Home Blog Page 3180

ಮಸ್ಕಿಯಲ್ಲಿ 25 ಸಾವಿರಕ್ಕೂ ಅಧಿಕ ಅಂತರದಿಂದ ಜಯ ಗಳಿಸಿದ ಕಾಂಗ್ರೆಸ್

ವಿಜಯಸಾಕ್ಷಿ ಸುದ್ದಿ, ಮಸ್ಕಿ

ಮಸ್ಕಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ್ ಭರ್ಜರಿ ಜಯ ದಾಖಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರ ವಿರುದ್ಧ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿದ್ದಾರೆ. ಆರಂಭದಿಂದಲೂ ಮುನ್ನಡೆ ಸಾಧಿಸಿಕೊಂಡು ಬಂದಿದ್ದ ಕಾಂಗ್ರೆಸ್ ಅಭ್ಯರ್ಥಿ ವಿಜಯದ ಮಾಲೆ ಹಾಕಿಕೊಂಡಿದ್ದಾರೆ. ಸದ್ಯ ಅವರ ಗೆಲುವನ್ನು ಅಧಿಕೃತವಾಗಿ ಘೋಷಿಸುವುದೊಂದೆ ಬಾಕಿ ಉಳಿದಿದೆ.

ಚುನಾವಣಾ ಮತ ಎಣಿಕೆ ಬಾಕಿ ಇರುವಾಗಲೇ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್, ತಮ್ಮ ಪಕ್ಷದ ಹಲವು ನಾಯಕರ ವಿರುದ್ಧ ಕಿಡಿ ಕಾರಿದರು. ನಮ್ಮವರೇ ನಮಗೆ ಮೋಸ ಮಾಡಿದರು. ಈ ಪರಿಸ್ಥಿತಿ ಕಾಂಗ್ರೆಸ್ ಗೆ ಅನುಕೂಲವಾಗಿದೆ ಎಂದು ಆರೋಪಿಸಿದ್ದರು.

2018ರ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಅವರು 60,387 ಮತಗಳನ್ನು ಪಡೆದಿದ್ದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರವಿಹಾಳ 60,174 ಮತಗಳನ್ನು ಗಳಿಸಿ ಸೋಲು ಕಂಡಿದ್ದರು. ಕೇವಲ 213 ಮತಗಳ ಅಂತರದಿಂದ ಪ್ರತಾಪ್ ಗೌಡ ಪಾಟೀಲ್ ಗೆದ್ದಿದ್ದರು. ಆದರೆ, ಆಪರೇಷನ್ ಕಮಲದಲ್ಲಿ ಪ್ರತಾಪ್ ಗೌಡ ಅವರು, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ಕಾಂಗ್ರೆಸ್ ಸೇರಿದ್ದರು. ಸದ್ಯ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ತುರವಿಹಾಳ್ ಭರ್ಜರಿಯಾಗಿ ಜಯ ದಾಖಲಿಸಿದ್ದಾರೆ. ಉಪ ಚುನಾವಣೆಯಲ್ಲಿ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ.

ಬಂಗಾಳದಲ್ಲಿ ಬಿಜೆಪಿಗೆ ಭಾರೀ ಮುಖಭಂಗ; ಮುನ್ನಡೆ ಕಾಯ್ದುಕೊಂಡ ಮಮತಾ

ವಿಜಯಸಾಕ್ಷಿ ಸುದ್ದಿ, ಕೊಲ್ಕತ್ತಾ

ಪಂಚ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆ ಪೈಕಿ ಪಶ್ಚಿಮ ಬಂಗಾಳ ದೇಶದ ಜನರನ್ನು ತನ್ನತ್ತ ಸೆಳೆದಿದೆ. ಇಲ್ಲಿ ಬಿಜೆಪಿ ಹಾಗೂ ಟಿಎಂಸಿ ನಡುವೆ ಯುದ್ಧದ ರೀತಿಯಲ್ಲಿಯೇ ಚುನಾವಣೆ ನಡೆದಿತ್ತು. ಈ ಯುದ್ಧದಲ್ಲಿ ಟಿಎಂಸಿ ಗೆಲುವಿನ ನಗೆ ಬೀರುವ ಸಾಧ್ಯತೆ ದಟ್ಟವಾಗಿದೆ.

