ಕಾಲಜ್ಞಾನಿ ಕೊಡೆಕಲ್ ಬಸವೇಶ್ವರ ದೇವಸ್ಥಾನದ ಹುಂಡಿ ಕಳ್ಳತನ ಮಾಡಲು ಪ್ರಯತ್ನಿಸಿದ್ದ ರಾಜನಕೋಳೂರು ಗ್ರಾಮದ ಮಾಳಿಂಗರಾಯ ದೇವಪ್ಪ ನಾಯ್ಕೋಡಿ ಎಂಬ ವ್ಯಕ್ತಿಗೆ ಸುರಪುರ ಜೆಎಮ್ಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅಮರನಾಥ್ ಬಿ.ಎನ್. ಅವರು ಅಪರಾಧಿಗೆ 3 ವರ್ಷ ಜೈಲು ಹಾಗೂ 5000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಕೊಡೆಕಲ್ ಪಿಎಸ್ಐ ಬಾಷುಮಿಯಾ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರ ನ್ಯಾಯವಾದಿ ನಾಗರಾಜ್ ವಾದ ಮಂಡಿಸಿದ್ದರು.
ವಿಜಯಸಾಕ್ಷಿ ವಿಶೇಷ ಸುದ್ದಿ, ಕೊಪ್ಪಳ: ಹಳ್ಳಿಗಳಲ್ಲಿ ಈಗ ಗ್ರಾಮ ಪಂಚಾಯಿತಿ ಚುನಾವಣೆಯದ್ದೇ ಸದ್ದು. ಗ್ರಾಮೀಣ ಮಟ್ಟದ ಅಧಿಕಾರಿಗಳಿಗಂತು ಇದೊಂದು ಅಸ್ತ್ರವೂ, ವರವೂ ಆದಂತಿದೆ. ಸಾರ್ವಜನಿಕರು ಏನೇ ಕೇಳಿದರೂ ಗ್ರಾಪಂ ಚುನಾವಣೆ ಮುಗಿಯಲಿ, ಮುಂದೆ ನೋಡೋಣ ಎಂದು ಹೇಳಿ ಸಾಗಿ ಹಾಕುತ್ತಿದ್ದಾರೆ.
ಇದಕ್ಕೊಂದು ತಾಜಾ ಉದಾಹರಣೆ ಎಂದರೆ ಕೊಪ್ಪಳ ತಾಲೂಕಿನ ಕೊಳೂರು ಗ್ರಾಮ ಪಂಚಾಯಿತಿಯ ಪುರಾಣ. ಕೊಳೂರು ಗ್ರಾಪಂ ವ್ಯಾಪ್ತಿಯ ಕೂಲಿ ಕಾರ್ಮಿಕರು ನರೇಗಾ ಯೋಜನೆಯಡಿ ಕೆಲಸ ಕೇಳಲು ಹೋದಾಗ ಪಿಡಿಒ ಸಿದ್ದಮ್ಮ ಮಠದ ಅವರು ಚುನಾವಣೆ ನೆಪ ಹೇಳಿದ್ದಾರೆ. ಮಂಗಳಾಪುರದ ಮುತ್ತು ದೊಡ್ಡಮನಿ ಎಂಬ ಯುವಕ ಈ ಕುರಿತು ಜಿಪಂ ಸಿಎಸ್ ಅವರಿಗೆ ದೂರು ನೀಡಿದ್ದಾನೆ. ದೂರು ಬಂದ ತಕ್ಷಣ ಸಿಎಸ್ ಅವರು ಕೊಳೂರು ಗ್ರಾಪಂ ಪಿಡಿಓ ಅವರಿಗೆ ಲೆಫ್ಟ್ ರೈಟ್ ತೆಗೆದುಕೊಂಡಿದ್ದು ಪಿಡಿಓ ಸಿದ್ದಮ್ಮ ಕೆಂಡಾಮಂಡಲರಾಗಿದ್ದಾರೆ.
ದೂರು ನೀಡಿದ ಯುವಕ ನರೇಗಾ ಕೆಲಸದ ವಿಚಾರವಾಗಿ ಪಿಡಿಓ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಮಹಿಳೆಯರಿಗೆ ಚುನಾವಣೆ ಮುಗಿದ ಮೇಲೆ ಕೆಲಸ ಕೊಡ್ತಿನಿ. ನೀನೂ ಅವರ ಹಾಗೆ ಕೆಲಸ ಕೇಳೋನು. ನೀನೇನು ದೊಡ್ಡ ಲೀಡರ್ ಅಲ್ಲ, ನನ್ನ ಹಿಂದೆ ತಿರುಗಾಡಬೇಡ. ಮಹಿಳೆಯರು ಬರಲಿ, ಅವರು ಬಂದಾಗ ಪಂಚಾಯಿತಿಗೆ ಕಡೆಗೆ ಬಾ. ಚುನಾವಣೆ ಮುಗಿದ ನಂತರ ಕೆಲಸ ಕೊಡ್ತಿನಿ. ಫಾರಂನ್ನು ನಾನೇ ತುಂಬುತ್ತೇನೆ. ಇಲ್ಲಿ ಪಿಡಿಓ ನಾನೇ ಹೊರತು ನೀನಲ್ಲ. ನಿನ್ನ ಆಟ ಬೇರೆಯವರ ಹತ್ತಿರ ಇಟ್ಕೊ. ನನ್ನ ಹತ್ತಿರ ನಡೆಯಲ್ಲ. ಇಡೋ ಫೋನು ಅಂತ ಆವಾಜ್ ಹಾಕಿದ ಆಡಿಯೊ ವೈರಲ್ ಆಗಿದೆ.
ಪಿಡಿಓ ಅವರು ನನ್ನ ಚಾರಿತ್ರ್ಯ ವಧೆಯಾಗುವಂಥ ಮಾತುಗಳನ್ನಾಡಿದ್ದಾರೆ. ಇದರಿಂದ ತುಂಬಾ ಬೇಸರವಾಗಿದೆ. ವಯಸ್ಸಿನಲ್ಲಿ ಅವರು ನನ್ನ ತಾಯಿ ಸಮಾನರಾಗಿದ್ದಾರೆ. ನನಗಿಂತಲೂ ಹೆಚ್ಚು ವಯಸ್ಸಿನ ಮಕ್ಕಳಿರುವ ಅವರು, ಉದ್ದೇಶಪೂರ್ವಕವಾಗಿ ನನ್ನ ವ್ಯಕ್ತಿತ್ವ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಬಡವರಿಗೆ ಕೆಲಸ ಕೊಡಿ ಎಂದು ಕೇಳಿದ್ದೇ ತಪ್ಪಾ ಸರ್? -ಮುತ್ತು ದೊಡ್ಡಮನಿ, ಮಂಗಳಾಪುರ.
ಚುನಾವಣೆಗೂ, ನರೇಗಾ ಕೆಲಸಕ್ಕೂ ಸಂಬಂಧ ಇಲ್ಲ. ಬುಧವಾರ ಬಹದ್ದೂರ್ ಬಂಡಿ ಕೆರೆ ಪರಿಶೀಲನೆಗೆ ಹೊರಟಿದ್ದೇವೆ. ನಾಡಿದ್ದೇ ಅರ್ಹರಿಗೆ ಫಾರಂಸಮೇತ ನರೇಗಾದಡಿ ಕೆಲಸ ಕೊಡ್ತಿವಿ. ಮುತ್ತು ಎಂಬ ಹುಡುಗ ಫಾರಂಗಳಿಗೆ ಸಹಿ ಹಾಕುವಂತೆ ಹಿಂದೆ ಹಿಂದೆ ದುಂಬಾಲು ಬೀಳುತ್ತಾನೆ. ಹಿಂದೆ ಇದ್ದ ಪಿಡಿಓಗಳಿಗೂ ಇದೇ ರೀತಿ ಕಾಟ ಕೊಟ್ಟಿದ್ದಾನಂತೆ. ನಾನು ಚುನಾವಣೆ ನಂತರ ಕೆಲಸ ಕೊಡ್ತಿನಿ ಅಂತ ಹೇಳೇ ಇಲ್ಲ. -ಸಿದ್ದಮ್ಮ ಮಠದ, ಪಿಡಿಓ ಕೊಳೂರು ಗ್ರಾಪಂ.
