ನಾನು ಕಾಡಿಬೇಡಿ, ಟೈಯರ್ ಸುಟ್ಟು ಮಂತ್ರಿ, ಶಾಸಕ ಆಗುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ನಮ್ಮ ಬೇಡಿಕೆ ಸಿಎಂ ಬದಲಾವಣೆ ಆಗಬೇಕು ಅಂತಿತ್ತು. ಈಗ ನಾಯಕತ್ವ ಬದಲಾವಣೆ ಆಗಿದೆ. ಸಿಎಂ ಬೊಮ್ಮಾಯಿ ಬಿಎಸ್ ವೈ ನೆರಳು ಆಗಲ್ಲ. ಅವರಿಗೆ ಸ್ವಲ್ಪ ಟೈಂ ಕೊಡಿ ಎಂದರು.
ನಾನು ಜೀರೋ ಇಂದ ಹೀರೋ ಆದವನು. ಹಿಂದೆ ಜೀರೋ ಆಗಿ ಈಗ ಮತ್ತೆ ಹೀರೋ ಆಗಿದ್ದೇನೆ. ದೆಹಲಿಯಲ್ಲಿ ಶಾಸಕರ ಲಾಭಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮಂತ್ರಿ ಸ್ಥಾನಕ್ಕೆ ಲಾಭಿ ನಡೆಸುವುದು ಸರಿಯಲ್ಲ.
ಸೂತ್ರಧಾರರೊಬ್ಬರು ಮಗು ಚೂಟಿ, ತೊಟ್ಟಿಲು ತೂಗುತ್ತಿದ್ದಾರೆ. ಈಗ ಸೂತ್ರಧಾರರ ಶಿಷ್ಯರೇ ಜಗಳ ತೆಗೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಬಿಎಸ್ ವೈ ಕಾಲೆಳೆದರು.
ಐ.ಟಿ., ಆಟೋ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳ ಗಳಿಕೆಯಿಂದಾಗಿ ದೇಶದ ಷೇರುಪೇಟೆಗಳು ಶುಕ್ರವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ವಹಿವಾಟಿನಲ್ಲಿ ಹೊಸ ಎತ್ತರ ಕಂಡು ಸಾರ್ವಕಾಲಿಕ ದಾಖಲೆ ಸೃಷ್ಟಿಸಿವೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ವಹಿವಾಟಿನಲ್ಲಿ 400ಕ್ಕೂ ಅಧಿಕ ಅಂಶ ಏರಿಕೆ ಕಂಡು ಹೊಸ ಎತ್ತರವಾದ 55,270 ಅಂಶ ತಲುಪಿತ್ತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 120 ಅಂಶ ಹೆಚ್ಚಳ ಕಂಡು 16486 ಅಂಶಗಳಿಗೆ ತಲುಪಿತ್ತು.
ಸೆನ್ಸೆಕ್ಸ್ನಲ್ಲಿ ಐಟಿ, ಪೇಪರ್ ವಲಯ, ಬ್ಯಾಂಕ್ ನಿಫ್ಟಿ ಷೇರುಗಳು ಉತ್ತಮ ಗಳಿಕೆ ದಾಖಲಿಸಿದವು. ಟಾಟಾ ಕನ್ಸುಮರ್, ಬಜಾಜ್ ಆಟೋ, ಎಲ್ ಟಿ, ಟಿಸಿಎಸ್ ಷೇರುಗಳು ಹೆಚ್ಚಿನ ಗಳಿಕೆ ಕಂಡಿವೆ.
ಕಳೆದ ಎರಡು ದಿನಗಳಿಂದ ಸಂವೇದಿ ಸೂಚ್ಯಂಕ ನಿರಂತರ ಏರಿಕೆ ದಾಖಲಿಸುತ್ತಿದೆ. ಶುಕ್ರವಾರವಂತೂ 400 ಕ್ಕೂ ಅಧಿಕ ಅಂಶ ದಾಖಲಿಸಿತ್ತು. ಅನ್ ಲಾಕ್ ಬಳಿಕ ದೇಶದ ಆರ್ಥಿಕತೆ ಚೇತರಿಕೆಯ ಹಂತಕ್ಕೆ ಮರಳಿದ್ದು, ಇದಕ್ಕೆ ತಕ್ಕಂತೆ ಸಂವೇದಿ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಾಡಿದೆ.
