Home Blog

ಗಿಡಗಳ ಆರೋಗ್ಯಕ್ಕೆ ಬೆಳಗಿನ ನೀರು ಅತ್ಯುತ್ತಮ: ತಜ್ಞರಿಂದ ಮಹತ್ವದ ಸಲಹೆ!

0

ಬೇಸಿಗೆಯ ತೀವ್ರ ಬಿಸಿಲಿನಲ್ಲಿ ಮನುಷ್ಯರು ಮಾತ್ರವಲ್ಲ, ಮನೆಯಲ್ಲಿರುವ ಗಿಡಗಳೂ ಸಹ ತೀವ್ರ ತಾಪಕ್ಕೆ ಬಸವಳಿದು ಹೋಗುತ್ತಿವೆ. ಇಂತಹ ಸಮಯದಲ್ಲಿ ಗಿಡಗಳನ್ನು ಉಳಿಸಲು ಹಲವರು ಬೆಳಗ್ಗೆ ಹಾಗೂ ಸಂಜೆ ಹೆಚ್ಚು ನೀರು ಹಾಕುವ ಅಭ್ಯಾಸ ಹೊಂದಿರುತ್ತಾರೆ.

ಆದರೆ ಅತಿಯಾದ ನೀರು ಹಾಕುವುದು ಗಿಡಗಳಿಗೆ ಹಾನಿಕಾರಕವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ತಜ್ಞರ ಪ್ರಕಾರ, ಅತಿಯಾಗಿ ನೀರು ಹಾಕಿದರೆ ಸಸ್ಯಗಳ ಬೇರುಗಳು ಕೊಳೆಯುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಸರಿಯಾದ ಸಮಯದಲ್ಲಿ ನೀರು ಹಾಕುವುದು ಅತ್ಯಂತ ಮುಖ್ಯವಾಗಿದೆ ಎಂದು ಸಲಹೆ ನೀಡಲಾಗಿದೆ.

ಬೆಳಗ್ಗೆ ನೀರು ಹಾಕಿದರೆ ಲಾಭಗಳು:
ಬೆಳಗಿನ ಜಾವ ತಾಪಮಾನ ಕಡಿಮೆಯಾಗಿರುವುದರಿಂದ ನೀರು ನಿಧಾನವಾಗಿ ಮಣ್ಣಿನಲ್ಲಿ ಇಂಗಿ ಬೇರುಗಳಿಗೆ ತಲುಪುತ್ತದೆ. ಇದರಿಂದ ಗಿಡಗಳು ದಿನವಿಡೀ ತೇವಾಂಶವನ್ನು ಪಡೆದು ಬಿಸಿಲಿನ ತೀವ್ರತೆಯನ್ನು ಸುಲಭವಾಗಿ ತಾಳಿಕೊಳ್ಳುತ್ತವೆ. ಜೊತೆಗೆ ಬೆಳಗ್ಗೆ ಹಾಕಿದ ನೀರು ಬೇಗ ಒಣಗುವುದರಿಂದ ಶಿಲೀಂಧ್ರ ಮತ್ತು ರೋಗಗಳ ಅಪಾಯವೂ ಕಡಿಮೆಯಾಗುತ್ತದೆ.

ಸಂಜೆ ನೀರು ಹಾಕಿದರೆ ಪರಿಣಾಮ:
ಸಂಜೆ ಸಮಯದಲ್ಲಿ ನೀರು ಹಾಕಿದರೆ ತೇವಾಂಶ ರಾತ್ರಿಯಿಡೀ ಉಳಿಯುತ್ತದೆ. ಇದರಿಂದ ಶಿಲೀಂಧ್ರ ಸೋಂಕು ಹಾಗೂ ಕೀಟಗಳ ಬೆಳವಣಿಗೆ ಹೆಚ್ಚುವ ಅಪಾಯವಿದೆ ಎಂದು ತಜ್ಞರು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಬೇಸಿಗೆಯಲ್ಲಿ ಗಿಡಗಳ ಆರೋಗ್ಯ ಕಾಪಾಡಲು ಬೆಳಗ್ಗೆ ನೀರು ಹಾಕುವುದು ಅತ್ಯಂತ ಸೂಕ್ತ ವಿಧಾನ ಎಂದು ತಜ್ಞರು ಸಲಹೆ ನೀಡಿದ್ದಾರೆ. ತೀವ್ರ ಬಿಸಿಲಿನ ಸಂದರ್ಭಗಳಲ್ಲಿ ಮಾತ್ರ ಸಂಜೆ ಸ್ವಲ್ಪ ಪ್ರಮಾಣದಲ್ಲಿ ನೀರು ಚಿಮುಕಿಸಬಹುದು ಎಂದು ಸೂಚಿಸಲಾಗಿದೆ.

ಬೆಂಗಳೂರು ನಾಗರಿಕರಿಗೆ ಸಿಹಿ ಸುದ್ದಿ: ಇ-ಖಾತಾ ಇನ್ಮುಂದೆ ಆನ್‌ಲೈನ್ ಡೌನ್‌ಲೋಡ್ ಸೌಲಭ್ಯ!

ಬೆಂಗಳೂರು: ಬೆಂಗಳೂರು ಮಹಾನಗರ ಆಡಳಿತ ಸಂಸ್ಥೆ (ಜಿಬಿಎ) ಇ-ಖಾತಾ ಸೇವೆಗೆ ಸಂಬಂಧಿಸಿದಂತೆ ನಾಗರಿಕರಿಗೆ ಸಿಹಿ ಸುದ್ದಿ ನೀಡಿದೆ.

ಇನ್ಮುಂದೆ ಇ-ಖಾತಾ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಹೊಸ ವ್ಯವಸ್ಥೆಯ ಪ್ರಕಾರ, ನಾಗರಿಕರು ತಮ್ಮ ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ಇ-ಖಾತಾ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಆಸ್ತಿ ತೆರಿಗೆ ಐಡಿ ಬಳಸಿ ಈ ಸೇವೆಯನ್ನು ಸುಲಭವಾಗಿ ಪಡೆಯುವ ವ್ಯವಸ್ಥೆಯನ್ನು ಜಿಬಿಎ ಜಾರಿಗೆ ತಂದಿದೆ.

ಕಳೆದ ಎರಡು ದಿನಗಳ ಹಿಂದೆ ಈ ಆನ್‌ಲೈನ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದ್ದು, ಸುಮಾರು 13 ಲಕ್ಷ ಇ-ಖಾತಾಗಳನ್ನು ತಕ್ಷಣವೇ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶ ಹೊಂದಿದೆ. ಇದರಿಂದ ಆಡಳಿತಾತ್ಮಕ ವಿಳಂಬ ಹಾಗೂ ಕಚೇರಿ ಅಡೆತಡೆಗಳನ್ನು ಕಡಿಮೆ ಮಾಡುವ ಗುರಿ ಇಡಲಾಗಿದೆ.

ಇ-ಖಾತಾ ಡೌನ್‌ಲೋಡ್ ಮಾಡುವ ವಿಧಾನ:

  1. https://bbmpeaasthi.karnataka.gov.in/ ವೆಬ್‌ಸೈಟ್‌ಗೆ ಭೇಟಿ ನೀಡಬೇಕು
  2. ಮೊಬೈಲ್ ಸಂಖ್ಯೆ ಮತ್ತು OTP ಮೂಲಕ ಲಾಗಿನ್ ಮಾಡಬೇಕು
  3. SAS ಅಪ್ಲಿಕೇಶನ್ ಅಥವಾ ಆಸ್ತಿ ತೆರಿಗೆ ಐಡಿ ನಮೂದಿಸಬೇಕು
  4. ತಕ್ಷಣವೇ ಇ-ಖಾತಾ ಡೌನ್‌ಲೋಡ್ ಮಾಡಿಕೊಳ್ಳಬಹುದು

ಜಿಬಿಎ ಪ್ರಕಾರ, ಈ ವ್ಯವಸ್ಥೆಯಿಂದ ಮಾಲೀಕರ ಹೆಸರನ್ನು ಹುಡುಕುವ ಸಂಕೀರ್ಣ ಪ್ರಕ್ರಿಯೆ ಕಡಿಮೆಯಾಗಲಿದೆ. ಯಾವುದೇ ಸಮಯದಲ್ಲೂ ಆನ್‌ಲೈನ್ ಮೂಲಕ ಸೇವೆ ಲಭ್ಯವಾಗಲಿದೆ.

ಅಲ್ಲದೆ, ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಅಥವಾ WhatsApp ಮೂಲಕ ಡೌನ್‌ಲೋಡ್ ಲಿಂಕ್ ಕಳುಹಿಸಲಾಗುತ್ತದೆ. ನಗರ ಪಾಲಿಕೆ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಇದೇ ವೇಳೆ ಅಧಿಕಾರಿಗಳು ಮಧ್ಯವರ್ತಿಗಳ ಸಹಾಯವನ್ನು ತಪ್ಪಿಸಿ, ನಾಗರಿಕರು ಕೇವಲ ಅಧಿಕೃತ ಆನ್‌ಲೈನ್ ವ್ಯವಸ್ಥೆಯನ್ನೇ ಬಳಸುವಂತೆ ಮನವಿ ಮಾಡಿದ್ದಾರೆ.

ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು! ಕೊಲೆ ಶಂಕೆ?

ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಗೌಡಹಳ್ಳಿಯಲ್ಲಿ ಮಹಿಳೆಯೊಬ್ಬರು ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಈ ಸಾವು ಕೇವಲ ಆಕಸ್ಮಿಕವೋ ಅಥವಾ ಹಿಂದೆ ಯಾವುದಾದರೂ ಸಂಚು ಇದ್ದಿರಬಹುದೋ ಎಂಬ ಅನುಮಾನಗಳು ಈಗ ಗಂಭೀರವಾಗಿವೆ.

ಮೃತರನ್ನು ಸುಜಾತ (30) ಎಂದು ಗುರುತಿಸಲಾಗಿದೆ. ತುಮಕೂರಿನ ಹೆಗ್ಗೆರೆ ನಿವಾಸಿಗಳಾದ ಪಾಂಡುರಂಗಯ್ಯ ಮತ್ತು ಭಾಗ್ಯಮ್ಮ ದಂಪತಿಯ ನಾಲ್ಕನೇ ಮಗಳಾದ ಸುಜಾತ, ಸುಮಾರು 10 ವರ್ಷಗಳ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿ ಚೇತನ್ ಅವರನ್ನು ವಿವಾಹವಾಗಿದ್ದರು.

ಪೊಲೀಸ್ ಮೂಲಗಳ ಪ್ರಕಾರ, ಇಂದು ಬೆಳಗ್ಗೆ 7:30ರ ಸುಮಾರಿಗೆ ವಾಷಿಂಗ್ ಮೆಷಿನ್ ಬಳಸುವಾಗ ಸುಜಾತ ಅವರಿಗೆ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ತಕ್ಷಣ ಅವರನ್ನು ವಿಪಿ ಮಾಗ್ನಸ್ ಆಸ್ಪತ್ರೆಗೆ ಕರೆದೊಯ್ಯಲಾದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಆದರೆ ಈ ಸಾವು ಬಗ್ಗೆ ಮೃತರ ಪೋಷಕರು ಗಂಭೀರ ಶಂಕೆ ವ್ಯಕ್ತಪಡಿಸಿದ್ದಾರೆ. ಮಗಳ ಸಾವಿನ ಹಿಂದೆ ಅಳಿಯ ಚೇತನ್ ಕೈವಾಡ ಇರಬಹುದೆಂದು ಅವರು ಆರೋಪಿಸಿದ್ದಾರೆ. ಮದುವೆಯಾದ ನಂತರ ದಂಪತಿಗಳ ನಡುವೆ ನಿರಂತರ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದ್ದು, ಸುಜಾತ ಒಂದು ತಿಂಗಳ ಹಿಂದೆ ತವರು ಮನೆಗೆ ತೆರಳಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.

ಇದಾದ ನಂತರ ಚೇತನ್ ಹಾಗೂ ಅವರ ತಾಯಿ ಸುಜಾತ ಅವರನ್ನು ಮನವೊಲಿಸಿ ಕೇವಲ ಒಂದು ವಾರದ ಹಿಂದೆ ಗೌಡಹಳ್ಳಿಗೆ ಕರೆತಂದಿದ್ದರು ಎಂದು ಹೇಳಲಾಗುತ್ತಿದೆ. ಮನೆಗೆ ಬಂದ ಕೆಲವೇ ದಿನಗಳಲ್ಲಿ ಇಂತಹ ಘಟನೆ ಸಂಭವಿಸಿರುವುದು ಕುಟುಂಬದಲ್ಲಿ ಅನುಮಾನ ಹೆಚ್ಚಿಸಿದೆ.

ಸದ್ಯ ಮೃತದೇಹವನ್ನು ಹೆಚ್ಚಿನ ತನಿಖೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವರದಿ ಬಂದ ನಂತರವೇ ಇದು ಆಕಸ್ಮಿಕ ಸಾವು ಅಥವಾ ಬೇರೆ ಕಾರಣವೋ ಎಂಬುದು ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.

ಉಗ್ರರಾದ ಉಮರ್ ಖಾಲಿದ್, ಶಾರ್ಜಿಲ್ ಇಮಾಮ್ ಕುರಿತ ಪುಸ್ತಕ ಬಿಡುಗಡೆಗೆ ವಿರೋಧ: ಎನ್ ರವಿಕುಮಾರ್

ಬೆಂಗಳೂರು: ದೆಹಲಿ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಬಂಧಿತನಾಗಿರುವ ಉಮರ್ ಖಾಲಿದ್ ಹಾಗೂ ಶಾರ್ಜಿಲ್ ಇಮಾಮ್ ಕುರಿತ ಪುಸ್ತಕ ಬಿಡುಗಡೆಗೆ ಭಾರತೀಯ ಜನತಾ ಪಾರ್ಟಿ ವಿರೋಧವಿದೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಇದಕ್ಕೆ ಅವಕಾಶ ಕೊಡಬಾರದು.

