ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ನಿರಂತರವಾಗಿ ಬಯಲಾಗುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಕಾರಾಗೃಹ ಇಲಾಖೆ ಇದೀಗ ಹೈಟೆಕ್ ಅಸ್ತ್ರ ಬಳಸಿದೆ. ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ರಾಜ್ಯದ ಪ್ರಮುಖ ಕಾರಾಗೃಹಗಳಲ್ಲಿ ‘ಪ್ರಿಸನರ್ಸ್ ಟ್ರ್ಯಾಕಿಂಗ್ ಮೂವ್ಮೆಂಟ್’ ಮತ್ತು ಬಯೋಮೆಟ್ರಿಕ್ ಕಣ್ಗಾವಲು ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಜಾರಿಗೆ ಬಂದಿರುವ ಈ ವ್ಯವಸ್ಥೆ, ಜೈಲಿನೊಳಗಿನ ಪ್ರತಿಯೊಂದು ಚಲನವಲನವನ್ನು ಸೆಕೆಂಡ್ ಟು ಸೆಕೆಂಡ್ ಟ್ರ್ಯಾಕ್ ಮಾಡಲಿದೆ.
ಇತ್ತೀಚಿನ ದಿನಗಳಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದ್ದ ಗಂಭೀರ ಭದ್ರತಾ ವೈಫಲ್ಯಗಳು ಸರ್ಕಾರವನ್ನು ಕಠಿಣ ಕ್ರಮಕ್ಕೆ ಒತ್ತಾಯಿಸಿತ್ತು. ದಾಳಿಯ ವೇಳೆ ಕೈದಿಗಳು ಅಧಿಕಾರಿಗಳ ಮೇಲೆಯೇ ಹಲ್ಲೆಗೆ ಯತ್ನಿಸಿದ್ದು, 200ಕ್ಕೂ ಹೆಚ್ಚು ಮೊಬೈಲ್ಗಳು ಪತ್ತೆಯಾಗಿದ್ದವು. ಇನ್ನೂ ಕೆಲವು ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಮಾಡಿ ವೈರಲ್ ಮಾಡಿದ್ದ ಘಟನೆ ಜೈಲು ವ್ಯವಸ್ಥೆಯನ್ನೇ ಪ್ರಶ್ನೆಗೆ ಒಳಪಡಿಸಿತ್ತು. ಈ ಹಿನ್ನೆಲೆಯಲ್ಲಿ ಈಗ ಸಿಬ್ಬಂದಿಯ ಮೇಲೂ ಬಿಗಿ ನಿಗಾ ಇಡಲಾಗುತ್ತಿದೆ.
ಹೊಸ ವ್ಯವಸ್ಥೆಯಡಿ ಜೈಲಿನ ಬ್ಯಾರಕ್, ಆಸ್ಪತ್ರೆ, ಅಡುಗೆಮನೆ, ಸಂದರ್ಶಕರ ಕೊಠಡಿ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ಬಯೋಮೆಟ್ರಿಕ್ ಯಂತ್ರಗಳನ್ನು ಅಳವಡಿಸಲಾಗಿದೆ. ಕೈದಿಯೊಬ್ಬರು ಒಂದು ವಿಭಾಗದಿಂದ ಮತ್ತೊಂದಕ್ಕೆ ಹೋಗಬೇಕಾದರೆ ಹೆಬ್ಬೆರಳಿನ ಗುರುತು ನೀಡುವುದು ಕಡ್ಡಾಯ. ಇದರಿಂದ ಯಾವ ಕೈದಿ ಎಲ್ಲಿ ಎಷ್ಟು ಸಮಯ ಕಳೆದಿದ್ದಾನೆ ಎಂಬ ಸಂಪೂರ್ಣ ಮಾಹಿತಿ ಡಿಜಿಟಲ್ ದಾಖಲಾಗಲಿದೆ.
ಕೈದಿಗಳು ಗುಂಪು ಸೇರುವುದು, ಮೊಬೈಲ್ ಬಳಕೆ, ಸಿಬ್ಬಂದಿಯ ಶಾಮೀಲಾತಿ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣ ನಿಯಂತ್ರಿಸುವ ಗುರಿಯೊಂದಿಗೆ ಈ ತಂತ್ರಜ್ಞಾನ ಜಾರಿಗೆ ತರಲಾಗಿದೆ. ಜೈಲಿನೊಳಗಿನ ಅಕ್ರಮ ಸಾಮ್ರಾಜ್ಯಕ್ಕೆ ಈಗ ‘ಡಿಜಿಟಲ್ ಬ್ರೇಕ್’ ಬೀಳಲಿದೆ ಎಂಬ ನಿರೀಕ್ಷೆ ಅಧಿಕಾರಿಗಳಲ್ಲಿದೆ.

