Home Blog

ವಿಧಾನಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಅವಿರೋಧ ಆಯ್ಕೆ

0

ಬೆಂಗಳೂರು: ವಿಧಾನಪರಿಷತ್‌ನ ತೆರವಾಗಿದ್ದ ಉಪಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ ಸದಸ್ಯೆ ಹಾಗೂ ಹಿರಿಯ ನಟಿ ಉಮಾಶ್ರೀ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಪಕ್ಷಕ್ಕೆ ಬಹುಮತವಿದ್ದರೂ, ವಿಪಕ್ಷದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಉಮಾಶ್ರೀ ಅವರ ಆಯ್ಕೆ ಅವಿರೋಧವಾಗಿ ನಡೆದಿದೆ.

ಈ ಹಿಂದೆ ಉಪಸಭಾಪತಿಯಾಗಿದ್ದ ಎಂ.ಕೆ. ಪ್ರಾಣೇಶ್ ಅವರು ರಾಜೀನಾಮೆ ನೀಡಿದ್ದರಿಂದ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ಸೋಮವಾರ ಉಮಾಶ್ರೀ ಅವರು ನಾಮಪತ್ರ ಸಲ್ಲಿಸಿದ್ದರು.

ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ ಅವರು ಉಮಾಶ್ರೀ ಅವರನ್ನು ಅಭಿನಂದಿಸಿ, ನಟನೆಯ ಮೂಲಕ ದೇಶದ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಚಿತ್ರರಂಗದ ಬಳಿಕ ರಾಜಕೀಯ ಪ್ರವೇಶಿಸಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಚುನಾವಣಾ ರಾಜಕಾರಣದಲ್ಲೂ ಸೋಲು-ಗೆಲುವುಗಳನ್ನು ಕಂಡಿದ್ದಾರೆ ಎಂದು ಹೇಳಿದರು.

2013ರಲ್ಲಿ ತೇರದಾಳ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಉಮಾಶ್ರೀ ಅವರು ಇದೀಗ ಮೇಲ್ಮನೆ ಉಪಸಭಾಪತಿಯಾಗಿ ಆಯ್ಕೆಯಾಗಿರುವುದು ಸಂತಸದ ವಿಚಾರ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.

‘ಉಮಾಶ್ರೀ ಅಕ್ಕ ದಾರಿ ತಪ್ಪಲ್ಲ’: ಛಲವಾದಿ ನಾರಾಯಣಸ್ವಾಮಿ

ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕೂಡ ಉಮಾಶ್ರೀ ಅವರನ್ನು ಅಭಿನಂದಿಸಿದರು. ರಾಜ್ಯ ಕಂಡ ಅತ್ಯುತ್ತಮ ನಟಿಯರಲ್ಲಿ ಒಬ್ಬರಾಗಿರುವ ಉಮಾಶ್ರೀ ಅವರು ಮೂರು ದಶಕಗಳಿಂದ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ ಎಂದರು.

“ಸಭಾಪತಿಗಳು ದಾರಿ ತಪ್ಪಿದರೂ ಉಮಾಶ್ರೀ ಅಕ್ಕ ದಾರಿ ತಪ್ಪಲ್ಲ. ಅವರು ಎಲ್ಲರಿಗೂ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸವಿದೆ” ಎಂದು ಅವರು ಹೇಳಿದರು.

ನಟನೆ ಹಾಗೂ ಜನಪ್ರಿಯತೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲೇ ಉಮಾಶ್ರೀ ರಾಜಕೀಯಕ್ಕೆ ಬಂದರು. 1994ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಎಸ್. ಬಂಗಾರಪ್ಪ ಅವರು ಅವರನ್ನು ಬೆಳೆಸುವಂತೆ ಸೂಚಿಸಿದ್ದರು ಎಂದು ಛಲವಾದಿ ನಾರಾಯಣಸ್ವಾಮಿ ನೆನಪಿಸಿಕೊಂಡರು.

ರಾಜಕೀಯ ಜೀವನದಲ್ಲಿ ಇಲ್ಲಿಯವರೆಗೆ ಯಾವುದೇ ರೀತಿಯ ಎಡವಟ್ಟು ಮಾಡಿಕೊಳ್ಳದೆ ಬಂದಿರುವ ಉಮಾಶ್ರೀ ಅವರ ಸಾಧನೆ ಗಮನಾರ್ಹ ಎಂದು ಅವರು ಶ್ಲಾಘಿಸಿದರು.