ಚುನಾವಣೆ ವೇಳೆ ಮತದಾರರಿಗೆ ಹಣ ಹಂಚಿಕೆ ಮಾಡಿದ ಪ್ರಕರಣದಲ್ಲಿ ಮಾಜಿ ಶಾಸಕರೊಬ್ಬರಿಗೆ ಪ್ರಜಾ ಪ್ರತಿನಿಧಿ ನ್ಯಾಯಾಲಯ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿರುವ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ.
ಮಾಜಿ ಶಾಸಕ ಪಾಯಂ ವೆಂಕಟೇಶ್ವರಲು ಶಿಕ್ಷೆಗೆ ಗುರಿಯಾದ ಶಾಸಕ.
2018ರ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣದ ಖಮ್ಮಂ ಜಿಲ್ಲೆಯ ಎಸ್ಟಿ ಮೀಸಲು ಕ್ಷೇತ್ರ ಪಿನಪಾಕ ಚುನಾವಣೆಯ ವೇಳೆ ಪಾಯಂ ವೆಂಕಟೇಶ್ವರಲು ವೋಟಿಗಾಗಿ ಮತದಾರರಿಗೆ ಹಣ ಹಂಚಿದ್ದ ಆರೋಪ ಕೇಳಿಬಂದಿತ್ತು.
ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೆಲಂಗಾಣ ಪ್ರಜಾ ಪ್ರತಿನಿಧಿ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದೆ.
ರಾಷ್ಟ್ರೀಯ ಹೆದ್ದಾರಿ 65 ರಲ್ಲಿ ಎರಡು ಲಾರಿಗಳ ಮಧ್ಯೆ ಡಿಕ್ಕಿ ಸಂಭವಿಸಿ ನಡು ರಸ್ತೆಯಲ್ಲೇ ಲಾರಿಗಳು ಹೊತ್ತಿ ಉರಿದ ಘಟನೆ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಳ್ಳಿ ಗ್ರಾಮದ ಬಳಿ ತಡರಾತ್ರಿ ನಡೆದಿದೆ.
ಅಪಘಾತದಲ್ಲಿ ಒಂದು ಲಾರಿ ಸುಟ್ಟು ಭಸ್ಮವಾದರೆ, ಇನ್ನೊಂದು ಭಾಗಶಃ ಸುಟ್ಟು ಕರಕಲಾಗಿದೆ.
ಮಹಾರಾಷ್ಟ್ರದ ಪುಣೆಯಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಸಿಮೆಂಟ್ ತುಂಬಿದ ಲಾರಿ, ಮುಂದೆ ಸಾಗುತ್ತಿದ್ದ ಕಂಟೇನರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಲಾರಿಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸುದ್ದಿ ತಿಳಿಯುತ್ತಿದ್ದಂತೆಯೇ ಬಸವಕಲ್ಯಾಣ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಸಂಚಾರಿ ಪಿಎಸ್ಐ ಪುಷ್ಪಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನಂದಸಿಂಗ್ ದೊಡ್ಡ ಖಾತೆಗೆ ಬೇಡಿಕೆ ಇಟ್ಟಿರುವುದು ಅವರ ವೈಯಕ್ತಿಕ ವಿಚಾರ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು. ಹೊಸಪೇಟೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆನಂದ್ ಸಿಂಗ್ ನನ್ನ ಆತ್ಮೀಯ ಸ್ನೇಹಿತರು. ಈ ಭಾಗದ ಪ್ರಭಾವಿ ನಾಯಕರೂ ಸಹ. ಪ್ರಬಲ ಖಾತೆಗೆ ಪಟ್ಟು ಹಿಡಿದಿರುವುದು ಅವರ ವೈಯಕ್ತಿಕ ವಿಚಾರ.
ಯಾವುದೇ ಖಾತೆ ಕೊಟ್ಟರೂ ನಿಭಾಯಿಸಹಬಹುದು. ಸರ್ಕಾರದ ಕಾರ್ಯಕ್ರಮ ಜನರಿಗೆ ತಲುಪಿಸವಲ್ಲಿ ಯಶಸ್ವಿಯಾಗಿ ಕೆಲಸ ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಕಳೆದ ಮೂರು ವರ್ಷಗಳಿಂದ ಯಡಿಯೂರಪ್ಪ ಅವರ ಸರ್ಕಾರ ಮತ್ತು ಈಗಿನ ಬೊಮ್ಮಾಯಿಯವರ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.
ಕೊರೊನಾ ವಿಚಾರದಲ್ಲಿ ಕನಿಷ್ಠ ಸಹಾಯ ಮಾಡಲೂ ಕೂಡ ಆಗುತ್ತಿಲ್ಲ ಎಂದು ಆರೋಪಿಸಿದ ಸಂತೋಷ ಲಾಡ್, ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಕೊರೊನಾ ಸಮಯದಲ್ಲಿ ಜನತೆಯ ಜತೆಗಿದ್ದೇವೆ. ಜನ ಕಾಂಗ್ರೆಸ್ ಕಡೆ ವಾಲುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಗೆ ಜನ ಕೈ ಹಿಡಿಯಲಿದ್ದಾರೆ ಎಂಬ ನಂಬಿಕೆ ಇದೆ ಎಂದರು.
ಬಿಜೆಪಿಯ ಕಾರ್ಯಕ್ರಮಗಳು ಕೇವಲ ಪೇಪರ್ ನಲ್ಲಿ ಮಾತ್ರ ಅನುಷ್ಠಾನಗೊಳ್ಳುತ್ತಿವೆ. ವಿಜಯನಗರ ಜಿಲ್ಲೆ ರಚನೆ ಮಾಡಿದ ನಂತರ ಒಬ್ಬ ವಿಶೇಷ ಅಧಿಕಾರಿ ನೇಮಕ ಮಾಡಿರುವುದನ್ನು ಬಿಟ್ಟರೆ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬರಲಿ, ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.
ಬಾಂಬೆ ಬಾಯ್ಸ್ ನ ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ವಿಚಾರ ಕುರಿತು ಪ್ರತಿಕ್ರಿಸಿದ ಅವರು, ಅದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸಂತೋಷ ಲಾಡ್ ಹೇಳಿದರು.
ನಾನೀಗ ಬಿಜೆಪಿ ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾನು ಹುದ್ದೆ ಹುಡುಕಿಕೊಂಡು ಹೋಗಿಲ್ಲ. ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸುತ್ತೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು.
ಕಲಬುರಗಿಯಲ್ಲಿ ಪತ್ರಕರ್ತರ ಜೊತೆಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನ, ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಯಡಿಯೂರಪ್ಪನವರು ಕೂಡ ರಾಜೀನಾಮೆ ನೀಡುವಾಗ ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ನನಗೆ ಇನ್ನೂ ವಯಸ್ಸಿದೆ. ಸದ್ಯ ಪಕ್ಷದ ಸಂಘಟನೆಗೆ ನಾನು ಹೆಚ್ಚಿನ ಗಮನ ಹರಿಸಲಿದ್ದೇನೆ ಎಂದರು.
ಸಂಪುಟ ರಚನೆ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ಎಲ್ಲ ಭಿನ್ನಾಭಿಪ್ರಾಯ ಬಗೆಹರಿಸುತ್ತಾರೆ. ಇತರೆ ಪಕ್ಷಗಳಿಂದ ಬಿಜೆಪಿಗೆ ಬಂದ 17 ಶಾಸಕರಲ್ಲಿ ಆನಂದ ಸಿಂಗ್ ಮೊದಲಿಗರು. ಅವರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ, ಅದನ್ನು ಮುಖ್ಯಮಂತ್ರಿಗಳು ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೊಮ್ಮಾಯಿ ಸರ್ಕಾರ ತನ್ನ ಅವಧಿ ಪೂರ್ಣಗೊಳಿಸಲಿದೆ. ಸಂಪುಟದಲ್ಲಿ ಕಲಬುರಗಿ ಜಿಲ್ಲೆಗೆ ಪ್ರಾತಿನಿಧ್ಯ ಸಿಗಬೇಕಿತ್ತು. ಕಲಬುರಗಿಯ ಅಳಿಯನಾಗಿದ್ದು, ಜಿಲ್ಲೆಗೆ ಸಚಿವ ಸ್ಥಾನ ಸಿಗದಿರುವುದು ನನಗೂ ವೈಯಕ್ತಿಕವಾಗಿ ಬೇಸರ ತಂದಿದೆ. ಇನ್ನೂ ನಾಲ್ಕು ಸಚಿವ ಸ್ಥಾನ ಖಾಲಿಯಿವೆ. ಈ ಭಾಗಕ್ಕೆ ನ್ಯಾಯ ದೊರಕಿಸಲು ಪ್ರಯತ್ನಿಸುತ್ತೇನೆ. ಜಿಲ್ಲೆಗೆ ಸೂಕ್ತ ಸ್ಥಾನಮಾನ ಸಿಗುವ ವಿಶ್ವಾಸವಿದೆ ಎಂದು ವಿಜಯೇಂದ್ರ ಹೇಳಿದರು.
ಕಮಲ ಅರಳಿಸಲು ಪಣ
ಬಿಬಿಎಂಪಿ, ಗುಲ್ಬರ್ಗಾ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಹಾನಗರ ಪಾಲಿಕೆಗಳಿಗೆ ಚುನಾವಣೆ ಘೋಷಣೆಯಾಗಿದೆ. ಪ್ರತಿ ವಾರ್ಡನಲ್ಲೂ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಿ ಎಲ್ಲಡೆ ಕಮಲ ಅರಳಿಸಲಾಗುವುದು ಎಂದು ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಈ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಲಿದೆ. ಮುಂಬರುವ ಸಿಂದಗಿ, ಹಾನಗಲ್ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಜಯಶಾಲಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊಸಪೇಟೆ ರಾಣಿಪೇಟೆಯಲ್ಲಿರುವ ಆನಂದ್ ಸಿಂಗ್ ಅವರ ಶಾಸಕರ ಕಚೇರಿಯ ನಾಮಫಲಕ ತೆರವು
ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಖಾತೆ ಹಂಚಿಕೆ ಕುರಿತು ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಖಾತೆ ಬದಲಾವಣೆ ಮಾಡದಿದ್ದರೆ ಬುಧವಾರ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಚಿವ ಆನಂದ್ ಸಿಂಗ್ ನಿರ್ಧರಿಸಿದ್ದಾರೆ.
ತಮಗೆ ಹಂಚಿಕೆ ಮಾಡಿರುವ ಖಾತೆಯಿಂದ ಅಸಂತುಷ್ಟಗೊಂಡಿರುವ ಆನಂದ ಸಿಂಗ್ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ಖಾತೆ ಬದಲಾವಣೆ ಮಾಡಲು ಗಡುವನ್ನೂ ನೀಡಿದ್ದಾರೆ. ಗಡುವಿನೊಳಗೆ ಖಾತೆ ಬದಲಾಗದಿದ್ದರೆ ನನ್ನ ರಾಜಿನಾಮೆ ಅಂಗೀಕರಿಸಿ ಎಂದು ಪತ್ರವನ್ನೂ ಕೊಟ್ಟು ಬಂದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಮಂಗಳವಾರ ಸಂಜೆ ಹೊಸಪೆಟೆಯ ರಾಣಿಪೇಟೆಯಲ್ಲಿರುವ ಆನಂದ್ ಸಿಂಗ್ ಅವರ ಶಾಸಕರ ಕಚೇರಿಯ ನಾಮಫಲಕ ತೆರವುಗೊಳಿಸಲಾಗಿದೆ. ಬುಲ್ಡೋಜರ್ ಹಚ್ಚಿ ನಾಮಫಲಕ ತೆಗೆಯಲಾಗಿದೆ.
