Home Blog

ವಿಜಯ್ ಕರ್ನಾಟಕ ಎಂಟ್ರಿಗೆ ಮಂಡ್ಯ ಆಕ್ರೋಶ! ಕಾವೇರಿ ವಿಚಾರಕ್ಕೆ ಬೀದಿಗಿಳಿದ ಕನ್ನಡಿಗರು

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ವಿವಾದಕ್ಕೆ ಕಾರಣವಾಗಿದ್ದು, ಮಂಡ್ಯದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ.

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಆಗಸ್ಟ್ 3ರಂದು ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ವಿಜಯ್ ವಿರುದ್ಧ ‘ಗೋ ಬ್ಯಾಕ್’ ಪೋಸ್ಟರ್‌ಗಳನ್ನು ಪ್ರದರ್ಶಿಸಿದ್ದಾರೆ.

ಪ್ರತಿಭಟನಾಕಾರರು ಟೀ ಕಾಯಿಸಿ, ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ಪದೇ ಪದೇ ಕ್ಯಾತೆ ತೆಗೆಯುತ್ತಿದೆ ಎಂದು ಆರೋಪಿಸಿದ ಅವರು, ಇದೀಗ ಮಾತುಕತೆಗಾಗಿ ಬರುತ್ತಿರುವುದನ್ನು ವಿರೋಧಿಸಿದ್ದಾರೆ.

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೂ ತಮಿಳುನಾಡು ಅಡ್ಡಿಪಡಿಸುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾವೇರಿ ಕೊಳ್ಳದ ರೈತರು ಹಾಗೂ ಜನರ ಬೇಡಿಕೆ ಸ್ಪಷ್ಟವಾಗಿದ್ದು, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಒತ್ತಾಯಿಸಿದ್ದಾರೆ.

ಸಿಡಬ್ಲ್ಯೂಎಂಎ ಆದೇಶ ಹಾಗೂ ವಿಜಯ್ ಅವರ ಭೇಟಿ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಇದೇ ವೇಳೆ ಹಾಸನದಲ್ಲೂ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಪ್ರತಿಭಟನೆಗೆ ಸಿದ್ಧತೆ ನಡೆದಿದೆ. ಹಾಸನ ನಗರದಲ್ಲಿ ಕರವೇ ನಾರಾಯಣಗೌಡ ಬಣ ಪ್ರತಿಭಟನೆಗೆ ಮುಂದಾಗಿದ್ದು, ಮತ್ತೊಂದೆಡೆ ಹೇಮಾವತಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಜಲಾಶಯಕ್ಕೆ ಮುತ್ತಿಗೆ ಹಾಕಲು ಸಜ್ಜಾಗಿವೆ.

ರೈತರ ಆಕ್ರೋಶದ ನಡುವೆ ರಾಜ್ಯ ಸರ್ಕಾರ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸದಿರಲು ನಿರ್ಧಾರ ಕೈಗೊಳ್ಳುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

ಚಿನ್ನ ಖರೀದಿಸುವವರಿಗೆ ಗುಡ್‌ನ್ಯೂಸ್; ದರದಲ್ಲಿ ಇಳಿಕೆ, ಇಂದಿನ ರೇಟ್ ಎಷ್ಟು ಗೊತ್ತಾ?

0

ನವದೆಹಲಿ: ಚಿನ್ನ ಖರೀದಿದಾರರಿಗೆ ಸ್ವಲ್ಪ ನೆಮ್ಮದಿ ಸುದ್ದಿ ಸಿಕ್ಕಿದೆ.

ಈ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದ್ದು, ಪ್ರತಿ ಗ್ರಾಮ್‌ಗೆ ಸುಮಾರು ₹35ರಷ್ಟು ಕಡಿಮೆಯಾಗಿದೆ.

ಕಳೆದ ಕೆಲವು ತಿಂಗಳಿಂದ ಚಿನ್ನದ ದರದಲ್ಲಿ ನಿರಂತರ ಏರಿಳಿತ ಮುಂದುವರಿದಿದ್ದು, ಇದೀಗ ಮತ್ತೆ ಬೆಲೆಯಲ್ಲಿ ಸಣ್ಣ ಮಟ್ಟಿನ ಬದಲಾವಣೆ ಕಂಡುಬಂದಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,32,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,44,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,32,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 23,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,422 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,220 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,816 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,422 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,220 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ.

ಕರ್ನಾಟಕದ ಜಲಾಶಯಗಳಿಗೆ ಜೀವಕಳೆ; ಹೇಮಾವತಿ ಸೇರಿ ಪ್ರಮುಖ ಡ್ಯಾಂಗಳಲ್ಲಿ ನೀರಿನ ಮಟ್ಟ ಏರಿಕೆ

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಸುರಿದ ಮಳೆಯಿಂದ ಪ್ರಮುಖ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ರೈತರು ಹಾಗೂ ಜನರಲ್ಲಿ ಸಂತಸ ಮೂಡಿದೆ.