400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ: ಬೋಜೇಗೌಡ

ಜೆಡಿಎಸ್ ಸದಸ್ಯ ಬೋಜೇಗೌಡ ಅವರು ಕೂಡ ಉಮಾಶ್ರೀ ಅವರನ್ನು ಅಭಿನಂದಿಸಿದರು. ಬಡತನದ ನಡುವೆಯೂ ಇಬ್ಬರು ಮಕ್ಕಳನ್ನು ಉತ್ತಮವಾಗಿ ಬೆಳೆಸಿ, ಒಬ್ಬರನ್ನು ವಕೀಲರನ್ನಾಗಿ ಹಾಗೂ ಮತ್ತೊಬ್ಬರನ್ನು ವೈದ್ಯರನ್ನಾಗಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಮಾಶ್ರೀ ಅವರು ತಮ್ಮ ನಟನಾ ಜೀವನದಲ್ಲಿ ಸುಮಾರು 400 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಎಂದು ಹೇಳಿದ ಬೋಜೇಗೌಡ, ಹಿರಿಯ ಕಲಾವಿದರಾದ ಎನ್‌.ಎಸ್‌. ರಾವ್ ಸೇರಿದಂತೆ ಹಲವು ಪ್ರಮುಖ ನಟರೊಂದಿಗೆ ಕೆಲಸ ಮಾಡಿರುವ ಅವರ ಸಿನಿ ಬದುಕಿನ ಅನುಭವಗಳನ್ನು ಸ್ಮರಿಸಿದರು.

ಉಮಾಶ್ರೀ ಅವರು ಮೇಲ್ಮನೆ ಉಪಸಭಾಪತಿಯಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಅವರು ಶುಭ ಹಾರೈಸಿದರು.

ಹನೂರು ಎನ್ ಕೌಂಟರ್ ಪ್ರಕರಣಕ್ಕೆ ಜುಡಿಷಿಯಲ್ ತನಿಖೆ ನಡೆಸಿ; ಸತ್ಯಾಸತ್ಯತೆ ಬಹಿರಂಗಪಡಿಸಿ – ಬಿ.ವೈ. ವಿಜಯೇಂದ್ರ

0

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ಬಳಿ ನಡೆದಿರುವ ಅರಣ್ಯ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಮಗ್ರ, ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಘಟನೆ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇವಲ ಮ್ಯಾಜಿಸ್ಟ್ರೇಟ್ ತನಿಖೆಗೆ ಸೀಮಿತಗೊಳಿಸದೆ ಜುಡಿಷಿಯಲ್ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ತಮಿಳುನಾಡು ಮುಖ್ಯಮಂತ್ರಿ ಹಾಗೂ ಆರ್ಚ್ ಬಿಷಪ್ ಅವರು ಮೃತರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ಹಾಗೂ ಪರಿಹಾರ ನೀಡುವಂತೆ ಮನವಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಈ ವಿಚಾರಕ್ಕೆ ಜಾತಿ ಅಥವಾ ಧರ್ಮದ ಬಣ್ಣ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಮೃತರು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಮಾನವೀಯತೆಯೇ ಪರಿಹಾರ ಮತ್ತು ನ್ಯಾಯದ ಮಾನದಂಡವಾಗಬೇಕು ಎಂದು ಹೇಳಿದರು.

ಸದನದ ಆರಂಭದ ದಿನದಿಂದಲೂ ಬಿಜೆಪಿ ಮತ್ತು ಜೆಡಿಎಸ್ ಮೃತಪಟ್ಟ ಮೂವರು ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ಹಾಗೂ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸುತ್ತಿವೆ ಎಂದ ಅವರು, ಅರಣ್ಯ ಸಚಿವರು ಸದನದಲ್ಲಿ ಪದೇಪದೇ ಮೃತರ ಧರ್ಮ ಉಲ್ಲೇಖಿಸುತ್ತಿರುವುದನ್ನು ಪ್ರಶ್ನಿಸಿದರು. ಪ್ರಕರಣವನ್ನು ಧರ್ಮದ ದೃಷ್ಟಿಕೋನದಿಂದ ಅಲ್ಲ, ಮಾನವೀಯ ದೃಷ್ಟಿಕೋನದಿಂದ ನೋಡಬೇಕು ಎಂದು ಒತ್ತಿ ಹೇಳಿದರು.

ಬೇಟೆಗೆ ಹೋಗಿದ್ದರು ಎಂಬ ಆರೋಪವಿದ್ದ ಮಾತ್ರಕ್ಕೆ ಎನ್‌ಕೌಂಟರ್ ಮಾಡಬಹುದೇ ಎಂದು ಪ್ರಶ್ನಿಸಿದ ವಿಜಯೇಂದ್ರ, ಅಧಿಕಾರಿಗಳ ಬಳಿ ಟಾರ್ಚ್ ಇತ್ತು, ಪರಿಸ್ಥಿತಿ ನಿಯಂತ್ರಿಸಲು ಬೇರೆ ಕಾನೂನುಬದ್ಧ ಮಾರ್ಗಗಳಿರಲಿಲ್ಲವೇ ಎಂಬುದಕ್ಕೆ ಸರ್ಕಾರ ಉತ್ತರಿಸಬೇಕು ಎಂದರು. ಅರಣ್ಯ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿದ್ದಾರೆಯೇ ಎಂಬುದನ್ನು ಸಮಗ್ರ ತನಿಖೆಯ ಮೂಲಕ ಪತ್ತೆಹಚ್ಚಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೊಡಗು, ಮಡಿಕೇರಿ, ಶಿವಮೊಗ್ಗ, ಮಲೆನಾಡು, ಉತ್ತರ ಕನ್ನಡ ಹಾಗೂ ಕರಾವಳಿ ಭಾಗಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಗಂಭೀರ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಹನೂರು ಘಟನೆಯ ಸಂಪೂರ್ಣ ಸತ್ಯ ಹೊರಬರುವುದು ಅಗತ್ಯ ಎಂದ ಅವರು, ಯಾವ ಸರ್ಕಾರದ ಅವಧಿಯಲ್ಲಿ ಘಟನೆ ನಡೆದಿದೆ ಎಂಬುದು ಮುಖ್ಯವಲ್ಲ, ಹಿಂದಿನ ಘಟನೆಗಳನ್ನು ಮುಂದಿಟ್ಟುಕೊಂಡು ಈಗಿನ ಪ್ರಕರಣದ ಹೊಣೆಗಾರಿಕೆಯಿಂದ ಸರ್ಕಾರ ನುಣುಚಿಕೊಳ್ಳಬಾರದು ಎಂದು ಹೇಳಿದರು.

