Home Blog Page 2

ಲಕ್ಕುಂಡಿಯಲ್ಲಿ ಗಣರಾಜ್ಯೋತ್ಸವದ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: 77ನೇ ಗಣರಾಜ್ಯೋತ್ಸವವನ್ನು ಇಲ್ಲಿಯ ವಿವಿಧ ಸಂಘ-ಸಂಸ್ಥೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಇಲ್ಲಿಯ ಗ್ರಾಮ ಪಂಚಾಯಿತಿ ಆವರಣದಲ್ಲಿ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ನೆರವೇರಿಸಿದರು. ಇದಕ್ಕೂ ಪೂರ್ವ ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮಕ್ಕಳು ಸಂವಿಧಾನ ಪೀಠಿಕೆಯನ್ನು ಓದಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ನಂತರ ವಿವಿಧ ಶಾಲೆಯ ಮಕ್ಕಳಿಂದ ದೇಶ ಭಕ್ತಿಯ ಗೀತೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಡಾ. ಬಿ.ಆರ್. ಅಂಬೇಡ್ಕರರು ಈ ದೇಶಕ್ಕೆ ನೀಡಿದ ಸಂವಿಧಾನದಿಂದ ಎಲ್ಲ ಕ್ಷೇತ್ರಗಳಲ್ಲಿ ಸಮಾನವಾದ ಅಧಿಕಾರ, ಉದ್ಯೋಗ, ಮೂಲಭೂತ ಸೌಲಭ್ಯಗಳು ದೊರೆತಿದ್ದು, ಎಲ್ಲರೂ ಸಂವಿಧಾನವನ್ನು ಗೌರವಿಸಬೇಕು ಎಂದರು.

ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಗ್ರಾ.ಪಂ ಸದಸ್ಯರು, ಪಿ.ಡಿ.ಒ ಅಮೀರಾನಾಯಕ, ಕಾರ್ಯದರ್ಶಿ ಎಂ.ಎ. ಗಾಜಿ ಸಿಬ್ಬಂದಿ ಹಾಜರಿದ್ದರು.

ಸರಕಾರಿ ಬಾಲಕಿಯರ ಪ್ರೌಢಶಾಲೆ, ಸರಕಾರಿ ಮಾದರಿಯ ದ್ವಿಭಾಷಾ ಪ್ರಾಥಮಿಕ ಶಾಲೆ, ಕೆ.ಜಿ.ಎಸ್ ಸರಕಾರಿ ಉರ್ದು ಶಾಲೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಾಪೂಜಿ ಕಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರಾಥಮಿಕ ಡಿ.ಪಿ.ಇ.ಪಿ ಶಾಲೆ, ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆ, ಜನತಾ ವಿದ್ಯಾವರ್ಧಕ ಸಂಸ್ಥೆ, ಬಿ.ಎಚ್. ಪಾಟೀಲ ಸಂಯುಕ್ತ ಪದವಿಪೂರ್ವ ಕಾಲೇಜು, ವಿವಿಧ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 1, 2, 3, ಲಕ್ಷ್ಮೀ ನಾರಾಯಣ ಸೌಹಾರ್ದ ಸಹಕಾರಿ ಸಂಘ ಸೇರಿದಂತೆ ವಿವಿಧ ಸಂಘಗಳಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರಕಾರಿ ಮಾದರಿ ದ್ವಿಭಾಷಾ (ಆಂಗ್ಲ) ಪ್ರಾಥಮಿಕ ಶಾಲೆಯ 1ನೇ ತರಗತಿ ವಿದ್ಯಾರ್ಥಿ ಸಾಹಿತ್ಯ ನಂದಪ್ಪನವರ ಸಂವಿಧಾನ ಪೀಠಿಕೆಯನ್ನು ನಿರರ್ಗಳವಾಗಿ ಇಂಗ್ಲೀಷ್‌ನಲ್ಲಿ ಹೇಳಿದ್ದು ಎಲ್ಲರ ಗಮನ ಸೆಳೆಯಿತು.

