Home Blog

ಋತುಚಕ್ರ ರಜೆ ಕುರಿತ ಕಾನೂನು ತರಲು ಸರ್ಕಾರ ಪರಿಶೀಲನೆ; ಹೈಕೋರ್ಟ್ʼಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಾಯಿತ ಉದ್ದಿಮೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಋತುಚಕ್ರ ರಜೆ ನೀಡುವ ಸಂಬಂಧ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಹೈಕೋರ್ಟ್‌ಗೆ ತಿಳಿಸಿದೆ.

ಈ ಸಂಬಂಧ ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್, ಬೆಂಗಳೂರು ಹೋಟೆಲ್‌ಗಳ ಸಂಘ, ಅವಿರತ ಡಿಫೆನ್ಸ್ ಸಿಸ್ಟಮ್ಸ್, ಬೆಂಗಳೂರು ಎಂಪ್ಲಾಯರ್ಸ್ ಅಸೋಸಿಯೇಷನ್ ಸೇರಿದಂತೆ ಹಲವು ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಸರ್ಕಾರ ಈ ಮಾಹಿತಿ ನೀಡಿದೆ. ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠ ಅರ್ಜಿಗಳ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಋತುಚಕ್ರ ರಜೆ ಕುರಿತು ಪ್ರಸ್ತುತ ಕಾನೂನಿನಲ್ಲಿ ಸ್ಪಷ್ಟ ನಿಬಂಧನೆಗಳು ಇಲ್ಲದ ಕಾರಣ ಕಾನೂನು ಶೂನ್ಯತೆ ಇದೆ ಎಂದು ತಿಳಿಸಿದರು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಸೂಕ್ತ ಕಾನೂನು ತರಲು ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ವಿಚಾರಣೆಯನ್ನು ಮುಂದೂಡಲು ಮನವಿ ಮಾಡಿದರು.

ಅದನ್ನು ಆಲಿಸಿದ ನ್ಯಾಯಪೀಠ, ಅಡ್ವೊಕೇಟ್ ಜನರಲ್ ನೀಡಿದ ಮಾಹಿತಿಯ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಮೌಖಿಕವಾಗಿ ತಿಳಿಸಿತು. ಜೊತೆಗೆ ಸರ್ಕಾರ ಇಂತಹ ಕಾನೂನು ತರಲು ಚಿಂತಿಸುತ್ತಿದೆ ಎಂಬ ಅಂಶವನ್ನು ಆದೇಶದಲ್ಲಿ ದಾಖಲಿಸಬೇಕೇ ಎಂದು ಪ್ರಶ್ನಿಸಿತು. ಇದಕ್ಕೆ ಸರ್ಕಾರದ ಪರ ವಕೀಲರು ಸಮ್ಮತಿ ಸೂಚಿಸಿದರು.

ನಂತರ ನ್ಯಾಯಪೀಠ, ಮಹಿಳೆಯರ ಋತುಚಕ್ರ ರಜೆಯನ್ನು ನಿಯಂತ್ರಿಸುವ ಕಾನೂನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿರುವುದಾಗಿ ಆದೇಶದಲ್ಲಿ ದಾಖಲಿಸಿಕೊಂಡಿತು. ಬೇಸಿಗೆ ರಜೆಗೆ ಮುನ್ನದ ಕೊನೆಯ ದಿನವಾಗಿರುವುದರಿಂದ ಹಾಗೂ ಸರ್ಕಾರ ಕಾನೂನು ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗಿರುವುದರಿಂದ ಪ್ರಕರಣದ ಮುಂದಿನ ವಿಚಾರಣೆಯನ್ನು ಬೇಸಿಗೆ ರಜೆ ಬಳಿಕಕ್ಕೆ ಮುಂದೂಡಿತು.

ಇದೇ ವೇಳೆ, ಮಧ್ಯಂತರದಲ್ಲಿ ಯಾವುದೇ ಹೊಸ ಬೆಳವಣಿಗೆಗಳು ಸಂಭವಿಸಿ ಅರ್ಜಿದಾರರು ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವೆಂದು ಭಾವಿಸಿದರೆ, ರಜಾ ಕಾಲದ ಪೀಠವನ್ನು ಸಂಪರ್ಕಿಸಲು ಅವಕಾಶವಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಸುಪ್ರೀಂ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು!

