Home Blog

ಅರಿಶಿನ ನೀರು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ? ಯಾರು ಕುಡಿಯಬೇಕು, ಯಾರು ಎಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ

0

ಅರಿಶಿನವು ಭಾರತೀಯ ಅಡುಗೆಮನೆಯ ಅವಿಭಾಜ್ಯ ಅಂಗವಾಗಿದ್ದು, ಶತಮಾನಗಳಿಂದ ಮಸಾಲೆ ಪದಾರ್ಥದ ಜೊತೆಗೆ ಸಾಂಪ್ರದಾಯಿಕ ಔಷಧೀಯ ಗುಣಗಳಿರುವ ನೈಸರ್ಗಿಕ ಆಹಾರವಾಗಿಯೂ ಬಳಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಮಳೆಗಾಲದಲ್ಲಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರು ಕುಡಿಯುವ ಅಭ್ಯಾಸವೂ ಹೆಚ್ಚುತ್ತಿದೆ.

ಅರಿಶಿನದಲ್ಲಿರುವ ಕರ್ಕ್ಯೂಮಿನ್ (Curcumin) ಎಂಬ ನೈಸರ್ಗಿಕ ಸಂಯುಕ್ತವು ಉರಿಯೂತ ನಿವಾರಕ, ಆಂಟಿಆಕ್ಸಿಡೆಂಟ್ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಆದರೆ ಇದನ್ನು ಮಿತ ಪ್ರಮಾಣದಲ್ಲಿ ಹಾಗೂ ಸರಿಯಾದ ರೀತಿಯಲ್ಲಿ ಸೇವಿಸುವುದು ಮುಖ್ಯ.

ಅರಿಶಿನ ನೀರು ಕುಡಿಯುವುದರಿಂದ ಸಿಗಬಹುದಾದ ಆರೋಗ್ಯ ಪ್ರಯೋಜನಗಳು

ಜೀರ್ಣಕ್ರಿಯೆ ಸುಧಾರಣೆಗೆ ನೆರವು:
ಬೆಳಗ್ಗೆ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಅರಿಶಿನ ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸುಗಮವಾಗಲು ಸಹಾಯವಾಗಬಹುದು. ಹೊಟ್ಟೆ ಉಬ್ಬರ, ಗ್ಯಾಸ್ ಹಾಗೂ ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಇದು ನೆರವಾಗಬಹುದು.

ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ:
ಅರಿಶಿನದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ನೆರವಾಗುತ್ತವೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಸಾಮಾನ್ಯ ಸೋಂಕುಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು.

ಉರಿಯೂತ ಮತ್ತು ಕೀಲು ನೋವು ಕಡಿಮೆ ಮಾಡಲು ನೆರವು:
ಕರ್ಕ್ಯೂಮಿನ್ ದೇಹದಲ್ಲಿನ ಉರಿಯೂತವನ್ನು ತಗ್ಗಿಸುವ ಗುಣ ಹೊಂದಿರುವುದರಿಂದ ಕೀಲು ನೋವು ಅಥವಾ ಸಂಧಿವಾತ ಸಮಸ್ಯೆ ಇರುವವರಿಗೆ ಕೆಲವು ಮಟ್ಟಿಗೆ ಉಪಯುಕ್ತವಾಗಬಹುದು.

ಹೃದಯದ ಆರೋಗ್ಯಕ್ಕೆ ಪೂರಕ:
ಕೆಲವು ಅಧ್ಯಯನಗಳ ಪ್ರಕಾರ, ಕರ್ಕ್ಯೂಮಿನ್ ರಕ್ತನಾಳಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡಬಹುದು. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದೊಂದಿಗೆ ಇದನ್ನು ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೂ ಪೂರಕವಾಗಬಹುದು.

ಚರ್ಮದ ಆರೋಗ್ಯಕ್ಕೆ ಸಹಕಾರಿ:
ಆಂಟಿಆಕ್ಸಿಡೆಂಟ್ ಗುಣಗಳಿಂದ ಚರ್ಮದ ಕೋಶಗಳನ್ನು ರಕ್ಷಿಸಲು ನೆರವಾಗುವ ಅರಿಶಿನ, ಚರ್ಮದ ಕಾಂತಿಯನ್ನು ಕಾಪಾಡಲು ಸಹ ಸಹಕಾರಿಯಾಗಬಹುದು.

ಮೆದುಳಿನ ಆರೋಗ್ಯಕ್ಕೆ ನೆರವು:
ಕೆಲವು ಸಂಶೋಧನೆಗಳು ಕರ್ಕ್ಯೂಮಿನ್ ಮೆದುಳಿನ ಕೋಶಗಳ ಕಾರ್ಯಕ್ಷಮತೆಯನ್ನು ಬೆಂಬಲಿಸಬಹುದು ಎಂದು ಸೂಚಿಸಿವೆ. ಆದರೆ ಅಲ್ಜೈಮರ್ಸ್‌ನಂತಹ ಕಾಯಿಲೆಗಳನ್ನು ತಡೆಯುತ್ತದೆ ಎಂಬುದಕ್ಕೆ ಇನ್ನಷ್ಟು ವೈಜ್ಞಾನಿಕ ಅಧ್ಯಯನಗಳು ಅಗತ್ಯವಿವೆ.

ಕರಿಮೆಣಸು ಸೇರಿಸಿದರೆ ಏನು ಪ್ರಯೋಜನ?

ಅರಿಶಿನದಲ್ಲಿರುವ ಕರ್ಕ್ಯೂಮಿನ್ ದೇಹದಲ್ಲಿ ಸುಲಭವಾಗಿ ಹೀರಿಕೊಳ್ಳುವುದಿಲ್ಲ. ಆದ್ದರಿಂದ ಚಿಟಿಕೆ ಕರಿಮೆಣಸು ಸೇರಿಸಿ ಕುಡಿಯುವುದರಿಂದ ಕರ್ಕ್ಯೂಮಿನ್ ಹೀರಿಕೊಳ್ಳುವಿಕೆ ಹೆಚ್ಚಾಗಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸಿವೆ. ಆದರೆ ಕರಿಮೆಣಸನ್ನೂ ಮಿತ ಪ್ರಮಾಣದಲ್ಲೇ ಬಳಸುವುದು ಸೂಕ್ತ.

ಯಾರು ಎಚ್ಚರಿಕೆ ವಹಿಸಬೇಕು?

ಪಿತ್ತಕೋಶದಲ್ಲಿ ಕಲ್ಲು ಇರುವವರು, ರಕ್ತ ತೆಳುವಾಗಿಸುವ ಔಷಧಿಗಳನ್ನು ಸೇವಿಸುತ್ತಿರುವವರು, ಗರ್ಭಿಣಿಯರು ಹಾಗೂ ಗ್ಯಾಸ್ಟ್ರಿಕ್ ಅಲ್ಸರ್ ಸಮಸ್ಯೆ ಇರುವವರು ಅರಿಶಿನ ನೀರನ್ನು ನಿಯಮಿತವಾಗಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ. ಅತಿಯಾಗಿ ಸೇವಿಸಿದರೆ ಕೆಲವರಲ್ಲಿ ಹೊಟ್ಟೆ ಉರಿ, ಅಜೀರ್ಣ ಅಥವಾ ಅತಿಸಾರದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಅರಿಶಿನ ನೀರು ತಯಾರಿಸುವ ಸರಳ ವಿಧಾನ

ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಅರ್ಧ ಟೀ ಸ್ಪೂನ್ ಶುದ್ಧ ಅರಿಶಿನ ಪುಡಿ ಅಥವಾ ತಾಜಾ ಅರಿಶಿನದ ಸಣ್ಣ ತುಂಡು ಸೇರಿಸಿ ಕುಡಿಯಬಹುದು. ಬೇಕಾದರೆ ಚಿಟಿಕೆ ಕರಿಮೆಣಸು ಸೇರಿಸಬಹುದು. ಆರೋಗ್ಯದ ದೃಷ್ಟಿಯಿಂದ ಸಕ್ಕರೆ ಸೇರಿಸುವುದನ್ನು ತಪ್ಪಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಸರಸ್ವತಿ ಮೂರ್ತಿ ಭಗ್ನ ಪ್ರಕರಣ ಭೇದಿಸಿದ ಪೊಲೀಸರು: ಮಂತ್ರಸಿದ್ಧಿ’ ಪುಸ್ತಕ ಓದಿ ನಿಧಿ ಆಸೆಗೆ ಕೃತ್ಯ; ನಾಲ್ವರು ಆರೋಪಿಗಳ ಬಂಧನ

0

ಗದಗ: ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಪುರಾತತ್ವ ಇಲಾಖೆಯ ಅಧೀನದ ಶ್ರೀ ಸರಸ್ವತಿ ಮೂರ್ತಿಯೊಳಗೆ ನಿಧಿ ಹುದುಗಿದೆ ಎಂಬ ಮೂಢನಂಬಿಕೆಗೆ ಬಿದ್ದು, ಕಬ್ಬಿಣದ ಚಾಣದಿಂದ ಮೂರ್ತಿಗೆ ಹಾನಿ ಮಾಡಿದ್ದ ಪ್ರಕರಣವನ್ನು ಗದಗ ನಗರ ಪೊಲೀಸರು ಭೇದಿಸಿದ್ದಾರೆ.

ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಜುಲೈ 10ರಂದು ಮಧ್ಯಾಹ್ನ ನಡೆದ ಈ ಕೃತ್ಯ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಮೂರ್ತಿಯ ಎದೆ ಭಾಗಕ್ಕೆ ಕಬ್ಬಿಣದ ವಸ್ತುವಿನಿಂದ ಹೊಡೆದು ಹಾನಿಗೊಳಿಸಿದ ಹಿನ್ನೆಲೆಯಲ್ಲಿ ಗದಗ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

‘ಮಂತ್ರಸಿದ್ಧಿ’ ಪುಸ್ತಕವೇ ಕೃತ್ಯಕ್ಕೆ ಪ್ರೇರಣೆ!

ಪೊಲೀಸ್ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿ ಬಾಲೇಶ ಕಳಸಣ್ಣವರ ಈ ಹಿಂದೆ ಗದಗಕ್ಕೆ ಬಂದಿದ್ದ ವೇಳೆ ಶಾಬಾದಿಮಠ ಎಂಬುವವರ ಪುಸ್ತಕ ಮಳಿಗೆಯಲ್ಲಿ ‘ಮಂತ್ರಸಿದ್ಧಿ’ ಎಂಬ ಪುಸ್ತಕ ಖರೀದಿಸಿ ಓದಿದ್ದ. ಅದರಲ್ಲಿ ಉಲ್ಲೇಖಿಸಿದ್ದ ವಿಚಾರಗಳನ್ನು ನಂಬಿ, ಶ್ರೀ ಸರಸ್ವತಿ ಮೂರ್ತಿಯೊಳಗೆ ನಿಧಿ ಇದೆ ಎಂದು ಭಾವಿಸಿ ತನ್ನ ಸಹಚರರೊಂದಿಗೆ ಸಂಚು ರೂಪಿಸಿದ್ದಾನೆ. ಬಳಿಕ ಜುಲೈ 10ರಂದು ಗದಗಕ್ಕೆ ಬಂದು ಕಬ್ಬಿಣದ ಚಾಣದಿಂದ ಮೂರ್ತಿಗೆ ಹೊಡೆದು ಹಾನಿ ಮಾಡಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.

ಬಂಧಿತ ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಿಂದಿಕುರಬೇಟನ ನಿವಾಸಿಗಳಾದ ಬಾಲೇಶ ತಂದೆ ಯಲ್ಲಪ್ಪ ಕಳಸಣ್ಣವರ (30), ಘಟಪ್ರಭಾದ ಆಸೀಫ್ ತಂದೆ ಮಂಜೂರಅಹಮದ್ ಭಾಗವಾನ್ (40), ಹಾಗೂ ಸಿಂದಿಕುರಬೇಟ್‌ನ ಬಸು ತಂದೆ ಸಿದ್ದರಾಮ ಸೆಂಡೂರ (25) ಹಾಗೂ ರಾಜೇಸಾಬ್ ಹಸನಸಾಬ್ ನದಾಫ್ (63) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ವಿಠ್ಠಲ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ಉಪಕರಣಗಳು ಹಾಗೂ ಎರ್ಟಿಗಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ಮುಂದುವರಿದಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಬಂಧನದ ಬಳಿಕ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್, ಐಪಿಎಸ್ ಹಾಗೂ ಡಿವೈಎಸ್ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಸಂಗಮೇಶ ಶಿವಯೋಗಿ, ಪಿಎಸ್‌ಐಗಳಾದ ಬಿ.ಟಿ. ರಿತ್ತಿ ಹಾಗೂ ರೇಣುಕಾ ಮುಂಡೇವಾಡಗಿ ನೇತೃತ್ವದ ವಿಶೇಷ ತಂಡ ಈ ಕಾರ್ಯಾಚರಣೆ ನಡೆಸಿತು. ತಂಡದಲ್ಲಿ ಗುರು ಬೂದಿಹಾಳ (ಎಆರ್‌ಎಸ್‌ಐ–ತಾಂತ್ರಿಕ ವಿಭಾಗ), ವಿ.ಎಸ್. ಶೆಟ್ಟೆಣ್ಣವರ, ಎಸ್‌.ಎಸ್‌. ಮಾವಿನಕಾಯಿ, ಉಮೇಶ ಸುಣಗಾರ, ಶರಣಪ್ಪ ನಾಗೇಂದ್ರಗಡ, ಕುಮಾರ ತಿಗರಿ, ಗಣೇಶ ತಳವಾರ, ಕಾರ್ತಿಕ್ ಮಂಗಳಿ, ಹನುಮಂತ ಯಾಡಿಯಾಪೂರ, ವೀರಪ್ಪ ಗೌಡನಾಯ್ಕರ, ಪ್ರಕಾಶ ಉಮಚಗಿ, ಸಂಜೀವ ಕೊರಡೂರ (ಟೆಕ್ನಿಕಲ್ ಸೆಲ್), ‘ಥರ್ಡ್ ಐ’ ವಿಭಾಗದ ಸಿಬ್ಬಂದಿ ಹಾಗೂ ಘಟಪ್ರಭಾ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವಿಠ್ಠಲ್ ಎಸ್‌.ಕೆ. ಮತ್ತು ಬಿ.ಎಸ್. ನಾಯ್ಕ ಸೇರಿದಂತೆ ಗದಗ ನಗರ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಎಸ್‌ಪಿ ರೋಹನ್ ಜಗದೀಶ್ ಪ್ರಶಂಸಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಚೀಟಿ ಪತ್ತೆ: 5 ಗಂಟೆ ತಡವಾಗಿ ಹೊರಟ ಇಂಡಿಗೋ ವಿಮಾನ!

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ಶೌಚಾಲಯದೊಳಗೆ ಬಾಂಬ್ ಬೆದರಿಕೆ ಚೀಟಿ ಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಗುರುವಾರ ಬೆಂಗಳೂರಿನಿಂದ ಅಹಮದಾಬಾದ್‌ಗೆ ತೆರಳಬೇಕಿದ್ದ ಇಂಡಿಗೋ 6E-6423 ವಿಮಾನದ ಶೌಚಾಲಯದಲ್ಲಿ ಬೆದರಿಕೆ ಚೀಟಿ ಪತ್ತೆಯಾಗಿದೆ. “ದಯವಿಟ್ಟು ಹೋಗಬೇಡಿ, ಬಾಂಬ್ ಇದೆ” ಎಂದು ಚೀಟಿಯಲ್ಲಿ ಬರೆಯಲಾಗಿತ್ತು ಎಂದು ತಿಳಿದುಬಂದಿದೆ.

ಚೀಟಿ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಯಾಣಿಕರಲ್ಲಿ ಆತಂಕ ಉಂಟಾಗಿದ್ದು, ತಕ್ಷಣ ಭದ್ರತಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಗತ್ಯ ತಪಾಸಣೆ ಹಾಗೂ ಅನುಮತಿ ಪ್ರಕ್ರಿಯೆಗಳಿಂದಾಗಿ ಸಂಜೆ 7.30ಕ್ಕೆ ಹೊರಡಬೇಕಿದ್ದ ವಿಮಾನ ಸುಮಾರು ಐದು ಗಂಟೆ ತಡವಾಗಿ ಟೇಕ್ ಆಫ್ ಆಗಿದೆ.

ವಿಮಾನಕ್ಕೆ ಯಾವುದೇ ಅಪಾಯವಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಏರ್ ಟ್ರಾಫಿಕ್ ಕಂಟ್ರೋಲ್ (ATC) ಕ್ಲಿಯರೆನ್ಸ್ ನೀಡಿದೆ. ಪ್ರಾಥಮಿಕ ತನಿಖೆಯಲ್ಲಿ ಓರ್ವ ಪ್ರಯಾಣಿಕನೇ ಈ ಬೆದರಿಕೆ ಚೀಟಿ ಬರೆದು ಹಾಕಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಪ್ರಯಾಣಿಕನ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇರಾನ್ ಮೇಲೆ ಅಮೆರಿಕದ ಮತ್ತೆ ದಾಳಿ: ಸೇತುವೆ, ರೈಲು ನಿಲ್ದಾಣ, ವಿಮಾನ ನಿಲ್ದಾಣ ಧ್ವಂಸ!

0

ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

ಇರಾನ್‌ನ ಮಿಲಿಟರಿ ಸಾಮರ್ಥ್ಯಗಳನ್ನು ಕುಗ್ಗಿಸುವ ಉದ್ದೇಶದಿಂದ ಅಮೆರಿಕ ಮತ್ತೆ ದಾಳಿ ನಡೆಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.

ಗುರುವಾರ ಸಂಜೆ ನಡೆದ ದಾಳಿಯಲ್ಲಿ ಇರಾನ್‌ನ ದಕ್ಷಿಣ ಭಾಗದಲ್ಲಿರುವ ಹಾರ್ಮುಜ್ಗನ್ ಪ್ರಾಂತ್ಯದ ಎರಡು ಸೇತುವೆಗಳು, ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣವನ್ನು ಗುರಿಯಾಗಿಸಲಾಗಿದೆ ಎಂದು ಇರಾನ್‌ನ ರಾಜ್ಯ ಮಾಧ್ಯಮಗಳು ವರದಿ ಮಾಡಿವೆ.

ಹಾರ್ಮುಜ್ ಜಲಸಂಧಿಯ ಸಮೀಪ ನಡೆದ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಜಾಗತಿಕ ತೈಲ ಮತ್ತು ಅನಿಲ ಸಾಗಣೆಗೆ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿವೆ.

ಇದೇ ವೇಳೆ, ಇರಾನ್‌ನ ಪಶ್ಚಿಮ ಭಾಗದಲ್ಲಿರುವ ಬುಶೆಹರ್ ನಗರದಲ್ಲಿಯೂ ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ. ಈ ಪ್ರದೇಶದಲ್ಲೇ ಇರಾನ್‌ನ ಏಕೈಕ ನಾಗರಿಕ ಪರಮಾಣು ಸ್ಥಾವರವಿದೆ.

ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಕೊಲ್ಲಿಯಲ್ಲಿರುವ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಕುವೈತ್ ತನ್ನ ವಾಯು ರಕ್ಷಣಾ ಪಡೆಗಳು ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ಎದುರಿಸುತ್ತಿವೆ ಎಂದು ಹೇಳಿದೆ. ಬಹ್ರೇನ್‌ನಲ್ಲಿಯೂ ವಾಯುದಾಳಿ ಎಚ್ಚರಿಕೆ ಸೈರನ್‌ಗಳು ಮೊಳಗಿವೆ.

ಇದು ಅಮೆರಿಕ ಪಡೆಗಳಿಂದ ಇರಾನ್ ವಿರುದ್ಧ ನಡೆದ ಸತತ ಆರನೇ ದಾಳಿ ಎಂದು CENTCOM ಹೇಳಿದೆ. ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ಮುಂದುವರಿದಿದ್ದು, ಜಾಗತಿಕ ತೈಲ ಮಾರುಕಟ್ಟೆ ಹಾಗೂ ಭದ್ರತಾ ಪರಿಸ್ಥಿತಿಯ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.

ರಾತ್ರಿ ಒಳಉಡುಪು ಕದ್ದು ಬೆಳಗ್ಗೆ ಮರಳಿ ಇಡುತ್ತಿದ್ದ ಆರೋಪಿ ಅರೆಸ್ಟ್; ಸಿಸಿಟಿವಿಯಲ್ಲಿ ಬಯಲಾಯ್ತು ಕೃತ್ಯ

ಬೆಂಗಳೂರು: ಮನೆ ಮುಂದೆ ಒಣಗಲು ಹಾಕಿದ್ದ ಮಹಿಳೆಯರ ಒಳಉಡುಪುಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಅಸ್ಸಾಂ ಮೂಲದ ಬ್ಲಿಂಕಿಟ್ ಡೆಲಿವರಿ ಬಾಯ್ ಅಬ್ದುಲ್ ಹುಸೇನ್ ಎಂದು ತಿಳಿದುಬಂದಿದೆ.

ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಯುವತಿಯರು ವಾಸವಾಗಿದ್ದ ಮನೆಯ ಮುಂದೆ ಒಣಗಲು ಹಾಕಿದ್ದ ಒಳಉಡುಪುಗಳು ಪದೇ ಪದೇ ನಾಪತ್ತೆಯಾಗುತ್ತಿದ್ದವು. ರಾತ್ರಿ ವೇಳೆ ಕಳುವಾಗುತ್ತಿದ್ದ ವಸ್ತುಗಳು ಬೆಳಗ್ಗೆ ಮತ್ತೆ ಅದೇ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಯುವತಿಯರಿಗೆ ಅನುಮಾನ ಮೂಡಿತ್ತು.

ಆರೋಪಿಯನ್ನು ಪತ್ತೆಹಚ್ಚಲು ಯುವತಿಯರು ಮನೆಯ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು. ಬಳಿಕ ರಾತ್ರಿ ವೇಳೆ ಮನೆ ಬಳಿ ಬಂದ ವ್ಯಕ್ತಿಯೊಬ್ಬ ಒಳಉಡುಪುಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಯುವತಿಯರು ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಅಬ್ದುಲ್ ಹುಸೇನ್ ಬ್ಲಿಂಕಿಟ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು, ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿ ಜಾಮೀನು ಪಡೆದು ಬಿಡುಗಡೆಯಾಗಿದ್ದಾನೆ.

ಪ್ರಕರಣದ ಕುರಿತು ಇಂದಿರಾನಗರ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಆಷಾಢದ ಮೊದಲ ಶುಕ್ರವಾರ: ನಾಗಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ತಾಯಿ ಚಾಮುಂಡೇಶ್ವರಿ!

ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರದ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಚಾಮುಂಡಿ ಬೆಟ್ಟದಲ್ಲಿ ಭಕ್ತಿ ಸಂಭ್ರಮ ಮನೆಮಾಡಿದೆ.

ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರ ನೆರವೇರಿಸಲಾಗಿದ್ದು, ಮುಂಜಾನೆಯಿಂದಲೇ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದಾರೆ.

ಈ ವಿಶೇಷ ದಿನದ ಅಂಗವಾಗಿ ಇಡೀ ಚಾಮುಂಡಿ ಬೆಟ್ಟವನ್ನು ವಿವಿಧ ಬಗೆಯ ಹೂಗಳಿಂದ ಸಿಂಗರಿಸಲಾಗಿದೆ. ತಾಯಿ ಚಾಮುಂಡೇಶ್ವರಿ ನಾಗಲಕ್ಷ್ಮೀ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದು, ಉತ್ಸವ ಮೂರ್ತಿಗೂ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ.

ದೇವಿಗೆ ಅಭಿಷೇಕ, ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿದ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ₹2,000 ಮೌಲ್ಯದ ವಿಶೇಷ ದರ್ಶನ ಟಿಕೆಟ್ ಪಡೆದ ಭಕ್ತರಿಗೆ ನೇರ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಮುಂಜಾನೆ 5.30ರಿಂದ ಬೆಳಗ್ಗೆ 10 ಗಂಟೆಯವರೆಗೆ ವಿವಿಐಪಿಗಳಿಗೆ ವಿಶೇಷ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಕ್ತರ ಅನುಕೂಲಕ್ಕಾಗಿ ದೇವಸ್ಥಾನ ಆಡಳಿತ ಅಗತ್ಯ ವ್ಯವಸ್ಥೆ ಮಾಡಿದೆ.

 

ದಾವಣಗೆರೆ ಜಿಮ್ ಪ್ರಕರಣಕ್ಕೆ ಹೊಸ ತಿರುವು: ಸುದ್ದಿಗೋಷ್ಠಿಯಲ್ಲಿ ಕರಾಳ ಅನುಭವ ಬಿಚ್ಚಿಟ್ಟ ಸಂತ್ರಸ್ತೆ!

ದಾವಣಗೆರೆ: ದಾವಣಗೆರೆಯಲ್ಲಿ ಭಾರೀ ಸಂಚಲನ ಮೂಡಿಸಿರುವ ಜಿಮ್ ಟ್ರೈನರ್ ವಿರುದ್ಧದ ಲೈಂಗಿಕ ದೌರ್ಜನ್ಯ ಹಾಗೂ ಬ್ಲ್ಯಾಕ್‌ಮೇಲ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಪವರ್ ಫಿಟ್ನೆಸ್ ಜಿಮ್‌ನ ಟ್ರೈನರ್ ಹಾಗೂ ಮಾಲೀಕ ಇಸ್ಮಾಯಿಲ್ ವಿರುದ್ಧ ಸಂತ್ರಸ್ತೆಯೊಬ್ಬರು ಸುದ್ದಿಗೋಷ್ಠಿ ನಡೆಸಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ಆರೋಪಿ ತನ್ನನ್ನು “ಆಕಾಂಕ್ಷ್” ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದು, ಜಿಮ್‌ನ ವಾತಾವರಣ ಹಾಗೂ ಹೆಸರನ್ನು ನೋಡಿ ತಾನು ಹಿಂದೂ ಜಿಮ್ ಎಂದು ನಂಬಿ ಸೇರಿದ್ದಾಗಿ ತಿಳಿಸಿದ್ದಾರೆ. ಸುಮಾರು ಆರು ತಿಂಗಳ ಹಿಂದೆ ಮಾತ್ರ ಆತನ ನಿಜವಾದ ಹೆಸರು ಇಸ್ಮಾಯಿಲ್ ಎಂಬುದು ತಿಳಿದಿತ್ತೆಂದು ಹೇಳಿದ್ದಾರೆ.

ಜಿಮ್‌ನ ಡ್ರೆಸ್ಸಿಂಗ್ ರೂಂನಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿ ಮಹಿಳೆಯರ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿ, ಬಳಿಕ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ ಹಣ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಫೋನ್‌ಪೇ ಹಾಗೂ ನಗದು ರೂಪದಲ್ಲಿ ಲಕ್ಷಾಂತರ ರೂಪಾಯಿ ಪಡೆದುಕೊಂಡಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇಸ್ಮಾಯಿಲ್ ತನ್ನನ್ನು ಕರೆದಾಗ ಬರದಿದ್ದರೆ ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಅಲ್ಲದೆ, ಕಳೆದ ಮೂರು-ನಾಲ್ಕು ತಿಂಗಳಿಂದ ತನ್ನ ಪತಿಗೂ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ. ತಮ್ಮ ಕುಟುಂಬವು ಸುಸಂಸ್ಕೃತ ಹಾಗೂ ಆರ್ಥಿಕವಾಗಿ ಸ್ಥಿರವಾಗಿದ್ದು, ಹನಿಟ್ರ್ಯಾಪ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಇಸ್ಮಾಯಿಲ್ ತಾಯಿ ಸುದ್ದಿಗೋಷ್ಠಿ ನಡೆಸಿ ತಮ್ಮ ಮಗ ಹನಿಟ್ರ್ಯಾಪ್‌ಗೆ ಬಲಿಯಾಗಿದ್ದಾನೆ ಎಂದು ಆರೋಪಿಸಿದ್ದರು. ಆದರೆ ಅದಕ್ಕೆ ಪ್ರತಿಕ್ರಿಯೆ ನೀಡಿರುವ ಸಂತ್ರಸ್ತೆ, ತಮ್ಮ ಮೇಲಿನ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಸಂತ್ರಸ್ತೆಯ ಪ್ರಕಾರ, ಆರೋಪಿ “ಆಕಾಶ್”, “ಕಿರಣ್”, “ಆಕಾಂಕ್ಷ್” ಸೇರಿದಂತೆ ವಿವಿಧ ಹೆಸರುಗಳನ್ನು ಬಳಸಿ ಮಹಿಳೆಯರೊಂದಿಗೆ ಪರಿಚಯ ಬೆಳೆಸುತ್ತಿದ್ದ. ಈತನ ಬಲೆಗೆ 15ಕ್ಕೂ ಹೆಚ್ಚು ಮಹಿಳೆಯರು ಬಿದ್ದಿರುವ ಶಂಕೆ ವ್ಯಕ್ತಪಡಿಸಿದ್ದು, ಮಾನ-ಮರ್ಯಾದೆಗೆ ಹೆದರಿ ಅನೇಕರು ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ತಿಳಿಸಿದ್ದಾರೆ.

ಇದಲ್ಲದೆ, ಆರೋಪಿಯ ಮೊದಲ ವಿವಾಹವೂ ದೀರ್ಘಕಾಲದ ಅನೈತಿಕ ಸಂಬಂಧದ ಕಾರಣ ಮುರಿದುಬಿದ್ದಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಮನೆ ಬಳಿ ಗಲಾಟೆ ನಡೆಸಿದ್ದ ಹಿನ್ನೆಲೆಯಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂಬ ಆರೋಪವನ್ನೂ ಸಂತ್ರಸ್ತೆ ಮಾಡಿದ್ದಾರೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ದಾವಣಗೆರೆ ಪೊಲೀಸರು ಜಿಮ್‌ಗಳ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಿದ್ದು, ಜಿಲ್ಲೆಯ ಜಿಮ್ ಮಾಲೀಕರು ಹಾಗೂ ತರಬೇತುದಾರರ ಸಭೆ ನಡೆಸಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.

ಬಂಜಾರ ಸಮುದಾಯದ ಮುಖಂಡ ಐ.ಎಸ್. ಪೂಜಾರ ಬಿಜೆಪಿ ಸೇರ್ಪಡೆ

0

ವಿಜಯಸಾಕ್ಷಿ ಸುದ್ದಿ, ಗದಗ: ಬಂಜಾರ ಸಮುದಾಯದ ಪ್ರಭಾವಿ ಯುವ ಮುಖಂಡ ಐ.ಎಸ್. ಪೂಜಾರ ಅವರು ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.

ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ 12 ವರ್ಷಗಳ ಆಡಳಿತ, ಅಭಿವೃದ್ಧಿ ಪರ ದೃಷ್ಟಿಕೋನ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಯುವ ನಾಯಕತ್ವದಿಂದ ಪ್ರೇರಿತರಾಗಿ ಪಕ್ಷ ಸೇರ್ಪಡೆಯಾಗಿರುವುದಾಗಿ ಐ.ಎಸ್. ಪೂಜಾರ ತಿಳಿಸಿದ್ದಾರೆ.

ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ತಮ್ಮ ಅಪಾರ ಬೆಂಬಲಿಗರು, ಸಮಾಜದ ಮುಖಂಡರು ಹಾಗೂ ಕ್ಷೇತ್ರದ ಪ್ರಮುಖ ನಾಯಕರೊಂದಿಗೆ ಪಕ್ಷ ಸೇರಿರುವುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣು ತಳ್ಳಿಕೇರಿ, ಶಿರಹಟ್ಟಿ ಬಂಜಾರ ಸಮಾಜದ ಅಧ್ಯಕ್ಷ ಶಿವಣ್ಣ ಲಮಾಣಿ, ಕಾರ್ಯದರ್ಶಿ ಪುಂಡಲೀಕ ಲಮಾಣಿ, ಬಿಜೆಪಿ ಮುಖಂಡರಾದ ಥಾವರೆಪ್ಪ ಲಮಾಣಿ ಹಾಗೂ ದೇವಿಹಾಳದ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಾಲೆಯಿಂದ ಯಾವ ಮಗುವೂ ಹೊರಗುಳಿಯಬಾರದು: ಕವಿತಾ ದಂಡಿನ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರತಿಯೊಂದು ಮಗುವಿಗೂ ಶಿಕ್ಷಣದ ಹಕ್ಕು ದೊರೆಯಬೇಕು ಎಂಬ ಉದ್ದೇಶದಿಂದ ಬೆಟಗೇರಿಯಲ್ಲಿ ವಿಶೇಷ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಲಾಗಿದ್ದು, ಪಾಲಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ದಾಖಲಿಸುವ ಮೂಲಕ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಕರೆ ನೀಡಿದರು.

ಬೆಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.1 ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ.2ರ ಶಿಕ್ಷಕರು ಮತ್ತು ಸಮುದಾಯದ ಸದಸ್ಯರೊಂದಿಗೆ ಕಬಾಡಿ ಓಣಿ, ಮಜ್ಜಗಿ ಓಣಿ ಹಾಗೂ ಕಲ್ಮಠ ಓಣಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮನೆ-ಮನೆಗೆ ತೆರಳಿ ವಿಶೇಷ ದಾಖಲಾತಿ ಆಂದೋಲನ ನಡೆಸಿ ಅವರು ಮಾತನಾಡಿದರು.

ವಿಶೇಷ ದಾಖಲಾತಿ ಆಂದೋಲನವು ಕೇವಲ ಮಕ್ಕಳ ದಾಖಲಾತಿಗೆ ಸೀಮಿತವಾಗಿಲ್ಲ. ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಸಾಮಾಜಿಕ ಬದ್ಧತೆಯಾಗಿದೆ. ಸಮುದಾಯದ ಸಹಭಾಗಿತ್ವದಿಂದ ಮಾತ್ರ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಗದಗ-ಬೆಟಗೇರಿ ನಗರಸಭೆ ಸದಸ್ಯ ಚಂದ್ರು ಕರಿಸೋಮನಗೌಡ್ರ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಶಿಸ್ತು, ಆತ್ಮವಿಶ್ವಾಸ ಹಾಗೂ ಉತ್ತಮ ನಾಗರಿಕ ಗುಣಗಳನ್ನು ಬೆಳೆಸುವ ವಾತಾವರಣವಿದ್ದು, ಪಾಲಕರು ಸರ್ಕಾರಿ ಶಾಲೆಗಳ ಮೇಲೆ ವಿಶ್ವಾಸವಿಟ್ಟು ಮಕ್ಕಳನ್ನು ದಾಖಲಿಸಬೇಕು ಎಂದು ಮನವಿ ಮಾಡಿದರು.

ಶಿಕ್ಷಣ ಸಂಯೋಜಕ ಮುರಳಿ ಸೋಲಾಪುರ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿವೇತನ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಿದ್ದು, ಪಾಲಕರು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಮುಖ್ಯೋಪಾಧ್ಯಾಯಿನಿ ಗೀತಾ ದೇವಂಗಮಠ ಮಾತನಾಡಿ, ದಾಖಲಾತಿ ಆಂದೋಲನದಿಂದ ಮಕ್ಕಳ ಶಿಕ್ಷಣದ ಬಗ್ಗೆ ಪಾಲಕರಲ್ಲಿ ಹೆಚ್ಚಿನ ಜಾಗೃತಿ ಮೂಡುತ್ತಿದ್ದು, ಮಕ್ಕಳನ್ನು ನಿಯಮಿತವಾಗಿ ಶಾಲೆಗೆ ಕಳುಹಿಸುವ ಮನೋಭಾವವೂ ಹೆಚ್ಚುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಎಸ್.ವಿ. ಕೇಸರಿ, ಪೋಷಕರಾದ ರಾಘವೇಂದ್ರ ಕಬಾಡಿ, ಲಕ್ಷ್ಮಣಸಿಂಗ್ ಗಿಡ್ಡಿಮನಿ, ಶ್ರದ್ಧಾ ಕಬಾಡಿ, ಪಾರ್ವತಿಬಾಯಿ ರಜಪೂತ, ಮುನಿರಾಬೇಗಂ ಹವಾಲ್ದಾರ್, ಬಿ.ಬಿ. ಜಾನ್ ಈಟಿ, ರೇಣುಕಾಬಾಯಿ ಮರಿಯಾಳ, ಮಂಜುನಾಥ ಹಾದಿಮನಿ, ಕಾಶೀನಾಥ ಅರವಟಗಿ, ಮಂಜಣ್ಣ ದಿಂಡಿ, ರಾಜು ಕಬಾಡಿ, ಅಶೋಕ ಬಿರಾದಾರ, ಆಕಾಶ ಅರವಟಗಿ, ರಾಜು ಶಿಂಧೆ, ಗಗನ ಕಬಾಡಿ ಹಾಗೂ ಹೇಮಂತ ರಜಪೂತ ಸೇರಿದಂತೆ ಹಲವರು ಭಾಗವಹಿಸಿದ್ದರು.

“ವಿಶೇಷ ದಾಖಲಾತಿ ಆಂದೋಲನವು ಕೇವಲ ದಾಖಲಾತಿ ಅಭಿಯಾನವಲ್ಲ; ಪ್ರತಿಯೊಂದು ಮಗುವಿನ ಶಿಕ್ಷಣದ ಹಕ್ಕು ಸಾಕಾರಗೊಳಿಸುವ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಸಮುದಾಯದ ಸಹಕಾರದಿಂದ ಮಾತ್ರ ‘ಯಾವ ಮಗು ಶಾಲೆಯಿಂದ ಹೊರಗುಳಿಯದ’ ಗುರಿ ಸಾಧಿಸಲು ಸಾಧ್ಯ.”

– ಕವಿತಾ ದಂಡಿನ

ಗದಗ ಮಾರ್ಗಕ್ಕೆ ಇನ್ನಷ್ಟು ರೈಲು ಓಡಿಸಿ

0

ವಿಜಯಸಾಕ್ಷಿ ಸುದ್ದಿ, ಗದಗ: ಬಳ್ಳಾರಿ–ಹೊಸಪೇಟೆ–ಕೊಪ್ಪಳ–ಗದಗ–ಹುಬ್ಬಳ್ಳಿ ಹಾಗೂ ಬಾಗಲಕೋಟೆ–ವಿಜಯಪುರ ಮಾರ್ಗಗಳಲ್ಲಿ ರೈಲುಗಳ ಸಂಖ್ಯೆ ತೀರಾ ಕಡಿಮೆಯಿರುವುದರಿಂದ ಈ ಭಾಗದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಈ ಮಾರ್ಗಗಳಲ್ಲಿ ಹೆಚ್ಚಿನ ಹೊಸ ರೈಲುಗಳನ್ನು ಆರಂಭಿಸುವಂತೆ ಕೊಪ್ಪಳ ಲೋಕಸಭಾ ಸದಸ್ಯ ರಾಜಶೇಖರ ಹಿಟ್ನಾಳ ಅವರಿಗೆ ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಮನವಿ ಸಲ್ಲಿಸಿದರು.

ಬಳ್ಳಾರಿಯಿಂದ ಹುಬ್ಬಳ್ಳಿ ಮಾರ್ಗಕ್ಕೆ ಮುಂಜಾನೆ ಕೆಲವೇ ರೈಲುಗಳಿದ್ದು, ಮಧ್ಯಾಹ್ನ ಹಾಗೂ ಸಂಜೆ ವೇಳೆಯಲ್ಲಿ ಪ್ರಯಾಣಿಕರಿಗೆ ಸೂಕ್ತ ರೈಲು ಸಂಪರ್ಕ ಇಲ್ಲದಿರುವುದು ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಧ್ಯಂತರ ವೇಳೆಯಲ್ಲಿಯೂ ಹೊಸ ರೈಲುಗಳನ್ನು ಓಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕುಷ್ಟಗಿ, ಗಂಗಾವತಿ ಹಾಗೂ ಸಿಂಧನೂರು ಭಾಗಕ್ಕೂ ರೈಲು ಸಂಚಾರದ ಕೊರತೆ ಇರುವುದರಿಂದ ಈ ಭಾಗಗಳಿಗೂ ಹೊಸ ರೈಲು ಸೇವೆ ಆರಂಭಿಸಬೇಕು ಎಂದು ಆಗ್ರಹಿಸಲಾಗಿದೆ.

ಬೆಂಗಳೂರು–ರಾಯದುರ್ಗ–ಬಳ್ಳಾರಿ–ಹೊಸಪೇಟೆ–ಕೊಪ್ಪಳ–ಗದಗ–ಹುಬ್ಬಳ್ಳಿ–ಬಾಗಲಕೋಟೆ–ವಿಜಯಪುರ ಮಾರ್ಗದಲ್ಲಿ ಹೊಸ ರೈಲುಗಳನ್ನು ಸಂಚರಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುವುದರ ಜೊತೆಗೆ ವ್ಯಾಪಾರ, ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಬೆಳವಣಿಗೆಗೂ ಉತ್ತೇಜನ ಸಿಗಲಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಈಗಾಗಲೇ ಗದಗ–ಸೊಲ್ಲಾಪುರ ರೈಲು ಮಾರ್ಗ ದ್ವಿಪಥವಾಗಿರುವ ಹಿನ್ನೆಲೆಯಲ್ಲಿ ಗದಗವನ್ನು ಪ್ರಮುಖ ರೈಲು ಜಂಕ್ಷನ್ ಆಗಿ ಅಭಿವೃದ್ಧಿಪಡಿಸಿ, ಮುಂಬೈ, ಪುಣೆ, ಅಹಮದಾಬಾದ್, ಜೈಪುರ, ದೆಹಲಿ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಗೆ ನೇರ ರೈಲು ಸಂಪರ್ಕ ಕಲ್ಪಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ರಾಜ್ಯ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತರಬೇಕೆಂದು ಸಂಸದರಿಗೆ ಮನವಿ ಮಾಡಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಗದೀಶ ಕಂಗೂರಿ, ವೆಂಕಟೇಶ ಕಬಾಡಿ, ವೀರಭದ್ರಪ್ಪ ಕಬ್ಬಿಣದ, ಬಸವರಾಜ ಜರತಕನಿ, ರಜಾಕ್ ನೂರಭಾಷ ಸೇರಿದಂತೆ ಗದಗ ಜಿಲ್ಲಾ ವಿಕಾಸ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

“ಬಳ್ಳಾರಿ–ಕೊಪ್ಪಳ–ಗದಗ–ಹುಬ್ಬಳ್ಳಿ ಮಾರ್ಗದಲ್ಲಿ ಹೊಸ ರೈಲುಗಳನ್ನು ಆರಂಭಿಸಿದರೆ ಈ ಭಾಗದ ಪ್ರಯಾಣಿಕರು, ವಿದ್ಯಾರ್ಥಿಗಳು ಹಾಗೂ ವ್ಯಾಪಾರ ವಹಿವಾಟಿಗೆ ಹೆಚ್ಚಿನ ಅನುಕೂಲವಾಗಲಿದೆ.”

– ವಿಶ್ವನಾಥ ಖಾನಾಪೂರ