Home Blog

ಅಮೆರಿಕದಲ್ಲಿ ಭಾರೀ ಹಿಮಪಾತ: 5,600ಕ್ಕೂ ಹೆಚ್ಚು ವಿಮಾನ ರದ್ದು, ಶಾಲೆಗಳಿಗೆ ರಜೆ ಘೋಷಣೆ

0

ನ್ಯೂಯಾರ್ಕ್: ಅಮೆರಿಕದ ಈಶಾನ್ಯ ಭಾಗದಲ್ಲಿ ಭಾರಿ ಹಿಮಬಿರುಗಾಳಿ ಅಪ್ಪಳಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮೇರಿಲ್ಯಾಂಡಿನಿಂದ ಮೈನೆವರೆಗೆ ವ್ಯಾಪಕ ಹಿಮಪಾತವಾಗಿದ್ದು, ತೀವ್ರ ಗಾಳಿ ಹಾಗೂ ಹಿಮದ ಪರಿಣಾಮ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದೆ.

ಹವಾಮಾನ ತಜ್ಞರ ಪ್ರಕಾರ, ಕಳೆದ ಒಂದು ದಶಕದಲ್ಲಿ ಕಂಡ ಅತ್ಯಂತ ಪ್ರಬಲ ಚಂಡಮಾರುತ ಇದಾಗಿದೆ. ಕೆಲವು ಪ್ರದೇಶಗಳಲ್ಲಿ 2 ಅಡಿ (60 ಸೆಂ.ಮೀ.) ಗಿಂತ ಹೆಚ್ಚು ಹಿಮ ಸುರಿದಿದೆ. ಪರಿಣಾಮವಾಗಿ ವ್ಯಾಪಾರ-ವಹಿವಾಟುಗಳಿಗೆ ಅಡ್ಡಿಯುಂಟಾಗಿ, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಅಧಿಕಾರಿಗಳು ಹಲವೆಡೆ ತುರ್ತು ಪರಿಸ್ಥಿತಿ ಘೋಷಿಸಿದ್ದು, ಶಾಲೆಗಳನ್ನು ಮುಚ್ಚಲಾಗಿದೆ. ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ, ಜನರು ಕತ್ತಲಲ್ಲಿ ದಿನ ಕಳೆಯುವಂತಾಗಿದೆ.

ವಿಮಾನ ಸಂಚಾರಕ್ಕೂ ಭಾರಿ ಹೊಡೆತ ಬಿದ್ದಿದೆ. ಸೋಮವಾರ ದೇಶಾದ್ಯಂತ 5,600ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಮಂಗಳವಾರ ನಿಗದಿಯಾಗಿದ್ದ ಇನ್ನೂ 2,000 ವಿಮಾನಗಳನ್ನು ರದ್ದುಪಡಿಸಲಾಗಿದೆ. ಸುಮಾರು 2,500 ವಿಮಾನಗಳ ಹಾರಾಟದಲ್ಲಿ ವಿಳಂಬ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹವಾಮಾನ ಪರಿಸ್ಥಿತಿ ಸಾಮಾನ್ಯವಾಗಲು ಇನ್ನೂ ಕೆಲವು ದಿನಗಳು ಬೇಕಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.

ಶರ್ಟ್ ಬಿಚ್ಚಿ ಘೋಷಣೆ: ಯೂತ್ ಕಾಂಗ್ರೆಸ್ ನಡೆಗೆ ಖರ್ಗೆ ಗ್ರೀನ್ ಸಿಗ್ನಲ್?

ಬೆಂಗಳೂರು: ದೆಹಲಿಯಲ್ಲಿ ನಡೆದ ನಡೆದ ಎಐ ಇಂಪ್ಯಾಕ್ಟ್‌ ಶೃಂಗಸಭೆಯ ವೇಳೆ ಸಭಾಂಗಣದೊಳಗೆ ಶರ್ಟ್ ಬಿಚ್ಚಿ ಘೋಷಣೆ ಕೂಗಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲ ಸೂಚಿಸಿದ್ದಾರೆ.

