ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಪಶ್ಚಿಮ ಪದವೀಧರ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮರೆಯದೆ, ಚುನಾವಣಾ ಆಯೋಗದ ಪ್ರತಿನಿಧಿಯಾಗಿ ಕೆಲಸ ಮಾಡಬೇಕು. ಚುನಾವಣಾ ಕಾರ್ಯಗಳಲ್ಲಿ ಅನನುಕೂಲ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆಯ ವೀಕ್ಷಕಿ ಡಾ. ಶಾಲಿನಿ ರಜನೀಶ್ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿ.ಪಂ. ಸಭಾಂಗಣದಲ್ಲಿ ನಡೆದ ಮೈಕ್ರೋ ವೀಕ್ಷಕರ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪಶ್ಚಿಮ ಪದವೀಧರ ಚುನಾವಣೆಯ ಅಂತ್ಯದವರೆಗೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆ ಆಗದಂತೆ ನಿಗಾವಹಿಸಬೇಕು. ಎಂಸಿಸಿ ಉಲ್ಲಂಘನೆಯಾದಲ್ಲಿ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದರು.
ಚುನಾವಣೆ ಕಾರ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದಲ್ಲಿ ತಕ್ಷಣ ಸಂಬಂಧಿಸಿದ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು. ಚುನಾವಣಾ ಕಾರ್ಯದ ಪ್ರತಿ ಹಂತದ ಪ್ರಚಲಿತ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ವಾಟ್ಸಾಪ್ ಗ್ರೂಪ್ ಮಾಡುವ ಮೂಲಕ ವಿನಿಮಯ ಮಾಡಿಕೊಳ್ಳಬೇಕು. ಚುನಾವಣಾ ಆಯೋಗ ಕಾಲಕಾಲಕ್ಕೆ ನೀಡುವ ನಿರ್ದೇಶನಗಳಂತೆ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಮುಂಜಾಗ್ರತೆ ಇರಲಿ: ಕೊರೊನಾ ಸಂದರ್ಭದಲ್ಲಿ ನಡೆಯುತ್ತಿರುವ ಪ್ರಥಮ ಚುನಾವಣೆ ಇದಾಗಿದ್ದು, ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್ ಬಗ್ಗೆ ಭಯಪಡದೆ ಜಾಗೃತವಾಗಿರಬೇಕು. ಮತದಾನದ ಸಂದರ್ಭದಲ್ಲಿ ಮತಗಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಚುನಾವಣಾ ಸಿಬ್ಬಂದಿ, ಮತದಾರರು ಸಹಿತ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮತದಾನಕ್ಕೂ ಮುನ್ನ ಮತಗಟ್ಟೆಗಳನ್ನು ಸ್ಯಾನಿಟೈಜೇಶನ್ ಮಾಡಬೇಕು., ಮತದಾನದ ಕೊನೆಯ ಘಳಿಗೆಯಲ್ಲಿ ಮುಂಜಾಗ್ರತಾ ಕ್ರಮಗಳೊಂದಿಗೆ ಕೋವಿಡ್ ಸೋಂಕಿತ ಮತ್ತು ಶಂಕಿತ ಪದವೀಧರರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು. ಮತಗಟ್ಟೆಗಳಲ್ಲಿ ಪ್ರತಿಯೊಬ್ಬರೂ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಿರ್ದೇಶಿಸಿದರು.
ಮತಗಟ್ಟೆಯಲ್ಲಿ ಶಾಂತಿಯುತ ಹಾಗೂ ನಿಷ್ಪಕ್ಷಪಾತ ಮತದಾನ ನಡೆಯುವಂತೆ ನೋಡಿಕೊಳ್ಳಬೇಕು. ಮತಗಟ್ಟೆಗಳಲ್ಲಿ ಜನಸಂದಣಿ ಆಗದಂತೆ ಕ್ರಮ ಕೈಗೊಳ್ಳಬೇಕು. ಮತದಾನ ಕೇಂದ್ರಗಳಲ್ಲಿ ವ್ಯಕ್ತಿಗತ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ನಿಯಂತ್ರಿಸುವುದರ ಜೊತೆಗೆ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದು ಡಾ. ಶಾಲಿನಿ ರಜನೀಶ್ ಸೂಚಿಸಿದರು.
ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು, ಜಿ.ಪಂ. ಸಿಇಒ ಡಾ. ಆನಂದ ಕೆ., ಎಸ್ಪಿ ಯತೀಶ್ ಎನ್., ಅಪರ ಜಿಲ್ಲಾಧಿಕಾರಿ ಸತೀಶ್ಕುಮಾರ ಎಂ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೈಕ್ರೋ ವೀಕ್ಷಕರ ಪ್ರಾತ್ಯಕ್ಷಿಕೆ ತರಬೇತಿ
ಮೀಸಲಾತಿ ಪಡೆಯುವವರೆಗೆ ವಿರಮಿಸೆವು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಶೇ. 3 ಜನರಿಗೆ ಕೇಳದೆ ಶೇ. 10 ನಿಗದಿ ಮಾಡಿರುವ ಮನುವಾದಿಗಳು ಶೇ. 8.5 ರಷ್ಟಿರುವ ಪರಿಶಿಷ್ಟ ಪಂಗಡಕ್ಕೆ ಮೀಸಲು ನೀಡಲು ಮೀನಾಮೇಷ ಎಣಿಸುತ್ತಿವೆ, ಮೀಸಲಾತಿ ಪಡೆಯುವವರೆಗೆ ವಿರಮಿಸುವದಿಲ್ಲ ಎಂದು ಸಮಾಜದ ಜಿಲ್ಲಾಧ್ಯಕ್ಷ ಟಿ. ರತ್ನಾಕರ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಮುಂದುಗಡೆ ಕೊಪ್ಪಳ ಜಿಲ್ಲಾ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಹಮ್ಮಿಕೊಂಡಿರುವ ಹತ್ತು ದಿನಗಳ ಪ್ರತಿಭಟನಾ ಧರಣಿ ಉದ್ದೇಶಿಸಿ ಮಾತನಾಡಿದರು.
ಮಾತು ಉಳಿಸಿಕೊಳ್ಳಿ: ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೆ. 7.5 ಮೀಸಲು ನಿಗದಿಗೆ ಕೊಟ್ಟ ಗಡುವು, ಅವಧಿ ಮುಗಿದಿದ್ದು ಸರಕಾರ ಶೀಘ್ರ ಕ್ಯಾಬಿನೆಟ್ ಅನುಮೋದನೆ ಪಡೆಯಬೇಕು. ಇಲ್ಲವಾದಲ್ಲಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಇನ್ನಷ್ಟು ತೀವ್ರ ಸ್ವರೂಪದ ಹೋರಾಟ ಮಾಡಲು ನಿರ್ಧರಿಸಲಾಯಿತು. ಫೆಬ್ರವರಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ವರದಿ ಬಂದ ತಕ್ಷಣ ಮೀಸಲಾತಿ ನೀಡುವ ಭರವಸೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮಾತು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಅ. 30ರ ವರೆಗೆ ಧರಣಿ: ರಾಜ್ಯ ಕಾರ್ಯದರ್ಶಿ ಸುರೇಶ ಡೊಣ್ಣಿ ಮಾತನಾಡಿ, ಸಮಾಜದ ನಾಲ್ಕು ದಶಕದ ಹೋರಾಟಕ್ಕೆ ಬೆಲೆ ಕೊಡಬೇಕು. ಇಲ್ಲವಾದಲ್ಲಿ ಬೇಡರು ಬಯಲಿಗೆ ಬರುತ್ತಾರೆ. ತಮ್ಮನ್ನು ಹಗುರವಾಗಿ ಪರಿಗಣಿಸಬಾರದು ಎಂದರು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ಅ. 30 ರವರೆಗೆ ಧರಣಿ ನಡೆಸಲಾಗುವುದು ಎಂದರು.
ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಕರ್ನಾಟಕ ಸರಕಾರ ಪರಿಶಿಷ್ಟ ಪಂಗಡಕ್ಕೆ ಕೊಡಬೇಕಿರುವ ಶೇ. 7.5 ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಯನ್ನು ಈ ಕೂಡಲೇ ಜಾರಿಗೆ ತರಬೇಕು. ತಮ್ಮ ಸರಕಾರ ಹಲವು ಬಾರಿ ಭರವಸೆ ನೀಡಿದ್ದು, ಜ. ನಾಗಮೋಹನ್ ದಾಸ್ ವರದಿ ಬಂದು ನಾಲ್ಕು ತಿಂಗಳು ಕಳೆದಿವೆ. ಅನುಷ್ಠಾನಕ್ಕೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಈ ನಾಲ್ಕು ದಶಕಗಳಲ್ಲಿ ಹಲವು ಜಾತಿಯ ಜನರು ಪರಿಶಿಷ್ಟ ಪಂಗಡದ ಪರಿಮಿತಿಯಲ್ಲಿ ಬಂದು ಸೇರಿದ್ದಾರೆ. ವಾಸ್ತವ ಅಂಕಿ ಅಂಶಗಳ ಪ್ರಕಾರ ಪರಿಶಿಷ್ಟ ಪಂಗಡದ ಜನಸಂಖ್ಯೆ ಶೇ. 8.5 ಆಗುತ್ತದೆ. ಹೀಗಿರುವಾಗ ಸಂವಿಧಾನಬದ್ಧ ಮೀಸಲು ನೀಡಲು ಮೀನಾಮೇಷ ಎಣಿಸುತ್ತಿರುವದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾ ಧರ್ಮದರ್ಶಿ ರಾಮಣ್ಣ ಕಲ್ಲನವರ, ಜಿಲ್ಲಾ ಕಾರ್ಯದರ್ಶಿ ಶಿವಮೂರ್ತಿ ಗುತ್ತೂರ್, ಮಾರ್ಕಂಡಪ್ಪ ಕಲ್ಲನವರ, ಹನುಮಂತಪ್ಪ ಗುದಗಿ, ಬಸವರಾಜ ಶಹಪೂರ, ಮುದಿಯಪ್ಪ ತಿಗರಿ, ನಾಗರಾಜ ಕಿಡದಾಳ, ಗವಿಸಿದ್ದಪ್ಪ ಶಹಪೂರ, ರಮೇಶ ಪಾಟೀಲ್, ವಿರುಪಾಕ್ಷಗೌಡ್ರು, ರಾಮಣ್ಣ, ಸಿದ್ದಪ್ಪ, ಶೇಖರ ಇಂದರಗಿ ಇದ್ದರು.
ಸಂಕನೂರ ಪರ ಅನಿಲ್ ಮೆಣಸಿನಕಾಯಿ ಪ್ರಚಾರ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ವಿ ಸಂಕನೂರ ಪರ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.
ಬುಧವಾರ ಬೆಟಗೇರಿಯ ಮೋಹನ್ ಹೊನ್ನಳ್ಳಿ ಅವರ ಮನೆಯಲ್ಲಿ ಪ್ರಚಾರ ಸಭೆ ನಡೆಸಿದ ಅನಿಲ್ ಮೆಣಸಿನಕಾಯಿ, ಎಸ್ ವಿ ಸಂಕನೂರ ಅವರ ಗೆಲುವಿಗೆ ಶ್ರಮಿಸಬೇಕೆಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಅನಿಲ್ ಮೆಣಸಿನಕಾಯಿ, ಸಂಕನೂರ ಅವರ ಗೆಲುವಿನಲ್ಲಿ ವಾರ್ಡ್ ಪ್ರಮುಖರ ಪಾತ್ರ ಅಪಾರವಾಗಿದೆ. ಪದವೀಧರ ಮತದಾರರ ಮನೆಮನೆಗೆ ತೆರಳಿ ಬಿಜೆಪಿ ಸರ್ಕಾರದ ಜೊತೆಗೆ ಸಂಕನೂರ ಅವರ ವೈಯಕ್ತಿಕ ಸಾಧನೆ ಮತ್ತು ಸೇವೆಯನ್ನು ತಿಳಿಸಿ, ಮತ ನೀಡುವಂತೆ ಮನವೊಲಿಸಬೇಕು. ಪದವೀಧರ ಮತದಾರರ ಪಟ್ಟಿ ಅಂತಿಮವಾಗಿದ್ದು, ಆ ಪಟ್ಟಿಯಲ್ಲಿರುವ ಮತದಾರರ ಸಂಪೂರ್ಣ ಮಾಹಿತಿ ಪಡೆಯಬೇಕು ಎಂದರು.
ಪ್ರಚಾರ ಸಭೆ ನಂತರ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಚುನಾವಣೆ ತಯಾರಿ, ಪಕ್ಷ ಸಂಘಟನೆ ಕುರಿತು ಸಂಪೂರ್ಣ ಮಾಹಿತಿ ಪಡೆದರು. ಯಾವುದೇ ಕಾರಣಕ್ಕೂ ಮೈಮರೆಯದೇ ಪಶ್ಚಿಮ ಪದವೀಧರ ಕ್ಷೇತ್ರ ಕೈ ತಪ್ಪದಂತೆ ನೋಡಿಕೊಳ್ಳಬೇಕೆಂದು ಮುಖಂಡರು ಹಾಗೂ ನೆರೆದಿದ್ದ ಕಾರ್ಯಕರ್ತರಿಗೆ ವಿನಂತಿಸಿದರು.
ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಕಾಂತಿಲಾಲ್ ಬನ್ಸಾಲಿ, ಶಹರ ಅಧ್ಯಕ್ಷ ಮಹಾಂತೇಶ್ ನಾಲ್ವಾಡ, ಡಿ ಜಿ ಕೊಳ್ಳಿ, ಈಶಣ್ಣ ಮುನವಳ್ಳಿ, ಮಂಜುನಾಥ್ ಮ್ಯಾಗೇರಿ, ರಾಘವೇಂದ್ರ ಯಳವತ್ತಿ, ಅರವಿಂದ ಹುಲ್ಲೂರ, ವೆಂಕಟೇಶ್ ಬಳ್ಳಾರಿ, ಶ್ರೀನಿವಾಸ್ ಹುಬ್ಬಳ್ಳಿ, ರಾಘು ಶ್ಯಾವಿ, ಹನುಮಂತಪ್ಪ ಅಳವಂಡಿ, ಸುಧೀರ್ ಕಾಟಿಗೇರ್, ಮಂಜುನಾಥ್ ತಳವಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ದೇವಸ್ಥಾನದ ಹುಂಡಿಯಲ್ಲೂ ಈ ಸಲ ಕಪ್ ನಮ್ದೆ!!
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಎಲ್ಲೆಡೆ ಐಪಿಎಲ್ ಕಾವು ಜೋರಾಗಿದೆ. ರಾಜ್ಯದಲ್ಲಿ ಆರ್ಸಿಬಿ ಅಭಿಮಾನಿಗಳು ಉತ್ಸಾಹದಿಂದ ಸಂಭ್ರಮಿಸುತ್ತಿರುವುದು ಗೊತ್ತಿರುವ ಸಂಗತಿಯೇ. ಕಳೆದ ಐಪಿಎಲ್ ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ಸಲ ಭರ್ಜರಿ ಫಾರ್ಮ್ನಲ್ಲಿದೆ.
ಈ ಸಲ ಕಪ್ ನಮ್ದೆ ಆರ್ ಸಿಬಿ ಎನ್ನುವ ಮಾತು ಕಳೆದ ಸಲಕ್ಕಿಂತ ಈ ಸಲ ಅಧಿಕವಾಗಿದೆ. ಎಷ್ಟೋ ಜನ ಅಭಿಮಾನಿಗಳು ದೇವಸ್ಥಾನದಲ್ಲಿ ಪೂಜೆ, ಪುನಸ್ಕಾರ ಮಾಡಿರುವ ಸುದ್ದಿಗಳು ಹೊರ ಬಂದಿವೆ.
ಇದೀಗ ಆರ್ಸಿಬಿ ಅಭಿಮಾನಿಯೊಬ್ಬ ಕೊಪ್ಪಳ ಜಿಲ್ಲೆಯ ಕನಕಗಿರಿಯ ಕನಕರಾಯ ದೇವಸ್ಥಾನದ ಹುಂಡಿಯಲ್ಲಿ ಭಕ್ತಿಯ ಕಾಣಿಕೆಯ ಜೊತೆಗೆ ಹುಂಡಿಯಲ್ಲಿ ಈ ಸಲ ಕಪ್ ನಮ್ದೆ ಆರ್ಸಿಬಿ ಎಂಬ ಅಭಿಮಾನದ ಚೀಟಿಯೊಂದನ್ನು ಹಾಕಿದ್ದಾನೆ. ದೇವಸ್ಥಾನದ ಹುಂಡಿಯ ಕಾಣಿಕೆ ಹಣವನ್ನು ಎಣಿಸುವಾಗ ಈ ಚೀಟಿ ಪತ್ತೆಯಾಗಿದೆ.
ಪೊಲೀಸ್ ಹುತಾತ್ಮರ ದಿನಾಚರಣೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಗದಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಅ. 21ರಂದು ಬೆಳಗ್ಗೆ ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಕರ್ತವ್ಯ ಪಾಲನೆಯಲ್ಲಿ ಪ್ರಾಣಾರ್ಪಣೆ ಮಾಡಿದ ಪೊಲೀಸರ ನೆನಪಿಗಾಗಿ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ಜರುಗಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ ವಿ. ಪಾಟೀಲ, ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು, ಜಿಲ್ಲಾ ಪಂಚಾಯತ್ ಸಿಇಒ ಡಾ. ಆನಂದ ಕೆ. ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ನಮನ ಸಲ್ಲಿಸಿದರು.