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಚೇರಿ ಮೇಲೆ ನಡೆದ ದಾಳಿಯನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದ ವಿಜಯೇಂದ್ರ, ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬದಿಂದ ಅಭ್ಯರ್ಥಿಗಳಿಗೆ ನಿರಂತರ ಅನ್ಯಾಯವಾಗುತ್ತಿದೆ ಎಂದು ದೂರಿದರು. ಯುವಕರ ಭವಿಷ್ಯದ ಜೊತೆ ಆಟವಾಡುವ ವ್ಯವಸ್ಥೆಗೆ ಕಡಿವಾಣ ಹಾಕುವುದು ಸರ್ಕಾರದ ಕರ್ತವ್ಯ ಎಂದ ಅವರು,

ಯಾವ ಸರ್ಕಾರ ಕೆಪಿಎಸ್‌ಸಿ ಅಧ್ಯಕ್ಷರು ಅಥವಾ ಸದಸ್ಯರನ್ನು ನೇಮಕ ಮಾಡಿತ್ತು ಎಂಬುದು ಮುಖ್ಯವಲ್ಲ, ಅಕ್ರಮ ನಡೆದಿದ್ದರೆ ನಿಷ್ಪಕ್ಷಪಾತ ತನಿಖೆ ಆಗಲೇಬೇಕು ಎಂದು ಪ್ರತಿಪಾದಿಸಿದರು. ಕೆಪಿಎಸ್‌ಸಿ ಅಕ್ರಮಗಳ ಕುರಿತು ರಾಜ್ಯ ಸರ್ಕಾರ ಕೂಡಲೇ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನಿವೃತ್ತ ಶಿಕ್ಷಕನ ಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಆಸ್ತಿಗಾಗಿ ಪ್ರಿಯಕರನೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗಳು

0

ವಿಜಯಪುರ: ನಿವೃತ್ತ ಶಿಕ್ಷಕ ಸಿದ್ದಪ್ಪ ಅಂಜುಟಗಿ ಕೊಲೆ ಪ್ರಕರಣದ ತನಿಖೆ ಪೊಲೀಸರನ್ನೇ ಬೆಚ್ಚಿಬೀಳಿಸುವಂತಹ ಸತ್ಯವನ್ನು ಬಯಲಿಗೆಳೆದಿದೆ. ಆಸ್ತಿ ವಿಚಾರದ ಜಗಳ ಹಾಗೂ ವೈಯಕ್ತಿಕ ಸಂಬಂಧಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪುತ್ರಿಯೇ ಪ್ರಿಯಕರನ ಜೊತೆ ಸೇರಿ ತಂದೆಯನ್ನು ಹತ್ಯೆ ಮಾಡಿದ್ದಾಳೆ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಇಂಡಿ ತಾಲೂಕಿನ ಚೌಡಿಹಾಳ ರಸ್ತೆಯ ಪೂಜಾರಿ ವಸ್ತಿ ತೋಟದ ಬಳಿ ಸಿದ್ದಪ್ಪ ಅವರ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು.

ಆದರೆ ಮೃತರ ಹಿರಿಯ ಪುತ್ರಿ ನಿಖಿತಾ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಮುಂದುವರಿಸಿದಾಗ ಪ್ರಕರಣದ ದಿಕ್ಕೇ ಬದಲಾಗಿದೆ. ಸಿದ್ದಪ್ಪ ಅವರ ಪುತ್ರಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಸಂತೋಷ್ ಸಿಂಧೆ ಬಂಧಿತರಾಗಿದ್ದಾರೆ. ಮತ್ತೋರ್ವ ಆರೋಪಿ ಗುರುರಾಜ ಬಿರಾದಾರ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ.

