ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಪಂಚಮಸಾಲಿ ಸಮಾಜದ 4 ನೇ ಪೀಠ ಸ್ಥಾಪನೆಗೆ ಕೊಪ್ಪಳದಲ್ಲಿ ಸದ್ದಿಲ್ಲದೆ ಸಿದ್ಧತೆ ನೆಡದಿದೆ. ಮೂರನೇ ಪೀಠ ಚರ್ಚೆ ಎನ್ನುತಿದ್ದಂತೆ ಇದೀಗ ನಾಲ್ಕನೇ ಪೀಠದ ಸರದಿ ಪ್ರಾರಂಭವಾಗಿದೆ. ರಾಜ್ಯದಲ್ಲೇ ಪ್ರಥಮ ಭಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಪಂಚಮಸಾಲಿಯ ನಾಲ್ಕನೇ ಪೀಠದ ಮೊದಲ ಸಭೆ ನೆಡಸಲು ಇದೀಗ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಇನ್ನೂ ನಾಲ್ಕನೆ ಪೀಠ ವಿಶೇಷವಾಗಿ ಪಂಚಮಸಾಲಿ ಸಮಾಜದ ಮಹಿಳಾ ಪೀಠವಾಗಬೇಕು ಎನ್ನುವುದು ಸಮಾಜದ ಮಹಿಳೆಯರ ಕೂಗು ಕೇಳಿ ಬರ್ತಿದೆ. ಸುಮಾರು 40 ಲಕ್ಷ ಮಹಿಳೆಯರನ್ನು ಹೊಂದಿದ ಪಂಚಮಸಾಲಿ ಸಮಾಜಕ್ಕೆ ಪ್ರತ್ಯೇಕ ಮಹಿಳಾ ಪೀಠ ಆಗಬೇಕು ಎಂದು ಪಂಚಮಸಾಲಿ ಮಹಾಸಭಾ ರಾಜ್ಯ ಉಪಾಧ್ಯಕ್ಷೆ ಕಿಶೋರಿ ಬುದನೂರ ರಿಂದ ಮಹಿಳಾ ಪೀಠದ ಸ್ಥಾಪನೆಗೆ ಒತ್ತಾಯಿಸಿದ್ದಾರೆ. ಹೆಸರಿಗೆ ಮಾತ್ರ ಕಿತ್ತೂರು ಚೆನ್ನಮ್ಮ ಅಂತಾರೆ ಆದರೆ ಈಗಿರುವ ಎರಡೂ ಪೀಠದಿಂದ ಸಮಾಜದ ಮಹಿಳೆಯರ ಅಭಿವೃದ್ಧಿ ಆಗಿಲ್ಲ ಸಮಾಜದ ಒಕ್ಕೂಟದಲ್ಲಿ 11 ಜನ ಮಹಿಳೆಯರಿದ್ದಾರೆ ಅದರಲ್ಲಿ ಒಬ್ಬರನ್ನು ಮಹಿಳಾ ಪೀಠದ ಪೀಠಾಧಿತಿ ಮಾಡಲಾಗುವುದು ಮಹಿಳಾ ಪೀಠದ ಸ್ಥಾಪನೆ ಬಗ್ಗೆ ಈಗಾಗಲೇ ಒಂದು ಸಭೆ ಮಾಡಲಾಗಿದೆ. ಮಹಿಳಾ ಪೀಠದ ಕುರಿತು ಕೂಡಲಸಂಗಮ, ಹರಿಹರ ಪೀಠದ ಸ್ವಾಮೀಜಿಗಳ ಗಮನಕ್ಕೆ ತರಲಾಗಿದೆ ಸಮಾಜದ ಮೂರು ಪೀಠಗಳು ಮಹಿಳಾ ಪೀಠದ ಸ್ಥಾಪನೆಗೆ ಒಪ್ಪಿಗೆ ಸೂಚಿಸುತ್ತಾರೆ ಯಾವುದೇ ಕಾರಣಕ್ಕೂ ಮಹಿಳಾ ಪೀಠ ಸ್ಥಾಪನೆ ವಿಷಯ ಕೈ ಬಿಡುವುದಿಲ್ಲ ಮಹಿಳಾ ಪೀಠ ಸ್ಥಾಪನೆ ಮಾಡಿಯೇ ಮಾಡುತ್ತೇವೆ ಎಂದು ಕಿಶೋರಿ ಬುದನೂರ ಹೇಳಿದ್ದಾರೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಪ್ರೌಢಶಾಲಾ ಕಟ್ಟಡ ಕಾಮಗಾರಿಯನ್ನು ನಿಗದಿತ ವೇಳೆಗೆ ಪೂರ್ಣಗೊಳಿಸಿದರೂ ಶಿಕ್ಷಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯು, ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಹಣ ಪಾವತಿಸದೇ ಸತಾಯಿಸುತ್ತಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯಿತಿಯ ಹುಲಿಹೈದರ್ ಕ್ಷೇತ್ರದ ಮಾಜಿ ಸದಸ್ಯೆ ಶಾಂತಾ ರಮೇಶ್ ನಾಯಕ್ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
2018-19ನೇ ಸಾಲಿನ ಅನುದಾನದಡಿ ಜಿಲ್ಲೆಯ ವಿವಿಧೆಡೆ ಪ್ರೌಢಶಾಲಾ ಕಟ್ಟಡಗಳ ನಿರ್ಮಾಣದ ಟೆಂಡರ್ ಪಡೆದ ಗುತ್ತಿಗೆದಾರರು ಕಾಮಗಾರಿ ಮುಗಿಸಿ ಎರಡು ವರ್ಷಗಳಾದರೂ ಶಿಕ್ಷಣ ಶಿಕ್ಷಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಕೋಟಿಗಟ್ಟಲೇ ಹಣ ಬಾಕಿ ಉಳಿಸಿಕೊಂಡಿದೆ.
ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರು ಇಲಾಖೆಗೆ ಸಾಕಷ್ಟು ಬಾರಿ ಅಲೆದಾಡಿದರೂ ಅವರಿಗೆ ಸೇರಬೇಕಾದ ಅರ್ಧದಷ್ಟು ಹಣವನ್ನು ನೀಡದೇ ಸತಾಯಿಸುತ್ತಿದೆ. ಆರ್ಥಿಕ ಸಂಕಷ್ಟದಲ್ಲಿರುವ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದ್ದು, ಕೂಡಲೇ ಶಿಕ್ಷಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗೆ ಬಾಕಿ ಹಣ ನೀಡುವಂತೆ ಆದೇಶಿಸಬೇಕೆಂದು ಶಾಂತಾ ರಮೇಶ್ ನಾಯಕ್ ಅವರು, ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಹಾಲಪ್ಪ ಆಚಾರ್ ಈ ಸಲ ಗಣರಾಜ್ಯದ ಧ್ವಜಾರೋಹಣವನ್ನು ಧಾರವಾಡದಲ್ಲಿ ನೆರವೇರಿಸಲಿದ್ದಾರೆ. ವಿಜಯನಗರ ಜಿಲ್ಲೆಯ ಆನಂದ್ಸಿಂಗ್ ಅವರನ್ನು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ.
ಸಚಿವ ಸಂಪುಟದ ಬಹುತೇಕ ಸಚಿವರ ಜಿಲ್ಲಾ ಮತ್ತು ಕೋವಿಡ್ ಉಸ್ತುವಾರಿಯನ್ನು ಬದಲಾಯಿಸಿ ರಾಜ್ಯಪಾಲರ ಆದೇಶಾನುಸಾರ ಸರಕಾರದ ಉಪ ಕಾರ್ಯದರ್ಶಿ ಬಿ.ಎನ್. ಸುಮತಿ ಇಂದಿನಿಂದಲೇ ಜಾರಿಯಾಗುವಂತೆ ಅಧಿಸೂಚನೆ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಗದಗ ಜಿಲ್ಲೆಗೆ ಕೋವಿಡ್ ಉಸ್ತುವಾರಿ ಹಾಗೂ ನೂತನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೌರವ ಖ್ಯಾತಿಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ನೇಮಕ ಆಗಿದ್ದಾರೆ.
ಸಚಿವ ಬಿ.ಸಿ.ಪಾಟೀಲ್ ಅವರಿಗೆ ಚಿತ್ರದುರ್ಗ ಹಾಗೂ ಗದಗ ಜಿಲ್ಲೆಗಳ ಉಸ್ತುವಾರಿ ಮಂತ್ರಿಯನ್ನಾಗಿ ನೇಮಕ ಮಾಡಲಾಗಿದ್ದು, ಈ ಮೊದಲು ಗದಗ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಸಿ.ಸಿ.ಪಾಟೀಲ್ ಅವರು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ.
ಕಾಂಗ್ರೆಸ್ ನ ಹಿಡಿತದಲ್ಲಿದ್ದ ನಗರಸಭೆ ಗದ್ದುಗೆ ಹದಿನಾಲ್ಕು ವರ್ಷಗಳ ಬಳಿಕ ಬಿಜೆಪಿಗೆ ಧಕ್ಕಿದ್ದು, ಕಮಲ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ.
ಸೋಮವಾರ ನಡೆದ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿಯ ಉಷಾ ಮಹೇಶ ದಾಸರ ನಗರಸಭೆಯ 60ನೇ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸುನಂದಾ ಪ್ರಕಾರ ಬಾಕಳೆ ಅವರು ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪರವಾಗಿ 19 ಮತಗಳು ಬಿದ್ದಿವೆ ಎಂದು ಚುನಾವಣಾಧಿಕಾರಿ ರಾಯಪ್ಪ ಹುಣಸಗಿ ಅಧಿಕೃತವಾಗಿ ಘೋಷಿಸಿದರು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ನಗರಸಭೆ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಹೀಗಾಗಿ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಉಷಾ ಮಹೇಶ ದಾಸರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸುನಂದಾ ಪ್ರಕಾಶ ಬಾಕಳೆ ನಾಮಪತ್ರ ಸಲ್ಲಿಸಿದ್ದರು.
ಅದರಂತೆ, ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಚಂದಾವರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಕುಂತಲಾ ಅಕ್ಕಿ ಉಮೇದುವಾರಿಕೆ ಸಲ್ಲಿಸಿದ್ದರು.
ಇನ್ನು ಉಷಾ ದಾಸರ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ನಗರಸಭೆ ಅಧ್ಯಕ್ಷರಾಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಇದಿಷ್ಟೇ ಅಲ್ಲದೆ ಇಡೀ ರಾಜ್ಯದಲ್ಲಿರುವ ಚೆನ್ನದಾಸರ ಸಮುದಾಯದಲ್ಲೇ ನಗರಸಭೆಗೆ ಆಯ್ಕೆಯಾದ ಏಕೈಕ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಹೊರಹೊಮ್ಮಿದ್ದಾರೆ.
ನಗರಸಭೆ ಅಧಿಕಾರ ಅಷ್ಟು ಸುಲಭವಾಗಿ ಬಿಟ್ಟು ಕೊಡಲು ಸಿದ್ಧವಿರದ ಕಾಂಗ್ರೆಸ್ ಹೊರಗಿನ ನಾಲ್ವರನ್ನು ಕರೆತಂದಿತ್ತು. ಇದಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು.
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೊಂದಲವಿದೆ. ಪಾರದರ್ಶಕ ಚುನಾವಣೆ ನಡೆಸಿಲ್ಲ. ಅಭ್ಯರ್ಥಿಗಳ ಪರವಾಗಿ ಸಹಿ ಆಗಿದ್ದನ್ನು ಸಂಸದರ ಜೊತೆ ಸೇರಿಕೊಂಡು ಎಣಿಕೆ ಮಾಡಿದಾಗ. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಚಂದಾವರಿಗೆ 19, ಉಷಾ ದಾಸರರವರಿಗೆ 18 ಮತಗಳು ಬಿದ್ದಿವೆ. ಹೀಗಾಗಿ ಚಂದಾವರಿ ಅವರನ್ನು ಚುನಾಯಿತರೆಂದು ಘೊಷಣೆ ಮಾಡಬೇಕೆಂದು ಮನವಿ ಮಾಡಿಕೊಳ್ಳಲಾಯಿತು. ಆದರೆ, ಅಧಿಕಾರಿಗಳು ಇಲ್ಲ ಇದು ತಪ್ಪಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಮರು ಚುನಾವಣೆ ಮಾಡಬೇಕು. ಅಲ್ಲದೇ, ಈ ಬಗ್ಗೆ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಶಾಸಕ ಎಚ್.ಕೆ.ಪಾಟೀಲ್ ಹೇಳಿದರು
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಬಗ್ಗೆ ಚರ್ಚೆ ನಡೆದಿರುವ ಕುರಿತು ಪ್ರತಿಕ್ರಿಯೆ ನೀಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್, ಸಚಿವ ಸಂಪುಟ ವಿಸ್ತರಣೆಯೂ ಆಗಲ್ಲ, ಪುನರ್ರಚನೆಯೂ ಆಗಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಕೊಪ್ಪಳದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೆಲ್ಲ ಮಾಧ್ಯಮಗಳ ಊಹಾಪೋಹವಷ್ಟೇ. ಸರಕಾರ ಸುಭದ್ರವಾಗಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಸಚಿವ ಸಂಪುಟದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂದರು.
ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಕೊಪ್ಪಳ ತಾಲೂಕಿನಲ್ಲಿ ಅನುಷ್ಠಾನಗೊಳಿಸುವ ಕುರಿತು ಸರಕಾರ ಇಚ್ಛಾಶಕ್ತಿ ತೋರಿದೆ. ಈ ಬಗ್ಗೆ ಹಲವು ಪ್ರಕಾರಗಳ ಅಧ್ಯಯನ ನಡೆಸುವ ಕುರಿತು ಚಿಂತನೆ ಇದೆ. ಹನಿ ನೀರಾವರಿ ಬದಲಿಗೆ ಸಮಗ್ರ ನೀರಾವರಿ ಬಗ್ಗೆ ಒಲವಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಣಯಿಸಲಾಗುವುದು ಎಂದು ತಿಳಿಸಿದರು.
ಇನ್ನೊಂದು ವರ್ಷದಲ್ಲಿ ಸರಕಾರದ ಅವಧಿ ಮುಗಿಯಲಿದ್ದು, ಕಾಮಗಾರಿಗಳನ್ನು ಘೋಷಿಸಲಾಗುತ್ತಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣಾ ಸಂದರ್ಭದಲ್ಲಿ ನಡಿಗೆ ಅಥವಾ ಪಾದಯಾತ್ರೆ ನಡೆಸಲು ನಮ್ಮದು ಕಾಂಗ್ರೆಸ್ ಅಲ್ಲ, ನಾವು ಹೇಳುವುದಿಲ್ಲ, ಮಾಡಿ ತೋರಿಸುತ್ತೇವೆ ಎಂದರು.
ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣಾ ವೇಳೆ ನಗರಸಭೆ ಕಚೇರಿ ಎದುರು ಹೈಡ್ರಾಮಾ ನಡೆಯಿತು.
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಆರಂಭಕ್ಕೂ ಮುನ್ನ ನಗರಸಭೆಯ ಕಚೇರಿ ಮುಂದೆ ಜಮಾಯಿಸಿದ ಎರಡೂ ಪಕ್ಷದ ಕಾರ್ಯಕರ್ತರು, ಮುಖಂಡರು ಘೋಷಣೆ ಕೂಗಿ ಹರ್ಷೋದ್ಘಾರ ವ್ಯಕ್ತಪಡಿಸಿದರು.
ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿ ಹಾಗೂ ಸಚಿವ ಸಿ.ಸಿ.ಪಾಟೀಲ್ ಪರ ಜಯಘೋಷಗಳನ್ನು ಕೂಗಿದರೆ, ಕೈ ಕಾರ್ಯಕರ್ತರು ಶಾಸಕ ಎಚ್.ಕೆ.ಪಾಟೀಲ್ ಪರ ಘೋಷಣೆ ಕೂಗಿದರು. ಈ ವೇಳೆ ಮೊದಲು ಅವರನ್ನು ಕಳುಹಿಸಿ ಆ ಮೇಲೆ ನಾವು ಹೋಗುತ್ತೇವೆ ಅಂತಾ ಉಭಯ ಪಕ್ಷಗಳ ಕಾರ್ಯಕರ್ತರು ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆಸಿದರು. ಹೀಗಾಗಿ ಎರಡೂ ಪಕ್ಷದ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಗದಗ-ಬೆಟಗೇರಿ ನಗರಸಭೆಯಲ್ಲಿ ಅಧಿಕಾರ ಹಿಡಿಯುವುದಕ್ಕಾಗಿ ಕಾಂಗ್ರೆಸ್ ಕುತಂತ್ರದ ರಾಜಕಾರಣ ಮಾಡುತ್ತಿದೆ. ಇದಕ್ಕಾಗಿ ಅವಳಿ ನಗರದಲ್ಲಿ ಊಹಾಪೋಹಗಳನ್ನು ಹಬ್ಬಿಸುತ್ತಿದ್ದು, ತಾವೇ ಗೆಲ್ಲುತ್ತೇವೆಂಬ ಗುಲ್ಲು ಹಬ್ಬಿಸಿ ಹುಚ್ಚುತನ ಪ್ರದರ್ಶಿಸುತ್ತಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಕಿಡಿಕಾರಿದರು.
ಸೋಮವಾರ ನಗರದ ರಾಯಲ್ ವಿಲ್ಲಾ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಆಯ್ಕೆಯ ಕೊನೆಯ ಘಟ್ಟದಲ್ಲಿದ್ದೇವೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಉಷಾ ದಾಸರ, ಉಪಾಧ್ಯಕ್ಷ ಸ್ಥಾನಕ್ಕೆ ಸುನಂದಾ ಬಾಕಳೆ ಅವರು ನಾಮಪತ್ರ ಸಲ್ಲಿಸಿದ್ದು, ಜಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆಯಲ್ಲಿ ಕಾಂಗ್ರೆಸ್ ದುರಾಡಳಿತ ದೂರವಿಡಲು ಬಿಜೆಪಿಗೆ ಜನಾದೇಶ ನೀಡಿದ್ದಾರೆ. ನಗರಸಬೆಯಲ್ಲಿ ಬಿಜೆಪಿ 18+1 ಸೇರಿ 19 ಮತ್ತು ಕಾಂಗ್ರೆಸ್ 17+1 ಸೇರಿ 18 ಸಂಖ್ಯಾಬಲ ಹೊಂದಿವೆ. ಬಿಜೆಪಿಗೆ ಬಹುಮತವಿದ್ದರೂ ಕಾಂಗ್ರೆಸ್ ನವರು ಅಧಿಕಾರಕ್ಕಾಗಿ ಅಡ್ಡದಾರಿ ಹಿಡಿಯುತ್ತಿದ್ದಾರೆ. ರಾಜ್ಯಸಭಾ ಸದಸ್ಯ ಡಾ.ಹನುಮಂತಯ್ಯ, ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ ಕೊಂಡಜ್ಜಿ, ಪ್ರಕಾಶ್ ರಾಥೋಡ ಅವರಿಂದ ಮತದಾರರ ಪಟ್ಟಿಗೆ ಹೆಸರು ಸೇರಿಸುವಂತೆ ಅರ್ಜಿ ಹಾಕಿಸಿರುವುದು ಶಾಸಕ ಎಚ್.ಕೆ.ಪಾಟೀಲರಿಗೆ ಶೋಭೆ ತರುವುದಿಲ್ಲ ಎಂದರು.
ಗದುಗಿನ ಗಲ್ಲಿ, ವಾರ್ಡ್ ಬಗ್ಗೆ ಗೊತ್ತಿಲ್ಲದವರನ್ನೂ ಕರೆ ತರಲು ಯತ್ನಿಸಿರುವ ಕಾಂಗ್ರೆಸ್ಸಿಗರು ಮುಂದೆ ಅನುಭವಿಸುತ್ತಾರೆ. ಅಧಿಕಾರ ಹಿಡಿಯುವ ಸಲುವಾಗಿ ನಮ್ಮ ಪಕ್ಷದ ಸದಸ್ಯರ ಮೇಲೆ ಸಾಕಷ್ಟು ಒತ್ತಡ ತಂದಿದ್ದಾರೆ. ಸಾಲದು ಅಂತಾ ನಮ್ಮ ಸದಸ್ಯರಿಗೆ ಧಮ್ಕಿ ಹಾಕಿದ್ದಾರೆ. ಭ್ರಷ್ಟಾಚಾರ ಮುಖವಾಡ ಕಳಚದಂತೆ ನೋಡಿಕೊಳ್ಳಲು ಇಂತಹ ಕೃತ್ಯಕ್ಕೆ ಇಳಿದಿದ್ದಾರೆ ಎಂದು ಅನಿಲ್ ಮೆಣಸಿನಕಾಯಿ ಹರಿಹಾಯ್ದರು.
ಕಾಂಗ್ರೆಸ್ ನವರು ಯಾವಾಗಲೂ ನೇರ ರಾಜಕಾರಣ ಮಾಡಿಲ್ಲ. ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ನಾಲ್ಕು ಮತ ಪಡೆಯಲು ಯತ್ನಿಸಿರುವವರು ಕಳೆದ ಎಂಎಲ್ಎ ಚುನಾವಣೆಯಲ್ಲೂ ಇದೇ ರೀತಿಯ ತಂತ್ರಗಾರಿಕೆ ಮಾಡಿದ್ದರು. ಇದಕ್ಕಾಗಿ ಕಾಂಗ್ರೆಸ್ನಲ್ಲಿ ದೊಡ್ಡ ತಂಡವೇ ಇದೆ. ಆದರೆ, ಹಿಂದೆ ನಡೆದ ಹಾಗೆ ಕಾಂಗ್ರೆಸ್ ನವರ ಆಟ ಈಗ ನಡೆಯುವುದಿಲ್ಲ. ನಮ್ಮ ನಾಯಕರನ್ನು ಎದುರಿಸುವ ಸಾಮರ್ಥ್ಯ ಕಾಂಗ್ರೆಸ್ ನವರಿಗಿಲ್ಲ. ಅಲ್ಲದೇ, ಸಲೀಂ ಅಹ್ಮದ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಸೋಲಿಸಿದ್ದು, ಯಾರು ಎಂಬುವುದು ಜನರಿಗೆ ಗೊತ್ತಿದೆ ಎಂದು ಅನಿಲ್ ಮೆಣಸಿನಕಾಯಿ ಕುಟಿಕಿದರು.
ಪಕ್ಷದ ಮೂವರು ವಿಧಾನ ಪರಿಷತ್ ಸದಸ್ಯರು, ಓರ್ವ ರಾಜ್ಯಸಭಾ ಸದಸ್ಯರು, ಗದಗ ಮತದಾರರಾಗಲು ಒಲವು ತೋರಿಸಿದ್ದರು. ಆದರೆ, ಅಧಿಕಾರಿಗಳು ಕಾನೂನು ಬಾಹಿರವಾಗಿ ವರ್ತಿಸಿ ಕಾಂಗ್ರೆಸ್ಗೆ ಅನ್ಯಾಯ ಮಾಡಿದ್ದಾರೆ ಎಂದು ಶಾಸಕ ಡಾ.ಎಚ್.ಕೆ.ಪಾಟೀಲ್ ಹೇಳಿದರು.
ಸೋಮವಾರ ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಪಕ್ಷದ ಕೆಲವರ ಅರ್ಜಿ ಅಲ್ಲಗಳೆಯಲು ಅಧಿಕಾರಿಗಳಿಗೆ ಯಾವುದೇ ವೈಯಕ್ತಿಕ ಕಾರಣವಿಲ್ಲ. ಆದರೆ, ಸರ್ಕಾರದ ಒತ್ತಡವೇ ಇದಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ನಾಲ್ವರು ಸದಸ್ಯರ ಹೆಸರು ಮತದಾರರ ಪಟ್ಟಿಗೆ ಸೇರಿಸುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕಾನೂನಾತ್ಮಕ ಅರ್ಹತೆ ಇದ್ದರೂ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ.
ಹೊರಗಿನವರನ್ನು ಕರೆತಂದು ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಬಿಜೆಪಿಯ ಪರಿಪಾಟ. ಈ ಹಿಂದೆ ಗುಲ್ಬರ್ಗ, ಬೆಂಗಳೂರು, ದಾವಣಗೆರೆಯಲ್ಲಿ ಹೀಗೆ ಮಾಡಿದ್ದು ಯಾರು?. ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ.ಸಂಕನೂರ ಅವರನ್ನು ಹುಬ್ಬಳ್ಳಿಯಲ್ಲಿ ಯಾಕೆ ಮತದಾರರನ್ನಾಗಿ ಮಾಡಿದರು ಎಂದು ಪ್ರಶ್ನಿಸಿದ ಅವರು, ಬಿಜೆಪಿಯ ಪರಿಪಾಟವನ್ನು ನಾವು ಗಮನಿಸುತ್ತಿದ್ದೇವೆ ಎಂದು ಹೇಳಿದರು.
ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆದ್ದಿದ್ದು, ಇಬ್ಬರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಪಕ್ಷೇತರ ಸದಸ್ಯರು ಪಕ್ಷ ಸೇರ್ಪಡೆಗೊಂಡಿದ್ದಾರೆ. ನಾನು ಸೇರಿದಂತೆ 18 ಸಂಖ್ಯಾಬಲ ಹೊಂದಿದ್ದೇವೆ. ಬಿಜೆಪಿ ಓರ್ವ ಸಂಸದ, 18 ಸದಸ್ಯರನ್ನೊಳಗೊಂಡಂತೆ 19 ಸಂಖ್ಯಾಬಲ ಹೊಂದಿದೆ. ಹೀಗಾಗಿ ಇವತ್ತು ನಡೆಯುತ್ತಿರುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಶಾಸಕ ಎಚ್.ಕೆ.ಪಾಟೀಲ್ ಹೇಳಿದರು.