Home Blog Page 3126

ಕಾರ್ಮಿಕ ಮುಖಂಡನ ಫಾರ್ಮ್ ಹೌಸ್ಗೆ ಕನ್ನ ಹಾಕಿದ ಖದೀಮರು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಫಾರ್ಮ್ ಹೌಸ್ ನ ಬೀಗ ಮುರಿದ ಕಳ್ಳರು ಟ್ರೇಜರಿಯಲ್ಲಿದ್ದ ಚಿನ್ನಾಭರಣ ಹಾಗೂ ಟಿವಿ ಕದ್ದೋಯ್ಯದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹೊಸಡಂಬಳ ಗ್ರಾಮದ ಬಳಿ ನಡೆದಿದೆ.

ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ನೌಕರರ ಸಂಘದ ಮುಖಂಡ ಡಿ ಪ್ರಸಾದ ಎಂಬುವವರ ಫಾರ್ಮ್ ಹೌಸ್ ನಲ್ಲಿ ಈ ಘಟನೆ ನಡೆದಿದೆ.

ಫಾರ್ಮ್ ಹೌಸ್ ನ ಬೀಗ ಮುರಿದು ಕಳ್ಳರು ಟ್ರೇಜರಿಯಲ್ಲಿದ್ದ 32 ಸಾವಿರ ರೂ, ಮೌಲ್ಯದ ಚಿನ್ನಾಭರಣ ಹಾಗೂ ಹಾಲ್ ನಲ್ಲಿದ್ದ ಟಿವಿ, ಬ್ಯಾಟರಿ, ಪವರ್ ಬ್ಯಾಂಕ್ ಕಳ್ಳತನ ಮಾಡಿದ್ದಾರೆ.
ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ಮಿಕ ಬೆಂಕಿಗೆ ಲಕ್ಷಾಂತರ ರೂ ಮೌಲ್ಯದ ಮೆಕ್ಕೆಜೋಳ ನಾಶ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಆಕಸ್ಮಿಕವಾಗಿ ಹೊತ್ತಿಕೊಂಡು ಬೆಂಕಿ ಲಕ್ಷಾಂತರ ರೂ. ಮೌಲ್ಯದ ಮೆಕ್ಕೆ ಜೋಳ ನಾಶ ವಾಗಿರುವ ಘಟನೆ ಗದಗ ತಾಲೂಕಿನ ನಾಗಾವಿ ತಾಂಡಾದಲ್ಲಿ ನಡೆದಿದೆ‌. ಲಕ್ಷ್ಮಣ ಪವಾರ್ ಎಂಬುವರಿಗೆ ಸೇರಿದ ಮೆಕ್ಕೆಜೋಳ ಇದಾಗಿದ್ದು ಒಂದು ತಿಂಗಳ ಹಿಂದೆ ತೆನೆ ಮುರಿದು ಹೊಲದಲ್ಲಿ ‌ಕೂಡಿಹಾಕಿದ್ದರು.

11 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸುಮಾರು 2.5 ಲಕ್ಷ ರೂ. ಮೌಲ್ಯದ ಬೆಳೆ ನಾಶವಾಗಿದೆ. ಬೆಂಕಿ ನಂದಿಸಲು ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡಬೇಕಾಯಿತು‌. ಸುದ್ದಿ ತಿಳಿದು ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಡಿಯುವ ನೀರು ಪೋಲು: ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಗದಗ ಬೆಟಗೇರಿ ಅವಳಿ ನಗರದ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ನಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ ತಾಲೂಕಿನ ಕದಾಂಪುರ ಬಳಿಯ ಸೇತುವೆ ಬಳಿಯ ಪೈಪ್ ಲೈನ್ ವಾಲ್ ದಿಂದ ದಿನನಿತ್ಯ ಲಕ್ಷಾಂತರ ಲೀಟರ್ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.

ಕಳೆದ ಮೂರು ದಿನಗಳಿಂದ ಇದೇ ರೀತಿ ನೀರು ಹಗಲು, ರಾತ್ರಿ ಹರಿದು ಚರಂಡಿಗೆ ಸೇರುತ್ತದೆ. ತುಂಗಭದ್ರಾ ನದಿಯಿಂದ ಗದಗ ಬೆಟಗೇರಿ ಅವಳಿ ನಗರದ ಜನರಿಗೆ ಕುಡಿಯುವ ನೀರು ಪೂರೈಸುವ ಪೈಪ್ ಇದಾಗಿದೆ.

ಇಷ್ಟೇಲ್ಲಾ ನೀರು ಪೋಲಾದರೂ ಕರ್ನಾಟಕ ನಗರ ಮ‌ೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳು (24×7) ಇತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಿಂದ ಕಾಂಗ್ರೆಸ್‌ಗೆ ಯಾರ್ಯಾರು ಬರ್ತಾರೆ ನೋಡ್ತಾ‌ ಇರಿ: ಡಿಕೆಶಿ

-ಹಿಟ್ನಾಳದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆಶಿಗೆ ರೆಡ್ ಕಾರ್ಪೆಟ್ ಸ್ವಾಗತ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರುವವರ ಬಗ್ಗೆ ಕೇಳಲ್ವಲ್ಲ ನೀವು? ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ‌ಶಿವಕುಮಾರ್ ಮಾಧ್ಯಮದವರನ್ನು ಪ್ರಶ್ನಿಸಿದರು.

ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದ ಶಾಸಕ ರಾಘವೇಂದ್ರ ಹಿಟ್ನಾಳ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸದ್ಯ ಬಿಜೆಪಿಯವರು ಅದೇನೇನು ಮಾಡುತ್ತಾರೊ ಮಾಡಲಿ. ಮುಂದೆ ಬಿಜೆಪಿ ತೊರೆದು ಯಾರ್ಯಾರು ಬರುತ್ತಾರೆ ಅನ್ನೋದನ್ನ ನೋಡ್ತಾ‌ ಇರಿ ಎಂದರು.

ಭತ್ತಕ್ಕೆ ಬೆಂಬಲ ಬೆಲೆಗೆ ಆಗ್ರಹಿಸಿ ಕಾಂಗ್ರೆಸ್ ಎಲ್ಲ ಕಡೆ ಪ್ರತಿಭಟಿಸಿದೆ.
ಈ ಕುರಿತು ಬೆಂಗಳೂರಿನಲ್ಲಿ ಸಭೆ ನಡೆಸಿ ಮುಂದಿನ ನಡೆ ಬಗ್ಗೆ ಚರ್ಚೆ ಮಾಡ್ತಿವಿ. ಶಿಕ್ಷಣ ವ್ಯವಸ್ಥೆ ಬಗ್ಗೆ ಸರಕಾರ ನಮ್ಮ ಸಲಹೆ ಕೇಳಿಲ್ಲ. ಸರಕಾರದ ಕ್ರಮ ನೋಡಿಕೊಂಡು ಆನಂತರ ಕಾಂಗ್ರೆಸ್ ನಿಲುವು ಪ್ರಕಟಿಸ್ತೇವೆ ಎಂದ ಡಿಕೆಶಿ,
ರೋಷನ್ ಬೇಗ್ ಬಂಧನಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಹಿಟ್ನಾಳ ಗ್ರಾಮದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆಶಿಗೆ ಅದ್ಧೂರಿ ಸ್ವಾಗತ ದೊರೆಯಿತು. ಶಾಸಕ ರಾಘವೇಂದ್ರ ಹಿಟ್ನಾಳ ನಿವಾಸದಲ್ಲಿ ಡಿಕೆಶಿ ಉಪಾಹಾರಕ್ಕೆ ಆಗಮಿಸಿದ್ದ ಡಿಕೆಶಿ ಅವರನ್ನು ರೆಡ್ ಕಾರ್ಪೆಟ್ ಮೂಲಕ ಸ್ವಾಗತಿಸಲಾಯಿತು. ಡೊಳ್ಳು, ಬಾಜಾ-ಭಜಂತ್ರಿಯೊಂದಿಗೆ ಡಿಕೆಶಿ ಮೆರವಣಿಗೆ ಮಾಡಲಾಯಿತು. ಹಿಟ್ನಾಳದಲ್ಲಿ ಹಬ್ಬದ ವಾತಾವರಣ ಕಂಡು ಬಂತು. ಡಿಕೆಶಿ ನೋಡಲು ಜನರು ಮುಗಿಬಿದ್ದರು.
ಜನರತ್ತ ಕೈಬೀಸಿ ಹಿಟ್ನಾಳ ನಿವಾಸಕ್ಕೆ ಆಗಮಿಸಿದ ಡಿಕೆಶಿ ಉಪಾಹಾರ ಸೇವಿಸಿ ಸುದ್ದಿಗೋಷ್ಠಿ ನಡೆಸಿದರು. ಆನಂತರ ಗಂಗಾವತಿಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಕಾರಟಗಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ನಿವಾಸಕ್ಕೆ ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದರು.

ಕೊವಿಡ್-19: ಗದಗ ಜಿಲ್ಲೆಯ ಭಾನುವಾರದ ಅಪ್ಡೇಟ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ನವೆಂಬರ್ 22 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 118926 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 122727 ಮಾದರಿಗಳಲ್ಲಿ 111128 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 929 ಮಾದರಿಗಳ ವರದಿ ಬರಲು ಬಾಕಿ ಇದೆ.

ಜಿಲ್ಲೆಯಲ್ಲಿ ಇಂದಿನ 10 ಪ್ರಕರಣಗಳು ಸೇರಿದಂತೆ ಒಟ್ಟು 10670 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ
ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 5 ಜನ ಸೇರಿದಂತೆ ಒಟ್ಟು 10453 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 76 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಜೆಪಿಗೆ ಸೇರ್ತಿನಿ ಅಂದ್ರೆ ತಾಲೂಕುಗಳನ್ನೇ ಜಿಲ್ಲೆ ಮಾಡ್ತಾರೆ: ತಂಗಡಗಿ ವ್ಯಂಗ್ಯ

ಇವಿಎಂ ಬದಲಾಗಿ ಬ್ಯಾಲೆಟ್ ಬಳಸಿ ಚುನಾವಣೆಯಲ್ಲಿ ಗೆಲ್ಲಲಿ, ಶರಣಾಗತಿ ಆಗ್ತೇವೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಈಗ ವಿಜಯನಗರ ಜಿಲ್ಲೆಗೆ ತಾತ್ವಿಕ ಒಪ್ಪಿಗೆ ನೀಡುವ ಅಗತ್ಯ ಇರಲಿಲ್ಲ. ಆನಂದ್ ಸಿಂಗ್ ಸಂತೋಷಕ್ಕಾಗಿ ಬಳ್ಳಾರಿ ಇಬ್ಭಾಗ ಮಾಡುವ ಹುನ್ನಾರವಿದು. ಬೇರೆ ಪಕ್ಷದವರು ಬಿಜೆಪಿಗೆ ಸೇರೋದಾದ್ರೆ ತಾಲೂಕುಗಳನ್ನೇ ಜಿಲ್ಲೆಯನ್ನಾಗಿ‌ ಮಾಡ್ತಾರೆ ಬಿಜೆಪಿಯವರು ಎಂದು ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.

ಕೊಪ್ಪಳದಲ್ಲಿ ರವಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ನಾಯಕರನ್ನು ಹುಟ್ಟು ಹಾಕುವ, ಬೆಳೆಸುವ ಸಾಮರ್ಥ್ಯ ಇಲ್ಲ. ಅದು ಕೇವಲ ಕಾಂಗ್ರೆಸ್‌ಗೆ ಮಾತ್ರ ಇರೋದು. ವಲಸೆ ಹೋದವರನ್ನೇ ಮಂತ್ರಿಗಳನ್ನಾಗಿ ಮಾಡಿದೆ ಬಿಜೆಪಿ. ಮೂಲ ಬಿಜೆಪಿಯವರು ಎಷ್ಟು ಜನ ಮಂತ್ರಿಗಳಿದ್ದಾರೆ ಲೆಕ್ಕ ಹಾಕಿ ನೋಡೋಣ? ಎಂದು ಅವರು ಪ್ರಶ್ನಿಸಿದರು.

ಹಾಗೆ ಬೇರೆ ಪಕ್ಷ ಬಿಟ್ಟು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದವರೆಲ್ಲ ಇವಿಎಂ ಮಷೀನ್ ದೋಷದಿಂದ ಗೆದ್ದಿದ್ದಾರೆ. ಶಿರಾದಲ್ಲಿ ಜಯಚಂದ್ರ ಅವರಿಗೆ ಜನಬೆಂಬಲ ಇತ್ತು. ಆದರೂ ಅಲ್ಲೂ ಬಿಜೆಪಿ ಗೆದ್ದಿದೆ ಅಂದ್ರೆ ಏನರ್ಥ? ದೇಶದಲ್ಲಿ ಮುಂಬರುವ ಚುನಾವಣೆಗಳಲ್ಲಿ ಇವಿಎಂ ಬದಲಾಗಿ ಬ್ಯಾಲೆಟ್ ಬಳಸಿ ಗೆಲ್ಲಲಿ. ಹಾಗೊಂದು ವೇಳೆ ಗೆದ್ದರೆ ಬಿಜೆಪಿಗೆ ನಾವು ಶರಣಾಗತಿ ಆಗುತ್ತೇವೆ. ಮುಂಬರುವ ಮಸ್ಕಿ ಚುನಾವಣೆಯಲ್ಲೂ ಇವಿಎಂ ಬಳಸಿದರೆ ನಮಗೆ ಫಲಿತಾಂಶದ ಬಗ್ಗೆ ಅನುಮಾನ ಇರುತ್ತೆ ಎಂದು ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ 10-15 ವರ್ಷಗಳಿಂದ ಚುನಾವಣೆ ನೋಡುತ್ತಿರಬಹುದು. ನಾನು 19ನೇ ವಯಸ್ಸಿನಲ್ಲಿ ಕಾಲೇಜು ದಿನಗಳಲ್ಲೇ ಚುನಾವಣೆ ಎದುರಿಸಿದವನು. ಅವರು ಇಲ್ಲಿಗೆ ಬರೋದು ಜಿಲ್ಲೆಯ ಅಭಿವೃದ್ಧಿ ಮಾಡುವುದಕ್ಕಲ್ಲ, ಬದಲಾಗಿ ಸೂಟ್‌ಕೇಸ್ ಒಯ್ಯಲಿಕ್ಕೆ. ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ನಡೆಸಿ ಬೈತಾರೆ. ಆನಂತರ ಬೇರೊಂದು ಜಾಗದಲ್ಲಿ ಅವರನ್ನು ಕರೆಸಿಕೊಂಡು ಗಂಟುಮೂಟೆ ಕಟ್ತಾರೆ. ನಿಜವಾಗಲೂ ಅಧಿಕಾರಿಗಳು ತಪ್ಪು ಮಾಡಿದ್ದರೆ ಜಿಲ್ಲೆಯಲ್ಲಿ ಒಬ್ಬ ಅಧಿಕಾರಿಯನ್ನಾದರೂ ಅಮಾನತು ಮಾಡಬೇಕಿತ್ತಲ್ಲವೇ? ಎಂದು ಅವರು ಅನುಮಾನ ಪಟ್ಟರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಮಾಲತಿ ನಾಯಕ್, ಶೈಲಜಾ ಹಿರೇಮಠ, ಅಕ್ಬರ್ ಪಲ್ಟಾನ್, ಗುರು ಹಲಗೇರಿ, ಮುತ್ತುರಾಜ ಕುಷ್ಟಗಿ ಮತ್ತಿತರರು ಇದ್ದರು

ಬಣ್ಣ ಬಯಲಾಗುತ್ತೆ: ಹಿಟ್ನಾಳ

ಕೊಪ್ಪಳ: ಬಿಜೆಪಿ ಆಡಳಿತ ಜನರಿಗೆ ರೋಸಿ ಹೋಗಿದೆ. ಈಗಾಗಲೇ ಜನರಿಗೆ ಬಿಜೆಪಿ ಬಂಡವಾಳ ಗೊತ್ತಾಗಿದೆ. ಇನ್ನೂ ಎರಡು-ಮೂರು ತಿಂಗಳಲ್ಲಿ ಬಿಜೆಪಿ ಬಣ್ಣ ಬಯಲಾಗಲಿದೆ. ಬಿಜೆಪಿ ಸೇರುವವರ ಸಂಖ್ಯೆ ಜಾಸ್ತಿಯಾಗಿಲ್ಲ. ಬಿಜೆಪಿ ತೊರೆದು ಕಾಂಗ್ರೆಸ್ ಸೇರುವವರು ಹರಿವು ಹೆಚ್ಚುತ್ತಿದೆ. ಕೆಲವೇ ತಿಂಗಳು ಕಾದು ನೋಡಿ, ಗೊತ್ತಾಗುತ್ತೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿಕೆ ನೀಡಿ ಸಂಚಲನ ಮೂಡಿಸಿದರು.

ಜೀವದ ಹಂಗು ತೊರೆದು ಮಾನವೀಯತೆ ಮೆರೆದ ರೈತ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಕಳೆದ ಮೂರು ದಿನಗಳಿಂದ ಬಾವಿಯಲ್ಲಿ ಸಿಲುಕಿಕೊಂಡಿದ್ದ ಸಾಕುಪ್ರಾಣಿಯ ಪ್ರಾಣ ಉಳಿಸಿದ ರೈತನೊಬ್ಬನ ವಿಡಿಯೋ ಈಗ ವೈರಲ್ ಆಗಿದೆ.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಸಾಕುಪ್ರಾಣಿ ಬೆಕ್ಕು ಬಾವಿಯಲ್ಲಿ ಬಿದ್ದು ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿತ್ತು. ಜೀವ ಕಾಪಾಡಿ ಎಂದು ಪೊದೆಯ ಮೇಲೆ ಕುಳಿತು ತನ್ನ‌ ಆರ್ತನಾದದ ಮೂಲಕ ಹೊರಹಾಕುತ್ತಿತ್ತು.

ಇದನ್ನು ಗಮನಿಸಿದ ಗ್ರಾಮದ ರೈತ ಮಹಾಂತೇಶ್ ತನ್ನ ಪ್ರಾಣವನ್ನು ಲೆಕ್ಕಿಸದೇ ಗೆಳಯರ ಸಹಾಯದಿಂದ ಹಗ್ಗದ ಮೂಲಕ ಬಾವಿಯಲ್ಲಿ ಇಳಿದು ಬೆಕ್ಕಿನ ಪ್ರಾಣ ಉಳಿಸಿದ್ದಾನೆ.

ಬೆಕ್ಕಿನ ರಕ್ಷಣಾ ಕಾರ್ಯದ ದೃಶ್ಯ ಸ್ಥಳೀಯ ಯುವಕರು ಮೊಬೈಲ್ ನಲ್ಲಿ ಸೆರೆಹಿಡಿದು ವೈರಲ್ ಮಾಡಿದ್ದಾರೆ.

ಬೆಕ್ಕಿನ ಜೀವ ಉಳಿಸಿದ ರೈತ ಮಹಾಂತೇಶ್ ನ ಮಾನವೀಯ ಕಾರ್ಯಕ್ಕೆ ಎಲ್ಲಡೇ ಮೆಚ್ಚುಗೆ ವ್ಯಕ್ತವಾಗಿದೆ.

ಅಪರಿಚಿತ ಮಹಿಳೆ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ಹೊರವಲಯದ ಕಾಡು ಪ್ರದೇಶದಲ್ಲಿ ಅಪರಿಚಿತ ಮಹಿಳೆ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ದನ ಕಾಯುವವರು ಶನಿವಾರ ಸಂಜೆ ಜಾನುವಾರು ಮೇಯಿಸಲು ಅಲ್ಲಿಗೆ ಹೋದಾಗ ದುರ್ವಾಸನೆ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಾತ್ರಿ ಶೋಧ ಕಾರ್ಯಾಚರಣೆಗೆ ಇಳಿದಾಗ ಮಹಿಳೆಯ ಶವ ಪತ್ತೆಯಾಗಿದೆ. ಶವದ ಪಕ್ಕದಲ್ಲಿ ಮದ್ಯ, ನೀರಿನ ಪೌಚ್‌ಗಳಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಕುರಿತು ಕುಷ್ಟಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಾಲಕ್ಕೆ ಹೆದರಿ ನೇಣಿಗೆ ಶರಣು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಸಾಲಕ್ಕೆ ಹೆದರಿ ಶನಿವಾರ ರಾತ್ರಿ ನೇಣಿಗೆ ಶರಣಾದ ಘಟನೆ ಕೊಪ್ಪಳದ ಜೆ.ಪಿ.ಮಾರ್ಕೆಟ್ ಬಳಿಯ ಬಟ್ಟೆ ಅಂಗಡಿಯೊಂದರ ಮಹಡಿ ಮೇಲೆ ನಡೆದಿದೆ.

ಮೃತನನ್ನು ಯಲ್ಲಪ್ಪ (20) ಎಂದು ಗುರುತಿಸಲಾಗಿದೆ. ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಸರ್ಕಾರ ನಿರ್ಮಿಸಿ ಕೊಟ್ಟ ಮನೆ ಸದುಪಯೋಗಕ್ಕೆ ಸಚಿವ ಪಾಟೀಲ ಕರೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,
ನರಗುಂದ

ಸಂತ್ರಸ್ತರಿಗಾಗಿ ಸರ್ಕಾರ 14 ಸ್ಥಳಾಂತರ ಗ್ರಾಮಗಳ ಕುಟುಂಬಗಳಿಗೆ ಸುಮಾರು 8,000 ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಸರ್ಕಾರ ನಿರ್ಮಿಸಿಕೊಟ್ಟ ಈ ಮನೆಗಳ ಸದುಪಯೋಗಪಡಿಸಿಕೊಳ್ಳುವಂತೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ಅವರು ತಾಲೂಕಿನ ಕುರ್ಲಗೇರಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಲಾದ ನರಗುಂದ -ಕುರ್ಲಗೇರಿ- ಗದಗ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಅರಭಾವಿ ಚಳ್ಳಕೇರಿ ರಾಷ್ಟ್ರೀಯ ಹೆದ್ದಾರಿ 45 ರ ಕಿ.ಮೀ 90 ರಿಂದ 94.60 ರವರೆಗೆ ರಸ್ತೆ ಸುಧಾರಣೆ (ನರಗುಂದದಿಂದ ಕುರ್ಲಗೇರಿವರೆಗೆ) ಅಂದಾಜು 5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಗ್ರಾಮಸ್ಥರು ಉತ್ತಮ ಕಾಮಗಾರಿ ನಡೆಯುವಂತೆ ನಿಗಾವಹಿಸಬೇಕು ಎಂದರು.

ಸ್ಥಳಾಂತರ ಗ್ರಾಮಗಳ ನಿವಾಸಿಗಳಿಗೆ ನಿರ್ಮಿಸಲಾದ ಮನೆಗಳನ್ನು ಸೌಹಾರ್ದತೆಯಿಂದ ಎಲ್ಲರೂ ಸೇರಿಕೊಂಡು ಮನೆ ಹಂಚಿಕೆ ಮಾಡಿಕೊಳ್ಳುವ ಮೂಲಕ ಸರ್ಕಾರ ನಿರ್ಮಿಸಿಕೊಟ್ಟ ಮನೆಗಳನ್ನು ಸದ್ಭಳಕೆ ಮಾಡಿಕೊಳ್ಳಲು ತಿಳಿಸಿದರು. ಕೆಲವು ಕುಟುಂಬಗಳಿಗೆ ಮನೆ ಹಂಚಿಕೆಯಲ್ಲಿ ಕೊರತೆ ಅಥವಾ ಕಡಿಮೆ ಆದಲ್ಲಿ ಮುಂದಿನ ದಿನಗಳಲ್ಲಿ ಅವರಿಗೂ ಸಹ ಮನೆ ನಿರ್ಮಿಸಿಕೊಡಲು ಸರ್ಕಾರ ಸಿದ್ಧವಿದ್ದು, ಸರ್ಕಾರ ಸದಾ ನಿಮ್ಮೊಂದಿಗಿದೆ ಎಂದರು.

ಕುರ್ಲಗೇರಿ ನಿವಾಸಿಗಳ ಬೇಡಿಕೆಯಾದ ಸೇತುವೆ ನಿರ್ಮಾಣ , ರಸ್ತೆನಿರ್ಮಾಣ ಕಾಮಗಾರಿಗಳನ್ನು ಮುಂದಿನ ಹಂತದಲ್ಲಿ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ರೇಣುಕಾ ಅವರಾದಿ, ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಶಂಕರಪ್ಪ ಬ್ಯಾಹಟ್ಟಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಮ್.ಎಸ್. ಪಾಟೀಲ, ಮುದುಕಯ್ಯ ಹಿರೇಮಠ, ಬಸವರಾಜ ಬ್ಯಾಹಟ್ಟಿ, ಈಶ್ವರಗೌಡ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷರು , ತಹಶೀಲ್ದಾರ ಮಹೇಂದ್ರ, ಶಿಕ್ಷಕ ಎಸ್.ಪಿ.ದೊಡ್ಡಮನಿ ಸೇರಿದಂತೆ ಇತರರು ಇದ್ದರು.

error: Content is protected !!