Home Blog

ಒಬ್ಬರ ಹೆಸರಲ್ಲಿ 9ಕ್ಕಿಂತ ಹೆಚ್ಚು ಸಿಮ್ ಇರೋದಿಲ್ಲ! ಹೊಸ ನಿಯಮದಲ್ಲಿ ರಿಯಲ್ ಟೈಮ್ ವೆರಿಫಿಕೇಷನ್ ಕಡ್ಡಾಯ

0

ನವದೆಹಲಿ: ಅಹಮದಾಬಾದ್‌ನಲ್ಲಿ ನಡೆದ ₹1.5 ಕೋಟಿ ಮೊತ್ತದ ‘ಬಾಸ್ ಸ್ಕ್ಯಾಮ್’ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರೀ ಸೈಬರ್ ಅಪರಾಧ ಜಾಲವೊಂದು ಪತ್ತೆಯಾಗಿದೆ. ಸೈಬರ್ ಅಪರಾಧಗಳಿಗೆ ಬಳಸಲಾಗುತ್ತಿದ್ದ ಸುಮಾರು 4,500 ಸಿಮ್ ಕಾರ್ಡ್‌ಗಳನ್ನು ಪೊಲೀಸರು ಪತ್ತೆಹಚ್ಚಿದ್ದು, ಈ ಜಾಲಕ್ಕೆ ಚೀನಾ ಮತ್ತು ಪಾಕಿಸ್ತಾನದೊಂದಿಗೆ ಸಂಪರ್ಕವಿರುವ ಶಂಕೆ ವ್ಯಕ್ತವಾಗಿದೆ.

ಈ ಬೆನ್ನಲ್ಲೇ ದೇಶದಾದ್ಯಂತ ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ. ಸೈಬರ್ ವಂಚನೆ ತಡೆಯುವ ಸಲುವಾಗಿ ಹೊಸ ಸಿಮ್ ಕಾರ್ಡ್‌ಗಳ ವಿತರಣಾ ಪ್ರಕ್ರಿಯೆಯನ್ನು ಬಿಗಿಗೊಳಿಸಿರುವ ಕೇಂದ್ರ, ನಕಲಿ ಸಿಮ್‌ಗಳು, ಸೈಬರ್ ವಂಚನೆ ಹಾಗೂ ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸಿಮ್ ವಿತರಿಸುವ ಮುನ್ನ ಗ್ರಾಹಕರ ಮಾಹಿತಿಯನ್ನು ರಿಯಲ್‌ಟೈಮ್‌ನಲ್ಲಿ ಪರಿಶೀಲಿಸುವುದನ್ನು ಕಡ್ಡಾಯಗೊಳಿಸಿದೆ.

ಟೆಲಿಕಾಂ ಕಂಪನಿಗಳು ಗ್ರಾಹಕರ ವಿವರಗಳನ್ನು ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ ಮೂಲಕ ಪರಿಶೀಲಿಸಬೇಕಿದ್ದು, ಅನುಮಾನಾಸ್ಪದ ಅಥವಾ ನಕಲಿ ಗುರುತಿನ ದಾಖಲೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಹೊಸ ಸಿಮ್ ಸಂಪರ್ಕ ನೀಡುವುದನ್ನು ತಡೆಯಲಾಗುತ್ತದೆ. ಇದಲ್ಲದೆ, ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು ನೋಂದಣಿಯಾಗಿವೆ ಎಂಬುದನ್ನು ಸರ್ಕಾರದ ಮಟ್ಟದಲ್ಲಿ ಟ್ರ್ಯಾಕ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಗರಿಷ್ಠ 9 ಸಿಮ್ ಕಾರ್ಡ್‌ಗಳನ್ನು ಹೊಂದಲು ಅವಕಾಶವಿದ್ದು, ಜಮ್ಮು-ಕಾಶ್ಮೀರ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಈ ಮಿತಿ ಗರಿಷ್ಠ 6 ಸಿಮ್ ಕಾರ್ಡ್‌ಗಳಿಗೆ ಸೀಮಿತವಾಗಿರಲಿದೆ.

ನಕಲಿ ಗುರುತಿನ ಆಧಾರದ ಮೇಲೆ ಸಿಮ್ ಕಾರ್ಡ್ ಪಡೆಯುವುದು, ಸೈಬರ್ ವಂಚನೆ ನಡೆಸುವುದು ಹಾಗೂ ಡಿಜಿಟಲ್ ಅರೆಸ್ಟ್‌ನಂತಹ ವಂಚನೆಗಳಿಗೆ ಬಳಸಲಾಗುವ ನಕಲಿ ಸಂಪರ್ಕಗಳನ್ನು ನಿಯಂತ್ರಿಸುವುದೇ ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.

