ಬೆಂಗಳೂರು: ರಾಜರಾಜೇಶ್ವರಿನಗರ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಸಂಚು ರೂಪಿಸಿ ಪ್ರಕರಣ ದಾಖಲಿಸಿದ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮುನಿರತ್ನ ಸೇರಿದಂತೆ ಕಿರಣ್ ನಾಯ್ಡು, ಲೋಹಿತ್ ಗೌಡ, ಮಂಜುನಾಥ, ಲಕ್ಷ್ಮೀ ಜಯರಾಮ್ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಅಯ್ಯಣ್ಣ ರೆಡ್ಡಿ, ಬಿ.ಎನ್. ಲೋಹಿತ್ ಮತ್ತು ಪೊಲೀಸ್ ಸಬ್ಇನ್ಸ್ಪೆಕ್ಟರ್ ಚಂದ್ರಶೇಖರ್ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಾಗುತ್ತಿದ್ದಂತೆಯೇ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (SIT) ವರ್ಗಾವಣೆ ಮಾಡಲಾಗಿದೆ. ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಪ್ರಕರಣದ ದಾಖಲೆಗಳನ್ನು SITಗೆ ಹಸ್ತಾಂತರಿಸಿದ್ದಾರೆ.
ದೂರಿನಲ್ಲಿ ಏನಿದೆ?
2018ರ ಜುಲೈನಲ್ಲಿ ಫೇಸ್ಬುಕ್ ಮೂಲಕ ರವಿಶಂಕರ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು ಎಂದು ದೂರುದಾರೆ ತಿಳಿಸಿದ್ದಾರೆ. 2019ರಲ್ಲಿ ಧಾರವಾಡದಲ್ಲಿ ರವಿಶಂಕರ್ ತಮ್ಮನ್ನು ಸರ್ಕಾರಿ ವಸತಿಗೃಹಕ್ಕೆ ಕರೆದೊಯ್ದು ಸುಮಾರು ಮೂರು ದಿನಗಳ ಕಾಲ ಅಲ್ಲಿಯೇ ಇರಿಸಿಕೊಂಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ 2021ರ ಅಕ್ಟೋಬರ್ 6ರಂದು ದೆಹಲಿಯ ಚಾಣಕ್ಯಪುರಿ ಪೊಲೀಸ್ ಠಾಣೆಯಲ್ಲಿ ರವಿಶಂಕರ್ ವಿರುದ್ಧ ಅತ್ಯಾಚಾರ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ಬಳಿಕ ಪ್ರಕರಣವನ್ನು ಧಾರವಾಡಕ್ಕೆ ವರ್ಗಾಯಿಸಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮುಂದೆ ಹನಿಟ್ರ್ಯಾಪ್ ಮಾಡಲು ಸಂಚು ರೂಪಿಸಿ ಕೆಲವರು ತಮ್ಮನ್ನು ಪರಿಚಯಿಸಿಕೊಂಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. 2021ರ ಆಗಸ್ಟ್ 12ರಂದು ಕಗ್ಗಲಿಪುರದ ರೆಸಾರ್ಟ್ಗೆ ಕೆಲವರು ಪೊಲೀಸರನ್ನು ಕರೆದುಕೊಂಡು ಹೋಗಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಅದೇ ವರ್ಷ ಸೆಪ್ಟೆಂಬರ್ 1ರಂದು ಹಾಗೂ ಮತ್ತೊಮ್ಮೆ ಚಿಕ್ಕಬಳ್ಳಾಪುರದ ಅಗಲಗುರ್ಕಿ ರೆಸಾರ್ಟ್ಗೆ ಪೊಲೀಸರನ್ನು ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಕಿರಣ್ ನಾಯ್ಡು ಅತ್ಯಾಚಾರಕ್ಕೆ ಪ್ರಯತ್ನಿಸಿದ್ದರು ಹಾಗೂ ಇತರರು ಖಾಸಗಿ ಫೋಟೋಗಳನ್ನು ತೆಗೆದುಕೊಂಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಮನೆ ಶೋಧ, ಬಂಧನದ ಆರೋಪ:
2021ರ ಅಕ್ಟೋಬರ್ನಲ್ಲಿ ರೋಹಿತ್ ಗೌಡ ಅಲಿಯಾಸ್ ಲೋಕೇಶ್ ಅವರು ತಮ್ಮ ವಿರುದ್ಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಮಹಿಳೆ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 11ರಂದು ತಮ್ಮ ಮನೆಯ ಶೋಧ ನಡೆಸಿ ಲ್ಯಾಪ್ಟಾಪ್, ನಾಲ್ಕು ಮೊಬೈಲ್ ಫೋನ್ಗಳು ಹಾಗೂ ಹಾರ್ಡ್ಡಿಸ್ಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಳಿಕ ತಮ್ಮನ್ನು ಬಂಧಿಸಿ ಅಕ್ಟೋಬರ್ 11ರಿಂದ 13ರವರೆಗೆ ಎರಡು ದಿನಗಳ ಕಾಲ ಪೊಲೀಸ್ ವಶದಲ್ಲಿರಿಸಲಾಗಿತ್ತು. ಅಕ್ಟೋಬರ್ 13ರಂದು ಜೈಲಿಗೆ ಕಳುಹಿಸಲಾಗಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಇದಾದ ಬಳಿಕ ಮುನಿರತ್ನ ಅವರು ತಮ್ಮನ್ನು ಹಾಗೂ ತಮ್ಮ ಸಹೋದರಿಯನ್ನು ದೆಹಲಿಗೆ ಕರೆದುಕೊಂಡು ಹೋಗಿ, ಈ ಹಿಂದೆ ದಾಖಲಿಸಿದ್ದ ಪ್ರಕರಣವನ್ನು ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಎಲ್ಲಾ ಆರೋಪಗಳ ಕುರಿತು ಇದೀಗ SIT ತನಿಖೆ ನಡೆಸಲಿದ್ದು, ತನಿಖೆಯ ಬಳಿಕ ಪ್ರಕರಣದ ಸಂಪೂರ್ಣ ವಾಸ್ತವಾಂಶ ಹೊರಬರಬೇಕಿದೆ.