ನವದೆಹಲಿ: ಅಸ್ಸಾಂನಲ್ಲಿ ದಾಖಲಾಗಿದ್ದ ಮಾನನಷ್ಟ ಹಾಗೂ ಫೋರ್ಜರಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಮೂಲಕ ಗುವಾಹಟಿ ಹೈಕೋರ್ಟ್ ನೀಡಿದ್ದ ಜಾಮೀನು ನಿರಾಕರಣೆಯ ಆದೇಶಕ್ಕೆ ಸುಪ್ರೀಂ ಕೋರ್ಟ್ ತಿದ್ದುಪಡಿ ತಂದಿದೆ.

ಏಪ್ರಿಲ್ 24ರಂದು ಗುವಾಹಟಿ ಹೈಕೋರ್ಟ್ ಪವನ್ ಖೇರಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆದೇಶವನ್ನು ಪ್ರಶ್ನಿಸಿ ಖೇರಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಸುಪ್ರೀಂ ಕೋರ್ಟ್ ಅವರಿಗೆ ಬಂಧನದಿಂದ ರಕ್ಷಣೆ ಒದಗಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಚಂದೂರ್ಕರ್ ಅವರ ಪೀಠ, ಪ್ರಕರಣ ರಾಜಕೀಯ ದ್ವೇಷದಿಂದ ಪ್ರೇರಿತವಾಗಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದೆ. ಆರೋಪಿಯು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿರುವ ಸಂದರ್ಭದಲ್ಲಿ ಬಂಧನದ ಅವಶ್ಯಕತೆ ಕಾಣುತ್ತಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ರಾಜಕೀಯ ಪೈಪೋಟಿಯಿಂದ ಪ್ರೇರಿತ ಪ್ರಕರಣಗಳಲ್ಲಿ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಹಗುರವಾಗಿ ಪರಿಗಣಿಸಲು ಅಥವಾ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿಂಕಿ ಭುಯಾನ್ ಶರ್ಮಾ ಅವರು ಪವನ್ ಖೇರಾ ವಿರುದ್ಧ ಮಾನನಷ್ಟ ಹಾಗೂ ದಾಖಲೆಗಳ ದುರುಪಯೋಗದ ಆರೋಪ ಹೊರಿಸಿ ದೂರು ದಾಖಲಿಸಿದ್ದರು. ಖೇರಾ ಅವರು ಸಾರ್ವಜನಿಕವಾಗಿ ನೀಡಿದ ಹೇಳಿಕೆಗಳು ಹಾಗೂ ಸಲ್ಲಿಸಿದ್ದ ದಾಖಲೆಗಳು ನಕಲಿ ಎಂಬ ಆರೋಪದ ಮೇರೆಗೆ ಅಸ್ಸಾಂ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.

ಹಿಂದೆ ಏಪ್ರಿಲ್ 15ರಂದು ತೆಲಂಗಾಣ ಹೈಕೋರ್ಟ್ ನೀಡಿದ್ದ ಮಧ್ಯಂತರ ರಕ್ಷಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಗುವಾಹಟಿ ಹೈಕೋರ್ಟ್ ಸಂಪರ್ಕಿಸಲು ಸೂಚಿಸಿತ್ತು. ಆದರೆ ಗುವಾಹಟಿ ಹೈಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಖೇರಾ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದ ಅವರಿಗೆ ತಾತ್ಕಾಲಿಕ ನಿರಾಳತೆ ದೊರೆತಿದೆ.

ಸಿಲಿಂಡರ್ ದರ ಏರಿಕೆಯಿಂದ ಜನರಿಗೆ ಸಂಕಷ್ಟ: ಕೇಂದ್ರ ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ಕಿಡಿ

ಬೆಂಗಳೂರು: ಕೇಂದ್ರ ಸರ್ಕಾರ ಜನಸಾಮಾನ್ಯರ ನೋವನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ. ಆದಾಯ ಪಾತಳಕ್ಕೆ ಕುಸಿದಿದೆ. ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು. ಗಾಂಧಿನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಉತ್ತರಿಸಿದರು.

