Home Blog Page 3264

ಆಚಾರ್‌ರದ್ದು ಬಾಲಿಶತನ, ರಾಯರಡ್ಡಿಯದ್ದು ಅಪ್ರಬುದ್ಧತೆ!!

0

ಕೆರೆ “ಮರೆ” ಜಗಳ

-ಯಲಬುರ್ಗಾ ಕ್ಷೇತ್ರದ ಹಾಲಿ-ಮಾಜಿ ಸಚಿವರ ಜಗಳ್‌ಬಂಧಿ

-ಈಗಿನಿಂದಲೇ ಮುಂದಿನ ಚುನಾವಣೆಯ ಟೀಸರ್ ಶುರು

ಬಸವರಾಜ ಕರುಗಲ್.
ವಿಜಯಸಾಕ್ಷಿ ವಿಶೇಷ
ಕೊಪ್ಪಳ: ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ಕಾಲು ವರ್ಷ ಬಾಕಿ ಇದೆ. ಆದರೆ ಯಲಬುರ್ಗಾ ಕ್ಷೇತ್ರದ ಹಾಲಿ ಹಾಗೂ ಮಾಜಿ ಸಚಿವರು ಚುನಾವಣೆಯ ಟೀಸರ್ ಆರಂಭಿಸಿದ್ದಾರೆ. ಹಾಲಿ ಸಚಿವ ಹಾಲಪ್ಪ ಆಚಾರ್ ಸರಕಾರದ ವಿವಿಧ ಕಾರ್ಯಗಳ ಮೂಲಕ ಕಾಂಗ್ರೆಸ್ ಟೀಕಿಸುತ್ತಾ ಪರೋಕ್ಷ ಪ್ರಚಾರ ಆರಂಭಿಸಿದ್ದರೆ, ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾಧ್ಯಮಗಳ ಮೂಲಕ ಜನರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ನೀರಾವರಿ ಹಾಗೂ ಕೆರೆ ತುಂಬಿಸುವ ಯೋಜನೆ, ಕೃಷ್ಣಾ ನದಿ‌ ನೀರಿನ ವಿತರಣೆಯ ವಿಚಾರವನ್ನು ಕೈಗೆತ್ತಿಕೊಂಡು ಕೆಸೆರೆರಚಾಟ ಆರಂಭಿಸಲಾಗಿದೆ.

ನಾಪತ್ತೆಯಾಗಿದ್ದ ರಾಯರಡ್ಡಿ ಪ್ರತ್ಯಕ್ಷ!
2018ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್‌ನ ಬಸವರಾಜ ರಾಯರಡ್ಡಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು ತೀರಾ ವಿರಳ. ಅವರನ್ನು ಕ್ಷೇತ್ರದ ಜನ ಕಾಣಬೇಕೆಂದರೆ ಧಾರವಾಡ, ಬೆಂಗಳೂರು ಇಲ್ಲವೇ ದೆಹಲಿಗೆ ತೆರಳಬೇಕಿತ್ತು. ಹಾಗಾಗಿ ರಾಯರಡ್ಡಿ ಬಹುತೇಕ ಜನಸಂಪರ್ಕದಿಂದ ದೂರವೇ ಉಳಿದಿದ್ದರು. ಗ್ರಾಪಂ ಚುನಾವಣೆ ಸೇರಿದಂತೆ ಪಕ್ಷದ ಇತರೆ ಕಾರ್ಯಕ್ರಮಗಳಲ್ಲೂ ಅವರ ಹಾಜರಾತಿ ಅಷ್ಟಕ್ಕಷ್ಟೇ. ಹೆಚ್ಚು ಕಡಿಮೆ ನಾಪತ್ತೆಯಾಗಿದ್ದ ಮಾಜಿ ಸಚಿವ ರಾಯರಡ್ಡಿ ಇದೀಗ ಪ್ರತ್ಯಕ್ಷವಾಗಿದ್ದಾರೆ. ಇನ್ನು ಮೇಲೆ ಆಗಾಗ ಕಾಣ್ತಾ‌ ಇರ‌್ತಿನಿ ಅಂತಲೂ ಮಾಧ್ಯಮದವರಿಗೆ ರಾಯರಡ್ಡಿ ಹೇಳಿರೋದನ್ನ ಗಮನಿಸಿದರೆ ಈಗಿನಿಂದಲೇ ಚುನಾವಣಾ ತಯಾರಿ ಶುರು ಎಂತಲೂ, ಅದಕ್ಕಾಗಿ ಈ ಟ್ರೇಲರ್ ಅಂದಂತಿತ್ತು.

ಏನದು ಟ್ರೇಲರ್? ಜಿಲ್ಲೆಯ ನೀರಾವರಿ ಯೋಜನೆಗಳ ವಿಚಾರವನ್ನು ಮುಂದಿಟ್ಟುಕೊಂಡು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಚಿವ ಹಾಲಪ್ಪ ಆಚಾರ್ ಅವರಿಗೆ ಬುದ್ಧಿ ಇಲ್ಲ ಎಂದು ಹೇಳುವ ಮೂಲಕ ಪ್ರಚಾರ ಗಿಟ್ಟಿಸೋದೇ ರಾಯರಡ್ಡಿ ತಂತ್ರಗಾರಿಕೆ ಮತ್ತು ಚುನಾವಣಾ ಪ್ರಚಾರದ ಟ್ರೇಲರ್. ಕೆರೆ ತುಂಬಿಸುವ ಯೋಜನೆಗಳಾಗಲಿ, ಕೃಷ್ಣಾ ನದಿ‌ ನೀರಿನ ಹಂಚಿಕೆಯಾಗಲಿ, ನೀರಾವರಿ ಯೋಜನೆಗಳಾಗಲಿ ಏಕ ವ್ಯಕ್ತಿಯಿಂದ ಸಾಧ್ಯವಿಲ್ಲ. ಹಾಗೊಂದು ವೇಳೆ ನನ್ನಿಂದಲೇ ಆಯ್ತು ಅನ್ನೋದು ಮೂರ್ಖತನ. ಯೋಜನೆಗಳು ಸಾಕಾರಗೊಳ್ಳೋದು ಏಕ ವ್ಯಕ್ತಿ ಅಥವಾ ಏಕ ಪಕ್ಷದಿಂದ ಅಲ್ಲ, ಆಡಳಿತಾರೂಢ ಸರಕಾರದಿಂದ ಯೋಜನೆಗಳ ಅನುಷ್ಠಾನ ಸಾಧ್ಯ. ಇದು ಬಿಜೆಪಿಯದ್ದಷ್ಟೇ ಸಾಧನೆಯಲ್ಲ, ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಸಿದ್ದರಾಮಯ್ಯ ಹಾಗೂ ಅವರ ಸರಕಾರ‌ ನಯಾಪೈಸೆ ಕೊಟ್ಟಿಲ್ಲ ಎಂಬುದು ಶುದ್ಧ ಸುಳ್ಳು ಎಂದು ಪ್ರತಿಪಾದಿಸಿದ ರಾಯರಡ್ಡಿ 2013-14ನೇ ಸಾಲಿನಿಂದ 2018-19ರವರೆಗೆ ಬಿಡುಗಡೆಯಾದ ಅನುದಾನಗಳ ವಿವರ ನೀಡಿದರು.

ಶಾಸಕರಾದವರಿಗೆ ತಿಳಿವಳಿಕೆ ಇಲ್ಲ ಎಂದು ಭಾಗಶಃ ಒಪ್ಪಬಹುದು.‌ ಇದುವರೆಗೂ ಶಾಸಕರಾಗಿದ್ದ ಹಾಲಪ್ಪ ಆಚಾರ್ ಅವರು ಕಾಂಗ್ರೆಸ್ ವಿರುದ್ಧ, ಸಿದ್ದರಾಮಯ್ಯ ವಿರುದ್ಧ ಮಾತನಾಡಿದಾಗ ಅವರಿಗೆ ತಿಳಿವಳಿಕೆ ಇಲ್ಲ ಎಂದು ಉದಾಸೀನ ಮಾಡುತ್ತಿದ್ದೆ. ಆದರೆ ಆಚಾರ್ ಈಗ ಸರಕಾರದ ಮೂರು‌ ಇಲಾಖೆಗಳನ್ನು ನಿಭಾಯಿಸುವ ಮಂತ್ರಿಯಾಗಿದ್ದುಕೊಂಡು ಚಿಕ್ಕಮಕ್ಕಳ ಥರಾ ಬಾಲಿಶವಾಗಿ ಮಾತನಾಡುವುದು ಸರಿಯಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಅಪ್ರಬುದ್ಧರ ಹೇಳಿಕೆಗೆ ಕಿವಿಗೊಡಬೇಕಾದ ಅಗತ್ಯ ಇಲ್ಲ
ಮಾಜಿ ಸಚಿವ ಬಸವರಾಜ ರಾಯರಡ್ಡಿಯವರ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಹಾಲಪ್ಪ ಆಚಾರ್, ಅಪ್ರಬುದ್ಧವಾಗಿ ಮಾತನಾಡುವವರಿಗೆ ಏನೆಂದು ಪ್ರತಿಕ್ರಿಯೆ‌ ನೀಡಲಿ? ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಜನಪರವಾಗಿ ಸ್ಪಂದಿಸಿದ್ದು ನಮ್ಮ ಬಿಜೆಪಿ ಸರಕಾರ. ಯಲಬುರ್ಗಾ ತಾಲೂಕಿನಲ್ಲಿ ನೀರಾವರಿ ಯೋಜನೆಗಳನ್ನು ತಂದದ್ದು ನಾನೇ ಎಂದು ಈಗಲೂ ಹೇಳಿಕೊಳ್ಳುತ್ತೇನೆ. ಈ ಹಿಂದೆ ಸಿದ್ದರಾಮಯ್ಯ ಸರಕಾರ ಇತ್ತು, ರಾಯರಡ್ಡಿಯವರೂ ಮಂತ್ರಿಯಾಗಿದ್ದರು. ನೀರಾವರಿ ಯೋಜನೆ ವಿಚಾರದಲ್ಲಿ ಅವರು ಕಿತ್ತು ಗುಡ್ಡೆ ಹಾಕಿರೋದು ಕ್ಷೇತ್ರದ ಜನರಿಗೆ ಗೊತ್ತಿದೆ. ರಾಜಕೀಯವಾಗಿ ಸಾಕಷ್ಟು ಅನುಭವ ಇದ್ದರೂ ರಾಯರಡ್ಡಿಯವರು ಅಪ್ರಬುದ್ಧನಂತೆ ಮಾತನಾಡುವುದು ಶೋಭೆಯಲ್ಲ. ನೀರಾವರಿ ವಿಚಾರಗಳಲ್ಲಿ ರಾಜಕಾರಣ ಬೆರೆಸಬಾರದು ಎಂದು ತೀಕ್ಷ್ಣವಾಗಿ ತಿವಿದರು.

ಒಟ್ಟಾರೆಯಾಗಿ ಮುಂಬರುವ ಚುನಾವಣೆಗೆ ಯಲಬುರ್ಗಾ ಕ್ಷೇತ್ರದಲ್ಲಿ ಈಗಿನಿಂದಲೇ ಸಿದ್ಧತೆ ಶುರುವಾದಂತೆ‌ ಕಾಣಿಸುತ್ತಿದೆ. ಜೊತೆಗೆ ಕನಕಗಿರಿ ಕ್ಷೇತ್ರದಲ್ಲೂ ಮಾಜಿ ಸಚಿವ ಶಿವರಾಜ ತಂಗಡಗಿ ಮತ್ತು ಶಾಸಕ ಬಸವರಾಜ ದಢೇಸೂಗುರು ಮಧ್ಯೆ ಪ್ರಚಾರ-ಅಪಪ್ರಚಾರದ ಪೈಪೋಟಿ ಶುರುವಾಗಿದ್ದು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ ಎಂಬ ಮಾತಿದೆ. ಗಂಗಾವತಿ ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಇನ್ನೂ ರಾಜಕೀಯ ಚಟುವಟಿಕೆ ಗರಿಗೆದರಿಲ್ಲ

ಸೂರಿಲ್ಲದ ಜಿಲ್ಲೆಯ ಜನರಿಗೆ ಸಿಹಿಸುದ್ದಿ; 4 ಸಾವಿರ ಬಡವರಿಗೆ ಮನೆ, ಜ.20ರೊಳಗೆ ಫಲಾನುಭವಿಗಳ ಆಯ್ಕೆ

ಸಿಹಿಸುದ್ದಿ: 4,190 ಬಡವರಿಗೆ ಸೂರು ಮಂಜೂರು,

ವಿವಿಧ ವಸತಿ ಯೋಜನೆಯಡಿ ಗ್ರಾಮೀಣ ಪ್ರದೇಶಕ್ಕೆ ಗುರಿ ನಿಗದಿ, ಜ. 20ರೊಳಗಾಗಿ ಫಲಾನುಭವಿಗಳ ಆಯ್ಕೆ ಮಾಡುವಂತೆ ಸಿಇಒ ಸೂಚನೆ,

ಎಸ್‌ಸಿ, ಎಸ್‌ಟಿ ವರ್ಗಕ್ಕೆ 1007, ಅಲ್ಪಸಂಖ್ಯಾತರ ಹಾಗೂ ಸಾಮಾನ್ಯ ವರ್ಗದವರಿಗೆ 3,183 ಮನೆಗಳ ಗುರಿ

ವಿಜಯಸಾಕ್ಷಿ ವಿಶೇಷ, ಗದಗ:

ಬಹು ದಿನಗಳಿಂದ ವಸತಿ ಯೋಜನೆಯಡಿ ಹೊಸ ಮನೆಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದ ಜಿಲ್ಲೆಯ ಜನರು ಸ್ವಲ್ಪ ನಿಟ್ಟಿಸಿರು ಬಿಟ್ಟಿದ್ದಾರೆ. ಹೊಸ ಮನೆ ಕಟ್ಟಿಸಿಕೊಳ್ಳಬೇಕೆಂಬ ನಿರೀಕ್ಷೆಯಲ್ಲಿದ್ದ ನೂತನ ಫಲಾನುಭವಿಗಳಿಗೆ ಅಂತೂ ಇಂತೂ ಕಾಲ ಕೂಡಿ ಬಂದಿದೆ.

ಕಳೆದೆರಡು ವರ್ಷದಿಂದ ಹೊಸ ಮನೆ ಮಂಜೂರಿಗಾಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೇಡಿಕೆ ಹೆಚ್ಚಿತ್ತು. ಇದರಿಂದ ಕಳೆದೊಂದು ವರ್ಷದಿಂದ ಗ್ರಾಮ ಪಂಚಾಯತಿ ಸದಸ್ಯರ ಮೇಲೆ ಒತ್ತಡವಿತ್ತು. ರಾಜ್ಯ ಸರ್ಕಾರದ ಈ ನಿರ್ಧಾರ ಗ್ರಾಮೀಣ ಜನರ ಖುಷಿಗೆ ಕಾರಣವಾಗಿದೆ.

ರಾಜ್ಯ ಸರ್ಕಾರ ಘೋಷಿಸಿರುವ 5 ಲಕ್ಷ ಮನೆಗಳಲ್ಲಿ, ಗ್ರಾಮೀಣ ಭಾಗಕ್ಕೆ ಮೀಸಲಿರುವ 4 ಲಕ್ಷ ಮನೆಗಳ ಪೈಕಿ ಗದಗ ಜಿಲ್ಲೆಗೆ ವಿವಿಧ ವಸತಿ ಯೋಜನೆಯಡಿ 4,190 ಮನೆಗಳ ಗುರಿ ನಿಗದಿಪಡಿಸಿದ್ದು, ಆಯಾ ಗ್ರಾಮ ಪಂಚಾಯತಿ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಮನೆ ಹಂಚಿಕೆಯಾಗಲಿವೆ.

ಜಿಲ್ಲೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 1,007, ಬಸವ ವಸತಿ ಯೋಜನೆಯಡಿ 3,183 ಸೇರಿ ಒಟ್ಟು 4,190 ಮನೆಗಳ ಗುರಿ ನಿಗದಿಪಡಿಸಲಾಗಿದೆ. ಅದರಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿ 719, ಪರಿಶಿಷ್ಟ ಪಂಗಡ 291 ಮನೆಗಳು ನಿಗದಿಯಾಗಿವೆ. ಅದರಂತೆ, ಬಸವ ವಸತಿ ಯೋಜನೆಯಡಿ ಅಲ್ಪಸಂಖ್ಯಾತರಿಗೆ 419, ಸಾಮಾನ್ಯ ವರ್ಗದವರಿಗೆ 2,764 ಮನೆಗಳು ನಿಗದಿಯಾಗಿದೆ ಎಂದು ಜಿ.ಪಂ. ಸಿಇಒ ಭರತ್ ಕೆ. ಅವರು ತಿಳಿಸಿದ್ದಾರೆ.

ವಿಧಾನಸಭೆ ಕ್ಷೇತ್ರವಾರು ವಿವರ

ಗದಗ ವಿಧಾನಸಭಾ ಕ್ಷೇತ್ರದ 12 ಗ್ರಾ.ಪಂ.ಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 112, ಬಸವ ವಸತಿ ಯೋಜನೆಯಡಿ 348, ನರಗುಂದ ವಿಧಾನಸಭಾ ಕ್ಷೇತ್ರದ 35 ಗ್ರಾ.ಪಂ.ಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 288, ಬಸವ ವಸತಿ ಯೋಜನೆಯಡಿ 912, ರೋಣ ವಿಧಾನಸಭಾ ಕ್ಷೇತ್ರದ 39 ಗ್ರಾ.ಪಂ.ಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 320, ಬಸವ ವಸತಿ ಯೋಜನೆಯಡಿ 1,010 ಹಾಗೂ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ 36 ಗ್ರಾ.ಪಂ.ಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 287, ಬಸವ ವಸತಿ ಯೋಜನೆಯಡಿ 913 ಮನೆಗಳ ಗುರಿ ನಿಗದಿಯಾಗಿದೆ.

ಗ್ರಾ.ಪಂ. ಸದಸ್ಯನಾಗಿ ಒಂದು ವರ್ಷ ಕಳೆದರೂ ವಸತಿರಹಿತ ಕುಟುಂಬಗಳಿಗೆ ಸೂರು ಕಲ್ಪಿಸಿ ಕೊಡಲಾಗದೆ ತುಂಬಾ ನಿರಾಸೆಯಾಗಿತ್ತು. ಸದ್ಯ ನಮ್ಮ ಪಂಚಾಯತಿಗೆ 40 ಮನೆಗಳು ಬರಲಿದ್ದು, 22 ಸದಸ್ಯರ ಮಧ್ಯೆ ಹಂಚಿಕೆಯಾಗಿ ಪ್ರತಿ ಸದಸ್ಯರಿಗೆ ಕನಿಷ್ಠ 2 ಮನೆಗಳು ಬರಲಿವೆ. ಇದು ತೃಪ್ತಿದಾಯಕವಲ್ಲದಿದ್ದರೂ, ಸ್ವಲ್ಪ ಸಮಾಧಾನ ತರಿಸಿದೆ.

ಚಂದ್ರಶೇಖರ್ ಹರಿಜನ, ಗ್ರಾ.ಪಂ. ಸದಸ್ಯ

ಜಿಲ್ಲೆಯ 122 ಗ್ರಾ.ಪಂ.ಗಳಿಗೆ 4190 ಮನೆಗಳ ಗುರಿ ನಿಗದಿಯಾಗಿದ್ದು, ಜ.20ರೊಳಗಾಗಿ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳು ಅರ್ಹ ಫಲಾನುಭವಿಗಳನ್ನು ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡಬೇಕು.

ಭರತ್ ಕೆ., ಜಿ.ಪಂ. ಸಿಇಒ

ಜಿಲ್ಲೆಯಲ್ಲಿ ಸೋಮವಾರದವರೆಗೂ ವೀಕೆಂಡ್ ಕರ್ಪ್ಯೂ; ಹಲವೆಡೆ ಚೆಕ್‌ಪೋಸ್ಟ್, ಎಂದಿನಂತೆ ಬಸ್ ಸಂಚಾರ

ವಿಜಯಸಾಕ್ಷಿ ಸುದ್ದಿ, ಗದಗ:

ರಾಜ್ಯಾದ್ಯಂತ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಜಿಲ್ಲೆಯ ಕಂದಾಯ, ಪೊಲೀಸ್ ಹಾಗೂ ಇತರೆ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವುದರ ಮೂಲಕ ರಾತ್ರಿ ಹಾಗೂ ವಾರಾಂತ್ಯದ ಕರ್ಪ್ಯೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.

ಜಿಲ್ಲಾಡಳಿತ ಭವನದ ವಿಡಿಯೋ ಸಂವಾದ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಕೋವಿಡ್ ಸೋಂಕು ನಿಯಂತ್ರಣ ಹಾಗೂ ಕಠಿಣ ಮಾರ್ಗಸೂಚಿಗಳ ಅನುಷ್ಠಾನ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೋಂಕು ನಿಯಂತ್ರಣದಲ್ಲಿ ವಿವಿಧ ಇಲಾಖೆಗಳು ಪ್ರಮುಖವಾಗಿ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮುಂಚೂಣಿಯಲ್ಲಿ ನಿಂತು ಪರಸ್ಪರ ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸಬೇಕು. ತಾಲೂಕಾಡಳಿತ ಹಾಗೂ ಸ್ಥಳೀಯ ಆಡಳಿತಗಳು ಸೋಂಕಿನ ಹತೋಟಿಗೆ ಮಾರ್ಗಸೂಚಿಗಳ ಪಾಲನೆ ಸರಿಯಾಗಿ ಅನುಷ್ಠಾನಗೊಳಿಸಬೇಕೆಂದು ಸೂಚಿಸಿದರು.

ಜ.19ರವರೆಗೆ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕರ್ಪ್ಯೂ ಹಾಗೂ ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗಿನ 5ರವರೆಗೆ ವಾರಾಂತ್ಯದ ಕರ್ಪ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಸರ್ಕಾರ ಜಾರಿಗೊಳಿಸಿರುವ ಪರಿಷ್ಕೃತ ಮಾರ್ಗಸೂಚಿಗಳು ಪಾಲನೆಯಾಗುವಂತೆ ನಿಗಾವಹಿಸಬೇಕು. ಮಾರ್ಗಸೂಚಿ ಉಲ್ಲಂಘಿಸುವವರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯ ಎಲ್ಲ ಸಾರ್ವಜನಿಕ ಉದ್ಯಾನಗಳು ಸ್ತಬ್ಧವಾಗಿರಲಿವೆ. ಮಾಹಿತಿ ತಂತ್ರಜ್ಞಾನ ಉದ್ಯಮ ಒಳಗೊಂಡಂತೆ ಎಲ್ಲ ಉದ್ಯಮ ಕ್ಷೇತ್ರಗಳಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಿದೆ. ನೌಕರರು ಆಯಾ ಸಂಘ/ಸಂಸ್ಥೆಗಳು ನೀಡುವ ಅಧಿಕೃತ ಗುರುತಿನ ಚೀಟಿ ಹಾಜರುಪಡಿಸಿ ಸಂಚರಿಸಬಹುದು. ಇನ್ನು ತುರ್ತು ಚಿಕಿತ್ಸೆಗಾಗಿ ಅಗತ್ಯವಿರುವ ರೋಗಿಗಳು, ಅವರ ಪರಿಚಾರಕರು/ವ್ಯಕ್ತಿಗಳಿಗೆ ಮತ್ತು ಲಸಿಕೆ ಹಾಕಿಸಿಕೊಳ್ಳಲು ಉದ್ದೇಶಿಸಿರುವ ವ್ಯಕ್ತಿಗಳಿಗೆ ಕನಿಷ್ಠ ರುಜುವಾತನ್ನು ಹಾಜರುಪಡಿಸಿ ಓಡಾಡಬಹುದು.

ವೀಕೆಂಡ್ ಕರ್ಪ್ಯೂ ವೇಳೆ ಆಹಾರ, ದಿನಸಿ, ಹಣ್ಣು ಮತ್ತು ತರಕಾರಿಗಳು, ಡೈರಿ ಮತ್ತು ಹಾಲಿನ ಬೂತ್‌ಗಳು, ಮಾಂಸ ಮತ್ತು ಮೀನು, ಪಶು ಆಹಾರದ ಅಂಗಡಿಗಳು ಕಾರ್ಯ ನಿರ್ವಹಿಸಲಿವೆ. ಬೀದಿ ಬದಿ ವ್ಯಾಪಾರಿಗಳಿಗೆ ಅನುಮತಿ ಇರಲಿದೆ. ಸಾರ್ವಜನಿಕ ವಿತರಣೆಯ ನ್ಯಾಯಬೆಲೆ ಅಂಗಡಿಗಳು ತೆರೆದಿರಲಿವೆ. ಜನರ ಅನಗತ್ಯ ಓಡಾಡಕ್ಕೆ ಕಡಿವಾಣ ಹಾಕುವುದಕ್ಕಾಗಿ (ಹೋಮ್ ಡಿಲೆವರಿ) ಪ್ರೋತ್ಸಾಹಿಸಬೇಕು.
ರೆಸ್ಟೋರೆಂಟ್, ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ ಇರಲಿದೆ.

ವಾರಾಂತ್ಯದ ಕರ್ಪ್ಯೂ ವೇಳೆಯಲ್ಲಿ ಬರುವ ಸಂತೆಗಳನ್ನು ಸಾಧ್ಯವಾದಷ್ಟು ಮುಂದೂಡಬೇಕು. ಇಲ್ಲವಾದಲ್ಲಿ ವಿಶಾಲವಾದ ಮೈದಾನಕ್ಕೆ ವರ್ಗಾಯಿಸಿ ಕೋವಿಡ್ ಮಾರ್ಗಸೂಚಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಅಗತ್ಯ ಸೇವೆಗಳ ಅಂಗಡಿ ಮುಂಗ್ಗಟ್ಟುಗಳಲ್ಲಿ ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಮಾಸ್ಕ ಧರಿಸಿ ಆಗಮಿಸುವಂತೆ ಅಳವಡಿಸಲು ತಿಳಿಸಿ ಸಾಮಾಜಿಕ ಅಂತರ ಪಾಲನೆಯಾಗುವಂತೆ ನೋಡಿಕೊಳ್ಳಬೇಕೆಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿವಪ್ರಕಾಶ ಅವರು ಮಾತನಾಡಿ, ಗದಗ ನಗರದ ಸುತ್ತಲಿನ ಪ್ರಮುಖ ಪ್ರವೇಶ ರಸ್ತೆಗಳಲ್ಲಿ ಚೆಕ್‌ಪೋಸ್ಟ್ ತೆರೆಯುವ ಮೂಲಕ ಅನಗತ್ಯ ಸಾರ್ವಜನಿಕರ ಸಂಚಾರವನ್ನು ತಡೆಯಬೇಕು. ಸಂಚಾರಿ ದಳಗಳ ವಾಹನಗಳ ಮೂಲಕ ಅಲ್ಲಲ್ಲಿ ಅನಗತ್ಯ ಜನ ಸಂಚಾರವನ್ನು ನಿಯಂತ್ರಿಸಬೇಕು. ಬೀಟ್ ಪೊಲೀಸರು ಪ್ರತಿದಿನ ಜನಜಂಗುಳಿ ಸೇರುವ ಪ್ರದೇಶಗಳ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ತಿಳಿಸುವ ಮೂಲಕ ನಿಯಂತ್ರಿಸಲು ಸೂಕ್ತ ಕ್ರಮ ವಹಿಸಬೇಕು. ತಾಲೂಕುಗಳಲ್ಲಿ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಒಟ್ಟಿಗೆ ಕಾರ್ಯಾಚರಣೆ ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆಯ ಮುಖ್ಯಸ್ಥರು ಆಯಾ ತಾಲೂಕಿನ ತಹಶೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಎಂದಿನಂತೆ ಬಸ್ ಸಂಚಾರ

ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿದ್ದರೂ ಎಂದಿನಂತೆ ಬಸ್ ಸಂಚಾರ ಇರಲಿದೆ. ಪ್ರಯಾಣಿಕರ ಸಂಖ್ಯೆ ವಿರಳವಿದ್ದಲ್ಲಿ, ಪ್ರಯಾಣಿಕರೇ ಇರದಿದ್ದಲ್ಲಿ ಆ ಮಾರ್ಗದಲ್ಲಿ ಸಂಚಾರ ಇರುವುದಿಲ್ಲ. ಒಟ್ಟು ಜಿಲ್ಲೆಯಲ್ಲಿ 483 ಬಸ್‌ಗಳಿದ್ದು ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಸ್ ಸಂಚಾರ ಇರಲಿದೆ. ಅಲ್ಲದೇ, ಗ್ರಾಮೀಣ ಪ್ರದೇಶಗಳಲ್ಲಿ ಎಂದಿನಂತೆ ಬಸ್ ಸಂಚರಿಸಲಿವೆ ಎಂದು ಕೆಎಸ್‌ಆರ್‌ಟಿಸಿ ಡಿಸಿ ಎಫ್.ಸಿ.ಹಿರೇಮಠ ಅವರು ವಿಜಯಸಾಕ್ಷಿಗೆ ತಿಳಿಸಿದರು.

ಸೋಮವಾರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸಾಧ್ಯತೆ; ಸೋತವ್ರು, ಗೆದ್ದವ್ರಿಗೆ ಬಿಜೆಪಿಯಿಂದ ಪ್ರವಾಸ ಭಾಗ್ಯ!

ವಿಜಯಸಾಕ್ಷಿ ಸುದ್ದಿ, ಗದಗ:

ಇತ್ತೀಚೆಗೆ ನಡೆದ ಗದಗ -ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಸದಸ್ಯರು, ಪರಾಜಿತಗೊಂಡ ಅಭ್ಯರ್ಥಿಗಳು ಹಾಗೂ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಓಡಾಡಿ ಕೆಲಸ ಮಾಡಿದ ಮುಖಂಡರು, ಕಾರ್ಯಕರ್ತರಿಗೆ ಪ್ರವಾಸ ಭಾಗ್ಯ ದೊರೆತಿದೆ.

ಹೌದು, ಬಿಜೆಪಿಯ ಗೆದ್ದ 18 ಸದಸ್ಯರು, ಪರಾಜಿತಗೊಂಡ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಸುಮಾರು 70 ಜನರು ಅಸ್ಸಾಂನತ್ತ ಪ್ರಯಾಣ ಬೆಳೆಸಿದ್ದಾರೆ. 15 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಆಪರೇಷನ್ ಹಸ್ತ ನಡೆಸಬಹುದು ಎಂಬ ಕಾರಣಕ್ಕೆ ತಮ್ಮವರನ್ನು ತಮ್ಮ ಬಳಿಯೇ ಸೇಫ್ ಆಗಿಟ್ಟುಕೊಳ್ಳಲು ಗುರುವಾರ (ಜ.6) ರಾತ್ರಿ ಲಗ್ಝುರಿ ಬಸ್ ಮೂಲಕ ಬೆಂಗಳೂರಿಗೆ ಹೋಗಿದ್ದಾರೆ. ಶುಕ್ರವಾರ ಬೆಳಗ್ಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಅಸ್ಸಾಂಗೆ ಹಾರಿದ್ದಾರೆ.

ನಗರಸಭೆ ಸದಸ್ಯರಾದ ಚಂದ್ರಶೇಖರ ತಡಸದ, ವಿನಾಯಕ ಮಾನ್ವಿ, ಶ್ವೇತಾ ದಂಡಿನ, ಗೂಳಪ್ಪ ಮುಶಿಗೇರಿ, ಅನಿಲ ಅಬ್ಬಿಗೇರಿ, ಪ್ರಕಾಶ್ ಅಂಗಡಿ, ಮಾಧುಸಾ, ಬಾಕಳೆ ಮುಖಂಡರಾದ ಎಂ.ಎಸ್.ಕರಿಗೌಡ್ರ, ಪ್ರಶಾಂತ ನಾಯ್ಕರ, ಮಹೇಶ ದಾಸರ, ವಿಜಯಲಕ್ಷ್ಮೀ, ಸೇರಿದಂತೆ ಅನೇಕರು ಶುಕ್ರವಾರ ಮಧ್ಯಾಹ್ನ ಅಸ್ಸಾಂಗೆ ತೆರಳಿದ್ದಾರೆ.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಶನಿವಾರ
(ಜ.8) ರಂದು ಚುನಾವಣಾ ನೋಟಿಫಿಕೇಷನ್ ಆಗುವ ಸಂಭವವಿದೆ. ಬಹುತೇಕ ಸೋಮವಾರ ಅಥವಾ ಮಂಗಳವಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಈ ಬೆನ್ನಲ್ಲೆ ಬಿಜೆಪಿ ರೆಸಾರ್ಟ್ ರಾಜಕಾರಣದತ್ತ ಮುಖ ಮಾಡಿರುವುದು ಗದಗ-ಬೆಟಗೇರಿ ಅವಳಿ ನಗರ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಚುನಾವಣೆಯಲ್ಲಿ ವಿಫ್ ಜಾರಿಗೊಳಿಸಿ ನಗರಸಭೆಯಲ್ಲಿ ತನ್ನ ಅಧಿಕಾರ ಸ್ಥಾಪಿಸಲು ಶತಾಯ-ಗತಾಯ ಪ್ರಯತ್ನ ನಡೆಸಿದ್ದು, ಕಾಂಗ್ರೆಸ್ ಪಕ್ಷದ ಆಶಾಭಾವನೆಗೆ ತಣ್ಣೀರು ಎರಚಿದಂತಾಗಿದೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೋಜು ಮಸ್ತಿ ಬೇಕಿತ್ತೆ ಎಂಬ ಮಾತುಗಳು ಅವಳಿ ನಗರದಲ್ಲಿ ಕೇಳಿ ಬರುತ್ತಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ, ನಾವು ಯಾವುದೇ ಮೋಜು-ಮಸ್ತಿ ಮಾಡಲು ಬಂದಿಲ್ಲ. ಹರಕೆ ತೀರಿಸಲು‌ ದೇವಸ್ಥಾನಕ್ಕೆ ಬಂದಿದ್ದೇವೆ. ಕಾಮಾಕ್ಯದೇವಿಯ ದರ್ಶನ ಪಡೆದು ಭಾನುವಾರ ಗದಗ ನಗರಕ್ಕೆ ಬರ್ತೀವಿ ಎಂದು ಸ್ಪಷ್ಟಪಡಿಸಿದರು.

ಸಂಬಳ ಇಲ್ಲಿ, ಸೇವೆ ಅಲ್ಲಿ; ಪಶು-ಪಕ್ಷಿಗಳ ‘ಮೂಕ’ವೇದನೆ!

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ: ಜಾನುವಾರುಗಳಿಗೆ ಸಿಗುತ್ತಿಲ್ಲ ಸೂಕ್ತ ಚಿಕಿತ್ಸೆ, ಹೆಚ್ಚುವರಿ ಪ್ರಭಾರಿ ಇಒಗಳ ನಿಯೋಜನೆ ರದ್ದುಪಡಿಸುವಂತೆ ಸಚಿವ ಪ್ರಭು ಚವ್ಹಾಣ ಸೂಚನೆ

ದುರಗಪ್ಪ ಹೊಸಮನಿ:

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ 259 ವಿವಿಧ ಹುದ್ದೆಗಳು ಖಾಲಿ ಇವೆ. ಹೀಗಾಗಿ ಇಲಾಖಾಧಿಕಾರಿಗಳು ಅನಿವಾರ್ಯವಾಗಿ ಇರುವಷ್ಟು ವೈದ್ಯಾಧಿಕಾರಿಗಳ, ಸಿಬ್ಬಂದಿಯ ಮೂಲಕ ಬಂಡಿ ಸಾಗಿಸುತ್ತಿದ್ದಾರೆ. ಆದರೆ, ವೈದ್ಯಾಧಿಕಾರಿಗಳ, ಸಿಬ್ಬಂದಿಯ ಕೊರತೆಯಿಂದಾಗಿ ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.

ಗದಗ ತಾಲೂಕು ಹೊಂಬಳ ಗ್ರಾಮದ ಪಶುಚಿಕಿತ್ಸಾಲಯದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಎಚ್.ಎಸ್. ಜಿನಗಾ 7-8 ವರ್ಷಗಳಿಂದ ಗದಗ ತಾ.ಪಂ. ಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಂತೆ, ಶಿರಹಟ್ಟಿ ತಾಪಂ ಇಒ ಆಗಿ ಡಾ. ಎನ್.ಎಚ್. ಓಲೇಕಾರ ಹಾಗೂ ಲಕ್ಷ್ಮೇಶ್ವರ ತಾಪಂ ಇಒ ಆಗಿ ಡಾ. ಆರ್.ವೈ. ಗುರಿಕಾರ ಹೆಚ್ಚುವರಿ ಪ್ರಭಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಪಶುವೈದ್ಯಾಧಿಕಾರಿಗಳ, ಸಿಬ್ಬಂದಿಯ ಕೊರತೆಯಿದ್ದರೂ ಹೆಚ್ಚುವರಿ ಪ್ರಭಾರದಲ್ಲಿ ಪಶುಸಂಗೋಪನಾ ಇಲಾಖೆಯ ಸಂಬಳ ಪಡೆದು ಗದಗ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕು ಪಂಚಾಯತಿಗಳಲ್ಲಿ ಮೂವರು ಪಶುವೈದ್ಯಾಧಿಕಾರಿಗಳು ಕಳೆದ ಹಲವು ವರ್ಷಗಳಿಂದ ‘ತಾತ್ಕಾಲಿಕ’ ಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಈ ಮೂವರು ಎರಡೂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಆಯಾ ತಾಲೂಕು ವ್ಯಾಪ್ತಿಯಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿದಾಯಕ ಕೆಲಸಗಳೂ ಆಗಿಲ್ಲ. ಅದರಲ್ಲೂ ಗದಗ ತಾ.ಪಂ. ಇಒ ಕಾಂಗ್ರೆಸ್ ಪಕ್ಷದ ಏಜೆಂಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪಗಳು ಬಿಜೆಪಿ ಕಾರ್ಯಕರ್ತರಿಂದ ಕೇಳಿ ಬರುತ್ತಿವೆ.

ಜಿಲ್ಲೆಯಲ್ಲಿ 82 ಪಶು ಚಿಕಿತ್ಸಾಲಯಗಳಿವೆ. ಅದರಲ್ಲಿ ಪಾಲಿಕ್ಲಿನಿಕ್ 1, ಪಶುಚಿಕಿತ್ಸಾಲಯ 62, ಪ್ರಥಮಿಕ ಪಶು ಚಿಕಿತ್ಸಾಲಯ 8, ತಾಲೂಕು ಪಶುಚಿಕಿತ್ಸಾಲಯಗಳು 7 ಹಾಗೂ 5 ಸಂಚಾರಿ ಪಶು ಚಿಕಿತ್ಸಾಲಯಗಳಿವೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಗುರುರಾಜ ಮನಗೂಳಿ ತಿಳಿಸಿದ್ದಾರೆ.


259 ಹುದ್ದೆಗಳು ಖಾಲಿ

ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ‘ಎ ವೃಂದದ ಮುಖ್ಯ ಪಶುವೈದ್ಯಾಧಿಕಾರಿ ಆಡಳಿತ 1, ಹಿರಿಯ ಪಶುವೈದ್ಯಾಧಿಕಾರಿಗಳು 13, ಪಶುವೈದ್ಯಾಧಿಕಾರಿ 49, ‘ಬಿ ವೃಂದದ ಜಾನುವಾರು ಅಭಿವೃದ್ಧಿ ಅಧಿಕಾರಿ 5, ‘ಸಿ ವೃಂದದ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು 8, ಪಶು ವೈದ್ಯಕೀಯ ಪರೀಕ್ಷಕರು 34, ಕಿರಿಯ ಪಶು ವೈದ್ಯಕೀಯ ಪರೀಕ್ಷಕರು 15, ಬೆರಳಚ್ಚುಗಾರರು 1, ವಾಹನ ಚಾಲಕರು 6, ಲ್ಯಾಬ್ ಟೆಕ್ನಿಷಿಯನ್ 1 ಹಾಗೂ ‘ಡಿ ವೃಂದದ 126 ಅನುಚರ ಸೇರಿ ಒಟ್ಟು 259 ಹುದ್ದೆಗಳು ಖಾಲಿ ಇವೆ.

ಪ್ರಭಾರ ಇಒಗಳ ನಿಯೋಜನೆ ರದ್ದುಪಡಿಸಿ

ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕು ಪಂಚಾಯತಿಗಳಲ್ಲಿ ಇಲಾಖೆಯ ಪಶುವೈದ್ಯಾಧಿಕಾರಿಗಳು ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಇಲಾಖೆಯ ಚಟುವಟಿಕೆಗಳು ಕುಂಠಿತವಾಗಿವೆ. ಜಾನುವಾರುಗಳ ದೈನಂದಿನ ಚಿಕಿತ್ಸೆಗೆ ಅನಾನುಕೂಲವಾಗುತ್ತಿದೆ ಎಂದು ಜನಪ್ರತಿನಿಧಿಗಳು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಪಶುವೈದ್ಯಾಧಿಕಾರಿಗಳ ನಿಯೋಜನೆಯನ್ನು ಕೂಡಲೇ ರದ್ದುಪಡಿಸಿ ಕೈಗೊಂಡ ಕ್ರಮದ ವಿವರವನ್ನು ಪಶುಸಂಗೋಪನಾ ಕಚೇರಿಗೆ ಸಲ್ಲಿಸುವಂತೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಜಿ.ಪಂ. ಸಿಇಒ ಭರತ್ ಎಸ್. ಅವರಿಗೆ ಡಿ. 14ರಂದು ಸೂಚಿಸಿದ್ದಾರೆ.

ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಮುಗಿಯಲಿಕ್ಕೆ ಬಂದಿದೆ. ಈ ವೇಳೆ ತಾ.ಪಂ. ವ್ಯಾಪ್ತಿಯಲ್ಲಿ ಕೋಟ್ಯಂತರ ರೂ. ಮೊತ್ತದ ಕೆಲಸಗಳು ನಡೆಯುತ್ತಿರುವುದರಿಂದ ಗೊಂದಲಗಳು ಉಂಟಾಗಬಾರದು ಎಂಬ ಕಾರಣಕ್ಕೆ ಕಾಯುತ್ತಿದ್ದೇವೆ. ಆರ್ಥಿಕ ವರ್ಷ ಮುಕ್ತಾಯದ ಬಳಿಕ ಹೆಚ್ಚುವರಿ ಪ್ರಭಾರದಲ್ಲಿ ಸೇವೆ ಸಲ್ಲಿಸುತ್ತಿರುವ ಇಒಗಳ ನಿಯೋಜನೆಯನ್ನು ಬಹುತೇಕ ರದ್ದುಗೊಳಿಸಲಾಗುವುದು.

ಭರತ್ ಎಸ್., ಜಿಪಂ ಸಿಇಒ

ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವೈದ್ಯಾಧಿಕಾರಿ, ಸಿಬ್ಬಂದಿಯ ಕೊರತೆಯಿಂದಾಗಿ ಸೊರಗಿದೆ. ಇದರಿಂದ ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ತಾಪಂಗಳಲ್ಲಿ ಹೆಚ್ಚುವರಿ ಪ್ರಭಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪಶುವೈದ್ಯಕೀಯ ಕ್ಷೇತ್ರದಲ್ಲಿ ಪಳಗಿರುವ ಮೂವರು ಇಒಗಳ ನಿಯೋಜನೆಯನ್ನು ಜಿಪಂ ಸಿಇಒ ಅವರು ಶೀಘ್ರವೇ ರದ್ದುಗೊಳಿಸಬೇಕು.

ರವಿ ವಗ್ಗನವರ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ತಾಲ್ಲೂಕಾಧ್ಯಕ್ಷ

ಪಶು ವೈದ್ಯಾಧಿಕಾರಿಗಳ ಕೊರತೆ ಇರುವುದರಿಂದ ಮೂರು-ನಾಲ್ಕು ಕಡೆಗಳಲ್ಲಿ ಒಬ್ಬರನ್ನೇ ನಿಯೋಜಿಸಲಾಗಿದೆ. ಶೀಘ್ರದಲ್ಲೇ ೪೫೮ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಗದಗ ಜಿಲ್ಲೆಗೆ ಏಪ್ರಿಲ್, ಮೇ ವೇಳೆಗೆ ಹೊಸ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಇಲಾಖಾ ಸಚಿವರು ತಿಳಿಸಿದ್ದಾರೆ. ೨೫ ಸಿಬ್ಬಂದಿಯನ್ನು ನೇಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗುವುದು.

ಡಾ. ಗುರುರಾಜ ಮನಗೂಳಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ, ಗದಗ

ನಗರಸಭೆಯಲ್ಲಿ ಗಂಡಂದಿರ ದರ್ಬಾರ್ ಆರಂಭ; ಪತ್ನಿ ಸದಸ್ಯೆ, ಪತಿಯ ಕಾರುಬಾರು

*ಅಧಿಕಾರಿಗಳಿಗೆ ಮೌಖಿಕ ಆದೇಶ!

ವಿಜಯಸಾಕ್ಷಿ ಸುದ್ದಿ, ಗದಗ:

ಪತ್ನಿಯರ ಹೆಸರಿನಲ್ಲಿ ಗಂಡಂದಿರು ಆಡಳಿತ ನಡೆಸೋದು ಹೊಸ ವಿಷಯವೇನಲ್ಲ. ಅಧಿಕಾರ ವಿಕೇಂದ್ರೀಕರಣ, ಮಹಿಳಾ ಮೀಸಲಾತಿ ಜಾರಿಗೆ ಬಂದ ಅನಂತರ ಮಹಿಳೆಯರಿಗೂ ಸಮಾನ ಅವಕಾಶವಿದೆ. ಇದನ್ನು ಬಳಸಿಕೊಳ್ಳುವ ಕೆಲವರು ತಮ್ಮ ಮನೆಯ ಮಹಿಳೆಯರಿಗೆ ರಾಜಕೀಯ ಪ್ರವೇಶಿಸಲು ಅವಕಾಶ ಕಲ್ಪಿಸಿ ತಾವೇ ಅಧಿಕಾರ ಚಲಾಯಿಸುವ ಪ್ರಕರಣಗಳು ಸಾಕಷ್ಟು ವರದಿಯಾಗಿವೆ.

ಅದರಲ್ಲೂ ಬೇರೆಯವರ ಹೆಸರಲ್ಲಿ ರಾಜಕೀಯ ಮಾಡುವುದು, ತಾಯಿ ಹೆಸರಲ್ಲಿ ಮಗ, ಪತ್ನಿಯ ಅಧಿಕಾರದಲ್ಲಿ ಪತಿ ಹಸ್ತಕ್ಷೇಪ, ಆಡಳಿತ ನಡೆಸುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ಇಂತಹದೇ ಒಂದು ಪ್ರಕರಣ ಗುರುವಾರ ಗದಗನಲ್ಲಿ ನಡೆದೇ ಹೋಯಿತು.

ಗದಗ-ಬೆಟಗೇರಿ ನಗರಸಭೆಯ 12ನೇ ವಾರ್ಡಿನ ಸದಸ್ಯೆಯಾಗಿ ಬಿಜೆಪಿಯ ವಿಜಯಲಕ್ಷ್ಮೀ ಶಶಿಧರ ದಿಂಡೂರ ಆಯ್ಕೆಯಾಗಿದ್ದಾರೆ. ಆದರೆ ಆಡಳಿತ ನಡೆಸೋದು ಮಾತ್ರ ಪತಿ ಶಶಿಧರ ಎಂಬುವುದು ಸ್ಥಳೀಯರ ಆರೋಪ. ಸಾರ್ವಜನಿಕರು ಅಷ್ಟೇ ಅಲ್ಲದೆ, ಕೆಲವು ಪ್ರಾಮಾಣಿಕ ಅಧಿಕಾರಿಗಳೂ ಶಶಿಧರ ದಿಂಡೂರ ಅವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

12ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳ ಹಿಂಡನ್ನು ಕರೆಯಿಸಿ ಕೆಲಸ ಮಾಡಲು ಮೌಖಿಕ ಆದೇಶ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದಕ್ಕೆ ಫೋಟೋ ಸಾಕ್ಷೀಕರಿಸಿದೆ. ಈ ಪೋಟೋದಲ್ಲಿ ಸದಸ್ಯೆ ವಿಜಯಲಕ್ಷ್ಮೀ ಅವರು ಕಾಣುತ್ತಿಲ್ಲ. ಆದರೆ, ಸ್ಥಳೀಯ ಜನರ ನಡುವೆ ಶಶಿಧರ ದಿಂಡೂರ ಸಾಹೇಬರು ಮಾತ್ರ ರಾರಾಜಿಸುತ್ತಿದ್ದಾರೆ.

ಇವರೊಂದಿಗೆ 24×7 ಕುಡಿಯುವ ನೀರು ಸರಬರಾಜು ಯೋಜನೆಯ ಅಧಿಕಾರಿಗಳಿದ್ದಾರೆ. ದಶಕದ ಸಮಸ್ಯೆಗೆ ತಿಂಗಳಲ್ಲಿ ಪರಿಹಾರ ಮಾಡುವುದಾಗಿ ಎಇಇ ಸುಭಾಸ್ ಭಜ್ಜನವರ್ ಶಶಿಧರ ದಿಂಡೂರ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಈ ರೀತಿ ಬೇರೆಯವರ ಹೆಸರಿನಲ್ಲಿ ಸ್ಥಳೀಯ ಸಂಸ್ಥೆಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂಬುವುದು ಸ್ಪಷ್ಟವಾಗಿರುವಂತೆ, ಪೌರಾಡಳಿತದಲ್ಲೂ ರೀತಿ ಹಸ್ತಕ್ಷೇಪ ಮಾಡುವಂತಿಲ್ಲ.
ಇದು ಒಂದೆಡೆಯಾದರೆ, ಗದಗ-ಬೆಟಗೇರಿ ನಗರಸಭೆಗೆ ಡಿ. 30ರಂದು ನಗರಸಭೆ ಸದಸ್ಯರಾಗಿ ಚುನಾಯಿತರಾಗಿದ್ದರೂ ಅಲ್ಲಿ ಇನ್ನೂ ಆಡಳಿತಾಧಿಕಾರಿಗಳ ಆಡಳಿತವಿದೆ. ಈ ಮಧ್ಯೆಯೂ ಪತ್ನಿಯ ಹೆಸರಲ್ಲಿ ಪತಿ ಆಡಳಿತ ಮಾಡುತ್ತಿರುವುದು ದುರಂತವೇ ಸರಿ.

ಪತ್ನಿಯ ಹೆಸರಲ್ಲಿ ಪತಿ ಶಶಿಧರ ದಿಂಡೂರ ಅಧಿಕಾರ ನಡೆಸಲು ಮುಂದಾಗಿದ್ದು, ಅವಳಿ ನಗರದಲ್ಲಿ ಚರ್ಚೆಯ ವಿಷಯವಾಗಿದೆ.

ಸರ್ಟಿಫಿಕೇಟ್’ಗಾಗಿ ಹಣ ಕೇಳಿದ ಆರೋಪ; ಉಪ ತಹಶೀಲ್ದಾರಗೆ ಥಳಿಸಿದ ಕಾಂಗ್ರೆಸ್ ಮುಖಂಡ!

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ನಾಡ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡನೊಬ್ಬ ಉಪ ತಹಶೀಲ್ದಾರ್ ಅವರಿಗೆ ಥಳಿಸಿದ ಆರೋಪ ಕೇಳಿ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಡಂಬಳ ಗ್ರಾಮದ ನಾಡ ಕಚೇರಿಯಲ್ಲಿ ಉಪ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಚಿದಾನಂದ ಕುಬೇರಪ್ಪ ಬಳೂಟಗಿ ಎಂಬುವವರನ್ನು ಸಮೀಪದ ಪೇಠಾಲೂರ ಗ್ರಾಮದ ಭೀಮನಗೌಡ ವಸಂತಗೌಡ ಪಾಟೀಲ ಎಂಬುವವರು ಥಳಿಸಿದ್ದಾರೆ ಎಂಬ ಆರೋಪ ಕೇಳಿ‌ ಬಂದಿದೆ.

ಭೀಮನಗೌಡ ಪಾಟೀಲ ಎಂಬಾತ ಬೋನೋಫೈಡ್ ದೃಢೀಕರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ದೃಡೀಕರಣ ಪತ್ರಕ್ಕಾಗಿ ಹಣ ನಾಡ ಕಚೇರಿಯ ಸಿಬ್ಬಂದಿ ಒಬ್ಬರು ಹಣ ಕೇಳಿದ್ದಾರೆ ಎನ್ನಲಾಗಿದೆ. ಆದರೆ ಅವರು ಕೇಳಿದಷ್ಟು ಹಣ ನೀಡದಿದ್ದಾಗ ಮಾತಿಗೆ ಮಾತು‌ ಬೆಳೆದ ಜಗಳ ‌ವಿಕೋಪಕ್ಕೆ ಹೋಗಿದೆ.

ಆಗ ಚಿದಾನಂದ ಹಾಗೂ ಭೀಮನಗೌಡ ಮಧ್ಯೆ ವಾಗ್ವಾದ ನಡೆದು ಕೈ ಕೈ‌ಮಿಲಾಯಿಸಿದ್ದಾರೆ ಎನ್ನಲಾಗಿದೆ. ಅಂದೇ ಗ್ರಾಮದ ಕೆಲ ಹಿರಿಯರು ಸೇರಿ ರಾಜಿ ಪಂಚಾಯತಿ ‌ನಡೆಸಿ ಭೀಮನಗೌಡ ಪಾಟೀಲ ಅವರಿಂದ ಕ್ಷಮೆ ಕೇಳಿಸಿ ಪ್ರಕರಣ ಸುಖಾಂತ್ಯಗೊಳಿಸಿದ್ದರು ಎಂದು ಮೂಲಗಳು ತಿಳಿಸಿವೆ.

ರಾಜಕೀಯ ತಿರುವು?

ಹಿರಿಯರು ರಾಜೀ ಪಂಚಾಯತಿ ನಡೆಸಿ ಸುಖಾಂತ್ಯಗೊಳಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ‌ಮರುದಿನ. ರಾಜೀ ಪಂಚಾಯತಿ ನಡೆದ ಪ್ರಕರಣಕ್ಕೆ ಜೀವ ತುಂಬಿ ರಾಜಕೀಯವಾಗಿ ಹಣೆಯಲು ಭೀಮನಗೌಡ ಪಾಟೀಲ ವಿರುದ್ಧ ಪ್ರಕರಣ ದಾಖಲಾಗುವಂತೆ ನೋಡಿಕೊಳ್ಳಲಾಗಿದೆ. ಪಕ್ಕದ ಮತ್ತೊಂದು ಗ್ರಾಮದ ಬಿಜೆಪಿ ಮುಖಂಡನೊಬ್ಬ ಉಪತಹಶೀಲ್ದಾರ ಅವರನ್ನು ಮುಂದಿಟ್ಟುಕೊಂಡು ಪಾಟೀಲ ವಿರುದ್ಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಭೀಮನಗೌಡ ಪಾಟೀಲ ಪರಾರಿಯಾಗಿದ್ದು, ಪೊಲೀಸರು ಬಂಧನಕ್ಕೆ ಜಾಲ ಬೀಸಿದ್ದಾರೆ.

ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ, ಅತಿ ಹಿಂದುಳಿದ ವರ್ಗದ ಜನರಿಗೆ ಅನ್ಯಾಯ ಆಗದಂತೆ ಕ್ರಮ; ಸಚಿವ ಪೂಜಾರಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು:

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಲೇಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಿಯಾಶೀಲವಾಗಿದ್ದು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ವೇದಿಕೆಯ ಮನವಿಯಂತೆ ಸುಮಾರು 73 ಅತಿ ಹಿಂದುಳಿದ ಜಾತಿಗಳನ್ನು ಗುರುತಿಸಿ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ. ದೇವರಾಜು‌ ಅರಸು ಸಂಶೋಧನಾ ಪೀಠಕ್ಕೆ  ಅನುದಾನ ನೀಡಲಾಗುತ್ತದೆ ಎಂದ ಸಚಿವ ಪೂಜಾರಿ, ಅತಿ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ‌ವಿಚಾರವಾಗಿ ಯಾರಿಗೂ ಅನ್ಯಾಯವಾಗದಂತೆ ಸರಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.

ಈಗಾಗಲೇ ಹಿಂದುಳಿದ ಆಯೋಗದ ಅಧ್ಯಕ್ಷರು, ಹಲವು ಸಮುದಾಯಗಳ ಪ್ರಸ್ತಾಪವನ್ನು ಪರಿಶೀಲಿಸುತ್ತಿದ್ದಾರೆ. ನಮ್ಮ ಸಮಾಜ ಇನ್ನೂ ಹೆಸರೇ ಕೇಳದ, ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಅದೆಷ್ಟೋ ಸಮುದಾಯಗಳ ಬದುಕು ದಾರುಣವಾಗಿದೆ. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಮೀಸಲಾತಿ ವಿಚಾರದಲ್ಲಿ ಮುಂದಿನ 15 ದಿನಗಳಲ್ಲಿ ಸಭೆ ಕರೆದು ಚರ್ಚೆ ಮಾಡುತ್ತೇವೆ ಎಂದು ಸಚಿವರು ಭರವಸೆ ನೀಡಿದರು.

ಬಲಾಡ್ಯ ಸಮುದಾಯಗಳೂ ಸಹ ಆರ್ಥಿಕವಾಗಿ ಹಿಂದುಳಿದಿರುವುದಾಗಿ ಕೇಂದ್ರಕ್ಕೆ ಅಹವಾಲು ಸಲ್ಲಿಸಲಾಗುವುದು. ಆದರೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಸಚಿವ ಪೂಜಾರಿ ಹೇಳಿದರು.

ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಕುರಿತಾಗಿ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ. ದೇವರಾಜ ಅರಸು ಅವರ ಭೂಸುಧಾರಣೆ ಯೋಜನೆಯ ಫಲಾನುಭವಿ ನಾನು, ಅವತ್ತು ನನಗೆ 2 ಎಕರೆ ಭೂಮಿ ಸಿಕ್ಕಿತ್ತು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಮರಿಸಿಕೊಂಡರು.  

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷರಾದ ಎಂ ಸಿ ವೇಣುಗೋಪಾಲ ಮಾತನಾಡಿ, ಒಂದು ವೇಳೆ ವೀರಶೈವ ಲಿಂಗಾಯಿತದ ಉಪಜಾತಿಯಾದ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎ ಪಟ್ಟಿಗೆ ಸೇರಿಸಿದರೆ ಹಿಂದುಳಿದ ಸಮುದಾಯಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.  

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಪಿ.ಆರ್‌ ರಮೇಶ್‌, ಮಾಜಿ ಶಾಸಕ ಹಾಗೂ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ನೆ.ಲ ನರೇಂದ್ರಬಾಬು ಸೇರಿದಂತೆ ಹಲವರು ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಲು ತಾಂತ್ರಿಕ ಅಡೆತಡೆಯಿದೆ. 2ಎ ಮೀಸಲಾತಿ ನೀಡಿದರೆ ಅತಿ ಹಿಂದುಳಿದ ಸಮುದಾಯಕ್ಕೆ ಘೋರ ಅನ್ಯಾಯವಾಗುತ್ತದೆ. ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ-ಗೆ ಸೇರಿಸಬಾರದೆಂದು ಒಕ್ಕೂರಲಿನಿಂದ ಸಚಿವರ ಬಳಿ ಮನವಿ ಮಾಡಿಕೊಂಡರು.

ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಬಳಿ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿ, ಪ್ರಮುಖ ಬೇಡಿಕೆಗಳ ಮನವಿ ಪತ್ರ ನೀಡಲಾಯಿತು. ಹೆಚ್. ಕಾಂತರಾಜ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿರುವ ಸಮಾಜೋ-ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಕೂಡಲೇ ಸ್ವೀಕರಿಸಿ ಬಹಿರಂಗ ಪಡಿಸಬೇಕು. ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ-2ಎಗೆ ಸೇರ್ಪಡೆ ಗೊಳಿಸಬಾರದು.  ನ್ಯಾಯಮೂರ್ತಿ ಸುಭಾಷ್ ಆಡಿ ಸಮಿತಿಯಿಂದ ಪಂಚಮಸಾಲಿ ವಿಷಯ ಹಿಂಪಡೆಯಬೇಕು. ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸುಮಾರು 70 ಜಾತಿ-ಉಪಜಾತಿಗಳನ್ನು ಸೇರ್ಪಡೆಗೆ ಶಿಫಾರಸ್ಸು ಮಾಡಬೇಕು. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ‌ ನೀಡಬೇಕು. ಸಮಾಜದ ಅಲಕ್ಷಿತ ಅತಿ ಹಿಂದುಳಿದ ಸಮುದಾಯಗಳ ಸಾಮಾಜಿಕ ಸುಧಾರಣೆಗೆ ಸರ್ಕಾರ ಬದ್ಧವಾಗಬೇಕು ಎಂಬ ಬೇಡಿಕೆಗಳನ್ನೊಳಗೊಂಡ ಮನವಿ ನೀಡಲಾಯಿತು.

ಸಭೆಗೂ ಮುನ್ನ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ 2ನೇ ಕಾರ್ಯಕಾರಿ ಮಂಡಳಿ ಸಭೆ ನಡೆಯಿತು. ಇತ್ತೀಚೆಗೆ ನಿಧನರಾದ ಹಿರಿಯ ಮುತ್ಸದ್ದಿ ರಾಜಕಾರಣಿ, ಮಾಜಿ ರಾಜ್ಯ ಮತ್ತು ಕೇಂದ್ರ ಸಚಿವ, ಹಿಂದುಳಿದ ಸಮುದಾಯಗಳ ನಾಯಕ ಆರ್‌.ಎಲ್‌ ಜಾಲಪ್ಪನವರಿಗೆ ಶ್ರದ್ಧಾಂಜಲಿ ಕೋರಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಹಾನಗಲ್‌ ಶಾಸಕ ಶ್ರೀನಿವಾಸ್‌ ಮಾನೆ ಮಾತನಾಡಿ, ಸಂಘಟನೆಯಿಂದ ವಂಚಿತರಾಗಿ ಛಿದ್ರವಾಗಿರುವ ಅತಿ ಹಿಂದುಳಿದ ವರ್ಗಗಳಿಗೆ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ವೇದಿಕೆ ದೊಡ್ಡ ಭರವಸೆಯಾಗಿದೆ.

ಮುಂದಿನ ದಿನಗಳಲ್ಲಿ ಅತಿ ಹಿಂದುಳಿದ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಯ ನಿರೀಕ್ಷೆಯನ್ನು ಖಂಡಿತಾ ಇಟ್ಟುಕೊಳ್ಳಬಹುದು. ಓರ್ವ ಶಾಸನ ಸಭೆಯ ಪ್ರತಿನಿಧಿಯಾಗಿ ಸಂಘಟನೆಗೆ ಸಾಧ್ಯವಿರುವ ಎಲ್ಲಾ ಅಗತ್ಯ ಕೆಲಸಗಳಿಗೂ ಬದ್ಧನಿದ್ದೇನೆ ಎಂದರು.

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಮೊಮ್ಮಗ ಸೂರಜ್, ನಿವೃತ್ತ ಐಎಎಸ್‌ ಅಧಿಕಾರಿ ಶ್ರೀನಿವಾಸ ಆಚಾರಿ, ನಿವೃತ್ತ ಐಎಎಸ್‌ ಅಧಿಕಾರಿ ಎಸ್‌ ಪುಟ್ಟಸ್ವಾಮಿ, ಕೆಎಎಸ್‌ ಅಧಿಕಾರಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆಎನ್‌ ಲಿಂಗಪ್ಪ, ವಿಧಾನ ಪರಿಷತ್‌ ಮಾಜಿ ಶಾಸಕ ತಿಪ್ಪಣ್ಣ, ವೇದಿಕೆಯ ಖಜಾಂಚಿ ಎಲ್‌.ಎ ಮಂಜುನಾಥ್‌, ಪ್ರಧಾನ ಕಾರ್ಯದರ್ಶಿ ಎಂ ನಾಗರಾಜ್‌, ಕಲಗೋಡು ರತ್ನಾಕರ್, ಶೋಭಾ, ಯಲ್ಲಪ್ಪ, ಕೆಎಸ್‌ ದುಶ್ಯಂತ, ಚಂದ್ರಶೇಖರ್‌ ಪಿ, ಮಂಜುನಾಥ್‌ ಎಸ್‌, ಪಲ್ಗುಣ, ಚಿದಾನಂದ ಬಡಿಗೇರಾ, ಕೆಎನ್‌ ಅಶೋಕ, ಶಿವಾನಂದ ಲಕ್ಷ್ಮಣ ಪಾಚಂಗಿ, ಗೋಪಿನಾಥ ರಾಜು, ಎಲ್‌ ಶಿವಶಂಕರ್‌, ಶಿವು ಯಾದವ್‌, ಗೋ ತಿಪ್ಪೇಶ್‌, ಗಣೇಶ್‌ ರಾವ್‌, ವರದರಾಜು, ಸತ್ಯನಾರಾಯಣ ರಾಜು, ದಿನೇಶ್‌ ಅರಸು, ಪದ್ಮನಾಭ್‌, ಚಂದ್ರಾನಾಯಕ್‌, ದೇವರಾಜು, ಶಂಕ್ರಪ್ಪ, ಚೆನ್ನಕೇಶವ ಮುಂತಾದವರು ಉಪಸ್ಥಿತರಿದ್ದರು.

ಗದಗ ಜಿಲ್ಲೆಯಲ್ಲಿ ಜ.19ರವರೆಗೆ ನೈಟ್ ಕರ್ಪ್ಯೂ; ಶುಕ್ರವಾರದಿಂದ ವೀಕೆಂಡ್ ಕರ್ಪ್ಯೂ; ಡಿಸಿ

0

ಧರಣಿ, ರ‌್ಯಾಲಿ ಮತ್ತು ಮುಷ್ಕರ ನಿರ್ಬಂಧ…. ಕೋವಿಡ್ ಲಸಿಕೆ ಕಡ್ಡಾಯ

ವಿಜಯಸಾಕ್ಷಿ ಸುದ್ದಿ, ಗದಗ:

ಇಂದಿನಿಂದ ರಾತ್ರಿ 10 ರಿಂದ ಜ.19ರ ಬೆಳಗ್ಗೆ 5ರವರೆಗೆ ರಾತ್ರಿ ಕರ್ಪ್ಯೂ ಹಾಗೂ ಶುಕ್ರವಾರ (ಜ.6)ದಿಂದ ರಾತ್ರಿ 10 ರಿಂದ ಸೋಮವಾರ ಬೆಳಗಿನ 5 ಗಂಟೆಯವರೆಗೆ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಆದೇಶಿಸಿದ್ದಾರೆ.

ಪ್ರಸ್ತುತ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಅನುಸಾರ ಗದಗ ಜಿಲ್ಲೆಯಾದ್ಯಂತ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕರ್ಪ್ಯೂ ಮುಂದುವರೆಸಲಾಗಿದೆ. ಜ.19ರವರೆಗೆ ಎಲ್ಲಾ ಸರ್ಕಾರಿ ಕಚೇರಿಗಳು ವಾರದಲ್ಲಿ ಐದು ದಿನ ಕಾರ್ಯನಿರ್ವಹಿಸಲಿವೆ.

ಅದರಂತೆ, ಪಬ್, ಕ್ಲಬ್, ರೆಸ್ಟೋರೆಂಟ್, ಬಾರ್, ಹೋಟೆಲ್, ಚಿತ್ರಮಂದಿರ, ರಂಗಮಂದಿರ, ಸಭಾಭವನಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೇ, ಕೋವಿಡ್‌ನ ಎರಡೂ ಲಸಿಕೆ ಪಡೆದವರಿಗಷ್ಟೇ ಪ್ರವೇಶಕ್ಕೆ ಅವಕಾಶ ಇರಲಿದೆ.

ಮದುವೆ ಸಮಾರಂಭಗಳಲ್ಲಿ ಹೊರಾಂಗಣದಲ್ಲಿ 200, ಒಳಾಂಗಣದಲ್ಲಿ 100 ಜನರು ಮೀರಬಾರದು. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು, ಯಾವುದೇ ಸೇವೆ ಇತ್ಯಾದಿಗಳಿಗೆ ಅವಕಾಶವಿಲ್ಲ. ಜಿಲ್ಲೆಯ ವಾಣಿಜ್ಯ ಸಂಕೀರ್ಣಗಳು, ಎಲ್ಲಾ ಏಕ ಕಟ್ಟಡದಲ್ಲಿನ ಅಂಗಡಿಗಳು ಮತ್ತು ವಾಣಿಜ್ಯ ಸ್ಥಳಗಳು ವಾರದಲ್ಲಿ 5 ದಿನ ಕಾರ್ಯನಿರ್ವಹಿಸಬೇಕು.

ಈಜುಕೊಳ, ಜಿಮ್, ಕ್ರೀಡಾ ಸಂಕೀರ್ಣ, ಆಟದ ಮೈದಾನಗಳಲ್ಲಿ ಶೇ.50ರಷ್ಟು ಜನರಿಗೆ ಅವಕಾಶ ಇರಲಿದೆ. ಜಿಲ್ಲೆಯಲ್ಲಿ ಯಾವುದೇ ರ‍್ಯಾಲಿ, ಧರಣಿ, ಮುಷ್ಕರಗಳನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ನಗರಸಭೆ ಸದಸ್ಯ, ಬೆಂಬಲಿಗರಿಂದ ಗೂಂಡಾಗಿರಿ; ಮನೆಗೆ ನುಗ್ಗಿ ಹಲ್ಲೆ ನಡೆಸಿದ ಕಾಂಗ್ರೆಸ್ ಸದಸ್ಯ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಸದಸ್ಯರಾಗಿ ಇತ್ತೀಚೆಗಷ್ಟೇ ಆಯ್ಕೆಗೊಂಡಿರುವ 18 ವಾರ್ಡಿನ ಕಾಂಗ್ರೆಸ್ ಸದಸ್ಯ ಜೈಲಾಲುದ್ದೀನ ಅಲಿಯಾಸ್ ಜೀವನಸಾಬ ಅಲಿಯಾಸ್ ಜೂನಸಾಬ ನಮಾಜಿ ಜನಪ್ರತಿನಿಧಿಯಾಗಿದ್ದರೂ ತಮ್ಮ ಗೂಂಡಾಗಿರಿ ಪ್ರವೃತ್ತಿ ಮುಂದುವರೆಸಿದ್ದಾರೆ. ಈ ಬಗ್ಗೆ ಮಹಿಳೆಯೋರ್ವರು ನಗಸರಸಭೆ ಸದಸ್ಯನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಡಿ.28 ರಂದೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜವಳಗಲ್ಲಿಯ ಜೈಲಾಲುದ್ದೀನ ಅಲಿಯಾಸ್ ಜೀವನಸಾಬ ಅಲಿಯಾಸ್ ಜೂನಸಾಬ ನಮಾಜಿ(ಎ-1), ಹುಸೇನಸಾಬ ಜೈನಾಪುರ(ಎ-2), ತನ್ವೀರ್ (ಎ-3), ಆಸೀಫ್ ಕರಮುಡಿ (ಎ-4), ಅಬ್ದುಲ್ ಅಣ್ಣಿಗೇರಿ (ಎ-5) ಐವರ ಮೇಲೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ಹತ್ತು ವರ್ಷಗಳಿಂದ ಮಹಿಳೆಯೋರ್ವಳ ಕುಟುಂಬದ ಮೇಲೆ ದ್ವೇಷ ಸಾಧಿಸುತ್ತಿದ್ದ ಜೂನಸಾಬ ನಮಾಜಿ ಕಳೆದ ಡಿ.28ರಂದು ನಾಯಿ ಕಚ್ಚಿದೆ ಎಂದು ಸುಳ್ಳು ಆಪಾದನೆ ಮಾಡಿದ್ದನಂತೆ. ಆಗ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಿ ಕಳುಹಿಸಿದ್ದಾರೆ. ಆದರೆ, ಇಷ್ಟಕ್ಕೆ ಸುಮ್ಮನಾಗದ ಆರೋಪಿ ಜೂನಸಾಬ ನಮಾಜಿ ತನ್ನ ಸಂಗಡಿಗರೊಂದಿಗೆ ಮಹಿಳೆಯ ಮನೆಯೊಳಗೆ ನುಗ್ಗಿ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೇ, ಮಹಿಳೆಯರು ಎನ್ನದೇ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾಳೆ.

ಈ ಹಿಂದೆ ಜೂನಸಾಬ ನಮಾಜಿ ಕತ್ತಿ (ತಲ್ವಾರ್) ಝಳಪಳಿಸುವ ಮೂಲಕ ಸುದ್ದಿಯಾಗಿದ್ದರು. ಇದೀಗ ಅದೇ ಪ್ರವೃತಿ ಮುಂದುವರೆಸಿದ್ದು, ಇವರೇನಾ ಜನಪ್ರತಿನಿಧಿ ಎಂದು ಅವಳಿ ನಗರದ ಜನತೆ ಆಡಿಕೊಳ್ಳುತ್ತಿದ್ದಾರೆ.

error: Content is protected !!