Home Blog Page 3198

ಲಾರಿ, ಟಂಟಂ ಮುಖಾಮುಖಿ: ಸ್ಥಳದಲ್ಲೇ ಓರ್ವ ಸಾವು

0

ವಿಜಯಸಾಕ್ಷಿ ಸುದ್ದಿ, ನರಗುಂದ: ಲಾರಿ‌ ಹಾಗೂ ಟಂಟಂ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿರುವ ಘಟನೆ‌ ಪಟ್ಟಣದ ಹೊರವಲಯದ ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಶರಣಪ್ಪ ಭಜಂತ್ರಿ (45) ಎಂದು ಗುರುತಿಸಲಾಗಿದೆ. ಮೃತನು ಗದಗ ತಾಲೂಕಿನ ಹುಯಿಲಗೋಳ ಗ್ರಾಮದವನೆಂದು ತಿಳಿದುಬಂದಿದೆ.

ಘಟನೆಯಲ್ಲಿ ನಾಲ್ಕು ಜನರಿಗೆ ಗಾಯಗಳಾಗಿದ್ದು, ನರಗುಂದ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಟಿಎಂ ಕೊರೆದು ಕಳ್ಳತನಕ್ಕೆ ಯತ್ನ: ಸಿಸಿಟಿವಿಯಲ್ಲಿ ಖದೀಮರ ಕೃತ್ಯ ಸೆರೆ

ವಿಜಯಸಾಕ್ಷಿ ಸುದ್ದಿ,ಗದಗ

ಎಟಿಎಂ ಕೊರೆದು ಹಣ ದೋಚಲು ಯತ್ನಿಸಿದ್ದ ಇಬ್ಬರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.‌

ಜ.16ರ ತಡರಾತ್ರಿ ನಗರದ ಹಾತಲಗೇರಿ ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕ್ ಎಟಿಎಂಗೆ ದುಷ್ಕರ್ಮಿಗಳು ಕನ್ನ ಹಾಕಿದ್ದರು. ಗ್ಯಾಸ್ ವೆಲ್ಡಿಂಗ್ ಹಾಗೂ ಕಟರ್ ನಿಂದ ಎಟಿಎಂ ಮಷಿನ್ ತುಂಡರಿಸಲು ಮುಂದಾಗಿದ್ದ ಘಟನೆ ನಡೆದಿತ್ತು.

ಕೃತ್ಯವೆಸಗುವ ಮುನ್ನ ಇಬ್ಬರು ಖದೀಮರು ಎಟಿಎಂನೊಳಗೆ ನುಗ್ಗಿ, ಸಿಸಿ ಟಿವಿಗೆ ಕೆಂಪು ಪಟ್ಟಿ ಅಂಟಿಸಿದ್ದರು. ಅಲ್ಲದೇ, ಎಟಿಎಂನಲ್ಲಿ ಎಲ್ಲೂ ಬೆರಳಿನ ಗುರುತು ಮೂಡಬಾರದೆಂದು ಕೈಗೆ ಹ್ಯಾಂಡ್ ಗ್ಲೌಸ್ ಹಾಕಿ ಹಣ ದೋಚಲು ಯತ್ನಿಸಿದ್ದರು. ಆದರೆ, ಅವರ ಪ್ರಯತ್ನ ಯಶಸ್ವಿಯಾಗದೇ ಬರಿಗೈಲಿ ಹಿಂದುರಿಗಿರುವ ದೃಶ್ಯ ಸದ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಸ್ – ಸ್ಕೂಟರ್ ನಡುವೆ ಅಪಘಾತ: ವಾಹನದ ಚಕ್ರಕ್ಕೆ‌ ಸಿಲುಕಿ ತಂದೆ ಮಗ ಸಾವು

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ : ಸಾರಿಗೆ ಸಂಸ್ಥೆಯ ವಾಹನದ ಚಕ್ರಕ್ಕೆ ಸಿಲುಕಿ ಸ್ಕೂಟರ್ ಸವಾರ ತಂದೆ ಹಾಗೂ ನಾಲ್ಕು ವರ್ಷದ ಮಗು ಸಾವನ್ನಪ್ಪಿದ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಸಂಭವಿಸಿದೆ.

ಮೃತ ದುರ್ದೈವಿಗಳನ್ನು ಗಂಗಾವತಿಯ ಜಯನಗರದ ಕೂಲಿ‌ಕಾರ್ಮಿಕ ಹನುಮೇಶ ನಾಯಕ (27) ಹಾಗೂ ಪವನ್ (4) ಎಂದು ಗುರುತಿಸಲಾಗಿದೆ. ಮೃತಪಟ್ಟವರು ಕಲ್ಗುಡಿ ಗ್ರಾಮದಿಂದ ಗಂಗಾವತಿಗೆ ಬರುವ ಸಂದರ್ಭದಲ್ಲಿ ಗಂಗಾವತಿಯಿಂದ ಸಿಂಧನೂರು ಮಾರ್ಗದತ್ತ ಹೊರಟಿದ್ದ ಸಾರಿಗೆ ಸಂಸ್ಥೆಯ ವಾಹನದ‌ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಈ ಘಟ‌ನೆ ಸಂಭವಿಸಿದೆ.

ಕಾರಟಗಿಯಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಕೂಡಲೇ ಸ್ಥಳಕ್ಕೆ ಧಾವಿಸಿದರು. ಪೊಲೀಸರು ಹಾಗೂ ಅಂಬುಲೆನ್ಸ್ ವಾಹನಕ್ಕೆ ಕರೆ‌ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡು ಸಂಚಾರ ದಟ್ಟಣೆ‌ ನಿಯಂತ್ರಣ ನಿವಾರಣೆಗೆ ಯತ್ನಿಸಿದರು. ವಿಷಯ ತಿಳಿದ ಶಾಸಕ ಬಸವರಾಜ್ ದಡೇಸೂಗೂರ ಸ್ಥಳಕ್ಕೆ ಧಾವಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಬೆಂಬಲಿತ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಕ್ಕೆ ಬಿಜೆಪಿ ಕಾರ್ಯಕರ್ತನ ಹತ್ಯೆ?

0

ವಿಜಯಸಾಕ್ಷಿ ಸುದ್ದಿ, ಹಾಸನ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರವಾಗಿ ಗ್ರಾ.ಪಂ.ಚುನಾವಣೆಯಲ್ಲಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾರಗೊಂಡನಹಳ್ಳಿಯಲ್ಲಿ ನಡೆದಿದೆ.

ಅದೇ ಗ್ರಾಮದ ಎಂ.ಎನ್.ಮೂರ್ತಿ (50) ಕೊಲೆಯಾದ ವ್ಯಕ್ತಿಯಾಗಿದ್ದು, ದುಷ್ಕರ್ಮಿಗಳು ಕೊಲೆ ಮಾಡಿದ ನಂತರ ಬೆನ್ನಿಗೆ ಕಲ್ಲು ಕಟ್ಟಿ ಬಾವಿಗೆ ಎಸೆದಿದ್ದಾರೆ‌.

ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದೇ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದ್ದು, ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಬಯಲಾಗಬೇಕಾಗಿದೆ. ಸ್ಥಳಕ್ಕೆ ಹೊಳೆನರಸೀಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಪೊಲೀಸರ ಮನೆಗೇ ಕನ್ನ! ಚಿನ್ನಾಭರಣ ದೋಚಿದ ಕಳ್ಳರು

0

ವಿಜಯಸಾಕ್ಷಿ ಸುದ್ದಿ, ಹೊಸಪೇಟೆ: ಚಾಲಾಕಿ ಕಳ್ಳರು ಪೊಲೀಸರ ಮನೆಯನ್ನೂ ಬಿಡದೇ ಚಿನ್ನಾಭರಣ ದೋಚಿರುವ ಘಟನೆ ಗ್ರಾಮೀಣ ಠಾಣೆ ವ್ಯಾಪ್ತಿಯ ಪಾಂಡುರಂಗ ಕಾಲೋನಿಯಲ್ಲಿ ನಡೆದಿದೆ.

ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಈರಣ್ಣ ಎನ್ನುವವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಈರಣ್ಣ ರಾತ್ರಿ ಪಾಳೆಯ ಕರ್ತವ್ಯ ನಿರ್ವಹಿಸಲು ಠಾಣೆಗೆ ಹೋದಾಗ ಮನೆಗೆ ನುಗ್ಗಿರುವ ಕಳ್ಳರು ಮನೆಯಲ್ಲಿದ್ದವರ ಕೈ ಕಾಲು ಕಟ್ಟಿ ಕಳ್ಳತನ ಮಾಡಿದ್ದಾರೆ.

ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಲಾಗಿದೆ ಎಂದು ಹೇಳಲಾಗಿದೆ. ಈರಣ್ಣ ಠಾಣೆಗೆ ಕರ್ತವ್ಯಕ್ಕೆ ಹೋಗುವಾಗ, ಮನೆಯಲ್ಲಿ ಸಂಭಂದಿಗಳಿದ್ದರೂ ಬೀಗ ಹಾಕಿ ಕೊಂಡು ಹೋಗಿದ್ದೇ ಕಳ್ಳತನಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಕುರಿತು ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುರ್ಗಾ ಬೆಟ್ಟದಲ್ಲಿ ಸೆರೆಯಾದ ಮತ್ತೊಂದು ಚಿರತೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಗಂಗಾವತಿ ತಾಲೂಕಿನ ದುರ್ಗಾ ಬೆಟ್ಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬೆಳಗ್ಗೆ ಮೂರು ಗಂಟೆಯ ಸುಮಾರಿಗೆ ಚಿರತೆಯೊಂದು ಬಿದ್ದಿದೆ.
ಬೆಳಗ್ಗೆ ದೇಗುಲದ ಸಿಬ್ಬಂದಿ ಯುವಕರು ಬೋನಿನಲ್ಲಿ ಸೆರೆಯಾದ ಚಿರತೆಯನ್ನು ಗಮನಿಸಿದ್ದಾರೆ.

ಬಳಿಕ ದೇಗುಲದ ಪ್ರಧಾನ ಅರ್ಚಕ ಬ್ರಹ್ಮಯ್ಯ ಅವರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ದೇಗುಲದ ಸಿಬ್ಬಂದಿ‌ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇದೇ ದುರ್ಗಾ ಬೆಟ್ಟದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಚಿರತೆಯೊಂದು ಸೆರೆಯಾಗಿತ್ತು. ಇದೀಗ ಎರಡನೇ‌ ಚಿರತೆ ಇದಾಗಿದ್ದು, ಬೆಟ್ಟದಲ್ಲಿ ಸೆರೆಯಾಗಿದೆ. ಇನ್ನು ಎಷ್ಟು ಚಿರತೆಗಳಿವೆ ಎಂಬುದರ ಬಗ್ಗೆ ಮಾಹಿತಿ ದೊರೆತಿಲ್ಲ. ಆದರೆ, ಜನರಲ್ಲಿ ಚಿರತೆಗಳ ಬಗ್ಗೆ ಆತಂಕ ಮಾತ್ರ ದೂರವಾಗಿಲ್ಲ.

ಸೋತ ಅಭ್ಯರ್ಥಿ ಮೇಲೆ ನೂತನ ಸದಸ್ಯನಿಂದ ಮಾರಾಣಾಂತಿಕ ಹಲ್ಲೆ!

ವಿಜಯಸಾಕ್ಷಿ ಸುದ್ದಿ, ತುಮಕೂರು: ಗ್ರಾ.ಪಂನ ನೂತನ ಸದಸ್ಯ ಸೋತ ಅಭ್ಯರ್ಥಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯ ಗುಂಡಗಲ್ಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವಾಸಿ ನರಸಪ್ಪ ಎಂಬಾತನ ಮೇಲೆ ಹಲ್ಲೆಯಾಗಿದ್ದು, ನೂತನ ಸದಸ್ಯ ಲಕ್ಷ್ಮೀನಾರಾಯಣ ಹಲ್ಲೆ ಮಾಡಿರುವ ಆರೋಪ ಹೊತ್ತಿದ್ದಾರೆ. ಚುನಾವಣೆಗೂ ಮುನ್ನ ಲಕ್ಷ್ಮೀನಾರಾಯಣಗೆ, ನರಸಪ್ಪ ಹಣವನ್ನು ಸಾಲವಾಗಿ ನೀಡಿದ್ದ.

