ಬೆಂಗಳೂರು: ಮನೆ ಖರ್ಚಿಗೆ ₹5 ಸಾವಿರ ಕೇಳಿದ್ದ ವಿಚಾರಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ 73 ವರ್ಷದ ವೃದ್ಧ ಪತಿಯ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಆದರೆ, ತಪ್ಪಿಗೆ ಪ್ರಾಯಶ್ಚಿತ್ತವಾಗಿ ಅರ್ಜಿಯ ಮುಂದಿನ ವಿಚಾರಣೆವರೆಗೆ ಪತ್ನಿಗೆ ಪ್ರತಿ ತಿಂಗಳು ₹10 ಸಾವಿರ ಪಾವತಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ಬಸವೇಶ್ವರನಗರ ನಿವಾಸಿಯಾಗಿರುವ 73 ವರ್ಷದ ವ್ಯಕ್ತಿಯೊಬ್ಬರು ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿ ಈ ಮಧ್ಯಂತರ ಆದೇಶ ನೀಡಿದೆ.
ಅರ್ಜಿದಾರರ ಪರ ವಕೀಲರು, ಪತಿ (73) ಮತ್ತು ಪತ್ನಿ (65) ವಯೋವೃದ್ಧ ದಂಪತಿಯಾಗಿದ್ದು, ಅವರಿಗೆ ವಯಸ್ಕ ಪುತ್ರ ಹಾಗೂ ಪುತ್ರಿಯಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಮನೆ ಖರ್ಚಿಗೆ ಹಣ ಕೇಳಿದ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪ್ರಕರಣ ಸಂಧಾನದ ಮೂಲಕ ಬಗೆಹರಿಯುವ ಸಾಧ್ಯತೆ ಇದೆ ಎಂದು ವಾದ ಮಂಡಿಸಿದರು.
ಈ ವೇಳೆ ನ್ಯಾಯಪೀಠ, “ಮನೆ ಖರ್ಚಿಗೆ ಹಣ ಕೇಳಿದರೆ 73 ವರ್ಷದವರಾಗಿದ್ದರೂ ಪತ್ನಿಗೆ ಬೈದು, ಹಲ್ಲೆ ಮಾಡುತ್ತಾರೆಯೇ? ಹೊಡೆಯುವುದಕ್ಕೂ ಬೈಯುವುದಕ್ಕೂ ವಯಸ್ಸಿನ ಮಿತಿ ಇಲ್ಲವೇ?” ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು.
65 ವರ್ಷದ ಪತ್ನಿ ಹಲ್ಲೆ ಮತ್ತು ಕಿರುಕುಳದ ಆರೋಪ ಮಾಡಿರುವುದನ್ನು ಉಲ್ಲೇಖಿಸಿದ ನ್ಯಾಯಾಲಯ, “ಈ ವಯಸ್ಸಿನಲ್ಲೇ ಪತಿ ಈ ರೀತಿಯಾಗಿ ವರ್ತಿಸುತ್ತಿದ್ದರೆ, ಹಿಂದೆ ಹೇಗೆ ನಡೆದುಕೊಂಡಿರಬಹುದು?” ಎಂದು ಕೂಡ ಪ್ರಶ್ನಿಸಿತು.
ವಿಚಾರಣೆ ವೇಳೆ ಪತ್ನಿ ಮನೆ ಖರ್ಚಿಗೆ ಎಷ್ಟು ಹಣ ಕೇಳಿದ್ದರು ಎಂದು ನ್ಯಾಯಪೀಠ ಪ್ರಶ್ನಿಸಿದಾಗ, ಅರ್ಜಿದಾರರ ಪರ ವಕೀಲರು ₹5 ಸಾವಿರ ಕೇಳಿದ್ದರು ಎಂದು ಉತ್ತರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, “ತನಿಖೆಗೆ ತಡೆಯಾಜ್ಞೆ ನೀಡಬೇಕಾದರೆ, ಪತ್ನಿ ಕೇಳಿದ್ದಕ್ಕಿಂತ ಹೆಚ್ಚು ಹಣ ಕೊಡುತ್ತೀರಾ?” ಎಂದು ಪ್ರಶ್ನಿಸಿದರು. ಇದಕ್ಕೆ ಅರ್ಜಿದಾರರ ಪರ ವಕೀಲರು ಒಪ್ಪಿಗೆ ಸೂಚಿಸಿದರು.
ಇದಾದ ಬಳಿಕ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆ ನಡೆಯುವವರೆಗೆ ಅರ್ಜಿದಾರರು ತಮ್ಮ ಪತ್ನಿಗೆ ಪ್ರತಿ ತಿಂಗಳು ₹10 ಸಾವಿರ ಪಾವತಿಸಬೇಕು ಎಂದು ನಿರ್ದೇಶಿಸಿತು. ಜೊತೆಗೆ, ಪತಿಯ ವಿರುದ್ಧ ನಡೆಯುತ್ತಿರುವ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಪ್ರಕರಣದ ವಿಚಾರಣೆಯನ್ನು ಮುಂದೂಡಿತು.

