Home Blog Page 2

ಸಮಾಜ ಸಂಘಟನೆಗೆ ಒತ್ತು ನೀಡಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಎಲ್ಲರಿಗೂ ವಿದ್ಯೆ ಮುಖ್ಯ. ವಿದ್ಯೆ ಇಲ್ಲದಿದ್ದರೆ ಜೀವನವೇ ಶೂನ್ಯ. ಕಾರಣ ಹಾಲುಮತ ಸಮಾಜ ಬಾಂಧವರು ಮಕ್ಕಳಿಗೆ ಶಿಕ್ಷಣ ದೊರಕಿಸಲು ಆದ್ಯತೆ ನೀಡಬೇಕು. ಹಾಲುಮತ ಸಮಾಜದಲ್ಲಿ ಸಾಕಷ್ಟು ವಿದ್ಯಾವಂತರಿದ್ದು, ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಪಾಲ್ಗೊಂಡು ಸಮಾಜ ಸಂಘಟನೆಗೆ ಒತ್ತು ನೀಡಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಚನ್ನಮ್ಮನ ವನದಲ್ಲಿ ಲಕ್ಷ್ಮೇಶ್ವರ ತಾಲೂಕು ಕನಕ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಹಾಲುಮತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರು ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಧಾರವಾಡದ ಡಾ. ಬಸವರಾಜ ದೇವರು ಮಹಾಸ್ವಾಮಿಗಳು ಮತ್ತು ಹುಲ್ಲೂರು ಅಮೋಘಿಮಠದ ಸಿದ್ದಯ್ಯ ಅಮೋಘಿಮಠ ಸ್ವಾಮಿಗಳ ಸಾನ್ನಿಧ್ಯದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕಾ ಕನಕ ನೌಕರರ ಪತ್ತಿನ ಸಹಕಾರಿ ಸಂಘವನ್ನು ಉದ್ಘಾಟಿಸಿದ ಶಾಂತಪ್ಪ ಮಾತನಾಡಿ, ಅನುತ್ತೀರ್ಣರಾದ ತಕ್ಷಣ ಇಡೀ ಜೀವನವೇ ಮುಗಿಯುವುದಿಲ್ಲ. ಮತ್ತೆ ಪರೀಕ್ಷೆ ಬರೆದು ಪಾಸಾಗಿ ಬದುಕಿನಲ್ಲಿ ಸಾಧನೆ ಮಾಡುವುದೇ ಮುಖ್ಯ. ಸೋಲುಗಳನ್ನೇ ಗೆಲುವಿನ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, 1ರಿಂದ 4ನೇ ತರಗತಿವರೆಗೆ ಕನ್ನಡದಲ್ಲಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು. ನಂತರ ಇಂಗ್ಲೀಷ್ ಭಾಷೆಯ ಶಿಕ್ಷಣ ಕೊಡಿಸಬೇಕು. ಪಾಲಕರು ಮಕ್ಕಳಿಗೆ ಮೊಬೈಲ್ ಕೊಡಬಾರದು ಮತ್ತು ಒತ್ತಡ ಹಾಕಬಾರದು. ಪರೀಕ್ಷೆಯಲ್ಲಿ ನಪಾಸಾದ ಕೂಡಲೇ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿಗಳ ಲಕ್ಷಣ. ಸಮಸ್ಯೆಗಳನ್ನು ಎದುರಿಸಿ ಜೀವನ ರೂಪಿಸಿಕೊಳ್ಳುವದೇ ಸಾಧನೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಮಂಜುನಾಥ ಕೊಕ್ಕರಗುಂದಿ ಅಧ್ಯಕ್ಷತೆ ವಹಿಸಿದ್ದರು. ಸಿದ್ದಯ್ಯ ಅಮೋಘಿಮಠ, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಎಚ್.ಕೆ. ಭಾರ್ಗವ ಮಾತನಾಡಿದರು. ಈ ಸಂದರ್ಭದಲ್ಲಿ ವಿ.ಜಿ. ಪಡಿಗೇರಿ, ಫಕ್ಕೀರಪ್ಪ ಹೆಬಸೂರ, ನಿಂಗಪ್ಪ ಬನ್ನಿ, ವೀರೇಂದ್ರಗೌಡ ಪಾಟೀಲ, ಭಾರ್ಗವ್, ಜಿ.ಆರ್. ಕೊಪ್ಪದ, ಹನಮಂತಪ್ಪ ಹುಳಕನವರ, ಬಸಣ್ಣ ಹೊಳಲಾಪುರ, ಯಲ್ಲಪ್ಪ ಸೂರಣಗಿ, ಅಣ್ಣಪ್ಪ ರಾಮಗೇರಿ, ಮಂಜುನಾಥ ಕೊಪ್ಪದ, ಯಲ್ಲವ್ವ ದುರ್ಗಣ್ಣವರ, ಶೇಕಪ್ಪ ಕಾಳೆ, ಮುದಕಪ್ಪ ಗದ್ದಿ, ಸೋಮಣ್ಣ ಬೆಟಗೇರಿ, ಅಡಿವೆಕ್ಕ ಬೆಟಗೇರಿ, ನಿಂಗಪ್ಪ ಬಂಕಾಪುರ, ಛಾಯಪ್ಪ ಬಸಾಪೂರ, ಅಣ್ಣಪ್ಪ ರಾಮಗೇರಿ ಮುಂತಾದವರಿದ್ದರು. ಬಸವರಾಜ ಯರಗುಪ್ಪಿ, ನಾಗರಾಜ ಶಿಗ್ಲಿ ನಿರೂಪಿಸಿದರು.

ಸಾನ್ನಿಧ್ಯ ವಹಿಸಿದ್ದ ಧಾರವಾಡ ರೇವಣ ಸಿದ್ಧೇಶ್ವರಮಠದ ಬಸವರಾಜ ದೇವರು ಮಾತನಾಡಿ, ಹಾಲುಮತ ಸಮಾಜದವರು ಶ್ರಮ ವಹಿಸಿ ಕೆಲಸ ಮಾಡುವವರು. ಅವರಿಂದ ಇನ್ನೂ ಜಾನಪದ ಸಾಹಿತ್ಯ ಉಳಿದುಕೊಂಡಿದೆ. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ತಪ್ಪದೆ ಶಿಕ್ಷಣ ಕೊಡಿಸಬೇಕು. ಎಲ್ಲರಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕಾದ್ದು ಸಮಾಜದ ಕರ್ತವ್ಯ ಎಂದರು.

ಬಸ್‌ನಲ್ಲಿ ವಿದ್ಯಾರ್ಥಿಗಳಿಗೆ ಪ್ರಥಮಾದ್ಯತೆ ನೀಡಿ

0

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಸರ್ಕಾರಿ ಬಸ್‌ಗಳಲ್ಲಿ ಶಾಲಾ ಮಕ್ಕಳಿಗೆ ಮೊದಲ ಆದ್ಯತೆ ನೀಡಬೇಕು. ಸಾರ್ವಜನಿಕರು ಸಹಕಾರ ನೀಡುವುದು ಅತ್ಯಗತ್ಯ ಎಂದು ಹರಪನಹಳ್ಳಿ ಕ್ಷೇತ್ರದ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದ ಶಕ್ತಿ ಯೋಜನೆಯ ಎರಡು ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಶಕ್ತಿ ಯೋಜನೆಯಡಿ ಹರಪನಹಳ್ಳಿಯಿಂದ ಎರಡು ವರ್ಷಗಳಲ್ಲಿ 1.40 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಇದರಿಂದ ಸರಕಾರಕ್ಕೆ 40 ಕೋಟಿಗೂ ಹೆಚ್ಚು ಲಾಭವಾಗಿದೆ. ಶಕ್ತಿ ಯೋಜನೆಯಿಂದ ಜಿಲ್ಲೆಯ ಮಹಿಳೆಯರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದು, ಈ ಯೋಜನೆಯು ಸ್ವತಂತ್ರವಾಗಿ ಸಂಚರಿಸಲು ಮಹಿಳೆಯರಿಗೆ ಸಹಕಾರಿಯಾಗಿದೆ. ಒಟ್ಟಾರೆ ರಾಜ್ಯಾದ್ಯಂತ 500 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂಬುದು ರಾಜ್ಯದ ಸಾಧನೆಯಾಗಿದೆ ಎಂದು ಹೇಳಿದರು.

ಮುಂದಿನ ವಾರಗಳಲ್ಲಿ ಹರಪನಹಳ್ಳಿಗೆ ಹೆಚ್ಚುವರಿಯಾಗಿ ಎರಡು ಬಸ್‌ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ 10 ಎಲೆಕ್ಟಿçಕ್ ಬಸ್‌ಗಳನ್ನು ನೀಡುವಂತೆ ಮನವಿ ಮಾಡುವ ವಿಚಾರವಿದೆ ಎಂದರು.

ಕಾರ್ಯಕ್ರಮದಲ್ಲಿ ಸಾರಿಗೆ ವ್ಯವಸ್ಥಾಪಕಿ ಮಂಜುಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಚಿಗಟೇರಿ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಮ್ಮ, ಪ್ರಮುಖರಾದ ರೆಹಮಾನ್ ಸಾಬ್, ವೆಂಕಟೇಶ್ ವಕೀಲ, ಜಂಬಣ್ಣ ಮುತ್ತಿಗಿ, ದಾದಾಪೀರ್, ನಂದಿಬೇವೂರು ಅಶೋಕ್, ಬಾವಿಹಳ್ಳಿ ಚಂದ್ರಪ್ಪ, ಮತ್ತಿಹಳ್ಳಿ ರಾಮಪ್ಪ, ಕವಿತಾ, ವಿಜಯಲಕ್ಷ್ಮೀ, ಮೈದೂರು ರಾಮಣ್ಣ, ಹುಲಿಕಟ್ಟಿ ಚಂದ್ರಪ್ಪ, ಉದಯ್ ಶಂಕರ್, ಮೋರಿಗೆರೆ ಹೇಮಣ್ಣ, ದೇವೇಂದ್ರಗೌಡ, ಗುಡಿಹಳ್ಳಿ ಹಾಲೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸಮಾಜದ ಓರೆಕೋರೆಗಳನ್ನು ತಿದ್ದುವ ಮಹತ್ವದ ಕೆಲಸವನ್ನು ಪತ್ರಿಕೆಗಳು ನಿರ್ವಹಿಸುತ್ತವೆ. ಇಂದಿಗೂ ಪತ್ರಿಕೆಗಳ ಪ್ರಾಸಂಗಿಕತೆ ಕಡಿಮೆಯಾಗಿಲ್ಲ. ಮಕ್ಕಳಲ್ಲಿ ಪತ್ರಿಕೆ ಓದುವ ಹವ್ಯಾಸ ಬೆಳೆಸುವುದು ಅವುಗಳ ಮಹತ್ವವನ್ನು ಅರಿಯಲು ನೆರವಾಗುತ್ತದೆ ಎಂದು ಉದ್ಯಮಿ ರಾಮಣ್ಣ ಕಮಾಜಿ ಹೇಳಿದರು.

