Home Blog

2.50 ಕೋಟಿ ಚಿನ್ನವಲ್ಲ, ಗೋಲ್ಡ್ ಪ್ಲೇಟೆಡ್: ಅಂಜನಾದ್ರಿ ದೇಣಿಗೆ ವಿವಾದಕ್ಕೆ ಹೊಸ ತಿರುವು

0

ಕೊಪ್ಪಳ: ಅಂಜನಾದ್ರಿ ಆಂಜನೇಯ ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಲಾಗಿದ್ದ 2.50 ಕೋಟಿ ರೂ. ಮೌಲ್ಯದ ಆಭರಣಗಳ ಬಗ್ಗೆ ನಡೆದ ವಿವಾದದ ನಡುವೆ ಉದ್ಯಮಿ ಮಹೇಶ ರೆಡ್ಡಿ ಖರೀದಿ ಬಿಲ್ ಸಲ್ಲಿಸಿದ್ದಾರೆ.

ಹೈದರಾಬಾದ್ ಮೂಲದ ಉದ್ಯಮಿ ಮಹೇಶ ರೆಡ್ಡಿ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸಮ್ಮುಖದಲ್ಲಿ ಪ್ರಭಾವಳಿ, ಚಕ್ರ ಮತ್ತು ಗದೆಯನ್ನು ದೇವಸ್ಥಾನಕ್ಕೆ ದಾನವಾಗಿ ನೀಡಿದ್ದರು. ಆರಂಭದಲ್ಲಿ ಇವು ಬಂಗಾರದ ಆಭರಣಗಳು ಎಂದು ಹೇಳಲಾಗಿತ್ತು.

ಆದರೆ ಜಿಲ್ಲಾಡಳಿತ ಪರಿಶೀಲನೆ ನಡೆಸಿದಾಗ ಆಭರಣಗಳು ಸಂಪೂರ್ಣ ಚಿನ್ನದದ್ದಲ್ಲ, ಬದಲಿಗೆ ಚಿನ್ನ ಲೇಪಿತ ತಾಮ್ರದಿಂದ ತಯಾರಾಗಿವೆ ಎಂಬುದು ಬಹಿರಂಗವಾಯಿತು. ಬಳಿಕ ದಾಖಲೆ ಸಲ್ಲಿಸುವಂತೆ ಉದ್ಯಮಿಗೆ ನೋಟಿಸ್ ನೀಡಲಾಗಿತ್ತು.

ಇದೀಗ ಬಿಡುಗಡೆ ಮಾಡಿರುವ ಬಿಲ್‌ನಲ್ಲಿ ಏಪ್ರಿಲ್ 28ರಂದು ಚಿನ್ನ ಖರೀದಿ ಮಾಡಿ ಮೇ 8ರಂದು ದೇವಸ್ಥಾನಕ್ಕೆ ದೇಣಿಗೆ ನೀಡಿರುವುದಾಗಿ ಮಹೇಶ ರೆಡ್ಡಿ ತಿಳಿಸಿದ್ದಾರೆ.

ಮುಜರಾಯಿ ಇಲಾಖೆ ನಿಯಮದಂತೆ ದೇವಾಲಯಕ್ಕೆ ದೇಣಿಗೆಯಾಗಿ ಬರುವ ಅಮೂಲ್ಯ ವಸ್ತುಗಳ ಮೌಲ್ಯಮಾಪನ ಮತ್ತು ದಾಖಲೆ ಕಡ್ಡಾಯವಾಗಿದ್ದು, ಸದ್ಯ ಅಧಿಕಾರಿಗಳು ಆಭರಣಗಳ ನಿಖರ ಮೌಲ್ಯ ಮತ್ತು ತೂಕ ಪರಿಶೀಲನೆ ನಡೆಸುತ್ತಿದ್ದಾರೆ.

ಸಕಲ ಸರ್ಕಾರಿ ಗೌರವಗಳೊಂದಿಗೆ ಸಚಿವ ಡಿ.ಸುಧಾಕರ್ ಅಂತ್ಯಕ್ರಿಯೆ

ಚಿತ್ರದುರ್ಗ: ಹಿರಿಯೂರು ಶಾಸಕ ಹಾಗೂ ಸಚಿವ ಡಿ.ಸುಧಾಕರ್ ಅವರಿಗೆ ಚಳ್ಳಕೆರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ನೀಡಲಾಯಿತು. ಜೈನ ಸಂಪ್ರದಾಯದಂತೆ ನಡೆದ ಅಂತ್ಯಕ್ರಿಯೆಯಲ್ಲಿ ಸಾವಿರಾರು ಅಭಿಮಾನಿಗಳು ಮತ್ತು ರಾಜಕೀಯ ನಾಯಕರು ಭಾಗವಹಿಸಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು ಹಾಗೂ ಶಾಸಕರು ಸುಧಾಕರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಪಾರ್ಥಿವ ಶರೀರದ ಮುಂದೆ ಡಿಕೆ ಶಿವಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದ ದೃಶ್ಯ ಗಮನ ಸೆಳೆಯಿತು.

