Home Blog Page 3160

ಕೊರೊನಾ; ಸೋಂಕಿನ ಸ್ಫೋಟ; 405 ಜನರಿಗೆ ಸೋಂಕು; ಮೂವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಮೇ 11 ಮಂಗಳವಾರ ಸೋಂಕಿನ ಸ್ಫೋಟ ಮುಂದುವರೆದಿದೆ. ಕಳೆದ ಒಂದು ವಾರದಿಂದ ಸೋಂಕು ಪ್ರಮಾಣದಲ್ಲಿ ಹೆಚ್ಚಳವಾಗುತ್ತಾ ಸಾಗುತ್ತಿದೆ. ಮತ್ತೆ ಇಂದು
ಕೋವಿಡ್ ನಿಂದ ಮೂರು ಜನ ಮಹಿಳೆಯರು ಮೃತಪಟ್ಟಿದ್ದಾರೆ.

ಇಂದಿನ 405 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 15532 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -237, ಮುಂಡರಗಿ-54, ನರಗುಂದ-25, ರೋಣ-33, ಶಿರಹಟ್ಟಿ-48 ಹೊರಜಿಲ್ಲೆಯ-08 ಸೇರಿದಂತೆ 405 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ ಮಾಹಿತಿ ಅಂತೆ ಮೂವರು ಮೃತಪಟ್ಟಿದ್ದಾರೆ.

ಬೆಟಗೇರಿ ಭಾಗದ ನಿವಾಸಿ 83 ವರ್ಷ ವಯಸ್ಸಿನ ಮಹಿಳೆ, ಮೇ 09 ರಂದು ಮೃತಪಟ್ಟಿದ್ದಾರೆ.

ಬೆಟಗೇರಿಯ ನಿವಾಸಿ 55 ವರ್ಷದ ಮಹಿಳೆ ಮೇ 10ಕ್ಕೆ ಮೃತಪಟ್ಟಿದ್ದಾರೆ.

ಬೆಟಗೇರಿಯ 40 ವರ್ಷದ ಮಹಿಳೆ ಮೇ 09 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹೇಳಿದ್ದಾರೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದಾಗಿ ಇದುವರೆಗೂ ಜಿಲ್ಲೆಯಲ್ಲಿ
163 ಜನರು ಸೋಂಕಿಗೆ ಬಲಿಯಾದಂತಾಗಿದೆ.

ಇಂದು 212 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 13629 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 1740 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 193 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಕೋವಿಡ್ ನಿಯಮ ಉಲ್ಲಂಘನೆ; ಇಬ್ಬರು ವರ್ತಕರ ಮೇಲೆ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಗದಗ

ಮಹಾಮಾರಿ ಸೋಂಕು ನಿಯಂತ್ರಣಕ್ಕಾಗಿ ಸರಕಾರ ಹತ್ತು ಹಲವು ನಿರ್ಬಂಧಗಳನ್ನು ಹೇರಿದರೂ ಜನರು ಮಾತ್ರ ಸುದಾರಿಸುತ್ತಿಲ್ಲ. ಅದರಲ್ಲೂ ದುಡ್ಡಿನ ಆಸೆಗೆ ಬಿದ್ದಿರುವ ವರ್ತಕರದಂತೂ ಹೇಳತೀರದಾಗಿದೆ. ಯಾವುದೇ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಅವಕಾಶ ಮಾತ್ರ ಕೊಡಲಾಗಿದೆ. ಆದರೆ ಬಟ್ಟೆಗಳನ್ನು ಮಾರಾಟ ಮಾಡಲು ಅವಕಾಶ ಇಲ್ಲ. ಆದರೂ ಬೆಟಗೇರಿಯ ರಜಪೂತಗಲ್ಲಿಯಲ್ಲಿ ಅಂಗಡಿ ತೆರದು ಭರ್ಜರಿ ವ್ಯಾಪಾರ ಮಾಡುತ್ತಿದ್ದ ಎಸ್ ಟಿ ವನ್ನಾಲ್ ಬಟ್ಟೆ ಅಂಗಡಿಯ ಮೇಲೆ ಪೊಲೀಸರು ದಾಳಿ ಮಾಡಿ ಮಾಲೀಕ ಹಾಗೂ ಮಗನ ಮೇಲೆ ಸೋಂಕು ಹರಡಲು ಕಾರಣವಾದ ಕೇಸ್ ಜಡಿದಿದ್ದಾರೆ.

