Home Blog

ನಾಲ್ಕನೇ ವ್ಯಕ್ತಿಯಿಂದ ಆಡಿಟ್ ಮಾಡಿಸುವ ಅಗತ್ಯವಿದೆಯೇ? ಕಳಪೆ ಗುಣಮಟ್ಟದ ಕಾಮಗಾರಿಗೆ ಮೋದಿ ಗರಂ

0

ನವದೆಹಲಿ: ನಿರ್ಮಾಣ ಹಾಗೂ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಲ್ಲಿ ಕಂಡುಬರುತ್ತಿರುವ ಕಳಪೆ ಗುಣಮಟ್ಟದ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಈಗ ನಾಲ್ಕನೇ ವ್ಯಕ್ತಿಗಳಿಂದ ಆಡಿಟ್ ಮೊರೆ ಹೋಗಬೇಕೆ ಎಂದು ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ಹಾಗೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಪ್ರಶ್ನಿಸಿದ ಪ್ರಧಾನಿ, ಸಾಮಾನ್ಯವಾಗಿ ಯೋಜನೆಗಳ ಗುಣಮಟ್ಟ ಪರಿಶೀಲನೆಗೆ ‘ಥರ್ಡ್ ಪಾರ್ಟಿ’ ಆಡಿಟ್ ವ್ಯವಸ್ಥೆ ಚಾಲ್ತಿಯಲ್ಲಿದ್ದರೂ ಅದು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಂಗಳವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೋದಿ, ಕಾಮಗಾರಿಗಳಲ್ಲಿ ಗುಣಮಟ್ಟದ ಕೊರತೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಉನ್ನತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

ಈ ಸಭೆಯಲ್ಲಿ ರೈಲ್ವೆ, ರಸ್ತೆ ಮತ್ತು ವಿದ್ಯುತ್ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 9 ರಾಜ್ಯಗಳಲ್ಲಿ ನಡೆಯುತ್ತಿರುವ ಸುಮಾರು 30,000 ಕೋಟಿ ರೂ. ವೆಚ್ಚದ ಆರು ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪ್ರಧಾನಿ ಪರಿಶೀಲಿಸಿದರು. ಮೂಲಸೌಕರ್ಯ ಕಾಮಗಾರಿಗಳನ್ನು ಬಿಡಿಭಾಗಗಳಾಗಿ ನೋಡದೆ ಸಮಗ್ರ ದೃಷ್ಟಿಕೋನದಿಂದ ಮೇಲ್ವಿಚಾರಣೆ ನಡೆಸಬೇಕು ಎಂದೂ, ತ್ವರಿತ ಅನುಷ್ಠಾನದ ಜೊತೆಗೆ ರಾಜಿ ಮಾಡಿಕೊಳ್ಳದೆ ಗುಣಮಟ್ಟವೂ ಇರಬೇಕು ಎಂದೂ ಅವರು ತಿಳಿಸಿದರು. ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಅನುಷ್ಠಾನ ಸಂಸ್ಥೆಗಳು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಪ್ರತಿ ಹಂತದಲ್ಲೂ ಗುಣಮಟ್ಟದ ಮೇಲ್ವಿಚಾರಣೆ ಬಲಪಡಿಸಬೇಕು ಎಂದು ಪ್ರಧಾನಿ ಕರೆ ನೀಡಿದರು.

ವಿದ್ಯುತ್ ಉತ್ಪಾದನೆ ಹೆಚ್ಚಿಸಿದರೆ ಮಾತ್ರ ಸಾಲದು, ಸರಿಯಾದ ಪ್ರಸರಣ ಮಾರ್ಗಗಳೂ ಇರಬೇಕು ಎಂದ ಮೋದಿ, ಇದು ಕಾಲುವೆಗಳನ್ನು ನಿರ್ಮಿಸದೆ ಅಣೆಕಟ್ಟು ಕಟ್ಟಿದಂತೆ ಯಾವುದೇ ಪ್ರಯೋಜನ ನೀಡುವುದಿಲ್ಲ ಎಂದು ವಿದ್ಯುತ್ ಯೋಜನೆಗಳ ಪರಿಶೀಲನೆ ವೇಳೆ ಹೇಳಿದರು.

ಹೆಚ್ಚುತ್ತಿರುವ ಸೈಬರ್ ವಂಚನೆ ಮತ್ತು ಡಿಜಿಟಲ್ ಅರೆಸ್ಟ್ ಪ್ರಕರಣಗಳ ಕುರಿತು ಚರ್ಚಿಸಿದ ಪ್ರಧಾನಿ, ತರಬೇತಿ, ಜಾಗೃತಿ ಮತ್ತು ಶಿಕ್ಷಣದ ಮೂಲಕ ಇವುಗಳ ತಡೆಗಟ್ಟುವಿಕೆ ಬಲಪಡಿಸಬೇಕು ಎಂದರು. ಹಿರಿಯ ನಾಗರಿಕರು, ಯುವಕರು ಸೇರಿದಂತೆ ದುರ್ಬಲ ವರ್ಗದವರನ್ನು ಗುರಿಯಾಗಿಸಿಕೊಂಡು ನಡೆಯುವ ಸೈಬರ್ ಅಪರಾಧಗಳ ಎಚ್ಚರಿಕೆ ಚಿಹ್ನೆಗಳು ಮತ್ತು ಸುರಕ್ಷಿತ ಡಿಜಿಟಲ್ ಪದ್ಧತಿಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸಲು ಸೂಚಿಸಿದರು. ಈ ಸಭೆಯಲ್ಲಿ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಸೈಬರ್ ಅಪರಾಧ ನಿಯಂತ್ರಣಕ್ಕೆ 20 ರಾಜ್ಯಗಳು ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡಿದರು.

ಶ್ರೀಲಂಕಾ 290 ರನ್‌ʼಗಳಿಗೆ ಆಲೌಟ್: 213 ರನ್ʼಗಳ ಭರ್ಜರಿ ಮುನ್ನಡೆ ಪಡೆದ ಟೀಂ ಇಂಡಿಯಾ

0

ಕೊಲಂಬೊ: ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡ 290 ರನ್‌ಗಳಿಗೆ ಆಲೌಟ್ ಆಗಿದೆ. ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (SSC) ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಭರ್ಜರಿ ಮುನ್ನಡೆ ಸಾಧಿಸಿದ್ದು, ಲಂಕಾ ತಂಡಕ್ಕೆ ಫಾಲೋಆನ್ ಹೇರಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ತಂಡವು 9 ವಿಕೆಟ್‌ಗಳ ನಷ್ಟಕ್ಕೆ 503 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡಕ್ಕೆ ಭಾರತೀಯ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಕೇವಲ 35 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡ ಲಂಕಾ ಪಡೆ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ ಕಣಕ್ಕಿಳಿದ ಪಸಿಂದು ಸೂರ್ಯಬಂಡಾರ 80 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಬಳಿಕ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಸೋನಾಲ್ ದಿನುಷಾ ಭರ್ಜರಿ ಶತಕ ಸಿಡಿಸಿ ಶ್ರೀಲಂಕಾ ತಂಡದ ಮೊತ್ತವನ್ನು 250 ರನ್‌ಗಳ ಗಡಿ ದಾಟಿಸಿದರು. 162 ಎಸೆತಗಳನ್ನು ಎದುರಿಸಿದ ದಿನುಷಾ 103 ರನ್‌ಗಳ ಮಹತ್ವದ ಇನಿಂಗ್ಸ್ ಆಡಿದರು.

ಆದರೆ ದಿನುಷಾ ವಿಕೆಟ್ ಪತನದ ಬಳಿಕ ಭಾರತೀಯ ಬೌಲರ್‌ಗಳು ಮತ್ತೆ ಬಿಗಿ ದಾಳಿ ಸಂಘಟಿಸಿದರು. ಸತತವಾಗಿ ವಿಕೆಟ್‌ಗಳನ್ನು ಕಬಳಿಸಿದ ಟೀಂ ಇಂಡಿಯಾ ಬೌಲರ್‌ಗಳು ಶ್ರೀಲಂಕಾ ತಂಡವನ್ನು 290 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.

ಭಾರತದ ಪರ ಪ್ರಸಿದ್ಧ್ ಕೃಷ್ಣ ಹಾಗೂ ಮಾನವ್ ಸುತಾರ್ ತಲಾ ಮೂರು ವಿಕೆಟ್ ಕಬಳಿಸಿ ಮಿಂಚಿದರು. ಸರಾನ್ಶ್ ಜೈನ್ ಎರಡು ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

ಲಂಕಾಗೆ ಫಾಲೋಆನ್

ಮೊದಲ ಇನಿಂಗ್ಸ್‌ನಲ್ಲಿ 213 ರನ್‌ಗಳ ಭರ್ಜರಿ ಮುನ್ನಡೆ ಪಡೆದ ಟೀಂ ಇಂಡಿಯಾ, ಶ್ರೀಲಂಕಾ ತಂಡಕ್ಕೆ ಫಾಲೋಆನ್ ಹೇರಿದೆ. ಇದರೊಂದಿಗೆ ಲಂಕಾ ಪಡೆ ಇದೀಗ ಎರಡನೇ ಇನಿಂಗ್ಸ್ ಆರಂಭಿಸಿದೆ.

ಶ್ರೀಲಂಕಾ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ 213 ರನ್‌ಗಳ ಒಳಗಾಗಿ ಆಲೌಟ್ ಮಾಡಲು ಭಾರತ ಯಶಸ್ವಿಯಾದರೆ, ಟೀಂ ಇಂಡಿಯಾ ಇನಿಂಗ್ಸ್ ಹಾಗೂ ರನ್‌ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಲಿದೆ. ಹೀಗಾಗಿ ಕೊಲಂಬೊ ಟೆಸ್ಟ್‌ನಲ್ಲಿ ಭಾರತ ಇನಿಂಗ್ಸ್ ಗೆಲುವಿನತ್ತ ಮುನ್ನಡೆಯುತ್ತಿದೆ.

ಭಾರತ ಪ್ಲೇಯಿಂಗ್ XI:

ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭ್‌ಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಧ್ರುವ್ ಜುರೆಲ್, ಸರಾನ್ಶ್ ಜೈನ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಶ್ರೀಲಂಕಾ ಪ್ಲೇಯಿಂಗ್ XI:

ಲಹಿರು ಉದಾರ, ಕಮಿಲ್ ಮಿಶ್ರಾ, ಪಸಿಂದು ಸೂರ್ಯಬಂಡಾರ, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ (ನಾಯಕ), ಸೋನಾಲ್ ದಿನುಷಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಕೇಶರ ನುವಾಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೊ.

ಅಂಬಾರಿ ರಾಜನಿಗೆ ವಿದಾಯ: 9 ದಸರಾ ಆನೆಗಳೊಂದಿಗೆ ಮೈಸೂರಿನತ್ತ ಗಜಪಯಣ ಆರಂಭ!

0

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳಿಗೆ ಭರ್ಜರಿ ಚಾಲನೆ ಸಿಕ್ಕಿದೆ. ನಾಗರಹೊಳೆಯ ವೀರನಹೊಸಹಳ್ಳಿಯಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಗಜಪಯಣ ಆರಂಭವಾಗಿದ್ದು, ಮೊದಲ ಹಂತದಲ್ಲಿ 9 ದಸರಾ ಆನೆಗಳು ಮೈಸೂರಿನತ್ತ ಹೊರಟಿವೆ.

ವೀರನಹೊಸಹಳ್ಳಿಯಲ್ಲಿ ನಿಗದಿತ ಶುಭ ಮುಹೂರ್ತವಾದ ಬೆಳಗ್ಗೆ 10ರಿಂದ 10:28ರ ತುಲಾ ಲಗ್ನದಲ್ಲಿ ಗಜಪಡೆಗೆ ಪೂಜೆ ನೆರವೇರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ ನೀಡಿದರು.

ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ ಹಾಗೂ ಹೆಣ್ಣು ಆನೆಗಳಾದ ಲಕ್ಷ್ಮೀ ಮತ್ತು ಕಾವೇರಿ ಸೇರಿದಂತೆ 9 ಆನೆಗಳು ಮೊದಲ ತಂಡದಲ್ಲಿವೆ.

ಗಜಪಡೆ ಎರಡು ದಿನಗಳ ಕಾಲ ಮೈಸೂರು ನಗರದ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಲಿದೆ. ಬಳಿಕ ಆಗಸ್ಟ್ 28ರಂದು ಅರಮನೆ ಆವರಣ ಪ್ರವೇಶಿಸಿ ದಸರಾ ತಾಲೀಮು ಸೇರಿದಂತೆ ಮುಂದಿನ ಸಿದ್ಧತೆಗಳಲ್ಲಿ ಭಾಗಿಯಾಗಲಿದೆ.

25 ವರ್ಷಗಳ ದಸರಾ ಪಯಣಕ್ಕೆ ತೆರೆ

ಈ ಬಾರಿಯ ದಸರಾ ಗಜಪಯಣದಲ್ಲಿ ಅತ್ಯಂತ ಭಾವುಕ ಕ್ಷಣಕ್ಕೂ ಸಾಕ್ಷಿಯಾಯಿತು. ಆರು ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಅಭಿಮನ್ಯು ಈ ಬಾರಿ ನಿವೃತ್ತಿಯಾಗಿದ್ದು, ಅರಣ್ಯ ಇಲಾಖೆ ವತಿಯಿಂದ ಸಾಂಪ್ರದಾಯಿಕವಾಗಿ ಬೀಳ್ಕೊಡುಗೆ ನೀಡಲಾಯಿತು.

ಸುಮಾರು 25 ವರ್ಷಗಳಿಂದ ದಸರಾ ಮಹೋತ್ಸವದ ಭಾಗವಾಗಿದ್ದ ಅಭಿಮನ್ಯುವಿನ ಸೇವೆಯನ್ನು ಸ್ಮರಿಸಿ ಪೂಜೆ ಸಲ್ಲಿಸಲಾಯಿತು.

ಆದರೆ ದಸರಾ ಸಂದರ್ಭದಲ್ಲಿ ಅಭಿಮನ್ಯುವನ್ನು ನಿಶಾನೆ ಆನೆಯಾಗಿ ಕರೆತರುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗಿಲ್ಲ. ಈ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಮುಂದಿನ ಸಾಧ್ಯತೆಗಳನ್ನು ಪರಿಶೀಲಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಕೃತಿ ಸನೋನ್ ರಾಖಿ ಜಾಹೀರಾತು ವಿವಾದ: ನೆಟ್ಟಿಗರ ಆಕ್ರೋಶಕ್ಕೆ ಮಣಿದ GIVA

ಬೆಂಗಳೂರು: ರಕ್ಷಾಬಂಧನದ ಹಿನ್ನೆಲೆಯಲ್ಲಿ GIVA ಬಿಡುಗಡೆ ಮಾಡಿದ್ದ ಕೃತಿ ಸನೋನ್ ಅಭಿನಯದ ಜಾಹೀರಾತು ಇದೀಗ ವಿವಾದದ ಕೇಂದ್ರವಾಗಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪಗಳ ನಡುವೆ ಸಂಸ್ಥೆ ತನ್ನ ಜಾಹೀರಾತನ್ನು ಎಲ್ಲಾ ಮಾಧ್ಯಮ ವೇದಿಕೆಗಳಿಂದ ಹಿಂಪಡೆದುಕೊಂಡಿದೆ.

ಜಾಹೀರಾತಿನ ಪ್ರಮುಖ ಪರಿಕಲ್ಪನೆಯೇ ವಿವಾದಕ್ಕೆ ಕಾರಣವಾಗಿದೆ. ಕೃತಿ ಸನೋನ್ ತಮ್ಮ ಸಹೋದರನಿಗೆ ರಾಖಿ ಕಟ್ಟಿದ ಬಳಿಕ ಸಾಕು ನಾಯಿಗೂ ರಾಖಿ ಕಟ್ಟುವ ದೃಶ್ಯವನ್ನು ಜಾಹೀರಾತಿನಲ್ಲಿ ತೋರಿಸಲಾಗಿತ್ತು.

ಈ ದೃಶ್ಯ ಭಾರತೀಯ ರಕ್ಷಾಬಂಧನ ಸಂಪ್ರದಾಯವನ್ನು ಲಘುವಾಗಿ ಬಿಂಬಿಸುತ್ತದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದರ ನಡುವೆಯೇ ಕೃತಿ ಸನೋನ್ ಅವರ ಉಡುಪಿನ ಬಗ್ಗೆಯೂ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಬಿಳಿ ಬಣ್ಣದ ಬ್ರಾಲೆಟ್ ಶೈಲಿಯ ಡೀಪ್ ವಿ-ನೆಕ್ ಬ್ಲೌಸ್, ಕೇಪ್ ಮತ್ತು ಸ್ಕರ್ಟ್ ಒಳಗೊಂಡ ಮಾಡರ್ನ್ ಲುಕ್ ರಕ್ಷಾಬಂಧನದಂತಹ ಸಾಂಪ್ರದಾಯಿಕ ಹಬ್ಬಕ್ಕೆ ಸೂಕ್ತವಲ್ಲ ಎಂಬ ಅಭಿಪ್ರಾಯಗಳು ಕೇಳಿಬಂದಿದ್ದವು.

ವಿವಾದ ಹೆಚ್ಚಾಗುತ್ತಿದ್ದಂತೆ GIVA ಸ್ಪಷ್ಟನೆ ನೀಡಿದೆ. ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಹಬ್ಬಗಳಿಗೆ ಸಂಸ್ಥೆ ಸದಾ ಗೌರವ ನೀಡುತ್ತದೆ. ಕುಟುಂಬದೊಂದಿಗೆ ಆಚರಿಸುವ ಹಬ್ಬದ ಸಂಭ್ರಮವನ್ನು ಸಾಕುಪ್ರಾಣಿಗಳಿಗೂ ವಿಸ್ತರಿಸುವ ಉದ್ದೇಶದಿಂದ ಈ ಜಾಹೀರಾತು ರೂಪಿಸಲಾಗಿತ್ತು ಎಂದು ಸಂಸ್ಥೆ ಹೇಳಿದೆ.

ಆದರೆ ಜಾಹೀರಾತಿನಿಂದ ಸಮಾಜದ ಯಾವುದೇ ವರ್ಗದ ಜನರ ಭಾವನೆಗಳಿಗೆ ನೋವಾಗಿದ್ದರೆ ಅದು ಉದ್ದೇಶಪೂರ್ವಕವಲ್ಲ ಎಂದು ತಿಳಿಸಿರುವ GIVA, ಜನರ ಭಾವನೆಗಳಿಗೆ ಗೌರವ ಸೂಚಿಸಿ ಜಾಹೀರಾತನ್ನು ಎಲ್ಲಾ ಮಾಧ್ಯಮಗಳಿಂದ ಹಿಂಪಡೆದಿರುವುದಾಗಿ ಘೋಷಿಸಿದೆ.

ಹಿಜಾಬ್ ತೀರ್ಪು ಇಸ್ಲಾಂ ಮೇಲಿನ ದಾಳಿ: ಅಲಹಾಬಾದ್ ಹೈಕೋರ್ಟ್ ವಿರುದ್ಧ ಓವೈಸಿ ಆಕ್ರೋಶ

0

ಹೈದರಾಬಾದ್: ಶಾಲೆಯಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಮುಸ್ಲಿಂ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತೀವ್ರವಾಗಿ ಖಂಡಿಸಿದ್ದಾರೆ.

ಈ ತೀರ್ಪನ್ನು ಇಸ್ಲಾಂ ಮೇಲಿನ ದಾಳಿ ಎಂದು ಕರೆದಿರುವ ಓವೈಸಿ, ಇಸ್ಲಾಂ ಧರ್ಮದಲ್ಲಿ ಯಾವುದು ಅತ್ಯಗತ್ಯ, ಯಾವುದು ಅಲ್ಲ ಎಂಬುದನ್ನು ನಿರ್ಧರಿಸಲು ನ್ಯಾಯಾಧೀಶರು ಯಾರು ಎಂದು ಪ್ರಶ್ನಿಸಿದ್ದಾರೆ. ಇದು ತಮ್ಮ ಧರ್ಮವಾಗಿದ್ದು, ಅದರಲ್ಲಿ ಯಾವುದು ಅತ್ಯಗತ್ಯ ಎಂಬುದನ್ನು ತಾವೇ ತೀರ್ಮಾನಿಸುವುದಾಗಿಯೂ, ಇದು ಧರ್ಮದ ಮೇಲಿನ ನೇರ ದಾಳಿ ಎಂದೂ ಆಕ್ರೋಶ ಹೊರಹಾಕಿದ್ದಾರೆ.

ಧಾರ್ಮಿಕ ಅತ್ಯಗತ್ಯ ಆಚರಣೆಗಳಿಗೆ ಸಂಬಂಧಿಸಿದ ವಿಷಯವನ್ನು ಶಬರಿಮಲೆ ಪ್ರಕರಣದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ಪರಿಶೀಲಿಸುತ್ತಿರುವಾಗ ಅಲಹಾಬಾದ್ ಹೈಕೋರ್ಟ್ ಈ ಕುರಿತು ತೀರ್ಪು ನೀಡಬಾರದಿತ್ತು ಎಂದು ಓವೈಸಿ ಹೇಳಿದರು. ಈ ಆದೇಶ ಸಂವಿಧಾನದ 19ನೇ ವಿಧಿ (ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು 25ನೇ ವಿಧಿ (ಧಾರ್ಮಿಕ ಸ್ವಾತಂತ್ರ್ಯ)ಗಳಿಗೆ ವಿರುದ್ಧವಾಗಿದೆ ಎಂದೂ,

ಹಿಜಾಬ್ ಧರಿಸುವುದು ತಲೆಯ ಮೇಲೆಯೇ ಹೊರತು ಮನಸ್ಸಿನ ಮೇಲಲ್ಲ ಎಂದೂ ಅಭಿಪ್ರಾಯಪಟ್ಟರು. ಈ ತೀರ್ಪಿನಿಂದ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯಾಗಲಿದ್ದು, ಉತ್ತರ ಪ್ರದೇಶದಲ್ಲಿ ಈಗಾಗಲೇ ಪ್ರೌಢಶಾಲೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ದಾಖಲಾತಿ ಪ್ರಮಾಣ ಅತ್ಯಂತ ಕಡಿಮೆಯಿದ್ದು, ಅವರ ಶಿಕ್ಷಣವನ್ನು ತಡೆಯುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದರು.

ಶಿಸ್ತು ಮತ್ತು ಸಮಾನತೆ ಕಾಯ್ದುಕೊಳ್ಳಲು ಸಮವಸ್ತ್ರ ನಿಯಮ ಜಾರಿಗೊಳಿಸುವ ಸಂಪೂರ್ಣ ಸ್ವಾಯತ್ತತೆ ಶಿಕ್ಷಣ ಸಂಸ್ಥೆಗಳಿಗೆ ಇದೆ ಎಂಬ ನ್ಯಾಯಾಲಯದ ಅಭಿಪ್ರಾಯವನ್ನು ತಿರಸ್ಕರಿಸಿದ ಓವೈಸಿ, ಏಕರೂಪತೆಯೇ ಸಮಾನತೆಯಲ್ಲ ಎಂದು ಪ್ರತಿಪಾದಿಸಿದರು.

ಕಲಬುರಗಿ ಡಿಸಿ ವಿರುದ್ಧ ವಿವಾದಾತ್ಮಕ ಹೇಳಿಕೆ: ರವಿಕುಮಾರ್ʼಗೆ ಷರತ್ತುಬದ್ಧ ಜಾಮೀನು ಮಂಜೂರು

ಬೆಂಗಳೂರು: ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಲಯಕ್ಕೆ ಖುದ್ದು ಹಾಜರಾದ ಎಂಎಲ್‌ಸಿ ರವಿಕುಮಾರ್ ಅವರಿಗೆ ಜಾಮೀನು ನೀಡಲಾಗಿದ್ದು, ಮುಂದೆ ಯಾವುದೇ ದ್ವೇಷ ಭಾಷಣ ಅಥವಾ ಅವಹೇಳನಕಾರಿ ಟೀಕೆ ಮಾಡಬಾರದೆಂದು ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.

1 ಲಕ್ಷ ರೂ. ವೈಯಕ್ತಿಕ ಬಾಂಡ್ ಹಾಗೂ 10 ಸಾವಿರ ರೂ. ಶ್ಯೂರಿಟಿ ಆಧಾರದ ಮೇಲೆ ಜಾಮೀನು ನೀಡಲಾಗಿದೆ. ಹಿಂದಿನ ವಿಚಾರಣೆ ವೇಳೆ ಗೈರುಹಾಜರಾಗಿದ್ದಕ್ಕೆ 500 ರೂ. ದಂಡ ವಿಧಿಸಲಾಗಿದೆ. ಪ್ರಚೋದನಕಾರಿ ಅಥವಾ ದ್ವೇಷಪೂರಿತ ಹೇಳಿಕೆ ನೀಡದಂತೆ ನ್ಯಾಯಾಲಯ ಷರತ್ತು ವಿಧಿಸಿದೆ.

ಏನಿದು ಪ್ರಕರಣ?

2025ರ ಮೇ 24ರಂದು ಕಲಬುರಗಿಯಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ್ದ ರವಿಕುಮಾರ್, ಜಿಲ್ಲಾಧಿಕಾರಿ ಫೌಝಿಯಾ ತರನ್ನಮ್ ಅವರು ಕಾಂಗ್ರೆಸ್ ಸರ್ಕಾರದ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ಅವರು ಪಾಕಿಸ್ತಾನದಿಂದ ಬಂದಿದ್ದಾರೋ ಅಥವಾ ಇಲ್ಲಿ ಅಧಿಕಾರಿಯಾಗಿದ್ದಾರೋ ಗೊತ್ತಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಸಂಬಂಧ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ರವಿಕುಮಾರ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದರು.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭೀಕರ ಅಪಘಾತ: ತಲೆಯ ಮೇಲೆ ಟ್ರಕ್ ಹರಿದು ಕಾರ್ಮಿಕ ಸಾವು

ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಟ್ಟಡ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತನ ತಲೆಯ ಮೇಲೆ ಟ್ರಕ್‌ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮೃತರನ್ನು ಬಿಹಾರ ಮೂಲದ ಬಾಬುಜೀ ಮಿಯಾ (45) ಎಂದು ಗುರುತಿಸಲಾಗಿದೆ. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಾಬುಜೀ ಮಿಯಾ, ಇಂದು ಕೆಲಸಕ್ಕೆಂದು ಉತ್ತರಹಳ್ಳಿಯಿಂದ ಸರ್ಜಾಪುರದ ಕಡೆಗೆ ತೆರಳುತ್ತಿದ್ದರು.

ಈ ವೇಳೆ ಎಲೆಕ್ಟ್ರಾನಿಕ್ ಸಿಟಿಯ ನೈಸ್‌ ಟೋಲ್‌ ಬಳಿ ಅಪಘಾತ ಸಂಭವಿಸಿದೆ. ಟ್ರಕ್‌ ಡಿಕ್ಕಿ ಹೊಡೆದ ಪರಿಣಾಮ ಬಾಬುಜೀ ಮಿಯಾ ಅವರ ತಲೆಯ ಮೇಲೆ ಟ್ರಕ್‌ ಹರಿದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅಪಘಾತದ ಬಳಿಕ ಟ್ರಕ್‌ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಸೆಂಟ್‌ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಪಘಾತಕ್ಕೆ ಕಾರಣ ಹಾಗೂ ಪರಾರಿಯಾಗಿರುವ ಟ್ರಕ್‌ ಚಾಲಕನ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹನೂರು ಶೂಟೌಟ್ ಬೆನ್ನಲ್ಲೇ ‘ವೈರಲ್ ಆಡಿಯೋ’ ಬಾಂಬ್: ತಮಿಳು ಸಮುದಾಯದ ಹೆಸರಿನಲ್ಲಿ ಪ್ರಚೋದನೆ ಆರೋಪ

0

ಚಾಮರಾಜನಗರ: ಹನೂರು ಎನ್‌ಕೌಂಟರ್ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿರುವ ನಡುವೆಯೇ ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಹೇಳಿಕೆಗಳಿರುವ ಆಡಿಯೋವೊಂದು ವೈರಲ್ ಆಗಿದೆ. ‘ಟೈಗರ್ ಆಫ್ ಜಸ್ಟೀಸ್’ ಸಂಘಟನೆಯ ಅಧ್ಯಕ್ಷ ದಿವ್ಯಾನಂದ ಅವರದ್ದೆಂದು ಹೇಳಲಾಗುತ್ತಿರುವ ಆಡಿಯೋದಲ್ಲಿ ಜಾತಿ, ಧರ್ಮ ಹಾಗೂ ಭಾಷೆಯ ಆಧಾರದಲ್ಲಿ ಜನರನ್ನು ಒಗ್ಗೂಡಿಸುವ ಮತ್ತು ರಾಜಕೀಯವಾಗಿ ಪ್ರಚೋದಿಸುವ ರೀತಿಯ ಹೇಳಿಕೆಗಳಿವೆ ಎಂಬ ಆರೋಪ ಕೇಳಿಬಂದಿದೆ.

ವೈರಲ್ ಆಡಿಯೋದಲ್ಲಿ ತಮಿಳು ಸಮುದಾಯದ ಮೇಲೆ ಅನ್ಯಾಯ ನಡೆಯುತ್ತಿದೆ ಎಂಬ ಆರೋಪ ಮಾಡಲಾಗಿದೆ. ತಮಿಳುನಾಡಿನಿಂದ ವಲಸೆ ಬಂದವರಿಗೆ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ ಎಂದು ಹೇಳಿ, ಕನ್ನಡಿಗರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ರೀತಿಯ ಹೇಳಿಕೆಗಳಿವೆ ಎನ್ನಲಾಗಿದೆ.

ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹಿಂದೆ ಹೋಗದಂತೆ ಕರೆ ನೀಡಿರುವ ಧ್ವನಿ, ತಮ್ಮದೇ ಆದ ಸಂಘಟನೆ ಕಟ್ಟಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದೆ ಎನ್ನಲಾಗಿದೆ.

ಪ್ರದೇಶದಲ್ಲಿ ಸುಮಾರು 65 ಸಾವಿರ ಮತಗಳಿವೆ ಎಂದು ಉಲ್ಲೇಖಿಸಿರುವ ಆಡಿಯೋದಲ್ಲಿ, ತಮಿಳು ಸಮುದಾಯದ ವ್ಯಕ್ತಿಗೆ ತೊಂದರೆಯಾದರೆ ಯಾವುದೇ ರಾಜಕೀಯ ಪಕ್ಷಕ್ಕೂ ಮತ ಹಾಕಬಾರದು ಎಂಬ ರೀತಿಯ ರಾಜಕೀಯ ಕರೆ ನೀಡಲಾಗಿದೆ ಎಂಬ ಆರೋಪವೂ ಇದೆ.

ತಮಿಳು ಪಡಿಯಾಚ್ಚಿ ಕ್ರಿಶ್ಚಿಯನ್ನರು ಒಗ್ಗಟ್ಟಾಗಿ ನಿಲ್ಲಬೇಕು ಎಂದು ಕರೆ ನೀಡಿರುವುದರ ಜೊತೆಗೆ, ಚರ್ಚ್‌ಗಳು ತಮ್ಮ ಬೆಂಬಲಕ್ಕೆ ನಿಂತಿವೆ ಎಂದು ಧ್ವನಿಯಲ್ಲಿ ಹೇಳಲಾಗಿದೆ ಎನ್ನಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿದರೂ ಕಾನೂನು ಹೋರಾಟ ನಡೆಸುವುದಾಗಿ ಸವಾಲು ಹಾಕಿರುವ ಹೇಳಿಕೆಯೂ ಆಡಿಯೋದಲ್ಲಿದೆ ಎನ್ನಲಾಗಿದೆ.

ಆದರೆ, ವೈರಲ್ ಆಗಿರುವ ಆಡಿಯೋದ ಸತ್ಯಾಸತ್ಯತೆ, ಅದು ಯಾರಿಂದ ಮತ್ತು ಯಾವ ಸಂದರ್ಭದಲ್ಲಿದೆ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹೇಳಿಕೆಗಳ ಆಧಾರದ ಮೇಲೆ ಯಾವುದೇ ಅಂತಿಮ ನಿರ್ಣಯಕ್ಕೆ ಬರುವಂತಿಲ್ಲ.

ಹನೂರು ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಐಡಿ ತನಿಖೆ ಆರಂಭವಾಗಿರುವ ಹಿನ್ನೆಲೆಯಲ್ಲಿ, ಈ ಆಡಿಯೋ ಪ್ರಕರಣವೂ ತನಿಖಾ ವ್ಯಾಪ್ತಿಗೆ ಬರಲಿದೆಯೇ ಎಂಬುದು ಇದೀಗ ಕುತೂಹಲ ಮೂಡಿಸಿದೆ.

ಅನೈತಿಕ ಸಂಬಂಧದ ಶಂಕೆ; ವಾಟ್ಸಾಪ್ ಸ್ಟೇಟಸ್ ನೋಡಿ ಕೆರಳಿದ ದಂಪತಿ, ವ್ಯಕ್ತಿಯ ಕೊಲೆ!

0

ಬೆಳಗಾವಿ: ವಾಟ್ಸಾಪ್ ಸ್ಟೇಟಸ್‌ಗೆ ಫೋಟೋ ಹಾಕಿದ್ದಕ್ಕೆ ಅನೈತಿಕ ಸಂಬಂಧದ ಶಂಕೆಯಲ್ಲಿ ವ್ಯಕ್ತಿಯೊಬ್ಬನನ್ನು ದಂಪತಿ ಸೇರಿ ಕುಡುಗೋಲಿನಿಂದ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ನಡೆದಿದೆ.

ಮೃತನನ್ನು ಗುಜನಟ್ಟಿ ಗ್ರಾಮದ ರಮೇಶ್ ಬಂಟ್ರೋಳಿ ಎಂದು ಗುರುತಿಸಲಾಗಿದೆ. ಕಲ್ಲೋಳಿ ಗ್ರಾಮದ ಬನಪ್ಪ ಒಡೆಯರ್ ಮತ್ತು ಆತನ ಪತ್ನಿ ಲಕ್ಷ್ಮೀ ಒಡೆಯರ್ ಕೊಲೆ ಆರೋಪಿಗಳಾಗಿದ್ದಾರೆ.

ರಮೇಶ್‌ಗೆ ಲಕ್ಷ್ಮೀ ಜೊತೆ ಅನೈತಿಕ ಸಂಬಂಧವಿದೆ ಎಂದು ಬನಪ್ಪ ಶಂಕಿಸಿದ್ದ ಎನ್ನಲಾಗಿದೆ. ರಮೇಶ್ ಮತ್ತು ಲಕ್ಷ್ಮೀ ಜೊತೆಯಲ್ಲಿದ್ದ ಫೋಟೋ ತೆಗೆದುಕೊಂಡು ಅದನ್ನು ವಾಟ್ಸಾಪ್ ಸ್ಟೇಟಸ್‌ಗೆ ಹಾಕಿದ್ದ. ಇದನ್ನು ನೋಡಿದ ಬನಪ್ಪ ಹಾಗೂ ಲಕ್ಷ್ಮೀ ಆಕ್ರೋಶಗೊಂಡಿದ್ದರು ಎನ್ನಲಾಗಿದೆ.

ಬಳಿಕ ಕಲ್ಲೋಳಿ ಗ್ರಾಮದ ಮನೆಯ ಹಿಂಭಾಗದ ಸೋಯಾಬಿನ್ ಜಮೀನಿನಲ್ಲಿ ರಮೇಶ್‌ನನ್ನು ಕುಡುಗೋಲಿನಿಂದ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬನಪ್ಪ ಹಾಗೂ ಲಕ್ಷ್ಮೀ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮುಂಜಾನೆಯಿಂದಲೇ ‘ಟಾಕ್ಸಿಕ್’ ಜೋಶ್: ಬಳ್ಳಾರಿ-ದಾವಣಗೆರೆ ಥಿಯೇಟರ್‌ಗಳ ಮುಂದೆ ಯಶ್ ಫ್ಯಾನ್ಸ್ ಅಬ್ಬರ!

ಬಳ್ಳಾರಿ/ದಾವಣಗೆರೆ: ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ತೆರೆಗೆ ಬರುತ್ತಿದ್ದಂತೆ ಬಳ್ಳಾರಿ ಮತ್ತು ದಾವಣಗೆರೆಯಲ್ಲಿ ಅಭಿಮಾನಿಗಳ ಸಂಭ್ರಮಕ್ಕೆ ಥಿಯೇಟರ್‌ಗಳೇ ಸಾಕ್ಷಿಯಾಗಿವೆ. ಬೆಳಗ್ಗೆ 6 ಗಂಟೆಯ ಶೋಗೆ ಮುನ್ನವೇ ಚಿತ್ರಮಂದಿರಗಳತ್ತ ಹರಿದುಬಂದ ಸಾವಿರಾರು ಅಭಿಮಾನಿಗಳು ಪಟಾಕಿ, ಡೋಲು, ಘೋಷಣೆ ಹಾಗೂ ಹೂಮಳೆಯೊಂದಿಗೆ ರಾಕಿಂಗ್ ಸ್ಟಾರ್‌ಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ.

ಬಳ್ಳಾರಿಯಲ್ಲಿ ನಗರದ ಮೂರು ಚಿತ್ರಮಂದಿರಗಳಲ್ಲಿ ಮುಂಜಾನೆ 6 ಗಂಟೆಯಿಂದ ‘ಟಾಕ್ಸಿಕ್’ ಶೋ ಆರಂಭವಾಗಿದೆ. ಶಿವ-ಗಂಗಾ ಮತ್ತು ನಟರಾಜ್ ಚಿತ್ರಮಂದಿರಗಳ ಬಳಿ ಬೆಳಗ್ಗಿನಿಂದಲೇ ಅಭಿಮಾನಿಗಳ ದಂಡು ಸೇರಿದ್ದು, ಚಿತ್ರಮಂದಿರಗಳ ಆವರಣ ಕಿಕ್ಕಿರಿದು ತುಂಬಿತ್ತು.

ಯಶ್ ಅವರ ಪೋಸ್ಟರ್‌ಗಳನ್ನು ಹಿಡಿದು ಜೈಕಾರ ಹಾಕಿದ ಫ್ಯಾನ್ಸ್, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸಿನಿಮಾ ಆರಂಭವಾಗಿ ಯಶ್ ತೆರೆ ಮೇಲೆ ಕಾಣಿಸಿಕೊಂಡ ಕ್ಷಣವೇ ಅಭಿಮಾನಿಗಳ ಉತ್ಸಾಹ ಮತ್ತಷ್ಟು ಹೆಚ್ಚಿದ್ದು, ಸ್ಕ್ರೀನ್ ಎದುರು ಚಪ್ಪಾಳೆ, ಜೈಕಾರ ಮತ್ತು ಹರ್ಷೋದ್ಗಾರ ಮೊಳಗಿದೆ.

ದಾವಣಗೆರೆಯಲ್ಲೂ ಇದೇ ರೀತಿಯ ಅಭಿಮಾನಿಗಳ ಕ್ರೇಜ್ ಕಂಡುಬಂದಿದೆ. ನಗರದ ಮೂರು ಚಿತ್ರಮಂದಿರಗಳು ಹಾಗೂ ಎಸ್‌ಎಸ್ ಮಾಲ್‌ನಲ್ಲಿ ‘ಟಾಕ್ಸಿಕ್’ ಬಿಡುಗಡೆಯಾಗಿದ್ದು, ತ್ರಿಶೂಲ್ ಮತ್ತು ತ್ರಿನೇತ್ರ ಚಿತ್ರಮಂದಿರಗಳ ಬಳಿ ಅಭಿಮಾನಿಗಳು ಭರ್ಜರಿ ಸೆಲೆಬ್ರೇಷನ್ ನಡೆಸಿದ್ದಾರೆ.

ನಾಸಿಕ್ ಡೋಲ್‌ಗಳ ಸದ್ದಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದು, ಪಟಾಕಿ ಸಿಡಿಸಿ ಸಿನಿಮಾ ಬಿಡುಗಡೆಯನ್ನು ಸಂಭ್ರಮಿಸಿದ್ದಾರೆ. ಸಾವಿರಾರು ಅಭಿಮಾನಿಗಳು ಸ್ಕ್ರೀನ್ ಬಳಿ ಜಮಾಯಿಸಿ ಯಶ್ ಎಂಟ್ರಿಗೆ ಹೂಮಳೆ ಸುರಿಸಿದ್ದಾರೆ.

ಇಷ್ಟೇ ಅಲ್ಲದೆ, ಕುಂಬಳಕಾಯಿ ಹಿಡಿದು ಆರತಿ ಬೆಳಗಿದ ಅಭಿಮಾನಿಗಳು ‘ಜೈ ಯಶ್’, ‘ಜೈ ರಾಕಿಂಗ್ ಸ್ಟಾರ್’ ಘೋಷಣೆಗಳೊಂದಿಗೆ ತಮ್ಮ ನೆಚ್ಚಿನ ನಟನಿಗೆ ಭರ್ಜರಿ ಸ್ವಾಗತ ನೀಡಿದ್ದಾರೆ.