Home Blog

ಔಷಧಿ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ: ವೈದ್ಯರ ಸಲಹೆ ಕಡ್ಡಾಯ!

ಅನಾರೋಗ್ಯ ಬಂದಾಗ ಔಷಧಿ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ.

ಆದರೆ ಔಷಧಿ ಸೇವನೆಯ ವೇಳೆ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ದೀರ್ಘಕಾಲದಲ್ಲಿ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಘಾಜಿಯಾಬಾದ್ ಜಿಲ್ಲಾ ಆಸ್ಪತ್ರೆಯ ಫಾರ್ಮಾಸಿಸ್ಟ್ ನರೇಂದ್ರ ಕುಮಾರ್ ಶರ್ಮಾ ಅವರ ಪ್ರಕಾರ, ಸ್ವಯಂ ಔಷಧಿ ಸೇವನೆ, ಡೋಸ್ ಮಧ್ಯದಲ್ಲೇ ನಿಲ್ಲಿಸುವುದು ಮತ್ತು ವೈದ್ಯರ ಸಲಹೆ ಇಲ್ಲದೆ ಔಷಧಿ ಬದಲಾಯಿಸುವುದು ಅಪಾಯಕಾರಿಯಾಗಬಹುದು. ವಿಶೇಷವಾಗಿ ಆಂಟಿಬಯೋಟಿಕ್‌ಗಳನ್ನು ಸರಿಯಾಗಿ ಬಳಸದಿದ್ದರೆ “ಸೂಪರ್‌ಬಗ್” ಎಂಬ ಪರಿಸ್ಥಿತಿ ಉಂಟಾಗಿ ಔಷಧಿಗಳು ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗದೇ ಹೋಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಜನರು ಸಾಮಾನ್ಯವಾಗಿ ಮಾಡುವ ತಪ್ಪುಗಳು:

ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವನೆ:
ಜ್ವರ, ಶೀತ, ಕೆಮ್ಮು ಬಂದಾಗ ಹಲವರು ತಾವೇ ಔಷಧಿ ತೆಗೆದುಕೊಳ್ಳುತ್ತಾರೆ. ಇದು ದೇಹದ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಕೋರ್ಸ್ ಪೂರ್ಣಗೊಳಿಸದೇ ಔಷಧಿ ನಿಲ್ಲಿಸುವುದು:
ಆರೋಗ್ಯ ಸ್ವಲ್ಪ ಸುಧಾರಿಸಿದ ತಕ್ಷಣ ಆಂಟಿಬಯೋಟಿಕ್ ನಿಲ್ಲಿಸುವುದರಿಂದ ಸೋಂಕು ಮತ್ತೆ ತೀವ್ರವಾಗುವ ಅಪಾಯ ಹೆಚ್ಚುತ್ತದೆ.

ಸಮಯಕ್ಕೆ ಸರಿಯಾಗಿ ಔಷಧಿ ಸೇವಿಸದಿರುವುದು:
ಔಷಧಿ ಸಮಯ ತಪ್ಪಿಸುವುದು, ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಅಥವಾ ಎಕ್ಸ್‌ಪೈರಿ ದಿನಾಂಕ ಪರಿಶೀಲಿಸದೇ ಸೇವಿಸುವುದು ಅಪಾಯಕಾರಿ ಎಂದು ಹೇಳಲಾಗಿದೆ.

ಪೇನ್‌ಕಿಲ್ಲರ್‌ಗಳ ಅತಿಯಾದ ಬಳಕೆ ಅಪಾಯಕಾರಿಯೇ?

ತಜ್ಞರ ಪ್ರಕಾರ, ನೋವು ನಿವಾರಕ ಔಷಧಿಗಳನ್ನು ಅತಿಯಾಗಿ ಬಳಸುವುದರಿಂದ ಕಿಡ್ನಿ ಮತ್ತು ಲಿವರ್ ಮೇಲೆ ಹಾನಿ ಉಂಟಾಗಬಹುದು. ಇದು ಮುಂದಿನ ದಿನಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಜನರಿಕ್ ಮತ್ತು ಬ್ರಾಂಡೆಡ್ ಔಷಧಿ ವ್ಯತ್ಯಾಸ:

ಜನರಿಕ್ ಮತ್ತು ಬ್ರಾಂಡೆಡ್ ಔಷಧಿಗಳಲ್ಲಿ ಇರುವ ಸಕ್ರಿಯ ಅಂಶ (salt) ಒಂದೇ ಆಗಿರುತ್ತದೆ. ವ್ಯತ್ಯಾಸ ಕೇವಲ ಕಂಪನಿ ಮತ್ತು ಬೆಲೆಯಲ್ಲಿ ಮಾತ್ರ ಎಂದು ತಜ್ಞರು ತಿಳಿಸಿದ್ದಾರೆ. ವೈದ್ಯರ ಸಲಹೆಯೊಂದಿಗೆ ಸರಿಯಾದ ರೀತಿಯಲ್ಲಿ ಬಳಸಿದರೆ ಜನರಿಕ್ ಔಷಧಿಯೂ ಪರಿಣಾಮಕಾರಿಯೇ ಎಂದು ಅವರು ಹೇಳಿದ್ದಾರೆ.

ರಾಜ್ಯದ ಹಲವೆಡೆ ನಾಳೆ ಗುಡುಗು ಸಹಿತ ಮಳೆ! 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ!

ಬೆಂಗಳೂರು: ಕರ್ನಾಟಕದಲ್ಲಿ ನಾಳೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯದ 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಬೆಂಗಳೂರು ಸೇರಿದಂತೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ನಿರೀಕ್ಷೆ ಇದೆ. ಅರಬ್ಬಿ ಸಮುದ್ರದಿಂದ ತೇವಾಂಶಯುಕ್ತ ಗಾಳಿಯ ಹರಿವು ಬಲವಾಗುತ್ತಿರುವುದು ಹಾಗೂ ಮುಂಗಾರು ಪೂರ್ವ ಹವಾಮಾನ ಬದಲಾವಣೆಗಳು ಮಳೆಯ ಪ್ರಮಾಣ ಹೆಚ್ಚಿಸಲು ಕಾರಣವಾಗಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ಹವಾಮಾನ ಕೇಂದ್ರದ ಪ್ರಕಾರ ಮುಂದಿನ ಕೆಲವು ದಿನಗಳವರೆಗೆ ರಾಜ್ಯದ ಹಲವೆಡೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಸಾಧಾರಣದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ.

ಮೇ 29ರವರೆಗೆ ಉತ್ತರ ಒಳನಾಡಿನಲ್ಲಿ ಗಂಟೆಗೆ 50–60 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ದಕ್ಷಿಣ ಒಳನಾಡಿನಲ್ಲಿಯೂ ಇದೇ ರೀತಿಯ ಹವಾಮಾನ ಮುಂದುವರಿಯಲಿದೆ ಎಂದು ಮಾಹಿತಿ ನೀಡಲಾಗಿದೆ. ಮೇ 29ರಿಂದ ಮೇ 31ರವರೆಗೆ ಗಾಳಿಯ ವೇಗ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದ್ದರೂ, ಕೆಲವೆಡೆ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

ಮನೆಯಲ್ಲಿರುವ ಉಪ್ಪಿನಿಂದಲೇ ಬಾತ್‌ರೂಮ್ ಹೊಳೆಯುವಂತೆ ಮಾಡಬಹುದು!

ಬಾತ್‌ರೂಮ್‌ ಅನ್ನು ಸ್ವಚ್ಛವಾಗಿಡುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ.

ತೇವಾಂಶ ಹೆಚ್ಚಿರುವ ಕಾರಣ ಸ್ನಾನಗೃಹದಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರ ಹಾಗೂ ದುರ್ವಾಸನೆ ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಹಲವರು ದುಬಾರಿ ಕ್ಲೀನರ್‌ಗಳನ್ನು ಬಳಸಿದರೂ, ಮನೆಯಲ್ಲೇ ಲಭ್ಯವಿರುವ ಉಪ್ಪಿನ ಸಹಾಯದಿಂದ ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿಯಾಗಿ ಬಾತ್‌ರೂಮ್‌ ಕ್ಲೀನ್‌ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಉಪ್ಪಿನೊಂದಿಗೆ ನಿಂಬೆಹಣ್ಣು ಬೆರೆಸಿ ನಲ್ಲಿಗಳು ಹಾಗೂ ಬೇಸಿನ್‌ಗಳನ್ನು ಸ್ವಚ್ಛಗೊಳಿಸಿದರೆ ತುಕ್ಕು ಮತ್ತು ನೀರಿನ ಕಲೆಗಳು ಮಾಯವಾಗಿ ಹೊಳಪು ಬರುತ್ತದೆ. ಅದೇ ರೀತಿ ಉಪ್ಪು ಮತ್ತು ವಿನೆಗರ್‌ ಮಿಶ್ರಣವು ಟೈಲ್ಸ್‌ ಹಾಗೂ ಗೋಡೆಯ ಮೇಲಿನ ಶಿಲೀಂಧ್ರ ಮತ್ತು ದುರ್ವಾಸನೆಯನ್ನು ನಿವಾರಿಸಲು ಸಹಕಾರಿ ಎನ್ನಲಾಗಿದೆ.

ಅರ್ಧ ಕಪ್‌ ಉಪ್ಪಿಗೆ ಅರ್ಧ ಕಪ್‌ ಅಡುಗೆ ಸೋಡಾ ಸೇರಿಸಿ ಪೇಸ್ಟ್‌ ತಯಾರಿಸಿ ಬಳಸಿದರೆ ಬಾತ್‌ರೂಮ್‌ನಲ್ಲಿರುವ ಕಲೆಗಳು ಹಾಗೂ ಬ್ಯಾಕ್ಟೀರಿಯಾಗಳನ್ನು ಸುಲಭವಾಗಿ ತೆಗೆದುಹಾಕಬಹುದು. ಉಪ್ಪಿನೊಂದಿಗೆ ಡಿಶ್‌ವಾಶ್‌ ಸೋಪ್‌ ಮಿಶ್ರಣ ಮಾಡಿ ವಾಶ್‌ಬೇಸಿನ್‌ ಹಾಗೂ ಟೈಲ್ಸ್‌ ಕ್ಲೀನ್‌ ಮಾಡಿದರೆ ಗ್ರೀಸ್‌ ಮತ್ತು ಮೊಂಡುತನದ ಕಲೆಗಳು ನಿವಾರಣೆಯಾಗುತ್ತವೆ.

ಚರಂಡಿಯಿಂದ ಬರುವ ದುರ್ವಾಸನೆ ಹಾಗೂ ಅಡಚಣೆ ನಿವಾರಣೆಗೆ ಉಪ್ಪು ಮತ್ತು ಬಿಸಿನೀರು ಉಪಯುಕ್ತವಾಗಿದೆ. ಚರಂಡಿಗೆ ಉಪ್ಪು ಹಾಕಿ ಅದರ ಮೇಲೆ ಬಿಸಿನೀರು ಸುರಿದರೆ ಕೊಳೆ ಹಾಗೂ ಗ್ರೀಸ್‌ ಸಡಿಲವಾಗಿ ಬ್ಲಾಕ್‌ ತೆರವುಗೊಳ್ಳುತ್ತದೆ ಎಂದು ತಿಳಿಸಲಾಗಿದೆ.

ಇನ್ನೂ ಟೈಲ್ಸ್‌ ಮೇಲಿನ ಹಳದಿ ಕಲೆಗಳನ್ನು ತೆಗೆದುಹಾಕಲು ಟೂತ್‌ಪೇಸ್ಟ್‌ ಮತ್ತು ಉಪ್ಪಿನ ಪೇಸ್ಟ್‌ ಪರಿಣಾಮಕಾರಿ ಎಂದು ಹೇಳಲಾಗಿದೆ.

ಉಪ್ಪು ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುವುದರ ಜೊತೆಗೆ ದುರ್ವಾಸನೆ ಕಡಿಮೆ ಮಾಡಿ ಬಾತ್‌ರೂಮ್‌ ಅನ್ನು ಸ್ವಚ್ಛ ಹಾಗೂ ನೈರ್ಮಲ್ಯಯುತವಾಗಿಡಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಸಿಎಂ ಸ್ಥಾನ ಬಿಟ್ಟುಕೊಡುವ ಮೂಲಕ ರಾಜಕೀಯ ಪ್ರೌಢಿಮೆ ತೋರಿದ್ದಾರೆ: ರಂಭಾಪುರಿ ಶ್ರೀ

ಚಿಕ್ಕಮಗಳೂರು: ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ರಾಜಕೀಯ ಚರ್ಚೆಗಳ ನಡುವೆಯೇ ರಂಭಾಪುರಿ ಶ್ರೀಗಳು ಮಹತ್ವದ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟುಕೊಡುವ ಮೂಲಕ ರಾಜಕೀಯ ಪ್ರೌಢಿಮೆ ತೋರಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ.

ಬಾಳೆಹೊನ್ನೂರಿನಲ್ಲಿ ಮಾತನಾಡಿದ ಶ್ರೀಗಳು, “2023ರಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಬಳಿಕ ಅನುಭವಿ ನಾಯಕನಾಗಿ ಸಿದ್ದರಾಮಯ್ಯ ಅವರಿಗೆ ಮೊದಲ ಅವಕಾಶ ನೀಡಲಾಗಿತ್ತು. ಎರಡೂವರೆ ವರ್ಷಗಳ ಬಳಿಕ ಅಧಿಕಾರ ಹಸ್ತಾಂತರದ ಮಾತು ಈಗ ಸಾಕಾರವಾಗುತ್ತಿದೆ” ಎಂದರು.

