Home Blog Page 3247

ಹಣಕಾಸಿನ‌ ವಿಚಾರ; ಮಾರಕಾಸ್ತ್ರಗಳಿಂದ ಹೊಡೆದಾಟ; ಏಳು ಜನರಿಗೆ ಗಾಯ, ಹೊಡೆದಾಟದ ವಿಡಿಯೋ ವೈರಲ್…!

ಹಳೆಯ ದ್ವೇಷವೂ ಕಾರಣ…..! ದೂರು, ಪ್ರತಿದೂರು ದಾಖಲು…

ವಿಜಯಸಾಕ್ಷಿ ಸುದ್ದಿ, ಗದಗ

ಹಣಕಾಸಿನ ‌ವಿಚಾರವಾಗಿ ನಡೆದ ಎರಡು ಕುಟುಂಬಗಳ ನಡುವಿನ ಕಲಹ ವಿಕೋಪಕ್ಕೆ ಹೋಗಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಿನ್ನೆ ರಾತ್ರಿ ಮೈನುದ್ದೀನ ತಹಸೀಲ್ದಾರ ಹಾಗೂ ಸಬೀಲ ಬಂಕಾಪೂರ ನಡುವೆ ಹಣಕಾಸಿನ ವಿಚಾರವಾಗಿ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ಹೋಗಿ ಹೊಡೆದಾಡಿಕೊಂಡಿದ್ದಾರೆ.

ಮೈನುದ್ದೀನ ತಹಸೀಲ್ದಾರ ಹಾಗೂ ಸಬೀಲ ಬಂಕಾಪೂರ ಇವರ ನಡುವೆ ಲಕ್ಷ್ಮೇಶ್ವರದ ಬಸ್ ನಿಲ್ದಾಣ ಬಳಿ ಮೈನುದ್ದೀನ ಈತನು ಸಬೀಲನಿಗೆ ಕೊಟ್ಟ ದುಡ್ಡುನ್ನು ಮರಳಿ ಕೇಳಿದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗಿದೆ.

ಹಲ್ಲೆಗೊಳಗಾದ ಮೈನುದ್ದೀನ ಲಕ್ಷ್ಮೇಶ್ವರದ ಸರಕಾರಿ ಆಸ್ಪತ್ರೆಗೆ ಹೋದಾಗ ಸಬೀಲ ಬಂಕಾಪೂರನ ಸಂಬಂಧಿಕರಾದ ನೌಶಾದ್ ಮೈನುದ್ದೀನ ಆಡೂರ, ಅಬ್ದುಲ್ ಅಲಿಯಾಸ್ ಅಬ್ದುಲ್ ರಜಾಕ್ ಮೈನುದ್ದೀನ ಆಡೂರು, ಇಸ್ಮಾಯಿಲ್ ಆಡೂರ, ಅತ್ತಾರ ಅಲಿಯಾಸ್ ಅಬ್ದುಲ್ ಸತ್ತಾರ ಆಡೂರ, ಸುಲೇಮಾನ್ ಆಡೂರ ಸೇರಿದಂತೆ ಇನ್ನೂ ಅನೇಕರು ಮತ್ತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಕೈಯಲ್ಲಿ ರಾಡ್, ಚಾಕು ಹಾಗೂ ಬಡಿಗೆಗಳಿಂದ ಮೈನುದ್ದೀನ ಹಾಗೂ ಆತನ ಸಹೋದರರಾದ ಇರ್ಫಾನ್, ಶಾಬುದ್ದೀನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, 0109/2023 ಕಲಂ 143,147,148, 323,307, 504, ರೆ.ವಿ 149 IPC ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿದೂರು ದಾಖಲು

ಹಳೆಯ ದ್ವೇಷ ಸಾಧಿಸುತ್ತಾ ಬಂದಿರುವ ಶಾಬುದ್ದೀನ ತಂದೆ ಮಲಿಕಸಾಬ ತಹಶೀಲ್ದಾರ, ಮೈನುದ್ದೀನ ತಹಶೀಲ್ದಾರ, ಇರ್ಫಾನ್ ತಹಶೀಲ್ದಾರ, ಬರಕತ್ ಅಲಿ ಡೋಂಗರಿ‌ ಮುಳಗುಂದ, ಮಕ್ಬೂಲಸಾಬ ಮುಳಗುಂದ ಹಾಗೂ ಇತರರು ಸೇರಿ ನಮ್ಮ ಜೊತೆಗೆ ಆಗಾಗ ತಂಟೆ ತಕರಾರು ದ್ವೇಷ ಇಟ್ಟುಕೊಂಡು ಶುಕ್ರವಾರ ರಾತ್ರಿ ಲಕ್ಷ್ಮೇಶ್ವರದ ಸರಕಾರಿ ಆಸ್ಪತ್ರೆ ಎದುರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ್ದಾರೆ ಎಂದು ನೌಶಾದ್ ತಂದೆ ಮೈನುದ್ದೀನ ಆಡೂರ ಎಂಬುವರು ದೂರು ನೀಡಿದ್ದು, 0110/2023, ಕಲಂ 143, 147,148,323,324, 307, 504, ರೆ.ವಿ 149 IPC ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ನಿಲ್ದಾಣದ ಬಳಿ ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಹೊಡೆದಾಟದ ದೃಶ್ಯ ನೋಡಿ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇನ್ನೂ ಹೊಡೆದಾಟದಲ್ಲಿ ಗಾಯಗೊಂಡ ಕೆಲವರು ಚಿಕಿತ್ಸೆಗಾಗಿ ಲಕ್ಷ್ಮೇಶ್ವರ ಸರಕಾರಿ ಆಸ್ಪತ್ರೆಗೆ ದಾಖಲಾದರೆ, ಇನ್ನುಳಿದ ಕೆಲವರು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಡಿಮೆ ಪರಿಹಾರ ನೀಡಿದ ವಿಮಾ ಕಂಪನಿಗೆ ದಂಡ; ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಆದೇಶ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ತಾಲೂಕಿ ಗ್ರಾಮಗಳ ರೈತರು 2016-17ನೇ ಹಿಂಗಾರು ಹಂಗಾಮಿನಲ್ಲಿ ಖುಷ್ಕಿ ಜಮೀನುಗಳಲ್ಲಿ ಬೆಳೆದ ಜೋಳ ಮತ್ತು ಕಡಲೆ ಬೆಳೆಗಳಿಗೆ ವಿಮೆ ಮಾಡಿಸಿದ್ದರು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ವಿಮೆ ಹಣದೊಂದಿಗೆ ಅರ್ಜಿ ಸಲ್ಲಿಸಿದ್ದರು. ಆ ಅವಧಿಯಲ್ಲಿ ಸರಿಯಾಗಿ ಮಳೆ ಬಾರದೆ ಬೆಳೆಗಳು ಒಣಗಿ ಫಸಲು ಬಾರದೆ ನಷ್ಟ ಉಂಟಾಗಿತ್ತು.

ಅನೇಕ ಸಲ ಸಂಬಂಧಪಟ್ಟ ಇಲಾಖೆಗಳಲ್ಲಿ ವಿಮಾ ಪರಿಹಾರ ಕೊಡಲು ಕೋರಿದರೂ ಪರಿಹಾರ ನೀಡಿರಲಿಲ್ಲ. ರೈತರು ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದಾಗ, ಜಿಲ್ಲಾಡಳಿತ ರೈತರಿಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿತ್ತು. ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆಯ ಆಯುಕ್ತರು ಇವರಿಗೆ ಖುಷ್ಕಿ ಜಮೀನಿನಲ್ಲಿ ಬೆಳೆದ ಬೆಳೆಗಳು ಮಳೆ ಬಾರದೆ ಹಾನಿಯಾಗಿರುವುದರಿಂದ ರೈತರಿಗೆ ಪರಿಹಾರ ಕೊಡಲು ಪತ್ರ ಬರೆದಿದ್ದರು.

ಕೃಷಿ ವಿಮಾ ಕಂಪನಿಯವರು ಮೂರು ವರ್ಷಗಳ ನಂತರ 2019ರಲ್ಲಿ ರೈತರ ಬ್ಯಾಂಕ್ ಖಾತೆಗೆ ನೀರಾವರಿ ಬೆಳೆ ನಷ್ಟ ಆದ ಬಗ್ಗೆ ಹಣ ಜಮಾ ಮಾಡಿದ್ದರು. ರೈತರು ಖುಷ್ಕಿ ಜಮೀನಿಗೆ ವಿಮೆ ಹಣ ಪಾವತಿ ಮಾಡಿದ್ದರೂ ಸಹ, ಬ್ಯಾಂಕಿನವರು ನೀರಾವರಿ ಬೆಳೆಯ ವಿಮೆ ಹಣ ಅಂತಾ ನಿರ್ಲಕ್ಷ್ಯದಿಂದ ತಪ್ಪು ದಾಖಲು ಮಾಡಿ ವಿಮಾ ಕಂಪನಿಗೆ ಕಳಿಸಿದ್ದು, ವಿಮಾ ಕಂಪನಿ ದಾಖಲೆಗಳನ್ನು ಪರಿಶೀಲಿಸದೆ, ನೀರಾವರಿ ಬೆಳೆ ನಷ್ಟ ಅಂತಾ ಕಡಿಮೆ ಹಣ ಜಮಾ ಮಾಡಿ ಸೇವಾ ನ್ಯೂನತೆ ಎಸಗಿದ್ದಾರೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಆಯೋಗದ ಅಧ್ಯಕ್ಷ ಡಿ ವಾಯ್ ಬಸಾಪುರ, ಸದಸ್ಯರಾದ ರಾಜು ನಾಮದೇವ ಮೇತ್ರಿ ಹಾಗೂ ಯಶೋಧಾ ಭಾಸ್ಕರ ಪಾಟೀಲರನ್ನು ಒಳಗೊಂಡ ಪೀಠವು ಸುದೀರ್ಘ ವಿಚಾರಣೆ ಮಾಡಿ, ರೈತರು ಹಾಜರುಪಡಿಸಿದ ಪಹಣಿಗಳನ್ನು ಹಾಗೂ ಜಿಲ್ಲಾಧಿಕಾರಿಗಳು ಸಲ್ಲಿಸಿದ ವರದಿಯನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನವರು ಮತ್ತು ಕೃಷಿ ವಿಮಾ ಕಂಪನಿಯವರು ಕೂಲಂಕುಷವಾಗಿ ಪರಿಶೀಲಿಸಿ ಖುಷ್ಕಿ ಬೆಳೆಗಳಿಗೆ ವಿಮಾ ಪರಿಹಾರ ನೀಡದೆ, ನೀರಾವರಿ ಬೆಳೆಗೆ ಕಡಿಮೆ ಹಣ ನೀಡಿ ಸೇವಾನ್ಯೂನತೆ ಎಸಗಿದ್ದು ಸಾಬೀತಾಗಿದೆ ಎಂದು ತೀರ್ಪು ನೀಡಿದ್ದು, ರೈತರಿಗೆ ಖುಷ್ಕಿ ಬೆಳೆಗಳ ಹಾನಿಯಾದ ಬಗ್ಗೆ ಪರಿಹಾರ ಕೊಡಲು ಆದೇಶಿಸಿದೆ.

ರೈತರ ಖಾತೆಗೆ ಈಗಾಲೇ ಜಮಾ ಮಾಡಿದ ಹಣ ವಜಾ ಮಾಡಿ ಉಳಿದ ಹಣವನ್ನು ಎರಡು ತಿಂಗಳ ಒಳಗಾಗಿ ಕೊಡಲು ಆದೇಶಿಸಿದೆ. ದೂರುದಾರರು ಆಯೋಗಕ್ಕೆ ಅಲೆದಾಡಿ ಮಾನಸಿಕ ಹಿಂಸೆ ಅನುಭವಿಸಿದ್ದರಿಂದ, 5 ಸಾವಿರ ರೂ.ಗಳ ಹೆಚ್ಚಿನ ಪರಿಹಾರ ಹಾಗೂ ಪ್ರಕರಣದ ಖರ್ಚು 2 ಸಾವಿರ ರೂ.ಗಳನ್ನು ಕೊಡಲು ಆದೇಶ ಮಾಡಿದೆ.

ಪೊಲೀಸರ ಕಾರ್ಯಾಚರಣೆ; ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಹನ್ನೊಂದು ಜನರ ಬಂಧನ

65ಸಾವಿರ ಹಣ ಜಪ್ತಿ…..

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಸಾರ್ವಜನಿಕ ರಸ್ತೆಯ ಮೇಲೆ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಹನ್ನೊಂದು ಜನರ ತಂಡದ ಮೇಲೆ ಬಡಾವಣೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಇಲ್ಲಿನ ಪಂಚಾಕ್ಷರಿ ನಗರದ 3ನೇ ಕ್ರಾಸ್ ಹತ್ತಿರ ಬನ್ನಿಕಟ್ಟಿ ಸಮೀಪ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಗದಗ ತಾಲೂಕಿನ ಮದಗಾನೂರು ಗ್ರಾಮದ ಬಸವರಾಜ್ ನೀಲಕಂಠಪ್ಪ ಓಲೇಕಾರ, ಬೆಳಹೋಡ ಗ್ರಾಮದ ಪಡಿಯಪ್ಪಗೌಡ ನಿಂಗನಗೌಡ ಫಕೀರಗೌಡ್ರ, ಹಿರೇಹಂದಿಗೋಳದ ಚನ್ನಪ್ಪ ದೇವಪ್ಪ ಆರಟ್ಟಿ, ರುದ್ರಪ್ಪ ಹನಮಪ್ಪ ತಳವಾರ, ಬಿಂಕದಕಟ್ಟಿಯ ರಮೇಶ್ ವೆಂಕಪ್ಪ ಮೂಲಿಮನಿ, ಚಂದ್ರಪ್ಪ ದುರಗಪ್ಪ ದೊಡಮನಿ, ಹುಲಕೋಟಿಯ ಶಂಕ್ರಪ್ಪ ಹನಮಂತಪ್ಪ ಮುಳಗುಂದ, ಶಿವಾನಂದ ರಾಮಪ್ಪ ಕವಡಿಕಾಯಿ, ರಾಜು ಗೋವಿಂದಗೌಡ ಜಲರಡ್ಡಿ, ಹುಬ್ಬಳ್ಳಿಯ ನವನಗರದ ಸಿಟಿ ಪಾರ್ಕ್‌ನ ಅನಿಲಸಿಂಗ್ ಅಶೋಕಸಿಂಗ್ ಸಮೋರೆ, ಕೊಂಡಿಕೊಪ್ಪದ ತಿಪ್ಪನಗೌಡ ಭೀಮನಗೌಡ ಶೇಷನಗೌಡ ಬಂಧಿತರು.

ಬಂಧಿತರಿಂದ 62ಸಾವಿರದ 260 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಟಗೇರಿ ಸಿಪಿಐ ಬಿ.ಜಿ ಸುಬ್ಬಾಪೂರಮಠ ಹಾಗೂ ಸಿಬ್ಬಂದಿ ಈ ದಾಳಿ ಮಾಡಿದ್ದರು.
ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ 0060/2023, Karnataka police act, 1963(U/s-87) ದಾಖಲಾಗಿದೆ.

ಕುಟುಂಬ ಕಲಹ; ಚಾಕುವಿನಿಂದ ಇರಿದು ಪತ್ನಿಯ ಭೀಕರ ಕೊಲೆ, ಆರೋಪಿ ಪೊಲೀಸರ ವಶಕ್ಕೆ….!

ಜಮೀನಿನಲ್ಲಿ ನಡೆದ ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯ…… ಪೊಲೀಸರ ಭೇಟಿ, ಪರಿಶೀಲನೆ…

ವಿಜಯಸಾಕ್ಷಿ ಸುದ್ದಿ, ರೋಣ

ಕುಟುಂಬ ಕಲಹದ ಹಿನ್ನೆಲೆಯಲ್ಲಿ ಪತಿ ಮಹಾಶಯನೊಬ್ಬ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಜರುಗಿದೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಬಾಚಲಾಪೂರ ಗ್ರಾಮದ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಸಂಗೀತಾ (32) ಕೊಲೆಯಾದ ದುರ್ಧೈವಿ ಮಹಿಳೆಯಾಗಿದ್ದಾಳೆ.

ಮಹೇಶ್ ಪಾಟೀಲ ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪಿ ಪತಿ.

ಕಳೆದ ಹನ್ನೆರಡು ವರ್ಷಗಳ ಹಿಂದೆ ಸಂಗೀತಾ ಹಾಗೂ ಮಹೇಶ್ ಪಾಟೀಲನ ಮದುವೆಯಾಗಿತ್ತು.‌ ದಂಪತಿಗೆ ಮೂವರು ಮಕ್ಕಳು ಇದ್ದಾರೆ.

ಮುಂಜಾನೆ ಮಕ್ಕಳ ಸಮೇತ ಪತ್ನಿಯನ್ನು ಜಮೀನಿಗೆ ಕರೆದುಕೊಂಡು ಹೋಗಿದ್ದ ಆರೋಪಿ ಮಹೇಶ್, ಪತ್ನಿ ಜೊತೆಗೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ಹೋಗಿ ಚಾಕುವಿನಿಂದ ಹೊಟ್ಟೆಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಇದರಿಂದಾಗಿ ಮಕ್ಕಳು, ಪತ್ನಿ ಸಂಗೀತಾ ಜೋರಾಗಿ ಕಿರಚಾಡಿದ್ದಾರೆ. ಇದರಿಂದ ಅಕ್ಕಪಕ್ಕದಲ್ಲಿ ಇದ್ದ ಜನ ಬಂದು ಸಂಗೀತಾಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈದ್ಯರು ಪರೀಕ್ಷಿಸಿದಾಗ ಅದಾಗಲೇ ಸಂಗೀತಾ ಮೃತಪಟ್ಟಿದ್ದಾಳೆ.

ಸುದ್ದಿ ತಿಳಿದು ರೋಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಆರೋಪಿ ಮಹೇಶನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೇಸ್ಬುಕ್ ಜಾಹೀರಾತು ನೋಡಿ ಹಣ ಕಳೆದುಕೊಂಡ ವರ್ತಕ…!

ವಿಜಯಸಾಕ್ಷಿ ಸುದ್ದಿ, ಗದಗ

ಫೇಸ್‌ಬುಕ್‌ ನಲ್ಲಿ ನೋಡಿದ ಜಾಹೀರಾತಿಗೆ ಮರಳಾದ ವರ್ತಕನೊಬ್ಬ ಸುಮಾರು 70 ಸಾವಿರ ರೂ. ಕಳೆದುಕೊಂಡು ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.

ಇಲ್ಲಿನ ಹೊಸ ಬಸ್ ನಿಲ್ದಾಣ ಬಳಿಯ ನಿವಾಸಿ ವಿನಾಯಕ ಮಾರುತಿ ಮೇದಾರ ಎಂಬವರು ಫೇಸ್‌ಬುಕ್‌ ನಲ್ಲಿ PVC PIPE MANUFACTURING ಅಂತ ಆಶೀರ್ವಾದ ಎಂಬ ಕಂಪನಿಯ ಮೂರು ಲೇಯರ್ 300,500,750,1000 ಲೀಟರ್ ಗಳ ಸಿಂಟೆಕ್ಷ್ ಬಗ್ಗೆ ಪ್ರತಿ ಲೀಟರ್ ಗೆ 3 ರೂ. ಹಾಗೂ ಸಂಪರ್ಕಿಸಲು 9348770986 ಹಾಕಿದ್ದ ಜಾಹೀರಾತು ನೋಡಿ, ಪಿ ವಿನಾಯಕ ಆ ನಂಬರ್ ಗೆ ಸಂಪರ್ಕಿಸಿದಾಗ, ಆರೋಪಿತರು ಆರ್ಡರ್ ಮಾಡಲು ಹೇಳಿ, ಒಟ್ಟು 38 ಸಿಂಟೆಕ್ಸ್ ಗಳ ಮೊತ್ತ 70,500/ ರೂ. ಗಳ ಬಿಲ್ ವಾಟ್ಸಾಪ್ ನಲ್ಲಿ ಕಳುಹಿಸಿ, ಆ ಹಣವನ್ನು ಖಾತೆ ನಂಬರ್-50100635715242, ifsc ನಂ.HDFC0005460 ಈ ಅಕೌಂಟ್ ಗೆ ಹಾಕಿಸಿಕೊಂಡು ಸಿಂಟೆಕ್ಸ್ ಗಳನ್ನು ಕಳುಹಿಸಿದೆ ಹಣವನ್ನು ಮರಳಿ ಕೊಡದೆ ಫಿರ್ಯಾದಿ ಮೊಬೈಲ್ ನಂಬರ್ ಬ್ಲಾಕ್ ಮಾಡಿ ಮೋಸ ಮಾಡಿದ್ದಾರೆ.

ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ 0059/2023, INFORMATION TECHNOLOGY ACT 2008(U/s-66(D) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನಿಧಾನಗತಿಯಲ್ಲಿ ಗ್ರಾಮ ಪಂಚಾಯತಿ ಕಟ್ಟಡ ಕಾಮಗಾರಿ; ಸಚಿವ ಎಚ್. ಕೆ .ಪಾಟೀಲ ಅಸಮಾಧಾನ

ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಕಾಲಮಿತಿಯೊಳಗೆ ಕಟ್ಟಡ ಪೂರ್ಣಗೊಳಿಸಲು ತಾಕೀತು…..

ವಿಜಯಸಾಕ್ಷಿ ಸುದ್ದಿ, ಗದಗ

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರಿಂದ ಭಾನುವಾರದಂದು ಹುಲಕೋಟಿಯಲ್ಲಿ ನಿರ್ಮಿಸಲಾಗುತ್ತಿರುವ ನೂತನ ಗ್ರಾಮ ಪಂಚಾಯತ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದರು.

ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಹಾಗೂ ಕಾಮಗಾರಿಯು ಸಂಪೂರ್ಣವಾಗಿ ಗುಣಮಟ್ಟದ ಸಾಮಗ್ರಿಗಳನ್ನು ಬಳಸುವ ಮೂಲಕ ಉತ್ತಮವಾಗಿ ನಿರ್ಮಾಣವಾಗುಬೇಕು ಎಂದು ಸಂಬಂಧಿತ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಹುಲಕೋಟಿ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.

ಅಯ್ಯೋ ದುರ್ವಿಧಿಯೇ, ಮೊಹರಂ ಹಬ್ಬದಲ್ಲಿ ಇಬ್ಬರ ದರ್ಮರಣ; ಹೆಜ್ಜೆ ಹಾಕುತ್ತಲೇ ಕುಸಿದು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಸಾವು, ಮತ್ತೊಬ್ಬ ಅಲಿದೇವರು ಹೊತ್ತಾಗಲೇ ಸಾವು…..

ಗ್ರಾಮದಲ್ಲಿ ಸೂತಕದ ಛಾಯೇ….

ವಿಜಯಸಾಕ್ಷಿ ಸುದ್ದಿ, ಗದಗ

ತ್ಯಾಗ ಮತ್ತು ಬಲಿದಾನದ ಸಂಕೇತವಾದ ಮೊಹರಂ ಹಬ್ಬದಲ್ಲಿ ಪ್ರತ್ಯೇಕ ಗ್ರಾಮಗಳಲ್ಲಿ ಇಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ದಾರುಣ ಘಟನೆ ಇಂದು ಜರುಗಿದೆ.

ಇದನ್ನೂ ಓದಿ ಫಾರ್ಮ್ ನಂ.3 ವಿತರಣೆಯಲ್ಲಿ ಕರ್ತವ್ಯಲೋಪ; ನಗರಸಭೆ ಕಂದಾಯ ಅಧಿಕಾರಿ ಸಸ್ಪೆಂಡ್ ಮಾಡಿ ಡಿಸಿ ಆದೇಶ

ಇವತ್ತು ಮೊಹರಂ ಕೊನೆಯ ದಿನವಾಗಿದ್ದರಿಂದ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಂಜಾಗಳ (ಅಲಿದೇವರು) ಮೆರವಣಿಗೆಯಲ್ಲಿ ಹೆಜ್ಜೆ ಮಜಲಿನಲ್ಲಿ ಹೆಜ್ಜೆ ಹಾಕುತ್ತಿದ್ದ ವ್ಯಕ್ತಿ ನೋಡುನೋಡುತ್ತಿದ್ದಂತೆಯೇ ಕುಸಿದುಬಿದ್ದ. ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಅಸುನಿಗಿದ್ದಾನೆ.

ಲಕ್ಕುಂಡಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಇಮಾಮ್ ಸಾಬ ನದಾಫ್ (55) ಮೃತಪಟ್ಟ ದುರ್ಧೈವಿಯಾಗಿದ್ದಾನೆ.

ಇನ್ನೊಂದು ಪ್ರಕರಣದಲ್ಲಿ ಅಲಿದೇವರು (ಪಂಜಾ) ಹೊತ್ತಿದ್ದ ವ್ಯಕ್ತಿ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಗದಗ ತಾಲೂಕಿನ ಹರ್ಲಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶರೀಫ್ ಮೂಲಿಮನಿ (40) ಮೃತಪಟ್ಟ ದುರ್ಧೈವಿ. ಮೊಹರಂ ಹಬ್ಬದ ಕೊನೆಯ ದಿನವೇ ಈ ಎರಡೂ ಘಟನೆ ನಡೆದಿದ್ದು, ಎರಡೂ ಗ್ರಾಮದಲ್ಲಿ ಸೂತಕರ ವಾತಾವರಣ ನಿರ್ಮಾಣವಾಗಿದೆ.

ಫಾರ್ಮ್ ನಂ.3 ವಿತರಣೆಯಲ್ಲಿ ಕರ್ತವ್ಯಲೋಪ; ನಗರಸಭೆ ಕಂದಾಯ ಅಧಿಕಾರಿ ಸಸ್ಪೆಂಡ್ ಮಾಡಿ ಡಿಸಿ ಆದೇಶ

0

ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರಪೇಕ್ಷಣಾ ಪತ್ರ ಇಲ್ಲದಿದ್ದರೂ ಫಾರ್ಮ್ ನಂ.3 ವಿತರಿಸಿದ್ದ ಕಂದಾಯ ಅಧಿಕಾರಿ…..

ವಿಜಯಸಾಕ್ಷಿ ಸುದ್ದಿ, ಗದಗ

ಫಾರ್ಮ್ ನಂ 3 ವಿತರಣೆಯಲ್ಲಿ ವಿಳಂಬ ಹಾಗೂ ಕರ್ತವ್ಯ ಲೋಪ ಎಸಗಿದ ನಗರಸಭೆ ಕಂದಾಯ ಅಧಿಕಾರಿ ಮಹೇಶ್ ಹಡಪದ ಅಮಾನತು ಆಗಿದ್ದಾರೆ.

ಈ ಕುರಿತು ಗದಗ ಡಿಸಿ ವೈಶಾಲಿ ಎಂ.ಎಲ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

01-04-2023ರಿಂದ 13-07-23. ರವರೆಗೆ ನಗರಸಭೆಯಿಂದ ಒಟ್ಟು 3148 ಫಾರ್ಮ್ ನಂ.3 ವಿವರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಅನ್ನಪೂರ್ಣ ಮುದಕಮ್ಮನವರ್ ನಗರಸಭೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಮಯದಲ್ಲಿ ಪೌರಾಯುಕ್ತರು ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದರು.

ಆದರೆ ರಿ.ಸ.ನಂ 862+863-864 ವಸತಿ ವಿನ್ಯಾಸದಲ್ಲಿ 979 ಹಾಗೂ ಇನ್ನುಳಿದ ಬೇರೆ ಬೇರೆ ನಿವೇಶನ ಸೇರಿದಂತೆ ಒಟ್ಟು 1063 ಫಾರ್ಮ್ ನಂ.3 ವಿತರಣೆ ಮಾಡಲಾಗಿದೆ. ಆದರೆ ಇದರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪೂರ್ಣ ಪ್ರಮಾಣದ ನಿವೇಶನ ಅಭಿವೃದ್ಧಿ ಹೊಂದಿದ ಬಗ್ಗೆ ನಿರಪೇಕ್ಷಣಾ ಪತ್ರ ಪಡೆಯದೇ ಕಂದಾಯ ಅಧಿಕಾರಿ ಮಹೇಶ್ ಹಡಪದ ಫಾರ್ಮ್ ನಂ.3 ವಿತರಣೆ ಮಾಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖವಿದೆ.

ನಗರಸಭೆ ಸದಸ್ಯರಾದ ಬರಕತ್ ಅಲಿ ಮುಲ್ಲಾ ಹಾಗೂ ಲಕ್ಷ್ಮಿ ಅನಿಲಕುಮಾರ್ ಸಿದ್ದಮ್ಮನಹಳ್ಳಿ ಅವರ ದೂರಿನ ಮೇರೆಗೆ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ್ ತನಿಖೆ ಮಾಡಿ ವರದಿ ಸಲ್ಲಿಸಿದ್ದರು.

ಅಪರ ಜಿಲ್ಲಾಧಿಕಾರಿಗಳ ವರದಿ ಆಧಾರಿಸಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಬೀಗ ಮುರಿದು ನಗದು ಸೇರಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲೂಟಿ

ಪೊಲೀಸರ ಭೇಟಿ, ಪರಿಶೀಲನೆ….

ವಿಜಯಸಾಕ್ಷಿ ಸುದ್ದಿ, ಗದಗ

ಮನೆ ಬಾಗಲಿಗೆ ಹಾಕಿದ್ದ ಬೀಗ ಮೀಟಿ ಒಳಹೊಕ್ಕು ಕಳ್ಳರು ಮನೆಯಲ್ಲಿದ್ದ ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ.

ಗದಗ ತಾಲೂಕಿನ ಮುಂಡರಗಿ ರಸ್ತೆಯ ಪಾಪನಾಶಿ ಗ್ರಾಮದ ರೈತ ಕೊಟ್ರಯ್ಯ ಬಸಯ್ಯ ಶಿರೋಳ ಎಂಬುವರು ಮನೆಯೇ ಕಳ್ಳತನವಾಗಿದ್ದು, ಮನೆಯಲ್ಲಿದ್ದ ಟ್ರಜರಿಯ ಬಾಗಿಲು ಯಾವುದು ವಸ್ತುವಿನಿಂದ ಮುರಿದು ಅದರೊಳಗೆ ಇದ್ದ 2 ಲಕ್ಷ 25 ಸಾವಿರ ರೂ ಮೌಲ್ಯದ 45 ಗ್ರಾಮ ತೂಕದ ಬಂಗಾರದ ತಾಳಿ ಚೈನ್, 15 ಸಾವಿರ ರೂ. ಮೌಲ್ಯದ ಮೂರು ಗ್ರಾಮ ತೂಕದ ಬಂಗಾರದ ಗಟ್ಟಿ ಚೂರುಗಳು, 17,500 ರೂ. ಮೌಲ್ಯದ ಬೆಳ್ಳಿಯ ಆರತಿ ಸಟ್ಟು, 11,200 ರೂ. ಗಳ ಬೆಳ್ಳಿಯ ಕಾಲ್ ಚೈನ್, ಹಾಗೂ 53 ಸಾವಿರ ನಗದು ಹಣ ಸೇರಿದಂತೆ 3,21, 700 ರೂ, ಮೌಲ್ಯದ ವಸ್ತುಗಳನ್ನು
ಕಳವು ಮಾಡಲಾಗಿದೆ.

ಈ ಕುರಿತು ಪಾಪನಾಶಿ ಗ್ರಾಮದ ಕೊಟ್ರಯ್ಯ ಬಸಯ್ಯ ಶಿರೋಳ ಎಂಬುವರು ಗದಗ ಗ್ರಾಮೀಣ ಠಾಣೆಗೆ ದೂರು ‌ನೀಡಿದ್ದು, ಕ್ರೈಮ್ ನಂಬರ್-0214/2023, IPC 1860(U/s-457,380) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಔಷಧಿ ಖರೀದಿ ನೆಪದಲ್ಲಿ ರೈತನ ಹಣ ಕಳ್ಳತನ; ಸಿಸಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯ ಸೆರೆ

ಅಂತರಾಜ್ಯದ ಖದೀಮರಿಂದ ಕೃತ್ಯದ ಶಂಕೆ…?

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ರಸಗೊಬ್ಬರ ಅಂಗಡಿಯಲ್ಲಿ ಕುಳಿತಿದ್ದ ರೈತನೋರ್ವನ ಕಿಸೆಯಿಂದ ಮೂವರು ಕಳ್ಳರು ೨೨೫೦೦ ರೂ ಕಳ್ಳತನ ಮಾಡಿ ಪರಾರಿಯಾದ ಘಟನೆ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತಾಲೂಕಿನ ರಣತೂರ ಗ್ರಾಮದ ರೈತ ಮುತ್ತಪ್ಪ ಬಸಪ್ಪ ಓಲಿ ಎಂಬುವರು ಪಟ್ಟಣದ ಗೊಬ್ಬರ ಅಂಗಡಿಯಲ್ಲಿ ಕಳೆನಾಶಕ ಔಷಧಿ ಖರೀದಿಗೆ ಬಂದಿದ್ದರು. ಇವರ ಶರ್ಟ್ ಮೇಲ್ಗಿಸೆಯಲ್ಲಿರುವ ದುಡ್ಡನ್ನು ಗಮನಿಸಿದ ಒರ್ವ ಮಹಿಳೆ ಇಬ್ಬರು ಪುರುಷರು ತರಕಾರಿ ಬೀಜ ಮತ್ತು ಕಳೆನಾಶಕ ಔಷಧ ಖರೀದಿ ನೆಪದಲ್ಲಿ ತಂತ್ರಮಾಡಿ ರೈತನ ಕಿಸೆಯಲ್ಲಿದ್ದ ೨೨೫೦೦ ರೂ ಯಾಮರಿಸಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ ವಾರ್ಡ್ ನಲ್ಲಿ ಅವ್ಯವಸ್ಥೆ, ಸಿಟ್ಟಿಗೆದ್ದ ಜನ್ರಿಂದ ನಗರಸಭೆಯ ಬಿಜೆಪಿ ಸದಸ್ಯನ‌ ಕೂಡಿ ಹಾಕಿ ಆಕ್ರೋಶ….

ದುಡ್ಡು ಕಳೆದುಕೊಂಡ ರೈತ ತೀವ್ರ ಆತಂಕ್ಕೀಡಾದುದನ್ನು ಮನಗಂಡ ಅಂಗಡಿ ಮಾಲೀಕರು ರೈತನನ್ನು ಸಮಾಧಾನಪಡಿಸಿ ಪೊಲೀಸರಿಗೆ ವಿಷಯ ತಲುಪಿಸಿದ್ದಾರೆ.

ಸ್ಥಳಕ್ಕೆ ಬೇಟಿ ನೀಡಿದ ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸಿ ಕಳ್ಳರು ಆಂಧ್ರದ ಮೂಲದವರಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದು, ಶೀಘ್ರವಾಗಿ ಪತ್ತೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತಗುಡ್ಡಕ್ಕೆ ಸದ್ಯಕ್ಕೆ ಯಾರೂ ಹೋಗಬೇಡಿ……..

ಕಳೆದ ಹಲವು ದಿನಗಳಿಂದ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶುಕ್ರವಾರ ಸಂತೆ ದಿನ, ಅಮವಾಸ್ಯೆ ವೇಳೆ ಕಳ್ಳತನದ ಘಟನೆಗಳು ನಡೆಯುತ್ತಲೇ ಇದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಶುಕ್ರವಾರದ ಸಂತೆಗೆ ಲಕ್ಷಾಂತರ ಜನ ಸೇರುವುದನ್ನು ಅರಿತಿರುವ ಕಳ್ಳರ ತಂಡದಿಂದಲೇ ಈ ಕೃತ್ಯ ನಡೆದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಶಿವಮೊಗ್ಗ, ಹಾನಗಲ್, ಹುಬ್ಬಳ್ಳಿ, ಗದಗದಿಂದ ಬರುವ ಕಳ್ಳರು ಬಸ್ ನಿಲ್ದಾಣ, ಆಭರಣದ ಅಂಗಡಿ, ಸಂತೆ ಗದ್ದಲದಲ್ಲಿ ಆಭರಣ, ಹಣ, ಮೊಬೈಲ್ ಇತರೆ ಬೆಲೆ ಬಾಳುವ ವಸ್ತುಗಳನ್ನು ಅಪಹರಿಸಿಕೊಂಡು ಪರಾರಿಯಾಗುತ್ತಿದ್ದಾರೆ. ಈ ಬಗ್ಗೆ ಆಗಾಗ್ಗೆ ಪೊಲೀಸರು ಕೆಲವರನ್ನು ಹಿಡಿದು ಬಿಸಿಮುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ.

ಆದರೂ ಕಳ್ಳರ ಕೈ ಚಳಕ ಮುಂದುವರೆದಿದೆ. ಈ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಅದೇಷ್ಟೋ ಅಮಾಯಕರು ಸಂಕಷ್ಟಕ್ಕೆ ಸಿಲುಕಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

error: Content is protected !!