Home Blog

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ಮಗುವಿಗೆ ಔಷಧಿ ತರಲು ಹೊರಟಿದ್ದ ತಂದೆ ಸೇರಿ ಇಬ್ಬರು ಬಲಿ!

0

ದಾವಣಗೆರೆ: ತಾಲೂಕಿನ ಕೈದಾಳೆ-ಕುಕ್ಕುವಾಡ ಕ್ರಾಸ್ ಬಳಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಕರೆಕಟ್ಟೆ ಗ್ರಾಮದ ಯೂಸುಫ್ ಖಾನ್ (33) ಹಾಗೂ ಹೊಸ ಬೆಳವನೂರು ಗ್ರಾಮದ ಅಣ್ಣಪ್ಪ (43) ಎಂದು ಗುರುತಿಸಲಾಗಿದೆ.

ದಾವಣಗೆರೆ ಕಡೆಯಿಂದ ಯೂಸುಫ್ ಖಾನ್ ಬೈಕ್‌ನಲ್ಲಿ ಬರುತ್ತಿದ್ದರು. ಇದೇ ವೇಳೆ ಚನ್ನಗಿರಿ ಕಡೆಯಿಂದ ಅಣ್ಣಪ್ಪ ಬೈಕ್‌ನಲ್ಲಿ ಬರುತ್ತಿದ್ದರು ಎನ್ನಲಾಗಿದೆ. ಕೈದಾಳೆ-ಕುಕ್ಕುವಾಡ ಕ್ರಾಸ್ ಬಳಿ ಎರಡೂ ಬೈಕ್‌ಗಳು ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯೂಸುಫ್ ಖಾನ್ ಅವರ ಮಗು ಅನಾರೋಗ್ಯದಿಂದ ಬಳಲುತ್ತಿದ್ದು, ಮಗುವಿಗೆ ಔಷಧಿ ತರಲು ಅವರು ಬೈಕ್‌ನಲ್ಲಿ ದಾವಣಗೆರೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಔಷಧಿ ತೆಗೆದುಕೊಂಡು ವಾಪಸ್‌ ತೆರಳುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಅಣ್ಣಪ್ಪ ಅವರ ಬೈಕ್‌ಗೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಪಘಾತದ ನಿಖರ ಕಾರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

ದಾವಣಗೆರೆಯಲ್ಲಿ ಬೆಚ್ಚಿಬೀಳಿಸಿದ ಕೊಲೆ; ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿ

0

ದಾವಣಗೆರೆ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿ, ಬಳಿಕ ಮೃತದೇಹವನ್ನು ತುಂಗಭದ್ರಾ ನದಿಗೆ ಎಸೆದಿರುವ ಆರೋಪ ಕೇಳಿಬಂದಿದೆ.

ದಾವಣಗೆರೆ ತಾಲೂಕಿನ ಪಾಮೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಪಾಮೇನಹಳ್ಳಿ ಗ್ರಾಮದ ರಘು (36) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಶೃತಿ, ಆಕೆಯ ಪ್ರಿಯಕರ ಉಬೇದುಲ್ಲಾ ಹಾಗೂ ಮೃತದೇಹ ಸಾಗಿಸಲು ಸಹಕರಿಸಿದ ಆರೋಪದ ಮೇಲೆ ಸುರೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ರಘು ಹಾಗೂ ಶೃತಿ ಸುಮಾರು 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ರಘುವಿಗೆ ಕುಡಿತದ ಚಟವಿದ್ದು, ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಈ ನಡುವೆ ಕಳೆದ 2-3 ವರ್ಷಗಳಿಂದ ಶೃತಿ ಹಾಗೂ ಉಬೇದುಲ್ಲಾ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಪತಿಯೊಂದಿಗೆ ಸಂಸಾರ ನಡೆಸಲು ರಘು ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿದ ಶೃತಿ, ಪ್ರಿಯಕರ ಉಬೇದುಲ್ಲಾ ಜೊತೆ ಸೇರಿ ರಘುವನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ ಎನ್ನಲಾಗಿದೆ.

ಯೋಜನೆಯಂತೆ ರಘುವಿನ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಉಬೇದುಲ್ಲಾ ಹಾಗೂ ಆತನ ಸ್ನೇಹಿತ ಸುರೇಶ್ ಸೇರಿಕೊಂಡು ರಘುವಿನ ಮೃತದೇಹವನ್ನು ತುಂಗಭದ್ರಾ ನದಿಗೆ ಎಸೆದಿದ್ದಾರೆ ಎನ್ನಲಾಗಿದೆ.

ಇತ್ತ ರಘು ನಾಪತ್ತೆಯಾಗಿರುವ ಕುರಿತು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.

ತನಿಖೆ ವೇಳೆ ಶೃತಿಯ ಸಹೋದರಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಕೆಲವು ಅನುಮಾನಾಸ್ಪದ ವಿಚಾರಗಳು ಬೆಳಕಿಗೆ ಬಂದಿವೆ. ಬಳಿಕ ಶೃತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಸತ್ಯಾಂಶ ಬಯಲಾಗಿದೆ ಎನ್ನಲಾಗಿದೆ.

ತನಿಖೆ ಮುಂದುವರಿಸಿದ ಪೊಲೀಸರು ಶೃತಿ, ಉಬೇದುಲ್ಲಾ ಹಾಗೂ ಸುರೇಶ್‌ನನ್ನು ಬಂಧಿಸಿದ್ದಾರೆ. ಸದ್ಯ ರಘುವಿನ ಮೃತದೇಹಕ್ಕಾಗಿ ತುಂಗಭದ್ರಾ ನದಿಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ನಡೆದಿರುವುದು ಹೇಗೆ, ಮೃತದೇಹವನ್ನು ನದಿಗೆ ಎಸೆಯಲು ಬಳಸಿದ ವಾಹನ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಇತರ ಅಂಶಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್‌ನಿಂದ ಪ್ಲಾಸ್ಟಿಕ್ ಫ್ಯಾಕ್ಟರಿಗೆ ಬೆಂಕಿ?; ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಕಾರ್ಖಾನೆ!

