ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದ ಒಕ್ಕಲಗೇರಿ ಓಣಿಯ ಶ್ರೀ ರಾಚೋಟೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಮೊಸರು ಗಡಿಗೆ ಒಡೆಯುವ ರೋಚಕ ಸ್ಪರ್ಧೆ ನೂರಾರು ಜನರ ಗಮನ ಸೆಳೆಯಿತು. ಯುವಕರ ಸಾಹಸ, ತಂಡಸ್ಫೂರ್ತಿ ಹಾಗೂ ಭಕ್ತರ ಹರ್ಷೋದ್ಗಾರದ ನಡುವೆ ನಡೆದ ಸ್ಪರ್ಧೆಯಲ್ಲಿ ಆರ್.ವಾಯ್.ಎಸ್. ಸಂಘ ಪ್ರಥಮ ಸ್ಥಾನ ಪಡೆದು ಸಂಭ್ರಮಿಸಿತು.
ಪ್ರತಿ ವರ್ಷದಂತೆ ಈ ವರ್ಷವೂ ಆಯೋಜಿಸಿದ್ದ ಸಾಹಸಮಯ ಸ್ಪರ್ಧೆಯಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಂಡಿದ್ದವು. ಪ್ರತಿ ತಂಡದಲ್ಲಿ 13 ಆಟಗಾರರಿದ್ದು, ಒಬ್ಬರ ಮೇಲೊಬ್ಬರು ನಿಂತು ಮಾನವ ಗೋಪುರ ನಿರ್ಮಿಸಿ, ಮೇಲಿದ್ದ ಆಟಗಾರ ಗಡಿಗೆ ಒಡೆಯುವ ದೃಶ್ಯ ರೋಮಾಂಚನ ಮೂಡಿಸಿತು. ಗಂಗಿಮಡಿ ಯುವಕರ ತಂಡ ದ್ವಿತೀಯ ಹಾಗೂ ಖಾನತೋಟದ ಯುವಕರ ತಂಡ ತೃತೀಯ ಸ್ಥಾನ ಗಳಿಸಿತು.
ಶ್ರೀಕೃಷ್ಣನ ಬಾಲಲೀಲೆಯನ್ನು ಸ್ಮರಿಸುವ ಈ ಆಚರಣೆಯು ಧಾರ್ಮಿಕ ಹಾಗೂ ಸಾಮಾಜಿಕ ಮಹತ್ವ ಹೊಂದಿದೆ. ಬಾಲಕೃಷ್ಣನು ಗೆಳೆಯರೊಂದಿಗೆ ಸೇರಿ ಗೋಪಿಕೆಯರ ಮನೆಯಲ್ಲಿ ಎತ್ತರದಲ್ಲಿ ಕಟ್ಟಿದ್ದ ಮೊಸರು, ಬೆಣ್ಣೆ ಮತ್ತು ಹಾಲಿನ ಗಡಿಗೆಗಳನ್ನು ಕದ್ದು ತಿನ್ನುತ್ತಿದ್ದ ಪ್ರಸಂಗವನ್ನು ನೆನಪಿಸುವ ಉದ್ದೇಶದಿಂದ ಯುವಕರು ಮಾನವ ಗೋಪುರ ನಿರ್ಮಿಸಿ ಗಡಿಗೆ ಒಡೆಯುತ್ತಾರೆ.
ನವೀನ ನಾಲ್ವಾಡ ಮಾತನಾಡಿ, ಗಡಿಗೆ ಒಡೆಯುವ ಯುವಕರನ್ನು ‘ಗೋವಿಂದರು’ ಎಂದು ಕರೆಯಲಾಗುತ್ತದೆ. ಒಬ್ಬರ ಮೇಲೊಬ್ಬರು ನಿಂತು ಮಾನವ ಗೋಪುರ ನಿರ್ಮಿಸಿ ಗಡಿಗೆ ಒಡೆಯುವ ಮೂಲಕ ಕೃಷ್ಣನ ಬಾಲಲೀಲೆಯನ್ನು ಸ್ಮರಿಸಲಾಗುತ್ತದೆ. ಆರು ತಂಡಗಳ ಆಟಗಾರರು ಉತ್ಸಾಹದಿಂದ ಪಾಲ್ಗೊಂಡು ಭಕ್ತರನ್ನು ರಂಜಿಸಿದರು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜು ಖಾನಪ್ಪನವರ, ಸಿದ್ದು ಸಂಗನಾಳ, ವೀರಣ್ಣ ಮೇಟಿ, ಮಂಜು ಅಂತರಗೊಂಡ, ಚೇತನ್ ಅಬ್ಬಿಗೇರಿ, ಮಲ್ಲು ಮಹಾಂತಶೆಟ್ಟರ, ಮಂಜುನಾಥ ಕುರ್ತಕೋಟಿ, ಈಶ್ವರ ಹಳ್ಳಿ, ಕಿರಣ್ ಕಮತರ, ಪರಶುರಾಮ ಹಳ್ಳದ, ನರಸಪ್ಪ ತುಕ್ಕಪ್ಪನವರ, ಬಸವರಾಜ ಹುಬ್ಬಳ್ಳಿ, ನಾಗರಾಜ ಮೇಣಸಗಿ, ವೀರೂಪಾಕ್ಷಪ್ಪ ಹೆಬ್ಬಳ್ಳಿ, ಮಹೇಶ ರೋಖಡೆ, ಸುರೇಶ ಹೆಬಸೂರ, ಹೇಮಂತ್ ಗಿಡ್ಡಹನಮಣ್ಣವರ, ಆನಂದ ಗವಲಿ, ಪಂಚಾಕ್ಷರಿ ಅಂಗಡಿ, ಸೋಮು ಮುಳಗುಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಟ್ರೋಪಿ ಜತೆಗೆ ನಗದು ಬಹುಮಾನ
ಪ್ರಥಮ ಸ್ಥಾನ ಪಡೆದ ಆರ್.ವಾಯ್.ಎಸ್. ಸಂಘಕ್ಕೆ ₹10,000 ನಗದು ಹಾಗೂ ಟ್ರೋಪಿ, ದ್ವಿತೀಯ ಸ್ಥಾನ ಪಡೆದ ಗಂಗಿಮಡಿ ಯುವಕರ ತಂಡಕ್ಕೆ ₹5,000 ನಗದು ಹಾಗೂ ಟ್ರೋಪಿ, ತೃತೀಯ ಸ್ಥಾನ ಪಡೆದ ಖಾನತೋಟದ ಯುವಕರ ತಂಡಕ್ಕೆ ₹2,500 ನಗದು ಹಾಗೂ ಟ್ರೋಪಿ ನೀಡಿ ಗೌರವಿಸಲಾಯಿತು.
ಗಡಿಗೆ ಒಡೆಯುವ ಕಾರ್ಯಕ್ರಮ ಶ್ರೀಕೃಷ್ಣನ ಬಾಲಲೀಲೆಯನ್ನು ಸ್ಮರಿಸುವ ಜತೆಗೆ ಯುವಕರಲ್ಲಿನ ಸಾಹಸ, ಒಗ್ಗಟ್ಟು ಮತ್ತು ತಂಡಸ್ಫೂರ್ತಿಯನ್ನು ಅನಾವರಣಗೊಳಿಸುತ್ತದೆ. ಇಂತಹ ಸಾಂಪ್ರದಾಯಿಕ ಆಚರಣೆಗಳು ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತವೆ.
— ಶ್ರೀಧರ್ ವಜ್ರಬಂಡಿ