Home Blog

ಹೊಳೆನರಸೀಪುರದಲ್ಲಿ ಚೆನ್ನಮ್ಮರಿಗೆ ಭಾವಪೂರ್ಣ ವಿದಾಯ: ಜನಸಾಗರದ ನಡುವೆ ಅಂತಿಮ ಯಾತ್ರೆ, ಹರದನಹಳ್ಳಿಯಲ್ಲಿ ಅಂತಿಮ ವಿಧಿ

0

ಹಾಸನ: ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತಿಮ ಯಾತ್ರೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಆರಂಭವಾಗಿದ್ದು, ಅಪಾರ ಸಂಖ್ಯೆಯ ಜನರು ಕಣ್ಣೀರಿನ ವಿದಾಯ ಸಲ್ಲಿಸುತ್ತಿದ್ದಾರೆ. ಪಾರ್ಥಿವ ಶರೀರವನ್ನು ಹೊತ್ತ ಮುಕ್ತಿವಾಹನವನ್ನು ಮಲ್ಲಿಗೆ ಹೂ ಮತ್ತು ತುಳಸಿ ಮಾಲೆಗಳಿಂದ ಅಲಂಕರಿಸಲಾಗಿದ್ದು, ಮಾರ್ಗದುದ್ದಕ್ಕೂ ಸಾರ್ವಜನಿಕರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಹೊಳೆನರಸೀಪುರದಿಂದ ಆರಂಭವಾಗಿರುವ ಅಂತಿಮ ಯಾತ್ರೆ ತಾಲೂಕಿನ ಹಲವು ಗ್ರಾಮಗಳ ಮೂಲಕ ಸಾಗಲಿದೆ. ನಾಗಲಾಪುರ, ಹುಚ್ಚನಕೊಪ್ಪಲು, ಸಂಕನಹಳ್ಳಿ, ಕಳ್ಳಿಕೊಪ್ಪಲು, ಕಟ್ಟಹಳ್ಳಿ ಬಾರೆ, ಮಾರಗೊಡನಹಳ್ಳಿ, ಪಡುವಲಹಿಪ್ಪೆ, ಹನುಮನಹಳ್ಳಿ, ಬಸವನಾಯಕನಹಳ್ಳಿ, ಹಂಗರಹಳ್ಳಿ ಮತ್ತು ಹಳೇಕೋಟೆ ಗ್ರಾಮಗಳಲ್ಲಿ ಅಂತಿಮ ಯಾತ್ರೆ ನಡೆಯಲಿದೆ.

ಅಂತಿಮ ಯಾತ್ರೆಯ ಬಳಿಕ ಮಧ್ಯಾಹ್ನ 3 ಗಂಟೆ ವೇಳೆಗೆ ಹರದನಹಳ್ಳಿಯ ಅಂತ್ಯಕ್ರಿಯೆ ಸ್ಥಳಕ್ಕೆ ಪಾರ್ಥಿವ ಶರೀರ ತಲುಪಲಿದೆ. 45 ನಿಮಿಷಗಳ ಕಾಲ ವಿಶೇಷ ಪೂಜಾ ವಿಧಿವಿಧಾನಗಳು ನಡೆಯಲಿದ್ದು, ಸಂಜೆ 4 ಗಂಟೆ ವೇಳೆಗೆ ಅಂತಿಮ ಸಂಸ್ಕಾರ ನೆರವೇರಲಿದೆ.

ಶ್ರೀ ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಕಣ್ಣನ್ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತಿದೆ. 15ಕ್ಕೂ ಹೆಚ್ಚು ಅರ್ಚಕರು ಭಾಗವಹಿಸಲಿದ್ದು, ವಾಸ್ತು ಪ್ರಕಾರ ಅಂತಿಮ ಸಂಸ್ಕಾರದ ವ್ಯವಸ್ಥೆ ಮಾಡಲಾಗಿದೆ.

ರಂಗನಾಥಸ್ವಾಮಿ ಬೆಟ್ಟದ ತಪ್ಪಲನ್ನು ಅಂತ್ಯಕ್ರಿಯೆಗೆ ಆಯ್ಕೆ ಮಾಡಿರುವುದರ ಹಿಂದೆ ಚೆನ್ನಮ್ಮ ಅವರ ಭಾವನಾತ್ಮಕ ನಂಟಿದೆ. ಹರದನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳೊಂದಿಗೆ ಅವರು ಹೊಂದಿದ್ದ ಆತ್ಮೀಯ ಸಂಬಂಧ, ಈ ಭಾಗದ ಜನರ ಮೇಲಿನ ಪ್ರೀತಿ ಹಾಗೂ ದೈವ ಭಕ್ತಿಯ ಹಿನ್ನೆಲೆಯಲ್ಲಿ ಕುಟುಂಬ ಈ ಸ್ಥಳವನ್ನು ಆಯ್ಕೆ ಮಾಡಿದೆ.

ಚೆನ್ನಮ್ಮ ಅವರ ಅಳಿಯ ಹಾಗೂ ಸಂಸದ ಸಿ.ಎನ್. ಮಂಜುನಾಥ್, ಕುಟುಂಬದ ಸದಸ್ಯರೆಲ್ಲರೂ ಚರ್ಚಿಸಿ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದೇ ಸ್ಥಳದಲ್ಲಿ ಸ್ಮಾರಕ ನಿರ್ಮಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದಿದ್ದಾರೆ.

ಹರದನಹಳ್ಳಿ ದೇವೇಗೌಡರ ತವರೂರಾಗಿದ್ದು, ಚೆನ್ನಮ್ಮ ಅವರ ಜೀವನದ ಹಲವು ನೆನಪುಗಳನ್ನು ಹೊಂದಿರುವ ಸ್ಥಳವಾಗಿದೆ. ಮಾವಿನಕೆರೆ ರಂಗನಾಥಸ್ವಾಮಿ ಬಗ್ಗೆ ಅಪಾರ ಭಕ್ತಿ ಹೊಂದಿದ್ದ ಅವರು, ಕುಟುಂಬದ ಒಳಿತಿಗಾಗಿ ಹಾಗೂ ರೈತರ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತಿದ್ದರು. ಇದೀಗ ಅದೇ ದೈವ ಸನ್ನಿಧಿಯ ನೆರಳಿನಲ್ಲಿ ಅವರ ಅಂತಿಮ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ.

ತ್ರಿಪುರ ಡಿಜಿಪಿ ಅನುರಾಗ್ ಧನಕರ್ ಕಚೇರಿಯಲ್ಲೇ ಶವವಾಗಿ ಪತ್ತೆ: ಆತ್ಮಹತ್ಯೆ ಶಂಕೆ, ತನಿಖೆ ಆರಂಭ

0

ಅಗರ್ತಲಾ: ತ್ರಿಪುರಾ ರಾಜ್ಯದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅನುರಾಗ್ ಧನಕರ್ ಅವರು ಅಗರ್ತಲಾದಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ತಮ್ಮ ಚೇಂಬರ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ಇಡೀ ಪೊಲೀಸ್ ಇಲಾಖೆಯಲ್ಲಿ ತೀವ್ರ ಆಘಾತ ಮೂಡಿಸಿದೆ.

ಮಾಹಿತಿಯ ಪ್ರಕಾರ, ಡಿಜಿಪಿ ಅನುರಾಗ್ ಧನಕರ್ ಅವರು ಇಂದು ಬೆಳಿಗ್ಗೆ ಎಂದಿನಂತೆ ತಮ್ಮ ಕಚೇರಿಗೆ ಆಗಮಿಸಿದ್ದರು. ಕೆಲ ಸಮಯದ ಬಳಿಕ ಅವರ ಚೇಂಬರ್‌ನಿಂದ ಗುಂಡಿನ ಸದ್ದು ಕೇಳಿಬಂದಿದೆ. ಕೂಡಲೇ ಸಿಬ್ಬಂದಿ ಒಳಗೆ ತೆರಳಿ ನೋಡಿದಾಗ, ಅವರು ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿರುವುದು ಕಂಡುಬಂದಿದೆ.

ಧನಕರ್ ಅವರು ತಮ್ಮ ಸೇವಾ ಪಿಸ್ತೂಲ್ ಬಳಸಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಜ್ಞರ ತಂಡ ರಾಜ್ಯ ಪೊಲೀಸ್ ಪ್ರಧಾನ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ಡಿಜಿಪಿ ಅವರ ಸಾವಿಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ.

ಅವರು ಈ ರೀತಿಯ ತೀವ್ರ ನಿರ್ಧಾರ ಕೈಗೊಳ್ಳಲು ಯಾವುದೇ ವೈಯಕ್ತಿಕ ಅಥವಾ ವೃತ್ತಿಪರ ಒತ್ತಡಗಳು ಕಾರಣವಾಗಿದ್ದವೇ ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಅನುರಾಗ್ ಧನಕರ್ ಅವರು ಈ ಹಿಂದೆ ಹಲವು ಪ್ರಮುಖ ತನಿಖೆಗಳಲ್ಲಿ ಭಾಗಿಯಾಗಿದ್ದ ಹಿರಿಯ ಪೊಲೀಸ್ ಅಧಿಕಾರಿ ಆಗಿದ್ದರು. 1984ರ ಸಿಖ್ ಸಮುದಾಯದ ಹತ್ಯಾಕಾಂಡ ಪ್ರಕರಣದ ತನಿಖೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಮುನ್ನಡೆಸಿದ್ದರು. ಅಲ್ಲದೆ, ಸಿಬಿಐನಲ್ಲಿ ಕಾರ್ಯನಿರ್ವಹಿಸುವ ವೇಳೆ ಉದ್ಯಮಿ ನೀರವ್ ಮೋದಿ ಪ್ರಕರಣದ ತನಿಖೆಯ ಜವಾಬ್ದಾರಿಯನ್ನೂ ವಹಿಸಿದ್ದರು.

ಸೆಲ್ಫಿಗಾಗಿ ಸಾವಿನ ಸವಾಲು! ಕೊಡಗಿನ ಜಲಪಾತಗಳಲ್ಲಿ ಪ್ರವಾಸಿಗರ ನಿರ್ಲಕ್ಷ್ಯ

0

ಮಡಿಕೇರಿ: ಮಳೆಗಾಲದ ಮಳೆಯಿಂದ ಕೊಡಗು ಜಿಲ್ಲೆಯ ಜಲಪಾತಗಳು ಭೋರ್ಗರೆದು ಹರಿಯುತ್ತಿದ್ದು, ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಆದರೆ ಪ್ರಕೃತಿಯ ಸೊಬಗನ್ನು ಸವಿಯಲು ಬಂದ ಕೆಲವರು ಸುರಕ್ಷತಾ ಎಚ್ಚರಿಕೆಗಳನ್ನು ಕಡೆಗಣಿಸಿ ಅಪಾಯಕಾರಿ ಸಾಹಸಗಳಲ್ಲಿ ತೊಡಗುತ್ತಿರುವುದು ಆಡಳಿತ ಹಾಗೂ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಅಬ್ಬಿ ಜಲಪಾತ ಮತ್ತು ಮೇಧುರ–ಸೂರ್ಲಬ್ಬಿ ಜಲಪಾತಗಳಲ್ಲಿ ಪ್ರವಾಸಿಗರು ನಿಷೇಧಿತ ಪ್ರದೇಶಗಳಿಗೆ ಇಳಿದು ಈಜುವುದು, ಜಾರುವ ಬಂಡೆಗಳ ಮೇಲೆ ನಿಂತು ಸೆಲ್ಫಿ ಹಾಗೂ ವಿಡಿಯೊ ಚಿತ್ರೀಕರಿಸುವುದು ನಿರಂತರವಾಗಿ ಕಂಡುಬರುತ್ತಿದೆ. ನೀರಿನ ಸೆಳೆತ ಹೆಚ್ಚಿರುವ ಪ್ರದೇಶಗಳಲ್ಲಿ ಇಂತಹ ವರ್ತನೆ ಭಾರಿ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಎಚ್ಚರಿಸುತ್ತಿದ್ದಾರೆ.

ಈ ಜಲಪಾತಗಳಲ್ಲಿ ಈ ಹಿಂದೆಯೇ ಹಲವು ಮಂದಿ ನೀರಿನ ಸೆಳೆತಕ್ಕೆ ಸಿಲುಕಿ ಜೀವ ಕಳೆದುಕೊಂಡಿದ್ದಾರೆ. ಮತ್ತಷ್ಟು ಮಂದಿಯನ್ನು ಸ್ಥಳೀಯರು ಅಪಾಯದ ನಡುವೆಯೇ ರಕ್ಷಿಸಿರುವ ಘಟನೆಗಳು ದಾಖಲಾಗಿವೆ. ಆದರೂ ಅಪಾಯದ ಅರಿವಿದ್ದರೂ ನಿರ್ಲಕ್ಷ್ಯ ಮುಂದುವರಿಯುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಲಪಾತಗಳ ಸುತ್ತಮುತ್ತ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೆ ತರಬೇಕು. ಅಪಾಯಕಾರಿ ಸ್ಥಳಗಳಿಗೆ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಳೆಗಾಲದಲ್ಲಿ ಜಲಪಾತಗಳ ನೀರಿನ ಹರಿವು ಕ್ಷಣಾರ್ಧದಲ್ಲಿ ಬದಲಾಗುವ ಸಾಧ್ಯತೆ ಇರುವುದರಿಂದ ಪ್ರವಾಸಿಗರು ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಜೀವಕ್ಕೆ ಅಪಾಯ ತರುವ ಸಾಹಸಗಳಿಂದ ದೂರವಿರಬೇಕು ಎಂದು ಅಧಿಕಾರಿಗಳು ಮತ್ತು ಸ್ಥಳೀಯರು ಮನವಿ ಮಾಡಿದ್ದಾರೆ.

ಪ್ರವಾಸಕ್ಕೆ ತೆರಳಿದ್ದ ಕುಟುಂಬಕ್ಕೆ ಆಘಾತ; ಪುರಾತನ ಬಾವಿಗೆ ಬಿದ್ದು 10 ವರ್ಷದ ಬಾಲಕ ದುರ್ಮರಣ

0

ದಾವಣಗೆರೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬಾಗಳಿಯ ಶ್ರೀ ಕಲ್ಲೇಶ್ವರ ದೇಗುಲದ ಬಳಿ ಸಂಭವಿಸಿದ ದುರಂತದಲ್ಲಿ 10 ವರ್ಷದ ಬಾಲಕ ಪುರಾತನ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ. ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ಕಾಲು ಜಾರಿ ಬಾವಿಗೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮೃತ ಬಾಲಕನನ್ನು ಹರಪನಹಳ್ಳಿಯ ಗಾಜಿನಕೇರಿ ನಿವಾಸಿಗಳಾದ ವಿನೋದ್–ವಿದ್ಯಾ ದಂಪತಿಯ ಪುತ್ರ ವಿಷ್ಣು (10) ಎಂದು ಗುರುತಿಸಲಾಗಿದೆ. ಕುಟುಂಬ ಸದಸ್ಯರು ಮಕ್ಕಳೊಂದಿಗೆ ದೇವಾಲಯಕ್ಕೆ ಪ್ರವಾಸಕ್ಕೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಪುರಾತನ ಬಾವಿಗೆ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹರಪನಹಳ್ಳಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಬಾಲಕನ ಮೃತದೇಹವನ್ನು ಹೊರತೆಗೆದರು.

ಘಟನೆಗೆ ಸಂಬಂಧಿಸಿದಂತೆ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪುತ್ರನನ್ನು ಕಳೆದುಕೊಂಡ ತಂದೆ-ತಾಯಿಯರ ಆಕ್ರಂದನ ಸ್ಥಳದಲ್ಲಿದ್ದವರ ಮನಕಲಕುವಂತಿತ್ತು.

ಮುಂಗಾರು ಅಧಿವೇಶನದ ಮೊದಲ ದಿನವೇ ಉದ್ವಿಗ್ನ ಪರಿಸ್ಥಿತಿ; ‘ಚಲೋ ಸಂಸತ್’ ಮೆರವಣಿಗೆ ತಡೆದ ಪೊಲೀಸರು, ಹಲವರು ವಶಕ್ಕೆ

0

ನವದೆಹಲಿ: ಸಂಸತ್ ಮುತ್ತಿಗೆಗೆ ಯತ್ನಿಸಿದ ಕಾಕ್ರೋಚ್ ಜನತಾ ಪಾರ್ಟಿ (CJP) ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಲಾಠಿಚಾರ್ಜ್ ಬಳಿಕ ದೆಹಲಿಯ ಕೆಲವು ಪ್ರದೇಶಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಜುಲೈ 20ರಂದು ನವದೆಹಲಿಯ ಜಂತರ್ ಮಂತರ್‌ನಿಂದ ಸಂಸತ್ ಭವನದತ್ತ ‘ಚಲೋ ಸಂಸತ್’ ಮೆರವಣಿಗೆ ನಡೆಸಲು ಸಿಜೆಪಿ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಜಂತರ್ ಮಂತರ್‌ನಲ್ಲಿ ಜಮಾಯಿಸಿದ್ದರು.

ಸಂಸತ್ತಿನತ್ತ ತೆರಳಲು ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ಅವರನ್ನು ತಡೆದರು. ಈ ವೇಳೆ ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ದಾಟಿ ಮುನ್ನುಗ್ಗಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಯೋಗಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ನಡೆಸಿದ ಲಾಠಿಚಾರ್ಜ್‌ನಲ್ಲಿ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ದೆಹಲಿ ಪೊಲೀಸರು ಹಾಗೂ ರ‍್ಯಾಪಿಡ್ ಆಕ್ಷನ್ ಫೋರ್ಸ್ (RAF) ಸಿಬ್ಬಂದಿಯನ್ನು ನಿಯೋಜಿಸಿ ಜಂತರ್ ಮಂತರ್ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಪ್ರತಿಭಟನಾಕಾರರು ಪೊಲೀಸ್ ಭದ್ರತೆಯನ್ನು ಮೀರಿ ಮುನ್ನುಗ್ಗಲು ಯತ್ನಿಸಿದಾಗ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಸಂಸತ್ ಅಧಿವೇಶನ ಆರಂಭವಾಗಿರುವ ಹಿನ್ನೆಲೆಯಲ್ಲಿ ದೆಹಲಿ ನಗರದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)ಯ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಈ ಮೆರವಣಿಗೆಗೆ ಅಧಿಕೃತ ಅನುಮತಿ ನೀಡಲಾಗಿರಲಿಲ್ಲ. ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಮುಂಚಿತವಾಗಿಯೇ ಎಚ್ಚರಿಕೆ ನೀಡಿದ್ದರು.

Gold Rate Today: ಬೆಂಗಳೂರು ಸೇರಿ ಪ್ರಮುಖ ನಗರಗಳ ಇಂದಿನ ಚಿನ್ನದ ದರ ಹೀಗಿದೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಜುಲೈ ತಿಂಗಳ ಮೂರನೇ ವಾರದ ಆರಂಭದಲ್ಲೇ ಬೆಲೆಗಳು ಏರುಮುಖವಾಗಿದ್ದು, ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಹೆಚ್ಚಳವಾಗಿದೆ ಎಂದು ಗುಡ್‌ರಿಟರ್ನ್ಸ್ ವರದಿ ಮಾಡಿದೆ.

ಜುಲೈ 20, 2026ರ ಸೋಮವಾರದ ದರದ ಪ್ರಕಾರ, 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ 17 ರೂಪಾಯಿ ಏರಿಕೆಯಾಗಿದೆ. ಇದರಿಂದ ಒಂದು ಗ್ರಾಂ ಚಿನ್ನದ ಬೆಲೆ 14,346 ರೂಪಾಯಿಗೆ ತಲುಪಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 170 ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ ಬೆಲೆ 1,43,460 ರೂಪಾಯಿ ದಾಖಲಾಗಿದೆ.

ಇದೇ ವೇಳೆ 22 ಕ್ಯಾರೆಟ್ ಚಿನ್ನದ ದರದಲ್ಲೂ ಏರಿಕೆ ಕಂಡುಬಂದಿದೆ. ಪ್ರತಿ ಗ್ರಾಂಗೆ 15 ರೂಪಾಯಿ ಹೆಚ್ಚಳವಾಗಿದ್ದು, ಒಂದು ಗ್ರಾಂ ಚಿನ್ನದ ಬೆಲೆ 13,150 ರೂಪಾಯಿಗೆ ತಲುಪಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 150 ರೂಪಾಯಿ ಏರಿಕೆಯಾಗಿ, 1,31,500 ರೂಪಾಯಿ ದಾಖಲಾಗಿದೆ.