ಅಡುಗೆ ಅನಿಲ ಸಿಲಿಂಡರ್ ಬೆಲೆ ಹಾಗೂ ಇತರೆ ಅಗತ್ಯ ಸೇವೆಗಳ ಬೆಲೆ ಏರಿಕೆ ಕುರಿತ “ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳದ ಹೊರೆ ಜನಸಾಮಾನ್ಯರ ಮೇಲೆಯೇ ಹೋಗುತ್ತದೆ. ಇದರಿಂದಾಗಿ ಅನೇಕ ಹೊಟೇಲ್ ಗಳು ಬಂದ್ ಆಗಿವೆ. ಇದರ ಬಗ್ಗೆ ಕೇಂದ್ರ ಸರ್ಕಾರ ಗಮನವಿಡಬೇಕಿತ್ತು. ಸರ್ಕಾರ ಜನರ ಮೇಲಿನ ಹೊರೆ ಇಳಿಸಬೇಕು. ಬೆಲೆ ಏರಿಕೆಯಿಲ್ಲದೇ ಜನಸಾಮಾನ್ಯ ನಿಶ್ಚಿಂತೆಯಿಂದ ಬದುಕುವ ದಾರಿಯನ್ನು ಕೇಂದ್ರ ಸರ್ಕಾರ ಮಾಡಬೇಕಿದೆ” ಎಂದರು.

“ಯುದ್ಧ ನಡೆಯುತ್ತಿರುವ ಹೊತ್ತಿನಲ್ಲಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಮಿತ್ರ ರಾಷ್ಟ್ರಗಳ ಜೊತೆ ಉಳಿಸಿಕೊಳ್ಳಬೇಕಿರುವುದು ಅತ್ಯವಶ್ಯ. ಅನೇಕ ದೇಶಗಳು ಭಾರತವನ್ನು ಅನೇಕ ರೀತಿಯಲ್ಲಿ ಬೆಂಬಲಿಸಿವೆ. ನಮ್ಮ ವಿದೇಶಾಂಗ ನೀತಿ ವಿಫಲವಾಗದಂತೆ ನೋಡಿಕೊಳ್ಳಬೇಕು”ಎಂದರು.

ಸಚಿವ ಸಂಪುಟ ಸಭೆಯಲ್ಲಿ ಅಲ್ಪಸಂಖ್ಯಾತರ ಪ್ರದೇಶ ಅಭಿವೃದ್ಧಿಗೆ 600 ಕೋಟಿ ಅನುದಾನ ಬಿಡುಗಡೆ ಬಗ್ಗೆ ಕೇಳಿದಾಗ, “ಅದನ್ನು ಮಾತ್ರ ಯಾಕೆ ದೊಡ್ಡದಾಗಿ ಬಿಂಬಿಸುತ್ತೀರಿ? ನಿನ್ನೆ ಸಚಿವ ಸಂಪುಟ ಸಭೆಯಲ್ಲಿ 18 ಸಾವಿರ ಕೋಟಿ ವೆಚ್ಚದಲ್ಲಿ ಬಿಡದಿ ಬಳಿ ಸ್ಯಾಟಲೈಟ್ ಟೌನ್ ಶಿಪ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಈ ವಿಚಾರ ಬಿಟ್ಟು ಅಲ್ಪಸಂಖ್ಯಾತರಿಗೆ ಕೊಟ್ಟಿರುವ ಅನುದಾನ ಬಗ್ಗೆ ಮಾತ್ರ ಮಾತನಾಡುವುದೇಕೆ?” ಎಂದು ಹೇಳಿದರು.

