Home Blog

ಗವಾಸ್ಕರ್, ಸೆಹ್ವಾಗ್ʼಗೂ ಸ್ಥಾನವಿಲ್ಲ! ಭಾರತದ ಸಾರ್ವಕಾಲಿಕ ಟಾಪ್-3 ಟೆಸ್ಟ್ ಬ್ಯಾಟರ್ʼಗಳನ್ನು ಆಯ್ಕೆ ಮಾಡಿದ ಅಶ್ವಿನ್

0

ನವದೆಹಲಿ: ಸುನಿಲ್ ಗವಾಸ್ಕರ್‌ನಿಂದ ವಿರೇಂದ್ರ ಸೆಹ್ವಾಗ್‌ವರೆಗೆ ಹಲವು ದಿಗ್ಗಜ ಬ್ಯಾಟರ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ. ಹೀಗಾಗಿ ಭಾರತದ ಸಾರ್ವಕಾಲಿಕ ಶ್ರೇಷ್ಠ ಮೂವರು ಟೆಸ್ಟ್ ಬ್ಯಾಟರ್‌ಗಳನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಆದರೆ ಟೀಂ ಇಂಡಿಯಾದ ಮಾಜಿ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ಸವಾಲನ್ನು ಸ್ವೀಕರಿಸಿದ್ದು, ಅವರ ಆಯ್ಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಅಶ್ವಿನ್ ಮೊದಲು ಭಾರತದ ಐವರು ಶ್ರೇಷ್ಠ ಟೆಸ್ಟ್ ಬ್ಯಾಟರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಬಳಿಕ ಆ ಪಟ್ಟಿಯನ್ನು ಮೂವರಿಗೆ ಇಳಿಸಿದ್ದಾರೆ. ಆದರೆ ಅಚ್ಚರಿಯ ಸಂಗತಿಯೆಂದರೆ, ಅವರ ಅಂತಿಮ ಟಾಪ್-3 ಪಟ್ಟಿಯಲ್ಲಿ ಭಾರತದ ಮಾಜಿ ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್‌ಗೆ ಸ್ಥಾನ ಸಿಕ್ಕಿಲ್ಲ.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಗವಾಸ್ಕರ್ ಅವರನ್ನು ಕೈಬಿಟ್ಟಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ತಮ್ಮ ಆಯ್ಕೆಯನ್ನು ಎಲ್ಲರೂ ಒಪ್ಪಿಕೊಳ್ಳುವುದು ಕಷ್ಟವಾಗಬಹುದು ಎಂಬುದನ್ನು ಅಶ್ವಿನ್ ಕೂಡ ಒಪ್ಪಿಕೊಂಡಿದ್ದಾರೆ.

ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 10 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 125 ಟೆಸ್ಟ್ ಪಂದ್ಯಗಳನ್ನಾಡಿರುವ ಗವಾಸ್ಕರ್, 51.12ರ ಸರಾಸರಿಯಲ್ಲಿ 10,122 ರನ್ ಗಳಿಸಿದ್ದಾರೆ. ಇದರಲ್ಲಿ 34 ಶತಕ ಹಾಗೂ 45 ಅರ್ಧಶತಕಗಳು ಸೇರಿವೆ. ಬಲಿಷ್ಠ ವೆಸ್ಟ್ ಇಂಡೀಸ್ ಬೌಲಿಂಗ್ ದಾಳಿಯ ವಿರುದ್ಧವೇ 13 ಶತಕಗಳನ್ನು ಸಿಡಿಸಿರುವುದು ಅವರ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಅವರ ಗರಿಷ್ಠ ಸ್ಕೋರ್ 236 ರನ್.

ಇನ್ನು ಸ್ಪೋಟಕ ಆರಂಭಿಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಕೂಡ ಅಶ್ವಿನ್ ಅವರ ಟಾಪ್-3 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ತ್ರಿಶತಕಗಳನ್ನು ಬಾರಿಸಿದ ಭಾರತದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆ ಸೆಹ್ವಾಗ್ ಅವರದ್ದಾಗಿದೆ. ಎದುರಾಳಿ ತಂಡದ ಬೌಲರ್‌ಗಳನ್ನು ಆರಂಭದಿಂದಲೇ ಒತ್ತಡಕ್ಕೆ ಸಿಲುಕಿಸುತ್ತಿದ್ದ ಸೆಹ್ವಾಗ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಇಂದಿಗೂ ಜನಪ್ರಿಯವಾಗಿದೆ.

ಅಶ್ವಿನ್ ಅವರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಟೆಸ್ಟ್ ಕ್ರಿಕೆಟ್‌ನಲ್ಲಿ 200ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಸಚಿನ್, 53.78ರ ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ಅವರ ಖಾತೆಯಲ್ಲಿ 51 ಶತಕ ಹಾಗೂ 68 ಅರ್ಧಶತಕಗಳಿವೆ.

ಎರಡನೇ ಸ್ಥಾನವನ್ನು ರಾಹುಲ್ ದ್ರಾವಿಡ್ ಅವರಿಗೆ ನೀಡಲಾಗಿದೆ. ‘ದಿ ವಾಲ್’ ಎಂದೇ ಖ್ಯಾತರಾಗಿರುವ ದ್ರಾವಿಡ್ 164 ಟೆಸ್ಟ್ ಪಂದ್ಯಗಳಿಂದ 52.31ರ ಸರಾಸರಿಯಲ್ಲಿ 13,288 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ದಾಖಲೆ ದ್ರಾವಿಡ್ ಅವರ ಹೆಸರಿನಲ್ಲಿದ್ದು, ಒಟ್ಟು 31,258 ಎಸೆತಗಳನ್ನು ಎದುರಿಸಿದ್ದಾರೆ. ಅಲ್ಲದೆ, ಕ್ರೀಸ್‌ನಲ್ಲಿ 44,152 ನಿಮಿಷಗಳ ಕಾಲ ಕಳೆದ ದಾಖಲೆ ಕೂಡ ಅವರದ್ದಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ದ್ರಾವಿಡ್ 36 ಶತಕಗಳನ್ನು ಬಾರಿಸಿದ್ದಾರೆ.

ಅಶ್ವಿನ್ ಅವರ ಟಾಪ್-3 ಪಟ್ಟಿಯ ಮೂರನೇ ಸ್ಥಾನದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟು 123 ಟೆಸ್ಟ್ ಪಂದ್ಯಗಳಲ್ಲಿ 46.85ರ ಸರಾಸರಿಯಲ್ಲಿ 9,230 ರನ್ ಗಳಿಸಿರುವ ಕೊಹ್ಲಿ, ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ನಾಯಕನಾಗಿ ಭಾರತ ತಂಡವನ್ನು ಅತಿ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಗೆಲ್ಲಿಸಿದ ನಾಯಕ ಎಂಬ ಹೆಗ್ಗಳಿಕೆಯೂ ಕೊಹ್ಲಿ ಅವರದ್ದಾಗಿದೆ.

ಹೀಗಾಗಿ ಅಶ್ವಿನ್ ಅವರ ಟಾಪ್-3 ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದರೆ, ಸುನಿಲ್ ಗವಾಸ್ಕರ್ ಮತ್ತು ವಿರೇಂದ್ರ ಸೆಹ್ವಾಗ್ ಅವರಂತಹ ದಿಗ್ಗಜರಿಗೆ ಸ್ಥಾನ ಸಿಗದಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಬಿಹಾರದಲ್ಲಿ ನಿಗೂಢ ಘಟನೆ: ತಾಯಿ ನೇಣಿಗೆ, ಹಾಸಿಗೆಯಲ್ಲಿ ಇಬ್ಬರು ಪುಟ್ಟ ಮಕ್ಕಳ ಶವ ಪತ್ತೆ

0

ಪಾಟ್ನಾ: ಬಿಹಾರದ ನವಾಡಾ ಜಿಲ್ಲೆಯಲ್ಲಿ ತಾಯಿ ಹಾಗೂ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಮನೆಯ ಕೋಣೆಯಲ್ಲಿ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಅವರ ನಾಲ್ಕು ಹಾಗೂ ಎರಡು ವರ್ಷದ ಹೆಣ್ಣುಮಕ್ಕಳು ಹಾಸಿಗೆಯ ಮೇಲೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೃತ ಮಹಿಳೆಯನ್ನು ನಿದಾ ಖಾತೂನ್ (37) ಎಂದು ಗುರುತಿಸಲಾಗಿದೆ. ಅವರ ನಾಲ್ಕು ವರ್ಷದ ಪುತ್ರಿ ಸರಿಯಾ ಖಾತೂನ್ ಹಾಗೂ ಎರಡು ವರ್ಷದ ಪುತ್ರಿ ಸಿದ್ರಾ ಖಾತೂನ್ ಮೃತಪಟ್ಟಿದ್ದಾರೆ.

ಬಾಗಿಲು ತೆರೆಯದಿದ್ದಾಗ ಬೆಳಕಿಗೆ:

ಸೋಮವಾರ ಈ ಘಟನೆ ಬೆಳಕಿಗೆ ಬಂದಿದೆ. ಮನೆಯ ಕೋಣೆಯ ಬಾಗಿಲು ಬಹಳ ಸಮಯದಿಂದ ಒಳಗಿನಿಂದ ಮುಚ್ಚಿದ್ದನ್ನು ಕುಟುಂಬಸ್ಥರು ಗಮನಿಸಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಕಿಟಕಿಯ ಮೂಲಕ ನೋಡಿದಾಗ, ಹಾಸಿಗೆಯ ಮೇಲೆ ಇಬ್ಬರು ಮಕ್ಕಳು ಮೃತಪಟ್ಟಿರುವುದು ಹಾಗೂ ನಿದಾ ಖಾತೂನ್ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದು ಕಂಡುಬಂದಿದೆ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಮೂವರು ಮೃತಪಟ್ಟಿರುವ ರೀತಿ ಅನುಮಾನಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಹಾಗೂ ಆತ್ಮಹತ್ಯೆ ಎರಡೂ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ನಿದಾ ಖಾತೂನ್ ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಅವರನ್ನು ಮೊದಲು ಹತ್ಯೆ ಮಾಡಿ ಬಳಿಕ ನೇಣು ಹಾಕಲಾಗಿದೆಯೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅವರ ದೇಹದ ಕೆಲವು ಭಾಗಗಳು ಹಾಸಿಗೆಯನ್ನು ಸ್ಪರ್ಶಿಸುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಸಾವಿನ ಸಂದರ್ಭದ ಕುರಿತು ಹಲವು ಅನುಮಾನಗಳು ಮೂಡಿವೆ.

ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ.

ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಮಕ್ಕಳ ಸಾವಿನ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿದಾ ಖಾತೂನ್ ಅವರ ಪತಿ ಮೊಹಮ್ಮದ್ ಶಾಹಿದ್ ಕಳೆದ ಒಂದು ವರ್ಷದಿಂದ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದು, ಅಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ನಿದಾ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಅತ್ತೆ-ಮಾವನ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಮೂವರ ಮೃತದೇಹಗಳನ್ನು ವಶಕ್ಕೆ ಪಡೆದು, ವಿಧಿವಿಜ್ಞಾನ ತಜ್ಞರ ಮೂಲಕ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಸದ್ಯ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ಮೂವರ ಸಾವಿನ ಹಿಂದಿರುವ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

ಕರ್ನಾಟಕ SIR ಮತದಾರರ ಪಟ್ಟಿ: 1.08 ಕೋಟಿ ಹೆಸರುಗಳಿಗೆ ಕುತ್ತು? ಸೆ.23ರವರೆಗೆ ಆಕ್ಷೇಪಣೆಗೆ ಅವಕಾಶ

0

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮನೆ-ಮನೆ ಭೇಟಿ ಕಾರ್ಯ ಸೋಮವಾರ ಮುಕ್ತಾಯಗೊಂಡಿದೆ.

ಜೂನ್ 30ರಿಂದ ಆರಂಭವಾಗಿದ್ದ ಈ ಪ್ರಕ್ರಿಯೆಯಲ್ಲಿ ರಾಜ್ಯಾದ್ಯಂತ ಕೋಟ್ಯಂತರ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಅವುಗಳ ಡಿಜಿಟಲೀಕರಣ ಕಾರ್ಯವೂ ಬಹುತೇಕ ಪೂರ್ಣಗೊಂಡಿದೆ.

SIR ಪ್ರಕ್ರಿಯೆಯಡಿ ರಾಜ್ಯದಲ್ಲಿ ಒಟ್ಟು 5,54,32,314 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ 4,46,00,369 ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಈ ವೇಳೆ ಒಟ್ಟು 1,08,31,945 ASDDO ಮತದಾರರು ಪತ್ತೆಯಾಗಿದ್ದಾರೆ.

ASDDO ಮತದಾರರು ಎಂದರೆ ಯಾರು?

ASDDO ಎಂದರೆ Absent, Shifted, Dead, Duplicate and Others ಎಂಬ ವರ್ಗಗಳನ್ನು ಒಳಗೊಂಡಿದೆ.

ಅಂದರೆ,

  • ಗೈರುಹಾಜರಾಗಿರುವವರು
  • ಶಾಶ್ವತವಾಗಿ ಸ್ಥಳಾಂತರಗೊಂಡವರು
  • ಮೃತಪಟ್ಟವರು
  • ನಕಲಿ ಅಥವಾ ಡುಪ್ಲಿಕೇಟ್ ಹೆಸರುಗಳು
  • ಇತರೆ ಕಾರಣಗಳಿಂದ ಪರಿಶೀಲನೆ ಅಗತ್ಯವಿರುವ ಮತದಾರರು

ಈ ವರ್ಗಕ್ಕೆ ಸೇರುತ್ತಾರೆ.

7 ಲಕ್ಷಕ್ಕೂ ಹೆಚ್ಚು ಡುಪ್ಲಿಕೇಟ್ ಮತದಾರರು ಪತ್ತೆ!

SIR ಪ್ರಕ್ರಿಯೆಯಲ್ಲಿ ಲಭ್ಯವಾದ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ 15,28,985 ಮತದಾರರು ನಾಪತ್ತೆಯಾಗಿರುವುದು ಪತ್ತೆಯಾಗಿದೆ. 65,61,607 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಕಂಡುಬಂದಿದೆ.

ಇನ್ನು 16,38,839 ಮತದಾರರು ಮೃತಪಟ್ಟಿರುವುದು, 7,07,792 ಡುಪ್ಲಿಕೇಟ್ ಮತದಾರರು ಹಾಗೂ 3,94,722 ಇತರೆ ವರ್ಗದ ಮತದಾರರು ಪತ್ತೆಯಾಗಿದ್ದಾರೆ.

ಈ ಅಂಕಿ-ಅಂಶಗಳ ಆಧಾರದಲ್ಲಿ ಸುಮಾರು 1.08 ಕೋಟಿ ಮತದಾರರ ಹೆಸರುಗಳು ಮೊದಲ ಕರಡು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಆದರೆ ಇದು ಅಂತಿಮ ನಿರ್ಧಾರವಲ್ಲ. ಪರಿಶೀಲನೆ ಹಾಗೂ ಆಕ್ಷೇಪಣೆಗಳ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಯಾರ ಹೆಸರು ಪಟ್ಟಿಯಲ್ಲಿ ಉಳಿಯಲಿದೆ, ಯಾರ ಹೆಸರು ಕೈಬಿಡಲಾಗುತ್ತದೆ ಎಂಬುದು ಸ್ಪಷ್ಟವಾಗಲಿದೆ.

ಆಗಸ್ಟ್ 24ಕ್ಕೆ ಮೊದಲ ಕರಡು ಪಟ್ಟಿ:

SIR ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 24ರಂದು ಪ್ರಕಟಿಸಲು ನಿಗದಿಪಡಿಸಲಾಗಿದೆ.

ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸದಿದ್ದರೆ ಅಥವಾ ಮತದಾರರ ವಿವರಗಳಲ್ಲಿ ಯಾವುದೇ ತಪ್ಪು ಕಂಡುಬಂದರೆ, ಸಂಬಂಧಪಟ್ಟ ಮತದಾರರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆ ಸಲ್ಲಿಸಬಹುದು:

ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಮತದಾರರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಹಾಗೂ ಅಗತ್ಯ ದಾಖಲೆಗಳನ್ನು ನೀಡಲು ಅವಕಾಶವಿದೆ.

ಈ ಅವಧಿಯಲ್ಲಿ ಸಲ್ಲಿಕೆಯಾಗುವ ಆಕ್ಷೇಪಣೆಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಪರಿಶೀಲನೆ, ಆಕ್ಷೇಪಣೆ ಹಾಗೂ ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.

ಹೀಗಾಗಿ ಆಗಸ್ಟ್ 24ರಂದು ಪ್ರಕಟವಾಗುವ ಕರಡು ಪಟ್ಟಿಯಲ್ಲಿ ಹೆಸರು ಕಾಣಿಸದಿದ್ದರೆ ಮತದಾರರು ಆತಂಕಪಡುವ ಅಗತ್ಯವಿಲ್ಲ. ನಿಗದಿತ ಅವಧಿಯಲ್ಲಿ ತಮ್ಮ ಹಕ್ಕನ್ನು ಪ್ರತಿಪಾದಿಸಿ ಅಗತ್ಯ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬಹುದು.

SIR ಪ್ರಕ್ರಿಯೆಯ ಪ್ರಮುಖ ಉದ್ದೇಶ ಮತದಾರರ ಪಟ್ಟಿಯನ್ನು ಪರಿಶುದ್ಧಗೊಳಿಸುವುದು ಹಾಗೂ ಅರ್ಹ ಮತದಾರರ ಹೆಸರುಗಳು ಮಾತ್ರ ಪಟ್ಟಿಯಲ್ಲಿ ಖಚಿತವಾಗುವಂತೆ ಮಾಡುವುದು. ನಾಪತ್ತೆ, ಸ್ಥಳಾಂತರ, ಮರಣ ಹಾಗೂ ಡುಪ್ಲಿಕೇಟ್ ಹೆಸರುಗಳಂತಹ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಹನೂರು ಭಾಗದ ಜನರೇ ಗಮನಿಸಿ: ಇಂದು 8 ಗಂಟೆ ಪವರ್‌ ಕಟ್!

0

ಹನೂರು: ಹನೂರು ಉಪವಿಭಾಗದ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಚೆಸ್ಕಾಂ ವತಿಯಿಂದ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವಿದ್ಯುತ್ ಕಡಿತ ಘೋಷಿಸಲಾಗಿದೆ.

ಈ ಪ್ರದೇಶಗಳಲ್ಲಿ ಪವರ್‌ ಕಟ್:

ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬಂಡಳ್ಳಿ, ಅಜ್ಜೀಪುರ, ರಾಮಾಪುರ, ಕೌದಳ್ಳಿ ಮತ್ತು ಮಾಟಳ್ಳಿ ಸೇರಿದಂತೆ ಸಂಬಂಧಿತ ಫೀಡರ್‌ಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಇದರಿಂದ ಈ ಪ್ರದೇಶಗಳ ಮನೆಗಳು, ಅಂಗಡಿಗಳು, ಕಚೇರಿಗಳು ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಸುಮಾರು 8 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್‌ ಅವಲಂಬಿತ ದೈನಂದಿನ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಮುಂಚಿತವಾಗಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಚೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.

ನಿರ್ವಹಣಾ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ವಿದ್ಯುತ್ ಕಂಬಗಳು, ಹರಿದು ಬಿದ್ದಿರುವ ವಿದ್ಯುತ್ ತಂತಿಗಳು ಹಾಗೂ ಇತರ ವಿದ್ಯುತ್ ಉಪಕರಣಗಳ ಸಮೀಪ ತೆರಳದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ನಿಗದಿತ ಸಮಯಕ್ಕಿಂತ ಮೊದಲೇ ಕಾಮಗಾರಿ ಪೂರ್ಣಗೊಂಡಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ಸರಬರಾಜು ಪುನರಾರಂಭಿಸುವ ಸಾಧ್ಯತೆಯಿದೆ.

ವಿದ್ಯುತ್ ವ್ಯತ್ಯಯಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಥವಾ ತುರ್ತು ಸಹಾಯಕ್ಕಾಗಿ ಹನೂರು ಉಪವಿಭಾಗದ 08224-295882 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಂಗಸ್ವಾಮಿ ತಿಳಿಸಿದ್ದಾರೆ.

ಸಾರ್ವಜನಿಕರು ಸಹಕರಿಸುವಂತೆ ಚೆಸ್ಕಾಂ ಮನವಿ ಮಾಡಿದೆ.

ಶ್ರಾವಣ ಮಂಗಳವಾರ: ಮಂಗಳಗೌರಿ ವ್ರತದಂದು ಈ ತಪ್ಪುಗಳನ್ನು ಮಾಡಲೇಬೇಡಿ!

0

ಶ್ರಾವಣ ಮಾಸದ ಪ್ರತಿಯೊಂದು ದಿನವೂ ಹಿಂದೂ ಧಾರ್ಮಿಕ ಪರಂಪರೆಯಲ್ಲಿ ವಿಶೇಷ ಮಹತ್ವ ಹೊಂದಿದೆ.

ಅದರಲ್ಲೂ ಶ್ರಾವಣ ಮಾಸದ ಮಂಗಳವಾರವನ್ನು ಮಂಗಳಗೌರಿ ವ್ರತಕ್ಕೆ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ವಿವಾಹಿತ ಮಹಿಳೆಯರು ಕುಟುಂಬದ ಶ್ರೇಯಸ್ಸು, ಸಮೃದ್ಧಿ ಹಾಗೂ ಅಖಂಡ ಸೌಭಾಗ್ಯಕ್ಕಾಗಿ ಮಂಗಳಗೌರಿ ದೇವಿಯನ್ನು ಭಕ್ತಿಯಿಂದ ಆರಾಧಿಸುತ್ತಾರೆ.

ಶ್ರಾವಣದ ಮೊದಲ ಮಂಗಳವಾರದಿಂದ ಆರಂಭವಾಗುವ ಈ ವ್ರತವನ್ನು ಶ್ರದ್ಧೆಯಿಂದ ಆಚರಿಸುವುದರಿಂದ ಕುಟುಂಬದಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಉಪವಾಸ, ಪೂಜೆ ಹಾಗೂ ಗೌರಿ ದೇವಿಯ ಆರಾಧನೆ ಈ ವ್ರತದ ಪ್ರಮುಖ ಭಾಗಗಳಾಗಿವೆ.

ಆದರೆ ಈ ಪವಿತ್ರ ದಿನದಂದು ಕೆಲವು ಕೆಲಸಗಳನ್ನು ಮಾಡಬಾರದು ಎಂಬ ಧಾರ್ಮಿಕ ನಂಬಿಕೆಯೂ ಇದೆ. ಅವುಗಳೇನು ಎಂಬ ಮಾಹಿತಿ ಇಲ್ಲಿದೆ.

ಮಂಗಳಗೌರಿ ವ್ರತದ ದಿನ ಮನೆಯಲ್ಲಿ ಸಾತ್ವಿಕ ವಾತಾವರಣವನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತವೆ.

ಈ ದಿನ ಮಾಂಸ, ಮೀನು, ಮೊಟ್ಟೆ ಹಾಗೂ ಮದ್ಯಪಾನ ಮಾಡುವುದನ್ನು ತಪ್ಪಿಸಬೇಕು ಎಂದು ಹಿರಿಯರು ಹಾಗೂ ಧಾರ್ಮಿಕ ಪಂಡಿತರು ಸಲಹೆ ನೀಡುತ್ತಾರೆ. ವ್ರತ ಆಚರಿಸುವವರು ವಿಶೇಷವಾಗಿ ಸಾತ್ವಿಕ ಆಹಾರವನ್ನೇ ಸೇವಿಸುವುದು ಸಂಪ್ರದಾಯವಾಗಿದೆ.

ಈರುಳ್ಳಿ, ಬೆಳ್ಳುಳ್ಳಿ ಸೇವನೆಗೂ ನಿರ್ಬಂಧ:

ವ್ರತ ಆಚರಿಸುವವರು ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸುವುದನ್ನು ತಪ್ಪಿಸುತ್ತಾರೆ. ಕೆಲವು ಧಾರ್ಮಿಕ ಸಂಪ್ರದಾಯಗಳಲ್ಲಿ ಬದನೆಕಾಯಿ ಹಾಗೂ ನಿರ್ದಿಷ್ಟ ಬಗೆಯ ಸೊಪ್ಪುಗಳನ್ನು ಕೂಡ ಈ ದಿನ ಸೇವಿಸಬಾರದು ಎಂದು ಹೇಳಲಾಗುತ್ತದೆ.

ಪ್ರದೇಶ ಹಾಗೂ ಕುಟುಂಬದ ಆಚರಣೆಗೆ ಅನುಗುಣವಾಗಿ ಆಹಾರ ಪದ್ಧತಿಯಲ್ಲಿ ವ್ಯತ್ಯಾಸಗಳಿರಬಹುದು.

ಉಗುರು, ಕೂದಲು ಕತ್ತರಿಸಬೇಡಿ:

ಶ್ರಾವಣ ಮಂಗಳವಾರದಂದು ಉಗುರು ಕತ್ತರಿಸುವುದು ಹಾಗೂ ಕೂದಲು ಕತ್ತರಿಸಿಕೊಳ್ಳುವುದನ್ನು ತಪ್ಪಿಸಬೇಕು ಎಂಬ ನಂಬಿಕೆ ಹಲವು ಕಡೆಗಳಲ್ಲಿ ಇದೆ.

ಇಂತಹ ಆಚರಣೆಗಳು ಧಾರ್ಮಿಕ ನಂಬಿಕೆಗಳಿಗೆ ಸಂಬಂಧಿಸಿದ್ದಾಗಿದ್ದು, ಈ ದಿನದ ಪಾವಿತ್ರ್ಯವನ್ನು ಕಾಪಾಡುವ ಉದ್ದೇಶದಿಂದ ಇವುಗಳನ್ನು ಪಾಲಿಸಲಾಗುತ್ತದೆ.

ಕೋಪ, ಜಗಳದಿಂದ ದೂರವಿರಿ:

ಮಂಗಳಗೌರಿ ವ್ರತದಲ್ಲಿ ಪೂಜೆ ಹಾಗೂ ಉಪವಾಸದ ಜೊತೆಗೆ ಮನಸ್ಸಿನ ಶುದ್ಧತೆಗೂ ಮಹತ್ವ ನೀಡಲಾಗುತ್ತದೆ.

ಹೀಗಾಗಿ ಈ ದಿನ ಯಾರನ್ನೂ ಅವಮಾನಿಸುವುದು, ಕೆಟ್ಟ ಮಾತುಗಳನ್ನಾಡುವುದು, ಜಗಳ ಮಾಡುವುದು ಅಥವಾ ಅನಗತ್ಯವಾಗಿ ಕೋಪಗೊಳ್ಳುವುದನ್ನು ತಪ್ಪಿಸಬೇಕು ಎಂದು ನಂಬಲಾಗಿದೆ.

ಶಾಂತ ಮನಸ್ಸಿನಿಂದ ದೇವರನ್ನು ಸ್ಮರಿಸಿ, ಕುಟುಂಬದವರೊಂದಿಗೆ ಸಂತೋಷದಿಂದ ಸಮಯ ಕಳೆಯುವುದು ವ್ರತದ ಭಾಗವೆಂದು ಪರಿಗಣಿಸಲಾಗುತ್ತದೆ.

ಭಕ್ತಿಯಿಂದ ಆಚರಿಸಿ:

ಮಂಗಳಗೌರಿ ವ್ರತದ ಆಚರಣೆಗಳು ಕುಟುಂಬದ ಸಂಪ್ರದಾಯ ಮತ್ತು ಸ್ಥಳೀಯ ಪದ್ಧತಿಗೆ ಅನುಗುಣವಾಗಿ ಬದಲಾಗಬಹುದು. ಹೀಗಾಗಿ ತಮ್ಮ ಕುಟುಂಬದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯಗಳನ್ನು ಪಾಲಿಸುವುದು ಸೂಕ್ತ.

ಶ್ರಾವಣ ಮಂಗಳವಾರದಂದು ಶ್ರದ್ಧೆ, ಸಾತ್ವಿಕತೆ ಹಾಗೂ ಸಂಯಮದಿಂದ ಮಂಗಳಗೌರಿ ದೇವಿಯನ್ನು ಆರಾಧಿಸುವುದು ಮುಖ್ಯ ಎಂಬುದು ಭಕ್ತರ ನಂಬಿಕೆಯಾಗಿದೆ.

ಮೂವರ ಎನ್‌ಕೌಂಟರ್‌ಗೆ ಟ್ವಿಸ್ಟ್: ಘಟನಾ ಸ್ಥಳದಲ್ಲಿ ಸಿಕ್ಕ ಹೊಸ ಚಪ್ಪಲಿ ಬಗ್ಗೆ ACF ಹೇಳಿದ್ದೇನು?

0

ಚಾಮರಾಜನಗರ: ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಮೂವರ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳದಲ್ಲಿ ಜಪ್ತಿ ಮಾಡಲಾದ ವಸ್ತುಗಳು ಹಲವು ಅನುಮಾನಗಳಿಗೆ ಕಾರಣವಾಗಿವೆ.

ವಿಶೇಷವಾಗಿ, ಸ್ಟಿಕ್ಕರ್ ಕೂಡ ಕಳಚದ ಹೊಸ ಚಪ್ಪಲಿ ಪತ್ತೆಯಾಗಿರುವುದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಬಗ್ಗೆ ಕಾವೇರಿ ವನ್ಯಧಾಮದ ಎಸಿಎಫ್ ಮರಿಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಘಟನಾ ಸ್ಥಳದಲ್ಲಿ ಎರಡು ಚೀಲಗಳು ಪತ್ತೆಯಾಗಿದ್ದು, ಅವುಗಳಲ್ಲಿ ಮಾಂಸ, ಬಂದೂಕು, ಚಪ್ಪಲಿ, ಟಾರ್ಚ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಘಟನಾ ಸ್ಥಳದಲ್ಲಿ ಹೊಸ ಚಪ್ಪಲಿ ಪತ್ತೆಯಾಗಿರುವ ಕುರಿತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಕಾಡಿಗೆ ಬೇಟೆಗೆ ತೆರಳಿದವರು ಹೊಸ ಚಪ್ಪಲಿಗಳನ್ನು ತೆಗೆದುಕೊಂಡು ಹೋಗಿದ್ದರೇ? ಅವುಗಳನ್ನು ಬಳಸದೇ ಏಕೆ ಬಿಟ್ಟು ಹೋಗಿದ್ದರು ಎಂಬ ಅನುಮಾನಗಳು ವ್ಯಕ್ತವಾಗಿದ್ದವು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸಿಎಫ್ ಮರಿಸ್ವಾಮಿ, “ನಮ್ಮ ಸಿಬ್ಬಂದಿ ಅಲ್ಲಿಗೆ ಹೊಸ ಚಪ್ಪಲಿ ತೆಗೆದುಕೊಂಡು ಹೋಗಿ ಇಟ್ಟಿಲ್ಲ. ಘಟನಾ ಸ್ಥಳದಲ್ಲಿ ನಾಲ್ಕು ಜೊತೆ ಚಪ್ಪಲಿಗಳು ಸಿಕ್ಕಿವೆ. ಕಿತ್ತುಹೋದರೆ ಇರಲಿ ಎಂದು ತಂದಿಟ್ಟುಕೊಂಡಿರಬಹುದು” ಎಂದು ತಿಳಿಸಿದ್ದಾರೆ.

ಬ್ಯಾಗ್‌ಗಳಲ್ಲಿ ದಿನಸಿ ಪದಾರ್ಥಗಳು, ಟಾರ್ಚ್ ಸೇರಿದಂತೆ ಬೇಟೆಗೆ ಬಳಸುವ ಸಲಕರಣೆಗಳು ಪತ್ತೆಯಾಗಿವೆ. ಅರಣ್ಯಕ್ಕೆ ಬಂದಿದ್ದವರು ಬೇಟೆಗಾರರು ಎಂದು ಹೇಳಿದ್ದಾರೆ.

“ಅವರು ದನ ಮೇಯಿಸಲು ಅಥವಾ ಹುಡುಕಲು ಅರಣ್ಯಕ್ಕೆ ಪ್ರವೇಶಿಸಿರಲಿಲ್ಲ. ಬೇಟೆಯಾಡುವ ಉದ್ದೇಶದಿಂದಲೇ ಅರಣ್ಯಕ್ಕೆ ಬಂದಿದ್ದರು. ಅವರು ಸುಮಾರು 8ರಿಂದ 10 ಕಿಲೋಮೀಟರ್‌ವರೆಗೆ ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿದ್ದರು. ಎನ್‌ಕೌಂಟರ್ ನಡೆದ ಸ್ಥಳದಿಂದ ಸುಮಾರು 75 ಮೀಟರ್ ದೂರದಲ್ಲಿ ಎರಡು ಬ್ಯಾಗ್‌ಗಳಲ್ಲಿ ಮಾಂಸ ಪತ್ತೆಯಾಗಿದೆ ಎಂದು ಎಸಿಎಫ್ ಮಾಹಿತಿ ನೀಡಿದ್ದಾರೆ.

ಒಬ್ಬನೇ ಸಿಬ್ಬಂದಿ ಗುಂಡು ಹಾರಿಸಿದ್ದ?

ಮೂವರ ಮೇಲೆ ಗುಂಡು ಹಾರಿಸಿದವರು ಒಬ್ಬನೇ ಅರಣ್ಯ ಸಿಬ್ಬಂದಿ. ಉಳಿದ ಸಿಬ್ಬಂದಿ ಆತನೊಂದಿಗೆ ಇದ್ದರು ಎಂದು ಅವರು ತಿಳಿಸಿದ್ದಾರೆ.

ಆತ್ಮರಕ್ಷಣೆಗಾಗಿ ಶೂಟೌಟ್ ನಡೆಸಲಾಗಿದೆ ಎಂಬುದು ಅರಣ್ಯ ಇಲಾಖೆಯ ನಿಲುವಾಗಿದ್ದು, ಪ್ರಕರಣದ ಕುರಿತು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ವಿವಿಧ ಪ್ರಶ್ನೆಗಳು ಕೇಳಿಬಂದಿವೆ.

ಶೂಟೌಟ್ ಪ್ರಕರಣದ ಬಳಿಕ ಅರಣ್ಯ ಸಿಬ್ಬಂದಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂಬ ವಿಚಾರವೂ ಚರ್ಚೆಗೆ ಬಂದಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಎಸಿಎಫ್, ಯಾವುದೇ ದುರ್ಘಟನೆ ನಡೆಯಬಾರದು ಎಂಬ ಕಾರಣಕ್ಕೆ ಅವರನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿತ್ತು ಎಂದು ತಿಳಿಸಿದ್ದಾರೆ.

“ಅವರು ಹೆದರಿ ಓಡುವ ಪರಿಸ್ಥಿತಿ ಇಲ್ಲ. ತನಿಖಾ ತಂಡದ ಮುಂದೆ ಹಾಜರುಪಡಿಸಿ ಹೇಳಿಕೆ ಪಡೆಯಲಾಗಿದೆ” ಎಂದು ಮರಿಸ್ವಾಮಿ ಹೇಳಿದ್ದಾರೆ.

ಕಾವೇರಿ ವನ್ಯಧಾಮದ ಶೂಟೌಟ್ ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಪ್ರಾಥಮಿಕ ವರದಿ ಇಂದು ಅಥವಾ ನಾಳೆ ಸಲ್ಲಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಶೂಟೌಟ್ ನಡೆಸಿದ ಅರಣ್ಯ ಸಿಬ್ಬಂದಿಯನ್ನೂ ಅರಣ್ಯಾಧಿಕಾರಿಗಳ ಕಣ್ಗಾವಲಿನಲ್ಲಿ ಇರಿಸಲಾಗಿದ್ದು, ತನಿಖಾಧಿಕಾರಿಗಳ ಮುಂದೆ ಹಾಜರುಪಡಿಸಿ ಘಟನೆಯ ಕುರಿತು ಹೇಳಿಕೆ ಪಡೆಯಲಾಗಿದೆ.

ಘಟನಾ ಸ್ಥಳದಲ್ಲಿ ಪತ್ತೆಯಾದ ವಸ್ತುಗಳು, ಶೂಟೌಟ್ ನಡೆದ ಸಂದರ್ಭ, ಅರಣ್ಯ ಸಿಬ್ಬಂದಿಯ ಹೇಳಿಕೆಗಳು ಹಾಗೂ ಮೃತರ ಹಿನ್ನೆಲೆ ಸೇರಿದಂತೆ ಹಲವು ಅಂಶಗಳನ್ನು ತನಿಖಾ ತಂಡ ಪರಿಶೀಲಿಸುತ್ತಿದೆ. ತನಿಖಾ ವರದಿ ಬಳಿಕ ಶೂಟೌಟ್ ಪ್ರಕರಣದಲ್ಲಿ ನಿಜವಾಗಿ ಯಾರ ತಪ್ಪಿದೆ ಎಂಬುದು ಸ್ಪಷ್ಟವಾಗಲಿದೆ.

ಕೇದಾರನಾಥದ ಮಾಜಿ ಪ್ರಧಾನ ಅರ್ಚಕ ಗುರುಲಿಂಗಯ್ಯ ಲಿಂಗೈಕ್ಯ!

0

ಬೆಂಗಳೂರು: ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಪವಿತ್ರ ಕೇದಾರನಾಥ ಕ್ಷೇತ್ರದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಗುರುಲಿಂಗಯ್ಯ (76) ಅವರು ಸೋಮವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಲಿಂಗೈಕ್ಯರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಕಳೆದ ಕೆಲವು ದಿನಗಳಿಂದ ಬಳಲುತ್ತಿದ್ದ ಗುರುಲಿಂಗಯ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕೇದಾರನಾಥ ಕ್ಷೇತ್ರದಲ್ಲಿ ದಶಕಗಳ ಕಾಲ ಶಿವನ ಆರಾಧನೆ ಹಾಗೂ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ಅರ್ಚಕರ ನಿಧನಕ್ಕೆ ಭಕ್ತರು ಹಾಗೂ ಧಾರ್ಮಿಕ ವಲಯದಲ್ಲಿ ಸಂತಾಪ ವ್ಯಕ್ತವಾಗಿದೆ.

ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕ ಬಾಗೇವಾಡಿ ಗ್ರಾಮದವರಾದ ಗುರುಲಿಂಗಯ್ಯ ಅವರ ಕುಟುಂಬ ಕಳೆದ ಮೂರು ತಲೆಮಾರುಗಳಿಂದ ಉತ್ತರಾಖಂಡದಲ್ಲಿ ನೆಲೆಸಿದೆ.

ಕೇದಾರಪೀಠದ 322ನೇ ಜಗದ್ಗುರು ರಾವಲ್ ಶಾಂತ ಶಿವಾಚಾರ್ಯ ಭಗವತ್ಪಾದರ ಕಾಲದಲ್ಲಿ ಗುರುಲಿಂಗಯ್ಯ ಅವರು ಕೇದಾರನಾಥ ಕ್ಷೇತ್ರದಲ್ಲಿ ಅರ್ಚಕರಾಗಿ ಸೇವೆ ಆರಂಭಿಸಿದ್ದರು.

1970ರಿಂದ ಸುಮಾರು 40 ವರ್ಷಗಳ ಕಾಲ ಕೇದಾರನಾಥೇಶ್ವರನ ಪ್ರಧಾನ ಅರ್ಚಕರಾಗಿ ನಿಷ್ಠೆ, ಶ್ರದ್ಧೆ ಹಾಗೂ ಭಕ್ತಿಯಿಂದ ಸೇವೆ ಸಲ್ಲಿಸಿದ್ದರು. ತಮ್ಮ ಸರಳತೆ ಹಾಗೂ ಧಾರ್ಮಿಕ ಸೇವೆಯ ಮೂಲಕ ಭಕ್ತರು ಹಾಗೂ ಕ್ಷೇತ್ರದೊಂದಿಗೆ ನಿಕಟ ಸಂಬಂಧ ಹೊಂದಿದ್ದರು.

ಕೇದಾರನಾಥ ಪೀಠದ ಸಾಂಪ್ರದಾಯಿಕ ನಿಯಮಗಳ ಪ್ರಕಾರ, ದಕ್ಷಿಣ ಭಾರತ, ವಿಶೇಷವಾಗಿ ಕರ್ನಾಟಕದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಜಂಗಮ ಅರ್ಚಕರೇ ಕೇದಾರನಾಥ ಕ್ಷೇತ್ರದಲ್ಲಿ ಪೂಜೆ ಸಲ್ಲಿಸುವ ರಾವಲ್ ಅಥವಾ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುವ ಪರಂಪರೆ ಇದೆ.

ಈ ಪವಿತ್ರ ಧಾರ್ಮಿಕ ಪರಂಪರೆಯಲ್ಲಿ ಗುರುಲಿಂಗಯ್ಯ ಅವರು ಪ್ರಮುಖ ಪಾತ್ರ ವಹಿಸಿದ್ದರು. ದಶಕಗಳ ಕಾಲ ಕೇದಾರನಾಥೇಶ್ವರನ ಆರಾಧನೆ ಹಾಗೂ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡು ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಗೌರವ ಪಡೆದಿದ್ದರು.

ಗುರುಲಿಂಗಯ್ಯ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಅವರ ಸ್ವಗ್ರಾಮವಾದ ಬೆಳಗಾವಿ ಜಿಲ್ಲೆಯ ಚಿಕ್ಕ ಬಾಗೇವಾಡಿಗೆ ತರಲಾಗಿದೆ.

ಇಂದು ಸಂಜೆ 4 ಗಂಟೆಗೆ ವೀರಶೈವ ಲಿಂಗಾಯತ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಸಕಲ ಗೌರವಗಳೊಂದಿಗೆ ಅವರ ಕ್ರಿಯಾ ಸಮಾಧಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.

ನಾಲ್ಕು ದಶಕಗಳ ಕಾಲ ಕೇದಾರನಾಥ ಕ್ಷೇತ್ರದಲ್ಲಿ ಶಿವನ ಸೇವೆ ಸಲ್ಲಿಸಿದ ಹಿರಿಯ ಅರ್ಚಕರ ಅಗಲಿಕೆಯಿಂದ ಧಾರ್ಮಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಭಕ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.

“ನೀವು ಸಾಕು ಎನ್ನುವ ಮೊದಲೇ ನಾನೇ ಮುಗಿಸಿದ್ದೇನೆ”: ಆ್ಯಂಕರಿಂಗ್‌ಗೆ ಅನುಪಮಾ ಗೌಡ ಗುಡ್‌ಬೈ!

0

ಹಿರಿತೆರೆ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಅವರು ಆ್ಯಂಕರಿಂಗ್‌ಗೆ ವಿದಾಯ ಹೇಳಿದ್ದಾರೆ.

ಹಲವು ವರ್ಷಗಳಿಂದ ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳನ್ನು ನಿರೂಪಿಸುತ್ತಿದ್ದ ಅವರು, ಇದೀಗ ಅನಿವಾರ್ಯ ಕಾರಣಗಳಿಂದ ಆ್ಯಂಕರಿಂಗ್ ಜರ್ನಿಯನ್ನು ಅಪೂರ್ಣವಾಗಿ ಅಂತ್ಯಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ.

ಆ್ಯಂಕರಿಂಗ್ ಕ್ಷೇತ್ರದಲ್ಲಿ ಅನುಪಮಾ ಗೌಡ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಅನುಪಮಾ ಗೌಡ ಅವರು ಕಲರ್ಸ್ ಕನ್ನಡ ಸೇರಿದಂತೆ ಹಲವು ವಾಹಿನಿಗಳ ಜನಪ್ರಿಯ ಕಾರ್ಯಕ್ರಮಗಳನ್ನು ನಿರೂಪಿಸಿ ಪ್ರೇಕ್ಷಕರ ಮನಗೆದ್ದಿದ್ದರು.

ಹಲವು ಜನಪ್ರಿಯ ಶೋಗಳ ನಿರೂಪಕಿ:

ಅನುಪಮಾ ಗೌಡ ಅವರು ‘ಮಜಾ ಭಾರತ್’, ‘ಕನ್ನಡ ಕೋಗಿಲೆ’, ‘ರಾಜಾ ರಾಣಿ’, ‘ನಮ್ಮಮ್ಮ ಸೂಪರ್ ಸ್ಟಾರ್’, ‘ಸುವರ್ಣ ಸೂಪರ್‌ಸ್ಟಾರ್ಸ್’, ‘ಸುವರ್ಣ ಜ್ಯಾಕ್‌ಪಾಟ್’, ‘ಗರ್ಲ್ಸ್ vs ಬಾಯ್ಸ್’ ಹಾಗೂ ‘ಕ್ವಾಟ್ಲೆ ಕಿಚನ್’ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರೂಪಿಸಿದ್ದಾರೆ.

ಆದರೆ, ತಮ್ಮ ಕೊನೆಯ ಶೋವನ್ನು ಸಂಪೂರ್ಣವಾಗಿ ಮುಗಿಸುವ ಅವಕಾಶ ಸಿಗದಿರುವುದು ಅವರಿಗೆ ಬೇಸರ ತಂದಿದೆ. ಈ ಕುರಿತು ಮಾತನಾಡಿರುವ ಅವರು ತಮ್ಮ ಆ್ಯಂಕರಿಂಗ್ ಪಯಣವನ್ನು ನೆನಪಿಸಿಕೊಂಡಿದ್ದಾರೆ.

ತಮ್ಮ ವಿಡಿಯೋದಲ್ಲಿ ಅನುಪಮಾ ಗೌಡ ಅವರು, ಆ್ಯಂಕರಿಂಗ್‌ಗೆ ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

“ನಾನು ನಿಮ್ಮೆಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ಹೊಸ ಶೋನಲ್ಲಿ ನಾನು ಇರಬೇಕಿತ್ತು. ಆದರೆ, ಇಲ್ಲ. ವಾಹಿನಿಯವರು ಏನೇನೋ ಪ್ರಾಮಿಸ್ ಮಾಡಿಕೊಂಡಿದ್ದಾರೆ. ಅದೇನು ಎಂಬುದು ನಾನು ಮಾಡಿಲ್ಲ. ಅಪೂರ್ಣವಾಗಿ ಈ ಪ್ರಯಾಣ ಕೊನೆ ಮಾಡುತ್ತಿದ್ದೇನೆ. ನೀವೆಲ್ಲ ‘ಸಾಕಮ್ಮ’ ಎನ್ನುವುದರೊಳಗೆ ನಾನೇ ಆ್ಯಂಕರಿಂಗ್ ಮುಗಿಸಿದ್ದೇನೆ” ಎಂದು ಭಾವುಕರಾಗಿ ಹೇಳಿದ್ದಾರೆ.

ಅಲ್ಲದೆ, ಮುಂದೆ ಮತ್ತೆ ಸೀರಿಯಲ್‌ಗೆ ಬರುತ್ತಾರೋ ಇಲ್ಲವೋ ಎಂಬುದು ತಮಗೂ ಗೊತ್ತಿಲ್ಲ ಎಂದು ಅನುಪಮಾ ತಿಳಿಸಿದ್ದಾರೆ.

ಅನುಪಮಾ ಗೌಡ ಅವರ ಈ ನಿರ್ಧಾರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಕೆಲವರು ತಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುವಂತೆ ಮನವಿ ಮಾಡಿದರೆ, ಮತ್ತಷ್ಟು ಅಭಿಮಾನಿಗಳು ಅವರ ಮುಂದಿನ ವೃತ್ತಿಜೀವನಕ್ಕೆ ಶುಭ ಹಾರೈಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲೂ ಅನುಪಮಾ ಗೌಡ ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಅವರ ಆ್ಯಂಕರಿಂಗ್ ಶೈಲಿಯನ್ನು ಮೆಚ್ಚಿಕೊಂಡಿರುವ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಅನುಪಮಾ ಗೌಡ ಅವರು 2003ರಲ್ಲಿ ಬಿಡುಗಡೆಯಾದ ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ 2014ರಲ್ಲಿ ಪ್ರಸಾರವಾದ ‘ಅಕ್ಕ’ ಧಾರಾವಾಹಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು. ಈ ಧಾರಾವಾಹಿಯಲ್ಲಿ ಅವರು ದ್ವಿಪಾತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು.

2017-18ರಲ್ಲಿ ಪ್ರಸಾರವಾದ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಸಿನಿಮಾಗಳಲ್ಲೂ ಅಭಿನಯಿಸಿರುವ ಅನುಪಮಾ ಗೌಡ ಅವರು ತಮ್ಮ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ನಟನೆ, ನಿರೂಪಣೆ ಹಾಗೂ ವಿವಿಧ ಕಿರುತೆರೆ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಅನುಪಮಾ ಗೌಡ ಅವರ ಆ್ಯಂಕರಿಂಗ್ ಜರ್ನಿ ಸದ್ಯಕ್ಕೆ ಅಂತ್ಯಗೊಂಡಿದ್ದು, ಮುಂದಿನ ದಿನಗಳಲ್ಲಿ ಅವರು ಯಾವ ಕ್ಷೇತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಇಂದಿನಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: 50 ಕಿ.ಮೀ ವೇಗದಲ್ಲಿ ಗಾಳಿ, ಈ ಜಿಲ್ಲೆಗಳಿಗೆ ಎಚ್ಚರಿಕೆ!

0

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚಟುವಟಿಕೆ ಮುಂದುವರಿದಿದ್ದು, ಮುಂದಿನ ಕೆಲವು ದಿನಗಳಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಇದರೊಂದಿಗೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಗುಡುಗು-ಮಿಂಚು ಮತ್ತು ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆಗಸ್ಟ್ 18ರಿಂದ 21ರವರೆಗೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ಗುಡುಗು-ಮಿಂಚು ಸಹಿತ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ಆಗಸ್ಟ್ 22ರಿಂದ ಈ ಎಚ್ಚರಿಕೆಯ ತೀವ್ರತೆ ಕಡಿಮೆಯಾಗುವ ನಿರೀಕ್ಷೆಯಿದೆ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಚಟುವಟಿಕೆ ಮುಂದುವರಿಯುವ ಸಾಧ್ಯತೆಯಿದೆ. ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ಸದ್ಯದ IMD ಮುನ್ಸೂಚನೆಯಲ್ಲಿ ಕರಾವಳಿ ಕರ್ನಾಟಕಕ್ಕೆ ಪ್ರತ್ಯೇಕ ಎಚ್ಚರಿಕೆ ನೀಡಲಾಗಿಲ್ಲ.

ಕಲಬುರಗಿ, ವಿಜಯಪುರ, ಬಾಗಲಕೋಟೆ, ಗದಗ, ರಾಯಚೂರು ಹಾಗೂ ಧಾರವಾಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಳೆಯೊಂದಿಗೆ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ.

ಬೆಳಗಾವಿ, ಬೀದರ್, ಹಾವೇರಿ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿಯೂ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಆಗಸ್ಟ್ 18ರಿಂದ 21ರವರೆಗೆ ಗುಡುಗು-ಮಿಂಚು ಮತ್ತು ಬಲವಾದ ಮೇಲ್ಮೈ ಗಾಳಿಯ ಮುನ್ಸೂಚನೆ ಇದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಹಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಭಾಗಗಳಲ್ಲೂ ಗುಡುಗು-ಮಿಂಚು ಹಾಗೂ ಬಲವಾದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಮಳೆಯ ಸಂದರ್ಭದಲ್ಲಿ ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೈತರು ಹಾಗೂ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಸೂಕ್ತವಾಗಿದೆ. ಗಾಳಿ ಬೀಸುವ ವೇಳೆ ಮರಗಳ ಕೆಳಗೆ, ವಿದ್ಯುತ್ ಕಂಬಗಳ ಸಮೀಪ ಹಾಗೂ ದುರ್ಬಲ ಕಟ್ಟಡಗಳ ಬಳಿ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.

ಮುಂದಿನ ಕೆಲವು ದಿನಗಳಲ್ಲಿ ರಾಜ್ಯದ ಎಲ್ಲ ಭಾಗಗಳಲ್ಲೂ ಒಂದೇ ರೀತಿಯ ಮಳೆಯಾಗುವುದಿಲ್ಲ. ಕೆಲವು ಜಿಲ್ಲೆಗಳಲ್ಲಿ ಚದುರಿದ ಮಳೆಯಾದರೆ, ಒಳನಾಡಿನ ಹಲವು ಭಾಗಗಳಲ್ಲಿ ಗುಡುಗು-ಮಿಂಚು ಹಾಗೂ ಬಲವಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾವಾರು ಹವಾಮಾನ ಮುನ್ಸೂಚನೆಯನ್ನು ಗಮನಿಸಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವುದು ಮುಖ್ಯವಾಗಿದೆ.

ಒಟ್ಟಿನಲ್ಲಿ, ಕರ್ನಾಟಕದಲ್ಲಿ ಮಳೆ ಚಟುವಟಿಕೆ ಮುಂದುವರಿಯಲಿದ್ದು, ಆಗಸ್ಟ್ 18ರಿಂದ 21ರವರೆಗೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯ ಜೊತೆಗೆ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ.

‘ನಾನು ಬದುಕಿದ್ದೇನೆ’ ಎಂದರೂ ದಾಖಲೆಗಳಲ್ಲಿ ಸಾವು! ಆಸ್ತಿ ಉಳಿಸಿಕೊಳ್ಳಲು 70ರ ವೃದ್ಧನ ಹೋರಾಟ

0

ರಾಯಚೂರು: ಬದುಕಿರುವ 70 ವರ್ಷದ ವೃದ್ಧನನ್ನು ದಾಖಲೆಗಳಲ್ಲಿ ಸತ್ತಿದ್ದಾನೆ ಎಂದು ಬಿಂಬಿಸಿ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ, ಕೋಟಿ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಕಬಳಿಸಿರುವ ಆರೋಪ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಕೇಳಿಬಂದಿದೆ.

ತಮ್ಮದೇ ದುಡಿಮೆಯಿಂದ ಸಂಪಾದಿಸಿದ ಆಸ್ತಿಯನ್ನು ಮರಳಿ ಪಡೆಯಲು ಮೊಹಮ್ಮದ್ ಶರ್ಫುದ್ದಿನ್ ಎಂಬ ವೃದ್ಧ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದು, ನ್ಯಾಯಕ್ಕಾಗಿ ಕಣ್ಣೀರು ಹಾಕುವಂತಾಗಿದೆ.

ಶರ್ಫುದ್ದಿನ್ ಅವರು ಮುಂಬೈ ಹಾಗೂ ಬಹ್ರೇನ್‌ನಲ್ಲಿ ಅಧಿಕಾರಿಯಾಗಿ ಸುದೀರ್ಘ ಕಾಲ ಕೆಲಸ ಮಾಡಿದ್ದರು. ಅಲ್ಲಿನ ದುಡಿಮೆಯಿಂದ ಬಂದ ಹಣವನ್ನು ಪತ್ನಿ ರಸೂಲ್ ಬೀ ಅವರಿಗೆ ಕಳುಹಿಸುತ್ತಿದ್ದು, ಮಾನ್ವಿ ಪಟ್ಟಣದಲ್ಲಿ 6 ಮನೆಗಳು ಹಾಗೂ 2 ಅಂಗಡಿಗಳನ್ನು ಖರೀದಿಸಿದ್ದರು ಎನ್ನಲಾಗಿದೆ.

ಪತ್ನಿ ರಸೂಲ್ ಬೀ ನಿಧನರಾದ ಬಳಿಕ, ‘ಕರೀಷ್ಮಾ’ ಎಂಬುವವರು ಜೀವಂತವಾಗಿರುವ ಶರ್ಫುದ್ದಿನ್ ಅವರ ಹೆಸರಿನಲ್ಲಿ ಮಾನ್ವಿ ಪುರಸಭೆಯಿಂದ ನಕಲಿ ಮರಣ ಪ್ರಮಾಣ ಪತ್ರ ಪಡೆದು ಆಸ್ತಿಯನ್ನು ಅಕ್ರಮವಾಗಿ ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮರಣ ಪ್ರಮಾಣ ಪತ್ರದಲ್ಲೇ ಹೆಸರು ವ್ಯತ್ಯಾಸ:

ಶರ್ಫುದ್ದಿನ್ ಅವರ ನೈಜ ದಾಖಲೆಗಳಲ್ಲಿ ‘ಮೊಹಮ್ಮದ್ ಶರ್ಫುದ್ದಿನ್, ತಂದೆ ಖಾಜಾ ಪಿರ್ ಸಾಬ್’ ಎಂದು ನಮೂದಿಸಲಾಗಿದೆ. ಆದರೆ ನಕಲಿ ಎಂದು ಆರೋಪಿಸಲಾಗಿರುವ ಮರಣ ಪ್ರಮಾಣ ಪತ್ರದಲ್ಲಿ ‘ಶರ್ಫುದ್ದಿನ್, ತಂದೆ ಪಿರ್ ಸಾಬ್’ ಎಂದು ದಾಖಲಾಗಿದೆ.

ಈ ಕುರಿತು ತನಿಖೆ ನಡೆಸಿದ ಮಾನ್ವಿ ತಹಶೀಲ್ದಾರ್, ಮರಣ ಪ್ರಮಾಣ ಪತ್ರದಲ್ಲಿರುವ ಹೆಸರಿನ ವ್ಯಕ್ತಿ ಆ ಸ್ಥಳದಲ್ಲಿ ವಾಸವಾಗಿಲ್ಲ ಎಂದು ಪೊಲೀಸರಿಗೆ ವರದಿ ನೀಡಿದ್ದಾರೆ ಎನ್ನಲಾಗಿದೆ.

ಇನ್ನು 2025ರಲ್ಲಿ ಕಂದಾಯ ಇಲಾಖೆ ನೀಡಿರುವ ವರದಿಯಲ್ಲೂ ಶರ್ಫುದ್ದಿನ್ ಅವರು ಜೀವಂತವಾಗಿದ್ದಾರೆ ಎಂಬುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಆದರೂ ಇದುವರೆಗೆ ನ್ಯಾಯ ದೊರೆತಿಲ್ಲ ಎಂಬುದು ವೃದ್ಧನ ಅಳಲು.

ಅಧಿಕಾರಿಗಳ ವಿರುದ್ಧವೂ ಆರೋಪ:

ಮಾನ್ವಿ ಪುರಸಭೆಯ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಶಾಮೀಲಾಗಿ ಜೀವಂತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ, ವೃದ್ಧ ಶರ್ಫುದ್ದಿನ್ ಅವರಿಗೆ ತಕ್ಷಣ ನ್ಯಾಯ ಒದಗಿಸಬೇಕು ಎಂದು ಸ್ಥಳೀಯ ಹೋರಾಟಗಾರ ಶಿವರಾಜ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾನ್ವಿ ಪುರಸಭೆ ಆಯುಕ್ತ ಪರಶುರಾಮ್ ದೇವಮಾನೆ, ದಾಖಲೆಗಳಲ್ಲಿ ಪರಸ್ಪರ ವ್ಯತ್ಯಾಸಗಳಿದ್ದು, ಈ ಹಿಂದೆ ನ್ಯಾಯಾಲಯ ಹಾಗೂ ಸರ್ಕಾರಕ್ಕೆ ಸಲ್ಲಿಸಲಾಗಿದ್ದ ಅರ್ಜಿಗಳು ವಜಾಗೊಂಡಿವೆ ಎಂದು ತಿಳಿಸಿದ್ದಾರೆ. ತಹಶೀಲ್ದಾರ್ ವರದಿ ಕುರಿತು ಮಾಹಿತಿ ಇಲ್ಲ. ಅಗತ್ಯವಿದ್ದರೆ ನ್ಯಾಯಾಲಯದ ಮೂಲಕ ಪ್ರಶ್ನಿಸಬಹುದು ಎಂದು ಅವರು ಹೇಳಿದ್ದಾರೆ.

ಜೀವಂತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಲಾಗಿದೆ ಎಂಬ ಆರೋಪ ಗಂಭೀರ ಸ್ವರೂಪ ಪಡೆದಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಿ ಸತ್ಯಾಂಶ ಹೊರತರಬೇಕೆಂಬ ಆಗ್ರಹ ಕೇಳಿಬಂದಿದೆ.