Home Blog

ಉದ್ಘಾಟನೆಗೂ ಮುನ್ನವೇ ಕಿತ್ತುಬಂದ ಸಿಮೆಂಟ್! ಕ್ರೀಡಾಪಟುಗಳ ಹಾಸ್ಟೆಲ್‌ನಲ್ಲಿ ಕಳಪೆ ಕಾಮಗಾರಿ?

0

ಬೀದರ್: ನಗರದ ನೆಹರು ಸ್ಟೇಡಿಯಂ ಬಳಿ ಗ್ರಾಮೀಣ ಭಾಗದ ಬಡ ಕ್ರೀಡಾಪಟು ಮಕ್ಕಳಿಗಾಗಿ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಎರಡು ಅಂತಸ್ತಿನ ವಸತಿ ನಿಲಯದ ಕಾಮಗಾರಿಯಲ್ಲಿ ಕಳಪೆ ಆರೋಪ ಕೇಳಿಬಂದಿದೆ.

ಈಗಾಗಲೇ ಕಟ್ಟಡದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಮೇಲ್ಚಾವಣಿ, ಶೌಚಾಲಯ, ಬಾಗಿಲು ಸೇರಿದಂತೆ ಹಲವು ಭಾಗಗಳಲ್ಲಿ ಗುಣಮಟ್ಟದ ಕೊರತೆ ಕಂಡುಬಂದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮೇಲ್ಚಾವಣಿಯ ಸಿಮೆಂಟ್ ಕಾಂಕ್ರೀಟ್ ಕಿತ್ತುಬರುತ್ತಿರುವುದು ಕೂಡ ಕಂಡುಬಂದಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆ ಮೂಡಿದೆ.

ಗ್ರಾಮೀಣ ಭಾಗದ ನೂರಾರು ಕ್ರೀಡಾಪಟು ಮಕ್ಕಳಿಗಾಗಿ ನಿರ್ಮಿಸಲಾಗುತ್ತಿರುವ ಈ ವಸತಿ ನಿಲಯ ಇನ್ನೂ ಉದ್ಘಾಟನೆಯಾಗಿಲ್ಲ. ಆದರೆ, ಉದ್ಘಾಟನೆಗೂ ಮುನ್ನವೇ ಕಳಪೆ ಕಾಮಗಾರಿಯ ಆರೋಪ ಕೇಳಿಬಂದಿರುವುದು ಚರ್ಚೆಗೆ ಕಾರಣವಾಗಿದೆ.

ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಕ್ರೀಡಾ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೋಟ್ಯಂತರ ರೂಪಾಯಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಕಾಮಗಾರಿಯನ್ನು ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರನ್ನು ಕೇಳಿದಾಗ, ಕಳಪೆ ಕಾಮಗಾರಿಯ ಆರೋಪದ ಬಗ್ಗೆ ತನಿಖೆ ನಡೆಸಲಾಗುವುದು. ವರದಿ ಬಂದ ಬಳಿಕ ತಪ್ಪಿತಸ್ಥರು ಕಂಡುಬಂದರೆ ಯಾವುದೇ ಮುಲಾಜಿಲ್ಲದೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಪಾವಗಡದಲ್ಲಿ ನಕಲಿ ನಕ್ಸಲ್ ಕಾಟ; 5 ಲಕ್ಷ ರೂ.ಗೆ ರೈತ ಕುಟುಂಬಕ್ಕೆ ಬೆದರಿಕೆ!

0

ತುಮಕೂರು: ರೈತರ ಪಂಪ್‌ಸೆಟ್‌ಗೆ ಬಾಂಬ್ ಇಟ್ಟು ಸ್ಫೋಟಿಸಿದ್ದಾನೆ ಎನ್ನಲಾದ ನಕಲಿ ನಕ್ಸಲ್ ಕನಕಲ ಬಂಡೆ ವೆಂಕಟೇಶ್ ವಿರುದ್ಧ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. 5 ಲಕ್ಷ ರೂಪಾಯಿ ಹಣ ನೀಡುವಂತೆ ರೈತ ಕುಟುಂಬಕ್ಕೆ ಬೆದರಿಕೆ ಪತ್ರ ಕಳುಹಿಸಲಾಗಿದೆ.

ಪಾವಗಡ ತಾಲೂಕಿನ ಗಂಗಸಾಗರದ ಮುತ್ತವ್ವ ಭೂಷಪ್ಪ ಎಂಬುವವರ ತೋಟದ ಶೆಡ್ ಬಾಗಿಲಿಗೆ ಬೆದರಿಕೆ ಪತ್ರ ಅಂಟಿಸಲಾಗಿದೆ. ಸಿಪಿಐ(ಎಂಎಲ್), ಸಿಪಿಎಂ ಪೀಪಲ್ ವಾರ್ ಜನಶಕ್ತಿ ಪಾರ್ಟಿ ಹೆಸರಿನಲ್ಲಿ ತೆಲುಗಿನಲ್ಲಿ ಪತ್ರ ಬರೆಯಲಾಗಿದೆ ಎನ್ನಲಾಗಿದೆ.

ಸೆಪ್ಟೆಂಬರ್ 16ರೊಳಗೆ 5 ಲಕ್ಷ ರೂಪಾಯಿ ಹಣವನ್ನು ವಕೀಲ ಸುಬ್ಬರಾಯಪ್ಪ ಅವರ ಬಳಿ ಕಳಿಸಬೇಕು. ಬಳಿಕ ಆ ಹಣವನ್ನು ಕ್ರಾಮೆಡ್ ದೇವಣ್ಣ ದಳಂಗೆ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕನಕಲ ಬಂಡೆ ವೆಂಕಟೇಶ್ ವಿರುದ್ಧ ಹಲವು ಪ್ರಕರಣಗಳಿದ್ದು, ಅವುಗಳನ್ನು ನಡೆಸಲು ಹಣದ ಅಗತ್ಯವಿದೆ ಎಂದೂ ಪತ್ರದಲ್ಲಿ ಬರೆಯಲಾಗಿದೆ ಎನ್ನಲಾಗಿದೆ.

ಬೆದರಿಕೆ ಪತ್ರದಿಂದ ಆತಂಕಗೊಂಡ ಮುತ್ತವ್ವ ಭೂಷಪ್ಪ ಅವರ ಕುಟುಂಬ ಪಾವಗಡ ಪೊಲೀಸರಿಗೆ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೆದರಿಕೆ ಪತ್ರದ ಹಿಂದಿರುವವರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

ನೇಮಕಾತಿಗೆ ತಡೆ; ಸದ್ಯಕ್ಕೆ ಪೌರಕಾರ್ಮಿಕರ ಹೋರಾಟಕ್ಕೆ ವಿರಾಮ!

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಸ್ವಚ್ಛತಾ ಕಾರ್ಯ ಹಾಗೂ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿರುವ ಮಹಿಳಾ ಕಾರ್ಮಿಕರನ್ನು ಕಡೆಗಣಿಸಿ 154 ಪೌರಕಾರ್ಮಿಕರ ನೇಮಕಾತಿಗೆ ಮುಂದಾಗಿರುವುದನ್ನು ವಿರೋಧಿಸಿ ಐದು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಗೆ ಸದ್ಯಕ್ಕೆ ವಿರಾಮ ದೊರೆತಿದೆ.

ಶುಕ್ರವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು, ಜಿಲ್ಲಾಡಳಿತದಿಂದ ಹೊರಡಿಸಲಾಗಿದ್ದ 154 ಪೌರಕಾರ್ಮಿಕರ ನೇಮಕಾತಿ ಅಧಿಸೂಚನೆಯನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದರು. ಅಲ್ಲದೆ, ಸಮಸ್ಯೆ ಕುರಿತು ಮುಂದಿನ ಹಂತದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮಹಿಳಾ ಕಾರ್ಮಿಕರು ಪ್ರತಿಭಟನೆ ಅಂತ್ಯಗೊಳಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸೇವಾವಧಿಯನ್ನು ಪರಿಗಣಿಸಿ, ನೇರ ಪಾವತಿ ವ್ಯವಸ್ಥೆಯಡಿ ಪೌರಕಾರ್ಮಿಕರ ಹುದ್ದೆಗಳಿಗೆ ಕಾಯಂಗೊಳಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.

