ವಿಜಯಪುರ: ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ವಿರುದ್ಧ ಸ್ಫೋಟಕ ಆರೋಪಗಳ ಸುರಿಮಳೆಗೈದಿದ್ದಾರೆ. “ರಾಜ್ಯದ ಸಚಿವ ಸಂಪುಟ ಗುಂಡಾಗಳ ಗೂಡಾಗಿದೆ. ಕ್ರಿಮಿನಲ್ ಹಿನ್ನೆಲೆಯವರಿಗೆ ಮಂತ್ರಿಗಿರಿ ನೀಡಿ ಕಾಂಗ್ರೆಸ್ ಸರ್ಕಾರ ತಪ್ಪು ಸಂದೇಶ ನೀಡಿದೆ” ಎಂದು ವಾಗ್ದಾಳಿ ನಡೆಸಿದರು.
“ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ರೂಪಿಸಿರುವ ಇದು ಅತ್ಯಂತ ಕೆಟ್ಟ ಸಚಿವ ಸಂಪುಟ. ಪ್ರಮುಖ ನಾಯಕರನ್ನು ಬದಿಗಿಟ್ಟು, ಕ್ರಿಮಿನಲ್ ಹಿನ್ನೆಲೆಯವರಿಗೆ ಅವಕಾಶ ನೀಡಿದ್ದಾರೆ. ಭ್ರಷ್ಟಾಚಾರ ಮತ್ತು ಗುಂಡಾಗಿರಿ ಆರೋಪ ಎದುರಿಸುತ್ತಿರುವವರೇ ಸರ್ಕಾರದಲ್ಲಿದ್ದಾರೆ” ಎಂದು ಟೀಕಿಸಿದರು.
ಕಾಂಗ್ರೆಸ್ ಶಾಸಕರ ರಾಜೀನಾಮೆ ಬೆದರಿಕೆಯನ್ನು ಲೇವಡಿ ಮಾಡಿದ ಯತ್ನಾಳ್, “ಇದು ಕೇವಲ ಒತ್ತಡ ತಂತ್ರ. ಯಾರೂ ರಾಜೀನಾಮೆ ಕೊಡುವುದಿಲ್ಲ. ಹೈಕಮಾಂಡ್ ಒಂದು ಕರೆ ಮಾಡಿದರೆ ಎಲ್ಲರೂ ಶಿಸ್ತಿನ ಸಿಪಾಯಿಗಳಾಗಿಬಿಡುತ್ತಾರೆ” ಎಂದು ಹೇಳಿದರು.
ವಿಜಯಪುರ ಜಿಲ್ಲೆಯ ಸಚಿವ ಸ್ಥಾನ ಹಂಚಿಕೆ ಕುರಿತು ಮಾತನಾಡಿದ ಅವರು, “ಎಂ.ಬಿ. ಪಾಟೀಲ್ ಕಾಂಗ್ರೆಸ್ನಲ್ಲಿ ಅತ್ಯಂತ ಪ್ರಭಾವಿ ನಾಯಕ. ಹೈಕಮಾಂಡ್ ಜೊತೆಗಿನ ಅವರ ಪ್ರಭಾವವೇ ಅವರನ್ನು ಸಚಿವರನ್ನಾಗಿಸಿದೆ” ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಅವಧಿಯನ್ನೂ ಉಲ್ಲೇಖಿಸಿದ ಯತ್ನಾಳ್, “ಹಣದ ರಾಜಕಾರಣ ಕಾಂಗ್ರೆಸ್ಗೆ ಮಾತ್ರ ಸೀಮಿತವಲ್ಲ. ಬಿಜೆಪಿ ಅವಧಿಯಲ್ಲೂ ಹೈಕಮಾಂಡ್ ಪಟ್ಟಿ ಬದಲಾಗುತ್ತಿತ್ತು. ಹಣದ ವ್ಯವಹಾರಗಳ ಮೂಲಕ ಸಚಿವ ಸ್ಥಾನ ಸಿಕ್ಕ ಉದಾಹರಣೆಗಳಿವೆ” ಎಂದು ಆರೋಪಿಸಿದರು.
ಸಿದ್ದರಾಮಯ್ಯ ಕುರಿತು ಪ್ರತಿಕ್ರಿಯಿಸಿದ ಅವರು, “ಕಾಂಗ್ರೆಸ್ ಹೈಕಮಾಂಡ್ ಈಗಲೂ ಸಿದ್ದರಾಮಯ್ಯ ಅವರನ್ನು ಕಡೆಗಣಿಸುತ್ತಿದೆ. ಅವರಿಗೆ ಸ್ವಾಭಿಮಾನ ಇದ್ದರೆ ಮುಂದಿನ ರಾಜಕೀಯ ನಿರ್ಧಾರದಲ್ಲಿ ಅದಕ್ಕೆ ಉತ್ತರ ನೀಡಬೇಕು” ಎಂದು ಹೇಳಿದರು.

