Home Blog

ರಾಜೀನಾಮೆ ನೀಡುವವರನ್ನು ತಡೆಯಲು ಸಾಧ್ಯವಿಲ್ಲ: ಪಕ್ಷವೇ ಮುಖ್ಯ ಎಂದ ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಉಂಟಾಗಿರುವ ಅಸಮಾಧಾನದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಹೇಳಿಕೆ ನೀಡಿದ್ದು, ರಾಜೀನಾಮೆ ನೀಡಲು ಮುಂದಾಗುವವರನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ, “ರಾಜೀನಾಮೆ ಕೊಡುವವರನ್ನು ಯಾರೂ ತಡೆಯಲು ಸಾಧ್ಯವಿಲ್ಲ. ರಾಜೀನಾಮೆ ನೀಡಿದ ಕೆಲವೇ ಕ್ಷಣಗಳಲ್ಲಿ ಅದನ್ನು ಅಂಗೀಕರಿಸುತ್ತೇನೆ. ಇದೆಲ್ಲವೂ ರಾಜಕೀಯದಲ್ಲಿ ನಡೆಯುವ ಸಹಜ ಪ್ರಕ್ರಿಯೆ. ರಾಜಕೀಯ ಭವಿಷ್ಯ ಬೇಕಾದರೆ ಪಕ್ಷವೇ ಮುಖ್ಯ” ಎಂದು ಹೇಳಿದರು.

ಕೆಲವು ಶಾಸಕರು ರಾಜೀನಾಮೆ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ತಮ್ಮ ಹಿಂದಿನ ರಾಜಕೀಯ ಅನುಭವವನ್ನು ಉಲ್ಲೇಖಿಸಿದರು.

“ಧರಂಸಿಂಗ್ ಹಾಗೂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ನನಗೂ ಮತ್ತು ಪರಮೇಶ್ವರ್ ಅವರಿಗೂ ಸಚಿವ ಸ್ಥಾನ ಸಿಗಲಿಲ್ಲ. ಆಗ ನಾವೂ ರಾಜೀನಾಮೆ ನೀಡಬಹುದಿತ್ತು. ಆದರೆ ತಾಳ್ಮೆಯಿಂದ ಇದ್ದೆವು. ವೀರೇಂದ್ರ ಪಾಟೀಲ್ ಅವರ ಅವಧಿಯಲ್ಲಿ ಬಂಗಾರಪ್ಪ ಅವರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಬಳಿಕ ಅವರು ಮುಖ್ಯಮಂತ್ರಿಯಾದರು. ಮಲ್ಲಿಕಾರ್ಜುನ ಖರ್ಗೆ ಅವರಿಗೂ ಹಲವು ಸಂದರ್ಭಗಳಲ್ಲಿ ಅವಕಾಶ ಸಿಗಲಿಲ್ಲ” ಎಂದು ಹೇಳಿದರು.

ಅಸಮಾಧಾನ ಹೊಂದಿರುವ ಶಾಸಕರಿಗೆ ತಾಳ್ಮೆ ಅಗತ್ಯವಿದೆ ಎಂದು ಸಲಹೆ ನೀಡಿದ ಡಿ.ಕೆ. ಶಿವಕುಮಾರ್, “ಎಲ್ಲಕ್ಕಿಂತ ಪಕ್ಷ ಮುಖ್ಯ. ನಿಗಮ, ಮಂಡಳಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಇರುವವರು ರಾಜೀನಾಮೆ ನೀಡುವಂತೆ ಸೂಚಿಸುತ್ತೇನೆ. ಅಧಿಕಾರ ಹಂಚಿಕೆ ಕುರಿತು ಮೊದಲೇ ಎರಡುವರೆ ವರ್ಷದ ಅವಧಿಯ ಬಗ್ಗೆ ತಿಳಿಸಲಾಗಿತ್ತು” ಎಂದರು.

ಮೊದಲು ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು. ಬಳಿಕ ಶಾಸಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ ಅವರು, ಹೊಸ ಬೆಳವಣಿಗೆಗಳಿದ್ದರೆ ತಾವೇ ಮಾಧ್ಯಮಗಳ ಮುಂದೆ ಮಾಹಿತಿ ನೀಡುವುದಾಗಿ ಹೇಳಿದರು.

750 ಕಿ.ಮೀ ಪಾದಚಾರಿ ಮಾರ್ಗ ಕ್ಲೀನ್: ಪೀಣ್ಯ ಫ್ಲೈಓವರ್ʼನಲ್ಲಿ ರಾತ್ರಿ ಸಂಚಾರ ನಿಷೇಧ

ಬೆಂಗಳೂರು: ನಗರದ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮುಕ್ತಗೊಳಿಸುವ ಉದ್ದೇಶದಿಂದ ಬಿಬಿಎಂಪಿ ಹಾಗೂ ನಗರಾಡಳಿತ ಅಧಿಕಾರಿಗಳು ನಡೆಸಿದ ‘ಸುರಕ್ಷಿತ ಪಾದಚಾರಿ ಮಾರ್ಗ’ ಅಭಿಯಾನ ಯಶಸ್ವಿಯಾಗಿದ್ದು, ಕಳೆದ ಒಂದು ತಿಂಗಳಲ್ಲಿ 750 ಕಿಲೋಮೀಟರ್‌ಗೂ ಹೆಚ್ಚು ಪಾದಚಾರಿ ಮಾರ್ಗಗಳಲ್ಲಿದ್ದ ಅತಿಕ್ರಮಣಗಳನ್ನು ತೆರವುಗೊಳಿಸಲಾಗಿದೆ.

ಜುಲೈ 1ರಿಂದ ಜುಲೈ 31ರವರೆಗೆ ನಡೆದ ವಿಶೇಷ ಅಭಿಯಾನದಲ್ಲಿ ನಗರದ ವಿವಿಧ ಭಾಗಗಳಲ್ಲಿದ್ದ ಅಂಗಡಿಗಳು, ತಳ್ಳುಗಾಡಿಗಳು ಹಾಗೂ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಸಾರ್ವಜನಿಕರು, ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಸುರಕ್ಷಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ. ತೆರವು ಕಾರ್ಯಾಚರಣೆ ಬಳಿಕ ಮತ್ತೆ ಅತಿಕ್ರಮಣವಾಗದಂತೆ ತಡೆಯಲು ಬಿಬಿಎಂಪಿ ವಲಯ ಅಧಿಕಾರಿಗಳು ಸಂಚಾರ ಪೊಲೀಸರು ಹಾಗೂ ಶಿಸ್ತು ಪಾಲನಾ ಸಿಬ್ಬಂದಿಯೊಂದಿಗೆ ಜಂಟಿಯಾಗಿ ದಿಢೀರ್ ತಪಾಸಣೆ ನಡೆಸಲು ಮುಂದಾಗಿದ್ದಾರೆ.

ವಲಯವಾರು ತೆರವು ಕಾರ್ಯಾಚರಣೆ:

  • ಸೆಂಟ್ರಲ್ ವಲಯ: 195.85 ಕಿ.ಮೀ
  • ಉತ್ತರ ವಲಯ: 175.75 ಕಿ.ಮೀ
  • ಪಶ್ಚಿಮ ವಲಯ: 168.37 ಕಿ.ಮೀ
  • ದಕ್ಷಿಣ ಮತ್ತು ಪೂರ್ವ ವಲಯ: ತಲಾ 116 ಕಿ.ಮೀಗೂ ಹೆಚ್ಚು

ಸೋಮವಾರ ಒಂದೇ ದಿನ 1.20 ಕಿ.ಮೀ ಪಾದಚಾರಿ ಮಾರ್ಗದ ಅತಿಕ್ರಮಣ ತೆರವುಗೊಳಿಸಲಾಗಿದ್ದು, ಜಯನಗರದ 9 ಮತ್ತು 10ನೇ ಮುಖ್ಯ ರಸ್ತೆ ಹಾಗೂ ಎಚ್‌ಎಸ್‌ಆರ್ ಲೇಔಟ್‌ನ 31ನೇ ಮುಖ್ಯ ರಸ್ತೆಯಲ್ಲಿ ತಳ್ಳುಗಾಡಿಗಳು ಮತ್ತು ತಾತ್ಕಾಲಿಕ ಶೆಡ್‌ಗಳನ್ನು ಜಪ್ತಿ ಮಾಡಲಾಗಿದೆ.

ಪೀಣ್ಯ ಮೇಲ್ಸೇತುವೆಯಲ್ಲಿ ರಾತ್ರಿ ಸಂಚಾರ ನಿರ್ಬಂಧ

ಇನ್ನೊಂದೆಡೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಡಾ. ಶ್ರೀ ಶಿವಕುಮಾರ ಸ್ವಾಮೀಜಿ (ಪೀಣ್ಯ) ಮೇಲ್ಸೇತುವೆಯಲ್ಲಿ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಆಗಸ್ಟ್ 12ರವರೆಗೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಸಂಚಾರ ನಿರ್ಬಂಧದ ಸಮಯ:

  • ಸೋಮವಾರದಿಂದ ಶುಕ್ರವಾರದವರೆಗೆ: ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ
  • ಶನಿವಾರ ಮತ್ತು ಭಾನುವಾರ: ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ

ತುಮಕೂರು ಹಾಗೂ ನೆಲಮಂಗಲ ಕಡೆಗೆ ತೆರಳುವ ವಾಹನ ಸವಾರರು ಎಸ್‌ಆರ್‌ಎಸ್ ಅಪ್ಪರ್ ರಾಂಪ್ ಬಳಿ ಕೆಳಗಿಳಿದು ಎನ್‌ಎಚ್-4 ಸರ್ವೀಸ್ ರಸ್ತೆ, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ಹಾಗೂ ಪಾರ್ಲೆ-ಜಿ ಟೋಲ್ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.

ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯಗೂ ಅಸಮಾಧಾನ; ಅದಕ್ಕೇ ಪ್ರಮಾಣವಚನಕ್ಕೆ ಹೋಗಿಲ್ಲ -ರಾಜೇಂದ್ರ ರಾಜಣ್ಣ

ಮೈಸೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಧ್ವನಿಗಳು ಮುಂದುವರಿದಿವೆ. ಸಚಿವ ಸಂಪುಟ ವಿಸ್ತರಣೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಬೇಸರವಿದ್ದು, ಇದೇ ಕಾರಣದಿಂದ ಅವರು ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ತಮ್ಮ ತಂದೆ ಹಾಗೂ ಹಿರಿಯ ನಾಯಕ ರಾಜಣ್ಣ ಅವರಿಗೂ ತೀವ್ರ ಬೇಸರವಾಗಿದೆ ಎಂದು ಹೇಳಿದರು.

“ರಾಜಣ್ಣ ಅವರು ಯಾವಾಗಲೂ ನೇರವಾಗಿ ಮಾತನಾಡುವ ವ್ಯಕ್ತಿ. ಪಕ್ಷದಲ್ಲಿ ನೇರವಾಗಿ ಮಾತನಾಡುವವರಿಗೆ ಅವಕಾಶ ಇಲ್ಲದಂತಾಗಿದೆ. ನಮಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇತ್ತು. ಆದರೆ ನಿರೀಕ್ಷೆ ಈಡೇರಿಲ್ಲ. ಇದರಿಂದ ಸಹಜವಾಗಿಯೇ ಬೇಸರವಾಗಿದೆ. ರಾಜಣ್ಣ ಅವರ ವಿರುದ್ಧ ಯಾವುದೇ ಆರೋಪ ಇರಲಿಲ್ಲ. ಹಿಂದೆ ನಡೆದ ವಿಚಾರ ಆಗಲೇ ಮುಕ್ತಾಯವಾಗಿತ್ತು,” ಎಂದು ತಿಳಿಸಿದರು.

ಪಕ್ಷದ ಕಾರ್ಯವೈಖರಿಯಲ್ಲಿ ಬದಲಾವಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ರಾಜೇಂದ್ರ ರಾಜಣ್ಣ, “ಪಕ್ಷ ಈ ರೀತಿಯ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು. ಹಾಗಾದರೆ ಪಕ್ಷಕ್ಕೇ ಒಳ್ಳೆಯದು. ಇಲ್ಲದಿದ್ದರೆ ಮುಂದಿನ ಚುನಾವಣೆಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗಬಹುದು,” ಎಂದು ಎಚ್ಚರಿಸಿದರು.

ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಬೇಸರವಿದೆ ಎಂದರೆ ಪಕ್ಷ ಬಿಡುವುದಿಲ್ಲ. ಪಕ್ಷದ ಒಳಗೆಯೇ ನಮ್ಮ ಹೋರಾಟ ಮುಂದುವರಿಯಲಿದೆ,” ಎಂದು ಹೇಳಿದರು.

ಶಾಲೆಯ ಆವರಣದಲ್ಲೇ ಶಿಕ್ಷಕಿಯ ಭೀಕರ ಹತ್ಯೆ; 30 ಸೆಕೆಂಡುಗಳಲ್ಲಿ 34 ಬಾರಿ ಚಾಕು ಇರಿದು ಕೊಂದ ಆರೋಪಿ ಅರೆಸ್ಟ್

0

ಚಂಡೀಗಢ: ಹರಿಯಾಣದ ಫರಿದಾಬಾದ್‌ನಲ್ಲಿ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರನ್ನು ಶಾಲೆಯ ಆವರಣದಲ್ಲೇ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಬೆಚ್ಚಿಬೀಳಿಸಿದೆ. ಘಟನೆಗೆ ಸಂಬಂಧಿಸಿದಂತೆ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಮೃತ ಶಿಕ್ಷಕಿಯನ್ನು 29 ವರ್ಷದ ಸಂಧ್ಯಾ ಎಂದು ಗುರುತಿಸಲಾಗಿದ್ದು, ಆರೋಪಿ ಅಮಿತ್ (21) ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಬುಧವಾರ ಬೆಳಗ್ಗೆ ಮುಸುಕುಧಾರಿ ವ್ಯಕ್ತಿಯೊಬ್ಬ ಶಾಲೆಗೆ ಬಂದು ಶಿಕ್ಷಕಿಯೊಂದಿಗೆ ಮಾತನಾಡಬೇಕಿದೆ ಎಂದು ಹೇಳಿ ಶಾಲೆಯ ಗೇಟ್ ಬಳಿ ಕಾಯುತ್ತಿದ್ದ. ಬಳಿಕ ಸಂಧ್ಯಾ ಹೊರಗೆ ಬಂದ ಕೂಡಲೇ ಆಕೆಯನ್ನು ಎಳೆದುಕೊಂಡು ಹೋಗಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಆರೋಪಿ ಶಿಕ್ಷಕಿಯ ಕುತ್ತಿಗೆ, ಮುಖ, ಎದೆ ಹಾಗೂ ಹೊಟ್ಟೆ ಭಾಗಗಳಿಗೆ ಪದೇಪದೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡು ಶಿಕ್ಷಕಿ ನೆಲಕ್ಕುರುಳಿದ ಬಳಿಕವೂ ದಾಳಿ ಮುಂದುವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿಕ್ಷಕಿಯ ಕಿರುಚಾಟ ಕೇಳಿ ಶಾಲೆಯ ಆಡಳಿತಾಧಿಕಾರಿ ಮಧ್ಯಪ್ರವೇಶಿಸಲು ಯತ್ನಿಸಿದಾಗ, ಆರೋಪಿ ಚಾಕು ತೋರಿಸಿ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಸಂಧ್ಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆ ನಡೆದ ಎರಡು ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಕೃತ್ಯ ಎಸಗಿರುವುದನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಕಳೆದ ಎರಡು ವರ್ಷಗಳಿಂದ ಆರೋಪಿ ಅಮಿತ್ ಶಿಕ್ಷಕಿ ಸಂಧ್ಯಾ ಅವರನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಆತ ಕಿರುಕುಳ ಮುಂದುವರಿಸಿದ್ದ. ಕೆಲ ದಿನಗಳ ಹಿಂದೆ ಸಂಧ್ಯಾ ಅವರು ಅಮಿತ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದಡಿ ಪೊಲೀಸ್ ದೂರು ದಾಖಲಿಸಿದ್ದರು.

ಈ ಪ್ರಕರಣದ ಸೇಡಿನಿಂದಲೇ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ತ್ರಿಷಾ ಕುರಿತು ವಿವಾದಾತ್ಮಕ ಹೇಳಿಕೆ: ಉದಯನಿಧಿ ಸ್ಟಾಲಿನ್ ಪೊಲೀಸ್ ವಶಕ್ಕೆ!

0

ಚೆನ್ನೈ: ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿ ಹಾಗೂ ಪ್ರಸ್ತುತ ವಿರೋಧ ಪಕ್ಷದ ನಾಯಕರಾಗಿರುವ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ತಂಜಾವೂರಿನಲ್ಲಿ ನಡೆದ ಕಾವೇರಿ ನೀರು ಹಂಚಿಕೆ ಕುರಿತ ಪ್ರತಿಭಟನಾ ಸಭೆಯಲ್ಲಿ ನಟಿ ತ್ರಿಷಾ ಕೃಷ್ಣನ್ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ವಿಜಯ್ ನೇತೃತ್ವದ ‘ತಮಿಳಾಗ ವೆಟ್ರಿ ಕಳಗಂ’ (TVK) ಪಕ್ಷ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಏನಿದು ವಿವಾದ?

ತಂಜಾವೂರಿನಲ್ಲಿ ಡಿಎಂಕೆ ಆಯೋಜಿಸಿದ್ದ ಕಾವೇರಿ ನೀರಿನ ಹಕ್ಕು ಕುರಿತ ಪ್ರತಿಭಟನಾ ಸಭೆಯಲ್ಲಿ ಉದಯನಿಧಿ ಸ್ಟಾಲಿನ್ ಮುಖ್ಯಮಂತ್ರಿ ವಿಜಯ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಇದೇ ವೇಳೆ ಸಭೆಯಲ್ಲಿ ಕೆಲವರು ನಟಿ ತ್ರಿಷಾ ಅವರ ಹೆಸರನ್ನು ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಉದಯನಿಧಿ,

“ನೀರು ಎಲ್ಲಿಗೆ ತಲುಪುತ್ತದೋ ಇಲ್ಲವೋ, ಅಲ್ಲಿಗೆ ತಲುಪಲೇಬೇಕು. ನಾನು ಹೇಳಿದ್ದು ಕಾವೇರಿ ನೀರನ್ನು” ಎಂದು ದ್ವಂದ್ವಾರ್ಥ ಬರುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ವಿವಾದಕ್ಕೆ ಕಾರಣವಾಯಿತು.

ಉದಯನಿಧಿ ಅವರ ಹೇಳಿಕೆ ಮಹಿಳೆಯರ ಘನತೆಗೆ ಧಕ್ಕೆ ತರುವಂತಿದೆ ಎಂದು ಆರೋಪಿಸಿರುವ ಟಿವಿಕೆ ಪಕ್ಷದ ನಾಯಕರು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ತಂಜಾವೂರು ಪೊಲೀಸ್ ಠಾಣೆ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ದೂರು ಸಲ್ಲಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ನಾಯಕರು ಮಹಿಳೆಯರ ಬಗ್ಗೆ ಇಂತಹ ಹೇಳಿಕೆ ನೀಡುವುದು ಅಸ್ವೀಕಾರಾರ್ಹ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದೂರು ದಾಖಲಾದ ಬಳಿಕ ಟಿವಿಕೆ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದರಿಂದ, ಚೆನ್ನೈನ ನೀಲಂಗರೈನಲ್ಲಿರುವ ಉದಯನಿಧಿ ಸ್ಟಾಲಿನ್ ನಿವಾಸದ ಸುತ್ತ ಭದ್ರತೆಯನ್ನು ಬಿಗಿಗೊಳಿಸಲಾಯಿತು. ಬಳಿಕ ತಂಜಾವೂರು ಪೊಲೀಸರು ಉದಯನಿಧಿ ಸ್ಟಾಲಿನ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಬಂಗಾರದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗಳ ಪರಿಣಾಮ ದೇಶೀಯ ಚಿನ್ನದ ಮಾರುಕಟ್ಟೆಯಲ್ಲೂ ಕಾಣಿಸಿಕೊಂಡಿದೆ. ಇರಾನ್-ಅಮೆರಿಕ ನಡುವಿನ ಉದ್ವಿಗ್ನತೆ ತಾತ್ಕಾಲಿಕವಾಗಿ ಶಮನಗೊಂಡಿರುವುದು ಹಾಗೂ ತೈಲ ಬೆಲೆಯಲ್ಲಿ ಇಳಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿದೆ.

ಇದೇ ವೇಳೆ ಹೂಡಿಕೆದಾರರು ಮುಂದಿನ ಆರ್ಥಿಕ ಬೆಳವಣಿಗೆಗಳ ಮೇಲೆ ಗಮನಹರಿಸಿದ್ದು, ಮಾತುಕತೆಗಳ ನಿರೀಕ್ಷೆಯಲ್ಲಿದ್ದಾರೆ. ಗುಡ್ ರಿಟರ್ನ್ಸ್ ವರದಿ ಪ್ರಕಾರ, ಆಗಸ್ಟ್ 4, 2026 (ಮಂಗಳವಾರ) 24 ಕ್ಯಾರೆಟ್ ಚಿನ್ನದ ದರದಲ್ಲಿ ಇಳಿಕೆ ದಾಖಲಾಗಿದೆ.

ಇಂದಿನ ಚಿನ್ನದ ದರ

  • 24 ಕ್ಯಾರೆಟ್ ಚಿನ್ನ (1 ಗ್ರಾಂ): ₹14,400 (₹22 ಇಳಿಕೆ)
  • 24 ಕ್ಯಾರೆಟ್ ಚಿನ್ನ (10 ಗ್ರಾಂ): ₹1,44,000 (₹220 ಇಳಿಕೆ)
  • 22 ಕ್ಯಾರೆಟ್ ಚಿನ್ನ (1 ಗ್ರಾಂ): ₹13,200 (₹20 ಇಳಿಕೆ)
  • 22 ಕ್ಯಾರೆಟ್ ಚಿನ್ನ (10 ಗ್ರಾಂ): ₹1,32,000 (₹200 ಇಳಿಕೆ)

ಬೆಂಗಳೂರಿನ ಬೆಳ್ಳಿ ದರ

ಬೆಳ್ಳಿ ದರದಲ್ಲಿ ಇಂದು ಯಾವುದೇ ಬದಲಾವಣೆ ಕಂಡುಬಂದಿಲ್ಲ.

  • ಬೆಳ್ಳಿ (1 ಗ್ರಾಂ): ₹235
  • ಬೆಳ್ಳಿ (1 ಕೆಜಿ): ₹2,35,000

ಜಾಗತಿಕ ಆರ್ಥಿಕ ಬೆಳವಣಿಗೆಗಳು, ಡಾಲರ್ ಮೌಲ್ಯ, ಕಚ್ಚಾತೈಲ ದರ ಹಾಗೂ ಭೌರಾಜಕೀಯ ಬೆಳವಣಿಗೆಗಳ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಮತ್ತಷ್ಟು ಏರಿಳಿತವಾಗುವ ಸಾಧ್ಯತೆ ಇದೆ.

ತ್ರಿಷಾ ಕುರಿತು ಉದಯನಿಧಿ ಸ್ಟಾಲಿನ್ ಹೇಳಿಕೆ ವಿವಾದ: ಮಹಿಳಾ ಆಯೋಗದ ಮೊರೆ ಹೋದ ಟಿವಿಕೆ

ಚೆನ್ನೈ: ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸಾರ್ವಜನಿಕ ಸಭೆಯಲ್ಲಿ ನಟಿ ತ್ರಿಷಾ ಕುರಿತು ನೀಡಿದ ಹೇಳಿಕೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮಹಿಳೆಯರ ಘನತೆಗೆ ಧಕ್ಕೆ ತರುವ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (ಎನ್‌ಸಿಡಬ್ಲ್ಯು) ದೂರು ಸಲ್ಲಿಸಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಕಾವೇರಿ ನೀರಿನ ವಿಚಾರವಾಗಿ ತಂಜಾವೂರಿನಲ್ಲಿ ನಡೆದ ಡಿಎಂಕೆ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ, ಜನಸಮೂಹದಿಂದ “ತ್ರಿಷಾ… ತ್ರಿಷಾ…” ಎಂಬ ಘೋಷಣೆಗಳು ಕೇಳಿಬಂದವು. ಇದಕ್ಕೆ ಪ್ರತಿಕ್ರಿಯಿಸಿದ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ಮಹಿಳೆಯರನ್ನು ಅವಮಾನಿಸುವ ಹಾಗೂ ದ್ವಂದ್ವಾರ್ಥ ಹೊಂದಿದೆ ಎಂದು ಟಿವಿಕೆ ಆರೋಪಿಸಿದೆ.

ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ, ಸಾರ್ವಜನಿಕ ವೇದಿಕೆಯಲ್ಲಿ ಮಹಿಳೆಯರ ಕುರಿತು ಇಂತಹ ಹೇಳಿಕೆ ನೀಡುವುದು ಅಸ್ವೀಕಾರಾರ್ಹ. ಇದು ಮಹಿಳೆಯರನ್ನು ವಸ್ತುವಿನಂತೆ ಕಾಣುವ ಮನೋಭಾವಕ್ಕೆ ಉತ್ತೇಜನ ನೀಡುತ್ತದೆ ಎಂದು ಟಿವಿಕೆ ತಿಳಿಸಿದೆ.

ಉದಯನಿಧಿ ಸ್ಟಾಲಿನ್ ಅವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚನೆ ಮಾಡಬೇಕು. ಮಹಿಳೆಯರ ಘನತೆಗೆ ಧಕ್ಕೆ ತಂದಿರುವ ಆರೋಪದಡಿ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಬೇಕು ಎಂದು ಪಕ್ಷ ಒತ್ತಾಯಿಸಿದೆ. ಅಲ್ಲದೆ, ಈ ವಿಚಾರವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಟಿವಿಕೆ ಘೋಷಿಸಿದೆ.

ಈ ಹೇಳಿಕೆಯನ್ನು ಬಿಜೆಪಿ ಕೂಡ ತೀವ್ರವಾಗಿ ಖಂಡಿಸಿದ್ದು, ಮಹಿಳೆಯರ ಬಗ್ಗೆ ಇಂತಹ ಭಾಷೆ ಬಳಸುವುದು ಯಾವುದೇ ರಾಜಕೀಯ ನಾಯಕರಿಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದೆ. ಉದಯನಿಧಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ರಸ್ತೆ ಅಪಘಾತದಲ್ಲಿ ಮಹಿಳೆ ಸಾವು ಪ್ರಕರಣ; ₹40 ಲಕ್ಷ ಪರಿಹಾರ ನೀಡುವಂತೆ ಬಿಎಂಟಿಸಿಗೆ ಹೈಕೋರ್ಟ್ ಆದೇಶ

ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ನೀಡಲಾಗಿದ್ದ ಪರಿಹಾರದ ಮೊತ್ತವನ್ನು ಕರ್ನಾಟಕ ಹೈಕೋರ್ಟ್‌ ಗಣನೀಯವಾಗಿ ಹೆಚ್ಚಿಸಿದೆ. ವಿಚಾರಣಾ ನ್ಯಾಯಾಲಯ ಘೋಷಿಸಿದ್ದ ₹13.30 ಲಕ್ಷ ಪರಿಹಾರವನ್ನು ಮಾರ್ಪಡಿಸಿದ ಹೈಕೋರ್ಟ್‌, ಮೃತರ ಕುಟುಂಬಕ್ಕೆ ಒಟ್ಟು ₹40.54 ಲಕ್ಷ ಪರಿಹಾರ ನೀಡುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಆದೇಶಿಸಿದೆ.

ಮೃತ ಶಕಿಲಾ ಬಿ. ಶೆಟ್ಟಿ ಅವರ ಪತಿ ಭಾಸ್ಕರ್ ಎನ್. ಶೆಟ್ಟಿ ಹಾಗೂ ಮಕ್ಕಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ತಾರಾ ವಿತಸ್ತಾ ಗಂಜು ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಹೈಕೋರ್ಟ್ ಆದೇಶದಂತೆ, ಮೇಲ್ಮನವಿ ಸಲ್ಲಿಸಲು ಅರ್ಜಿದಾರರು ವಿಳಂಬ ಮಾಡಿದ 217 ದಿನಗಳ ಅವಧಿಗೆ ಬಡ್ಡಿ ಅನ್ವಯಿಸುವುದಿಲ್ಲ. ಉಳಿದ ಅವಧಿಗೆ ಅರ್ಜಿ ಸಲ್ಲಿಸಿದ ದಿನಾಂಕದಿಂದ ವಾರ್ಷಿಕ ಶೇ.9ರ ಬಡ್ಡಿದರದಲ್ಲಿ ಎಂಟು ವಾರಗಳೊಳಗೆ ಪರಿಹಾರದ ಬಾಕಿ ಮೊತ್ತವನ್ನು ಪಾವತಿಸುವಂತೆ ಬಿಎಂಟಿಸಿಗೆ ನಿರ್ದೇಶಿಸಲಾಗಿದೆ.

ಆದಾಯ ತೆರಿಗೆ ದಾಖಲೆ ಪರಿಗಣಿಸದ ನ್ಯಾಯಮಂಡಳಿ

ಮೃತರು ಸ್ವಯಂ ಉದ್ಯೋಗಿಯಾಗಿದ್ದು, ಟ್ಯೂಷನ್ ತರಗತಿಗಳನ್ನು ನಡೆಸುತ್ತಿದ್ದರು. ಅವರ ಆದಾಯ ತೆರಿಗೆ ರಿಟರ್ನ್ಸ್ ದಾಖಲೆಗಳನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸದೇ, ಕೇವಲ ತಿಂಗಳಿಗೆ ₹9 ಸಾವಿರ ಆದಾಯವೆಂದು ನಿಗದಿಪಡಿಸಿ ₹13.30 ಲಕ್ಷ ಪರಿಹಾರ ಘೋಷಿಸಿತ್ತು.

ಆದರೆ, ಸುಪ್ರೀಂ ಕೋರ್ಟ್‌ನ ತೀರ್ಪುಗಳ ಪ್ರಕಾರ ಆದಾಯ ತೆರಿಗೆ ದಾಖಲೆಗಳು ಶಾಸನಬದ್ಧ ದಾಖಲೆಗಳಾಗಿದ್ದು, ವಾರ್ಷಿಕ ಆದಾಯ ನಿರ್ಧಾರಕ್ಕೆ ಅವುಗಳನ್ನು ಕಡ್ಡಾಯವಾಗಿ ಪರಿಗಣಿಸಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಕಳೆದ ಮೂರು ವರ್ಷಗಳ ಆದಾಯ ತೆರಿಗೆ ದಾಖಲೆಗಳ ಆಧಾರದ ಮೇಲೆ ಮೃತರ ವಾರ್ಷಿಕ ಸರಾಸರಿ ಆದಾಯ ₹3.33 ಲಕ್ಷ ಎಂದು ಪರಿಗಣಿಸಿ ಹೊಸದಾಗಿ ಪರಿಹಾರ ಲೆಕ್ಕ ಹಾಕಲಾಗಿದೆ.

ಪರಿಹಾರದ ವಿವರ

ಹೈಕೋರ್ಟ್ ಘೋಷಿಸಿರುವ ಪರಿಹಾರದ ವಿವರ ಹೀಗಿದೆ:

  • ಅವಲಂಬನೆ ನಷ್ಟ – ₹38,89,200
  • ಪತಿ ಮತ್ತು ಮಕ್ಕಳಿಗೆ ಸಾಂತ್ವನ ಪರಿಹಾರ – ₹1,32,000
  • ಆಸ್ತಿ (Estate) ನಷ್ಟ – ₹16,500
  • ಅಂತ್ಯಕ್ರಿಯೆ ವೆಚ್ಚ – ₹16,500

ಒಟ್ಟು ಪರಿಹಾರ: ₹40,54,200

ಪ್ರಕರಣದ ಹಿನ್ನೆಲೆ

2017ರ ಜುಲೈ 1ರಂದು ಮಧ್ಯಾಹ್ನ ಶಕಿಲಾ ಬಿ. ಶೆಟ್ಟಿ ಅವರು ತಮ್ಮ ಸಹೋದರನೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಬಂದ ಬಿಎಂಟಿಸಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಮೃತರ ಪತಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳು ಮೋಟಾರು ವಾಹನಗಳ ಕಾಯ್ದೆ-1988ರ ಸೆಕ್ಷನ್ 166ರಡಿ ಪರಿಹಾರ ಕೋರಿ ಮೋಟಾರು ಅಪಘಾತಗಳ ಪರಿಹಾರ ನ್ಯಾಯಮಂಡಳಿಯನ್ನು ಸಂಪರ್ಕಿಸಿದ್ದರು. ನ್ಯಾಯಮಂಡಳಿ ಘೋಷಿಸಿದ್ದ ಪರಿಹಾರ ಅಲ್ಪವಾಗಿದೆ ಎಂದು ವಾದಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಹೈಕೋರ್ಟ್ ಇದೀಗ ಆದಾಯ ತೆರಿಗೆ ದಾಖಲೆಗಳಿಗೆ ಮಹತ್ವ ನೀಡಿ ಪರಿಹಾರದ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಿರುವುದು, ರಸ್ತೆ ಅಪಘಾತ ಪರಿಹಾರ ಪ್ರಕರಣಗಳಲ್ಲಿ ಮಹತ್ವದ ತೀರ್ಪಾಗಿ ಪರಿಗಣಿಸಲಾಗುತ್ತಿದೆ.

ಟಾಪ್-5 ಭಾರತೀಯ ಬೌಲರ್ʼಗಳ ಪಟ್ಟಿಯನ್ನು ಬಹಿರಂಗಪಡಿಸಿದ ಅರ್ಶದೀಪ್ ಸಿಂಗ್!

0

ಭಾರತದ ಯುವ ವೇಗದ ಬೌಲರ್ ಅರ್ಶದೀಪ್ ಸಿಂಗ್ ತಮ್ಮ ಪಾಲಿನ ಸಾರ್ವಕಾಲಿಕ ಶ್ರೇಷ್ಠ ಐವರು ಭಾರತೀಯ ಬೌಲರ್‌ಗಳ ಪಟ್ಟಿಯನ್ನು ಬಹಿರಂಗಪಡಿಸಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ವಿಶೇಷವೆಂದರೆ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ರವಿಚಂದ್ರನ್ ಅಶ್ವಿನ್ ಅವರಂತಹ ದಿಗ್ಗಜರನ್ನು ಹಿಂದಿಕ್ಕಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರಿಗೆ ಅರ್ಶದೀಪ್ ಮೊದಲ ಸ್ಥಾನ ನೀಡಿದ್ದಾರೆ.

ಕೃಷ್ಣಾಕ್ ಅಥ್ರೆ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅರ್ಶದೀಪ್ ಸಿಂಗ್, “ಭುವನೇಶ್ವರ್ ಕುಮಾರ್ ನನ್ನ ನೆಚ್ಚಿನ ಬೌಲರ್. ಆದ್ದರಿಂದ ಅವರಿಗೆ ಮೊದಲ ಸ್ಥಾನ ನೀಡಿದ್ದೇನೆ. ಈ ವಿಚಾರದಲ್ಲಿ ನಾನು ಸ್ವಲ್ಪ ಪಕ್ಷಪಾತಿಯಾಗಿದ್ದೇನೆ,” ಎಂದು ನಗುಮುಖದಿಂದ ಹೇಳಿದ್ದಾರೆ.

ಇದೇ ವೇಳೆ ಎರಡನೇ ಸ್ಥಾನವನ್ನು ಮೊಹಮ್ಮದ್ ಶಮಿ ಅವರಿಗೆ ನೀಡಿದ ಅರ್ಶದೀಪ್, “ಯಾವುದೇ ಪಿಚ್‌ನಲ್ಲಾದರೂ ಶಮಿ ಅತ್ಯುತ್ತಮ ವೇಗದ ಬೌಲಿಂಗ್ ಮಾಡುತ್ತಾರೆ. ಅವರ ಲೈನ್, ಲೆಂಗ್ತ್ ಹಾಗೂ ವೇಗ ಯಾವಾಗಲೂ ಎದುರಾಳಿಗಳಿಗೆ ಸವಾಲಾಗಿರುತ್ತದೆ. ಅವರು ವಿಶ್ವದ ಶ್ರೇಷ್ಠ ವೇಗಿಗಳಲ್ಲಿ ಒಬ್ಬರು,” ಎಂದು ಪ್ರಶಂಸಿಸಿದರು.

ಮೂರನೇ ಸ್ಥಾನದಲ್ಲಿ ಎಡಗೈ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಆಯ್ಕೆ ಮಾಡಿದ ಅರ್ಶದೀಪ್, ಅವರ ವಿಶಿಷ್ಟ ಸ್ಪಿನ್ ಕೌಶಲ್ಯವನ್ನು ಶ್ಲಾಘಿಸಿದರು. ನಾಲ್ಕನೇ ಸ್ಥಾನದಲ್ಲಿ ಯುಜುವೇಂದ್ರ ಚಹಲ್ ಅವರನ್ನು ಆಯ್ಕೆ ಮಾಡಿ, “ಚಹಲ್ ಸಾಕಷ್ಟು ವಿಕೆಟ್‌ಗಳನ್ನು ಪಡೆದ ಅನುಭವಿ ಸ್ಪಿನ್ನರ್. ಅವರ ಬೌಲಿಂಗ್ ತಂಡಕ್ಕೆ ಅನೇಕ ಬಾರಿ ಗೆಲುವು ತಂದುಕೊಟ್ಟಿದೆ,” ಎಂದು ಹೇಳಿದರು.

ಇನ್ನು ಭಾರತದ ಎರಡನೇ ಗರಿಷ್ಠ ಟೆಸ್ಟ್ ವಿಕೆಟ್ ಸರದಾರ ರವಿಚಂದ್ರನ್ ಅಶ್ವಿನ್ ಅವರಿಗೆ ಐದನೇ ಸ್ಥಾನ ನೀಡಿದ ಅರ್ಶದೀಪ್, ತಮಾಷೆಯ ಶೈಲಿಯಲ್ಲಿ ಕ್ಷಮೆಯನ್ನೂ ಕೇಳಿದರು. “ಅಶ್ವಿನ್ ಅಣ್ಣನಿಗೆ ಕೊನೆಯ ಸ್ಥಾನ ನೀಡಬೇಕೆಂಬ ಉದ್ದೇಶ ನನ್ನದಲ್ಲ. ಆದರೆ ಬೇರೆ ಸ್ಥಾನ ಉಳಿದಿರಲಿಲ್ಲ.

ಅವರು ದಿಗ್ಗಜ ಆಟಗಾರ. ಪಂಜಾಬ್ ಕಿಂಗ್ಸ್‌ನಲ್ಲಿ ನನ್ನ ಮೊದಲ ಐಪಿಎಲ್ ನಾಯಕ ಕೂಡ ಅವರೇ. ಕ್ಷಮಿಸಿ ಅಶ್ವಿನ್ ಅಣ್ಣ… ನಿಮಗೆ ನಾನು ವೈಯಕ್ತಿಕವಾಗಿ ಸಂದೇಶ ಕಳುಹಿಸುತ್ತೇನೆ,” ಎಂದು ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದರು.

ಅರ್ಶದೀಪ್ ಸಿಂಗ್ ಅವರ ಈ ಆಯ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳು ತಮ್ಮದೇ ಆದ ಟಾಪ್-5 ಭಾರತೀಯ ಬೌಲರ್‌ಗಳ ಪಟ್ಟಿಯನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ.

ಶಿಕ್ಷಣವೇ ಸಮಾಜ ಪರಿವರ್ತನೆಯ ಶಕ್ತಿ: ಶಾಸಕ ಡಾ. ಚಂದ್ರು ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮೀಣ ಭಾಗದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ಸರ್ಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸಿದ್ದು, ವಿದ್ಯಾರ್ಥಿಗಳು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಸೋಮವಾರ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ₹3 ಕೋಟಿ 58 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ; ಉತ್ತಮ ವ್ಯಕ್ತಿತ್ವ, ಸಂಸ್ಕಾರ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಶಕ್ತಿಯಾಗಿದೆ. ವಿದ್ಯಾರ್ಥಿನಿಯರು ವಸತಿ ನಿಲಯದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿ ಕುಟುಂಬ ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ ಮಾತನಾಡಿ, ಸರ್ಕಾರವು ಹಿಂದುಳಿದ ಹಾಗೂ ಬಡ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಸತಿ ನಿಲಯಗಳ ಮೂಲಕ ಉತ್ತೇಜನ ನೀಡುತ್ತಿದೆ. 100 ವಿದ್ಯಾರ್ಥಿನಿಯರಿಗೆ ಊಟ, ವಸತಿ ಸೇರಿದಂತೆ ಅಗತ್ಯ ಸೌಲಭ್ಯಗಳೊಂದಿಗೆ ಈ ನಿಲಯವನ್ನು ಇಲಾಖೆಯ ನಿಯಮಾನುಸಾರ ಭರ್ತಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಗೋಪಾಲ ನಾಯಕ, ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳ, ಮುತ್ತಣ್ಣ ಸಂಕನೂರ, ಎಂ.ಆರ್. ಪಾಟೀಲ, ಪ್ರವೀಣ ಬಾಳಿಕಾಯಿ, ಜಗದೀಶ ಪುರಾಣಿಕಮಠ ಸೇರಿದಂತೆ ವಿವಿಧ ಗಣ್ಯರು, ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.