Home Blog

ಚರಂಡಿ ಕಾಮಗಾರಿಗೆ ₹50 ಲಕ್ಷ; ?

0

ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ನಗರೋತ್ಥಾನ ಹಂತ-4 ಯೋಜನೆಯಡಿ ವಾರ್ಡ್ ನಂ.7ರಲ್ಲಿ ಕೈಗೊಂಡಿರುವ ಚರಂಡಿ ನಿರ್ಮಾಣ ಕಾಮಗಾರಿ ಕಳಪೆ ಹಾಗೂ ಅರ್ಧಂಬರ್ಧವಾಗಿದ್ದು, ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ ಎಂದು ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಆರೋಪಿಸಿದ್ದಾರೆ.

ವಾರ್ಡ್‌ನ ಉಮನಾಬಾದಿ ಮನೆಯಿಂದ ಮಾಳೋದೆಯವರ ಮಾರ್ಗವಾಗಿ ಕನ್ಯಾಳ ಅಗಸಿವರೆಗೆ ಹಾಗೂ ಟೆಂಗಿನಕಾಯಿ ಬಜಾರ್‌ನ ಪುಣೇಕರ ಮನೆಯಿಂದ ಬೆಟಗೇರಿ ಬಸ್ ನಿಲ್ದಾಣದವರೆಗೆ ಚರಂಡಿ ನಿರ್ಮಾಣಕ್ಕೆ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕೆ.ವಿ.ಆರ್. ಕನ್‌ಸ್ಟ್ರಕ್ಷನ್ ಸಂಸ್ಥೆ ನಿಗದಿತ ಸ್ಥಳಗಳ ಬದಲಿಗೆ ಕೆಲವೇ ಭಾಗಗಳಲ್ಲಿ ಕಾಮಗಾರಿ ನಡೆಸಿ, ಉಳಿದ ಕಡೆ ಕಾಮಗಾರಿ ಅಪೂರ್ಣವಾಗಿ ಬಿಟ್ಟಿದೆ ಎಂದು ಅವರು ದೂರಿದ್ದಾರೆ.

ನಿರ್ಮಿಸಿರುವ ಚರಂಡಿಗಳ ಮೇಲೂ ಸಾರ್ವಜನಿಕರ ಸಂಚಾರಕ್ಕೆ ಅಗತ್ಯವಾದ ಸಿ.ಡಿ.ಗಳನ್ನು ಅಳವಡಿಸಿಲ್ಲ. ಪರಿಣಾಮ ಜನರು ಚರಂಡಿ ದಾಟಲು ಪರದಾಡುವಂತಾಗಿದೆ. ಅಲ್ಲದೆ, ಕಾಮಗಾರಿಯಲ್ಲಿ ಗುಣಮಟ್ಟದ ಸಾಮಗ್ರಿ ಬಳಸದೇ, ಅಗತ್ಯ ಪೈಪ್‌ಗಳನ್ನು ಅಳವಡಿಸದ ಕಾರಣ ನೀರು ಸರಾಗವಾಗಿ ಹರಿಯದೆ ಕೊಳಚೆ ನೀರು ಸಂಗ್ರಹವಾಗುತ್ತಿದೆ. ಇದರಿಂದ ದುರ್ವಾಸನೆ ಹಾಗೂ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ ಎಂದು ಯಳವತ್ತಿ ಹೇಳಿದ್ದಾರೆ.

ನಾಲ್ಕು ಬಾರಿ ಮನವಿ; ಸ್ಥಳ ಪರಿಶೀಲನೆಯಾದರೂ ಪರಿಹಾರವಿಲ್ಲ

ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳಿಗೆ ಮೂರು-ನಾಲ್ಕು ಬಾರಿ ಲಿಖಿತ ಮನವಿ ಸಲ್ಲಿಸಲಾಗಿದೆ. ಬಳಿಕ ಜಿಲ್ಲಾ ಯೋಜನಾ ನಿರ್ದೇಶಕರು, ಮುಖ್ಯ ಕಾರ್ಯಪಾಲಕ ಅಭಿಯಂತರರು, ನಗರಸಭೆ ಪೌರಾಯುಕ್ತರು, ಅಭಿಯಂತರರು ಹಾಗೂ ಗುತ್ತಿಗೆ ಸಂಸ್ಥೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ಆದರೆ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆ ಸಂಸ್ಥೆಯು ಕಾಮಗಾರಿಗೆ ಸಂಬಂಧಿಸಿದ ನಿಗದಿತ ಮಾನದಂಡಗಳನ್ನು ಪಾಲಿಸದೆ ವಿಳಂಬ ಮಾಡುತ್ತಿದೆ. ಸಮರ್ಪಕ ಯಂತ್ರೋಪಕರಣ ಮತ್ತು ಕಾರ್ಮಿಕರ ಕೊರತೆಯ ನೆಪದಲ್ಲಿ ಕಾಮಗಾರಿ ಮುಂದೂಡಲಾಗುತ್ತಿದೆ. ಅಲ್ಲದೆ, ಮೂಲ ಗುತ್ತಿಗೆ ಸಂಸ್ಥೆ ಸ್ಥಳೀಯ ಸಬ್‌ಕಾಂಟ್ರಾಕ್ಟರ್‌ಗಳಿಗೆ ಕಾಮಗಾರಿ ವಹಿಸಿರುವುದರಿಂದ ಗುಣಮಟ್ಟ ಹಾಗೂ ಕಾಮಗಾರಿ ಪೂರ್ಣಗೊಳಿಸುವಿಕೆಯಲ್ಲಿ ಮತ್ತಷ್ಟು ಸಮಸ್ಯೆಯಾಗಿದೆ ಎಂದು ಆರೋಪಿಸಿದ್ದಾರೆ.

₹50 ಲಕ್ಷದ ಕಾಮಗಾರಿ; ಪೂರ್ಣಗೊಂಡಿದ್ದು ಎಷ್ಟು?

ವಾರ್ಡ್ ನಂ.7ರಲ್ಲಿ ಚರಂಡಿ ನಿರ್ಮಾಣಕ್ಕೆ ಸುಮಾರು ₹50 ಲಕ್ಷ ಅನುದಾನ ನಿಗದಿಯಾಗಿದ್ದು, ಈವರೆಗೆ ಅಂದಾಜು ₹20 ಲಕ್ಷದಷ್ಟು ಮಾತ್ರ ಕಾಮಗಾರಿ ನಡೆದಿದೆ. ಉಳಿದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಯಳವತ್ತಿ ಆರೋಪಿಸಿದ್ದಾರೆ.

ಅಂದಾಜು ಪತ್ರಿಕೆ ಸಿದ್ಧಪಡಿಸುವ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಕಚೇರಿಯಲ್ಲಿ ಕುಳಿತು ಅಂದಾಜು ರೂಪಿಸಿರುವುದರಿಂದ ಸಮಸ್ಯೆ ಎದುರಾಗಿದೆ. ವಾರ್ಡ್‌ನ ವಿವಿಧ ಭಾಗಗಳಲ್ಲಿ ಅಗತ್ಯವಿರುವ ಕಾಮಗಾರಿಗಳ ಸ್ಥಳಗಳನ್ನು ತಿಳಿಸಿದ್ದರೂ ಕೆಲವು ಪ್ರದೇಶಗಳನ್ನು ಅಂದಾಜು ಪತ್ರಿಕೆಯಲ್ಲಿ ಸೇರಿಸಿಲ್ಲ ಎಂದು ಅವರು ದೂರಿದ್ದಾರೆ. ಕಾಮಗಾರಿ ವಿಳಂಬ ಹಾಗೂ ಕಳಪೆ ಗುಣಮಟ್ಟದ ಕುರಿತು ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ. ಗದಗ-ಬೆಟಗೇರಿ ನಗರಸಭೆಯ ಇತರ ವಾರ್ಡ್‌ಗಳಲ್ಲಿಯೂ ಇದೇ ಸಂಸ್ಥೆಯ ಕಾಮಗಾರಿಗಳ ಬಗ್ಗೆ ದೂರುಗಳಿವೆ ಎಂದು ಆರೋಪಿಸಿರುವ ಯಳವತ್ತಿ, ಜಿಲ್ಲಾಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

“ಸಾರ್ವಜನಿಕರಿಗೆ ನಿತ್ಯ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆ.ವಿ.ಆರ್. ಕನ್‌ಸ್ಟ್ರಕ್ಷನ್ ಸಂಸ್ಥೆಯ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಕಳಪೆ ಹಾಗೂ ಅಪೂರ್ಣ ಕಾಮಗಾರಿಗೆ ಬಿಲ್ ಪಾವತಿಸಬಾರದು. ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿ, ಉಳಿದ ಅನುದಾನದಲ್ಲಿ ಅಗತ್ಯವಿರುವ ಕಡೆ ಸಮರ್ಪಕ ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು.”

— ರಾಘವೇಂದ್ರ ಯಳವತ್ತಿ, ನಗರಸಭೆ ಸದಸ್ಯ

ಕ್ಷಣಗಳನ್ನು ಶಾಶ್ವತಗೊಳಿಸಿದ ಗದಗದ ಕ್ಯಾಮೆರಾ ಕಣ್ಣುಗಳು

ವಿಜಯಸಾಕ್ಷಿ ಸುದ್ದಿ, ಗದಗ: ಕಣ್ಣಿಗೆ ಕಾಣುವ ಒಂದು ಕ್ಷಣವನ್ನು ಕ್ಯಾಮೆರಾದ ಕಣ್ಣಿನ ಮೂಲಕ ಸೆರೆಹಿಡಿದು, ಅದನ್ನು ಮುಂದಿನ ಪೀಳಿಗೆಗಳಿಗೂ ಉಳಿಸಿಕೊಡುವ ಛಾಯಾಗ್ರಾಹಕರ ಸೃಜನಶೀಲತೆ, ಪರಿಶ್ರಮ ಮತ್ತು ಕಲೆಯನ್ನು ಗೌರವಿಸುವ ದಿನವೇ ವಿಶ್ವ ಛಾಯಾಗ್ರಾಹಕರ ದಿನ. ಪ್ರತಿ ವರ್ಷ ಆಗಸ್ಟ್ 19ರಂದು ವಿಶ್ವದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ.