ಪಟ್ಟಣದ ಸರಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಇ)ಯಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಪ್ರತಿದಿನವೂ ಪತ್ರಿಕೆ ಓದುವುದರಿಂದ ಜ್ಞಾನವೃದ್ಧಿಯಾಗುತ್ತದೆ. ಪ್ರಚಲಿತ ವಿದ್ಯಮಾನಗಳ ಅರಿವಿಗೆ ಪತ್ರಿಕೆಗಳ ಪಾತ್ರ ಅಪಾರವಾಗಿದೆ. ಈ ಡಿಜಿಟಲ್ ಯುಗದಲ್ಲೂ ಪತ್ರಿಕೆಗಳ ವಾಚನ ಅನುಭವಕ್ಕೆ ವಿಶೇಷ ಮೌಲ್ಯವಿದ್ದು, ಪತ್ರಿಕೆಗಳ ವಸ್ತುನಿಷ್ಠತೆ ಮತ್ತು ನಿಖರತೆ ಅನನ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಆರ್.ಎನ್. ದೇಶಪಾಂಡೆ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಎಂ. ಕಲ್ಲನಗೌಡರ, 1843 ಜುಲೈ 1ರಂದು ಆರಂಭವಾದ `ಮಂಗಳೂರು ಸಮಾಚಾರ’ ಕನ್ನಡದ ಮೊದಲ ಪತ್ರಿಕೆ. ಪತ್ರಿಕಾ ಸಾಹಿತ್ಯವನ್ನು ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಗುರುತಿಸಬಹುದು. ಪತ್ರಿಕೋದ್ಯಮವು ಸಂವಿಧಾನದ ನಾಲ್ಕನೇ ಅಂಗವಾಗಿದ್ದು, ಪತ್ರಿಕೆಗಳು ನ್ಯಾಯ, ನೈತಿಕತೆ ಮತ್ತು ಜವಾಬ್ದಾರಿಯ ಪ್ರತೀಕವಾಗಿವೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮಹಾದೇವಪ್ಪ ಮಾನೇಗಾರ, ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಐ.ಎಂ. ಶೇಖ್, ಪ.ಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಡಾ. ಎಸ್.ಸಿ. ಚವಡಿ, ಆರ್.ಎಂ. ಕಲ್ಲನಗೌಡರ, ಹೊನ್ನಪ್ಪ ನೀಲಗುಂದ, ವಿ.ಡಿ. ಕಣವಿ, ಎಂ.ಎ. ಜಮಾಲಸಾಬನವರ, ಭರತ ಕುರಣಿ, ಎಸ್.ಎಚ್. ಪೂಜಾರಿ, ನೂರಹ್ಮದ್ ನದಾಫ್, ವಿ.ಟಿ. ಅಂಗಡಿ, ಬಸವರಾಜ ಗೌರಿಮಣಿ, ಗೀತಾ ಪಾಟೀಲ, ಬಿ.ವಿ. ಸುಂಕಾಪೂರ ಹಾಗೂ ದತ್ತಣ್ಣ ಯಳವತ್ತಿ ಉಪಸ್ಥಿತರಿದ್ದರು.

ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸುಂಕಾಪುರ ಮಾತನಾಡಿ, ಇಂದಿನ ಪತ್ರಿಕೋದ್ಯಮವು ಹಲವು ಬಿಕ್ಕಟ್ಟಿನ ಮಧ್ಯೆ ಸಾಗುತ್ತಿದೆ. ರಾಜಕೀಯ ಮತ್ತು ಬಂಡವಾಳಶಾಹಿಯ ಒತ್ತಡದ ನಡುವೆ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಸತ್ಯವನ್ನು ಜನತೆಯೆದುರು ತರುತ್ತಿದ್ದು, ಅವರ ಸೇವೆ ಅಪಾರ ಎಂದು ಪ್ರಶಂಸಿಸಿದರು.

ಸಮಾಜಕ್ಕೆ ಗುರುವಿನ ಪಾತ್ರ ಅವಶ್ಯಕ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸಮಾಜದಲ್ಲಿ ಗುರುಗಳು ಮಹತ್ತರ ಸ್ಥಾನ ಹೊಂದಿದ್ದು, ಅವರ ಮಾರ್ಗದರ್ಶನವಿಲ್ಲದೆ ಯಾವುದೇ ಕಾರ್ಯ ಯಶಸ್ವಿಯಾಗಲು ಸಾಧ್ಯವಿಲ್ಲ. ಗುರು ಜ್ಞಾನದೆಡೆಗೆ ಕಣ್ಣು ತೆರೆಸುವವನು. ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಗುರುವಿನ ಕೃಪೆ ಅಗತ್ಯವಿದೆ ಎಂದು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.

ಪಟ್ಟಣದ ಹಡಪದ ಅಪ್ಪಣ್ಣ ಸಮುದಾಯ ಭವನದಲ್ಲಿ ಮುಳಗುಂದ ಹೋಬಳಿ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಘಟಕಗಳ ಸೇವಾ ದೀಕ್ಷೆ ಹಾಗೂ ಹಡಪದ ಅಪ್ಪಣ್ಣ ಜಯಂತ್ಯುತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗದಗ ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಮಾತನಾಡಿ, ಹಡಪದ ಅಪ್ಪಣ್ಣ ನಿಜ ಸುಖದ ಬದುಕನ್ನು ತಮ್ಮ ಶರಣ ಸಾಹಿತ್ಯದ ಮೂಲಕ ತೋರಿಸಿಕೊಟ್ಟ ಮಹಾನ್ ಶರಣರು. ಮಕ್ಕಳಿಗೆ ಇಂತಹ ಶರಣರ ವಚನಗಳನ್ನು ಮನೆಯಲ್ಲಿ ಪಠಿಸುವ ಅಭ್ಯಾಸ ಬೆಳೆಸಬೇಕು. ಜಾತಿ, ಮತ, ಪಂಥ ಭೇದವಿಲ್ಲದ ಸಮಾನತೆಯ ಸಮಾಜ ನಿರ್ಮಿಸಲು ಶರಣರು ಸೂಚಿಸಿರುವ ಮಾರ್ಗದರ್ಶನ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಡಿ. ಬಟ್ಟೂರ ವಹಿಸಿದ್ದರು. ಡಾ. ಎಸ್.ಸಿ. ಚವಡಿ, ಬಿ.ಕೆ. ಹರಪನಹಳ್ಳಿ, ಎಸ್.ಎಂ. ಮರಿಗೌಡರ, ರಾಮಣ್ಣಾ ಕಮಾಜಿ, ಕುಮಾರ ಹಡಪದ, ಪಿ.ಎ. ವಂಟಕರ, ಬೂದಪ್ಪ ಅಂಗಡಿ, ಶಂಕ್ರಪ್ಪ ತೆಂಬದಮನಿ, ಮಂಜುನಾಥ ಮಟ್ಟಿ, ಪ್ರಕಾಶ ಮದ್ದಿನ, ರಾಜೇಶ್ವರಿ ಬಡ್ನಿ ಮತ್ತು ಎಂ.ಕೆ. ಲಮಾಣಿ ಉಪಸ್ಥಿತರಿದ್ದರು.

ಪಂಚಮಸಾಲಿ ಯುವ ಘಟಕದಿಂದ ವಿಜಯೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: 2024ರ ಡಿಸೆಂಬರ್ 10ರಂದು ಬೆಳಗಾವಿ ಸುವರ್ಣಸೌಧ ಮುಂಭಾಗದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಪ್ರಕರಣದ ನ್ಯಾಯಾಂಗ ತನಿಖೆಗೆ ತಡೆ ನೀಡಬೇಕು ಎಂದು ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿ, ಪ್ರಕರಣದ ನ್ಯಾಯಾಂಗ ತನಿಖೆ ನಡೆಸಬೇಕೆಂಬ ಆದೇಶವನ್ನು ಧಾರವಾಡ ಹೈಕೋರ್ಟ್ ಎತ್ತಿ ಹಿಡಿದಿದೆ.

ಕೂಡಲಸಂಗಮ ಮಹಾಪೀಠದ ಜಗದ್ಗುರು ಲಿಂಗಾಯತ ಪಂಚಮಸಾಲಿ ಪರಮಪೂಜ್ಯರಾದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಶ್ರೀಗಳ, ಎಲ್‌ಪಿಎಪಿ ವಕೀಲರ ಸಂಘ ಮತ್ತು ರಾಜ್ಯದ ಲಿಂಗಾಯತ ಪಂಚಮಸಾಲಿ ಹೋರಾಟಗಾರರು ಹಾಗೂ ಸಮಾಜ ಬಾಂಧವರೆಲ್ಲರ ಪರಿಶ್ರಮವನ್ನು ಸ್ಮರಿಸಿ ನಗರದಲ್ಲಿ ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ಯುವ ಘಟಕದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಮ.ಅಂಗಡಿ, ಉಪಾಧ್ಯಕ್ಷ ಬಸವರಾಜ ಗಡ್ಡೆಪ್ಪನವರ, ಪದಾಧಿಕಾರಿಗಳಾದ ನಿಂಗಪ್ಪ ಹುಗ್ಗಿ, ಕೆ.ವಿ. ಗದುಗಿನ, ಚನ್ನವೀರಪ್ಪ ಮಳಗಿ, ನಗರಸಭೆ ಸದಸ್ಯ ಮಾಹಾಂತೇಶ ನಲವಡಿ, ಶಿವರಾಜಗೌಡ ಹಿರೇಮನಿ (ಪಾಟೀಲ), ಗ್ರಾಮೀಣ ಅಧ್ಯಕ್ಷರಾದ ಮಂಜುನಾಥ ಗುಡದೂರ, ರಾಜು ಜಕ್ಕನಗೌಡ್ರ, ಚೇತನ ಅಬ್ಬಿಗೇರಿ, ಚಂದ್ರು ಪಾಟೀಲ, ಪ್ರಶಾಂತ ನೇರಗಲ್ಲ, ಮಂಜು ಬಾಣದ, ರಾಜು ರೊಟ್ಟಿ, ಸಂಗಮೇಶ ಗೂಂದಿ, ನಿಂಗನಗೌಡ ಮಾಲಿಪಾಟೀಲ, ಸಂತೋಷ ಕೊಪ್ಪದ, ಶರಣಪ್ಪ ಮರಿಗೌಡ್ರ, ಅಶೋಕ ತೋಟದ ಮುಂತಾದವರಿದ್ದರು.

ವಿದ್ಯಾರ್ಥಿಗಳೊಂದಿಗೆ ಸಂವಹನ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ವಾಣಿಜ್ಯ ವಿದ್ಯಾರ್ಥಿಗಳಾದ ನೀವು ಸ್ವಂತ ಪ್ರೇರೇಪಣೆಯಿಂದ ಮುನ್ನುಗ್ಗುವ ಪ್ರವೃತ್ತಿ ಬೆಳೆಸಿಕೊಂಡಲ್ಲಿ ಮಾತ್ರ ಮುನ್ನಡೆ ಅಥವಾ ಪ್ರಗತಿ ಸಾಧ್ಯ ಎಂದು ಸನ್ಮಾರ್ಗ ಪದವಿಪೂರ್ವ ಮಹಾವಿದ್ಯಾಲಯದ ನಿರ್ದೇಶಕ ಪ್ರೊ. ಉಡುಪಿ ದೇಶಪಾಂಡೆ ಅಭಿಪ್ರಾಯಪಟ್ಟರು.

ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಬಿಂಕದಕಟ್ಟಿಯ ಪ್ರಾಣಿ ಸಂಗ್ರಹಾಲಯದಲ್ಲಿ ಜರುಗಿದ ‘ಪ್ರೇರೇಪಣಾ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಹನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ವಾಣಿಜ್ಯ ವಿದ್ಯಾರ್ಥಿಗಳಾದ ನೀವು ಪಠ್ಯದ ಜೊತೆಗೆ ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ನಿಮ್ಮ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಂಡು ಜೀವನದಲ್ಲಿ ಪ್ರಗತಿ ಕಾಣಬೇಕು ಎಂದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರೊ. ರಾಜೇಶ ಕುಲಕರ್ಣಿ, ಪ್ರಾಚಾರ್ಯ ಪ್ರೇಮಾನಂದ ರೋಣದ, ಆಡಳಿತಾಧಿಕಾರಿ ಎಂ.ಸಿ. ಹಿರೇಮಠ, ನಿರ್ದೇಶಕರುಗಳಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ರಾಹುಲ ಒಡೆಯರ್, ಪ್ರೊ. ಸೈಯ್ಯದ್ ಮತೀನ್ ಮುಲ್ಲಾ ಸೇರಿದಂತೆ ಮಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿ ಹಾಗೂ ವಾಣಿಜ್ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರೊ. ಎಸ್.ಎಸ್. ವಜ್ರಬಂಡಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಪ್ರೊ. ಹೇಮಂತ ದಳವಾಯಿ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ಸಂಗೀತಾ ಬೀಳಗಿ ವಂದಿಸಿದರು.

ಸೇವಾ ಉದ್ದೇಶಗಳಿಗೆ ಹೊಸ ಶಕ್ತಿ

0

ಗದಗ: ಸಮಾಜಮುಖಿ ಚಟುವಟಿಕೆಗಳ ಮೂಲಕ ಮಹಿಳೆಯರ ಸಾಮರ್ಥ್ಯ ಹೆಚ್ಚಿಸಲು ಸದಾ ಮುಂಚೂಣಿಯಲ್ಲಿರುವ ಇನ್ನರ್ ವೀಲ್ ಕ್ಲಬ್ ಗದಗ-ಬೆಟಗೇರಿಯ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯಾಗಿದೆ. ಈ ತಂಡದ ನಾಯಕತ್ವವನ್ನು ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ, ಸಮಾಜಸೇವೆಯಲ್ಲಿ ತೊಡಗಿರುವ ಮಹಿಳೆಯರು ವಹಿಸಿಕೊಂಡಿದ್ದು, ಈ ವರ್ಷದ ಸೇವಾ ಉದ್ದೇಶಗಳಿಗೊಂದು ಹೊಸ ಶಕ್ತಿ ತುಂಬಿದೆ.

ಅಧ್ಯಕ್ಷೆ ಅಶ್ವಿನಿ ಜಗತಾಪ್: ಜೀವನಶೈಲಿಯಲ್ಲಿ ನಂಬಿಕೆ ಮತ್ತು ನಿಷ್ಠೆಯೊಂದಿಗೆ ಸಾಗುತ್ತಿರುವ ಅಶ್ವಿನಿ ಜಗತಾಪ್ ಅವರು ಈ ಬಾರಿ ಕ್ಲಬ್ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ. ಬೆಳಗಾವಿಯಲ್ಲಿ ಹುಟ್ಟಿ ಬೆಳೆದ ಇವರು, ಸಾಹಿತ್ಯ, ಕಲೆ, ಆಟೋಟಗಳಲ್ಲಿ ಬಾಲ್ಯದಿಂದಲೇ ತೊಡಗಿದ್ದರು. ಗದುಗಿನ ಖ್ಯಾತ ಮುದ್ರಣೋದ್ಯಮಿ ವಿನಯ್ ಕುಮಾರ್ ಜಗತಾಪರವರ ಧರ್ಮಪತ್ನಿಯಾಗಿರುವ ಅಶ್ವಿನಿಯವರು, ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ದೃಢ ಇಚ್ಛಾಶಕ್ತಿಯೊಂದಿಗೆ ಈ ಸ್ಥಾನವನ್ನು ಸ್ವೀಕರಿಸಿದ್ದಾರೆ.

ಕಾರ್ಯದರ್ಶಿ ಶಿವಲೀಲಾ ಅಕ್ಕಿ: ಶಿರಸಿಯಿಂದ ಬಂದಿರುವ ಶಿವಲೀಲಾ ಅಕ್ಕಿ ತಮ್ಮ ಸಾಮಾಜಿಕ ಹಕ್ಕುಬದ್ಧತೆಯನ್ನು ವಿವಿಧ ಸಂಘಟನೆಗಳ ಮೂಲಕ ಸಾಧಿಸಿದ್ದಾರೆ. ಗದುಗಿನ ಟಿ.ಪಿ. ಅಕ್ಕಿಯವರ ಧರ್ಮಪತ್ನಿಯಾಗಿರುವ ಇವರು, ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಸಮಿತಿಯಿಂದ ಹಿಡಿದು ಅನೇಕ ಸಾಮಾಜಿಕ ಸಂಘಟನೆಗಳ ಪ್ರಮುಖ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸೇವಾಭಾವ ಹೊಸ ಕಾರ್ಯಕಾರಿಣಿಗೆ ಶಕ್ತಿಯ ಸಾರವಾಗಿ ಪರಿಣಮಿಸಲಿದೆ.

ಕೋಶಾಧ್ಯಕ್ಷೆ ಪುಷ್ಪ ಭಂಡಾರಿ: ವಿತ್ತ ನಿಯಂತ್ರಣದ ಹಿರಿಮೆಯನ್ನು ಗೌರವಿಸುವ ಪುಷ್ಪ ಭಂಡಾರಿಯವರು ಈ ಬಾರಿ ಕೋಶಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಉತ್ತಮ ಪ್ರಭಾವ ಬೀರಿದ 2024-25ರ ಐ.ಎಸ್.ಓ ಆಗಿ ಅವರು 100 ಧ್ವಜಗಳನ್ನು ಹಸ್ತಾಂತರಿಸಿ ಗಮನ ಸೆಳೆದಿದ್ದರು. ಸಾಹಿತ್ಯ, ಯೋಗ ಮತ್ತು ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಇವರು, ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಐ.ಎಸ್.ಓ ಪೂಜಾ ಭೂಮಾ: ಸೃಜನಾತ್ಮಕತೆ, ವ್ಯಾಪಾರ ಪ್ರಜ್ಞೆ ಮತ್ತು ಸಂಘಟನಾ ಸಾಮರ್ಥ್ಯದ ಸಮನ್ವಯತೆಯೊಂದಿಗೆ ಪೂಜಾ ಭೂಮಾ ಈ ವರ್ಷ ಇಂಟರ್‌ನಲ್ ಸರ್ವೀಸ್ ಆಫೀಸರ್ ಆಗಿದ್ದಾರೆ. ಶುಭಂ ಜ್ಯುವೆಲರ್ಸ್ನ ಮಾಲಕಿಯಾಗಿ ಉದ್ಯಮ ನಿರ್ವಹಿಸುತ್ತಿರುವ ಇವರು, ಓದು ಮತ್ತು ಚಿತ್ರಕಲೆಗಳಲ್ಲಿ ಅದಮ್ಯ ಆಸಕ್ತಿಯನ್ನಿಟ್ಟುಕೊಂಡಿದ್ದಾರೆ. ಕಳೆದ ದಶಕದಿಂದ ಕ್ಲಬ್‌ನೊಂದಿಗೆ ಸಕ್ರಿಯವಾಗಿ ಬೆಸೆದುಕೊಂಡಿರುವ ಇವರ ಸಾಧನೆ ಶ್ಲಾಘನೀಯವಾಗಿದೆ.

ಸಂಪಾದಕಿ ವೀಣಾ ಕಾವೇರಿ: ಲೇಖನ, ಓದು, ಶಿಕ್ಷಣ ಮತ್ತು ಸಂಘಟನಾ ಜೀವನದಲ್ಲಿ ಸಮಾನ ಪ್ರೀತಿ ಹೊಂದಿರುವ ವೀಣಾ ಕಾವೇರಿ ಅವರು ಈ ಬಾರಿ ಕ್ಲಬ್‌ನ ಸಂಪಾದಕರಾಗಿ ಆಯ್ಕೆಗೊಂಡಿದ್ದಾರೆ. ಗಣಿತ ಶಿಕ್ಷಕಿ ಹಾಗೂ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ ಇವರು, ಉತ್ತಮ ಸಂವಹನ ಕೌಶಲ್ಯ ಹಾಗೂ ವೃತ್ತಿಪರ ಮನೋಭಾವನೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನರ್ ವೀಲ್ ಸಂಸ್ಥೆಯು ಮಹಿಳಾ ಸಾಮರ್ಥ್ಯ, ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಉದ್ದೇಶಗಳಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿರುವ ಮಹತ್ವದ ವೇದಿಕೆಯಾಗಿದೆ. ಈ ಹೊಸ ತಂಡದಿಂದ ಗದಗ-ಬೆಟಗೇರಿ ಘಟಕವು ಹೊಸ ಉತ್ಸಾಹ, ನವ ಚೇತನದೊಂದಿಗೆ ಇನ್ನಷ್ಟು ಕ್ರಿಯಾಶೀಲತೆಯತ್ತ ಹೆಜ್ಜೆ ಹಾಕಲಿದೆ.

ಜೈನ ಪರಂಪರೆಯ ಸಂರಕ್ಷಣೆ ಎಲ್ಲರ ಕರ್ತವ್ಯ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: 101 ದೇವಾಲಯ, 101 ಕಲ್ಯಾಣಿಗಳನ್ನು ಹೊಂದಿರುವ ಇತಿಹಾಸ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿ ಜೈನ ಬಸದಿಗಳನ್ನು ಅಭಿವೃದ್ಧಿಪಡಿಸುವುದರೊಂದಿಗೆ ಅವುಗಳ ಸಂರಕ್ಷಣೆಗೆ ಕಂಕಣಬದ್ಧರಾಗಿ ನಿಂತಿರುವ ಪ್ರವಾಸೋದ್ಯಮ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ಶ್ರವಣಬೆಳಗೋಳದ ಚಾರುಕೀರ್ತಿ ಭಟ್ಟಾಚಾರ್ಯ ಪಂಡಿತಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿಯ ಪ್ರಾಚೀನ ಸ್ಮಾರಕಗಳನ್ನು ವೀಕ್ಷಿಸಿ ಮಾತನಾಡಿದ ಶ್ರೀಗಳು, ಈ ಭಾಗದಲ್ಲಿ ಹೆಚ್ಚು ಪ್ರಾಚೀನ ಸ್ಮಾರಕಗಳಿವೆ ಎಂಬುದು ಇತಿಹಾಸದ ಪುಸ್ತಕಗಳಿಂದ ತಿಳಿದಿದ್ದು, ಪ್ರವಾಸೋದ್ಯಮ ಇಲಾಖೆ, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆಯು ಅವುಗಳ ರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ. ಈ ಯುಗದಲ್ಲಿ 6 ಕಾಲಚಕ್ರಗಳು ಬರುತ್ತವೆ. ಅದರಂತೆ ಇದು ಪಂಚಮಕಾಲವಾಗಿದೆ. ಇಲ್ಲಿರುವ ಜೈನ ಬಸದಿಯಲ್ಲಿ ನೇಮಿನಾಥ ತೀರ್ಥಂಕರ ಮೂರ್ತಿಯಿದೆ. ಪ್ರಾಚೀನ ಕಾಲದಿಂದಲೂ 24 ತೀರ್ಥಂಕರರು ಆಳಿದ್ದು ಕೊನೆಯದಾಗಿ ಭಗವಾನ ಮಹಾವೀರರು ರಾಜರಾಗಿದ್ದರು.

ಭೂತಕಾಲದಿಂದ ಭವಿಷ್ಯತ್ ಕಾಲದವರೆಗೂ 24 ತೀರ್ಥಂಕರರು ಇದ್ದೇ ಇರುತ್ತಾರೆ ಎಂದು ಜೈನ ಸಿದ್ದಾಂತಗಳು ಹೇಳುತ್ತವೆ. ಇಲ್ಲಿ ದೊರೆತ ಅವಶೇಷಗಳಲ್ಲಿ ಜೈನ ಶಾಸನಗಳು, ಮೂರ್ತಿಗಳು, ಶಿಲ್ಪ ಕಲೆಗಳಿವೆ. ದೇಶಾದ್ಯಂತ ಜೈನ ಮಂದಿರಗಳು, ಸ್ಮಾರಕಗಳು, ಕಾಣಸಿಗುತ್ತವೆ. ಭಾರತವು ಹಿಂದಿನಿಂದಲೂ ಸಂಪದ್ಭರಿತ ನಾಡಾಗಿದ್ದು, ಇಲ್ಲಿಯ ಶಿಲ್ಪ ಕಲೆ, ಸಂಸ್ಕೃತಿಯು ಜೈನ ರಾಜರ ನೆಲೆಯಾಗಿತ್ತು. ವಿದೇಶೀಯರು ಈ ಜೈನ ಧರ್ಮದ ಮೇಲೆ ಅಕ್ರಮಣ ಮಾಡಿ ನಾಶ ಮಾಡಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಪಂಪ, ರನ್ನ, ಪೊನ್ನ ಮತ್ತು ಚನ್ನ ಕವಿಗಳು ಕನ್ನಡಕ್ಕಾಗಿ ತಮ್ಮ ಅಮೋಘ ಕೊಡುಗೆಯನ್ನು ನೀಡಿದ್ದಾರೆ. ಜೈನರ ಪರಂಪರೆ, ಸಂಸ್ಕೃತಿಯನ್ನು ಸಂರಕ್ಷಣೆ ಮಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಕಳೆದ ವಾರ ಶ್ರವಣಬೆಳಗೋಳಕ್ಕೆ ಭೇಟಿ ನೀಡಿದ್ದ ಪ್ರವಾಸೋದ್ಯಮ ಸಚಿವರು ನಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಇಂಗಿತವನ್ನು ತಿಳಿಸಿದ್ದಾರೆ. ಪ್ರಾಚೀನ ಸ್ಮಾರಕಗಳ ಬಗ್ಗೆ ಅವರಿಗಿರುವ ಕಾಳಜಿ ಹಿರಿದು ಎಂದರು.

ಚಾರುಕೀರ್ತಿ ಭಟ್ಟಾಚಾರ್ಯರು ಹಾಗೂ ವರೂರು ಕ್ಷೇತ್ರದ ಅಮೀನಭಾವಿಯ ಧರ್ಮಸೇನಾ ಪಟ್ಟಾಧ್ಯಕ್ಷರನ್ನು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಸನ್ಮಾನಿಸಿ ಗೌರವಿಸಿದರು. ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕೊಟ್ರೇಶ ವಿಭೂತಿ, ಗದಗ ಜಿಲ್ಲಾ ಜೈನ ಸಮಾಜದ ಅಧ್ಯಕ್ಷ ಬಿ.ಎ. ಕುಲಕರ್ಣಿ, ಅಜ್ಜಪ್ಪಗೌಡ ಪಾಟೀಲ, ಗ್ರಾ.ಪಂ ಮಾಜಿ ಸದಸ್ಯ ಅಣ್ಣಪ್ಪ ಬಸ್ತಿ ಇದ್ದರು.

ಬ್ರಹ್ಮಜಿನಾಲಯ, ನಾಗನಾಥ, ನನ್ನೇಶ್ವರ, ಕಾಶಿ ವಿಶ್ವನಾಥ ಹಾಗೂ ಮುಸ್ಕಿನಭಾವಿಯಲ್ಲಿರುವ ಶಿಲ್ಪಕಲೆ ಹಾಗೂ ಪ್ರಾಚ್ಯಾವಶೇಷಗಳ ವಸ್ತು ಸಂಗ್ರಾಲಯವನ್ನು ವೀಕ್ಷಿಸಿದ ಶ್ರೀಗಳು, ಶಿಲ್ಪಕಲೆಯ ಇತಿಹಾಸವನ್ನು ಇತಿಹಾಸ ತಜ್ಞ ಅ.ದ. ಕಟ್ಟಿಮನಿಯವರಿಂದ ತಿಳಿದುಕೊಂಡು ಸಂತಸಪಟ್ಟರು. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, ಲಕ್ಕುಂಡಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಸ್ಮಾರಕಗಳು, ಪ್ರಾಚ್ಯಾವಶೇಷಗಳು ಹಾಗೂ ಉತ್ಖನನದ ಕುರಿತು ಸರಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು.

DCM ಅಧಿಕಾರ ನನಗೆ ಕೊಟ್ರೆ ಕೇವಲ ಒಂದೇ ವರ್ಷದಲ್ಲಿ ಬೆಂಗಳೂರು ಸರಿ ಮಾಡುತ್ತೇನೆ: ತೇಜಸ್ವಿ ಸೂರ್ಯ ಸವಾಲ್

ಬೆಂಗಳೂರು: ಡಿಸಿಎಂಗೆ ಇರೋ ಅಧಿಕಾರ, ನನ್ನ ಬಳಿ ಇದ್ರೆ ಕೇವಲ ಒಂದೇ ವರ್ಷದಲ್ಲಿ ಸರಿ ಮಾಡುತ್ತೇನೆ ಎಂದು ಡಿಕೆಶಿಗೆ ಸಂಸದ ತೇಜಸ್ವಿ ಸೂರ್ಯ ಸವಾಲ್ ಹಾಕಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮೆಟ್ರೋ ಯೋಜನೆ ವಿಸ್ತರಣೆ ಆದ್ರೆ ಸಾರಿಗೆ ಸಂಚಾರ ಸುಲಭವಾಗಲಿದೆ. 45 ಸಾವಿರ ಕೋಟಿಯ ಸುರಂಗ ರಸ್ತೆ ಯೋಜನೆ ಅಗತ್ಯ ಬೆಂಗಳೂರಿಗೆ ಇಲ್ಲ.

ಡಿಸಿಎಂ ಅವರೇ ಇತ್ತೀಚೆಗೆ ಹೇಳಿದ್ರು, ದೇವರೇ ಕೆಳಗೆ ಬಂದ್ರೂ ಬೆಂಗಳೂರನ್ನ ಸರಿ ಮಾಡಲು ಸಾಧ್ಯವಿಲ್ಲ ಅಂತ. ಬೆಂಗಳೂರಿಗೆ ದೇವರು ಕೆಳಗೆ ಬರಬೇಕಿಲ್ಲ. ಸರಿ ಮಾಡುವ ನಾಯಕತ್ವ, ಇಚ್ಛಾಶಕ್ತಿ ಸಾಕು. ಡಿಸಿಎಂಗೆ ಇರೋ ಅಧಿಕಾರ, ನನ್ನ ಬಳಿ ಇದ್ರೆ ಕೇವಲ ಒಂದೇ ವರ್ಷದಲ್ಲಿ ಸರಿ ಮಾಡುತ್ತೇನೆ ಎಂದು ಡಿಕೆಶಿಗೆ ಸವಾಲ್ ಹಾಕಿದ್ದಾರೆ.

120 ಕಿ. ಮೀ ಬೆಂಗಳೂರು, ಮೈಸೂರು ರಾಷ್ಟ್ರೀಯ ಹೆದ್ದಾರಿಗೆ 8,480 ಕೋಟಿ ರೂ. ಆಗಿದೆ. ಸುರಂಗ ಕೊರೆದು 9.02 ಕಿ. ಮೀ ಅಟಲ್ ಸುರಂಗ ಮಾಡಲು 3,309 ಕೋಟಿ ರೂ. ಆಗಿದೆ. ಬೆಂಗಳೂರಿನ 18 ಕಿ.ಮೀ ಟನಲ್‌ಗೆ 18,500 ಕೋಟಿ ರೂ‌. ವೆಚ್ಚ ಅಂದಾಜಿಸಲಾಗಿದೆ. ಟನೆಲ್ ರಸ್ತೆ ಯೋಜನೆಯಲ್ಲಿ ಭಂಡತನದಿಂದ ಹಗಲು ದರೋಡೆಗೆ ಸರ್ಕಾರ ಇಳಿದಿದೆ.

ಇಲ್ಲಿ ಟೆಂಡರ್​​ಗಳಲ್ಲಿ ಭ್ರಷ್ಟಾಚಾರ 40% ಗಿಂತಲೂ ಮೀರಿದೆ. ಪರ್ಸೆಂಟೇಜ್ 400%, 4000% ಗಿಂತಲೂ ದಾಟಿ ಹೋಗಿದೆ. ಇವರೇನು ಉಕ್ಕಿನಲ್ಲಿ ರಸ್ತೆ ಮಾಡ್ತಿದ್ದಾರಾ? ಸಿಮೆಂಟ್​​ನಲ್ಲಿ ಮಾಡ್ತಿದ್ದಾರಾ? ಚಿನ್ನದಲ್ಲಿ ರಸ್ತೆ ಮಾಡಿದ್ದಾರಾ? ಗೊತ್ತಿಲ್ಲ, ಅವರೇ ಹೇಳಬೇಕು ಎಂದಿದ್ದಾರೆ.

ಚಾಲಕರೇ ಹುಷಾರ್: ಆಟೋ ಹಿಂದೆ ಜಾಹೀರಾತು ಹಾಕಿದ್ರೆ ಬೀಳುತ್ತೆ ದಂಡ!

ಬೆಂಗಳೂರು:- ಆಟೋಗಳ ಮೇಲೆ ಪೋಸ್ಟರ್ ಅಂಟಿಸಿದವರಿಗೆ ಆರ್‌ಟಿಓ ಫೈನ್ ಅಸ್ತ್ರ ಪ್ರಯೋಗ ಮಾಡಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ 5,000 ರೂ. ದಂಡ ಪ್ರಯೋಗ ಮಾಡಿರುವುದು ಆಟೋ ಚಾಲಕರ ಪಾಲಿಗೆ ಬಿಗ್ ಶಾಕ್ ಆಗಿದೆ.

ನಗರದಲ್ಲಿ ಅನೇಕ ಆಟೋಗಳ ಹಿಂದೆ ಕಲರ್ ಕಲರ್ ಜಾಹೀರಾತು ಹಾಕಿ ಓಡಾಡುತ್ತಿದ್ದ ಆಟೋ ಚಾಲಕರಿಗೆ ಆರ್‌ಟಿಓ ಬಿಸಿ ಮುಟ್ಟಿಸಿದೆ. 500 ಹಾಗೂ ಸಾವಿರದಾಸೆಗೆ ಪೋಸ್ಟರ್ ಅಂಟಿಸಿ ಅಧಿಕಾರಿಗಳಿಗೆ ತಗ್ಲಾಕೊಂಡು ಸಾವಿರಾರು ರೂ. ಫೈನ್ ಕಟ್ಟುವಂತಾಗಿದೆ.

ಸಾರಿಗೆ ಇಲಾಖೆಯ ನಿಯಮದ ಪ್ರಕಾರ ಆಟೋಗಳಲ್ಲಿ ಜಾಹೀರಾತು ಪ್ರದರ್ಶನ ಮಾಡುವುದಕ್ಕೆ ವಾರ್ಷಿಕವಾಗಿ ಅನುಮತಿ ಪಡೆದಿರಬೇಕು. ಏನೇ ಜಾಹೀರಾತು ಅಳವಡಿಕೆ ಮಾಡಿದರೂ ವರ್ಷಕ್ಕೆ 5,000 ರೂ. ಕಟ್ಟಬೇಕು. ಹಾಗೊಮ್ಮೆ ಅನುಮತಿ ಪಡೆದಿದ್ದರೆ,

ವರ್ಷವಿಡೀ ಜಾಹೀರಾತು ಅಳವಡಿಕೆಗೆ ಅವಕಾಶ ಇದೆ. ಆದರೆ ಈ ನಿಯಮದ ಬಗ್ಗೆ ನಗರದ ಬಹುತೇಕ ಆಟೋ ಚಾಲಕರಿಗೆ ಅರಿವೇ ಇಲ್ಲ. ಅನುಮತಿ ಪಡೆಯದೇ ಹಾಗೂ ಹಣದ ಆಸೆಗೆ ಆಟೋ ಹಿಂದೆ ಜಾಹೀರಾತು ಪೋಸ್ಟರ್ ಹಾಕಿಸಿ ಆರ್‌ಟಿಓ ಫೈನ್ ಸುಳಿಯಲ್ಲಿ ಚಾಲಕರು ಸಿಲುಕಿಕೊಂಡಿದ್ದಾರೆ.

error: Content is protected !!