Home Blog

Egg Price Hike: ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆಗೆ ಕೊಕ್? ಶಿಕ್ಷಕರಿಗೆ ಹೆಚ್ಚಿದ ಹೊರೆ!

ಬೆಂಗಳೂರು: ಮೊಟ್ಟೆ ದರ ಏರಿಕೆಯ ಪರಿಣಾಮ ಸರ್ಕಾರಿ ಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮೇಲೂ ಪರಿಣಾಮ ಬೀರಿದೆ.

ಹೆಚ್ಚುವರಿ ಹಣ ಹೊಂದಿಸಲಾಗದೆ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡಲು ಶಿಕ್ಷಕರು ಪರದಾಡುವಂತಾಗಿದೆ.

ಮಾರುಕಟ್ಟೆಯಲ್ಲಿ ಮೊಟ್ಟೆ ದರ ಪ್ರತಿ ಮೊಟ್ಟೆಗೆ 2ರಿಂದ 3 ರೂ.ವರೆಗೆ ಏರಿಕೆಯಾಗಿದೆ. ಆದರೆ ಮೊಟ್ಟೆ ಖರೀದಿಗೆ ಸರ್ಕಾರ ನೀಡುತ್ತಿರುವ ಅನುದಾನ ಹೆಚ್ಚಳವಾಗಿಲ್ಲ. ಈ ಹಿನ್ನೆಲೆಯಲ್ಲಿ ಶಾಲಾ ಹಂತದಲ್ಲಿ ಹಣಕಾಸಿನ ಕೊರತೆ ಎದುರಾಗಿದ್ದು, ಶಿಕ್ಷಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ರಾಜ್ಯದಲ್ಲಿ 1ರಿಂದ 10ನೇ ತರಗತಿಯ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆ ನೀಡಲಾಗುತ್ತಿದೆ. ಸುಮಾರು 55 ಲಕ್ಷ ಮಕ್ಕಳಿಗೆ ಶಿಕ್ಷಣ ಇಲಾಖೆ ಮೂಲಕ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಶಾಲಾ ಹಂತದಲ್ಲಿ ಪ್ರತಿ ಮೊಟ್ಟೆ ಖರೀದಿಗೆ ₹6 ಅನುದಾನ ನೀಡಲಾಗುತ್ತಿದೆ.

ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ ₹8ರಿಂದ ₹9ಕ್ಕೆ ಏರಿಕೆಯಾಗಿದೆ. ಹೆಚ್ಚುವರಿ ವೆಚ್ಚವನ್ನು ಭರಿಸಲು ಸರ್ಕಾರದಿಂದ ಯಾವುದೇ ಹೆಚ್ಚುವರಿ ಅನುದಾನ ಲಭ್ಯವಾಗಿಲ್ಲ. ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಸರ್ಕಾರದಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ ಎನ್ನಲಾಗಿದೆ.

ಮೊಟ್ಟೆ ಖರೀದಿಗೆ ಹಣದ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ಬದಲಾಗಿ ಬಾಳೆಹಣ್ಣು ನೀಡಲಾಗುತ್ತಿದೆ. ಮೊಟ್ಟೆ ದರ ಏರಿಕೆಗೆ ಅನುಗುಣವಾಗಿ ಅನುದಾನ ಹೆಚ್ಚಿಸುವಂತೆ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ನಾಳೆ 6 ಗಂಟೆ ಇರಲ್ಲ ಕರೆಂಟ್, ನಿಮ್ಮ ಏರಿಯಾ ಪಟ್ಟಿಯಲ್ಲಿದೆಯಾ ನೋಡಿ!

ಬೆಂಗಳೂರು: ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಜುಲೈ 29ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಸುಮಾರು ಆರು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯ ಉಂಟಾಗುವ ಪ್ರಮುಖ ಪ್ರದೇಶಗಳು:

  • ನಾರ್ತ್ ಗೇಟ್ 1, 2, 3
  • ರಾಯಭಾರ ಕಚೇರಿ ಹಾಗೂ ಫಿಲಿಪ್ಸ್ ಕಂಪನಿ ಸುತ್ತಮುತ್ತಲಿನ ಪ್ರದೇಶಗಳು
  • ದ್ವಾರಕಾನಗರ, ಬಾಬಾನಗರ ಹಾಗೂ ಕಟ್ಟಿಗೇನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳು
  • ಬಾಗಲೂರು ಕ್ರಾಸ್, ಬಾಗಲೂರು ಮುಖ್ಯ ರಸ್ತೆ ಹಾಗೂ ವಿನಾಯಕನಗರ
  • ಮಣಿಪಾಲ ಕಾಲೇಜು, ಬಿಎಸ್‌ಎಫ್ ಕ್ಯಾಂಪ್ ಮತ್ತು ಪಿಡಿಎಂಎಸ್ ಪ್ರದೇಶಗಳು

ವಿದ್ಯುತ್ ವ್ಯತ್ಯಯದಿಂದ ಸಾರ್ವಜನಿಕರು ಹಾಗೂ ಉದ್ಯಮಗಳಿಗೆ ಉಂಟಾಗುವ ಅನಾನುಕೂಲತೆಗಾಗಿ ಬೆಸ್ಕಾಂ ವಿಷಾದ ವ್ಯಕ್ತಪಡಿಸಿದೆ. ಸಾರ್ವಜನಿಕರು ಮುಂಚಿತವಾಗಿ ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವಂತೆ ಹಾಗೂ ಕಾಮಗಾರಿ ಅವಧಿಯಲ್ಲಿ ಸಹಕರಿಸುವಂತೆ ಮನವಿ ಮಾಡಿದೆ.

ಪ್ರಯಾಣಿಕರೇ ಗಮನಿಸಿ: ಪೀಣ್ಯ ಮೇಲ್ಸೇತುವೆಯಲ್ಲಿ ರಾತ್ರಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ಇಲ್ಲಿದೆ!

ಬೆಂಗಳೂರು: ತುಮಕೂರು ರಸ್ತೆ ಮೂಲಕ ಸಂಚರಿಸುವ ವಾಹನ ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ.

ಪೀಣ್ಯ ಎಲಿವೇಟೆಡ್ ಫ್ಲೈಓವರ್‌ನಲ್ಲಿ ಡಾಂಬರೀಕರಣ ಹಾಗೂ ದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ–4ರ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆಯ ಮೇಲೆ ಜುಲೈ 27ರಿಂದ ಆಗಸ್ಟ್‌ 5ರವರೆಗೆ ಸಂಚಾರ ನಿರ್ಬಂಧ ಜಾರಿಯಲ್ಲಿರಲಿದೆ. ಸಾಮಾನ್ಯ ದಿನಗಳಲ್ಲಿ (ಸೋಮವಾರದಿಂದ ಶುಕ್ರವಾರದವರೆಗೆ) ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಹಾಗೂ ಶನಿವಾರ ಮತ್ತು ಭಾನುವಾರ ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ವಾಹನ ಸಂಚಾರ ಬಂದ್ ಮಾಡಲಾಗುತ್ತದೆ.

ಈ ನಿರ್ಬಂಧವು ನೆಲಮಂಗಲ ಅಥವಾ ತುಮಕೂರು ಕಡೆಯಿಂದ ಬೆಂಗಳೂರು ನಗರಕ್ಕೆ ಬರುವ ವಾಹನಗಳಿಗೆ ಮಾತ್ರ ಅನ್ವಯವಾಗಲಿದೆ. ಬೆಂಗಳೂರಿನಿಂದ ಹೊರಹೋಗುವ ವಾಹನಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪರ್ಯಾಯ ಮಾರ್ಗ:

ನೆಲಮಂಗಲದಿಂದ ಬೆಂಗಳೂರು ಕಡೆಗೆ ಬರುವ ವಾಹನಗಳು ಕೆನ್ನಮೆಟಲ್ ಫ್ಯಾಕ್ಟರಿ ಬಳಿ ಫ್ಲೈಓವರ್ ಕೆಳಭಾಗದ ರಾಷ್ಟ್ರೀಯ ಹೆದ್ದಾರಿ–4 ಹಾಗೂ ಸರ್ವಿಸ್ ರಸ್ತೆಯ ಮೂಲಕ 8ನೇ ಮೈಲಿ ತಲುಪಬೇಕು. ಬಳಿಕ ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್‌ಆರ್‌ಎಸ್ ಜಂಕ್ಷನ್ ಹಾಗೂ ಗೊರಗುಂಟೆಪಾಳ್ಯ ಮಾರ್ಗವಾಗಿ ಸಂಚರಿಸಬಹುದು ಎಂದು ಸೂಚಿಸಲಾಗಿದೆ.