ಬುಧವಾರದಿಂದ ಇಲ್ಲಿ ಶಾಸಕರು ಲಭ್ಯವಿರುವುದಿಲ್ಲ. ಸಾರ್ವಜನಿಕರ ಅಹವಾಲು ಸ್ವೀಕರಿಸುವುದಿಲ್ಲ ಎಂದು ತಿಳಿಸಲಾಗಿದೆ ಎಂಬುದು ರಾಜೀನಾಮೆ ವದಂತಿಗೆ ಪುಷ್ಟಿ ನೀಡಿದೆ.
ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಸಚಿವ ಆನಂದ ಸಿಂಗ್ ನಿರಾಕರಿಸಿದ್ದಾರೆ. ನನ್ನ ತೀರ್ಮಾನ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ನಿಲುವಿನಿಂದ ಹಿಂದೆ ಸರಿಯಲಾರೆ ಎಂದು ತಿಳಿಸಿದ್ದಾರೆ.
ತಮ್ಮ ಖಾತೆ ಬದಲಾಗದಿದ್ದರೆ ಅಧಿಕಾರ ವಹಿಸಿಕೊಳ್ಳಲಾರೆ, ಸ್ವಾತಂತ್ರ್ಯೋತ್ಸವದ ದಿನ ಧ್ವಜಾರೋಹಣವನ್ನೂ ಮಾಡಲಾರೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಆಕೆ ಪ್ಯಾರಾ ಮೆಡಿಕಲ್ ಓದುತ್ತಿದ್ದ ಯುವತಿ. ಆದರೆ ಆಟೋ ಚಾಲಕನನ್ನು ಪ್ರೀತಿ ಮಾಡುತ್ತಿದ್ದಳು. ಆತನನ್ನು ನಂಬಿ ಮನಸ್ಸು ಹಾಗೂ ದೇಹ ಎರಡನ್ನೂ ಅರ್ಪಿಸಿದ್ದ ಯುವತಿ, ಮದುವೆ ಮಾಡಿಕೊಳ್ಳೋಣ ಎಂದಿದ್ದೇ ತಡ, ಹುಡುಗ ಉಲ್ಟಾ ಹೊಡೆದಿದ್ದಾನೆ. ನಾ ಆಕೆಯನ್ನ ಪ್ರೀತಿನೇ ಮಾಡಿಲ್ಲ ಅಂತ ಮಾತು ಬದಲಿಸಿದ್ದನಂತೆ. ಆದರೂ ಸೋಮವಾರ ತಾನು ಸಾಯುವ ಮುನ್ನ ಈ ಯುವತಿ ತನ್ನನ್ನು ತಿರಸ್ಕರಿಸಿದ್ದ ಯುವಕನೊಂದಿಗೆ ಕಾಲ ಕಳೆದಿದ್ದಳು. ಕೊನೆಗೆ ಶವವಾಗಿ ಪತ್ತೆಯಾಗಿದ್ದಾಳೆ. ಈಕೆಯ ಸಾವಿನಲ್ಲಿ ಪ್ರಿಯಕರನ ಕೈವಾಡ ಇದೆ ಎಂದು ಯುವತಿಯ ಪೋಷಕರು ಆರೋಪ ಮಾಡುತ್ತಿದ್ದಾರೆ.
ರಾಜೀವ್ ಗಾಂಧಿ ನಗರದ ನಿವಾಸಿ ಪಲ್ಲವಿ ಯಲ್ಲಪ್ಪ ಗೊಲ್ಲರ (19) ಎಂಬ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಗದಗ ತಾಲೂಕಿನ ಕಣಗಿನಹಾಳ ರೈಲ್ವೇ ನಿಲ್ದಾಣದ ಬಳಿ ಹಳಿಯ ಪಕ್ಕದಲ್ಲಿ ಮೈತುಂಬ ಗಾಯಗಳಿರುವ ಸ್ಥಿತಿಯಲ್ಲಿ ಅವಳ ಮೃತದೇಹ ಪತ್ತೆಯಾಗಿದೆ. ಆದರೆ ಸಾವಿನ ಬಗ್ಗೆ ಯುವತಿಯ ಹೆತ್ತವರು, ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಶವಾಗಾರದ ಮುಂದೆ ಜಮಾಯಿಸಿದ್ದ ಪೋಷಕರು, `ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಕೆಯನ್ನ ಕೊಲೆ ಮಾಡಲಾಗಿದೆ. ಪ್ರಕಾಶ್ ಮುಂಡೆವಾಡಗಿ ಎಂಬಾತನೇ ಆಕೆಯನ್ನ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ’ ಎಂದು ಆರೋಪ ಮಾಡಿದ್ದಾರೆ.
ಈ ಯುವತಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯಾಗಿದ್ದು, ಮೂರು ವರ್ಷಗಳಿಂದ ರಾಜೀವ್ ಗಾಂಧಿ ನಗರದ ನಿವಾಸಿ, ಆಟೋ ಚಾಲಕ ಪ್ರಕಾಶ್ ಮುಂಡೆವಾಡಗಿ ಎಂಬಾತನನ್ನ ಪ್ರೀತಿ ಮಾಡುತ್ತಿದ್ದಳು. ಆಕೆಯನ್ನು ಪುಸಲಾಯಿಸಿ ದೇಹ ಸಂಬಂಧವನ್ನೂ ಬೆಳೆಸಿದ್ದ. ಮದುವೆ ಮಾಡಿಕೊ ಎಂದಾಗ ಆತ ತಿರಸ್ಕಿದ್ದನಂತೆ. 20 ದಿನಗಳ ಹಿಂದೆ ರಾಜೀವ್ ಗಾಂಧಿ ನಗರದ ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯತಿ ನಡೆದಿತ್ತು. ಮುಚ್ಚಳಿಕೆ ಪತ್ರದ ಮೂಲಕ ರಾಜೀ ಮಾಡಿಸಿ, ಒಬ್ಬರಿಗೊಬ್ಬರು ಮತ್ತೆ ತಂಟೆಗೆ ಬರದಂತೆ ತಾಕೀತು ಮಾಡಿ ಕಳಿಸಲಾಗಿತ್ತಂತೆ.
ಆತ್ಮಹತ್ಯೆ ಅನ್ನುತ್ತಾರೆ ಪೊಲೀಸರು!
ಆದ್ರೆ ಸೋಮವಾರ ಮನೆಗೆ ಬಂದು ಹೊಸ ಬಟ್ಟೆ ಹಾಕಿಕೊಂಡು, ಕೈಕೊಟ್ಟಿದ್ದ ಪ್ರಿಯಕರ ಪ್ರಕಾಶನ ಜೊತೆಗೆ ಮತ್ತೆ ಹೋಗಿದ್ದಳು. ಅಲ್ಲಿ ಏನೋ ಗಲಾಟೆ ನಡೆದು ಈಕೆಯ ಕೊಲೆ ಆಗಿದೆ ಅಂತ ತಂದೆ-ತಾಯಿ ಆರೋಪ ಮಾಡ್ತಿದ್ದಾರೆ. ಈ ಸಂಬಂಧ ಗದಗ ರೈಲ್ವೇ ಸ್ಟೇಷನ್ ನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಇದು ಕೊಲೆ ಅಲ್ಲ, ಆತ್ಮಹತ್ಯೆ ಎಂದು ಹೇಳುತ್ತಿದ್ದಾರೆ. ಆತ್ಮಹತ್ಯೆ ಆಗಿದ್ದರೂ ಅದಕ್ಕೊಂದು ಕಾರಣ ಇರಬೇಕಲ್ಲ? ಅದು ಏನು? ಕೊಲೆಯಾಗಿದ್ದರೆ ಯಾರು ಮಾಡಿದ್ದಾರೆ ಎಂದು ಪೊಲೀಸರು ತನಿಖೆ ನಡೆಸಿ, ಮೃತ ಯುವತಿಗೆ ನ್ಯಾಯ ದೊರಕಿಸುವಂತೆ ಆಕೆಯ ಬಂಧುಗಳು ಆಗ್ರಹಿಸಿದ್ದಾರೆ.
ನನ್ನ ಮಗಳು ಪ್ಯಾರಾಮೆಡಿಕಲ್ ಓದುತ್ತಿದ್ದಳು. ಆಟೋ ಚಾಲಕ ಪ್ರಕಾಶ್ ಅಲಿಯಾಸ್ ಪಾರು ಎಂಬುವನನ್ನು ಪ್ರೀತಿ ಮಾಡ್ತಿದ್ದಳು. ನಿನ್ನೆ ಅವನ ಜೊತೆಗೆ ಹೋಗಿದ್ದಳು. ಅಲ್ಲಿ ಇಬ್ಬರಿಗೂ ಮದುವೆ ವಿಚಾರವಾಗಿ ಗಲಾಟೆ ನಡೆದು ನನ್ನ ಮಗಳನ್ನ ಕೊಲೆ ಮಾಡಿದ್ದಾನೆ. ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ.
ಯಲ್ಲಪ್ಪ ಗೊಲ್ಲರ್, ಯುವತಿ ತಂದೆ
ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಕೆಯ ಸಾವಿಗೆ ಪ್ರಕಾಶ ಅನ್ನೋವನೆ ಕಾರಣ. ಆತನನ್ನ ನನ್ನ ಮಗಳು ಬಾಳ ಪ್ರೀತಿ ಮಾಡ್ತಿದ್ದಳು. ಆಕೆ ದೊಡ್ಡವಳಾಗೋವರೆಗೂ ಊರೂರು ಅಲೆದಾಡಿ ಆಕೆಯನ್ನ ಸಾಲಿಕಲಿಸೇನಿ. ಮದರ್ ಥೇರೆಸ್ ನ ಕಾಲೇಜ್ ನಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದಳು. ನಿನ್ನೆ ಜಳಕ ಮಾಡಿ ಹೋದವಳು ತಿರುಗಿಬಂದಿಲ್ಲ.
ಈಶ್ವರಪ್ಪ ಮೊದಲಿನಿಂದಲೂ ಹೀಗೆಯೇ ಮಾತನಾಡುತ್ತಿದ್ದಾರೆ. ಅವರಿಗೆ ಸಂಸ್ಕೃತಿಯೇ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಕೆ.ಎಸ್. ಈಶ್ವರಪ್ಪ ಅವಾಚ್ಯ ಶಬ್ದ ಬಳಕೆ ವಿಚಾರಕ್ಕೆ ಮೈಸೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಯವರ ಸಂಸ್ಕತಿಯೇ ಇಂತದ್ದು. ಈಶ್ವರಪ್ಪರಿಗೆ ಬಿಜೆಪಿ ಬುದ್ಧಿ ಹೇಳುವ ಕೆಲಸ ಮಾಡುತ್ತಿಲ್ಲ. ಸಂಸ್ಕಾರ ಇರುವವರು ಅಂತಹ ಪದವನ್ನು ಬಯಸುವುದಿಲ್ಲ. ಈಶ್ವರಪ್ಪನಿಗೆ ಸಂಸ್ಕಾರ, ಸಂಸ್ಕತಿಯೇ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಶ್ವರಪ್ಪ ಬೆಳೆದು ಬಂದಿರುವ ಹಾದಿಯೇ ಹಾಗಿದೆ. ಅವರಿಂದ ಬದಲಾವಣೆ ನಿರೀಕ್ಷೆ ಮಾಡುವುದೇ ತಪ್ಪು. ಆಡಳಿತದಲ್ಲಿರುವವರು ಟೀಕೆಗಳನ್ನು ಆರೋಗ್ಯ ಪೂರ್ಣವಾಗಿ ಸ್ವೀಕರಿಸಬೇಕು. ರಾಜಕಾರಣದಲ್ಲಿ ಟೀಕೆ ಬರುವುದು ಸಹಜ. ಅದಕ್ಕೆ ಈ ರೀತಿ ಪ್ರತಿಕ್ರಿಯೆ ನೀಡೋದು ಸರಿಯಲ್ಲ ಎಂದರು.
ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯದ ಹಿತಾಶಕ್ತಿಗೆ ವಿರುದ್ಧವಾಗಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಡಿದ ಟ್ವೀಟ್ ಸತ್ಯವಾಗಿದ್ದರೆ ತಕ್ಷಣ ಸಿ.ಟಿ.ರವಿ ರಾಜ್ಯದ ಜನತೆಯಲ್ಲಿ ಕ್ಷಮೆ ಯಾಚಿಸಬೇಕು ಹಾಗೂ ತಮ್ಮ ನಿಲುವು ಬದಲಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ತೆಗೆದುಕೊಂಡ ನಿಲುವು ಮತ್ತು ಹೋರಾಟ ಬೆಂಬಲಿಸಿ ಸಿ.ಟಿ.ರವಿ ಅವರು ಟ್ವೀಟ್ ಮಾಡಿದ್ದಾರೆ. ಸಿ.ಟಿ.ರವಿ ಅವರ ನಿಲುವು ಆಶ್ಚರ್ಯ ಮತ್ತು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಸರಿಯಾದ ನಿಲುವು ತೆಗೆದುಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೆಗೆದುಕೊಂಡ ನಿಲುವಿನ ಬಗ್ಗೆ ಮುಖ್ಯಮಂತ್ರಿಗಳೂ ಗಟ್ಟಿ ಧ್ವನಿಯಲ್ಲೇ ಮಾತನಾಡಿದ್ದಾರೆ. ರಾಜ್ಯದ ನಿಲುವು ಒಂದೇ ಆಗಿದ್ದಾರೂ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಟ್ವೀಟ್ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ ಅವರು, ಬಿಜೆಪಿ ಮತ್ತು ಸರಕಾರದ ನಿಲುವಿನಲ್ಲಿ ವ್ಯಾತ್ಯಾಸವಿದೆ. ಈ ಬಗ್ಗೆ ಸರಕಾರ ಮತ್ತು ಪಕ್ಷ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಕೊರೊನಾ ನಿರ್ವಹಣೆ ಕುರಿತು ಗಮನಹರಿಸಿ, ಶ್ರದ್ಧೆಯಿಂದ ಕೆಲಸಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಆದರೆ, ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಕಿತ್ತಾಟ ನಡೆದಿದೆ. ಸಚಿವ ಆನಂದ ಸಿಂಗ್, ಎಂಟಿಬಿ ನಾಗರಾಜ ಅವರು ಖಾತೆ ಬದಲಾವಣೆಗಾಗಿ ಮುಖ್ಯಮಂತ್ರಿಗಳಿಗೆ ಗಡುವು ನೀಡಿದರೆ, ಸುಮಾರು ಐವರು ಶಾಸಕರು ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಬೆದರಿಕೆ ಹಾಕಿದ್ದಾರೆ. ಅದನ್ನು ಶಮನಗೊಳಿಸಲು ಸಿಎಂ ಬಸವರಾಜ ಬೊಮ್ಮಾಯಿ ಮತ್ತೆ ದೆಹಲಿಗೆ ತೆರಳುವುದಾಗಿ ಹೇಳುತ್ತಿದ್ದಾರೆ. ಆದರೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಮೂರನೇ ಅಲೆ ತೀವ್ರವಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜಕೀಯ ಅಟಾಟೋಪಗಳಿಗೆ ಅವಕಾಶ ನೀಡದೇ, ಎಲ್ಲರೂ ಸೋಂಕು ನಿವಾರಿಸಲು ಪ್ರಯತ್ನಿಸಬೇಕು ಎಂದು ಸರಕಾರಕ್ಕೆ ಸಲಹೆ ನೀಡಿದರು.