ಬೆಂಗಳೂರು: ನಗರದ ಕೆ.ಆರ್. ಪುರಂನಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ತನಿಖೆಗೆ ಮಹತ್ವದ ತಿರುವು ಸಿಕ್ಕಿದ್ದು, ಆರೋಪಿ ಕೆನತ್ ಮೂವರನ್ನೂ ಕೊಲೆ ಮಾಡಿದ್ದು ತಾನೇ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಪ್ರಕರಣದ ಆರಂಭಿಕ ತನಿಖೆಯಲ್ಲಿ ಆರೋಪಿ ಶ್ವೇತಾ, ತನ್ನ ತಾಯಿಯನ್ನು ತಾನೇ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಳು. ಮತ್ತೊಂದೆಡೆ, ಕೆನತ್ ಕೂಡ ಮೂವರ ಹತ್ಯೆಯನ್ನು ತಾನೇ ನಡೆಸಿದ್ದಾಗಿ ಹೇಳಿದ್ದ. ಅಲ್ಲದೆ, ಸಾವಿಗೂ ಮುನ್ನ ನೀಡಿದ್ದ ಹೇಳಿಕೆಯಲ್ಲಿ ಶ್ವೇತಾಳ ತಂದೆ ಸೋಮಸುಂದರ್, “ಕೆನತ್ ಮತ್ತು ಶ್ವೇತಾ ಇಬ್ಬರೂ ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದರು” ಎಂದು ಉಲ್ಲೇಖಿಸಿದ್ದರಿಂದ ಪ್ರಕರಣ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು. ಒಬ್ಬ ವ್ಯಕ್ತಿ ಒಂದೇ ವೇಳೆ ಮೂವರನ್ನು ಹತ್ಯೆ ಮಾಡುವುದು ಹೇಗೆ ಸಾಧ್ಯ ಎಂಬ ಅನುಮಾನ ವ್ಯಕ್ತವಾಗಿದ್ದರಿಂದ, ಪ್ರಕರಣದ ಸತ್ಯಾಸತ್ಯತೆ ತಿಳಿಯಲು ನ್ಯಾಯಾಲಯದ ಅನುಮತಿ ಪಡೆದು ಕೆನತ್ಗೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲು ಕೆ.ಆರ್. ಪುರಂ ಪೊಲೀಸರು ಸಿದ್ಧತೆ ನಡೆಸಿದ್ದರು.
ಆದರೆ, ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೂ ಮುನ್ನವೇ ಕೆನತ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, “ಈ ಪ್ರಕರಣದಲ್ಲಿ ಶ್ವೇತಾಳ ಪಾತ್ರವಿಲ್ಲ. ಮೂವರನ್ನೂ ಕೊಲೆ ಮಾಡಿದ್ದು ನಾನೇ” ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ಶ್ವೇತಾ ಮತ್ತು ಕೆನತ್ ವಿರುದ್ಧ ಶ್ವೇತಾಳ ತಂದೆ ಸೋಮಸುಂದರ್, ತಾಯಿ ಮುತ್ತುಲಕ್ಷ್ಮಿ ಹಾಗೂ ಸಹೋದರಿ ಸುಪ್ರಿಯಾ ಅವರ ಕೊಲೆ ಆರೋಪ ದಾಖಲಾಗಿತ್ತು. ಇದೀಗ ಕೆನತ್ ನೀಡಿರುವ ಹೊಸ ಹೇಳಿಕೆ ತನಿಖೆಗೆ ಹೊಸ ತಿರುವು ನೀಡಿದ್ದು, ಪ್ರಕರಣದ ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