ಹೊಸ ಸಿಮ್ ಕಾರ್ಡ್ ಖರೀದಿಗೆ ಟಫ್ ರೂಲ್ಸ್:

  • ಹೊಸ ಸಿಮ್ ಕಾರ್ಡ್ ನೀಡುವ ಮೊದಲು ರಿಯಲ್‌ಟೈಮ್ ಪರಿಶೀಲನೆ ಕಡ್ಡಾಯ
  • ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ ಮೂಲಕ ಗ್ರಾಹಕರ ವಿವರ ಪರಿಶೀಲನೆ
  • ನಕಲಿ ಗುರುತಿನ ವ್ಯಕ್ತಿಗಳಿಗೆ ಸಿಮ್ ನಿರ್ಬಂಧ
  • ವ್ಯಕ್ತಿಯ ಹೆಸರಿನ ಸಿಮ್ ಸಂಖ್ಯೆ ಸರ್ಕಾರದಿಂದ ಟ್ರ್ಯಾಕಿಂಗ್
  • ಗರಿಷ್ಠ 9 ಸಿಮ್ (ಜೆ&ಕೆ, ಈಶಾನ್ಯ ರಾಜ್ಯಗಳಲ್ಲಿ 6 ಸಿಮ್ ಮಿತಿ)

ಉದ್ದೇಶಕ್ಕೆ ಬಳಕೆಯಾಗದ ಭೂಮಿ ವಾಪಸ್: ಡಿಸಿಎಂ ಪರಮೇಶ್ವರ್ ಸ್ಪಷ್ಟನೆ

0

ಬೆಂಗಳೂರು: ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರ ಕೊಟ್ಟಿರುವ ಭೂಮಿಯನ್ನು ನಿಗದಿತ ಉದ್ದೇಶಕ್ಕೆ ಬಳಕೆ ಮಾಡದೇ ಹೋದರೆ ಸರ್ಕಾರ ಅದನ್ನು ಮರುವಶಪಡಿಸಿಕೊಳ್ಳಲಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಶಿವಕುಮಾರ್ ಪ್ರಶ್ನೆ ಕೇಳಿದ್ದರು. ಸಂಘ ಸಂಸ್ಥೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಭೂಮಿ ನೀಡುತ್ತಿದ್ದು, ಅವರು ಯಾವ ಉದ್ದೇಶಕ್ಕೆ ಭೂಮಿ ಪಡೆದಿದ್ದರೋ ಅದಕ್ಕೆ ಬಳಕೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದ ಅವರು, ಧಾರ್ಮಿಕ ಸಂಘಗಳಿಗೆ ಸರ್ಕಾರ ಭೂಮಿ ನೀಡಬಾರದು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರ ನೀಡಿದ ಡಿಸಿಎಂ ಪರಮೇಶ್ವರ್, ಸಂಘ ಸಂಸ್ಥೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ 2010ರಿಂದ 2026ರವರೆಗೆ ಸುಮಾರು 2,400 ಎಕರೆಗೂ ಹೆಚ್ಚು ಭೂಮಿಯನ್ನು ಸರ್ಕಾರ ನೀಡಿದೆ ಎಂದು ವಿವರಿಸಿದರು. ಈ ಅವಧಿಯಲ್ಲಿ ಎಲ್ಲಾ ಸರ್ಕಾರಗಳೂ ಜಮೀನು ನೀಡಿವೆ ಎಂದ ಅವರು, ಪಡೆದ ಉದ್ದೇಶಕ್ಕೆ ಜಮೀನುಗಳನ್ನು ಬಳಸಿಕೊಳ್ಳುತ್ತಿದ್ದಾರೆಯೇ ಎಂದು ಪರಿಶೀಲಿಸಲು 2020ರಲ್ಲೇ ಡಿಸಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಯಾರು ಉಪಯೋಗ ಮಾಡಿಲ್ಲವೋ ಅಥವಾ ಕೇಳಿದ ಉದ್ದೇಶಕ್ಕೆ ಬಳಕೆಯಾಗದೇ ಹೋಗಿದೆಯೋ, ಆ ಜಮೀನನ್ನು ವಾಪಸ್ ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದ ಡಿಸಿಎಂ, ಸಂಘ ಸಂಸ್ಥೆಗಳಿಗೆ ಜಮೀನು ಕೊಡುವುದಕ್ಕೆ ನಿಯಮಗಳಿದ್ದು, ಅದರ ಅನ್ವಯವೇ ಭೂಮಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

IND vs SL 1st Test: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ 165 ರನ್ʼಗಳ ಗೆಲುವು!

0

ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. ಗಾಲೆ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 165 ರನ್‌ಗಳಿಂದ ಶ್ರೀಲಂಕಾವನ್ನು ಮಣಿಸಿದೆ. ಈ ಗೆಲುವಿನ ಪ್ರಮುಖ ರೂವಾರಿಯಾಗಿದ್ದು ಸ್ಪಿನ್ನರ್ ಮಾನವ್ ಸುತಾರ್.

372 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 206 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಸ್ಪಿನ್ನರ್ ಮಾನವ್ ಸುತಾರ್ ಅದ್ಭುತ ಬೌಲಿಂಗ್ ಪ್ರದರ್ಶಿಸಿ 6 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಶ್ರೀಲಂಕಾ ಬ್ಯಾಟಿಂಗ್ ಪಡೆಯನ್ನು ಕಾಡಿದರು.

ಮೊದಲ ಇನ್ನಿಂಗ್ಸ್‌ನಲ್ಲೂ 4 ವಿಕೆಟ್ ಪಡೆದಿದ್ದ ಮಾನವ್ ಸುತಾರ್, ಪಂದ್ಯದಲ್ಲಿ ಒಟ್ಟು 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದರು. ಅವರ ಪರಿಣಾಮಕಾರಿ ಸ್ಪಿನ್ ಬೌಲಿಂಗ್‌ನ ಮುಂದೆ ಶ್ರೀಲಂಕಾ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ.

ಧನಂಜಯ-ಸೋನಲ್ ಹೋರಾಟ ವ್ಯರ್ಥ

ಶ್ರೀಲಂಕಾ ಪರ ನಾಯಕ ಧನಂಜಯ ಡಿ ಸಿಲ್ವಾ ಹಾಗೂ ಸೋನಲ್ ದಿನುಶಾ ಅರ್ಧಶತಕ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ಧನಂಜಯ 59 ರನ್ ಗಳಿಸಿ ಔಟಾದರೆ, ಸೋನಲ್ ದಿನುಶಾ 84 ರನ್ ಗಳಿಸಿ ಮಾನವ್ ಸುತಾರ್ ಅವರ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಇನ್ನು ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಸಿದ್ಧ್ ಕೃಷ್ಣ 2 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಹಾಗೂ ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಕಬಳಿಸಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಪಡಿಕ್ಕಲ್ ಅಬ್ಬರ

ಭಾರತದ ಗೆಲುವಿನಲ್ಲಿ ಬ್ಯಾಟರ್‌ಗಳ ಕೊಡುಗೆಯೂ ಪ್ರಮುಖವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 167 ರನ್ ಸಿಡಿಸಿದರು. ಕೆ.ಎಲ್. ರಾಹುಲ್ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ 82 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾದರು.

ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 462 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 193 ರನ್‌ಗಳಿಗೆ ಆಲೌಟ್ ಆಯಿತು. ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 284 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 206 ರನ್‌ಗಳಿಗೆ ಆಲೌಟ್ ಆಯಿತು.

ಸರಣಿಯಲ್ಲಿ ಭಾರತಕ್ಕೆ 1-0 ಮುನ್ನಡೆ

ಈ ಗೆಲುವಿನೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 23ರಿಂದ 27ರವರೆಗೆ ಕೊಲಂಬೊದಲ್ಲಿ ನಡೆಯಲಿದೆ.

ಭಾರತ ಗೆಲುವು ಸಾಧಿಸುತ್ತಿದ್ದಂತೆಯೇ ಗಾಲೆ ಕ್ರೀಡಾಂಗಣದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಪಂದ್ಯ ಮುಕ್ತಾಯದ ಬಳಿಕವೂ ವಾತಾವರಣ ಗಮನ ಸೆಳೆಯಿತು.

ಗಂಡ-ಹೆಂಡ್ತಿ ನಡುವೆ ಜಗಳ: ಇಬ್ಬರು ಪುಟ್ಟ ಮಕ್ಕಳನ್ನ ಕಾಲುವೆಗೆ ಎಸೆದ ಪಾಪಿ ತಂದೆ

0

ಯಾದಗಿರಿ: ಹೆಂಡತಿ ಜೊತೆಗಿನ ಜಗಳ ವಿಕೋಪಕ್ಕೆ ತಿರುಗಿದ ಬಳಿಕ ತಂದೆಯೊಬ್ಬ ತನ್ನದೇ ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದಿರುವ ಆರೋಪ ಯಾದಗಿರಿಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ಕೇಳಿಬಂದಿದೆ. 9 ವರ್ಷದ ಬಾಲಕಿ ಹಾಗೂ 2 ವರ್ಷದ ಬಾಲಕನಿಗಾಗಿ ಕಾಲುವೆಯಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.

ಶಾಂತಪ್ಪ ಬಿರಾದಾರ್ ತನ್ನ ಮೂವರು ಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ದಿದ್ದ ಎನ್ನಲಾಗಿದೆ. ಬಳಿಕ 9 ವರ್ಷದ ಸಾನ್ವಿ ಮತ್ತು 2 ವರ್ಷದ ಸೃಜನ್ ಅವರನ್ನು ಕಾಲುವೆಗೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ಮತ್ತೊಬ್ಬ ಮಗಳನ್ನು ಮಾತ್ರ ವಾಪಸ್ ಕರೆತಂದು ತಾಯಿಗೆ ಒಪ್ಪಿಸಿದ್ದಾನೆ ಎನ್ನಲಾಗಿದೆ.

ಇಬ್ಬರು ಮಕ್ಕಳು ಕಾಲುವೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ಬಳಿಕ ಅವರ ಯಾವುದೇ ಸುಳಿವು ಸಿಕ್ಕಿಲ್ಲ. ಮಕ್ಕಳಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾಲುವೆಯಲ್ಲಿ ಶೋಧ ನಡೆಸುತ್ತಿದ್ದಾರೆ.

ಈ ಸಂಬಂಧ ಗೋಗಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ಕುರಿತು ತನಿಖೆ ಮುಂದುವರಿಸಿದ್ದಾರೆ. ಸಂಸಾರದ ಕಲಹದ ಕೋಪವನ್ನು ಮಕ್ಕಳ ಮೇಲೆ ತೀರಿಸಿಕೊಂಡಿರುವ ಆರೋಪ ಇದೀಗ ಗ್ರಾಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು: ವಿಧಾನ ಪರಿಷತ್ʼನಲ್ಲಿ ವಿಪಕ್ಷಗಳ ಪ್ರತಿಭಟನೆ

0

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಇಂದು ಕೂಡ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳು ಪ್ರತಿಭಟಿಸಿದ ಪ್ರಸಂಗ ನಡೆಯಿತು. ಕಪ್ಪು ಬಟ್ಟೆ ಹಿಡಿದು ರಾಜೀನಾಮೆಗೆ ಪಟ್ಟು ಹಿಡಿದ ವಿಪಕ್ಷ ಸದಸ್ಯರು, ಸದನದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸರ್ಕಾರ ಮೊದಲು ರಾಜೀನಾಮೆ ಕೊಡಿಸಬೇಕು, ಕಳಂಕಿತ ಮಂತ್ರಿಗಳನ್ನು ಇಟ್ಟುಕೊಂಡು ಹೇಗೆ ಸದನ ನಡೆಸಲು ಸಾಧ್ಯ ಎಂದು ಪ್ರಶ್ನಿಸಿ, ಮೊದಲು ರಾಜೀನಾಮೆ ಕೊಡಿಸಿ ನಂತರ ಸದನ ಮುಂದುವರಿಸುವಂತೆ ಆಗ್ರಹಿಸಿದರು.

ಈ ವೇಳೆ ಕಾಂಗ್ರೆಸ್‌ನ ರವಿ ಮಾತನಾಡಿ, ಬರಗಾಲದ ಬಗ್ಗೆ ಚರ್ಚೆ ಮಾಡುವಂತೆಯೂ, ನಾಗೇಂದ್ರ ವಿಚಾರವಾಗಿ ನೋಟಿಸ್ ಕೊಟ್ಟು ಚರ್ಚಿಸುವಂತೆಯೂ ಸಲಹೆ ನೀಡಿದರು. ಆದರೆ ಸದನದಲ್ಲಿ ಗದ್ದಲ ಗಲಾಟೆ ಮುಂದುವರಿಯಿತು. ಬಿಜೆಪಿ ಸದಸ್ಯರು ಪ್ರಶ್ನೆ ಕೇಳುವ ಬದಲು ಸಚಿವ ನಾಗೇಂದ್ರ ಅವರನ್ನು ವಜಾಗೊಳಿಸುವಂತೆ ಘೋಷಣೆ ಕೂಗಿದರು. ವಿಪಕ್ಷಗಳ ಗಲಾಟೆಯ ನಡುವೆಯೇ ಪ್ರಶ್ನೋತ್ತರ ಕಲಾಪ ನಡೆಯಿತು. ‘ಕೋಟಿ ಕೋಟಿ ಲೂಟಿ’ ಎಂಬ ಘೋಷಣೆಗಳನ್ನೂ ವಿಪಕ್ಷ ಸದಸ್ಯರು ಕೂಗಿದರು.

ಪ್ರಶ್ನೋತ್ತರ ಅವಧಿಗೆ ಅಡ್ಡಿಪಡಿಸಬಾರದು ಎಂದು ಆಗ್ರಹಿಸಿದ ನಾಗರಾಜ್ ಯಾದವ್, ಈ ಬಗ್ಗೆ ಸಭಾಪತಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಮಧ್ಯೆ ವಿಪಕ್ಷಗಳು ರಾಹುಲ್ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇದರಿಂದ ಸದನದಲ್ಲಿ ಮತ್ತೆ ಗದ್ದಲ ಏರ್ಪಟ್ಟಿತು. ಕಪ್ಪು ಬಟ್ಟೆ ತಿರುಗಿಸುತ್ತಾ ‘ಕೋಟಿ ಕೋಟಿ ಎಲ್ಲಿ ಹೋಯ್ತು, ರಾಹುಲ್ ಗಾಂಧಿ ಜೇಬಿಗೆ ಹೋಯ್ತು’ ಎಂದು ವಿಪಕ್ಷಗಳು ಘೋಷಣೆ ಕೂಗಿದವು.

ಪಾಯಿಂಟ್ ಆಫ್ ಆರ್ಡರ್ ಎತ್ತಿದ ಬಸವರಾಜ್ ಹೊರಟ್ಟಿ, ಸದನವನ್ನು ಈ ರೀತಿ ನಡೆಸುವುದು ಸರಿಯಲ್ಲ, ಯಾರು ಪ್ರಶ್ನೆ ಕೇಳುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಈ ಪದ್ಧತಿಗೆ ಇತಿಶ್ರೀ ಹಾಡುವಂತೆಯೂ, ಸದನ ಮುಂದೂಡಿ ಮಾತುಕತೆ ನಡೆಸುವಂತೆಯೂ ಮನವಿ ಮಾಡಿದರು.

‘ಭ್ರಷ್ಟಾಚಾರಿಗಳನ್ನು ಮಂತ್ರಿ ಮಾಡಿದ್ದೀರಿ, ಹೀಗೆ ಸದನ ಹೇಗೆ ನಡೆಸುತ್ತೀರಿ’ ಎಂದು ಘೋಷಣೆ ಕೂಗಿದ ವಿಪಕ್ಷಗಳು, ನಾಗೇಂದ್ರ ಅವರನ್ನು ವಜಾಗೊಳಿಸುವಂತೆ ಚಪ್ಪಾಳೆ ತಟ್ಟಿ ಘೋಷಣೆ ಕೂಗಿದವು.

ತಮಿಳುನಾಡು ಶಾಸಕರಿಗೆ ವಿಜಯ್ ಸರ್ಕಾರದ ಬಂಪರ್ ಕೊಡುಗೆ! ಸರ್ಕಾರಿ ಕಾರಿನ ಜತೆಗೆ 75 ಸಾವಿರ ರೂ. ವಾಹನ ಭತ್ಯೆ

ಚೆನ್ನೈ: ತಮಿಳುನಾಡು ಶಾಸಕರಿಗೆ ಸಿಎಂ ಜೋಸೆಫ್ ವಿಜಯ್ ಬಂಪರ್ ಕೊಡುಗೆಗಳನ್ನು ಘೋಷಿಸಿದ್ದಾರೆ. ಇನ್ಮುಂದೆ ರಾಜ್ಯದ ಎಲ್ಲಾ 234 ಶಾಸಕರಿಗೆ ಕಾರು, ಇಂಧನ ಮತ್ತು ನಿರ್ವಹಣಾ ವೆಚ್ಚಗಳಿಗಾಗಿ ಭತ್ಯೆ ಸಿಗಲಿದೆ.

ತಮಿಳುನಾಡು ಶಾಸಕರಿಗೆ ಕಾರು, ಇಂಧನ ಭತ್ಯೆ ಹಾಗೂ ಕಾರ್ಯದರ್ಶಿ ವ್ಯವಸ್ಥೆ ಸಿಗಲಿದೆ. ಶಾಸಕರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳಿಗೆ ಸಹಾಯವಾಗಲೆಂದು ಸರ್ಕಾರಿ ವಾಹನ ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಶಾಸಕರು ತಮ್ಮ ಕ್ಷೇತ್ರಗಳಿಗೆ ಆಗಾಗ್ಗೆ ಪ್ರಯಾಣಿಸಬೇಕಾಗುತ್ತದೆ, ಸರ್ಕಾರಿ ವಾಹನವು ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಖಚಿತಪಡಿಸುತ್ತದೆ ಎಂದು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಮತ್ತು ಬಡ ಹಿನ್ನೆಲೆಯಿಂದ ಬಂದ ಹಲವಾರು ಶಾಸಕರಿದ್ದು, ಜನಪ್ರತಿನಿಧಿಯಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅವರಿಗೆ ಕಾರು ಅಗತ್ಯವಿದೆ ಎಂದು ಸಿಎಂ ಹೇಳಿದ್ದಾರೆ.

ಅಗತ್ಯವಿರುವ ಲಾಜಿಸ್ಟಿಕ್ಸ್ ಬೆಂಬಲವಿಲ್ಲದೆ ಶಾಸಕರು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ವಿಸಿಕೆ ಶಾಸಕ ಜ್ಯೋತಿಮಣಿ ಈ ಹಿಂದೆ ಹೇಳಿ, ಶಾಸಕರಿಗೆ ಕಾರುಗಳನ್ನು ನೀಡುವಂತೆ ವಿನಂತಿಸಿದ್ದರು. ಈ ಮನವಿಯ ಬೆನ್ನಲ್ಲೇ ಸರ್ಕಾರದಿಂದ ಈ ಘೋಷಣೆ ಹೊರಬಿದ್ದಿದೆ.