0

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಪಟ್ಟಣದ ಟಿಪ್ಪುನಗರದ ಎಸ್‌ಟಿಪಿ ರಸ್ತೆಯಲ್ಲಿರುವ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಖಾನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಪ್ಲಾಸ್ಟಿಕ್ ಕಚ್ಚಾ ವಸ್ತುಗಳು ಹಾಗೂ ಯಂತ್ರೋಪಕರಣಗಳು ಬೆಂಕಿಗೆ ಆಹುತಿಯಾಗಿವೆ.

ಕಾರ್ಖಾನೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಸಮಯದಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಕಾರ್ಖಾನೆಗೆ ವ್ಯಾಪಿಸಿದೆ. ಪ್ಲಾಸ್ಟಿಕ್ ಕಚ್ಚಾ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿದ್ದ ಹಿನ್ನೆಲೆಯಲ್ಲಿ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ದಟ್ಟ ಹೊಗೆ ಆವರಿಸಿಕೊಂಡಿತ್ತು ಎನ್ನಲಾಗಿದೆ.

ಕಾರ್ಖಾನೆ ಫ್ರೆಂಡ್ಸ್ ಇಲಿಯಾಸ್ ಅವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಲಭ್ಯವಾಗುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಲೋಕೇಶ್ ನೇತೃತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸುದೀರ್ಘ ಕಾರ್ಯಾಚರಣೆಯ ಬಳಿಕ ಬೆಂಕಿ ಸಂಪೂರ್ಣವಾಗಿ ನಂದಿಸಲಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ವ್ಯಾಪಿಸುವುದನ್ನು ತಡೆಯಲಾಗಿದೆ.

ಅಗ್ನಿ ಅವಘಡದಿಂದ ಕಾರ್ಖಾನೆಯಲ್ಲಿದ್ದ ಪ್ಲಾಸ್ಟಿಕ್ ಕಚ್ಚಾ ವಸ್ತುಗಳು ಹಾಗೂ ಹಲವು ಯಂತ್ರೋಪಕರಣಗಳು ಸುಟ್ಟುಹೋಗಿವೆ. ಘಟನೆಯಿಂದ ಕಾರ್ಖಾನೆ ಮಾಲೀಕರಿಗೆ ಭಾರೀ ಪ್ರಮಾಣದ ಆರ್ಥಿಕ ನಷ್ಟ ಸಂಭವಿಸಿರುವ ಸಾಧ್ಯತೆಯಿದ್ದು, ನಷ್ಟದ ನಿಖರ ಪ್ರಮಾಣ ಇನ್ನಷ್ಟೇ ತಿಳಿದುಬರಬೇಕಿದೆ.

ಘಟನೆಯ ಮಾಹಿತಿ ತಿಳಿದು ಚಿಂತಾಮಣಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಖಾನೆಯಲ್ಲಿನ ಬೆಂಕಿ ಅವಘಡದ ಸ್ಥಳವನ್ನು ಪರಿಶೀಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪ್ರಾಥಮಿಕವಾಗಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ. ಅಗ್ನಿಶಾಮಕ ಇಲಾಖೆ ಹಾಗೂ ಪೊಲೀಸರು ಘಟನೆಯ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.

35ನೇ ವಯಸ್ಸಿನಲ್ಲಿ ಟೆಸ್ಟ್ʼಗೆ ಪದಾರ್ಪಣೆ ಮಾಡಿ ದಾಖಲೆ ಬರೆದ ಆಸ್ಟ್ರೇಲಿಯಾ ಬ್ಯಾಟರ್!

0

ನವದೆಹಲಿ: ಕ್ರಿಕೆಟ್ ದಾಖಲೆಗಳ ಮಾತು ಬಂದಾಗ ಸಚಿನ್ ತೆಂಡೂಲ್ಕರ್ ಹಾಗೂ ಸರ್ ಡೊನಾಲ್ಡ್ ಬ್ರಾಡ್‌ಮನ್ ಅವರ ಹೆಸರುಗಳು ಮೊದಲಿಗೆ ನೆನಪಿಗೆ ಬರುತ್ತವೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ರನ್‌ಗಳನ್ನು ಔಟಾಗದೆ ಕಲೆಹಾಕಿದ ಅಪರೂಪದ ದಾಖಲೆ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಆಡಂ ವೋಗ್ಸ್ ಅವರ ಹೆಸರಿನಲ್ಲಿದೆ.

2015ರ ಡಿಸೆಂಬರ್‌ನಿಂದ 2016ರ ಫೆಬ್ರವರಿವರೆಗೆ ಆಡಂ ವೋಗ್ಸ್ ಸತತವಾಗಿ 614 ರನ್‌ಗಳನ್ನು ಔಟಾಗದೆ ಕಲೆಹಾಕಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ಹೋಬಾರ್ಟ್ ಟೆಸ್ಟ್‌ನಲ್ಲಿ 269* ರನ್ ಗಳಿಸಿದ ವೋಗ್ಸ್, ನಂತರ ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ 106* ರನ್ ಗಳಿಸಿದರು. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ 239 ರನ್ ಗಳಿಸಿದ ಅವರು ಅಂತಿಮವಾಗಿ ವಿಕೆಟ್ ಒಪ್ಪಿಸಿದರು.

ವೋಗ್ಸ್ ಈ ದಾಖಲೆ ನಿರ್ಮಿಸುವ ಮೊದಲು ಟೆಸ್ಟ್ ಕ್ರಿಕೆಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ರನ್‌ಗಳನ್ನು ಔಟಾಗದೆ ಗಳಿಸಿದ ದಾಖಲೆ ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. 2004ರಲ್ಲಿ ಸಚಿನ್ ಸತತವಾಗಿ 497 ರನ್‌ಗಳನ್ನು ಔಟಾಗದೆ ಕಲೆಹಾಕಿದ್ದರು. ಆದರೆ ವೋಗ್ಸ್ 614 ರನ್‌ಗಳೊಂದಿಗೆ ಈ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಿದರು.

ವೋಗ್ಸ್ ಅವರ ಈ ಅದ್ಭುತ ಬ್ಯಾಟಿಂಗ್ ಅವಧಿಯಲ್ಲಿ ಟೆಸ್ಟ್ ಸರಾಸರಿ 100ರ ಗಡಿಯನ್ನು ದಾಟಿತ್ತು. ವೆಲ್ಲಿಂಗ್ಟನ್‌ನಲ್ಲಿ 239 ರನ್‌ಗಳಿಗೆ ಔಟಾದ ಬಳಿಕ ಅವರ ವೃತ್ತಿಜೀವನದ ಟೆಸ್ಟ್ ಸರಾಸರಿ 97.46ಕ್ಕೆ ಇಳಿಯಿತು. 2015-16ರ ಅವಧಿಯಲ್ಲಿ ವೋಗ್ಸ್ ಅಸಾಧಾರಣ ಫಾರ್ಮ್‌ನಲ್ಲಿದ್ದರು.

ಆಸ್ಟ್ರೇಲಿಯಾ ಪರ ಒಟ್ಟು 20 ಟೆಸ್ಟ್ ಪಂದ್ಯಗಳನ್ನು ಆಡಿರುವ ಆಡಂ ವೋಗ್ಸ್ 1,485 ರನ್‌ಗಳನ್ನು ಕಲೆಹಾಕಿದ್ದಾರೆ. ಅವರ ಖಾತೆಯಲ್ಲಿ ಐದು ಶತಕಗಳಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 269* ರನ್.

ವೋಗ್ಸ್ ಅವರ ಈ ದಾಖಲೆ ಮತ್ತಷ್ಟು ವಿಶೇಷವಾಗಿರುವುದು ಅವರು ಟೆಸ್ಟ್ ಕ್ರಿಕೆಟ್‌ಗೆ ತಡವಾಗಿ ಪದಾರ್ಪಣೆ ಮಾಡಿದ್ದರಿಂದ. 35ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟ ಅವರು, ಕೆಲವೇ ವರ್ಷಗಳ ಅವಧಿಯಲ್ಲಿ ತಮ್ಮ ಹೆಸರನ್ನು ಕ್ರಿಕೆಟ್ ದಾಖಲೆ ಪುಸ್ತಕದಲ್ಲಿ ಅಚ್ಚಳಿಯದಂತೆ ದಾಖಲಿಸಿದರು.

2015-16ರ ಋತುವಿನಲ್ಲಿ ವೋಗ್ಸ್ ಅವರ ಬ್ಯಾಟಿಂಗ್ ಪ್ರದರ್ಶನ ಅತ್ಯಂತ ಗಮನಾರ್ಹವಾಗಿತ್ತು. ಆ ಅವಧಿಯಲ್ಲಿ ಅವರು 969 ರನ್‌ಗಳನ್ನು 161.50ರ ಅದ್ಭುತ ಸರಾಸರಿಯಲ್ಲಿ ಕಲೆಹಾಕಿದ್ದರು.

ಸಚಿನ್ ತೆಂಡೂಲ್ಕರ್ ಮತ್ತು ಡೊನಾಲ್ಡ್ ಬ್ರಾಡ್‌ಮನ್ ಅವರಂತಹ ದಿಗ್ಗಜರ ಯುಗದ ಬಳಿಕವೂ ಆಡಂ ವೋಗ್ಸ್ ತಮ್ಮದೇ ಆದ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದಾರೆ. ಒಮ್ಮೆ ವಿಕೆಟ್ ಕಳೆದುಕೊಂಡ ಬಳಿಕ ಮತ್ತೆ ಕ್ರೀಸ್‌ಗೆ ಬಂದು ಸತತವಾಗಿ ದೊಡ್ಡ ಮೊತ್ತ ಕಲೆಹಾಕುವುದು ಸುಲಭದ ಮಾತಲ್ಲ. ಆದರೆ ವೋಗ್ಸ್ 614 ರನ್‌ಗಳ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಕಬ್ಬಿಣ, ಸ್ಟೀಲ್‌ ವಸ್ತುಗಳಿಗೆ ಹಿಡಿದ ತುಕ್ಕು ತೆಗೆಯೋದು ಹೇಗೆ? ಮನೆಯಲ್ಲೇ ಇರುವ ಈ ವಸ್ತುಗಳಿಂದ ಸುಲಭವಾಗಿ ಕ್ಲೀನ್‌ ಮಾಡಿ

0

ಕಬ್ಬಿಣ ಮತ್ತು ಸ್ಟೀಲ್‌ನ ವಸ್ತುಗಳು ದೀರ್ಘಕಾಲ ಬಳಕೆಯಲ್ಲಿದ್ದಂತೆ ತುಕ್ಕು ಹಿಡಿಯುವುದು ಸಾಮಾನ್ಯ.

ಅದರಲ್ಲೂ ಮಳೆಗಾಲದಲ್ಲಿ ಮಳೆ ನೀರು, ತೇವಾಂಶ ಹಾಗೂ ಧೂಳಿನಿಂದಾಗಿ ಮನೆಯ ಗೇಟ್‌, ಬಾಲ್ಕನಿ ರೇಲಿಂಗ್‌, ಕಿಟಕಿ ರಾಡ್‌ಗಳು ಸೇರಿದಂತೆ ಹಲವು ಕಬ್ಬಿಣದ ವಸ್ತುಗಳು ಬೇಗನೆ ತುಕ್ಕು ಹಿಡಿಯುತ್ತವೆ. ಇದರಿಂದ ವಸ್ತುಗಳ ಹೊಳಪು ಕಡಿಮೆಯಾಗುವುದಲ್ಲದೆ, ಕ್ರಮೇಣ ಅವುಗಳ ಮೇಲ್ಮೈ ಕೂಡ ಹಾಳಾಗುವ ಸಾಧ್ಯತೆಯಿದೆ.

ಬಾಗಿಲಿನ ಹಿಡಿಕೆ, ಕತ್ತರಿ, ಕಬ್ಬಿಣದ ಪಾತ್ರೆಗಳು ಸೇರಿದಂತೆ ಹಲವು ವಸ್ತುಗಳಲ್ಲೂ ತುಕ್ಕು ಕಾಣಿಸಿಕೊಳ್ಳುತ್ತದೆ. ಇದನ್ನು ತೆಗೆಯಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ಲೀನರ್‌ಗಳನ್ನು ಬಳಸುವುದು ಸಾಮಾನ್ಯ. ಆದರೆ ಮನೆಯಲ್ಲೇ ಸುಲಭವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸಿ ತುಕ್ಕನ್ನು ಸ್ವಚ್ಛಗೊಳಿಸಬಹುದು.

ವಿನೆಗರ್‌ನಿಂದ ತುಕ್ಕು ಕ್ಲೀನ್‌:

ತುಕ್ಕು ಹಿಡಿದ ಕಬ್ಬಿಣ ಮತ್ತು ಸ್ಟೀಲ್‌ ವಸ್ತುಗಳನ್ನು ಸ್ವಚ್ಛಗೊಳಿಸಲು ಬಿಳಿ ವಿನೆಗರ್‌ ಬಳಸಬಹುದು. ಒಂದು ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ಬಿಳಿ ವಿನೆಗರ್‌ ಅನ್ನು ಸಮ ಪ್ರಮಾಣದಲ್ಲಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.

ಈ ಮಿಶ್ರಣವನ್ನು ತುಕ್ಕು ಹಿಡಿದ ಜಾಗಕ್ಕೆ ಸಿಂಪಡಿಸಿ ಸುಮಾರು 5ರಿಂದ 10 ನಿಮಿಷಗಳ ಕಾಲ ಬಿಡಬೇಕು. ಬಳಿಕ ಮೃದುವಾದ ಬಟ್ಟೆಯಿಂದ ನಿಧಾನವಾಗಿ ಒರೆಸಿದರೆ ತುಕ್ಕಿನ ಕಲೆ ಕಡಿಮೆಯಾಗಬಹುದು.

ನಿಂಬೆ ಮತ್ತು ಅಡುಗೆ ಸೋಡಾ

ಬಾಗಿಲಿನ ಹಿಡಿಕೆ, ಬಾಲ್ಕನಿ ರೇಲಿಂಗ್‌ ಅಥವಾ ಇತರ ಕಬ್ಬಿಣದ ವಸ್ತುಗಳಿಗೆ ತುಕ್ಕು ಹಿಡಿದಿದ್ದರೆ ನಿಂಬೆ ಮತ್ತು ಅಡುಗೆ ಸೋಡಾ ಬಳಸಬಹುದು.

ಸ್ವಲ್ಪ ನಿಂಬೆ ರಸಕ್ಕೆ ಅಡುಗೆ ಸೋಡಾ ಸೇರಿಸಿ ದಪ್ಪ ಪೇಸ್ಟ್‌ ತಯಾರಿಸಿಕೊಳ್ಳಬೇಕು. ಈ ಪೇಸ್ಟ್‌ ಅನ್ನು ತುಕ್ಕು ಹಿಡಿದ ಭಾಗಕ್ಕೆ ಹಚ್ಚಿ 15ರಿಂದ 20 ನಿಮಿಷಗಳ ಕಾಲ ಬಿಡಬೇಕು. ನಂತರ ಹಳೆಯ ಹಲ್ಲುಜ್ಜುವ ಬ್ರಷ್‌ ಅಥವಾ ಮೃದುವಾದ ಬ್ರಷ್‌ನಿಂದ ನಿಧಾನವಾಗಿ ಉಜ್ಜಿ ನೀರಿನಿಂದ ಸ್ವಚ್ಛಗೊಳಿಸಬಹುದು.

ಅಡುಗೆ ಸೋಡಾ ಮತ್ತು ನೀರು

ಅಡುಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ದಪ್ಪ ಪೇಸ್ಟ್‌ ಮಾಡಿಕೊಳ್ಳಬಹುದು. ಈ ಪೇಸ್ಟ್‌ ಅನ್ನು ತುಕ್ಕು ಹಿಡಿದ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆಯೇ ಬಿಡಬೇಕು.

ನಂತರ ಬ್ರಷ್‌ ಅಥವಾ ಬಟ್ಟೆಯಿಂದ ನಿಧಾನವಾಗಿ ಸ್ಕ್ರಬ್‌ ಮಾಡಿ ಸ್ವಚ್ಛಗೊಳಿಸಬೇಕು. ತುಕ್ಕು ಸಡಿಲಗೊಂಡ ಬಳಿಕ ಅದನ್ನು ತೆಗೆಯಲು ಸುಲಭವಾಗುತ್ತದೆ.

ತೆಂಗಿನ ಎಣ್ಣೆ

ಕಿಟಕಿ ಅಥವಾ ಬಾಗಿಲಿನ ಹಿಡಿಕೆಯಂತಹ ಸಣ್ಣ ಲೋಹದ ವಸ್ತುಗಳಲ್ಲಿ ಸ್ವಲ್ಪ ತುಕ್ಕು ಕಾಣಿಸಿಕೊಂಡಿದ್ದರೆ ತೆಂಗಿನ ಎಣ್ಣೆಯನ್ನು ಬಳಸಬಹುದು.

ಹಳೆಯ ಹಲ್ಲುಜ್ಜುವ ಬ್ರಷ್‌ಗೆ ಸ್ವಲ್ಪ ತೆಂಗಿನ ಎಣ್ಣೆ ಹಚ್ಚಿ ತುಕ್ಕು ಹಿಡಿದ ಜಾಗವನ್ನು ನಿಧಾನವಾಗಿ ಉಜ್ಜಬಹುದು. ಎಣ್ಣೆಯ ಲೇಪನವು ಮೇಲ್ಮೈಯಲ್ಲಿ ತೇವಾಂಶದ ಸಂಪರ್ಕವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

ನಿಂಬೆ ಮತ್ತು ಉಪ್ಪು

ನಿಂಬೆ ಮತ್ತು ಉಪ್ಪಿನ ಸಂಯೋಜನೆಯನ್ನೂ ತುಕ್ಕು ತೆಗೆಯಲು ಬಳಸಬಹುದು. ತುಕ್ಕು ಹಿಡಿದ ಜಾಗದ ಮೇಲೆ ಸ್ವಲ್ಪ ಉಪ್ಪು ಹಾಕಿ, ಅದರ ಮೇಲೆ ನಿಂಬೆ ರಸವನ್ನು ಹಿಂಡಬೇಕು.

ಸುಮಾರು ಅರ್ಧ ಗಂಟೆಯ ಬಳಿಕ ಬ್ರಷ್‌ನಿಂದ ನಿಧಾನವಾಗಿ ಸ್ಕ್ರಬ್‌ ಮಾಡಿ ನೀರಿನಿಂದ ತೊಳೆಯಬಹುದು. ಬಳಿಕ ವಸ್ತುವನ್ನು ಸಂಪೂರ್ಣವಾಗಿ ಒಣಗಿಸುವುದು ಮುಖ್ಯ.

ಬೋರಾಕ್ಸ್ ಪೌಡರ್‌

ಕಬ್ಬಿಣದ ವಸ್ತುಗಳ ಮೇಲಿನ ತುಕ್ಕು ತೆಗೆಯಲು ಬೋರಾಕ್ಸ್‌ ಪೌಡರ್‌ ಬಳಸುವ ವಿಧಾನವೂ ಇದೆ. ಸುಮಾರು 3ರಿಂದ 4 ಟೀ ಚಮಚ ಬೋರಾಕ್ಸ್‌ ಪೌಡರ್‌ಗೆ ಒಂದು ಟೀ ಚಮಚ ನೀರು ಸೇರಿಸಿ ದಪ್ಪ ಪೇಸ್ಟ್‌ ತಯಾರಿಸಿಕೊಳ್ಳಬೇಕು.

ಈ ಪೇಸ್ಟ್‌ ಅನ್ನು ತುಕ್ಕು ಹಿಡಿದ ಭಾಗಕ್ಕೆ ಹಚ್ಚಿ ಸುಮಾರು 10 ನಿಮಿಷಗಳ ಕಾಲ ಬಿಡಬೇಕು. ನಂತರ ಸೂಕ್ತವಾದ ಸ್ಕ್ರಬ್ಬರ್‌ ಅಥವಾ ಸ್ಯಾಂಡ್‌ಪೇಪರ್‌ನಿಂದ ನಿಧಾನವಾಗಿ ಉಜ್ಜಿ ಸ್ವಚ್ಛಗೊಳಿಸಬಹುದು.

ಸ್ವಚ್ಛಗೊಳಿಸಿದ ಬಳಿಕ ಏನು ಮಾಡಬೇಕು?

ತುಕ್ಕು ತೆಗೆದ ನಂತರ ಕಬ್ಬಿಣ ಅಥವಾ ಸ್ಟೀಲ್‌ ವಸ್ತುವನ್ನು ನೀರಿನಿಂದ ತೊಳೆದಿದ್ದರೆ ಅದನ್ನು ಸಂಪೂರ್ಣವಾಗಿ ಒಣಗಿಸಬೇಕು. ತೇವಾಂಶ ಉಳಿದರೆ ಮತ್ತೆ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ. ಅಗತ್ಯವಿದ್ದಲ್ಲಿ ಲೋಹದ ಮೇಲ್ಮೈಗೆ ಸೂಕ್ತವಾದ ರಕ್ಷಣಾತ್ಮಕ ಲೇಪನ ಅಥವಾ ಪೇಂಟ್‌ ಹಚ್ಚುವುದರಿಂದ ತುಕ್ಕು ಮರುಕಳಿಸುವುದನ್ನು ಕಡಿಮೆ ಮಾಡಬಹುದು.

ಸೂಚನೆ: ಯಾವುದೇ ಮನೆಮದ್ದನ್ನು ಬಳಸುವ ಮೊದಲು ವಸ್ತುವಿನ ಸಣ್ಣ, ಕಾಣದ ಭಾಗದಲ್ಲಿ ಪರೀಕ್ಷಿಸಿ. ಅಮೂಲ್ಯ, ಸೂಕ್ಷ್ಮ ಅಥವಾ ವಿಶೇಷ ಲೇಪನವಿರುವ ಲೋಹದ ವಸ್ತುಗಳ ಮೇಲೆ ಆಮ್ಲೀಯ ಪದಾರ್ಥಗಳನ್ನು ಬಳಸುವ ಮುನ್ನ ತಯಾರಕರ ಸೂಚನೆಗಳನ್ನು ಪರಿಶೀಲಿಸುವುದು ಉತ್ತಮ.

ಮೂರನೇ ಮಗುವಿಗೂ 365 ದಿನಗಳ ಹೆರಿಗೆ ರಜೆ: ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ತಮಿಳುನಾಡು ಸರ್ಕಾರದ ಬಂಪರ್‌ ಗಿಫ್ಟ್

0

ಚೆನ್ನೈ: ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ತಮಿಳುನಾಡು ಸರ್ಕಾರ ಮಹತ್ವದ ಘೋಷಣೆ ಮಾಡಿದೆ.

ಇನ್ನು ಮುಂದೆ ಮೂರನೇ ಮಗುವಿನ ಜನನಕ್ಕೂ 365 ದಿನಗಳ ಹೆರಿಗೆ ರಜೆ ನೀಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಮೂರನೇ ಮಗುವಿನ ಹೆರಿಗೆ ರಜೆಯನ್ನು ಈಗಿರುವ 12 ವಾರಗಳಿಂದ ಒಂದು ವರ್ಷಕ್ಕೆ ವಿಸ್ತರಿಸಲಾಗುತ್ತಿದೆ.

ಪ್ರಸ್ತುತ, ಎರಡಕ್ಕಿಂತ ಕಡಿಮೆ ಮಕ್ಕಳಿರುವ ವಿವಾಹಿತ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ 365 ದಿನಗಳ ಹೆರಿಗೆ ರಜೆ ಸಿಗುತ್ತದೆ. ಆದರೆ ಈಗಾಗಲೇ ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಮಹಿಳಾ ಉದ್ಯೋಗಿಗಳಿಗೆ ಮೂರನೇ ಮಗುವಿನ ಸಂದರ್ಭದಲ್ಲಿ ಕೇವಲ 12 ವಾರಗಳ ಹೆರಿಗೆ ರಜೆ ನೀಡಲಾಗುತ್ತಿತ್ತು.