ಮಮತಾ ಬ್ಯಾನರ್ಜಿಯನ್ನು ಅಧಿಕಾರದಿಂದ ಇಳಿಸಿಯೇ ಸಿದ್ಧವೆಂದು ಬಿಜೆಪಿ ಪಟಾಲಂ ಅಮಿತ್ ಶಾ, ಮೋದಿ, ಜೆಪಿ ನಡ್ಡಾ ಮೂವರು ತಿಂಗಳುಗಳ ಕಾಲ ಅಖಾಡದಲ್ಲಿಯೇ ಬೀಡು ಬಿಟ್ಟಿದ್ದರು. ಆದರೆ, ಇಲ್ಲಿಯವರೆಗಿನ ಫಲಿತಾಂಶ ಗಮನಿಸಿದರೆ ಬಿಜೆಪಿಯ ಲೆಕ್ಕಾಚಾರ ತಲೆಕೆಳಾಗಾಗುತ್ತಿವೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ನೇತೃತ್ವದ ಟಿಎಂಸಿ ಪಕ್ಷವು ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ದಾಟಿ ಭಾರಿ ಮುನ್ನಡೆ ಸಾಧಿಸಿದೆ. ಸದ್ಯ ಟಿಎಂಸಿ 203ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ ಬಿಜೆಪಿ 86 ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.

ಮಮತಾ ಬ್ಯಾನರ್ಜಿ ಸ್ಪರ್ಧೆ ಮಾಡಿರುವ ನಂದಿಗ್ರಾಮದಲ್ಲಿ ಸದ್ಯ ಟಿಎಂಸಿ ಮುನ್ನಡೆ ಸಾಧಿಸಿದೆ. ಸತತ ಹಿನ್ನಡೆ ಅನುಭವಿಸುತ್ತಿದ್ದ ಮಮತಾ ಸೋಲಬಹುದು ಎಂದೇ ಎಲ್ಲರೂ ಅಂದಾಜಿಸಿದ್ದರು. ಆದರೆ, ಸದ್ಯ ಮಮತಾ ಬ್ಯಾನರ್ಜಿ 1,500 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಹಲವು ಜಿಲ್ಲೆಗಳಿಗೆ ನೂತನ ಉಸ್ತುವಾರಿ ಸಚಿವರ ನೇಮಕ ಮಾಡಿದ ಸರ್ಕಾರ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯ ಸರ್ಕಾರವು ವಿವಿಧ ಜಿಲ್ಲೆಗಳಿಗೆ ನೂತನ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಚಿವ ಸಂಪುಟ ವಿಸ್ತರಣೆಯಾದ ನಂತರ ಸರ್ಕಾರವು ಜಿಲ್ಲಾ ಉಸ್ತುವಾರಿಗಳ ನೇಮಕ ಮಾಡಿರಲಿಲ್ಲ. ಅಲ್ಲದೇ, ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳ ಅವಶ್ಯಕತೆ ಇದೆ. ಹೀಗಾಗಿ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದೆ.

ಡಿಸಿಎಂ ಗೋವಿಂದ ಕಾರಜೋಳ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ಇನ್ನುಳಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರನ್ನು ಬಾಗಲಕೋಟೆ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರನ್ನು ಬೀದರ್,

ಪೌರಾಡಳಿತ ಮತ್ತು ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ಅವರನ್ನು ಕೋಲಾರ, ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರನ್ನು ಕಲಬುರಗಿ ಹಾಗೂ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ್ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಎಲ್ಲ ವಯೋಮಾನದವರಲ್ಲಿಯೂ ಕಂಡು ಬರುತ್ತಿದೆ ಸೋಂಕು!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ದೇಶದಲ್ಲಿ ಮಹಾಮಾರಿಯು ಎಲ್ಲರನ್ನೂ ನಡುಗಿಸುತ್ತಿದೆ. ಅದರಲ್ಲಿಯೂ ಮಹಾರಾಷ್ಟ್ರದಲ್ಲಂತೂ ಅದರ ತೀವ್ರತೆ ಹೇಳತೀರದಾಗಿದೆ. ಸದ್ಯ ಈ ರಾಜ್ಯದಲ್ಲಿ ಮತ್ತೊಂದು ಸಮಸ್ಯೆ ಕಾಡುತ್ತಿದೆ.

