Home Blog

ಅಂಗಡಿಗೆ ಬೆಂಕಿ ಹೊತ್ತಿಕೊಂಡ ಆಘಾತ; ಬೆಂಕಿ ಆರಿಸಿದ ಕೆಲವೇ ಕ್ಷಣಗಳಲ್ಲಿ ಮಿಲ್ಕ್ ಪಾರ್ಲರ್ ಮಾಲೀಕ ಹೃದಯಾಘಾತಕ್ಕೆ ಬಲಿ

ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪದ ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದ ಬಳಿಕ ಹೃದಯವಿದ್ರಾವಕ ಘಟನೆ ನಡೆದಿದೆ. ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಸ್ಥಳೀಯರ ನೆರವಿನಿಂದ ನಂದಿಸಿದ ಮಾಲೀಕ ವೆಂಕಟೇಶ್ (55) ಅವರು ತೀವ್ರ ಮಾನಸಿಕ ಆಘಾತದಿಂದ ಹೃದಯಾಘಾತಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಣಜೇನಹಳ್ಳಿ ನಿವಾಸಿಯಾಗಿದ್ದ ವೆಂಕಟೇಶ್ ಹಲವು ವರ್ಷಗಳಿಂದ ನಂದಿನಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದರು. ಸೋಮವಾರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಮಾಹಿತಿ ತಿಳಿಯುತ್ತಿದ್ದಂತೆ ಅವರು ತಕ್ಷಣ ಸ್ಥಳಕ್ಕೆ ಧಾವಿಸಿದ್ದರು. ಸ್ಥಳೀಯರೊಂದಿಗೆ ಸೇರಿ ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತಂದಿದ್ದರು.

ಆದರೆ ಬೆಂಕಿ ಆರಿಸಿದ ಕೆಲವೇ ಕ್ಷಣಗಳಲ್ಲಿ ಅಂಗಡಿ ಎದುರೇ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರೂ, ವೈದ್ಯರು ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಘಟನೆಯಿಂದ ಕುಟುಂಬಸ್ಥರು ಹಾಗೂ ಸ್ಥಳೀಯರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಮಿಲ್ಕ್ ಪಾರ್ಲರ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಅಗ್ನಿ ಅವಘಡದ ಮೂಲವನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.

ಸ್ನೇಹಿತನ ಪತ್ನಿ ಜೊತೆ ಪರಾರಿಯಾದ ಯುವಕ: ಮನೆ ಮೇಲೆ 200 ಮಂದಿಯ ಅಟ್ಟಹಾಸ, ಕುರಿ-ಚಿನ್ನ ದೋಚಿ ಪರಾರಿ

0

ಬೆಳಗಾವಿ: ಜಿಲ್ಲೆಯ ಯಮಕನಮರಡಿ ಕ್ಷೇತ್ರದ ಭರಮ್ಯಾನಟ್ಟಿ ಗ್ರಾಮದಲ್ಲಿ ವೈಯಕ್ತಿಕ ವಿಚಾರವೊಂದು ಸಾಮೂಹಿಕ ಹಿಂಸಾಚಾರಕ್ಕೆ ತಿರುಗಿದೆ. ವಿವಾಹಿತೆ ನಾಗವ್ವ ಯುವಕ ಯಲ್ಲಪ್ಪನೊಂದಿಗೆ ಪರಾರಿಯಾಗಿದ್ದ ಘಟನೆಗೆ ಆಕ್ರೋಶಗೊಂಡ ಮಹಿಳೆಯ ಪೋಷಕರು ಹಾಗೂ ಪತಿಯ ಸಂಬಂಧಿಕರು ಸೇರಿ ಸುಮಾರು 200ಕ್ಕೂ ಅಧಿಕ ಮಂದಿ ಯಲ್ಲಪ್ಪನ ಮನೆ ಮೇಲೆ ದಾಳಿ ನಡೆಸಿ ಭೀಕರ ದಾಂಧಲೆ ನಡೆಸಿದ್ದಾರೆ.

ನಾಗವ್ವ ಕಳೆದ ವರ್ಷ ಬಸಪ್ಪ ನಾಯಕ ಅವರನ್ನು ವಿವಾಹವಾಗಿದ್ದರು. ಬಸಪ್ಪ ಹಾಗೂ ಯಲ್ಲಪ್ಪ ಆತ್ಮೀಯ ಸ್ನೇಹಿತರಾಗಿದ್ದು, ಇಬ್ಬರೂ ನಾಗವ್ವ ಜೊತೆಗೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಯಲ್ಲಪ್ಪ ಮತ್ತು ನಾಗವ್ವ ನಡುವೆ ಸಲುಗೆ ಬೆಳೆದು, ಇಬ್ಬರೂ ಮನೆ ಬಿಟ್ಟು ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಯ ಬೆನ್ನಲ್ಲೇ ಶಸ್ತ್ರಾಸ್ತ್ರಗಳನ್ನು ಹಿಡಿದು ಬಂದ ದುಷ್ಕರ್ಮಿಗಳ ಗುಂಪು ಯಲ್ಲಪ್ಪನ ಮನೆಗೆ ನುಗ್ಗಿ ಮನೆಯ ಹಂಚು, ಗೋಡೆ, ಪೀಠೋಪಕರಣಗಳು, ಟಿವಿ, ಅಲ್ಮಾರಿ ಸೇರಿದಂತೆ ಎಲ್ಲ ವಸ್ತುಗಳನ್ನು ಧ್ವಂಸಗೊಳಿಸಿದೆ. ಯಲ್ಲಪ್ಪನ ಪೋಷಕರು ಸೇರಿದಂತೆ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲು ಯತ್ನಿಸಿದ್ದರೂ, ಅವರು ಪರಾರಿಯಾಗಿದ್ದರಿಂದ ಪ್ರಾಣಾಪಾಯ ತಪ್ಪಿದೆ.

ದಾಳಿಕೋರರು ಮನೆಯಿಂದ ಚಿನ್ನಾಭರಣ, ನಗದು ಹಣ ದೋಚಿಕೊಂಡು, ಕೊಟ್ಟಿಗೆಯಲ್ಲಿದ್ದ 25 ಕುರಿಗಳನ್ನೂ ಕೊಂಡೊಯ್ದಿರುವ ಆರೋಪ ಕೇಳಿಬಂದಿದೆ.

ಪ್ರಕರಣದ ಬಳಿಕ ಸಂತ್ರಸ್ತ ಕುಟುಂಬ ಬೆಳಗಾವಿ ಪೊಲೀಸ್ ಕಮಿಷನರ್ ಅವರನ್ನು ಸಂಪರ್ಕಿಸಿ, ದಾಳಿಯಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಮನವಿ ಮಾಡಿದೆ. ಪ್ರಕರಣದ ಕುರಿತು ಪೊಲೀಸ್ ತನಿಖೆ ಮುಂದುವರಿದಿದೆ.

ತುಮಕೂರಿನಲ್ಲಿ ಕಾರು ಸ್ಫೋಟ ಪ್ರಕರಣಕ್ಕೆ ಟ್ವಿಸ್ಟ್! ಪಾಗಲ್ ಪ್ರೇಮಿ ನಾಗೇಂದ್ರನಿಗೆ ನಾಡಬಾಂಬ್ ನೀಡಿದ ಶಂಕೆ, ಮೂವರು ಅರೆಸ್ಟ್

ಕಾರವಾರ: ತುಮಕೂರಿನಲ್ಲಿ ನಾಡಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ ನಾಗೇಂದ್ರ ಪ್ರಕರಣಕ್ಕೆ ಸಂಬಂಧಿಸಿ ಅಂಕೋಲ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.

ಈ ಪ್ರಕರಣದಲ್ಲಿ ಇದುವರೆಗೆ 60ಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಲಾಗಿದೆ.

ವಿಚಾರಣೆ ವೇಳೆ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಹೊನ್ನಾವರದ ಚಂದಾವರ ಮೂಲದ ಒಬ್ಬ ಹಾಗೂ ಸರಳೆಬೈಲಿನ ಇಬ್ಬರು ಶಂಕಿತರು ಸೇರಿದ್ದಾರೆ. ನಾಗೇಂದ್ರನಿಗೆ ನಾಡಬಾಂಬ್ ತಯಾರಿಸಿ ನೀಡಿರುವ ಶಂಕೆಯ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಸ್ನೇಹಿತರು ಹಾಗೂ ಸಂಬಂಧಿಗಳ ವಿಚಾರಣೆ ವೇಳೆ, ನಾಗೇಂದ್ರ ನಾಡಬಾಂಬ್ ಖರೀದಿಸಿದ್ದನ್ನು ದೃಢಪಡಿಸಿರುವ ಮಾಹಿತಿ ಲಭ್ಯವಾಗಿದೆ. ಖರೀದಿ ಸಂದರ್ಭದಲ್ಲಿ ಆತ ಮೊಬೈಲ್ ಬಳಸದೆಯೇ ನೇರವಾಗಿ ಭೇಟಿಯಾಗಿ ವ್ಯವಹಾರ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ಅಂಕೋಲ ಠಾಣೆ ಪೊಲೀಸರು ಹಾಗೂ ತುಮಕೂರು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ತನಿಖೆ ಮುಂದುವರಿದಿದೆ.

ಕರ್ನಾಟಕದಲ್ಲಿ ಇಂದಿನಿಂದ SIR: ಮತದಾರರ ಬಳಿ ಬಿಎಲ್ಓಗಳು ಕೇಳುವ ದಾಖಲೆಗಳೇನು? ಇಲ್ಲಿದೆ ಮಾಹಿತಿ!

ಬೆಂಗಳೂರು: ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಇಂದಿನಿಂದ ಒಂದು ತಿಂಗಳ ಕಾಲ ಆರಂಭವಾಗಿದೆ.

ಈಗಾಗಲೇ ಮತದಾರರ ಮ್ಯಾಪಿಂಗ್ ಕಾರ್ಯ ಮುಕ್ತಾಯವಾಗಿದ್ದು, ಬೂತ್ ಮಟ್ಟದ ಅಧಿಕಾರಿಗಳು (BLO) ಮನೆಮನೆಗೆ ಭೇಟಿ ನೀಡಿ ಪರಿಶೀಲನಾ ಕಾರ್ಯವನ್ನು ಕೈಗೊಳ್ಳಲಿದ್ದಾರೆ.

ಕರ್ನಾಟಕದಲ್ಲಿ ಒಟ್ಟು 5,54,32,314 ಮತದಾರರ ಪೈಕಿ 5,07,79,810 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, ಶೇಕಡಾ 91.61ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನೂ 46,52,504 ಮತದಾರರ ಮ್ಯಾಪಿಂಗ್ ಬಾಕಿ ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಭಿಯಾನದ ಮೂಲಕ ನಕಲಿ, ಅನರ್ಹ ಹಾಗೂ ಅಕ್ರಮ ಮತದಾರರ ಹೆಸರುಗಳನ್ನು ಪತ್ತೆಹಚ್ಚಿ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಜೊತೆಗೆ ಮತದಾರರ ಹೆಸರು ಪರಿಶೀಲನೆ, ತಿದ್ದುಪಡಿ, ಹೊಸ ಹೆಸರು ಸೇರ್ಪಡೆ ಹಾಗೂ ಮೃತ ಅಥವಾ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವ ಕಾರ್ಯವೂ ನಡೆಯಲಿದೆ.

ಬಿಎಲ್‌ಓಗಳು ಮನೆಗಳಿಗೆ ಭೇಟಿ ನೀಡಿ ಎಸ್‌ಐಆರ್ ಅರ್ಜಿಗಳನ್ನು ವಿತರಿಸಲಿದ್ದು, ಮತದಾರರು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಸಹಿ ಹಾಕಬೇಕು. ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಪ್ರಮುಖ ದಿನಾಂಕಗಳು:

  • ಜುಲೈ 29ರವರೆಗೆ: ಮನೆಮನೆ ಭೇಟಿ ಮತ್ತು ಮಾಹಿತಿ ಸಂಗ್ರಹ
  • ಜುಲೈ 29ರೊಳಗೆ: ಮತಗಟ್ಟೆಗಳ ಮರುಹೊಂದಾಣಿಕೆ
  • ಆಗಸ್ಟ್ 5: ಕರಡು ಮತದಾರರ ಪಟ್ಟಿ ಪ್ರಕಟ
  • ಆಗಸ್ಟ್ 5–ಸೆಪ್ಟೆಂಬರ್ 4: ಆಕ್ಷೇಪಣೆ ಸಲ್ಲಿಕೆ ಅವಕಾಶ
  • ಆಗಸ್ಟ್ 5–ಅಕ್ಟೋಬರ್ 3: ಹಕ್ಕು ಮತ್ತು ಆಕ್ಷೇಪಣೆ ವಿಲೇವಾರಿ
  • ಅಕ್ಟೋಬರ್ 10: ಅಂತಿಮ ಮತದಾರರ ಪಟ್ಟಿ ಪ್ರಕಟ
  • ಅಗತ್ಯ ದಾಖಲೆಗಳು:

ಮತದಾರರು ತಮ್ಮ ಕುಟುಂಬ ಸದಸ್ಯರ ಗುರುತಿನ ಚೀಟಿ, ವೋಟರ್ ಐಡಿ, ಆಧಾರ್ ಕಾರ್ಡ್, ವಿಳಾಸ ದೃಢೀಕರಣ ಪತ್ರ ಹಾಗೂ ಪಾಸ್‌ಪೋರ್ಟ್ ಅಳತೆಯ ಫೋಟೋವನ್ನು ಸಿದ್ಧವಾಗಿಟ್ಟುಕೊಳ್ಳಬೇಕೆಂದು ಸೂಚಿಸಲಾಗಿದೆ.

ಮತದಾರರ ಹಕ್ಕು ಕಾಪಾಡಲು ಈ ಅಭಿಯಾನದಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಚುನಾವಣಾ ಆಯೋಗ ಮನವಿ ಮಾಡಿದೆ.

ಪುಟ್ಟರಾಜ ಗವಾಯಿಗಳ ಮಠದ ಆಡಳಿತ ತನಿಖೆಯಾಗಲಿ: ಅನಿಲ ಮೆಣಸಿನಕಾಯಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದ ಹೆಮ್ಮೆಯ ಆಧ್ಯಾತ್ಮಿಕ ಹಾಗೂ ಸಂಗೀತ ಪರಂಪರೆಯ ಪ್ರತೀಕವಾಗಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮ ಹಾಗೂ ಪುಟ್ಟರಾಜ ಗವಾಯಿಗಳ ಮಠದ ಆಡಳಿತ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಮೂಡಿರುವ ಅನುಮಾನಗಳನ್ನು ನಿವಾರಿಸಲು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅನಿಲ ಮೆಣಸಿನಕಾಯಿ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಡವರು, ಅನಾಥರು ಹಾಗೂ ವಿಶೇಷವಾಗಿ ದೃಷ್ಟಿಹೀನರಿಗೆ ಉಚಿತ ಶಿಕ್ಷಣ, ವಸತಿ ಮತ್ತು ಸಂಗೀತ ಶಿಕ್ಷಣ ನೀಡುವ ಮೂಲಕ ಮಠವು ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದೆ. ಇಂತಹ ಪವಿತ್ರ ಸಂಸ್ಥೆಯ ಘನತೆ ಮತ್ತು ಭಕ್ತರ ನಂಬಿಕೆಗೆ ಯಾವುದೇ ಧಕ್ಕೆಯಾಗಬಾರದು ಎಂದು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಠದ ಆಡಳಿತ, ಆರ್ಥಿಕ ವ್ಯವಹಾರಗಳು ಹಾಗೂ ಆಸ್ತಿಗಳ ನಿರ್ವಹಣೆ ಕುರಿತಂತೆ ವಿವಿಧ ರೀತಿಯ ಚರ್ಚೆಗಳು ಮತ್ತು ಅನುಮಾನಗಳು ವ್ಯಕ್ತವಾಗುತ್ತಿದ್ದು, ಇದರಿಂದ ಭಕ್ತರಲ್ಲಿ ಆತಂಕ ಮೂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಠದ ಆಡಳಿತ, ಆರ್ಥಿಕ ವ್ಯವಹಾರಗಳು ಹಾಗೂ ಆಸ್ತಿ ನಿರ್ವಹಣೆ ಕುರಿತು ಸಮಗ್ರ ತನಿಖೆ ನಡೆಸಬೇಕು. ಅಗತ್ಯವಿದ್ದಲ್ಲಿ ಸಂಬಂಧಿತ ತನಿಖಾ ಸಂಸ್ಥೆಗಳ ಮೂಲಕ ಪರಿಶೀಲನೆ ನಡೆಸಿ, ಸತ್ಯಾಂಶವನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಒತ್ತಾಯಿಸಿದ್ದಾರೆ.

ಮಠದ ಮೂಲ ಉದ್ದೇಶಗಳಾದ ಶಿಕ್ಷಣ, ಅನ್ನದಾಸೋಹ, ಸಂಗೀತ ಸೇವೆ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಜೊತೆಗೆ ಮಠದ ಗೌರವ, ಪರಂಪರೆ ಹಾಗೂ ಭಕ್ತರ ನಂಬಿಕೆಯನ್ನು ಉಳಿಸುವ ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಯಾಗಬೇಕು ಎಂದು ತಿಳಿಸಿದ್ದಾರೆ.

ತಪ್ಪುಗಳು ಕಂಡುಬಂದರೆ ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾವುದೇ ಅಕ್ರಮ ಕಂಡುಬರದಿದ್ದರೆ ಸಾರ್ವಜನಿಕರಲ್ಲಿ ಸ್ಪಷ್ಟತೆ ಮೂಡಿಸುವ ಅಧಿಕೃತ ವರದಿಯನ್ನು ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

“ಇದು ಯಾವುದೇ ವ್ಯಕ್ತಿ ಅಥವಾ ಸಮುದಾಯದ ವಿರುದ್ಧದ ಆರೋಪವಲ್ಲ. ಪುಟ್ಟರಾಜ ಗವಾಯಿಗಳ ಆದರ್ಶ, ಮಠದ ಪಾವಿತ್ರ್ಯ ಮತ್ತು ಲಕ್ಷಾಂತರ ಭಕ್ತರ ನಂಬಿಕೆಯನ್ನು ಉಳಿಸುವ ಉದ್ದೇಶದಿಂದ ಪಾರದರ್ಶಕ ತನಿಖೆಗೆ ಆಗ್ರಹಿಸುತ್ತಿದ್ದೇವೆ.”

– ಅನಿಲ ಮೆಣಸಿನಕಾಯಿ

ವೀರೇಶ್ವರ ಪುಣ್ಯಾಶ್ರಮದ ಅವ್ಯವಹಾರ ಆರೋಪ: ಸಮಗ್ರ ತನಿಖೆಗೆ ಹಿಂದೂ ಸಂಘಟನೆಗಳ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ನಾಡಿನ ಹೆಮ್ಮೆಯ ಆಧ್ಯಾತ್ಮಿಕ ಹಾಗೂ ಸಂಗೀತ ಪರಂಪರೆಯ ಪ್ರತೀಕವಾಗಿರುವ ವೀರೇಶ್ವರ ಪುಣ್ಯಾಶ್ರಮದಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆದಿರುವುದಾಗಿ ಆರೋಪಿಸಲಾಗುತ್ತಿರುವ ಆಡಳಿತಾತ್ಮಕ ಹಾಗೂ ಹಣಕಾಸು ಅವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಆಶ್ರಮವನ್ನು ಸರ್ಕಾರದ ವಶಕ್ಕೆ ಪಡೆದು ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳ ಹೋರಾಟಗಾರ ರಾಜು ಖಾನಪ್ಪನವರ ನೇತೃತ್ವದಲ್ಲಿ ಸೋಮವಾರ ನೂರಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.

ನಾಡಿನ ಹೆಮ್ಮೆಯ ಆಧ್ಯಾತ್ಮಿಕ ಹಾಗೂ ಸಂಗೀತ ಪರಂಪರೆಯ ಪ್ರತೀಕವಾಗಿರುವ ವೀರೇಶ್ವರ ಪುಣ್ಯಾಶ್ರಮದಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆದಿರುವುದಾಗಿ ಆರೋಪಿಸಲಾಗುತ್ತಿರುವ ಆಡಳಿತಾತ್ಮಕ ಹಾಗೂ ಹಣಕಾಸು ಅವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಆಶ್ರಮವನ್ನು ಸರ್ಕಾರದ ವಶಕ್ಕೆ ಪಡೆದು ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳ ಹೋರಾಟಗಾರ ರಾಜು ಖಾನಪ್ಪನವರ ನೇತೃತ್ವದಲ್ಲಿ ಸೋಮವಾರ ನೂರಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ರಾಜು ಖಾನಪ್ಪನವರ, ಲಿಂ. ಪಂಚಾಕ್ಷರ ಗವಾಯಿಗಳು ಹಾಗೂ ಲಿಂ. ಪಂ. ಪುಟ್ಟರಾಜ ಕವಿ ಗವಾಯಿಗಳು ಕಟ್ಟಿ ಬೆಳೆಸಿದ ವೀರೇಶ್ವರ ಪುಣ್ಯಾಶ್ರಮವು ಸಾವಿರಾರು ಅಂಧ ಹಾಗೂ ಅನಾಥ ಮಕ್ಕಳಿಗೆ ಶಿಕ್ಷಣ, ಸಂಗೀತ ಮತ್ತು ಆಶ್ರಯ ನೀಡುವ ಮೂಲಕ ಅಪಾರ ಸೇವೆ ಸಲ್ಲಿಸಿದೆ. ಇಂತಹ ಪವಿತ್ರ ಸಂಸ್ಥೆಯಲ್ಲಿ ನಡೆಯುತ್ತಿರುವುದಾಗಿ ಹೇಳಲಾಗುತ್ತಿರುವ ಬೆಳವಣಿಗೆಗಳು ಭಕ್ತರಲ್ಲಿ ಆತಂಕ ಮೂಡಿಸಿವೆ ಎಂದು ಹೇಳಿದರು.

ಆಶ್ರಮಕ್ಕೆ ನಾಡಿನ ಮೂಲೆಮೂಲೆಗಳಿಂದ ಭಕ್ತರು ಹಣ, ದವಸ-ಧಾನ್ಯ ಹಾಗೂ ಇತರೆ ದೇಣಿಗೆಗಳನ್ನು ನೀಡುತ್ತಿದ್ದಾರೆ. ಆದರೆ ಈ ಸಂಪನ್ಮೂಲಗಳ ಬಳಕೆ ಕುರಿತು ಪಾರದರ್ಶಕತೆ ಇರಬೇಕೆಂಬುದು ಭಕ್ತರ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಆಶ್ರಮದ ಆಡಳಿತ, ಹಣಕಾಸು ವ್ಯವಹಾರಗಳು ಹಾಗೂ ಆಸ್ತಿ ನಿರ್ವಹಣೆ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಆಶ್ರಮಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈ ಕುರಿತು ಸರ್ಕಾರ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ರಥದ ಗಾಲಿಗಳ ಮೇಲೆ ದೇಣಿಗೆದಾರರ ಹೆಸರನ್ನು ಕೆತ್ತಿಸಿರುವ ವಿಚಾರವೂ ಭಕ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಅದನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಆಶ್ರಮದಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ಸರ್ಕಾರ ತಕ್ಷಣ ಆಡಳಿತಾಧಿಕಾರಿಯನ್ನು ನೇಮಿಸಿ, ಆಶ್ರಮದ ಮೂಲ ಉದ್ದೇಶಗಳಾದ ಶಿಕ್ಷಣ, ಸಂಗೀತ ಸೇವೆ ಹಾಗೂ ಅನ್ನದಾಸೋಹಕ್ಕೆ ಯಾವುದೇ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ವಿಷಯವನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಹೇಶ ರೋಖಡೆ, ಅರುಣ್ ಬಾವಿ, ಶಿವಯೋಗಿ ಹಿರೇಮಠ, ಮಹಾಬಲೇಶ್ವರ ಶೆಟ್ಟರ್, ಪಿ.ಎಸ್. ಕಾಳೆ, ಸತೀಶ್ ಕುಂಬಾರ, ಅಶೋಕ್ ಬಜಂತ್ರಿ, ವೆಂಕಟೇಶ್ ದೊಡ್ಡಮನಿ, ಕುಮಾರ್ ನಡಗೇರಿ, ಕುಮಾರ ಮಿಟ್ಟಿಮಠ, ಈರಪ್ಪ ಹೆಬಸೂರು, ಈರಣ್ಣ ಪೂಜಾರ, ಭರತ ಲದ್ದಿ, ಸಿದ್ದಪ್ಪ ಯಳವತ್ತಿ, ಪ್ರವೀಣ್ ಕರಬಷ್ಟಿ, ಬಸನಗೌಡ ಪೊಲೀಸ್ ಪಾಟೀಲ್, ಹುಲುಗಪ್ಪ ವಾಲ್ಮೀಕಿ, ಸದಾನಂದ್ ಸಿಂಗ್ ಗುರ್ಲಸೂರ್, ಈರಣ್ಣ ಗಾಣಿಗೇರ, ದತ್ತು ವಿಠ್ಠಲಕರ, ಸಂಜು ಚಟ್ಟಿ, ವಿಶಾಲ್ ಗೋಕಾವಿ ಹಾಗೂ ವಿಶ್ವನಾಥ್ ಸಿರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ವೀರೇಶ್ವರ ಪುಣ್ಯಾಶ್ರಮದ ಬಗ್ಗೆ ನಮಗೆ ಅಪಾರ ಗೌರವವಿದೆ. ನಮ್ಮ ಹೋರಾಟ ಆಶ್ರಮದ ವಿರುದ್ಧವಲ್ಲ, ಆಶ್ರಮದಲ್ಲಿ ನಡೆಯುತ್ತಿರುವುದಾಗಿ ಆರೋಪಿಸಲಾಗುತ್ತಿರುವ ಅಧಿಕಾರ ದುರ್ಬಳಕೆ ಹಾಗೂ ಅನಧಿಕೃತ ಹಸ್ತಕ್ಷೇಪದ ವಿರುದ್ಧವಾಗಿದೆ.”

– ರಾಜು ಖಾನಪ್ಪನವರ, ಹಿಂದೂ ಸಂಘಟನೆಗಳ ಹೋರಾಟಗಾರ

“ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆದಿರುವ ಎಲ್ಲ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಯಬೇಕು. ಆಶ್ರಮದಲ್ಲಿ ಉಂಟಾಗಿರುವ ಗೊಂದಲವನ್ನು ಹಿರಿಯ ಯತಿಗಳು ಮಧ್ಯಪ್ರವೇಶಿಸಿ ಶಾಂತಿಯುತವಾಗಿ ಬಗೆಹರಿಸಬೇಕು.”

– ಮಗಚ ಡಾ. ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ, ಕದಾಂಪೂರ

ಮಳೆ ಕೊರತೆಯಿಂದ ರೈತರ ಸಂಕಷ್ಟ: ಶಿರಹಟ್ಟಿ ಬರಪೀಡಿತ ಘೋಷಣೆಗೆ ಬಿಜೆಪಿ ಆಗ್ರಹ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸಮರ್ಪಕ ಮಳೆಯ ಕೊರತೆಯಿಂದ ಬಿತ್ತನೆ ಮಾಡಿದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಶಿರಹಟ್ಟಿ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಬಿಜೆಪಿ ಮುಖಂಡರಾದ ಶಿವಪ್ರಕಾಶ ಮಹಾಜನಶೆಟ್ಟರ ಹಾಗೂ ವಿಶ್ವನಾಥ ಕಪ್ಪತ್ತನವರ ಆಗ್ರಹಿಸಿದರು.

ಸಮರ್ಪಕ ಮಳೆಯ ಕೊರತೆಯಿಂದ ಬಿತ್ತನೆ ಮಾಡಿದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಶಿರಹಟ್ಟಿ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಬಿಜೆಪಿ ಮುಖಂಡರಾದ ಶಿವಪ್ರಕಾಶ ಮಹಾಜನಶೆಟ್ಟರ ಹಾಗೂ ವಿಶ್ವನಾಥ ಕಪ್ಪತ್ತನವರ ಆಗ್ರಹಿಸಿದರು.

ಸೋಮವಾರ ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಸುಮಾರು 30ರಿಂದ 35 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಈಗಾಗಲೇ ಬಹುತೇಕ ರೈತರು ಬಿತ್ತನೆ ಪೂರ್ಣಗೊಳಿಸಿದ್ದಾರೆ. ಆದರೆ ಕಳೆದ ಒಂದು ತಿಂಗಳಿಂದ ಸಮರ್ಪಕ ಮಳೆಯಾಗದ ಕಾರಣ ಬೆಳೆ ಉಳಿಯುವ ಬಗ್ಗೆ ರೈತರು ಆತಂಕದಲ್ಲಿದ್ದಾರೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಕೂಡ ಶಿರಹಟ್ಟಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂದು ಅವರು ತಿಳಿಸಿದರು.

ರೈತರಿಗೆ ಎಫ್‌ಐಡಿ ಆಧಾರದಲ್ಲಿ ಮಾತ್ರ ಗೊಬ್ಬರ ವಿತರಿಸುತ್ತಿರುವುದರಿಂದ ಅನೇಕ ತೊಂದರೆಗಳು ಉಂಟಾಗುತ್ತಿವೆ. ಬಿತ್ತನೆಗೆ ಅನುಗುಣವಾಗಿ ಸಮರ್ಪಕ ಗೊಬ್ಬರ ಪೂರೈಕೆ ಮಾಡಬೇಕು. ಕೃಷಿ ಇಲಾಖೆಯ ಅಧಿಕಾರಿಗಳು ಬೆಳೆ ವಿಮೆ ಕುರಿತು ರೈತರಿಗೆ ಸಮರ್ಪಕ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡರ, ತಿಪ್ಪಣ್ಣ ಕೊಂಚಿಗೇರಿ, ಸಂದೀಪ ಕಪ್ಪತ್ತನವರ, ನಿಂಬಣ್ಣ ಮಡಿವಾಳರ, ರಮೇಶ ಭರಮಗೌಡ್ರ, ಚನ್ನವೀರಪ್ಪ ಹೂಗಾರ, ಮಹೇಶ ಮತ್ತೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಮೆ ಕಟ್ಟಿದ ರೈತರಿಗೆ ಪರಿಹಾರವೇ ಮರೀಚಿಕೆ..!

0

ವಿಜಯಸಾಕ್ಷಿ ಸುದ್ದಿ, ಡಂಬಳ: ಗದಗ ಜಿಲ್ಲೆಯಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆ ಮಾಡಿಸಿದ ಸಾವಿರಾರು ರೈತರಿಗೆ ಮಧ್ಯಂತರ ಪರಿಹಾರ ದೊರೆಯದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರ್ಹರಾಗಿದ್ದರೂ 22 ಸಾವಿರಕ್ಕೂ ಹೆಚ್ಚು ರೈತರಿಗೆ ಪರಿಹಾರ ನೀಡದಿರುವುದು ಸರ್ಕಾರ ಹಾಗೂ ವಿಮಾ ಕಂಪನಿಗಳ ನಿರ್ಲಕ್ಷ್ಯ ಎಂದು ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘ ಆರೋಪಿಸಿದೆ.

ಗದಗ ಜಿಲ್ಲೆಯಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆ ಮಾಡಿಸಿದ ಸಾವಿರಾರು ರೈತರಿಗೆ ಮಧ್ಯಂತರ ಪರಿಹಾರ ದೊರೆಯದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರ್ಹರಾಗಿದ್ದರೂ 22 ಸಾವಿರಕ್ಕೂ ಹೆಚ್ಚು ರೈತರಿಗೆ ಪರಿಹಾರ ನೀಡದಿರುವುದು ಸರ್ಕಾರ ಹಾಗೂ ವಿಮಾ ಕಂಪನಿಗಳ ನಿರ್ಲಕ್ಷ್ಯ ಎಂದು ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘ ಆರೋಪಿಸಿದೆ.

ಜಿಲ್ಲೆಯಲ್ಲಿ ಒಟ್ಟು 52,013 ರೈತರು ಬೆಳೆವಿಮೆ ಮಾಡಿಸಿದ್ದು, ಕಳೆದ ವರ್ಷ ವಾಡಿಕೆಗಿಂತ ಅಧಿಕ ಮಳೆಯಾಗಿ ಬೆಳೆ ನಷ್ಟ ಅನುಭವಿಸಿದ್ದಾರೆ. ನಿಯಮಾನುಸಾರ ಟೋಲ್‌ಫ್ರೀ ಸಂಖ್ಯೆಗೆ ದೂರು ಸಲ್ಲಿಸಿದ ರೈತರಿಗೆ ವಿಮಾ ಕಂಪನಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮಧ್ಯಂತರ ಪರಿಹಾರ ನೀಡಬೇಕಾಗಿತ್ತು.

ಸಂಘದ ಪ್ರಕಾರ, 38,177 ರೈತರು ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿದ್ದರು. ಇವರಲ್ಲಿ ಮೊದಲ ಹಂತದಲ್ಲಿ 9,687 ರೈತರಿಗೆ ಹಾಗೂ ಎರಡನೇ ಹಂತದಲ್ಲಿ 3,020 ರೈತರಿಗೆ ಮಾತ್ರ ಪರಿಹಾರ ಜಮೆಯಾಗಿದ್ದು, ಒಟ್ಟು 12,707 ರೈತರಿಗೆ ಮಾತ್ರ ಮಧ್ಯಂತರ ಪರಿಹಾರ ದೊರೆತಿದೆ.

ಇನ್ನೂ 22,356 ರೈತರು ಅರ್ಹರಾಗಿದ್ದರೂ ಪರಿಹಾರದಿಂದ ವಂಚಿತರಾಗಿದ್ದಾರೆ. ಅಲ್ಲದೆ 3,114 ರೈತರ ಜಮೀನುಗಳನ್ನು ಸಮರ್ಪಕ ಪರಿಶೀಲನೆ ನಡೆಸದೇ ‘ಪಾಳು ಭೂಮಿ’ ಎಂದು ನಮೂದಿಸಿ ಪರಿಹಾರವನ್ನು ತಿರಸ್ಕರಿಸಲಾಗಿದೆ ಎಂದು ಆರೋಪಿಸಲಾಗಿದೆ.

ವಿಮೆ ಸಮೀಕ್ಷೆ ವೇಳೆ ಅಧಿಕಾರಿಗಳು ಪ್ರತಿ ಜಮೀನಿನ ಸಮರ್ಪಕ ಪರಿಶೀಲನೆ ನಡೆಸದೆ, ಒಂದೇ ಸರ್ವೇ ನಂಬರ್ ಆಧರಿಸಿ ವರದಿ ಸಲ್ಲಿಸಿದ್ದರಿಂದ ಬೆಳೆ ಬೆಳೆದಿದ್ದ ಜಮೀನುಗಳನ್ನೂ ಪಾಳು ಎಂದು ದಾಖಲಿಸಿ ನೈಜ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ರೈತರು ದೂರಿದ್ದಾರೆ.

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಒಣ ಮೆಣಸಿನಕಾಯಿ ಹಾಗೂ ಗೋವಿನ ಜೋಳ ಬೆಳೆದ ರೈತರಿಗೆ ಪೂರ್ಣ ಪ್ರಮಾಣದ ವಿಮಾ ಪರಿಹಾರ ಇನ್ನೂ ದೊರೆತಿಲ್ಲ. ಅಗತ್ಯ ದಾಖಲೆಗಳನ್ನು ಸಕಾಲಕ್ಕೆ ಸಲ್ಲಿಸಿದ್ದರೂ ವಿಮಾ ಕಂಪನಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆಗೆ ಹಣವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದು, ಕಳೆದ ಸಾಲಿನ ಬೆಳೆವಿಮೆ ಪರಿಹಾರ ಸಿಕ್ಕಿದ್ದರೆ ಅದು ಆಸರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಂಸದರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಅರ್ಹ ರೈತರಿಗೆ ಶೀಘ್ರದಲ್ಲೇ ಬೆಳೆವಿಮೆ ಪರಿಹಾರ ಒದಗಿಸಬೇಕು ಎಂದು ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪಗೌಡ್ರ ಕರಮುಡಿ ಆಗ್ರಹಿಸಿದ್ದಾರೆ.

“ಅರ್ಹ ರೈತರಿಗೆ ಬೆಳೆವಿಮೆ ಪರಿಹಾರ ನೀಡದಿರುವುದು ಅನ್ನದಾತರ ಮೇಲಿನ ಅನ್ಯಾಯ. ಸರ್ಕಾರ ಹಾಗೂ ವಿಮಾ ಕಂಪನಿ ಕೂಡಲೇ ಬಾಕಿ ಇರುವ ಮಧ್ಯಂತರ ಪರಿಹಾರ ಬಿಡುಗಡೆ ಮಾಡಬೇಕು.”

ಯಲ್ಲಪ್ಪಗೌಡ್ರ ಕರಮುಡಿ, ಜಿಲ್ಲಾಧ್ಯಕ್ಷರು, ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘ

ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ತಲುಪಿಸಿ: ಡಾ. ಸಂತೋಷ ಹುಯಿಲಗೋಳ

0

ವಿಜಯಸಾಕ್ಷಿ ಸುದ್ದಿ, ಗದಗ: ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ತಲುಪಿಸುವ ಮೂಲಕ ಪೋಲಿಯೋ ಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ವಿಶೇಷ ಪೋಲಿಯೋ ಲಸಿಕಾ ಅಭಿಯಾನಕ್ಕೆ ಗದಗ ಭಾವಸಾರ ವ್ಹಿಜನ್ ಇಂಡಿಯಾ ಸಂಘಟನೆ ಸಹಕಾರ ನೀಡುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆಯಿತು.

ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ತಲುಪಿಸುವ ಮೂಲಕ ಪೋಲಿಯೋ ಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ವಿಶೇಷ ಪೋಲಿಯೋ ಲಸಿಕಾ ಅಭಿಯಾನಕ್ಕೆ ಗದಗ ಭಾವಸಾರ ವ್ಹಿಜನ್ ಇಂಡಿಯಾ ಸಂಘಟನೆ ಸಹಕಾರ ನೀಡುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆಯಿತು.

ಗದಗ 1ನೇ ವೃತ್ತದ 213ನೇ ಅಂಗನವಾಡಿ ಕೇಂದ್ರದ 13ನೇ ಬೂತ್ ವತಿಯಿಂದ ನಗರದ ಡಾ. ಹುಯಿಲಗೋಳ ಸಿಟಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಡಾ. ಸಂತೋಷ ಹುಯಿಲಗೋಳ ಹಾಗೂ ಶ್ರೀಮತಿ ರೂಪಾ ಹುಯಿಲಗೋಳ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಡಾ. ಸಂತೋಷ ಹುಯಿಲಗೋಳ, ಪೋಲಿಯೋ ರೋಗವು ಮಕ್ಕಳನ್ನು ಶಾಶ್ವತ ಅಂಗವೈಕಲ್ಯಕ್ಕೆ ತಳ್ಳುವ ಅಪಾಯಕಾರಿ ಕಾಯಿಲೆಯಾಗಿದ್ದು, ಲಸಿಕೆಯಿಂದ ಮಾತ್ರ ಅದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯ. ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರೂ, ಪ್ರತಿಯೊಬ್ಬ ಪೋಷಕರು ತಮ್ಮ ಜವಾಬ್ದಾರಿಯನ್ನು ಅರಿತು ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು ಎಂದು ಹೇಳಿದರು.

ಗದಗ ಭಾವಸಾರ ವ್ಹಿಜನ್ ಇಂಡಿಯಾ ಅಧ್ಯಕ್ಷ ಶ್ರೀಪಾದ ವೈಕುಂಠೆ ಮಾತನಾಡಿ, ಸಂಘಟನೆಯು ಆರಂಭದಿಂದಲೂ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತ ಬಂದಿದೆ. ಮಕ್ಕಳ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಪೋಲಿಯೋ ಲಸಿಕಾ ಅಭಿಯಾನಕ್ಕೂ ಸಂಪೂರ್ಣ ಸಹಕಾರ ನೀಡಲಾಗಿದ್ದು, ಸರ್ಕಾರದ ಆರೋಗ್ಯ ಕಾರ್ಯಕ್ರಮಗಳು ಯಶಸ್ವಿಯಾಗಲು ಸ್ವಯಂಸೇವಾ ಸಂಘಟನೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದು ತಿಳಿಸಿದರು.

ಕಾರ್ಯದರ್ಶಿ ಸುಧಾ ವೈಕುಂಠೆ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಮರಿಯಮ್ಮ ಕಡೂರ, ಪವನಕುಮಾರ, ವೀರಣ್ಣ ಬೆಳಮಕರ, ರಾಜೇಂದ್ರ ತ್ರಿಮಲ್ಲೆ, ರಾಜೇಶ್ವರಿ ಸಣ್ಣಕ್ಕಿ, ವಿಜಯಾ ನವಲೆ, ಮಂಜುಳಾ ಜಾಧವ, ಡಾ. ದತ್ತಾತ್ರೇಯ ವೈಕುಂಠೆ, ಲಕ್ಷ್ಮೀ ಬೆಳಮಕರ, ಕಾವ್ಯಾ ದೊಡ್ಡಮನಿ, ರಾಘವೇಂದ್ರ ನವಲೆ, ಮಲ್ಲಮ್ಮ ಪಲ್ಲೇದ ಹಾಗೂ ಮಮತಾಜ್ ಧಾರವಾಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.

170 ಮಕ್ಕಳಿಗೆ ಲಸಿಕೆ

ನಗರದ ವೀರರಾಣಿ ಕಿತ್ತೂರ ಚೆನ್ನಮ್ಮ ಸರ್ಕಲ್ ಹಾಗೂ ಹುಯಿಲಗೋಳ ಆಸ್ಪತ್ರೆ ಸುತ್ತಮುತ್ತಲಿನ ಹಿಂದುಳಿದ ಪ್ರದೇಶಗಳ ಐದು ವರ್ಷದೊಳಗಿನ ಸುಮಾರು 170 ಮಕ್ಕಳಿಗೆ ಭಾನುವಾರ ಸಂಜೆಯವರೆಗೆ ಪೋಲಿಯೋ ಲಸಿಕೆ ನೀಡಲಾಯಿತು. ಆರೋಗ್ಯ ಸಿಬ್ಬಂದಿ ಹಾಗೂ ಸ್ವಯಂಸೇವಕರ ಸಹಕಾರದಿಂದ ಅಭಿಯಾನ ಯಶಸ್ವಿಯಾಗಿ ನಡೆಯಿತು.

“ಪೋಲಿಯೋವನ್ನು ತಡೆಗಟ್ಟಲು ಲಸಿಕೆಯೇ ಅತ್ಯಂತ ಪರಿಣಾಮಕಾರಿ ಅಸ್ತ್ರ. ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು.”

                               ಡಾ. ಸಂತೋಷ ಹುಯಿಲಗೋಳ

ಎಸ್‌.ಎಸ್‌.ಕೆ. ತರುಣ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಇತ್ತೀಚೆಗೆ ನಡೆದ ಎಸ್‌.ಎಸ್‌.ಕೆ. ತರುಣ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಇತ್ತೀಚೆಗೆ ನಡೆದ ಎಸ್‌.ಎಸ್‌.ಕೆ. ತರುಣ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಂಘದ ಅಧ್ಯಕ್ಷರಾಗಿ ಶ್ರೀರಾಮ ಸುರೇಂದ್ರಸಾ ಹಬೀಬ, ಉಪಾಧ್ಯಕ್ಷರಾಗಿ ನಾರಾಯಣಸಾ ರಾಮಚಂದ್ರಸಾ ಕಬಾಡಿ, ಗೌರವ ಕಾರ್ಯದರ್ಶಿಯಾಗಿ ಸುರೇಶ ಸೋಮನಾಥಸಾ ಮೇರವಾಡೆ, ಸಹಕಾರ್ಯದರ್ಶಿಯಾಗಿ ಪರಶುರಾಮ ಹನಮಂತಸಾ ಸೋಳಂಕಿ, ಖಜಾಂಚಿಯಾಗಿ ಸತ್ಯನಾರಾಯಣ ಫಕ್ಕೀರಸಾ ಮೇರವಾಡೆ, ಲೆಕ್ಕ ಪರಿಶೋಧಕರಾಗಿ ನರಸಿಂಗಸಾ ವೆಂಕೂಸಾ ಮೇರವಾಡೆ ಹಾಗೂ ವ್ಯಾಯಾಮಶಾಲೆ ಚೇರ್ಮನ್ ಆಗಿ ವಿನಾಯಕ ಶಂಕರಸಾ ಹಾದಿಮನಿ ಅವರನ್ನು ಆಯ್ಕೆ ಮಾಡಲಾಯಿತು.

ನೂತನವಾಗಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳನ್ನು ಪಂಚ ಟ್ರಸ್ಟ್ ಕಮಿಟಿ, ಎಸ್‌.ಎಸ್‌.ಕೆ. ತರುಣ ಸಂಘ, ಮಹಿಳಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜದ ಮುಖಂಡರು ಮತ್ತು ಸಮಾಜಬಾಂಧವರು ಅಭಿನಂದಿಸಿ, ಶುಭ ಹಾರೈಸಿದರು.