Home Blog

ಇಬ್ಬರು ಪಾಟೀಲ್‌ಗಳ ನಡುವೆ ಸಚಿವ ಸ್ಥಾನ ಸಮರ: ಹೈಕಮಾಂಡ್ ಮೇಲೆ ಒತ್ತಡ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆ ಸಮೀಪಿಸುತ್ತಿದ್ದಂತೆ ಗದಗ ಜಿಲ್ಲೆಯಲ್ಲಿ ಸಚಿವ ಸ್ಥಾನದ ರಾಜಕೀಯ ಕದನ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಾಜಿ ಸಚಿವ ಎಚ್.ಕೆ. ಪಾಟೀಲ್ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ್ ಪರ ಬೆಂಬಲಿಗರು ಪ್ರತ್ಯೇಕವಾಗಿ ಶಕ್ತಿ ಪ್ರದರ್ಶನ ಆರಂಭಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನಗಳು ಜೋರಾಗಿವೆ. ಒಂದೆಡೆ ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಮಹಿಳೆಯರು ಕಣ್ಣೀರಿನ ಮನವಿ ಮಾಡಿದರೆ, ಮತ್ತೊಂದೆಡೆ ಜಿ.ಎಸ್. ಪಾಟೀಲ್ ಪರ ಕಾರ್ಯಕರ್ತರು ಬೃಹತ್ ಪಾದಯಾತ್ರೆಯ ಘೋಷಣೆ ಮಾಡುವ ಮೂಲಕ ರಾಜಕೀಯ ಕಣ ರಂಗೇರಿಸಿದ್ದಾರೆ.

ಒಂದು ಕಡೆ ಗದಗ ಕ್ಷೇತ್ರದ ಕಾಂಗ್ರೆಸ್ ಮಹಿಳಾ ಘಟಕದ ನಗರಸಭೆ ಸದಸ್ಯೆ ಶಕುಂತಲಾ ಅಕ್ಕಿ ಮತ್ತು ಕಾರ್ಯಕರ್ತೆಯರು ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಭಾವನಾತ್ಮಕ ಮನವಿ ಮಾಡಿದ್ದಾರೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಲ ಮಹಿಳೆಯರು ಕಣ್ಣೀರು ಹಾಕುತ್ತಾ, “ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಅವರು ಮುಖ್ಯಮಂತ್ರಿ ಹುದ್ದೆ ನಿಭಾಯಿಸುವ ಸಾಮರ್ಥ್ಯವುಳ್ಳ ನಾಯಕರು” ಎಂದು ಹೈಕಮಾಂಡ್‌ಗೆ ಸಂದೇಶ ರವಾನಿಸಿದರು.

ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಎಚ್.ಕೆ. ಪಾಟೀಲ್ ಅವರನ್ನು ಕೈಬಿಟ್ಟಿರುವುದು ಉತ್ತರ ಕರ್ನಾಟಕ ಭಾಗಕ್ಕೆ ಮಾಡಿದ ಅನ್ಯಾಯವಾಗಿದೆ. ಬಡವರು, ರೈತರು ಹಾಗೂ ಸಾಮಾನ್ಯ ಜನರ ಪರ ನಿರಂತರವಾಗಿ ಕೆಲಸ ಮಾಡಿದ ಅನುಭವಿ ನಾಯಕನಿಗೆ ನ್ಯಾಯ ಸಿಗಬೇಕು. ಎರಡನೇ ಹಂತದಲ್ಲಿ ಸಚಿವ ಸ್ಥಾನ ಮಾತ್ರವಲ್ಲ, ಉಪಮುಖ್ಯಮಂತ್ರಿ ಹುದ್ದೆಯನ್ನೂ ನೀಡಬೇಕು ಎಂದು ಒತ್ತಾಯಿಸಿದರು.

ಜಿ.ಎಸ್. ಪಾಟೀಲ್ ಪರ ಶಿರಹಟ್ಟಿಯಿಂದ ಶಕ್ತಿ ಪ್ರದರ್ಶನ

ಇನ್ನೊಂದೆಡೆ ರೋಣ ಶಾಸಕ ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಗದಗ ಜಿಲ್ಲೆಯ ಶಿರಹಟ್ಟಿಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈರಣ್ಣ ಕೋಟಿ, 2013ರ ಚುನಾವಣೆಯಲ್ಲಿ ಗದಗ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಜಿ.ಎಸ್. ಪಾಟೀಲ್ ಅವರ ಸಂಘಟನಾ ಶಕ್ತಿ ಪ್ರಮುಖ ಕಾರಣವಾಗಿತ್ತು. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿರಿಯ ನಾಯಕರನ್ನು ಹೈಕಮಾಂಡ್ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಜೂನ್ 16ರಂದು ತುಮಕೂರಿನಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಹೈಕಮಾಂಡ್ ನಿರ್ಧಾರದತ್ತ ಜಿಲ್ಲೆಯ ಚಿತ್ತ

ಸಚಿವ ಸ್ಥಾನಕ್ಕಾಗಿ ಜಿಲ್ಲೆಯ ಇಬ್ಬರು ಪ್ರಬಲ ನಾಯಕರ ಪರ ಕಾರ್ಯಕರ್ತರು ಕಳೆದ ಹದಿನೈದು ದಿನಗಳಿಂದ ಜಿಲ್ಲೆಯಾದ್ಯಂತ ಶಕ್ತಿ ಪ್ರದರ್ಶನ ಆರಂಭಿಸಿರುವುದು ಕಾಂಗ್ರೆಸ್ ವಲಯದಲ್ಲಿ ಕುತೂಹಲ ಮೂಡಿಸಿದೆ. ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬುದು ಈಗ ಜಿಲ್ಲೆಯ ರಾಜಕೀಯದ ಕೇಂದ್ರ ಬಿಂದುವಾಗಿದೆ.

ಇಬ್ಬರು ನಾಯಕರ ಪರ ಕೇಳಿ ಬಂದ ಪ್ರಮುಖ ವಾದಗಳು

ಎಚ್.ಕೆ. ಪಾಟೀಲ್ ಪರ

  • ಅನುಭವಿ ಹಾಗೂ ಮಾಜಿ ಸಚಿವ
  • ಉತ್ತರ ಕರ್ನಾಟಕದ ಪ್ರಭಾವಿ ನಾಯಕ
  • ಬಡವರ ಪರ ಕೆಲಸ ಮಾಡಿದ ಹಿನ್ನಲೆ
  • ಉಪಮುಖ್ಯಮಂತ್ರಿ ಸ್ಥಾನಕ್ಕೂ ಅರ್ಹರು ಎಂಬ ಬೆಂಬಲಿಗರ ವಾದ

ಜಿ.ಎಸ್. ಪಾಟೀಲ್ ಪರ

  • ನಾಲ್ಕು ಬಾರಿ ಶಾಸಕರಾಗಿ ಆಯ್ಕೆ
  • ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ
  • 2013ರಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರ ಗೆಲುವಿನ ರೂವಾರಿ ಎಂಬ ಬೆಂಬಲಿಗರ ಅಭಿಪ್ರಾಯ
  • ಜೂನ್ 16ರಂದು ಬೃಹತ್ ಪಾದಯಾತ್ರೆ ಘೋಷಣೆ

