Home Blog Page 3

ಚಿಕ್ಕಮಗಳೂರು ಸೆಂಟ್ರಲ್ ಬ್ಯಾಂಕ್‌ಲ್ಲಿ ಮಹಾ ಮೋಸ – ಗ್ರಾಹಕರ ಅಸಲಿ ಚಿನ್ನವೇ ಕಳ್ಳತನ

0

ಚಿಕ್ಕಮಗಳೂರು: ವಿಶ್ವಾಸದ ಪ್ರತೀಕವೆಂದು ಪರಿಗಣಿಸಲ್ಪಡುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲೇ ಗ್ರಾಹಕರಿಗೆ ಭಾರೀ ಮೋಸ ನಡೆದಿರುವ ಆರೋಪ ಹೊರಬಂದಿದೆ. ಗೋಲ್ಡ್ ಲೋನ್ ಹೆಸರಿನಲ್ಲಿ ಗ್ರಾಹಕರ ಅಸಲಿ ಚಿನ್ನಾಭರಣವನ್ನು ಮಾರಾಟ ಮಾಡಿ, ನಕಲಿ ಚಿನ್ನವನ್ನು ಬದಲಾಯಿಸಿದ್ದಾರೆಯೆಂಬ ಗಂಭೀರ ಆರೋಪ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕೇಳಿಬಂದಿದೆ.

ಚಿಕ್ಕಮಗಳೂರು ನಗರದಲ್ಲಿರುವ ಶಾಖೆಯಲ್ಲಿ 2020 ರಿಂದ 2025ರವರೆಗೆ ಕ್ರಮಬದ್ಧವಾಗಿ ಈ ವಂಚನೆ ನಡೆದಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಸಂದೀಪ್, ನಾರಾಯಣಸ್ವಾಮಿ ಸೇರಿದಂತೆ 5 ಮಂದಿ ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಹಕರಿಗೆ ತಿಳಿಯದಂತೆ ಹೆಚ್ಚುವರಿ ಸಾಲ ಮಂಜೂರು ಮಾಡಿ ಹಣವನ್ನು ಗುಳುಂ ಮಾಡಲಾಗಿದೆ. 80 ಗ್ರಾಂ ರಿಂದ 140 ಗ್ರಾಂ ವರೆಗೆ ಚಿನ್ನ ಜಾಮೀನು ಇಟ್ಟು ಸಾಲ ಪಡೆದಿದ್ದವರು ಈಗ ತಮ್ಮ ಚಿನ್ನವನ್ನು ಮರಳಿ ಪಡೆಯಲು ಪರದಾಡುತ್ತಿದ್ದಾರೆ. ಸಾಲ ಸಂಪೂರ್ಣ ತೀರಿಸಿದ್ದರೂ ಚಿನ್ನ ವಾಪಸ್ ಸಿಗದೆ ಕಣ್ಣೀರಿಡುತ್ತಿದ್ದಾರೆ.

ಇಷ್ಟೇ ಅಲ್ಲದೆ ಕೆಲ ಗ್ರಾಹಕರ ಫಿಕ್ಸ್ಡ್ ಡಿಪಾಸಿಟ್ ಹಣವನ್ನೂ ಸಹ ಅಕ್ರಮವಾಗಿ ಬಳಕೆ ಮಾಡಿಕೊಂಡಿರುವ ಆರೋಪಗಳು ಕೇಳಿಬಂದಿವೆ. ಸ್ಥಳೀಯ ಶಾಖೆಯಲ್ಲಿ ನ್ಯಾಯ ಸಿಗದ ಕಾರಣ, ಸಂತ್ರಸ್ತರು ಬ್ಯಾಂಕಿನ ಬೆಂಗಳೂರು ಕೇಂದ್ರ ಕಚೇರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಪ್ರಕರಣ ಇದೀಗ ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸಂಪೂರ್ಣ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

D K Shivakumar: ಕಾಮಾಕ್ಯ ದೇವಾಲಯಕ್ಕೆ ಡಿಕೆ ಶಿವಕುಮಾರ್, ಪ್ರಿಯಾಂಕಾ ಗಾಂಧಿ ಭೇಟಿ

0

ಗುವಾಹಟಿ: ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ಇರುವ ಕಾಮಾಕ್ಯ ದೇವಾಲಯಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ ನೆರವೇರಿಸಿದರು.

ಈ ಕುರಿತು ಡಿಕೆ ಶಿವಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, “ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರೊಂದಿಗಿಂದು ಅಸ್ಸಾಂನ ಗುವಾಹಟಿಯಲ್ಲಿರುವ ಪವಿತ್ರ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿದೆವು. ತಾಯಿ ಕಾಮಾಕ್ಯ ಆಶೀರ್ವಾದವು ಎಲ್ಲರಿಗೂ ಶಕ್ತಿ ಮತ್ತು ಸಮೃದ್ಧಿ ನೀಡಲಿ” ಎಂದು ಪ್ರಾರ್ಥಿಸಿದ್ದಾರೆ.

ಚಿತ್ರದುರ್ಗದಲ್ಲಿ ಚಲಿಸುತ್ತಿದ್ದ ಟ್ಯಾಂಕರ್‌ ಲಾರಿಗೆ ಬೆಂಕಿ! ಚಾಲಕ ಜಸ್ಟ್‌ ಮಿಸ್

0

ಚಿತ್ರದುರ್ಗ: ನೀರು ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಬಳೆಕಟ್ಟೆ ಗೇಟ್ ಸಮೀಪದ ಕಾತ್ರಾಳು ಕೆರೆಯ ಪ್ರದೇಶದಲ್ಲಿ  ನಡೆದಿದೆ.

ರಸ್ತೆ ಬದಿಯ ಗಿಡಗಳಿಗೆ ನೀರು ಹಾಯಿಸುತ್ತಿದ್ದ ವೇಳೆ ಟ್ಯಾಂಕರ್‌ಗೆ ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ಇಂಜಿನ್ ಭಾಗದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಚಾಲಕ ತಕ್ಷಣವೇ ಲಾರಿಯಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆಯ ಪರಿಣಾಮ ಕೆಲಕಾಲ ರಾಷ್ಟ್ರೀಯ ಹೆದ್ದಾರಿ–4ರಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡು ಟ್ರಾಫಿಕ್ ಜಾಮ್ ಉಂಟಾಯಿತು.

ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಬಳಿಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಈ ಘಟನೆ ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಕಮಿಷನ್ ಪದ್ಧತಿ ಹಿಂದೆಯೂ ಇತ್ತು, ಈಗಲೂ ಇದೆ: ಸಚಿವ ಸತೀಶ್ ಜಾರಕಿಹೊಳಿ

0

ಬೆಂಗಳೂರು: ಕಮಿಷನ್ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದನ್ನು ಸಂಪೂರ್ಣವಾಗಿ ನಿರ್ಮೂಲ ಮಾಡುವುದು ಕಷ್ಟ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರಿಂದ ಕಮಿಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, “ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ದಾರಿ ಹುಡುಕಬೇಕು. ಮುಖ್ಯಮಂತ್ರಿಗಳು ಇದ್ದಾರೆ, ಲೋಕಾಯುಕ್ತ ಇದೆ. ಅವರ ಗಮನಕ್ಕೆ ತರಬಹುದು. ಆದರೆ ಇಷ್ಟು ಪ್ರಮಾಣದಲ್ಲಿ ಬಾಕಿ ಬಿದ್ದಿರುವುದಕ್ಕೆ ಕಾರಣವೇನು ಎಂಬುದರ ಮೇಲೆ ಚಿಂತನೆ ಅಗತ್ಯ ಎಂದರು.

ಬಜೆಟ್ ಬೆಂಬಲವಿಲ್ಲದೆ ಹಿಂದಿನ ಬಿಜೆಪಿ ಸರ್ಕಾರ ಟೆಂಡರ್ ನೀಡಿದ ಕಾರಣವೇ ಇಂದಿನ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಆರೋಪಿಸಿದರು. ಆ ಸಮಯದಲ್ಲಿ ಟೆಂಡರ್ ನೀಡದೇ ಇದ್ದಿದ್ದರೆ ಈ ಪರಿಸ್ಥಿತಿ ಬರ್ತಿರಲಿಲ್ಲ. ಕೆಲಸಗಳು ನಡೆದಿವೆ, ಪಾವತಿಗೆ ಸಮಯ ಬೇಕು. ವಿಶೇಷವಾಗಿ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಹೆಚ್ಚು ಬಾಕಿ ಇದೆ ಎಂದು ತಿಳಿಸಿದರು.

ಕಾಮಗಾರಿ ನಿಲ್ಲಿಸಲು ಸಾಧ್ಯವಿಲ್ಲ. ಗುತ್ತಿಗೆದಾರರು ತಮ್ಮ ಅನುಕೂಲ ಇರುವ ಕಡೆ ಟೆಂಡರ್ ಹಾಕುತ್ತಾರೆ. ನಮ್ಮಲ್ಲಿರುವ ಬಜೆಟ್‌ಗೆ ಸರಿಹೊಂದುವಂತೆ ಕೆಲಸಗಳನ್ನು ಸಮತೋಲನಗೊಳಿಸುತ್ತಿದ್ದೇವೆ. ನಾವು ಹೊಸ ಕೆಲಸಗಳಿಗೆ ಅನುಮೋದನೆ ನೀಡಿಲ್ಲ, ಹಳೆಯ ಬಾಕಿಗಳನ್ನು ಸಮತೋಲನಗೊಳಿಸುತ್ತಿದ್ದೇವೆ ಎಂದು ಹೇಳಿದರು.

ಚಿಕ್ಕಮಗಳೂರು | ನರಹಂತಕ ಕಾಡಾನೆ ಸೆರೆಗೆ ಸಕ್ರೆಬೈಲ್‌ ಕ್ಯಾಂಪ್‌ನ ಸಾಕಾನೆ ಬಳಕೆ

0

ಚಿಕ್ಕಮಗಳೂರು: ಕಾಫಿನಾಡಿನ ಗ್ರಾಮೀಣ ಪ್ರದೇಶದಲ್ಲಿ ಕಾರ್ಮಿಕನೊಬ್ಬರನ್ನು ಬಲಿ ಪಡೆದ ಕಾಡಾನೆ ವಿರುದ್ಧ ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಂಡಿದೆ. ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ನಡೆದ ದುರ್ಘಟನೆ ನಂತರ ಅರಣ್ಯ ಇಲಾಖೆ ಮಹತ್ವದ ಕಾರ್ಯಾಚರಣೆ ಆರಂಭಿಸಿದೆ.

ಸಕ್ರೆಬೈಲು ಆನೆ ಶಿಬಿರ ದಿಂದ 5 ಸಾಕಾನೆಗಳ ವಿಶೇಷ ದಳವನ್ನು ಕರೆತರಲಾಗಿದ್ದು, 3 ಕಾಡಾನೆಗಳ ಗುಂಪಿನಲ್ಲಿ ಮಾನವ ಹತ್ಯೆಗೈದ ಆನೆಗೆ ಗುರಿಯಾಗಿಸಿ ಸೆರೆ ಕಾರ್ಯಾಚರಣೆ ನಡೆಯುತ್ತಿದೆ. ಉಳಿದ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅವುಗಳ ಸಂಚಾರದ ಮೇಲೆ ನಿಗಾ ವಹಿಸಲಾಗುತ್ತದೆ.

ಫೆ.16ರಂದು ಕಾಡಾನೆ ದಾಳಿಯಲ್ಲಿ ಯಲ್ಲಪ್ಪ ಮೃತಪಟ್ಟ ಬಳಿಕ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿದ್ದರು. ಬಾಳೆಹೊನ್ನೂರು ಅರಣ್ಯ ಇಲಾಖೆ ಕಚೇರಿ ಮುಂದೆ ಜಮಾಯಿಸಿದ ಜನರು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಇದೀಗ ಸರ್ಕಾರದ ಆದೇಶದ ಮೇರೆಗೆ ಅರಣ್ಯ ಇಲಾಖೆ ಕಾಡಾನೆ ಸೆರೆಹಿಡಿಯಲು ಸಜ್ಜಾಗಿದೆ. ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆ ಸೂಚನೆ ನೀಡಲಾಗಿದೆ.

ನಂದಿನಿ ಉತ್ಪನ್ನ ಸೇವಿಸಿದ್ರೆ ಕ್ಯಾನ್ಸರ್‌ ಬರುತ್ತಾ? ಸ್ಪಷ್ಟನೆ ನೀಡಿದ ಕೆಎಂಎಫ್‌ ಎಂಡಿ ಬಿ. ಶಿವಸ್ವಾಮಿ

0

ಬೆಂಗಳೂರು: ಕರ್ನಾಟಕ ಮಿಲ್ಕ್ ಫೆಡರೇಷನ್ (ಕೆಎಂಎಫ್) ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಆಗಿದ್ದು, ಅದರ ನಂದಿನ ಉತ್ಪನ್ನಗಳು ದೇಶ-ವಿದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ಹೊಂದಿವೆ. ಇಂತಹ ಪ್ರತಿಷ್ಠಿತ ಬ್ರ್ಯಾಂಡ್ ಮೇಲೆ ಇದೀಗ ಕಿಡಿಗೇಡಿಗಳ ಕಣ್ಣು ಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಡುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ.

ಕೆಎಂಎಫ್ ಉತ್ಪನ್ನಗಳನ್ನು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂದು ಡಾ. ಶರಣ್ಯ ಸಂತೋಷ್ ಎಂಬುವವರ ಹೇಳಿಕೆ ವೈರಲ್ ಆಗಿರುವುದು ಗ್ರಾಹಕರಲ್ಲಿ ಗೊಂದಲ ಮೂಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಅವರು, ಈ ಆರೋಪ ಸಂಪೂರ್ಣ ಸುಳ್ಳು ಎಂದು ಖಡಕ್ ಸ್ಪಷ್ಟನೆ ನೀಡಿದ್ದಾರೆ.

“ಕೆಎಂಎಫ್ ಉತ್ಪನ್ನಗಳನ್ನು ನೈಸರ್ಗಿಕವಾಗಿ ತಯಾರಿಸಲಾಗುತ್ತದೆ. ಯಾವುದೇ ರೀತಿಯ ಕೆಮಿಕಲ್ ಸೇರಿಸಲಾಗುವುದಿಲ್ಲ. ಇದುವರೆಗೆ ನಮ್ಮ ಉತ್ಪನ್ನಗಳ ಬಗ್ಗೆ ಯಾವುದೇ ದೂರು ಬಂದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ನಿರಾಧಾರ,” ಎಂದು ಅವರು ತಿಳಿಸಿದ್ದಾರೆ.

ಸುಳ್ಳು ಮಾಹಿತಿ ಹಬ್ಬಿಸಿರುವವರ ವಿರುದ್ಧ ಈಗಾಗಲೇ ಕ್ರಿಮಿನಲ್ ಕೇಸ್ ದಾಖಲಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿ. ಶಿವಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಮುಂದೆಯೂ ಇಂತಹ ಅಪಪ್ರಚಾರ ಮುಂದುವರೆದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಜೊತೆಗೆ ಗ್ರಾಹಕರು ಯಾವುದೇ ಆತಂಕವಿಲ್ಲದೆ ಕೆಎಂಎಫ್ ಉತ್ಪನ್ನಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ.

ಇದರ ಜೊತೆಗೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ನಡೆಸಿದ ಪರೀಕ್ಷೆಯಲ್ಲಿ ಕೆಎಂಎಫ್ ಉತ್ಪನ್ನಗಳು ಸಂಪೂರ್ಣ ಸುರಕ್ಷಿತ ಎಂಬ ವರದಿ ಬಂದಿದೆ. ಮೈಸೂರು ಪಾಕ್, ಮಿಲ್ಕ್ ಪೇಡಾ, ಪನ್ನೀರ್, ವೆನಿಲಾ ಮಿಲ್ಕ್ ಶೇಕ್ ಸೇರಿದಂತೆ ಎಲ್ಲಾ ಉತ್ಪನ್ನಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಿವೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಕಸ ವಿಲೇವಾರಿಗೆ ಅಡ್ಡಿ ಮಾಡಿದರೆ ಜನರೇ ಉತ್ತರ ಕೊಡುತ್ತಾರೆ: ಡಿ.ಕೆ. ಶಿವಕುಮಾರ್

0

ಬೆಂಗಳೂರು: ಕಸ ವಿಲೇವಾರಿ ವಿಚಾರದಲ್ಲಿ ಬಿಜೆಪಿ ನಾಯಕರು ಅಡ್ಡಿಪಡಿಸಿದರೆ ಜನರೇ ಅವರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಅಸ್ಸಾಂಗೆ ತೆರಳುವ ಮುನ್ನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,

ಬಿಜೆಪಿ ನಾಯಕರು ಕಸ ವಿಲೇವಾರಿಗೆ ಬಿಡುವುದಿಲ್ಲ ಎಂದು ಹೇಳುತ್ತಾರೆ. ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಲೇಬೇಕಲ್ಲವೇ? ಅದು ಜನರ ಕಸ. ಮೊದಲಿನಿಂದಲೂ ಹೇಗೆ ವ್ಯವಸ್ಥೆ ಇತ್ತೋ, ಅದೇ ರೀತಿ ಮುಂದುವರಿಸುತ್ತಿದ್ದೇವೆ. ಬಿಜೆಪಿ ಹಾಗೂ ನಮ್ಮ ಆಡಳಿತಾವಧಿಯಲ್ಲೂ ಇದೇ ರೀತಿಯ ತೀರ್ಮಾನ ಕೈಗೊಳ್ಳಲಾಗಿತ್ತು” ಎಂದು ಸ್ಪಷ್ಟಪಡಿಸಿದರು.

ಯಾರು ಕಸ ಬಿಡುವುದಿಲ್ಲವೋ, ಅಂಥವರ ಕ್ಷೇತ್ರದಲ್ಲಿ ಕಸವನ್ನು ತೆಗೆಯುವುದೇ ಇಲ್ಲ, ತೆಗೆಸುವುದೇ ಇಲ್ಲ. ಆಗ ಜನರೇ ಅವರಿಗೆ ಪ್ರಶ್ನೆ ಕೇಳುತ್ತಾರೆ. ಅಗತ್ಯವಿದ್ದರೆ ಮೈಕ್ ಹಾಕಿ ಪ್ರಚಾರ ಮಾಡಿಸುತ್ತೇನೆ. ಅಭಿವೃದ್ಧಿಗೆ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

20, 30 ಕೋಟಿ ಸೇರಿದಂತೆ 50 ರಿಂದ 100 ಕೋಟಿ ರೂಪಾಯಿವರೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ನೀಡುತ್ತಿದ್ದೇವೆ. ನಾವು ನೀಡುತ್ತಿರುವ ಸಹಾಯವನ್ನು ಅವರು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದರು. ಮಹದೇವಪುರದಲ್ಲಿ ಕಸ ವಿಲೇವಾರಿ ನಿಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು,

ಅಲ್ಲಿ ಮೂರು ದಿನ ಕಸವನ್ನು ತೆಗೆಯದೇ ಇದ್ದರೆ ಪರಿಸ್ಥಿತಿ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಸ ವಿಲೇವಾರಿಗೆ ನಾಲ್ಕು ಕಡೆ ಜಾಗಗಳನ್ನು ಪರಿಶೀಲಿಸಿದ್ದೆವು. ಭೂಮಿ ಸಂಬಂಧಿತ ಸಮಸ್ಯೆಗಳ ಹಿನ್ನೆಲೆಯಲ್ಲಿ ಎರಡು ಕಡೆ ಅಂತಿಮಗೊಳಿಸಿದ್ದೇವೆ. ಟೆಂಡರ್ ಕೂಡ ಕರೆಯಲಾಗಿದೆ. ಸರ್ಕಾರ ತನ್ನ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿದೆ” ಎಂದು ತಿಳಿಸಿದರು.

ರೈತರನ್ನು ಮದುವೆಯಾಗುವವರಿಗೆ ಭತ್ಯೆ ಘೋಷಣೆ ಮಾಡಲಿ — ಶಾಸಕ ರಂಗನಾಥ್ ಆಗ್ರಹ

0

ತುಮಕೂರು: ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ರೈತ ಕುಟುಂಬಗಳ ಯುವಕರಿಗೆ ಮದುವೆ ಸಾಧ್ಯವಾಗದ ಸ್ಥಿತಿ ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಮೂಡಿದೆ. ಕುಣಿಗಲ್ ಶಾಸಕ ಡಾ. ಹೆಚ್.ಡಿ. ರಂಗನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಈ ಸಂಕಷ್ಟವನ್ನು ಉಲ್ಲೇಖಿಸಿದ್ದಾರೆ.

ತಾಲ್ಲೂಕಿನ ಬಹುಪಾಲು ಯುವಕರು ಕೃಷಿ ಅವಲಂಬಿತ ಜೀವನ ನಡೆಸುತ್ತಿದ್ದರೂ, ಹೆಣ್ಣುಮಕ್ಕಳು ನಗರ ಪ್ರದೇಶದ ಸರ್ಕಾರಿ ನೌಕರರು ಅಥವಾ ಸ್ಥಿರ ಉದ್ಯೋಗ ಹೊಂದಿದವರನ್ನೇ ಆಯ್ಕೆ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ರೈತಾಪಿ ಕುಟುಂಬಗಳ ಯುವಕರ ವಿವಾಹ 30 ವರ್ಷ ದಾಟಿದರೂ ನಡೆಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಶಾಸಕರು, ಕೃಷಿಕರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ವಿಶೇಷ ಭತ್ಯೆ ಮತ್ತು ವಿಶೇಷ ಸ್ಥಾನಮಾನ ನೀಡುವ ಯೋಜನೆಯನ್ನು ಮುಂಬರುವ ಅಧಿವೇಶನದಲ್ಲಿ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.

ಹಿಂದೆ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಕೂಡ ಇದೇ ವಿಚಾರವನ್ನು ಎತ್ತಿ ಹಿಡಿದು, ರೈತ ಹಾಗೂ ಕೃಷಿ ಕಾರ್ಮಿಕರ ಮಕ್ಕಳನ್ನು ಮದುವೆಯಾಗುವವರಿಗೆ 10 ಲಕ್ಷ ಠೇವಣಿ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದರು.

ಗ್ರಾಮೀಣ ಸಮಾಜದಲ್ಲಿ ಮೂಡುತ್ತಿರುವ ಈ ಹೊಸ ಮದುವೆ ಸಂಕಷ್ಟದ ಬಗ್ಗೆ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಈಗ ಗಮನಾರ್ಹ ವಿಷಯವಾಗಿದೆ.

ವಿಜಯಪುರದಲ್ಲಿ ಪತ್ನಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಕೊಲೆ ಬಳಿಕ ನಾಪತ್ತೆಯಾಗಿರುವ ನಾಟಕವಾಡಿ ದೂರು ನೀಡಿದ್ದ ಹಂತಕ!

0

ವಿಜಯಪುರ: ಪತ್ನಿಯನ್ನು ಕೊಂದು ಮನೆಯ ಆವರಣದಲ್ಲೇ ಹೂತು ಹಾಕಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಕೊಲೆ ಮಾಡಿದ ಬಳಿಕ ಪತ್ನಿ ನಾಪತ್ತೆಯಾಗಿರುವಂತೆ ನಾಟಕವಾಡಿ ಪೊಲೀಸರಿಗೆ ದೂರು ನೀಡಿದ್ದ ಪತಿ ಅರೆಸ್ಟ್‌ ಆಗಿದ್ದಾನೆ. ಹಂತಕ ಪತಿಯನ್ನು ಪ್ರಭು ರತ್ನಾಕರ್ (46) ಹಾಗೂ ಮೃತ ಪತ್ನಿಯನ್ನು ಸರೋಜಿನಿ ರತ್ನಾಕರ್ (45) ಎಂದು ಗುರುತಿಸಲಾಗಿದೆ.

ಪತ್ನಿ ಸರೋಜಿನಿ ಹೆಸರಲ್ಲಿ ಪ್ರಭು ಹೆಚ್ಚಿನ ಸಾಲ ಮಾಡಿದ್ದ ಎನ್ನಲಾಗಿದ್ದು, ಈ ವಿಷಯವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜನವರಿ 23ರಂದು ರಾತ್ರಿ ಕೂಡ ಸಾಲದ ವಿಚಾರವಾಗಿ ಗಲಾಟೆ ನಡೆದಿದೆ. ಜನವರಿ 24ರಂದು ಪತ್ನಿಯ ತಲೆಗೆ ಹಾರಿಯಿಂದ ಹೊಡೆದು ಕೊಲೆ ಮಾಡಿದ ಪ್ರಭು, ಬಳಿಕ ಶವವನ್ನು ಮನೆಯ ಆವರಣದಲ್ಲಿ ಗಿಡ ನೆಡುವ ಜಾಗದಲ್ಲಿ ಹೂತು ಹಾಕಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಕೊಲೆ ಬಳಿಕ ಮಾರುಕಟ್ಟೆಗೆ ಹೋದ ನನ್ನ ಹೆಂಡತಿ ಮನೆಗೆ ಮರಳಿ ಬಂದಿಲ್ಲ ಎಂದು ಹೇಳಿ, ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ. ಜೊತೆಗೆ ಪತ್ನಿಯ ಕುಟುಂಬಸ್ಥರೊಂದಿಗೆ ಸೇರಿ ಹುಡುಕಾಟ ನಡೆಸುವ ನಾಟಕವಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 24 ದಿನಗಳ ತನಿಖೆಯ ಬಳಿಕ ಆರೋಪಿಯ ನಾಟಕ ಬಯಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕಾನೂನು ಪ್ರಕಾರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ. ಘಟನೆ ಸಂಬಂಧ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 

ಚಿನ್ನದ ಅಂಗಡಿ ದರೋಡೆ ಪ್ರಕರಣ: ಆರೋಪಿಗಳ ಹೆಡೆಮುರಿ ಕಟ್ಟಿದ ವಿಜಯಪುರ ಪೊಲೀಸರು!

0

ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದ್ದ ಚಿನ್ನದ ಅಂಗಡಿ ದರೋಡೆ ಪ್ರಕರಣವನ್ನು ವಿಜಯಪುರ ಜಿಲ್ಲಾ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಜನವರಿ 26ರಂದು ಮಧ್ಯಾಹ್ನ ಸುಮಾರು 3.30 ಗಂಟೆ ವೇಳೆಗೆ ಹಲಸಂಗಿ ಗ್ರಾಮದ ಭೂಮಿಕಾ ಜ್ಯುವೆಲರ್ಸ್ ಅಂಗಡಿಗೆ ಮುಸುಕುಧಾರಿಗಳಾದ ಇಬ್ಬರು ಖದೀಮರು ನುಗ್ಗಿ ಗನ್ ತೋರಿಸಿ ಹಾಡು ಹಗಲೇ ದರೋಡೆ ನಡೆಸಿದ್ದರು. ಅಂಗಡಿ ಮಾಲೀಕ ಮಹಾರುದ್ರ ಕಂಚಗಾರ ಅವರಿಗೆ ಸೇರಿದ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದರು.

ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ರಾಜ್ಯದ ಸಂಖ ಗ್ರಾಮದ ಹಣಮಂತ ವಾಘೋಲಿ (28) ಹಾಗೂ ಇಂಡಿ ತಾಲೂಕಿನ ಲಾಳಸಂಗಿ ಗ್ರಾಮದ ಶಿವರಾಜ್ ನಾವಿ (28) ಎಂದು ಗುರುತಿಸಲಾಗಿದೆ. ಬಂಧಿತರಿಂದ 3 ಕಂಟ್ರೀ ಪಿಸ್ತೂಲ್, 26 ಜೀವಂತ ಗುಂಡುಗಳು, 1 ಏರ್ ಗನ್ ಹಾಗೂ ಕೃತ್ಯಕ್ಕೆ ಬಳಸಿದ ಹೋಂಡಾ ಕಂಪನಿಯ ಯುನಿಕಾರ್ನ್ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದಲ್ಲದೆ, ಆರೋಪಿಗಳಿಂದ ಒಟ್ಟು 205 ಗ್ರಾಂ ಬಂಗಾರ ಹಾಗೂ 1 ಕೆಜಿ ಬೆಳ್ಳಿ ಸೇರಿದಂತೆ ಅಂದಾಜು ₹24 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ. ಈ ದರೋಡೆ ಪ್ರಕರಣ ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವಿಜಯಪುರ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.

error: Content is protected !!