ಸುಮಾರು 20 ವರ್ಷಗಳಿಂದ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುವುದು ಸೇರಿದಂತೆ ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು ಕಡಿಮೆ ಆದಾಯದಲ್ಲೇ ಕುಟುಂಬ ನಿರ್ವಹಿಸುತ್ತಿದ್ದಾರೆ. ಹೊಸದಾಗಿ ನೇಮಕಾತಿ ಕೈಗೊಂಡರೆ ತಮ್ಮ ಉದ್ಯೋಗ ಕಳೆದುಕೊಳ್ಳುವ ಆತಂಕವಿದೆ ಎಂದು ಅವರು ಅಳಲು ತೋಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಶಾಸಕ ಡಾ. ಎಚ್.ಕೆ. ಪಾಟೀಲ ಅವರ ನೇತೃತ್ವದಲ್ಲಿ ಸೆ.22ರಂದು ಬೆಂಗಳೂರಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮುಖಂಡರ ಸಭೆ ನಡೆಯಲಿದೆ. ಪೌರಕಾರ್ಮಿಕರ ಬೇಡಿಕೆಗಳ ಕುರಿತು ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಪ್ರಸ್ತುತ ಪ್ರತಿಭಟನೆ ಹಿಂಪಡೆದಿದ್ದರೂ, ಬೆಂಗಳೂರಿನ ಸಭೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರ ಪರವಾಗಿ ನ್ಯಾಯಯುತ ನಿರ್ಧಾರ ಕೈಗೊಳ್ಳಬೇಕು. ಬೇಡಿಕೆ ಈಡೇರದಿದ್ದರೆ ಮತ್ತೆ ಪ್ರತಿಭಟನೆ ಆರಂಭಿಸಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಮಹಿಳಾ ಕಾರ್ಮಿಕರು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕೃಷ್ಣಾ ಪರಾಪುರ, ಯುವರಾಜ ಬಳ್ಳಾರಿ, ಪೃಥ್ವಿ ಪರಾಪುರ, ವಿಜಯ ಕಲ್ಮನಿ, ಉಡಚಪ್ಪ ಹಳ್ಳಿಕೇರಿ, ನಿಂಗಪ್ಪ ದೊಡ್ಡಮನಿ, ಚಂದ್ರು ಕೋನಿಮನಿ, ಗಣೇಶ ಹುಬ್ಬಳ್ಳಿ ಸೇರಿದಂತೆ ನಾಗಮ್ಮ ಬಳ್ಳಾರಿ, ಯಶೋದಾ ಬಳ್ಳಾರಿ, ದಂಡಕ್ಕ ಬಳ್ಳಾರಿ, ಕನಕವ್ವ ದೊಡ್ಡಮನಿ, ಅನಿತಾ ಯಳವತ್ತಿ, ರಾಜೇಶ್ವರಿ, ಜ್ಯೋತಿ ಮತ್ತಿತರ ಮಹಿಳಾ ಪೌರಕಾರ್ಮಿಕರು ಉಪಸ್ಥಿತರಿದ್ದರು.

ಸೆ.12ರಂದು ಬೆಟಿಗೇರಿಯಲ್ಲಿ ಪ್ರಜಾ ಸೇವಾ ಆಂದೋಲನ

0

ವಿಜಯಸಾಕ್ಷಿ ಸುದ್ದಿ, ಗದಗ: ಬೆಟಿಗೇರಿ ಹೋಬಳಿ ವ್ಯಾಪ್ತಿಯ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ ಸಭೆ ಸೆ.12ರಂದು ಬೆಳಗ್ಗೆ 10.30ಕ್ಕೆ ಬೆಟಿಗೇರಿಯ ತಾರಾಲಯದಲ್ಲಿ ನಡೆಯಲಿದೆ.

ಗದಗ ಶಾಸಕ ಡಾ. ಎಚ್.ಕೆ. ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳು, ಅಹವಾಲುಗಳು ಹಾಗೂ ಅಗತ್ಯ ಸೇವೆಗಳಿಗೆ ಸಂಬಂಧಿಸಿದ ಮನವಿಗಳನ್ನು ಸಲ್ಲಿಸಿ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಹಾರ ಕಂಡುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರ ಅಹವಾಲುಗಳಿಗೆ ಸ್ಥಳದಲ್ಲಿಯೇ ಸ್ಪಂದಿಸುವುದು ಹಾಗೂ ಸರ್ಕಾರದ ವಿವಿಧ ಜನಪರ ಯೋಜನೆಗಳು ಮತ್ತು ಸೇವೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡುವುದು ಸಭೆಯ ಉದ್ದೇಶವಾಗಿದೆ.

ಬೆಟಿಗೇರಿ ಹೋಬಳಿ ವ್ಯಾಪ್ತಿಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯ ಸದುಪಯೋಗ ಪಡೆದುಕೊಳ್ಳುವಂತೆ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಕೋರಿದ್ದಾರೆ.

ಅರಣ್ಯ ರಕ್ಷಕರು ದೇಶದ ಸೈನಿಕರಿದ್ದಂತೆ: ಸಿ.ಎಸ್. ಶಿವನಗೌಡ್ರ

0

ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಗಡಿಯನ್ನು ಸೈನಿಕರು ಕಾಯುವಂತೆ, ನಾಡಿನ ಅಮೂಲ್ಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ಗುರುತರ ಜವಾಬ್ದಾರಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಹೇಳಿದರು.

ತಾಲೂಕಿನ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಶುಕ್ರವಾರ ಅರಣ್ಯ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1980ರ ಅರಣ್ಯ ಸಂರಕ್ಷಣಾ ಕಾಯ್ದೆಗೆ ಸುಪ್ರೀಂ ಕೋರ್ಟ್‌ನ ಟಿ.ಎನ್. ಗೋದಾವರ್ಮನ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದ ತೀರ್ಪಿನ ಬಳಿಕ ಮತ್ತಷ್ಟು ಬಲ ದೊರೆತಿದೆ. ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 62ರಡಿ ಅರಣ್ಯ ಅಧಿಕಾರಿಗಳಿಗೆ ಪೊಲೀಸ್ ಅಧಿಕಾರಿಗಳಂತೆಯೇ ಅಧಿಕಾರ ಹಾಗೂ ರಕ್ಷಣೆ ನೀಡಲಾಗಿದೆ. ಸರ್ಕಾರಿ ದಾಖಲೆಗಳಲ್ಲಿ ‘ಅರಣ್ಯ’ ಎಂದು ನಮೂದಾಗಿರುವ ಪ್ರದೇಶವನ್ನು ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ಅನ್ಯ ಉದ್ದೇಶಕ್ಕೆ ಬಳಸಲು ಸಾಧ್ಯವಿಲ್ಲ ಎಂದರು.

