Home Blog

15 ವರ್ಷಗಳ ಬಳಿಕ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಮಹಿಳಾ ಡಬಲ್ಸ್‌ಗೆ ಪದಕ; ತ್ರಿಶಾ–ಗಾಯತ್ರಿ ಐತಿಹಾಸಿಕ ಸಾಧನೆ!

0

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತ್ರಿಶಾ ಜಾಲಿ–ಗಾಯತ್ರಿ ಗೋಪಿಚಂದ್ ಜೋಡಿ ಇತಿಹಾಸ ಬರೆದಿದೆ.

2026ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮಹಿಳಾ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ವರೆಗೆ ಮುನ್ನಡೆದ ಭಾರತೀಯ ಜೋಡಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.

ನವದೆಹಲಿ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಹಾಗೂ ಹಾಲಿ ಚಾಂಪಿಯನ್ ಚೀನಾದ ಲಿಯು ಶೆಂಗ್‌ಶು–ಟಾನ್ ನಿಂಗ್ ಜೋಡಿಯನ್ನು ಎದುರಿಸಿದ ತ್ರಿಶಾ–ಗಾಯತ್ರಿ, ಆರಂಭದಲ್ಲೇ ಭರ್ಜರಿ ಆಟ ಪ್ರದರ್ಶಿಸಿತು.

ಮೊದಲ ಗೇಮ್‌ನಲ್ಲಿ ಭಾರತೀಯ ಜೋಡಿ ಚೀನಾದ ಅಗ್ರ ಶ್ರೇಯಾಂಕದ ಆಟಗಾರ್ತಿಯರಿಗೆ ಪ್ರಬಲ ಪೈಪೋಟಿ ನೀಡಿ 21-18 ಅಂತರದಲ್ಲಿ ಗೆಲುವು ಸಾಧಿಸಿತು. ಈ ಮೂಲಕ ಫೈನಲ್ ಪ್ರವೇಶದ ಭರವಸೆ ಮೂಡಿಸಿತು. ಆದರೆ ನಂತರ ಚೀನಾದ ಜೋಡಿ ತಮ್ಮ ಅನುಭವ ಹಾಗೂ ಆಕ್ರಮಣಕಾರಿ ಆಟದ ಮೂಲಕ ಪಂದ್ಯಕ್ಕೆ ಮರಳಿತು.

ಎರಡನೇ ಗೇಮ್‌ನಲ್ಲಿ ಲಿಯು ಶೆಂಗ್‌ಶು–ಟಾನ್ ನಿಂಗ್ 21-13 ಅಂತರದಲ್ಲಿ ಗೆದ್ದು ಪಂದ್ಯವನ್ನು ಸಮಬಲಗೊಳಿಸಿತು. ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಚೀನಾದ ಜೋಡಿ ಸಂಪೂರ್ಣ ಹಿಡಿತ ಸಾಧಿಸಿ 21-8ರಲ್ಲಿ ಗೆಲುವು ದಾಖಲಿಸಿತು. 70 ನಿಮಿಷಕ್ಕೂ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ಚೀನಾದ ಜೋಡಿ 21-18, 13-21, 8-21 ಅಂತರದಲ್ಲಿ ಗೆದ್ದು ಫೈನಲ್‌ಗೆ ಪ್ರವೇಶಿಸಿತು.

15 ವರ್ಷಗಳ ಬಳಿಕ ಭಾರತಕ್ಕೆ ಮಹಿಳಾ ಡಬಲ್ಸ್ ಪದಕ:

ಸೆಮಿಫೈನಲ್‌ನಲ್ಲಿ ಸೋತರೂ ತ್ರಿಶಾ ಜಾಲಿ–ಗಾಯತ್ರಿ ಗೋಪಿಚಂದ್ ಜೋಡಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. ವಿಶ್ವ ಚಾಂಪಿಯನ್‌ಶಿಪ್ ಮಹಿಳಾ ಡಬಲ್ಸ್‌ನಲ್ಲಿ ಭಾರತಕ್ಕೆ 15 ವರ್ಷಗಳ ಬಳಿಕ ಪದಕ ದೊರೆತಿದೆ.

ಇದಕ್ಕೂ ಮೊದಲು ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ 2011ರಲ್ಲಿ ಕಂಚಿನ ಪದಕ ಗೆದ್ದಿತ್ತು. ಇದೀಗ ತ್ರಿಶಾ–ಗಾಯತ್ರಿ ಆ ಸಾಧನೆಯನ್ನು ಪುನರಾವರ್ತಿಸಿ ಭಾರತದ ಮಹಿಳಾ ಡಬಲ್ಸ್‌ಗೆ ಮತ್ತೊಂದು ವಿಶ್ವ ಮಟ್ಟದ ಪದಕ ತಂದುಕೊಟ್ಟಿದ್ದಾರೆ.

ಕ್ವಾರ್ಟರ್‌ಫೈನಲ್‌ನಲ್ಲಿ ಬಿಗ್ ಗೆಲುವು:

ತ್ರಿಶಾ–ಗಾಯತ್ರಿ ಜೋಡಿಯ ವಿಶ್ವ ಚಾಂಪಿಯನ್‌ಶಿಪ್ ಅಭಿಯಾನವೂ ಗಮನಾರ್ಹವಾಗಿತ್ತು. ಕ್ವಾರ್ಟರ್‌ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಚೀನಾದ ಜಿಯಾ ಯಿ ಫ್ಯಾನ್–ಜಾಂಗ್ ಶು ಕ್ಸಿಯಾನ್ ಜೋಡಿಯನ್ನು ಎದುರಿಸಿದ ಭಾರತೀಯ ಆಟಗಾರ್ತಿಯರು ಮೊದಲ ಗೇಮ್‌ನಲ್ಲಿ 16-21ರಲ್ಲಿ ಸೋತರೂ, ನಂತರದ ಎರಡು ಗೇಮ್‌ಗಳಲ್ಲಿ 21-15, 21-13 ಅಂತರದಲ್ಲಿ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿದ್ದರು. ಈ ಗೆಲುವಿನೊಂದಿಗೆ ಭಾರತಕ್ಕೆ ಪದಕ ಖಚಿತಪಡಿಸಿದ್ದರು.

