Home Blog Page 2

ಎಎಪಿ ತೊರೆದು ಬಿಜೆಪಿ ಸೇರ್ಪಡೆ ವಿಚಾರ: ರಾಘವ್ ಛಡ್ಡಾ ನಿರ್ಧಾರ ಸರಿಯಾಗಿದೆ – ಅಣ್ಣಾ ಹಜಾರೆ

0

ಮಹಾರಾಷ್ಟ್ರ: ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರಿರುವ ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಹಾಗೂ ಇತರೆ ಸದಸ್ಯರ ನಿರ್ಧಾರ ಕುರಿತು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ತೆಗೆದುಕೊಂಡಿರುವ ಈ ನಿರ್ಧಾರ ಸರಿಯಾದ ಮಾರ್ಗದ ಆಯ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಷ್ಟ್ರದ ಅಹಿಲ್ಯಾನಗರದಲ್ಲಿ ಮಾತನಾಡಿದ ಹಜಾರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯ ಹೊಂದುವ ಹಕ್ಕಿದೆ ಎಂದು ಹೇಳಿದರು. ಛಡ್ಡಾ ಸೇರಿದಂತೆ ಇತರರು ಪಕ್ಷದ ಒಳಗೆ ಕೆಲವು ಸಂಕಷ್ಟಗಳನ್ನು ಎದುರಿಸಿದ್ದರಿಂದಲೇ ಅವರು ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿರಬಹುದು ಎಂದು ತಿಳಿಸಿದ್ದಾರೆ.

ಇದೇ ವೇಳೆ, ಈ ಬೆಳವಣಿಗೆಗೆ ಎಎಪಿ ನಾಯಕತ್ವದ ವೈಫಲ್ಯವೂ ಕಾರಣವಾಗಿರಬಹುದು ಎಂದು ಅವರು ಟೀಕಿಸಿದರು. ಪಕ್ಷ ಸರಿಯಾದ ದಾರಿಯಲ್ಲಿ ನಡೆದಿದ್ದರೆ ಸದಸ್ಯರು ಹೊರಬರುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಪಕ್ಷದೊಳಗಿನ ಅಸಮಾಧಾನ ಮತ್ತು ಸಮಸ್ಯೆಗಳೇ ಈ ರೀತಿಯ ನಿರ್ಧಾರಕ್ಕೆ ಕಾರಣವಾಗಿರಬಹುದು. ಎಲ್ಲವೂ ಸಮರ್ಪಕವಾಗಿದ್ದರೆ ಅವರು ಪಕ್ಷ ತೊರೆಯುವ ಅಗತ್ಯವೇ ಇರಲಿಲ್ಲ ಎಂದು ಅಣ್ಣಾ ಹಜಾರೆ ತಿಳಿಸಿದ್ದಾರೆ.

ಇರಾನ್ ಸಂಘರ್ಷದ ಪರಿಣಾಮ: ಕಾಂಡೋಮ್ ದರದಲ್ಲಿ ಶೇ.20-30 ಏರಿಕೆ ಸಾಧ್ಯತೆ!

0

ಕೌಲಾಲಂಪುರ: ಇರಾನ್ ಸಂಘರ್ಷದ ಪರಿಣಾಮವಾಗಿ ಜಾಗತಿಕ ಪೂರೈಕೆ ಸರಪಳಿಯಲ್ಲಿ ಉಂಟಾಗಿರುವ ವ್ಯತ್ಯಯದಿಂದ ಕಾಂಡೋಮ್ ದರಗಳು ಶೀಘ್ರದಲ್ಲೇ ಹೆಚ್ಚಾಗುವ ಸಾಧ್ಯತೆ ಎದುರಾಗಿದೆ. ವಿಶ್ವದ ಅತಿದೊಡ್ಡ ಕಾಂಡೋಮ್ ತಯಾರಕ ಸಂಸ್ಥೆಯಾದ ಮಲೇಷ್ಯಾ ಮೂಲದ ಕಾರೆಕ್ಸ್ ಕಂಪನಿ, ಕಾಂಡೋಮ್ ದರಗಳು ಶೇ. 20ರಿಂದ 30ರವರೆಗೆ ಏರಿಕೆಯಾಗಬಹುದು ಎಂದು ತಿಳಿಸಿದೆ. ಹೆಚ್ಚುತ್ತಿರುವ ವೆಚ್ಚವನ್ನು ಗ್ರಾಹಕರ ಮೇಲೆ ಹಾಕುವುದು ಅನಿವಾರ್ಯವಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಜಾಗತಿಕ ಮಟ್ಟದಲ್ಲಿ ಕಾಂಡೋಮ್ ಪೂರೈಕೆಯ ಬಹುಪಾಲು ಮಲೇಷ್ಯಾ ಸೇರಿದಂತೆ ಆಗ್ನೇಯ ಏಷ್ಯಾದ ದೇಶಗಳಿಂದಲೇ ನಡೆಯುತ್ತದೆ. ಆದರೆ ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿ ಮತ್ತು ಕೆಂಪು ಸಮುದ್ರ ಮಾರ್ಗಗಳಲ್ಲಿ ಸಾಗಾಣಿಕೆಗೆ ಭದ್ರತಾ ಸವಾಲು ಎದುರಾಗಿದೆ. ಇದರ ಪರಿಣಾಮವಾಗಿ ಹಡಗುಗಳು ದೀರ್ಘವಾದ ಪರ್ಯಾಯ ಮಾರ್ಗಗಳನ್ನು ಬಳಸಬೇಕಾಗಿ ಬಂದಿದ್ದು, ಸಾಗಣೆ ಮತ್ತು ವಿಮಾ ವೆಚ್ಚಗಳು ಹೆಚ್ಚಳ ಕಂಡಿವೆ.

ಈ ಕಾರಣದಿಂದ ಯುರೋಪ್ ಮತ್ತು ಅಮೆರಿಕದಂತಹ ಮಾರುಕಟ್ಟೆಗಳಿಗೆ ಸರಕು ತಲುಪಲು ಹಿಂದಿನ 3-4 ವಾರಗಳ ಬದಲು ಈಗ 6ರಿಂದ 8 ವಾರಗಳ ಕಾಲ ಹಿಡಿಯುತ್ತಿದೆ. ಈ ವಿಳಂಬದಿಂದ ಮಾರುಕಟ್ಟೆಯಲ್ಲಿ ಕೃತಕ ಅಭಾವ ಉಂಟಾಗಿ ಬೆಲೆ ಏರಿಕೆಗೆ ಕಾರಣವಾಗುತ್ತಿದೆ.

ಇದೇ ವೇಳೆ, ಕಾಂಡೋಮ್ ತಯಾರಿಕೆಗೆ ಅಗತ್ಯವಾದ ಸಿಲಿಕೋನ್ ಆಯಿಲ್, ಅಮೋನಿಯಾ ಹಾಗೂ ಸಿಂಥೆಟಿಕ್ ರಬ್ಬರ್‌ನಂತಹ ಪೆಟ್ರೋಕೆಮಿಕಲ್ ವಸ್ತುಗಳ ಬೆಲೆಯೂ ಗಣನೀಯವಾಗಿ ಏರಿಕೆಯಾಗಿದೆ. ತೈಲ ಬೆಲೆ ಏರಿಕೆಯಿಂದಾಗಿ ಕೆಲವು ಕಚ್ಚಾ ವಸ್ತುಗಳ ದರಗಳು ಶೇ. 100ರವರೆಗೆ ಹೆಚ್ಚಿರುವುದಾಗಿ ವರದಿಯಾಗಿದೆ.

ಅಲ್ಲದೆ, ಕಾಂಡೋಮ್ ಪ್ಯಾಕಿಂಗ್‌ಗೆ ಬಳಸುವ ಅಲ್ಯೂಮಿನಿಯಂ ಫಾಯಿಲ್ ಮತ್ತು ಪಿವಿಸಿ ವಸ್ತುಗಳ ಪೂರೈಕೆಯಲ್ಲಿಯೂ ವ್ಯತ್ಯಯ ಉಂಟಾಗಿ ದರ ಏರಿಕೆಯಾಗಿದೆ. ಜೊತೆಗೆ, ಜಾಗತಿಕ ಹಣದುಬ್ಬರದಿಂದ ಕಾರ್ಮಿಕರ ಕೂಲಿಯೂ ಹೆಚ್ಚಿರುವುದು ಉತ್ಪಾದನಾ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಿದೆ.

ಪೂರೈಕೆಯಲ್ಲಿ ಉಂಟಾದ ಕೊರತೆಯಿಂದ ಕಾಂಡೋಮ್‌ಗಳ ಬೇಡಿಕೆಯೂ ಶೇ. 30ರಷ್ಟು ಏರಿಕೆಯಾಗಿದೆ. ಈ ಎಲ್ಲಾ ಕಾರಣಗಳಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದ ಪ್ರತಿ ಐದು ಕಾಂಡೋಮ್‌ಗಳಲ್ಲಿ ಒಂದನ್ನು ತಯಾರಿಸುವ ಕಾರೆಕ್ಸ್ ಸಂಸ್ಥೆಯ ಈ ಘೋಷಣೆಯಿಂದ, ಭಾರತದಲ್ಲಿ ಲಭ್ಯವಿರುವ ಡ್ಯುರೆಕ್ಸ್, ಟ್ರೋಜನ್ ಸೇರಿದಂತೆ ಅಂತರಾಷ್ಟ್ರೀಯ ಬ್ರ್ಯಾಂಡ್‌ಗಳ ಬೆಲೆಯೂ ಶೀಘ್ರದಲ್ಲೇ ಏರಿಕೆಯಾಗುವ ಸಾಧ್ಯತೆ ಇದೆ.

ದೈವದ ಭಂಡಾರ ಮೆರವಣಿಗೆಯಲ್ಲಿ ಅವಘಡ: ಕಾಲು ಸಂಕ ಕುಸಿದು 8 ಮಂದಿಗೆ ಗಾಯ

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುಚ್ಚೆಮೊಗರು ಬಾವದಬೈಲು ಪ್ರದೇಶದಲ್ಲಿ ದೈವದ ಭಂಡಾರ ಮೆರವಣಿಗೆ ವೇಳೆ ಕಾಲು ಸಂಕ ಕುಸಿದು ಬಿದ್ದ ಪರಿಣಾಮ ಎಂಟು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ದೈವದ ಭಂಡಾರವನ್ನು ತಾಕೋಡೆ ಬರ್ಕೆ ಧರ್ಮನೇಮಕ್ಕೆ ಪಲ್ಲಕ್ಕಿಯಲ್ಲಿ ಕೊಂಡೊಯ್ಯುವ ವೇಳೆ ಈ ಅವಘಡ ಸಂಭವಿಸಿದೆ. ಕೊಂಬು, ಕಹಳೆ ಹಾಗೂ ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಕಾಲು ಸಂಕದ ಮೇಲೆ ಬಂದಾಗ ಅದು ಏಕಾಏಕಿ ಕುಸಿದು ಬಿದ್ದಿದೆ. ಇದರಿಂದ ಪಲ್ಲಕ್ಕಿ ಉರುಳಿ ಬಿದ್ದು ಗಾಯಗಳಾಗಿವೆ.

ಘಟನೆಯಲ್ಲಿ ಸುನಿಲ್ ಶೆಟ್ಟಿ (ಮುಕಾಲ್ದಿ ಮಾರೂರು), ಲೋಕೇಶ್ ಭಂಡಾರಿ ಸೇರಿದಂತೆ ಪಲ್ಲಕ್ಕಿ ಹೊತ್ತವರನ್ನೂ ಒಳಗೊಂಡು ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ. ಸಂಕ ಮುರಿದು ಕಲ್ಲಿನ ಬೀಮ್ ಪಲ್ಲಕ್ಕಿ ಹೊತ್ತವರ ಮೇಲೆ ಬಿದ್ದ ಪರಿಣಾಮ ಗಾಯಗಳಾಗಿವೆ.

ಅವಘಡದಲ್ಲಿ ಪಲ್ಲಕ್ಕಿಯಲ್ಲಿದ್ದ ದೈವದ ಮೊಗಮೂರ್ತಿ ಹಾಗೂ ಇತರೆ ಧಾರ್ಮಿಕ ಪರಿಕರಗಳಿಗೂ ಹಾನಿಯಾಗಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ ಮಾಜಿ ಸಿಎಂ ಕೆಸಿಆರ್ ಪುತ್ರಿ ಕೆ ಕವಿತಾ!

0

ಹೈದರಾಬಾದ್: ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಮಾಜಿ ಸಂಸದೆ ಕೆ. ಕವಿತಾ ಅವರು ಹೈದರಾಬಾದ್‌ನಲ್ಲಿ ತಮ್ಮ ಹೊಸ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಅವರು ತಮ್ಮ ಹೊಸ ಪಕ್ಷಕ್ಕೆ “ತೆಲಂಗಾಣ ರಾಷ್ಟ್ರ ಸೇನಾ” ಎಂದು ಹೆಸರಿಟ್ಟಿದ್ದಾರೆ. ಈ ಹೆಸರು, ಹಿಂದೆ ಅವರ ತಂದೆ ಕೆಸಿಆರ್ ಬಳಸುತ್ತಿದ್ದ “ತೆಲಂಗಾಣ ರಾಷ್ಟ್ರ ಸಮಿತಿ” (ಟಿಆರ್‌ಎಸ್) ಪಕ್ಷದ ನೆನಪನ್ನು ಮೂಡಿಸುವಂತಿದ್ದು, ತೆಲಂಗಾಣದ ಮೂಲ ಅಸ್ಮಿತೆ ಮತ್ತು ಸ್ವಾಭಿಮಾನವನ್ನು ಪುನರುಜ್ಜೀವನಗೊಳಿಸುವ ಸಂಕೇತವಾಗಿ ಬಳಸಲಾಗಿದೆ.

ಕವಿತಾ 2025 ಸೆಪ್ಟೆಂಬರ್‌ನಲ್ಲಿ ಭಾರತ್ ರಾಷ್ಟ್ರ ಸಮಿತಿಯಿಂದ ಹೊರಬಂದಿದ್ದರು. ಆಂತರಿಕ ಭಿನ್ನಮತಗಳು ಮತ್ತು ತಮ್ಮ ಸಹೋದರ ಕೆ.ಟಿ. ರಾಮರಾವ್ ಅವರೊಂದಿಗಿನ ವೈಮನಸ್ಸಿನ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ನಂತರ ಅವರು ತಮ್ಮ ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದರು.

ಇಂದು ಹೈದರಾಬಾದ್‌ನ ಮುನೀರ್‌ಬಾದ್‌ನಲ್ಲಿ ನಡೆದ ಸಮಾವೇಶದಲ್ಲಿ ಹೊಸ ಪಕ್ಷದ ಧ್ವಜ ಹಾಗೂ ಸಿದ್ಧಾಂತಗಳನ್ನು ಅನಾವರಣಗೊಳಿಸಲಾಯಿತು. ಈ ಹೊಸ ರಾಜಕೀಯ ವೇದಿಕೆ ನೇರವಾಗಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಹಾಗೂ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಒಡ್ಡುವ ಸಾಧ್ಯತೆ ಇದೆ.

ಕವಿತಾ ಅವರು ತಮ್ಮ ತಂದೆಯ ಪಕ್ಷವಾದ ಬಿಆರ್‌ಎಸ್ ತನ್ನ ಮೂಲ ಆಶಯಗಳಿಂದ ದೂರ ಸರಿದಿದೆ ಎಂದು ಆರೋಪಿಸಿದ್ದಾರೆ. ತಮ್ಮ ಹೋರಾಟವು ಕೇವಲ ರಾಜಕೀಯವಲ್ಲ, ತೆಲಂಗಾಣದ ಸ್ವಾಭಿಮಾನವನ್ನು ಉಳಿಸುವ ಹೋರಾಟ ಎಂದು ತಿಳಿಸಿದ್ದಾರೆ.

ಅವರು ಮುಂದಿನ ದಿನಗಳಲ್ಲಿ ನಡೆಯಲಿರುವ 2028–29ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಪ್ರಮುಖ ಪಾತ್ರ ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೊಸ ಪಕ್ಷವು ತೆಲಂಗಾಣದ ಧ್ವನಿ ಇಲ್ಲದ ಜನರಿಗೆ ವೇದಿಕೆಯಾಗಲಿದೆ ಎಂದು ಕವಿತಾ ಹೇಳಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ತಮ್ಮ ಪಕ್ಷ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

ಅಪ್ರಾಪ್ತೆಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಗರ್ಭಧಾರಣೆಗೆ ಒತ್ತಾಯಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

0

ನವದೆಹಲಿ: ಯಾವುದೇ ನ್ಯಾಯಾಲಯವೂ ಮಹಿಳೆಯನ್ನು, ವಿಶೇಷವಾಗಿ ಅಪ್ರಾಪ್ತ ವಯಸ್ಕಳನ್ನು, ಆಕೆಯ ಇಚ್ಛೆಗೆ ವಿರುದ್ಧವಾಗಿ ಗರ್ಭಧಾರಣೆಯನ್ನು ಮುಂದುವರಿಸಲು ಬಲವಂತಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಹದಿನೈದು ವರ್ಷದ ಬಾಲಕಿಯ ಏಳು ತಿಂಗಳ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ಅನುಮತಿ ನೀಡುವ ವೇಳೆ ನ್ಯಾಯಾಲಯ ಈ ತೀರ್ಪನ್ನು ಪ್ರಕಟಿಸಿತು. ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ನೇತೃತ್ವದ ಪೀಠವು, ಗರ್ಭಿಣಿಯ ಆಯ್ಕೆಗೆ ಆದ್ಯತೆ ನೀಡಬೇಕು ಹಾಗೂ ಮಹಿಳೆಯ ಸಂತಾನೋತ್ಪತ್ತಿ ಸ್ವಾಯತ್ತತೆಗೆ ಸಂವಿಧಾನಾತ್ಮಕವಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ತಿಳಿಸಿದೆ.

ಈ ಪ್ರಕರಣದಲ್ಲಿ 15 ವರ್ಷದ ಅಪ್ರಾಪ್ತೆಗೆ ಗರ್ಭಧಾರಣೆಯನ್ನು ಮುಂದುವರಿಸಲು ಇಚ್ಛೆ ಇಲ್ಲದಿರುವುದನ್ನು ಗಮನಿಸಿ, ಆಕೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿರುವ ಹಿನ್ನೆಲೆಯಲ್ಲಿ, ಗರ್ಭಧಾರಣೆಯನ್ನು ಮುಂದುವರಿಸುವುದು ಅವಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಸಾಂವಿಧಾನಿಕ ನ್ಯಾಯಾಲಯಗಳು ಹುಟ್ಟಲಿರುವ ಮಗುವಿನ ಹಿತಾಸಕ್ತಿಗಿಂತ ಗರ್ಭಿಣಿಯ ದೈಹಿಕ ಮತ್ತು ಮಾನಸಿಕ ಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು, ಅಪ್ರಾಪ್ತ ವಯಸ್ಕೆಯ ಗರ್ಭಧಾರಣೆಯನ್ನು ಮುಂದುವರಿಸುವುದು ಆಕೆಯ ಮಾನಸಿಕ ಆರೋಗ್ಯ, ಶಿಕ್ಷಣದ ಅವಕಾಶಗಳು, ಸಾಮಾಜಿಕ ಸ್ಥಾನಮಾನ ಹಾಗೂ ಒಟ್ಟಾರೆ ಬೆಳವಣಿಗೆ ಮೇಲೆ ದೀರ್ಘಕಾಲೀನ ಹಾನಿಕಾರಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ದೇಹದ ಮೇಲೆ, ವಿಶೇಷವಾಗಿ ಸಂತಾನೋತ್ಪತ್ತಿ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಗೌಪ್ಯತೆಯ ಅವಿಭಾಜ್ಯ ಭಾಗವಾಗಿದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಅನಗತ್ಯ ಗರ್ಭಧಾರಣೆಯ ಸಂದರ್ಭಗಳಲ್ಲಿ ಮಹಿಳೆಯ ನಿರ್ಧಾರ ಸ್ವಾತಂತ್ರ್ಯವನ್ನು ನಿರ್ಬಂಧಿಸುವುದು ಅವಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಹೀಗಾಗಿ ಯಾವುದೇ ನ್ಯಾಯಾಲಯವೂ ಮಹಿಳೆಯನ್ನು, ವಿಶೇಷವಾಗಿ ಅಪ್ರಾಪ್ತೆಯನ್ನು, ಅವಳ ಸ್ಪಷ್ಟ ಇಚ್ಛೆಗೆ ವಿರುದ್ಧವಾಗಿ ಗರ್ಭಧಾರಣೆಯನ್ನು ಪೂರ್ಣಾವಧಿಗೆ ಮುಂದುವರಿಸಲು ಬಲವಂತಪಡಿಸಬಾರದು. ಅಂತಹ ಕ್ರಮವು ಆಕೆಯ ಮಾನಸಿಕ, ಭಾವನಾತ್ಮಕ ಹಾಗೂ ದೈಹಿಕ ಆರೋಗ್ಯಕ್ಕೆ ಗಂಭೀರ ಆಘಾತ ಉಂಟುಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಕೇರಳದಲ್ಲಿ ತೀವ್ರ ಬಿಸಿಲು: ‘ಸ್ವಯಂ ಲಾಕ್ ಡೌನ್’ ಪಾಲನೆಗೆ ಮುಖ್ಯಮಂತ್ರಿ ಪಿಣರಾಯಿ ಸೂಚನೆ

0

ಕೇರಳ: ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತೀವ್ರ ಉರಿ ಸೂರ್ಯನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಜನರು ಸ್ವಯಂ ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಮನವಿ ಮಾಡಿದ್ದಾರೆ. ವಿಶೇಷವಾಗಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪಾಲಕ್ಕಾಡ್, ಕೊಲ್ಲಂ ಮತ್ತು ತ್ರಿಶೂರು ಜಿಲ್ಲೆಗಳಿಗೆ ಶಾಖದಲೆ ಎಚ್ಚರಿಕೆ ನೀಡಿದೆ. ಈ ಪ್ರದೇಶಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿ ದಾಖಲಾಗಿದ್ದು, ಒಣ ಹವೆಯ ಪರಿಣಾಮದಿಂದ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಇತರ ಜಿಲ್ಲೆಗಳಲ್ಲಿಯೂ ಸಹ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ, ಅಗತ್ಯವಿಲ್ಲದಿದ್ದರೆ ಮಧ್ಯಾಹ್ನದ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.

ಐಎಂಡಿ ಏಪ್ರಿಲ್ 23 ಮತ್ತು 24ರಂದು ಕೇರಳದ ಕೆಲವು ಭಾಗಗಳಲ್ಲಿ ಶಾಖದಲೆ ಪರಿಸ್ಥಿತಿ ಮುಂದುವರಿಯಬಹುದು ಎಂದು ಎಚ್ಚರಿಸಿದೆ. ಜೊತೆಗೆ ಏಪ್ರಿಲ್ 27ರವರೆಗೆ ತಮಿಳುನಾಡು, ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳು ಮತ್ತು ಕರ್ನಾಟಕದ ಕರಾವಳಿ ಭಾಗಗಳಲ್ಲಿ ಬಿಸಿ ಹಾಗೂ ಆರ್ದ್ರ ಹವಾಮಾನ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿದೆ.

ಈ ಅವಧಿಯಲ್ಲಿ ಸಾರ್ವಜನಿಕರು ನೇರ ಬಿಸಿಲಿಗೆ ಒಳಗಾಗುವುದನ್ನು ತಪ್ಪಿಸಬೇಕು, ದೇಹದಲ್ಲಿ ನೀರಿನ ಅಂಶವನ್ನು ಕಾಪಾಡಿಕೊಳ್ಳಬೇಕು ಮತ್ತು ಒಆರ್‌ಎಸ್, ಲಸ್ಸಿ ಹಾಗೂ ಮಜ್ಜಿಗೆಯಂತಹ ಮನೆಮದ್ದಿನ ಪಾನೀಯಗಳನ್ನು ಹೆಚ್ಚು ಸೇವಿಸುವಂತೆ ಐಎಂಡಿ ಸಲಹೆ ನೀಡಿದೆ.

ಇದೇ ಸಮಯದಲ್ಲಿ ಏಪ್ರಿಲ್ 23ರಿಂದ 27ರವರೆಗೆ ಕೇರಳ ಮತ್ತು ಕರ್ನಾಟಕದಲ್ಲಿ ಗಂಟೆಗೆ 30 ರಿಂದ 50 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಚದುರಿದ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದೇ ರೀತಿಯ ಹವಾಮಾನ ಪರಿಸ್ಥಿತಿ ಏಪ್ರಿಲ್ 25ರವರೆಗೆ ಆಂಧ್ರಪ್ರದೇಶದ ಕರಾವಳಿ ಮತ್ತು ಯಾನಂ ಪ್ರದೇಶಗಳಲ್ಲಿಯೂ ಮುಂದುವರಿಯುವ ನಿರೀಕ್ಷೆಯಿದೆ.

RCB ಪ್ಲೇ ಆಫ್ ಹಾದಿ ಇನ್ನೂ ಸುಲಭ! ಜಸ್ಟ್ ಇನ್ನೂ 3 ಪಂದ್ಯ ಗೆದ್ರೆ ಸಾಕು ಟಾಪ್ 4ರಲ್ಲಿ ಫಿಕ್ಸ್

0

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು, ಏಳು ಪಂದ್ಯಗಳಿಂದ 10 ಅಂಕಗಳನ್ನು ಕಲೆಹಾಕಿದೆ.

ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಗೆಲುವಿನಿಂದ ಶುಭಾರಂಭ ಮಾಡಿದ ಆರ್‌ಸಿಬಿ, ಮೂರನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ಸೋಲು ಅನುಭವಿಸಿತ್ತು.

ಆದರೆ ಆ ಸೋಲಿನ ಬಳಿಕ ತಂಡ ಮರುಕಳಿಸಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ದಾಖಲಿಸಿತು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೋಲು ಕಂಡರೂ, ಮೊದಲಾರ್ಧದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.

ಒಟ್ಟು 5 ಗೆಲುವುಗಳೊಂದಿಗೆ 10 ಅಂಕ ಗಳಿಸಿರುವ ಆರ್‌ಸಿಬಿಗೆ ಪ್ಲೇಆಫ್ ಪ್ರವೇಶಕ್ಕೆ ಇನ್ನೂ ಮೂರು ಗೆಲುವು ಸಾಕಾಗಿದೆ. ದ್ವಿತೀಯಾರ್ಧದಲ್ಲಿ ಉಳಿದಿರುವ ಏಳು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದರೆ, 16 ಅಂಕಗಳೊಂದಿಗೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತವಾಗಲಿದೆ.

ಮುಂದಿನ ಪಂದ್ಯಗಳಲ್ಲಿ ಇದೇ ರೀತಿ ಪ್ರದರ್ಶನ ಮುಂದುವರಿಸಿದರೆ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಗೆ ಇನ್ನೊಂದು ಸಂಕಷ್ಟ: ಯೂಟ್ಯೂಬ್‌ನಿಂದ ಮಾಯವಾದ ‘ಕೆಡಿ’ ಸಿನಿಮಾ ಟ್ರೇಲರ್

ರಿಲೀಸ್‌ಗೆ ಕೆಲವೇ ದಿನ ಬಾಕಿ ಇರುವಾಗಲೇ KD: The Devil ಸಿನಿಮಾ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ಧ್ರುವ ಸರ್ಜಾ ಅಭಿನಯದ ಈ ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಎರಡು ದಿನಗಳಲ್ಲೇ ಯೂಟ್ಯೂಬ್‌ನಿಂದ ಅಳಿಸಲಾಗಿದ್ದು, ಸಿನಿ ವಲಯದಲ್ಲಿ ಅನುಮಾನಗಳನ್ನು ಹುಟ್ಟಿಸಿದೆ.

ನಿರ್ಮಾಣ ಸಂಸ್ಥೆ ಕೆವಿಎನ್‌ ಪ್ರೊಡಕ್ಷನ್‌ ನೀಡಿರುವ ಮಾಹಿತಿಯ ಪ್ರಕಾರ, ಟ್ರೇಲರ್‌ನಲ್ಲಿ ಸೆನ್ಸಾರ್ ಪ್ರಮಾಣೀಕರಣಕ್ಕೆ ವಿರುದ್ಧವಾದ ಕೆಲವು ಅಂಶಗಳು ಸೇರಿದ್ದರಿಂದ ಅದನ್ನು ಪ್ರೈವೇಟ್ ಮಾಡಲಾಗಿದೆ. ಇದೀಗ ಮಾರ್ಗಸೂಚಿಗಳಿಗೆ ಅನುಗುಣವಾಗಿ ತಿದ್ದುಪಡಿ ಮಾಡಿ ಮರುಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ.

ಇದೇ ವೇಳೆ, KVN ಸಂಸ್ಥೆಗೆ ಇದು ಮತ್ತೊಂದು ಹಿನ್ನಡೆ ಎಂದೇ ಹೇಳಬಹುದು. ಈ ಹಿಂದೆ ವಿಜಯ್ ನಟನೆಯ ‘ಜನ ನಾಯಗನ್’ ಮುಂದೂಡಿಕೆಯಾದರೆ, ಯಶ್ ಅಭಿನಯದ ‘ಟಾಕ್ಸಿಕ್’ ಕೂಡ ಬಿಡುಗಡೆ ದಿನಾಂಕ ಬದಲಾವಣೆ ಕಂಡಿತ್ತು.

‘ಕೆಡಿ’ ಸಿನಿಮಾ ಆರಂಭದಿಂದಲೂ ವಿವಾದಗಳ ನಡುವೆ ಸಾಗುತ್ತಿದ್ದು, ಹಾಡು ವಿರೋಧ, ಸೆನ್ಸಾರ್ ಸಮಸ್ಯೆ ಬಳಿಕ ಇದೀಗ ಟ್ರೇಲರ್ ಡಿಲೀಟ್ ಆಗಿರುವುದು ತಂಡಕ್ಕೆ ದೊಡ್ಡ ಸವಾಲಾಗಿದೆ.

ಏಪ್ರಿಲ್ 30ರಂದು ಬಿಡುಗಡೆ ಗುರಿಯಿಟ್ಟಿರುವ ಈ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದ್ದರೂ, ಈ ಬೆಳವಣಿಗೆ ಚಿತ್ರದ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಭಿಮಾನಿಗಳು ಇದೀಗ ಹೊಸ ಟ್ರೇಲರ್ ಹಾಗೂ ಅಧಿಕೃತ ಸ್ಪಷ್ಟನೆಗಾಗಿ ಕಾದು ಕುಳಿತಿದ್ದಾರೆ.

ಪ್ರೆಗ್ನೆನ್ಸಿಯಲ್ಲೂ ಬ್ರೇಕ್ ಇಲ್ಲ! ‘ಕಿಂಗ್’ ಸೆಟ್‌ನಲ್ಲಿ ಆಕ್ಷನ್ ಮೋಡ್‌ಗೆ ದೀಪಿಕಾ ಪಡುಕೋಣೆ

ಬಾಲಿವುಡ್‌ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ಇತ್ತೀಚೆಗಷ್ಟೇ ತಾವು ಎರಡನೇ ಬಾರಿಗೆ ಪೋಷಕರಾಗುತ್ತಿರುವ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದರು. ಮೊದಲ ಮಗಳು ದುವಾ ಜೊತೆಗಿರುವ ಮುದ್ದಾದ ಪೋಸ್ಟ್ ಮೂಲಕ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದರು.

ದೀಪಿಕಾ ಪ್ರೆಗ್ನೆನ್ಸಿಯಲ್ಲಿದ್ದರೂ ಪ್ರೊಫೆಷನಲ್ ಕಮಿಟ್‌ಮೆಂಟ್‌ಗೆ ತುತ್ತಾಗದೇ ಮುಂದುವರಿದಿರುವ ನಟಿ ಇದೀಗ ಕಿಂಗ್‌ ಸಿನಿಮಾದಲ್ಲಿ ಆಕ್ಷನ್ ಅವತಾರದಲ್ಲಿ ಮಿಂಚುತ್ತಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯ ವಿಚಾರವನ್ನು ಹಂಚಿಕೊಂಡ ಕೆಲವೇ ದಿನಗಳಲ್ಲಿ, ಅವರು ಮುಂಬೈನ ಸ್ಟುಡಿಯೋ ಸೆಟ್‌ನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಶಾರುಖ್ ಖಾನ್ ಜೊತೆಗಿನ ಪ್ರಮುಖ ಸನ್ನಿವೇಶಗಳ ಜೊತೆಗೆ, ಭರ್ಜರಿ ಫೈಟ್ ಸೀಕ್ವೆನ್ಸ್‌ನಲ್ಲಿ ಭಾಗಿಯಾಗಿರುವುದು ಚಿತ್ರತಂಡದ ಬದ್ಧತೆಯನ್ನು ತೋರಿಸುತ್ತದೆ.

‘ಕಿಂಗ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಮೂಡಿಬರುತ್ತಿದ್ದು, ನಿರ್ದೇಶಕ ಸಿದ್ಧಾರ್ಥ್ ಆನಂದ್ ಮತ್ತೆ ಆಕ್ಷನ್ ಪ್ಯಾಕ್ಡ್ ಕಥೆಯನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ಮೀರಾ ರೋಡ್‌ನಲ್ಲಿ ಮರಳುಗಾಡಿನ ಬ್ಯಾಕ್‌ಡ್ರಾಪ್‌ನಲ್ಲಿ ಮತ್ತಷ್ಟು ಸಾಹಸ ದೃಶ್ಯಗಳ ಚಿತ್ರೀಕರಣಕ್ಕೂ ಯೋಜನೆ ರೂಪಿಸಲಾಗಿದೆ.

ಈ ಚಿತ್ರದಲ್ಲಿ ಸುಹಾನಾ ಖಾನ್ ಡೆಬ್ಯೂಗೆ ಸಮಾನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಷೇಕ್ ಬಚ್ಚನ್ ವಿಲನ್ ಆಗಿ ಮಿಂಚುವ ನಿರೀಕ್ಷೆ ಇದೆ. ಜೊತೆಗೆ ಅನಿಲ್ ಕಪೂರ್ ಮತ್ತು ಜಾಕಿ ಶ್ರಾಫ್ ಉಪಸ್ಥಿತಿ ಚಿತ್ರದ ತೂಕವನ್ನು ಹೆಚ್ಚಿಸಿದೆ. ಒಟ್ಟಿನಲ್ಲಿ, ‘ಕಿಂಗ್’ ಸಿನಿಮಾ ಭರ್ಜರಿ ಆಕ್ಷನ್, ಸ್ಟಾರ್ ಪವರ್ ಮತ್ತು ಹೈ ಎಕ್ಸ್‌ಪೆಕ್ಟೇಷನ್‌ಗಳೊಂದಿಗೆ ಬಾಲಿವುಡ್‌ನ ಮುಂದಿನ ಬಿಗ್ ಪ್ರಾಜೆಕ್ಟ್ ಆಗಿ ರೂಪುಗೊಳ್ಳುತ್ತಿದೆ.

30 ವರ್ಷಗಳ ಬಳಿಕ ‘ಖಳನಾಯಕ್’ ಸೀಕ್ವೆಲ್ ಘೋಷಣೆ: ಸಂಜಯ್ ದತ್ ಮಾಸ್ ಕಂಬ್ಯಾಕ್ ಟೀಸರ್ ವೈರಲ್

ಬಾಲಿವುಡ್‌ನ ಐಕಾನಿಕ್ ಫ್ರಾಂಚೈಸಿಗಳಲ್ಲಿ ಒಂದಾದ ಖಳನಾಯಕ್ ಮತ್ತೆ ಜೀವಂತವಾಗುತ್ತಿದೆ. ‘ಖಳನಾಯಕ್ ರಿಟರ್ನ್ಸ್’ ಟೀಸರ್ ಬಿಡುಗಡೆಯಾಗಿದ್ದು, ದೀರ್ಘ ವಿರಾಮದ ಬಳಿಕ ಸಂಜಯ್ ದತ್ ತಮ್ಮ ಐಕಾನಿಕ್ ‘ಬಲ್ಲು’ ಪಾತ್ರದೊಂದಿಗೆ ಮರಳುತ್ತಿದ್ದಾರೆ.

ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ಸಂಜಯ್ ದತ್ ಅವರ ತೀವ್ರ ಅಭಿನಯ, ಗಾಢ ಮನೋಭಾವ ಮತ್ತು ಆ್ಯಕ್ಷನ್ ಭರಿತ ಪ್ರೆಸೆನ್ಸ್ ಚಿತ್ರವು ಹಿಂದಿನ ಭಾಗಕ್ಕಿಂತ ಹೆಚ್ಚು ಗಂಭೀರ ಮತ್ತು ಪ್ರಭಾವಿ ಆಗಿರಲಿದೆಯೆಂಬ ಸೂಚನೆ ನೀಡಿದೆ. ದೃಶ್ಯ ವೈಭವ, ಬ್ಯಾಕ್‌ಗ್ರೌಂಡ್ ಸ್ಕೋರ್ ಮತ್ತು ಶೈಲಿಯ ನಿರೂಪಣೆ ಪ್ರೇಕ್ಷಕರ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿವೆ.

ಚಿತ್ರದ ಘೋಷಣೆಯೊಂದಿಗೆ, “ಪ್ರತಿ ಕಥೆಗೆ ತನ್ನದೇ ಸಮಯವಿರುತ್ತದೆ” ಎಂಬ ಟ್ಯಾಗ್‌ಲೈನ್ ಮೂಲಕ ತಂಡ ಕುತೂಹಲ ಕೆರಳಿಸಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಫ್ರಾಂಚೈಸಿ ಮತ್ತೆ ಬಿಗ್ ಸ್ಕೇಲ್‌ನಲ್ಲಿ ವಾಪಸ್ಸಾಗುತ್ತಿರುವುದು ಸ್ಪಷ್ಟವಾಗಿದೆ.

1993ರಲ್ಲಿ ಸುಭಾಷ್ ಘೈ ನಿರ್ದೇಶನದಲ್ಲಿ ಮೂಡಿಬಂದ ‘ಖಳನಾಯಕ್’ ಚಿತ್ರದಲ್ಲಿ ಜಾಕಿ ಶ್ರಾಫ್ ಹಾಗೂ ಮಾಧುರಿ ದೀಕ್ಷಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇದೀಗ ಸೀಕ್ವೆಲ್‌ನಲ್ಲಿ ಹಳೆಯ ತಾರಾಗಣ ಮುಂದುವರಿಯುತ್ತದೆಯೇ ಅಥವಾ ಹೊಸ ಮುಖಗಳು ಸೇರುತ್ತವೆಯೇ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಸದ್ಯದ ಟೀಸರ್ ಪ್ರತಿಕ್ರಿಯೆ ಗಮನಿಸಿದರೆ, ‘ಖಳನಾಯಕ್ ರಿಟರ್ನ್ಸ್’ ಬಾಲಿವುಡ್‌ನಲ್ಲಿ ಮತ್ತೊಂದು ಭಾರೀ ಬಾಕ್ಸ್ ಆಫೀಸ್ ಹಿಟ್ ಆಗುವ ಸೂಚನೆ ನೀಡುತ್ತಿದೆ.

error: Content is protected !!