Home Blog

ವಿದ್ಯಾರ್ಥಿಗೆ ‘ವಂದೇ ಮಾತರಂ’ ಘೋಷಣೆ ಕೂಗದಂತೆ ಬೆದರಿಕೆ ಆರೋಪ; ಪ್ರಾಂಶುಪಾಲರ ವಿರುದ್ಧ ಕೇಸ್

0

ಬೀದರ್: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ‘ವಂದೇ ಮಾತರಂ’ ಹಾಗೂ ‘ಭಾರತ್ ಮಾತಾಕಿ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಲೇಜು ಪ್ರಾಂಶುಪಾಲರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಬೀದರ್ ಜಿಲ್ಲೆಯ ಚಿಟಗುಪ್ಪ ಪಟ್ಟಣದ ಕಾಲೇಜೊಂದರಲ್ಲಿ ಆ.15ರಂದು 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆದಿತ್ತು. ಧ್ವಜಾರೋಹಣದ ಬಳಿಕ ಪಿಯುಸಿ ವಿದ್ಯಾರ್ಥಿ ಸಾಗರ್ ಗೌಳಿ ‘ವಂದೇ ಮಾತರಂ’ ಹಾಗೂ ‘ಭಾರತ್ ಮಾತಾಕಿ ಜೈ’ ಘೋಷಣೆ ಕೂಗಿದ್ದ ಎನ್ನಲಾಗಿದೆ.

ಈ ವೇಳೆ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಹಕೀಮ್ ಅವರು ವಿದ್ಯಾರ್ಥಿಗೆ ಹಾಗೂ ಇತರ ವಿದ್ಯಾರ್ಥಿಗಳಿಗೆ ಘೋಷಣೆ ಕೂಗದಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಒಂದು ಧಾರ್ಮಿಕ ಸಮುದಾಯಕ್ಕೆ ಸಂಬಂಧಿಸಿದ ಘೋಷಣೆ ಎಂದು ಹೇಳಿ, ಇಂತಹ ಘೋಷಣೆಗಳನ್ನು ಕಾಲೇಜಿನಲ್ಲಿ ಸಹಿಸುವುದಿಲ್ಲ ಎಂದು ಪ್ರಾಂಶುಪಾಲರು ಎಚ್ಚರಿಕೆ ನೀಡಿದ್ದರು ಎಂದು ವಿದ್ಯಾರ್ಥಿಯ ತಂದೆ ಹಿರೋಬಾ ಗೌಳಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಾಂಶುಪಾಲ ಅಬ್ದುಲ್ ಹಕೀಮ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.

ಕಾಲೇಜಿನಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಒಟ್ಟಿಗೆ ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರಾಂಶುಪಾಲರು ವಿದ್ಯಾರ್ಥಿಗಳ ನಡುವೆ ಧಾರ್ಮಿಕ ತಾರತಮ್ಯ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇಂತಹ ನಡೆ ವಿದ್ಯಾರ್ಥಿಗಳ ನಡುವೆ ವೈಮನಸ್ಸು ಮೂಡಿಸುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಖಂಡಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ವಿದ್ಯಾರ್ಥಿಗಳಿಗೆ ಧಾರ್ಮಿಕ ತಾರತಮ್ಯ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಗಳ ಸತ್ಯಾಸತ್ಯತೆ ತನಿಖೆಯ ಬಳಿಕ ತಿಳಿದುಬರಬೇಕಿದೆ.

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ಅಂತಿಮ: ತುಮಕೂರಿನಲ್ಲಿ ನಿರ್ಮಿಸುವ ಪ್ರಸ್ತಾಪವೇ ಇಲ್ಲ ಎಂದ ಸರ್ಕಾರ

0

ಬೆಂಗಳೂರು: ನಗರದಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದ್ದು, ಅದರಲ್ಲಿ ತುಮಕೂರು ಜಿಲ್ಲೆಯಲ್ಲಿ ಮಾಡುವ ಪ್ರಸ್ತಾಪ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಅಧಿವೇಶನದಲ್ಲಿ ತುಮಕೂರು ಶಾಸಕ ಜ್ಯೋತಿ ಗಣೇಶ್ ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವ ಎಂ.ಬಿ.ಪಾಟೀಲ್ ಉತ್ತರಿಸಿದರು. ಎರಡನೇ ವಿಮಾನ ನಿಲ್ದಾಣಕ್ಕೆ ಸೋಮನಹಳ್ಳಿ-ಕನಕಪುರ ರಸ್ತೆ ರಾಮನಗರ, ಚೂಡಹಳ್ಳಿ-ಕನಕಪುರ ರಸ್ತೆ ರಾಮನಗರ ಹಾಗೂ ಗುಡೆಮಾರನಹಳ್ಳಿ ನೆಲಮಂಗಲ ಎಂಬ ಮೂರು ಸ್ಥಳಗಳು ಶಾರ್ಟ್‌ಲಿಸ್ಟ್ ಆಗಿವೆ ಎಂದು ಸದನಕ್ಕೆ ಮಾಹಿತಿ ನೀಡಿದ ಅವರು, ಹಾರೋಹಳ್ಳಿ ಕೂಡ ಅಂತಿಮ ಪರಿಶೀಲನೆಯ ಹಂತದಲ್ಲಿದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ತುಮಕೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಬೇಕು ಎಂದು ಪರಮೇಶ್ವರ್, ಸೋಮಣ್ಣ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕೇಂದ್ರ ಸರ್ಕಾರದ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನೀತಿಯ ಪ್ರಕಾರ, ಹಾಲಿ ಇರುವ ನಾಗರಿಕ ವಿಮಾನ ನಿಲ್ದಾಣದಿಂದ 150 ಕಿ.ಮೀ ವ್ಯಾಪ್ತಿಯಲ್ಲಿ ಇನ್ನೊಂದು ಹೊಸ ವಿಮಾನ ನಿಲ್ದಾಣಕ್ಕೆ ಸಾಮಾನ್ಯವಾಗಿ ಅನುಮತಿ ನೀಡಲಾಗುವುದಿಲ್ಲ ಎಂದು ವಿವರಿಸಿದರು.

ಒಂದು ವೇಳೆ ಈ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಬೇಕಾದರೆ, ಹಾಲಿ ಇರುವ ವಿಮಾನ ನಿಲ್ದಾಣದ ಮೇಲಾಗುವ ಪ್ರಭಾವವನ್ನು ಆಧರಿಸಿ ಪ್ರತ್ಯೇಕವಾಗಿ ಪರಿಶೀಲಿಸಿ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.

ಮುಂಬರುವ ಬಜೆಟ್‌ನಲ್ಲಿ ತುಮಕೂರು ವಿಮಾನ ನಿಲ್ದಾಣಕ್ಕೆ ಹಣ ಕಾಯ್ದಿರಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ, ಅಂತಹ ಯಾವುದೇ ಯೋಜನೆ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲದಿರುವುದರಿಂದ ಅನುದಾನ ಹಂಚಿಕೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಶೀಘ್ರದಲ್ಲೇ ನಕಲಿ ಔಷಧಿ ಜಾಲ ತನಿಖೆಗೆ SIT: ಸಚಿವ ಯು.ಟಿ. ಖಾದರ್ ಘೋಷಣೆ

0

ಬೆಂಗಳೂರು: ನಕಲಿ ಔಷಧಿ ಜಾಲ ಸಂಬಂಧ ಶೀಘ್ರದಲ್ಲಿಯೇ ಎಸ್ಐಟಿ (Special Investigation Team) ರಚನೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ನಕಲಿ ಔಷಧಿ ಜಾಲ ಪತ್ತೆ ಬಹಳ ಗಂಭೀರ ವಿಷಯ, ಅಂತಾರಾಜ್ಯ ಮಟ್ಟದಲ್ಲಿ ಜಾಲ ಇದ್ದು,

ರಾಜ್ಯದಲ್ಲಿ ಬೇರೆ ಎಲ್ಲೆಲ್ಲಿದೆ ಎಂಬುದನ್ನು ಕಂಡುಹಿಡಿಯಬೇಕು ಎಂದು ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. ಅದೇ ರೀತಿ ಸಂಬಂಧಪಟ್ಟ ರಾಜ್ಯಗಳ ಸಚಿವರಿಗೂ ಪತ್ರ ಬರೆದಿದ್ದು, ಆ ಫ್ಯಾಕ್ಟರಿ ಮೇಲೆ ಅವರೇ ಕ್ರಮ ಜರುಗಿಸಬೇಕು, ಎಸ್ಐಟಿ ಮುಖಾಂತರ ತನಿಖೆ ನಡೆಸಬೇಕು ಎಂದು ಕೋರಿರುವುದಾಗಿ ಹೇಳಿದರು. ಈಗಾಗಲೇ ರಾಮನಗರ ಎಸ್ಪಿ ಮತ್ತು ಪೊಲೀಸರು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.

ಹಿಂದಿನ ಆರೋಗ್ಯ ಸಚಿವರಿಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲವೇ ಎಂಬ ಪ್ರಶ್ನೆಗೆ, ಹಿಂದಿನ ಎಲ್ಲಾ ಸಚಿವರು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದು, ಅದನ್ನು ತಾವು ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ಸಚಿವರು ಸ್ಪಷ್ಟಪಡಿಸಿದರು. ಇದು ಕೇವಲ ಆರೋಗ್ಯ ಇಲಾಖೆ ಅಥವಾ ಆಹಾರ ಇಲಾಖೆಯಿಂದ ಸಾಧ್ಯವಿಲ್ಲ,

ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆ ಇರುವುದಾಗಿ ತಿಳಿಸಿದ ಅವರು, ಇಲಾಖೆಯಲ್ಲಿರುವ 150 ಜನರಿಂದ ಇದನ್ನು ನೋಡಲು ಕಷ್ಟವಾಗುತ್ತದೆ, ಸಮಾಜದಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಒಂದೇ ಔಷಧಿ ಎರಡು ಅಂಗಡಿಗಳಲ್ಲಿ ಬೇರೆ ಬೇರೆ ದರದಲ್ಲಿ ಮಾರಾಟವಾಗುತ್ತಿದ್ದರೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಿದರು.

ಎಷ್ಟು ವರ್ಷಗಳಿಂದ ಈ ನಕಲಿ ಔಷಧಿಗಳು ಮಾರುಕಟ್ಟೆಯಲ್ಲಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಎಲ್ಲಾ ವಿಚಾರಗಳು ತನಿಖೆ ಆದ ಬಳಿಕ ಹೊರಬರುತ್ತವೆ ಎಂದು ತಿಳಿಸಿ, ಯಾವ್ಯಾವ ಆಸ್ಪತ್ರೆಗಳಿಗೆ ಇದು ತಲುಪಿದೆ, ಯಾವ ರೋಗಿಗಳಿಗೆ ನೀಡಲಾಗಿದೆ ಎಂಬುದೂ ತನಿಖೆಯ ನಂತರ ಗೊತ್ತಾಗುತ್ತದೆ ಎಂದರು.

ಸಾವಿಗೆ ಪ್ರೇರಣೆಯಾಗುವ ಸಂಬಂಧ ಸೆಕ್ಷನ್ 302 ಅನ್ವಯಿಸುವಂತೆಯೂ ಸೂಚಿಸಿರುವುದಾಗಿ ತಿಳಿಸಿದ ಸಚಿವರು, ಈಗಾಗಲೇ 6 ಕಂಪನಿಗಳನ್ನು ಲೇಬಲ್ ಮಾಡಲಾಗಿದ್ದು, ತಂದು ಮಾರಾಟ ಮಾಡುತ್ತಿದ್ದವರ ಮೇಲೆ ಕೇಸ್ ದಾಖಲಾಗಿದೆ ಎಂದರು. ಇದರಲ್ಲಿ ಭಾಗಿಯಾದ ಎಲ್ಲರ ಮೇಲೂ ಕೇಸ್ ದಾಖಲಾಗಲಿದೆ ಎಂದು ಸ್ಪಷ್ಟಪಡಿಸಿದರು.

ಸಮ್ಮತಿಯ ಲಿವ್ ಇನ್ ಸಂಬಂಧ ಮದುವೆಗೆ ಸಮಾನ: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು

0

ನವದೆಹಲಿ: ವಯಸ್ಕರ ಪರಸ್ಪರ ಸಮ್ಮತಿಯ ಲಿವ್ ಇನ್ ಸಂಬಂಧವು ಮದುವೆಗೆ ಸಮಾನವಾಗಿದ್ದು, ಇದರಲ್ಲಿ ಪೋಷಕರು, ಸಂಬಂಧಿಕರು ಅಥವಾ ಸ್ನೇಹಿತರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರಿದ್ದ ಪೀಠವು, ವಯಸ್ಕರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಯಾವುದೇ ಹಸ್ತಕ್ಷೇಪ ಅಥವಾ ಬೆದರಿಕೆಗಳಿಲ್ಲದೆ ಒಟ್ಟಿಗೆ ಜೀವಿಸುವ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲದೆ ಯುವತಿಯ ಕುಟುಂಬದಿಂದ ಜೀವಬೆದರಿಕೆ ಎದುರಿಸುತ್ತಿದ್ದ ಜೋಡಿಗೆ ರಕ್ಷಣೆ ನೀಡುವಂತೆ ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿದೆ.

ಅರ್ಜಿದಾರರು ಕಾನೂನುಬದ್ಧವಾಗಿ ವಿವಾಹವಾಗದಿದ್ದರೂ, ಇಬ್ಬರೂ ಒಪ್ಪಿಗೆಯ ವಯಸ್ಕರಾಗಿರುವುದರಿಂದ ಅವರ ಸಂಬಂಧವು ‘ಮದುವೆಗೆ ಸಮಾನ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಜಾತಿ, ಮತ, ಪಂಥ ಅಥವಾ ಧರ್ಮದ ಹಂಗಿಲ್ಲದೆ ವಯಸ್ಕರ ಸಂಬಂಧಗಳನ್ನು ಕಾನೂನು ಮಾನ್ಯ ಮಾಡುತ್ತದೆ ಎಂದ ಪೀಠ, ಸಮಾಜದ ಕಟ್ಟುಪಾಡುಗಳು ಮತ್ತು ಪೂರ್ವಾಗ್ರಹಗಳು ನಾಗರಿಕರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ, ಅಂತಹ ನಿರ್ಬಂಧಗಳು ವ್ಯಕ್ತಿಯ ಪ್ರತ್ಯೇಕ ಅಸ್ತಿತ್ವ ಮತ್ತು ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ ಎಂದು ಅಭಿಪ್ರಾಯಪಟ್ಟಿದೆ.

ವಿವಾಹವಾಗದೇ ಇದ್ದರೂ ವಯಸ್ಕರು ಜೊತೆಯಾಗಿ ಜೀವಿಸುವ ಹಕ್ಕನ್ನು ಸುಪ್ರೀಂ ಕೋರ್ಟ್ ಈ ಹಿಂದೆಯೇ ಎತ್ತಿಹಿಡಿದಿದೆ ಎಂದು ಉಲ್ಲೇಖಿಸಿದ ನ್ಯಾಯಾಲಯ, ‘ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-2005’ ಸೇರಿದಂತೆ ಹಲವು ಕಾನೂನುಗಳ ಅಡಿಯಲ್ಲಿ ಇಂತಹ ಸಂಬಂಧಗಳಿಗೆ ಈಗಾಗಲೇ ಮಾನ್ಯತೆ ದೊರೆತಿದೆ ಎಂದಿತು.

ಜಾತಿ, ಧರ್ಮ, ಪಂಥ, ಬಣ್ಣ ಅಥವಾ ನಂಬಿಕೆಯ ಆಧಾರದ ಮೇಲೆ ವಯಸ್ಕರ ವೈಯಕ್ತಿಕ ಆಯ್ಕೆ ಮತ್ತು ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ, ‘ಸಾಮಾಜಿಕ ನೈತಿಕತೆ ಮತ್ತು ಪೂರ್ವಾಗ್ರಹ’ಗಳ ಹೆಸರಿನಲ್ಲಿ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವುದು ವ್ಯಕ್ತಿಯ ಸ್ವತಂತ್ರ ಅಸ್ತಿತ್ವವನ್ನು ನಿರಾಕರಿಸಿದಂತಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ? 30 ವರ್ಷ ವಯಸ್ಸಿನ ಜೋಡಿ ಕೆಲವು ಸಮಯದಿಂದ ಲಿವ್-ಇನ್ ಸಂಬಂಧದಲ್ಲಿದ್ದು, ಮುಂದೆ ವಿವಾಹವಾಗುವ ಉದ್ದೇಶ ಹೊಂದಿದ್ದರು. ಆದರೆ ಯುವತಿಯ ತಂದೆ ಮತ್ತು ಸಹೋದರ ಈ ಸಂಬಂಧವನ್ನು ವಿರೋಧಿಸಿ ನಿರಂತರವಾಗಿ ಜೀವಬೆದರಿಕೆ ಹಾಕುತ್ತಿದ್ದರು. ಸ್ಥಳೀಯ ಠಾಣಾಧಿಕಾರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಜೋಡಿಯ ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬೆದರಿಕೆ ಇರುವುದನ್ನು ಪರಿಗಣಿಸಿ ಅವರಿಗೆ ತಕ್ಷಣ ಪೊಲೀಸ್ ರಕ್ಷಣೆ ಒದಗಿಸುವಂತೆ ಆದೇಶಿಸಿದೆ.

ಮಳೆ, ಪ್ರವಾಹದ ನಡುವೆಯೂ ಕರ್ತವ್ಯಕ್ಕೆ ಸೆಲ್ಯೂಟ್: ಹೊಳೆಗೆ ಧುಮುಕಿ ವಿದ್ಯುತ್ ತಂತಿ ಜೋಡಿಸಿದ ಮೆಸ್ಕಾಂ ಸಿಬ್ಬಂದಿ

ಪುತ್ತೂರು: ಒಂದು ಕಡೆ ಧಾರಾಕಾರ ಮಳೆ, ಮತ್ತೊಂದೆಡೆ ಉಕ್ಕಿ ಹರಿಯುತ್ತಿದ್ದ ಹೊಳೆ. ಜೀವಕ್ಕೆ ಅಪಾಯವಿದ್ದರೂ 12 ಮನೆಗಳು ಕತ್ತಲಲ್ಲಿ ಉಳಿಯಬಾರದು ಎಂಬ ಕಾರಣಕ್ಕೆ ಮೆಸ್ಕಾಂ ಪವರ್‌ಮ್ಯಾನ್‌ಗಳು ಹೊಳೆಗೆ ಧುಮುಕಿ ವಿದ್ಯುತ್ ಸಂಪರ್ಕ ಮರುಸ್ಥಾಪಿಸಿದ ಘಟನೆ ಬೆಟ್ಟಂಪಾಡಿ ಗ್ರಾಮದ ದೂಮಡ್ಕದಲ್ಲಿ ನಡೆದಿದೆ.

ಬಂದೇ ನವಾಜ್, ಪ್ರವೀಣ್ ಹಾಗೂ ಬಸವರಾಜ್ ನೇತೃತ್ವದ ಮೆಸ್ಕಾಂ ಸಿಬ್ಬಂದಿ ಸ್ಥಳೀಯ ಜಾನು ನಾಯ್ಕ ಮತ್ತು ಊರವರ ನೆರವಿನೊಂದಿಗೆ ಈ ಸಾಹಸಿಕ ಕಾರ್ಯಾಚರಣೆ ನಡೆಸಿದ್ದಾರೆ.

ದೂಮಡ್ಕದ ಹೊಳೆ ಬದಿಯಲ್ಲಿರುವ ಸುಮಾರು 12 ಮನೆಗಳಿಗೆ ಹೊಳೆಯ ಇನ್ನೊಂದು ಬದಿಯಿಂದ ಎಲ್‌ಟಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಸತತ ಮಳೆಯಿಂದ ಸೀರೆ ಹೊಳೆ ಉಕ್ಕಿ ಹರಿಯುತ್ತಿದ್ದ ವೇಳೆ ಹೊಳೆ ದಡದಲ್ಲಿದ್ದ ಈಚಲು ಮರ ವಿದ್ಯುತ್ ಲೈನ್ ಮೇಲೆ ಉರುಳಿದೆ. ಇದರಿಂದ ಎರಡು ವಿದ್ಯುತ್ ತಂತಿಗಳು ತುಂಡಾಗಿ ಹೊಳೆಗೆ ಬಿದ್ದಿದ್ದವು.

ತಂತಿಗಳು ನೀರಿನ ರಭಸಕ್ಕೆ ಕೊಚ್ಚಿಹೋಗದಂತೆ ಸ್ಥಳೀಯರು ಅವುಗಳನ್ನು ಮರಕ್ಕೆ ಕಟ್ಟಿ ಹಿಡಿದಿದ್ದರು. ಆದರೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಮನೆಗಳು ಕತ್ತಲಲ್ಲಿ ಮುಳುಗಿದ್ದವು. ಸಮಸ್ಯೆ ಪರಿಹರಿಸಲು ಮುಂದಾದ ಮೆಸ್ಕಾಂ ಸಿಬ್ಬಂದಿ, ಅಪಾಯದ ನಡುವೆಯೇ ಹೊಳೆಗೆ ಇಳಿಯುವ ನಿರ್ಧಾರ ಕೈಗೊಂಡರು.

ಬಂದೇ ನವಾಜ್, ಪ್ರವೀಣ್ ಹಾಗೂ ಸ್ಥಳೀಯರೊಬ್ಬರು ತಂತಿ ಮತ್ತು ಹಗ್ಗವನ್ನು ಹಿಡಿದುಕೊಂಡು ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಈಜಿ ಎದುರು ದಡ ತಲುಪಿದರು. ಮತ್ತೊಂದೆಡೆ ಬಸವರಾಜ್ ಹಾಗೂ ಸ್ಥಳೀಯರು ತಂತಿಯನ್ನು ಅಗತ್ಯ ಸ್ಥಳಕ್ಕೆ ತಲುಪಿಸುವಲ್ಲಿ ನೆರವಾದರು.

ಮಳೆ ಹಾಗೂ ನೀರಿನ ಸೆಳೆತದ ನಡುವೆಯೇ ತಂತಿಯನ್ನು ನಿಗದಿತ ಸ್ಥಳಕ್ಕೆ ತಲುಪಿಸಿ ಮರುಜೋಡಣೆ ಮಾಡಲಾಯಿತು. ಬೆಟ್ಟಂಪಾಡಿ ಮೆಸ್ಕಾಂ ಶಾಖೆಯ ಕಿರಿಯ ಎಂಜಿನಿಯರ್ ಪುತ್ತು ಜೆ ಅವರು ಸ್ಥಳದಲ್ಲಿದ್ದು ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು.

‘ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ 12 ಮನೆಗಳು ಕತ್ತಲಲ್ಲಿ ಉಳಿಯಬೇಕಾಗಿತ್ತು. ಪ್ರತಿಕೂಲ ಪರಿಸ್ಥಿತಿಯಲ್ಲೂ ಧೈರ್ಯದಿಂದ ಕಾರ್ಯಾಚರಣೆ ನಡೆಸಿ ಸಂಪರ್ಕ ಪುನರ್ ಕಲ್ಪಿಸಿದ್ದೇವೆ. ಇದು ನಮ್ಮ ಕರ್ತವ್ಯ. ಅಧಿಕಾರಿಗಳು ಮತ್ತು ಊರವರು ನೀಡಿದ ಸಹಕಾರದಿಂದ ಕೆಲಸ ಸಾಧ್ಯವಾಯಿತು’ ಎಂದು ಪವರ್‌ಮ್ಯಾನ್ ಬಂದೇ ನವಾಜ್ ಹೇಳಿದ್ದಾರೆ.

ಸಿಬ್ಬಂದಿಯ ಕರ್ತವ್ಯನಿಷ್ಠೆ ಹಾಗೂ ಧೈರ್ಯಕ್ಕೆ ಮೆಸ್ಕಾಂ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೀವದ ಹಂಗು ತೊರೆದು ಹೊಳೆಗೆ ಇಳಿದು ಮನೆಗಳಿಗೆ ಬೆಳಕು ಮರಳಿಸಿದ ಪವರ್‌ಮ್ಯಾನ್‌ಗಳ ಕಾರ್ಯಾಚರಣೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕಾಂಗ್ರೆಸ್ʼನ ವಂದೇ ಮಾತರಂ ನಿರ್ಣಯ ‘ದೇಶವಿರೋಧಿ’: ಅಮಿತ್ ಶಾ ವಾಗ್ದಾಳಿ

0

ಚೆನ್ನೈ: ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಹಾಡುವ ನಿರ್ಧಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಈ ನಿರ್ಧಾರವನ್ನು ‘ದೇಶವಿರೋಧಿ’ ಎಂದು ಟೀಕಿಸಿದ ಅವರು, ಇದು ಕಾಂಗ್ರೆಸ್‌ನ ಹಳೆಯ ತುಷ್ಟೀಕರಣ ರಾಜಕಾರಣವನ್ನು ಮತ್ತೆ ಮುನ್ನೆಲೆಗೆ ತಂದಿದೆ ಎಂದು ಆರೋಪಿಸಿದ್ದಾರೆ.

ತಮಿಳುನಾಡಿನ ಚೆಂಗಲ್ಪಟ್ಟಿನಲ್ಲಿ ಮಾತನಾಡಿದ ಅಮಿತ್ ಶಾ, 1937ರಲ್ಲಿ ಕಾಂಗ್ರೆಸ್ ವಂದೇ ಮಾತರಂ ಅನ್ನು ಎರಡು ಭಾಗಗಳಾಗಿ ವಿಭಜಿಸುವ ನಿರ್ಧಾರ ಕೈಗೊಂಡಿತ್ತು ಎಂದು ಸ್ಮರಿಸಿ, ಮುಸ್ಲಿಮರ ತುಷ್ಟೀಕರಣಕ್ಕಾಗಿ ಕೈಗೊಂಡ ಆ ನಿರ್ಧಾರವೇ ದೇಶ ವಿಭಜನೆಗೆ ದಾರಿ ಮಾಡಿಕೊಟ್ಟಿತು ಎಂದು ಆರೋಪಿಸಿದರು. ಈಗ ಅದೇ ನಿರ್ಧಾರವನ್ನು ಕಾಂಗ್ರೆಸ್ ಮತ್ತೆ ಜಾರಿಗೆ ತರುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಬುಧವಾರ ನಡೆದ ಸಭೆಯಲ್ಲಿ, 1937ರ ತನ್ನ ನಿರ್ಣಯವನ್ನು ಮುಂದುವರಿಸಲು ತೀರ್ಮಾನಿಸಿದ್ದು, ಪಕ್ಷದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದು ಸ್ಪಷ್ಟಪಡಿಸಿದೆ.

ಈ ಬೆಳವಣಿಗೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಕೂಡ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ವಂದೇ ಮಾತರಂ ಅನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸುವ ಮೂಲಕ ಕಾಂಗ್ರೆಸ್ ತನ್ನ ‘ಅವಮಾನ’ವನ್ನು ಅಧಿಕೃತ ನಿರ್ಣಯವನ್ನಾಗಿ ಮಾಡಿಕೊಂಡಿದೆ ಎಂದು ಟೀಕಿಸಿದ್ದಾರೆ. ವೋಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ‘ಹೊಸ ಮುಸ್ಲಿಂ ಲೀಗ್’ ಆಗಿದೆ ಎಂದೂ ಆರೋಪಿಸಿದ್ದಾರೆ.

ವಂದೇ ಮಾತರಂ ಅನ್ನು ‘ಭಾರತ ಮಾತೆಯ ಪವಿತ್ರ ಸ್ತುತಿ’ ಎಂದು ಬಣ್ಣಿಸಿದ ನಬಿನ್, ಈ ಗೀತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸಾವಿರಾರು ಹುತಾತ್ಮರಿಗೆ ಇದು ಅವಮಾನ ಎಂದು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ನಡೆದಿದ್ದ ವಂದೇ ಮಾತರಂ ಕುರಿತ ವಿವಾದವನ್ನೂ ಉಲ್ಲೇಖಿಸಿದ ಅವರು, ಆಗ ನಡೆದದ್ದು ‘ವ್ಯಕ್ತಿಯ ನಡವಳಿಕೆ’ ಆಗಿದ್ದರೆ, ಇದೀಗ ಅದೇ ನಿಲುವು ಕಾಂಗ್ರೆಸ್‌ನ ನೀತಿಯಾಗಿ ಮಾರ್ಪಟ್ಟಿದೆ ಎಂದು ಟೀಕಿಸಿದ್ದಾರೆ.

ಬೆಂಗಳೂರಲ್ಲಿ 446 ಅಕ್ರಮ ವಿದೇಶಿಗರು: ಸದನದಲ್ಲಿ ಗೃಹ ಇಲಾಖೆಯಿಂದ ಸ್ಫೋಟಕ ಮಾಹಿತಿ

0

ಬೆಂಗಳೂರು: ನಗರದಲ್ಲಿ ಅಕ್ರಮ ವಿದೇಶ ನುಸುಳುಕೋರರು ಇರುವುದಾಗಿ ಖುದ್ದು ಸರ್ಕಾರ ಒಪ್ಪಿಕೊಂಡಿದೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಗೋಪಿನಾಥ್ ಚುಕ್ಕೆ ಗುರುತಿನ ಪ್ರಶ್ನೆಗೆ ಗೃಹ ಇಲಾಖೆ ಸಚಿವರು ಉತ್ತರ ನೀಡಿದ್ದಾರೆ.

ಅಕ್ರಮ ವಲಸಿಗ ನುಸುಳುಕೋರರು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಸ್ಫೋಟಕ ಮಾಹಿತಿಯನ್ನು ಇಲಾಖೆ ನೀಡಿದೆ. ಬೆಂಗಳೂರಿನಲ್ಲಿ ವೀಸಾ, ಪಾಸ್‌ಪೋರ್ಟ್ ಅವಧಿ ಇರುವ ವಿದೇಶಿಗರು 5,304 ಜನ ಇದ್ದಾರೆ.

ವೀಸಾ, ಪಾಸ್‌ಪೋರ್ಟ್ ಅವಧಿ ಮೀರಿದ್ದರೂ ಅಕ್ರಮವಾಗಿ 446 ವಿದೇಶಿಗರು ಇದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. 3 ವರ್ಷಗಳಲ್ಲಿ ದೇಶದೊಳಗೆ ಅಕ್ರಮವಾಗಿ ನುಸುಳಿ ರಾಜ್ಯದಲ್ಲಿ ನೆಲೆಸಿರುವ ವಿದೇಶಿಗರ ಮಾಹಿತಿ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದ್ದು, ಆದರೆ 3 ವರ್ಷಗಳಲ್ಲಿ 911 ಜನ ಅಕ್ರಮ ವಲಸಿಗರನ್ನು ಇಲಾಖೆ ಗುರುತಿಸಿದೆ.

ಇದರಲ್ಲಿ ಬಾಂಗ್ಲಾದೇಶದ 868, ಪಾಕಿಸ್ತಾನದ 20, ನೈಜೀರಿಯಾದ 13, ಶ್ರೀಲಂಕಾದ 8, ಮಯನ್ಮಾರ್‌ನ 1 ಹಾಗೂ ಉಗಾಂಡಾದ ಒಬ್ಬರು ಸೇರಿದ್ದಾರೆ. 31 ದೇಶಗಳ 365 ವಿದೇಶಿಗರು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿಯನ್ನೂ ಗೃಹ ಇಲಾಖೆ ಸದನಕ್ಕೆ ನೀಡಿದೆ.

ತಮಿಳುನಾಡಿಗೆ ನೀರು ಬಿಡುವುದು ನಿಲ್ಲಿಸಿ: ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಆಗ್ರಹ

0

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಇದೀಗ ಸ್ವಪಕ್ಷದ ಶಾಸಕರಿಂದಲೇ ವಿರೋಧ ವ್ಯಕ್ತವಾಗಿದೆ. ಮಂಡ್ಯದ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಸರ್ಕಾರದ ನಡೆ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ರವಿಕುಮಾರ್ ಗಣಿಗ, ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯದ ರೈತರಿಗೆ ಬೆಳೆಗಳಿಗೆ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾದರೆ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮುಂದೆ ರಾಜ್ಯದ ನೈಜ ಪರಿಸ್ಥಿತಿಯನ್ನು ಸರ್ಕಾರ ಸಮರ್ಥವಾಗಿ ಮಂಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ನೀರಿನ ಕೊರತೆ ಇದೆ ಎಂಬುದನ್ನು ಅಂಕಿ-ಅಂಶಗಳ ಸಮೇತ ಪ್ರಾಧಿಕಾರದ ಮುಂದೆ ಬಲವಾಗಿ ಪ್ರತಿಪಾದಿಸಬೇಕು ಎಂದಿದ್ದಾರೆ.

ಇದಕ್ಕಾಗಿ ತಜ್ಞರ ತಂಡವನ್ನು CWMA ಮುಂದೆ ಕಳುಹಿಸಬೇಕು ಎಂದು ಸಲಹೆ ನೀಡಿದ ಅವರು, ತಕ್ಷಣವೇ ವಿಧಾನಸಭೆ ಅಧಿವೇಶನ ಕರೆದು ರಾಜ್ಯದ ನೀರಿನ ಪರಿಸ್ಥಿತಿ ಬಗ್ಗೆ ಒಮ್ಮತದ ನಿರ್ಣಯ ಕೈಗೊಂಡು ಬಲವಾದ ವಾದ ಮಂಡಿಸಬೇಕು ಎಂದೂ ಸೂಚಿಸಿದ್ದಾರೆ.

ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಈಗಾಗಲೇ ವಿರೋಧ ಪಕ್ಷಗಳು ಹಾಗೂ ರೈತ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಆಡಳಿತ ಪಕ್ಷದ ಶಾಸಕರೇ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿರುವುದು ಕಾವೇರಿ ಕಣಿವೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

1984ರ ಸಿಖ್ ವಿರೋಧಿ ದಂಗೆ ಪ್ರಕರಣ: ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಸಂಸದ ಸಜ್ಜನ್ ಕುಮಾರ್ ನಿಧನ

0

ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್ (80) ನಿಧನರಾಗಿದ್ದಾರೆ. ಅಸ್ವಸ್ಥರಾಗಿದ್ದ ಅವರನ್ನು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ.

1984ರ ಅಕ್ಟೋಬರ್ 31ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಸಿಖ್ ಸಮುದಾಯದ ವಿರುದ್ಧ ಭೀಕರ ಹಿಂಸಾಚಾರ ನಡೆದಿತ್ತು. ದೆಹಲಿಯೊಂದರಲ್ಲೇ 3,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ಈ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಯಲ್ಲಿ ಸಜ್ಜನ್ ಕುಮಾರ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ದೆಹಲಿ ಪೊಲೀಸರ ತನಿಖೆಯ ಪ್ರಕಾರ, ದಂಗೆಗೆ ಪ್ರಚೋದನೆ ನೀಡಿದ ಪ್ರಮುಖ ವ್ಯಕ್ತಿಗಳಲ್ಲಿ ಸಜ್ಜನ್ ಕುಮಾರ್ ಕೂಡ ಒಬ್ಬರಾಗಿದ್ದರು.

ಆದರೆ ದಂಗೆಯ ಬಳಿಕ ಸುಮಾರು ಮೂರು ದಶಕಗಳ ಕಾಲ ನಡೆದ ವಿವಿಧ ತನಿಖೆಗಳು ಹಾಗೂ ವಿಚಾರಣೆಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬೆಳವಣಿಗೆಗಳು ನಡೆದಿದ್ದವು. ಜಸ್ಟಿಸ್ ರಂಗನಾಥ್ ಮಿಶ್ರಾ ಆಯೋಗ ಸೇರಿದಂತೆ ಆರಂಭಿಕ ತನಿಖಾ ಸಮಿತಿಗಳ ವರದಿಗಳಲ್ಲಿ ಸಜ್ಜನ್ ಕುಮಾರ್ ಅವರ ಹೆಸರು ನೇರವಾಗಿ ಪ್ರಸ್ತಾಪವಾಗಿರಲಿಲ್ಲ.

2015ರಲ್ಲಿ ಕೇಂದ್ರ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ, ಈ ಹಿಂದೆ ಮುಚ್ಚಿಹೋಗಿದ್ದ ಪ್ರಕರಣಗಳನ್ನು ಮರುಪರಿಶೀಲಿಸಲು ಮುಂದಾದ ಬಳಿಕ ಪ್ರಕರಣಕ್ಕೆ ಮತ್ತಷ್ಟು ವೇಗ ಸಿಕ್ಕಿತ್ತು. ನಂತರ ಸಜ್ಜನ್ ಕುಮಾರ್ ವಿರುದ್ಧದ ಪ್ರಕರಣದಲ್ಲಿ ನ್ಯಾಯಾಂಗ ಪ್ರಕ್ರಿಯೆ ಮುಂದುವರಿದು, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

‘ರಾಮಾಯಣದ ರಾವಣನ ಧ್ವನಿ ದೇವರಾಜ್​​ ಅವರದ್ದಲ್ಲ’: ಪ್ರಜ್ವಲ್ ದೇವರಾಜ್ ಸ್ಪಷ್ಟನೆ

ಬೆಂಗಳೂರು: ‘ರಾಮಾಯಣ’ ಸಿನಿಮಾದ ಟ್ರೇಲರ್ ಬಿಡುಗಡೆಯಾದ ಬಳಿಕ ರಾವಣನ ಪಾತ್ರದ ಧ್ವನಿ ಕುರಿತು ಹುಟ್ಟಿಕೊಂಡಿದ್ದ ಭಾರೀ ಚರ್ಚೆಗೆ ಇದೀಗ ತೆರೆ ಬಿದ್ದಿದೆ. ಟ್ರೇಲರ್‌ನಲ್ಲಿ ಕೇಳಿಬಂದ ಗಂಭೀರ ಧ್ವನಿ ರಾಕಿಂಗ್ ಸ್ಟಾರ್ ಯಶ್ ಅವರದ್ದಲ್ಲ, ನಟ ದೇವರಾಜ್ ಅವರದ್ದು ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ನಟ ಪ್ರಜ್ವಲ್ ದೇವರಾಜ್ ಸ್ಪಷ್ಟಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಜ್ವಲ್, ವದಂತಿ ಗಮನಕ್ಕೆ ಬಂದ ಕೂಡಲೇ ಯಶ್ ಅವರಿಗೆ ತಾವೇ ಕರೆ ಮಾಡಿ ಈ ಕುರಿತು ಮಾತನಾಡಿದ್ದಾಗಿ ಹೇಳಿದ್ದಾರೆ. ಈ ವೇಳೆ ದೇವರಾಜ್ ಕೂಡ ಯಶ್ ಅವರೊಂದಿಗೆ ಮಾತನಾಡಿದ್ದರು.

ತಮ್ಮ ಧ್ವನಿಯನ್ನು ದೇವರಾಜ್ ಅವರ ಗಂಭೀರ ಧ್ವನಿಗೆ ಹೋಲಿಸುತ್ತಿರುವ ಬಗ್ಗೆ ಯಶ್ ಸಂತಸ ವ್ಯಕ್ತಪಡಿಸಿದ್ದರು. ಹಿರಿಯ ನಟನ ಧ್ವನಿಗೆ ತಮ್ಮ ಧ್ವನಿಯನ್ನು ಹೋಲಿಸುತ್ತಿರುವುದೇ ಹೆಮ್ಮೆಯ ವಿಚಾರ ಎಂದು ಯಶ್ ಹೇಳಿದ್ದಾಗಿ ಪ್ರಜ್ವಲ್ ತಿಳಿಸಿದ್ದಾರೆ.

ಹೀಗಾಗಿ ‘ರಾಮಾಯಣ’ದಲ್ಲಿ ರಾವಣನಾಗಿ ಕೇಳಿಬಂದಿರುವ ಧ್ವನಿ ಸ್ವತಃ ಯಶ್ ಅವರದ್ದೇ ಎಂಬುದು ಇದೀಗ ಖಚಿತವಾಗಿದೆ. ಟ್ರೇಲರ್‌ನಲ್ಲಿ ಕೇಳಿಬಂದ ಅವರ ಗಂಭೀರ ಕಂಠ ರಾವಣನ ಪಾತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದ್ದು, ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಿಸಿದೆ.

ಇತ್ತ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ಬಿಡುಗಡೆಯಾಗಲು ಸಜ್ಜಾಗಿದೆ. ‘ರಾಮಾಯಣ’ ಕೂಡ ದೀಪಾವಳಿ ಸಂದರ್ಭದಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದ್ದು, ಒಂದೇ ವರ್ಷದಲ್ಲಿ ಯಶ್ ಅವರ ಎರಡು ಬಹುನಿರೀಕ್ಷಿತ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿವೆ.