ಮುಂಬೈ: ಕಿರುತೆರೆ ನಟಿ ಸಂಚಿತಾ ಉಗಾಳೆ ಆತ್ಮಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಗಳು ಹೊರಬರುತ್ತಿವೆ. ಜೂನ್ 14ರಂದು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ನಟಿಯ ಸಾವಿನ ಹಿಂದೆ ಮಾನಸಿಕ ಕಿರುಕುಳ ಮತ್ತು ಹಣಕ್ಕಾಗಿ ಒತ್ತಡ ಹೇರಲಾಗುತ್ತಿತ್ತು ಎಂಬ ಗಂಭೀರ ಆರೋಪವನ್ನು ಅವರ ತಂದೆ ಮಚ್ಚೀಂದ್ರ ಉಗಾಳೆ ಮಾಡಿದ್ದಾರೆ.
ಸಂಚಿತಾ ಕಳೆದ ಕೆಲವು ತಿಂಗಳುಗಳಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಿರುವ ಅವರು, “ಹೊರಗೆ ಎಲ್ಲರೊಂದಿಗೆ ನಗುಮುಖದಿಂದ ವರ್ತಿಸುತ್ತಿದ್ದಳು. ಆದರೆ ಒಳಗೊಳಗೆ ಭಾರೀ ನೋವು ಅನುಭವಿಸುತ್ತಿದ್ದಳು. ಕೆಲವೊಮ್ಮೆ ಏಕಾಏಕಿ ಖಿನ್ನತೆಗೆ ಜಾರುತ್ತಿದ್ದಳು” ಎಂದು ತಿಳಿಸಿದ್ದಾರೆ.
ಕುಟುಂಬದವರು ಆಕೆಯ ಮಾನಸಿಕ ಸ್ಥಿತಿಯನ್ನು ಗಮನಿಸಿ ಸದಾ ಜೊತೆಗೇ ಇರುತ್ತಿದ್ದರು. “ನಾವು ಆಕೆಯನ್ನು ಒಬ್ಬಳೇ ಬಿಡುತ್ತಿರಲಿಲ್ಲ. ಆದರೆ ಘಟನೆ ನಡೆದ ದಿನ ಕೇವಲ ಅರ್ಧ ಗಂಟೆ ಮಾತ್ರ ಆಕೆ ಒಂಟಿಯಾಗಿದ್ದಳು. ಆ ಸಮಯದಲ್ಲೇ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂದು ಊಹಿಸಿರಲಿಲ್ಲ” ಎಂದು ತಂದೆ ಕಣ್ಣೀರಿಟ್ಟಿದ್ದಾರೆ.
ಇದೇ ವೇಳೆ, ಯಾರೋ ವ್ಯಕ್ತಿ ಸಂಚಿತಾಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. “ಹಣದ ಬೇಡಿಕೆ, ಒತ್ತಡ ಮತ್ತು ಮಾನಸಿಕ ಹಿಂಸೆ ನಿರಂತರವಾಗಿತ್ತು. ಆಕೆ ಎಲ್ಲವನ್ನೂ ಮನಸ್ಸಿನಲ್ಲೇ ಇಟ್ಟುಕೊಂಡು ನೋವು ಅನುಭವಿಸುತ್ತಿದ್ದಳು. ಈ ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕು” ಎಂದು ಹೇಳಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಮೃತದೇಹ ಒಳಗಡೆಯಿಂದ ಲಾಕ್ ಮಾಡಲಾಗಿದ್ದ ಕೋಣೆಯಲ್ಲಿ ಪತ್ತೆಯಾಗಿತ್ತು. ಸದ್ಯ ಪೊಲೀಸರು ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದು, ಸಾವಿನ ಹಿಂದಿನ ನಿಜವಾದ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.