ಈ ನಿಯಮದಲ್ಲಿ ಬದಲಾವಣೆ ತರಲು ಸರ್ಕಾರ ಮುಂದಾಗಿದೆ. ಮೂರನೇ ಮಗುವಿನ ಜನನಕ್ಕೂ ಒಂದು ವರ್ಷದ ಹೆರಿಗೆ ರಜೆ ನೀಡುವುದಾಗಿ ಮಾನವ ಸಂಪನ್ಮೂಲ ನಿರ್ವಹಣಾ ಸಚಿವ ಡಿ. ಶರತ್‌ಕುಮಾರ್ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.

ತಮ್ಮ ಇಲಾಖೆಗೆ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಸಚಿವರು, ತಮಿಳುನಾಡು ಸರ್ಕಾರವು ಸಾಮಾಜಿಕ ಕಲ್ಯಾಣ ಹಾಗೂ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವ ಕಲ್ಯಾಣಾಧಾರಿತ ಆಡಳಿತವಾಗಿದೆ ಎಂದು ಹೇಳಿದರು.

ಶೀಘ್ರದಲ್ಲೇ ಸರ್ಕಾರಿ ಆದೇಶ:

ವಿಧಾನಸಭೆಯಲ್ಲಿ ಮಾಡಿರುವ ಘೋಷಣೆಯನ್ನು ಜಾರಿಗೆ ತರಲು ಶೀಘ್ರದಲ್ಲೇ ವಿವರವಾದ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರ್ಕಾರಿ ಆದೇಶ ಹೊರಬಂದ ಬಳಿಕ ಮೂರನೇ ಮಗುವಿನ ಹೆರಿಗೆ ರಜೆ ಸಂಬಂಧಿಸಿದ ಹೊಸ ನಿಯಮ ಅಧಿಕೃತವಾಗಿ ಜಾರಿಗೆ ಬರಲಿದೆ.

ಹಲವು ಹಂತಗಳಲ್ಲಿ ಹೆರಿಗೆ ರಜೆ ವಿಸ್ತರಣೆ:

ತಮಿಳುನಾಡಿನಲ್ಲಿ ಮಹಿಳಾ ಸರ್ಕಾರಿ ಉದ್ಯೋಗಿಗಳ ಹೆರಿಗೆ ರಜೆಯನ್ನು ಹಲವು ಹಂತಗಳಲ್ಲಿ ಹೆಚ್ಚಿಸಲಾಗಿದೆ. 2011ರಲ್ಲಿ 90 ದಿನಗಳಿಗೆ ಸೀಮಿತವಾಗಿದ್ದ ಹೆರಿಗೆ ರಜೆಯನ್ನು ಆರು ತಿಂಗಳಿಗೆ ವಿಸ್ತರಿಸಲಾಯಿತು. ಬಳಿಕ 2016ರಲ್ಲಿ ಒಂಬತ್ತು ತಿಂಗಳಿಗೆ ಹೆಚ್ಚಿಸಲಾಯಿತು. 2021ರ ಜುಲೈನಲ್ಲಿ ಹೆರಿಗೆ ರಜೆಯನ್ನು ಒಂದು ವರ್ಷ ಅಥವಾ 365 ದಿನಗಳಿಗೆ ವಿಸ್ತರಿಸಲಾಗಿತ್ತು.

ಆದರೆ ಈ 365 ದಿನಗಳ ರಜೆ ಪ್ರಯೋಜನವು ನಿಗದಿತ ಅರ್ಹತಾ ನಿಯಮಗಳ ಪ್ರಕಾರ ಎರಡಕ್ಕಿಂತ ಕಡಿಮೆ ಮಕ್ಕಳಿರುವ ನಿಯಮಿತ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ಅನ್ವಯಿಸುತ್ತಿತ್ತು. ಇದೀಗ ಮೂರನೇ ಮಗುವಿಗೂ ಒಂದು ವರ್ಷದ ಹೆರಿಗೆ ರಜೆ ನೀಡುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ.

ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ಮೂರನೇ ಮಗುವಿನ ಸಂದರ್ಭದಲ್ಲೂ ಒಂದು ವರ್ಷದ ರಜೆ ದೊರೆಯುವಂತಾಗಿರುವುದು ತಮಿಳುನಾಡು ಸರ್ಕಾರದ ಈ ಘೋಷಣೆಯ ಪ್ರಮುಖ ಅಂಶವಾಗಿದೆ.

Crime News: ನೀರು ಕೊಡಲಿಲ್ಲವೆಂದು ಲಾರಿ ಕ್ಲೀನರ್‌ಗೆ ಚಾಕು ಇರಿತ; ಆರೋಪಿ ಬಂಧನ

0

ಬೆಂಗಳೂರು: ಕುಡಿಯಲು ನೀರು ಕೊಡಲಿಲ್ಲ ಎಂಬ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಲಾರಿ ಕ್ಲೀನರ್‌ವೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಗರದ ಆರ್‌ಎಂಸಿ ಯಾರ್ಡ್‌ನಲ್ಲಿರುವ ಫ್ಯಾಕ್ಟರಿಯೊಂದರ ಬಳಿ ನಡೆದಿದೆ.

ಹತ್ಯೆಯಾದ ದುರ್ದೈವಿಯನ್ನು ಆಂಧ್ರಪ್ರದೇಶ ಮೂಲದ ಬರ್ಕತ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುಗಿರಿ ಮೂಲದ ಸೀನಪ್ಪ ಎಂಬಾತನನ್ನು ಆರ್‌ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.

ಬರ್ಕತ್ ಹಾಗೂ ಸೀನಪ್ಪ ಇಬ್ಬರೂ ಲಾರಿ ಕ್ಲೀನರ್‌ಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮಧ್ಯಾಹ್ನ ಊಟದ ಬಳಿಕ ಸೀನಪ್ಪ, ಬರ್ಕತ್ ಬಳಿ ಕುಡಿಯಲು ನೀರು ಕೇಳಿದ್ದಾನೆ. ಆದರೆ ಬರ್ಕತ್ ನೀರು ನೀಡಲು ನಿರಾಕರಿಸಿದ್ದಾನೆ ಎನ್ನಲಾಗಿದೆ.

ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು, ಬಳಿಕ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಸೀನಪ್ಪ ಚಾಕುವಿನಿಂದ ಬರ್ಕತ್‌ಗೆ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಪರಿಣಾಮ ಬರ್ಕತ್ ಮೃತಪಟ್ಟಿದ್ದಾನೆ.

ಕೊಲೆ ಬಳಿಕ ಆರೋಪಿ ಸೀನಪ್ಪ ಸ್ಥಳದಿಂದ ಪರಾರಿಯಾಗಿದ್ದ. ಘಟನೆ ಕುರಿತು ಲಾರಿ ಚಾಲಕರಿಂದ ಮಾಹಿತಿ ಪಡೆದ ಆರ್‌ಎಂಸಿ ಯಾರ್ಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಮೀನು ಹಿಡಿಯಲು ಹೋಗಿ ನಾಪತ್ತೆಯಾದ ಮೂವರು ಯುವಕರು; ಓರ್ವನ ಶವ ಪತ್ತೆ, ಇಬ್ಬರಿಗಾಗಿ ಶೋಧ!

0

ಹಗರಿಬೊಮ್ಮನಹಳ್ಳಿ: ಮೀನು ಹಿಡಿಯಲು ತುಂಗಭದ್ರಾ ನದಿಗೆ ತೆರಳಿದ್ದ ಮೂವರು ಯುವಕರು ನಾಪತ್ತೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಗ್ರಾಮದ ಬಳಿ ನಡೆದಿದೆ.

ನಾಪತ್ತೆಯಾಗಿದ್ದ ಮೂವರ ಪೈಕಿ ಓರ್ವನ ಶವ ಇದೀಗ ಪತ್ತೆಯಾಗಿದ್ದು, ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ನಾಪತ್ತೆಯಾದವರನ್ನು ರಾಜ (22), ಯಮನಪ್ಪ (20) ಹಾಗೂ ಅಜ್ಜಪ್ಪ (26) ಎಂದು ಗುರುತಿಸಲಾಗಿದೆ. ಮೂವರು ಮಂಗಳವಾರ ಮಧ್ಯಾಹ್ನ ತುಂಗಭದ್ರಾ ನದಿಯ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದರು ಎನ್ನಲಾಗಿದೆ.

ಆದರೆ ಸಂಜೆಯಾದರೂ ಮೂವರು ಮನೆಗೆ ವಾಪಸ್‌ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಬಳಿಕ ಸಂಬಂಧಿಕರು ಹಾಗೂ ಕುಟುಂಬಸ್ಥರು ನದಿಯ ಸುತ್ತಮುತ್ತ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಹಗರಿಬೊಮ್ಮನಹಳ್ಳಿ ಪೊಲೀಸರು ಹಾಗೂ ಸ್ಥಳೀಯರು ನದಿಯ ಬಳಿ ತೆರಳಿ ಶೋಧ ಕಾರ್ಯ ಆರಂಭಿಸಿದ್ದಾರೆ. ಬಳಿಕ ಎಸ್‌ಡಿಆರ್‌ಎಫ್ ತಂಡವೂ ಸ್ಥಳಕ್ಕೆ ಆಗಮಿಸಿ ತುಂಗಭದ್ರಾ ನದಿ ಹಿನ್ನೀರಿನಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಈ ವೇಳೆ ನಾಪತ್ತೆಯಾಗಿದ್ದ ಮೂವರ ಪೈಕಿ ಓರ್ವ ಯುವಕನ ಶವ ಪತ್ತೆಯಾಗಿದೆ. ಉಳಿದ ಇಬ್ಬರು ಯುವಕರಿಗಾಗಿ ಎಸ್‌ಡಿಆರ್‌ಎಫ್ ತಂಡ ಹಾಗೂ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿ ನಾಪತ್ತೆಯಾದ ಯುವಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ತಂಬ್ರಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕರು ನಾಪತ್ತೆಯಾಗಿರುವ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಕೋಲ್ಕತ್ತಾ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ; ಮಗು ಸೇರಿ 9 ಮಂದಿ ಸಾವು!

0

ಕೋಲ್ಕತ್ತಾ: ನಗರದ ಫ್ರೀ ಸ್ಕೂಲ್ ಸ್ಟ್ರೀಟ್‌ನಲ್ಲಿರುವ ಹೋಟೆಲ್‌ವೊಂದರಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮಗು ಸೇರಿದಂತೆ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನ್ಯೂ ಮಾರ್ಕೆಟ್ ಸಮೀಪದ ಫ್ರೀ ಸ್ಕೂಲ್ ಸ್ಟ್ರೀಟ್‌ನಲ್ಲಿರುವ ಹೋಟೆಲ್‌ನಲ್ಲಿ ಮುಂಜಾನೆ ಸುಮಾರು 2 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತೀವ್ರವಾಗಿ ವ್ಯಾಪಿಸಿದ ಪರಿಣಾಮ ಹೋಟೆಲ್‌ನಲ್ಲಿದ್ದ ಹಲವು ಅತಿಥಿಗಳು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ:

ಅಗ್ನಿ ಅವಘಡದ ಮಾಹಿತಿ ಲಭ್ಯವಾಗುತ್ತಿದ್ದಂತೆ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಬಳಿಕ ವಿಪತ್ತು ನಿರ್ವಹಣಾ ತಂಡವೂ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತು.

ಹೋಟೆಲ್‌ನೊಳಗೆ ಸಿಲುಕಿದ್ದವರನ್ನು ಸುರಕ್ಷಿತವಾಗಿ ಹೊರಗೆ ಕರೆತರಲು ಅಗ್ನಿಶಾಮಕ ಸಿಬ್ಬಂದಿ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು. ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

ಪ್ರಾಥಮಿಕ ಮಾಹಿತಿಯ ಪ್ರಕಾರ ಎಸಿ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ. ಈ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಅಗ್ನಿಶಾಮಕ ಇಲಾಖೆಯ ಪ್ರಕಾರ, ಘಟನೆಯಲ್ಲಿ ಮೃತಪಟ್ಟ ಎಲ್ಲಾ 9 ಮಂದಿ ಬಾಂಗ್ಲಾದೇಶದ ಪ್ರಜೆಗಳು ಎಂದು ತಿಳಿದುಬಂದಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಅವರು ಕೋಲ್ಕತ್ತಾಗೆ ಬಂದಿದ್ದರು ಎನ್ನಲಾಗಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತರ ಗುರುತು ಹಾಗೂ ಅಗ್ನಿ ಅವಘಡದ ಸಂಪೂರ್ಣ ವಿವರಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಜನನಿಬಿಡ ಪ್ರದೇಶದಲ್ಲೇ ಈ ಭೀಕರ ಅಗ್ನಿ ಅವಘಡ ಸಂಭವಿಸಿರುವುದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಶೃಂಗೇರಿ ಅಂಚೆ ಮತ ಮರು ಎಣಿಕೆ ವಿವಾದ: ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ!

0

ಚಿಕ್ಕಮಗಳೂರು: 2023ರ ವಿಧಾನಸಭಾ ಚುನಾವಣೆಯಿಂದ ಆರಂಭವಾಗಿ, ಮೂರು ವರ್ಷಗಳ ಕಾನೂನು ಹೋರಾಟದ ಬಳಿಕ ಭಾರೀ ರಾಜಕೀಯ ಸಂಚಲನಕ್ಕೆ ಕಾರಣವಾಗಿರುವ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರು ಎಣಿಕೆ ವಿವಾದದ ಕುರಿತು ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.

ಈ ಪ್ರಕರಣದಲ್ಲಿ ಕೆಲವೇ ದಿನಗಳ ಅವಧಿಯಲ್ಲಿ ಶಾಸಕರ ಬದಲಾವಣೆಯಾಗಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರು ಶಾಸಕ ಸ್ಥಾನ ಉಳಿಸಿಕೊಳ್ಳಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಂದು ನಡೆಯಲಿರುವ ವಿಚಾರಣೆ ಮಹತ್ವ ಪಡೆದುಕೊಂಡಿದೆ.

201 ಮತಗಳ ಅಂತರದಲ್ಲಿ ರಾಜೇಗೌಡ ಗೆಲುವು:

2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಅಂಚೆ ಮತಗಳ ಮರು ಎಣಿಕೆಗೆ ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ಸುಮಾರು ಮೂರು ವರ್ಷಗಳ ಕಾಲ ನಡೆದ ಬಳಿಕ ಹೈಕೋರ್ಟ್ ಅಂಚೆ ಮತಗಳ ಮರು ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸುವಂತೆ ಆದೇಶಿಸಿತ್ತು.

ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು:

ಹೈಕೋರ್ಟ್ ಆದೇಶದಂತೆ ಮೇ 2ರಂದು ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು 52 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದರಿಂದ ಮೂರು ವರ್ಷಗಳ ಕಾಲ ಶಾಸಕರಾಗಿದ್ದ ರಾಜೇಗೌಡ ಅವರು ಶಾಸಕ ಸ್ಥಾನ ಕಳೆದುಕೊಂಡಿದ್ದರು.

ಮರು ಎಣಿಕೆಯ ಬಳಿಕ ಜೀವರಾಜ್ ಅವರು ಶಾಸಕರಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದರು.

ಮೂರೇ ದಿನಕ್ಕೆ ಮತ್ತೆ ಬದಲಾದ ಶಾಸಕ ಸ್ಥಾನ:

ಆದರೆ ಅಂಚೆ ಮತ ಮರು ಎಣಿಕೆ ಫಲಿತಾಂಶವನ್ನು ಪ್ರಶ್ನಿಸಿ ಟಿ.ಡಿ. ರಾಜೇಗೌಡ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡುವ ಮೂಲಕ ರಾಜೇಗೌಡ ಅವರು ಶಾಸಕ ಸ್ಥಾನದಲ್ಲಿ ಮುಂದುವರಿಯಲು ಅವಕಾಶ ನೀಡಿತ್ತು.

ಇದರ ಪರಿಣಾಮವಾಗಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಡಿ.ಎನ್. ಜೀವರಾಜ್ ಅವರು ಮೂರೇ ದಿನಗಳಲ್ಲಿ ಮತ್ತೆ ಶಾಸಕ ಸ್ಥಾನ ಕಳೆದುಕೊಂಡರು.

ಇಂದು ದಾಖಲೆಗಳ ಪರಿಶೀಲನೆ ಸಾಧ್ಯತೆ:

ಮೇ 2ರಂದು ಅಂಚೆ ಮತ ಮರು ಎಣಿಕೆ ನಡೆದ ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜು ಆವರಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ಮರು ಎಣಿಕೆಯ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ತೀವ್ರ ಕುತೂಹಲ ಮನೆ ಮಾಡಿತ್ತು.

ಇದೀಗ ಪ್ರಕರಣ ಮತ್ತೆ ಸುಪ್ರೀಂ ಕೋರ್ಟ್‌ನ ಅಂಗಳದಲ್ಲಿದ್ದು, ಇಂದು ನಡೆಯುವ ವಿಚಾರಣೆಯಲ್ಲಿ 2023ರ ಮೂಲ ಮತ ಎಣಿಕೆ ಹಾಗೂ 2026ರ ಮರು ಎಣಿಕೆಯ ದಾಖಲೆಗಳನ್ನು ಚುನಾವಣಾ ಆಯೋಗ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. ಈ ದಾಖಲೆಗಳನ್ನು ನ್ಯಾಯಾಲಯ ಪರಿಶೀಲಿಸುವ ಸಾಧ್ಯತೆಯಿದೆ.

ಹೀಗಾಗಿ ಶೃಂಗೇರಿ ಕ್ಷೇತ್ರದ ಶಾಸಕ ಸ್ಥಾನ ಯಾರ ಪಾಲಾಗಲಿದೆ ಎಂಬುದು ಮತ್ತೆ ಕುತೂಹಲ ಮೂಡಿಸಿದ್ದು, ಇಂದಿನ ಸುಪ್ರೀಂ ಕೋರ್ಟ್ ವಿಚಾರಣೆಯತ್ತ ರಾಜ್ಯ ರಾಜಕೀಯದ ಚಿತ್ತ ನೆಟ್ಟಿದೆ.