ಬೆಂಗಳೂರು: ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಮಧ್ಯಂತರ ಜೀವನಾಂಶದ ಪ್ರಮುಖ ಉದ್ದೇಶ ಸಂಗಾತಿಗೆ ಆರ್ಥಿಕ ಬೆಂಬಲ ಒದಗಿಸುವುದಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಪತ್ನಿ ಸಲ್ಲಿಸಿದ್ದ ಮಧ್ಯಂತರ ಜೀವನಾಂಶ ಅರ್ಜಿಯನ್ನು ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.
ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 24ರಡಿ ತಿಂಗಳಿಗೆ 50 ಸಾವಿರ ರೂ. ಮಧ್ಯಂತರ ಜೀವನಾಂಶ ಹಾಗೂ 1 ಲಕ್ಷ ರೂ. ಮೊಕದ್ದಮೆ ವೆಚ್ಚ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಮನ್ಮಧ ರಾವ್ ಅವರಿದ್ದ ಏಕಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ.
ಅರ್ಜಿದಾರರು ಅಂತಿಮವಾಗಿ ಪ್ರಕರಣದಲ್ಲಿ ಯಶಸ್ವಿಯಾಗುವುದಿಲ್ಲ ಎಂಬ ಕಾರಣ ಮಾತ್ರಕ್ಕೆ ಮಧ್ಯಂತರ ಜೀವನಾಂಶ ಮತ್ತು ಮೊಕದ್ದಮೆ ವೆಚ್ಚಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 24ರ ಉದ್ದೇಶ, ಆರ್ಥಿಕವಾಗಿ ಹಿಂದುಳಿದ ಸಂಗಾತಿಗೆ ಕಾನೂನು ಹೋರಾಟ ಮುಂದುವರಿಸಲು ಅಗತ್ಯ ನೆರವು ಒದಗಿಸುವುದಾಗಿದೆ. ಜೀವನ ನಿರ್ವಹಣೆ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಮಧ್ಯಂತರ ಜೀವನಾಂಶ ನೆರವಾಗಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮಧ್ಯಂತರ ಜೀವನಾಂಶದ ಮೊತ್ತ ನಿಗದಿಪಡಿಸಲು ಯಾವುದೇ ಕಟ್ಟುನಿಟ್ಟಿನ ಸೂತ್ರ ಇಲ್ಲ. ಮದುವೆಯ ಅವಧಿ, ದಂಪತಿಗಳ ಆರ್ಥಿಕ ಸ್ಥಿತಿ, ಆದಾಯ ಸಾಮರ್ಥ್ಯ, ಮಕ್ಕಳ ಜವಾಬ್ದಾರಿ, ಶಿಕ್ಷಣ ಹಾಗೂ ಇತರೆ ಪರಿಸ್ಥಿತಿಗಳನ್ನು ಪರಿಗಣಿಸಿ ನ್ಯಾಯಾಲಯ ತೀರ್ಮಾನ ಕೈಗೊಳ್ಳಬೇಕು ಎಂದು ಪೀಠ ತಿಳಿಸಿದೆ.
ಇದೇ ವೇಳೆ, ಕೌಟುಂಬಿಕ ನ್ಯಾಯಾಲಯ ತನ್ನ ವಿವೇಚನಾ ಅಧಿಕಾರವನ್ನು ನ್ಯಾಯಸಮ್ಮತವಾಗಿ ಬಳಸಬೇಕು. ಕಾಯಿದೆಯ ಉದ್ದೇಶ ಹಾಗೂ ವೈವಾಹಿಕ ಕಾನೂನಿನ ಮೂಲ ತತ್ವಗಳನ್ನು ಗಮನದಲ್ಲಿಟ್ಟುಕೊಂಡೇ ತೀರ್ಪು ನೀಡಬೇಕೆಂದು ಹೈಕೋರ್ಟ್ ಸೂಚಿಸಿದೆ.
ಹಾಲಿ ಪ್ರಕರಣದಲ್ಲಿ ಪತ್ನಿಯ ಅರ್ಜಿಯನ್ನು ತಿರಸ್ಕರಿಸಲು ಕೌಟುಂಬಿಕ ನ್ಯಾಯಾಲಯ ಸಮರ್ಪಕ ಕಾರಣಗಳನ್ನು ನೀಡಿಲ್ಲ ಎಂದು ಹೇಳಿದ ಹೈಕೋರ್ಟ್, ಪ್ರಕರಣವನ್ನು ಮರು ವಿಚಾರಣೆಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಹಿಂತಿರುಗಿಸಿದೆ. ಜೊತೆಗೆ, ದಂಪತಿಗಳು ಜೂನ್ 10ರಂದು ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಹಾಜರಾಗುವಂತೆ ನಿರ್ದೇಶನ ನೀಡಿದೆ.
ಇಬ್ಬರೂ ತಮ್ಮ ಆಸ್ತಿ ಹಾಗೂ ಹೊಣೆಗಾರಿಕೆಗಳ ವಿವರಗಳನ್ನು ಸಲ್ಲಿಸಬೇಕು. ಸಾಧ್ಯವಾದಷ್ಟು ಬೇಗ ಪ್ರಕರಣವನ್ನು ಇತ್ಯರ್ಥಗೊಳಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯಕ್ಕೆ ಸೂಚಿಸಲಾಗಿದೆ.
ಪ್ರಕರಣದ ಹಿನ್ನೆಲೆ ಕುರಿತು ಹೇಳುವುದಾದರೆ, ದಂಪತಿಗಳು ಕೇವಲ ಆರರಿಂದ ಏಳು ತಿಂಗಳುಗಳ ಕಾಲ ಮಾತ್ರ ಒಟ್ಟಿಗೆ ವಾಸಿಸಿದ್ದರು. ಈ ಕಾರಣದಿಂದ ಪತ್ನಿಗೆ ಮಧ್ಯಂತರ ಜೀವನಾಂಶ ಅಥವಾ ಮೊಕದ್ದಮೆ ವೆಚ್ಚಕ್ಕೆ ಅರ್ಹತೆ ಇಲ್ಲ ಎಂದು ಕೌಟುಂಬಿಕ ನ್ಯಾಯಾಲಯ 2025ರ ಸೆಪ್ಟೆಂಬರ್ 17ರಂದು ಅರ್ಜಿ ತಿರಸ್ಕರಿಸಿತ್ತು.
ಆದರೆ, ಪತ್ನಿ ತಾನು ಬಿಕಾಂ ಪದವಿ ಅಧ್ಯಯನ ಮಾಡುತ್ತಿದ್ದು ಪ್ರಸ್ತುತ ನಿರುದ್ಯೋಗಿಯಾಗಿದ್ದೇನೆ. ಪತಿ ದುಬೈನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು ತಿಂಗಳಿಗೆ ಸುಮಾರು 8 ಲಕ್ಷ ರೂ. ಆದಾಯ ಹೊಂದಿದ್ದಾರೆ ಎಂದು ಹೈಕೋರ್ಟ್ ಮುಂದೆ ವಾದಿಸಿದ್ದರು.