Home Blog

ಗದಗದ ಅಭಿವೃದ್ಧಿಗೆ ಬೀದಿ ಬೀದಿಯಲ್ಲಿ ‘GEN Z ಸೈನಿಕರು’

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ಅಭಿವೃದ್ಧಿ, ಮೂಲಸೌಕರ್ಯ ಸಮಸ್ಯೆಗಳು ಹಾಗೂ ಗ್ರಾಮೀಣ ಭಾಗಗಳ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಮತ್ತು ಆಡಳಿತದ ಗಮನಕ್ಕೆ ತರುವ ಉದ್ದೇಶದಿಂದ GEN Z Voters & Citizens Forum ಹೊಸ ಮಾದರಿಯ ಜನಜಾಗೃತಿ ಅಭಿಯಾನಕ್ಕೆ ಮುಂದಾಗಿದೆ.

ನಗರದ ಪ್ರತಿಯೊಂದು ರಸ್ತೆ, ಬಡಾವಣೆ, ವಾರ್ಡ್ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ GEN Z ಯುವಕರು ‘ಅಭಿವೃದ್ಧಿಯ ಸೈನಿಕರು’ ಆಗಿ ಕಾರ್ಯನಿರ್ವಹಿಸಲಿದ್ದು, ಪ್ರತಿ ತಂಡವನ್ನು ಮುನ್ನಡೆಸುವ ಯುವ ನಾಯಕರು ‘ಟೀಮ್ ಲೀಡರ್ ಕಮಾಂಡೋ’ಗಳಾಗಿ ಜವಾಬ್ದಾರಿ ವಹಿಸಲಿದ್ದಾರೆ.

ಹಾಳಾದ ರಸ್ತೆಗಳು, ಅವ್ಯವಸ್ಥೆಯ ಚರಂಡಿಗಳು, ಕುಡಿಯುವ ನೀರಿನ ಸಮಸ್ಯೆ, ಕಸದ ರಾಶಿ, ಬೀದಿ ದೀಪಗಳ ಕೊರತೆ, ಅಪೂರ್ಣ ಕಾಮಗಾರಿಗಳು ಹಾಗೂ ಸಾರ್ವಜನಿಕ ಸೌಲಭ್ಯಗಳ ಕೊರತೆ ಸೇರಿದಂತೆ ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಸಮಸ್ಯೆಗಳನ್ನು ಯುವಕರು ಫೋಟೊ ಮತ್ತು ವಿಡಿಯೊಗಳ ಮೂಲಕ ಸ್ಥಳ ಹಾಗೂ ದಿನಾಂಕದೊಂದಿಗೆ ದಾಖಲಿಸಲಿದ್ದಾರೆ. ಈ ದಾಖಲೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರ ಗಮನಕ್ಕೆ ತರುವುದರ ಜತೆಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಗಮನಕ್ಕೂ ತರಲಾಗುವುದು.

ಆರೋಪಕ್ಕಾಗಿ ಅಲ್ಲ — ಪರಿಹಾರಕ್ಕಾಗಿ ದಾಖಲೆ

ಅಭಿಯಾನವು ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕ ದಾಳಿ ಮಾಡುವ ಉದ್ದೇಶ ಹೊಂದಿಲ್ಲ. ಗದಗದ ಅಭಿವೃದ್ಧಿಯಲ್ಲಿ ಎಲ್ಲಿ ಕೊರತೆಯಿದೆ, ಜನರು ಎದುರಿಸುತ್ತಿರುವ ಸಮಸ್ಯೆಗಳೇನು ಹಾಗೂ ಇನ್ನೂ ಆಗಬೇಕಿರುವ ಕೆಲಸಗಳೇನು ಎಂಬುದನ್ನು ಸಾಕ್ಷ್ಯಾಧಾರಗಳೊಂದಿಗೆ ಜನರ ಮುಂದಿಡುವುದು ಇದರ ಉದ್ದೇಶವಾಗಿದೆ.

“ನಮ್ಮ ಹೋರಾಟ ವ್ಯಕ್ತಿಯ ವಿರುದ್ಧವಲ್ಲ; ಅಭಿವೃದ್ಧಿಯ ಕೊರತೆಯ ವಿರುದ್ಧ. ನಮ್ಮ ಗುರಿ ರಾಜಕೀಯ ದ್ವೇಷವಲ್ಲ; ಗದಗದ ಅಭಿವೃದ್ಧಿ.”

ಜನಪ್ರತಿನಿಧಿಗಳು ಜನರಿಂದ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ನಗರದ ರಸ್ತೆ, ಕುಡಿಯುವ ನೀರು, ಚರಂಡಿ, ಸ್ವಚ್ಛತೆ, ಉದ್ಯೋಗ ಹಾಗೂ ಮೂಲಸೌಕರ್ಯಗಳ ಕುರಿತು ಪ್ರಶ್ನಿಸುವುದು ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕು ಎಂದು Forum ತಿಳಿಸಿದೆ. ಉತ್ತಮ ಕೆಲಸಗಳು ನಡೆದಿದ್ದರೆ ಅವುಗಳನ್ನೂ ಗುರುತಿಸುವ ಜವಾಬ್ದಾರಿಯುತ ಜನಜಾಗೃತಿ ಅಭಿಯಾನ ಇದಾಗಲಿದೆ.

ಪ್ರತಿ ವಾರ್ಡ್‌ಗೆ GEN Z ತಂಡ

ಪ್ರತಿಯೊಂದು ವಾರ್ಡ್ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯುವಕರ ತಂಡಗಳನ್ನು ರಚಿಸಲಾಗುವುದು. ತಂಡದ ನಾಯಕರ ನೇತೃತ್ವದಲ್ಲಿ ತಮ್ಮ ಪ್ರದೇಶದ ಸಮಸ್ಯೆಗಳನ್ನು ಗುರುತಿಸಿ ದಾಖಲಿಸಲಾಗುತ್ತದೆ.

ಒಂದು ರಸ್ತೆ — ಒಂದು ಜವಾಬ್ದಾರಿ.
ಒಂದು ವಾರ್ಡ್ — ಒಂದು ಬಲಿಷ್ಠ GEN Z ತಂಡ.
ಒಂದು ಸಮಸ್ಯೆ — ಒಂದು ದಾಖಲೆ.

ದಾಖಲೆಯಿಂದ ಪ್ರಶ್ನೆ, ಪ್ರಶ್ನೆಯಿಂದ ಉತ್ತರ, ಉತ್ತರದಿಂದ ಅಭಿವೃದ್ಧಿ ಎಂಬ ಆಶಯದೊಂದಿಗೆ ಯುವಕರು ಕೇವಲ ಮತದಾರರಾಗಿ ಉಳಿಯದೆ, ತಮ್ಮ ನಗರದ ಅಭಿವೃದ್ಧಿಯನ್ನು ಗಮನಿಸುವ ಜಾಗೃತ ನಾಗರಿಕರಾಗಿ ಮುಂದೆ ಬರಬೇಕು ಎಂದು GEN Z Voters & Citizens Forum ಆಶಿಸಿದೆ.

                         — GEN Z Voters & Citizens Forum

ಸಣ್ಣ ಅಂಗಡಿಯಿಂದ ಉದ್ಯಮ ಸಾಮ್ರಾಜ್ಯದವರೆಗೆ…!

0

ಒಂದು ಸಣ್ಣ ಅಂಗಡಿ… ಅಲ್ಪ ಬಂಡವಾಳ… ಆದರೆ ದೊಡ್ಡ ಕನಸು. ಅಲ್ಲಿಂದ ಆರಂಭವಾದ ವ್ಯಾಪಾರ ಇಂದು ಸಂಸ್ಕರಣಾ ಘಟಕ, ಬೃಹತ್ ಮಳಿಗೆ, ಉತ್ಪಾದನಾ ಘಟಕ ಹಾಗೂ ನೂರಾರು ಜನರಿಗೆ ಉದ್ಯೋಗ ನೀಡುವ ಉದ್ಯಮವಾಗಿ ಬೆಳೆದಿದೆ. ಮತ್ತೊಂದೆಡೆ ಪಾರಂಪರಿಕ ವೃತ್ತಿಯನ್ನು ಉದ್ಯಮವನ್ನಾಗಿ ಬೆಳೆಸಿದವರು, ಉದ್ಯೋಗದಿಂದ ಉದ್ಯಮದತ್ತ ಹೆಜ್ಜೆ ಹಾಕಿದವರು, ವ್ಯಾಪಾರದ ಜತೆಗೆ ಸಮಾಜ ಸೇವೆಯನ್ನೂ ತಮ್ಮ ಕರ್ತವ್ಯವೆಂದು ಪರಿಗಣಿಸಿದವರು…

ಇಂತಹ ಪರಿಶ್ರಮ, ಪ್ರಾಮಾಣಿಕತೆ, ಉದ್ಯಮಶೀಲತೆ ಹಾಗೂ ಸಾಮಾಜಿಕ ಕಾಳಜಿಯ ಮೂಲಕ ಸಾಧನೆ ಮಾಡಿದ ಮಹನೀಯರಿಗೆ ಗದಗ ಉತ್ಸವ–೨೦೨೬ ಗೌರವದ ವೇದಿಕೆಯಾಗುತ್ತಿದೆ.

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ವತಿಯಿಂದ ಆಗಸ್ಟ್ ೧೬ರಂದು ಶ್ರೇಷ್ಠ ಉದ್ಯಮಿ, ಶ್ರೇಷ್ಠ ವರ್ತಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುತ್ತಿದೆ. ಈ ಸಾಧಕರ ಯಶೋಗಾಥೆ ಕೇವಲ ವ್ಯಾಪಾರದ ಕಥೆಯಲ್ಲ, ಇದು ಗದಗದ ಉದ್ಯಮಶೀಲತೆಯ ಬೆಳವಣಿಗೆಯ ಕಥೆಯೂ ಹೌದು.

*೨೦ನೇ ವಯಸ್ಸಿನಲ್ಲಿ ಆರಂಭವಾದ ಉದ್ಯಮದ ಪಯಣ*

ಕುಮಾರ ವಿ. ಘಟ್ಟದ ಅವರು ೧೯೮೧ರಲ್ಲಿ ತಮ್ಮ ೨೦ನೇ ವಯಸ್ಸಿನಲ್ಲಿ ಅಲ್ಪ ಬಂಡವಾಳದೊಂದಿಗೆ ಆರಂಭಿಸಿದ ಜಿ.ವಿ. ಘಟ್ಟದ ಟ್ರೇಡರ್ಸ್ ಇಂದು ಗದುಗಿನ ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿದೆ. ರಸ್ತೆ ಬದಿಯ ಸಣ್ಣ ಅಂಗಡಿಯಿಂದ ಆರಂಭವಾದ ವ್ಯಾಪಾರ, ಇಂದು ಸ್ವಂತ ಸಂಸ್ಕರಣಾ ಘಟಕ ಹೊಂದುವ ಮಟ್ಟಕ್ಕೆ ಬೆಳೆದಿದೆ.

ವ್ಯಾಪಾರದಿಂದ ಸಂಸ್ಕರಣೆಯತ್ತ ಹೆಜ್ಜೆ ಇಟ್ಟು, ರೈತರಿಂದ ನೇರವಾಗಿ ಉತ್ಪನ್ನ ಖರೀದಿಸಿ ಮೌಲ್ಯವರ್ಧನೆ ಮಾಡುತ್ತಿರುವುದು ಸಂಸ್ಥೆಯ ಪ್ರಮುಖ ಸಾಧನೆ. ಪ್ರಾಮಾಣಿಕತೆ, ನೈತಿಕತೆ ಮತ್ತು ‘ಕಾಯಕವೇ ಕೈಲಾಸ’ ಎಂಬ ದೃಢ ನಂಬಿಕೆಯೊಂದಿಗೆ ಲಾಭದ ಜತೆಗೆ ಸಂಬಂಧಗಳಿಗೂ ಬೆಲೆ ನೀಡಿರುವ ಅವರು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.

*ತಂದೆಯ ಅಂಗಡಿಯಿಂದ ವಿಶ್ವಾಸದ ಮಳಿಗೆಯವರೆಗೆ*

ಸುರೇಶಕುಮಾರ ರಾಜಮಲ್ ಓಸ್ವಾಲ್ ಅವರು ೪೫ ವರ್ಷಕ್ಕೂ ಹೆಚ್ಚು ಕಾಲ ಬಟ್ಟೆ ವ್ಯಾಪಾರದಲ್ಲಿ ಅನುಭವ ಹೊಂದಿದ್ದಾರೆ. ತಂದೆ ಆರಂಭಿಸಿದ ಓಸ್ವಾಲ್ ಸೀರೆ ಅಂಗಡಿಯ ಜವಾಬ್ದಾರಿ ಹೊತ್ತು, ಅದನ್ನು ಇಂದು ‘ಓಸ್ವಾಲ್ ಕಲೆಕ್ಷನ್’ ಎಂಬ ವಿಶ್ವಾಸಾರ್ಹ ಬಟ್ಟೆ ಮಳಿಗೆಯಾಗಿ ಬೆಳೆಸಿದ್ದಾರೆ.

ಮಹಿಳೆಯರು, ಪುರುಷರು ಮತ್ತು ಮಕ್ಕಳ ಎಥ್ನಿಕ್ ವೇರ್ ಹಾಗೂ ಪ್ರೀಮಿಯಂ ಬ್ರಾಂಡ್‌ಗಳಿಗೆ ಒಂದೇ ಸೂರಿನಡಿ ತಾಣವಾಗಿರುವ ಸಂಸ್ಥೆ ೫೦ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದೆ. ೨೦೨೪ರಲ್ಲಿ ಎರಡನೇ ಶಾಖೆಯನ್ನೂ ಆರಂಭಿಸಿದ್ದಾರೆ. ರಕ್ತದಾನ ಶಿಬಿರ, ಬಡ ಮಕ್ಕಳ ಶಿಕ್ಷಣಕ್ಕೆ ನೆರವು ಹಾಗೂ ವಿಧವಾ ಮಹಿಳೆಯರ ಸ್ವಾವಲಂಬನೆಗೆ ಆರ್ಥಿಕ ಸಹಾಯದ ಮೂಲಕ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ.

*ಹತ್ತಿ ವ್ಯಾಪಾರದಿಂದ ಉದ್ಯಮದ ಗುರುತು*

ಬಸಪ್ಪ ಸಿದ್ದಪ್ಪ ಶೆಟ್ಟಿಕೇರಿ ಅವರು ಉದ್ಯೋಗದಿಂದ ಉದ್ಯಮದತ್ತ ಹೆಜ್ಜೆ ಹಾಕಿದವರು. ಭಾರತೀಯ ಹತ್ತಿ ನಿಗಮದಲ್ಲಿ ಐದು ವರ್ಷ ಸೇವೆ ಸಲ್ಲಿಸಿದ ಬಳಿಕ, ಮಾರ್ಗದರ್ಶನ ಪಡೆದು ೧೯೮೪ರಲ್ಲಿ ಎಸ್. ಶೆಟ್ಟಿಕೇರಿ ಅಂಡ್ ಕಂಪನಿ ಸ್ಥಾಪಿಸಿ ಹತ್ತಿ ಅರಳಿ ವ್ಯಾಪಾರ ಆರಂಭಿಸಿದರು. ನಂತರದ ವರ್ಷಗಳಲ್ಲಿ ಹತ್ತಿ ಉದ್ಯಮದಲ್ಲಿ ತಮ್ಮದೇ ಆದ ಸ್ಥಾನ ಗಳಿಸಿದ್ದಾರೆ.

ಸಂಗಮೇಶ ಕೆ. ಗೌರಿಮಠ ಅವರು ದ್ವಿತೀಯ ಪಿಯುಸಿವರೆಗೆ ಶಿಕ್ಷಣ ಪಡೆದರೂ ಸ್ವಂತ ಪರಿಶ್ರಮದಿಂದ ಉದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಹೊಳೆಆಲೂರು ಹಾಗೂ ಶಿರೋಳದಲ್ಲಿ ಏಳು ಸಂಸ್ಥೆಗಳನ್ನು ನಡೆಸುತ್ತಿದ್ದು, ಆಟೋಮೊಬೈಲ್ಸ್, ಮೋಟಾರ್ಸ್, ಟ್ರೇಡರ್ಸ್ ಹಾಗೂ ಅರ್ಥ್ ಮೂವರ್ಸ್ ಕ್ಷೇತ್ರಗಳಲ್ಲಿ ಉದ್ಯಮ ವಿಸ್ತರಿಸಿದ್ದಾರೆ. ಈ ಸಂಸ್ಥೆಗಳ ಮೂಲಕ ನೂರಾರು ಜನರಿಗೆ ಉದ್ಯೋಗ ದೊರೆತಿದೆ.

*ಪಾರಂಪರಿಕ ನೇಕಾರಿಕೆಯಿಂದ ಉದ್ಯಮದತ್ತ*

ವೀರಣ್ಣ ಹಾಲಪ್ಪ ಪವಾಡದ ಅವರು ಶಿಗ್ಲಿ ಗ್ರಾಮದ ಪಾರಂಪರಿಕ ನೇಕಾರ ಕುಟುಂಬದ ಹಿನ್ನೆಲೆಯಿಂದ ಬಂದವರು. ನೇಕಾರಿಕೆ ವೃತ್ತಿಯನ್ನು ಮುಂದುವರಿಸಿಕೊಂಡು ಶ್ರೀ ರಂಭಾಪುರಿ ಟೆಕ್ಸ್ಟೈಲ್ಸ್ ಮೂಲಕ ನೇಕಾರ ಸಮುದಾಯಕ್ಕೆ ಉದ್ಯೋಗ ಕಲ್ಪಿಸಿದ್ದಾರೆ. ಶ್ರೀ ಅನ್ನದಾನೇಶ್ವರ ಆಗ್ರೋ ಟ್ರೇಡರ್ಸ್ ಮೂಲಕ ರೈತಪರ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.

ಈರಣ್ಣ ಸಂಗಪ್ಪ ಸೊನ್ನದ ಅವರು ಗಜೇಂದ್ರಗಡದಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ೧೯೭೬ರಲ್ಲಿ ಎಂ.ವಿ. ಸೊನ್ನದ್ & ಕಂಪನಿ ಹೆಸರಿನಲ್ಲಿ ದಲಾಲಿ ಅಂಗಡಿ ಆರಂಭಿಸಿ, ೧೯೯೨ರಲ್ಲಿ ವಿಜಯ ಆಯಿಲ್ ಮಿಲ್ ಸ್ಥಾಪಿಸುವ ಮೂಲಕ ಉದ್ಯಮ ವಿಸ್ತರಿಸಿದ್ದಾರೆ. ಕುಟುಂಬದ ಸದಸ್ಯರ ಸಹಕಾರದೊಂದಿಗೆ ಉದ್ಯಮವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

*ಮುಂಡರಗಿಯಲ್ಲಿ ವ್ಯಾಪಾರದ ವಿಶ್ವಾಸದ ಹೆಸರು*

ರಾಜಸ್ಥಾನದ ಜಾಲೋರ್ ಜಿಲ್ಲೆಯ ಬಾದರಾಜೋನ್ ಗ್ರಾಮದವರಾದ ಗೌತಮ್‌ಚಂದ್ ಮೇಘರಾಜ್ ಚೋಪ್ರಾ ಅವರು ೧೯೮೦ರಲ್ಲಿ ಸಹೋದರ ರೂಪಚಂದ್ ಜೈನ್ ಅವರೊಂದಿಗೆ ಮುಂಡರಗಿಗೆ ಬಂದು ‘ಗೌತಮ್ ಕಿರಾಣಿ ಸ್ಟೋರ್’ ಮೂಲಕ ವ್ಯಾಪಾರ ಆರಂಭಿಸಿದರು.

೧೯೯೦ರಲ್ಲಿ ರಾಮದೇವ ಕಿರಾಣಿ ಸ್ಟೋರ್, ೧೯೯೭ರಲ್ಲಿ ಎಪಿಎಂಸಿಯಲ್ಲಿ ರಾಮದೇವ ಟ್ರೇಡಿಂಗ್ ಕಂಪನಿ ಹಾಗೂ ೨೦೨೧ರಲ್ಲಿ ಗೌತಮ್ ಟ್ರೇಡಿಂಗ್ ಕಂಪನಿ ಸ್ಥಾಪಿಸಿ ಯಶಸ್ವಿ ವರ್ತಕರಾಗಿ ಬೆಳೆದಿದ್ದಾರೆ. ಎಪಿಎಂಸಿ ವರ್ತಕರ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ರಾಜಸ್ಥಾನ ಮೂಲದವರಾದರೂ ಕನ್ನಡದಲ್ಲೇ ವ್ಯವಹರಿಸುವ ಅವರ ಕನ್ನಡಪರ ನಿಲುವಿಗೆ ವಿವಿಧ ಕನ್ನಡಪರ ಸಂಘಟನೆಗಳಿಂದ ಗೌರವ ದೊರೆತಿದೆ.

*ಉದ್ಯಮದ ಜತೆಗೆ ಮಹಿಳಾ ಸೇವೆ*

ನಿರ್ಮಲಾ ದಶರಥರಾಜ ಕೊಳ್ಳಿ ಅವರು ವಾಣಿಜ್ಯೋದ್ಯಮ ಹಾಗೂ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿಯ ಸದಸ್ಯೆಯಾಗಿ ಹಾಗೂ ಗದಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಹಿಳಾ ವಿಭಾಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

*ಯುವ ಉದ್ಯಮಿಗಳಿಗೂ ವಿಶೇಷ ಗೌರವ*

ಈ ಬಾರಿ ಅನುಭವಿಗಳ ಜತೆಗೆ ಹೊಸ ತಲೆಮಾರಿನ ಉದ್ಯಮಶೀಲತೆಗೂ ಗೌರವ ನೀಡಲಾಗುತ್ತಿದೆ.

ವಿಜಯಕುಮಾರ ಮೇಗೂರು ಅವರು ಧಾನ್ಯ ಸಂಸ್ಕರಣಾ ಯಂತ್ರೋಪಕರಣಗಳ ತಯಾರಿಕೆ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ೨೦೧೧ರಲ್ಲಿ ಕಾರಟಗಿಯಲ್ಲಿ ಸಣ್ಣ ಮಟ್ಟದಲ್ಲಿ ವ್ಯಾಪಾರ ಆರಂಭಿಸಿ, ೨೦೧೬ರಲ್ಲಿ ಬೆಂಗಳೂರಿನಲ್ಲಿ ಉತ್ಪಾದನಾ ಉದ್ಯಮ ಸ್ಥಾಪಿಸಿದರು. ೨೦೨೫ರಲ್ಲಿ ಕಾರಟಗಿಯಲ್ಲೇ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬೃಹತ್ ಉತ್ಪಾದನಾ ಘಟಕ ಆರಂಭಿಸಿದ್ದಾರೆ. ಸ್ಥಳೀಯ ಯುವಕರಿಗೆ ಉದ್ಯೋಗ ಕಲ್ಪಿಸುವ ಜತೆಗೆ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಗೆ ಬಲ ತುಂಬುತ್ತಿದ್ದಾರೆ.

ಹರ್ಷದ್ ಅಯೂಬ್ ಖಾಜಿ ಅವರು ಮೆಕ್ಯಾನಿಕಲ್ ಡಿಸೈನ್ ಇಂಜಿನಿಯರ್ ಆಗಿ ಸುಮಾರು ಆರು ವರ್ಷ ಅನುಭವ ಪಡೆದ ಬಳಿಕ ೨೦೨೨ರಲ್ಲಿ ಸ್ವಂತ ಕಂಪನಿ ಆರಂಭಿಸಿದರು. ಅಲ್ಪಾವಧಿಯಲ್ಲೇ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಸಂಸ್ಥೆ, ಏರೋಸ್ಪೇಸ್ ಹಾಗೂ ರಕ್ಷಣಾ ಕೈಗಾರಿಕೆಗಳಿಗೆ ಕಾಂಟ್ರ್ಯಾಕ್ಟ್ ಮ್ಯಾನುಫ್ಯಾಕ್ಚರರ್ ಆಗಿ ಬಿಡಿಭಾಗಗಳನ್ನು ತಯಾರಿಸಿ ಪೂರೈಸುತ್ತಿದೆ. ಗದಗದಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅವರ ಸಾಧನೆ ಯುವ ಇಂಜಿನಿಯರ್‌ಗಳಿಗೆ ಸ್ಫೂರ್ತಿಯಾಗಿದೆ.

ಸುವರ್ಣ ಮದರಿಮಠ ಅವರು ‘ನಾರಿ ಸಮ್ಮಾನ’ ಪ್ರಶಸ್ತಿಗೆ ಪುರಸ್ಕೃತರಾಗಿದ್ದು, ಇದೇ ಸಂದರ್ಭದಲ್ಲಿ ಅವರನ್ನು ಸಹ ಸನ್ಮಾನಿಸಲಾಗುತ್ತಿದೆ.

ಗದಗ ಉತ್ಸವ–೨೦೨೬ರ ಗೌರವದ ವೇದಿಕೆಯಲ್ಲಿ

ಶ್ರೇಷ್ಠ ಉದ್ಯಮಿ: ಕುಮಾರ ವಿ. ಘಟ್ಟದ
ಶ್ರೇಷ್ಠ ವರ್ತಕ: ಸುರೇಶಕುಮಾರ ರಾಜಮಲ್ ಓಸ್ವಾಲ್
ಗೌರವ ಪುರಸ್ಕೃತರು: ಬಸಪ್ಪ ಶೆಟ್ಟಿಕೇರಿ, ಸಂಗಮೇಶ ಗೌರಿಮಠ, ಈರಣ್ಣ ಸೊನ್ನದ, ವೀರಣ್ಣ ಪವಾಡದ, ಗೌತಮ್ ಚೋಪ್ರಾ, ನಿರ್ಮಲಾ ಕೊಳ್ಳಿ
ವಿಶೇಷ ಸನ್ಮಾನ: ವಿಜಯಕುಮಾರ ಮೇಗೂರು, ಹರ್ಷದ್ ಖಾಜಿ, ಸುವರ್ಣ ಮದರಿಮಠ»

*ಸಾಧನೆಯ ಹಿಂದೆ ಸಮಾಜದ ನಂಟು*

ಈ ಸಾಧಕರ ಯಶೋಗಾಥೆಗಳನ್ನು ಗಮನಿಸಿದರೆ ಪ್ರತಿಯೊಬ್ಬರ ಹಾದಿಯೂ ವಿಭಿನ್ನ. ಆದರೆ ಎಲ್ಲರಲ್ಲೂ ಒಂದು ಸಾಮಾನ್ಯ ಗುಣವಿದೆ—ಪರಿಶ್ರಮದ ಜತೆಗೆ ಸಮಾಜದ ಮೇಲಿನ ಕಾಳಜಿ.

ರೈತರ ಉತ್ಪನ್ನಕ್ಕೆ ಮೌಲ್ಯವರ್ಧನೆ ಮಾಡುವ ಉದ್ಯಮಿ, ನೂರಾರು ಮಂದಿಗೆ ಉದ್ಯೋಗ ನೀಡಿದ ವರ್ತಕ, ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಸಮಾಜ ಸೇವಕ, ಪಾರಂಪರಿಕ ವೃತ್ತಿಗೆ ಹೊಸ ಆಯಾಮ ನೀಡಿದ ಉದ್ಯಮಿ, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಯುವ ಉದ್ಯಮಿ—ಹೀಗೆ ಗದಗದ ಉದ್ಯಮ ಲೋಕದ ವಿವಿಧ ಮುಖಗಳು ಈ ಸಾಧಕರ ಮೂಲಕ ಕಾಣಿಸುತ್ತವೆ.

ಹೀಗಾಗಿ, ಗದಗ ಉತ್ಸವ–೨೦೨೬ರ ಈ ಸನ್ಮಾನ ಕೇವಲ ಪ್ರಶಸ್ತಿ ಪ್ರದಾನವಲ್ಲ. ಗದಗದ ಉದ್ಯಮಶೀಲತೆ, ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಮಾಜಮುಖಿ ಚಿಂತನೆಗೆ ಸಲ್ಲಿಸುವ ಗೌರವ.

ಸಣ್ಣ ಅಂಗಡಿಯಿಂದ ಆರಂಭಿಸಿ ದೊಡ್ಡ ಉದ್ಯಮ ಕಟ್ಟಿದವರಿಂದ ಹಿಡಿದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಯುವ ಉದ್ಯಮಿಗಳವರೆಗೆ—ಈ ಸಾಧಕರ ಯಶೋಗಾಥೆಗಳು ಮುಂದಿನ ಪೀಳಿಗೆಗೆ ಒಂದೇ ಸಂದೇಶ ನೀಡುತ್ತವೆ.

“ಕನಸು ದೊಡ್ಡದಿರಲಿ, ಹೆಜ್ಜೆ ಸಣ್ಣದಾದರೂ ಪರವಾಗಿಲ್ಲ. ನಿರಂತರ ಪರಿಶ್ರಮವಿದ್ದರೆ ಯಶಸ್ಸು ದೂರವಲ್ಲ.”

-ಈರಣ್ಣ ಮುದಗಲ್ಲ – ನಾಗರಾಜ ನರಗುಂದ, ಗದಗ
ಉತ್ಸವ, ಪ್ರಚಾರ ಸಮಿತಿ

ಎಲ್ಲ ತಾಲೂಕುಗಳಲ್ಲೂ ‘ಉದ್ಯೋಗ ಚೀಟಿ ಮೇಳ’

0

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಆಗಸ್ಟ್ 15ರಿಂದ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ‘ಉದ್ಯೋಗ ಚೀಟಿ ಮೇಳ’ (ಜಾಬ್ ಕಾರ್ಡ್ ಮೇಳ) ಅಭಿಯಾನವನ್ನು ಗದಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೂಚಿಸಿದ್ದಾರೆ.

ಈ ಕುರಿತು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳಿಗೆ ನೀಡಿರುವ ಮಾರ್ಗಸೂಚಿಯಂತೆ, ಈವರೆಗೆ ಯೋಜನೆಯಡಿ ನೋಂದಣಿಯಾಗದ ಅರ್ಹ ಗ್ರಾಮೀಣ ಕುಟುಂಬಗಳನ್ನು ಗುರುತಿಸಿ, ಅವರಿಂದ ಅರ್ಜಿ ಪಡೆದು VBGRAMG ಯೋಜನೆಯಡಿ ಹೊಸ ಮಾದರಿಯ ಉದ್ಯೋಗ ಚೀಟಿಗಳನ್ನು ಒದಗಿಸಬೇಕು. ಅಲ್ಲದೆ, ಗ್ರಾಮಸ್ಥರಿಗೆ ಯೋಜನೆಯ ಕುರಿತು ಸಮಗ್ರ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಜಾಬ್ ಕಾರ್ಡ್ ಮೇಳದ ಅಂಗವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆ-ಮನೆ ಭೇಟಿ, ಗ್ರಾಮಸಭೆ ಹಾಗೂ ‘ಸ್ವಚ್ಛತಾ ವಾಹಿನಿ’ ಮೂಲಕ ಪ್ರಚಾರ ಸೇರಿದಂತೆ ವಿವಿಧ IEC ಚಟುವಟಿಕೆಗಳನ್ನು ಕೈಗೊಂಡು ಜನರಲ್ಲಿ ಗ್ರಾಮೀಣ ರೋಜಗಾರ್ ಗ್ಯಾರಂಟಿ ಕಾರ್ಡ್‌ಗಳ ಕುರಿತು ಜಾಗೃತಿ ಮೂಡಿಸಬೇಕು. ಅರ್ಹ ಕುಟುಂಬಗಳಿಂದ ಜಾಬ್ ಕಾರ್ಡ್‌ಗಾಗಿ ಅರ್ಜಿ ಸ್ವೀಕರಿಸಿ, ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕಿದೆ.

ಅಭಿಯಾನದ ಸಂದರ್ಭದಲ್ಲಿ ಈಗಾಗಲೇ ನೋಂದಣಿಯಾಗಿ ಉದ್ಯೋಗ ಚೀಟಿ ಹೊಂದಿರುವ ಕುಟುಂಬಗಳ ವಿವರಗಳನ್ನು ಪರಿಶೀಲಿಸಬೇಕು. ಉದ್ಯೋಗ ಚೀಟಿಯ ಕಾಲಾವಧಿ ಮುಗಿದಿದ್ದರೆ ನವೀಕರಿಸುವುದು, ಸದಸ್ಯರ ಸೇರ್ಪಡೆ, e-KYC ಸೇರಿದಂತೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಕ್ಕೂ ಆದ್ಯತೆ ನೀಡಬೇಕು. ಜಾಬ್ ಕಾರ್ಡ್‌ಗೆ ಸಂಬಂಧಿಸಿದ ಅರ್ಜಿಗಳ ಸ್ವೀಕೃತಿ ಹಾಗೂ ವಿಲೇವಾರಿ ಪ್ರಕ್ರಿಯೆಯನ್ನು ನಿಯಮಾನುಸಾರ ನಡೆಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಗದಗ ಜಿಲ್ಲೆಯ ವ್ಯಾಪ್ತಿಯಲ್ಲಿ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಲು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಬ್ ಕಾರ್ಡ್ ಮೇಳದ ಕುರಿತು ವ್ಯಾಪಕ ಪ್ರಚಾರ ಕೈಗೊಂಡು, ಅರ್ಹ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಅಭಿಯಾನದ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಿ, ಕೈಗೊಂಡಿರುವ ಚಟುವಟಿಕೆಗಳ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸುವಂತೆಯೂ ಸೂಚಿಸಲಾಗಿದೆ. ವಿಶೇಷವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಜನರಿಗೆ ಯೋಜನೆಯ ಮಾಹಿತಿ ತಲುಪಿಸುವುದು ಮತ್ತು ಅರ್ಹ ಕುಟುಂಬಗಳನ್ನು ಗುರುತಿಸುವ ಕಾರ್ಯಕ್ಕೆ ಒತ್ತು ನೀಡಬೇಕಾಗಿದೆ.

ಆಗಸ್ಟ್ 15ರಿಂದ ಆರಂಭವಾಗಲಿರುವ ಈ ಅಭಿಯಾನವು ಗ್ರಾಮೀಣ ಜನರಿಗೆ VBGRAMG ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

“ಆಗಸ್ಟ್ 15ರಿಂದ ಆರಂಭವಾಗುವ ಉದ್ಯೋಗ ಚೀಟಿ ಮೇಳವನ್ನು ಜಿಲ್ಲೆಯ ಎಲ್ಲ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಅರ್ಹ ಗ್ರಾಮೀಣ ಕುಟುಂಬಗಳನ್ನು ಗುರುತಿಸಿ, ಅವರಿಗೆ ಉದ್ಯೋಗ ಚೀಟಿ ಒದಗಿಸುವುದರ ಜತೆಗೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು.”

 ಸಿ.ಆರ್. ಮುಂಡರಗಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ

ಪ್ರಥಮ ರಾಷ್ಟ್ರಧ್ವಜ ಕೊಟ್ಟ ಮೇಡಂ ಕಾಮಾ

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮೇಡಂ ಭಿಕಾಜಿ ಕಾಮಾ ಅವರ ಹೆಸರು ಅಚ್ಚಳಿಯದೆ ಉಳಿದಿದೆ. ದೇಶವೇ ತನ್ನ ಮನೆ, ಭಾರತದ ಸ್ವಾತಂತ್ರ್ಯವೇ ತನ್ನ ಬದುಕಿನ ಗುರಿ ಎಂದು ನಂಬಿ ಹೋರಾಡಿದ ಅವರು, ವಿದೇಶಿ ನೆಲದಲ್ಲಿ ಭಾರತದ ಸ್ವಾತಂತ್ರ್ಯದ ಧ್ವಜ ಹಾರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1861ರ ಸೆಪ್ಟೆಂಬರ್ 24ರಂದು ಮುಂಬೈನಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದ ಭಿಕಾಜಿ ಕಾಮಾ, ವಿದ್ಯಾರ್ಥಿ ದೆಸೆಯಿಂದಲೇ ಆದರ್ಶಪ್ರಾಯ ಹಾಗೂ ನೇರನುಡಿಯ ವ್ಯಕ್ತಿತ್ವ ಹೊಂದಿದ್ದರು. 1885ರಲ್ಲಿ ಖ್ಯಾತ ವಕೀಲ ರುಸ್ತುಂ ಕಾಮಾ ಅವರನ್ನು ವಿವಾಹವಾದರೂ, ದೇಶದ ಸ್ವಾತಂತ್ರ್ಯದ ಹೋರಾಟದತ್ತ ಅವರ ಒಲವು ಹೆಚ್ಚಾಯಿತು.

1897ರಲ್ಲಿ ಮುಂಬೈನಲ್ಲಿ ಪ್ಲೇಗ್‌ ರೋಗ ಹರಡಿದಾಗ ಜನರ ಸೇವೆಗೆ ಧಾವಿಸಿದ ಕಾಮಾ ಅವರಿಗೂ ಸೋಂಕು ತಗುಲಿತು. ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ ಅವರು ಶ್ಯಾಮಜಿ ಕೃಷ್ಣವರ್ಮಾ ಹಾಗೂ ದಾದಾಭಾಯಿ ನವರೋಜಿ ಸೇರಿದಂತೆ ಹಲವು ರಾಷ್ಟ್ರೀಯವಾದಿಗಳ ಸಂಪರ್ಕಕ್ಕೆ ಬಂದರು. ದಾದಾಭಾಯಿ ನವರೋಜಿಯವರ ವೈಯಕ್ತಿಕ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದರು.

ಬ್ರಿಟಿಷರ ಒತ್ತಡದ ನಡುವೆಯೂ ಸ್ವಾತಂತ್ರ್ಯ ಚಟುವಟಿಕೆ ನಿಲ್ಲಿಸಲು ನಿರಾಕರಿಸಿದ ಅವರು ಪ್ಯಾರಿಸ್‌ಗೆ ತೆರಳಿ ಅಲ್ಲಿಂದಲೇ ಹೋರಾಟ ಮುಂದುವರಿಸಿದರು.

ವಿದೇಶಿ ನೆಲದಲ್ಲಿ ತ್ರಿವರ್ಣದ ಮುನ್ನೋಟ

1907ರ ಆಗಸ್ಟ್ 22ರಂದು ಜರ್ಮನಿಯ ಸ್ಟುಟ್‌ಗಾರ್ಟ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾಜವಾದಿ ಸಮ್ಮೇಳನದಲ್ಲಿ ಭಾರತದ ಸ್ವಾತಂತ್ರ್ಯದ ಧ್ವಜವನ್ನು ಭಿಕಾಜಿ ಕಾಮಾ ಹಾರಿಸಿದರು. ಆ ಮೂಲಕ ವಿದೇಶಿ ನೆಲದಲ್ಲಿ ಭಾರತದ ಧ್ವಜ ಹಾರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅವರು ಹಾರಿಸಿದ ಧ್ವಜ ಇಂದಿನ ತ್ರಿವರ್ಣ ಧ್ವಜದಂತಿರಲಿಲ್ಲ. ಹಸಿರು, ಹಳದಿ ಮತ್ತು ಕೆಂಪು ಪಟ್ಟಿಗಳಿದ್ದ ಆ ಧ್ವಜದಲ್ಲಿ ಕಮಲದ ಹೂವುಗಳು, ‘ವಂದೇ ಮಾತರಂ’ ಬರಹ, ಸೂರ್ಯ ಮತ್ತು ಚಂದ್ರನ ಚಿಹ್ನೆಗಳಿದ್ದವು. ಭಾರತದ ಸ್ವಾತಂತ್ರ್ಯದ ಸಂಕೇತವಾಗಿ ಈ ಧ್ವಜವನ್ನು ವಿಶ್ವದ ವೇದಿಕೆಯಲ್ಲಿ ಪ್ರದರ್ಶಿಸಿದ ಕಾಮಾ, ಭಾರತೀಯರು ಒಗ್ಗಟ್ಟಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಕೈಜೋಡಿಸುವಂತೆ ಕರೆ ನೀಡಿದರು.

ಬ್ರಿಟಿಷರು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡರೂ, ಕಾಮಾ ತಮ್ಮ ಹೋರಾಟ ನಿಲ್ಲಿಸಲಿಲ್ಲ. ದೀರ್ಘಕಾಲ ಯುರೋಪ್‌ನಲ್ಲಿ ಇದ್ದು ಸ್ವಾತಂತ್ರ್ಯ ಚಳವಳಿಗೆ ಬೆಂಬಲ ನೀಡಿದ ಅವರು 1935ರಲ್ಲಿ ಭಾರತಕ್ಕೆ ಮರಳಿದರು. 1936ರ ಆಗಸ್ಟ್ 13ರಂದು ನಿಧನರಾದರು.

ರಾಷ್ಟ್ರಧ್ವಜ: ನಮ್ಮ ಹೆಮ್ಮೆ

ಇಂದು ನಾವು ಹಾರಿಸುವ ತ್ರಿವರ್ಣ ಧ್ವಜದ ಮೇಲ್ಭಾಗದಲ್ಲಿ ಕೇಸರಿ, ಮಧ್ಯದಲ್ಲಿ ಬಿಳಿ ಹಾಗೂ ಕೆಳಭಾಗದಲ್ಲಿ ಹಸಿರು ಬಣ್ಣಗಳಿವೆ. ಮಧ್ಯದಲ್ಲಿ ನೇವಿ ನೀಲಿ ಬಣ್ಣದ ಅಶೋಕ ಚಕ್ರವಿದ್ದು, ಅದರಲ್ಲಿ 24 ಕಡ್ಡಿಗಳಿವೆ. ಧ್ವಜದ ಉದ್ದ-ಅಗಲದ ಅನುಪಾತ 3:2.

ಕೇಸರಿ ಧೈರ್ಯ ಮತ್ತು ತ್ಯಾಗವನ್ನು, ಬಿಳಿ ಸತ್ಯ ಮತ್ತು ಶಾಂತಿಯನ್ನು, ಹಸಿರು ಸಮೃದ್ಧಿ ಹಾಗೂ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ.

ರಾಷ್ಟ್ರಧ್ವಜದ ಬಳಕೆ ಮತ್ತು ಪ್ರದರ್ಶನಕ್ಕೆ ಭಾರತದ ಧ್ವಜ ಸಂಹಿತೆ, 2002 ಹಾಗೂ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971 ಅನ್ವಯಿಸುತ್ತವೆ. ಧ್ವಜದ ಗೌರವ ಮತ್ತು ಘನತೆಯನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.

ರಾಷ್ಟ್ರಧ್ವಜ ಕೇವಲ ಮೂರು ಬಣ್ಣಗಳ ಬಟ್ಟೆಯಲ್ಲ. ಅದು ಕೋಟ್ಯಂತರ ಭಾರತೀಯರ ಸ್ವಾತಂತ್ರ್ಯದ ಕನಸು, ತ್ಯಾಗದ ನೆನಪು ಮತ್ತು ದೇಶಭಕ್ತಿಯ ಸಂಕೇತ.

ಮೇಡಂ ಭಿಕಾಜಿ ಕಾಮಾ ಅವರಂತಹ ಧೀಮಂತ ಹೋರಾಟಗಾರ್ತಿಯ ತ್ಯಾಗವನ್ನು ಸ್ಮರಿಸುತ್ತಾ ತ್ರಿವರ್ಣವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ.

ತ್ರಿವರ್ಣ ನಮ್ಮ ಹೆಮ್ಮೆ.
ತ್ರಿವರ್ಣ ನಮ್ಮ ಗೌರವ.
ತ್ರಿವರ್ಣ ನಮ್ಮ ದೇಶದ ಆತ್ಮ.

