ವಿಜಯಸಾಕ್ಷಿ ಸುದ್ದಿ, ಗದಗ:
ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ನಾಡ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡನೊಬ್ಬ ಉಪ ತಹಶೀಲ್ದಾರ್ ಅವರಿಗೆ ಥಳಿಸಿದ ಆರೋಪ ಕೇಳಿ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಡಂಬಳ ಗ್ರಾಮದ ನಾಡ ಕಚೇರಿಯಲ್ಲಿ ಉಪ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಚಿದಾನಂದ ಕುಬೇರಪ್ಪ ಬಳೂಟಗಿ ಎಂಬುವವರನ್ನು ಸಮೀಪದ ಪೇಠಾಲೂರ ಗ್ರಾಮದ ಭೀಮನಗೌಡ ವಸಂತಗೌಡ ಪಾಟೀಲ ಎಂಬುವವರು ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಭೀಮನಗೌಡ ಪಾಟೀಲ ಎಂಬಾತ ಬೋನೋಫೈಡ್ ದೃಢೀಕರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ದೃಡೀಕರಣ ಪತ್ರಕ್ಕಾಗಿ ಹಣ ನಾಡ ಕಚೇರಿಯ ಸಿಬ್ಬಂದಿ ಒಬ್ಬರು ಹಣ ಕೇಳಿದ್ದಾರೆ ಎನ್ನಲಾಗಿದೆ. ಆದರೆ ಅವರು ಕೇಳಿದಷ್ಟು ಹಣ ನೀಡದಿದ್ದಾಗ ಮಾತಿಗೆ ಮಾತು ಬೆಳೆದ ಜಗಳ ವಿಕೋಪಕ್ಕೆ ಹೋಗಿದೆ.
ಆಗ ಚಿದಾನಂದ ಹಾಗೂ ಭೀಮನಗೌಡ ಮಧ್ಯೆ ವಾಗ್ವಾದ ನಡೆದು ಕೈ ಕೈಮಿಲಾಯಿಸಿದ್ದಾರೆ ಎನ್ನಲಾಗಿದೆ. ಅಂದೇ ಗ್ರಾಮದ ಕೆಲ ಹಿರಿಯರು ಸೇರಿ ರಾಜಿ ಪಂಚಾಯತಿ ನಡೆಸಿ ಭೀಮನಗೌಡ ಪಾಟೀಲ ಅವರಿಂದ ಕ್ಷಮೆ ಕೇಳಿಸಿ ಪ್ರಕರಣ ಸುಖಾಂತ್ಯಗೊಳಿಸಿದ್ದರು ಎಂದು ಮೂಲಗಳು ತಿಳಿಸಿವೆ.
ರಾಜಕೀಯ ತಿರುವು?
ಹಿರಿಯರು ರಾಜೀ ಪಂಚಾಯತಿ ನಡೆಸಿ ಸುಖಾಂತ್ಯಗೊಳಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಮರುದಿನ. ರಾಜೀ ಪಂಚಾಯತಿ ನಡೆದ ಪ್ರಕರಣಕ್ಕೆ ಜೀವ ತುಂಬಿ ರಾಜಕೀಯವಾಗಿ ಹಣೆಯಲು ಭೀಮನಗೌಡ ಪಾಟೀಲ ವಿರುದ್ಧ ಪ್ರಕರಣ ದಾಖಲಾಗುವಂತೆ ನೋಡಿಕೊಳ್ಳಲಾಗಿದೆ. ಪಕ್ಕದ ಮತ್ತೊಂದು ಗ್ರಾಮದ ಬಿಜೆಪಿ ಮುಖಂಡನೊಬ್ಬ ಉಪತಹಶೀಲ್ದಾರ ಅವರನ್ನು ಮುಂದಿಟ್ಟುಕೊಂಡು ಪಾಟೀಲ ವಿರುದ್ಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಭೀಮನಗೌಡ ಪಾಟೀಲ ಪರಾರಿಯಾಗಿದ್ದು, ಪೊಲೀಸರು ಬಂಧನಕ್ಕೆ ಜಾಲ ಬೀಸಿದ್ದಾರೆ.