ಪೀಣ್ಯ ಮೇಲ್ಸೇತುವೆ ಬೆಂಗಳೂರು–ತುಮಕೂರು ರಸ್ತೆಯ ಪ್ರಮುಖ ಸಂಪರ್ಕ ಮಾರ್ಗವಾಗಿರುವುದರಿಂದ ಕಾಮಗಾರಿ ನಡೆಯುವ ಸಮಯದಲ್ಲಿ ಈ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಹಾಗೂ ಅಗತ್ಯವಿದ್ದರೆ ಈ ಸಮಯದಲ್ಲಿ ಪ್ರಯಾಣ ತಪ್ಪಿಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

2 ದಿನದ ನವಜಾತ ಶಿಶುವನ್ನು ಆಸ್ಪತ್ರೆಯಲ್ಲಿ ಬಿಟ್ಟು ತಾಯಿ ನಾಪತ್ತೆ; ಪೊಲೀಸರಿಂದ ತೀವ್ರ ಹುಡುಕಾಟ!

ಚಿಕ್ಕಬಳ್ಳಾಪುರ: ಕೇವಲ ಎರಡು ದಿನಗಳ ಹಿಂದೆ ಜನಿಸಿದ್ದ ನವಜಾತ ಗಂಡು ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ತಾಯಿ ನಾಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.

ದೇವನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಜುಲೈ 24ರಂದು ಹೆರಿಗೆಗೆ ದಾಖಲಾಗಿದ್ದ ಯುವತಿಗೆ ಗಂಡು ಮಗು ಜನಿಸಿತ್ತು. ಮಗುವಿಗೆ ಕಡಿಮೆ ತೂಕ ಹಾಗೂ ಉಸಿರಾಟದ ತೊಂದರೆ ಇದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ತಾಯಿ ಹಾಗೂ ಕೇರ್‌ಟೇಕರ್ ನರ್ಸ್ ಜೊತೆ ಅಂಬುಲೆನ್ಸ್ ಮೂಲಕ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು.

ಚಿಕ್ಕಬಳ್ಳಾಪುರ ಆಸ್ಪತ್ರೆಗೆ ಬಂದ ಬಳಿಕ ಮಗುವಿನ ಚಿಕಿತ್ಸೆಗೆ ಹಣ ತರುತ್ತೇನೆ ಎಂದು ಹೇಳಿ ಹೊರಹೋದ ತಾಯಿ ಮತ್ತೆ ವಾಪಸ್ ಬಂದಿಲ್ಲ ಎಂದು ತಿಳಿದುಬಂದಿದೆ. ತಾಯಿ ಇಲ್ಲದೆ ಮಗು ಆಸ್ಪತ್ರೆಯ ಎನ್‌ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಮಗುವಿನ ಪೋಷಕರ ಬಗ್ಗೆ ವಿಚಾರಿಸಿದಾಗ ಕೇರ್‌ಟೇಕರ್ ನರ್ಸ್ ಈ ಮಾಹಿತಿ ನೀಡಿದ್ದಾರೆ.

ಇದರಿಂದ ಅನುಮಾನಗೊಂಡ ಆಸ್ಪತ್ರೆ ಆಡಳಿತ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದೆ. ಮಾಹಿತಿ ಪಡೆದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದೇ ವೇಳೆ ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಯುವತಿ ಆಸ್ಪತ್ರೆಯಲ್ಲಿ ನೀಡಿದ್ದ ಆಧಾರ್‌ ಕಾರ್ಡ್‌ನಲ್ಲಿ ಹಾವೇರಿ ಜಿಲ್ಲೆಯ ವಿಳಾಸ ಪತ್ತೆಯಾಗಿದ್ದು, ಅದರ ಆಧಾರದಲ್ಲಿ ಆಕೆಯ ಪತ್ತೆ ಕಾರ್ಯ ಮುಂದುವರಿದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಯುವತಿಗೆ ವಿವಾಹವಾಗಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗಿರುವ ಸಾಧ್ಯತೆ ಕುರಿತು ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮಗುವಿನ ಆರೋಗ್ಯ ಸ್ಥಿತಿ ಸದ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ನಿನ್ನ ರೇಟ್ ಎಷ್ಟು, 10 ಸಾವಿರಕ್ಕೆ ಬರ್ತಿಯಾ?; ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ!

ಬೆಂಗಳೂರು: ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ ಎಂದು ಆರೋಪಿಸಲಾಗಿದೆ.

ಸ್ಕೂಟಿಯಲ್ಲಿ ಬಂದ ವ್ಯಕ್ತಿಯೊಬ್ಬ ಯುವತಿಯ ಬಳಿ ತೆರಳಿ, “ನಿನ್ನ ರೇಟ್ ಎಷ್ಟು? ₹10 ಸಾವಿರ ಕೊಡುತ್ತೇನೆ, ಬರುತ್ತೀಯಾ?” ಎಂದು ಕೇಳಿದ್ದಾನೆ ಎನ್ನಲಾಗಿದೆ. ಇದಕ್ಕೆ ಯುವತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದಾಗ, ಆತ ಅವಾಚ್ಯ ಶಬ್ದಗಳಿಂದ ನಿಂದಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಯ ಸಂಪೂರ್ಣ ದೃಶ್ಯವನ್ನು ಯುವತಿ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

ರಾಗ, ತಾಳ, ಲಯದಂತೆ ಮನಸ್ಸು…

ಸಂಗೀತಕ್ಕೆ ಮನಸ್ಸೋಲದವರೇ ಇಲ್ಲ. ಮನುಷ್ಯನ ಭಾವಗಳನ್ನು ಬೆಸೆಯುವ ಮಾಂತ್ರಿಕ ಶಕ್ತಿಯೇ ಸಂಗೀತ. ರಾಗ, ತಾಳ, ಲಯ ಸಂಗೀತದ ಆಧಾರಸ್ತಂಭಗಳು. ಸ್ವರಗಳ ಶಿಸ್ತುಬದ್ಧತೆಯೇ ರಾಗವಾದರೆ, ಸಂಗೀತಕ್ಕೆ ಹೃದಯ ಬಡಿತದಂತೆ ತಾಳ. ಇನ್ನು ಲಯವೆಂದರೆ ಭಾವಾನುಸಂಧಾನದ ಬೆಸುಗೆಯಂತೆ. ಭಾವನೆಗಳ ವೇಗವನ್ನು ಸರಿದೂಗಿಸುವ ಲಯ ಸಂಗೀತದ ಸ್ವಾರಸ್ಯಕ್ಕೆ ಮೆರಗು ನೀಡುತ್ತದೆ.

ಮನಸ್ಸೂ ಸಹ ಒಂದು ರೀತಿಯಲ್ಲಿ ಸಂಗೀತದ ರಾಗ, ತಾಳ, ಲಯದಂತೆಯೇ. “ಮನವೇ ಮನುಷ್ಯನ ಮಹಾನ್ ಮಿತ್ರ. ಕೆಲವು ಸಂದರ್ಭಗಳಲ್ಲಿ ಅದೇ ಮನಸ್ಸು ಅವನ ದೊಡ್ಡ ಶತ್ರುವೂ ಆಗಬಹುದು.” ರಾಗ, ತಾಳ, ಲಯ ತಪ್ಪಿದರೆ ಸಂಗೀತ ಹೇಗೆ ತನ್ನ ಇಂಪನ್ನು ಕಳೆದುಕೊಳ್ಳುತ್ತದೆಯೋ, ಹಾಗೆಯೇ ಮನಸ್ಸು ತನ್ನದೇ ಆದ ಇತಿಮಿತಿಗಳನ್ನು ಮೀರಿ ಆಸೆ, ಆಮಿಷಗಳ ದಾಸನಾದರೆ ಮನುಷ್ಯನ ಬದುಕನ್ನೇ ವಿಚಲಿತಗೊಳಿಸುತ್ತದೆ. ಪ್ರಸ್ತುತ ಮಾನವನ ಬದುಕಿನ ಸಂಗತಿಗಳನ್ನು ಗಮನಿಸಿದಾಗ, ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಆತಂಕಕಾರಿ ಘಟನೆಗಳನ್ನು ನೆನಪಿಸಿಕೊಂಡಾಗ, ಹಲವು ವಿಕೃತಿಗಳಿಗೆ ಮನುಷ್ಯನ ಮನಸ್ಥಿತಿಯೇ ಕಾರಣ ಎಂಬುದು ಸತ್ಯ.

