ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಹೊಂದಿಕೊಂಡಂತೆ ನಿರ್ಮಾಣವಾಗಲಿರುವ ಶ್ರೀ ದತ್ತ ಮಂಗಲ ಭವನ ಕಾಮಗಾರಿ ಯಶಸ್ವಿಯಾಗಲೆಂದು ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶನಿವಾರ ಅಘೋರ ಹೋಮ ಹಾಗೂ ಪೂರ್ಣಾಹುತಿ ನೆರವೇರಿಸಲಾಯಿತು.
ಹೋಮದ ಪೂರ್ಣಾಹುತಿ ಬಳಿಕ ಮಾತನಾಡಿದ ಅರ್ಚಕ ಶ್ರೀವಲ್ಲಭಭಟ್ಟ ಸದರಜೋಷಿ, ಯಾವುದೇ ದೇವಸ್ಥಾನದ ಜೀರ್ಣೋದ್ಧಾರ ಅಥವಾ ಧಾರ್ಮಿಕ ಕಟ್ಟಡ ನಿರ್ಮಾಣದಂತಹ ಕಾರ್ಯಗಳಿಗೆ ಮುನ್ನ ಅಘೋರ ಹೋಮ ನೆರವೇರಿಸುವುದು ಶಾಸ್ತ್ರಸಮ್ಮತವಾಗಿದೆ ಎಂದು ಹೇಳಿದರು.
ಶ್ರೀ ದತ್ತ ಮಂಗಲ ಭವನ ಸಮಿತಿಯ ಗೌರವಾಧ್ಯಕ್ಷ ಡಾ. ಜಿ.ಕೆ. ಕಾಳೆ ಮಾತನಾಡಿ, ಶ್ರೀ ಗುರುದತ್ತಾತ್ರೇಯರ ಪ್ರೇರಣೆಯಿಂದ ಮಂಗಲ ಭವನ ನಿರ್ಮಾಣದ ಸಂಕಲ್ಪ ಕೈಗೊಂಡಿದ್ದು, ಭಕ್ತರ ಸಹಕಾರದಿಂದ ಈ ಕಾರ್ಯ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಶ್ವನಾಥಭಟ್ಟ ವೈದ್ಯ, ಅರುಣ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ನಾಗೇಶಭಟ್ಟ ಗ್ರಾಮಪುರೋಹಿತ, ಪ್ರಶಾಂತ ಗ್ರಾಮಪುರೋಹಿತ, ಡಾ. ನಾಗರಾಜ ಗ್ರಾಮಪುರೋಹಿತ, ಶ್ರೀಪಾದಭಟ್ಟ ಜೋಷಿ, ಪ್ರಕಾಶ ಕುಲಕರ್ಣಿ, ಬಿ.ಎಲ್. ಕುಲಕರ್ಣಿ ಸೇರಿದಂತೆ ದತ್ತಭಕ್ತ ಮಂಡಳಿಯ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಶ್ರೀಪಾದ ಕುಲಕರ್ಣಿ ದಂಪತಿ ಪೂರ್ಣಾಹುತಿ ಅರ್ಪಿಸಿದರು.

