Home Blog

ಸ್ವಾತಂತ್ರ್ಯದ ಮೌಲ್ಯ ಅರಿತು ಕರ್ತವ್ಯ ಪಾಲಿಸೋಣ: ತಹಸೀಲ್ದಾರ್ ಧನಂಜಯ ಎಂ. ಕರೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸ್ವತಂತ್ರ ಭಾರತದ ಶತಮಾನೋತ್ಸವದತ್ತ ದೇಶ ಹೆಜ್ಜೆ ಹಾಕುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ‘ನಾವೆಲ್ಲ ಭಾರತಮಾತೆಯ ಮಕ್ಕಳು’ ಎಂಬ ಒಗ್ಗಟ್ಟಿನ ಮಂತ್ರದೊಂದಿಗೆ ನವಭಾರತ ನಿರ್ಮಾಣದ ಸಂಕಲ್ಪ ಕೈಗೊಂಡು ದೇಶದ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಹಸೀಲ್ದಾರ್ ಧನಂಜಯ ಎಂ. ಕರೆ ನೀಡಿದರು.

ಪಟ್ಟಣದ ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ನಡೆದ ೮೦ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

೧೯೪೭ರ ಆಗಸ್ಟ್ ೧೫ರಂದು ಭಾರತ ಸ್ವಾತಂತ್ರ್ಯ ಪಡೆದಿದ್ದು, ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ಹೋರಾಟದ ಫಲವಾಗಿದೆ. ಸ್ವಾತಂತ್ರ್ಯ ನಮಗೆ ಹಕ್ಕುಗಳ ಜತೆಗೆ ಕರ್ತವ್ಯಗಳನ್ನೂ ನೀಡಿದೆ. ಸಂವಿಧಾನದ ಆಶಯಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ಹಾಗೂ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ವಿಶ್ವದ ಗಮನ ಸೆಳೆಯುತ್ತಿದೆ. ಆದರೆ ಭ್ರಷ್ಟಾಚಾರ, ಭಯೋತ್ಪಾದನೆ, ಜಾತೀಯತೆ ಹಾಗೂ ಕೋಮುವಾದದಂತಹ ಸಮಸ್ಯೆಗಳನ್ನು ದೇಶ ಎದುರಿಸುತ್ತಿದೆ. ದೇಶದ ಸಂಪತ್ತಾಗಿರುವ ಯುವಜನತೆ ದುಶ್ಚಟಗಳು ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿದ್ದು, ಪ್ರಜ್ಞಾವಂತ ನಾಗರಿಕರಾಗಿ ದೇಶದ ಶ್ರೇಷ್ಠತೆ, ಏಕತೆ, ಸ್ವಚ್ಛತೆ ಹಾಗೂ ಪ್ರಗತಿಗಾಗಿ ಶ್ರಮಿಸಬೇಕು ಎಂದು ಹೇಳಿದರು.

ಲಕ್ಷ್ಮೇಶ್ವರ ತಾಲೂಕನ್ನು ಸ್ವಚ್ಛ, ಹಸಿರು ಹಾಗೂ ಅಭಿವೃದ್ಧಿ ಹೊಂದಿದ ತಾಲೂಕನ್ನಾಗಿ ರೂಪಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಪರಿಸರ ಸಂರಕ್ಷಣೆ, ನೀರಿನ ಉಳಿತಾಯ ಹಾಗೂ ಸಾರ್ವಜನಿಕ ಆಸ್ತಿಯ ರಕ್ಷಣೆಗೆ ಆದ್ಯತೆ ನೀಡಬೇಕು. ‘ದೇಶ ನನಗಾಗಿ ಏನು ಮಾಡಿದೆ ಎನ್ನುವುದಕ್ಕಿಂತ, ನಾನು ದೇಶಕ್ಕಾಗಿ ಏನು ಮಾಡಬಹುದು’ ಎಂಬ ಚಿಂತನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.

ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿ, ಈ ಭಾಗದ ಅನೇಕ ಗ್ರಾಮಗಳ ನೂರಾರು ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಅವರ ತ್ಯಾಗವನ್ನು ಸ್ಮರಿಸುತ್ತಾ ದೇಶಕ್ಕಾಗಿ ನಮ್ಮ ಕೊಡುಗೆ ಏನು ಎಂಬುದನ್ನು ಪ್ರತಿಯೊಬ್ಬರೂ ಚಿಂತಿಸಬೇಕು ಎಂದು ಹೇಳಿದರು.

ಧ್ವಜಾರೋಹಣದ ಬಳಿಕ ಪೊಲೀಸ್, ಎನ್‌ಸಿಸಿ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪಥಸಂಚಲನದ ನೇತೃತ್ವವನ್ನು ಪ್ರೊ. ಪಿಎಸ್‌ಐ ರಮಾಕಾಂತ ಗುಗ್ಗರಿ ವಹಿಸಿದ್ದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಬಿ.ಡಿ. ತಟ್ಟಿ ಕಿವುಡ ಮಕ್ಕಳ ಶಾಲೆ ಹಾಗೂ ಅರಳು ವಿಶೇಷಚೇತನ ಮಕ್ಕಳಿಂದ ನಡೆದ ವೇಷಭೂಷಣ ಮತ್ತು ದೇಶಭಕ್ತಿ ಗೀತೆಗಳ ನೃತ್ಯ ಗಮನ ಸೆಳೆಯಿತು. ಸ್ಕೂಲ್ ಚಂದನ ಶಾಲೆಯ ವಿದ್ಯಾರ್ಥಿಗಳ ವಿಶೇಷ ಬ್ಯಾಂಡ್ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

ಕಾರ್ಯಕ್ರಮದಲ್ಲಿ ಗ್ರೇಡ್–೨ ತಹಸೀಲ್ದಾರ ಮಂಜುನಾಥ ಅಮಾಸಿ, ತಾಪಂ ಇಒ ಮಂಜುಳಾ ಹಕಾರಿ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ಉಪನೋಂದಣಾಧಿಕಾರಿ ಎಸ್.ಕೆ. ಜಲರಡ್ಡಿ, ಪಿಎಸ್‌ಐ ನಾಗರಾಜ ಗಡದ, ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ನೌಕರರ ಸಂಘದ ಅಧ್ಯಕ್ಷ ಗುರುರಾಜ ಹವಳದ, ಸಿಡಿಪಿಒ ಮೃತ್ಯುಂಜಯ ಜಿ., ಪ್ರಶಾಂತ ಕಿಮಾಯಿ, ರೇಣುಕಾ ಶಿರಹಟ್ಟಿ, ಆರ್.ಬಿ. ಜೋಶಿ, ಬಿ.ಎಂ. ಯರಗುಪ್ಪಿ, ಉಮೇಶ ನೇಕಾರ, ಎನ್.ಎ. ಮುಲ್ಲಾ, ನವೀನ ಅಂಗಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಕಂದಾಯ ನಿರೀಕ್ಷಕ ಎಂ.ಎ. ನಧಾಪ್ ಸ್ವಾಗತಿಸಿದರು. ಶಿರಸ್ತೇದಾರ ಜಮೀರ ಮನಿಯಾರ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ ಕಾರ್ಯಕ್ರಮ ನಿರ್ವಹಿಸಿದರು.

“ಸ್ವಾತಂತ್ರ್ಯ ನಮಗೆ ಹಕ್ಕುಗಳ ಜತೆಗೆ ಕರ್ತವ್ಯಗಳನ್ನೂ ನೀಡಿದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು.”

— ಧನಂಜಯ ಎಂ., ತಹಸೀಲ್ದಾರ

ಯುವಜನತೆ ದೇಶದ ಭವಿಷ್ಯ; ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ: ಉಪತಹಶೀಲ್ದಾರ್ ಎಸ್.ಎಸ್. ಬಿಚ್ಚಾಲಿ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಇಂದಿನ ಯುವಜನತೆ ದೇಶದ ಭವಿಷ್ಯವಾಗಿದ್ದು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು, ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಉಪತಹಶೀಲ್ದಾರ್ ಎಸ್.ಎಸ್. ಬಿಚ್ಚಾಲಿ ಹೇಳಿದರು.

ಡಂಬಳ ಗ್ರಾಮದ ಇಂಗ್ಲಿಷ್ ಮಾಧ್ಯಮ ಉರ್ದು ಶಾಲೆಯಲ್ಲಿ ನಡೆದ ೮೦ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಜಾತಿ, ಧರ್ಮ, ಭಾಷೆ ಹಾಗೂ ಪ್ರದೇಶದ ಭೇದಗಳನ್ನು ಮೀರಿ ‘ನಾವು ಭಾರತೀಯರು’ ಎಂಬ ಭಾವನೆಯೊಂದಿಗೆ ಮುನ್ನಡೆಯಬೇಕು. ದೇಶದ ಸಂವಿಧಾನ ನಮಗೆ ಹಕ್ಕುಗಳ ಜತೆಗೆ ಕರ್ತವ್ಯಗಳನ್ನೂ ನೀಡಿದೆ. ಪ್ರತಿಯೊಬ್ಬ ನಾಗರಿಕರೂ ಕಾನೂನುಗಳನ್ನು ಗೌರವಿಸುವುದು, ಪರಿಸರ ಸಂರಕ್ಷಿಸುವುದು, ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು ಹಾಗೂ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಬೆಳೆಸುವುದು ತಮ್ಮ ಜವಾಬ್ದಾರಿ ಎಂದು ಅವರು ಹೇಳಿದರು.

ಸಮಾಜದ ಹಿರಿಯರಾದ ಹುಸೇನಸಾಬ ಹೊಸಬಾವಿ ಹಾಗೂ ಸಮಾಜಸೇವಕ ಬುಡ್ನೆಸಾಬ ಅತ್ತಾರ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಗದಗ ಜಿಲ್ಲೆಯ ಹೋರಾಟಗಾರರ ಪಾತ್ರ ಮಹತ್ವದ್ದಾಗಿದೆ. ಮುಂಡರಗಿ ಭೀಮರಾಯ, ಹಮ್ಮಿಗೆ ಕೆಂಚನಗೌಡ, ಇಟಗಿಯ ವೀರಭದ್ರಯ್ಯ, ಶಿರೂರು ವೀರಭದ್ರಪ್ಪ, ಶಿವಮೂರ್ತಿಸ್ವಾಮಿ ಅಳವಂಡಿ, ಜನಾರ್ದನರಾಯ ದೇಸಾಯಿ, ಎಲ್.ಕೆ. ಷರೀಫ್, ಬಿಂದು ಮಾಧವರಾವ್, ಕಂಪ್ಲಿಮನಿ, ಬಿ.ಕೆ. ಪ್ರಾಣೇಶಾಚಾರ್ಯ, ಮುರಡಿ ಭೀಮಜ್ಜ ಸೇರಿದಂತೆ ಅನೇಕ ಹೋರಾಟಗಾರರ ತ್ಯಾಗವನ್ನು ಸ್ಮರಿಸಬೇಕು ಎಂದರು.

ಸ್ವಾತಂತ್ರ್ಯ ಹೋರಾಟಗಾರರು ಜಾತಿ, ಮತ, ಪಂಥದ ಭೇದವಿಲ್ಲದೆ ಜನರನ್ನು ಒಗ್ಗೂಡಿಸಿ ಹೋರಾಡಿದರು. ಅವರ ತ್ಯಾಗ, ಹೋರಾಟ ಹಾಗೂ ದೇಶಭಕ್ತಿಯ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಜುಮನ ಸಮಿತಿ ಅಧ್ಯಕ್ಷ ಬಶೀರಹಮ್ಮದ ತಾಂಬೋಟಿ ಅವರು ಶಾಲೆಯ ಒಂದನೇ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ತಲಾ ₹೧,೦೦೦ ವಿತರಿಸಿದರು. ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮಹಬೂಬ ಕಾಸ್ತಾರ, ಅಂಜುಮನ ಅಧ್ಯಕ್ಷ ಬಶೀರಹಮ್ಮದ ತಾಂಬೋಟಿ, ಕಂದಾಯ ಅಧಿಕಾರಿ ಪ್ರಭು ಬಾಗಲಿ, ಮುಖ್ಯೋಪಾಧ್ಯಾಯ ಎಸ್.ಎಂ. ಶೇಖ, ಗ್ರಾಮ ಆಡಳಿತಾಧಿಕಾರಿ ಲಕ್ಷ್ಮಣ ಗುಡಸಲಮನಿ, ಎಂ.ಎಂ. ವಿಭೂತಿ, ಸಾಗರ ಚಿತ್ರಗಾರ, ಮುದಕೇಶ ತಳಗೇರಿ, ಎನ್.ಬಿ. ಶೇಖ, ಎಸ್.ಬಿ. ಕನವಳ್ಳಿ, ಹಸೀನಾ ಬಿ., ಎಸ್‌ಡಿಎಂಸಿ ಸದಸ್ಯರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಇದ್ದರು.

ತಿಮ್ಮಾಪೂರದಲ್ಲಿ ಸ್ವಾತಂತ್ರ್ಯೋತ್ಸವ, ಸಂಗೊಳ್ಳಿ ರಾಯಣ್ಣ ಜಯಂತಿ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ೮೦ನೇ ಸ್ವಾತಂತ್ರ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಮುಂಭಾಗದಲ್ಲಿ ಮಾಜಿ ಸೈನಿಕರಾದ ಈಶಪ್ಪ ತಳಕಲ್ ಹಾಗೂ ಹನುಮಪ್ಪ ಜೋಗಿನ ಧ್ವಜಾರೋಹಣ ನೆರವೇರಿಸಿದರು. ದೇಶಕ್ಕಾಗಿ ಸೇವೆ ಸಲ್ಲಿಸಿದ ಮಾಜಿ ಸೈನಿಕರ ಕೈಯಿಂದ ರಾಷ್ಟ್ರಧ್ವಜ ಹಾರಿಸಲಾಯಿತು.

ಈ ಸಂದರ್ಭದಲ್ಲಿ ಕೆವಿಎಸ್‌ಆರ್ ಕಾಲೇಜಿನ ಮುಖ್ಯೋಪಾಧ್ಯಾಯ ರಾಮಣ್ಣ ಕುರುಡಗಿ ಮಾತನಾಡಿ, ಸ್ವಾತಂತ್ರ್ಯದ ಮಹತ್ವ ಹಾಗೂ ಸಂಗೊಳ್ಳಿ ರಾಯಣ್ಣನ ತ್ಯಾಗ, ಹೋರಾಟದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಮಾತನಾಡಿ, ಇಂದಿನ ಯುವಕರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಧೈರ್ಯ, ದೇಶಭಕ್ತಿ ಹಾಗೂ ತ್ಯಾಗದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ನಿಜವಾದ ದೇಶಪ್ರೇಮವನ್ನು ತೋರಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಕುಕನೂರು ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ರಾಯಣ್ಣನ ಪುತ್ಥಳಿಗೆ ಹಾಲಿನ ಅಭಿಷೇಕ ನೆರವೇರಿಸಲಾಯಿತು. ಈ ವೇಳೆ ‘ಭಾರತ ಮಾತಾ ಕಿ ಜೈ’, ‘ಸಂಗೊಳ್ಳಿ ರಾಯಣ್ಣ ಕಿ ಜೈ’ ಎಂಬ ಘೋಷಣೆಗಳು ಮೊಳಗಿದವು.

ಬಸವರಾಜ ದೇವರವರ, ಹನುಮಪ್ಪ ಯತ್ನಟ್ಟಿ, ಬಸವರಾಜ ಜೋಗಿನ, ಉದಯ ಗಂಗರಾತ್ರಿ, ಸಿದ್ದಪ್ಪ ಹಾಗಲದ, ಹನುಮಪ್ಪ ಜೋಗಿನ, ರಾಮಣ್ಣ ಖಂಡ್ರೆ, ಮಾರುತಿ ಕಟಗಿ, ಶರಣಪ್ಪ ಜೋಗಿನ ಸೇರಿದಂತೆ ಗ್ರಾಮದ ಹಿರಿಯರು, ಯುವಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ರೈತ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆಗಳ ಗಾಯನ ಹಾಗೂ ಸಂಗೊಳ್ಳಿ ರಾಯಣ್ಣನ ಜೀವನ ಮತ್ತು ಹೋರಾಟವನ್ನು ಬಿಂಬಿಸುವ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು.

ಅರ್ಜಿ ಸಲ್ಲಿಸಿದ ದಿನವೇ ಜಾಬ್ ಕಾರ್ಡ್: ಶ್ರೀಧರ್ ಚಿನಗುಂಡಿ

0

ವಿಜಯಸಾಕ್ಷಿ ಸುದ್ದಿ, ನರಗುಂದ: ಗ್ರಾಮೀಣ ಕುಟುಂಬಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಕಸಿತ ಭಾರತ–ವ್ಹಿಬಿಜಿರಾಮ್ ಜಿ ಯೋಜನೆಯಡಿ ನರಗುಂದ ತಾಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ ಆ.15ರಿಂದ ಸೆ.15ರವರೆಗೆ ಜಾಬ್ ಕಾರ್ಡ್ ಮೇಳ ಹಾಗೂ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯ ಕೂಲಿಕಾರ್ಮಿಕರಿಗೆ ಯೋಜನೆಯಡಿ ಉದ್ಯೋಗ ಕಲ್ಪಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.

ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳ ಮಾಹಿತಿಯನ್ನು ಪರಿಶೀಲಿಸಿ, ಅಗತ್ಯವಿರುವವರಿಗೆ ಹೊಸ ಜಾಬ್ ಕಾರ್ಡ್ ವಿತರಿಸಬೇಕು. ಜಾಬ್ ಕಾರ್ಡ್ ನವೀಕರಣ, ಇ-ಕೆವೈಸಿ ಪೂರ್ಣಗೊಳಿಸುವಿಕೆ ಹಾಗೂ ಉದ್ಯೋಗದ ಬೇಡಿಕೆ ಸ್ವೀಕರಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಕುಟುಂಬಗಳಿಗೆ ನಿಯಮಾನುಸಾರ ಸ್ವೀಕೃತಿ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಮನೆ-ಮನೆಗೆ ತೆರಳಿ ಜಾಗೃತಿ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ-ಮನೆ ಭೇಟಿ ಮೂಲಕ ಯೋಜನೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಗ್ರಾಮಸಭೆ ಹಾಗೂ ಜಾಗೃತಿ ಸಭೆಗಳನ್ನು ನಡೆಸುವುದರ ಜತೆಗೆ ಪೋಸ್ಟರ್, ಬ್ಯಾನರ್‌ಗಳ ಮೂಲಕ ಜಾಬ್ ಕಾರ್ಡ್ ಮೇಳದ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕಾರ್ಮಿಕರ ಹಾಜರಾತಿ, ಕಾಮಗಾರಿಗಳ ಪ್ರಗತಿ ಹಾಗೂ ಸಂಬಂಧಿತ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಯಲ್ಲಿ ನಿರ್ವಹಿಸಬೇಕು. ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಬಂಧಿತ ಕಾರ್ಯಕರ್ತರು ಸಮನ್ವಯದಿಂದ ಕಾರ್ಯನಿರ್ವಹಿಸಿ ಅರ್ಹ ಕುಟುಂಬಗಳಿಗೆ ಯೋಜನೆಯ ಸೌಲಭ್ಯ ತಲುಪಿಸಬೇಕು ಎಂದರು.

ಉದ್ಯೋಗದ ಅವಕಾಶವನ್ನು ಅರ್ಹ ಕುಟುಂಬಗಳ ಮನೆಬಾಗಿಲಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಜಾಬ್ ಕಾರ್ಡ್, ಇ-ಕೆವೈಸಿ ಹಾಗೂ ಉದ್ಯೋಗದ ಬೇಡಿಕೆ ಸಲ್ಲಿಕೆ ಕುರಿತು ಯಾವುದೇ ಮಾಹಿತಿ ಅಗತ್ಯವಿದ್ದರೂ ಸಾರ್ವಜನಿಕರು ತಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬೇಕು. ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಜನರ ಸಹಕಾರ ಅಗತ್ಯ ಎಂದು ಹೇಳಿದರು.

ತಾಲೂಕಿನ ಎಲ್ಲ 13 ಗ್ರಾಮ ಪಂಚಾಯಿತಿಗಳ ಕೂಲಿಕಾರ್ಮಿಕರು ಜಾಬ್ ಕಾರ್ಡ್ ಮೇಳದ ಪ್ರಯೋಜನ ಪಡೆದುಕೊಂಡು ವ್ಹಿಬಿಜಿರಾಮ್ ಜಿ ಯೋಜನೆಯಡಿ ಉದ್ಯೋಗ ಪಡೆಯಬೇಕು ಎಂದು ಅವರು ಮನವಿ ಮಾಡಿದರು.

ಅರ್ಜಿ ಸಲ್ಲಿಸಿದ ದಿನವೇ ಜಾಬ್ ಕಾರ್ಡ್

ಜಾಬ್ ಕಾರ್ಡ್ ಹೊಂದಿರದ ಕೂಲಿಕಾರ್ಮಿಕರು ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು. ಅರ್ಹ ಕೂಲಿಕಾರ್ಮಿಕರು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೆ, ನಿಯಮಾನುಸಾರ ಅರ್ಜಿ ಸಲ್ಲಿಸಿದ ದಿನವೇ ಜಾಬ್ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀಧರ್ ಚಿನಗುಂಡಿ ತಿಳಿಸಿದರು.

ಅಮೃತ ಭೋಜನದಿಂದ ಮಕ್ಕಳ ಹಾಜರಾತಿ, ಪ್ರಗತಿಗೆ ಅನುಕೂಲ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶ್ರಾವಣ ಮಾಸದ ಅಂಗವಾಗಿ ನಗರದ ಶ್ರೀ ಕೃಷ್ಣಾಜಿ ರಂಗರಾವ್ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಮೃತ ಭೋಜನ ಕಾರ್ಯಕ್ರಮಕ್ಕೆ ಶಾಲಾ ಭೂದಾನಿ ಆನಂದರಾವ್ ಕುಲಕರ್ಣಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಾನಿಗಳ ನೆರವಿನಿಂದ ಶ್ರಾವಣ ಮಾಸದಲ್ಲಿ ಅಮೃತ ಭೋಜನ ಹಮ್ಮಿಕೊಂಡಿರುವುದು ಶಾಲಾ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಪೂರಕವಾಗಿದೆ. ಪ್ರತಿವರ್ಷ ಅಮೃತ ಭೋಜನ ಕಾರ್ಯಕ್ರಮ ನಡೆಯುವುದರಿಂದ ಮಕ್ಕಳ ಹಾಜರಾತಿ ಹಾಗೂ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಮುಖ್ಯ ಶಿಕ್ಷಕ ಎಸ್.ಬಿ. ನಿಡಗುಂದಿ ಮಾತನಾಡಿ, ಸರ್ಕಾರಿ ಶಾಲೆಗಳ ಬಗ್ಗೆ ಸಾರ್ವಜನಿಕರು ಹೊಂದಿರುವ ಅಭಿಮಾನಕ್ಕೆ ಅಮೃತ ಭೋಜನ ಕಾರ್ಯಕ್ರಮ ಸಾಕ್ಷಿಯಾಗಿದೆ. ಅನೇಕ ದಾನಿಗಳು ಪ್ರತಿವರ್ಷ ಕಾರ್ಯಕ್ರಮಕ್ಕೆ ನೆರವು ನೀಡಲು ಮುಂದಾಗಿರುವುದು ಸಂತಸದ ಸಂಗತಿ. ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ದಾನಿಗಳು ಕೈಜೋಡಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.

ಶಿಕ್ಷಣ ಪ್ರೇಮಿ ಅರ್ಚನಾ ಕುಲಕರ್ಣಿ, ಶಿಕ್ಷಕರಾದ ಎಸ್.ಎಂ. ಹಳ್ಳದ, ಡಿ.ಎಸ್. ಬಡಿಗೇರ ಹಾಗೂ ಬಿ.ಟಿ. ತಾಳಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಹಲವು ಸೌಲಭ್ಯಗಳಿದ್ದು, ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ೧೨೦ ವಿದ್ಯಾರ್ಥಿಗಳು ಅಮೃತ ಭೋಜನ ಸವಿದು ಸಂತಸಪಟ್ಟರು. ಕಾರ್ಯಕ್ರಮಕ್ಕೆ ನೆರವು ನೀಡಿದ ದಾನಿಗಳಿಗೆ ವಿದ್ಯಾರ್ಥಿಗಳು ಹಾಗೂ ಶಾಲೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

ಶಿಕ್ಷಕಿ ಕೌಶಲ್ಯ ಕುರಿ ವಂದನಾರ್ಪಣೆ ಮಾಡಿದರು. ಪ್ರಶಿಕ್ಷಣಾರ್ಥಿಗಳಾದ ಶರಣು ಖವಾಸ್ತೆ ಹಾಗೂ ಗೂಳಪ್ಪ ಬೂದಿಹಾಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ವಿಜಯ ರಾಘವೇಂದ್ರ ಅಭಿನಯದ ‘ರುದ್ರಾಭಿಷೇಕಂ’ ಸೆ. 25ಕ್ಕೆ ತೆರೆಗೆ

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ನ್ಯಾಚುರಲ್ ಸ್ಟಾರ್ ವಿಜಯ ರಾಘವೇಂದ್ರ ದ್ವಿಪಾತ್ರದಲ್ಲಿ ಅಭಿನಯಿಸಿರುವ ‘ರುದ್ರಾಭಿಷೇಕಂ’ ಚಿತ್ರ ಸೆಪ್ಟೆಂಬರ್ ೨೫ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ.

‘ಪಾನ್ ಇಂಡಿಯಾ ಕ್ರಿಯೇಷನ್ಸ್’, ವಿಜಯಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಂಸ್ಥೆಯ ಮೂಲಕ ನಿರ್ಮಾಣಗೊಂಡಿರುವ ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಸಂಸ್ಥೆಯ ಮೊದಲ ಹೆಜ್ಜೆಯಾಗಿದೆ. ವೀರಭದ್ರ ಸ್ವಾಮಿಯ ಜಾನಪದ ಕಥೆಯನ್ನು ಆಧರಿಸಿರುವ ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರು ಹಿಂದೆಂದೂ ಕಾಣದ ವಿಭಿನ್ನ ಹಾಗೂ ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಶಿಷ್ಟ ವೀರಗಾಸೆ ಪಾತ್ರದಲ್ಲಿ ಮಿಂಚಿದ್ದಾರೆ.

ಸಾಹಸಮಯ ಕಥಾಹಂದರ ಹೊಂದಿರುವ ಚಿತ್ರಕ್ಕೆ ನಾದಬ್ರಹ್ಮ ವಿ. ಮನೋಹರ್ ಸಂಗೀತ ಸಂಯೋಜಿಸಿದ್ದು, ಥ್ರಿಲ್ಲರ್ ಮಂಜು ಅವರ ಸಾಹಸ ದೃಶ್ಯಗಳು ಪ್ರಮುಖ ಆಕರ್ಷಣೆಯಾಗಿವೆ. ದೇವನಹಳ್ಳಿ, ಗೋಕರ್ಣ, ಹೊನ್ನಾವರ, ಕುಮಟಾ, ಅಬ್ಬಕ್ಕ ಫೋರ್ಟ್ ಹಾಗೂ ಅಘನಾಶಿನಿ ಹಿನ್ನೀರಿನ ಪ್ರದೇಶಗಳಲ್ಲಿ ೫೦ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

ಚಿತ್ರವು ಈಗಾಗಲೇ ಕನ್ನಡ ಕಲಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಸೆಪ್ಟೆಂಬರ್ ೨೫ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಕೆ. ವಸಂತ್‌ಕುಮಾರ್ ತಿಳಿಸಿದ್ದಾರೆ.

ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರಿಗೆ ನಾಯಕಿಯಾಗಿ ‘ಮಿಲ್ಕ್ ಬ್ಯೂಟಿ’ ಪ್ರಿಯಾಂಕಾ ತಿಮ್ಮೇಶ್ ಅಭಿನಯಿಸಿದ್ದಾರೆ. ರಾಜ್ ಬಲವಾಡಿ, ವಸಂತ್ ಕುಮಾರ್, ಮನು, ಬುಲೆಟ್ ವಿನು, ಸಂದೀಪ್, ಸನತ್, ಸೌಂದರ್ಯ, ನವನೀತ್, ಮಮತಾ, ಸ್ವಾತಿ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.

ತಾಂತ್ರಿಕ ವರ್ಗದಲ್ಲಿ ಮುತ್ತುರಾಜ್ ಛಾಯಾಗ್ರಹಣ, ವಿ. ಮನೋಹರ್ ಸಂಗೀತ, ಭಜರಂಗಿ ಮೋಹನ್ ನೃತ್ಯ ಸಂಯೋಜನೆ, ಥ್ರಿಲ್ಲರ್ ಮಂಜು ಸಾಹಸ, ಬಾಬುಖಾನ್ ಕಲಾ ನಿರ್ದೇಶನ, ನೊಣವಿನಕೆರೆ ಕುಮಾರ ಪ್ರಸಾಧನ ಹಾಗೂ ಮುತ್ತುರಾಜ್.ಟಿ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ನಾಗೇಂದ್ರ, ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ್ ಹಂಡಿಗಿ ಪಿಆರ್‌ಒ ಆಗಿ ಕಾರ್ಯನಿರ್ವಹಿಸಿದ್ದಾರೆ.

ಕೆ. ವಸಂತ್‌ಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ಚಿತ್ರದ ಹಾಡುಗಳನ್ನು ರಚಿಸಿ, ತತ್ವಜ್ಞಾನಿ ಪಾತ್ರದಲ್ಲೂ ಅಭಿನಯಿಸಿದ್ದಾರೆ. ಮನು ಮತ್ತು ಧೀರಜ್ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಎನ್. ಜಯರಾಮ್, ಕೆ.ಎನ್. ಮಂಜುನಾಥ್, ಕೆ. ವೆಂಕಟೇಶ್, ಬಿ. ಚಿದಾನಂದ ಮೂರ್ತಿ, ಸುರೇಶ್ ಬಾಬು, ರವಿ, ಅಶ್ವಥನಾರಾಯಣ, ಡಾ. ಎಂ. ಶಿವಕುಮಾರ್ ಹಾಗೂ ಕುಸುಮ ವಸಂತ್ ಕುಮಾರ್ ಚಿತ್ರವನ್ನು ನಿರ್ಮಿಸಿದ್ದಾರೆ.

ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು

0
ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮಕ್ಕಳನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸಿ, ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಹೇಳಿದರು.
ಲಕ್ಕುಂಡಿ ಸಮೀಪದ ಹರ್ಲಾಪೂರ ಕೊಟ್ಟೂರೇಶ್ವರ ಮಠದಲ್ಲಿ ನಡೆದ ೩೨೦ನೇ ಶಿವಾನುಭವ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವ ಮಹತ್ವದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಾರ್ಥಕತೆ ಕಂಡುಕೊಂಡ ಶಿಕ್ಷಕರನ್ನು ಶಿವಾನುಭವ ಕಾರ್ಯಕ್ರಮದಲ್ಲಿ ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿ. ಪಾಲಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿದ ಕೂಟುಮುಚಗಿ ಗ್ರಾಮದ ನಿವೃತ್ತ ಶಿಕ್ಷಕ ಜೆ.ಎ. ಪಾಟೀಲ ಮಾತನಾಡಿ, ಪವಿತ್ರವಾದ ಶಿಕ್ಷಕ ವೃತ್ತಿಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ ತೃಪ್ತಿ ಇದೆ. ತಮ್ಮ ಶಿಕ್ಷಣ ಸೇವೆಯನ್ನು ಗುರುತಿಸಿ ಮಠದಿಂದ ಸನ್ಮಾನಿಸಿ ಗೌರವಿಸಿರುವುದು ಸಂತಸ ತಂದಿದೆ. ಪ್ರತಿಯೊಂದು ಶಿವಾನುಭವ ಕಾರ್ಯಕ್ರಮದಲ್ಲೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಪಿ. ಹೂಗಾರ ಮಾತನಾಡಿ, ಶಿಕ್ಷಕ ವೃತ್ತಿಯ ಸಾರ್ಥಕತೆಗೆ ಮಠದ ಗುರುಗಳ ಆಶೀರ್ವಾದ ಹಾಗೂ ಮಾರ್ಗದರ್ಶನ ಪ್ರಮುಖವಾಗಿದೆ ಎಂದರು. ನಿವೃತ್ತ ಶಿಕ್ಷಕ ಟಿ. ಉದಯಕುಮಾರ ಹಾಗೂ ಜೀವನಸಾಬ ಹಿರೇಹಾಳ ಮಾತನಾಡಿದರು.
ಶಿಕ್ಷಕ ಕೆ.ಆರ್. ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಬಿ. ವೀರಾಪೂರ ಹಾಗೂ ಮಂಜುನಾಥ ಅರ್ಕಸಾಲಿ ಸಂಗೀತ ಸೇವೆ ಸಲ್ಲಿಸಿದರು. ಮಹಾಲಿಂಗಪ್ಪ ಜಮಲಿಂಗಪ್ಪನವರ, ಶರಣಪ್ಪ ದೇಸಾಯಿ, ರಾಮಣ್ಣ ಬೆಳಧಡಿ, ವಿರುಪಾಕ್ಷಪ್ಪ ಹಡಪದ ಹಾಗೂ ದೇವೇಂದ್ರಪ್ಪ ಜಮಲಿಂಗಪ್ಪನವರ ವೇದಿಕೆಯಲ್ಲಿದ್ದರು. ವೆಂಕಟೇಶ ಜುಂಜಣಿ ನಿರೂಪಿಸಿ ವಂದಿಸಿದರು.

ಪರಿಸರ, ಗಿಡಮರ, ಪ್ರಾಣಿ–ಪಕ್ಷಿಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಲಿ: ತೋಂಟದ ಶ್ರೀ

0

ವಿಜಯಸಾಕ್ಷಿ ಸುದ್ದಿ, ಗದಗ: ಅನೇಕ ಮಹಾತ್ಮರ ತ್ಯಾಗ, ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ೮೦ನೇ ಸ್ವಾತಂತ್ರ್ಯೋತ್ಸವವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರಲ್ಲೂ ‘ನಮ್ಮ ದೇಶ, ನಾವೆಲ್ಲರೂ ಒಂದು’ ಎಂಬ ಭಾವನೆ ಬೆಳೆಯಬೇಕು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ದುರಾಸೆಯಿಂದ ಸುತ್ತಮುತ್ತಲಿನ ಪರಿಸರ, ಪ್ರಾಣಿ–ಪಕ್ಷಿಗಳು ಹಾಗೂ ನೈಸರ್ಗಿಕ ಸಂಪನ್ಮೂಲಗಳ ನಾಶ ಹೆಚ್ಚಾಗುತ್ತಿದೆ. ಗಿಡಮರ, ಪ್ರಾಣಿ–ಪಕ್ಷಿಗಳು ಮತ್ತು ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಅಣ್ಣಿಗೇರಿಯ ಶಿವಯೋಗಿ ಹುಬ್ಬಳ್ಳಿ ಹಾಗೂ ಶರಣಪ್ಪ ಸವಡಿ ಪಾಲ್ಗೊಂಡಿದ್ದರು. ಡಾ. ಜಿ.ಬಿ. ಪಾಟೀಲ, ಅಶೋಕ ಬರಗುಂಡಿ, ದಾನಯ್ಯ ಗಣಾಚಾರಿ, ಕರೆಗೌಡ್ರ, ವಿಜಯಕುಮಾರ ಮಾಲಗಿತ್ತಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ಶ್ರೀಮತಿ ಹಾಸಿಲಕರ ಕಾರ್ಯಕ್ರಮ ನಿರೂಪಿಸಿದರು. ಗುರುಬಸವ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಭಕ್ತಿ ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಬಾಲಚಂದ್ರ ಭರಮಗೌಡರ, ವಿರೂಪಾಕ್ಷಪ್ಪ ಬೊಳ್ಳೊಳ್ಳಿ, ರಾಜಪ್ಪ ಮೆಣಜಿಗಿ, ಚನ್ನಯ್ಯ ಹಿರೇಮಠ, ವೀರಣ್ಣ ಗೋಟಡಕಿ, ಗಿರಿಜಕ್ಕ ಧರ್ಮರೆಡ್ಡಿ, ಪ್ರಕಾಶ್ ಅಶುಂಡಿ, ಸೋಮು ಪುರಾಣಿಕ ಸೇರಿದಂತೆ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

“ನಮ್ಮ ದೇಶ, ನಾವೆಲ್ಲರೂ ಒಂದು ಎಂಬ ಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಪರಿಸರ, ಗಿಡಮರ ಹಾಗೂ ಪ್ರಾಣಿ–ಪಕ್ಷಿಗಳ ಸಂರಕ್ಷಣೆಯನ್ನು ನಮ್ಮೆಲ್ಲರ ಜವಾಬ್ದಾರಿಯನ್ನಾಗಿ ಮಾಡಿಕೊಳ್ಳಬೇಕು.”

— ತೋಂಟದಾರ್ಯ ಶ್ರೀಗಳು

ಗದಗದಲ್ಲಿ ಕೈಗಾರಿಕಾ ಪಾರ್ಕ್, ಟೆಕ್ಸಟೈಲ್ ಪಾರ್ಕ್ ಅನಿವಾರ್ಯ

0

ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ ಕೈಗಾರಿಕಾ ಜಡತ್ವಕ್ಕೆ ಸರ್ಕಾರವನ್ನು ದೂರುತ್ತಾ ಕೂರುವುದರಿಂದ ಪ್ರಯೋಜನವಿಲ್ಲ. ಸ್ಥಳೀಯ ನಾಯಕತ್ವ ಮತ್ತು ವಾಣಿಜ್ಯೋದ್ಯಮಿಗಳು ದೂರದೃಷ್ಟಿಯಿಂದ ಪ್ರಸ್ತಾವನೆ ಸಿದ್ಧಪಡಿಸಿ, ಸರ್ಕಾರದ ಬೆನ್ನತ್ತಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಆಯೋಜಿಸಿರುವ ‘ಗದಗ ಉತ್ಸವ’ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ತೆರಳುವ ಮುನ್ನ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಗದಗದ ವಾಣಿಜ್ಯೋದ್ಯಮ ಬೆಳೆಯಬೇಕಾದಷ್ಟು ಬೆಳೆದಿಲ್ಲ. ಹಲವು ವರ್ಷಗಳಿಂದ ಚೇಂಬರ್‌ನ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ಸಿಗದ ಕಾರಣ ಸಮಸ್ಯೆಗಳು ಗುಡ್ಡೆಯಾಗಿ ಉಳಿದಿವೆ. ಗದಗ-ರಾಯಚೂರು ಭಾಗದಲ್ಲಿ ಹತ್ತಿ ಬೆಳೆಯುತ್ತಿದ್ದರೂ ಅದನ್ನು ಕೊಯಮತ್ತೂರಿಗೆ ಕಳುಹಿಸುವ ಪರಿಸ್ಥಿತಿ ಇದೆ. ರಾಯಚೂರಿನಲ್ಲಿ ಲಾಂಗ್ ಸ್ಟೇಪಲ್ ಹತ್ತಿ ಲಭ್ಯವಿದ್ದರೂ ಮಿಲ್‌ಗಳು ಉಳಿಯಲಿಲ್ಲ. ತಂತ್ರಜ್ಞಾನ ಬದಲಾವಣೆಗೆ ಹೊಂದಿಕೊಳ್ಳದಿರುವುದು ಹಾಗೂ ಆರ್ಥಿಕ ವ್ಯವಸ್ಥೆಯ ಕೊರತೆ ಇದಕ್ಕೆ ಕಾರಣ ಎಂದು ಹೇಳಿದರು.

ವೈಯಕ್ತಿಕ ಪ್ರಯತ್ನದಿಂದ ಕೈಗಾರಿಕೀಕರಣ ಸಾಧ್ಯವಿಲ್ಲ. ಸರ್ಕಾರ ಕೈಗಾರಿಕಾ ಪಾರ್ಕ್‌ಗೆ ಜಾಗ ಮೀಸಲಿಟ್ಟು ರಿಯಾಯಿತಿ ನೀಡಬೇಕು. ಪಾರ್ಕ್‌ನಲ್ಲಿ ಒಂದು ಅಥವಾ ಎರಡು ದೊಡ್ಡ ಆಂಕರ್ ಕೈಗಾರಿಕೆಗಳು ಬಂದರೆ, ಅವುಗಳ ಸುತ್ತ ಸಣ್ಣ ಮತ್ತು ಸ್ವತಂತ್ರ ಕೈಗಾರಿಕೆಗಳು, ಸಾರಿಗೆ, ಲಾಜಿಸ್ಟಿಕ್ಸ್, ವಸತಿ ಹಾಗೂ ಸ್ಥಳೀಯ ವ್ಯಾಪಾರ-ವಹಿವಾಟು ಸೇರಿದಂತೆ ಇಡೀ ಕೈಗಾರಿಕಾ ವ್ಯವಸ್ಥೆ ಬೆಳೆಯಲಿದೆ ಎಂದರು.

ಗದಗ ಮತ್ತು ಹಾವೇರಿ ಜಿಲ್ಲೆಗಳ ಅಭಿವೃದ್ಧಿಗೆ ಎರಡು ಮಹತ್ವದ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವುದಾಗಿ ತಿಳಿಸಿದ ಅವರು, ಹಾವೇರಿ ಜಿಲ್ಲೆಯಲ್ಲಿ ಟೆಕ್ಸಟೈಲ್ ಪಾರ್ಕ್ ಹಾಗೂ ನೇಕಾರರಿಗೆ ನೆರವು ಒಳಗೊಂಡ ಹ್ಯಾಂಡ್ಲೂಮ್ ಯೋಜನೆ ರೂಪಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಗದಗದಲ್ಲೂ ಬೃಹತ್ ಟೆಕ್ಸಟೈಲ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.

ಈ ಸಂಬಂಧ ಗದಗ ಜಿಲ್ಲಾಧಿಕಾರಿಗಳಿಗೆ ೫೦ರಿಂದ ೧೦೦ ಎಕರೆ ಜಮೀನು ಗುರುತಿಸಲು ಸೂಚಿಸಲಾಗಿದೆ. ಜಾಗ ದೊರೆತರೆ ೫ರಿಂದ ೧೦ ಸಾವಿರ ಜನರಿಗೆ ನೇರ ಉದ್ಯೋಗ ಕಲ್ಪಿಸುವ ಪಾರ್ಕ್ ನಿರ್ಮಿಸಲು ಸಾಧ್ಯವಾಗಲಿದೆ. ರಾಜ್ಯ ಸರ್ಕಾರ ಶೀಘ್ರ ಜಾಗ ಮಂಜೂರು ಮಾಡಿದರೆ, ಡಿಸೆಂಬರ್ ಒಳಗೆ ಕೇಂದ್ರದ ಮಂಜೂರಾತಿ ಪಡೆಯುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.

ಗದಗ ಭಾಗದಲ್ಲಿ ಕಾಳು-ಕಡಿ ಬೆಳೆ ಹೆಚ್ಚಿರುವ ಹಿನ್ನೆಲೆಯಲ್ಲಿ ಫುಡ್ ಪ್ರೊಸೆಸಿಂಗ್ ಪಾರ್ಕ್‌ಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಟೆಕ್ಸಟೈಲ್ ಪಾರ್ಕ್ ಪ್ರಸ್ತಾವನೆ ಮುಂದುವರಿದಿದ್ದು, ಫುಡ್ ಪ್ರೊಸೆಸಿಂಗ್ ಪಾರ್ಕ್ ಪ್ರಕ್ರಿಯೆ ನಿಧಾನವಾಗಿದೆ. ಎರಡೂ ಯೋಜನೆಗಳನ್ನು ಗಂಭೀರವಾಗಿ ಮುಂದುವರಿಸುವುದಾಗಿ ತಿಳಿಸಿದರು.

ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಅವರು ವ್ಯಾಪಾರಸ್ಥರ ಸಮಸ್ಯೆಗಳು ಹಾಗೂ ಚೇಂಬರ್‌ನ ಬೇಡಿಕೆಗಳನ್ನು ಸಂಸದರಿಗೆ ಸಲ್ಲಿಸಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಬೊಮ್ಮಾಯಿ, ಚೇಂಬರ್‌ಗೆ ಶಾಶ್ವತ ಎಕ್ಸಿಬಿಷನ್ ಸೆಂಟರ್ ನಿರ್ಮಿಸಲು ಎರಡು ಎಕರೆ ಜಮೀನು ಕೊಡಿಸುವುದಾಗಿ ಭರವಸೆ ನೀಡಿದರು. ಜಾಗ ಹುಡುಕುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ಎಕ್ಸಿಬಿಷನ್ ಸೆಂಟರ್‌ನಲ್ಲಿ ವರ್ಷಕ್ಕೆ ಎರಡು-ಮೂರು ಬಾರಿ ಟೆಕ್ಸಟೈಲ್, ಹ್ಯಾಂಡ್ಲೂಮ್, ಫರ್ನಿಚರ್ ಸೇರಿದಂತೆ ವಿವಿಧ ವಲಯಗಳ ವಸ್ತು ಪ್ರದರ್ಶನ ಆಯೋಜಿಸಿದರೆ ಸ್ಥಳೀಯ ಉದ್ಯಮಗಳ ಬೆಳವಣಿಗೆಗೆ ನೆರವಾಗಲಿದೆ ಎಂದರು.

ಈ ಎಲ್ಲ ಯೋಜನೆಗಳ ಕುರಿತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಮುಖ್ಯಮಂತ್ರಿ ಹಾಗೂ ಸ್ಥಳೀಯ ನಾಯಕ ಎಚ್.ಕೆ. ಪಾಟೀಲ ಅವರೊಂದಿಗೆ ಚರ್ಚಿಸಿ, ಎಲ್ಲರ ವಿಶ್ವಾಸದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳೋಣ. ಇದಕ್ಕೆ ವಾಣಿಜ್ಯೋದ್ಯಮಿಗಳ ಸಹಕಾರ ಹಾಗೂ ರಾಜ್ಯ ಸರ್ಕಾರದ ಬೆಂಬಲ ಅತ್ಯಗತ್ಯ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಮಧುಸೂಧನ ಪುಣೇಕರ, ಚೇಂಬರ್ ಕಾರ್ಯದರ್ಶಿ ಚನ್ನವೀರಪ್ಪ ಹುಣಶೀಕಟ್ಟಿ ಸೇರಿದಂತೆ ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

“ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳುತ್ತಾ ಕೂರುವ ಬದಲು, ‘ನಮಗೆ ಇದನ್ನು ಮಾಡಿಕೊಡಿ, ನಾವು ಇದನ್ನು ಮಾಡುತ್ತೇವೆ’ ಎಂಬ ಪ್ರಸ್ತಾವನೆ ತೆಗೆದುಕೊಂಡು ಸರ್ಕಾರದ ಮುಂದೆ ಹೋಗಬೇಕು.”

— ಬಸವರಾಜ ಬೊಮ್ಮಾಯಿ, ಸಂಸದ

ಒಳ ಮೀಸಲಾತಿಯಿಂದ ಬಂಜಾರ ಯುವಕರಿಗೆ ಅನ್ಯಾಯ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳ ಮೀಸಲಾತಿ ವ್ಯವಸ್ಥೆಯಲ್ಲಿನ ರೋಸ್ಟರ್ ಬಿಂದುವಿನಿಂದ ಬಂಜಾರ ಸಮುದಾಯದ ಯುವಕರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಮಜ್ಜೂರ ತಾಂಡಾದ ಯುವಕರು ಆ. 15ರಂದು ಮನವಿ ಸಲ್ಲಿಸಿದರು.

ಒಳ ಮೀಸಲಾತಿ ವ್ಯವಸ್ಥೆಯಲ್ಲಿ ಬಂಜಾರ ಸಮುದಾಯದ ಯುವಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿ, ಅನ್ಯಾಯ ಸರಿಪಡಿಸಬೇಕು. ವಿಶೇಷವಾಗಿ ರೋಸ್ಟರ್ ಬಿಂದುವಿನಿಂದ ಉದ್ಯೋಗ ಹಾಗೂ ಶೈಕ್ಷಣಿಕ ಅವಕಾಶಗಳಲ್ಲಿ ಸಮುದಾಯಕ್ಕೆ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸ್ವೀಕರಿಸಿ ಮಾತನಾಡಿದ ವಕೀಲರು ಹಾಗೂ ಗೋರಸೇನಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ತಾಂಡಾದ ಯುವಕರು ಸಲ್ಲಿಸಿರುವ ಮನವಿಯಲ್ಲಿನ ಅಂಶಗಳು ಗಂಭೀರವಾಗಿದ್ದು, ಬಂಜಾರ ಸಮುದಾಯದ ವಾಸ್ತವ ಸಮಸ್ಯೆಯನ್ನು ಪ್ರತಿಬಿಂಬಿಸುತ್ತವೆ ಎಂದರು.

ಶಿರಹಟ್ಟಿ ತಾಲೂಕಿನ ತಾಂಡಾ ಯುವಕರು ಸಲ್ಲಿಸಿರುವ ಮನವಿಯ ಅಂಶಗಳು ರಾಜ್ಯದಾದ್ಯಂತ ಇರುವ ಬಂಜಾರ ಸಮುದಾಯದ ಸಮಸ್ಯೆಯ ಪ್ರತಿಬಿಂಬವಾಗಿವೆ. ತಾಂಡಾ ತಾಂಡಾಗಳಿಗೆ ತೆರಳಿ ಜನಜಾಗೃತಿ ಮೂಡಿಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಅವರು ತಿಳಿಸಿದರು.

ಬಂಜಾರ ಸಮುದಾಯದ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಮಾನ ಅವಕಾಶ ದೊರೆಯುವಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ರೋಸ್ಟರ್ ಬಿಂದುವಿನಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ಪರಿಶೀಲಿಸಿ, ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಶೀಘ್ರ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಜ್ಜೂರ ತಾಂಡಾದ ಯುವಕರು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

“ಒಳ ಮೀಸಲಾತಿಯಲ್ಲಿನ ರೋಸ್ಟರ್ ಬಿಂದುವಿನ ಪರಿಣಾಮವಾಗಿ ಉದ್ಯೋಗ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂಬುದು ಯುವಕರ ಆತಂಕವಾಗಿದೆ. ‘ರೋಸ್ಟರ್ ಬಿಂದು ಹಠಾವೋ, ಒಳ ಮೀಸಲಾತಿ ಬಚಾವೋ’ ಎಂಬ ಘೋಷಣೆಯೊಂದಿಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು.”

— ರವಿಕಾಂತ ಅಂಗಡಿ, ಗೋರಸೇನಾ ರಾಜ್ಯಾಧ್ಯಕ್ಷ