ಇಂದು ಅವಸರದ ಬದುಕನ್ನು ಅರಸುತ್ತ ಹೊರಟಿರುವ ಮಾನವ ತನ್ನ ಅವನತಿಗೆ ತಾನೇ ಕಾರಣವಾಗುತ್ತಿರುವುದು ಬೂದಿ ಮುಚ್ಚಿದ ಕೆಂಡದಂತಿದೆ. ಜೀವನದ ಯಶಸ್ಸು, ವೈಫಲ್ಯ, ಸಂತೋಷ, ದುಃಖ, ಪ್ರೀತಿ, ದ್ವೇಷ, ಶಾಂತಿ, ಅಶಾಂತಿ ಹೀಗೆ ಎಲ್ಲ ರೀತಿಯ ಸಂವೇಗಗಳು ಮನುಷ್ಯನನ್ನು ಅನೇಕ ತಲ್ಲಣಗಳಿಗೆ ಗುರಿಮಾಡಿವೆ. ಮನುಷ್ಯ ಇಂದು ಏನೇ ಸಾಧಿಸಿದ್ದರೂ, ನೈಪುಣ್ಯ, ತಾಂತ್ರಿಕತೆ ಮತ್ತು ಕ್ರಿಯಾಶೀಲತೆ ಹೊಂದಿದ್ದರೂ, ಇವೆಲ್ಲವೂ ಮನಸ್ಸಿನ ಸ್ಥಿತಿಯನ್ನು ಅವಲಂಬಿಸಿವೆ.

ಸರಿಯಾದ ರೀತಿಯಲ್ಲಿ ಬಾಹ್ಯ ಪ್ರಪಂಚದ ಸಂವೇಗಗಳನ್ನು ಗ್ರಹಿಸಬೇಕಾದರೆ ಪಂಚೇಂದ್ರಿಯಗಳ ಸರಿಯಾದ ಕಾರ್ಯನಿರ್ವಹಣೆ ಅವಶ್ಯ. ಪಂಚೇಂದ್ರಿಯಗಳಲ್ಲಿ ತೊಡಕುಗಳಿದ್ದರೆ ಸಂವೇಗಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಸಂದರ್ಭಗಳ ವ್ಯತ್ಯಾಸದಿಂದ ಮನುಷ್ಯ ಪಡೆಯುವ ಅನುಭವಗಳು ಸಕಾರಾತ್ಮಕವಾಗಿರಬಹುದು ಅಥವಾ ನಕಾರಾತ್ಮಕವೂ ಆಗಬಹುದು. ಅದು ಮಾನವ ಅಸ್ತಿತ್ವದ ಗಾಢ ಅನುಭವವಾಗಿದೆ.

ಮನಸ್ಸು ಅಗೋಚರವಾದುದು. ಅದಕ್ಕೆ ನಿರ್ದಿಷ್ಟ ಆಕಾರ, ಗಾತ್ರ ಅಥವಾ ತೂಕವಿಲ್ಲ. ಆದರೆ ಮನುಷ್ಯನ ಎಲ್ಲಾ ಕ್ರಿಯೆಗಳಿಗೆ ಅದು ಮುನ್ನುಡಿಯಾಗಿದೆ. ಮನಸ್ಸು ಗೋಚರಿಸುವ ಅಂಗವಲ್ಲ. ಆದರೂ ಅದರ ಪ್ರಭಾವ ವಿಶ್ವದ ಯಾವುದೇ ಶಕ್ತಿಗಿಂತ ಕಡಿಮೆಯಿಲ್ಲ.

ಅದು ಕ್ಷಣಾರ್ಧದಲ್ಲಿ ಸಾವಿರಾರು ನೆನಪುಗಳನ್ನು ಮೆಲುಕು ಹಾಕುತ್ತದೆ. ಭವಿಷ್ಯದ ಕನಸುಗಳನ್ನು ಕಟ್ಟುತ್ತದೆ. ಭೂತಕಾಲದ ನೋವನ್ನು ಮತ್ತೆ ಅನುಭವಿಸುತ್ತದೆ. ಒಂದೇ ಕ್ಷಣದಲ್ಲಿ ಮನುಷ್ಯನನ್ನು ಶಿಖರಕ್ಕೇರಿಸಬಲ್ಲದು; ಮತ್ತೊಂದು ಕ್ಷಣದಲ್ಲಿ ನಿರಾಶೆಯ ಕಂದಕಕ್ಕೂ ತಳ್ಳಬಲ್ಲದು. ಮನುಷ್ಯನ ಪ್ರಜ್ಞಾವಂತಿಕೆ ಮನಸ್ಸನ್ನು ನಿಗ್ರಹಿಸಬಲ್ಲದು ಹಾಗೂ ನಿಯಂತ್ರಿಸಬಲ್ಲದು.

ಇಂದಿನ ತಂತ್ರಜ್ಞಾನ ಯುಗದಲ್ಲಿ ಮನಸ್ಸಿನ ಪಾತ್ರ ಇನ್ನಷ್ಟು ಸಂಕೀರ್ಣವಾಗಿದೆ. ಅವಶ್ಯಕತೆಗಾಗಿ ಆರಂಭವಾದ ತಾಂತ್ರಿಕ ಬಳಕೆ ಇಂದು ಮನುಷ್ಯನನ್ನೇ ಮಾಯಾಬಜಾರ್‌ನಲ್ಲಿ ಸುತ್ತಿಸುತ್ತಿದೆ. ಸಂವಹನಕ್ಕಾಗಿ ಬಳಸುವ ಮೊಬೈಲ್, ಅವಶ್ಯಕತೆಯನ್ನು ಮೀರಿ ನಮ್ಮನ್ನೇ ಆಳುತ್ತಿದೆ. ಅಂದರೆ, ನಾವೇ ಅದರ ವ್ಯಾಮೋಹಕ್ಕೆ ಬಲಿಯಾಗಿ ನಮ್ಮತನವನ್ನೇ ಮರೆಯುತ್ತಿದ್ದೇವೆ.

ಬದುಕಿನ ಚಿಕ್ಕಪುಟ್ಟ ಸಂಗತಿಗಳು ಜಗಜ್ಜಾಹಿರವಾಗುತ್ತಿವೆ. ಯಾವುದು ಅಲ್ಲ ಅದು ಹೌದು, ಯಾವುದು ಹೌದು ಅದು ಅಲ್ಲ ಎನ್ನುವ ತಾರ್ಕಿಕ ವಿಸ್ಮಯಕ್ಕೆ ನಾವು ಸಿಲುಕಿದ್ದೇವೆ. ಸಾಮಾಜಿಕ ಜಾಲತಾಣಗಳು, ಕೃತಕ ಬುದ್ಧಿಮತ್ತೆ, ನಿರಂತರ ಸ್ಪರ್ಧೆ, ಉದ್ಯೋಗದ ಒತ್ತಡ, ವಿದ್ಯಾಭ್ಯಾಸದ ಸವಾಲುಗಳು, ಬದುಕಿನ ನಿರ್ವಹಣೆ ಮುಂತಾದ ಅಂಶಗಳು ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿವೆ. ಮಾಹಿತಿಯ ಪ್ರವಾಹ ಹೆಚ್ಚಾದರೂ ಮನಸ್ಸಿನ ನೆಮ್ಮದಿ ಕಡಿಮೆಯಾಗುತ್ತಿರುವುದು ಇಂದಿನ ಸಮಾಜದ ದೊಡ್ಡ ವೈಪರೀತ್ಯವಾಗಿದೆ.

ಇಂದಿನ ಯುವಜನರಲ್ಲಿ ಚಿತ್ತಚಾಂಚಲ್ಯ, ಆತಂಕ, ಖಿನ್ನತೆ, ಏಕಾಂತದ ಭಾವನೆ ಹಾಗೂ ಹೋಲಿಕೆಯ ಮನೋಭಾವ ಹೆಚ್ಚುತ್ತಿರುವುದಕ್ಕೆ ಪ್ರಮುಖ ಕಾರಣ ಮನಸ್ಸಿನ ಮೇಲಿನ ನಿಯಂತ್ರಣದ ಕೊರತೆ. ಸಾಮಾಜಿಕ ಜಾಲತಾಣಗಳಲ್ಲಿ ಇತರರ ಯಶಸ್ಸನ್ನು ಮಾತ್ರ ನೋಡುತ್ತಾ ತಮ್ಮ ಜೀವನವನ್ನು ಕಡಿಮೆ ಅಂದಾಜು ಮಾಡಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ.

