Home Blog Page 3255

ಮುಖ್ಯಮಂತ್ರಿ ಅಂತೂ ಮಾಡಲಿಲ್ಲ, ಉಪಮುಖ್ಯಮಂತ್ರಿಯನ್ನಾದರೂ ಮಾಡಲಿ

ಹಿರಿತನ ಪರಿಗಣಿಸಿ ಡಿಸಿಎಂ ಮಾಡುವ ನಿರೀಕ್ಷೆಯಿದೆ! ಮೈಸೂರಿನಲ್ಲಿ ಕೆ.ಎಸ್. ಈಶ್ವರಪ್ಪ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಮೈಸೂರು

ಮುಖ್ಯಮಂತ್ರಿ ಅಂತೂ ಮಾಡಲಿಲ್ಲ. ಹಿರಿತನ ಆಧರಿಸಿ ಉಪ ಮುಖ್ಯಮಂತ್ರಿಯನ್ನಾದರೂ ಮಾಡುವ ನಿರೀಕ್ಷೆ ಇದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಾಗಿ ಹಲವು ವರ್ಷಗಳ ಕಾಲ ದುಡಿದಿದ್ದೇನೆ. ಹೀಗಾಗಿ ನನ್ನನ್ನು ಮುಖ್ಯಮಂತ್ರಿ ಮಾಡಬಹುದು ಎಂದು ಬೆಂಬಲಿಗರು ನಿರೀಕ್ಷೆ ಮಾಡಿದ್ದರು. ಪಕ್ಷದ ಹೈಕಮಾಂಡ್ ಬೊಮ್ಮಾಯಿ ಅವರುನ್ನ ಸಿಎಂ ಮಾಡಿದೆ. ಈಗ ಈಶ್ವರಪ್ಪ ಉಪಮುಖ್ಯಮಂತ್ರಿ ಆಗಲಿ ಎಂದು ಸ್ವಾಮೀಜಿಗಳು, ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಯಡಿಯೂರಪ್ಪ ನವರು 4 ಬಾರಿ ಮುಖ್ಯಮಂತ್ರಿ ಆದರು. ಜನ ನಮಗೆ ಸ್ಪಷ್ಟ ಬಹುಮತ ಕೊಟ್ಟಿಲ್ಲ. ಆದರೆ, ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ಕೆಲವು ಗೊಂದಲಗಳು ಇದ್ದದ್ದು ನಿಜ. ಈ ಎಲ್ಲ ಗೊಂದಲಗಳನ್ನು ಹೈಕಮಾಂಡ್ ಬಗೆಹರಿಸಿದೆ ಎಂದು ಹೇಳಿದರು.

ಯಾರನ್ನ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಬಿಡಬೇಕು ಎಂಬುದು ಹೈಕಮಾಂಡ್ ಗೆ ಗೊತ್ತಿದೆ. ನಮಲ್ಲಿನ ಗೊಂದಲ ಬಗೆಹರಿದಿದೆ, ಈಗ ಕಾಂಗ್ರೆಸ್ ನಲ್ಲಿ ಗೊಂದಲ ಶುರು ಆಗಿದೆ.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ತನ್ವೀರ್ ಸೇಠ್, ಎಂ.ಬಿ. ಪಾಟೀಲ್ ನಾನೇ ಸಿಎಂ ಎಂದು ಹೇಳಿಕೊಳ್ಳುತ್ತಿದ್ದಾರೆ. ಇವರಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಅವರ ಹೈಕಮಾಂಡ್ ಘೋಷಿಸಲಿ ಎಂದು ಸವಾಲು ಹಾಕಿದರು.

ಲೆಕ್ಕ ಕೊಡದವರ ಮನೆಗೆ ನುಗ್ಗಿ ಚಾಕು ಇರಿತ; ಗ್ರಾ. ಪಂ ಸದಸ್ಯನ ಮಕ್ಕಳ ಪುಂಡಾಟ?

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ ಮೂವತ್ತು ವರ್ಷಗಳ ಆಡಳಿತದ ಅಂಜುಮನ್ ಇಸ್ಲಾಂ ಕಮಿಟಿಯ ಲೆಕ್ಕ ಕೇಳಲು ಹೋದ ಗ್ರಾಮ ಪಂಚಾಯತಿ ಸದಸ್ಯನ ಮಕ್ಕಳು ಹಾಗೂ ಬೆಂಬಲಿಗರು ಇಬ್ಬರ ಮೇಲೆ ಹಲ್ಲೆ ಮಾಡಿ ಓರ್ವನಿಗೆ‌ ಚಾಕು ಇರಿದ ಘಟನೆ ಜರುಗಿದೆ.

ಗದಗ ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಮಹಬೂಬಸಾಬ ಮಕ್ತುಮಸಾಬ ದೊಡ್ಡಮನಿ ಹಾಗೂ ಫಕ್ರುದ್ದೀನ ಪೆಂಡಾರಿ ಚಿಕಿತ್ಸೆಗೆ ಜಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳಸಾಪೂರ ಗ್ರಾಮ ಪಂಚಾಯತಿ ಸದಸ್ಯ ನಜೀರಸಾಬ ಅಂಗಡಿ, ಮಕ್ಕಳಾದ ಸದ್ದಾಂ, ಸಾಧಿಕ್ ಹಾಗೂ ಸಂಬಂಧಿಗಳು, ಗಾಯಾಳು ಮಹಿಬೂಬಸಾಬ್ ಅವರ ತಂದೆ ಮಕ್ತುಮಸಾಬನನ್ನು ಲೆಕ್ಕ ಕೇಳಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಮಹಬೂಬಸಾಬನಿಗೆ ಸಾಧಿಕ್ ಅಂಗಡಿ ಚಾಕುವಿನಿಂದ ತಲೆಗೆ ಇರಿದಿದ್ದಾನೆ. ಅಲ್ಲೆಯೇ ಇದ್ದ ಫಕ್ರುಸಾಬನ ಮೇಲೂ ಹಲ್ಲೆ ಮಾಡಲಾಗಿದ್ದು, ಗಾಯಗೊಂಡ ಇಬ್ಬರೂ ಜಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ನಜೀರಸಾಬ ಅಂಗಡಿ ಸೇರಿದಂತೆ ಒಂಬತ್ತು ಜನರ ಮೇಲೆ ಪ್ರಕರಣ ದಾಖಲಾಗಿದೆ.

ಪ್ರತಿದೂರು ದಾಖಲು

ಅಂಜುಮನ್ ಎ ಇಸ್ಲಾಂ ಕಮಿಟಿಯ ಹಿರಿಯರಾದ
ಮಕ್ತುಮಸಾಬ ಮಾಬುಸಾಬ ದೊಡ್ಡಮನಿ ಎಂಬುವರು ಮನೆ ಮುಂದೆ ಫಿರ್ಯಾದಿ ಮಕಬೂಲಸಾಬ ಚತ್ತುಸಾಬ ಪೆಂಡಾರಿ ಹಾಗೂ ಹಿರಿಯರು ಹೋಗಿ ಲೆಕ್ಕದ ಮಾಹಿತಿ ಕೇಳಿದಾಗ ಮಕಬೂಲಸಾಬ ಮಾಬುಸಾಬ ದೊಡ್ಡಮನಿ, ತೌಶೀಪ್ ಮಕ್ತುಮಸಾಬ ದೊಡ್ಡಮನಿ ಹಾಗೂ ಆಶೀಫ್ ಮಾಬುಸಾಬ ದೊಡ್ಡಮನಿ ಸೇರಿದಂತೆ ಹತ್ತು ಜನರ ತಂಡ ಅವಾಚ್ಯ ಶಬ್ದಗಳಿಂದ ಬೈದು, ನಾಶಿರ ಹೊನ್ನೂರಸಾಬ ಪೆಂಡಾರಿ, ಫಕ್ರುಸಾಬ ರಾಜೇಸಾಬ ಪೆಂಡಾರಿ ಹಾಗೂ ಸಾಧಿಕ್ ನಜೀರಸಾಬ ಅಂಗಡಿ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲ ಗ್ರಾಮ ಪಂಚಾಯತಿ ಸದಸ್ಯ ನಜೀರಸಾಬ ಹುಚ್ಚುಸಾಬ ಅಂಗಡಿ ಎಂಬಾತನಿಗೆ ಅಡ್ಡಗಟ್ಟಿ ನಿಲ್ಲಿಸಿ, ಗಟ್ಟಿಯಾಗಿ ಹಿಡಿದು, ಅಕ್ರಮ ತಡೆಯೊಡ್ಡಿ, ಇನ್ನೊಮ್ಮೆ ಮನೆ ಹತ್ರ ಜೀವ ತಗೆತೀವಿ ಅಂತ ಬೆದರಿಕೆವೊಡ್ಡಿದ್ದಾರೆ ಎಂದು ಪ್ರತಿದೂರು ನೀಡಲಾಗಿದೆ.

ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈ ಗೊಂಡಿದ್ದಾರೆ.

ಆಟೋ ಚಾಲಕನ ಮೇಲೆ ಟ್ರಾಫಿಕ್ ಪೊಲೀಸ್ ದರ್ಪ

ವಿಜಯಸಾಕ್ಷಿ ಸುದ್ದಿ, ಗದಗ

ಯಾರನ್ನೋ‌ ಮೆಚ್ಚಿಸಲು ಹೋಗಿ ಸಂಚಾರಿ ಪೊಲೀಸರೊಬ್ಬರು ಬಡಪಾಯಿ ಆಟೋ ಡ್ರೈವರ್ ಮೇಲೆ ದರ್ಪ ಮೆರೆದ ಘಟನೆ ಗದಗನ ನಗರದಲ್ಲಿ ನಡೆದಿದೆ.

ಇಲ್ಲಿನ ಹತ್ತಿಕಾಳ ಕೂಟ (ಬಸವೇಶ್ವರ ಸರ್ಕಲ್) ಬಳಿ ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಟ್ರಾಫಿಕ್ ಹೆಡ್ ಕಾನಸ್ಟೇಬಲ್ ಸತ್ಯರಡ್ಡಿ ಎಂಬುವರೇ ಆಟೋ ಡ್ರೈವರ್ ನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಪ್ರಶ್ನೆಸಿದರೆ ಆಟೋ ಸಮೇತ ಒಳಗೆ ಹಾಕಿಸುವ ಬೆದರಿಕೆ ಹಾಕಿದ್ದಾರೆ.

ನಿನ್ನೆ ಸಂಜೆ 7-30 ರ ಸುಮಾರಿಗೆ ಬಸವೇಶ್ವರ ಸರ್ಕಲ್ ಬಳಿ ದೊಡ್ಡ ಪ್ರಮಾಣದ ಗೂಡ್ಸ ಲಾರಿಯೊಂದು ರಸ್ತೆಗೆ ಅಡ್ಡವಾಗಿ ನಿಂತಿತ್ತು. ಅದರಲ್ಲಿದ್ದ ಕಿರಾಣಿ ಸಾಮಾನುಗಳನ್ನು ಅರಿಹಂತ ಟ್ರೇಡರ್ಸ್ ಅನ್ನೂ ಅಂಗಡಿಗೆ ಇಳಿಸಲಾಗುತ್ತಿತ್ತು. ಈ ವೇಳೆ ಟ್ರಾಫಿಕ್ ಜಾಮ್ ಆಗಿದೆ. ನಿತ್ಯವೂ ಸರ್ಕಲ್ ಬಳಿ ಗ್ರಾಮೀಣ ಭಾಗಕ್ಕೆ ಹೋಗುವ ಪ್ರಯಾಣಿಕರಿಗಾಗಿ ಆಟೋ, ಟಂ ಟಂ ನಿಲ್ಲಿಸಲಾಗುತ್ತೆ.

ಅದರಂತೆ ನಿನ್ನೆ ಸಂಜೆಯೂ ಕಳಸಾಪೂರ ಗ್ರಾಮದ ಸುಲೆಮಾನ್ ಎಂಬಾತ ತನ್ನ ಆಟೋ ನಿಲ್ಲಿಸಿಕೊಂಡು ಪ್ರಯಾಣಿಕರಿಗಾಗಿ ಕಾಯುತ್ತಿದ್ದ. ಈ ಸಂದರ್ಭದಲ್ಲಿ ಒಂದಿಷ್ಟು ಟ್ರಾಫಿಕ್ ಜಾಮ್ ಆಗಿದೆ. ಮೊದಲೇ ದೊಡ್ಡ ಲಾರಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಗಿತ್ತು. ಇದರಿಂದ ಮತ್ತಷ್ಟು ಸಮಸ್ಯೆ ಆಗಿದೆ. ಆದರೆ ಲಾರಿ ಚಾಲಕನ ತಪ್ಪೋ ಅಥವಾ ಅಂಗಡಿ ಮಾಲೀಕನ ತಪ್ಪೋ ಅದನ್ನು ಗಮನಿಸದೆ ಸತ್ಯರಡ್ಡಿ ಸಾಹೇಬರು ಸೀದಾ ಬಂದವರೇ ಆಟೋ ಚಾಲಕ ಸುಲೇಮಾನ್ ಗೆ ಪಟಾರ್ ಅಂತ ಕಪಾಳಕ್ಕೆ ಹೊಡೆದಿದ್ದು ಅಲ್ಲದೇ, ನಾಲ್ಕೈದು ಏಟು ಬಾರಿಸಿದ್ದಾರೆ. ಇದು ಅಲ್ಲಿದ್ದ ಇತರ ಆಟೋ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಟ್ರಾಫಿಕ್ ಜಾಮ್ ಇದೇ ಮೊದಲಲ್ಲ

ಬಸವೇಶ್ವರ ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಆಗೋದು ಇದೇ ಮೊದಲಲ್ಲ. ಪ್ರತಿ ಸೋಮವಾರ, ಬುಧವಾರ ಹಾಗೂ ಶನಿವಾರ ಈ ಸಮಸ್ಯೆ ಉಂಟಾಗುತ್ತೆ. ಆದ್ರೂ ಪೊಲೀಸರು ಮಾತ್ರ, ದ್ವಿಚಕ್ರ ವಾಹನ ಸವಾರರ, ಆಟೋ ಚಾಲಕರ ಮೇಲೆ ಸವಾರಿ ಮಾಡಿ, ಗದರಿಸಿ ಅಂಗಡಿ ಮಾಲೀಕರ ಮೇಲೆ ಕರುಣೆ ತೋರಿಸುತ್ತಾರೆ. ಗೂಡ್ಸ ವಾಹನ, ಟಂ ಟಂ ವಾಹನಗಳ, ದೊಡ್ಡ ದೊಡ್ಡ ಲಾರಿಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವವರಿಗೆ ಪಾಠ ಕಲಿಸಬೇಕು. ಆದರೆ ಏಕಾಏಕಿ ಹಲ್ಲೆ ಮಾಡುವ, ಬಡವರ ಮೇಲೆ ದರ್ಪ ಮೆರೆಯುವು ಇಂತಹ ಪೊಲೀಸರ ಮೇಲೆ ಹಿರಿಯ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.

ಕುತೂಹಲ ಕೆರಳಿಸಿದ ಬಿಎಸ್ ವೈ ಕುಮಾರಕೃಪಾ ಭೇಟಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಸಿಎಮ್ ಯಡಿಯೂರಪ್ಪ ಬೆಂಗಳೂರಿನ ಕೇಶವ ಕೃಪಾಗೆ ಭೇಟಿ ನೀಡಿ ಆರ್ ಎಸ್ ಎಸ್ ಮುಖಂಡರೊಂದಿಗೆ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯಪಾಲರ ಹುದ್ದೆ ಬೇಡವೆಂದಿರುವ ಯಡಿಯೂರಪ್ಪನವರನ್ನು ಮನವೊಲಿಕೆ ಮಾಡುವ ನಿಟ್ಟಿನಲ್ಲಿ ಮುಖಂಡರು ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೂ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿಯೂ ಯಡಿಯೂರಪ್ಪ ಆರ್ ಎಸ್ ಎಸ್ ಮುಖಂಡರ ಜೊತೆ ಚರ್ಚಿಸಬಹುದಾದ ಸಾಧ್ಯತೆಯಿದೆ ಎನ್ನಲಾಗುತ್ತದೆ.

ಸಂಪುಟ ವಿಸ್ತರಣೆ: ಮುಖ್ಯಮಂತ್ರಿ ನಿರ್ಧಾರಕ್ಕೆ ಬದ್ಧ


ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟದ್ದು. ಸಿಎಂ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ಬೆಂಗಳೂರಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಬಳಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು,
ಸಂಪುಟ ವಿಸ್ತರಣೆ ವಿಷಯದಲ್ಲಿ ಸಿಎಂ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು ಎಂದರು.

ಶೆಟ್ಟರ್ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರು ಯಾವ ನಿರ್ಧಾರ ಕೈಗೊಳ್ಳುತ್ತಾರೊ ನನಗೆ ಗೊತ್ತಿಲ್ಲ. ಶೆಟ್ಟರ್ ಅವರದು ವೈಯಕ್ತಿಕ ವಿಚಾರ. ಈ ಬಗ್ಗೆ ಹೇಳಿಕೆ ನೀಡಿ ಗೊಂದಲ ಸೃಷ್ಟಿಲಾರೆ ಎಂದು ಹೇಳಿದರು.

ಮೊದಲ ಸಚಿವ ಸಂಪುಟ ಸಭೆಯಲ್ಲೇ ಅತ್ಯುತ್ತಮವಾದ ನಿರ್ಧಾರಗಳನ್ನು ಸಿಎಂ ಬೊಮ್ಮಾಯಿ ತೆಗೆದುಕೊಂಡಿದ್ದಾರೆ. ರೈತರು, ಹಿರಿಯರು, ವಿಧವೆಯರು, ಅಂಗವಿಕಲರಿಗೆ ಆದ್ಯತೆ ನೀಡುವ ನಿರ್ಣಯಗಳನ್ನು ಕೈಗೊಂಡಿರುವುದು ಉತ್ತಮ ನಿರ್ಧಾರ ಎಂದು ಪ್ರಶಂಸಿಸಿದರು.

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ

  • ಬಳ್ಳಾರಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ಹೈಕಮಾಂಡ್ ಏನ್ ತೀರ್ಮಾನ ತೆಗೆದುಕೊಳ್ಳುವುದೋ ಅದಕ್ಕೆ ನಾನು‌ ಬದ್ಧ. ಎಂತಹುದೆ ನಿರ್ಧಾರ ಕೈಗೊಂಡರೂ
ನನಗೆ ಯಾವುದೇ ಬೇಸರವಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಸ್ಥಾನ ವಿಚಾರವಾಗಿ ನನ್ನ ಬಗ್ಗೆ ಚರ್ಚೆಯಾಗಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ‌ ನೋಡಿದ್ದೆ ಅಷ್ಟೇ. ಆದರೆ, ಯಾವುದೇ ಚೆರ್ಚೆಗಳಾಗಿಲ್ಲ. ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಆಯ್ಕೆ ಬಿಟ್ಟರೆ ಏನು ನಡೆದಿಲ್ಲ. ಇನ್ನು ಯಾರ್ಯಾರು ಮಂತ್ರಿಗಳಾಗ್ತಾರೊ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ನೂತನ ಸಿ.ಎಂ.ಬೊಮ್ಮಾಯಿ ಶಾಡೋ ಮುಖ್ಯಮಂತ್ರಿ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ,
ನೂತನ ಸಿ.ಎಂ. ಬೊಮ್ಮಾಯಿ ಒಳ್ಳೆಯವರು, ಅನುಭವಿ ರಾಜಕಾರಣಿ. ಕೋವಿಡ್ ಸಂಧರ್ಭದಲ್ಲಿ ಸರ್ಕಾರ ಯಾವ ರೀತಿ ನಡಸಿದರೋ ಅದೇ ರೀತಿ ನಡೆಸ್ತಾರೆ ಎಂದು ಹೇಳಿದರು.

ಯಡಿಯೂರಪ್ಪ ಸಿಎಂ ಆಗಲು ನಾನೇ ಕಾರಣ

  • ಚಿತ್ರದುರ್ಗದಲ್ಲಿ ದೇವದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ದಕ್ಷಿಣ ಭಾರತದಲ್ಲಿ ಪಕ್ಷ ಬರಲು, ಯಡಿಯೂರಪ್ಪ ಮುಖ್ಯಮಂತ್ರಿಯಾಲು ನಾನೇ ಕಾರಣ ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 2008ರಲ್ಲಿ ಸರ್ಕಾರ ರಚನೆಗೆ ಬಿಜೆಪಿ ಬೆಂಬಲ ನೀಡಲು ಮೊದಲು ಮುಂದೆ ಬಂದವನೇ ನಾನು. ನನಗೆ ಆಗ ಕಾಂಗ್ರೆಸ್ ಪಕ್ಷದಲ್ಲಿ ಅನ್ಯಾಯವಾಗಿತ್ತು. ಬಿಜೆಪಿಗೆ ಮೂವರ ಬೆಂಬಲ ಬೇಕಿತ್ತು. ನಾನೊಬ್ಬನೇ ಪ್ರೀಯಾಗಿ ಬೆಂಬಲ ಕೊಟ್ಟಿದ್ದೆ.

ವರ್ತೂರ್ ಪ್ರಕಾಶ್, ನರೇಂದ್ರ ಸ್ವಾಮಿ, ಸುಧಾಕರ್, ವೆಂಕಟರಮಣಪ್ಪ ಎಲ್ಲರೂ ಕಾಂಗ್ರೆಸ್ ಹಿನ್ನಲೆಯವರು. ಅಂದು ಇವರಾರೂ ಮುಂದೆ ಬರಲಿಲ್ಲ. ಶಾಸಕಾಂಗ ಸಭೆಯಲ್ಲಿ ನಾನೇ ಮೊದಲು ಬಿಜೆಪಿ ಬೆಂಬಲಿಸಿದ್ದು.
ನನ್ನ ಕರೆದುಕೊಂಡು ಹೋಗಿ ಬಳ್ಳಾರಿಯ ಜನಾರ್ಧನ ರೆಡ್ಡಿ, ರಾಮುಲು, ಕರುಣಾಕರ ರೆಡ್ಡಿ ಪವರ್ ಪುಲ್ ಮಂತ್ರಿಯಾದರು.
ಹೊರಗಡೆ ಗೂಳಿಹಟ್ಟಿ ಶೇಖರ್ ನೂರು ಕೋಟಿ ತಕೊಂಡರು ಎಂದು ಬಿಂಬಿಸಿದರು.
ಈ ರೀತಿ ಹೈಪ್ ಮಾಡಿ ಮಂತ್ರಿಯಾದರು. ನಾನು ಒಂದು ರೂಪಾಯಿ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಬಂದ ನಂತರವೇ ಉಳಿದವರು ಬೆಂಬಲಕ್ಕೆ ಮುಂದೆ ಬಂದರೂ, ಅವರಿಗೆ ಪವರ್ ಪುಲ್ ಖಾತೆ ನೀಡಿ ನನಗೆ ಅನ್ಯಾಯ ಮಾಡಿದರು. ನಮ್ಮ ಹಿಂದೆ ಬಂದವರಿಗೆ ಉತ್ತಮ ಸ್ಥಾನಮಾನ ನೀಡಿದರು. ಬಿಜೆಪಿ ಸರ್ಕಾರ ಬರಲು, ಯಡಿಯೂರಪ್ಪರನ್ನ ಸಿಎಂ ಮಾಡಲು ನಾನೇ ಕಾರಣ ಎಂದು ಎದೆತಟ್ಟಿಕೊಂಡು ಹೇಳುವೆ. ಇದು ಯಡಿಯೂರಪ್ಪ ಅವರಿಗೆ ಗೊತ್ತು, ಹೇಳಿದರೆ ಘನತೆಗೆ ಧಕ್ಕೆ ಬರುತ್ತದೆ ಎಂದು ಹೇಳಲ್ಲ ಎಂದರು.

ಜಿಲ್ಲೆಯಲ್ಲಿ ನನ್ನ ಕೆಪಾಸಿಟಿ ಏನೆಂದು ಬಿಜೆಪಿ ವರಿಷ್ಠರಿಗೂ ಗೊತ್ತಿದೆ. 2014 ರಲ್ಲಿ ದೇಶದಲ್ಲಿ ಮೋದಿ ಅಲೆ ಇದ್ದಾಗಲೂ ಚಿತ್ರದುರ್ಗದಲ್ಲಿ ಬಿಜೆಪಿ ಸೋಲು ಕಂಡಿತ್ತು. ನಾನು ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದರಿಂದ ಸೋತಿತ್ತು. ಬೇರೆ ಜಿಲ್ಲೆಯವರಾದ ರಘು ಆಚಾರ್ ಅವರನ್ನು ಕರೆತಂದು ಎಂಎಲ್ಸಿ ಮಾಡಿದ್ದೇನೆ.

ನಾನು ಯಾವುದೇ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ, ನಮ್ಮ ಮಾತು ಯಾರೂ ಕೇಳಲ್ಲ. ನಮಗೆ ಯಾರು ಗಾಡ್ ಫಾದರ್ ಇಲ್ಲ .ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಇರುತ್ತೇನೆ ಎಂದು ಹೇಳಿದರು.

ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆ‌ ಸ್ವಾಗತಾರ್ಹ

  • ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಯಡಿಯೂರಪ್ಪ ಪದತ್ಯಾಗದಿಂದ‌ ಬಹುಸಂಖ್ಯಾತ ವೀರಶೈವ ಲಿಂಗಾಯತ ಸಮುದಾಯದವರು ಬೇಸರದಲ್ಲಿದ್ದರು. ಅದನ್ನು ಸರಿದೂಗಿಸಲು ಅದೇ ಸಮುದಾಯದ ನಾಯಕನನ್ನು ಸಿಎಂ ಮಾಡಿರುವುದು ಸ್ವಾಗತಾರ್ಹ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಜಗದ್ಗುರುಗಳು ಹೇಳಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ ನಾಲ್ಕೈದು ಜನರ ಹೆಸರು ಕೇಳಿ ಬಂದಿದ್ದವಾದರೂ ಬಸವರಾಜ ಬೊಮ್ಮಾಯಿ ಸರ್ವಾನುಮತದಿಂದ ಆಯ್ಕೆ ಮಾಡಿರುವುದು, ಬಿಜೆಪಿಯ ಒಗ್ಗಟ್ಟು, ದೂರದೃಷ್ಟಿಗೆ ಸಾಕ್ಷಿ ಎಂದರು.

ಬಸವರಾಜ ಬೊಮ್ಮಾಯಿ ಚಾಣಾಕ್ಷ ರಾಜಕಾರಣಿ, ದಕ್ಷ ಆಡಳಿತಗಾರ, ಯಾವುದೇ ಆರೋಪಗಳಿಲ್ಲ. ಹೀಗಾಗಿ, ಬಿಜೆಪಿಯ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ಅವರಲ್ಲಿದೆ. ಯಡಿಯೂರಪ್ಪ ಅವರ ಮಾತಿಗೆ ರಾಷ್ಟ್ರೀಯ ನಾಯಕರು ಗೌರವ ಕೊಟ್ಟಿದ್ದಾರೆ ಎಂದು ಭಾವಿಸಿದ್ದೇವೆ ಎಂದರು.

ಮೈಸೂರು ಪ್ರಾಂತ್ಯದಲ್ಲಿ ಆಗುತ್ತಿದ್ದ ಅಭಿವೃದ್ಧಿ ಕಾರ್ಯಗಳು ಉತ್ತರ ಕರ್ನಾಟಕದಲ್ಲಿ ಆಗುತ್ತಿಲ್ಲವೆಂಬ ಕೂಗು ಕೇಳಿ ಬರುತ್ತಿದೆ.
ಇದರ ಕಡೆ ಬೊಮ್ಮಾಯಿ ಹೆಚ್ಚಿನ ಮುತುವರ್ಜಿ ವಹಿಸಿವ ಉ.ಕ. ಭಾಗದ ಅಭಿವೃದ್ಧಿಗಳು ಕಾರ್ಯ ಕುಂಠಿತವಾಗಿದ್ದು, ಅವುಗಳಿಗೆ ವೇಗ ತರಬೇಕು.‌ ಈ ಭಾಗದ ರೈತ ಸಮುದಾಯಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕು. ಮೌಲ್ಯಾಧರಿತ ಶಿಕ್ಷಣಕ್ಕೆ ಒತ್ತು ನೀಡಿ ಜಾತಿ-ಮತ-ವರ್ಗಗಳನ್ನು ಮರೆತು ಕೆಲಸ ಮಾಡಬೇಕು ಎಂದರು.

ಈವರೆಗೂ ಬಿಜೆಪಿಯಲ್ಲಿ ಗುಂಪುಗಳಾಗಿ ಕೆಲಸ ಮಾಡುತ್ತಿದ್ದರು. ಸಿಎಂ ಬೊಮ್ಮಾಯಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕು. ಬಿಎಸ್‌ವೈ ದೂರದೃಷ್ಟಿ, ಸಂಕಲ್ಪ ಸಾಕಾರಗೊಳಿಸುವ ನಿಟ್ಟಿನಲ್ಲಿ ಬೊಮ್ಮಾಯಿ ಕೆಲಸ ಮಾಡಲಿ ಎಂದರು.

ಸಿಎಂ ಆಗಿ ಬಸವರಾಜ ಬೊಮ್ಮಾಯಿ ಉತ್ತಮ ಆಯ್ಕೆ; ಜೋಶಿ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಸಿಎಂ ಆಗಿ ಬಸವರಾಜ ಬೊಮ್ಮಾಯಿ ಉತ್ತಮ ಆಯ್ಕೆ. ಪ್ರಧಾನಿ ನರೇಂದ್ರ ಮೋದಿ, ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ನಡ್ಡಾ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ. ಬೊಮ್ಮಾಯಿ ಒಳ್ಳೆಯ ಮನುಷ್ಯ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ಹೇಳಿದರು.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸ್ವಭಾವದಿಂದ ಒಳ್ಳೆಯ ವ್ಯಕ್ತಿ. ನನ್ನ ಆತ್ಮೀಯ ಸ್ನೇಹಿತರೂ ಸಹ ಎಂದು ಹೇಳಿದರು. ಬಿಜೆಪಿಗೆ ಯಡಿಯೂರಪ್ಪ ಕೊಡುಗೆ ದೊಡ್ಡದು. ಕರ್ನಾಟಕದಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸರಕಾರ ಸುಗಮವಾಗಿ ನಡೆಯಲಿದ್ದು, ಉತ್ತಮ ಆಡಳಿತ ನೀಡಲಿದೆ ಎಂದು ಸಚಿವ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ಎಲ್ಲ ಸರಿಯಿದೆ. ಏನೇ ಸಮಸ್ಯೆಗಳಿದ್ದರೂ ಚರ್ಚಿಸಿ ಪರಿಹರಿಸಲಾಗುವುದು ಎಂದರು. ರೈತ ಪರ ಕಾನೂನು ವಿರೋಧಿಸಿ ಪ್ರತಿಪಕ್ಷಗಳು ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ನಡೆ ಅಪ್ರಬುದ್ಧವಾದದು. ರೈತರ ಹಿತಕ್ಕಾಗಿ ಈ ಕಾನೂನುಗಳು ಎರಡೂ ಸದನಗಳಲ್ಲಿ ಅಂಗೀಕಾರವಾಗಿವೆ. ಕೃಷಿ ಕಾನೂನು ಜಾರಿಗೊಂಡ ಬಳಿಕ‌ ದೇಶದ ಅನೇಕ ಕಡೆ ಚುನಾವಣೆ ಆಗಿವೆ. ಜನರು ಸರ್ಕಾರದ ನೀತಿ ಸ್ವೀಕರಿಸಿ ಮತಗಳನ್ನು ನೀಡಿದ್ದಾರೆ. ಪ್ರತಿಪಕ್ಷಗಳ ನಡೆಯನ್ನು ದೇಶದ ಜನ ನೋಡುತ್ತಿದ್ದಾರೆ ಎಂದು ಹೇಳಿದರು.

ಮಹತ್ಮಾ ಗಾಂಧಿ ಮಗ ಕುಡಕನಾದ, ಬೊಮ್ಮಾಯಿ ಮಗ ತಂದೆಯಂತಾಗುತ್ತಾರೆ ಅನ್ನೋದು ಏನು ಗ್ಯಾರಂಟಿ ?

  • ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಮೈಸೂರು

ಮಹಾತ್ಮ ಗಾಂಧಿ ಮಗ ಅವರಂತಾಗಲಿಲ್ಲ,
ಕುಡುಕನಾದ. ಅದೇ ರೀತಿ ಬೊಮ್ಮಾಯಿ ಮಗ ತಂದೆಯಂತೆ ಆಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಂದೆಯ ಗುಣ ಕೆಲವು ಮಕ್ಕಳಿಗೆ ಬರುವುದಿಲ್ಲ. ಎಸ್.ಆರ್. ಬೊಮ್ಮಾಯಿ ಗುಣ ಮಗನಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.

ಮುಖ್ಯಮಂತ್ರಿ ಬದಲಾದ್ರೆ ಎಲ್ಲವೂ ಬದಲಾಗುತ್ತಾ..?

ಯಡಿಯೂರಪ್ಪ ಇಳಿದ್ದಿದ್ದಾರೆ.
ಬೊಮ್ಮಾಯಿ ಸಿಎಂ ಆಗಿದ್ದಾರೆ ಎಂದ ಮಾತ್ರಕ್ಕೆ ಬಿಜೆಪಿಯ ಐಡಿಯಾಲಜಿ ಬದಲಾಗುತ್ತಾ.? ಎಂದವರು ಪ್ರಶ್ನಿಸಿದ್ದಾರೆ. ಕೋಮುವಾದ ಹೊರಟು ಹೋಗುತ್ತಾ ? ಹಿಂದುತ್ವದ ಅಜೆಂಡಾ ಬದಲಾಗುತ್ತಾ ? ಬಿಜೆಪಿಯವರು ಯಾವತ್ತಿಗೂ ಅಲ್ಪಸಂಖ್ಯಾತರು, ದಲಿತರು, ಬಡವರ ಪರವಾಗಿ ಇಲ್ಲ. ಹಾಗಾಗಿ ಈ ಸರ್ಕಾರದಿಂದ ಯಾವುದೇ ನೀರೀಕ್ಷೆ ಮಾಡೋದಿಲ್ಲ ಎಂದರು.

ಬಸವರಾಜ ಬೊಮ್ಮಾಯಿಗೆ ಒಂದು ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ಆಡಳಿತ ನೀಡಲಿ ಎಂದಷ್ಟೆ ನಾ ಹೇಳಬಲ್ಲೆ ಎಂದರು.

error: Content is protected !!