತೀಯ ಸಿನಿರಂಗಕ್ಕೆ ದೊಡ್ಡ ಗೌರವವೆಂದೇ ಹೇಳಬಹುದು.

‘ಪುಷ್ಪ’ ಚಿತ್ರದ ಶ್ರೀವಳ್ಳಿ ಪಾತ್ರದಿಂದ ಜಪಾನ್‌ನಲ್ಲಿ ಭಾರೀ ಕ್ರೇಜ್ ಪಡೆದ ರಶ್ಮಿಕಾ, ಅನಿಮೇ ಪ್ರಪಂಚದ ಮೇಲಿನ ತಮ್ಮ ಪ್ರೀತಿಯಿಂದಲೇ ಈ ವೇದಿಕೆಯಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳುತ್ತಿದ್ದಾರೆ.

‘ಅನಿಮಲ್’ದಿಂದ ‘ಪುಷ್ಪ 2’ವರೆಗೆ ಹಿಟ್ ಮೇಲೆ ಹಿಟ್ ನೀಡುತ್ತಿರುವ ರಶ್ಮಿಕಾ, ಈಗ ‘ಮೈಸಾ’, ‘ರಣಬಲಿ’ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಗ್ಲೋಬಲ್ ಸ್ಟಾರ್ ಆಗಿ ಮತ್ತಷ್ಟು ಎತ್ತರಕ್ಕೆ ಏರುತ್ತಿರುವ ರಶ್ಮಿಕಾ, ಅಭಿಮಾನಿಗಳ ಗಮನ ಸೆಳೆಯುತ್ತಲೇ ಇದ್ದಾರೆ.

ಆಟೋ ಚಾಲಕರ ಸಂಕಷ್ಟ: ಈ ಸಮಸ್ಯೆ ನಾವು ಯಾರೂ ಬಯಸಿ ಬಂದಿರೋದಲ್ಲ – ಹೆಚ್ ಡಿ ಕುಮಾರಸ್ವಾಮಿ

ಕೊಪ್ಪಳ: ರಾಜ್ಯದಲ್ಲಿ ಆಟೋ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳು ಯುದ್ಧದ ಹಿನ್ನೆಲೆ ಉಂಟಾಗಿರುವವು, ಇದು ಯಾರೂ ಬಯಸಿದ ಪರಿಸ್ಥಿತಿ ಅಲ್ಲ ಎಂದು ಕೇಂದ್ರ ಸಚಿವ HD ಕುಮಾರಸ್ವಾಮಿ ತಿಳಿಸಿದ್ದಾರೆ.

ಕೊಪ್ಪಳ ತಾಲೂಕಿನ ಹಿಟ್ನಾಳ್ ಟೋಲ್ ಗೇಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂತಹ ಸಂದರ್ಭಗಳಲ್ಲಿ ಜನಸಾಮಾನ್ಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ಸರ್ಕಾರಗಳ ಕರ್ತವ್ಯ ಎಂದು ಹೇಳಿದರು.

ಪ್ರಧಾನಿ ಮೋದಿ ನೇತೃತ್ವದಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಕೆಲವು ಮಟ್ಟಿಗೆ ಯಶಸ್ಸು ಸಾಧಿಸಲಾಗಿದೆ ಎಂದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ಟೀಕೆ ನಡೆಸಿದ ಅವರು, ಯುಪಿಎ ಸರ್ಕಾರ ಇದ್ದರೆ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರವನ್ನು ಟೀಕಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಅವರು, ರಾಜ್ಯದಲ್ಲಿ ಸಿಲಿಂಡರ್ ಮತ್ತು ಆಟೋ ಎಲ್‌ಪಿಜಿ ಕೊರತೆ ಕಾಣಿಸುತ್ತಿದೆ ಎಂದರು.

ಇದೇ ವೇಳೆ, ಆಟೋ ಚಾಲಕರ ಮೇಲೆ ತೆರಿಗೆ ವಿಧಿಸಿರುವುದನ್ನು ಉಲ್ಲೇಖಿಸಿ, ಆಟೋ ಚಾಲಕರು ತಿಂಗಳಿಗೆ ₹15,000 ನೆರವು ನೀಡುವಂತೆ ಆಗ್ರಹಿಸುತ್ತಿದ್ದಾರೆ. ಸರ್ಕಾರ ಇದನ್ನು ಪರಿಗಣಿಸಿ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.

ಕದ್ದ ಮೊಬೈಲ್‌ʼನಿಂದ ರ‍್ಯಾಪಿಡೋ ಬುಕ್: ಆಟೋ ಚಾಲಕನ ಮೇಲೆ ಹಲ್ಲೆ, ಇಬ್ಬರು ಬಂಧನ

0

ಬೆಂಗಳೂರು: ಕದ್ದ ಮೊಬೈಲ್ ಬಳಸಿ ರ‍್ಯಾಪಿಡೋ ಬುಕ್ ಮಾಡಿ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಮೊದಲು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ರಿಹ್ಯಾಬಿಲಿಟೇಶನ್ ಕೇಂದ್ರದಿಂದ ಪರಾರಿಯಾಗಿದ್ದರು. ಅಲ್ಲಿಂದಲೇ ಕೇಂದ್ರದ ಮಾಲೀಕರ ಮೊಬೈಲ್ ಕದ್ದು, ಅದನ್ನು ಬಳಸಿ ರ‍್ಯಾಪಿಡೋ ಸೇವೆ ಬುಕ್ ಮಾಡಿದ್ದಾರೆ.

ಹುಸ್ಕೂರು ಬಳಿ ಆಟೋ ಬುಕ್ ಮಾಡಿಕೊಂಡು, ಚಾಲಕನನ್ನು ಜೋಹಳ್ಳಿ ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಡ್ರಾಪ್ ಮಾಡಿದ ನಂತರ ಹಣ ಕೇಳಿದ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ನಾಲ್ಕು ಹಲ್ಲುಗಳು ಮುರಿದಿವೆ.

ಆ ಬಳಿಕ ಆರೋಪಿಗಳು ಆಟೋ ಮತ್ತು ಮೊಬೈಲ್ ತೆಗೆದುಕೊಂಡು ಪರಾರಿಯಾಗಿ ಮಾಲೂರಿಗೆ ತೆರಳಿದ್ದಾರೆ. ಅಲ್ಲಿ “ತಂದೆಗೆ ಆರೋಗ್ಯ ಸರಿಯಿಲ್ಲ” ಎಂಬ ನೆಪ ಹೇಳಿ ಆಟೋವನ್ನು ಅಡಮಾನ ಇಟ್ಟು ಹಣ ಪಡೆದಿದ್ದಾರೆ.

ನಂತರ ಮತ್ತೆ ಬೆಂಗಳೂರಿಗೆ ಬಂದು ಸುತ್ತಾಡುತ್ತಿದ್ದರು. ಈ ನಡುವೆ, ಆರೋಪಿಗಳು ಮೊಬೈಲ್ ಅನ್ನು ಅಗತ್ಯವಿದ್ದಾಗ ಮಾತ್ರ ಆನ್ ಮಾಡಿ, ಬಳಿಕ ಆಫ್ ಮಾಡುತ್ತಿದ್ದರು. ಘಟನೆ ಸಂಬಂಧ ಆಟೋ ಚಾಲಕ ನೀಡಿದ ದೂರಿನ ಮೇರೆಗೆ ಬಾಗಲೂರು ಪೊಲೀಸರು ತನಿಖೆ ಆರಂಭಿಸಿ, ಕಾನಿಷ್ ಸೇರಿದಂತೆ ಒಬ್ಬ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ರೆಸಾರ್ಟ್‌ನಲ್ಲಿ ರೇವ್ ಪಾರ್ಟಿ ರಂಗು: ರೌಡಿಶೀಟರ್ ಬರ್ತ್‌ಡೇಗೆ ಡ್ರಗ್ಸ್ ದಂಗಲ್, 15 ಮಂದಿಗೆ ಶಾಕ್!

