Home Blog

ಇಂಧನ ಬೆಲೆ ಏರಿಕೆ ಶಾಕ್: ಪೆಟ್ರೋಲ್, ಡೀಸೆಲ್ ಜೊತೆಗೆ ಜೆಟ್ ಫ್ಯುಯೆಲ್ ದರ ದ್ವಿಗುಣ

0

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ವದಂತಿಗಳ ನಡುವೆಯೇ ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ ಮತ್ತೊಮ್ಮೆ ದರ ಏರಿಕೆ ಮಾಡಿ ಜನತೆಗೆ ಶಾಕ್ ನೀಡಿದೆ. ಕಳೆದ 15 ದಿನಗಳಲ್ಲಿ ಮೂರನೇ ಬಾರಿ ದರ ಹೆಚ್ಚಿಸಿದ್ದ ಶೆಲ್, ಇದೀಗ ಮತ್ತೆ ಇಂಧನ ಬೆಲೆ ಏರಿಕೆ ಮಾಡಿದೆ. ಇದರೊಂದಿಗೆ ಪ್ರೀಮಿಯಂ ಪೆಟ್ರೋಲ್ ಹಾಗೂ ಜೆಟ್ ಇಂಧನದ ದರಗಳು ಗಣನೀಯವಾಗಿ ಏರಿಕೆ ಕಂಡಿವೆ.

ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ವಿಮಾನ ಇಂಧನ (ಜೆಟ್ ಫ್ಯೂಲ್) ದರವು ದ್ವಿಗುಣವಾಗಿದೆ. ಒಂದು ತಿಂಗಳ ಹಿಂದೆ ಪ್ರತಿ ಕಿಲೋಲೀಟರ್‌ಗೆ 96,638.14 ರೂ. ಇದ್ದ ದರ, ಇದೀಗ 2,07,341.22 ರೂ.ಗೆ ಏರಿಕೆಯಾಗಿದೆ.

ಇದೇ ವೇಳೆ ದೆಹಲಿಯಲ್ಲಿ ಇಂಡಿಯನ್ ಆಯಿಲ್ ಕಂಪನಿ ತನ್ನ XP100 (100-ಆಕ್ಟೇನ್ ಪ್ರೀಮಿಯಂ ಪೆಟ್ರೋಲ್) ಬೆಲೆಯನ್ನು 149 ರೂ.ಗಳಿಂದ 160 ರೂ.ಗಳಿಗೆ ಹೆಚ್ಚಿಸಿದೆ. ಈ ಪೆಟ್ರೋಲ್ ಐಷಾರಾಮಿ ಕಾರುಗಳು ಹಾಗೂ ಸೂಪರ್ ಬೈಕ್‌ಗಳಿಗೆ ವಿನ್ಯಾಸಗೊಳಿಸಲ್ಪಟ್ಟಿದ್ದು, ಉತ್ತಮ ಎಂಜಿನ್ ಕಾರ್ಯಕ್ಷಮತೆ ನೀಡುತ್ತದೆ. ಜೊತೆಗೆ ‘ಎಕ್ಸ್ಟ್ರಾ ಗ್ರೀನ್’ ಪ್ರೀಮಿಯಂ ಡೀಸೆಲ್ ದರವನ್ನೂ 91.49 ರೂ.ಗಳಿಂದ 92.99 ರೂ.ಗಳಿಗೆ ಏರಿಸಲಾಗಿದೆ.

ಪ್ರೀಮಿಯಂ ಇಂಧನದ ದರ ಏರಿಕೆಗೆ ಸ್ಪಷ್ಟ ಕಾರಣವನ್ನು ಕಂಪನಿ ತಿಳಿಸದಿದ್ದರೂ, ಮಧ್ಯಪ್ರಾಚ್ಯದ ಬಿಕ್ಕಟ್ಟು ಮತ್ತು ಕಚ್ಚಾ ತೈಲದ ಕೊರತೆಯೇ ಪ್ರಮುಖ ಕಾರಣವೆಂದು ಅಂದಾಜಿಸಲಾಗಿದೆ.

ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ಜೆಟ್ ಇಂಧನ ದರವನ್ನೂ ಏಕಾಏಕಿ ಎರಡು ಪಟ್ಟು ಹೆಚ್ಚಿಸಲಾಗಿದೆ. ಇದಕ್ಕೂ ಮೊದಲು ಮಾರ್ಚ್ 1ರಂದು ಶೇಕಡಾ 5.7ರಷ್ಟು (5,244.75 ರೂ.) ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ದೇಶೀಯ ಎಟಿಎಫ್ ದರವೂ ಶೇಕಡಾ 8.6ರಷ್ಟು ಏರಿಕೆಯಾಗಿದ್ದು, ಪ್ರತಿ ಕಿಲೋಲೀಟರ್‌ಗೆ 1.04 ಲಕ್ಷ ರೂ. ತಲುಪಿದೆ.