“ಡಿಕೆ ಶಿವಕುಮಾರ್ ಅವರು ಈ ಅವಧಿಯಲ್ಲಿ ತಾಳ್ಮೆ ಮತ್ತು ಸಹನೆಯನ್ನು ಕಳೆದುಕೊಳ್ಳದೆ ಕಾಯುತ್ತಿದ್ದರು. ಸಿದ್ದರಾಮಯ್ಯ ಅವರು ಉದಾರ ಮನಸ್ಸಿನಿಂದ ಸ್ಥಾನ ಬಿಟ್ಟುಕೊಡುವ ಮೂಲಕ ಮುತ್ಸದ್ದಿತನ ತೋರಿದ್ದಾರೆ” ಎಂದು ಹೇಳಿದರು.

ರಾಜ್ಯದ ಮುಂದಿನ ಆಡಳಿತ ಕುರಿತು ಮಾತನಾಡಿದ ಅವರು, “ಡಿಕೆಶಿ ಮುಖ್ಯಮಂತ್ರಿ ಆಗಿ ಉತ್ತಮ ಆಡಳಿತ ನೀಡಲಿ. ಜಾತಿ-ಧರ್ಮದ ಸಂಘರ್ಷಗಳು ಹೆಚ್ಚಾಗಬಾರದು. ಎಲ್ಲಾ ಸಮುದಾಯದ ಜನರನ್ನೂ ಮೇಲೆತ್ತುವ ಕೆಲಸ ನಡೆಯಬೇಕು” ಎಂದು ಆಶಿಸಿದರು.

“ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲೂ ಜಾತಿ ಭಾವನೆ ಬೆಳೆಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಬೇಸರದ ಸಂಗತಿ. ಸಮಾಜದಲ್ಲಿ ಸಮಾನತೆ ಮತ್ತು ಶಾಂತಿ ಉಳಿಯಬೇಕು” ಎಂದು ಶ್ರೀಗಳು ಕರೆ ನೀಡಿದರು.

“ನಾಳೆಯೇ ರಾಜೀನಾಮೆ ಕೊಡ್ತೀನಿ ಅಂದ್ರು”: ಸಿದ್ದರಾಮಯ್ಯ ನಿರ್ಧಾರ ಬಿಚ್ಚಿಟ್ಟ ಆರ್‌ವಿ ದೇಶಪಾಂಡೆ!

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಕ್ಷಣಕ್ಷಣಕ್ಕೂ ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಇದೀಗ ಬಹುತೇಕ ಖಚಿತವಾಗಿದೆ. ಈ ನಡುವೆ ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ. ದೇಶಪಾಂಡೆ ಅವರು ಸ್ಫೋಟಕ ಹೇಳಿಕೆ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ದೇಶಪಾಂಡೆ, “ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ರಾಜೀನಾಮೆ ನಿರ್ಧಾರ ತಿಳಿಸಿ ಬಂದಿದ್ದಾರೆ. ನಾಳೆಯೇ ರಾಜೀನಾಮೆ ಕೊಡ್ತೀನಿ ಅಂತ ನಮಗೆ ಹೇಳಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ ಎಂದು ಒತ್ತಾಯಿಸಿದ್ದೇವೆ” ಎಂದು ತಿಳಿಸಿದ್ದಾರೆ.

ಇದುವರೆಗೆ ಊಹಾಪೋಹಗಳ ಮಟ್ಟದಲ್ಲಿದ್ದ ರಾಜೀನಾಮೆ ಚರ್ಚೆಗೆ ದೇಶಪಾಂಡೆ ಅವರ ಈ ಹೇಳಿಕೆ ಅಧಿಕೃತ ಮುದ್ರೆ ಒತ್ತಿದಂತಾಗಿದೆ.

ಇನ್ನೊಂದೆಡೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಬಳಿಕ ಕಾನೂನು ಸಚಿವ ಎಚ್.ಕೆ. ಪಾಟೀಲ್ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. “ರಾಜೀನಾಮೆ ಕುರಿತ ಸುದ್ದಿಗಳಿಂದ ನಮಗೂ ಕಳವಳ ಉಂಟಾಯಿತು. ಸಿಎಂ ಮುಂದೆ ನಮ್ಮ ಮನವಿಯನ್ನು ಇಟ್ಟಿದ್ದೇವೆ. ಆದರೆ ಅವರು ನಮ್ಮ ಎದುರು ಒಂದು ಮಾತನ್ನೂ ಆಡಲಿಲ್ಲ. ಸಂಪೂರ್ಣ ಮೌನವಾಗಿದ್ದರು” ಎಂದು ಹೇಳಿದ್ದಾರೆ.

ರಾಜಕೀಯ ಬೆಳವಣಿಗೆಗಳ ನಡುವೆಯೇ ಸಿದ್ದರಾಮಯ್ಯ ಅವರ ಮೌನ ಮತ್ತು ದೇಶಪಾಂಡೆ ಅವರ ಬಹಿರಂಗ ಹೇಳಿಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಈಗ ಅಂತಿಮ ಹಂತ ತಲುಪಿದೆ ಎಂಬ ಸಂದೇಶ ನೀಡಿದೆ.

ಲೋಕಭವನಕ್ಕೆ ಟೈಮ್ ಕೇಳಿದ ಸಿದ್ದರಾಮಯ್ಯ: ರಾಜೀನಾಮೆಗೆ ಕ್ಷಣಗಣನೆ, ಹೋಗುವ ಮುನ್ನ ‘ಜಾತಿಗಣತಿ’ ಅಸ್ತ್ರ!

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದು ಇದೀಗ ಕೇವಲ ಅಧಿಕೃತ ಪ್ರಕ್ರಿಯೆಯಷ್ಟೇ ಬಾಕಿ ಉಳಿದಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಮುಖ್ಯಮಂತ್ರಿ ಕಚೇರಿಯಿಂದ ಲೋಕಭವನ (ರಾಜಭವನ) ಭೇಟಿಗೆ ಸಮಯ ಕೋರಿ ಅಧಿಕೃತ ಮಾಹಿತಿ ರವಾನೆಯಾಗಿದೆ.

ಮುಖ್ಯಮಂತ್ರಿಗಳ ಸಚಿವಾಲಯದಿಂದ ಲೋಕಭವನಕ್ಕೆ ಸಂದೇಶ ಕಳುಹಿಸಲಾಗಿದ್ದು, ನಾಳೆ (ಗುರುವಾರ) ಮಧ್ಯಾಹ್ನ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದಾರೆ ಎಂದು ತಿಳಿಸಲಾಗಿದೆ. ಆದರೆ ಭೇಟಿಯ ನಿಖರ ಸಮಯವನ್ನು ಇನ್ನೂ ಬಹಿರಂಗಪಡಿಸಿಲ್ಲ. ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳ ಪ್ರಕಾರ, ಬೆಳಗ್ಗೆ ಜಂಟಿ ಸುದ್ದಿಗೋಷ್ಠಿ ಬಳಿಕ ಮಧ್ಯಾಹ್ನ ಸಿದ್ದರಾಮಯ್ಯ ಅವರು ರಾಜೀನಾಮೆ ಪತ್ರ ಸಲ್ಲಿಸುವ ಸಾಧ್ಯತೆ ಇದೆ.

ಈ ಬೆಳವಣಿಗೆಯ ನಡುವೆಯೇ ಸಚಿವ ಚಲುವರಾಯಸ್ವಾಮಿ ಸಿಎಂ ನಿವಾಸಕ್ಕೆ ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದ್ದಾರೆ.

ಇದರ ಜೊತೆಗೆ, ತಮ್ಮ ರಾಜೀನಾಮೆಗೆ ಮುನ್ನ ‘ಜಾತಿಗಣತಿ ವರದಿ’ಯನ್ನು ಅಧಿಕೃತವಾಗಿ ಸ್ವೀಕರಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ವಿಧಾನಸೌಧಕ್ಕೆ ಆಗಮಿಸಲಿರುವ ಅವರು, ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಸ್ವೀಕರಿಸಲಿದ್ದಾರೆ.

ಈ ಕುರಿತು ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್. ನಾಯ್ಕ್, “ವರದಿ ಒಂದು ತಿಂಗಳ ಹಿಂದೆಯೇ ಸಿದ್ಧವಾಗಿತ್ತು. ಸದಸ್ಯರ ಲಭ್ಯತೆ ಸಮಸ್ಯೆಯಿಂದ ಸಲ್ಲಿಕೆ ತಡವಾಯಿತು. ರಾಜಕೀಯ ಬೆಳವಣಿಗೆಗಳಿಗೂ ವರದಿ ಸಲ್ಲಿಕೆಗೆ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

4ರ ಹರೆಯದಲ್ಲೇ ನ್ಯಾಷನಲ್ ಅವಾರ್ಡ್: ಕಮಲ್ ಹಾಸನ್ ದಾಖಲೆ ಮುರಿದ ಪುಟ್ಟ ಹುಡುಗಿ ಯಾರು?