ಚಾಮರಾಜನಗರ: ಕೊಳ್ಳೇಗಾಲ ಹೊರವಲಯದಲ್ಲಿ ನಡೆದ ಡ್ರಗ್ಸ್ ಪಾರ್ಟಿ ಪ್ರಕರಣ ರಾಜ್ಯದ ಗಮನ ಸೆಳೆದಿದೆ. ರೌಡಿಶೀಟರ್ ಜಹೀರ್ ಜನ್ಮದಿನದ ಹೆಸರಿನಲ್ಲಿ ನಡೆದ ಈ ಪಾರ್ಟಿ, ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಈ ಪಾರ್ಟಿಯಲ್ಲಿ ಗಾಂಜಾ, ಚರಸ್ ಸೇವನೆ ನಡೆದಿದ್ದು, ಎಲ್ಲರೂ ಮೋಜುಮಸ್ತಿಯಲ್ಲಿ ತೊಡಗಿದ್ದರೆಂದು ವರದಿಯಾಗಿದೆ. ಪೊಲೀಸರ ದಾಳಿ ನಡೆಸಿ ಸಂಭ್ರಮಕ್ಕೆ ಬ್ರೇಕ್ ಹಾಕಿದ್ದಾರೆ.

ಪಾರ್ಟಿಯಲ್ಲಿ ಒಟ್ಟು ಐವತ್ತು ಮಂದಿ ಭಾಗಿಯಾಗಿದ್ದು, ವೈದ್ಯಕೀಯ ಪರೀಕ್ಷೆಯ ಬಳಿಕ 15 ಮಂದಿಗೆ ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿದ್ದು ಇದು ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ನೀಡಿದೆ. ಈ ಪಾರ್ಟಿ ನಡೆದಿರುವುದು ಎ1 ಕಾಂಟ್ರಾಕ್ಟರ್ ಫಯಾಜ್ ಖಾನ್ ರೆಸಾರ್ಟ್‌ನಲ್ಲಿ ಎಂಬುದು ಮತ್ತಷ್ಟು ಸಂಚಲನ ಮೂಡಿಸಿದೆ.

ಪ್ರಭಾವಿ ಸಂಪರ್ಕಗಳಿದ್ದ ವ್ಯಕ್ತಿಯ ರೆಸಾರ್ಟ್‌ನಲ್ಲಿ ಈ ರೀತಿ ಪಾರ್ಟಿ ನಡೆದಿರುವುದು ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ. ಪಾರ್ಟಿಯಲ್ಲಿ ಜಹೀರ್ ಕುಟುಂಬ ಸದಸ್ಯರೂ ಇದ್ದಾರೆ ಎಂಬ ಮಾಹಿತಿ ಇನ್ನಷ್ಟು ಶಾಕ್ ನೀಡಿದೆ.

ಮಹಿಳೆಯರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗುತ್ತಿದ್ದು, ಪೊಲೀಸರ ತನಿಖೆ ಇನ್ನಷ್ಟು ಗಂಭೀರವಾಗಿದೆ. ಈಗ ಈ ಪ್ರಕರಣದಲ್ಲಿ ಇನ್ನೂ ಯಾರ ಹೆಸರು ಹೊರಬರುತ್ತದೆ? ಇನ್ನಷ್ಟು ದೊಡ್ಡ ಸಂಪರ್ಕಗಳು ಬಯಲಾಗುತ್ತವೆಯಾ? ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ.

ಸರ್ಕಾರಿ ಬಸ್ʼಗೆ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಎಸ್ಕಾರ್ಟ್ ವಾಹನ ಡಿಕ್ಕಿ: ಪ್ರಕರಣ ದಾಖಲು

0

ಹಾವೇರಿ: ಸರ್ಕಾರಿ ಬಸ್‌ಗೆ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.

ನಗರದ ವಾಲ್ಮೀಕಿ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದತ್ತ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಪಘಾತದಲ್ಲಿ ಎಸ್ಕಾರ್ಟ್ ವಾಹನದ ಮುಂಭಾಗ ಸಂಪೂರ್ಣ ನುಜ್ಜುನುಜ್ಜಾಗಿದ್ದು, ಬಸ್‌ನ ಹಿಂಭಾಗಕ್ಕೂ ಹಾನಿಯಾಗಿದೆ.

ಎಸ್ಕಾರ್ಟ್ ವಾಹನದ ಚಾಲಕ ಚನ್ನಬಸಪ್ಪ ಅರ್ಚಕ್ ಅತೀವೇಗದಲ್ಲಿ ಚಾಲನೆ ಮಾಡುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಬಸ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗಿದೆ.

ಹಾವೇರಿಯಿಂದ ಗದಗಕ್ಕೆ ತೆರಳುತ್ತಿದ್ದ KA-27 F0726 ಸಂಖ್ಯೆಯ ಬಸ್‌ಗೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಭೀಕರ ಅಪಘಾತ: ಕಾರು ಬಾವಿಗೆ ಉರುಳಿ ಒಂದೇ ಕುಟುಂಬದ 9 ಮಂದಿ ಸಾವು!

0

ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ತಾಲ್ಲೂಕಿನಲ್ಲಿ ಭೀಕರ ಅಪಘಾತ ಸಂಭವಿಸಿ, ಒಂದೇ ಕುಟುಂಬದ 9 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಶುಕ್ರವಾರ ತಡರಾತ್ರಿ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಕಾರು ಬಾವಿಗೆ ಉರುಳಿ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಮಾಹಿತಿಯ ಪ್ರಕಾರ, ದಿಂಡೋರಿ ತಾಲೂಕಿನ ಶಿವಾಜಿನಗರ ಪ್ರದೇಶದ ರಾಜ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ, ದರ್ಗುಡೆ ಕುಟುಂಬವು ಮಾರುತಿ XL6 ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಈ ದುರಂತದಲ್ಲಿ ರೇಷ್ಮಾ ಸುನಿಲ್ ದರ್ಗುಡೆ (27), ಆಶಾ ಅನಿಲ್ ದರ್ಗುಡೆ (32), ಖುಷಿ/ಶ್ರಿಷ್ಟಿ ಅನಿಲ್ ದರ್ಗುಡೆ (14), ಶ್ರೇಯಸ್ ಅನಿಲ್ ದರ್ಗುಡೆ (11), ರಾಖಿ/ಗುಣವಂತಿ ಸುನಿಲ್ ದರ್ಗುಡೆ, ಶ್ರಾವಣಿ ಅನಿಲ್ ದರ್ಗುಡೆ (11), ಸಮೃದ್ಧಿ ರಾಜೇಂದ್ರ ದರ್ಗುಡೆ (7), ಮಾಧುರಿ ಅನಿಲ್ ದರ್ಗುಡೆ (13) ಹಾಗೂ ಸುನಿಲ್ ದತ್ತು ದರ್ಗುಡೆ (32) ಮೃತಪಟ್ಟಿದ್ದಾರೆ. ಮೃತರೆಲ್ಲರೂ ದಿಂಡೋರಿ ತಾಲೂಕಿನ ನಿವಾಸಿಗಳಾಗಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಕಾರು ನಿಯಂತ್ರಣ ಕಳೆದುಕೊಂಡಿರುವುದರಿಂದ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ರಕ್ಷಣಾ ಕಾರ್ಯಾಚರಣೆ ತಕ್ಷಣ ಆರಂಭಗೊಂಡಿದ್ದು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡ ಸ್ಥಳಕ್ಕೆ ಧಾವಿಸಿದೆ. ಆದರೆ, ಜನಸಂದಣಿ ಹೆಚ್ಚಿರುವುದರಿಂದ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ದಿಂಡೋರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ: ಯುವತಿಯನ್ನು ಮಾಡೆಲ್ ಮಾಡ್ತೇನೆಂದು ನಂಬಿಸಿ ಗರ್ಭಿಣಿ ಮಾಡಿ ಗರ್ಭಪಾತ ಮಾಡಿಸಿದ್ದ ಸಮೀರ್?

0

ಹುಬ್ಬಳ್ಳಿ: ನಗರದಲ್ಲಿ ಸದ್ದು ಮಾಡುತ್ತಿರುವ ‘ಲವ್ ಜಿಹಾದ್’ ಪ್ರಕರಣ ಮತ್ತೊಂದು ಸ್ಫೋಟಕ ತಿರುವು ಪಡೆದಿದೆ. ಪ್ರೀತಿ ಮತ್ತು ಭರವಸೆಯ ಹೆಸರಿನಲ್ಲಿ ಆರಂಭವಾದ ಸಂಬಂಧ ಇದೀಗ ಗಂಭೀರ ಅಪರಾಧ ಆರೋಪಗಳ ಜಾಲವಾಗಿ ಬದಲಾಗಿದೆ.

ಜಿಮ್ ಟ್ರೈನರ್ ಸಮೀರ್, ‘ನಿನ್ನನ್ನು ದೊಡ್ಡ ಮಾಡೆಲ್ ಮಾಡುತ್ತೇನೆ’ ಎಂಬ ಕನಸು ತೋರಿಸಿ ಯುವತಿಯನ್ನು ತನ್ನತ್ತ ಸೆಳೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆಕೆಯ ವಿಶ್ವಾಸವನ್ನು ಗಳಿಸಿದ ಬಳಿಕ, ಆತನಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಇದಲ್ಲದೆ, ಈ ಪ್ರಕರಣಕ್ಕೆ ಈಗ ಶಾಕ್ ನೀಡುವ ಮತ್ತೊಂದು ಅಂಶ ಕೇಳಿ ಬಂದಿದೆ.  ಯುವತಿ ಗರ್ಭಿಣಿಯಾಗಿದ್ದು, ನಂತರ ಬಲವಂತವಾಗಿ ಗರ್ಭಪಾತ ಮಾಡಿಸಲಾಗಿದೆ ಎಂಬ ಗಂಭೀರ ಆರೋಪ ಸಮೀರ್‌ ವಿರುದ್ಧ ಕೇಳಿ ಬಂದಿದೆ. ಈ ಮಾಹಿತಿ ಹೊರಬಿದ್ದ ಬಳಿಕ ಪ್ರಕರಣದ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ.

ಮೊದಲಿನಿಂದಲೇ ಈ ಪ್ರಕರಣದಲ್ಲಿ ಡ್ರಗ್ ನೀಡಿ ಅತ್ಯಾಚಾರ, ವಿಡಿಯೋ ಮಾಡಿ ಬೆದರಿಕೆ ಹಾಕುವುದು, ಬ್ಲ್ಯಾಕ್ಮೇಲ್ ಮಾಡುವುದು ಎಂಬ ಗಂಭೀರ ಆರೋಪಗಳು ಇದ್ದವು. ಆದರೆ, ಸಮೀರ್ ಈ ಎಲ್ಲ ಆರೋಪಗಳನ್ನು ತಳ್ಳಿಹಾಕುತ್ತಾ, ‘ವಿಡಿಯೋ ನಾನು ಮಾಡಿಲ್ಲ, ಆಕೆಯೇ ಚಿತ್ರೀಕರಿಸಿದ್ದಾಳೆ’ ಎಂದು ಹೇಳಿಕೆ ನೀಡಿದ್ದಾನೆ.

ಈ ಪರಸ್ಪರ ವಿರುದ್ಧ ಹೇಳಿಕೆಗಳ ನಡುವೆ, ಸತ್ಯವೇನು ಎಂಬುದು ಇದೀಗ ಪ್ರಮುಖ ಪ್ರಶ್ನೆಯಾಗಿದೆ. ಪೊಲೀಸರು ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಇಬ್ಬರನ್ನೂ ಮುಖಾಮುಖಿಯಾಗಿ ವಿಚಾರಣೆ ಮಾಡಲು ಸಿದ್ಧತೆ ನಡೆಸಿದ್ದಾರೆ.

error: Content is protected !!