ಬೆಂಗಳೂರು ನಗರದಲ್ಲಿ ನಕಲಿ ಬ್ರಾಂಡೆಡ್ ವಾಚ್ ಮಾರಾಟ: ಸಿಸಿಬಿ ಪೊಲೀಸರಿಂದ ಐವರ ಬಂಧನ

ಬೆಂಗಳೂರು: ಬೆಂಗಳೂರು ನಗರದಲ್ಲಿ ಪ್ರಸಿದ್ಧ ಬ್ರಾಂಡ್‌ಗಳ ಹೆಸರಿನಲ್ಲಿ ನಕಲಿ ಗಡಿಯಾರಗಳನ್ನು ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಈ ದಾಳಿ ವ್ಯಾಪಕವಾಗಿ ನಡೆದಿದ್ದು, ಸುಮಾರು 25 ಲಕ್ಷ ರೂ. ಮೌಲ್ಯದ ನಕಲಿ ವಸ್ತುಗಳನ್ನು ವಶಪಡಿಸಲಾಗಿದೆ.

ಬಂಧಿತ ಆರೋಪಿಗಳನ್ನು ಹರೀಶ್ ಕುಮಾರ್, ಸಯ್ಯದ್ ಜೈಸಾದ್ ಇಕ್ಬಾಲ್, ಮೊಹಮ್ಮದ್ ಹಬೀಬ್ ಹುಸೈನ್, ಖಲೀಮ್ ಉಲ್ಲಾ ಮತ್ತು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಇವರು ಆರ್‌ಟಿ ನಗರ, ಗಂಗಾನಗರ ಮತ್ತು ಚಿಕ್ಕಪೇಟೆ ಪ್ರದೇಶಗಳಲ್ಲಿ ಅಂಗಡಿಗಳನ್ನು ನಡೆಸುತ್ತಿದ್ದರು.

ಆರೋಪಿಗಳು ಗ್ರಾಹಕರನ್ನು ಕಡಿಮೆ ಬೆಲೆಯಲ್ಲಿ, “ಆಫರ್ ರೇಟ್”ನಲ್ಲಿ ಗಡಿಯಾರಗಳನ್ನು ನೀಡುತ್ತಿದ್ದರು. ಆದರೆ, ಮೂಲ ಬ್ರಾಂಡ್ ಉತ್ಪನ್ನಗಳೇ ಎಂದು ನಂಬಿಸಿ ಮಾರಾಟ ಮಾಡಲಾಗುತ್ತಿತ್ತು.

ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಐದು ಅಂಗಡಿಗಳ ಮೇಲೆ ದಾಳಿ ನಡೆಸಿ, ಒಟ್ಟು 670 ನಕಲಿ ಗಡಿಯಾರಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆಯುತ್ತಿದೆ.

‘ಬ್ಯಾಚುಲರ್ ಪಾರ್ಟಿ’ ಹಾಡು ವಿವಾದ: ರಕ್ಷಿತ್ ಶೆಟ್ಟಿಗೆ 25 ಲಕ್ಷ ದಂಡ ವಿಧಿಸಿದ ದೆಹಲಿ ಹೈಕೋರ್ಟ್

ಕನ್ನಡ ಚಿತ್ರರಂಗದ ಸ್ಟಾರ್ ನಟ, ನಿರ್ದೇಶಕ ಮತ್ತು ನಿರ್ಮಾಪಕ ರಕ್ಷಿತ್ ಶೆಟ್ಟಿ ತಾನು ನಿರ್ಮಾಣ ಮಾಡಿದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದ ಕಾರಣ ಕಾನೂನು ವಿವಾದದಲ್ಲಿ ಸಿಲುಕಿದ್ದಾರೆ. ಅವರ ನಿರ್ಮಾಣ ಸಂಸ್ಥೆ ‘ಪರಂವಾ ಸ್ಟುಡಿಯೋಸ್‌’ಗೆ ದೆಹಲಿ ಹೈಕೋರ್ಟ್ ಒಟ್ಟು 25 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಖ್ಯಾತ ಮ್ಯೂಸಿಕ್ ಕಂಪನಿ ‘ಎಮ್‌ಆರ್‌ಟಿ ಮ್ಯೂಸಿಕ್’ 2020ರ ಹಕ್ಕುಸ್ವಾಮ್ಯ ಒಪ್ಪಂದದ ಅಡಿಯಲ್ಲಿ ‘ನ್ಯಾಯ ಎಲ್ಲಿದೆ’ ಮತ್ತು ‘ಒಮ್ಮೆ ನಿನ್ನನ್ನು’ ಹಾಡುಗಳ ಮಾಲೀಕತ್ವ ತಮ್ಮದಾಗಿದ್ದು, ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ದೂರು ದಾಖಲಿಸಿತ್ತು.

ರಕ್ಷಿತ್ ಶೆಟ್ಟಿ ತಂಡವು ತಮ್ಮ ಪರವಾಗಿ, ಬಳಸಿದ ಸಮಯ ಕಡಿಮೆ—‘ನ್ಯಾಯ ಎಲ್ಲಿದೆ’ 7 ಸೆಕೆಂಡ್, ‘ಒಮ್ಮೆ ನಿನ್ನನ್ನು’ 31 ಸೆಕೆಂಡ್ ಮಾತ್ರ—ಅದು ಹಕ್ಕು ಉಲ್ಲಂಘನೆ ಅಲ್ಲ ಎಂದು ವಾದಿಸಿತ್ತು.

ನ್ಯಾಯಾಲಯವು ಈ ವಾದ ತಿರಸ್ಕರಿಸಿ, “ಹಾಡುಗಳು ಕೇವಲ ಹಿನ್ನೆಲೆ ಸೃಜನಾತ್ಮಕ ಅಂಶವಲ್ಲ, ವಾಣಿಜ್ಯ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ ಬಳಸಲಾಗಿದೆ. ಪಾತ್ರದ ಸಂಕಷ್ಟಕ್ಕೆ ಬೆಂಬಲ ನೀಡಲು ಹಾಡು ಬಳಕೆ ಹಕ್ಕು ಉಲ್ಲಂಘನೆಯಾಗಿದೆ” ಎಂದು ಹೇಳಿದೆ.

20 ಲಕ್ಷ ರೂಪಾಯಿಗಳನ್ನು ಠೇವಣಿಯಾಗಿ ‘ಎಮ್‌ಆರ್‌ಟಿ ಮ್ಯೂಸಿಕ್’ ಗೆ ನೀಡುವಂತೆ ಕೋರ್ಟ್ ಆದೇಶಿಸಿದೆ. ಆದೇಶ ವಿಳಂಬವಾದಲ್ಲಿ 5 ಲಕ್ಷ ಹೆಚ್ಚುವರಿ ದಂಡ ಕೂಡ ವಿಧಿಸಲಾಗಿದೆ.

ಜೈಲು ಶಿಕ್ಷೆಯನ್ನು ಬಿಡಲು ವಿನಾಯಿತಿ ನೀಡಿದರೂ, ಹಣಕಾಸಿನ ವಿಭಾಗದಲ್ಲಿ ಕಟ್ಟುನಿಟ್ಟಿನ ನಿರ್ಧಾರ ರಕ್ಷಿತ್ ಶೆಟ್ಟಿಗೆ ಕಠಿಣ ಸಂದೇಶ ನೀಡುತ್ತಿದೆ.

ಜನತೆಗೆ ಮತ್ತೊಂದು ಶಾಕ್: ಶೆಲ್ ಪೆಟ್ರೋಲ್-ಡೀಸೆಲ್ ದರ ಏರಿಕೆ!

ಬೆಂಗಳೂರು: ಪೆಟ್ರೋಲ್, ಡೀಸೆಲ್ ಕೊರತೆ ವದಂತಿ ನಡುವೆಯೇ ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ ಮತ್ತೊಂದು ದರ ಏರಿಕೆಯನ್ನು ಘೋಷಿಸಿದೆ.

ಕಳೆದ 15 ದಿನಗಳಲ್ಲಿ ಮೂರು ಬಾರಿ ದರ ಏರಿಕೆ ಮಾಡಿರುವ ಶೆಲ್, ಇಂದು ಪ್ರೀಮಿಯಂ ಮತ್ತು ಸಾಮಾನ್ಯ ಪೆಟ್ರೋಲ್, ಡೀಸೆಲ್ ದರಗಳನ್ನು ಮತ್ತೆ ಹೆಚ್ಚಿಸಿದೆ.

ಸಾಮಾನ್ಯ ಪೆಟ್ರೋಲ್:

  • ಮೊದಲು: 106 ರೂ.
  • ನಾಲ್ಕು ದಿನದ ಹಿಂದೆ: 112 ರೂ.
  • ಇಂದಿನ ದರ: 119.8 ರೂ.
  • ಲೀಟರ್‌ಗೆ ಏರಿಕೆ: 7 ರೂ.

ಪ್ರೀಮಿಯಂ ಪೆಟ್ರೋಲ್:

  • ಮೊದಲು: 122.42 ರೂ.
  • ಇಂದಿನ ದರ: 129.8 ರೂ.

ಸಾಮಾನ್ಯ ಡೀಸೆಲ್:

  • ಮೊದಲು: 91 ರೂ.
  • ನಾಲ್ಕು ದಿನದ ಹಿಂದೆ: 98 ರೂ.
  • ಇಂದಿನ ದರ: 123 ರೂ.
  • ಲೀಟರ್‌ಗೆ ಏರಿಕೆ: 25 ರೂ.

ಪ್ರೀಮಿಯಂ ಡೀಸೆಲ್:

  • ಮೊದಲು: 108.50 ರೂ.
  • ಇಂದಿನ ದರ: 133 ರೂ.

ಈ ಏರಿಕೆ ಜನರಿಗೆ ಭಾರೀ ಹೊಡೆತ ಕೊಟ್ಟಿದ್ದು, ವಾಹನ ಖರ್ಚು ಮತ್ತು ದಿನನಿತ್ಯದ ಸಾರಿಗೆ ಮೇಲೆ ಪ್ರಭಾವ ಬೀರುತ್ತದೆ.

 

ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ! ಮನೆಯಲ್ಲಿ ಈ ಗಿಡಗಳಿದ್ದರೆ ತಕ್ಷಣ ಹೊರಗೆ ಹಾಕಿ!

0

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತು ಧನಾತ್ಮಕ ಅಥವಾ ನಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ.

ಗಿಡಗಳು ಪ್ರಕೃತಿಯ ಸಂಕೇತವಾಗಿದ್ದರೂ, ಕೆಲವು ನಿರ್ದಿಷ್ಟ ಗಿಡಗಳನ್ನು ಮನೆಯೊಳಗೆ ಅಥವಾ ಆವರಣದಲ್ಲಿ ಬೆಳೆಸುವುದು ಅಶುಭವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಮುಳ್ಳಿನ ಗಿಡಗಳು:
ಮುಳ್ಳಿನ ಗಿಡಗಳನ್ನು ಮನೆಯ ಒಳಗೆ ಇಡಬಾರದು. ಕಳ್ಳಿ ಗಿಡ ಅಥವಾ ಕ್ಯಾಕ್ಟಸ್‌ನಂತಹ ಮುಳ್ಳಿನ ಸಸ್ಯಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡುತ್ತವೆ ಎಂದು ನಂಬಲಾಗಿದೆ. ಇವು ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯ, ಜಗಳ ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಆದರೆ, ಗುಲಾಬಿ ಗಿಡವನ್ನು ಇದಕ್ಕೆ ಹೊರತಾಗಿ ನೋಡಲಾಗುತ್ತದೆ; ಇದನ್ನು ಮನೆಯ ಹೊರಗಿನ ಅಂಗಳದಲ್ಲಿ ಬೆಳೆಸಬಹುದು.

ಬೋನ್ಸಾಯ್ ಗಿಡಗಳು:
ಬೋನ್ಸಾಯ್ ಗಿಡಗಳು “ಕುಂಠಿತ ಬೆಳವಣಿಗೆ” ಪ್ರತಿನಿಧಿಸುತ್ತವೆ. ದೊಡ್ಡ ಮರವನ್ನು ಕೃತಕವಾಗಿ ಚಿಕ್ಕದಾಗಿಸುವುದರಿಂದ, ಮನೆಯ ಸದಸ್ಯರ ವೃತ್ತಿಜೀವನ ಮತ್ತು ವೈಯಕ್ತಿಕ ಪ್ರಗತಿಗೆ ಅಡ್ಡಪರಿಣಾಮ ಬೀರಬಹುದು.

ಹಾಲಿನಂತಹ ದ್ರವ ಹೊಡೆಯುವ ಗಿಡಗಳು:
ಎಲೆ ಅಥವಾ ಕೊಂಬೆಯನ್ನು ಮುರಿದಾಗ ಹಾಲಿನಂತಹ ಬಿಳಿ ದ್ರವ ಹೊರಬರುವ ಗಿಡಗಳನ್ನು ಮನೆಯಲ್ಲಿ ಇಡಬಾರದು. ಇವು ಶಾಂತಿ, ನೆಮ್ಮದಿ ಹಾಗೂ ಆರ್ಥಿಕ ಸ್ಥಿತಿಗೆ ಹಾನಿ ಮಾಡಬಹುದು.

ರಬ್ಬರ್ ಮತ್ತು ಇತರ ಗಿಡಗಳು:
ರಬ್ಬರ್ ಗಿಡವನ್ನು ಮನೆಯ ಹೊರಗೆ ಇಡುವುದು ಉತ್ತಮ, ಆದರೆ ಪ್ರವೇಶ ದ್ವಾರ ಅಥವಾ ಬೆಡ್‌ರೂಮ್‌ನಲ್ಲಿ ಬೇಡ. ಒಣಗಿದ ಅಥವಾ ಬಾಡಿಹೋದ ಗಿಡಗಳು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತವೆ.

ಮನೆಯ ಹತ್ತಿರ ಬೆಳೆದಾಗ ಹಾನಿ ಮಾಡುವ ಗಿಡಗಳು:
ಹುಣಸೆ ಮರ ಮತ್ತು ಖರ್ಜೂರದ ಮರಗಳನ್ನು ಮನೆಯ ತೀರ ಹತ್ತಿರದಲ್ಲಿ ಬೆಳೆಸಬಾರದು. ಹುಣಸೆ ಮರವು ನಕಾರಾತ್ಮಕ ಶಕ್ತಿಗಳನ್ನು ಸೆಳೆಯುತ್ತದೆಯೆಂದು, ಖರ್ಜೂರ ಮರವು ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡಿದ್ದಾರೆ.

ಗ್ಯಾಸ್ ಅಭಾವದ ನಡುವೆಯೇ ವಾಣಿಜ್ಯ LPG ಸಿಲಿಂಡರ್ ದರ ಏರಿಕೆ| ಈಗ ಎಷ್ಟಿದೆ?

0

ನವದೆಹಲಿ: ಗ್ಯಾಸ್ ಅಭಾವದ ನಡುವೆಯೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಹಣಕಾಸು ವರ್ಷದ ಮೊದಲ ದಿನವೇ ದೇಶದ ಜನತೆಗೆ ಶಾಕ್‌ ಕೊಟ್ಟಿದೆ.

ಹಣಕಾಸು ವರ್ಷ ಪ್ರಾರಂಭವಾಗಿದೆ. ಈಗಾಗಲೇ ಏಪ್ರಿಲ್ ತಿಂಗಳನ್ನ ದುಬಾರಿ ತಿಂಗಳು ಎಂದೇ ಕರೆಯಲಾಗುತ್ತಿದೆ. ಇದರ ಬೆನ್ನಲ್ಲಿಯೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರವು ದೇಶದ ಜನತೆಗೆ ಶಾಕ್‌ ಕೊಟ್ಟಿದೆ. ಇದಕ್ಕೂ ಮೊದಲು, ಮಾರ್ಚ್ 1 ರಂದು, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನ 114.5 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಇದು ಕಳೆದ ಒಂದು ತಿಂಗಳಲ್ಲಿ 2ನೇ ಬಾರಿಗೆ ಮಾಡಿದ ಬೆಲೆ ಏರಿಕೆಯಾಗಿದೆ. ಸದ್ಯ ಗೃಹಬಳಕೆ ಸಿಲಿಂಡರ್‌ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. 14.2 ಕೆಜಿ ಸಿಲಿಂಡರ್‌ ಬೆಲೆ ಮಾ.7 ರಂದು ಕೊನೆಯದ್ದಾಗಿ 60 ರೂ.ಗಳಿಗೆ ಹೆಚ್ಚಿಸಲಾಗಿತ್ತು. ದೆಹಲಿಯಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆ 913 ರೂ. ಬೆಲೆಗೆ ಮಾರಾಟವಾಗುತ್ತಿದೆ.

ಮೊದಲೇ ಸಿಲಿಂಡರ್ ಸಿಗ್ತಿಲ್ಲ ಎಂದು ಹೋಟೆಲ್ ಉದ್ಯಮಿಗಳು ಪರದಾಡುತ್ತಿರುವ ಸಂದರ್ಭದಲ್ಲಿ ಈ ಬೆಲೆ ಏರಿಕೆ ಇನ್ನಷ್ಟು ಸಂಕಷ್ಟ ತಂದೊಡ್ಡಿದೆ. ಮಧ್ಯಪ್ರಾಚ್ಯ ದೇಶಗಳ ಯುದ್ಧದಿಂದಾಗಿ ಭಾರತದಲ್ಲಿ ತೈಲ ಅಭಾವ ಉಂಟಾಗಿದ್ದು, ಇದರಿಂದ ಹೋಟೆಲ್ ಮಾಲೀಕರು ಸೇರಿ ಜನತೆ ಕಂಗಾಲಾಗಿದ್ದಾರೆ.

ಟೋಲ್ ದರ ಹೆಚ್ಚಳ: ಮೈಸೂರು–ಬೆಂಗಳೂರು ಪ್ರಯಾಣ ಇನ್ನಷ್ಟು ದುಬಾರಿ!

ಮಂಡ್ಯ: ಹಣಕಾಸು ವರ್ಷದ ಮೊದಲ ದಿನವೇ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಟೋಲ್ ದರ ಏರಿಕೆಯಾಗಿದ್ದು, ವಾಹನ ಸವಾರರಿಗೆ ಹೆಚ್ಚುವರಿ ಹೊರೆ ಉಂಟಾಗಿದೆ.

ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆಯ ನಡುವೆಯೇ ಇದೀಗ ಟೋಲ್ ದರ ಹೆಚ್ಚಳ ಮತ್ತಷ್ಟು ಸಂಕಷ್ಟ ತಂದಿದೆ.

ಎಕ್ಸ್‌ಪ್ರೆಸ್‌ವೇಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಹಾಗೂ ರಾಮನಗರದ ಗಣಮಿಣಕಿ ಬಳಿ ಇರುವ ಎರಡು ಟೋಲ್ ಪ್ಲಾಜಾಗಳಲ್ಲಿ ಒಂದೇ ಮಾದರಿಯಲ್ಲಿ ದರ ಹೆಚ್ಚಿಸಲಾಗಿದೆ. ಪ್ರತಿ ಟೋಲ್‌ನಲ್ಲಿ 5 ರೂ.ರಿಂದ 25 ರೂ.ವರೆಗೆ ಹೆಚ್ಚಳ ಮಾಡಲಾಗಿದೆ.

118 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಕಾರಿನಲ್ಲಿ ಸಂಚರಿಸುವವರಿಗೆ ಪ್ರತಿ ಟೋಲ್‌ಗೆ 5 ರೂ. ಹೆಚ್ಚಳವಾಗಿದ್ದು, ಎರಡು ಟೋಲ್‌ಗಳಿಂದ ಒಟ್ಟು 10 ರೂ. ಹೆಚ್ಚುವರಿ ಪಾವತಿಸಬೇಕಾಗಿದೆ. ಮೊದಲು ಮೈಸೂರು–ಬೆಂಗಳೂರು ಪ್ರಯಾಣಕ್ಕೆ 345 ರೂ. ಟೋಲ್ ಕಟ್ಟಬೇಕಾಗಿದ್ದರೆ, ಈಗ ಅದು 355 ರೂ.ಗೆ ಏರಿಕೆಯಾಗಿದೆ.

ವಾಹನವಾರು ಹೊಸ ಟೋಲ್ ದರಗಳು:

  • ಕಾರು/ವ್ಯಾನ್/ಜೀಪ್: 170 ರೂ. → 175 ರೂ. (ಏರಿಕೆ 5 ರೂ.)
  • ಲಘು ವಾಹನ/ಮಿನಿ ಬಸ್: 275 ರೂ. → 280 ರೂ. (ಏರಿಕೆ 5 ರೂ.)
  • ಟ್ರಕ್/ಬಸ್ (2 ಆಕ್ಸ್‌ಲ್): 570 ರೂ. → 585 ರೂ. (ಏರಿಕೆ 15 ರೂ.)
  • 3 ಆಕ್ಸ್‌ಲ್ ವಾಣಿಜ್ಯ ವಾಹನ: 625 ರೂ. → 640 ರೂ. (ಏರಿಕೆ 15 ರೂ.)
  • 4–6 ಆಕ್ಸ್‌ಲ್ ವಾಹನ: 900 ರೂ. → 920 ರೂ. (ಏರಿಕೆ 20 ರೂ.)
  • 7ಕ್ಕಿಂತ ಹೆಚ್ಚು ಆಕ್ಸ್‌ಲ್ ವಾಹನ: 1,095 ರೂ. → 1,120 ರೂ. (ಏರಿಕೆ 25 ರೂ.)