ಖ್ಯಾತ ನಟ ಕಮಲ್ ಹಾಸನ್ ಹೆಸರಿನಲ್ಲಿದ್ದ ಅತಿ ಕಿರಿಯ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಬಾಲನಟ ಎಂಬ ದಾಖಲೆಯನ್ನು ಇದೀಗ ಮರಾಠಿ ಬಾಲ ನಟಿ ತ್ರೀಶಾ ವಿವೇಕ್ ಥೋಸರ್ ಮುರಿದಿದ್ದಾಳೆ.

‘ನಾಳ್ 2’ ಸಿನಿಮಾದಲ್ಲಿನ ಅಭಿನಯಕ್ಕಾಗಿ ತ್ರೀಶಾ ಕೇವಲ ನಾಲ್ಕನೇ ವಯಸ್ಸಿನಲ್ಲೇ ಅತ್ಯುತ್ತಮ ಬಾಲ ನಟಿ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದಾಳೆ. ಈ ಮೂಲಕ 6ನೇ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಕಮಲ್ ಹಾಸನ್ ಅವರ 60 ವರ್ಷದ ಹಳೆಯ ದಾಖಲೆಯನ್ನು ಆಕೆ ಹಿಂದಿಕ್ಕಿದ್ದಾಳೆ.

ಇದೀಗ ತ್ರೀಶಾಳ ಪ್ರಶಸ್ತಿ ಸ್ವೀಕಾರದ ವಿಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪುಟ್ಟ ಬಾಲಕಿಯ ಆತ್ಮವಿಶ್ವಾಸಕ್ಕೆ ಫಿದಾ ಆಗಿದ್ದಾರೆ. ಸೀರೆ ಉಟ್ಟು ರಾಷ್ಟ್ರಪತಿಗಳ ಮುಂದೆ ಅತ್ಯಂತ ಧೈರ್ಯವಾಗಿ ನಡೆದು ಹೋಗಿ ಪ್ರಶಸ್ತಿ ಸ್ವೀಕರಿಸಿದ ದೃಶ್ಯ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

ತ್ರೀಶಾಳ ಸಾಧನೆಯನ್ನು ಕಮಲ್ ಹಾಸನ್ ಕೂಡ ವಿಶೇಷವಾಗಿ ಅಭಿನಂದಿಸಿದ್ದರು. ‘ನೀನು ನನ್ನ ದಾಖಲೆಯನ್ನು ಮುರಿದಿದ್ದೀಯ, ನಿನ್ನ ಪ್ರತಿಭೆ ಇನ್ನೂ ಎತ್ತರಕ್ಕೆ ಏರಲಿ’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ್ದ ತ್ರೀಶಾ, ‘ರಾಷ್ಟ್ರಪತಿಗಳು ಅಭಿನಂದಿಸಿದ್ದು ನನಗೆ ತುಂಬಾ ಖುಷಿಯಾಯಿತು’ ಎಂದು ಹೇಳಿದ್ದಳು.

ಹೈಕಮಾಂಡ್ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದ್ದು ನಿಜ: ಸಚಿವ ಸತೀಶ್ ಜಾರಕಿಹೊಳಿ

ನವದೆಹಲಿ: ರಾಜ್ಯ ಕಾಂಗ್ರೆಸ್ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಹೈಕಮಾಂಡ್ ನೇತೃತ್ವದಲ್ಲಿ ಮಹತ್ವದ ಚರ್ಚೆಗಳು ನಡೆದಿರುವುದು ಸತ್ಯ. ಆದರೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಮಾತನಾಡಿದ ಬಳಿಕವೇ ಎಲ್ಲವೂ ಸ್ಪಷ್ಟವಾಗಲಿದೆ. ಹೈಕಮಾಂಡ್ ಸಭೆಯಲ್ಲಿ ಏನು ಚರ್ಚೆಯಾಯಿತು, ಯಾವ ರೀತಿಯ ಸೂಚನೆ ನೀಡಲಾಗಿದೆ ಎಂಬುದರ ಬಗ್ಗೆ ನಮಗೆ ಇನ್ನೂ ಮಾಹಿತಿ ಇಲ್ಲ ಎಂದು ಹೇಳಿದರು.

ಗುರುವಾರ ನಡೆಯಲಿರುವ ಬ್ರೇಕ್‌ಫಾಸ್ಟ್ ಸಭೆಯ ಬಳಿಕ ಮುಖ್ಯಮಂತ್ರಿ ಈ ವಿಚಾರವಾಗಿ ಮಾತನಾಡಲಿದ್ದಾರೆ. ಬೆಂಗಳೂರಿನಲ್ಲಿ ಉಪಾಹಾರ ಕೂಟ ಆಯೋಜಿಸಲಾಗಿದೆ. ನಾವು ಕೂಡ ಅದರಲ್ಲಿ ಭಾಗವಹಿಸುತ್ತೇವೆ. ಅಲ್ಲಿ ಮುಖ್ಯಮಂತ್ರಿ ಏನು ಹೇಳುತ್ತಾರೆ ಎಂಬುದರ ಬಳಿಕವೇ ಮುಂದಿನ ಬೆಳವಣಿಗೆಗಳು ತಿಳಿಯಲಿವೆ ಎಂದು ಹೇಳಿದರು.

ಹೈಕಮಾಂಡ್ ನಮ್ಮ ಅಭಿಪ್ರಾಯ ಕೇಳಿದರೆ, ನಮ್ಮ ಬೇಡಿಕೆಗಳು ಮತ್ತು ಅಭಿಪ್ರಾಯಗಳನ್ನು ತಿಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ,

ಈ ಬಗ್ಗೆ ನನಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಇನ್ನೂ ನಿರ್ದಿಷ್ಟ ಚರ್ಚೆಯೂ ನಡೆದಿಲ್ಲ. ಕೆಲವು ಮಟ್ಟದ ಚರ್ಚೆಗಳು ನಡೆಯುತ್ತಿವೆ. ಆದರೆ ಹಿರಿಯ ನಾಯಕರು ಇದುವರೆಗೆ ವೈಯಕ್ತಿಕವಾಗಿ ನನ್ನೊಂದಿಗೆ ಮಾತನಾಡಿಲ್ಲ ಎಂದು ತಿಳಿಸಿದರು.

‘ಜನ ನಾಯಗನ್’ ರಿಲೀಸ್ ಫಿಕ್ಸ್?: ವಿಜಯ್ ಎಂಟ್ರಿಯಿಂದ ಸಮಂತಾ ಸಿನಿಮಾ ಡೇಂಜರ್‌ನಲ್ಲಿ!

ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆಯ ಕುರಿತು ಹೊಸ ಅಪ್‌ಡೇಟ್ ಹೊರಬಿದ್ದಿದ್ದು, ಸಿನಿಮಾ ಜೂನ್ 19ರಂದು ತೆರೆಗೆ ಬರಲಿದೆ ಎನ್ನುವ ಸುದ್ದಿ ಕಾಲಿವುಡ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ.

ರಾಜಕೀಯ ಪ್ರವೇಶದ ಬಳಿಕ ಚಿತ್ರರಂಗಕ್ಕೆ ವಿದಾಯ ಹೇಳಿದ್ದ ವಿಜಯ್, ‘ಜನ ನಾಯಗನ್’ ನನ್ನ ಅಂತಿಮ ಸಿನಿಮಾ ಎಂದು ಘೋಷಿಸಿದ್ದರು. ಆದರೆ ಹಲವು ಕಾರಣಗಳಿಂದ ಚಿತ್ರದ ಬಿಡುಗಡೆ ವಿಳಂಬವಾಗಿತ್ತು. ಇದೀಗ ಸೆನ್ಸಾರ್ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ನಿರ್ಮಾಪಕರು ಬಿಡುಗಡೆ ದಿನಾಂಕ ನಿಗದಿ ಮಾಡಿದ್ದಾರೆ ಎನ್ನಲಾಗಿದೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ವಿಜಯ್ ಸರ್ಕಾರ ಇತ್ತೀಚೆಗೆ ಹೊಸ ಸಿನಿಮಾಗಳಿಗೆ ಮೊದಲ ವಾರ ದಿನಕ್ಕೆ ಐದು ಪ್ರದರ್ಶನಗಳಿಗೆ ಅನುಮತಿ ನೀಡಿರುವುದು. ಇದರಿಂದ ‘ಜನ ನಾಯಗನ್’ಗೆ ಭರ್ಜರಿ ಓಪನಿಂಗ್ ಸಿಗುವ ನಿರೀಕ್ಷೆ ಇದೆ.

ಆದರೆ ಈ ಬೆಳವಣಿಗೆ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ ಬಾಕ್ಸ್ ಆಫೀಸ್‌ನಲ್ಲಿ ನೇರ ಪೈಪೋಟಿ ಎದುರಾಗಲಿದೆ. ಹೀಗಾಗಿ ಸಮಂತಾ ಚಿತ್ರದ ಬಿಡುಗಡೆ ದಿನಾಂಕ ಮತ್ತೆ ಬದಲಾಗಬಹುದು ಎನ್ನಲಾಗುತ್ತಿದೆ.

‘ಜನ ನಾಯಗನ್’ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿದ್ದು, ಎಚ್ ವಿನೋದ್ ನಿರ್ದೇಶಿಸಿದ್ದಾರೆ. ಪೂಜಾ ಹೆಗ್ಡೆ ನಾಯಕಿಯಾಗಿದ್ದು, ಬಾಬಿ ಡಿಯೋಲ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತ ನಿರ್ದೇಶನ ಮಾಡಿದ್ದಾರೆ.

‘ದೇವಿ‌ ಮಹಾತ್ಮೆ’ ಸಿನಿಮಾದ ಆಡಿಯೋ ರೈಟ್ಸ್ ಖರೀದಿಸಿದ ‘ಹೊಂಬಾಳೆ ಮ್ಯೂಸಿಕ್’: ಚಿತ್ರರಂಗದಲ್ಲಿ ಹೊಸ ಅಧ್ಯಾಯ ಆರಂಭ!

ಭಾರತೀಯ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ‘ಹೊಂಬಾಳೆ ಫಿಲ್ಮ್ಸ್’ ಈಗ ಮ್ಯೂಸಿಕ್ ಕ್ಷೇತ್ರಕ್ಕೂ ಅಧಿಕೃತವಾಗಿ ಕಾಲಿಟ್ಟಿದೆ. ‘ಹೊಂಬಾಳೆ ಮ್ಯೂಸಿಕ್’ ಮೂಲಕ ಸಿನಿಮಾಗಳ ಆಡಿಯೋ ಹಕ್ಕುಗಳನ್ನು ಖರೀದಿಸುವ ಕಾರ್ಯ ಆರಂಭಿಸಿರುವ ಸಂಸ್ಥೆ, ತನ್ನ ಮೊದಲ ಖರೀದಿಯಾಗಿ ‘ದೇವಿ ಮಹಾತ್ಮೆ’ ಸಿನಿಮಾದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.

‘ಕೆಜಿಎಫ್’, ‘ಕಾಂತಾರ’, ‘ಸಲಾರ್’ ಸೇರಿದಂತೆ ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಹೊಂಬಾಳೆ, ಈಗ ಸಂಗೀತ ಮಾರುಕಟ್ಟೆಯಲ್ಲೂ ತನ್ನ ಹಾಜರಾತಿಯನ್ನು ಗಟ್ಟಿಗೊಳಿಸುತ್ತಿದೆ. ‘ದೇವಿ ಮಹಾತ್ಮೆ’ ಚಿತ್ರದ ಆಡಿಯೋ ಹಕ್ಕು ಹೊಂಬಾಳೆ ಮ್ಯೂಸಿಕ್‌ಗೆ ಸೇರುವುದರಿಂದ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಬಲ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ನಾಗರಾಜ ಸೋಮಯಾಜಿ ನಿರ್ದೇಶನದ ಈ ಚಿತ್ರವು ಕಾಮಿಡಿ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಲಿಖಿತ್ ಪ್ರಸಾದ್ ಕೆ. ಶೆಟ್ಟಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಯುವಿಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ವಿದ್ಯಾ ಗಾಂಧಿರಾಜನ್ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಚಿತ್ರದ ತಾಂತ್ರಿಕ ವಿಭಾಗದಲ್ಲೂ ಬಲವಾದ ತಂಡ ಕೆಲಸ ಮಾಡುತ್ತಿದ್ದು, ಉಜ್ವಲ್ ಚಂದ್ರ ಅವರ ಸಂಕಲನ ಮತ್ತು ಎಸ್.ಕೆ. ರಾವ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಬರವಣಿಗೆಯಲ್ಲಿ ಅರವಿಂದ್ ಕುಪ್ಳೀಕರ್ ಸೇರಿದಂತೆ ಹಲವು ಲೇಖಕರು ಕೈಜೋಡಿಸಿದ್ದಾರೆ.

error: Content is protected !!