ಎರಡು ವರ್ಷಗಳ ಹಿಂದೆ ನಿವೃತ್ತಿಯಾಗಿದ್ದ ಸಿದ್ದಪ್ಪ ಅವರಿಗೆ ನಿವೃತ್ತಿ ಹಣ ಬಂದಿತ್ತು. ಗ್ರಾಮದಲ್ಲೂ ಆಸ್ತಿ ಹೊಂದಿದ್ದರು. ಈ ಆಸ್ತಿಯಲ್ಲಿ ಪಾಲು ನೀಡುವಂತೆ ಪುತ್ರಿ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಆದರೆ ಸಿದ್ದಪ್ಪ ಇದಕ್ಕೆ ಒಪ್ಪಿರಲಿಲ್ಲ.

ಇದೇ ವೇಳೆ ಪ್ರಿಯಾಂಕಾ ಆಟೋ ಚಾಲಕ ಸಂತೋಷ್ ಸಿಂಧೆ ಜೊತೆ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ಇದಕ್ಕೆ ಸಿದ್ದಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆಸ್ತಿ ಹಾಗೂ ಈ ಸಂಬಂಧದ ವಿಚಾರವಾಗಿ ತಂದೆ-ಮಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಆಗಸ್ಟ್ 15ರಂದು ಮತ್ತೊಮ್ಮೆ ಇದೇ ವಿಚಾರಕ್ಕೆ ಜಗಳ ನಡೆದಿದೆ. ಬಳಿಕ ಪ್ರಿಯಾಂಕಾ ತನ್ನ ಪ್ರಿಯಕರ ಸಂತೋಷ್‌ನನ್ನು ಕರೆಸಿಕೊಂಡಿದ್ದಾಳೆ. ಇಬ್ಬರೂ ಸೇರಿ ಸಿದ್ದಪ್ಪ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ನಂತರ ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆಯನ್ನು ಖಚಿತಪಡಿಸಿಕೊಂಡು, ಮೃತದೇಹವನ್ನು ರಸ್ತೆ ಬದಿಗೆ ಎಸೆದು ಪರಾರಿಯಾಗಿದ್ದರು ಎಂಬ ಸ್ಫೋಟಕ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಪ್ರಿಯಾಂಕಾ ಹಾಗೂ ಸಂತೋಷ್ ಪೊಲೀಸರ ವಶದಲ್ಲಿದ್ದು, ಕೃತ್ಯಕ್ಕೆ ಸಹಕರಿಸಿದ್ದಾನೆ ಎನ್ನಲಾದ ಗುರುರಾಜ ಬಿರಾದಾರ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ತದಡಿ ಅಳಿವೆಯಲ್ಲಿ ಬೋಟ್ ಮುಳುಗು: ನಾಲ್ವರು ಮೀನುಗಾರರು ಕೂದಲೆಳೆ ಅಂತರದಲ್ಲಿ ಪಾರು

0

ಕಾರವಾರ: ತದಡಿ ಬಂದರಿನ ಅಳಿವೆಯಲ್ಲಿ ಹೂಳು ಮತ್ತು ಅಲೆಗಳ ಅಬ್ಬರದಿಂದ ಮೀನುಗಾರಿಕಾ ಬೋಟ್‌ವೊಂದು ಮುಳುಗಿದ್ದು, ಅದರಲ್ಲಿದ್ದ ನಾಲ್ವರು ಮೀನುಗಾರರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ತದಡಿ ಬಂದರಿನಲ್ಲಿ ಘಟನೆ ನಡೆದಿದೆ.

ಸುರೇಂದ್ರ ಹರಿಕಂತ್ರ ಅವರಿಗೆ ಸೇರಿದ ‘ಲಕ್ಷ್ಮೀಕೃಪ’ ಬೋಟ್ ಇಂದು ಮೀನುಗಾರಿಕೆಗೆ ತೆರಳಿತ್ತು. ಬಂದರಿನಿಂದ ಹೊರಟ ಕೆಲವೇ ದೂರದಲ್ಲಿ ಹೂಳು ತುಂಬಿದ ಅಳಿವೆಯಲ್ಲಿ ಬೋಟ್ ಸಿಲುಕಿಕೊಂಡಿದೆ.

ಅಳಿವೆಯಲ್ಲಿ ಅಲೆಗಳ ಹೊಡೆತ ಹೆಚ್ಚಾದ ಹಿನ್ನೆಲೆಯಲ್ಲಿ ಬೋಟ್‌ನ ತಳಭಾಗ ಹಾನಿಗೊಳಗಾಗಿದೆ. ಪರಿಣಾಮ ನೀರು ಬೋಟ್ ಒಳಗೆ ನುಗ್ಗಿ ಕೆಲವೇ ಕ್ಷಣಗಳಲ್ಲಿ ಬೋಟ್ ಮುಳುಗಿದೆ. ಘಟನೆಯಲ್ಲಿ ಸುಮಾರು ₹20 ಲಕ್ಷ ಮೌಲ್ಯದ ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ.

ಅಪಾಯದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಮೀನುಗಾರರು ಧಾವಿಸಿ ನಾಲ್ವರು ಮೀನುಗಾರರನ್ನು ರಕ್ಷಿಸಿದ್ದಾರೆ. ಹೀಗಾಗಿ ಭಾರೀ ದುರಂತವೊಂದು ತಪ್ಪಿದಂತಾಗಿದೆ.

ತದಡಿ ಅಳಿವೆಯಲ್ಲಿ ಹೂಳು ತುಂಬಿರುವುದರಿಂದ ಬೋಟ್‌ಗಳು ಸಂಚರಿಸುವುದೇ ಅಪಾಯಕಾರಿಯಾಗಿದೆ ಎಂದು ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ಸ್ಥಳದಲ್ಲಿ ಎರಡು ದಿನಗಳ ಹಿಂದಷ್ಟೇ ‘ಶ್ರೀದೇವಿ’ ಹೆಸರಿನ ಬೋಟ್ ಕೂಡ ಮುಳುಗಿತ್ತು.

ಒಂದೇ ವಾರದಲ್ಲಿ ಎರಡು ಬೋಟ್‌ಗಳು ಮುಳುಗಿರುವ ಹಿನ್ನೆಲೆಯಲ್ಲಿ ತದಡಿ ಅಳಿವೆಯ ಹೂಳು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಒತ್ತಾಯ ಇದೀಗ ಮತ್ತಷ್ಟು ಗಟ್ಟಿಯಾಗಿದೆ.

KRS ನೀರು ಬಿಡುಗಡೆಗೆ ರೈತರ ಆಕ್ರೋಶ: ಒಳಹರಿವು 1,961, ಹೊರಹರಿವು 4,917 ಕ್ಯೂಸೆಕ್!

0

ಮಂಡ್ಯ: ಕೃಷ್ಣರಾಜ ಸಾಗರ (KRS) ಜಲಾಶಯದಿಂದ ನೀರು ಬಿಡುಗಡೆ ವಿಚಾರ ಮಂಡ್ಯದಲ್ಲಿ ಮತ್ತೊಮ್ಮೆ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಡ್ಯಾಂಗೆ ಕೇವಲ 1,961 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೂ, 4,917 ಕ್ಯೂಸೆಕ್‌ಗೂ ಅಧಿಕ ನೀರನ್ನು ನದಿಗೆ ಹರಿಸಲಾಗುತ್ತಿದೆ. ಒಳಹರಿವಿಗಿಂತ ಹೊರಹರಿವು ಗಣನೀಯವಾಗಿ ಹೆಚ್ಚಿರುವುದೇ ಇದೀಗ ರೈತರ ಅನುಮಾನಕ್ಕೆ ಪ್ರಮುಖ ಕಾರಣವಾಗಿದೆ.

KRSನಿಂದ ತಮಿಳುನಾಡಿಗೆ ಕದ್ದುಮುಚ್ಚಿ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ರೈತ ಸಂಘಟನೆಗಳು ಆರೋಪಿಸಿವೆ. ಕಳೆದ ಆಗಸ್ಟ್ 15ರಿಂದಲೇ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದೆ ನೀರು ಹರಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿರುವ ರೈತರು, ನೀರು ಬಿಡುಗಡೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಹಿಂದೆ ಕುಡಿಯುವ ನೀರು ಮತ್ತು ನಾಲೆಗಳಿಗೆ 2,000ರಿಂದ 2,500 ಕ್ಯೂಸೆಕ್‌ನಷ್ಟು ನೀರು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಇದೀಗ ಏಕಾಏಕಿ 4,917 ಕ್ಯೂಸೆಕ್‌ಗೂ ಅಧಿಕ ನೀರು ಹೊರಬಿಡುತ್ತಿರುವುದೇಕೆ ಎಂಬ ಪ್ರಶ್ನೆ ಎದ್ದಿದೆ.

“ಜಲಾಶಯಕ್ಕೆ ನೀರು ಕಡಿಮೆ ಬರುತ್ತಿರುವಾಗ ಹೊರಹರಿವು ಏಕೆ ಹೆಚ್ಚಿಸಲಾಗಿದೆ? ನೀರು ಕುಡಿಯಲು ಹಾಗೂ ನಾಲೆಗಳಿಗೆ ಹೋಗುತ್ತಿದೆಯೇ ಅಥವಾ ಬೇರೆಡೆಗೆ ಹರಿಸಲಾಗುತ್ತಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು” ಎಂದು ರೈತರು ಒತ್ತಾಯಿಸಿದ್ದಾರೆ.

ಮಂಡ್ಯ ರೈತರ ಪಾಲಿಗೆ KRS ನೀರು ಅತ್ಯಂತ ಮಹತ್ವದ್ದಾಗಿದ್ದು, ನೀರು ಬಿಡುಗಡೆ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲ ಅಥವಾ ಮುಚ್ಚುಮರೆ ಇರಬಾರದು ಎಂದು ರೈತ ಸಂಘಟನೆಗಳು ಎಚ್ಚರಿಸಿವೆ.

ಒಳಹರಿವು-ಹೊರಹರಿವಿನ ಸಂಪೂರ್ಣ ಲೆಕ್ಕ, ನೀರು ಬಿಡುಗಡೆಗೆ ಕಾರಣ ಹಾಗೂ ನೀರು ತಲುಪುತ್ತಿರುವ ಪ್ರದೇಶಗಳ ಕುರಿತು ಸರ್ಕಾರ ತಕ್ಷಣ ಸ್ಪಷ್ಟ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಶಾಲೆಯಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಕುಸಿದ ಪಿಲ್ಲರ್: ವಿದ್ಯಾರ್ಥಿ ಸ್ಥಳದಲ್ಲೇ ಸಾವು

0

ತುಮಕೂರು: ಶಾಲೆ ಆರಂಭಕ್ಕೂ ಮುನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ 4ನೇ ತರಗತಿ ವಿದ್ಯಾರ್ಥಿಯೊಬ್ಬನ ಮೇಲೆ ಪಿಲ್ಲರ್ ಕುಸಿದು ಸ್ಥಳದಲ್ಲೇ ಮೃತಪಟ್ಟಿರುವ ಆಘಾತಕಾರಿ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬೆಳಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮತ್ತಿಘಟ್ಟ ಗ್ರಾಮದ ಆನಂದ್ ಮೂರ್ತಿ ಅವರ ಮಗ ಧನುಷ್ (10) ದುರಂತದಲ್ಲಿ ಮೃತಪಟ್ಟಿದ್ದಾನೆ. ಬೆಳಗಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಧನುಷ್ 4ನೇ ತರಗತಿ ಓದುತ್ತಿದ್ದ.

ಇಂದು ಬೆಳಗ್ಗೆ ಶಾಲೆಗೆ ಆಗಮಿಸಿದ್ದ ಬಾಲಕ, ತರಗತಿ ಆರಂಭಕ್ಕೂ ಮುನ್ನ ಶಾಲಾ ಆವರಣದಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ. ಈ ವೇಳೆ ಶಾಲೆಯ ಪಕ್ಕದಲ್ಲಿರುವ ನಂದಿನಿ ಹಾಲಿನ ಡೈರಿ ಕಟ್ಟಡದ ಪಿಲ್ಲರ್ ಇದ್ದಕ್ಕಿದ್ದಂತೆ ಕುಸಿದು ಬಾಲಕನ ಮೇಲೆ ಬಿದ್ದಿದೆ.

ಪಿಲ್ಲರ್ ತಲೆಯ ಮೇಲೆ ಬಿದ್ದ ಪರಿಣಾಮ ಧನುಷ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಬೆಳಗ್ಗೆ 9.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.

ಘಟನೆ ಕುರಿತು ಮಾಹಿತಿ ಪಡೆದ ಹಂದನಕೆರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಟ್ಟಡ ನಿರ್ಮಾಣದ ವೇಳೆ ಕಳಪೆ ಕಾಮಗಾರಿ ನಡೆಸಿರುವುದೇ ಪಿಲ್ಲರ್ ಕುಸಿತಕ್ಕೆ ಕಾರಣ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಸಾವಿರ ಹೆಡೆಗಳ ಸರ್ಪ ಹೇಳಿಕೆಗೆ ಈಗಲೂ ಬದ್ಧ: ಸಚಿವ ಯತೀಂದ್ರ

0

ಬೆಂಗಳೂರು: ಆರ್‌ಎಸ್‌ಎಸ್ ಅನ್ನು “ಸಾವಿರ ಹೆಡೆಗಳ ಸರ್ಪ” ಎಂದು ಹೋಲಿಸಿ ನೀಡಿದ್ದ ಹೇಳಿಕೆಗೆ ತಾವು ಈಗಲೂ ಬದ್ಧರಾಗಿರುವುದಾಗಿ ಸಚಿವ ಡಾ.ಯತೀಂದ್ರ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಆರ್‌ಎಸ್‌ಎಸ್ ನೂರಾರು ಅಂಗ ಸಂಸ್ಥೆಗಳನ್ನು ಹೊಂದಿದ್ದು, ತಮಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳುತ್ತಲೇ ಆ ಸಂಘಟನೆ ಪರವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಆರೋಪಿಸಿದರು.

ಸಮಾಜದಲ್ಲಿ ನಿರಂತರವಾಗಿ ಕೋಮುವಾದದ ವಿಷ ಬಿತ್ತುತ್ತಿರುವ ಕಾರಣದಿಂದಲೇ ಈ ರೀತಿಯ ಉಪಮೆ ನೀಡಿರುವುದಾಗಿ ಅವರು ತಿಳಿಸಿದರು. ಯಾವುದೇ ವಿಷಯ ಎತ್ತಿಕೊಂಡರೂ ಅದನ್ನು ಧರ್ಮ ಮತ್ತು ಜಾತಿಯ ಚೌಕಟ್ಟಿಗೆ ತಿರುಗಿಸುವುದೇ ಆರ್‌ಎಸ್‌ಎಸ್‌ನ ಕೆಲಸ, ಜನರ ನೈಜ ಸಮಸ್ಯೆಗಳನ್ನು ಎತ್ತುವುದಿಲ್ಲ ಎಂದು ದೂರಿದರು.

ಕೋಮುವಾದ ಮಾಡುವ ಯಾರನ್ನೇ ಆದರೂ ತಾವು ಟೀಕಿಸುವುದಾಗಿ ಹೇಳಿದ ಸಚಿವರು, ಆರ್‌ಎಸ್‌ಎಸ್‌ನ ಭಯ ತಮಗಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ತಾವು ಅವರ ಪರವಾಗಿ ಮಾತನಾಡಬೇಕೆ ಎಂದು ಪ್ರಶ್ನಿಸಿದ ಅವರು, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರೂ ಈ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಕಾಂಗ್ರೆಸ್‌ನ ಸಿದ್ಧಾಂತಕ್ಕೆ ಬದ್ಧರಾಗಿರುವ ತಾವು ಕೋಮುವಾದದ ವಿರುದ್ಧ ಇರುವ ಜಾತ್ಯತೀತ ಸಿದ್ಧಾಂತವನ್ನು ಬಲವಾಗಿ ಸಮರ್ಥಿಸುವುದಾಗಿ ತಿಳಿಸಿದ ಯತೀಂದ್ರ, ಆರ್‌ಎಸ್‌ಎಸ್ ಹಿಂದುತ್ವ ವಿಚಾರ ಬಿಟ್ಟು ಬೇರೆ ವಿಷಯ ಮಾತನಾಡಿದರೆ ಆರೋಪ ಮಾಡುವುದು ತಪ್ಪಾಗುತ್ತಿತ್ತು ಎಂದರು. ರಾಜಕಾರಣಕ್ಕೆ ಬಂದಾಗಿನಿಂದಲೂ ಇದೇ ವಿಚಾರ ಮಾತನಾಡುತ್ತಿರುವುದಾಗಿ ಹೇಳಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿದ ಘಟನೆಯಿಂದಾಗಿಯೇ ತಾವು ಪ್ರತಿಕ್ರಿಯೆ ನೀಡಬೇಕಾಯಿತು ಎಂದು ಪ್ರಶ್ನಿಸಿದರು.

ನೇಮಕಾತಿ ಅಕ್ರಮ ಪ್ರಕರಣ: ಮಾಜಿ KPSC ಅಧ್ಯಕ್ಷ ಶಿವಶಂಕರಪ್ಪ ಇಡಿ ವಶಕ್ಕೆ!

0

ಬೆಂಗಳೂರು: ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಾಜಿ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಹೊಯ್ಸಳ ಡ್ರೀಮ್ಸ್ ಅಪಾರ್ಟ್‌ಮೆಂಟ್‌ನಲ್ಲಿರುವ ಅವರ ನಿವಾಸದಲ್ಲೇ ಇಡಿ ಅಧಿಕಾರಿಗಳು ಶಿವಶಂಕರಪ್ಪ ಅವರನ್ನು ವಶಕ್ಕೆ ಪಡೆದಿದ್ದು, ಅವರ ಮೊಬೈಲ್ ಫೋನ್ ಅನ್ನೂ ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ.

ಬೆಳಗ್ಗೆ 6 ಗಂಟೆ ಸುಮಾರಿಗೆ ಇಡಿ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಶಿವಶಂಕರಪ್ಪ ಅವರ ಪತ್ನಿ ದೇವಸ್ಥಾನಕ್ಕೆ ತೆರಳಿದ್ದರು ಎನ್ನಲಾಗಿದ್ದು, ಇದರಿಂದಾಗಿ ಅಧಿಕಾರಿಗಳ ತಂಡ ಅವರನ್ನು ಹುಡುಕಿಕೊಂಡು ದೇವಸ್ಥಾನದ ಬಳಿಗೆ ತೆರಳಿತ್ತು. ಆದರೆ ಅಷ್ಟರಲ್ಲಾಗಲೇ ಶಿವಶಂಕರಪ್ಪ ಪತ್ನಿ ಮನೆಗೆ ವಾಪಸ್ ಬಂದಿದ್ದರು ಎಂದು ತಿಳಿದುಬಂದಿದೆ.

ಯಾವುದೇ ರಾಜ್ಯವೂ ಇನ್ನೊಂದು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು: CM ಡಿ.ಕೆ.ಶಿವಕುಮಾರ್

0

ಬೆಂಗಳೂರು:ಇದು ಒಕ್ಕೂಟ ವ್ಯವಸ್ಥೆ. ಯಾವುದೇ ರಾಜ್ಯವೂ ಇನ್ನೊಂದು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು. ಪನ್ನೀರ್ಸೆಲ್ವಂ ಆಗಲಿ ಅಥವಾ ಯಾರೇ ಆಗಲಿ, ಅವರಿಗೆ ಕನಿಷ್ಠ ಸಂಸ್ಕೃತಿ ಇರಬೇಕುಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಹನೂರು ಶೂಟೌಟ್ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಯಬೇಕು ಎಂಬ ತಮಿಳುನಾಡು ಮಾಜಿ ಸಿಎಂ ಪನ್ನೀರ್ಸೆಲ್ವಂ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, “ತಮಿಳುನಾಡಿನ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಲ್ಲಿ ನಾನು ಯಾವುದೇ ರೀತಿಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲಎಂದು ಸ್ಪಷ್ಟಪಡಿಸಿದರು.

ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಸಮಸ್ಯೆ ಇರುತ್ತದೆ. ಅದನ್ನು ಅವರೂ ತಿಳಿದುಕೊಳ್ಳಬೇಕು. ನಮ್ಮ ರಾಜ್ಯವನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ. ಅವರು ತಮ್ಮ ಕೆಲಸವನ್ನು ಮಾಡಲಿ, ನಾವು ನಮ್ಮ ಕೆಲಸವನ್ನು ಮಾಡುತ್ತೇವೆ. ಅವರ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ನಾನು ಬಯಸುವುದಿಲ್ಲ. ನಮ್ಮ ರಾಜ್ಯಕ್ಕಿರುವ ಪವಿತ್ರತೆಯನ್ನು ನಾವು ಕಾಪಾಡಿಕೊಳ್ಳಬೇಕು, ರಕ್ಷಿಸಬೇಕುಎಂದು ಸಿಎಂ ಹೇಳಿದರು.

ಪ್ರಕರಣದ ತನಿಖೆ ಆಗಬೇಕು ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಹೇಳಿಕೆ ನೀಡಿರುವ ಬಗ್ಗೆ ಪ್ರಶ್ನಿಸಿದಾಗ, “ನಾನು ಇದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಇದು ಸಾಮಾನ್ಯ ಚರ್ಚೆ. ಅವರು ತಮ್ಮ ಕೆಲಸವನ್ನು ಮಾಡಬೇಕು, ನಾವು ನಮ್ಮ ಕೆಲಸವನ್ನು ಮಾಡಬೇಕುಎಂದು ಶಿವಕುಮಾರ್ ತಿಳಿಸಿದರು.

ಗಣಿ ಮಸೂದೆ ಹಿಂಪಡೆಯಿರಿ: ಪ್ರಧಾನಿ ಮೋದಿ, ಸಚಿವ ಕಿಶನ್ ರೆಡ್ಡಿಗೆ ಡಿಸಿಎಂ ಪರಮೇಶ್ವರ್ ಪತ್ರ

0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ.ಕಿಶನ್ ರೆಡ್ಡಿ ಅವರಿಗೆ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಪತ್ರ ಬರೆದಿದ್ದಾರೆ. 2026ರ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಖನಿಜ ಹಕ್ಕುಗಳು ಹಾಗೂ ಖನಿಜ ಸಮೃದ್ಧ ಭೂಮಿಗಳ ಮೇಲೆ ತೆರಿಗೆ ವಿಧಿಸುವ ರಾಜ್ಯಗಳ ಸಾಂವಿಧಾನಿಕ ಅಧಿಕಾರವನ್ನು ನಿರ್ಬಂಧಿಸುವ ಮಸೂದೆಯ ನಿಬಂಧನೆಗಳ ಬಗ್ಗೆ ಪರಮೇಶ್ವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಪಟ್ಟಿಯ 49 ಮತ್ತು 50ನೇ ನಮೂದುಗಳ ಅಡಿಯಲ್ಲಿ ರಾಜ್ಯಗಳ ಶಾಸಕಾಂಗ ಮತ್ತು ಹಣಕಾಸು ಅಧಿಕಾರಗಳನ್ನು ದೃಢಪಡಿಸಿದ್ದ ಸುಪ್ರೀಂ ಕೋರ್ಟ್‌ನ 2024ರ ಮಹತ್ವದ ತೀರ್ಪನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೇಂದ್ರದ ಈ ಏಕಪಕ್ಷೀಯ ನಿಲುವು ಭಾರತದ ಒಕ್ಕೂಟ ವ್ಯವಸ್ಥೆಗೆ ಗಂಭೀರ ಕಳವಳಕಾರಿ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಡಿಸಿಎಂ, ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ ಅರ್ಥಪೂರ್ಣ ಸಮಾಲೋಚನೆ ನಡೆಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಖನಿಜ ಹಿತಾಸಕ್ತಿ ಹಾಗೂ ರಾಜ್ಯಗಳ ಹಣಕಾಸು ಸ್ವಾಯತ್ತತೆ ಎರಡನ್ನೂ ರಕ್ಷಿಸುವ ಒಕ್ಕೂಟ ಸಹಕಾರದ ತತ್ವವನ್ನು ಎತ್ತಿಹಿಡಿಯಬೇಕು ಮತ್ತು ಒಮ್ಮತ ಆಧಾರಿತ ಚೌಕಟ್ಟನ್ನು ರೂಪಿಸಬೇಕು ಎಂದು ಪರಮೇಶ್ವರ್ ತಮ್ಮ ಪತ್ರದಲ್ಲಿ ಒತ್ತಿ ಹೇಳಿದ್ದಾರೆ.