Home Blog

ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಪ್ರಾಯೋಜಿತ ಎಐ ವಿಶ್ವವಿದ್ಯಾಲಯ; ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (Artificial Intelligence–AI) ವಿಶ್ವವಿದ್ಯಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಕರ್ನಾಟಕವನ್ನು ‘ಎಐ-ನೇಟಿವ್’ ರಾಜ್ಯವನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ಈ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆದ ಗೂಗಲ್ ಐ/ಒ ಕನೆಕ್ಟ್ ಇಂಡಿಯಾ 2026 ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಆಡಳಿತ ಮತ್ತು ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಎಐ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವತ್ತ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಎಐ ಕ್ಷೇತ್ರದಲ್ಲಿ ಪ್ರತಿಭೆಗಳನ್ನು ಬೆಳೆಸುವುದು, ಸುಧಾರಿತ ಸಂಶೋಧನೆಗೆ ಉತ್ತೇಜನ ನೀಡುವುದು ಹಾಗೂ ಶಿಕ್ಷಣ ಸಂಸ್ಥೆಗಳು, ಉದ್ಯಮ ವಲಯ ಮತ್ತು ಸರ್ಕಾರದ ನಡುವೆ ಸಮನ್ವಯ ಸಾಧಿಸುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

ಎಐ ತಂತ್ರಜ್ಞಾನವನ್ನು ಶಿಕ್ಷಣ, ಆರೋಗ್ಯ, ಕೃಷಿ, ಸರ್ಕಾರಿ ಸೇವೆಗಳು ಹಾಗೂ ಸಣ್ಣ ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸುವ ಮೂಲಕ ಜನಜೀವನದಲ್ಲಿ ಮಹತ್ವದ ಬದಲಾವಣೆ ತರಲು ಸರ್ಕಾರ ಯೋಜನೆ ರೂಪಿಸಿದೆ. ಎಐ ಆಧಾರಿತ ಬೋಧನಾ ವಿಧಾನಗಳಿಂದ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವುದು, ರೋಗಗಳ ಮುಂಚಿತ ಪತ್ತೆ ಹಾಗೂ ಉತ್ತಮ ವೈದ್ಯಕೀಯ ಸೇವೆಗಳನ್ನು ಒದಗಿಸುವುದು, ರೈತರಿಗೆ ಎಐ ಆಧಾರಿತ ಸಲಹಾ ಸೇವೆಗಳನ್ನು ನೀಡುವುದು ಮತ್ತು ಸರ್ಕಾರಿ ಸೇವೆಗಳನ್ನು ಇನ್ನಷ್ಟು ವೇಗವಾಗಿ ಹಾಗೂ ಪಾರದರ್ಶಕವಾಗಿ ಜನರಿಗೆ ತಲುಪಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಎಐ ಆಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸಿಕೊಳ್ಳಲು ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

“ಭಾರತದ ನಾವೀನ್ಯತೆಯ ರಾಜಧಾನಿ ಮತ್ತು ವಿಶ್ವದ ಪ್ರಮುಖ ತಂತ್ರಜ್ಞಾನ ಕೇಂದ್ರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಗೂಗಲ್ ಐ/ಒ ಕನೆಕ್ಟ್ ಇಂಡಿಯಾ 2026 ಆಯೋಜನೆಯಾಗಿರುವುದು ಹೆಮ್ಮೆಯ ಸಂಗತಿ. ತಂತ್ರಜ್ಞಾನವು ಇಲ್ಲಿ ಕೇವಲ ಉದ್ಯಮವಲ್ಲ, ಜನರ ದೈನಂದಿನ ಬದುಕಿನ ಭಾಗವಾಗಿದೆ” ಎಂದು ಅವರು ಹೇಳಿದರು.

ಪ್ರತಿ ಪೀಳಿಗೆಗೂ ಮಾನವ ನಾಗರಿಕತೆಯ ದಿಕ್ಕನ್ನೇ ಬದಲಿಸುವ ತಂತ್ರಜ್ಞಾನವೊಂದು ದೊರೆಯುತ್ತದೆ. ಸ್ಟೀಮ್ ಎಂಜಿನ್ ಕೈಗಾರಿಕಾ ಕ್ರಾಂತಿಗೆ ಕಾರಣವಾಯಿತು, ವಿದ್ಯುತ್ ನಗರಗಳನ್ನು ರೂಪಿಸಿತು, ಇಂಟರ್‌ನೆಟ್ ಜಗತ್ತನ್ನು ಸಂಪರ್ಕಿಸಿತು, ಮೊಬೈಲ್ ತಂತ್ರಜ್ಞಾನ ಎಲ್ಲವನ್ನೂ ಕೈಗೆಟುಕುವಂತೆ ಮಾಡಿತು. ಈಗ ಕೃತಕ ಬುದ್ಧಿಮತ್ತೆ ಮಾನವ ಸಾಮರ್ಥ್ಯವನ್ನು ಹೊಸ ಹಂತಕ್ಕೆ ಕೊಂಡೊಯ್ಯುವ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.

ಶಾಪಿಂಗ್ ವೇಳೆ ಗ್ರಿಲ್‌ನಿಂದ ಬಿದ್ದ 4 ವರ್ಷದ ಬಾಲಕಿ: ಸ್ಥಿತಿ ಗಂಭೀರ

ಚಿಕ್ಕಬಳ್ಳಾಪುರ: ಪೋಷಕರೊಂದಿಗೆ ಬಟ್ಟೆ ಖರೀದಿಸಲು ಬಂದಿದ್ದ ನಾಲ್ಕು ವರ್ಷದ ಬಾಲಕಿ ಆಟವಾಡುವ ವೇಳೆ ಅಂಗಡಿಯ ಗ್ರಿಲ್‌ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಪಿಳ್ಳಪ್ಪ ಕಾಂಪ್ಲೆಕ್ಸ್‌ನಲ್ಲಿ ನಡೆದಿದೆ. ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ಬಳಿಕ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಗೊಲ್ಲರದೊಡ್ಡಿ ಗ್ರಾಮದ ನಾರಾಯಣಸ್ವಾಮಿ ಹಾಗೂ ಮಧು ದಂಪತಿಯ ಪುತ್ರಿ ಗಗನ ಸಿಂಧು ಈ ದುರ್ಘಟನೆಗೆ ಒಳಗಾಗಿದ್ದಾಳೆ. ಪೋಷಕರು ಖರೀದಿಯಲ್ಲಿ ನಿರತರಾಗಿದ್ದ ವೇಳೆ ಬಾಲಕಿ ಗ್ರಿಲ್ ಏರಿ ಆಟವಾಡುತ್ತಿದ್ದಳು.

ತಾಯಿ ಹಲವು ಬಾರಿ ಮಗುವನ್ನು ಗ್ರಿಲ್‌ನಿಂದ ದೂರ ಕರೆದುಕೊಂಡು ಬಂದಿದ್ದರೂ, ಬಾಲಕಿ ಮತ್ತೆ ಅಲ್ಲಿಗೆ ತೆರಳಿ ಆಟವಾಡಲು ಮುಂದಾಗಿದ್ದಳು. ಇದೇ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾಳೆ.

ತಕ್ಷಣವೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಅಂಗಡಿ ಮಾಲೀಕರ ಪ್ರಕಾರ, ಬಾಲಕಿ ಹಲವು ಬಾರಿ ಗ್ರಿಲ್ ಬಳಿ ಹೋಗುತ್ತಿದ್ದಳು. ತಾಯಿ ಕೂಡ ಪದೇಪದೆ ತಡೆದಿದ್ದರೂ ಕೊನೆಗೆ ಈ ಅವಘಡ ಸಂಭವಿಸಿದೆ. ಘಟನೆ ಬಳಿಕ ಕುಟುಂಬಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಜೈಲು ಗೋಡೆ ಹಾರಿ ಎಸ್ಕೇಪ್‌ ಆದ ಕೊಲೆ ಪ್ರಕರಣದ ಕೈದಿಗಳು; ಕಲಬುರಗಿಯಲ್ಲಿ ಹೈ ಅಲರ್ಟ್‌, ವಿಶೇಷ ತಂಡಗಳಿಂದ ಶೋಧ

0

ಕಲಬುರಗಿ: ರಾಜ್ಯದ ಅತಿ ಭದ್ರತಾ ಕಾರಾಗೃಹಗಳಲ್ಲಿ ಒಂದಾದ ಕಲಬುರಗಿ ಕೇಂದ್ರ ಕಾರಾಗೃಹದಿಂದ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮೂವರು ಸಜಾ ಕೈದಿಗಳು ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿದ್ದಾರೆ. ಮಸ್ತಾನ್, ಸಂತೋಷ್ ಹಾಗೂ ಸಾಗರ್ ಎಂಬ ಕೈದಿಗಳು ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಜೈಲಿನ 15ರಿಂದ 20 ಅಡಿ ಎತ್ತರದ ಕಾಂಪೌಂಡ್ ಗೋಡೆ ಹಾರಿ ತಪ್ಪಿಸಿಕೊಂಡಿದ್ದು, ಈ ಘಟನೆ ಕಾರಾಗೃಹ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತಾಗಿದೆ.

ಪರಾರಿಯಾಗುವ ಮುನ್ನ ಕೈದಿಗಳು ಬ್ಯಾರಕ್‌ನ ಕಬ್ಬಿಣದ ಕಂಬಿಗಳನ್ನು ಕತ್ತರಿಸಿ, ಟವೆಲ್ ಮತ್ತು ಹಾಸಿಗೆಯನ್ನು ಹಗ್ಗದಂತೆ ಬಳಸಿಕೊಂಡು ಗೋಡೆ ಏರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಜೈಲಿನ ಹೊರಭಾಗದಲ್ಲಿ ಕಾರೊಂದು ಮೊದಲೇ ಸಿದ್ಧವಾಗಿದ್ದ ಹಿನ್ನೆಲೆಯಲ್ಲಿ, ಇದು ಪೂರ್ವಯೋಜಿತ ಪರಾರಿಯಾಗಿರುವ ಶಂಕೆ ಬಲವಾಗಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರ ಪೊಲೀಸ್ ಆಯುಕ್ತ ಶರಣಪ್ಪ ನೇತೃತ್ವದಲ್ಲಿ ಅಧಿಕಾರಿಗಳು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾದ ಕೈದಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ರಾಜ್ಯಾದ್ಯಂತ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿ ಜೈಲಿನ ಭದ್ರತಾ ವೈಫಲ್ಯದ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಕೈದಿಗಳು ಇಷ್ಟೊಂದು ದೊಡ್ಡ ಮಟ್ಟದ ಸಿದ್ಧತೆ ನಡೆಸಿದರೂ ಜೈಲು ಸಿಬ್ಬಂದಿಗೆ ಮಾಹಿತಿ ಸಿಗದಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಆಂತರಿಕ ತನಿಖೆಯೂ ಆರಂಭವಾಗಿದೆ.

ಇದೇ ವೇಳೆ ಕಲಬುರಗಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, “ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸದ್ಯ ಇರಾನ್-ಅಮೆರಿಕ ಯುದ್ಧದಲ್ಲಿ ಬ್ಯುಸಿಯಾಗಿದ್ದಾರೆ. ಅದನ್ನು ಮುಗಿಸಿ ಇಲ್ಲಿಗೆ ಬರುತ್ತಾರೆ” ಎಂದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.

ಜುಲೈ 3ರಂದು ಅಫಜಲಪುರ ಪೊಲೀಸ್ ಠಾಣೆಯಿಂದ ಪೋಕ್ಸೋ ಪ್ರಕರಣದ ಆರೋಪಿ ಪೊಲೀಸರ ವಶದಿಂದಲೇ ಪರಾರಿಯಾಗಿದ್ದ ಘಟನೆ ಮಾಸುವ ಮುನ್ನವೇ ಇದೀಗ ಕೇಂದ್ರ ಕಾರಾಗೃಹದಿಂದ ಮೂವರು ಶಿಕ್ಷಿತ ಕೈದಿಗಳು ತಪ್ಪಿಸಿಕೊಂಡಿರುವುದು ಜಿಲ್ಲೆಯ ಕಾನೂನು-ಸುವ್ಯವಸ್ಥೆ ಹಾಗೂ ಭದ್ರತಾ ವ್ಯವಸ್ಥೆ ಬಗ್ಗೆ ಮತ್ತೊಮ್ಮೆ ಆತಂಕ ಹೆಚ್ಚಿಸಿದೆ.

ಸುಳ್ಳು ಆದಾಯ ಪ್ರಮಾಣಪತ್ರ ಆರೋಪ: KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪುತ್ರಿಗೆ ನೋಟಿಸ್

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿದ ಬೆನ್ನಲ್ಲೇ, ಅವರ ಪುತ್ರಿ ಸುಮಾ ಸಾಹುಕಾರ್ ಅವರಿಗೆ ವಿಧಾನಸೌಧ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.

ಕೆಪಿಎಸ್‌ಸಿ ಸಹಾಯಕ ಕಾರ್ಯದರ್ಶಿ ನೀಡಿದ ದೂರಿನ ಆಧಾರದ ಮೇಲೆ, ಸರ್ಕಾರಿ ಉದ್ಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ತಂದೆಯ ಪ್ರಭಾವ ಬಳಸಿ ಸುಳ್ಳು ಆದಾಯ ಹಾಗೂ ಜಾತಿ ಪ್ರಮಾಣಪತ್ರ ಸಲ್ಲಿಸಿರುವ ಆರೋಪದಡಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದ ತನಿಖೆಯ ಭಾಗವಾಗಿ ಸುಮಾ ಸಾಹುಕಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿಗೆ ಸುಮಾ ಸಾಹುಕಾರ್ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದರು. ಹಿಂದುಳಿದ ವರ್ಗಗಳ ಮೀಸಲಾತಿ ಹಾಗೂ ಶುಲ್ಕ ವಿನಾಯಿತಿ ಪಡೆಯುವ ಉದ್ದೇಶದಿಂದ, ತಮ್ಮ ಕುಟುಂಬದ ವಾರ್ಷಿಕ ಆದಾಯವನ್ನು ₹40,000 ಎಂದು ನಮೂದಿಸಿರುವ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

ನೇಮಕಾತಿ ಪ್ರಕ್ರಿಯೆಯ ದಾಖಲೆಗಳ ಪರಿಶೀಲನೆ ವೇಳೆ ಸಲ್ಲಿಸಲಾದ ಆದಾಯ ಪ್ರಮಾಣಪತ್ರ ಹಾಗೂ 3ಬಿ ಮೀಸಲಾತಿ ಪ್ರಮಾಣಪತ್ರದಲ್ಲಿ ವಾರ್ಷಿಕ ಆದಾಯ ₹40 ಸಾವಿರ ಎಂದು ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ. ಆದರೆ, ಈ ಮಾಹಿತಿ ವಾಸ್ತವಕ್ಕೆ ವಿರುದ್ಧವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ವಿಧಾನಸೌಧ ಪೊಲೀಸರು, ದಾಖಲೆಗಳ ಪರಿಶೀಲನೆ ಹಾಗೂ ವಿಚಾರಣೆಗಾಗಿ ಸುಮಾ ಸಾಹುಕಾರ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ನಿಗದಿತ ದಿನಾಂಕಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