ಬರಗಾಲದ ಆತಂಕದಲ್ಲಿದ್ದ ಹಾಸನ ಜಿಲ್ಲೆಯ ಗೊರೂರು ಹೇಮಾವತಿ ಜಲಾಶಯಕ್ಕೆ ಕಳೆದ ಒಂದೂವರೆ ತಿಂಗಳಲ್ಲಿ ಬರೋಬ್ಬರಿ 11 ಟಿಎಂಸಿ ನೀರು ಹರಿದು ಬಂದಿದೆ. ಜೂನ್ ಆರಂಭಕ್ಕೆ ಹೋಲಿಸಿದರೆ ಜಲಾಶಯದ ನೀರಿನ ಮಟ್ಟ ಸುಮಾರು 19 ಅಡಿಗಳಷ್ಟು ಏರಿಕೆಯಾಗಿದೆ.

ಕಬಿನಿ ಜಲಾಶಯದಲ್ಲಿ ಒಳಹರಿವು ಹೆಚ್ಚಳ:

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೂ ಒಳಹರಿವು ಹೆಚ್ಚಾಗಿದೆ.

ಪ್ರಸ್ತುತ ಜಲಾಶಯದ ನೀರಿನ ಮಟ್ಟ 80.08 ಅಡಿ ಇದ್ದು, ಒಟ್ಟು 17.09 ಟಿಎಂಸಿ ನೀರು ಸಂಗ್ರಹವಾಗಿದೆ. ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ 7.28 ಟಿಎಂಸಿ ಇದೆ.

ಜಲಾಶಯಕ್ಕೆ 11,747 ಕ್ಯೂಸೆಕ್ ಒಳಹರಿವು ಇದ್ದು, ನದಿಗೆ 500 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಕಬಿನಿ ಜಲಾಶಯ ವ್ಯಾಪ್ತಿಯಲ್ಲಿ 60 ಮಿ.ಮೀ ಮಳೆಯಾಗಿದೆ.

ಆಲಮಟ್ಟಿ ಜಲಾಶಯ ಭರ್ತಿ ಹಂತಕ್ಕೆ:

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ) ಜಲಾಶಯ ಕೂಡ ಭರ್ತಿ ಹಂತ ತಲುಪಿದೆ.

ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಇದ್ದು, ಸದ್ಯ ನೀರಿನ ಮಟ್ಟ 519.00 ಮೀಟರ್ ಇದೆ.

ಆಲಮಟ್ಟಿ ಜಲಾಶಯಕ್ಕೆ 92,500 ಕ್ಯೂಸೆಕ್ ಒಳಹರಿವು ಇದ್ದು, ನದಿಗೆ 1,11,308 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

ತುಂಗಾ ಡ್ಯಾಂ ಸಂಪೂರ್ಣ ಭರ್ತಿ:

ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.

ಡ್ಯಾಂನ 22 ಕ್ರಸ್ಟ್ ಗೇಟ್‌ಗಳನ್ನು ತೆರೆಯಲಾಗಿದ್ದು, 55,000 ಕ್ಯೂಸೆಕ್ ನೀರನ್ನು ತುಂಗಾ ನದಿಗೆ ಹರಿಬಿಡಲಾಗಿದೆ.

ತುಂಗಾ ಡ್ಯಾಂ ಭರ್ತಿಯಾಗಿರುವುದು ಶಿವಮೊಗ್ಗ ಸೇರಿದಂತೆ ದಾವಣಗೆರೆ, ಬಳ್ಳಾರಿ, ಹಾವೇರಿ ಹಾಗೂ ಗದಗ ಜಿಲ್ಲೆಯ ರೈತರಿಗೆ ದೊಡ್ಡ ಮಟ್ಟದ ನೆಮ್ಮದಿ ತಂದಿದೆ.

ಹೇಮಾವತಿ ಜಲಾಶಯದಲ್ಲಿ ನೀರಿನ ಸಂಗ್ರಹ ಏರಿಕೆ:

ಗೊರೂರು ಹೇಮಾವತಿ ಜಲಾಶಯಕ್ಕೆ ಸದ್ಯ 11,686 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ಜಲಾಶಯದ ನೀರಿನ ಮಟ್ಟ 2,890 ಅಡಿಯಿಂದ 2,909 ಅಡಿಗೆ ಏರಿಕೆಯಾಗಿದೆ. ಒಟ್ಟು 37 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 25.986 ಟಿಎಂಸಿ ನೀರು ಸಂಗ್ರಹವಾಗಿದ್ದು, ಶೇ.65ರಷ್ಟು ಭರ್ತಿಯಾಗಿದೆ.

ಒಟ್ಟಾರೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ಕೃಷಿ ಚಟುವಟಿಕೆಗಳಿಗೆ ಹಾಗೂ ಕುಡಿಯುವ ನೀರಿನ ನಿರ್ವಹಣೆಗೆ ಅನುಕೂಲವಾಗುವ ನಿರೀಕ್ಷೆ ಮೂಡಿಸಿದೆ.

ವೈಯಕ್ತಿಕ ದಾಖಲೆಗಿಂತ ಟ್ರೋಫಿ ಮುಖ್ಯ: ಮನದಾಳದ ಮಾತು ಹಂಚಿಕೊಂಡ ಕೃನಾಲ್ ಪಾಂಡ್ಯ

0

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅನುಭವಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಇತ್ತೀಚೆಗೆ ಆರ್‌ಸಿಬಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿ ತಮ್ಮ ಜೀವನ, ಕ್ರಿಕೆಟ್ ಪಯಣ ಮತ್ತು ಯಶಸ್ಸಿನ ಕುರಿತಾದ ಹಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಯಶಸ್ಸು ಮತ್ತು ಸೋಲನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಅವರು ಹೇಳಿರುವ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸಂಭಾಷಣೆಯ ವೇಳೆ ಮಾತನಾಡಿದ ಕೃನಾಲ್, “ನಾವು ಸೋತಾಗ ಅಥವಾ ಜೀವನದಲ್ಲಿ ಕಷ್ಟದ ಪರಿಸ್ಥಿತಿಯನ್ನು ಎದುರಿಸಿದಾಗ ಅದರಿಂದ ಹೊರಬರುವುದು ಹೇಗೆ ಎಂದು ಹಲವರು ಸಲಹೆ ನೀಡುತ್ತಾರೆ. ಆದರೆ, ದೊಡ್ಡ ಯಶಸ್ಸು ಸಿಕ್ಕಾಗ ಅದನ್ನು ಹೇಗೆ ನಿಭಾಯಿಸಬೇಕು ಎಂದು ಯಾರೂ ಹೇಳುವುದಿಲ್ಲ.

ಯಶಸ್ಸನ್ನು ಜೀರ್ಣಿಸಿಕೊಳ್ಳುವುದು ಕೂಡ ದೊಡ್ಡ ಸವಾಲು. ಎಷ್ಟೇ ಎತ್ತರಕ್ಕೆ ಬೆಳೆದರೂ ವಿನಮ್ರತೆಯನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ” ಎಂದು ಹೇಳಿದರು. ತಮ್ಮ ಕ್ರಿಕೆಟ್ ಬದುಕಿನ ಗುರಿಯ ಬಗ್ಗೆ ಮಾತನಾಡಿದ ಅವರು, ವೈಯಕ್ತಿಕ ಸಾಧನೆಗಿಂತ ತಂಡದ ಯಶಸ್ಸಿಗೆ ಹೆಚ್ಚಿನ ಮಹತ್ವ ನೀಡುವುದಾಗಿ ತಿಳಿಸಿದರು.

“ನಾನು ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಎಷ್ಟು ರನ್ ಗಳಿಸಿದ್ದೇನೆ ಎಂಬುದಕ್ಕಿಂತ, ನನ್ನ ತಂಡ ಎಷ್ಟು ಟ್ರೋಫಿಗಳನ್ನು ಗೆದ್ದಿದೆ ಎಂಬುದೇ ನನಗೆ ಹೆಮ್ಮೆ ತರುತ್ತದೆ. ತಂಡದ ಗೆಲುವು ಯಾವಾಗಲೂ ನನ್ನ ಮೊದಲ ಆದ್ಯತೆ” ಎಂದು ಕೃನಾಲ್ ಹೇಳಿದ್ದಾರೆ.

ದೊಡ್ಡ ಪಂದ್ಯಗಳ ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ದೊಡ್ಡ ವೇದಿಕೆಗಳು ನನಗಾಗಿಯೇ ಸೃಷ್ಟಿಯಾಗಿವೆ ಎಂದು ನಾನು ನಂಬುತ್ತೇನೆ. ಒತ್ತಡದ ಸಂದರ್ಭದಲ್ಲೂ ಶಾಂತವಾಗಿ ಇರುವುದು ಹಾಗೂ ಪ್ರಸ್ತುತ ಕ್ಷಣದ ಮೇಲೆ ಗಮನ ಕೇಂದ್ರೀಕರಿಸುವುದು ಯಶಸ್ಸಿನ ಗುಟ್ಟು. ಹಿರಿಯರ ಆಶೀರ್ವಾದ ಮತ್ತು ದೇವರ ಕೃಪೆಯೇ ನನ್ನನ್ನು ಇಲ್ಲಿಯವರೆಗೆ ತಂದಿದೆ” ಎಂದರು.

ತಮ್ಮ ಸ್ಪರ್ಧಾತ್ಮಕ ಮನೋಭಾವದ ಬಗ್ಗೆ ಮಾತನಾಡಿದ ಕೃನಾಲ್, ಬಾಲ್ಯದಲ್ಲಿ ತಂದೆಯಿಂದ ಕಲಿತ ಶಿಸ್ತು ಮತ್ತು ಛಲವೇ ಇಂದು ತಮ್ಮ ವ್ಯಕ್ತಿತ್ವವನ್ನು ರೂಪಿಸಿದೆ ಎಂದು ನೆನಪಿಸಿಕೊಂಡರು. ಬಾಲ್ಯದ ಕಠಿಣ ಪರಿಶ್ರಮವೇ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.

ಕೃನಾಲ್ ಪಾಂಡ್ಯ ಅವರ ಈ ಮಾತುಗಳು ಕೇವಲ ಕ್ರಿಕೆಟಿಗರಿಗೆ ಮಾತ್ರವಲ್ಲದೆ, ಜೀವನದಲ್ಲಿ ಯಶಸ್ಸಿನ ಕನಸು ಕಾಣುವ ಪ್ರತಿಯೊಬ್ಬ ಯುವಕರಿಗೂ ಪ್ರೇರಣೆಯ ಸಂದೇಶವಾಗಿದೆ. ಯಶಸ್ಸು ಬಂದಾಗ ಅಹಂಕಾರ ಪಡದೆ, ಸೋಲು ಎದುರಾದಾಗ ಆತ್ಮವಿಶ್ವಾಸ ಕಳೆದುಕೊಳ್ಳದೆ ಮುನ್ನಡೆಯುವುದೇ ನಿಜವಾದ ಸಾಧನೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

ರಾಯಚೂರಿಗೆ ಪ್ರವಾಹ ಭೀತಿ; ಕಾಡ್ಲೂರು ದೇವಸ್ಥಾನ ಜಲಾವೃತ, ನದಿ ಪಾತ್ರದ ಜನರಿಗೆ ಎಚ್ಚರಿಕೆ

ರಾಯಚೂರು: ನಾರಾಯಣಪುರ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದೆ.

ರಾಯಚೂರು ತಾಲೂಕಿನ ಕಾಡ್ಲೂರು ಗ್ರಾಮದ ನದಿ ದಂಡೆಯಲ್ಲಿರುವ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನ ಜಲಾವೃತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದೇವಸ್ಥಾನಕ್ಕೆ ಭಕ್ತರು ತೆರಳದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಕೃಷ್ಣಾ ನದಿಯ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಜಲಾಶಯ ಭರ್ತಿಯಾಗಲು ಇನ್ನೂ ಸುಮಾರು 4 ಟಿಎಂಸಿ ನೀರು ಮಾತ್ರ ಬಾಕಿ ಉಳಿದಿದೆ.

ಸದ್ಯ ನಾರಾಯಣಪುರ ಜಲಾಶಯಕ್ಕೆ 1.1 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯದಿಂದ ಕೃಷ್ಣಾ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದರೆ ನಾರಾಯಣಪುರ ಜಲಾಶಯದ ಹೊರಹರಿವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗುವ ಹಂತ ತಲುಪಿದೆ. ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾದರೆ ರಾಯಚೂರು, ಲಿಂಗಸುಗೂರು ಹಾಗೂ ದೇವದುರ್ಗ ತಾಲೂಕುಗಳ ಹಲವು ಸೇತುವೆಗಳು ಮುಳುಗುವ ಸಾಧ್ಯತೆ ಇದೆ.

ಕೃಷ್ಣಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಹಾಗೂ ನದಿ ಬಳಿ ತೆರಳದಂತೆ ಜಿಲ್ಲಾಡಳಿತ ಮನವಿ ಮಾಡಿದೆ.

‘ಪೆಳ್ಳಿ ಚೂಪುಲು’ಗೆ 10 ವರ್ಷ: ಮೊದಲ ಗೆಲುವು ನೆನೆದು ಮನದಾಳ ಬಿಚ್ಚಿಟ್ಟ ವಿಜಯ್ ದೇವರಕೊಂಡ

ಹೈದರಾಬಾದ್: ಸ್ಟಾರ್ ನಟನಾಗಿ ಬೆಳೆಯುವ ಮೊದಲು ಕನಸು ಕಂಡ ಯುವಕನಿಂದ ಇಂದಿನ ಸೂಪರ್‌ಸ್ಟಾರ್‌ವರೆಗೆ ಸಾಗಿದ ಹತ್ತು ವರ್ಷದ ಪಯಣವನ್ನು ವಿಜಯ್ ದೇವರಕೊಂಡ ಭಾವುಕರಾಗಿ ನೆನಪಿಸಿಕೊಂಡಿದ್ದಾರೆ. ತಮ್ಮ ಜೀವನವನ್ನೇ ಬದಲಿಸಿದ ‘ಪೆಳ್ಳಿ ಚೂಪುಲು’ ಸಿನಿಮಾ ಬಿಡುಗಡೆಯಾಗಿ ದಶಕ ಪೂರೈಸಿದ ಹಿನ್ನೆಲೆ, ಹಳೆಯ ನೆನಪುಗಳನ್ನು ಹಂಚಿಕೊಂಡು ಅಭಿಮಾನಿಗಳು ಹಾಗೂ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

‘ಪೆಳ್ಳಿ ಚೂಪುಲು’ ಚಿತ್ರದ ಶೂಟಿಂಗ್ ವೇಳೆ ಸೆರೆಹಿಡಿದ ಅಪರೂಪದ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿರುವ ವಿಜಯ್, ಹತ್ತು ವರ್ಷಗಳು ಕ್ಷಣಾರ್ಧದಲ್ಲಿ ಕಳೆದುಹೋಗಿವೆ ಎಂದು ಬರೆದುಕೊಂಡಿದ್ದಾರೆ. ಅಂದು ಪ್ರೇಕ್ಷಕರು ನೀಡಿದ ಪ್ರೋತ್ಸಾಹವೇ ತಮ್ಮ ವೃತ್ತಿಜೀವನದ ಭದ್ರ ಅಡಿಪಾಯವಾಗಿದ್ದು, ಆ ಪ್ರೀತಿಗೆ ಎಂದೆಂದಿಗೂ ಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.

ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿಗಳು ಬಂದಿದ್ದನ್ನು ಹೆಮ್ಮೆಯಿಂದ ಉಲ್ಲೇಖಿಸಿರುವ ಅವರು, ನಿರ್ದೇಶಕ ತರುಣ್ ಭಾಸ್ಕರ್ ಅವರನ್ನು ವಿಶೇಷವಾಗಿ ನೆನೆದಿದ್ದಾರೆ. “ಅವರ ಜೊತೆ ಕೆಲಸ ಮಾಡಿದ ಅನುಭವ ನನ್ನ ಬದುಕಿನ ದೊಡ್ಡ ಪಾಠ. ಆಗಿದ್ದ ಮುಗ್ಧತೆ ಈಗಿಲ್ಲ. ಈಗ ಪ್ರತಿಯೊಂದು ಹೆಜ್ಜೆಯಲ್ಲೂ ಜವಾಬ್ದಾರಿಯ ತೂಕ ಹೆಚ್ಚಾಗಿದೆ” ಎಂದು ವಿಜಯ್ ತಮ್ಮ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

‘ಪೆಳ್ಳಿ ಚೂಪುಲು’ ಚಿತ್ರದ ಯಶಸ್ಸೇ ವಿಜಯ್ ದೇವರಕೊಂಡ ಅವರನ್ನು ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಾಯಕನಾಗಿ ಸ್ಥಾಪಿಸಿತು. ನಂತರ ‘ಅರ್ಜುನ್ ರೆಡ್ಡಿ’ ಹಾಗೂ ‘ಗೀತ ಗೋವಿಂದಂ’ ಮೂಲಕ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದರು. ಸದ್ಯ ಕೀರ್ತಿ ಸುರೇಶ್ ಅಭಿನಯದ ‘ರೌಡಿ ಜನಾರ್ದನ’, ರಶ್ಮಿಕಾ ಮಂದಣ್ಣ ಜೊತೆಗಿನ ‘ರಣಬಾಲಿ’ ಹಾಗೂ ನಿರ್ದೇಶಕ ಶೌರ್ಯುವ್ ಅವರ ಹೊಸ ಪ್ರಾಜೆಕ್ಟ್‌ಗಳಲ್ಲಿ ವಿಜಯ್ ದೇವರಕೊಂಡ ನಿರತರಾಗಿದ್ದಾರೆ.

ಚೆನ್ನಮ್ಮ ದೇವೇಗೌಡರ ನಿಧನದಿಂದ ಮುಂದೂಡಿದ್ದ ಜೆಡಿಎಸ್ ಪಾದಯಾತ್ರೆಗೆ ಹೊಸ ದಿನಾಂಕ ಘೋಷಣೆ!

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಹೊಸ ದಿನಾಂಕ ನಿಗದಿಯಾಗಿದೆ.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಪಾದಯಾತ್ರೆಯ ದಿನಾಂಕವನ್ನು ಘೋಷಿಸಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಪಾದಯಾತ್ರೆಯನ್ನು ಇದೀಗ ಆಗಸ್ಟ್ 9, 10 ಮತ್ತು 11ರಂದು ನಡೆಸಲು ತೀರ್ಮಾನಿಸಲಾಗಿದೆ.

ಆಗಸ್ಟ್ 9ರಂದು ರಾಮನಗರ ಜಿಲ್ಲೆಯ ಭೈರಮಂಗಲದಿಂದ ಪಾದಯಾತ್ರೆ ಆರಂಭವಾಗಲಿದ್ದು, ಆಗಸ್ಟ್ 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದೆ. ಅದೇ ದಿನ ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್ ಬೃಹತ್ ಸಮಾವೇಶ ಆಯೋಜಿಸಿದೆ.

ಪಾದಯಾತ್ರೆಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಮೂರು ದಿನಗಳ ಹೋರಾಟದಲ್ಲಿ ಒಂದು ದಿನ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಕೂಡ ಭಾಗಿಯಾಗಲಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.

ಬಿಡದಿ ಟೌನ್‌ಶಿಪ್ ಯೋಜನೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಒತ್ತಡ ಹೆಚ್ಚಿಸುವ ಉದ್ದೇಶದಿಂದ ಜೆಡಿಎಸ್ ಈ ಪಾದಯಾತ್ರೆ ನಡೆಸುತ್ತಿದೆ. ಈ ಬಾರಿ ದೋಸ್ತಿ ಪಕ್ಷ ಬಿಜೆಪಿಯನ್ನು ದೂರವಿಟ್ಟು ಜೆಡಿಎಸ್ ಪ್ರತ್ಯೇಕವಾಗಿ ಹೋರಾಟ ನಡೆಸಲು ನಿರ್ಧರಿಸಿದೆ.

ಪಾದಯಾತ್ರೆ ಬಳಿಕ ಆಗಸ್ಟ್ 14ರಂದು ಜೆಡಿಎಸ್ ವತಿಯಿಂದ ‘ವಿಧಾನಸೌಧ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧದವರೆಗೆ ಈ ಹೋರಾಟ ನಡೆಯಲಿದೆ.

ತಂದೆ ವಿಜಯ್ ಜೊತೆ ಕನಸಿನ ಸಿನಿಮಾ! ಮೊದಲ ಸಂದರ್ಶನದಲ್ಲೇ ಮನದಾಸೆ ಬಿಚ್ಚಿಟ್ಟ ಜೇಸನ್ ಸಂಜಯ್

ಚೆನ್ನೈ: ದಳಪತಿ ವಿಜಯ್ ಅವರ ಪುತ್ರ ಎಂಬ ಗುರುತನ್ನು ಮೀರಿ ಸ್ವಂತ ಹೆಜ್ಜೆ ಇಡಲು ಮುಂದಾಗಿರುವ ಜೇಸನ್ ಸಂಜಯ್, ನಿರ್ದೇಶಕರಾಗಿ ಚಿತ್ರರಂಗಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಸುದೀಪ್ ಕಿಶನ್ ನಟನೆಯ ‘ಸಿಗ್ಮಾ’ ಚಿತ್ರದ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಿರುವ ಅವರು, ಮೊದಲ ಸಂದರ್ಶನದಲ್ಲೇ ತಂದೆ ವಿಜಯ್ ಜೊತೆಗಿನ ಕನಸಿನ ಸಿನಿಮಾ, ತಮ್ಮ ವೃತ್ತಿಜೀವನದ ಆಯ್ಕೆ ಹಾಗೂ ವಿದೇಶದಲ್ಲಿ ಪಡೆದ ಅನುಭವಗಳ ಬಗ್ಗೆ ಮನಮುಟ್ಟುವಂತೆ ಮಾತನಾಡಿದ್ದಾರೆ.

ಹಾಲಿವುಡ್‌ನ ಆಕ್ಷನ್ ಸೂಪರ್‌ಸ್ಟಾರ್ ಜೇಸನ್ ಸ್ಟೇಥಮ್ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ಯಾವ ತಮಿಳು ನಟನನ್ನು ಆಯ್ಕೆ ಮಾಡುತ್ತೀರಿ ಎಂಬ ಪ್ರಶ್ನೆಗೆ ಜೇಸನ್ ಸಂಜಯ್, “ನನ್ನ ತಂದೆ ವಿಜಯ್ ಅವರನ್ನೇ ಆಯ್ಕೆ ಮಾಡುತ್ತೇನೆ. ಅವರಿಬ್ಬರ ಜೋಡಿ ಪರದೆ ಮೇಲೆ ಅದ್ಭುತವಾಗಿ ಮೂಡಿಬರಲಿದೆ” ಎಂದು ಆತ್ಮವಿಶ್ವಾಸದಿಂದ ಉತ್ತರಿಸಿದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗಬಹುದು ಎಂದು ಅವರು ನಗುತ್ತಲೇ ಪ್ರತಿಕ್ರಿಯಿಸಿದರು.

ನಟನಾಗಿ ಸುಲಭವಾಗಿ ಚಿತ್ರರಂಗಕ್ಕೆ ಕಾಲಿಡುವ ಅವಕಾಶ ಇದ್ದರೂ, ನಿರ್ದೇಶನವೇ ತಮ್ಮ ಗುರಿಯಾಗಿತ್ತು ಎಂದು ಜೇಸನ್ ಸ್ಪಷ್ಟಪಡಿಸಿದರು. ಬಾಲ್ಯದಲ್ಲೇ ಸಿನಿಮಾ ಸೆಟ್‌ಗಳಲ್ಲಿ ಬೆಳೆದ ಅನುಭವ, ನಂತರ ಕಥೆ ಬರವಣಿಗೆಯ ಮೇಲಿನ ಆಸಕ್ತಿ ಮತ್ತು ಅದಕ್ಕಾಗಿ ಕೆನಡಾದಲ್ಲಿ ಪಡೆದ ವೃತ್ತಿಪರ ತರಬೇತಿ ತಮ್ಮ ಬದುಕಿನ ದಿಕ್ಕನ್ನೇ ಬದಲಿಸಿತು ಎಂದು ಹೇಳಿದರು.

ಕೆನಡಾದಲ್ಲಿ ಓದುತ್ತಿದ್ದ ವೇಳೆ ಜಾಹೀರಾತು ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದು, ಸ್ಟಾರ್ಟ್‌ಅಪ್ ಕಂಪನಿಗಳ ಜಾಹೀರಾತುಗಳನ್ನು ನಿರ್ದೇಶಿಸಿದ್ದು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿತು ಎಂದರು. ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದ ಅನುಭವ, ಜಾಗತಿಕ ಸಿನಿಮಾಗಳ ಅಧ್ಯಯನ ಹಾಗೂ ಮಲಯಾಳಂ ನಟ ನಿವಿನ್ ಪೌಲಿ ಅವರನ್ನು ಭೇಟಿಯಾದ ಕ್ಷಣ ತಮ್ಮ ಸಿನಿ ಪಯಣದ ಅಮೂಲ್ಯ ನೆನಪುಗಳಾಗಿವೆ ಎಂದು ಜೇಸನ್ ಸಂಜಯ್ ತಿಳಿಸಿದ್ದಾರೆ.

ಚಿತ್ರದುರ್ಗದಲ್ಲಿ ಜೋಡಿ ಹೆಣ್ಣು ಚಿರತೆಗಳ ಅನುಮಾನಾಸ್ಪದ ಸಾವು; ಸಾವಿನ ಕಾರಣ ನಿಗೂಢ!?

ಚಿತ್ರದುರ್ಗ: ಜಿಲ್ಲೆಯ ಸಿರಿಗೆರೆ ಸಮೀಪದ ಸಿಡಿಗೆರೆ ಹೋಬಳಿಯ ಜಮ್ಮೇನಹಳ್ಳಿ ಗ್ರಾಮದಲ್ಲಿ ಜೋಡಿ ಹೆಣ್ಣು ಚಿರತೆಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ಗ್ರಾಮದ ಜಮೀನೊಂದರಲ್ಲಿ ಎರಡು ಹೆಣ್ಣು ಚಿರತೆಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಜಮೀನಿಗೆ ತೆರಳಿದ್ದ ರೈತರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಬಳಿಕ ಅರಣ್ಯಾಧಿಕಾರಿ ರಾಮಚಂದ್ರಪ್ಪ ನೇತೃತ್ವದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿರತೆಗಳ ಸಾವು ವಿಷಪ್ರಾಶನ, ವಿದ್ಯುತ್ ಸ್ಪರ್ಶ ಅಥವಾ ಇತರೆ ಕಾರಣಗಳಿಂದ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಚಿರತೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಗತ್ಯ ಮಾದರಿಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಪ್ರಯೋಗಾಲಯದ ವರದಿ ಬಂದ ಬಳಿಕವೇ ಚಿರತೆಗಳ ಸಾವಿನ ನಿಖರ ಕಾರಣ ತಿಳಿದುಬರಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವನ್ಯಜೀವಿಗಳ ಸಂರಕ್ಷಣೆಗೆ ಇಲಾಖೆ ಹೆಚ್ಚಿನ ನಿಗಾ ವಹಿಸಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಗತ್ಯವಿರುವ ಪ್ರದೇಶಗಳಲ್ಲಿ ಕ್ಯಾಮೆರಾ ಟ್ರ್ಯಾಪ್ ಅಳವಡಿಸುವ ಮೂಲಕ ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಧಿವಿಜ್ಞಾನ ವರದಿ ಬಳಿಕ ಈ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಬಹಿರಂಗವಾಗುವ ನಿರೀಕ್ಷೆಯಿದೆ.

ನಾಲಿಗೆಯ ಬಣ್ಣವೇ ನಿಮ್ಮ ಆರೋಗ್ಯದ ಕನ್ನಡಿ! ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಸಮಸ್ಯೆ ಗ್ಯಾರಂಟಿ

0

ನಾಲಿಗೆ ಕೇವಲ ಆಹಾರದ ರುಚಿಯನ್ನು ತಿಳಿಯುವ ಅಂಗವಷ್ಟೇ ಅಲ್ಲ, ದೇಹದ ಆರೋಗ್ಯದ ಸ್ಥಿತಿಯನ್ನು ಸೂಚಿಸುವ ಪ್ರಮುಖ ಭಾಗವೂ ಹೌದು. ಸಾಮಾನ್ಯವಾಗಿ ಆರೋಗ್ಯಕರ ನಾಲಿಗೆ ತಿಳಿ ಗುಲಾಬಿ ಬಣ್ಣದಲ್ಲಿದ್ದು, ಅದರ ಮೇಲ್ಮೈ ಸ್ವಚ್ಛವಾಗಿರುತ್ತದೆ. ಆದರೆ ನಾಲಿಗೆಯ ಬಣ್ಣ, ಮೇಲಿನ ಪದರ, ನೋವು ಅಥವಾ ಉರಿ ಕಾಣಿಸಿಕೊಂಡರೆ ಅದು ಕೆಲವು ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ನಾಲಿಗೆಯ ಮೇಲೆ ಬಿಳಿ ಪದರ ಕಾಣಿಸಿಕೊಳ್ಳುವುದು ಬಾಯಿಯ ಸ್ವಚ್ಛತೆ ಸರಿಯಾಗಿ ಇಲ್ಲದಿರುವುದು ಅಥವಾ ಶಿಲೀಂಧ್ರ ಹಾಗೂ ಇತರ ಸೋಂಕುಗಳ ಲಕ್ಷಣವಾಗಿರಬಹುದು. ಇದೇ ವೇಳೆ ನಾಲಿಗೆ ಅತಿಯಾಗಿ ಕೆಂಪು ಬಣ್ಣಕ್ಕೆ ತಿರುಗಿದ್ದರೆ ವಿಟಮಿನ್ ಬಿ12, ಫೋಲೇಟ್ ಅಥವಾ ಕಬ್ಬಿಣದ ಕೊರತೆಯ ಸಂಕೇತವಾಗಿರಬಹುದು.

ಇನ್ನು ನಾಲಿಗೆಯಲ್ಲಿ ನೋವು ಅಥವಾ ಉರಿ ಕಾಣಿಸಿಕೊಳ್ಳಲು ಬಿಸಿ ಆಹಾರ ಸೇವನೆ, ಬಾಯಿಯ ಹುಣ್ಣು, ಅಲರ್ಜಿ ಅಥವಾ ಸೋಂಕು ಕಾರಣವಾಗಬಹುದು. ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ನಾಲಿಗೆಯ ಮೇಲ್ಮೈಯಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿರುವ ಸಾಧ್ಯತೆಯೂ ಇರುತ್ತದೆ.

ತಜ್ಞರ ಪ್ರಕಾರ, ನಾಲಿಗೆಯ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಹಲ್ಲುಜ್ಜುವಾಗ ಟಂಗ್ ಕ್ಲೀನರ್ ಅಥವಾ ಮೃದುವಾದ ಬ್ರಷ್ ಬಳಸಿ ನಾಲಿಗೆಯನ್ನು ಸ್ವಚ್ಛಗೊಳಿಸಬೇಕು. ದಿನವಿಡೀ ಸಾಕಷ್ಟು ನೀರು ಕುಡಿಯುವುದು, ಧೂಮಪಾನ ಮತ್ತು ತಂಬಾಕು ಉತ್ಪನ್ನಗಳಿಂದ ದೂರವಿರುವುದು, ಪೌಷ್ಟಿಕ ಆಹಾರ ಸೇವಿಸುವುದು ಹಾಗೂ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವ ಅಭ್ಯಾಸ ಬೆಳೆಸಿಕೊಳ್ಳುವುದು ಬಾಯಿಯ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ.

ನಾಲಿಗೆಯ ಬಣ್ಣ ಅಥವಾ ಸ್ಥಿತಿಯಲ್ಲಿ ಬದಲಾವಣೆಗಳು ದೀರ್ಘಕಾಲ ಮುಂದುವರಿದರೆ ಅಥವಾ ನೋವು, ಉರಿ, ಗಾಯಗಳು ಗುಣವಾಗದಿದ್ದರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವ ಬದಲು ದಂತ ವೈದ್ಯರು ಅಥವಾ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ.