ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹಾಲಕೆರೆ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನಿರ್ಮಿಸಲಾಗುತ್ತಿರುವ ಜಲಸಂಗ್ರಹಾಗಾರದ ಕಾಮಗಾರಿಯನ್ನು ಗುಣಮಟ್ಟದಿಂದ ಪೂರ್ಣಗೊಳಿಸಿ ಗ್ರಾಮಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ರೋಣ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ ಹೇಳಿದರು.
ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಜಲಸಂಗ್ರಹಾಗಾರಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ನೀರು ಸಂಗ್ರಹಿಸುವ ವ್ಯವಸ್ಥೆ ಇಲ್ಲದಿರುವುದನ್ನು ಮನಗಂಡು ಶಾಸಕ ಜಿ.ಎಸ್. ಪಾಟೀಲ ಅವರು ತಮ್ಮ ಶಾಸಕರ ಅನುದಾನದಿಂದ ₹20 ಲಕ್ಷ ಮಂಜೂರು ಮಾಡಿದ್ದು, ಗ್ರಾಮ ಪಂಚಾಯಿತಿಯಿಂದ ₹20 ಲಕ್ಷ ನೀಡಲಾಗುತ್ತಿದೆ. ಒಟ್ಟು ₹40 ಲಕ್ಷ ವೆಚ್ಚದಲ್ಲಿ ಜಲಸಂಗ್ರಹಾಗಾರ ನಿರ್ಮಾಣವಾಗಲಿದ್ದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸೂಚಿಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಾಲಕೆರೆ ಗ್ರಾಮಕ್ಕೆ ಜಲಸಂಗ್ರಹಾಗಾರದ ಅವಶ್ಯಕತೆ ಬಹಳಷ್ಟಿದ್ದು, ಶಾಸಕ ಜಿ.ಎಸ್. ಪಾಟೀಲ ಅವರ ಕೊಡುಗೆ ಶ್ಲಾಘನೀಯವಾಗಿದೆ ಎಂದರು. ಗ್ರಾಮದಲ್ಲಿ ನೆಡುವ ಸಸಿಗಳನ್ನು ಮರಗಳಾಗುವವರೆಗೆ ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಾಲಕೆರೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಂದನಗೌಡ ಪಾಟೀಲ, ರೋಣ ಎಇ ರಶ್ಮಿ, ಗಜೇಂದ್ರಗಡ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶರಣಪ್ಪ ಬೆಟಗೇರಿ ಮಾತನಾಡಿದರು.
ಈ ಸಂದರ್ಭದಲ್ಲಿ ಗಿರೀಶಗೌಡ ಮುಲ್ಕಿಪಾಟೀಲ, ಸಿದ್ದನಗೌಡರ ಇನಾಮತಿ, ಸೊಪ್ಪಯ್ಯ ಸ್ವಾಮಿ ಸೊಪ್ಪಿಹಿರೇಮಠ, ಹೊನ್ನಪ್ಪಗೌಡ ಪಾಟೀಲ, ಪಿಡಿಒ ಶರಣಪ್ಪ ನರೇಗಲ್ಲ, ಶಿವಕುಮಾರ ನಂದಿ, ಅಂದನಗೌಡ ಪಾಟೀಲ, ವೀರಣ್ಣ ಹಳ್ಳಿ, ಅಶೋಕ ಮಾಳಗೌಡರ, ಮಹೇಶ್ ಕುರಿ, ಆನಂದ ಹಳ್ಳಿ, ಪರಶುರಾಮ ತೆಲೆಖಾನ, ರಾಮಪ್ಪ ಪೂಜಾರ, ಶರಣಪ್ಪ ಪೂಜಾರ, ನವೀನ್ ಮಾದಿನೂರ, ಪ್ರವೀಣ ಭೈರಗೊಂಡ, ಬಾಳಪ್ಪ ಕುರಿ, ಮಾಂತೇಶ್ ಪ್ರಭಣ್ಣವರ, ಸಿದ್ದಪ್ಪ ಗೆದಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

