Home Blog

ಸೋಮವಾರ ಬಿಲ್ವಪತ್ರೆ ಕೀಳಬಹುದಾ? ಶಿವಪೂಜೆ ಮಾಡುವವರು ತಿಳಿಯಲೇಬೇಕಾದ ಮಹತ್ವದ ನಿಯಮಗಳು

0

ಶಿವಪೂಜೆಯಲ್ಲಿ ಬಿಲ್ವಪತ್ರೆ ಅಥವಾ ಬೇಲ್ಪತ್ರೆಗೆ ಅತ್ಯಂತ ವಿಶೇಷವಾದ ಸ್ಥಾನವಿದೆ.

ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಭಗವಾನ್ ಶಿವನು ಪ್ರಸನ್ನನಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ.

ಆದರೆ ಶಿವ ಮಹಾಪುರಾಣದ ಪ್ರಕಾರ ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ಹೇಳಲಾಗಿದೆ. ಸರಿಯಾದ ವಿಧಾನದ ಮೂಲಕ ಬಿಲ್ವಪತ್ರೆ ಅರ್ಪಿಸಿದರೆ ಪೂಜೆಯ ಸಂಪೂರ್ಣ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಸೋಮವಾರ, ಚತುರ್ದಶಿಯಂದು ಬಿಲ್ವಪತ್ರೆ ಕೀಳಬಾರದು:

ಧಾರ್ಮಿಕ ನಂಬಿಕೆಗಳ ಪ್ರಕಾರ ಸೋಮವಾರ ಅಥವಾ ಚತುರ್ದಶಿ ತಿಥಿಯಂದು ಬಿಲ್ವಪತ್ರೆಯನ್ನು ಮರದಿಂದ ಕೀಳಬಾರದು. ಈ ದಿನಗಳಲ್ಲಿ ಬಿಲ್ವಪತ್ರೆ ಕೀಳುವುದು ಅಶುಭ ಎಂದು ಪರಿಗಣಿಸಲಾಗುತ್ತದೆ.

ಹೀಗಾಗಿ ಸೋಮವಾರ ಶಿವನಿಗೆ ಬಿಲ್ವಪತ್ರೆ ಅರ್ಪಿಸಬೇಕಿದ್ದರೆ ಹಿಂದಿನ ದಿನವೇ ಎಲೆಗಳನ್ನು ಕಿತ್ತು ಇಟ್ಟುಕೊಳ್ಳಬೇಕು. ಒಂದು ದಿನ ಮುಂಚಿತವಾಗಿ ಕಿತ್ತು ಇಟ್ಟ ಬಿಲ್ವಪತ್ರೆಯನ್ನೂ ಪೂಜೆಗೆ ಬಳಸಬಹುದು ಎಂದು ನಂಬಲಾಗಿದೆ.

ಯಾವ ಬಿಲ್ವಪತ್ರೆಯನ್ನು ಅರ್ಪಿಸಬೇಕು?

ಬಿಲ್ವಪತ್ರೆ ಕೀಳುವಾಗ ಮೂರು ಎಲೆಗಳು ಒಂದೇ ತೊಟ್ಟಿನಲ್ಲಿ ಇರುವ ಎಲೆಯನ್ನು ಆಯ್ಕೆ ಮಾಡಬೇಕು. ಈ ಮೂರು ಎಲೆಗಳು ಬ್ರಹ್ಮ, ವಿಷ್ಣು, ಮಹೇಶ್ವರರ ಸಂಕೇತ ಹಾಗೂ ಶಿವನ ತ್ರಿಶೂಲದ ಪ್ರತೀಕ ಎಂದು ಪರಿಗಣಿಸಲಾಗುತ್ತದೆ.

ಹರಿದಿರುವ, ಕೀಟಗಳು ತಿಂದಿರುವ ಅಥವಾ ಅಪೂರ್ಣವಾಗಿರುವ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸಬಾರದು ಎಂಬ ನಂಬಿಕೆ ಇದೆ. ಹಾಗೆಯೇ ಬಿಲ್ವಮರದ ಕೊಂಬೆಗಳನ್ನು ಮುರಿಯದೆ ಎಲೆಗಳನ್ನು ಮಾತ್ರ ಕೀಳಬೇಕು.

ಶಿವಲಿಂಗಕ್ಕೆ ಎಷ್ಟು ಬಿಲ್ವಪತ್ರೆ ಅರ್ಪಿಸಬೇಕು?

ಶಿವಪೂಜೆಯಲ್ಲಿ ಬಿಲ್ವಪತ್ರೆಗಳ ಸಂಖ್ಯೆಯೂ ಮಹತ್ವ ಹೊಂದಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಬೆಸ ಸಂಖ್ಯೆಯಲ್ಲಿ ಬಿಲ್ವಪತ್ರೆಗಳನ್ನು ಅರ್ಪಿಸುವುದು ಶುಭ.

3, 5, 7, 11, 21, 51 ಅಥವಾ 101 ಬಿಲ್ವಪತ್ರೆಗಳನ್ನು ಅರ್ಪಿಸುವುದು ವಿಶೇಷ ಎಂದು ಹೇಳಲಾಗಿದೆ. ಶಿವಲಿಂಗಕ್ಕೆ ಅರ್ಪಿಸುವ ಮೊದಲು ಬಿಲ್ವಪತ್ರೆಯನ್ನು ಶುದ್ಧ ನೀರಿನಿಂದ ತೊಳೆಯಬೇಕು.

ಬಿಲ್ವಪತ್ರೆ ಅರ್ಪಿಸುವ ಸರಿಯಾದ ವಿಧಾನ

ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸುವಾಗ ಅದರ ಮೃದುವಾದ ಭಾಗವು ಶಿವಲಿಂಗಕ್ಕೆ ತಾಗುವಂತೆ ಕೆಳಮುಖವಾಗಿ ಇಡಬೇಕು. ಎಲೆಯ ಒರಟಾದ ಭಾಗವು ಮೇಲ್ಮುಖವಾಗಿರಬೇಕು ಎಂಬುದು ಧಾರ್ಮಿಕ ಪದ್ಧತಿ.

ಈ ರೀತಿಯಲ್ಲಿ ಭಕ್ತಿಯಿಂದ ಬಿಲ್ವಪತ್ರೆ ಅರ್ಪಿಸುವುದರಿಂದ ಶಿವನ ಅನುಗ್ರಹ ದೊರೆಯುತ್ತದೆ ಮತ್ತು ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ಆಷಾಢ 3ನೇ ಶುಕ್ರವಾರ: ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ತಾಯಿ ಚಾಮುಂಡಿ!

ಮೈಸೂರು: ಆಷಾಢ ಮಾಸದ 3ನೇ ಶುಕ್ರವಾರದ ಹಿನ್ನೆಲೆ ನಾಡದೇವತೆ ತಾಯಿ ಚಾಮುಂಡೇಶ್ವರಿ ಇಂದು ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.

ವಿಶೇಷ ಪೂಜೆ ಹಾಗೂ ಅಲಂಕಾರದ ಅಂಗವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.

