ಬೆಂಗಳೂರು: ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿರುವ ಮಧ್ಯೆಯೇ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರ್ಡಿಪಿಆರ್ ಇಂಜಿನಿಯರ್ಗಳ ನೇಮಕಾತಿ ಅಕ್ರಮ ಪ್ರಕರಣದ ಬಗ್ಗೆ ಹೊಸ ಆರೋಪಗಳನ್ನು ಮಾಡಿದ್ದು, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಒಂದೊಂದೇ ಪ್ರಶ್ನೆ ಎತ್ತಿದ್ದಾರೆ.
ಅಕ್ರಮವನ್ನು ಪ್ರಿಯಾಂಕ್ ಖರ್ಗೆ ಮಾಡಿದ್ದಾರೆ ಎಂದು ಹೇಳುವುದಿಲ್ಲ ಎಂದ ಕುಮಾರಸ್ವಾಮಿ, ಆರ್ಡಿಪಿಆರ್ ಅಧಿಕಾರಿಗಳು ಏನು ಮಾಡಿದ್ದರು, ಆ ಇಲಾಖೆಯ ಸಚಿವರು ಪ್ರಿಯಾಂಕ್ ಖರ್ಗೆ ಆಗಿರಲಿಲ್ಲವೇ ಎಂದು ಪ್ರಶ್ನಿಸಿದರು. ಪರೀಕ್ಷೆ ನಡೆಸುವುದು ಕೆಪಿಎಸ್ಸಿಯಾದರೂ ಆದೇಶ ಹೊರಡಿಸುವುದು ಸರ್ಕಾರ ಎಂದು ಪ್ರತಿಪಾದಿಸಿದ ಅವರು, ಸಚಿವರಿಗೆ ತಿಳಿಯದೇ 24 ಮಂದಿಗೆ ನೇಮಕಾತಿ ಪತ್ರ ಹೇಗೆ ನೀಡಲು ಸಾಧ್ಯ, ಆದೇಶ ಪತ್ರ ನೀಡಿದ್ದು ಅವರ ಇಲಾಖೆಯೇ ಅಲ್ಲವೇ, ಇದನ್ನು ಪತ್ತೆ ಹಚ್ಚಲು ಒಂದೂವರೆ ವರ್ಷ ಬೇಕೇ ಎಂದು ವಾಗ್ದಾಳಿ ನಡೆಸಿದರು.
ದೃಷ್ಟಿದೋಷ ಹೊಂದಿದ್ದ ವ್ಯಕ್ತಿಯೊಬ್ಬರು ಪರೀಕ್ಷೆ ಬರೆದು ತಹಶೀಲ್ದಾರ್ ಆಗಿದ್ದರೆಂದೂ, ಆ ಹುದ್ದೆಯನ್ನು ಸರ್ಕಾರ ರದ್ದುಗೊಳಿಸಿತ್ತೆಂದೂ, ಇದೇ ಸಂಬಂಧ ದೇವೇಗೌಡರು ಪತ್ರ ಬರೆದಿದ್ದರೆಂದೂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ತಮ್ಮ ಸಂಬಂಧಿಕರ ಬಗ್ಗೆ ನೋಡಿಕೊಳ್ಳಿ ಎಂದು ಆ ಪತ್ರದಲ್ಲಿ ಬರೆದಿರಲಿಲ್ಲ ಎಂದ ಅವರು, ಕೆಪಿಎಸ್ಸಿ ಮಾಜಿ ಅಧ್ಯಕ್ಷರನ್ನು ಜೈಲಿನಲ್ಲಿ ಭೇಟಿ ಮಾಡಿದ್ದು ನಿಜವೆಂದೂ,
ಆ ವೇಳೆ ಅವರು ಅಧ್ಯಕ್ಷ ಸ್ಥಾನದಲ್ಲಿ ಇರಲಿಲ್ಲವೆಂದೂ ಸ್ಪಷ್ಟಪಡಿಸಿದರು. ಆ ಅಧ್ಯಕ್ಷರ ಅವಧಿಯಲ್ಲಿ 13 ಸಾವಿರ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಾಗಿತ್ತೆಂದೂ, ಯಾವುದೇ ಭ್ರಷ್ಟಾಚಾರ ನಡೆದಿರಲಿಲ್ಲವೆಂದೂ ಪ್ರತಿಪಾದಿಸಿದ ಕುಮಾರಸ್ವಾಮಿ, ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಮನೆಗೆ ತೆರಳಿ ಮಾಜಿ ಅಧ್ಯಕ್ಷರ ಬಗ್ಗೆ ದ್ವೇಷ ಬೇಡ ಎಂದು ಹೇಳಿದ್ದಾಗಿ ತಿಳಿಸಿದರು. ಅಧ್ಯಕ್ಷರ ಆಯ್ಕೆ ಹೇಗಾಯಿತು ಎಂಬುದನ್ನು ತಮ್ಮ ತಂದೆಯವರಿಂದಲೇ ಕೇಳಿ ತಿಳಿದುಕೊಳ್ಳುವಂತೆ ಖರ್ಗೆ ಅವರಿಗೆ ಅವರು ತಿರುಗೇಟು ನೀಡಿದರು.
ಕೆಪಿಎಸ್ಸಿ ಸಂಸ್ಥೆ ಉತ್ತಮ ಉದ್ದೇಶದಿಂದ ಆರಂಭವಾಗಿತ್ತಾದರೂ, ಈಗ ಬೇರೆಯದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ರಾಜ್ಯ ಸರ್ಕಾರದಿಂದ ಕಾರ್ಯದರ್ಶಿ ಹಾಗೂ ಪರೀಕ್ಷೆ ನಡೆಸಲು ಕಂಟ್ರೋಲರ್ ನೇಮಕವಾಗುತ್ತಿದೆಯೆಂದೂ, ರೆಸಾರ್ಟ್ಗಳಲ್ಲಿ ಪರೀಕ್ಷೆ ಬರೆಸಲಾಗುತ್ತಿದೆಯೆಂದೂ ಆರೋಪಿಸಿದರು. ಈ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಅವರು ಮಾಜಿ ಕೆಪಿಎಸ್ಸಿ ಅಧ್ಯಕ್ಷರ ಜೈಲು ಭೇಟಿ ಹಾಗೂ 2011ರ ಕೆಪಿಎಸ್ಸಿ ಬ್ಯಾಚ್ ಕುರಿತು ಮಾತನಾಡಿದ್ದರೆಂದೂ, ಆ ಸಂದರ್ಭದಲ್ಲಿ ಸರ್ಕಾರ ತಡೆಹಿಡಿದ ಆದೇಶ ರದ್ದುಪಡಿಸಲು ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರೆಂದೂ, 362 ಪರೀಕ್ಷಾರ್ಥಿಗಳು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿ ಅದು ರಾಜ್ಯದಾದ್ಯಂತ ಸುದ್ದಿಯಾಗಿತ್ತೆಂದೂ ಅವರು ಸ್ಮರಿಸಿದರು.
ಆಹಾರ ಇಲಾಖೆಯಲ್ಲಿ ಜ್ಞಾನೇಂದ್ರ ಇದ್ದ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳ ಮಕ್ಕಳನ್ನು ಆಯ್ಕೆ ಮಾಡಲು ರೆಸಾರ್ಟ್ನಲ್ಲಿ ಪರೀಕ್ಷೆ ಬರೆಸಲಾಗಿತ್ತು ಎಂದು ಆರೋಪಿಸಿದ ಕುಮಾರಸ್ವಾಮಿ, ಇತ್ತೀಚೆಗೆ ನಡೆದ ಕೆಎಎಸ್ ಪರೀಕ್ಷೆ ಕುರಿತ ಸಿಐಡಿ ತನಿಖೆಯನ್ನು ನ್ಯಾಯಯುತವಾಗಿ ನಡೆಸಬೇಕೇ ಹೊರತು ತೋರಿಕೆಗೆ ಮುಚ್ಚಿಹಾಕಬಾರದು ಎಂದು ಒತ್ತಾಯಿಸಿದರು. 2011ರ ಕೆಎಎಸ್ ಪರೀಕ್ಷೆಯನ್ನು ಯಾವ ಆಧಾರದ ಮೇಲೆ ರದ್ದುಗೊಳಿಸಲಾಯಿತು, ಸಿಐಡಿ ತನಿಖಾ ವರದಿ ಹಾಗೂ ಮಧ್ಯಂತರ ವರದಿಯಲ್ಲಿ ಏನಿತ್ತು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದ ಅವರು, ಅಕ್ರಮ ನಡೆದಿದೆ ಎಂದು ತಾವು ಹೇಳುತ್ತಿಲ್ಲ, ಮಾಧ್ಯಮ ವರದಿಗಳೇ ಅದನ್ನು ಹೇಳುತ್ತಿವೆ ಎಂದರು.
ಪ್ರಿಯಾಂಕ್ ಖರ್ಗೆ ಭಾಗಿಯಾಗಿದ್ದಾರೋ ಇಲ್ಲವೋ ಎಂಬುದು ತಮಗೆ ಗೊತ್ತಿಲ್ಲವಾದರೂ, ಸಚಿವರಾಗಿ ಅವರ ಜವಾಬ್ದಾರಿ ಏನಿತ್ತು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ತಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದೂ, ಆದೇಶ ಪ್ರತಿ ನೀಡಿದ್ದು ಖರ್ಗೆ ಅವರ ಇಲಾಖೆಯೇ ಎಂದೂ ಸ್ಪಷ್ಟಪಡಿಸಿದರು. ಇಷ್ಟೆಲ್ಲಾ ಆದ ಮೇಲೂ ರಾಜೀನಾಮೆ ಕೇಳಬೇಕೋ ಬೇಡವೋ ಎಂದು ಪ್ರಶ್ನಿಸಿದ ಅವರು, ತಪ್ಪಾಗಿದೆ ಎಂಬ ಕಾರಣಕ್ಕೇ ಷರತ್ತುಬದ್ಧ ಆದೇಶ ನೀಡಲಾಗಿತ್ತಾದರೂ ಅದರ ತನಿಖೆ ಏಕೆ ನಡೆದಿಲ್ಲ ಎಂದು ಪ್ರಶ್ನಿಸಿದರು.