ಯೂತ್ ಕಾಂಗ್ರೆಸ್ ಮುಖಂಡರ ಬಂಧನವನ್ನು ಖಂಡಿಸಿದ ಖರ್ಗೆ, “ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಸಹಜ. ದೇಶದ ಹಿತಕ್ಕಾಗಿ ಇಂತಹ ಪ್ರೊಟೆಸ್ಟ್‌ಗಳು ನಡೆಯುತ್ತವೆ” ಎಂದು ಹೇಳಿದ್ದಾರೆ. ಕೆಲ ಕಾಂಗ್ರೆಸ್ ನಾಯಕರುಲೇ ಈ ನಡೆಯನ್ನು ಖಂಡಿಸಿದ್ದ ನಡುವೆಯೇ ಖರ್ಗೆ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

“ಕಾಮನ್‌ವೆಲ್ತ್ ಗೇಮ್ಸ್ ವೇಳೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿರಲಿಲ್ಲವಾ? ಯೂತ್ ಕಾಂಗ್ರೆಸ್ ಗಮನ ಸೆಳೆಯಲು ಪ್ರೊಟೆಸ್ಟ್ ನಡೆಸಿದೆ” ಎಂದು ಖರ್ಗೆ ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಯೂತ್ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಮಾತನಾಡಿರುವುದನ್ನು ಉಲ್ಲೇಖಿಸಿ, ಕಾರ್ಯಕರ್ತರ ಮೇಲಿನ ದೌರ್ಜನ್ಯವನ್ನು ಖಂಡಿಸುವುದಾಗಿ ಹೇಳಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗಳನ್ನು ಪ್ರಧಾನಿ ಮೋದಿ ಕೇಳುತ್ತಿದ್ದಾರೆ, ಅವರು ಸರೆಂಡರ್ ಆಗಿದ್ದಾರೆ ಎಂಬ ಗಂಭೀರ ಆರೋಪವನ್ನೂ ಖರ್ಗೆ ಮಾಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ ಯೂತ್ ಕಾಂಗ್ರೆಸ್ ಕಾರ್ಯಕರ್ತರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಶಿಸ್ತು ಮತ್ತು ಸಭ್ಯತೆ ಮುಖ್ಯ ಎಂದು ಅವರು ಎಚ್ಚರಿಸಿದ್ದರು.

ಭಾರತ್ ಮಂಟಪಂನಲ್ಲಿ ನಡೆದ ಎಐ ಶೃಂಗಸಭೆ ವೇಳೆ 10 ಮಂದಿ ಯೂತ್ ಕಾಂಗ್ರೆಸ್ ನಾಯಕರು ಏಕಾಏಕಿ ಶರ್ಟ್ ಕಳಚಿ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ’ ಎಂಬ ಟಿ-ಶರ್ಟ್‌ಗಳನ್ನು ಪ್ರದರ್ಶಿಸಿ ಗಮನ ಸೆಳೆಯಲು ಯತ್ನಿಸಿದರು.

ಪೊಲೀಸ್ ತನಿಖೆಯಲ್ಲಿ, ನೇಪಾಳದ ಜೆನ್‌ ಝಿ ಪ್ರತಿಭಟನೆಯಿಂದ ಪ್ರೇರಿತವಾಗಿ ಗಲಭೆ ಸೃಷ್ಟಿಸಲು ಪಿತೂರಿ ನಡೆಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ಆಪರೇಷನ್ ವೈಲ್ಡ್‌ ಲೈಫ್! 144 ಸೆಕ್ಷನ್ ಜಾರಿ ಮಾಡಿ ಸೆರೆ ಕಾರ್ಯಾಚರಣೆ ನಡೆಸಲು ಸಚಿವ ಖಂಡ್ರೆ ಸೂಚನೆ

0

ಚಿಕ್ಕಮಗಳೂರು: ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಮಾಹಿತಿ ಕಮಾಂಡ್ ಸೆಂಟರ್‌ಗೆ ಬಂದ ತಕ್ಷಣವೇ ತೋಟದ ಬೆಳೆಗಾರರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ಸ್ಥಳೀಯ ಮುಖಂಡರಿಗೆ ಮಾಹಿತಿ ರವಾನಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಚಿಕ್ಕಮಗಳೂರು ತಾಲೂಕು ಹುಣಸೆಹಳ್ಳಿ ಬಳಿಯ ತೋಟದಲ್ಲಿ ಕಳೆದ ಏಳು ದಿನಗಳ ಅಂತರದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸಚಿವರು ಉನ್ನತಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದರು.

ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಿರುವ ಪ್ರದೇಶಗಳಲ್ಲಿ ಸ್ಥಳೀಯ ಮುಖಂಡರು, ಗ್ರಾಮಗಳ ಜಮೀನು ಮಾಲೀಕರನ್ನು ಒಳಗೊಂಡ ವಾಟ್ಸಪ್ ಗುಂಪು ರಚಿಸಿ ತಕ್ಷಣ ಮಾಹಿತಿ ಹಂಚುವಂತೆ ನಿರ್ದೇಶನ ನೀಡಿದರು.

144 ಜಾರಿ ಮಾಡಿ ಕಾರ್ಯಾಚರಣೆ

“ಮಾನವ ಜೀವ ಅತ್ಯಮೂಲ್ಯ. ಒಂದು ಜೀವ ಹಾನಿಯಾದ ಬಳಿಕ ಮತ್ತೊಂದು ಸಾವು ಸಂಭವಿಸಿರುವುದು ದುಃಖದ ಸಂಗತಿ. ಇಂತಹ ಘಟನೆ ಮರುಕಳಿಸದಂತೆ 24×7 ನಿಗಾವಹಿಸಬೇಕು” ಎಂದು ಸಚಿವರು ತಿಳಿಸಿದರು. ಕಡ್ಡಾಯವಾಗಿ ಸೆಕ್ಷನ್ 144 ಜಾರಿ ಮಾಡಿ ವನ್ಯಜೀವಿ ಸೆರೆ ಕಾರ್ಯಾಚರಣೆ ನಡೆಸಬೇಕು. ಥರ್ಮಲ್ ಡ್ರೋನ್ ಸೇರಿದಂತೆ ಅತ್ಯಾಧುನಿಕ ಸಾಧನಗಳನ್ನು ಬಳಕೆ ಮಾಡಬೇಕು ಎಂದು ಸೂಚಿಸಿದರು.

ಕಳೆದ ವಾರ ಆನೆ ದಾಳಿಯಿಂದ ವ್ಯಕ್ತಿ ಮೃತಪಟ್ಟ ಬಳಿಕ ಆನೆ ಸೆರೆಗೆ ಕ್ರಮ ಕೈಗೊಳ್ಳಲಾಗಿತ್ತು. ಸ್ಥಳೀಯರಿಗೆ ತೋಟಗಳಿಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದ್ದರೂ, ಸೂಚನೆ ಉಲ್ಲಂಘಿಸಿ ತೋಟಕ್ಕೆ ಹೋದ ಕಾರಣ ಈ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದ ಬಳಿಕವೂ ತೋಟದ ಮಾಲೀಕರು ಕಾರ್ಮಿಕರನ್ನು ಕೆಲಸಕ್ಕೆ ಕಳುಹಿಸಿದರೆ ಅಂತಹ ಮಾಲೀಕರಿಗೆ ಎಚ್ಚರಿಕೆ ನೀಡಬೇಕು. ನಿರ್ಲಕ್ಷ್ಯ ತೋರಿದರೆ ದೂರು ದಾಖಲಿಸಲು ಸೂಚನೆ ನೀಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯದ ಹೊರಭಾಗದಲ್ಲಿ 35 ಆನೆಗಳು ಮೂರು ಗುಂಪುಗಳಲ್ಲಿ ಸಂಚರಿಸುತ್ತಿವೆ. ಬೇಸಿಗೆ ಕಾಲದಲ್ಲಿ ಕಾಡಿನಿಂದ ಹೊರಬರುವುದು ಸಾಮಾನ್ಯವಾದರೂ, ವನ್ಯಜೀವಿ-ಮಾನವ ಸಂಘರ್ಷ ತಪ್ಪಿಸಲು ಸಿಬ್ಬಂದಿ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಸಚಿವರು ಸೂಚಿಸಿದರು.

ಪ್ರತಿ ವರ್ಷ ವನ್ಯಜೀವಿ ದಾಳಿಯಲ್ಲಿ ಸಂಭವಿಸುವ ಸಾವಿನ ಸಂಖ್ಯೆ ಇಳಿಕೆಯಾಗಬೇಕೇ ಹೊರತು ಹೆಚ್ಚಳವಾಗಬಾರದು. ಈ ದಿಶೆಯಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

ವಿಧಾನಸಭೆ ಚುನಾವಣೆಗೂ ಮುನ್ನ ‘ಕೇರಳ’ಗೆ ಹೊಸ ಹೆಸರು? ‘ಕೇರಳಂ’ ಮಸೂದೆಗೆ ಇಂದು ಕೇಂದ್ರ ಮುದ್ರೆ ಸಾಧ್ಯತೆ

0

ತಿರುವನಂತಪುರಂ: ವಿಧಾನಸಭಾ ಚುನಾವಣೆಗೆ ಮುನ್ನ ಕೇರಳ ರಾಜ್ಯದ ಹೆಸರೇ ಬದಲಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನುಮುಂದೆ ರಾಜ್ಯವನ್ನು “ಕೇರಳಂ” ಎಂದು ಕರೆಯುವಂತೆ ಮಾಡುವ ಮಸೂದೆಗೆ ಇಂದು ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗುವ ನಿರೀಕ್ಷೆಯಿದೆ.

