Home Blog

ಲಡಾಖ್ನ ಲೇಹ್ʼನಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ 2 ಬಾರಿ ಭೂಕಂಪ: 5.5 ಮತ್ತು 4.3 ತೀವ್ರತೆಯ ಕಂಪನ

0

ಲೇಹ್: ಲಡಾಖ್‌ನ ಲೇಹ್‌ನಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಎರಡು ಬಾರಿ ಭೂಕಂಪ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ರಾಷ್ಟ್ರೀಯ ಭೂಕಂಪನ ಕೇಂದ್ರದ ಮಾಹಿತಿ ಪ್ರಕಾರ, ಬೆಳಿಗ್ಗೆ 6:05ರ ಸುಮಾರಿಗೆ 10 ಕಿಲೋಮೀಟರ್ ಆಳದಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದೆ.

ಇದಾದ ಕೆಲವೇ ಗಂಟೆಗಳ ಬಳಿಕ ಬೆಳಿಗ್ಗೆ 9:54ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದ್ದು, 4.3 ತೀವ್ರತೆಯ ಭೂಕಂಪ ದಾಖಲಾಗಿದೆ. ಸತತವಾಗಿ ಎರಡು ಬಾರಿ ಭೂಕಂಪ ಸಂಭವಿಸಿರುವುದು ಜನರಲ್ಲಿ ಭಯದ ವಾತಾವರಣ ನಿರ್ಮಿಸಿದೆ.

ಈವರೆಗೆ ಭೂಕಂಪನದಿಂದ ಯಾವುದೇ ರೀತಿಯ ಪ್ರಾಣಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಅಧಿಕಾರಿಗಳು ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ.

ಲಡಾಖ್ ಭೂಕಂಪನ ವಲಯಕ್ಕೆ ಒಳಪಡುವ ಪ್ರದೇಶವಾಗಿರುವುದರಿಂದ ಇಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಿರುತ್ತವೆ. ಆದರೂ ಒಂದೇ ದಿನದಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಎರಡು ಬಾರಿ ಭೂಕಂಪ ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕೆಂಪುಕೋಟೆ ಬಾಂಬ್ ದಾಳಿ ರಹಸ್ಯ ಬಯಲು: AQIS ಕೈವಾಡ ದೃಢಪಡಿಸಿದ ಯುಎನ್ ವರದಿ

0

ನ್ಯೂಯಾರ್ಕ್/ನವದೆಹಲಿ: ಕಳೆದ ನವೆಂಬರ್ 2025ರಲ್ಲಿ ದೆಹಲಿಯ ಐತಿಹಾಸಿಕ ಕೆಂಪುಕೋಟೆ ಸಮೀಪ ನಡೆದ ಭೀಕರ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ತನ್ನ 38ನೇ ‘Analytical Support and Sanctions Monitoring Team’ ವರದಿಯಲ್ಲಿ, ಈ ಉಗ್ರ ದಾಳಿಯನ್ನು ಆಲ್-ಖೈದಾ ಇನ್ ದಿ ಇಂಡಿಯನ್ ಸಬ್‌ಕಾಂಟಿನೆಂಟ್ (AQIS) ಸಂಘಟನೆಯೇ ನಡೆಸಿದೆ ಎಂದು ಅಧಿಕೃತವಾಗಿ ಉಲ್ಲೇಖಿಸಿದೆ. ಈ ದಾಳಿಯಲ್ಲಿ 11 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು.

ವರದಿಯ ಪ್ರಕಾರ, AQIS ಭಾರತೀಯ ಉಪಖಂಡದಲ್ಲಿ ತನ್ನ ಚಟುವಟಿಕೆಗಳನ್ನು ವೇಗವಾಗಿ ವಿಸ್ತರಿಸುತ್ತಿದ್ದು, ಸಣ್ಣ ತಂಡಗಳ ಮೂಲಕ ಕಾರ್ಯಾಚರಣೆ ನಡೆಸುವ ತಂತ್ರ ಅನುಸರಿಸುತ್ತಿದೆ. ಸಂಘಟನೆ ಹಣಕಾಸು ಮತ್ತು ಲಾಜಿಸ್ಟಿಕ್ಸ್ ಜಾಲವನ್ನು ಬಲಪಡಿಸುವ ಜೊತೆಗೆ, ಬಾಂಗ್ಲಾದೇಶದಲ್ಲಿ ಹೊಸ ನೆಲೆಗಳು ಮತ್ತು ಬೆಂಬಲ ಜಾಲ ನಿರ್ಮಿಸಲು ಸಕ್ರಿಯ ಪ್ರಯತ್ನ ನಡೆಸುತ್ತಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಈ ಹಿಂದೆ ಯುಎನ್ ಸದಸ್ಯ ರಾಷ್ಟ್ರವೊಂದು ಈ ದಾಳಿಯ ಹಿಂದೆ ಜೈಷ್-ಎ-ಮೊಹಮ್ಮದ್ (JeM) ಕೈವಾಡವಿದೆ ಎಂದು ಹೇಳಿತ್ತು. ಆದರೆ ಈಗ ಯುಎನ್‌ಎಸ್‌ಸಿಯ ಅಧಿಕೃತ ವರದಿ ದಾಳಿಯ ಹೊಣೆಯನ್ನು ನೇರವಾಗಿ AQIS ಮೇಲೆ ಹೊರಿಸಿದೆ.

ವರದಿಯಲ್ಲಿ ಮತ್ತೊಂದು ಆತಂಕಕಾರಿ ಸಂಗತಿಯನ್ನೂ ಉಲ್ಲೇಖಿಸಲಾಗಿದೆ. ಆಲ್-ಖೈದಾ ಹಾಗೂ ಐಸಿಸ್ ಸಂಘಟನೆಗಳು ರಾಸಾಯನಿಕ ಮತ್ತು ಜೈವಿಕ ಆಯುಧಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನ ಮುಂದುವರಿಸಿದ್ದು, ಇತ್ತೀಚೆಗೆ ಐಸಿಸ್ ಪ್ರಕಟಿಸಿದ ‘ಇನ್ವೇಡ್’ ಆನ್‌ಲೈನ್ ಮ್ಯಾಗಜೀನ್‌ನಲ್ಲಿ ಸೈನೈಡ್ ಹಾಗೂ ಬೊಟುಲಿನಮ್ ಟಾಕ್ಸಿನ್ ತಯಾರಿಕೆ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ. ಐಸಿಸ್-ಕೆ (ISIL-K) ಸಂಘಟನೆ ರೈಸಿನ್ ವಿಷ ತಯಾರಿಕೆಯ ಮಾರ್ಗಸೂಚಿಗಳನ್ನೂ ಹರಡುತ್ತಿದೆ ಎಂದು ವರದಿ ಎಚ್ಚರಿಸಿದೆ.

ಇದೇ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕರಣದ ತನಿಖೆ ಪೂರ್ಣಗೊಳಿಸಿ, 11 ಆರೋಪಿಗಳ ವಿರುದ್ಧ 7,500 ಪುಟಗಳ ಬೃಹತ್ ಚಾರ್ಜ್‌ಶೀಟ್ ಸಲ್ಲಿಸಿದೆ. 580ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳನ್ನು ಒಳಗೊಂಡಿರುವ ಈ ದೋಷಾರೋಪಣಾ ಪಟ್ಟಿಯ ವಿಚಾರಣೆಯನ್ನು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಆಗಸ್ಟ್ 27ರಂದು ಕೈಗೆತ್ತಿಕೊಳ್ಳಲಿದೆ.

ನವೆಂಬರ್ 2025ರ ಸಂಜೆ ಸುಮಾರು 7 ಗಂಟೆ ವೇಳೆಗೆ ಕೆಂಪುಕೋಟೆ ಸಮೀಪ ಸಂಚರಿಸುತ್ತಿದ್ದ ಹುಂಡೈ i20 ಕಾರಿನಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಕಾರು ಚಲಾಯಿಸುತ್ತಿದ್ದ ಉಮರ್ ಉನ್ ನಬಿ ಸೇರಿದಂತೆ 11 ಮಂದಿ ಮೃತಪಟ್ಟಿದ್ದರು. ಈ ಘಟನೆ ದೇಶದ ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.

ಶ್ರೀಲಂಕಾ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್‌ಗೆ ಸಚಿನ್ ದಾಖಲೆ ಮೇಲೆ ಕಣ್ಣು!

0

ಆಗಸ್ಟ್ 15ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮಹತ್ವದ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಜೈಸ್ವಾಲ್, ಅಭ್ಯಾಸ ಪಂದ್ಯದಲ್ಲೂ ಅರ್ಧಶತಕ ಸಿಡಿಸುವ ಮೂಲಕ ಉತ್ತಮ ಲಯದಲ್ಲಿರುವುದನ್ನು ತೋರಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜೈಸ್ವಾಲ್ ಶತಕ ಬಾರಿಸಿದರೆ, 24ನೇ ವಯಸ್ಸಿಗೂ ಮುನ್ನ ಐದು ವಿಭಿನ್ನ ದೇಶಗಳಲ್ಲಿ ಟೆಸ್ಟ್ ಶತಕ ಸಿಡಿಸಿದ ದಾಖಲೆ ನಿರ್ಮಿಸುವ ಅವಕಾಶ ಹೊಂದಿದ್ದಾರೆ. ಈ ವಿಶೇಷ ದಾಖಲೆ ಸದ್ಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ.

ಜೈಸ್ವಾಲ್ ಈಗಾಗಲೇ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ ಮತ್ತು ವೆಸ್ಟ್ ಇಂಡೀಸ್ ನೆಲದಲ್ಲಿ ಟೆಸ್ಟ್ ಶತಕ ಬಾರಿಸಿದ್ದಾರೆ. ಇದೀಗ ಶ್ರೀಲಂಕಾದಲ್ಲೂ ಶತಕ ಸಿಡಿಸಿದರೆ, ಸಚಿನ್ ಅವರ ವಿಶೇಷ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಏಷ್ಯಾದ ಮೈದಾನಗಳಲ್ಲೂ ಜೈಸ್ವಾಲ್ ಅವರ ಬ್ಯಾಟಿಂಗ್ ದಾಖಲೆ ಗಮನಾರ್ಹವಾಗಿದೆ. ಏಷ್ಯಾದಲ್ಲಿ ಇದುವರೆಗೆ 15 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 1,417 ರನ್ ಗಳಿಸಿದ್ದಾರೆ. 54.5ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಜೈಸ್ವಾಲ್, ನಾಲ್ಕು ಶತಕ ಹಾಗೂ ಎಂಟು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ ಅಜೇಯ 214 ರನ್.

ಆದರೆ ಶ್ರೀಲಂಕಾ ನೆಲದಲ್ಲಿ ಜೈಸ್ವಾಲ್‌ಗೆ ಸವಾಲು ಎದುರಾಗಲಿದೆ. ಏಕೆಂದರೆ ಅವರು ಇದೇ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ. ಅಲ್ಲದೆ, ಶ್ರೀಲಂಕಾ ವಿರುದ್ಧವೂ ಇದು ಅವರ ಮೊದಲ ಟೆಸ್ಟ್ ಸರಣಿಯಾಗಿದೆ. ಹೀಗಾಗಿ ಸಿಂಹಳೀಯರ ನಾಡಿನಲ್ಲಿ ಜೈಸ್ವಾಲ್ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಇದರ ಜೊತೆಗೆ ಮತ್ತೊಂದು ಮೈಲಿಗಲ್ಲು ಸಾಧಿಸುವ ಅವಕಾಶವೂ ಜೈಸ್ವಾಲ್ ಮುಂದಿದೆ. ಈ ಟೆಸ್ಟ್ ಸರಣಿಯಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 50 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ ಮೂರನೇ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಪಟ್ಟಿಯಲ್ಲಿ ಈಗಾಗಲೇ ರೋಹಿತ್ ಶರ್ಮಾ ಮತ್ತು ವೀರೇಂದ್ರ ಸೆಹ್ವಾಗ್ ಸ್ಥಾನ ಪಡೆದಿದ್ದಾರೆ.

ಕಿಮ್ಸ್ ಆಸ್ಪತ್ರೆಯಲ್ಲಿ ಯಶಸ್ವಿ ಸರ್ಜರಿ: ‘ಶೀಘ್ರದಲ್ಲೇ ಭೇಟಿಯಾಗುತ್ತೇನೆ’ ಎಂದ ಜೂನಿಯರ್ ಎನ್‌ಟಿಆರ್

‘ಡ್ರ್ಯಾಗನ್’ ಚಿತ್ರದ ಚಿತ್ರೀಕರಣದ ವೇಳೆ ಭುಜಕ್ಕೆ ಗಾಯಗೊಂಡಿದ್ದ ಟಾಲಿವುಡ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಅವರು ಹೈದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸರ್ಜರಿ ಬಳಿಕ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ತಮ್ಮ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಶೀಘ್ರದಲ್ಲೇ ಅಭಿಮಾನಿಗಳ ಮುಂದೆ ಮರಳುವುದಾಗಿ ತಿಳಿಸಿದ್ದಾರೆ.

‘ನಿಮ್ಮ ಪ್ರಾರ್ಥನೆ ಮತ್ತು ಪ್ರೀತಿಗೆ ಧನ್ಯವಾದಗಳು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನಾನು ಚೇತರಿಸಿಕೊಳ್ಳುತ್ತಿದ್ದೇನೆ. ವೈದ್ಯರ ತಂಡದ ಆರೈಕೆ ಹಾಗೂ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳ ಬೆಂಬಲ ನನಗೆ ಅಪಾರ ಶಕ್ತಿ ನೀಡಿದೆ. ಆದಷ್ಟು ಬೇಗ ನಿಮ್ಮನ್ನು ಭೇಟಿಯಾಗುತ್ತೇನೆ’ ಎಂದು ಎನ್‌ಟಿಆರ್ ಬರೆದುಕೊಂಡಿದ್ದಾರೆ.

ಕಿಮ್ಸ್ ಆಸ್ಪತ್ರೆಯ ವೈದ್ಯರ ತಂಡ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಪ್ರಕಾರ, ಭುಜದ ಗಾಯದ ತೀವ್ರತೆಯನ್ನು ಪರಿಶೀಲಿಸಿದ ಬಳಿಕ ಆರ್ಥ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸರ್ಜರಿ ಯಶಸ್ವಿಯಾಗಿದ್ದು, ಎನ್‌ಟಿಆರ್ ಉತ್ತಮ ಚೇತರಿಕೆ ಕಾಣುತ್ತಿದ್ದಾರೆ. ಮುಂದಿನ ಎರಡು ರಿಂದ ಮೂರು ತಿಂಗಳು ವೈದ್ಯರ ಮಾರ್ಗದರ್ಶನದಲ್ಲಿ ಪುನಶ್ಚೇತನ ಚಿಕಿತ್ಸೆ ಪಡೆಯಲಿದ್ದು, ಸಂಪೂರ್ಣ ಗುಣಮುಖರಾಗುವ ವಿಶ್ವಾಸ ವ್ಯಕ್ತಪಡಿಸಲಾಗಿದೆ.

ಜುಲೈ ಕೊನೆಯ ವಾರದಲ್ಲಿ ‘ಡ್ರ್ಯಾಗನ್’ ಚಿತ್ರದ ಶೂಟಿಂಗ್ ವೇಳೆ ಸಂಭವಿಸಿದ ಗಾಯದ ಬಳಿಕ ವೈದ್ಯರು ಆರುರಿಂದ ಎಂಟು ವಾರಗಳ ಸಂಪೂರ್ಣ ವಿಶ್ರಾಂತಿ ಸೂಚಿಸಿದ್ದರು. ಆಗ ಅಭಿಮಾನಿಗಳ ಆತಂಕ ಹೆಚ್ಚಾಗುತ್ತಿದ್ದಂತೆ, ಚಿತ್ರತಂಡ ಗಂಭೀರ ಅಪಾಯ ಇಲ್ಲ ಎಂದು ಸ್ಪಷ್ಟಪಡಿಸಿ, ಆರೋಗ್ಯದ ಕುರಿತು ಅಧಿಕೃತ ಮಾಹಿತಿ ನೀಡುವುದಾಗಿ ಹೇಳಿತ್ತು.

ಈಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿರುವುದರಿಂದ ಎನ್‌ಟಿಆರ್ ಅವರ ಚೇತರಿಕೆ ಪ್ರಕ್ರಿಯೆ ಆರಂಭವಾಗಿದೆ. ಆರೋಗ್ಯ ಸಂಪೂರ್ಣವಾಗಿ ಸುಧಾರಿಸಿದ ಬಳಿಕ ಅವರು ಮತ್ತೆ ‘ಡ್ರ್ಯಾಗನ್’ ಚಿತ್ರದ ಚಿತ್ರೀಕರಣಕ್ಕೆ ಮರಳಲಿದ್ದು, ಅವರ ಮುಂದಿನ ಸಿನಿಮಾಗಳ ವೇಳಾಪಟ್ಟಿಯೂ ಅದಕ್ಕೆ ಅನುಗುಣವಾಗಿ ರೂಪುಗೊಳ್ಳಲಿದೆ.

ಕರ್ನಾಟಕ ಬಂದ್‌ʼಗೆ ಕರೆ ಕೊಟ್ಟಿದ್ದ ವಾಟಾಳ್ ನಾಗರಾಜ್ ಪೊಲೀಸರ ವಶಕ್ಕೆ!

0

ಬೆಂಗಳೂರು: ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ಪೊಲೀಸರು ತಡೆಯೊಡ್ಡಲು ಮುಂದಾಗುತ್ತಿದ್ದಂತೆ ವಾಟಾಳ್ ನಾಗರಾಜ್ ಅವರು ತಮ್ಮ ನಿವಾಸದ ಗೇಟ್‌ನ ಒಳಭಾಗದಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ತಮ್ಮನ್ನು ವಶಕ್ಕೆ ಪಡೆಯಲು ಪೊಲೀಸರು ಮನೆಗೆ ಬಂದಿರುವುದನ್ನು ವಿರೋಧಿಸಿದ ವಾಟಾಳ್ ನಾಗರಾಜ್, “ನಾನು ಮನೆಯಿಂದ ಹೊರಗೆ ಬರುವುದಿಲ್ಲ, ವಶಕ್ಕೆ ಪಡೆಯುವ ಕಾರಣಕ್ಕಾಗಿ ಹೊರಬರುವುದಿಲ್ಲ” ಎಂದು ಪಟ್ಟು ಹಿಡಿದರು.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರದ ನಿಲುವನ್ನು ಖಂಡಿಸಿ ವಾಟಾಳ್ ನಾಗರಾಜ್ ಅವರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಬಾಯಿಗೆ ಸೆಲ್ಲೋ ಟೇಪ್ ಹಾಕಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ತಡೆಯಲು ಎಸಿಪಿ ತನ್ವೀರ್ ಹಾಗೂ ಡಿಸಿಪಿ ನೇಮಗೌಡ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ವಾಟಾಳ್ ನಾಗರಾಜ್ ಅವರ ನಿವಾಸಕ್ಕೆ ಆಗಮಿಸಿತ್ತು. ಸುಮಾರು ಅರ್ಧ ಗಂಟೆಗಳ ಕಾಲ ಪೊಲೀಸರು ಅವರನ್ನು ಮನವೊಲಿಸಲು ಪ್ರಯತ್ನಿಸಿದರು.

