Home Blog Page 2

ಗೋಲ್ಡ್ ಪ್ರಿಯರ ಗಮನಕ್ಕೆ: ಚಿನ್ನದ ಬೆಲೆ ಅಲ್ಪ ಏರಿಕೆ; ಗ್ರಾಂ ಎಷ್ಟು ಗೊತ್ತಾ?

0

ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ತುಸು ಏರಿಕೆ ಕಂಡಿದ್ದು, ಗೋಲ್ಡ್ ಪ್ರಿಯರು ಕಂಗಾಲಾಗಿದ್ದಾರೆ.

ಶುದ್ಧ ಚಿನ್ನದ ಬೆಲೆ 12,300 ರೂ ಮುಟ್ಟಿದೆ. ಆಭರಣ ಚಿನ್ನದ ಬೆಲೆ ಗ್ರಾಮ್​ಗೆ 30 ರೂ ಏರಿ, 11,275 ರೂ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,12,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,23,000 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 15,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,12,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 15,200 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 16,600 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 2ಕ್ಕೆ):

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,300 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,275 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,225 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 152 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,300 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,275 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 152 ರೂ.

ಮದುವೆ ಆಗುವಂತೆ ಒತ್ತಾಯಿಸುತ್ತಿದ್ದ ವಿಚ್ಛೇದಿತ ಮಹಿಳೆಯ ಭೀಕರ ಕೊಲೆ: ಆರೋಪಿ ಕುಟ್ಟಿ ಅರೆಸ್ಟ್

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಕೆಜಿಹಳ್ಳಿಯಲ್ಲಿ ತಾಳಿ ಕಟ್ಟುವಂತೆ ಒತ್ತಾಯಿಸುತ್ತಿದ್ದ ವಿಚ್ಛೇದಿತ ಮಹಿಳೆಯನ್ನು 6 ಬಾರಿ ಚಾಕುವಿನಿಂದ ಇರಿದು ಪ್ರಿಯಕರ ಹತ್ಯೆ ಮಾಡಿರುವ ಘಟನೆ ಜರುಗಿದೆ.

ರೇಣುಕಾ ಹತ್ಯೆಗೀಡಾದ ಮಹಿಳೆ. ಅಂಬೇಡ್ಕರ್ @ ಕುಟ್ಟಿ ಕೊಲೆಗೈದ ಆರೋಪಿ. ಈತ ಫೈನಾನ್ಸ್ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಮೃತ ಮಹಿಳೆಗೆ ಮದುವೆಯಾಗಿ ಒಂದು ಮಗುವಿತ್ತು. ಆದರೆ ಗಂಡನೊಂದಿಗೆ ವಿಚ್ಛೇದನ ಪಡೆದಿದ್ದರು. ಕೆಜಿ ಹಳ್ಳಿಯ ಪಿಳ್ಳಣ್ಣ ಗಾರ್ಡನ್‌ನಲ್ಲಿ ಮಗುವಿನೊಂದಿಗೆ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಈ ನಡುವೆ ಮೃತ ರೇಣುಕಾಗೆ ಅದೇ ಏರಿಯಾದಲ್ಲಿದ್ದ ಆರೋಪಿ ಕುಟ್ಟಿ ಪರಿಚಯವಾಗಿತ್ತು. ಬಳಿಕ ಇಬ್ಬರ ನಡುವೆ ಪ್ರೀತಿಯೂ ಬೆಳೆದಿತ್ತು.

