Home Blog

ಗಾಂಜಾ ಮತ್ತಿನಲ್ಲಿ ಸ್ನೇಹಿತನನ್ನೇ ಕೊಂದು ಶವ ಸುಟ್ಟ ದುಷ್ಕರ್ಮಿಗಳು

0

ಹಾಸನ: ಗಾಂಜಾ ಅಮಲಿನಲ್ಲಿ ಸ್ನೇಹಿತನನ್ನೇ ಅಪಹರಿಸಿ ಕ್ರೂರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿ, ಬಳಿಕ ಶವವನ್ನು ಸುಟ್ಟು ಸಾಕ್ಷಿ ನಾಶ ಮಾಡಲು ಯತ್ನಿಸಿರುವ ಬೆಚ್ಚಿಬೀಳಿಸುವ ಘಟನೆ ಹಾಸನ ತಾಲೂಕಿನ ನಿಟ್ಟೂರು ಸಮೀಪದ ಹಂಗರಹಳ್ಳಿ ತೋಟದ ಮನೆಯಲ್ಲಿ ಬೆಳಕಿಗೆ ಬಂದಿದೆ.

ಅರಸೀಕೆರೆ ತಾಲೂಕಿನ ಕಾಡಯ್ಯನಕೊಪ್ಪಲು ನಿವಾಸಿ ವರುಣ್ (22) ಹತ್ಯೆಯಾದ ಯುವಕನಾಗಿದ್ದು, ಹಣಕಾಸು ವಿಚಾರವೇ ಈ ದಾರುಣ ಕೃತ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಸಂಬಂಧ ಶಶಾಂಕ್, ಸತೀಶ್, ಕಿರಣ್, ಅಭಿ, ಜೀವನ್, ಚೇತನ್, ಪೃಥ್ವಿಕ್ ಹಾಗೂ ಗಜ ಅಲಿಯಾಸ್ ಪ್ರಜ್ವಲ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಮಾರ್ಚ್ 10ರಿಂದ ವರುಣ್ ನಾಪತ್ತೆಯಾಗಿದ್ದ. ಹಣಕಾಸು ವಿಚಾರದಲ್ಲಿ ವಾಗ್ವಾದದ ಹಿನ್ನೆಲೆಯಲ್ಲಿ ವರುಣ್ ಹಾಗೂ ಅವನ ಸ್ನೇಹಿತ ಲೋಹಿತ್ ಅವರನ್ನು ಆರೋಪಿಗಳು ಅಪಹರಿಸಿ ಹಂಗರಹಳ್ಳಿಯ ತೋಟದ ಮನೆಯಲ್ಲಿ ಬಂಧಿಸಿದ್ದರು. ಅಲ್ಲಿ ಇಬ್ಬರ ಮೇಲೂ ಹಲ್ಲೆ ನಡೆಸಲಾಗಿದ್ದು, ಲೋಹಿತ್ ಹೇಗೋ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾನೆ.

ಆದರೆ ವರುಣ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದ ಆರೋಪಿಗಳು, ಬಳಿಕ ಅರಸೀಕೆರೆ ತಾಲೂಕಿನ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಶವವನ್ನು ಸುಟ್ಟು ಪರಾರಿಯಾಗಿದ್ದಾರೆ.

ಇನ್ನೊಂದೆಡೆ, ಮಾರ್ಚ್ 15ರಂದು ಪುತ್ರ ನಾಪತ್ತೆಯಾದ ಬಗ್ಗೆ ವರುಣ್ ತಾಯಿ ಕಲಾವತಿ ಗಂಡಸಿ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ತನಿಖೆಯ ವೇಳೆ ಕೊಲೆ ಪ್ರಕರಣದ ಭೀಕರ ಸತ್ಯ ಬಹಿರಂಗವಾಗಿದೆ.

ಸಿನಿಮೀಯ ಶೈಲಿಯಲ್ಲಿ ಅಪಹರಣೆ, ಹಲ್ಲೆ ಹಾಗೂ ಹತ್ಯೆ ನಡೆಸಿದ ಆರೋಪಿಗಳ ವಿರುದ್ಧ ಮಾರ್ಚ್ 19ರಂದು ದುದ್ದ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ.

‘ನನ್ನ ಫೋಟೋ ಬಳಸಿ ಫ್ಲೆಕ್ಸ್ ಬೇಡ’: ವಿವಾದಕ್ಕೆ ತೆರೆ ಎಳೆದ ಐಪಿಎಸ್ ಶೋಭಾರಾಣಿ

0

ಮಂಡ್ಯ: ಯುಗಾದಿ ಹಬ್ಬದ ಹಿನ್ನೆಲೆ ಮಂಡ್ಯ ನಗರದಾದ್ಯಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜೆ. ಶೋಭಾರಾಣಿ ಅವರ ಭಾವಚಿತ್ರವಿರುವ ಫ್ಲೆಕ್ಸ್‌ಗಳು ರಾರಾಜಿಸಿದ್ದರಿಂದ ಭಾರೀ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ಫ್ಲೆಕ್ಸ್ ಅಳವಡಿಕೆ ಕುರಿತು ಟೀಕೆಗಳು ವ್ಯಕ್ತವಾಗುತ್ತಿದ್ದಂತೆಯೇ, ಐಪಿಎಸ್ ಅಧಿಕಾರಿ ಶೋಭಾರಾಣಿ ತಕ್ಷಣ ಸ್ಪಷ್ಟನೆ ನೀಡಿ ತಮ್ಮ ನಿಲುವು ಪ್ರಕಟಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿದ ಅವರು, “ನನ್ನ ಭಾವಚಿತ್ರವನ್ನು ಬಳಸಿಕೊಂಡು ಯಾವುದೇ ಫ್ಲೆಕ್ಸ್‌, ಬ್ಯಾನರ್ ಅಥವಾ ಪ್ರಚಾರ ಕಾರ್ಯಗಳನ್ನು ನಡೆಸಬಾರದು. ಕಾನೂನು ಮತ್ತು ವೈಯಕ್ತಿಕ ಗೌರವವನ್ನು ಕಾಪಾಡುವುದು ನನ್ನ ಕರ್ತವ್ಯ. ದಯವಿಟ್ಟು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ,” ಎಂದು ಅಭಿಮಾನಿಗಳಿಗೆ ವಿನಂತಿಸಿದ್ದಾರೆ.

ಇತ್ತೀಚೆಗೆ ಯುಗಾದಿ ಹಬ್ಬದ ಶುಭಾಶಯ ಕೋರಿ ಮಂಡ್ಯ ನಗರದ ಪ್ರಮುಖ ವೃತ್ತಗಳು, ಹೆದ್ದಾರಿ ಬದಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಈ ಫ್ಲೆಕ್ಸ್‌ಗಳಲ್ಲಿ ಶೋಭಾರಾಣಿ ಅವರ ಜೊತೆಗೆ ಮಂಜುನಾಥ್ ಗೌಡ, ಶಿವಾನಂದ್ ಹಾಗೂ ಪಾಪಣ್ಣ ಅವರ ಭಾವಚಿತ್ರಗಳೂ ಕಾಣಿಸಿಕೊಂಡಿದ್ದವು. ಇದಕ್ಕೂ ಮೊದಲು ಅವರು ಅಧಿಕಾರ ಸ್ವೀಕರಿಸಿದಾಗಲೂ ಇದೇ ರೀತಿ ಫ್ಲೆಕ್ಸ್ ಹಾಕಿ ಸ್ವಾಗತ ಕೋರಲಾಗಿತ್ತು.

ಸಕ್ಕರೆ ನಾಡು ಮಂಡ್ಯದಲ್ಲಿ ರಾಜಕೀಯ ಮುಖಂಡರ ಫ್ಲೆಕ್ಸ್‌ಗಳು ಸಾಮಾನ್ಯವಾದರೂ, ಈ ಬಾರಿ ಅಧಿಕಾರಿಯೊಬ್ಬರ ಭಾವಚಿತ್ರವೇ ನಗರದೆಲ್ಲೆಡೆ ಮೆರೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಯಿತು. ಕೆಲವರು ಅಧಿಕಾರಿಯ ಜನಸ್ನೇಹಿ ಧೋರಣೆಯನ್ನು ಮೆಚ್ಚಿದರೆ, ಇನ್ನೂ ಕೆಲವರು ಫ್ಲೆಕ್ಸ್ ಸಂಸ್ಕೃತಿಯ ಅತಿರೇಕವನ್ನು ಪ್ರಶ್ನಿಸಿದರು.

