Home Blog Page 3

ಥಿಯೇಟರ್ ಬಳಿಕ ಡಿಜಿಟಲ್ ದಾಳಿ: ‘ದಿ ಕೇರಳ ಸ್ಟೋರಿ 2’ ಒಟಿಟಿಗೆ ಎಂಟ್ರಿ

ವಿವಾದ, ವಿರೋಧ ಮತ್ತು ಬಾಕ್ಸ್ ಆಫೀಸ್ ಚರ್ಚೆಗಳ ನಡುವೆ ಸಾಗಿದ ದಿ ಕೇರಳ ಸ್ಟೋರಿ ಸಿನಿಮಾ ಇದೀಗ ಡಿಜಿಟಲ್ ರಿಲೀಸ್‌ಗೆ ಸಿದ್ಧವಾಗಿದೆ. ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಿಡುಗಡೆ ಆಗಿದ್ದು ಸಾಕಷ್ಟು ವಿರೋದದ ನಡುವೆಯೂ ಚಿತ್ರ ಉತ್ತಮ ಪ್ರದರ್ಶನ ಕಂಡಿತ್ತು. ಇದೀಗ ಸಿನಿಮಾ ಮೇ 8ರಿಂದ ZEE5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

The Kerala Story ಚಿತ್ರದ ಮುಂದುವರಿದ ಭಾಗವಾಗಿ ಬಂದ ಈ ಸಿನಿಮಾ, ಧಾರ್ಮಿಕ ಮತಾಂತರದ ಸನ್ನಿವೇಶವನ್ನು ಆಧಾರವಾಗಿಸಿಕೊಂಡ ಕಥೆಯನ್ನು ಹೇಳುತ್ತದೆ. ಚಿತ್ರ ಬಿಡುಗಡೆಯಾಗುವ ಮೊದಲು ಕಾನೂನು ತಡೆ ಎದುರಿಸಿದರೂ, ನಂತರ ಅದನ್ನು ತೆರವುಗೊಳಿಸಿ ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲಾಯಿತು.

ಸುಮಾರು 10 ವಾರಗಳ ಥಿಯೇಟ್ರಿಕಲ್ ರನ್ ನಂತರ OTTಗೆ ಬರುತ್ತಿರುವ ಈ ಸಿನಿಮಾ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಲಭ್ಯವಾಗಲಿದೆ. ಬಾಕ್ಸ್ ಆಫೀಸ್‌ನಲ್ಲಿ ಸುಮಾರು 50 ಕೋಟಿ ಗಳಿಕೆ ಮಾಡಿದ ಈ ಚಿತ್ರವು, ಮೊದಲ ಭಾಗದಷ್ಟು ಪ್ರಭಾವ ಬೀರುವಲ್ಲಿ ಯಶಸ್ವಿಯಾಗದಿದ್ದರೂ ತನ್ನದೇ ಆದ ಪ್ರೇಕ್ಷಕರನ್ನು ಸೆಳೆದಿದೆ.

ಚಿತ್ರದಲ್ಲಿ ಉಲ್ಕಾ ಗುಪ್ತಾ, ಅದಿತಿ ಭಾಟಿಯಾ, ಅಲ್ಕಾ ಅಮಿನ್ ಮತ್ತು ಐಶ್ವರ್ಯಾ ಓಜಾ ಅಭಿನಯಿಸಿದ್ದಾರೆ. ಸಂಗೀತವನ್ನು ಮನನ್ ಶಾ ಮತ್ತು ರಾಹುಲ್ ಸುಹಾಸ್ ನೀಡಿದ್ದಾರೆ.

ಒಟ್ಟಿನಲ್ಲಿ, ಥಿಯೇಟರ್‌ನಲ್ಲಿ ಚರ್ಚೆ ಹುಟ್ಟಿಸಿದ ಈ ಸಿನಿಮಾ ಇದೀಗ OTTನಲ್ಲಿ ಮತ್ತೊಮ್ಮೆ ಗಮನ ಸೆಳೆಯಲು ಸಜ್ಜಾಗಿದೆ.

ಮೇಕೆದಾಟು ಬಳಿ ಕಾಡಾನೆ ದಾಳಿ: ಪ್ರವಾಸಿಗರಲ್ಲಿ ಭೀತಿ, ಮಹಿಳೆಗೆ ಗಾಯ!

ರಾಮನಗರ: ಸಂಗಮ ಅರಣ್ಯ ಪ್ರದೇಶದ ಮೇಕೆದಾಟು ಬಳಿಯ ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ಪ್ರವಾಸಿಗರ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ನಡೆದಿದೆ.

ನೀರು ಕುಡಿಯಲು ನದಿಯತ್ತ ಬಂದ ಕಾಡಾನೆ, ಅಲ್ಲಿದ್ದ ಪ್ರವಾಸಿಗರನ್ನು ಕಂಡು ದಾಳಿ ನಡೆಸಿದಾಗ ಜನರು ಎದ್ನೋಬಿದ್ನೋ ಎಂದು ಓಡಿದ್ದಾರೆ. ಈ ವೇಳೆ ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ ಬಳಿಕ ಕಾಡಿನೊಳಗೆ ಕಾಲ್ಕಿತ್ತಿದೆ.

ದಾಳಿಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೊಸಕೋಟೆಯಲ್ಲಿ ಕೆರೆ ಮಣ್ಣು ದಂಧೆ: ರಾಜಾರೋಷವಾಗಿ ಸಾಗಾಟ, ಕಂಡು ಕಾಣದಂತಿರುವ ಅಧಿಕಾರಿಗಳು?

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ತಾಲೂಕಿನ ಲಕ್ಕೊಂಡಹಳ್ಳಿ ಗ್ರಾಮದಲ್ಲಿ ಕೆರೆಯಿಂದ ಅಕ್ರಮವಾಗಿ ಮಣ್ಣು ತೆಗೆಯುವ ಪ್ರಕರಣ ಬೆಳಕಿಗೆ ಬಂದಿದೆ.

ರಾಜಾರೋಷವಾಗಿ ನಡೆಯುತ್ತಿರುವ ಈ ದಂಧೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.

ಗ್ರಾಮದ ಕೆರೆಯಿಂದ ನೂರಾರು ಲೋಡ್‌ಗಳಷ್ಟು ಮಣ್ಣು ತೆಗೆದು ಮಾರಾಟ ಮಾಡಲಾಗುತ್ತಿದ್ದು, ಪರಿಸರ ಹಾನಿಯ ಆತಂಕ ಎದುರಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ‘PDOಗೆ ತಿಳಿಸಿದ್ದೇವೆ’ ಎಂದು ಹೇಳಲಾಗುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ಹೇಳಿ ಮೌನ ವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸಣ್ಣ ನೀರಾವರಿ ಇಲಾಖೆ ಹಾಗೂ ಗ್ರಾಮ ಆಡಳಿತದ ಗಮನಕ್ಕೆ ವಿಷಯ ತಂದರೂ ಯಾವುದೇ ಕ್ರಮವಾಗದಿರುವುದು ಪ್ರಶ್ನಾರ್ಥಕವಾಗಿದೆ. ವಿಲ್ಲೇಜ್ ಅಕೌಂಟೆಂಟ್‌ ಸಹ ಲಭ್ಯವಾಗದೇ ಇರುವುದರಿಂದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಅಕ್ರಮ ಚಟುವಟಿಕೆಯನ್ನು ತಕ್ಷಣ ನಿಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿಂದು ಗುಡುಗು ಸಹಿತ ಆಲಿಕಲ್ಲು ಮಳೆ: 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​! ಇಂದಿನ ಹವಾಮಾನ ವರದಿ ಹೀಗಿದೆ

ಬೆಂಗಳೂರು: ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಈಗಾಗಲೇ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕವು ಬಿಸಿಲಿನ ಬೇಗೆಗೆ ತತ್ತರಿಸಿದೆ.

ಇಂದು ಕರಾವಳಿಯಲ್ಲಿ ಉಷ್ಣ ಅಲೆಯ ಆರ್ಭಟವಿರಲಿದ್ದು ಜೊತೆಗೆ ರಾಜ್ಯದ ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಒಳನಾಡಿನ ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದ್ದು, ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿಯೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೀಟ್ ವೇವ್ ಅಲರ್ಟ್ ನೀಡಲಾಗಿದೆ.

ಈ ನಡುವೆ ವೈದ್ಯರು ಜನರಿಗೆ ಎಚ್ಚರಿಕೆ ನೀಡಿದ್ದು, ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಅನಗತ್ಯವಾಗಿ ಹೊರಗೆ ಹೋಗಬಾರದು, ಹೆಚ್ಚು ನೀರು ಸೇವಿಸಬೇಕು ಎಂದು ಸಲಹೆ ನೀಡಿದ್ದಾರೆ. ಮುಂದಿನ ಐದು ದಿನಗಳವರೆಗೆ ರಾಜ್ಯದ ಹಲವೆಡೆ ಇದೇ ರೀತಿಯ ಮಿಶ್ರ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

IPL 2026: ಕೊಹ್ಲಿ-ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್: ಗುಜರಾತ್ ವಿರುದ್ದ ಬೆಂಗಳೂರಿಗೆ ಭರ್ಜರಿ ಜಯ!

0

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ವಿರಾಟ್ ಕೊಹ್ಲಿ ಮತ್ತು ದೇವದತ್ತ್ ಪಡಿಕ್ಕಲ್ ಅವರ ಆಕರ್ಷಕ ಬ್ಯಾಟಿಂಗ್ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಸಾಯಿ ಸುದರ್ಶನ್ 58 ಬಾಲ್‌ಗಳಲ್ಲಿ 11 ಫೋರ್ ಹಾಗೂ 5 ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿ ಮಿಂಚಿದರು. ನಾಯಕ ಶುಭಮನ್ ಗಿಲ್ 32, ಜೋಶ್ ಬಟ್ಲರ್ 25, ವಾಷಿಂಗ್ಟನ್ ಸುಂದರ್ 19 ಹಾಗೂ ಜೇಸನ್ ಹೋಲ್ಡರ್ 23 ರನ್‌ಗಳೊಂದಿಗೆ ತಂಡಕ್ಕೆ ಬಲ ತುಂಬಿದರು.

206 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭದಲ್ಲೇ ಜಾಕೋಬ್ ಬೆಥೆಲ್ (14) ವಿಕೆಟ್ ಕಳೆದುಕೊಂಡಿತು. ನಂತರ ಕೊಹ್ಲಿ ಮತ್ತು ಪಡಿಕ್ಕಲ್ ಶತಕದ ಜೊತೆಯಾಟ ಕಟ್ಟುವ ಮೂಲಕ ಪಂದ್ಯವನ್ನು ತಂಡದ ಕಡೆಗೆ ತಿರುಗಿಸಿದರು. ಕೊಹ್ಲಿ 44 ಬಾಲ್‌ಗಳಲ್ಲಿ 81 ರನ್ (8 ಫೋರ್, 4 ಸಿಕ್ಸರ್) ಗಳಿಸಿದರೆ, ಪಡಿಕ್ಕಲ್ 27 ಬಾಲ್‌ಗಳಲ್ಲಿ 55 ರನ್ ಸಿಡಿಸಿ ಗಮನ ಸೆಳೆದರು.

ಕೊನೆಯಲ್ಲಿ ಕೃಣಾಲ್ ಪಾಂಡ್ಯ ಅಜೇಯ 23 ರನ್‌ಗಳೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಟಿಮ್ ಡೇವಿಡ್ ಹಾಗೂ ಜಿತೇಶ್ ಶರ್ಮಾ ತಲಾ 10 ರನ್‌ಗಳ ಕೊಡುಗೆ ನೀಡಿದರು. ಆರ್‌ಸಿಬಿ 19ನೇ ಓವರ್‌ನಲ್ಲೇ ಗುರಿ ತಲುಪಿ ಗೆಲುವು ಸಾಧಿಸಿತು.

ಸಿಇಟಿ ಪರೀಕ್ಷೆಯಲ್ಲಿ ಜನಿವಾರ ದಂಗಲ್: ಮೂವರನ್ನು ಬಂಧಿಸಿದ ಮಡಿವಾಳ ಪೊಲೀಸ್!

ಬೆಂಗಳೂರು: ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಡಿವಾಳ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಡಿವಾಳದ ಖಾಸಗಿ ಕೃಪಾನಿಧಿ ಕಾಲೇಜಿನಲ್ಲಿ ನಡೆದ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಮೂವರು ವಿದ್ಯಾರ್ಥಿಗಳಿಗೆ ಜನಿವಾರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಜನಿವಾರ ತೆಗೆದು ಪರೀಕ್ಷೆ ಬರೆಯಬೇಕು ಅಥವಾ ಮನೆಗೆ ತೆರಳಬೇಕು ಎಂದು ಸಿಬ್ಬಂದಿ ಸೂಚಿಸಿದ ಹಿನ್ನೆಲೆ ವಿದ್ಯಾರ್ಥಿಗಳು ಜನಿವಾರ ತೆಗೆದು ಪರೀಕ್ಷೆ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಕುರಿತು ವಿದ್ಯಾರ್ಥಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪರೀಕ್ಷಾ ಪರಿವೀಕ್ಷಕರಾದ ಸರಿತಾ, ಗಿರಿಜಮ್ಮ ಹಾಗೂ ಪರೀಕ್ಷಾ ಕೇಂದ್ರದ ಉಸ್ತುವಾರಿ ಸುಧಾಕರ್ ಅವರನ್ನು ಬಂಧಿಸಲಾಗಿದೆ.

ಬಿಎನ್‌ಎಸ್ 299, 302 ಹಾಗೂ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪರೀಕ್ಷಾ ಕೇಂದ್ರದಲ್ಲಿ ನಡೆದ ಈ ಘಟನೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.

ಕಬ್ಬಿನ ಜ್ಯೂಸ್ ಎಲ್ಲರಿಗೂ ಒಳ್ಳೆಯದಲ್ಲ! ಈ ಆರೋಗ್ಯ ಸಮಸ್ಯೆ ಇದ್ದಲ್ಲಿ ಕುಡಿಯಬೇಡಿ

0

ಬೇಸಿಗೆ ಕಾಲದಲ್ಲಿ ತಂಪು ನೀಡುವ ಜನಪ್ರಿಯ ಪಾನೀಯಗಳಲ್ಲೊಂದು ಕಬ್ಬಿನ ಜ್ಯೂಸ್ ಆಗಿದ್ದು, ಎಳನೀರು ಸೇರಿದಂತೆ ಇತರ ನೈಸರ್ಗಿಕ ಪಾನೀಯಗಳಂತೆ ಇದು ಹೆಚ್ಚು ಸೇವನೆಗೆ ಒಳಗಾಗುತ್ತದೆ.

ಆದರೆ ಕಬ್ಬಿನ ರಸ ಎಲ್ಲರಿಗೂ ಸುರಕ್ಷಿತವಲ್ಲ ಎಂಬ ವೈದ್ಯಕೀಯ ಎಚ್ಚರಿಕೆ ಇದೀಗ ಮತ್ತೆ ಗಮನ ಸೆಳೆದಿದೆ.

ಆರೋಗ್ಯ ತಜ್ಞರ ಪ್ರಕಾರ, ಕಬ್ಬಿನ ಜ್ಯೂಸ್‌ನಲ್ಲಿ ನೈಸರ್ಗಿಕ ಸಕ್ಕರೆ ಪ್ರಮಾಣ ಹೆಚ್ಚಿರುವುದರಿಂದ ಮಧುಮೇಹ ಇರುವವರು ಇದನ್ನು ಸೇವಿಸುವುದು ಅಪಾಯಕಾರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ಏರಿಸಬಹುದಾಗಿ ವೈದ್ಯರು ತಿಳಿಸಿದ್ದಾರೆ.

ಅತಿಯಾದ ತೂಕ (ಒಬಿಸಿಟಿ) ಇರುವವರು ಕೂಡ ಕಬ್ಬಿನ ಜ್ಯೂಸ್ ಸೇವನೆ ವೇಳೆ ಎಚ್ಚರಿಕೆ ವಹಿಸಬೇಕಾಗಿದೆ. ಹೆಚ್ಚಿನ ಕ್ಯಾಲೊರಿ ಇರುವುದರಿಂದ ತೂಕ ಹೆಚ್ಚುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ವಾರಕ್ಕೆ ಒಂದು ಬಾರಿ ಮಿತ ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ.

ಇದೇ ವೇಳೆ ಜೀರ್ಣಕ್ರಿಯೆ ಸಮಸ್ಯೆ, ಅಜೀರ್ಣ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಕಬ್ಬಿನ ಜ್ಯೂಸ್ ತಪ್ಪಿಸುವುದು ಉತ್ತಮ ಎಂದು ವೈದ್ಯರು ಸೂಚಿಸಿದ್ದಾರೆ. ಕೆಲವೊಮ್ಮೆ ಇದು ಹೊಟ್ಟೆಯ ಅಸೌಕರ್ಯವನ್ನು ಹೆಚ್ಚಿಸಬಹುದಾಗಿದೆ.

ವೈದ್ಯರ ಪ್ರಕಾರ, ಕಬ್ಬಿನ ಜ್ಯೂಸ್ ಸದಾ ತಾಜಾ ಹಾಗೂ ಸ್ವಚ್ಛವಾಗಿ ತಯಾರಿಸಿದದ್ದಾಗಿರಬೇಕು. ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಹಾಗೂ ಅತಿಯಾದ ಪ್ರಮಾಣದಲ್ಲಿ ಕುಡಿಯುವುದನ್ನು ತಪ್ಪಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ.

ಒಟ್ಟಿನಲ್ಲಿ ಬೇಸಿಗೆಯಲ್ಲಿ ತಂಪು ನೀಡುವ ಪಾನೀಯವಾಗಿದ್ದರೂ, ಕಬ್ಬಿನ ಜ್ಯೂಸ್ ಎಲ್ಲರಿಗೂ ಸಮಾನವಾಗಿ ಉಪಯುಕ್ತವಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಆರೋಗ್ಯ ಸಮಸ್ಯೆಗಳಿರುವವರು ವೈದ್ಯರ ಸಲಹೆಯ ನಂತರವೇ ಇದನ್ನು ಸೇವಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.

ಕೇವಲ 57 ಎಸೆತಗಳಲ್ಲಿ ಶತಕ: ಚಿನ್ನಸ್ವಾಮಿಯಲ್ಲಿ ದಾಖಲೆ ನಿರ್ಮಿಸಿದ ಸಾಯಿ ಸುದರ್ಶನ್!

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 34ನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಭರ್ಜರಿ ಶತಕ ಸಿಡಿಸಿದ್ದಾರೆ.

ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸುದರ್ಶನ್, ಆರ್‌ಸಿಬಿ ವೇಗದ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹೇಜಲ್‌ವುಡ್ ವಿರುದ್ಧ ಸಿಡಿಲಿನ ಬ್ಯಾಟಿಂಗ್ ನಡೆಸಿದರು. ಪವರ್‌ಪ್ಲೇಯಲ್ಲೇ ವೇಗವಾಗಿ ರನ್ ಕಲೆಹಾಕಿದ ಅವರು ಕೇವಲ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ನಂತರ ನಾಯಕ ಶುಭಮನ್ ಗಿಲ್ ಜೊತೆಗೆ ಉತ್ತಮ ಜೊತೆಯಾಟ ಕಟ್ಟಿದ ಸುದರ್ಶನ್, ತಂಡವನ್ನು ಭದ್ರ ಸ್ಥಿತಿಗೆ ಕೊಂಡೊಯ್ದರು. 57 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿದ ಅವರು, ಅಂತಿಮವಾಗಿ 58 ರನ್‌ಗಳಲ್ಲಿ 100 ರನ್ ಮಾಡಿ ಹೇಜಲ್‌ವುಡ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಈ ಶತಕದೊಂದಿಗೆ ಸಾಯಿ ಸುದರ್ಶನ್ ಐಪಿಎಲ್‌ನಲ್ಲಿ ತಮ್ಮ ಮೂರನೇ ಶತಕ ದಾಖಲಿಸಿದ್ದಾರೆ. ಅವರು ಈ ಹಿಂದೆ 2024 ಹಾಗೂ 2025 ಆವೃತ್ತಿಗಳಲ್ಲಿಯೂ ತಲಾ ಒಂದು ಶತಕ ಬಾರಿಸಿದ್ದರು.

ಇದೇ ವೇಳೆ ಸುದರ್ಶನ್ ಐಪಿಎಲ್‌ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 2000 ರನ್ ಪೂರೈಸಿದ ದಾಖಲೆ ನಿರ್ಮಿಸಿದ್ದಾರೆ. ಕೇವಲ 47 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿ, ಕ್ರಿಸ್ ಗೇಲ್ ಅವರ ಹಿಂದಿನ ದಾಖಲೆ ಮುರಿದಿದ್ದಾರೆ.

ಸುದರ್ಶನ್ ಅವರ ಈ ಇನ್ನಿಂಗ್ಸ್‌ಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಪರ ಅಬ್ಬರದ ಬ್ಯಾಟಿಂಗ್ ಕಾಣಿಸಿಕೊಂಡಿದೆ.

ಚಿಕ್ಕಮಗಳೂರಿನಲ್ಲಿ ಗಾಳಿ ಸಹಿತ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ!

ಚಿಕ್ಕಮಗಳೂರು: ಜಿಲ್ಲೆಯ ಕೊಟ್ಟಿಗೆಹಾರ, ಬಣಕಲ್, ಆಲ್ದೂರು ಹಾಗೂ ಮತ್ತಿಕಟ್ಟೆ ಭಾಗಗಳಲ್ಲಿ ಇಂದು ಗುಡುಗು-ಸಿಡಿಲು ಸಮೇತ ಧಾರಾಕಾರ ಮಳೆ ಸುರಿದಿದೆ.

ಹಲವೆಡೆ ಆಲಿಕಲ್ಲು ಸಹಿತ ಮಳೆಯೂ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಹಗಲಿನಲ್ಲಿ ಬಿಸಿಲು, ಸಂಜೆ ವೇಳೆಗೆ ಮಳೆ ಎಂಬಂತೆ ಹವಾಮಾನ ಬದಲಾವಣೆ ಕಂಡುಬರುತ್ತಿದ್ದು, ಇದರಿಂದ ಜನರಿಗೂ ಕೊಂಚ ತೊಂದರೆ ಆಗಿತ್ತು. ಅಷ್ಟೇ ಅಲ್ಲ ಬಿಸಿಲು–ಮಳೆಯ ನಡುವಿನ ಈ ತೀವ್ರ ಬದಲಾವಣೆಯಿಂದ ಭೂಮಿಯ ಉಷ್ಣತೆ ಹೆಚ್ಚಾಗಿ ಜನರು ಹೈರಾಣಾಗಿದ್ದಾರೆ.

ಮತ್ತೊಂದೆಡೆ, ಈ ಮಳೆಯಿಂದ ಕಾಫಿ ಮತ್ತು ಅಡಿಕೆ ಬೆಳೆಗಳಿಗೆ ನೀರಿನ ಕೊರತೆಯಿಂದ ಪರದಾಡುತ್ತಿದ್ದ ರೈತರಿಗೆ ಸ್ವಲ್ಪ ನಿರಾಳತೆ ದೊರೆತಿದೆ. ಆದರೆ ಆಲಿಕಲ್ಲು ಮಳೆಯ ಪರಿಣಾಮ ಬೆಳೆಗಳಿಗೆ ಹಾನಿಯಾಗುವ ಆತಂಕವೂ ಬೆಳೆಗಾರರಲ್ಲಿ ಉಂಟಾಗಿದೆ.

ಆಲ್ದೂರು ಪಟ್ಟಣದಲ್ಲಿ ಮಳೆಯ ಸಂತೋಷದಲ್ಲಿ ವೃದ್ಧರೊಬ್ಬರು ರಸ್ತೆಯ ಮಧ್ಯದಲ್ಲಿ ಮಳೆಯಲ್ಲಿ ನೆನೆಯುತ್ತಾ ಡ್ಯಾನ್ಸ್ ಮಾಡಿದ್ದು ಸ್ಥಳೀಯರಲ್ಲಿ ಗಮನ ಸೆಳೆದಿದೆ. ಮತ್ತಿಕಟ್ಟೆ ಸಮೀಪದ ಅಡ್ಡಮಕ್ಕಿ ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿದಿದ್ದು, ಮಹಿಳೆಯೊಬ್ಬರು ಆಲಿಕಲ್ಲುಗಳನ್ನು ಸಂಗ್ರಹಿಸಿರುವ ಘಟನೆ ಕೂಡ ನಡೆದಿದೆ.

ಒಟ್ಟಿನಲ್ಲಿ, ನಿರಂತರ ಹವಾಮಾನ ಬದಲಾವಣೆಯಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ.

ಚಿಂಚೋಳಿ–ತೆಲಂಗಾಣ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ: 10 ಜನರಿಗೆ ಗಾಯ

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಂಚೋಳಿ–ತೆಲಂಗಾಣ ರಾಜ್ಯ ಹೆದ್ದಾರಿಯಲ್ಲಿ ಇಂದು ಭೀಕರ ಸರಣಿ ಅಪಘಾತ ಸಂಭವಿಸಿದೆ.

ಸಿಮೆಂಟ್ ಟ್ಯಾಂಕರ್, ಖಾಸಗಿ ಬಸ್ ಹಾಗೂ ಆಟೋ ನಡುವೆ ನಡೆದ ಈ ಅಪಘಾತದಲ್ಲಿ ಹತ್ತು ಮಂದಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.

ತೆಲಂಗಾಣದ ತಾಂಡೂರು ಕಡೆಯಿಂದ ಚಿಂಚೋಳಿ ಕಡೆಗೆ ಬರುತ್ತಿದ್ದ ಸಿಮೆಂಟ್ ಟ್ಯಾಂಕರ್, ಎದುರಿನಲ್ಲಿದ್ದ ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿದೆ. ಇದೇ ವೇಳೆ ಟ್ಯಾಂಕರ್ ಚಿಂಚೋಳಿಯಿಂದ ವೆಂಕಟಾಪುರ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಯಿಂದ ಆಟೋ ಕೂಡ ಸಂಪೂರ್ಣ ಜಖಂಗೊಂಡಿದೆ.

ಘಟನೆಯಲ್ಲಿ ಗಾಯಗೊಂಡ ಹತ್ತು ಮಂದಿಯನ್ನು ತಕ್ಷಣವೇ ಚಿಂಚೋಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬನ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ನಿಗಾ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದ ಬಳಿಕ ಸ್ಥಳದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ತನಿಖೆ ನಡೆಯುತ್ತಿದೆ.

error: Content is protected !!