ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶ್ರಾವಣ ಮಾಸದ ಅಂಗವಾಗಿ ನಗರದ ಶ್ರೀ ಕೃಷ್ಣಾಜಿ ರಂಗರಾವ್ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಮೃತ ಭೋಜನ ಕಾರ್ಯಕ್ರಮಕ್ಕೆ ಶಾಲಾ ಭೂದಾನಿ ಆನಂದರಾವ್ ಕುಲಕರ್ಣಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಾನಿಗಳ ನೆರವಿನಿಂದ ಶ್ರಾವಣ ಮಾಸದಲ್ಲಿ ಅಮೃತ ಭೋಜನ ಹಮ್ಮಿಕೊಂಡಿರುವುದು ಶಾಲಾ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಪೂರಕವಾಗಿದೆ. ಪ್ರತಿವರ್ಷ ಅಮೃತ ಭೋಜನ ಕಾರ್ಯಕ್ರಮ ನಡೆಯುವುದರಿಂದ ಮಕ್ಕಳ ಹಾಜರಾತಿ ಹಾಗೂ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಸ್.ಬಿ. ನಿಡಗುಂದಿ ಮಾತನಾಡಿ, ಸರ್ಕಾರಿ ಶಾಲೆಗಳ ಬಗ್ಗೆ ಸಾರ್ವಜನಿಕರು ಹೊಂದಿರುವ ಅಭಿಮಾನಕ್ಕೆ ಅಮೃತ ಭೋಜನ ಕಾರ್ಯಕ್ರಮ ಸಾಕ್ಷಿಯಾಗಿದೆ. ಅನೇಕ ದಾನಿಗಳು ಪ್ರತಿವರ್ಷ ಕಾರ್ಯಕ್ರಮಕ್ಕೆ ನೆರವು ನೀಡಲು ಮುಂದಾಗಿರುವುದು ಸಂತಸದ ಸಂಗತಿ. ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ದಾನಿಗಳು ಕೈಜೋಡಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.
ಶಿಕ್ಷಣ ಪ್ರೇಮಿ ಅರ್ಚನಾ ಕುಲಕರ್ಣಿ, ಶಿಕ್ಷಕರಾದ ಎಸ್.ಎಂ. ಹಳ್ಳದ, ಡಿ.ಎಸ್. ಬಡಿಗೇರ ಹಾಗೂ ಬಿ.ಟಿ. ತಾಳಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಹಲವು ಸೌಲಭ್ಯಗಳಿದ್ದು, ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ೧೨೦ ವಿದ್ಯಾರ್ಥಿಗಳು ಅಮೃತ ಭೋಜನ ಸವಿದು ಸಂತಸಪಟ್ಟರು. ಕಾರ್ಯಕ್ರಮಕ್ಕೆ ನೆರವು ನೀಡಿದ ದಾನಿಗಳಿಗೆ ವಿದ್ಯಾರ್ಥಿಗಳು ಹಾಗೂ ಶಾಲೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
ಶಿಕ್ಷಕಿ ಕೌಶಲ್ಯ ಕುರಿ ವಂದನಾರ್ಪಣೆ ಮಾಡಿದರು. ಪ್ರಶಿಕ್ಷಣಾರ್ಥಿಗಳಾದ ಶರಣು ಖವಾಸ್ತೆ ಹಾಗೂ ಗೂಳಪ್ಪ ಬೂದಿಹಾಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.