ಬೆಳಗಿನ ಬ್ರಾಹ್ಮಿ ಮುಹೂರ್ತದಿಂದಲೇ ಭಕ್ತರು ಚಾಮುಂಡಿ ಬೆಟ್ಟದತ್ತ ಆಗಮಿಸಿದರು. ಕೆಲವರು ವಾಹನಗಳ ಮೂಲಕ ಬಂದರೆ, ಇನ್ನೂ ಕೆಲ ಭಕ್ತರು ಮೆಟ್ಟಿಲುಗಳ ಮಾರ್ಗವಾಗಿ ತೆರಳಿ ತಾಯಿ ಚಾಮುಂಡಿಯ ದರ್ಶನ ಪಡೆದರು.

ಆಷಾಢದ 3ನೇ ಶುಕ್ರವಾರದ ಪ್ರಯುಕ್ತ ತಾಯಿ ಚಾಮುಂಡಿಗೆ ಲಕ್ಷ್ಮಿ ದೇವಿಯ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಒಳಾಂಗಣವನ್ನು ಚೆಂಡು ಹೂ, ಕಮಲ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಜೊತೆಗೆ ಕಿತ್ತಳೆ, ಮಾವು ಸೇರಿದಂತೆ ಹಲವು ಬಗೆಯ ಹಣ್ಣುಗಳನ್ನು ಅಲಂಕಾರಕ್ಕೆ ಬಳಸಲಾಗಿತ್ತು.

ದೇವಸ್ಥಾನದ ಆವರಣ ಕರ್ಪೂರ, ಗಂಧ ಹಾಗೂ ಧೂಪದ ಪರಿಮಳದಿಂದ ಆಧ್ಯಾತ್ಮಿಕ ವಾತಾವರಣದಿಂದ ಕೂಡಿತ್ತು. ಬೆಳಗ್ಗೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಆಷಾಢ ಮಾಸದ ಮೊದಲ ಶುಕ್ರವಾರ ತಾಯಿ ಚಾಮುಂಡಿಗೆ ನಾಗಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. ಎರಡನೇ ಶುಕ್ರವಾರ ಲಕ್ಷ್ಮಿ ಅಲಂಕಾರ ನೆರವೇರಿಸಲಾಗಿತ್ತು. ಇದೀಗ ಮೂರನೇ ಶುಕ್ರವಾರವೂ ಲಕ್ಷ್ಮಿ ದೇವಿಯ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡಿದ್ದಾಳೆ.

ವಿಶೇಷ ದರ್ಶನಕ್ಕಾಗಿ 2 ಸಾವಿರ ರೂಪಾಯಿ ಮೌಲ್ಯದ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ಅಭಿಷೇಕ, ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 5.30ರಿಂದ 10 ಗಂಟೆಯವರೆಗೆ ವಿವಿಐಪಿ ದರ್ಶನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಝೀರೋ ಟ್ರಾಫಿಕ್‌ನಲ್ಲೂ ಉಳಿಯಲಿಲ್ಲ 4 ತಿಂಗಳ ಕಂದಮ್ಮ; ಶ್ವಾಸಕೋಶ ಸೋಂಕಿಗೆ ಮಗು ಬಲಿ!

ದಾವಣಗೆರೆ: ಅಂಬುಲೆನ್ಸ್‌ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ತುರ್ತಾಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯತ್ನ ಫಲಿಸದೆ, ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ನಾಲ್ಕು ತಿಂಗಳ ಹಸುಗೂಸು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಂಡಿ ಗ್ರಾಮದ ಹನುಮೇಶ್ ಹಾಗೂ ಪವಿತ್ರಾ ದಂಪತಿಯ ಹೆಣ್ಣು ಮಗು ಮೃತಪಟ್ಟಿದೆ. ಮೂರು ತಿಂಗಳ ಹಿಂದೆ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಪವಿತ್ರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಕಳೆದ ಕೆಲವು ದಿನಗಳಿಂದ ಮಗು ಶ್ವಾಸಕೋಶ ಸೋಂಕಿನಿಂದ ಬಳಲುತ್ತಿತ್ತು.

ಕಳೆದ ಒಂದು ವಾರದಿಂದ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ವೈದ್ಯರು ಸಲಹೆ ನೀಡಿದ್ದರು.

ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅಂಬುಲೆನ್ಸ್‌ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ದಾರಿ ಮಧ್ಯೆ ಹೊನ್ನಾಳಿ ತಾಲೂಕಿನ ಹೆಚ್. ಕಡದಕಟ್ಟೆ ಬಳಿ ಅಂಬುಲೆನ್ಸ್‌ನ ಟೈರ್ ಪಂಕ್ಚರ್ ಆಗಿದ್ದು, ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮಗುವಿನ ಜೀವ ಉಳಿಸಲು ಪೋಷಕರು, ಪೊಲೀಸರು ಹಾಗೂ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾದರು. ಹೊನ್ನಾಳಿ ಸಿಪಿಐ ಸುನೀಲ್ ಕುಮಾರ್ ಹಾಗೂ ಸ್ಥಳೀಯರ ಸಹಕಾರದಿಂದ ಅಂಬುಲೆನ್ಸ್ ಟೈರ್ ಬದಲಾಯಿಸಲಾಯಿತು. ಬಳಿಕ ಮಗುವಿನ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆದರೆ, ಪೊಲೀಸರ ಹಾಗೂ ವೈದ್ಯರ ಸತತ ಪ್ರಯತ್ನದ ನಡುವೆಯೂ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ. ಹಸುಗೂಸನ್ನು ಉಳಿಸಲು ನಡೆಸಿದ ಪ್ರಯತ್ನಗಳ ನಡುವೆಯೇ ನಡೆದ ಈ ಘಟನೆ ಪೋಷಕರಲ್ಲಿ ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.

ಕಲಬುರಗಿ-ರಾಯಚೂರಿನಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಜೊತೆ ಚೆಲ್ಲಾಟ? ಆಹಾರ ಸೇವಿಸಿ 70ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿನ್ನೆ ಬೆಳಗಿನ ಉಪಹಾರ ಸೇವಿಸಿದ ಬಳಿಕ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ.

ಹೊಟ್ಟೆನೋವು, ವಾಂತಿ, ತಲೆಸುತ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಹುತೇಕ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ.

ಶಾಲೆಯಲ್ಲಿ ಬೆಳಗಿನ ಉಪಹಾರಕ್ಕೆ ಅವಲಕ್ಕಿ ತಯಾರಿಸಲಾಗಿತ್ತು. ಉಪಹಾರದಿಂದ ದುರ್ವಾಸನೆ ಬರುತ್ತಿದೆ ಎಂದು ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿಗೆ ತಿಳಿಸಿ, ಬೇರೆ ಆಹಾರ ನೀಡುವಂತೆ ಮನವಿ ಮಾಡಿದ್ದರು. ಆದರೆ, ಸಿಬ್ಬಂದಿ ಮನವಿಯನ್ನು ನಿರಾಕರಿಸಿದ್ದರಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಅದೇ ಉಪಹಾರ ಸೇವಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಅಫಜಲಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ವಸತಿ ಶಾಲೆಯ ವಿದ್ಯಾರ್ಥಿಗಳು ಅಫಜಲಪುರ ಸರ್ಕಾರಿ ಆಸ್ಪತ್ರೆ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಂ.ವೈ. ಪಾಟೀಲ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಮಕ್ಕಳ ಜೀವದೊಂದಿಗೆ ನಿರ್ಲಕ್ಷ್ಯ ತೋರಿದ ವಾರ್ಡನ್, ಮುಖ್ಯ ಶಿಕ್ಷಕ ಹಾಗೂ ಅಡುಗೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಸೂಚನೆ ನೀಡಿದರು.

