ವಿಜಯಸಾಕ್ಷಿ ಸುದ್ದಿ, ಗದಗ: ನಗರ ಪ್ರದೇಶಗಳಲ್ಲಿ ಅಂಚೆ ಸೇವೆಯನ್ನು ಇನ್ನಷ್ಟು ವೇಗವಾಗಿ, ಪಾರದರ್ಶಕವಾಗಿ ಹಾಗೂ ಗ್ರಾಹಕ ಸ್ನೇಹಿಯಾಗಿ ರೂಪಿಸುವ ಉದ್ದೇಶದಿಂದ ಗದಗ ನಗರದಲ್ಲಿ ಭಾರತೀಯ ಅಂಚೆ ಇಲಾಖೆಯ ನೂತನ ಸ್ವತಂತ್ರ ವಿತರಣಾ ಕೇಂದ್ರವನ್ನು ಶನಿವಾರ ಉದ್ಘಾಟಿಸಲಾಯಿತು.
ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ, ನಗರಗಳು ಹಾಗೂ ಪಕ್ಕದ ಪ್ರದೇಶಗಳಲ್ಲಿ ಬುಕ್ ಆಗುವ ಪಾರ್ಸೆಲ್ಗಳನ್ನು ಗ್ರಾಹಕರಿಗೆ ಅದೇ ದಿನ ತಲುಪಿಸುವಲ್ಲಿ ಸ್ವತಂತ್ರ ವಿತರಣಾ ಕೇಂದ್ರಗಳು ಮಹತ್ವದ ಪಾತ್ರವಹಿಸಲಿವೆ ಎಂದು ಹೇಳಿದರು.
ಇ-ಕಾಮರ್ಸ್ ಸಂಸ್ಥೆ ಫ್ಲಿಪ್ಕಾರ್ಟ್ ಭಾರತೀಯ ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಗ್ರಾಹಕರಿಗೆ ಪಾರ್ಸೆಲ್ ಸೇವೆ ಇನ್ನಷ್ಟು ಸುಲಭವಾಗಿ ಹಾಗೂ ವೇಗವಾಗಿ ತಲುಪಲಿದೆ. ತಂತ್ರಜ್ಞಾನದ ಅಳವಡಿಕೆ, ಸಿಬ್ಬಂದಿಯ ದಕ್ಷತೆ ಹಾಗೂ ಗ್ರಾಹಕ ಕೇಂದ್ರಿತ ಸೇವೆಯಿಂದ ಭಾರತೀಯ ಅಂಚೆ ಇಲಾಖೆ ಮತ್ತಷ್ಟು ಜನಪ್ರಿಯ ಸೇವಾ ಸಂಸ್ಥೆಯಾಗಿ ಬೆಳೆಯಲಿದೆ ಎಂದು ತಿಳಿಸಿದರು.
ಗ್ರಾಹಕರ ಅನುಕೂಲಕ್ಕಾಗಿ ಒಟಿಪಿ ಆಧಾರಿತ ಸುರಕ್ಷಿತ ವಿತರಣೆ, ಆನ್ಲೈನ್ ಪಾವತಿ, ಎಸ್ಎಂಎಸ್ ಅಧಿಸೂಚನೆ ಸೇರಿದಂತೆ ಹಲವು ಆಧುನಿಕ ಸೇವೆಗಳನ್ನು ಅಂಚೆ ಇಲಾಖೆ ಜಾರಿಗೆ ತಂದಿದೆ ಎಂದು ವಿವರಿಸಿದರು.
ಗದಗ ಉಪ ವಿಭಾಗದ ವಿನೋದಕುಮಾರ ಮೇದಾರ ಮಾತನಾಡಿ, ಭಾರತೀಯ ಅಂಚೆ ಇಲಾಖೆಯ ಆಧುನೀಕರಣದ ಭಾಗವಾಗಿ ಆರಂಭಿಸಿರುವ ಸ್ವತಂತ್ರ ವಿತರಣಾ ಕೇಂದ್ರವು ಗ್ರಾಹಕರಿಗೆ ಗುಣಮಟ್ಟದ ಮತ್ತು ತ್ವರಿತ ಸೇವೆ ಒದಗಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಭಾರತೀಯ ಅಂಚೆ ಇಲಾಖೆ ಕೇವಲ ಸರ್ಕಾರಿ ಸಂಸ್ಥೆಯಲ್ಲ, ಅದು ದೇಶದ ಭಾವನಾತ್ಮಕ ಕೊಂಡಿಯಾಗಿದ್ದು, ಖಾಸಗಿ ಸಂಸ್ಥೆಗಳು ತಲುಪದ ಪ್ರದೇಶಗಳಲ್ಲಿಯೂ ಜನಸೇವೆ ಮಾಡುತ್ತಿರುವ ವಿಶ್ವಾಸಾರ್ಹ ಸಂಸ್ಥೆಯಾಗಿದೆ ಎಂದು ಹೇಳಿದರು.
ರೋಣ ಉಪ ವಿಭಾಗದ ಅಂಚೆ ನಿರೀಕ್ಷಕ ವೆಂಕಟೇಶರೆಡ್ಡಿ ಕೊಳ್ಳಿ, ಐಡಿಸಿ ಮೇಲ್ವಿಚಾರಕ ಡಿ.ಜಿ. ಮ್ಯಾಗೇರಿ ಮಾತನಾಡಿದರು. ಪ್ರಧಾನ ಅಂಚೆ ಪಾಲಕ ಲಕ್ಷ್ಮಣ ಅಸುಂಡಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪ ಅಂಚೆ ಪಾಲಕರಾದ ಮಂಜುನಾಥ ಕುರಿಯವರ, ಶರಣಪ್ಪ ನಾಯ್ಕರ, ಶಂಕರ ಕುಬ್ಬಳ್ಳಿ, ಬಸವರಾಜ ಶೇಡದ, ಮನೋಹರ ಕಡಿಯವರ ಸೇರಿದಂತೆ ಅಂಚೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಮೇಘನಾ ಕುಲಕರ್ಣಿ ಪ್ರಾರ್ಥಿಸಿದರು. ಅಂಚೆ ಸಹಾಯಕ ಎಂ.ಟಿ. ಕರಿಗಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
“ಗದಗ-ಬೆಟಗೇರಿ ಅವಳಿ ನಗರದ ಎಲ್ಲಾ ಅಂಚೆ ಪತ್ರಗಳು ಮತ್ತು ಪಾರ್ಸೆಲ್ಗಳನ್ನು ಗ್ರಾಹಕರಿಗೆ ತ್ವರಿತವಾಗಿ ತಲುಪಿಸಲು ಒಂದೇ ಸೂರಿನಡಿ 39 ಅಂಚೆ ಬಟವಾಡೆ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಶೇ.100ರಷ್ಟು ಅಂಚೆ ಬಟವಾಡೆಗೆ ಆದ್ಯತೆ ನೀಡಲಾಗುವುದು.”
ಎಸ್.ಎಸ್. ಶಿರಹಟ್ಟಿ, ಗದಗ ವಿಭಾಗೀಯ ಅಂಚೆ ಅಧೀಕ್ಷಕರು

