ಬೆಂಗಳೂರು: ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದ್ದಕ್ಕೆ ಸಂಭ್ರಮ ಮುಗಿಲು ಮುಟ್ಟಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಆಶೀರ್ವಾದ ಕೂಡ ಪಡೆಯುತ್ತಿದ್ದಾರೆ. ಇಂದು ಮಾಜಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ RT ನಗರದ ಬೊಮ್ಮಾಯಿ ನಿವಾಸದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಹಾಗೆ ಪಕ್ಷದ ಸಾಧಕ ಬಾಧಕಗಳ ಬಗ್ಗೆಯೂ ಚರ್ಚೆ ನಡೆಸಿದರು.
ಗೋಕಾಕ್ನಲ್ಲಿ ಯುವಕನ ಬರ್ಬರ ಹತ್ಯೆ, ಆರೋಪಿಗಳ ಮನೆ ಮೇಲೆ ಕಲ್ಲು ತೂರಾಟ
ಬೆಳಗಾವಿ:- ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗೋಕಾಕ್ ನಲ್ಲಿ ಜರುಗಿದೆ.
ಕಾಲೋನಿಯ ಯುವಕರಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ಮನೆಗಳ ಮೇಲೆ ಮೃತನ ಕುಟುಂಬಸ್ಥರು ಕಲ್ಲು ತೂರಿ ಆಕ್ರೋಶ ಹೊರಹಾಕಿದ್ದಾರೆ.
25 ವರ್ಷದ ಶಾನೂರ್ ಅಲಿಯಾಸ್ ಸಂತೋಷ ಪೂಜಾರಿ ಹತ್ಯೆಯಾದ ಯುವಕ. ಐದಾರು ಮಂದಿ ದುಷ್ಕರ್ಮಿಗಳು ಶಾನೂರ್ ಮೇಲೆ ದಾಳಿ ನಡೆಸಿ ಹತ್ಯೆಗೈದಿದ್ದಾರೆ.
ಇದರಿಂದ ಕೆರಳಿದ ಶಾನೂರ್ ಕುಟುಂಬಸ್ಥರು, ಆರೋಪಿಗಳ ಮನೆ ಮೇಲೆ ಕಲ್ಲು ತೂರಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗೋಕಾಕ್ ಶಹರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಮೂರು ಡಿಎಆರ್ ತುಕಡಿ, ನಾಲ್ಕು ಮಂದಿ ಸಿಪಿಐ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಗದಗನಲ್ಲಿ ದೀಪಾವಳಿ ಸಂಭ್ರಮ- ಹೆಚ್ಚಾಯ್ತು ಹೂಗಳ ಬೇಡಿಕೆ
ಗದಗ:- ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹೂಗಳಿಗೆ ಬೇಡಿಕೆ ಹೆಚ್ಚಾಗಿದೆ. ಗದಗ ಎಪಿಎಂಸಿ ಹೂವಿನ ಮಾರುಕಟ್ಟೆ ಫುಲ್ ರಶ್ ಆಗಿದ್ದು, ಎಲ್ಲಿ ನೋಡಿದ್ರೂ ಜನವೋ ಜನ. ಹೂಗಳನ್ನು ಕೊಂಡುಕೊಳ್ಳಲು ಜನರು ಮುಗಿಬಿದ್ದಿದ್ದಾರೆ.
ಇನ್ನೂ ಹಬ್ಬದ ಹಿನ್ನೆಲೆ, ಚೆಂಡು, ಸೆವಂತಿ, ಗಲಾಟೆ, ಗುಲಾಬಿ ಹೂಗಳ ದರ ಹೆಚ್ಚಾಗಿದೆ. ದುಬಾರಿ ಬೆಲೆಯ ನಡುವೆಯೂ ಸಂಭ್ರಮದ ದೀಪಾವಳಿ ಹಬ್ಬದ ಆಚರಣೆಗೆ ಗದಗ ಜನ ಸಿದ್ದವಾಗುತ್ತಿದ್ದಾರೆ.
KEA ಪರೀಕ್ಷಾ ಅಕ್ರಮ ಪ್ರಕರಣ – CID ಗೆ ದಾಖಲೆ ಹಸ್ತಾಂತರ
ಕಲಬುರ್ಗಿ:- KEA ಪರೀಕ್ಷೆ ಅಕ್ರಮ ಪ್ರಕರಣದ ತನಿಖೆಯನ್ನ ಇದೀಗ CID ಶುರುಮಾಡಿರುವುದು ಎಲ್ಲರಿಗೂ ತಿಳಿದ ವಿಷಯ.