ಆದರೆ, ಸರ್ಕಾರದ ನಿಲುವಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್ ಅವರು ಪೊಲೀಸರ ಮನವೊಲಿಕೆಗೆ ಒಪ್ಪಲಿಲ್ಲ. ಕೊನೆಗೆ ಬೇರೆ ಯಾವುದೇ ಆಯ್ಕೆ ಇಲ್ಲದೆ ಪೊಲೀಸರು ಅವರನ್ನು ಸ್ಥಳದಲ್ಲೇ ವಶಕ್ಕೆ ಪಡೆದು ಕರೆದೊಯ್ದರು.

ಇದಕ್ಕೂ ಮುನ್ನ ಬೆಳಗ್ಗೆಯೇ ವಾಟಾಳ್ ನಾಗರಾಜ್ ಅವರ ನಿವಾಸಕ್ಕೆ ಆಗಮಿಸಿದ್ದ ಬೆಂಬಲಿಗ ನಾರಾಯಣ್ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ಹೊಯ್ಸಳ ವಾಹನದಲ್ಲಿ ಕರೆದೊಯ್ಯಲಾಯಿತು.

ಪೊಲೀಸರ ಕ್ರಮಕ್ಕೆ ವಾಟಾಳ್ ನಾಗರಾಜ್ ಅವರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಹಾಗೂ ಪೊಲೀಸರು ಜಂಟಿಯಾಗಿ ಕನ್ನಡಪರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಬೇಕು ಎಂದು ಆಗ್ರಹಿಸಿ ವಾಟಾಳ್ ನಾಗರಾಜ್ ಅವರು ಪ್ರತಿಭಟನೆ ನಡೆಸುತ್ತಿದ್ದು, ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

52 ದಿನಗಳ ಬಳಿಕ ಜೆಡಿಎಸ್‌ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಜೈಲಿನಿಂದ ಬಿಡುಗಡೆ

0

ಹಾಸನ: ಬಗರ್ ಹುಕುಂ ಭೂ ಮಂಜೂರಾತಿ ಯೋಜನೆಗೆ ಸಂಬಂಧಿಸಿದ ಅಕ್ರಮ ಆರೋಪ ಪ್ರಕರಣದಲ್ಲಿ ಬಂಧಿತರಾಗಿದ್ದ ಬೇಲೂರು ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿದ್ದು, 52 ದಿನಗಳ ಜೈಲುವಾಸದ ಬಳಿಕ ಅವರು ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆ ವೇಳೆ ಬೆಂಬಲಿಗರು ಭವ್ಯ ಸ್ವಾಗತ ಕೋರಿದ್ದು, ಮಾಜಿ ಶಾಸಕರು ತಮ್ಮ ವಿರುದ್ಧದ ಆರೋಪಗಳನ್ನು ಮತ್ತೊಮ್ಮೆ ನಿರಾಕರಿಸಿದ್ದಾರೆ.

ಸಿಐಡಿ ದಾಖಲಿಸಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಕೆ.ಎಸ್. ಲಿಂಗೇಶ್ ಅವರಿಗೆ ಮಂಗಳವಾರ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಅಗತ್ಯ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಬುಧವಾರ ರಾತ್ರಿ ಅವರು ಜೈಲಿನಿಂದ ಹೊರಬಂದರು.

ಕಾರಾಗೃಹದ ಹೊರಗೆ ನೆರೆದಿದ್ದ ಜೆಡಿಎಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಹೂವಿನ ಹಾರ ಹಾಕಿ, ಹೆಗಲ ಮೇಲೆ ಹೊತ್ತುಕೊಂಡು ಜಯಘೋಷಗಳೊಂದಿಗೆ ಸ್ವಾಗತಿಸಿದರು. ಬಿಡುಗಡೆಯಾದ ಮಾಜಿ ಶಾಸಕನನ್ನು ಅಭಿನಂದಿಸಲು ನೂರಾರು ಬೆಂಬಲಿಗರು ಆಗಮಿಸಿದ್ದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎಸ್. ಲಿಂಗೇಶ್, “ನಮ್ಮ ವೈರಿಗೂ ಇಂತಹ ಪರಿಸ್ಥಿತಿ ಬರಬಾರದು. ನಾನು ಮಾಡದ ತಪ್ಪಿಗೆ 52 ದಿನ ಜೈಲು ಶಿಕ್ಷೆ ಅನುಭವಿಸಿದ್ದೇನೆ. 1988ರಲ್ಲಿ ಅರ್ಜಿ ಸಲ್ಲಿಸಿದ್ದ ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಿದ್ದೇವೇ ಹೊರತು ಯಾವುದೇ ಅಕ್ರಮ ನಡೆದಿಲ್ಲ” ಎಂದು ಸ್ಪಷ್ಟಪಡಿಸಿದರು. ತಮ್ಮ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಪುನರುಚ್ಚರಿಸಿದ ಅವರು, ಕಾನೂನಿನ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.

ನಿಮ್ಮ ಹೆಂಡ್ತಿಗೆ ಈ ಗುಣಗಳಿವೆಯಾ!? ಹಾಗಿದ್ರೆ ನಿಮ್ಮ ಅದೃಷ್ಟವೇ ಬದಲಾಗುತ್ತೆ! ಚಾಣಕ್ಯ ಹೇಳಿರುವುದೇನು?

0

ಆಚಾರ್ಯ ಚಾಣಕ್ಯರು ಭಾರತ ಕಂಡ ಶ್ರೇಷ್ಠ ವಿದ್ವಾಂಸರು, ರಾಜಕೀಯ ತಜ್ಞರು ಹಾಗೂ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರು.

ಕೌಟಿಲ್ಯ ಹಾಗೂ ವಿಷ್ಣುಗುಪ್ತ ಎಂಬ ಹೆಸರಿನಿಂದಲೂ ಪ್ರಸಿದ್ಧರಾಗಿದ್ದ ಚಾಣಕ್ಯರು ತಮ್ಮ ಜ್ಞಾನ ಮತ್ತು ರಾಜಕೀಯ ತಂತ್ರಗಳಿಂದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅವರು ರಚಿಸಿದ ‘ಚಾಣಕ್ಯ ನೀತಿ’ಯಲ್ಲಿ ಜೀವನ, ಹಣಕಾಸು, ಸ್ನೇಹ, ಸಂಬಂಧಗಳು, ದಾಂಪತ್ಯ ಹಾಗೂ ಕುಟುಂಬದ ಕುರಿತು ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.

ಚಾಣಕ್ಯ ನೀತಿಯಲ್ಲಿನ ಕೆಲವು ವಿಚಾರಗಳ ಪ್ರಕಾರ, ಕುಟುಂಬದ ನೆಮ್ಮದಿ, ಆರ್ಥಿಕ ಸ್ಥಿರತೆ ಹಾಗೂ ಯಶಸ್ಸಿನಲ್ಲಿ ಪತ್ನಿಯ ಪಾತ್ರವೂ ಮಹತ್ವದ್ದಾಗಿದೆ. ಹಾಗಾದರೆ ಯಾವ ಗುಣಗಳನ್ನು ಹೊಂದಿರುವ ಮಹಿಳೆ ಕುಟುಂಬಕ್ಕೆ ಶುಭವನ್ನು ತರುತ್ತಾಳೆ ಎಂಬುದನ್ನು ನೋಡೋಣ.

ಹಣದ ಮೌಲ್ಯ ತಿಳಿದಿರುವ ಮಹಿಳೆ:

ಹಣವನ್ನು ಅನಗತ್ಯವಾಗಿ ಖರ್ಚು ಮಾಡದೆ, ಅಗತ್ಯಕ್ಕೆ ತಕ್ಕಂತೆ ಉಳಿತಾಯ ಮಾಡುವ ಗುಣ ಹೊಂದಿರುವ ಮಹಿಳೆ ಕುಟುಂಬದ ಆರ್ಥಿಕ ಸ್ಥಿರತೆಗೆ ಸಹಕಾರಿಯಾಗುತ್ತಾಳೆ. ಆದಾಯಕ್ಕೆ ತಕ್ಕಂತೆ ಖರ್ಚು ನಿರ್ವಹಿಸಿ ಭವಿಷ್ಯದ ಅಗತ್ಯಗಳಿಗಾಗಿ ಉಳಿತಾಯ ಮಾಡುವ ಮೂಲಕ ಕುಟುಂಬದ ಸಂಪತ್ತನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ.

ಉತ್ತಮ ನಡತೆ ಮತ್ತು ಶಿಸ್ತು:

ಉತ್ತಮ ನಡತೆ, ಶಿಸ್ತು ಹಾಗೂ ಸಂಸ್ಕಾರವನ್ನು ಹೊಂದಿರುವ ಮಹಿಳೆ ಕುಟುಂಬದಲ್ಲಿ ಶಾಂತಿಯ ವಾತಾವರಣ ನಿರ್ಮಿಸಲು ನೆರವಾಗುತ್ತಾಳೆ. ಮನೆಯ ಸದಸ್ಯರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವುದು ಮತ್ತು ಕುಟುಂಬದ ಘನತೆಯನ್ನು ಕಾಪಾಡುವುದು ಆಕೆಯ ಪ್ರಮುಖ ಗುಣಗಳಾಗಿವೆ.

ಜಾಣ್ಮೆ ಮತ್ತು ವಿದ್ಯೆ:

ಜಾಣ್ಮೆ ಹಾಗೂ ವಿವೇಚನೆ ಹೊಂದಿರುವ ಪತ್ನಿ ಕಷ್ಟದ ಸಂದರ್ಭಗಳಲ್ಲಿ ಪತಿಗೆ ಸೂಕ್ತ ಸಲಹೆ ನೀಡುವ ಮೂಲಕ ಬೆಂಬಲವಾಗಿ ನಿಲ್ಲುತ್ತಾಳೆ. ಜೀವನದ ಸವಾಲುಗಳನ್ನು ಒಟ್ಟಾಗಿ ಎದುರಿಸಲು ಆತ್ಮವಿಶ್ವಾಸ ತುಂಬುವ ಮೂಲಕ ಕುಟುಂಬದ ಪ್ರಗತಿಗೆ ನೆರವಾಗುತ್ತಾಳೆ.

ಪತಿಯ ಬಗ್ಗೆ ನಿಷ್ಠೆ:

ದಾಂಪತ್ಯ ಜೀವನದಲ್ಲಿ ಪರಸ್ಪರ ನಂಬಿಕೆ ಮತ್ತು ನಿಷ್ಠೆ ಅತ್ಯಂತ ಮುಖ್ಯ. ಪತಿಯೊಂದಿಗೆ ಪ್ರಾಮಾಣಿಕವಾಗಿ ನಡೆದುಕೊಂಡು, ಸುಖ-ದುಃಖಗಳಲ್ಲಿ ಜೊತೆಯಾಗಿ ನಿಲ್ಲುವ ಪತ್ನಿ ಕುಟುಂಬದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾಳೆ.

ಕುಟುಂಬದ ನೆಮ್ಮದಿಗೆ ಕಾರಣವಾಗುವ ಗುಣ:

ಮನೆಯ ಸದಸ್ಯರ ನಡುವೆ ಉತ್ತಮ ಬಾಂಧವ್ಯ ಕಾಪಾಡುವುದು, ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸುವುದು ಹಾಗೂ ಪರಸ್ಪರ ಗೌರವಕ್ಕೆ ಆದ್ಯತೆ ನೀಡುವುದು ಕುಟುಂಬದ ನೆಮ್ಮದಿಗೆ ಕಾರಣವಾಗುತ್ತದೆ. ಇಂತಹ ಗುಣಗಳು ಮನೆಯ ವಾತಾವರಣವನ್ನು ಸಕಾರಾತ್ಮಕವಾಗಿಡಲು ಸಹಕಾರಿಯಾಗುತ್ತವೆ.

ಒಟ್ಟಾರೆ, ‘ಮದುವೆಯಾದ ಬಳಿಕ ಅದೃಷ್ಟ ಬದಲಾಯಿತು’ ಎಂದು ಹೇಳುವ ಸಂದರ್ಭಗಳ ಹಿಂದೆ ಪತಿ-ಪತ್ನಿಯ ಪರಸ್ಪರ ಬೆಂಬಲ, ಉತ್ತಮ ನಿರ್ಧಾರಗಳು, ಹಣಕಾಸಿನ ಶಿಸ್ತು ಹಾಗೂ ಕುಟುಂಬದ ಒಗ್ಗಟ್ಟು ಪ್ರಮುಖ ಕಾರಣಗಳಾಗಿರಬಹುದು. ಚಾಣಕ್ಯ ನೀತಿಯ ಹೆಸರಿನಲ್ಲಿ ಪ್ರಸಾರವಾಗುವ ಇಂತಹ ವಿಚಾರಗಳನ್ನು ಇಂದಿನ ಕಾಲದಲ್ಲಿ ಕುಟುಂಬ ಜೀವನಕ್ಕೆ ಸಂಬಂಧಿಸಿದ ನೈತಿಕ ಹಾಗೂ ಪ್ರಾಯೋಗಿಕ ಸಲಹೆಗಳಾಗಿ ನೋಡಬಹುದು.

ಹಾಸ್ಟೆಲ್, ಪಿಜಿಗಳ ಆಹಾರದ ಮೇಲೂ ಸರ್ಕಾರದ ಕಣ್ಣು; ಫುಡ್ ಟೆಸ್ಟ್ ನಡೆಸಲು ಖಾದರ್ ಸೂಚನೆ

0

ಬೆಂಗಳೂರು: ಹೋಟೆಲ್‌ಗಳ ಮೇಲೆ ಆರೋಗ್ಯ ಇಲಾಖೆ ನಡೆಸುತ್ತಿರುವ ತಪಾಸಣೆಯ ಬೆನ್ನಲ್ಲೇ ಇದೀಗ ಹಾಸ್ಟೆಲ್‌ಗಳು ಮತ್ತು ಪಿಜಿಗಳಲ್ಲಿನ ಆಹಾರದ ಗುಣಮಟ್ಟ ಪರಿಶೀಲನೆಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸರ್ಕಾರಿ ಹಾಸ್ಟೆಲ್‌ಗಳು, ಖಾಸಗಿ ಹಾಸ್ಟೆಲ್‌ಗಳು ಹಾಗೂ ಸಹಕಾರಿ ಹಾಸ್ಟೆಲ್‌ಗಳಲ್ಲಿ ಆಹಾರ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ತಪಾಸಣೆ ವೇಳೆ ಆಹಾರದ ಗುಣಮಟ್ಟ, ಅಡುಗೆ ಸ್ಥಳದ ಸ್ವಚ್ಛತೆ ಹಾಗೂ ಆಹಾರ ಪದಾರ್ಥಗಳನ್ನು ಯಾವ ರೀತಿಯಲ್ಲಿ ಸಂಗ್ರಹಿಸಲಾಗುತ್ತಿದೆ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಹಾಸ್ಟೆಲ್‌ಗಳ ಜೊತೆಗೆ ಪಿಜಿಗಳಲ್ಲಿಯೂ ಆಹಾರದ ಗುಣಮಟ್ಟ ಪರೀಕ್ಷೆ ನಡೆಸಲು ಇಲಾಖೆ ಮುಂದಾಗಿದೆ. ನಗರದ ಎಲ್ಲಾ ಹಾಸ್ಟೆಲ್‌ಗಳು ಹಾಗೂ ಪಿಜಿಗಳಲ್ಲಿ ಆಹಾರ ತಪಾಸಣೆ ನಡೆಸಲಾಗುವುದು. ಇದರ ಜೊತೆಗೆ ಕ್ಯಾಂಟೀನ್‌ಗಳಲ್ಲಿಯೂ ಆಹಾರ ಪರೀಕ್ಷೆ ಕೈಗೊಳ್ಳಲಾಗುವುದು ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.

ಬೆಂಗಳೂರಿನ ಕೇಂದ್ರ ಭಾಗಗಳಲ್ಲಿ ಈಗಾಗಲೇ ದಾಳಿ ಹಾಗೂ ತಪಾಸಣೆ ನಡೆಯುತ್ತಿದ್ದು, ಜಿಲ್ಲಾ ಕೇಂದ್ರಗಳಲ್ಲಿಯೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.

ಹಾಸ್ಟೆಲ್‌ಗಳು, ಪಿಜಿಗಳು ಹಾಗೂ ಕ್ಯಾಂಟೀನ್‌ಗಳಲ್ಲಿ ಆಹಾರ ಸೇವಿಸುವ ಜನರಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸುವುದು ಕಡ್ಡಾಯ. ಗ್ರಾಹಕರು ನೀಡುವ ಹಣಕ್ಕೆ ತಕ್ಕ ಗುಣಮಟ್ಟದ ಆಹಾರ ನೀಡಬೇಕು. ಯಾವುದೇ ಕಾರಣಕ್ಕೂ ಜನರಿಗೆ ಕಳಪೆ ಗುಣಮಟ್ಟದ ಆಹಾರ ನೀಡಿ ವಂಚಿಸಬಾರದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

ಆಹಾರ ಸುರಕ್ಷತೆ ಹಾಗೂ ಸ್ವಚ್ಛತೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣದ ಗಂಭೀರತೆಗೆ ಅನುಗುಣವಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ಹೋಟೆಲ್‌ಗಳ ಬಳಿಕ ಇದೀಗ ಹಾಸ್ಟೆಲ್‌ಗಳು, ಪಿಜಿಗಳು ಹಾಗೂ ಕ್ಯಾಂಟೀನ್‌ಗಳ ಮೇಲೂ ಆರೋಗ್ಯ ಇಲಾಖೆಯ ತಪಾಸಣೆ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.

ಹುಲಿ ಅಂಗಾಂಗ ಮಾರಾಟಕ್ಕೆ ಯತ್ನ: ಚಾಮರಾಜನಗರದಲ್ಲಿ ಮೂವರು ಆರೋಪಿಗಳ ಬಂಧನ

0

ಚಾಮರಾಜನಗರ: ಅಕ್ರಮವಾಗಿ ಹುಲಿಯ ಹಲ್ಲು ಹಾಗೂ ಉಗುರುಗಳನ್ನು ಸಂಗ್ರಹಿಸಿ, ಅವುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಮೇತ ಬಂಧಿಸಿದ್ದಾರೆ.

ಬಂಡೀಪುರ-ನಾಗರಹೊಳೆ ವಿಶೇಷ ಹುಲಿ ಸಂರಕ್ಷಣಾ ದಳ ಹಾಗೂ ಗೋಪಾಲಸ್ವಾಮಿಬೆಟ್ಟ ವಲಯ ಅರಣ್ಯ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಈ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮಹದೇವ ಬಿನ್ ಜಡಿಯ, ಹೊಸಪೋಡು ಗ್ರಾಮದ ರಮೇಶ ಬಿನ್ ಆಲುವಯ್ಯ ಹಾಗೂ ಮಾವತ್ತೂರು ಗ್ರಾಮದ ಮಣಿ ಬಿನ್ ರಾಮು ಎಂದು ಗುರುತಿಸಲಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿಗೆ ಹುಲಿಯ ಅಂಗಾಂಗಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಕೆಲವರು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದರು. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ತಂಡವು ಮೂವರನ್ನೂ ವಶಕ್ಕೆ ಪಡೆದು ಪರಿಶೀಲನೆ ನಡೆಸಿದೆ.

ಆರೋಪಿಗಳ ಬಳಿ ಪರಿಶೀಲನೆ ನಡೆಸಿದಾಗ ಹುಲಿಯ ಅಂಗಾಂಗಗಳು ಪತ್ತೆಯಾಗಿವೆ. ಅವರಿಂದ ಹುಲಿಯ 4 ಕೋರೆ ಹಲ್ಲುಗಳು, 2 ದವಡೆ ಹಲ್ಲುಗಳು ಹಾಗೂ 1 ಹುಲಿಯ ಉಗುರು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ ಆಟೋವನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ವಶಪಡಿಸಿಕೊಂಡಿರುವ ಹುಲಿಯ ಹಲ್ಲು ಮತ್ತು ಉಗುರುಗಳನ್ನು ಅಧಿಕಾರಿಗಳು ಸುರಕ್ಷಿತವಾಗಿ ಅರಣ್ಯ ಇಲಾಖೆಯ ವಶಕ್ಕೆ ಪಡೆದಿದ್ದಾರೆ. ಹುಲಿಯ ಅಂಗಾಂಗಗಳು ಎಲ್ಲಿಂದ ಬಂದವು, ಅವುಗಳನ್ನು ಯಾರಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿತ್ತು ಹಾಗೂ ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಹುಲಿ ಸೇರಿದಂತೆ ಸಂರಕ್ಷಿತ ವನ್ಯಜೀವಿಗಳ ಅಂಗಾಂಗಗಳನ್ನು ಅಕ್ರಮವಾಗಿ ಹೊಂದಿರುವುದು ಹಾಗೂ ಮಾರಾಟ ಮಾಡಲು ಯತ್ನಿಸುವುದು ಕಾನೂನುಬಾಹಿರವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಚಾರಣೆ ನಡೆಸಿದ ಬಳಿಕ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 

WTC ಫೈನಲ್ ಕನಸು ಜೀವಂತವಾಗಿರಬೇಕಾದರೆ ಲಂಕಾ ಸರಣಿ ಗೆಲ್ಲಬೇಕು: ಭಾರತದ ಮುಂದಿದೆ 9 ಟೆಸ್ಟ್ಗಳ ಕಠಿಣ ಸವಾಲು

0

ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಮೂರು ಆವೃತ್ತಿಗಳ ಪೈಕಿ ಎರಡು ಬಾರಿ ಫೈನಲ್‌ಗೆ ಪ್ರವೇಶಿಸಿರುವ ಭಾರತ ತಂಡ, 2025-27ರ ಆವೃತ್ತಿಯಲ್ಲೂ ಪ್ರಶಸ್ತಿ ಸುತ್ತು ಪ್ರವೇಶಿಸುವ ಗುರಿ ಹೊಂದಿದೆ. ಆದರೆ ಈ ಬಾರಿ ಫೈನಲ್‌ಗೇರಲು ಟೀಂ ಇಂಡಿಯಾ ಮುಂದೆ ಕಠಿಣ ಲೆಕ್ಕಾಚಾರವಿದೆ.

ಆಗಸ್ಟ್ 15ರಿಂದ ಶ್ರೀಲಂಕಾ ವಿರುದ್ಧ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಗೆಲುವು ಸಾಧಿಸುವುದು ಅತ್ಯಂತ ಮಹತ್ವದ್ದಾಗಿದೆ. ಈ ಸರಣಿಯಲ್ಲಿ ಉತ್ತಮ ಫಲಿತಾಂಶ ಪಡೆಯುವುದರ ಜೊತೆಗೆ ಉಳಿದ ಪಂದ್ಯಗಳಲ್ಲೂ ಹೆಚ್ಚಿನ ಗೆಲುವು ದಾಖಲಿಸಿದರೆ ಮಾತ್ರ ಭಾರತ ಅಗ್ರ-2 ಸ್ಥಾನ ಪಡೆಯುವ ಅವಕಾಶ ಹೊಂದಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಹಿಂದಿನ ಎರಡು ಆವೃತ್ತಿಗಳಲ್ಲಿ ಫೈನಲ್‌ಗೆ ಪ್ರವೇಶಿಸಿದ್ದ ನಾಲ್ಕು ತಂಡಗಳ ಪೈಕಿ ಮೂರು ತಂಡಗಳು ಕನಿಷ್ಠ ಶೇ.65ರ ಗೆಲುವಿನ ಪ್ರತಿಶತ ಹೊಂದಿದ್ದವು. 2023ರಲ್ಲಿ ಭಾರತ ಶೇ.58.8ರ ಗೆಲುವಿನ ಪ್ರತಿಶತದೊಂದಿಗೆ ಫೈನಲ್‌ಗೆ ಪ್ರವೇಶಿಸಿತ್ತು. ಹೀಗಾಗಿ ಈ ಬಾರಿ ಫೈನಲ್‌ಗೇರಲು ಶೇ.60 ಅಥವಾ ಅದಕ್ಕಿಂತ ಹೆಚ್ಚಿನ ಗೆಲುವಿನ ದಾಖಲೆ ಅಗತ್ಯವಾಗುವ ಸಾಧ್ಯತೆಯಿದೆ.

ಭಾರತ ತಂಡ ಪ್ರಸಕ್ತ ಆವೃತ್ತಿಯಲ್ಲಿ ಇದುವರೆಗೆ 9 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ತಲಾ 4 ಗೆಲುವು ಮತ್ತು ಸೋಲು ದಾಖಲಿಸಿದೆ. ಒಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇದರೊಂದಿಗೆ ಭಾರತ ಶೇ.48.15ರ ಗೆಲುವಿನ ದಾಖಲೆಯೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಟೀಂ ಇಂಡಿಯಾಗೆ ಇನ್ನೂ 9 ಟೆಸ್ಟ್ ಪಂದ್ಯಗಳು ಬಾಕಿಯಿವೆ. ಶ್ರೀಲಂಕಾ ವಿರುದ್ಧ 2, ನ್ಯೂಜಿಲೆಂಡ್ ವಿರುದ್ಧ 2 ಹಾಗೂ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ 5 ಟೆಸ್ಟ್ ಪಂದ್ಯಗಳನ್ನು ಭಾರತ ಆಡಬೇಕಿದೆ. ಈ 9 ಪಂದ್ಯಗಳ ಪೈಕಿ ಕನಿಷ್ಠ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಭಾರತ ಫೈನಲ್‌ಗೇರುವ ಸಾಧ್ಯತೆ ಬಲವಾಗಲಿದೆ.

ಇನ್ನು 6 ಪಂದ್ಯಗಳಲ್ಲಿ ಗೆದ್ದು, 2 ಪಂದ್ಯಗಳನ್ನು ಡ್ರಾ ಮಾಡಿಕೊಂಡರೂ ಭಾರತ ಅಗ್ರ-2 ಸ್ಥಾನ ಪಡೆಯುವ ಅವಕಾಶ ಹೊಂದಿರಬಹುದು. ಆದರೆ ಉಳಿದ ಪಂದ್ಯಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಸೋಲುಗಳನ್ನು ಕಂಡರೆ ಭಾರತದ ಫೈನಲ್‌ ಕನಸು ಮತ್ತೊಮ್ಮೆ ಭಗ್ನವಾಗುವ ಸಾಧ್ಯತೆಯಿದೆ.

ಶ್ರೀಲಂಕಾಗೂ ಸರಣಿ ಗೆಲುವು ಅನಿವಾರ್ಯ

ಆತಿಥೇಯ ಶ್ರೀಲಂಕಾ ತಂಡಕ್ಕೂ ಭಾರತ ವಿರುದ್ಧದ ಸರಣಿ ಅತ್ಯಂತ ಮಹತ್ವದ್ದಾಗಿದೆ. ಶ್ರೀಲಂಕಾ ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 4 ಪಂದ್ಯಗಳನ್ನು ಆಡಿದ್ದು, ಒಂದು ಗೆಲುವು, ಒಂದು ಸೋಲು ಹಾಗೂ ಎರಡು ಡ್ರಾಗಳನ್ನು ದಾಖಲಿಸಿದೆ.

ಶ್ರೀಲಂಕಾಗೆ ಇನ್ನೂ 8 ಟೆಸ್ಟ್ ಪಂದ್ಯಗಳು ಬಾಕಿಯಿವೆ. ಈ ಪೈಕಿ 6 ಪಂದ್ಯಗಳಲ್ಲಿ ಗೆದ್ದು 2 ಪಂದ್ಯಗಳಲ್ಲಿ ಸೋತರೆ ತಂಡದ ಗೆಲುವಿನ ಪ್ರತಿಶತ ಶೇ.63.89ಕ್ಕೆ ಏರಿಕೆಯಾಗಲಿದೆ. ಮತ್ತೊಂದೆಡೆ 7 ಪಂದ್ಯಗಳಲ್ಲಿ ಗೆದ್ದು ಕೇವಲ ಒಂದು ಪಂದ್ಯ ಸೋತರೆ ಗೆಲುವಿನ ಪ್ರತಿಶತ ಶೇ.72.22ಕ್ಕೆ ತಲುಪಲಿದೆ. ಈ ರೀತಿಯ ಫಲಿತಾಂಶ ದೊರೆತರೆ ಶ್ರೀಲಂಕಾಗೂ ಫೈನಲ್‌ಗೇರುವ ಅವಕಾಶ ಸೃಷ್ಟಿಯಾಗಲಿದೆ.

ಅಗ್ರಸ್ಥಾನದಲ್ಲಿ ಆಸ್ಟ್ರೇಲಿಯಾ

ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತಂಡ 8 ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ಶೇ.87.50ರ ಗೆಲುವಿನ ಪ್ರತಿಶತ ಹೊಂದಿದೆ.

ಆಸ್ಟ್ರೇಲಿಯಾ ತಂಡಕ್ಕೆ ಇನ್ನೂ 14 ಟೆಸ್ಟ್ ಪಂದ್ಯಗಳು ಬಾಕಿಯಿದ್ದು, ಅವುಗಳಲ್ಲಿ 8 ಪಂದ್ಯಗಳನ್ನು ಗೆದ್ದರೂ ಫೈನಲ್‌ಗೆ ಅರ್ಹತೆ ಪಡೆಯುವ ಉತ್ತಮ ಅವಕಾಶ ಹೊಂದಿದೆ.

ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾ 4 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿ ಶೇ.75.00ರ ಗೆಲುವಿನ ಪ್ರತಿಶತ ಹೊಂದಿದೆ. ನ್ಯೂಜಿಲೆಂಡ್ 6 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿ ಶೇ.72.22ರ ಗೆಲುವಿನ ಪ್ರತಿಶತ ಹೊಂದಿದೆ.

ಹೀಗಾಗಿ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗಾಗಿ ಪೈಪೋಟಿ ತೀವ್ರವಾಗಿದ್ದು, ಶ್ರೀಲಂಕಾ ವಿರುದ್ಧದ ಸರಣಿಯ ಫಲಿತಾಂಶ ಭಾರತದ ಮುಂದಿನ ಹಾದಿಗೆ ನಿರ್ಣಾಯಕವಾಗಲಿದೆ.