ಇಲ್ಲಿನ ಜಿಮ್ಸ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ ಸೋಮವಾರ 16 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನು ನಗರ ಪ್ರದೇಶದಲ್ಲಷ್ಟೇ ಪತ್ತೆಯಾಗುತ್ತಿದ್ದ ಕೋವಿಡ್ ಇದೀಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.
ಗದಗನ ಎಸ್.ಎಂ.ಕೃಷ್ಣ ನಗರ, ಪಂಚಾಕ್ಷರಿ ನಗರ, ಕಳಸಾಪುರ ರಸ್ತೆ, ಮುಂಡರಗಿ ತಾಲ್ಲೂಕಿನ ಬಾಗೇವಾಡಿ, ಗಜೇಂದ್ರಗಡದ ನಿವಾಸಿಗಳು ಸೇರಿದಂತೆ 16 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಸೋಮವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 695220 ಮಾದರಿ ಸಂಗ್ರಹಿಸಿದ್ದು, 669079 ಮಾದರಿಗಳು ನಕಾರಾತ್ಮಕವಾಗಿವೆ.
ಸೋಮವಾರದ 16 ಪ್ರಕರಣ ಸೇರಿ ಒಟ್ಟು 26,143 ಜನರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಸೋಂಕಿನಿಂದ 319 ಜನ ಮೃತಪಟ್ಟಿದ್ದಾರೆ. ಇಂದಿನ ಮೂವರು ಸೇರಿ ಒಟ್ಟು 25,758 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 66 ಸಕ್ರಿಯ ಪ್ರಕರಣಗಳಿದ್ದು, ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
–ಈ ಹಿಂದೆ ಕೂಡಲಸಂಗಮಕ್ಕೆ ಪಾದಯಾತ್ರೆ ಮಾಡಿ ನೀಡಿದ್ದ ಭರವಸೆ ಏನಾಯ್ತು?
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕಾಂಗ್ರೆಸ್ಗೆ ಡೊಂಬರಾಟ ಹೊಸದೇನಲ್ಲ. ಕಾಂಗ್ರೆಸ್ನವರು ಚುನಾವಣೆ ಸಮೀಪಿಸುತ್ತಿದ್ದಂತೆ ಪಾದಯಾತ್ರೆಯಂಥ ಡೊಂಬರಾಟ ಶುರು ಮಾಡ್ತಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ನಿಷೇಧಿತ ಪದ ಬಳಸಿ ವಿವಾದ ಎಳೆದುಕೊಂಡಿದ್ದಾರೆ.
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೂರನಢ ಲಸಿಕಾಕರಣ ಕುರಿತು ಸುದ್ದಿಗೋಷ್ಠಿ ನಡೆಸುವ ವೇಳೆ ಸಚಿವರು, ಕಾಂಗ್ರೆಸ್ ನಡೆ ಟೀಕಿಸುವ ಭರದಲ್ಲಿ “ಡೊಂಬರಾಟ” ಎಂಬ ನಿಷೇಧಿತ ಪದವನ್ನು ಬಳಸಿದರು.
ಜನರ ಜೀವದ ಬಗ್ಗೆ ಕಾಳಜಿ ಇಲ್ಲದೇ ಕೋವಿಡ್ ನಿಯಮ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ನವರು ರಾಜಕಾರಣ ಹಾಗೂ ಕೆಲಸವನ್ನು ಜನರಿಗಾಗಿ ಮಾಡುವುದನ್ನು ಬಿಟ್ಟು ರಾಜಕೀಯಕ್ಕಾಗಿ, ಅಧಿಕಾರದ ಲಾಲಸೆಗಾಗಿ ಮಾಡುತ್ತಿದ್ದಾರೆ ಎಂದು ಹರಿ ಹಾಯ್ದರು.
ಇನ್ನೂ ಚುನಾವಣೆ ಮುಂದೆ ಇದೆ. ಮೇಕೆದಾಟು ಯೋಜನೆ ಜಾರಿ ಬಗ್ಗೆ ಸಿಎಂ ಬೊಮ್ಮಾಯಿಯವರು ಕೆಲಸ ಮಾಡುತ್ತಿದ್ದಾರೆ. ಕಳೆದ ಸಲ ಪಾದಯಾತ್ರೆ ಮಾಡಿದಾಗ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಮುಖಂಡರು ಇನ್ನೂ ಅದೇ ಭ್ರಮೆಯಲ್ಲೇ ಇದ್ದಾರೆ. ಕೂಡಲ ಸಂಗಮಕ್ಕೆ ಪಾದಯಾತ್ರೆ ನಡೆಸಿ ಕೃಷ್ಣಾ ಯೋಜನೆ ಅನುಷ್ಠಾನಕ್ಕೆ ಪ್ರತಿ ವರ್ಷ 10 ಸಾವಿರ ಕೋಟಿ ಅನುದಾನ ಕೊಡುವುದಾಗಿ ನೀಡಿದ್ದ ಭರವಸೆ ಏನಾಯ್ತು ಎಂಬುದು ಜನರಿಗೆ ಗೊತ್ತಿದೆ ಎಂದು ಲೇವಡಿ ಮಾಡಿದರು.
ದೇವರ ಮೇಲೆ ಪ್ರಮಾಣ ಮಾಡಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ಗೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಡಿಪಿಆರ್ ಮಾಡಿಸಲೂ ಆಗಲಿಲ್ಲ. ಸಮ್ಮಿಶ್ರ ಸರಕಾರ ಇದ್ದಾಗ ಡಿಪಿಆರ್ ಆಗಿದೆ. ಕಾಂಗ್ರೆಸ್ಗೆ ಮೇಕೆದಾಟು ಯೋಜನೆ ಬಗ್ಗೆ ಪ್ರಾಮಾಣಿಕ ಕಳಕಳಿ ಇಲ್ಲ. ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಹೆಸರಿನಲ್ಲಿ ರಾಜಕೀಯ ಮಾಡಲು ನಿಂತಿದೆ ಎಂದು ಸಚಿವ ಆಚಾರ್ ಆರೋಪಿಸಿದರು.
ಜನರು ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದಿಲ್ಲ. ಕಾಂಗ್ರೆಸ್ನವರ ನಾಟಕವನ್ನು ಜನರು ಒಪ್ಪುವುದಿಲ್ಲ. ಜನರ ದಾರಿ ತಪ್ಪಿಸುವುದು ಕಾಂಗ್ರೆಸ್ಗೆ ಮೊದಲಿನಿಂದಲೂ ಇರುವ ಗುಣ. ಜನರು ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಹುಡ್ಕೋ 2ನೇ ಕ್ರಾಸ್ ನಲ್ಲಿ ಶುಕ್ರವಾರ ಮಹಿಳೆಯೊಬ್ಬರ ಮಾಂಗಲ್ಯ ಸರ ಕಿತ್ತುಕೊಂಡು ಹೋದ ಘಟನೆ ಗೊತ್ತೇ ಇದೆ. ಆದರೆ, ಇದಕ್ಕೂ ಮೊದಲು ಖದೀಮರು ನಡೆಸಿದ ಸಿದ್ಧತೆ ಅವಳಿ ನಗರದ ಜನರನ್ನು ಬೆಚ್ಚಿಬೀಳಿಸಿದೆ.
ಹೌದು, ಶುಕ್ರವಾರ ಘಟನೆ ನಡೆಯುವ ಮುನ್ನ ಅಂದರೆ ಹದಿನೈದು ದಿನಗಳ ಮೊದಲೇ ಖದೀಮರು ಸುಲಿಗೆ ಮಾಡಲು ಸ್ಕೆಚ್ ಹಾಕಿದ್ದರೆ ಎಂಬ ಅನುಮಾನ ಇದೀಗ ಶುರುವಾಗಿದೆ. ಇನ್ನು ‘ದಂಡುಪಾಳ್ಯ’ ಸಿನಿಮಾದಲ್ಲಿ ಮಹಿಳೆಯೊಬ್ಬಳು ಕುಡಿಯಲು ನೀರು ಕೇಳುವುದು, ತಿನ್ನಲು ಏನದಾರೂ ಕೊಡಿ ಅಂತಾ ಕೇಳುವ ನೆಪದಲ್ಲಿ ಮನೆಯಲ್ಲಿ ಯಾರ್ಯಾರು ಇರುತ್ತಾರೆ, ಎಷ್ಟು ಜನ ಇರುತ್ತಾರೆ ಎಂಬುದನ್ನು ತಿಳಿದುಕೊಂಡು ತನ್ನ ಗ್ಯಾಂಗ್ ನವರಿಗೆ ಹೇಳುತ್ತಾಳೆ. ಬಳಿಕ ಅವರೆಲ್ಲರೂ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಕನ್ನ ಹಾಕುವುದನ್ನು ನೋಡಿದ್ದೇವೆ. ಅಂತಹದೇ ಘಟನೆ ಗದಗನಲ್ಲೂ ನಡೆಯಿತೇ ಎಂಬ ಶಂಕೆ ಶುರುವಾಗಿದೆ.
ಹುಡ್ಕೋ ಕಾಲನಿಯಲ್ಲಿ ಸರಗಳ್ಳತನದ ಕೃತ್ಯ ನಡೆಯುವ ಹದಿನೈದು ದಿನಗಳ ಹಿಂದೆ ಪುಷ್ಪಾ ಎಂಬುವವರ ಮನೆಗೆ ಅಪರಿಚಿತ ಮಹಿಳೆಯೊಬ್ಬರು ನೀರು ಕೇಳಿಕೊಂಡು ಮನೆಗೆ ಬಂದಿದ್ದರು. ಆಶ್ಚರ್ಯವೆಂದರೆ, ಮನೆಯ ಗೇಟ್ ತಗೆದು ಡೋರ್ ಕ್ಲೋಸ್ ಇದ್ದಾಗಲೂ ಕಾಲಿಂಗ್ ಬೆಲ್ಲ ಒತ್ತಿ ಮಹಿಳೆ ಹೊರಬರುವವರೆಗೂ ಬಿಡದೇ ನೀರು ಕೇಳಿದ್ದಾಳೆ ಅಂತೆ. ಇದೇ ಮಹಿಳೆ ಅಂದು ಕುಡಿಯುವ ನೀರು ಕೇಳುವ ನೆಪದಲ್ಲಿ ಮನೆಯಲ್ಲಿ ಯಾರು ಇರುತ್ತಾರೆ, ಎಷ್ಟು ಜನ ಇದ್ದಾರೆ ಎಂಬುವುದನ್ನು ತಿಳಿದುಕೊಂಡು ಹೋಗಿದ್ದಳೆ ಎಂಬ ಅನುಮಾನ ಕುಟಂಬದ ಸದಸ್ಯರು ವ್ಯಕ್ತಪಡಿಸಿದ್ದಾರೆ.
ಘಟನೆ ವಿವರ
ನಗರದ ಹುಡ್ಕೋ ಕಾಲನಿಯ ನಿವಾಸಿ ಪುಷ್ಪಾ ಎಂಬುವವರು ಶುಕ್ರವಾರ ಸಂಜೆ 7 ಗಂಟೆಗೆ ಮನೆಯಲ್ಲಿ ಮಂಗಳಗೌರಿ ಧಾರಾವಾಹಿ ವೀಕ್ಷಿಸುತ್ತಿದ್ದರಂತೆ. ಈ ವೇಳೆ ಗೇಟ್ ಸೌಂಡ್ ಬಂದಿದೆ. ಯಾರು ಎಂದು ಕೂಗಿದಾಗಲೂ ಮಾತನಾಡದ ಮಾಸ್ಕ್ ಹಾಕಿದ ಯುವಕನೊಬ್ಬ ಮನೆಯೊಳಗೆ ನುಗ್ಗಿದ್ದಾನೆ. ಪುಷ್ಪಾ ಅವರು, ಯಾರ ನೀ…ಯಾರೂ ಅಂತಾ ಕೇಳುವಷ್ಟರಲ್ಲೇ ಅವರ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯದ ಸರಕ್ಕೆ ಕೈಹಾಕಿದ್ದಾನೆ. ಈ ವೇಳೆ ತೀವ್ರ ಪ್ರತಿರೋಧ ಒಡ್ಡಿದರೂ ಬಿಡದ ಸುಲಿಗೆಕೋರ ಕಪಾಳಕ್ಕೆ ಹೊಡೆದಿದ್ದಾನೆ. ಅಷ್ಟರಲ್ಲೇ ಇನ್ನೊಂದು ಕೋಣೆಯಲ್ಲಿ ಇದ್ದ ಮಹಿಳೆಯ ಪತಿ ಹಾಲ್ ಗೆ ಬರೋದೊರಳಗೆ ಅರ್ಧ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಅಷ್ಟಕ್ಕೂ ತೀರಾ ಸಮೀಪದಲ್ಲಿ ಹಿಟ್ಟಿನ ಗಿರಣಿ ಇದೆ. ಅಲ್ಲಿ ಜನಜಂಗುಳಿ ಇದ್ದರೂ ಆ ಯುವಕ ಮನೆಯೊಳಗೆ ಹೊಕ್ಕು ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡಿದ್ದೇ ಸೋಜಿಗವೆನಿಸುತ್ತೆ. ಘಟನೆಯ ನಂತರ ಅಕ್ಕಪಕ್ಕದ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಶಹರ ಠಾಣೆಯ ಪೊಲೀಸರು ಖದೀಮ ಕಳ್ಳನನ್ನು ಬಂಧಿಸಲು ಜಾಲ ಬೀಸಿದ್ದಾರೆ.
ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಎರಡಂಕಿ ತಲುಪಿರುವ ಕೊರೊನಾ ಸೋಂಕು ಶತಕದತ್ತ ಮುನ್ನುಗ್ಗುತ್ತಿದೆ. ಶನಿವಾರ ಒಂದೇ ದಿನ 16 ಜನರಿಗೆ ಕೊರೊನಾ ಸೋಂಕು ದೃಢಪಟ್ಟು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿತ್ತು.
ಭಾನುವಾರವೂ ಜಿಮ್ಸ್ ವೈದ್ಯಕೀಯ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ವಸತಿ ನಿಲಯದಲ್ಲಿ ಐಸೋಲೇಶನ್ ಮಾಡಲಾಗಿದೆ.
ಅದರಂತೆ, ಅವಳಿ ನಗರದ ಎಸ್.ಎಂ.ಕೃಷ್ಣ ನಗರದ ಬಡಾವಣೆ ಪ್ರಾಥಮಿಕ ಶಾಲೆ ನಂ.12ರಲ್ಲಿ ಇಬ್ಬರು ಶಿಕ್ಷಕರಿಯರು ಹಾಗೂ ಓರ್ವ ಅಡುಗೆ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ವಿದ್ಯಾರ್ಥಿಗಳಲ್ಲೂ ಸೋಂಕಿನ ಭೀತಿ ಕಾಡುತ್ತಿದೆ.
ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಎಸ್.ಎಂ.ಕೃಷ್ಣ ಶಾಲೆಯ ಮೂವರು ಸೇರಿ ಭಾನುವಾರ ಜಿಲ್ಲೆಯಲ್ಲಿ ಏಳು ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಗದಗ ತಾಲೂಕಿನ ನಾಲ್ವರು, ಮುಂಡರಗಿ ವ್ಯಾಪ್ತಿಯ ಮೂವರಿಗೆ ಸೋಂಕು ಖಚಿತಪಟ್ಟಿದೆ.
ಭಾನುವಾರದವರೆಗೆ (ಜ.9) ಜಿಲ್ಲೆಯಲ್ಲಿ 6,44,329 ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ 6,94,360 ಮಾದರಿ ಸಂಗ್ರಹಿಸಿದ್ದು, 6,68,235 ನಕಾರಾತ್ಮಕವಾಗಿವೆ. ಭಾನುವಾರದ 07 ಪ್ರಕರಣ ಸೇರಿ ಒಟ್ಟು 26,127 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಈವರೆಗೆ 319 ಜನ ಮೃತಪಟ್ಟಿದ್ದು, ಒಟ್ಟು 25,755 ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 53 ಸಕ್ರಿಯ ಪ್ರಕರಣಗಳಿದ್ದು, ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಜನರಲ್ಲಿ ಧಾರಾವಾಹಿ ವೀಕ್ಷಿಸುವ ಗೀಳು ಹೆಚ್ಚಾಗಿದೆ. ಪ್ರತಿಯೊಂದು ಮನೆಯಲ್ಲೂ ಸಂಜೆ ಆಗುತ್ತಲೇ ಅರ್ಧ ಗಂಟೆಗೊಂದರಂತೆ ಪ್ರಸಾರವಾಗುವ ಧಾರಾವಾಹಿಗಳಿಗಾಗಿ ಗಡಿಬಿಡಿಯಿಂದ ಮನೆಯ ಎಲ್ಲ ಕೆಲಸ ಮುಗಿಸಿ, ಟಿವಿ ಮುಂದೆ ರಿಮೋಟ್ ಹಿಡಿದು ಕುಳಿತುಕೊಳ್ಳುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ.
ಚಿಕ್ಕ ಮಕ್ಕಳಿಂದ ಹಿಡಿದು ಇಳಿ ವಯಸ್ಸಿನ ಅಜ್ಜಿಯರ ಮನ ಸೆಳೆದಿರುವ ಧಾರಾವಾಹಿಗಳನ್ನು ವೀಕ್ಷಿಸುವಾಗ ಅಕ್ಕ-ಪಕ್ಕ ಏನೇ ಆದರೂ ತಿಳಿಯದಷ್ಟು ತಲ್ಲೀನರಾಗಿರುತ್ತಾರೆ.
ಹೀಗೆ ಮನೆಯಲ್ಲಿ ಧಾರಾವಾಹಿ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಕಳ್ಳನೊಬ್ಬ ಒಳನುಗ್ಗಿ, ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯವನ್ನೇ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಶುಕ್ರವಾರ ಸಂಜೆ ನಗರದಲ್ಲಿ ನಡೆದಿದೆ.
ನಗರದ ಹುಡ್ಕೋ ಕಾಲನಿಯ ಎರಡನೇ ಕ್ರಾಸ್ ನಿವಾಸಿ ಪುಷ್ಪಾ (63) ಎಂಬ ಮಹಿಳೆ ಶುಕ್ರವಾರ ಸಂಜೆ 7 ಗಂಟೆಯಿಂದ `ಮಂಗಳಗೌರಿ’ ಧಾರಾವಾಹಿ ವೀಕ್ಷಿಸುವುದರಲ್ಲಿ ಮಗ್ನರಾಗಿದ್ದರು. ಈ ವೇಳೆ ಕಳ್ಳ ಒಳನುಗ್ಗಿದ್ದೇ ತಿಳಿಯಲಿಲ್ಲ. ಕೊರಳಿಗೆ ಕೈಹಾಕಿ ಮಾಂಗಲ್ಯ ಕಿತ್ತುಕೊಂಡಾಗಲೇ ಅರಿವಿಗೆ ಬಂದಿದ್ದು.
25-30 ವಯಸ್ಸಿನ ಮುಖಕ್ಕೆ ಮಾಸ್ಕ್ ಹಾಕಿದ್ದ ಯುವಕ ಮಾಂಗಲ್ಯಕ್ಕೆ ಕೈ ಹಾಕಿದಾಗ ಮಹಿಳೆ ತೀವ್ರ ಪ್ರತಿರೋಧ ಒಡ್ಡಿದ್ದಾರೆ. ಆದರೆ ಯುವಕ ಆಕೆಯ ಕಪಾಳಕ್ಕೆ ಬಾರಿಸಿ, ಸುಮಾರು 70 ಸಾವಿರ ರೂ. ಮೌಲ್ಯದ ತಾಳಿಯನ್ನು ಕದ್ದೊಯ್ದಿದ್ದಾನೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
–ಬಸವರಾಜ ಕರುಗಲ್. ವಿಜಯಸಾಕ್ಷಿ ವಿಶೇಷ ಕೊಪ್ಪಳ: ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ಕಾಲು ವರ್ಷ ಬಾಕಿ ಇದೆ. ಆದರೆ ಯಲಬುರ್ಗಾ ಕ್ಷೇತ್ರದ ಹಾಲಿ ಹಾಗೂ ಮಾಜಿ ಸಚಿವರು ಚುನಾವಣೆಯ ಟೀಸರ್ ಆರಂಭಿಸಿದ್ದಾರೆ. ಹಾಲಿ ಸಚಿವ ಹಾಲಪ್ಪ ಆಚಾರ್ ಸರಕಾರದ ವಿವಿಧ ಕಾರ್ಯಗಳ ಮೂಲಕ ಕಾಂಗ್ರೆಸ್ ಟೀಕಿಸುತ್ತಾ ಪರೋಕ್ಷ ಪ್ರಚಾರ ಆರಂಭಿಸಿದ್ದರೆ, ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾಧ್ಯಮಗಳ ಮೂಲಕ ಜನರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ನೀರಾವರಿ ಹಾಗೂ ಕೆರೆ ತುಂಬಿಸುವ ಯೋಜನೆ, ಕೃಷ್ಣಾ ನದಿ ನೀರಿನ ವಿತರಣೆಯ ವಿಚಾರವನ್ನು ಕೈಗೆತ್ತಿಕೊಂಡು ಕೆಸೆರೆರಚಾಟ ಆರಂಭಿಸಲಾಗಿದೆ.
ನಾಪತ್ತೆಯಾಗಿದ್ದ ರಾಯರಡ್ಡಿ ಪ್ರತ್ಯಕ್ಷ! 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್ನ ಬಸವರಾಜ ರಾಯರಡ್ಡಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು ತೀರಾ ವಿರಳ. ಅವರನ್ನು ಕ್ಷೇತ್ರದ ಜನ ಕಾಣಬೇಕೆಂದರೆ ಧಾರವಾಡ, ಬೆಂಗಳೂರು ಇಲ್ಲವೇ ದೆಹಲಿಗೆ ತೆರಳಬೇಕಿತ್ತು. ಹಾಗಾಗಿ ರಾಯರಡ್ಡಿ ಬಹುತೇಕ ಜನಸಂಪರ್ಕದಿಂದ ದೂರವೇ ಉಳಿದಿದ್ದರು. ಗ್ರಾಪಂ ಚುನಾವಣೆ ಸೇರಿದಂತೆ ಪಕ್ಷದ ಇತರೆ ಕಾರ್ಯಕ್ರಮಗಳಲ್ಲೂ ಅವರ ಹಾಜರಾತಿ ಅಷ್ಟಕ್ಕಷ್ಟೇ. ಹೆಚ್ಚು ಕಡಿಮೆ ನಾಪತ್ತೆಯಾಗಿದ್ದ ಮಾಜಿ ಸಚಿವ ರಾಯರಡ್ಡಿ ಇದೀಗ ಪ್ರತ್ಯಕ್ಷವಾಗಿದ್ದಾರೆ. ಇನ್ನು ಮೇಲೆ ಆಗಾಗ ಕಾಣ್ತಾ ಇರ್ತಿನಿ ಅಂತಲೂ ಮಾಧ್ಯಮದವರಿಗೆ ರಾಯರಡ್ಡಿ ಹೇಳಿರೋದನ್ನ ಗಮನಿಸಿದರೆ ಈಗಿನಿಂದಲೇ ಚುನಾವಣಾ ತಯಾರಿ ಶುರು ಎಂತಲೂ, ಅದಕ್ಕಾಗಿ ಈ ಟ್ರೇಲರ್ ಅಂದಂತಿತ್ತು.
ಏನದು ಟ್ರೇಲರ್?ಜಿಲ್ಲೆಯ ನೀರಾವರಿ ಯೋಜನೆಗಳ ವಿಚಾರವನ್ನು ಮುಂದಿಟ್ಟುಕೊಂಡು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಚಿವ ಹಾಲಪ್ಪ ಆಚಾರ್ ಅವರಿಗೆ ಬುದ್ಧಿ ಇಲ್ಲ ಎಂದು ಹೇಳುವ ಮೂಲಕ ಪ್ರಚಾರ ಗಿಟ್ಟಿಸೋದೇ ರಾಯರಡ್ಡಿ ತಂತ್ರಗಾರಿಕೆ ಮತ್ತು ಚುನಾವಣಾ ಪ್ರಚಾರದ ಟ್ರೇಲರ್. ಕೆರೆ ತುಂಬಿಸುವ ಯೋಜನೆಗಳಾಗಲಿ, ಕೃಷ್ಣಾ ನದಿ ನೀರಿನ ಹಂಚಿಕೆಯಾಗಲಿ, ನೀರಾವರಿ ಯೋಜನೆಗಳಾಗಲಿ ಏಕ ವ್ಯಕ್ತಿಯಿಂದ ಸಾಧ್ಯವಿಲ್ಲ. ಹಾಗೊಂದು ವೇಳೆ ನನ್ನಿಂದಲೇ ಆಯ್ತು ಅನ್ನೋದು ಮೂರ್ಖತನ. ಯೋಜನೆಗಳು ಸಾಕಾರಗೊಳ್ಳೋದು ಏಕ ವ್ಯಕ್ತಿ ಅಥವಾ ಏಕ ಪಕ್ಷದಿಂದ ಅಲ್ಲ, ಆಡಳಿತಾರೂಢ ಸರಕಾರದಿಂದ ಯೋಜನೆಗಳ ಅನುಷ್ಠಾನ ಸಾಧ್ಯ. ಇದು ಬಿಜೆಪಿಯದ್ದಷ್ಟೇ ಸಾಧನೆಯಲ್ಲ, ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಸಿದ್ದರಾಮಯ್ಯ ಹಾಗೂ ಅವರ ಸರಕಾರ ನಯಾಪೈಸೆ ಕೊಟ್ಟಿಲ್ಲ ಎಂಬುದು ಶುದ್ಧ ಸುಳ್ಳು ಎಂದು ಪ್ರತಿಪಾದಿಸಿದ ರಾಯರಡ್ಡಿ 2013-14ನೇ ಸಾಲಿನಿಂದ 2018-19ರವರೆಗೆ ಬಿಡುಗಡೆಯಾದ ಅನುದಾನಗಳ ವಿವರ ನೀಡಿದರು.
ಶಾಸಕರಾದವರಿಗೆ ತಿಳಿವಳಿಕೆ ಇಲ್ಲ ಎಂದು ಭಾಗಶಃ ಒಪ್ಪಬಹುದು. ಇದುವರೆಗೂ ಶಾಸಕರಾಗಿದ್ದ ಹಾಲಪ್ಪ ಆಚಾರ್ ಅವರು ಕಾಂಗ್ರೆಸ್ ವಿರುದ್ಧ, ಸಿದ್ದರಾಮಯ್ಯ ವಿರುದ್ಧ ಮಾತನಾಡಿದಾಗ ಅವರಿಗೆ ತಿಳಿವಳಿಕೆ ಇಲ್ಲ ಎಂದು ಉದಾಸೀನ ಮಾಡುತ್ತಿದ್ದೆ. ಆದರೆ ಆಚಾರ್ ಈಗ ಸರಕಾರದ ಮೂರು ಇಲಾಖೆಗಳನ್ನು ನಿಭಾಯಿಸುವ ಮಂತ್ರಿಯಾಗಿದ್ದುಕೊಂಡು ಚಿಕ್ಕಮಕ್ಕಳ ಥರಾ ಬಾಲಿಶವಾಗಿ ಮಾತನಾಡುವುದು ಸರಿಯಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಅಪ್ರಬುದ್ಧರ ಹೇಳಿಕೆಗೆ ಕಿವಿಗೊಡಬೇಕಾದ ಅಗತ್ಯ ಇಲ್ಲ ಮಾಜಿ ಸಚಿವ ಬಸವರಾಜ ರಾಯರಡ್ಡಿಯವರ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಹಾಲಪ್ಪ ಆಚಾರ್, ಅಪ್ರಬುದ್ಧವಾಗಿ ಮಾತನಾಡುವವರಿಗೆ ಏನೆಂದು ಪ್ರತಿಕ್ರಿಯೆ ನೀಡಲಿ? ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಜನಪರವಾಗಿ ಸ್ಪಂದಿಸಿದ್ದು ನಮ್ಮ ಬಿಜೆಪಿ ಸರಕಾರ. ಯಲಬುರ್ಗಾ ತಾಲೂಕಿನಲ್ಲಿ ನೀರಾವರಿ ಯೋಜನೆಗಳನ್ನು ತಂದದ್ದು ನಾನೇ ಎಂದು ಈಗಲೂ ಹೇಳಿಕೊಳ್ಳುತ್ತೇನೆ. ಈ ಹಿಂದೆ ಸಿದ್ದರಾಮಯ್ಯ ಸರಕಾರ ಇತ್ತು, ರಾಯರಡ್ಡಿಯವರೂ ಮಂತ್ರಿಯಾಗಿದ್ದರು. ನೀರಾವರಿ ಯೋಜನೆ ವಿಚಾರದಲ್ಲಿ ಅವರು ಕಿತ್ತು ಗುಡ್ಡೆ ಹಾಕಿರೋದು ಕ್ಷೇತ್ರದ ಜನರಿಗೆ ಗೊತ್ತಿದೆ. ರಾಜಕೀಯವಾಗಿ ಸಾಕಷ್ಟು ಅನುಭವ ಇದ್ದರೂ ರಾಯರಡ್ಡಿಯವರು ಅಪ್ರಬುದ್ಧನಂತೆ ಮಾತನಾಡುವುದು ಶೋಭೆಯಲ್ಲ. ನೀರಾವರಿ ವಿಚಾರಗಳಲ್ಲಿ ರಾಜಕಾರಣ ಬೆರೆಸಬಾರದು ಎಂದು ತೀಕ್ಷ್ಣವಾಗಿ ತಿವಿದರು.
ಒಟ್ಟಾರೆಯಾಗಿ ಮುಂಬರುವ ಚುನಾವಣೆಗೆ ಯಲಬುರ್ಗಾ ಕ್ಷೇತ್ರದಲ್ಲಿ ಈಗಿನಿಂದಲೇ ಸಿದ್ಧತೆ ಶುರುವಾದಂತೆ ಕಾಣಿಸುತ್ತಿದೆ. ಜೊತೆಗೆ ಕನಕಗಿರಿ ಕ್ಷೇತ್ರದಲ್ಲೂ ಮಾಜಿ ಸಚಿವ ಶಿವರಾಜ ತಂಗಡಗಿ ಮತ್ತು ಶಾಸಕ ಬಸವರಾಜ ದಢೇಸೂಗುರು ಮಧ್ಯೆ ಪ್ರಚಾರ-ಅಪಪ್ರಚಾರದ ಪೈಪೋಟಿ ಶುರುವಾಗಿದ್ದು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ ಎಂಬ ಮಾತಿದೆ. ಗಂಗಾವತಿ ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಇನ್ನೂ ರಾಜಕೀಯ ಚಟುವಟಿಕೆ ಗರಿಗೆದರಿಲ್ಲ
ವಿವಿಧ ವಸತಿ ಯೋಜನೆಯಡಿ ಗ್ರಾಮೀಣ ಪ್ರದೇಶಕ್ಕೆ ಗುರಿ ನಿಗದಿ, ಜ. 20ರೊಳಗಾಗಿ ಫಲಾನುಭವಿಗಳ ಆಯ್ಕೆ ಮಾಡುವಂತೆ ಸಿಇಒ ಸೂಚನೆ,
ಎಸ್ಸಿ, ಎಸ್ಟಿ ವರ್ಗಕ್ಕೆ 1007, ಅಲ್ಪಸಂಖ್ಯಾತರ ಹಾಗೂ ಸಾಮಾನ್ಯ ವರ್ಗದವರಿಗೆ 3,183 ಮನೆಗಳ ಗುರಿ
ವಿಜಯಸಾಕ್ಷಿ ವಿಶೇಷ, ಗದಗ:
ಬಹು ದಿನಗಳಿಂದ ವಸತಿ ಯೋಜನೆಯಡಿ ಹೊಸ ಮನೆಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದ ಜಿಲ್ಲೆಯ ಜನರು ಸ್ವಲ್ಪ ನಿಟ್ಟಿಸಿರು ಬಿಟ್ಟಿದ್ದಾರೆ. ಹೊಸ ಮನೆ ಕಟ್ಟಿಸಿಕೊಳ್ಳಬೇಕೆಂಬ ನಿರೀಕ್ಷೆಯಲ್ಲಿದ್ದ ನೂತನ ಫಲಾನುಭವಿಗಳಿಗೆ ಅಂತೂ ಇಂತೂ ಕಾಲ ಕೂಡಿ ಬಂದಿದೆ.
ಕಳೆದೆರಡು ವರ್ಷದಿಂದ ಹೊಸ ಮನೆ ಮಂಜೂರಿಗಾಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೇಡಿಕೆ ಹೆಚ್ಚಿತ್ತು. ಇದರಿಂದ ಕಳೆದೊಂದು ವರ್ಷದಿಂದ ಗ್ರಾಮ ಪಂಚಾಯತಿ ಸದಸ್ಯರ ಮೇಲೆ ಒತ್ತಡವಿತ್ತು. ರಾಜ್ಯ ಸರ್ಕಾರದ ಈ ನಿರ್ಧಾರ ಗ್ರಾಮೀಣ ಜನರ ಖುಷಿಗೆ ಕಾರಣವಾಗಿದೆ.
ರಾಜ್ಯ ಸರ್ಕಾರ ಘೋಷಿಸಿರುವ 5 ಲಕ್ಷ ಮನೆಗಳಲ್ಲಿ, ಗ್ರಾಮೀಣ ಭಾಗಕ್ಕೆ ಮೀಸಲಿರುವ 4 ಲಕ್ಷ ಮನೆಗಳ ಪೈಕಿ ಗದಗ ಜಿಲ್ಲೆಗೆ ವಿವಿಧ ವಸತಿ ಯೋಜನೆಯಡಿ 4,190 ಮನೆಗಳ ಗುರಿ ನಿಗದಿಪಡಿಸಿದ್ದು, ಆಯಾ ಗ್ರಾಮ ಪಂಚಾಯತಿ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಮನೆ ಹಂಚಿಕೆಯಾಗಲಿವೆ.
ಜಿಲ್ಲೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 1,007, ಬಸವ ವಸತಿ ಯೋಜನೆಯಡಿ 3,183 ಸೇರಿ ಒಟ್ಟು 4,190 ಮನೆಗಳ ಗುರಿ ನಿಗದಿಪಡಿಸಲಾಗಿದೆ. ಅದರಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿ 719, ಪರಿಶಿಷ್ಟ ಪಂಗಡ 291 ಮನೆಗಳು ನಿಗದಿಯಾಗಿವೆ. ಅದರಂತೆ, ಬಸವ ವಸತಿ ಯೋಜನೆಯಡಿ ಅಲ್ಪಸಂಖ್ಯಾತರಿಗೆ 419, ಸಾಮಾನ್ಯ ವರ್ಗದವರಿಗೆ 2,764 ಮನೆಗಳು ನಿಗದಿಯಾಗಿದೆ ಎಂದು ಜಿ.ಪಂ. ಸಿಇಒ ಭರತ್ ಕೆ. ಅವರು ತಿಳಿಸಿದ್ದಾರೆ.
ವಿಧಾನಸಭೆ ಕ್ಷೇತ್ರವಾರು ವಿವರ
ಗದಗ ವಿಧಾನಸಭಾ ಕ್ಷೇತ್ರದ 12 ಗ್ರಾ.ಪಂ.ಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 112, ಬಸವ ವಸತಿ ಯೋಜನೆಯಡಿ 348, ನರಗುಂದ ವಿಧಾನಸಭಾ ಕ್ಷೇತ್ರದ 35 ಗ್ರಾ.ಪಂ.ಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 288, ಬಸವ ವಸತಿ ಯೋಜನೆಯಡಿ 912, ರೋಣ ವಿಧಾನಸಭಾ ಕ್ಷೇತ್ರದ 39 ಗ್ರಾ.ಪಂ.ಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 320, ಬಸವ ವಸತಿ ಯೋಜನೆಯಡಿ 1,010 ಹಾಗೂ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ 36 ಗ್ರಾ.ಪಂ.ಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 287, ಬಸವ ವಸತಿ ಯೋಜನೆಯಡಿ 913 ಮನೆಗಳ ಗುರಿ ನಿಗದಿಯಾಗಿದೆ.
ಗ್ರಾ.ಪಂ. ಸದಸ್ಯನಾಗಿ ಒಂದು ವರ್ಷ ಕಳೆದರೂ ವಸತಿರಹಿತ ಕುಟುಂಬಗಳಿಗೆ ಸೂರು ಕಲ್ಪಿಸಿ ಕೊಡಲಾಗದೆ ತುಂಬಾ ನಿರಾಸೆಯಾಗಿತ್ತು. ಸದ್ಯ ನಮ್ಮ ಪಂಚಾಯತಿಗೆ 40 ಮನೆಗಳು ಬರಲಿದ್ದು, 22 ಸದಸ್ಯರ ಮಧ್ಯೆ ಹಂಚಿಕೆಯಾಗಿ ಪ್ರತಿ ಸದಸ್ಯರಿಗೆ ಕನಿಷ್ಠ 2 ಮನೆಗಳು ಬರಲಿವೆ. ಇದು ತೃಪ್ತಿದಾಯಕವಲ್ಲದಿದ್ದರೂ, ಸ್ವಲ್ಪ ಸಮಾಧಾನ ತರಿಸಿದೆ.
ಚಂದ್ರಶೇಖರ್ ಹರಿಜನ, ಗ್ರಾ.ಪಂ. ಸದಸ್ಯ
ಜಿಲ್ಲೆಯ 122 ಗ್ರಾ.ಪಂ.ಗಳಿಗೆ 4190 ಮನೆಗಳ ಗುರಿ ನಿಗದಿಯಾಗಿದ್ದು, ಜ.20ರೊಳಗಾಗಿ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳು ಅರ್ಹ ಫಲಾನುಭವಿಗಳನ್ನು ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡಬೇಕು.
ರಾಜ್ಯಾದ್ಯಂತ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಜಿಲ್ಲೆಯ ಕಂದಾಯ, ಪೊಲೀಸ್ ಹಾಗೂ ಇತರೆ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವುದರ ಮೂಲಕ ರಾತ್ರಿ ಹಾಗೂ ವಾರಾಂತ್ಯದ ಕರ್ಪ್ಯೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.
ಜಿಲ್ಲಾಡಳಿತ ಭವನದ ವಿಡಿಯೋ ಸಂವಾದ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಕೋವಿಡ್ ಸೋಂಕು ನಿಯಂತ್ರಣ ಹಾಗೂ ಕಠಿಣ ಮಾರ್ಗಸೂಚಿಗಳ ಅನುಷ್ಠಾನ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೋಂಕು ನಿಯಂತ್ರಣದಲ್ಲಿ ವಿವಿಧ ಇಲಾಖೆಗಳು ಪ್ರಮುಖವಾಗಿ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮುಂಚೂಣಿಯಲ್ಲಿ ನಿಂತು ಪರಸ್ಪರ ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸಬೇಕು. ತಾಲೂಕಾಡಳಿತ ಹಾಗೂ ಸ್ಥಳೀಯ ಆಡಳಿತಗಳು ಸೋಂಕಿನ ಹತೋಟಿಗೆ ಮಾರ್ಗಸೂಚಿಗಳ ಪಾಲನೆ ಸರಿಯಾಗಿ ಅನುಷ್ಠಾನಗೊಳಿಸಬೇಕೆಂದು ಸೂಚಿಸಿದರು.
ಜ.19ರವರೆಗೆ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕರ್ಪ್ಯೂ ಹಾಗೂ ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗಿನ 5ರವರೆಗೆ ವಾರಾಂತ್ಯದ ಕರ್ಪ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಸರ್ಕಾರ ಜಾರಿಗೊಳಿಸಿರುವ ಪರಿಷ್ಕೃತ ಮಾರ್ಗಸೂಚಿಗಳು ಪಾಲನೆಯಾಗುವಂತೆ ನಿಗಾವಹಿಸಬೇಕು. ಮಾರ್ಗಸೂಚಿ ಉಲ್ಲಂಘಿಸುವವರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯ ಎಲ್ಲ ಸಾರ್ವಜನಿಕ ಉದ್ಯಾನಗಳು ಸ್ತಬ್ಧವಾಗಿರಲಿವೆ. ಮಾಹಿತಿ ತಂತ್ರಜ್ಞಾನ ಉದ್ಯಮ ಒಳಗೊಂಡಂತೆ ಎಲ್ಲ ಉದ್ಯಮ ಕ್ಷೇತ್ರಗಳಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಿದೆ. ನೌಕರರು ಆಯಾ ಸಂಘ/ಸಂಸ್ಥೆಗಳು ನೀಡುವ ಅಧಿಕೃತ ಗುರುತಿನ ಚೀಟಿ ಹಾಜರುಪಡಿಸಿ ಸಂಚರಿಸಬಹುದು. ಇನ್ನು ತುರ್ತು ಚಿಕಿತ್ಸೆಗಾಗಿ ಅಗತ್ಯವಿರುವ ರೋಗಿಗಳು, ಅವರ ಪರಿಚಾರಕರು/ವ್ಯಕ್ತಿಗಳಿಗೆ ಮತ್ತು ಲಸಿಕೆ ಹಾಕಿಸಿಕೊಳ್ಳಲು ಉದ್ದೇಶಿಸಿರುವ ವ್ಯಕ್ತಿಗಳಿಗೆ ಕನಿಷ್ಠ ರುಜುವಾತನ್ನು ಹಾಜರುಪಡಿಸಿ ಓಡಾಡಬಹುದು.
ವೀಕೆಂಡ್ ಕರ್ಪ್ಯೂ ವೇಳೆ ಆಹಾರ, ದಿನಸಿ, ಹಣ್ಣು ಮತ್ತು ತರಕಾರಿಗಳು, ಡೈರಿ ಮತ್ತು ಹಾಲಿನ ಬೂತ್ಗಳು, ಮಾಂಸ ಮತ್ತು ಮೀನು, ಪಶು ಆಹಾರದ ಅಂಗಡಿಗಳು ಕಾರ್ಯ ನಿರ್ವಹಿಸಲಿವೆ. ಬೀದಿ ಬದಿ ವ್ಯಾಪಾರಿಗಳಿಗೆ ಅನುಮತಿ ಇರಲಿದೆ. ಸಾರ್ವಜನಿಕ ವಿತರಣೆಯ ನ್ಯಾಯಬೆಲೆ ಅಂಗಡಿಗಳು ತೆರೆದಿರಲಿವೆ. ಜನರ ಅನಗತ್ಯ ಓಡಾಡಕ್ಕೆ ಕಡಿವಾಣ ಹಾಕುವುದಕ್ಕಾಗಿ (ಹೋಮ್ ಡಿಲೆವರಿ) ಪ್ರೋತ್ಸಾಹಿಸಬೇಕು. ರೆಸ್ಟೋರೆಂಟ್, ಹೋಟೆಲ್ಗಳಲ್ಲಿ ಪಾರ್ಸೆಲ್ಗೆ ಅವಕಾಶ ಇರಲಿದೆ.
ವಾರಾಂತ್ಯದ ಕರ್ಪ್ಯೂ ವೇಳೆಯಲ್ಲಿ ಬರುವ ಸಂತೆಗಳನ್ನು ಸಾಧ್ಯವಾದಷ್ಟು ಮುಂದೂಡಬೇಕು. ಇಲ್ಲವಾದಲ್ಲಿ ವಿಶಾಲವಾದ ಮೈದಾನಕ್ಕೆ ವರ್ಗಾಯಿಸಿ ಕೋವಿಡ್ ಮಾರ್ಗಸೂಚಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಅಗತ್ಯ ಸೇವೆಗಳ ಅಂಗಡಿ ಮುಂಗ್ಗಟ್ಟುಗಳಲ್ಲಿ ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಮಾಸ್ಕ ಧರಿಸಿ ಆಗಮಿಸುವಂತೆ ಅಳವಡಿಸಲು ತಿಳಿಸಿ ಸಾಮಾಜಿಕ ಅಂತರ ಪಾಲನೆಯಾಗುವಂತೆ ನೋಡಿಕೊಳ್ಳಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿವಪ್ರಕಾಶ ಅವರು ಮಾತನಾಡಿ, ಗದಗ ನಗರದ ಸುತ್ತಲಿನ ಪ್ರಮುಖ ಪ್ರವೇಶ ರಸ್ತೆಗಳಲ್ಲಿ ಚೆಕ್ಪೋಸ್ಟ್ ತೆರೆಯುವ ಮೂಲಕ ಅನಗತ್ಯ ಸಾರ್ವಜನಿಕರ ಸಂಚಾರವನ್ನು ತಡೆಯಬೇಕು. ಸಂಚಾರಿ ದಳಗಳ ವಾಹನಗಳ ಮೂಲಕ ಅಲ್ಲಲ್ಲಿ ಅನಗತ್ಯ ಜನ ಸಂಚಾರವನ್ನು ನಿಯಂತ್ರಿಸಬೇಕು. ಬೀಟ್ ಪೊಲೀಸರು ಪ್ರತಿದಿನ ಜನಜಂಗುಳಿ ಸೇರುವ ಪ್ರದೇಶಗಳ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ತಿಳಿಸುವ ಮೂಲಕ ನಿಯಂತ್ರಿಸಲು ಸೂಕ್ತ ಕ್ರಮ ವಹಿಸಬೇಕು. ತಾಲೂಕುಗಳಲ್ಲಿ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಒಟ್ಟಿಗೆ ಕಾರ್ಯಾಚರಣೆ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆಯ ಮುಖ್ಯಸ್ಥರು ಆಯಾ ತಾಲೂಕಿನ ತಹಶೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಎಂದಿನಂತೆ ಬಸ್ ಸಂಚಾರ
ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿದ್ದರೂ ಎಂದಿನಂತೆ ಬಸ್ ಸಂಚಾರ ಇರಲಿದೆ. ಪ್ರಯಾಣಿಕರ ಸಂಖ್ಯೆ ವಿರಳವಿದ್ದಲ್ಲಿ, ಪ್ರಯಾಣಿಕರೇ ಇರದಿದ್ದಲ್ಲಿ ಆ ಮಾರ್ಗದಲ್ಲಿ ಸಂಚಾರ ಇರುವುದಿಲ್ಲ. ಒಟ್ಟು ಜಿಲ್ಲೆಯಲ್ಲಿ 483 ಬಸ್ಗಳಿದ್ದು ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಸ್ ಸಂಚಾರ ಇರಲಿದೆ. ಅಲ್ಲದೇ, ಗ್ರಾಮೀಣ ಪ್ರದೇಶಗಳಲ್ಲಿ ಎಂದಿನಂತೆ ಬಸ್ ಸಂಚರಿಸಲಿವೆ ಎಂದು ಕೆಎಸ್ಆರ್ಟಿಸಿ ಡಿಸಿ ಎಫ್.ಸಿ.ಹಿರೇಮಠ ಅವರು ವಿಜಯಸಾಕ್ಷಿಗೆ ತಿಳಿಸಿದರು.
ಇತ್ತೀಚೆಗೆ ನಡೆದ ಗದಗ -ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಸದಸ್ಯರು, ಪರಾಜಿತಗೊಂಡ ಅಭ್ಯರ್ಥಿಗಳು ಹಾಗೂ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಓಡಾಡಿ ಕೆಲಸ ಮಾಡಿದ ಮುಖಂಡರು, ಕಾರ್ಯಕರ್ತರಿಗೆ ಪ್ರವಾಸ ಭಾಗ್ಯ ದೊರೆತಿದೆ.
ಹೌದು, ಬಿಜೆಪಿಯ ಗೆದ್ದ 18 ಸದಸ್ಯರು, ಪರಾಜಿತಗೊಂಡ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಸುಮಾರು 70 ಜನರು ಅಸ್ಸಾಂನತ್ತ ಪ್ರಯಾಣ ಬೆಳೆಸಿದ್ದಾರೆ. 15 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಆಪರೇಷನ್ ಹಸ್ತ ನಡೆಸಬಹುದು ಎಂಬ ಕಾರಣಕ್ಕೆ ತಮ್ಮವರನ್ನು ತಮ್ಮ ಬಳಿಯೇ ಸೇಫ್ ಆಗಿಟ್ಟುಕೊಳ್ಳಲು ಗುರುವಾರ (ಜ.6) ರಾತ್ರಿ ಲಗ್ಝುರಿ ಬಸ್ ಮೂಲಕ ಬೆಂಗಳೂರಿಗೆ ಹೋಗಿದ್ದಾರೆ. ಶುಕ್ರವಾರ ಬೆಳಗ್ಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಅಸ್ಸಾಂಗೆ ಹಾರಿದ್ದಾರೆ.
ನಗರಸಭೆ ಸದಸ್ಯರಾದ ಚಂದ್ರಶೇಖರ ತಡಸದ, ವಿನಾಯಕ ಮಾನ್ವಿ, ಶ್ವೇತಾ ದಂಡಿನ, ಗೂಳಪ್ಪ ಮುಶಿಗೇರಿ, ಅನಿಲ ಅಬ್ಬಿಗೇರಿ, ಪ್ರಕಾಶ್ ಅಂಗಡಿ, ಮಾಧುಸಾ, ಬಾಕಳೆ ಮುಖಂಡರಾದ ಎಂ.ಎಸ್.ಕರಿಗೌಡ್ರ, ಪ್ರಶಾಂತ ನಾಯ್ಕರ, ಮಹೇಶ ದಾಸರ, ವಿಜಯಲಕ್ಷ್ಮೀ, ಸೇರಿದಂತೆ ಅನೇಕರು ಶುಕ್ರವಾರ ಮಧ್ಯಾಹ್ನ ಅಸ್ಸಾಂಗೆ ತೆರಳಿದ್ದಾರೆ.
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಶನಿವಾರ (ಜ.8) ರಂದು ಚುನಾವಣಾ ನೋಟಿಫಿಕೇಷನ್ ಆಗುವ ಸಂಭವವಿದೆ. ಬಹುತೇಕ ಸೋಮವಾರ ಅಥವಾ ಮಂಗಳವಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಈ ಬೆನ್ನಲ್ಲೆ ಬಿಜೆಪಿ ರೆಸಾರ್ಟ್ ರಾಜಕಾರಣದತ್ತ ಮುಖ ಮಾಡಿರುವುದು ಗದಗ-ಬೆಟಗೇರಿ ಅವಳಿ ನಗರ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಚುನಾವಣೆಯಲ್ಲಿ ವಿಫ್ ಜಾರಿಗೊಳಿಸಿ ನಗರಸಭೆಯಲ್ಲಿ ತನ್ನ ಅಧಿಕಾರ ಸ್ಥಾಪಿಸಲು ಶತಾಯ-ಗತಾಯ ಪ್ರಯತ್ನ ನಡೆಸಿದ್ದು, ಕಾಂಗ್ರೆಸ್ ಪಕ್ಷದ ಆಶಾಭಾವನೆಗೆ ತಣ್ಣೀರು ಎರಚಿದಂತಾಗಿದೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೋಜು ಮಸ್ತಿ ಬೇಕಿತ್ತೆ ಎಂಬ ಮಾತುಗಳು ಅವಳಿ ನಗರದಲ್ಲಿ ಕೇಳಿ ಬರುತ್ತಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ, ನಾವು ಯಾವುದೇ ಮೋಜು-ಮಸ್ತಿ ಮಾಡಲು ಬಂದಿಲ್ಲ. ಹರಕೆ ತೀರಿಸಲು ದೇವಸ್ಥಾನಕ್ಕೆ ಬಂದಿದ್ದೇವೆ. ಕಾಮಾಕ್ಯದೇವಿಯ ದರ್ಶನ ಪಡೆದು ಭಾನುವಾರ ಗದಗ ನಗರಕ್ಕೆ ಬರ್ತೀವಿ ಎಂದು ಸ್ಪಷ್ಟಪಡಿಸಿದರು.