ತುಮಕೂರು: ಮನೆತನದ ಗೌರವಕ್ಕೆ ಧಕ್ಕೆ ತಂದಿದ್ದಾಳೆ ಎಂಬ ಕೋಪದಲ್ಲಿ ತಂದೆಯೇ ತನ್ನ ಅಪ್ರಾಪ್ತ ಮಗಳನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಂಬೆ ಮರದಹಳ್ಳಿಯಲ್ಲಿ ನಡೆದಿದೆ.
ಮೇಘನ (17) ಮೃತ ಬಾಲಕಿ. ಈ ಪ್ರಕರಣದಲ್ಲಿ ಆಕೆಯ ತಂದೆ ತಿಮ್ಮರಾಯಪ್ಪನನ್ನು ಕಳ್ಳಂಬೆಳ್ಳ ಪೊಲೀಸರು ಬಂಧಿಸಿದ್ದಾರೆ.
ಮಗಳು ಕಾಣೆಯಾಗಿದ್ದಾಳೆ ಎಂದು ಆಕೆಯ ತಾಯಿ ತಿಂಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ವೇಳೆ ಬಾಲಕಿಯ ತಂದೆ ನಾಪತ್ತೆಯಾಗಿದ್ದರಿಂದ ಅನುಮಾನ ಗಾಢವಾಗಿತ್ತು. ಬಳಿಕ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಸತ್ಯ ಹೊರಬಿದ್ದಿದೆ.
ಮೇಘನ ತನ್ನ ಸಂಬಂಧಿಕನೊಬ್ಬನೊಂದಿಗೆ ಪ್ರೀತಿಯಲ್ಲಿ ಇದ್ದಳು ಎನ್ನಲಾಗಿದ್ದು, ಇದಕ್ಕೆ ತಂದೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ. ಇದೇ ವಿಚಾರವಾಗಿ ತಂದೆ-ಮಗಳ ನಡುವೆ ಹಲವು ಬಾರಿ ಜಗಳ ನಡೆದಿತ್ತು.
ಏಪ್ರಿಲ್ 16ರಂದು ನಡೆದ ಜಗಳದ ವೇಳೆ ಕೋಪಗೊಂಡ ತಿಮ್ಮರಾಯಪ್ಪ ಮಗಳನ್ನು ಹತ್ಯೆ ಮಾಡಿ, ಶವವನ್ನು ಜಮೀನಿನ ಪಕ್ಕದ ಸರ್ಕಾರಿ ಹಳ್ಳದಲ್ಲಿ ಹೂತು ಹಾಕಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಕರಣ ಸಂಬಂಧ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದು, ಅಧಿಕಾರಿಗಳ ಸಮ್ಮುಖದಲ್ಲಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ಮಾಡಲಾಗಿದೆ.

