Home Blog Page 3

ಪಿಯು ಉಪನ್ಯಾಸಕರ ಸಂಘಕ್ಕೆ ಮತ್ತೆ ಎಸ್.ಎಸ್. ಸೋಮಣ್ಣವರ ಸಾರಥ್ಯ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವಿಶ್ವಾಸವನ್ನು ಮತ್ತೊಮ್ಮೆ ಗಳಿಸಿರುವ ಎಸ್.ಎಸ್. ಸೋಮಣ್ಣವರ ನೇತೃತ್ವದ ತಂಡ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಗದಗ ಜಿಲ್ಲಾ ಘಟಕದ 2026-31ನೇ ಸಾಲಿನ ಅವಧಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ.

ಜೂನ್ 2ರಂದು ನಡೆದ ಚುನಾವಣೆಯಲ್ಲಿ ಎಲ್ಲಾ ಹುದ್ದೆಗಳಿಗೂ ಅವಿರೋಧ ಆಯ್ಕೆ ನಡೆದಿದ್ದು, ಈ ಕುರಿತು ಜಿಲ್ಲಾ ಚುನಾವಣಾಧಿಕಾರಿ ಎಸ್.ಎಸ್. ಚವಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಾಗಡಿ ಪ್ರಭಾರಿ ಪ್ರಾಚಾರ್ಯ ಎಸ್.ಎಸ್. ಸೋಮಣ್ಣವರ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳಾಗಿ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಎಂ.ಎಸ್. ಕೊಕ್ಕರಗುಂದಿ (ಸರ್ಕಾರಿ ಪದವಿ ಪೂರ್ವ ಕಾಲೇಜು, ಲಕ್ಷ್ಮೇಶ್ವರ), ಜಿಲ್ಲಾ ಉಪಾಧ್ಯಕ್ಷೆ (ಮಹಿಳಾ ಮೀಸಲು)ಯಾಗಿ ಅಮನ್ ಗುಳೇದಗುಡ್ಡ (ಮುನ್ಸಿಪಲ್ ಪದವಿ ಪೂರ್ವ ಕಾಲೇಜು, ಗದಗ), ಜಿಲ್ಲಾ ಖಜಾಂಚಿಯಾಗಿ ಎಂ.ಪಿ. ಕುಲಕರ್ಣಿ (ಸರ್ಕಾರಿ ಪದವಿ ಪೂರ್ವ ಕಾಲೇಜು, ನರಗುಂದ), ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಎಫ್.ಎಸ್. ಬೆಳವಗಿ (ಎಸ್.ಎಚ್.ಎಸ್. ಪದವಿ ಪೂರ್ವ ಕಾಲೇಜು, ಪೇಠಾಲೂರ), ಜಿಲ್ಲಾ ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಹನುಮರೆಡ್ಡಿ (ಎನ್.ಎಫ್.ಎಂ. ಡಬಾಲಿ ಪದವಿ ಪೂರ್ವ ಕಾಲೇಜು, ಶಿರಹಟ್ಟಿ), ಜಿಲ್ಲಾ ಕಾರ್ಯದರ್ಶಿಯಾಗಿ ಎನ್.ಟಿ. ಮಳೋದೆ (ಸರ್ಕಾರಿ ಪದವಿ ಪೂರ್ವ ಕಾಲೇಜು, ನಿಡಗುಂದಿ), ಜಿಲ್ಲಾ ಜಂಟಿ ಕಾರ್ಯದರ್ಶಿಯಾಗಿ ಎಸ್.ಎಸ್. ನರಗುಂದ (ಪ್ರಾಚಾರ್ಯರು, ಎಸ್.ವಿ. ಪದವಿ ಪೂರ್ವ ಕಾಲೇಜು, ಬೆಳವಣಕಿ) ಹಾಗೂ ಜಿಲ್ಲಾ ಸಂಚಾಲಕರಾಗಿ ಎಸ್.ಎಸ್. ತೋಗುಣಸಿ (ಶ್ರೀ ಗುರು ಮಹಾಂತೇಶ ಪದವಿ ಪೂರ್ವ ಕಾಲೇಜು, ಸೂಡಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ತಂಡವು ಉಪನ್ಯಾಸಕರ ಹಿತಾಸಕ್ತಿ ರಕ್ಷಣೆ, ಶೈಕ್ಷಣಿಕ ಗುಣಮಟ್ಟ ವೃದ್ಧಿ ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂಬ ವಿಶ್ವಾಸವನ್ನು ಸದಸ್ಯರು ವ್ಯಕ್ತಪಡಿಸಿದ್ದಾರೆ.

ಅವಿರೋಧವಾಗಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ವಿವಿಧ ಶಿಕ್ಷಕರ ಸಂಘಟನೆಗಳು, ಶಿಕ್ಷಣ ತಜ್ಞರು ಹಾಗೂ ಉಪನ್ಯಾಸಕರು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.

ಉಪನ್ಯಾಸಕರ ಹಿತಾಸಕ್ತಿ ಮತ್ತು ಶಿಕ್ಷಣದ ಗುಣಮಟ್ಟ ವೃದ್ಧಿಗೆ ಸಂಘದ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಾಗುವುದು.” 

ಎಸ್.ಎಸ್. ಸೋಮಣ್ಣವರ

ಜಿಲ್ಲಾ ಅಧ್ಯಕ್ಷರು

ಗದಗ ಹಸಿರೀಕರಣಕ್ಕೆ 30 ಸಾವಿರ ಸಸಿಗಳ ಸಜ್ಜು

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕಿನಲ್ಲಿ ಹಸಿರು ಪರಿಸರ ನಿರ್ಮಾಣದ ಮಹತ್ವಾಕಾಂಕ್ಷಿ ಗುರಿಯೊಂದಿಗೆ ಗದಗ ಸಾಮಾಜಿಕ ಅರಣ್ಯ ವಲಯ ವ್ಯಾಪ್ತಿಯ ಬಿಂಕದಕಟ್ಟಿ ಹೈಟೆಕ್ ಸಸ್ಯ ಕ್ಷೇತ್ರ ಬರೋಬ್ಬರಿ 30 ಸಾವಿರ ವಿವಿಧ ಜಾತಿಯ ಸಸಿಗಳೊಂದಿಗೆ ಸಜ್ಜಾಗಿ ನಿಂತಿದೆ. ಸಾಮಾಜಿಕ ಅರಣ್ಯ ವಲಯದ ಆರ್.ಎಸ್.ಪಿ.ಡಿ. ಯೋಜನೆಯಡಿ ರೈತರಿಗೆ ಸಹಾಯಧನದ ರೂಪದಲ್ಲಿ ಸಸಿಗಳನ್ನು ವಿತರಿಸಲಾಗುತ್ತಿದ್ದು, ಆಸಕ್ತ ರೈತರು ಹಾಗೂ ಪರಿಸರ ಪ್ರೇಮಿಗಳು ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಸಸಿಗಳನ್ನು ಪಡೆದು ಅವುಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿ ಹಸಿರು ಸಮುದಾಯ ನಿರ್ಮಾಣಕ್ಕೆ ಕೈಜೋಡಿಸುವಂತೆ ಅರಣ್ಯ ಇಲಾಖೆ ಕರೆ ನೀಡಿದೆ.

ಧಾರವಾಡ ಬೀಜ ಅಭಿವೃದ್ಧಿ ಘಟಕದಿಂದ ಬೀಜಗಳನ್ನು ಪಡೆದು ಸಸ್ಯ ಕ್ಷೇತ್ರದಲ್ಲಿ ಬೀಜ ಬಿತ್ತನೆ ಮಾಡಿ, ಒಂದು ವರ್ಷದವರೆಗೆ ಪೋಷಣೆ ಮಾಡಿ ನಂತರ ಸಸಿಗಳನ್ನು ವಿತರಿಸಲಾಗುತ್ತಿದೆ.

ಬಿಂಕದಕಟ್ಟಿ ಸಸ್ಯ ಕ್ಷೇತ್ರದಲ್ಲಿ ಮಹಾಗನಿ, ಶ್ರೀಗಂಧ, ದಾಂಡೇಲಿ ತೇಗ, ಬಿದಿರು, ರಕ್ತಚಂದನ, ಇಲಾಚಿ (ಸಿಹಿ ಹುಣಸೆ), ನೇರಳೆ, ಹೆಬ್ಬೇವು, ನೆಲ್ಲಿ, ಬೇವು, ಕರಿಬೇವು, ಚತುರ್ಮುಖ, ಸಂಪಿಗೆ, ಬಂಗಾಳಿ, ಗಜಗ, ಕಬೂಬಿಯ, ಶಿವನಿ, ಹೊಳೆಮತ್ತಿ, ಚರಿ, ಬಳುಲ, ಹೊಂಗೆ, ಪೇರಳೆ, ಮಾವು, ಲಿಂಬಿ, ಸೀತಾಫಲ, ಅರಳಿ, ಬಸರಿ, ಬಸವನಪಾದ, ಆಕಾಶ ಮಲ್ಲಿಗೆ, ಜವಾನಿಕಾ, ಕಾಡು ಬಾದಾಮಿ, ತಪಸ್, ಅತ್ತಿ, ಚಳ್ಳ, ಗುಲ್ಮೊಹರ್, ಸಿರಸಲ್, ರೇನ್ ಟ್ರೀ ಸೇರಿದಂತೆ ವಿವಿಧ ಜಾತಿಯ ಸಸಿಗಳು ಲಭ್ಯವಿವೆ.

ವಿವಿಧ ಬಗೆಯ ಸಸಿ ತಳಿಗಳಿಗೆ ಹೆಸರುವಾಸಿಯಾಗಿರುವ ಬಿಂಕದಕಟ್ಟಿ ಹೈಟೆಕ್ ಸಸ್ಯ ಕ್ಷೇತ್ರದಲ್ಲಿ ಎಲ್ಲ ತಳಿ ಸಸ್ಯಗಳೂ ಲಭ್ಯವಿದ್ದು, ಬೇಸಿಗೆ ಕಾಲದಲ್ಲಿ ಅಗತ್ಯ ಬೀಜಗಳನ್ನು ಗದಗ ಜಿಲ್ಲೆಯಾದ್ಯಂತ ಸಂಚರಿಸಿ ಸಂಗ್ರಹಿಸಲಾಗುತ್ತದೆ. ಸಿಗದ ಬೀಜಗಳನ್ನು ಹೊರ ಜಿಲ್ಲೆಗಳಿಂದ ತರಿಸಲಾಗುತ್ತದೆ. ಶ್ರೀಗಂಧ, ಕಬೂಬಿಯ, ನುಗ್ಗಿ ಹಾಗೂ ಹೆಬ್ಬೇವು ಬೀಜಗಳನ್ನು ದಾವಣಗೆರೆ, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳಿಂದ ತರಿಸಿ ಬೆಳೆಸಲಾಗುತ್ತಿದೆ.

ಬೀಜದಿಂದ ಬೆಳೆಸಿದ ಸಸಿಗಳನ್ನು ಒಂದು ವರ್ಷದ ಬಳಿಕ ರೈತರಿಗೆ ವಿತರಿಸಲಾಗುತ್ತದೆ. ಗದಗ ತಾಲೂಕು ಸಾಮಾಜಿಕ ಅರಣ್ಯ ವಲಯವು ರೈತರಿಗೆ ಸಹಾಯಧನದ ರೂಪದಲ್ಲಿ ಸಸಿಗಳನ್ನು ವಿತರಿಸಲು ಮುಂದಾಗಿದ್ದು, 30 ಸಾವಿರ ಸಸಿಗಳ ವಿತರಣೆಯ ಗುರಿ ಹೊಂದಿದೆ.

ಸಸಿಗಳ ಗಾತ್ರಕ್ಕೆ ಅನುಗುಣವಾಗಿ ರೈತರು ಹಣ ಪಾವತಿಸಬೇಕಿದ್ದು, ಸಣ್ಣ ಸಸಿಗೆ 3 ರೂ. ಹಾಗೂ ದೊಡ್ಡ ಸಸಿಗೆ 6 ರೂ. ನಿಗದಿಪಡಿಸಲಾಗಿದೆ. ಇದೇ ಸಸಿಗಳಿಗೆ ಮಾರುಕಟ್ಟೆಯಲ್ಲಿ 20 ರೂ.ದಿಂದ 33 ರೂ.ವರೆಗೆ ಬೆಲೆ ಇದೆ.

ಸಬ್ಸಿಡಿ ಯೋಜನೆಯಡಿ ಸಸಿಗಳನ್ನು ಪಡೆಯಲು ರೈತರು ಆರ್.ಟಿ.ಸಿ. ಉತಾರ, ಆಧಾರ್ ಕಾರ್ಡ್ ಹಾಗೂ ಭಾವಚಿತ್ರದೊಂದಿಗೆ ಬಿಂಕದಕಟ್ಟಿ ಸಸ್ಯ ಕ್ಷೇತ್ರವನ್ನು ಸಂಪರ್ಕಿಸಬಹುದಾಗಿದೆ.