ಪಲಾವ್ ತಿಂದು 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ:

ಇನ್ನು ನಿನ್ನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲೂ ಹುಳ ಬಿದ್ದಿದ್ದ ಪಲಾವ್ ಸೇವಿಸಿದ ಪರಿಣಾಮ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ವಾಂತಿ, ಭೇದಿ, ತಲೆನೋವು ಹಾಗೂ ತಲೆಸುತ್ತಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆಹಾರದಲ್ಲಿ ಹುಳಗಳು ಪತ್ತೆಯಾಗಿರುವ ಹಿನ್ನೆಲೆ ವಾರ್ಡನ್ ವಿರುದ್ಧ ಪೋಷಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮತ್ತೆ ಮಧ್ಯರಾತ್ರಿ ಮೋದಿ ವಿಡಿಯೋ! ಪೇಪರ್ ಲೀಕ್ ಮಾಫಿಯಾಗೆ ಖಡಕ್ ಎಚ್ಚರಿಕೆ

0

ನವದೆಹಲಿ: ಇತ್ತೀಚೆಗೆ ಮಧ್ಯರಾತ್ರಿ ಸೆಲ್ಫೀ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ, ನಿನ್ನೆ ಮಧ್ಯರಾತ್ರಿ ಮತ್ತೊಂದು ಸೆಲ್ಫೀ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ–2026 ಕುರಿತು ಮಾತನಾಡಿರುವ ಅವರು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.

“ಪ್ರಶ್ನೆಪತ್ರಿಕೆ ಸೋರಿಕೆ ಮಾಫಿಯಾ, ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿರುವ ಯಾವುದೇ ಗ್ಯಾಂಗ್ ಹಾಗೂ ದೇಶದ ಮಕ್ಕಳ ಭವಿಷ್ಯದೊಂದಿಗೆ ಆಟವಾಡುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇಂತಹವರ ವಿರುದ್ಧ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ.

ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ ಮತ್ತು ವಿಶ್ವಾಸಾರ್ಹವಾಗಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಫಾಸ್ಟ್-ಟ್ರ್ಯಾಕ್ ವ್ಯವಸ್ಥೆ, ವಿವಿಧ ಪಾಲುದಾರರ ಸಲಹೆಗಳ ಆಧಾರದ ಮೇಲೆ ಸಾಂಸ್ಥಿಕ ಸುಧಾರಣೆಗಳು ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ದಶಕಗಳಿಂದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆಯುತ್ತಿದ್ದು, ಅದನ್ನು ತಡೆಯಲು ಕಠಿಣ ಕಾನೂನಿನ ಅಗತ್ಯವಿತ್ತು. ಇದೇ ಉದ್ದೇಶದಿಂದ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಉಭಯ ಸದನಗಳಲ್ಲಿ ಚರ್ಚೆಯ ಬಳಿಕ ಅಂಗೀಕಾರವಾಗಿದೆ ಎಂದು ಪ್ರಧಾನಿ ಹೇಳಿದರು.

ವಿರೋಧ ಪಕ್ಷಗಳ ಸಭಾತ್ಯಾಗದ ನಡುವೆಯೇ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ–2026 ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರಗೊಂಡಿದೆ. ಈ ವಿಧೇಯಕವು ಈಗಾಗಲೇ ಲೋಕಸಭೆಯಲ್ಲೂ ಅಂಗೀಕಾರವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಕಿತಕ್ಕಾಗಿ ಕಳುಹಿಸಲಾಗಿದೆ.

ಕಾಲದೊಂದಿಗೆ ಬೆಳೆದ ವ್ಯಕ್ತಿತ್ವ, ಮೌಲ್ಯಗಳೊಂದಿಗೆ ಅರಳಿದ ಬದುಕು..!

ಬ್ಬ ವ್ಯಕ್ತಿಯ ಸಾಧನೆಯನ್ನು ಅವರು ಅಲಂಕರಿಸಿದ ಹುದ್ದೆಗಳಿಂದ ಅಳೆಯಲು ಸಾಧ್ಯವಿಲ್ಲ. ಅವರು ಸಮಾಜಕ್ಕೆ ನೀಡಿದ ಕೊಡುಗೆ, ಉಳಿಸಿದ ಮೌಲ್ಯಗಳು ಮತ್ತು ಜನರ ಮನಸ್ಸಿನಲ್ಲಿ ಮೂಡಿಸಿದ ವಿಶ್ವಾಸವೇ ಅವರ ವ್ಯಕ್ತಿತ್ವದ ನಿಜವಾದ ಅಳತೆ. ಹಿರಿಯ ಪತ್ರಕರ್ತ ಡಾ. ಅನಂತ ಕಾರ್ಕಳ ಅವರ ಬದುಕು ಈ ಮಾತಿಗೆ ಜೀವಂತ ಸಾಕ್ಷಿಯಾಗಿದೆ.

ಮೂರು ದಶಕಗಳಿಗೂ ಹೆಚ್ಚು ಕಾಲ ಮುದ್ರಣ ಹಾಗೂ ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು, ತಮ್ಮ ಲೇಖನಿ, ನೇರ ನುಡಿ ಮತ್ತು ಸಾಮಾಜಿಕ ಬದ್ಧತೆಯ ಮೂಲಕ ಅಸಂಖ್ಯಾತ ಜನರ ವಿಶ್ವಾಸ ಗಳಿಸಿದ್ದಾರೆ. ಅವರ ಪತ್ರಿಕೋದ್ಯಮ ಕೇವಲ ಸುದ್ದಿಗಳ ಪ್ರಸಾರಕ್ಕೆ ಸೀಮಿತವಾಗಿರದೆ, ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆ.

ಗದಗದ ನೆಲದಲ್ಲಿ ಆರಂಭವಾದ ಅವರ ಪತ್ರಿಕೋದ್ಯಮದ ಪಯಣ, ರಾಜ್ಯದ ಪ್ರಮುಖ ಪತ್ರಿಕೆಗಳು ಹಾಗೂ ದೂರದರ್ಶನ ಮಾಧ್ಯಮಗಳವರೆಗೆ ವಿಸ್ತರಿಸಿತು. ವರದಿಗಾರ, ಸಂಪಾದಕ ಮತ್ತು ಹಿರಿಯ ಪತ್ರಕರ್ತರಾಗಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿದ ಅವರು, ಸತ್ಯ, ನಿಷ್ಪಕ್ಷಪಾತತೆ ಮತ್ತು ಜನಪರ ನಿಲುವಿನಿಂದ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಸಮಾಜದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು, ಆಡಳಿತದ ವೈಫಲ್ಯಗಳನ್ನು ಪ್ರಶ್ನಿಸುವುದು ಮತ್ತು ಜನರ ಪರವಾಗಿ ಧ್ವನಿ ಎತ್ತುವುದು ಅವರ ವೃತ್ತಿ ಜೀವನದ ಧ್ಯೇಯವಾಗಿತ್ತು. ಈ ಕಾರಣದಿಂದಲೇ ಅವರ ಲೇಖನಗಳು ಕೇವಲ ಸುದ್ದಿಗಳಾಗಿರದೆ, ಜನರ ಆಶಯಗಳ ಪ್ರತಿಬಿಂಬವಾಗಿ ಗುರುತಿಸಿಕೊಂಡಿವೆ.

ಸ್ನಾತಕೋತ್ತರ ಪದವಿ, ಬಿ.ಎಡ್., ಎಲ್.ಎಲ್.ಬಿ. ಹಾಗೂ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿರುವ ಡಾ. ಅನಂತ ಕಾರ್ಕಳ ಅವರು ಜ್ಞಾನ ಮತ್ತು ಅನುಭವದ ಅಪೂರ್ವ ಸಂಗಮವಾಗಿದ್ದಾರೆ. ನಿರಂತರ ಅಧ್ಯಯನ ಹಾಗೂ ವೃತ್ತಿ ಬದ್ಧತೆಯ ಮೂಲಕ ಪತ್ರಿಕೋದ್ಯಮದ ಹೊಸ ತಲೆಮಾರಿಗೆ ಪ್ರೇರಣೆಯಾಗಿದ್ದಾರೆ.

ಪತ್ರಕರ್ತರ ಸಂಘಟನೆಗಳಲ್ಲಿಯೂ ಅವರು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದು, ಹೋರಾಟದ ಸಂದರ್ಭದಲ್ಲಿ ನಾಯಕನಾಗಿ, ಮಾರ್ಗದರ್ಶನದ ವೇಳೆ ಹಿರಿಯನಾಗಿ ಹಾಗೂ ಸಂಕಷ್ಟದ ಸಂದರ್ಭಗಳಲ್ಲಿ ಸಹೋದ್ಯೋಗಿಗಳ ಬೆನ್ನೆಲುಬಾಗಿ ನಿಂತಿದ್ದಾರೆ.

ಸರಳತೆ, ಸಜ್ಜನಿಕೆ, ಸತ್ಯನಿಷ್ಠೆ ಮತ್ತು ಮಾನವೀಯ ಮೌಲ್ಯಗಳು ಅವರ ವ್ಯಕ್ತಿತ್ವದ ಪ್ರಮುಖ ಆಧಾರಸ್ತಂಭಗಳಾಗಿವೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿಯೂ ವೃತ್ತಿಯ ಮೌಲ್ಯಗಳನ್ನು ಉಳಿಸಿಕೊಂಡು ಪತ್ರಿಕೋದ್ಯಮದ ಗೌರವವನ್ನು ಹೆಚ್ಚಿಸಿದ ಅಪರೂಪದ ಪತ್ರಕರ್ತರ ಸಾಲಿನಲ್ಲಿ ಅವರು ಗುರುತಿಸಿಕೊಂಡಿದ್ದಾರೆ.

ಅರವತ್ತು ವರ್ಷಗಳು ಬದುಕಿನ ಒಂದು ಮೈಲಿಗಲ್ಲು ಮಾತ್ರ. ಅನುಭವ, ಚಿಂತನೆ, ಸಾಮಾಜಿಕ ಕಾಳಜಿ ಮತ್ತು ವೃತ್ತಿ ಬದ್ಧತೆಯಿಂದ ಸಮೃದ್ಧವಾಗಿರುವ ಅವರ ಬದುಕು ಇನ್ನಷ್ಟು ಅರ್ಥಪೂರ್ಣವಾಗಲಿ. ಅವರ ಮಾರ್ಗದರ್ಶನ, ಮೌಲ್ಯಗಳು ಮತ್ತು ಲೇಖನಿಯ ಬೆಳಕು ಮುಂದಿನ ಪೀಳಿಗೆಯ ಪತ್ರಕರ್ತರಿಗೆ ಸದಾ ಸ್ಫೂರ್ತಿಯಾಗಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

– ಟಿ. ಎನ್. ಭಾಂಡಗೆ
ವಕೀಲರು, ಗದಗ

ಗೂಡ್ಸ್ ವಾಹನ-ಆಟೋ ಮುಖಾಮುಖಿ ಡಿಕ್ಕಿ: ಐವರಿಗೆ ಗಂಭೀರ ಗಾಯ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗದಗ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಗೊಜನೂರ ಸಮೀಪ ಆಟೋರಿಕ್ಷಾ ಹಾಗೂ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಆಟೋರಿಕ್ಷಾದಲ್ಲಿದ್ದ ಇಬ್ಬರು ಚಿಕ್ಕ ಮಕ್ಕಳು ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.

ಗದಗ ಮೂಲದ ಒಂದೇ ಕುಟುಂಬದ ಸದಸ್ಯರು ಲಕ್ಷ್ಮೇಶ್ವರದ ದೂದಪೀರಾ ದರ್ಗಾಕ್ಕೆ ಆಟೋರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ, ಲಕ್ಷ್ಮೇಶ್ವರದಿಂದ ಗದಗದತ್ತ ಬರುತ್ತಿದ್ದ ಗೂಡ್ಸ್ ವಾಹನ ಎದುರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಪ್ರಯಾಣಿಕರು ರಸ್ತೆಗೆ ಚದುರಿ ಬಿದ್ದಿದ್ದಾರೆ.

ಅಪಘಾತದಲ್ಲಿ ಅಬೂಬಕರ್ ಹುಬ್ಬಳ್ಳಿ (30), ಮುಸ್ತಾಕ್ ಹುಬ್ಬಳ್ಳಿ (25), ಆಯೇಷಾ ಹುಬ್ಬಳ್ಳಿ (30), ಬಿಸ್ಮಿಲ್ಲಾ ಹುಬ್ಬಳ್ಳಿ (48) ಹಾಗೂ ಮೂರು ವರ್ಷದ ಮಗು ಅಬೂಬಕರ್ ಹುಬ್ಬಳ್ಳಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮತ್ತೊಬ್ಬರಾದ ದಿಲ್‌ಶ್ಯಾದ್ ಕುನ್ನುಟಗಿ (64) ಗಾಯಗೊಂಡಿದ್ದು, ಎರಡು ವರ್ಷದ ನೂರೈಸ್ ಎಂಬ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.

ಗಾಯಾಳುಗಳ ತಲೆ, ಮುಖ, ಕಣ್ಣು, ಕೈ-ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ತೀವ್ರ ಪೆಟ್ಟಾಗಿದ್ದು, ಸ್ಥಳೀಯರು ತಕ್ಷಣವೇ ಅವರನ್ನು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದರು.

ಅಪಘಾತದ ಬಳಿಕ ಗೂಡ್ಸ್ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಹೋರಾಟದ ಹಾದಿಯ ಹಿರಿಯ ಪತ್ರಕರ್ತ

ದಗ ಜಿಲ್ಲೆಯ ಪತ್ರಿಕೋದ್ಯಮಕ್ಕೆ ತನ್ನದೇ ಆದ ಸಮೃದ್ಧ ಇತಿಹಾಸವಿದೆ. ತಮ್ಮ ಲೇಖನಿ, ನಿಷ್ಪಕ್ಷಪಾತ ನಿಲುವು ಮತ್ತು ಸಮಾಜಮುಖಿ ವರದಿಗಳ ಮೂಲಕ ರಾಜ್ಯದ ಗಮನ ಸೆಳೆದ ಹಲವಾರು ಪತ್ರಕರ್ತರನ್ನು ಈ ನೆಲ ನೀಡಿದೆ. ಅಂತಹ ಹಿರಿಯ ಪತ್ರಕರ್ತರ ಸಾಲಿನಲ್ಲಿ ಆತ್ಮೀಯ ಮಿತ್ರ ಡಾ. ಅನಂತ್ ಎಸ್. ಕಾರ್ಕಳ ಅವರ ಹೆಸರು ಗೌರವದಿಂದ ಉಲ್ಲೇಖಿಸಲೇಬೇಕು.

ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಗದಗ ಜಿಲ್ಲೆಯ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅನಂತ್, ಸ್ಥಳೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳ ವರದಿಗಾರಿಕೆಯಿಂದ ಆರಂಭಿಸಿ, ರಾಜ್ಯಮಟ್ಟದ ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿದರು. ನಂತರ ತಮ್ಮದೇ ಆದ ‘ಇದು ಸತ್ಯ’ ಹಾಗೂ ‘ಅನಂತ ಲೇಖನಿ’ ಪತ್ರಿಕೆಗಳನ್ನು ಆರಂಭಿಸುವ ಮೂಲಕ ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗಗಳಿಗೆ ಕೈಹಾಕಿದರು.

ಅವರ ಬದುಕಿನ ಪಯಣ ಹೂವಿನ ಹಾಸಿಗೆಯಾಗಿರಲಿಲ್ಲ. ಅನೇಕ ಸವಾಲುಗಳು, ಸೋಲುಗಳು ಮತ್ತು ಅವಮಾನಗಳನ್ನು ಮೀರಿ ಇಂದು ಅವರು ತಲುಪಿರುವ ಸ್ಥಾನ, ಅವರ ಹೋರಾಟದ ಮನೋಭಾವಕ್ಕೆ ಸಾಕ್ಷಿಯಾಗಿದೆ.

ಮುದ್ರಣ ಮಾಧ್ಯಮದ ಜೊತೆಗೆ ದೃಶ್ಯ ಮಾಧ್ಯಮದಲ್ಲಿಯೂ ತಮ್ಮ ಛಾಪು ಮೂಡಿಸಿದ ಅವರು, ಸಿ.ಟಿ. ಟಿವಿ ಸಂಪಾದಕರಾಗಿ ಗದಗ ಕೇಂದ್ರವಾಗಿಸಿಕೊಂಡು ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸಿದರು. ಅವರ ಬರಹ ಹೇಗೆ ನೇರ, ಹರಿತ ಮತ್ತು ವಸ್ತುನಿಷ್ಠವೋ, ಅವರ ಮಾತು ಕೂಡ ಅಷ್ಟೇ ಪ್ರಭಾವಶಾಲಿ.

ಕಳೆದ ಮೂರು ದಶಕಗಳಿಂದ ಅವರನ್ನು ಹತ್ತಿರದಿಂದ ನೋಡಿದ ಸ್ನೇಹಿತನಾಗಿ ಹೇಳುವುದಾದರೆ, ಅನಂತ್ ಅವರ ಸರಳತೆ, ಸ್ನೇಹಪರ ಸ್ವಭಾವ, ಹಾಸ್ಯಪ್ರಜ್ಞೆ ಮತ್ತು ಚಿಂತನಾ ಮನೋಭಾವ ಇಂದಿಗೂ ಬದಲಾಗಿಲ್ಲ. ಕಾಲ ಬದಲಾದರೂ ಸ್ನೇಹವನ್ನು ಉಳಿಸಿಕೊಳ್ಳುವ ಗುಣ ಅವರ ವ್ಯಕ್ತಿತ್ವದ ವಿಶೇಷತೆ.

ಪತ್ರಿಕೋದ್ಯಮದ ಜೊತೆಗೆ ಹಲವು ಕೃತಿಗಳನ್ನು ರಚಿಸಿರುವ ಅವರು, ಉತ್ತಮ ಲೇಖಕರೂ ಹೌದು. ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಮಾತಿನ ಮೂಲಕ ಜನಮನ ಗೆಲ್ಲುವ ಅಪರೂಪದ ವಾಗ್ಮಿಯೂ ಆಗಿದ್ದಾರೆ.

ಗದಗ ಜಿಲ್ಲೆಯ ಪತ್ರಕರ್ತರನ್ನು ಒಗ್ಗೂಡಿಸಿ ಪತ್ರಿಕಾ ಭವನ ನಿರ್ಮಾಣದಲ್ಲಿ ಅವರು ವಹಿಸಿದ ಪಾತ್ರ ಸದಾ ಸ್ಮರಣೀಯ. ಕೆಲವೊಮ್ಮೆ ನೇರ ಮಾತಿನಿಂದ ವಿವಾದಗಳಿಗೂ ಕಾರಣವಾದರೂ, ತಮ್ಮ ಹೃದಯವಂತಿಕೆ ಮತ್ತು ಆತ್ಮೀಯತೆಯಿಂದ ಎಲ್ಲರನ್ನೂ ಮತ್ತೆ ತನ್ನತ್ತ ಸೆಳೆಯುವ ಅಪರೂಪದ ಗುಣ ಅವರಲ್ಲಿದೆ.

ಡಿಜಿಟಲ್ ಯುಗದಲ್ಲೂ ಹಿಂದೆ ಬೀಳದೆ ‘ಆಸ್ಕ್ ನ್ಯೂಸ್’ ಯೂಟ್ಯೂಬ್ ವಾಹಿನಿಯ ಮೂಲಕ ಹೊಸ ಮಾಧ್ಯಮವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿರುವುದು ಅವರ ಕಾಲಾನುಗುಣ ಚಿಂತನೆಗೆ ಸಾಕ್ಷಿಯಾಗಿದೆ. ಇಂದಿನ ಯುವ ಪತ್ರಕರ್ತರಿಗೆ ಅವರ ಅನುಭವ ಮತ್ತು ಮಾರ್ಗದರ್ಶನ ಅತ್ಯಂತ ಅಗತ್ಯವಾಗಿದೆ.

