ಗದಗ: ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ಚಿನ್ನ–ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಫೆಬ್ರವರಿ 17ರ ರಾತ್ರಿ 11.45ರಿಂದ 18ರ ಬೆಳಗ್ಗೆ 6.30ರ ನಡುವೆ ಟಗರಗಲ್ಲಿಯಲ್ಲಿರುವ ದೂರುದಾರರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.30/2026, ಕಲಂ 331(3), 331(4), 305 BNS-2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರ ಮಾರ್ಗದರ್ಶನದಲ್ಲಿ, ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭುಗೌಡ ಪಾಟೀಲ ಹಾಗೂ ಸಿಪಿಐ ವಿಜಯಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪಿಎಸ್ಐ ಪ್ರಕಾಶ ಡಿ ಹಾಗೂ ತಾಂತ್ರಿಕ, ಫಿಂಗರ್ಪ್ರಿಂಟ್ ತಂಡದ ಸಹಕಾರದಿಂದ ತನಿಖೆ ಮುಂದುವರಿಸಲಾಯಿತು.
ಫೆಬ್ರವರಿ 23ರಂದು ಕುಷ್ಟಗಿ ರಾಷ್ಟ್ರೀಯ ಹೆದ್ದಾರಿ ಬ್ರಿಜ್ ಹತ್ತಿರ ಪ್ರಮುಖ ಆರೋಪಿ ನಾಗರಾಜ ದೇವರಮನಿ (45) ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಳ್ಳತನ ಒಪ್ಪಿಕೊಂಡಿದ್ದಾನೆ. ಆತನ ಹೇಳಿಕೆಯ ಮೇರೆಗೆ ಶಿವಮ್ಮ ದೇವರಮನಿ (38) ಮತ್ತು ಬಸಮ್ಮ ಎರಿಬಗೇರಿ (40) ಅವರನ್ನು ದೇವದುರ್ಗ ತಾಲೂಕಿನ ಗಲಗ ಗ್ರಾಮದಲ್ಲಿ ಬಂಧಿಸಲಾಗಿದೆ.
ಆರೋಪಿಗಳಿಂದ 78 ಗ್ರಾಂ 730 ಮಿಲಿ ಚಿನ್ನ (₹3,93,650) ಮತ್ತು 711.47 ಗ್ರಾಂ ಬೆಳ್ಳಿ (₹56,918) ಸೇರಿ ಒಟ್ಟು ₹4,50,568 ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್ಪಿ ರೋಹನ್ ಜಗದೀಶ ಪ್ರಶಂಸಿಸಿದ್ದಾರೆ.