24 ಕಿ.ಮೀ. ರಸ್ತೆ ಬದಿಯಲ್ಲಿ ಸಸಿ ನೆಡುವ ಯೋಜನೆ

ಗದಗ ತಾಲೂಕು ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಸುಮಾರು 24 ಕಿಲೋಮೀಟರ್ ಉದ್ದದವರೆಗೆ ಸಸಿ ನೆಡುವ ಯೋಜನೆ ರೂಪಿಸಲಾಗಿದ್ದು, ಈ ಕಾರ್ಯಕ್ಕೆ ಗುತ್ತಿಗೆ ನೀಡಲಾಗುತ್ತದೆ. ಗುತ್ತಿಗೆದಾರರು ಸಸಿ ನೆಡುವುದು, ಒಂದು ವರ್ಷದವರೆಗೆ ರಕ್ಷಣೆ, ನೀರುಣಿಸುವುದು ಹಾಗೂ ಪೋಷಣೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಹಕ್ಕುಪತ್ರ ಪಡೆದ ರೈತರಿಗೆ 3,500 ಸಸಿಗಳು ಉಚಿತ

ಕಬಲಾಯತಕಟ್ಟಿ ತಾಂಡಾ ಸೇರಿದಂತೆ ಅರಣ್ಯ ವ್ಯಾಪ್ತಿಯಲ್ಲಿ ಸಾಗುವಳಿ ಮಾಡುವ ಹಕ್ಕುಪತ್ರಗಳನ್ನು ಪಡೆದ ರೈತರಿಗೆ ಕೇಂದ್ರ ಸರ್ಕಾರದ ಯೋಜನೆಯಡಿ 3,500 ಸಸಿಗಳನ್ನು ಉಚಿತವಾಗಿ ವಿತರಿಸಲಾಗುವುದು.

ಮಾನ್ಸೂನ್ ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ 30 ಸಾವಿರ ಸಸಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಮಳೆಗಾಲದಲ್ಲಿ ಸಸಿ ನೆಟ್ಟರೆ ಕಡಿಮೆ ಶ್ರಮದಲ್ಲಿ ಉತ್ತಮ ಬೆಳವಣಿಗೆ ಸಾಧಿಸಿ, ಗದಗ ತಾಲೂಕನ್ನು ಹಸಿರೀಕರಣಗೊಳಿಸಲು ಸಾಧ್ಯವಾಗಲಿದೆ ಎಂದು ಇಲಾಖೆ ತಿಳಿಸಿದೆ.

“ರೈತರು ಮತ್ತು ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಗದಗ ತಾಲೂಕಿನಾದ್ಯಂತ ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು. ಗದಗ ಹಸಿರೀಕರಣ ಅಭಿಯಾನವನ್ನು ಜನಸಹಭಾಗಿತ್ವದ ಮೂಲಕ ಯಶಸ್ವಿಗೊಳಿಸೋಣ.”

 ನಮನ ನಾಯ್ಕ, ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ವಲಯ, ಗದಗ

ಮಕ್ಕಳ ಹಕ್ಕುಗಳ ರಕ್ಷಣೆಗೆ ಪ್ರತಿಜ್ಞೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಸಮೀಪದ ಜಕ್ಕಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಂಕೀರ್ಣದಲ್ಲಿ ಶುಕ್ರವಾರ ಜಾಗೃತಿ ಕಾರ್ಯಕ್ರಮ ಆಯೋಜಿಸಿ, ವಿದ್ಯಾರ್ಥಿಗಳಿಗೆ ಬಾಲ ಕಾರ್ಮಿಕತೆ ನಿರ್ಮೂಲನೆ ಕುರಿತು ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಾಲ ಕಾರ್ಮಿಕತೆ ವಿರುದ್ಧ ಪ್ರತಿಜ್ಞಾವಿಧಿ ಬೋಧಿಸಿ, ಮಕ್ಕಳ ಹಕ್ಕುಗಳು, ಶಿಕ್ಷಣದ ಮಹತ್ವ ಹಾಗೂ ಸುರಕ್ಷಿತ ಬಾಲ್ಯದ ಅಗತ್ಯತೆಯ ಕುರಿತು ಮಾಹಿತಿ ನೀಡಲಾಯಿತು.

ಕೆ.ಜಿ.ಎಸ್. ಶಾಲೆಯ ಮುಖ್ಯ ಶಿಕ್ಷಕ ಎಸ್.ಬಿ. ಗವಿ ಮಾತನಾಡಿ, ಪ್ರತಿಯೊಬ್ಬ ಮಗುವಿಗೂ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷಿತ ಬಾಲ್ಯದ ಹಕ್ಕು ಇದೆ. ಯಾವುದೇ ಮಗುವನ್ನು ದುಡಿಮೆಗೆ ತೊಡಗಿಸುವುದು ಕಾನೂನುಬಾಹಿರವಾಗಿದ್ದು, ಬಾಲ ಕಾರ್ಮಿಕತೆ ನಿರ್ಮೂಲನೆಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ಬಾಲ ಕಾರ್ಮಿಕತೆ, ಬಾಲ್ಯ ವಿವಾಹ, ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಕಂಡುಬಂದಲ್ಲಿ ಸಮೀಪದ ಅಂಗನವಾಡಿ ಕೇಂದ್ರ, ಶಾಲೆ ಅಥವಾ ಮಕ್ಕಳ ಸಹಾಯವಾಣಿ 1098ಕ್ಕೆ ಮಾಹಿತಿ ನೀಡುವ ಮೂಲಕ ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಗಂಡು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ಎಚ್.ಎಸ್. ಬಿಂಗಿ ಮಾತನಾಡಿ, ಬಾಲ ಕಾರ್ಮಿಕತೆ ಸಮಾಜದ ಅಭಿವೃದ್ಧಿಗೆ ಮಾರಕವಾಗಿದ್ದು, ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಅಂದಪ್ಪ ಮಾದರ, ವೀರಪ್ಪ ಮುಕ್ಕಣ್ಣವರ, ಶಿಕ್ಷಕರಾದ ಎಂ.ವಿ. ತಾಳಿಕೋಟಿ, ಎ.ಪಿ. ಶೆಟ್ಟರ, ಸಿ.ಎಸ್. ಬೆಳ್ಳಟ್ಟಿ, ಎಸ್.ಎ. ಪಲ್ಲೇದ, ಪಿ.ಜಿ. ಹುಯಿಲಗೋಳ, ಎಸ್.ಎಸ್. ಯಲ್ಲರಡ್ಡಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಬಾಲ ಕಾರ್ಮಿಕತೆ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

“ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಬಾಲ ಕಾರ್ಮಿಕತೆ ನಿರ್ಮೂಲನೆಗೆ ಸಮಾಜದ ಎಲ್ಲ ವರ್ಗದವರ ಸಹಕಾರ ಅಗತ್ಯ.”

ಎಸ್.ಬಿ. ಗವಿ, ಮುಖ್ಯ ಶಿಕ್ಷಕರು

‘ಜಮೀನು ಉಳಿಸಿ’ ಅಭಿಯಾನಕ್ಕೆ ರೈತರ ಸ್ಪಂದನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಮಣ್ಣಿನ ಆರೋಗ್ಯ ಸಂರಕ್ಷಣೆ, ಕೃಷಿ ತ್ಯಾಜ್ಯಗಳ ಸಮರ್ಪಕ ಬಳಕೆ ಹಾಗೂ ಪರ್ಯಾಯ ಗೊಬ್ಬರಗಳ ಮಹತ್ವದ ಕುರಿತು ರೈತರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಐಸಿಎಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಹಾಗೂ ಕೃಷಿ ಇಲಾಖೆ, ಗದಗ ಇವರ ಸಂಯುಕ್ತ ಆಶ್ರಯದಲ್ಲಿ ನರಗುಂದ ತಾಲೂಕಿನ ಬನಹಟ್ಟಿ ಹಾಗೂ ಬೈರನಹಟ್ಟಿ ಗ್ರಾಮಗಳಲ್ಲಿ “ಜಮೀನು ಉಳಿಸಿ” (ಖೇತ ಬಚಾವೋ) ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ವಿನಾಯಕ ನಿರಂಜನ ಮಾತನಾಡಿ, ಮಣ್ಣಿನ ಆರೋಗ್ಯ ಕಾಪಾಡಲು ಕೃಷಿ ತ್ಯಾಜ್ಯಗಳ ಮರುಬಳಕೆ, ಮಣ್ಣು ಮತ್ತು ನೀರಿನ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಸಾವಯವ ಪದಾರ್ಥಗಳ ಬಳಕೆಯಿಂದ ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಾಣುಗಳ ಸಂಖ್ಯೆ ಹೆಚ್ಚಾಗಿ, ಫಲವತ್ತತೆ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಮತ್ತೋರ್ವ ವಿಜ್ಞಾನಿ ಡಾ. ಚೇತನ ಬಾಬು ತಾಂತ್ರಿಕ ಉಪನ್ಯಾಸ ನೀಡಿ, ಜೈವಿಕ ಗೊಬ್ಬರಗಳಾದ ಟ್ರೈಕೊಡರ್ಮಾ, ರೈಜೋಬಿಯಂ ಹಾಗೂ ಪಿ.ಎಸ್.ಬಿ. ಬಳಸಿ ಬೀಜೋಪಚಾರ ಮಾಡುವ ವಿಧಾನವನ್ನು ವಿವರಿಸಿದರು. ಜೊತೆಗೆ ಕೊಟ್ಟಿಗೆ ಗೊಬ್ಬರ ಹಾಗೂ ಗೋ ಉತ್ಪನ್ನಗಳ ಉಪಯುಕ್ತತೆ ಕುರಿತು ರೈತರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ಚೇತನಾ ಪಾಟೀಲ ಮಾತನಾಡಿ, ಜಾಗತಿಕ ಬಿಕ್ಕಟ್ಟಿನ ಪರಿಣಾಮದಿಂದ ರಸಗೊಬ್ಬರಗಳ ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಪರ್ಯಾಯ ಗೊಬ್ಬರಗಳ ಬಳಕೆಯತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆ ವತಿಯಿಂದ ರೈತರಿಗೆ ಉದ್ದು ಹಾಗೂ ತೊಗರಿಯ ಸುಧಾರಿತ ತಳಿಯ ಬೀಜಗಳನ್ನು ಪ್ರಾತ್ಯಕ್ಷಿಕೆಗಾಗಿ ವಿತರಿಸಲಾಯಿತು.

ನರಗುಂದ ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ಬೆಳವಟಿಗಿ ಸ್ವಾಗತಿಸಿದರು. ಶಿವಾನಂದ ಸಾಠೆ ವಂದಿಸಿದರು.

ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿ ಕೃಷಿ ತಜ್ಞರಿಂದ ಮಾಹಿತಿ ಪಡೆದುಕೊಂಡರು.

“ಮಣ್ಣಿನ ಆರೋಗ್ಯವೇ ಕೃಷಿಯ ಜೀವಾಳ. ಸಾವಯವ ಮತ್ತು ಜೈವಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿ, ಭೂಮಿಯ ಫಲವತ್ತತೆ ಹೆಚ್ಚುತ್ತದೆ.”

ಡಾ. ವಿನಾಯಕ ನಿರಂಜನ

ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ

ರೈತರಿಗೆ ಉದ್ದು-ತೊಗರಿ ಬೀಜ ವಿತರಣೆ

ಖೇತ ಬಚಾವೋ ಅಭಿಯಾನದ ಅಂಗವಾಗಿ ಬನಹಟ್ಟಿ ಹಾಗೂ ಬೈರನಹಟ್ಟಿ ಗ್ರಾಮಗಳ ರೈತರಿಗೆ ಕೃಷಿ ಇಲಾಖೆ ವತಿಯಿಂದ ಉದ್ದು ಮತ್ತು ತೊಗರಿಯ ಸುಧಾರಿತ ತಳಿಯ ಬೀಜಗಳನ್ನು ಪ್ರಾತ್ಯಕ್ಷಿಕೆಗಾಗಿ ವಿತರಿಸಿ, ಪರ್ಯಾಯ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಲಾಯಿತು.

ಮಳೆಗಾಗಿ ‘ಗುರ್ಜಿ’ ಮೊರೆ ಹೋದ ಮಹಿಳೆಯರು

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಮಹಿಳೆಯರು ಹಾಗೂ ಮಕ್ಕಳು ಸಂಪ್ರದಾಯಬದ್ಧ ‘ಗುರ್ಜಿ ಪೂಜೆ’ ನಡೆಸುವ ಮೂಲಕ ವರುಣ ದೇವನ ಕೃಪೆಗೆ ಮೊರೆ ಹೋದ ಅಪರೂಪದ ದೃಶ್ಯ ಶುಕ್ರವಾರ ಕಂಡು ಬಂತು.

ಮೇ 25ರಂದು ಸುರಿದ ಅಲ್ಪಸ್ವಲ್ಪ ರೋಹಿಣಿ ಮಳೆ ರೈತರಲ್ಲಿ ಉತ್ತಮ ಮಳೆಯ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಬಳಿಕ ಮಳೆ ಕೈಕೊಟ್ಟ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬಿತ್ತನೆ ಮಾಡಿದ ಬೆಳೆಗಳು ಒಣಗುವ ಭೀತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಗುರ್ಜಿ ಪೂಜೆಯ ಆಚರಣೆಗೆ ಮಹಿಳೆಯರು ಮುಂದಾಗಿದ್ದಾರೆ.

ಹಿಂದಿನ ಕಾಲದಲ್ಲಿ ಮಳೆ ಕೊರತೆ ಉಂಟಾದಾಗ ಗ್ರಾಮೀಣ ಪ್ರದೇಶದ ಜನರು ಗುರ್ಜಿ ಪೂಜೆ ನೆರವೇರಿಸಿ ವರುಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ಆಚರಣೆಯಿಂದ ಮಳೆ ಸುರಿದು ರೈತರ ಬದುಕಿಗೆ ಆಸರೆಯಾಗುತ್ತದೆ ಎಂಬ ನಂಬಿಕೆ ಇಂದಿಗೂ ಗ್ರಾಮೀಣ ಭಾಗದಲ್ಲಿ ಜೀವಂತವಾಗಿದೆ.

ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ವಿಶಿಷ್ಟ ಆಚರಣೆಯಲ್ಲಿ ವ್ಯಕ್ತಿ ಅಥವಾ ಬಾಲಕನ ತಲೆಯ ಮೇಲೆ ಹಂಚಿನ ತವೆ ಇಟ್ಟು ಅದರ ಮೇಲೆ ಆಕಳ ಸಗಣಿಯಿಂದ ಗುರ್ಜಿ ನಿರ್ಮಿಸಲಾಗುತ್ತದೆ. ಗುರ್ಜಿ ಹೊತ್ತ ವ್ಯಕ್ತಿಯ ಹಿಂದೆ ಮಹಿಳೆಯರು ಮತ್ತು ಮಕ್ಕಳು ಗುರ್ಜಿ ಹಾಡುಗಳನ್ನು ಹಾಡುತ್ತಾ ಗ್ರಾಮದ ಮನೆ ಮನೆಗೆ ತೆರಳುತ್ತಾರೆ.

ಪ್ರತಿ ಮನೆಯವರು ಗುರ್ಜಿಗೆ ಪೂಜೆ ಸಲ್ಲಿಸಿ ನೀರು ಸುರಿದು, “ಓ ಮಳೆರಾಯ, ಎಲ್ಲಿದ್ದರೂ ಬಾ” ಎಂದು ಪ್ರಾರ್ಥನೆ ಸಲ್ಲಿಸುವ ಮೂಲಕ ಉತ್ತಮ ಮಳೆಯಿಗಾಗಿ ದೇವರಲ್ಲಿ ಬೇಡಿಕೊಳ್ಳುತ್ತಾರೆ.

ಪ್ರದೇಶದಲ್ಲಿ ಹೆಸರು, ಉದ್ದು, ಅಲಸಂದಿ, ಮಡಿಕೆ ಹಾಗೂ ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಈಗಾಗಲೇ ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಕೊರತೆಯಿಂದ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದು, ಇನ್ನೆರಡು-ಮೂರು ದಿನಗಳಲ್ಲಿ ಮಳೆಯಾಗದಿದ್ದರೆ ರೈತರು ಭಾರೀ ನಷ್ಟ ಅನುಭವಿಸುವ ಆತಂಕ ಎದುರಾಗಿದೆ.

ಮಳೆ ಮುಂದುವರಿಯುತ್ತದೆ ಎಂಬ ನಿರೀಕ್ಷೆಯಲ್ಲಿ ಅನೇಕ ರೈತರು ಸಾಲ-ಸೂಲ ಮಾಡಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಕಾರ್ಯಗಳಿಗೆ ಹಣ ಖರ್ಚು ಮಾಡಿದ್ದಾರೆ. ಆದರೆ ಮಳೆ ಕೈಕೊಟ್ಟ ಪರಿಣಾಮ ರೈತರು ತಲೆ ಮೇಲೆ ಕೈಹೊತ್ತು ಆಕಾಶದತ್ತ ನೋಡುವಂತಾಗಿದೆ.

‘ಓ ಮಳೆರಾಯ, ಎಲ್ಲಿದ್ದರೂ ಬಾ…!’

“ರೋಹಿಣಿ ಮಳೆ ರೈತರಲ್ಲಿ ಭರವಸೆ ಮೂಡಿಸಿತ್ತು. ಆದರೆ ನಂತರ ಮಳೆ ಕೈಕೊಟ್ಟಿದೆ. ಬೆಳೆಗಳು ಉಳಿಯಲೆಂದು ಸಂಪ್ರದಾಯದಂತೆ ಗುರ್ಜಿ ಪೂಜೆ ಮೂಲಕ ವರುಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.”

ಗದಗದಲ್ಲಿ 15 ದಿನಗಳ ಯೋಗ ಮಹೋತ್ಸವ

0
ವಿಜಯಸಾಕ್ಷಿ ಸುದ್ದಿ, ಗದಗ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಜೂನ್ 15ರಿಂದ 30ರವರೆಗೆ ಗದಗ ನಗರದಲ್ಲಿ 15 ದಿನಗಳ ಯೋಗ ಮಹೋತ್ಸವ ಹಾಗೂ ಉಚಿತ ಯೋಗ-ಯೋಗಾಸನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸ್ಥಳೀಯ ಸೇವಾಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕ ತಿಳಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗವು ಭಾರತೀಯ ಸಂಸ್ಕೃತಿಯ ಮೂಲ ಬೇರುವಾಗಿದ್ದು, ಇಡೀ ವಿಶ್ವಕ್ಕೆ ಭಾರತದ ಪರಿಚಯವನ್ನು ಯೋಗ ಮತ್ತು ಆಧ್ಯಾತ್ಮಿಕತೆ ಮಾಡಿಕೊಟ್ಟಿವೆ. ಯೋಗವು ಕೇವಲ ಆಸನಗಳ ಸಮೂಹವಲ್ಲ, ಅದು ಆರೋಗ್ಯಕರ ಮತ್ತು ಮೌಲ್ಯಯುತ ಜೀವನಕ್ಕೆ ದಾರಿದೀಪವಾಗಿರುವ ಜೀವನ ಪದ್ಧತಿಯಾಗಿದೆ ಎಂದು ಹೇಳಿದರು.
ಇಂದಿನ ಒತ್ತಡದ ಜೀವನಶೈಲಿ, ಮಾನಸಿಕ ಆತಂಕ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಯೋಗ ಪರಿಣಾಮಕಾರಿ ಪರಿಹಾರವಾಗಿದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಯೋಗ ಅತ್ಯುತ್ತಮ ಮಾರ್ಗವಾಗಿದೆ. ವಿಶ್ವಸಂಸ್ಥೆಯು ಸಹ ಯೋಗದ ಮಹತ್ವವನ್ನು ಗುರುತಿಸಿ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿದೆ ಎಂದು ತಿಳಿಸಿದರು.
ಜೂನ್ 15ರಿಂದ 30ರವರೆಗೆ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 7.30 ಗಂಟೆಯವರೆಗೆ ನಗರದ ಮೂರು ಕೇಂದ್ರಗಳಲ್ಲಿ ಏಕಕಾಲಕ್ಕೆ ಶಿಬಿರ ನಡೆಯಲಿದ್ದು, ಪ್ರಾರ್ಥನೆ, ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ತರಬೇತಿಯನ್ನು ನೀಡಲಾಗುವುದು ಎಂದು ಹೇಳಿದರು. ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ. ಅದು ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆ ತರುವ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಗದಗ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಭಾಗವಹಿಸಿ ಯೋಗದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಶಿಬಿರದಲ್ಲಿ ಭಾಗವಹಿಸಲು ಆಸಕ್ತರು ಸಂಬಂಧಿಸಿದ ಕೇಂದ್ರಗಳ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಮೂರು ಕೇಂದ್ರಗಳಲ್ಲಿ ಶಿಬಿರ
  • ಬ್ರಹ್ಮಕುಮಾರಿಸ್, ಬಸವೇಶ್ವರ ನಗರ (ಶಾಪೂರಪೇಟೆ), ಗದಗ
  • ಬ್ರಹ್ಮಕುಮಾರಿಸ್, ಸಿದ್ಧರಾಮೇಶ್ವರ ನಗರ (ವಡ್ಡರಗೇರಿ), ಗದಗ
  • ಬ್ರಹ್ಮಕುಮಾರಿಸ್, ಹೊಸಪೇಟೆ ಚೆಕ್‌ಪೋಸ್ಟ್, ಬೆಟಗೇರಿ
“ಯೋಗವು ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡುವ ದಿವ್ಯ ಔಷಧಿಯಾಗಿದೆ. ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು.”
ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕ, ಸಂಚಾಲಕರು

ಗದಗದ ಯೋಗಪಟುಗಳ ರಾಜ್ಯಮಟ್ಟದ ಸಾಧನೆ

0
ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ತಪೋವನದಲ್ಲಿ ನಡೆದ ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್‌ಶಿಪ್ ಸ್ಪರ್ಧೆಗಳಲ್ಲಿ ಗದಗ ಜಿಲ್ಲಾ ಯೋಗಾಸನ ಕ್ರೀಡಾ ತಂಡದ ಸದಸ್ಯರು ಉತ್ತಮ ಸಾಧನೆ ಮಾಡಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ (ರಿ) ಬೆಂಗಳೂರು, ಉತ್ತರ ಕನ್ನಡ ಜಿಲ್ಲಾ ಯೋಗ ಫೆಡರೇಶನ್ (ರಿ) ಶಿರಸಿ ಹಾಗೂ ಯಲ್ಲಾಪುರ ತಾಲೂಕು ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಶನ್ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯ ಕ್ರೀಡಾಪಟುಗಳು ವಿವಿಧ ವಯೋಮಿತಿ ವಿಭಾಗಗಳಲ್ಲಿ ಪ್ರಶಸ್ತಿ ಪಡೆದರು.
10-12 ವರ್ಷದ ಬಾಲಕರ ವಿಭಾಗದಲ್ಲಿ ಮಲ್ಲಿಕಾರ್ಜುನ ಅಳಗವಾಡಿ, 16-18 ವರ್ಷದ ಬಾಲಕಿಯರ ವಿಭಾಗದಲ್ಲಿ ನಮ್ರತಾ ವೆರ್ಣೇಕರ, 18-21 ವರ್ಷದ ವಿಭಾಗದಲ್ಲಿ ಪ್ರಶಾಂತ ಗಾಣಿಗೇರ ಹಾಗೂ ಸುಷ್ಮಿತಾ ಮಾರನವಬಸರಿ, 35-45 ವರ್ಷದ ಮಹಿಳೆಯರ ವಿಭಾಗದಲ್ಲಿ ಚೈತ್ರಾ ಸೋಮನಗೌಡ್ರ ವಿಶೇಷ ಸ್ಥಾನ ಪಡೆದು ಗಮನ ಸೆಳೆದರು.
ಗದಗ ಜಿಲ್ಲೆಯಿಂದ ನಿರ್ಣಾಯಕರಾಗಿ ಚೇತನ ಚುಂಚಾ, ಸುಮಂಗಲಾ ಹದ್ಲಿ ಹಾಗೂ ಅನುರಾಧಾ ಶಿರಿಯಣ್ಣವರ ಕಾರ್ಯನಿರ್ವಹಿಸಿದರು. ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್‌ನ ಕಾರ್ಯಕಾರಿ ಮಂಡಳಿ ಸದಸ್ಯ ಕೆ.ಎಸ್. ಪಲ್ಲೇದ ಸಹ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸೇವೆ ಸಲ್ಲಿಸಿದರು.
ಇದಲ್ಲದೆ, ಗದಗ ಜಿಲ್ಲೆಯ ಎಸ್.ವೈ.ಬಿ.ಎಂ.ಎಸ್. ಯೋಗಪಾಠಶಾಲೆ ಹಾಗೂ ನಿತ್ಯಂ ಯೋಗ ಕೇಂದ್ರ ತಂಡ ಪ್ರಶಸ್ತಿಯನ್ನು ಪಡೆದು ಜಿಲ್ಲೆಗೆ ಮತ್ತೊಂದು ಗೌರವ ತಂದುಕೊಟ್ಟಿವೆ.
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು, ತರಬೇತುದಾರರು, ಪಾಲಕರು ಹಾಗೂ ಸಹಕರಿಸಿದ ಎಲ್ಲರಿಗೂ ಗದಗ ಜಿಲ್ಲಾ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಕೆ.ಎಸ್. ಪಲ್ಲೇದ ಮತ್ತು ಕಾರ್ಯದರ್ಶಿ ಚೇತನ ಚುಂಚಾ ಅಭಿನಂದನೆ ಸಲ್ಲಿಸಿದ್ದಾರೆ.

ಡಿಎಸ್‌ಎಸ್ ತಾಲೂಕು ಸಂಚಾಲಕರಾಗಿ ಸದಾನಂದ ನಂದೆಣ್ಣವರ ನೇಮಕ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಲಕ್ಷ್ಮೇಶ್ವರ ತಾಲೂಕು ಸಂಚಾಲಕರಾಗಿ ಸದಾನಂದ ನಂದೆಣ್ಣವರ ಅವರನ್ನು ನೇಮಕ ಮಾಡಲಾಗಿದೆ.

ಶನಿವಾರ ಗದಗದಲ್ಲಿ ರಾಜ್ಯ ಸಂಘಟನೆಯ ವತಿಯಿಂದ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಗದಗ ಜಿಲ್ಲಾ ಸಂಚಾಲಕ ದುರ್ಗಪ್ಪ ಎಲ್.ಎಚ್. ಅವರು ನೇಮಕಾತಿ ಆದೇಶ ಪತ್ರ ವಿತರಿಸಿದರು.

ಶಿಕ್ಷಣವೇ ಸಮಾಜದ ಶಕ್ತಿ; 135 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗಾಣಿಗ ಸಮಾಜದಿಂದ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಮೂಲಾಧಾರವಾಗಿದ್ದು, ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಉನ್ನತ ಗುರಿ ಸಾಧನೆಗೆ ಪ್ರೋತ್ಸಾಹಿಸಬೇಕು ಎಂದು ಶಿವಾನಂದ ಬ್ರಹ್ಮನ್ಮಠದ ಸದಾಶಿವಾನಂದ ಸ್ವಾಮೀಜಿ ಹೇಳಿದರು.

ನಗರದ ವಿವೇಕಾನಂದ ನಗರದ ಗಾಣಿಗ ಸಮುದಾಯ ಭವನದಲ್ಲಿ ಶನಿವಾರ ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗವರ್ಧಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ, ವಾರ್ಷಿಕ ಸಭೆ ಹಾಗೂ ವಧು-ವರರ ಸಮಾವೇಶ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶಿಕ್ಷಣವು ವ್ಯಕ್ತಿಯ ಬೌದ್ಧಿಕ ಬೆಳವಣಿಗೆಗೆ ಮಾತ್ರ ಸೀಮಿತವಾಗಿಲ್ಲ. ಅದು ಆರ್ಥಿಕ ಸ್ವಾವಲಂಬನೆ, ಉತ್ತಮ ಆರೋಗ್ಯ, ಸಂಸ್ಕಾರ ಮತ್ತು ಸಮಾಜದ ಪ್ರಗತಿಗೆ ದಾರಿಯಾಗುತ್ತದೆ. ಸಮಾಜದ ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ನಿಟ್ಟಿನಲ್ಲಿ ಸಮುದಾಯ ಭವನದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಕೋಚಿಂಗ್ ತರಗತಿಗಳನ್ನು ಆರಂಭಿಸಬೇಕು. ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಕೆಲಸವನ್ನು ಸಮಾಜದ ಮುಖಂಡರು ಕೈಗೆತ್ತಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ: ಬೆನಕೊಪ್ಪ

ನಿವೃತ್ತ ಡಿಡಿಪಿಐ ಐ.ಬಿ. ಬೆನಕೊಪ್ಪ ಮಾತನಾಡಿ, ಆಧುನಿಕ ಜೀವನಶೈಲಿಯಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಯುವಜನತೆ ದಾರಿ ತಪ್ಪದಂತೆ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಮೌಲ್ಯಗಳನ್ನು ಕಲಿಸಬೇಕು ಎಂದು ಹೇಳಿದರು.

“ಅಂಕಗಳು ಮಾತ್ರ ಪ್ರತಿಭೆಯ ಮಾನದಂಡವಲ್ಲ. ಪ್ರತಿಯೊಬ್ಬ ಮಗುವಿನಲ್ಲೂ ವಿಶಿಷ್ಟ ಪ್ರತಿಭೆ ಅಡಗಿದೆ. ಅದನ್ನು ಗುರುತಿಸಿ ಬೆಳೆಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪಾಲಕರ ಮೇಲಿದೆ” ಎಂದು ಅಭಿಪ್ರಾಯಪಟ್ಟರು.

ಶಿಕ್ಷಣವೇ ಯಶಸ್ಸಿನ ಮೆಟ್ಟಿಲು: ಬಸವರಾಜ ಕೆಂಪವಾಡ

ಭಾರತೀಯ ಅರಣ್ಯ ಸೇವೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಬಸವರಾಜ ಕೆಂಪವಾಡ ಮಾತನಾಡಿ, ಉತ್ತಮ ಶಿಕ್ಷಣ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಪೋಷಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರದೇ, ಅವರ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಬೇಕು ಎಂದರು.

ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಶಿಸ್ತು, ಪರಿಶ್ರಮ ಹಾಗೂ ಸ್ಪಷ್ಟ ಗುರಿ ಅಗತ್ಯ. ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಮನೋಭಾವ ಪ್ರತಿಯೊಬ್ಬ ಯುವಕರಲ್ಲೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹತ್ತು ವರ್ಷಗಳಿಂದ ಪ್ರತಿಭೆಗೆ ಪ್ರೋತ್ಸಾಹ

ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ಬಸವರಾಜ ಬಿಂಗಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಸಮಾಜದ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಸ್ಪಷ್ಟ ಗುರಿ ಇಟ್ಟುಕೊಂಡು ಅಧ್ಯಯನ ಮಾಡಿದರೆ ಮಾತ್ರ ಉನ್ನತ ಸಾಧನೆ ಸಾಧ್ಯ. ಗಾಣಿಗ ಸಮಾಜದ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುವಂತಾಗಬೇಕು ಎಂದು ಆಶಿಸಿದರು.

135 ಪ್ರತಿಭಾವಂತರಿಗೆ ಗೌರವ

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಸುಮಾರು 135 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಭಾರತೀಯ ಅರಣ್ಯ ಸೇವೆಯಲ್ಲಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದ ಬಸವರಾಜ ಕೆಂಪವಾಡ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಷಣ್ಮಖಪ್ಪ ಬಡ್ನಿ, ಕಟ್ಟಡ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ, ಜಿಲ್ಲಾ ಗಾಣಿಗ ಸಮಾಜದ ಉಪಾಧ್ಯಕ್ಷ ಬಿ.ಬಿ. ಐನಾಪೂರ, ಸಮಾಜದ ಮುಖಂಡರಾದ ಅಶೋಕ ಮಂದಾಲಿ, ಸಿದ್ದು ಪಾಟೀಲ ಸೇರಿದಂತೆ ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗವರ್ಧಕ ಟ್ರಸ್ಟ್‌ನ ಪದಾಧಿಕಾರಿಗಳಾದ ಮುರುಘರಾಜೇಂದ್ರ ಬಡ್ನಿ, ಸುರೇಶ ಮರಳಪ್ಪನವರ, ಎಸ್.ವಿ. ಪವಾಡಿಗೌಡ್ರ, ಗಿರಿಯಪ್ಪ ಅಸೂಟಿ, ಗಂಗಾಧರ ಗಾಣಿಗೇರ, ರಮೇಶ ಮಂದಾಲಿ, ಬಿ.ಎಸ್. ವಡವಟ್ಟಿ, ದಶರಥ ಗಾಣಿಗೇರ, ಬಸವರಾಜ ಸುಂಕದ, ಫಕೀರಪ್ಪ ಸಿಂಧಗಿ, ಹಾಲಪ್ಪ ಬಣವಿ, ಅಮರೇಶ ಹಾದಿ, ಶ್ರೀಕಾಂತ ಲಕ್ಕುಂಡಿ, ತೋಟಪ್ಪ ಗಾಣಿಗೇರ, ಐ.ಎಂ. ಕಿರೇಸೂರ, ಬಸವಂತಪ್ಪ ನವಲಳ್ಳಿ, ಸಂದೀಪ ಬೆಳವಟಗಿ, ಬಸವರಾಜ ನಲವಗುಂದ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

“ಸಮಾಜದ ಪ್ರಗತಿಗೆ ಶಿಕ್ಷಣವೇ ಅಡಿಪಾಯ. ಬಡ ಹಾಗೂ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಸಮಾಜವೇ ಬೆನ್ನೆಲುಬಾಗಿ ನಿಲ್ಲಬೇಕು; ಆಗ ಮಾತ್ರ ಉಜ್ವಲ ಭವಿಷ್ಯದ ಸಮಾಜ ನಿರ್ಮಾಣ ಸಾಧ್ಯ.”

ಸದಾಶಿವಾನಂದ ಸ್ವಾಮೀಜಿ

ಶಿವಾನಂದ ಬ್ರಹ್ಮನ್ಮಠ

ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನಕ್ಕೆ ಕಾರ್ಮಿಕರ ಹಕ್ಕೊತ್ತಾಯ: ವಿಷ ಸೇವನೆ ಯತ್ನದಿಂದ ಹೈಡ್ರಾಮಾ!

0

ವಿಜಯಸಾಕ್ಷಿ ಸುದ್ದಿ, ರೋಣ: ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ತಾಲೂಕು ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಕ್ಕೊತ್ತಾಯ ಪ್ರತಿಭಟನೆ ಹಾಗೂ ಬೃಹತ್ ಮೆರವಣಿಗೆ ನೂರಾರು ಕಾರ್ಮಿಕರ ಭಾಗವಹಿಸುವಿಕೆಯಿಂದ ಗಮನ ಸೆಳೆಯಿತು.

ಪಟ್ಟಣದ ಸಿದ್ದಾರೂಢ ಮಠದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಗೆ ವಿವಿಧ ಮಠಾಧೀಶರು ಹಾಗೂ ದರ್ಗಾದ ಅಜ್ಜನವರು ಚಾಲನೆ ನೀಡಿದರು. ಸಚಿವ ಸಂಪುಟದಲ್ಲಿ ಈ ಬಾರಿ ಜಿ.ಎಸ್. ಪಾಟೀಲರಿಗೆ ಸ್ಥಾನ ನೀಡಲೇಬೇಕು ಎಂದು ಕಾರ್ಮಿಕರು ಘೋಷಣೆಗಳನ್ನು ಕೂಗಿ ಒತ್ತಾಯಿಸಿದರು.

ಮೆರವಣಿಗೆಯು ಸೂಡಿ ವೃತ್ತ, ಮುಲ್ಲಾನ ಭಾವಿ ಮಾರ್ಗವಾಗಿ ಪೋತರಾಜನ ಕಟ್ಟೆ ತಲುಪಿದ ವೇಳೆ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಜಿ.ಎಸ್. ಪಾಟೀಲರಿಗೆ ಕೊಟ್ಟ ಮಾತಿನಂತೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಗಳಲ್ಲಿ ಮತದಾನ ಬಹಿಷ್ಕರಿಸುವ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.

ವಿಷ ಸೇವನೆ ಯತ್ನ; ಕೆಲಕಾಲ ಉದ್ವಿಗ್ನತೆ

ಪ್ರತಿಭಟನೆ ಪೋತರಾಜನ ಕಟ್ಟೆ ತಲುಪುತ್ತಿದ್ದಂತೆ ಶಾಸಕ ಜಿ.ಎಸ್. ಪಾಟೀಲರ ಅಭಿಮಾನಿಗಳಾದ ಸಂಗಪ್ಪ ಜಿಡ್ಡಿಬಾಗಿಲ, ಶಾಭಾಜ್ ಗದಗಕರ್ ಹಾಗೂ ದಾವಲಸಾಬ ಬಾಡಿನ ಅವರು ಕ್ರಿಮಿನಾಶಕ ಸೇವಿಸಲು ಮುಂದಾದ ಘಟನೆ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಸಿತು.

“ರೋಣ ಮತಕ್ಷೇತ್ರಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಿ.ಎಸ್. ಪಾಟೀಲರು ಪಕ್ಷವನ್ನು ಬಲಪಡಿಸಲು ಅಪಾರ ಶ್ರಮವಹಿಸಿದ್ದಾರೆ. ಆದರೂ ಸಚಿವ ಸ್ಥಾನ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿಗಳು ವಿಷ ಸೇವಿಸಲು ಮುಂದಾದರು. ಕೂಡಲೇ ಪಕ್ಷದ ಮುಖಂಡರು ಮಧ್ಯಪ್ರವೇಶಿಸಿ ಅವರನ್ನು ಸಮಾಧಾನಪಡಿಸಿ ಕ್ರಿಮಿನಾಶಕವನ್ನು ವಶಪಡಿಸಿಕೊಂಡರು.

ಪ್ರತಿಭಟನೆಯ ಬಳಿಕ ಶ್ರೀಗಳು ಹಾಗೂ ಕಾರ್ಯಕರ್ತರು ಪೋತರಾಜನ ಕಟ್ಟೆ ಸಮೀಪದ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಜರತ್ ಸುಲೇಮಾನ್ ಶಾವಲಿ ಅಜ್ಜನವರು, ಶಿವಮುನಿ ಶ್ರೀಗಳು, ಮರುಳ ಸಿದ್ದೇಶ್ವರ ಶ್ರೀಗಳು, ದಿವಾನ್ ಶರೀಫ್ ಶ್ರೀಗಳು, ಬಸವರಾಜ ಶರಣರು, ಹುಚ್ಚಯ್ಯ ಶ್ರೀಗಳು, ವಿಶ್ವನಾಥ ಶ್ರೀಗಳು, ಗದಿಗೇಪ್ಪ ಕಿರೇಸೂರ, ಯೂಸುಫ್ ಇಟಗಿ, ಬಾವಾಸಾಬ ಬಟಗೇರಿ, ಆನಂದ ಚಂಗಳಿ, ದುರ್ಗಪ್ಪ ಹಿರೇಮನಿ, ಮಲೀಕ ಯಲಿಗಾರ, ಹನ್ಮಂತಪ್ಪ ತಳ್ಳಿಕೇರಿ, ಅಸ್ಲಂ ಕೊಪ್ಪಳ, ಬಶೀರ ಕಟ್ಟಿಮನಿ, ಮೌನೇಶ ಹಾದಿಮನಿ, ಮಕ್ತುಂಸಾಬ ಮುಲ್ಲಾ, ಕೆ.ಕೆ. ಮುಲ್ಲಾ, ಸಂಜಯ ದೊಡ್ಡಮನಿ ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.

“ಶಾಸಕ ಜಿ.ಎಸ್. ಪಾಟೀಲರು ಕಳೆದ 50 ವರ್ಷಗಳಿಂದ ಪಕ್ಷಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕು. ಇದು ನಮ್ಮ ನ್ಯಾಯಯುತ ಬೇಡಿಕೆ. ಇದಕ್ಕೆ ಸ್ಪಂದಿಸದಿದ್ದರೆ ನಾವು ಪ್ರಾಣತ್ಯಾಗಕ್ಕೂ ಸಿದ್ಧರಿದ್ದೇವೆ. ಮುಂದಾಗುವ ಯಾವುದೇ ಅನಾಹುತಕ್ಕೆ ಪಕ್ಷದ ವರಿಷ್ಠರೇ ಹೊಣೆ.”

ವಿನಾಯಕ ಜಕ್ಕಣಗೌಡ್ರ, ಕಾಂಗ್ರೆಸ್ ಮುಖಂಡ

ಸಚಿವ ಸ್ಥಾನ ನೀಡದಿದ್ದರೆ ವಿಧಾನಸೌಧ ಚಲೋ

ಮರುಳ ಸಿದ್ದೇಶ್ವರ ಪುಣ್ಯಾಶ್ರಮದ ಶ್ರೀ ಶಿವಶರಣ ಗದಿಗೆಪ್ಪಜ್ಜನವರು ಮಾತನಾಡಿ, “ಜಿ.ಎಸ್. ಪಾಟೀಲರು ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಹೃದಯವಂತ ನಾಯಕ. ಪಕ್ಷ ನೀಡಿದ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಶ್ರೀಗಳ ನೇತೃತ್ವದಲ್ಲಿ ‘ವಿಧಾನಸೌಧ ಚಲೋ’ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

error: Content is protected !!