ಇದಕ್ಕೂ ಮುನ್ನ ಜಪಾನ್‌ನ ಏಳನೇ ಶ್ರೇಯಾಂಕದ ರಿನ್ ಇವಾನಾಗಾ–ಕೀ ನಕಾನಿಶಿ ಜೋಡಿಯನ್ನು 21-16, 21-12 ಅಂತರದಲ್ಲಿ ಮಣಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದರು.

ಸೆಮಿಫೈನಲ್‌ನಲ್ಲಿ ಫೈನಲ್‌ಗೇರಲು ಸಾಧ್ಯವಾಗದಿದ್ದರೂ, ವಿಶ್ವದ ಅಗ್ರ ಜೋಡಿಗೆ ಮೊದಲ ಗೇಮ್‌ನಲ್ಲೇ ಸೋಲುಣಿಸಿ ಗಮನ ಸೆಳೆದ ತ್ರಿಶಾ–ಗಾಯತ್ರಿ, ಅಂತಿಮವಾಗಿ ಐತಿಹಾಸಿಕ ಕಂಚಿನ ಪದಕದೊಂದಿಗೆ ವಿಶ್ವ ಚಾಂಪಿಯನ್‌ಶಿಪ್ ಅಭಿಯಾನ ಮುಗಿಸಿದ್ದಾರೆ.

ಶಿಸ್ತು, ಪರಿಶ್ರಮದಿಂದ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ: ಡಾ. ಅಪ್ಪಣ್ಣ ಹಂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾಲಯವೆಂದರೆ ಕೇವಲ ಪಾಠ ಕಲಿಸುವ ಕೇಂದ್ರವಲ್ಲ; ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಪ್ರತಿಭಾ ಅನಾವರಣ ಹಾಗೂ ಭವಿಷ್ಯ ನಿರ್ಮಾಣಕ್ಕೆ ದಾರಿದೀಪವಾಗಿರುವ ಜ್ಞಾನದೇಗುಲ. ವಿದ್ಯಾರ್ಥಿಗಳು ಮತ್ತು ವಿದ್ಯಾಲಯದ ನಡುವಿನ ಆತ್ಮೀಯ ಹಾಗೂ ವಿಶ್ವಾಸಪೂರ್ಣ ಸಂಬಂಧವು ಶೈಕ್ಷಣಿಕ ಪ್ರಗತಿಯ ಜೊತೆಗೆ ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಪ್ರಾಂಶುಪಾಲ ಡಾ. ಅಪ್ಪಣ್ಣ ಹಂಜೆ ಹೇಳಿದರು.

ಹುಲಕೋಟಿಯ ಶ್ರೀ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026–27ನೇ ಸಾಲಿನಲ್ಲಿ ಪ್ರವೇಶ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ದಿಕ್ಸೂಚಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಅವರ ಪ್ರತಿಭೆ ಹಾಗೂ ಆಸಕ್ತಿಗಳನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವುದು ವಿದ್ಯಾಲಯದ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.

ಕಾರ್ಯಕ್ರಮದ ಸಂಘಟಕ ಹಾಗೂ ಸಾಂಸ್ಕೃತಿಕ ವಿಭಾಗದ ಸಂಯೋಜಕ ರಮೇಶ ಹುಲಕುಂದ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಲಯವನ್ನು ತಮ್ಮದೇ ಕುಟುಂಬವೆಂದು ಭಾವಿಸಿ ಶಿಸ್ತು, ಸಮಯಪಾಲನೆ, ಉತ್ತಮ ನಡತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಕುಮಾರಿ ಪ್ರಜ್ಞಾ ವರ್ಣೇಕರ ಪ್ರಾರ್ಥಿಸಿದರು. ಕಲಾ ವಿಭಾಗದ ಮುಖ್ಯಸ್ಥೆ ಮಹಾನಂದ ಹಿರೇಮಠ ಸ್ವಾಗತಿಸಿದರು. ಐಕ್ಯುಎಸಿ ಸಹ ಸಂಯೋಜಕ ಡಾ. ಮಂಜುನಾಥ ತ್ಯಾಲಗಡಿ, ಉದ್ಯೋಗ ಮಾಹಿತಿ ಕೋಶದ ಸಂಯೋಜಕ ಡಾ. ಶ್ರೀಶವಿಠ್ಠಲ ಡಿ., ಎನ್‌ಎಸ್‌ಎಸ್ ಘಟಕದ ಸಂಯೋಜಕ ವಿಜಯಕುಮಾರ ಎಸ್., ಹೊಸ ದಿಗಂತ ಕಾರ್ಯಕ್ರಮದ ಸಂಯೋಜಕ ಹುಸೇನಭಾಷಾ, ಶಿಸ್ತು ಸಮಿತಿ ಸಂಯೋಜಕ ಮಹಾಂತೇಶ ಹಾಗೂ ರೆಡ್‌ಕ್ರಾಸ್ ಸಂಯೋಜಕ ಭೀಮೇಶ ಕಾಲೇಜಿನ ವಿವಿಧ ಶೈಕ್ಷಣಿಕ ಹಾಗೂ ಸಹಪಠ್ಯ ಘಟಕಗಳ ಕುರಿತು ಪರಿಚಯಿಸಿದರು.

ಆಂತರಿಕ ಪರೀಕ್ಷಾ ವಿಭಾಗದ ಸಂಯೋಜಕ ಮನೋಜಕುಮಾರ ಜೋತಾವರ ವಂದಿಸಿದರು. ರೋವರ್ಸ್–ರೇಂಜರ್ಸ್ ಸಂಯೋಜಕಿ ಸಾವಿತ್ರಿ ಟಿ. ಕಾರ್ಯಕ್ರಮ ನಿರ್ವಹಿಸಿದರು.

ಮಾದಕ ವಸ್ತುಗಳ ದಾಸರಾಗಬೇಡಿ: ಡಾ. ಎಚ್.ವಿ. ಡಂಬಳ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಮಾದಕ ವಸ್ತು ಸೇವನೆ ನಾಗರಿಕ ಸಮಾಜದ ದುರಂತವಾಗಿದ್ದು, ನಾಡಿನ ಆಸ್ತಿ ಎಂದು ಕರೆಯಲ್ಪಡುವ ಯುವಕರೇ ಇದರ ಕರಾಳ ಛಾಯೆಗೆ ಹೆಚ್ಚು ಸಿಲುಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಾದಕ ವಸ್ತುಗಳ ಸೇವನೆ ಒಂದು ರೀತಿಯ ಮಾನಸಿಕ ದಾಸ್ಯವಾಗಿದ್ದು, ವಿದ್ಯಾರ್ಥಿಗಳು ಇದರ ಆಕರ್ಷಣೆಗೆ ಒಳಗಾಗಬಾರದು ಎಂದು ಸೋನಿಯಾ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಎಚ್.ವಿ. ಡಂಬಳ ಹೇಳಿದರು.

ಸಂಗೊಳ್ಳಿ ರಾಯಣ್ಣ ನಗರದ ಸೋನಿಯಾ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದ ವತಿಯಿಂದ ‘ಮಾದಕ ವಸ್ತು ದುರ್ಬಳಕೆ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ’ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಅಪಾರ ಶಕ್ತಿಯಿದ್ದು, ದೇಶದ ಸಮಗ್ರ ಚಿತ್ರಣವನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಒಮ್ಮೆ ಮಾದಕ ವಸ್ತುಗಳ ಆಕರ್ಷಣೆಗೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಜವಾಬ್ದಾರಿಯಿಂದ ಬಳಸಬೇಕು. ಆರೋಗ್ಯಕ್ಕೆ ಆದ್ಯತೆ ನೀಡಿ, ನೆರೆಹೊರೆಯವರಲ್ಲಿಯೂ ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಮಾದಕ ವಸ್ತುಗಳ ದುರ್ಬಳಕೆ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ದೊಡ್ಡ ಸಮಸ್ಯೆಯಾಗಿದೆ. ಇದರ ಹಿಂದೆ ದೊಡ್ಡ ಮಾಫಿಯಾ ಕಾರ್ಯನಿರ್ವಹಿಸುತ್ತಿದೆ. ಯುವಶಕ್ತಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಕುರಿತು ಆತ್ಮಾವಲೋಕನ ಅಗತ್ಯ. ವಿದ್ಯಾರ್ಥಿಗಳು ಯಾವುದೇ ಆಕರ್ಷಣೆ ಅಥವಾ ಒತ್ತಡಕ್ಕೆ ಒಳಗಾಗಿ ಮಾದಕ ವಸ್ತುಗಳ ದಾಸರಾಗಬಾರದು ಎಂದರು.

ಧಾರವಾಡದ ಡಿಮಾನ್ಸ್‌ನ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಪಾಟೀಲ ಉಪನ್ಯಾಸ ನೀಡಿ, ಮಾದಕ ವಸ್ತುಗಳ ದುರಭ್ಯಾಸವು ದಾರಿತಪ್ಪಿದ ವರ್ತನೆಯಾಗಿದೆ. ಅರೆಕ್ಷಣದ ಥ್ರಿಲ್ ಹಾಗೂ ಸಹವಾಸದೋಷದಿಂದ ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆಗೆ ಬಲಿಯಾದರೆ ಅನೇಕ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಆರೋಗ್ಯಪೂರ್ಣ ಜೀವನ ನಡೆಸಬೇಕು ಎಂದರು.

ಪ್ರಾಚಾರ್ಯ ಡಾ. ಪ್ರಕಾಶ ಜೋಗಿನ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆಯ ದುರಭ್ಯಾಸಕ್ಕೆ ಬಲಿಯಾಗದೆ ಆತ್ಮಸಾಕ್ಷಿಗನುಗುಣವಾಗಿ ಆರೋಗ್ಯಕರ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಪ್ರೊ. ಶಾಂಭವಿ ನರಗುಂದ ಪ್ರಾರ್ಥಿಸಿದರು. ಪ್ರೊ. ಮಲ್ಲಪ್ಪ ಭೈರಪ್ಪನವರ ಸ್ವಾಗತಿಸಿದರು. ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಗಂಗಾಧರ ಮರಳಿಹಳ್ಳಿ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರೊ. ಯಾಸ್ಮಿನ್ ಬೀಳಗಿ ವಂದಿಸಿದರು. ಪ್ರೊ. ಲಕ್ಷ್ಮೀ ಕುರಿ ನಿರೂಪಿಸಿದರು. ಡಾ. ಎಚ್.ವಿ. ಡಂಬಳ ಸೇರಿದಂತೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಕಲ್ಪ ಶಾಲೆಯಲ್ಲಿ ರಾಖಿ ತಯಾರಿಕೆ ಸ್ಪರ್ಧೆ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಕಲ್ಪ ಶಿಕ್ಷಣ ಸಂಸ್ಥೆ(ರಿ.)ಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹಾಗೂ ಸಹೋದರ–ಸಹೋದರಿಯರ ಬಾಂಧವ್ಯದ ಮಹತ್ವವನ್ನು ಬೆಳೆಸುವ ಉದ್ದೇಶದಿಂದ ರಾಖಿ ತಯಾರಿಕೆ ಸ್ಪರ್ಧೆ ಆಯೋಜಿಸಲಾಗಿತ್ತು.

ಶಾಲೆಯ 3ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ವಿವಿಧ ವಿನ್ಯಾಸಗಳ ರಾಖಿಗಳನ್ನು ತಯಾರಿಸಿದರು. ರಾಖಿ ಕೇವಲ ಕೈಗೆ ಕಟ್ಟುವ ದಾರವಲ್ಲ, ಅದು ಪರಸ್ಪರ ಪ್ರೀತಿ, ರಕ್ಷಣೆ, ಗೌರವ ಹಾಗೂ ವಿಶ್ವಾಸದ ಸಂಕೇತ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಲ್ಪ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಸ್.ವಿ. ಹುಬ್ಬಳ್ಳಿ ವಹಿಸಿದ್ದರು. ಮಾರ್ಗದರ್ಶಕಿ ಎಸ್.ಎನ್. ಹುಬ್ಬಳ್ಳಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಶಿಕ್ಷಕಿ ಪುಷ್ಪಾ ಪಿ. ಮೇಗೇರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶೋಭಾ ತದೇವಾಡಿ ಕಾರ್ಯಕ್ರಮದ ಮೇಲ್ವಿಚಾರಣೆ ವಹಿಸಿದ್ದರು.

ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಯೋಗ ಡಿಪ್ಲೋಮಾ ಫಲಿತಾಂಶ ಪ್ರಕಟ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಂಯೋಜನೆಯಲ್ಲಿ ಎಸ್.ವೈ.ಬಿ.ಎಂ.ಎಸ್. ಯೋಗ ಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯದಲ್ಲಿ ಕಳೆದ ಮಾರ್ಚ್–ಏಪ್ರಿಲ್‌ನಲ್ಲಿ ನಡೆದ ಸ್ನಾತಕೋತ್ತರ ಯೋಗ ಡಿಪ್ಲೋಮಾ ಅಧ್ಯಯನ (ಪಿ.ಜಿ. ಡಿಪ್ಲೋಮಾ ಇನ್ ಯೋಗ ಸ್ಟಡೀಸ್) 2025–26ನೇ ಸಾಲಿನ ಮೊದಲ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.

ಪರೀಕ್ಷೆ ಬರೆದ ಬಸವ ಯೋಗ ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.100ರಷ್ಟು ಫಲಿತಾಂಶ ದಾಖಲಿಸಿದ್ದಾರೆ.

ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಬೋಧಕ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆಯಲ್ಲಿ ಖಯುಮ ನವಲೂರ ಹೆಚ್ಚಿನ ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರೆ, ಬಾಬು ಛಲವಾದಿ ದ್ವಿತೀಯ ಹಾಗೂ ರೇಷ್ಮಾ ಹಡಪದ ತೃತೀಯ ಸ್ಥಾನ ಪಡೆದು ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಾರೆ.

ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳು ಮತ್ತು ಬೋಧಕ-ಸಿಬ್ಬಂದಿಗೆ ಬಸವ ಯೋಗ ಮಹಾವಿದ್ಯಾಲಯದ ಮಹಾಪೋಷಕರಾದ ಪೂಜ್ಯ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಚೇರಮನ್ ಪ್ರೊ. ಎಸ್.ವಿ. ಸಂಕನೂರ, ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟಿ, ಪ್ರಾಚಾರ್ಯ ಕೆ.ಎಸ್. ಪ್ಲೇದ ಹಾಗೂ ಸಂಸ್ಥೆಯ ಅಭಿಮಾನಿ ಯೋಗ ಬಂಧುಗಳು ಅಭಿನಂದಿಸಿ ಶುಭ ಹಾರೈಸಿದ್ದಾರೆ.

“ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಉತ್ತಮ ಫಲಿತಾಂಶ ನೀಡಿರುವುದು ಮಹಾವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿ. ಯೋಗ ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ಶಿಸ್ತು, ಆರೋಗ್ಯ ಹಾಗೂ ಉತ್ತಮ ಜೀವನಮೌಲ್ಯಗಳನ್ನು ರೂಢಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಲಿ.”

— ಕೆ.ಎಸ್. ಪ್ಲೇದ, ಪ್ರಾಚಾರ್ಯರು, ಬಸವ ಯೋಗ ಮಹಾವಿದ್ಯಾಲಯ, ಗದಗ

ಸ್ವಾತಂತ್ರ್ಯ ಹೋರಾಟಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರ: ರಾಜೇಶ್ವರಿ ಬಡ್ನಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಗದಗ ಪ್ರಮುಖ ಕೇಂದ್ರವಾಗಿ ರೂಪುಗೊಂಡಿತ್ತು. ಮಹಾತ್ಮ ಗಾಂಧೀಜಿ, ಲೋಕಮಾನ್ಯ ತಿಲಕರು ಹಾಗೂ ಜವಾಹರಲಾಲ್ ನೆಹರು ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಗದಗಕ್ಕೆ ಭೇಟಿ ನೀಡುವ ಮೂಲಕ ಸ್ವಾತಂತ್ರ್ಯದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದ್ದರು. ಜಿಲ್ಲೆಯ ಸಾಮಾನ್ಯ ಜನರೂ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮದೇ ಆದ ಕೊಡುಗೆ ನೀಡಿರುವುದು ಮಹತ್ವದ ಸಂಗತಿ ಎಂದು ಸಾಮಾಜಿಕ ಕಾರ್ಯಕರ್ತೆ ರಾಜೇಶ್ವರಿ ಬಡ್ನಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತ್ಯಾಗ ಹಾಗೂ ಬಲಿದಾನಗಳ ಹಿನ್ನೆಲೆಯಲ್ಲಿ ದೊರೆತ ಸ್ವಾತಂತ್ರ್ಯವನ್ನು ಸದುಪಯೋಗಪಡಿಸಿಕೊಂಡು ದೇಶದ ಏಳ್ಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಸ್ವಾತಂತ್ರ್ಯ ಚಳವಳಿಗೆ ರೋಣ ಭಾಗದ ಜನರು ಹೆಚ್ಚಿನ ಕೊಡುಗೆ ನೀಡಿದ್ದಾರೆ. ಪ್ರಬಲ ಮಾಧ್ಯಮಗಳಿಲ್ಲದ ಆ ಕಾಲದಲ್ಲಿ ಗಾಂಧೀಜಿಯವರ ಒಂದು ಕರೆ ದೇಶದ ಜನರನ್ನು ಜಾಗೃತಗೊಳಿಸುವ ಶಕ್ತಿ ಹೊಂದಿತ್ತು. ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣ ಚಳವಳಿ ಹಾಗೂ ಹೈದರಾಬಾದ್ ವಿಮೋಚನಾ ಚಳವಳಿಯ ಮಹತ್ವ, ಸಂಕಷ್ಟ ಮತ್ತು ನೋವುಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು ಎಂದರು.

ಮುಖ್ಯ ಅತಿಥಿ ರುದ್ರಣ್ಣ ಗುಳಗುಳಿ ಮಾತನಾಡಿ, ಸಮಾಜದ ಎಲ್ಲ ವರ್ಗಗಳ ಜನರು ಒಗ್ಗಟ್ಟಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಮೈಲಾರ ಮಹಾದೇವರ ಅಪ್ರತಿಮ ಹೋರಾಟಗಳು ಬ್ರಿಟಿಷರ ನಿದ್ದೆಗೆಡಿಸಿದ್ದವು. ಇಂತಹ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ಹೋರಾಟದ ಕಥನಗಳು ಮುಂದಿನ ಪೀಳಿಗೆಗೆ ತಲುಪಬೇಕು ಎಂದರು.

ಬಸವರಾಜ ಬಿಂಗಿ ಮಾತನಾಡಿ, ಇಂದಿನ ಯುವಜನಾಂಗದಲ್ಲಿ ದೇಶಾಭಿಮಾನದ ಭಾವನೆ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಇತಿಹಾಸ ಹಾಗೂ ಹೋರಾಟಗಾರರ ತ್ಯಾಗದ ಕಥನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ಚಳವಳಿಯಲ್ಲಿ ಸಾಮಾನ್ಯ ಜನರು ಹಾಗೂ ಮಹಿಳೆಯರು ತಮ್ಮದೇ ಆದ ಮಹತ್ವದ ಕೊಡುಗೆ ನೀಡಿದ್ದಾರೆ. ಹೋರಾಟಗಾರರಿಗೆ ಅನ್ನ, ಆಶ್ರಯ ನೀಡುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪರ ಚಳವಳಿಗಳು ನಿರಂತರವಾಗಿರಬೇಕು. ಕಾಲಕ್ಕೆ ತಕ್ಕಂತೆ ಸಮಾಜದಲ್ಲಿ ಉಂಟಾಗುವ ಅಸಮಾನತೆಗಳನ್ನು ಪ್ರಶ್ನಿಸುವ ಮನೋಭಾವವನ್ನು ಯುವಕರು ಬೆಳೆಸಿಕೊಳ್ಳಬೇಕು. ಚಲನಶೀಲ ಸಮಾಜಕ್ಕೆ ಇದು ಅತ್ಯಂತ ಅಗತ್ಯವಾಗಿದೆ ಎಂದರು.

ಷಣ್ಮುಖಪ್ಪ ಬಡ್ನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಹುಲ ಗಿಡ್ನಂದಿ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಸತೀಶಕುಮಾರ ಚನ್ನಪ್ಪಗೌಡರ ವಂದಿಸಿದರು.

ಕಾರ್ಯಕ್ರಮದಲ್ಲಿ ಸುಧಾ ಬಳ್ಳಿ, ರತ್ನಾ ಪುರಂತರ, ಪ್ರೇಮಾ ಬಡ್ನಿ, ಶೈಲಜಾ ಗಿಡ್ನಂದಿ, ಮಲ್ಲಿಕಾರ್ಜುನ ನಿಂಗೋಜಿ, ಗಂಗಾಧರ ಹಕಾರಿ, ಎಚ್.ಎನ್. ಕಾಳೆ, ಬಿ.ಬಿ. ಹೊಳಗುಂದಿ, ಶರಣಪ್ಪ ಹೊಸಂಗಡಿ, ರವಿ ದೇವರಡ್ಡಿ, ಸಾಕ್ಷಿ ದೇವರಡ್ಡಿ, ಕೆ.ಎಸ್. ಗುಗ್ಗರಿ, ಎಂ.ಎಫ್. ಡೋಣಿ, ಪ್ರ.ತೋ. ನಾರಾಯಣಪೂರ, ಪ್ರವೀಣಕುಮಾರ ಬಾವಿ, ಅಶೋಕ ಹಾದಿ, ಎಸ್.ಡಿ. ಗಾಂಜಿ, ಮುಕ್ತಾ ಉಡುಪಿ, ಡಾ. ಜಿ.ಬಿ. ಪಾಟೀಲ, ಎಸ್.ಎಲ್. ಕುಲಕರ್ಣಿ, ಕೆ.ಜೆ. ಮುಲ್ಲಾ, ಚಂದ್ರಕಲಾ ಇಟಗಿಮಠ, ಪುಷ್ಪಾ ನಿಡಗುಂದಿ, ಜೆ.ಎ. ಪಾಟೀಲ, ಅನ್ನದಾನಿ ಹಿರೇಮಠ, ಮಂಜುಳಾ ವೆಂಕಟೇಶಯ್ಯ, ಯು.ಎಸ್. ಕಣವಿ, ರಾಜೇಂದ್ರ ಗಡಾದ, ರೇವಯ್ಯ ಹಿರೇಮಠ, ವಿ.ಎಸ್. ದಲಾಲಿ, ರವೀಂದ್ರ ಜೋಶಿ, ಎಸ್.ಯು. ಸಜ್ಜನಶೆಟ್ಟರ, ಸಿ.ಎಂ. ಮಾರನಬಸರಿ, ಷಡಕ್ಷರಿ ಮೆಣಸಿನಕಾಯಿ, ರಾಮಕೃಷ್ಣ ಪವಾರ, ಪರಶುರಾಮ ಖಟವಟೆ, ವೈ.ಎಸ್. ಪಾಟೀಲ, ಮಹದೇವ ಕುಲಕರ್ಣಿ, ಕಿರಣ ಗುಗ್ಗರಿ, ಶಿವಶಂಕರ ಗದ್ದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಸ್ವಾತಂತ್ರ್ಯ ಚಳವಳಿಯಲ್ಲಿ ಸಾಮಾನ್ಯ ಜನರು ಹಾಗೂ ಮಹಿಳೆಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅನ್ನ, ಆಶ್ರಯ ನೀಡುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ. ಇಂದಿನ ಯುವಕರು ಸಮಾಜದಲ್ಲಿನ ಅಸಮಾನತೆಗಳನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಚಲನಶೀಲ ಸಮಾಜಕ್ಕೆ ಇಂತಹ ಮನೋಭಾವ ಅತ್ಯಂತ ಅಗತ್ಯ.”

— ವಿವೇಕಾನಂದಗೌಡ ಪಾಟೀಲ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು

ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಿರಹಟ್ಟಿ ಹಾಗೂ ಮುಂಡರಗಿ ಮಂಡಲಗಳ ವತಿಯಿಂದ ಗದಗ ಜಿಲ್ಲಾ ಅಧಿಕಾರಿಗಳ ಕಚೇರಿ ಎದುರು ಬೃಹತ್ ಧರಣಿ ಹಾಗೂ ಪ್ರತಿಭಟನೆ ನಡೆಯಿತು.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ಬಿ.ನಾಗೇಂದ್ರ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಹಗರಣದಲ್ಲಿ ಆರೋಪಿಯಾಗಿದ್ದು, ನೈತಿಕ ಹೊಣೆ ಹೊತ್ತು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷರಾದ ಸುನೀಲ ಮಹಾಂತಶೇಟ್ಟರ, ಕುಮಾರಸ್ವಾಮಿ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಕ್ಕಿರೇಶ ರಟ್ಟಿಹಳ್ಳಿ, ಲಿಂಗರಾಜ ಪಾಟೀಲ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗಂಗಾಧರ ಮೆಣಸಿನಕಾಯಿ, ಬಸವರಾಜ ಬಿಳಿಮಗ್ಗದ, ಪ್ರಶಾಂತ್ ಕುಮಾರ್ ಗುಡದಪ್ಪನವರ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಎಂ.ಎಸ್. ಕರೀಗೌಡ್ರ, ಹೆಮಗಿರಿಶ ಹಾವಿನಾಳ, ಅಜ್ಜಪ್ಪ ಲಿಂಬಿಕಾಯಿ, ನಾಗರಾಜ ಲಕ್ಕುಂಡಿ, ಅನಿಲ ಮುಳಗುಂದ, ಮಾಂತೇಶ ಅಡರಕಟ್ಟಿ, ಶರಣಪ್ಪ ಬಾರಕೇರ್, ನಿಂಗಪ್ಪ ಬನ್ನಿ, ಬಸವರಾಜ ಚಕ್ರಸಾಲಿ, ಅಶೋಕ ಶಿರಹಟ್ಟಿ, ಕೊಟ್ರೇಶಪ್ಪ ಅಂಗಡಿ, ರವೀಂದ್ರ ಗೌಡ ಪಾಟೀಲ್, ಸಂಜೀವ್ ದಾಸಾಯಿ, ವಿರೇಶ ಸಾಸಲವಾಡ, ವಿಜಯಕುಮಾರ್ ಕುಂಬಾರ್, ಪ್ರವೀಣ ಬೊಂಬಲೆ, ಶಿವಕುಮಾರ್ ಗೌಡನಾಯ್ಕರ, ಮೈಲಾರಪ್ಪ ಕಲ್ಕೇರಿ, ಬಸವರಾಜ ಚಿಗಣ್ಣವರ್, ಶಿವಕುಮಾರ್ ಕುರಿ, ನಾಗರಾಜ ಹೊಸೂರ್, ಪವಿತ್ರ ಕಲ್ಕುಟಗರ, ನಾಗೇಶ್ ಹುಬ್ಬಳ್ಳಿ, ಪವನ್ ಮೇಟಿ, ಕವಿತಾ ಉಳ್ಳಾಗಡ್ಡಿ, ಜ್ಯೋತಿ ಹಾನಗಲ್, ಪವನ್ ಲ್ಯಾಂಡ್ವೇ, ಪರಶುರಾಮ್ ಕರಡಿ ಕೊಳ್ಳ, ಸಿದ್ದು ದೇಸಾಯಿ, ದೇವಪ್ಪ ಇಟಗಿ, ಶಿವರಾಜ್ ರಾವಣಕಿ, ದ್ಯಾಮಣ್ಣ ತಳವಾರ, ರಾಮಣ್ಣ ಕಂಬಳಿ, ಅಕ್ಬರಸಾಬ್ ಯಾದಗಿರಿ, ಚೆನ್ನವೀರಗೌಡ ತೆಗ್ಗಿನಮನಿ, ವೀರೇಶ ತಂಗೋಡು, ಮಂಜುನಾಥ ಸಂಕಿನದಾಸರ್, ದೇವರಾಜ ಮೇಟಿ, ಡಿ.ವೈ. ಹುನಗುಂದ, ನೀಲಪ್ಪ ಹತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಿಹಿ ಭೋಜನದ ಜೊತೆ ಮಕ್ಕಳಿಗೆ ಮೌಲ್ಯಗಳ ಸಿಂಚನ

0

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿ ಜೀವನವು ಕೇವಲ ಜ್ಞಾನ ಪಡೆಯುವ ಹಂತವಲ್ಲ. ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು, ವ್ಯಕ್ತಿತ್ವವನ್ನು ಬೆಳೆಸಿಕೊಂಡು ಆದರ್ಶ ಬದುಕಿನತ್ತ ಸಾಗುವ ಪ್ರಮುಖ ಘಟ್ಟವಾಗಿದೆ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಶಿಸ್ತು ಹಾಗೂ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಮೌಲ್ಯಾಧಾರಿತ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಪ್ರೊ. ಪ್ರೇಮಲತಾ ಹಿರೇಮಠ ಹೇಳಿದರು.

ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ. ೨ರಲ್ಲಿ ಗದಗ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ಮಹಿಳಾ ವೇದಿಕೆ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ‘ಅಮೃತ ಭೋಜನ–ಜ್ಞಾನ ಸಿಂಚನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವಲ್ಲಿ ಪಾಲಕರು, ಶಿಕ್ಷಕರು ಹಾಗೂ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಮಕ್ಕಳ ಉಜ್ವಲ ಭವಿಷ್ಯ ಹಾಗೂ ಮೌಲ್ಯಯುತ ಬದುಕಿಗಾಗಿ ಅವರ ಮನಸ್ಸಿನಲ್ಲಿ ಉತ್ತಮ ಮೌಲ್ಯಗಳ ಬೀಜ ಬಿತ್ತುವ ಕೆಲಸ ನಿರಂತರವಾಗಿ ನಡೆಯಬೇಕು ಎಂದರು.

ಮಕ್ಕಳಿಗೆ ಸಿಹಿ ಭೋಜನ ನೀಡುವುದರ ಜೊತೆಗೆ ನೈತಿಕ ಹಾಗೂ ಮಾನವೀಯ ಮೌಲ್ಯಗಳ ಅರಿವು ಮೂಡಿಸುವ ಕದಳಿಶ್ರೀ ವೇದಿಕೆಯ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಜೊತೆಗೆ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿಯಾಗುತ್ತವೆ ಎಂದರು.

ಅತಿಥಿಯಾಗಿ ಆಗಮಿಸಿದ್ದ ಖ್ವಾಜಾಮೈನುದ್ದೀನ ಜಾನಿಸಾಬ ಹಣಗಿ ಮಾತನಾಡಿ, ಉತ್ತಮ ಮೌಲ್ಯಗಳು ಉತ್ತಮ ವ್ಯಕ್ತಿತ್ವದ ಅಡಿಪಾಯವಾಗಿದ್ದು, ಉತ್ತಮ ವ್ಯಕ್ತಿತ್ವ ಹೊಂದಿದವರಿಂದಲೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಹಾಗೂ ನಮ್ರತೆಯನ್ನು ರೂಢಿಸಿಕೊಳ್ಳಬೇಕು ಎಂದರು.

ಇನ್ನೋರ್ವ ಅತಿಥಿ ರೇಖಾ ರೊಟ್ಟಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಭವಿಷ್ಯದ ನಿರ್ಮಾತೃಗಳಾಗಿದ್ದು, ಅವರ ಜೀವನದಲ್ಲಿ ಮೌಲ್ಯಗಳಿಗೆ ಪ್ರಮುಖ ಸ್ಥಾನವಿದೆ. ಉತ್ತಮ ಶಿಕ್ಷಣದ ಜೊತೆಗೆ ಸರಿಯಾದ ಜೀವನ ಕ್ರಮವನ್ನು ಅನುಸರಿಸುವ ಮೂಲಕ ಯಶಸ್ಸಿನತ್ತ ಸಾಗಬೇಕು ಎಂದರು.

ಕದಳಿಶ್ರೀ ವೇದಿಕೆಯ ಸಂಚಾಲಕಿ ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿವರ್ಷ ಶ್ರಾವಣ ಮಾಸದಲ್ಲಿ ಶಾಲಾ-ಕಾಲೇಜುಗಳಲ್ಲಿ ಉತ್ತಮ ಮೌಲ್ಯಗಳ ಕುರಿತು ಜಾಗೃತಿ ಕಾರ್ಯಕ್ರಮ, ಸಿಹಿ ಭೋಜನ ಹಾಗೂ ಕಲಿಕಾ ಸಾಮಗ್ರಿಗಳ ವಿತರಣೆ ಮಾಡಲಾಗುತ್ತಿದೆ. ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಕಳೆದ ೧೫ ವರ್ಷಗಳಿಂದ ಈ ಕಾರ್ಯವನ್ನು ನಿರಂತರವಾಗಿ ಮುನ್ನಡೆಸಲಾಗುತ್ತಿದೆ ಎಂದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್.ಎನ್. ಕಾಮತ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಜ್ಞಾನ ಹಾಗೂ ಕೌಶಲ್ಯಗಳ ಜೊತೆಗೆ ಬದುಕನ್ನು ಸುಂದರವಾಗಿ ರೂಪಿಸಿಕೊಂಡು ಯಶಸ್ಸು ಸಾಧಿಸಬೇಕು. ಕದಳಿಶ್ರೀ ವೇದಿಕೆಯ ಇಂತಹ ಕಾರ್ಯಕ್ರಮಗಳು ಮಕ್ಕಳ ಶಿಕ್ಷಣಕ್ಕೆ ಸ್ಫೂರ್ತಿ ತುಂಬುತ್ತಿವೆ ಎಂದರು.

ವಿಜಯ ಪತ್ತಾರ ಹಾಗೂ ಲತೇಶ ಹೆಬಸೂರ ಪ್ರಾರ್ಥಿಸಿದರು. ಎಸ್.ಜಿ. ಕಂಠಿ ಸ್ವಾಗತಿಸಿದರು. ವಿ.ಎಂ. ಚರಂತಿಮಠ ನಿರೂಪಿಸಿದರು. ಅನಿಲ ನಡುವಿನಮನಿ ವಂದಿಸಿದರು. ಸವಿತಾ ಹರದಾಳಮಠ, ಶೈನಜ್ ಕಳಸದ, ಲಲಿತಾ ತಳವಾರ, ಶಿಕ್ಷಕರು ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.

“ವಿದ್ಯಾರ್ಥಿ ಜೀವನವು ಜ್ಞಾನ ಪಡೆಯುವುದರ ಜೊತೆಗೆ ಉತ್ತಮ ಮೌಲ್ಯಗಳು ಹಾಗೂ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಪ್ರಮುಖ ಹಂತ. ಮಕ್ಕಳು ಆದರ್ಶ ಬದುಕನ್ನು ರೂಪಿಸಿಕೊಂಡು ಸಮಾಜದಲ್ಲಿ ಮೌಲ್ಯಾಧಾರಿತ ವ್ಯಕ್ತಿಗಳಾಗಿ ಬೆಳೆಯಬೇಕು. ಮಕ್ಕಳಿಗೆ ಸಿಹಿ ಭೋಜನದ ಜೊತೆಗೆ ನೈತಿಕ ಹಾಗೂ ಮಾನವೀಯ ಮೌಲ್ಯಗಳ ಅರಿವು ಮೂಡಿಸುತ್ತಿರುವ ಕದಳಿಶ್ರೀ ವೇದಿಕೆಯ ಕಾರ್ಯ ಅತ್ಯಂತ ಮಹತ್ವದ್ದಾಗಿದೆ.”

— ಪ್ರೊ. ಪ್ರೇಮಲತಾ ಹಿರೇಮಠ

ದರ್ಶನ್‌ ಕೇಸ್‌ನಲ್ಲಿ ಮಾಫಿ ಸಾಕ್ಷಿ ಕಂಟಕ? ದೈವದ ಮೊರೆ ಹೋದ ವಿಜಯಲಕ್ಷ್ಮಿ; ವಿಶೇಷ ಪೂಜೆ, ಕೋಲ ಸೇವೆ

0

ಮಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೋಷ್‌ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ, ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ದೈವದ ಮೊರೆ ಹೋಗಿದ್ದಾರೆ.

ಮಂಗಳೂರಿನ ಶ್ರೀಕ್ಷೇತ್ರ ಮಂದಾರಬೈಲು ಶ್ರೀರಕ್ತೇಶ್ವರಿ ಮಂತ್ರದೇವತಾ ಹಾಗೂ ಗುಳಿಗ ದೈವದ ಸನ್ನಿಧಿಗೆ ಭೇಟಿ ನೀಡಿದ ವಿಜಯಲಕ್ಷ್ಮಿ, ವಿಶೇಷ ಸೇವೆ ಹಾಗೂ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಕೋಲ ಸೇವೆ ನಡೆಸಿ ಹರಕೆ ಸಲ್ಲಿಸಿದ್ದು, ದರ್ಶನ್‌ ಅವರ ಮೇಲಿರುವ ಪ್ರಕರಣದ ಸಂಕಷ್ಟದಿಂದ ಪಾರಾಗಲು ದೈವಾನುಗ್ರಹ ಕೋರಿದ್ದಾರೆ ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೋಷ್‌ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿ ದರ್ಶನ್‌ ಪ್ರಕರಣದಲ್ಲಿ ಮಹತ್ವ ಪಡೆದುಕೊಂಡಿದೆ. ಪ್ರದೋಷ್‌ ಮಾಫಿ ಸಾಕ್ಷಿಯಾದರೆ ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ಹೊಸ ಬೆಳವಣಿಗೆಗಳಿಗೆ ಕಾರಣವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಆ.24ಕ್ಕೆ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ:

ಪ್ರದೋಷ್‌ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಯ ಆದೇಶವನ್ನು 59ನೇ ಸೆಷನ್ಸ್‌ ಕೋರ್ಟ್‌ ಆ.24ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಮುಂದಿನ ಬೆಳವಣಿಗೆಯತ್ತ ಎಲ್ಲರ ಗಮನ ನೆಟ್ಟಿದೆ.

ಪ್ರದೋಷ್‌ ಅವರ ಅಪರಾಧ ಹಿನ್ನೆಲೆಯ ಕುರಿತು ಕಾಮಾಕ್ಷಿಪಾಳ್ಯ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಈ ಪ್ರಕರಣವನ್ನು ಹೊರತುಪಡಿಸಿ ಪ್ರದೋಷ್‌ ವಿರುದ್ಧ ಬೇರೆ ಯಾವುದೇ ಪ್ರಕರಣಗಳಿಲ್ಲ ಎಂದು ಎಸಿಪಿ ವರದಿಯಲ್ಲಿ ತಿಳಿಸಲಾಗಿದೆ.

ಇದಲ್ಲದೆ, ಜೈಲಿನಲ್ಲಿದ್ದ ಅವಧಿಯಲ್ಲಿ ಪ್ರದೋಷ್‌ ಅವರ ನಡವಳಿಕೆ ಹೇಗಿತ್ತು ಎಂಬ ಬಗ್ಗೆಯೂ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಈ ಎಲ್ಲ ಮಾಹಿತಿಗಳನ್ನು ಪರಿಗಣಿಸಿದ ಬಳಿಕ ನ್ಯಾಯಾಲಯ ಮಾಫಿ ಸಾಕ್ಷಿ ಅರ್ಜಿಯ ಕುರಿತು ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.

ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಪ್ರದೋಷ್‌ ಮಾಫಿ ಸಾಕ್ಷಿಯಾಗಲು ಅವಕಾಶ ಸಿಗುತ್ತದೆಯೇ ಎಂಬುದು ಆ.24ರಂದು ನಡೆಯಲಿರುವ ವಿಚಾರಣೆಯಲ್ಲಿ ಸ್ಪಷ್ಟವಾಗಲಿದೆ.

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ; ‘ನಮ್ಮ ಅಧಿಕಾರಿಗಳ ಕೈವಾಡವೂ ಇದೆ’ ಎಂದ ಪ್ರಿಯಾಂಕ್ ಖರ್ಗೆ

0

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜೈಲು ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಪ್ರಕರಣದಲ್ಲಿ ಜೈಲು ಅಧಿಕಾರಿಗಳ ಕೈವಾಡವೂ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿರುವ ಅವರು, ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಮೊಬೈಲ್‌ ಯಾರ ಮೂಲಕ ಜೈಲಿನೊಳಗೆ ತಲುಪಿತು ಎಂಬುದು ತನಿಖೆಯಿಂದ ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾಗಿರುವುದಕ್ಕೆ ಸಂಬಂಧಿಸಿದ ವೀಡಿಯೋ 2025ರ ಡಿಸೆಂಬರ್‌ನ ಹಳೆಯ ವೀಡಿಯೋ. ಪ್ರಜ್ವಲ್ ರೇವಣ್ಣ ಸೆಲ್ ಮೇಲೆ ಮಾತ್ರ ರೇಡ್ ಮಾಡ್ಸಿಲ್ಲ, ಇಡೀ ಜೈಲಿನ ಮೇಲೆ ದಾಳಿ ಮಾಡಿದ್ದೆವು. ತನಿಖೆ ಆಗುತ್ತಿದೆ, ಯಾರು ಕೊಟ್ರು ಅನ್ನೋದು ಬಯಲಿಗೆ ಬರಲಿದೆ. ಇದರಲ್ಲಿ ನಮ್ಮ ಅಧಿಕಾರಿಗಳ ಕೈವಾಡವೂ ಇದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ ಎಂದು ಪ್ರಶ್ನಿಸಿದರು.

ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್‌ ಸೇರಿದಂತೆ ನಿಷೇಧಿತ ವಸ್ತುಗಳು ತಲುಪದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ತನಿಖೆಯ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಜೈಲುಗಳ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಜೈಲುಗಳಲ್ಲಿ ಭದ್ರತಾ ವ್ಯವಸ್ಥೆ ಸುಧಾರಿಸಲು ಈಗಾಗಲೇ ಸುಮಾರು ₹20 ಕೋಟಿ ವೆಚ್ಚದಲ್ಲಿ ಎಐ ಆಧಾರಿತ ಕ್ಯಾಮೆರಾಗಳನ್ನು ಪಡೆಯಲಾಗಿದೆ. ಮುಂದಿನ ಹಂತದಲ್ಲಿ ಜೈಲುಗಳಲ್ಲಿ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.

ಜೈಲು ವ್ಯವಸ್ಥೆಯಲ್ಲೇ ಕೆಲವು ನ್ಯೂನ್ಯತೆಗಳಿರುವುದು ಗಮನಕ್ಕೆ ಬಂದಿದೆ. ಅವುಗಳನ್ನು ಸರಿಪಡಿಸುವ ಕೆಲಸ ನಡೆಯಲಿದೆ. ಕೆಲವರಿಗೆ ಜೈಲಿನಲ್ಲಿ ವಿಐಪಿ ಟ್ರೀಟ್‌ಮೆಂಟ್‌ ಸಿಕ್ಕಿರುವ ಆರೋಪಗಳೂ ಕೇಳಿಬಂದಿವೆ. ಇಂತಹ ವ್ಯವಸ್ಥೆಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಹೇಳಿದರು.