Home Blog

1.80 ಲಕ್ಷ ರೈತರ RTCಗಳಲ್ಲಿ ವಕ್ಫ್ ಉಲ್ಲೇಖ ದಾಖಲು: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ರೈತರ ಭೂಮಿ ದಾಖಲೆಗಳಿಗೆ ಸಂಬಂಧಿಸಿದ ವಕ್ಫ್ ವಿವಾದ ಮತ್ತೊಮ್ಮೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕದ ವಿವಿಧ ಭಾಗಗಳ ರೈತರು ಹಾಗೂ ಖಾಸಗಿ ವ್ಯಕ್ತಿಗಳ ಜಮೀನುಗಳ ಆರ್‌ಟಿಸಿ (RTC) ದಾಖಲೆಗಳಲ್ಲಿ ಪೂರ್ವ ಸೂಚನೆ ಇಲ್ಲದೆ ವಕ್ಫ್ ಉಲ್ಲೇಖ ನಮೂದಾಗುತ್ತಿದೆ ಎಂದು ಆರೋಪಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ರಾಜ್ಯದ 1.80 ಲಕ್ಷಕ್ಕೂ ಹೆಚ್ಚು ರೈತರ ಆರ್‌ಟಿಸಿ ದಾಖಲೆಗಳ ಕಾಲಂ 11ರಲ್ಲಿ ಈಗಾಗಲೇ ವಕ್ಫ್ ಉಲ್ಲೇಖ ದಾಖಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಒಟ್ಟು 3 ಲಕ್ಷ ಆರ್‌ಟಿಸಿ ದಾಖಲೆಗಳನ್ನು ಈ ಪ್ರಕ್ರಿಯೆಯ ವ್ಯಾಪ್ತಿಗೆ ತರಲು ಕ್ರಮ ನಡೆಯುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ತುಷ್ಟೀಕರಣದ ರಾಜಕಾರಣ ಈಗ ರೈತರ ಅಸ್ತಿತ್ವಕ್ಕೇ ಧಕ್ಕೆ ತರುವ ಹಂತಕ್ಕೆ ತಲುಪಿದೆ ಎಂದು ಅಶೋಕ್ ಆರೋಪಿಸಿದ್ದಾರೆ. ರೈತರ ಜಮೀನು ದಾಖಲೆಗಳಲ್ಲಿ ವಕ್ಫ್ ಉಲ್ಲೇಖ ಸೇರ್ಪಡೆಯಾಗುತ್ತಿರುವುದು ಕೇವಲ ದಾಖಲೆ ತಿದ್ದುಪಡಿಯ ವಿಷಯವಲ್ಲ, ಅದು ರೈತರ ಮಾಲೀಕತ್ವದ ಹಕ್ಕು, ಬದುಕು ಹಾಗೂ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ವಿಚಾರವಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ 31 ಜಿಲ್ಲೆಗಳ ರೈತರು ಈ ಬೆಳವಣಿಗೆಯಿಂದ ಆತಂಕದಲ್ಲಿದ್ದು, ತಮ್ಮ ಜಮೀನುಗಳ ಮಾಲೀಕತ್ವದ ಬಗ್ಗೆ ಅನಿಶ್ಚಿತತೆ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಜಿಲ್ಲಾವಾರು ಉಲ್ಲೇಖಿಸಿದ ಅಂಕಿ-ಅಂಶ

ಆರ್. ಅಶೋಕ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ವಕ್ಫ್ ಉಲ್ಲೇಖ ದಾಖಲಾಗಿರುವ ಆರ್‌ಟಿಸಿಗಳ ಸಂಖ್ಯೆ ಹೀಗಿದೆ:

  • ಉತ್ತರ ಕನ್ನಡ – 73,000
  • ದಕ್ಷಿಣ ಕನ್ನಡ – 48,000
  • ಶಿವಮೊಗ್ಗ – 38,000
  • ಬೆಂಗಳೂರು ದಕ್ಷಿಣ – 18,000
  • ಕಲಬುರಗಿ – 17,000
  • ಬಾಗಲಕೋಟೆ – 17,000

ರೈತರು ತಮ್ಮದೇ ಜಮೀನನ್ನು ಮಾರಾಟ ಮಾಡಲು, ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅಥವಾ ಮಾಲೀಕತ್ವದ ಹಕ್ಕು ಚಲಾಯಿಸಲು ಅನಿಶ್ಚಿತತೆ ಎದುರಿಸುವ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

“ರೈತರನ್ನು ತಮ್ಮದೇ ಭೂಮಿಯಲ್ಲಿ ಭಿಕ್ಷುಕರನ್ನಾಗಿ ಮಾಡಲು ಸರ್ಕಾರ ಹೊರಟಿದೆಯೇ? ಕಾಂಗ್ರೆಸ್ ಸರ್ಕಾರಕ್ಕೆ ರೈತರ ಹಿತ ಮುಖ್ಯವೇ, ಅಥವಾ ತುಷ್ಟೀಕರಣದ ರಾಜಕಾರಣ ಮುಖ್ಯವೇ?” ಎಂದು ಅವರು ಪ್ರಶ್ನಿಸಿದ್ದಾರೆ.

ಅನ್ನದಾತ ದೇಶದ ಹಸಿವನ್ನು ನೀಗಿಸುವವನು. ಅಂತಹ ರೈತನನ್ನು ತನ್ನದೇ ಜಮೀನಿನ ಹಕ್ಕಿಗಾಗಿ ಸರ್ಕಾರಿ ಕಚೇರಿಗಳ ಮುಂದೆ ಅಲೆದಾಡುವ ಸ್ಥಿತಿಗೆ ತಳ್ಳಬಾರದು. ಇಲ್ಲವಾದರೆ ಅನ್ನದಾತನ ಶಾಪ ಸರ್ಕಾರಕ್ಕೆ ತಟ್ಟದೇ ಇರದು ಎಂದು ಆರ್. ಅಶೋಕ್ ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನರ ಹೃದಯ ಸಿಂಹಾಸನ ಶಾಶ್ವತ: ಸಿದ್ದರಾಮಯ್ಯ ಭಾವುಕ ಪೋಸ್ಟ್

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆ ಮೈಸೂರಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜನರಿಂದ ದೊರೆತ ಅದ್ಧೂರಿ ಸ್ವಾಗತಕ್ಕೆ ಭಾವುಕರಾಗಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮನದಾಳದ ಸಂದೇಶ ಹಂಚಿಕೊಂಡಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ, “ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನರ ಹೃದಯ ಸಿಂಹಾಸನ ಶಾಶ್ವತ. ಅಲ್ಲಿಂದ ನನ್ನನ್ನು ಯಾರೂ ಕೆಳಗಿಳಿಸಲಾರರು. ಅದು ನನ್ನ ಮತ್ತು ನಾನು ನಂಬಿರುವ ಜನತಾ ಜನಾರ್ಧನರ ನಡುವಿನ ಶಾಶ್ವತ ಒಪ್ಪಂದ” ಎಂದು ಅವರು ಬರೆದುಕೊಂಡಿದ್ದಾರೆ.

ರಾಜಕೀಯ ಅಧಿಕಾರವೆಂದರೆ ಜನಸೇವೆ ಮಾಡಲು ದೊರೆಯುವ ಒಂದು ಅವಕಾಶ ಎಂದು ತಾವು ಯಾವಾಗಲೂ ನಂಬಿದ್ದೇನೆ ಎಂದು ಹೇಳಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನ ತೊರೆದ ಬಳಿಕ ರಾಜ್ಯದ ವಿವಿಧ ಭಾಗಗಳಲ್ಲಿ ಜನರು ತೋರುತ್ತಿರುವ ಪ್ರೀತಿ, ವಿಶ್ವಾಸ ಮತ್ತು ಅಭಿಮಾನ ತಮ್ಮ ಸಾರ್ವಜನಿಕ ಬದುಕಿನ ದೊಡ್ಡ ಸಂಪತ್ತಾಗಿದೆ ಎಂದು ತಿಳಿಸಿದ್ದಾರೆ.

“ಅಧಿಕಾರ ಮತ್ತು ಸಂಪತ್ತು ಕಾಲ ಬದಲಾದಂತೆ ಕಳೆದುಹೋಗಬಹುದು. ಆದರೆ ಜನರ ಪ್ರೀತಿ ಮಾತ್ರ ಶಾಶ್ವತ. ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ಜನಮೆಚ್ಚುವ ರೀತಿಯಲ್ಲಿ ಸೇವೆ ಸಲ್ಲಿಸಿದ್ದೇನೆ ಎಂಬ ತೃಪ್ತಿ ಈಗ ಜನರ ಪ್ರೀತಿಯನ್ನು ಕಂಡಾಗ ಮತ್ತಷ್ಟು ಹೆಚ್ಚಾಗಿದೆ,” ಎಂದು ಅವರು ಹೇಳಿದ್ದಾರೆ.

ಮೈಸೂರಿಗೆ ಭೇಟಿ ನೀಡಿದ ವೇಳೆ ಜನಸಾಗರದಿಂದ ವ್ಯಕ್ತವಾದ ಅಭಿಮಾನ ತಮ್ಮನ್ನು ಮೂಕವಿಸ್ಮಿತರನ್ನಾಗಿಸಿದೆ ಎಂದು ಉಲ್ಲೇಖಿಸಿರುವ ಅವರು, “ನನ್ನ ಸಾರ್ವಜನಿಕ ಬದುಕಿನಲ್ಲಿ ಅಪಾರ ಜನರ ಪ್ರೀತಿಯನ್ನು ಸಂಪಾದಿಸಿದ್ದೇನೆ ಎಂಬ ಹೆಮ್ಮೆ ನನಗಿದೆ. ನಾಡಿನ ಉದ್ದಗಲಕ್ಕೂ ಯಾವುದೇ ನಿರೀಕ್ಷೆಯಿಲ್ಲದೆ ಪ್ರೀತಿ ಮತ್ತು ಅಕ್ಕರೆ ತೋರುತ್ತಿರುವ ಜನರ ಸೇವೆಗೆ ನಾನು ಸದಾ ಬದ್ಧನಾಗಿರುತ್ತೇನೆ,” ಎಂದು ಭರವಸೆ ನೀಡಿದ್ದಾರೆ.

ಇದರೊಂದಿಗೆ ಮೈಸೂರಿನಲ್ಲಿ ಅಭಿಮಾನಿಗಳು ನೀಡಿದ ಅದ್ಧೂರಿ ಸ್ವಾಗತದ ವಿಡಿಯೊವನ್ನೂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶನಿವಾರ ಮೈಸೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರಿಗೆ ಹೈವೇ ಸರ್ಕಲ್‌ನಲ್ಲಿ ಅಭಿಮಾನಿಗಳು ಬೃಹತ್ ಸೇಬಿನ ಹಾರ ಹಾಕಿ, ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತ ಕೋರಿದ್ದರು. ಈ ಸಂದರ್ಭದಲ್ಲಿ ಶಾಸಕರಾದ ತನ್ವೀರ್ ಸೇಠ್, ಹರೀಶ್ ಗೌಡ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿಯನ್ನು ಬರಮಾಡಿಕೊಂಡಿದ್ದರು.

ಜಪಾನ್ʼನಲ್ಲಿ ಮತ್ತೆ ಭೂಮಿ ಕಂಪನ; 6.1 ತೀವ್ರತೆಯ ದಾಖಲು, ಕೇವಲ 7 ದಿನಗಳಲ್ಲಿ ವಿಶ್ವದಾದ್ಯಂತ 11 ಪ್ರಬಲ ಕಂಪನಗಳು

0

ಟೋಕಿಯೊ: ಜಪಾನ್‌ನಲ್ಲಿ ಭಾನುವಾರ ಮುಂಜಾನೆ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಕಂಪನ ದಾಖಲಾಗಿದ್ದರೂ, ಸದ್ಯಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ವರದಿಯೂ ಇದುವರೆಗೆ ಲಭ್ಯವಾಗಿಲ್ಲ.

ಜಪಾನ್ ಹವಾಮಾನ ಇಲಾಖೆ (JMA) ಮಾಹಿತಿ ಪ್ರಕಾರ, ಭಾನುವಾರ ಬೆಳಗ್ಗೆ 7.25ಕ್ಕೆ ಈಶಾನ್ಯ ಜಪಾನ್‌ನಲ್ಲಿ ಭೂಕಂಪ ಸಂಭವಿಸಿದೆ. ಇವಾಟೆ ಪ್ರಾಂತ್ಯದ ಕರಾವಳಿಯಿಂದ ಸುಮಾರು 40 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಕಂಪನದ ಪರಿಣಾಮ ಅಯೋಮೋರಿ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ.

ಕಳೆದ ಒಂದು ವಾರದಿಂದ ಜಪಾನ್‌ನಲ್ಲಿ ನಿರಂತರವಾಗಿ ಭೂಕಂಪಗಳು ಸಂಭವಿಸುತ್ತಿದ್ದು, ಪ್ರಸ್ತುತ ಟೈಫೂನ್ (ಚಂಡಮಾರುತ) ಕಾಲವೂ ಆಗಿರುವುದರಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದ ಅಪಾಯ ಹೆಚ್ಚಾಗಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ, ವಿಶ್ವದಾದ್ಯಂತ ಕಳೆದ ಏಳು ದಿನಗಳಲ್ಲಿ ಒಟ್ಟು 11 ಪ್ರಬಲ ಭೂಕಂಪಗಳು ದಾಖಲಾಗಿವೆ. ಇದರಲ್ಲಿ ವೆನೆಜುವೆಲಾದಲ್ಲಿ ಬುಧವಾರ ಸಂಭವಿಸಿದ ಎರಡು ಭೀಕರ ಭೂಕಂಪಗಳಿಂದ ಭಾರೀ ಪ್ರಮಾಣದ ಹಾನಿಯಾಗಿದೆ. ಈ ದುರಂತದಲ್ಲಿ 920ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 3,360ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಜಪಾನ್ ಭೂಕಂಪ ಹಾಗೂ ಸುನಾಮಿ ಅಪಾಯ ಹೆಚ್ಚಿರುವ ಪ್ರದೇಶಗಳಲ್ಲಿ ಒಂದಾಗಿದೆ. ಕಳೆದ ಗುರುವಾರ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದರೆ, ಶುಕ್ರವಾರ ಮೌಂಟ್ ಫೂಜಿ ಸಮೀಪದ ಯಮನಾಶಿ ಪ್ರಾಂತ್ಯ ಹಾಗೂ ಟೋಕಿಯೊದ ಪಶ್ಚಿಮ ಭಾಗದಲ್ಲಿ 5.6 ತೀವ್ರತೆಯ ಮತ್ತೊಂದು ಭೂಕಂಪ ದಾಖಲಾಗಿತ್ತು.

ಸರಣಿಯಾಗಿ ಭೂಕಂಪಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ಕಂಪನಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಭೂವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಹಾಗೂ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ.

ಗಂಡು ಮಗು ಹುಟ್ಟಿದ್ದಕ್ಕೆ ಪಾರ್ಟಿ ಕೇಳಿದ ಸ್ನೇಹಿತನನ್ನೇ ಬರ್ಬರ ಕೊಲೆಗೈದ ಆರೋಪಿ ಅರೆಸ್ಟ್!

ಬೆಳಗಾವಿ: ಗಂಡು ಮಗು ಹುಟ್ಟಿದ ಸಂಭ್ರಮದ ಪಾರ್ಟಿ ಕೇಳಿದ ವಿಚಾರಕ್ಕೆ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಗ್ರಾಮದ ಹಣಮಂತಪ್ಪ ಯಮನಪ್ಪ ಇಟಗಿ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಯಾಗಿ ಅವರ ಸ್ನೇಹಿತ ವಿಶ್ವನಾಥ ಪೂಜೇರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮಾಹಿತಿಯ ಪ್ರಕಾರ, ಇಬ್ಬರೂ ಮದ್ಯದ ಅಮಲಿನಲ್ಲಿ ಗ್ರಾಮದ ಕಟ್ಟೆಯಲ್ಲಿ ಕುಳಿತು ಮಾತನಾಡುತ್ತಿದ್ದ ವೇಳೆ ಗಂಡು ಮಗು ಹುಟ್ಟಿದ ಹಿನ್ನೆಲೆಯಲ್ಲಿ ಹಣಮಂತಪ್ಪ ಪಾರ್ಟಿ ಕೇಳಿದ್ದಾರೆ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.

ಗಲಾಟೆ ತೀವ್ರಗೊಂಡ ವೇಳೆ ಆರೋಪಿ ವಿಶ್ವನಾಥನ ಕಣ್ಣಿಗೆ ಹಣಮಂತಪ್ಪನ ಕೈ ಬೆರಳು ತಾಕಿದ್ದು, ಇದರಿಂದ ಕೋಪಗೊಂಡ ಆರೋಪಿ ಕಲ್ಲಿನಿಂದ ಹಣಮಂತಪ್ಪನ ತಲೆಗೆ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ. ತೀವ್ರ ರಕ್ತಸ್ರಾವದಿಂದ ಹಣಮಂತಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೋಹರಂ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದೀಗ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನೇಸರಗಿ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಜನರಿಗೆ ಸಿಹಿಸುದ್ದಿ: ನಗರದ ಮೊದಲ ಟನಲ್ ರಸ್ತೆ ಯೋಜನೆಗೆ ಇಂದು ಶಂಕುಸ್ಥಾಪನೆ

ಬೆಂಗಳೂರು: ನಗರದ ಸಂಚಾರ ದಟ್ಟಣೆಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಬೆಂಗಳೂರಿನ ಮೊದಲ ಟನಲ್ ರಸ್ತೆ ಯೋಜನೆಗೆ ಇಂದು ಅಧಿಕೃತ ಚಾಲನೆ ಸಿಗಲಿದೆ. ಹೆಬ್ಬಾಳದಿಂದ ಮೇಖ್ರಿ ಸರ್ಕಲ್‌ವರೆಗೆ ನಿರ್ಮಾಣವಾಗಲಿರುವ 2.2 ಕಿಲೋಮೀಟರ್ ಉದ್ದದ ಟನಲ್ ರಸ್ತೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಳಗ್ಗೆ ಭೂಮಿಪೂಜೆ ನೆರವೇರಿಸಲಿದ್ದಾರೆ.

ಕಾರ್ಯಕ್ರಮದ ಪೂರ್ವಭಾವಿಯಾಗಿ ಸಾರಿಗೆ ಸಚಿವ ಬೈರತಿ ಸುರೇಶ್ ಶನಿವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಈ ಯೋಜನೆಯು ರಾಜ್ಯದ ಮಹತ್ವಾಕಾಂಕ್ಷೆಯ ಪೈಲಟ್ ಪ್ರಾಜೆಕ್ಟ್ ಆಗಿದ್ದು, ಸಂಚಾರ ದಟ್ಟಣೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.

ಹೆಬ್ಬಾಳ, ಯಲಹಂಕ ಹಾಗೂ ಬ್ಯಾಟರಾಯನಪುರ ಭಾಗಗಳಿಗೆ ಸಂಚರಿಸುವ ವಾಹನ ಸವಾರರಿಗೆ ಈ ಟನಲ್ ರಸ್ತೆ ನಿರ್ಮಾಣದಿಂದ ಹೆಚ್ಚಿನ ಅನುಕೂಲವಾಗಲಿದೆ. ಕಾಮಗಾರಿಯನ್ನು 18 ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಯೋಜನೆಗೆ 1,199 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಸಚಿವರು ತಿಳಿಸಿದರು.

ಹೈದರಾಬಾದ್ ಮೂಲದ ಖಾಸಗಿ ಕಂಪನಿಯೊಂದು ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಕಾಮಗಾರಿ ವೇಳೆ ಸಾರ್ವಜನಿಕರ ಆಸ್ತಿ-ಪಾಸ್ತಿಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಅವರು ಹೇಳಿದರು.

ಟನಲ್ ರಸ್ತೆ ಪೂರ್ಣಗೊಂಡ ಬಳಿಕ ನಗರದಲ್ಲಿನ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಟನಲ್ ರಸ್ತೆಗಳ ಮಾದರಿ ಯಶಸ್ವಿಯಾಗಿದ್ದು, ಬೆಂಗಳೂರಿನಲ್ಲೂ ಇದೇ ರೀತಿಯ ಆಧುನಿಕ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ ಎಂದು ಬೈರತಿ ಸುರೇಶ್ ಹೇಳಿದರು.

ಟನಲ್ ರಸ್ತೆ ಯೋಜನೆಗೆ ಅನಗತ್ಯ ವಿರೋಧ ವ್ಯಕ್ತಪಡಿಸುವ ಅಗತ್ಯವಿಲ್ಲ. ಇದು ಸಂಪೂರ್ಣವಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಕೈಗೆತ್ತಿಕೊಳ್ಳಲಾಗಿರುವ ಯೋಜನೆಯಾಗಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.

ಡಾ. ರಾಜ್ ಕುಮಾರ್ ಹಾದಿಯಲ್ಲಿ ನೇತ್ರದಾನ ಮಾಡಿ ಮಾನವೀಯತೆ ಮೆರೆದ ಕೆ. ಭಾಗ್ಯರಾಜ್!

ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಹಾಗೂ ಚಿತ್ರಕಥೆಗಾರ ಕೆ. ಭಾಗ್ಯರಾಜ್ ಅವರು ಶನಿವಾರ ಚೆನ್ನೈನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. 73 ವರ್ಷದ ಭಾಗ್ಯರಾಜ್ ಅವರ ಅಗಲಿಕೆ ತಮಿಳು ಚಿತ್ರರಂಗ ಸೇರಿದಂತೆ ದೇಶದ ಸಿನಿಪ್ರೇಮಿಗಳಿಗೆ ಆಘಾತ ಉಂಟುಮಾಡಿದೆ.

ತಮ್ಮ ವಿಭಿನ್ನ ಕಥಾಹಂದರ ಹಾಗೂ ಚಿತ್ರಕಥೆಗಳ ಮೂಲಕ ‘ಚಿತ್ರಕಥೆಯ ರಾಜ’ ಎಂದೇ ಖ್ಯಾತಿ ಪಡೆದಿದ್ದ ಅವರು, ಸಾವಿನ ಬಳಿಕವೂ ನೇತ್ರದಾನದ ಮೂಲಕ ಮಾನವೀಯತೆಯ ಮಾದರಿಯಾಗಿದ್ದಾರೆ.

ಬಾಳಿರುವಾಗಲೇ ತಮ್ಮ ನೇತ್ರಗಳನ್ನು ದಾನ ಮಾಡುವುದಾಗಿ ಕೆ. ಭಾಗ್ಯರಾಜ್ ಪ್ರತಿಜ್ಞೆ ಮಾಡಿದ್ದರು. ಅವರ ನಿಧನದ ಬಳಿಕ ಕುಟುಂಬಸ್ಥರು ಅವರ ಅಂತಿಮ ಇಚ್ಛೆಯನ್ನು ಗೌರವಿಸಿ ತಕ್ಷಣವೇ ಕಣ್ಣಿನ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ. ಬಳಿಕ ವೈದ್ಯರ ತಂಡವು ಅವರ ನಿವಾಸಕ್ಕೆ ಭೇಟಿ ನೀಡಿ ಕಾರ್ನಿಯಾ ಸಂಗ್ರಹಿಸುವ ಮೂಲಕ ನೇತ್ರದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಭಾಗ್ಯರಾಜ್ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂತಾಪ ಸೂಚಿಸಿದ್ದಾರೆ. ಭಾಗ್ಯರಾಜ್ ಅವರ ನೇತ್ರದಾನದ ನಿರ್ಧಾರವನ್ನು ಶ್ಲಾಘಿಸಿರುವ ಅವರು, ಮರಣಾನಂತರವೂ ಮತ್ತೊಬ್ಬರ ಬದುಕಿಗೆ ಬೆಳಕಾಗಬೇಕು ಎಂಬ ಅವರ ಮಾನವೀಯ ಚಿಂತನೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿರುವ ಗಣ್ಯರು ನೇತ್ರದಾನ ಮಾಡಿದಾಗ ಅದು ಸಮಾಜದಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 1 ಲಕ್ಷದಿಂದ 2 ಲಕ್ಷ ಜನರಿಗೆ ಕಾರ್ನಿಯಾ ಕಸಿ ಅಗತ್ಯವಿದ್ದರೂ, ಕೇವಲ 45ರಿಂದ 50 ಸಾವಿರ ಕಾರ್ನಿಯಾಗಳು ಮಾತ್ರ ಲಭ್ಯವಾಗುತ್ತಿವೆ ಎಂದು ತಮಿಳಿಸೈ ಸೌಂದರರಾಜನ್ ಕಳವಳ ವ್ಯಕ್ತಪಡಿಸಿದ್ದಾರೆ.

ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯಿಂದ ಅಚ್ಚಳಿಯದ ಛಾಪು ಮೂಡಿಸಿದ್ದ ಕೆ. ಭಾಗ್ಯರಾಜ್, ಜೀವನದ ಕೊನೆಯ ಕ್ಷಣದಲ್ಲಿಯೂ ನೇತ್ರದಾನದ ಮೂಲಕ ಮಾನವೀಯತೆಯ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ. ಅವರ ಈ ಕಾರ್ಯವು ಸಮಾಜದಲ್ಲಿ ನೇತ್ರದಾನದ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವಂತಾಗಿದೆ.

ಮೊಹರಂ ಮೆರವಣಿಗೆ ವೇಳೆ ವಿಷದ ಮಾತ್ರೆ ಹಂಚಿಕೆ ಸಂಚು: ಮುಂಬೈನಲ್ಲಿ ದೊಡ್ಡ ಪ್ರಕರಣ ಭೇದಿಸಿದ ಪೊಲೀಸರು!

0

ಮುಂಬೈ: ಮೊಹರಂ ಮೆರವಣಿಗೆ ಸಂದರ್ಭದಲ್ಲಿ ಜನರಿಗೆ ವಿಷದ ಮಾತ್ರೆಗಳನ್ನು ಹಂಚಿ ಅನಾಹುತ ಸೃಷ್ಟಿಸಲು ಯತ್ನಿಸಿದ ದೊಡ್ಡ ಸಂಚೊಂದನ್ನು ಮುಂಬೈ ಪೊಲೀಸರು ಭೇದಿಸಿದ್ದಾರೆ.

ಡೊಂಗ್ರಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿ ಕಾರ್ಯಾಚರಣೆ ನಡೆಸಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪುಣೆಯ ನಿವಾಸಿ ಫಯಾಜ್ ಪ್ರೇಮ್‌ಜಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ನೋವು ನಿವಾರಕ ಮಾತ್ರೆಗಳು ಎಂದು ಹೇಳಿ, ವಾಸ್ತವದಲ್ಲಿ ಇಲಿ ಪಾಷಾಣ ಮಿಶ್ರಿತ ವಿಷಕಾರಿ ಮಾತ್ರೆಗಳನ್ನು ಜನರಿಗೆ ಹಂಚುತ್ತಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆತನ ಬಳಿಯಿಂದ ಸುಮಾರು 14,900 ವಿಷಕಾರಿ ಕ್ಯಾಪ್ಸೂಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೊಹರಂ ಮೆರವಣಿಗೆ ಸಂದರ್ಭದಲ್ಲಿ ವಿಷದ ಮಾತ್ರೆ ಸೇವಿಸಿದ ವ್ಯಕ್ತಿಯೊಬ್ಬರು ವಾಂತಿ–ಭೇದಿಯಿಂದ ಅಸ್ವಸ್ಥಗೊಂಡ ನಂತರ ಈ ಸಂಚಿನ ಬಗ್ಗೆ ಮಾಹಿತಿ ಪೊಲೀಸರಿಗೆ ದೊರೆತಿದೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಯ ಚಟುವಟಿಕೆಗಳು ಬಯಲಾಗಿವೆ.

ಆತನ ಚೀಲದಲ್ಲಿ ಸಂಗ್ರಹಿಸಿದ್ದ ವಿಷಕಾರಿ ಕ್ಯಾಪ್ಸೂಲ್‌ಗಳನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣದ ಕುರಿತು ತೀವ್ರ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

9 ಮತ್ತು 10ನೇ ತರಗತಿಗಳಿಗೆ ಪಿಯು ಉಪನ್ಯಾಸಕರ ನಿಯೋಜನೆಗೆ ಭಾರಿ ವಿರೋಧ!

ಹಗರಿಬೊಮ್ಮನಹಳ್ಳಿ: ಸರ್ಕಾರಿ ಪ್ರೌಢಶಾಲೆಗಳ 9 ಮತ್ತು 10ನೇ ತರಗತಿಗಳಿಗೆ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಬೋಧನೆಗೆ ನಿಯೋಜಿಸುವ ರಾಜ್ಯ ಸರ್ಕಾರದ ಕರಡು ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘದ ನೂತನ ಜಿಲ್ಲಾಧ್ಯಕ್ಷ ಗೂಳಪ್ಪ ಹುಲಿಮನಿ ಆಗ್ರಹಿಸಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿ ಪ್ರಾಚಾರ್ಯರು ಹಾಗೂ ಸರ್ಕಾರಿ-ಅನುದಾನಿತ ಕಾಲೇಜುಗಳ ಉಪನ್ಯಾಸಕರು ಪತ್ರ ಚಳುವಳಿ ನಡೆಸಿ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ, ಹೊಸ ಕರಡು ನಿಯಮಗಳ ಪ್ರಕಾರ ಪಿಯು ಉಪನ್ಯಾಸಕರನ್ನು ನೇರ ನೇಮಕಾತಿ ಅಥವಾ ಬಡ್ತಿಯ ಮೂಲಕ ಪ್ರೌಢಶಾಲೆಗಳ 9 ಮತ್ತು 10ನೇ ತರಗತಿಗಳಿಗೆ ಬೋಧನೆಗೆ ಕಡ್ಡಾಯವಾಗಿ ನಿಯೋಜಿಸುವ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಪಿಯು ಉಪನ್ಯಾಸಕರು ಗ್ರೂಪ್–‘ಬಿ’ ಹಾಗೂ ಪ್ರೌಢಶಾಲಾ ಶಿಕ್ಷಕರು ಗ್ರೂಪ್–‘ಸಿ’ ವೃಂದಕ್ಕೆ ಸೇರಿದವರಾಗಿದ್ದು, ಇಬ್ಬರಿಗೂ ಪ್ರತ್ಯೇಕ ನೇಮಕಾತಿ ಹಾಗೂ ಸೇವಾ ನಿಯಮಗಳಿವೆ. ಇಂತಹ ಸಂದರ್ಭದಲ್ಲಿ ಪಿಯು ಉಪನ್ಯಾಸಕರಿಗೆ ಹೆಚ್ಚುವರಿ ಹೈಸ್ಕೂಲ್ ಬೋಧನೆ ಜವಾಬ್ದಾರಿ ನೀಡುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಥಮ ಮತ್ತು ದ್ವಿತೀಯ ಪಿಯುಸಿ ಹಂತವು ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಪ್ರಮುಖವಾಗಿದ್ದು, ಉಪನ್ಯಾಸಕರ ಸಂಪೂರ್ಣ ಸಮಯ ಅಗತ್ಯವಿದೆ. 9 ಮತ್ತು 10ನೇ ತರಗತಿಗಳಿಗೆ ಅವರನ್ನು ನಿಯೋಜಿಸಿದರೆ ಪಿಯು ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಯಿತು.

ಈ ಹಿನ್ನೆಲೆಯಲ್ಲಿ ಕರಡು ಅಧಿಸೂಚನೆಯನ್ನು ಹಿಂಪಡೆಯಬೇಕು ಹಾಗೂ ಪಿಯು ಉಪನ್ಯಾಸಕರನ್ನು ಕೇವಲ ಪಿಯು ತರಗತಿಗಳ ಬೋಧನೆಗೆ ಮಾತ್ರ ಬಳಸಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಎಂ.ಕೆ. ದುರುಗಪ್ಪ, ಬೇಟೆ ಮಾರುತಿ, ಎನ್. ಸಾಬುದ್ದೀನ್ ಸಾಹೇಬ್, ಟಿ. ಮಲ್ಲಿಕಾರ್ಜುನ, ಎಸ್. ಮಹೇಶ್, ಬಿ.ಜೆ. ರಾಘವೇಂದ್ರ, ಬಿ. ಚಿರಂಜೀವಿ ಆಚಾರಿ, ಜೆ.ಬಿ. ನಾಗರಾಜ, ವಿಶ್ವನಾಥ್, ಬಸವರಾಜ್, ಸಿದ್ದಪ್ಪ, ನಿತಿನ್, ಗುರು ಬಸವರಾಜ, ಉಮಾ, ಅನ್ನಪೂರ್ಣ ಸೇರಿದಂತೆ ಹಲವು ಉಪನ್ಯಾಸಕರು ಉಪಸ್ಥಿತರಿದ್ದರು.

ಈ 5 ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು: ಚಾಣಕ್ಯ ಕೊಟ್ಟ ಕಾರಣಗಳು ಇಲ್ಲಿದೆ!

ನೆಮ್ಮದಿ, ಸುರಕ್ಷಿತ ಮತ್ತು ಯಶಸ್ವಿ ಜೀವನಕ್ಕಾಗಿ ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಅನೇಕ ಮಹತ್ವದ ಸಲಹೆಗಳನ್ನು ನೀಡಿದ್ದಾರೆ.

ಅವರ ಪ್ರಕಾರ, ಕೆಲವು ವೈಯಕ್ತಿಕ ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಭವಿಷ್ಯದಲ್ಲಿ ತೊಂದರೆ, ನಷ್ಟ ಹಾಗೂ ಅನಗತ್ಯ ಸಮಸ್ಯೆಗಳನ್ನು ತಂದೊಡ್ಡಬಹುದು.

ಚಾಣಕ್ಯರ ಹೇಳಿಕೆಯಂತೆ, ಕೆಲವೊಂದು ರಹಸ್ಯಗಳನ್ನು ಎಷ್ಟೇ ಆಪ್ತರಿದ್ದರೂ ಸಹ ಗುಪ್ತವಾಗಿಯೇ ಇಟ್ಟುಕೊಳ್ಳುವುದು ಉತ್ತಮ. ಅಂತಹ ಪ್ರಮುಖ ವಿಷಯಗಳು ಯಾವುವು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

1. ಆರ್ಥಿಕ ಸ್ಥಿತಿ:

ನಿಮ್ಮ ಆದಾಯ, ಬ್ಯಾಂಕ್ ಬ್ಯಾಲೆನ್ಸ್ ಅಥವಾ ಆರ್ಥಿಕ ಸಂಕಷ್ಟಗಳ ಬಗ್ಗೆ ಎಲ್ಲರಿಗೂ ಹೇಳಬಾರದು. ಇದರಿಂದ ಅನಗತ್ಯ ಸಹಾಯ ಬೇಡಿಕೆಗಳು ಹೆಚ್ಚಾಗಬಹುದು ಮತ್ತು ಕೆಲವರು ನಿಮ್ಮ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ.

2. ಕುಟುಂಬದ ಸಮಸ್ಯೆಗಳು:

ಮನೆಯ ಒಳಗಿನ ಜಗಳಗಳು ಅಥವಾ ಭಿನ್ನಾಭಿಪ್ರಾಯಗಳನ್ನು ಹೊರಗಿನವರೊಂದಿಗೆ ಹಂಚಿಕೊಳ್ಳುವುದು ಸೂಕ್ತವಲ್ಲ. ಇದರಿಂದ ಗೌರವ ಕಡಿಮೆಯಾಗುವ ಸಾಧ್ಯತೆ ಇದೆ ಹಾಗೂ ನಿಮ್ಮ ವೈಯಕ್ತಿಕ ವಿಷಯಗಳು ಬೇರೆಯವರ ಕೈಯಲ್ಲಿ ಚರ್ಚೆಯ ವಿಷಯವಾಗಬಹುದು.

3. ಅವಮಾನ ಅಥವಾ ದ್ರೋಹ:

ಯಾರಾದರೂ ನಿಮಗೆ ಮಾಡಿದ ದ್ರೋಹ ಅಥವಾ ಅವಮಾನವನ್ನು ಎಲ್ಲರಿಗೂ ಹೇಳುವುದು ನಿಮ್ಮ ಪ್ರತಿಷ್ಠೆಗೆ ಹಾನಿ ಮಾಡಬಹುದು. ಇದರಿಂದ ನೀವು ದುರ್ಬಲರಾಗಿ ಕಾಣುವ ಸಾಧ್ಯತೆಯೂ ಇರುತ್ತದೆ.

4. ವೈಯಕ್ತಿಕ ದುಃಖ ಮತ್ತು ದೌರ್ಬಲ್ಯ:

ನಿಮ್ಮ ಭಯ, ದುಃಖ ಅಥವಾ ದೌರ್ಬಲ್ಯಗಳನ್ನು ಎಲ್ಲರಿಗೂ ಹೇಳುವುದು ಅಪಾಯಕಾರಿಯಾಗಬಹುದು. ಕೆಲವರು ಇದನ್ನು ನಿಮ್ಮ ವಿರುದ್ಧ ಬಳಸುವ ಸಾಧ್ಯತೆ ಇದೆ.

5. ಭವಿಷ್ಯದ ಯೋಜನೆಗಳು:

ನಿಮ್ಮ ದೊಡ್ಡ ಕನಸುಗಳು ಮತ್ತು ಯೋಜನೆಗಳನ್ನು ಅವು ಪೂರ್ಣಗೊಂಡ ನಂತರವೇ ಹಂಚಿಕೊಳ್ಳುವುದು ಉತ್ತಮ. ಮೊದಲೇ ಹೇಳಿದರೆ ಅಡ್ಡಿಗಳು ಅಥವಾ ನಕಾರಾತ್ಮಕ ಪ್ರಭಾವ ಎದುರಾಗಬಹುದು.

6. ವೈಯಕ್ತಿಕ ಸಂಬಂಧಗಳು:

ನಿಮ್ಮ ಪ್ರೀತಿ ಮತ್ತು ವೈಯಕ್ತಿಕ ಸಂಬಂಧಗಳನ್ನು ಎಲ್ಲರಿಗೂ ಹೇಳುವುದನ್ನು ತಪ್ಪಿಸುವುದು ಉತ್ತಮ. ಕೆಲವರು ಅದನ್ನು ಹಾಳುಮಾಡಲು ಅಥವಾ ತಪ್ಪಾಗಿ ಬಳಸಲು ಪ್ರಯತ್ನಿಸಬಹುದು.

ಚಾಣಕ್ಯರ ಪ್ರಕಾರ, ಮೌನ ಮತ್ತು ಗೌಪ್ಯತೆ ಜೀವನದಲ್ಲಿ ಯಶಸ್ಸು ಮತ್ತು ಸ್ಥಿರತೆಯನ್ನು ನೀಡುವ ಪ್ರಮುಖ ಅಂಶಗಳಾಗಿವೆ.

 

ಬೆಂಗಳೂರಿನಲ್ಲಿ ರೌಡಿಯ ಬರ್ಬರ ಹತ್ಯೆ! ಹಳೆ ದ್ವೇಷಕ್ಕೆ ಹರಿದ ನೆತ್ತರು

0

ಬೆಂಗಳೂರು: ನಿನ್ನೆ ಸಂಜೆ ಜೆಪಿ ನಗರ ಐಜಿ ಸರ್ಕಲ್ ಬಳಿ ರೌಡಿಶೀಟರ್ ಒಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ ಘಟನೆ ನಡೆದಿದೆ.

ಸಂಜೆ ಟೀ ಕುಡಿದು ಮನೆಗೆ ಹೋಗುತ್ತಿದ್ದ ರಾಜು ಅಲಿಯಾಸ್ ಹಲ್ಮುರ್ಕ್ ರಾಜಾ ಮೇಲೆ ದುಷ್ಕರ್ಮಿಗಳು ಜನಸಂದಣಿ ನಡುವೆ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ರಾಜು ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಮೃತ ರಾಜು ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಸುಮಾರು 10 ವರ್ಷಗಳ ಹಿಂದೆ ಬನಶಂಕರಿಯಲ್ಲಿ ನಡೆದ ರೌಡಿ ಕುಟ್ಟಿ ಅಲಿಯಾಸ್ ಸ್ಟ್ಯಾಂಡ್ ಕುಟ್ಟಿ ಕೊಲೆ ಪ್ರಕರಣದಲ್ಲಿಯೂ ಅವನು ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಅವನು ಜೈಲು ಶಿಕ್ಷೆ ಅನುಭವಿಸಿದ್ದನು.

ಅಲ್ಲದೆ, ಸುಬ್ರಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣದಲ್ಲಿಯೂ ಅವನ ಹೆಸರು ಕೇಳಿಬಂದಿದೆ. ರಾಜು ದಕ್ಷಿಣ ಬೆಂಗಳೂರಿನ ರೌಡಿ ಅರಸಯ್ಯನ ಗುಂಪಿನಲ್ಲಿದ್ದನೆಂದು ಪೊಲೀಸರು ಶಂಕಿಸಿದ್ದಾರೆ.

ಹಳೆಯ ವೈಷಮ್ಯವೇ ಈ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಪ್ರಾಥಮಿಕವಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಸಂಜೆ ಸುಮಾರು 5:30ಕ್ಕೆ ನಡೆದಿದೆ.

ಘಟನೆಯ ಬಳಿಕ ಜೆಪಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಟ್ ಸಂತೋಷ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.