Home Blog Page 3110

-ಕೆಆರ್ ಎಸ್ ಕಾರ್ಯಕರ್ತರು-ಪೊಲೀಸರ ನಡುವೆ ವಾಗ್ವಾದ

ಬಿಕ್ಕಟ್ಟು ತಂದಿಟ್ಟ ಹಲ್ಕಟ್ ಪದಪ್ರಯೋಗ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಸೈಕಲ್ ಜಾಥಾ ಮತ್ತು ಸಾರ್ವಜನಿಕ ಭಾಷಣದ ಪರವಾನಗಿಗೆ ಸಂಬಂಧಿಸಿದಂತೆ ಪೊಲೀಸರು ಮತ್ತು ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಪಿಎಸ್ಐ ಮಹಾಂತೇಶ ಮೇಟಿ ಬಳಸಿದ ಹಲ್ಕಟ್ ಎಂದ ಪದಪ್ರಯೋಗ ಕೆಆರ್ಎಸ್ ಕಾರ್ಯಕರ್ತರನ್ನು ಕೆರಳಿಸಿತು.

ನಗರದ ಅಶೋಕ ವೃತ್ತದಲ್ಲಿ ಗುರುವಾರ ವಾಗ್ವಾದದ ಘಟನೆ ನಡೆದಿದ್ದು, ಕೆಲ ಕಾಲ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು. ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣರಡ್ಡಿ ಪೊಲೀಸರಿಗೆ ಪರವಾನಗಿ ಮಾಹಿತಿ ನೀಡಿದ ಬಳಿಕ ಸೈಕಲ್ ಜಾಥಾ ಮುಂದುವರಿಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕೃಷ್ಣರಡ್ಡಿ, ಪೊಲೀಸ್ ಭಾಷೆ ಎಲ್ಲ ಸಂದರ್ಭದಲ್ಲೂ ಒಂದೇ ಇರಬಾರದು. ಭಾಷಾ ಬಳಕೆ, ಪದ ಪ್ರಯೋಗ ನಮಗೂ ಚನ್ನಾಗಿ ಗೊತ್ತಿದೆ. ಜೈಲು ನಮಗೇನು ಹೊಸತಲ್ಲ. ಆದರೂ ಹಲ್ಕಟ್ ಪದ ಬಳಕೆ ಸರಿಯಾದುದಲ್ಲ. ಇದನ್ನೇ ಬೆಳೆಸುವ ಇಚ್ಛೆ ನಮಗಿಲ್ಲ ಎಂದರು.

ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂಬ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದು ಬಿ.ಸಿ.ಪಾಟೀಲ್ ಅವರ ದುರಹಂಕಾರದ ಮಾತು, ಸಂವೇದನೆ ಇಲ್ಲದ ಮಾತು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಹ ಆತ್ಮಹತ್ಯೆಗೆ ಯತ್ನಿಸಿದ್ದರು. ಹಾಗಾದರೆ ಅವರು ಹೇಡಿನಾ? ಅಥವಾ ಅಂಥವರನ್ನು ನೇಮಿಸಿಕೊಂಡ ಮುಖ್ಯಮಂತ್ರಿಯ ಯೋಗ್ಯತೆ ಏನು? ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರಡ್ಡಿ ಪ್ರಶ್ನಿಸಿದರು.

ರೈತರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ ವಿರುದ್ಧ ಕಿಡಿ ಕಾರಿದ ಅವರು, ರೈತರ ಆತ್ಮಗೌರವಕ್ಕೆ ಧಕ್ಕೆ ತರುವಂಥ ಮಾತುಗಳು ಸರಿಯಲ್ಲ. ರೈತರು ಯಾವ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂಬುದು ಶ್ರೀಮಂತ ಕುಟುಂಬದ ದರ್ಪಿಷ್ಟ ಸಚಿವರಿಗೆ ಏನು ಗೊತ್ತು? ಇಂಥವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ಸಿಎಂ ಯಡಿಯೂರಪ್ಪ ಬಿ.ಸಿ.ಪಾಟೀಲ್ ರಿಂದ ಕೃಷಿ ಖಾತೆ ಹಿಂಪಡೆಯಬೇಕು. ಬೇರೆ ಖಾತೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ವಿರೋಧಿಸಿ ನಮ್ಮ ಕೆಆರ್ಎಸ್ ಪಕ್ಷ ಸೈಕಲ್ ಯಾತ್ರೆ ನಡೆಸುತ್ತಿದ್ದು, ಎರಡನೇ ಹಂತದಲ್ಲಿ ಬೆಳಗಾವಿಯಿಂದ ಆರಂಭಗೊಂಡು ಬಳ್ಳಾರಿವರೆಗೆ ಸೈಕಲ್ ಯಾತ್ರೆ ನಡೆಯಲಿದೆ. ಕನ್ನಡಪರ ಸಂಘಟನೆಗಳ ಕರ್ನಾಟಕ ಬಂದ್ಗೆ ಪಕ್ಷವು ಬೆಂಬಲ ನೀಡಲ್ಲ. ಹೋರಾಟದ ಹಾದಿ ಸರಿಯಿದ್ದು, ಸರಕಾರ ಜಾತಿಗಳ ಓಲೈಕೆಗೆ ನಿಗಮ, ಮಂಡಳಿ, ಅಭಿವೃದ್ಧಿ ಪ್ರಾಧಿಕಾರದ ಗಿಮಿಕ್ ಬಿಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟು ಮುಚ್ಚುವಂತಿಲ್ಲ; ಎಸ್ಪಿ ಯತೀಶ್

0

ವಿಜಯಸಾಕ್ಷಿ ಸುದ್ದಿ, ಗದಗ

ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಡಿ.5 ರಂದು ಶನಿವಾರ ಕರ್ನಾಟಕ ಬಂದ್ ಘೋಷಿಸಿದ್ದು, ಬಂದ್ ಬಗ್ಗೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ವಿಜಯಸಾಕ್ಷಿ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಯಲ್ಲಿ ಎಂದಿನಂತೆ ಜನಜೀವನ ನಡೆಯಲಿದೆ. ಯಾರೂ ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಬಾರದು. ಯಾವುದೇ ರಸ್ತೆ ತಡೆ ಮಾಡಬಾರದು. ಯಾವುದೇ ತರಹದ ವಾಹನಗಳನ್ನು ತೆಡೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಿದ್ದರೆ ಸಲ್ಲಿಸಬಹುದು. ಆದರೆ, ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದರೆ ಮತ್ತು ಕಾನೂನಿಗೆ ವಿರುದ್ಧವಾದ ಕೆಲಸಗಳನ್ನು ಮಾಡುವ ಮೂಲಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ಪ್ರಯತ್ನಸಿದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ತಿಳಿಸಿದ್ದಾರೆ.

ಸಚಿವ ಬಿ.ಸಿ.ಪಾಟೀಲ್ ಗೆ ಬಾರ್ಗಳಿಂದಲೂ ಮಾಮೂಲಿ ಫಿಕ್ಸ್: ತಂಗಡಗಿ ಆರೋಪ

-ಕೊರೋನಾ ಹೆಸರಿನಲ್ಲಿ ಕೇಂದ್ರ-ರಾಜ್ಯ ಸರಕಾರ ಕೋಟಿ ಕೋಟಿ ಲೂಟಿ: ಹಿಟ್ನಾಳ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ಜಿಲ್ಲೆಯ ಅಭಿವೃದ್ಧಿ ಕನಸು ಹೊತ್ತು ಬರುವುದಿಲ್ಲ. ಬದಲಾಗಿ ತಮ್ಮ ಕಮಾಯಿ ಗಿಟ್ಟಿಸಿಕೊಳ್ಳಲು ಕೊಪ್ಪಳಕ್ಕೆ ಬಂದು ಸಭೆಯ ಹೆಸರಿನಲ್ಲಿ ವಂತಿಗೆ ಪಡೆಯುತ್ತಾರೆ. ಜಿಲ್ಲೆಯ ಬಾರ್ಗಳಿಂದ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ಗೆ ಮಾಮೂಲಿ ಫಿಕ್ಸ್ ಆಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.

ನಗರದ ಮೇಘರಾಜ ಕಲ್ಯಾಣಮಂಟಪದಲ್ಲಿ ಗುರುವಾರ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕಿದೆ. ಇವಿಎಂಗಳ ಮುಖಾಂತರ ಮೋಸದಿಂದ ಚುನಾವಣೆ ಗೆಲ್ಲುವ ಬಿಜೆಪಿಗೆ ಬುದ್ದಿ ಕಲಿಸಬೇಕಿದೆ. ರಾಜ್ಯದಲ್ಲಿ ಸರಕಾರವೇ ಇಲ್ಲ. ಇದ್ದರೂ ಸತ್ತಂತಿದೆ. ಕೊಪ್ಪಳ ಜಿಲ್ಲೆಯ ಉಸ್ತುವಾರಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳೇ ಮಂತ್ರಿ ಯನ್ನು ತೆಗೆಯಲು ಮನವಿ ಮಾಡಿದ್ದಾರೆ. ಇದುವರೆಗೆ ಸಿಎಂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯನವರು ಮಾಡಿದಂತಹ ಯಾವುದೇ ಯೋಜನೆಗಳನ್ನು ಬಿಜೆಪಿಯವರು ಮಾಡಿಲ್ಲ. ಲವ್ ಜೆಹಾದ್, ಗೋ ಹತ್ಯೆ ಬಿಟ್ರೆ ಬೇರೆ ಏನಿಲ್ಲ. ಯಾವ ಜಾತಿಯವರು ಯಾರನ್ನಾದರೂ ಕಾನೂನು ನಿಗದಿಪಡಿಸಿರುವ ವಯೋಮಾನದವರು ಮದುವೆಯಾದರೆ ಬಿಜೆಪಿಯವರದೇನು ದೊಡ್ಡಸ್ತಿಕೆ? ಬಿಜೆಪಿಯವರು ಬೀದಿಗೆ ಬಿದ್ದ ರೈತರ ಪರವಾಗಿ ಯಾವುದೇ ಕೆಲಸ ಮಾಡುತ್ತಿಲ್ಲ. ಅಧಿಕಾರ ಉಳಿಸಿಕೊಳ್ಳಲು ನಿತ್ಯ ಸರ್ಕಸ್ ಮಾಡುತ್ತಿದ್ದಾರೆ ಬಿಜೆಪಿ ನಾಯಕರು ಎಂದು ಕಿಡಿ ಕಾರಿದರು.

ಗ್ರಾ.ಪಂ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಬೇಕಿದೆ. ಒಂದೇ ವಾರ್ಡಿನಲ್ಲಿ ಇಬ್ಬರು ಮೂವರು ನಿಲ್ಲದೇ ಗೆಲ್ಲುವ ಕೆಲಸ ಮಾಡಬೇಕಿದೆ. ಅಂದಾಗ ದುಷ್ಟ ಬಿಜೆಪಿಯನ್ನು ದೂರ ಮಾಡಲು ಸಾಧ್ಯ. ನಿಷ್ಟಾವಂತ ಕಾಂಗ್ರೆಸ್ ಬೆಂಬಲಿಗರು ಬಿಜೆಪಿಯ ಆಮಿಷಕ್ಕೆ ಒಳಗಾಗುವುದಿಲ್ಲ. ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಬೆಂಬಲಿತರಿಗೆ ತಕ್ಕ ಶಾಸ್ತಿ ಕಲಿಸೋಣ ಎಂದು ಕರೆ ನೀಡಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಲಂಚ ಹೊಡೆಯುವುದರಲ್ಲಿ ರಾಜ್ಯ ಕೇಂದ್ರ ಸರಕಾರ ಒಬ್ಬರಿಗಿಂತ ಒಬ್ಬರು ನಾ ಮೇಲು, ನೀ ಮೇಲು ಎಂಬಂತೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮ ರೂಪಿಸುವಲ್ಲಿ ಬಿಜೆಪಿ ನಾಯಕರು ಶೂನ್ಯವಾಗಿದ್ದಾರೆ ಎಂದು ದೂರಿದರು.

ಬಿಜೆಪಿಯವರು ಭಾಷಣ ಮಾಡುವುದನ್ನು ಬಿಟ್ಟರೆ ಬೇರೆ ಯಾವ ಅಭಿವೃದ್ಧಿಯನ್ನು ಮಾಡಿಲ್ಲ. ದೆಹಲಿಯಲ್ಲಿ ರೈತರು ಹೋರಾಟ ಮಾಡುತ್ತಿರುವಾಗ ಲಾಠಿ ಬೀಸುವ ಕೆಲಸ ಮಾಡಲಾಗಿದೆ. ಮೋದಿಯವರು ಬಿಹಾರ ರಾಜ್ಯಕ್ಕೆ ಉಚಿತವಾಗಿ ಕೊರೋನಾ ಲಸಿಕೆ ಕೊಡುವ ಮಾತನಾಡುತ್ತಾರೆ. ಹಾಗಾದರೆ ಕರ್ನಾಟಕದವರು ಭಾರತೀಯರಲ್ಲವೇ? ಎಂದು ಅವರು ಪ್ರಶ್ನಿಸಿದರು.

ಕೊರೋನಾ ವಿಚಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಎಲ್ಲವನ್ನೂ ನಾಲ್ಕು ಪಟ್ಟು ಹಣ ಕೊಟ್ಟು ಖರೀದಿ ಮಾಡಲಾಗಿದೆ. ಕೊರೋನಾ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಕೋಟಿ ಕೋಟಿ ಲೂಟಿ ಮಾಡಿದೆ. ಕಾಂಗ್ರೆಸ್ ಮಾತ್ರ ಪ್ರತಿಯೊಂದು ಸಮಾಜವನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಪಕ್ಷ. ನೀರಾವರಿ ಯೋಜನೆ, ಆಸ್ಪತ್ರೆ, ಶೈಕ್ಷಣಿಕ ಎಲ್ಲ ಕ್ಷೇತ್ರದಲ್ಲಿ ಮೂರೂವರೆ ಸಾವಿರ ಕೋಟಿಯಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಆದರೆ ಬಿಜೆಪಿ ಏನನ್ನು ಮಾಡಿಲ್ಲ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಚುನಾವಣೆ. ಒಳ್ಳೆಯರನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಪಾಠ ಕಲಿಸಬೇಕು ಎಂದು ತಿಳಿಸಿದರು.

ಈ ವೇಳೆ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಜಿಪಂ ಸದಸ್ಯರಾದ ಗೂಳಪ್ಪ ಹಲಗೇರಿ, ಜಿಪಂ ಮಾಜಿ ಸದಸ್ಯ ಜನಾರ್ಧನ ಹುಲಗಿ, ತಾಪಂ ಅಧ್ಯಕ್ಷ ಬಾಲಚಂದ್ರ, ನಗರಸಭೆ ಸದಸ್ಯರಾದ ಗುರು ಹಲಗೇರಿ, ಅಕ್ಬರ್ ಪಾಷಾ ಪಲ್ಟಾನ್ ಮತ್ತಿತರರು ಇದ್ದರು.

ಚಿಕ್ಕೋಡಿ/ಗೋಕಾಕ ಪ್ರತ್ಯೇಕ ಜಿಲ್ಲೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವೆ: ಸಚಿವ ರಮೇಶ್ ಜಾರಕಿಹೊಳಿ

ವಿಜಯಸಾಕ್ಷಿ ಸುದ್ದಿ, ಚಿಕ್ಕೋಡಿ

ಬೆಳಗಾವಿ ಜಿಲ್ಲೆ ವಿಭಜನೆ ಮಾಡುವುದು ಅತ್ಯಂತ ಅವಶ್ಯಕವಿದೆ. ಚಿಕ್ಕೋಡಿ ಅಥವಾ ಗೋಕಾಕ ತಾಲೂಕಿನವರು ಯಾರಾದರೂ ಒಬ್ಬರು ಹಿಂದಕ್ಕೆ ಸರಿದರೆ ಇವೆರಡರಲ್ಲಿ ಒಂದನ್ನು ಸಲೀಸಾಗಿ ಜಿಲ್ಲೆಯನ್ನಾಗಿ ಮಾಡಬಹುದು ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯವರಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಹಲವು ದಿನಗಳಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆಗೊಳಿಸಿ ಚಿಕ್ಕೋಡಿ-ಗೋಕಾಕ ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಚಿಕ್ಕೋಡಿ-ಗೋಕಾಕ ಜಿಲ್ಲೆಯನ್ನಾಗಿ ಮಾಡಲು ನಿರ್ಧರಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣದಿಂದ ಕೈಬಿಡಲಾಯಿತು ಎಂದು ತಿಳಿಸಿದರು.

ಪ್ರತ್ಯೆಕ ಜಿಲ್ಲೆಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡುವೆ ಎಂದು ಸಚಿವ ರಮೇಶ್ ಜಾರಕಿಹೋಳಿ ಭರವಸೆ ನೀಡಿದರು.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ, ವಿಜಯನಗರವನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಿತ್ತು. ಇದು ರಾಜಕೀಯ ತಿರುವು ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ವಿಭಜನೆ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಂತಾಗಿದೆ.

ಈ ಸಂದರ್ಭದಲ್ಲಿ ಬಿ.ಆರ್.ಸಂಗಪ್ಪಗೋಳ, ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ ಸೇರಿದಂತೆ ಮುಂತಾದವರು ಇದ್ದರು.

ನಡುರಾತ್ರಿಯಲ್ಲಿ ಯುವಕನ ಹತ್ಯೆ; ಕೊಲೆ ಪಾತಕರು ಪರಾರಿ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಇಲ್ಲಿನ ಹೊರವಲಯದಲ್ಲಿ ಮಧ್ಯರಾತ್ರಿ ಯುವಕನೊರ್ವನನ್ನು ದುಷ್ಕರ್ಮಿಗಳು ಭೀಕರ ಹತ್ಯೆಗೈದಿರುವ ಘಟನೆ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ನಡೆದಿದೆ.

ಕೊಲೆಯಾದ ಯುವಕನನ್ನು ಹಳೆಹುಬ್ಬಳ್ಳಿಯ ನಿವಾಸಿ ಶಾರುಖ್ ಸೌದಾಗರ್ ಎಂದು ಗುರುತಿಸಲಾಗಿದೆ.
ಯುವಕನ ಮೇಲೆ ಮನಸ್ಸೊ ಇಚ್ಚೆ ದಾಳಿ ನಡೆಸಿರುವ
ದುಷ್ಕರ್ಮಿಗಳು ತೊಡೆ ಹಾಗೂ ಬೆನ್ನು ಮೂಳೆ ಮುರಿಯುವಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಬಳಿಕ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾರುಖ್ ನ ಮೃತ ದೇಹ ಎಸೆದಿದ್ದಾರೆ.

ಕೆಲ ಮೂಲಗಳ ಪ್ರಕಾರ ನಟೋರಿಯಸ್ ಹಂತಕ ರೌಡಿಶೀಟರ್ ಸಲೀಂ ಬಳ್ಳಾರಿಯೇ ಈ ಕೊಲೆಯ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿದೆ. ಸಲೀಂ ಮೇಲೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. ಲಾಕ್ ಡೌನ್ ವೇಳೆ ಹೋಟೆಲ್ ತಿಂಡಿ ಕೊಡುವಂತೆ ಮಧ್ಯರಾತ್ರಿ ಪಿಡಿಸಿದ್ದ ಸಲೀಂನಿಗೆ ಸ್ಥಳೀಯರು ಧರ್ಮದೇಟು ನೀಡಿ ಕಸಬಾ ಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಜಾಮೀನಿನ ಮೇಲೆ‌ ಹೊರಬಂದ ಸಲೀಂ ತನ್ನ ಹಳೆ ಚಾಳಿ ಮುಂದುವರೆಸಿದ್ದಾನೆಂದು ತಿಳಿದು ಬಂದಿದೆ.

ಕೊಲೆಯಾಗಿರುವ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಶವಗಾರದಲ್ಲಿ ಮೃತ ಯುವಕನ ಶವವನ್ನು ಇರಿಸಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಹಂದಿ ಹಾವಳಿಗೆ ಬೆಳೆ ನಾಶ; ರೈತ ಕಂಗಾಲು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಲಕ್ಷ್ಮೇಶ್ವರ

ಇತ್ತೀಚೆಗೆ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಹಂದಿಗಳ ಹಾವಳಿ ತುಸು ಹೆಚ್ಚಾಗಿದೆ. ಇದರಿಂದ ಜನರು ಹೈರಾಣಾಗುತ್ತಿದ್ದಾರೆ.

