ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಮೆಕ್ಕೆಜೋಳ ಕಾಯಲು ಹೊಲಕ್ಕೆ ಹೋಗಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಕರಡಿ ದಾಳಿ ಮಾಡಿದ ಘಟನೆ ರವಿವಾರ ರಾತ್ರಿ ಗಂಗಾವತಿ ತಾಲೂಕಿನ ಬಂಡ್ರಾಳದಲ್ಲಿ ನಡೆದಿದೆ. ಗಾಯಾಳುಗಳನ್ನು ಮಲ್ಲಪ್ಪ ಜಲ್ಲಿ (30) ಮತ್ತು ದುರ್ಗಪ್ಪ ಜಲ್ಲಿ (60) ಎಂದು ಗುರುತಿಸಲಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಪ್ಪಳದಲ್ಲಿ ಕರಡಿ ದಾಳಿ; ಇಬ್ಬರಿಗೆ ಗಾಯ
ಸೆಂಚುರಿ ಸ್ಟಾರ್ ಶಿವಣ್ಣ ಈಗ ಅಶ್ವತ್ಥಾಮ!
ಬಿಎಸ್ಕೆ
ವಿಜಯಸಾಕ್ಷಿ ವಿಶೇಷ ಬೆಂಗಳೂರು
ಕನ್ನಡ ಚಿತ್ರರಂಗದಲ್ಲಿ ಒಂದಿಲ್ಲೊಂದು ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ಕುಮಾರ್ ಈಗ ಅಶ್ವತ್ಥಾಮನಾಗಿ ತೆರೆ ಮೇಲೆ ಬರಲಿದ್ದಾರೆ.
ಕನ್ನಡದಲ್ಲಿ ಐತಿಹಾಸಿಕ, ಪೌರಾಣಿಕ ಸಿನಿಮಾಗಳ ಟ್ರೆಂಡ್ ಹೆಚ್ಚುತ್ತಿದೆ. ಬಿಗ್ ಬಜೆಟ್ ಹೊಂದಿರುವ ಇಂಥ ಸಿನಿಮಾಗಳು ಗೆದ್ದದ್ದೇ ಹೆಚ್ಚು. ಬಹಳ ವರ್ಷಗಳ ನಂತರ ಡಾ.ಶಿವಣ್ಣ ಈಗ ಪೌರಾಣಿಕ ಕತೆಯ ಸಿನಿಮಾದಲ್ಲಿ ನಟಿಸಲು ಗ್ರಿನ್ ಸಿಗ್ನಲ್ ಕೊಟ್ಟಿದ್ದಾರೆ.
ಶಿವ ಮೆಚ್ಚಿದ ಕಣ್ಣಪ್ಪ, ಗಂಡುಗಲಿ ಕುಮಾರರಾಮ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಐತಿಹಾಸಿಕ, ಪೌರಾಣಿಕ ಕಥಾಹಂದರದಲ್ಲಿ ಪ್ರವೇಶಿಸಿರುವ ಅನುಭವದ ಆ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ.
ಫ್ಯಾಂಟಸಿ ಕಥೆಯಾಧಾರಿತ ಮಿ.ಪುಟ್ಸಾಮಿ ಸಿನಿಮಾ ಸಹ ಶಿವಣ್ಣನಿಗೆ ಒಳ್ಳೇ ಹೆಸರು ತಂದುಕೊಟ್ಟಿತ್ತು. ಈಗ ಮತ್ತೇ ಪುರಾಣ ಹಿನ್ನೆಲೆಯ ಸಿನಿಮಾದಲ್ಲಿ ಶಿವಣ್ಣ ನಟಿಸಲು ಒಪ್ಪಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ.
ಚಿತ್ರಕ್ಕೆ ಅಶ್ವತ್ಥಾಮ ಹೆಸರನ್ನು ಫೈನಲ್ ಮಾಡಲಾಗಿದೆ. ರಾಜ್ಯೋತ್ಸವದ ದಿನ ಚಿತ್ರದ ಮೊದಲ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಚಕ್ರವ್ಯೂಹದಲ್ಲಿ ಸಿಲುಕಿರುವ ಅಭಿಮನ್ಯುವಿನಂತೆ ಮದ್ಯದಲ್ಲಿರುವ ಶಿವಣ್ಣನ ಸುತ್ತ ಧನಸು, ಬಂದೂಕು, ಪಿಸ್ತೂಲು, ಮಚ್ಚು, ಕುಡಗೋಲು.. ವಿವಿಧ ಆಯುಧಗಳು ಸುತ್ತುವರಿದಿವೆ. ಈ ಪೋಸ್ಟರ್ ನೋಡಿದರೆ ಇದು ಪೌರಣಿಕ ಕಥೆಯೋ, ಕ್ರೈಂ ಬೇಸ್ಡ್ ಸ್ಟೋರಿಯೊ? ಎಂಬ ಪ್ರಶ್ನೆಗಳು ಸುಳಿದಾಡುತ್ತವೆ. ಯಾಕೆಂದರೆ ಅಶ್ವತ್ಥಾಮನನ್ನು ನಿರ್ದೇಶಿಸುತ್ತಿರೋದು ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಸಚಿನ್. ಪುಷ್ಕರ ಮಲ್ಲಿಕಾರ್ಜುನಯ್ಯ ಚಿತ್ರ ನಿರ್ಮಾಣಕ್ಕೆ ಒಲವು ತೋರಿದ್ದಾರೆ.
ಇದು ಮಹಾಭಾರತದ ದ್ರೋಣಾಚಾರ್ಯ ಪುತ್ರ ಅಶ್ವತ್ಥಾಮನ ಕಥೆಯೋ? ಅಥವಾ ಈಗಿನ ವ್ಯವಸ್ಥೆಯ ಅಶ್ವತ್ಥಾಮನ ಸ್ಥಿತಿಯ ಕಾಲ್ಪನಿಕ ಕತೆಯೊ? ಎಂಬುದನ್ನು ಅರಿಯಲು ಇನ್ನು ಕೆಲ ತಿಂಗಳು ಕಾಯಲೇಬೇಕು.
ಸಿದ್ದರಾಮಯ್ಯ ಬಿಜೆಪಿಗೆ ಬಂದ್ರೆ ಸ್ವಾಗತ: ಪಾಟೀಲ
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಮಾಜಿ ಸಿಎಂ ಸಿದ್ದರಾಮಯ್ಯ ಮೊದಲು ತಮ್ಮದನ್ನು ತಾವು ನೋಡಿಕೊಳ್ಳಲಿ. ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ, ಮತ್ತೊಬ್ಬರ ತಾಟಿನ ನೊಣ ತೆಗೆಯೋದು ಬೇಡ. ಸಿದ್ದರಾಮಯ್ಯ ಬಿಜೆಪಿಗೆ ಬಂದ್ರೆ ಸ್ವಾಗತ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಕೊಪ್ಪಳದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಮೊದಲು ತಮ್ಮ ಪಕ್ಷದಲ್ಲಿನ ಭಿನ್ನಾಭಿಪ್ರಾಯ ಮೊದಲು ಸರಿ ಮಾಡಿಕೊಳ್ಳಲಿ. ಡಿಕೆ ಶಿವಕುಮಾರ ಮತ್ತು ನಿಮ್ಮ ನಡುವಿನ ಕಚ್ಚಾಟ ಮುಗಿಸಿಕೊಳ್ಳಿ
ನಮ್ಮನ್ನು ಅನರ್ಹ ಮಾಡಲು ಮುಂದಾಗಿದ್ದ ನಿಮಗೆ ನಮ್ಮ ಬಗ್ಗೆ ಕಾಳಜಿ ಏಕೆ ಎಂದು ಬಿ.ಸಿ.ಪಾಟೀಲ ಪ್ರಶ್ನಿಸಿದರು.
ಬಿಜೆಪಿಯವರ ಬಗ್ಗೆ ಸಿದ್ದರಾಮಯ್ಯನವರಿಗೆ ಅಷ್ಟು ಚಿಂತೆ ಏಕೆ? ಸಿದ್ದರಾಮಯ್ಯನವರಿಗೆ ಬಿಜೆಪಿಗೆ ಬರಲು ಅಷ್ಟು ಆಸಕ್ತಿ ಇದ್ದರೆ ನಾವು ಸ್ವಾಗತಸ್ತಿವಿ ಎಂದರು.
ರಾಜ್ಯದಲ್ಲಿ ಇನ್ನೂ ಎರಡೂವರೆ ವರ್ಷ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ತಿಳಿಸಿದರು.
ಅದು ಘೇರಾವ್ ಅಲ್ಲ, ಮನವಿ ಸಲ್ಲಿಕೆ: ವಿಜಯಸಾಕ್ಷಿ ವರದಿಗೆ ಸ್ಪಷ್ಟನೆ ಕೊಟ್ಟ ಕೃಷಿ ಸಚಿವ ಬಿ.ಸಿ.ಪಾಟೀಲ
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ರೀ ಸ್ವಾಮಿ ಘೇರಾವ್ ಅಂದ್ರೇನು? ಮನವಿ ಕೊಡೊಕೆ ಬಂದಿರೋರು ನನ್ನ ಸುತ್ತುವರಿದು ಮನವಿ ಕೊಟ್ಟರಷ್ಟೇ.. ಅದನ್ನೇ ಘೇರಾವ್ ಅಂತ ಬರೆದರೆ ಹೇಗೆ? ಎಂದು ಬಿ.ಸಿ.ಪಾಟೀಲ ಹೇಳಿದರು.
ರವಿವಾರ ವಿಜಯಸಾಕ್ಷಿಯ ಕೊಪ್ಪಳ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಪತ್ರಿಕೆಯ ವೆಬ್ನಲ್ಲಿ ಸುದ್ದಿ ಪ್ರಕಟಗೊಂಡ ಒಂದೇ ಗಂಟೆಯಲ್ಲಿ ಸ್ಪಷ್ಟೀಕರಣ ನೀಡಿದರು.
ಕೊಪ್ಪಳದಲ್ಲಿ ಪತ್ರಕರ್ತರ ಜೊತೆ ಮಾತನಾಡಲು ಅದಕ್ಕೆ ಹಿಂಜರಿಯಬೇಕೆನಿಸುತ್ತೆ. ರಾಜ್ಯದ ಬೇರೆ ಬೇರೆ ಕಡೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವುದು ಸುಲಭ. ಆದರೆ ಕೊಪ್ಪಳದಲ್ಲಿ ಅನವಶ್ಯಕ ಪ್ರಶ್ನೆಗಳನ್ನೇ ಜಾಸ್ತಿ ಕೇಳ್ತಾರೆ ಎಂದು ನಗುತ್ತಲೇ ಪ್ರತಿಕ್ರಿಯೆ ನೀಡಿದರು.
ನನ್ನನ್ನು ಟೀಕಿಸಿ ಬರೆಯೋದರಲ್ಲೇ ನಿಮಗೆ ಖುಷಿ ಅನಿಸಿದರೆ ಬರೆದುಕೊಳ್ಳಿ. ಏನ್ ಮಾಡಾಕಾಗುತ್ತೆ ಎಂದ ಪಾಟೀಲರಿಗೆ, ಸುದ್ದಿಯನ್ನು ಸುದ್ದಿಯಾಗೇ ಕೊಡೋದು ವಿಜಯಸಾಕ್ಷಿಯ ಕೆಲಸ. ಇಲ್ಲಸಲ್ಲದ್ದನ್ನ ಸೃಷ್ಟಿ ಮಾಡಿ, ಕಲ್ಪನೆ ಮಾಡಿಕೊಂಡು ವರದಿ ಮಾಡಲ್ಲ ಎಂಬುದನ್ನು ವಿಜಯಸಾಕ್ಷಿ ಮನವರಿಕೆ ಮಾಡಿತು.
ಸಚಿವ ಬಿ.ಸಿ.ಪಾಟೀಲಗೆ ಬಿಜೆಪಿ ಕಾರ್ಯಕರ್ತರಿಂದಲೇ ಘೇರಾವ್!
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಜಿಲ್ಲೆಯಲ್ಲಿ ಭತ್ತದ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಸ್ವಪಕ್ಷದ ಕಾರ್ಯಕರ್ತರೇ ಸಚಿವ ಬಿ.ಸಿ.ಪಾಟೀಲಗೆ ಘೇರಾವ್ ಹಾಕಿ ಮನವಿ ಸಲ್ಲಿಸಿದರು.
ಹಿಟ್ನಾಳ ಹೋಬಳಿಯ ಅನೇಕ ರೈತರು ರವಿವಾರ ಬಿಜೆಪಿ ಕಾರ್ಯಕರ್ತರ ಮುಂದಾಳತ್ವದಲ್ಲಿ ಕೃಷಿ ಸಚಿವ ಬಿಸಿ ಪಾಟೀಲ್ ಅವರಿಗೆ ಕೊಪ್ಪಳದಲ್ಲಿ ಘೇರಾವ್ ಹಾಕಿ ಶೀಘ್ರದಲ್ಲಿ ಕೊಪ್ಪಳ ಮತ್ತು ಹಿಟ್ನಾಳ ಹೋಬಳಿ ವ್ಯಾಪ್ತಿಯಲ್ಲಿ ಭತ್ತದ ಖರೀದಿ ಕೇಂದ್ರ ಪ್ರಾರಂಭಿಸಲು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ ಶಾಸಕ ಕೆ ರಾಘವೆಂದ್ರ ಹಿಟ್ನಾಳ ಇದ್ದರು.
ಕೊಪ್ಪಳ ಜಿಲ್ಲೆಯಲ್ಲಿ ಭತ್ತದ ಕಟಾವು ಆರಂಭವಾಗಿದ್ದು ಭತ್ತದ ಬೆಲೆ ಕನಿಷ್ಠ ದರಕ್ಕೆ ಕುಸಿದಿದ್ದು, ರೈತರು ಕಂಗಾಲಾಗುವ ಪರಿಸ್ಥಿತಿ ಬಂದಿದೆ. ಇದರಿಂದ ರೈತರಿಗೆ ತುಂಬಾ ತೊಂದರೆ ಆಗಿದ್ದು, ಕೂಡಲೇ ಕೇಂದ್ರ ಸರ್ಕಾರ ನಿಗದಿಪಡಿಸಿದ MSP ದರದಲ್ಲಿ ಭತ್ತವನ್ನು ಖರೀದಿ ಮಾಡಿದರೆ ರೈತರಿಗೆ ಅನೂಕೂಲ ಆಗಲಿದೆ. ಹಾಗೂ ಭತ್ತದ ಕಟಾವು ಯಂತ್ರದ ದರವನ್ನು ಯಂತ್ರದ ಮಾಲಕರು ಬೇಕಾಬಿಟ್ಟಿ ನಿಗದಿ ಮಾಡಿದ್ದು ಅಂದಾಜು ಎರಡು ಸಾವಿರದಿಂದ ನಾಲ್ಕು ಸಾವಿರ ರೂ.ವರೆಗೆ ನಿಗದಿ ಮಾಡಿ ರೈತರಿಂದ ವಸೂಲಿ ಮಾಡುತ್ತಿದ್ದಾರೆ. ಇದನ್ನೂ ಕೂಡಲೆ ಜಿಲ್ಲಾಧಿಕಾರಿಗಳ ಮುಖಾಂತರ ದರವನ್ನು ಒಂದು ಗಂಟೆಗೆ ಹದಿನೆಂಟು ನೂರು ರೂಪಾಯಿಗಳನ್ನು ನಿಗದಿಪಡಿಸಬೇಕೆಂದು ಆಗ್ರಹಿಸಿದರು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು ಇದೇ ತಿಂಗಳಿನಿಂದ ರೈತರ ನೋಂದಣಿ ಕಾರ್ಯ ಪ್ರಾರಂಭಿಸಿ ಕೂಡಲೇ ಕೊಪ್ಪಳದಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಎಂಎಸಿಪಿ ದರದಲ್ಲಿ ಕೊಪ್ಪಳದಲ್ಲಿ ಕೇಂದ್ರವನ್ನು ಆರಂಭಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಹಿಟ್ನಾಳ ಹೋಬಳಿಯ ಹುಲಿಗಿ ತಾ.ಪಂ.ಸದಸ್ಯ ಪಾಲಾಕ್ಷಪ್ಪ ಗುಂಗಾಡಿ, ಕೊಪ್ಪಳ ಬಿಜೆಪಿ ತಾಲೂಕು ಅಧ್ಯಕ್ಷ ಪ್ರದೀಪ ಹಿಟ್ನಾಳ, ಎಪಿಎಂಸಿ ಸದಸ್ಯ ವಿಶ್ವನಾಥ್ ರಾಜ, ರೈತ ಮುಖಂಡರಾದ ಶಿವಬಾಬು ಚಲಸಾನಿ, ವೆಂಕಟರಾವ, ಚನ್ನಪ್ಪಗೌಡ್ರ, ಶೀನಪ್ಪ, ಹನುಮಂತಪ್ಪ, ರಾಮರಾವ, ಮಹೇಶ ಮಂಗಳೂರ, ಬಸವರಾಜ್ ಕೆ.ವಿಶ್ವನಾಥ ಹೀರೆಮಠ, ಮಂಜುನಾಥ ಪೂಜಾರ, ಭಿಮಣ್ಣ ಹಿಟ್ನಾಳ ಹಾಗೂ ಹಿಟ್ನಾಳ, ಅಗಳಕೇರಿ, ಶಿವಪುರ, ಹುಲಿಗಿ ಗ್ರಾಮದ ರೈತರು ಸಚಿವರಿಗೆ ಮನವಿ ಸಲ್ಲಿಸಿದರು.
ಬೆಳೆ ಹಾನಿ ವಿವರ ದಾಖಲೀಕರಣ ಶೀಘ್ರ ಪೂರ್ಣಗೊಳಿಸಿ: ಸುಂದರೇಶ್ ಬಾಬು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಪರಿಹಾರ ತಂತ್ರಾಂಶದಲ್ಲಿ ಬೆಳೆ ಹಾನಿ ವಿವರವನ್ನು ಸಂಬಂಧಿತ ಇಲಾಖೆಗಳು ಮುತುವರ್ಜಿಯಿಂದ ವಹಿಸಿ ದಾಖಲೀಕರಣ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಫರೆನ್ಸ ಸಭಾಂಗಣದಲ್ಲಿ ಜರುಗಿದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ಬೆಳೆ ಹಾನಿಯ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ನಮೂದಿಸಲು ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಹಾನಿಗೊಳಗಾದ ಬೆಳೆಯ ವಿವರವನ್ನು ಸಂಬಂಧಿಸಿದ ಇಲಾಖೆಗೆ ಒದಗಿಸಲು ತಿಳಿಸಿದರು. ಪರಿಹಾರ ತಂತ್ರಾಂಶದ ದಾಖಲಿಕರಣಕ್ಕೆ ಸಂಬಂಧಿಸಿದ ಅಡಚಣೆಗಳನ್ನು ಕೂಡಲೇ ನಿವಾರಿಸಿ ದಾಖಲೀಕರಣ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಈ ಕಾರ್ಯದಲ್ಲಿ ಯಾವುದೇ ನೆಪ ಒಡ್ಡಿ ವಿಳಂಭವಾದರೆ ಸಂಬಂಧಿಸಿದ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವದು ಎಂದು ತಿಳಿಸಿದರು. ಈ ಕಾರ್ಯವನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಅನುಕೂಲವಾಗುವಂತೆ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಬೆಳೆ ವಿಮೆ ಕುರಿತಂತೆ ಮಾತನಾಡಿದ ಜಿಲ್ಲಾಧಿಕಾರಿಗಳು ವಿಮಾ ಪಾವತಿಯ ಕೊನೆಯ ದಿನಾಂಕ ಹತ್ತಿರವಾಗುತ್ತಿದ್ದು ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿ ಹೆಚ್ಚಿನ ರೈತರು ಬೆಳೆ ವಿಮೆಗೆ ಒಳಪಡುವಂತೆ ಜಾಗೃತಿ ಮೂಡಿಸಬೇಕು. ಬಿತ್ತನೆ ಕಾರ್ಯ ಪ್ರಾರಂಭವಾಗಿದ್ದು ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಸಮರ್ಪಕ ದಾಸ್ತಾನು ಹೊಂದಿದ್ದು ಈ ವಿಷಯದಲ್ಲಿ ಯಾವುದೇ ಅನಾನೂಕುಲವಾಗದಂತೆ ವಿತರಿಸಲು ಸೂಚಿಸಿದರು. ರೈತರ ಬಿತ್ತನೆ ಮಾಡುವ ಪೂರ್ವದಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಲು ಹಾಗೂ ಬೆಳೆಗಳಿಗೆ ಬರಬಹುದಾಂತಹ ರೋಗಗಳ ಕುರಿತು ಅಗತ್ಯದ ತಿಳುವಳಿಕೆ ನೀಡಬೇಕು.
ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಒದಗಿಸಲು ಕೂಡಲೆ ಕ್ರಮ ಕೈಗೊಳ್ಳಬೇಕು. ಹಾನಿಗೊಳಗಾದ ಮನೆಗಳ ಸಂಪೂರ್ಣ ವಿವರ ಪಡೆದು ಪರಿಹಾರ ಮೊತ್ತವನ್ನು ಫಲಾನುಭವಿಗಳಿಗೆ ಶೀಘ್ರವೇ ವಿತರಿಸಿ ವರದಿ ನೀಡುವಂತೆ ತಿಳಿಸಿದ ಅವರು ಮಳೆ ಹಾಗೂ ಪ್ರವಾಹದಿಂದಾಗಿ ಜನ ಜಾನುವಾರು ಪ್ರಾಣ ಹಾನಿಗೆ ಪರಿಹಾರ ಒದಗಿಸಿದರ ಕುರಿತು ಮಾಹಿತಿ ಪಡೆದರು.
ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ತಾಲೂಕು ಮಟ್ಟದಲ್ಲಿ ಈ ಕುರಿತು ಎಲ್ಲ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಲು ತಿಳಿಸಿದರು. ಜನ ಸಂಚಾರ ಹೆಚ್ಚಾಗಿರುವ ಪ್ರದೇಶಗಳ ರಸ್ತೆ ದುರಸ್ತಿಗೆ ಪ್ರಥಮಾದ್ಯತೆ ನೀಡಿ ನಂತರ ಉಳಿದ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗೃಹ ದಿಗ್ಬಂಧನದಲ್ಲಿರುವವರ ಮೇಲೆ ನಿರಂತರ ನಿಗಾವಹಿಸಿ ವರದಿ ನೀಡಬೇಕು. ಇದಕ್ಕಾಗಿ ನಿಯಮಿಸಲಾದ ಅಧಿಕಾರಿಗಳು ಗೃಹದಿಗ್ಬಂಧನದಲ್ಲಿರುವವರ ಮನೆಗೆ ನಿಯಮಿತವಾಗಿ ಬೇಟಿ ನೀಡಿ ನಿಗದಿತ ಸಮಯದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ., ಉಪವಿಬಾಗಾಧಿಕಾರಿ ರಾಯಪ್ಪ ಹುಣಸಗಿ, ಎಲ್ಲ ತಹಶೀಲ್ದಾರರು, ಕೃಷಿ ಹಾಗೂ ತೊಟಗಾರಿಕೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ರಾಷ್ಟ್ರೀಯ ಏಕತಾ ದಿವಸ: ಪ್ರತಿಜ್ಞಾ ವಿಧಿ ಸ್ವೀಕಾರ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ರಾಷ್ಟ್ರೀ ಏಕತಾ ದಿವಸ ಅಂಗವಾಗಿ ಜಿಲ್ಲಾಡಳಿತ ಮುಖ್ಯ ಸಭಾಂಗಣದಲ್ಲಿ ರಾಷ್ಟ್ರದ ಐಕ್ಯತೆ, ಸಮಗ್ರತೆ, ಭದ್ರತೆ ಮತ್ತು ರಾಷ್ಟ್ರೀಯ ಏಕೀಕರಣದ ಸ್ಪೂರ್ತಿಯನ್ನು ಕಾಪಾಡುವ ಪ್ರತಿಜ್ಞಾ ವಿಧಿಯನ್ನು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ. ಅವರು ಭೋಧಿಸಿದರು.
ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನ್ನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಡಿ.ವೈ.ಎಸ್ಪಿ, ಎಸ್.ಕೆ.ಪ್ರಹ್ಲಾದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವದರ ಮೂಲಕ ಗೌರವ ಸಮರ್ಪಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್., ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನ್ನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಡಿ.ವೈ.ಎಸ್ಪಿ, ಎಸ್.ಕೆ.ಪ್ರಹ್ಲಾದ ಸೇರಿದಂತೆ ಸಮಾಜದ ಮುಖಂಡರು, ಗಣ್ಯರು, ವಿವಿಧ ಇಲಾಖೆ, ಅಧಿಕಾರಿ ಸಿಬ್ಬಂದಿಗಳು ಭಾಗಹಿಸಿದ್ದರು.
ಇದೇ ಸಂದರ್ಭದಲ್ಲಿ ಎಸ.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಪರಿಶಿಷ್ಟ ಪಂಗಡದ ವಿಧ್ಯಾರ್ಥಿನಿ ಕು. ಸಹನಾ ರಾಮಗೇರಿ ಅವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಒಂದೊಂದಾಗಿ ಸಾಯುತ್ತಿರುವ ಕುರಿಗಳು: ಚಿಕಿತ್ಸೆ ನೀಡಲು ಸತಾಯಿಸುತ್ತಿರುವ ವೈದ್ಯರು!
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಶನಿವಾರ ಬೆಳಗಿನಿಂದ ಅಸ್ವಸ್ಥಗೊಂಡಂತೆ ಕಂಡು ಬಂದ ಕುರಿಯೊಂದು ತಾಲೂಕಿನ ಅಳವಂಡಿ ಹೋಬಳಿಯ ಹೈದರ್ನಗರದಲ್ಲಿ ನಡೆದಿದೆ.
ತಕ್ಷಣ ಕುರಿಗಾಹಿ ದೇವಪ್ಪ ಅವರು ಪಶು ವೈದ್ಯ ವಿನೋದ ಅಳವಂಡಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿ ಸುಮಾರು ನಾಲ್ಕು ಗಂಟೆ ಕಳೆದರೂ ಸ್ಥಳಕ್ಕೆ ಪಶುವೈದ್ಯರು ಬಂದಿಲ್ಲ. ಪರಿಣಾಮ ಕುರಿಹಿಂಡಿನಲ್ಲಿರುವ ಒಂದೊಂದೇ ಕುರಿಗಳು ಅಸು ನೀಗುತ್ತಿವೆ.
ಇದರಿಂದ ಆತಂಕಗೊಂಡಿರುವ ಕುರಿಗಾಹಿ ದೇವಪ್ಪ ಪರಿ ಪರಿಯಾಗಿ ಬೇಡಿಕೊಂಡರೂ ವೈದ್ಯರು ನಮಗೆ ಇದೊಂದೇ ಕೆಲಸ ಅಲ್ಲ, ಬೇರೆ ಕಡೆ ಇದೀವಿ. ಜೊತೆಗೆ ಇವತ್ತು ರಜೆ ಬೇರೆ ಇದೆ. ಬರುವವರೆಗೆ ಕಾಯಬೇಕು ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎಂದು ಕುರಿಗಾಹಿ ದೇವಪ್ಪ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ಕೇಳಲು ಪಶುವೈದ್ಯ ವಿನೋದ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಸಂಪರ್ಕ ಸಾಧ್ಯವಾಗುತ್ತಿಲ್ಲ.
ಅ.31 ರಂದು ಮಹರ್ಷಿ ವಾಲ್ಮೀಕಿ ಜಯಂತಿ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಅ.31 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

