ಪರಿಷತ್ತು, ರಾಜ್ಯಸಭಾ ಸದಸ್ಯರ ಹೆಸರು ಸೇರ್ಪಡೆ ಇಲ್ಲ
ವಿಜಯಸಾಕ್ಷಿ ಸುದ್ದಿ, ಗದಗ:
ಪಕ್ಷದ ಮೂವರು ವಿಧಾನ ಪರಿಷತ್ ಸದಸ್ಯರು, ಓರ್ವ ರಾಜ್ಯಸಭಾ ಸದಸ್ಯರು, ಗದಗ ಮತದಾರರಾಗಲು ಒಲವು ತೋರಿಸಿದ್ದರು. ಆದರೆ, ಅಧಿಕಾರಿಗಳು ಕಾನೂನು ಬಾಹಿರವಾಗಿ ವರ್ತಿಸಿ ಕಾಂಗ್ರೆಸ್ಗೆ ಅನ್ಯಾಯ ಮಾಡಿದ್ದಾರೆ ಎಂದು ಶಾಸಕ ಡಾ.ಎಚ್.ಕೆ.ಪಾಟೀಲ್ ಹೇಳಿದರು.
ಸೋಮವಾರ ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಪಕ್ಷದ ಕೆಲವರ ಅರ್ಜಿ ಅಲ್ಲಗಳೆಯಲು ಅಧಿಕಾರಿಗಳಿಗೆ ಯಾವುದೇ ವೈಯಕ್ತಿಕ ಕಾರಣವಿಲ್ಲ. ಆದರೆ, ಸರ್ಕಾರದ ಒತ್ತಡವೇ ಇದಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ನಾಲ್ವರು ಸದಸ್ಯರ ಹೆಸರು ಮತದಾರರ ಪಟ್ಟಿಗೆ ಸೇರಿಸುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕಾನೂನಾತ್ಮಕ ಅರ್ಹತೆ ಇದ್ದರೂ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ.
ಹೊರಗಿನವರನ್ನು ಕರೆತಂದು ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಬಿಜೆಪಿಯ ಪರಿಪಾಟ. ಈ ಹಿಂದೆ ಗುಲ್ಬರ್ಗ, ಬೆಂಗಳೂರು, ದಾವಣಗೆರೆಯಲ್ಲಿ ಹೀಗೆ ಮಾಡಿದ್ದು ಯಾರು?. ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ.ಸಂಕನೂರ ಅವರನ್ನು ಹುಬ್ಬಳ್ಳಿಯಲ್ಲಿ ಯಾಕೆ ಮತದಾರರನ್ನಾಗಿ ಮಾಡಿದರು ಎಂದು ಪ್ರಶ್ನಿಸಿದ ಅವರು, ಬಿಜೆಪಿಯ ಪರಿಪಾಟವನ್ನು ನಾವು ಗಮನಿಸುತ್ತಿದ್ದೇವೆ ಎಂದು ಹೇಳಿದರು.
ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆದ್ದಿದ್ದು, ಇಬ್ಬರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಪಕ್ಷೇತರ ಸದಸ್ಯರು ಪಕ್ಷ ಸೇರ್ಪಡೆಗೊಂಡಿದ್ದಾರೆ. ನಾನು ಸೇರಿದಂತೆ 18 ಸಂಖ್ಯಾಬಲ ಹೊಂದಿದ್ದೇವೆ. ಬಿಜೆಪಿ ಓರ್ವ ಸಂಸದ, 18 ಸದಸ್ಯರನ್ನೊಳಗೊಂಡಂತೆ 19 ಸಂಖ್ಯಾಬಲ ಹೊಂದಿದೆ. ಹೀಗಾಗಿ ಇವತ್ತು ನಡೆಯುತ್ತಿರುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಶಾಸಕ ಎಚ್.ಕೆ.ಪಾಟೀಲ್ ಹೇಳಿದರು.