Home Blog

ಗದಗ ನಗರಸಭೆ ಕೇಸ್‌ಗೆ ಸುಪ್ರೀಂ ಬ್ರೇಕ್: ಬಿಜೆಪಿ ಸದಸ್ಯರಿಗೆ ತಾತ್ಕಾಲಿಕ ರಿಲೀಫ್!

ಗದಗ: ಗದಗ–ಬೆಟಗೇರಿ ನಗರಸಭೆಯ ಮೂವರು ಸದಸ್ಯರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಈ ಮೂಲಕ ಬೆಳಗಾವಿ ಪ್ರಾದೇಶಿಕ ಆಯುಕ್ತರು ನಡೆಸಬೇಕಿದ್ದ ಮುಂದಿನ ವಿಚಾರಣಾ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.

ನಗರಸಭೆ ಸದಸ್ಯರಾದ ಉಷಾ ಮಹೇಶ್ ದಾಸರ, ಅನಿಲ್ ಅಬ್ಬಿಗೇರಿ ಹಾಗೂ ಗುಳಪ್ಪ ಮುಶಿಗೇರಿ ಅವರ ಸದಸ್ಯತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಹಿನ್ನೆಲೆಯಲ್ಲಿ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ದ್ವಿಸದಸ್ಯ ಪೀಠ ತಡೆ ನೀಡಿತ್ತು. ನಂತರ ಪ್ರಾದೇಶಿಕ ಆಯುಕ್ತರು ಮರು ವಿಚಾರಣೆ ನಡೆಸುವಂತೆ ಸೂಚನೆ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಈ ನೋಟಿಸ್ ಪ್ರಶ್ನಿಸಿ ಮೂವರು ಸದಸ್ಯರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಿದ್ದರು.

ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಹಾಗೂ ವಿಜಯ್ ಬಿಷ್ಣೋಯಿ ಅವರ ಪೀಠ, ಹೈಕೋರ್ಟ್ ದ್ವಿಸದಸ್ಯ ಪೀಠದ ಆದೇಶ ಸೇರಿದಂತೆ ಎಲ್ಲಾ ಮುಂದಿನ ಪ್ರಕ್ರಿಯೆಗಳಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಈ ಬೆಳವಣಿಗೆಯಿಂದ ಬಿಜೆಪಿ ಸದಸ್ಯರಿಗೆ ತಾತ್ಕಾಲಿಕವಾಗಿ ಕಾನೂನು ಹೋರಾಟದಲ್ಲಿ ಸಮಾಧಾನ ಸಿಕ್ಕಂತಾಗಿದೆ. ಸದ್ಯಕ್ಕೆ ಮೂವರು ಸದಸ್ಯರು ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆ ನಾಲ್ಕು ವಾರಗಳ ಬಳಿಕ ನಡೆಯುವ ಸಾಧ್ಯತೆ ಇದೆ.

ಜ್ವರ–ಉಸಿರಾಟ ತೊಂದರೆ: ಹಂಟಾವೈರಸ್ ಲಕ್ಷಣಗಳ ಬಗ್ಗೆ ತಜ್ಞರ ಎಚ್ಚರಿಕೆ!

ಇತ್ತೀಚಿನ ದಿನಗಳಲ್ಲಿ ಹಂಟಾವೈರಸ್ ಮತ್ತೆ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ. ವಿಶೇಷವಾಗಿ ಕ್ರೂಸ್ ಶಿಪ್‌ನಲ್ಲಿ ಸೋಂಕು ಪ್ರಕರಣ ಪತ್ತೆಯಾದ ಬಳಿಕ ಹಲವು ದೇಶಗಳಲ್ಲಿ ಈ ವೈರಸ್ ಕುರಿತು ಎಚ್ಚರಿಕೆ ಹೆಚ್ಚಾಗಿದೆ.

ಆದರೆ ಆರೋಗ್ಯ ತಜ್ಞರ ಪ್ರಕಾರ, ಹಂಟಾವೈರಸ್ ಹೊಸ ವೈರಸ್ ಅಲ್ಲ. 1993ರಿಂದ 2023ರವರೆಗೆ ಅಮೆರಿಕದಲ್ಲಿ ಸುಮಾರು 890ಕ್ಕೂ ಹೆಚ್ಚು ಲ್ಯಾಬ್ ದೃಢಪಟ್ಟ ಪ್ರಕರಣಗಳು ದಾಖಲಾಗಿವೆ ಎಂದು CDC ವರದಿ ತಿಳಿಸಿದೆ. ಈ ವೈರಸ್ ಗಂಭೀರ ಶ್ವಾಸಕೋಶ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಹೊಂದಿದ್ದು, ಸೋಂಕಿತರಲ್ಲಿ ಸುಮಾರು 35 ಶೇಕಡಾ ಸಾವು ಪ್ರಮಾಣ ದಾಖಲಾಗಿದೆ ಎಂಬ ಮಾಹಿತಿ ಇದೆ.

ಹಂಟಾವೈರಸ್ ಮುಖ್ಯವಾಗಿ ಇಲಿಗಳಿಂದ ಹರಡುವ ವೈರಸ್ ಆಗಿದ್ದು, ಅವುಗಳ ಮೂತ್ರ, ಮಲ ಅಥವಾ ಲಾಲಾರಸದ ಸಂಪರ್ಕದಿಂದ ಮನುಷ್ಯರಿಗೆ ಸೋಂಕು ತಗಲಬಹುದು. ಸೋಂಕಿತ ಪ್ರದೇಶಗಳನ್ನು ಸ್ವಚ್ಛಗೊಳಿಸುವ ವೇಳೆ ಧೂಳಿನ ಕಣಗಳ ಮೂಲಕವೂ ವೈರಸ್ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಸಾಮಾನ್ಯವಾಗಿ ಈ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುವುದಿಲ್ಲ. ಆದರೆ “ಆಂಡೀಸ್ ಸ್ಟ್ರೇನ್” ಎಂಬ ವಿಶೇಷ ರೂಪದಲ್ಲಿ ಮಾನವ–ಮಾನವ ಹರಡುವ ಸಾಧ್ಯತೆ ಇರುವುದರಿಂದ ಜಾಗತಿಕ ಆರೋಗ್ಯ ಸಂಸ್ಥೆಗಳು ನಿಗಾವಹಿಸುತ್ತಿವೆ.

ಜ್ವರ, ನಡುಕ, ತೀವ್ರ ತಲೆನೋವು, ದೇಹ ನೋವು, ದಣಿವು ಮತ್ತು ಉಸಿರಾಟದ ತೊಂದರೆಗಳು ಇದರ ಪ್ರಮುಖ ಲಕ್ಷಣಗಳಾಗಿವೆ ಎಂದು ತಿಳಿಸಲಾಗಿದೆ. ಮಧುಮೇಹ, ಹೃದಯ ಸಮಸ್ಯೆ ಹಾಗೂ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರಲ್ಲಿ ಸೋಂಕು ಗಂಭೀರವಾಗುವ ಸಾಧ್ಯತೆ ಹೆಚ್ಚು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಇಲಿಗಳ ನಿಯಂತ್ರಣ, ಮನೆ ಸ್ವಚ್ಛತೆ ಹಾಗೂ ಸೋಂಕಿತ ಪ್ರದೇಶಗಳನ್ನು ಸ್ವಚ್ಛಗೊಳಿಸುವಾಗ ಮಾಸ್ಕ್–ಗ್ಲೌಸ್ ಧರಿಸುವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಲಾಗಿದೆ. ಯಾವುದೇ ಅನುಮಾನಾಸ್ಪದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಮಕ್ಕಳ ಮುಂದೆ ಈ ಮಾತುಗಳನ್ನು ತಪ್ಪಿಸಿ: ಪೋಷಕರಿಗೆ ಮಹತ್ವದ ಸಲಹೆ!

ಮಕ್ಕಳ ಮನಸ್ಸು ರೂಪಿಸುವಲ್ಲಿ ಪೋಷಕರ ಮಾತುಗಳೇ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚಿಕ್ಕ ಮಕ್ಕಳ ಮನಸ್ಸು ಬಹಳ ಮೃದುವಾಗಿರುವುದರಿಂದ ಅವರು ಸುತ್ತಮುತ್ತಲಿನ ವಾತಾವರಣ ಹಾಗೂ ಪೋಷಕರ ನಡವಳಿಕೆಯಿಂದಲೇ ಜಗತ್ತನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳ ಮುಂದೆ ಕೆಲವೊಂದು ವಿಚಾರಗಳನ್ನು ಮಾತನಾಡುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಲಾಗಿದೆ. ವಿಶೇಷವಾಗಿ ಸಂಗಾತಿ ಅಥವಾ ಕುಟುಂಬದ ಹಿರಿಯರ ಬಗ್ಗೆ ನಕಾರಾತ್ಮಕ ಮಾತುಗಳು ಮಕ್ಕಳ ಮನಸ್ಸಿನಲ್ಲಿ ಭಯ ಹಾಗೂ ಗೊಂದಲವನ್ನು ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದೇ ರೀತಿ ಸಂಬಂಧಿಕರು ಹಾಗೂ ಸ್ನೇಹಿತರ ಬಗ್ಗೆ ಚಾಡಿ ಹೇಳುವ ಅಭ್ಯಾಸವೂ ಮಕ್ಕಳಲ್ಲಿ ತಪ್ಪು ಸಂದೇಶವನ್ನು ನೀಡುತ್ತದೆ ಮತ್ತು ಸಂಬಂಧಗಳ ಮೇಲೆ ನಂಬಿಕೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಮಕ್ಕಳ ಮುಂದೆ ಆರ್ಥಿಕ ಸಮಸ್ಯೆಗಳ ಕುರಿತು ನಿರಂತರ ಚರ್ಚೆ ಮಾಡುವುದರಿಂದ ಮಕ್ಕಳಲ್ಲಿ ಅಸುರಕ್ಷಿತ ಭಾವನೆ ಮೂಡಬಹುದು ಹಾಗೂ ಮಾನಸಿಕ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಅಲ್ಲದೆ, ಮಕ್ಕಳ ನ್ಯೂನತೆಗಳನ್ನು ಇತರರ ಮುಂದೆ ಹೇಳುವುದು ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಎಂದು ಎಚ್ಚರಿಸಲಾಗಿದೆ. ಜಗತ್ತು ಮತ್ತು ಭವಿಷ್ಯದ ಬಗ್ಗೆ ಭಯ ಹುಟ್ಟಿಸುವ ರೀತಿಯ ಮಾತುಗಳನ್ನು ಕೂಡ ತಪ್ಪಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಮಲೆಮಹದೇಶ್ವರ ಬೆಟ್ಟ ಪಾದಯಾತ್ರೆಗೆ ಬ್ರೇಕ್: ಅರಣ್ಯ ಇಲಾಖೆಯ ಮಹತ್ವದ ಆದೇಶ!

ಚಾಮರಾಜನಗರ: ಕಾಡುಪ್ರಾಣಿಗಳ ದಾಳಿಯ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಸಂಬಂಧಿಸಿದ ಪಾದಯಾತ್ರೆ ವ್ಯವಸ್ಥೆಯಲ್ಲಿ ಅರಣ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಇದೀಗ ಜಾತ್ರಾ ಕಾಲವನ್ನು ಹೊರತುಪಡಿಸಿ ಉಳಿದ ಸಾಮಾನ್ಯ ದಿನಗಳಲ್ಲಿ ಭಕ್ತರ ಪಾದಯಾತ್ರೆಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದ್ದು, ಭಕ್ತರು ಬಸ್ ಸೇರಿದಂತೆ ವಾಹನಗಳಲ್ಲಿಯೇ ಬೆಟ್ಟಕ್ಕೆ ತೆರಳಬೇಕೆಂದು ಸೂಚಿಸಲಾಗಿದೆ. ಮಾನವ–ಪ್ರಾಣಿ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.

ಮಲೆಮಹದೇಶ್ವರ ಬೆಟ್ಟಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಪ್ರತಿದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪಾದಯಾತ್ರೆಯು ಹಳೆಯ ಪರಂಪರೆ ಆಗಿದ್ದರೂ, ಇತ್ತೀಚಿನ ದಿನಗಳಲ್ಲಿ ಇದು ವರ್ಷಪೂರ್ತಿ ಮುಂದುವರಿದಿದ್ದರಿಂದ ಕಾಡುಮಾರ್ಗಗಳಲ್ಲಿ ಅಪಾಯ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಕೆಲ ತಿಂಗಳಲ್ಲಿ ಚಿರತೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದು, ಇನ್ನೊಬ್ಬರು ಗಾಯಗೊಂಡ ಘಟನೆಗಳು ನಡೆದಿವೆ. ಆನೆಗಳ ಸಂಚಾರವೂ ಭಕ್ತರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಸೂಚನೆಯಂತೆ ಹೊಸ ನಿರ್ಬಂಧ ಜಾರಿಗೆ ತರಲಾಗಿದೆ.

ಇನ್ನು ಮುಂದೆ ಮಲೆಮಹದೇಶ್ವರ ಬೆಟ್ಟ–ನಾಗಮಲೈ ನಡುವಿನ 14 ಕಿ.ಮೀ. ಕಾಡುಮಾರ್ಗದಲ್ಲಿ ಕೇವಲ 3 ಕಿ.ಮೀ.ವರೆಗೆ ಮಾತ್ರ ಪಾದಯಾತ್ರೆಗೆ ಅವಕಾಶ ನೀಡಲಾಗಿದ್ದು, ಅದು ಕೂಡ ಗೈಡ್‌ಗಳೊಂದಿಗೆ ಹಾಗೂ ಕಡ್ಡಾಯ ಮುಂಜಾಗ್ರತಾ ಕ್ರಮಗಳೊಂದಿಗೆ ಮಾತ್ರ ಅನುಮತಿಸಲಾಗಿದೆ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

ಸಿಎಂ ಆದ್ಮೇಲೆ ತ್ರಿಶಾ ಸಿನಿಮಾಗೆ ವಿಜಯ್ ಸ್ಪೆಷಲ್ ಟ್ರೀಟ್? ‘ಕರುಪ್ಪ್’ಗೆ ಮಾರ್ನಿಂಗ್ ಶೋ ಪರ್ಮಿಷನ್!