ಒಂದು ವೇಳೆ ಅವಕಾಶ ನೀಡಿದರೆ ಬಿಜೆಪಿ ಖಂಡಿಸಲಿದೆ ಎಂದು ವಿಧಾನ ಪರಿಷತ್ತಿನಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ಹೇಳಿದ್ದಾರೆ. ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕರ ಕುರಿತು ಪುಸ್ತಕ ಬಿಡುಗಡೆಗೆ ಸಿದ್ಧತೆ ನಡೆದಿದೆ.

2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆ ಸಂಬಂಧ  ಸುಪ್ರೀಂ ಕೋರ್ಟ್ ಇವರಿಬ್ಬರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಶಾರ್ಜೀಲ್ ಇಮಾಮ್ ನನ್ನು ಸಿಎಎ ಮತ್ತು ಎನ್‍ಆರ್‍ಸಿ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಮಾಡಿದ ಭಾಷಣಗಳಿಗಾಗಿ ಬಂಧಿಸಲಾಗಿದೆ. ಎನ್ ಆರ್‍ಸಿ ಮತ್ತು ಸಿಎಎ ವಿರುದ್ಧ ಹೋರಾಟದ ಸಂದರ್ಭ ಬಾಂಬ್ ಸ್ಫೋಟದಲ್ಲಿ

53 ಜನರ ಹತ್ಯೆಯಾಗಿತ್ತು. ಸುಮಾರು 700 ಜನರು ಗಾಯಗೊಂಡಿದ್ದರು. ಈಗ ಇವರ ಬಗ್ಗೆಯೇ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಇವರಿಬ್ಬರ ಜೊತೆಗೆ 18 ಜನರನ್ನು ಬಂಧಿಸಲಾಗಿತ್ತು. 11 ಜನರಿಗೆ ಜಾಮೀನು ಸಿಕ್ಕಿದೆ. ಇನ್ನೂ 7 ಆರೋಪಿಗಳಿಗೆ ಜಾಮೀನು ಸಿಕ್ಕಿಲ್ಲ. ಇಂತಹ ಭಯೋತ್ಪಾದಕ ಹಾಗೂ ದೇಶದ್ರೋಹಿಗಳನ್ನು ಕುರಿತ ಪುಸ್ತಕ ಬಿಡುಗಡೆ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.

ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್‍ನಲ್ಲಿ ನಡೆಯುತ್ತಿರುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಕಾಶ್ ರೈ, ಇತಿಹಾಸಕಾರರಾದ ರಾಮಚಂದ್ರಗುಹಾ ಹಾಗೂ ಜಾನಕಿ ನಾಯರ್ ಅವರು ಭಾಗವಹಿಸುತ್ತಿದ್ದಾರೆ. ಇದಕ್ಕೆ ಯಾವುದೇ ರೀತಿ ಅವಕಾಶ ಸಿಗಬಾರದು. ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹರಿಹರ ಪಂಚಮಸಾಲಿ ಪೀಠದಲ್ಲಿ ಹೈಡ್ರಾಮಾ: ಸ್ವಾಮೀಜಿ ಬೆಂಬಲಿಗರಿಂದ ಟ್ರಸ್ಟಿ ಬೆಂಬಲಿಗರ ಮೇಲೆ ಹಲ್ಲೆ

ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ಆವರಣದಲ್ಲಿ ಲೆಕ್ಕ ಮಂಡನೆ ಸಂದರ್ಭದಲ್ಲಿ ಭಾರೀ ಗಲಾಟೆ ಉಂಟಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಪೀಠದ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಲೆಕ್ಕ ಮಂಡಿಸುತ್ತಿದ್ದ ವೇಳೆ, ಸ್ವಾಮೀಜಿ ಬೆಂಬಲಿಗರು ಮತ್ತು ಟ್ರಸ್ಟ್ ಬೆಂಬಲಿಗರ ನಡುವೆ ವಾಗ್ವಾದ ಶುರುವಾಗಿದೆ. ಈ ವೇಳೆ ಪರಸ್ಪರ ನಿಂದನೆ ನಡೆಯುತ್ತಿದ್ದಂತೆಯೇ ಗಲಾಟೆ ತೀವ್ರಗೊಂಡು, ಸ್ವಾಮೀಜಿ ಬೆಂಬಲಿಗರು ವಿಜಯನಗರ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಶಿವನಗೌಡ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಘಟನೆ ತೀವ್ರವಾಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಗಲಾಟೆ, ಧಿಕ್ಕಾರ ಘೋಷಣೆಗಳ ನಡುವೆಯೇ ಉಮಾಪತಿ ಲೆಕ್ಕ ಮಂಡನೆ ಮುಂದುವರಿಸಿದರು.

2008ರಿಂದ 2026ರವರೆಗಿನ ಲೆಕ್ಕಾಚಾರವನ್ನು ಬಹಿರಂಗಪಡಿಸಿದ ಅವರು, ಭಕ್ತರಿಂದ ಬಂದ ಕಾಣಿಕೆ ಹಾಗೂ ಸರ್ಕಾರದ ಅನುದಾನ ಸೇರಿ ಒಟ್ಟು 27 ಕೋಟಿ 61 ಲಕ್ಷ 51 ಸಾವಿರ 518 ರೂಪಾಯಿ ಜಮಾ ಆಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಮಠದ ಅಭಿವೃದ್ಧಿ ಹಾದಿ ಕುರಿತು ಮಾತನಾಡಿದ ಉಮಾಪತಿ, “ಮಾಜಿ ಸಚಿವ ದಿವಂಗತ ಶಿವಪ್ಪ ಅವರು ಪಡೆಯಲು ಯತ್ನಿಸಿದ್ದ ಜಮೀನನ್ನು ಮಠವೇ ಹಣ ನೀಡಿ ಖರೀದಿಸಿದೆ. ಆದರೆ ಅದನ್ನು ದಾನವಾಗಿ ನೀಡಿದ್ದೇವೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ,” ಎಂದು ಸ್ಪಷ್ಟಪಡಿಸಿದರು.

ಲೆಕ್ಕ ಕೇಳುವ ಅಭಿಯಾನ ಕುರಿತು ಕಿಡಿಕಾರಿದ ಅವರು, “ಇಷ್ಟು ವರ್ಷಗಳ ಕಾಲ ಲೆಕ್ಕ ಕೇಳದವರು ಈಗ ಕೇಳುತ್ತಿದ್ದಾರೆ. ನಾವು ಪ್ರತಿವರ್ಷವೂ ಲೆಕ್ಕ ನೀಡುತ್ತಿದ್ದೇವೆ. ಇದು ಸ್ವಾಮೀಜಿಗಳ ತಪ್ಪನ್ನು ಮರೆಮಾಚಿಸುವ ಪ್ರಯತ್ನ,” ಎಂದು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ನಿಜವಾದ ತನಿಖೆ ಮಾಡಿ, ಅಧಿಕಾರ ದುರ್ಬಳಕೆ ಬೇಡ: ಪೊಲೀಸರ ನಡೆಗೆ ಹೈಕೋರ್ಟ್ ತೀವ್ರ ಆಕ್ಷೇಪ

ಬೆಂಗಳೂರು: ರಾಜ್ಯ ಪೊಲೀಸರ ಕಾರ್ಯವೈಖರಿಯ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “ನಿಜವಾದ ಅಪರಾಧಗಳ ತನಿಖೆಗಿಂತ ಜನರನ್ನು ಅಲೆದಾಡಿಸುವ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಕಿಡಿಕಾರಿದೆ.

ಚನ್ನಪಟ್ಟಣದ ಎಂ.ಕೆ. ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024ರಲ್ಲಿ ಎರಡು ಹಸುಗಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ, ಎರಡು ವರ್ಷಗಳ ಬಳಿಕ 2026ರಲ್ಲಿ ಪೊಲೀಸರು ದೂರುದಾರರ ನೆರೆಮನೆಯವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಈ ಎಫ್‌ಐಆರ್ ರದ್ದುಪಡಿಸುವಂತೆ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಹಸುಗಳು ಇನ್ನೂ ಪತ್ತೆಯಾಗಿಲ್ಲವೆಂಬ ಕಾರಣಕ್ಕೆ ಇಡೀ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿದ ನ್ಯಾಯಾಲಯ, ಸಾಮಾನ್ಯವಾಗಿ ಜನರು ದೂರು ದಾಖಲಿಸಲು ಪೊಲೀಸ್ ಠಾಣೆಗೆ ಅನೇಕ ಬಾರಿ ಸುತ್ತಾಡಬೇಕಾಗುತ್ತದೆ. ಆದರೂ ಎಫ್‌ಐಆರ್ ದಾಖಲಿಸಲು ಪೊಲೀಸರು ಹಿಂಜರಿಯುತ್ತಾರೆ. ಆದರೆ ಎರಡು ವರ್ಷ ಹಳೆಯ ಪ್ರಕರಣದಲ್ಲಿ ತಕ್ಷಣವೇ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನಿನ ದುರ್ಬಳಕೆ ಎಂದು ತರಾಟೆಗೆ ತೆಗೆದುಕೊಂಡಿತು.

ರಾಜ್ಯ ಸರ್ಕಾರ ಹಾಗೂ ಪೊಲೀಸರು ಹಸುಗಳ ವಿಚಾರದಲ್ಲಿ ಮಾತ್ರ ಸೀಮಿತವಾಗದೇ, ಸಮಾಜದಲ್ಲಿ ನಡೆಯುತ್ತಿರುವ ಗಂಭೀರ ಅಪರಾಧಗಳತ್ತ ಗಮನ ಹರಿಸಬೇಕು. ಜನರನ್ನು ಅನಾವಶ್ಯಕವಾಗಿ ಅಲೆದಾಡಿಸುವ ಪ್ರವೃತ್ತಿ ನಿಲ್ಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದ ವಿರುದ್ಧ ನಡೆಯುತ್ತಿದ್ದ ತನಿಖಾ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಪೊಲೀಸರ ಅಧಿಕಾರ ದುರ್ಬಳಕೆಯ ಉದಾಹರಣೆಯಾಗಿ ಈ ಪ್ರಕರಣವನ್ನು ಉಲ್ಲೇಖಿಸಿದೆ. ಇಂತಹ ನಡೆಗಳನ್ನು ಸಹಿಸಲಾಗುವುದಿಲ್ಲ ಎಂದು ನ್ಯಾಯಾಲಯ ಎಚ್ಚರಿಸಿದೆ.

ಮೇ ಎರಡನೇ ವಾರದಲ್ಲಿ ಸಿಹಿ ಸುದ್ದಿ ಸಿಗುವ ಭರವಸೆ ಹೈಕಮಾಂಡ್ ನೀಡಿದೆ: ಅಶೋಕ್ ಪಟ್ಟಣ್

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಕುರಿತು ಮೇ ಎರಡನೇ ವಾರದಲ್ಲಿ ‘ಸಿಹಿ ಸುದ್ದಿ’ ಸಿಗುವ ಭರವಸೆ ಹೈಕಮಾಂಡ್ ನೀಡಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಹಾಗೂ ಶಾಸಕ ಅಶೋಕ್ ಪಟ್ಟಣ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಪ್ರತಿನಿಧಿ ಸುರ್ಜೇವಾಲ ಅವರು ಮೇ ಎರಡನೇ ವಾರದಲ್ಲಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆ ನಿರೀಕ್ಷೆಯಲ್ಲೇ ನಾವು ಇದ್ದೇವೆ ಎಂದು ಹೇಳಿದರು.

ಮೇ 4ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬರುವುದಿದ್ದು, ಅದರ ನಂತರ ಸುಮಾರು 40 ಮಂದಿ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಯಾಗಿ ಮತ್ತೊಮ್ಮೆ ಮನವಿ ಮಾಡುವ ಯೋಜನೆ ಇದೆ ಎಂದು ತಿಳಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಸಿಹಿ ಸುದ್ದಿ’ ನೀಡುವುದೇ ಅಥವಾ ಇಲ್ಲವೇ ಎಂಬುದು ಹೈಕಮಾಂಡ್ ನಿರ್ಧಾರವಾಗಿದ್ದು, ಅವರಿಗೆ ಮುಂಗಡ ಶುಭಾಶಯಗಳನ್ನು ತಿಳಿಸುತ್ತೇನೆ. ಸಂಪುಟ ಪುನರ್‌ರಚನೆ ಆಗಲೇಬೇಕು ಎಂಬುದು ನಮ್ಮ ಆಗ್ರಹ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ವಿಚಾರದಲ್ಲಿ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವೆಂಟಿಲೇಟರ್‌ನಲ್ಲಿ ಇರುವ ವ್ಯಕ್ತಿ ಬಗ್ಗೆ ಈ ರೀತಿಯ ಹೇಳಿಕೆ ನೀಡುವುದು ಮಾನವೀಯತೆಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು.

ಶಿಕ್ಷಕರಿಗೆ ಸಿಹಿ ಸುದ್ದಿ: ನೇಮಕಾತಿ ನಾಲ್ಕೈದು ತಿಂಗಳಲ್ಲಿ ಮುಗಿಯಲಿದೆ – ಮಧು ಬಂಗಾರಪ್ಪ ಭರವಸೆ

ಶಿವಮೊಗ್ಗ: ರಾಜ್ಯದಲ್ಲಿ ಶಿಕ್ಷಕರ ನೇಮಕಾತಿಯನ್ನು ನಾಲ್ಕೈದು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಘೋಷಣೆಯಾದ ಬಳಿಕ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಥಮ ಸಭೆ ನಡೆಸಲಾಗಿದೆ ಎಂದು ಹೇಳಿದರು. ಎರಡು ದಿನಗಳ ರಜೆಯ ಬಳಿಕ ಈಗ ಪ್ರಕ್ರಿಯೆ ಮತ್ತೆ ಆರಂಭಗೊಂಡಿದ್ದು, ಒಳ ಮೀಸಲಾತಿ ಸಮಸ್ಯೆ ಪರಿಹಾರಗೊಂಡಿರುವುದರಿಂದ ನೇಮಕಾತಿಗೆ ಅಡಚಣೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಶಿಕ್ಷಕರ ನೇಮಕಾತಿಗಾಗಿ ಸಿಇಟಿ ಪರೀಕ್ಷೆಯನ್ನು ಸಾಧ್ಯವಾದಷ್ಟು ಬೇಗ ನಡೆಸಲಾಗುವುದು. ಕಳೆದ ವರ್ಷವೇ ಆರು ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶವಿತ್ತು. ಆದರೆ ಈಗ ಒಳ ಮೀಸಲಾತಿ ಸಮಸ್ಯೆ ನಿವಾರಣೆಯಾಗಿರುವ ಹಿನ್ನೆಲೆಯಲ್ಲಿ ನಾಲ್ಕೈದು ತಿಂಗಳೊಳಗೆ ನೇಮಕಾತಿ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಜೂನ್ ತಿಂಗಳಲ್ಲೇ ನೇಮಕಾತಿ ಪ್ರಾರಂಭಿಸುವ ಯೋಚನೆ ಇತ್ತು, ನಂತರ ಜುಲೈಗೆ ಮುಂದೂಡಲಾಯಿತು. ಆದರೆ ಅಲ್ಪ ಅವಧಿಯಲ್ಲಿ ಎಲ್ಲವನ್ನು ಮುಗಿಸುವುದು ಸಾಧ್ಯವಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಬೇಗ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ನಡೆಯಬೇಕಿರುವುದು ಶಿಕ್ಷಣ ಇಲಾಖೆಯಲ್ಲೇ ಆಗಿದ್ದು, ಅಭ್ಯರ್ಥಿಗಳ ಕಷ್ಟ ನಮಗೆ ತಿಳಿದಿದೆ. ಕೆಲವರು ಸರ್ಕಾರದ ಬಳಿ ಹಣದ ಕೊರತೆ ಇದೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಅವರು ಟೀಕಿಸಿದರು.

ಇನ್ನು, ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಕೋರ್ಟ್‌ನಲ್ಲಿ ವ್ಯಾಜ್ಯಗಳು ಇರುವುದರಿಂದ ಪ್ರಕ್ರಿಯೆ ವಿಳಂಬವಾಗುತ್ತಿದೆ. ಟಿಇಟಿ ಪರೀಕ್ಷೆ ಈಗಾಗಲೇ ಮುಗಿದಿದ್ದು, ಮುಂದಿನ ಹಂತವಾಗಿ ಸಿಇಟಿ ಪರೀಕ್ಷೆ ನಡೆಸಲಾಗುತ್ತದೆ. ಒಳ ಮೀಸಲಾತಿ ಘೋಷಣೆಯಾದ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ಇದೀಗ ಸುಗಮವಾಗಿದೆ ಎಂದು ಸಚಿವರು ವಿವರಿಸಿದರು.

ಡಿ. ಸುಧಾಕರ್ ಆರೋಗ್ಯ ಸ್ಥಿತಿ ಸ್ಥಿರ: ಹೆಲ್ತ್ ಅಪ್ಡೇಟ್ ನೀಡಿದ ಗೃಹ ಸಚಿವ ಪರಮೇಶ್ವರ್

ಆನೇಕಲ್: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಕಿಮ್ಸ್ ಆಸ್ಪತ್ರೆಯಲ್ಲಿ ಸಚಿವ ಡಿ. ಸುಧಾಕರ್ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಶ್ವಾಸಕೋಶದ ಸೋಂಕಿನ ಹಿನ್ನೆಲೆಯಲ್ಲಿ ಅವರಿಗೆ ವೆಂಟಿಲೇಟರ್ ಹಾಗೂ ಎಕ್ಮೋ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.

ಸಚಿವರ ಆರೋಗ್ಯ ವಿಚಾರಿಸಲು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಭಾನುವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಸ್ಪತ್ರೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದಿದ್ದರು. ಇಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹಸಚಿವ ಪರಮೇಶ್ವರ್, ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿ ಸಹಜವಾಗಿದ್ದು, ವೈದ್ಯರು ಪಾಸಿಟಿವ್ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಬ್ರೈನ್ ಕಾರ್ಯಾಚರಣೆ ಸಾಮಾನ್ಯ ಸ್ಥಿತಿಗೆ ಬರಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ. ಅವರಿಗೆ ಇನ್ನೂ ಪ್ರಜ್ಞೆ ಬಂದಿಲ್ಲದಿದ್ದರೂ ವೈದ್ಯರು ಗಮನವಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಶೀಘ್ರದಲ್ಲೇ ಗುಣಮುಖರಾಗುವ ವಿಶ್ವಾಸವಿದೆ ಎಂದು ಹೇಳಿದರು.

ಇದೇ ವೇಳೆ, ಸಚಿವರ ಆರೋಗ್ಯ ವಿಚಾರವನ್ನು ಸರ್ಕಾರ ಮುಚ್ಚಿಡುತ್ತಿದೆ ಎಂಬ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಈ ವಿಷಯದಲ್ಲಿ ಯಾವುದೇ ಮಾಹಿತಿ ಮುಚ್ಚಿಡಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಕುಮಾರಸ್ವಾಮಿ ಅವರಿಗೆ ತಿಳಿದಿರುವುದನ್ನು ಅವರು ಹೇಳುತ್ತಿದ್ದಾರೆ, ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

3 ದಿನಗಳಲ್ಲಿ ಒಪ್ಪಿಗೆ ಇಲ್ಲದಿದ್ದರೆ ತೈಲ ಪೈಪ್‌ ಲೈನ್‌ ಸ್ಫೋಟ: ಇರಾನಿಗೆ ಟ್ರಂಪ್ ಕಠಿಣ ಎಚ್ಚರಿಕೆ

0

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದು, ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ಮೂರು ದಿನಗಳ ಗಡುವು ನೀಡಿರುವುದಾಗಿ ತಿಳಿಸಿದ್ದಾರೆ.

ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ಇರಾನ್ ತೈಲ ರಫ್ತು ಮಾಡಲು ಸಾಧ್ಯವಾಗದ ಸ್ಥಿತಿ ಮುಂದುವರಿದರೆ ತೈಲ ಪೈಪ್ಲೈನ್‌ಗಳಲ್ಲಿ ಒತ್ತಡ ಹೆಚ್ಚಾಗಿ ಅವು ಒಳಗಿನಿಂದಲೇ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಅಮೆರಿಕ ನೌಕಾಪಡೆಯ ದಿಗ್ಬಂಧನದ ಪರಿಣಾಮ ಇರಾನ್ ತನ್ನ ತೈಲವನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ತೈಲ ಹರಿವು ನಿಂತುಬಿಟ್ಟರೆ ಪೈಪ್ಲೈನ್‌ಗಳಲ್ಲಿ ಅತಿಯಾದ ಒತ್ತಡ ಉಂಟಾಗಿ ಅವು ತಾಂತ್ರಿಕವಾಗಿ ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು ಟ್ರಂಪ್ ವಿವರಿಸಿದರು.

ಇಂತಹ ಹಾನಿ ಸಂಭವಿಸಿದರೆ ಪೈಪ್ಲೈನ್‌ಗಳನ್ನು ಮರುಸ್ಥಾಪಿಸುವುದು ಕಷ್ಟವಾಗುತ್ತದೆ. ಇದರಿಂದ ಇರಾನ್ ತನ್ನ ಒಟ್ಟು ತೈಲ ಉತ್ಪಾದನಾ ಸಾಮರ್ಥ್ಯದ ಶೇ. 50 ರಷ್ಟು ಭಾಗವನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ಪಾಕಿಸ್ತಾನದ ಮೂಲಕ ಹೊಸ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಅಮೆರಿಕ ಆರ್ಥಿಕ ದಿಗ್ಬಂಧನವನ್ನು ಹಿಂತೆಗೆದುಕೊಂಡರೆ, ಜಾಗತಿಕ ತೈಲ ಸಾಗಣೆಗೆ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದಾಗಿ ಇರಾನ್ ಸೂಚಿಸಿದೆ.

ಆದರೆ ಅಮೆರಿಕದ ನಿಯಮಗಳಿಗೆ ಇರಾನ್ ಒಪ್ಪದಿದ್ದರೆ ಯಾವುದೇ ಪ್ರಸ್ತಾವನೆಗಳು ಸ್ವೀಕಾರಾರ್ಹವಾಗುವುದಿಲ್ಲ ಎಂಬ ಕಠಿಣ ನಿಲುವು ಟ್ರಂಪ್ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, ಇರಾನ್ ತನ್ನ ಯುರೇನಿಯಂ ಪುಷ್ಟೀಕರಣ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ತನ್ನ ಬಳಿ ಇರುವ ಶೇ. 60ರಷ್ಟು ಪುಷ್ಟೀಕರಿಸಿದ ಯುರೇನಿಯಂ ಸಂಗ್ರಹವನ್ನು ಅಮೆರಿಕಕ್ಕೆ ಅಥವಾ ಮೂರನೇ ದೇಶಕ್ಕೆ ಹಸ್ತಾಂತರಿಸಬೇಕು ಎಂಬ ಬೇಡಿಕೆಯನ್ನು ಅಮೆರಿಕ ಮುಂದಿರಿಸಿದೆ.

error: Content is protected !!