ರಜಪೂತಗಲ್ಲಿಯ ಬಟ್ಟೆ ಅಂಗಡಿಯ ಮಾಲೀಕ ಶಿವರಾಮ್ ತಪ್ಪಣ್ಣ ವನ್ನಾಲ್ ಹಾಗೂ ಮಗ ನಾರಾಯಣ ಶಿವರಾಮ ವನ್ನಾಲ್ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಸರಕಾರದ ಆದೇಶ ಉಲ್ಲಂಘಿಸಿದ್ದು ಅಲ್ಲದೇ ಜನರು ಮಾಸ್ಕ್, ಸಾಮಾಜಿಕ ಅಂತರ ಮರೆತು ವ್ಯಾಪಾರದಲ್ಲಿ ತೊಡಗಿದ್ದು ಸೋಂಕು ಹರಡಲು ಅವಕಾಶ ಮಾಡಿಕೊಡಲಾಗಿತ್ತು.

ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯ ಪಿಎಸ್ಐ ರಾಜೇಶ್ ಬಟಗುರ್ಕಿ ಮಾಹಿತಿ ನೀಡಿದ್ದಾರೆ.

ಪೊಲೀಸರ ದಾಳಿ; ಜೂಜಾಟದಲ್ಲಿ ತೊಡಗಿದ್ದ ಆರು ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್ ನಿಯಮಾವಳಿ ಮೀರಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಆರು ಜನರ ಮೇಲೆ ಪೊಲೀಸರು ದಾಳಿ ಮಾಡಿ ಬಂಧಿಸಿದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹೈತಾಪೂರ‌ ಗ್ರಾಮದಲ್ಲಿ ನಡೆದಿದೆ.

ಹೈತಾಪೂರ ಗ್ರಾಮದ ಮೈಲಾಂಬಿಕಾ ದೇವಸ್ಥಾನದ ಮುಂದೆ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಮಂಜುನಾಥ್ ಬಸಪ್ಪ ಗೋಡಿ, ಬಸಪ್ಪ ಹೊನಕೇರಪ್ಪ ಪೂಜಾರ, ನಿಂಗನಗೌಡ್ ವಿರುಪಾಕ್ಷಗೌಡ್ ಪಾಟೀಲ್, ರಾಯನಗೌಡ್ ಈಶ್ವರಗೌಡ್ ಪಾಟೀಲ್, ನಾಗಪ್ಪ ಮಹಾದೇವಪ್ಪ ಪೂಜಾರ, ಲಕ್ಷ್ಮಣ್ಣ ಭರಮಪ್ಪ ಪೂಜಾರ ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರಿಂದ ನಗದು 920 ರೂ, ಗಳನ್ನು ಜಪ್ತಿ ಮಾಡಲಾಗಿದೆ. ಮುಂಡರಗಿ ಪಿಎಸ್ಐ ನೂರಜಾನ್ ಸಬರ್ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು.

ಮುಂಡರಗಿ ಠಾಣೆಯಲ್ಲಿ ಜೂಜಾಟ ಹಾಗೂ ಕೋವಿಡ್ ನಿಯಮಾವಳಿ ಉಲ್ಲಂಘಿಸಿದ ಪ್ರಕರಣ ದಾಖಲಾಗಿದೆ.

ಪತ್ನಿಯೊಂದಿಗೆ ಸಲುಗೆ; ಕೊಡಲಿಯಿಂದ ಹೊಡೆದು ಕೊಲೆಗೆ ಯತ್ನ

ವಿಜಯಸಾಕ್ಷಿ ಸುದ್ದಿ, ಗದಗ

ತನ್ನ ಪತ್ನಿಯೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದ ಯುವಕನನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಘಟನೆ ಗದಗ ತಾಲೂಕಿನ ಗಾವರವಾಡ ಗ್ರಾಮದಲ್ಲಿ ನಡೆದಿದೆ.

ಮಲ್ಲಯ್ಯ ಮಲ್ಲಿಕಾರ್ಜುನಯ್ಯ ಕುಮಾರಗೊಪ್ಪ ಎಂಬ ಯುವಕನೇ ಕೊಲೆ ಯತ್ನದಲ್ಲಿ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆರೋಪಿ ಮಲ್ಲಪ್ಪ ಚನ್ನಪ್ಪ ಅರಳಿ ಎಂಬಾತನೇ ಕೊಲೆಗೆ ಯತ್ನಿಸಿದಾತ.

ಗಾಯಾಳು ಮಲ್ಲಯ್ಯ ಎಂದಿನಂತೆ ತನ್ನ ಮನೆಯ ಮೇಲೆ ಮಲಗಿದ್ದಾಗ ಶನಿವಾರ ಬೆಳಗಿನ ಜಾವ ಆರೋಪಿ ಮಲ್ಲಪ್ಪ ಕೊಡಲಿಯಿಂದ ಹೊಡೆದಿದ್ದಾನೆ. ಸ್ವಲ್ಪದರಲ್ಲಿ ಗಾಯಾಳು ಮಲ್ಲಯ್ಯ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಟಗೇರಿ ಪೊಲೀಸರ ದಾಳಿ; 7 ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ನಿತ್ಯವೂ ದುಡಿದು ಬದುಕೋ ಜನರೆಲ್ಲಾ ಒಂದಾಗಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದಾಗ ಬೆಟಗೇರಿ ಪೊಲೀಸರು ದಾಳಿ ಬಂಧಿಸಿದ್ದಾರೆ.

ಗದಗ ತಾಲೂಕಿನ ನಾಗಸಮುದ್ರ ಗ್ರಾಮದ ಬನ್ನಿಕೊಪ್ಪ ರಸ್ತೆಯಲ್ಲಿ ಇವರೆಲ್ಲರೂ ಇಸ್ಪೀಟು ಎಲೆಗಳ ಸಹಾಯದಿಂದ ಜೂಜಾಟದಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇಲೆ ಬೆಟಗೇರಿ ಠಾಣೆಯ ಪಿಎಸ್ಐ ರಾಜೇಶ್ ಬಟಗುರ್ಕಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.

ಬಂಧಿತರು ಪೊಲೀಸರ ಪ್ರಕಾರ ಡ್ರೈವರ್ ಕೆಲಸ ಮಾಡೋ ಈಶಪ್ಪ ಗೂಳಪ್ಪ ಭಾವಿ, ಗೌಂಡಿ ಕೆಲಸಗಾರ ಭವಾನಿಸಾಬ್ ಅಲ್ಲಾಸಾಬ್ ಹೊಸಳ್ಳಿ, ಕೂಲಿ ಕೆಲಸ ಮಾಡುವಾತ ಶರೀಫಸಾಬ್ ಅಲ್ಲಾಸಾಬ್ ನದಾಫ್, ಕೂಲಿ ಕೆಲಸ ಮಾಡುವಾತ ಬಸವರಾಜ್ ತೀರಬಸಪ್ಪ ಕಟಗಿ, ಗೌಂಡಿ ಕೆಲಸಗಾರ ಬಾಳನಗೌಡ್ ಹನಮಂತಗೌಡ್ ಮರಿಗೌಡ್ರ, ಹಮಾಲಿ ಮಾಡುವ
ರಮೇಶ್ ಬಸಪ್ಪ ಕೊಳ್ಳಿ, ಕೂಲಿ ಕೆಲಸ ಮಾಡುವ ಕುಬೇರಪ್ಪ ಫಕ್ಕೀರಪ್ಪ ದೇಸುಣಕಿ ಎನ್ನಲಾಗಿದೆ.

ಬಂಧಿತರಿಂದ 4000 ಸಾವಿರ ರೂ,ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಟಗೇರಿ ಠಾಣೆಯಲ್ಲಿ ಜೂಜಾಟದ ಪ್ರಕರಣ ಮಾತ್ರ ದಾಖಲು ಮಾಡಿಕೊಳ್ಳಲಾಗಿದೆ. ಇಲ್ಲಿ ಕೋವಿಡ್ ನಿಯಮಾವಳಿ ಉಲ್ಲಂಘನೆ ಆಗರಲಿಕ್ಕಿಲ್ಲ.

ಅಂದರ್-ಬಾಹರ್ ಜೂಜಾಟ; 12 ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

12 ಜನರ ಗುಂಪೊಂದು ಊರ ದ್ಯಾಮವ್ವನ ಗುಡಿ ಎದುರಿಗೆ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಲಕ್ಷ್ಮೇಶ್ವರ ಪೊಲೀಸರು ದಾಳಿ ಬಂಧಿಸಲಾಗಿದೆ.

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಗ್ರಾಮದ ದ್ಯಾಮವ್ವನ ಗುಡಿ ಎದುರಿಗೆ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಗ್ರಾಮದ ಪರಸಪ್ಪ ಹನಮಂತಪ್ಪ ಹುಣಸಿಮರದ, ಮಲ್ಲೇಶ್ ಈರಪ್ಪ ಕುಮಸಿ, ಬಸವಂತಪ್ಪ ಮಹಾದೇವಪ್ಪ ಕಾಳೆ, ರಾಮಪ್ಪ ಹನುಮಪ್ಪ ಹುಣಸಿಮರದ, ಮಹಾದೇವಪ್ಪ ಲಕ್ಷ್ಮಪ್ಪ ಪೂಜಾರ್, ನಿಂಗಪ್ಪ ಮೇಲಗಿರಿಯಪ್ಪ ಬನ್ನಿಕೊಪ್ಪ , ಶಿವಾನಂದ ಮಹಾದೇವಪ್ಪ ಮಾಯಣ್ಣವರ, ಈಶ್ವರಗೌಡ ಹನುಮಂತಗೌಡ ಪಾಟೀಲ್, ಯಲ್ಪಪ್ಪ ಬಸಪ್ಪ ಕಾಳೆ, ಬುಡ್ಡೆಸಾಬ್ ಇಮಾಮಸಾಬ್ ತೆಗ್ಗಿನಮನಿ, ಮಾಬುಸಾಬ ಮರ್ದಾನಸಾಬ್ ಗದಗಿನ, ಆನಂದ ಶಿವಪ್ಪ ಗೌಳಿ ಎಂಬುವವರನ್ನು ಬಂಧಿಸಲಾಗಿದೆ.

ಲಕ್ಷ್ಮೇಶ್ವರ ಪಿಎಸ್ಐ ಎಸ್ ವೈ ಲೋಹಾರ ಹಾಗೂ ಸಿಬ್ಬಂದಿ ಈ ದಾಳಿ ಮಾಡಿದ್ದರು. ಈ ಪ್ರಕರಣದಲ್ಲಿ ಯಾವುದೇ ಕೋವಿಡ್ ನಿಯಮಾವಳಿ ಉಲ್ಲಂಘನೆ ಆದ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋವಿಡ್ ನಿಯಮ ಉಲ್ಲಂಘಿಸಿ ಬಟ್ಟೆ ವ್ಯಾಪಾರ; ಪ್ರಕರಣ ದಾಖಲು

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ಸೋಂಕು ತಡೆಗಟ್ಟಲು ಸರಕಾರ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಕೇವಲ ಅಗತ್ಯದ ವಸ್ತುಗಳ ಮಾರಾಟ ಹಾಗೂ ಖರೀದಿಸಲು ಮಾತ್ರ ಅವಕಾಶ ಮಾಡಿಕೊಟ್ಟಿದೆ. ಆದರೆ ಕೋವಿಡ್ ನಿಯಮಾವಳಿ ಉಲ್ಲಂಘಿಸಿದ ಬಟ್ಟೆ ವ್ಯಾಪಾರಿಯೊಬ್ಬನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಗದಗ ಜಿಲ್ಲೆಯ ನರೇಗಲ್ ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಪವನಪುತ್ರ ಶೋ ರೂಮ್ ಮಾಲೀಕ ಹೇಮರಾಜ್ ಅಲಿಯಾಸ್ ಚಂದ್ರು ಕೀ‌ಮರಾಜ್ ರಾಜಪುರೋಹಿತ ಎಂಬಾತ ತನ್ನ ಅಂಗಡಿ ತೆರದು ವ್ಯಾಪಾರ ಮಾಡುತ್ತಿದ್ದಾಗ ನರೇಗಲ್ ಠಾಣೆಯ ಪಿಎಸ್ಐ ರಾಘವೇಂದ್ರ ಎಸ್ ಹಾಗೂ ಸಿಬ್ಬಂದಿ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ; 4 ಜನರ ಬಂಧನ, 50 ಸಾವಿರ ರೂ ವಶ

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್ ನಿಯಮಾವಳಿ ಉಲ್ಲಂಘಿಸಿ ನಡೆಯುತ್ತಿದ್ದ ಇಸ್ಪೀಟು ಜೂಜಾಟದ ಅಡ್ಡೆಯ ಮೇಲೆ ಶಿರಹಟ್ಟಿ
ಪೊಲೀಸರು ದಾಳಿ ಮಾಡಿ 4 ಜನರನ್ನು ಬಂಧಿಸಿದ್ದು, ನಾಲ್ಕು ಜನ ಪರಾರಿಯಾಗಿದ್ದಾರೆ.

ಶಿರಹಟ್ಟಿ ತಾಲೂಕಿನ ಕೆರಹಳ್ಳಿ ತಾಂಡದ ಬಸವಣ್ಣ ದೇವಸ್ಥಾನದ ಮುಂದೆ ಮಾಸ್ಕ್, ಸಾಮಾಜಿಕ ಅಂತರ ಮರೆತು ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಆರೋಪಿಗಳು ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದರು.

ಶಿರಹಟ್ಟಿ ಠಾಣೆಯ ಪಿಎಸ್ಐ ನವೀನ ಜಕ್ಕಲಿ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು.

ಜೂಜಾಟದಲ್ಲಿ ತೊಡಗಿದ್ದ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದ ಯಲ್ಲಪ್ಪ ಬಸಪ್ಪ ಜೀವಿ, ಮುಂಡರಗಿಯ ರಾಜೇಸಾಬ್ ಸುಭಾನಸಾಬ್ ಡಂಬಳ, ಮುರಡಿತಾಂಡಾದ ಚನ್ನಪ್ಪ ದಾವಜಪ್ಪ ರಾಥೋಡ್, ಕೃಷ್ಣ ರಾಮಪ್ಪ ಅರ್ಕಸಾಲಿ, ಬಾಗೇವಾಡಿಯ ಚಿದಾನಂದ ಹಡಪದ, ಹಾಗೂ ಕೆರಹಳ್ಳ ತಾಂಡಾದ ಸುನಿಲ್ ಚಂದ್ರಪ್ಪ ಲಮಾಣಿ, ಕುಮಾರ್ ಶಿವಪ್ಪ ಲಮಾಣಿ, ಮಹಾಂತೇಶ್ ಲಮಾಣಿ ಇವರಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಉಳಿದ ನಾಲ್ವರು ಪೊಲೀಸರ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.

ಜೂಜಾಟ ಹಾಗೂ ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣ ದಾಖಲಾಗಿದೆ.

ವಿಜಯ್ ದೇವರಕೊಂಡ ಜೊತೆ ತೆರೆಹಂಚಿಕೊಳ್ಳಲಿರುವ ಕತ್ರಿನಾ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ದೇವರಕೊಂಡ ಅವರು ಬಾಲಿವುಡ್ ಬೆಡಗಿಯೊಂದಿಗೆ ರೋಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ. ದೇವರಕೊಂಡ ಸದ್ಯ ಲೈಗರ್ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಸದ್ಯ ಈ ಚಿತ್ರದ ಮೇಲೆ ಹೆಚ್ಚಿನ ನಿಗಾ ಇಟ್ಟುಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಲೈಗರ್ ಚಿತ್ರ ಮೂಡಿ ಬಂದಿದೆ.

ಇತ್ತೀಚಿಗಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಿರುವ ವಿಜಯ್, ಅಭಿಮಾನಿಗಳಿಗೆ ಲೈಗರ್ ಟೀಸರ್ ಗಿಫ್ಟ್ ನೀಡಲಿದ್ದಾರೆ ಎಂದೇ ಎಲ್ಲ ಅಭಿಮಾನಿಗಳು ಭಾವಿಸಿದ್ದರು. ಆದರೆ, ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಟೀಸರ್ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ.
ಇದರ ಮಧ್ಯೆ ವಿಜಯ್ ಅವರ ಮತ್ತೊಂದು ಸುದ್ದಿ ಹೊರ ಬಿದ್ದಿದ್ದು, ಮತ್ತೊಂದು ಪ್ಯಾನ್ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ.

ನಿರ್ದೇಶಕ ಕೊರಟಾಲ ಶಿವ ಅವರ ಮುಂದಿನ ಸಿನಿಮಾದಲ್ಲಿ ವಿಜಯ್ ನಾಯಕನಾಗಿ ಮಿಂಚಲಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರದಾಡುತ್ತಿದೆ. ಬಿಗ್ ಬಜೆಟ್ ನಲ್ಲಿ ಸಿನಿಮಾ ತಯಾರಾಗಲಿದೆ.

ವಿಜಯ್ ಮತ್ತು ಕತ್ರಿನಾ ಕೈಫ್ ಒಂದಾಗಲಿದ್ದಾರೆ ಎಂಬ ಸುದ್ದಿ ಸದ್ಯ ಅಭಿಮಾನಿಗಳಲ್ಲಿ ರೋಮಾಂಚನ ಸೃಷ್ಟಿಸುತ್ತಿದೆ. ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಲೈಗರ್ ಸಿನಿಮಾ ಮುಗಿಯುತ್ತಿದ್ದಂತೆ ವಿಜಯ್, ಕೊರಟಾಲ ಶಿವ ಜೊತೆ ಹೊಸ ಸಿನಿಮಾ ಪ್ರಾರಂಭ ಮಾಡಲಿದ್ದಾರೆ. ಇನ್ನೊಂದೆಡೆ ಕತ್ರಿನಾ ಕೈಫ್ ಕೂಡ ಹಲವು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ.

ಪವಿತ್ರ ಗಂಗೆಯಲ್ಲಿ ತೇಲಿ ಬರುತ್ತಿದೆ ಹೆಣಗಳ ರಾಶಿ!

ವಿಜಯಸಾಕ್ಷಿ ಸುದ್ದಿ, ಪಟನಾ

ದೇಶದಲ್ಲಿ ಕೊರೊನಾದಿಂದಾಗಿ ಸೋಂಕಿತರ ಅಂತ್ಯ ಸಂಸ್ಕಾರಕ್ಕಾಗಿ ದಿನಪೂರ್ತಿ ಕಾಯಬೇಕಾದ ಪರಿಸ್ಥಿತಿ ಬಂದೋದಗಿದೆ. ಇಂತಹ ಪರಿಸ್ಥಿತಿಯ ನಡುವೆಯೇ ಗಂಗಾ ನದಿಯಲ್ಲಿ ಹೆಣದ ರಾಶಿಗಳು ಹರಿದು ಬರುತ್ತಿದ್ದ ಆತಂಕ ಮನೆ ಮಾಡುತ್ತಿದೆ.
ಗಂಗಾ ನದಿಯಲ್ಲಿ 150ಕ್ಕೂ ಹೆಚ್ಚು ಮೃತದೇಹಗಳ ರಾಶಿ ಪತ್ತೆಯಾಗಿದೆ.

ಬಿಹಾರದ ಬಕ್ಸಾರ್‌ ಜಿಲ್ಲೆಯ ಚೌಸಾ ಗ್ರಾಮದ ಹತ್ತಿರದ ಗಂಗಾ ಮಹಾದೇವ್‌ ಘಾಟ್‌ ಬಳಿ ನೂರಾರು ಹೆಣಗಳು ತೇಲಿಬಂದಿದ್ದು, ತೀರ ಸೇರಿವೆ. ನಾಯಿ, ಹದ್ದು, ಕಾಗೆಗಳು ಹೆಣಗಳನ್ನು ಕಿತ್ತು ತಿನ್ನುವ ಭಯಾನಕ ದೃಶ್ಯ ಕಂಡು ಅಲ್ಲಿಯ ಜನ ಭಯಭೀತರಾಗಿದ್ದಾರೆ.