ಛಾಯಾಗ್ರಹಣವೆಂದರೆ ಕೇವಲ ಒಂದು ಚಿತ್ರ ತೆಗೆಯುವ ತಂತ್ರವಲ್ಲ; ಅದು ಕಾಲವನ್ನು ದಾಖಲಿಸುವ ಅಪೂರ್ವ ಕಲೆ. ಒಂದು ಛಾಯಾಚಿತ್ರದಲ್ಲಿ ವ್ಯಕ್ತಿಯ ಭಾವನೆ, ಸಮಾಜದ ಸ್ಥಿತಿ, ಪ್ರಕೃತಿಯ ಸೌಂದರ್ಯ, ಇತಿಹಾಸದ ಹೆಜ್ಜೆಗುರುತು ಹಾಗೂ ಬದುಕಿನ ಅನೇಕ ನೆನಪುಗಳು ಅಡಗಿರುತ್ತವೆ. ಮಾತುಗಳಿಂದ ಹೇಳಲಾಗದ ಭಾವವನ್ನೂ ಒಂದು ಉತ್ತಮ ಛಾಯಾಚಿತ್ರ ಹೇಳಬಲ್ಲದು. ಹೀಗಾಗಿಯೇ ಕೆಲವೊಮ್ಮೆ ಒಂದು ಚಿತ್ರವೇ ಸಾವಿರಾರು ಪದಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾತನಾಡುತ್ತದೆ.

ಸಾಮಾನ್ಯ ದೃಶ್ಯದಲ್ಲಿಯೂ ಅಸಾಮಾನ್ಯ ಸೌಂದರ್ಯವನ್ನು ಕಂಡುಕೊಳ್ಳುವ ದೃಷ್ಟಿ ಛಾಯಾಗ್ರಾಹಕನದ್ದು. ಬೆಳಕು–ನೆರಳು, ಬಣ್ಣ–ಭಾವ, ಕ್ಷಣ–ಕಾಲ ಇವೆಲ್ಲವನ್ನೂ ಸಮನ್ವಯಗೊಳಿಸಿ ಚಿತ್ರಕ್ಕೆ ಜೀವ ತುಂಬುವ ಕಲೆ ಅವನದು. ಸರಿಯಾದ ಕ್ಷಣವನ್ನು ಗುರುತಿಸುವ ದೃಷ್ಟಿ, ಬೆಳಕಿನ ಅರಿವು, ಸಂಯೋಜನೆಯ ಪ್ರಜ್ಞೆ ಮತ್ತು ವಿಷಯದ ಮೇಲಿನ ಸೂಕ್ಷ್ಮ ಸಂವೇದನೆ ಒಬ್ಬ ಉತ್ತಮ ಛಾಯಾಗ್ರಾಹಕನನ್ನು ರೂಪಿಸುತ್ತವೆ.

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್‌ಗಳಲ್ಲಿಯೇ ಅತ್ಯಾಧುನಿಕ ಕ್ಯಾಮೆರಾಗಳು ಲಭ್ಯವಿದ್ದು, ಪ್ರತಿಯೊಬ್ಬರೂ ಛಾಯಾಚಿತ್ರ ತೆಗೆಯಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಚಿತ್ರ ತೆಗೆಯುವುದು ಬೇರೆ, ಚಿತ್ರವನ್ನು ಸೃಷ್ಟಿಸುವುದು ಬೇರೆ. ಕ್ಯಾಮೆರಾ ಕೈಯಲ್ಲಿರುವುದರಿಂದ ಮಾತ್ರ ಯಾರೂ ಛಾಯಾಗ್ರಾಹಕರಾಗುವುದಿಲ್ಲ. ಒಂದು ಕ್ಷಣದ ಮಹತ್ವವನ್ನು ಗುರುತಿಸಿ, ಅದರ ಹಿಂದೆ ಇರುವ ಕಥೆಯನ್ನು ಅರಿತು, ಅದನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ದೃಷ್ಟಿಯೇ ಛಾಯಾಗ್ರಾಹಕನ ನಿಜವಾದ ಶಕ್ತಿ.

ರೂಪದರ್ಶಿ ಛಾಯಾಗ್ರಹಣ, ನಿಸರ್ಗ ಛಾಯಾಗ್ರಹಣ, ವಾಣಿಜ್ಯ ಛಾಯಾಗ್ರಹಣ, ಪತ್ರಿಕೋದ್ಯಮ ಛಾಯಾಗ್ರಹಣ, ಫಿಲ್ಮ್ ಫೋಟೋಗ್ರಫಿ ಸೇರಿದಂತೆ ಹಲವು ಪ್ರಕಾರಗಳ ಛಾಯಾಗ್ರಾಹಕರು ನಮ್ಮ ನಡುವೆ ಇದ್ದಾರೆ. ಹವ್ಯಾಸಿ ಛಾಯಾಗ್ರಾಹಕರೂ ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನದಿಂದ ಈ ಕಲೆಯನ್ನು ಶ್ರೀಮಂತಗೊಳಿಸುತ್ತಿದ್ದಾರೆ.

ಸುದ್ದಿ ಛಾಯಾಗ್ರಾಹಕರು ಸಮಾಜದ ಆಗುಹೋಗುಗಳನ್ನು ದಾಖಲಿಸುತ್ತಾರೆ. ಪ್ರಕೃತಿ ಛಾಯಾಗ್ರಾಹಕರು ಪರಿಸರದ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುತ್ತಾರೆ. ವನ್ಯಜೀವಿ ಛಾಯಾಗ್ರಾಹಕರು ಅಪರೂಪದ ಜೀವಿಗಳ ಬದುಕನ್ನು ನಮ್ಮ ಕಣ್ಣಮುಂದೆ ತರುತ್ತಾರೆ. ಕಲಾತ್ಮಕ ಛಾಯಾಗ್ರಾಹಕರು ಕಲ್ಪನೆ ಮತ್ತು ಸೌಂದರ್ಯದ ಹೊಸ ಲೋಕವನ್ನು ನಿರ್ಮಿಸುತ್ತಾರೆ. ಹೀಗೆ ಛಾಯಾಗ್ರಹಣದ ಪ್ರತಿಯೊಂದು ಕ್ಷೇತ್ರವೂ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.

ಒಂದು ಹಳೆಯ ಛಾಯಾಚಿತ್ರವನ್ನು ನೋಡಿದಾಗ ನಾವು ಕೇವಲ ಮುಖಗಳನ್ನು ನೋಡುವುದಿಲ್ಲ; ಅದರೊಂದಿಗೆ ಒಂದು ಕಾಲಘಟ್ಟವನ್ನೇ ಮರುಕಾಣುತ್ತೇವೆ. ಕುಟುಂಬದ ನೆನಪುಗಳಿಂದ ಹಿಡಿದು ಐತಿಹಾಸಿಕ ಘಟನೆಗಳವರೆಗೆ ಛಾಯಾಚಿತ್ರಗಳು ನಮ್ಮ ಸ್ಮೃತಿಯ ಅಮೂಲ್ಯ ದಾಖಲೆಗಳಾಗಿವೆ. ಕ್ಷಣ ಕಳೆದುಹೋಗಬಹುದು, ಕಾಲ ಮುಂದೆ ಸಾಗಬಹುದು; ಆದರೆ ಅದನ್ನು ಪ್ರೀತಿಯಿಂದ ಸೆರೆಹಿಡಿದ ಒಂದು ಛಾಯಾಚಿತ್ರ ಮಾತ್ರ ನೆನಪಾಗಿ ನಮ್ಮೊಂದಿಗೆ ಉಳಿಯುತ್ತದೆ.

ಗದಗದ ಛಾಯಾಗ್ರಹಣಕ್ಕಿದೆ ಸುದೀರ್ಘ ಇತಿಹಾಸ

ಗದಗ ಜಿಲ್ಲೆಯ ಪತ್ರಿಕಾ ಛಾಯಾಗ್ರಾಹಕರಿಗೆ ವಿಶೇಷ ಸ್ಥಾನಮಾನವಿದೆ. ಅವರ ಛಾಯಾಗ್ರಹಣದ ಪಯಣಕ್ಕೆ ಸುದೀರ್ಘ ಇತಿಹಾಸವೂ ಇದೆ. ಗದಗದಲ್ಲಿ ಛಾಯಾಗ್ರಹಣದ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದವರಲ್ಲಿ ನಾಗಪ್ಪ ಮಹೇಂದ್ರಕರ ಅವರ ಹೆಸರು ಪ್ರಮುಖವಾಗಿ ನೆನಪಾಗುತ್ತದೆ.

ನಾಗಪ್ಪ ಮಹೇಂದ್ರಕರ ಅವರು 1922ರಲ್ಲಿ ಸ್ಟುಡಿಯೋ ಆರಂಭಿಸಿದ್ದರು. ಮಹಾತ್ಮ ಗಾಂಧೀಜಿ ಜಕ್ಕಲಿ ಗ್ರಾಮಕ್ಕೆ ಆಗಮಿಸಿದ ಸಂದರ್ಭವನ್ನು ಸೆರೆಹಿಡಿದ ಹೆಗ್ಗಳಿಕೆಯೂ ನಾಗಪ್ಪ ಮಹೇಂದ್ರಕರ ಅವರದ್ದಾಗಿದೆ. ಛಾಯಾಗ್ರಹಣದ ಮೇಲಿನ ಅವರ ಆಸಕ್ತಿ ಹಾಗೂ ಬದ್ಧತೆ ಮುಂದಿನ ಪೀಳಿಗೆಗೂ ಸಾಗಿತು. ಅವರ ಐದು ಮಕ್ಕಳು—ಭೀಮರಾವ, ದತ್ತಾತ್ರೇಯ, ಶ್ರೀಧರ, ವಸಂತ ಮತ್ತು ಮಧುಕರ್—ಸಹ ಛಾಯಾಗ್ರಹಣ ಕ್ಷೇತ್ರದಲ್ಲಿಯೇ ತಮ್ಮ ಬದುಕನ್ನು ಕಟ್ಟಿಕೊಂಡರು.

