ಮಂಡ್ಯ: ರಾಜಕೀಯ ತಾಪಮಾನ ಏರಿಕೆಯಾಗಿದೆ. ಕಾಂಗ್ರೆಸ್ ಶಾಸಕ ಕದಲೂರು ಉದಯ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸ್ಫೋಟಕ ಆರೋಪ ಮಾಡಿದ್ದಾರೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲು ಸೇರಲು ರಾಜಕೀಯ ಷಡ್ಯಂತ್ರವೇ ಕಾರಣ ಎಂದು ಉದಯ್ ನೇರ ಆರೋಪ ಹೊರಿಸಿದ್ದಾರೆ.
ಮದ್ದೂರಿನಲ್ಲಿ ಮಾತನಾಡಿದ ಅವರು, “ತಮ್ಮ ಮಗ ಗೆದ್ದಿಲ್ಲ ಎಂಬ ಕಾರಣಕ್ಕೆ ಅಣ್ಣನ ಮಗನನ್ನೇ ಜೈಲಿಗೆ ಹಾಕಿಸಿದ್ರು. ಅಣ್ಣನ ಮಗನನ್ನೇ ಸಹಿಸಿಕೊಳ್ಳದವರು ನಮ್ಮನ್ನು ಸಹಿಸಿಕೊಳ್ತಾರಾ?” ಎಂದು ಪ್ರಶ್ನಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮನಸ್ಸು ಮಾಡಿದ್ದರೆ ಪರಿಸ್ಥಿತಿ ಬೇರೆ ಆಗಬಹುದಿತ್ತು ಎಂದೂ ಹೇಳಿದ್ದಾರೆ.
ಅಭಿವೃದ್ಧಿ ವಿಚಾರದಲ್ಲಿ ಕುಮಾರಸ್ವಾಮಿಗೆ ನೇರ ಸವಾಲು ಹಾಕಿದ ಉದಯ್, “ತಾಕತ್ತಿದ್ದರೆ ಮಂಡ್ಯಕ್ಕೆ ಕೈಗಾರಿಕೆ ತರಲಿ. ನಾನು 60-70 ಎಕರೆ ಜಮೀನು ಕೊಡ್ತೀನಿ. ಸರ್ಕಾರದ ಭಾಗವಾಗಿ ಜಾಗ ಕೊಡ್ತೇವೆ. ಮೊದಲು ಯಾವ ಕೈಗಾರಿಕೆ ತರುತ್ತಾರೆ ಅಂತ ಹೇಳಲಿ” ಎಂದು ಕಿಡಿಕಾರಿದ್ದಾರೆ.
ರೈತರ ಸಂಕಷ್ಟ ಅರಿತು ಕೆಲಸ ಮಾಡಬೇಕು, ಟಿವಿ ಭಾಷಣಗಳಿಂದ ಅಭಿವೃದ್ಧಿ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.