ಇದರ ಪರಿಣಾಮ ಆತ್ಮವಿಶ್ವಾಸ ಕುಸಿಯುತ್ತಿದೆ. ಯಾರು ಯಾರಿಗೆ ಹೇಳಬೇಕು, ಯಾರನ್ನು ಯಾವ ರೀತಿಯಲ್ಲಿ ಸರಿದಾರಿಗೆ ತರಬೇಕು ಎನ್ನುವ ಗೊಂದಲದ ವಾತಾವರಣ ನಿರ್ಮಾಣವಾಗಿದೆ. “ಅರಿವೇ ಗುರು” ಎಂಬಂತೆ ನಮ್ಮನ್ನು ನಾವು ಅರಿತಾಗ ನಮ್ಮಿಂದ ಅದೆಷ್ಟೋ ಸಕಾರಾತ್ಮಕ ಬದಲಾವಣೆಗಳು ಸಾಧ್ಯವಾಗುತ್ತವೆ. ಆದ್ದರಿಂದ ಇಂದು ಕೇವಲ ಅಂಕಗಳಿಕೆಗಾಗಿ, ಬದುಕಿನ ತಯಾರಿಗಾಗಿ ಶಿಕ್ಷಣ ನೀಡುವ ಸಂಕುಚಿತ ಭಾವನೆ ಬದಲಾಗಬೇಕು. ಮನುಷ್ಯತ್ವದ ಬದುಕಿಗೆ ಉತ್ತಮ ನಡವಳಿಕೆಗಳನ್ನು ರೂಪಿಸುವ ಶಿಕ್ಷಣದ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಮಾಜದ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬದಲಾವಣೆ ಕೇವಲ ಹೊರಜಗತ್ತಿನಲ್ಲಿ ಅಲ್ಲ; ಅದು ಮೊದಲು ನಮ್ಮೊಳಗೆ ಆರಂಭವಾಗಬೇಕು.

ಮನಸ್ಸಿನ ಮತ್ತೊಂದು ವಿಸ್ಮಯವೆಂದರೆ ಅದರ ಸೃಜನಶೀಲತೆ. ಜಗತ್ತಿನ ಪ್ರತಿಯೊಂದು ಆವಿಷ್ಕಾರವೂ ಮೊದಲು ಯಾರೋ ಒಬ್ಬರ ಮನಸ್ಸಿನಲ್ಲಿ ಹುಟ್ಟಿದ ಕಲ್ಪನೆಯಾಗಿತ್ತು. ವಿಜ್ಞಾನ, ಸಾಹಿತ್ಯ, ಸಂಗೀತ, ಕಲೆ, ಸಂಶೋಧನೆ ಹಾಗೂ ಸಾಮಾಜಿಕ ಪರಿವರ್ತನೆಗಳು ಮನಸ್ಸಿನ ಸೃಜನಶೀಲ ಶಕ್ತಿಯ ಫಲಗಳಾಗಿವೆ.

ಉತ್ತಮ ಚಿಂತನೆಗಳು ವ್ಯಕ್ತಿಯನ್ನು ಮಾತ್ರವಲ್ಲ, ಸಮಾಜವನ್ನೂ ಬದಲಾಯಿಸುವ ಸಾಮರ್ಥ್ಯ ಹೊಂದಿವೆ.

ಭಾರತೀಯ ತತ್ತ್ವಶಾಸ್ತ್ರ ಮನಸ್ಸಿಗೆ ವಿಶೇಷ ಸ್ಥಾನ ನೀಡಿದೆ. ಉಪನಿಷತ್ತುಗಳು, ಭಗವದ್ಗೀತೆ ಹಾಗೂ ಬಸವಾದಿ ಶರಣರ ವಚನಗಳು ಮನಸ್ಸಿನ ಶುದ್ಧತೆ, ನಿಯಂತ್ರಣ ಮತ್ತು ಆತ್ಮಜ್ಞಾನವನ್ನು ಜೀವನದ ಮೂಲ ಮೌಲ್ಯಗಳಾಗಿ ಬೋಧಿಸಿವೆ.

ವಿಶ್ವಗುರು ಬಸವಣ್ಣನವರ ಕಾಯಕ ಮತ್ತು ದಾಸೋಹದ ತತ್ವಗಳು ಮನಸ್ಸನ್ನು ಸ್ವಾರ್ಥದಿಂದ ಸೇವೆಯ ಕಡೆಗೆ ಕೊಂಡೊಯ್ಯುತ್ತವೆ. ಈ ಮೌಲ್ಯಗಳು ಬದುಕಿನಲ್ಲಿ ಅನ್ವಯವಾಗಬೇಕಿದೆ.

ಭಗವಾನ್ ಬುದ್ಧ ಮನಸ್ಸಿನ ಶಾಂತಿಯೇ ನಿಜವಾದ ಸುಖವೆಂದು ಬೋಧಿಸಿದನು. ಮನಸ್ಸಿಗೆ ಶಾಂತಿ ಬೇಕಾದರೆ ಬದುಕಿನ ವಾಸ್ತವವನ್ನು ಇದ್ದಂತೆಯೇ ಅರ್ಥೈಸಿಕೊಳ್ಳಬೇಕು. ಜೀವನ ದುಃಖಮಯ, ಬದುಕು ಶಾಶ್ವತವಲ್ಲ. ಹುಟ್ಟು ಖುಷಿ ನೀಡಿದರೆ, ಸಾವು ದುಃಖ ನೀಡುತ್ತದೆ ಎಂಬ ಸತ್ಯವನ್ನು ಅರಿತು ಸಾಗಬೇಕು. ಅತಿ ಆಸೆಯೇ ದುಃಖಕ್ಕೆ ಕಾರಣ. ಆದ್ದರಿಂದ ಅತಿ ಆಸೆಗಳನ್ನು ತ್ಯಜಿಸಿದಾಗ ಮನಸ್ಸು ಹಿತಮಿತವಾದ ಬದುಕಿನ ಅನುಭವವನ್ನು ನೀಡಬಲ್ಲದು.

ಅಂಕಗಳ ಸ್ಪರ್ಧೆಗಿಂತ ಆತ್ಮವಿಶ್ವಾಸ, ಸಹಾನುಭೂತಿ, ಮಾನವೀಯತೆ, ಸೃಜನಶೀಲತೆ ಹಾಗೂ ಭಾವನಾತ್ಮಕ ಸಮತೋಲನವನ್ನು ಬೆಳೆಸುವ ಶಿಕ್ಷಣವೇ ಇಂದಿನ ಅಗತ್ಯ. ಪೋಷಕರು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕು. ಶಿಕ್ಷಕರು ಪ್ರೋತ್ಸಾಹದ ಮಾತುಗಳ ಮೂಲಕ ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕು.

ಮನಸ್ಸನ್ನು ಆರೋಗ್ಯವಾಗಿಡಲು ಕೆಲವು ಜೀವನ ಮೌಲ್ಯಗಳು ಅಗತ್ಯ.

ಸಕಾರಾತ್ಮಕ ಚಿಂತನೆ ಬೆಳೆಸುವುದು.

ಪ್ರತಿದಿನ ಸ್ವಲ್ಪ ಸಮಯ ಆತ್ಮಾವಲೋಕನ ಅಥವಾ ಧ್ಯಾನ ಮಾಡುವುದು.

ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸುವುದು.

ಪ್ರಕೃತಿಯೊಂದಿಗೆ ಸಮಯ ಕಳೆಯುವುದು.

ಇತರರೊಂದಿಗೆ ಹೋಲಿಕೆ ಮಾಡುವುದನ್ನು ಕಡಿಮೆ ಮಾಡುವುದು.

ಕುಟುಂಬ ಮತ್ತು ಸ್ನೇಹಿತರೊಂದಿಗೆ ಮುಕ್ತ ಸಂವಾದ ನಡೆಸುವುದು.

ಸೇವಾ ಮನೋಭಾವ ಹಾಗೂ ಕೃತಜ್ಞತೆಯನ್ನು ಜೀವನದ ಭಾಗವಾಗಿಸಿಕೊಳ್ಳುವುದು.

ಇಂತಹ ಅಮೂಲ್ಯವಾದ ವಿಚಾರಧಾರೆಗಳು ನಮ್ಮೊಳಗಿದ್ದಾಗ ಮನಸ್ಸು ಸುಂದರ ಬದುಕನ್ನು ರೂಪಿಸಬಲ್ಲದು.

ಮನಸ್ಸಿನ ನಿಜವಾದ ಸೌಂದರ್ಯ ಅದರ ಕರುಣೆ, ಕ್ಷಮೆ, ಪ್ರೀತಿ ಮತ್ತು ಮಾನವೀಯತೆಯಲ್ಲಿ ಅಡಗಿದೆ. ಹೊರಗಿನ ಸೌಂದರ್ಯ ಕಾಲಕ್ರಮೇಣ ಮಸುಕಾಗಬಹುದು. ಆದರೆ ಒಳ್ಳೆಯ ಮನಸ್ಸಿನ ಬೆಳಕು ಸದಾ ಶಾಶ್ವತವಾಗಿರುತ್ತದೆ. ಆದ್ದರಿಂದ ಮನಸ್ಸನ್ನು ಗೆದ್ದವನು ಲೋಕವನ್ನೇ ಗೆಲ್ಲಬಲ್ಲನು.

ಮನಸ್ಸನ್ನು ಅರಿತವನು ತನ್ನ ಬದುಕಿನ ದಿಕ್ಕನ್ನು ಅರಿಯುತ್ತಾನೆ. ಮನಸ್ಸನ್ನು ನಿಯಂತ್ರಿಸಿದವನು ಸಂಕಷ್ಟದಲ್ಲಿಯೂ ಸಮಚಿತ್ತದಿಂದ ಬದುಕುತ್ತಾನೆ. ಆದ್ದರಿಂದ ನಮ್ಮ ಮನಸ್ಸನ್ನು ಉತ್ತಮ ಆಲೋಚನೆಗಳಿಂದ ಸದೃಢಗೊಳಿಸಬೇಕಿದೆ.

– ಶ್ರೀಮತಿ ಸುಧಾ ಹುಚ್ಚಣ್ಣವರ, ಗದಗ

ಎಪ್ಪತ್ತುಗಿರಿ ಬೇಡ… ಒಮ್ಮೆ ಕಪ್ಪತ್ತಗುಡ್ಡ ನೋಡಿ!

0

ವಿಜಯಸಾಕ್ಷಿ ಸುದ್ದಿ, ಡಂಬಳ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತಿ ಪಡೆದಿರುವ ಕಪ್ಪತ್ತಗುಡ್ಡ ಮಳೆಗಾಲದ ಹಸಿರು ಹೊದಿಕೆ ಹೊದ್ದು ಪ್ರಕೃತಿ ಪ್ರೇಮಿಗಳು, ಚಾರಣಿಗರು ಹಾಗೂ ಯಾತ್ರಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದೆ. ಹದವಾದ ಮಳೆಯ ಸಿಂಚನದಿಂದ ಗುಡ್ಡದ ತುಂಬ ನಾನಾ ಬಗೆಯ ಕಾಡುಹೂಗಳು ಅರಳಿ, ಔಷಧೀಯ ಸಸ್ಯಗಳ ಪರಿಮಳದಿಂದ ಪರಿಸರ ಸುಗಂಧಮಯವಾಗಿದೆ.

“ಎಪ್ಪತ್ತುಗಿರಿ ನೋಡುವುದಕ್ಕಿಂತ ಕಪ್ಪತ್ತಗಿರಿ ನೋಡುವುದೇ ಮೇಲು” ಎಂಬ ಜನಪದ ನುಡಿ ಕಪ್ಪತ್ತಗುಡ್ಡದ ವೈಭವವನ್ನು ಸಾರುತ್ತದೆ. ಔಷಧೀಯ ಸಸ್ಯಗಳ ಆಗರ, ಜೀವವೈವಿಧ್ಯದ ನೆಲೆ, ಪರಿಸರ ಅಧ್ಯಯನದ ಪ್ರಯೋಗಾಲಯ, ಜನಪದ ಕಥೆಗಳ ತೊಟ್ಟಿಲು ಹಾಗೂ ಏಷ್ಯಾದಲ್ಲಿಯೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಪ್ಪತ್ತಗುಡ್ಡ ಇಂದು ಉತ್ತರ ಕರ್ನಾಟಕದ ಪ್ರಮುಖ ಪರಿಸರ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ.

ಸುಮಾರು 33 ಸಾವಿರ ಹೆಕ್ಟೇರ್ ವ್ಯಾಪ್ತಿಯಲ್ಲಿ ಶಿರಹಟ್ಟಿ, ಮುಂಡರಗಿ ಹಾಗೂ ಗದಗ ತಾಲೂಕುಗಳಲ್ಲಿ ಹರಡಿರುವ ಈ ಗಿರಿಶ್ರೇಣಿ ಬಿಂಕದಕಟ್ಟಿಯಿಂದ ಸಿಂಗಟಾಲೂರಿನವರೆಗೆ ಸುಮಾರು 64 ಕಿಲೋಮೀಟರ್ ವಿಸ್ತಾರ ಹೊಂದಿದೆ. ಬೇಸಿಗೆಯಲ್ಲಿ ಬೋಳುಗುಡ್ಡದಂತೆ ಕಾಣುವ ಈ ಪ್ರದೇಶ ಮಳೆಗಾಲದಲ್ಲಿ ಹಸಿರು ಉಡುಗೆಯುಟ್ಟು ಪ್ರಕೃತಿಯ ಮನಮೋಹಕ ಸೌಂದರ್ಯವನ್ನು ಅನಾವರಣಗೊಳಿಸುತ್ತದೆ.

ಅರಣ್ಯ ಇಲಾಖೆಯ ಪರಿಸರ ಕಾಳಜಿ

ಕಪ್ಪತ್ತಗುಡ್ಡಕ್ಕೆ ಆಗಮಿಸುವ ಪ್ರವಾಸಿಗರಲ್ಲಿ ಪರಿಸರ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಹಲವು ವಿನೂತನ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಮಳೆಗಾಲದಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ 10 ಸಾವಿರಕ್ಕೂ ಹೆಚ್ಚು ವಿವಿಧ ಜಾತಿಯ ಬೀಜದುಂಡೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಗಿಡ ನೆಡುವ ಅಭಿಯಾನಕ್ಕೆ ಉತ್ತೇಜನ ನೀಡಲಾಗುತ್ತಿದೆ.

ಇದರ ಜೊತೆಗೆ ಪ್ಲಾಸ್ಟಿಕ್ ಮುಕ್ತ ಕಪ್ಪತ್ತಗುಡ್ಡ ನಿರ್ಮಾಣದ ಉದ್ದೇಶದಿಂದ ಪ್ರವಾಸಿಗರು ತರುವ ಪ್ಲಾಸ್ಟಿಕ್ ಬಾಟಲಿಗಳಿಗೆ ಸ್ಟಿಕ್ಕರ್ ಅಳವಡಿಸಿ, ಹಿಂದಿರುಗುವಾಗ ಅವುಗಳನ್ನು ಮರಳಿ ತರಿಸುವ ವ್ಯವಸ್ಥೆ ಮಾಡಲಾಗಿದೆ. ಈ ಯೋಜನೆಯಿಂದ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣದಲ್ಲಿ ಗಮನಾರ್ಹ ಯಶಸ್ಸು ದೊರೆತಿದೆ.

ಕಪ್ಪತ್ತಗುಡ್ಡವನ್ನು ಇನ್ನಷ್ಟು ಹಸಿರುಗೊಳಿಸುವ ಹಾಗೂ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಲಾಖೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಪ್ಪತ್ತಗುಡ್ಡ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ ತಿಳಿಸಿದ್ದಾರೆ.

ಗಾಳಿಗುಂಡಿ ಬಸವಣ್ಣ, ಪವನಚಕ್ರಗಳ ಆಕರ್ಷಣೆ

ಕಪ್ಪತಮಲ್ಲೇಶ್ವರ ದೇವಸ್ಥಾನದಿಂದ ಮುಂದೆ ಚಾರಣ ಮಾಡಿದರೆ ಸಿಗುವ ಗಾಳಿಗುಂಡಿ ಬಸವಣ್ಣ ದೇವಾಲಯ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ. ಗುಡ್ಡದ ತುದಿಯಲ್ಲಿ ಅಳವಡಿಸಿರುವ ಬೃಹತ್ ಪವನಚಕ್ರಗಳು, ನಿರಂತರ ಬೀಸುವ ತಂಗಾಳಿ ಹಾಗೂ ಅಲ್ಲಿಂದ ಕಾಣುವ ವಿಹಂಗಮ ದೃಶ್ಯಗಳು ಪ್ರವಾಸಿಗರನ್ನು ಮನಸೂರೆಗೊಳಿಸುತ್ತವೆ.

ಜೀವವೈವಿಧ್ಯದ ಅಪರೂಪದ ತಾಣ

ಕಪ್ಪತ್ತಗುಡ್ಡ ಔಷಧೀಯ ಸಸ್ಯಗಳ ಆಗರವಾಗಿದ್ದು, ಆಯುರ್ವೇದ ವಿದ್ಯಾರ್ಥಿಗಳು ಹಾಗೂ ಸಂಶೋಧಕರ ಅಧ್ಯಯನ ಕೇಂದ್ರವಾಗಿದೆ. ಚಿರತೆ, ಕರಡಿ, ತೋಳ, ನರಿ, ಪುನುಗು ಬೆಕ್ಕು, ಚುಕ್ಕೆ ಜಿಂಕೆ, ಸಾರಂಗ, ಮುಳ್ಳುಹಂದಿ ಸೇರಿದಂತೆ ಹಲವು ವನ್ಯಜೀವಿಗಳು ಇಲ್ಲಿ ಆಶ್ರಯ ಪಡೆದಿವೆ. ನವಿಲು, ಬುಲ್‌ಬುಲ್, ಸನ್‌ಬರ್ಡ್, ಮಿಂಚುಳ್ಳಿ, ಬ್ಲ್ಯಾಕ್ ಡ್ರಾಂಗೋ ಸೇರಿದಂತೆ ವೈವಿಧ್ಯಮಯ ಪಕ್ಷಿಗಳು ಪಕ್ಷಿ ವೀಕ್ಷಕರು ಹಾಗೂ ಛಾಯಾಗ್ರಾಹಕರನ್ನು ಸೆಳೆಯುತ್ತಿವೆ.

ಬೆಟ್ಟದ ತಪ್ಪಲಿನಲ್ಲಿರುವ ಅರಣ್ಯ ಇಲಾಖೆಯ ಶ್ರೀ ಕಪ್ಪತಮಲ್ಲೇಶ್ವರ ದೈವೀವನದಲ್ಲಿ ನೂರಾರು ಔಷಧೀಯ ಸಸ್ಯಗಳನ್ನು ಬೆಳೆಸಲಾಗಿದ್ದು, ಪ್ರತಿಯೊಂದು ಸಸ್ಯಕ್ಕೂ ಮಾಹಿತಿ ಫಲಕ ಅಳವಡಿಸಲಾಗಿದೆ. ಪ್ರವಾಸಿಗರಿಗೆ ಉಚಿತ ಪ್ರವೇಶವಿದ್ದು, ಪರಿಸರ ಶಿಕ್ಷಣದ ಕೇಂದ್ರವಾಗಿ ಇದು ರೂಪುಗೊಂಡಿದೆ.

ಹೋರಾಟದಿಂದ ಉಳಿದ ಹಸಿರು ಸಂಪತ್ತು

ಹೆಮಟೈಟ್, ಲಿಮೋನೈಟ್, ತಾಮ್ರ, ಮ್ಯಾಂಗನೀಸ್ ಹಾಗೂ ಚಿನ್ನ ಸೇರಿದಂತೆ ಹಲವು ಖನಿಜ ಸಂಪತ್ತು ಹೊಂದಿರುವ ಕಪ್ಪತ್ತಗುಡ್ಡದಲ್ಲಿ ಹಿಂದೆ ಗಣಿಗಾರಿಕೆ ನಡೆಸಲು ಯತ್ನಿಸಲಾಗಿತ್ತು. ಆದರೆ ವಿವಿಧ ಮಠಾಧೀಶರು, ಪರಿಸರ ಹೋರಾಟಗಾರರು, ಚಿಂತಕರು ಹಾಗೂ ನಾಗರಿಕರ ಹೋರಾಟದಿಂದ ಈ ಹಸಿರು ಪ್ರದೇಶ ಉಳಿದುಕೊಂಡಿದೆ.

ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಸೇರಿದಂತೆ ಅನೇಕ ಪರಿಸರ ಪ್ರೇಮಿಗಳು ಕಪ್ಪತ್ತಗುಡ್ಡದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದ ಪರಿಣಾಮ, ಇಂದು ಇದು ಉತ್ತರ ಕರ್ನಾಟಕದ ಪರಿಸರ ಸಮತೋಲನ ಕಾಪಾಡುವ ಪ್ರಮುಖ ಹಸಿರು ಸಂಪತ್ತಾಗಿ ಉಳಿದಿದೆ.

ಮಳೆಗಾಲದಲ್ಲಿ ಕಪ್ಪತ್ತಗುಡ್ಡದ ಸೌಂದರ್ಯ ಮತ್ತಷ್ಟು ಹೆಚ್ಚಾಗಿದ್ದು, ಶುದ್ಧ ಗಾಳಿ, ಹಸಿರು ಪರಿಸರ, ಔಷಧೀಯ ಸಸ್ಯ ಸಂಪತ್ತು ಹಾಗೂ ಚಾರಣದ ಅನುಭವ ಬಯಸುವವರಿಗೆ ಇದು ಅತ್ಯುತ್ತಮ ಪ್ರವಾಸಿ ತಾಣವಾಗಿದೆ.

“ಮಳೆಗಾಲದ ಹಸಿರು ಹೊದಿಕೆಯಲ್ಲಿ ಕಂಗೊಳಿಸುತ್ತಿರುವ ಕಪ್ಪತ್ತಗುಡ್ಡ ಕೇವಲ ಪ್ರವಾಸಿ ತಾಣವಲ್ಲ, ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಜೀವಂತ ಪಾಠಶಾಲೆಯಾಗಿದೆ. ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯ ಎಸೆಯದೆ ಪರಿಸರ ಸಂರಕ್ಷಣೆಗೆ ಸಹಕರಿಸಬೇಕು.”

– ಮಂಜುನಾಥ ಮೇಗಲಮನಿ, ವಲಯ ಅರಣ್ಯಾಧಿಕಾರಿ, ಕಪ್ಪತ್ತಗುಡ್ಡ

ಕಾರ್ಗಿಲ್ ವೀರರ ತ್ಯಾಗ ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗಡಿಯಲ್ಲಿ ಹಗಲಿರುಳು ದೇಶವನ್ನು ಕಾಪಾಡುತ್ತಿರುವ ಸೈನಿಕರ ತ್ಯಾಗದಿಂದಲೇ ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. 1999ರ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರಯೋಧರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.

ನರೇಗಲ್ಲದ ನಿವೃತ್ತ ಸೈನಿಕರ ಸಂಘ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳಲ್ಲಿ ದೇಶಭಕ್ತಿ ಹಾಗೂ ರಾಷ್ಟ್ರೀಯ ಚಿಂತನೆ ಬೆಳೆಸುವ ಅಗತ್ಯವಿದೆ. ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಯಾರ ಆಹ್ವಾನಕ್ಕೂ ಕಾಯದೆ ಸ್ವಯಂಪ್ರೇರಿತವಾಗಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜಮುಖಿ ಕಾರ್ಯಗಳ ಮೂಲಕ ನರೇಗಲ್ಲದ ನಿವೃತ್ತ ಸೈನಿಕರ ಸಂಘ ಉತ್ತಮ ಮಾದರಿಯಾಗಿದೆ ಎಂದು ಹೇಳಿದರು.

ಮುತ್ತಣ್ಣ ಪಲ್ಲೇದ ಮಾತನಾಡಿ, ನಿವೃತ್ತ ಸೈನಿಕರು ತಮ್ಮ ಹೋರಾಟದ ಮನೋಭಾವನೆಯನ್ನು ಇಂದಿಗೂ ಉಳಿಸಿಕೊಂಡಿರುವುದು ಶ್ಲಾಘನೀಯ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರನ್ನು ಸದಾ ಸ್ಮರಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆ ಎಂದರು.

ಡಾ. ಕೆ.ಬಿ. ಧನ್ನೂರ ಮಾತನಾಡಿ, ಸೈನಿಕರೇ ನಿಜವಾದ ದೇಶಭಕ್ತರು ಮತ್ತು ನಿಷ್ಕಾಮ ಕರ್ಮಯೋಗಿಗಳು. ಶಾಲೆ-ಕಾಲೇಜುಗಳಲ್ಲಿ ಎನ್‌ಸಿಸಿ ಕಡ್ಡಾಯಗೊಳಿಸಿದರೆ ಉತ್ತಮ ಸೈನಿಕರನ್ನು ರೂಪಿಸಲು ನೆರವಾಗಲಿದೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಮನೋಭಾವ ಬೆಳೆಸುವ ಕಾರ್ಯವನ್ನು ನಿವೃತ್ತ ಸೈನಿಕರ ಸಂಘ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಬಸವರಾಜ ವಂಕಲಕುಂಟಿ ಮಾತನಾಡಿ, ಭಾರತೀಯ ಯೋಧರು ಸಮರ್ಥ ಯುದ್ಧತಂತ್ರದಿಂದ ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿದರು. ದೇಶದೊಳಗಿನ ಹಿತಶತ್ರುಗಳ ವಿರುದ್ಧವೂ ಜಾಗೃತ ಮನೋಭಾವ ಅಗತ್ಯವಾಗಿದೆ. ಗಾಂಧಿ ಭವನವನ್ನು ಜೀರ್ಣೋದ್ಧಾರ ಮಾಡಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಅಶೋಕ ಬೇವಿನಕಟ್ಟಿ ಮಾತನಾಡಿ, ದೇಶಕ್ಕೆ ಸಂಕಷ್ಟ ಬಂದಾಗ ಸೂಕ್ತ ನಿರ್ಧಾರಗಳನ್ನು ಕೈಗೊಂಡು ದೇಶರಕ್ಷಣೆಗೆ ಮುಂದಾದ ನಾಯಕರನ್ನು ಸ್ಮರಿಸಬೇಕು. ನಿವೃತ್ತ ಸೈನಿಕರು ಇಂದಿಗೂ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯರಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಸುರೇಶ ಹಳ್ಳಿಕೇರಿ ಕಾರ್ಗಿಲ್ ಯುದ್ಧದ ಹಿನ್ನೆಲೆ ಮತ್ತು ಪರಿಣಾಮಗಳ ಕುರಿತು ವಿವರಿಸಿದರು.

ಶಿವಪುತ್ರಪ್ಪ ಸಂಗನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರಂಭದಲ್ಲಿ ಶಾಂತಗೌಡ ಮತ್ತು ಕುಮಾರ ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ದಾದಾಸಾಬ ನದಾಫ್ ನಿರೂಪಿಸಿದರು. ಮಲ್ಲನಗೌಡ ಮಲ್ಲನಗೌಡ್ರ ಸ್ವಾಗತಿಸಿದರು. ಪ್ರಭುದೇವ ಮುಕ್ಕಣ್ಣವರ ವಂದಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರು ಭಾಗವಹಿಸಿ ಕಾರ್ಗಿಲ್ ವೀರಯೋಧರಿಗೆ ನಮನ ಸಲ್ಲಿಸಿದರು.

“ಗಡಿಯಲ್ಲಿ ನಿಂತು ದೇಶವನ್ನು ಕಾಯುವ ಸೈನಿಕರ ತ್ಯಾಗದಿಂದಲೇ ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ. ಕಾರ್ಗಿಲ್ ವೀರರ ತ್ಯಾಗವನ್ನು ಸದಾ ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.”

– ಅರುಣ ಕುಲಕರ್ಣಿ, ನಿವೃತ್ತ ಮುಖ್ಯ ಶಿಕ್ಷಕ

ಅಂಕಗಳ ಜತೆಗೆ ಕೌಶಲ್ಯವೂ ಯಶಸ್ಸಿನ ಮೆಟ್ಟಿಲು: ಜ.ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜಕ್ಕಾಗಿ ಬದುಕಿದವರನ್ನೇ ಇತಿಹಾಸ ಸ್ಮರಿಸುತ್ತದೆ. ತ್ಯಾಗವೇ ಮನುಷ್ಯನಿಗೆ ಅಮರತ್ವ ತಂದುಕೊಡುತ್ತದೆ. ಶಿಕ್ಷಣ ಸೇವೆ, ಸಮಾಜಮುಖಿ ಬದುಕು ಹಾಗೂ ಕೌಶಲ್ಯಾಧಾರಿತ ಶಿಕ್ಷಣವೇ ಯುವಜನರ ಭವಿಷ್ಯ ರೂಪಿಸುವ ಶಕ್ತಿಗಳಾಗಿದ್ದು, ವಿದ್ಯಾರ್ಥಿಗಳು ಅಂಕಗಳ ಜೊತೆಗೆ ಕೌಶಲ್ಯವನ್ನೂ ಬೆಳೆಸಿಕೊಳ್ಳಬೇಕು ಎಂದು ಗದಗ ತೋಂಟದಾರ್ಯ ಮಠದ ಪೂಜ್ಯ ಜ.ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು.

ನಗರದ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಆಯೋಜಿಸಿದ್ದ 96ನೇ ಜಯಂತ್ಯುತ್ಸವ ಹಾಗೂ 12ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬಡ ಮಕ್ಕಳ ಶಿಕ್ಷಣ ಹಾಗೂ ಸಮಾಜಸೇವೆಗೆ ತಮ್ಮ ಸಂಪೂರ್ಣ ಬದುಕನ್ನೇ ಸಮರ್ಪಿಸಿದ್ದ ಅಪರೂಪದ ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳು ತಮ್ಮ ವೇತನ ಹಾಗೂ ನಿವೃತ್ತಿಯ ನಂತರದ ಪಿಂಚಣಿಯನ್ನೂ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿನಿಯೋಗಿಸಿದ್ದು, ಅವರ ಆದರ್ಶ ಇಂದಿಗೂ ಆಶ್ರಮದ ಸೇವಾಕಾರ್ಯಗಳಲ್ಲಿ ಜೀವಂತವಾಗಿದೆ ಎಂದು ಹೇಳಿದರು.

ಆಶ್ರಮವು ಉಚಿತ ಶಿಕ್ಷಣ, ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ವಿಕಾಸದ ಮೂಲಕ ನೂರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗುತ್ತಿದೆ. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಕಾರ್ಯವೂ ಶ್ಲಾಘನೀಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕೃಷ್ಣೇಗೌಡ ಪಾಟೀಲ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಅಂಕಗಳಿಂದಲ್ಲ, ತಮ್ಮ ಕೌಶಲ್ಯದಿಂದ ಗುರುತಿಸಿಕೊಳ್ಳಬೇಕು. ಹೈಸ್ಕೂಲ್ ಹಂತವೇ ಭವಿಷ್ಯದ ಭದ್ರ ಅಡಿಪಾಯವಾಗಿದ್ದು, ಶಿಸ್ತು, ಪರಿಶ್ರಮ ಹಾಗೂ ಸ್ಪಷ್ಟ ಗುರಿಯೊಂದಿಗೆ ಅಧ್ಯಯನ ಮಾಡಬೇಕು ಎಂದರು.

ಡಿಗ್ರಿಗಿಂತ ಕೌಶಲ್ಯಕ್ಕೆ ಹೆಚ್ಚು ಮಹತ್ವ ದೊರೆಯುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸಮಸ್ಯೆ ಪರಿಹಾರ ಸಾಮರ್ಥ್ಯ, ತಾಂತ್ರಿಕ ಜ್ಞಾನ ಹಾಗೂ ಹೊಸ ಕೌಶಲ್ಯಗಳನ್ನು ನಿರಂತರವಾಗಿ ಕಲಿಯುವುದು ಅಗತ್ಯವಾಗಿದೆ ಎಂದು ತಿಳಿಸಿದರು. ‘ಐಸ್ ಕ್ಯೂಬ್ ಥಿಯರಿ’ ಉದಾಹರಿಸಿ, ಯಶಸ್ಸಿನ ಹಿಂದೆ ನಿರಂತರ ಪರಿಶ್ರಮ ಅಡಗಿರುತ್ತದೆ ಎಂದು ಹೇಳಿದರು.

ಆಶ್ರಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಜಿ.ಎನ್.ಟಿ.ಟಿ.ಎಫ್. ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ ಅವರು, ಆಶ್ರಮದ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ಮಾತನಾಡಿ, ಕಳೆದ 12 ವರ್ಷಗಳಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿಯೇ ನಗದು ಬಹುಮಾನ, ಪ್ರಮಾಣಪತ್ರ ಹಾಗೂ ಕಾಲೇಜು ಬ್ಯಾಗ್‌ನೊಂದಿಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ ಎಂದರು.

ಆಶ್ರಮದಲ್ಲಿ ಟ್ಯೂಷನ್ ಪಡೆದ 70 ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಪುರಸ್ಕಾರ ನೀಡಲಾಗಿದೆ. ಬೇಸಿಗೆ ರಜೆಯಲ್ಲಿ 8, 9 ಹಾಗೂ 10ನೇ ತರಗತಿಯ ಸುಮಾರು 700ರಿಂದ 800 ವಿದ್ಯಾರ್ಥಿಗಳಿಗೆ 12 ಶಿಕ್ಷಕರು ಉಚಿತ ಬೋಧನೆ ಮಾಡುತ್ತಿದ್ದಾರೆ. ಕಲಿಕೆಗೆ ಅತ್ಯಾಧುನಿಕ ಎರಡು ಡಿಜಿಟಲ್ ಬೋರ್ಡ್‌ಗಳನ್ನು ದಾನಿಗಳು ನೀಡಿದ್ದಾರೆ. ತೋಂಟದಾರ್ಯ ಶಿಕ್ಷಣ ಸಮಿತಿಯಲ್ಲಿ 10 ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ದಾನಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಆಶ್ರಮದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗೋಪಾಲ ಅಗರವಾಲ್, ಲಕ್ಷ್ಮಣ ಜೋಗದಂಡಕರ, ಸಂತೋಷ ಪುಣೇಕರ, ನೇಹಾ ಖಟವಟೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಆಂಜನೇಯ ಕಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ತುಮ್ಮರಮಟ್ಟಿ ನಿರೂಪಿಸಿದರು. ಶಿವಪ್ಪ ಕತ್ತಿ ವಂದಿಸಿದರು. ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು, ಪಾಲಕರು, ಗಣ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ವಿದ್ಯಾರ್ಥಿಗಳು ಕೇವಲ ಅಂಕಗಳ ಬೆನ್ನಟ್ಟದೇ, ಜ್ಞಾನ, ಕೌಶಲ್ಯ ಮತ್ತು ವ್ಯಕ್ತಿತ್ವವನ್ನು ಬೆಳೆಸಿಕೊಂಡಾಗ ಮಾತ್ರ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ.”

– ಜ.ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿ

ಧರ್ಮ ಪಾಲನೆಯಿಂದಲೇ ಜೀವನಕ್ಕೆ ಶಾಂತಿ, ಸಮೃದ್ಧಿ: ರಂಭಾಪುರಿ ಶ್ರೀ

0

ವಿಜಯಸಾಕ್ಷಿ ಸುದ್ದಿ, ರೋಣ: ಮನುಷ್ಯನ ಆದರ್ಶ ಬದುಕಿಗೆ ಉತ್ತಮ ಚಿಂತನೆಗಳು ಅಗತ್ಯವಾಗಿದ್ದು, ಜೀವನದ ಉನ್ನತಿ, ಸಮೃದ್ಧಿ ಹಾಗೂ ಶಾಂತಿಗಾಗಿ ಧರ್ಮ ಪಾಲನೆ ಅತ್ಯಂತ ಮುಖ್ಯ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ರೋಣ ತಾಲೂಕಿನ ಕೌಜಗೇರಿ ಗ್ರಾಮದಲ್ಲಿ ಶ್ರೀಮದ್ ರಂಭಾಪುರಿ ಶಾಖಾ ಹಿರೇಮಠದ ನೂತನ ಮಠದ ಉದ್ಘಾಟನೆ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ನಡೆದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದೇಹವು ದೇವರ ದೇಗುಲವಾಗಿದ್ದು, ಸತ್ಯ, ಶಾಂತಿ ಸೇರಿದಂತೆ ದೈವೀ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮನಸ್ಸಿನಲ್ಲಿರುವ ಅಸುರೀ ಗುಣಗಳನ್ನು ತೊರೆದು ಪರಿಶುದ್ಧ ಬದುಕು ನಡೆಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಅಧರ್ಮಕ್ಕೆ ಹಲವು ದಾರಿಗಳಿದ್ದರೂ ಧರ್ಮದ ಮಾರ್ಗ ಒಂದೇ. ಶ್ರೀ ಜಗದ್ಗುರು ರೇಣುಕಾಚಾರ್ಯರು ‘ಸಿದ್ಧಾಂತ ಶಿಖಾಮಣಿ’ಯಲ್ಲಿ ಬೋಧಿಸಿದ ಜೀವನ ಮೌಲ್ಯಗಳು ಹಾಗೂ ಅಹಿಂಸಾದಿ ದಶಧರ್ಮ ಸೂತ್ರಗಳು ಇಂದಿಗೂ ಜೀವನ ವಿಕಾಸಕ್ಕೆ ದಾರಿದೀಪವಾಗಿವೆ ಎಂದು ಅವರು ತಿಳಿಸಿದರು.

ಕೌಜಗೇರಿ ಹಿರೇಮಠವು ರಂಭಾಪುರಿ ಪೀಠದ ಶಾಖಾಮಠವಾಗಿದ್ದು, ನೂತನ ಮಠ ನಿರ್ಮಿಸಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಲಮೂರ್ತಿ ಪ್ರತಿಷ್ಠಾಪಿಸಿರುವುದು ಸಂತಸದ ಸಂಗತಿಯಾಗಿದೆ. ಇದಕ್ಕಾಗಿ ಶ್ರಮಿಸಿದ ಸದ್ಭಕ್ತರಿಗೆ ಅಭಿನಂದನೆ ಸಲ್ಲಿಸಿದರು.

ಸಮಾರಂಭದ ನೇತೃತ್ವ ವಹಿಸಿದ್ದ ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಣತೆ ಬೆಳಗುತ್ತದೆ, ಉರಿಯುವುದಿಲ್ಲ; ಆದರೆ ಮನುಷ್ಯ ಉರಿಯುತ್ತಿದ್ದಾನೆ, ಬೆಳಗುತ್ತಿಲ್ಲ. ಯಾವುದೇ ಕೆಲಸವನ್ನು ಶುದ್ಧ ಮನಸ್ಸಿನಿಂದ ಮಾಡಿದಾಗ ಅದರ ಫಲ ದೊಡ್ಡದಾಗುತ್ತದೆ. ಮುರಿಯುವುದಕ್ಕಿಂತ ಜೋಡಿಸುವುದು, ಕೆಡವುವುದಕ್ಕಿಂತ ಕಟ್ಟುವುದು ಸಮಾಜದ ಸೌಹಾರ್ದಕ್ಕೆ ಅಗತ್ಯ ಎಂದರು.

ಬೆನಹಾಳ ಹಿರೇಮಠದ ಸದಾಶಿವ ಮಹಾಂತ ಶಿವಾಚಾರ್ಯ ಸ್ವಾಮೀಜಿ ಪ್ರಾತಃಕಾಲದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮೂರ್ತಿ ಪ್ರತಿಷ್ಠಾಪನೆ ವಿಧಿವಿಧಾನಗಳನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಯಲಬುರ್ಗಾ ಶ್ರೀಧರಮುರಡಿ ಹಿರೇಮಠದ ಬಸವೇಶ್ವರ ಶಿವಾಚಾರ್ಯರು, ನರಗುಂದ ಪತ್ರಿವನಮಠದ ಡಾ. ಗುರುಸಿದ್ಧವೀರ ಶಿವಾಚಾರ್ಯರು, ರಾಜೂರ-ಅಡ್ನೂರಿನ ಅಭಿನವ ಪಂಚಾಕ್ಷರ ಶಿವಾಚಾರ್ಯರು, ಅಸೂಟಿ ಹಿರೇಮಠದ ರೇವಣಸಿದ್ಧಯ್ಯ ಸ್ವಾಮೀಜಿ, ಜಗದೀಶಯ್ಯ ಹಿರೇಮಠ ಹಾಗೂ ಸಿದ್ಧಲಿಂಗಯ್ಯ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಶಿಧರ ಭಿಕ್ಷಾವರ್ತಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ ವಾಲಿ ಸ್ವಾಗತಿಸಿದರು. ರಾಜೇಶ್ವರಿ ಮತ್ತು ಸೌಜನ್ಯ ಹಿರೇಮಠ ಪ್ರಾರ್ಥನೆ ನೆರವೇರಿಸಿದರು. ಪ್ರವೀಣ ಔದಕ್ಕನವರ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನ ಗ್ರಾಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ವೈಭವದಿಂದ ಜರುಗಿತು. ಬಳಿಕ ಅನ್ನದಾಸೋಹ ನಡೆಯಿತು. ಗ್ರಾಮದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

“ಜೀವನದ ಸಮೃದ್ಧಿ ಮತ್ತು ಶಾಂತಿಗೆ ಧರ್ಮ ಪಾಲನೆ ಅತ್ಯಗತ್ಯ. ಮನುಷ್ಯನ ಆದರ್ಶ ಬದುಕಿಗೆ ಉತ್ತಮ ಚಿಂತನೆಗಳೇ ಅಡಿಪಾಯ.”

– ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀ ರಂಭಾಪುರಿ ಪೀಠ