Home Blog Page 3156

ತೌಖ್ತೆ ಚಂಡಮಾರುತ ಹಾವಳಿಯಿಂದ ಕರಾವಳಿಯಲ್ಲಿ ಜನ, ಜೀವನ ಅಸ್ತವ್ಯಸ್ಥ – ನಾಲ್ವರ ಸಾವು

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ತೌಖ್ತೆ ಚಂಡಮಾರುತದ ಅಬ್ಬರಕ್ಕೆ ಕರಾವಳಿ ಪ್ರದೇಶ ವಿಲವಿಲ ಎನ್ನುತ್ತಿದೆ. ಕಳೆದ 24 ಗಂಟೆಗಳಿಂದ ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಮಲೆನಾಡಿನ ಮೂರು ಜಿಲ್ಲೆಗಳಲ್ಲಿ ಮಳೆರಾಯನ ಅಟ್ಟಹಾಸ ಎಲ್ಲೆ ಮೀರುತ್ತಿದೆ.

ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಇಲ್ಲಿಯವರೆಗೆ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಈ ಚಂಡಮಾರುತ 73 ಗ್ರಾಮಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆಯು ತೌಖ್ತೆ ಚಂಡಮಾರುತ ಬೀಸುವ ಹಿನ್ನೆಲೆಯಲ್ಲಿ ಮಂಗಳೂರು, ಕಾರವಾರ, ಮಲ್ಪೆ, ಭಟ್ಕಳ, ಹೊನ್ನಾವರ ಹಾಗೂ ಕೇರಳದ ತಿರುವನಂತಪುರಗಳಿಗೆ ಮುನ್ನೆಚ್ಚರಿಕೆ ಘೋಷಿಸಿದೆ.

ಮಲ್ಪೆ ಬೀಚ್ ಬಳಿ ಚಂಡಮಾರುತದ ರಭಸಕ್ಕೆ ತೀರದಲ್ಲಿರುವ ಮೀನುಗಾರಿಕೆ ದೋಣಿಗಳು ಹಾನಿಯಾಗಿವೆ.
ಮಂಗಳೂರಿನ ಎಲ್ಲ ತಾಲೂಕುಗಳಲ್ಲಿ ಇಂದು ಕೂಡ ಮಳೆ ಮುಂದುವರಿದಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮನೆಗಳು ಹಾನಿಯಾಗಿವೆ. ಅಲ್ಲದೇ, ತೆಂಗು ಸೇರಿದಂತೆ ತೋಟ – ಗದ್ದೆಗಳಲ್ಲಿ ನೀರು ನುಗ್ಗುತ್ತಿದೆ. ವಿದ್ಯುತ್ ಕಂಬಗಳು, ಮರಗಳು ಧರೆಗೆ ಉರುಳಿವೆ. ಜನರು ಕೈಯಲ್ಲಿ ಜೀವ ಹಿಡಿದು ಬುದುಕು ಸಾಗಿಸುತ್ತಿದ್ದಾರೆ. ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.

ಇಂಡಿಯಾ, ಶ್ರೀಲಂಕಾ ಸರಣಿಯ ಮೇಲೆ ಮತ್ತೆ ದಾಳಿ ಮಾಡಿದ ಕೊರೊನಾ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಇತ್ತೀಚೆಗಷ್ಟೇ ಬಿಸಿಸಿಐ, ಶ್ರೀಲಂಕಾಕ್ಕೆ ತೆರಳುವ ಭಾರತೀಯ ಕ್ರಿಕೆಟ್ ತಂಡ ಘೋಷಿಸಿತ್ತು. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಿರಿಯ ನಾಯಕರ ಅಲಭ್ಯ ಈ ತಂಡದಲ್ಲಿತ್ತು. ಆದರೆ, ಈ ಹೊಸ ತಂಡ ತೆರಳುವ ಕುತೂಹಲಕ್ಕೆ ವಿಘ್ನ ಎದುರಾಗಿದೆ.
ಸದ್ಯ ಭಾರತದಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇದರೊಂದಿಗೆ ಶ್ರೀಲಂಕಾದಲ್ಲಿಯೂ ಕೊರೊನಾ ಹಾವಳಿ ಮಿತಿ ಮೀರುತ್ತಿದೆ. ಕೆಲವು ದಿನಗಳಿಂದ ಶ್ರೀಲಂಕಾದಲ್ಲಿ ಸೋಂಕಿತರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗುತ್ತಿದೆ. ಈ ಕಾರಣದಿಂದಾಗಿ ಆತಿಥೇಯ ಭಾರತದೊಂದಿಗೆ ಕ್ರಿಕೆಟ್ ಸರಣಿ ನಡೆಯುವುದು ಅನಿವಾರ್ಯ ಎನ್ನಲಾಗುತ್ತಿದೆ.

ಜುಲೈ ತಿಂಗಳಲ್ಲಿ ಭಾರತೀಯ ಕ್ರಿಕೆಟ್ ತಂಡವು ಏಕದಿನ ಮತ್ತು ಟಿ 20 ಸರಣಿಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ ಎನ್ನಲಾಗಿತ್ತು. ಇತ್ತೀಚೆಗೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಈ ಕುರಿತು ಹೇಳಿದ್ದರು. ಅಷ್ಟೇ ಅಲ್ಲ, ಈ ಸರಣಿಗೆ ಇಂಗ್ಲೆಂಡ್ ಗೆ ತೆರಳುವ ಯಾವುದೇ ಸದಸ್ಯ ಹೋಗುವುದಿಲ್ಲ ಎಂದು ಸೌರವ್ ಹೇಳಿ ಅಚ್ಚರಿ ಮೂಡಿಸಿದ್ದರು. ಈ ಸರಣಿಯನ್ನು ಹಿಂದಿನ ವರ್ಷವೇ ಫ್ಯೂಚರ್ ಟೂರ್ ಕಾರ್ಯಕ್ರಮದಡಿ ಆಡಬೇಕಿತ್ತು. ಆದರೆ, ಮಹಾಮಾರಿಯಿಂದಾಗಿ ಆಡಲು ಆಗಿರಲಿಲ್ಲ.

ಸದ್ಯ ಮತ್ತೊಮ್ಮೆ ಈ ಸರಣಿಗೆ ಮಹಾಮಾರಿಯ ಕಾಟ ಶುರುವಾಗಿದೆ. ಎರಡನೇ ಬಾರಿಯೂ ಈ ಸರಣಿಯ ಮೇಲೆ ಕೊರೊನಾ ದಾಳಿ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್‌ ನ ನಿರ್ವಹಣಾ ಸಮಿತಿ ಮುಖ್ಯಸ್ಥ ಅರ್ಜುನ್ ಡಿಸಿಲ್ವಾ ತಿಳಿಸಿದ್ದಾರೆ. ಆದರೂ ಈಗಾಗಲೇ ನಾವು ಇಂಗ್ಲೆಂಡ್ ತಂಡದೊಂದಿಗಿನ ಸರಣಿಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ಸರಣಿಯನ್ನು ಕೂಡ ಹಾಗೆಯೇ ನಡೆಸುತ್ತೇವೆ ಎಂದು ಡಿಸಿಲ್ವಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊರೊನಾದೊಂದಿಗೆ ಶುರುವಾಗಿದೆ ಬ್ಲ್ಯಾಕ್ ಫಂಗಸ್ ಕಾಟ….ಹಲವರ ಬಲಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮಹಾಮಾರಿಯೊಂದಿಗೆ ಬ್ಲ್ಯಾಕ್ ಪಂಗಸ್ ಸೋಂಕಿನ ಕಾಟ ಕೂಡ ಶುರುವಾಗಿದೆ. ಸದ್ಯ ರಾಜ್ಯದಲ್ಲಿ 100ಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ವಿವಿಧ ಪ್ರದೇಶಗಳು ಸೇರಿದಂತೆ ಒಟ್ಟು 9 ಜನ ಈಗಾಗಲೇ ಇದಕ್ಕೆ ಬಲಿಯಾಗಿದ್ದಾರೆ.

ಬ್ಲ್ಯಾಕ್ ಫಂಗಸ್ ಗೆ ಬೆಂಗಳೂರಿನಲ್ಲಿ ಇಬ್ಬರು, ಬಾಗಲಕೋಟೆ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ತಲಾ ಒಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದವರು ಕೂಡ ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಕೊರೊನಾದಿಂದ ಗುಣಮುಖರಾಗಿರುವ ಮಧುಮೇಹ ರೋಗಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ವಿಪರೀತ ಸ್ಟೀರಾಯ್ಡ್‌ ಬಳಕೆಯಿಂದಾಗಿ ದೇಹದ ರೋಗ ನಿರೋಧಕ ಶಕ್ತಿ ಕುಸಿದು ಅತಿ ಸೂಕ್ಷ್ಮ ಶಿಲೀಂಧ್ರಗಳ ದಾಳಿಗೆ ಕಂಗೆಡುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಪ್ರಾರಂಭದಲ್ಲಿ ಮೂಗು, ಶ್ವಾಸಕೋಶ, ಕಣ್ಣು ಮತ್ತು ಬಳಿಕ ಮೆದುಳಿಗೆ ಫಂಗಸ್‌ ದಾಳಿ ನಡೆಸುತ್ತದೆ. ಈ ರೋಗದ ಲಕ್ಷಣ ಕಂಡು ಬಂದ ಕೂಡಲೇ ಆಸ್ಪತ್ರೆಗೆ ತೆರಳಬೇಕು ಎಂದು ವೈದ್ಯರು ಕಿವಿ ಮಾತು ಹೇಳುತ್ತಿದ್ದಾರೆ.

ಬ್ಲ್ಯಾಕ್ ಪಂಗಸ್ ಗೆ ಕೊಡುವ ಆಂಫೊಟೆರಿಸಿನ್‌ – ಬಿ ಇಂಜೆಕ್ಷನ್‌ ಮಾರುಕಟ್ಟೆಯಲ್ಲಿ ದುಬಾರಿಯಾಗಿದ್ದು, ವಿರಳವಾಗಿದೆ ಕೂಡ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಇತ್ತ ಗಮನ ಹರಿಸಬೇಕು ಎಂದು ವೈದ್ಯರು ಮನವಿ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ 1500 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು, 50ಕ್ಕಿಂತ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

ತರಕಾರಿಯ ನೆಪ, ಮಾರುಕಟ್ಟೆಯ ತುಂಬೆಲ್ಲ ಜನ..ಕಂಡು ಕಾಣದಂತಿರುವ ನಗರಸಭೆ!

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ, ಜನಕ್ಕೆ ಮಾತ್ರ ಇನ್ನೂ ಬುದ್ಧಿ ಬಂದಿಲ್ಲ.

ಬೆಟಗೇರಿಯಲ್ಲಿ ಬೆಳಿಗ್ಗೆಯಿಂದಲೇ ಮಾರುಕಟ್ಟೆಗೆ ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ತರಕಾರಿ ಖರೀದಿ ಹೆಸರಿನಲ್ಲಿ ಮನೆಯಿಂದ ಜನ ಹೊರಗೆ ಬರುತ್ತಿದ್ದಾರೆ. ಇನ್ನೊಂದೆಡೆ ವ್ಯಾಪಾರಸ್ಥರು ಕೂಡ ಗ್ರಾಹಕರಂತೆ ಬೇಜವಾಬ್ದಾರಿತನ ಮೆರೆಯುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಾಗೂ ಮಾಸ್ಕ್ ಧರಿಸಿದೆ ಕೊರೊನಾ ಹರಡುವ ಎಲ್ಲ ಕಾರ್ಯಗಳು ಸದ್ಯ ಇಲ್ಲಿಯ ಮಾರುಕಟ್ಟೆಯಲ್ಲಿ ನಡೆಯುತ್ತಿವೆ.

ಮಾಂಸ, ತರಕಾರಿ ಹಾಗೂ ಹಣ್ಣುಗಳನ್ನು ಖರೀದಿ ಮಾಡುಲು ಜನ ಮುಗಿ ಬೀಳುತ್ತಿದ್ದಾರೆ. ತಳ್ಳುವ ಗಾಡಿಯ ಮೂಲಕ ತರಕಾರಿ, ಹಣ್ಣು ಮಾರಲು ಸರ್ಕಾರ ಅವಕಾಶ ನೀಡಿದ್ದರೂ ಮಾರುಕಟ್ಟೆಯಲ್ಲಿಯೇ ವ್ಯವಹಾರ ಮಾಡಲಾಗುತ್ತಿದೆ. ಇದರಿಂದಾಗಿ ಗುಂಪು ಗೂಡಿ ಜನ ಖರೀದಿಸುತ್ತಿದ್ದಾರೆ. ಇದನ್ನು ಕಂಡ ಗದಗ – ಬೆಟಗೇರಿ ನಗರಸಭೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಕೊರೊನಾ ಮನೆ ಮನೆಯ ಒಳಗೂ ಹೋಗುವುದರಲ್ಲಿ ಸಂಶಯವೇ ಇಲ್ಲ ಎಂದು ಪ್ರಜ್ಞಾವಂತರು ಮಾತನಾಡಿಕೊಳ್ಳುತ್ತಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಎಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಗೊತ್ತಾ?

ವಿಜಯಸಾಕ್ಷಿ ಸುದ್ದಿ, ನವದೆಹಲಿ

ದೇಶದಲ್ಲಿ ಕೊರೊನಾ 2ನೇ ಅಲೆ ಜೋರಾಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,11,170 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಈ ಅವಧಿಯಲ್ಲಿ 4,077 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,46,84,077ಕ್ಕೆ ಏರಿಕೆಯಾಗಿದ್ದು, ಬಲಿಯಾದವರ ಸಂಖ್ಯೆ 2,70,284ಕ್ಕೆ ತಲುಪಿದೆ.

ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 36,18,458ಕ್ಕೆ ಏರಿಕೆಯಾಗಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 3,62,437 ಜನ ಗುಣಮುಖರಾಗಿ ದೇಶದ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಲಾಗಿದೆ.

ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 18,22,20,164 ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕೊರೊನಾ ರೋಗಿಗಳಿಗೆ ವಿಡಿಯೋ ಕಾಲ್ ಮಾಡಿ ಧೈರ್ಯ ತುಂಬುತ್ತಿರುವ ಗವಿಮಠದ ಶ್ರೀ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ವಿಡಿಯೋ ಕಾಲ್ ಮಾಡಿ ಕೊರೊನಾ ರೋಗಿಗಳಲ್ಲಿ ಧೈರ್ಯ ತುಂಬುವ ಕಾರ್ಯವನ್ನು ಗವಿಮಠದ ಶ್ರೀ ಮಾಡಿದ್ದಾರೆ.
ಶ್ರೀಗಳು ಇತ್ತೀಚೆಗಷ್ಟೇ ವೃದ್ಧಾಶ್ರಮದಲ್ಲಿ 100 ಬೆಡ್ ಗಳ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ತೆರೆದಿದ್ದರು. ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ದಾಖಲಾದ ರೋಗಿಗಳಿಗೆ ವೀಡಿಯೋ ಕಾಲ್ ಮಾಡಿ ಧೈರ್ಯ ತುಂಬಿದ್ದಾರೆ.

ಆರೋಗ್ಯ ವಿಚಾರಿಸಿ, ಯಾವುದೇ ರೀತಿಯ ಭಯಪಡದಂತೆ ರೋಗಿಗಳಲ್ಲಿ ಧೈರ್ಯ ತುಂಬಿದ್ದಾರೆ. ವೀಡಿಯೋ ಕಾಲ್ ಮೂಲಕ ಧೈರ್ಯ ತುಂಬಿದ ಶ್ರೀಗಳಿಗೆ ರೋಗಿಗಳು ಸಂತಸದಿಂದ ಕೈ ಮುಗಿದಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಬೆಡ್ ಫುಲ್ ಆಗುತ್ತಿದ್ದಂತೆ ಗವಿಮಠದಿಂದ 100 ಬೆಡ್ ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ. ಗವಿ ಮಠದ ಸ್ವಾಮೀಜಿ ಕಾರ್ಯಕ್ಕೆ ಸಿಎಂ ಯಡಿಯೂರಪ್ಪ ಅವರು ಕೂಡ ಧನ್ಯವಾದ ಅರ್ಪಿಸಿದ್ದಾರೆ.

ಒಟ್ಟು 100 ಹಾಸಿಗೆಯಲ್ಲಿ 70 ಆಕ್ಸಿಜನ್ ಬೆಡ್, 20 ಸಾಮಾನ್ಯ ಬೆಡ್ ಮಾಡಲಾಗಿದೆ. ಬಾಕಿ 10 ಬೆಡ್ ನಲ್ಲಿ 6 ಎಚ್‍ ಎಫ್ ಎನ್ ಸಿ ಬೆಡ್ ಮತ್ತು 4 ವೆಂಟಿಲೇಟರ್ ಬೆಡ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ವಾಮೀಜಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸೋಂಕಿಗೆ ತಾಯಿ ಬಲಿ..ನೋಡಲು ಬಂದ ಮಗ ತಾಯಿಯೊಂದಿಗೆ ಹೋದ!

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ಮಹಾಮಾರಿಗೆ ಬಲಿಯಾಗಿದ್ದ ತಾಯಿಯನ್ನು ಕೊನೆಯ ಬಾರಿ ನೋಡಲು ಬಂದಿದ್ದ ಮಗ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತಾಲೂಕಿನ ಹುರುಳಿನಂಜನಪುರ ಗ್ರಾಮದಲ್ಲಿ ನಡೆದಿದೆ. ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಅವರ ಅತ್ತೆ ಸರೋಜಮ್ಮ(76) ಮಹಾಮಾರಿಗೆ ಬಲಿಯಾಗಿದ್ದರು.

ಕೊನೆಯ ಬಾರಿಗೆ ತಾಯಿಯನ್ನು ನೋಡಲು ಬೆಂಗಳೂರಿನಿಂದ ಬಂದಿದ್ದ ಮಗ ಸುರೇಶ್ ಕುಮಾರ್ (53) ಕೂಡ ಅಂತ್ಯಕ್ರಿಯೆ ನಡೆಯುವ ಸ್ಥಳದಿಂದ ಸ್ವಲ್ಪ ದೂರದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ತಾಯಿ, ಮಗ ಇಬ್ಬರೂ ಒಂದೇ ದಿನ ಸಾವನ್ನಪ್ಪಿದ್ದು, ಕುಟುಂಬದ ನೀರವ ಮೌನಕ್ಕೆ ಕಾರಣವಾಗಿದೆ.

ಆರೋಗ್ಯ ಇಲಾಖೆಯ ಯಡವಟ್ಟು; ಗ್ರಾಮದಲ್ಲಿ ಮನೆ ಮಾಡಿದ ಆತಂಕ!

ವಿಜಯಸಾಕ್ಷಿ ಸುದ್ದಿ, ಹಾವೇರಿ

ರಾಜ್ಯದಲ್ಲಿ ಈಗಾಗಲೇ ಕೊರೊನಾ 2ನೇ ಅಲೆ ಶುರುವಾಗಿದೆ. ಹಳ್ಳಿ ಹಳ್ಳಿಗೂ ಕೊರೊನಾ ಲಗ್ಗೆಯಿಟ್ಟಿದೆ. ಲಸಿಕೆ, ಚಿಕಿತ್ಸೆಯ ಕೊರತೆಗಳ ಮಧ್ಯೆ ಜನ ಪ್ರಾಣ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಈ ಸಂದರ್ಭದಲ್ಲಿಯೇ ಆರೋಗ್ಯ ಇಲಾಖೆಯ ಮತ್ತೊಂದು ಯಡವಟ್ಟು ಬೆಳಕಿಗೆ ಬಂದಿದೆ.
ಕೊವೀಡ್ ನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಕೊರೊನಾದಿಂದ ಸತ್ತಿಲ್ಲ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಶವವನ್ನು ಹಸ್ತಾಂತರ ಮಾಡಿದ್ದಾರೆ. ಈ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದಲ್ಲಿ ನಡೆದಿದೆ. ಸದ್ಯ ನಿಜ ಸಂಗತಿ ತಿಳಿಯುತ್ತಿದ್ದಂತೆ ಜನ ಆತಂಕದಲ್ಲಿ ಬದುಕುವಂತಾಗಿದೆ.

ಮೇ. 10ರಂದು ಗ್ರಾಮದ 50 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು. ಆದರೆ, ಅನಾರೋಗ್ಯದಿಂದ ಮೃತಪಟ್ಟಿದ್ದಾನೆ ಎಂದು ಮೃತ ದೇಹವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಅಂತ್ಯಕ್ರಿಯೆ ಮುಗಿದ ಮೂರು ದಿನಗಳ ನಂತರ ಮೃತನ ವರದಿ ಬಂದಿದ್ದು, ಅದರಲ್ಲಿ ಕೊರೊನಾ ಪಾಸಿಟಿವ್ ಇದೆ ಎನ್ನಲಾಗಿದೆ. ಹೀಗಾಗಿ ಇಡೀ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಕೊರೊನಾ ಇಲ್ಲವೆಂದು ಅಂತ್ಯಕ್ರಿಯೆಯಲ್ಲಿ ಸಂಬಂಧಿಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಆರೋಗ್ಯ ಇಲಾಖೆ, ಸರಿಯಾದ ಮಾಹಿತಿ ನೀಡಿದ್ದರೆ ನಾವು ಕೊರೊನಾ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ಮಾಡುತ್ತಿದ್ದೇವು ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

ಹುಷಾರ್..! ಸದ್ದಿಲ್ಲದೆ ಯುವಕರ ಪ್ರಾಣವಾಯುವನ್ನೇ ನಿಲ್ಲಿಸುತ್ತಿದೆ ಮಹಾಮಾರಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ದೇಶಾದ್ಯಂತ ಸದ್ಯ ಕೊರೊನಾ ಎರಡನೇ ಅಲೆ ಜೋರಾಗಿದೆ. ಈ ಅಲೆಗೆ ಯುವ ಸಮುದಾಯವೇ ಹೆಚ್ಚಾಗಿ ಸೋಂಕಿಗೆ ಬಲಿಯಾಗುತ್ತಿದೆ. ಸುಮಾರು 35 ರಿಂದ 45 ವರ್ಷ ವಯಸ್ಸಿನೊಳಗಿನವರಲ್ಲಿಯೇ ಸೋಂಕಿನ ಗಂಭೀರತೆ ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ರೂಪಾಂತರಿ ಕೊರಾನಾದಿಂದಾಗಿ ಯುವಕರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ.

ಯುವಕರ ರಕ್ತದಲ್ಲಿ ಅಥವಾ ದೇಹದಲ್ಲಿ ಆಮ್ಲಜನಕದ ಪ್ರಮಾಣ ದಿಢೀರ್‌ ಕುಸಿಯುವ ‘ಹ್ಯಾಪಿ ಹೈಪೊಕ್ಸಿಯಾ’ದಿಂದ ಯುವಕರು ಸಾವನ್ನಪ್ಪುವಂತಾಗುತ್ತಿದೆ. ಆಕ್ಸಿಮೀಟರ್‌ ನಿಂದ ಸೋಂಕಿತರು ನಿಯಮಿತವಾಗಿ ತಮ್ಮ ಆಮ್ಲಜನಕ ಪ್ರಮಾಣ ಚೆಕ್‌ ಮಾಡಿಕೊಳ್ಳುವುದೊಂದೇ ಸದ್ಯದ ಪರಿಹಾರ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಹಳಷ್ಟು ಯುವಕರಿಗೆ ತಮ್ಮ ದೇಹದ ಆಮ್ಲಜನಕ ಪ್ರಮಾಣ ಇಳಿಕೆಯಾಗುತ್ತಿರುವುದು ತಕ್ಷಣಕ್ಕೆ ಗೊತ್ತಾಗುತ್ತಿಲ್ಲ. ಆಮ್ಲಜನಕದ ಪ್ರಮಾಣ ಶೇ. 20 ರಿಂದ 30ರಷ್ಟು ಇಳಿಕೆ ಕಂಡಾಗಲೇ ತಿಳಿಯುತ್ತಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಯುವಕರ ತುಟಿಗಳ ಬಣ್ಣ ಬದಲಾಗಿ ನೀಲಿಗೆ ತಿರುಗುವುದು. ಕೈ -ಕಾಲುಗಳ ಚರ್ಮದ ಬಣ್ಣ ಕೆಂಪಾಗುವುದು. ಏಕಾಏಕಿಯಾಗಿ ವಿಪರೀತ ಬೆವರುವುದು ಕಂಡು ಬರುತ್ತಿದ್ದರೆ, ಯುವಕರು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ.

ಅಂತ್ಯಕ್ರಿಯೆ ನಡೆಯಬೇಕು ಎನ್ನುವಷ್ಟರಲ್ಲಿಯೇ ಕಣ್ಣು ತೆರೆದ ಸೋಂಕಿತ ಮಹಿಳೆ

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಸೋಂಕಿತ ಮಹಿಳೆಯೊಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆಂದು ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆ ನಡೆದಿತ್ತು. ಕುಟುಂಬದವರ ಆಕ್ರಂದನ ಕೂಡ ಮುಗಿಲು ಮುಟ್ಟಿತು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಇನ್ನೇನು ಅಂತ್ಯಕ್ರಿಯೆ ನಡೆಯಬೇಕು ಎನ್ನುವಷ್ಟರಲ್ಲಿಯೇ ಮಹಿಳೆ ಎದ್ದು ಕುಳಿತಿರುವ ಘಟನೆ ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದಿದೆ.

76 ವರ್ಷದ ಮಹಿಳೆ ಈ ರೀತಿಯಾಗಿ ಎದ್ದು ಕುಳಿತಿದ್ದಾರೆ. ಅಂತ್ಯಸಂಸ್ಕಾರಕ್ಕೂ ಕೆಲವೇ ನಿಮಿಷಗಳಿರುವಾಗ ಎಚ್ಚರಗೊಂಡು ಎದ್ದು ಕುಳಿತಿದ್ದಾರೆ. ಶಕುಂತಲಾ ಗಾಯಕ್‌ವಾಡ್ ಅವರಿಗೆ ಇತ್ತೀಚೆಗಷ್ಟೇ ಸೋಂಕು ತಗುಲಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲ. ಅವರನ್ನು ಕಾರಿನಲ್ಲಿಯೇ ಇರಿಸಿಕೊಳ್ಳಲಾಗಿತ್ತು. ಆದರೆ, ಅವರು ಕಾರಿನಲ್ಲಿ ಕುಸಿದು ಬಿದ್ದಿದ್ದರು. ಹೀಗಾಗಿ ಕುಟುಂಬದವರು ಮಹಿಳೆ ಮೃತಪಟ್ಟಿದ್ದಾರೆಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು.

ಕೆಲವು ಸಮಯದ ನಂತರ ಮಹಿಳೆ ಕಣ್ಣು ತೆರೆದು ಅಳಲು ಪ್ರಾರಂಭಿಸಿದ್ದಾರೆ. ಕೂಡಲೇ ಕುಟುಂಬಸ್ಥರು ಚಿಕಿತ್ಸೆಗಾಗಿ ಮಹಿಳೆಯನ್ನು ಸಿಲ್ವರ್ ಜುಬ್ಲೀ ಆಸ್ಪತ್ರೆಗೆ ದಾಖಲಿಸಿದ್ದಾರೆ.

error: Content is protected !!