ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಗ್ರಾಮದೇವತೆಗಳಾದ ಶ್ರೀ ದ್ಯಾಮಮ್ಮ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರೆಯನ್ನು 12 ವರ್ಷಗಳ ಬಳಿಕ ಈ ಬಾರಿ ಅದ್ಧೂರಿಯಾಗಿ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಆಚರಿಸಲು ಭಕ್ತರು ನಿರ್ಧರಿಸಿದ್ದಾರೆ.
ನಗರದ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಭಕ್ತರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಗದಗ ನಗರದ 64 ವಿವಿಧ ಸಮಾಜಗಳ ಮುಖಂಡರು ಜಾತ್ರೆಯ ಯಶಸ್ವಿ ಆಯೋಜನೆ ಕುರಿತು ಚರ್ಚಿಸಿದರು.
ಜಾತ್ರೆಯು ಆಗಸ್ಟ್ 18ರಿಂದ 28ರವರೆಗೆ ಒಕ್ಕಲಗೇರಿ ಓಣಿಯ ದ್ಯಾಮಮ್ಮನ ಕಟ್ಟೆ ಹಾಗೂ ಜೋಡ ಮಾರುತಿ ದೇವಸ್ಥಾನದ ಎದುರಿನ ದ್ಯಾಮಮ್ಮ–ದುರ್ಗಮ್ಮ ದೇವಸ್ಥಾನದಲ್ಲಿ ನಡೆಯಲಿದೆ.
ಆಗಸ್ಟ್ 18ರಂದು ದೇವಿಯರ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಜಾತ್ರೆಗೆ ಚಾಲನೆ ದೊರೆಯಲಿದೆ. ಬಳಿಕ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಆಗಸ್ಟ್ 24ರಂದು ಮಹಾ ಅನ್ನಸಂತರ್ಪಣೆ, ಆಗಸ್ಟ್ 25ರಂದು ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ನಗರದ ವಿವಿಧ ದೇವಸ್ಥಾನಗಳಿಗೆ ಉಡಿ ತುಂಬುವ ಮತ್ತು ಕಾಯಿ ಒಡೆಯುವ ಸಂಪ್ರದಾಯಗಳು ಜರುಗಲಿವೆ.
ಆಗಸ್ಟ್ 26ರಂದು ದೇವಿಯರ ಮೂರ್ತಿಗಳನ್ನು ಮಂಗಳ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಕಿಲ್ಲಾದ ದೇವಸ್ಥಾನಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಲಾಗುವುದು. ಆಗಸ್ಟ್ 28ರಂದು ಮಹಾಹೋಮ, ಅನ್ನಸಂತರ್ಪಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ಕೀರ್ತನಕಾರ ಕಲ್ಲಿನಾಥ ಶಾಸ್ತ್ರಿಗಳು ದೇವಿಯರ ಮಹಿಮೆ ಹಾಗೂ ಹರಿಜಾತ್ರೆಯ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್ ಸಮಿತಿ ಅಧ್ಯಕ್ಷ ಕೊಟ್ರಪ್ಪ ಕಮತರ ವಹಿಸಿದ್ದರು. ವಿವಿಧ ಸಮಾಜಗಳ ಮುಖಂಡರು, ಪದಾಧಿಕಾರಿಗಳು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.
ಜಾತ್ರೆಯ ಪ್ರಮುಖ ಕಾರ್ಯಕ್ರಮಗಳು
- ಆಗಸ್ಟ್ 18: ದೇವಿಯರ ಮೂರ್ತಿ ಪ್ರತಿಷ್ಠಾಪನೆ
- ಆಗಸ್ಟ್ 18–25: ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು
- ಆಗಸ್ಟ್ 24: ಮಹಾ ಅನ್ನಸಂತರ್ಪಣೆ
- ಆಗಸ್ಟ್ 25: ಮುತೈದೆಯರಿಗೆ ಉಡಿ ತುಂಬುವ ಹಾಗೂ ಕಾಯಿ ಒಡೆಯುವ ಕಾರ್ಯಕ್ರಮ
- ಆಗಸ್ಟ್ 26: ದ್ಯಾಮಮ್ಮ–ದುರ್ಗಮ್ಮ ದೇವಿಯರ ಭವ್ಯ ಮೆರವಣಿಗೆ ಮತ್ತು ಮೂರ್ತಿ ಪ್ರತಿಷ್ಠಾಪನೆ
- ಆಗಸ್ಟ್ 28: ಮಹಾಹೋಮ, ಅನ್ನಸಂತರ್ಪಣೆ ಹಾಗೂ ಸಮಾರೋಪ
64 ಸಮಾಜಗಳ ಭಕ್ತರ ಸಾಥ್
ಹಲವು ವರ್ಷಗಳ ಬಳಿಕ ನಡೆಯುತ್ತಿರುವ ಹರಿಜಾತ್ರೆಯನ್ನು ಯಶಸ್ವಿಗೊಳಿಸಲು ಗದಗ ನಗರದ 64 ವಿವಿಧ ಸಮಾಜಗಳ ಮುಖಂಡರು ತನು-ಮನ-ಧನದಿಂದ ಸಹಕರಿಸುವುದಾಗಿ ಸಭೆಯಲ್ಲಿ ಸಂಕಲ್ಪ ಕೈಗೊಂಡರು. ಜಾತ್ರೆಯನ್ನು ಐತಿಹಾಸಿಕವಾಗಿ ಆಚರಿಸಲು ಎಲ್ಲ ಸಮಾಜಗಳ ಸಕ್ರಿಯ ಭಾಗವಹಿಸುವಿಕೆಗೆ ಕರೆ ನೀಡಲಾಯಿತು.

