ಚಾಮರಾಜನಗರ: ರಾಜ್ಯದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪ ಮಾನವರಿಗೆ ಮಾತ್ರವಲ್ಲದೆ ಮೂಕ ಪ್ರಾಣಿಗಳಿಗೂ ಸಂಕಷ್ಟ ಉಂಟುಮಾಡುತ್ತಿದೆ.
ಹನೂರು ತಾಲೂಕಿನ ಉಡುತೊರೆ ಹಳ್ಳದಲ್ಲಿ ನೀರು ಅರಸಿ ಬಂದ ಕಾಡಾನೆಗಳ ಹಿಂಡಿನಲ್ಲಿ ಒಂದು ಹೆಣ್ಣಾನೆ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ತೀವ್ರ ಬಿಸಿಲಿನಿಂದ ಬಳಲಿದ್ದ ಐದು ಆನೆಗಳ ಹಿಂಡು ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಉಡುತೊರೆ ಹಳ್ಳದ ಹಿನ್ನೀರಿಗೆ ನೀರು ಕುಡಿಯಲು ಬಂದಿತ್ತು. ಈ ವೇಳೆ ಮೂರು ಆನೆಗಳು ಕೆಸರಿನಲ್ಲಿ ಸಿಲುಕಿಕೊಂಡಿದ್ದವು. ಘಟನೆ ಗಮನಿಸಿದ ಅರಣ್ಯ ಇಲಾಖೆ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು.
ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಸುಮಾರು 17 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಎರಡು ಆನೆಗಳನ್ನು ಸುರಕ್ಷಿತವಾಗಿ ಹೊರತೆಗೆದರು. ಆದರೆ ಸುಮಾರು 25 ವರ್ಷ ಪ್ರಾಯದ ಹೆಣ್ಣಾನೆ ತೀವ್ರ ಅಸ್ವಸ್ಥತೆಯಿಂದ ಎದ್ದು ನಿಲ್ಲಲು ಸಾಧ್ಯವಾಗದೆ ಅಲ್ಲಿಯೇ ಉಳಿದುಕೊಂಡಿತ್ತು.
ಅಸ್ವಸ್ಥಗೊಂಡ ಆನೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹಾಗೂ ಮಲೆ ಮಹದೇಶ್ವರ ವನ್ಯಧಾಮದ ಪಶುವೈದ್ಯರು ಸ್ಥಳದಲ್ಲೇ ತುರ್ತು ಚಿಕಿತ್ಸೆ ನೀಡಿದರು. ಜೆಸಿಬಿ ಹಾಗೂ ಕ್ರೇನ್ ಸಹಾಯದಿಂದ ಆನೆಯನ್ನು ಎಬ್ಬಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ.
ನಿರ್ಜಲೀಕರಣ ಹಾಗೂ ತೀವ್ರ ಬಿಸಿಲಿನ ಪರಿಣಾಮವಾಗಿ ಆ ಹೆಣ್ಣಾನೆ ನಿನ್ನೆ ತಡರಾತ್ರಿ ಕೊನೆಯುಸಿರೆಳೆದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

