Home Blog

ಗಣೇಶ ಮೆರವಣಿಗೆಯಲ್ಲಿ ಕಿರಿಕ್; ಎರಡು ಗುಂಪುಗಳ ನಡುವೆ ಮಾರಾಮಾರಿ, 19 ಜನರ ವಿರುದ್ಧ FIR

0

ಯಾದಗಿರಿ: ಗಣೇಶೋತ್ಸವ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಬಳಿಕ ಕಲ್ಲುತೂರಾಟ ಹಾಗೂ ದೊಣ್ಣೆಗಳಿಂದ ಮಾರಾಮಾರಿ ನಡೆದಿರುವ ಘಟನೆ ಯಾದಗಿರಿ ನಗರದ ದುರ್ಗಾದೇವಿ ಮಂದಿರದ ಬಳಿ ನಡೆದಿದೆ.

ಘಟನೆ ಸಂಬಂಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ 19 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಗಣೇಶ ಮೂರ್ತಿ ಮೆರವಣಿಗೆ ಸಾಗುತ್ತಿದ್ದ ವೇಳೆ ಒಂದು ಗುಂಪಿನ ಯುವಕನ ಮೇಲೆ ಬೈಕ್ ಹಾದುಹೋಗಿದೆ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದೆ.

ಈ ವೇಳೆ ಮತ್ತೊಂದು ಗುಂಪಿನವರು, “ನಮ್ಮ ಏರಿಯಾದಲ್ಲಿ ಗಣೇಶ ಮೂರ್ತಿಯನ್ನು ಹೇಗೆ ಪ್ರತಿಷ್ಠಾಪನೆ ಮಾಡುತ್ತೀರಾ ನೋಡ್ತೀವಿ. ನಾವು ಹೇಳಿದಂತೆಯೇ ನಡೆಯಬೇಕು” ಎಂದು ಬೆದರಿಕೆ ಹಾಕಿ ಕಿರಿಕ್ ಮಾಡಿದ್ದಾರೆ ಎನ್ನಲಾಗಿದೆ.

ವಿವಾದ ತಾರಕಕ್ಕೇರಿ ಎರಡು ಗುಂಪುಗಳ ನಡುವೆ ಕಲ್ಲುತೂರಾಟ ನಡೆದಿದ್ದು, ದೊಣ್ಣೆಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಘಟನೆ ಸಂಬಂಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ 19 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೂಲಿಗಾಗಿ ವಲಸೆ ತಪ್ಪಿಸಲು ಗ್ರಾಮದಲ್ಲೇ ಉದ್ಯೋಗ : ಫಾರ್ಮ್ ನಂ.6 ಸಲ್ಲಿಕೆಗೆ ವಿಶೇಷ ಅಭಿಯಾನ

0

ವಿಜಯಸಾಕ್ಷಿ ಸುದ್ದಿ, ರೋಣ: ಗ್ರಾಮದಲ್ಲೇ ಉದ್ಯೋಗ ಸಿಗಲಿ, ಕೂಲಿಗಾಗಿ ದೂರದ ಊರುಗಳಿಗೆ ವಲಸೆ ಹೋಗುವ ಪರಿಸ್ಥಿತಿ ತಪ್ಪಲಿ ಎಂಬ ಉದ್ದೇಶದಿಂದ ರೋಣ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಫಾರ್ಮ್ ನಂ.6 ಮೂಲಕ ಉದ್ಯೋಗ ಬೇಡಿಕೆ ಸಲ್ಲಿಸುವ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ವಿಬಿ-ಜಿ ರಾಮ್ (ಜಿ) ಯೋಜನೆಯಡಿ ಉದ್ಯೋಗ ಪಡೆಯಲು ಇಚ್ಛಿಸುವ ಗ್ರಾಮೀಣ ಕುಟುಂಬಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗೆ ತೆರಳಿ ಫಾರ್ಮ್ ನಂ.6 ಸಲ್ಲಿಸಬೇಕು. ಕೆಲಸದ ಅಗತ್ಯವಿರುವ ಕುಟುಂಬಗಳನ್ನು ಗುರುತಿಸಿ, ಲಭ್ಯವಿರುವ ಕಾಮಗಾರಿಗಳ ಆಧಾರದ ಮೇಲೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಈ ಹಿಂದೆ ನರೇಗಾ ಯೋಜನೆಯಡಿ ಜಾಬ್‌ಕಾರ್ಡ್ ಹೊಂದಿರುವ ಕುಟುಂಬಗಳಿಗೂ ಹೊಸ ಯೋಜನೆಯಡಿ ಉದ್ಯೋಗ ಪಡೆಯಲು ಅವಕಾಶವಿದೆ. ಈ-ಕೆವೈಸಿ ಪೂರ್ಣಗೊಂಡಿರುವ ಹಳೆಯ ಉದ್ಯೋಗ ಚೀಟಿಗಳನ್ನು ಆರಂಭಿಕ ಹಂತದಲ್ಲಿ ಮಾನ್ಯಗೊಳಿಸಲಾಗಿದ್ದು, ಹೊಸದಾಗಿ ಉದ್ಯೋಗ ಬಯಸುವ ಕುಟುಂಬಗಳಿಗೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.

ಫಾರ್ಮ್ ನಂ.6 ಸಲ್ಲಿಸಿದ ಬಳಿಕ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅರ್ಜಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಅರ್ಹ ಕುಟುಂಬಗಳ ವಿವರ ದಾಖಲಿಸಿಕೊಳ್ಳಲಿದ್ದಾರೆ. ಹೀಗಾಗಿ ಉದ್ಯೋಗ ಚೀಟಿ ಹೊಂದಿರುವುದರ ಜತೆಗೆ ಕೆಲಸದ ಬೇಡಿಕೆಯನ್ನೂ ಅಧಿಕೃತವಾಗಿ ಸಲ್ಲಿಸುವುದು ಅಗತ್ಯವಾಗಿದೆ.

ಯೋಜನೆಯಡಿ ದಿನಕ್ಕೆ ₹382 ಕೂಲಿ ನಿಗದಿಯಾಗಿದ್ದು, ಅರ್ಹ ಗ್ರಾಮೀಣ ಕುಟುಂಬಗಳಿಗೆ ವರ್ಷದಲ್ಲಿ ಗರಿಷ್ಠ 125 ದಿನಗಳವರೆಗೆ ಉದ್ಯೋಗ ಕಲ್ಪಿಸುವ ಉದ್ದೇಶವಿದೆ. ಜಲಸಂರಕ್ಷಣೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಹಾಗೂ ಹವಾಮಾನ ಸಂಬಂಧಿತ ವಿವಿಧ ಕಾಮಗಾರಿಗಳಲ್ಲಿ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗ ದೊರೆಯಲಿದೆ.

ಕೃಷಿ ಕೆಲಸ ಕಡಿಮೆಯಾಗುವ ಅವಧಿಯಲ್ಲಿ ಗ್ರಾಮದಲ್ಲಿಯೇ ಉದ್ಯೋಗ ದೊರೆಯುವುದರಿಂದ ಕುಟುಂಬಗಳ ಆದಾಯಕ್ಕೆ ನೆರವಾಗುವುದರ ಜತೆಗೆ, ಉದ್ಯೋಗಕ್ಕಾಗಿ ನಗರ ಹಾಗೂ ಹೊರ ಜಿಲ್ಲೆಗಳಿಗೆ ವಲಸೆ ಹೋಗುವ ಪ್ರಮಾಣವೂ ಕಡಿಮೆಯಾಗುವ ನಿರೀಕ್ಷೆಯಿದೆ.

ಕೆಲಸದ ಅಗತ್ಯವಿರುವವರು ಗ್ರಾಮ ಪಂಚಾಯಿತಿಗೆ ತೆರಳಿ ಫಾರ್ಮ್ ನಂ.6 ಮೂಲಕ ಅರ್ಜಿ ಸಲ್ಲಿಸಬೇಕು. ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ನಿಯಮಾನುಸಾರ ಉದ್ಯೋಗ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.

— ಚಂದ್ರಶೇಖರ ಬಿ. ಕಂದಕೂರ, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ, ರೋಣ

ಧರ್ಮ ರಕ್ಷಣೆಯೇ ವೀರಭದ್ರನ ಸಂದೇಶ: ರಂಭಾಪುರಿ ಜಗದ್ಗುರು

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಸಮಾಜದಲ್ಲಿ ಅಸಮಾನತೆ, ಅಶಾಂತಿ ಹಾಗೂ ಮೌಲ್ಯಗಳ ಕುಸಿತ ಹೆಚ್ಚುತ್ತಿರುವ ಸಂದರ್ಭದಲ್ಲಿ ಶ್ರೀ ವೀರಭದ್ರಸ್ವಾಮಿಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಯುವಕರು ಧರ್ಮದ ಜತೆಗೆ ಆಧುನಿಕ ಶಿಕ್ಷಣ, ಸಾಮಾಜಿಕ ಜವಾಬ್ದಾರಿ ಹಾಗೂ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ನಗರದ ವಿದ್ಯಾನಗರದಲ್ಲಿರುವ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದ ಆವರಣದಲ್ಲಿ ಮಂಗಳವಾರ ನಡೆದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವೀರಭದ್ರ ಎಂದರೆ ಕೇವಲ ಶಸ್ತ್ರಧಾರಿ ದೈವದ ರೂಪವಲ್ಲ. ಧರ್ಮ ರಕ್ಷಣೆ ಹಾಗೂ ದುಷ್ಟ ಶಕ್ತಿಗಳ ದಮನವೇ ವೀರಭದ್ರಸ್ವಾಮಿಯ ಅವತಾರದ ಮೂಲ ಉದ್ದೇಶ. ವಿವೇಕ, ಧೈರ್ಯ, ಶಿಸ್ತು, ಕರ್ತವ್ಯನಿಷ್ಠೆ ಹಾಗೂ ಧರ್ಮಬದ್ಧ ಜೀವನವೇ ನಿಜವಾದ ವೀರತ್ವವಾಗಿದೆ ಎಂದರು.

ವೀರಭದ್ರೇಶ್ವರ ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಲ್ಲ. ಅವು ಜನಪರ ಸಂಸ್ಕೃತಿ, ಶೈವ ಪರಂಪರೆ, ಕಲೆ, ಆಚರಣೆಗಳು ಹಾಗೂ ಸಮುದಾಯದ ಐತಿಹಾಸಿಕ ನೆನಪುಗಳನ್ನು ಉಳಿಸಿಕೊಂಡಿರುವ ಸಾಂಸ್ಕೃತಿಕ ಕೇಂದ್ರಗಳಾಗಿವೆ. ಶ್ರೀ ವೀರಭದ್ರಸ್ವಾಮಿ ರಂಭಾಪುರಿ ಪೀಠದ ಕ್ಷೇತ್ರನಾಥ ಹಾಗೂ ಗೋತ್ರಪುರುಷನಾಗಿ ಪೂಜೆಗೊಳ್ಳುತ್ತಿದ್ದಾನೆ. ನಾಡಿನ ಯಾವುದೇ ಭಾಗದಲ್ಲಿ ಶ್ರೀ ವೀರಭದ್ರಸ್ವಾಮಿ ನೆಲೆಗೊಂಡಿದ್ದರೂ, ಆತನ ಮೂಲ ಶಕ್ತಿಕೇಂದ್ರ ರಂಭಾಪುರಿ ಕ್ಷೇತ್ರವಾಗಿದೆ ಎಂದು ತಿಳಿಸಿದರು.