2014ರ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ಎಂಟು ವಾರಗಳಲ್ಲಿ ವಿಚಾರಣೆ ಪೂರ್ಣಗೊಳಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು: 2014ರಲ್ಲಿ ಬೆಂಗಳೂರಿನ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ಇನ್ನೂ ಪೂರ್ಣಗೊಳ್ಳದಿರುವುದಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದ ವಿಚಾರಣೆಯನ್ನು ಮುಂದಿನ ಎಂಟು ವಾರಗಳೊಳಗೆ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಗಡುವು ವಿಧಿಸಿದೆ.

ಸಂತ್ರಸ್ತ ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದ್ದು, ತ್ವರಿತ ವಿಚಾರಣೆಯ ಹಕ್ಕು ಸಂವಿಧಾನದ 21ನೇ ವಿಧಿಯ ಅವಿಭಾಜ್ಯ ಅಂಗವಾಗಿದೆ ಎಂದು ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಪೋಕ್ಸೊ ಪ್ರಕರಣಗಳು ಆದಷ್ಟು ಬೇಗ ಅಂತಿಮ ಹಂತ ತಲುಪಬೇಕು ಎಂದು ಕಾನೂನಿನ ಆಶಯವಾಗಿದೆ. ಇಂತಹ ಪ್ರಕರಣಗಳಲ್ಲಿ ಪದೇಪದೆ ವಿಚಾರಣೆಯನ್ನು ಮುಂದೂಡುವ ಪ್ರವೃತ್ತಿ ಖಂಡನೀಯವಾಗಿದ್ದು, ಉಭಯ ಪಕ್ಷಗಳು ವಿಚಾರಣಾ ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳಲು ಸಹಕರಿಸಬೇಕು ಎಂದು ಸೂಚಿಸಿದೆ.

ಪ್ರಕರಣವನ್ನು ಹಲವು ವರ್ಷಗಳ ಕಾಲ ವಿವಿಧ ನೆಪಗಳಲ್ಲಿ ಮುಂದೂಡಿರುವ ಕ್ರಮವನ್ನು ನ್ಯಾಯಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರು ಹಾಗೂ ಸೆಷನ್ಸ್ ನ್ಯಾಯಾಲಯ ಹೆಚ್ಚು ಜಾಗರೂಕತೆಯಿಂದ ನಡೆದುಕೊಳ್ಳಬೇಕಿತ್ತು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಕಲಂ 164ರ ಅಡಿಯಲ್ಲಿ ಬಾಲಕಿ ಮ್ಯಾಜಿಸ್ಟ್ರೇಟ್ ಎದುರು ದಾಖಲಿಸಿದ್ದ ಹೇಳಿಕೆಯ ಪ್ರತಿಯಲ್ಲಿ ಬಾಲಕಿ ಹಾಗೂ ಮ್ಯಾಜಿಸ್ಟ್ರೇಟ್ ಅವರ ಸಹಿ ಇಲ್ಲ ಎಂಬ ಕಾರಣ ನೀಡಿ, ಸಂಬಂಧಿತ ಮ್ಯಾಜಿಸ್ಟ್ರೇಟ್‌ಗೆ ಸಮನ್ಸ್ ಜಾರಿಗೊಳಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: 2014ರ ಜುಲೈ 14ರಂದು ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಜಿಮ್ನಾಸ್ಟಿಕ್ಸ್ ತರಗತಿ ಮುಗಿದ ಬಳಿಕ ಆರು ವರ್ಷದ ಬಾಲಕಿಯ ಮೇಲೆ ಇಬ್ಬರು ತರಬೇತುದಾರರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಜಿಮ್ನಾಸ್ಟಿಕ್ಸ್ ತರಬೇತುದಾರರನ್ನು ಬಂಧಿಸಿ, ಭಾರತೀಯ ದಂಡ ಸಂಹಿತೆಯ ಕಲಂ 376, 202 ಹಾಗೂ ಪೋಕ್ಸೊ ಕಾಯ್ದೆಯ ಕಲಂ 4, 6 ಮತ್ತು 21ರ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣ ದೇಶಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿದ್ದು, ಶಾಲಾ ಆವರಣಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕಡ್ಡಾಯ ಸಿಸಿಟಿವಿ ಅಳವಡಿಕೆ ಸೇರಿದಂತೆ ಹಲವು ಕಠಿಣ ಮಾರ್ಗಸೂಚಿಗಳನ್ನು ಸರ್ಕಾರ ಜಾರಿಗೆ ತರಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಆದಿ ಶಂಕರಾಚಾರ್ಯರ ಕುರಿತು ವಿವಾದಾತ್ಮಕ ಹೇಳಿಕೆ: ಕ್ಷಮೆಯಾಚಿಸಿದ್ದ ಹರಿಕಥೆ ಕಲಾವಿದೆ, ಶಿರೂರು ಮಠದಿಂದಲೂ ಸ್ಪಷ್ಟನೆ

0

ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಹರಿಕಥೆ ಕಾರ್ಯಕ್ರಮದಲ್ಲಿ ಆದಿ ಶಂಕರಾಚಾರ್ಯರ ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಹರಿಕಥೆ ಕಲಾವಿದೆ ವಿಡಿಯೊ ಮೂಲಕ ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ. ಈ ವಿವಾದಕ್ಕೆ ಉಡುಪಿ ಮಠ ಅಥವಾ ಶಿರೂರು ಮಠದ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಉಂಟುಮಾಡುವ ಉದ್ದೇಶ ತಮ್ಮದಾಗಿರಲಿಲ್ಲ ಎಂದು ಹೇಳಿದ್ದಾರೆ.

“ಯಾವುದೇ ಮಧ್ವ ಮಠದವರು ಈ ರೀತಿಯ ಹೇಳಿಕೆ ನೀಡುವಂತೆ ನಮಗೆ ಸೂಚಿಸಿಲ್ಲ. ಪುಸ್ತಕದಲ್ಲಿದ್ದ ಮಾಹಿತಿಯನ್ನು ಉಲ್ಲೇಖಿಸಿ ಹೇಳಿದ್ದೇವೆ. ನಮ್ಮ ಮಾತಿನಿಂದ ಬೇರೆ ಮತದವರು ಅಥವಾ ಮಠದವರಿಗೆ ನೋವಾಗಿದ್ದರೆ ಹೃತ್ಪೂರ್ವಕ ಕ್ಷಮೆ ಕೋರುತ್ತೇವೆ” ಎಂದು ಕಲಾವಿದೆ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ಕುರಿತು ಶಿರೂರು ಮಠವೂ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅಂಕಿತಾ ನಾಯಕ್ ಹಾಗೂ ಗೌರಿ ಪಾಂಡುರಂಗಿ ಅವರಿಗೆ ಭರತನಾಟ್ಯ ಕಾರ್ಯಕ್ರಮ ನಡೆಸಲು ಮಾತ್ರ ಅನುಮತಿ ನೀಡಲಾಗಿತ್ತು. ಕಾರ್ಯಕ್ರಮದ ಮಧ್ಯೆ ‘ಭಕ್ತ ಪ್ರಹ್ಲಾದ’ ಹರಿಕಥೆ ನಡೆಸಲಾಗಿದ್ದು, ಆ ವೇಳೆ ಆದಿ ಶಂಕರಾಚಾರ್ಯರ ಕುರಿತು ಅಕ್ಷೇಪಾರ್ಹ ಹೇಳಿಕೆ ನೀಡಿರುವುದು ಮಠದ ಗಮನಕ್ಕೆ ಬಂದಿದೆ ಎಂದು ತಿಳಿಸಿದೆ.

ಸಂಬಂಧಪಟ್ಟ ಇಬ್ಬರು ಕಲಾವಿದೆಯರಿಗೆ ತಕ್ಷಣ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಅವರು ಕ್ಷಮೆ ಕೋರಿದ್ದು, ನಡೆದ ಘಟನೆಯ ಬಗ್ಗೆ ಶಿರೂರು ಮಠ ವಿಷಾದ ವ್ಯಕ್ತಪಡಿಸಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ರಾಜಾಂಗಣದಲ್ಲಿ ನಡೆದ ಹರಿಕಥೆ ಕಾರ್ಯಕ್ರಮದಲ್ಲಿ ಆಚಾರ್ಯ ಮಾಧ್ವರ ಪ್ರಸಂಗ ವಿವರಿಸುವ ವೇಳೆ ಜಗದ್ಗುರು ಆದಿ ಶಂಕರಾಚಾರ್ಯರ ಕುರಿತು ಅವಹೇಳನಕಾರಿ ಉಲ್ಲೇಖ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೀಗ ಕಲಾವಿದೆಯ ಕ್ಷಮೆಯಾಚನೆ ಹಾಗೂ ಮಠದ ಸ್ಪಷ್ಟನೆಯೊಂದಿಗೆ ಪ್ರಕರಣ ಹೊಸ ತಿರುವು ಪಡೆದಿದೆ.

Gold-Silver Price Today: ಇಂದು ಮತ್ತೆ ಇಳಿಕೆ ಕಂಡ ಬಂಗಾರ! ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟು?

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಅಮೆರಿಕ–ಇರಾನ್ ಸಂಘರ್ಷ, ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆ ಹಾಗೂ ಅಮೆರಿಕದ ಸುಂಕ ನೀತಿಗಳ ಪರಿಣಾಮ ತೈಲ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಳಿಕೆ ದಾಖಲಾಗಿದೆ.

ಜುಲೈ 14, 2026ರಂದು ಚಿನ್ನ ಖರೀದಿದಾರರಿಗೆ ಕೊಂಚ ನೆಮ್ಮದಿ ಸಿಕ್ಕಿದ್ದು, 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

ಇಂದಿನ ದರದಂತೆ 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 11 ರೂಪಾಯಿ ಇಳಿಕೆಯಾಗಿ 14,280 ರೂಪಾಯಿಗೆ ತಲುಪಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 110 ರೂಪಾಯಿ ಇಳಿಕೆಯಾಗಿ 1,42,800 ರೂಪಾಯಿಯಾಗಿದೆ.

22 ಕ್ಯಾರೆಟ್ ಚಿನ್ನದ ದರವೂ ಇಳಿಕೆಯಾಗಿದ್ದು, 1 ಗ್ರಾಂಗೆ 10 ರೂಪಾಯಿ ಕಡಿಮೆಯಾಗಿ 13,090 ರೂಪಾಯಿಗೆ ತಲುಪಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 100 ರೂಪಾಯಿ ಇಳಿಕೆಯಾಗಿ 1,30,900 ರೂಪಾಯಿಯಾಗಿ ದಾಖಲಾಗಿದೆ.

ಇನ್ನು ಬೆಂಗಳೂರಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಪ್ರತಿ ಗ್ರಾಂ ದರ 14,280 ರೂಪಾಯಿಯಾಗಿದ್ದು, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಪ್ರತಿ ಗ್ರಾಂ ಬೆಳ್ಳಿ 235 ರೂಪಾಯಿಯಲ್ಲೇ ಸ್ಥಿರವಾಗಿದ್ದು, ಒಂದು ಕೆಜಿ ಬೆಳ್ಳಿಯ ಬೆಲೆ 2,35,000 ರೂಪಾಯಿಯಾಗಿ ಮುಂದುವರಿದಿದೆ.

ಜಾಗತಿಕ ಆರ್ಥಿಕ ಬೆಳವಣಿಗೆಗಳು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳ ನಡುವೆ ಚಿನ್ನದ ದರದಲ್ಲಿ ದಿನನಿತ್ಯ ಬದಲಾವಣೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ಆಭರಣ ಖರೀದಿಸಲು ಯೋಜಿಸುತ್ತಿರುವವರು ಇಂದಿನ ಇಳಿಕೆಯನ್ನು ಗಮನಿಸಿ ಖರೀದಿ ನಿರ್ಧಾರ ಕೈಗೊಳ್ಳಬಹುದಾಗಿದೆ.

‘ದೀಪಿಕಾ ನನ್ನನ್ನು ಪ್ರಪೋಸ್ ಮಾಡಿದ್ದರು’ ಎಂದಿದ್ದ ಮುಜಮ್ಮಿಲ್ ಇಬ್ರಾಹಿಂ: ವೈರಲ್ ವಿಡಿಯೋ ಬಗ್ಗೆ ನಟನ ಸ್ಪಷ್ಟನೆ

ಮುಂಬೈ: ನಟಿ ದೀಪಿಕಾ ಪಡುಕೋಣೆ ಕುರಿತು ನೀಡಿದ್ದ ಹಳೆಯ ಸಂದರ್ಶನದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿ ವಿವಾದ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ನಟ ಮುಜಮ್ಮಿಲ್ ಇಬ್ರಾಹಿಂ ಮೌನ ಮುರಿದಿದ್ದಾರೆ. ವೈರಲ್ ಆಗಿರುವ ವಿಡಿಯೊ ಸಂಪೂರ್ಣ ಸಂಭಾಷಣೆಯಲ್ಲ, ತಮ್ಮ ಹೇಳಿಕೆಯನ್ನು ತಪ್ಪಾಗಿ ಕತ್ತರಿಸಿ ಪ್ರಸಾರ ಮಾಡಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

2025ರಲ್ಲಿ ನೀಡಿದ್ದ ಸಂದರ್ಶನದಲ್ಲಿ, ದೀಪಿಕಾ ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ತಮಗೆ ಪ್ರಪೋಸ್ ಮಾಡಿದ್ದರು ಎಂದು ಮುಜಮ್ಮಿಲ್ ಹೇಳಿದ್ದರು. ಆಗ ದೀಪಿಕಾ ಮಾಡೆಲ್ ಆಗಿದ್ದು, ತಾವು ಉದಯೋನ್ಮುಖ ನಟರಾಗಿದ್ದ ಕಾರಣ ಆ ಪ್ರಸ್ತಾಪವನ್ನು ಸ್ವೀಕರಿಸಿರಲಿಲ್ಲ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಯ ತುಣುಕುಗಳು ಇತ್ತೀಚೆಗೆ ಮತ್ತೆ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಸ್ಪಷ್ಟನೆ ನೀಡಿರುವ ಮುಜಮ್ಮಿಲ್, ಎಡಿಟ್ ಮಾಡಲಾದ ಕ್ಲಿಪ್‌ಗಳು ತಮ್ಮ ಮಾತಿನ ನಿಜವಾದ ಅರ್ಥವನ್ನು ಬದಲಾಯಿಸಿವೆ ಎಂದು ಹೇಳಿದ್ದಾರೆ.

“ನಾನು ಮಾತನಾಡಿದ ಸಂದರ್ಭ, ನನ್ನ ಗೌರವದ ಭಾವನೆ ಹಾಗೂ ಹಿಂಜರಿಕೆ ಎಲ್ಲವೂ ಎಡಿಟಿಂಗ್‌ನಲ್ಲಿ ಕಣ್ಮರೆಯಾಗಿವೆ. ನನ್ನ ಜೀವನದಲ್ಲಿ ಭೇಟಿಯಾದ ಎಲ್ಲರ ಬಗ್ಗೆಯೂ ಗೌರವದಿಂದಲೇ ಮಾತನಾಡಿದ್ದೇನೆ. ಈಗಲೂ ಅದೇ ನಿಲುವು ಮುಂದುವರಿದಿದೆ” ಎಂದು ಅವರು ತಿಳಿಸಿದ್ದಾರೆ.

ಇದೀಗ ದೀಪಿಕಾ ಪಡುಕೋಣೆ ತಮ್ಮ ವೃತ್ತಿಜೀವನ ಹಾಗೂ ಕುಟುಂಬ ಜೀವನದಲ್ಲಿ ತೊಡಗಿಸಿಕೊಂಡಿದ್ದು, 2018ರಲ್ಲಿ ರಣವೀರ್ ಸಿಂಗ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ದುವಾ ಎಂಬ ಪುತ್ರಿ ಇದ್ದಾಳೆ.

ಭಾರತ ಹಿಂದೂ ರಾಷ್ಟ್ರವಾದರೂ ಮುಸ್ಲಿಮರು, ಕ್ರೈಸ್ತರಿಗೆ ಯಾವುದೇ ಅಪಾಯವಿಲ್ಲ: ಬಾಬಾ ರಾಮ್ ದೇವ್

0

ನವದೆಹಲಿ: ಭಾರತ ಹಿಂದೂ ರಾಷ್ಟ್ರವಾದರೂ ಮುಸ್ಲಿಮರು ಹಾಗೂ ಕ್ರೈಸ್ತರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದು ಯೋಗಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಹಾಗೂ ಎಐಎಂಐಎಂ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಾಬಾ ರಾಮ್‌ದೇವ್, “ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಕಂಡು ಯಾರೂ ಆತಂಕಪಡುವ ಅಗತ್ಯವಿಲ್ಲ. ಒಂದು ವೇಳೆ ಭಾರತ ಹಿಂದೂ ರಾಷ್ಟ್ರವಾದರೂ ಇಲ್ಲಿನ ಮುಸ್ಲಿಮರು ಮತ್ತು ಕ್ರೈಸ್ತರಿಗೆ ಯಾವುದೇ ಅಪಾಯವಿರುವುದಿಲ್ಲ” ಎಂದು ಹೇಳಿದರು.

“ಧರ್ಮಗಳು ಬೇರೆಬೇರೆಯಾಗಿರಬಹುದು. ಆದರೆ ನಮ್ಮ ಪೂರ್ವಜರು ಒಂದೇ. ನಮ್ಮೆಲ್ಲರ ಡಿಎನ್‌ಎ ಒಂದೇ ಆಗಿದೆ. ನಿಮ್ಮ ಪೂರ್ವಜರ ಸಂಪ್ರದಾಯಗಳನ್ನು ಅನುಸರಿಸಿ. ಗಡ್ಡ ಇಟ್ಟುಕೊಳ್ಳುವುದೋ ಅಥವಾ ಕ್ಷೌರ ಮಾಡಿಸಿಕೊಳ್ಳುವುದೋ, ಯಾವ ಉಡುಪು ಧರಿಸಬೇಕೋ ಅದು ನಿಮ್ಮ ವೈಯಕ್ತಿಕ ಆಯ್ಕೆ. ಆದರೆ ನಿಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಳ್ಳಿ” ಎಂದು ಅವರು ಅಭಿಪ್ರಾಯಪಟ್ಟರು.

ಬಾಬಾ ರಾಮ್‌ದೇವ್ ಅವರ ಈ ಹೇಳಿಕೆ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಪ್ರತಿಕ್ರಿಯಿಸಿ, “ಎಲ್ಲರೂ ಸನಾತನಿಗಳೇ ಆಗಿದ್ದರೆ ದೇಶದಲ್ಲಿ ವಿಭಜನೆಯ ವಾತಾವರಣ ಏಕೆ ನಿರ್ಮಿಸಲಾಗುತ್ತಿದೆ? ಎಲ್ಲರನ್ನೂ ಒಂದೇ ಎಂದು ಹೇಳುವವರು ಮುಸ್ಲಿಮರ ವಿರುದ್ಧ ದ್ವೇಷದ ಭಾವನೆ ಏಕೆ ಮೂಡಿಸುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.

ಎಐಎಂಐಎಂ ವಕ್ತಾರ ವಾರಿಸ್ ಪಠಾಣ್ ಕೂಡ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಭಾರತವು ಸಂವಿಧಾನದ ಆಶಯಗಳ ಪ್ರಕಾರವೇ ನಡೆಯುವ ದೇಶ. ಭಾರತ ಯಾವುದೇ ಕಾರಣಕ್ಕೂ ಹಿಂದೂ ರಾಷ್ಟ್ರವಾಗುವುದಿಲ್ಲ. ಮುಸ್ಲಿಮರು ಯಾರ ಬೆದರಿಕೆಗೂ ಹೆದರುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, “ನಾವು ಸಂವಿಧಾನದ ಚೌಕಟ್ಟಿನೊಳಗೆ ಬದುಕುತ್ತೇವೆ ಮತ್ತು ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇವೆ. ಸಂವಿಧಾನವನ್ನು ಗೌರವಿಸಿ, ಅದರ ಮಿತಿಯೊಳಗೆ ಮಾತನಾಡಬೇಕು. ಸಮಾಜದಲ್ಲಿ ದ್ವೇಷ ಹರಡುವಂತಹ ಹೇಳಿಕೆಗಳನ್ನು ನಿಲ್ಲಿಸಬೇಕು” ಎಂದು ವಾರಿಸ್ ಪಠಾಣ್ ಆಗ್ರಹಿಸಿದ್ದಾರೆ.

ಹಾಲಿವುಡ್‌ಗೆ ಮತ್ತೊಂದು ಆಘಾತ: ‘ಜುರಾಸಿಕ್ ಪಾರ್ಕ್’ ದಂತಕಥೆ ಸ್ಯಾಮ್ ನೀಲ್ ನಿಧನ

ಸಿಡ್ನಿ: ‘ಜುರಾಸಿಕ್ ಪಾರ್ಕ್’ ಸರಣಿಯ ಡಾ. ಅಲನ್ ಗ್ರಾಂಟ್ ಪಾತ್ರದ ಮೂಲಕ ಕೋಟ್ಯಂತರ ಸಿನಿಪ್ರಿಯರ ಮನ ಗೆದ್ದಿದ್ದ ನ್ಯೂಜಿಲೆಂಡ್ ನಟ ಸ್ಯಾಮ್ ನೀಲ್ 78ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸಿಡ್ನಿಯಲ್ಲಿ ಕುಟುಂಬದವರ ಸಮ್ಮುಖದಲ್ಲಿ ಅವರು ಕೊನೆಯುಸಿರೆಳೆದಿದ್ದು, ಅಧಿಕೃತ ಇನ್‌ಸ್ಟಾಗ್ರಾಮ್ ಪ್ರಕಟಣೆಯ ಮೂಲಕ ಕುಟುಂಬ ಈ ಸುದ್ದಿಯನ್ನು ಖಚಿತಪಡಿಸಿದೆ.

ಕುಟುಂಬದ ಹೇಳಿಕೆಯ ಪ್ರಕಾರ, ಸ್ಯಾಮ್ ನೀಲ್ ಅವರ ಸಾವು ಹಠಾತ್ ಹಾಗೂ ಅನಿರೀಕ್ಷಿತವಾಗಿತ್ತು. ಆದರೆ ಅವರು ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾಗಿದ್ದರು. ಅವರಿಗೆ ಚಿಕಿತ್ಸೆ ನೀಡಿದ ಸೇಂಟ್ ವಿನ್ಸೆಂಟ್ಸ್ ಪ್ರೈವೇಟ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಕುಟುಂಬ ಕೃತಜ್ಞತೆ ಸಲ್ಲಿಸಿದ್ದು, ತಮ್ಮ ಗೌಪ್ಯತೆಯನ್ನು ಗೌರವಿಸುವಂತೆ ಮನವಿ ಮಾಡಿದೆ.

ಅಪರೂಪದ ರಕ್ತದ ಕ್ಯಾನ್ಸರ್ ವಿರುದ್ಧ ಹಲವು ವರ್ಷ ಹೋರಾಡಿದ್ದ ಸ್ಯಾಮ್ ನೀಲ್, ಇಮ್ಯುನೊಥೆರಪಿ ಸೇರಿದಂತೆ ವಿಶೇಷ ಚಿಕಿತ್ಸೆಯ ಬಳಿಕ ಈ ವರ್ಷ ಕ್ಯಾನ್ಸರ್ ಮುಕ್ತರಾಗಿರುವುದಾಗಿ ತಿಳಿಸಿದ್ದರು. ಆದರೆ ಆರೋಗ್ಯ ಸುಧಾರಿಸಿದ್ದ ಕೆಲವೇ ತಿಂಗಳಲ್ಲಿ ಅವರು ನಿಧನರಾಗಿರುವುದು ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ.

ಐದು ದಶಕಗಳಿಗೂ ಅಧಿಕ ಕಾಲದ ಸಿನಿ ಪಯಣದಲ್ಲಿ ‘ಜುರಾಸಿಕ್ ಪಾರ್ಕ್’, ‘ದಿ ಪಿಯಾನೋ’, ‘ದಿ ಹಂಟ್ ಫಾರ್ ರೆಡ್ ಅಕ್ಟೋಬರ್’, ‘ಪೊಸೆಷನ್’, ‘ಪೀಕಿ ಬ್ಲೈಂಡರ್ಸ್’ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪಾರ ಗೌರವ ಗಳಿಸಿದ್ದರು.