ಕೆಲ ದಿನಗಳ ಬಳಿಕ ಮೃತ ರೇಣುಕಾ ಕುಟ್ಟಿಯನ್ನು ಮದುವೆಯಾಗು ಎಂದು ದುಂಬಾಲು ಬಿದ್ದಿದ್ದಳು. ನೀನು ಟೈಮ್ ಪಾಸ್‌ಗಾಗಿ ಪ್ರೀತಿ ಮಾಡುವುದೆಲ್ಲ ಬೇಡ, ಮದುವೆಯಾಗು ಎನ್ನುತ್ತಿದ್ದಳಂತೆ. ಇದರಿಂದ ಕುಟ್ಟಿ ರೊಚ್ಚಿಗೆದ್ದಿದ್ದ. ಘಟನೆಯಾದ ದಿನ ರೇಣುಕಾ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಳು. ಈ ವೇಳೆ ಕುಟ್ಟಿ ರೇಣುಕಾಳನ್ನು ತಡೆದು, ನಿನ್ನ ಜೊತೆ ಮಾತಾಡಬೇಕು ಬಾ ಎಂದು ಪಿಳ್ಳಣ್ಣ ಗಾರ್ಡನ್‌ನ ಸರ್ಕಾರಿ ಶಾಲೆಯ ಬಳಿ ಕರೆದುಕೊಂಡು ಹೋಗಿದ್ದ. ಅಲ್ಲಿ 6 ಬಾರಿ ಚಾಕುವಿನಿಂದ ಇರಿದು ಸಾರ್ವಜನಿಕವಾಗಿ ಹತ್ಯೆ ಮಾಡಿ, ಪರಾರಿಯಾಗಿದ್ದಾನೆ.

ಕೂಡಲೇ ಸ್ಥಳೀಯರು ರೇಣುಕಾಳನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದರೂ ಕೂಡ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಕೆಜೆ ಹಳ್ಳಿ ಪೊಲೀಸರು ಆರೋಪಿ ಕುಟ್ಟಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸ್ತಿದ್ದಾರೆ.

ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿ ಕಾಲು ಜಾರಿ ಬಿದ್ದ ಬಾಲಕಿ: ರಕ್ಷಣೆಗೆ ಹೋದ ನಾಲ್ವರು ಮಕ್ಕಳು ನೀರುಪಾಲು

0

ಮಂಡ್ಯ:- ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯ ಕೊಪ್ಪಲು ಬಳಿಯ ನಾಲೆಯಲ್ಲಿ ಬಟ್ಟೆ ತೊಳೆಯುವಾಗ ಕಾಲು ಜಾರಿ ಬಿದ್ದ ಬಾಲಕಿ ರಕ್ಷಣೆಗೆ ಮುಂದಾದ ನಾಲ್ವರು ಮಕ್ಕಳು ನೀರುಪಾಲಾದ ದಾರುಣ ಘಟನೆ ಜರುಗಿದೆ.

ನಿನ್ನೆ ಓರ್ವ ಬಾಲಕಿಯನ್ನು ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ 14 ವರ್ಷದ ಆಯಿಷಾ ಮೃತಪಟ್ಟಿದ್ದಾಳೆ. ಇಂದು 13 ವರ್ಷದ ಆಫ್ರಿನ್ ಮೃತದೇಹ ಪತ್ತೆಯಾಗಿದೆ. ಇನ್ನೂ ಇಬ್ಬರು ಮಕ್ಕಳು ಹನಿ (14) ಮತ್ತು ಥರ್ಬಿಮ್ (13) ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ.

ಮೃತರು ಮತ್ತು ನಾಪತ್ತೆಯಾದವರು ಮೈಸೂರಿನ ಶಾಂತಿನಗರದ ಮದರಸದ ವಿದ್ಯಾರ್ಥಿಗಳು. 15 ಮಕ್ಕಳು ಮತ್ತು ಮೂವರು ಸಿಬ್ಬಂದಿ ಪ್ರವಾಸಕ್ಕಾಗಿ ಮಂಡ್ಯಕ್ಕೆ ಬಂದಿದ್ದರು. ಮಕ್ಕಳು ನಾಲೆಯಲ್ಲಿ ಆಟವಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ವರುಣನ ಕೊಂಚ ರಿಲೀಫ್: ಕರ್ನಾಟಕದಲ್ಲಿ ಮುಂದುವರಿದ ಒಣ ಹವೆಯ ವಾತಾವರಣ!

0

ಬೆಂಗಳೂರು:- ಕರ್ನಾಟಕದಲ್ಲಿ ವರುಣ ರಿಲೀಫ್ ಕೊಟ್ಟಿದ್ದು, ರಾಜ್ಯದಲ್ಲಿ ಒಣ ಹವೆ ಮುಂದುವರಿದಿದೆ.

ಕರಾವಳಿಯ ಜಿಲ್ಲೆಗಳಲ್ಲಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಒಣ ಹವೆ ಇರಲಿದೆ. ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಸಂಪೂರ್ಣವಾಗಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಮಳೆ ಸಾಧ್ಯತೆ ತೀರಾ ವಿರಳವಾಗಿರಲಿದೆ. ಕರಾವಳಿಯಲ್ಲೂ ಸಧ್ಯಕ್ಕೆ ವರುಣಾರ್ಭಟ ನಿಂತಿದ್ದು, ಮಳೆಯ ಸಾಧ್ಯತೆ ಕಡಿಮೆಯಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಉಳಿದ ಭಾಗಗಳಂತೆ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಿಗ್ನಲ್ ನಲ್ಲಿ ನಿಂತಿದ್ದ ಬೈಕ್ ಗೆ ಆಂಬುಲೆನ್ಸ್ ಡಿಕ್ಕಿ: ಸ್ಥಳದಲ್ಲೇ ಗಂಡ ಹೆಂಡತಿ ದುರ್ಮರಣ

0

ಬೆಂಗಳೂರು:- ಸಿಗ್ನಲ್ ನಲ್ಲಿ ನಿಂತಿದ್ದ ಬೈಕ್ ಗೆ ಆಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಗಂಡ ಹೆಂಡತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಶಾಂತಿನಗರದ ಡಬಲ್ ರೋಡ್‌ನ ಸಂಗೀತ ಸಿಗ್ನಲ್ ಬಳಿ ಜರುಗಿದೆ.

ಪತಿ ಇಸ್ಮಾಯಿಲ್ (40) ಮತ್ತು ಪತ್ನಿ ಸಮೀನ್ ಬಾನು ಮೃತರು. ಘಟನೆಯಲ್ಲಿ ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ರೆಡ್‌ ಸಿಗ್ನಲ್‌ ಇದ್ದ ಕಾರಣ ಸವಾರ ಬೈಕ್‌ ನಿಲ್ಲಿಸಿದ್ದರು. ರಿಚ್ಮಂಡ್ ಸರ್ಕಲ್ ಕಡೆಯಿಂದ ವೇಗವಾಗಿ ಬಂದ ಅಂಬುಲೆನ್ಸ್‌ ಹಿಂದಿನಿಂದ ಬೈಕ್‌ಗೆ ಗುದ್ದಿದೆ. ಬೈಕ್‌ ಸಮೇತ 200 ಮೀಟರ್‌ ಎಳೆದೊಯ್ದಿದೆ. ಕೊನೆಗೆ ಪೊಲೀಸ್ ಚೌಕ್ ಹಾಗೂ ಸಿಗ್ನಲ್ ಕಂಡ್ರೋಲ್ ಯುನಿಟ್‌ಗೆ ಗುದ್ದಿ ಅಂಬುಲೆನ್ಸ್‌ ನಿಂತಿದೆ. ಪರಿಣಾಮ ಇಸ್ಮಾಯಿಲ್ (40) ಮತ್ತು ಪತ್ನಿ ಸಮೀನ್ ಬಾನು ಸಾವನ್ನಪ್ಪಿದ್ದಾರೆ.

ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್ ಚಾಲಕನಿಂದ ಅಪಘಾತವಾಗಿದೆ. ಅಂಬುಲೆನ್ಸ್ ಒಳಗೆ ಯಾರೂ ರೋಗಿ ಇರಲಿಲ್ಲ. ಆದರೂ, ಅತಿವೇಗವಾಗಿ ಬಂದು ಸಿಗ್ನಲ್ ಇದ್ದರೂ ಬ್ರೇಕ್ ಹಾಕದೇ ಅಪಘಾತವೆಸಗಿದ್ದಾನೆ. ಅಪಘಾತ ಸ್ಥಳದಲ್ಲಿ ಸ್ಥಳೀಯರ ಆಕ್ರೋಶ ಹೊರಹಾಕಿ ಅಂಬುಲೆನ್ಸ್‌ ಅನ್ನು ಪಲ್ಟಿ ಹೊಡೆಸಿದ್ದಾರೆ. ಈ ಏರಿಯಾದಲ್ಲಿ ಅಂಬುಲೆನ್ಸ್ ಅಪಘಾತ ಎರಡನೇ ಸಲ ಆಗಿರೋದು. ಯಾರು ಕೂಡ ಇಲ್ಲದಿದ್ದರೂ ಸೈರನ್ ಹಾಕಿಕೊಂಡು ಬರ್ತಾರೆ. ಇವರಿಂದ ಇಬ್ಬರ ಪ್ರಾಣ ಹೋಗಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಅಂಬುಲೆನ್ಸ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಕನ್ನಡ ಈ ನೆಲದ ಸಂಸ್ಕೃತಿ, ಶಕ್ತಿ: ಸಂತೋಷ ಹಿರೇಮಠ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ಶನಿವಾರ 70ನೇ ವರ್ಷದ ರಾಜ್ಯೋತ್ಸವವನ್ನು ರಾಷ್ಟ್ರ ದ್ವಜಾರೋಹಣ ನೆರವೇರಿಸಿ, ತಾಯಿ ಭುವನೇಶ್ವರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

ತಹಸೀಲ್ದಾರ ಸಂತೋಷ ಹಿರೇಮಠ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಸಾವಿರಾರು ವರ್ಷಗಳ ಭವ್ಯ ಇತಿಹಾಸ ಕನ್ನಡ ಭಾಷೆಯಾಗಿದೆ. ಕನ್ನಡಕ್ಕಿರುವ ಅಗಾಧ ಶಕ್ತಿ ಮತ್ತೊಂದು ಭಾಷೆಯಲ್ಲಿ ಕಾಣಲು ಸಾಧ್ಯವಾಗುವುದಿಲ್ಲ. ಕನ್ನಡ ಎಂಬುದು ಬರೀ ಭಾಷೆಯಲ್ಲ, ಅದು ಈ ನೆಲದ ಸಂಸ್ಕೃತಿ, ಸಂಸ್ಕಾರ, ಪರಂಪರೆ ಸಾರುವ ಶಕ್ತಿಯಾಗಿದೆ. ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ, ಸ್ವಾಭಿಮಾನ ಬೆಳೆದು ಬರಬೇಕು. ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಕನ್ನಡದ ಬಗ್ಗೆ ಗೌರವಾಭಿಮಾನ ಮೂಡಿಸುವಲ್ಲಿ ಪಾಲಕ, ಶಿಕ್ಷಕ ಮತ್ತು ಕನ್ನಡಪರ ಸಂಘಟನೆಗಳ ಜವಾಬ್ದಾರಿ ಹೆಚ್ಚಿದೆ. ಯುವ ಜನತೆ ಕನ್ನಡ ನಾಡನ್ನು ಕಾಪಾಡಲು ಇಂದಿನಿಂದಲೇ ಪಣ ತೊಡಬೇಕು. ಕೇವಲ ಬಾಯಿ ಮಾತಿನಿಂದ ಕನ್ನಡ ಉಳಿಸಲು ಸಾಧ್ಯವಿಲ್ಲ. ಕನ್ನಡ ನಮ್ಮ ಉಸಿರಾಗಬೇಕು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಸಾಹಿತಿ ಈಶ್ವರ ಮೆಡ್ಲೇರಿ ಉಪನ್ಯಾಸ ನೀಡಿ, ಎರಡುವರೆ ಸಾವಿರ ವರ್ಷಗಳ ಭವ್ಯ ಇತಿಹಾಸದ ಕನ್ನಡ ಭಾಷೆಗೆ ಸಮನಾದ ಭಾಷೆ ಮತ್ತೊಂದಿಲ್ಲ. ಭಾರತಮಾತೆಯ ಮುಕುಟಮಣಿಯಾಗಿ ಕರ್ನಾಟಕದ ಕೀರ್ತಿ ಎಂದಿಗೂ ರಾರಾಜಿಸುತ್ತದೆ. ಕನ್ನಡ ಸಾಹಿತ್ಯಕ್ಕೆ ಲಕ್ಷ್ಮೇಶ್ವರದ ಕೊಡುಗೆ ಅಪಾರವಾಗಿದ್ದು, ಇಲ್ಲಿನ ಒಂದೊಂದು ಭಾಗವೂ ಒಂದು ಇತಿಹಾಸವನ್ನು ಸಾರುತ್ತಿವೆ ಎಂದರು.

ಈ ವೇಳೆ ಪುರಸಭೆ ಸದಸ್ಯ ರಾಜಣ್ಣ ಕುಂಬಿ, ಪ್ರಕಾಶ ಕೊಂಚಿಗೇರಿಮಠ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ರಾಮಣ್ಣ ಲಮಾಣಿ, ರಫೀಕ್ ಕಲಬುರ್ಗಿ, ಮುಖ್ಯಾಧಿಕಾರಿ ಮಹಾಂತೇಶ್ ಬೀಳಗಿ, ತಾ.ಪಂ ಇಒ ಕೃಷ್ಣಪ್ಪ ಧರ್ಮರ, ಪಿಎಸ್‌ಐ ನಾಗರಾಜ ಗಡಾದ, ಹೆಸ್ಕಾಂ ಎಇಇ ಆಂಜನಪ್ಪ, ಎಸ್.ಕೆ. ಜಲರಡ್ಡಿ, ಚಂದ್ರಶೇಖರ ನರಸಮ್ಮನವರ, ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪೂರ, ಕಂದಾಯ ಅಧಿಕಾರಿ ಎಂ.ಎ. ನದಾಫ್, ಶಿರಸ್ತೇದಾರ ಜಮೀರ್ ಮನಿಯಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಇದ್ದರು.

ಶಿಕ್ಷಕರಾದ ಉಮೇಶ ನೇಕಾರ, ಸತೀಶ ಬೋಮಲೆ, ರಾಘವೇಂದ್ರ ಜೋಶಿ, ಎನ್.ಎ. ಮುಲ್ಲಾ ಕಾರ್ಯಕ್ರಮ ನಿರ್ವಹಿಸಿದರು.

ಇದೇ ಸಂದರ್ಭದಲ್ಲಿ ಸಾಧಕರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. ಇತ್ತೀಚೆಗೆ ರಾಜ್ಯಮಟ್ಟದ ಕಿತ್ತೂರು ಚನ್ನಮ್ಮ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಸಾಹಿತಿ ಲಲಿತಕ್ಕ ಕೆರಿಮನಿ ಮತ್ತು ಕೆಯುಡಬ್ಲ್ಯೂಜೆಯಿಂದ ನೀಡಲಾಗುವ ರಾಜ್ಯಮಟ್ಟದ ಅತ್ಯುತ್ತಮ ಗ್ರಾಮಾಂತರ ವರದಿಗೆ ನೀಡುವ ಜಿ. ನಾರಾಯಣಸ್ವಾಮಿ ಪ್ರಶಸ್ತಿ ಪುರಸ್ಕೃತರಾಗಿರುವ ಪತ್ರಕರ್ತ ದಿಗಂಬರ ಪೂಜಾರ ಅವರನ್ನು ಗೌರವಿಸಲಾಯಿತು.

ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳಿಸಿ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕನ್ನಡ ನಮ್ಮ ಮಾತೃಭಾಷೆಯಾಗಿದ್ದು, ಕನ್ನಡ ಭಾಷೆ ಉಳಿಸಿ-ಬೆಳೆಸಲು ಕನ್ನಡದ ಬಗೆಗಿನ ಆಸಕ್ತಿ ಹೆಚ್ಚಾಗಬೇಕು ಎಂದು ಶಿಕ್ಷಕಿ ವಿ.ಎಂ. ಕಂಠಿ ಹೇಳಿದರು.

ಅವರು ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 1ರಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ತಾಯಿಗೆ ಇರುವಷ್ಟೇ ಮಹತ್ವ ನಮ್ಮ ಕನ್ನಡ ಭಾಷೆಗೆ ಇರುವುದರಿಂದ, ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಬೇಕು. ಕನ್ನಡ ಶಾಲೆಯಲ್ಲಿ ನುರಿತ, ಅನುಭವಿ ಶಿಕ್ಷಕರ ವೃಂದವಿದ್ದು, ಸರ್ಕಾರ ಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ರೂಪಿಸುವ ಮೂಲಕ ಪ್ರತಿಯೊಬ್ಬರೂ ಶಿಕ್ಷಣ ಪಡೆಯಲು ಶ್ರಮಿಸುತ್ತಿದೆ ಎಂದರು.

