Home Blog

ಠಾಣೆಗೆ ವಿನಾಕಾರಣ ಕರೆದು ಕಿರುಕುಳ ಕೊಡಬೇಡಿ: ಪೊಲೀಸರಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ

ಬೆಂಗಳೂರು: ತನಿಖೆಯ ಹೆಸರಿನಲ್ಲಿ ಸಾರ್ವಜನಿಕರನ್ನು ವಿನಾಕಾರಣ ಪೊಲೀಸ್ ಠಾಣೆಗೆ ಕರೆಸಿ ಕಿರುಕುಳ ನೀಡಬಾರದು ಎಂದು ಹೈಕೋರ್ಟ್ ಪೊಲೀಸರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ದಾಖಲಾಗಿರುವ ಅಪರಾಧದ ವ್ಯಾಪ್ತಿಯನ್ನು ಮೀರಿ ವಿಚಾರಣೆ ನಡೆಸಿದರೆ ಸಂಬಂಧಪಟ್ಟ ತನಿಖಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಅಲ್ಲದೆ, ತನಿಖೆಗೆ ಹಾಜರಾಗುವಂತೆ ನೀಡುವ ಸಮನ್ಸ್ ಅಥವಾ ನೋಟಿಸ್‌ನಲ್ಲಿ ಯಾವ ಕಾನೂನಿನ ಯಾವ ಕಲಂ ಅಡಿಯಲ್ಲಿ ಕರೆಯಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು. ಜೊತೆಗೆ, ನೋಟಿಸ್ ನೀಡಿದ ಅಧಿಕಾರಿಯ ಹೆಸರು, ಹುದ್ದೆ ಹಾಗೂ ಸಹಿ ಕಡ್ಡಾಯವಾಗಿರಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಬೆಂಗಳೂರಿನ ವರುಣ್ ಜುವೆಲ್ಲರ್ಸ್ ಸಂಸ್ಥಾಪಕರಾದ ನರೇಶ್ ಕುಮಾರ್ ಸಿಯಾಲ್ ಹಾಗೂ ಪ್ರಕಾಶ್ ಚಾಂದ್ ಸಿಯಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ಏಕಸದಸ್ಯ ಪೀಠ ಈ ಮಹತ್ವದ ಸೂಚನೆ ನೀಡಿದೆ.

ಅತ್ತಿಬೆಲೆ ಠಾಣೆ ಪೊಲೀಸರು ತನಿಖೆಗೆ ಹಾಜರಾಗುವಂತೆ ನೀಡಿದ್ದ ನೋಟಿಸ್‌ನಲ್ಲಿ ಯಾವುದೇ ಕಾನೂನು ಸೆಕ್ಷನ್ ಉಲ್ಲೇಖಿಸದೇ, ತನಿಖಾಧಿಕಾರಿಯ ಹೆಸರು ಮತ್ತು ಹುದ್ದೆ ನಮೂದಿಸದೇ ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, “ಯಾವ ಅಧಿಕಾರದ ಅಡಿಯಲ್ಲಿ ನೋಟಿಸ್ ನೀಡಲಾಗಿದೆ? ಅಧಿಕಾರಿಯ ಹೆಸರು ಮತ್ತು ಹುದ್ದೆ ಯಾಕೆ ನಮೂದಿಸಿಲ್ಲ?” ಎಂದು ಪ್ರಶ್ನಿಸಿದೆ.

ಇದರ ಜೊತೆಗೆ, ಎರಡು ವಾರಗಳೊಳಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ನಾಲ್ಕನೇ ವಾರಕ್ಕೆ ಮುಂದೂಡಿದೆ.

ನ್ಯಾಯಪೀಠವು, “ನಿಯಮಾವಳಿಗಳ ಸ್ಪಷ್ಟ ಉಲ್ಲೇಖವಿಲ್ಲದೆ ಯಾರನ್ನೂ ಠಾಣೆಗೆ ಕರೆಯಬಾರದು. ಕರೆಯಿಸಿದರೂ ಕಿರುಕುಳ ನೀಡದೇ ನಿಗದಿತ ಅವಧಿಯೊಳಗೆ ವಿಚಾರಣೆ ಮುಗಿಸಬೇಕು” ಎಂದು ತಿಳಿಸಿದೆ.

ಇದೇ ವೇಳೆ, ಇ-ಆಫೀಸ್ ವ್ಯವಸ್ಥೆ ಬಳಸಿ ಡಿಜಿಟಲ್ ಸಹಿ ಹೊಂದಿರುವ ನೋಟಿಸ್ ನೀಡಬೇಕಿತ್ತು. ಅದನ್ನು ಯಾಕೆ ಪಾಲಿಸಲಾಗಿಲ್ಲ ಎಂದು ಕೂಡ ನ್ಯಾಯಾಲಯ ಪ್ರಶ್ನಿಸಿದೆ.

ಪ್ರಕರಣದ ಹಿನ್ನೆಲೆ:

ಮಾರ್ಚ್ ತಿಂಗಳಲ್ಲಿ ಅತ್ತಿಬೆಲೆಯಲ್ಲಿ ನಡೆದ ದಾರುಣ ಘಟನೆಯಲ್ಲಿ, ಚೀಟಿ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಮೋಹನ್ ಎಂಬಾತ ತಾಯಿ ಹಾಗೂ ಅಕ್ಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ಪ್ರಕರಣಕ್ಕೂ ಮುನ್ನ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಸಾಲದ ಒತ್ತಡ ಮತ್ತು ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದ.

ಈ ಪ್ರಕರಣದ ತನಿಖೆ ಸಂಬಂಧ ವರುಣ್ ಜುವೆಲ್ಲರ್ಸ್ ಸಂಸ್ಥಾಪಕರಿಗೆ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದರು. ಆದರೆ ತಮ್ಮ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲದಿದ್ದರೂ ಠಾಣೆಗೆ ಕರೆಸಿ ವ್ಯಾಪಾರ, ಲಾಭ ಸೇರಿದಂತೆ ಸಂಬಂಧವಿಲ್ಲದ ವಿಚಾರಗಳ ಬಗ್ಗೆ ಇಡೀ ದಿನ ವಿಚಾರಣೆ ನಡೆಸಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಮೇಕೆದಾಟು; ತಮಿಳುನಾಡಿನ ಅರ್ಜಿ ವಜಾಗೊಳಿಸಿದ ಸುಪ್ರೀಂಗೆ ಧನ್ಯವಾದ – ಡಿ.ಕೆ. ಶಿವಕುಮಾರ್

ನವದೆಹಲಿ: ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ವಜಾಗೊಳಿಸಿದೆ. ಇದು ಕರ್ನಾಟಕ ಪಾಲಿಗೆ ಶುಭಸುದ್ದಿ. ಕರ್ನಾಟಕ ರಾಜ್ಯದ ಜನರ ಪರವಾಗಿ ನಾವು ಸುಪ್ರೀಂ ಕೋರ್ಟಿಗೆ ಧನ್ಯವಾದ ಅರ್ಪಿಸುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ಸುಪ್ರೀಂ ಕೋರ್ಟ್ ಈ ಹಿಂದಿನ ಆದೇಶದಲ್ಲೇ ನಮಗೆ ಸ್ಪಷ್ಟ ಸೂಚನೆ ನೀಡಿದ್ದು ತಮಿಳುನಾಡಿನ ಪಾಲಿನ 177 ಟಿಎಂಸಿ ನೀರನ್ನು ಹರಿಸಬೇಕು ಎಂದು ಷರತ್ತು ವಿಧಿಸಿದೆ.

ಈಗ ಈ ಯೋಜನೆ ಕುರಿತು ತೀರ್ಮಾನ ಮಾಡಬೇಕಿರುವುದು ಕೇಂದ್ರ ಸರ್ಕಾರ. ನಾವು ಪರಿಷ್ಕೃತ ಡಿಪಿಆರ್ ಸಲ್ಲಿಕೆ ಪ್ರಕ್ರಿಯೆಯಲ್ಲಿದ್ದೇವೆ” ಎಂದು ತಿಳಿಸಿದರು.

ಆಪರೇಷನ್ ಮಾಡದೆ ಸುಳ್ಳು ಹೇಳಿ ಹಣ ಪಡೆದ ವೈದ್ಯ?: ಬೀದರ್ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ

0

ಬೀದರ್: ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸದೆ ನಡೆಸಿದ್ದೇವೆಂದು ಹೇಳಿ ಹಣ ವಸೂಲಿ ಮಾಡಿದ ಗಂಭೀರ ಆರೋಪವೊಂದು ಬೀದರ್ ತಾಲೂಕಿನ ಮನ್ನಾಖೇಳಿ ಗ್ರಾಮದ ಸೇಡಂಕರ್ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ.

ಬಸಲಾಪುರ ಗ್ರಾಮದ ಪ್ರಜ್ವಲ್ ಎಂಬ ಯುವಕ ಅಪಘಾತದಲ್ಲಿ ಭುಜದ ಎಲುಬು ಮುರಿದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ಮಾಡಿ ಎಲುಬಿಗೆ ರಾಡ್ ಹಾಕಬೇಕು ಎಂದು ವೈದ್ಯರು ತಿಳಿಸಿ 37 ಸಾವಿರ ರೂಪಾಯಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ ನಿಜವಾಗಿ ಯಾವುದೇ ಆಪರೇಷನ್ ನಡೆದಿಲ್ಲ, ಕೇವಲ ಬ್ಯಾಂಡೇಜ್ ಹಾಕಲಾಗಿದೆ ಎಂದು ಕುಟುಂಬ ಆರೋಪಿಸಿದೆ. ನಂತರವೂ ನೋವು ಮುಂದುವರಿದ ಕಾರಣ ಸ್ಕ್ಯಾನಿಂಗ್ ಮಾಡಿಸಿದಾಗ, ಎಲುಬು ಮುರಿದ ಸ್ಥಿತಿಯಲ್ಲೇ ಇರುವುದು ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.

ಈ ಘಟನೆ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಹಣಕಾಸು ಅಕ್ರಮದ ಆರೋಪಗಳಿಗೆ ಕಾರಣವಾಗಿದ್ದು, ಸ್ಥಳೀಯ ಮಟ್ಟದಲ್ಲಿ ತೀವ್ರ ಆಕ್ರೋಶ ಮತ್ತು ಚರ್ಚೆಗೆ ಗ್ರಾಸವಾಗಿದೆ.

ವಿವಾದಗಳ ಬೆನ್ನಲ್ಲೇ ಚಾಮುಂಡಿ ತಾಯಿಗೆ ಶರಣಾದ ರಣ್ವೀರ್ ಸಿಂಗ್: ದೇವಿ ಮುಂದೆ ಕ್ಷಮೆ ಯಾಚಿಸಿದ ನಟ!

ಮೈಸೂರು: ಬಾಲಿವುಡ್ ನಟ ರಣ್ವೀರ್ ಸಿಂಗ್ ಸುತ್ತ ವಿವಾದಗಳು ಹೆಚ್ಚಾಗುತ್ತಿರುವ ಮಧ್ಯೆಯೇ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ಘಟನೆ ಗಮನ ಸೆಳೆದಿದೆ. ಇತ್ತೀಚಿನ ಬ್ಯಾನ್ ನಿರ್ಧಾರದ ಬೆನ್ನಲ್ಲೇ ಅವರು ಚಾಮುಂಡಿ ದೇವಾಲಯಕ್ಕೆ ಆಗಮಿಸಿರುವುದು ಚರ್ಚೆಗೆ ಕಾರಣವಾಗಿದೆ.

ಕೆಲ ತಿಂಗಳ ಹಿಂದೆ ಗೋವಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಣ್ವೀರ್ ಸಿಂಗ್ ದೈವವನ್ನು ಅನುಕರಣೆ ಮಾಡಿದ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ರಿಷಬ್ ಶೆಟ್ಟಿ ಜೊತೆಗಿನ ಆ ವೇದಿಕೆಯಲ್ಲಿ ನಡೆದ ಘಟನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ನಂತರ ಅವರು ಕ್ಷಮೆ ಕೇಳಿದ್ದರೂ, ಪ್ರಕರಣ ಹೈಕೋರ್ಟ್ ವರೆಗೆ ತಲುಪಿತ್ತು.

ಹೈಕೋರ್ಟ್ ಈ ಸಂಬಂಧ ಚಾಮುಂಡಿ ದೇವಸ್ಥಾನದಲ್ಲಿ ಕ್ಷಮೆ ಕೇಳುವಂತೆ ಸೂಚನೆ ನೀಡಿದ್ದರೂ, ಅದನ್ನು ಅವರು ತಕ್ಷಣ ಪಾಲಿಸಿರಲಿಲ್ಲ ಎಂದು ವರದಿಯಾಗಿದೆ. ಇದೀಗ ವೃತ್ತಿಜೀವನದಲ್ಲಿ ಎದುರಾಗಿರುವ ಹಿನ್ನಡೆಗಳ ನಡುವೆಯೇ ರಣ್ವೀರ್ ಸಿಂಗ್ ಮೈಸೂರಿಗೆ ಭೇಟಿ ನೀಡಿದ್ದಾರೆ.

ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಿಯ ಮುಂದೆ ಕ್ಷಮೆ ಯಾಚಿಸಿರುವ ರಣ್ವೀರ್ ಸಿಂಗ್, ಕೆಲ ಹರಕೆಗಳನ್ನು ಕೂಡ ಹೊತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ಭೇಟಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

ತೀವ್ರಗೊಂಡ ಮುರಿನಕಟ್ಟೆ ವಿವಾದ: ಠಾಣೆ ಎದುರು ಘೋಷಣೆ ಕೂಗಿದ 18 ಮಂದಿ ವಿರುದ್ಧ ಸ್ವಯಂಪ್ರೇರಿತ FIR!

ಭಟ್ಕಳ: ಮುರಿನಕಟ್ಟೆ ಸ್ಥಳಾಂತರ ವಿವಾದವು ಭಟ್ಕಳದಲ್ಲಿ ಕಾನೂನು ಕ್ರಮಕ್ಕೆ ಕಾರಣವಾಗಿದ್ದು, ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ 18 ಮಂದಿಯ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಹೆದ್ದಾರಿ 66 ವಿಸ್ತರಣೆ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಧಾರ್ಮಿಕ ಸ್ಥಳವಾಗಿದ್ದ ಮುರಿನಕಟ್ಟೆ ಸ್ಥಳಾಂತರ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಪರಿಸ್ಥಿತಿ ತೀವ್ರವಾಗದಂತೆ 2021ರಿಂದಲೇ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಇತ್ತೀಚೆಗೆ 10×10 ಅಳತೆಯ ಹೊಸ ಕಟ್ಟೆ ನಿರ್ಮಾಣಕ್ಕೆ ಸಂಬಂಧಿಸಿದ ಕ್ರಮಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅದನ್ನು ತೆರವುಗೊಳಿಸಿದ್ದರು. ಇದರಿಂದ ಅಸಮಾಧಾನಗೊಂಡ ಗುಂಪೊಂದು ಮೇ 24ರಂದು ರಾತ್ರಿ ಭಟ್ಕಳ ನಗರ ಪೊಲೀಸ್ ಠಾಣೆ ಆವರಣದಲ್ಲಿ ಅಕ್ರಮವಾಗಿ ಸೇರಿ ಘೋಷಣೆಗಳನ್ನು ಕೂಗಿದೆ.

ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆ ಕೂಗಿ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡಿದ ಆರೋಪದ ಮೇಲೆ ಪಿಎಸ್ಸೈ ತಿಮ್ಮಪ್ಪ ಎಸ್ ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (BNS) 2023 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನಾಗೇಶ ಕೃಷ್ಣಪ್ಪ ನಾಯ್ಕ, ಶ್ರೀನಿವಾಸ ಮಸ್ತಪ್ಪ ನಾಯ್ಕ ಸೇರಿದಂತೆ 18 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬಕ್ರೀದ್ ಮುನ್ನ ಜಾನುವಾರು ಖರೀದಿಗೆ ಬ್ರೇಕ್ ಹಾಕಿದ ಮುಸ್ಲಿಂ ಒಕ್ಕೂಟ

ಹಾಸನ: ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಮುಂದಿಟ್ಟುಕೊಂಡು ಹಾಸನ ಜಿಲ್ಲೆಯ ಮುಸ್ಲಿಂ ಸಮುದಾಯವು ಈ ಬಾರಿಯ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮಹತ್ವದ ಸ್ವಯಂ ನಿಯಂತ್ರಣ ಕ್ರಮವನ್ನು ಕೈಗೊಂಡಿದೆ. ಜಾನುವಾರು ಖರೀದಿಯನ್ನು ಸಂಪೂರ್ಣವಾಗಿ ತಾತ್ಕಾಲಿಕವಾಗಿ ನಿಲ್ಲಿಸುವ ನಿರ್ಧಾರವನ್ನು ಮುಸ್ಲಿಂ ಒಕ್ಕೂಟ ಪ್ರಕಟಿಸಿದೆ.

ಸಂತೆಯಲ್ಲಿ ನಡೆದ ಸಭೆಯಲ್ಲಿ ಮುಸ್ಲಿಂ ಮುಖಂಡರು ಭಾಗವಹಿಸಿ, ಸಮುದಾಯದ ಜನರಿಗೆ ದನ, ಹಸು ಹಾಗೂ ಎಮ್ಮೆ ಸೇರಿದಂತೆ ಯಾವುದೇ ಜಾನುವಾರುಗಳನ್ನು ಖರೀದಿಸದಂತೆ ಮನವಿ ಮಾಡಿದ್ದಾರೆ. ಹಬ್ಬದ ಆಚರಣೆಯಲ್ಲಿ ಅನಗತ್ಯ ವಿವಾದಗಳು ಅಥವಾ ಅಸಮಾಧಾನ ಉಂಟಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಖಂಡರು ಮಾತನಾಡುತ್ತಾ, ಕಾನೂನಿನ ಚೌಕಟ್ಟನ್ನು ಗೌರವಿಸುವುದಾಗಿ ತಿಳಿಸಿ, ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ತಮ್ಮ ಅಸಮ್ಮತಿಯನ್ನು ಸಹ ವ್ಯಕ್ತಪಡಿಸಿದ್ದಾರೆ.

ಅಮೀರ್ ಜಾನ್ ಸೇರಿದಂತೆ ಹಲವಾರು ಸಮುದಾಯ ಮುಖಂಡರು ಈ ನಿರ್ಧಾರಕ್ಕೆ ಸಾಕ್ಷಿಯಾದರು. ಈ ಕ್ರಮವನ್ನು ಸ್ಥಳೀಯವಾಗಿ ಶಾಂತಿ ಕಾಪಾಡುವ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.

ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ: ಜೂನ್ 18ರಂದು 7 ಸ್ಥಾನಗಳಿಗೆ ಮತದಾನ

ಬೆಂಗಳೂರು: ರಾಜ್ಯಸಭಾ ಚುನಾವಣೆಯ ಘೋಷಣೆಯ ಬೆನ್ನಲ್ಲೇ ಕರ್ನಾಟಕ ವಿಧಾನಪರಿಷತ್ ಚುನಾವಣೆಯ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದೆ. ವಿಧಾನಪರಿಷತ್ತಿನ 7 ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದೆ.

ಜೂನ್ 26ರಂದು ಅವಧಿ ಪೂರ್ಣಗೊಳ್ಳಲಿರುವ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ನ 3, ಬಿಜೆಪಿಯ 3 ಹಾಗೂ ಜೆಡಿಎಸ್‌ನ 1 ಸದಸ್ಯರ ಅವಧಿ ಮುಕ್ತಾಯವಾಗಲಿದೆ.

ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ವಿವಿಧ ಪಕ್ಷಗಳ ಆಕಾಂಕ್ಷಿಗಳು ಟಿಕೆಟ್‌ಗಾಗಿ ಲಾಬಿ ಆರಂಭಿಸಿದ್ದು, ರಾಜಕೀಯ ವಲಯದಲ್ಲಿ ಚಟುವಟಿಕೆ ಹೆಚ್ಚಾಗಿದೆ.

ವಿಧಾನಪರಿಷತ್ ಚುನಾವಣೆಯ ವೇಳಾಪಟ್ಟಿ ಹೀಗಿದೆ:

  • ಚುನಾವಣೆ ಅಧಿಸೂಚನೆ ಪ್ರಕಟ: ಜೂನ್ 1
  • ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಜೂನ್ 8
  • ನಾಮಪತ್ರ ಪರಿಶೀಲನೆ: ಜೂನ್ 9
  • ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಜೂನ್ 11
  • ಮತದಾನ: ಜೂನ್ 18
  • ಫಲಿತಾಂಶ ಪ್ರಕಟ: ಜೂನ್ 18

ಈ ಬಾರಿ ಅವಧಿ ಮುಕ್ತಾಯಗೊಳ್ಳಲಿರುವ ಸದಸ್ಯರಲ್ಲಿ ಬಿ.ಕೆ. ಹರಿಪ್ರಸಾದ್, ನಾಸೀರ್ ಅಹ್ಮದ್, ತಿಪ್ಪಣ್ಣ, ಪ್ರತಾಪ್ ಸಿಂಹ ನಾಯಕ್, ಎನ್. ನಾಗರಾಜು (ಎಂಟಿಬಿ), ಸುನಿಲ್ ವಲ್ಯಾಪುರ ಹಾಗೂ ಗೋವಿಂದರಾಜು ಸೇರಿದ್ದಾರೆ.

ವಿಧಾನಸಭೆಯ ಹಾಲಿ ಸಂಖ್ಯಾಬಲವನ್ನು ಪರಿಗಣಿಸಿದರೆ, ತೆರವಾಗಲಿರುವ 7 ಸ್ಥಾನಗಳ ಪೈಕಿ ಕಾಂಗ್ರೆಸ್‌ಗೆ 5 ಸ್ಥಾನಗಳು ಹಾಗೂ ಬಿಜೆಪಿಗೆ 2 ಸ್ಥಾನಗಳು ಸಿಗುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಲೆಕ್ಕಾಚಾರ ನಡೆಯುತ್ತಿದೆ.

ಈ ಲೆಕ್ಕಾಚಾರ ಸತ್ಯವಾದರೆ ಕಾಂಗ್ರೆಸ್‌ಗೆ ಪರಿಷತ್ತಿನಲ್ಲಿ 2 ಸ್ಥಾನಗಳ ಹೆಚ್ಚಳವಾಗಲಿದ್ದು, ಬಿಜೆಪಿ ಹಾಗೂ ಜೆಡಿಎಸ್ ತಲಾ ಒಂದು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ.

ಗಣಿ ಇಲಾಖೆ ಅಂಧಾ ದರ್ಬಾರ್‌ಗೆ ಸಚಿವ HK ಪಾಟೀಲ ಬ್ರೇಕ್.! ಮರಳು ಟೆಂಡರ್ ಅಕ್ರಮ ಆರೋಪಕ್ಕೆ ಖಡಕ್ ಎಚ್ಚರಿಕೆ

ಗದಗ: ಗದಗ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಟೆಂಡರ್ ಪ್ರಕ್ರಿಯೆ ಭಾರೀ ವಿವಾದದ ಕೇಂದ್ರಬಿಂದುವಾಗಿ ಪರಿಣಮಿಸಿದ್ದು, ಗಣಿ ಇಲಾಖೆ ವಿರುದ್ಧ ಗೋಲ್ಮಾಲ್ ಹಾಗೂ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿ ಬಂದಿವೆ. ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕು ವ್ಯಾಪ್ತಿಯ ತುಂಗಭದ್ರಾ ನದಿಯ ಮರಳು ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಗುತ್ತಿಗೆದಾರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.

ತಮಗೆ ಬೇಕಾದ ಟೆಂಡರ್ ದಾರರನ್ನು ಆಯ್ಕೆ ಮಾಡಿಕೊಂಡು, ಬೇಡವಾದವರ ಅರ್ಜಿಗಳನ್ನು ಯಾವುದೇ ಸ್ಪಷ್ಟ ಕಾರಣ ನೀಡದೇ ತಿರಸ್ಕರಿಸಲಾಗಿದೆ ಎಂದು ಆರೋಪಿಸಿರುವ ಟೆಂಡರ್ ದಾರರು, “ರಾತ್ರೋರಾತ್ರಿ ಧಂಧೆಕೋರರ ಜೊತೆ ಸೇರಿ ಟೆಂಡರ್ ಫೈನಲ್ ಮಾಡಲಾಗಿದೆ” ಎಂದು ಗಣಿ ಇಲಾಖೆ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ.

ಕಾನೂನು ಸಚಿವರ ತವರಲ್ಲೇ ಗಣಿ ಇಲಾಖೆ ಅಧಿಕಾರಿಗಳ “ಅಂಧಾ ದರ್ಬಾರ್” ನಡೆಯುತ್ತಿದೆ ಎಂದು ಕಿಡಿಕಾರಿದ ಗುತ್ತಿಗೆದಾರರು, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹಾಗೂ ಗಣಿ ಇಲಾಖೆ ಅಧಿಕಾರಿ ನಾಗಭೂಷಣ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಟೆಂಡರ್ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಅನ್ಯಾಯಕ್ಕೊಳಗಾದ ಟೆಂಡರ್ ದಾರರು ಕಾನೂನು ಸಚಿವ ಎಚ್‌.ಕೆ. ಪಾಟೀಲ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು. ಈ ವೇಳೆ ಸಚಿವರು ಟೆಂಡರ್ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಬೇಕು ಎಂದು ಸೂಚನೆ ನೀಡಿ, ಮರು ಟೆಂಡರ್ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ಖಡಕ್ ತಾಕೀತು ಮಾಡಿದರೆಂದು ತಿಳಿದು ಬಂದಿದೆ.

ಭ್ರಷ್ಟಾಚಾರದ ಆರೋಪ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಗಣಿ ಇಲಾಖೆ ಅಧಿಕಾರಿ ನಾಗಭೂಷಣ ಅವರಿಗೆ ಸಚಿವರು ಸಿಟ್ಟಿನಿಂದಲೇ “ಇದು ಲಾಸ್ಟ್ ವಾರ್ನಿಂಗ್” ಎಂದು ಎಚ್ಚರಿಕೆ ನೀಡಿದರೆಂಬ ಮಾಹಿತಿ ಲಭ್ಯವಾಗಿದೆ.

ಜಿಲ್ಲಾಡಳಿತ ಭವನಕ್ಕೆ ದೌಡಾಯಿಸಿದ ಟೆಂಡರ್ ದಾರರು, ಟೆಂಡರ್ ಪ್ರಕ್ರಿಯೆಯಲ್ಲಿ ನಡೆದ ಅನ್ಯಾಯದ ಬಗ್ಗೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರನ್ನು ಪ್ರಶ್ನಿಸಿದರು. ಈ ವೇಳೆ ಡಿಸಿ ಹಾಗೂ ಗುತ್ತಿಗೆದಾರರ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು.

ಪರಿಸ್ಥಿತಿ ನಿಯಂತ್ರಣ ತಪ್ಪುವ ಹಂತಕ್ಕೆ ತಲುಪುತ್ತಿದ್ದಂತೆ ಮಧ್ಯ ಪ್ರವೇಶ ಮಾಡಿದ ಎಸ್ಪಿ ರೋಹನ್ ಜಗದೀಶ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

“ಸಚಿವ ಎಚ್‌.ಕೆ. ಪಾಟೀಲ್ ಮರು ಟೆಂಡರ್ ಮಾಡುವಂತೆ ಸೂಚಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ‘ಮಾಡಲ್ಲ’ ಎಂದು ಹೇಳುತ್ತಿದ್ದಾರೆ. ಸಚಿವರ ಮಾತಿಗೂ ಗೌರವ ಇಲ್ಲದಂತಾಗಿದೆ” ಎಂದು ಟೆಂಡರ್ ದಾರರು ಆಕ್ರೋಶ ವ್ಯಕ್ತಪಡಿಸಿದರು. ಗಣಿ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿರುವ ಟೆಂಡರ್ ದಾರರು, ಟೆಂಡರ್ ಪ್ರಕ್ರಿಯೆಯು ಸಂಪೂರ್ಣ ತನಿಖೆಗೆ ಒತ್ತಾಯಿಸಿದ್ದಾರೆ.

ಹೈವೋಲ್ಟೇಜ್ ಸಭೆಗೂ ಮುನ್ನ ಎಐಸಿಸಿ ಕಚೇರಿಯಲ್ಲಿ CM-DCM ಮುಖಾಮುಖಿ!

ನವದೆಹಲಿ: ಕರ್ನಾಟಕ ರಾಜಕೀಯದಲ್ಲಿ ಭಾರೀ ಕುತೂಹಲ ಹುಟ್ಟಿಸಿರುವ ಕಾಂಗ್ರೆಸ್ ನಾಯಕತ್ವ ವಿಚಾರ ಇದೀಗ ನಿರ್ಣಾಯಕ ಹಂತ ತಲುಪಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಇಂದು ಮಹತ್ವದ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.

ಮುಖ್ಯಮಂತ್ರಿ ಕುರ್ಚಿಗೆ ಸಂಬಂಧಿಸಿದ ಅಂತಿಮ ಹಂತದ ಚರ್ಚೆಗಳು ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಆರಂಭವಾಗಿದ್ದು, ರಾಜ್ಯದ ರಾಜಕೀಯ ವಲಯದ ಸಂಪೂರ್ಣ ಗಮನ ದೆಹಲಿಯತ್ತ ನೆಟ್ಟಿದೆ.

ಹೈವೋಲ್ಟೇಜ್ ಸಭೆಗೆ ಮುನ್ನ ಎಐಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರಸ್ಪರ ಮುಖಾಮುಖಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗಿನ ಮಹತ್ವದ ಭೇಟಿಗೂ ಮುನ್ನ ಇಬ್ಬರು ನಾಯಕರು ನಡೆಸಿದ ಈ ಚರ್ಚೆ ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಇಂದು ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ಮೂರು ಹಂತದ ಮಹತ್ವದ ಸಭೆಗಳು ನಡೆಯಲಿವೆ ಎಂದು ತಿಳಿದುಬಂದಿದೆ. ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಪ್ರತ್ಯೇಕವಾಗಿ ಸಭೆ ನಡೆಸಿ ಅಭಿಪ್ರಾಯ ಆಲಿಸಲಿದ್ದಾರೆ.

ಅದರ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒನ್-ಟು-ಒನ್ ಸಭೆಗೆ ಆಹ್ವಾನಿಸಿ ನಾಯಕತ್ವ, ಸಂಪುಟ ಪುನರ್‌ರಚನೆ ಹಾಗೂ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.

ಮೊದಲ ಎರಡು ಹಂತದ ಸಭೆಗಳಲ್ಲಿ ಸಿಎಂ ಹಾಗೂ ಡಿಸಿಎಂ ವ್ಯಕ್ತಪಡಿಸುವ ಅಭಿಪ್ರಾಯಗಳ ಆಧಾರದ ಮೇಲೆ ಮೂರನೇ ಹಂತದ ಸಭೆ ನಡೆಯಲಿದ್ದು, ಅಗತ್ಯವಿದ್ದರೆ ಇಬ್ಬರು ನಾಯಕರನ್ನೂ ಒಟ್ಟಿಗೆ ಕೂರಿಸಿ ಹೈಕಮಾಂಡ್ ಅಂತಿಮ ಸಂಧಾನ ಸೂತ್ರದ ಬಗ್ಗೆ ಚರ್ಚೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ವಿಶೇಷವೆಂದರೆ, ಬೆಳಿಗ್ಗೆ ಇಬ್ಬರೂ ನಾಯಕರು ಕರ್ನಾಟಕ ಭವನದಲ್ಲಿದ್ದರೂ ಪರಸ್ಪರ ಭೇಟಿಯಾಗಿರಲಿಲ್ಲ. ಆದರೆ ಬಳಿಕ ಎಐಸಿಸಿ ಕಚೇರಿಯಲ್ಲಿ ಮುಖಾಮುಖಿಯಾಗಿ ಮಾತುಕತೆ ನಡೆಸಿರುವುದು ಕಾಂಗ್ರೆಸ್ ಒಳರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ನಕಲಿ ಬಿಲ್‌, ಕೋಟಿ ಕೋಟಿ ಲೂಟಿ…ಕೊನೆಗೂ ಬಯಲಾಯ್ತು ಪಶು ವಿವಿ ಬಹುಕೋಟಿ ಹಗರಣ – ಮಾಜಿ ಉಪಕುಲಪತಿ ಸೇರಿ ಆರು ಮಂದಿ ಬಂಧನ

0

ಬೀದರ್: ಹಲವು ವರ್ಷಗಳಿಂದ ರಾಜ್ಯ ರಾಜಕಾರಣ ಹಾಗೂ ಶಿಕ್ಷಣ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಬೀದರ್ ಪಶು ವೈದ್ಯಕೀಯ ವಿಶ್ವವಿದ್ಯಾಲಯದ 45 ಕೋಟಿ ರೂಪಾಯಿ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬಹುಕೋಟಿ ಅವ್ಯವಹಾರ ಪ್ರಕರಣದಲ್ಲಿ ಮಾಜಿ ಉಪಕುಲಪತಿ ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ.

2017-18ರ ಅವಧಿಯಲ್ಲಿ ವಿಶ್ವವಿದ್ಯಾಲಯದ ಖರೀದಿ ಪ್ರಕ್ರಿಯೆಯಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸಾರ್ವಜನಿಕ ಹಣವನ್ನು ಲೂಟಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ತನಿಖೆಯಲ್ಲಿ ಆರೋಪಿಗಳು ಸೇರಿ ಸುಮಾರು 45 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಅವ್ಯವಹಾರ ನಡೆಸಿರುವುದು ಬಹಿರಂಗವಾಗಿದೆ.

ಮಾಜಿ ಉಪಕುಲಪತಿ ಪ್ರೊ. ಹೆಚ್.ಡಿ. ನಾರಾಯಣಸ್ವಾಮಿ, ಹಣಕಾಸು ನಿಯಂತ್ರಣಾಧಿಕಾರಿ ಕೆ.ಎಲ್. ಸುರೇಶ್ ಸೇರಿದಂತೆ ಮೃತ್ಯುಂಜಯ ಹಿರೇಮಠ, ಬೊಪಣ್ಣ, ಮಂಜುನಾಥ ಮತ್ತು ರಾಮಗೊಂಡರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದ ತನಿಖೆ 2021ರಿಂದಲೇ ಆರಂಭವಾಗಿತ್ತು. ಬಳಿಕ 2025ರ ಸೆಪ್ಟೆಂಬರ್‌ನಲ್ಲಿ ರಾಜ್ಯದ 25ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಮಹತ್ವದ ದಾಖಲೆಗಳು ಮತ್ತು ಹಣಕಾಸು ವ್ಯವಹಾರಗಳ ವಿವರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಸದ್ಯ ಬಂಧಿತರನ್ನು ವಿಚಾರಣೆಗೆ ಒಳಪಡಿಸಿರುವ ಲೋಕಾಯುಕ್ತ ಪೊಲೀಸರು, ಹಗರಣದಲ್ಲಿ ಇನ್ನೂ ಹಲವು ಅಧಿಕಾರಿಗಳು ಮತ್ತು ಖಾಸಗಿ ಕಂಪನಿಗಳ ಪಾತ್ರವಿದೆಯೇ ಎಂಬ ದಿಕ್ಕಿನಲ್ಲಿ ತನಿಖೆ ಮುಂದುವರಿಸಿದ್ದಾರೆ.

error: Content is protected !!