ಲೈಂಗಿಕ ದೌರ್ಜನ್ಯ, ಬ್ಲ್ಯಾಕ್‌ಮೇಲ್ ಆರೋಪ: ರಾಮನಗರ ಮಕ್ಕಳ ಆಯೋಗ ಸದಸ್ಯ ಚಂದ್ರೇಗೌಡ ಬಂಧನ

ಬೆಂಗಳೂರು: ಹಲವು ಮಹಿಳೆಯರಿಗೆ ಬ್ಲ್ಯಾಕ್‌ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ರಾಮನಗರ ಮಕ್ಕಳ ಆಯೋಗ ಸಮಿತಿ ಸದಸ್ಯನನ್ನು ಬೆಂಗಳೂರು ನಗರದ ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿತನನ್ನು ಚಂದ್ರೇಗೌಡ ಎಂದು ಗುರುತಿಸಲಾಗಿದೆ.

ತನಿಖೆ ಪ್ರಕಾರ, ಆರೋಪಿ ಮಹಿಳೆಯರನ್ನು ಪರಿಚಯಿಸಿಕೊಂಡು ತಾನು ಪೊಲೀಸ್ ಅಧಿಕಾರಿ, ವಕೀಲ ಹಾಗೂ ಮಾಧ್ಯಮ ಪ್ರತಿನಿಧಿ ಎಂದು ನಕಲಿ ಗುರುತಿನ ಚೀಟಿಗಳನ್ನು ಬಳಸಿಕೊಂಡು ನಂಬಿಕೆ ಗಳಿಸುತ್ತಿದ್ದ. ನಂತರ ಮದುವೆಯ ಭರವಸೆ ನೀಡಿ ಲೈಂಗಿಕ ಸಂಬಂಧ ಬೆಳೆಸಿ, ಖಾಸಗಿ ಕ್ಷಣಗಳನ್ನು ವಿಡಿಯೋ ಹಾಗೂ ಫೋಟೋ ರೂಪದಲ್ಲಿ ದಾಖಲಿಸಿಕೊಂಡಿದ್ದಾನೆ ಎನ್ನಲಾಗಿದೆ.

ಆ ಬಳಿಕ ಅದೇ ದಾಖಲೆಗಳನ್ನು ಆಧಾರವನ್ನಾಗಿ ಮಾಡಿಕೊಂಡು ಮಹಿಳೆಯರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಒಬ್ಬ ಸಂತ್ರಸ್ತೆಯಿಂದ ಸುಮಾರು 5 ಲಕ್ಷ ರೂ. ಪಡೆದಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.

ಪೊಲೀಸ್ ಪರಿಶೀಲನೆಯಲ್ಲಿ ಆರೋಪಿ ಮೊಬೈಲ್‌ನಲ್ಲಿ 20ಕ್ಕೂ ಹೆಚ್ಚು ಮಹಿಳೆಯರ ವಿಡಿಯೋ ಹಾಗೂ ಫೋಟೋಗಳು ಪತ್ತೆಯಾಗಿದ್ದು, ಪ್ರಕರಣದ ಗಂಭೀರತೆ ಹೆಚ್ಚಿಸಿದೆ.

ಲಿವಿನ್ ಸಂಬಂಧ ದುರಂತ ಅಂತ್ಯ: ಅನುಮಾನದಿಂದ ಯುವತಿ ನೇಣಿಗೆ ಶರಣು

ಬೆಂಗಳೂರು: ಲಿವಿನ್‌ ಸಂಬಂಧದಲ್ಲಿದ್ದ ಜೋಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂಜೀವಿನಿ ನಗರದಲ್ಲಿ ನಡೆದಿದೆ.

ಮೇಘಾಲಯ ಮೂಲದ ಅಗತ ಬೈತಿಯಂಗುಂ (34) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದ ಅಗತ, ಮಣಿಪುರ ಮೂಲದ ನವಾಜ್ ಶರೀಫ್ (26) ಜೊತೆ ಕಳೆದ ಮೂರು ವರ್ಷಗಳಿಂದ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಇಬ್ಬರ ನಡುವೆ 8 ವರ್ಷದ ವಯಸ್ಸಿನ ಅಂತರ ಇದ್ದು, ಇದೇ ಕಾರಣಕ್ಕೆ ಪದೇ ಪದೇ ಗಲಾಟೆಗಳು ನಡೆಯುತ್ತಿದ್ದವು.

ಘಟನೆಯ ದಿನ ರಾತ್ರಿ, ನವಾಜ್ ತನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಅನುಮಾನಗೊಂಡ ಅಗತ ಜಗಳ ಆರಂಭಿಸಿದ್ದಾಳೆ. ವಾಗ್ವಾದ ತೀವ್ರಗೊಂಡ ಬಳಿಕ ನವಾಜ್ ಮನೆಯಿಂದ ಹೊರಗೆ ತೆರಳಿದನು. ಈ ನಡುವೆ ಅಗತ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನವಾಜ್ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕೊಡಿಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೂರು ವರ್ಷದ ಸಂಬಂಧ ಅನುಮಾನದಿಂದ ದುರಂತ ಅಂತ್ಯ ಕಂಡಿದೆ.

ಮಹಿಳೆಯರ ಅಶ್ಲೀಲ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್: ಮಕ್ಕಳ ಆಯೋಗ ಸಮಿತಿ ಸದಸ್ಯ ಅರೆಸ್ಟ್!

ಬೆಂಗಳೂರು: ಮಹಿಳೆಯರ ಜೊತೆಗಿನ ಖಾಸಗಿ ವಿಡಿಯೋಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಯನ್ನು ಆರ್‌ಆರ್ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಚಂದ್ರೇಗೌಡ ಎಂದು ಗುರುತಿಸಲಾಗಿದ್ದು, ಆತ ರಾಮನಗರ ಮಕ್ಕಳ ಆಯೋಗ ಸಮಿತಿ ಸದಸ್ಯನಾಗಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿ ತಾನು ಪೊಲೀಸ್ ಅಧಿಕಾರಿ, ವರದಿಗಾರ ಹಾಗೂ ವಕೀಲ ಎಂದು ಸುಳ್ಳು ಪರಿಚಯ ನೀಡಿ ಹಲವು ಮಹಿಳೆಯರನ್ನು ನಂಬಿಸಿ ವಂಚನೆ ನಡೆಸುತ್ತಿದ್ದ ಎನ್ನಲಾಗಿದೆ. ಅಲ್ಲದೆ, ಇದೇ ರೀತಿ ಹಲವು ಮಹಿಳೆಯರಿಗೆ ಬೆದರಿಕೆ ಒಡ್ಡಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪವೂ ಕೇಳಿಬಂದಿದೆ.

ಗಂಡನಿಂದ ದೂರವಾಗಿದ್ದ ಮಹಿಳೆಯೊಬ್ಬಳನ್ನು ಪರಿಚಯಿಸಿಕೊಂಡಿದ್ದ ಚಂದ್ರೇಗೌಡ, ತಾನು ವಿಚ್ಛೇದನ ಪಡೆದಿದ್ದು ಮದುವೆಯಾಗುವುದಾಗಿ ನಂಬಿಸಿದ್ದಾನೆ. ಬಳಿಕ ಆಕೆಯೊಂದಿಗೆ ಆತ್ಮೀಯತೆ ಬೆಳೆಸಿ ದೈಹಿಕ ಸಂಪರ್ಕ ಹೊಂದಿದ್ದಾನೆ. ಈ ವೇಳೆ ಖಾಸಗಿ ವಿಡಿಯೋ ಚಿತ್ರೀಕರಿಸಿಕೊಂಡು ಅದನ್ನೇ ಆಧಾರವನ್ನಾಗಿ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದೇ ಪ್ರಕರಣದಲ್ಲಿ ಮಹಿಳೆಗೆ ಬೆದರಿಕೆ ಹಾಕಿ ಸುಮಾರು 5 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿರುವುದಾಗಿ ಆರೋಪಿಸಲಾಗಿದೆ.

ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಆರ್‌ಆರ್ ನಗರ ಪೊಲೀಸರು ಚಂದ್ರೇಗೌಡನನ್ನು ಬಂಧಿಸಿದ್ದು, ಆತನ ಮೊಬೈಲ್‌ ಪರಿಶೀಲನೆ ವೇಳೆ ಸುಮಾರು 20ಕ್ಕೂ ಹೆಚ್ಚು ಮಹಿಳೆಯರ ಜೊತೆಗಿನ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಚಂದ್ರೇಗೌಡನ ಕೃತ್ಯದಿಂದ ಬೇಸತ್ತ ಮಹಿಳೆ ಬಳಿಕ ಆರ್‌ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಆರೋಪ: ಕಾಂಗ್ರೆಸ್ ನಾಯಕನ ವಿರುದ್ಧ ದೂರು

0

ಮೈಸೂರು: ಜಿಲ್ಲೆಯ ಟಿ. ನರಸೀಪುರದಲ್ಲಿ ಕಾಂಗ್ರೆಸ್ ಮುಖಂಡ ಮದನ್ ರಾಜ್ ವಿರುದ್ಧ ಪ್ರೀತಿ ಹೆಸರಿನಲ್ಲಿ ವಂಚನೆ ಮತ್ತು ಕೊಲೆ ಯತ್ನದ ಆರೋಪ ಕೇಳಿಬಂದಿದೆ.

ಯುವತಿ ನೀಡಿದ ದೂರಿನ ಪ್ರಕಾರ, ಆರೋಪಿ ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದು, ನಂತರ ಮದುವೆಗೆ ನಿರಾಕರಿಸಿದ್ದಾರೆ. ಆತನ ಜೊತೆಗಿನ ವೈಯಕ್ತಿಕ ಫೋಟೋಗಳಿರುವ ಮೊಬೈಲ್‌ಗಳನ್ನು ಕೂಡ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಮದುವೆಗೆ ಒತ್ತಾಯಿಸಿದಾಗ, ಇಬ್ಬರೂ ವಿಷ ಸೇವಿಸೋಣ ಎಂದು ಹೇಳಿ ಯುವತಿಗೆ ಮಾತ್ರ ವಿಷ ನೀಡಿ ಕೊಲೆ ಯತ್ನ ಮಾಡಿದ್ದಾರೆ ಎಂಬ ಆರೋಪ ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಇದೀಗ ಆರೋಪಿ ಮತ್ತೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಮಾಹಿತಿ ಹೊರಬಂದಿದ್ದು, ಪೊಲೀಸರು ಆರೋಪಿ ಬಂಧನಕ್ಕಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಪ್ರೀತಿ ಹೆಸರಿನಲ್ಲಿ ತರಬೇತಿ ನಿರತ ಗಗನಸಖಿಗೆ ಕಿರುಕುಳ: ಕಾಮುಕ ಅರೆಸ್ಟ್!

ಬೆಂಗಳೂರು: ತರಬೇತಿ ಪಡೆಯುತ್ತಿದ್ದ ಗಗನಸಖಿಯೊಬ್ಬಳಿಗೆ ರಸ್ತೆಯಲ್ಲೇ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಾಗಲೂರು ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಆರೋಪಿ ಹಾಗೂ ಸಂತ್ರಸ್ತ ಯುವತಿ ಇಬ್ಬರೂ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದು, ಪರಸ್ಪರ ಪರಿಚಯಸ್ಥರಾಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ಇವರ ನಡುವೆ ಬಳಿಕ ಆರೋಪಿ ಪ್ರೀತಿಸುವಂತೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ.

ಆರೋಪಿಯ ವರ್ತನೆಯಿಂದ ಅಸಹ್ಯಗೊಂಡ ಯುವತಿ ಆತನಿಂದ ದೂರವಾಗಲು ಪ್ರಯತ್ನಿಸಿದ್ದಳು. ಇದರಿಂದ ಕೋಪಗೊಂಡ ಚಂದ್ರಶೇಖರ್, ಯುವತಿ ಕಾಲೇಜಿಗೆ ತೆರಳುವಾಗ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಹಿಂಬಾಲಿಸುತ್ತಿದ್ದ ಎಂದು ತಿಳಿದುಬಂದಿದೆ.

ಕಳೆದ ಒಂದು ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಯುವತಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದು, ನಡುರಸ್ತೆಯಲ್ಲೇ ತಡೆದು ನಿಲ್ಲಿಸಿ ಕಿರಿಕಿರಿ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದರ ನಡುವೆ, ಇತ್ತೀಚೆಗೆ ಸಾರ್ವಜನಿಕ ಸ್ಥಳದಲ್ಲೇ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಅನುಚಿತವಾಗಿ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನಿರಂತರ ಕಿರುಕುಳದಿಂದ ಬೇಸತ್ತ ಯುವತಿ, ಪೋಷಕರೊಂದಿಗೆ ಬಾಗಲೂರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ದೂರಿನ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಚಂದ್ರಶೇಖರ್‌ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳ ಜೀವ ಉಳಿಸಿ ತಾನೇ ಬಲಿಯಾದ ತಾಯಿ!

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ಕೆರೆಯಲ್ಲಿ ಮಕ್ಕಳನ್ನು ರಕ್ಷಿಸಲು ಹೋಗಿದ್ದ ತಾಯಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಬೆಂಗಳೂರಿನ ಬನಶಂಕರಿ ಮೂಲದ ತಬುಸುಮ್ ಖಾನ್ (24) ಮೃತ ದುರ್ದೈವಿ. ಕುಟುಂಬದ ಸದಸ್ಯರು ಮುರಗಮಲ್ಲದ ದರ್ಗಾಕ್ಕೆ ಭೇಟಿ ನೀಡಿದ್ದ ವೇಳೆ ಈ ದುರಂತ ಸಂಭವಿಸಿದೆ.

ಕುಟುಂಬಸ್ಥರು ಕೆರೆಯ ಸಮೀಪ ಕಾಲ ಕಳೆಯುತ್ತಿದ್ದಾಗ ಮಕ್ಕಳು ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ತಾಯಿ ತಬುಸುಮ್ ಖಾನ್ ಬಟ್ಟೆ ತರಲು ತೆರಳಿದ್ದರು. ಅಷ್ಟರಲ್ಲಿ ಮಕ್ಕಳು ಕೆರೆಯೊಳಗೆ ಹೋಗಿ ಮುಳುಗಲು ಆರಂಭಿಸಿದ್ದಾರೆ.

ಮಕ್ಕಳು ಅಪಾಯದಲ್ಲಿರುವುದನ್ನು ಗಮನಿಸಿದ ತಬುಸುಮ್ ಖಾನ್ ಕೂಡಲೇ ಕೆರೆಗೆ ಹಾರಿದ್ದಾರೆ. ಆದರೆ ಅವರಿಗೆ ಈಜು ಬಾರದ ಕಾರಣ ತಾವೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಅದೃಷ್ಟವಶಾತ್ ಅಲ್ಲೇ ಇದ್ದ ಮಕ್ಕಳ ತಂದೆ ಹಾಗೂ ಸಂಬಂಧಿಕ ಯುವಕರು ತಕ್ಷಣ ಕೆರೆಗೆ ಇಳಿದು ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ತಬುಸುಮ್ ಖಾನ್ ರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಮಕ್ಕಳನ್ನು ಉಳಿಸಿಕೊಂಡರೂ ಪತ್ನಿಯನ್ನು ಕಳೆದುಕೊಂಡೆ ಎಂದು ಪತಿ ಕಣ್ಣೀರಿಟ್ಟಿದ್ದು, ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

ಸುಡು ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡ್ತೀರಾ? ಆರೋಗ್ಯಕ್ಕೆ ಅಪಾಯ ಈ ಅಭ್ಯಾಸ

ಕೂದಲು ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುವ ಪ್ರಮುಖ ಅಂಶವಾಗಿದ್ದು, ಆರೋಗ್ಯಕರ ಹಾಗೂ ದಪ್ಪ ಕೂದಲುಗಾಗಿ ಮಹಿಳೆಯರು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಶಾಂಪೂ, ಕಂಡೀಷನರ್ ಮತ್ತು ಎಣ್ಣೆ ಬಳಕೆ ಸೇರಿದಂತೆ ವಿವಿಧ ವಿಧಾನಗಳನ್ನು ಅನುಸರಿಸಿದರೂ, ತಲೆ ಸ್ನಾನದ ವೇಳೆ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಕೂದಲಿನ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತವೆ.

ತಲೆ ಸ್ನಾನ ಮಾಡುವಾಗ ನೀರಿನ ತಾಪಮಾನ ಅತ್ಯಂತ ಮಹತ್ವದ್ದಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ತಣ್ಣನೆಯ ಅಥವಾ ಉಗುರು ಬೆಚ್ಚಗಿನ ನೀರನ್ನು ಬಳಸಲಾಗುತ್ತದೆ. ಆದರೆ ಚಳಿಗಾಲದಲ್ಲಿ ಹೆಚ್ಚು ಬಿಸಿ ನೀರನ್ನು ಬಳಸುವುದು ಹೆಚ್ಚಾಗಿ ಕಂಡುಬರುತ್ತದೆ. ತಾತ್ಕಾಲಿಕವಾಗಿ ಸುಖಕರವಾಗಿ ಅನಿಸಿದರೂ, ಅತಿಯಾಗಿ ಬಿಸಿ ನೀರು ಕೂದಲಿನ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.

ತಲೆಯ ಮೇಲಿನ ಚರ್ಮದಲ್ಲಿ ನೈಸರ್ಗಿಕ ತೈಲದ ಪದರವಿದ್ದು, ಇದು ಕೂದಲನ್ನು ತೇವಾಂಶದಿಂದ ಕಾಪಾಡುತ್ತದೆ. ಆದರೆ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಈ ತೈಲ ಪದರ ತೆಗೆಯಲ್ಪಟ್ಟು, ತಲೆಚರ್ಮ ಒಣಗುವ ಸಾಧ್ಯತೆ ಹೆಚ್ಚುತ್ತದೆ. ಇದರಿಂದ ಹೊಟ್ಟು, ತುರಿಕೆ ಹಾಗೂ ಚರ್ಮದ ಸಮಸ್ಯೆಗಳು ಉಂಟಾಗಬಹುದು.

ಇದರ ಪರಿಣಾಮವಾಗಿ ಕೂದಲು ಒಣಗುವುದು, ಬಿರುಕು ಬರುವುದು, ಸೀಳುವುದು ಮತ್ತು ಸುಲಭವಾಗಿ ಮುರಿಯುವುದು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವಿಶೇಷವಾಗಿ ಕೂದಲಿಗೆ ಬಣ್ಣ ಹಚ್ಚಿರುವವರು ಬಿಸಿ ನೀರನ್ನು ಬಳಸಿದರೆ, ಕೂದಲಿನ ಬಣ್ಣ ಬೇಗ ಮಂಕಾಗುವುದು ಹಾಗೂ ಹೊಳಪು ಕಡಿಮೆಯಾಗುವುದು ಸಾಮಾನ್ಯ.

ಇನ್ನು ತಲೆಚರ್ಮದ ಮೇಲೆ ಬಿಸಿ ನೀರು ಬೀಳುವುದರಿಂದ ಕೂದಲಿನ ಬುಡ ದುರ್ಬಲವಾಗಿ, ಕೂದಲು ಉದುರುವ ಸಮಸ್ಯೆ ಕೂಡ ಹೆಚ್ಚಾಗಬಹುದು. ಜೊತೆಗೆ ತಲೆಚರ್ಮದಲ್ಲಿ ಒಣತನ, ಸಿಪ್ಪೆ ಸುಲಿಯುವುದು ಮತ್ತು ಕೆರಳಿಕೆ ಉಂಟಾಗುವ ಸಾಧ್ಯತೆ ಇದೆ.

ಕೂದಲಿನ ಆರೋಗ್ಯವನ್ನು ಕಾಪಾಡಲು ಉಗುರು ಬೆಚ್ಚಗಿನ ನೀರನ್ನು ಬಳಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಎಣ್ಣೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು, ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸವಾಗಿದೆ.

ಹಾಗೆಯೇ, ಕಂಡೀಷನರ್ ಬಳಕೆ ಮಾಡಿದ ಬಳಿಕ ತಣ್ಣನೆಯ ನೀರಿನಲ್ಲಿ ಕೂದಲು ತೊಳೆಯುವುದು ಉತ್ತಮ. ಇದು ಕೂದಲಿನ ಹೊರಪದರವನ್ನು ಮುಚ್ಚಿ, ಹೊಳಪು ಹೆಚ್ಚಿಸುವುದಲ್ಲದೆ ಕೂದಲು ಉದುರುವುದನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

error: Content is protected !!