ಬೆಂಗಳೂರಿನಿಂದ ಅಧಿಕಾರಿಯೊಬ್ಬರು ತನಿಖೆಗಾಗಿ ಕಲಬುರಗಿಗೆ ಆಗಮಿಸಿದ್ದು ಮೊದಲು ಅಶೋಕ ನಗರ ಠಾಣೆಯಲ್ಲಿ ದಾಖಲಾಗಿರುವ ಕೇಸನ್ನ ಕೈಗೆತ್ತಿಕೊಂಡಿದ್ದಾರೆ.
ಸರ್ಕಾರದ ಆದೇಶದ ಬಳಿಕ ಎಲ್ಲ ದಾಖಲೆಗಳನ್ನ ಸ್ಥಳೀಯ ಪೋಲೀಸರು CID ಗೆ ಹಸ್ತಾಂತರ ಮಾಡಿದ್ದಾರೆ..
ಈ ಹಿಂದೆ ನಡೆದ ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದ ಕಲಬುರಗಿಯ CID ಅಧಿಕಾರಿಯೊಬ್ರು ಬೆಂಗಳೂರಿನ ತನಿಖಾಧಿಕಾರಿ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಹೀಗಾಗಿ ತನಿಖೆ ಮತ್ತಷ್ಟು ವೇಗ ಪಡೆಯಲಿದೆ..
ತಮ್ಮ ಅವಧಿಯ ರಾಜಕೀಯ ನೆನೆದು ಭಾವುಕರಾದ ಶ್ರೀ ರಾಮುಲು
ಬಳ್ಳಾರಿ:- ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ ಎಂದು ಮಾಜಿ ಸಚಿವ ಶ್ರೀ ರಾಮುಲು ಹೇಳಿದ್ದಾರೆ.
ಮಗಳ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಕೌಲ್ ಬಜಾರ್ ಗೆ ಬಂದಂತ ಸಮಯದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು, ಅಭಿಮಾನಿಗಳು ಧೃತಿಗೇಡಬೇಡಿ, ರಾಜಕೀಯದಲ್ಲಿ ಸೋಲು- ಗೆಲು ಸಾಮಾನ್ಯ ಎಂದರು.
ಕಾರ್ಯಕರ್ತರಿಗೆ ಯಾವುದೇ ತೊಂದರೆಯಾದರೆ ಸಹಿಸುವ ಮಾತೆ ಇಲ್ಲ, ರಾಜಕೀಯ ನಾಯಕರಿಗೆ ಜೀವಾಳವೇ ಕಾರ್ಯಕರ್ತರು ಮತ್ತು ಅಭಿಮಾನಿಗಳು, ಅವರಿಗೆ ತೊಂದರೆಯಾದರೆ ಮೌನವಹಿಸುವ ಜಾಯಮಾನ ನನ್ನದಲ್ಲ, ಹಿಂದಿನ ಅವರ ಅವಧಿಯ ರಾಜಕೀಯ ನೆನೆದು ರಾಮುಲು ಭಾವುಕರಾಗಿದ್ದಾರೆ.
ರಾಜಕೀಯದಲ್ಲಿ ಯಾರಿಗೂ ಅಧಿಕಾರ ಶಾಶ್ವತವಲ್ಲ ಎಂದು ಮಗಳ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಕೌಲ್ ಬಜಾರ್ ಗೆ ಬಂದಂತ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ.
ನೆರದಿರುವ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಹಿತೈಸಿಗಳನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.
ಇನ್ನೂ ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಂದ ಅಭಯದ ಮಾತುಗಳು ಕೇಳಿ ಕಾರ್ಯಕರ್ತರು ಸಂತಸಗೊಂಡರು.
ಸಿಎಂ ಸಿದ್ದರಾಮಯ್ಯ ಬುರುಡೆ ಬಿಟ್ಟು ಹೋಗಿದ್ದಾರೆ – ಸಂಸದ ಮುನಿಸ್ವಾಮಿ ವ್ಯಂಗ್ಯ
ಬಂಗಾರಪೇಟೆ:- ಬುರುಡೆ ಬಿಟ್ಟು ಸಿದ್ದರಾಮಯ್ಯ ಹೋಗಿದ್ದಾರೆ ಎಂದು ಹೇಳುವ ಮೂಲಕ ಸಂಸದ ಮುನಿಸ್ವಾಮಿ ಟೀಕೆ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗೆ ಕೊಡಲು ಹಣವಿಲ್ಲ, ಇನ್ನು ಕೋಲಾರ ಜಿಲ್ಲೆಯ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದೆ ಎಂದರು.
ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ನಂತರ ಸರ್ಕಾರದ ಖಜಾನೆ ಖಾಲಿಯಾಗಿದೆ. ಕಾಂಗ್ರೆಸ್ ಶಾಸಕರಿಗೆ ಕೇವಲ ಒಂದೆರಡು ಲಕ್ಷ ಅನುದಾನ ಕೊಡಲೂ ಸರ್ಕಾರದ ಬಳಿ ಹಣವಿಲ್ಲ. ಕೆಜಿಎಫ್ ಮತ್ತು ಬಂಗಾರಪೇಟೆ ಶಾಸಕರು ಹೇಳಿಕೊಟ್ಟಂತೆ ಅಂಕಿ ಅಂಶಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಯರಗೋಳ್ ಡ್ಯಾಂ ಉದ್ಘಾಟನೆ ಡ್ರಾಮಾ ಕಂಪನಿಯ ವೇದಿಕೆಯಾಗಿತ್ತು ಎಂದರು.
ಯರಗೋಳ್ ಯೋಜನೆಗೂ ಕಾಂಗ್ರೆಸ್ಗೂ ಸಂಬಂಧವಿಲ್ಲ. ಅದು ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಾಧನೆ. ಮೊದಲು ಯೋಜನೆಗೆ 150ಕೋಟಿ ಮಂಜೂರು ಮಾಡಿದ್ದೇ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಎಂದರು.
ಇದಕ್ಕೂ ಮೊದಲು ಯೋಜನೆಯ ಸರ್ವೆ ಮಾಡಲು ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಕೆ.ಶ್ರೀನಿವಾಸಗೌಡ, ಎಸ್.ರಾಜೇಂದ್ರನ್, ಕೃಷ್ಣಯ್ಯ ಶೆಟ್ಟಿ ತಲಾ 2 ಲಕ್ಷ ಕೊಟ್ಟಿದ್ದರು. ಯರಗೋಳ್ ಲೋಕಾರ್ಪಣೆ ಕೀರ್ತಿ ಇವರಿಗೆ ಸಲ್ಲಬೇಕೇ ಹೊರತು ಕಾಂಗ್ರೆಸ್ ಸರ್ಕಾರಕ್ಕೆ ಅಲ್ಲ ಎಂದರು.
ಮಹಾನಗರ ಪಾಲಿಕೆ ಮೇಯರ್ ಎಲೆಕ್ಷನ್ ಗೆ ಮುಹೂರ್ತ ಫಿಕ್ಸ್
ಬಳ್ಳಾರಿ:- ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಇದು ಕೈಗೆ ಪ್ರತಿಷ್ಠೆಯಾಗಿದೆ. ನ.28ರಂದು ಬಳ್ಳಾರಿ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ನಡೆಯಲಿದೆ. ರಾಜ್ಯದ ಕಿರಿಯ ಮೇಯರ್ ಹೆಗ್ಗಳಿಕೆಗೆ ಪಾತ್ರವಾಗಿದ್ದ 23 ವರ್ಷದ ಡಿ.ತ್ರಿವೇಣಿ ಏಳು ತಿಂಗಳು ಆಡಳಿತ ನಡೆಸಿ, ನವೆಂಬರ್ 4ರಂದು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ನೂತನ ಮೇಯರ್, ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಮೇಯರ್ ಸ್ಥಾನ ಎಸ್ಸಿ ಸಮುದಾಯಕ್ಕೆ ಮೀಸಲಾಗಿದೆ. ಉಪಮೇಯರ್ ಸ್ಥಾನಕ್ಕೆ ಎಸ್ಟಿ (ಮಹಿಳೆ) ಮೀಸಲಾಗಿದೆ. ಪಾಲಿಕೆಯ 39 ವಾರ್ಡ್ಗಳ ಪೈಕಿ ಬಿಜೆಪಿಯ 13 ಸದಸ್ಯರಿದ್ದರೇ, ಕಾಂಗ್ರೆಸ್ 21 ಸದಸ್ಯರು ಮತ್ತು ಐವರು ಪಕ್ಷೇತರ ಸದಸ್ಯರಿದ್ದಾರೆ. ಈ ಐವರು ಪಕ್ಷೇತರರು ಈಗಾಗಲೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.ಇದೇ ನಂ 28 ಕ್ಕೆ ನಡೆಯುವ ಚುನಾವಣೆಯಲ್ಲಿಯು ಈ ಬಾರಿಯ ಕಾಂಗ್ರೇಸ್ ಮತ್ತೆ ತನ್ನ ಪಾರುಪತ್ಯವನ್ನು ಸಾಧಿಸುವುದು ಮೇಲ್ನೋಟಕ್ಕೆ ಸಬೀತಾಗಿದೆ.
ದೀಪಾವಳಿ ಹಬ್ಬದಂದೇ ಫರ್ನೀಚರ್ ಶೋ ರೂಂಗೆ ಬೆಂಕಿ: ತಪ್ಪಿದ ಅನಾಹುತ
ಬೆಂಗಳೂರು:- ನಗರದಲ್ಲಿ ಫರ್ನೀಚರ್ ಶೋ ರೂಂಗೆ ಬೆಂಕಿ ಬಿದ್ದ ಘಟನೆ ಬೆಂಗಳೂರಿನಲ್ಲಿ ಜರುಗಿದೆ.
ಬೆಂಗಳೂರು ಹೊರಮಾವು ಔಟರ್ ರಿಂಗ್ ರೋಡ್ ನಲ್ಲಿನ ಸ್ಟಾನ್ಲಿ ಫರ್ನೀಚರ್ ಶೋರೂಂ ನಲ್ಲಿ ಅವಘಡ ಸಂಭವಿಸಿದೆ. ಐದು ಅಂತಸ್ತಿನ ಬಿಲ್ಡಿಂಗ್ ನಲ್ಲಿ ಮೂರು ಕಂಪನಿಗಳಿದ್ದವು. ಈ ಪೈಕಿ ಫರ್ನೀಚರ್ ಶೋರೂಂ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
ನೆಲಮಹಡಿ ಹಾಗೂ ಮೊದಲನೇ ಮಹಡಿಯಲ್ಲಿ ಫರ್ನೀಚರ್ ಶೋರೂಂ ಇದ್ದು, ರಾತ್ರಿ 12 ಗಂಟೆ ಸುಮಾರಿಗೆ ಘಟನೆ ಜರುಗಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮೂವರು ಸೆಕ್ಯೂರಿಟಿ ಗಾರ್ಡ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಟ್ಟಡದಲ್ಲಿ ಸಿಲುಕಿದ್ದ ಸೆಕ್ಯೂರಿಟಿ ಗಾರ್ಡ್ ಗಳನ್ನ ಅಗ್ನಿಶಾಮಕದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಘಟನೆಯಲ್ಲಿ ಫರ್ನಿಚರ್ ಶೋರೂಂ ಸಂಪೂರ್ಣ ಭಸ್ಮವಾಗಿದೆ. ಉಳಿದಂತೆ ಕೋಚಿಂಗ್ ಸೆಂಟರ್ ಹಾಗೂ ಐಟಿ ಕಂಪನಿ ಸಣ್ಣಪುಟ್ಟ ವಸ್ತುಗಳು ಬೆಂಕಿಗೆ ಆಹುತಿ ಆಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಢ ನಡೆದಿರುವ ಶಂಕೆ ವ್ಯಕ್ತವಾಗಿದೆ. ಎರಡನೇ ಮಹಡಿಯಲ್ಲಿ ಕಾಮೆಡ್ ಕೋಚಿಂಗ್ ಸೆಂಟರ್ ಇದ್ದು, 3,4 ನೇ ಮಹಡಿಯಲ್ಲಿ ಬ್ರೇಕ್ಸ್ ಕಂಟ್ರೋಲ್ಸ್, ಎಂಬ ಸಾಫ್ಟ್ವೇರ್ ಕಂಪನಿ ಇತ್ತು.
ಸ್ಥಳಕ್ಕೆ ಬಂದ ನಾಲ್ಕು ಅಗ್ನಿಶಾಮಕದಳ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಸದ್ಯ ಸಂಪೂರ್ಣವಾಗಿ ಅಗ್ನಿಶಾಮಕದಳ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ನಡುರಸ್ತೆಯಲ್ಲೇ ಬಿಎಂಟಿಸಿ ಬಸ್ ನಲ್ಲಿ ಬೆಂಕಿ ಅವಘಡ
ಬೆಂಗಳೂರು: ಬಿಎಂಟಿಸಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಜಾಗರೂಕತೆಯಿಂದ ಭಾರಿ ಅಪಾಯದ ಘಟನೆ ಇಲ್ಲಿನ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ದಾಸನಪುರ ಡಿಪೋದಿಂದ ನೆಲಮಂಗಲ ಪಟ್ಟಣಕ್ಕೆ ಆಗಮಿಸುತ್ತಿದ್ದ ಬಿಎಂಟಿಸಿ ಬಸ್ ನಗರದ ಜೆಪಿ ಆಸ್ಪತ್ರೆ ಸಮೀಪ ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ.
ಇನ್ನೂ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಜನರು ಭಯಗೊಂಡಿದ್ದಾರೆ. ಬಸ್ ನಲ್ಲಿದ್ದ ಜನರು ಕೂಗಾಡಿದ್ದಾರೆ, ತಕ್ಷಣ ಬಸ್ ನಿಲ್ಲಿಸಿದ ಚಾಲಕ ಪ್ರಯಾಣಿಕರನ್ನು ಕೆಳಗೆ ಇಳಿಸಿ ನಂತರ ಹಿಂದೆ ಬರುತ್ತಿದ್ದ ಬಸ್ನಲ್ಲಿದ್ದ ಬೆಂಕಿ ನಂದಿಸುವ ಸಾಧನದಿಂದ ಬೆಂಕಿಯನ್ನು ನಂದಿಸುವ ಮೂಲಕ ಜಾಗರೂಕತೆಯಿಂದ ಭಾರಿ ಅಪಾಯವನ್ನು ತಪ್ಪಿಸಿದ್ದಾರೆ.
ಅಲ್ಲದೇ ಬೆಂಕಿ ಅವಘಡದ ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ತೊಂದರೆ ಆಗಿಲ್ಲ. ಬೆಂಕಿ ಕಾಣಿಸಿಕೊಂಡ ವಿಚಾರ ತಿಳಿದು ಜನರು ಹೆಚ್ಚಾಗಿ ಸೇರಿಕೊಂಡ ಪರಿಣಾಮ ಸ್ಥಳಕ್ಕೆ ಟೌನ್ ಇನ್ಸ್ಪೆಕರ್ ಶಶಿಧರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಆನಂದಪುರ ಗ್ರಾಮ: ಈಶ್ವರ ದೇವಸ್ಥಾನ ಆವರಣದಲ್ಲಿ ಪುರಾತನ ಆಭರಣ, ನಿಧಿ ಪತ್ತೆ
ಸಿದ್ದಾಪುರ: ಇಲ್ಲಿನ ಆನಂದಪುರ ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಬಳಿ ಪುರಾತನ ಆಭರಣಗಳು ಹಾಗೂ ನಿಧಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.
ವಿರಾಜಪೇಟೆ ಸಿದ್ದಾಪುರ ಮಾರ್ಗ ಮಧ್ಯದ ಅಮ್ಮತಿ ಸಮೀಪದ ಮುಖ್ಯ ರಸ್ತೆಯಲ್ಲಿರುವ ಪುರಾತನ ಈಶ್ವರ ದೇವಸ್ಥಾನವು ಟಾಟಾ ಕಾಫಿ ಸಂಸ್ಥೆಗೆ ಸೇರಿದ ಜಾಗದಲ್ಲಿ ದೇವಸ್ಥಾನವಿದ್ದು ತೋಟ ಕಾರ್ಮಿಕರು ಕೆಲಸ ನಿರ್ವಹಿಸುತಿದ್ದ ವೇಳೆ ಭೂಮಿಯಡಿಯಲ್ಲಿ ಕುಡಿಕೆಯಲ್ಲಿ ಆಭರಣಗಳು ಪತ್ತೆಯಾಗಿದೆ ಎಂದು ಹೇಳಲಾಗಿದೆ.
ತೋಟದ ವ್ಯವಸ್ಥಾಪಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಸಿದ್ದಾಪುರ ಪೊಲೀಸ್ ಸಬ್ -ಇನ್ಸ್ ಪೆಕ್ಟರ್ ಪಿ.ಎಂ.ರಾಘವೇಂದ್ರ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಗಳ ತಂಡ ತಹಸೀಲ್ದಾರರ್ ಹಾಗೂ ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಆಭರಣಗಳನ್ನು ಸಂಗ್ರಹಿಸಿ ಮಹಜರು ನಡೆಸಿ ನಿಯಮ ರೀತ್ಯ ಕ್ರಮಗಳ ಬಳಿಕ ಜಿಲ್ಲಾಧಿಕಾರಿಗಳ ವಶಕ್ಕೆ ನೀಡಲಾಯಿತು.

