ಕಾರವಾರ: ಸಾಮಾಜಿಕ ಜಾಲತಾಣಕ್ಕಾಗಿ ರೀಲ್ಸ್ ಮಾಡಲು ಹೋಗಿದ್ದ ಐಟಿ ಉದ್ಯೋಗಿಯೊಬ್ಬ ಸಮುದ್ರದ ಅಲೆಗಳಿಗೆ ಕೊಚ್ಚಿಹೋಗಿ ನಾಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಸಮುದ್ರತೀರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಪುಣೆ ಮೂಲದ 26 ವರ್ಷದ ಜೀವನ್ ಭಟ್ಟರಾಯಿ ನಾಪತ್ತೆಯಾದ ಯುವಕ. ಐವರು ಸ್ನೇಹಿತರೊಂದಿಗೆ ಕುಮಟಾ ಭಾಗಕ್ಕೆ ಪ್ರವಾಸಕ್ಕೆ ಬಂದಿದ್ದ ಅವರು ಖಾಸಗಿ ರೆಸಾರ್ಟ್ನಲ್ಲಿ ಕಳೆದ ಮೂರು ದಿನಗಳಿಂದ ತಂಗಿದ್ದರು.
ಭಾನುವಾರ ರೆಸಾರ್ಟ್ನಿಂದ ಚೆಕ್ಔಟ್ ಆಗುವ ಮುನ್ನ ಸ್ನೇಹಿತರೊಂದಿಗೆ ಕಡ್ಲೆ ಸಮುದ್ರತೀರಕ್ಕೆ ತೆರಳಿ ರೀಲ್ಸ್ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ವೇಳೆ ಸಮುದ್ರಕ್ಕೆ ಇಳಿದ ಜೀವನ್ ಭಟ್ಟರಾಯಿ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕರಾವಳಿ ಕಾವಲುಪಡೆ, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಆದರೆ ಈವರೆಗೂ ಯುವಕನ ಸುಳಿವು ಪತ್ತೆಯಾಗಿಲ್ಲ.
ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.

