Home Blog Page 2

ಬೆಂಗಳೂರು ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ: ದೂರು ದಾಖಲು

0

ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ಸೈಬರ್ ವಂಚಕರು ನಕಲಿ ಫೇಸ್‌ಬುಕ್ ಖಾತೆ ತೆರೆಯುವ ಮೂಲಕ ವಂಚನೆ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ಹೆಸರಿನಲ್ಲಿ ನಕಲಿ ಎಫ್‌ಬಿ ಖಾತೆ ಸೃಷ್ಟಿಸಿ, ಗಣ್ಯ ವ್ಯಕ್ತಿಗಳ ಜೊತೆ ಇರುವ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ.

ಹಿಂದಿ ಹೆಸರಿನೊಂದಿಗೆ ಖಾತೆ ರಚಿಸಿರುವ ವಂಚಕರು, ಆಯುಕ್ತರೇ ಪೋಸ್ಟ್ ಮಾಡುತ್ತಿದ್ದಾರೆಂದು ನಂಬುವಂತೆ ಮಾಡುತ್ತಿದ್ದಾರೆ. ನಕಲಿ ಖಾತೆಯಿಂದ ತಪ್ಪು ಸಂದೇಶಗಳನ್ನು ಕಳುಹಿಸಿ ಜನರನ್ನು ದಾರಿ ತಪ್ಪಿಸುವ ಯತ್ನ ಮಾಡಲಾಗಿದೆ.

ಕೆಲವು ನಾಗರಿಕರು ಖಾತೆಯನ್ನು ನಿಜವೆಂದು ಭಾವಿಸಿ ಪ್ರತಿಕ್ರಿಯೆ ನೀಡಿರುವುದು ತಿಳಿದುಬಂದಿದೆ. ಮೊದಲು ನಂಬಿಕೆ ಗಳಿಸಿ ಬಳಿಕ ಹಣ ದೋಚುವ ಉದ್ದೇಶದಿಂದ ಖಾತೆ ಸೃಷ್ಟಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಕೂಡ ಅಲೋಕ್ ಕುಮಾರ್ ಹಾಗೂ ಭೀಮಾ ಶಂಕರ ಗುಳೇದ್ ಅವರ ಹೆಸರಿನಲ್ಲಿ ನಕಲಿ ಖಾತೆಗಳು ರಚನೆಯಾಗಿದ್ದವು. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸಾರ್ವಜನಿಕರು ಇಂತಹ ನಕಲಿ ಖಾತೆಗಳಿಗೆ ಮೋಸ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗೆ ಸೈಬರ್ ಸೆಲ್ ಅಧಿಕಾರಿಗಳ ಹೆಸರಿನಲ್ಲಿ ಬೆದರಿಕೆ ಕರೆ!

0

ಬೆಂಗಳೂರು: ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿಗೆ ಬೆಂಗಳೂರು ಸೈಬರ್ ಸೆಲ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಬೆದರಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸುಪ್ರೀಂ ಕೋರ್ಟ್‌ ಮಾಜಿ ನ್ಯಾಯಮೂರ್ತಿಯಾದ ಜೆ. ಚೆಲಮೇಶ್ವರ್ ಅವರಿಗೆ ಅಪರಿಚಿತರು ಕರೆ ಮಾಡಿ ತಾವು ಬೆಂಗಳೂರಿನ ಸೈಬರ್ ಸೆಲ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಈ ಕುರಿತು ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿ ಭರತ್ ಪರಾಶರ್ ದೂರು ನೀಡಿದ್ದು, ಅವರ ದೂರಿನ ಅನ್ವಯ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜನವರಿ 9ರಂದು ನಡೆದ ಈ ಘಟನೆಗೆ ಸಂಬಂಧಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ತನಿಖೆ ಆರಂಭಿಸಲಾಗಿದೆ. ಕರೆ ಮಾಡಿದವರ ಪತ್ತೆಗಾಗಿ ತಾಂತ್ರಿಕ ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಲವ್ ಯೂ ಅಪ್ಪ, ನೀವು ಯಾವಾಗಲೂ ನನ್ನ ಬೆಸ್ಟ್ಫ್ರೆಂಡ್ : ದರ್ಶನ್ಗೆ ಮುದ್ದಾದ ಬರ್ತ್ಡೇ ವಿಶ್ ಮಾಡಿದ ವಿನೀಶ್

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಅವರ 49ನೇ ಹುಟ್ಟುಹಬ್ಬ ಅಭಿಮಾನಿಗಳಲ್ಲಿ ಭಾವುಕತೆಯನ್ನು ಮೂಡಿಸಿದೆ.

