ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಬಿಜೆಪಿ 17 ಜನರಿಂದಲಷ್ಟೇ ಅಧಿಕಾರಕ್ಕೆ ಬಂದಿದೆಂಬುವುದು ಸುಳ್ಳು. ನಾವು 105 ಜನ ಶಾಸಕರು ಇರದಿದ್ದರೆ ಸರ್ಕಾರ ಹೇಗೆ ರಚನೆಯಾಗುತ್ತಿತ್ತು? ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ನಾವು ಗೆದ್ದಿದ್ದೇವೆ. ಹೀಗಾಗಿ ಮೊದಲಿಗೆ 105 ಶಾಸಕರು, ನಂತರ ಉಳಿದವರು.
ಪಕ್ಷದವರಿಗೆ ಆದ್ಯತೆ ನೀಡಬೇಕು ಎಂದು ಹೇಳುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪಿಸಲು ಕಾರಣಿಕರ್ತರು ಯಾರು ಎಂಬ ಚರ್ಚೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿಧಾನಸೌಧದಲ್ಲಿಂದು ನಾಂದಿ ಹಾಡಿದ್ದಾರೆ.
ಇದಕ್ಕೆ ಪ್ರತ್ತ್ಯುತ್ತರವಾಗಿ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ 105 ಜನ ಶಾಸಕರಿದ್ದಾಗ ಸರ್ಕಾರ ರಚಿಸಲಿಲ್ಲ ಯಾಕೆ ಎಂದು ತಿರುಗೇಟು ನೀಡಿದ್ದಾರೆ.
ರೇಣುಕಾಚಾರ್ಯ ಹೇಳಿದ್ದಿಷ್ಟು;
ಯಾರೋ ಒಬ್ಬರಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ. 17 ಜನರೊಂದಿಗೆ 105 ಜನರು ಇದ್ದಿದ್ದರಿಂದಲೇ ಸರ್ಕಾರ ಅಧಿಕಾರಕ್ಕೆ ಬಂದಿದ್ದು. 17 ಜನರ ಬಗ್ಗೆ ಗೌರವವಿದ್ದು, ಅವರಿಗೆ ಯೋಗ್ಯವಾದ ಸ್ಥಾನಮಾನ ನೀಡಿದೆ. ಅವರು ಕಾಂಗ್ರೆಸ್ ಜೆಡಿಎಸ್ ಪಕ್ಷದಿಂದ ಬೇಸತ್ತು ಬಿಜೆಪಿಗೆ ಬಂದಿದ್ದಾರೆ. ನನ್ನಿಂದಲೇ ಸರ್ಕಾರ ರಚನೆಯಾಗಿದೆ ಎಂದು ಹೇಳುವವರು ಅರ್ಥ ಮಾಡಿಕೊಳ್ಳಬೇಕು ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಎಂಟಿಬಿ ನಾಗರಾಜ್ ಹೇಳಿದ್ದಿಷ್ಟು
ಪಕ್ಷದಲ್ಲಿ 105 ಶಾಸಕರಿದ್ದಾಗ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲವ್ಯಾಕೆ. 17 ಜನರು ಬಂದಿರುವುದರಿಂದಲೇ ಸರ್ಕಾರ ಸ್ಥಾಪಿತವಾಗಿರುವುದನ್ನು ಮರೆಯಬಾರದು. ನಮ್ಮ ಹಿಂದಿನ ಪಕ್ಷಗಳಿಗೆ ರಾಜೀನಾಮೆ ನೀಡಿ, ಬಿಜಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿದ್ದೇವೆ. ಹಾಗಾಗಿ ಈಗ ನಾವೆಲ್ಲರೂ ಬಿಜೆಪಿಯವರೇ ಎಂದಿದ್ದಾರೆ.
ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಮೂಲ ಹಾಗೂ ವಲಸಿಗ ಬಿಜೆಪಿಗರ ಮಧ್ಯೆ ಬೂದಿ ಮುಚ್ಚಿದ ಕೆಂಡದಂತಿರುವ ಮುನಿಸು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಹೇಳಿಕೆಯಿಂದಾಗಿ ಮತ್ತೊಮ್ಮೆ ಸ್ಪೋಟಗೊಂಡಂತಾಗಿದೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಕೈಯಲ್ಲಿದ್ದ ಕಬ್ಬಿಣದ ಪೈಪ್ ವಿದ್ಯುತ್ ತಂತಿಗೆ ತಗುಲಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಕುರ್ತಕೋಟಿ ಅಸುಂಡಿ ರಸ್ತೆಯಲ್ಲಿರುವ ಎಂಪ್ಲಸ್ ಕೆ.ಎನ್.ಸೋಲಾರ್ ಪ್ರೈವೇಟ್ ಲಿಮಿಟೆಡ್ ಸೈಟಿನಲ್ಲಿ ನಡೆದಿದೆ.
ಮೃತಪಟ್ಟಿರುವ ವ್ಯಕ್ತಿ ಕುರ್ತಕೋಟಿ ಗ್ರಾಮದ ಕರಿಯಪ್ಪ ರೇವಣಪ್ಪ ಭಾಗವಾಡ ಎಂದು ಗುರುತಿಸಲಾಗಿದೆ. ಮೃತನು ಸೋಲಾರ್ ಪ್ಲೇಟ್ ಮಾಡಲ್ ಕ್ಲೀನಿಂಗ್ ಕೆಲಸಗಾರನಾಗಿದ್ದನು.
ಸೋಲಾರ್ ಪ್ಲ್ಯಾಂಟ್ ನ ಕೆಲಸಗಾರರ ಬಗ್ಗೆ ಯಾವುದೇ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೇ, ಕ್ಲೀನಿಂಗ್ ಕರಿಯಪ್ಪನ ಕೈಯಲ್ಲಿ ಕಬ್ಬಿಣದ ಪೈಪ್ ಕೊಟ್ಟು ಕೆಲಸಕ್ಕೆ ಕಳುಹಿಸಿದ ಸೋಲಾರ್ ಪ್ಲ್ಯಾಂಟ್ ಸೂಪರ್ವೈಸರ್ ದಾದಾಪೀರ, ಸೇಫ್ಟಿ ಇನ್ಚಾರ್ಜ್ ಹಾಗೂ ಸೈಟ್ ಜವಾಬ್ದಾರಿ ಹೊಂದಿರುವ ಸುರೇಶ ಮತ್ತು ಕಾರ್ತಿಕರೆಡ್ಡಿ ಅವರಿಗೆ ಕೆಲಸಗಾರರ ಬಗೆಗಿನ ನಿರ್ಲಕ್ಷತನವೇ ಕಾರಣ ಎಂದು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಪಿಎಸ್ಐ ಅಜಿತ್ ಕುಮಾರ ಹೊಸಮನಿ ತಿಳಿಸಿದ್ದಾರೆ.
ಘಟನೆಯ ವಿವರ: ಕ್ಲೀನಿಂಗ್ ಕರಿಯಪ್ಪ ನ.24 ರಂದು ಸೋಲಾರ್ ಪ್ಲ್ಯಾಂಟಿಗೆ ಕೆಲಸಕ್ಕೆ ಹೋಗಿದ್ದನು. ಸೋಲಾರ್ ಪ್ಲ್ಯಾಂಟಿನ ಗೇಟ್ ಮುಂದೆ ವಿದ್ಯುತ್ ಕಂಬಗಳಿದ್ದು, ವಿದ್ಯುತ್ ತಂತಿ ಹಾದಿವೆ. ಸೋಲಾರ್ ಪ್ಲೇಟ್ ಸ್ವಚ್ಛ ಮಾಡುವ ಉದ್ದನೆಯ ಕಬ್ಬಿಣದ ಪೈಪ್ ಕೊಟ್ಟು ಗೇಟ್ ಒಳಗೆ ಕೆಲಸಕ್ಕೆ ಕಳುಹಿಸಿದ್ದಾರೆ. ಈ ವೇಳೆ ಅಲ್ಲೇ ಗೇಟ್ ಮುಂದೆ ಹಾದಿರುವ ವಿದ್ಯುತ್ ತಂತಿಗೆ ಪೈಪ್ ತಗುಲಿ ವಿದ್ಯುತ್ ಸ್ಪರ್ಶಿಸಿ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ತಕ್ಷಣ ಚಿಕಿತ್ಸೆಗಾಗಿ ಹುಲಕೋಟಿಯ ಆರ್.ಎಂ.ಎಸ್. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಲ್ಲಿನ ವೈದ್ಯರು ವ್ಯಕ್ತಿಯು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ರಾಜಕೀಯ ನಾಯಕರು ನಾಲಿಗೆ ಹರಿ ಬಿಡುತ್ತಿರುವುದೇನೂ ಇತ್ತೀಚಿನ ದಿನಗಳಲ್ಲಿ ಹೊಸತೇನಲ್ಲ. ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಹಲವರ ವಿರುದ್ಧ ಆಗಾಗ್ಗೆ ಕುಹಕವಾಗಿ ಮಾತನಾಡುತ್ತಲೇ ಇರುತ್ತಾರೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿರುವ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಆಡಳಿತದ ಬಗ್ಗೆ ಬಿಜೆಪಿ ನಾಯಕರು ಹರಿಹಾಯುತ್ತಲೇ ಇದ್ದಾರೆ. ಇಲ್ಲಿ ಗೂಂಡಾಗಿರಿ ಆಡಳಿತವಿದೆ ಎಂದು ಆರೋಪಿಸುತ್ತಲೇ ಬರುತ್ತಿರುವುದು ಹೊಸತಲ್ಲ.
ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಗೂಂಡಾಗಿರಿ ಆಡಳಿತ ಜಾರಿಯಲ್ಲಿದೆ. ಪೊಲೀಸರು ಕೈಕಟ್ಟಿ ಕುಳಿತಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ್ರೆ ಬೂಟು ನೆಕ್ಕಿಸುತ್ತೇವೆಂದು ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷ ರಾಜು ಬ್ಯಾನರ್ಜಿ ನಿನ್ನೆ ನಡೆದ ದುರ್ಗಾಪುರದ ಸಮಾವೇಶದಲ್ಲಿ ಮಾತನಾಡಿರುವ ವಿವಾದಾತ್ಮಕ ಹೇಳಿಕೆ ನ್ಯೂಸ್ 18 ಕನ್ನಡದಲ್ಲಿ ವರದಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಏನಾಗುತ್ತದೆ ನೋಡಿ. ಗೂಂಡಾಡಳಿತ ನಡೆಯುತ್ತಿದ್ದರೂ ಪೊಲೀಸರು ಸುಮ್ಮನಿದ್ದಾರೆ. ಇಂತವರನ್ನ ಏನ್ಮಾಡ್ಬೇಕು ಹೇಳಿ. ಅವರಿಗೆ ನಾವು ಬೂಟು ನೆಕ್ಕುವ ಕೆಲಸ ನೀಡುತ್ತೇವೆಂದು ಬಿಜೆಪಿ ನಾಯಕ ರಾಜು ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2021ರಲ್ಲಿ ನಡೆಯುವ ಹಿನ್ನೆಲೆಯಲ್ಲಿ ಟಿಎಂಸಿ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಪಕ್ಷ ಸಂಘಟನೆ ಹಾಗೂ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.