                         – ಡಾ. ತಯಬಅಲಿ ಅ. ಹೊಂಬಳ, ಗದಗ

ಅರಸು ಜಯಂತಿ ಅರ್ಥಪೂರ್ಣ ಆಚರಣೆಗೆ ಸಿದ್ಧತೆ

0

ವಿಜಯಸಾಕ್ಷಿ ಸುದ್ದಿ, ಗದಗ: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆಯನ್ನು ಆ.20ರಂದು ನಗರದ ಕನಕ ಭವನದಲ್ಲಿ ಅರ್ಥಪೂರ್ಣವಾಗಿ ಹಾಗೂ ವ್ಯವಸ್ಥಿತವಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಣ, ಕಾರ್ಯಕ್ರಮದ ಸ್ಥಳದ ಸ್ವಚ್ಛತೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಡಿ. ದೇವರಾಜ ಅರಸು ಅವರ ಜೀವನ, ಆಡಳಿತ ಹಾಗೂ ಸಾಮಾಜಿಕ ಸುಧಾರಣೆಗಳ ಕುರಿತು ಆಳವಾಗಿ ಅಧ್ಯಯನ ಮಾಡಿದವರಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಬೇಕು. ಒಟ್ಟಾರೆ ಜನ್ಮದಿನಾಚರಣೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎಂ. ತುಂಬರಮಟ್ಟಿ ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಅಲ್ಲದೆ, ಅರಸು ಜಯಂತಿ ನಿಮಿತ್ತ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಚನ್ನಮ್ಮ ವೃತ್ತದಿಂದ ಡಿ. ದೇವರಾಜ ಅರಸು ಅವರ ಭಾವಚಿತ್ರದೊಂದಿಗೆ ಮೆರವಣಿಗೆ ಹೊರಟು ಕನಕ ಭವನಕ್ಕೆ ತಲುಪಲಿದೆ ಎಂದು ಹೇಳಿದರು.

ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಡಿವೈಎಸ್‌ಪಿ ಮಹಾಂತೇಶ ಸಜ್ಜನರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಸೇರಿದಂತೆ ಸಮಾಜದ ಗಣ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

೧೦೦ ಮೀಟರ್ ತ್ರಿವರ್ಣ ಯಾತ್ರೆ ಯಶಸ್ವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿಯಾಗಿ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಬೃಹತ್ ೧೦೦ ಮೀಟರ್ ತ್ರಿವರ್ಣ ಯಾತ್ರೆ ಶುಕ್ರವಾರ ನಗರದಲ್ಲಿ ಅದ್ದೂರಿಯಾಗಿ ಜರುಗಿತು. ನೂರಾರು ದೇಶಪ್ರೇಮಿಗಳು ಬೃಹತ್ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹೊತ್ತು ಸಾಗುವ ಮೂಲಕ ದೇಶಭಕ್ತಿ, ಏಕತೆ ಹಾಗೂ ರಾಷ್ಟ್ರಾಭಿಮಾನದ ಸಂದೇಶ ಸಾರಿದರು.

ಲಯನ್ಸ್ ಕ್ಲಬ್ ಆಫ್ ಗದಗ-ಬೆಟಗೇರಿ ಹಾಗೂ ಗದಗ ಜಿಲ್ಲಾ ಬಟ್ಟೆ ವ್ಯಾಪಾರಸ್ಥರ ಸಂಘದ ಸಹಯೋಗದಲ್ಲಿ ನಡೆದ ಯಾತ್ರೆಗೆ ಲಯನ್ಸ್ ಜಿಲ್ಲೆಯ ೩೧೭ಬಿ ನಿಕಟಪೂರ್ವ ಜಿಲ್ಲಾ ಗವರ್ನರ್ ಆನಂದ ಪೋತ್ನೀಸ್ ಚಾಲನೆ ನೀಡಿದರು. ನಗರದ ಬಸವೇಶ್ವರ ಸರ್ಕಲ್ (ಹತ್ತಿಕಾಳ ಕೂಟ)ದಿಂದ ಆರಂಭಗೊಂಡ ಯಾತ್ರೆ ನಾಮಜೋಶಿ ರಸ್ತೆ, ಹುಯಿಲಗೋಳ ನಾರಾಯಣರಾವ್ ವೃತ್ತ, ಮಹೇಂದ್ರಕರ ವೃತ್ತ ಹಾಗೂ ಮಹಾತ್ಮ ಗಾಂಧಿ ವೃತ್ತ ಮಾರ್ಗವಾಗಿ ಸಾಗಿ ಲಯನ್ಸ್ ಭವನದಲ್ಲಿ ಮುಕ್ತಾಯಗೊಂಡಿತು.

ಬೃಹತ್ ತ್ರಿವರ್ಣ ಧ್ವಜದೊಂದಿಗೆ ಸಾಗಿದ ಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ದೇಶಭಕ್ತಿಯ ವಾತಾವರಣ ನಿರ್ಮಿಸಿತು. ಯಾತ್ರೆಯಲ್ಲಿ ಪಾಲ್ಗೊಂಡವರು ಭಾರತ ಮಾತೆಯ ಘೋಷಣೆಗಳನ್ನು ಮೊಳಗಿಸುತ್ತಾ, ಪುಷ್ಪವೃಷ್ಟಿಗೈದು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.

ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಮಾಜಿ ಸೈನಿಕರಾದ ಎಸ್.ಆರ್. ಪಾಟೀಲ, ವ್ಹಿ.ಬಿ. ಬಿಂಗಿ, ಎಸ್.ಬಿ. ಸರ್ವಿ, ಶಂಕರಗೌಡ ಪಾಟೀಲ, ಅರವಟಗಿಮಠ, ವಿಜಯ ಬಡಿಗೇರ, ಚವ್ಹಾಣ ಸೇರಿದಂತೆ ಹಲವರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ಜೈನ್ ಸಮಾಜದ ಮಹಿಳಾ ಸಂಘಟನೆಯಾದ ವೀರ ಬಾಲಿಕಾ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು ತ್ರಿವರ್ಣ ಯಾತ್ರೆಯ ಯಶಸ್ಸಿಗೆ ಕೈಜೋಡಿಸಿದರು.

ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ ವಾರಕರ, ಕಾರ್ಯದರ್ಶಿ ಲಿಂಗರಾಜ ತೋಟದ, ಖಜಾಂಚಿ ರೇಣುಕಪ್ರಸಾದ ಶಿಗ್ಲಿಮಠ, ರಾಜಣ್ಣ ಮಲ್ಲಾಡದ, ರಮೇಶ ಶಿಗ್ಲಿ, ರೇಣುಕಪ್ರಸಾದ ಹಿರೇಮಠ, ರಾಜಣ್ಣ ವೇರ್ಣೆಕರ, ವೀರೇಶ ಪಟ್ಟಣಶೆಟ್ಟಿ, ಡಾ. ಸಿ.ಬಿ. ಹಿರೇಗೌಡ್ರ, ಡಾ. ಜೆ.ಸಿ. ಶಿರೋಳ, ಸಂಜಯ ರುದ್ದಂ, ದತ್ತು ಬೇವಿನಕಟ್ಟಿ, ಅಶ್ವಥ್ ಸುಲಾಖೆ, ಜೆ.ಡಿ. ಉತ್ತರಕರ, ಸಂತೋಷ ಕಬಾಡರ, ಅಂಕಿತ ಸಾವಕರ, ಶಿವಕುಮಾರ ಶೆಟ್ಟರ, ವೀರಣ್ಣ ಬಾಳಿಕಾಯಿ, ರಾಹುಲ್ ಅರಳಿ ಸೇರಿದಂತೆ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಲಯನ್ ಲೇಡೀಸ್ ಕ್ಲಬ್ ಅಧ್ಯಕ್ಷೆ ಅಮೃತಾ ವಾರಕರ, ಕಾರ್ಯದರ್ಶಿ ಅಪರ್ಣಾ ತೋಟದ, ಖಜಾಂಚಿ ಪ್ರಿಯಾ ಶಿಗ್ಲಿಮಠ, ವೀಣಾ ಸುಲಾಖೆ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಡಾ. ಪದ್ಮಾ ಕಬಾಡಿಗೆ ರವೀಂದ್ರನಾಥ ಟ್ಯಾಗೋರ್ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದ ಸಾಹಿತ್ಯ, ನೆಲ, ನಾಡು, ನುಡಿ ಹಾಗೂ ಸಂಸ್ಕೃತಿಗೆ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ‘ಗದುಗಿನ ಮಾಣಿಕ್ಯ’ ಎಂದೇ ಖ್ಯಾತರಾದ ಶ್ರೀಮತಿ ಡಾ. ಪದ್ಮಾ ಜೆ. ಕಬಾಡಿ ಅವರಿಗೆ ರವೀಂದ್ರನಾಥ ಟ್ಯಾಗೋರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಿರಿಗನ್ನಡ ಫೌಂಡೇಶನ್ ಕರ್ನಾಟಕ ಹಾಗೂ ಶ್ರೀ ವಿವೇಕಾನಂದ ಸಂಸ್ಥೆ (ರಿ), ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯ ಸಂಭ್ರಮ-2026 ಅಂಗವಾಗಿ ಆ.9ರಂದು ಧಾರವಾಡದ ರಂಗಾಯಣದಲ್ಲಿ ಆಯೋಜಿಸಿದ್ದ ‘ಸಿರಿಗನ್ನಡ ಸ್ವಾತಂತ್ರ್ಯ ಸಂಭ್ರಮ’ ಕಾರ್ಯಕ್ರಮದಲ್ಲಿ ಡಾ. ಪದ್ಮಾ ಕಬಾಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಹಿತ್ಯ ಕ್ಷೇತ್ರದ ಜೊತೆಗೆ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಸಂರಕ್ಷಣೆ ಮತ್ತು ಬೆಳವಣಿಗೆಗೆ ಡಾ. ಪದ್ಮಾ ಜೆ. ಕಬಾಡಿ ಅವರು ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಅಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಅಗಡಿ ಎಂಜಿನಿಯರಿಂಗ್ ಕಾಲೇಜಿನ ಪ್ರೊ. ವೆಂಕಟ ಸುಬ್ಬಾ ಶೆಟ್ಟಿ ಗ್ರಂಥಾಲಯದಲ್ಲಿ ಗ್ರಂಥಾಲಯ ಮಾಹಿತಿ ವಿಜ್ಞಾನ ಕ್ಷೇತ್ರದ ಪಿತಾಮಹ ಪದ್ಮಶ್ರೀ ಡಾ. ಎಸ್.ಆರ್. ರಂಗನಾಥನ್ ಅವರ 134ನೇ ಜನ್ಮದಿನದ ಅಂಗವಾಗಿ ಗ್ರಂಥಪಾಲಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಂಥಾಲಯಗಳ ಮಹತ್ವ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಗ್ರಂಥಪಾಲಕರ ಪಾತ್ರ ಹಾಗೂ ಪುಸ್ತಕ ಓದುವ ಹವ್ಯಾಸ ಬೆಳೆಸುವ ಅಗತ್ಯದ ಕುರಿತು ಚರ್ಚಿಸಲಾಯಿತು. ಜ್ಞಾನಾರ್ಜನೆಗೆ ಗ್ರಂಥಾಲಯಗಳು ಪ್ರಮುಖ ಕೇಂದ್ರಗಳಾಗಿದ್ದು, ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜತೆಗೆ ವಿವಿಧ ವಿಷಯಗಳ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದು ತಿಳಿಸಲಾಯಿತು.

ಡಾ. ಎಸ್.ಆರ್. ರಂಗನಾಥನ್ ಅವರು ಗ್ರಂಥಾಲಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆ ಹಾಗೂ ಅವರ ಸೇವೆಯನ್ನು ಸ್ಮರಿಸಲಾಯಿತು. ಅವರ ತತ್ವಗಳು ಇಂದಿಗೂ ಗ್ರಂಥಾಲಯಗಳ ಅಭಿವೃದ್ಧಿಗೆ ಮಾರ್ಗದರ್ಶಿಯಾಗಿವೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ, ಡೀನ್ ಅಕಾಡೆಮಿಕ್ಸ್ ಡಾ. ಸುಭಾಸ್ ಮೇಟಿ, ಆಡಳಿತಾಧಿಕಾರಿ ವಿಕ್ರಂ ಶಿರೋಳ, ವಿವಿಧ ವಿಭಾಗಗಳ ಮುಖ್ಯಸ್ಥರು, ಸಹಾಯಕ ಗ್ರಂಥಪಾಲಕರಾದ ಜಗದೀಶ್ ಶಿಗ್ಲಿಮಠ, ವೀರಯ್ಯ ಬಾಳೂರುಮಠ ಹಾಗೂ ಗ್ರಂಥಾಲಯದ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ರಾಜ್ಯದಲ್ಲೇ ಮೊದಲ ಟ್ರಾನ್ಸ್‌ಪ್ಲಾಂಟ್ ಗೇಮ್ಸ್‌ಗೆ ಗದಗ ಸಜ್ಜು

0

ವಿಜಯಸಾಕ್ಷಿ ಸುದ್ದಿ, ಗದಗ: ಅಂಗಾಂಗ ಕಸಿ ಮಾಡಿಸಿಕೊಂಡವರು ಹಾಗೂ ಅಂಗಾಂಗ ದಾನಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವುದು ಮತ್ತು ಅಂಗಾಂಗ ದಾನದ ಕುರಿತು ಸಮಾಜದಲ್ಲಿರುವ ಭಯ, ತಪ್ಪು ಕಲ್ಪನೆಗಳನ್ನು ನಿವಾರಿಸಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆ.16ರಂದು ಗದಗದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಗದಗ್ ಟ್ರಾನ್ಸ್‌ಪ್ಲಾಂಟ್ ಗೇಮ್ಸ್-2026 ಆಯೋಜಿಸಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ತಿಳಿಸಿದರು.

ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕಲ್ಪ ಕಿಡ್ನಿ ಕೇರ್ ಫೌಂಡೇಶನ್, ಕೆ.ಎಚ್. ಪಾಟೀಲ ಆಸ್ಪತ್ರೆ ಹಾಗೂ ಎಚ್.ಕೆ. ಪಾಟೀಲ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂಗಾಂಗ ಕಸಿ ಬಳಿಕವೂ ವ್ಯಕ್ತಿ ಸಾಮಾನ್ಯ ಜೀವನ ನಡೆಸಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವುದು ಕ್ರೀಡಾಕೂಟದ ಪ್ರಮುಖ ಉದ್ದೇಶವಾಗಿದೆ ಎಂದರು.

ಕಿಡ್ನಿ ಸೇರಿದಂತೆ ವಿವಿಧ ಅಂಗಾಂಗ ಕಸಿ ಮಾಡಿಸಿಕೊಂಡವರು, ಅಂಗಾಂಗ ದಾನಿಗಳು ಹಾಗೂ ಡಯಾಲಿಸಿಸ್‌ನಲ್ಲಿರುವವರನ್ನು ಒಂದೇ ವೇದಿಕೆಗೆ ಕರೆತಂದು ಕ್ರೀಡಾಕೂಟ ಆಯೋಜಿಸಲಾಗಿದೆ. ವೈದ್ಯರ ಸಲಹೆಯಂತೆ ಕಸಿ ಮಾಡಿಸಿಕೊಂಡವರು ದೈಹಿಕವಾಗಿ ಹೆಚ್ಚು ಒತ್ತಡಕ್ಕೆ ಒಳಗಾಗದ ರೀತಿಯಲ್ಲಿ ಕ್ರೀಡೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಸಂಕಲ್ಪ ಕಿಡ್ನಿ ಕೇರ್ ಫೌಂಡೇಶನ್‌ನ ಡಾ. ಅವಿನಾಶ ಓದುಗೌಡ್ರ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಿಂದ ಅಂಗಾಂಗ ಕಸಿ ಮಾಡಿಸಿಕೊಂಡವರು ಹಾಗೂ ದಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನಿಂದ ಹೃದಯ ಕಸಿ ಮಾಡಿಸಿಕೊಂಡ ವ್ಯಕ್ತಿಯೊಬ್ಬರೂ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಸುಮಾರು 75 ಮಂದಿ ನೋಂದಣಿ ಮಾಡಿಕೊಂಡಿದ್ದು, ಆನ್‌ಸ್ಪಾಟ್ ನೋಂದಣಿಯೊಂದಿಗೆ 75ರಿಂದ 100 ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಟ್ರಾನ್ಸ್‌ಪ್ಲಾಂಟ್ ಗೇಮ್ಸ್‌ನಲ್ಲಿ 100 ಮೀ., 200 ಮೀ. ವಾಕಿಂಗ್, ರನ್ನಿಂಗ್, 400 ಮೀ. ವಾಕ್, ಶಾಟ್‌ಪುಟ್, ಡಿಸ್ಕಸ್ ಥ್ರೋ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಕ್ಯಾರಂ, ಟಗ್ ಆಫ್ ವಾರ್ ಹಾಗೂ ಮ್ಯೂಸಿಕಲ್ ಚೇರ್‌ನಂತಹ ಮನರಂಜನಾ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ.

ಡಯಾಲಿಸಿಸ್‌ನಲ್ಲಿರುವವರ ಆರೋಗ್ಯದ ದೃಷ್ಟಿಯಿಂದ ಅವರಿಗೆ ಸೂಕ್ತವಾಗುವ ಲಘು ಕ್ರೀಡೆಗಳನ್ನು ಆಯ್ಕೆ ಮಾಡಲಾಗಿದೆ. ಸ್ಪರ್ಧೆಗಳಲ್ಲಿ ಡೋನರ್, ರಿಸಿಪಿಯೆಂಟ್ ಹಾಗೂ ಡಯಾಲಿಸಿಸ್ ರೋಗಿಗಳೆಂದು ಮೂರು ಪ್ರಮುಖ ವಿಭಾಗಗಳನ್ನು ಮಾಡಲಾಗಿದ್ದು, ವಯಸ್ಸಿನ ಆಧಾರದಲ್ಲಿಯೂ ವರ್ಗೀಕರಣ ಮಾಡಲಾಗಿದೆ ಎಂದು ಡಾ. ಅವಿನಾಶ ಓದುಗೌಡ್ರ ತಿಳಿಸಿದರು.

ಅಂಗಾಂಗ ದಾನದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಜಿಲ್ಲೆಯ ಸುಮಾರು 150 ಶಾಲೆಗಳಲ್ಲಿ 7ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆ ನಡೆಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಸುಮಾರು 120 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅಂತಿಮವಾಗಿ ಭಾಷಣ ಸ್ಪರ್ಧೆಯಲ್ಲಿ 10 ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಆರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಆ.16ರಂದು ನಡೆಯುವ ಟ್ರಾನ್ಸ್‌ಪ್ಲಾಂಟ್ ಗೇಮ್ಸ್ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ಆನಂದ ಪೋತ್ನೀಸ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಶೋಕ ಮಂದಾಲಿ, ಡಾ. ಪವನ್ ಕುರಹಟ್ಟಿ, ಸಂಕಲ್ಪ ಕಿಡ್ನಿ ಕೇರ್ ಫೌಂಡೇಶನ್ ಹಾಗೂ ಕೆ.ಎಚ್. ಪಾಟೀಲ ಆಸ್ಪತ್ರೆಯ ವೈದ್ಯರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

“ಅಂಗಾಂಗ ಕಸಿ ಮಾಡಿಸಿಕೊಂಡವರು ಸಹ ಸಾಮಾನ್ಯ ಜೀವನ ನಡೆಸಬಹುದು ಎಂಬ ಆತ್ಮವಿಶ್ವಾಸ ಮೂಡಿಸುವುದು ಹಾಗೂ ಅಂಗಾಂಗ ದಾನದ ಕುರಿತು ಜನರಲ್ಲಿರುವ ಭಯ ಮತ್ತು ತಪ್ಪು ಕಲ್ಪನೆಗಳನ್ನು ದೂರ ಮಾಡುವುದು ಟ್ರಾನ್ಸ್‌ಪ್ಲಾಂಟ್ ಗೇಮ್ಸ್‌ನ ಉದ್ದೇಶ.”

                         — ಕೃಷ್ಣಗೌಡ ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ

BNSS ಸೆಕ್ಷನ್ 106ರಡಿ ಬ್ಯಾಂಕ್ ಖಾತೆ ಜಪ್ತಿ, ಫ್ರೀಜ್ʼಗೆ ಪೊಲೀಸರಿಗೆ ಸಂಪೂರ್ಣ ಅಧಿಕಾರ: ಹೈಕೋರ್ಟ್

0

ಬೆಂಗಳೂರು: ತನಿಖೆಯ ಸಂದರ್ಭದಲ್ಲಿ ಬ್ಯಾಂಕ್ ಖಾತೆಗಳನ್ನು ‘ಫ್ರೀಜ್’ ಮಾಡಲು ಪೊಲೀಸರಿಗೆ ಅಧಿಕಾರವಿದ್ದು, ಅದಕ್ಕಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)ಯ ಸೆಕ್ಷನ್ 106 ಅಡಿಯಲ್ಲಿ ತನಿಖಾಧಿಕಾರಿಗಳಿಗೆ ಬ್ಯಾಂಕ್ ಖಾತೆಗಳು ಸೇರಿದಂತೆ ಆಸ್ತಿಗಳನ್ನು ಜಪ್ತಿ ಮಾಡುವ ಅಧಿಕಾರವಿದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಸ್ಪಷ್ಟಪಡಿಸಿದೆ.

ಜಾರ್ ಗೋಲ್ಡ್ ಕಂಪನಿಯ ಬ್ಯಾಂಕ್ ಖಾತೆಗಳನ್ನು ಪೊಲೀಸರು ಫ್ರೀಜ್ ಮಾಡಿದ್ದ ಕ್ರಮವನ್ನು ರದ್ದುಪಡಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹಾಗೂ ತನಿಖಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಆದೇಶ ನೀಡಿದೆ.

ಸೆಕ್ಷನ್ 106ರಡಿ ಪೊಲೀಸರಿಗೆ ಅಧಿಕಾರ

ಹಳೆಯ ಸಿಆರ್‌ಪಿಸಿ ಸೆಕ್ಷನ್ 102ರ ಹೊಸ ರೂಪವೇ BNSS ಸೆಕ್ಷನ್ 106 ಎಂದು ಹೈಕೋರ್ಟ್ ತಿಳಿಸಿದೆ. ಈ ಸೆಕ್ಷನ್ ಅಡಿಯಲ್ಲಿ ತನಿಖೆಯ ಭಾಗವಾಗಿ ಬ್ಯಾಂಕ್ ಖಾತೆಗಳು ಸೇರಿದಂತೆ ಆಸ್ತಿಗಳನ್ನು ಜಪ್ತಿ ಮಾಡಲು ತನಿಖಾಧಿಕಾರಿಗಳಿಗೆ ಅಧಿಕಾರವಿದೆ. ಆದರೆ, ಪೊಲೀಸರು ಆಸ್ತಿಯನ್ನು ಜಪ್ತಿ ಮಾಡಿದ ಬಳಿಕ ಈ ಕುರಿತು ತಕ್ಷಣವೇ ತಮ್ಮ ಅಧಿಕಾರ ವ್ಯಾಪ್ತಿಯ ಮ್ಯಾಜಿಸ್ಟ್ರೇಟ್‌ಗೆ ವರದಿ ಸಲ್ಲಿಸಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.

ಸೆಕ್ಷನ್ 107 ಬೇರೆ ಉದ್ದೇಶಕ್ಕೆ

BNSS ಸೆಕ್ಷನ್ 107ರ ಅಡಿಯಲ್ಲಿ ಆಸ್ತಿ ಮುಟ್ಟುಗೋಲು, ಜಪ್ತಿ ತೆರವು ಹಾಗೂ ಆಸ್ತಿಯ ಮರುಸ್ಥಾಪನೆಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯದ ಆದೇಶ ಕಡ್ಡಾಯವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

ಸೆಕ್ಷನ್ 106 ಮತ್ತು 107 ಎರಡೂ ಪರಸ್ಪರ ಪೂರಕವಾಗಿವೆಯೇ ಹೊರತು, ಒಂದು ಸೆಕ್ಷನ್ ಮತ್ತೊಂದರ ಅಧಿಕಾರವನ್ನು ನಿಯಂತ್ರಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಸೈಬರ್ ವಂಚನೆ ಪ್ರಕರಣಗಳಲ್ಲಿ ತ್ವರಿತ ಕ್ರಮ ಅಗತ್ಯ

ಸೈಬರ್ ವಂಚನೆ ಪ್ರಕರಣಗಳಲ್ಲಿ ದೋಚಿದ ಹಣವನ್ನು ಆರೋಪಿಗಳು ಕ್ಷಣಾರ್ಧದಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರತಿಯೊಂದು ಖಾತೆಯನ್ನು ಫ್ರೀಜ್ ಮಾಡುವ ಮುನ್ನ ನ್ಯಾಯಾಲಯದ ಪೂರ್ವಾನುಮತಿ ಪಡೆಯಬೇಕೆಂದು ನಿಯಮಿಸಿದರೆ, ತನಿಖೆಗೆ ದೊಡ್ಡ ಹಿನ್ನಡೆಯಾಗಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಸಾರ್ವಜನಿಕರ ಜೀವನಪೂರ್ತಿ ಉಳಿತಾಯವನ್ನು ರಕ್ಷಿಸುವ ನಿಟ್ಟಿನಲ್ಲಿ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಪ್ರತಿ ಬಾರಿ ಪೂರ್ವಾನುಮತಿ ಪಡೆಯುವ ನಿಯಮ ಜಾರಿಗೆ ತಂದರೆ ಪ್ರಾಯೋಗಿಕ ಸಮಸ್ಯೆಗಳು ಎದುರಾಗಬಹುದು ಎಂದು ಪೀಠ ವಿವರಿಸಿದೆ.

ಏನಿದು ಪ್ರಕರಣ?

ಅನಿಯಂತ್ರಿತ ಠೇವಣಿ ನಿಷೇಧ ಕಾಯ್ದೆ, 2019ರ ಅಡಿಯಲ್ಲಿ ‘ಜಾರ್ ಗೋಲ್ಡ್ ರಿಟೇಲ್ ಪ್ರೈವೇಟ್ ಲಿಮಿಟೆಡ್’ ವಿರುದ್ಧ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿದ್ದರು. ತನಿಖೆಯ ವೇಳೆ ಪೊಲೀಸರು ಕಂಪನಿಗೆ ಸಂಬಂಧಿಸಿದ ಚಿನ್ನ ಹಾಗೂ ಬೆಳ್ಳಿಯನ್ನು ವಶಪಡಿಸಿಕೊಂಡು, ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದರು.

ಬಳಿಕ ಬ್ಯಾಂಕ್ ಖಾತೆಗಳ ಫ್ರೀಜ್ ತೆರವುಗೊಳಿಸುವಂತೆ ಬೆಂಗಳೂರು ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹಾಗೂ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, BNSS ಸೆಕ್ಷನ್ 106ರಡಿ ತನಿಖೆಯ ಸಂದರ್ಭದಲ್ಲಿ ಬ್ಯಾಂಕ್ ಖಾತೆ ಸೇರಿದಂತೆ ಆಸ್ತಿಗಳನ್ನು ಜಪ್ತಿ ಮಾಡಲು ಪೊಲೀಸರಿಗೆ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದೆ.