ಬೆಂಗಳೂರು: ಮುಖ್ಯಮಂತ್ರಿಗಳು ದೇಶದ ಪ್ರಧಾನಮಂತ್ರಿಗಳ ವಿರುದ್ಧ ಹೇಡಿ ಎಂಬ ಕೆಟ್ಟ ಪದ ಬಳಸಿದ್ದು ಸರಿಯೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ. ಇದನ್ನು ಖಂಡತುಂಡವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಮುಖ್ಯಮಂತ್ರಿಗಳಿಗೆ ಪಶ್ಚಾತ್ತಾಪ ಆಗಿದ್ದರೆ ಅವರು ತಕ್ಷಣ ದೇಶದ ಕ್ಷಮೆ ಕೇಳಬೇಕು. ಮೋದಿಜೀ ಅವರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿಯವರು ತಾಳ್ಮೆ ಕಳಕೊಂಡು ಹೀಗೆ ಮಾತನಾಡುತ್ತಿದ್ದಾರಾ? ರಾಹುಲ್ ಗಾಂಧಿಯವರ ಓಲೈಕೆಗಾಗಿ ಹೀಗೆ ಮಾತನಾಡುತ್ತಾರಾ? ಮುಖ್ಯಮಂತ್ರಿ ಪದವಿಯಲ್ಲಿ ಇನ್ನೊಂದಷ್ಟು ದಿನ ಉಳಕೊಳ್ಳಲು ಹೀಗೆ ಮಾತಾಡಿದ್ದಾರಾ? ಅಥವಾ ತಲೆಗಿಲೆ ಕೆಟ್ಟು ಇಂಥ ಪದ ಬಳಸುತ್ತಿದ್ದಾರಾ? ಎಂದು ಕೇಳಿದರು. ಅವರಿಗೆ ಪರೀಕ್ಷೆ ಮಾಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರಿಂದ ಈಚೆಗೆ ಅಮೃತವನ್ನು ಸವಿಯಬೇಕಾದ ನಾಲಿಗೆಯಲ್ಲಿ ಹೇಸಿಗೆಯ ಮಾತುಗಳು ಬರುತ್ತಿರುವುದು ವಿಪರ್ಯಾಸ. ನಾಲಿಗೆಗೆ ಒಂದು ಬೆಲೆ ಇದೆ. ಅದಕ್ಕೊಂದು ಗೌರವ ಇದೆ. ನಾಲಿಗೆ ಒಂದು ಜೀವನದ ಉತ್ತಮ ಮಟ್ಟ ಇಲ್ಲವೇ ಕೆಟ್ಟ ಪರಂಪರೆಯ ಸೃಷ್ಟಿಗೆ ಕಾರಣವಾಗುತ್ತದೆ ಎಂದು ವಿಶ್ಲೇಷಿಸಿದರು.
ಪ್ರಿಯಾಂಕ್ ಖರ್ಗೆಯವರು ಇದಕ್ಕೂ ಮುಂಚೆ ಇದೇರೀತಿಯ ಪದ ಬಳಸಿದ್ದರು. ಸರಿಸಮಾನ ಪದವಿಯಲ್ಲಿ ಇರುವವರು ಕೆಲವು ಸಂದರ್ಭದಲ್ಲಿ ಟೀಕೆ ಮಾಡುವಾಗ ಲಘುವಾಗಿ ಮಾತನಾಡಿದರೂ ಅವರವರ ಎತ್ತರಕ್ಕೆ ಸರಿ ಹೋಗಬಹುದು. ಆದರೆ, ಒಬ್ಬ ಯುವಕ, ಸಣ್ಣ ವ್ಯಕ್ತಿ ದೇಶದ ಪ್ರಧಾನಿಯನ್ನು ಇಷ್ಟೊಂದು ಕಠಿಣ ಪದಗಳಿಂದ ನಿಂದಿಸಿದರೆ ಪ್ರಧಾನಿಯನ್ನು ಗೌರವಿಸುವ ಈ ದೇಶವಾಸಿಗಳು ಅವರನ್ನು ಬಹುಶಃ ಕುನ್ನಿಗೆ ಹೋಲಿಸುತ್ತಾರೆ. ನಾನು ಆ ಥರ ಹೋಲಿಸುವುದಿಲ್ಲ ಎಂದು ನುಡಿದರು.