ಸಾಮಾಜಿಕ ಜಾಲತಾಣಗಳಲ್ಲೂ ಈ ಫೋಟೋಗಳು ವೈರಲ್ ಆಗಿ, ಅಧಿಕಾರಿಯೊಬ್ಬರು ಈ ಮಟ್ಟಿಗೆ ಫ್ಲೆಕ್ಸ್‌ಗಳಲ್ಲಿ ಕಾಣಿಸಿಕೊಳ್ಳುವುದು ರಾಜಕೀಯ ಮುನ್ಸೂಚನೆಯೇ ಎಂಬ ಚರ್ಚೆಯೂ ಕೇಳಿಬಂದಿತ್ತು. ಈ ಎಲ್ಲಾ ಗೊಂದಲಗಳ ನಡುವೆಯೇ ಶೋಭಾರಾಣಿ ನೀಡಿದ ಸ್ಪಷ್ಟನೆ ಇದೀಗ ವಿವಾದಕ್ಕೆ ತೆರೆ ಎಳೆದಂತಾಗಿದೆ.

ಹೈಕಮಾಂಡ್ ತೀರ್ಮಾನದಂತೆ ನನ್ನ ಪುತ್ರನಿಗೆ ಟಿಕೆಟ್ ಲಭಿಸಿದೆ: ಎಸ್‌.ಎಸ್‌.ಮಲ್ಲಿಕಾರ್ಜುನ್‌

ದಾವಣಗೆರೆ:- ದಾವಣಗೆರೆ ಟಿಕೆಟ್‌ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಹೇಳಿದ್ದಾರೆ.

ಪುತ್ರನ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ‘ಬಿ’ ಫಾರಂ ಪಡೆದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್ ತೀರ್ಮಾನದಂತೆ ಪುತ್ರ ಸಮರ್ಥ್‌ಗೆ ಟಿಕೆಟ್ ಘೋಷಣೆ ಆಗಿದೆ. ದಾವಣಗೆರೆ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ಸಿಎಂ, ‌ಡಿಸಿಎಂ, ಸುರ್ಜೇವಾಲ, ಅಲ್ಪಸಂಖ್ಯಾತ ನಾಯಕರಿಗೆ ಧನ್ಯವಾದ ಹೇಳ್ತೀನಿ. ನಿನ್ನೆಯ ಸಭೆಯಲ್ಲಿ ರಾಜಿ ಸಂಧಾನ ಮಾಡಿದ್ರು. ನಾವೆಲ್ಲರೂ ಹೈಕಮಾಂಡ್ ‌ನಿರ್ಧಾರಕ್ಕೆ ಬಿಟ್ಟಿದ್ವಿ. ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದೆ. ಯಾವುದೇ ಗೊಂದಲ ಇಲ್ಲ. ಅಣ್ಣ-ತಮ್ಮಂದಿರ ರೀತಿ ‌ಇದ್ದೇವೆ‌ ಎಂದು ಹೇಳಿದರು.

ಮಲಗಿದ್ದ ಗಂಡನ ಮರ್ಮಾಂಗಕ್ಕೆ ಒದ್ದು ಹಲ್ಲೆ ಮಾಡಿದ ಹೆಂಡ್ತಿ: ಮಧ್ಯರಾತ್ರಿ ಏನಾಯ್ತು?

0

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ವೆಂಕಟರಾಯನಕೋಟೆ ಗ್ರಾಮದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ ಇಲ್ಲಿ ನಡೆದ ಜಗಳ ದುರಂತಕ್ಕೆ ಎಡೆಮಾಡಿಕೊಟ್ಟಿದೆ. ಎಸ್, ಜಗಳದ ಬಳಿಕ ಮಲಗಿದ್ದ ಗಂಡನ ಮರ್ಮಾಂಗಕ್ಕೆ ಹೆಂಡತಿ ಒದ್ದು ಗಂಭೀರವಾಗಿ ಹಲ್ಲೆ ಮಾಡಿದ್ದಾಳೆ.

ಗಂಡ ಹೆಂಡತಿ ಇಬ್ಬರು ಕಳೆದ ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ನಂತರ ಮಹಿಳೆ ಚಿತ್ರ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದಳಂತೆ. ವಿನಾಕಾರಣ ಗಂಡನ ಜೊತೆ ಕ್ಯಾತೆ ತೆಗೆದು ಜಗಳ ಮಾಡುತ್ತಿದ್ದಳಂತೆ. ಇದೇ ರೀತಿ ಬೆಳಿಗ್ಗೆ ಗಂಡನ ಬಟ್ಟೆ ಹರಿದು ಹಾಕಿ ಜೋರು ಗಲಾಟೆ ಮಾಡಿದ್ದಳಂತೆ. ನಂತರ ಮಧ್ಯರಾತ್ರಿ ಮನೆಯಲ್ಲಿ ಮಲಗಿದ್ದ ಗಂಡನ ಮರ್ಮಾಂಗಕ್ಕೆ ಬಲವಾಗಿ ಒದ್ದಿದ್ದಾಳೆ.

ಬಳಿಕ ಆತನೇ ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬೆಳಗ್ಗೆ ಗಂಡನ ನೋಡಲು ಆಸ್ಪತ್ರೆಗೆ ಬಂದ ಮಹಿಳೆಗೆ ಗಂಡನನ್ನ ನೋಡಲು ಕುಟುಂಬಸ್ಥರು ಅವಕಾಶ ನೀಡಿಲ್ಲ. ಇದಾದ ಬಳಿಕ ಪೊಲೀಸರಿಗೆ ಕುಟುಂಬಸ್ಥರು ದೂರು ಕೊಟ್ಟಿದ್ದಾರೆ. ದೂರು ಬೆನ್ನಲ್ಲೇ ಮಹಿಳೆಯು ಕ್ರೀಮಿನಾಶಕ ಸೇವಿಸಿ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಮಹಿಳೆಯನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಚನ್ನಪಟ್ಟಣದಲ್ಲಿ ಕಾಡಾನೆಗಳ ಹಾವಳಿ: ಕೆರೆಯಲ್ಲಿ ಆನೆಗಳ ಹಿಂಡು ಕಂಡು ಗ್ರಾಮಸ್ಥರಲ್ಲಿ ಆತಂಕ!

ರಾಮನಗರ: ಚನ್ನಪಟ್ಟಣ ತಾಲೂಕಿನ ಬ್ರಹ್ಮಣೀಪುರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ.

ಬೆಳ್ಳಂಬೆಳಗ್ಗೆ ಗ್ರಾಮದ ಹೊರವಲಯದ ಕೆರೆಯಲ್ಲಿ ಮೂರು ಕಾಡಾನೆಗಳು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿವೆ.

ಕೆರೆಯಲ್ಲಿ ಬೀಡುಬಿಟ್ಟಿರುವ ಆನೆಗಳು ರಾತ್ರಿಯಿಡೀ ಸುತ್ತಮುತ್ತಲಿನ ಜಮೀನುಗಳಲ್ಲಿ ನುಗ್ಗಿ ಬೆಳೆಗಳನ್ನು ತಿಂದು ನಾಶಪಡಿಸಿವೆ. ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಗ್ರಾಮಕ್ಕೆ ಬಂದಿರುವ ಆನೆಗಳು, ಕಳೆದ ಕೆಲ ದಿನಗಳಿಂದ ಒಂದಲ್ಲ ಒಂದು ಕಡೆ ದಾಂಧಲೆ ನಡೆಸಿ ರೈತರ ನಿದ್ದೆಗೆಡಿಸುತ್ತಿವೆ.

ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಜೆ ಬಳಿಕ ಆನೆಗಳನ್ನು ಸುರಕ್ಷಿತವಾಗಿ ಕಾಡಿಗೆ ಹಿಂತಿರುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಧಾನಸೌಧ ಮುಂಭಾಗ ಸ್ವಚ್ಛತೆ: ನಟ ಅನಿರುದ್ಧ್ ಜತ್ಕರ್ ಮಾದರಿ ಕಾರ್ಯ!

ಬೆಂಗಳೂರು: ನಟ ಅನಿರುದ್ಧ ಜತ್ಕರ್ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಹೆಸರಾಗಿರುವುದರ ಜೊತೆಗೆ ಸಾಮಾಜಿಕ ಕಳಕಳಿ ಕೂಡ ಹೊಂದಿದ್ದಾರೆ.

ನಗರದಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಅವರು, ವಿಧಾನಸೌಧ ಮುಂಭಾಗ ಸ್ವಚ್ಛಗೊಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ನಗರದ ಯಾವುದೇ ಭಾಗದಲ್ಲಿ ಕಸದ ರಾಶಿ ಕಂಡರೂ ಅದರ ವಿಡಿಯೋವನ್ನು ಪೋಸ್ಟ್ ಮಾಡಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರುವ ಕಾರ್ಯವನ್ನು ಅವರು ನಿರಂತರವಾಗಿ ಮಾಡುತ್ತಿದ್ದಾರೆ.

ಅನಿರುದ್ಧ್ ಅವರ ಈ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಕಿಯ ಜ್ವಾಲೆಗೆ ಹೊತ್ತಿ ಉರಿದ ಐತಿಹಾಸಿಕ ಮಲ್ಲೇಶ್ವರ ಗುಡ್ಡ!

ಹಾವೇರಿ: ಹಾವೇರಿ ಜಿಲ್ಲೆಯ ರಾಣೆಬೇನ್ನೂರು ಬಳಿಯಿರುವ ಐತಿಹಾಸಿಕ ಮಲ್ಲೇಶ್ವರ ಗುಡ್ಡಕ್ಕೆ ಕಿಡಿಗೇಡಿಗಳು ಬೆಂಕಿಯಿಟ್ಟ ಪರಿಣಾಮ ಧಗದಗನೇ ಹೊತ್ತಿ ಉರಿದಿದೆ.

ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡಲು ಸರ್ಕಾರ ಇತ್ತೀಚಿಗೆ ಈ ಸ್ಥಳವನ್ನ ಆಯ್ಕೆ ಮಾಡಿತ್ತು ಈಗ ಅದೇ ಅರಣ್ಯಧಾಮಕ್ಕೆ ಬೆಂಕಿಯ ಜ್ವಾಲೆ ಆವರಿಸಿದೆ. ಸಂಪದ್ಭರಿತ ವನಸ್ಪತಿ ಗಿಡಮೂಲಿಕೆಗಳು ಈ ಗುಡ್ಡದಲ್ಲಿತ್ತು. ಕೃಷ್ಣಮೃಗ ಅಭಯಾರಣ್ಯ, ಪ್ರಾಣಿ ಪಕ್ಷಿಗಳು ಇರೋ ಅಭಯಾರಣ್ಯದಲ್ಲಿ ಈ ಘಟನೆ ನಡೆದಿದೆ.

ಘಟನೆ ಬೆನ್ನಲ್ಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

ಮಂಗಳೂರಿಗೆ 16,714 ಮೆಟ್ರಿಕ್ ಟನ್ ಎಲ್‍ಪಿಜಿ ಹೊತ್ತು ತಂದ ಖಾರ್ಗೋ ಹಡಗು!

ಮಂಗಳೂರು: ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ ದೇಶದ ಮೇಲೂ ಬಿದ್ದಿದ್ದು, ಕಮರ್ಷಿಯಲ್ ಹಾಗೂ ಗೃಹ ಬಳಕೆಯ ಸಿಲಿಂಡರ್ ಅಭಾವ ತಲೆದೋರಿದೆ.

ಈ ಮಧ್ಯೆಯೇ ನವಮಂಗಳೂರು ಬಂದರಿಗೆ 16,714 ಮೆಟ್ರಿಕ್ ಟನ್ ಎಲ್‍ಪಿಜಿ ಹೊತ್ತ ಖಾರ್ಗೋ ಹಡಗು ಆಗಮಿಸಿದೆ. ಇರಾನ್ ಹಾಗೂ ಇಸ್ರೇಲ್ ಯುದ್ಧ ಶುರುವಾದ ಬಳಿಕ ರಾಜ್ಯಕ್ಕೆ ಆಗಮಿಸಿದ ಮೊದಲ ಹಡಗು ಇದಾಗಿದೆ. ಅಮೆರಿಕದ ಟೆಕ್ಸಾಸ್‍ನಿಂದ 16,714 ಮೆಟ್ರಿಕ್ ಟನ್ ಎಲ್‍ಪಿಜಿ ಹೊತ್ತ ಪಿಕ್ಸಿಸ್ ಪಯನೀರ್ ಎಂಬ ಹಡಗು ಮಂಗಳೂರಿನ ನವಮಂಗಳೂರು ಬಂದರಿಗೆ ಆಗಮಿಸಿದೆ.

ಏಜೀಸ್ ಕಂಪನಿಗೆ ಎಲ್‍ಪಿಜಿಯನ್ನು ಈ ಹಡಗು ತಂದಿದೆ. ಮಾ.14 ರಂದು ಅಮೇರಿಕದಿಂದ ಪಿಕ್ಸಿಸ್ ಪಯಿನೀರ್ ಕಾರ್ಗೋ ಹಡಗು ಹೊರಟಿತ್ತು. ಇಂದು ಮಂಗಳೂರಿಗೆ ತಲುಪಿದ್ದು, ರಾಜ್ಯದಲ್ಲಿ ತಲೆದೂರಿರುವ ಸಿಲಿಂಡರ್ ಅಭಾವ ಪರಿಹಾರ ಆಗುವ ನಿರೀಕ್ಷೆ ಇದೆ.

ಇನ್ನೂ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಕೊರತೆಯಿಂದ ಹೋಟೆಲ್‌ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಸಿಲಿಂಡರ್‌ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದ್ದರಿಂದ ಹಲವು ಹೋಟೆಲ್‌ಗಳು ಆಹಾರ ಪದಾರ್ಥಗಳ ದರ ಹೆಚ್ಚಿಸಿದ್ದು, ಗ್ರಾಹಕರಿಗೂ ಬಿಸಿ ತಟ್ಟಿದಂತಾಗಿದೆ.

ಮಾರಕಾಸ್ತ್ರಗಳಿಂದ ಯುವಕನ ಬರ್ಬರ ಕೊಲೆ! ಕೃತ್ಯಕ್ಕೆ ಹಳೆಯ ದ್ವೇಷ ಕಾರಣವೇ?

ಬೆಂಗಳೂರು: ನಗರದ ರಾಮಮೂರ್ತಿನಗರ ಪ್ರದೇಶದಲ್ಲಿ ಭೀಕರ ಘಟನೆ ನಡೆದಿದೆ.

ಇಂದು ಮುಂಜಾನೆ ಸುಮಾರು 5 ಗಂಟೆಗೆ ಟಿ.ಸಿ. ಪಾಳ್ಯ ಮುಖ್ಯರಸ್ತೆಯಲ್ಲಿ 25 ವರ್ಷದ ಯುವಕ ಕಿರಣ್ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ್ದಾರೆ. ಘಟನೆ ತಕ್ಷಣ ಸ್ಥಳಕ್ಕೆ ರಾಮಮೂರ್ತಿ ನಗರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸ್ ವರದಿ ಪ್ರಕಾರ, ಕಿರಣ್ ವಿರುದ್ಧ ಕೆ.ಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಪೊಲೀಸರು ಹಳೆಯ ದ್ವೇಷವೇ ಈ ಕೊಲೆಗೆ ಕಾರಣವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಯ ಮುನ್ನರಾತ್ರಿ ಕೂಡ ಕಿರಣ್ ಕುಡಿದು ಗಲಾಟೆ ಮಾಡಿದ್ದು, ತಡರಾತ್ರಿವರೆಗೆ ವಾಗ್ವಾದ ನಡೆದ ನಂತರ ಮುಂಜಾನೆ ಈ ದಾಳಿ ನಡೆದಿರುವ ಸಾಧ್ಯತೆ ಇದೆ.

ಸ್ಥಳೀಯ ನಿವಾಸಿ ಗೋಪಾಲ್ ಮಾತನಾಡಿ, ಕಿರಣ್ ತನ್ನ ತಾಯಿಯೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಆಟೋ ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ತಿಳಿಸಿದ್ದಾರೆ. ಒಟ್ಟಾರೆ, ಈ ಕೊಲೆ ಪ್ರಕರಣ ನಗರದಲ್ಲಿ ಆತಂಕ ಮೂಡಿಸಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಚುರುಕುಗೊಂಡಿದ್ದಾರೆ.

ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದ ಲ್ಯಾಂಬೋರ್ಗಿನಿ ಕಾರ್ ಡ್ರಿಫ್ಟಿಂಗ್!? ಪೊಲೀಸರಿಂದ ನೋಟಿಸ್!

ಬೆಂಗಳೂರು: ನಗರದ ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣದ ಸಂಬಂಧ ಲ್ಯಾಂಬೊರ್ಗಿನಿ ಕಾರನ್ನು ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕಾರು ಡ್ರಿಫ್ಟಿಂಗ್ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪೋಲಿಸರು, ರಿಕ್ಕಿ ರೈಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಕಾರಿನ ದಾಖಲೆಗಳು ಯಾರ ಹೆಸರಿನಲ್ಲಿವೆ ಎಂಬುದನ್ನು ಪರಿಶೀಲಿಸಲು ಆರ್‌ಟಿಒಗೆ ಪತ್ರ ಸಹ ಕಳುಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಪೊಲೀಸರು ಸಂಗ್ರಹಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಕಾರ್ ಡ್ರಿಫ್ಟಿಂಗ್ ವಿಡಿಯೋ ವೈರಲ್ ಆಗಿದ್ದು, ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಎರಡು–ಮೂರು ಬಾರಿ ಈ ರೀತಿಯ ಘಟನೆ ನಡೆದಿರುವುದಾಗಿ ದಾಖಲಾಗಿದೆ.

error: Content is protected !!