ಇವರಲ್ಲಿ ವಸಂತ ಮಹೇಂದ್ರಕರ ಅವರು ತಮ್ಮ ವೃತ್ತಿ ಜೀವನದ ಅನೇಕ ಅಪರೂಪದ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಗದಗ ಕಾಟನ್ ಸೇಲ್ಸ್ ಸೊಸೈಟಿಗೆ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಆಗಮಿಸಿದ್ದ ಸಂದರ್ಭದಲ್ಲಿ ಅವರ ಚಿತ್ರವನ್ನು ತಾನೇ ತೆಗೆದಿರುವುದಾಗಿ ವಸಂತ ಮಹೇಂದ್ರಕರ ಅವರು ಹೆಮ್ಮೆ ಮತ್ತು ಅಭಿಮಾನದಿಂದ ಹೇಳುತ್ತಾರೆ. ಆ ನೆನಪುಗಳನ್ನು ಮೆಲುಕು ಹಾಕುವಾಗ ಅವರ ಕಂಗಳಲ್ಲಿ ಮೂರನೇ ಕಣ್ಣಿನಂತೆ ಕ್ಯಾಮೆರಾದ ಹಿಂದಿನ ಗತಕಾಲದ ಘಟನೆಗಳ ರೀಲುಗಳು ಚಕ್‌ಚಕ್‌ನೆ ಸುತ್ತಿದ ಅನುಭವವಾಗುತ್ತದೆ.

ಮಹೇಂದ್ರಕರ ಕುಟುಂಬದ ಮುಂದಿನ ಪೀಳಿಗೆಯವರೂ ಛಾಯಾಗ್ರಹಣ ಕ್ಷೇತ್ರದಿಂದ ದೂರವಾಗಲಿಲ್ಲ. ಅವರ ಮಕ್ಕಳು ಗುತ್ತಿಗೆ ಆಧಾರದ ಮೇಲೆ ವಿಶ್ವವಿದ್ಯಾಲಯದ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ನವೋದಯ ಹಾಗೂ ವಾರ್ತಾ ಇಲಾಖೆಯ ಛಾಯಾಗ್ರಾಹಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಸಹೋದರರೊಬ್ಬರು ಪೊಲೀಸ್ ಇಲಾಖೆಯ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದು, ಸಹೋದರರ ಮಗ ‘ಚೋಟು’ ಕಿತ್ತೂರು ಕರ್ನಾಟಕ ಪತ್ರಿಕೆಯ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗೆ ಒಂದು ಕುಟುಂಬವೇ ಹಲವು ದಶಕಗಳ ಕಾಲ ಛಾಯಾಗ್ರಹಣದೊಂದಿಗೆ ಬೆಸೆದುಕೊಂಡಿರುವುದು ಗದಗದ ಛಾಯಾಗ್ರಹಣ ಕ್ಷೇತ್ರದ ವಿಶೇಷತೆಯಾಗಿದೆ.

37 ವರ್ಷಗಳಿಂದ ಕ್ಯಾಮೆರಾ ಕೊರಳಲ್ಲಿಟ್ಟ ಬನೇಶ್ ಕುಲಕರ್ಣಿ

ಪ್ರಜಾವಾಣಿ ಪತ್ರಿಕೆಯ ಛಾಯಾಗ್ರಾಹಕ ಬನೇಶ್ ಕುಲಕರ್ಣಿ ಕಳೆದ 37 ವರ್ಷಗಳಿಂದ ಕ್ಯಾಮೆರಾವನ್ನು ಕೊರಳಿಗೆ ಹಾಕಿಕೊಂಡು ಛಾಯಾಗ್ರಹಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಟಿವಿ ಹಾಗೂ ಉದಯ ಟಿವಿಯಲ್ಲಿಯೂ ಕ್ಯಾಮೆರಾಮನ್ ಮತ್ತು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ ಅವರು, ಪ್ರಸ್ತುತ ಪ್ರಜಾವಾಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸುದ್ದಿ, ಘಟನೆ, ವ್ಯಕ್ತಿ ಮತ್ತು ಸಂದರ್ಭಗಳನ್ನು ನಿಖರವಾಗಿ ದಾಖಲಿಸುವ ಮೂಲಕ ಪತ್ರಿಕೋದ್ಯಮದ ಛಾಯಾಗ್ರಹಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ತಂದೆಯಿಂದ ಬಂದ ಛಾಯಾಗ್ರಹಣದ ಬಳುವಳಿ

ವಿಜಯ ಕರ್ನಾಟಕದ ಜಿಲ್ಲಾ ವರದಿಗಾರ ಸಲೀಂ ಬಳಬಟ್ಟಿ ಅವರ ಛಾಯಾಗ್ರಹಣದ ಆಸಕ್ತಿ ಹಾಗೂ ವಿಶೇಷ ದೃಷ್ಟಿಕೋನ ತಂದೆಯಿಂದ ಬಂದ ಬಳುವಳಿ. ಅವರ ತಂದೆ ಬಂಡಾಯ ಸಾಹಿತಿ, ಕವಿ, ರಂಗಭೂಮಿ ಕಲಾವಿದ ಹಾಗೂ ಛಾಯಾಗ್ರಾಹಕ ಬಿ. ಬಾಬು ಅವರಿಂದ ಛಾಯಾಗ್ರಹಣದ ಕಲೆಯನ್ನು ಕಲಿತು ಬೆಳೆಸಿಕೊಂಡಿದ್ದಾರೆ.

ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಲೀಂ ಬಳಬಟ್ಟಿ ಅವರು 2008ರಲ್ಲಿ ಕರ್ನಾಟಕ ಫೋಟೋ ನ್ಯೂಸ್ ಸಂಸ್ಥೆಯ ಫೋಟೋ ಜರ್ನಲಿಸ್ಟ್ ಆಗಿ ಸೇವೆ ಆರಂಭಿಸಿದರು. ಬಳಿಕ ಉದಯವಾಣಿ ಹಾಗೂ ಕನ್ನಡಪ್ರಭ ಪತ್ರಿಕೆಗಳಲ್ಲಿ ವರದಿಗಾರರಾಗಿ, ವಿಶ್ವವಾಣಿ ಪತ್ರಿಕೆಯಲ್ಲಿ ಉಪಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಪ್ರದರ್ಶನಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಕ್ಯಾಮೆರಾ ಕಟ್ಟಿದ ಕೊರಳು ನೂರು ಕೊರಳುಗಳ ಬಗ್ಗೆ ಚಿಂತಿಸಬೇಕು

ಕಳೆದ 34 ವರ್ಷಗಳಿಂದ ಕ್ಯಾಮೆರಾವನ್ನು ಕೊರಳಿಗೆ ಹಾಕಿಕೊಂಡು ಸಾಗುತ್ತಿರುವ ಜಂಗಮ ಮುತ್ತು ಹಾಳಕೇರಿ ಅವರು ಛಾಯಾಗ್ರಹಣವನ್ನು ಕೇವಲ ವೃತ್ತಿಯಾಗಿ ನೋಡದೆ, ಸಾಮಾಜಿಕ ಜವಾಬ್ದಾರಿಯನ್ನೂ ಹೊತ್ತ ಕಲೆಯಾಗಿ ಪರಿಗಣಿಸಿದ್ದಾರೆ.

“ಫೋಟೋಗ್ರಾಫರ್ ಚಿತ್ರ ಮಾತ್ರ ತೆಗೆಯುವುದಲ್ಲ, ತನ್ನನ್ನು ತಾನೇ ಪ್ರಶ್ನಿಸಿಕೊಳ್ಳಬೇಕು. ಕ್ಯಾಮೆರಾ ಕಟ್ಟಿದ ಕೊರಳು ನೂರು ಕೊರಳುಗಳ ಬಗ್ಗೆ ಚಿಂತಿಸಬೇಕು. ಪ್ರಚಲಿತ ಸಮಸ್ಯೆಗಳು, ಗ್ರಾಮೀಣ ಬದುಕು ಹಾಗೂ ಜನರ ಜೀವನದ ಬಗ್ಗೆ ಚಿಂತಿಸಬೇಕು” ಎಂಬುದು ಮುತ್ತು ಅವರ ಆಶಯ.

ಅಲೆಮಾರಿ ಕುರಿಗಾಯಿಗಳು ನೀರಿಗಾಗಿ ಅಲೆಯುವ ಬದುಕನ್ನು ಬಿಂಬಿಸುವ ಮುತ್ತು ಅವರು ತೆಗೆದ ಛಾಯಾಚಿತ್ರವೊಂದು 25 ಸಾವಿರ ರೂ. ಬಹುಮಾನ ಪಡೆದಿದೆ. ವಿಶೇಷವೆಂದರೆ, ಆ ಬಹುಮಾನದ ಮೊತ್ತವನ್ನೇ ಅವರು ಕುರಿಗಾಯಿಗಳಿಗೆ ಕಾಣಿಕೆಯಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ನಾಡಿನಾದ್ಯಂತ ಮುತ್ತು ಅವರ ಛಾಯಾಚಿತ್ರಗಳು ಪ್ರದರ್ಶನಗೊಂಡಿವೆ. ‘ಮದುವೆ ಕ್ಷಣಗಳು’ ಎಂಬ ಶೀರ್ಷಿಕೆಯಡಿ ಸುವರ್ಣ ನ್ಯೂಸ್ ಆಯೋಜಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಹೆಗ್ಗಳಿಕೆಯೂ ಅವರದ್ದಾಗಿದೆ. ಪ್ರಗತಿಪರ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಮುತ್ತು ಅವರ ಹಾಜರಾತಿ ಸಾಮಾನ್ಯವಾಗಿದ್ದು, ಸಮಾಜಮುಖಿ ಚಿಂತನೆಗಳೊಂದಿಗೆ ಅವರು ತಮ್ಮ ಕ್ಯಾಮೆರಾವನ್ನು ಬಳಸಿಕೊಂಡಿದ್ದಾರೆ.

ಗದಗದ ಪತ್ರಿಕಾ ಲೋಕದಲ್ಲಿ ಹಲವು ಕ್ಯಾಮೆರಾ ಕಣ್ಣುಗಳು

ಗದಗದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಛಾಯಾಗ್ರಹಣದ ಮೂಲಕ ಗಮನ ಸೆಳೆದವರಲ್ಲಿ ರಾಮು ವಗ್ಗಿ ಹಾಗೂ ಲಕ್ಷ್ಮಣ ವಗ್ಗಿ ಅವರೂ ಪ್ರಮುಖರು. ಸಾರ್ವಜನಿಕ ಸಭೆ, ಸಮಾರಂಭಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ಅಪರೂಪದ ಕ್ಷಣಗಳನ್ನು ಕ್ರಮವಾಗಿ ವಿಜಯ ಕರ್ನಾಟಕ ಹಾಗೂ ಉದಯವಾಣಿ ಪತ್ರಿಕೆಗಳಿಗಾಗಿ ಸೆರೆಹಿಡಿದು ಓದುಗರ ಗಮನ ಸೆಳೆದಿದ್ದಾರೆ.

ಗದಗ ಉತ್ಸವ, ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಲವು ಪ್ರಶಸ್ತಿ–ಪುರಸ್ಕಾರಗಳು ಜಿಲ್ಲೆಯ ಛಾಯಾಗ್ರಾಹಕರ ಸಾಧನೆಗೆ ಮತ್ತಷ್ಟು ಮೆರುಗು ತಂದಿವೆ.

ಸಂಜೆವಾಣಿ ಪತ್ರಿಕೆಯ ಬಸವರಾಜ ದಂಡಿನ ಅವರು ಹಿರಿಯ ಪತ್ರಕರ್ತರಾಗಿ ಮಾತ್ರವಲ್ಲ, ಛಾಯಾಗ್ರಾಹಕರಾಗಿಯೂ ಗುರುತಿಸಿಕೊಂಡಿದ್ದಾರೆ. ಸಮಾಜಮುಖಿ ಚಿಂತನೆಗಳ ಬರವಣಿಗೆಯಲ್ಲಿ ತೊಡಗಿಕೊಂಡಿರುವ ಅವರು ನಾಡಿನ ಅನೇಕ ಪತ್ರಿಕೆಗಳು ಹಾಗೂ ಸಂಘಟನೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಶಂಕರ್ ಗುರಿಕಾರ, ಉಮೇಶ್ ಸಜ್ಜನ ಸೇರಿದಂತೆ ಜಿಲ್ಲೆಯಾದ್ಯಂತ ಇನ್ನೂ ಅನೇಕ ಪತ್ರಿಕಾ ಛಾಯಾಚಿತ್ರ ಕಲಾವಿದರು ತಮ್ಮ ವೃತ್ತಿ ಹಾಗೂ ಕಲೆಯ ಮೂಲಕ ಪತ್ರಿಕೋದ್ಯಮಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.

ಎಐ–ಮೊಬೈಲ್ ಯುಗದಲ್ಲೂ ಉಳಿಸಿಕೊಂಡಿದ್ದಾರೆ ತಮ್ಮತನ

ಇಂದು ಕೃತಕ ಬುದ್ಧಿಮತ್ತೆ (AI), ಮೊಬೈಲ್ ಕ್ಯಾಮೆರಾ ಮತ್ತು ಡಿಜಿಟಲ್ ತಂತ್ರಜ್ಞಾನಗಳು ಛಾಯಾಗ್ರಹಣದ ಸ್ವರೂಪವನ್ನೇ ಬದಲಿಸುತ್ತಿವೆ. ಕ್ಷಣಮಾತ್ರದಲ್ಲಿ ಚಿತ್ರ ಸೆರೆಹಿಡಿಯುವುದು, ಸಂಪಾದಿಸುವುದು ಹಾಗೂ ಜಗತ್ತಿನ ಯಾವುದೇ ಮೂಲೆಗೆ ತಲುಪಿಸುವುದು ಸಾಧ್ಯವಾಗಿದೆ. ಆದರೂ ಪತ್ರಿಕಾ ಛಾಯಾಗ್ರಾಹಕನ ಅನುಭವ, ಸ್ಥಳದ ಅರಿವು, ಜನರೊಂದಿಗೆ ಬೆರೆಯುವ ಗುಣ, ಸರಿಯಾದ ಕ್ಷಣವನ್ನು ಗುರುತಿಸುವ ದೃಷ್ಟಿ ಮತ್ತು ಸಾಮಾಜಿಕ ಸಂವೇದನೆಗೆ ಪರ್ಯಾಯವಿಲ್ಲ.

ಎಐ ಮತ್ತು ಮೊಬೈಲ್‌ಗಳ ಹಾವಳಿಯ ನಡುವೆಯೂ ತಮ್ಮತನವನ್ನು ಉಳಿಸಿಕೊಂಡು ಪತ್ರಿಕಾ ಛಾಯಾಚಿತ್ರಕಾರರಾಗಿ ನೇರ ಹಾಗೂ ಪರೋಕ್ಷವಾಗಿ ಪತ್ರಿಕೋದ್ಯಮದ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯುತ್ತಿರುವುದು ನಿಜಕ್ಕೂ ಅಭಿಮಾನದ ಸಂಗತಿ.

ವಿಶ್ವ ಛಾಯಾಗ್ರಾಹಕರ ದಿನವು ಕೇವಲ ಛಾಯಾಗ್ರಾಹಕರಿಗೆ ಶುಭಾಶಯ ಕೋರುವ ದಿನವಲ್ಲ. ಕಾಲವನ್ನು ಸೆರೆಹಿಡಿದು ನೆನಪುಗಳಿಗೆ ಜೀವ ನೀಡುವ ಪ್ರತಿಯೊಬ್ಬ ಛಾಯಾಗ್ರಾಹಕನ ಕಲೆಯನ್ನು ಗೌರವಿಸುವ ದಿನ. ಅವರ ಕ್ಯಾಮೆರಾದ ಕಣ್ಣು ಸಮಾಜವನ್ನು ನೋಡುವ ಮತ್ತೊಂದು ಸೂಕ್ಷ್ಮ ಕಣ್ಣು.

ಕ್ಷಣಗಳು ಕಳೆದುಹೋಗುತ್ತವೆ… ಕಾಲ ಮುಂದೆ ಸಾಗುತ್ತದೆ… ಆದರೆ ಆ ಕ್ಷಣವನ್ನು ಸೆರೆಹಿಡಿದ ಛಾಯಾಚಿತ್ರ ಮಾತ್ರ ಚಿರಂತನವಾಗಿ ಉಳಿಯುತ್ತದೆ.

ವಿಶ್ವ ಛಾಯಾಗ್ರಾಹಕರ ದಿನದಂದು ಕ್ಷಣಗಳಿಗೆ ಚಿರಂತನತೆ ನೀಡುವ ಜಿಲ್ಲೆಯ ಹಾಗೂ ನಾಡಿನ ಎಲ್ಲ ಛಾಯಾಗ್ರಾಹಕರಿಗೆ ಹೃತ್ಪೂರ್ವಕ ಶುಭಾಶಯಗಳು.

— ಎ. ಎಸ್. ಮಕಾನದಾರ
ಕವಿ, ಪ್ರಕಾಶಕ, ಸಂಪಾದಕ
ನಿರಂತರ ಪ್ರಕಾಶನ, ಗದಗ

ಗದಗ ಮೀಡಿಯಾ ಕ್ರಿಕೆಟ್ ಲೀಗ್‌ಗೆ ಭರ್ಜರಿ ಚಾಲನೆ ; ನೈಟ್ ರೈಡರ್ಸ್, ರೂರಲ್ ಕಿಂಗ್ಸ್ ಜಯಭೇರಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಆಯೋಜಿಸಿರುವ ಗದಗ ಮೀಡಿಯಾ ಕ್ರಿಕೆಟ್‌ ಲೀಗ್‌ಗೆ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಸುರೇಶ ವಿ. ನಾಡಗೌಡರ ಟಾಸ್‌ ಮಾಡುವ ಮೂಲಕ ಚಾಲನೆ ನೀಡಿದರು. ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ನೈಟ್‌ ರೈಡರ್ಸ್‌ ತಂಡ ವಿನ್ನರ್ಸ್‌ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ವಿನ್ನರ್ಸ್‌ ತಂಡ ನಿಗದಿತ 10 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 76 ರನ್‌ ಗಳಿಸಿತು. ನಾಯಕ ಅನಿಲ ತೆಂಬದಮನಿ 35 ರನ್‌ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ನೈಟ್‌ ರೈಡರ್ಸ್‌ ಪರ ಮಂಜು ಪತ್ತಾರ 3 ವಿಕೆಟ್‌ ಪಡೆದರೆ, ಸುರೇಶ ಕಡ್ಲಿಮಟ್ಟಿ, ಅರುಣಕುಮಾರ ಹಿರೇಮಠ ಹಾಗೂ ವಿಜಯ ಸೊರಟೂರ ತಲಾ ಒಂದು ವಿಕೆಟ್‌ ಪಡೆದರು.

77 ರನ್‌ಗಳ ಗುರಿ ಬೆನ್ನತ್ತಿದ ನೈಟ್‌ ರೈಡರ್ಸ್‌ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ನಾಯಕ ಸುರೇಶ ಕಡ್ಲಿಮಟ್ಟಿ 38, ಅರುಣಕುಮಾರ ಹಿರೇಮಠ 13 ಹಾಗೂ ಮಂಜು ಪತ್ತಾರ 12 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಿನ್ನರ್ಸ್‌ ಪರ ಅನಿಲ ತೆಂಬದಮನಿ, ಪರಮೇಶ ಲಮಾಣಿ ಹಾಗೂ ಅಶೋಕ ಹೂಗಾರ ತಲಾ ಒಂದು ವಿಕೆಟ್‌ ಪಡೆದರು. 3 ವಿಕೆಟ್‌ ಹಾಗೂ 12 ರನ್‌ ಗಳಿಸಿದ ಮಂಜು ಪತ್ತಾರ ಆಲ್‌ರೌಂಡ್‌ ಪ್ರದರ್ಶನದೊಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಆರ್‌ಸಿಬಿಗೆ ಶಾಕ್; ರೂರಲ್‌ ಕಿಂಗ್ಸ್‌ ಜಯಭೇರಿ

ಲೀಗ್‌ನ ಎರಡನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ರೂರಲ್‌ ಕಿಂಗ್ಸ್‌ ತಂಡ 7 ವಿಕೆಟ್‌ಗಳ ಅಂತರದಿಂದ ಜಯಗಳಿಸಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ ನಿಗದಿತ 10 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 89 ರನ್‌ ಗಳಿಸಿತು. ವಿನಾಯಕ ಚೌಡಾಪೂರ 31, ಫಿರೋಜ್ ಮೋಮಿನ್‌ 19 ಹಾಗೂ ರಾಘವೇಂದ್ರ ಕುಲಕರ್ಣಿ 13 ರನ್‌ ಗಳಿಸಿದರು. ರೂರಲ್‌ ಕಿಂಗ್ಸ್‌ ಪರ ಶಿವಾನಂದ ಹಿರೇಮಠ 4, ನಿಂಗನಗೌಡ ಹನಮಗೌಡ್ರ ಹಾಗೂ ಸಂಜೀವ್‌ ಪಾಂಡ್ರೆ ತಲಾ ಒಂದು ವಿಕೆಟ್‌ ಪಡೆದರು.

90 ರನ್‌ಗಳ ಗುರಿ ಬೆನ್ನತ್ತಿದ ರೂರಲ್‌ ಕಿಂಗ್ಸ್‌ 7 ವಿಕೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಶಿವಾನಂದ ಹಿರೇಮಠ 37 ಹಾಗೂ ನಿಂಗನಗೌಡ ಹನಮಗೌಡ್ರ 18 ರನ್‌ ಗಳಿಸಿದರು. ಆರ್‌ಸಿಬಿ ಪರ ಗಿರೀಶ ಕಮ್ಮಾರ, ಶಿವಕುಮಾರ ಕುಷ್ಟಗಿ ಹಾಗೂ ಫಿರೋಜ್‌ ಮೋಮಿನ್‌ ತಲಾ ಒಂದು ವಿಕೆಟ್‌ ಪಡೆದರು. 4 ವಿಕೆಟ್‌ ಹಾಗೂ 37 ರನ್‌ ಗಳಿಸಿದ ಶಿವಾನಂದ ಹಿರೇಮಠ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದಕ್ಕೂ ಮುನ್ನ ಗದಗ ಮೀಡಿಯಾ ಕ್ರಿಕೆಟ್‌ ಲೀಗ್‌ಗೆ ಚಾಲನೆ ನೀಡಿ ಮಾತನಾಡಿದ ಆರ್‌ಡಿಪಿಆರ್‌ ವಿವಿ ಕುಲಪತಿ ಸುರೇಶ ವಿ. ನಾಡಗೌಡರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದಂತೆಯೇ ಪತ್ರಿಕಾರಂಗಕ್ಕೂ ಮಹತ್ವದ ಸ್ಥಾನವಿದೆ. ಸಮಾಜದ ಹಲವು ಮಹತ್ವದ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಪತ್ರಿಕೋದ್ಯಮ ಅಪಾರ ಕೊಡುಗೆ ನೀಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ಮಾರುತಿ ಜೋಗದಂಡಕರ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ರಾಜ್ಯ ಕಾರ್ಯಕಾರಣಿ ಸದಸ್ಯ ಅರುಣಕುಮಾರ ಹಿರೇಮಠ, ವಿನ್ನರ್ಸ್‌ ತಂಡದ ಮಾಲೀಕರಾದ ಅನಂತ ಕಾರ್ಕಳ, ಸುನೀಲ್ ತೆಂಬದಮನಿ, ಟಿ.ಎನ್. ಭಾಂಡಗೆ, ರೂರಲ್‌ ಕಿಂಗ್ಸ್‌ನ ಜಗದೀಶ ಪೂಜಾರ, ಆರ್‌ಸಿಬಿಯ ಅಜಿತ ಹೊಂಬಾಳಿ, ನೈಟ್‌ ರೈಡರ್ಸ್‌ ತಂಡದ ಎಚ್.ಎಂ. ಶರೀಫನವರ, ಆನಂದ ಸಾಲಿಗ್ರಾಮ, ಆನಂದಯ್ಯ ವಿರಕ್ತಮಠ ಸೇರಿದಂತೆ ಕಾನಿಪ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.

ಪತ್ರಕರ್ತ ಶಿವಕುಮಾರ ಕುಷ್ಟಗಿ ಕಾರ್ಯಕ್ರಮ ನಿರೂಪಿಸಿದರು.

“ಪತ್ರಕರ್ತರಲ್ಲಿ ವೃತ್ತಿಬದ್ಧತೆ ಹೆಚ್ಚಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದಲ್ಲಿ ಪತ್ರಿಕಾ ದಿನಾಚರಣೆ, ವಿಚಾರ ಸಂಕಿರಣದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪತ್ರಿಕೋದ್ಯಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಯಿಂದ ಅಗತ್ಯ ನೆರವು ನೀಡಲಾಗುವುದು.”

— ಸುರೇಶ ವಿ. ನಾಡಗೌಡರ, ಕುಲಪತಿ, ಆರ್‌ಡಿಪಿಆರ್‌ ವಿಶ್ವವಿದ್ಯಾಲಯ

ದ್ಯಾಮವ್ವನಕಟ್ಟಿಯ 206 ವರ್ಷಗಳ ದೈವೀ ಇತಿಹಾಸ

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಒಕ್ಕಲಗೇರಿ ಓಣಿಯ ಶ್ರೀ ದ್ಯಾಮವ್ವನಕಟ್ಟಿ ಗ್ರಾಮದೇವತೆಯ ಕ್ಷೇತ್ರಕ್ಕೆ ಸುಮಾರು ಎರಡು ಶತಮಾನಗಳ ಇತಿಹಾಸವಿದೆ. ಪುಟ್ಟ ಮಣ್ಣಿನ ಗುಡಿಯಿಂದ ಆರಂಭಗೊಂಡ ಈ ಕ್ಷೇತ್ರ ಇಂದು ಸಾವಿರಾರು ಭಕ್ತರ ಆರಾಧನಾ ಕೇಂದ್ರವಾಗಿದೆ. ಇಲ್ಲಿನ ಜಗಲಿಕಟ್ಟಿ ಮೇಲಿರುವ ಐದು ಅಡಿ ಎತ್ತರದ ಬೃಹತ್ ರಥದ ಕಳಸವು 206 ವರ್ಷಗಳ ಹಿಂದಿನ ಇತಿಹಾಸಕ್ಕೆ ಜೀವಂತ ಸಾಕ್ಷಿಯಾಗಿ ನಿಂತಿದೆ.

ಗದಗದ ಗ್ರಾಮದೇವತೆಗಳ ಹರಿಜಾತ್ರೆ ಕೇವಲ ಧಾರ್ಮಿಕ ಆಚರಣೆಯಲ್ಲ. ಇದು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ನಂಬಿಕೆ, ಹರಕೆ, ಸಂಪ್ರದಾಯ ಮತ್ತು ಸಾಮಾಜಿಕ ಸಾಮರಸ್ಯದ ಪ್ರತೀಕ. 2026ರ ಹರಿಜಾತ್ರೋತ್ಸವ ಆಗಸ್ಟ್ 18ರಿಂದ 28ರವರೆಗೆ ನಡೆಯುತ್ತಿದ್ದು, ಗದಗ-ಬೆಟಗೇರಿ ನಗರವೇ ಜಗನ್ಮಾತೆಯ ಆರಾಧನೆಯಲ್ಲಿ ತೊಡಗಿದೆ.

ಆದಿಶಕ್ತಿಗೆ ನಿರ್ದಿಷ್ಟ ನಾಮರೂಪವಿಲ್ಲ ಎಂಬ ಆಧ್ಯಾತ್ಮಿಕ ಪರಿಕಲ್ಪನೆಯ ಪ್ರತಿರೂಪದಂತೆ ದ್ಯಾಮವ್ವನಕಟ್ಟಿ ಕಾಣುತ್ತದೆ. ಇಲ್ಲಿನ ಗರ್ಭಗುಡಿಯಲ್ಲಿ ಭವ್ಯ ಮೂರ್ತಿಯ ಬದಲಾಗಿ ಜಗಲಿಯ ಮೇಲಿರುವ ಗದ್ದುಗೆ ಹಾಗೂ ಅದರ ಮೇಲೆ ಗ್ರಾಮದೇವತೆಯ ಪಾದುಕೆಗಳೇ ಪ್ರಮುಖ ಆರಾಧನಾ ಸ್ವರೂಪ. ಭಕ್ತರ ಅನುಕೂಲಕ್ಕಾಗಿ ಆದಿಶಕ್ತಿಯ ಭಾವಚಿತ್ರವನ್ನು ಇರಿಸಲಾಗಿದ್ದರೂ, ಪಾದಗಟ್ಟಿಯೇ ಕ್ಷೇತ್ರದ ಮೂಲ ಆರಾಧನಾ ಕೇಂದ್ರವಾಗಿದೆ.

ಹಳೆಯ ಕೃತಪುರ ಗ್ರಾಮದಲ್ಲಿ ಗ್ರಾಮದೇವತೆಯರಿಗಾಗಿ ಇದ್ದ ಪುಟ್ಟ ಮಣ್ಣಿನ ಗುಡಿಯೇ ಮುಂದೆ ದ್ಯಾಮವ್ವನಕಟ್ಟಿಯಾಗಿ ಪ್ರಸಿದ್ಧಿಯಾಯಿತು. ಕಿಲ್ಲಾ ಓಣಿಯಿಂದ ಗ್ರಾಮದೇವತೆಗಳನ್ನು ತವರು ಮನೆಗೆ ಬರುವ ಹೆಣ್ಣುಮಕ್ಕಳಂತೆ ವಾದ್ಯಮೇಳದೊಂದಿಗೆ ಒಕ್ಕಲಗೇರಿಗೆ ಕರೆತರುವ ಸಂಪ್ರದಾಯವಿತ್ತು. ಇದೇ ಕಾರಣಕ್ಕೆ ದ್ಯಾಮವ್ವ-ದುರಗವ್ವ ಗ್ರಾಮದೇವತೆಗಳ ತವರುಮನೆ ಎಂಬ ಭಾವನೆ ಜನಮನದಲ್ಲಿ ಗಟ್ಟಿಯಾಯಿತು.

ಸುಮಾರು ಆರು-ಏಳು ದಶಕಗಳ ಹಿಂದೆ ಅಬ್ಬಿಗೇರಿ ಮನೆತನದ ಶ್ರೀ ಬಸಪ್ಪ ಕರಬಸಪ್ಪ ಅಬ್ಬಿಗೇರಿ ಅವರು ಪುಟ್ಟ ಮಣ್ಣಿನ ಗುಡಿಯನ್ನು ಬೃಹತ್ ದೇವಾಲಯವನ್ನಾಗಿ ನಿರ್ಮಿಸಲು ಮುಂದಾದರು. ಸಂಗಯ್ಯ ಗುಡ್ಡಿಮಠ, ವಿರುಪಾಕ್ಷಗೌಡ ಪೊಲೀಸ್‌ಪಾಟೀಲ, ನಾಗಯ್ಯ ಶಿವಪ್ಪಯ್ಯನಮಠ, ಯಲ್ಲಪ್ಪ ಗುಗ್ಗರಿ, ಶಿವಪ್ಪ ಮಾನ್ವಿ, ಫಕ್ಕೀರಪ್ಪ ಕಂಬಳಿ ಸೇರಿದಂತೆ ವಿವಿಧ ಸಮುದಾಯಗಳ ಅನೇಕರು ಕೈಜೋಡಿಸಿದರು. ಹೀಗಾಗಿ ದ್ಯಾಮವ್ವನಕಟ್ಟಿ ಸರ್ವರ ಭಕ್ತಿಯ ಕ್ಷೇತ್ರವಾಗಿ ಬೆಳೆಯಿತು.

ಈ ಕ್ಷೇತ್ರದ ಇತಿಹಾಸದಲ್ಲಿ 1820ರ ರಥದ ಕಳಸಕ್ಕೆ ವಿಶೇಷ ಸ್ಥಾನವಿದೆ. ಕಳಸದ ಮೇಲಿನ ಲಿಖಿತ ಉಲ್ಲೇಖದ ಪ್ರಕಾರ, ‘1820, ಆಗಸ್ಟ್ 3, ಮಾನ್ವಿಯವರು ಕೊಡಿಸಿದ್ದು, ಗ್ರಾಮದೇವತೆಯರ ರಥದ ಕಳಸ’ ಎಂಬ ದಾಖಲೆಯಿದೆ. ಆಗ 18 ಗಾಲಿಯ ಬೃಹತ್ ರಥದಲ್ಲಿ ಗ್ರಾಮದೇವತೆಗಳನ್ನು ಪ್ರತಿಷ್ಠಾಪಿಸಿ ಪ್ರಮುಖ ಬೀದಿಗಳಲ್ಲಿ ರಥೋತ್ಸವ ನಡೆಸಲಾಗುತ್ತಿತ್ತು.

ಆದರೆ ಮೂರನೇ ವರ್ಷದ ರಥೋತ್ಸವದಲ್ಲಿ ಒಕ್ಕಲಗೇರಿಯ ದ್ಯಾಮವ್ವನ ಪಾದಗಟ್ಟಿಗೆ ಬಂದ ರಥ ಮುಂದೆ ಸಾಗಲಿಲ್ಲ ಎನ್ನುವುದು ಕ್ಷೇತ್ರದ ನಂಬಿಕೆ. ಎಷ್ಟೇ ಪ್ರಯತ್ನಿಸಿದರೂ ರಥ ಕದಲದ ಹಿನ್ನೆಲೆಯಲ್ಲಿ, ಪ್ರತಿವರ್ಷ ರಥೋತ್ಸವ ನಡೆಸುವ ಬದಲು 12 ವರ್ಷಕ್ಕೊಮ್ಮೆ ಹರಕೆ ತೀರಿಸುವ ಜಾತ್ರೆ ನಡೆಸಲು ದೈವದ ಜನರು ನಿರ್ಧರಿಸಿದರು. ರಥದ ಕಳಸವನ್ನು ದ್ಯಾಮವ್ವನ ಜಗಲಿಯ ಮೇಲಿನ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಸಂಪ್ರದಾಯವೂ ಅಂದಿನಿಂದ ಆರಂಭವಾಯಿತು. ಹೀಗೆ ‘ಹರಕೆ ಜಾತ್ರೆ’ ಮುಂದೆ ‘ಹರಿಜಾತ್ರೆ’ಯಾಗಿ ಪ್ರಸಿದ್ಧಿಯಾಯಿತು.

ಹರಿಜಾತ್ರೆಯಲ್ಲಿ ಗ್ರಾಮದೇವತೆಗಳ ಮೂರ್ತಿಗಳಿಗೆ ಬಣ್ಣ-ಅಲಂಕಾರ ಮಾಡಿ ತಡರಾತ್ರಿ ಕಿಲ್ಲಾ ಓಣಿಯಿಂದ ಒಕ್ಕಲಗೇರಿಗೆ ಕರೆತರಲಾಗುತ್ತದೆ. ಬೆಳಗಿನ ಜಾವ ಪ್ರತಿಷ್ಠಾಪಿಸಿ ಕಣ್ಣು ಬರೆಯುವ ವಿಶೇಷ ವಿಧಿ ನೆರವೇರಿಸಲಾಗುತ್ತದೆ. ಕನ್ನಡಿಯಲ್ಲಿ ಪ್ರತಿಬಿಂಬ ನೋಡುತ್ತಾ ಕಣ್ಣು ಬರೆಯುವುದು ಇಲ್ಲಿನ ಅಪರೂಪದ ಆಚರಣೆ.

ಒಂಬತ್ತು ದಿನಗಳ ಕಾಲ ಭಕ್ತರು ವಿವಿಧ ನಿಯಮಗಳನ್ನು ಪಾಲಿಸುತ್ತಾರೆ. ಉಡಿ ತುಂಬುವುದು, ಕಾಯಿ ಒಡೆಯುವುದು, ಭಂಡಾರ ಲೇಪಿಸುವುದು, ಮೆರವಣಿಗೆ ಸೇರಿದಂತೆ ಹಲವು ಧಾರ್ಮಿಕ ವಿಧಿಗಳು ನಡೆಯುತ್ತವೆ. ಈ ಜಾತ್ರೆ ಎಲ್ಲ ಜಾತಿ-ಧರ್ಮದವರಿಗೂ ಮುಕ್ತವಾಗಿದ್ದು, ಹರಕೆ ತೀರಿಸುವುದೇ ಇದರ ಮೂಲ ಆಶಯವಾಗಿದೆ.

2026ರ ಹರಿಜಾತ್ರೆಯ ಅಂಗವಾಗಿ ಆಗಸ್ಟ್ 18ರಿಂದ ಉಡಿ ತುಂಬುವ ಕಾರ್ಯಕ್ರಮ ಆರಂಭಗೊಂಡಿದ್ದು, ಆಗಸ್ಟ್ 25ರಂದು ಊರ ದೇವರಿಗೆ ಉಡಿ ತುಂಬಿ ಕಾಯಿ ಒಡೆಯಲಾಗುತ್ತದೆ. ಆಗಸ್ಟ್ 26ರಂದು ಗ್ರಾಮದೇವತೆಗಳನ್ನು ಮೆರವಣಿಗೆಯಲ್ಲಿ ಕಿಲ್ಲಾ ಓಣಿಗೆ ಕಳಿಸಿಕೊಡಲಾಗುತ್ತದೆ. 27ರಂದು ಸೇವೆ ಸಲ್ಲಿಸಿದ ಭಕ್ತರು ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಗುತ್ತದೆ. 28ರಂದು ರುದ್ರಾಭಿಷೇಕ, ಹೋಮ-ಹವನ ಹಾಗೂ ಮಹಾಪ್ರಸಾದ ನಡೆಯಲಿದೆ.

— ಜಿ.ಬಿ. ಹಾವಣಗಿ, ಶಿಕ್ಷಕರು

ಅರ್ಥಪೂರ್ಣವಾಗಿ ನಾರಾಯಣ ಗುರು ಜಯಂತಿ ಆಚರಿಸಿ: ಡಾ. ದುರಗೇಶ್

0

ವಿಜಯಸಾಕ್ಷಿ ಸುದ್ದಿ, ಗದಗ: ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಆ.28ರಂದು ಅರ್ಥಪೂರ್ಣವಾಗಿ, ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಿಸಿ ಗಣ್ಯರು ಹಾಗೂ ಸಾರ್ವಜನಿಕರಿಗೆ ವಿತರಿಸಬೇಕು. ಶಾಲಾ-ಕಾಲೇಜುಗಳು, ಗ್ರಾಮ ಪಂಚಾಯಿತಿಗಳು ಹಾಗೂ ತಾಲೂಕು ಮಟ್ಟದಲ್ಲಿಯೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಪ್ರತಿಭಾವಂತರು, ಸಾಧಕರಿಗೆ ಸನ್ಮಾನ

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳು, ಪದವಿ ಹಂತದಲ್ಲಿ ಚಿನ್ನದ ಪದಕ ಪಡೆದವರು, ಕ್ರೀಡಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಮಾಜದ ಹಿರಿಯರನ್ನು ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ, ಚಿಂತನೆ ಹಾಗೂ ಸಾಮಾಜಿಕ ಕೊಡುಗೆಗಳ ಕುರಿತು ಆಳವಾದ ಅಧ್ಯಯನ ನಡೆಸಿದವರಿಂದ ವಿಶೇಷ ಉಪನ್ಯಾಸ ಆಯೋಜಿಸುವಂತೆ ತಿಳಿಸಿದರು.

ಕಾರ್ಯಕ್ರಮದ ವೇದಿಕೆ, ಊಟೋಪಹಾರ ಸೇರಿದಂತೆ ಅಗತ್ಯ ವ್ಯವಸ್ಥೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ಪುಸ್ತಕ ಬಿಡುಗಡೆ ಮಾಡುವ ಬಗ್ಗೆಯೂ ಚರ್ಚೆ ನಡೆಯಿತು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀಕ್ಷಕ ರಾಜಕುಮಾರ ಸೊಪಡ್ಲ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜದ ಗಣ್ಯರು ಹಾಗೂ ಹಿರಿಯರು ಉಪಸ್ಥಿತರಿದ್ದರು.

“ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಆದರ್ಶ ಹಾಗೂ ಸಾಮಾಜಿಕ ಸಂದೇಶಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅರ್ಥಪೂರ್ಣವಾಗಿ ನಡೆಸಬೇಕು.”

— ಡಾ. ದುರಗೇಶ್ ಕೆ.ಆರ್., ಅಪರ ಜಿಲ್ಲಾಧಿಕಾರಿ

ಕಾಡುಹಂದಿಗಳ ಹಾವಳಿ: ಮೆಕ್ಕೆಜೋಳ ಬೆಳೆ ನಾಶ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಬೆಣಕಲ್ಲು ಗ್ರಾಮದಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು, ರೈತರ ಮೆಕ್ಕೆಜೋಳ ಬೆಳೆಗಳಿಗೆ ಹಾನಿಯಾಗಿದೆ.

ಗ್ರಾಮದ ರೈತ ಟಿ. ಮೇಘರಾಜ ಅವರು 2.50 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆಯನ್ನು ಕಾಡುಹಂದಿಗಳು ಹಾಳು ಮಾಡಿವೆ. ತೆನೆ ಬರುವ ಹಂತದಲ್ಲಿದ್ದ ಬೆಳೆಯ ಬಹುತೇಕ ಭಾಗ ನಾಶವಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ 15–20 ದಿನಗಳಿಂದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ರೈತರ ಜಮೀನುಗಳಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದೆ. ಹಗಲು-ರಾತ್ರಿ ಹೊಲ ಕಾಯುತ್ತಿದ್ದರೂ ಹಾವಳಿ ನಿಯಂತ್ರಣಕ್ಕೆ ಬರುತ್ತಿಲ್ಲ. ಕಷ್ಟಪಟ್ಟು ಬೆಳೆದ ಬೆಳೆ ಕಣ್ಣೆದುರೇ ನಾಶವಾಗುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈಗಾಗಲೇ ಬರಗಾಲದ ಹೊಡೆತದಿಂದ ತತ್ತರಿಸಿರುವ ರೈತರಿಗೆ ಕಾಡುಹಂದಿಗಳ ಹಾವಳಿ ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿದೆ. ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಅಧಿಕಾರಿಗಳು ಕಾಡುಹಂದಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಂಡು, ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ದ್ಯಾಮವ್ವ–ದುರ್ಗಮ್ಮ ಹರಿಜಾತ್ರೆ: ಆ.20ರಂದು ರಾತ್ರಿ ಡೊಳ್ಳಿನ ಪದ, ಜುಗಲಬಂದಿ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗ್ರಾಮದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಮ್ಮ ದೇವಿಯರ 12 ವರ್ಷಕ್ಕೊಮ್ಮೆ ನಡೆಯುವ ಹರಿಜಾತ್ರಾ ಮಹೋತ್ಸವದ ಅಂಗವಾಗಿ ಆ.20ರಂದು ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಗದುಗಿನ ಬ್ರಹ್ಮಮಠದ ಪೂಜ್ಯ ಜ. ಸದಾಶಿವಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ ಅಧ್ಯಕ್ಷತೆ ವಹಿಸುವರು. ಜಾತ್ರಾ ಕಮಿಟಿ ಕಾರ್ಯಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಉಪಸ್ಥಿತರಿರುವರು.

ಸಾಮಾಜಿಕ ಕಾರ್ಯಕರ್ತ ಮಹೇಶ ದಾಸರ, ಗಣ್ಯ ವ್ಯಾಪಾರಸ್ಥ ಶರಣಪ್ಪ ಸಾಸನೂರ, ಯುವ ಧುರೀಣ ಸಂಗಮೇಶ ಕವಳಿಕಾಯಿ, ಉದ್ಯಮದಾರ ಸಾಗರ ಪವಾರ ಹಾಗೂ ಗಣ್ಯ ವ್ಯಾಪಾರಸ್ಥ ಪಕೀರಸಾ ಬಾಂಡಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ನಗರಸಭೆ ಸದಸ್ಯರಾದ ಶ್ವೇತಾ ದಂಡಿನ, ವಿಜಯಲಕ್ಷ್ಮಿ ದಿಂಡೂರ, ಗೂಳಪ್ಪ ಮುಷಿಗೇರಿ, ಪ್ರಕಾಶ ಅಂಗಡಿ, ಚಂದ್ರಶೇಖರ ತಡಸದ ಹಾಗೂ ಜಾತ್ರಾ ಕಮಿಟಿ ಕಾರ್ಯದರ್ಶಿ ಗಂಗಾಧರ ಮೇಲಗಿರಿ ಅತಿಥಿಗಳಾಗಿ ಉಪಸ್ಥಿತರಿರುವರು.

ಸಭೆಯ ಬಳಿಕ ರಾತ್ರಿ 8.30ಕ್ಕೆ ಡೋಣಿಯ ನಿಂಗಪ್ಪ ಗುಡ್ಡದ ಅವರಿಂದ ಡೊಳ್ಳಿನ ಪದ ಹಾಗೂ ರಾಮದುರ್ಗದ ತಂಡದಿಂದ ಜುಗಲಬಂದಿ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ದ್ಯಾಮವ್ವ–ದುರ್ಗಮ್ಮ ದೇವಿಯರ ಹರಿಜಾತ್ರೋತ್ಸವ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದನ್ನು ಖಂಡಿಸಿ ಹಾಗೂ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಎದುರು ಬುಧವಾರ ಪ್ರತಿಭಟನೆ ನಡೆಯಿತು.

ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಸರ್ಕಾರ ಹಾಗೂ ಸಚಿವ ಬಿ. ನಾಗೇಂದ್ರ ವಿರುದ್ಧ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಿಗಮದ ಹಣ ಬೇನಾಮಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್‌ನಲ್ಲಿಯೂ ಹಣ ವರ್ಗಾವಣೆಯ ಕುರಿತು ಉಲ್ಲೇಖವಾಗಿತ್ತು. ಬಿಜೆಪಿ ನಡೆಸಿದ ಹೋರಾಟದ ಹಿನ್ನೆಲೆಯಲ್ಲಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣದ ತನಿಖೆ ಹಾಗೂ ಆರೋಪಗಳು ಇನ್ನೂ ಚರ್ಚೆಯಲ್ಲಿರುವಾಗಲೇ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನಿಗಮದ ಹಣದ ಅಕ್ರಮದಲ್ಲಿ ಸಚಿವ ನಾಗೇಂದ್ರ ಅವರ ಪಾತ್ರದ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದರೂ, ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿರುವುದು ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಾದ ಹಣದ ಅಕ್ರಮದಿಂದ ಆ ಸಮಾಜಕ್ಕೆ ಅನ್ಯಾಯವಾಗಿದೆ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೆ ಬಿಜೆಪಿ ಜನಪ್ರತಿನಿಧಿಗಳು ವಿಧಾನಮಂಡಲ ಅಧಿವೇಶನ ಸುಗಮವಾಗಿ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜನರ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ಭ್ರಷ್ಟಾಚಾರದ ಆರೋಪಗಳು ಸರ್ಕಾರವನ್ನು ಸುತ್ತುವರಿದಿದ್ದು, ಆಡಳಿತದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ರಾಜ್ಯದಲ್ಲಿ ‘ತುಘಲಕ್‌ ಸರ್ಕಾರ’ದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಎಲ್ಲ ವರ್ಗದ ಜನರನ್ನು ಸಮರ್ಪಕವಾಗಿ ತಲುಪುತ್ತಿಲ್ಲ. ಸರ್ಕಾರ ಒಂದು ಕೋಮಿನ ಓಲೈಕೆಗೆ ಆದ್ಯತೆ ನೀಡುತ್ತಿದೆ ಎಂಬ ಆರೋಪವನ್ನೂ ಬಿಜೆಪಿ ಮುಖಂಡರು ಮಾಡಿದರು. ಕಾಂಗ್ರೆಸ್‌ ಸರ್ಕಾರದ ಆಡಳಿತದಿಂದ ಜನರು ಬೇಸರಗೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ರಾಘವೇಂದ್ರ ಯಳವತ್ತಿ, ವಿನಾಯಕ ಮಾನ್ವಿ, ವಿಜಯಕುಮಾರ ಗಡ್ಡಿ, ಸಿದ್ದಣ್ಣ ಪಲ್ಲೇದ, ಹೇಮಗಿರೀಶ ಹಾವಿನಾಳ, ಐ.ಎಸ್. ಪೂಜಾರ, ನಾಗರಾಜ ತಳವಾರ, ಅನಿಲ್ ಅಬ್ಬಿಗೇರಿ, ನಿರ್ಮಲಾ ಕೊಳ್ಳಿ, ವಂದನಾ ವೆರ್ಣೇಕರ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

“ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಾದ ಹಣದ ಅಕ್ರಮದಿಂದ ಆ ಸಮಾಜಕ್ಕೆ ಅನ್ಯಾಯವಾಗಿದೆ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ.”

— ರಾಜು ಕುರಡಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಯಿಯ ಪ್ರೀತಿಯಂತೆ ಸಿಕ್ಕ ಆತ್ಮೀಯತೆ: ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಎಚ್.ಕೆ. ಪಾಟೀಲ ಭಾವುಕ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಈಶ್ವರೀಯ ವಿಶ್ವವಿದ್ಯಾಲಯದ ಸೇವಾ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಶಾಸಕ ಎಚ್.ಕೆ. ಪಾಟೀಲ ಅವರ ಜನ್ಮದಿನಾಚರಣೆಯನ್ನು ಆತ್ಮೀಯವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪರಮಾತ್ಮನ ಆಶೀರ್ವಾದ ಪಡೆದು ಮಾತನಾಡಿದ ಶಾಸಕ ಎಚ್.ಕೆ. ಪಾಟೀಲ ಅವರು, ಈಶ್ವರೀಯ ವಿಶ್ವವಿದ್ಯಾಲಯದ ಸೇವಾ ಕೇಂದ್ರದಲ್ಲಿ ದೊರೆತ ಆತ್ಮೀಯತೆಯನ್ನು ಸ್ಮರಿಸಿದರು.

ರಾಜಕಾರಣಿ ಹಾಗೂ ಸಚಿವನಾದ ಬಳಿಕ ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಾಧೀಶರು ಹಾಗೂ ಪ್ರಖ್ಯಾತ ವಕೀಲರ ಸಭೆ-ಸಮಾರಂಭಗಳಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಧೈರ್ಯವಾಗಿ ಮಾತನಾಡಿದ್ದೇನೆ. ಆದರೆ, ಇಂದು ಈ ಆಧ್ಯಾತ್ಮಿಕ ಸಭೆಯಲ್ಲಿ ಮಾತನಾಡಲು ನನಗೆ ಪದಗಳೇ ಸಿಗುತ್ತಿಲ್ಲ. ಇಲ್ಲಿ ತೋರಿದ ಪ್ರೀತಿ-ಮಮತೆ ನನ್ನ ತಾಯಿಯ ಪ್ರೀತಿಯನ್ನು ನೆನಪಿಸಿದೆ ಎಂದರು.

ದೀಪ ಬೆಳಗಿಸಿ, ಕೇಕ್ ಕತ್ತರಿಸಿ ತಮ್ಮ ಜನ್ಮದಿನ ಆಚರಿಸಿದ ರೀತಿಯು ತಾಯಿಯ ಪ್ರೀತಿಯನ್ನು ನೆನಪಿಸಿತು. ತಮ್ಮ ತಾಯಿ ಮಾಡುತ್ತಿದ್ದ ಆಚರಣೆಗಳನ್ನು ಇಲ್ಲಿನ ಸಹೋದರಿಯರು ಮುಂದುವರಿಸಿಕೊಂಡು ಹೋಗುತ್ತಿರುವಂತೆ ಭಾಸವಾಯಿತು. ಪ್ರತಿವರ್ಷವೂ ಈ ಪವಿತ್ರ ಸ್ಥಳಕ್ಕೆ ಆಗಮಿಸಿ ಎಲ್ಲರ ಆಶೀರ್ವಾದ ಪಡೆಯಲು ಬಯಸುವುದಾಗಿ ಅವರು ಹೇಳಿದರು.

ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ. ಜಯಂತಿ ಅಕ್ಕ ಅವರು ಸ್ವಾಗತಿಸಿ ಅಭಿನಂದಿಸಿದರು. ಸ್ವಾತಂತ್ರ್ಯ ದಿನದ ಅಂಗವಾಗಿ ಆಂತರಿಕ ಸ್ವಾತಂತ್ರ್ಯದ ಮಹತ್ವದ ಕುರಿತು ಸಂದೇಶ ನೀಡಿದರು.

ನಂತರ ನೆರೆದಿದ್ದವರಿಗೆ ರಾಜಯೋಗ ಧ್ಯಾನದ ಅಭ್ಯಾಸ ಮಾಡಿಸಿ, ವ್ಯಸನಮುಕ್ತ ಜೀವನ ನಡೆಸುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿಯ ಡಾ. ಶ್ರೀಮತಿ ವಿದ್ಯಾ, ಡಾ. ವೇಮನ್ ಸಾವಕಾರ್, ಜಿಲ್ಲಾಸ್ಪತ್ರೆಯ ಡಾ. ಗಿರೀಶ್ ನಾಗರಾಳ, ಆಂಜನೇಯ ಕಟಗಿ, ವರದರಾಜ್ ಹೆಬ್ಸೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಿ.ಕೆ. ರೇಖಾ ವಂದಿಸಿದರು.

ಮಹಿಳಾ ಶಿಕ್ಷಣದಿಂದ ಕುಟುಂಬದ ಪ್ರಗತಿ ಸಾಧ್ಯ: ಶಂಕರ ಹಲಗತ್ತಿ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಶಿಕ್ಷಣ ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕಾಗಿದ್ದು, ಮಹಿಳಾ ಶಿಕ್ಷಣದಿಂದ ಕುಟುಂಬ, ಸಮಾಜ ಹಾಗೂ ದೇಶದ ಪ್ರಗತಿ ಸಾಧ್ಯ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

ನಗರದ ಶ್ರೀಮತಿ ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಹಾಗೂ ಸುಶೀಲ ಮುರಿಗೆಪ್ಪ ಶೇಷಗಿರಿ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದ ವತಿಯಿಂದ ಆಯೋಜಿಸಿದ್ದ ‘ಮಹಿಳೆ: ಶಿಕ್ಷಣ ಹಾಗೂ ಆರೋಗ್ಯ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

“ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಶಿಕ್ಷಿತ ತಾಯಿ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವುದರ ಜತೆಗೆ ಅವರ ಆರೋಗ್ಯ ಹಾಗೂ ಶಿಕ್ಷಣದ ಬಗ್ಗೆ ಸೂಕ್ತ ಕಾಳಜಿ ವಹಿಸಬಲ್ಲಳು. ಒಬ್ಬ ಪುರುಷ ಶಿಕ್ಷಣ ಪಡೆದರೆ ಒಬ್ಬ ವ್ಯಕ್ತಿ ಕಲಿತಂತಾಗುತ್ತದೆ; ಆದರೆ ಒಬ್ಬ ಮಹಿಳೆ ಶಿಕ್ಷಣ ಪಡೆದರೆ ಇಡೀ ಕುಟುಂಬವೇ ಸುಶಿಕ್ಷಿತವಾಗುತ್ತದೆ” ಎಂದು ಶಂಕರ ಹಲಗತ್ತಿ ಹೇಳಿದರು.

ಕೇವಲ ಪದವಿ ಪಡೆಯುವುದೇ ಶಿಕ್ಷಣದ ಅಂತಿಮ ಗುರಿಯಲ್ಲ. ಶಿಕ್ಷಣವೆಂದರೆ ವ್ಯಕ್ತಿಯೊಳಗಿನ ಅರಿವಿನ ವಿಸ್ತರಣೆ ಹಾಗೂ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಬದುಕುವ ಕಲಿಕೆಯಾಗಬೇಕು. ಮಹಿಳಾ ಶಿಕ್ಷಣವು ಕುಟುಂಬದ ಅಭಿವೃದ್ಧಿಗೆ ಮಾತ್ರವಲ್ಲದೆ ಇಡೀ ಸಮಾಜದ ಪ್ರಗತಿಗೂ ಕಾರಣವಾಗುತ್ತದೆ ಎಂದರು.

ಪ್ರಸೂತಿ ಹಾಗೂ ಹೆರಿಗೆ ತಜ್ಞೆ ಡಾ. ಗೀತಾ ಭರತ್ ಉತ್ತೂರ ‘ಮಹಿಳೆ: ಶಿಕ್ಷಣ ಹಾಗೂ ಆರೋಗ್ಯ’ ವಿಷಯದ ಕುರಿತು ಉಪನ್ಯಾಸ ನೀಡಿ, ಕುಟುಂಬ ನಿರ್ವಹಣೆಯ ಒತ್ತಡದಲ್ಲಿ ಮಹಿಳೆಯರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಆರೋಗ್ಯವಾಗಿದ್ದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

“ಮಹಿಳೆಯರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಬಾರದು. ರಕ್ತಹೀನತೆ, ಖಿನ್ನತೆ, ಸುಸ್ತು, ಥೈರಾಯ್ಡ್ ಸಮಸ್ಯೆ ಹಾಗೂ ಋತುಚಕ್ರದ ಅಸಮತೆಯಂತಹ ಸಮಸ್ಯೆಗಳು ಕಂಡುಬಂದರೆ ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಸಮತೋಲನ ಆಹಾರ, ನಿಯಮಿತ ದೈಹಿಕ ಚಟುವಟಿಕೆ ಹಾಗೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ” ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯ ಡಾ. ಜೆ.ಎಂ. ನಾಗಯ್ಯ ಹಾಗೂ ಆಡಳಿತಾಧಿಕಾರಿ ಎಸ್.ಕೆ. ಹೊಸಂಗಡಿ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯೆ ಪ್ರೊ. ರಾಜೇಶ್ವರಿ ಶೆಟ್ಟರ ಸ್ವಾಗತಿಸಿದರು. ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಅಶ್ವಿನಿ ಪಾಟೀಲ ಪರಿಚಯಿಸಿದರು. ಚೇತನ ಎಂ.ವ್ಹಿ. ನಿರೂಪಿಸಿದರು. ಡಾ. ದತ್ತಾ ಕಾಮಕರ ವಂದಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ಉಪನ್ಯಾಸಕರು, ವಿಜಯಕುಮಾರ ಗಿಡ್ನವರ ದಂಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.