ಪೊಲೀಸ್ ಹುತಾತ್ಮರ ದಿನಾಚರಣೆ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಕಳೆದ ಒಂದು ವರ್ಷದಲ್ಲಿ ಕರ್ನಾಟಕದ 17 ಸೇರಿದಂತೆ ದೇಶದಲ್ಲಿ ಒಟ್ಟು 264 ಜನ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿ ಪ್ರಾಣಾರ್ಪಣೆ ಮಾಡಿದ್ದು, ಅವರ ಪ್ರಾಣ ಬಲಿದಾನ ನೆನೆಯುವ ದಿನ ಇದಾಗಿದೆ. 1959 ರಿಂದ ಪ್ರತಿ ವರ್ಷ ಅ. 21ರಂದು ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ ಎಂದ ಅವರು, ಹುತಾತ್ಮರಾದ ಪೊಲೀಸರ ಹೆಸರುಗಳನ್ನು ವಾಚಿಸಿದರು.
ಕವಾಯತು ಸಮಾದೇಷ್ಠರಿಂದ ವಂದನೆ ಸಲ್ಲಿಸಿ, ಬಳಿಕ ವಿವಿಧ ಶಸ್ತ್ರಾಸ್ತ್ರ ಕವಾಯತು ನಡೆಯಿತು. ಅನಂತರ ಮೌನಾಚರಣೆ ಮಾಡಲಾಯಿತು. ಪೊಲೀಸ್ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.
ಮಾನ್ಪಡೆ ನಿಧನ ಎಡಪಂಥೀಯ ಸಂಘಟನೆಗಳಿಗೆ ದೊಡ್ಡ ನಷ್ಟ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಹರಪನಹಳ್ಳಿ
ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ವಾದ) ಹಿರಿಯ ನಾಯಕ ಮಾರುತಿ ಮಾನ್ಪಡೆ ನಿಧನರಾಗಿದ್ದು ಎಡಪಂಥೀಯ ಪಕ್ಷ ಸಂಘಟನೆಗಳಿಗೆ ತುಂಬಲಾಗದ ನಷ್ಟವಾಗಿದೆ ಎಂದು ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು.
ಸಿಪಿಐ (ಎಂ) ತಾಲ್ಲೂಕು ಕಾರ್ಯದರ್ಶಿ ರೇಣುಕಮ್ಮ ಮಾತನಾಡಿ, ಮಾರುತಿ ಮಾನ್ಪಡೆ ಅವರ ಅಕಾಲಿಕ ಮರಣ ಪಕ್ಷಕ್ಕೆ ಮಾತ್ರವಲ್ಲ, ನಮ್ಮ ಎಲ್ಲ ಎಡಪಂಥೀಯ ಪಕ್ಷ ಸಂಘಟನೆಗಳಿಗೆ ತುಂಬಲಾರದ ನಷ್ಟವಾಗಿದೆ, ಒಬ್ಬ ಅತ್ಯುತ್ತಮ ಬುದ್ಧಿಜೀವಿ ಹೊರಾಟಗಾರರನ್ನು ನನ್ನ ಜೀವಮಾನದಲ್ಲೇ ಕಂಡಿರಲಿಲ್ಲ. ಇವತ್ತು ನನ್ನಂತಹ ಮಹಿಳೆಯವರು ಕೊಮುವಾದಿಗಳಿಂದ ಹದಗೆಟ್ಟ ಸಾಮಾಜಿಕ ವ್ಯವಸ್ಥೆಯೊಳಗೆ ಒಬ್ಬಂಟಿಯಾಗಿ ಧೈರ್ಯದಿಂದ ಬದುಕುವುದನ್ನು ಕಲಿಸಿಕೊಟ್ಟ ಧೀಮಂತ ನಾಯಕ ಎಂದು ಬಣ್ಣಿಸಿದರು.
