ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಎರಡು ದಿನ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು, 16 ರಂದು ಬೆಂಗಳೂರಿಗೆ ಬರಲಿದ್ದು, ಅಲ್ಲಿ ಇಲಾಖೆ ಪರಿಶೀಲನೆ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಭದ್ರಾವತಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮರಳಿ ಬೆಂಗಳೂರಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿ ಮಾಹಿತಿ ತಿಳಿಸಿದ ಅವರು, ಜ.17 ರಂದು ಬೆಳಗ್ಗೆ 10.30ಕ್ಕೆ ಅಮಿತ್ ಶಾ ಅವರು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರಲಿದ್ದು, ಬೆಳಗ್ಗೆ ಬಾಗಲಕೋಟೆಯಲ್ಲಿ ಸಕ್ಕರೆ ಕಾರ್ಖಾನೆ ಉದ್ಘಾಟನೆ ಮಾಡಿ ಮರಳಿ ಬೆಳಗಾವಿಗೆ ಬರಲಿದ್ದಾರೆ. ಅಂದು ಮಧ್ಯಾಹ್ನ ಬೆಳಗಾವಿಯಲ್ಲಿ ಜನಸೇವಕ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಂತರ ಬೆಳಗಾವಿಯಲ್ಲಿಯೇ ಅಮಿತ್ ಶಾ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ ಎಂದರು.
ಬಳಿಕ ದಿ.ಸುರೇಶ್ ಅಂಗಡಿ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಜ.17 ರ ಸಂಜೆ ಅಧಿಕಾರಿಗಳ ಸಭೆ ನಡೆಸಿ ಮರಳಿ ದೆಹಲಿಗೆ ತೆರಳಲಿದ್ದಾರೆ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಪಕ್ಷದಲ್ಲಿ ಭಿನ್ನಮತ, ಅಸಮಾಧಾನ ಸಹಜವಾಗಿಯೇ ಇರುತ್ತವೆ. ಯಾರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅವರಿಗೆ ಬೇಸರ ಆಗಿರುತ್ತದೆ. ಹಾಗಾಗಿ ಬೇಸರದಿಂದ ಅಸಮಾಧಾನ ಹೊರ ಹಾಕುತ್ತಾರೆ. ಪಕ್ಷದ ಕುಟುಂಬದದಲ್ಲಿರುವ ಅಸಮಾಧಾನವಾಗಿದ್ದು, ಅವೆಲ್ಲವೂ ಮುಂದಿನ ದಿನಗಳಲ್ಲಿ ಸರಿ ಹೋಗಲಿವೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಕ್ಷದಲ್ಲಿ ನೋವು ತೊಡಿಕೊಳ್ಳಲು ಮುಕ್ತ ಅವಕಾಶವಿದೆ. ನಮ್ಮ ನಾಯಕರ ಎದುರು ನೋವು ತೋಡಿಕೊಳ್ಳದೇ ಮತ್ಯಾರ ಮುಂದೆ ಹೇಳಿಕೊಳ್ಳಬೇಕು. ಅಸಮಾಧಾನಿತ ಶಾಸಕರು ನನ್ನ ಸಂಪರ್ಕಕ್ಕೆ ಬಂದಿಲ್ಲ. ನೋಡೋಣಾ, ಇನ್ನೂ ಸ್ವಲ್ಪ ದಿನಗಳ ಬಳಿಕ ಮಾತನಾಡೋಣ ಎಂದು ತಿಳಿಸಿದರು.
ಸಿಎಂ ಯಡಿಯೂರಪ್ಪಗೆ ಸಿಡಿ ಬ್ಲ್ಯಾಕ್ ಮೇಲ್ ಕುರಿತು ಯಾವ ಸಿಡಿನೂ ಇಲ್ಲಾ ಗಿಡಿನೂ ಇಲ್ಲ ಎಂದು ಒಂದೇ ವಾಕ್ಯದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಉತ್ತರಿಸಿದರು.
ವಿಜಯಸಾಕ್ಷಿ ಸುದ್ದಿ,ಕೊಪ್ಪಳ: ರಾಜ್ಯದ ಸಾಂಸ್ಕೃತಿಕ, ನಾಡಿನ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಸಮೀಪಿಸಿದ್ದು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ವೀರಣ್ಣ ನಿಂಗೋಜಿ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಹೇಶ್ ಜೋಶಿ ಸ್ಪರ್ಧಿಸಲು ನಿಶ್ಚಯಿಸಿದ್ದು ಇವರನ್ನು ಬೆಂಬಲಿಸುವಂತೆ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಕೋರಿದರು.
ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ವೀರಣ್ಣ ನಿಂಗೋಜಿ ಕಸಾಪದ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಹಲವು ಸಮ್ಮೇಳನಗಳನ್ನು ಅಚ್ಚುಕಟ್ಟಾಗಿ ನಡೆಸಿದ್ದಾರೆ. ಕಸಾಪ ಸದಸ್ಯರು ಇನ್ನೊಂದು ಅವಧಿಗೆ ನಿಂಗೋಜಿಯವರನ್ನು ಬೆಂಬಲಿಸಬೇಕು ಎಂದರು.
ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ ಮಾತನಾಡಿ, ಸಾಹಿತ್ಯಕ್ಷೇತ್ರದಲ್ಲಿ ಕೃಷಿ ಮಾಡಿದವರು ಕಸಾಪ ಪ್ರತಿನಿಧಿಸಿದರೆ ಸೂಕ್ತ. ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದಿದ್ದರೆ ಪರಿಷತ್ತಿನ ಕಾರ್ಯ, ಉದ್ದೇಶ ಸಮರ್ಪಕವಾಗಿ ಅನುಷ್ಠಾನ ಕಷ್ಟಸಾಧ್ಯ. ನಿಂಗೋಜಿಯವರು ಈಗಾಗಲೇ ಹಲವು ಕೃತಿಗಳನ್ನು ಹೊರ ತಂದಿದ್ದಾರೆ. ಕಸಾಪ ಬೆಳವಣಿಗೆ ಕುರಿತಂತೆ ಹಲವು ಕನಸು ಕಂಡಿದ್ದಾರೆ ಎಂದರು.
ಕಸಾಪದ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ಡಾ.ಕೆ.ಬಿ.ಬ್ಯಾಳಿ ಮಾತನಾಡಿ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲು ಒಲವಿದೆ. ನಿಂಗೋಜಿಯವರಿಗಿಂತ ಸಮರ್ಥರು ಯಾರಾದರೂ ಇದ್ದರೆ ಜಿಲ್ಲೆಯ ಎಲ್ಲ ಸದಸ್ಯರು ಸೇರಿಕೊಂಡು ಅವಿರೋಧ ಆಯ್ಕೆ ಮಾಡಲು ನಮಗೇನೊ ಮನಸ್ಸಿದೆ. ಆದರೆ ಚುನಾವಣೆ ಎಂದಾಕ್ಷಣ ಸ್ಪರ್ಧೆ, ಆಕಾಂಕ್ಷೆ ಹಾಗೂ ಆಕಾಂಕ್ಷೆಗಳು ಸಹಜ ಎಂದು ತಿಳಿಸಿದರು.
ಕಸಾಪದ ಮತ್ತೊಬ್ಬ ಮಾಜಿ ಅಧ್ಯಕ್ಷ ರವಿತೇಜ ಅಬ್ಬಿಗೇರಿ ಮಾತನಾಡಿ, ಗಂಗಾವತಿಗೆ ಪ್ರಾತಿನಿಧ್ಯ ಸಿಗಬೇಕೆನ್ನುವುದು ಸರಿ. ಪ್ರತಿ ಚುನಾವಣೆಯಲ್ಲೂ ಗಂಗಾವತಿ ಭಾಗದವರು ಸ್ಪರ್ಧಿಸುತ್ತಿದ್ದಾರೆ. ಇದೊಂದು ಬಾರಿ ನಿಂಗೋಜಿವರಿಗೆ ಅವಕಾಶ ಕೊಡೋಣ ಎಂದರು.
ಆಕಾಂಕ್ಷಿ ವೀರಣ್ಣ ನಿಂಗೋಜಿ ಮಾತನಾಡಿ, ಎಲ್ಲರ ಒತ್ತಾಸೆ ಮೇರೆಗೆ ಕಸಾಪ ಜಿಲ್ಲಾಧ್ಯಕ್ಷ ಚುನಾವಣೆಯ ಕಣಕ್ಕೆ ಧುಮುಕಲು ನಿರ್ಧರಿಸಿದ್ದೇನೆ. ಕಸಾಪಕ್ಕೆ ಸಂಬಂಧಿಸಿದಂತೆ ಇದು ನನ್ನ ಕೊನೆ ಚುನಾವಣೆ ಎಂದು ಘೋಷಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಅಕ್ಬರ್ ಸಿ.ಕಾಲಿಮಿರ್ಚಿ ಮತ್ತಿತರರು ಇದ್ದರು.
ವಿಜಯಸಾಕ್ಷಿ ಸುದ್ದಿ, ಕಲಬುರಗಿ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಸಹೋದರರಿಬ್ಬರನ್ನು ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕಮಲಾಪುರ ತಾಲೂಕಿನ ತಡಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ನೀಲೇಶ್ 40, ರಾಜಶೇಖರ 35 ಎಂದು ಗುರುತಿಸಲಾಗಿದೆ. ಈ ಹಿಂದೆ ಕುಡಿದ ಮತ್ತನಲ್ಲಿ ಬೇರೆಯವರೊಂದಿಗೆ ಕ್ಷುಲಕ ಕಾರಣಕ್ಕೆ ಸಹೋದರರಿಬ್ಬರೂ ಜಗಳವಾಡಿದ್ದರು ಎಂದು ತಿಳಿದುಬಂದಿದೆ. ಇದೇ ಈ ಕೊಲೆಗೆ ಕಾರಣವಾಗಿರಬಹುದು ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಹೋದರರ ಮೃತದೇಹದ ಮುಂದೆ ಸಂಬಂಧಿಕರ ರೋಧನ ಮನ ಕಲುಕುವಂತಿತ್ತು. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ಮಹಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಜಯಸಾಕ್ಷಿ ಸುದ್ದಿ, ಮಂಗಳೂರು: ಅಂಡ್ ವೇರ್ ನ ಸೀಕ್ರಟ್ ಜೇಬಿನಲ್ಲಿಟ್ಟು ಸ್ಮಗ್ಲಿಂಗ್ ಮಾಡ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಶಾರ್ಜಾದಿಂದ ಚಿನ್ನ ಕಳ್ಳಸಾಗಣಿಕೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಕೇರಳದ ಕಾಸರಗೋಡಿನ ಫೈಜಲ್ (37), ಮಹಮ್ಮದ್ ಹುಸೈನ್ (31) ಬಂಧಿತ ಆರೋಪಿತರಾಗಿದ್ದಾರೆ ಕಸ್ಟಮ್ಸ್ ನ ಡಿಆರ್ ಐ ವಿಭಾಗದ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಪೇಸ್ಟ್ ರೂಪದಲ್ಲಿ ತರಲಾಗುತ್ತಿದ್ದ 1.09 ಕೋಟಿ ರೂಪಾಯಿ ಮೌಲ್ಯದ 2 ಕೇಜಿ ಅಕ್ರಮ ಚಿನ್ ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ನಿಲ್ದಾಣಕ್ಕೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನದಲ್ಲಿ, ಶಾರ್ಜಾದಿಂದ ಬಂದಿದ್ದ ಈ ಇಬ್ಬರನ್ನು ತಪಾಸಣೆ ನಡೆಸಿದ ವೇಳೆ ಚಿನ್ನ ಪತ್ತೆಯಾಗಿದೆ. ಅಂಡರ್ ವೇರ್ ನಲ್ಲಿ ಎರಡು ಚಿನ್ನದ ಪೇಸ್ಟ್ ಪ್ಯಾಕೆಟನ್ನು ಅಡಗಿಸಿ ಇಡಲಾಗಿತ್ತು.
ಎಸ್ಟಿಗೆ ಕುರುಬ ಸಮಾಜ ಸೇರಿಸೊಕೆ ಬರುವುದಿಲ್ಲ ಎಂದವರು ಬೆಂಬಲ ಯಾಕೆ ಕೊಟ್ಟರು. ಈ ರೀತಿಯ ಹೋರಾಟ ಬೇಡವೆಂದರೆ ಮತ್ಯಾವ ರೀತಿಯಲ್ಲಿ ಹೋರಾಟ ಮಾಡಬೇಕೆಂಬುವುದನ್ನು ಹೇಳಲಿ ಹಾಗೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅವರನ್ನು ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಶಿವಮೊಗ್ಗದಲ್ಲಿ ಈ ಕುರಿತು ಮಾತನಾಡಿದ ಸಚಿವರು, ಸ್ವಾಮಿಜಿಗಳಿಬ್ಬರು ಚರ್ಚೆ ಮಾಡಿ ಹೋರಾಟ ರೂಪಿಸಿದಾಗ ನನ್ನ ಬೆಂಬಲವಿದೆ. ಬರುವುದಕ್ಕೆ ಆಗುವುದಿಲ್ಲ ಎಂದಿದ್ದರು. ಈಗಲೂ ಬಂದು ಹೋರಾಟದಲ್ಲಿ ಪಾಲ್ಗೊಳ್ಳಲಿ ನಮ್ಮ ಆಭ್ಯಂತರವಿಲ್ಲ ಎಂದ ಅವರು, ಕುರುಬ ಸಮಾಜವನ್ನು ಎಸ್ ಟಿ ಮೀಸಲಾತಿಗೆ ಸೇರಿಸುವ ಕಾಗೆನೆಲೆಯ ಇಬ್ಬರು ಸ್ವಾಮೀಜಿಗಳ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ಪಂಚಮಸಾಲಿ ಸಮಾಜದವರು ಪಾದಯಾತ್ರೆ ಮೂಲಕ ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ಪಾದಯಾತ್ರೆ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆ ಬರುವುದಿಲ್ಲ. ಯಾರು ಅರ್ಹರೋ ಅವರಿಗೆ ಖಂಡಿತವಾಗಿ ಮೀಸಲಾತಿ ಸಿಗುತ್ತದೆ. ಅಲ್ಲದೇ, ಅರ್ಹತೆ ಇರುವವರಿಗೆ ಸರ್ಕಾರ ಮೀಸಲಾತಿ ಕೊಡಲೇ ಬೇಕಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.
ವಿಜಯಸಾಕ್ಷಿ ಸುದ್ದಿ, ಕಲಬುರಗಿ: ಹುಟ್ಟು ಹಬ್ಬ ಆಚರಣೆ ವೇಳೆ ತಲ್ವಾರ್ ಝಳಪಿಸಿದ ಯುವಕರೀಗ ಪೊಲೀಸರ ಅತಿಥಿಯಾಗಿದ್ದಾರೆ. ತಲ್ವಾರ್ ಹಿಡಿದು, ಡಿ.ಜೆ. ಗೆ ಹೆಜ್ಜೆ ಹಾಕಿದ್ದ ಯುವಕರನ್ನು ರೋಜಾ ಠಾಣೆಯ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಕಲಬುರ್ಗಿಯ ಮೆಹಬೂಬ ನಗರದಲ್ಲಿ ಈ ಘಟನೆ ನಡೆದಿತ್ತು. ಇಮ್ರಾನ್ ಎಂಬಾತನ ಬರ್ತಡೇ ಸೆಲೆಬ್ರೇಷನ್ ವೇಳೆ ಇಮ್ರಾನ್, ತಬ್ರೇಜ್, ರಶೀದ್, ಅಫ್ರೋಜ್, ತಲ್ಹಾ, ಸೋಹೆಲ್ ಹಾಗೂ ಜಹೀರ್ ರಾಜಾರೋಣವಾಗಿ ತಲ್ವಾರ್ ಝಳಪಿಸಿದ್ದಲ್ಲದೇ, ಡಿಜೆ ಸೌಂಡ್ ಗೆ ಹೆಜ್ಜೆ ಹಾಕಿದ್ದರು.
ಕೋವಿಡ್ ನಡುವೆ ಯಾವುದೇ ಪರವಾನಿಗೆ ಪಡೆಯದೇ ಸಾರ್ವಜನಿಕ ಸ್ಥಳದಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿದ್ದರು. ಅಲ್ಲದೇ, ಅನುಮತಿ ಇಲ್ಲದೆಯೇ ಸಾರ್ವಜನಿಕ ಸ್ಥಳದಲ್ಲಿ ವೇದಿಕೆ ನಿರ್ಮಾಣ ಮಾಡಿ, ವೇದಿಕೆ ಮೇಲೆ ತಲ್ವಾರ್ ಹಿಡಿದು ಕುಣಿದು ಕುಪ್ಪಳಿಸಿದ್ದರು.
ಈ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿ ಅದು ವೈರಲ್ ಆಗಿತ್ತು. ಇದು ಕಲಬುರಗಿ ಜನತೆಯಲ್ಲಿ ಆತಂಕ ಹುಟ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು ತಲ್ವಾರ್ ಹಿಡಿದು ಕುಣಿದ ಏಳು ಯುವಕರನ್ನು ಬಂಧಿಸಿದ್ದಾರೆ. ಕಲಬುರ್ಗಿ ಎ ಡಿವಿಜನ್ ಎಸಿಪಿ ಅಂಶುಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿದ್ದು, ಆರೋಪಿತರನ್ನು, ಸೆಕ್ಷನ್ 107 ರ ಅಡಿ ಪ್ರಕರಣ ದಾಖಲು ಮಾಡಲಾಗಿದೆ.
ಕೊರೊನಾ, ಹಕ್ಕಿಜ್ವರ ಭೀತಿ ಮಧ್ಯೆಯೂ ಹೊಸ ವರ್ಷದ ಮೊದಲ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯ ದಿನವಾದ ಗುರುವಾರದಂದು ತಾಲ್ಲೂಕಿನ ಬಿಂಕದಕಟ್ಟಿ ಮಕ್ಕಳ ಉದ್ಯಾನವನ, ಮೃಗಾಲಯ ಹಾಗೂ ಸಾಲು ಮರದ ತಿಮ್ಮಕ್ಕ ಉದ್ಯಾನವನಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 5ಸಾವಿರಕ್ಕೂ ಹೆಚ್ಚು ಜನ ಪ್ರವಾಸಿಗರು ಆಗಮಿಸಿದ್ದರು.
ಅಪಾರ ಜನಸ್ತೋಮದಿಂದಾಗಿ ಮೃಗಾಲಯದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು. ಬೆರಳೆಣಕೆಯಷ್ಟು ಜನರು ಮಾತ್ರ ಮುಖಕ್ಕೆ ಮಾಸ್ಕ್ ಧರಿಸಿದ್ದರು. ವ್ಯಕ್ತಿಗತ ಅಂತರ ಮರೆತಿದ್ದ ಪ್ರವಾಸಿಗರು, ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದರು.
ಜಿಲ್ಲೆಯಲ್ಲಿ ಹಕ್ಕಿಜ್ವರ ಪತ್ತೆಯಾಗದಿದ್ದರೂ, ಮೊನ್ನೆಯಷ್ಟೇ ಜಿಲ್ಲೆಯ ಡಂಬಳ ಗ್ರಾಮದ ಐಬಿಯಲ್ಲಿ ಹತ್ತಾರು ಹಕ್ಕಿಗಳು ಮೃತಪಟ್ಟಿದ್ದವು. ಇದರಿಂದ ಜಿಲ್ಲೆಯ ಜನರಲ್ಲಿ ಭೀತಿ ಹೆಚ್ಚಾಗಿತ್ತು. ಈ ನಡುವೆಯೇ ಮೃಗಾಲಯಕ್ಕೆ ಆದಾಯ ಬರುತ್ತೆ ಎಂಬ ಕಾರಣಕ್ಕೆ ಅರಣ್ಯಾಧಿಕಾರಿಗಳು ಸಂಕ್ರಾಂತಿಯಂದು ಅಪಾರ ಸಂಖ್ಯೆಯ ಜನರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದಾರೆ. ಅಲ್ಲದೇ, ಹಕ್ಕಿಜ್ವರ ಭೀತಿ ಹಿನ್ನೆಲೆಯಲ್ಲಿ ಪಕ್ಷಿ ವೀಕ್ಷಣೆ ಬಂದ್ ಮಾಡಿ, ಪ್ರಾಣಿ ವೀಕ್ಷಣೆಗೆ ಅವಕಾಶ ನೀಡಿದ್ದರು.
ಬೆಳಗಿನಿಂದಲೇ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ, ಮೃಗಾಲಯ ಮತ್ತು ಉದ್ಯಾನವನದ ಪ್ರವೇಶ ಟಿಕೆಟ್ ಪಡೆಯಲು ಮಾರುದ್ಧ ಸಾಲುಗಟ್ಟಿ ನಿಂತಿದ್ದರು. ನಾಲ್ವರು ಅರಣ್ಯ ಸಿಬ್ಬಂದಿಗಳು ಟಿಕೆಟ್ ನೀಡುತ್ತಿದ್ದರೂ, ಜನರ ಸಂಖ್ಯೆ ಸಾಯಂಕಾಲದವರೆಗೂ ಯಥಾಸ್ಥಿತಿಯಲ್ಲಿಯೇ ಗೋಚರವಾಯಿತು. ಇನ್ನು, ಟಿಕೆಟ್ ದರ ದೊಡ್ಡವರಿಗೆ 40 ರೂ. ಚಿಕ್ಕವರಿಗೆ 20 ರೂ. ನಿಗದಿ ಪಡಿಸಲಾಗಿತ್ತು.
ಮೃಗಾಲಯದಲ್ಲಿ ಕೇವಲ ಪ್ರಾಣಿಗಳ ವೀಕ್ಷಣೆಗಷ್ಟೇ ಅವಕಾಶ ಕಲ್ಪಿಸಿದ್ದರಿಂದ ಪ್ರವಾಸಿಗರು ವಿವಿಧ ವನ್ಯ ಜೀವಿಗಳ ಕಲರವ ಕಣ್ತುಂಬಿಕೊಂಡರು. ಚಿಕ್ಕ ಮಕ್ಕಳು ಜಾರು ಬಂಡಿ, ಜೋಕಾಲಿ ಆಡಿ ಸಂತಸ ಪಟ್ಟರು. ಟೆಡ್ಡಿ ಬೇರ್, ಮಕ್ಕಳ ಆಟಿಕೆ ಸಾಮಾನು, ಬಣ್ಣ ಬಣ್ಣದ ಬಲೂನ್ ಮಾರಾಟ ಮತ್ತು ಖರೀದಿ ಜೋರಾಗಿತ್ತು.
ಕೊರೊನಾ ಭೀತಿಯಿಂದಾಗಿ ಜಿಲ್ಲೆಯ ಜನರು ಜಿಲ್ಲೆ ಬಿಟ್ಟು ಬೇರೆಡೆ ಪ್ರವಾಸ ಕೈಗೊಂಡಿರದ ಕಾರಣ ಸಂಕ್ರಾಂತಿ ಹಬ್ಬ ಆಚರಣೆಗಾಗಿ ಜ್ಯೂಗೆ ಬಂದಿದ್ದ ಬಹುತೇಕ ಪ್ರವಾಸಿಗರು ಹಬ್ಬಕ್ಕಾಗಿ ಮನೆಯಲ್ಲೇ ತಯಾರಿಸಿದ್ದ ವಿವಿಧ ಬಗೆಯ ಸಿಹಿ, ಖಾರದ ಖಾದ್ಯಗಳನ್ನು ಮೃಗಾಲಯಕ್ಕೆ ಬುತ್ತಿ ಕಟ್ಟಿಕೊಂಡು ಬಂದಿದ್ದರು. ಅಲ್ಲಿಯೇ ಕುಟುಂಬಸ್ಥರು ಒಂದೆಡೆ ಮರದ ಕೆಳಗೆ ಗುಂಪಾಗಿ ಕುಳಿತು ಪ್ರಕೃತಿ ಸೊಬಗಿನಲ್ಲಿ ಊಟ ಸವಿದು ಸಂತೋಷ ಪಟ್ಟರು.
ಫೋಟೋ ಕ್ರೇಜ್
ಮೃಗಾಲಯಕ್ಕೆ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಜ್ಯೂನಲ್ಲಿನ ಪ್ರಾಕೃತಿಕ ಸೌಂದರ್ಯದಲ್ಲಿ ತಮಗಿಷ್ಟ ಬಂದಂತೆ ಮೊಬೈಲ್ನಲ್ಲಿ ಫೋಟೋ ಸೆರೆ ಹಿಡಿದು ಖುಷಿ ಪಡುತ್ತಿದ್ದರು. ಇನ್ನು, ಪ್ರೇಮಿಗಳಂತೂ ಉತ್ತರಾಯಣ ಕಾಲದ ಮೊದಲ ದಿನದಂದು ಮೃಗಾಲಯದ ಸೌಂದರ್ಯ ಆಸ್ವಾದಿಸಿ ಸಂತೋಷಿಸಿದರು. ಅದರಂತೆ, ಕುಟುಂಬ ಸಮೇತ ಆಗಮಿಸಿರುವವರು ಕುಟುಂಬ ಸದಸ್ಯರೆಲ್ಲರೂ ಗುಂಪು, ವೈಯಕ್ತಿಕ ಛಾಯಾಚಿತ್ರಕ್ಕೆ ಫೋಸ್ ಕೊಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪೊಲೀಸರ ಹರಸಾಹಸ
ಸಾಕಷ್ಟು ಪ್ರಮಾಣದಲ್ಲಿ ಪ್ರವಾಸಿಗರ ದಂಡು ಸ್ವಂತ, ಖಾಸಗಿ ವಾಹನಗಳ ಮೂಲಕ ಮೃಗಾಲಯಕ್ಕೆ ಆಗಮಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬಂದಿದ್ದರಿಂದ ಇಕ್ಕಟ್ಟಾದ ಜ್ಯೂ ಮುಂದಿರುವ ರಸ್ತೆಯಲ್ಲಿ ವಾಹನ ಸವಾರರು ಪರದಾಡಿದರು. ಪೊಲೀಸರು ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಳ್ಳುತ್ತಿದ್ದರೂ, ರಸ್ತೆಯುದ್ದಕ್ಕೂ ಜನ, ವಾಹನಗಳೇ ತುಂಬಿದ್ದವು. ಇದರಿಂದ ಸಂಚಾರಕ್ಕೂ ಅಡೆತಡೆ ಉಂಟಾಗುತ್ತಿತ್ತು. ಅಲ್ಲದೇ, ಪ್ರವೇಶ ಟಿಕೆಟ್ ಪಡೆಯಲು ಜನರು ಸಾಲುಗಟ್ಟಿ ನಿಂತಿದ್ದರಿಂದ ನೂಕುನುಗ್ಗಲು ಆಗುತ್ತಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಮೃಗಾಲಯ ವೀಕ್ಷಣೆಗೆ ಸಂಕ್ರಾಂತಿ ದಿನ ೫,೦೦೦ ಜನರು ಬರುತ್ತಾರೆಂದು ನಿರೀಕ್ಷೆ ಮಾಡಿದ್ವಿ. ಆದ್ರೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಏವಿಯನ್ ಸೋಂಕು ಹಿನ್ನೆಲೆಯಲ್ಲಿ ಪಕ್ಷಿ ವೀಕ್ಷಣೆ ಬಂದ್ ಮಾಡಲಾಗಿದ್ದು, ಕೇವಲ ಪ್ರಾಣಿ ವೀಕ್ಷಣೆಗೆ ಮಾತ್ರ ಅವಕಾಶ ನೀಡಿದೆ. ಜ್ಯೂನಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ್ದು, ಮೃಗಾಲಯದ ಅಲ್ಲಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.
ಚೈತ್ರಾ ಮೆಣಸಿನಕಾಯಿ, ವಲಯ ಅರಣ್ಯಧಿಕಾರಿ
ಪ್ರತಿವರ್ಷ ಸಂಕ್ರಾಂತಿ ದಿವಸ ಎಲ್ಲಿಗಾದ್ರೂ ಪ್ರವಾಸಕ್ಕೆ ಹೋಗ್ತಿದ್ವಿ. ಆದ್ರೆ, ಈ ಬಾರಿ ಕೊರೊನಾ ಸಲುವಾಗಿ ಎಲ್ಲಿಯೂ ಹೋಗಿಲ್ಲ. ನಮ್ಮದೇ ಜಿಲ್ಲೆಯ ಬಿಂಕದಕಟ್ಟಿ ಜ್ಯೂ ನೋಡಾಕ ಬಂದಿದ್ದು, ಬಹಳ ಖುಷಿಯಾಗೈತ್ರಿ.
ಪೂರ್ಣಿಮಾ, ಪ್ರವಾಸಿಗರು
ಮೃಗಾಲಯಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಬರುತ್ತಿರುವುದರಿಂದ ದಿನಕ್ಕಿಂತ ಹೆಚ್ಚು ದುಡಿಮೆಯಾಗುತ್ತಿದೆ. ಇನ್ನೊಂದೆಡೆ, ಬೇರೆಡೆ ಹೋಗಲು ಬಾಡಿಗೆಗಳು ಬರುತ್ತಿವೆ. ಆದ್ರೆ, ಎಲ್ಲ್ಲಿ ದುಡಿಯೋದು ಎಂಬ ಗೊಂದಲವಿದೆ.
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ 2021 ಸರಳತೆಗೆ ಸಜ್ಜು
-ಪ್ರತಿ ವರ್ಷ ಗವಿಸಿದ್ಧನ ಬಳಿ ಭಕ್ತರು, ಈ ವರ್ಷ ಭಕ್ತರ ಬಳಿಯೇ ಗವಿಸಿದ್ಧೇಶ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಶತಮಾನಗಳಿಂದ ನಡೆದುಕೊಂಡು ಬಂದ ಶ್ರೀ ಗವಿಸಿದ್ಧೇಶ್ವರ ಜಾತ್ರೆಯನ್ನು ಕೋವಿಡ್-19 ಇರುವದರಿಂದ ಸರ್ಕಾರದ ಆದೇಶ ಮೀರದಂತೆ, ಸಂಪ್ರದಾಯ ಮುರಿಯದಂತೆ ಸರಳವಾಗಿ ಆಚರಿಸಲು ನಿಶ್ಚಯಿಸಿ ಶ್ರೀಮಠದ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸಿ, ಉಳಿದ ಕಾರ್ಯಕ್ರಮಗಳನ್ನು ಮಾಡದಿರಲು ನಿಶ್ಚಯಿಸಲಾಗಿದೆ.
ಶ್ರೀ ಗವಿವಠದ ಸದ್ಭಕ್ತರು, ಜಿಲ್ಲಾಡಳಿತ ಜನಪ್ರತಿನಿಧಿಗಳು ಚರ್ಚಿಸಿ ಈ ಕೆಳಗಿನ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ಪ್ರತಿ ವರ್ಷ ಜಾತ್ರೆಯ ಅಂಗವಾಗಿ ಸಾಮಾಜಿಕ ಕಳಕಳಿಯಡಿ ನಡೆಯುವ ವಿದ್ಯಾರ್ಥಿ ಜಾಥಾ ಇರುವುದಿಲ್ಲ
ಗುಡ್ಡದಲ್ಲಿ ಹಾಗೂ ಕೆರೆಯ ದಡದಲ್ಲಿ ಬಹಳ ಜನ ಒಂದೆ ಕಡೆ ಸೇರುವುದರಿಂದ ತೆಪ್ಪೋತ್ಸವ ಕಾರ್ಯಕ್ರಮವೂ ಸಹ ಇರುವುದಿಲ್ಲ.
ದಿನಾಂಕ 30 ಶನಿವಾರ ಜರುಗುವ ಮಹಾರಥೋತ್ಸವ ಪ್ರತಿ ವರ್ಷದಂತೆ ಲಕ್ಷಾಂತರ ಭಕ್ತ ಜನರ ಮಧ್ಯದಲ್ಲಿ ಜರುಗುವದಿಲ್ಲ. ಜಾತ್ರಾ ಮೈದಾನದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ, ಪುರಿ ಜಗನ್ನಾಥ ರಥೋತ್ಸವ, ಮೈಸೂರ ದಸರಾ ಜಂಬೂಸವಾರಿ ರೀತಿಯಲ್ಲಿ ಕೇವಲ ಸಾಂಪ್ರದಾಯಿಕವಾಗಿ ರಥೋತ್ಸವವನ್ನು ಸರಳವಾಗಿ ಆಚರಿಸಲಾಗುವುದು.
ಕೈಲಾಸ ಮಂಟಪದ ವೇದಿಕೆಯಲ್ಲಿ ಜರುಗುವ ಧಾರ್ಮಿಕ ಗೋಷ್ಠಿ, ಭಕ್ತ ಹಿತ ಚಿಂತನಾ ಸಭೆ, ಅನುಭಾವಿಗಳ ಅಮೃತಗೋಷ್ಠಿ, ಸಂಗೀತ, ಸಾಹಿತ್ಯ, ಹಾಸ್ಯ, ಸಾಧಕರ ಸನ್ಮಾನ ಈ ಯಾವ ಕಾರ್ಯಕ್ರಮಗಳೂ ನಡೆಯುವುದಿಲ್ಲ.
ದಿನಾಂಕ 31 ರವಿವಾರದಂದು ಶರಣರ ದೀರ್ಘದಂಡ ನಮಸ್ಕಾರ ಇರುತ್ತದೆ. ಆದರೆ ಭಕ್ತರಿಗೆ ದೀರ್ಘದಂಡ ನಮಸ್ಕಾರ ಹಾಕಲು ಅನುಮತಿ ಇರುವುದಿಲ್ಲ. ಅವರ ಹಿಂದೆ ದೀರ್ಘದಂಡ ನಮಸ್ಕಾರ ಹಾಕದಂತೆ ಭಕ್ತರಲ್ಲಿ ಕೇಳಿಕೊಳ್ಳುತ್ತೇವೆ. ಶರಣರು ಧೀರ್ಘದಂಡ ನಮಸ್ಕಾರ ಹಾಕುವ ದಿನ ಹೊರತು ಪಡಿಸಿ ತಮಗೆ ಅನುಕೂಲವಾದ ಸಮಯ ಅಥವಾ ದಿನದಂದು ತಮ್ಮ ಹರಕೆ ಅಥವಾ ಸಂಕಲ್ಪಗಳನ್ನು ಪೂರೈಸಿಸಬಹುದು.
ದಿನಾಂಕ 31 ರಂದು ಸಿದ್ಧೇಶ್ವರ ಮೂರ್ತಿಯ ಮೆರವಣಿಗೆ ನಂತರ ನಡೆಯುವ ಮದ್ದು ಸುಡುವ ಕಾರ್ಯಕ್ರಮ ನಡೆಯುವುದಿಲ್ಲ.
ಪ್ರತಿ ವರ್ಷದಂತೆ 15-20 ದಿವಸ ನಡೆಯುವ ಮಹಾದಾಸೋಹ ಶ್ರೀಮಠಕ್ಕೆ ಬರುವ ಭಕ್ತಾಧಿಗಳಿಗೆ ಅನಾನುಕೂಲವಾಗದಿರಲೆಂದು ಈ ವರ್ಷ ಕೇವಲ ಜನೇವರಿ 30, 31 ಮತ್ತು ಫೆಬ್ರುವರಿ 1ರವರೆಗೆ ಸೀಮಿತಗೊಳಿಸಲಾಗಿದೆ. ಭಕ್ತರು ಯಾರು ರೊಟ್ಟಿಗಳನ್ನು ಹಾಗೂ ಸಿಹಿ ಪದಾರ್ಥಗಳನ್ನು ತರಬಾರದು, ಅವುಗಳನ್ನು ಮಹಾದಾಸೋಹದಲ್ಲಿ ಸ್ವೀಕರಿಸುವುದಿಲ್ಲ.
ದಾಸೋಹದಲ್ಲಿ ಕೇವಲ ದವಸ-ಧಾನ್ಯ, ಕಾಯಿಪಲ್ಲೆಯನ್ನು ಮಾತ್ರ ಸ್ವೀಕರಿಸಲಾಗುವುದು.
ಜಾತ್ರಾ ಮಹೋತ್ಸವದಲ್ಲಿ ಅಂಗಡಿಗಳನ್ನು, ಅಮ್ಯುಜ್ಮೆಂಟ್ ಪಾರ್ಕ, ಮಿಠಾಯಿ, ಹೋಟಲ್, ಸ್ಟೇಷನರಿ ಅಂಗಡಿಗಳನ್ನಗೊಂಡಂತೆ ಸಂಪೂರ್ಣವಾಗಿ ಆವರಣದಲ್ಲಿ ಜಾತ್ರಾ ಅಂಗಡಿಗಳು ಇರುವುದಿಲ್ಲ.
ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದ ಆವರಣದಲ್ಲಿ ಪಾನಿಪುರಿ, ಗೋಬಿ, ಕಡ್ಲೆ, ಕಬ್ಬಿನಹಾಲು ಐಸ್ಕ್ರೀಮ್, ಇತರೆ ತಿನಿಸಿನ ಮಾರಾಟದ ಅಂಗಡಿಗಳನ್ನು ನಿಷೇಧಿಸಿದೆ.
ಕೃಷಿ ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಕ್ರೀಡಾಕೂಟ, ನಾಟಕ, ವಿವಿಧ ಸಾಂಸ್ಕೃತಿಕ, ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಿದೆ.
ಪ್ರತಿ ವರ್ಷದಂತೆ ಶ್ರೀ ಗವಿಸಿದ್ಧೇಶ್ವರ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ರೆಡ್ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಜರುಗುವ ರಕ್ತದಾನ ಶಿಬಿರವನ್ನು ನಡೆಸಲಾಗುತ್ತದೆ.
ಪ್ರತಿ ವರ್ಷ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತಿತ್ತು ಆದರೆ ಈ ವರ್ಷ ರಥೋತ್ಸವಕ್ಕೆ ಬರುವ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದಿಲ್ಲ.
ಶ್ರೀ ಗವಿಸಿದ್ಧೇಶ್ವರ ಗದ್ದುಗೆ ದರ್ಶನಕ್ಕೆ ಅವಕಾಶವಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಭಕ್ತರು ದರ್ಶನ ಪಡೆಯಬಹುದು. ಆದರೆ ಎಲ್ಲಿ ಗುಂಪುಗೂಡಿ ಕೂಡುವಂತಿಲ್ಲ. ಶ್ರೀಮಠದ ಸಮಸ್ತ ಸದ್ಭಕ್ತರಲ್ಲಿ ಅರಿಕೆ ಮಾಡಿಕೊಳ್ಳುವದೇನೆಂದರೆ ಶ್ರೀಮಠ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಭಕ್ತರು ಸೇರಿ ತೆಗೆದುಕೊಂಡ ನಿರ್ಣಯವನ್ನು ಪ್ರೀತಿಯಿಂದ ಒಪ್ಪಿಕೊಂಡು ಈ ವರ್ಷ ಸರಕಾರದ ಆದೇಶ ಪಾಲಿಸುತ್ತ ಗವಿಸಿದ್ಧೇಶನ ಜಾತ್ರೆಯನ್ನು ಸರಳವಾಗಿ ಆಚರಿಸೋಣ ತಮಗೆಲ್ಲಾ ಗವಿಸಿದ್ಧೇಶನ ಕೃಪೆ ಸದಾ ಇರಲೆಂದು ಪ್ರಾರ್ಥಿಸುತ್ತೇವೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ.
ಶ್ರೀ ಗವಿಸಿದ್ಧೇಶ್ವರ ಮಹಾ ರಥೋತ್ಸವದ ದೃಶ್ಯವನ್ನು ಸಾಮಾಜಿಕ, ಜಾಲತಾಣದಲ್ಲಿ ಹಾಗೂ ಸ್ಥಳೀಯ ಚಾನಲ್ಗಳಲ್ಲಿ ಪ್ರಸಾರ ಮಾಡಲಾಗುವದು. ಭಕ್ತರು ಶ್ರೀಮಠದ ಆವರಣಕ್ಕೆ ಬರದೆ ತಾವಿರುವ ಸ್ಥಳದಲ್ಲಿಯೇ ರಥ ದರ್ಶನ ಮಾಡಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೆವೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ.
ನಾಡಿನ ಭಕ್ತಗಣಕ್ಕೆ ಶ್ರೀ ಗವಿಸಿದ್ಧೇಶನ ಜಾತ್ರೆಯ ಬಗ್ಗೆ ಅತ್ಯಂತ ಕುತೂಹಲ. ಜಾತ್ರೆ ಹೇಗೆ ನಡೆಯುತ್ತದೆ? ಅಜ್ಜನವರ ನಿರ್ಣಯವೇನು? ಜಾತ್ರೆ ನಡೆಯುವುದೋ ಇಲ್ಲವೋ? ಹೀಗೆ ಹತ್ತು ಹಲವು ಸಂಗತಿಗಳು. ಜಾತ್ರೆ ನಡೆಸುತ್ತೇನೆ ಎನ್ನಲು, ಜಾತ್ರೆ ನಡೆಸುವುದಿಲ್ಲವೆನ್ನಲು ನಾನಾರು? ಒಂದೆಡೆ ದೈವಿಶಕ್ತಿ ಇನ್ನೊಂದೆಡೆ ಭಕ್ತರ ಭಕ್ತಿಯ ಶಕ್ತಿ. ಈ ಎರಡೂ ದಿವ್ಯ ಶಕ್ತಿಯ ಸಂಗಮವನ್ನು ನಾನು ಕೂಡಿಸುವೆನೆಂದಾಗಲಿ ಅಥವಾ ನಿಲ್ಲಿಸುವೆನೆಂದಾಗಲಿ ಹೇಳಿದರೆ ಅಹಂಕಾರದ ಮಾತಾದೀತು. ಬಸವಣ್ಣನವರು ಹೇಳುವಂತೆ “ಆನು ದೇವಾ ಹೊರಗಣವನು ಕೂಡಲ ಸಂಗಮದೇವಾ, ನಿಮ್ಮ ನಾಮವಿಡಿದ ಅನಾಮಿಕ ನಾನು” ಇಂದು ದೈವೇಚ್ಛೆ, ಭಕ್ತರ ನಿರೀಕ್ಷೆ ಇವರೆಡರ ಪರೀಕ್ಷೆಯ ಸಂಧಿಕಾಲ. ಜಾತ್ರೆಯನ್ನೂ ನಡೆಸಬೇಕು, ಸರ್ಕಾರದ ಆದೇಶವನ್ನೂ ಪಾಲಿಸಬೇಕು. ಕಾನೂನನ್ನು ಮೀರಿರಬಾರದು, ಸಂಪ್ರದಾಯವನ್ನು ಮುರಿದಿರಬಾರದು. ಪರಿಸರ ಸ್ನೇಹಿ ಜಾತ್ರೆಯ ಜೊತೆಗೆ, ಪರಿಸ್ಥಿತಿ ಸ್ನೇಹಿ ಜಾತ್ರೆಯನ್ನು ಮಾಡುವ ಮಧ್ಯಮ ಮಾರ್ಗವನ್ನು ಅನುಸರಿಸಬೇಕಾಗಿದೆ. ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ತೆಗೆದುಕೊಳ್ಳುವ ನಿರ್ಧಾರಗಳು, ನಮ್ಮ ಒಳಿತಿಗಾಗಿ ಎನ್ನುವ ಉನ್ನತ ಭಾವದೊಂದಿಗೆ ಈ ವರ್ಷದ ಜಾತ್ರೆ ಸರಳ ಮತ್ತು ವೈಶಿಷ್ಟ್ಯಪೂರ್ಣವಾಗಿ ಧಾರ್ಮಿಕ ವಿಧಿವಿಧಾನಗಳಿಗೆ ಮಾತ್ರ ಸೀಮಿತಗೊಳಿಸೋಣ. ಇಷ್ಟು ವರ್ಷ ಮಠದ ಅಂಗಳದಲ್ಲಿ ಗವಿಸಿದ್ಧೇಶ್ವರನ ರಥ ಎಳೆಯುತ್ತಿತ್ತು . ಭಕ್ತರು ಅದನ್ನು ನೋಡಲು ಬರುತ್ತಿದ್ದರು. ಈ ವರ್ಷ ನಿಮ್ಮ ಹೃದಯಂಗಳದಲ್ಲಿ ಆತನ ದಿವ್ಯ ಸ್ಮರಣೆಯ ರಥ ಎಳೆಯಲಿ ಅದನ್ನು ನೋಡಲು ಗವಿಸಿದ್ಧೇಶ್ವರನೇ ನಿಮ್ಮ ಮನೆಗೆ ಬರುತ್ತಾನೆಂದು ನನ್ನ ಭಾವನೆ.
-ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ, ಸಂಸ್ಥಾನ ಗವಿಮಠ, ಕೊಪ್ಪಳ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೋವಿಡ್ ಸೋಂಕು ನಿವಾರಿಸುವ ಸಂಜೀವಿನಿ ಗುರುವಾರ ಸಂಜೆ 7 ಗಂಟೆಗೆ ಕೊಪ್ಪಳ ನಗರದ ಹಳೆ ಜಿಲ್ಲಾಸ್ಪತ್ರೆಗೆ ಬಾಗಲಕೋಟೆಯಿಂದ ಬಂದು ತಲುಪಿದೆ.
6,500 ಡೋಸ್ ಹಾಗೂ 37,800 ಸಿರೇಂಜ್ ಹೊತ್ತ ವ್ಯಾಕ್ಸಿನ್ ವ್ಯಾನ್ ಈಗಾಗಲೇ ಬಂದು ತಲುಪಿದೆ. ವ್ಯಾಕ್ಸಿನ್ನ್ನು ಆರೋಗ್ಯ ಅಧಿಕಾರಿಗಳು ಸಿಬ್ಬಂದಿ ಸ್ಟೋರ್ ರೂಮ್ನಲ್ಲಿ ಸಂಗ್ರಹಿಸಿದ್ರು.
ಆರ್ ಸಿಎಚ್ ಅಧಿಕಾರಿ ಡಾ. ಜಂಬಯ್ಯ ಈ ಸಂದರ್ಭದಲ್ಲಿ ಮಾತನಾಡಿ, ಜನವರಿ 16 ರಂದು 4 ಸೆಂಟರ್ನಲ್ಲಿ ಪ್ರಯೋಗ ಮಾಡಲಾಗುವುದು. ನಂತರ ಇನ್ನು 10 ಸೆಂಟರ್ಗಳನ್ನು ಗುರುತಿಸಿ ವ್ಯಾಕ್ಸಿನ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.