ಇಲ್ಲ 10 ವರ್ಷದೊಳಗಿನ ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.

ಕೇವಲ ಒಂದು ತಿಂಗಳಲ್ಲಿಯೇ ರಾಜ್ಯದಲ್ಲಿನ ಶೇ. 51ರಷ್ಟ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಏ. 3 ರ ವರೆಗೂ ರಾಜ್ಯದಲ್ಲಿ 10 ವರ್ಷದೊಳಗಿನ 1,34,470 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೇವಲ 25 ದಿನಗಳಲ್ಲಿ 75,387 ಮಕ್ಕಳಲ್ಲಿ ಸೋಂಕು ದೃಢಪಟ್ಟಿದ್ದು, ಶೇ.51ರಷ್ಟು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

10 ವರ್ಷದೊಳಗಿನ ಶೇ. 3.04ರಷ್ಟು ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. 11 – 20ರ ವಯಸ್ಸಿನ ಶೇ. 6.80ರಷ್ಟು ಹಾಗೂ 21 – 30 ರ ವಯಸ್ಸಿನವರಲ್ಲಿ ಶೇ. 17.51ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

31-40 ವರ್ಷದವರಲ್ಲಿಯೇ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ಶೇ. 22.09ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 61 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಲ್ಲಿ ಶೇ. 17.15ರಷ್ಟಿದೆ.

ಆಸ್ಸಾಂನಲ್ಲಿ ಭಾರೀ ಅಂತರ ಕಾಯ್ದುಕೊಂಡ ಬಿಜೆಪಿ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಅಸ್ಸಾಂ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಸದ್ಯದ ಅಂಕಿ- ಸಂಖ್ಯೆಯಂತೆ ಎನ್ ಡಿಎ ಮೈತ್ರಿಕೂಟ 72 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಯುಪಿಎ ಮೈತ್ರಿಕೂಟ 33 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಮುಖಭಂಗ ಅನುಭವಿಸುತ್ತಿದೆ.
ಅಸ್ಸಾಂ ನಲ್ಲಿ ಎನ್ ಡಿಎ ಹಾಗೂ ಯುಪಿಎ ನೇರಾನೇರ ಸ್ಪರ್ಧೆ ಏರ್ಪಡಬಹುದು ಎನ್ನುವ ಲೆಕ್ಕಾಚಾರ ಇತ್ತು. ಎನ್ ಡಿಎ ಆ ಲೆಕ್ಕಾಚಾರವನ್ನ ಬುಡಮೇಲು ಮಾಡಿದೆ.

ಇನ್ನೂ ಯುಪಿಎ ಮೈತ್ರಿಕೂಟ ಫಲಿತಾಂಶಕ್ಕೂ ಮುನ್ನವೇ ತಮ್ಮ ಅಭ್ಯರ್ಥಿಗಳನ್ನ ಆಪರೇಷನ್ ಮೂಲಕ ಕೊಂಡೊಯ್ಯುವ ಭೀತಿಯಿಂದ ಹಿಡಿದಿಟ್ಟುಕೊಂಡಿತ್ತು. ಆದರೆ ಬಿಜೆಪಿ ಆ ಚಿತ್ರಣವನ್ನೇ ಬದಲಾಯಿಸಿಬಿಟ್ಟಿದೆ.

ಕೊರೊನಾ ಮಹಾಮಾರಿಗೆ ವಾರಿಯರ್ ಬಲಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಇಲ್ಲಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನರ್ಸ್ ಒಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆ.

ಇಲ್ಲಿಯ ಭವಾನಿ ನಗರದ ಸೋಫಿಯಾ ಪೀಟರ್ ಕನವಳ್ಳಿ(45) ಮಹಾಮಾರಿಗೆ ಬಲಿಯಾದ ದುರ್ದೈವಿ. ಇವರು ಪತಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇವರು ಕಿಮ್ಸ್ ಆಸ್ಪತ್ರೆಯಲ್ಲಿ ಕಳೆದ 16 ವರ್ಷಗಳಿಂದ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಸೋಫಿಯಾ ಅವರು ಹಗಲು – ರಾತ್ರಿ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಏ. 23ರಂದು ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರಲ್ಲಿ ಏ. 29ರಂದು ಏಕಾಏಕಿ ಉಸಿರಾಟದ ತೊಂದರೆಯಾಗಿ ಸಾವನ್ನಪ್ಪಿದ್ದಾರೆ.

ಸೋಫಿಯಾ ಅವರ ನಿಧನಕ್ಕೆ ಇಡೀ ಕಿಮ್ಸ್ ಸಿಬ್ಬಂದಿ ಕಂಬನಿ ಮಿಡಿದಿದೆ.

ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾಮಲೈ ಗೆಲುವು ಸಾಧಿಸುವರೇ?

ವಿಜಯಸಾಕ್ಷಿ ಸುದ್ದಿ, ಚೆನ್ನೈ

ತಮಿಳುನಾಡು ಚುನಾವಣೆಯಲ್ಲಿ ಯಾವಾಗಲೂ ಸೆಲೆಬ್ರಿಟಿಗಳದ್ದೇ ಸದ್ದು. ಈ ವರ್ಷದ ಚುನಾವಣೆಯಲ್ಲಿ ಸ್ವಂತ ಪಕ್ಷ ಕಟ್ಟಿ ನಟ ಕಟ್ಟಿ ಕಮಲ್ ಹಾಸನ್ ಹೆಚ್ಚು ಸದ್ದು ಮಾಡಿದ್ದರು. ಅಲ್ಲದೇ, ತಮ್ಮ ಐಪಿಎಸ್ ಗೆ ರಾಜೀನಾಮೆ ನೀಡಿ ಅಣ್ಣಾಮಲೈ ಬಿಜೆಪಿ ಸೇರಿ ಚುನಾವಣೆಗೆ ಸ್ಪರ್ಧಿಸಿದ್ದರು.

ಸದ್ಯ ಕೊಯಮತ್ತೂರು ದಕ್ಷಿಣದಲ್ಲಿ ಸ್ಪರ್ಧೆ ಮಾಡಿದ್ದ ಕಮಲ ಹಾಸನ್ ಗೆ ಆರಂಭಿಕ ಹಿನ್ನಡೆಯಾಗಿದೆ. ಅರವಕುರಿಚಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸಿಂಗಂ ಅಣ್ಣಾಮಲೈ ಗೆ ಆರಂಭಿಕ ಮುನ್ನಡೆ ಸಿಕ್ಕಿದೆ. ಥೌಸಂಡ್ ಲೈಟ್ಸ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟಿ ಖುಷ್ಬೂ ಅವರು ಮುನ್ನಡೆ ಸಾಧಿಸಿದ್ದಾರೆ.

ದೀದಿ ಸ್ಪರ್ಧೆ ಮಾಡಿದ್ದ ನಂದಿಗ್ರಾಮದ ಮೇಲೆಯೇ ಎಲ್ಲರ ಕಣ್ಣು! ಅಷ್ಟಕ್ಕೂ ಅಲ್ಲಿನ ಹಿಂದಿನ ಶಾಸಕರು ಯಾರು ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಕೋಲ್ಕತ್ತಾ

ಸದ್ಯ ಐದು ರಾಜ್ಯಗಳಿಗೆ ನಡೆದ ಚುನಾವಣೆಯ ಮತ ಎಣಿಕೆಯ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಇಡೀ ದೇಶದ ಜನರ ಕಣ್ಣು ಪಶ್ಚಿಮ ಬಂಗಾಳದ ನಂದಿಗ್ರಾಮದ ಮೇಲಿದೆ. ಏಕೆಂದರೆ ಸಿಎಂ ಮಮತಾ ಬ್ಯಾನರ್ಜಿ ಅವರು ಅಲ್ಲಿ ಸ್ಪರ್ಧೆ ಮಾಡಿದ್ದಾರೆ. ಅಷ್ಟೇ ಅಲ್ಲ ದೀದಿ ತಮ್ಮ ಆಪ್ತನ ವಿರುದ್ಧ ಸ್ಪರ್ಧೆ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಹಾಗೂ ಅವರ ಮಾಜಿ ಆಪ್ತ ಸುವೇಂದು ಅಧಿಕಾರಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. ಹೀಗಾಗಿ ಅವರ ವಿರುದ್ಧವೇ ದೀದಿ ಸ್ಪರ್ಧೆ ಮಾಡಿದ್ದಾರೆ.
ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸೋಲುತ್ತಾರೆ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೂಡ ಸೋಲುತ್ತಾರೆ ಎಂದು ಬಿಜೆಪಿ ಚುನಾವಣಾ ಪ್ರಚಾರ ಮಾಡಿತ್ತು. ಮಮತಾ ಬ್ಯಾನರ್ಜಿ ಮಾತ್ರ ಯಾವುದೇ ಕ್ಷೇತ್ರದಲ್ಲಿಯೂ ಸ್ಪರ್ಧೆ ಮಾಡದೆ ಕೇವಲ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ್ದರು.

ಈ ಕ್ಷೇತ್ರದಲ್ಲಿ ಈ ಹಿಂದೆ ಸುವೇಂದು ಅಧಿಕಾರಿ ತಂದೆ ಶಾಸಕರಾಗಿದ್ದರು. ಈಗ ಸತತ ಮೂರು ಬಾರಿ ಸುವೇಂದು ಅಧಿಕಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಹಜವಾಗಿ ಈ ಕ್ಷೇತ್ರದ ಮೇಲೆ ಸುವೇಂದು ಅಧಿಕಾರಿಯ ಪ್ರಭಾವವೇ ಜಾಸ್ತಿಯಿದೆ. ಆದರೂ ದೀದಿ ತಮ್ಮ ಹಠ ಬಿಡಲಿಲ್ಲ.

ದ್ರಾವಿಡ ನೆಲದಲ್ಲಿ ಡಿಎಂಕೆ…ಬಂಗಾಳದಲ್ಲಿ ದೀದಿ….ದೇವರ ನಾಡಿನಲ್ಲಿ ಎಲ್ ಡಿಎಫ್ ಮುಂದೆ!

ವಿಜಯಸಾಕ್ಷಿ ಸುದ್ದಿ, ಚೈನ್ನೈ

ದೇಶದಲ್ಲಿನ ಐದು ರಾಜ್ಯಗಳ ವಿಧಾನಸಭ ಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಹೊರ ಬೀಳಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಎಲ್ಲೆಡೆ ಪ್ರಗತಿಯಲ್ಲಿದೆ. ತಮಿಳುನಾಡಿನಲ್ಲಿ ಡಿಎಂಕೆ ಆರಂಭಿಕ ಮುನ್ನಡೆ ಪಡೆದಿದ್ದು, ಕೇರಳದಲ್ಲಿ ಎಲ್ ಡಿಎಫ್ ಮುಂದಿದೆ.

ತಮಿಳುನಾಡಿನಲ್ಲಿ ಒಟ್ಟು 234 ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದೆ. ಈ ಪೈಕಿ ಈಗಾಗಲೇ ಡಿಎಂಕೆ 50 ಮತ್ತು ಎಐಎಡಿಎಂಕೆ ಎರಡು ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಇದರಿಂದ ಡಿಎಂಕೆ ಭಾರೀ ಮುನ್ನಡೆ ಕಾಯ್ದುಕೊಂಡಂತಾಗಿದೆ.
ಕೇರಳದಲ್ಲಿ 140 ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು, ಎಲ್ ಡಿಎಫ್ 38, ಯುಡಿಎಫ್ 24 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಎಲ್ ಡಿಎಫ್ ಮುನ್ನಡೆ ಸಾಧಿಸಲಿದೆ ಎಂದು ಹೇಳಲಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಲ್ಲಿ ಟಿಎಂಸಿ 58 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 55 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಪುದುಚೇರಿಯಲ್ಲಿ ಬಿಜೆಪಿ 1, ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಅಸ್ಸಾಂನಲ್ಲಿ 126 ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ 4, ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.

ಈ ಸಮಯದಲ್ಲಿ ರಾಜ್ಯದಲ್ಲಿ ಇರಲಿದೆಯಂತೆ ಮೂರನೇ ಅಲೆ; ಜನ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಗ್ಯಾರಂಟಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸೋಂಕಿನ ಎರಡನೇ ಅಲೆ ಈಗಾಗಲೇ ಜನರನ್ನು ಸಾಕಷ್ಟು ಆತಂಕಕ್ಕೆ ದೂಡಿದೆ. ಇದರ ಮಧ್ಯೆಯೂ ರಾಜ್ಯದಲ್ಲಿ ಮೂರನೇ ಅಲೆಯ ಮಾತು ಕೇಳಿ ಬರುತ್ತಿದ್ದು, ಜನ ಬೆಚ್ಚಿ ಬೀಳುವಂತಾಗಿದೆ.

ಸದ್ಯ ರಾಜ್ಯದಲ್ಲಿ ಪ್ರತಿ ದಿನ 40 ಸಾವಿರದ ಆಸುಪಾಸಿನಲ್ಲಿ ಸೋಂಕಿತರ ಸಂಖ್ಯೆ ದಾಖಲಾಗುತ್ತಿದೆ. ಈ ಸಂದರ್ಭದಲ್ಲಿ ಇದೇ ವರ್ಷದ ಅಕ್ಟೋಬರ್ ತಿಂಗಳ ಸಮಯದಲ್ಲಿ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ತಾಂತ್ರಿಕ ಸಲಹಾ ಸಮಿತಿಯ ವಿಶ್ಲೇಷಕರ ತಂಡ ನೀಡಿರುವ ವರದಿಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.

ರಾಜ್ಯದಲ್ಲಿ ಮೇ ಹಾಗೂ ಜುಲೈ ತಿಂಗಳವರೆಗೆ 2ನೇ ಅಲೆಯೇ ಇರಲಿದ್ದು, ಆದಾದ ನಂತರ ಮೂರನೇ ಅಲೆ ಇರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಯುರೋಪಿಯನ್ ರಾಷ್ಟ್ರಗಳಲ್ಲಿ ಕೊರೊನಾ ಪರಿಸ್ಥಿತಿ ಗಮನಿಸಿದರೆ ಖಂಡಿತವಾಗಿಯೂ ರಾಜ್ಯದಲ್ಲಿಯೂ ಮೂರನೇ ಅಲೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈಗಿನಿಂದಲೇ ಜನರು ಎಚ್ಚರ ವಹಿಸಬೇಕು ಎಂದು ತಜ್ಞರು ಕಿವಿ ಮಾತು ಹೇಳಿದ್ದಾರೆ.

ಲಸಿಕೆ ಪಡೆದುಕೊಳ್ಳುವುದರ ನಡುವೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಶುದ್ಧವಾಗಿ ತೊಳೆಯುವುದು ಸೇರಿದಂತೆ ಕೊವಿಡ್-19 ತೊಲಗಿಸಲು ವೈದ್ಯರು ನೀಡಿರುವ ಸಲಹೆಗಳನ್ನು ಚಾಚು ತಪ್ಪದೆ ಜನರು ನಿರ್ವಹಿಸಬೇಕು ಎಂದು ತಜ್ಞರು ಹೇಳಿದ್ದಾರೆ.

error: Content is protected !!