ಕೈಲಾಸ ವರಸಿದ್ಧಿ ವಿನಾಯಕನ ಪರಮಭಕ್ತರಾಗಿರುವ ಅನಂತ್, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಸಂಘಟನೆಯಲ್ಲೂ ಸಕ್ರಿಯರಾಗಿದ್ದಾರೆ.

ಜುಲೈ 31, 2026ರಂದು 60ನೇ ವಸಂತಕ್ಕೆ ಕಾಲಿಡುತ್ತಿರುವ ಡಾ. ಅನಂತ್ ಎಸ್. ಕಾರ್ಕಳ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಇನ್ನಷ್ಟು ಸಮಾಜಮುಖಿ ಸೇವೆ ಸಲ್ಲಿಸುವ ಶಕ್ತಿ ದೇವರು ಕರುಣಿಸಲಿ ಎಂಬುದು ನನ್ನ ಹಾರೈಕೆ.

ಆನಂದ್ ಜಿ. ಸಾಲಿಗ್ರಾಮ
ಹಿರಿಯ ಪತ್ರಕರ್ತರು, ಗದಗ

ಸ್ತ್ರೀ ಸಂವೇದನೆಯ ಶಕ್ತಿ: ಡಾ. ನಾಗಲಕ್ಷ್ಮಿ ಚೌದರಿ

“ಮನೆ ಮನೆಗಳಲ್ಲಿ ದೀಪ ಬೆಳಗಿದಾಕೆ, ನಿನಗೆ ಬೇರೆ ಹೆಸರು ಬೇಕೆ… ಸ್ತ್ರೀ ಎಂದರೆ ಅಷ್ಟೇ ಸಾಕೆ…” ಎಂಬ ಕವಿವಾಣಿಯು ಮಹಿಳೆಯ ಶಕ್ತಿ, ತ್ಯಾಗ ಮತ್ತು ಸಂವೇದನೆಯ ಪ್ರತೀಕವಾಗಿದೆ. ಈ ಸಾಲುಗಳನ್ನು ನೆನಪಿಸಿಕೊಂಡಾಗ ಸಹಜವಾಗಿಯೇ ಮನಸ್ಸಿಗೆ ಬರುವ ವ್ಯಕ್ತಿತ್ವವೆಂದರೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ.

ಇಂದಿನ ಆಧುನಿಕ ಸಮಾಜದಲ್ಲಿಯೂ ಮಹಿಳೆಯರು ಅನೇಕ ಸಾಮಾಜಿಕ, ಆರ್ಥಿಕ ಹಾಗೂ ಮಾನಸಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಜೀವನದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾದರೂ, ದೌರ್ಜನ್ಯ, ಕಿರುಕುಳ, ಶೋಷಣೆ ಮತ್ತು ಅಸಮಾನತೆ ಇನ್ನೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯರ ಧ್ವನಿಯಾಗಿ, ಅವರ ಹಕ್ಕುಗಳ ರಕ್ಷಕಿಯಾಗಿ ಡಾ. ನಾಗಲಕ್ಷ್ಮಿ ಚೌದರಿ ಅವರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಹಿಳಾ ಆಯೋಗದ ಕಾರ್ಯವು ಕೇವಲ ದೂರುಗಳನ್ನು ಸ್ವೀಕರಿಸುವುದಕ್ಕೆ ಸೀಮಿತವಾಗಿಲ್ಲ. ಕೌಟುಂಬಿಕ ಹಿಂಸೆ, ಲೈಂಗಿಕ ಕಿರುಕುಳ, ಆರ್ಥಿಕ ಶೋಷಣೆ, ಸಾಮಾಜಿಕ ಅನ್ಯಾಯ ಹಾಗೂ ಮಹಿಳೆಯರ ಮೇಲಿನ ವಿವಿಧ ರೀತಿಯ ದೌರ್ಜನ್ಯಗಳಿಗೆ ಸ್ಪಂದಿಸಿ, ಕಾನೂನುಬದ್ಧ ಹಾಗೂ ಮಾನವೀಯ ನೆಲೆಯಲ್ಲಿ ಪರಿಹಾರ ಕಲ್ಪಿಸುವ ಜವಾಬ್ದಾರಿಯನ್ನು ಆಯೋಗ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಈ ಕಾರ್ಯದಲ್ಲಿ ಡಾ. ನಾಗಲಕ್ಷ್ಮಿ ಚೌದರಿ ಅವರ ಸಂವೇದನಾಶೀಲತೆ ವಿಶೇಷವಾಗಿ ಗಮನ ಸೆಳೆಯುತ್ತದೆ.

ಅವರು ಮಹಿಳೆಯರ ಸಮಸ್ಯೆಗಳನ್ನು ಕೇವಲ ಕಡತಗಳಾಗಿ ನೋಡುವುದಿಲ್ಲ. ನೋವಿನ ಹಿಂದಿರುವ ಬದುಕನ್ನು ಅರ್ಥಮಾಡಿಕೊಂಡು ಸ್ಪಂದಿಸುವ ಮಾನವೀಯ ಗುಣವೇ ಅವರ ನಾಯಕತ್ವದ ದೊಡ್ಡ ಶಕ್ತಿಯಾಗಿದೆ.

ನೊಂದ ಮಹಿಳೆಯರಿಗೆ ಧೈರ್ಯ ತುಂಬುವುದು, ತುರ್ತು ನೆರವು ಕಲ್ಪಿಸುವುದು ಹಾಗೂ ನ್ಯಾಯ ದೊರಕಿಸಲು ಶ್ರಮಿಸುವುದು ಅವರ ಕಾರ್ಯವೈಖರಿಯ ಪ್ರಮುಖ ಅಂಶವಾಗಿದೆ.

ಗ್ರಾಮೀಣ ಮಹಿಳೆಯರು, ಕಾರ್ಮಿಕ ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ವಿವಿಧ ಸಾಮಾಜಿಕ ವರ್ಗಗಳ ಮಹಿಳೆಯರೊಂದಿಗೆ ನೇರ ಸಂವಾದ ನಡೆಸುವ ಮೂಲಕ ಅವರ ನೈಜ ಸಮಸ್ಯೆಗಳನ್ನು ಅರಿಯುವ ಪ್ರಯತ್ನವನ್ನು ಅವರು ನಿರಂತರವಾಗಿ ನಡೆಸುತ್ತಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಸರ್ಕಾರದ ವಿವಿಧ ಯೋಜನೆಗಳು ಫಲಾನುಭವಿಗಳಿಗೆ ತಲುಪುವಂತೆ ಮಾಡುವಲ್ಲಿಯೂ ಅವರು ವಿಶೇಷ ಆಸಕ್ತಿ ತೋರಿದ್ದಾರೆ.

ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧ, ಆನ್‌ಲೈನ್ ಕಿರುಕುಳ ಹಾಗೂ ಸಾಮಾಜಿಕ ಜಾಲತಾಣಗಳ ದುರುಪಯೋಗ ಮಹಿಳೆಯರಿಗೆ ಹೊಸ ಸವಾಲುಗಳಾಗಿವೆ. ಈ ಹಿನ್ನೆಲೆಯಲ್ಲಿ ಮಹಿಳೆಯರಲ್ಲಿ ಕಾನೂನು ಅರಿವು, ಡಿಜಿಟಲ್ ಸುರಕ್ಷತೆ ಮತ್ತು ಆತ್ಮವಿಶ್ವಾಸ ಬೆಳೆಸುವ ಜಾಗೃತಿ ಕಾರ್ಯಕ್ರಮಗಳಿಗೆ ಮಹಿಳಾ ಆಯೋಗ ಆದ್ಯತೆ ನೀಡುತ್ತಿರುವುದು ಕಾಲದ ಅಗತ್ಯವಾಗಿದೆ.

ಮಹಿಳಾ ಸಬಲೀಕರಣವೆಂದರೆ ಕೇವಲ ಅವಕಾಶ ಕಲ್ಪಿಸುವುದಲ್ಲ; ಅವರ ಸಾಮರ್ಥ್ಯವನ್ನು ಗುರುತಿಸಿ ನಾಯಕತ್ವದ ಸ್ಥಾನಕ್ಕೆ ತರುವುದು. ಮಹಿಳೆಯರ ಶಿಕ್ಷಣ, ಆರೋಗ್ಯ, ಉದ್ಯೋಗ, ಸ್ವಾಭಿಮಾನ ಮತ್ತು ಸುರಕ್ಷತೆಗೆ ನೀಡುವ ಆದ್ಯತೆಯೇ ಸಮಾಜದ ಭವಿಷ್ಯವನ್ನು ರೂಪಿಸುತ್ತದೆ. ಮಹಿಳೆಯರ ಸ್ಥಾನಮಾನ ಬಲಗೊಂಡಷ್ಟೂ ಕುಟುಂಬ, ಸಮಾಜ ಮತ್ತು ರಾಷ್ಟ್ರದ ಪ್ರಗತಿಯೂ ದೃಢವಾಗುತ್ತದೆ.

“ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ” ಎಂಬ ಮಾತಿನಂತೆ, ನಕಾರಾತ್ಮಕ ಟೀಕೆಗಳಿಗೆ ಮಣಿಯದೆ ಸಮಾಜಮುಖಿ ಕಾರ್ಯಗಳ ಮೂಲಕ ಜನಮನದಲ್ಲಿ ಸ್ಥಾನ ಪಡೆದಿರುವ ನಾಯಕತ್ವ ಡಾ. ನಾಗಲಕ್ಷ್ಮಿ ಚೌದರಿಯವರದು. ಅವರ ಕ್ರಿಯಾಶೀಲತೆ, ಬದ್ಧತೆ ಹಾಗೂ ಮಾತೃ ಹೃದಯ ಮಹಿಳೆಯರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಜುಲೈ 31 ಮತ್ತು ಆಗಸ್ಟ್ 1ರಂದು ಗದಗ ಜಿಲ್ಲೆಗೆ ಅವರು ಆಗಮಿಸಿದ್ದು ಜಿಲ್ಲೆಯ ಮಹಿಳೆಯರಿಗೆ ಮತ್ತಷ್ಟು ಆತ್ಮವಿಶ್ವಾಸ ತುಂಬುವ ಸಂದರ್ಭವಾಗಿದೆ. ಗದಗ ಜಿಲ್ಲೆಯ ಸಮಸ್ತ ಮಹಿಳಾ ಬಳಗದ ಪರವಾಗಿ ಅವರಿಗೆ ಆತ್ಮೀಯ ಸ್ವಾಗತ ಹಾಗೂ ಹೃತ್ಪೂರ್ವಕ ಅಭಿನಂದನೆಗಳು.

Oplus_16908288

– ಶ್ರೀಮತಿ ಸುಧಾ ಶರಣರೆಡ್ಡಿ ಹುಚ್ಚಣ್ಣವರ
ಜಿಲ್ಲಾಧ್ಯಕ್ಷರು
ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆ

ಶತಮಾನದ ಸಂಭ್ರಮದಲ್ಲಿ ಅರಳಿದ ಬಾಲ್ಯದ ನೆನಪುಗಳು…

ಶಾಲೆಯ ಶತಮಾನೋತ್ಸವದ ಅಂಗವಾಗಿ ಎರಡು ದಿನಗಳ ವಿಶೇಷ ಸಂಭ್ರಮ, ಎರಡು ದಶಕಗಳ ಬಳಿಕ ಮತ್ತೆ ಒಂದಾಗಲಿರುವ ಸಹಪಾಠಿಗಳು, ಭಾವುಕರಾಗಲಿರುವ ಶಿಕ್ಷಕರು-ಹಳೆ ವಿದ್ಯಾರ್ಥಿಗಳು

ಕೆಲವು ಫೋಟೋಗಳು ಕೇವಲ ಚಿತ್ರಗಳಲ್ಲ, ಬದುಕಿನ ಅಮೂಲ್ಯ ನೆನಪುಗಳಾಗಿರುತ್ತವೆ. 2000-2001ನೇ ಸಾಲಿನ 7ನೇ ತರಗತಿಯ ವಿದ್ಯಾರ್ಥಿಗಳ ಈ ಅಪರೂಪದ ಗುಂಪುಚಿತ್ರವೂ ಅಂತಹದ್ದೇ ಒಂದು ನೆನಪಿನ ಭಂಡಾರ. ಮುಗ್ಧ ನಗು, ಸರಳ ಶಾಲಾ ಸಮವಸ್ತ್ರ, ಸ್ನೇಹದ ಆತ್ಮೀಯತೆ ಮತ್ತು ಕನಸುಗಳಿಂದ ತುಂಬಿದ ಬಾಲ್ಯ—ಇವೆಲ್ಲವೂ ಇಂದಿಗೂ ಮನಸ್ಸನ್ನು ಭಾವುಕರನ್ನಾಗಿಸುತ್ತವೆ.

ಸುಮಾರು ಇಪ್ಪತ್ತೈದು ವರ್ಷಗಳ ಬಳಿಕ, ಶಾಲೆಯ ಶತಮಾನೋತ್ಸವದ ಸಂಭ್ರಮದ ಅಂಗವಾಗಿ ಆಗಸ್ಟ್‌ 1 ಮತ್ತು 2ರಂದು ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಅಂದಿನ ಸಹಪಾಠಿಗಳು ಮತ್ತೆ ಒಂದೇ ವೇದಿಕೆಯಲ್ಲಿ ಸೇರುತ್ತಿದ್ದಾರೆ. ಇದು ಕೇವಲ ಹಳೆಯ ವಿದ್ಯಾರ್ಥಿಗಳ ಭೇಟಿ ಮಾತ್ರವಲ್ಲ, ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ, ಸ್ನೇಹದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ತಮ್ಮನ್ನು ರೂಪಿಸಿದ ಶಾಲೆಗೆ ಕೃತಜ್ಞತೆ ಸಲ್ಲಿಸುವ ಅಪರೂಪದ ಕ್ಷಣವಾಗಿದೆ.

ಕಾಲದ ಹರಿವಿನಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಬದುಕಿನ ದಾರಿಯನ್ನು ಹಿಡಿದಿದ್ದಾರೆ. ಉದ್ಯೋಗ, ಕೃಷಿ, ವ್ಯಾಪಾರ, ಕುಟುಂಬದ ಜವಾಬ್ದಾರಿಗಳ ನಡುವೆ ಜೀವನ ಸಾಗಿದರೂ, ಶಾಲೆಯ ಮೇಲಿನ ಅಭಿಮಾನ ಮತ್ತು ಸಹಪಾಠಿಗಳ ಮೇಲಿನ ಪ್ರೀತಿ ಮಾತ್ರ ಎಂದಿಗೂ ಮಸುಕಾಗಿಲ್ಲ. ಈಗ ಶತಮಾನೋತ್ಸವದ ನೆಪದಲ್ಲಿ ಎಲ್ಲರೂ ಮತ್ತೆ ಒಂದಾಗುತ್ತಿರುವುದು ಅವರ ಪಾಲಿಗೆ ಜೀವನದ ಅತ್ಯಂತ ಸಂತಸದ ಕ್ಷಣವಾಗಿದೆ.

ಅಂದಿನ ತರಗತಿ ಕೊಠಡಿಗಳು, ಕಪ್ಪು ಹಲಗೆ, ಶಾಲೆಯ ಗಂಟೆಯ ಶಬ್ದ, ಮಧ್ಯಾಹ್ನದ ಆಟ, ಶಿಕ್ಷಕರ ಪ್ರೀತಿ-ಬೈಗುಳ, ಸ್ನೇಹಿತರೊಂದಿಗೆ ಹಂಚಿಕೊಂಡ ಊಟ, ಪರೀಕ್ಷೆಯ ಆತಂಕ, ಫಲಿತಾಂಶದ ಸಂಭ್ರಮ—ಇವೆಲ್ಲವೂ ಈ ಎರಡು ದಿನಗಳ ಸಂಭ್ರಮದಲ್ಲಿ ಮತ್ತೊಮ್ಮೆ ಜೀವಂತವಾಗಲಿವೆ. ವರ್ಷಗಳ ಬಳಿಕ ಶಿಕ್ಷಕರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆಯುವುದು ಹಾಗೂ ಹಳೆಯ ನೆನಪುಗಳನ್ನು ಹಂಚಿಕೊಳ್ಳುವುದು ಎಲ್ಲರಿಗೂ ಮರೆಯಲಾಗದ ಅನುಭವವಾಗಲಿದೆ.

ಈ ಐತಿಹಾಸಿಕ ಪುನರ್ಮಿಲನದಲ್ಲಿ ಭಾಗವಹಿಸುತ್ತಿರುವ 2000-2001ರ 7ನೇ ತರಗತಿ ವಿದ್ಯಾರ್ಥಿಗಳು: ಶರಣಪ್ಪ ನಾಗೇಂದ್ರಗಡ, ವಿ.ಎನ್. ರೊಟ್ಟಿ, ಶರಣಪ್ಪ ಮುದೇನೂರ್, ಉಮೇಶ್ ಆಡಿನ, ಉಮೇಶ್ ಅಂಗಡಿ, ಭೀಮಪ್ಪ ಬಾರಕೆರ್, ವೀರೇಶ್ ಬೂದಿಹಾಳ್, ಗೀತಾ ಜೇನುಬೇಟಿಗಾರ್, ರೂಪಾ ಜೋಷಿ, ಶಾವು, ಈರಮ್ಮ ಜಾಲಿಹಾಳ್, ಶೈಲಾ ನಗರಹಾಳ್, ರತ್ನ ಬಡಿಗೇರ್, ಮಾನವ್ವ ಕಮ್ಮಾರ್, ಶರಣಪ್ಪ ಹಂಡಿ ಹಾಗೂ ಇನ್ನಿತರ ಸಹಪಾಠಿಗಳು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಶಿವಾನಂದಯ್ಯ ಮಠದ, ಅಶೋಕ್ ಜಿಗಳೂರು, ಶರಣಪ್ಪ ಕುರಿ, ಪರಶುರಾಮ್ ಹಂಡಿ, ಹುಲ್ಲಪ್ಪ ಹರಿಹರ ಹಾಗೂ ನಿಂಗಪ್ಪ ಹಂಡಿ ಸೇರಿದಂತೆ ಗ್ರಾಮದ ಗುರು-ಹಿರಿಯರು ಹಾಗೂ ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಶತಮಾನೋತ್ಸವದ ಸಂಭ್ರಮಕ್ಕೆ ಮೆರುಗು ತರಲಿದ್ದಾರೆ.

ಒಬ್ಬ ವ್ಯಕ್ತಿಯ ಬದುಕಿನ ಭದ್ರ ಅಡಿಪಾಯವನ್ನು ಹಾಕುವುದು ಶಾಲೆ. ಅಕ್ಷರ ಜ್ಞಾನ, ಸಂಸ್ಕಾರ, ಶಿಸ್ತು, ಸ್ನೇಹ ಮತ್ತು ಮಾನವೀಯತೆಯ ಮೌಲ್ಯಗಳನ್ನು ಕಲಿಸಿದ ಈ ಶಾಲೆಗೆ ಕೃತಜ್ಞತೆ ಸಲ್ಲಿಸುವ ಸುವರ್ಣ ಅವಕಾಶವೇ ಈ ಶತಮಾನೋತ್ಸವ. ಆಗಸ್ಟ್‌ 1 ಮತ್ತು 2ರಂದು ನಡೆಯಲಿರುವ ಈ ಐತಿಹಾಸಿಕ ಸಮಾರಂಭವು ಕೇವಲ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನವಲ್ಲ, ಮುಂದಿನ ಪೀಳಿಗೆಗೆ ಶಾಲೆಯ ಪರಂಪರೆ, ಮೌಲ್ಯಗಳು ಹಾಗೂ ಸ್ನೇಹದ ಮಹತ್ವವನ್ನು ಸಾರುವ ಸ್ಮರಣೀಯ ಕ್ಷಣವಾಗಲಿದೆ.

ಬಾಲ್ಯದ ನೆನಪುಗಳು ಎಂದಿಗೂ ಹಸಿರಾಗಿರುತ್ತವೆ. ಆ ನೆನಪುಗಳನ್ನು ಮತ್ತೊಮ್ಮೆ ಜೀವಂತಗೊಳಿಸುತ್ತಿರುವ ಈ ಶತಮಾನೋತ್ಸವವು ಎಲ್ಲರ ಬದುಕಿನ ಸುವರ್ಣ ಅಧ್ಯಾಯವಾಗಿ ಶಾಶ್ವತವಾಗಿ ಉಳಿಯಲಿ ಎಂಬ ಆಶಯದೊಂದಿಗೆ 2000-2001ರ ತಂಡ ಸಂಭ್ರಮದ ಕ್ಷಣಗಳನ್ನು ಎದುರು ನೋಡುತ್ತಿದೆ.