ಟೋಲ್ ದರ ಈಗಾಗಲೇ ಹೆಚ್ಚಿದ್ದ ಹಿನ್ನೆಲೆ ಮತ್ತಷ್ಟು ಏರಿಕೆ ಮಾಡಿರುವುದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ರೀತಿಯಾಗಿ ದರ ಹೆಚ್ಚಿಸುತ್ತ ಹೋದರೆ ಕಾರು ಓಡಿಸುವುದೇ ಕಷ್ಟ” ಎಂದು ಕೆಲ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ಶೀಘ್ರವೇ ಇರಾನ್ ವಿರುದ್ಧದ ಯುದ್ಧ ಅಂತ್ಯವಾಗಲಿದೆ: ಡೊನಾಲ್ಡ್ ಟ್ರಂಪ್

0

ವಾಷಿಂಗ್ಟನ್: ಮುಂದಿನ 2-3 ವಾರಗಳಲ್ಲಿ ಇರಾನ್ ವಿರುದ್ಧದ ಯುದ್ಧ ಅಂತ್ಯವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇಂಧನ ಬೆಲೆ ಏರಿಕೆ ಪರಿಣಾಮ ಕುರಿತು ಮಾತನಾಡಿದ ಟ್ರಂಪ್, ಇರಾನ್ ವಿರುದ್ಧದ ಯುದ್ಧ ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ ಅಂತ್ಯಗೊಳ್ಳಲಿದೆ. ನಾವು ನಮ್ಮ ಕೆಲಸವನ್ನು ಮುಗಿಸುತ್ತಿದ್ದೇವೆ. ಬಹುಶಃ ಎರಡು ಅಥವಾ ಮೂರು ವಾರಗಳಲ್ಲಿ ನಾವು ಮುಗಿಸಲಿದ್ದೇವೆ. ನಾವು ಬೇಗನೇ ಇರಾನ್ ಬಿಟ್ಟು ಹೋಗಬೇಕಿದೆ. ಇರಾನ್‌ನಲ್ಲಿ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಕೊನೆಗೊಳಿಸಲಾಗುವುದು. ಇರಾನ್ ಸೋಲಿನ ಸನಿಹದಲ್ಲಿದೆ ಎಂದು ಹೇಳಿದ್ದಾರೆ.

ಅಮೆರಿಕದ ಕಾರ್ಯಾಚರಣೆಯ ಅಂತ್ಯವು ಇರಾನ್‌ನ ಜೊತೆ ಯಾವುದೇ ಒಪ್ಪಂದ ಅವಲಂಬಿಸಿಲ್ಲ. ಅವರು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಿಲ್ಲ. ಇರಾನ್‌ಗೆ ಅಣ್ವಸ್ತ್ರ ತಯಾರಿಸಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿದಾಗ ನಾವು ಹೊರಡುತ್ತೇವೆ. ಒಂದು ವೇಳೆ ರಾಜತಾಂತ್ರಿಕವಾಗಿ ಪರಿಹಾರ ದೊರಕಿದರೆ ಯುದ್ಧ ಇನ್ನೂ ಬೇಗನೇ ಕೊನೆಗೊಳ್ಳಬಹುದು. ಅವರು ಸಹ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆ. ನಮಗಿಂತಲೂ ಹೆಚ್ಚಾಗಿ ಅವರೇ ಬಯಸುತ್ತಿದ್ದಾರೆ ಎಂದಿದ್ದಾರೆ.

ಬೆಂಗಳೂರಿಗರಿಗೆ ಬಿಗ್ ಶಾಕ್: ಇಂದಿನಿಂದ ನೀರಿನ ಶುಲ್ಕ ಶೇ.3% ಹೆಚ್ಚಳ

ಬೆಂಗಳೂರು: ಇಂದಿನಿಂದ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಶುಲ್ಕ ಶೇ.3% ರಷ್ಟು ಹೆಚ್ಚಳವಾಗಲಿದ್ದು, ಸಿಟಿ ಮಂದಿಗೆ ಮತ್ತಷ್ಟು ಹೊರೆಯಾಗಲಿದೆ.

ಆರ್ಥಿಕ ಸಂಕಷ್ಟದಿಂದ ಹೊರಬರುವ ಉದ್ದೇಶದೊಂದಿಗೆ ಜಲಮಂಡಳಿಯು ಈ ನಿರ್ಧಾರ ಕೈಗೊಂಡಿದೆ. ಪ್ರತಿ ವರ್ಷದಂತೆ ಆರ್ಥಿಕ ಸಮತೋಲನವನ್ನ ಸರಿದೂಗಿಸಲು ಶೇ.3 ರಷ್ಟು ನೀರಿನ ಶುಲ್ಕ ಹೆಚ್ಚಿಸಿದೆ. ಈ ತಿಂಗಳ ಬಿಲ್‌ನಿಂದಲೇ ದರ ಅನ್ವಯವಾಗಲಿದೆ. ಪರಿಣಾಮ ಏಪ್ರಿಲ್‌ ತಿಂಗಳಿನಿಂದ ಗೃಹ ಬಳಕೆದಾರರಿಗೆ ಮಾಸಿಕ ಸರಾಸರಿ 20 ರಿಂದ 30 ರೂ. ಹೆಚ್ಚುವರಿ ನೀರಿನ ಬಿಲ್‌ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಪರಿಷ್ಕೃತ ದರ ಹಿನ್ನೆಲೆ ಗೃಹ ಬಳಕೆದಾರರಿಗೆ ಸ್ಲ್ಯಾಬ್ ಗಳ ಆಧಾರದಡಿ ಸುಮಾರು ಪ್ರತಿ ಲೀಟರ್ ಗೆ 0.15 ಪೈಸೆಯಿಂದ 1 ಪೈಸೆವರೆಗೆ ಹೆಚ್ಚಳವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ಪ್ರತಿ ಲೀಟರ್‌ಗೆ 1.90 ಪೈಸೆ ಏರಿಕೆ ಆಗಲಿದೆ. ಕಳೆದ ವರ್ಷವೂ ಇದೇ ಮಾದರಿಯಲ್ಲಿ ನೀರು ಬಳಕೆ ಶುಲ್ಕ ಹೆಚ್ಚಿಸಲಾಗಿತ್ತು. ಇದೀಗ ಏಪ್ರಿಲ್‌ ತಿಂಗಳಿನಿಂದ ಅನ್ವಯವಾಗುವಂತೆ ಮತ್ತೆ ಶೇ.3ರಷ್ಟು ನೀರಿನ ಬಿಲ್‌ ಹೆಚ್ಚಳ ಮಾಡಲಾಗುತ್ತಿದೆ.

ಗೃಹ ಬಳಕೆದಾರರ ದರಸಂಶೋಧನೆ:

  • 8,000 ಲೀಟರ್ ಒಳಗಿನ ಬಳಕೆ: ಲೀಟರ್ ಗೆ 0.15 ಪೈಸೆ
  • 8,000–25,000 ಲೀಟರ್ ಬಳಕೆ: ಲೀಟರ್ ಗೆ 0.30 ಪೈಸೆ
  • 25,000–50,000 ಲೀಟರ್ ಬಳಕೆ: ಲೀಟರ್ ಗೆ 0.80 ಪೈಸೆ
  • 50,000–1 ಲಕ್ಷ ಲೀಟರ್ ಬಳಕೆ: ಲೀಟರ್ ಗೆ 1 ಪೈಸೆ

ವಾಣಿಜ್ಯ ಬಳಕೆದಾರರ ದರಸಂಶೋಧನೆ:

  • 10,000 ಲೀಟರ್ ಒಳಗಿನ ಬಳಕೆ: ಲೀಟರ್ ಗೆ 1 ಪೈಸೆ
  • 10,000–25,000 ಲೀಟರ್ ಬಳಕೆ: ಲೀಟರ್ ಗೆ 1.30 ಪೈಸೆ
  • 25,000–50,000 ಲೀಟರ್ ಬಳಕೆ: ಲೀಟರ್ ಗೆ 1.50 ಪೈಸೆ
  • 50,000–75,000 ಲೀಟರ್ ಬಳಕೆ: ಲೀಟರ್ ಗೆ 1.90 ಪೈಸೆ

ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯ ಸಾಧ್ಯತೆ! ಇಂದಿನ ಹವಾಮಾನ ವರದಿ ಹೀಗಿದೆ

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಮಳೆಯ ತೀವ್ರತೆ ಹೆಚ್ಚುತ್ತಿದೆ.

ಅದರಂತೆ ಇಂದು ಕೂಡ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೀದರ್, ಕಲಬುರ್ಗಿ, ಯಾದಗಿರಿ, ವಿಜಯಪುರ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಸೂಚಿಸಿದೆ.

ಇದರ ಜೊತೆಗೆ, ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಯಾದಗಿರಿ, ಕಲಬುರ್ಗಿ, ಬೀದರ್, ಗದಗ, ರಾಯಚೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಹ ಮಳೆಯ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ನಗರ-ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಗಾಳಿ 30-40 ಕೀ.ಮಿ/ಗಂ ವೇಗದಲ್ಲಿ ಗಾಳಿ ಮಳೆ ಜೋರಾಗಿರಲಿದೆ. ಉಳಿದೆಡೆ ಒಣ ಹವೆಯ ವಾತಾವರಣವಿರಲಿದೆ.

 

 

error: Content is protected !!