ಕೋಲ್ಕತ್ತಾ: ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಅವರ ಪತ್ನಿ ಡೋನಾ ಗಂಗೂಲಿ ಅವರಿಗೆ ಅಪರಿಚಿತರಿಂದ ನಿರಂತರ ಕೊಲೆ ಬೆದರಿಕೆ ಪತ್ರಗಳು ಬರುತ್ತಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಗಂಗೂಲಿ ದಂಪತಿ ಹಾಗೂ ಅವರ ಆಪ್ತರನ್ನು ಕೊಲ್ಲುವುದಾಗಿ ನೇರವಾಗಿ ಎಚ್ಚರಿಕೆ ನೀಡಲಾಗಿದ್ದು, ಈ ಸಂಬಂಧ ದಕ್ಷಿಣ ಕೋಲ್ಕತ್ತಾದ ಠಾಕೂರ್ಪುಕುರ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ.
ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (CAB) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರ ಕಚೇರಿಗೆ ಇಂಗ್ಲಿಷ್ ಭಾಷೆಯಲ್ಲಿ ಬೆದರಿಕೆ ಪತ್ರಗಳು ಬಂದಿವೆ. ಕಳೆದ ನಾಲ್ಕರಿಂದ ಆರು ತಿಂಗಳಿನಿಂದ ಇಂತಹ ಪತ್ರಗಳು ನಿರಂತರವಾಗಿ ಬರುತ್ತಿದ್ದರೂ, ಆರಂಭದಲ್ಲಿ ಅವುಗಳನ್ನು ಅಭಿಮಾನಿಗಳ ಅತಿರೇಕದ ಸಂದೇಶಗಳು ಅಥವಾ ಸಾಮಾನ್ಯ ದ್ವೇಷದ ಪತ್ರಗಳು ಎಂದು ಪರಿಗಣಿಸಿ ನಿರ್ಲಕ್ಷಿಸಲಾಗಿತ್ತು ಎನ್ನಲಾಗಿದೆ.
ಆದರೆ ಇತ್ತೀಚೆಗೆ ಬಂದ ಎರಡು ಪತ್ರಗಳಲ್ಲಿ ಬೆದರಿಕೆಯ ತೀವ್ರತೆ ಹೆಚ್ಚಾಗಿದೆ. ಗಂಗೂಲಿ ದಂಪತಿ ಹಾಗೂ ಅವರ ಆಪ್ತರನ್ನು ಕೊಲ್ಲುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಉಗ್ರ ಎಚ್ಚರಿಕೆ ನೀಡಲಾಗಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ.
ಗಂಗೂಲಿ ಅವರ ಖಾಸಗಿ ಕಾರ್ಯದರ್ಶಿ ತಾನಿಯಾ ಭಟ್ಟಾಚಾರ್ಯ ನೀಡಿದ ದೂರಿನ ಆಧಾರದ ಮೇಲೆ, ಆಗಸ್ಟ್ 10ರಂದು ಠಾಕೂರ್ಪುಕುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಕೋಲ್ಕತ್ತಾ ಪೊಲೀಸರ ವಿಶೇಷ ಕಾರ್ಯಪಡೆ (STF) ಹಾಗೂ ಪಶ್ಚಿಮ ಬಂಗಾಳ ಸರ್ಕಾರದ ಭದ್ರತಾ ವಿಭಾಗ ತನಿಖೆ ಆರಂಭಿಸಿದೆ.
ಪ್ರಾಥಮಿಕ ತನಿಖೆಯಲ್ಲಿ ಬೆದರಿಕೆ ಪತ್ರಗಳನ್ನು ಕೊರಿಯರ್ ಮೂಲಕ ಕಳುಹಿಸಿರುವ ಸುಳಿವು ಸಿಕ್ಕಿದೆ. ಪತ್ರದ ಮೇಲಿನ ವಿಳಾಸದಲ್ಲಿ ಉತ್ತರ 24 ಪರಗಣ ಜಿಲ್ಲೆಯ ಬೆಲ್ಘಾರಿಯಾ ಮೂಲದ ‘ಅರುಣ್ ಕುಮಾರ್’ ಎಂಬ ಹೆಸರು ನಮೂದಿಸಿರುವುದು ಪತ್ತೆಯಾಗಿದೆ.
ಕೊರಿಯರ್ ಜಾಡು ಆಧರಿಸಿ ತನಿಖೆ ಮುಂದುವರಿಸಿರುವ STF ತಂಡ, ಗಂಗೂಲಿ ಅವರ ಬೆಹಾಲಾ ನಿವಾಸದಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿರುವ ಶಂಕಿತ ಸ್ಥಳವೊಂದನ್ನು ಗುರುತಿಸಿ ದಾಳಿ ನಡೆಸಿದೆ. ಪತ್ರದಲ್ಲಿ ಉಲ್ಲೇಖವಾಗಿದ್ದ ಮೊಬೈಲ್ ಸಂಖ್ಯೆಯ ಲೊಕೇಶನ್ ಹಾಗೂ ಸಿಮ್ ಕಾರ್ಡ್ ಚಲನವಲನಗಳನ್ನೂ ಸೈಬರ್ ಕ್ರೈಂ ವಿಭಾಗ ತಾಂತ್ರಿಕವಾಗಿ ಪರಿಶೀಲಿಸುತ್ತಿದೆ.
ಅರುಣ್ ಕುಮಾರ್ ಅವರೇ ಈ ಬೆದರಿಕೆ ಪತ್ರಗಳನ್ನು ಕಳುಹಿಸಿದ್ದಾರೆಯೇ ಅಥವಾ ಅವರ ಹೆಸರನ್ನು ಯಾರಾದರೂ ದುರುಪಯೋಗಪಡಿಸಿಕೊಂಡಿದ್ದಾರೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆದರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಸೌರವ್ ಗಂಗೂಲಿ, ಅವರ ಪತ್ನಿ ಡೋನಾ ಹಾಗೂ ಅವರ ನಿವಾಸಕ್ಕೆ ಕೋಲ್ಕತ್ತಾ ಪೊಲೀಸರು ಹೆಚ್ಚುವರಿ ಭದ್ರತೆ ಒದಗಿಸಿದ್ದಾರೆ. ಭದ್ರತಾ ವ್ಯವಸ್ಥೆಯನ್ನೂ ಮರುಪರಿಶೀಲಿಸಲಾಗಿದ್ದು, ಆರೋಪಿಯನ್ನು ಶೀಘ್ರ ಪತ್ತೆಹಚ್ಚಲು ತನಿಖೆ ಚುರುಕುಗೊಂಡಿದೆ.

