Home Blog

ಗದಗ ಎಸ್‌ಪಿ ರೋಹನ್ ಜಗದೀಶ್ ರಾಮನಗರಕ್ಕೆ ವರ್ಗಾವಣೆ; ಮಿಥುನ್ ಎಚ್.ಎನ್. ನೂತನ SP

0

ಗದಗ: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ವರ್ಗಾವಣೆ ನಡೆಸಿದ್ದು, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಐಪಿಎಸ್ ಅವರನ್ನು ವರ್ಗಾವಣೆ ಮಾಡಿ ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ) ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಅವರ ಸ್ಥಾನಕ್ಕೆ ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆಗಿ ಕಾರ್ಯನಿರ್ವಹಿಸುತ್ತಿದ್ದ ಮಿಥುನ್ ಎಚ್.ಎನ್., ಐಪಿಎಸ್ ಅವರನ್ನು ಗದಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಗದಗ ಜಿಲ್ಲೆಯಲ್ಲಿ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ರೋಹನ್ ಜಗದೀಶ್ ಅವರು ತಮ್ಮ ವಿಶಿಷ್ಟ ಕಾರ್ಯವೈಖರಿ ಹಾಗೂ ಖಡಕ್ ಕ್ರಮಗಳಿಂದ ಗಮನ ಸೆಳೆದಿದ್ದರು. ವಿಶೇಷವಾಗಿ ರೌಡಿ ಶೀಟರ್‌ಗಳು ಮತ್ತು ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದವರಿಗೆ ಸಿಂಹಸ್ವಪ್ನವಾಗಿದ್ದ ಅವರು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು.

ಅಪರಾಧಿಗಳ ವಿರುದ್ಧ ಖಡಕ್ ನಿಲುವು ತಳೆದಿದ್ದ ರೋಹನ್ ಜಗದೀಶ್ ಅವರು, ಸಾರ್ವಜನಿಕರೊಂದಿಗೆ ಮಾತ್ರ ಅತ್ಯಂತ ಆತ್ಮೀಯ ಹಾಗೂ ಸ್ನೇಹಪರವಾಗಿ ವರ್ತಿಸುತ್ತಿದ್ದರು. ಯಾವಾಗಲೂ ನಗುಮೊಗದಿಂದ, ಹಸನ್ಮುಖಿಯಾಗಿ ಸಾರ್ವಜನಿಕರನ್ನು ಎದುರಿಸುತ್ತಿದ್ದ ಅವರ ಸರಳ ನಡೆ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನವನ್ನೂ ಅವರು ನಡೆಸಿದ್ದರು.

ಒಂದೆಡೆ ಅಪರಾಧಿಗಳ ವಿರುದ್ಧ ಕಠಿಣ ಕ್ರಮ, ಮತ್ತೊಂದೆಡೆ ಸಾರ್ವಜನಿಕರೊಂದಿಗೆ ಸ್ನೇಹಪರ ನಡೆ—ಈ ಎರಡು ವಿಭಿನ್ನ ಮುಖಗಳ ಕಾರ್ಯವೈಖರಿಯಿಂದ ರೋಹನ್ ಜಗದೀಶ್ ಅವರು ಗದಗ ಜಿಲ್ಲೆಯ ಜನತೆಯ ಗಮನ ಸೆಳೆದಿದ್ದರು.

ಇದೀಗ ಸರ್ಕಾರದ ವರ್ಗಾವಣೆ ಆದೇಶದಂತೆ ಅವರು ರಾಮನಗರದಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇನ್ನು ಗದಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿರುವ ಮಿಥುನ್ ಎಚ್.ಎನ್. ಅವರು 2020ರ ಬ್ಯಾಚ್‌ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಈ ಹಿಂದೆ ವಿವಿಧ ಪೊಲೀಸ್ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅವರು, ಸಕಲೇಶಪುರದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಿಥುನ್ ಎಚ್.ಎನ್. ಅವರನ್ನು ಇದೀಗ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ರೌಡಿ ಶೀಟರ್‌ಗಳಿಗೆ ಸಿಂಹಸ್ವಪ್ನವಾಗಿದ್ದರೂ, ಸಾರ್ವಜನಿಕರೊಂದಿಗೆ ನಗುಮೊಗದ ಹಸನ್ಮುಖಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ರೋಹನ್ ಜಗದೀಶ್ ಅವರ ವರ್ಗಾವಣೆಯೊಂದಿಗೆ ಗದಗ ಜಿಲ್ಲೆಗೆ ನೂತನ ಪೊಲೀಸ್ ಸಾರಥಿಯಾಗಿ ಮಿಥುನ್ ಎಚ್.ಎನ್. ಆಗಮಿಸುತ್ತಿದ್ದು, ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.

RSS ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣ: ಪ್ರಿಯಾಂಕ್ ಖರ್ಗೆ, ನಲಪಾಡ್ʼಗೆ ಜಾಮೀನು ಮಂಜೂರು!

0

ಬೆಂಗಳೂರು: ಆರ್‌ಎಸ್‌ಎಸ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ವಿಚಾರಣೆ ನಡೆಸಿದ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಇಬ್ಬರಿಗೂ ತಲಾ 10 ಸಾವಿರ ರೂ. ವೈಯಕ್ತಿಕ ಶ್ಯೂರಿಟಿ ನೀಡುವ ಷರತ್ತಿನ ಮೇಲೆ ಜಾಮೀನು ಮಂಜೂರು ಮಾಡಿದೆ.

ತೇಜಸ್ ಗೌಡ ಎಂಬುವರು ಸಲ್ಲಿಸಿದ್ದ ಖಾಸಗಿ ದೂರಿನ ಮೇರೆಗೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ನಲಪಾಡ್‌ಗೆ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಕಳೆದ ವಿಚಾರಣೆ ವೇಳೆ ಇಬ್ಬರೂ ನಾಯಕರು ಖುದ್ದು ಹಾಜರಾತಿಯಿಂದ ವಿನಾಯಿತಿ ಪಡೆದುಕೊಂಡಿದ್ದರು. ಆದರೆ ಈ ಬಾರಿ ಖುದ್ದು ಹಾಜರಾಗುವಂತೆ ಕೋರ್ಟ್ ಸೂಚಿಸಿತ್ತು.

ಇದಕ್ಕೆ ಬದಲಾಗಿ ಸದಾಶಿವನಗರ ಮತ್ತು ಅಶೋಕ ನಗರ ಪೊಲೀಸರು ಖುದ್ದು ಹಾಜರಾಗಿ ವರದಿ ಸಲ್ಲಿಸಿದ್ದರು. ಆದರೆ ಈ ವರದಿ ತೃಪ್ತಿಕರವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಾಧೀಶರು, ಇಬ್ಬರೂ ನಾಯಕರು ಖುದ್ದು ಹಾಜರಾಗುವಂತೆ ಸೂಚಿಸಿ ಮತ್ತೆ ಸಮನ್ಸ್ ಜಾರಿ ಮಾಡಿದ್ದರು.

ರಾಜಕೀಯಕ್ಕೆ ರವಿಚಂದ್ರನ್ ಎಂಟ್ರಿ: ಬಾಲ್ಯದ ಗೆಳೆಯನಿಗೆ ಡಿಕೆಶಿ ‘ಉಡುಗೊರೆ’

ಬೆಂಗಳೂರು: ಚಿತ್ರರಂಗದಲ್ಲಿ ಅದ್ಧೂರಿ ಕನಸುಗಳನ್ನು ತೆರೆಗೆ ತಂದ ‘ಕನಸುಗಾರ’ ರವಿಚಂದ್ರನ್‌ ಇದೀಗ ರಾಜಕೀಯ ಅಂಗಳಕ್ಕೆ ಕಾಲಿಡಲಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ಕಲಾ ಕ್ಷೇತ್ರದ ಸಾಧಕರ ಕೋಟಾದಲ್ಲಿ ರವಿಚಂದ್ರನ್ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವ ಚರ್ಚೆ ನಡೆಯುತ್ತಿದೆ ಎನ್ನಲಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಶಿಫಾರಸು ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ರವಿಚಂದ್ರನ್‌ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದವರು. ಯಾವುದೇ ರಾಜಕೀಯ ಪಕ್ಷದೊಂದಿಗೆ ಅಧಿಕೃತವಾಗಿ ಗುರುತಿಸಿಕೊಂಡಿಲ್ಲ. ಆದರೆ ಡಿ.ಕೆ. ಶಿವಕುಮಾರ್ ಅವರೊಂದಿಗೆ ರವಿಚಂದ್ರನ್ ಹೊಂದಿರುವ ವೈಯಕ್ತಿಕ ಆತ್ಮೀಯತೆ ಇದೀಗ ಈ ಚರ್ಚೆಯ ಕೇಂದ್ರಬಿಂದುವಾಗಿದೆ.

ರವಿಚಂದ್ರನ್ ಮತ್ತು ಶಿವಕುಮಾರ್ ಬಾಲ್ಯದ ಗೆಳೆಯರು ಹಾಗೂ ಶಾಲಾ ಸಹಪಾಠಿಗಳು ಎಂಬುದು ಈಗಾಗಲೇ ಬಹಿರಂಗವಾಗಿದೆ. ಇತ್ತೀಚಿನ ದಿನಗಳಲ್ಲಿ ಇಬ್ಬರ ಭೇಟಿಗಳು ಹೆಚ್ಚಾಗಿರುವುದು ಕೂಡ ರಾಜಕೀಯ ವಲಯದ ಗಮನ ಸೆಳೆದಿದೆ.

ವಿಶೇಷವಾಗಿ ಮದ್ದೂರಮ್ಮ ಉತ್ಸವದ ಸಂದರ್ಭದಲ್ಲಿ ರವಿಚಂದ್ರನ್ ಅವರು ಶಿವಕುಮಾರ್ ಅವರನ್ನು ಕೊಂಡಾಡಿದ್ದ ಮಾತುಗಳು ಇದೀಗ ಮತ್ತೆ ಚರ್ಚೆಯಾಗುತ್ತಿವೆ. ‘ನಾನು ಕೈ ಚಾಚುವ ಮುನ್ನವೇ ನನ್ನ ಕೈಹಿಡಿದಿದ್ದಾರೆ. ಜೀವನಪರ್ಯಂತ ಅವರ ಋಣದಲ್ಲಿ ಇರುತ್ತೇನೆ’ ಎಂಬ ಅರ್ಥದ ಮಾತುಗಳ ಮೂಲಕ ಸಿಎಂ ಮೇಲಿನ ತಮ್ಮ ಆತ್ಮೀಯತೆ ಹಾಗೂ ಕೃತಜ್ಞತೆಯನ್ನು ಅವರು ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಕಲಾ ಕ್ಷೇತ್ರದ ಕೋಟಾದಲ್ಲಿ ರವಿಚಂದ್ರನ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಭಿಮಾನಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬೆಳವಣಿಗೆಯನ್ನು ಸಂಭ್ರಮದಿಂದ ಹಂಚಿಕೊಳ್ಳುತ್ತಿದ್ದಾರೆ.

ರವಿಚಂದ್ರನ್ ಅವರ ಸಿನಿಮಾ ಬದುಕು ಹಲವು ದಶಕಗಳಷ್ಟು ಹಳೆಯದು. ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರಿಗೆ ಕಲಾ ಕ್ಷೇತ್ರದ ಸಾಧಕರಾಗಿ ಪರಿಷತ್ ಪ್ರವೇಶದ ಅವಕಾಶ ಸಿಗಬಹುದು ಎಂಬ ಚರ್ಚೆ ನಡೆಯುತ್ತಿದೆ.

ಆದರೆ ಇಲ್ಲಿ ಪ್ರಮುಖ ಅಂಶವೆಂದರೆ, ರವಿಚಂದ್ರನ್ ಅವರನ್ನು ವಿಧಾನ ಪರಿಷತ್‌ಗೆ ಕಳುಹಿಸುವ ಕುರಿತು ಕಾಂಗ್ರೆಸ್ ಪಕ್ಷವಾಗಲಿ ಅಥವಾ ಮುಖ್ಯಮಂತ್ರಿ ಕಚೇರಿಯಾಗಲಿ ಯಾವುದೇ ಅಧಿಕೃತ ನಿರ್ಧಾರ ಅಥವಾ ಘೋಷಣೆ ಮಾಡಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ ಇದು ದೃಢಪಟ್ಟ ನೇಮಕಾತಿಯಲ್ಲ; ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ನಿರೀಕ್ಷೆ ಮತ್ತು ಚರ್ಚೆಯಾಗಿದೆ.

ನಾಗೇಂದ್ರ ವಿರುದ್ಧ ಹಣ ಪಡೆದಿರುವುದಕ್ಕೆ ಸಾಕ್ಷ್ಯವಿಲ್ಲ, ಬಿಜೆಪಿ ರಾಜಕೀಯ ಮಾಡುತ್ತಿದೆ: ಪರಮೇಶ್ವರ್ ಆರೋಪ

0

ಮೈಸೂರು: ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಖಂಡಿತವಾಗಿಯೂ ಪಕ್ಷಕ್ಕೆ ಮುಜುಗರ ತಂದಿದೆ ಎಂದು ಡಿಸಿಎಂ ಜಿ. ಪರಮೇಶ್ವರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು. ಮೈಸೂರಿಗೆ ಹೆಚ್ಚಿನ ಕಾರ್ಖಾನೆಗಳನ್ನು ತರುವ ಉದ್ದೇಶದಿಂದ ಕೆಐಡಿಬಿ ಭೂಮಿಗೆ ನೋಟಿಫಿಕೇಶನ್ ನೀಡಿರಬಹುದು ಎಂದು ಹೇಳಿದ ಪರಮೇಶ್ವರ್,

ಈ ವಿಚಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನೋಡಿಕೊಳ್ಳುತ್ತಾರೆ, ಕೈಗಾರಿಕಾ ಸಚಿವರು ಮತ್ತು ಜಿಲ್ಲಾ ಮಂತ್ರಿಗಳೇ ಇದನ್ನು ನಿರ್ವಹಿಸುತ್ತಾರೆ ಎಂದು ತಿಳಿಸಿದರು. ನಾಗೇಂದ್ರ ರಾಜೀನಾಮೆ ಪಕ್ಷಕ್ಕೆ ಖಂಡಿತ ಮುಜುಗರ ತಂದಿದೆ ಎಂದ ಪರಮೇಶ್ವರ್, ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಿದೆ ಎಂದು ಆರೋಪಿಸಿದರು.

ಎರಡು ಬಾರಿ ರಾಜೀನಾಮೆ ಕೊಡಿಸುವ ಮೂಲಕ ಬಿಜೆಪಿ ರಾಜಕೀಯ ನಡೆಸಿದೆ ಎಂದ ಅವರು, ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನಾಗೇಂದ್ರ ಪಕ್ಷಕ್ಕೆ ಮುಜುಗರವಾಗಬಾರದೆಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆಯೇ ಹೊರತು, ರಾಜೀನಾಮೆ ನೀಡುವ ಅಗತ್ಯವೇ ಇರಲಿಲ್ಲ ಎಂದು ಸಮರ್ಥಿಸಿಕೊಂಡರು. ಇಡಿ ಹಾಗೂ ಸಿಬಿಐ ತನಿಖೆಗಳಲ್ಲಿ ನಾಗೇಂದ್ರ ಹೆಸರಿನ ಉಲ್ಲೇಖವಿಲ್ಲ ಎಂದೂ, ಅವರು ಹಣ ಪಡೆದಿರುವ ಬಗ್ಗೆಯೂ ಯಾವುದೇ ಸಾಕ್ಷ್ಯಾಧಾರವಿಲ್ಲ ಎಂದೂ ಪರಮೇಶ್ವರ್ ಸ್ಪಷ್ಟಪಡಿಸಿದರು.

ತಾವು ಗೃಹ ಸಚಿವರಾಗಿದ್ದಾಗಲೇ ಶೇ. 79ರಷ್ಟು ಹಣ ರಿಕವರಿಯಾಗಿತ್ತು ಎಂದು ಹೇಳಿದ ಅವರು, ಈಗ 5 ಕೋಟಿ ರೂ. ರಿಕವರಿ ಪ್ರಕ್ರಿಯೆಯಲ್ಲಿದ್ದು, ಇದರಲ್ಲೂ ನಾಗೇಂದ್ರ ಹೆಸರು ಇಲ್ಲ ಎಂದರು. ಮುಂದಿನ ದಿನಗಳಲ್ಲಿ ವಸ್ತುಸ್ಥಿತಿಯನ್ನು ಜನರ ಮುಂದೆ ತೆರೆದಿಡುವುದಾಗಿ ತಿಳಿಸಿದ ಪರಮೇಶ್ವರ್, ಸದನದಲ್ಲಿ ಈ ಪ್ರಶ್ನೆ ಕೇಳುವಂತೆ ಸೂಚಿಸಿದರೂ ಬಿಜೆಪಿಯವರು ಕೇಳಲಿಲ್ಲ, ಅವರು ಬರೀ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ ಎಂದು ಟೀಕಿಸಿದರು.

ಕುಮಾರಸ್ವಾಮಿ ರಾಮನಗರಕ್ಕೆ ಬರಲಿ, ಪಾದ ತೊಳೆದು ಸ್ವಾಗತಿಸುತ್ತೇನೆ: ಇಕ್ಬಾಲ್ ಹುಸೇನ್

0

ರಾಮನಗರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಮನಗರಕ್ಕೆ ಬಂದರೆ ಕಾಲು ತೊಳೆದು ಸ್ವಾಗತಿಸುವುದಾಗಿ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂಬ ಚರ್ಚೆಗೆ ಪ್ರತಿಕ್ರಿಯಿಸಿದರು. “ಅವರು ರಾಜ್ಯ ರಾಜಕಾರಣಕ್ಕೆ ಬಂದರೆ ಸಂತೋಷದಿಂದ ಸ್ವಾಗತಿಸುತ್ತೇವೆ. ರಾಮನಗರಕ್ಕೆ ಬಂದರೆ ಅವರ ಪಾದ ತೊಳೆದೇ ಸ್ವಾಗತಿಸುತ್ತೇವೆ” ಎಂದು ಕುಟುಕಿದರು.

ನೈಸ್ ರಸ್ತೆ ವಿಚಾರವಾಗಿ ಹೋರಾಟಕ್ಕೆ ಮುಂದಾಗಿರುವ ಜೆಡಿಎಸ್ ವಿರುದ್ಧ ಕಿಡಿಕಾರಿದ ಇಕ್ಬಾಲ್ ಹುಸೇನ್, ಜವಾಬ್ದಾರಿಯುತ ಸ್ಥಾನದಲ್ಲಿರುವ ಕುಮಾರಸ್ವಾಮಿ ರಾಜ್ಯದ ಪರ ಕೆಲಸ ಮಾಡಬೇಕು ಹಾಗೂ ರಾಮನಗರ ಜನತೆಯ ಋಣ ತೀರಿಸಬೇಕು ಎಂದರು. ರಾಮನಗರ ಭಾಗಕ್ಕೆ ಬೃಹತ್ ಕೈಗಾರಿಕೆಗಳನ್ನು ತಂದು ಯುವಕರಿಗೆ ಉದ್ಯೋಗ ಒದಗಿಸುವ ಆಲೋಚನೆ ಮಾಡಬೇಕಿದ್ದ ಕುಮಾರಸ್ವಾಮಿಗೆ ಅಂತಹ ಅಭಿವೃದ್ಧಿ ಚಿಂತನೆಗಳೇ ಇಲ್ಲ ಎಂದೂ, ಬಿಡದಿ ಮತ್ತು ನೈಸ್ ರಸ್ತೆ ವಿಚಾರದಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾಜಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಇಕ್ಬಾಲ್ ಹುಸೇನ್, ಸರ್ಕಾರದ ವಿರುದ್ಧ ಹೋರಾಡಲು ವಿರೋಧ ಪಕ್ಷದ ಬಳಿ ಬೇರೆ ಅಸ್ತ್ರಗಳಿಲ್ಲ ಎಂದು ಟೀಕಿಸಿದರು. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು ಹಾಗೂ ಬಿಜೆಪಿಯವರ ವರ್ತನೆಯಿಂದ ನೊಂದು ನಾಗೇಂದ್ರ ರಾಜೀನಾಮೆ ನೀಡಿದ್ದಾರೆಯೇ ಹೊರತು, ಆರೋಪ ಸಾಬೀತಾಗಿದ್ದಕ್ಕಲ್ಲ ಎಂದು ಸಮರ್ಥಿಸಿಕೊಂಡ ಅವರು, ಪಕ್ಷಕ್ಕೆ ಮುಜುಗರವಾಗಬಾರದೆಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದರು. ಈಗಾಗಲೇ ಎಸ್‌ಐಟಿ ನಾಗೇಂದ್ರಗೆ ಕ್ಲೀನ್ ಚಿಟ್ ನೀಡಿದ್ದು, ಬಿಜೆಪಿ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪ್ರತಿಪಾದಿಸಿದರು.

ಫೇಕ್ ಐಡಿ, ಇಸ್ರೋ ಜಾಬ್ ಆಮಿಷ, ಅಶ್ಲೀಲ ವಿಡಿಯೋ..! ಗದಗದಲ್ಲಿ ಸಿಕ್ಕಿಬಿದ್ದ ವಂಚಕ

ಗದಗ: “ನಾನು ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದೇನೆ… ನಿಮಗೂ ಇಸ್ರೋದಲ್ಲಿ ಉದ್ಯೋಗ ಕೊಡಿಸುತ್ತೇನೆ…” ಎಂದು ಸಾಮಾಜಿಕ ಜಾಲತಾಣದ ಮೂಲಕ ಯುವಕ–ಯುವತಿಯರನ್ನು ಪರಿಚಯ ಮಾಡಿಕೊಂಡು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪದ ಪ್ರಕರಣ ಗದಗದಲ್ಲಿ ಬೆಳಕಿಗೆ ಬಂದಿದೆ.

https://www.facebook.com/share/v/1Yb23MG4VV/

ವಿಜಯಪುರ ಮೂಲದ ಈರಣ್ಣ ಬಡಿಗೇರ್ ಎಂಬಾತನ ವಿರುದ್ಧ ಗಂಭೀರ ವಂಚನೆ ಆರೋಪ ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಉದ್ಯೋಗಾಕಾಂಕ್ಷಿಗಳನ್ನು ತನ್ನ ಬಲೆಗೆ ಬೀಳಿಸುತ್ತಿದ್ದ ಎನ್ನಲಾಗಿದೆ. ಈತ 30ಕ್ಕೂ ಹೆಚ್ಚು ಯುವಕ–ಯುವತಿಯರಿಗೆ ಇಸ್ರೋದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿರುವ ಆರೋಪವೂ ಕೇಳಿಬಂದಿದೆ.

ಇನ್‌ಸ್ಟಾಗ್ರಾಂನಲ್ಲಿ ಪರಿಚಯ… ನಂತರ ಇಸ್ರೋ ಜಾಬ್ ಆಫರ್..!

ಆರೋಪಿಯು ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಯುವಕ–ಯುವತಿಯರನ್ನು ಪರಿಚಯ ಮಾಡಿಕೊಂಡು, ತಾನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದ ಎನ್ನಲಾಗಿದೆ.

https://www.facebook.com/share/v/1Yb23MG4VV/

ನಂತರ ಇಸ್ರೋದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ವಿವಿಧ ಪ್ರಕ್ರಿಯೆಗಳು ಹಾಗೂ ದಾಖಲೆಗಳ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಆರೋಪ ಕೇಳಿ ಬಂದಿದೆ. ಫೋನ್‌ಪೇ ಸೇರಿದಂತೆ ಆನ್‌ಲೈನ್ ಹಣ ವರ್ಗಾವಣೆ ವ್ಯವಸ್ಥೆಯ ಮೂಲಕ ಹಣ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಉದ್ಯೋಗದ ನಿರೀಕ್ಷೆಯಲ್ಲಿದ್ದ ಯುವಕರನ್ನು ಗುರಿಯಾಗಿಸಿಕೊಂಡು ಈತ ವಂಚನೆಯ ಜಾಲ ಹೆಣೆದಿದ್ದಾನೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಯುವತಿಯರನ್ನೂ ಬಲೆಗೆ ಬೀಳಿಸಿದ ಆರೋಪ

ಆರೋಪಿಯು ಕೇವಲ ಯುವಕರನ್ನಷ್ಟೇ ಗುರಿಯಾಗಿಸಿರಲಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ಯುವತಿಯರೊಂದಿಗೆ ಪರಿಚಯ ಮಾಡಿಕೊಂಡು ಅವರನ್ನೂ ತನ್ನ ವಂಚನೆಯ ಜಾಲಕ್ಕೆ ಸೆಳೆಯುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಈತನ ವಿರುದ್ಧ ವಂಚನೆಗೊಳಗಾದವರ ಸಂಖ್ಯೆ ಇನ್ನಷ್ಟು ಇರಬಹುದೆಂಬ ಅನುಮಾನವೂ ವ್ಯಕ್ತವಾಗಿದ್ದು, ಪ್ರಕರಣದ ವ್ಯಾಪ್ತಿಯ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಸ ಹೋದ ಯುವಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದರು

ಉದ್ಯೋಗ ಕೊಡಿಸುವುದಾಗಿ ಹೇಳಿ ಹಣ ಪಡೆದುಕೊಂಡ ನಂತರವೂ ಯಾವುದೇ ಕೆಲಸವಾಗದ ಹಿನ್ನೆಲೆಯಲ್ಲಿ ಕೆಲ ಯುವಕರಿಗೆ ಅನುಮಾನ ಮೂಡಿದೆ ಎನ್ನಲಾಗಿದೆ. ಬಳಿಕ ಪರಸ್ಪರ ಮಾಹಿತಿ ಹಂಚಿಕೊಂಡ ಯುವಕರು ಆರೋಪಿಯನ್ನು ಹಿಡಿದು ಗದಗ ಶಹರ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರ ವಶಕ್ಕೆ ಸಿಕ್ಕ ನಂತರ ಆರೋಪಿಯ ವಿರುದ್ಧ ಹಲವು ವಿಚಾರಗಳು ಹೊರಬರುತ್ತಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಮೊಬೈಲ್ ಪರಿಶೀಲನೆ ವೇಳೆ ಬೆಚ್ಚಿಬೀಳಿಸಿದ ವಿಡಿಯೋಗಳು..?

ಆರೋಪಿಯ ಮೊಬೈಲ್ ಪರಿಶೀಲನೆ ನಡೆಸಿದ ವೇಳೆ ಹಲವು ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಮೊಬೈಲ್‌ನಲ್ಲಿದ್ದ ಕೆಲವು ಅಶ್ಲೀಲ ವಿಡಿಯೋಗಳ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆ ವಿಡಿಯೋಗಳ ಹಿನ್ನೆಲೆ ಏನು, ಅವುಗಳಲ್ಲಿ ಯಾರಿದ್ದಾರೆ ಮತ್ತು ಅವುಗಳನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಲಾಗಿತ್ತು ಎಂಬ ಕುರಿತು ತನಿಖೆ ನಡೆಯಬೇಕಿದೆ. ಈ ಬಗ್ಗೆ ಸಂಪೂರ್ಣ ಸತ್ಯ ತನಿಖೆಯ ಬಳಿಕವೇ ಹೊರಬರಬೇಕಿದೆ.

‘ಸಾಲ ತೀರಿಸಲು ಈ ಕೆಲಸಕ್ಕೆ ಇಳಿದೆ’ ಎಂದ ಆರೋಪ..!

ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದೆ. ಆ ಸಾಲವನ್ನು ತೀರಿಸುವ ಉದ್ದೇಶದಿಂದ ಈ ಕೆಲಸಕ್ಕೆ ಇಳಿದಿದ್ದೇನೆ ಎಂದು ಆರೋಪಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ ಎಂಬ ಮಾಹಿತಿ ಕೇಳಿಬಂದಿದೆ. ಡಿಪ್ಲೋಮಾ ಶಿಕ್ಷಣ ಪಡೆದ ಯುವಕನೊಬ್ಬ ಸಾಲದ ಸುಳಿಯಿಂದ ಹೊರಬರುವ ನೆಪದಲ್ಲಿ ಉದ್ಯೋಗಾಕಾಂಕ್ಷಿಗಳನ್ನು ಗುರಿಯಾಗಿಸಿಕೊಂಡು ವಂಚನೆಗೆ ಇಳಿದಿದ್ದಾನೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ.

ಬ್ಯಾಗ್‌ನಲ್ಲಿ ನಿರೋಧದ ಪ್ಯಾಕೆಟ್ ಪತ್ತೆ; ತನಿಖೆ ಚುರುಕು

ಆರೋಪಿಯ ಬ್ಯಾಗ್ ಪರಿಶೀಲನೆ ವೇಳೆ ನಿರೋಧದ ಪ್ಯಾಕೆಟ್ ಕೂಡ ಪತ್ತೆಯಾಗಿದೆ ಎನ್ನಲಾಗಿದೆ. ಆದರೆ ಇದಕ್ಕೆ ವಂಚನೆ ಪ್ರಕರಣದೊಂದಿಗೆ ಯಾವುದೇ ಸಂಬಂಧವಿದೆಯೇ ಅಥವಾ ಬೇರೆ ಯಾವುದಾದರೂ ಉದ್ದೇಶವಿದೆಯೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಮೊಬೈಲ್‌ನಲ್ಲಿ ಪತ್ತೆಯಾದ ವಿಡಿಯೋಗಳು ಹಾಗೂ ಇತರ ಮಾಹಿತಿಯ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.

ವಂಚನೆಯ ಜಾಲದ ಹಿಂದೆ ಇನ್ನಷ್ಟು ಮಂದಿ ಇದ್ದಾರೆಯೇ..?

ಇಸ್ರೋದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 30ಕ್ಕೂ ಹೆಚ್ಚು ಮಂದಿಯಿಂದ ಹಣ ಪಡೆದುಕೊಂಡಿರುವ ಆರೋಪದ ಹಿಂದೆ ಇನ್ನೂ ಹೆಚ್ಚಿನ ಜನರು ಭಾಗಿಯಾಗಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.

ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸಿ ಎಷ್ಟು ಮಂದಿಯನ್ನು ಸಂಪರ್ಕಿಸಲಾಗಿದೆ..? ಎಷ್ಟು ಜನರಿಂದ ಹಣ ಪಡೆದುಕೊಳ್ಳಲಾಗಿದೆ..? ವಂಚನೆಯ ಹಣ ಎಲ್ಲಿಗೆ ಹೋಗಿದೆ..? ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ..? ಎಂಬ ಹಲವು ಪ್ರಶ್ನೆಗಳಿಗೆ ಗದಗ ಶಹರ ಪೊಲೀಸರ ತನಿಖೆಯೇ ಉತ್ತರ ನೀಡಬೇಕಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಗದಗ ಶಹರ ಪೊಲೀಸರು ಪ್ರಕರಣದ ವಿವಿಧ ಆಯಾಮಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.

ಬಿಜೆಪಿ ತಮ್ಮ ರಾಜಕೀಯಕ್ಕಾಗಿ ನಿರಪರಾಧಿಯನ್ನ ಬಲಿ ತೆಗೆದುಕೊಂಡಿದೆ: CM ಡಿಕೆ ಶಿವಕುಮಾರ್

0

ಮೈಸೂರು: ಬಿಜೆಪಿ ತಮ್ಮ ರಾಜಕೀಯಕ್ಕಾಗಿ ನಿರಪರಾಧಿಯೊಬ್ಬರನ್ನು ಬಲಿ ತೆಗೆದುಕೊಂಡಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ನಾಗೇಂದ್ರ ರಾಜೀನಾಮೆ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯಾವ ತಪ್ಪನ್ನೂ ಮಾಡದಿದ್ದರೂ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯವರಿಗೆ ರಾಜಕೀಯ ಬೇಕಿರುವುದರಿಂದ ಪಾದಯಾತ್ರೆ ಮಾಡುತ್ತಿದ್ದಾರೆ, ಮಾಡಲಿ” ಎಂದರು. ಯಾವ ಕಾರಣಕ್ಕಾಗಿ ನಾಗೇಂದ್ರ ರಾಜೀನಾಮೆ ಕೇಳಲಾಯಿತು ಎಂಬ ತಮ್ಮ ಪ್ರಶ್ನೆಗೆ ಬಿಜೆಪಿಯವರು ಇನ್ನೂ ಉತ್ತರ ನೀಡಿಲ್ಲ ಎಂದು ಶಿವಕುಮಾರ್ ಆಕ್ಷೇಪಿಸಿದರು.

ಡಿ.ಕೆ. ಶಿವಕುಮಾರ್ ವಿಧಾನಸೌಧ ಮಾರುತ್ತಾರೆ ಎಂಬ ಹೆಚ್‌ಡಿಕೆ ಆರೋಪಕ್ಕೆ ತಿರುಗೇಟು ನೀಡಿದ ಅವರು, “ಯಾರ್ಯಾರು ಏನೇನು ಮಾರಲು ಹೊರಟಿದ್ದರು ಎಂಬ ಚರಿತ್ರೆ ಬಿಚ್ಚಿಟ್ಟರೆ ಎಲ್ಲವೂ ಬಯಲಾಗುತ್ತದೆ, ಆದರೆ ಸದ್ಯಕ್ಕೆ ಆ ವಿಷಯಕ್ಕೆ ಹೋಗುವುದಿಲ್ಲ” ಎಂದರು. ಕುಮಾರಸ್ವಾಮಿಗೆ ಬಾಯಿ ಚಪಲವಿದ್ದು, ಚಪಲಕ್ಕೆ ಮಾತನಾಡಿ ಖುಷಿಪಡಲಿ ಎಂದು ವ್ಯಂಗ್ಯವಾಡಿದ ಶಿವಕುಮಾರ್,

ತಾವು ಸಿಎಂ ಆಗಿರುವುದು ಕೆಲವರಿಗೆ ಅಸೂಯೆ ತಂದಿದೆ ಎಂದೂ, ಕುಮಾರಸ್ವಾಮಿ ಮಾತ್ರವಲ್ಲದೆ ಬಿಜೆಪಿ ಸೇರಿ ಇಡೀ ಎನ್‌ಡಿಎ ಒಕ್ಕೂಟಕ್ಕೇ ತಾವು ಸಿಎಂ ಆಗಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು. “ಟೀಕೆಗಳು ಸಾಯುತ್ತವೆ, ಮಾಡಿದ ಕೆಲಸ ಉಳಿಯುತ್ತದೆ ಎಂಬುದನ್ನು ನಂಬಿದವನು ನಾನು” ಎಂದು ಅವರು ಹೇಳಿದರು.

ಹನೂರು ಶೂಟೌಟ್ ಪ್ರಕರಣದ ಕುರಿತು ಮಾತನಾಡಿದ ಸಿಎಂ, ತನಿಖಾ ವರದಿ ಕೈಸೇರಿದ್ದು, ಇಡೀ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದರು. ಬಂದಿರುವ ವರದಿಯಲ್ಲಿ ಹತ್ತಿರದಿಂದ ಗುಂಡು ಹಾರಿಸಿರುವ ಬಗ್ಗೆ ಹಾಗೂ ಸಂಬಂಧಿಸಿದವರ ಬಳಿ ಇದ್ದ ವಸ್ತುಗಳು, ಕಾಡಿಗೆ ತೆರಳಿದ ಕಾರಣಗಳ ಬಗ್ಗೆ ಪ್ರಸ್ತಾಪವಿದೆ ಎಂದು ತಿಳಿಸಿದ ಅವರು, ಸಿಐಡಿ ತನಿಖೆ ಪೂರ್ಣಗೊಂಡ ಬಳಿಕ ಎಲ್ಲ ಅಂಶಗಳೂ ಬಹಿರಂಗವಾಗಲಿವೆ ಎಂದು ಹೇಳಿದರು.

ನಾಗೇಂದ್ರ ಎಲ್ಲಿ ಸ್ಪರ್ಧಿಸುತ್ತಾರೋ ಅಲ್ಲೇ ನಾನು ನಿಲ್ಲುತ್ತೇನೆ: ಶ್ರೀರಾಮುಲು ಪ್ರತಿಸವಾಲು

0

ಬೆಂಗಳೂರು: ಮಾಜಿ ಸಚಿವ ಬಿ. ನಾಗೇಂದ್ರ ಅವರ ಸವಾಲನ್ನು ಸ್ವೀಕರಿಸಿರುವ ಬಿಜೆಪಿ ನಾಯಕ, ಮಾಜಿ ಸಚಿವ ಶ್ರೀರಾಮುಲು, 2028ರ ಚುನಾವಣೆಯಲ್ಲಿ ನಾಗೇಂದ್ರ ಎಲ್ಲಿ ಸ್ಪರ್ಧಿಸುತ್ತಾರೋ ತಾವೂ ಅಲ್ಲಿಯೇ ಸ್ಪರ್ಧಿಸುವುದಾಗಿ ಪ್ರತಿಸವಾಲು ಹಾಕಿದ್ದಾರೆ.

ಶನಿವಾರ ಪಕ್ಷದ ಮಲ್ಲೇಶ್ವರಂ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು, “2028ಕ್ಕೆ ನಾಗೇಂದ್ರ ಎಲ್ಲಿ ಸ್ಪರ್ಧಿಸುತ್ತಾರೋ ನಾನೂ ಅಲ್ಲೇ ನಿಲ್ಲುತ್ತೇನೆ. ಒಬ್ಬ ಭ್ರಷ್ಟಾಚಾರಿ ವಿರುದ್ಧ ಈಗ ನಾನೇಕೆ ಸ್ಪರ್ಧಿಸಲಿ? ಮುಂದಿನ ಚುನಾವಣೆಗೆ ಅವರು ಬರಲಿ” ಎಂದು ಹೇಳಿದರು. ಈ ಭ್ರಷ್ಟಾಚಾರದ ಹಣದಿಂದಲೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಲವರು ಗೆದ್ದಿದ್ದಾರೆ ಎಂದು ಆರೋಪಿಸಿದ ಅವರು, ತುಕಾರಾಂ, ಖರ್ಗೆ ಅಳಿಯ ಹಾಗೂ ಬೀದರ್ ಸಂಸದರು ಇದೇ ಹಣದಿಂದ ಗೆದ್ದವರು ಎಂದು ಆರೋಪ ಮಾಡಿದರು.

ಜನತಾ ನ್ಯಾಯಾಲಯಕ್ಕೆ ಬರುವಂತೆ ನಾಗೇಂದ್ರ ನೀಡಿರುವ ಸವಾಲಿಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, “ಸರ್ಕಾರ ವಜಾಗೊಳಿಸಿ ಅವರು ಬರಲಿ, ನಾವೂ ಈಗಲೇ ಜನತಾ ನ್ಯಾಯಾಲಯಕ್ಕೆ ಬರಲು ಸಿದ್ಧ” ಎಂದು ತಿರುಗೇಟು ನೀಡಿದರು. ಚುನಾವಣೆ ಸಂದರ್ಭದಲ್ಲೇ ಎದುರಿಸುವುದಾಗಿ ಹೇಳಿದ ಅವರು, ಈಗಾಗಲೇ ಜನತಾ ನ್ಯಾಯಾಲಯ ತೀರ್ಪು ನೀಡಿದ್ದು, ಸೋತಿರುವುದು ನಿಜವಾದರೂ ಮುಂದೆ ಮತ್ತೆ ಜನ ಕೈಹಿಡಿಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿ, ನಾಗೇಂದ್ರಗೆ ಇಷ್ಟೊಂದು ಅವಸರವೇಕೆ ಎಂದು ಪ್ರಶ್ನಿಸಿದರು.

ಒಂದೇ ವಿಚಾರದಲ್ಲಿ ಎರಡು ಬಾರಿ ರಾಜೀನಾಮೆ ನೀಡಿರುವುದು ಇದೇ ಮೊದಲ ಬಾರಿ ಎಂದ ಶ್ರೀರಾಮುಲು, ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ನಿಗಮದಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಂಡಿದ್ದರು ಎಂದು ನೆನಪಿಸಿದರು. ಲೋಕಸಭೆ ಚುನಾವಣೆಗೆ ನಿಗಮದ ಹಣ ಬಳಕೆಯಾಗಿದ್ದು, ಸದನದಲ್ಲಿ ಸಿಎಂ ನಾಗೇಂದ್ರ ಪರ ಸಮರ್ಥನೆ ಮಾಡಿಕೊಳ್ಳಲಿಲ್ಲ ಎಂದೂ ಆರೋಪಿಸಿದ ಅವರು, ನಾಗೇಂದ್ರ ರಾಜೀನಾಮೆಯನ್ನು ಡಿಕೆ ಶಿವಕುಮಾರ್ ಬಯಸಿದ್ದರಿಂದಲೇ ಸದನದಲ್ಲಿ ಯಾವುದೇ ಸಮರ್ಥನೆ ಮಾಡಿಕೊಳ್ಳಲಿಲ್ಲ ಎಂದು ಆರೋಪಿಸಿದರು.

ನಾಗೇಂದ್ರ ಅವರ ಕಣ್ಣೀರಿನ ಪ್ರತಿಕ್ರಿಯೆಗೆ ತಿರುಗೇಟು ನೀಡಿದ ಶ್ರೀರಾಮುಲು, “ನಾವೇನು ನಿಮ್ಮ ಮಂತ್ರಿ ಸ್ಥಾನ ಕಸಿದುಕೊಂಡೆವಾ? ತಪ್ಪು ಮಾಡಿ ರಾಜೀನಾಮೆ ಕೊಟ್ಟಿರಿ, ವಿಪಕ್ಷವಾಗಿ ಸಮುದಾಯಕ್ಕಾಗಿ ಹೋರಾಟ ಮಾಡಿದ್ದೇವೆ” ಎಂದರು. ನಾಗೇಂದ್ರ ‘ಮನುವಾದಿಗಳು’ ಎಂದು ಆಪಾದಿಸಿದ್ದಕ್ಕೆ ಪ್ರತಿಕ್ರಿಯಿಸಿ, 2013ರಲ್ಲಿ ನಾಗೇಂದ್ರ ಗೆದ್ದಾಗ ಇದೇ ‘ಮನುವಾದಿಗಳೇ’ ಜೊತೆಗಿದ್ದರು ಎಂದು ಪ್ರಶ್ನಿಸಿ, ಇಷ್ಟೊಂದು ಕಣ್ಣೀರು ಹಾಕುವ ಅಗತ್ಯವೇನಿತ್ತು ಎಂದು ಶ್ರೀರಾಮುಲು ಟೀಕಿಸಿದರು.

ಖರ್ಗೆ ಭಾಷಣ ಸ್ಥಳ ಶುದ್ಧೀಕರಣ ವಿವಾದ: ಬಿಜೆಪಿ ನಾಯಕರ ವಿರುದ್ಧ FIRಗೆ ಮೋದಿ ಆದೇಶಿಸಲಿ – ರಾಹುಲ್ ಗಾಂಧಿ ಆಗ್ರಹ

0

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ಸ್ಥಳದಲ್ಲಿ ಶುದ್ಧೀಕರಣ ನಡೆಸಿದ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪ್ರಧಾನಿ ಮೋದಿ ಆದೇಶಿಸಬೇಕು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿ, ಖರ್ಗೆ ಅವರ ಹಲ್ದ್ವಾನಿ ಭೇಟಿ ಪ್ರಸ್ತಾಪಿಸಿದರು.

ಖರ್ಗೆ ಅವರು ಭಾಷಣ ಮಾಡಿದ್ದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ‘ಶುದ್ಧೀಕರಣ’ ನಡೆಸಲಾಗಿದ್ದು, ಈ ಕುರಿತು ಪ್ರಧಾನಿ ಮಧ್ಯಪ್ರವೇಶಿಸಬೇಕು ಮತ್ತು ಈ ಕೃತ್ಯ ಎಸಗಿದವರ ವಿರುದ್ಧ ಎಫ್‌ಐಆರ್‌ಗೆ ಆದೇಶಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು. ಶುದ್ಧೀಕರಣ ಎಂಬುದು ಮೂಲಭೂತವಾಗಿ ಅಸ್ಪೃಶ್ಯತೆಯ ಮತ್ತೊಂದು ರೂಪವಾಗಿದ್ದು, ಸಂವಿಧಾನವೇ ಇದನ್ನು ನಿಷೇಧಿಸಿದೆ ಎಂದು ಅವರು ಹೇಳಿದರು.

ಇಂತಹ ಆಚರಣೆಗಳು ದಲಿತರನ್ನು ಅಶುದ್ಧರೆಂದು ಬಿಂಬಿಸುತ್ತವೆ ಎಂದ ರಾಹುಲ್, ಈ ರೀತಿಯ ಸಂವಿಧಾನ ವಿರೋಧಿ ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಿಗೇ ಇಂತಹ ಘಟನೆ ಸಂಭವಿಸುವುದಾದರೆ, ಸಾಮಾನ್ಯ ನಾಗರಿಕರ ವಿರುದ್ಧವೂ ಇಂತಹ ಘಟನೆಗಳು ನಡೆಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇಂದಿಗೂ ದಲಿತರು ತಾರತಮ್ಯ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಾವಿಗಳಿಂದ ನೀರು ಸೇದುವುದನ್ನು ನಿಷೇಧಿಸುವುದು ಮತ್ತು ಚಹಾ ಅಂಗಡಿಗಳಲ್ಲಿ ದಲಿತರಿಗೆ ಪ್ರತ್ಯೇಕ ಪೇಪರ್ ಕಪ್‌ಗಳನ್ನು ನೀಡುವಂತಹ ತಾರತಮ್ಯದ ಉದಾಹರಣೆಗಳನ್ನು ಪ್ರಸ್ತಾಪಿಸಿದರು. ಮದುವೆ ಮೆರವಣಿಗೆಯಲ್ಲಿ ಕುದುರೆ ಏರುವ ದಲಿತರ ಮೇಲೆ ಕಲ್ಲು ತೂರಾಟ ನಡೆಸುವ ಕಾರಣ ಅವರು ಹೆಲ್ಮೆಟ್ ಧರಿಸಬೇಕಾದ ಪರಿಸ್ಥಿತಿ ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಇದೆ ಎಂದು ಹೇಳಿದರು.

ಸಾಧನೆ ಮಾಡುವ ದಲಿತರ ವಿರುದ್ಧವೇ ಆಕ್ರಮಣಗಳು ನಡೆಯುತ್ತಿವೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಖರ್ಗೆ ಭಾಷಣ ಮಾಡಿದ ಸ್ಥಳದ ಶುದ್ಧೀಕರಣ ಕೃತ್ಯವನ್ನು ಬಿಜೆಪಿ-ಆರ್‌ಎಸ್‌ಎಸ್ ಜನರೇ ನಡೆಸಿದ್ದಾರೆ ಎಂದು ಆರೋಪಿಸಿದರು. ಇದೊಂದು ಕ್ರಿಮಿನಲ್ ಚಟುವಟಿಕೆ ಮಾತ್ರವಲ್ಲದೆ, ಅಸ್ಪೃಶ್ಯತೆಯನ್ನು ಮರುಜಾರಿಗೆ ತರುವ ಪ್ರಯತ್ನ ಎಂದೂ ಅವರು ಆಕ್ಷೇಪ ವ್ಯಕ್ತಪಡಿಸಿದರು.

‘ಅಸೂಯೆಗೆ ಮದ್ದಿಲ್ಲ, ಟೀಕೆ ಸಾಯುತ್ತೆ-ಕೆಲಸ ಉಳಿಯುತ್ತೆ’: ಹೆಚ್‌ಡಿಕೆ ವಿರುದ್ಧ ಡಿಕೆಶಿ ವಾಗ್ದಾಳಿ!

0

ಮೈಸೂರು: ರಾಜಕೀಯ ಲಾಭಕ್ಕಾಗಿ ಬಿಜೆಪಿ ನಿರಪರಾಧಿ ಬಿ. ನಾಗೇಂದ್ರ ಅವರನ್ನು ಬಲಿ ತೆಗೆದುಕೊಂಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ನಾಗೇಂದ್ರ ರಾಜೀನಾಮೆ ನೀಡಿದ ಬಳಿಕವೂ ಬಿಜೆಪಿ ಪಾದಯಾತ್ರೆ ನಡೆಸಲು ಮುಂದಾಗಿರುವುದು ರಾಜಕೀಯ ಉದ್ದೇಶದಿಂದ ಎಂದು ಅವರು ಟೀಕಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಯಾವುದೇ ತಪ್ಪು ಮಾಡದಿದ್ದರೂ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು. ನಾಗೇಂದ್ರ ರಾಜೀನಾಮೆ ನೀಡಿದ ಬಳಿಕವೂ ಬಿಜೆಪಿಯವರು ಪಾದಯಾತ್ರೆ ನಡೆಸುವುದಾದರೆ ನಡೆಸಲಿ. ಅವರಿಗೆ ರಾಜಕೀಯವೇ ಮುಖ್ಯವಾಗಿದ್ದು, ಅದಕ್ಕಾಗಿಯೇ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

‘ಯಾವ ಕಾರಣಕ್ಕಾಗಿ ನಾಗೇಂದ್ರ ರಾಜೀನಾಮೆ ಕೇಳಿದರು ಎಂಬ ನನ್ನ ಒಂದೇ ಪ್ರಶ್ನೆಗೆ ಬಿಜೆಪಿ ಇನ್ನೂ ಉತ್ತರ ನೀಡಿಲ್ಲ’ ಎಂದು ಡಿಕೆಶಿ ಪ್ರಶ್ನಿಸಿದರು.

ವಿಧಾನಸೌಧ ಮಾರಾಟ ಮಾಡುತ್ತಾರೆ ಎಂಬ ಹೆಚ್.ಡಿ. ಕುಮಾರಸ್ವಾಮಿ ಆರೋಪದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಯಾರು ಏನನ್ನು ಮಾರಾಟ ಮಾಡಲು ಹೊರಟಿದ್ದರು ಎಂಬುದನ್ನು ಬಿಚ್ಚಿಟ್ಟರೆ ಎಲ್ಲವೂ ಬಯಲಾಗಲಿದೆ ಎಂದರು. ಸದ್ಯ ತಾವು ಆ ವಿಚಾರದ ತಂಟೆಗೆ ಹೋಗುವುದಿಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ಅವರಿಗೆ ‘ಬಾಯಿ ಚಪಲ’ ಇದೆ. ಚಪಲಕ್ಕೆ ಮಾತನಾಡಿ ಅವರು ಖುಷಿಪಡಲಿ, ತಮ್ಮ ವಿರುದ್ಧ ಇನ್ನಷ್ಟು ಟೀಕೆ ಮಾಡಲಿ ಎಂದು ವ್ಯಂಗ್ಯವಾಡಿದ ಡಿ.ಕೆ. ಶಿವಕುಮಾರ್, ‘ಅಸೂಯೆಗೆ ಮದ್ದಿಲ್ಲ. ನಾನು ಮುಖ್ಯಮಂತ್ರಿ ಆಗಿರುವುದು ಕೆಲವರಿಗೆ ಅಸೂಯೆ ತಂದಿದೆ’ ಎಂದು ತಿರುಗೇಟು ನೀಡಿದರು.

ತಾವು ಮುಖ್ಯಮಂತ್ರಿ ಆಗಿರುವುದನ್ನು ಕುಮಾರಸ್ವಾಮಿ ಮಾತ್ರವಲ್ಲ, ಬಿಜೆಪಿ ಹಾಗೂ ಎನ್‌ಡಿಎ ಕೂಟಕ್ಕೂ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮ್ಮ ವಿರುದ್ಧ ಏನೇನು ಮಾತನಾಡುತ್ತಾರೋ ಮಾತನಾಡಲಿ ಎಂದು ಹೇಳಿದರು.

‘ಟೀಕೆಗಳು ಸಾಯುತ್ತವೆ, ಮಾಡಿದ ಕೆಲಸ ಉಳಿಯುತ್ತದೆ. ಇದನ್ನು ನಂಬಿದವನು ನಾನು’ ಎಂದು ಡಿಕೆಶಿ ಪ್ರತಿಕ್ರಿಯಿಸಿದರು.

ಹನೂರು ಶೂಟೌಟ್ ಪ್ರಕರಣದ ಕುರಿತು ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿ ಸರ್ಕಾರದ ಕೈ ಸೇರಿದೆ. ಸಂಪೂರ್ಣ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.

ಪ್ರಾಥಮಿಕ ತನಿಖಾ ವರದಿಯಲ್ಲಿ ಹಲವು ಅಂಶಗಳು ಉಲ್ಲೇಖವಾಗಿವೆ. ಗುಂಡಿನ ದಾಳಿ ಹತ್ತಿರದಿಂದ ನಡೆದಿರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪವಿದೆ. ಮೃತಪಟ್ಟವರ ಬಳಿ ಇದ್ದ ವಸ್ತುಗಳು ಹಾಗೂ ಅವರು ಕಾಡಿಗೆ ತೆರಳಿದ್ದ ಕಾರಣದ ಬಗ್ಗೆಯೂ ಮಾಹಿತಿ ಇದೆ. ಸಿಐಡಿ ತನಿಖೆ ಪೂರ್ಣಗೊಂಡ ಬಳಿಕ ಪ್ರಕರಣದ ಸಂಪೂರ್ಣ ವಿವರ ಬಹಿರಂಗವಾಗಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.