ಬೆಂಗಳೂರು: ಕೆ.ಆರ್. ಪುರಂ ತ್ರಿವಳಿ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿ ಶ್ವೇತಾ ಇದೀಗ ತನ್ನ ಲವ್ವರ್ ಕೆನತ್ ವಿರುದ್ಧವೇ ಸಾಕ್ಷಿ ಹೇಳಲು ಮುಂದೆ ಬಂದಿದ್ದು, ಮಾಫಿ ಸಾಕ್ಷಿ ಅಥವಾ ಅಪ್ರೂವರ್ ಆಗಲು ಅವಕಾಶ ನೀಡುವಂತೆ 29ನೇ ಎಸಿಜೆಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ತಾನು ಕೊಲೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದೆ ಎಂದು ಒಪ್ಪಿಕೊಂಡಿರುವ ಶ್ವೇತಾ, ಕೊಲೆ ಮಾಡುವ ನಿರ್ಧಾರ ಕೆನತ್ನದ್ದಾಗಿತ್ತು ಮತ್ತು ನೇರವಾಗಿ ಕೊಲೆ ಮಾಡಿದ್ದು ಆತನೇ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಆದರೆ ತಾನು ಯಾರಿಗೂ ಚಾಕುವಿನಿಂದ ಇರಿದಿಲ್ಲ ಹಾಗೂ ನೇರವಾಗಿ ಕೊಲೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೆನತ್ ವಿರುದ್ಧ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಲು ತಾನು ಸಿದ್ಧಳಿದ್ದು, ಪ್ರಕರಣದಲ್ಲಿ ತನ್ನನ್ನು ಅಪ್ರೂವರ್ ಆಗಿ ಪರಿಗಣಿಸಬೇಕು ಎಂದು ಶ್ವೇತಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಆದರೆ ಶ್ವೇತಾ ಅರ್ಜಿಯನ್ನು ನ್ಯಾಯಾಲಯ ಸದ್ಯಕ್ಕೆ ಪರಿಗಣಿಸಿಲ್ಲ. ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಕೆಲವು ಫೊರೆನ್ಸಿಕ್ ವರದಿಗಳು ಬರಬೇಕಿದ್ದು, ಅವು ಲಭ್ಯವಾದ ಬಳಿಕ ಚಾರ್ಜ್ಶೀಟ್ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾದ ಬಳಿಕ ಮಾಫಿ ಸಾಕ್ಷಿಯಾಗಲು ಮತ್ತೆ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಹೀಗಾಗಿ ಶ್ವೇತಾ ಸಲ್ಲಿಸಿದ್ದ ಅರ್ಜಿಯನ್ನು ಸದ್ಯಕ್ಕೆ ಇತ್ಯರ್ಥಪಡಿಸಿರುವ ಕೋರ್ಟ್, ಮುಂದಿನ ಹಂತದಲ್ಲಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

