ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ಶನಿವಾರ 70ನೇ ವರ್ಷದ ರಾಜ್ಯೋತ್ಸವವನ್ನು ರಾಷ್ಟ್ರ ದ್ವಜಾರೋಹಣ ನೆರವೇರಿಸಿ, ತಾಯಿ ಭುವನೇಶ್ವರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ತಹಸೀಲ್ದಾರ ಸಂತೋಷ ಹಿರೇಮಠ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಸಾವಿರಾರು ವರ್ಷಗಳ ಭವ್ಯ ಇತಿಹಾಸ ಕನ್ನಡ ಭಾಷೆಯಾಗಿದೆ. ಕನ್ನಡಕ್ಕಿರುವ ಅಗಾಧ ಶಕ್ತಿ ಮತ್ತೊಂದು ಭಾಷೆಯಲ್ಲಿ ಕಾಣಲು ಸಾಧ್ಯವಾಗುವುದಿಲ್ಲ. ಕನ್ನಡ ಎಂಬುದು ಬರೀ ಭಾಷೆಯಲ್ಲ, ಅದು ಈ ನೆಲದ ಸಂಸ್ಕೃತಿ, ಸಂಸ್ಕಾರ, ಪರಂಪರೆ ಸಾರುವ ಶಕ್ತಿಯಾಗಿದೆ. ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ, ಸ್ವಾಭಿಮಾನ ಬೆಳೆದು ಬರಬೇಕು. ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಕನ್ನಡದ ಬಗ್ಗೆ ಗೌರವಾಭಿಮಾನ ಮೂಡಿಸುವಲ್ಲಿ ಪಾಲಕ, ಶಿಕ್ಷಕ ಮತ್ತು ಕನ್ನಡಪರ ಸಂಘಟನೆಗಳ ಜವಾಬ್ದಾರಿ ಹೆಚ್ಚಿದೆ. ಯುವ ಜನತೆ ಕನ್ನಡ ನಾಡನ್ನು ಕಾಪಾಡಲು ಇಂದಿನಿಂದಲೇ ಪಣ ತೊಡಬೇಕು. ಕೇವಲ ಬಾಯಿ ಮಾತಿನಿಂದ ಕನ್ನಡ ಉಳಿಸಲು ಸಾಧ್ಯವಿಲ್ಲ. ಕನ್ನಡ ನಮ್ಮ ಉಸಿರಾಗಬೇಕು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಸಾಹಿತಿ ಈಶ್ವರ ಮೆಡ್ಲೇರಿ ಉಪನ್ಯಾಸ ನೀಡಿ, ಎರಡುವರೆ ಸಾವಿರ ವರ್ಷಗಳ ಭವ್ಯ ಇತಿಹಾಸದ ಕನ್ನಡ ಭಾಷೆಗೆ ಸಮನಾದ ಭಾಷೆ ಮತ್ತೊಂದಿಲ್ಲ. ಭಾರತಮಾತೆಯ ಮುಕುಟಮಣಿಯಾಗಿ ಕರ್ನಾಟಕದ ಕೀರ್ತಿ ಎಂದಿಗೂ ರಾರಾಜಿಸುತ್ತದೆ. ಕನ್ನಡ ಸಾಹಿತ್ಯಕ್ಕೆ ಲಕ್ಷ್ಮೇಶ್ವರದ ಕೊಡುಗೆ ಅಪಾರವಾಗಿದ್ದು, ಇಲ್ಲಿನ ಒಂದೊಂದು ಭಾಗವೂ ಒಂದು ಇತಿಹಾಸವನ್ನು ಸಾರುತ್ತಿವೆ ಎಂದರು.
ಈ ವೇಳೆ ಪುರಸಭೆ ಸದಸ್ಯ ರಾಜಣ್ಣ ಕುಂಬಿ, ಪ್ರಕಾಶ ಕೊಂಚಿಗೇರಿಮಠ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ರಾಮಣ್ಣ ಲಮಾಣಿ, ರಫೀಕ್ ಕಲಬುರ್ಗಿ, ಮುಖ್ಯಾಧಿಕಾರಿ ಮಹಾಂತೇಶ್ ಬೀಳಗಿ, ತಾ.ಪಂ ಇಒ ಕೃಷ್ಣಪ್ಪ ಧರ್ಮರ, ಪಿಎಸ್ಐ ನಾಗರಾಜ ಗಡಾದ, ಹೆಸ್ಕಾಂ ಎಇಇ ಆಂಜನಪ್ಪ, ಎಸ್.ಕೆ. ಜಲರಡ್ಡಿ, ಚಂದ್ರಶೇಖರ ನರಸಮ್ಮನವರ, ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪೂರ, ಕಂದಾಯ ಅಧಿಕಾರಿ ಎಂ.ಎ. ನದಾಫ್, ಶಿರಸ್ತೇದಾರ ಜಮೀರ್ ಮನಿಯಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಇದ್ದರು.
ಶಿಕ್ಷಕರಾದ ಉಮೇಶ ನೇಕಾರ, ಸತೀಶ ಬೋಮಲೆ, ರಾಘವೇಂದ್ರ ಜೋಶಿ, ಎನ್.ಎ. ಮುಲ್ಲಾ ಕಾರ್ಯಕ್ರಮ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಸಾಧಕರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. ಇತ್ತೀಚೆಗೆ ರಾಜ್ಯಮಟ್ಟದ ಕಿತ್ತೂರು ಚನ್ನಮ್ಮ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಸಾಹಿತಿ ಲಲಿತಕ್ಕ ಕೆರಿಮನಿ ಮತ್ತು ಕೆಯುಡಬ್ಲ್ಯೂಜೆಯಿಂದ ನೀಡಲಾಗುವ ರಾಜ್ಯಮಟ್ಟದ ಅತ್ಯುತ್ತಮ ಗ್ರಾಮಾಂತರ ವರದಿಗೆ ನೀಡುವ ಜಿ. ನಾರಾಯಣಸ್ವಾಮಿ ಪ್ರಶಸ್ತಿ ಪುರಸ್ಕೃತರಾಗಿರುವ ಪತ್ರಕರ್ತ ದಿಗಂಬರ ಪೂಜಾರ ಅವರನ್ನು ಗೌರವಿಸಲಾಯಿತು.