Home Blog

ಗದಗದಲ್ಲಿ ಮನಕಲುಕುವ ದೃಶ್ಯ..! ದಾಹ ತೀರಿಸಿಕೊಳ್ಳಲು ರಸ್ತೆ ಬದಿಯ ನೀರನ್ನೇ ಕುಡಿದ ಮಂಗಗಳು

ಗದಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದು, ಮನುಷ್ಯರಷ್ಟೇ ಅಲ್ಲದೆ ಪ್ರಾಣಿ-ಪಕ್ಷಿಗಳೂ ನೀರಿನ ಕೊರತೆಯಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದ ರಸ್ತೆಯಲ್ಲಿ ನೀರಿಗಾಗಿ ಮಂಗಗಳು ಪರದಾಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೇಸಿಗೆಯ ತೀವ್ರ ಉಷ್ಣತೆಯಿಂದ ನೀರು ಮತ್ತು ಆಹಾರದ ಅಭಾವ ಎದುರಿಸುತ್ತಿರುವ ಎರಡು ಮಂಗಗಳು ರಸ್ತೆ ಬದಿಯ ತಗ್ಗಿನಲ್ಲಿ ನಿಂತಿದ್ದ ನೀರನ್ನು ಕುಡಿಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ದಾಹದಿಂದ ಅಲೆದಾಡುತ್ತಿದ್ದ ಮಂಗಗಳು ಕೊನೆಗೆ ರಸ್ತೆ ಬದಿಯ ನೀರನ್ನೇ ಕುಡಿದು ತಾವು ತಣಿಸಿಕೊಂಡಿರುವ ದೃಶ್ಯ ಮನಕಲುಕುವಂತಾಗಿದೆ.

ಬಿರು ಬೇಸಿಗೆಯಿಂದಾಗಿ ಪ್ರಾಣಿ ಹಾಗೂ ಪಕ್ಷಿಗಳಿಗೆ ನೀರಿನ ಕೊರತೆ ತೀವ್ರವಾಗುತ್ತಿದ್ದು, ಆಹಾರ ಮತ್ತು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದೃಶ್ಯ ಸಾರ್ವಜನಿಕರಲ್ಲಿ ಆಘಾತ ಮೂಡಿಸಿದ್ದು, ಪ್ರಾಣಿ-ಪಕ್ಷಿಗಳಿಗಾಗಿ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ.

ಹೈಡ್ರಾಮಾ ಮಧ್ಯೆ ಮಮತಾ ಸರ್ಕಾರ ವಿಸರ್ಜನೆ..! ರಾಜ್ಯಪಾಲರ ಆದೇಶ

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರೀ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನು ರಾಜ್ಯಪಾಲ ಆರ್‌.ಎನ್‌. ರವಿ ವಜಾಗೊಳಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲು ಕಂಡಿದ್ದರೂ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೆ ಹೈಡ್ರಾಮಾ ಮುಂದುವರಿಸಿದ್ದರು.

ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದರೂ, “ಟಿಎಂಸಿ ಸೋತಿಲ್ಲ, ಚುನಾವಣಾ ಆಯೋಗದ ಕಾರಣದಿಂದ ಬಿಜೆಪಿ ಗೆದ್ದಿದೆ” ಎಂದು ಆರೋಪಿಸಿದ್ದ ಮಮತಾ ಬ್ಯಾನರ್ಜಿ, “ಬೇಕಿದ್ದರೆ ರಾಜ್ಯಪಾಲರೇ ನನ್ನನ್ನು ವಜಾ ಮಾಡಲಿ” ಎಂದು ಸವಾಲು ಹಾಕಿದ್ದರು.

ಭಾರತ ಸಂವಿಧಾನದ 172ನೇ ವಿಧಿಯ ಪ್ರಕಾರ, ವಿಧಾನಸಭೆಯ ಮೊದಲ ಸಭೆಯಿಂದ ಐದು ವರ್ಷ ಪೂರ್ಣಗೊಂಡ ಬಳಿಕ ಸಭೆ ಸ್ವಯಂಚಾಲಿತವಾಗಿ ವಿಸರ್ಜನೆಯಾಗುತ್ತದೆ. ಅದರಂತೆ 2021ರಲ್ಲಿ ರಚನೆಯಾಗಿದ್ದ 17ನೇ ವಿಧಾನಸಭೆಯ ಅವಧಿ ಮೇ 07ರಂದು ಅಂತ್ಯಗೊಂಡಿದೆ.

ಈ ಹಿನ್ನೆಲೆ ರಾಜ್ಯಪಾಲ ಆರ್‌.ಎನ್‌. ರವಿ ಅವರು ಸಂವಿಧಾನದ 164(1)ನೇ ವಿಧಿಯಡಿ ಮಮತಾ ಬ್ಯಾನರ್ಜಿ ನೇತೃತ್ವದ ಸಚಿವ ಸಂಪುಟವನ್ನು ವಜಾಗೊಳಿಸಿ ವಿಧಾನಸಭೆ ವಿಸರ್ಜನೆಗೆ ಆದೇಶಿಸಿದ್ದಾರೆ. ಇದರೊಂದಿಗೆ ಮಮತಾ ಬ್ಯಾನರ್ಜಿ ಸೇರಿದಂತೆ ಎಲ್ಲಾ 294 ಶಾಸಕರ ಸದಸ್ಯತ್ವವೂ ರದ್ದಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಸಾಧಿಸಿದ್ದು, ಟಿಎಂಸಿ ಕೇವಲ 80 ಸ್ಥಾನಗಳಿಗೆ ಕುಸಿದಿದೆ. ಭವಾನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಸುಮಾರು 15 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ ಎನ್ನಲಾಗಿದೆ.

ಇದೀಗ ರಾಜ್ಯಪಾಲರು ಬಿಜೆಪಿ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸುವ ಸಾಧ್ಯತೆ ಇದ್ದು, ಮೇ 09ರಂದು ಹೊಸ ಸರ್ಕಾರ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

ಹಾವೇರಿ, ಶಿವಮೊಗ್ಗದಲ್ಲಿ ಗಾಳಿ ಸಹಿತ ಮಳೆ..! ರೈತರ ಮೊಗದಲ್ಲಿ ಮಂದಹಾಸ

ಶಿವಮೊಗ್ಗ/ಹಾವೇರಿ: ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಗಳ ಜನತೆಗೆ ವರುಣ ದೇವ ಕೊಂಚ ತಂಪಿನ ಅನುಭವ ನೀಡಿದ್ದಾನೆ.

ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಹಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ರಾತ್ರಿ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

ಇನ್ನೂ ಹಾವೇರಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭಾರೀ ಗಾಳಿ ಸಹಿತ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ 37 ರಿಂದ 38 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿದ್ದ ತಾಪಮಾನದಿಂದ ಜನರು ಬೇಸತ್ತಿದ್ದರು. ಇದೀಗ ಸುರಿದ ಮಳೆಯಿಂದ ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಸುಮಾರು 20 ನಿಮಿಷಗಳ ಕಾಲ ಧಾರಾಕಾರ ಮಳೆಯಾಗಿದ್ದು, ಬಿಸಿಲಿನಿಂದ ಒಣಗುತ್ತಿದ್ದ ಬೆಳೆಗಳಿಗೆ ಜೀವ ಬಂದಂತಾಗಿದೆ. ಮಳೆಯಾಗಿದ್ದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಪಡಿತರ ಅಕ್ಕಿ ಪಾಲಿಶ್ ಮಾಡಿ ಗುಜರಾತ್‌ಗೆ ಸಾಗಾಟ..!ಅಕ್ರಮ ಜಾಲ ಭೇದಿಸಿದ ಗದಗ ಪೊಲೀಸರು

ಗದಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಅನ್ನಭಾಗ್ಯ’ ಯೋಜನೆಯಡಿ ಬಡವರಿಗೆ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಭಾರೀ ಜಾಲವನ್ನು ಗದಗ ಪೊಲೀಸರು ಭೇದಿಸಿದ್ದಾರೆ.

ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಗುಜರಾತ್‌ಗೆ ಸಾಗಿಸಲಾಗುತ್ತಿದ್ದ ದಂಧೆಯನ್ನು ಬೆಟಗೇರಿ ಬಡಾವಣೆ ಪೊಲೀಸರು ಪತ್ತೆ ಹಚ್ಚಿದ್ದು, ಕಾರ್ಯಾಚರಣೆಯಲ್ಲಿ ಸುಮಾರು ₹42.88 ಲಕ್ಷ ಮೌಲ್ಯದ ಅಕ್ಕಿ ಹಾಗೂ ಲಾರಿಯನ್ನು ಜಪ್ತಿ ಮಾಡಿದ್ದಾರೆ.

ಗುರುವಾರ ಎಪಿಎಂಸಿ ಆವರಣದಲ್ಲಿರುವ ಆಹಾರ ನಿಗಮದ ಗೋದಾಮಿಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಜಪ್ತಿ ಮಾಡಲಾದ ಅಕ್ಕಿಯನ್ನು ಪರಿಶೀಲಿಸಿ ಪ್ರಕರಣದ ಮಾಹಿತಿ ನೀಡಿದರು.

ಬುಧವಾರ ಸಂಜೆ ಗದಗ ನಗರದ ಮುಂಡರಗಿ ರಸ್ತೆಯ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜ್ ಎದುರು ಅಕ್ಕಿ ತುಂಬಿದ ಲಾರಿಯೊಂದು ಅನುಮಾನಾಸ್ಪದವಾಗಿ ನಿಂತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಬೆಟಗೇರಿ ಬಡಾವಣೆ ಪೊಲೀಸರು ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಿಂದ ಗುಜರಾತ್‌ಗೆ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ.

ಸರ್ಕಾರದ ಪಡಿತರ ಅಕ್ಕಿಯನ್ನು ಮೇಲ್ನೋಟಕ್ಕೆ ಗುರುತಿಸಲಾಗದಂತೆ ಫ್ಯಾಕ್ಟರಿಯಲ್ಲಿ ಪಾಲಿಶ್ ಮಾಡಲಾಗಿತ್ತು. ಅಲ್ಲದೆ, ಇದು ಪಡಿತರ ಅಕ್ಕಿಯಲ್ಲ ಎಂಬಂತೆ ತೋರಿಸಲು ನಕಲಿ ವೇಬಿಲ್ ಸೇರಿದಂತೆ ಹಲವು ದಾಖಲೆಗಳನ್ನು ಸೃಷ್ಟಿಸಲಾಗಿತ್ತು. ಆದರೆ ಆಹಾರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅದು ಸರ್ಕಾರದ ಪಡಿತರ ಅಕ್ಕಿಯೇ ಎಂಬುದು ದೃಢಪಟ್ಟಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮೂಲದ ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಲಾರಿಯನ್ನು ಬಾಡಿಗೆಗೆ ಪಡೆದು ಅಕ್ರಮ ಸಾಗಾಟಕ್ಕೆ ಬಳಸಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಇನ್ನೂ ಅಕ್ಕಿಯನ್ನು ಪಾಲಿಶ್ ಮಾಡಿದ ಫ್ಯಾಕ್ಟರಿ ಮಾಲೀಕರು, ನಕಲಿ ದಾಖಲೆ ಸೃಷ್ಟಿಸಿದ ಕಿಂಗ್‌ಪಿನ್‌ಗಳು ಹಾಗೂ ಈ ಅಕ್ರಮ ಜಾಲದ ಹಿಂದಿರುವ ಪ್ರಮುಖ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಆಹಾರ ನಿರೀಕ್ಷಕ ಜಗದೀಶ ಅಮಾತಿ ಸೇರಿದಂತೆ ಆಹಾರ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಹೆಚ್ಚು ಬೆವರು ಚರ್ಮಕ್ಕೆ ಅಪಾಯಕಾರಿ..! ಫಂಗಲ್ ಇನ್‌ಫೆಕ್ಷನ್ ಬಗ್ಗೆ ತಜ್ಞರ ಸಲಹೆ

ಬೇಸಿಗೆ ಆರಂಭವಾದ ಬಳಿಕ ರಾಜ್ಯಾದ್ಯಂತ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದರ ಪರಿಣಾಮವಾಗಿ ಹೆಚ್ಚಿನವರಲ್ಲಿ ಅತಿಯಾಗಿ ಬೆವರು ಕಾಣಿಸಿಕೊಳ್ಳುತ್ತಿದೆ.

ಸಾಮಾನ್ಯವಾಗಿ ಬೆವರು ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಸಹಾಯಕವಾದರೂ, ಅತಿಯಾಗಿ ಬೆವರು ಬಂದಾಗ ಹಲವು ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ವೈದ್ಯರ ಪ್ರಕಾರ, ಬೆವರು ಹೆಚ್ಚು ಸಮಯ ಚರ್ಮದ ಮೇಲೆಯೇ ಉಳಿದರೆ ತೇವಾಂಶ ಹೆಚ್ಚಾಗಿ ಬ್ಯಾಕ್ಟೀರಿಯಾ ಹಾಗೂ ಫಂಗಸ್ ವೇಗವಾಗಿ ಬೆಳೆಯಲು ಅನುಕೂಲವಾಗುತ್ತದೆ. ಇದರಿಂದ ಚರ್ಮದಲ್ಲಿ ಉರಿ, ಕೆರೆತ, ಕೆಂಪು ಚುಕ್ಕೆಗಳು ಹಾಗೂ ಫಂಗಲ್ ಇನ್‌ಫೆಕ್ಷನ್ ಸಮಸ್ಯೆಗಳು ಕಾಣಿಸಬಹುದು. ವಿಶೇಷವಾಗಿ ಕುತ್ತಿಗೆ, ಕೈಕುಳಿ, ಬೆನ್ನು ಮತ್ತು ತೊಡೆ ಭಾಗಗಳಲ್ಲಿ ಹೆಚ್ಚು ಬೆವರು ಉಂಟಾದರೆ ಸೋಂಕಿನ ಅಪಾಯ ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಧೂಳು ಮತ್ತು ಮಲಿನತೆ ಬೆವರಿನೊಂದಿಗೆ ಸೇರಿ ಚರ್ಮದ ಮೇಲೆ ಉಳಿದರೆ ಸಮಸ್ಯೆ ಮತ್ತಷ್ಟು ಗಂಭೀರವಾಗಬಹುದು. ಜೊತೆಗೆ ಒದ್ದೆಯಾದ ಬಟ್ಟೆಗಳನ್ನು ಹೆಚ್ಚು ಸಮಯ ಧರಿಸುವುದು ಹಾಗೂ ದೇಹದ ಸ್ವಚ್ಛತೆಗೆ ನಿರ್ಲಕ್ಷ್ಯ ವಹಿಸುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚುತ್ತದೆ. ಸಂವೇದನಾಶೀಲ ಚರ್ಮ ಹೊಂದಿರುವವರಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.

ಚರ್ಮದ ಸೋಂಕು ತಡೆಯಲು ಬೇಸಿಗೆಯಲ್ಲಿ ದೇಹವನ್ನು ಸದಾ ಸ್ವಚ್ಛ ಹಾಗೂ ಒಣಗಿರುವಂತೆ ನೋಡಿಕೊಳ್ಳಬೇಕು. ಹೆಚ್ಚು ಬೆವರು ಬಂದಾಗ ಮುಖ ಮತ್ತು ದೇಹವನ್ನು ತೊಳೆಯುವುದು ಉತ್ತಮ. ಗಾಳಿ ಸರಿಯಾಗಿ ಹರಿಯುವ ಸಡಿಲ ಹಾಗೂ ಕಾಟನ್ ಬಟ್ಟೆ ಧರಿಸುವುದರಿಂದ ಬೆವರು ಬೇಗ ಒಣಗಲು ಸಹಕಾರಿಯಾಗುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಸಾಕಷ್ಟು ನೀರು ಕುಡಿಯುವುದು, ಹೆಚ್ಚು ಸಮಯ ಒದ್ದೆಯಾದ ಬಟ್ಟೆಗಳಲ್ಲಿ ಉಳಿಯದಿರುವುದು ಹಾಗೂ ಇತರರ ಟವೆಲ್, ಬಟ್ಟೆ ಮತ್ತು ವೈಯಕ್ತಿಕ ವಸ್ತುಗಳನ್ನು ಬಳಸುವುದನ್ನು ತಪ್ಪಿಸಬೇಕು. ಚರ್ಮದಲ್ಲಿ ನಿರಂತರ ಉರಿ, ಕೆರೆತ ಅಥವಾ ಕೆಂಪು ಚುಕ್ಕೆಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.

ಲಕ್ಕುಂಡಿಯಲ್ಲಿ ಹೊಯ್ಸಳ ಕಾಲದ ಅಪರೂಪದ ಶಿಲ್ಪಾವಶೇಷ ಪತ್ತೆ..! ಪುರಾತತ್ವ ಪ್ರಿಯರಲ್ಲಿ ಹೆಚ್ಚಿದ ಕುತೂಹಲ

ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಪ್ರಾಚ್ಯಾವಶೇಷಗಳ ಅನ್ವೇಷಣೆ ವೇಳೆ ಹೊಯ್ಸಳ ಕಾಲಕ್ಕೆ ಸೇರಿದ ಅಪರೂಪದ ಶಿಲ್ಪಾವಶೇಷಗಳು ಪತ್ತೆಯಾಗಿವೆ.

ಲಕ್ಕುಂಡಿಯ ದುರ್ಗಾದೇವಿ ಕೆರೆಯಲ್ಲಿ ಈ ಮಹತ್ವದ ಶಿಲ್ಪಗಳು ಬೆಳಕಿಗೆ ಬಂದಿದ್ದು, ಇತಿಹಾಸಾಸಕ್ತರು ಹಾಗೂ ಪುರಾತತ್ವ ಪ್ರಿಯರ ಗಮನ ಸೆಳೆಯುತ್ತಿವೆ.

ಈ ಕುರಿತು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಲಕ್ಕುಂಡಿ ಪ್ರಾಧಿಕಾರದ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ್ ಮಾಹಿತಿ ನೀಡಿದ್ದು, ಪತ್ತೆಯಾದ ಎರಡು ಶಿಲ್ಪಾವಶೇಷಗಳು ದೇವಾಲಯದ ಕಲಾತ್ಮಕ ಬಿಡಿಭಾಗಗಳಾಗಿವೆ ಎಂದು ತಿಳಿಸಿದ್ದಾರೆ. ಶಿಲ್ಪಗಳಲ್ಲಿ ಹೊಯ್ಸಳ ಶೈಲಿಯ ಅದ್ಭುತ ಕಲಾತ್ಮಕತೆ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಸಂಗೀತ ಹಾಗೂ ನೃತ್ಯ ಕಲೆಯ ವೈಭವ ಅನಾವರಣಗೊಂಡಿದೆ.

ಒಂದು ಶಿಲ್ಪದಲ್ಲಿ ಪುರುಷನು ಮದ್ದಳೆ ಬಾರಿಸುತ್ತಿರುವ ದೃಶ್ಯವಿದ್ದು, ಅಲಂಕೃತಳಾದ ಮಹಿಳೆ ತ್ರಿಭಂಗಿಯಲ್ಲಿ ನೃತ್ಯ ಮಾಡುತ್ತಿರುವ ಮನಮೋಹಕ ಚಿತ್ರಣ ಕೆತ್ತಲಾಗಿದೆ. ಮತ್ತೊಂದು ಶಿಲ್ಪದಲ್ಲಿ ಪುರುಷನು ವೇಣುವಾದನದಲ್ಲಿ ತಲ್ಲೀನನಾಗಿದ್ದು, ಮಹಿಳೆ ನೃತ್ಯದಲ್ಲಿ ನಿರತರಾಗಿರುವ ದೃಶ್ಯ ಕಂಡುಬಂದಿದೆ. ಈ ಕೆತ್ತನೆಗಳು ಆ ಕಾಲದ ಸಂಗೀತ ಮತ್ತು ನೃತ್ಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸುತ್ತವೆ.

ಶಿಲ್ಪಗಳಲ್ಲಿ ಪುರುಷರ ಮೇಲ್ವಸ್ತ್ರ, ಮಹಿಳೆಯರ ಉಡುಪು, ಆಭರಣಗಳು ಹಾಗೂ ವಿಶಿಷ್ಟ ಕೇಶವಿನ್ಯಾಸವನ್ನು ಅತ್ಯಂತ ಸೂಕ್ಷ್ಮವಾಗಿ ಕೆತ್ತಲಾಗಿದ್ದು, ಶಿಲ್ಪಿಯ ಕಲಾತ್ಮಕತೆ ಎದ್ದು ಕಾಣುತ್ತಿದೆ. ಕೆತ್ತನೆಯ ನಾಜೂಕು ಹಾಗೂ ವಿನ್ಯಾಸಗಳನ್ನು ಗಮನಿಸಿದರೆ, ಇವು ಹೊಯ್ಸಳ ಶೈಲಿಯ ಭವ್ಯ ದೇವಾಲಯದ ಭಾಗಗಳಾಗಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ.

ಐತಿಹಾಸಿಕ ವೈಭವಕ್ಕೆ ಹೆಸರಾಗಿರುವ ಲಕ್ಕುಂಡಿಯಲ್ಲಿ ಇಂತಹ ಅಪರೂಪದ ಶಿಲ್ಪಾವಶೇಷಗಳ ಪತ್ತೆ ಆ ಭಾಗದ ಸಾಂಸ್ಕೃತಿಕ ಮತ್ತು ಶಿಲ್ಪಕಲೆಯ ಶ್ರೀಮಂತ ಪರಂಪರೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.

‘ಹೆಲ್ದಿ’ ಅಂತಾ ತಿನ್ನುವ ಆಹಾರದಲ್ಲೇ ಅಡಗಿದ ಸಕ್ಕರೆ, ಕೊಬ್ಬು..! ಬೆಚ್ಚಿಬೀಳಿಸುವ ಮಾಹಿತಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ “ಹೆಲ್ದಿ”, “ಲೋ ಫ್ಯಾಟ್”, “ಶುಗರ್ ಫ್ರೀ” ಎಂಬ ಹೆಸರಿನ ಆಹಾರ ಉತ್ಪನ್ನಗಳ ಬಳಕೆ ಹೆಚ್ಚಾಗುತ್ತಿದೆ.

ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಜನರು ಇಂತಹ ಉತ್ಪನ್ನಗಳನ್ನು ನಂಬಿಕೊಂಡು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲಾ ‘ಹೆಲ್ದಿ’ ಉತ್ಪನ್ನಗಳೂ ನಿಜವಾಗಿಯೂ ಆರೋಗ್ಯಕರವಾಗಿಲ್ಲ ಎಂಬ ಎಚ್ಚರಿಕೆಯನ್ನು ಆರೋಗ್ಯ ತಜ್ಞರು ನೀಡಿದ್ದಾರೆ.

ಪ್ಯಾಕೇಜಿಂಗ್ ಮೇಲಿನ ಆಕರ್ಷಕ ಪದಗಳು ಮತ್ತು ಜಾಹೀರಾತುಗಳಿಗೆ ಮೋಸ ಹೋಗಬಾರದು ಎಂದು ತಜ್ಞರು ಸಲಹೆ ನೀಡಿದ್ದು, ಕೆಲವು ಉತ್ಪನ್ನಗಳಲ್ಲಿ “ಹೆಲ್ದಿ” ಎಂದು ಬರೆದಿದ್ದರೂ ಅದರೊಳಗೆ ಅಧಿಕ ಪ್ರಮಾಣದ ಸಕ್ಕರೆ, ಉಪ್ಪು, ಅನಾರೋಗ್ಯಕರ ಕೊಬ್ಬು ಹಾಗೂ ಪ್ರಿಸರ್ವೇಟಿವ್‌ಗಳು ಅಡಗಿರಬಹುದು ಎಂದು ತಿಳಿಸಿದ್ದಾರೆ. ಇವುಗಳನ್ನು ನಿರಂತರವಾಗಿ ಸೇವಿಸಿದರೆ ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಫ್ಲೇವರ್ಡ್ ಯೋಗರ್ಟ್, ಪ್ಯಾಕೇಜ್ಡ್ ಜ್ಯೂಸ್, ಎನರ್ಜಿ ಬಾರ್, ಡಯಟ್ ಸ್ನ್ಯಾಕ್ಸ್ ಹಾಗೂ ಇನ್‌ಸ್ಟಂಟ್ ಓಟ್ಸ್‌ಗಳಲ್ಲಿ ಹೆಚ್ಚುವರಿ ಸಕ್ಕರೆ ಮತ್ತು ರಿಫೈನ್ಡ್ ಕಾರ್ಬೊಹೈಡ್ರೇಟ್‌ಗಳ ಪ್ರಮಾಣ ಹೆಚ್ಚು ಇರಬಹುದಾಗಿದೆ. ಇಂತಹ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಬೊಜ್ಜು, ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಯಾವುದೇ ಆಹಾರ ಉತ್ಪನ್ನ ಖರೀದಿಸುವ ಮೊದಲು ಅದರ ನ್ಯೂಟ್ರಿಷನ್ ಲೇಬಲ್ ಪರಿಶೀಲಿಸುವುದು ಅಗತ್ಯವಾಗಿದೆ. ಸಕ್ಕರೆ, ಉಪ್ಪು, ಕೊಬ್ಬು ಹಾಗೂ ಕ್ಯಾಲೊರಿಗಳ ಪ್ರಮಾಣವನ್ನು ಗಮನಿಸುವ ಜೊತೆಗೆ ಇಂಗ್ರಿಡಿಯಂಟ್ಸ್ ಪಟ್ಟಿಯನ್ನೂ ಓದಬೇಕು. ಹೆಚ್ಚು ಪ್ರೊಸೆಸ್ಡ್ ಆಹಾರಗಳಿಂದ ದೂರವಿರುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಇದೇ ವೇಳೆ ಮನೆಯಲ್ಲೇ ತಯಾರಿಸಿದ ಆಹಾರ ಸಾಮಾನ್ಯವಾಗಿ ಹೆಚ್ಚು ಸುರಕ್ಷಿತ ಮತ್ತು ಆರೋಗ್ಯಕರವಾಗಿರುತ್ತದೆ. ಮನೆಯ ಆಹಾರದಲ್ಲಿ ಸಕ್ಕರೆ, ಉಪ್ಪು ಹಾಗೂ ಎಣ್ಣೆಯ ಪ್ರಮಾಣವನ್ನು ನಿಯಂತ್ರಿಸಬಹುದಾಗಿದ್ದು, ಪ್ರಿಸರ್ವೇಟಿವ್‌ಗಳ ಬಳಕೆ ಕೂಡ ಕಡಿಮೆ ಇರುತ್ತದೆ. ಹೀಗಾಗಿ ಸಾಧ್ಯವಾದಷ್ಟು ಮನೆ ಆಹಾರಕ್ಕೆ ಆದ್ಯತೆ ನೀಡುವುದು ಉತ್ತಮ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಕಿರಣ ರಕ್ಷಾ ಕವಚ ಹೊತ್ತ ವಾಹನ ಉರುಳಿ ಬಿದ್ದು ಆತಂಕ..!ತಪ್ಪಿದ ಭಾರೀ ಅನಾಹುತ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಟುಗಾ ಗ್ರಾಮದ ಸಮೀಪ ಇಂದು ಭಾರೀ ಅವಘಡವೊಂದು ಸಂಭವಿಸಿದ್ದು, ಕೈಗಾ ಅಣುಸ್ಥಾವರಕ್ಕೆ ಸಾಗಿಸಲಾಗುತ್ತಿದ್ದ ಮಹತ್ವದ ಉಪಕರಣ ಹೊತ್ತ ಭಾರೀ ವಾಹನ ಪಲ್ಟಿಯಾಗಿದೆ.

ಕೈಗಾ ಅಣುಸ್ಥಾವರದ 5 ಹಾಗೂ 6ನೇ ಘಟಕಗಳ ನಿರ್ಮಾಣ ಕಾಮಗಾರಿಗಾಗಿ ಸೂರತ್‌ನಿಂದ ವಿಶೇಷ ರೀತಿಯಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 140 ಟನ್ ತೂಕದ ವಿಕಿರಣ ರಕ್ಷಾ ಕವಚವನ್ನು ಹೊತ್ತಿದ್ದ ವಾಹನವೇ ಅಪಘಾತಕ್ಕೀಡಾಗಿದೆ.

ಅತ್ಯಂತ ಭದ್ರತಾ ಕ್ರಮಗಳೊಂದಿಗೆ ರಸ್ತೆಯ ಮೂಲಕ ಸಾಗಿಸಲಾಗುತ್ತಿದ್ದ ಈ ಭಾರೀ ವಾಹನ ಮಲೆನಾಡಿನ ತಿರುವುಮಯ ರಸ್ತೆಯಲ್ಲಿ ಸಾಗುವಾಗ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಘಟನೆಯಿಂದ ಕೆಲಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಸ್ಥಳೀಯರು ಆತಂಕಕ್ಕೊಳಗಾದರು. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಸೋರಿಕೆ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕೈಗಾ ಅಣುಸ್ಥಾವರದ ವಿಸ್ತರಣಾ ಯೋಜನೆಗೆ ಈ ವಿಕಿರಣ ರಕ್ಷಾ ಕವಚ ಅತ್ಯಂತ ಪ್ರಮುಖವಾಗಿದ್ದು, ಇದರ ಸುರಕ್ಷಿತ ಸಾಗಣೆಗೆ ವಿಶೇಷ ತಾಂತ್ರಿಕ ವ್ಯವಸ್ಥೆ ಮಾಡಲಾಗಿತ್ತು. ಆದರೆ ದುರ್ಗಮ ಹಾಗೂ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಸಾಗುವ ವೇಳೆ ವಾಹನ ಸಮತೋಲನ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಕಾರ್ಯಾಚರಣೆ ಸಂಕೀರ್ಣಗೊಂಡಿದೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಕೈಗಾ ಅಣುಸ್ಥಾವರದ ಹಿರಿಯ ಅಧಿಕಾರಿಗಳು, ತಾಂತ್ರಿಕ ತಜ್ಞರ ತಂಡ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸುಮಾರು 140 ಟನ್ ಭಾರ ಇರುವ ವಾಹನವನ್ನು ಮೇಲಕ್ಕೆತ್ತಲು ಬೃಹತ್ ಸಾಮರ್ಥ್ಯದ ಕ್ರೇನ್‌ಗಳನ್ನು ಕರೆಸುವ ಕಾರ್ಯ ನಡೆಯುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಈ ಘಟನೆ ಹಿನ್ನೆಲೆ ಕೈಗಾ ಅಣುಸ್ಥಾವರದ ಭದ್ರತೆ ಹಾಗೂ ಭಾರೀ ಉಪಕರಣಗಳ ಸಾಗಣೆ ಕ್ರಮಗಳ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಕನಸಿನಲ್ಲಿ ಕೂದಲು ಉದುರಿದರೆ ಎಚ್ಚರ..! ಭವಿಷ್ಯದ ಬಗ್ಗೆ ಸಿಗುತ್ತೆ ಮಹತ್ವದ ಸುಳಿವು

ನಿದ್ರೆಯಲ್ಲಿ ಕಾಣುವ ಪ್ರತಿಯೊಂದು ಕನಸಿಗೂ ತನ್ನದೇ ಆದ ವಿಶೇಷ ಅರ್ಥವಿದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ.

ಕನಸುಗಳು ಭವಿಷ್ಯದಲ್ಲಿ ನಡೆಯಬಹುದಾದ ಘಟನೆಗಳ ಮುನ್ಸೂಚನೆ ನೀಡುತ್ತವೆ ಎನ್ನುವ ನಂಬಿಕೆ ಇದೆ. ಅದರಲ್ಲೂ ಕನಸಿನಲ್ಲಿ ಕೂದಲು ಉದುರುತ್ತಿರುವ ದೃಶ್ಯ ಕಂಡರೆ, ಅದು ಸಾಮಾನ್ಯ ಸಂಗತಿಯಲ್ಲ ಎಂದು ಪರಿಗಣಿಸಲಾಗುತ್ತದೆ. ನಿಜ ಜೀವನದಲ್ಲಿ ಕೂದಲು ಉದುರುವುದು ಹೇಗೆ ಆತಂಕಕ್ಕೆ ಕಾರಣವಾಗುತ್ತದೋ, ಕನಸಿನಲ್ಲಿಯೂ ಇದು ಹಲವು ಮಹತ್ವದ ಸೂಚನೆಗಳನ್ನು ಒಳಗೊಂಡಿರುತ್ತದೆ.

ಸ್ವಪ್ನ ಶಾಸ್ತ್ರದ ಪ್ರಕಾರ, ಕೂದಲು ವ್ಯಕ್ತಿಯ ಸೌಂದರ್ಯ, ಆತ್ಮವಿಶ್ವಾಸ ಮತ್ತು ಆಂತರಿಕ ಶಕ್ತಿಯ ಸಂಕೇತವಾಗಿದೆ. ಹೀಗಾಗಿ, ಕನಸಿನಲ್ಲಿ ಕೂದಲು ಉದುರುತ್ತಿರುವಂತೆ ಕಂಡರೆ, ಅದು ವ್ಯಕ್ತಿಯ ಮನಸ್ಸಿನ ಅಶಾಂತಿ, ಅಸುರಕ್ಷತೆ ಅಥವಾ ಆತ್ಮವಿಶ್ವಾಸದ ಕೊರತೆಯನ್ನು ಸೂಚಿಸುತ್ತದೆ. ಜೊತೆಗೆ ಜೀವನದಲ್ಲಿ ಅತ್ಯಂತ ಮುಖ್ಯವಾದ ಯಾವುದನ್ನಾದರೂ ಕಳೆದುಕೊಳ್ಳುವ ಭಯ ಮನಸ್ಸಿನಲ್ಲಿ ಮನೆ ಮಾಡಿರುವುದನ್ನೂ ಈ ಕನಸು ಪ್ರತಿಬಿಂಬಿಸಬಹುದು.

ಹಠಾತ್‌ವಾಗಿ ಮತ್ತು ವೇಗವಾಗಿ ಕೂದಲು ಉದುರುವ ಕನಸು ಕಂಡರೆ, ಅದನ್ನು ಅಶುಭ ಸಂಕೇತವೆಂದು ಹೇಳಲಾಗುತ್ತದೆ. ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ಸಮಸ್ಯೆಗಳು, ಕುಟುಂಬದೊಳಗಿನ ಉದ್ವಿಗ್ನತೆ ಅಥವಾ ಮಾನಸಿಕ ಒತ್ತಡಗಳ ಬಗ್ಗೆ ಇದು ಎಚ್ಚರಿಕೆ ನೀಡುತ್ತದೆ ಎನ್ನಲಾಗುತ್ತದೆ. ಇದೇ ವೇಳೆ ಜೀವನದಲ್ಲಿ ದೊಡ್ಡ ಬದಲಾವಣೆ ಸಂಭವಿಸುವ ಸಾಧ್ಯತೆಯೂ ಇದರಿಂದ ಸೂಚನೆಯಾಗಿರಬಹುದು.

ಇನ್ನೊಂದೆಡೆ, ಕೂದಲು ನಿಧಾನವಾಗಿ ಉದುರುತ್ತಿರುವ ಕನಸು ಕಂಡರೆ, ಅದು ದೀರ್ಘಕಾಲದ ಮಾನಸಿಕ ಒತ್ತಡ, ಆಯಾಸ ಅಥವಾ ಅಸ್ಥಿರ ಜೀವನಶೈಲಿಯ ಸಂಕೇತವಾಗಿರಬಹುದು. ವ್ಯಕ್ತಿ ತನ್ನ ಜೀವನದಲ್ಲಿ ಸಮತೋಲನ ಕಳೆದುಕೊಳ್ಳುತ್ತಿರುವುದನ್ನು ಇದು ಸೂಚಿಸುತ್ತಿದ್ದು, ಆರೋಗ್ಯ ಮತ್ತು ಮನಸ್ಸಿನ ಶಾಂತಿಯ ಕಡೆ ಹೆಚ್ಚಿನ ಗಮನ ಹರಿಸಬೇಕೆಂಬ ಸಂದೇಶವನ್ನೂ ನೀಡುತ್ತದೆ.

ಆರೋಗ್ಯದ ದೃಷ್ಟಿಯಿಂದ ನೋಡಿದರೆ, ಇಂತಹ ಕನಸುಗಳು ದೈಹಿಕ ದೌರ್ಬಲ್ಯ, ನಿದ್ರಾಹೀನತೆ ಅಥವಾ ಅಸಮರ್ಪಕ ದಿನಚರಿಯನ್ನು ಸೂಚಿಸುವ ಸಾಧ್ಯತೆಯಿದೆ. ಸರಿಯಾದ ಆಹಾರ ಪದ್ಧತಿ, ಸಮರ್ಪಕ ವಿಶ್ರಾಂತಿ ಮತ್ತು ನಿಯಮಿತ ಜೀವನಶೈಲಿ ಅನುಸರಿಸುವ ಅಗತ್ಯವಿದೆ ಎಂಬುದನ್ನು ಸುಪ್ತ ಮನಸ್ಸು ಕನಸುಗಳ ಮೂಲಕ ತಿಳಿಸುತ್ತಿದೆ ಎಂದು ಹೇಳಲಾಗುತ್ತದೆ.

ಆದರೆ ಪ್ರತಿಯೊಂದು ಕನಸೂ ನಕಾರಾತ್ಮಕ ಅರ್ಥವನ್ನೇ ಹೊಂದಿರಬೇಕೆಂದಿಲ್ಲ. ಕೆಲವು ಸಂದರ್ಭಗಳಲ್ಲಿ ಕೂದಲು ಉದುರುವ ಕನಸು, ಜೀವನದಲ್ಲಿ ಹೊಸ ಆರಂಭ ಮತ್ತು ಬದಲಾವಣೆಯ ಸಂಕೇತವಾಗಿಯೂ ಪರಿಗಣಿಸಲಾಗುತ್ತದೆ. ಹಳೆಯ ಸಮಸ್ಯೆಗಳು ಮತ್ತು ಆಲೋಚನೆಗಳನ್ನು ತೊರೆದು ಹೊಸ ದಾರಿಗೆ ಹೆಜ್ಜೆ ಇಡುವ ಸನ್ನದ್ಧತೆಯನ್ನೂ ಇದು ಸೂಚಿಸಬಹುದು.

ಬಿಟುಮಿನ್ ಇಲ್ಲ ಅಂತ ರಸ್ತೆ ಕೆಲಸ ಸ್ಟಾಪ್… ಕಾರವಾರದಲ್ಲಿ ಮಾತ್ರ ಒಳ್ಳೆ ರಸ್ತೆಯನ್ನೇ ಕಿತ್ತು ಹಾಳು ಮಾಡಿದ ಅವಾಂತರ!

ಕಾರವಾರ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಾಂಬರು ಕೊರತೆಯಿಂದ ರಸ್ತೆ ಕಾಮಗಾರಿಗಳು ನಿಂತು ಹೋಗಿದ್ದರೆ, ಕಾರವಾರದಲ್ಲಿ ಮಾತ್ರ ಗುತ್ತಿಗೆದಾರರ ಎಡವಟ್ಟಿಗೆ ಭದ್ರವಾಗಿದ್ದ ಕಾಂಕ್ರೀಟ್ ರಸ್ತೆಯನ್ನೇ ಹಾಳು ಮಾಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಕಾರವಾರ ಬಸ್ ನಿಲ್ದಾಣದಿಂದ ಕೈಗಾ ಅಣುಸ್ಥಾವರಕ್ಕೆ ಹೋಗುವ ಸುಸಜ್ಜಿತ ಕಾಂಕ್ರೀಟ್ ರಸ್ತೆಯ ಮೇಲೆ ಏಕಾಏಕಿ ಡಾಂಬರು ಹಾಕಲು ಆರಂಭಿಸಲಾಗಿತ್ತು. ರಸ್ತೆ ಈಗಾಗಲೇ ಉತ್ತಮ ಸ್ಥಿತಿಯಲ್ಲಿದ್ದರೂ ಅನಗತ್ಯ ಕಾಮಗಾರಿ ನಡೆಸುತ್ತಿರುವುದನ್ನು ಕಂಡ ಸಾರ್ವಜನಿಕರು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ಥಳೀಯರ ಆಕ್ರೋಶ ಹೆಚ್ಚುತ್ತಿದ್ದಂತೆಯೇ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿ ಅಲ್ಲಿಂದ ತೆರಳಿದ್ದಾರೆ. ಆದರೆ ಬಳಿಕ ಹಾಕಿದ್ದ ಡಾಂಬರನ್ನು ಜೆಸಿಬಿ ಮೂಲಕ ಕಿತ್ತು ಹಾಕುವ ವೇಳೆ ಕಾಂಕ್ರೀಟ್ ರಸ್ತೆಯ ಮೇಲ್ಭಾಗವೇ ಹಾನಿಗೊಳಗಾಗಿದೆ. ಇದರಿಂದ ಸಾರ್ವಜನಿಕರು ಇನ್ನಷ್ಟು ಕಿಡಿಕಾರಿದ್ದಾರೆ.

ಕೆಶಿಪ್ ಯೋಜನೆಯಡಿ ಮಂಜೂರಾದ ಕಾಮಗಾರಿಯಿದು ಎನ್ನಲಾಗುತ್ತಿದೆ. ಆದರೆ ಸ್ಥಳದ ವಾಸ್ತವ ಸ್ಥಿತಿ ತಿಳಿಯದೇ ಗುತ್ತಿಗೆದಾರರು ಕೆಲಸ ಆರಂಭಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳೀಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೂ ಈ ಅವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ.

ಒಟ್ಟಾರೆ ರಾಜ್ಯದ ಅನೇಕ ಕಡೆ ರಸ್ತೆ ಅಭಿವೃದ್ಧಿಗೆ ಹಣವಿಲ್ಲ ಎಂದು ಜನರು ಪರದಾಡುತ್ತಿದ್ದರೆ, ಕಾರವಾರದಲ್ಲಿ ಮಾತ್ರ ಚೆನ್ನಾಗಿದ್ದ ರಸ್ತೆಗೆ ಡಾಂಬರು ಹಾಕಿ ಮತ್ತೆ ಕಿತ್ತು ಹಾಳು ಮಾಡುತ್ತಿರುವುದು ಸಾರ್ವಜನಿಕ ಹಣದ ದುರ್ಬಳಕೆ ಅಲ್ಲವೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.

error: Content is protected !!