Home Blog

ಜಿಲೆಟಿನ್ ಕಡ್ಡಿ ಪತ್ತೆಯಾದ ಸ್ಥಳದಲ್ಲೇ ಟೈಮರ್ ಕೂಡ ಪತ್ತೆ; NIA ತನಿಖೆ ಬಗ್ಗೆ ಪರಮೇಶ್ವರ್ ಹೇಳಿದ್ದೇನು..?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಪತ್ತೆಯಾದ ಜಿಲೆಟಿನ್ ಕಡ್ಡಿ ಮತ್ತು ಟೈಮರ್ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಂಬ್ ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಆತನ ವಿಚಾರಣೆ ನಡೆಯುತ್ತಿದೆ. ಇದೇ ವೇಳೆ ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಪತ್ತೆಯಾದ ಜಿಲೆಟಿನ್ ಕಡ್ಡಿ ಸೇರಿದಂತೆ ಎಲ್ಲಾ ಅನುಮಾನಾಸ್ಪದ ವಸ್ತುಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಈ ಪ್ರಕರಣದ ತನಿಖೆ ನಡೆಸಲು ಎನ್‌ಐಎ ಸಹ ಮನವಿ ಮಾಡಿದೆ. ಹೀಗಾಗಿ ತನಿಖೆಗೆ ಅವರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ ಪರಮೇಶ್ವರ್, ಪ್ರಧಾನಿ ಭೇಟಿ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಭದ್ರತಾ ವ್ಯವಸ್ಥೆಗಳು ಈಗಾಗಲೇ ಜಾರಿಯಲ್ಲಿದ್ದವು ಎಂದರು.

ಕಾರ್ಯಕ್ರಮ ಆರಂಭಕ್ಕೂ ಸುಮಾರು ಎರಡು ಗಂಟೆಗಳ ಮುನ್ನ, ಅಂದರೆ ಬೆಳಗ್ಗೆ 9 ಗಂಟೆ ಸುಮಾರಿಗೆ ಜಿಲೆಟಿನ್ ಕಡ್ಡಿ ಪತ್ತೆಯಾಗಿರುವುದು ಭದ್ರತಾ ಸಿಬ್ಬಂದಿಯ ಎಚ್ಚರಿಕೆಯನ್ನು ತೋರಿಸುತ್ತದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಈ ಘಟನೆಗೆ ಭಯೋತ್ಪಾದನಾ ಸಂಘಟನೆಗಳ ಸಂಪರ್ಕವಿದೆಯೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದರು.

ಇದೇ ವೇಳೆ ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯದ ಅಂತಿಮ ತೀರ್ಪನ್ನು ಕಾದು ನೋಡಬೇಕಿದೆ ಎಂದರು. ಮರು ಎಣಿಕೆಯಲ್ಲಿ 250ಕ್ಕೂ ಹೆಚ್ಚು ಮತಗಳ ವ್ಯತ್ಯಾಸ ಕಂಡುಬಂದಿರುವುದು ಮೊದಲ ಎಣಿಕೆ ಪ್ರಕ್ರಿಯೆಯಲ್ಲಿ ಲೋಪವಾಗಿರುವ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಮತ ಎಣಿಕೆಯಲ್ಲಿ ಅಕ್ರಮ ಅಥವಾ ತಾಂತ್ರಿಕ ದೋಷಗಳ ಬಗ್ಗೆ ದಾಖಲಾಗಿರುವ ದೂರಿನ ತನಿಖೆಯನ್ನು ರಾಜ್ಯ ಪೊಲೀಸರು ನಡೆಸುತ್ತಿದ್ದು, ವಿಧಿವಿಜ್ಞಾನ ಪ್ರಯೋಗಾಲಯದಲ್ಲಿಯೂ ಪರಿಶೀಲನೆ ನಡೆಯಲಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.

ಪ್ರಧಾನಿ ಭೇಟಿ ವೇಳೆ ಜಿಲೆಟಿನ್ ಪತ್ತೆ ರಾಜ್ಯಕ್ಕೆ ಅವಮಾನ: ಸರ್ಕಾರದ ವಿರುದ್ಧ ಅರಗ ಜ್ಞಾನೇಂದ್ರ ವಾಗ್ದಾಳಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ವೇಳೆ ಜಿಲೆಟಿನ್ ಪತ್ತೆಯಾಗಿರುವುದು ರಾಜ್ಯಕ್ಕೆ ತಲೆತಗ್ಗಿಸುವ ಸಂಗತಿ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಭೇಟಿಯಂತಹ ಅತ್ಯಂತ ಮಹತ್ವದ ಕಾರ್ಯಕ್ರಮಕ್ಕೆ ಸಮರ್ಪಕ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದ ಪ್ರಧಾನಮಂತ್ರಿಯವರಿಗೂ ಸೂಕ್ತ ರಕ್ಷಣೆ ನೀಡಲು ಸಾಧ್ಯವಾಗದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

ಈ ಘಟನೆ ಕರ್ನಾಟಕದ ಗೌರವಕ್ಕೆ ಧಕ್ಕೆಯುಂಟುಮಾಡಿದ್ದು, ರಾಜ್ಯದ ಭದ್ರತಾ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎಬ್ಬಿಸಿದೆ ಎಂದು ಟೀಕಿಸಿದರು.

ಜಿಬಿಎ ಚುನಾವಣೆಯನ್ನು ಮುಂದೂಡುವಂತೆ ಸರ್ಕಾರ ಮನವಿ ಮಾಡಿರುವ ವಿಚಾರಕ್ಕೂ ಅರಗ ಜ್ಞಾನೇಂದ್ರ ತೀವ್ರ ವಿರೋಧ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರಕ್ಕೆ ಧೈರ್ಯವಿಲ್ಲ. ಇದು ಕಾಂಗ್ರೆಸ್‌ನ ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ತೋರಿಸುತ್ತದೆ ಎಂದು ಆರೋಪಿಸಿದರು.

ಪಂಚರಾಜ್ಯ ಚುನಾವಣಾ ಫಲಿತಾಂಶಗಳಿಂದ ಕಾಂಗ್ರೆಸ್ ದೃತಿಗೆಟ್ಟು ಹೋಗಿದ್ದು, ಜನರ ಆಕ್ರೋಶವನ್ನು ಎದುರಿಸಲು ಸಾಧ್ಯವಾಗದೆ ಚುನಾವಣೆ ಮುಂದೂಡುವ ತಂತ್ರ ಅನುಸರಿಸುತ್ತಿದೆ ಎಂದು ಹೇಳಿದರು. ಇದು ಜನಾಭಿಪ್ರಾಯದಿಂದ ತಪ್ಪಿಸಿಕೊಳ್ಳುವ ರಾಜಕೀಯ ತಂತ್ರವಾಗಿದ್ದು, ಎಲ್ಲರಿಗೂ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಮೇ 3ರಂದು ನಡೆದ ನೀಟ್ ಪರೀಕ್ಷೆ ರದ್ದು – ಸಿಬಿಐ ತನಿಖೆಗೆ ಆದೇಶ

ನವದೆಹಲಿ: ಮೇ 3ರಂದು ನಡೆದಿದ್ದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್ ಯುಜಿ)ಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ರದ್ದುಗೊಳಿಸಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯಾದ ಆರೋಪಗಳ ಹಿನ್ನೆಲೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಮರುಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಎನ್‌ಟಿಎ ತಿಳಿಸಿದೆ.

ರಾಜಸ್ಥಾನದ ಸಿಕಾರ್‌ನಲ್ಲಿ ಮೇ 1ರಂದೇ ‘ಊಹೆ ಪತ್ರಿಕೆ’ ಎಂಬ ಹೆಸರಿನಲ್ಲಿ ಕೆಲವು ಪ್ರಶ್ನೆಗಳು ಹರಿದಾಡಿದ್ದವು ಎಂದು ವರದಿಯಾಗಿದೆ. ಈ ಊಹೆ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳ 100ಕ್ಕೂ ಹೆಚ್ಚು ಪ್ರಶ್ನೆಗಳು ಮೂಲ ಪ್ರಶ್ನೆ ಪತ್ರಿಕೆಗೆ ಹೋಲಿಕೆಯಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಬೆಳವಣಿಗೆ ದೇಶಾದ್ಯಂತ ಪರೀಕ್ಷಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಪರೀಕ್ಷೆಯ ಪಾರದರ್ಶಕತೆ ಕುರಿತು ಪ್ರಶ್ನೆಗಳು ಉದ್ಭವಿಸಿವೆ.

ಪ್ರಕರಣದ ತನಿಖೆಯನ್ನು ರಾಜಸ್ಥಾನದ ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ಆರಂಭಿಸಿದೆ. ಪ್ರಾಥಮಿಕ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಎನ್‌ಟಿಎ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಿದೆ ಎಂದು ತಿಳಿಸಿದೆ.

ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಅವ್ಯವಹಾರ ನಡೆದಿದೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ತೀವ್ರಗೊಳಿಸಲಾಗಿದೆ. ಗಮನಾರ್ಹವಾಗಿ, 2024 ಮತ್ತು 2025ರಲ್ಲಿಯೂ ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಇದೇ ರೀತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳು ಕೇಳಿಬಂದಿದ್ದವು.

2024ರ ಪ್ರಕರಣದಲ್ಲಿ ಸಿಬಿಐ ಪಾಟ್ನಾ ಮತ್ತು ಹಜಾರಿಬಾಗ್ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಹಲವು ಆರೋಪಿಗಳನ್ನು ಬಂಧಿಸಿತ್ತು. ಇಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಭದ್ರತೆ ಮತ್ತು ವಿಶ್ವಾಸಾರ್ಹತೆ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.

“ಪಂಚೆ ರಾಜಕೀಯದಿಂದ ಸೂಟ್ ರಾಜಕೀಯದವರೆಗೆ”: ವ್ಯಂಗ್ಯವಾಡಿದ ಅಣ್ಣಾಮಲೈ

ತಮಿಳುನಾಡು ರಾಜಕೀಯದಲ್ಲಿ ದಳಪತಿ ವಿಜಯ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿರುವ ಘಟನೆ ಕೇವಲ ಅಧಿಕಾರ ಬದಲಾವಣೆಗಷ್ಟೇ ಸೀಮಿತವಾಗದೆ, ರಾಜ್ಯದ ರಾಜಕೀಯ ಶೈಲಿ ಮತ್ತು ಪರಂಪರೆಯ ಮೇಲೆಯೂ ಪ್ರಶ್ನೆಗಳನ್ನು ಎತ್ತಿದೆ.

ಪ್ರಮಾಣವಚನ ಸಮಾರಂಭದಲ್ಲಿ ವಿಜಯ್ ಅವರು ಧರಿಸಿದ ಕಪ್ಪು ಸೂಟು, ಬಿಳಿ ಶರ್ಟ್ ಮತ್ತು ಪ್ಯಾಂಟ್ ತಮಿಳುನಾಡಿನ ರಾಜಕೀಯದಲ್ಲಿ ಸಾಮಾನ್ಯವಾಗಿರುವ ಬಿಳಿ ಪಂಚೆ-ಶರ್ಟ್ ಸಂಪ್ರದಾಯಕ್ಕೆ ವಿರುದ್ಧವಾಗಿ ಕಾಣಿಸಿಕೊಂಡಿದೆ. ಈ ಬದಲಾವಣೆ ರಾಜಕೀಯ ಸಂಕೇತವಾಗಿ ವಿಶ್ಲೇಷಿಸಲ್ಪಡುತ್ತಿದೆ.

ಈ ನಡುವೆ ಬಿಜೆಪಿ ಮುಖಂಡ ಕೆ. ಅಣ್ಣಾಮಲೈ ಯುಎಸ್‌ನಲ್ಲಿ ನಡೆದ ಸಂವಾದದಲ್ಲಿ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಅವರು ತಮಿಳುನಾಡಿನ ದ್ರಾವಿಡ ರಾಜಕೀಯವನ್ನು ಪ್ರವಾಹದ ಉದಾಹರಣೆಯ ಮೂಲಕ ವಿವರಿಸಿದರು.

ಅವರ ಪ್ರಕಾರ, 1970ರಿಂದ 2020ರವರೆಗೆ ಕರುಣಾನಿಧಿ, ಸ್ಟಾಲಿನ್ ಮತ್ತು ಉದಯನಿಧಿ ಸ್ಟಾಲಿನ್ ಪ್ರವಾಹ ಸಂದರ್ಭಗಳಲ್ಲಿ ಸಾರ್ವಜನಿಕ ದೃಶ್ಯಗಳಲ್ಲಿ ಕಾಣಿಸಿಕೊಂಡರೂ, ಪ್ರವಾಹ ನಿರ್ವಹಣೆಯಲ್ಲಿ ಶಾಶ್ವತ ಪರಿಹಾರಗಳ ಕೊರತೆ ಮುಂದುವರಿದಿದೆ. ಇದನ್ನು ಅವರು ಪರೋಕ್ಷವಾಗಿ ಕುಟುಂಬ ರಾಜಕೀಯದ ಆಡಳಿತ ಶೈಲಿಗೆ ಸಂಬಂಧಿಸಿದ್ದಾರೆ.

ಅದೇ ವೇಳೆ ವಿಜಯ್ ಅವರ ಸೂಟ್ ರಾಜಕೀಯ ಶೈಲಿಯನ್ನು ಉಲ್ಲೇಖಿಸಿದ ಅಣ್ಣಾಮಲೈ, ಹೊಸ ನಾಯಕತ್ವವು ಕೇವಲ ಚಿತ್ರಾತ್ಮಕ ರಾಜಕೀಯವಲ್ಲದೆ, ನೆಲಮಟ್ಟದ ಆಡಳಿತ ಸವಾಲುಗಳನ್ನು ಹೇಗೆ ಎದುರಿಸುತ್ತದೆ ಎಂಬುದು ಮುಂದಿನ ಪರೀಕ್ಷೆ ಎಂದು ಹೇಳಿದ್ದಾರೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಹೇಳಿಕೆಗಳು ತಮಿಳುನಾಡಿನ ಪರಂಪರಾತ್ಮಕ ರಾಜಕೀಯ ಮತ್ತು ಹೊಸ ರಾಜಕೀಯ ಶೈಲಿಯ ನಡುವಿನ ಸ್ಪಷ್ಟ ವಿಭಜನೆಯನ್ನು ಹೊರಹಾಕುತ್ತಿವೆ. ವಿಜಯ್ ಅವರ ಉದಯದೊಂದಿಗೆ ರಾಜ್ಯ ರಾಜಕೀಯದಲ್ಲಿ ‘ಶೈಲಿ vs ಆಡಳಿತ’ ಚರ್ಚೆ ತೀವ್ರಗೊಂಡಿದೆ.

ಇಂಧನ ಉಳಿತಾಯಕ್ಕೆ ಪ್ರಧಾನಿ ಮೋದಿ ಕರೆ; ವರ್ಕ್ ಫ್ರಂ ಹೋಮ್, ಆನ್ ಲೈನ್ ಕ್ಲಾಸ್ʼಗೆ ಸಲಹೆ

ವಡೋದರಾ: ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಹಾಗೂ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಇಂಧನ ಉಳಿತಾಯದ ಬಗ್ಗೆ ಮಹತ್ವದ ಸಲಹೆ ನೀಡಿದ್ದಾರೆ.

ವರ್ಕ್ ಫ್ರಂ ಹೋಮ್ ವ್ಯವಸ್ಥೆ, ಸಾರ್ವಜನಿಕ ಸಾರಿಗೆ ಬಳಕೆ ಮತ್ತು ಶಾಲಾ-ಕಾಲೇಜುಗಳಲ್ಲಿ ಆನ್‌ಲೈನ್ ತರಗತಿಗಳನ್ನು ಪರಿಗಣಿಸುವಂತೆ ಪ್ರಧಾನಿ ಮನವಿ ಮಾಡಿದ್ದಾರೆ.

ಗುಜರಾತ್‌ನ ವಡೋದರಾದಲ್ಲಿ ಸರ್ದಾರ್‌ಧಾಮ್ ಭವನ-3 ಹಾಗೂ ವಿದ್ಯಾರ್ಥಿನಿಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಇಂಧನ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕೆಂದು ಕರೆ ನೀಡಿದರು.

ಕೋವಿಡ್-19 ಅವಧಿಯಲ್ಲಿ ಅನುಸರಿಸಿದ್ದ ಮಾದರಿಯಂತೆ, ಶಾಲಾ-ಕಾಲೇಜುಗಳು ತಾತ್ಕಾಲಿಕವಾಗಿ ಆನ್‌ಲೈನ್ ತರಗತಿಗಳನ್ನು ನಡೆಸುವ ಕುರಿತು ಆಲೋಚಿಸಬೇಕು ಎಂದು ಸಲಹೆ ನೀಡಿದರು.

ಇದರಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಪ್ರಯಾಣ ಕಡಿಮೆಯಾಗಿದ್ದು, ಇಂಧನ ಉಳಿತಾಯಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಪೆಟ್ರೋಲ್ ಹಾಗೂ ಡೀಸೆಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವಂತೆ ಮನವಿ ಮಾಡಿದ ಪ್ರಧಾನಿ, ಮೆಟ್ರೋ ರೈಲು, ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಹೆಚ್ಚು ಬಳಸುವಂತೆ ದೇಶವಾಸಿಗಳಿಗೆ ಕರೆ ನೀಡಿದರು.

ಅದೇ ರೀತಿ ಕಾರು ಹಂಚಿಕೆ ವ್ಯವಸ್ಥೆಯನ್ನು ಉತ್ತೇಜಿಸುವ ಮೂಲಕ ಇಂಧನ ಬಳಕೆ ಕಡಿಮೆ ಮಾಡಬಹುದು ಎಂದರು.

ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಸಾಧ್ಯವಾದಷ್ಟು ವರ್ಚುವಲ್ ಸಭೆಗಳನ್ನು ನಡೆಸಬೇಕು. ಅಗತ್ಯವಿರುವ ಕಡೆ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

ಇಂಧನ ಉಳಿತಾಯದ ಜೊತೆಗೆ ದೇಶದ ವಿದೇಶಿ ವಿನಿಮಯ ಮೀಸಲು ಸಂರಕ್ಷಿಸುವ ನಿಟ್ಟಿನಲ್ಲಿ ಖಾದ್ಯ ತೈಲ ಬಳಕೆಯನ್ನು ಮಿತಗೊಳಿಸುವುದು, ಚಿನ್ನದ ಖರೀದಿಯನ್ನು ಮುಂದೂಡುವುದು ಹಾಗೂ ಅನಗತ್ಯ ವಿದೇಶಿ ಪ್ರವಾಸಗಳನ್ನು ತಪ್ಪಿಸುವಂತೆ ಮನವಿ ಮಾಡಿದರು. ಜಾಗತಿಕ ಆರ್ಥಿಕ ಸವಾಲುಗಳ ನಡುವೆ ದೇಶದ ಆರ್ಥಿಕ ಸ್ಥಿರತೆ ಕಾಪಾಡಲು ಪ್ರತಿಯೊಬ್ಬ ನಾಗರಿಕರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಹಿಮಂತ ಬಿಸ್ವಾ ಶರ್ಮಾ ಮತ್ತೆ ಅಸ್ಸಾಂ ಸಿಎಂ: ಸತತ ಎರಡನೇ ಬಾರಿ ಅಧಿಕಾರ ಸ್ವೀಕಾರ

ಗುವಾಹಟಿ: ಹಿಮಂತ ಬಿಸ್ವಾ ಶರ್ಮಾ ಅವರು ಸತತ ಎರಡನೇ ಬಾರಿಗೆ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅಸ್ಸಾಂ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಗುವಾಹಟಿಯ ಖಾನಾಪಾರಾದ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಹಿಮಂತ ಬಿಸ್ವಾ ಶರ್ಮಾ ಹಾಗೂ ಅವರ ಸಚಿವ ಸಂಪುಟಕ್ಕೆ ಪ್ರಮಾಣವಚನ ಬೋಧಿಸಿದರು.

ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ನಾಲ್ವರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಇವರಲ್ಲಿ ಬಿಜೆಪಿಯ ಅಜಂತಾ ನಿಯೋಗ್ ಮತ್ತು ರಾಮೇಶ್ವರ್ ತೇಲಿ, ಅಸ್ಸಾಂ ಗಣ ಪರಿಷತ್‌ನ ಅತುಲ್ ಬೋರಾ ಹಾಗೂ ಬೊಡೋ ಪೀಪಲ್ಸ್ ಫ್ರಂಟ್‌ನ ಚರಣ್ ಬೋರೋ ಸೇರಿದ್ದಾರೆ.

ಸತತ ಎರಡನೇ ಬಾರಿಗೆ ಅಸ್ಸಾಂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ಕಾಂಗ್ರೆಸ್ಸೇತರ ನಾಯಕ ಎಂಬ ಹೆಗ್ಗಳಿಕೆಗೆ ಹಿಮಂತ ಬಿಸ್ವಾ ಶರ್ಮಾ ಪಾತ್ರರಾಗಿದ್ದಾರೆ.

ಇತ್ತೀಚೆಗೆ ನಡೆದ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಪ್ರದರ್ಶನ ನೀಡಿದ್ದು, ಒಟ್ಟು 126 ಕ್ಷೇತ್ರಗಳ ಪೈಕಿ 102 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದಿತ್ತು.

ಈ ಭಾರೀ ಗೆಲುವಿನ ಬೆನ್ನಲ್ಲೇ ಹೊಸ ಸರ್ಕಾರ ರಚನೆಯಾಗಿದ್ದು, ಮತ್ತೊಮ್ಮೆ ಹಿಮಂತ ಬಿಸ್ವಾ ಶರ್ಮಾ ನೇತೃತ್ವಕ್ಕೆ ಜನಮಂಡೇಟ್ ದೊರೆತಿದೆ.

ಧರ್ಮಸ್ಥಳ ಬುರುಡೆ ಪ್ರಕರಣ​​: ಉತ್ಖನನ ನಡೆದು 10 ತಿಂಗಳಾದರೂ ಕೂಲಿ ಕಾರ್ಮಿಕರ ಕೈ ಸೇರದ ಹಣ

0

ಮಂಗಳೂರು, ಮೇ 12: ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆಗೆ ಸಂಬಂಧಿಸಿದ ಉತ್ಖನನ ಕಾರ್ಯಾಚರಣೆ ಇದೀಗ ಆಡಳಿತಾತ್ಮಕ ವಿವಾದಕ್ಕೆ ಕಾರಣವಾಗಿದೆ. ಎಸ್‌ಐಟಿ ಸೂಚನೆಯಂತೆ ನಡೆಸಲಾಗಿದ್ದ 17 ಸ್ಥಳಗಳ ಉತ್ಖನನ ಕಾರ್ಯದ ವೆಚ್ಚ ಪಾವತಿ ಇನ್ನೂ ಪೂರ್ಣಗೊಂಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.

2025ರ ಜುಲೈ ಅಂತ್ಯದಿಂದ ಆಗಸ್ಟ್ ಮಧ್ಯದವರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಜೆಸಿಬಿ, ಹಿಟಾಚಿ ಸೇರಿದಂತೆ ಯಂತ್ರೋಪಕರಣಗಳು ಹಾಗೂ ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳಲಾಗಿತ್ತು. ಆದರೆ ಕಾರ್ಯಾಚರಣೆ ಮುಗಿದು 10 ತಿಂಗಳು ಕಳೆದರೂ ಸುಮಾರು 2 ಲಕ್ಷ ರೂ.ಗೂ ಅಧಿಕ ಬಿಲ್ ಬಾಕಿ ಉಳಿದಿದೆ ಎಂದು ಮಾಲಕರು ತಿಳಿಸಿದ್ದಾರೆ.

ಜೆಸಿಬಿ ಬಾಡಿಗೆ, ಕಾರ್ಮಿಕರ ಕೂಲಿ, ನೀರು, ಶಾಮಿಯಾನ ಸೇರಿದಂತೆ ಎಲ್ಲಾ ವೆಚ್ಚಗಳನ್ನು ಸೇರಿಸಿದಾಗ ಒಟ್ಟು ಬಾಕಿ ಮೊತ್ತ ಹೆಚ್ಚಾಗಿದೆ. ವಿಶೇಷವಾಗಿ ಹಿಟಾಚಿ ಯಂತ್ರವನ್ನು ಕೇವಲ ನಿರ್ದಿಷ್ಟ ದಿನಗಳಷ್ಟೇ ಬಳಸಲಾಗಿದ್ದರೂ ಅದರ ಬಾಡಿಗೆ ಹಣ ನೀಡಿಲ್ಲ ಎಂದು ಆರೋಪಿಸಲಾಗಿದೆ.

ಬಿಲ್ ಪಾವತಿ ವಿಚಾರದಲ್ಲಿ ಗ್ರಾಮ ಪಂಚಾಯತ್ ಮತ್ತು ಎಸ್‌ಐಟಿ ನಡುವೆ ಸ್ಪಷ್ಟತೆ ಇಲ್ಲದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಒಂದೆಡೆ ಪಂಚಾಯತ್ ಎಸ್‌ಐಟಿಯತ್ತ ಹೊಣೆ ತೋರಿಸುತ್ತಿದ್ದರೆ, ಮತ್ತೊಂದೆಡೆ ಎಸ್‌ಐಟಿ ಬಿಲ್ ಪಾವತಿ ಈಗಾಗಲೇ ನಡೆದಿದೆ ಎಂದು ಹೇಳುತ್ತಿದೆ ಎಂಬ ವಿರೋಧಾಭಾಸದ ಹೇಳಿಕೆಗಳು ಹೊರಬಿದ್ದಿವೆ.

ಇದರಿಂದ ಅಸಮಾಧಾನಗೊಂಡಿರುವ ಕೂಲಿ ಕಾರ್ಮಿಕರು ಮತ್ತು ಯಂತ್ರ ಮಾಲಕರು ತಕ್ಷಣ ಬಾಕಿ ಹಣ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೌರಿಂಗ್ ಆಸ್ಪತ್ರೆ ದುರಂತದ ತನಿಖೆ ಪೂರ್ಣ: ಸರ್ಕಾರಕ್ಕೆ ಸಂಪೂರ್ಣ ವರದಿ ನೀಡಿದ ಜಿಲ್ಲಾಧಿಕಾರಿ

ಬೆಂಗಳೂರು: ಬೌರಿಂಗ್ ಆಸ್ಪತ್ರೆಯಲ್ಲಿ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜಗದೀಶ್ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆಸಲಾಗಿದ್ದು, ದುರಂತಕ್ಕೆ ಆರೋಗ್ಯ ಇಲಾಖೆ ಇಂಜಿನಿಯರ್‌ಗಳು, ಗುತ್ತಿಗೆದಾರರು ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂಬ ಅಂಶ ವರದಿಯಲ್ಲಿ ಉಲ್ಲೇಖವಾಗಿದೆ.

ತನಿಖಾ ವರದಿಯ ಪ್ರಕಾರ, ಗೋಡೆಯ ಪಕ್ಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಸುರಿದಿರುವುದೇ ದುರಂತಕ್ಕೆ ಮೂಲ ಕಾರಣವಾಗಿದೆ. ಗೋಡೆ ಸಮೀಪ ಸುರಿದಿದ್ದ ಮಣ್ಣನ್ನು ಸೂಕ್ತ ಸಮಯದಲ್ಲಿ ತೆರವುಗೊಳಿಸಲು ಗುತ್ತಿಗೆದಾರರು ಹಾಗೂ ಆರೋಗ್ಯ ಇಲಾಖೆ ಇಂಜಿನಿಯರ್‌ಗಳು ಕ್ರಮ ಕೈಗೊಂಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಸುಮಾರು 8 ಅಡಿ ಎತ್ತರದ ಗೋಡೆಯ ಪಕ್ಕದಲ್ಲಿ 6 ಅಡಿ ಎತ್ತರದವರೆಗೆ ಮಣ್ಣು ಸುರಿಯಲಾಗಿತ್ತು. ಜೊತೆಗೆ, ಗೋಡೆ ಸಮೀಪ ಕ್ರಿಕೆಟ್ ಆಡಲು ನೆಟ್ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ಮಣ್ಣು ಹಾಕಲಾಗಿತ್ತು ಎಂಬ ಮಾಹಿತಿ ಕೂಡ ತನಿಖೆಯಲ್ಲಿ ಬಹಿರಂಗವಾಗಿದೆ.

ಸಿಎಸ್ಆರ್ ನಿಧಿಯಡಿ ದಾನಿಯೊಬ್ಬರ ಸಹಕಾರದಿಂದ ಆಸ್ಪತ್ರೆ ಆವರಣದಲ್ಲಿ ಸ್ಟೇಡಿಯಂ ಮಾದರಿಯ ವ್ಯವಸ್ಥೆ ನಿರ್ಮಿಸಲು ಮುಂದಾಗಲಾಗಿತ್ತು. ಆದರೆ, ಈ ಕಾಮಗಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದು ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯವೂ ದುರಂತಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

BJP ಸಿಎಂ ಆಪ್ತ ಸಹಾಯಕ ಹತ್ಯೆ ಪ್ರಕರಣ CBI ಗೆ: ಮೂವರು ಆರೋಪಿಗಳು ಅರೆಸ್ಟ್!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಪ್ರಕರಣದ ತನಿಖೆಯನ್ನು ಇದೀಗ ರಾಜ್ಯ ಪೊಲೀಸರಿಂದ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಗಿದೆ.

ಮೇ 6ರ ರಾತ್ರಿ ಚಂದ್ರನಾಥ್ ರಥ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.

ಪ್ರಾಥಮಿಕ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿತ್ತು. ಬಳಿಕ ಪ್ರಕರಣದ ಗಂಭೀರತೆ ಹಾಗೂ ರಾಜಕೀಯ ಸಂವೇದನಾಶೀಲತೆಯನ್ನು ಪರಿಗಣಿಸಿ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 11ರಂದು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತನಿಖಾಧಿಕಾರಿಗಳು ಡಿಜಿಟಲ್ ಸುಳಿವುಗಳು ಮತ್ತು ಅಂತರರಾಜ್ಯ ಸಂಪರ್ಕದ ಆಧಾರದ ಮೇಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹತ್ಯೆಯ ಬಳಿಕ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳು ಟೋಲ್ ಪ್ಲಾಜಾದಲ್ಲಿ ಯುಪಿಐ ಮೂಲಕ ಹಣ ಪಾವತಿಸಿದ್ದರು. ಈ ಡಿಜಿಟಲ್ ಪಾವತಿ ಮಾಹಿತಿ ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವಾಗಿ ಪರಿಣಮಿಸಿತು.

ಯುಪಿಐ ವ್ಯವಹಾರದಿಂದ ದೊರೆತ ಮೊಬೈಲ್ ಸಂಖ್ಯೆ ಮತ್ತು ಇತರ ಡಿಜಿಟಲ್ ದಾಖಲೆಗಳ ಆಧಾರದ ಮೇಲೆ ಶಂಕಿತರ ಗುರುತು ಪತ್ತೆ ಹಚ್ಚಲಾಯಿತು.

ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಎಸ್ಐಟಿ ಅಧಿಕಾರಿಗಳು ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದರು.

ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಇದೀಗ ಸಿಬಿಐಗೆ ಹಸ್ತಾಂತರವಾಗಿರುವುದರಿಂದ ಹತ್ಯೆ ಹಿಂದೆ ಇರುವ ನಿಜವಾದ ಸಂಚು ಮತ್ತು ಸಾಧ್ಯತೆಯ ರಾಜಕೀಯ ಆಯಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗುವ ನಿರೀಕ್ಷೆ ಮೂಡಿದೆ.

ಪಂಚೆಯಿಂದ ಸೂಟ್‌ಗೆ ಶಿಫ್ಟ್: ದ್ರಾವಿಡ ರಾಜಕೀಯ ರೂಲ್ಸ್ ಬ್ರೇಕ್ ಮಾಡಿದ ಸಿಎಂ ವಿಜಯ್ 

ತಮಿಳುನಾಡಿನ ರಾಜಕೀಯದಲ್ಲಿ ದಶಕಗಳಿಂದ ಅಚಲವಾಗಿದ್ದ ದ್ರಾವಿಡ ಸಂಪ್ರದಾಯಗಳಿಗೆ ದಳಪತಿ ವಿಜಯ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬ್ರೇಕ್ ಹಾಕಿದ್ದಾರೆ. ಡಿಎಂಕೆ ಮತ್ತು ಎಐಎಡಿಎಂಕೆ ಯುಗವನ್ನು ಮೀರಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.

ವಿಜಯ್ ಅವರು ತಮಿಳುನಾಡಿನ ಸಾಂಪ್ರದಾಯಿಕ ರಾಜಕೀಯ ಉಡುಪು ವ್ಯವಸ್ಥೆಯನ್ನು ಬದಲಾಯಿಸಿರುವುದು ಈಗ ಪ್ರಮುಖ ಚರ್ಚೆಯಾಗಿದೆ. ಬಿಳಿ ಶರ್ಟ್-ಪಂಚೆ ಬದಲು ಸೂಟ್-ಬೂಟ್ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ರಾಜ್ಯದ ರಾಜಕೀಯ ಶೈಲಿಯಲ್ಲಿ ಮೊದಲ ಬಾರಿಗೆ ದೊಡ್ಡ ಬದಲಾವಣೆ ಎಂದು ಹೇಳಲಾಗುತ್ತಿದೆ.

ಅವರ ಕಪ್ಪು ಸೂಟ್ ಆಯ್ಕೆಯ ಹಿಂದೆ ಸೈದ್ಧಾಂತಿಕ ಸಂದೇಶವಿದೆ ಎಂದು ಹೇಳಲಾಗುತ್ತಿದ್ದು, ಪೆರಿಯಾರ್ ಅವರ ಅಸಮಾನತೆ ವಿರೋಧಿ ಚಿಂತನೆಗಳಿಗೆ ಅನುಗುಣವಾಗಿ ಕಪ್ಪು ಬಣ್ಣವನ್ನು ಪ್ರತಿರೋಧದ ಸಂಕೇತವಾಗಿ ಬಳಸಲಾಗಿದೆ ಎನ್ನಲಾಗುತ್ತಿದೆ. ಕ್ರಿಶ್ಚಿಯನ್ ಸಮುದಾಯ ಹಿನ್ನೆಲೆಯುಳ್ಳ ವಿಜಯ್, ಈ ಮೂಲಕ ತಮ್ಮ ರಾಜಕೀಯ ನಿಲುವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ ಎಂಬ ವಿಶ್ಲೇಷಣೆಯೂ ಇದೆ.

ಆದರೆ ಈ ಬದಲಾವಣೆ ವಿವಾದಕ್ಕೂ ಕಾರಣವಾಗಿದೆ. ಕೆಲ ರಾಜಕೀಯ ವಲಯಗಳು ವಿಜಯ್ ಅವರ ಸೂಟ್ ಶೈಲಿಯನ್ನು ‘ಎಲಿಟ್ ರಾಜಕೀಯ’ ಎಂದು ಪರಿಗಣಿಸುತ್ತಿದ್ದು, ಜನಸಾಮಾನ್ಯರ ಸಂಸ್ಕೃತಿಯಿಂದ ದೂರ ಸರಿಯುವ ಸೂಚನೆ ಎಂದು ಅಭಿಪ್ರಾಯಪಟ್ಟಿವೆ. ಮತ್ತೊಂದೆಡೆ, ಬೆಂಬಲಿಗರು ಇದನ್ನು ಆಧುನಿಕ ಆಡಳಿತ ಶೈಲಿ ಮತ್ತು ಹೊಸ ಯುಗದ ರಾಜಕೀಯ ಆರಂಭವೆಂದು ಶ್ಲಾಘಿಸುತ್ತಿದ್ದಾರೆ.

error: Content is protected !!