ಸುಧಾಕರ್ ಸ್ಟೇಡಿಯಂನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದ ಪಾರ್ಥಿವ ಶರೀರಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಗೌರವ ಸಲ್ಲಿಸಿದರು. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಜೈನ ಮುಕ್ತಿಧಾಮಕ್ಕೆ ಕರೆದೊಯ್ಯಲಾಯಿತು.

ಚಿತಾಗಾರದಲ್ಲಿ ಬಂದೂಕು ಪಡೆ ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿತು. ರಾಷ್ಟ್ರಧ್ವಜವನ್ನು ಸಿಎಂ ಸಿದ್ದರಾಮಯ್ಯ ಅವರು ಕುಟುಂಬಕ್ಕೆ ಹಸ್ತಾಂತರಿಸಿದರು. ಪುತ್ರ ಸುಹಾಸ್ ಅಂತಿಮ ವಿಧಿ ನೆರವೇರಿಸಿ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.

ಮೊಣಕಾಲು ಶಸ್ತ್ರಚಿಕಿತ್ಸೆಯ ಬಳಿಕ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ 65 ವರ್ಷದ ಡಿ.ಸುಧಾಕರ್, ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೇ 10ರಂದು ನಿಧನರಾಗಿದ್ದರು.

ಚಿನ್ನ, ಇಂಧನ ಬೆಲೆ ಏರಿಕೆ ಬಗ್ಗೆ ಪ್ರಧಾನಿ ಯಾಕೆ ಮಾತನಾಡುತ್ತಿಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು: ಚಿನ್ನ ಖರೀದಿ ಮಾಡಬೇಡಿ, ಇಂಧನ ಬಳಕೆ ಕಡಿಮೆ ಮಾಡಿ ಎಂದು ಸಲಹೆ ನೀಡುತ್ತಿರುವ ಪ್ರಧಾನ ಮಂತ್ರಿಗಳು, ಇವುಗಳ ಬೆಲೆ ಏರಿಕೆಯಾಗಿದ್ದು ಯಾಕೆ? ಯಾರಿಂದ ಬೆಲೆ ಏರಿಕೆಯಾಗಿದೆ ಎಂಬುದನ್ನು ವಿವರಿಸಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದರು. ಬೆಂಗಳೂರಿನ ಸರ್ಕಾರಿ ನಿವಾಸ ಕುಮಾರಪಾರ್ಕ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೇಶದ ಜನರಿಗೆ ಕೊಟ್ಟಿರುವ ಸಲಹೆ ಬಗ್ಗೆ ಕೇಳಿದಾಗ, “ಮದುವೆ, ಮುಂಜಿ ಮಾಡುವವರು ಚಿನ್ನ ತೆಗೆದುಕೊಳ್ಳಬೇಡಿ ಎಂದು ಹೇಳಲು ಸಾಧ್ಯವೇ? ಅವರು ಸಲಹೆಗಳನ್ನು ನೀಡುತ್ತಾರೆ. ಹಿಂದೆ ಕೋವಿಡ್ ಬಂದಾಗ ದೀಪ ಹಚ್ಚಿಸಿ, ಚಪ್ಪಾಳೆ ತಟ್ಟಿಸಿದರು. ಅದರಿಂದ ಸಮಸ್ಯೆ ನಿಂತು ಹೋಯಿತಾ? ಮದುವೆಯಾದ ಮಹಿಳೆ ಚಿನ್ನದ ತಾಳಿ, ಸರ ಹಾಕಿಕೊಳ್ಳುವುದುನ್ನು ಬೇಡ ಎನ್ನಲು ಸಾಧ್ಯವೇ? ಅವರ ಬದುಕಿನಲ್ಲಿ ಕಷ್ಟವೋ ಸುಖವೋ,

ಸಾಲ ಮಾಡಿ ಚಿನ್ನ ಖರೀದಿ ಮಾಡುತ್ತಾರೆ. ಎಲ್ಲರನ್ನು ಸಾರ್ವಜನಿಕ ಸಾರಿಗೆಯಲ್ಲೇ ಓಡಾಡಿ ಎನ್ನುವುದಾದರೆ, ಪ್ರಧಾನ ಮಂತ್ರಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವಂತೆ ಸೂಚಿಸಲಿ. ಅವರ ಕೇಂದ್ರ ಸಚಿವರಿಗೆ ತಾಕೀತು ಮಾಡಲಿ. ನಾವು ಮೊದಲು ನಡೆದುಕೊಂಡು ನಂತರ ಸಾಮಾನ್ಯ ಜನಕ್ಕೆ ಸಂದೇಶ ನೀಡಬೇಕು” ಎಂದರು.

ಬಿಜೆಪಿ ಶಾಸಕರು, ನಾಯಕರು, ಕಾರ್ಯಕರ್ತರಿಂದ ತ್ಯಾಗ ಪ್ರಾರಂಭವಾಗಲಿ

ಜಗತ್ತಿನ ಪರಿಸ್ಥಿತಿ ಸರಿಯಿಲ್ಲ ಕೆಲವೊಮ್ಮೆ ತ್ಯಾಗಕ್ಕೂ ಸಿದ್ಧವಾಗಿರಬೇಕು ಎಂಬ ಕಾರಣಕ್ಕೆ ಸಂದೇಶ ನೀಡಿದ್ದಾರೆ ಎಂದಾಗ, “ಮೊದಲು ತ್ಯಾಗವನ್ನು ಮಂತ್ರಿಗಳು, ಕೇಂದ್ರ ಸರ್ಕಾರದ ಸಚಿವರು, ಅಧಿಕಾರಿಗಳು, ಬಿಜೆಪಿ ಆಡಳಿತ ರಾಜ್ಯಗಳಲ್ಲಿರುವ ಅಧಿಕಾರಿಗಳಿಂದ, ಅವರ ಪಕ್ಷದ ಶಾಸಕರು, ನಾಯಕರು ಹಾಗೂ ಕಾರ್ಯಕರ್ತರಿಂದ ತ್ಯಾಗ ಆರಂಭವಾಗಲಿ. ನಂತರ ಬೇರೆಯವರಿಗೆ ತ್ಯಾಗದ ಸಲಹೆ ನೀಡಲಿ” ಎಂದು ತಿರುಗೇಟು ನೀಡಿದರು.

ಬೆಂಗಳೂರಿಗೆ ಗ್ಯಾರಂಟಿ ಯೋಜನೆ; ಮೇ 13ರಂದು ಪ್ರಕಟ

ನಿನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ಜಿಬಿಎ ಸಭೆ ಮಾಡಿದ್ದೀರಿ ಎಂದು ಕೇಳಿದಾಗ, “ಸುರ್ಜೆವಾಲ ಅವರ ಜೊತೆ ರಾಜಕೀಯವಾಗಿ ಸಭೆ ಮಾಡಿದ್ದೇವೆ. ಅಧಿಕಾರಿಗಳನ್ನು ಕರೆದು ಕೆಲವು ಸೂಚನೆ ನೀಡಿದ್ದು, ಬೆಂಗಳೂರು ನಗರಕ್ಕೆ ದೊಡ್ಡ ಗ್ಯಾರಂಟಿಗಳನ್ನು ನೀಡುತ್ತಿದ್ದೇವೆ, ಈ ಬಗ್ಗೆ ಮೇ 13ರಂದು ಮಾಹಿತಿ ನೀಡುತ್ತೇವೆ” ಎಂದು ತಿಳಿಸಿದರು.

ಸಾಮಾನ್ಯರಿಗೆ ಮತ್ತೊಂದು ಬೆಲೆ ಶಾಕ್; ರಾಜ್ಯದಲ್ಲಿ ಅಡುಗೆ ಎಣ್ಣೆ ದರ ಲೀಟರ್ʼಗೆ 3 ರೂ. ಏರಿಕೆ

ಬೆಂಗಳೂರು: ರಾಜ್ಯದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಲೇ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಇದೀಗ ಅಡುಗೆ ಎಣ್ಣೆ ದರ ಏರಿಕೆ ಮತ್ತೊಂದು ಹೊರೆ ತಂದಿದೆ. ಕಳೆದ ಕೆಲ ದಿನಗಳಿಂದ ಸ್ಥಿರವಾಗಿದ್ದ ಅಡುಗೆ ಎಣ್ಣೆ ಬೆಲೆ ಇದೀಗ ಲೀಟರ್‌ಗೆ 3 ರೂಪಾಯಿ ಹೆಚ್ಚಳವಾಗಿದೆ.

ಮಾರುಕಟ್ಟೆಯಲ್ಲಿ ಈವರೆಗೆ ಪ್ರತಿ ಲೀಟರ್ ಅಡುಗೆ ಎಣ್ಣೆ 138 ರೂಪಾಯಿಗೆ ಮಾರಾಟವಾಗುತ್ತಿದ್ದು, ಸೋಮವಾರದ ವಹಿವಾಟಿನಲ್ಲಿ ದರ 141 ರೂಪಾಯಿಗೆ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತಗಳು ಹಾಗೂ ಆಮದು ವೆಚ್ಚ ಹೆಚ್ಚಳವೇ ಈ ದರ ಏರಿಕೆಗೆ ಪ್ರಮುಖ ಕಾರಣವೆಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಖರ್ಚಿನ ಲೆಕ್ಕಾಚಾರದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದೆ. ಜೊತೆಗೆ, ಹೋಟೆಲ್ ಮತ್ತು ಆಹಾರೋದ್ಯಮಕ್ಕೂ ಹೆಚ್ಚುವರಿ ವೆಚ್ಚದ ಹೊರೆ ಬೀಳುವ ಆತಂಕ ಎದುರಾಗಿದೆ.

ಭಾರತವು ಅಡುಗೆ ಎಣ್ಣೆಗಾಗಿ ಬಹುಪಾಲು ವಿದೇಶಿ ಆಮದುಗಳ ಮೇಲೆ ಅವಲಂಬಿತವಾಗಿರುವುದರಿಂದ, ತೈಲ ಉತ್ಪಾದಕ ರಾಷ್ಟ್ರಗಳ ನಡುವಿನ ರಾಜಕೀಯ ಬೆಳವಣಿಗೆಗಳು ಹಾಗೂ ಜಾಗತಿಕ ವ್ಯಾಪಾರ ಪರಿಸ್ಥಿತಿಗಳ ಬದಲಾವಣೆಗಳು ದೇಶೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತಿವೆ.

ತಜ್ಞರ ಅಭಿಪ್ರಾಯದಂತೆ, ಅಡುಗೆ ಎಣ್ಣೆಯ ಮಿತ ಬಳಕೆ ಆರೋಗ್ಯದ ದೃಷ್ಟಿಯಿಂದಲೂ ಲಾಭಕರವಾಗಿದ್ದು, ದೇಶದ ವಿದೇಶಿ ವಿನಿಮಯದ ಮೇಲಿನ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗಬಹುದು.

ಒಟ್ಟಿನಲ್ಲಿ, ಬೆಲೆ ಏರಿಕೆಯು ಜನಸಾಮಾನ್ಯರಿಗೆ ಮತ್ತಷ್ಟು ಆರ್ಥಿಕ ಒತ್ತಡ ತಂದಿದ್ದರೂ, ಮಿತ ಬಳಕೆಯತ್ತ ಜನರು ಗಮನ ಹರಿಸುವುದು ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಸಕಾರಾತ್ಮಕ ಬೆಳವಣಿಗೆಯಾಗಿದೆ.

ಕಂಟೇನರ್‌ಗೆ ಕಾರು ಡಿಕ್ಕಿ ; ತೆಲುಗು ನಟ ಭರತ್ ಕಾಂತ್ ದಾರುಣ ಅಂತ್ಯ

ಹೈದರಾಬಾದ್: ಹೊರ ವರ್ತುಲ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ತೆಲುಗು ನಟ ಭರತ್ ಕಾಂತ್ ಮತ್ತು ಅವರ ಸ್ನೇಹಿತ ಸಾಯಿ ತ್ರಿಲೋಕ್ ಮೃತಪಟ್ಟ ಘಟನೆ ಆದಿಬಟ್ಲಾ ಬಳಿ ನಡೆದಿದೆ.

ಭರತ್ ಕಾಂತ್ ಕಾರು ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಲಾರಿಯ ಹಿಂದಿನ ಚಕ್ರಗಳೂ ಕಳಚಿ ಬಿದ್ದಿದ್ದು, ಘಟನೆ ಸ್ಥಳದಲ್ಲಿ ಭೀಕರ ದೃಶ್ಯ ನಿರ್ಮಾಣವಾಗಿತ್ತು. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ಆರಂಭಿಸಿದ್ದಾರೆ.

31 ವರ್ಷದ ಭರತ್ ಕಾಂತ್ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯ ಡಿಜಿಟಲ್ ಕ್ರಿಯೇಟರ್ ಆಗಿದ್ದರು. ಜೊತೆಗೆ ತೆಲುಗು ಸಿನಿಮಾಗಳು ಮತ್ತು ‘ಟೆನೆಂಟ್’, ‘ಗ್ರಾಮಮ್’ ಸೇರಿದಂತೆ ಕಿರುಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದರು.

ಪ್ರಮಾಣವಚನದ ಬಳಿಕ ಜೀವರಾಜ್‌ಗೆ ಶಾಕ್! ರಾಜೇಗೌಡಗೆ ಮತ್ತೆ ಶಾಸಕ ಸ್ಥಾನ

ನವದೆಹಲಿ: ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆ ವಿವಾದದಲ್ಲಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದ್ದು, ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರಿಗೆ ಮತ್ತೆ ಶಾಸಕ ಸ್ಥಾನ ಉಳಿದಿದೆ.

ಅಂಚೆ ಮತಗಳ ಮರು ಎಣಿಕೆಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜೇಗೌಡ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ.

ಮರು ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಗೆಲುವು ಸಾಧಿಸಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಸುಪ್ರೀಂಕೋರ್ಟ್ ಆದೇಶದಿಂದ ಅವರಿಗೆ ತಾತ್ಕಾಲಿಕ ಹಿನ್ನಡೆ ಉಂಟಾಗಿದೆ.

ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿರುವ ಸುಪ್ರೀಂಕೋರ್ಟ್, ಮರು ಎಣಿಕೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 21ಕ್ಕೆ ನಿಗದಿ ಮಾಡಿದೆ.

ಈ ಆದೇಶದೊಂದಿಗೆ ಕಾಂಗ್ರೆಸ್ ಶಿಬಿರದಲ್ಲಿ ಸಂಭ್ರಮ ಮನೆಮಾಡಿದ್ದು, ಶೃಂಗೇರಿ ಕ್ಷೇತ್ರದ ರಾಜಕೀಯ ಮತ್ತೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ವಿತರಣೆಗೆ ಹೊಸ ನಿಯಮ; ಬಾಟಲಿ, ಕ್ಯಾನ್ʼನಲ್ಲಿ ಇಂಧನ ಮಾರಾಟ ನಿಷೇಧ

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಬದಲಾವಣೆಗಳು ಹಾಗೂ ರಾಜ್ಯದಲ್ಲಿ ಇಂಧನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ, ನಾಗರಿಕ ಸರಬರಾಜು ಮತ್ತು ಆಹಾರ ಇಲಾಖೆ ಪೆಟ್ರೋಲ್ ಹಾಗೂ ಡೀಸೆಲ್ ವಿತರಣೆಗೆ ಸಂಬಂಧಿಸಿದಂತೆ ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಗ್ರಾಹಕರ ಹಿತಾಸಕ್ತಿ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯದ ಎಲ್ಲಾ ಇಂಧನ ವಿತರಣಾ ಕೇಂದ್ರಗಳಿಗೆ ಕಡ್ಡಾಯ ಸೂಚನೆಗಳನ್ನು ನೀಡಲಾಗಿದೆ. ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ನಿಯಮ ಉಲ್ಲಂಘಿಸುವ ಪೆಟ್ರೋಲ್ ಬಂಕ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ಮಾರ್ಗಸೂಚಿಯ ಪ್ರಮುಖ ಅಂಶಗಳು ಹೀಗಿವೆ:

ಪೆಟ್ರೋಲಿಯಂ ನಿಯಮಗಳು–2002ರ ಪ್ರಕಾರ, ಇಂಧನವನ್ನು ವಾಹನಗಳ ಟ್ಯಾಂಕ್‌ಗಳಿಗೆ ಅಥವಾ ಅಧಿಕೃತ ಅನುಮೋದಿತ ಕಂಟೇನರ್‌ಗಳಿಗೆ ಮಾತ್ರ ಪೂರೈಸಬೇಕು. ಇದಕ್ಕೂ ಗರಿಷ್ಠ 200 ಲೀಟರ್ ಮಿತಿಯನ್ನು ನಿಗದಿಪಡಿಸಲಾಗಿದೆ.

ಸುರಕ್ಷತೆಯ ದೃಷ್ಟಿಯಿಂದ ಬಾಟಲಿ, ಕ್ಯಾನ್ ಅಥವಾ ಇತರ ಅನಧಿಕೃತ ಪಾತ್ರೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಇಂಧನ ವಿತರಣಾ ಕೇಂದ್ರಗಳು ದೊಡ್ಡ ಪ್ರಮಾಣದಲ್ಲಿ ಇಂಧನ ಪೂರೈಕೆ ಮಾಡುವಂತಿಲ್ಲ. ಬಲ್ಕ್ ಪ್ರಮಾಣದ ಪೂರೈಕೆಯನ್ನು ಕೇವಲ ‘ನೇರ ಮಾರಾಟ ಕಾರ್ಯವಿಧಾನ’ದ ಮೂಲಕವೇ ನಡೆಸಬೇಕು. ನಿಯಮ ಉಲ್ಲಂಘಿಸಿ ಬಲ್ಕ್ ಮಾರಾಟ ನಡೆಸಿದರೆ ಪರವಾನಗಿ ರದ್ದುಪಡಿಸುವಂತಹ ಕಠಿಣ ಕ್ರಮ ಎದುರಿಸಬೇಕಾಗಬಹುದು.

ಕೃಷಿ ಚಟುವಟಿಕೆಗಳು ಹಾಗೂ ಜಲಚರ ಸಾಕಾಣಿಕೆಗೆ ಅಗತ್ಯವಿರುವ ಡೀಸೆಲ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಲಾಗಿದೆ. ರೈತರ ಬೇಡಿಕೆಯನ್ನು ಪರಿಶೀಲಿಸಿ ಸಮರ್ಪಕವಾಗಿ ಇಂಧನ ವಿತರಣೆ ಖಚಿತಪಡಿಸಿಕೊಳ್ಳುವಂತೆ ನಿರ್ದೇಶಿಸಲಾಗಿದೆ.

ಇದೇ ವೇಳೆ, ಬಲ್ಕ್ ಕಾರ್ಯಾಚರಣೆಗಳಲ್ಲಿ ಯಾವುದೇ ಅವ್ಯವಹಾರ ಕಂಡುಬಂದರೆ ಅದನ್ನು ಸುರಕ್ಷತೆ ಹಾಗೂ ಲೈಸೆನ್ಸಿಂಗ್ ನಿಯಮಗಳ ಗಂಭೀರ ಉಲ್ಲಂಘನೆ ಎಂದು ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.

278 ಪ್ರಯಾಣಿಕರಿದ್ದ ಟರ್ಕಿಶ್ ಏರ್ಲೈನ್ಸ್ ವಿಮಾನದಲ್ಲಿ ಬೆಂಕಿ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ

ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಟರ್ಕಿಶ್ ಏರ್ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಇಸ್ತಾಂಬುಲ್‌ನಿಂದ ಕಠ್ಮಂಡುವಿಗೆ ಆಗಮಿಸಿದ್ದ ಟರ್ಕಿಶ್ ಏರ್ಲೈನ್ಸ್ ವಿಮಾನ ಇಂದು ಮುಂಜಾನೆ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ 11 ಸಿಬ್ಬಂದಿ ಸೇರಿ ಒಟ್ಟು 278 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.

ಲ್ಯಾಂಡಿಂಗ್ ವೇಳೆ ವಿಮಾನದ ಬಲಭಾಗದ ಟೈರ್‌ಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ವಿಮಾನ ನಿಲ್ದಾಣದ ಸಿಬ್ಬಂದಿ ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಂಡರು. ತಕ್ಷಣವೇ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿಸಲಾಯಿತು.

ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.

ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಟರ್ಕಿಶ್ ಏರ್ಲೈನ್ಸ್ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಗಮನಾರ್ಹವಾಗಿ, 2015ರಲ್ಲಿ ಇದೇ ಟರ್ಕಿಶ್ ಏರ್ಲೈನ್ಸ್‌ಗೆ ಸೇರಿದ ಮತ್ತೊಂದು ವಿಮಾನ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿ ಉರುಳಿ ಬಿದ್ದಿತ್ತು. ಆ ಅವಘಡದ ಪರಿಣಾಮ ವಿಮಾನ ನಿಲ್ದಾಣ ನಾಲ್ಕು ದಿನಗಳ ಕಾಲ ಬಂದ್ ಆಗಿದ್ದ ಘಟನೆ ಮತ್ತೆ ನೆನಪಾಗಿದೆ.

ಸಿನಿಮಾದಲ್ಲಿ ಕೋಟಿ ಕೋಟಿ.. ಸಿಎಂ ಆಗಿ ಲಕ್ಷಗಳಲ್ಲಿ ಸಂಬಳ: ವಿಜಯ್‌ಗೆ ಸಿಗೋ ಪವರ್‌ಫುಲ್ ಸೌಲಭ್ಯಗಳು ಯಾವೆಲ್ಲಾ?

ತಮಿಳುನಾಡಿನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿರುವ ದಳಪತಿ ವಿಜಯ್, ಚಿತ್ರರಂಗದ ಭಾರೀ ಸಂಭಾವನೆ ಬಿಟ್ಟು ಈಗ ಆಡಳಿತದ ಜವಾಬ್ದಾರಿ ಹೊತ್ತಿದ್ದಾರೆ. ಸಿಎಂ ಆದ ಬಳಿಕ ಅವರಿಗೆ ಸಿಗುವ ಸಂಬಳ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಹೊರಬಿದ್ದಿದೆ.

ತಮಿಳುನಾಡು ಮುಖ್ಯಮಂತ್ರಿಗೆ ಮೂಲ ವೇತನವಾಗಿ ತಿಂಗಳಿಗೆ 2,05,000 ರೂಪಾಯಿ ಸಿಗುತ್ತದೆ. ವಿವಿಧ ಭತ್ಯೆಗಳನ್ನು ಸೇರಿಸಿದರೆ ಒಟ್ಟು ಸಂಬಳ ಸುಮಾರು 2.85 ಲಕ್ಷ ರೂಪಾಯಿಗೆ ಏರಲಿದೆ. ವಾರ್ಷಿಕವಾಗಿ ಸುಮಾರು 34.20 ಲಕ್ಷ ರೂಪಾಯಿ ಆದಾಯ ಸಿಗಲಿದೆ.

ಒಂದು ಸಿನಿಮಾಕ್ಕೆ 100ರಿಂದ 200 ಕೋಟಿ ರೂಪಾಯಿ ವರೆಗೆ ಸಂಭಾವನೆ ಪಡೆಯುತ್ತಿದ್ದ ವಿಜಯ್, ಇದೀಗ ಸರ್ಕಾರಿ ಹುದ್ದೆಯ ಸಂಬಳಕ್ಕೆ ಬದಲಾಗಿರುವುದು ಅಭಿಮಾನಿಗಳಲ್ಲಿ ಚರ್ಚೆ ಹುಟ್ಟುಹಾಕಿದೆ.

ಸಿಎಂ ಆಗಿರುವ ವಿಜಯ್ ಅವರಿಗೆ ಸರ್ಕಾರಿ ಬಂಗಲೆ, ಕ್ಯಾಂಪ್ ಆಫೀಸ್, ಬುಲೆಟ್ ಪ್ರೂಫ್ ವಾಹನ, ಬೆಂಗಾವಲು ಪಡೆ ಹಾಗೂ ಅಧಿಕೃತ ಪ್ರವಾಸ ವೆಚ್ಚ ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿವೆ. ಜೊತೆಗೆ Z+ ಭದ್ರತೆಯಡಿ 24 ಗಂಟೆಗಳ ಪೊಲೀಸ್ ಕಾವಲು ಕೂಡ ಇರಲಿದೆ.

ನಿವೃತ್ತಿಯ ನಂತರವೂ ಪಿಂಚಣಿ, ವೈದ್ಯಕೀಯ ಸೌಲಭ್ಯ, ರೈಲು ಪ್ರಯಾಣ ಹಾಗೂ ಕಚೇರಿ ಸಿಬ್ಬಂದಿ ಸೌಲಭ್ಯಗಳು ಮುಂದುವರಿಯಲಿದ್ದು, ಸಿನಿಮಾ ಸೂಪರ್‌ಸ್ಟಾರ್ ಇದೀಗ ಪವರ್‌ಫುಲ್ ರಾಜಕೀಯ ನಾಯಕರಾಗಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಮೇ 13ಕ್ಕೆ ಬೆಂಗಳೂರು ಜನತೆಗೆ ಬಿಗ್ ಗಿಫ್ಟ್ ನೀಡಲಿದ್ದೇವೆ: ಡಿಕೆ ಶಿವಕುಮಾರ್

ಬೆಂಗಳೂರು: ಮೇ 13ರಂದು ಬೆಂಗಳೂರು ಜನತೆಗೆ ಮಹತ್ವದ ‘ಬಿಗ್ ಗಿಫ್ಟ್’ ಘೋಷಣೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆ ದಿನವೇ ಜನತೆಗೆ ವಿಶೇಷ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

“ಸುರ್ಜೇವಾಲ ಅವರೊಂದಿಗೆ ರಾಜಕೀಯ ವಿಚಾರವಾಗಿ ಸಭೆ ನಡೆಸಿದ್ದೇವೆ. ಈಗಾಗಲೇ ಅಧಿಕಾರಿಗಳನ್ನು ಕರೆದು ಅಗತ್ಯ ಸೂಚನೆಗಳನ್ನು ನೀಡಿದ್ದೇನೆ. ಮೇ 13ರಂದು ಬೆಂಗಳೂರಿನ ಜನತೆಗೆ ದೊಡ್ಡ ಗ್ಯಾರಂಟಿ ಹಾಗೂ ವಿಶೇಷ ಗಿಫ್ಟ್ ನೀಡಲಿದ್ದೇವೆ. ಅದರ ಸಂಪೂರ್ಣ ವಿವರವನ್ನು ಅಂದೇ ಬಹಿರಂಗಪಡಿಸುತ್ತೇನೆ,” ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ದೇಶದ ಜನತೆಗೆ ನೀಡಿದ ಸಲಹೆಗಳ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮೋದಿ ಅವರು ಜನರಿಗೆ ಪೆಟ್ರೋಲ್ ಬಳಕೆ ಕಡಿಮೆ ಮಾಡಿ ಎನ್ನುತ್ತಾರೆ. ಆದರೆ ಪೆಟ್ರೋಲ್ ದರ ಏಕೆ ಏರಿಕೆಯಾಗಿದೆ ಎಂಬುದನ್ನು ಹೇಳುವುದಿಲ್ಲ. ಚಿನ್ನದ ಬೆಲೆ ಏರಿಕೆಯ ಬಗ್ಗೆ ಸಹ ಸ್ಪಷ್ಟನೆ ನೀಡುತ್ತಿಲ್ಲ. ಜನರಿಗೆ ತೊಂದರೆ ಆಗುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಪ್ರಧಾನಿ ಅವರೇ ವಿವರಿಸಬೇಕು ಎಂದು ಪ್ರಶ್ನಿಸಿದರು.

ಚಿನ್ನ ಖರೀದಿಸಬೇಡಿ ಎನ್ನುವ ಸಲಹೆ ಪ್ರಾಯೋಗಿಕವಲ್ಲ ಎಂದು ಟೀಕಿಸಿದ ಅವರು, ಮದುವೆ, ಶುಭಕಾರ್ಯಗಳಿಗೆ ಚಿನ್ನ ಖರೀದಿ ಮಾಡಲೇಬೇಕು. ಅದನ್ನು ನಿಲ್ಲಿಸೋಕೆ ಸಾಧ್ಯವೇ? ಜನರಿಗೆ ಸಲಹೆ ಕೊಡುವುದು ಸುಲಭ. ಆದರೆ ಅದು ವಾಸ್ತವಿಕವಾಗಿರಬೇಕು,” ಎಂದು ಹೇಳಿದರು.

ಕೊರೋನಾ ಅವಧಿಯಲ್ಲಿನ ಪ್ರಧಾನಿ ಮನವಿಯನ್ನು ಉಲ್ಲೇಖಿಸಿದ ಡಿಕೆಶಿ, “ಆಗ ದೀಪ ಹಚ್ಚಿ ಎಂದರು, ದೀಪ ಹಚ್ಚಿದ್ದೇವೆ. ಚಪ್ಪಾಳೆ ತಟ್ಟಿ ಎಂದರು, ತಟ್ಟಿದ್ದೇವೆ. ಆದರೆ ಅದರಿಂದ ಸಮಸ್ಯೆ ನಿಂತಿತೇ? ಯಾವುದೇ ಸಮಸ್ಯೆಗೆ ಪ್ರಾಯೋಗಿಕ ಪರಿಹಾರ ಬೇಕು,” ಎಂದು ಅಭಿಪ್ರಾಯಪಟ್ಟರು.

error: Content is protected !!