ಅರಣ್ಯ ರಕ್ಷಣೆ ಹಾಗೂ ಕಳ್ಳಸಾಗಣೆ ತಡೆಯುವ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿದ ಹುತಾತ್ಮರ ಕುಟುಂಬಗಳಿಗೆ ಸೂಕ್ತ ಪರಿಹಾರ, ಬೆಂಬಲ ಹಾಗೂ ಪುನರ್ವಸತಿ ಕಲ್ಪಿಸುವುದು ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ. ಅವರ ಕುಟುಂಬಗಳೊಂದಿಗೆ ನಾವಿದ್ದೇವೆ ಎಂಬ ಭರವಸೆ ನೀಡುವುದು ಅಗತ್ಯ ಎಂದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಮುಂದಿನ ಪೀಳಿಗೆಗಾಗಿ ಅರಣ್ಯ ಉಳಿಸುವ ಉದ್ದೇಶದಿಂದ ಸಿಬ್ಬಂದಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಕರ್ತವ್ಯವೇ ಮುಖ್ಯವೆಂದು ಭಾವಿಸಿ ಅಪಾಯಗಳನ್ನು ಎದುರಿಸಿದ ಅವರ ಬಲಿದಾನ ಸ್ಮರಣೀಯ. ಗಡಿಯಲ್ಲಿ ಕಾಯುವ ಯೋಧರಂತೆ ಅರಣ್ಯ ಸಿಬ್ಬಂದಿ ಕಾಡು ಮತ್ತು ಮಾನವ ವಸತಿ ಪ್ರದೇಶಗಳ ನಡುವಿನ ಸೂಕ್ಷ್ಮ ಗಡಿಯನ್ನು ಹಗಲಿರುಳು ಕಾಯುತ್ತಿದ್ದಾರೆ ಎಂದರು.

ಅರಣ್ಯ ಕ್ಷೇತ್ರದಲ್ಲಿ ಎದುರಾಗುವ ಅಪಾಯಗಳ ನಡುವೆಯೂ ಸಿಬ್ಬಂದಿಗೆ ನೀಡುವ ತರಬೇತಿ ಅವರಲ್ಲಿ ಕರ್ತವ್ಯನಿಷ್ಠೆ ಹಾಗೂ ಆತ್ಮಧೈರ್ಯ ತುಂಬುತ್ತದೆ. ಇಂತಹ ಧೀರ ಸಿಬ್ಬಂದಿಯನ್ನು ಕಳೆದುಕೊಳ್ಳುವುದು ದೇಶ ಹಾಗೂ ಇಲಾಖೆಗೆ ತುಂಬಲಾರದ ನಷ್ಟ. ಅರಣ್ಯ ಮತ್ತು ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಮಾತನಾಡಿ, ಅರಣ್ಯ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ. ಸಾರ್ವಜನಿಕರು ಹಾಗೂ ಇತರ ಇಲಾಖೆಗಳು ಒಗ್ಗೂಡಿ ಶ್ರಮಿಸಿದಾಗ ಮಾತ್ರ ಪರಿಣಾಮಕಾರಿ ಸಂರಕ್ಷಣೆ ಸಾಧ್ಯ. ‘ಕಾಡು ನನ್ನದು’ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಹಿಂದೆ ಕಳ್ಳಸಾಗಣೆ ಹಾಗೂ ಕಾಡುಗಳ್ಳರ ದಾಳಿಯಿಂದ ಹುತಾತ್ಮರಾಗುವವರ ಸಂಖ್ಯೆ ಹೆಚ್ಚಿತ್ತು. ಈಗ ಇಲಾಖೆಯ ಸಂರಕ್ಷಣಾ ಕ್ರಮಗಳಿಂದ ವನ್ಯಜೀವಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ದೇಶದಲ್ಲೇ ಅತಿ ಹೆಚ್ಚು ಆನೆಗಳು, ಎರಡನೇ ಅತಿ ಹೆಚ್ಚು ಹುಲಿಗಳು ಹಾಗೂ ಮೂರನೇ ಅತಿ ಹೆಚ್ಚು ಚಿರತೆಗಳು ಕರ್ನಾಟಕದಲ್ಲಿವೆ ಎಂದರು.

ರಾಜಸ್ಥಾನದ ಖೇಜರ್ಲಿಯಲ್ಲಿ ಮರಗಳ ರಕ್ಷಣೆಗಾಗಿ ಗ್ರಾಮಸ್ಥರು ಮಾಡಿದ ಬಲಿದಾನ ಹಾಗೂ ಕರ್ನಾಟಕದಲ್ಲಿ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಐಎಫ್‌ಎಸ್ ಅಧಿಕಾರಿ ಶ್ರೀನಿವಾಸ್ ಸೇರಿದಂತೆ ಹುತಾತ್ಮರಾದವರ ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಈ ದಿನಾಚರಣೆ ಆಚರಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವನ್ಯಜೀವಿಗಳ ದಾಳಿ ಹಾಗೂ ಅರಣ್ಯ ರಕ್ಷಣೆಯ ಸವಾಲುಗಳ ನಡುವೆಯೂ ಕರ್ತವ್ಯ ನಿರ್ವಹಿಸಿ ಪ್ರಾಣತ್ಯಾಗ ಮಾಡಿದ ವೀರ ಸಿಬ್ಬಂದಿಯ ಬಲಿದಾನ ನಮಗೆ ಸದಾ ಪ್ರೇರಣೆಯಾಗಬೇಕು. ಹುತಾತ್ಮರ ಕುಟುಂಬಗಳೊಂದಿಗೆ ಅರಣ್ಯ ಇಲಾಖೆ ಸದಾ ನಿಲ್ಲಲಿದೆ.

— ಸಂತೋಷಕುಮಾರ ಕೆಂಚಪ್ಪನವರ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಗದಗ

ಹಿರಿಯ ನಾಗರಿಕರಿಗೆ ಕ್ರೀಡೆ, ಸಂಸ್ಕೃತಿಯ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗಾಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲು ಜಿಲ್ಲಾಡಳಿತ ಮುಂದಾಗಿದೆ. ಸೆಪ್ಟೆಂಬರ್ 21ರಂದು ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಸ್ಪರ್ಧೆಗಳನ್ನು ವ್ಯವಸ್ಥಿತವಾಗಿ ನಡೆಸಲಾಗುವುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಶ್ರೀದೇವಿ ಎಸ್.ಎನ್. ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿರಿಯ ನಾಗರಿಕ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ 60ರಿಂದ 69, 70ರಿಂದ 79 ಹಾಗೂ 80 ವರ್ಷ ಮೇಲ್ಪಟ್ಟವರ ವಿಭಾಗಗಳಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಕ್ರೀಡಾ ಸ್ಪರ್ಧೆಗಳಲ್ಲಿ ಬಿರುಸಿನ ನಡಿಗೆ, ಬಕೆಟ್‌ಗೆ ಚೆಂಡು ಎಸೆಯುವುದು, ಮ್ಯೂಸಿಕಲ್ ಚೇರ್, ಚೇಸ್ ಹಾಗೂ ಕೇರಂ ಸ್ಪರ್ಧೆಗಳು ನಡೆಯಲಿವೆ.

ಅದೇ ರೀತಿ ಏಕಪಾತ್ರಾಭಿನಯ ಹಾಗೂ ಗಾಯನ ಸ್ಪರ್ಧೆಗಳನ್ನು ಸಾಂಸ್ಕೃತಿಕ ವಿಭಾಗದಲ್ಲಿ ಆಯೋಜಿಸಲಾಗುವುದು. ಸ್ಪರ್ಧೆಗಳಲ್ಲಿ ಭಾಗವಹಿಸುವ ಹಿರಿಯ ನಾಗರಿಕರು ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವವರು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವವರು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅಕ್ಟೋಬರ್ 1ರಂದು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯುವ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು. ಕಾರ್ಯಕ್ರಮದ ಯಶಸ್ಸಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ದಿನಾಚರಣೆ ಹಿನ್ನೆಲೆಯಲ್ಲಿ ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಣ, ವೇದಿಕೆ, ಉಪಾಹಾರ, ಪುಸ್ತಕ, ಆಸನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಮಣ್ಣೂರು, ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಮುತ್ತಪ್ಪ ಕಂಬಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಾಗರ ಚವ್ಹಾಣ, ಹಿರಿಯ ನಾಗರಿಕರ ಸಂಘದ ತಾಲೂಕು ಘಟಕದ ಅಧ್ಯಕ್ಷರು, ಹಿರಿಯ ನಾಗರಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿರಿಯ ನಾಗರಿಕರಲ್ಲಿರುವ ಪ್ರತಿಭೆ ಹಾಗೂ ಉತ್ಸಾಹವನ್ನು ಗುರುತಿಸುವ ಉದ್ದೇಶದಿಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಎಲ್ಲ ಅರ್ಹ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.