ಶಾಲಾ ಪ್ರಧಾನಗುರು ಪಿ.ಬಿ. ಕೆಂಚನಗೌಡರ, ಎಂ.ಎ. ಮೆಗಲಮನಿ, ಎಂ.ಎ. ಕೊಪ್ಪಳ, ಕೆ.ಎಂ. ಹೆರಕಲ್, ಮಂಜುನಾಥ ಕಲ್ಯಾಣಮಠ, ವೀಣಾ ಟಿ., ಎಸ್.ಎಚ್. ಉಪ್ಪಾರ, ಎಚ್.ಆರ್. ಭಜಂತ್ರಿ, ಎಸ್.ವಿ. ಹಿರೇಮಠ, ಎಸ್.ಡಿ. ಪಂಡಿತ, ರೇಣುಕಾ ಪರ್ವತಗೌಡರ, ಶಭಾನಾ ಡಾಲಾಯತ್, ರಾಧಾ ಬಾತಾಖಾನಿ, ಕವಿತಾ ಬಿನ್ನಾಳ ಇದ್ದರು.

ಸೈನಿಕ ಸಮುದಾಯ ಭವನ, ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭ ಇಂದು

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ನೂತನ ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭವು ನವೆಂಬರ್ 2ರಂದು ಮುಂಜಾನೆ 11 ಗಂಟೆಗೆ ಮುಳಗುಂದ ರಸ್ತೆಯ ಆದಿತ್ಯ ನಗರದಲ್ಲಿ ಜರುಗಲಿದೆ ಎಂದು ಸಂಘದ ಅಧ್ಯಕ್ಷ, ನಿವೃತ್ತ ಸೇನಾಧಿಕಾರಿ ಸುಬೇದಾರ್ ಗೂಳಯ್ಯ ಮಾಲಗಿತ್ತಿಮಠ ಹೇಳಿದರು.

ಸಮುದಾಯ ಭವನದಲ್ಲಿ ಈ ಕುರಿತು ಜರುಗಿದ ಉದ್ಘಾಟನಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ವಿವರಣೆ ನೀಡಿದರು.

ಸಾನಿಧ್ಯವನ್ನು ಓಂಕಾರೇಶ್ವರ ಹಿರೇಮಠದ ಪೂಜ್ಯ ಫಕೀರೇಶ್ವರ ಪಟ್ಟಾಧ್ಯಕ್ಷರು ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸಮುದಾಯ ಭವನವನ್ನು ಉದ್ಘಾಟಿಸುವರು. ಘನ ಅಧ್ಯಕ್ಷತೆಯನ್ನು ನಿವೃತ್ತ ವಾಯು ಸೇನಾಧಿಕಾರಿ ಏರ್ ಕಮಾಂಡರ್ ಸಿ.ಎಸ್. ಹವಲ್ದಾರ ವಹಿಸುವರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಿ.ಬಿ. ಮಾಲಗಿತ್ತಿಮಠ ವಹಿಸುವರು.

ಮುಖ್ಯ ಅತಿಥಿಗಳಾಗಿ ವಿ.ಪ ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಸಚೇತಕ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಆಗಮಿಸುವರು. ವಿಶೇಷ ಆಹ್ವಾನಿತರಾಗಿ ಗಣ್ಯರಾದ ಅರವಿಂದ ಶಿಗ್ಗಾಂವಿ, ಸುಧೀಂದ್ರ ಇಟ್ನಾಳ, ಭುವನ್ ಖರೆ, ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಟಿ.ಎಸ್. ಪಾಟೀಲ, ಬಸವರಾಜ ನಿಂಗನಗೌಡರ, ಶಿವಲೀಲಾ ಭಾವಿಕಟ್ಟಿ ಆಗಮಿಸುವರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಕಾರ್ಯದರ್ಶಿ ಸಿ.ಜಿ. ಸೊನ್ನದ, ಖಜಾಂಚಿ ಎಸ್.ಎಫ್. ಹೊನ್ನಪ್ಪನವರ, ಸಂಘಟನಾ ಕಾರ್ಯದರ್ಶಿ ಈರಣ್ಣ ತಳ್ಳಿಕೇರಿ, ಮಹಮ್ಮದ್ ಹನೀಫ್ ಶೇಖಬಾಯಿ, ಲಲಿತಾ ಕುರಹಟ್ಟಿ, ಶರಣಪ್ಪ ಸರ್ವಿ, ವೀರಪ್ಪ ಬಿಂಗಿ, ಶಿವಲೀಲಾ ಭಾವಿಕಟ್ಟಿ, ಕೆ.ಎಸ್. ಹಿರೇಮಠ, ಎಸ್.ಎಸ್. ವಡ್ಡಿಣ, ಬಸವನಗೌಡ ಪಾಟೀಲ ಮುಂತಾದವರಿದ್ದರು.

ಅತಿಥಿಗಳಾಗಿ ಅನುಸೂಯಾ ಬೆಟಗೇರಿ, ಕಿರಣಕುಮಾರ ಕೋಪರ್ಡೆ, ಶಾಂತವ್ವ ಭಜಂತ್ರಿ, ವಿದ್ಯಾ ಕೆ., ಜಿ.ಸಿ. ರೇಶ್ಮಿ, ಕೇಶವ ದೇವಾಂಗ ಆಗಮಿಸುವರು. ಮಾಜಿ ಸೈನಿಕರ ಸಂಘಟನೆಯೊಂದು ಈ ರೀತಿಯ ಸೈನಿಕ ತರಬೇತಿ ಕೇಂದ್ರ/ಸಮುದಾಯ ಭವನ ನಿರ್ಮಿಸಿರುವುದು ರಾಜ್ಯದಲ್ಲಿಯೇ ಪ್ರಥಮ ಎಂಬ ಹೆಗ್ಗಳಿಕೆಗೆ ಗದಗ ಜಿಲ್ಲೆ ಪಾತ್ರವಾಗಿದೆ. ಈ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇತರ ಚುನಾಯಿತ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ಜೊತೆಗೆ ಮಾಜಿ ಸೈನಿಕರು, ವೀರನಾರಿಯರು ಉದಾರ ದೇಣಿಗೆ ನೀಡಿದ್ದಾರೆ ಎಂದು ಜಿ.ಬಿ. ಮಾಲಗಿತ್ತಿಮಠ ಮಾಹಿತಿ ನೀಡಿದರು.

ಕನ್ನಡದ ಬಗ್ಗೆ ಹೆಮ್ಮೆ ಬೆಳೆಸಿಕೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ಲಕ್ಷ್ಮೇಶ್ವರ ತಾಲೂಕು ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಸ್.ಎಫ್. ಆದಿ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕನ್ನಡ ನಾಡು-ನುಡಿಯ ಬಗ್ಗೆ ಎಲ್ಲರೂ ಹೆಮ್ಮೆ ಮತ್ತು ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ ನಮ್ಮ ಹೃದಯಭಾಷೆಯಾಗಿರಲಿ; ತೋರಿಕೆಗಾಗಿ ಕನ್ನಡದ ಅಭಿಮಾನ ಬೇಡ. ಕನ್ನಡಕ್ಕೆ ಅಪಾರ ಮಹತ್ವವಿದ್ದು, ಅನೇಕ ಜ್ಞಾನಪೀಠ ಪ್ರಶಸ್ತಿಗಳನ್ನು ಕನ್ನಡ ಸಾಹಿತಿಗಳು ಪಡೆದುಕೊಂಡಿದ್ದಾರೆ. ಅನೇಕ ಮಹನೀಯರು ಕನ್ನಡ ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಕನ್ನಡ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪಣತೊಡಬೇಕು,” ಎಂದು ಹೇಳಿದರು.

ಕರವೇ ತಾಲೂಕಾಧ್ಯಕ್ಷ ಲೋಕೇಶ ಸುತಾರ ಮಾತನಾಡಿ, “ಕನ್ನಡ ರಕ್ಷಣಾ ವೇದಿಕೆಯವರು ಕನ್ನಡ, ನಾಡು-ನುಡಿ, ಜಲ-ನೆಲಕ್ಕಾಗಿ ಸದಾ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ನಮ್ಮವರೇ ಶತ್ರುಗಳಾಗಿ ಪರಿಣಮಿಸುತ್ತಿದ್ದಾರೆ. ಇಂಗ್ಲಿಷ್ ವ್ಯಾಮೋಹದಿಂದ ಕನ್ನಡವನ್ನು ಮರೆತಿರುವುದು ನೋವುಂಟುಮಾಡುವ ವಿಷಯ. ಕನ್ನಡ ನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮನಾಗಿದ್ದು, ಆಡಳಿತದಲ್ಲಿ ಕನ್ನಡ ಕಡ್ಡಾಯವಾಗಿ ಜಾರಿಗೆ ಬರಬೇಕೆನ್ನುವದು ಕರವೇ ಬೇಡಿಕೆಯಾಗಿದೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರವೀಣ ಗಾಣಿಗೇರ, ಗಂಗಾಧರ ಕರ್ಜೆಕಣ್ಣವರ, ಈರಣ್ಣ ಶಿಗ್ಲಿ, ಅರುಣ ಮೆಕ್ಕಿ, ಗಂಗಾಧರ ಕೊಂಚಿಗೇರಿಮಠ, ಆದೇಶ ಸವಣೂರ, ಆಶೀಪ್ ಗುತ್ತಲ್, ಜಾಹೀರ್ ಮೊಮಿನ್, ವೀರೇಶ ಸಾಸಲವಾಡ, ಕುಮಾರ ಕಣವಿ, ಪ್ರವೀಣ ಮುದಗಲ್, ವುಳವೇಶ ಪಾಟೀಲ, ವಿನಯ ಹಿರೇಮಠ, ಸಾವಿತ್ರಿ ಅತ್ತಿಗೇರಿ, ವಿಜಯಕುಮಾರ ಮುಂತಾದವರು ಉಪಸ್ಥಿತರಿದ್ದರು.

ಕೆಎಸ್‌ಆರ್‌ಟಿಸಿ ಕನ್ನಡದ ತೇರು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಲಕ್ಷ್ಮೇಶ್ವರ ಸಾರಿಗೆ ಘಟಕದ ಹಲವು ಬಸ್ಸುಗಳು ಹಳದಿ-ಕೆಂಪು ಬಣ್ಣದೊಂದಿಗೆ ಅಲಂಕಾರಗೊಂಡಿದ್ದವು. ವಿಶೇಷವಾಗಿ ಘಟಕದ ಚಾಲಕ ಎನ್.ಜಿ. ಬೇನಾಳ ಅವರು ತಾವು ಚಾಲನೆ ಮಾಡುವ ಬಸ್ಸನ್ನು ಸಂಪೂರ್ಣವಾಗಿ ಕನ್ನಡದ ತೇರನ್ನಾಗಿಸಿದ್ದರು.

ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಕೆಂಪು-ಹಳದಿ ಬಲೂನ್, ರಿಬ್ಬನ್, ಬಾಳೆಕಂಬ ತಳಿರು-ತೋರಣಗಳಿಂದ ಸಿಂಗರಿಸಿದ್ದರು. ಬಸ್‌ನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ, ಕನ್ನಡ ಕವಿಗಳ, ಸಾಹಿತಿಗಳ ಭಾವಚಿತ್ರಗಳು, ಅಲ್ಲದೆ ಬಸ್‌ನ ಸೀಟುಗಳನ್ನು ಕೆಂಪು-ಹಳದಿ ಬಣ್ಣ ಕಾಣುವಂತೆ ಸಿಂಗರಿಸಿದ್ದರು. ಬಸ್ಸಿನ ಅಲಂಕಾರಕ್ಕೆ ಕುಟುಂಬಸ್ಥರೂ ಸಹಕಾರ ನೀಡಿದರು.

ಚಾಲಕರ ಈ ಕನ್ನಡ ಪ್ರೀತಿಗೆ ಘಟಕ ವ್ಯವಸ್ಥಾಪಕರಾದ ಸವಿತಾ ಆದಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಯಾಣಿಕರು ಬಸ್ಸಿನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಘಟಕದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಡಿ.ಎಚ್. ಸೊರಟೂರ ಕನ್ನಡ ಗೀತೆಗಳನ್ನು ಹಾಡಿ ಮನರಂಜಿಸಿದರು.

error: Content is protected !!