Home Blog

ಜಿಬಿಎ ಚುನಾವಣೆ ಭವಿಷ್ಯ ಇಂದು ನಿರ್ಧಾರ? ಸುಪ್ರೀಂನಲ್ಲಿ ಅರ್ಜಿ ವಿಚಾರಣೆ!

ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.

ಈ ಹಿಂದೆ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಜೂನ್ ತಿಂಗಳೊಳಗೆ ಜಿಬಿಎ ಪಂಚ ಪಾಲಿಕೆಗಳಿಗೆ ಚುನಾವಣೆ ನಡೆಸಬೇಕು ಎಂದು ಆದೇಶಿಸಿತ್ತು. ಆದರೆ ರಾಜ್ಯದಲ್ಲಿ ಜನಗಣತಿ ಹಾಗೂ ಎಸ್‌ಐಆರ್ ಕಾರ್ಯಗಳು ನಡೆಯುತ್ತಿರುವುದರಿಂದ ಸರ್ಕಾರಿ ನೌಕರರು ಈಗಾಗಲೇ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಸುವುದು ಕಷ್ಟಕರವಾಗಿದೆ ಎಂದು ರಾಜ್ಯ ಸರ್ಕಾರ ವಾದಿಸಿದೆ.

ಅದೇ ಕಾರಣದಿಂದ ಚುನಾವಣೆ ಮುಂದೂಡಿಕೆ ಮಾಡುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಜೊತೆಗೆ ರಾಜ್ಯ ಚುನಾವಣಾ ಆಯೋಗವೂ ಚುನಾವಣೆಗೆ ಹೆಚ್ಚುವರಿ ಮೂರು ತಿಂಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದೆ.

ಈ ಕುರಿತು ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯಲಿದ್ದು, ಮಹತ್ವದ ತೀರ್ಪಿನ ನಿರೀಕ್ಷೆ ಇದೆ.

ಈ ವಿಚಾರ ರಾಜ್ಯ ರಾಜಕೀಯ ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಗಮನ ಸೆಳೆದಿದೆ.

ಶಾಲಾ ಆರಂಭಕ್ಕೂ ಮುನ್ನ ಪೋಷಕರಿಗೆ ಡಬಲ್ ಶಾಕ್: ನೋಟ್‌ಬುಕ್ ಬೆಲೆ 25% ಏರಿಕೆ!

ಬೆಂಗಳೂರು: ರಾಜ್ಯದಲ್ಲಿ ಶಾಲೆ–ಕಾಲೇಜುಗಳ ಆರಂಭಕ್ಕೂ ಮುನ್ನವೇ ಪೋಷಕರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಈಗಾಗಲೇ ಶಾಲಾ ಶುಲ್ಕ ಹಾಗೂ ಶಾಲಾ ವಾಹನಗಳ ಬಾಡಿಗೆ ದರ ಹೆಚ್ಚಳವಾಗಿರುವ ನಡುವೆಯೇ, ಇದೀಗ ನೋಟ್‌ಬುಕ್, ವರ್ಕ್‌ಬುಕ್ ಹಾಗೂ ಪೇಪರ್‌ಗಳ ಬೆಲೆಗಳು ಶೇಕಡ 20ರಿಂದ 25ರಷ್ಟು ಏರಿಕೆಯಾಗಿವೆ.

ಕಚ್ಚಾ ವಸ್ತುಗಳ ದರ ಏರಿಕೆ ಹಾಗೂ ಇಂಧನ ಬೆಲೆ ಹೆಚ್ಚಳವೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ಉದ್ಯಮಿಗಳು ತಿಳಿಸಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿನ ಸಂಘರ್ಷದ ಪರಿಣಾಮವಾಗಿ ಕಚ್ಚಾ ವಸ್ತುಗಳ ಪೂರೈಕೆ ಅಸ್ಥಿರಗೊಂಡಿದ್ದು, ಪೇಪರ್ ತಯಾರಿಕೆಗೆ ಅಗತ್ಯವಾದ ರಾಸಾಯನಿಕಗಳು ಮತ್ತು ಬಣ್ಣಗಳ ಲಭ್ಯತೆಯೂ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಇಂಧನ ದರ ಏರಿಕೆಯಿಂದ ನೋಟ್‌ಬುಕ್, ವರ್ಕ್‌ಬುಕ್ ಹಾಗೂ ಪೇಪರ್ ಉತ್ಪಾದನೆ ಮತ್ತು ಮುದ್ರಣ ವೆಚ್ಚವೂ ಹೆಚ್ಚಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಶಾಲಾ ಸಾಮಗ್ರಿಗಳ ಬೆಲೆಗಳು ಗಣನೀಯವಾಗಿ ಹೆಚ್ಚಳಗೊಂಡಿವೆ.

ಈ ಬೆಲೆ ಏರಿಕೆ ನೇರವಾಗಿ ಪೋಷಕರ ಮೇಲೆ ಪರಿಣಾಮ ಬೀರಿದ್ದು, ಶಾಲಾ ಆರಂಭದ ಹೊತ್ತಿನಲ್ಲಿ ಖರ್ಚಿನ ಭಾರ ಹೆಚ್ಚಾಗಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬಿಚ್ಚಾಲಿ ಗ್ರಾಮದಲ್ಲಿ ಜಾಗ ವಿವಾದ: ರಾಯರ ಜಪದ ಕಟ್ಟೆ ಕೋಣೆಗಳಿಗೆ ಬೀಗ ಜಡಿದ ಅಧಿಕಾರಿಗಳು!

ರಾಯಚೂರು: ತಾಲೂಕಿನ ಬಿಚ್ಚಾಲಿ ಗ್ರಾಮದಲ್ಲಿರುವ ರಾಘವೇಂದ್ರ ಸ್ವಾಮಿಗಳ ಏಕಶಿಲಾ ವೃಂದಾವನ ಬಳಿಯ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ರಾಯರ ಜಪದ ಕಟ್ಟೆ ಬಳಿಯ 6 ಕೋಣೆಗಳು ಹಾಗೂ ಗೋಶಾಲೆಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ.

ಪೊಲೀಸ್ ಭದ್ರತೆಯ ನಡುವೆ ಕಂದಾಯ ಇಲಾಖೆ ಅಧಿಕಾರಿಗಳು ಅರ್ಚಕರ ವಶದಲ್ಲಿದ್ದ ಕೋಣೆಗಳನ್ನು ವಶಕ್ಕೆ ಪಡೆದು ಬೀಗ ಹಾಕಿದ್ದಾರೆ. ಸರ್ವೆ ಸಂಖ್ಯೆ 35 ಹಾಗೂ 37ರಲ್ಲಿ ಇರುವ 2 ಎಕರೆ 33 ಗುಂಟೆ ಜಾಗದ ವಿಚಾರವಾಗಿ ಮಂತ್ರಾಲಯ ರಾಯರ ಮಠ, ಅರ್ಚಕರು ಹಾಗೂ ರೈತರ ನಡುವೆ ಹಲವು ದಿನಗಳಿಂದ ವಿವಾದ ಮುಂದುವರಿದಿತ್ತು.

ಈ ಜಾಗವನ್ನು ಸರ್ಕಾರ ಮಂತ್ರಾಲಯ ರಾಯರ ಮಠಕ್ಕೆ ಮಂಜೂರು ಮಾಡಿದ್ದು, ಇದನ್ನು ಪ್ರಶ್ನಿಸಿ ಜಪದ ಕಟ್ಟೆ ಬಿಚ್ಚಾಲಿ ಅಪ್ಪಣ್ಣಾಚಾರ್ಯ ಸೇವಾ ಟ್ರಸ್ಟ್ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು.

ನ್ಯಾಯಾಲಯದ ಸೂಚನೆಯಂತೆ ಅಧಿಕಾರಿಗಳು ಇದೇ ಏಪ್ರಿಲ್ 13ರಂದು ಸ್ಥಳದ ಸರ್ವೆ ಕಾರ್ಯ ನಡೆಸಿದ್ದರು. ಯಾವುದೇ ಮುನ್ಸೂಚನೆ ನೀಡದೆ ಸರ್ವೆ ಮಾಡಲಾಗಿದೆ ಎಂದು ಉಳುಮೆ ಮಾಡುತ್ತಿದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.

ಈಗ ಏಕಾಏಕಿ ಕೋಣೆಗಳಿಗೆ ಬೀಗ ಹಾಕಿರುವುದಕ್ಕೆ ಅರ್ಚಕರ ಕುಟುಂಬಸ್ಥರು ಕೂಡ ಆಕ್ರೋಶ ಹೊರಹಾಕಿದ್ದಾರೆ. ನ್ಯಾಯಾಲಯದ ಆದೇಶದಂತೆ ಜಾಗದ ಸರ್ವೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಯಚೂರು ಉಪವಿಭಾಗ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಹಾಗೂ ತಹಶೀಲ್ದಾರ್ ಸುರೇಶ್ ವರ್ಮಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಆಸ್ತಿಯನ್ನು ಮಂತ್ರಾಲಯ ಮಠದ ವಶಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ.

IPL 2026: ವೈಭವ್‌ ಸೂರ್ಯವಂಶಿ ಅಬ್ಬರ: ಲಕ್ನೋ ವಿರುದ್ಧ ರಾಜಸ್ಥಾನ್‌ಗೆ ರೋಚಕ ಜಯ!

ಜೈಪುರ: ಯುವ ಆಟಗಾರ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 220 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್‌ ರಾಯಲ್ಸ್‌ 19.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 225 ರನ್‌ ಗಳಿಸಿ ರೋಚಕ ಗೆಲುವು ಸಾಧಿಸಿತು.

ಈ ಗೆಲುವಿನೊಂದಿಗೆ ರಾಜಸ್ಥಾನ್‌ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದು, ಪ್ಲೇಆಫ್‌ ಪ್ರವೇಶಕ್ಕೆ ಮತ್ತೊಂದು ಹೆಜ್ಜೆ ದೂರದಲ್ಲಿದೆ. ಮುಂಬೈ ವಿರುದ್ಧದ ಕೊನೆಯ ಪಂದ್ಯದಲ್ಲಿ ಗೆದ್ದರೆ ಟಾಪ್‌-4 ಸ್ಥಾನ ಖಚಿತವಾಗಲಿದೆ. ಚೇಸಿಂಗ್‌ ಆರಂಭಿಸಿದ ರಾಜಸ್ಥಾನ್‌ಗೆ ಯಶಸ್ವಿ ಜೈಸ್ವಾಲ್ ವೇಗದ ಆರಂಭ ನೀಡಿದರು. 23 ಎಸೆತಗಳಲ್ಲಿ 43 ರನ್‌ ಸಿಡಿಸಿದ ಜೈಸ್ವಾಲ್‌ಗೆ ಸಾಥ್‌ ನೀಡಿದ ವೈಭವ್‌ ಸೂರ್ಯವಂಶಿ ಬೌಲರ್‌ಗಳ ಮೇಲೆ ಅಬ್ಬರಿಸಿದರು.

ವೈಭವ್‌ ಕೇವಲ 38 ಎಸೆತಗಳಲ್ಲಿ 10 ಸಿಕ್ಸ್‌ ಮತ್ತು 7 ಬೌಂಡರಿಗಳೊಂದಿಗೆ 93 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ ಆಡಿದರು. ಧ್ರುವ್ ಜುರೆಲ್ ಕೂಡ 38 ಎಸೆತಗಳಲ್ಲಿ 53 ರನ್‌ ಬಾರಿಸಿ ತಂಡದ ಗೆಲುವಿಗೆ ನೆರವಾದರು.

ಲಕ್ನೋ ಪರ ಆಕಾಶ್ ಸಿಂಗ್ ಹಾಗೂ ಮೊಯ್ಸಿನ್ ಖಾನ್ ತಲಾ ಒಂದು ವಿಕೆಟ್‌ ಪಡೆದರು. ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡದ ಪರ ಮಿಚೆಲ್ ಮಾರ್ಷ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಸಿಕ್ಸರ್‌, ಬೌಂಡರಿಗಳ ಮಳೆ ಸುರಿಸಿದ ಮಾರ್ಷ್‌ ಶತಕದ ಸನಿಹದಲ್ಲಿ ಔಟಾದರು.

ಜೋಶ್ ಇಂಗ್ಲೀಸ್ ಜೊತೆಗೂಡಿ ಮಾರ್ಷ್‌ ಕೇವಲ 50 ಎಸೆತಗಳಲ್ಲಿ 109 ರನ್‌ಗಳ ಜೊತೆಯಾಟ ಕಟ್ಟಿದರು. ಮಾರ್ಷ್‌ 57 ಎಸೆತಗಳಲ್ಲಿ 96 ರನ್‌ ಗಳಿಸಿದರೆ, ಜೋಶ್‌ ಇಂಗ್ಲೀಸ್‌ 29 ಎಸೆತಗಳಲ್ಲಿ 60 ರನ್‌ ಚಚ್ಚಿದರು. ನಾಯಕ ರಿಷಬ್ ಪಂತ್ 23 ಎಸೆತಗಳಲ್ಲಿ 35 ರನ್‌ಗಳಿಸಿದರು.

ರಾಜಸ್ಥಾನ್‌ ಪರ ಯಶ್‌ ರಾಜ್‌ 2 ವಿಕೆಟ್‌ ಪಡೆದರೆ, ಜೋಫ್ರಾ ಆರ್ಚರ್ ಒಂದು ವಿಕೆಟ್‌ ಕಬಳಿಸಿದರು.

ಇಂದು ರಾಜ್ಯಾದ್ಯಂತ ಮೆಡಿಕಲ್ ಶಾಪ್ ಬಂದ್: 26 ಸಾವಿರಕ್ಕೂ ಅಧಿಕ ಔಷಧಿ ಅಂಗಡಿಗಳು ಕ್ಲೋಸ್!

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಇಂದು ಮೆಡಿಕಲ್ ಶಾಪ್‌ಗಳು ಬಂದ್ ಆಗಲಿವೆ.

ಆನ್‌ಲೈನ್ ಇ-ಫಾರ್ಮಸಿ ಹಾಗೂ ಕ್ವಿಕ್ ಕಾಮರ್ಸ್ ಆ್ಯಪ್‌ಗಳ ಮೂಲಕ ಕಾನೂನು ಬಾಹಿರವಾಗಿ ಔಷಧಿ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಪ್ರತಿಭಟನೆಗೆ ಕರೆ ನೀಡಿದೆ.

ಈ ಬಂದ್‌ಗೆ ಕರ್ನಾಟಕ ರಾಜ್ಯ ಔಷಧಿ ಮಾರಾಟ ವ್ಯಾಪಾರಿಗಳ ಸಂಘವೂ ಬೆಂಬಲ ನೀಡಿದ್ದು, ರಾಜ್ಯಾದ್ಯಂತ 26 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್‌ಗಳು ಒಂದು ದಿನದ ಮಟ್ಟಿಗೆ ಸಂಪೂರ್ಣ ಬಂದ್ ಆಗಲಿವೆ. ಬೆಂಗಳೂರು ಒಂದರಲ್ಲೇ ಮೂರು ಸಾವಿರಕ್ಕೂ ಹೆಚ್ಚು ಮೆಡಿಕಲ್ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಅಂಗಡಿಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

ಇನ್ನೊಂದೆಡೆ, ಬೆಂಗಳೂರು ಫಾರ್ಮ್ ರಿಟೈಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಫೋರಂನಿಂದ ಹೊರಬಂದ ಕೆಲ ಸದಸ್ಯರು ಪ್ರತ್ಯೇಕ ಸಂಘ ರಚಿಸಿ ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಹೆಚ್ಚಿನ ಮೆಡಿಕಲ್ ಮಾಲೀಕರು ಬಂದ್‌ಗೆ ಬೆಂಬಲ ನೀಡಿ ಅಂಗಡಿಗಳನ್ನು ಮುಚ್ಚಿದ್ದಾರೆ.

ಬಂದ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲವು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಒಳಗೆ ಕಾರ್ಯನಿರ್ವಹಿಸುವ ಫಾರ್ಮಸಿಗಳು ಎಂದಿನಂತೆ ತೆರೆದಿರಲಿವೆ. ತುರ್ತು ಸಂದರ್ಭಗಳಲ್ಲಿ ಅಗತ್ಯ ಔಷಧಿ ಪೂರೈಕೆಗಾಗಿ ಆಯ್ದ ಕೇಂದ್ರಗಳಲ್ಲಿ ಎಮರ್ಜೆನ್ಸಿ ಕೌಂಟರ್‌ಗಳನ್ನು ತೆರೆಯಲಾಗುತ್ತದೆ ಎಂದು ಸಂಘಟನೆ ತಿಳಿಸಿದೆ.

ತುರ್ತು ವೈದ್ಯಕೀಯ ಅವಶ್ಯಕತೆ ಇರುವವರು ಆಸ್ಪತ್ರೆಗಳ ಫಾರ್ಮಸಿಗಳ ಸೇವೆಯನ್ನು ಪಡೆಯಬಹುದಾಗಿದೆ.

ಮೆಟ್ರೋ ಪಿಲ್ಲರ್‌ಗಳ ಮೇಲೆ ಜಾಹೀರಾತು: ಬಿಎಂಆರ್‌ಸಿಎಲ್ ಯೋಜನೆಗೆ ಸಾರ್ವಜನಿಕರ ಆಕ್ರೋಶ!

ಬೆಂಗಳೂರು: ಬೆಂಗಳೂರಿನ ಲೈಫ್‌ಲೈನ್ ಎಂದೇ ಖ್ಯಾತಿಯಾಗಿರುವ ನಮ್ಮ ಮೆಟ್ರೋ ಇನ್ಮುಂದೆ ಕೇವಲ ಸಾರಿಗೆ ಸೇವೆಗೆ ಸೀಮಿತವಾಗದೆ, ವಾಣಿಜ್ಯ ಆದಾಯ ಹೆಚ್ಚಿಸುವತ್ತ ದೊಡ್ಡ ಹೆಜ್ಜೆ ಇಡುತ್ತಿದೆ.

ಟಿಕೆಟ್ ಆದಾಯದ ಜೊತೆಗೆ ನಾನ್-ಫೇರ್ ಬಾಕ್ಸ್ ರೆವಿನ್ಯೂ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮವು ಮೆಟ್ರೋ ಪಿಲ್ಲರ್‌ಗಳನ್ನು ವಾಣಿಜ್ಯ ಮತ್ತು ಡಿಜಿಟಲ್ ಜಾಹೀರಾತುಗಳಿಗೆ ಬಳಸಲು ಮುಂದಾಗಿದೆ. ನಗರದ ವಿವಿಧ ಭಾಗಗಳಲ್ಲಿರುವ ಮೆಟ್ರೋ ಪಿಲ್ಲರ್‌ಗಳ ಮೇಲೆ ಜಾಹೀರಾತು ಅಳವಡಿಸಲು ಬಿಎಂಆರ್‌ಸಿಎಲ್ ಮೆಗಾ ಟೆಂಡರ್ ಆಹ್ವಾನಿಸಿದ್ದು, ಈ ನಿರ್ಧಾರ ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ನಗರದ ಸೌಂದರ್ಯ ಹಾಳಾಗುವುದರ ಜೊತೆಗೆ ವಾಹನ ಸವಾರರ ಗಮನ ಭಂಗವಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಸಾರ್ವಜನಿಕರಾದ ವೀರೇಶ್, “ಮೆಟ್ರೋ ಸಂಸ್ಥೆ ಹಣ ಗಳಿಸುವ ಉದ್ದೇಶದಿಂದ ನಗರದ ಸೌಂದರ್ಯ ಹಾಳು ಮಾಡಲು ಹೊರಟಿದೆ. ವಿಶೇಷವಾಗಿ ರಾತ್ರಿ ವೇಳೆ ಪ್ರಕಾಶಮಾನವಾದ ಡಿಜಿಟಲ್ ಬೋರ್ಡ್‌ಗಳಿಂದ ವಾಹನ ಚಾಲನೆ ಕಷ್ಟವಾಗಬಹುದು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದರೆ ಈ ಆರೋಪಗಳನ್ನು ಬಿಎಂಆರ್‌ಸಿಎಲ್ ತಳ್ಳಿಹಾಕಿದೆ. ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶ್ವಂತ್ ಚೌಹಾಣ್ ಮಾತನಾಡಿ, “ವಿಶ್ವದರ್ಜೆಯ ಸಂಘಟಿತ ಜಾಹೀರಾತು ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸ್ಥಳೀಯ ಸಂಸ್ಥೆಗಳ ನಿಯಮಾವಳಿಗಳ ಅನ್ವಯವೇ ಬೋರ್ಡ್‌ಗಳನ್ನು ಅಳವಡಿಸಲಾಗುತ್ತದೆ” ಎಂದು ಸ್ಪಷ್ಟನೆ ನೀಡಿದ್ದಾರೆ.

ಆರ್ಥಿಕವಾಗಿ ಸ್ವಾವಲಂಬಿಯಾಗಲು ಮೆಟ್ರೋ ಸಂಸ್ಥೆ ಇಟ್ಟಿರುವ ಈ ಹೆಜ್ಜೆ ಒಂದು ಕಡೆ ಮೆಚ್ಚುಗೆಗೆ ಪಾತ್ರವಾಗುತ್ತಿದ್ದರೆ, ಮತ್ತೊಂದೆಡೆ ರಸ್ತೆ ಸುರಕ್ಷತೆ ಮತ್ತು ನಗರದ ಸೌಂದರ್ಯ ಕಾಪಾಡುವ ಸವಾಲು ಕೂಡ ಎದುರಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ರಾಜ್ಯದಲ್ಲಿ ಮಳೆ ಅಬ್ಬರ: ಈ ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ!

ಬೆಂಗಳೂರು:- ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದೂ ಮಳೆಯ ಆರ್ಭಟ ಮುಂದುವರಿಯಲಿದ್ದು, ಹವಾಮಾನ ಇಲಾಖೆ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಿಸಿದೆ.

ಉತ್ತರ ಮತ್ತು ದಕ್ಷಿಣ ಒಳನಾಡಿನ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಗಂಟೆಗೆ 50ರಿಂದ 60 ಕಿಲೋಮೀಟರ್ ವೇಗದ ಬಲವಾದ ಗಾಳಿಯೊಂದಿಗೆ ಭಾರೀ ಮಳೆ ಹಾಗೂ ಆಲಿಕಲ್ಲು ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 40ರಿಂದ 50 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಇದೇ ವೇಳೆ ಕರಾವಳಿ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಮತ್ತು ಕಲಬುರಗಿ ಜಿಲ್ಲೆಗಳ ಕೆಲ ಭಾಗಗಳಲ್ಲೂ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತೀವ್ರ ಹವಾಮಾನದ ಪರಿಣಾಮವಾಗಿ ತಗ್ಗು ಪ್ರದೇಶಗಳಲ್ಲಿ ಜಲಾವೃತ, ವಾಹನ ಸಂಚಾರ ದಟ್ಟಣೆ ಹಾಗೂ ವಿದ್ಯುತ್ ವ್ಯತ್ಯಯ ಸಂಭವಿಸುವ ಸಾಧ್ಯತೆ ಇದೆ. ಬಲವಾದ ಗಾಳಿಯಿಂದ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳುವ ಅಪಾಯವೂ ಇದೆ.

ಸಾರ್ವಜನಿಕರು ಮಳೆ ಮತ್ತು ಬಿರುಗಾಳಿಯ ಸಮಯದಲ್ಲಿ ಅನಗತ್ಯವಾಗಿ ಹೊರಗೆ ತೆರಳದಂತೆ, ಮರಗಳ ಕೆಳಗೆ ಆಶ್ರಯ ಪಡೆಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತೆರೆದ ಪ್ರದೇಶಗಳಲ್ಲಿ ಸಂಗ್ರಹಿಸಿಟ್ಟಿರುವ ಕಟಾವು ಮಾಡಿದ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ರೈತರು ತಮ್ಮ ಬೆಳೆಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿಕೊಳ್ಳುವಂತೆ ಸೂಚಿಸಲಾಗಿದೆ.

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ – ಹಲವೆಡೆ ಅವಾಂತರ, ಮರಗಳು ಧರೆಗುರುಳಿ ಹಾನಿ!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಗುಡುಗು ಸಹಿತ ಬಿರುಗಾಳಿ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಅವಾಂತರಗಳು ಸಂಭವಿಸಿವೆ.

ಬೀದರ್ ಜಿಲ್ಲೆಯ ಅಣದೂರು ವಾಡಿ ಗ್ರಾಮದ ಬಳಿ ಇರುವ ಮಾಂಜ್ರಾ ವಾಟರ್ ಪಾರ್ಕ್‌ನಲ್ಲಿ ಗೋಡೆ ಕುಸಿದು ಬಿದ್ದು ಅನಾಹುತ ಸಂಭವಿಸಿದ್ದು, ಮಕ್ಕಳು ಹಾಗೂ ಮಹಿಳೆಯರು ಸೇರಿ 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅದೇ ಜಿಲ್ಲೆಯ ಕಮಠಾಣ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮೂವರು ಮಕ್ಕಳು ಗಾಯಗೊಂಡಿದ್ದಾರೆ.

ಗದಗ ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ಚವಡಿ ಕೂಟ ಬಳಿ ಮನೆಯ ಮೇಲಿದ್ದ ಸಿಂಟೆಕ್ಸ್ ಟ್ಯಾಂಕ್ ಹಾರಿ ಬಂದು ವಿದ್ಯುತ್ ತಂತಿಗೆ ತಗುಲಿ ನೇತಾಡಿದ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಪಿಲ್ಲಿಗುಂಟಾ ತಾಂಡಾದಲ್ಲಿ ಸಿಡಿಲು ಬಡಿದು ಸುಮಾರು 25 ಮೇಕೆಗಳು ಸಾವನ್ನಪ್ಪಿವೆ.

ಚಿಕ್ಕೋಡಿ ಉಪ ವಿಭಾಗದಲ್ಲಿ ಸುರಿದ ಗಾಳಿ ಮಳೆಗೆ ಕಟಕಭಾವಿ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಹಾರಿಹೋಗಿದೆ. ಬಳ್ಳಾರಿ ನಗರದಲ್ಲೂ ಮಳೆ ಅವಾಂತರ ಉಂಟಾಗಿದ್ದು, ಹಲವು ಕಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಬೃಹತ್ ಮರ ಬಿದ್ದು ಎರಡು ಕಾರುಗಳು ಜಖಂ ಆಗಿವೆ. ಕನಕ ದುರ್ಗಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆ ಹಾಗೂ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಚಿತ್ರದುರ್ಗದಲ್ಲೂ ಮಳೆಯಿಂದ ಮುಖ್ಯರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ.

ಇನ್ನು ರಾಜಧಾನಿ ಬೆಂಗಳೂರಿನ ಸದಾಶಿವನಗರದಲ್ಲಿ ಗಾಳಿ ಮಳೆಗೆ ಬೃಹತ್ ಮರ ಕಾರಿನ ಮೇಲೆ ಉರುಳಿದ ಘಟನೆ ವರದಿಯಾಗಿದೆ. ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಚ್ಚರಿಕೆಯಿಂದ ಇರಲು ಸೂಚಿಸಿದೆ.

ದಸರಾದಿಂದ ಕಂಜನ್ ಆನೆಗೆ ಕೋಕ್: ಅರಣ್ಯ ಇಲಾಖೆಯ ಮಹತ್ವದ ನಿರ್ಧಾರ!

ಕೊಡಗು: ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ನಡೆದ ದಾರುಣ ಘಟನೆಯ ಬಳಿಕ, ದಸರಾ ಮಹೋತ್ಸವದಿಂದ ಕಂಜನ್ ಆನೆಯನ್ನು ಹೊರಗಿಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಮಾರ್ತಾಂಡ ಆನೆಯ ಮೇಲೆ ದಾಳಿ ಮಾಡಿದ ಕಂಜನ್ ಆನೆಯನ್ನು ಇನ್ನು ಮುಂದೆ ದಸರಾ ಜಂಬೂಸವಾರಿಯಲ್ಲಿ ಬಳಸಬಾರದು ಎಂದು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಂಜನ್ ಆನೆಗೆ ದಸರಾದಿಂದ ‘ಕೋಕ್’ ನೀಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ದುರ್ಘಟನೆ ರಾಜ್ಯಾದ್ಯಂತ ಶೋಕಕ್ಕೆ ಕಾರಣವಾಗಿದೆ. ಜೊತೆಗೆ ಈ ಘಟನೆಯ ಸಮಯದಲ್ಲಿ ಪ್ರವಾಸಿ ಮಹಿಳೆಯೊಬ್ಬರು ಕೂಡ ಮೃತಪಟ್ಟಿರುವುದು ಘಟನೆ ಗಂಭೀರತೆಯನ್ನು ಹೆಚ್ಚಿಸಿದೆ.

ಅರಣ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ದಸರಾ ಉತ್ಸವದಲ್ಲಿ ಭಾಗವಹಿಸುತ್ತಿದ್ದ ಕಂಜನ್ ಆನೆಯ ಭವಿಷ್ಯದ ಭಾಗವಹಿಸುವಿಕೆಯನ್ನು ರದ್ದುಪಡಿಸಲಾಗಿದೆ. ಆನೆಯ ವರ್ತನೆ ಮತ್ತು ಸುರಕ್ಷತಾ ಕಾರಣಗಳನ್ನು ಗಮನದಲ್ಲಿಟ್ಟು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಕುರಿತು ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ.

ದುಬಾರೆ ಶಿಬಿರ ದುರಂತ: ಮಾರ್ತಾಂಡ ಆನೆ ಚಿಕಿತ್ಸೆ ಫಲಕಾರಿಯಾಗದೆ ಸಾವು!

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿ ನಡೆದ ಕಾಡಾನೆಗಳ ಕಾದಾಟದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದೆ.

ನಿನ್ನೆ ಮಾವುತರು ಸ್ನಾನಕ್ಕೆಂದು ಕಾವೇರಿ ನದಿಗೆ ಕಂಜನ್ ಮತ್ತು ಮಾರ್ತಾಂಡ ಆನೆಗಳನ್ನು ಕರೆತಂದಿದ್ದ ಸಂದರ್ಭದಲ್ಲಿ ಅವುಗಳ ನಡುವೆ ಕಾದಾಟ ಸಂಭವಿಸಿತ್ತು. ಈ ದುರಂತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದರು. ಜೊತೆಗೆ ಮಾರ್ತಾಂಡ ಆನೆಗೂ ಗಂಭೀರ ಗಾಯಗಳಾಗಿದ್ದವು.

ಶಿಬಿರದಲ್ಲೇ ತಕ್ಷಣ ಚಿಕಿತ್ಸೆ ನೀಡಲಾಗಿದ್ದರೂ ಆನೆ ಆರೋಗ್ಯ ಸ್ಥಿತಿ ಚಿಂತಾಜನಕವಾಗಿಯೇ ಇತ್ತು. ಆದರೆ ಎಲ್ಲಾ ಪ್ರಯತ್ನಗಳ ನಡುವೆಯೂ ಇಂದು ಮಾರ್ತಾಂಡ ಆನೆ ಕೊನೆಯುಸಿರೆಳೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಡಿಎಫ್ಒ ಅಭಿಶೇಕ್ ಮಾಹಿತಿ ನೀಡಿದ್ದು, ಘಟನೆಯಿಂದ ಶಿಬಿರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

error: Content is protected !!