Home Blog

ಮಂತ್ರಾಲಯಕ್ಕೆ ಹೋಗಿ ನಿಗೂಢವಾಗಿ ನಾಪತ್ತೆಯಾದ ರಾಯರ ಭಕ್ತ!

0

ಚಾಮರಾಜನಗರ: ಅಪಾರ ಭಕ್ತಿಯಿಂದ ರಾಘವೇಂದ್ರ ಸ್ವಾಮಿಗಳು ಆರಾಧನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹರಕೆ ತೀರಿಸಲು ಮಂತ್ರಾಲಯಕ್ಕೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಚಾಮರಾಜನಗರದ ಗಾಳಿಪುರ ಬಡಾವಣೆಯ ನಿವಾಸಿ ದೊರೆಸ್ವಾಮಿ (55) ನಾಪತ್ತೆಯಾದವರು. ಕೂಲಿ ಕೆಲಸ ಮಾಡಿಕೊಂಡಿದ್ದರೂ ಪ್ರತಿ ಗುರುವಾರ ತಪ್ಪದೇ ರಾಯರ ಪೂಜೆ ಮಾಡುತ್ತಿದ್ದ ಅವರು, ಜೀವನದಲ್ಲಿ ಒಮ್ಮೆಯಾದರೂ ಮಂತ್ರಾಲಯಕ್ಕೆ ತೆರಳಿ ಮುಡಿ ಕೊಟ್ಟು ದರ್ಶನ ಪಡೆಯಬೇಕೆಂಬ ಕನಸನ್ನು ಹೊಂದಿದ್ದರು. ಫೆಬ್ರವರಿ 9ರಂದು ಚಾಮರಾಜನಗರದಿಂದ ರೈಲಿನಲ್ಲಿ ಮಂತ್ರಾಲಯಕ್ಕೆ ತೆರಳಿದ್ದ ದೊರೆಸ್ವಾಮಿಗೆ, ಪುತ್ರ ತೇಜಸ್ ಸ್ವತಃ ಟಿಕೆಟ್ ತೆಗೆಸಿಕೊಟ್ಟು 2 ಸಾವಿರ ರೂಪಾಯಿ ಖರ್ಚು ಹಣ ನೀಡಿ ಕಳುಹಿಸಿಕೊಟ್ಟಿದ್ದರು.

“ಮೂರು ದಿನಗಳಲ್ಲಿ ವಾಪಸ್ ಬರುತ್ತೇನೆ” ಎಂದು ಹೇಳಿ ಹೋದವರು ಫೆಬ್ರವರಿ 28 ಕಳೆದರೂ ಮನೆಗೆ ಮರಳಿಲ್ಲ. ಮೊಬೈಲ್ ಫೋನ್ ಬಳಸದ ಕಾರಣ ಕುಟುಂಬಸ್ಥರಿಗೆ ಸಂಪರ್ಕ ಸಾಧ್ಯವಾಗಿಲ್ಲ. ಅವರ ಸುಳಿವು ಸಿಗದ ಹಿನ್ನೆಲೆಯಲ್ಲಿ ಪತ್ನಿ ರೇಖಾ ಹಾಗೂ ಪುತ್ರ ತೇಜಸ್ ಮಂತ್ರಾಲಯಕ್ಕೆ ತೆರಳಿ ರೈಲ್ವೆ ನಿಲ್ದಾಣ ಹಾಗೂ ಮಠದ ಸುತ್ತಮುತ್ತ ಹುಡುಕಾಟ ನಡೆಸಿ ಆರ್‌ಪಿಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಚಾಮರಾಜನಗರ ಟೌನ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ಇಸ್ರೇಲ್–ಇರಾನ್ ಸಂಘರ್ಷ: ಕಚ್ಚಾ ತೈಲ ದರ ಏರಿಕೆ ಭೀತಿ: ಭಾರತೀಯರ ಜೇಬಿಗೆ ಹೊಡೆತ?

0

ದೆಹಲಿ: ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಉಲ್ಬಣಗೊಂಡಿರುವ ಸಂಘರ್ಷವು ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ತಲ್ಲಣ ಉಂಟುಮಾಡಿದ್ದು, ಅದರ ಪರಿಣಾಮ ಭಾರತದಲ್ಲಿಯೂ ಇಂಧನ ಬೆಲೆ ಏರಿಕೆಯ ಆತಂಕವನ್ನು ಹುಟ್ಟಿಸಿದೆ.

ಇರಾನ್ ವಿಶ್ವದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿರುವುದರಿಂದ ಯುದ್ಧದ ಕಾರಣ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ವ್ಯಕ್ತವಾಗಿದೆ. ಇದರ ಪರಿಣಾಮವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದು, ಭಾರತವು ತನ್ನ ಅಗತ್ಯದ ಶೇ.80ಕ್ಕಿಂತ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುವ ಹಿನ್ನೆಲೆ ಇದು ದೇಶದ ಆರ್ಥಿಕತೆಯ ಮೇಲೆ ನೇರ ಹೊರೆ ತರಬಹುದಾಗಿದೆ.

ಪರ್ಷಿಯನ್ ಕೊಲ್ಲಿ ಮತ್ತು ಕೆಂಪು ಸಮುದ್ರ ಮಾರ್ಗಗಳಲ್ಲಿ ಅಡಚಣೆ ಉಂಟಾದರೆ ಸಾಗಾಣಿಕೆ ಹಾಗೂ ವಿಮೆ ವೆಚ್ಚಗಳು ಹೆಚ್ಚಾಗಿ, ಅಂತಿಮವಾಗಿ ಪೆಟ್ರೋಲ್–ಡೀಸೆಲ್ ದರ ಏರಿಕೆಗೆ ಕಾರಣವಾಗುವ ಸಾಧ್ಯತೆ ಇದೆ. ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚವೂ ಹೆಚ್ಚಾಗಿ ತರಕಾರಿ, ಹಣ್ಣು, ಹಾಲು ಸೇರಿದಂತೆ ದಿನಸಿ ವಸ್ತುಗಳ ಬೆಲೆ ಏರಿಕೆಯಾಗುವ ಆತಂಕವಿದೆ. ಜೊತೆಗೆ ಜಾಗತಿಕ ಅನಿಶ್ಚಿತತೆಯಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡಿದರೆ ರೂಪಾಯಿ ಮೌಲ್ಯ ಕುಸಿತ ಹಾಗೂ ಷೇರು ಮಾರುಕಟ್ಟೆ ಅಸ್ಥಿರತೆಯೂ ಹೆಚ್ಚಾಗಬಹುದು. ಆದರೆ ಸದ್ಯಕ್ಕೆ ದೇಶೀಯ ತೈಲ ಕಂಪನಿಗಳು ಬೆಲೆ ಏರಿಕೆ ಕುರಿತು ಅಧಿಕೃತ ಘೋಷಣೆ ಮಾಡಿಲ್ಲ; ಜಾಗತಿಕ ಪರಿಸ್ಥಿತಿಯ ಬೆಳವಣಿಗೆಯೇ ಮುಂದಿನ ನಿರ್ಧಾರವನ್ನು ನಿರ್ಧರಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಊಟ ಮಾಡಿದ ನಂತರ ಹೊಟ್ಟೆ ನೋವು ಏಕೆ ಬರುತ್ತದೆ? ತಿಳಿಯಬೇಕಾದ ಪ್ರಮುಖ ಕಾರಣಗಳು!

0

ಕೆಲವರಿಗೆ ಊಟ ಮಾಡಿದ ನಂತರ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ಕಾಣುವ ಸಮಸ್ಯೆಯಾದರೂ, ಅದನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಕೆಲ ಸಂದರ್ಭಗಳಲ್ಲಿ ಈ ನೋವು ಸಣ್ಣ ಮಟ್ಟದಲ್ಲಿದ್ದು ಸ್ವಲ್ಪ ಸಮಯದ ಬಳಿಕ ತಾನಾಗಿಯೇ ಕಡಿಮೆಯಾಗಬಹುದು.

ಆದರೆ ಕೆಲವರಿಗೆ ಇದೇ ನೋವು ಮರುಮರು ಕಾಣಿಸಿಕೊಂಡು ತೀವ್ರ ಸ್ವರೂಪ ಪಡೆಯುತ್ತದೆ. ಬಹಳಷ್ಟು ಜನರು ಇದನ್ನು ಗ್ಯಾಸ್ಟ್ರಿಕ್ ಸಮಸ್ಯೆ, ಜೀರ್ಣಕ್ರಿಯೆಯ ತೊಂದರೆ ಅಥವಾ ದಿನನಿತ್ಯದ ಸಾಮಾನ್ಯ ಸಮಸ್ಯೆ ಎಂದು ಲಘುವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಊಟ ಮಾಡಿದ ತಕ್ಷಣ ಅಥವಾ ಊಟದ ಕೆಲ ಹೊತ್ತಿನ ನಂತರ ನಿರಂತರವಾಗಿ ಹೊಟ್ಟೆ ನೋವು ಕಾಣಿಸುತ್ತಿದ್ದರೆ, ಅದು ದೇಹದ ಒಳಗಿರುವ ಯಾವುದೋ ಆರೋಗ್ಯ ಸಮಸ್ಯೆಯ ಮುನ್ಸೂಚನೆಯಾಗಿರಬಹುದು. ಈ ನೋವು ಹೊಟ್ಟೆಯ ಮೇಲ್ಭಾಗದಲ್ಲಿ, ನಾಭಿ ಸುತ್ತಮುತ್ತ, ಎಡ ಅಥವಾ ಬಲ ಭಾಗದಲ್ಲಿ ಅಥವಾ ಕೆಲವೊಮ್ಮೆ ಸಂಪೂರ್ಣ ಹೊಟ್ಟೆಯ ಭಾಗದಲ್ಲಿಯೇ ಅನುಭವವಾಗಬಹುದು.

ಇಂತಹ ಹೊಟ್ಟೆ ನೋವಿನಿಂದ ಬಳಲುವವರು ಕೆಲವೊಮ್ಮೆ ಊಟ ಮಾಡಲು ಭಯಪಡುವ ಸ್ಥಿತಿಗೂ ತಲುಪುತ್ತಾರೆ. ಪರಿಣಾಮವಾಗಿ ಹಸಿವು ಕಡಿಮೆಯಾಗುವುದು, ಸರಿಯಾಗಿ ಊಟ ಮಾಡದಿರುವುದು, ದೇಹದಲ್ಲಿ ಶಕ್ತಿ ಕೊರತೆ ಕಾಣಿಸಿಕೊಳ್ಳುವುದು ಹಾಗೂ ದಿನನಿತ್ಯದ ಕೆಲಸ ಕಾರ್ಯಗಳ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದಲ್ಲದೆ, ದೀರ್ಘಕಾಲ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಜೀರ್ಣಕ್ರಿಯೆ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ ಇರುತ್ತದೆ. ಅಸಮರ್ಪಕ ಆಹಾರ ಕ್ರಮ, ಅತಿಯಾದ ಮಸಾಲೆ, ಎಣ್ಣೆ ಪದಾರ್ಥಗಳ ಸೇವನೆ, ಅತಿಯಾದ ತಾಣತೆ, ಒತ್ತಡ, ನಿದ್ರಾಹೀನತೆ ಅಥವಾ ಕೆಲವೊಮ್ಮೆ ಒಳಾಂಗಿಕ ಸಮಸ್ಯೆಗಳು ಕೂಡ ಊಟದ ನಂತರ ಹೊಟ್ಟೆ ನೋವಿಗೆ ಕಾರಣವಾಗಬಹುದು.

ಆದ್ದರಿಂದ ಊಟ ಮಾಡಿದ ಬಳಿಕ ಆಗಾಗ್ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದರೆ, ಅದನ್ನು ಸಾಮಾನ್ಯ ಎಂದು ಬಿಟ್ಟುಬಿಡದೆ ಗಂಭೀರವಾಗಿ ಪರಿಗಣಿಸಬೇಕು. ನೋವಿನ ಸ್ವರೂಪ, ಸಮಯ, ತೀವ್ರತೆ ಹಾಗೂ ಇತರೆ ಲಕ್ಷಣಗಳನ್ನು ಗಮನಿಸಿ, ಅಗತ್ಯವಿದ್ದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತರೆ ಸಮಸ್ಯೆಯನ್ನು ನಿಯಂತ್ರಿಸಬಹುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ.

ಹೋಳಿ ಬಳಿಕ ಮೈಮೇಲೆ ಅಂಟಿದ ಬಣ್ಣವನ್ನು ತೆಗೆದು ಹಾಕಲು ಈ ಟಿಪ್ಸ್ ಫಾಲೋ ಮಾಡಿ!

0

ಹೋಳಿ ಅಂದ್ರೆ ಬಣ್ಣಗಳ ಹಬ್ಬ, ಆದರೆ ಸಂಭ್ರಮದ ನಂತರ ಮೈಗೆ ಬಿದ್ದ ಬಣ್ಣವನ್ನು ತೆಗೆಯುವುದು ಕೆಲವರಿಗೆ ಕಷ್ಟವಾಗಬಹುದು. ಆದರೆ ಈ ಕೆಲವು ಸರಳ ವಿಧಾನಗಳ ಮೂಲಕ ಬಣ್ಣವನ್ನು ಸುಲಭವಾಗಿ ಹೋಗಲಾಡಿಸಬಹುದು.

ಓಕುಳಿಯಾಡುವ ಮೊದಲು ಚರ್ಮ ಮತ್ತು ಕೂದಲಿಗೆ ತೆಂಗಿನ ಎಣ್ಣೆ ಹಚ್ಚಿ, ಬಣ್ಣ ಚರ್ಮಕ್ಕೆ ಆಳವಾಗಿ ತೂರಿಕೊಳ್ಳುವುದನ್ನು ತಡೆಯಬಹುದು. ಹೋಳಿ ನಂತರ, ಮುಖ ಮತ್ತು ದೇಹಕ್ಕೆ ಕಡ್ಲೆಹಿಟ್ಟು ಮತ್ತು ಮೊಸರು ಪೇಸ್ಟ್ ಹಚ್ಚಿ ಸ್ವಲ್ಪ ಒಣಗಿದ ಮೇಲೆ ಮಸಾಜ್ ಮಾಡಿ ತೊಳೆಯಬಹುದು. ಬಣ್ಣವನ್ನು ಹಗುರಗೊಳಿಸಲು ಮೊಸರು ಮತ್ತು ನಿಂಬೆ ರಸ ಬಳಸಿ 10–15 ನಿಮಿಷ ಬಿಟ್ಟರೆ ಸಹಾಯವಾಗುತ್ತದೆ.

ಹಸಿ ಹಾಲು ಮತ್ತು ಹತ್ತಿ ಅಥವಾ ಐಚ್ಛಿಕವಾಗಿ ಜೇನುತುಪ್ಪ ಬಳಸಿ ಬಣ್ಣವನ್ನು ತೆಗೆಯಬಹುದು. ತ್ವಚೆ ಕೆಂಪಾಗಿದರೆ ಅಥವಾ ಸೂಕ್ಷ್ಮವಾಗಿದ್ದರೆ, ರೋಸ್ ವಾಟರ್ ಮತ್ತು ಅಲೋವೆರಾ ಜೆಲ್ ಹಚ್ಚಿ ಶಾಂತಗೊಳಿಸಬಹುದು. ಕೂದಲಿಗೆ ಬಣ್ಣ ಹೋದರೆ ಮೊಸರು ಮತ್ತು ಜೇನುತುಪ್ಪ ಮಿಶ್ರಣ ಹಚ್ಚಿ 20 ನಿಮಿಷ ಬಿಟ್ಟು ತೊಳೆಯುವ ಮೂಲಕ ಕೂದಲು ಆರೋಗ್ಯಕರ ಮತ್ತು ಹೊಳೆಯುವಂತೆ ಮಾಡಬಹುದು.

ಈ ಸರಳ ಮನೆಮದ್ದುಗಳ ಬಳಕೆ ಮೂಲಕ ಹೋಳಿ ಬಣ್ಣವನ್ನು ಸುಲಭವಾಗಿ ತೆರವುಗೊಳಿಸಬಹುದು ಮತ್ತು ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ರಕ್ಷಿಸಬಹುದು.

Ranji Trophy Final: ಕರ್ನಾಟಕವನ್ನು ಮಣಿಸಿ ಚೊಚ್ಚಲ ರಣಜಿ ಟ್ರೋಫಿಗೆ ಮುತ್ತಿಕ್ಕಿದ ಜಮ್ಮುಕಾಶ್ಮೀರ!

0

ಹುಬ್ಬಳ್ಳಿ: ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿದ್ದವು. ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಜಮ್ಮು-ಕಾಶ್ಮೀರ ತಂಡ, ಬಲಿಷ್ಠ ಕರ್ನಾಟಕವನ್ನು ಮಣಿಸಿ ಐತಿಹಾಸಿಕವಾಗಿ ಚಾಂಪಿಯನ್ ಪಟ್ಟ ಕೈಸೇರಿಸಿಕೊಂಡಿದೆ.

ರಣಜಿ ಇತಿಹಾಸದಲ್ಲಿ 15ನೇ ಬಾರಿ ಫೈನಲ್ ತಲುಪಿದ್ದ ಕರ್ನಾಟಕ ತಂಡ ತವರು ನೆಲದ ಲಾಭ ಪಡೆದು ಸುಲಭವಾಗಿ ಗೆಲ್ಲಲಿದೆ ಎಂದು ನಿರೀಕ್ಷಿಸಲಾಗಿತ್ತು. ತಂಡದಲ್ಲಿ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ಮತ್ತು ದೇವದತ್ ಪಡಿಕ್ಕಲ್‌ರಂತಹ ಅನುಭವಿ ಬ್ಯಾಟ್ಸ್‌ಮನ್‌ಗಳು ಇದ್ದರು. ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ್ ಕೃಷ್ಣ ಮತ್ತು ಶ್ರೇಯಸ್ ಗೋಪಾಲ್ ಪ್ರಮುಖರಾಗಿದ್ದರು. ಆದರೂ ಪಂದ್ಯ ಆರಂಭದಿಂದಲೇ ಹಿಡಿತ ಸಾಧಿಸಿದ ಜಮ್ಮು-ಕಾಶ್ಮೀರ ತಂಡ, ಕರ್ನಾಟಕಕ್ಕೆ ಮರುಪ್ರವೇಶದ ಅವಕಾಶವೇ ನೀಡಲಿಲ್ಲ.

1959-60ರಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿಯಲ್ಲಿ ಭಾಗವಹಿಸಿದ್ದ ಜಮ್ಮು-ಕಾಶ್ಮೀರ ತಂಡಕ್ಕೆ ಇದುವರೆಗೆ ಪ್ರಶಸ್ತಿ ಸಿಕ್ಕಿರಲಿಲ್ಲ. ಬರೋಬ್ಬರಿ 67 ವರ್ಷಗಳ ಬಳಿಕ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ವಿಜೇತರನ್ನು ಘೋಷಿಸುವ ನಿಯಮದಂತೆ ಜಮ್ಮು-ಕಾಶ್ಮೀರ ತಂಡಕ್ಕೆ ಕಿರೀಟ ಒಲಿಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು-ಕಾಶ್ಮೀರ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು. ಪ್ರತಿಯಾಗಿ ಕರ್ನಾಟಕ ತಂಡ 293 ರನ್‌ಗಳಿಗೆ ಆಲೌಟ್ ಆಯಿತು.

ಎರಡನೇ ಇನ್ನಿಂಗ್ಸ್‌ನಲ್ಲೂ ಜಮ್ಮು-ಕಾಶ್ಮೀರ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಆರಂಭಿಕ ಆಟಗಾರ ಕಮ್ರಾನ್ ಇಕ್ಬಾಲ್ 160 ರನ್‌ಗಳ ಸೊಗಸಾದ ಇನ್ನಿಂಗ್ಸ್ ಆಡಿದರು. ಸಾಹಿಲ್ ಕೂಡ ಶತಕ ಬಾರಿಸಿದರು. ಇದರಿಂದ ಒಟ್ಟು ಮುನ್ನಡೆ 630 ರನ್‌ಗಳನ್ನು ಮೀರಿತು. ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೂ, ಮೊದಲ ಇನ್ನಿಂಗ್ಸ್‌ನಲ್ಲಿ 291 ರನ್‌ಗಳ ಮುನ್ನಡೆ ಪಡೆದಿದ್ದ ಜಮ್ಮು-ಕಾಶ್ಮೀರ ತಂಡವನ್ನು ನಿಯಮಾನುಸಾರ ಚಾಂಪಿಯನ್ ಎಂದು ಘೋಷಿಸಲಾಯಿತು.

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಹುಬ್ಬಳ್ಳಿಗೆ ಆಗಮಿಸಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆಟಗಾರರನ್ನು ಅಭಿನಂದಿಸಿದರು. ಈ ಸಾಧನೆ ಭವಿಷ್ಯದ ಪೀಳಿಗೆಗಳಿಗೆ ಕ್ರೀಡೆಯಲ್ಲಿ ಸ್ಫೂರ್ತಿ ನೀಡಲಿದೆ ಎಂದು ಅವರು ಹೇಳಿದರು. ಜಮ್ಮು-ಕಾಶ್ಮೀರ ತಂಡದ ಈ ಗೆಲುವು ರಣಜಿ ಟ್ರೋಫಿ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಂತಾಗಿದೆ.

“ಶಸ್ತ್ರಾಸ್ತ್ರ ತ್ಯಜಿಸಿ, ಇಲ್ಲವೇ ಸಾವನ್ನು ಎದುರಿಸಿ”: ಇರಾನ್ʼಗೆ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ

0

ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ತನ್ನ ಯುದ್ಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇರಾನಿನ ಸೈನಿಕರಿಗೆ “ಶಸ್ತ್ರಾಸ್ತ್ರಗಳನ್ನು ಕೆಳಗಿಡಿ, ಇಲ್ಲವೇ ಸಾವನ್ನು ಎದುರಿಸಿ” ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್ ಪೂರ್ವಭಾವಿ ವಾಯುದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ, ಅಮೆರಿಕ ಪಡೆಗಳು ಇರಾನ್‌ನಲ್ಲಿ ಪ್ರಮುಖ ಯುದ್ಧ ಕಾರ್ಯಾಚರಣೆಗಳನ್ನು ಆರಂಭಿಸಿವೆ ಎಂದು ಟ್ರಂಪ್ ಘೋಷಿಸಿದ್ದಾರೆ.

“ಯುನೈಟೆಡ್ ಸ್ಟೇಟ್ಸ್ ಮಿಲಿಟರಿ ಇರಾನ್‌ನಲ್ಲಿ ಯುದ್ಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದೆ. ಇರಾನ್ ಆಡಳಿತದಿಂದ ಎದುರಾಗಬಹುದಾದ ಬೆದರಿಕೆಗಳಿಂದ ಅಮೆರಿಕದ ಜನರನ್ನು ರಕ್ಷಿಸುವುದು ನಮ್ಮ ಉದ್ದೇಶ” ಎಂದು ಅವರು ಹೇಳಿದ್ದಾರೆ.

ಅಮೆರಿಕದ ಹಿತಾಸಕ್ತಿಗಳ ವಿರುದ್ಧ ದಶಕಗಳಿಂದ ಟೆಹ್ರಾನ್ ಸಂಚು ರೂಪಿಸುತ್ತಿದೆ. ಇನ್ನು ಮುಂದೆ ಇದನ್ನು ಸಹಿಸುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಇರಾನದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಸದಸ್ಯರು, ಸಶಸ್ತ್ರ ಪಡೆಗಳು ಮತ್ತು ಎಲ್ಲಾ ಪೊಲೀಸರಿಗೆ ಎಚ್ಚರಿಕೆ ನೀಡಿದ ಅವರು, “ನೀವು ನಿಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ. ನಮ್ಮ ಸೂಚನೆ ಪಾಲಿಸಿದರೆ ನ್ಯಾಯಯುತವಾಗಿ ವರ್ತಿಸಲಾಗುತ್ತದೆ. ಇಲ್ಲವೇ ಸಾವು ನಿಶ್ಚಿತ” ಎಂದು ಹೇಳಿದ್ದಾರೆ.

ಈ ಹೇಳಿಕೆಯಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಇಸ್ರೇಲ್–ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷ ಜಾಗತಿಕ ಮಟ್ಟದಲ್ಲಿ ಭಾರಿ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.

ನಿಗಮ-ಮಂಡಳಿ ಅಧ್ಯಕ್ಷರ ಅವಧಿ ವಿಸ್ತರಣೆ: ಸಿಬ್ಬಂದಿ ಇಲಾಖೆ ಆದೇಶ

0

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ನಾಮನಿರ್ದೇಶನ ಗೊಂಡಿದ್ದ ಅಧ್ಯಕ್ಷರ ಅವಧಿಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ. ಈಗಾಗಲೇ ಅವಧಿ ಮುಕ್ತಾಯಗೊಂಡಿರುವ ಅಥವಾ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿರುವ ಅಧ್ಯಕ್ಷರಿಗೆ ಈ ಆದೇಶ ಅನ್ವಯವಾಗಲಿದೆ.

ಸರ್ಕಾರದ ವಿವಿಧ ಇಲಾಖೆಗಳ ಅಧೀನದಲ್ಲಿರುವ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ನಾಮನಿರ್ದೇಶಿತ ಅಧ್ಯಕ್ಷರ ಅವಧಿಯನ್ನು ಮುಂದಿನ ಆದೇಶದವರೆಗೆ ಮುಂದುವರಿಸಲಾಗಿದೆ.

ಸಂಬಂಧಿತ ಅಧಿನಿಯಮ ಮತ್ತು ನಿಯಮಾವಳಿಗಳ ಪ್ರಕಾರ ತಕ್ಷಣದಿಂದಲೇ ಅಧ್ಯಕ್ಷರು ಕಾರ್ಯನಿರ್ವಹಿಸಲು ಸೂಕ್ತ ಅಧಿಸೂಚನೆ ಹೊರಡಿಸುವಂತೆ ಆಡಳಿತ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಉಪ ಕಾರ್ಯದರ್ಶಿ ಅಭಿಜಿನ್ ಬಿ. ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮೊದಲು ಕೆಲವು ಕಾಡಾ ಅಭಿವೃದ್ಧಿ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರದ ಅಧ್ಯಕ್ಷರ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.

ವಿವಿಧ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ನಿಗಮ-ಮಂಡಳಿಗಳಿಗೆ ಡಿಸಿಸಿ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಮುಖಂಡರನ್ನು ಎರಡು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿತ್ತು. ಫೆಬ್ರವರಿ 7ರ ಆದೇಶದಲ್ಲಿ ಪಟ್ಟಿಯಲ್ಲಿದ್ದ ಕೆಲವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿ ವಿಸ್ತರಣೆ ನೀಡಲಾಗಿತ್ತು. ಆದರೆ ಕೆಲವು ಕಾಡಾ ಅಭಿವೃದ್ಧಿ ಪ್ರಾಧಿಕಾರ ಮತ್ತು ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನು ಆ ಪಟ್ಟಿಯಿಂದ ಕೈಬಿಡಲಾಗಿತ್ತು.

ಪ್ರಸ್ತುತ ಆ ಪ್ರಾಧಿಕಾರಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡದಿರುವುದರಿಂದ, ಮುಂದಿನ ಆದೇಶದವರೆಗೆ ಅಥವಾ ಹೊಸ ನೇಮಕಾತಿ ನಡೆಯುವವರೆಗೆ ಹಾಲಿ ಅಧ್ಯಕ್ಷರನ್ನೇ ಮುಂದುವರಿಸುವಂತೆ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದರು.

ಹಣೆಯಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ: ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್

0

ಬೆಂಗಳೂರು: ಹಣೆ ಬರಹದಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ. ಹಣೆಬರಹ ಇಲ್ಲ ಎಂದರೆ ಯಾರೂ ಏನೂ ಮಾಡಲು ಆಗುವುದಿಲ್ಲ” ಎಂದು ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.

ನೀವು ಶಸ್ತ್ರತ್ಯಾಗ ಮಾಡಿದ್ದೀರಾ ಎಂದು ಕೇಳಿದಾಗ, “ತ್ಯಾಗ ಮಾಡಲು ಶಸ್ತ್ರ ಇರಬೇಕಲ್ಲವೇ? ಶಸ್ತ್ರವೇ ಇಲ್ಲವಲ್ಲ. ಶಸ್ತ್ರ ಇದೆ ಎಂದು ನಾನು ಯಾವಾಗ ಹೇಳಿದ್ದೆ. ಶಸ್ತ್ರವೇ ಇಲ್ಲದಿದ್ದಾಗ ಶಸ್ತ್ರತ್ಯಾಗದ ಪ್ರಶ್ನೆಯೇ ಬಾರದು” ಎಂದು ಕೇಳಿದರು.

ತಾಳ್ಮೆಯ ಅಸ್ತ್ರ ಇದೆ ಎಂದಿದ್ದೀರಿ ಎಂದಾಗ, “ಈಗಲೂ ತಾಳ್ಮೆ ಇರಲಿ ಎಂದು ಹೇಳುತ್ತಿದ್ದೇನೆ” ಎಂದರು. ಶಸ್ತ್ರ, ತಂತ್ರ, ಯುದ್ಧ ಇಲ್ಲದೇ ಬಗೆಹರಿಯುವುದೇ ಎಂದಾಗ, “ಇದು ರಾಜಕಾರಣ. ಇಲ್ಲಿ ಶಸ್ತ್ರ ಹಾಗೂ ಅಸ್ತ್ರ ಬೇಕಾಗಿಲ್ಲ” ಎಂದರು.

ಶಾಸಕರ ದೆಹಲಿ ಯಾತ್ರೆ ವಿಚಾರ ನನಗೆ ಗೊತ್ತಿಲ್ಲ

ಶಾಸಕರು ದೆಹಲಿಗೆ ತೆರಳಿ ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ನಾಯಕರನ್ನು ಕೇಳುವ ಬಗ್ಗೆ ಪ್ರಶ್ನಿಸಿದಾಗ, “ಶಾಸಕರು ದೆಹಲಿಗೆ ಹೋಗುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಶಾಸಕರನ್ನೇ ಕೇಳಿ” ಎಂದರು.

ಭೋಜನಕೂಟ ಸೇರಿದ ಶಾಸಕರು ನಾಯಕತ್ವದ ವಿಚಾರದಲ್ಲಿ ಸ್ಪಷ್ಟನೆ ಕೇಳಿದ್ದಾರೆ ಎಂದಾಗ, “ನಾನು ಊರಲ್ಲಿ ಇರಲಿಲ್ಲ. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಅವರು ಯಾವ ತೀರ್ಮಾನ ಕೈಗೊಂಡಿದ್ದಾರೆ, ಯಾವ ಹೇಳಿಕೆ ಕೊಟ್ಟಿದ್ದಾರೆ ಎಂಬುದೂ ಗೊತ್ತಿಲ್ಲ. ಇದು ಅವರ ವೈಯಕ್ತಿಕ ವಿಚಾರ. ಪಕ್ಷ ಅದನ್ನು ಗಮನಿಸಲಿದೆ” ಎಂದು ತಿಳಿಸಿದರು.

ಹೀಗೆ ಆದರೆ 2028ರ ಚುನಾವಣೆ ಪಕ್ಷಕ್ಕೆ ಕಷ್ಟವಾಗಲಿದೆ ಎಂದಾಗ, “ಚುನಾವಣೆಗೆ ಸ್ಪರ್ಧಿಸುವವರಿಗೆ ಕಷ್ಟವಾಗಬಹುದು. ನನಗೆ ಕಷ್ಟ ಆಗುವುದಿಲ್ಲ. ಈ ಬಗ್ಗೆ ನಾನೇಗೆ ಹೇಳಲಿ” ಎಂದು ತಿಳಿಸಿದರು.

ಶಾಸಕರ ಆಗ್ರಹದಲ್ಲಿ ನ್ಯಾಯ ಇದೆ ಅಲ್ಲವೇ ಎಂದು ಕೇಳಿದಾಗ, “ಶಾಸಕರ ವಿಚಾರಧಾರೆ ಅವರಿಗೆ ಹಾಗೂ ಸಂಬಂಧಿಸಿದ್ದೇ ಹೊರತು, ನನಗಲ್ಲ. ಪಕ್ಷ ಅವರ ವಿಚಾರಗಳನ್ನು ಗಮನಿಸಲಿದೆ. ನಾವು ಆ ವಿಚಾರದಲ್ಲಿ ಹೇಳಲು ಬರುವುದಿಲ್ಲ” ಎಂದರು.

ಶಿವಕುಮಾರ್ ಅವರು ಪಕ್ಷ ನನ್ನನ್ನು ಗಮನಿಸಲಿದೆ ಎಂದು ಹೇಳುತ್ತಲೇ ಇದ್ದಾರೆ ಎಂದಾಗ, “ಎಲ್ಲದಕ್ಕೂ ತಾಳ್ಮೆ ಇರಲಿ” ಎಂದರು. ಸಿದ್ದರಾಮಯ್ಯ ಅವರನ್ನು ಬದಲಿಸುವುದಾದರೆ ದಲಿತ ಸಿಎಂ ಮಾಡಬೇಕು ಎಂಬ ಹೆಚ್.ಸಿ ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಎಲ್ಲರಿಗೂ ಆಸೆ ಇದೆ. ಇದರಲ್ಲಿ ತಪ್ಪೇನಿಲ್ಲ” ಎಂದರು.

ನಿಮ್ಮ ಸಹೋದರರನ್ನು ಸಿಎಂ ಹುದ್ದೆಯಲ್ಲಿ ಕೂರಿಸಲು ನಿಮ್ಮ ಪ್ರಯತ್ನ ಹೇಗಿದೆ, ನಿಮ್ಮ ಬಳಿ ಶಾಸಕರ ಸಂಖ್ಯೆ ಹೆಚ್ಚಾಗಿದೆಯೇ ಎಂದು ಕೇಳಿದಾಗ, “ನನಗೆ ಆ ಬಗ್ಗೆ ಗೊತ್ತಿಲ್ಲ. ಶಾಸಕರ ವಿಚಾರ ಬಿಟ್ಟು ಬಮೂಲ್ ವಿಚಾರ ಏನಾದರೂ ಇದ್ದರೆ ಕೇಳಿ, ಪ್ರತಿಕ್ರಿಯೆ ನೀಡುವೆ’ ಎಂದರು.

ಪಕ್ಷದಿಂದ ಕೆಎಂಎಫ್ ಚುನಾವಣೆ ಅಭ್ಯರ್ಥಿ ಆಯ್ಕೆ

ಮಾರ್ಚ್ 6 ರಂದು ಕೆಎಂಎಫ್ ಚುನಾವಣೆ ನಡೆಯಲಿದೆಯೇ ಎಂದು ಕೇಳಿದಾಗ, “ಚುನಾವಣೆ ಯಾವಾಗ ಮಾಡಬೇಕು ಎಂದು ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಆಗ ಪಕ್ಷ ತೀರ್ಮಾನ ಮಾಡುವ ವ್ಯಕ್ತಿಯೇ ಸ್ಪರ್ಧೆ ಮಾಡಲಿದ್ದಾರೆ” ಎಂದರು.

ನೀವು ಕೆಎಂಎಫ್ ಚುನಾವಣೆ ಆಕಾಂಕ್ಷಿ ಎಂದಾಗ, “ನಾನು ಯಾವುದಕ್ಕೂ ಆಕಾಂಕ್ಷಿ ಅಲ್ಲ” ಎಂದರು. ರಾಜ್ಯಸಭೆಗೆ ಹೋಗುವ ಪ್ರಯತ್ನ ಇದೆಯೇ ಎಂದಾಗ, “ಇಲ್ಲ, ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ರಾಜಕೀಯ ಪಂಡಿತನಲ್ಲ” ಎಂದರು.ನನ್ನ ಪರವಾಗಿ ಯಾರು ದೆಹಲಿಗೆ ಹೋಗುವುದು ಬೇಡ ಎಂದು ಡಿಸಿಎಂ ಅವರು ಹೇಳಿರುವ ಬಗ್ಗೆ ಕೇಳಿದಾಗ, “ನಾನು ಶಿವಕುಮಾರ್ ಅವರನ್ನು ಭೇಟಿ ಮಾಡಿಲ್ಲ. ಹೀಗಾಗಿ ಈ ವಿಚಾರ ನನಗೆ ಗೊತ್ತಿಲ್ಲ” ಎಂದರು.

ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ! ಆತ್ಮಹತ್ಯೆಯೋ, ಕೊಲೆಯೋ?

0

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಂಡ್ಲುಗುರ್ಕಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮನೆಯಲ್ಲಿ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಗುಂಡ್ಲುಗುರ್ಕಿ ಗ್ರಾಮದ ನಿವಾಸಿ ಮುನಿರಾಜು (42) ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಮುನಿರಾಜು ಅವರ ಪತ್ನಿ ಸುನಿತಾ ವಿರುದ್ಧ ಅಕ್ರಮ ಸಂಬಂಧದ ಆರೋಪ ಕೇಳಿಬರುತ್ತಿದೆ. ಪತ್ನಿ ಪದೇಪದೇ ಮನೆಬಿಟ್ಟು ಬೇರೊಬ್ಬರ ಜೊತೆ ಹೋಗುತ್ತಿದ್ದಾಳೆ ಎಂಬ ಕಾರಣದಿಂದ ಮುನಿರಾಜು ಬೇಸರಗೊಂಡಿದ್ದರೆಂದು ಹೇಳಲಾಗುತ್ತಿದೆ.

ಈ ವಿಚಾರವಾಗಿ ಫೆಬ್ರವರಿ 27ರ ಮಧ್ಯರಾತ್ರಿ ಒಂದು ಗಂಟೆಯವರೆಗೂ ಸ್ಥಳೀಯರು ಹಾಗೂ ಪತ್ನಿಯ ಸಂಬಂಧಿಕರು ನ್ಯಾಯ ಪಂಚಾಯಿತಿ ನಡೆಸಿದ್ದರು ಎನ್ನಲಾಗಿದೆ. ಪಂಚಾಯಿತಿಯ ಬಳಿಕವೇ ಮುನಿರಾಜು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಪ್ರಕರಣಕ್ಕೆ ಇನ್ನಷ್ಟು ತಿರುವು ನೀಡಿದೆ.

ಮುನಿರಾಜು ಆತ್ಮಹತ್ಯೆ ಮಾಡಿಕೊಂಡರೋ ಅಥವಾ ಇದರಲ್ಲಿ ಬೇರೆ ಏನಾದರೂ ಶಂಕಾಸ್ಪದ ಅಂಶಗಳಿವೆಯೋ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಪತ್ನಿಯೇ ಸಾವಿಗೆ ಕಾರಣವೇ ಎಂಬ ಅನುಮಾನವೂ ವ್ಯಕ್ತವಾಗಿದೆ.

ಘಟನೆ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಪೋಸ್ಟ್‌ಮಾರ್ಟಂ ವರದಿ ಮತ್ತು ತನಿಖೆಯ ಬಳಿಕವೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಗಳ ಅಪಹರಣ ಆರೋಪದಲ್ಲಿ ಅಳಿಯ ವಿರುದ್ಧ ದೂರು: ಕಾನೂನು ದುರ್ಬಳಕೆ ಎಂದ ಹೈಕೋರ್ಟ್

0

ಬೆಂಗಳೂರು: ಮಗಳನ್ನು ಮನೆಯಿಂದ ಕರೆದುಕೊಂಡು ಹೋಗಿದ್ದ ಅಳಿಯನ ವಿರುದ್ಧ ಅತ್ತೆ ದಾಖಲಿಸಿದ್ದ ಅಪಹರಣ ಪ್ರಕರಣವನ್ನು “ಕಾನೂನು ದುರ್ಬಳಕೆಯ ಸ್ಪಷ್ಟ ಉದಾಹರಣೆ” ಎಂದು ಹೇಳಿರುವ ಕರ್ನಾಟಕ ಹೈಕೋರ್ಟ್, ನ್ಯಾಯಾಂಗ ಬಂಧನದಲ್ಲಿದ್ದ ಅಳಿಯ ಹಾಗೂ ಆತನ ಗೆಳೆಯನನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿದೆ.

ಕೋಲಾರ ತಾಲೂಕಿನ ಬೆಳಮಾರನಹಳ್ಳಿ ನಿವಾಸಿಗಳಾದ ಬಿ.ಎನ್. ಮುರಳಿ ಮತ್ತು ಚರಣ್ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ಹಾಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದರು.

ದೂರುದಾರೆಯಾದ ಅತ್ತೆ, ತನ್ನ ಮಗಳನ್ನು ಅಳಿಯ ಅಪಹರಿಸಿದ್ದಾನೆಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಆದರೆ, ಮುರಳಿ ಮತ್ತು ದೂರುದಾರೆಯ ಮಗಳು ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದು, ಯುವತಿ ಸ್ವಇಚ್ಛೆಯಿಂದ ಮನೆಬಿಟ್ಟು ಹೋಗಿದ್ದಾಳೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಯುವತಿಗೆ 18 ವರ್ಷ ಮೀರಿದೆ ಎಂಬುದನ್ನೂ ಸ್ಪಷ್ಟಪಡಿಸಿದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಈ ಪ್ರಕರಣವು ಕಾನೂನು ದುರ್ಬಳಕೆಗೆ ಸ್ಪಷ್ಟ ಉದಾಹರಣೆ ಎಂದು ಅಭಿಪ್ರಾಯಪಟ್ಟಿತು. ಪರಸ್ಪರ ಒಪ್ಪಿಗೆಯ ಮೇರೆಗೆ ನಡೆದ ಮದುವೆಯ ಹಿನ್ನೆಲೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ಸೂಚಿಸಿತು. ಇದು ಜಾಮೀನು ಪಡೆಯಬಹುದಾದ ಪ್ರಕರಣವಾಗಿದ್ದು, ಇಂತಹ ಪ್ರಕರಣದಲ್ಲಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದು ಯುಕ್ತಿಯುತವಲ್ಲ ಎಂದು ನ್ಯಾಯಾಲಯ ಹೇಳಿದೆ.

ವಿಚಾರಣಾ ನ್ಯಾಯಾಲಯ ನೀಡಿದ್ದ ನ್ಯಾಯಾಂಗ ಬಂಧನ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಅರ್ಜಿದಾರರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಜೈಲಾಧಿಕಾರಿಗಳಿಗೆ ನಿರ್ದೇಶಿಸಿದೆ. ಈ ತೀರ್ಪು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಕಾನೂನು ಪ್ರಕ್ರಿಯೆಯ ದುರ್ಬಳಕೆಯ ಬಗ್ಗೆ ಮಹತ್ವದ ಸಂದೇಶ ನೀಡಿದೆ.

error: Content is protected !!