ಪ್ರತಿ ವರ್ಷ ಸಾವಿರಾರು ಅಭಿಮಾನಿಗಳ ಮಧ್ಯೆ ನಡೆಯುವ ಸಂಭ್ರಮ ಈ ಬಾರಿ ಜೈಲಿನ ಗೋಡೆಗಳೊಳಗೆ ಸೀಮಿತವಾಗಿದೆ. ಪುತ್ರ ವಿನೀಶ್ ಸಾಮಾಜಿಕ ಜಾಲತಾಣದಲ್ಲಿ ತಂದೆಯೊಂದಿಗೆ ಹಳೆಯ ಚಿತ್ರ ಹಂಚಿಕೊಂಡು ಪ್ರೀತಿಯ ಸಂದೇಶ ನೀಡಿದ್ದರೆ, ಪತ್ನಿ ವಿಜಯಲಕ್ಷ್ಮಿ ಕುಟುಂಬದ ಚಿತ್ರ ಪ್ರಕಟಿಸಿ ಶುಭಾಶಯ ತಿಳಿಸಿದ್ದಾರೆ.

ಹ್ಯಾಪಿ ಬರ್ತ್​ಡೇ ಅಪ್ಪ, ಐ ಲವ್ ಯೂ, ನೀವು ಯಾವಾಗಲೂ ನನ್ನ ಬೆಸ್ಟ್​ಫ್ರೆಂಡ್ ಎಂದು ಹಳೆಯ ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಇನ್ನು ವಿಜಯಲಕ್ಷ್ಮಿ ಕೂಡಾ ಪತಿ ದರ್ಶನ್ ಹಾಗೂ ಮಗ ವಿನಿಶ್ ಜೊತೆಗಿರುವ ಫೋಟೋ ಶೇರ್ ಮಾಡಿ “ಪ್ರತಿದಿನವೂ ಸಂಭ್ರಮಿಸಲ್ಪಡುವ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯ” ಎಂದು ಬರೆದುಕೊಂಡಿದ್ದಾರೆ.ಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹಿನ್ನೆಲೆಯಲ್ಲಿ ನಟ ಹೊರಗೆ ಬರಲು ಸಾಧ್ಯವಾಗದೆ ಇರುವುದರಿಂದ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಲ್ಲದೆ ಜನ್ಮದಿನ ಆಚರಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಆದರೂ ರಾಜ್ಯದ ಹಲವು ಭಾಗಗಳಲ್ಲಿ ಸೇವಾಕಾರ್ಯಗಳ ಮೂಲಕ ಅಭಿಮಾನಿಗಳು ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಟಿಪ್ಪರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಸಾವು!

0

ಬೆಂಗಳೂರು: ಭಾನುವಾರ ಆಡುಗೋಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಟಿಪ್ಪರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಟಿಪ್ಪರ್ ವಾಹನ ಡಿಕ್ಕಿ ಹೊಡೆದು ಮಹಿಳೆ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಟಿಪ್ಪರ್ ಮಹಿಳೆಯ ಕಾಲಿನ ಮೇಲೆ ಹರಿದ ಪರಿಣಾಮ, ಅವರ ಎರಡೂ ಕಾಲುಗಳು ಛಿದ್ರಛಿದ್ರವಾಗಿವೆ.

ಘಟನೆ ನಡೆದ ತಕ್ಷಣವೇ ಸ್ಥಳೀಯರು ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೇ, ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಪ್ರಕರಣ ಸಂಬಂಧ ಆಡುಗೋಡಿ ಸಂಚಾರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಎಲೆಕ್ಟ್ರಿಕ್ ಬಸ್ ಅಪಘಾತಗಳ ಏರಿಕೆ: ಕೇಂದ್ರಕ್ಕೆ ಎರಡನೇ ಭಾರಿ ಪತ್ರ ಬರೆದ ಸಾರಿಗೆ ಸಚಿವರು

0

ಬೆಂಗಳೂರು: ನಗರದಲ್ಲಿ ಸಾರ್ವಜನಿಕ ಸಾರಿಗೆ ಭದ್ರತೆ ಕುರಿತು ಆತಂಕ ಹೆಚ್ಚುತ್ತಿರುವ ಹಿನ್ನೆಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎಲೆಕ್ಟ್ರಿಕ್ ಬಸ್‌ಗಳ ನಿರ್ವಹಣೆ ವಿಚಾರದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಮತ್ತೊಮ್ಮೆ ಪತ್ರ ಬರೆದಿದ್ದಾರೆ.

ನಗರದ ಸಂಚಾರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಸಂಸ್ಥೆಯ ಬಳಿ 6 ಸಾವಿರಕ್ಕೂ ಹೆಚ್ಚು ಬಸ್‌ಗಳಿದ್ದು, ಸುಮಾರು 1,700 ಎಲೆಕ್ಟ್ರಿಕ್ ಬಸ್‌ಗಳಾಗಿವೆ. ಆದರೆ ಇತ್ತೀಚೆಗೆ ಈ ಬಸ್‌ಗಳಿಂದ ಅಪಘಾತಗಳು ಹಾಗೂ ಬ್ರೇಕ್ ವೈಫಲ್ಯ ಪ್ರಕರಣಗಳು ಹೆಚ್ಚುತ್ತಿರುವುದಾಗಿ ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ಗುತ್ತಿಗೆ ಮಾದರಿಯಲ್ಲಿ ಖಾಸಗಿ ಸಂಸ್ಥೆಗಳ ಮೂಲಕ ಬಸ್‌ಗಳನ್ನು ಓಡಿಸಲಾಗುತ್ತಿದ್ದು, ಚಾಲಕರ ನೇಮಕವೂ ಕಂಪನಿಯದ್ದೇ ಆಗಿರುವುದರಿಂದ ಅಪಘಾತಗಳಿಗೆ ಹೊಣೆಗಾರಿಕೆ ನಿಗದಿ ಮಾಡುವುದು ಕಷ್ಟವಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಬ್ಯಾಟರಿ ಸಮಸ್ಯೆಯಿಂದ ಬಸ್‌ಗಳು ಮಧ್ಯದಲ್ಲೇ ನಿಲ್ಲುತ್ತಿರುವುದು ಕಾರ್ಯಾಚರಣೆಗೆ ಅಡಚಣೆ ತಂದಿದೆ.

ಒಂದು ದಿನಕ್ಕೆ 200 ಕಿಲೋಮೀಟರ್ ಓಡಬೇಕಾದ ಬಸ್‌ಗಳು 100 ರಿಂದ 120 ಕಿಲೋಮೀಟರ್ ಮಾತ್ರ ಸಂಚರಿಸುತ್ತಿವೆ. 45 ದಿನಗಳಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರೂ ಕ್ರಮವಾಗದ ಹಿನ್ನೆಲೆ ಎರಡನೇ ಬಾರಿ ಪತ್ರ ಬರೆದಿರುವುದಾಗಿ ಸಚಿವರು ತಿಳಿಸಿದ್ದಾರೆ.

ತುಮಕೂರು| ಕಾರು–ಟ್ರಾಕ್ಟರ್ ಡಿಕ್ಕಿ, ಚಾಲಕ ಸ್ಥಳದಲ್ಲೇ ಸಾವು!

0

ತುಮಕೂರು: ಹಿಂಬದಿಯಿಂದ ಅತಿ ವೇಗವಾಗಿ ಬಂದ ಕಾರೊಂದು ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಟ್ರಾಕ್ಟರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಮೃತನನ್ನು ಕೆಂಪೇಗೌಡ ಎಂದು ಗುರುತಿಸಲಾಗಿದೆ. ಈ ಅಪಘಾತವು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹೇರೂರು ಬ್ರಿಡ್ಜ್ ಮೇಲೆ ಸಂಭವಿಸಿದೆ. ಕಾರಿನ ಡಿಕ್ಕಿಯ ರಭಸಕ್ಕೆ ಟ್ರಾಕ್ಟರ್ ಪಲ್ಟಿಯಾಗಿದ್ದು, ಚಾಲಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ಬಳಿಕ ಮೃತದೇಹವನ್ನು ಕುಣಿಗಲ್‌ನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಪ್ರಕರಣ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಕೊಲಂಬೊದಲ್ಲಿ ಭಾರತಕ್ಕೆ ಭರ್ಜರಿ ಜಯ: ಪಾಕ್‌ ಸೋಲೋದು ಗೊತ್ತಾಗ್ತಿದ್ದಂತೆ ಮೈದಾನದಿಂದ ನಿರ್ಗಮಿಸಿದ ಪಿಸಿಬಿ ಅಧ್ಯಕ್ಷ

0

ಕೊಲಂಬೊ: ಭಾರತ-ಪಾಕಿಸ್ತಾನ ಪೈಪೋಟಿ ಎಂದೇ ಪ್ರಸಿದ್ಧಿ ಪಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಮತ್ತೊಮ್ಮೆ ನಿರಾಸೆ ಮೂಡಿಸಿದೆ. ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ 61 ರನ್ ಅಂತರದ ಭರ್ಜರಿ ಜಯ ಸಾಧಿಸಿದೆ.

176 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರಂಭದಲ್ಲೇ ಕುಸಿದು ಪವರ್ ಪ್ಲೇಯಲ್ಲೇ 4 ಪ್ರಮುಖ ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಉಸ್ಮಾನ್ ಖಾನ್ ಮಾತ್ರ ಪ್ರತಿರೋಧ ತೋರಿದರೆ ಉಳಿದ ಬ್ಯಾಟರ್‌ಗಳು ಬೇಗನೆ ಔಟ್ ಆದರು.

12ನೇ ಓವರ್‌ನಲ್ಲಿ ಕುಲ್‌ದೀಪ್ ಯಾದವ್ ಬೌಲಿಂಗ್‌ನಲ್ಲಿ ಮೊಹಮ್ಮದ್ ನವಾಜ್ ಕ್ಯಾಚ್ ಔಟ್ ಆದ ಕ್ಷಣದಿಂದ ಪಂದ್ಯ ಸಂಪೂರ್ಣ ಭಾರತ ಕಡೆ ತಿರುಗಿತು. ಈ ವೇಳೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸ್ಟೇಡಿಯಂ ತೊರೆದು ಹೊರಟ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.

ಭಾರತದ ಬೌಲರ್‌ಗಳ ದಾಳಿಗೆ ಪಾಕ್ ತಂಡ 18 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್ ಆಯಿತು. ಗೆಲುವಿನ ಬಳಿಕ ವಿವಿಧ ದೇಶಗಳ ಅಭಿಮಾನಿಗಳು ಸಂಭ್ರಮಿಸಿದರು.

ಪ್ರತಿದಿನವೂ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ: ದರ್ಶನ್ ಬರ್ತ್​​ಡೇಗೆ ನಟಿ ರಕ್ಷಿತಾ ಭಾವುಕ ಪೋಸ್ಟ್

ಬೆಂಗಳೂರು: ನಟ ದರ್ಶನ್ ಜೈಲಿನಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ನೋವುಂಟುಮಾಡಿದೆ. ಕಳೆದ ವರ್ಷ ಇದೇ ದಿನ ಕುಟುಂಬದ ಜೊತೆ ಸಂಭ್ರಮಿಸಿದ್ದರೂ ಈ ಬಾರಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.

ಈ ನಡುವೆ ನಟಿ ರಕ್ಷಿತಾ ಗೆಳೆಯನನ್ನು ನೆನೆದು ಭಾವುಕ ಸಂದೇಶ ಪ್ರಕಟಿಸಿದ್ದಾರೆ. ದರ್ಶನ್, ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್ ಒಟ್ಟಿಗೆ ಇರುವ ಹಳೆಯ ಚಿತ್ರವನ್ನು ಹಂಚಿಕೊಂಡು ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

ಇನ್ನೊಂದು ಸಂದೇಶದಲ್ಲಿ ಪ್ರತಿದಿನವೂ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ, ನೀನು ಮತ್ತೆ ಸಂತೋಷವಾಗಿ ಇರುವ ದಿನ ಬರಲಿ ಎಂದು ಬರೆದು ಹೃದಯಸ್ಪರ್ಶಿ ಮಾತುಗಳನ್ನಾಡಿದ್ದಾರೆ.

ಜಾಮೀನು ವಜಾದ ಹಿನ್ನೆಲೆಯಲ್ಲಿ ದರ್ಶನ್ ಜೈಲಿನಲ್ಲೇ ಉಳಿದಿದ್ದು ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿದಿದೆ. ಅಭಿಮಾನಿಗಳು ಬಿಡುಗಡೆಗೆ ಕಾಯುತ್ತಿದ್ದಾರೆ.

ಚಾಮರಾಜನಗರ| ಉರುಳಿಗೆ ಸಿಲುಸಿ ಬೃಹತ್ ಗಾತ್ರದ ಹುಲಿ ಸಾವು!

0

ಚಾಮರಾಜನಗರ:- ಜಿಲ್ಲೆಯ ಹನೂರು ತಾಲ್ಲೂಕು, ಗುಂಡಾಲ್ ಜಲಾಶಯದ ಬಳಿ ಬೃಹತ್ ಗಾತ್ರದ ಹುಲಿಯೊಂದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ವರದಿಗಳ ಪ್ರಕಾರ, ಸ್ಥಳೀಯ ಬೇಟೆಗಾರರು ಜಲಾಶಯದ ಪ್ರಾಣಿಗಳನ್ನು ಸೆರೆ ಹಿಡಿಯಲು ಉರುಳು ಹಾಕಿದ್ದರು, ಅದಕ್ಕೆ ಹುಲಿ ಸಿಲುಕಿಸಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಘಟನೆ ಸ್ಥಳಕ್ಕೆ ಬಿ.ಆರ್.ಟಿ. ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಡಿಸಿಎಫ್ ಶ್ರೀಪತಿ ವಲಯ ಅರಣ್ಯ ಅಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಸ್ಥಳೀಯ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯ ಪೊಲೀಸರಿಗೆ ಕೂಡ ಮಾಹಿತಿ ನೀಡಲಾಗಿದೆ, ಮತ್ತು ಶ್ವಾನದಳದ ಸಿಬ್ಬಂದಿ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಜಾಗರಣೆಗೆ ಹೋದ ಕುಟುಂಬಕ್ಕೆ ಶಾಕ್ — ಲಕ್ಷಾಂತರ ಮೌಲ್ಯದ ಚಿನ್ನ, ನಗದು ಕಳವು

0

ವಿಜಯಪುರ: ಮಹಾಶಿವರಾತ್ರಿ ಜಾಗರಣೆಯನ್ನು ಬಂಡವಾಳ ಮಾಡಿಕೊಂಡು ಕಳ್ಳರು ಮನೆ ಕಳ್ಳತನ ನಡೆಸಿದ ಘಟನೆ ವಿಜಯಪುರ ನಗರದ ಶಾರದಾ ನಗರದಲ್ಲಿ ನಡೆದಿದೆ.

ಸೋಮಶೇಖರ ಗಣಿ ಅವರಿಗೆ ಸೇರಿದ ಮನೆಯಲ್ಲಿ ಕಳ್ಳರು ನುಗ್ಗಿ 40 ಸಾವಿರ ರೂಪಾಯಿ ನಗದು, 154 ಗ್ರಾಂ ಚಿನ್ನಾಭರಣ ಮತ್ತು 270 ಗ್ರಾಂ ಬೆಳ್ಳಿ ಆಭರಣ ಕದ್ದೊಯ್ದಿದ್ದಾರೆ. ಕುಟುಂಬಸ್ಥರು ಮನೆಗೆ ಬೀಗ ಹಾಕಿ ಶಿವಗಿರಿಗೆ ಜಾಗರಣೆಗೆ ತೆರಳಿದ್ದರು.

ಇಂಡಿಯಾ – ಪಾಕ್ ಟಿ20 ಕ್ರಿಕೆಟ್ ಪಂದ್ಯ ಇದ್ದ ಕಾರಣ ಬೀದಿಯಲ್ಲಿ ಜನಸಂಚಾರವೂ ಇರಲಿಲ್ಲ. ಇದೇ ಅವಕಾಶ ಬಳಸಿಕೊಂಡ ಖದೀಮರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಗೋಲಗುಂಬಜ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ತಂಡದಿಂದ ಪರಿಶೋಧನೆ ನಡೆಸಲಾಗಿದ್ದು ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!