Home Blog

ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಭಾರೀ ನೀರು ಬಿಡುಗಡೆ; 108.76 ಅಡಿಗೆ ಕುಸಿದ ಜಲಮಟ್ಟ!

0

ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಹರಿಸಲಾಗುತ್ತಿರುವ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಜಲಾಶಯದ ನೀರಿನ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ.

ಎರಡು ದಿನಗಳ ಹಿಂದೆ ಕೆಆರ್‌ಎಸ್ ಡ್ಯಾಂನಿಂದ 7,697 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿತ್ತು. ನಿನ್ನೆ ಈ ಪ್ರಮಾಣ 8,544 ಕ್ಯೂಸೆಕ್‌ಗೆ ಏರಿಕೆಯಾಗಿತ್ತು. ಇದೀಗ ಹೊರಹರಿವು ಮತ್ತಷ್ಟು ಹೆಚ್ಚಾಗಿ 9,253 ಕ್ಯೂಸೆಕ್‌ಗೆ ತಲುಪಿದೆ.

ಇತ್ತ ಜಲಾನಯನ ಪ್ರದೇಶಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಡ್ಯಾಂಗೆ ಒಳಹರಿವು ಗಣನೀಯವಾಗಿ ಕುಸಿದಿದೆ. ಸದ್ಯ ಕೇವಲ 3,028 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ಒಳಹರಿವಿಗಿಂತ ಸುಮಾರು ಮೂರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿರುವ ಪರಿಣಾಮ, ಇತ್ತೀಚೆಗೆ 111 ಅಡಿಗೆ ತಲುಪಿದ್ದ ಕೆಆರ್‌ಎಸ್ ಜಲಮಟ್ಟ ಇದೀಗ 108.76 ಅಡಿಗೆ ಕುಸಿದಿದೆ.

ಸದ್ಯ ಜಲಾಶಯದಲ್ಲಿ 30.493 ಟಿಎಂಸಿ ನೀರು ಸಂಗ್ರಹವಿದೆ. ಒಳಹರಿವು ಕಡಿಮೆಯಾಗುತ್ತಿರುವ ನಡುವೆಯೂ ಹೊರಹರಿವಿನ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕಪ್ಪತ್ತ ಮಲ್ಲಯ್ಯ ಜಾತ್ರೆಗೆ ಭಕ್ತರ ದಂಡು; ಬಸ್‌ಗಳಿಲ್ಲದೆ ಗದಗದಲ್ಲಿ ಭಕ್ತರ ಪರದಾಟ! ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ

0

ಗದಗ: ಉತ್ತರ ಕರ್ನಾಟಕದ ಪ್ರಸಿದ್ಧ ಕಪ್ಪತ್ತಗುಡ್ಡದ ಕಪ್ಪತ್ತ ಮಲ್ಲಯ್ಯ ಜಾತ್ರೆಯ ಹಿನ್ನೆಲೆಯಲ್ಲಿ ಭಕ್ತರಿಗೆ ಸಮರ್ಪಕ ಬಸ್ ಸೌಲಭ್ಯ ದೊರೆಯದೆ ಪರದಾಡುವಂತಾಗಿದೆ.

ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡದಲ್ಲಿರುವ ಕಪ್ಪತ್ತ ಮಲ್ಲಯ್ಯ ದೇವಸ್ಥಾನಕ್ಕೆ ತೆರಳಲು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ನೂರಾರು ಭಕ್ತರು ಬಸ್‌ಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಸ್‌ಗಳಲ್ಲಿ ಸೀಟ್‌ಗಾಗಿ ಮಹಿಳೆಯರ ನಡುವೆ ವಾಗ್ವಾದವೂ ನಡೆದಿದೆ. ಕೆಲ ಮಹಿಳೆಯರು ಕಿಟಕಿಯಿಂದ ಮಕ್ಕಳನ್ನು ಎತ್ತಿಕೊಂಡು ಸೀಟ್ ಕಾಯ್ದಿರಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದಿವೆ.

ಸಮರ್ಪಕ ಬಸ್ ಸೌಲಭ್ಯ ಕಲ್ಪಿಸದಿರುವುದಕ್ಕೆ ಸಾರಿಗೆ ಸಂಸ್ಥೆ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತ್ರೆಯ ಹಿನ್ನೆಲೆಯಲ್ಲಿ ಕಪ್ಪತ್ತಗುಡ್ಡಕ್ಕೆ ಹೆಚ್ಚುವರಿ ವಿಶೇಷ ಬಸ್‌ಗಳನ್ನು ಕೂಡಲೇ ಒದಗಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.

ಹೊಟ್ಟೆ ತುಂಬ ಊಟ ಮಾಡಿದರೂ ಮತ್ತೆ ಹಸಿವಾಗುತ್ತಿದೆಯೇ? ದೇಹ ನೀಡುತ್ತಿರುವ ಈ ಸೂಚನೆಗಳನ್ನು ಗಮನಿಸಿ

0

ಸಾಮಾನ್ಯವಾಗಿ ಹೊಟ್ಟೆ ತುಂಬ ಊಟ ಮಾಡಿದ ಕೆಲವು ಗಂಟೆಗಳ ಬಳಿಕ ಮತ್ತೆ ಹಸಿವಾಗುವುದು ಸಹಜ. ಆದರೆ ಊಟ ಮಾಡಿದ ಕೆಲವೇ ಸಮಯದಲ್ಲಿ ಪದೇಪದೇ ಏನಾದರೂ ತಿನ್ನಬೇಕು ಎನ್ನಿಸುತ್ತಿದ್ದರೆ ಅಥವಾ ನಿರಂತರವಾಗಿ ಹಸಿವಿನ ಅನುಭವವಾಗುತ್ತಿದ್ದರೆ, ಅದಕ್ಕೆ ಹಲವು ಕಾರಣಗಳಿರಬಹುದು.

ಆಹಾರದಲ್ಲಿ ಪ್ರೋಟೀನ್, ನಾರಿನಾಂಶ ಕಡಿಮೆಯೇ?

ನಾವು ಸೇವಿಸುವ ಆಹಾರದಲ್ಲಿ ಪ್ರೋಟೀನ್ ಮತ್ತು ನಾರಿನಾಂಶ ಕಡಿಮೆಯಿದ್ದರೆ ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವ ಇರುವುದಿಲ್ಲ. ಅನ್ನ, ಬ್ರೆಡ್, ಸಿಹಿತಿಂಡಿಗಳಂತಹ ಕಾರ್ಬೋಹೈಡ್ರೇಟ್‌ಯುಕ್ತ ಆಹಾರ ಹೊಟ್ಟೆ ತುಂಬಿಸಿದರೂ ಕೆಲವೇ ಸಮಯದಲ್ಲಿ ಮತ್ತೆ ಹಸಿವಾಗಬಹುದು.

ಬೇಳೆ, ಮೊಟ್ಟೆ, ಮೊಸರು, ಪನ್ನೀರ್, ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳನ್ನು ಆಹಾರದಲ್ಲಿ ಸೇರಿಸುವುದು ಉತ್ತಮ. ಪ್ರೋಟೀನ್ ಹಾಗೂ ನಾರಿನಾಂಶವು ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡಲು ಸಹಾಯ ಮಾಡಬಹುದು.

ದೇಹಕ್ಕೆ ನೀರು ಕಡಿಮೆಯಾಗಿದೆಯೇ?

ಕೆಲವೊಮ್ಮೆ ದೇಹಕ್ಕೆ ನೀರಿನ ಅಗತ್ಯವಿದ್ದರೂ ಅದನ್ನು ಹಸಿವು ಎಂದು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಊಟದ ನಂತರ ಮತ್ತೆ ಏನಾದರೂ ತಿನ್ನಬೇಕು ಎನ್ನಿಸಿದಾಗ ಮೊದಲು ನೀರು ಕುಡಿದು ಸ್ವಲ್ಪ ಸಮಯ ಕಾಯುವುದು ಸಹಾಯವಾಗಬಹುದು.

ಆದರೆ ಪದೇಪದೇ ಅತಿಯಾದ ಬಾಯಾರಿಕೆ ಅಥವಾ ಹಸಿವು ಕಾಣಿಸಿಕೊಳ್ಳುತ್ತಿದ್ದರೆ ಅದನ್ನು ನಿರ್ಲಕ್ಷಿಸದೆ ಗಮನಿಸುವುದು ಮುಖ್ಯ.

ಸಾಕಷ್ಟು ನಿದ್ರೆ ಇಲ್ಲದಿದ್ದರೂ ಹಸಿವಿನ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆಯ ಕೊರತೆಯಿಂದ ಹಸಿವು ಹಾಗೂ ಹೊಟ್ಟೆ ತುಂಬಿದ ಅನುಭವವನ್ನು ನಿಯಂತ್ರಿಸುವ ಹಾರ್ಮೋನುಗಳಲ್ಲಿ ಬದಲಾವಣೆ ಉಂಟಾಗಬಹುದು. ಇದರಿಂದ ಸಿಹಿ ಅಥವಾ ಹೆಚ್ಚಿನ ಕ್ಯಾಲೊರಿ ಇರುವ ಆಹಾರ ಸೇವಿಸುವ ಬಯಕೆ ಹೆಚ್ಚಾಗಬಹುದು.

ಹೀಗಾಗಿ ಪ್ರತಿದಿನ ಸಾಕಷ್ಟು ಹಾಗೂ ಉತ್ತಮ ಗುಣಮಟ್ಟದ ನಿದ್ರೆ ಪಡೆಯುವುದು ಮುಖ್ಯ.

ಒತ್ತಡದಿಂದಲೂ ತಿನ್ನುವ ಬಯಕೆ ಹೆಚ್ಚಾಗಬಹುದು:

ನಿಜವಾದ ಹಸಿವಿಗಿಂತ ಒತ್ತಡ, ಆತಂಕ ಅಥವಾ ಬೇಸರದಿಂದಲೂ ಏನಾದರೂ ತಿನ್ನಬೇಕು ಎನ್ನಿಸಬಹುದು. ಇದನ್ನು ಭಾವನಾತ್ಮಕ ಹಸಿವು ಎಂದು ಕರೆಯಲಾಗುತ್ತದೆ.

ಇಂತಹ ಸಂದರ್ಭದಲ್ಲಿ ಸಿಹಿ, ಕರಿದ ತಿಂಡಿ ಅಥವಾ ಇಷ್ಟದ ಆಹಾರವನ್ನು ತಿನ್ನುವ ಬಯಕೆ ಹೆಚ್ಚಾಗಬಹುದು. ಹೀಗಾಗಿ ನಿಜವಾಗಿಯೂ ಹಸಿವಾಗಿದೆಯೇ ಅಥವಾ ಒತ್ತಡದಿಂದ ತಿನ್ನಬೇಕು ಎನ್ನಿಸುತ್ತಿದೆಯೇ ಎಂಬುದನ್ನು ಗಮನಿಸುವುದು ಅಗತ್ಯ.

ಊಟವನ್ನು ತುಂಬಾ ವೇಗವಾಗಿ ಮಾಡಬೇಡಿ:

ಊಟ ಮಾಡಿದ ತಕ್ಷಣವೇ ಹೊಟ್ಟೆ ತುಂಬಿದೆ ಎಂಬ ಸಂಕೇತ ಮೆದುಳಿಗೆ ತಲುಪುವುದಿಲ್ಲ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಹೀಗಾಗಿ ವೇಗವಾಗಿ ಊಟ ಮಾಡಿದರೆ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವ ಸಾಧ್ಯತೆ ಇದೆ.

ಆಹಾರವನ್ನು ನಿಧಾನವಾಗಿ ಸೇವಿಸಿ, ಚೆನ್ನಾಗಿ ಅಗಿಯುವುದು ಉತ್ತಮ ಅಭ್ಯಾಸ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಹೊಟ್ಟೆ ತುಂಬ ಊಟ ಮಾಡಿದರೂ ನಿರಂತರವಾಗಿ ಅತಿಯಾದ ಹಸಿವು ಕಾಣಿಸಿಕೊಳ್ಳುತ್ತಿದ್ದರೆ ಹಾಗೂ ಇದರೊಂದಿಗೆ ತೂಕದಲ್ಲಿ ವೇಗವಾದ ಬದಲಾವಣೆ, ಅತಿಯಾದ ಬಾಯಾರಿಕೆ, ಪದೇಪದೇ ಮೂತ್ರ ವಿಸರ್ಜನೆ ಅಥವಾ ದೌರ್ಬಲ್ಯದಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಕೆಲವು ಸಂದರ್ಭಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟದ ಬದಲಾವಣೆ, ಥೈರಾಯ್ಡ್ ಸಮಸ್ಯೆಗಳು ಅಥವಾ ಕೆಲವು ಔಷಧಿಗಳ ಪರಿಣಾಮದಿಂದಲೂ ಹಸಿವು ಹೆಚ್ಚಾಗಬಹುದು.

ಹೀಗಾಗಿ ಪದೇಪದೇ ಹಸಿವಾಗುವುದು ಎಂದರೆ ದೇಹಕ್ಕೆ ಇನ್ನಷ್ಟು ಆಹಾರ ಬೇಕು ಎಂದೇ ಅರ್ಥವಲ್ಲ. ಸಮತೋಲಿತ ಆಹಾರ, ಸಾಕಷ್ಟು ನೀರು, ಉತ್ತಮ ನಿದ್ರೆ ಮತ್ತು ಒತ್ತಡ ನಿಯಂತ್ರಣದತ್ತ ಗಮನ ಹರಿಸುವುದು ಮುಖ್ಯ.

ಕಲಬುರಗಿಯಲ್ಲಿ ಭೀಕರ ಅಪಘಾತ: ತಾಯಿ, 3 ತಿಂಗಳ ಮಗು ಸ್ಥಳದಲ್ಲೇ ಸಾವು!

0

ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಹೊರವಲಯದಲ್ಲಿ ಆಟೋ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ ಹಾಗೂ ಮೂರು ತಿಂಗಳ ಮಗು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಅಪಘಾತದಲ್ಲಿ ಶರಣಮ್ಮ (30) ಹಾಗೂ ಅವರ ಮೂರು ತಿಂಗಳ ಮಗು ಸಾವನ್ನಪ್ಪಿದ್ದಾರೆ. ವಾಡಿ ಪಟ್ಟಣಕ್ಕೆ ಆಗಮಿಸುತ್ತಿದ್ದ ವೇಳೆ ಆಟೋಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಶರಣಮ್ಮ ಅವರ ಅತ್ತೆ ಸಾಬಮ್ಮ ಹಾಗೂ ಆಟೋ ಚಾಲಕ ಖಾಜಾ ಪಟೇಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜಿಲ್ಲಾ ಕ್ರೀಡಾಂಗಣದಲ್ಲಿ ಟರ್ಫ್ ಬೇಡ: ಗ್ರಾಸ್ ಫುಟ್‌ಬಾಲ್ ಮೈದಾನ ನಿರ್ಮಿಸಿ

0

ಗದಗ: ಗದಗ-ಬೆಟಗೇರಿ ಅವಳಿ ನಗರದ ಏಕೈಕ ಜಿಲ್ಲಾ ಕ್ರೀಡಾಂಗಣದಲ್ಲಿ ತರಾತುರಿಯಲ್ಲಿ ಸಿಂಥೆಟಿಕ್ ಫುಟ್‌ಬಾಲ್ ಟರ್ಫ್ ಮೈದಾನ ನಿರ್ಮಿಸುತ್ತಿರುವ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಅದರ ಬದಲಿಗೆ ಹುಲ್ಲಿನ ಹಾಸಿನ (ಗ್ರಾಸ್) ಫುಟ್‌ಬಾಲ್ ಮೈದಾನ ನಿರ್ಮಿಸಬೇಕು ಎಂದು ಶಿವರಾಮಕೃಷ್ಣ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಕ್ರೀಡಾ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಮಕೃಷ್ಣ ಸೇವಾ ಟ್ರಸ್ಟ್ ಅಧ್ಯಕ್ಷ ರಾಜೂ ಖಾನಪ್ಪನವರ, ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತಿವರ್ಷ ದಸರಾ ಕ್ರೀಡಾಕೂಟ, ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ, ಶಾಲಾ-ಕಾಲೇಜುಗಳ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳು ನಡೆಯುತ್ತವೆ. ಅಲ್ಲದೆ, ಆಗಸ್ಟ್ 15, ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದಂತಹ ರಾಷ್ಟ್ರೀಯ ಮತ್ತು ನಾಡಹಬ್ಬಗಳ ಕಾರ್ಯಕ್ರಮಗಳಿಗೂ ಇದೇ ಕ್ರೀಡಾಂಗಣ ಬಳಕೆಯಾಗುತ್ತಿದೆ ಎಂದು ತಿಳಿಸಿದರು.

ಇಂತಹ ಬಹುಉದ್ದೇಶದ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಫುಟ್‌ಬಾಲ್ ಟರ್ಫ್ ನಿರ್ಮಿಸಿದರೆ ಉಳಿದ ಕ್ರೀಡೆಗಳಿಗೆ ತೀವ್ರ ಅನಾನುಕೂಲವಾಗಲಿದೆ ಎಂದು ಕ್ರೀಡಾಪಟುಗಳು ಆತಂಕ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಶಾಟ್‌ಪುಟ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ ಹಾಗೂ ಹ್ಯಾಮರ್ ಥ್ರೋ ಸ್ಪರ್ಧೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಇದರಿಂದ ಕ್ರೀಡಾಪಟುಗಳು ಶಾಲಾ-ಕಾಲೇಜುಗಳ ಮೈದಾನಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.

ಫುಟ್‌ಬಾಲ್ ಕ್ರೀಡೆಯ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಆದರೆ ಒಂದೇ ಕ್ರೀಡೆಗಾಗಿ ಜಿಲ್ಲೆಯ ವಿವಿಧ ಕ್ರೀಡೆಗಳಿಗೆ ಲಭ್ಯವಿರುವ ಏಕೈಕ ಕ್ರೀಡಾಂಗಣದ ಸ್ವರೂಪವನ್ನು ಬದಲಿಸುವುದು ವೈಜ್ಞಾನಿಕ ಕ್ರಮವಲ್ಲ. ಟರ್ಫ್ ಬದಲಿಗೆ ಹುಲ್ಲಿನ ಹಾಸಿನ ಗ್ರಾಸ್ ಫುಟ್‌ಬಾಲ್ ಮೈದಾನ ನಿರ್ಮಿಸಿದರೆ ಫುಟ್‌ಬಾಲ್ ಸೇರಿದಂತೆ ಇತರ ಕ್ರೀಡೆಗಳಿಗೂ ಅವಕಾಶ ಉಳಿಯಲಿದೆ ಎಂದು ರಾಜೂ ಖಾನಪ್ಪನವರ ಪ್ರತಿಪಾದಿಸಿದರು.

ಕ್ರೀಡಾಂಗಣ ನಿರ್ಮಾಣದ ಕುರಿತು ವಿವಿಧ ಕ್ರೀಡಾ ಸಂಘಟನೆಗಳು ಹಾಗೂ ಕ್ರೀಡಾಪಟುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಮಗಾರಿ ಆರಂಭಿಸಿರುವುದು ಖಂಡನೀಯ. ಕ್ರೀಡಾ ಕ್ಷೇತ್ರದ ತಜ್ಞರು ಹಾಗೂ ಎಲ್ಲ ಕ್ರೀಡಾ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಈಗಾಗಲೇ ಆರಂಭಿಸಿರುವ ಟರ್ಫ್ ಫುಟ್‌ಬಾಲ್ ಮೈದಾನದ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಏಳು ದಿನಗಳೊಳಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ, ಸರದಿ ಉಪವಾಸ ಸತ್ಯಾಗ್ರಹ, ರಸ್ತೆ ತಡೆ ಹಾಗೂ ಅಮರಣ ಉಪವಾಸ ಸೇರಿದಂತೆ ವಿವಿಧ ರೀತಿಯ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡರ, ಅರವಿಂದ ಹುಲ್ಲೂರ, ರವಿಕಾಂತ ಅಂಗಡಿ, ಪ್ರಭುಗೌಡ ಪಾಟೀಲ, ವೀರೇಶ ರೋಣದ, ನಾಗರಾಜ ಬಂಡಿವಡ್ಡರ, ಮಹಾಂತೇಶ ಪಾಟೀಲ, ರಾಜೂ ಉಮಚಗಿ, ಪರಮೇಶ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹೊರಗಿನ ಸಂಪತ್ತಿಗಿಂತ ಅಂತರಂಗದ ನೆಮ್ಮದಿ ಶ್ರೇಷ್ಠ: ಚನ್ನವೀರ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಹಿರಂಗದ ಸಂಪತ್ತನ್ನು ಗಳಿಸಿಕೊಳ್ಳಲು ಬದುಕಿನಲ್ಲಿ ಹಲವಾರು ದಾರಿಗಳಿವೆ. ಆದರೆ ಮನುಷ್ಯನ ಅಂತರಂಗದಲ್ಲಿ ಶಾಂತಿ, ಸಮಾಧಾನ ಹಾಗೂ ನೆಮ್ಮದಿ ನೆಲೆಸುವುದೇ ನಿಜವಾದ ಸಂಪತ್ತು. ಅದಕ್ಕಾಗಿ ಪ್ರತಿಯೊಬ್ಬರೂ ಪೂಜೆ, ಧ್ಯಾನ, ಪ್ರಾರ್ಥನೆ, ದಾನ ಹಾಗೂ ಧರ್ಮಕಾರ್ಯಗಳನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ರೂಢಿಸಿಕೊಳ್ಳಬೇಕು ಎಂದು ಹೂವಿನಶಿಗ್ಲಿ ಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

ಶ್ರಾವಣ ಮಾಸದ ನಿಮಿತ್ತ ಬುಧವಾರ ಲಕ್ಷ್ಮೇಶ್ವರದಲ್ಲಿ ಹುಲಗೇರಿ ಬಣದ ಭಕ್ತಗಣ ಆಯೋಜಿಸಿದ್ದ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಭೌತಿಕ ಸಂಪತ್ತು, ಉದ್ಯೋಗ ಹಾಗೂ ವಿವಿಧ ಚಟುವಟಿಕೆಗಳ ಹಿಂದೆ ಓಡುತ್ತ ಅಂತರಂಗದ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ. ನಿತ್ಯದ ಕೆಲಸದ ಒತ್ತಡ, ಜಂಜಾಟ ಹಾಗೂ ಸ್ಪರ್ಧಾತ್ಮಕ ಜೀವನದ ನಡುವೆಯೂ ಧಾರ್ಮಿಕ ಕಾರ್ಯಗಳಿಗೆ ಸಮಯ ಮೀಸಲಿಡುವುದು ಅತ್ಯಂತ ಅಗತ್ಯವಾಗಿದೆ ಎಂದರು.

ಶ್ರಾವಣ ಮಾಸವು ಭಕ್ತಿ, ಧ್ಯಾನ, ಆತ್ಮಚಿಂತನೆ ಹಾಗೂ ಧಾರ್ಮಿಕ ಆಚರಣೆಗಳಿಗೆ ವಿಶೇಷ ಮಹತ್ವ ಹೊಂದಿದೆ. ಇವುಗಳ ಮೂಲಕ ಮನಸ್ಸಿನಲ್ಲಿ ಹೊಸ ಚೈತನ್ಯ ಮೂಡುತ್ತದೆ. ಭಕ್ತಿಯಿಂದ ಲಿಂಗಪೂಜೆ, ಜಪ, ಧ್ಯಾನ ಹಾಗೂ ಪ್ರಾರ್ಥನೆ ಮಾಡುವುದರಿಂದ ಮನಸ್ಸಿನ ಚಂಚಲತೆ ದೂರವಾಗಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ಬದುಕಿನಲ್ಲಿ ಎದುರಾಗುವ ಕಷ್ಟ-ಸಂಕಷ್ಟಗಳನ್ನು ಸಮಚಿತ್ತದಿಂದ ಎದುರಿಸುವ ಶಕ್ತಿಯೂ ದೊರೆಯುತ್ತದೆ ಎಂದು ಹೇಳಿದರು.

ಇಷ್ಟಲಿಂಗ ಪೂಜೆ ಅಂತರಂಗವನ್ನು ಶುದ್ಧೀಕರಿಸುವ ಸಾಧನವಾಗಿದ್ದು, ಜೀವನದಲ್ಲಿ ಶಿಸ್ತು, ಸದಾಚಾರ, ಸಂಯಮ ಹಾಗೂ ಸಾತ್ವಿಕ ಚಿಂತನೆಯನ್ನು ಬೆಳೆಸುತ್ತದೆ. ಆದ್ದರಿಂದ ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರೂ ಸಾಧ್ಯವಾದಷ್ಟು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಕ್ಕಳಿಗೂ ಧಾರ್ಮಿಕ ಹಾಗೂ ಸಂಸ್ಕಾರದ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಕೇವಲ ವಿದ್ಯಾಭ್ಯಾಸ ಮತ್ತು ಭೌತಿಕ ಯಶಸ್ಸಿನತ್ತ ಕೊಂಡೊಯ್ಯದೆ, ಪೂಜೆ, ಪ್ರಾರ್ಥನೆ, ದಾನ, ಧರ್ಮ ಹಾಗೂ ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನೂ ಬೆಳೆಸಬೇಕು. ಉತ್ತಮ ಸಂಸ್ಕಾರ ಹೊಂದಿದ ಮಕ್ಕಳು ಭವಿಷ್ಯದಲ್ಲಿ ಸಮಾಜದ ಆಸ್ತಿಯಾಗುತ್ತಾರೆ ಎಂದು ಶ್ರೀಗಳು ಹೇಳಿದರು.

ಭೌತಿಕ ಜೀವನದಲ್ಲಿ ಎಷ್ಟೇ ಸಂಪತ್ತು ಗಳಿಸಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ ಬದುಕು ಅಪೂರ್ಣವಾಗುತ್ತದೆ. ಆದ್ದರಿಂದ ಹೊರಗಿನ ಸಂಪತ್ತಿನೊಂದಿಗೆ ಅಂತರಂಗದ ಸಂಪತ್ತನ್ನೂ ಗಳಿಸಿಕೊಳ್ಳಬೇಕು. ಭಕ್ತಿ, ಧರ್ಮ ಹಾಗೂ ಸತ್ಕಾರ್ಯಗಳ ಮೂಲಕ ಅಂತರಂಗದ ಸಂಪತ್ತನ್ನು ವೃದ್ಧಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ಶ್ರೀ ಚನ್ನವೀರ ಮಹಾಸ್ವಾಮಿಗಳು ಆಶೀರ್ವದಿಸಿದರು.

ಸೋಮೇಶ್ವರ ಭಕ್ತರ ಟ್ರಸ್ಟ್ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ, ಶಂಕರ ಬಾಳಿಕಾಯಿ, ದೇವಣ್ಣ ತೋಟದ, ಎಸ್.ಎಫ್. ಆದಿ, ಬಸವರಾಜ ಮೆಣಸಿನಕಾಯಿ, ವಿರೂಪಾಕ್ಷ ಆದಿ, ಬಸವರಾಜ ಅಣ್ಣಿಗೇರಿ, ಜಿ.ಎಸ್. ಗುಡಗೇರಿ, ಕಾಶಪ್ಪ ಮುಳಗುಂದ, ಮಯೂರಗೌಡ ಪಾಟೀಲ, ಸುರೇಶ ಚೌಕನವರ, ಶಂಕರಪ್ಪ ಆದಿ ಸೇರಿದಂತೆ ಭಕ್ತರು ಶ್ರಾವಣ ಮಾಸದ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಪೂಜೆ ಸಲ್ಲಿಸಿದರು.

ಜಿಲ್ಲಾ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಸಾಹಿತ್ಯ ಜಾಧವ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಿಸರ್ಗ ಯೋಗ ಸೆಂಟರ್, ಧಾರವಾಡ ಹಾಗೂ ಕಿಟಲ್ ಕಲಾ ಮಹಾವಿದ್ಯಾಲಯ, ಧಾರವಾಡ ಇವರ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಸಿದ್ಧಲಿಂಗನಗರದ ಬಸವೇಶ್ವರ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಾಹಿತ್ಯ ಕೆ. ಜಾಧವ ಉತ್ತಮ ಸಾಧನೆ ಮಾಡಿದ್ದಾರೆ.

೮ರಿಂದ ೧೨ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಿದ ಸಾಹಿತ್ಯ ಜಾಧವ ಅವರು ಆರನೇ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಯೋಗಾಸನ ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಿದ ಸಾಹಿತ್ಯ ಜಾಧವ ಅವರನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಲತಾ ಕಾಲವಾಡ, ಶಿವಾನಂದ ಗಿಡ್ಡಕೆಂಚಣ್ಣವರ, ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಂ. ಬುರಡಿ, ಪಾಲಕರಾದ ಮಾಲಾಶ್ರೀ ಹಾಗೂ ಕೃಷ್ಣಾಜಿ ಜಾಧವ ಮತ್ತು ಯೋಗಾಸನ ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.

ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉನ್ನತ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.

‘ನಾನು, ನನ್ನದು’ ಎಂಬ ಅಹಂಕಾರವೇ ನೆಮ್ಮದಿ ಕಸಿಯುತ್ತದೆ: ಡಾ. ರಾಜಶೇಖರ ದಾನರಡ್ಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ‘ನಾನು… ನನ್ನದು… ನಾನು ಮಾಡಿದೆ…’ ಎಂಬ ಅಹಂಕಾರದ ಭಾವನೆಯೇ ಮನುಷ್ಯನ ಬದುಕಿನ ನೆಮ್ಮದಿಯನ್ನು ಕಸಿದುಕೊಳ್ಳುತ್ತದೆ. ತನು, ಮನ, ಧನ, ಮನೆ, ಸತಿ-ಸುತರ ಮೇಲಿನ ಅತಿಯಾದ ಮಮಕಾರವನ್ನು ಮೀರಿ, ಎಲ್ಲವೂ ಭಗವಂತನ ಕೃಪೆ ಎಂಬ ಸಮರ್ಪಣಾ ಭಾವದಿಂದ ಬದುಕಿದಾಗ ಮಾತ್ರ ಜೀವನದಲ್ಲಿ ನಿಜವಾದ ಸುಖ, ಸಂತೋಷ ಮತ್ತು ನೆಮ್ಮದಿ ಕಾಣಲು ಸಾಧ್ಯ ಎಂದು ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ರಾಜಶೇಖರ ದಾನರಡ್ಡಿ ಹೇಳಿದರು.

ಎಸ್‌ವೈಬಿಎಂಎಸ್ ಯೋಗಪಾಠಶಾಲೆ, ಗದಗ, ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ವಚನಪಾಠಶಾಲೆ ಹಾಗೂ ಸಿದ್ಧಲಿಂಗನಗರದ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿರುವ ಸಾಪ್ತಾಹಿಕ ವಚನ ಶ್ರಾವಣ-೨೦೨೬ ಕಾರ್ಯಕ್ರಮದ ಮೂರನೇ ಶ್ರಾವಣ ಸೋಮವಾರದ ಅಂಗವಾಗಿ ಅವರು ಷಣ್ಮುಖಸ್ವಾಮಿಯವರ ವಚನದ ಭಾವಾರ್ಥವನ್ನು ವಿಶ್ಲೇಷಿಸಿ ಮಾತನಾಡಿದರು.

ಮಾನವ ಮೂಲತಃ ಅಹಂಕಾರದ ಜೀವಿಯಾಗಿದ್ದು, ನಾನು, ನನ್ನದು, ನಾನು ಮಾಡಿದೆ ಎಂಬ ಭಾವದಿಂದ ಮೆರೆಯುತ್ತಾನೆ. ಆದರೆ ಈ ಅಹಂಕಾರ ಶಾಶ್ವತವಾದುದಲ್ಲ. ತಾನು ಕಟ್ಟಿಸಿದ ಮನೆ ಹಾಳಾದಾಗ, ಗಳಿಸಿದ ಸಂಪತ್ತು ಕಳೆದುಹೋದಾಗ ಅಥವಾ ಬದುಕಿನಲ್ಲಿ ಸಂಕಷ್ಟಗಳು ಎದುರಾದಾಗ ಇದೇ ಮನುಷ್ಯ ದುಃಖಕ್ಕೆ ಒಳಗಾಗುತ್ತಾನೆ ಎಂದು ಹೇಳಿದರು.

ನಾನಿರುವುದು ಭಗವಂತನ ಕೃಪೆಯಿಂದ. ನಾನು ಮಾಡುವ ಪ್ರತಿಯೊಂದು ಕಾರ್ಯವೂ ದೇವರಿಗಾಗಿ, ಅಂದರೆ ಸಮಾಜದ ಒಳಿತಿಗಾಗಿ ಎಂಬ ಮನೋಭಾವದಿಂದ ಬದುಕಬೇಕು. ನಮ್ಮೊಳಗಿನ ಅಹಂಕಾರ ಕರಗಿ ಸಮರ್ಪಣಾ ಭಾವ ಮೂಡಿದಾಗ ಮಾತ್ರ ನಿಜವಾದ ಸಂತೋಷದ ಬದುಕು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಡಿಜಿಎಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಜಿ.ಎಸ್. ಹಿರೇಮಠ ಮಾತನಾಡಿ, ಹಿಂದೆ ನಿರ್ದಿಷ್ಟ ಕಾಯಕಗಳನ್ನು ನಿರ್ದಿಷ್ಟ ವರ್ಗದವರೇ ಮಾಡಬೇಕು ಎಂಬ ಸಂಪ್ರದಾಯ ರೂಢಿಯಲ್ಲಿತ್ತು. ಆದರೆ ಇಂದು ಯಾವುದೇ ಕಾಯಕವನ್ನು ಯಾರು ಬೇಕಾದರೂ ಮಾಡಬಹುದಾಗಿದೆ. ಮಾಡುವ ಕಾಯಕದಲ್ಲಿ ಶ್ರದ್ಧೆ ಇರಬೇಕು ಹಾಗೂ ನಮ್ಮ ಕಾರ್ಯ ಇತರರಿಗೆ ಮಾರ್ಗದರ್ಶನವಾಗುವಂತಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕೃಷಿ ವಿಜ್ಞಾನಿ ಡಾ. ಎಸ್.ಕೆ. ನಾಲ್ವತವಾಡಮಠ ಮಾತನಾಡಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಇಂದು ಸ್ವಾರ್ಥ ಮನೋಭಾವ ಹೆಚ್ಚುತ್ತಿದೆ. ಸ್ವಾರ್ಥತೆಯನ್ನು ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಸಮರ್ಪಣಾ ಭಾವದಿಂದ ಶ್ರಮಿಸಿದರೆ ದೇಶ ಇನ್ನಷ್ಟು ವೇಗವಾಗಿ ಪ್ರಗತಿಯ ಪಥದಲ್ಲಿ ಮುನ್ನಡೆಯಲಿದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಗೌರವಾಧ್ಯಕ್ಷೆ ಅನ್ನಪೂರ್ಣಕ್ಕ ವರವಿ, ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರ ಹಾಗೂ ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಉಪಸ್ಥಿತರಿದ್ದು, ಕಾರ್ಯಕ್ರಮದ ಸೇವಾಕರ್ತರನ್ನು ಗೌರವಿಸಿದರು.

ವಿಶೇಷವಾಗಿ ಸುನಂದಾ ಜ್ಞಾನೋಪಂತರ ಹಾಗೂ ಚಂದ್ರಕಲಾ ಸ್ಥಾವರಮಠ ಅವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು. ಯೋಗಪಾಠಶಾಲೆ, ವಚನಪಾಠಶಾಲೆ ಹಾಗೂ ಯೋಗ ವಿಜ್ಞಾನ ಕೇಂದ್ರದ ಸದಸ್ಯರು ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

ಪ್ರಾರಂಭದಲ್ಲಿ ಸಂಗೀತ ನಾಕೋಡ ಸಾಮೂಹಿಕ ಬಸವ ಪ್ರಾರ್ಥನೆ ನಡೆಸಿಕೊಟ್ಟರು. ಅರುಣಾ ಇಂಗಳಳ್ಳಿ ಸ್ವಾಗತಿಸಿದರು. ಶಾಂತಾ ಮುಂದಿನಮನಿ ಧರ್ಮಗ್ರಂಥ ಪಠಣ ಮಾಡಿದರು. ಬಸವರಾಜ ತೋಟಿಗೇರ ಸಂವಿಧಾನವನ್ನು ಓದಿ ತಿಳಿಸಿದರು. ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಸುಲೋಚನಾ ಐಹೊಳೆ ಕಾರ್ಯಕ್ರಮ ನಿರೂಪಿಸಿದರು.

ತನು, ಮನ, ಧನ, ಮನೆ ಎಂಬ ಮಮಕಾರವನ್ನು ಮೀರಿ, ಎಲ್ಲವೂ ಭಗವಂತನ ಕೃಪೆ ಎಂಬ ಸಮರ್ಪಣಾ ಭಾವದಿಂದ ಬದುಕಿದರೆ ಅಹಂಕಾರ ಕರಗಿ ಜೀವನದಲ್ಲಿ ನಿಜವಾದ ಸುಖ ಮತ್ತು ನೆಮ್ಮದಿ ದೊರೆಯುತ್ತದೆ.

— ಡಾ. ರಾಜಶೇಖರ ದಾನರಡ್ಡಿ, ಸಹ ಪ್ರಾಧ್ಯಾಪಕ

ಮಕ್ಕಳು ಆತ್ಮವಿಶ್ವಾಸದಿಂದ ಶೈಕ್ಷಣಿಕ ಸಾಧನೆಯತ್ತ ಮುನ್ನಡೆಯಲಿ: ಅನ್ನಪೂರ್ಣ ವರವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಆತ್ಮವಿಶ್ವಾಸವು ವ್ಯಕ್ತಿಯಲ್ಲಿ ಇತರರೊಂದಿಗೆ ಬೆರೆಯುವ ಗುಣ, ಸ್ವಯಂಪ್ರೇರಣೆ, ಕಲಿಕೆಯ ಆಸಕ್ತಿ, ಅನ್ವೇಷಣಾ ಪ್ರವೃತ್ತಿ, ಪ್ರಶ್ನಿಸುವ ಮನೋಭಾವ ಹಾಗೂ ಸೃಜನಶೀಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆದ್ದರಿಂದ ಮಕ್ಕಳು ಆತ್ಮವಿಶ್ವಾಸದಿಂದ ಶೈಕ್ಷಣಿಕ ಸಾಧನೆಯತ್ತ ಮುನ್ನಡೆಯಬೇಕು ಎಂದು ಚಿಂತಕಿ ಅನ್ನಪೂರ್ಣ ವರವಿ ಹೇಳಿದರು.

ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. ೧೫ರಲ್ಲಿ ಗದಗ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆ ವತಿಯಿಂದ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಆಯೋಜಿಸಲಾಗುವ ‘ಅಮೃತಭೋಜನ-ಜ್ಞಾನ ಸಿಂಚನ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ಭೋಜನ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಪೈಪೋಟಿಯನ್ನು ಸಮರ್ಥವಾಗಿ ಎದುರಿಸುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಸಾಧನೆಗಳಲ್ಲಿ ಮುನ್ನಡೆ ಸಾಧಿಸಲು ಆತ್ಮವಿಶ್ವಾಸವೇ ಯಶಸ್ಸಿನ ಮುನ್ನುಡಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು.

ಮಕ್ಕಳಿಗೆ ಸಿಹಿ ವಿತರಿಸಿದ ಶಾಲೆಯ ಎಸ್‌ಡಿಎಂಸಿ ಸದಸ್ಯ ಶ್ರೀನಿವಾಸ ಬೇವಿನಕಟ್ಟಿ ಮಾತನಾಡಿ, ಉತ್ತಮ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ. ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಬುದ್ಧ ಹಾಗೂ ಬಸವಣ್ಣನವರಂತಹ ಮಹನೀಯರ ಚಿಂತನೆಗಳು ಜೀವನಕ್ಕೆ ಪ್ರೇರಣೆ ನೀಡುತ್ತವೆ. ಆದ್ದರಿಂದ ಮಕ್ಕಳು ಹಿರಿಯರು ಹಾಗೂ ದಾರ್ಶನಿಕರ ನಡೆ-ನುಡಿಗಳನ್ನು ಮನನ ಮಾಡಿಕೊಳ್ಳಬೇಕು ಎಂದರು.

ನಿವೃತ್ತ ಶಿಕ್ಷಕಿ ಸುವರ್ಣ ಗುರಮ್ಮನವರ ಅವರು ಮಕ್ಕಳಿಗೆ ಗಾದೆಮಾತುಗಳ ಕುರಿತು ತಿಳುವಳಿಕೆ ನೀಡಿದರು. ಹಿರಿಯರ ಅನುಭವದ ಸಾರವೇ ಗಾದೆಮಾತುಗಳಾಗಿದ್ದು, ಅವು ಚಿಕ್ಕದಾಗಿದ್ದರೂ ಅರ್ಥಪೂರ್ಣವಾಗಿರುತ್ತವೆ. ಪ್ರತಿಯೊಂದು ಗಾದೆಯೂ ಒಂದೊಂದು ಜೀವನ ಸಂದೇಶವನ್ನು ಒಳಗೊಂಡಿದ್ದು, ಅವುಗಳ ಅರ್ಥವನ್ನು ತಿಳಿದು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕದಳಿಶ್ರೀ ವೇದಿಕೆಯ ಸಂಚಾಲಕಿ ಕವಿತಾ ದಂಡಿನ ಮಾತನಾಡಿ, ಶ್ರಾವಣ ಮಾಸದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸರ್ಕಾರಿ ಶಾಲೆಗಳಿಗೆ ಆಹ್ವಾನಿಸಿ, ಅವರ ಅಮೃತವಾಣಿಯ ಮೂಲಕ ಮಕ್ಕಳಿಗೆ ಜೀವನ ಮೌಲ್ಯಗಳು ಹಾಗೂ ಪ್ರೇರಣಾದಾಯಕ ವಿಚಾರಗಳನ್ನು ತಿಳಿಸಲಾಗುತ್ತಿದೆ. ಸಿಹಿ ಭೋಜನದೊಂದಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸಮುದಾಯವನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವ ಕಾರ್ಯವನ್ನು ವೇದಿಕೆ ನಿರಂತರವಾಗಿ ನಡೆಸುತ್ತಿದೆ ಎಂದರು.

ವಿದ್ಯಾರ್ಥಿನಿಯರಾದ ಅರ್ಚನಾ ಯಂಡಿಗೇರಿ, ಲೋಕೇಶ್ವರಿ ಮುಧೋಳ ಹಾಗೂ ಮಲ್ಲಿಕಾ ದಹಿಂಡೆ ವಚನ ಪ್ರಾರ್ಥನೆ ನೆರವೇರಿಸಿದರು. ಮುಖ್ಯೋಪಾಧ್ಯಾಯಿನಿ ವಿ.ಎನ್. ಬಸಾಪೂರ ಸ್ವಾಗತಿಸಿದರು. ಬಿ. ಯಶೋಧಾ ನಿರೂಪಿಸಿದರು. ವಿ.ಬಿ. ಕರಬಸಗೌಡರ ವಂದಿಸಿದರು.

ರೇಣುಕಾ ಗೌಳಿಕೇರ, ಗಿರಿಜಾ ದಾಸರ, ಮಹಾದೇವಿ ಮೊಸಳಿ, ವಿನೋದಾ ಕೆಳಗಿನಮನಿ, ಪ್ರಿಯಾಂಕಾ ಲಮಾಣಿ, ರೇಖಾ ಮೂಗನೂರ, ರೇಣುಕಾ ಶಿಂಧೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೊಪ್ಪಳ ವಿವಿ ಹಂಗಾಮಿ ಕುಲಪತಿಗೆ ಅತಿಥಿ ಉಪನ್ಯಾಸಕರಿಂದ ಸತ್ಕಾರ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯಾಗಿ ನೇಮಕಗೊಂಡಿರುವ ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಟಿ.ವಿ. ವಾರುಣಿ ಅವರನ್ನು ಕೊಪ್ಪಳ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಸತ್ಕರಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಡಾ. ವೀರಣ್ಣ ಸಜ್ಜನರ್, ಡಾ. ಸಣ್ಣದೇವೇಂದ್ರಸ್ವಾಮಿ, ಡಾ. ತುಕಾರಾಂ, ಡಾ. ಶಿವಬಸಪ್ಪ ಮಸ್ಕಿ, ಡಾ. ಮಹಾಂತೇಶ ನೆಲಾಗಣಿ, ಬಸವರಾಜ ಕರುಗಲ್, ಜ್ಞಾನೇಶ್ವರ ಪತ್ತಾರ, ಸೋಮೇಶ್, ವಿಜಯಕುಮಾರ್ ಕೆ., ಡಾ. ಗಿರಿಜಾ ತುರಮುರಿ ಹಾಗೂ ಡಾ. ಸಾವಿತ್ರಿ ಕಣವಿ ಉಪಸ್ಥಿತರಿದ್ದರು.