ಡಿಸೆಂಬರ್ 15 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 147964 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 153347 ಮಾದರಿಗಳಲ್ಲಿ 142364 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 147 ಮಾದರಿಗಳ ವರದಿ ಬರಲು ಬಾಕಿ ಇದೆ.
ಜಿಲ್ಲೆಯಲ್ಲಿ ಇಂದಿನ 08 (ಗದಗ-04, ರೋಣ-03, ಶಿರಹಟ್ಟಿ-01) ಪ್ರಕರಣಗಳು ಸೇರಿದಂತೆ ಒಟ್ಟು 10836 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 11 ಜನ ಸೇರಿದಂತೆ ಒಟ್ಟು 10653 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 42 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಗಲಾಟೆ ಸಿದ್ದರಾಮಯ್ಯನವರ ಕಾಲದಿಂದ ಬಂದಿರುವ ಪರಂಪರೆಯಾಗಿದೆ. ಸದನದಲ್ಲಿ ಇವತ್ತು ನಡೆದ ಘಟನೆ ನೋವಿನ ಸಂಗತಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಅವರು ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಉಪ ಸಭಾಪತಿ ಪೀಠಕ್ಕಾಗಿ ನಡೆದ ಫೈಟ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅವಿಶ್ವಾಸ ನಿರ್ಣಯ ಮಾಡಿದ ವೇಳೆ ಕಾಂಗ್ರೆಸ್ ನವರು ಖುರ್ಚಿ ಮೇಲೆ ಕೂಡಬಾರದು. ಕಿತ್ತಾಟ, ಗಲಾಟೆ ಇದು ಕಾಂಗ್ರೆಸ್ ನವರ ಸಂಸ್ಕೃತಿ ತೋರಿಸುತ್ತದೆ. ಖುರ್ಚಿ ಮೇಲೆ ಕೂಡಬೇಕಾದರೆ ಏಳಬೇಕಾದರೆ ಪೀಠಕ್ಕೆ ಕೈಮಗಿಯುತ್ತೆವೆ. ಹಾಗಾಗಿ ಪೀಠದ ಘನತೆ, ಗೌರವ ಉಳಿಸಬೇಕು ಎಂದರು.
ಶಂಕರ್ ಬಿದರಿ ಹೊರಹಾಕಿ ಆಗಲೂ ಹೈಡ್ರಾಮಾ ಮಾಡಿದರು. ಅವಿಶ್ವಾಸ ಮಂಡನೆಗೆ ಅವಕಾಶ ಕೊಡಬೇಕಿತ್ತು, ಮತ ಹಾಕಬೇಕಿತ್ತು. ಬಹುಮತವಿಲ್ಲದೆ ಸ್ಪೀಕರ್ ಕೂಡಲು ಸಾಧ್ಯನಾ? ಬಹುಮತವಿದ್ದರೆ ಹತ್ತು ನಿಮಷದಲ್ಲಿ ಮುಗಿಯುತ್ತದೆ. ಖುರ್ಚಿ ಎಳೆಯುವುದು, ಅವರು ಕೂಡಿಸುವುದು, ನಾವು ಕೂಡಿಸುವುದು ರಾದ್ಧಾಂತಾ ಬೇಕಿತ್ತಾ ಎಂದು ಸಚಿವರು ಪ್ರಶ್ನಿಸಿದರು.
ಗೋ ಹತ್ಯೆ ನಿಷೇಧದ ಕುರಿತು ಮಾತನಾಡಿದ ಅವರು, ಬಹುಮತವಿದ್ದರೆ ೧೦ ನಿಮಿಷದಲ್ಲಿ ಮುಗಿದು, ಗೋ ಹತ್ಯೆ ಬಿಲ್ ಪಾಸ್ ಆಗುತ್ತಿತ್ತು. ಕಾಂಗ್ರೆಸ್ ನವರ ಉದ್ದೇಶ ಗೋ ಹತ್ಯೆ ಬಿಲ್ ಪಾಸ್ ಮಾಡಬಾರದು ಅಂತಿರಬಹುದು ಎಂದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ನಿಷೇಧ ಹಿಂಪಡೆಯುತ್ತೇವೆ ಎಂದು ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ. ಅವರು ಹಿಂದೂಗಳ ಭಾವನೆ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾ ಅಧ್ಯಕ್ಷ ಮೋಹನ್ ಮಾಳಶೆಟ್ಟಿ, ಮುಖಂಡ ರಾಜು ಕುರಡಗಿ ಇದ್ದರು.
ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಂತಿಮವಾಗಿ 53 ಗ್ರಾ.ಪಂ.ಗಳ 801 ಸ್ಥಾನಗಳಿಗೆ 2216 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
ಮೊದಲ ಹಂತದಲ್ಲಿ ಗದಗ ತಾಲ್ಲೂಕಿನ 26 ಗ್ರಾಮ ಪಂಚಾಯತಿಗಳ 438 ಸ್ಥಾನಗಳಿಗೆ ಅನುಸೂಚಿತ ಜಾತಿ 207, ಅನುಸೂಚಿತ ಪಂಗಡದ 77, ಹಿಂದುಳಿದ ‘ಅ’ ವರ್ಗ 216, ಹಿಂದುಳಿದ ‘ಬ’ ವರ್ಗ 36, ಸಾಮಾನ್ಯ 653 ಸೇರಿ ಒಟ್ಟು 1189 ಅಭ್ಯರ್ಥಿಗಳಿದ್ದಾರೆ.
ಲಕ್ಷ್ಮೇಶ್ವರ ತಾಲ್ಲೂಕಿನ 13 ಗ್ರಾಮ ಪಂಚಾಯತಿಗಳ 174 ಸ್ಥಾನಗಳಿಗೆ ಅನುಸೂಚಿತ ಜಾತಿಯ 144, ಅನುಸೂಚಿತ ಪಂಗಡದ 47, ಹಿಂದುಳಿದ ‘ಅ’ ವರ್ಗ 55, ಹಿಂದುಳಿದ ‘ಬ’ ವರ್ಗ 9, ಸಾಮಾನ್ಯ 257 ಸೇರಿ ಒಟ್ಟು 512 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಅದರಂತೆ, ಶಿರಹಟ್ಟಿ ತಾಲ್ಲೂಕಿನ 14 ಗ್ರಾ.ಪಂ. 189 ಸ್ಥಾನಗಳಿಗೆ ಅನುಸೂಚಿತ ಜಾತಿಯ 114, ಅನುಸೂಚಿತ ಪಂಗಡದ 55, ಹಿಂದುಳಿದ ‘ಅ’ ವರ್ಗ 62, ಹಿಂದುಳಿದ ‘ಬ’ ವರ್ಗ 17, ಸಾಮಾನ್ಯ 267 ಸೇರಿ ಒಟ್ಟು 515 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣೆ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ಶಾಖೆ ತಿಳಿಸಿದೆ.
ಮುಳಗುಂದ ರಸ್ತೆಯ ಈಚಲ ಹಳ್ಳದಲ್ಲಿ ನಿನ್ನೆ ಪತ್ತೆಯಾಗಿದ್ದ ಯುವಕನ ಶವದ ಗುರುತು ಪತ್ತೆಯಾಗಿದ್ದು, ನಗರದ ಗಂಗಿಮಡಿ ಆಶ್ರಯ ಕಾಲೋನಿಯ ನಿವಾಸಿ ರಮೇಶ್ ಹುಳಕಣ್ಣವರ ಎಂದು ತಿಳಿದು ಬಂದಿದೆ.
ರಮೇಶ್ ನ ಕುತ್ತಿಗೆಗೆ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ್ದಾರೆ. ಅಲ್ಲದೇ, ಕೊಲೆಯಾಗಿರುವ ಯುವಕನ ಮೃತದೇಹವನ್ನು ದುಷ್ಕರ್ಮಿಗಳು ಈಚಲ ಹಳ್ಳದ ಬ್ರಿಡ್ಜ್ ಕೆಳಗೆ ರವಿವಾರ ತಡರಾತ್ರಿ ಎಸೆದು ಹೋಗಿದ್ದರು. ಸೋಮವಾರ ಸಂಜೆ ಯುವಕನ ಶವ ಪತ್ತೆಯಾಗಿತ್ತು.
ರಮೇಶ್ ಆಟೋ ಚಾಲಕನಾಗಿದ್ದು, ಅವನ ಸ್ನೇಹಿತನೇ ಕರೆದುಕೊಂಡು ಹೋಗಿ ಹತ್ಯೆ ಮಾಡಿಸಿರಬಹುದು ಎಂದು ಶಂಕಿಸಲಾಗಿದೆ.
ಇನ್ನು ಪ್ರೇಮ ಕಲಹ ಅಥವಾ ಹಣಕಾಸಿನ ವ್ಯವಹಾರಗಳಲ್ಲಿ ರಮೇಶ್ ಭಾಗಿಯಾಗಿದ್ದನೇ ಎಂಬ ಎಲ್ಲಾ ಆಯಾಮಗಳನ್ನಿಟ್ಟುಕೊಂಡು ಮೃತ ಯುವಕನ ಕುಟುಂಬದವರ ಮಾಹಿತಿ ಆಧರಿಸಿ ಪೊಲೀಸರು ಹಂತಕರ ಪತ್ತೆಗಾಗಿ ಬಲೆ ಬೀಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತ ಕಾರ್ತಿಕ್ ಗುಜಮಾಗಡಿ ಹಾಗೂ ಆತನ ಸಹಚರ ಇಬ್ಬರು ಸೇರಿ ಬಿಜೆಪಿ ಕಾರ್ಯಕರ್ತ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಹಾಗೂ ಶಾಖಾ ಮುಖ್ಯ ಶಿಕ್ಷಕ ಪಂಚಾಕ್ಷರಿ ಅಂಗಡಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಗದಗ ನಗರದ ರಾಚೋಟೇಶ್ವರ ನಗರದ ಒಕ್ಕಲಗೇರಿ ಓಣಿಯ ಸಿಟಿಜನ್ ಶಾಲೆಯ ಹತ್ತಿರವಿರುವ ಬಿಜೆಪಿ ಕಾರ್ಯಕರ್ತ ಪಂಚಾಕ್ಷರಿ ಅವರ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.
ಹಲ್ಲೆ ಮಾಡಿರುವ ಆರೋಪಿಗಳು ಪಂಚಾಕ್ಷರಿ ಅವರ ಮನೆಯೊಳಗೆ ಹೋಗಿ ಹೊರಗೆ ಎಳೆದುಕೊಂಡು ಬಂದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಯಾವ ಕಾರಣಕ್ಕಾಗಿ ಹಲ್ಲೆ ನಡೆಸಿದ್ದಾರೆ ಎಂಬುವುದು ಇನ್ನೂ ತಿಳದು ಬಂದಿಲ್ಲ. ಆದರೆ, ಒಂದು ವಿಡಿಯೋ ಶೇರ್ ಮಾಡಿದ್ದಕ್ಕೆ ಸಿಟ್ಟಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಗದಗ ಶಹರ ಪೊಲೀಸ್ ಠಾಣೆಯಲ್ಲಿ ಜಮಾಯಿಸದ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಲ್ಲೆ ನಡೆಸಿದವರನ್ನು ಬಂಧಿಸುವವರೆಗೂ ನಾವು ಠಾಣೆಯಿಂದ ಹೊರ ಹೋಗುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ರಾಜು ಕುರುಡಗಿ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ.
ಹಲ್ಲೆ ಮಾಡಿರುವ ಕಾರ್ತಿಕ್ ಗುಜುಮಾಗಡಿಗೆ ಜಿ.ಪಂ. ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ್ ಅವರ ಕುಮ್ಮಕ್ಕು ಇದೆ ಆರೋಪಿಸಿರುವ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸಲು ಪೊಲೀಸರಿಗೆ ಆಗ್ರಹಿಸಿದ್ದಾರೆ.
ಮೃತ ಯುವಕ ಸಾದಗಪ್ಪಾಗಿದ್ದು, 5.6 ಅಡಿ ಎತ್ತರವಿದ್ದಾನೆ. ಮೈ ಮೇಲೆ ಕೆಂಪು ಉದ್ದ ತೋಳಿನ ಟೀ ಶರ್ಟ್, ಕ್ರೀಮ್ ಕಲರ್ ಪ್ಯಾಂಟ್ ಧರಿಸಿದ್ದಾನೆ. ಎಡಗೈ ಮೇಲೆ mom dad*** ಎಂದು ಬಲಗೈ ಮೇಲೆ s ಅಮ್ಮ ಅಂತಾ ಹಾಗೂ ಹೂವಿನ ಚಿತ್ರವಿರುವ ಹಚ್ಚೆ ಹಾಕಿಸಿಕೊಂಡಿದ್ದಾನೆ. ಅಲ್ಲದೇ, ಬಲಗೈಯಲ್ಲಿ ಕಬ್ಬಿಣದ ಕಡಗ, ಬಲಗೈ ಬೆರಳಿನಲ್ಲಿ ಗಣೇಶ ಚಿತ್ರವಿರುವ ಉಂಗುರ, ಕಾಲಿನಲ್ಲಿ ಎರಡೆಳೆ ಕರಿದಾರ, ಸೊಂಟದಲ್ಲಿ ಶಿವದಾರದ ಉಡದಾರ ಇದೆ.
ಮಾಹಿತಿ ಹೋಲುವ ಯಾವುದಾದರೂ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಮಾಹಿತಿಯಿದ್ದಲ್ಲಿ ಸಂಪರ್ಕಿಸುವಂತೆ ಗದಗ ಗ್ರಾಮೀಣ ಸಿಪಿಐ ರವಿ ಕಪ್ಪತನವರ ಮಾಹಿತಿ ನೀಡಿದ್ದಾರೆ.
ಗದಗ ತಾಲ್ಲೂಕಿನ ಹುಲಕೋಟಿ ಗ್ರಾ.ಪಂ.ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭರ್ಥಿಗಳನ್ನು ಶಾಸಕ ಎಚ್ ಕೆ ಪಾಟೀಲ್ ರ ಬೆಂಬಲಿಗರು ಅಪಹರಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಗಂಭೀರವಾಗಿ ಆರೋಪಿಸಿದ್ದಾರೆ.
ಹುಲಕೋಟಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗೂಂಡಾಗಿರಿ ನಡೆಸುತ್ತಿದ್ದು, ಬಿಜೆಪಿಯ ಅಭ್ಯರ್ಥಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಅನಿಲ್ ಆರೋಪಿಸಿದ್ದಾರೆ.
ಮೊದಲ ಹಂತದ ಗ್ರಾ.ಪಂ.ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ಘಳಿಗೆಯಲ್ಲಿ ಶುಕ್ರವಾರದಂದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ರವಿವಾರದಿಂದ ಬಿಜೆಪಿ ಅಭ್ಯರ್ಥಿಗಳು ಹುಲಕೋಟಿ ಗ್ರಾಮದಲ್ಲಿ ಕಾಣಿಸುತ್ತಿಲ್ಲ. ಕಾಂಗ್ರೆಸ್ ನವರೇ ಬಿಜೆಪಿ ಅಭ್ಯರ್ಥಿಗಳನ್ನು ಅಪಹರಣ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಹುಲಕೋಟಿಯಲ್ಲಿ ಬಿಜೆಪಿಗರ ಮೇಲೆ ಕಾಂಗ್ರೆಸ್ ನವರು ನಿರಂತರ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಹುಲಕೋಟಿ ಗ್ರಾಮದ ಬಿಜೆಪಿ ಬೆಂಬಲಿತ ವಾರ್ಡ್ ನಂ.3 ಹಿಂದುಳಿದ ‘ಅ’ ವರ್ಗದ ಅಭ್ಯರ್ಥಿ ನಿಂಗಪ್ಪ ನೀಲಪ್ಪ ದುರಗಣ್ಣವರ, ವಾರ್ಡ್ ನಂ.2 ರ ಮೀಸಲಾತಿ ಅಭ್ಯರ್ಥಿ ಹನಮವ್ವ ದೇವಪ್ಪ ನಿಂಬನಾಯ್ಕರ, ವಾರ್ಡ್ ನಂ.4 ಸಾಮಾನ್ಯ ಅಭ್ಯರ್ಥಿ ಕರಿಯಪ್ಪ ಫಕ್ಕೀರಪ್ಪ ರವಳೋಜಿ, ವಾರ್ಡ್ ನಂ.1 ಸಾಮಾನ್ಯ ಕ್ಷೇತ್ರದ ಅಭ್ಯರ್ಥಿ ರಾಮನಗೌಡ ಗೌಡಪ್ಪಗೌಡ ಹಿರೇಗೌಡರ ಅವರನ್ನು ಶಾಸಕರ ಬೆಂಬಲಿಗರು ಅಪಹರಿಸಿದ್ದಾರೆ ಎಂದು ಅನಿಲ ಮೆಣಸಿನಕಾಯಿ ಆರೋಪಿಸಿದ್ದಾರೆ.
4 ನೇ ವಾರ್ಡ್ ಅಭ್ಯರ್ಥಿ ಸವಿತಾ ಹನಮರ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದರಂತೆ. ಈ ಬಗ್ಗೆ ಬಿಜೆಪಿ ನಾಯಕರು ಪೊಲೀಸರ ಗಮನಕ್ಕೆ ತಂದಿದ್ದರಂತೆ. ಹಾಗಾಗಿ ಅಭ್ಯರ್ಥಿ ಸವಿತಾ ಅವರ ಮನೆಗೆ ಪೊಲೀಸ್ ಬಂದೋಬಸ್ತ್ ನೀಡಿ ಭದ್ರತೆ ಒದಗಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.
ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಬಸ್ ಬಂದ್ ಮಾಡಿ ರಾಜ್ಯಾದ್ಯಂತ ಮುಷ್ಕರ ನಡೆಸಿದ್ದ ಸಾರಿಗೆ ಸಿಬ್ಬಂದಿಗಳು ಮುಷ್ಕರ ಹಿಂಪಡೆದು ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ.
ಬಸ್ ಬಂದ್ ಆಗಿದ್ದರಿಂದ ನಗರದ ಕೇಂದ್ರೀಯ ಬಸ್ ನಿಲ್ದಾಣದ ಕಳೆದ ಮೂರು ದಿನಗಳಿಂದ ಪ್ರಯಾಣಿಕರಿಲ್ಲದೇ ಬಣಗುಡುತ್ತಿತ್ತು. ಬೇರೆ ಊರಿಗೆ ಹೋಗಲಾಗದೆ ಜನರು ಚಡಪಡಿಸಿದ್ದರು. ಬಸ್ ಯಾವಾಗ ಪ್ರಾರಂಭ ಆಗುತ್ತವೆಯೋ ಎಂದು ಕನವರಿಸುತ್ತಿದ್ದರು.
ನಗರದಲ್ಲಿ ಸೋಮವಾರ ಎಂದಿನಂತೆ ಬಸ್ ಸಂಚಾರ ಶುರುವಾಗಿದೆ. ಇದರಿಂದ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಒಬ್ಬೊಬ್ಬರಾಗಿ ಆಗಮಿಸುತ್ತಿದ್ದು, ಮುಖದಲ್ಲಿ ಮಂದಹಾಸ ಮೂಡಿದೆ. ಬಸ್ ಆರಂಭ ಆಗಿರುವುದಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಒಂದೊಂದಾಗಿ ಬಸ್ ಗಳು ನಿಲ್ದಾಣದ ಪ್ಲಾಟ್ ಫಾರ್ಮ್ ಗೆ ಬಂದು ನಿಲ್ಲುತ್ತಿದ್ದು, ಪ್ರಯಾಣಿಕರು ಬಸ್ ಏರಿ ತಾವು ಹೋಗಬೇಕಾದ ಊರಿಗೆ ತೆರಳುತ್ತಿದ್ದಾರೆ. ನಿಲ್ದಾಣಕ್ಕೆ ಬಸ್ ಗಳು ಬರುತ್ತಿದ್ದಂತೆ ಜನರು ಓಡೋಡಿ ಬಂದು ಬಸ್ ಹತ್ತುವ ದೃಶ್ಯ ನಗರದಲ್ಲಿ ಸಾಮಾನ್ಯವಾಗಿದೆ.
ಆದರೆ, ಬಸ್ ನಿಲ್ದಾಣದಲ್ಲಿ ಸಾರಿಗೆ ವಾಹನಗಳ ಸಂಖ್ಯೆ ಕಡಿಮೆ ಇದ್ದು, ಸದ್ಯ ಜಿಲ್ಲೆಯ ವಿವಿಧ ಡಿಫೋಗಳಿಂದ 34 ಬಸ್ ರಸ್ತೆಗಿಳಿದಿವೆ. ಅದರಲ್ಲಿ ಗದಗ-13, ರೋಣ-7, ಲಕ್ಷ್ಮೇಶ್ವರ-2, ನರಗುಂದ-1 ಮುಂಡರಗಿ – 4 ಹಾಗೂ ಗಜೇಂದ್ರಗಡ- 7 ಡಿಫೋದಿಂದ ಬಸ್ ಸಂಚರಿಸುತ್ತಿವೆ. ಮತ್ತೆ ಬಸ್ ಗಳು ಬಂದಾಗುವ ಸಾದ್ಯತೆಗಳಿದ್ದು, ವಸತಿ ಇರುವ ಬಸ್ ಗಳನ್ನು ಇನ್ನೂವರೆಗೂ ಬಿಟ್ಟಿಲ್ಲ ಎಂದು ಸಾರಿಗೆ ಸಂಸ್ಥೆಯ ಮೂಲಗಳು ತಿಳಿಸಿವೆ.
ಇದರಿಂದ ಪ್ರಯಾಣಿಕರಲ್ಲಿ ಸಹಜವಾಗಿ ಆತಂಕ ಮೂಡಿದ್ದು, ಮತ್ತೆ ಯಾವಾಗ ಬಸ್ ಬಂದ್ ಆಗುತ್ತದೆಯೋ ಎಂಬ ಅನುಮಾನದಲ್ಲೇ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.