ಬೆಂಗಳೂರು: ಮಗಳು ತನ್ನ ತಾಯಿಯನ್ನು ನೋಡಿಕೊಳ್ಳುವ ಕಾನೂನು, ನೈತಿಕ ಹಾಗೂ ಸಾಮಾಜಿಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಮಗಳ ಹೆಸರಿಗೆ ವರ್ಗಾಯಿಸಲಾಗಿದ್ದ ತಾಯಿಯ ಆಸ್ತಿಯನ್ನು ಮರುಹಿಂತಿರುಗಿಸಲು ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ದಾನಪತ್ರದಲ್ಲಿ ತಾಯಿಯನ್ನು ನೋಡಿಕೊಳ್ಳಬೇಕೆಂಬ ಷರತ್ತು ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ, ಆಸ್ತಿ ವರ್ಗಾವಣೆಯ ಹಿಂದೆ ಅಂತಹ ನಂಬಿಕೆ ಅಡಕವಾಗಿರುತ್ತದೆ ಎಂಬುದು ಕಾನೂನಿನ ಆಶಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮಗಳು ಆರ್. ಪವಿತ್ರಾ ಅವರಿಗೆ ಸ್ವಂತ ಮನೆ ಇದ್ದರೂ, ವೃದ್ಧ ತಾಯಿ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿರುವುದು ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಪೀಠ ಹೇಳಿದೆ. ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯ್ದೆಯ ಉದ್ದೇಶವೇ ಅಸಹಾಯಕ ಪೋಷಕರನ್ನು ರಕ್ಷಿಸುವುದಾಗಿದ್ದು, ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಕಾಯ್ದೆಯ ಆಶಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ ಹಿರಿಯ ನಾಗರಿಕರನ್ನು ಬಡತನ ಮತ್ತು ನಿರ್ಲಕ್ಷ್ಯದಿಂದ ರಕ್ಷಿಸಲು ರೂಪುಗೊಂಡ ಪ್ರಯೋಜನಕಾರಿ ಕಾನೂನು ಎಂದು ಪೀಠ ಉಲ್ಲೇಖಿಸಿದೆ. ಪ್ರತಿಯೊಂದು ಪ್ರಕರಣದಲ್ಲೂ ಕಾಯ್ದೆಯ ಆಶಯವನ್ನು ಕಡೆಗಣಿಸಿದರೆ ಶಾಸನಬದ್ಧ ರಕ್ಷಣೆಯ ಉದ್ದೇಶವೇ ವಿಫಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದಲ್ಲಿ ಹಿರಿಯ ನಾಗರಿಕರಾದ ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕಿ ಜಿ. ಹೇಮಾ ಅವರು ತಮ್ಮ ಸ್ವಂತ ಸಂಪಾದನೆಯ ಆಸ್ತಿಗಳನ್ನು ಮಗ ಆರ್. ವೇಣುಗೋಪಾಲ್ ಮತ್ತು ಮಗಳು ಆರ್. ಪವಿತ್ರಾ ಹೆಸರಿಗೆ ದಾನಪತ್ರದ ಮೂಲಕ ವರ್ಗಾಯಿಸಿದ್ದರು. ವೃದ್ಧಾಪ್ಯದಲ್ಲಿ ಮಕ್ಕಳು ಆಸರೆಯಾಗುತ್ತಾರೆ ಹಾಗೂ ಆಸ್ತಿಯ ಬಾಡಿಗೆಯಿಂದ ಜೀವನ ಸಾಗಿಸಲು ನೆರವಾಗುತ್ತಾರೆ ಎಂಬ ನಂಬಿಕೆಯಿಂದ ಈ ನಿರ್ಧಾರ ಕೈಗೊಂಡಿದ್ದರು.
ಆದರೆ ನಂತರ ಮಕ್ಕಳು ಮನೆಯ ಬಾಡಿಗೆ ಹಣ ವಸೂಲಿ ಮಾಡುತ್ತಿದ್ದರೂ, ತಾಯಿಯ ಆರೈಕೆ ಮತ್ತು ಅಗತ್ಯ ಸೌಲಭ್ಯಗಳ ಕಡೆ ಗಮನಹರಿಸಿರಲಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ಬೇಸತ್ತ ಜಿ. ಹೇಮಾ ಅವರು ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿ, ಮಕ್ಕಳ ಹೆಸರಿಗೆ ಮಾಡಿದ್ದ ದಾನಪತ್ರವನ್ನು ರದ್ದುಪಡಿಸುವಂತೆ ಮನವಿ ಮಾಡಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ ಆಸ್ತಿ ವರ್ಗಾವಣೆಯನ್ನು ರದ್ದುಪಡಿಸಿ, ಆಸ್ತಿಯನ್ನು ಮರುಕಳಿಸಿ ತಾಯಿ ಹೆಸರಿಗೆ ನೋಂದಣಿ ಮಾಡಿಸಿತ್ತು. ಬಳಿಕ ಮಗಳು ಸಲ್ಲಿಸಿದ್ದ ಮೇಲ್ಮನವಿಯನ್ನೂ ಉಪವಿಭಾಗಾಧಿಕಾರಿಗಳು ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಮಗಳಿಗೆ ಇದೀಗ ಹಿನ್ನಡೆಯಾಗಿದೆ.