ಜಾತಿ, ಪ್ರದೇಶ ಹಾಗೂ ಪಕ್ಷಭೇದಗಳನ್ನು ಮೀರಿ ಧರ್ಮ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಮಾಜ ಕಟ್ಟುವ ಸಂಕಲ್ಪವನ್ನು ಜಯಂತ್ಯುತ್ಸವದ ಮೂಲಕ ಕೈಗೊಳ್ಳಬೇಕು. ವೀರಭದ್ರನ ಶೌರ್ಯ ನಮ್ಮಲ್ಲಿ ಧೈರ್ಯ, ಶಿವನ ತತ್ವ ಜ್ಞಾನ ಹಾಗೂ ಧರ್ಮದ ಮಾರ್ಗ ಸದಾಚಾರವನ್ನು ಬೆಳೆಸಲಿ ಎಂದು ಜಗದ್ಗುರುಗಳು ಆಶಿಸಿದರು.

ಸದಾನಂದ ಡಂಗನವರ, ಚಂದ್ರಶೇಖರ ಜುಟ್ಟಲ, ವಿ.ಜಿ. ಪಾಟೀಲ, ಆರ್.ಎಂ. ಹಿರೇಮಠ, ಬಂಗಾರೇಶ ಹಿರೇಮಠ, ಬಸವರಾಜ ಸುಳ್ಳದ, ಡಾ. ರಾಮು ಮೂಲಗಿ, ಸಂಶಿ ಉಮೇಶ, ಸುಮಂಗಲಾ ಹಿರೇಮಠ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು. ಮ್ಯಾನೇಜರ್ ಜಿ.ವಿ. ಹಿರೇಮಠ ಸ್ವಾಗತಿಸಿ, ನಿರೂಪಿಸಿದರು.

ವಿವೇಕ, ಧೈರ್ಯ, ಶಿಸ್ತು, ಕರ್ತವ್ಯನಿಷ್ಠೆ ಮತ್ತು ಧರ್ಮಬದ್ಧ ಜೀವನವೇ ನಿಜವಾದ ವೀರತ್ವ. ವೀರಭದ್ರನ ಆದರ್ಶಗಳನ್ನು ಯುವಕರು ಬದುಕಿನಲ್ಲಿ ಅಳವಡಿಸಿಕೊಂಡು ಧರ್ಮ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು.

— ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು

ಕಾಮನ್‌ವೆಲ್ತ್ ಸಮ್ಮೇಳನದಲ್ಲಿ ಕರ್ನಾಟಕದ ಹಿರಿಮೆ ಅನಾವರಣ

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆಯುತ್ತಿರುವ 69ನೇ ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಮಂಡಲದ ನಿಯೋಗವು ದಕ್ಷಿಣ ಆಫ್ರಿಕಾ ಗಣರಾಜ್ಯದ ರಾಷ್ಟ್ರೀಯ ಸಭೆಯ ಸಭಾಧ್ಯಕ್ಷೆ ಥೋಕೊ ದಿದಿಜಾ ಅವರಿಗೆ ‘A Brochure on Karnataka’ ಎಂಬ ವಿಶೇಷ ಕಿರುಹೊತ್ತಿಗೆಯನ್ನು ಅರ್ಪಿಸಿತು.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಅವರು ಪ್ರತಿನಿಧಿಯಾಗಿ (Delegate) ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹಮದ್ ಅವರು ವೀಕ್ಷಕರಾಗಿ (Observer) ಒಳಗೊಂಡ ನಿಯೋಗವು ಕೇಪ್‌ಟೌನ್ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿರುಹೊತ್ತಿಗೆಯನ್ನು ಹಸ್ತಾಂತರಿಸಿತು.

ಕರ್ನಾಟಕದ ಸಂಸದೀಯ ಪರಂಪರೆ, ಆಡಳಿತ ವ್ಯವಸ್ಥೆ, ಸಾಂಸ್ಕೃತಿಕ ವೈಭವ ಹಾಗೂ ಅಭಿವೃದ್ಧಿ ಸಾಧನೆಗಳನ್ನು ಅಂತರರಾಷ್ಟ್ರೀಯ ನಿಯೋಗಗಳಿಗೆ ಪರಿಚಯಿಸುವ ಉದ್ದೇಶದಿಂದ ಕಿರುಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. ಕರ್ನಾಟಕ ವಿಧಾನಮಂಡಲದ ಪರವಾಗಿ ಇದನ್ನು ಸಂಸದೀಯ ಸ್ನೇಹ ಹಾಗೂ ಸೌಹಾರ್ದದ ಸಂಕೇತವಾಗಿ ಅರ್ಪಿಸಲಾಯಿತು.

ಕರ್ನಾಟಕದ ಸಂಸದೀಯ ಪರಂಪರೆ, ಸಾಂಸ್ಕೃತಿಕ ವೈಭವ ಹಾಗೂ ಅಭಿವೃದ್ಧಿ ಸಾಧನೆಗಳನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪರಿಚಯಿಸುವುದು ರಾಜ್ಯದ ಹೆಮ್ಮೆಯ ಸಂಗತಿ.

ಕೇಪ್‌ಟೌನ್‌ನಲ್ಲಿ ನಡೆಯುತ್ತಿರುವ ಸಮ್ಮೇಳನವು ‘ಬದಲಾಗುತ್ತಿರುವ ವಿಶ್ವ ವ್ಯವಸ್ಥೆಯಲ್ಲಿ ಅಂತರರಾಷ್ಟ್ರೀಯ ಕಾನೂನು ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ಬಲಪಡಿಸುವುದು, ಕಾಮನ್‌ವೆಲ್ತ್ ನಾಯಕತ್ವ’ ಎಂಬ ಧ್ಯೇಯದಡಿ ನಡೆಯುತ್ತಿದೆ.

ಕಾಮನ್‌ವೆಲ್ತ್‌ನ ಒಂಬತ್ತು ಭೌಗೋಳಿಕ ಪ್ರದೇಶಗಳಿಂದ ಸಭಾಧ್ಯಕ್ಷರು, ಸಭಾಪತಿಗಳು ಹಾಗೂ ಸಂಸದರು ಸೇರಿದಂತೆ 800ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನದ ಇತಿಹಾಸದಲ್ಲೇ ಇದೊಂದು ಅತಿದೊಡ್ಡ ಸಮಾವೇಶವಾಗಿದೆ.

ಕರ್ನಾಟಕದ ನಿಯೋಗವು ಶಾಸಕಾಂಗದಲ್ಲಿ ಅಂತರ್‌ಸಂಸದೀಯ ಸಹಕಾರ, ಆರ್ಥಿಕತೆ ಮತ್ತು ವ್ಯಾಪಾರ, ಕೃತಕ ಬುದ್ಧಿಮತ್ತೆಯ ಬಳಕೆ, ಮಾನವ ಹಕ್ಕುಗಳು ಮತ್ತು ಶಾಂತಿ ಹಾಗೂ ಹವಾಮಾನ ಬದಲಾವಣೆ ಮತ್ತು ಸ್ಥಿತಿಸ್ಥಾಪಕತ್ವದಂತಹ ಪ್ರಮುಖ ವಿಷಯಗಳ ಕುರಿತು ನಡೆಯುತ್ತಿರುವ ಗೋಷ್ಠಿಗಳು ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಿದೆ.

ಯುವಕರೇ ದೇಶದ ಸಂಪತ್ತು: ಚಂದ್ರು ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಯುವಕರು ದೇಶದ ಸಂಪತ್ತು. ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ದೇಶ, ನಾಡು, ನುಡಿ, ನೆಲ, ಭಾಷೆ ಹಾಗೂ ಸಂವಿಧಾನದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಪುರಸಭೆ ಕಲಾ ಮಹಾವಿದ್ಯಾಲಯದಲ್ಲಿ ತಾಲೂಕು ಆಡಳಿತ, ಪುರಸಭೆ, ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ವಿಶ್ವಮಾನ್ಯವಾಗಿದೆ. ದೇಶದ ಆಡಳಿತ ಸಂವಿಧಾನದ ಆಶಯದಂತೆ ನಡೆಯಬೇಕು. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆಗಳು ಸಂವಿಧಾನದ ಚೌಕಟ್ಟಿನಲ್ಲಿಯೇ ಕಾರ್ಯನಿರ್ವಹಿಸಬೇಕು. ಪ್ರತಿಯೊಬ್ಬರೂ ಸಂವಿಧಾನದ ತತ್ವಗಳು ಮತ್ತು ಮೌಲ್ಯಗಳನ್ನು ಅರಿತು, ಅದರ ಆಶಯದಂತೆ ಬದುಕಬೇಕು ಎಂದರು.

ಯುವ ಸಂಸತ್‌ನಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಂಸದೀಯ ವ್ಯವಸ್ಥೆಯ ಕುರಿತು ಅರಿವು ಮೂಡಿಸುವುದರ ಜತೆಗೆ ಚರ್ಚೆ, ವಿಚಾರ ಮಂಡನೆ, ನಾಯಕತ್ವ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ತಹಸೀಲ್ದಾರ್ ಧನಂಜಯ ಎಂ. ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿದ್ದು, ಶಿಸ್ತು, ಸಂಸ್ಕಾರ ಹಾಗೂ ಉತ್ತಮ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಬದ್ಧರಾಗಬೇಕು. ಭವಿಷ್ಯದಲ್ಲಿ ದೇಶದ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಲು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು.

ವಕೀಲ ಬಿ.ಎಸ್. ಬಾಳೇಶ್ವರಮಠ ಅವರು ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಯುವಕರ ಪಾತ್ರದ ಕುರಿತು ಉಪನ್ಯಾಸ ನೀಡಿದರು.

ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ, ಸಿಪಿಐ ಬಿ.ವಿ. ನ್ಯಾಮಗೌಡ್ರ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲ ನಾಯಕ, ಪಿಎಸ್‌ಐ ಟಿ.ಕೆ. ರಾಠೋಡ, ಇಸಿಒ ರಾಘವೇಂದ್ರ ಜೋಶಿ, ಪ್ರಾಚಾರ್ಯ ನಾಗರಾಜ ಕಳ್ಳಿಮನಿ ಸೇರಿದಂತೆ ಉಪನ್ಯಾಸಕರು, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಫ್.ಸಿ. ಚಕಾರದ ನಿರೂಪಿಸಿದರು.

ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಸಂವಿಧಾನದ ಮೌಲ್ಯಗಳನ್ನು ಅರಿತು, ದೇಶದ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು.

— ಡಾ. ಚಂದ್ರು ಲಮಾಣಿ, ಶಾಸಕ

ಕಾಮಗಾರಿಗಳ ಗುಣಮಟ್ಟಕ್ಕೆ ಕಟ್ಟುನಿಟ್ಟಿನ ನಿಗಾ ಅಗತ್ಯ: ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರದ ಅನುದಾನದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಎಂಜಿನಿಯರ್‌ಗಳು ಕಟ್ಟುನಿಟ್ಟಿನ ನಿಗಾವಹಿಸಬೇಕು. ಗುತ್ತಿಗೆದಾರರು ತಮಗೆ ಬೇಕಾದ ರೀತಿಯಲ್ಲಿ ಕಾಮಗಾರಿ ನಡೆಸದಂತೆ, ನಿಯಮಾನುಸಾರ ಕೆಲಸ ನಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ, ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ನಗರದ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಗದಗ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ (ರಿ.) ಸಹಯೋಗದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಸ್ತೆ, ಸೇತುವೆ ಸೇರಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸುವಾಗ ಅಗತ್ಯ ಅಳತೆ, ದಾಖಲೆ ಹಾಗೂ ತಾಂತ್ರಿಕ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೇವಲ ಕಾಗದದ ಮೇಲಿನ ಪರಿಶೀಲನೆಗೆ ಸೀಮಿತವಾಗದೆ, ಸ್ಥಳದಲ್ಲೇ ಕಾಮಗಾರಿಯನ್ನು ಪರಿಶೀಲಿಸಿ ಲೋಪ ಕಂಡುಬಂದರೆ ತಕ್ಷಣ ಸರಿಪಡಿಸುವ ಕ್ರಮ ಕೈಗೊಳ್ಳಬೇಕು ಎಂದು ಎಚ್.ಕೆ. ಪಾಟೀಲ ಸೂಚಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಕಾಮಗಾರಿಗಳ ಗುಣಮಟ್ಟ ನೇರವಾಗಿ ಜನಪ್ರತಿನಿಧಿಗಳ ಮೇಲೂ ಪರಿಣಾಮ ಬೀರುತ್ತದೆ. ಉತ್ತಮ ಕಾಮಗಾರಿಗೆ ಎಲ್ಲರಿಗೂ ಶ್ರೇಯಸ್ಸು ದೊರೆಯುತ್ತದೆ, ಕಳಪೆ ಕಾಮಗಾರಿ ನಡೆದರೆ ಜನರು ಜನಪ್ರತಿನಿಧಿಗಳನ್ನೇ ಪ್ರಶ್ನಿಸುತ್ತಾರೆ. ಹೀಗಾಗಿ ಎಂಜಿನಿಯರ್‌ಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ, ಸರ್ಕಾರದ ಹಣ ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು ಎಂದರು.

ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದೆ. ಬಿಡುಗಡೆಯಾದ ಅನುದಾನವನ್ನು ಸಕಾಲದಲ್ಲಿ ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದು ಮುಖ್ಯ. ಕಾಮಗಾರಿ ಆರಂಭಿಸುವ ಮುನ್ನ ಸೂಕ್ತ ನಕ್ಷೆ, ಅಳತೆ, ತಾಂತ್ರಿಕ ಪರಿಶೀಲನೆ ಹಾಗೂ ಸಮರ್ಪಕ ಯೋಜನೆ ಸಿದ್ಧಪಡಿಸಬೇಕು. ಅನುದಾನ ಬಿಡುಗಡೆಯಾದ ಬಳಿಕ ಕಾಮಗಾರಿ ವಿಳಂಬವಾಗದಂತೆ ಕ್ರಮವಹಿಸಿ, ಸಾರ್ವಜನಿಕರಿಗೆ ಯೋಜನೆಗಳ ಪ್ರಯೋಜನ ಶೀಘ್ರ ದೊರೆಯುವಂತೆ ಮಾಡಬೇಕು ಎಂದು ಹೇಳಿದರು.

ಎಂಜಿನಿಯರಿಂಗ್ ಕ್ಷೇತ್ರದಲ್ಲಿ ದೇಶವು ಗಣನೀಯ ಪ್ರಗತಿ ಸಾಧಿಸಿದ್ದು, ಆಧುನಿಕ ತಂತ್ರಜ್ಞಾನದಿಂದ ಬೃಹತ್ ಸೇತುವೆಗಳು ಸೇರಿದಂತೆ ಹಲವು ನಿರ್ಮಾಣ ಕಾರ್ಯಗಳು ಸಾಧ್ಯವಾಗಿವೆ. ಇದೇ ತಂತ್ರಜ್ಞಾನವನ್ನು ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳಲ್ಲೂ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಿ.ಸಿ. ಪಾಟೀಲ ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಲೋಕೋಪಯೋಗಿ ಇಲಾಖೆ ಆವರಣದಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಯೂತ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾಲಾರ್ಪಣೆ ಮಾಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ ಉಪಸ್ಥಿತರಿದ್ದರು.

ಮುಖ್ಯ ಅಭಿಯಂತರ ಶಿವಾನಂದ ನಾಯಕ, ಕಾರ್ಯಪಾಲಕ ಅಭಿಯಂತರರಾದ ಉಮೇಶ ನಾಯಕ ಹಾಗೂ ಆರ್.ಬಿ. ಮರಾಠೆ, ಹಿರಿಯ ಭೂವಿಜ್ಞಾನಿ ಉಮೇಶ ಬಗರಿ, ಗದಗ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ಅಧ್ಯಕ್ಷ ಎಸ್.ಕೆ. ಪಾಟೀಲ ಸೇರಿದಂತೆ ಪದಾಧಿಕಾರಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬಾಹುಬಲಿ ಜೈನರ ಸ್ವಾಗತಿಸಿ ನಿರೂಪಿಸಿದರು. ಪ್ರಕಾಶ ಮುದಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಇರಬಾರದು. ಸರ್ಕಾರದ ಹಣ ಜನರ ಹಣವಾಗಿದ್ದು, ಅದು ಸಮರ್ಪಕವಾಗಿ ಬಳಕೆಯಾಗುವಂತೆ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.

— ಎಚ್.ಕೆ. ಪಾಟೀಲ, ಶಾಸಕ

ಸಹಕಾರ ಕ್ಷೇತ್ರಕ್ಕೆ ವಂಚನೆ ಕಂಟಕ; ಎಚ್ಚರಿಕೆ ಅಗತ್ಯ: ಮೋಹನ್ ಟಿ. ಕೋಟಿ

0

ವಿಜಯಸಾಕ್ಷಿ ಸುದ್ದಿ, ಗದಗ: ತಂತ್ರಜ್ಞಾನ ಬಳಕೆ ಹೆಚ್ಚಿದಂತೆ ಸಹಕಾರ ಬ್ಯಾಂಕ್‌ಗಳು ಹಾಗೂ ಪತ್ತಿನ ಸಂಘಗಳಲ್ಲಿ ವಂಚನೆಯ ಅಪಾಯವೂ ಹೆಚ್ಚುತ್ತಿದ್ದು, ಅದನ್ನು ತಡೆಯಲು ಕಟ್ಟುನಿಟ್ಟಿನ ಆಂತರಿಕ ನಿಯಂತ್ರಣ, ಪರಿಣಾಮಕಾರಿ ಲೆಕ್ಕಪರಿಶೋಧನೆ ಹಾಗೂ ತಂತ್ರಜ್ಞಾನ ಆಧಾರಿತ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದು ಮರ್ಚಂಟ್ಸ್ ಲಿಬರಲ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಮೋಹನ್ ಟಿ. ಕೋಟಿ ಹೇಳಿದರು.

ಗದಗ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಮರ್ಚಂಟ್ಸ್ ಲಿಬರಲ್ ಕೋ-ಆಪರೇಟಿವ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ನಗರದ ಬ್ಯಾಂಕ್ ಸಭಾಭವನದಲ್ಲಿ ಅರ್ಬನ್ ಬ್ಯಾಂಕುಗಳು ಹಾಗೂ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ವ್ಯವಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗಾಗಿ ಆಯೋಜಿಸಿದ್ದ ಒಂದು ದಿನದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಾಲ ವಂಚನೆ, ನಕಲಿ ಸದಸ್ಯರ ಹೆಸರಿನಲ್ಲಿ ಸಾಲ ಮಂಜೂರು, ಒಂದೇ ಆಸ್ತಿಯ ಮೇಲೆ ಬಹು ಸಾಲ, ದಾಖಲೆಗಳ ಮೌಲ್ಯವನ್ನು ಕೃತಕವಾಗಿ ಹೆಚ್ಚಿಸುವುದು ಸೇರಿದಂತೆ ಹಲವು ರೀತಿಯ ವಂಚನೆಗಳು ನಡೆಯುತ್ತಿವೆ. ಒಟಿಪಿ, ಪಿನ್, ಪಾಸ್‌ವರ್ಡ್ ಕಳವು, ನಕಲಿ ಬ್ಯಾಂಕ್ ಲಿಂಕ್‌ಗಳು, ಮೊಬೈಲ್ ಆ್ಯಪ್‌ಗಳು, ಇಂಟರ್‌ನೆಟ್ ಬ್ಯಾಂಕಿಂಗ್ ಹಾಗೂ ಕ್ಯೂಆರ್ ಕೋಡ್ ಮೂಲಕವೂ ವಂಚನೆ ನಡೆಯುವ ಸಾಧ್ಯತೆ ಇರುವುದರಿಂದ ಸಿಬ್ಬಂದಿ ಮತ್ತು ಸದಸ್ಯರಲ್ಲಿ ನಿರಂತರ ಜಾಗೃತಿ ಮೂಡಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿ, ಸಹಕಾರ ಸಂಸ್ಥೆಗಳು ಜನರ ವಿಶ್ವಾಸದ ಮೇಲೆ ನಿಂತಿವೆ. ಜಾಗೃತಿ, ಪಾರದರ್ಶಕ ಆಡಳಿತ, ಕಟ್ಟುನಿಟ್ಟಿನ ಆಂತರಿಕ ನಿಯಂತ್ರಣ ಹಾಗೂ ಪರಿಣಾಮಕಾರಿ ಆಡಿಟ್ ಮೂಲಕ ವಂಚನೆಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದರು.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಬಲ್ಲದು. ಆದರೆ ಎಐ ಬಳಕೆಯಲ್ಲಿ ನೈತಿಕತೆ, ಕಾನೂನು, ಗೌಪ್ಯತೆ, ಸುರಕ್ಷತೆ, ಪಾರದರ್ಶಕತೆ ಹಾಗೂ ಮಾನವ ಮೇಲ್ವಿಚಾರಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ತರಬೇತಿ ಶಿಬಿರದಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳಾದ ಬಿ.ವಿ. ರವೀಂದ್ರನಾಥ ಹಾಗೂ ವರುಣ್ ಭಟ್ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಬ್ಯಾಂಕಿಂಗ್ ಮತ್ತು ಪತ್ತಿನ ಕ್ಷೇತ್ರದಲ್ಲಿನ ವಂಚನೆಗಳ ಗುರುತಿಸುವಿಕೆ, ತಡೆ ಕ್ರಮಗಳು ಹಾಗೂ ಎಐ ತಂತ್ರಜ್ಞಾನದ ಪ್ರಾಯೋಗಿಕ ಬಳಕೆಯ ಕುರಿತು ತರಬೇತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮರ್ಚಂಟ್ಸ್ ಲಿಬರಲ್ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಕೆ.ಎಸ್. ಪರ್ವತಗೌಡ್ರ, ನಿರ್ದೇಶಕರಾದ ವಿ.ಸಿ. ರಾಮನಕೊಪ್ಪ, ಟಿ.ಆರ್. ಭಾಂಡಗೆ, ಎಸ್.ಬಿ. ಅಬ್ಬಿಗೇರಿ, ಸಿ.ಎಸ್. ಸಂಕಣ್ಣವರ, ಎಸ್.ಎಚ್. ನಡವಲಗುಡ್ಡ ಹಾಗೂ ಸಿ.ಟಿ. ದುಂದೂರ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಸ್.ಕೆ. ಕುರಡಗಿ, ಹಿರಿಯ ಲೆಕ್ಕಪರಿಶೋಧಕಿ ಜೆ.ಎನ್. ಮಾಳೆಕೊಪ್ಪ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಆರ್. ನಿಡಗುಂದಿ ಉಪಸ್ಥಿತರಿದ್ದರು.

ವಂಚನೆ ತಡೆಗೆ ಜಾಗೃತಿ ಮಾತ್ರವಲ್ಲ, ಕಟ್ಟುನಿಟ್ಟಿನ ನಿಯಂತ್ರಣ ವ್ಯವಸ್ಥೆಯೂ ಅಗತ್ಯ. ಪ್ರತಿಯೊಬ್ಬ ಸದಸ್ಯ, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಜವಾಬ್ದಾರಿ ಇದರಲ್ಲಿ ಮಹತ್ವದ್ದಾಗಿದೆ.

— ಸಿ.ಎಂ. ಪಾಟೀಲ, ಅಧ್ಯಕ್ಷರು, ಗದಗ ಜಿಲ್ಲಾ ಸಹಕಾರ ಯೂನಿಯನ್

ಗಣೇಶನಿಗೆ ನವಧಾನ್ಯಗಳ ವಿಶೇಷ ಪೂಜೆ : ಉತ್ತಮ ಮಳೆ, ರೈತರ ಸಮೃದ್ಧಿಗಾಗಿ ಪ್ರಾರ್ಥನೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗಾನಯೋಗಿ ಶ್ರೀ ಪಂ. ಪಂಚಾಕ್ಷರ ಗವಾಯಿಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗೆ ಎರಡನೇ ದಿನವಾದ ಮಂಗಳವಾರ ದಲಾಲ ವರ್ತಕರ ಸಂಘದ ವತಿಯಿಂದ ರೈತಪರ ವಿಶೇಷ ಪೂಜೆ ನೆರವೇರಿಸಲಾಯಿತು.

ಗಣೇಶನ ಮೂರ್ತಿಯ ಮುಂದೆ ಜಿಲ್ಲೆಯ ರೈತರು ಶ್ರಮವಹಿಸಿ ಬೆಳೆದ ಜೋಳ, ಗೋಧಿ, ಹೆಸರು, ತೊಗರಿ, ಕಡಲೆ, ಎಳ್ಳು, ಸೂರ್ಯಕಾಂತಿ ಸೇರಿದಂತೆ ನವಧಾನ್ಯಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಕೃಷಿ ಸಂಸ್ಕೃತಿ ಹಾಗೂ ರೈತರ ಶ್ರಮಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ನವಧಾನ್ಯಗಳ ನೈವೇದ್ಯ ಸಮರ್ಪಿಸಲಾಯಿತು.

ಜಿಲ್ಲೆಯಲ್ಲಿ ನಿರೀಕ್ಷಿತ ಮಳೆಯಾಗದೆ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಉತ್ತಮ ಮಳೆ ಹಾಗೂ ರೈತರ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಪಿಎಂಸಿ ದಲಾಲ ಸಂಘದ ಪದಾಧಿಕಾರಿಗಳಾದ ಮಹಾದೇವಪ್ಪ ಗೌರಿಪುರ, ಶಶಿಧರ ಭೀರನವರ, ತಿಮ್ಮಣ್ಣ ಕೋನರೆಡ್ಡಿ, ಹುಚ್ಚಪ್ಪ ಶಹಪೂರ, ಮಂಜುನಾಥ ಬೇಲೆರಿ, ಸಿದ್ಧಣ್ಣ ಮಾರನಬಸರಿ, ಪ್ರಕಾಶ ಉಗಲಾಟದ, ನಿತಿನ್ ವಾರಕರ, ಮಂಜುನಾಥ ಹುಚ್ಚಣ್ಣವರ, ಶರಣಪ್ಪ ಕುರಡಗಿ, ಸೋಮನಗೌಡ ಪಾಟೀಲ ಹಾಗೂ ಶಿವಯ್ಯ ನಾಲ್ವತ್ವಾಡಮಠ ಸೇರಿದಂತೆ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು, ವರ್ತಕರು, ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವರಸಿದ್ಧಿ ವಿನಾಯಕನ ಕೃಪೆಯಿಂದ ಗದಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ, ರೈತರ ಬೆಳೆಗಳು ನಳನಳಿಸಲಿ. ಬರಗಾಲದ ಛಾಯೆ ದೂರವಾಗಿ ಜಿಲ್ಲೆಯ ರೈತರಿಗೆ ಸಮೃದ್ಧಿ ದೊರೆಯಲಿ.

— ಮುರಘರಾಜೇಂದ್ರ ಬಡ್ನಿ, ಅಧ್ಯಕ್ಷರು, ಎಪಿಎಂಸಿ ದಲಾಲ ವರ್ತಕರ ಸಂಘ

ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಿ: ಶಂಕರ ಹಲಗತ್ತಿ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಇಂದಿನ ಮಕ್ಕಳು ಪ್ರತಿಭಾವಂತರಾಗಿದ್ದು, ಶಿಕ್ಷಣದ ಜತೆಗೆ ನೃತ್ಯ, ಸಂಗೀತ, ವೇಷಭೂಷಣ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ಪಾಲಕರು ಪ್ರೋತ್ಸಾಹಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಯುವ ಡಾನ್ಸ್ ಅಕಾಡೆಮಿ ಆಯೋಜಿಸಿದ್ದ ಯುವ ಕೃಷ್ಣ-ಯುವ ರಾಧೆ 2026, ಸೀಸನ್-2 ಮಕ್ಕಳ ಫ್ಯಾಷನ್ ಶೋ, ವೇಷಭೂಷಣ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಪ್ರತಿಭೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಮೊಬೈಲ್ ಅವಲಂಬನೆಯಿಂದ ಹೊರಬಂದು ಸೃಜನಶೀಲ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಪಾಲಕರು ಗಮನಹರಿಸಬೇಕು. ಯುವ ಡಾನ್ಸ್ ಅಕಾಡೆಮಿ ಕಳೆದ ಹಲವು ವರ್ಷಗಳಿಂದ ಮಕ್ಕಳ ಪ್ರತಿಭೆ ಉತ್ತೇಜಿಸುವ ಜತೆಗೆ ಸಮಾಜಮುಖಿ ಹಾಗೂ ಪರಿಸರ ಕಾಳಜಿಯ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಡಾ. ಎಂ.ಡಿ. ಒಕ್ಕುಂದ ಮಾತನಾಡಿ, ಮಕ್ಕಳ ಪ್ರತಿಭೆ ಬೆಳೆಸುವಲ್ಲಿ ಯುವ ಡಾನ್ಸ್ ಅಕಾಡೆಮಿಯ ಕಾರ್ಯ ಅಭಿನಂದನೀಯ. ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವು ಹಾಗೂ ಪರಿಸರ ಕಾಳಜಿಯ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸುಮಾರು 30 ಮಕ್ಕಳು ರಾಧಾ-ಕೃಷ್ಣ ವೇಷಭೂಷಣ, ಜಾನಪದ ನೃತ್ಯ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಅಕಾಡೆಮಿ ಸಂಸ್ಥಾಪಕ ರಮೇಶ್ ಪಾಟೀಲ್, ಗೌರವಾಧ್ಯಕ್ಷೆ ರತ್ನಮ್ಮ ಪಾಟೀಲ್, ನಿರ್ಣಾಯಕರಾದ ಸಂತೋಷ್ ಪಾಟೀಲ್ ಹಾಗೂ ಸುರಕ್ಷಾ ಹಿರೇಮಠ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಭಾಗವಹಿಸಿದ ಎಲ್ಲ ಮಕ್ಕಳಿಗೂ ವಿವಿಧ ವಿಶೇಷ ಬಿರುದು ನೀಡಿ ಗೌರವಿಸಲಾಯಿತು.

ಮಕ್ಕಳನ್ನು ಮೊಬೈಲ್ ಅವಲಂಬನೆಯಿಂದ ಹೊರತಂದು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಅವರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಬೇಕು.

— ಶಂಕರ ಹಲಗತ್ತಿ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ವಿದ್ಯಾವರ್ಧಕ ಸಂಘ

ವಂದೇ ಮಾತರಂನಲ್ಲಿ ಸರ್ಕಾರ ರಾಷ್ಟ್ರಭಕ್ತಿ ಮೆರೆಯಲಿ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಷ್ಟ್ರಭಕ್ತಿಯ ಪ್ರತೀಕವಾದ ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿರುವ ರಾಜ್ಯ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿದು, ಗೀತೆಯ ಪೂರ್ಣರೂಪಕ್ಕೆ ಗೌರವ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ವಂದೇ ಮಾತರಂ ಗೀತೆಯನ್ನು ಎರಡು ಚರಣಗಳಿಗೆ ಸೀಮಿತಗೊಳಿಸಿ ಹಾಡುವಂತೆ ರಾಜ್ಯ ಸರ್ಕಾರ ಸೂಚಿಸಿರುವುದು ಖಂಡನೀಯ. ಇದು ವಂದೇ ಮಾತರಂ ಗೀತೆಗೆ ಮಾತ್ರವಲ್ಲದೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರಿಗೆ ಮಾಡಿರುವ ಅವಮಾನ ಎಂದು ಟೀಕಿಸಿದ್ದಾರೆ.

ವಂದೇ ಮಾತರಂ ಭಾರತದ ಸ್ವಾತಂತ್ರ್ಯ ಹೋರಾಟದ ಚೈತನ್ಯ, ತ್ಯಾಗ ಹಾಗೂ ರಾಷ್ಟ್ರಭಕ್ತಿಯ ಪ್ರತೀಕ. ಇಂತಹ ಐತಿಹಾಸಿಕ ಗೀತೆಯನ್ನು ಮೊಟಕುಗೊಳಿಸುವುದು ಅದರ ಪರಂಪರೆ ಹಾಗೂ ಇತಿಹಾಸವನ್ನು ಕುಗ್ಗಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರವು ತುಷ್ಟೀಕರಣ ರಾಜಕಾರಣಕ್ಕಾಗಿ ವಂದೇ ಮಾತರಂ ವಿಚಾರದಲ್ಲಿ ಇಂತಹ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದ ಅವರು, ಸಂವಿಧಾನದ ಆಶಯಗಳ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ದ್ವಂದ್ವ ನಿಲುವು ತಾಳುತ್ತಿರುವುದು ಖಂಡನೀಯ ಎಂದಿದ್ದಾರೆ.

ವಂದೇ ಮಾತರಂ ವಿಚಾರದಲ್ಲಿ ಸರ್ಕಾರದ ನಿರ್ಧಾರವನ್ನು ಬಿಜೆಪಿ ರಾಜ್ಯಾದ್ಯಂತ ವಿರೋಧಿಸಲಿದೆ. ಸರ್ಕಾರ ಕೂಡಲೇ ತನ್ನ ನಿಲುವು ಬದಲಿಸಿ, ವಂದೇ ಮಾತರಂನ ಪೂರ್ಣರೂಪಕ್ಕೆ ಗೌರವ ನೀಡುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯದ ಜನರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಲಿಂಗರಾಜ ಪಾಟೀಲ ಎಚ್ಚರಿಸಿದ್ದಾರೆ.

ವಂದೇ ಮಾತರಂ ಕೇವಲ ಗೀತೆಯಲ್ಲ; ಅದು ಸ್ವಾತಂತ್ರ್ಯ ಹೋರಾಟದ ಚೈತನ್ಯ ಮತ್ತು ರಾಷ್ಟ್ರಭಕ್ತಿಯ ಪ್ರತೀಕ. ಇಂತಹ ಐತಿಹಾಸಿಕ ಗೀತೆಯನ್ನು ಮೊಟಕುಗೊಳಿಸುವ ನಿರ್ಧಾರವನ್ನು ಬಿಜೆಪಿ ಎಂದಿಗೂ ಒಪ್ಪುವುದಿಲ್ಲ.

— ಲಿಂಗರಾಜ ಪಾಟೀಲ ಮಲ್ಲಾಪೂರ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