ನಾನಷ್ಟೇ ರಾಜ್ಯದಲ್ಲಿ ಆಸ್ತಿ ಸಂಪಾದಿಸಿರುವುದಾ? ಯಾರ ಮೇಲೂ ಇಲ್ಲದ ತನಿಖೆ ನನ್ನ ಮೇಲ್ಯಾಕೆ? ಸಿಬಿಐ ತನಿಖೆ ದ್ವೇಷದ ರಾಜಕಾರಣ ಅಲ್ಲವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ದ್ವೇಷದಿಂದ ನನ್ನ ವಿರುದ್ಧ ಸಿಬಿಐ ವಿಚಾರಣೆ ನಡೆಯುತ್ತಿದೆ. ನಾನೇನು ಮಾಡಲಾರದಂತಹ ಕೆಲಸ ಮಾಡಿಲ್ಲವಾದ್ದರಿಂದ ಹೆದರುವ ಅವಶ್ಯಕತೆ ಇಲ್ಲ. ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಇಡೀ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ನನ್ನ ವಿರುದ್ಧ ತನಿಖೆ ಮಾಡುವಂತೆ ಸಿಬಿಐಗೆ ಅನುಮತಿ ನೀಡಿದ್ದಾರೆ ಎಂದರು.
‘ ಇದುವರೆಗೂ ಯಾರ ಮೇಲೆಯೂ ಈ ರೀತಿ ತನಿಖೆ ಮಾಡಿಸಿಲ್ಲ. ನನ್ನ ಮೇಲೆ ಯಾವುದಾದರೂ ದೂರು ದಾಖಲಾಗಿದೆಯಾ? ಆರೋಪ ಸಾಬೀತಾಗಿದೆಯಾ? ಲಂಚ ಪಡೆದಿದ್ದೇನಾ? ಅಧಿಕಾರ ದುರುಪಯೋಗ ಮಾಡಿಕೊಂಡಿದ್ದೇನಾ? ಇಂಧನ ಸಚಿವನಾಗಿದ್ದಾಗ ಅಕ್ರಮ ಮಾಡಿದ್ದೇನಾ? ಅವರದೇ ಸರ್ಕಾರವಿರುವಾಗ ಈ ಎಲ್ಲದರ ಬಗ್ಗೆ ತನಿಖೆ ಮಾಡಿಸಲಿ. ಅದನ್ನು ಬಿಟ್ಟು ಸಿಬಿಐಗೆ ಕೊಡುವ ಅಗತ್ಯವೇನಿತ್ತು? ‘ ಎಂದು ಪ್ರಶ್ನಿಸಿದರು.
‘ಇದೊಂದು ತನಿಖೆ ಮಾಡುವ ಪ್ರಕರಣವಲ್ಲವೆಂದು ಅಡ್ವೊಕೇಟ್ ಜನರಲ್ ಅವರೇ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿರುವ ಎಸಿಬಿಯಿಂದಲೇ ವಿಚಾರಣೆ ನಡೆಸಬಹುದುಂದು ತಿಳಿಸಿದ್ದಾರೆ. ಆದರೂ ಸರ್ಕಾರದ ಒತ್ತಡದ ಮೇಲೆ ಈ ವಿಚಾರಣೆ ನಡೆಯುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರಿದರು.
ನಾನು ಸಿಬಿಐ ಅಧಿಕಾರಿಗಳ ಕಾರ್ಯ ಪ್ರಶ್ನಿಸುವುದಿಲ್ಲ. ಅವರು ಅವರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ, ನಮಗೆ ಯಾವುದೇ ತರಹದ ತೊಂದರೆ ನೀಡುತ್ತಿಲ್ಲ. ಅಲ್ಲದೇ, ವಿಚಾರಣೆ ವೇಳೆ ಸಿಬಿಐ ಕಚೇರಿ ಬಳಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸ್ನೇಹಿತರು ಸೇರಿದಂತೆ ಯಾರೂ ಬರಬಾರದು ಎಂದು ಮನವಿ ಮಾಡಿಕೊಂಡರು.
ಜಿಲ್ಲೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಹಾಗೂ ಬೈಕ್ ಗಳನ್ನು ಕಳೆದುಕೊಂಡು ದುಃಖದಲ್ಲಿದ್ದ ವಾರಸುದಾರರಿಗೆ, ಕಳೆದು ಹೋಗಿದ್ದ ವಸ್ತುಗಳನ್ನು ವಾಪಸ್ ನೀಡುವ ಮೂಲಕ ನಗು ಕಮರಿದ್ದ ಮುಖದಲ್ಲಿ ಗದಗ ಜಿಲ್ಲಾ ಪೊಲೀಸರು ಮಂದಹಾಸ ಮೂಡಿಸಿದ್ದಾರೆ.
ಯತೀಶ್ ಎನ್, ಗದಗ ಎಸ್ಪಿ
ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ಬಂಗಾರ, ಬೆಳ್ಳಿ, ಹಣ, ವಾಹನ ಕಳೆದುಕೊಂಡು ಕಂಗಾಲಾಗಿದ್ದ ಕುಟುಂಬಗಳಿಗೆ ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಾಪರ್ಟಿ ರಿಟರ್ನ್ ಪರೇಡ್ ನಲ್ಲಿ ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಸ್ತು ಮತ್ತು ಆಭರಣಗಳನ್ನು ಸಂಬಂಧಿಸಿದ ಫಲಾನುಭವಿಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಮರಳಿಸಿತು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 50 ಕಳ್ಳತನ ಪ್ರಕರಣ ಬೇಧಿಸಿರುವ ಪೊಲೀಸರು ಕಳ್ಳರಿಂದ ಒಟ್ಟು 39 ಲಕ್ಷ 24 ಸಾವಿರ ಮೌಲ್ಯದ ಚಿನ್ನಾಭರಣ, ನಗದು, ಬೈಕ್ ಸೇರಿದಂತೆ ವಾಹನಗಳನ್ನು ಜಪ್ತಿ ಮಾಡಲಾಗಿತ್ತು. ಅದರಲ್ಲಿ 656 ಗ್ರಾಂ ಚಿನ್ನಾಭರಣ, 2 ಕೆಜಿ 265 ಗ್ರಾಂ ಬೆಳ್ಳಿ, 23 ಬೈಕ್ ಹಾಗೂ ನಾಲ್ಕು ವಾಹನಗಳ ಸೇರಿವೆ.
ಪ್ರಸಕ್ತ ಸಾಲಿನಲ್ಲಿ 50 ಸ್ವತ್ತು ಪ್ರಕರಣಗಳನ್ನು ಬೇಧಿಸಿದ್ದು, ಈ ವೇಳೆ ಜಪ್ತಿ ಮಾಡಿರುವ ಚಿನ್ನಾಭರಣಗಳನ್ನು ಫಲಾನುಭವಿಗಳಿಗೆ ಮರಳಿ ನೀಡಲಾಗಿದೆ. ಈ ವರ್ಷ ಸ್ವತ್ತು ಪ್ರಕರಣಗಳಲ್ಲಿ ಸರಾಸರಿ 56% ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಇನ್ನುಳಿದವುಗಳ ಪತ್ತೆಗಾಗಿ ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತವಾಗಿದೆ. ಇನ್ನೆರಡು ತಿಂಗಳಲ್ಲಿ ಇನ್ನುಳಿದ ಪ್ರಕರಣಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗುವುದು.
ಯತೀಶ್ ಎನ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕಳ್ಳತನ ಆಗಿದ್ದ ಮನ್ಯಾಗಿದ್ದ ಬಂಗಾರ, ಬೆಳ್ಳಿ, ಹಣ ಹೋದ್ವು ಅಂತಾ ತಿಳ್ಕೊಂಡಿದ್ದಿವ್ರಿ. ಇದರಿಂದ ಬಹಳ ನೋವಾಗಿತ್ತು. ಆದ್ರೆ, ಇವತ್ತು ಮತ್ತೆ ನಮ್ಮ ಕೈ ಸೇರಿದ್ದು ತುಂಬಾ ಖುಷಿ ಆಗೈತಿ. ಪ್ರಕರಣ ಬೇಧಿಸುವ ಮೂಲಕ ಕಳೆದು ಹೋದ ಚಿನ್ನಾಭರಣ ಮರಳಿ ಕೊಡಿಸಿದ ಪೊಲೀಸ್ ಇಲಾಖೆಗೆ ಧನ್ಯವಾದಗಳು.
ನವೆಂಬರ್ 23 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 119496 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 123310 ಮಾದರಿಗಳಲ್ಲಿ 112248 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 371 ಮಾದರಿಗಳ ವರದಿ ಬರಲು ಬಾಕಿ ಇದೆ.
ಜಿಲ್ಲೆಯಲ್ಲಿ ಇಂದಿನ 21 ಪ್ರಕರಣಗಳು ಸೇರಿದಂತೆ ಒಟ್ಟು 10691 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 6 ಜನ ಸೇರಿದಂತೆ ಒಟ್ಟು 10459 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 91 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಮಾರಾಟ ಮಾಡಿದ್ದ ಜಮೀನಿನ ಹಣ ಮಂಜೂರು ಮಾಡಲು ಲಂಚದ ಬೇಡಿಕೆ ಇಟ್ಟಿದ್ದ ನಿಗಮದ ಮ್ಯಾನೇಜರ್ ಎಚ್ ವೈ ರುದ್ರಾಕ್ಷಿ, ಡ್ರೈವರ್ ಫಕ್ಕೀರೇಶ್ ಪೂಜಾರ, ಹಾಗೂ ಮಧ್ಯವರ್ತಿ ಕೋಲ್ಡ್ ಡ್ರಿಂಕ್ಸ್ ಅಂಗಡಿಯ ಮಾಲಿಕ ಪ್ರತೀಕ ಬೇವಿನಕಟ್ಟಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮಂಜುನಾಥ್ ಸಜ್ಜನ ಎಂಬುವವರು ಗದಗ ತಾಲೂಕಿನ ಹಿರೇಹಂದಿಗೋಳ ಗ್ರಾಮದ ಹದ್ದಿನಲ್ಲಿ ಇದ್ದ 20 ಎಕರೆ ಜಮೀನನ್ನು 1ಕೋಟಿ, 2ಲಕ್ಷ 57,500 ರೂ,ಗಳಿಗೆ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಮಾರಾಟ ಮಾಡಿದ್ದರು.
ಅದಕ್ಕೆ ಈಗಾಗಲೇ ನಿಗಮದಿಂದ 90ಲಕ್ಷ ಹಣ ಕೊಡಲಾಗಿತ್ತು. ಉಳಿದ 12ಲಕ್ಷ 57,500 ಹಣ ಕೊಡಲು ನಿಗಮದ ಮ್ಯಾನೇಜರ್ ಎಚ್ ವೈ ರುದ್ರಾಕ್ಷಿ 40 ಸಾವಿರ ರೂ, ಲಂಚ ಕೇಳಿದ್ದರು. ಇವತ್ತು ಫಿರ್ಯಾದಿ ಮಂಜುನಾಥ್ ಸಜ್ಜನ ಹಣ ಕೊಡಲು ಬಂದಾಗ ಡ್ರೈವರ್ ಫಕ್ಕೀರೇಶ್ ನ ಬಳಿ ಕೊಡಲು ಹೇಳಿದ್ದಾರೆ. ಫಕ್ಕೀರೇಶ್ ಕೋಲ್ಡ್ ಡ್ರಿಂಕ್ಸ್ ಅಂಗಡಿಯ ಮಾಲೀಕ ಪ್ರತೀಕ ಬೇವಿನಕಟ್ಟಿ ಬಳಿ ಕೊಡಲು ಹೇಳಿದ್ದಾನೆ. ಜಿಲ್ಲಾಡಳಿತ ಭವನದಲ್ಲಿ ಇರುವ ಕಚೇರಿಯಲ್ಲಿ ಪ್ರತೀಕ ಹಣ ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್ಪಿ ವಾಸುದೇವರಾಮ್ ಎನ್ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಗಳಾದ ವಾಯ್ ಎಸ್ ಧರಣಾನಾಯ್ಕ್, ರವೀಂದ್ರ ಕುರಬಗಟ್ಟಿ, ಸಿಬ್ಬಂದಿಗಳಾದ ಎಮ್ ಎಮ್ ಅಯ್ಯನಗೌಡರ್, ಆರ್ ಎಚ್ ಹೆಬಸೂರು, ಎನ್ ಎಸ್ ತಾಯಣ್ಣವರ, ವೀರೇಶ್ ಜೋಳದ, ಐ ಸಿ ಕರಿಗಾರ ಹಾಗೂ ತಾರಪ್ಪ ಇದ್ದರು.
ಫಾರ್ಮ್ ಹೌಸ್ ನ ಬೀಗ ಮುರಿದ ಕಳ್ಳರು ಟ್ರೇಜರಿಯಲ್ಲಿದ್ದ ಚಿನ್ನಾಭರಣ ಹಾಗೂ ಟಿವಿ ಕದ್ದೋಯ್ಯದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹೊಸಡಂಬಳ ಗ್ರಾಮದ ಬಳಿ ನಡೆದಿದೆ.
ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ನೌಕರರ ಸಂಘದ ಮುಖಂಡ ಡಿ ಪ್ರಸಾದ ಎಂಬುವವರ ಫಾರ್ಮ್ ಹೌಸ್ ನಲ್ಲಿ ಈ ಘಟನೆ ನಡೆದಿದೆ.
ಫಾರ್ಮ್ ಹೌಸ್ ನ ಬೀಗ ಮುರಿದು ಕಳ್ಳರು ಟ್ರೇಜರಿಯಲ್ಲಿದ್ದ 32 ಸಾವಿರ ರೂ, ಮೌಲ್ಯದ ಚಿನ್ನಾಭರಣ ಹಾಗೂ ಹಾಲ್ ನಲ್ಲಿದ್ದ ಟಿವಿ, ಬ್ಯಾಟರಿ, ಪವರ್ ಬ್ಯಾಂಕ್ ಕಳ್ಳತನ ಮಾಡಿದ್ದಾರೆ. ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕವಾಗಿ ಹೊತ್ತಿಕೊಂಡು ಬೆಂಕಿ ಲಕ್ಷಾಂತರ ರೂ. ಮೌಲ್ಯದ ಮೆಕ್ಕೆ ಜೋಳ ನಾಶ ವಾಗಿರುವ ಘಟನೆ ಗದಗ ತಾಲೂಕಿನ ನಾಗಾವಿ ತಾಂಡಾದಲ್ಲಿ ನಡೆದಿದೆ. ಲಕ್ಷ್ಮಣ ಪವಾರ್ ಎಂಬುವರಿಗೆ ಸೇರಿದ ಮೆಕ್ಕೆಜೋಳ ಇದಾಗಿದ್ದು ಒಂದು ತಿಂಗಳ ಹಿಂದೆ ತೆನೆ ಮುರಿದು ಹೊಲದಲ್ಲಿ ಕೂಡಿಹಾಕಿದ್ದರು.
11 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸುಮಾರು 2.5 ಲಕ್ಷ ರೂ. ಮೌಲ್ಯದ ಬೆಳೆ ನಾಶವಾಗಿದೆ. ಬೆಂಕಿ ನಂದಿಸಲು ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.