ಬೆಳ್ಳಿ ದರದಲ್ಲಿಯೂ ಭಾರೀ ಏರಿಕೆ ಕಂಡುಬಂದಿದ್ದು, ಪ್ರತಿ ಕೆಜಿಗೆ 5 ಸಾವಿರ ರೂಪಾಯಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಒಂದು ಗ್ರಾಂ ಬೆಳ್ಳಿಯ ಬೆಲೆ 235 ರೂಪಾಯಿ ಇದ್ದು, ಒಂದು ಕೆಜಿ ಬೆಳ್ಳಿಯ ದರ 2,35,000 ರೂಪಾಯಿಗೆ ತಲುಪಿದೆ.

ಜುಲೈ 1ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 14,078 ರೂಪಾಯಿ ಇತ್ತು. ಇದೀಗ ಜುಲೈ 20ರಂದು ಅದು 14,346 ರೂಪಾಯಿಗೆ ಏರಿಕೆಯಾಗಿದೆ. ಈ ತಿಂಗಳಲ್ಲಿ ಚಿನ್ನದ ಗರಿಷ್ಠ ದರ 14,700 ರೂಪಾಯಿವರೆಗೆ ತಲುಪಿತ್ತು.

ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು ಹಾಗೂ ಜಾಗತಿಕ ತೈಲ ಬೆಲೆ ಏರಿಕೆಯ ಪರಿಣಾಮ ಕಳೆದ ವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು. ಇದರ ನಡುವೆ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದ ರದ್ದಾಗಿರುವುದು ಹಾಗೂ ಇರಾನ್ ವಿರುದ್ಧದ ಸಂಘರ್ಷದ ಆತಂಕವೂ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ.

ಜಾಗತಿಕ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳಿಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೇಡಿಕೆ ಹಾಗೂ ದರದಲ್ಲಿ ಮತ್ತಷ್ಟು ಏರಿಳಿತ ಕಾಣುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಅಭಿವೃದ್ಧಿಗೆ ಸಂಸತ್ ಸಹಕಾರಿಯಾಗಲಿ: ಆರ್ಥಿಕ ಬೆಳವಣಿಗೆ, ಬಾಹ್ಯಾಕಾಶ ಸಾಧನೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ

0

ನವದೆಹಲಿ: ಸಂಸತ್ತಿನ ಮಾನ್ಸೂನ್ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿ, ಅಧಿವೇಶನವು ದೇಶದ ಅಭಿವೃದ್ಧಿಗೆ ಪೂರಕವಾಗುವಂತೆ ಫಲಪ್ರದವಾಗಿ ನಡೆಯಲಿ ಎಂದು ಆಶಿಸಿದರು. ಇದೇ ವೇಳೆ ಕಳೆದ ಕೆಲವು ತಿಂಗಳಲ್ಲಿ ಭಾರತ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದಾಖಲಿಸಿರುವ ಹಲವು ಮಹತ್ವದ ಸಾಧನೆಗಳನ್ನು ಪ್ರಸ್ತಾಪಿಸಿದರು.

ಮಾನ್ಸೂನ್ ಮಳೆ ದೇಶದ ಕೃಷಿ ಮತ್ತು ಆರ್ಥಿಕತೆಗೆ ಎಷ್ಟು ಅಗತ್ಯವೋ, ಅದೇ ರೀತಿ ಸಂಸತ್ತಿನ ಮಾನ್ಸೂನ್ ಅಧಿವೇಶನವೂ ದೇಶದ ಪ್ರಗತಿಗೆ ಸಹಕಾರಿಯಾಗಬೇಕು ಎಂದು ಪ್ರಧಾನಿ ಹೇಳಿದರು. ಇತ್ತೀಚಿನ ದಿನಗಳಲ್ಲಿ ಭಾರತ ಹಲವು ಕ್ಷೇತ್ರಗಳಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದು, ದೇಶದ ಸಾಧನೆಗಳು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುವಂತಿವೆ ಎಂದು ತಿಳಿಸಿದರು.

ಇತ್ತೀಚೆಗೆ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಕೈರೂಟ್ ಸಾಧಿಸಿರುವ ಯಶಸ್ಸನ್ನು ಉಲ್ಲೇಖಿಸಿದ ಪ್ರಧಾನಿ, ದೇಶದ ಯುವ ಪ್ರತಿಭೆಗಳು ಹೊಸ ಆವಿಷ್ಕಾರಗಳ ಮೂಲಕ ಭಾರತಕ್ಕೆ ಹೊಸ ದಿಕ್ಕು ತೋರಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ, “ನಾನು 56 ವರ್ಷದ ಯುವಕರ ಬಗ್ಗೆ ಮಾತನಾಡುತ್ತಿಲ್ಲ” ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಪಶ್ಚಿಮ ಏಷ್ಯಾದ ಯುದ್ಧದ ಪರಿಣಾಮ ಜಾಗತಿಕ ಇಂಧನ ಕ್ಷೇತ್ರದಲ್ಲಿ ಹಲವು ಸವಾಲುಗಳು ಎದುರಾಗಿದ್ದರೂ, ಭಾರತವು ಶೇ. 7.7ರ ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಂಡಿದೆ ಎಂದು ಪ್ರಧಾನಿ ಹೇಳಿದರು. ಇದು ದೇಶದ ಆರ್ಥಿಕ ಸಾಮರ್ಥ್ಯ ಮತ್ತು ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ರಾಜಸ್ಥಾನದಲ್ಲಿ ನಿರ್ಮಾಣವಾಗುತ್ತಿರುವ ತೈಲ ಸಂಸ್ಕರಣಾಗಾರ, ಸೆಮಿಕಂಡಕ್ಟರ್ ಉತ್ಪಾದನಾ ಘಟಕ, ಹಸಿರು ಹೈಡ್ರೋಜನ್ ರೈಲು ಸೇರಿದಂತೆ ಹಲವು ಮಹತ್ವಾಕಾಂಕ್ಷಿ ಅಭಿವೃದ್ಧಿ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಇವುಗಳು ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿವೆ ಎಂದು ಹೇಳಿದರು.

 

ಅರ್ಜುನ್ ಕಪೂರ್ ಜೊತೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ಸಾಹಿಬಾ ಬಾಲಿ: ಡೇಟಿಂಗ್ ವದಂತಿಗೆ ಹೊಸ ಕಿಚ್ಚು

ಮುಂಬೈ: ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ನಟಿ-ಕಂಟೆಂಟ್ ಕ್ರಿಯೇಟರ್ ಸಾಹಿಬಾ ಬಾಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಒಟ್ಟಿಗೆ ವೀಕ್ಷಿಸಿದ ಬಳಿಕ ಇಬ್ಬರ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆ ಶುರುವಾಗಿದೆ. ಜುಲೈ 19ರಂದು ನಡೆದ ಪಂದ್ಯದಲ್ಲಿ ಕ್ರೀಡಾಂಗಣದ ಗ್ಯಾಲರಿಯಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿರುವ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದ್ದು, ಡೇಟಿಂಗ್ ವದಂತಿಗಳಿಗೆ ಮತ್ತಷ್ಟು ಬಲ ನೀಡಿವೆ.

ಪಂದ್ಯದ ವೇಳೆ ಅರ್ಜುನ್ ಮತ್ತು ಸಾಹಿಬಾ ರಿಲ್ಯಾಕ್ಸ್ ಆಗಿ ಪಂದ್ಯವನ್ನು ಎಂಜಾಯ್ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಇಬ್ಬರೂ ಒಂದೇ ಬಣ್ಣದ ಉಡುಪು ಧರಿಸಿರುವುದು ನೆಟ್ಟಿಗರ ಗಮನ ಸೆಳೆದಿದ್ದು, ಸ್ನೇಹಕ್ಕಿಂತ ಮೀರಿದ ಸಂಬಂಧ ಇದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೆ ಈ ವದಂತಿಗಳ ಬಗ್ಗೆ ಅರ್ಜುನ್ ಕಪೂರ್ ಅಥವಾ ಸಾಹಿಬಾ ಬಾಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ವಿಡಿಯೋ ವೈರಲ್ ಆದ ಬಳಿಕ ಅಭಿಮಾನಿಗಳಲ್ಲಿ ಹಲವು ಊಹಾಪೋಹಗಳು ಹರಿದಾಡಿವೆ. ಕೆಲವರು ಇಬ್ಬರಿಗೂ ಮುಂಚಿತವಾಗಿಯೇ ಶುಭಾಶಯ ಕೋರಿದರೆ, ಮತ್ತೊಬ್ಬರು ಸಾಹಿಬಾ ಬೇರೆ ವ್ಯಕ್ತಿಯೊಂದಿಗೆ ಸಂಬಂಧದಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೆಲ ನೆಟ್ಟಿಗರು, ಸಾಹಿಬಾ ಕಂಟೆಂಟ್ ಕ್ರಿಯೇಟರ್ ಕುಲ್ಲು ಜೊತೆ ಪಂದ್ಯ ವೀಕ್ಷಿಸಲು ಬಂದಿದ್ದರು. ಅರ್ಜುನ್ ಕಪೂರ್ ಅದೇ ಸ್ನೇಹಿತರ ಗುಂಪಿನ ಭಾಗವಾಗಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಅರ್ಜುನ್ ಕಪೂರ್ ಜನ್ಮದಿನದಂದು ಸಾಹಿಬಾ ಬಾಲಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, “ಎಲ್ಲರ ಬೆಸ್ಟಿಗೆ ಹುಟ್ಟುಹಬ್ಬದ ಶುಭಾಶಯಗಳು. ತೂಕ ಇಳಿಸುವುದನ್ನು ನಿಲ್ಲಿಸಿ, ಸ್ವಲ್ಪ ಕೇಕ್ ತಿನ್ನಿ” ಎಂದು ತಮಾಷೆಯಾಗಿ ಪೋಸ್ಟ್ ಮಾಡಿದ್ದರು. ಅದಕ್ಕೆ ಅರ್ಜುನ್, “ನೀನು ನನ್ನ ಜೊತೆ ಸೇರಿಕೊಳ್ಳಲು ಕಾಯುತ್ತಿದ್ದೇನೆ” ಎಂದು ಪ್ರತಿಕ್ರಿಯಿಸಿದ್ದರು. ಈ ಸಂಭಾಷಣೆಯೂ ಅಭಿಮಾನಿಗಳ ಗಮನ ಸೆಳೆದಿತ್ತು.

ಸಾಹಿಬಾ ಬಾಲಿ ನಟಿ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿದ್ದು, ತಾವು ಸಿಂಗಲ್ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು. ಕಂಟೆಂಟ್ ಕ್ರಿಯೇಟರ್ ಕುಲ್ಲು ಜೊತೆಗಿನ ತಮ್ಮ ಬಾಂಧವ್ಯ ವೃತ್ತಿಪರ ಸ್ನೇಹ ಮಾತ್ರ ಎಂದು ಹೇಳಿದ್ದರು. ಮತ್ತೊಂದೆಡೆ, ಅರ್ಜುನ್ ಕಪೂರ್ ನಟಿ ಮಲೈಕಾ ಅರೋರಾ ಜೊತೆ 2018ರಿಂದ ಸಂಬಂಧದಲ್ಲಿದ್ದು, 2024ರಲ್ಲಿ ಇಬ್ಬರೂ ಬೇರ್ಪಟ್ಟಿದ್ದರು. ಈಗ ಸಾಹಿಬಾ ಜೊತೆಗಿನ ಸಾರ್ವಜನಿಕ ಕಾಣಿಸಿಕೊಳ್ಳುವಿಕೆ ಹೊಸ ವದಂತಿಗಳಿಗೆ ಕಾರಣವಾಗಿದೆ. ಆದರೆ ಇಬ್ಬರ ನಡುವೆ ಪ್ರೇಮ ಸಂಬಂಧವಿದೆ ಎಂಬುದಕ್ಕೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ನಟಿ ಐಶ್ವರ್ಯ ಸಿಂದೋಗಿಗೆ ಸೋಷಿಯಲ್ ಮೀಡಿಯಾ ಕಿರುಕುಳ: ನಕಲಿ ಖಾತೆಗಳ ವಿರುದ್ಧ ಎಫ್‌ಐಆರ್, ಸೈಬರ್ ತನಿಖೆ ಆರಂಭ

ಬೆಂಗಳೂರು: ಸ್ಯಾಂಡಲ್‌ವುಡ್ ನಟಿಯರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಕಮೆಂಟ್‌ಗಳು ಹಾಗೂ ಮಾನಸಿಕ ಕಿರುಕುಳ ನೀಡುವ ಪ್ರಕರಣಗಳು ಮುಂದುವರಿದಿರುವ ನಡುವೆ, ಇದೀಗ ನಟಿ ಐಶ್ವರ್ಯ ಸಿಂದೋಗಿ ಕೂಡ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪ್ರಕಟಿಸುವ ಪೋಸ್ಟ್‌ಗಳಿಗೆ ನಿರಂತರವಾಗಿ ಅಶ್ಲೀಲ, ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಕಮೆಂಟ್‌ಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ಅವರು ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ನಟಿ, ತಮಗೆ ಪರಿಚಯವಿರುವ ವ್ಯಕ್ತಿಯೊಬ್ಬರ ಹೆಸರನ್ನು ಉಲ್ಲೇಖಿಸಿದ್ದು, ಇದೇ ವ್ಯಕ್ತಿ ಈ ಹಿಂದೆಯೂ ಬೆದರಿಕೆ ಹಾಕಿದ್ದ ಹಿನ್ನೆಲೆ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದ್ದಾರೆ. ಈಗ ಅದೇ ವ್ಯಕ್ತಿ ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸಿ ಅವುಗಳ ಮೂಲಕ ನಿರಂತರವಾಗಿ ಕೆಟ್ಟ ಕಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ತಮಗೆ ಮಾನಸಿಕ ಕಿರುಕುಳ ನೀಡುತ್ತಿರುವ ಎಲ್ಲಾ ನಕಲಿ ಖಾತೆಗಳ ಹಿಂದೆ ಇರುವವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಐಶ್ವರ್ಯ ಸಿಂದೋಗಿ ಮನವಿ ಮಾಡಿದ್ದಾರೆ. ಅವರ ದೂರಿನ ಆಧಾರದಲ್ಲಿ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ನಟಿಯರ ತೇಜೋವಧೆ ನಡೆಸುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಇತ್ತೀಚೆಗೆ ನಟಿ ರಮ್ಯಾ ಹಾಗೂ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಕೂಡ ಇದೇ ರೀತಿಯ ಆನ್‌ಲೈನ್ ಕಿರುಕುಳದ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸೈಬರ್ ಕ್ರೈಂ ಪೊಲೀಸರು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದರು.

ಆದರೂ ನಟಿಯರನ್ನು ಗುರಿಯಾಗಿಸಿಕೊಂಡು ನಕಲಿ ಖಾತೆಗಳ ಮೂಲಕ ಮಾನಹಾನಿ, ನಿಂದನೆ ಹಾಗೂ ಆನ್‌ಲೈನ್ ಕಿರುಕುಳ ನೀಡುವ ಪ್ರವೃತ್ತಿ ಇನ್ನೂ ಮುಂದುವರಿದಿದ್ದು, ಐಶ್ವರ್ಯ ಸಿಂದೋಗಿ ಪ್ರಕರಣ ಮತ್ತೊಮ್ಮೆ ಸೈಬರ್ ಅಪರಾಧಗಳ ವಿರುದ್ಧ ಕಠಿಣ ಕ್ರಮದ ಅಗತ್ಯವನ್ನು ಎತ್ತಿ ತೋರಿಸಿದೆ.

ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ದಂಪತಿಗೆ ಗಂಡು ಮಗು ಜನನ; ಅಪರೂಪದ ರಾಜಕೀಯ ದಾಖಲೆಗೆ ಸಾಕ್ಷಿಯಾದ ಕುಟುಂಬ

0

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹಾಗೂ ಅವರ ಪತ್ನಿ, ಅಮೆರಿಕದ ಎರಡನೇ ಮಹಿಳೆ ಉಷಾ ವ್ಯಾನ್ಸ್ ದಂಪತಿಗೆ ನಾಲ್ಕನೇ ಮಗು ಜನಿಸಿದೆ. ಗಂಡು ಮಗುವಿಗೆ ‘ಅಲೆಕ್ ನೀಲ್ ವ್ಯಾನ್ಸ್’ ಎಂದು ಹೆಸರಿಡಲಾಗಿದ್ದು, ಈ ಸಂತಸದ ಸುದ್ದಿಯನ್ನು ಕುಟುಂಬ ಅಧಿಕೃತವಾಗಿ ಹಂಚಿಕೊಂಡಿದೆ.

ಭಾನುವಾರ ಬೆಳಿಗ್ಗೆ ಮೇರಿಲ್ಯಾಂಡ್‌ನ ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರದಲ್ಲಿ ಉಷಾ ವ್ಯಾನ್ಸ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ವೈದ್ಯಕೀಯ ಸೇವೆ ನೀಡಿದ ಆಸ್ಪತ್ರೆಯ ವೈದ್ಯರು ಹಾಗೂ ಶ್ವೇತಭವನದ ವೈದ್ಯಕೀಯ ತಂಡಕ್ಕೆ ಜೆ.ಡಿ. ವ್ಯಾನ್ಸ್ ಮತ್ತು ಉಷಾ ವ್ಯಾನ್ಸ್ ಕೃತಜ್ಞತೆ ಸಲ್ಲಿಸಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿಯ ಸೇವೆಯನ್ನು ಅವರು ವಿಶೇಷವಾಗಿ ಪ್ರಶಂಸಿಸಿದ್ದಾರೆ.

ಅಲೆಕ್ ನೀಲ್ ವ್ಯಾನ್ಸ್ ದಂಪತಿಯ ನಾಲ್ಕನೇ ಮಗುವಾಗಿದೆ. ಈಗಾಗಲೇ ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಪುತ್ರಿ ಇದ್ದಾರೆ. ತಮ್ಮ ಮಕ್ಕಳ ಖಾಸಗಿತನವನ್ನು ಕಾಪಾಡುವ ಉದ್ದೇಶದಿಂದ ಕುಟುಂಬವು ಅವರನ್ನು ಸಾರ್ವಜನಿಕ ಜೀವನದಿಂದ ದೂರವಿಡಲು ಹೆಚ್ಚಿನ ಆದ್ಯತೆ ನೀಡುತ್ತಿದೆ.

ಈ ಜನನ ಅಮೆರಿಕದ ರಾಜಕೀಯ ಇತಿಹಾಸದಲ್ಲೂ ವಿಶೇಷ ಮಹತ್ವ ಪಡೆದಿದೆ. ಸುಮಾರು 150 ವರ್ಷಗಳ ಬಳಿಕ ಅಧಿಕಾರದಲ್ಲಿರುವ ಅಮೆರಿಕದ ಉಪಾಧ್ಯಕ್ಷರೊಬ್ಬರಿಗೆ ಮಗು ಜನಿಸಿರುವ ಅಪರೂಪದ ಘಟನೆ ಇದಾಗಿದೆ. ಇದಕ್ಕೂ ಮೊದಲು 1870ರಲ್ಲಿ ಆಗಿನ ಉಪಾಧ್ಯಕ್ಷ ಶುಯ್ಲರ್ ಕೋಲ್ಫ್ಯಾಕ್ಸ್ ಅಧಿಕಾರದಲ್ಲಿದ್ದಾಗ ತಂದೆಯಾಗಿದ್ದರು.

41 ವರ್ಷದ ಜೆ.ಡಿ. ವ್ಯಾನ್ಸ್ ಅಮೆರಿಕದ ಕಿರಿಯ ಉಪಾಧ್ಯಕ್ಷರಲ್ಲಿ ಒಬ್ಬರಾಗಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಪತ್ನಿ ಉಷಾ ವ್ಯಾನ್ಸ್ ಭಾರತೀಯ ಮೂಲದವರಾಗಿದ್ದು, ಅವರ ಕುಟುಂಬ ಮೂಲತಃ ಆಂಧ್ರಪ್ರದೇಶಕ್ಕೆ ಸೇರಿದದ್ದಾಗಿದೆ.