ವಿಜಯ್ ಸರ್ಕಾರವು ಶಾಸಕರಿಗೆ ಚಾಲಕ, ಇಂಧನ ಮತ್ತು ಕಾರುಗಳ ನಿರ್ವಹಣೆ ವೆಚ್ಚಗಳಿಗಾಗಿ ತಿಂಗಳಿಗೆ ₹75,000 ಭತ್ಯೆಯನ್ನು ಘೋಷಿಸಿದೆ. ಹೆಚ್ಚುವರಿಯಾಗಿ, ಶಾಸಕರು ಈಗ ಅಧಿಕೃತ ಕೆಲಸಕ್ಕಾಗಿ ಕಾರ್ಯದರ್ಶಿಯನ್ನು ನೇಮಿಸಿಕೊಳ್ಳಲು ₹25,000 ರಾಜ್ಯ ಅನುದಾನವನ್ನು ಪಡೆಯಲಿದ್ದಾರೆ. ಮುಖ್ಯಮಂತ್ರಿಯ ಈ ಘೋಷಣೆಯನ್ನು ಶಾಸಕರು ಸ್ವಾಗತಿಸಿದ್ದಾರೆ.

ಕೆ.ಆರ್. ಪುರಂ ತ್ರಿವಳಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಲವ್ವರ್ ಕೆನತ್ ವಿರುದ್ಧ ಮಾಫಿ ಸಾಕ್ಷಿಯಾಗಲು ಶ್ವೇತಾ ಸಿದ್ಧ!

0

ಬೆಂಗಳೂರು: ಕೆ.ಆರ್. ಪುರಂ ತ್ರಿವಳಿ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿ ಶ್ವೇತಾ ಇದೀಗ ತನ್ನ ಲವ್ವರ್ ಕೆನತ್ ವಿರುದ್ಧವೇ ಸಾಕ್ಷಿ ಹೇಳಲು ಮುಂದೆ ಬಂದಿದ್ದು, ಮಾಫಿ ಸಾಕ್ಷಿ ಅಥವಾ ಅಪ್ರೂವರ್ ಆಗಲು ಅವಕಾಶ ನೀಡುವಂತೆ 29ನೇ ಎಸಿಜೆಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ತಾನು ಕೊಲೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದೆ ಎಂದು ಒಪ್ಪಿಕೊಂಡಿರುವ ಶ್ವೇತಾ, ಕೊಲೆ ಮಾಡುವ ನಿರ್ಧಾರ ಕೆನತ್‌ನದ್ದಾಗಿತ್ತು ಮತ್ತು ನೇರವಾಗಿ ಕೊಲೆ ಮಾಡಿದ್ದು ಆತನೇ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಆದರೆ ತಾನು ಯಾರಿಗೂ ಚಾಕುವಿನಿಂದ ಇರಿದಿಲ್ಲ ಹಾಗೂ ನೇರವಾಗಿ ಕೊಲೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೆನತ್ ವಿರುದ್ಧ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಲು ತಾನು ಸಿದ್ಧಳಿದ್ದು, ಪ್ರಕರಣದಲ್ಲಿ ತನ್ನನ್ನು ಅಪ್ರೂವರ್ ಆಗಿ ಪರಿಗಣಿಸಬೇಕು ಎಂದು ಶ್ವೇತಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಆದರೆ ಶ್ವೇತಾ ಅರ್ಜಿಯನ್ನು ನ್ಯಾಯಾಲಯ ಸದ್ಯಕ್ಕೆ ಪರಿಗಣಿಸಿಲ್ಲ. ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಕೆಲವು ಫೊರೆನ್ಸಿಕ್ ವರದಿಗಳು ಬರಬೇಕಿದ್ದು, ಅವು ಲಭ್ಯವಾದ ಬಳಿಕ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕ ಮಾಫಿ ಸಾಕ್ಷಿಯಾಗಲು ಮತ್ತೆ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಹೀಗಾಗಿ ಶ್ವೇತಾ ಸಲ್ಲಿಸಿದ್ದ ಅರ್ಜಿಯನ್ನು ಸದ್ಯಕ್ಕೆ ಇತ್ಯರ್ಥಪಡಿಸಿರುವ ಕೋರ್ಟ್, ಮುಂದಿನ ಹಂತದಲ್ಲಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

ಕೋಲಾರ: ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆ

0

ಕೋಲಾರ: ಹಾಲಿನ ಖರೀದಿ ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೋಲಾರದಲ್ಲಿ ಹಾಲು ಉತ್ಪಾದಕರು ಬೃಹತ್ ಪ್ರತಿಭಟನೆ ನಡೆಸಿದರು. ಸಾವಿರಾರು ಹಾಲು ಉತ್ಪಾದಕರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್‌ಗೆ ₹10ಕ್ಕೆ ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಇದರ ಜೊತೆಗೆ ಪಶು ಆಹಾರದ ಬೆಲೆಯನ್ನು ಕಡಿಮೆ ಮಾಡಬೇಕು ಹಾಗೂ ಹಾಲು ಉತ್ಪಾದಕರಿಗೆ ನೀಡುತ್ತಿರುವ ₹5 ಪ್ರೋತ್ಸಾಹಧನವನ್ನು ₹7ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಮೈಸೂರು ದಸರಾ ಗಜಪಡೆಯಿಂದ ‘ಕ್ಯಾಪ್ಟನ್’ ಅಭಿಮನ್ಯು ಔಟ್: ಅಂಬಾರಿ ಹೊತ್ತ ಗಜರಾಜನಿಗೆ ವಯಸ್ಸಿನ ಬ್ರೇಕ್!

0

ಮೈಸೂರು: ಮೈಸೂರು ದಸರಾ ವೈಭವಕ್ಕೆ ವರ್ಷಗಳ ಕಾಲ ರಾಜಗಾಂಭೀರ್ಯ ತುಂಬಿದ್ದ ಅಭಿಮನ್ಯು ಈ ಬಾರಿ ಗಜಪಡೆಯ ಭಾಗವಾಗುವುದಿಲ್ಲ. 60 ವರ್ಷ ವಯಸ್ಸಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಭಿಮನ್ಯುವನ್ನು ದಸರಾ ಆನೆಗಳ ಪಟ್ಟಿಯಿಂದ ಕೈಬಿಟ್ಟಿದ್ದು, ಸತತ ಆರು ಬಾರಿ ಚಿನ್ನದ ಅಂಬಾರಿ ಹೊತ್ತ ಗಜರಾಜನ ದಸರಾ ಕರ್ತವ್ಯಕ್ಕೆ ಅಂತ್ಯ ಹಾಡಿದೆ.

ಚಿನ್ನದ ಅಂಬಾರಿ ಹೊತ್ತು ಮೈಸೂರು ರಾಜಬೀದಿಯಲ್ಲಿ ಹೆಜ್ಜೆ ಹಾಕುತ್ತಿದ್ದ ಅಭಿಮನ್ಯುವಿನ ಗಾಂಭೀರ್ಯ ದಸರಾ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಆರು ಬಾರಿ ಅಂಬಾರಿ ಹೊತ್ತಿದ್ದ ಈ ಗಜರಾಜನಿಗೆ ಮೈಸೂರು ಜನರಲ್ಲೂ ಅಪಾರ ಅಭಿಮಾನವಿದೆ. ಆದರೆ ವಯಸ್ಸಿನ ಕಾರಣದಿಂದ ಈ ಬಾರಿ ಅಭಿಮನ್ಯುವಿಗೆ ದಸರಾ ಕರ್ತವ್ಯದಿಂದ ವಿಶ್ರಾಂತಿ ನೀಡಲಾಗಿದೆ.

ಅಭಿಮನ್ಯುವಿನ ಖ್ಯಾತಿ ಅಂಬಾರಿ ಹೊರುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕಾಡಾನೆ ಸೆರೆ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿದ್ದ ಆತ ‘ಕೂಂಬಿಂಗ್ ಸ್ಪೆಷಲಿಸ್ಟ್’ ಎಂದೇ ಗುರುತಿಸಿಕೊಂಡಿದ್ದ. ಅಪಾಯಕಾರಿ ಕಾಡಾನೆಗಳನ್ನು ನಿಯಂತ್ರಿಸುವ ಕಾರ್ಯಾಚರಣೆಗಳಲ್ಲಿ ಅರಣ್ಯ ಇಲಾಖೆಯ ಪ್ರಮುಖ ಆನೆಗಳಲ್ಲಿ ಒಂದಾಗಿದ್ದ.

ಅಭಿಮನ್ಯುವಿನ ಸ್ಥಾನವನ್ನು ಸದ್ಯ ಖಾಲಿ ಇಡಲಾಗಿದ್ದು, ಭೀಮ ಮತ್ತು ಹರ್ಷ ಆನೆಗಳನ್ನು ಮೀಸಲು ಆನೆಗಳಾಗಿ ಇರಿಸಲಾಗಿದೆ. ದಸರಾ ಗಜಪಡೆಯ ಮೊದಲ ಹಂತದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮೀ ಹಾಗೂ ಕಾವೇರಿ ಆಗಮಿಸಲಿವೆ. ಎರಡನೇ ಹಂತದಲ್ಲಿ ರೂಪ, ಚೈತ್ರ ಹಾಗೂ ಶ್ರೀಕಂಠ ಗಜಪಡೆ ಸೇರಲಿವೆ.

ಅಭಿಮನ್ಯು ಈ ಬಾರಿ ಚಿನ್ನದ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗದಿದ್ದರೂ, ಮೈಸೂರು ದಸರಾ ಇತಿಹಾಸದಲ್ಲಿ ಆತನ ಸ್ಥಾನ ಅಳಿಸಲಾಗದು. ಅಂಬಾರಿಯ ಭಾರ ಹೊತ್ತು ರಾಜಬೀದಿಯಲ್ಲಿ ಹೆಜ್ಜೆ ಹಾಕಿದ ಆ ಗಜರಾಜನ ನೆನಪು ಮಾತ್ರ ಮೈಸೂರು ಜನರ ಮನದಲ್ಲಿ ಎಂದಿಗೂ ಉಳಿಯಲಿದೆ.

‘ಬಿಜೆಪಿಗೆ, ರಾಜ್ಯಕ್ಕೆ ತುಂಬಲಾರದ ನಷ್ಟ’: ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನಕ್ಕೆ ಗಣ್ಯರ ಕಂಬನಿ

0

ಬೆಂಗಳೂರು: ಮಾಜಿ ಶಿಕ್ಷಣ ಸಚಿವ ಹಾಗೂ ತಿಪಟೂರು ಮಾಜಿ ಶಾಸಕ ಬಿ.ಸಿ. ನಾಗೇಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ನಾಯಕರು ನಾಗೇಶ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ಬಿ.ಸಿ. ನಾಗೇಶ್ ಅವರು ಅಜಾತಶತ್ರು ಸ್ವಭಾವದವರಾಗಿದ್ದು, ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದರು. ಅವರ ಅಗಲಿಕೆ ಬಿಜೆಪಿಗೆ ತುಂಬಲಾರದ ನಷ್ಟ ತಂದಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ದುಃಖಿತ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಎಂಎಲ್‌ಸಿ ಸಿ.ಟಿ. ರವಿ ಅವರು ನಾಗೇಶ್ ಅವರನ್ನು ಮೃದು ಹೃದಯದ ವ್ಯಕ್ತಿ ಹಾಗೂ ರಾಜಕೀಯವನ್ನು ಮೀರಿ ಜನಪ್ರೀತಿ ಗಳಿಸಿದ್ದ ನಾಯಕ ಎಂದು ಸ್ಮರಿಸಿದ್ದಾರೆ. ಶಾಸಕರಾಗುವುದಕ್ಕೂ ಮುನ್ನವೇ ಎಬಿವಿಪಿಯಲ್ಲಿ ಸೇವೆ ಸಲ್ಲಿಸಿದ್ದ ಅವರು ಕೊನೆಯವರೆಗೂ ಪಕ್ಷ ಮತ್ತು ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿರುವುದು ನೋವಿನ ಸಂಗತಿ ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಗೇಶ್ ಅವರನ್ನು ‘ಸರಳ, ಸಜ್ಜನ ಜೆಂಟಲ್‌ಮ್ಯಾನ್ ಇನ್ ಪಾಲಿಟಿಕ್ಸ್’ ಎಂದು ಬಣ್ಣಿಸಿದ್ದಾರೆ. ತಿಪಟೂರು ಕ್ಷೇತ್ರದ ಅಭಿವೃದ್ಧಿಗೆ ನಾಗೇಶ್ ಸಾಕಷ್ಟು ಶ್ರಮಿಸಿದ್ದರು. ವಿಶೇಷವಾಗಿ ನೀರಾವರಿ ಯೋಜನೆಗಳಿಗಾಗಿ ಕೆಲಸ ಮಾಡಿದ್ದರು ಎಂದು ಸ್ಮರಿಸಿದ್ದಾರೆ.

ತಮ್ಮ ಮುಖ್ಯಮಂತ್ರಿತ್ವದ ಅವಧಿಯಲ್ಲಿ ನಾಗೇಶ್ ಶಿಕ್ಷಣ ಸಚಿವರಾಗಿ ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಶ್ರಮಿಸಿದ್ದರು. ಅವರ ನಿಧನ ಬಿಜೆಪಿಗೆ ಮಾತ್ರವಲ್ಲದೆ ರಾಜ್ಯಕ್ಕೂ ಹಾಗೂ ವೈಯಕ್ತಿಕವಾಗಿ ತಮ್ಮಿಗೂ ದೊಡ್ಡ ನಷ್ಟ ಎಂದು ಬೊಮ್ಮಾಯಿ ಹೇಳಿದ್ದಾರೆ.

67 ವರ್ಷದ ಬಿ.ಸಿ. ನಾಗೇಶ್ ಅವರು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಬೆಂಗಳೂರಿನ ಜಯನಗರದಲ್ಲಿರುವ ಪುತ್ರಿಯ ನಿವಾಸದಲ್ಲಿ ಮಂಗಳವಾರ ನಿಧನರಾದರು.

ನಾಗೇಶ್ ಅವರ ಪಾರ್ಥಿವ ಶರೀರವನ್ನು ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ತರಲಾಗಿದ್ದು, ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಿ.ವೈ. ವಿಜಯೇಂದ್ರ, ಸಿ.ಟಿ. ರವಿ, ರವಿಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಅಂತಿಮ ದರ್ಶನ ಪಡೆದಿದ್ದಾರೆ.

ನಾಗೇಶ್ ಅವರ ಅಂತ್ಯಕ್ರಿಯೆ ತಿಪಟೂರಿನ ಸ್ವಗೃಹದಲ್ಲಿ ನಡೆಯಲಿದೆ.