ರಾಜ್ಯದ ಭಾಷಾ ಗುರುತು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅಧಿಕೃತವಾಗಿ ಮಾನ್ಯಗೊಳಿಸುವ ಹೆಜ್ಜೆಯಾಗಿ ಈ ನಿರ್ಧಾರವನ್ನು ನೋಡಲಾಗುತ್ತಿದೆ. ಕೇರಳ ವಿಧಾನಸಭೆ ಈಗಾಗಲೇ ಸರ್ವಾನುಮತದಿಂದ ಹೆಸರನ್ನು “ಕೇರಳಂ” ಎಂದು ಬದಲಾಯಿಸುವ ನಿರ್ಣಯವನ್ನು ಅಂಗೀಕರಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 2024ರಲ್ಲಿ ಈ ಪ್ರಸ್ತಾಪವನ್ನು ಮಂಡಿಸಿದ್ದರು. 2024ರ ಜೂನ್ 25ರಂದು ವಿಧಾನಸಭೆ ಎರಡನೇ ಬಾರಿ ನಿರ್ಣಯ ಅಂಗೀಕರಿಸಿತು. ಕೇಂದ್ರ ಗೃಹ ಸಚಿವಾಲಯವು ಮೊದಲ ನಿರ್ಣಯ ಪರಿಶೀಲಿಸಿ ಕೆಲವು ತಿದ್ದುಪಡಿಗಳನ್ನು ಸೂಚಿಸಿತ್ತು.

ಇಂದು ಸಚಿವ ಸಂಪುಟ ಅನುಮೋದನೆ ನೀಡಿದರೆ, ಸಂವಿಧಾನದ ಎಂಟನೇ ವೇಳಾಪಟ್ಟಿಗೆ ತಿದ್ದುಪಡಿ ಮಾಡಲು ಅಂತಿಮ ಶಿಫಾರಸು ಕಳುಹಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಈ ವಿಷಯ ಚರ್ಚೆಯಾಗಲಿದೆ. ಸಭೆ ಸೇವಾತೀರ್ಥದಲ್ಲಿ ನಡೆಯಲಿದೆ.

ಇದಕ್ಕೂ ಮುನ್ನ ಫೆಬ್ರವರಿ 13ರಂದು ಸೌತ್ ಬ್ಲಾಕ್‌ನಲ್ಲಿ ಸಭೆ ನಡೆದಿತ್ತು. ಇದೇ ವೇಳೆ, ಕೇರಳ ಸರ್ಕಾರ ರಾಜ್ಯಸಭೆಯಲ್ಲಿ ನೇಟಿವಿಟಿ ಕಾರ್ಡ್ ಮಸೂದೆ ಮಂಡಿಸಿದ್ದು, ಅದನ್ನು ಐತಿಹಾಸಿಕ ಶಾಸನ ಎಂದು ಕರೆದಿದೆ.

ಮೈಸೂರು ಜ್ಯುವೆಲರಿ ದರೋಡೆ ಕೇಸ್: ಹುಣಸೂರಿನಲ್ಲಿ ಕಳ್ಳತನ; ನೇಪಾಳದಲ್ಲಿ ಮಾರಾಟ – ಪೊಲೀಸರಿಗೆ ತಲೆನೋವು

0

ಮೈಸೂರು: ಹುಣಸೂರು ಪಟ್ಟಣದ ಚಿನ್ನದ ಅಂಗಡಿಯಲ್ಲಿ ನಡೆದ ಭಾರಿ ದರೋಡೆ ಪ್ರಕರಣದಲ್ಲಿ ಕದ್ದ ಸುಮಾರು 10 ಕೋಟಿ ರೂ. ಮೌಲ್ಯದ 8 ಕೆಜಿ ಚಿನ್ನವನ್ನು ಆರೋಪಿಗಳು ನೇಪಾಳದಲ್ಲಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಕರಣ ಇದೀಗ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಪ್ರಕರಣದ ಮಾಸ್ಟರ್ ಮೈಂಡ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಮೈಸೂರು ಜಿಲ್ಲಾ ಪೊಲೀಸರು ಬಂಧಿಸಿರುವರೂ, ಕದ್ದ ಚಿನ್ನವನ್ನು ಇನ್ನೂ ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಅಂತರರಾಜ್ಯ ಕಳ್ಳರ ಜಾಲದ ಮೂಲಕ ಕದ್ದ ಚಿನ್ನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಲೇವಾರಿ ಮಾಡಲಾಗಿದೆ ಎನ್ನಲಾಗಿದೆ.