ಶ್ರೀಮಾತೆ ಶಾರದಾ ದೇವಿ ಸ್ತ್ರೀತನದ ಶಕ್ತಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರೀಮಾತೆ ಶಾರದಾ ದೇವಿ ಎಂದ ಕೂಡಲೇ ಕಣ್ಮುಂದೆ ಹಾಯುವುದು ಅವರ ಪರಮಪವಿತ್ರವಾದ ಜೀವನ. ತಮ್ಮ ಆಧ್ಯಾತ್ಮಿಕ ಶಕ್ತಿ, ಸರಳ ಬದುಕಿನ ಮೂಲಕ ಗುರುಮಾತೆಯ ಸ್ಥಾನ ಪಡೆದವರು ಎಂದು ಕನ್ನಡ ಉಪನ್ಯಾಸಕಿ ರೇಶ್ಮಿ ಮೇಲಗಿರಿ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಸೋಮವಾರ ಹಮ್ಮಿಕೊಂಡ ಶ್ರೀಮಾತೆ ಶಾರದಾ ದೇವಿ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೂಢನಂಬಿಕೆ, ಹೆಣ್ಣುಮಕ್ಕಳ ಅಸಹಾಯಕತೆ, ಸ್ತ್ರೀಶೋಷಣೆ ನಡೆಯುತ್ತಿದ್ದ ಕಾಲದಲ್ಲಿ ಶಾರದಾ ದೇವಿ ಮೌನವಾಗಿಯೇ ಈ ಎಲ್ಲ ನಿರ್ಬಂಧಗಳನ್ನು ಎದುರಿಸಿ ಬೆಳೆದರು. ಶ್ರೀಮಾತೆ ಬಾಲ್ಯದಿಂದಲೂ ತಮ್ಮ ಸ್ತ್ರೀತನದೊಳಗಿನ ಶಕ್ತಿಯನ್ನು ಪ್ರದರ್ಶಿಸುತ್ತಲೇ ಬೆಳೆದವರು. ಅವರ ನಿತ್ಯ ಜೀವನದಲ್ಲಿ ಪೂಜೆ, ಜಪಕ್ಕಿಂತಲೂ ಹೆಚ್ಚಿನ ಮನ್ನಣೆ ಸೇವಾಕಾರ್ಯಗಳಿಗೆ ಮೀಸಲಾಗಿರುತ್ತಿತ್ತು. ವಾಸ್ತವದಲ್ಲಿ ರಾಮಕೃಷ್ಣ ಪರಮಹಂಸರ ಸಾಧನೆ ಪರಿಪೂರ್ಣಗೊಂಡದ್ದು ಶಾರದಾ ದೇವಿಯವರ ಸಹಕಾರದಿಂದಲೇ ಎಂದು ರಾಮಕೃಷ್ಣರೇ ಹೇಳಿಕೊಂಡಿದ್ದರಂತೆ. ಸ್ವಾಮಿ ವಿವೇಕಾನಂದರು ಶಾರದೇವಿಯವರನ್ನು ಮಾತೃಸ್ವರೂಪ ಸ್ಥಾನದಲ್ಲಿ ಕಾಣುತ್ತಿದ್ದರೆಂದು ಅಭಿಪ್ರಾಯಪಟ್ಟರು.

ನಿವೃತ್ತ ಶಿಕ್ಷಕಿ ಸಾವಿತ್ರಿಬಾಯಿ ನೇಕಾರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪಾರ್ವತಿ ಪಾಟೀಲ, ಅನ್ನಪೂರ್ಣ ಓದುನವರ, ಗಾಯತ್ರಿ ಓದುನವರ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಚೈತನ್ಯಶ್ರೀ ಪ್ರಶಸ್ತಿ ಪುರಸ್ಕೃತರಾದ ನಿರ್ಮಲಾ ಅರಳಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ವೇದಿಕೆಯ ಅಧ್ಯಕ್ಷೆ, ಸಾಹಿತಿ ಲಲಿತಾ ಕೆರಿಮನಿ, ಪ್ರತಿಮಾ ಮಹಾಜನಶೆಟ್ಟರ್, ಲತಾ ತಟ್ಟಿ, ಶಾಂತಾ ಅಬ್ಬಿಗೇರಿ, ಕಾಂಚನಮಾಲಾ ಹಸರೆಡ್ಡಿ, ನೀಲಕ್ಕ ಬೂದಿಹಾಳ, ಲಲಿತಾ ಲಮಾಣಿ, ಅರುಂಧತಿ ಬಿಂಕದಕಟ್ಟಿ, ಜಯಶ್ರೀ ಮತ್ತಿಕಟ್ಟಿ, ವೀಣಾ ಕುಂಬಿ, ಅಶ್ವಿನಿ ಅಂಕಲಕೋಟಿ, ದೇವಕ್ಕ ಕೊಡ್ಲಿವಾಡ, ರತ್ನಾ ಕರ್ಕಿ, ಶಾರದಾ ಮಹಾಂತಶೆಟ್ಟರ ಮುಂತಾದವರಿದ್ದರು. ಶೈಲಾ ಬಿಂಕದಕಟ್ಟಿ, ಶೋಭಾ ಗಾಂಜಿ, ಮಹಾನಂದಾ ಕೊಣ್ಣೂರ ನಿರೂಪಿಸಿದರು.

ವಿಜ್ರಂಭಣೆಯ ಶ್ರೀ ಬೀರಲಿಂಗೇಶ್ವರ ಜಾತ್ರೆ

ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ತಿಮ್ಮಾಪೂರ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜ್ರಂಭಣೆಯಿಂದ ನಡೆಯಿತು. ಬೆಳಿಗ್ಗೆ ಶ್ರೀದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ಅನೇಕ ಪೂಜಾ ಕೈಂಕರ್ಯಗಳು ನಡೆದವು.

ಬೆಳಿಗ್ಗೆ 10 ಗಂಟೆಗೆ ಸಕಲ ಮಂಗಳ ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ದೇವರನ್ನು ಕೂರಿಸಿ ಗಂಗಾ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವದ ಮೂಲಕ ಸಂಚರಿಸಿ ಗುಡಿಯನ್ನು ತಲುಪಿತು. ಮಧ್ಯಾಹ್ನ ಮಹಾ ದಾಸೋಹದಲ್ಲಿ ನೂರಾರು ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.

ರಾತ್ರಿ ಶಾಲಾ ಮಕ್ಕಳಿಂದ ಜಾನಪದ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಅವರು ದೇವಸ್ಥಾನಕ್ಕೆ ದೇಣಿಗೆ ನೀಡಿದ ದಾನಿಗಳಾದ ರಾಮಣ್ಣ ಕಂಕರಿ, ಮಾದೇವಪ್ಪ ಇದ್ಲಿ ಹನುಮಪ್ಪ ದೇವರವರ, ಶ್ರೀಕಾಂತ ಸೋಂಟಿ ರಾಮಣ್ಣ ಡಂಬಳ ನಾಗಪ್ಪ ಆಲೂರು, ಶರಣಪ್ಪ ಗಾಜಿ ಇವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬೀರಲಿಂಗೇಶ್ವರ ಜಾತ್ರಾ ಕಮಿಟಿ ಸದಸ್ಯರಾದ ರಮೇಶ ಬನಾಪೂರ, ಬಸಪ್ಪ ದೇವರವರ, ಶಿವಾನಂದ ಡಂಬಳ, ಚಂದ್ರು ಆಲೂರ, ಹನುಮಪ್ಪ ಬಿಚಗಲ್ಲ, ಮಾರುತಿ ಕಟಗಿ, ಬಸವರಾಜ ಇದ್ಲಿ, ಮಂಜುನಾಥ ಕೊಪ್ಪಳ, ಶ್ರೀಕಾಂತ ಬಾಬರಿ, ಮಾರುತಿ ಹಚ್ಚಪ್ಪನವರ, ಬೀರಪ್ಪ, ಬಂಡಿಹಾಳ, ಮಲ್ಲಪ್ಪ ಡಂಬಳ, ಬೀರಪ್ಪ ಬನಾಪೂರ, ಪ್ರಕಾಶ ಯತ್ನಟ್ಟಿ ಮುಂತಾದವರಿದ್ದರು.

ರಾಜೀವ್ ಗೌಡನನ್ನು ಜೈಲಿಗೆ ಕರೆದೊಯ್ಯವಾಗ ಭಾರೀ ಹೈಡ್ರಾಮಾ; ವಾಹನ ಅಡ್ಡಹಾಕಿದ ಬೆಂಬಲಿಗರು, ಪೊಲೀಸರಿಂದ ಲಾಠಿ ಚಾರ್ಜ್!

0

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಬಿಜೆಪಿ ಮುಖಂಡ ರಾಜೀವ್ ಗೌಡನ ಜಾಮೀನು ಅರ್ಜಿಯನ್ನು ಶಿಡ್ಲಘಟ್ಟ ಜೆಎಂಎಫ್​ಸಿ ಕೋರ್ಟ್ ವಜಾಗೊಳಿಸಿ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.

ಜೈಲಿಗೆ ಕರೆದೊಯ್ಯುವ ವೇಳೆ ಕೋರ್ಟ್​​ ಮುಂಭಾಗದಲ್ಲಿ ರಾಜೀವ್ ಗೌಡ ಬೆಂಬಲಿಗರು ತೊಂದರೆ ಉಂಟುಮಾಡಿದ್ದು, ರಾಜೀವ್ ಗೌಡನ ವಾಹನವನ್ನು ಅಡ್ಡಹಾಕಿ ಜನರು ಜೈಕಾರ ಮಾಡಲು ಯತ್ನಿಸಿದರು. ಕೂಡಲೇ ಅಲರ್ಟ್ ಆದ ಪೊಲೀಸರು, ಲಾಠಿ ರುಚಿ ತೋರಿಸಿ ಗುಂಪು ಚದುರಿಸಿದರು. ಬಳಿಕ ರಾಜೀವ್ ಗೌಡನನ್ನು ಜೈಲಿಗೆ ಕರೆದೊಯ್ದರು.

ಜಾಮೀನು ನೀಡಲು ಕೋರ್ಟ್ ನಿರಾಕರಣೆ; ಧಮ್ಕಿ ಪುಢಾರಿ ರಾಜೀವ್‌ ಗೌಡಗೆ ಜೈಲು!

ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಧಮ್ಕಿ ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ರಾಜಕೀಯ ಪುಢಾರಿ ರಾಜೀವ್ ಗೌಡನನ್ನು ವೈದ್ಯಕೀಯ ಪರೀಕ್ಷೆ ಬಳಿಕ ಪೊಲೀಸರು ಜೆಎಂಎಫ್‌ಸಿ ಕೋರ್ಟ್ ಮುಂದೆ ಹಾಜರುಪಡಿಸಿದರು.

ಆರೋಪಿಯ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದರೂ, ತನಿಖೆ ಇನ್ನೂ ಮುಂದುವರಿಯಬೇಕಿದ್ದು ಆರೋಪಿಯ ಮೊಬೈಲ್ ಹಾಗೂ ಪರಾರಿಯಾಗಲು ಬಳಸಿದ ಕಾರನ್ನು ವಶಪಡಿಸಿಕೊಳ್ಳಬೇಕಿದೆ ಎಂದು ಪೊಲೀಸರು ವಾದಿಸಿದರು. ವಾದಗಳನ್ನು ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ರಾಜೀವ್ ಗೌಡನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಇದೇ ಪ್ರಕರಣದಲ್ಲಿ ರಾಜೀವ್ ಗೌಡಗೆ ಆಶ್ರಯ ನೀಡಿದ್ದ ಮಂಗಳೂರು ಉದ್ಯಮಿ ಮೈಕಲ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

 

ಭೋಪಾಲ್| ಏಮ್ಸ್ ಆಸ್ಪತ್ರೆಯೊಳಗೆ ಲಿಫ್ಟ್​ನಲ್ಲೇ ಮಾಂಗಲ್ಯ ದೋಚಿ ಎಸ್ಕೇಪ್ ಆದ ಕಳ್ಳ!

0

ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆದ ಘಟನೆ ಭದ್ರತಾ ವ್ಯವಸ್ಥೆಯ ಮೇಲಿನ ಗಂಭೀರ ಪ್ರಶ್ನೆಗಳನ್ನು ಎತ್ತಿ ತೋರಿಸಿದೆ.

ಭೋಪಾಲ್‌ನ ಏಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಲಿಫ್ಟ್‌ನಿಂದ ಇಳಿಯುವ ವೇಳೆ, ಮಾಸ್ಕ್ ಧರಿಸಿದ್ದ ಅಪರಿಚಿತ ವ್ಯಕ್ತಿ ಆಕೆಯ ಕುತ್ತಿಗೆಯಿಂದ ಮಂಗಳಸೂತ್ರವನ್ನು ಕಸಿದುಕೊಂಡು ಪರಾರಿಯಾದ ಘಟನೆ ನಡೆದಿದೆ.

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಆರೋಪಿ ಮಹಿಳೆಯೊಂದಿಗೆ ಲಿಫ್ಟ್‌ನಲ್ಲೇ ಪ್ರಯಾಣಿಸಿದ್ದ. ಲಿಫ್ಟ್ ಬಾಗಿಲು ತೆರೆಯುತ್ತಿದ್ದಂತೆಯೇ ಆತ ಆಕೆಯ ಚಿನ್ನದ ಸರವನ್ನು ಕಸಿದು ವೇಗವಾಗಿ ಓಡಿಹೋಗಿದ್ದಾನೆ. ಮಹಿಳೆ ಕಿರುಚುತ್ತಾ ಬೆನ್ನಟ್ಟಲು ಯತ್ನಿಸಿದರೂ ಆರೋಪಿ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾನೆ.

ಆಸ್ಪತ್ರೆಯೊಳಗೆ ಇಂತಹ ಘಟನೆ ಸಂಭವಿಸಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದು, ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವಂತೆ ಆಗ್ರಹ ಕೇಳಿಬರುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಜಾಮೀನು ನೀಡಲು ಕೋರ್ಟ್ ನಿರಾಕರಣೆ; ಧಮ್ಕಿ ಪುಢಾರಿ ರಾಜೀವ್‌ ಗೌಡಗೆ ಜೈಲು!

0

ಚಿಕ್ಕಬಳ್ಳಾಪುರ: ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಧಮ್ಕಿ ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ರಾಜಕೀಯ ಪುಢಾರಿ ರಾಜೀವ್ ಗೌಡನನ್ನು ವೈದ್ಯಕೀಯ ಪರೀಕ್ಷೆ ಬಳಿಕ ಪೊಲೀಸರು ಜೆಎಂಎಫ್‌ಸಿ ಕೋರ್ಟ್ ಮುಂದೆ ಹಾಜರುಪಡಿಸಿದರು.

ಆರೋಪಿಯ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದರೂ, ತನಿಖೆ ಇನ್ನೂ ಮುಂದುವರಿಯಬೇಕಿದ್ದು ಆರೋಪಿಯ ಮೊಬೈಲ್ ಹಾಗೂ ಪರಾರಿಯಾಗಲು ಬಳಸಿದ ಕಾರನ್ನು ವಶಪಡಿಸಿಕೊಳ್ಳಬೇಕಿದೆ ಎಂದು ಪೊಲೀಸರು ವಾದಿಸಿದರು. ವಾದಗಳನ್ನು ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ರಾಜೀವ್ ಗೌಡನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಇದೇ ಪ್ರಕರಣದಲ್ಲಿ ರಾಜೀವ್ ಗೌಡಗೆ ಆಶ್ರಯ ನೀಡಿದ್ದ ಮಂಗಳೂರು ಉದ್ಯಮಿ ಮೈಕಲ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಈ ನಡುವೆ ರಾಜೀವ್ ಗೌಡ ತನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾನೆ.

ಹಣ ಕೊಟ್ಟಿಲ್ಲ ಎಂದು ತಾಯಿಯನ್ನೇ ಕಲ್ಲಿನಿಂದ ಜಜ್ಜಿ ಕೊಂದ ಪಾಪಿ ಮಗ! ಆರೋಪಿ ಅರೆಸ್ಟ್

0

ರಾಯಚೂರು: ಹಣ ಕೊಡಲು ನಿರಾಕರಿಸಿದ ತಾಯಿಯನ್ನೇ ಮಗ ಕಲ್ಲಿನಿಂದ ಜಜ್ಜಿ ಕೊಲೆಗೈದ ಹೃದಯವಿದ್ರಾವಕ ಘಟನೆ ಮಸ್ಕಿ ತಾಲೂಕಿನ ಜಕ್ಕೇರುಮಡು ತಾಂಡ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಚಂದವ್ವ (58) ಮೃತರು. ಕೊಲೆಗಡುಕ ಮಗ ಕುಮಾರನನ್ನು ಮುದಗಲ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಕುಮಾರ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಊರಿಗೆ ಬಂದಾಗಲೆಲ್ಲ ತನ್ನ ತಾಯಿ ಚಂದವ್ವನಿಗೆ ಹಣ ಕೊಡಬೇಕು ಎಂದು ಜಗಳ ತೆಗೆದು ಹಲ್ಲೆ ನಡೆಸುತ್ತಿದ್ದನೆಂದು ತಿಳಿದುಬಂದಿದೆ. ಜನವರಿ 25ರಂದು ಬೆಳಗ್ಗೆ ಬೆಂಗಳೂರಿನಿಂದ ಜಕ್ಕೇರುಮಡು ತಾಂಡಕ್ಕೆ ಬಂದ ಕುಮಾರ, ತಾಯಿಯೊಂದಿಗೆ ಜಗಳ ತೆಗೆದು, ಹೊಲ ಮಾರಾಟ ಮಾಡಿ ಅಥವಾ ಅಡವಿಟ್ಟು ಎರಡು ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾನೆ.

ಇದಕ್ಕೆ ಚಂದವ್ವ, ಕಿರಿಯ ಪುತ್ರ ಸಂತೋಷನ ಮದುವೆ ಮಾಡಬೇಕಿದೆ, ನಮ್ಮ ಬಳಿ ಹಣವಿಲ್ಲ, ಹೊಲ ಮಾರಿದರೆ ಮದುವೆಗೆ ಹಣ ಎಲ್ಲಿಂದ ತರೋದು? ನೀನು ನಿನ್ನ ಪಾಡಿಗೆ ಹೆಂಡತಿಯ ಜೊತೆ ಇದ್ದು ತಮ್ಮನ ಮದುವೆ ಬಗ್ಗೆ ಯೋಚನೆ ಮಾಡಲ್ಲ ಎಂದು ಹೇಳಿ ಹಣ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಕುಮಾರ ಮನೆಯ ಛಾವಣಿಗೆ ಹಾಕಿದ್ದ ಸಿಮೆಂಟ್ ಶೀಟ್‌ಗಳನ್ನು ಒಡೆದು, ನಾಳೆಯೊಳಗೆ ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ತೆರಳಿದ್ದಾನೆ.

ನಿನ್ನೆ (ಸೋಮವಾರ) ಸಂಜೆ ಸುಮಾರು 5 ಗಂಟೆಗೆ ಮತ್ತೆ ಮನೆಗೆ ಬಂದ ಕುಮಾರ, ತಾಯಿಯೊಂದಿಗೆ ಜಗಳ ತೆಗೆದು, ಎರಡು ಲಕ್ಷ ರೂಪಾಯಿ ಕೊಡು, ನಾನು ಬೆಂಗಳೂರಿಗೆ ಹೋಗಬೇಕು ಎಂದು ಹೇಳಿದ್ದಾನೆ. ಹಣ ಇಲ್ಲ ಎಂದು ಚಂದವ್ವ ಹೇಳುತ್ತಿದ್ದಂತೆ, ಕುಮಾರ ಏಕಾಏಕಿ ತಾಯಿಯ ತಲೆ ಕೂದಲು ಹಿಡಿದು ಮನೆಯ ಮುಂದಿರುವ ಸತ್ಯಸೇವಲಾಲ ಭವನದ ಬಳಿ ಎಳೆದೊಯ್ದು ಗೋಡೆಗೆ ಗುದ್ದಿಸಿ, ತಲೆಗೆ ಕಲ್ಲಿನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ.

ಗಂಭೀರವಾಗಿ ಗಾಯಗೊಂಡ ಚಂದವ್ವರನ್ನು ಮುದಗಲ್ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಘಟನೆಯ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಕಲಂ 115(2), 352, 351(2), 103(1) ಬಿಎನ್‌ಎಸ್–2023 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಿವಮೊಗ್ಗ: ಶಾಲೆಯಲ್ಲಿ ನೀಡಿದ ಮಾತ್ರೆ ನುಂಗಿ 59 ವಿದ್ಯಾರ್ಥಿಗಳು ಅಸ್ವಸ್ಥ!

0

ಭದ್ರಾವತಿ: ಜಿಲ್ಲೆಯ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನಿಮಿಯಾ ತಡೆಗಟ್ಟಲು ನೀಡಿದ ಖನಿಜಾಂಶ ಮಾತ್ರೆ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ನಡೆದಿದೆ.

ವಾರಕ್ಕೆ ಒಮ್ಮೆ ವಿದ್ಯಾರ್ಥಿಗಳಿಗೆ ಅನಿಮಿಯಾ ತಡೆಗಟ್ಟುವ ಉದ್ದೇಶದಿಂದ ಖನಿಜಾಂಶ ಮಾತ್ರೆ ನೀಡಲಾಗುತ್ತದೆ. ಅದರಂತೆ ಇಂದು ಮಧ್ಯಾಹ್ನ ಶಾಲೆಯಲ್ಲಿ ಮಾತ್ರೆ ವಿತರಿಸಲಾಗಿತ್ತು. ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಯಲ್ಲಿ, ಮಾತ್ರೆ ಸೇವಿಸಿದ ಬಳಿಕ ಏಕಾಏಕಿ 59 ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು ಕಾಣಿಸಿಕೊಂಡು ಅಸ್ವಸ್ಥರಾದರು.

ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ತಕ್ಷಣ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಯಾವುದೇ ವಿದ್ಯಾರ್ಥಿಗಳಿಗೆ ಜೀವಾಪಾಯವಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ (ಟಿಎಚ್) ಹಾಗೂ ಬ್ಲಾಕ್ ಶಿಕ್ಷಣಾಧಿಕಾರಿ (ಬಿಇಒ) ನಾಗೇಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.

ಯೋಗೇಶ್ ಗೌಡ ಕೊಲೆ ಕೇಸ್: ವಿನಯ್ ಕುಲಕರ್ಣಿ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

0

ಬೆಂಗಳೂರು: ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ  ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವುದೇ ಸೂಕ್ತ ಎಂದು ಸೂಚಿಸಿ, ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿಯಾಗಿದೆ.

ಧಾರವಾಡ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ 15ನೇ ಆರೋಪಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ 2021ರಲ್ಲಿ ಕೋರ್ಟ್‌ನಿಂದ ಅವರಿಗೆ ಜಾಮೀನು ಮಂಜೂರಾಗಿತ್ತು. ಆದರೆ, ಇತ್ತೀಚೆಗೆ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಮೂಲಕ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಸಿಬಿಐ ಜಾಮೀನು ರದ್ದುಪಡಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಸಿಬಿಐ ಸಲ್ಲಿಸಿದ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್, ವಿನಯ್ ಕುಲಕರ್ಣಿಗೆ ನೀಡಿದ್ದ ಜಾಮೀನನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು. ಇದರ ಪರಿಣಾಮವಾಗಿ ಅವರು ಮತ್ತೆ ಜೈಲಿಗೆ ಹೋಗಬೇಕಾಯಿತು. ಸದ್ಯ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದಾರೆ. ಇದೀಗ ಹೈಕೋರ್ಟ್ ಆದೇಶದಂತೆ, ವಿನಯ್ ಕುಲಕರ್ಣಿ  ಜಾಮೀನಿಗಾಗಿ ಮತ್ತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕಾಗಿದೆ.

ಮಹಾಕಾಳೇಶ್ವರ VIP ದರ್ಶನ ಅರ್ಜಿ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್!

0

ನವದೆಹಲಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಪ್ರಸಿದ್ಧ ಶ್ರೀ ಮಹಾಕಾಳೇಶ್ವರ ದೇವಾಲಯದ ಗರ್ಭಗುಡಿಗೆ ವಿಐಪಿ ದರ್ಶನ ನೀಡುವ ವ್ಯವಸ್ಥೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಧಾರ್ಮಿಕ ವಿಚಾರಗಳನ್ನು ನಿಯಂತ್ರಿಸುವುದು ನ್ಯಾಯಾಲಯದ ವ್ಯಾಪ್ತಿಯಲ್ಲಿಲ್ಲ ಎಂದು ಹೇಳಿದ ನ್ಯಾಯಾಲಯ, ಈ ರೀತಿಯ ನಿರ್ಧಾರಗಳನ್ನು ದೇವಾಲಯದ ಆಡಳಿತ ಮಂಡಳಿಯೇ ತೆಗೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.

ಅರ್ಜಿಯ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಆರ್. ಮಹಾದೇವನ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ, ಅರ್ಜಿದಾರ ದರ್ಪಣ್ ಅವಸ್ಥಿ ಅವರಿಗೆ ಈ ವಿಚಾರದಲ್ಲಿ ದೇವಾಲಯ ಪ್ರಾಧಿಕಾರದ ಮುಂದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸುವಂತೆ ಸೂಚಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ವಿಷ್ಣು ಶಂಕರ್ ಜೈನ್, ದೇವಾಲಯದ ಗರ್ಭಗುಡಿ ಪ್ರವೇಶದ ವಿಷಯದಲ್ಲಿ ಪ್ರತಿಯೊಬ್ಬ ನಾಗರಿಕನನ್ನೂ ಸಮಾನವಾಗಿ ಪರಿಗಣಿಸಬೇಕು ಎಂದು ವಾದಿಸಿದರು. ವಿಐಪಿ ಸ್ಥಾನಮಾನ ಆಧಾರದ ಮೇಲೆ ತಾರತಮ್ಯ ಮಾಡಲಾಗುವುದಿಲ್ಲ. ಎಲ್ಲರಿಗೂ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಅಥವಾ ಎಲ್ಲರಿಗೂ ಸಮಾನ ಪ್ರವೇಶ ನೀಡಬೇಕು ಎಂದು ಅವರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, ದೇವಾಲಯದ ಗರ್ಭಗುಡಿಯೊಳಗೆ ಸಂವಿಧಾನದ ಕಲಂ 14 (ಸಮಾನತೆಯ ಹಕ್ಕು) ಅನ್ವಯಿಸುತ್ತದೆ ಎಂದು ಒಪ್ಪಿಕೊಂಡರೆ, ಕಲಂ 19 (ವಾಕ್ಸ್ವಾತಂತ್ರ್ಯ) ಸೇರಿದಂತೆ ಇತರ ಮೂಲಭೂತ ಹಕ್ಕುಗಳನ್ನೂ ಅಲ್ಲಿ ಅನ್ವಯಿಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.

“ಮೊದಲು ಇತರರು ಪ್ರವೇಶಿಸುತ್ತಿರುವುದರಿಂದ ನನಗೂ ಪ್ರವೇಶಿಸುವ ಹಕ್ಕು ಇದೆ ಎಂದು ನೀವು ಹೇಳುತ್ತೀರಿ. ನಂತರ ಮಾತನಾಡುವ ಹಕ್ಕಿನ ಆಧಾರದ ಮೇಲೆ ಮಂತ್ರಗಳನ್ನು ಪಠಿಸುವ ಹಕ್ಕನ್ನೂ ಬೇಡಿಕೊಳ್ಳುತ್ತೀರಿ. ಹೀಗೆ ಎಲ್ಲಾ ಮೂಲಭೂತ ಹಕ್ಕುಗಳನ್ನು ಗರ್ಭಗುಡಿಯೊಳಗೆ ವಿಸ್ತರಿಸಬೇಕಾದ ಸ್ಥಿತಿ ಬರಬಹುದು” ಎಂದು ಪೀಠ ಸ್ಪಷ್ಟಪಡಿಸಿತು.

ಈ ಹಿಂದೆ ಹೈಕೋರ್ಟ್ ಕೂಡ, ‘ವಿಐಪಿ’ ಎಂಬ ಪದವನ್ನು ಯಾವುದೇ ಕಾಯ್ದೆ ಅಥವಾ ನಿಯಮದಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿಲ್ಲ. ಇದು ದೇವಾಲಯ ನಿರ್ವಹಣಾ ಸಮಿತಿ ಹಾಗೂ ಜಿಲ್ಲಾಧಿಕಾರಿಗಳ ಆಡಳಿತಾತ್ಮಕ ವಿವೇಚನೆಗೆ ಒಳಪಟ್ಟ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.

error: Content is protected !!