ರೈತ ಬಿತ್ತನೆ ಮಾಡಿದಾಗಿನಿಂದ ಮಳೆ ಕೊರತೆ, ಅತಿವೃಷ್ಟಿ, ಕೀಟಬಾಧೆ, ಇಳುವರಿ‌ ಕುಂಠಿತ, ಬೆಲೆ ಕುಸಿತ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದ್ದಾನೆ. ಇದರೊಂದಿಗೆ ಹಂದಿ ಹಾವಳಿಯೂ ಹೊಸದಾಗಿ ಸೇರಿಕೊಂಡಂತೆ ಕಾಣುತ್ತಿದೆ.

ತಾಲ್ಲೂಕಿನ ಗೋವನಾಳ ಗ್ರಾಮದ ರೈತ ಚಂದ್ರಗೌಡ್ರ‌ ಕರೆಗೌಡ್ರ ಅವರು ತಮ್ಮ ಎರಡು ಎಕರೆ ಹೊಲದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಗೋವಿನಜೋಳ ಇನ್ನೇನೂ ಫಲ ಕೊಡುವ ಹಂತಕ್ಕೆ ಬಂದಿತ್ತು. ಆದರೆ, ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನ ಹಂದಿಗಳು‌ ರಾತ್ರೋರಾತ್ರಿ ತಿಂದು ಹಾಳು ಮಾಡಿವೆ. ಇದರಿಂದ ರೈತ ಸಂಕಷ್ಟಕೀಡಾಗಿದ್ದಾನೆ.

ತಾಲೂಕಿನಲ್ಲಿ ಹಲವು ರೈತರ ಜಮೀನುಗಳಲ್ಲಿ ಹಂದಿಗಳ ಕಾಟ ಹೆಚ್ಚಾಗಿದೆ. ಬೆಳೆದು ನಿಂತ ಅಳಿದುಳಿದ ಬೆಳೆ ಸಂರಕ್ಷಿಸಿಕೊಳ್ಳಲು ರೈತರು ಹಗಲು ರಾತ್ರಿ ಹಂದಿ ಕಾಯುವ ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕು. ರೈತರ ಹೊಲದಲ್ಲಿರುವ ಬೆಳೆ ನಾಶ ಮಾಡುತ್ತಿರುವ ಹಂದಿಗಳಿಂದ ಮುಕ್ತಿ‌ ನೀಡಬೇಕೆಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

’ದುಡ್ಡಿ’ನಾಸೆಗೆ ಕಾಳಸಂತೆಗೆ ಅಕ್ಕಿ ಮಾರಾಟ: ’ಅನ್ನಭಾಗ್ಯ’ ಅಕ್ಕಿ ಹೊರ ರಾಜ್ಯಗಳಿಗೆ ರವಾನೆ! ಪ್ರಭಾವಿಗಳು ಶಾಮೀಲು?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ರಾಜ್ಯ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಅವುಗಳು ಯಶಸ್ವಿಯಾಗಲು ಯೋಜನೆ ಎಷ್ಟು ಜನರಿಗೆ ತಲುಪುತ್ತಿದೆ? ಜನರು ಎಷ್ಟರಮಟ್ಟಿಗೆ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ? ಎಂಬುವುದೂ ಬಹುಮುಖ್ಯ. ಅದರಲ್ಲಿ ಬಡವರ ಹಸಿವು ನೀಗಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಪ್ರಮುಖವಾಗಿದೆ.

ಅನ್ನಭಾಗ್ಯ ಯೋಜನೆಯಡಿ ಸರ್ಕಾರ ಉಚಿತವಾಗಿ ಅಕ್ಕಿ ವಿತರಿಸುತ್ತಿದೆ. ಇದರಿಂದ ಲಕ್ಷಾಂತರ ಬಡ ಜನರ ಹೊಟ್ಟೆ ತುಂಬುತ್ತಿದೆ. ಒಂದು ಹೊತ್ತು ಊಟಕ್ಕೂ ಪರದಾಡುತ್ತಿದ್ದ ಜನರು ಹೊಟ್ಟೆ ತುಂಬಾ ಊಟ ಮಾಡುವಂತಾಗಿದೆ. ಆದರೆ, ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡೆದ ಅಕ್ಕಿಯನ್ನು ಪಡಿತರದಾರರು ಸಮೀಪದ ನಗರಗಳಿಗೆ ತೆರಳಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಗರ ಪ್ರದೇಶಗಳಲ್ಲಿ ಅಕ್ಕಿ ಖರೀದಿಸುವ ದಲ್ಲಾಳಿಗಳ ಸಂಖ್ಯೆ ಹೆಚ್ಚುತ್ತಿದೆ.

ಅನ್ನಭಾಗ್ಯ ಯೋಜನೆ ಫ್ಲಾಪ್?

ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿಸುವ ಸದುದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 2013ರ ಜುಲೈನಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿತು. ಈ ದಿಶೆಯಲ್ಲಿ ಸರ್ಕಾರ ದಿಟ್ಟ ಹೆಜ್ಜೆಯನ್ನಿಡುತ್ತಿದೆ. ಆದರೆ, ಸರ್ಕಾರದ ಹೆಜ್ಜೆಯ ಗುರುತು ಅಳಿಸಿ ಹಾಕುವತ್ತ ದಲ್ಲಾಳಿಗಳು, ಪಡಿತರದಾರರು ಕೆಲಸ ಮಾಡುತ್ತಿರುವುದು ದುರದೃಷ್ಟಕರ. ಇದರಿಂದಾಗಿ ಸರ್ಕಾರದ ಜನಪರ ಯೋಜನೆಗಳು ಹಳ್ಳ ಹಿಡಿಯುತ್ತಿವೆ.

ಜಿಲ್ಲೆಯಲ್ಲಿ ರೇಶನ್ ಅಕ್ಕಿ ಮಾರಾಟದ ಹಾವಳಿ ಜೋರಾಗಿದ್ದು, ಸರ್ಕಾರದ ಬಹುದೊಡ್ಡ ಯೋಜನೆಯ ಆಶಯ ನೆಲಕಚ್ಚಿದಂತಾಗುತ್ತಿದೆ.

ಹೊರ ರಾಜ್ಯಕ್ಕೆ ಅಕ್ಕಿ ಸಾಗಾಟ

ಪಡಿತರದಾರರಿಂದ ಕೇವಲ 12 ರೂ.ಗೆ ಅನ್ನಭಾಗ್ಯ ಅಕ್ಕಿ ಖರೀದಿಸುವ ದಲ್ಲಾಳಿಗಳು ಖರೀದಿಸಿದ ಅಕ್ಕಿಯನ್ನು ಪಾಲಿಶ್ ಮಾಡಿಸಿ ಗುಜರಾತ್, ಗೋವಾ, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಗೆ ಸಾಗಿಸುತ್ತಾರೆ. ಪಾಲಿಶ್ ಮಾಡಿದ ಅದೇ ಅಕ್ಕಿಯನ್ನು ಗ್ರಾಹಕರಿಗೆ 42 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಕ್ರಮ ಅಕ್ಕಿ ಸಾಗಾಟದಿಂದ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಅಧೋಗತಿಯತ್ತ ಸಾಗುತ್ತಿದೆ.

ಗದಗ ಅಕ್ರಮ ಅಕ್ಕಿ ಖರೀದಿ ಕೇಂದ್ರ?

ಅಕ್ಕಿ ಖರೀದಿ ಮತ್ತು ಅಕ್ರಮ ಸಾಗಾಟದ ವಹಿವಾಟು ಗದಗ, ಗಜೇಂದ್ರಗಡ, ಲಕ್ಷ್ಮೇಶ್ವರ, ಮುಳಗುಂದ ಸಹಿತ ಜಿಲ್ಲೆಯ ಬಹುತೇಕ ಪಟ್ಟಣ ಪ್ರದೇಶಗಳಲ್ಲಿ ಸದ್ದು ಮಾಡುತ್ತಿದೆ. ಯಾರೊಬ್ಬರ ಭಯವಿಲ್ಲದೆ ಅಕ್ರಮ ಅಕ್ಕಿ ವ್ಯವಹಾರ ನಡೆಸುತ್ತಿದ್ದಾರೆ. ನಗರ ಪ್ರದೇಶಗಳ ಸುತ್ತಲಿನ ಗ್ರಾಮಗಳಿಂದ ಅಕ್ಕಿ ತರುವ ಪಡಿತರದಾರರು ಅತೀ ಕಡಿಮೆ ದರದಲ್ಲಿ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಜಿಲ್ಲೆಯು ಅಕ್ಕಿ ಮಾರಾಟ ಕೇಂದ್ರವಾದಂತಾಗಿದೆ.

ಇತ್ತೀಚೆಗಷ್ಟೇ ಗಜೇಂದ್ರಗಡದ ಸುಖಸಾಗರ ಬಳಿ ಅನ್ನಭಾಗ್ಯ ಯೋಜನೆಯ ಅಕ್ರಮ ಅಕ್ಕಿ ಚೀಲಗಳನ್ನು ಸಾಗಾಟ ಮಾಡುತ್ತಿದ್ದ ಲಾರಿ ವಶಪಡಿಸಿಕೊಳ್ಳಲಾಗಿತ್ತು. ಅಷ್ಟಾದರೂ, ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ಮತ್ತು ಸಾಗಣೆ ನಿಲ್ಲುತ್ತಿಲ್ಲ. ಇದರಿಂದ ಅಧಿಕಾರಿಗಳು ಅಕ್ಕಿ ದಂಧೆಕೋರರ ಜೊತೆ ಪಾಲುದಾರರಾಗಿದ್ದಾರೆಯೇ? ಎಂಬ ಗುಮಾನಿಯೂ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.

ಮುಳಗುಂದ ಪಟ್ಟಣದ ಮಾರುಕಟ್ಟೆಯ ಮುಖ್ಯ ರಸ್ತೆಯಲ್ಲಿಯೇ ಅಡುಗೆ ಎಣ್ಣೆ ವ್ಯಾಪಾರಸ್ಥರು ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ರಾಜಾರೋಷವಾಗಿ ಖರೀದಿಸುತ್ತಿದ್ದಾರೆ. ಖರೀದಿಸಿದ ಅಕ್ಕಿಯನ್ನು ನಗರದ ಶ್ರೀಕೃಷ್ಣ ದೇವಸ್ಥಾನದ ಹತ್ತಿರ ಸಂಗ್ರಹಿಸಿಟ್ಟು, ನಸುಕಿನ ಜಾವದಲ್ಲಿ ಗಾಡಿಯ ಮೂಲಕ ಬೇರೆಡೆ ಸಾಗಿಸುತ್ತಾರೆ ಎನ್ನಲಾಗಿದೆ.

ಜನಪ್ರತಿನಿಧಿಯೊಬ್ಬರ ಆಪ್ತನ ದಂಧೆ?

ಗಜೇಂದ್ರಗಡಲ್ಲಿ ಸಿಕ್ಕಿರುವ ಅನ್ನಭಾಗ್ಯ ಅಕ್ಕಿ ಚೀಲಗಳು ಎಲ್ಲಿಯವು? ಅಕ್ಕಿ ಎಲ್ಲಿಂದ ಎಲ್ಲಿಗೆ ಸಾಗಾಟವಾಗುತ್ತಿತ್ತು? ಗಜೇಂದ್ರಗಡದಲ್ಲಿ ನಡೆಯುವ ದಂದೆಯ ಹಿಂದೆ ಯಾರಿದ್ದಾರೆ?  ಪ್ರಭಾವಿ ರಾಜಕಾರಣಿಯೊಬ್ಬರ ಆಪ್ತ ಈ ದಂಧೆಯಲ್ಲಿ ತೊಡಗಿದ್ದಾರಾ? ಆ ಕಾರಣಕ್ಕಾಗಿಯೇ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರಾ? ಎಂಬ ಪ್ರಶ್ನೆಗಳಿಗೆ ಪೊಲೀಸರ ನಿಷ್ಪಕ್ಷಪಾತ ತನಿಖೆ ನಡೆಸಿದಾಗಲೇ ಉತ್ತರ ಸಿಗಲಿದೆ.

ಸಿದ್ದರಾಮಯ್ಯ ಮೊಘಲರ ಕಾಲದಲ್ಲಿದ್ದಾರೆ; ಸಚಿವ ಬಸವರಾಜ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಉಡುಪಿ

ರಾಜ್ಯದಲ್ಲಿ ಲವ್ ಜಿಹಾದ್ ನಿಷೇಧ ಕಾನೂನು ಕುರಿತು ಪರ ವಿರೋಧದ ಚರ್ಚೆಗಳು ಶುರುವಾಗಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರ ಮಧ್ಯೆ ವಾಕ್ಸಮರ ಪ್ರಾರಂಭವಾಗಿದೆ.

ಲವ್ ಜಿಹಾದ್ ವಿಚಾರವಾಗಿ ಉಡುಪಿಯಲ್ಲಿ ಗುರುವಾರ ಪ್ರತಿಯಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಸಿದ್ದರಾಮಯ್ಯನವರು ಮೊಘಲ್ ಶಕೆಯಲ್ಲಿ ಬದುಕುತ್ತಿದ್ದಾರೆ.
ಮುನ್ನೂರು ವರ್ಷದಿಂದ ಲವ್ ಜಿಹಾದ್ ಇದೆ ಎಂದು ಅವರೇ ಹೇಳಿದ್ದಾರೆ. ಅದಕ್ಕೆ ಅವರಿನ್ನೂ ಮೊಘಲ್ ಶಕೆಯಲ್ಲಿ ಇದ್ದಾರೆ ಎಂದರು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಲವ್ ಜಿಹಾದ್ ಕಾನೂನು ಜಾರಿಗೆ ತರಲು ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಲವ್ ಜಿಹಾದ್ ವಿರುದ್ಧ ಕಾನೂನು ಬಂದೇ ಬರುತ್ತದೆ.
ಈ ಬಗ್ಗೆ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಉತ್ತರ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶ ಸರ್ಕಾರಗಳು ಲವ್ ಜಿಹಾದ್ ಕಾನೂನು ಜಾರಿಗೆ ಚಿಂತನೆ ಮಾಡಿವೆ. ಅದೇ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಚಿಂತನೆ ನಡೆಸಿದೆ ಎಂದರು.

ಲವ್ ಜಿಹಾದ್ ಕಾನೂನು ಹೇಗೆ ಜಾರಿಗೊಳಿಸಬೇಕು, ಯಾವ ಅಂಶಗಳನ್ನು ಸೇರಿಸಬೇಕೆಂಕು ಎಂಬುವುದು ಮುಖ್ಯವಾಗಿದೆ. ಲವ್ ಜಿಹಾದ್ ಕಾನೂನು ಕುರಿತು ಉತ್ತರಪ್ರದೇಶ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಅಧಿಸೂಚನೆಯ ಪ್ರತಿಗಳನ್ನು ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಪ್ಪಿದ್ದಾರೆ. ಮಂಗಳೂರಿನಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಇದನ್ನು ಘೋಷಿಸಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಡಿ.5ರಂದು ಬಂದ್ ಮಾಡಬೇಡಿ; ಸಚಿವ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ,ಉಡುಪಿ

ಡಿ.5 ರಂದು ಎಲ್ಲಾ ಸರ್ಕಾರಿ ಕಚೇರಿಗಳು ಎಂದಿನಂತೆ ನಡೆಯುತ್ತದೆ. ಬಂದ್ ಮಾಡಬಾರದು ಎಂದು ಸುಪ್ರೀಂಕೋರ್ಟ್ ನ ಸ್ಪಷ್ಟ ಆದೇಶವಿದ್ದು, ಬಂದ್ ಮಾಡಿದರೆ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದಂತೆ ಆಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಡಿ.5 ರ ಕರ್ನಾಟಕ ಬಂದ್ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಬಂದ್ ಮಾಡಬೇಡಿ ಎಂದು ಮುಖ್ಯಮಂತ್ರಿ ಅವರೊಂದಿಗೆ ನಾನು ಮನವಿ ಮಾಡಿಕೊಳ್ಳುತ್ತೇನೆ.
ಇಷ್ಟರ ಮೇಲೆಯೂ ಬಂದ್ ಮಾಡಿದರೆ ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಣೆಗೆ ಬೇಕಾಗಿರುವ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಭದ್ರತೆಗೆ ಬೇಕಾದ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ಹೊಸ ವರ್ಷಾಚರಣೆಗೆ ತಡೆ ವಿಚಾರವಾಗಿ ಮಾತನಾಡಿದ ಅವರು, ನೈಟ್ ಕರ್ಪ್ಯೂ ಬಗ್ಗೆ ಯಾವುದೇ ಸಭೆ ಕರೆದಿಲ್ಲ. ಜನ ಸೇರದಂತೆ ನೋಡಿಕೊಳ್ಳಲು ತಜ್ಞರು ತಿಳಿಸಿದ್ದಾರೆ. ಇವತ್ತು ಅಥವಾ ನಾಳೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ.
ನೈಟ್ ಕರ್ಪ್ಯೂ ಬಗ್ಗೆ ಯಾವುದೇ ಚಿಂತನೆ ಇಲ್ಲ. ಬದಲಾಗಿ ಹೊಸ ವರ್ಷಾಚರಣೆಯಲ್ಲಿ ಜನ ಸಂದಣಿಯಾಗದಂತೆ ನೋಡುವ ಜವಾಬ್ದಾರಿ ಇದೆ.
ನೈಟ್ ಕರ್ಪ್ಯೂ ಹೊರತಾಗಿಯೂ ಕ್ರಮ‌ ಕೈಗೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದರು.

ಡಿ.ಜೆ.ಹಳ್ಳಿ ಪ್ರಕರಣದಲ್ಲಿ ಮಾಜಿ ಕಾರ್ಪೋರೇಟರ ಜಾಕೀರ್ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಜಾಕೀರ್ ಬಂಧನವಾಗಿದೆ.
ಇವತ್ತು ರಜೆ ಇರುವುದರಿಂದ ನಾಳೆ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ. ಜಾಕೀರ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದರು.

ಮಾಜಿ ಶಾಸಕ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದ ಕುರಿತು ಕೋಲಾರ ಪೊಲೀಸರು ತನಿಖೆ ಆರಂಭಿಸಿದ್ದು, ಸ್ಥಳ ಭೇಟಿ, ಟವರ್ ಡಂಪಿಂಗ್ ಮಾಡಿ ಸೇರಿದಂತೆ ಪ್ರತಿಯೊಂದರ ಬಗ್ಗೆಯೂ ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಬಿಜೆಪಿಯೊಂದಿಗೆ ಚೆನ್ನಾಗಿದ್ದೇನೆ ; ಶಾಸಕ ಎನ್.ಮಹೇಶ್

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ಬಿಜೆಪಿ ಸರ್ಕಾರದ ಜೊತೆ ಚೆನ್ನಾಗಿದ್ದು,
ಕ್ಷೇತ್ರದ ಜನರಿಗೆ ಒಳ್ಳೆಯ ಸುದ್ದಿ ನೀಡಲು ಬಿಜೆಪಿಯವರೊಂದಿಗೆ ಚೆನ್ನಾಗಿದ್ದೇನೆ ಎಂದು ಬಿಎಸ್ಪಿ ಉಚ್ಚಾಟಿತ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕೊಳ್ಳೆಗಾಲದಲ್ಲಿ ಮಾತನಾಡಿದ ಅವರು, ಬಿಜೆಪಿ ಸೇರುವ ಆಪ್ಶನ್ ಯಾವತ್ತಿಗೂ ತೆರೆದಿದ್ದು, 2008 ರಿಂದ ಯಡಿಯೂರಪ್ಪ ಅವರು ನನ್ನೊಂದಿಗೆ ಚೆನ್ನಾಗಿದ್ದಾರೆ ಎಂದರು.

ಕ್ಷೇತ್ರದ ಅಭಿವೃದ್ಧಿಯಾದ ದಿನವೇ ನನ್ನ‌ ಕ್ಷೇತ್ರದ ಜನರಿಗೆ ಒಳ್ಳೆಯ ಸುದ್ದಿ. ಸಂಕ್ರಾಂತಿ ಹಬ್ಬಕ್ಕೆ ಸಾಕಷ್ಟು ಅನುದಾನ ಕೊಟ್ಟರೆ ಪಕ್ಕಾ ಒಳ್ಳೆಯ ಸುದ್ದಿ ಕೊಡುತ್ತೇನೆ. ಅಲ್ಲದೇ, ನನ್ನ‌ ಕ್ಷೇತ್ರದ ಬಸ್ ನಿಲ್ದಾಣ, ಅಂಬೇಡ್ಕರ್ ಭವನ, ವಾಲ್ಮೀಕಿ‌ ಭವನ ಲೋಕಾರ್ಪಣೆಗೊಳ್ಳಬೇಕು ಎಂದು ಶಾಸಕ ಎನ್.ಮಹೇಶ್ ಹೇಳಿದರು.

error: Content is protected !!