ಸಿಪಿಐ ತಾಲ್ಲೂಕು ಕಾರ್ಯದರ್ಶಿ ಕೆರೆ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಹರಪನಹಳ್ಳಿಯಲ್ಲಿ ಅವರು ನಡೆಸಿದ ಹೋರಾಟಗಳ ಸಂದರ್ಭದಲ್ಲಿ ಧೈರ್ಯದಿಂದ ಪಾಲ್ಗೊಂಡಿದ್ದರು. ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ, ಹೋರಾಟಕ್ಕಾಗಿ ತಮ್ಮ ಇಡೀ ಬದುಕನ್ನೇ ಮೀಸಲಿಟ್ಟಿದ್ದರು. ಇಂತಹ ನಾಯಕರು ಇವತ್ತಿನ ಸಂದರ್ಭದಲ್ಲಿ ತುಂಬ ವಿರಳ, ನಾವೆಲ್ಲರೂ ಅವರ ಮಾರ್ಗದಲ್ಲಿ ನಡೆಯೋಣ ಎಂದರು.
ಕೆಪಿಆರ್ಎಸ್ನ ಹುಲಿ ಕಟ್ಟಿ ರಾಜಪ್ಪ, ಬದ್ಯನಾಯ್ಕ, ರಹಮತ್ ಹುಲಿಕಟ್ಟಿ, ಹುಲಿ ಕಟ್ಟಿ ಮೈಲಪ್ಪ, ದುರ್ಗಪ್ಪ, ಎ.ಐ.ವೈ.ಎಫ್. ರಾಜ್ಯ ಕಾರ್ಯದರ್ಶಿ ಸಂತೋಷ ಎಚ್.ಎಂ., ಎ.ಐ.ಎಸ್.ಎಫ್. ರಾಜ್ಯ ಉಪಾಧ್ಯಕ್ಷ ಚಂದ್ರ ನಾಯ್ಕ ಭಾಗಿಯಾಗಿದ್ದರು.
ಚುನಾವಣೆ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯಾಗಲಿ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ
ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ಯುವ ಸಮೂಹವನ್ನು ನಿರುದ್ಯೋಗಕ್ಕೆ ದೂಡಿರುವ ಬಿಜೆಪಿ ಸರ್ಕಾರಗಳಿಗೆ ಪದವೀಧರರ ಚುನಾವಣೆಯ ಫಲಿತಾಂಶವು ಎಚ್ಚರಿಕೆಯಾಗಲಿ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ಬಂಕದ ಹೇಳಿದರು.
ಪಶ್ಚಿಮ ಪದವೀಧರರ ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ದುರ್ಗಾವೃತ್ತ, ಸರಾಫ್ ಬಜಾರ್, ಈದ್ಗಾ ಮೈದಾನ ಸೇರಿ ವಿವಿಧ ಬಡಾವಣೆಗಳ ಪದವೀಧರರ ಬಳಿಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಡಾ. ಆರ್.ಎಂ. ಕುಬೇರಪ್ಪ ಪರವಾಗಿ ಮತಯಾಚಸಿ ಮಾತನಾಡಿದರು.
ರೈತರ, ಕಾರ್ಮಿಕರ ಹಾಗೂ ಜನಸಾಮಾನ್ಯರ ಆರ್ಥಿಕ ಸ್ಥಿತಿ ಸುಧಾರಣೆ ಜತೆಗೆ ದೇಶದ ಯುವ ಸಮೂಹಕ್ಕೆ ಉದ್ಯೋಗ ನೀಡಬೇಕಿದ್ದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಯುವ ಸಮೂಹಕ್ಕೆ ನಿರುದ್ಯೋಗ ಭಾಗ್ಯ ನೀಡುತ್ತಿದೆ. ಪ್ರಶ್ನಿಸುವ ಜನತೆಗೆ ಯುವಕರು ಪಕೋಡ ಮಾರಿ ಎಂಬ ಉತ್ತರ ನೀಡುವ ಮೂಲಕ ಪದವೀಧರರ ನೌಕರಿ ಕನಸಿಗೆ ಕೊಳ್ಳಿ ಇಟ್ಟಿದೆ. ಬಹುಮತವಿದೆ ಎಂದು ಜನವಿರೋಧಿ ಹಾಗೂ ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳಿಗೆ ಸುಗ್ರಿವಾಜ್ಞೆಗಳಿಂದ ತಿದ್ದುಪಡಿ ತರುತ್ತಿರುವ ಸರ್ಕಾರಗಳಿಗೆ ಎಚ್ಚರಿಕೆ ರವಾನಿಸಲು ಸಿಕ್ಕಿರುವ ಅವಕಾಶವನ್ನು ಪ್ರಜ್ಞಾವಂತ ಪದವೀಧರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಐವೈಸಿ ತಾಲೂಕು ಪ್ರಧಾನ ಕಾರ್ಯದರ್ಶಿ ಅನಿಲ್ ಕರ್ಣೆ ಹಾಗೂ ಉಮೇಶ ರಾಠೋಡ ಮಾತನಾಡಿ, ನಮ್ಮ ಜಿಲ್ಲೆಯವರು ಎಂದು ನೀಡಿದ್ದ ಅವಕಾಶವನ್ನು ಬಳಿಕೆ ಮಾಡಿಕೊಳ್ಳುವಲ್ಲಿ ಹಾಗೂ ಪದವೀಧರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಂಕನೂರ ಅವರು ವಿಫಲವಾಗಿದ್ದಾರೆ. ಸಂಘಟನೆ ಹಾಗೂ ಹೋರಾಟ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಅವರಿಗೆ ಅ. 28 ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಲು ಪದವೀಧರರು ಉತ್ಸುಕವಾಗಿದ್ದಾರೆ ಎಂದರು.
ಯತ್ನಾಳ ಅವರದ್ದು ಫೂಲೀಶ್ ಹೇಳಿಕೆ: ಈಶ್ವರಪ್ಪ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಬಸನಗೌಡ ಯತ್ನಾಳ ಅವರದ್ದು ಫೂಲೀಶ್ ಹೇಳಿಕೆ. ಅದು ಅಶಿಸ್ತಿನ ಹೇಳಿಕೆ. ಯತ್ನಾಳ ಹೇಳಿಕೆಯನ್ನು ಖಂಡಸ್ತಿನಿ ಎಂದು ಆರ್ಡಿಪಿಆರ್ ಸಚಿವ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು.
ಕೊಪ್ಪಳದ ಶಿವಶಾಂತ ಮಂಗಲಭವನದಲ್ಲಿ ಬುಧವಾರ ನಡೆದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಪ್ರಚಾರದ ಹಿನ್ನೆಲೆಯಲ್ಲಿ ಮಂಡಲ ಪ್ರಭಾರಿಗಳು ಹಾಗೂ ಮುಖಂಡರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಕ್ಷದಲ್ಲಿ ಇದ್ದುಕೊಂಡು ಶಿಸ್ತಿಗೆ ಭಂಗ ತರುವ ಕೆಲಸ ಸರಿಯಲ್ಲ. ಯತ್ನಾಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲು ಈಗಾಗಲೇ ರಾಜ್ಯಾಧ್ಯಕ್ಷರು ಆದೇಶಿಸಿದ್ದಾರೆ. ನಾವು ಅಂದರೆ ಬಿಜೆಪಿಯವರು ಶಿಸ್ತಿನ ಸಿಪಾಯಿಗಳಾಗಿರಬೇಕು ಎಂದರು.
ಎರಡು ಅಸೆಂಬ್ಲಿ, ನಾಲ್ಕು ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಮುಂದಿನ ದಿಕ್ಸೂಚಿ ಎಂದು ಹೇಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆಶಿಯವರ ಹೇಳಿಕೆಯನ್ನು ಸವಾಲಾಗಿ ಬಿಜೆಪಿ ಸ್ವೀಕರಿಸುತ್ತದೆ. ಫಲಿತಾಂಶ ಕಾದು ನೋಡಿ ದಿಕ್ಸೂಚಿ ಯಾವ ಕಡೆ ಇದೆ ಅಂತ ಗೊತ್ತಾಗುತ್ತೆ ಎಂದು ಹೇಳಿದರು.
ನಮಗೆ ನೂರಕ್ಕೆ ನೂರು ವಿಶ್ವಾಸ ಇದೆ. ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಗೆದ್ದೇ ಗೆಲ್ಲುತ್ತಾರೆ. ಎರಡನೇ ಬಾರಿ ಮತದಾರರನ್ನ ಭೇಟಿ ಮಾಡಿದ್ದೇನೆ. ಕಾಂಗ್ರೆಸ್ನ ಯಾರಾದರೂ ಒಮ್ಮೆಯಾದರೂ, ಒಬ್ಬರನ್ನಾದರೂ ಭೇಟಿ ಮಾಡಿದಾರಾ? ಎಂದು ಪ್ರಶ್ನಿಸಿದರು.
ಹತಾಶಾಭಾವದಲ್ಲಿ ವಿಪಕ್ಷಗಳಿವೆ: ಸಿ.ಟಿ. ರವಿ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ರಾಜ್ಯದಲ್ಲಿ ವಿಪಕ್ಷಗಳು ಹತಾಶಾಭಾವದಿಂದ ಮಾತನಾಡುತ್ತಿವೆ. ಬಿಜೆಪಿ ಅಂಬೇಡ್ಕರ್ ವಿರೋಧಿ, ರೈತ ವಿರೋಧಿ ಎಂದು ದಲ್ಲಾಳಿಗಳ ಪರ ಇರುವ ಕಾಂಗ್ರೆಸ್ ಆರೋಪಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು.
ಕೊಪ್ಪಳದ ಶಿವಶಾಂತ ಮಂಗಲಭವನದಲ್ಲಿ ಬುಧವಾರ ನಡೆದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಪ್ರಚಾರದ ಹಿನ್ನೆಲೆಯಲ್ಲಿ ಮಂಡಲ ಪ್ರಧಾನಿಗಳು ಹಾಗೂ ಮುಖಂಡರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದು ಟ್ರೆಂಡ್ ಸೆಟ್ ಮಾಡುವ ಚುನಾವಣೆ ಅಲ್ಲ, ಮೈಂಡ್ಸೆಟ್ ಮಾಡುವ ಚುನಾವಣೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಕಾಂಗ್ರೆಸ್ಗೆ ಇತ್ತಿಚೆಗೆ ಪಾಕಿಸ್ತಾನದ ಮೇಲೆ ಪ್ರೀತಿ ಜಾಸ್ತಿಯಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬಹುದು, ಆದರೆ ಭಾರತ, ಕರ್ನಾಟಕದಲ್ಲಿ ಅಲ್ಲ,ಪಾಕಿಸ್ತಾನದಲ್ಲಿ ಗೆಲ್ಲಬಹುದು ಎಂದು ಲೇವಡಿ ಮಾಡಿದರು.
ಮೋದಿಯವರು ಮಾಡಿದ ಪರಿವರ್ತನೆ ಯುಗಕ್ಕೆ ಈ ಚುನಾವಣೆ ನಾಂದಿ ಹಾಕುತ್ತದೆ. ಈಶಾನ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಳೆಗೆ ಮನೆ ಕುಸಿತ : ಎತ್ತು, ಹೋರಿ ಕರುಗಳನ್ನು ರಕ್ಷಿಸಿದ ಗ್ರಾಮಸ್ಥರು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಯಲಬುರ್ಗಾ : ನಿರಂತರ ಮಳೆಯಿಂದ ತಾಲೂಕಿನ ಕರಮುಡಿ ಗ್ರಾಮದ ವೀರಪ್ಪ ಮಂಡಲಗೇರಿ ಎಂಬುವವರ ಮನೆಯ ದನದ ಕೊಟ್ಟಿಗೆಯ ಛಾವಣಿ ಸಂಪೂರ್ಣ ಕುಸಿದಿದ್ದರಿಂದ ಕೊಟ್ಟಿಗೆಯಲ್ಲಿದ್ದ ಒಂದು ಎತ್ತು, ಎರಡು ಹೋರಿ ಕರುಗಳು ಮಣ್ಣಿನಡಿ ಸಿಲುಕಿದ್ದವು.
ಬೆಲೆಬಾಳುವ ಜಾನುವಾರುಗಳು ಮಣ್ಣಿನಡಿ ಸಿಲುಕಿದ್ದವು. ಗ್ರಾಮದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಮಣ್ಣಿನಡಿ ಸಿಲುಕಿದ್ದ ಜಾನುವಾರುಗಳನ್ನು ಹೊರತೆಗೆದು ಅವುಗಳ ಪ್ರಾಣ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಜಾನುವಾರು ಮಾಲೀಕನ ಜತೆಗೆ ಗ್ರಾಮದ ಗ್ರಾಮಸ್ಥರು ಕೂಡಿ ಜಾನುವಾರುಗಳ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪಶು ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಲಾಯಿತು.
ಪರಿಹಾರಕ್ಕೆ ಆಗ್ರಹ : ಮನೆ ಕುಸಿತದಿಂದ ಅಪಾರ ವಸ್ತುಗಳು ಹಾನಿಯಾಗಿದ್ದು ಕುಟುಂಬಕ್ಕೆ ತಾಲೂಕಾಡಳಿತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