ಹೈಟೆಕ್ ತಂತ್ರಜ್ಞಾನ ಬಳಸಿ ದರೋಡೆ ನಡೆಸಿದ್ದ ಆರೋಪಿಗಳು, ಕಳ್ಳತನದಷ್ಟೇ ಚಿನ್ನ ವಿಲೇವಾರಿಗೋ ಕೂಡ ಸೂಕ್ಷ್ಮ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದರು. ಹುಣಸೂರಿನಲ್ಲಿ ಕದ್ದ ಚಿನ್ನವನ್ನು ನೇಪಾಳದಲ್ಲಿ ಮಾರಾಟ ಮಾಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದರೂ, ವಿದೇಶಕ್ಕೆ ತೆರಳಿ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಕಾನೂನು ಹಾಗೂ ಪ್ರಕ್ರಿಯಾತ್ಮಕ ಅಡಚಣೆಗಳು ಎದುರಾಗಿವೆ.

ಹೀಗಾಗಿ ಸುಮಾರು 10 ಕೋಟಿ ರೂ. ಮೌಲ್ಯದ ಚಿನ್ನವನ್ನು ಮರುಪಡೆಯುವ ಸಾಧ್ಯತೆ ಕಡಿಮೆಯಾಗಿದ್ದು, ಈ ಪ್ರಕರಣವನ್ನು ಮುಕ್ತಾಯದ ಹಂತಕ್ಕೆ ತರುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎನ್ನಲಾಗಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

 

ಖಾಲಿ ಹುದ್ದೆಗಳ ಭರ್ತಿಗೆ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ: ಪೊಲೀಸರೊಂದಿಗೆ ತೀವ್ರ ಮಾತುಕತೆ

0

ಧಾರವಾಡ: ರಾಜ್ಯದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಶ್ರೀನಗರ ವೃತ್ತದಲ್ಲಿ ಯುವಕರು ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರ ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಘೋಷಣೆ ಕೂಗಿದರು.

ಪ್ರತಿಭಟನಾಕಾರರು ಕಾಂಗ್ರೆಸ್ ನಾಯಕರ ಫೋಟೋಗಳನ್ನು ಹಿಡಿದು ಸರ್ಕಾರದ ವಿರುದ್ಧ ಕಿಡಿಕಾರಿದರು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಶ್ರೀನಗರ ವೃತ್ತದ ಬಳಿ ಯುವಕರನ್ನು ತಡೆದು ನಿಲ್ಲಿಸಿದರು.

ಇಂದು ಪ್ರತಿಭಟನೆ ನಡೆಸಲು ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಅನುಮತಿ ಕೇಳಿದ್ದರೂ, ಪೊಲೀಸರು ಅದನ್ನು ನಿರಾಕರಿಸಿದ್ದರು. ಬಳಿಕ ಸಂಘಟನೆ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯವು ಪೊಲೀಸರೊಂದಿಗೆ ಚರ್ಚಿಸಿ ಎಂದು ಸೂಚಿಸಿ ವಿಚಾರಣೆಯನ್ನು ಮಾರ್ಚ್ 3ಕ್ಕೆ ಮುಂದೂಡಿತ್ತು.

ಇದರ ನಡುವೆಯೇ ಬಿಜೆಪಿ ಹೋರಾಟಕ್ಕೆ ಅನುಮತಿ ನೀಡಲಾಗಿದೆ ಎಂಬ ಸುದ್ದಿ ಹಿನ್ನೆಲೆ, ಅನುಮತಿ ಇಲ್ಲದಿದ್ದರೂ ಪ್ರತಿಭಟನಾಕಾರರು ಬೀದಿಗೆ ಇಳಿದಿದ್ದಾರೆ. ಧಾರವಾಡದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

‘ಅವನು ಇಷ್ಟಪಟ್ಟ ಹುಡುಗಿಯೇ ಸೊಸೆ’: ವಿಜಯ್ ತಂದೆಯ ಹೇಳಿಕೆ ವೈರಲ್, ‘ವಿರೋಷ್’ ಮದುವೆಗೆ ಕೌಂಟ್‌ಡೌನ್!

ಟಾಲಿವುಡ್‌ನ ಹಾಟ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆ ಸಂಭ್ರಮ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ. ಫೆಬ್ರವರಿ 26ರಂದು **ಉದಯಪುರ**ದಲ್ಲಿ ನಡೆಯಲಿರುವ ಈ ಅದ್ದೂರಿ ಮದುವೆಗೆ ‘ವಿರೋಷ್’ ಎಂದು ಹೆಸರು ಇಟ್ಟಿದ್ದಾರೆ.

ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹ ನಡೆಯಲಿದ್ದು, ಮಾರ್ಚ್ 04ರಂದು **ಹೈದರಾಬಾದ್**ನಲ್ಲಿ ಆರತಕ್ಷತೆ ನಡೆಯಲಿದೆ ಎಂಬ ವರದಿ ಇದೆ.

ಈ ನಡುವೆ ವಿಜಯ್ ಪಾಲಕರು ಭಾವಿ ಸೊಸೆ ಬಗ್ಗೆ ಹೇಳಿದ್ದ ಮಾತುಗಳು ಮತ್ತೆ ವೈರಲ್ ಆಗಿವೆ. ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದ ವಿಜಯ್ ತಾಯಿ ಮಾಧವಿ, “ನಮ್ಮ ಮಗನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವನನ್ನು ಬೇಷರತ್ತಾಗಿ ಪ್ರೀತಿಸಬೇಕು. ಚಿತ್ರರಂಗದ ಒತ್ತಡಗಳನ್ನು ಅರ್ಥಮಾಡಿಕೊಳ್ಳಬೇಕು” ಎಂದು ಷರತ್ತು ಹೊರಹಾಕಿದ್ದರು.

ವಿಜಯ್ ತಂದೆ ಗೋವರ್ಧನ್ ರಾವ್ ಮತ್ತಷ್ಟು ಸ್ಪಷ್ಟವಾಗಿ, “ಅವನು ಇಷ್ಟಪಟ್ಟ ಹುಡುಗಿಯೇ ಸರಿ. ಜಾತಿ-ಧರ್ಮ ಬೇಡ. ಭಾರತೀಯಳಾಗಿದ್ದು, ದಕ್ಷಿಣದ ಹುಡುಗಿಯಾಗಿದ್ದರೆ ನನಗೆ ಸಂತೋಷ” ಎಂದು ಹೇಳಿದ್ದರು.

ಈ ಹೇಳಿಕೆಗಳ ಬೆನ್ನಲ್ಲೇ ವಿಜಯ್-ರಶ್ಮಿಕಾ ವಿವಾಹದ ಸುದ್ದಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ‘ವಿರೋಷ್’ ಮದುವೆ ಇದೀಗ ಫ್ಯಾನ್ಸ್‌ಗೆ ಹಬ್ಬದ ಸಂಭ್ರಮವಾಗುತ್ತಿದೆ.

ಉದ್ಯೋಗಾಕಾಂಕ್ಷಿಗಳ ಕಿಚ್ಚು: ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ – ಆರ್. ಅಶೋಕ್ ಆರೋಪ

0

ಧಾರವಾಡ: ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಕರು ಉದ್ಯೋಗಾವಕಾಶಗಳನ್ನು ಒದಗಿಸುವಂತೆ ಆಗ್ರಹಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಿರುದ್ಯೋಗ ಸಮಸ್ಯೆ ತೀವ್ರಗೊಂಡಿರುವುದಾಗಿ ಆರೋಪಿಸಿದ ಪ್ರತಿಭಟನಾಕಾರರು, ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಳೆದ ಎರಡೂವರೆ ವರ್ಷಗಳಲ್ಲಿ ಒಬ್ಬ ನಿರುದ್ಯೋಗಿಗೂ ಉದ್ಯೋಗ ನೀಡಿಲ್ಲ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರದ ಕಚ್ಚಾಟದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ದಿವಾಳಿಯ ಸ್ಥಿತಿಯಲ್ಲಿದ್ದು, ಸಂಬಳ ನೀಡಲು ಸಹ ಹಣದ ಕೊರತೆ ಎದುರಿಸುತ್ತಿದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇದ್ದವೆಂದು ಹೇಳಿದರು.

ಹಣಕಾಸು ಇಲಾಖೆ 65,000 ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ನೀಡಿದರೂ, ಆರು ತಿಂಗಳು ಕಳೆದರೂ ಒಂದೇ ಒಂದು ಸಂದರ್ಶನ ಕೂಡ ನಡೆಸಲಾಗಿಲ್ಲ ಎಂದು ದೂರಿದರು. ತಕ್ಷಣವೇ ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸದಿದ್ದರೆ ರಾಜ್ಯವ್ಯಾಪಿ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಆರ್. ಅಶೋಕ್ ಎಚ್ಚರಿಸಿದರು.

Gold Rate Today: ಬಂಗಾರದ ಬೆಲೆ ಏರಿಕೆ! ಬೆಳ್ಳಿ ದರ ಇಳಿಕೆ – ಹೀಗಿದೆ ಇಂದಿನ ಚಿನ್ನಾಭರಣಗಳ ರೇಟ್

0

ಚಿನ್ನದ ಬೆಲೆಯ ಸತತ ಏರಿಕೆ ಮುಂದುವರಿದಿದೆ. ಮೊನ್ನೆ 285 ರೂ ಹಾಗೂ ನಿನ್ನೆ 190 ರೂ ಏರಿಕೆಯಾದ ಚಿನ್ನದ ದರ, ಇಂದು ಮತ್ತಷ್ಟು 40 ರೂ ಹೆಚ್ಚಾಗಿದೆ. ಇನ್ನೊಂದೆಡೆ, ಬೆಳ್ಳಿ ದರದಲ್ಲಿ ಏರಿಕೆಯ ಓಟ ತಗ್ಗಿದ್ದು, ಮಂಗಳವಾರ 10ರಿಂದ 15 ರೂವರೆಗೆ ಇಳಿಕೆಯಾಗಿದೆ. ನಿನ್ನೆ ಮಾತ್ರ ಬೆಳ್ಳಿ ದರ 25 ರೂ ಏರಿಕೆಯಾಗಿತ್ತು.

ದೇಶಾದ್ಯಂತ ಚಿನ್ನ-ಬೆಳ್ಳಿ ದರ (ಫೆಬ್ರವರಿ 24)

  • 24 ಕ್ಯಾರಟ್ (1 ಗ್ರಾಂ) ಚಿನ್ನ: ₹16,178
  • 22 ಕ್ಯಾರಟ್ (1 ಗ್ರಾಂ) ಚಿನ್ನ: ₹14,830
  • 18 ಕ್ಯಾರಟ್ (1 ಗ್ರಾಂ) ಚಿನ್ನ: ₹12,134
  • ಬೆಳ್ಳಿ (1 ಗ್ರಾಂ): ₹285

ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,48,300 ಆಗಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,61,780 ತಲುಪಿದೆ. 100 ಗ್ರಾಂ ಬೆಳ್ಳಿ ದರ ₹28,500 ಆಗಿದೆ.

ಬೆಂಗಳೂರು ದರ

ಬೆಂಗಳೂರುನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,48,300 ಆಗಿದ್ದು, ಬೆಳ್ಳಿ (100 ಗ್ರಾಂ) ದರ ₹28,500 ಇದೆ.

ಇತರೆ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)

  • ಚೆನ್ನೈ: ₹14,890
  • ಮುಂಬೈ: ₹14,830
  • ದೆಹಲಿ: ₹14,845
  • ಕೋಲ್ಕತಾ: ₹14,830
  • ಕೇರಳ: ₹14,830
  • ಅಹ್ಮದಾಬಾದ್: ₹14,835
  • ಜೈಪುರ್: ₹14,845
  • ಲಕ್ನೋ: ₹14,845
  • ಭುವನೇಶ್ವರ್: ₹14,830

ತಮಿಳುನಾಡು ಹಾಗೂ ಕೇರಳ ಸೇರಿದಂತೆ ಕೆಲವು ಭಾಗಗಳಲ್ಲಿ ಬೆಳ್ಳಿ ದರ ₹29,000ರವರೆಗೆ ತಲುಪಿದೆ. ಚಿನ್ನದ ಬೆಲೆ ಮುಂದಿನ ದಿನಗಳಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರ ವಲಯ ಅಂದಾಜಿಸಿದೆ.

ಮೆಟ್ರೋ ಜನಸಂದಣಿ ಹೆಚ್ಚಳ: ಪರ್ಪಲ್ ಮತ್ತು ಗ್ರೀನ್ ಲೈನ್ʼಗೆ ಬರಲಿವೆ ಮೂರು ಹೊಸ ರೈಲುಗಳು!

0

ಬೆಂಗಳೂರು: ನಗರದ ಮೆಟ್ರೋ ಸಂಚಾರದಲ್ಲಿ ಉಂಟಾಗುತ್ತಿರುವ ತೀವ್ರ ಜನಸಂದಣಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶೇಷವಾಗಿ ಪರ್ಪಲ್ ಹಾಗೂ ಗ್ರೀನ್ ಮಾರ್ಗಗಳಲ್ಲಿ ಪ್ರಯಾಣಿಕರು ಹೆಚ್ಚಿನ ಅಸೌಕರ್ಯ ಅನುಭವಿಸುತ್ತಿದ್ದಾರೆ. ವಾರದಲ್ಲಿ ಸರಾಸರಿ ಪ್ರಯಾಣಿಕರ ಸಂಖ್ಯೆ 10 ಲಕ್ಷದ ಗಡಿಯನ್ನು ದಾಟಿರುವುದಾಗಿ ತಿಳಿದುಬಂದಿದೆ.

ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ಮೇ–ಜೂನ್ ವೇಳೆಗೆ ಮೂರು ಹೊಸ ರೈಲುಗಳನ್ನು ಸೇವೆಗೆ ಸೇರಿಸುವ ಯೋಜನೆ ರೂಪಿಸಲಾಗಿದೆ. ಪಶ್ಚಿಮ ಬಂಗಾಳದ ಟೀಟಾಘರ್ ರೈಲು ಸಿಸ್ಟಮ್ಸ್ ಲಿಮಿಟೆಡ್ (ಟಿಆರ್‌ಎಸ್‌ಎಲ್) ಕಂಪನಿಯಿಂದ ಫೆಬ್ರವರಿ 18ರಂದು ಪರ್ಪಲ್ ಹಾಗೂ ಗ್ರೀನ್ ಮಾರ್ಗಗಳಿಗೆ ಮೀಸಲಾಗಿರುವ 20 ಡಿಟಿಜಿ (ಡಿಸ್ಟೆನ್ಸ್-ಟು-ಗೋ) ರೈಲುಗಳಲ್ಲಿ ಮೊದಲ ರೈಲನ್ನು ರವಾನಿಸಲಾಗಿದೆ.

ಈ ರೈಲು ಫೆಬ್ರವರಿ ಅಂತ್ಯದೊಳಗೆ ಪೀಣ್ಯ ಡಿಪೋಗೆ ತಲುಪಲಿದೆ. ಅಲ್ಲಿಗೆ ತಲುಪಿದ ನಂತರ ಆರು ಕೋಚ್‌ಗಳನ್ನು ಜೋಡಿಸಿ ಸಂಪೂರ್ಣ ರೈಲಾಗಿ ಸಿದ್ಧಪಡಿಸಲಾಗುತ್ತದೆ. ನಂತರ ಸ್ಥಿರ ಹಾಗೂ ವಿದ್ಯುತ್ ವಲಯ ಪರೀಕ್ಷೆಗಳು ನಡೆಯಲಿದ್ದು,

ಮುಖ್ಯ ಮಾರ್ಗದಲ್ಲಿ ರಾತ್ರಿ ವೇಳೆ ಸುಮಾರು 750 ಕಿಲೋಮೀಟರ್ ಪ್ರಯೋಗಾತ್ಮಕ ಸಂಚಾರ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 2019ರಲ್ಲಿ ಚೀನಾದ ಸರ್ಕಾರಿ ಕಂಪನಿಯೊಂದಿಗೆ ರೂ. 1,578 ಕೋಟಿ ಮೌಲ್ಯದ ಒಪ್ಪಂದ ಮಾಡಲಾಗಿತ್ತು. ಒಟ್ಟು 36 ರೈಲುಗಳನ್ನು ಪೂರೈಕೆ ಮಾಡುವ ಜವಾಬ್ದಾರಿ ನೀಡಲಾಗಿತ್ತು.

ಇದರಲ್ಲಿ 15 ರೈಲುಗಳು ಯೆಲ್ಲೋ ಲೈನ್‌ಗೆ ಮತ್ತು 21 ರೈಲುಗಳು ಪರ್ಪಲ್ ಹಾಗೂ ಗ್ರೀನ್ ಮಾರ್ಗಗಳಿಗೆ ಮೀಸಲಾಗಿದ್ದವು. ಎರಡು ಪ್ರೋಟೋಟೈಪ್ ರೈಲುಗಳನ್ನು ಈಗಾಗಲೇ ಪೂರೈಸಲಾಗಿದ್ದು, ಉಳಿದ ರೈಲುಗಳನ್ನು ಟಿಆರ್‌ಎಸ್‌ಎಲ್ ನಿರ್ಮಿಸುತ್ತಿದೆ.

error: Content is protected !!