ಈ ಮೃತದೇಹಗಳು ಕೊರೊನಾ ಸೋಂಕಿತರದ್ದು ಎಂದು ಹೇಳಲಾಗಿದೆ. ಕಾರಣ, ಹರಿದು ಬಂದ ಮೃತ ದೇಹಗಳು ಸೀಲ್ ಮಾಡಿದ ಸ್ಥಿತಿಯಲ್ಲಿ ಇವೆ. ಸ್ಮಶಾನಗಳಲ್ಲಿ ದಿನಗಟ್ಟಲೆ ಕಾಯುವ ಹಾಗೂ ಅಂತ್ಯ ಸಂಸ್ಕಾರಕ್ಕೆ ದುಬಾರಿ ವೆಚ್ಚ ಇರುವ ಹಿನ್ನೆಲೆಯಲ್ಲಿ ಈ ರೀತಿ ಹೆಣಗಳನ್ನು ನದಿಗಳಿಗೆ ಎಸೆಯಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಸದ್ಯ ಗಂಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಹೆಣಗಳು ದಡಕ್ಕೆ ಬಂದು ಸೇರುತ್ತಿವೆ. ಈ ಬೆಳವಣಿಗೆಯ ನಂತರ ದಡದ ಜನರ ಆತಂಕ ಹೆಚ್ಚಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ನದಿಯಲ್ಲಿ ಸುಮಾರು 400 ರಿಂದ 500 ಮೃತ ದೇಹಗಳನ್ನು ಕಂಡಿದ್ದಾಗಿ ಗ್ರಾಮಸ್ಥರೊಬ್ಬರು ಹೇಳಿದ್ದರೆ, ಅಧಿಕಾರಿಗಳು 40 ರಿಂದ 50ರಷ್ಟು ಹೆಣ ಪತ್ತೆಯಾಗಿವೆ ಎಂದು ಹೇಳಿದ್ದಾರೆ.

ಈ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಈ ನಡುವೆ ಕೊರೊನಾದಿಂದ ಮೃತಪಟ್ಟವರ ಶವಗಳನ್ನು ನಿರ್ವಹಣೆ ಮಾಡುವ ವಿಚಾರದಲ್ಲಿ ಬಿಹಾರ ಹಾಗೂ ಉತ್ತರ ಪ್ರದೇಶದ ನಡುವೆ ಆರೋಪ – ಪ್ರತ್ಯಾರೋಪ ಕೇಳಿ ಬಂದಿದೆ. ಬಕ್ಸರ್‌ ನ ಮಹಾದೇವ್‌ ಘಾಟ್‌ ಗೆ ಬರುವುದಕ್ಕೂ ಮುನ್ನ ಗಂಗಾ ನದಿಯು ಉತ್ತರ ಪ್ರದೇಶದ ಬಿರ್‌ ಪುರ್‌ ಹಾಗೂ ಬರೆಗಾಮ್‌ ನಗರಗಳ ಮೂಲಕ ಹಾಯ್ದು ಬರುತ್ತದೆ. ಆ ನಂತರವೇ ಮೃತ ದೇಹಗಳು ಮಹಾದೇವ್‌ ಘಾಟ್‌ ನ ದಡಕ್ಕೆ ಸೇರುತ್ತಿವೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

ಉತ್ತರ ಪ್ರದೇಶದ ಯಮುನಾ ನದಿಯಲ್ಲಿಯೂ ಇದೇ ರೀತಿ ಹೆಣಗಳ ರಾಶಿ ಹರಿದು ಬಂದಿತ್ತು. ಸದ್ಯ ಸ್ಥಿತಿಯಲ್ಲಿ ಹೆಣವನ್ನು ಸ್ಮಶಾನಕ್ಕೆ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿದರೆ ಸುಮಾರು ರೂ. 30 ಸಾವಿರದಿಂದ ರೂ. 40 ಸಾವಿರದಷ್ಟು ಖರ್ಚಾಗುತ್ತದೆ. ಹೀಗಾಗಿ ಈ ರೀತಿ ಹೆಣಗಳನ್ನು ಎಸೆಯಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

error: Content is protected !!