Home Blog Page 3258

ನಾಳೆ ಬೆಳಗಾವಿಗೆ ಸಿಎಂ ಭೇಟಿ; ಪ್ರವಾಹ ಪರಿಸ್ಥಿತಿ ಅವಲೋಕನ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಪದತ್ಯಾಗ ಖಾತ್ರಿಯಾಗಿರುವ ಮಧ್ಯೆಯೇ ಸಿಎಂ ಯಡಿಯೂರಪ್ಪ ಮತ್ತಷ್ಟು ಆ್ಯಕ್ಟಿವ್ ಆಗಿದ್ದು, ಭಾನುವಾರ ಬೆಳಗಾವಿ ಜಿಲ್ಲೆಯ ಪ್ರವಾಸ ಕೈಗೊಂಡು ಪ್ರವಾಹ ಪರಿಸ್ಥಿತಿ ಅವಲೋಕನ ನಡೆಸುವರು. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕೈದು ದಿನದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಬೆಳಗಾವಿಗೆ ಆಗಮಿಸಿ ನಂತರ ಅವರು ವಿವಿಧ ಪ್ರದೇಶಗಳ ವೈಮಾನಿಕ ಸಮೀಕ್ಷೆ ಬಳಿಕ ಪರಿಶೀಲನಾ ಸಭೆಯನ್ನೂ ನಡೆಸಲಿದ್ದಾರೆ‌ ಎಂದು ತಿಳಿದುಬಂದಿದೆ. ಡಿಸಿಎಂ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲೆಯ ಸಚಿವರು ಸೇರಿದಂತೆ ಕೆಲವು ಸಚಿವರು ಸಿಎಂಗೆ ಸಾಥ್ ನೀಡಲಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿಗಳ ಜೊತೆ ಅವರು ವಿಡಿಯೋ ಸಂವಾದ ನಡೆಸಿದ್ದರು.
ಸೋಮವಾರ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜಿನಾಮೆ ನೀಡಲಿದ್ದಾರೆ ಎನ್ನುವ ಸುದ್ದಿ ಹರಡಿರುವುದರಿಂದ ಅದು ನಿಜವಾದಲ್ಲಿ ಸಿಎಂ ಆಗಿ ಬೆಳಗಾವಿ ಜಿಲ್ಲೆಗೆ ಅವರ ಕೊನೆಯ ಭೇಟಿಯಾಗಲಿದೆ ಎಂಬ ಮಾತು ಕೇಳಿಬರುತ್ತಿವೆ.

ಕೃಷ್ಣಾ ಪ್ರವಾಹದಲ್ಲಿ ಸಿಲುಕಿದವರ ನೆರವಿಗೆ ಧಾವಿಸಿದ ಎನ್ ಡಿಆರ್ ಎಫ್

  • ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಿಂದ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ನದಿತೀರದಲ್ಲಿ ನೀರಿನಲ್ಲಿ ಸಿಲುಕಿದ್ದ ಹಲವರನ್ನು ಎನ್‍ಡಿಆರ್‍ಎಫ್ ತಂಡ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.

ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಕಮತೆ ತೋಟದಲ್ಲಿ ಕೃಷ್ಣಾ ನದಿಯ ನೀರು ಆವರಿಸಿ ಮನೆಯೊಂದರ ಸುತ್ತುವರಿದ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಎನ್‍ಡಿಆರ್‍ಎಫ್ ಸಿಬ್ಬಂದಿ ಹಾಗೂ ಅಂಕಲಿ ಪೊಲೀಸರು ಬೋಟ್ ಮೂಲಕ ತೆರಳಿ ಸಾಜನೆ ಕುಟುಂಬದ ನಾಲ್ವರನ್ನು ಯಡೂರ ಗ್ರಾಮಕ್ಕೆ ತಂದು ಸುರಕ್ಷಿತ ಸ್ಥಳಕ್ಕೆ ರವಾನಿಸಿದರು.

ಮುಳವಾಡದಲ್ಲಿ ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಿಸಿ ಮುಳವಾಡದಿಂದ ಶಿರಗುಪ್ಪಿಗೆ ಸ್ಥಳಾಂತರಿಸಿದರು. ಮಾಂಗೂರ ಪಾಟಾದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಂತ್ರಸ್ತರನ್ನು ಯಮಗರ್ಣಿಗೆ ಸ್ಥಳಾಂತರಿಸಿದರು. ಹುಬ್ಬಳ್ಳಿಗೆ ಶಸ್ತ್ರ ಚಿಕಿತ್ಸೆಗೆ ಹೋಗಬೇಕಿದ್ದ ಓರ್ವ ರೋಗಿಯನ್ನು ಆಂಬುಲೆನ್ಸ್ ಮೂಲಕ ಹುಬ್ಬಳ್ಳಿಗೆ ಕಳಿಸಿಕೊಟ್ಟರು.

ಡಾ. ಅಂಬೇಡ್ಕರ್ ಗೆ ಅತಿಹೆಚ್ಚು ಅವಮಾನ ಮಾಡಿದ್ದು ಕಾಂಗ್ರೆಸ್

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ಡಾ. ಅಂಬೇಡ್ಕರ್ ಗೆ ಅತಿಹೆಚ್ಚು ಅವಮಾನ ಮಾಡಿದ್ದು ಕಾಂಗ್ರೆಸ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ತಾಕತ್ತಿದ್ದರೆ ದಲಿತ ಸಿಎಂ ಮಾಡಲಿ ಎಂದ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯಗೆ
ಚಿತ್ರದುರ್ಗದಲ್ಲಿ ತಿರುಗೇಟು ನೀಡಿದರು.

ದೇಶದ ಮೊದಲ ಸಚಿವ ಸಂಪುಟದಲ್ಲಿ ನೋವಾಗಿ ಡಾ.ಅಂಬೇಡ್ಕರ್ ರಾಜೀನಾಮೆ ನೀಡಿದ್ದರು. ಲೋಕಸಭೆ ಚುನಾವಣೆಗೆ ನಿಂತಾಗ ಅವರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್ ನವರು, 2ನೇ ಬಾರಿ ಅವರ ಸಹಾಯಕನನ್ನೇ ಎದುರು‌ ನಿಲ್ಲಿಸಿ ಸೋಲಿಸಿದರು. ಅಂಬೇಡ್ಕರ್ ಅಂತ್ಯ ಸಂಸ್ಕಾರಕ್ಕೂ ಜಾಗ ಕೊಡಲಿಲ್ಲ. ಭಾರತರತ್ನವೂ ಕೊಡಲಿಲ್ಲ, ಅವರಿಗೆ ಭಾರತ ರತ್ನ ಕೊಟ್ಟಿದ್ದು ನಾವು. ಕಾಂಗ್ರೆಸ್ ನವರು ಜಗಜೀವನ್ ರಾಮ್ ರನ್ನು ಪ್ರಧಾನಿ ಮಾಡಲಿಲ್ಲ ಎಂದು ಕುಟುಕಿದರು.

ಸಿದ್ದರಾಮಣ್ಣನ ಇತಿಹಾಸ ಹೇಳಬೇಕೆಂದರೆ ಕಾಂಗ್ರೆಸ್ ಗೆ ಬಂದು ಸಿಎಂ ಆದರು. ಪರಮೇಶ್ವರ್ ಅವರನ್ನು ಡಿಸಿಎಂ ಮಾಡಲಿಲ್ಲ, ಕ್ಷೇತ್ರದಲ್ಲಿ ಸೋಲಿಸಿದರು. ಮಲ್ಲಿಕಾರ್ಜುನ ಖರ್ಗೆ, ಚಂದ್ರಪ್ಪ, ದೃವನಾರಾಯಣ ಸೇರಿ ದಲಿತ ಮುಖಂಡರನ್ನು ಸೋಲಿಸಿದರು. ಇವತ್ತಿಗೂ ಖರ್ಗೆ, ಪರಮೇಶ್ವರ್ ರಾಜಕೀಯವಾಗಿ ಬೆಳೆಯಲು ಸಿದ್ದರಾಮಯ್ಯ ಬಿಡಲ್ಲ‌ ಎಂದರು.

ಬಿಜೆಪಿ ಕಡಿಮೆ ಸಮಯ ಅಧಿಕಾರ ನಡೆಸಿದರೂ ಮುಸ್ಲಿಂ, ದಲಿತರಿಗೆ ಅಧಿಕಾರ ನೀಡಿದೆ. ಮುಸ್ಲಿಂ ಸಮುದಾಯದ ಅಬ್ದುಲ್ ಕಲಾಂರನ್ನು, ದಲಿತ ಸಮಾಜದ ಕೋವಿಂದ್ ರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ. ಕೇಳದಿದ್ದರೂ ಗೋವಿಂದ ಕಾರಜೋಳರನ್ನು ಡಿಸಿಎಂ ಮಾಡಿದ್ದೇವೆ. ಆನೇಕಲ್ ವಿಧಾನಸಭೆಯಲ್ಲಿ ಸೋತ ಎ.ನಾರಾಯಣಸ್ವಾಮಿಗೆ ಚಿತ್ರದುರ್ಗದ ಸಂಸದರನ್ನಾಗಿಸಿದ್ದಲ್ಲದೆ ಕೇಂದ್ರ ಸಚಿವರನ್ನಾಗಿಸಿದ್ದೇವೆ ಎಂದು ಸಮರ್ಥಿಸಿಕೊಂಡರು.

ನನ್ನ ಹೆಸರಿನ ಫೇಕ್ ಆಡಿಯೋ ಪ್ರಕರಣ ತನಿಖೆ ನಡೆಯುತ್ತಿದೆ. ಸಿದ್ದರಾಮಯ್ಯ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರ ಯಾರೂ ಮಾಡಲು ಸಾಧ್ಯವಿಲ್ಲ. ಸಿದ್ದರಾಮಣ್ಣ ಅರ್ಕಾವತಿ ಬಡಾವಣೆ ಪ್ರಕರಣ ಮುಚ್ಚಿ ಹಾಕಿದ್ದಾರೆ ಎಂದು ಆರೋಪಿಸಿದರು.

ವಲಸೆ ಬಂದ ಶಾಸಕರ ಆತಂಕ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮಲ್ಲಿ ಮಿತ್ರ ಮಂಡಳಿ, ವಲಸಿಗ ಪದ ಸರಿಯಲ್ಲ. ಅವರೆಲ್ಲ
ಬಿಜೆಪಿಯಿಂದ ಶಾಸಕರಾಗಿದ್ದಾರೆ, ಪಕ್ಷದ ಒಂದು ಭಾಗ ಎಂದ ಅವರು, ರಾಷ್ಟ್ರೀಯ ನಾಯಕರ ಸೂಚನೆ ಪಾಲಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಈಗವರು ನೆರೆ ವೀಕ್ಷಣೆ, ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬದಲಾವಣೆ ಬಗ್ಗೆ ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ನಳೀನ್ ಕುಮಾರ ಕಟೀಲ್ ಹೇಳಿದರು.

ಪತಿ, ಪತ್ನಿ‌ ಕಿರುಕುಳ; ಯುವಕ ನೇಣಿಗೆ ಶರಣು

ವಿಜಯಸಾಕ್ಷಿ ಸುದ್ದಿ, ಗದಗ

ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿವಾಹಿತ ಯುವಕನೊಬ್ಬ ಮಹಿಳೆ ಮತ್ತು ಆಕೆಯ ಪತಿಯ ಕಿರುಕುಳ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ರೋಣ ತಾಲೂಕಿನ ಕರಮುಡಿ ಗ್ರಾಮದಲ್ಲಿ ನಡೆದಿದೆ.

ಸ್ವಜಾತಿಯ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾದ ಅರ್ಜುನ ಶಿವರಾಯಪ್ಪ ಚಲವಾದಿಯ ವರ್ತನೆಯಿಂದ ಬೇಸತ್ತು ಆತನ ಪತ್ನಿ ಲಕ್ಷ್ಮಿ ತವರು ಮನೆಗೆ ಮರಳಿದ್ದಳು. ಇನ್ನು, ವಿವಾಹಿತೆ ಹಾಗೂ ಆಕೆಯ ಪತಿ ನಿರಂತರ ಕಿರುಕುಳ ನೀಡುತ್ತಿದ್ದುದರಿಂದ ಬೇಸತ್ತು ಆತ ಮನೆಯಲ್ಲೇ ಪಂಚೆಯಿಂದ ನೇಣು ಹಾಕಿಕೊಂಡಿದ್ದಾನೆ ಎಂದು ಮೃತನ ಸಹೋದರ ಹನುಮಂತಪ್ಪ ಚಲವಾದಿ ರೋಣ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಶಸಸ್ತ್ರ ಮೀಸಲು ಪೊಲೀಸ್ ಪಡೆ ಅಧಿಕಾರಿ ನೇಣಿಗೆ ಶರಣು

ವಿಜಯಸಾಕ್ಷಿ ಸುದ್ದಿ, ಕಲಬುರಗಿ

  • ಕಲಬುರಗಿಯ ಪೊಲೀಸ್ ಕ್ವಾಟರ್ಸ್ ನಲ್ಲಿ ಆತ್ಮಹತ್ಯೆ

ಪೊಲೀಸ್ ಕ್ವಾಟರ್ಸ್ ನಲ್ಲೇ ನೇಣು ಬಿಗಿದುಕೊಂಡು ಶಸಸ್ತ್ರ ಮೀಸಲು ಪೊಲೀಸ್ ಪಡೆಯ ಎಆರ್ ಎಸ್ಐ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಜಗನ್ನಾಥ್ ಮುತ್ತಂಗಿ (54) ಆತ್ಮಹತ್ಯೆಗೆ ಶರಣಾದವರು. ಕಲಬುರಗಿಯ ಶಸಸ್ತ್ರ ಮೀಸಲು ಪಡೆಯ ಎಆರ್ ಎಸ್ಐ ಆಗಿದ್ದ ಜಗನ್ನಾಥ್ ಪ್ಯಾರಲೇಸಸ್ ನಿಂದ ಬಳಲುತ್ತಿದ್ದರು. ಕಳೆದ ಒಂದುವರೆ ತಿಂಗಳಿನಿಂದ ರಜೆ ಹಾಕಿ ಮನೆಯಲ್ಲೇ ಇದ್ದರು.

ಮಾನಸಿಕವಾಗಿ ಕುಗ್ಗಿ ಹೋಗಿದ್ದರಿಂದ ಇಂದು ನೆಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐವರು ಶ್ರೀಗಂಧ ಮರಗಳ್ಳರು ಅರೆಸ್ಟ್

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

  • ರಾತ್ರಿಹೊತ್ತು ಶ್ರೀಗಂಧ ಮರ ಕಳ್ಳತನ ಮಾಡುತ್ತಿದ್ದ ಆರೋಪಿಗಳು
  • 2.81 ಲಕ್ಷ ಮೌಲ್ಯದ ಶ್ರೀಗಂಧ, ವಾಹನ ವಶ

ಚಿಕ್ಕಜಾಜೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಐವರು ಶ್ರೀಗಂಧ ಮರ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 2.80 ಲಕ್ಷ ಮೌಲ್ಯದ 51 ಶ್ರೀಗಂಧ ಮರದ ತುಂಡು, 1 ಬೈಕ್ ವಶಪಡಿಸಿಕೊಂಡಿದ್ದಾರೆ.

ಹೊಳಲ್ಕೆರೆ ತಾಲೂಕಿನ ಕಾಗಳಗೆರೆ ಗ್ರಾಮದ
ಪಾಂಡುರಂಗ, ಮಹಂತೇಶ್, ಬಸವರಾಜ್, ರಾಜಪ್ಪ, ಮುನ್ನಾ ಬಂಧಿತ ಆರೋಪಿಗಳು.
ಚಿಕ್ಕಜಾಜೂರು ವ್ಯಾಪ್ತಿಯ ಸಾಸಲು ಗ್ರಾಮದ ಪ್ರಶಾಂತಕುಮಾರ ಬಿ.ಜೆ. ಎಂಬುವವರ 4 ಎಕರೆ ಜಮೀನಿನಲ್ಲಿ 50 ಶ್ರೀಗಂಧದ ಮರಗಳನ್ನು ಬೆಳೆದಿದ್ದರು.‌ ಆರೋಪಿಗಳು ಜು.9ರಂದು ರಾತ್ರಿ 8 ಮರಗಳನ್ನು ಕಡಿದು ಐದು ಮರಗಳನ್ನು ಕಡಿದು ಮೂರು ಮರಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಕುರಿತು ಪ್ರಶಾಂತಕುಮಾರ್ ಚಿಕ್ಕಜಾಜೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪಿಎಸ್ಐ ಬಾಹುಬಲಿ ನೇತೃತ್ವದಲ್ಲಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಲೋನ್ ಕೊಡುವುದಾಗಿ ಖಾಸಗಿ ನೌಕರನಿಗೆ ವಂಚನೆ; ಲಕ್ಷಾಂತರ ರೂ. ಪಂಗನಾಮ

ವಿಜಯಸಾಕ್ಷಿ ಸುದ್ದಿ, ಗದಗ

ಬ್ಯಾಂಕ್ ಅಕೌಂಟ್, ಪಿನ್, ಎಟಿಎಮ್ ಕಾರ್ಡ್ ಬ್ಲಾಕ್ ಆಗಿದೆ ಅಂತ ಯಾರಾದರೂ ಅಪರಿಚಿತರು ಕರೆ ಮಾಡಿದರೆ ಅವರಿಗೆ ಉತ್ತರ ನೀಡಬೇಡಿ ಅಂತ ಪೊಲೀಸರು ಎಷ್ಟೇ ಎಚ್ಚರಿಕೆ, ಜಾಗೃತಿ ನೀಡಿದರೂ ಜನ ಮಾತ್ರ ಅದರ ಗಮನ ಹರಿಸುತ್ತಿಲ್ಲ. ಅದರಲ್ಲೂ ವಿದ್ಯಾವಂತರೇ ಅರ್ಥಮಾಡಿಕೊಳ್ಳುತ್ತಿಲ್ಲ. ಇದಕ್ಕೆ ಉದಾಹರಣೆ ಲಕ್ಷ್ಮೇಶ್ವರನ ಖಾಸಗಿ ಉದ್ಯೋಗಿಯೊಬ್ಬ ಲಕ್ಷಾಂತರ ರೂ. ಕಳೆದುಕೊಂಡ ಪ್ರಕರಣ.

ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಬಣದ ನಿವಾಸಿ ವಿಕಾಸ್ ಪಾಟೀಲ್ ಎಂಬುವವರಿಗೆ ಬೆಂಗಳೂರಿನ ಇಂಡಸ್ ಇಂಡ್ ಬ್ಯಾಂಕ್ ಕಷ್ಟ್ ಮರ್ ಕೇರ್ ನಿಂದ ಮಾತಾಡೋದು ಅಂತ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ನಿಮಗೆ ಲೋನ್ ಕೊಡುವುದಾಗಿ ಹೇಳಿದ್ದಾನೆ. ಇದಕ್ಕೆ ಮರುಳಾದ ವಿಕಾಸ್ ಪಾಟೀಲ್, ತಮ್ಮ ಜಕ್ಕಸಂದ್ರ ಶಾಖೆಯ ಅಕೌಂಟ್ ನಂಬರ್ ಕೊಟ್ಟಿದ್ದಾರೆ. ಅಕೌಂಟ್ ನಂಬರ್ ಕೊಟ್ಟಿದ್ದೇ ತಡ ಖದೀಮ ಅದರಲ್ಲಿದ್ದ ಸುಮಾರು 1ಲಕ್ಷ 29 ಸಾವಿರ ಡ್ರಾ ಮಾಡಿಕೊಂಡಿದ್ದಾನೆ.

ಜುಲೈ 11 ರಂದು 49 ಸಾವಿರದಂತೆ ಎರಡು ಸಲ ಹಾಗೂ 30 ಸಾವಿರ ರೂ.ಗಳನ್ನು ಕ್ರೆಡಿಟ್ ಕಾರ್ಡ್ ಬಳಸಿ ಆನ್‌ಲೈನ್ ಮೂಲಕ ವಂಚಿಸಿ ಹಣ ಪಡೆದಿದ್ದಾನೆ. ಇದು ಒಂದು ವಾರದ ನಂತರ ವಿಕಾಸ್ ಪಾಟೀಲ್ ಗೆ ಗೊತ್ತಾಗಿದ್ದು, ವಂಚನೆ ಮಾಡಿದ ಆರೋಪಿಯನ್ನು ಪತ್ತೆ ಮಾಡಿ ಅಂತ ಲಕ್ಷ್ಮೇಶ್ವರ ಠಾಣೆಗೆ ದೂರು ನೀಡಿದ್ದು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಭಾರಿ ಮಳೆಗೆ ರಾಜ್ಯಾದ್ಯಂತ 21 ರಾಜ್ಯ ಹೆದ್ದಾರಿ ಸಂಪರ್ಕ ಕಡಿತ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

  • ಪರ್ಯಾಯ ಸಂಚಾರಕ್ಕೆ ಅಗತ್ಯ ಕ್ರಮ
  • ಡಿಸಿಎಂ ಗೋವಿಂದ ಕಾರಜೋಳ ಮಾಹಿತಿ

ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಧಾರಾಕಾರ ಮಳೆಯಿಂದಾಗಿ 26 ಜಿಲ್ಲಾ ಮುಖ್ಯ ರಸ್ತೆ, 21 ರಾಜ್ಯ ಹೆದ್ದಾರಿಗಳ ಸಂಪರ್ಕ ಕಡಿತಗೊಂಡಿದ್ದು, ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಡಿಸಿಎಂ ಹಾಗೂ ಲೋಕೋಪಯೋಗಿ ಸಚಿವ ಗೋವೀಂದ ಕಾರಜೋಳ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ 24 ಗಂಟೆಯಿಂದ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯ 26 ಜಿಲ್ಲಾ ಮುಖ್ಯ ರಸ್ತೆ, 21 ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ತುರ್ತು ರಸ್ತೆ ರಿಪೇರಿಗೆ 50 ಕೋಟಿ ರೂಪಾಯಿ ಬೇಕಾಗುತ್ತದೆ. ಎಂದು ತಿಳಿಸಿದರು.

ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆ‌ ಸೇರಿ 400 ಕೋಟಿಯಷ್ಟು, ರಸ್ತೆ, ಸೇತುವೆಗಳಿಗೆ ಹಾನಿ‌ ಆಗಿದೆ. ಹಣ ಬಿಡುಗಡೆಗೆ ಸಿಎಂ ನೇತೃತ್ವದ ಸಭೆಯಲ್ಲಿ ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದರು.

ಕಳೆದ 24 ಗಂಟೆಯಲ್ಲಿ 300ಮಿಮೀಗಿಂತ ಹೆಚ್ಚು ಮಳೆ ಆಗಿದೆ. ಕೊಯ್ನಾ ಡ್ಯಾಂ ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕ ಹೊಂದಿದ್ದು,
ಜನರಿಗೆ ತೊಂದರೆ ಆಗದಂತೆ ಕಾಳಜಿ ಕೇಂದ್ರ, ಜಾನುವಾರು ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ.
ನೋಡಲ್ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದೆ ಎಂದು ಕಾರಜೋಳ ತಿಳಿಸಿದರು.

ರೈಲು ಸಂಚಾರ ರದ್ದು

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಬೆಳಗಾವಿ-ಗೋವಾ ರೈಲ್ವೆ ಮಾರ್ಗದಲ್ಲಿ ದೂಧಸಾಗರ ಬಳಿ ಶುಕ್ರವಾರ ಭೂಕುಸಿತ ಹಾಗೂ ಸೋನಾಲಿಂ ಕುಲೆಂ ನಡುವೆ ರೈಲು ಹಳಿ ತಪ್ಪಿದೆ ಹಿನ್ನೆಲೆಯಲ್ಲಿ ಕೆಲವು ರೈಲು ಸಂಚಾರ ರದ್ದುಪಡಿಸಿದ್ದು, ಇನ್ನು ಹಲವು ರೈಲುಗಳನ್ನು ಭಾಗಶಃ ರದ್ದುಪಡಿಸಿ, ಒಂದು ರೈಲಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ನಿರ್ದೇಶನ ನೀಡಿ ನೈರುತ್ಯ ರೈಲ್ವೆ ಅಧಿಕಾರಿಗಳು ಆದೇಶ ನೀಡಿದ್ದಾರೆ.

ಅಂದರ್-ಬಾಹರ್ ಜೂಜಾಟ; 10 ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಈಶ್ವರ ದೇವಸ್ಥಾನದ ಪಕ್ಕದಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್- ಬಾಹರ್ ಜೂಜಾಟದಲ್ಲಿ ತೊಡಗಿದ್ದ 10 ಜನರ ತಂಡವನ್ನು ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಈಶ್ವರ ದೇವಸ್ಥಾನದ ಬಳಿ ಜೂಜಾಟದಲ್ಲಿ ತೊಡಗಿದ್ದ ಬನ್ನಿಕೊಪ್ಪದ ನೀಲಪ್ಪ ಬಸಪ್ಪ ಕಡಕೋಳಿ, ಮುತ್ತಪ್ಪ ಶಿವಪ್ಪ ಬಡ್ನಿ, ವಿಜಯಕುಮಾರ್ ಮಂಜುನಾಥ್ ಹೆಸಿ, ಹನುಮಂತ ಮುರೆಗೆಪ್ಪ ಹಳ್ಳೆಪ್ಪನವರ್, ಬಸಪ್ಪ ಮಲ್ಲಪ್ಪ ಆರೇರ್, ನಾಗಪ್ಪ ಸತ್ಯಪ್ಪ ತಳವಾರ, ಪಕ್ಕೀರಪ್ಪ ರಾಮಣ್ಣ ಪೆಡ್ಡಾರ, ಶ್ರೀಕಾಂತ್ ಶಾಂತಪ್ಪ ಕಂಚಿನಕೋಟಿ, ಮಾಚೇನಹಳ್ಳಿಯ ಶಂಕರ್ ಗೌಡ ಗೋವಿಂದಗೌಡ್ ಪಾಟೀಲ್, ಮುತ್ತಪ್ಪ ಗುಡದಪ್ಪ ಕಮತರ ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರಿಂದ 5930 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೂಜಾಟದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಶಿರಹಟ್ಟಿ ಪಿಎಸ್ಐ ನವೀನ್ ಜಕ್ಕಲಿ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು.

error: Content is protected !!