ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮೊದಲ ಹಂತದ ವಿಧಾನಸಭಾ ಚುನಾವಣೆಯ ವೇಳೆ ಅಚ್ಚರಿಯ ಘಟನೆ ನಡೆದಿದೆ.
ಝಾರ್ಗ್ರಾಮ್ ಜಿಲ್ಲೆಯ ಮತಗಟ್ಟೆಯೊಂದಕ್ಕೆ ಕಾಡಾನೆಯೊಂದು ಆಗಮಿಸಿದ್ದು ಮತದಾರರು ಹಾಗೂ ಅಧಿಕಾರಿಗಳು ಕೆಲಕಾಲ ಆತಂಕಗೊಂಡಿದ್ದಾರೆ.
ಝಾರ್ಗ್ರಾಮ್ ಜಿಲ್ಲೆಯ ಜಿತುಸೋಲ್ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಬಳಿ ‘ರಾಮಲಾಲ್’ ಎಂಬ ಹೆಸರಿನ ಕಾಡಾನೆ ಮತದಾನ ಆರಂಭಕ್ಕೂ ಮುನ್ನವೇ ಕಾಣಿಸಿಕೊಂಡಿತ್ತು. ಮತಗಟ್ಟೆ ಸಾಲಿನ ಬಳಿ ಆನೆ ಸುಳಿದಾಡಿದ ಘಟನೆ ಸ್ಥಳದಲ್ಲಿ ಕ್ಷಣಕಾಲ ಗೊಂದಲಕ್ಕೆ ಕಾರಣವಾಯಿತು.
ಆನೆ ಸಮೀಪದಲ್ಲಿದ್ದ ಸರಕು ಸಾಗಣೆ ವಾಹನವನ್ನು ಕುತೂಹಲದಿಂದ ಗಮನಿಸಿದರೂ ಯಾರಿಗೂ ಹಾನಿ ಮಾಡದೆ ಶಾಂತವಾಗಿ ಅಲ್ಲಿಂದ ತೆರಳಿದೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಲೋಧಾಶುಲಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಆನೆಯನ್ನು ಸುರಕ್ಷಿತವಾಗಿ ಅರಣ್ಯದ ಕಡೆಗೆ ಕಳುಹಿಸಿದ್ದಾರೆ. ನಂತರ ಮತದಾನ ಪ್ರಕ್ರಿಯೆ ಯಾವುದೇ ಅಡಚಣೆಯಿಲ್ಲದೆ ಮುಂದುವರಿದಿದೆ.
ಜಂಗಲ್ಮಹಲ್ ಪ್ರದೇಶದಲ್ಲಿ ಮಾನವ–ಪ್ರಾಣಿ ಸಂಘರ್ಷ ಸಾಮಾನ್ಯವಾಗಿರುವ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ವಿಶೇಷ 15 ಸದಸ್ಯರ ತಂಡ ಹಾಗೂ ‘ಐರಾವತ’ ವಾಹನವನ್ನು ನಿಯೋಜಿಸಿದೆ.