ರಾಜಕೀಯ ನಾಡಿಮಿಡಿತ

 “ಸಚಿವ ಸಂಪುಟ ವಿಸ್ತರಣೆ ಘೋಷಣೆಯಾಗುವ ಮುನ್ನವೇ ಗದಗ ಜಿಲ್ಲೆಯಲ್ಲಿ ರಾಜಕೀಯ ತಾಪಮಾನ ಏರಿದೆ. ಎಚ್.ಕೆ. ಪಾಟೀಲ್ ಅವರ ಅನುಭವಕ್ಕೆ ಮಣೆ ಹಾಕುತ್ತದೆಯೇ ಹೈಕಮಾಂಡ್? ಅಥವಾ ನಾಲ್ಕು ಬಾರಿ ಶಾಸಕರಾಗಿರುವ ಜಿ.ಎಸ್. ಪಾಟೀಲ್ ಅವರಿಗೆ ಅವಕಾಶ ನೀಡುತ್ತದೆಯೇ? ಎಂಬ ಕುತೂಹಲ ಜಿಲ್ಲೆಯ ರಾಜಕೀಯ ವಲಯದಲ್ಲಿ ಮನೆ ಮಾಡಿದೆ.”

 

ಹೆಚ್‌ಕೆಪಿಗೆ ಸಚಿವ ಸ್ಥಾನ ಕೊಡದಿದ್ದರೆ ಉತ್ತರ ಕರ್ನಾಟಕಕ್ಕೆ ಅನ್ಯಾಯ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಹಿರಿಯ ಹಾಗೂ ಅನುಭವಿ ರಾಜಕಾರಣಿ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲೇಬೇಕು. ಅವರನ್ನು ಸಚಿವ ಸಂಪುಟದಿಂದ ಹೊರಗಿಡುವುದು ಉತ್ತರ ಕರ್ನಾಟಕ ಭಾಗಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಗದಗ-ಬೆಟಗೇರಿ ಶಹರ ಮಹಿಳಾ ಕಾಂಗ್ರೆಸ್ ಹೇಳಿದೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗದಗ-ಬೆಟಗೇರಿ ಶಹರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕುಂತಲಾ ಅಕ್ಕಿ, ಮುಖ್ಯಮಂತ್ರಿ ಸ್ಥಾನ ನಿಭಾಯಿಸುವ ಸಾಮರ್ಥ್ಯ ಹೊಂದಿರುವ ಎಚ್.ಕೆ. ಪಾಟೀಲ ಅವರಿಗೆ ಮೊದಲ ಹಂತದ ಸಚಿವ ಸಂಪುಟದಲ್ಲಿಯೇ ಸ್ಥಾನ ಸಿಗಬೇಕಿತ್ತು. ಆದರೆ ಅವರನ್ನು ಕಡೆಗಣಿಸಲಾಗಿದೆ. ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಎಚ್.ಕೆ. ಪಾಟೀಲ ಅವರು ದಿಟ್ಟ, ಪ್ರಾಮಾಣಿಕ, ಕಳಂಕರಹಿತ ಹಾಗೂ ರಾಜ್ಯದ ಹಿರಿಯ ನಾಯಕರಾಗಿದ್ದು, ಪಕ್ಷದ ಸಂಘಟನೆ ಮತ್ತು ಆಡಳಿತ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಇಂತಹ ನಾಯಕರನ್ನು ಸಂಪುಟದಿಂದ ಹೊರಗಿಡುವುದು ಕಾಂಗ್ರೆಸ್ ಕಾರ್ಯಕರ್ತರಿಗೂ ನಿರಾಸೆ ಮೂಡಿಸಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ಮಾತನಾಡಿ, ಗದಗ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪರಿಚಯಿಸುವ ಮೂಲಕ ಎಚ್.ಕೆ. ಪಾಟೀಲ ಅವರು ಜನಪರ ಆಡಳಿತದ ಮಾದರಿ ನಿರ್ಮಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪನೆ ಸೇರಿದಂತೆ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿರುವ ಅವರು ಸಚಿವ ಸ್ಥಾನಕ್ಕೆ ಸಂಪೂರ್ಣ ಅರ್ಹರು ಎಂದು ಹೇಳಿದರು.

ರಾಜ್ಯದ ಅಭಿವೃದ್ಧಿಗೆ ಅವರ ಅನುಭವ ಮತ್ತು ದೂರದೃಷ್ಟಿಯ ನಾಯಕತ್ವ ಅಗತ್ಯವಿದೆ. ಹೀಗಾಗಿ ಸಚಿವ ಸ್ಥಾನ ಮಾತ್ರವಲ್ಲದೆ ಉಪಮುಖ್ಯಮಂತ್ರಿ ಹುದ್ದೆಯನ್ನೂ ನೀಡುವ ಮೂಲಕ ಗೌರವಿಸಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ದ್ರಾಕ್ಷಾಯಿಣಿ ಹಾಸಿಲಕರ, ಮೀನಾಕ್ಷಿ ಬೆನಕಣ್ಣವರ, ವೀಣಾ ಕಟ್ನಳ್ಳಿ, ಲಕ್ಷ್ಮೀ ಸಿದ್ದಮನಹಳ್ಳಿ, ಮುಸ್ಕಾನ್ ಸಯ್ಯದ್, ಯಲ್ಲಮ್ಮ ಜಡಿ, ರುದ್ರಮ್ಮ ಕೆರಕಲಮಟ್ಟಿ, ಲತಾ ಗೊಳಗೊಳಕಿ, ವಾಣಿ ಹಿರೇಮಠ ಸೇರಿದಂತೆ ಮಹಿಳಾ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ನಿಷ್ಠಾವಂತ ನಾಯಕನಿಗೆ ನ್ಯಾಯ ನೀಡಿ: ಮಹಮ್ಮದ್ ಯೂಸುಫ್ ಇಟಗಿ

0

ವಿಜಯಸಾಕ್ಷಿ ಸುದ್ದಿ, ಗದಗ: ರೋಣ ಶಾಸಕ ಜಿ.ಎಸ್. ಪಾಟೀಲ ಅವರು ಕಾಂಗ್ರೆಸ್ ಪಕ್ಷದ ಸಂಘಟನೆಗೆ ಸಾಕಷ್ಟು ಶ್ರಮಿಸಿದ್ದು, ರೋಣ ತಾಲೂಕಿಗೆ ಅನ್ಯಾಯ ಮಾಡದೆ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮುಖಂಡರಾದ ಮಹಮ್ಮದ್ ಯೂಸುಫ್ ಇಟಗಿ ಆಗ್ರಹಿಸಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಬಲವರ್ಧನೆ ಹಾಗೂ ಸಂಘಟನೆಗಾಗಿ ಜಿ.ಎಸ್. ಪಾಟೀಲ ಅವರು ಹಲವು ವರ್ಷಗಳಿಂದ ದುಡಿಯುತ್ತಿದ್ದು, ಅವರ ಸೇವೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಜಾಸಾಬ್ ಸಾಂಗ್ಲಿಕರ್, ನಬಿಸಾಬ್ ಕೆಲೂರು, ಬಾವಸಾಬ್ ಬೆಟಗೇರಿ, ಮುರ್ತುಜಾ ಡಾಲಾಯತ್, ಅಬ್ದುಲ್ ರಜಾಕ್ ಕೋಲಕಾರ್, ಇಸ್ಮಾಯಿಲ್ ಹೊರಪೇಟಿ, ಬಸೀರ್ ವಡ್ಡಟ್ಟಿ, ಡಿ.ಎಂ. ಕಾತರಕಿ ಹಾಗೂ ಅಬ್ದುಲ್ ರೆಹಮಾನ್ ಕಲಕೇರಿ ಉಪಸ್ಥಿತರಿದ್ದರು.

‘ಪಕ್ಷಕ್ಕಾಗಿ ಇಡೀ ಕುಟುಂಬ ದುಡಿದಿದೆ’

ಶಿರಹಟ್ಟಿ ತಾಲೂಕಿನ ಕಾಂಗ್ರೆಸ್ ಪಕ್ಷ ಹಾಗೂ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗದ ಮುಖಂಡರು ಸಹ ಜಿ.ಎಸ್. ಪಾಟೀಲ ಪರವಾಗಿ ಬೆಂಬಲ ವ್ಯಕ್ತಪಡಿಸಿ, ಅವರ ಇಡೀ ಕುಟುಂಬ ಕಾಂಗ್ರೆಸ್ ಪಕ್ಷದ ಬೆಳವಣಿಗೆಗಾಗಿ ನಿರಂತರವಾಗಿ ದುಡಿದಿದೆ. ಪಕ್ಷದ ನಿಷ್ಠಾವಂತ ನಾಯಕನಾಗಿರುವ ಅವರಿಗೆ ಸಚಿವ ಸಂಪುಟದಲ್ಲಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷದ ಮುಖಂಡ ಈರಣ್ಣ ಕೋಟಿ ಮಾತನಾಡಿ, ರೋಣ ಶಾಸಕ ಜಿ.ಎಸ್. ಪಾಟೀಲ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಈ ಭಾರಿ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಹಾಂತೇಶ ದಶಮನಿ, ಬಸವರಾಜ ಕಂಬಳಿ, ಚಂದ್ರಶೇಖರ ಮುಂಡವಾಡ, ರವಿ ಘಂಟಿ, ಈರಣ್ಣ, ಗೋವಿಂದ ಬಾಗೇವಾಡಿ, ಅಪ್ಪಣ್ಣ ಪಾಟೀಲ ಹಾಗೂ ಮುತ್ತಣ್ಣ ಮುಂಡವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಜಿ.ಎಸ್. ಪಾಟೀಲ ಅವರು ಕಾಂಗ್ರೆಸ್ ಸಂಘಟನೆಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ರೋಣ ತಾಲ್ಲೂಕಿಗೆ ನ್ಯಾಯ ದೊರಕಬೇಕಾದರೆ ಅವರಿಗೆ ಸಚಿವ ಸ್ಥಾನ ನೀಡಬೇಕು.”

ಈರಣ್ಣ ಕೋಟಿ

ಕಾಂಗ್ರೆಸ್ ಪಕ್ಷದ ಮುಖಂಡ

ಅಜ್ಜಯ್ಯನವರ ಹೆಸರನ್ನು ರಾಜಕೀಯಕ್ಕೆ ಬಳಸಬೇಡಿ: ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಲಿಂ. ವೀರಗಂಗಾಧರ ಜಗದ್ಗುರುಗಳ (ಅಜ್ಜಯ್ಯ) ಹೆಸರನ್ನು ಪ್ರಸ್ತಾಪಿಸಿ ವ್ಯಂಗ್ಯವಾಗಿ ಮಾತನಾಡಿರುವುದನ್ನು ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ತೀವ್ರವಾಗಿ ಖಂಡಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂಬ ವಿಶ್ವಮಾನವ ಸಂದೇಶ ಸಾರಿದ ಶ್ರೇಷ್ಠ ಜಗದ್ಗುರುಗಳಾದ ಅಜ್ಜಯ್ಯನವರ ತಪೋಬಲ, ವ್ಯಕ್ತಿತ್ವ ಮತ್ತು ಸಮಾಜಮುಖಿ ಸೇವೆಯ ಬಗ್ಗೆ ತಿಳಿದುಕೊಂಡು ಮಾತನಾಡಬೇಕು ಎಂದು ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು.

ಬಿಡದಿ ಟೌನ್‌ಶಿಪ್ ಕುರಿತ ಸುದ್ದಿಗೋಷ್ಠಿಯಲ್ಲಿ “ರೈತರನ್ನು ಒಕ್ಕಲೆಬ್ಬಿಸಿ ಎಂದು ಅಜ್ಜಯ್ಯ ಹೇಳಿದ್ದಾರಾ?” ಎಂದು ಪ್ರಶ್ನಿಸಿರುವುದು ದೇಶದಾದ್ಯಂತ ಇರುವ ಲಕ್ಷಾಂತರ ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಅವರು ಆರೋಪಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ವಿರುದ್ಧ ಇರುವ ರಾಜಕೀಯ ಭಿನ್ನಾಭಿಪ್ರಾಯಕ್ಕಾಗಿ ದೇವರ ಸ್ವರೂಪದಲ್ಲಿ ಪೂಜಿಸಲ್ಪಡುವ ಮಹನೀಯರ ಹೆಸರನ್ನು ಎಳೆದು ತರುವುದು ಸರಿಯಲ್ಲ. ಸ್ವತಃ ಕೃಷಿ ಮಾಡಿ, ಸಕಲ ಜೀವಿಗಳ ಕಲ್ಯಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಅಜ್ಜಯ್ಯನವರ ಹೆಸರನ್ನು ರಾಜಕೀಯ ಚರ್ಚೆಗೆ ಬಳಸುವುದು ಖಂಡನೀಯ ಎಂದು ಹೇಳಿದರು.

ರಾಜಕೀಯ ಲಾಭಕ್ಕಾಗಿ ಮಹನೀಯರ ಹೆಸರು ಬಳಸುವ ಪ್ರವೃತ್ತಿಯನ್ನು ಕೈಬಿಡಬೇಕು. ಇಂತಹ ಹೇಳಿಕೆಗಳು ಭಕ್ತರ ಭಾವನೆಗಳಿಗೆ ಧಕ್ಕೆ ತರುವುದಲ್ಲದೆ, ರಾಜಕೀಯವಾಗಿಯೂ ಹಿನ್ನಡೆ ಉಂಟುಮಾಡಬಹುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಅಜ್ಜಯ್ಯನವರ ಭಕ್ತರಾದ ಚಂಬಣ್ಣ ಬಾಳಿಕಾಯಿ, ಆನಂದ ಮೆಕ್ಕಿ, ಕುಬೇರಪ್ಪ ಮಹಾಂತಶೆಟ್ಟರ, ರುದ್ರಮುನಿ ಘಂಟಾಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಮುಖ್ಯಮಂತ್ರಿಗಳ ವಿರುದ್ಧದ ರಾಜಕೀಯ ಭಿನ್ನಾಭಿಪ್ರಾಯಕ್ಕೆ ಅಜ್ಜಯ್ಯನವರಂತಹ ಮಹನೀಯರ ಹೆಸರನ್ನು ಬಳಸಬಾರದು. ಅವರ ಹೆಸರನ್ನು ವ್ಯಂಗ್ಯವಾಗಿ ಪ್ರಸ್ತಾಪಿಸಿರುವುದು ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದೆ.”

– ಜಿ.ಎಂ. ಮಹಾಂತಶೆಟ್ಟರ, ಮಾಜಿ ಶಾಸಕ

ಮಹಿಳಾ ಸಬಲೀಕರಣವೇ ಗ್ರಾಮ ಸ್ವರಾಜ್ಯದ ಬುನಾದಿ: ಡಿ.ಆರ್. ಪಾಟೀಲ್

0

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸಾಕಾರಗೊಳ್ಳಬೇಕಾದರೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಗ್ರಾಮ ಪಂಚಾಯಿತಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮಾಜಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಿ.ಆರ್. ಪಾಟೀಲ್ ಹೇಳಿದರು.

ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಶ್ರೀ ಕರಿಯಮ್ಮದೇವಿ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ವತಿಯಿಂದ ಆಯೋಜಿಸಿದ್ದ “ಮಹಿಳೆಯರ ಒಗ್ಗೂಡಿಸುವಿಕೆ ಹಾಗೂ ಗ್ರಾಮದ ಹಿರಿಯರ ಸಭೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1993ರ 73ನೇ ಸಂವಿಧಾನ ತಿದ್ದುಪಡಿಯ ಆಶಯಗಳು ಗ್ರಾಮದ ಬಾಗಿಲಿಗೆ ತಲುಪಬೇಕು. ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಆರ್ಥಿಕವಾಗಿ ಸಬಲರಾಗಿ ಗ್ರಾಮಾಭಿವೃದ್ಧಿಯ ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಕರೆ ನೀಡಿದರು.

ಗೃಹಲಕ್ಷ್ಮಿ ಯೋಜನೆಯಿಂದ ದೊರೆಯುವ ಹಣದಲ್ಲಿ ಪ್ರತಿ ಮಹಿಳೆಯೂ ₹100 ಉಳಿಸಿ ಗ್ರಾಮದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಬೇಕು. ದುಂದು ವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಿ ಸಾಮೂಹಿಕ ವಿವಾಹಗಳನ್ನು ಉತ್ತೇಜಿಸುವ ಮೂಲಕ ಹಣ ಮತ್ತು ಸಮಯ ಉಳಿತಾಯ ಮಾಡಬಹುದು ಎಂದು ಸಲಹೆ ನೀಡಿದರು.

ತಿಂಗಳಲ್ಲಿ ಒಂದು ದಿನ ಮಹಿಳೆಯರು, ಹಿರಿಯರು ಹಾಗೂ ಯುವಕರು ಸೇರಿ ಶ್ರಮದಾನ ಮಾಡುವ ಮೂಲಕ ಗ್ರಾಮವನ್ನು ಸ್ವಚ್ಛ ಹಾಗೂ ಮಾದರಿ ಗ್ರಾಮವನ್ನಾಗಿ ರೂಪಿಸಬಹುದು ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಚ್.ಎಸ್. ಜಿನಗಾ ಮಾತನಾಡಿ, ಗ್ರಾಮ ಸಭೆಗಳಲ್ಲಿ ಮಹಿಳೆಯರು ಹಾಗೂ ಹಿರಿಯರು ಕಡ್ಡಾಯವಾಗಿ ಭಾಗವಹಿಸಿ ತಮ್ಮ ಗ್ರಾಮದ ಅಭಿವೃದ್ಧಿಗೆ ಅಗತ್ಯ ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಜನರ ಅಗತ್ಯಗಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಮಾತನಾಡಿ, ಗ್ರಾಮ ಸಭೆಗಳನ್ನು ನಿಯಮಿತವಾಗಿ ನಡೆಸಿ ಜನರ ಸಮಸ್ಯೆಗಳ ಕುರಿತು ಚರ್ಚಿಸಿ ಕ್ರಿಯಾ ಯೋಜನೆ ರೂಪಿಸಿ ಸರ್ಕಾರದ ಅನುಮೋದನೆಯೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರ್ಲಾಪೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ವಡ್ಡರ ವಹಿಸಿದ್ದರು.

ಈ ಸಂದರ್ಭದಲ್ಲಿ ಗುರಣ್ಣ ಬಳಗಾನೂರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಕೆ. ಪಾಟೀಲ್, ಪಿಡಿಒ ಅಶ್ವಿನಿ ಕುರುಡಗಿ, ಎಸ್.ಬಿ. ಸತ್ಯಪ್ಪನವರ ಸೇರಿದಂತೆ ನೂರಾರು ಮಹಿಳೆಯರು, ಹಿರಿಯರು, ರೈತರು ಹಾಗೂ ಯುವಕರು ಭಾಗವಹಿಸಿದ್ದರು.

“ಗ್ರಾಮಗಳ ಅಭಿವೃದ್ಧಿಗೆ ಮಹಿಳೆಯರ ಭಾಗವಹಿಸುವಿಕೆ ಅತ್ಯಗತ್ಯ. ಮಹಿಳಾ ಸಬಲೀಕರಣವೇ ಗ್ರಾಮ ಸ್ವರಾಜ್ಯದ ನಿಜವಾದ ಶಕ್ತಿ.”

ಡಿ.ಆರ್. ಪಾಟೀಲ್, ಮಾಜಿ ಶಾಸಕ

ಪಿಯು ಉಪನ್ಯಾಸಕರ ಸಂಘಕ್ಕೆ ಮತ್ತೆ ಎಸ್.ಎಸ್. ಸೋಮಣ್ಣವರ ಸಾರಥ್ಯ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವಿಶ್ವಾಸವನ್ನು ಮತ್ತೊಮ್ಮೆ ಗಳಿಸಿರುವ ಎಸ್.ಎಸ್. ಸೋಮಣ್ಣವರ ನೇತೃತ್ವದ ತಂಡ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಗದಗ ಜಿಲ್ಲಾ ಘಟಕದ 2026-31ನೇ ಸಾಲಿನ ಅವಧಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ.

ಜೂನ್ 2ರಂದು ನಡೆದ ಚುನಾವಣೆಯಲ್ಲಿ ಎಲ್ಲಾ ಹುದ್ದೆಗಳಿಗೂ ಅವಿರೋಧ ಆಯ್ಕೆ ನಡೆದಿದ್ದು, ಈ ಕುರಿತು ಜಿಲ್ಲಾ ಚುನಾವಣಾಧಿಕಾರಿ ಎಸ್.ಎಸ್. ಚವಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಾಗಡಿ ಪ್ರಭಾರಿ ಪ್ರಾಚಾರ್ಯ ಎಸ್.ಎಸ್. ಸೋಮಣ್ಣವರ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳಾಗಿ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಎಂ.ಎಸ್. ಕೊಕ್ಕರಗುಂದಿ (ಸರ್ಕಾರಿ ಪದವಿ ಪೂರ್ವ ಕಾಲೇಜು, ಲಕ್ಷ್ಮೇಶ್ವರ), ಜಿಲ್ಲಾ ಉಪಾಧ್ಯಕ್ಷೆ (ಮಹಿಳಾ ಮೀಸಲು)ಯಾಗಿ ಅಮನ್ ಗುಳೇದಗುಡ್ಡ (ಮುನ್ಸಿಪಲ್ ಪದವಿ ಪೂರ್ವ ಕಾಲೇಜು, ಗದಗ), ಜಿಲ್ಲಾ ಖಜಾಂಚಿಯಾಗಿ ಎಂ.ಪಿ. ಕುಲಕರ್ಣಿ (ಸರ್ಕಾರಿ ಪದವಿ ಪೂರ್ವ ಕಾಲೇಜು, ನರಗುಂದ), ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಎಫ್.ಎಸ್. ಬೆಳವಗಿ (ಎಸ್.ಎಚ್.ಎಸ್. ಪದವಿ ಪೂರ್ವ ಕಾಲೇಜು, ಪೇಠಾಲೂರ), ಜಿಲ್ಲಾ ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಹನುಮರೆಡ್ಡಿ (ಎನ್.ಎಫ್.ಎಂ. ಡಬಾಲಿ ಪದವಿ ಪೂರ್ವ ಕಾಲೇಜು, ಶಿರಹಟ್ಟಿ), ಜಿಲ್ಲಾ ಕಾರ್ಯದರ್ಶಿಯಾಗಿ ಎನ್.ಟಿ. ಮಳೋದೆ (ಸರ್ಕಾರಿ ಪದವಿ ಪೂರ್ವ ಕಾಲೇಜು, ನಿಡಗುಂದಿ), ಜಿಲ್ಲಾ ಜಂಟಿ ಕಾರ್ಯದರ್ಶಿಯಾಗಿ ಎಸ್.ಎಸ್. ನರಗುಂದ (ಪ್ರಾಚಾರ್ಯರು, ಎಸ್.ವಿ. ಪದವಿ ಪೂರ್ವ ಕಾಲೇಜು, ಬೆಳವಣಕಿ) ಹಾಗೂ ಜಿಲ್ಲಾ ಸಂಚಾಲಕರಾಗಿ ಎಸ್.ಎಸ್. ತೋಗುಣಸಿ (ಶ್ರೀ ಗುರು ಮಹಾಂತೇಶ ಪದವಿ ಪೂರ್ವ ಕಾಲೇಜು, ಸೂಡಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ತಂಡವು ಉಪನ್ಯಾಸಕರ ಹಿತಾಸಕ್ತಿ ರಕ್ಷಣೆ, ಶೈಕ್ಷಣಿಕ ಗುಣಮಟ್ಟ ವೃದ್ಧಿ ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂಬ ವಿಶ್ವಾಸವನ್ನು ಸದಸ್ಯರು ವ್ಯಕ್ತಪಡಿಸಿದ್ದಾರೆ.

ಅವಿರೋಧವಾಗಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ವಿವಿಧ ಶಿಕ್ಷಕರ ಸಂಘಟನೆಗಳು, ಶಿಕ್ಷಣ ತಜ್ಞರು ಹಾಗೂ ಉಪನ್ಯಾಸಕರು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.

ಉಪನ್ಯಾಸಕರ ಹಿತಾಸಕ್ತಿ ಮತ್ತು ಶಿಕ್ಷಣದ ಗುಣಮಟ್ಟ ವೃದ್ಧಿಗೆ ಸಂಘದ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಾಗುವುದು.” 

ಎಸ್.ಎಸ್. ಸೋಮಣ್ಣವರ

ಜಿಲ್ಲಾ ಅಧ್ಯಕ್ಷರು

ಗದಗ ಹಸಿರೀಕರಣಕ್ಕೆ 30 ಸಾವಿರ ಸಸಿಗಳ ಸಜ್ಜು

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕಿನಲ್ಲಿ ಹಸಿರು ಪರಿಸರ ನಿರ್ಮಾಣದ ಮಹತ್ವಾಕಾಂಕ್ಷಿ ಗುರಿಯೊಂದಿಗೆ ಗದಗ ಸಾಮಾಜಿಕ ಅರಣ್ಯ ವಲಯ ವ್ಯಾಪ್ತಿಯ ಬಿಂಕದಕಟ್ಟಿ ಹೈಟೆಕ್ ಸಸ್ಯ ಕ್ಷೇತ್ರ ಬರೋಬ್ಬರಿ 30 ಸಾವಿರ ವಿವಿಧ ಜಾತಿಯ ಸಸಿಗಳೊಂದಿಗೆ ಸಜ್ಜಾಗಿ ನಿಂತಿದೆ. ಸಾಮಾಜಿಕ ಅರಣ್ಯ ವಲಯದ ಆರ್.ಎಸ್.ಪಿ.ಡಿ. ಯೋಜನೆಯಡಿ ರೈತರಿಗೆ ಸಹಾಯಧನದ ರೂಪದಲ್ಲಿ ಸಸಿಗಳನ್ನು ವಿತರಿಸಲಾಗುತ್ತಿದ್ದು, ಆಸಕ್ತ ರೈತರು ಹಾಗೂ ಪರಿಸರ ಪ್ರೇಮಿಗಳು ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಸಸಿಗಳನ್ನು ಪಡೆದು ಅವುಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿ ಹಸಿರು ಸಮುದಾಯ ನಿರ್ಮಾಣಕ್ಕೆ ಕೈಜೋಡಿಸುವಂತೆ ಅರಣ್ಯ ಇಲಾಖೆ ಕರೆ ನೀಡಿದೆ.

ಧಾರವಾಡ ಬೀಜ ಅಭಿವೃದ್ಧಿ ಘಟಕದಿಂದ ಬೀಜಗಳನ್ನು ಪಡೆದು ಸಸ್ಯ ಕ್ಷೇತ್ರದಲ್ಲಿ ಬೀಜ ಬಿತ್ತನೆ ಮಾಡಿ, ಒಂದು ವರ್ಷದವರೆಗೆ ಪೋಷಣೆ ಮಾಡಿ ನಂತರ ಸಸಿಗಳನ್ನು ವಿತರಿಸಲಾಗುತ್ತಿದೆ.

ಬಿಂಕದಕಟ್ಟಿ ಸಸ್ಯ ಕ್ಷೇತ್ರದಲ್ಲಿ ಮಹಾಗನಿ, ಶ್ರೀಗಂಧ, ದಾಂಡೇಲಿ ತೇಗ, ಬಿದಿರು, ರಕ್ತಚಂದನ, ಇಲಾಚಿ (ಸಿಹಿ ಹುಣಸೆ), ನೇರಳೆ, ಹೆಬ್ಬೇವು, ನೆಲ್ಲಿ, ಬೇವು, ಕರಿಬೇವು, ಚತುರ್ಮುಖ, ಸಂಪಿಗೆ, ಬಂಗಾಳಿ, ಗಜಗ, ಕಬೂಬಿಯ, ಶಿವನಿ, ಹೊಳೆಮತ್ತಿ, ಚರಿ, ಬಳುಲ, ಹೊಂಗೆ, ಪೇರಳೆ, ಮಾವು, ಲಿಂಬಿ, ಸೀತಾಫಲ, ಅರಳಿ, ಬಸರಿ, ಬಸವನಪಾದ, ಆಕಾಶ ಮಲ್ಲಿಗೆ, ಜವಾನಿಕಾ, ಕಾಡು ಬಾದಾಮಿ, ತಪಸ್, ಅತ್ತಿ, ಚಳ್ಳ, ಗುಲ್ಮೊಹರ್, ಸಿರಸಲ್, ರೇನ್ ಟ್ರೀ ಸೇರಿದಂತೆ ವಿವಿಧ ಜಾತಿಯ ಸಸಿಗಳು ಲಭ್ಯವಿವೆ.

ವಿವಿಧ ಬಗೆಯ ಸಸಿ ತಳಿಗಳಿಗೆ ಹೆಸರುವಾಸಿಯಾಗಿರುವ ಬಿಂಕದಕಟ್ಟಿ ಹೈಟೆಕ್ ಸಸ್ಯ ಕ್ಷೇತ್ರದಲ್ಲಿ ಎಲ್ಲ ತಳಿ ಸಸ್ಯಗಳೂ ಲಭ್ಯವಿದ್ದು, ಬೇಸಿಗೆ ಕಾಲದಲ್ಲಿ ಅಗತ್ಯ ಬೀಜಗಳನ್ನು ಗದಗ ಜಿಲ್ಲೆಯಾದ್ಯಂತ ಸಂಚರಿಸಿ ಸಂಗ್ರಹಿಸಲಾಗುತ್ತದೆ. ಸಿಗದ ಬೀಜಗಳನ್ನು ಹೊರ ಜಿಲ್ಲೆಗಳಿಂದ ತರಿಸಲಾಗುತ್ತದೆ. ಶ್ರೀಗಂಧ, ಕಬೂಬಿಯ, ನುಗ್ಗಿ ಹಾಗೂ ಹೆಬ್ಬೇವು ಬೀಜಗಳನ್ನು ದಾವಣಗೆರೆ, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳಿಂದ ತರಿಸಿ ಬೆಳೆಸಲಾಗುತ್ತಿದೆ.

ಬೀಜದಿಂದ ಬೆಳೆಸಿದ ಸಸಿಗಳನ್ನು ಒಂದು ವರ್ಷದ ಬಳಿಕ ರೈತರಿಗೆ ವಿತರಿಸಲಾಗುತ್ತದೆ. ಗದಗ ತಾಲೂಕು ಸಾಮಾಜಿಕ ಅರಣ್ಯ ವಲಯವು ರೈತರಿಗೆ ಸಹಾಯಧನದ ರೂಪದಲ್ಲಿ ಸಸಿಗಳನ್ನು ವಿತರಿಸಲು ಮುಂದಾಗಿದ್ದು, 30 ಸಾವಿರ ಸಸಿಗಳ ವಿತರಣೆಯ ಗುರಿ ಹೊಂದಿದೆ.

ಸಸಿಗಳ ಗಾತ್ರಕ್ಕೆ ಅನುಗುಣವಾಗಿ ರೈತರು ಹಣ ಪಾವತಿಸಬೇಕಿದ್ದು, ಸಣ್ಣ ಸಸಿಗೆ 3 ರೂ. ಹಾಗೂ ದೊಡ್ಡ ಸಸಿಗೆ 6 ರೂ. ನಿಗದಿಪಡಿಸಲಾಗಿದೆ. ಇದೇ ಸಸಿಗಳಿಗೆ ಮಾರುಕಟ್ಟೆಯಲ್ಲಿ 20 ರೂ.ದಿಂದ 33 ರೂ.ವರೆಗೆ ಬೆಲೆ ಇದೆ.

ಸಬ್ಸಿಡಿ ಯೋಜನೆಯಡಿ ಸಸಿಗಳನ್ನು ಪಡೆಯಲು ರೈತರು ಆರ್.ಟಿ.ಸಿ. ಉತಾರ, ಆಧಾರ್ ಕಾರ್ಡ್ ಹಾಗೂ ಭಾವಚಿತ್ರದೊಂದಿಗೆ ಬಿಂಕದಕಟ್ಟಿ ಸಸ್ಯ ಕ್ಷೇತ್ರವನ್ನು ಸಂಪರ್ಕಿಸಬಹುದಾಗಿದೆ.

24 ಕಿ.ಮೀ. ರಸ್ತೆ ಬದಿಯಲ್ಲಿ ಸಸಿ ನೆಡುವ ಯೋಜನೆ

ಗದಗ ತಾಲೂಕು ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಸುಮಾರು 24 ಕಿಲೋಮೀಟರ್ ಉದ್ದದವರೆಗೆ ಸಸಿ ನೆಡುವ ಯೋಜನೆ ರೂಪಿಸಲಾಗಿದ್ದು, ಈ ಕಾರ್ಯಕ್ಕೆ ಗುತ್ತಿಗೆ ನೀಡಲಾಗುತ್ತದೆ. ಗುತ್ತಿಗೆದಾರರು ಸಸಿ ನೆಡುವುದು, ಒಂದು ವರ್ಷದವರೆಗೆ ರಕ್ಷಣೆ, ನೀರುಣಿಸುವುದು ಹಾಗೂ ಪೋಷಣೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಹಕ್ಕುಪತ್ರ ಪಡೆದ ರೈತರಿಗೆ 3,500 ಸಸಿಗಳು ಉಚಿತ

ಕಬಲಾಯತಕಟ್ಟಿ ತಾಂಡಾ ಸೇರಿದಂತೆ ಅರಣ್ಯ ವ್ಯಾಪ್ತಿಯಲ್ಲಿ ಸಾಗುವಳಿ ಮಾಡುವ ಹಕ್ಕುಪತ್ರಗಳನ್ನು ಪಡೆದ ರೈತರಿಗೆ ಕೇಂದ್ರ ಸರ್ಕಾರದ ಯೋಜನೆಯಡಿ 3,500 ಸಸಿಗಳನ್ನು ಉಚಿತವಾಗಿ ವಿತರಿಸಲಾಗುವುದು.

ಮಾನ್ಸೂನ್ ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ 30 ಸಾವಿರ ಸಸಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಮಳೆಗಾಲದಲ್ಲಿ ಸಸಿ ನೆಟ್ಟರೆ ಕಡಿಮೆ ಶ್ರಮದಲ್ಲಿ ಉತ್ತಮ ಬೆಳವಣಿಗೆ ಸಾಧಿಸಿ, ಗದಗ ತಾಲೂಕನ್ನು ಹಸಿರೀಕರಣಗೊಳಿಸಲು ಸಾಧ್ಯವಾಗಲಿದೆ ಎಂದು ಇಲಾಖೆ ತಿಳಿಸಿದೆ.

“ರೈತರು ಮತ್ತು ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಗದಗ ತಾಲೂಕಿನಾದ್ಯಂತ ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು. ಗದಗ ಹಸಿರೀಕರಣ ಅಭಿಯಾನವನ್ನು ಜನಸಹಭಾಗಿತ್ವದ ಮೂಲಕ ಯಶಸ್ವಿಗೊಳಿಸೋಣ.”

 ನಮನ ನಾಯ್ಕ, ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ವಲಯ, ಗದಗ

ಮಕ್ಕಳ ಹಕ್ಕುಗಳ ರಕ್ಷಣೆಗೆ ಪ್ರತಿಜ್ಞೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಸಮೀಪದ ಜಕ್ಕಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಂಕೀರ್ಣದಲ್ಲಿ ಶುಕ್ರವಾರ ಜಾಗೃತಿ ಕಾರ್ಯಕ್ರಮ ಆಯೋಜಿಸಿ, ವಿದ್ಯಾರ್ಥಿಗಳಿಗೆ ಬಾಲ ಕಾರ್ಮಿಕತೆ ನಿರ್ಮೂಲನೆ ಕುರಿತು ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಾಲ ಕಾರ್ಮಿಕತೆ ವಿರುದ್ಧ ಪ್ರತಿಜ್ಞಾವಿಧಿ ಬೋಧಿಸಿ, ಮಕ್ಕಳ ಹಕ್ಕುಗಳು, ಶಿಕ್ಷಣದ ಮಹತ್ವ ಹಾಗೂ ಸುರಕ್ಷಿತ ಬಾಲ್ಯದ ಅಗತ್ಯತೆಯ ಕುರಿತು ಮಾಹಿತಿ ನೀಡಲಾಯಿತು.

ಕೆ.ಜಿ.ಎಸ್. ಶಾಲೆಯ ಮುಖ್ಯ ಶಿಕ್ಷಕ ಎಸ್.ಬಿ. ಗವಿ ಮಾತನಾಡಿ, ಪ್ರತಿಯೊಬ್ಬ ಮಗುವಿಗೂ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷಿತ ಬಾಲ್ಯದ ಹಕ್ಕು ಇದೆ. ಯಾವುದೇ ಮಗುವನ್ನು ದುಡಿಮೆಗೆ ತೊಡಗಿಸುವುದು ಕಾನೂನುಬಾಹಿರವಾಗಿದ್ದು, ಬಾಲ ಕಾರ್ಮಿಕತೆ ನಿರ್ಮೂಲನೆಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ಬಾಲ ಕಾರ್ಮಿಕತೆ, ಬಾಲ್ಯ ವಿವಾಹ, ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಕಂಡುಬಂದಲ್ಲಿ ಸಮೀಪದ ಅಂಗನವಾಡಿ ಕೇಂದ್ರ, ಶಾಲೆ ಅಥವಾ ಮಕ್ಕಳ ಸಹಾಯವಾಣಿ 1098ಕ್ಕೆ ಮಾಹಿತಿ ನೀಡುವ ಮೂಲಕ ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಗಂಡು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ಎಚ್.ಎಸ್. ಬಿಂಗಿ ಮಾತನಾಡಿ, ಬಾಲ ಕಾರ್ಮಿಕತೆ ಸಮಾಜದ ಅಭಿವೃದ್ಧಿಗೆ ಮಾರಕವಾಗಿದ್ದು, ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಅಂದಪ್ಪ ಮಾದರ, ವೀರಪ್ಪ ಮುಕ್ಕಣ್ಣವರ, ಶಿಕ್ಷಕರಾದ ಎಂ.ವಿ. ತಾಳಿಕೋಟಿ, ಎ.ಪಿ. ಶೆಟ್ಟರ, ಸಿ.ಎಸ್. ಬೆಳ್ಳಟ್ಟಿ, ಎಸ್.ಎ. ಪಲ್ಲೇದ, ಪಿ.ಜಿ. ಹುಯಿಲಗೋಳ, ಎಸ್.ಎಸ್. ಯಲ್ಲರಡ್ಡಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಬಾಲ ಕಾರ್ಮಿಕತೆ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

“ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಬಾಲ ಕಾರ್ಮಿಕತೆ ನಿರ್ಮೂಲನೆಗೆ ಸಮಾಜದ ಎಲ್ಲ ವರ್ಗದವರ ಸಹಕಾರ ಅಗತ್ಯ.”

ಎಸ್.ಬಿ. ಗವಿ, ಮುಖ್ಯ ಶಿಕ್ಷಕರು

‘ಜಮೀನು ಉಳಿಸಿ’ ಅಭಿಯಾನಕ್ಕೆ ರೈತರ ಸ್ಪಂದನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಮಣ್ಣಿನ ಆರೋಗ್ಯ ಸಂರಕ್ಷಣೆ, ಕೃಷಿ ತ್ಯಾಜ್ಯಗಳ ಸಮರ್ಪಕ ಬಳಕೆ ಹಾಗೂ ಪರ್ಯಾಯ ಗೊಬ್ಬರಗಳ ಮಹತ್ವದ ಕುರಿತು ರೈತರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಐಸಿಎಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಹಾಗೂ ಕೃಷಿ ಇಲಾಖೆ, ಗದಗ ಇವರ ಸಂಯುಕ್ತ ಆಶ್ರಯದಲ್ಲಿ ನರಗುಂದ ತಾಲೂಕಿನ ಬನಹಟ್ಟಿ ಹಾಗೂ ಬೈರನಹಟ್ಟಿ ಗ್ರಾಮಗಳಲ್ಲಿ “ಜಮೀನು ಉಳಿಸಿ” (ಖೇತ ಬಚಾವೋ) ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ವಿನಾಯಕ ನಿರಂಜನ ಮಾತನಾಡಿ, ಮಣ್ಣಿನ ಆರೋಗ್ಯ ಕಾಪಾಡಲು ಕೃಷಿ ತ್ಯಾಜ್ಯಗಳ ಮರುಬಳಕೆ, ಮಣ್ಣು ಮತ್ತು ನೀರಿನ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಸಾವಯವ ಪದಾರ್ಥಗಳ ಬಳಕೆಯಿಂದ ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಾಣುಗಳ ಸಂಖ್ಯೆ ಹೆಚ್ಚಾಗಿ, ಫಲವತ್ತತೆ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಮತ್ತೋರ್ವ ವಿಜ್ಞಾನಿ ಡಾ. ಚೇತನ ಬಾಬು ತಾಂತ್ರಿಕ ಉಪನ್ಯಾಸ ನೀಡಿ, ಜೈವಿಕ ಗೊಬ್ಬರಗಳಾದ ಟ್ರೈಕೊಡರ್ಮಾ, ರೈಜೋಬಿಯಂ ಹಾಗೂ ಪಿ.ಎಸ್.ಬಿ. ಬಳಸಿ ಬೀಜೋಪಚಾರ ಮಾಡುವ ವಿಧಾನವನ್ನು ವಿವರಿಸಿದರು. ಜೊತೆಗೆ ಕೊಟ್ಟಿಗೆ ಗೊಬ್ಬರ ಹಾಗೂ ಗೋ ಉತ್ಪನ್ನಗಳ ಉಪಯುಕ್ತತೆ ಕುರಿತು ರೈತರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ಚೇತನಾ ಪಾಟೀಲ ಮಾತನಾಡಿ, ಜಾಗತಿಕ ಬಿಕ್ಕಟ್ಟಿನ ಪರಿಣಾಮದಿಂದ ರಸಗೊಬ್ಬರಗಳ ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಪರ್ಯಾಯ ಗೊಬ್ಬರಗಳ ಬಳಕೆಯತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆ ವತಿಯಿಂದ ರೈತರಿಗೆ ಉದ್ದು ಹಾಗೂ ತೊಗರಿಯ ಸುಧಾರಿತ ತಳಿಯ ಬೀಜಗಳನ್ನು ಪ್ರಾತ್ಯಕ್ಷಿಕೆಗಾಗಿ ವಿತರಿಸಲಾಯಿತು.

ನರಗುಂದ ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ಬೆಳವಟಿಗಿ ಸ್ವಾಗತಿಸಿದರು. ಶಿವಾನಂದ ಸಾಠೆ ವಂದಿಸಿದರು.

ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿ ಕೃಷಿ ತಜ್ಞರಿಂದ ಮಾಹಿತಿ ಪಡೆದುಕೊಂಡರು.

“ಮಣ್ಣಿನ ಆರೋಗ್ಯವೇ ಕೃಷಿಯ ಜೀವಾಳ. ಸಾವಯವ ಮತ್ತು ಜೈವಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿ, ಭೂಮಿಯ ಫಲವತ್ತತೆ ಹೆಚ್ಚುತ್ತದೆ.”

ಡಾ. ವಿನಾಯಕ ನಿರಂಜನ

ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ

ರೈತರಿಗೆ ಉದ್ದು-ತೊಗರಿ ಬೀಜ ವಿತರಣೆ

ಖೇತ ಬಚಾವೋ ಅಭಿಯಾನದ ಅಂಗವಾಗಿ ಬನಹಟ್ಟಿ ಹಾಗೂ ಬೈರನಹಟ್ಟಿ ಗ್ರಾಮಗಳ ರೈತರಿಗೆ ಕೃಷಿ ಇಲಾಖೆ ವತಿಯಿಂದ ಉದ್ದು ಮತ್ತು ತೊಗರಿಯ ಸುಧಾರಿತ ತಳಿಯ ಬೀಜಗಳನ್ನು ಪ್ರಾತ್ಯಕ್ಷಿಕೆಗಾಗಿ ವಿತರಿಸಿ, ಪರ್ಯಾಯ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಲಾಯಿತು.

ಮಳೆಗಾಗಿ ‘ಗುರ್ಜಿ’ ಮೊರೆ ಹೋದ ಮಹಿಳೆಯರು

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಮಹಿಳೆಯರು ಹಾಗೂ ಮಕ್ಕಳು ಸಂಪ್ರದಾಯಬದ್ಧ ‘ಗುರ್ಜಿ ಪೂಜೆ’ ನಡೆಸುವ ಮೂಲಕ ವರುಣ ದೇವನ ಕೃಪೆಗೆ ಮೊರೆ ಹೋದ ಅಪರೂಪದ ದೃಶ್ಯ ಶುಕ್ರವಾರ ಕಂಡು ಬಂತು.

ಮೇ 25ರಂದು ಸುರಿದ ಅಲ್ಪಸ್ವಲ್ಪ ರೋಹಿಣಿ ಮಳೆ ರೈತರಲ್ಲಿ ಉತ್ತಮ ಮಳೆಯ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಬಳಿಕ ಮಳೆ ಕೈಕೊಟ್ಟ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬಿತ್ತನೆ ಮಾಡಿದ ಬೆಳೆಗಳು ಒಣಗುವ ಭೀತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಗುರ್ಜಿ ಪೂಜೆಯ ಆಚರಣೆಗೆ ಮಹಿಳೆಯರು ಮುಂದಾಗಿದ್ದಾರೆ.

ಹಿಂದಿನ ಕಾಲದಲ್ಲಿ ಮಳೆ ಕೊರತೆ ಉಂಟಾದಾಗ ಗ್ರಾಮೀಣ ಪ್ರದೇಶದ ಜನರು ಗುರ್ಜಿ ಪೂಜೆ ನೆರವೇರಿಸಿ ವರುಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ಆಚರಣೆಯಿಂದ ಮಳೆ ಸುರಿದು ರೈತರ ಬದುಕಿಗೆ ಆಸರೆಯಾಗುತ್ತದೆ ಎಂಬ ನಂಬಿಕೆ ಇಂದಿಗೂ ಗ್ರಾಮೀಣ ಭಾಗದಲ್ಲಿ ಜೀವಂತವಾಗಿದೆ.

ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ವಿಶಿಷ್ಟ ಆಚರಣೆಯಲ್ಲಿ ವ್ಯಕ್ತಿ ಅಥವಾ ಬಾಲಕನ ತಲೆಯ ಮೇಲೆ ಹಂಚಿನ ತವೆ ಇಟ್ಟು ಅದರ ಮೇಲೆ ಆಕಳ ಸಗಣಿಯಿಂದ ಗುರ್ಜಿ ನಿರ್ಮಿಸಲಾಗುತ್ತದೆ. ಗುರ್ಜಿ ಹೊತ್ತ ವ್ಯಕ್ತಿಯ ಹಿಂದೆ ಮಹಿಳೆಯರು ಮತ್ತು ಮಕ್ಕಳು ಗುರ್ಜಿ ಹಾಡುಗಳನ್ನು ಹಾಡುತ್ತಾ ಗ್ರಾಮದ ಮನೆ ಮನೆಗೆ ತೆರಳುತ್ತಾರೆ.

ಪ್ರತಿ ಮನೆಯವರು ಗುರ್ಜಿಗೆ ಪೂಜೆ ಸಲ್ಲಿಸಿ ನೀರು ಸುರಿದು, “ಓ ಮಳೆರಾಯ, ಎಲ್ಲಿದ್ದರೂ ಬಾ” ಎಂದು ಪ್ರಾರ್ಥನೆ ಸಲ್ಲಿಸುವ ಮೂಲಕ ಉತ್ತಮ ಮಳೆಯಿಗಾಗಿ ದೇವರಲ್ಲಿ ಬೇಡಿಕೊಳ್ಳುತ್ತಾರೆ.

ಪ್ರದೇಶದಲ್ಲಿ ಹೆಸರು, ಉದ್ದು, ಅಲಸಂದಿ, ಮಡಿಕೆ ಹಾಗೂ ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಈಗಾಗಲೇ ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಕೊರತೆಯಿಂದ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದು, ಇನ್ನೆರಡು-ಮೂರು ದಿನಗಳಲ್ಲಿ ಮಳೆಯಾಗದಿದ್ದರೆ ರೈತರು ಭಾರೀ ನಷ್ಟ ಅನುಭವಿಸುವ ಆತಂಕ ಎದುರಾಗಿದೆ.

ಮಳೆ ಮುಂದುವರಿಯುತ್ತದೆ ಎಂಬ ನಿರೀಕ್ಷೆಯಲ್ಲಿ ಅನೇಕ ರೈತರು ಸಾಲ-ಸೂಲ ಮಾಡಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಕಾರ್ಯಗಳಿಗೆ ಹಣ ಖರ್ಚು ಮಾಡಿದ್ದಾರೆ. ಆದರೆ ಮಳೆ ಕೈಕೊಟ್ಟ ಪರಿಣಾಮ ರೈತರು ತಲೆ ಮೇಲೆ ಕೈಹೊತ್ತು ಆಕಾಶದತ್ತ ನೋಡುವಂತಾಗಿದೆ.

‘ಓ ಮಳೆರಾಯ, ಎಲ್ಲಿದ್ದರೂ ಬಾ…!’

“ರೋಹಿಣಿ ಮಳೆ ರೈತರಲ್ಲಿ ಭರವಸೆ ಮೂಡಿಸಿತ್ತು. ಆದರೆ ನಂತರ ಮಳೆ ಕೈಕೊಟ್ಟಿದೆ. ಬೆಳೆಗಳು ಉಳಿಯಲೆಂದು ಸಂಪ್ರದಾಯದಂತೆ ಗುರ್ಜಿ ಪೂಜೆ ಮೂಲಕ ವರುಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.”

error: Content is protected !!