ಚುನಾವಣೆಯಲ್ಲಿ ಸೋತ ನಂತರ ತನ್ನ ಹಣ ಮರಳಿ ನೀಡುವಂತೆ ಕೇಳಿದ್ದಕ್ಕಾಗಿ ಲಕ್ಷ್ಮೀನಾರಾಯಣ ತನ್ನ ಸ್ನೇಹಿತರಾದ ಗಂಗಪ್ಪ, ನರೇಂದ್ರ ಬಾಬು, ಗಂಗಾಧರಪ್ಪ, ನಾರಾಯಣಪ್ಪ ಅವರೊಂದಿಗೆ ಸೇರಿ ಲಾಂಗು, ಮಚ್ಚು ಹಾಗೂ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿದ್ದಾನೆ. ಈ ಕುರಿತು ಕೊಡಿಗೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇಶದ ಬಡವರಿಗೆ ಕಾಂಗ್ರೆಸ್ ಸಿಲಿಂಡರ್ ತಲುಪಿಸಿಲ್ಲ, ಮನೆ ಕಟ್ಟಿಸಿಲ್ಲ, ಆಯುಷ್ಮಾನ್ ಮಾಡಲಿಲ್ಲ; ಏಕೆಂದರೆ, ಅವರಿಗೆ ಬಡವರನ್ನು ಹೊಡೆದೋಡಿಸುವ ಉದ್ದೇಶವಿತ್ತು: ಅಮಿತ್ ಶಾ ಕಿಡಿ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಕೊರೊನಾ ಸಂಕಷ್ಟವನ್ನು ಮೋದಿ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಪ್ರಪಂಚದಲ್ಲಿಯೇ ಅತಿ ಕಡಿಮೆ ಜನರು ಮರಣ ಹೊಂದಿದ್ದಾರೆ. ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಜನರು ಕಾಂಗ್ರೆಸ್ ನಾಯಕರ ಮಾತು ಕೇಳಬಾರದು.
ಕೊರೊನಾ ಲಸಿಕೆ ಪಡೆದು ಆದಷ್ಟು ಬೇಗ ಕೊರೊನಾ ಮುಕ್ತ ದೇಶ ಮಾಡೋಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜನಸೇವಕ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರು ಇತಿಹಾಸ ಸೃಷ್ಟಿಸಿದ್ದಾರೆ. ಆ ಕಾರಣಕ್ಕೆ ನಾನು ಬೆಳಗಾವಿಗೆ ಬಂದಿದ್ದೇನೆ.
ಅತಿ ಹೆಚ್ಚು ಗ್ರಾಮ ಪಂಚಾಯತಿ ಸದಸ್ಯರನ್ನು ಚುನಾಯಿಸಿದ್ದಾರೆ.
ನರೇಂದ್ರ ಮೋದಿಯ ನಾಯಕತ್ವಕ್ಕೆ ಜನರು ಸಾಥ್ ನೀಡಿದ್ದಾರೆ ಎಂದು ಅಭಿಪ್ರಾಯ ಪಟ್ಟ ಅವರು, ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸಿದರು.

ಪಂಡಿತ ನೆಹರೂವಿನಿಂದ ಹಿಡಿದು ಮನಮೋಹನ್ ಸಿಂಗ್ ವರೆಗೂ ಕಾಶ್ಮೀರ ವಶ ಮಾಡಿಕೊಳ್ಳಲು ಆಗಿಲ್ಲ. ತ್ರಿವಳಿ ತಲಾಕ್ ನಿಷೇಧಿಸಿದೆ. ಸರ್ಜಿಕಲ್ ಸ್ಟ್ರೈಕ್ ಏರ್ ಸ್ಟ್ರೈಕ್ ಮಾಡಿ ಪಾಕಿಸ್ತಾನದ ವೈರಿಗಳನ್ನು ಹೊಡೆದು ಉರುಳಿಸಿದ್ದೇವೆ.ಇನ್ನು ಕೆಲವೇ ತಿಂಗಳಲ್ಲಿ ಶ್ರೀರಾಮ ಮಂದಿರ ನಿರ್ಮಿಸುತ್ತೇವೆ ಎಂದು ಶಾ ತಿಳಿಸಿದರು.

ದೇಶದ ಅಭಿವೃದ್ಧಿಗಾಗಿ ಮೋದಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಗ್ರಾಮೀಣ ಪ್ರದೇಶದ ಮನೆ ಮನೆಗೆ ಸಿಲಿಂಡರ್ ತಲುಪಿಸುವ ಕೆಲಸ ಮೋದಿ ಸರ್ಕಾರ ಮಾಡಿದೆ ಎಂದ ಅವರು, ನಾನು ಕಾಂಗ್ರೆಸ್ ನವರಿಗೆ ಕೇಳುತ್ತೇನೆ ‘ಯಾಕೆ ನೀವು ಸಿಲಿಂಡರ್ ತಲುಪಿಸಿಲ್ಲ, ಮನೆ ಕಟ್ಟಿಸಿಲ್ಲ, ಆಯುಷ್ಮಾನ್ ಮಾಡಲಿಲ್ಲ. ಏಕೆಂದರೆ, ಅವರಿಗೆ ದೇಶದಲ್ಲಿ ಬಡತನ ಹೋಗಲಾಡಿಸುವ ಉದ್ದೇಶ ಇರಲಿಲ್ಲ. ಬಡವರನ್ನು ಹೊಡೆದೋಡಿಸುವ ಉದ್ದೇಶವಿತ್ತು ಎಂದು ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಎಂಟಿಎಂ ಕಳ್ಳತನಕ್ಕೆ ವಿಫಲ ಯತ್ನ: ಸಿಸಿ ಕ್ಯಾಮೆರಾಗೆ ಸ್ಟಿಕರ್ ಹಚ್ಚಿದರೂ ಫಲಿಸಲಿಲ್ಲ ಕಳ್ಳರ ಯತ್ನ!

  • ವಿಜಯಸಾಕ್ಷಿ ಸುದ್ದಿ, ಗದಗ

ಖದೀಮರು ಎಟಿಎಂ ಹೊರಗಿನ ಸಿಸಿ ಕ್ಯಾಮೆರಾಕ್ಕೆ ಸ್ಟಿಕರ್ ಹಚ್ಚಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ
ನಗರದ ಹಾತಲಗೇರಿ ರಸ್ತೆಯಲ್ಲಿರುವ ಎಸ್ ಬಿ ಐ ಬ್ಯಾಂಕ್ ಎಟಿಎಂನಲ್ಲಿ ನಡೆದಿದೆ.

ಇದನ್ನೂ ಒದಿ ಕಳ್ಳತನ ತಡೆಯಲು ಹೋದ ಗೂರ್ಖಾ ಥಳಿಸಿ ಪರಾರಿಯಾದ ದರೋಡೆಕೊರರು

ಗ್ಯಾಸ್ ಮಷಿನ್ ‌ನಿಂದ ಎಟಿಎಂ ಯಂತ್ರ ಕೊರೆಯಲೆತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಎಲ್ಲವೂ ಸುಭದ್ರವಾಗಿದೆ. ಬೆಳಿಗ್ಗೆ ಗ್ರಾಹಕರೊಬ್ಬರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಗರದ ಬಡಾವಣೆ ಪೊಲೀಸರು
ಶ್ವಾನ ದಳದೊಂದಿಗೆ ಪರಿಶೀಲನೆ ನಡೆಸಿ ಬೆರಳಿನ ಗುರುತು ತೆಗೆದುಕೊಂಡು ಹೋಗಿದ್ದಾರೆ ಎಂದು ಎಸ್ ಬಿಐ ಬ್ಯಾಂಕ್ ನೌಕರ ಆಕಾಶ್ ಎಂಬುವವರು ತಿಳಿಸಿದ್ದಾರೆ.

ದನ್ನೂ ಓದಿ ಮದುವೆಯಾಗುತ್ತೇನೆಂದು ನಂಬಿಸಿ ಮೋಸವೆಸಗಿದ ಯುವಕ: ಪೊಲೀಸ್ ಠಾಣೆಯ ಮೆಟ್ಟಿಲೇರಿದ ಯುವತಿ

ಈ ಕುರಿತು ಗದಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಖೋಟಾನೋಟು ಸಾಗಿಸುತ್ತಿದ್ದ ವ್ಯಕ್ತಿ ಬಂಧನ; ಹೊಸ ನೋಟುಗಳೂ ಆದವು ಖೋಟಾ!

0

ವಿಜಯಸಾಕ್ಷಿ ಸುದ್ದಿ, ಕಲಬುರಗಿ: 500, 200, 100 ಮುಖಬೆಲೆಯ ಖೋಟಾ ನೋಟುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಸೇಡಂನಲ್ಲಿ ನಡೆದಿದೆ. ಈ ಎಲ್ಲಾ ನೋಟುಗಳು ಹೊಸ ರೂಪದ ನೋಟುಗಳೆನ್ನುವುದು ಗಮನಾರ್ಹವಾಗಿದೆ.

ಖೋಟಾ ನೋಟು ಸಾಗಿಸುತ್ತಿದ್ದ
ಚಿಂಚೋಳಿ ರಸ್ತೆಯ ಆಶ್ರಯ ಕಾಲೋನಿ ನಿವಾಸಿ ಅಲ್ಲಾವುದ್ದೀನ್ ಚಿನ್ನುಸಾಬ ಮಳಗಿ ಎಂಬಾತನನ್ನು ಖೋಟಾ ನೋಟು ಸಹಿತ ಪೊಲೀಸರು ಬಂಧಿಸಿದ್ದಾರೆ. ಡಿಸಿಐಬಿ ಪಿಎಸ್ಐ ಪರಶುರಾಮ ವನಂಜಕರ ನೇತೃತ್ವದ ತಂಡ ದಾಳಿ ನಡೆಸಿ, ಅಲ್ಲಾವುದ್ದೀನ್ ನನ್ನು ಬಂಧಿಸಿದ್ದು, ಆತನಿಂದ
500, 200 ಮತ್ತು 100 ರೂಪಾಯಿ ಮುಖಬೆಲೆಯ 4.22 ಲಕ್ಷ ನಕಲಿ ನೋಟುಗಳು, ಒಂದು ಬೈಕ್ ಹಾಗೂ ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ.

ಖೋಟಾನೋಟುಗಳನ್ನು ಎಲ್ಲಿಗೆ ಕೊಂಡೊಯ್ಯಲು ಯತ್ನಿಸುತ್ತಿದ್ದ, ಎಲ್ಲಿಂದ‌ ತಂದಿದ್ದ, ಎಲ್ಲಿ ಪ್ರಿಂಟ್ ಮಾಡಲಾಗಿದೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ತನಿಖೆ ಮುಂದುವರೆಸಿರುವುದಾಗಿ ಪಿಎಸ್ಐ ನಾನಾಗೌಡ ಅವರು ತಿಳಿಸಿದ್ದಾರೆ.

ಅಲ್ಲಾವುದ್ದೀನ್, ಕೆಲ ಪ್ರಮುಖ ವ್ಯಕ್ತಿಗಳ ಮುಖಾಂತರ ನೋಟು ಚಲಾವಣೆ ಮಾಡ್ತಿದ್ದ, ಕಮಿಷನ್ ಆಧಾರದ ಮೇಲೆ ಹಣ ಸಾಗಾಟ ನಡೆಸುತ್ತಿದ್ದ ಎನ್ನಲಾಗಿದೆ. ಕಳೆದ‌ ಕೆಲ‌ ವರ್ಷಗಳ ಹಿಂದೆಯೂ ಸಹ ಖೋಟಾನೋಟು ಚಲಾವಣೆ ಪ್ರಕರಣದಲ್ಲಿ ಅಲ್ಲಾವುದ್ದೀನ್ ಬಂಧಿತನಾಗಿದ್ದ ಎಂದು ತಿಳಿದು ಬಂದಿದೆ.

error: Content is protected !!