— ಶ್ರೀದೇವಿ ಎಸ್.ಎನ್., ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ

ಬೆರಳಚ್ಚು ಪರೀಕ್ಷೆಯಲ್ಲಿ ಶ್ರೀ ಕಲ್ಮೇಶ್ವರ ವಿದ್ಯಾಲಯಕ್ಕೆ ಶೇ.94.44 ಫಲಿತಾಂಶ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಬೆಂಗಳೂರು ನಡೆಸಿದ 2026ರ ಜುಲೈ ತಿಂಗಳ ಬೆರಳಚ್ಚು ವಾರ್ಷಿಕ ಪರೀಕ್ಷೆಯಲ್ಲಿ ನಗರದ ಶ್ರೀ ಕಲ್ಮೇಶ್ವರ ಬೆರಳಚ್ಚು ಮತ್ತು ಕಂಪ್ಯೂಟರ್ ವಿದ್ಯಾಲಯವು ಶೇ.94.44ರಷ್ಟು ಫಲಿತಾಂಶ ದಾಖಲಿಸಿದೆ.

ಪರೀಕ್ಷೆಯಲ್ಲಿ ಇಂಗ್ಲಿಷ್ ಬೆರಳಚ್ಚು ಸೀನಿಯರ್ ವಿಭಾಗದಲ್ಲಿ ಮುಸ್ಕಾನ ಮುಲ್ಲಾ ಶೇ.90.50, ಇಂಗ್ಲಿಷ್ ಬೆರಳಚ್ಚು ಜೂನಿಯರ್ ವಿಭಾಗದಲ್ಲಿ ವಾಹಿದಾ ಮುರಾದಖಾನ ಶೇ.89.50, ಕನ್ನಡ ಬೆರಳಚ್ಚು ಸೀನಿಯರ್ ವಿಭಾಗದಲ್ಲಿ ಗೌರಿ ಆರ್. ಶಿಲ್ಪಿ ಶೇ.83 ಹಾಗೂ ಕನ್ನಡ ಬೆರಳಚ್ಚು ಜೂನಿಯರ್ ವಿಭಾಗದಲ್ಲಿ ಪ್ರಾರ್ಥನಾ ಶೀರೂಳ ಶೇ.85ರಷ್ಟು ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ಇದಲ್ಲದೆ ಸೌಭಾಗ್ಯ ಕಗ್ಗಲಗೌಡರ ಶೇ.88.50, ಆದರ್ಶ ಪೂಜಾರ ಶೇ.85, ಅಪ್ಜಲ್ ಬಳ್ಳಾರಿ ಶೇ.84, ಗಂಗಮ್ಮ ಕಟ್ನಾಕಿ ಶೇ.87.50, ಸತ್ಯಮ್ಮ ಬೆಲೇರಿ ಶೇ.86.50, ಕವಿತಾ ಅಂಬಿಗೇರ ಶೇ.87, ಸಾನಿಯಾ ಪೆಂಡಾರಿ ಶೇ.86, ಸೋನು ವಾಲ್ಮೀಕಿ ಶೇ.85, ಭವಾನಿ ಬೀರಕಟ್ಟಿ ಶೇ.76.50, ಸಹನಾ ಗದಗ ಶೇ.79.50, ನೂರಹಬೀಬಾ ಶೇ.82.50 ಹಾಗೂ ಸೌಮ್ಯ ಏಗ್ನೂರ ಶೇ.79.50ರಷ್ಟು ಅಂಕ ಪಡೆದಿದ್ದಾರೆ.

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 19 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 29 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟು ಆರು ವಿದ್ಯಾರ್ಥಿಗಳು ಸಹ ಉತ್ತೀರ್ಣರಾಗಿದ್ದು, ವಿದ್ಯಾಲಯ ಶೇ.94.44ರಷ್ಟು ಫಲಿತಾಂಶ ದಾಖಲಿಸಿದೆ.

ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ವಿದ್ಯಾರ್ಥಿಗಳ ಪರಿಶ್ರಮಕ್ಕೆ ಶಿಕ್ಷಕರ ಮಾರ್ಗದರ್ಶನವೂ ಕಾರಣವಾಗಿದ್ದು, ಮುಂದಿನ ದಿನಗಳಲ್ಲೂ ಉತ್ತಮ ಫಲಿತಾಂಶ ದಾಖಲಿಸುವಂತೆ ಎಲ್ಲ ವಿದ್ಯಾರ್ಥಿಗಳು ಶ್ರಮಿಸಬೇಕು.

— ಡಾ. ತಯಬಅಲಿ ಅ. ಹೊಂಬಳ, ಪ್ರಾಚಾರ್ಯರು

ಬೀದಿ ದನಗಳ ಜೀವ ರಕ್ಷಣೆಗೆ ರೇಡಿಯಂ ಪಟ್ಟಿಯ ರಕ್ಷಾಕವಚ

0

ವಿಜಯಸಾಕ್ಷಿ ಸುದ್ದಿ, ಗದಗ: ರಾತ್ರಿ ವೇಳೆ ರಸ್ತೆಗಳಲ್ಲಿ ಸಂಚರಿಸುವ ಬೀದಿ ದನಗಳು ವಾಹನಗಳಿಗೆ ಕಾಣದೆ ಅಪಘಾತಕ್ಕೀಡಾಗುವುದನ್ನು ತಪ್ಪಿಸಲು ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಹಾಗೂ ಭಗತ್‌ಸಿಂಗ್ ಅಭಿಮಾನಿ ಬಳಗದ ಸಹಯೋಗದಲ್ಲಿ ವಿಶೇಷ ಪ್ರಾಣಿ ಕಲ್ಯಾಣ ಕಾರ್ಯ ಕೈಗೊಳ್ಳಲಾಯಿತು.

ಅವಳಿ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸುತ್ತಿದ್ದ ಹಸು, ದನ-ಕರುಗಳ ಕೊರಳಿಗೆ ಪ್ರತಿಫಲಿತ ರೇಡಿಯಂ ಪಟ್ಟಿಗಳನ್ನು ಅಳವಡಿಸಲಾಯಿತು. ವಾಹನಗಳ ಹೆಡ್‌ಲೈಟ್ ಬೆಳಕು ಬಿದ್ದಾಗ ಪಟ್ಟಿಗಳು ಹೊಳೆಯುವುದರಿಂದ ದೂರದಿಂದಲೇ ದನಗಳ ಇರುವಿಕೆ ತಿಳಿದು ಅಪಘಾತ ತಪ್ಪಿಸಲು ಸಹಕಾರಿಯಾಗಲಿದೆ.

ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಖುದ್ದು ರಸ್ತೆಗಿಳಿದು ಕಾರ್ಯದಲ್ಲಿ ಪಾಲ್ಗೊಂಡರು.

ಅಂಬಾಭವಾನಿ ದೇವಸ್ಥಾನದಲ್ಲಿ ಛಪ್ಪನ್ ಭೋಗ್ ನೈವೇದ್ಯ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹುಡ್ಕೋ ಬಡಾವಣೆಯ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಎಸ್‌ಎಸ್‌ಕೆ ಮಹಿಳಾ ಮಂಡಳದ ವತಿಯಿಂದ ಸತ್ಯನಾರಾಯಣ ಪೂಜೆ ಹಾಗೂ ವಿಶೇಷ ಛಪ್ಪನ್ ಭೋಗ್ ನೈವೇದ್ಯ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಸತ್ಯನಾರಾಯಣ ಪೂಜೆ ನೆರವೇರಿಸಲಾಗಿದ್ದು, ವಿಶೇಷವಾಗಿ ಛಪ್ಪನ್ ಭೋಗ್ ನೈವೇದ್ಯ ಅರ್ಪಿಸಲಾಯಿತು. ಮಹಿಳಾ ಮಂಡಳದ ಸದಸ್ಯೆಯರು ತಮ್ಮ ಮನೆಗಳಲ್ಲಿಯೇ ತಯಾರಿಸಿದ ವಿವಿಧ ಬಗೆಯ ಸಿಹಿ ಪದಾರ್ಥಗಳು, ಹಾಲಿನ ಖಾದ್ಯಗಳು, ಅನ್ನದ ವಿವಿಧ ತಿನಿಸುಗಳು, ಪಲ್ಯ, ತಿಂಡಿಗಳು, ಹಣ್ಣು ಹಾಗೂ ಒಣಹಣ್ಣುಗಳನ್ನು ಶ್ರೀ ಸತ್ಯನಾರಾಯಣ ಸ್ವಾಮಿಗೆ (ಕೃಷ್ಣನಿಗೆ) ನೈವೇದ್ಯವಾಗಿ ಅರ್ಪಿಸಿದರು.

ಬೆಳಿಗ್ಗೆ ಶ್ರೀ ಅಂಬಾಭವಾನಿ ಮಾತೆಗೆ ಅಭಿಷೇಕ ನೆರವೇರಿಸುವುದರೊಂದಿಗೆ ಪೂಜಾ ಕೈಂಕರ್ಯಗಳು ಆರಂಭಗೊಂಡವು. ಬಳಿಕ ಸತ್ಯನಾರಾಯಣ ಪೂಜೆ, ಛಪ್ಪನ್ ಭೋಗ್ ನೈವೇದ್ಯ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ದೇವಸ್ಥಾನದ ಅರ್ಚಕ ಶ್ರೀನಿವಾಸ ಭಟ್ಟರು ಎಲ್ಲ ಪೂಜಾ ವಿಧಿವಿಧಾನಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.

ಮಹಿಳಾ ಮಂಡಳದ ಪದಾಧಿಕಾರಿಗಳು, ಸದಸ್ಯೆಯರು ಹಾಗೂ ಭಕ್ತರು ಪೂಜೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅಧ್ಯಕ್ಷ ಫಕ್ಕೀರಸಾ ಭಾಂಡಗೆ, ಚೇರ್ಮನ್ ಪರಶುರಾಮಸಾ ಬದಿ ಹಾಗೂ ಮಾರುತಿ ಪವಾರ್ ದೇವಸ್ಥಾನಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.

ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ: ರವಿಕಾಂತ ಅಂಗಡಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆ ಹೆಚ್ಚಿದ್ದು, ಕ್ರೀಡಾ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ವಕೀಲ ಹಾಗೂ ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.

ಮಜ್ಜೂರ ಸರ್ಕಾರಿ ಪ್ರೌಢಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಕ್ರೀಡಾಕೂಟಕ್ಕೆ ವಾಲಿಬಾಲ್ ಆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಕ್ರೀಡೆಗಳನ್ನು ಹೆಚ್ಚು ಉತ್ತೇಜಿಸುವ ಮೂಲಕ ಅವುಗಳ ಸೊಗಡನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು. ಕ್ರೀಡೆಯಿಂದ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ಹೆಚ್ಚಿನ ವಿದ್ಯಾರ್ಥಿಗಳು ಕ್ರೀಡಾ ಹಾಸ್ಟೆಲ್‌ಗಳಿಗೆ ಆಯ್ಕೆಯಾಗಿ ಸರ್ಕಾರದ ಸೌಲಭ್ಯ ಪಡೆದು ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದರು.

ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸಿಮೀಕೇರಿ ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜತೆಗೆ ಕ್ರೀಡೆಗೂ ಆದ್ಯತೆ ನೀಡಬೇಕು. ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ ಹಾಗೂ ತಂಡ ಮನೋಭಾವ ಬೆಳೆಸುತ್ತದೆ ಎಂದರು.

ಮಜ್ಜೂರ ಸರ್ಕಾರಿ ಪ್ರೌಢಶಾಲೆ, ರಣತೂರು, ಛಬ್ಬಿ ಹಾಗೂ ಮಾಚೆಹಳ್ಳಿ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ವಾಲಿಬಾಲ್, ಥ್ರೋಬಾಲ್, ಕಬಡ್ಡಿ, ಖೋ-ಖೋ ಸೇರಿದಂತೆ ವಿವಿಧ ವೈಯಕ್ತಿಕ ಹಾಗೂ ಸಾಮೂಹಿಕ ಕ್ರೀಡಾ ಸ್ಪರ್ಧೆಗಳು ನಡೆದವು.

ಮಜ್ಜೂರ ಗ್ರಾಮದ ಮುಖಂಡ ಶ್ರೀದೇವಪ್ಪ ಮಾದರ ಥ್ರೋಬಾಲ್, ಗುತ್ತಿಗೆದಾರ ಮಂಜು ಕಿರಣ ಪಾಟೀಲ ಕಬಡ್ಡಿ, ಗ್ರಾಮದ ಮುಖಂಡ ದಾದಾಫೀರ್ ನಾಯಕನವರ ಖೋ-ಖೋ ಪಂದ್ಯಗಳಿಗೆ ಚಾಲನೆ ನೀಡಿದರು. ಆಪ್ರಿದ್ ಬೈರಕ್‌ದಾರ ವೈಯಕ್ತಿಕ ಆಟಗಳಿಗೆ ಚಾಲನೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ರವಿ ಲಮಾಣಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಹಳೆ ವಿದ್ಯಾರ್ಥಿ ಸೇವಾಲಾಲ ಸಂಘ, ಶಿವಾಜಿನಗರ ತಾಂಡಾದ ಮಹೇಶ ಲಮಾಣಿ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ವಸಂತ ಲಮಾಣಿ, ಬಸಪ್ಪ ಮುಂಡವಾಡ, ಎಸ್‌ಆರ್‌ಡಿಕೆ ಸಂಸ್ಥೆಯ ಮಾಲೀಕ ಮಂಜುನಾಥ ಲಮಾಣಿ, ಛಬ್ಬಿ ಕ್ಲಸ್ಟರ್‌ನ ಸಿಆರ್‌ಪಿ ಗೀತಾ ಸರ್ವಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸಂತೋಷ ದಾಮೋದರ ನಿರೂಪಿಸಿದರು. ಕಿರಣಕುಮಾರ ಎಂ. ಲಮಾಣಿ ಸ್ವಾಗತಿಸಿದರು. ರೇಷ್ಮಾ ಎಚ್. ಪ್ರಾರ್ಥಿಸಿದರು. ಎಫ್.ಎ. ಮಕರಬಿ ವಂದನಾರ್ಪಣೆ ಸಲ್ಲಿಸಿದರು.

ಗ್ರಾಮೀಣ ವಿದ್ಯಾರ್ಥಿಗಳಲ್ಲೇ ಕ್ರೀಡಾ ಪ್ರತಿಭೆ ಹೆಚ್ಚಿದ್ದು, ಅವರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು. ಕ್ರೀಡೆಯಿಂದ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಸಾಮರ್ಥ್ಯವೂ ವೃದ್ಧಿಸುತ್ತದೆ.

— ರವಿಕಾಂತ ಅಂಗಡಿ, ವಕೀಲರು ಹಾಗೂ ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷರು