ಉತ್ತರ ಪ್ರದೇಶ: ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಹೊಸ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ನೇಮಕಗೊಂಡ ಬೆನ್ನಲ್ಲೇ, ರಾಮಮಂದಿರದ ಆಡಳಿತ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದೆ. ವಿಶೇಷವಾಗಿ ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮಗಳಿಗೆ ಅವಕಾಶವಾಗದಂತೆ ಹೊಸ ನಿಯಮಗಳನ್ನು ಜಾರಿಗೆ ತರಲು ಟ್ರಸ್ಟ್ ನಿರ್ಧರಿಸಿದೆ.
ದೇಣಿಗೆ ಎಣಿಕೆ ಮಾಡುವ ಸಿಬ್ಬಂದಿಗೆ ಜೇಬುಗಳಿಲ್ಲದ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ. ಎಣಿಕಾ ಕೇಂದ್ರಕ್ಕೆ ಪ್ರವೇಶಿಸುವಾಗ ಹಾಗೂ ಅಲ್ಲಿಂದ ಹೊರಬರುವಾಗ ತಪಾಸಣೆ ನಡೆಸುವುದು ಕಡ್ಡಾಯವಾಗಲಿದೆ. ದೇಣಿಗೆ ಎಣಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡ್ ಮಾಡುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗುತ್ತಿದೆ.
ಈ ಹಿಂದೆ ಎಣಿಕಾ ಕೇಂದ್ರದ ಸಿಸಿಟಿವಿ ದೃಶ್ಯಗಳನ್ನು 45 ದಿನಗಳ ಕಾಲ ಬ್ಯಾಕಪ್ನಲ್ಲಿ ಸಂರಕ್ಷಿಸಲಾಗುತ್ತಿತ್ತು. ಇದೀಗ ಈ ಅವಧಿಯನ್ನು 180 ದಿನಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಸಾಮಾನ್ಯ ಕ್ಯಾಮೆರಾಗಳ ಬದಲಿಗೆ PTZ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಇವು ಸ್ವಯಂ ತಿರುಗುವಿಕೆ ಹಾಗೂ ಜೂಮ್ ಮಾಡುವ ವ್ಯವಸ್ಥೆಯನ್ನು ಹೊಂದಿರಲಿವೆ.
ಎಣಿಕಾ ಕೇಂದ್ರದ ಮೇಲ್ವಿಚಾರಣೆಗಾಗಿ ಈ ಹಿಂದೆ 13 ಕ್ಯಾಮೆರಾಗಳಿದ್ದರೆ, ಇದೀಗ ಒಟ್ಟು 27 ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಹೆಚ್ಚುವರಿ ಎಸ್ಐಎಸ್ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗುತ್ತದೆ.
ಎಣಿಕಾ ಕೇಂದ್ರಕ್ಕೆ ಪ್ರವೇಶವನ್ನೂ ನಿರ್ಬಂಧಿಸಲಾಗಿದ್ದು, ಅನುಮತಿ ಪಡೆದ 43 ಮಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಲೆಕ್ಕಪತ್ರ ನಿರ್ವಹಣೆಯನ್ನು ಡಿಜಿಟಲ್ ರೂಪಕ್ಕೆ ತರಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಚಾರ್ಟರ್ಡ್ ಅಕೌಂಟೆಂಟ್ರನ್ನು ನೇಮಕ ಮಾಡಲಾಗುತ್ತದೆ.
ಹಣ ಬಿಡುಗಡೆ ಮಾಡುವ ಸಂದರ್ಭದಲ್ಲಿ ಖಜಾಂಚಿ ಮಹೇಶ್ ಭಾಗಚಂದಕ್, ಮುಖ್ಯ ಎಂಜಿನಿಯರ್ ಜಗದೀಶ್ ಅಫಲೆ ಹಾಗೂ ಸಿಎ ಚಂದನ್ ರೈ ಅವರ ಸಹಿ ಕಡ್ಡಾಯವಾಗಲಿದೆ.
ಇನ್ನು ದೇಣಿಗೆ ಎಣಿಕೆ ಕಾರ್ಯಕ್ಕೆ ಗುತ್ತಿಗೆ ನೌಕರರ ಬದಲಿಗೆ ಎಸ್ಬಿಐನ 36 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸಂಗ್ರಹವಾಗುವ ನಗದು ಹಣವನ್ನು ಎಸ್ಬಿಐ ಬ್ಯಾಂಕ್ ವಾಹನದಲ್ಲೇ ವರ್ಗಾವಣೆ ಮಾಡುವ ವ್ಯವಸ್ಥೆ ಮಾಡಲಾಗಿದ್ದು, ಹಣ ವರ್ಗಾವಣೆಯ ಪ್ರತಿಯೊಂದು ಹಂತವನ್ನೂ ವಿಡಿಯೋ ರೆಕಾರ್ಡ್ ಮಾಡಲು ಟ್ರಸ್ಟ್ ನಿರ್ಧರಿಸಿದೆ.
ಇತ್ತೀಚೆಗೆ ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಹೊಸ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ದೆಹಲಿ ಮೂಲದ ಮಹೇಶ್ ಭಾಗಚಂದಕ್, ಅಯೋಧ್ಯೆ ನಿವಾಸಿ ಮದನ್ ಮೋಹನ್ ಪಾಂಡೆ ಹಾಗೂ ಶಿಕೋಹಾಬಾದ್ನ ನಿರ್ಮಲಾ ಯಾದವ್ ಅವರನ್ನು ಹೊಸ ಟ್ರಸ್ಟಿಗಳಾಗಿ ನೇಮಕ ಮಾಡಲಾಗಿದೆ.

