ಬೆಂಗಳೂರು: ನಟ ದರ್ಶನ್ ವಿರುದ್ಧ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಡೆಯುತ್ತಿರುವ ‘ಮಾಧ್ಯಮ ವಿಚಾರಣೆ’ ಬಗ್ಗೆ ಕರ್ನಾಟಕ ಹೈಕೋರ್ಟ್ ಕಠಿಣ ಆಕ್ಷೇಪ ವ್ಯಕ್ತಪಡಿಸಿದೆ. ಟಿವಿ ಚಾನೆಲ್ಗಳು ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳು ನ್ಯಾಯಾಲಯದ ಪ್ರಕ್ರಿಯೆಯನ್ನೇ ಸಾರ್ವಜನಿಕ ಪ್ರದರ್ಶನದಂತೆ ಪ್ರಸಾರ ಮಾಡುತ್ತಿರುವುದು ಗಂಭೀರ ಬೆಳವಣಿಗೆ ಎಂದು ಕೋರ್ಟ್ ಎಚ್ಚರಿಸಿದೆ.
“ಮಾಧ್ಯಮಗಳು ನ್ಯಾಯಾಲಯಗಳ ಪರ್ಯಾಯವಾಗಲು ಸಾಧ್ಯವಿಲ್ಲ. ನ್ಯಾಯಾಧೀಶರಂತೆ ವರ್ತಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸುವ ಹಕ್ಕು ಮಾಧ್ಯಮಗಳಿಗೆ ಇಲ್ಲ” ಎಂದು ಹೈಕೋರ್ಟ್ ಸ್ಪಷ್ಟ ಸಂದೇಶ ರವಾನಿಸಿದೆ.
ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠ, ಕೆಲ ವಾಹಿನಿಗಳು ನ್ಯಾಯಾಲಯದ ಕಲಾಪಗಳನ್ನು ಮರುಸೃಷ್ಟಿ ಮಾಡಿ, ಆರೋಪಿಗಳು ಹಾಗೂ ವಕೀಲರ ಮುಖಗಳನ್ನು ತೆರೆದೆಯೇ ತೋರಿಸುತ್ತಿರುವುದು ನ್ಯಾಯಯುತ ವಿಚಾರಣೆಯ ಹಕ್ಕಿಗೆ ಧಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ. “ಇದು ಬಾಕಿ ಇರುವ ಪ್ರಕರಣಗಳನ್ನು ಜನರ ಮನರಂಜನೆಗಾಗಿ ಪ್ರಸಾರ ಮಾಡುವಂತಾಗಿದೆ” ಎಂದು ಕೋರ್ಟ್ ಗಂಭೀರ ಟೀಕೆ ಮಾಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತು ಕೆಲ ಮಾಧ್ಯಮ ಸಂಸ್ಥೆಗಳು ತಡೆಯಾಜ್ಞೆ ಆದೇಶ ಮತ್ತು ಕಾರ್ಯಕ್ರಮ ಸಂಹಿತೆ ಉಲ್ಲಂಘಿಸಿ ವರದಿ ಮಾಡುತ್ತಿವೆ ಎಂದು ಆರೋಪಿಸಿ ನಟ ದರ್ಶನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮಾಧ್ಯಮಗಳು ಆಯ್ದ ಮಾಹಿತಿ ಸೋರಿಕೆ, ಊಹಾತ್ಮಕ ವಿಶ್ಲೇಷಣೆ ಮತ್ತು ಪರಿಶೀಲಿಸದ ಆರೋಪಗಳ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿತಗೊಳಿಸುತ್ತಿವೆ ಎಂದು ಅವರು ದೂರಿದ್ದರು.
ಈ ಅರ್ಜಿಯನ್ನು ಭಾಗಶಃ ಮಾನ್ಯಗೊಳಿಸಿರುವ ಹೈಕೋರ್ಟ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ದೂರುಗಳ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದೆ.
ನ್ಯಾಯಾಲಯದ ಪ್ರಕಾರ, ಈ ರೀತಿಯ ಪ್ರಸಾರಗಳು ಕೇಬಲ್ ಟೆಲಿವಿಷನ್ ನೆಟ್ವರ್ಕ್ ನಿಯಮಗಳು, 1994ರ ಕಾರ್ಯಕ್ರಮ ಸಂಹಿತೆಯ ನಿಯಮ 6 ಉಲ್ಲಂಘಿಸುವುದರ ಜೊತೆಗೆ ನ್ಯಾಯಾಂಗದ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವಂತಿವೆ. “ತಡೆಯಾಜ್ಞೆ ಇದ್ದರೂ ನಿರಂತರ ಪ್ರಸಾರ ಮಾಡುವುದು ನ್ಯಾಯಾಂಗದ ನಿರ್ಲಕ್ಷ್ಯ ತೋರಿಸುತ್ತದೆ. ಇದು ಪ್ರಾಥಮಿಕವಾಗಿ ನ್ಯಾಯಾಲಯದ ಅವಮಾನಕ್ಕೆ ಸಮಾನ” ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.