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಆಗಿರುವ ವಿಜಯ್, ನಟಿ ತ್ರಿಶಾ ಕೃಷ್ಣನ್ ಅಭಿನಯದ ‘ಕರುಪ್ಪ್’ ಸಿನಿಮಾಗೆ ವಿಶೇಷ ಅನುಮತಿ ನೀಡಿರುವುದು ಚಿತ್ರರಂಗದಲ್ಲಿ ಹಾಟ್ ಟಾಪಿಕ್ ಆಗಿದೆ. ಸೂರ್ಯ ಮತ್ತು ತ್ರಿಶಾ ನಟನೆಯ ಈ ಚಿತ್ರ ಮೇ 14ರಂದು ಬಿಡುಗಡೆಯಾಗಲಿದ್ದು, ಬೆಳಿಗ್ಗೆ 9 ಗಂಟೆಯ ಫಸ್ಟ್ ಶೋ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದೆ.

ತಮಿಳುನಾಡಿನಲ್ಲಿ ಸಾಮಾನ್ಯವಾಗಿ ಬೆಳಿಗ್ಗೆ 9 ಗಂಟೆಗೂ ಮುನ್ನ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಇರುವುದಿಲ್ಲ. ಮೊದಲ ದಿನ ಅಭಿಮಾನಿಗಳ ಅತಿರೇಕ, ಟ್ರಾಫಿಕ್ ಸಮಸ್ಯೆ ಹಾಗೂ ಭದ್ರತಾ ದೃಷ್ಟಿಯಿಂದ ಈ ನಿಯಮ ಜಾರಿಯಲ್ಲಿದೆ. ಹೆಚ್ಚಿನ ಸಿನಿಮಾಗಳ ಫಸ್ಟ್ ಶೋ ಬೆಳಿಗ್ಗೆ 11 ಅಥವಾ 12 ಗಂಟೆಯ ನಂತರವೇ ಆರಂಭವಾಗುತ್ತದೆ. ವಿಶೇಷ ಪರಿಸ್ಥಿತಿಯಲ್ಲಿ ಮಾತ್ರ ಸರ್ಕಾರದಿಂದ ಪ್ರತ್ಯೇಕ ಅನುಮತಿ ಪಡೆಯಬೇಕಾಗುತ್ತದೆ.

‘ಕರುಪ್ಪ್’ ಸಿನಿಮಾಗೆ ದಿನಕ್ಕೆ ಐದು ಶೋಗಳನ್ನು ನಡೆಸಲು ಸಹ ಸರ್ಕಾರ ಅನುಮತಿ ನೀಡಿದೆ. ಈ ವೇಳೆ ಚಿತ್ರಮಂದಿರಗಳ ಬಳಿ ಜನದಟ್ಟಣೆ ನಿಯಂತ್ರಿಸುವ ಹೊಣೆಗಾರಿಕೆಯನ್ನು ಥಿಯೇಟರ್ ಮಾಲೀಕರಿಗೆ ನೀಡಲಾಗಿದೆ.

ಈ ವಿಶೇಷ ಅನುಮತಿ ಕುರಿತು ‘ಕರುಪ್ಪ್’ ಸಿನಿಮಾ ತಂಡ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಮುಖ್ಯಮಂತ್ರಿ ವಿಜಯ್ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದೆ.

ಆರ್‌ಜೆ ಬಾಲಾಜಿ ನಿರ್ದೇಶನದ ‘ಕರುಪ್ಪ್’ ಸಿನಿಮಾದಲ್ಲಿ ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಸಿಕ್ಕಿರುವ ಈ ಸ್ಪೆಷಲ್ ಪರ್ಮಿಷನ್ ಇದೀಗ ಕಾಲಿವುಡ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಗುನ್ನೂರಿನ ತೋಟದ ಮನೆಯಲ್ಲಿ ಮಣ್ಣಾದ ನಟ ದಿಲೀಪ್ ರಾಜ್: ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ

ರಾಮನಗರ: ಹೃದಯಾಘಾತದಿಂದ ನಿಧನರಾದ ಕನ್ನಡದ ಖ್ಯಾತ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅವರಿಗೆ ರಾಮನಗರ ತಾಲೂಕಿನ ಗುನ್ನೂರು ಬಳಿಯ ಫಾರ್ಮ್‌ಹೌಸ್‌ನಲ್ಲಿ ಅಂತಿಮ ವಿದಾಯ ನೀಡಲಾಯಿತು. ಲಿಂಗಾಯತ ಸಂಪ್ರದಾಯದಂತೆ ನಡೆದ ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು, ಸ್ನೇಹಿತರು, ಕಲಾವಿದರು ಹಾಗೂ ಗ್ರಾಮಸ್ಥರು ಭಾಗಿಯಾಗಿ ಕಂಬನಿ ಮಿಡಿದರು.

ದಿಲೀಪ್ ರಾಜ್ ಅವರು ಗುನ್ನೂರಿನ ತೋಟದ ಮನೆಯನ್ನು ವಿಶೇಷವಾಗಿ ಇಷ್ಟಪಡುತ್ತಿದ್ದರು. ಬಿಡುವು ಸಿಕ್ಕಾಗಲೆಲ್ಲಾ ಅಲ್ಲಿಗೆ ತೆರಳಿ ಸಮಯ ಕಳೆಯುತ್ತಿದ್ದರು. ಹಳೆಯ ಶೈಲಿಯ ತೊಟ್ಟಿ ಮನೆ ನಿರ್ಮಿಸಿಕೊಂಡಿದ್ದ ಅವರು, ಗ್ರಾಮಸ್ಥರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಹೀಗಾಗಿ ಅವರ ಇಚ್ಛೆಯಂತೆ ಅಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಅಂತ್ಯಕ್ರಿಯೆಗೆ ಮುನ್ನ ರೇವಣಸಿದ್ದೇಶ್ವರ ಮಠದ ರಾಜಶೇಖರ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಕುಟುಂಬದ ಸದಸ್ಯರು ಪೂಜಾ ಕಾರ್ಯ ನೆರವೇರಿಸಿದರು.

ಅಂತಿಮ ದರ್ಶನಕ್ಕೆ ನಟ ಸೃಜನ್ ಲೋಕೇಶ್, ಅನುಪ್ರಭಾಕರ್, ರಘು ಮುಖರ್ಜಿ, ಜಗಪ್ಪ, ಮಂಜು ಪಾವಗಡ, ಹುಲಿ ಕಾರ್ತಿಕ್ ಸೇರಿದಂತೆ ಅನೇಕ ಕಲಾವಿದರು ಆಗಮಿಸಿ ನಮನ ಸಲ್ಲಿಸಿದರು. ಪಾರ್ಥಿವ ಶರೀರದ ಮುಂದೆ ಕುಟುಂಬಸ್ಥರ ಆಕ್ರಂದನ ಕಂಡು ಅಲ್ಲಿದ್ದವರು ಭಾವುಕರಾದರು.

‘ಬಾಯ್‌ಫ್ರೆಂಡ್’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದ ದಿಲೀಪ್ ರಾಜ್, ‘ಮಿಲನ’ ಸಿನಿಮಾದ ವಿಲನ್ ಪಾತ್ರದಿಂದ ಮನೆಮಾತಾಗಿದ್ದರು. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಮೂಲಕ ಕಿರುತೆರೆಯಲ್ಲೂ ಅಪಾರ ಜನಪ್ರಿಯತೆ ಗಳಿಸಿದ್ದರು. ‘ಸುಗ್ರೀವ’, ‘ಗೆಳೆಯ’, ‘ಯೂ ಟರ್ನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಅವರು, ನಿರ್ಮಾಪಕರಾಗಿಯೂ ಯಶಸ್ಸು ಕಂಡಿದ್ದರು.

ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದನ ಅಗಲಿಕೆ ಅಭಿಮಾನಿಗಳಲ್ಲಿ ದುಃಖದ ವಾತಾವರಣ ನಿರ್ಮಿಸಿದೆ.

ಗ್ರಾಮೀಣ ಮಹಿಳೆಯರ ಕೈಚಳಕಕ್ಕೆ ಜಾಗತಿಕ ಮನ್ನಣೆ: ವಿದೇಶಕ್ಕೆ ಹಾರಿದ ‘ಕಲಬುರಗಿ ರೊಟ್ಟಿ’

ಕಲಬುರಗಿ: ಜಿಲ್ಲೆಯ ಗುರುತಾಗಿರುವ ‘ಕಲಬುರಗಿ ರೊಟ್ಟಿ’ ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಮಹಿಳಾ ಸ್ವಸಹಾಯ ಸಂಘಗಳ ಮೂಲಕ ತಯಾರಾಗುತ್ತಿರುವ ರೊಟ್ಟಿಗಳನ್ನು ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾಕ್ಕೆ ರಫ್ತು ಮಾಡುವ ಮಹತ್ವಾಕಾಂಕ್ಷಿ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗಿದೆ.

ಅಮೆರಿಕ ಹಾಗೂ ಆಸ್ಟ್ರೇಲಿಯಾಕ್ಕೆ ಪ್ರತಿ ತಿಂಗಳು ತಲಾ 10,000 ರೊಟ್ಟಿಗಳು ಹಾಗೂ ಕೆನಡಾಕ್ಕೆ 5,000 ರೊಟ್ಟಿಗಳನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ. ಈ ಬೆಳವಣಿಗೆ ಕಲಬುರಗಿಯ ಸಾಂಪ್ರದಾಯಿಕ ಆಹಾರಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಂತಾಗಿದೆ.

ಸಚಿವ ಪ್ರಿಯಾಂಕ ಖರ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಯೋಜನೆ ಕುರಿತು ಮಾಹಿತಿ ಹಂಚಿಕೊಂಡಿದ್ದು, ಮಹಿಳಾ ಸ್ವಸಹಾಯ ಸಂಘಗಳ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.

ಜಿಲ್ಲೆಯ 100ಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಸುಮಾರು 1,000 ಮಹಿಳೆಯರು ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರ ಕಳೆದ ಎರಡು ವರ್ಷಗಳಲ್ಲಿ 150ಕ್ಕೂ ಹೆಚ್ಚು ರೊಟ್ಟಿ ತಯಾರಿಕಾ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಿದ್ದು, ಗ್ರಾಮೀಣ ಮಹಿಳೆಯರ ಜೀವನೋಪಾಯಕ್ಕೆ ದೊಡ್ಡ ಆಸರೆಯಾಗಿದೆ.

ಪ್ಯಾಕೇಜಿಂಗ್, ಲೇಬಲಿಂಗ್ ಮತ್ತು ಬ್ರ್ಯಾಂಡಿಂಗ್‌ಗೆ ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟ ಅಳವಡಿಸಲಾಗಿದ್ದು, ಕಲಬುರಗಿ ರೊಟ್ಟಿ ಈಗ ಸ್ವಿಗ್ಗಿ, ಜೊಮ್ಯಾಟೊ ಮತ್ತು ಅಮೆಜಾನ್ ಮೂಲಕವೂ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಸ್ಥಳೀಯ ಸಾಂಪ್ರದಾಯಿಕ ಆಹಾರ ಜಾಗತಿಕ ಮಾರುಕಟ್ಟೆ ತಲುಪಿರುವುದು ಜಿಲ್ಲೆಯ ಮಹಿಳಾ ಉದ್ಯಮಶೀಲತೆಗೆ ಹೊಸ ಅಧ್ಯಾಯ ಬರೆದಂತಾಗಿದೆ.

ಬಿ ಖಾತೆದಾರರಿಗೆ ಸಿಹಿ ಸುದ್ದಿ; ಎ ಖಾತೆ ಪರಿವರ್ತನೆಗೆ 6ನೇ ಗ್ಯಾರಂಟಿ ಘೋಷಿಸಿದ ಡಿಕೆ ಶಿವಕುಮಾರ್

ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಜನತೆಗೆ ಮಹತ್ವದ ಘೋಷಣೆ ಮಾಡಿದ್ದು, ಬಿ ಖಾತೆ ಹೊಂದಿರುವ ಆಸ್ತಿ ಮಾಲೀಕರಿಗೆ ಎ ಖಾತೆ ಪಡೆಯಲು ಅವಕಾಶ ಕಲ್ಪಿಸುವ ‘ನನ್ನ ಖಾತಾ, ನನ್ನ ಹಕ್ಕು’ ಅಭಿಯಾನಕ್ಕೆ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ. ಇದನ್ನು ಬೆಂಗಳೂರಿಗರಿಗಾಗಿ ರಾಜ್ಯ ಸರ್ಕಾರದ 6ನೇ ಗ್ಯಾರಂಟಿ ಎಂದು ಅವರು ಘೋಷಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಇ-ಖಾತಾ, ನಂಬಿಕೆ ನಕ್ಷೆ ಸೇರಿದಂತೆ ಹಲವು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದ್ದೇವೆ. ಇದೀಗ ಬಿ ಖಾತೆ ಹೊಂದಿರುವ ನಾಗರಿಕರಿಗೆ ಎ ಖಾತೆ ಮಾಡಿಸಿಕೊಳ್ಳಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಮೇ 16, 2026ರಿಂದ ಈ ಅಭಿಯಾನ ಆರಂಭವಾಗಲಿದ್ದು, ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆಗೊಳ್ಳಲು ಅವಕಾಶ ನೀಡಲಾಗುತ್ತದೆ. ನಗರದಲ್ಲಿ ಸುಮಾರು 7 ಲಕ್ಷ ಬಿ ಖಾತೆಗಳಿದ್ದು, ಯೋಜನೆಯಿಂದ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಒಸಿ ಇಲ್ಲದೇ ವಿದ್ಯುತ್ ಹಾಗೂ ನೀರಿನ ಸಂಪರ್ಕ ಸಿಗದೇ ಪರದಾಡುತ್ತಿರುವ ನಾಗರಿಕರಿಗೆ ಈ ಯೋಜನೆ ನೆರವಾಗಲಿದೆ. ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ ಆಸ್ತಿ ಪ್ರಮಾಣಪತ್ರವನ್ನು ಮನೆಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

ಬೆಂಗಳೂರು ನಗರದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಶಾಲಾ ಆವರಣಗಳಲ್ಲಿ 10 ಸ್ಥಳಗಳನ್ನು ಗುರುತಿಸಿ ಅಭಿಯಾನ ನಡೆಸಲಾಗುತ್ತದೆ. ಮೇ 16ರ ಬಳಿಕ ಪ್ರತಿ ಶನಿವಾರ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುವುದು. ಅಧಿಕಾರಿಗಳು ರಜೆ ದಿನಗಳಲ್ಲಿಯೂ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.

ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆಗೊಳ್ಳುವವರಿಗೆ ಗೈಡನ್ಸ್ ವ್ಯಾಲ್ಯೂ ಶೇಕಡಾ 5ರಿಂದ ಶೇಕಡಾ 2ಕ್ಕೆ ಇಳಿಕೆ ಮಾಡುವುದಾಗಿ ಘೋಷಿಸಿರುವ ಡಿಸಿಎಂ, ಮುಂದಿನ 100 ದಿನಗಳಲ್ಲಿ ಈ ಅವಕಾಶವನ್ನು ನಾಗರಿಕರು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ, ಕೆಂಪೇಗೌಡ ಜಯಂತಿ ಅಂಗವಾಗಿ ಬೆಂಗಳೂರನ್ನು ಹಸಿರುಮಯಗೊಳಿಸುವ ಉದ್ದೇಶದಿಂದ 15 ಲಕ್ಷ ಸಸಿಗಳನ್ನು ನೆಡುವ ಗ್ರೀನ್ ಬೆಂಗಳೂರು ಅಭಿಯಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬಿಡಿಎ 50ನೇ ವರ್ಷದ ಅಂಗವಾಗಿ ಜೂನ್ 27ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಇನ್ನೊಂದೆಡೆ, ಎಲೆಕ್ಟ್ರಾನಿಕ್ ಸಿಟಿಯಿಂದ ಮೈಸೂರು ರಸ್ತೆವರೆಗೆ 33 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಿಸಿನೆಸ್ ಕಾರಿಡಾರ್ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಭೂಮಿ ನೀಡುವ ಮಾಲೀಕರಿಗೆ ಐದು ರೀತಿಯ ಪರಿಹಾರ ನೀಡಲಾಗುವುದು. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಡಿನೋಟಿಫೈ ಮಾಡುವುದಿಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಮಂಗಳೂರಿನಲ್ಲಿ ಉಚಿತ ನೇರ ಸಂದರ್ಶನ ಆಯೋಜನೆ

0

ದಕ್ಷಿಣ ಕನ್ನಡ: ಜಿಲ್ಲೆಯ ಮಂಗಳೂರಿನಲ್ಲಿ ನಿರುದ್ಯೋಗಿಗಳಿಗೆ ಸುವರ್ಣಾವಕಾಶ ಒದಗಿದ್ದು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ನೇರ ಸಂದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ.

ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಶ್ರಯದಲ್ಲಿ ನಡೆಯುವ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಎಕ್ಸ್‌ಪರ್ಟ್ ಕಾಲೇಜು ಹಾಗೂ ಮಾಂಡೋವಿ ಮೋಟಾರ್ಸ್ ಸಂಸ್ಥೆಗಳು ಭಾಗವಹಿಸುತ್ತಿವೆ.

ಎಕ್ಸ್‌ಪರ್ಟ್ ಕಾಲೇಜಿನಲ್ಲಿ ‘ಫಿಸಿಕ್ಸ್ ಲ್ಯಾಬ್ ಇನ್‌ಸ್ಟ್ರಕ್ಟರ್’ ಹುದ್ದೆಗೆ ಬಿ.ಎಸ್ಸಿ ಫಿಸಿಕ್ಸ್ ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಮಾಂಡೋವಿ ಮೋಟಾರ್ಸ್‌ನಲ್ಲಿ ‘ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್’ ಹುದ್ದೆಗೆ ಪಿಯುಸಿ, ಐಟಿಐ, ಡಿಪ್ಲೋಮಾ ಅಥವಾ ಯಾವುದೇ ಪದವಿ ಪಡೆದಿರುವ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ.

ಮೇ 16ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಪಡೀಲ್‌ನಲ್ಲಿರುವ ಜಿಲ್ಲಾಡಳಿತ ಭವನದ ‘ಪ್ರಜಾ ಸೌಧ’ದ ನೆಲಮಹಡಿಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.

ಉದ್ಯೋಗಾಕಾಂಕ್ಷಿಗಳು ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಹಾಜರಾಗುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ 0824-2457139 ಸಂಪರ್ಕಿಸಲು ಸೂಚಿಸಲಾಗಿದೆ.

ಶಾಲೆಯಿಂದ ನಾಪತ್ತೆಯಾಗಿದ್ದ ಬಾಲಕ ಬೆಂಗಳೂರಿನಲ್ಲಿ ಪತ್ತೆ: ಕಬಡ್ಡಿ ಪಂದ್ಯದಿಂದ ಬಯಲಾಯ್ತು ರಹಸ್ಯ

0

ಮಂಡ್ಯ: ಜಿಲ್ಲೆಯ ತಂಗಳಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ನಾಲ್ಕು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ. ಕಬಡ್ಡಿ ಆಟದ ಮೇಲಿದ್ದ ಆಸಕ್ತಿಯೇ ಕೊನೆಗೂ ಬಾಲಕನ ಸುಳಿವು ನೀಡಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.

ಪಾಂಡವಪುರ ತಾಲೂಕಿನ ಹಿರೇಮರಹಳ್ಳಿ ಗ್ರಾಮದ ಈರೇಗೌಡರ ಪುತ್ರ ಕಿಶೋರ್ 9ನೇ ತರಗತಿಯಲ್ಲಿ ಓದುತ್ತಿದ್ದ ವೇಳೆ 2022ರ ಆಗಸ್ಟ್ 10ರಂದು ಶಾಲೆಯಿಂದ ನಾಪತ್ತೆಯಾಗಿದ್ದ. ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಆತ ಶಾಲೆಯತ್ತ ಹೋಗುತ್ತಿರುವುದು ಮಾತ್ರ ದಾಖಲಾಗಿತ್ತು. ಬಳಿಕ ಆತ ಎಲ್ಲಿಗೆ ತೆರಳಿದ್ದಾನೆ ಎಂಬುದು ಪತ್ತೆಯಾಗಿರಲಿಲ್ಲ.

ತಂದೆ ಶಾಲೆಗೆ ಭೇಟಿ ನೀಡಿದಾಗ ಮಗ ಕಳೆದ ಹಲವು ದಿನಗಳಿಂದ ಶಾಲೆಗೆ ಬಂದಿಲ್ಲ ಎಂಬ ಮಾಹಿತಿ ತಿಳಿದುಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ಕು ವರ್ಷಗಳಿಂದ ನಿರಂತರ ಶೋಧ ನಡೆಸುತ್ತಿದ್ದರು.

ತನಿಖೆಯಲ್ಲಿ ಕಿಶೋರ್ ಸ್ವಯಂಪ್ರೇರಿತವಾಗಿ ಶಾಲೆ ಬಿಟ್ಟು ಬೆಂಗಳೂರಿಗೆ ತೆರಳಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಓದಿನಲ್ಲಿ ಆಸಕ್ತಿ ಇಲ್ಲದ ಕಾರಣ ಶಾಲೆಯ ಕಾಂಪೌಂಡ್ ಹಾರಿ ಹೊರಬಂದಿದ್ದ ಆತ, ಬೆಂಗಳೂರಿನಲ್ಲಿ ವಿವಿಧ ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ.

ಕಬಡ್ಡಿ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಕಿಶೋರ್ ಸ್ಥಳೀಯ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸುತ್ತಿದ್ದ ವೇಳೆ ಪರಿಚಿತರು ಆತನನ್ನು ಗುರುತಿಸಿದ್ದಾರೆ. ಮಾಹಿತಿ ಆಧರಿಸಿ ಪೊಲೀಸರು ಆತನನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಗ್ರಾಮಕ್ಕೆ ಕರೆತಂದಿದ್ದಾರೆ.

ನಾಲ್ಕು ವರ್ಷಗಳಿಂದ ಮಗನಿಗಾಗಿ ಕಾದಿದ್ದ ಕುಟುಂಬಕ್ಕೆ ಈಗ ಸಂತಸದ ಕ್ಷಣ ಮರಳಿ ಬಂದಿದೆ.

error: Content is protected !!