Home Blog Page 3203

ಗದಗ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಪ್ರಮಾದ; ಕಾಂಗ್ರೆಸ್‌ನ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ವಿಜಯಸಾಕ್ಷಿ ಸುದ್ದಿ, ಧಾರವಾಡ/ಗದಗ:

ಜ.24ರಂದು ನಡೆದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಪ್ರಮಾದಗಳನ್ನು ಪ್ರಶ್ನಿಸಿ ಕಾಂಗ್ರೆಸ್‌ನ ನಗರಸಭೆ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪೀಠ ಸೋಮವಾರ ವಜಾಗೊಳಿಸಿ ಆದೇಶಿಸಿದೆ.

ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ಕುರಿತು ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅಲ್ಲಿಯೇ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೋಮವಾರ ಆದೇಶಿಸಿದೆ. ಅಲ್ಲದೆ, ಚುನಾವಣಾಧಿಕಾರಿಗಳು ಆಗಿದ್ದ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಅವರ ಕರ್ತವ್ಯಲೋಪದ ಬಗ್ಗೆ ಸಂಪೂರ್ಣ ವಿಚಾರಣೆ ನಡೆಸಬೇಕು. ಬಳಿಕ ತೆಗೆದುಕೊಂಡ ಕ್ರಮದ ಬಗ್ಗೆ 90 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗೆ ಆದೇಶಿಸಿದೆ. ಇದರಿಂದ ಕಾಂಗ್ರೆಸ್ ಸದಸ್ಯರಿಗೆ ತೀವ್ರ ಮುಖಭಂಗ ಅನುಭವಿಸುವಂತಾಗಿದ್ದರೂ, ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದಿದೆ ಎನ್ನಲಾದ ಪ್ರಮಾದಗಳ ಬಗ್ಗೆ ಜಿಲ್ಲಾ ನ್ಯಾಯಾಲಯದಲ್ಲಿ ಪೈಲ್ ಮಾಡಲು ಹೈಕೋರ್ಟ್ ಅವಕಾಶ ನೀಡಿದ್ದಕ್ಕೆ ತೃಪ್ತಿಪಡುವಂತಾಗಿದೆ.

ಜ.24ರಂದು ನಡೆದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಪ್ರಮಾದಗಳನ್ನು ಪ್ರಶ್ನಿಸಿ ನಗರಸಭೆ ಸದಸ್ಯರಾದ ಲಕ್ಷ್ಮಣ ಚಂದಾವರಿ, ಶಕುಂತಲಾ ಅಕ್ಕಿ, ಕೃಷ್ಣಾ ಪರಾಪುರ, ಬರಕತ್ ಅಲಿ ಮುಲ್ಲಾ, ರವಿಕುಮಾರ್ ಕಮತರ, ಜೈನುಲಾಬ್ದಿನ್ ನಮಾಜಿ ಹಾಗೂ ಚಂದ್ರಶೇಖರಗೌಡ ಕರಿಸೋಮನಗೌಡರ ಸೇರಿ ಏಳು ಜನ ಕಾಂಗ್ರೆಸ್ ಸದಸ್ಯರು ಜ.28ರಂದು ಹೈಕೋರ್ಟ್ ಮೊರೆ ಹೋಗಿದ್ದರು. ಅಧಿಕಾರಿಗಳು ಪಾರದರ್ಶಕ ಚುನಾವಣೆ ನಡೆಸಿಲ್ಲ. ಹೀಗಾಗಿ ಮರು ಚುನಾವಣೆ ನಡೆಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.

ಫೆ.1ರಂದು ಎಲ್.ಡಿ.ಚಂದಾವರಿ ಸೇರಿ ಏಳು ಜನ ಕಾಂಗ್ರೆಸ್ ಸದಸ್ಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಬಿ.ಎಂ.ಶ್ಯಾಮಪ್ರಸಾದ್ ಅವರಿದ್ದ ಪೀಠ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಗೆಜೆಟ್‌ನಲ್ಲಿ ಪ್ರಕಟಿಸದಂತೆ ಮಧ್ಯಂತರ ಆದೇಶ ನೀಡಿ ಫೆ.21ಕ್ಕೆ ವಿಚಾರಣೆ ಮುಂದೂಡಿತ್ತು. ಫೆ.21ರಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಮಾರ್ಚ್ 2ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿ, ಅಂದು ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ತೀರ್ಪು ಕಾಯ್ದಿರಿಸಿತ್ತು. ಬಳಿಕ ಸೋಮವಾರ (ಮಾ.14)ದಂದು ಹೈಕೋರ್ಟ್ ಅರ್ಜಿ ವಜಾಗೊಳಿಸಿ ಆದೇಶ ನೀಡಿದೆ.

ನಗುವೇ ಜೀವನಕ್ಕೆ ಔಷಧಿ; ಬಿ ಸಿ ಹನಮಂತಗೌಡ್ರ

ವಿಜಯಸಾಕ್ಷಿ ಸುದ್ದಿ, ನರಗುಂದ:

ನಗು ಜೀವನಕ್ಕೆ ಔಷಧಿ ಇದ್ದಂತೆ. ಪ್ರತಿಯೊಬ್ಬರೂ ಜೀವನದಲ್ಲಿ ನಗು-ನಗುತ್ತಾ ಬಾಳಬೇಕು. ಇಂದಿನ ಒತ್ತಡದ ಬದುಕಿನಲ್ಲಿ ನಗುವಿಗೆ ಅವಕಾಶ ಕಡಿಮೆಯಾಗಿದೆ. ಈ ಒತ್ತಡದ ಬದುಕಿನಿಂದ ಹೊರಬರಲು ನಗುವೇ ದಿವ್ಯ ಔಷಧ ಎಂದು‌ ಕಸಾಪ ಅಧ್ಯಕ್ಷರಾದ ಬಿ.ಸಿ ಹನಮಂತಗೌಡ್ರ ಹೇಳಿದರು.
ಅವರು, ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾಣಿಜ್ಯ ಸೌರಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾಲೇಜ್ ಪ್ರಾಚಾರ್ಯರಾದ ಪ್ರೊ. ಸಿ. ಎಸ್ ಸುಳ್ಳದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಣ್ಯ ವ್ಯಾಪಾರಸ್ಥರಾದ ಜಿ ಟಿ ಗುಡಿಸಾಗರ, ಬಿ ಎಮ್ ಲೆಂಕನ್ನವರ, ಎಸ್ ಬಿ ಭಜಂತ್ರಿ, ವೇದಿಕೆ ಮೇಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಧೀರ ಸಜ್ಜನ, ಎಸ್ ಸಿ ಸುರಕೊಂಡ, ಸುಜಾತಾ ಮೆಳವಂಕಿ,ಲಕ್ಷ್ಮೀ ಕಲ್ಲಾಪೂರ, ಎಸ್ ಹಿರೇಮನಿ, ಚನ್ನು ನೀಲಗುಂದ, ರಮೇಶ ಐನಾಪೂರ, ಕಾಲೆಜು ವಿಧ್ಯಾರ್ಥಿ, ವಿಧ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗದಗ-ಬೆಟಗೇರಿ ನಗರಸಭೆಗೆ ನೂತನ ಪೌರಾಯುಕ್ತರಾಗಿ ರಮೇಶ್ ನೇಮಕ

ವಿಜಯಸಾಕ್ಷಿ ಸುದ್ದಿ, ಗದಗ:

ತಾಯಿ ಇಲ್ಲದ ತಬ್ಬಿಲಿಯಂತಾಗಿದ್ದ ಗದಗ-ಬೆಟಗೇರಿ ನಗರಸಭೆಗೆ ನಗರಾಭಿವೃದ್ಧಿ ಇಲಾಖೆ ಖಾಯಂ ಪೌರಾಯುಕ್ತರನ್ನು ನೇಮಕಗೊಳಿಸಿ ಬುಧವಾರ ಆದೇಶಿಸಿದ್ದು, ಕಾಟಚಾರಕ್ಕೆ ವಹಿಸಿಕೊಳ್ಳುತ್ತಿದ್ದ ಪ್ರಭಾರ ಪೌರಾಯುಕ್ತರಿಗೆ ಸರ್ಕಾರ ಕೊನೆ ಹಾಡಿದೆ. ಇದರಿಂದ ಅವಳಿ ನಗರದ ಜನರಲ್ಲಿ ಮಂದಹಾಸ ಮೂಡಿದೆ.

ಸ್ಥಳ‌ ನಿರೀಕ್ಷೆಯಲ್ಲಿದ್ದ ಪೌರಸೇವ ವೃಂದದ ರಮೇಶ್ ಎಸ್.ಸುಣಗಾರ ಅವರನ್ನು ಸರ್ಕಾರ ಗದಗ-ಬೆಟಗೇರಿ ನಗರಸಭೆಯಲ್ಲಿ ಖಾಲಿ ಇರುವ ಪೌರಾಯುಕ್ತರ ಹುದ್ದೆಗೆ ನೇಮಕಗೊಳಿಸಿ ಆದೇಶಿಸಿದೆ.

ಫೆ.೧೮ರಂದು ವಿಜಯಸಾಕ್ಷಿ ಪತ್ರಿಕೆಯು ‘ನಗರಸಭೆಗಿಲ್ಲ ಖಾಯಂ ಪೌರಾಯುಕ್ತರು! ಎಂಬ ಶೀರ್ಷಿಕೆಯಡಿ ಪೂರ್ಣ ಪ್ರಮಾಣದ ಪೌರಾಯುಕ್ತರಿಲ್ಲದೇ ಅವಳಿ ನಗರದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿಸ್ತ್ರತ ವರದಿ ಪ್ರಕಟಿಸಿತ್ತು. ಅಲ್ಲದೆ, ಖಾಯಂ ಪೌರಾಯುಕ್ತರನ್ನು ನಿಯೋಜಿಸುವಂತೆ ಗದಗ-ಬೆಟಗೇರಿ ಜನರ ಬೇಡಿಕೆಯೂ ಹೆಚ್ಚಾಗಿತ್ತು. ಈ ಬೆನ್ನಲ್ಲೇ ಸರ್ಕಾರ ಜನರ ಈ ಸಮಸ್ಯೆ ನಿವಾರಿಸಲು ಪೂರ್ಣ ಪ್ರಮಾಣದ ಪೌರಾಯುಕ್ತರನ್ನು ನಿಯೋಜಿಸಿದೆ.

ಕಳೆದ ಹಲವು ತಿಂಗಳಿಂದ ಪೂರ್ಣ ಪ್ರಮಾಣದ ಪೌರಾಯುಕ್ತರಿಲ್ಲದೆ, ನಗರದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದವು. ಪ್ರಭಾರಿ ಪೌರಾಯುಕ್ತರಿದ್ದರೂ ಸಾರ್ವಜನಿಕರ ಕಡತಗಳು ಸಕಾಲಕ್ಕೆ ವಿಲೇವಾರಿಯಾಗದೇ ಬಾಕಿ ಉಳಿಯುತ್ತಿದ್ದವು. ಇದರಿಂದಾಗಿ ಅವಳಿ ನಗರದ ಜನರು ಪರಿತಪಿಸುವಂತಾಗಿತ್ತು. ಇದೀಗ ಈ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಸರ್ಕಾರ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಪೌರಾಯುಕ್ತರನ್ನು ನೇಮಕಗೊಳಿಸಿದೆ.

ನಗರಸಭೆ ಪೌರಾಯುಕ್ತ ರಮೇಶ್ ಜಾಧವ್, ಎಇಇ ವರ್ಧಮಾನ್ ಹುದ್ದಾರ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಅನಿಲಕುಮಾರ್ ಮುದ್ದಾ ಘನತ್ಯಾಜ್ಯ ವಿಲೇವಾರಿ ಘಟಕದ ಮಣ್ಣು ಸಾಗಾಟದ ಹಣ ಬಿಡುಗಡೆಗೆ ಲಂಚ ಕೇಳಿದ್ದ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ದಾಳಿ ನಡೆಸಿತ್ತು. ಇದು ನಗರಸಭೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಗದಗ-ಬೆಟಗೇರಿ ನಗರಸಭೆ ಆಡಳಿತಕ್ಕೆ ಕಪ್ಪುಚುಕ್ಕೆ ಅಂಟಿದ್ದು, ಇದನ್ನೆಲ್ಲಾ ಶಮನಗೊಳಿಸಲು ಭ್ರಷ್ಟಾಚಾರ ರಹಿತ ಆಡಳಿತ ನಡೆಸಬೇಕಿದೆ. ಈ ನಿಟ್ಟಿನಲ್ಲಿ ನೂತನ ಪೌರಾಯುಕ್ತರು ಕಾರ್ಯೋನ್ಮುಖರಾಗಬೇಕು ಎಂಬುವುದು ಅವಳಿ ನಗರದ ಜನರ ನಿರೀಕ್ಷೆಯಾಗಿದೆ.


10 ತಿಂಗಳಲ್ಲಿ ಮೂವರು ಪೌರಾಯುಕ್ತರು

ಎಸಿಬಿ ದಾಳಿ ಬಳಿಕ ಅನಧಿಕೃತ ರಜೆ ಪಡೆದಿದ್ದ ರಮೇಶ್ ಜಾಧವ್‌ಗೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಕಡ್ಡಾಯ ರಜೆ ನೀಡಿ ಅಂದಿನ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ್ ವಟಗಲ್‌ಗೆ ಜುಲೈ 20ರಂದು ಪೌರಾಯುಕ್ತರ ಪ್ರಭಾರ ವಹಿಸಿದ್ದರು. ರಮೇಶ್ ವಟಗಲ್ ಬಳಿಕ ಗುರುಪ್ರಸಾದ್‌ಗೆ ಪೌರಾಯುಕ್ತರ ಪ್ರಭಾರ ವಹಿಸಲಾಗಿತ್ತು. ಅವರು ಅನಾರೋಗ್ಯ ನಿಮಿತ್ತ ರಜೆ ಹೋದ ಹಿನ್ನೆಲೆಯಲ್ಲಿ ನಗರಸಭೆಯ ಬಂಡಿ ಸಾಗಿಸಲು ಎಸ್.ಬಿ.ಮರಿಗೌಡ ಎಂಬುವವರಿಗೆ ಪ್ರಭಾರ ವಹಿಸಲಾಗಿತ್ತು. ಜುಲೈನಿಂದ ಇಲ್ಲಿಯವರೆಗೆ ಮೂವರು ಪೌರಾಯುಕ್ತರಾಗಿ ನೇಮಕಗೊಂಡರೂ ಸಾರ್ವಜನಿಕರ ಗೋಳು ತಪ್ಪಿರಲಿಲ್ಲ.

ಪ್ರಾಧಿಕಾರದ ಅಧ್ಯಕ್ಷರಾಗಿ ಶ್ರೀಪತಿ ಉಡುಪಿ ನೇಮಕ: ಬಿಜೆಪಿ ಪಾಳೆಯದಲ್ಲಿ ತೀವ್ರ ಅಸಮಾಧಾನ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಶ್ರೀಪತಿ ಉಡುಪಿ ಅವರನ್ನು ಮೂರು ವರ್ಷಗಳ ಅವಧಿಯವರೆಗೆ ರಾಜ್ಯ ಸರ್ಕಾರ ನೇಮಕ ಮಾಡಿ ಮಂಗಳವಾರ ಆದೇಶಿಸಿದೆ. ಇದು ಬಿಜೆಪಿಯ ಮುಖಂಡರ, ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯದಲ್ಲಿ ಇದುವರೆಗೂ ಯಾರೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರಲಿಲ್ಲ. ಹೀಗಾಗಿ ಈ ಬಾರಿ ಬಿಜೆಪಿ ಮುಖಂಡ ಸಿದ್ದು ಪಲ್ಲೇದ ಅವರು ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದರು. ಆದರೆ, ಸರ್ಕಾರ ಹಾಗೂ ಪಕ್ಷ ಈ ಹಿಂದೆ ಬ್ರಾಹ್ಮಣ ಕೋಟಾದಲ್ಲಿ ಕೃಷ್ಣ ಹೊಂಬಾಳೆಯವರು ಅಧ್ಯಕ್ಷರಾಗಿದ್ದರೂ, ಬ್ರಾಹ್ಮಣ ಸಮುದಾಯದ ಶ್ರೀಪತಿ ಉಡುಪಿಯವರೆಗೆ ಮತ್ತೆ ಮಣೆ ಹಾಕಿದೆ.

ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಶ್ರೀಪತಿ ಉಡುಪಿ ಅವರು ಪ್ರಾಧಿಕಾರದ ಅಧ್ಯಕ್ಷರಾಗಿರುವುದಕ್ಕೆ ಪಕ್ಷದಲ್ಲಿ ಕೆಲವರಿಗೆ ಅಸಮಾಧಾನವನ್ನುಂಟು ಮಾಡಿದೆ. ಏಕೆಂದರೆ, ಕಳೆದ ಬಾರಿ ಬಣಜಿಗ ಸಮುದಾಯ ಸಂಗಮೇಶ ದುಂದೂರ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ಹೀಗೆ ಬಹುತೇಕ ಎಲ್ಲ ಸಮುದಾಯವರಿಗೂ ಅಧ್ಯಕ್ಷ ಪಟ್ಟ ಸಿಕ್ಕಿತ್ತು. ಆದರೆ, ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯದವರಿಗೆ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದ ಲಿಂಗಾಯತ ಪಂಚಮಸಾಲಿ ಸಮುದಾಯದ ಬಹುತೇಕ ಜನ ಸಿದ್ದು ಪಲ್ಲೇದ ಅವರ ನೇಮಕ ಮಾಡಲು ಸಂಪೂರ್ಣ ಬೆಂಬಲ‌ ನೀಡಿದ್ದರು. ಇದೀಗ ಶ್ರೀಪತಿ ಉಡುಪಿ ಅವರ ನೇಮಕ ಸಮುದಾಯದ ಬಹುತೇಕ ಜನರಲ್ಲಿ ಅಸಮಾಧಾನ ಉಂಟು ಮಾಡಿದೆ.

ಅದರಂತೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟ್ಟಕ್ಕೆ ಪ್ರಬಲ ಲಿಂಗಾಯತ ಸಮುದಾಯದವರಿಗೆ ಅವಕಾಶ ಕೊಟ್ಟಿದ್ದರೆ ಮುಂಬರುವ ವಿಧಾನಸಭೆ, ತಾಪಂ, ಜಿಪಂ ಚುನಾವಣೆಗಳಲ್ಲಿ ಬಿಜೆಪಿಗೆ ಅನುಕೂಲವಾಗುತ್ತಿತ್ತು. ಆದರೆ, ಸರ್ಕಾರ ಶ್ರೀಪತಿ ಉಡುಪಿ ಅವರನ್ನು ನೇಮಕ ಮಾಡಿದ್ದು, ಮುಂದಿನ ಚುನಾವಣೆಗಳಲ್ಲಿ ಕಮಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕಳೆದ ಡಿಸೆಂಬರ್‌ನಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಸಿದ್ದು ಪಲ್ಲೇದ ಅವರನ್ನು ಪಕ್ಷದತ್ತ ಸೆಳೆಯಲು ಕಾಂಗ್ರೆಸ್‌ನವರು ಕಸರತ್ತು ನಡೆಸಿದ್ದರೂ ಸಿದ್ದು ಪಲ್ಲೇದ ಅವರು ಪಕ್ಷ ನಿಷ್ಠೆ ತೋರಿದ್ದರು. ಆದರೆ, ಇದೀಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನೇಮಕ ವೇಳೆ ಹೆಸರು ಕೈಬಿಟ್ಟಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಹೆಣ್ಣು ಬದುಕಿನ ಕಣ್ಣು: ಮುತ್ತು ರಾಯರಡ್ಡಿ

ವಿಜಯಸಾಕ್ಷಿ ಸುದ್ದಿ, ನರಗುಂದ:

‘ಮಹಿಳೆಯರು ಜನನಕ್ಕೆ ತಾಯಿಯಾಗಿ, ಸಹಕಾರಕ್ಕೆ ಸಹೋದರಿಯಾಗಿ, ಸಲಹೆಗೆ ಸ್ನೇಹಿತೆಯಾಗಿ, ಸಂಸಾರಕ್ಕೆ ಮಗಳಾಗಿ, ಜನನದಿಂದ ಮರಣದವರೆಗೂ ಜೊತೆಯಾಗಿ ಬರುವ ಹೆಣ್ಣು ನಮ್ಮ ಬದುಕಿನ ಕಣ್ಣು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ತಾಲ್ಲೂಕು ಅಧ್ಯಕ್ಷ ಹಾಗೂ‌ ಚಿಕ್ಕನರಗುಂದ ಗ್ರಾ.ಪಂ.ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ನವ ನಿರ್ಮಾಣ ಸೇನೆ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಿ ಮಾತನಾಡಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಸಿ.ಹನಮಂತಗೌಡ್ರ ಮಾತನಾಡಿ, ‘ಮಹಿಳೆ ಇಂದು ಎಲ್ಲ ರಂಗದಲ್ಲಿಯೂ ಮುಂಚೂಣಿಯಲ್ಲಿದ್ದು, ಅವರ ಸಾಧನೆಗಳು ಇನ್ನು ಹೆಚ್ಚಾಗಲಿ ಎಂದು ಶುಭ ಹಾರೈಸಿದರು.

ಇದೇ ವೇಳೆ ಡಾಕ್ಟರೇಟ್ ಪದವಿ ಪಡೆದ ಬಾಲ ಪ್ರತಿಭೆ ವೈದ್ಯತಿ ಕೋರಿಶೆಟ್ಟರ್, ಕವಿವಿ ಕಬಡ್ಡಿ ತಂಡಕ್ಕೆ ಆಯ್ಕೆಯಾದ ಸಂಗೀತಾ ತಳವಾರ, ಪ್ರೇಮಾ ಹಲಗೌಡ್ರ, ಲೇಖಕಿ ಡಾ.ಕಲಾಶ್ರೀ ಹಾದಿಮನಿ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಜೆ.ಪಿ.ಪತಂಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

  ಈ ಸಂದರ್ಭದಲ್ಲಿ ರಾಘವೇಂದ್ರ ಗುಜಮಾಗಡಿ, ಚನ್ನು ನಂದಿ, ಶರಣಬಸಪ್ಪ ಹಳೇಮನಿ, ನಬಿ ಕಿಲ್ಲೇದಾರ, ಬಸು ತಾವರೆ, ಶರಣು ಚಲವಾದಿ, ವಿಜಯ ಚಲವಾದಿ, ಪಿ.ವಿ.ಜಾಧವ, ಬಿ.ಎಸ್.ಕ್ಯಾರಕೊಪ್ಪ, ವಿಲಾಸ ಹಿರೇಮಠ, ಮಾರುತಿ ತಳವಾರ, ನಾಗರಾಜ ಕೋರಿಶೆಟ್ಟರ್, ನವೀನ್ ದೊಡ್ಡಮನಿ ಸೇರಿದಂತೆ ಅನೇಕರು ಇದ್ದರು.

ಕಣ್ಣೀರು ಹಾಕಿದ ಮಾಲಾಶ್ರೀ!

0

ಸ್ವ ಪಕ್ಷ ಕಾಂಗ್ರೆಸ್ ಸದಸ್ಯರ ನಡೆಗೆ ಬೇಸರ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಅಧಿಕಾರದಲ್ಲಿದ್ದ ಮಹಿಳೆಯನ್ನು ಕೆಳಗಿಳಿಸಲು ಸ್ವಪಕ್ಷ ಕಾಂಗ್ರೆಸ್ ಸದಸ್ಯರ ನಡೆಯಿಂದ ಅಸಮಾಧಾನಗೊಂಡು ಗಂಗಾವತಿ ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಕಣ್ಣೀರು ಸುರಿಸಿದರು.

ಗಂಗಾವತಿ ನಗರಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಇದೆ. ಅಧಿಕಾರದ ಗದ್ದುಗೆ ಏರುವಾಗ ಮಾಲಾಶ್ರೀ ಸಂದೀಪ್‌ಕುಮಾರ್ ಅವರನ್ನು ರಾಣಿಯಂತೆ ಮೆರೆಸಿದ್ದ ಕಾಂಗ್ರೆಸ್ ಸದಸ್ಯರು, ಇದೀಗ ಕಿರುಕುಳ ನೀಡಲಾರಂಭಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ನಗರಸಭೆ ಅಧ್ಯಕ್ಷ ಸ್ಥಾನದಿಂದ ಮಾಲಾಶ್ರೀ ಅವರನ್ನು ಕೆಳಗಿಳಿಸಲು ಸ್ವಪಕ್ಷದ ಸದಸ್ಯರೇ ಜಿಲ್ಲಾಧಿಕಾರಿಗಳಿಗೆ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮನವಿ ಸಲ್ಲಿಸಿದ್ದರಿಂದ ಮಾಲಾಶ್ರೀ ಮನ ನೊಂದಿದ್ದಾರೆ.

ನಾನೇ ರಾಜೀನಾಮೆ ಕೊಡ್ತಿನಿ:
ನನ್ನ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವರೇನು ಮನವಿ ಸಲ್ಲಿಸೋದು? ಅಧ್ಯಕ್ಷ ಸ್ಥಾನಕ್ಕೆ ನಾನೇ ರಾಜೀನಾಮೆ ನೀಡ್ತಿನಿ. ಸ್ವ ಪಕ್ಷದ ಸದಸ್ಯರ ಈ ನಡೆ ನಿಜಕ್ಕೂ ನನಗೆ ಬೇಸರ ತರಿಸಿದೆ.
-ಮಾಲಾಶ್ರೀ ಸಂದೀಪ್‌ಕುಮಾರ್, ನಗರಸಭೆ ಅಧ್ಯಕ್ಷೆ, ಗಂಗಾವತಿ.

ಯಾವ ಗಂಡಸು ಬಂಧಿಸಲಿಕ್ಕೆ ಬರುತ್ತಾನೋ ನೋಡೋಣ; ಪೊಲೀಸರಿಗೆ ಜಿ ಎಸ್ ಪಾಟೀಲ್ ಸವಾಲು

25 ಲಕ್ಷ ರೂ. ಪರಿಹಾರ ಘೋಷಿಸುವಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ್ ಸರ್ಕಾರಕ್ಕೆ ಒತ್ತಾಯ

ವಿಜಯಸಾಕ್ಷಿ ಸುದ್ದಿ, ಗದಗ:

ಅಲ್ಲ್ಯಾರೋ ಸತ್ತರೆ 25 ಲಕ್ಷ ರೂ. ಪರಿಹಾರ ಘೋಷಿಸುವ ಸರ್ಕಾರ, ಹಕ್ಕಿಗಾಗಿ ಹೋರಾಡಿ ಮೃತಪಟ್ಟ ಮಹಿಳೆ ಪರಿಶಿಷ್ಟ ಪಂಗಡ ಜನಾಂಗಕ್ಕೆ ಸೇರಿದವಳೆಂದು ಕೇವಲ 5 ಲಕ್ಷ ರೂ. ಘೋಷಿಸಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ್ ಕಿಡಿಕಾರಿದರು.

ಮಂಗಳವಾರ ಜಿಮ್ಸ್ ಆವರಣದಲ್ಲಿರುವ ಸರ್ಕಾರಿ ಶುಶ್ರೂಷಾ ಶಾಲೆಯ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ‘ಮೃತ ಮಹಿಳೆ ಎಸ್ಟಿ ಜನಾಂಗಕ್ಕೆ ಸೇರಿದವರಾಗಿದ್ದು, ಎಷ್ಟು ಪರಿಹಾರ ಕೊಟ್ಟರೂ ತೆಗೆದುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಐದು ಲಕ್ಷ ರೂ. ಘೋಷಿಸಿರುವುದು ಖಂಡನೀಯ. ಕೊಡುವುದಾದರೆ 25 ಲಕ್ಷ ರೂ. ಪರಿಹಾರ‌ ಕೊಡಿ. ಇಲ್ಲದಿದ್ದರೆ, ಅದು ಸಹಿತ ಬೇಡ. ನಾವೇ ಅಷ್ಟು ಪರಿಹಾರ ಕೊಡುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖಾಧಿಕಾರಿಗಳು ಗ್ರಾಮದ ರೈತರನ್ನು ರಕ್ಷಿಸಲು ಹೋಗದೆ, ಬಂಧಿಸಿಲು ಹೋಗಿದ್ದರು. ಗ್ರಾಮದ ಕೆಲವರ ಮೇಲೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಅವರು ಎಲ್ಲಿಯೂ ಹೊಗದೆ ಇಲ್ಲಿಯೇ ಇದ್ದಾರೆ ಯಾವ ಗಂಡಸು ಬಂಧಿಸಲಿಕ್ಕೆ ಬರುತ್ತಾನೋ ನೋಡೋಣ. ಅವರನ್ನು ಅರೆಸ್ಟ್ ಮಾಡಿದ್ರೆ ಅವರ ಜೊತೆ ನಾನು ಹೋಗುತ್ತೇನೆ ಎಂದು ಜಿ.ಎಸ್‌.ಪಾಟೀಲ್ ಎಚ್ಚರಿಕೆ ನೀಡಿದರು.

ಸ್ಥಳೀಯ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದದ್ದು ಎಂದು ಆರೋಪಿಸಿದ ಜಿ.ಎಸ್.ಪಾಟೀಲರು ಸರ್ಕಾರ ಅರಣ್ಯ ಅಧಿಕಾರಿಗಳ ಗರ್ವ ಅಡಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ‌ಸೇರಿದಂತೆ ಅನೇಕರು ‌ಇದ್ದರು.

ಅರಣ್ಯ ಒತ್ತುವರಿ ತೆರವಿನಲ್ಲಿ ಮಾನವೀಯತೆ ಅನುಸರಿಸಿ : ಸಚಿವ ಸಿ.ಸಿ.ಪಾಟೀಲ ಅಧಿಕಾರಿಗಳಿಗೆ ತಾಕೀತು

ಮೃತ ಮಹಿಳೆಯ ಕುಟುಂಬಕ್ಕೆ 5 ಲಕ್ಷ ರೂ.‌ಪರಿಹಾರ

ವಿಜಯಸಾಕ್ಷಿ ಸುದ್ದಿ, ಗದಗ:

‘ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕೇಲೂರು ಗ್ರಾಮದಲ್ಲಿ ಸೋಮವಾರ ಅರಣ್ಯ ಇಲಾಖೆಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಉದ್ವೇಗಕ್ಕೆ ಒಳಗಾಗಿ ಇಬ್ಬರು ಮಹಿಳೆಯರು ವಿಷ ಸೇವಿಸಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿರುವುದು ಅತ್ಯಂತ ದುರ್ದೈವದ ಘಟನೆ’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ವಿಷಾದ ವ್ಯಕ್ತಪಡಿಸಿದರು.

ಈ ಘಟನೆಯ ಕುರಿತು ಸಂಬಂಧಿಸಿದ ಗದಗ ಜಿಲ್ಲೆಯ ಅಧಿಕಾರಿಗಳೊಂದಿಗೆ ಮಾತನಾಡಿರುವ ಅವರು, ‘ಈ ರೀತಿಯ ಅವಘಡಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಒತ್ತುವರಿ ತೆರವು ಕಾರ್ಯಾಚರಣೆಯಂತಹ ಪ್ರಸಂಗಗಳಲ್ಲಿ ಮಾನವೀಯ ದೃಷ್ಟಿಯಿಂದ ನೋಡಬೇಕು ಎಂದು ಸೂಚಿಸಿದ ಅವರು, ಈ ಘಟನೆಯಲ್ಲಿ ವಿಷ ಸೇವಿಸಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸರೋಜಾ ಪಾಟೀಲ ಅವರಿಗೆ ಅಗತ್ಯವಿರುವ ಹೆಚ್ಚಿನ ಚಿಕಿತ್ಸೆ ನೀಡಲು ಸೂಕ್ತ ಕ್ರಮ ಕೈಗೊಳ್ಳಲು’ ನಿರ್ದೇಶಿಸಿದರು.

‘ಈಗಾಗಲೇ ಮೃತ ಮಹಿಳೆ ನಿರ್ಮಲಾ ಪಾಟೀಲ ಅವರ ಕುಟುಂಬ ಸದಸ್ಯರನ್ನು ಜಿಲ್ಲಾಧಿಕಾರಿಗಳು ಭೇಟಿಯಾಗಿದ್ದಾರೆ. ತಾವು ಕೂಡಾ ಸದ್ಯದಲ್ಲೇ ಅಲ್ಲಿಗೆ ತೆರಳಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳುವುದಾಗಿ ಸಷ್ಟಪಡಿಸಿದ ಸಿ.ಸಿ.ಪಾಟೀಲರು, ಅರಣ್ಯ ಒತ್ತುವರಿ ಕಾರ್ಯಾಚರಣೆ ಮಾಡುವಾಗ ಯಾರಿಗೂ ಅನ್ಯಾಯವಾಗದಂತೆ ನಿಯಮಾನುಸಾರವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಸಚಿವ ಸಿ.ಸಿ.ಪಾಟೀಲ್ ಅರಣ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

5 ಲಕ್ಷ ರೂ. ಪರಿಹಾರ: ಘಟನೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೊಂದಿಗೆ ಚರ್ಚಿಸಿದ್ದು, ಮಾನವೀಯ ದೃಷ್ಟಿಯಿಂದ ಮೃತ ಮಹಿಳೆಯ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ಘೋಷಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆ ಪ್ರಕಾರ ಅವರ ಕುಟುಂಬದವರಿಗೆ ಪರಿಹಾರ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿ.ಸಿ.ಪಾಟೀಲ ತಿಳಿಸಿದ್ದಾರೆ.

ನ್ಯಾಯ ಒದಗಿಸದ ಆರೋಪ; ಜನರ ಎದುರೇ ತಾಂಡಾದ ಮುಖಂಡನ ಕೊಲೆಗೈದು ಆರೋಪಿ ಠಾಣೆಗೆ ಶರಣು

ವಿಜಯಸಾಕ್ಷಿ ಸುದ್ದಿ, ಮುಂಡರಗಿ:

ಗಂಡ-ಹೆಂಡತಿ ಮಧ್ಯೆದ ಜಗಳ ನ್ಯಾಯ ಹೇಳಲು ಹೋದ ತಾಂಡಾದ ಮುಖಂಡನ ಕೊಲೆಯಲ್ಲಿ ಅಂತ್ಯಗೊಂಡಿರುವ ಧಾರುಣ ಘಟನೆ ಶುಕ್ರವಾರ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾದಲ್ಲಿ ನಡೆದಿದೆ.

ಕೊಲೆಗೀಡಾದ ತಾಂಡಾದ ಮುಖಂಡ

ಹೌದು, ರಾಜೀ ಪಂಚಾಯತಿ ಮಾಡಿ ನನಗೆ ನ್ಯಾಯ ಒದಗಿಸಿ ಕೊಡಲಿಲ್ಲವೆಂದು ಕೋಪಗೊಂಡ
ವಿಷ್ಣು ರೂಪಲಪ್ಪ ಪವಾರ(35) ಎಂಬ ವ್ಯಕ್ತಿ ಗಂಡ-ಹೆಂಡತಿ ನಡುವಿನ ಜಗಳ ಬಗೆಹರಿಸಲು ಮಧ್ಯಸ್ಥಿಕೆ ವಹಿಸಿದ್ದ ತಾಂಡಾದ ಮುಖಂಡನಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ.

ಅತ್ತಿಕಟ್ಟಿ ತಾಂಡಾದ ಸೋಮಲಪ್ಪ ನಾಯಕ್(50) ಎಂಬ ವ್ಯಕ್ತಿಯ ದಾರುಣವಾಗಿ ಕೊಲೆಗೀಡಾದ ಮುಖಂಡ. ಹೊಟ್ಟೆ, ಎದೆ ಹಾಗೂ ಗಂಟಲು ಭಾಗಕ್ಕೆ ಬಲವಾಗಿ ಚಾಕು ಇರಿದ ಪರಿಣಾಮ ಸೋಮಲಪ್ಪ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದು, ವಿಷ್ಣು ಸ್ವತಃ ತಾನೇ ಹೋಗಿ ಪೊಲೀಸರಿಗೆ ‌ಶರಣಾಗಿದ್ದಾನೆ.

ಘಟನೆ ವಿವರ:

ಕಳೆದ ನಾಲ್ಕೈದು ವರ್ಷಗಳಿಂದ ವಿಷ್ಣು ಪವಾರ ಮತ್ತು ಆತನ ಹೆಂಡತಿ ಸುಮಿತ್ರಾ ಇಬ್ಬರು ಮಧ್ಯೆ ಜಗಳ ಬಂದಿತ್ತು. ವಿಷ್ಣು ತನ್ನ ಹೆಂಡತಿಯ ಮೇಲೆ ಸಂಶಯ ಮಾಡುತ್ತಿದ್ದನಂತೆ. ಸಂಶಯ ಸಂಸಾರ ಹಾಳು ಮಾಡಿತು ಎಂಬಂತೆ‌ ಪತಿಯ ಈ ನಡೆಯಿಂದ ಬೇಸತ್ತಿದ್ದ ಸುಮಿತ್ರಾ ತಾಂಡಾ ಬಿಟ್ಟು ಹೋಗಿದ್ದಳಂತೆ. ನಾಲ್ಕು ಮಕ್ಕಳ ತುಂಬು ಸಂಸಾರ ಬಿಟ್ಟು ಸುಮಿತ್ರಾ ತವರು ಮನೆಯಲ್ಲೇ ಇದ್ದಳಂತೆ.

ಇನ್ನು ರಾಜೀ ಪಂಚಾಯತಿ ಮಾಡಿ ಗಂಡ ಹೆಂಡತಿಯನ್ನು ಒಂದು ಮಾಡಲು ತಾಂಡಾದ ಮುಖಂಡರು ಮುಂದಾಗಿದ್ದರು. ಆದರೆ, ಸುಮಿತ್ರಾ ಊರ ಜನರ ಮಾತು ಕೇಳದೆ ತವರು ಮನೆಯಲ್ಲೇ ಉಳಿದಿದ್ದಳು. ಇದರಿಂದ ತಾಂಡಾದ ಮುಖಂಡರು ಸರಿಯಾಗಿ ರಾಜೀ ಪಂಚಾಯತಿ ಮಾಡಿಲ್ಲವೆಂದು ವಿಷ್ಣು ಸಿಟ್ಟು ಮಾಡಿಕೊಂಡಿದ್ದನಂತೆ. ನಿನ್ನೆ (ಶುಕ್ರವಾರ) ಗ್ರಾಮದ ಸೇವಲಾಲ್ ಉತ್ಸವದ ಕುರಿತು ಚರ್ಚಿಸಲು ಕಾರುಬಾರಿ, ನಾಯಕರುಗಳು ಸಭೆ ಸೇರಿದ್ದರು. ಈ ವೇಳೆ ಏಕಾಏಕಿ ಗಲಾಟೆ ಎಬ್ಬಿಸಿದ ವಿಷ್ಣು ಪವಾರ ತಾಂಡಾದ ನಾಯಕ ಸೋಮಲಪ್ಪನನ್ನು ಕೊಲೆ ಮಾಡಿ ಸ್ವತಃ ತಾನೇ ಹೋಗಿ ಪೊಲೀಸರಿಗೆ ಶರಣಾಗಿದ್ದು, ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆಯ ನಂತರ ತಾಂಡಾದ ಜನರು ಆರೋಪಿ ವಿಷ್ಣುಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಗದಗ ರೈಲು ಕ್ಷೇತ್ರಕ್ಕೆ ಸಿಎಂ ಬೊಮ್ಮಾಯಿ ಬಂಪರ್ ಗಿಪ್ಟ್; ಗದಗ-ಯಲವಗಿ ರೈಲು ಮಾರ್ಗ ಜಾರಿಗೆ ಪ್ರಸ್ತಾವನೆ

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ಜನರ ಬಹದಿನಗಳ ಬೇಡಿಕೆಯಾಗಿದ್ದ ನೂತನ ಗದಗ-ಯಲವಗಿ, ಗದಗ-ವಾಡಿ ರೈಲು ಮಾರ್ಗಗಳ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ಶುಕ್ರವಾರ ಬಸವರಾಜ್ ಬೊಮ್ಮಾಯಿ ಅವರು 2022-23ನೇ ಸಾಲಿನ ತಮ್ಮ ಚೊಚ್ಚಲ ಬಜೆಟ್‌ನಲ್ಲಿ 55 ಕಿ.ಮೀ.ಉದ್ದದ ಗದಗ-ಯಲವಗಿ ರೈಲು ಮಾರ್ಗದ ಭೂಸ್ವಾಧೀನ ವೆಚ್ಚ ಭರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಹಾಗೂ ಗದಗ-ವಾಡಿ ರೈಲು ಅನುಷ್ಠಾನಗೊಳಿಸುವುದಾಗಿ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ರೈಲ್ವೆ ಸಾಂದ್ರತೆ ಹೆಚ್ಚಿಸುವ ಮೂಲಕ ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಸರ್ಕಾರ ನಿರ್ಧರಿಸಿದ್ದು, ರೈಲ್ವೆ ಇಲಾಖೆಯೊಂದಿಗೆ 50:50 ವೆಚ್ಚ ಹಂಚಿಕೆಯಲ್ಲಿ ಒಂಬತ್ತು ನೂತನ ರೈಲ್ವೆ ಮಾರ್ಗ ಅನುಷ್ಠಾನಗೊಳಿಸುತ್ತಿದೆ. ಗಿಣಿಗೇರಾ-ರಾಯಚೂರು, ತುಮಕೂರು-ರಾಯದುರ್ಗ, ಗದಗ-ವಾಡಿ, ಕುಡಚಿ-ಬಾಗಲಕೋಟೆ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು, ತುಮಕೂರು-ಚಿತ್ರದುರ್ಗ-ದಾವಣಗೆರೆ, ಚಿಕ್ಕಮಗಳೂರು-ಬೇಲೂರು ಹಾಗೂ ಬೇಲೂರು-ಹಾಸನ ರೈಲು ಮಾರ್ಗಗಳಿಗೆ ಹಸಿರು ನಿಶಾನೆ ತೋರಿದ್ದಾರೆ.

ಅದರಂತೆ, 55 ಕಿ.ಮೀ.ಉದ್ದ ಗದಗ-ಯಲವಗಿ ನೂತನ ರೈಲು ಮಾರ್ಗ ಯೋಜನೆಯನ್ನು 640 ಕೋಟಿ ರೂ. ಅಂದಾಜು ವೆಚ್ಚದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಭೂಸ್ವಾಧೀನ ವೆಚ್ಚ ಭರಿಸಿ ಕೇಂದ್ರದ ಪಾಲಿನೊಂದಿಗೆ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದಿದ್ದಾರೆ.

ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮಸ್ಕಿ, ಸಿಂಧನೂರು, ಗದಗ ಮತ್ತು ಯಾದಗಿರಿ ನಗರಗಳಿಗೆ ಬೈಪಾಸ್ ರಸ್ತೆ ನಿಮಿಸಲಾಗುವುದು. ಈ ಯೋಜನೆಗೆ ಅವಶ್ಯಕವಿರುವ ಭೂಸ್ವಾಧೀನ ವೆಚ್ಚದಲ್ಲಿ ರಾಜ್ಯ ಸರ್ಕಾರದ ಪಾಲು ಭರಿಸಲು ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಸಿಎಂ ಬೊಮ್ಮಾಯಿ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.

error: Content is protected !!