Home Blog Page 3269

ಡಿ.28 ರಿಂದ ಹತ್ತು ದಿನ ರಾತ್ರಿ ಕರ್ಪ್ಯೂ; ಸಚಿವ ಪಾಟೀಲ

ವಿಜಯಸಾಕ್ಷಿ ಸುದ್ದಿ, ಗದಗ

‘ರಾಜ್ಯದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯ ವರದಿ ಆಧರಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಡಿ.28ರಿಂದ ಹತ್ತು ದಿನಗಳವರೆಗೆ ರಾತ್ರಿ ಕರ್ಪ್ಯೂ ವಿಧಿಸಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಭಾನುವಾರ ಗದಗ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಅವರು ಮಾತನಾಡಿ, ‘ಬಾರ್ ಆ್ಯಂಡ್ ರೆಸ್ಟೋರೆಂಟ್, ಪಬ್ ಗಳಲ್ಲಿ ಜನಜಂಗುಳಿ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಶೇ.50 ರಷ್ಟು ಜನರಿಗೆ ಮಾತ್ರ ಸ್ಥಳವಕಾಶ ನೀಡಿ ಆದೇಶಿಸಿದ್ದಾರೆ. ರಾಜ್ಯದ ಜನರ ಆರೋಗ್ಯದ ಹಿತದೃಷ್ಟಿಯನ್ನಿಟ್ಟುಕೊಂಡು ಇಂತಹ ರಾಜ್ಯ ಸರ್ಕಾರ ಇಂತಹ ನಿರ್ಧಾರೆ ತೆಗದುಕೊಂಡಿದೆ’ ಎಂದರು.

‘ಕೋವಿಡ್ ಒಂದು ಮತ್ತು ಎರಡನೇ ಅಲೆಗಳಲ್ಲಿ ಸ್ನೇಹಿತರು, ಹಿತೈಷಿಗಳು, ಕುಟುಂಬಕ್ಕೆ ಆಧಾರಸ್ತಂಭವಾಗಿದ್ದವರನ್ನು ಕಳೆದುಕೊಂಡ ದುಃಖದ ಪರಿಸ್ಥಿತಿಯನ್ನು ಕಣ್ಣಾರೆ‌ ಕಂಡಿದ್ದೇವೆ. ಈ ಬಾರಿ ಅಂತಹ ಪರಿಸ್ಥಿತಿ ಮರುಕಳಿಸಬಾರದು. ಹೀಗಾಗಿ ಮುಖ್ಯಮಂತ್ರಿಗಳು ಜಾರಿ ಮಾಡಿರುವ ಆದೇಶವನ್ನು ನಾವೆಲ್ಲರೂ ತಪ್ಪದೇ ಪಾಲಿಸಿ ಜನರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸೋಣ. ಜನ ಜೀವನಕ್ಕೆ ಹಾನಿಯಾಗದಂತೆ ಮೂರನೇ ಅಲೆ ನಿಯಂತ್ರಿಸುವಲ್ಲಿ ಯಶಸ್ವಿಯಾಗೋಣ’ ಎಂದು ಸಚಿವರು ಮನವಿ ಮಾಡಿದರು.

ನೀತಿ ಸಂಹಿತೆ ಉಲ್ಲಂಘನೆ: ಕಾಂಗ್ರೆಸ್ ಅಭ್ಯರ್ಥಿ ಮೇಲೆ ಕೇಸ್

ವಿಜಯಸಾಕ್ಷಿ ಸುದ್ದಿ, ಗದಗ

ಗದಗ-ಬೆಟಗೇರಿ ಚುನಾವಣೆಯ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ 29ನೇ ವಾರ್ಡಿನ
ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ದೇವಿಂದ್ರಪ್ಪ ಚಂದಾವರಿ
ಹಾಗೂ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ಬಹಿರಂಗ ಪ್ರಚಾರ ಅಂತ್ಯ; ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಪ್ರಚಾರ

ರಾಜ್ಯ ಚುನಾವಣಾ ಆಯೋಗ ಬಹಿರಂಗ ಪ್ರಚಾರ ಮಾಡಬಾರದೆಂದು ಸೂಚಿಸಿದ್ದರು, ಬೆಂಬಲಿಗರೊಂದಿಗೆ ರಾಜೀವ್ ಗಾಂಧಿ ನಗರದಲ್ಲಿ ಬಹಿರಂಗವಾಗಿ ಮತಯಾಚಿಸಿದ್ದರು. ಈ ಬಗ್ಗೆ ‘ವಿಜಯಸಾಕ್ಷಿ’ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಅಭ್ಯರ್ಥಿ ಸೇರಿದಂತೆ ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಆರ್ ಒ ಎನ್.ಟಿ. ನೆಗಳೂರು ಅವರು ಪ್ರಕರಣ ದಾಖಲಿಸಿದ್ದಾರೆ.

ಇನ್ನು ಮಾದರಿ ನೀತಿ ಸಂಹಿತೆ ಹಾಗೂ ಜನಪ್ರಾತಿನಿಧಿಕ ಕಾಯ್ದೆ(ಆರ್ ಪಿ ಆ್ಯಕ್ಟ್)ಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಚಾರಕ್ಕೆ ಬಳಸಲಾದ ಆಟೋ (ಕೆಎ 24 ಎ-1643) ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಡಿ.27ರಂದು ರಜೆ ಘೋಷಣೆ

0

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದಲ್ಲಿ 58 ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಅವಧಿ ಮುಕ್ತಾಯವಾದ ಮತ್ತು ಖಾಲಿ ಇರುವ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ಡಿ.27 ಸೋಮವಾರ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ರಜೆ ಘೋಷಿಸಿದೆ.

ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಸಾರ್ವತ್ರಿಕ, ಉಪ ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮತ ಕ್ಷೇತ್ರದಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಿದೆ.

ಅದರಂತೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರೆ ಬ್ಯಾಂಕುಗಳು, ಕಾರ್ಖಾನೆಗಳು, ಉಳಿದ ಕೈಗಾರಿಕಾ ಕಾರ್ಖಾನೆಗಳು, ಸಹಕಾರ ರಂಗದ ಸಂಸ್ಥೆಗಳಲ್ಲಿ ಎಲ್ಲ ವ್ಯವಹಾರಿಕ ಸಂಸ್ಥೆಗಳಲ್ಲಿ ಔಧ್ಯಮಿಕ ಸಂಸ್ಥೆಗಳಲ್ಲಿ, ಖಾಯಂ ಆಗಿ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಅರ್ಹ ಮತದಾರ ನೌಕರರಿಗೆ ಸೀಮಿತವಾದಂತೆ ಡಿ.27ರಂದು ವೇತನ ಸಹಿತ ರಜೆ ಘೋಷಿಸಿ ಆದೇಶಿಸಿದೆ.

ಈ ರಜೆಯು ತುರ್ತು ಸೇವೆಗಳ ಮೇಲೆ ಇರುವ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಕೂಡ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡತಕ್ಕದ್ದು, ಈ ಚುನಾವಣಾ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಎಲ್ಲಾ ಸರ್ಕಾರಿ ನೌಕರರು ಚುನಾವಣಾ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶದಲ್ಲಿ ತಿಳಿಸಿದೆ.

ಕೊನೆ ಘಳಿಗೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ಪಕ್ಷೇತರ ಅಭ್ಯರ್ಥಿ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಎರಡು ದಿನ ಬಾಕಿ ಇರುವಾಗಲೇ ಪಕ್ಷೇತರ ಅಭ್ಯರ್ಥಿಯೊಬ್ಬರು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ.

ಹೌದು, ಅವಳಿ ನಗರದ 32ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಆಶಾಬಿ ಉಳ್ಳಾಗಡ್ಡಿ ಕೊನೆ ಘಳಿಗೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದರಿಂದಾಗಿ ಬಿಜೆಪಿ ಅಭ್ಯರ್ಥಿಯಿಂದ ತೀವ್ರ ಪೈಪೋಟಿ ಎದುರಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸುಮನ್ ಜಿತೂರಿಗೆ ಸ್ವಲ್ಪ ಮಟ್ಟಿಗೆ ನಿರಾಳತೆ ಮೂಡಿದೆ.

ಶಾಸಕ ಎಚ್.ಕೆ.ಪಾಟೀಲ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಪ್ರಭು ಬುರಬರೆ, ವಿನೋದ ಶಿದ್ಲಿಂಗ, ರಮೇಶ ಮುಳಗುಂದ ಉಪಸ್ಥಿತರಿದ್ದರು.

ಬಹಿರಂಗ ಪ್ರಚಾರ ಅಂತ್ಯ; ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಪ್ರಚಾರ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಸೋಮವಾರ 7 ಗಂಟೆಗೆ ಮತದಾನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 7 ಗಂಟೆಗೆ ಬಹಿರಂ ಪ್ರಚಾರಕ್ಕೆ ತೆರೆ ಬಿದ್ದಿದೆ. ಈ ವೇಳೆ ಯಾವ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಬಹಿರಂಗ ಪ್ರಚಾರ ಮಾಡಬಾರದು ಎಂದು ಚುನಾವಣಾ ಆಯೋಗ ಸೂಚಿಸಿದ್ದರು. ಅಭ್ಯರ್ಥಿಗಳು ಮಾತ್ರ ಯಾರ ಭಯವಿಲ್ಲದೇ ಅವಳಿ ನಗರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಈ ಕುರಿತು ಚುನಾವಣೆ ಅಧಿಕಾರಿಗಳಿಗೆ ಪತ್ರ ಬರೆದು ದೂರು‌ ನೀಡಿರುವ 29ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಸುಧಾಕರ ವೀರಾಪೂರ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದರೂ, ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ ನಡೆಸಿದ್ದಾರೆ. ತಕ್ಷಣ ಬಹಿರಂಗ ಪ್ರಚಾರ ನಿಲ್ಲಸದೇ ಹೋದರೆ, ನಾವು ಬಹಿರಂಗ ಪ್ರಚಾರ ಮಾಡಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು,ಎಂಸಿಸಿ‌ ಅಧಿಕಾರಿಗಳಾದ ಬಿ.ಕಲ್ಲೇಶ್ ಅವರು ಪ್ರತಿಕ್ರಿಯಿಸಿ ‘ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಹೀಗಾಗಿ ಯಾರೂ ಬಹಿರಂಗ ಪ್ರಚಾರ ಮಾಡುವಂತಿಲ್ಲ. ಅವಳಿ‌ ನಗರದ ವಾರ್ಡ್ ನಂ.೨೯ಗೆ ಸಂಬಂಧಿಸಿದ ಆರ್ ಒ ಎನ್.ಟಿ.ನೆಗಳೂರು ಅವರಿಗೆ ಸೂಚಿಸಿಲಾಗಿದೆ. ಅಲ್ಲದೇ, ಸಿಪಿಐ ಅವರ ಗಮನಕ್ಕೂ ತಂದಿದ್ದು ಅವರು ಅಲ್ಲಿಗೆ ಹೋಗಿದ್ದಾರೆ’ ಎಂದು ತಿಳಿಸಿದರು.

’29ನೇ ವಾರ್ಡ್ ನಲ್ಲಿ ಬಹಿರಂಗ ಪ್ರಚಾರ ಮಾಡುತ್ತಿದ್ದಾರೆ ಎಂಬುವುದು ನನ್ನ ಗಮನಕ್ಕೆ ಬಂದಿದ್ದು ಕೂಡಲೇ ಸ್ಥಳಕ್ಕೆ ಭೇಟಿ ನೀಡುತ್ತನೆ’ ಎಂದು ಬಡಾವಣೆ ಪೊಲೀಸರು ತಿಳಿಸಿದರು.

ಪಕ್ಷೇತರ ಅಭ್ಯರ್ಥಿಗೆ ಕಾಂಗ್ರೆಸ್ ಬಾಹ್ಯ ಬೆಂಬಲ?

ವಿಜಯಸಾಕ್ಷಿ ಸುದ್ದಿ, ಗದಗ:

ನಗರಸಭೆಯ ಚುನಾವಣೆಗೆ ಇನ್ನೆರಡು ದಿನಗಳು ಬಾಕಿ ಇರುವಾಗಲೇ ಅವಳಿ ನಗರದ ವಾರ್ಡ್‌ವೊಂದರಲ್ಲಿ ಕಾಂಗ್ರೆಸ್ ಪಕ್ಷ ಪಕ್ಷೇತರ ಅಭ್ಯರ್ಥಿಗೆ ಬಾಹ್ಯ ಬೆಂಬಲ ಘೋಷಿಸಿದೆ ಎಂಬ ಊಹಾಪೋಹಗಳು ಶುಕ್ರವಾರ ಬೆಳಗ್ಗೆಯಿಂದ ಗದಗ-ಬೆಟಗೇರಿ ನಗರದಾದದ್ಯಂತ ಕೇಳಿ ಬರುತ್ತಿವೆ.

ಹಿಂದುಳಿದ ‘ಎ ವರ್ಗಕ್ಕೆ ಮೀಸಲಾಗಿದ್ದ ವಾರ್ಡ್ ನಂ.28ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾದಂತಹ ವಾತಾವರಣ ಇರಲಿಲ್ಲ. ಈ ಕಾರಣಕ್ಕಾಗಿಯೇ ಅಭ್ಯರ್ಥಿ ಘೋಷಿಸುವಲ್ಲಿ ತಡವಾಗಿತ್ತು. ಬಿಜೆಪಿಯ ಭದ್ರಕೋಟೆಯಾಗಿರುವ ಈ ವಾರ್ಡ್‌ನಲ್ಲಿ ಬಿಜೆಪಿಯ ಕಾರ್ಯಕರ್ತ ಬದ್ರಿ ಅಲಿಯಾಸ್ ವೀರಭದ್ರಪ್ಪ ಡಂಬಳ ಅವರ ಪತ್ನಿ ಮಹಾಲಕ್ಷ್ಮೀಗೆ ಟಿಕೆಟ್ ಕೇಳಿದ್ದ. ಆದರೆ, ಮಹಾಲಕ್ಷ್ಮೀಗೆ ಟಿಕೆಟ್ ಸಿಕ್ಕಿರಲಿಲ್ಲ. ಮಾಜಿ ಸದಸ್ಯ ಅನಿಲ್ ಅಬ್ಬಿಗೇರಿಗೆ ಟಿಕಟ್ ನೀಡಿತ್ತು. ಇದರಿಂದಾಗಿ ಆಕ್ರೋಶಗೊಂಡ ಬದ್ರಿ ಪತ್ನಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾನೆ. ಇದರಿಂದ ಪಕ್ಷದ ಮುಖಂಡರಿಗೆ ಇರುಸು ಮುರುಸಾಗಿ ನಾಮಪತ್ರ ವಾಪಸ್ ಪಡೆಯುಲು ಸಾಕಷ್ಟು ಒತ್ತಡ ಹಾಕಿದ್ದರೂ, ಹಿಂಪಡೆಯದೇ ಅಂತಿಮವಾಗಿ ಕಣದಲ್ಲಿ ಉಳಿಯುವಲ್ಲಿ ಯಶಸ್ವಿಯಾಗಿದ್ದಾನೆ.

ಆದರೆ, ಆರಂಭದಲ್ಲಿ ಅಷ್ಟೇನೂ ಪ್ರಭಾವಿಯಾಗಿ ಕಾಣಿಸಿಕೊಳ್ಳದ ಪಕ್ಷೇತರ ಅಭ್ಯರ್ಥಿ ಮಹಾಲಕ್ಷ್ಮೀ ಇದೀಗ ಮತದಾರರನ್ನು ಸೆಳೆಯುವಲ್ಲಿ ಮುಂದಾಗಿದ್ದು, ಇವರಿಗೆ ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಮುಖಂಡರು ಬೆಂಬಲಿಸಿ ಕೈ ಸುಟ್ಟುಕೊಳ್ಳುವಂತಾಗಿದೆ.

ಕಾಂಗ್ರೆಸ್‌ನವರು ಹಣ ಕೊಟ್ಟರೇ?

ಶುಕ್ರವಾರ ಮುಂಜಾನೆಯಿಂದಲೂ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯ ಪತಿ ಹಣ ಪಡೆದಿದ್ದೇ ಸುದ್ದಿ. ಇಂತಹ ಒಂದು ಸುದ್ದಿ ಮೊದಲು ಎಲ್ಲಿ ಉದಯಿಸಿತೋ ಗೊತ್ತಿಲ್ಲ. ಆದರೆ, ವಾರ್ಡ್ ಸೇರಿ ಇಡೀ ಅವಳಿ ನಗರದೆಲ್ಲೆಡೆ 28ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿಗೆ ಕಾಂಗ್ರೆಸ್‌ನವರು ಹಣ ಕೊಟ್ಟಿದ್ದಾರೆ ಮತ್ತು ಬಾಹ್ಯ ಬೆಂಬಲ ನೀಡಿದ್ದಾರೆ ಎನ್ನುವ ವದಂತಿ ಹಬ್ಬಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಹಾಲಕ್ಷ್ಮೀ ವೀರಭದ್ರಪ್ಪ ಡಂಬಳ ಅವರು, ‘ಇದು ಕೇವಲ ಗಾಳಿ ಸುದ್ದಿ, ಯಾರು ಭೇಟಿಯೂ ಆಗಿಲ್ಲ. ಯಾರು ಬೆಂಬಲವನ್ನೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

‘ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ನಾವು ಯಾವುದೇ ಬೆಂಬಲ ಕೊಟ್ಟಿಲ್ಲ. ಯಾರಿಗೂ ಬಾಹ್ಯ ಬೆಂಬಲ ನೀಡಿಲ್ಲ. ಈ ಆರೋಪವೆಲ್ಲ ಸತ್ಯಕ್ಕೆ ದೂರವಾಗಿದ್ದು, ಎರಡೂ ಪಕ್ಷಗಳ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವೆಂಕನಗೌಡ ಆರ್. ಗೋವಿಂದಗೌಡ್ರ ಆರೋಪ ತಳ್ಳಿ ಹಾಕಿದರು.

//ಬಡವ ರಾಸ್ಕಲ್
ಸಿನಿಮಾ ವಿಮರ್ಶೆ// ಮಧ್ಯಮ ವರ್ಗದ ಹುಡುಗನ ಕಥೆ-ವ್ಯಥೆ

0

ಬಸವರಾಜ ಕರುಗಲ್.
ಬಡವರ ಮಕ್ಕಳನ್ನ ಹೀರೋ ಆಗೋಕೆ ಎಲ್ರಪ್ಪಾ ಬಿಡ್ತಿರಾ? ಹಿಂದೆಯಿಂದಾನೇ ಹೊಡೆದು ಬಿಡ್ತಿರಲ್ಲ ಎನ್ನುವ ಜಬರ್‌ದಸ್ತ್ ಡೈಲಾಗ್, ಫೈಟ್ ಜೊತೆ ಎಂಟ್ರಿ ಕೊಡೊ ನಟ ರಾಕ್ಷಸ, ಡಾಲಿ ಧನಂಜಯ್ ಇಡೀ ಸಿನಿಮಾದುದ್ದಕ್ಕೂ ನಗಸ್ತಾರೆ, ಅಳಸ್ತಾರೆ. ಬಡವ ರಾಸ್ಕಲ್ ಮಧ್ಯಮ ವರ್ಗದ ಹುಡುಗನ ಪ್ರೀತಿಯ ಕಥೆ ಮತ್ತು ವ್ಯಥೆ.

ಕಚಗುಳಿ, ಸೆಂಟೆಮೆಂಟ್ ಇರದಿದ್ದರೆ ಈ ಸಿನಿಮಾ ಕಥೆ ಮಾಮೂಲಿ ಲವ್ ಸ್ಟೋರಿ ಥರಾ ಆಗಿ ಬಿಡುವ ಅಪಾಯ ಇತ್ತು. ನಿರ್ದೇಶಕ ಶಂಕರ್ ಗುರು ಸಿನಿಮಾನ ಅಪಾಯದ ಅಂಚಿನಿಂದ ಮೇಲೆತ್ತಿ, ಮಧ್ಯಮ ವರ್ಗದ ಮನೆಯಲ್ಲಿ‌ ನಿತ್ಯ ನಡೆಯುವ ಎಳೆಯನ್ನ ಹೆಣೆದು ಉಪಾಯದಿಂದ ಪ್ರೇಕ್ಷಕರನ್ನು ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಇಲ್ಲಿ ಸೀಟಿನಂಚಿಗೆ ಕುಳಿತು ನೋಡುವ ದೃಶ್ಯಗಳಿಲ್ಲ, ಆದರೆ ಸೀಟಿಗೊರಗಿ ನಕ್ಕು ನಲಿಯುವ ದೃಶ್ಯಗಳಿಗಂತು‌ ಕೊರತೆ ಇಲ್ಲ.

ಶ್ರೀಮಂತ ಮನೆತನದ ಹುಡುಗಿಗೂ ಆಟೋ ಡ್ರೈವರ್ ಮಗನಿಗೂ ಲವ್ವು. ಒಂದು ಸಣ್ಣ ಕಾರಣಕ್ಕೆ ಬ್ರೇಕಪ್ಪು. ಕಾರಣ ತಿಳ್ಕೊಬೇಕಂದ್ರೆ ಬಡವ ರಾಸ್ಕಲ್‌ನನ್ನ ಥೇಟರ್‌ನಲ್ಲೇ ನೋಡಬೇಕು. ಕ್ಲೈಮಾಕ್ಸ್ ಹೊರತುಪಡಿಸಿ ಇಡೀ ಸಿನಿಮಾ ಫ್ಲ್ಯಾಶ್‌ಬ್ಯಾಕ್‌ನಲ್ಲಿದ್ದು, ಟ್ವಿಸ್ಟ್ ಕೊಡುವ, ನಗಿಸುವ, ಅಳಿಸುವ ಫ್ಲ್ಯಾಶ್‌ಬ್ಯಾಕ್‌ನಲ್ಲೇ ಕಥೆನ ಹೇಳ್ತಾ ಹೋಗಿರೋದು ಕನ್ನಡದ ಪ್ರೇಕ್ಷಕರಿಗೆ ಹೊಸತೇನಲ್ಲವಾದರೂ, ಸವಕಲು ಅನ್ನಿಸದ ಹಾಗೆ ಬಡವ ರಾಸ್ಕಲ್ ನೋಡಿಸ್ಕೊಂಡು ಹೋಗ್ತಾನೆ.

ಸಾಯಿಕುಮಾರ್ ಅಂತ ಹೆಸರು ಇಟ್ಕೊಂಡು ಒಂದೇ ಒಂದು ಡೈಲಾಗ್ ಇಲ್ವಲ್ಲೊ..!, ನರಕಕ್ಕೆ ಕಳಿಸಿದ್ರೂ ವಂಡರ್‌ಲಾ ಮಾಡ್ಕೊಂಡ್ ಬಿಡ್ತಾರೆ..ಹೀಗೆ ಇಂಥ
ಗಟ್ಟಿಯಾದ, ಕಚಗುಳಿ ಇಡುವ ಮಾತುಗಳು, ಮಾಸ್, ಅಲ್ಲಲ್ಲಿ ಡಬ್ಬಲ್ ಮೀನಿಂಗ್ ಡೈಲಾಗ್‌ಗಳು ಚಿತ್ರದ ಓಟಕ್ಕೆ ಪೂರಕವಾಗಿವೆ. ವಾಸುಕಿ ವೈಭವ್ ಸಂಗೀತದಲ್ಲಿ ಮೂಡಿ ಬಂದಿರೊ “ಉಡುಪಿ ಹೋಟಲು, ಮೂಲೆ ಟೇಬಲು” ರೋಮ್ಯಾಂಟಿಕ್ ಆಗಿಯೂ ಇಷ್ಟ ಆಗುತ್ತದೆ. ಉಳಿದ ಹಾಡುಗಳಿಗೂ ಗುನುಗುನಿಸುವ ಗುಣ ಇದೆ. ಛಾಯಾಗ್ರಾಹಕ ಪ್ರೀತ್ ಜಯರಾಮನ್ ಸಿನಿಮಾ ರಿಚ್ ಆಗಿ ಮೂಡಿ ಬರುವಂತೆ ಶ್ರಮಿಸಿದ್ದು ಎದ್ದು ಕಾಣುತ್ತದೆ. ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಲೇ ಸಿನಿಮಾ ನಿರ್ದೇಶಿಸುವ ಕನಸು ಕಂಡಿದ್ದ ಶಂಕರ ಗುರು ಮೊದಲ ಪ್ರಯತ್ನದಲ್ಲೇ ಸಿಕ್ಸರ್ ಹೊಡೆದಿದ್ದಾರೆ. ಆದರೆ ಈ ಸಿಕ್ಸರ್ ಚಿತ್ರತಂಡಕ್ಕೆ ಎಷ್ಟರಮಟ್ಟಿಗೆ ಪ್ರಯೋಜನವಾಗುತ್ತೆ ಕಾದು ನೋಡಬೇಕು.

ರಂಗಾಯಣ ರಘು ಮತ್ತು ತಾರಾ ಮಧ್ಯಮ ವರ್ಗದ ದಂಪತಿಯಾಗಿ ಅಭಿನಯದಲ್ಲಿ ಮತ್ತೊಮ್ಮೆ ಗೆದ್ದಿದ್ದಾರೆ. ಬಡವ ರಾಸ್ಕಲ್ ಮೂಲಕ ನಟ ರಾಕ್ಷಸನಾಗಿರೊ ಡಾಲಿ ಧನಂಜಯ್ ಪಾತ್ರಕ್ಕೆ ಜೀವ ತುಂಬಿದ್ದು, ಉಳಿದ ಕಲಾವಿದರು ಸ್ಕ್ರೀನ್‌ನಲ್ಲಿ ಸ್ಪೇಸ್ ಕೊಟ್ಟಿದ್ದಾರೆ. ನಟರಾಗಿ ಸರ್ಕಸ್ ಮಾಡಿರೊ ಡಾಲಿ ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ. ಸ್ಪರ್ಶ ರೇಖಾ ಮೊದಲ ಬಾರಿಗೆ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಕ್ಕಟ್‌ನ ನಾಗಭೂಷಣ್ ನಾಯಕನ ಗೆಳೆಯನಾಗಿ ಕಚಗುಳಿ ಇಡುತ್ತಲೇ ಇಷ್ಟವಾಗುತ್ತಾರೆ. ಕಾಮಿಡಿ ಆ್ಯಕ್ಟರ್ ಚೇರ್‌ಗೆ ಟವಲ್ ಹಾಕಿ ಮೀಸಲಿರಿಸಿದ್ದಾರೆ.

ಈ ವಾರ ಕನ್ನಡದಲ್ಲೇ ಮೂರ್ನಾಲ್ಕು ಸಿನಿಮಾಗಳು ರಿಲೀಸ್ ಆಗಿವೆ. ಅವುಗಳಲ್ಲಿ ಬಡವ ರಾಸ್ಕಲ್ ಸಿನಿಮಾ ನೋಡಿದರೆ ಕೊಟ್ಟ ದುಡ್ಡಿಗೆ ಮೋಸವಿಲ್ಲ ಅನ್ನಬಹುದು, ಆದರೆ ಪೈಸಾ ವಸೂಲ್ ಸಿನಿಮಾ ಅಂತ ಹೇಳೋದು ಕೊಂಚ ಕಷ್ಟಾನೇ..!

ರೇಟಿಂಗ್: ***

ಗದಗ ಜಿಲ್ಲೆಯ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ವಿತರಣೆಗೆ ಸಮೀಕ್ಷೆ

ಆರ್‌ಡಿಪಿಆರ್‌ನಿಂದ ಯಾದಗಿರಿ, ಗದಗ ಜಿಲ್ಲೆಯ ಮಕ್ಕಳ ಅಪೌಷ್ಟಿಕತೆ ಕುರಿತು ಅಧ್ಯಯನ

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ:

ರಾಜ್ಯ ಸರ್ಕಾರದ ಸಹಕಾರದೊಂದಿಗೆ ಕೇಂದ್ರ ಸರ್ಕಾರ ಶಾಲಾ ಮಕ್ಕಳಲ್ಲಿನ ಪೌಷ್ಟಿಕಾಂಶ ವೃದ್ಧಿಸಲು, ಕಲಿಕೆಯ ಪ್ರಮಾಣ ಹೆಚ್ಚಾಗಬೇಕು, ಮಕ್ಕಳು ಹೆಚ್ಚು ಶಕ್ತಿಯುತವಾಗಿ ಬೆಳೆಯಬೇಕು ಎಂಬ ದೃಷ್ಟಿಯಿಂದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಿಸಲಾಗುತ್ತಿದೆ. ತಜ್ಞರ ಪ್ರಕಾರ 8-15 ವಯಸ್ಸಿನ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಕಾಡುತ್ತಿದೆ ಎಂಬ ಕಾರಣದಿಂದಾಗಿ ರಾಜ್ಯ ಸರ್ಕಾರ ಹೊಸ ಪ್ರಯೋಗ ನಡೆಸಿದೆ.

ಮೊದಲ ಹಂತದಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಬಿಸಿಯೂಟದ ಜೊತೆಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುತ್ತಿದೆ. ಗದಗ ಜಿಲ್ಲೆಗೂ ಯೋಜನೆ ವಿಸ್ತರಿಸುವಂತೆ ಬೇಡಿಕೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಯಾದಗಿರಿ, ಗದಗ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ವಿಶ್ವವಿದ್ಯಾಲಯ ಅಧ್ಯಯನ ಕೈಗೊಂಡಿದೆ.

ಯಾದಗಿರಿ ಅಧ್ಯಯನ ಜಿಲ್ಲೆ

ಶಾಲಾ ಮಕ್ಕಳು ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿರುವ ಯಾದಗಿರಿಯನ್ನು ಅಧ್ಯಯನ ಜಿಲ್ಲೆಯನ್ನಾಗಿ ಆಯ್ಕೆ ಮಾಡಿದೆ. ಅದರಂತೆ ಗದಗವನ್ನು ಕಂಟ್ರೋಲ್ ಜಿಲ್ಲೆಯನ್ನಾಗಿ ಆಯ್ದುಕೊಂಡಿರುವ ವಿಶ್ವವಿದ್ಯಾಲಯವು ಎರಡೂ ಜಿಲ್ಲೆಗಳ 60 ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳ ಆರೋಗ್ಯದ ಸ್ಥಿತಿಗತಿ, ರಕ್ತಹೀನತೆ, ಎತ್ತರ, ತೂಕ ಮತ್ತಿತರ ಅಂಶಗಳನ್ನು ಇಟ್ಟುಕೊಂಡು ಮೂಲ ಸಮೀಕ್ಷೆ ನಡೆಸಿ ಪೂರ್ಣಗೊಳಿಸಿದೆ.

ವಿಶ್ವವಿದ್ಯಾಲಯದ ಒಟ್ಟು 80 ವಿದ್ಯಾರ್ಥಿಗಳು, 10ಕ್ಕೂ ಹೆಚ್ಚು ಅಧ್ಯಾಪಕರು ಸಮೀಕ್ಷೆ ನಡೆಸಿದ್ದು, ಸೆಂಟರ್ ಫಾರ್ ರಿಸರ್ಚ್ ಇನೋವೇಶನ್ ಆಂಡ್ ಇವ್ಯಾಲುವೇಶನ್‌ನ ಸಹಾಯಕ ನಿರ್ದೇಶಕ ಗಿರೀಶ್ ದೀಕ್ಷಿತ್ ಅವರ ನೇತೃತ್ವದಲ್ಲಿ ಅಧ್ಯಯನ ನಡೆದಿದೆ.

ಗದಗ ಕಂಟ್ರೋಲ್ ಜಿಲ್ಲೆ

ಮಧ್ಯಾಹ್ನದ ಊಟದ ಜೊತೆಗೆ ವಾರದಲ್ಲಿ ಮೂರು ದಿನ ಮೊಟ್ಟೆ ನೀಡಲಾಗುತ್ತಿದೆ. ಅಲ್ಲದೆ, ಮಕ್ಕಳಲ್ಲಿ ಪೌಷ್ಟಿಕಾಂಶ ಬೆಳೆಸಲಿಕ್ಕೆ ಸಹಕಾರಿಯಾಗಲಿದೆ ಎಂಬ ಕಾರಣಕ್ಕಾಗಿ ಡಿ. 1ರಿಂದಲೇ ಈ ಯೋಜನೆ ಜಾರಿಗೆ ಬಂದಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ ದೃಷ್ಟಿಯಿಂದ ರಾಜ್ಯದ ಶೈಕ್ಷಣಿಕ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಸಮಾಲೋಚನೆ ನಡೆಸಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಅಧ್ಯಯನದ ಜವಾಬ್ದಾರಿ ನೀಡಿದ್ದರು.

ವಿಶ್ವವಿದ್ಯಾಲಯವು ಒಂದು ತಿಂಗಳಿಂದ ಎಲ್ಲ ಸಿದ್ಧತೆ ನಡೆಸಿ, ಅಧ್ಯಾಪಕರು, ತಜ್ಞರು, ವಿದ್ಯಾರ್ಥಿಗಳು ಯಾದಗಿರಿ ಜಿಲ್ಲೆಯಲ್ಲಿ ಮೂಲ ಸಮೀಕ್ಷೆ ಮಾಡಿದ್ದಾರೆ. ಇದರೊಂದಿಗೆ ವಾಸ್ತವಿಕ ಅಂಶವನ್ನು ಅರ್ಥೈಸಿಕೊಳ್ಳುವ ಸಲುವಾಗಿ ಗದಗವನ್ನು ಕಂಟ್ರೋಲ್ ಜಿಲ್ಲೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಎರಡೂ ಜಿಲ್ಲೆಗಳಲ್ಲಿ ಮೂಲ ಸಮೀಕ್ಷೆ ಮುಕ್ತಾಯಗೊಂಡಿದೆ.

4500 ವಿದ್ಯಾರ್ಥಿಗಳ ಸಮೀಕ್ಷೆ

ಯಾದಗಿರಿ, ಗದಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸೇರಿ ಪ್ರತಿ ಜಿಲ್ಲೆಯಲ್ಲೂ 30 ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದೆ. 4500 ವಿದ್ಯಾರ್ಥಿಗಳಲ್ಲಿ ಅವರ ಆಹಾರ-ವಿಹಾರ ಪದ್ಧತಿ, ಊಟ ವ್ಯವಸ್ಥೆ, ವ್ಯಕ್ತಿಗತ ಮಾಹಿತಿ, ಆರೋಗ್ಯ ಸ್ಥಿತಿಗತಿ ಸೇರಿ ಇತರ ಮಾಹಿತಿಗಳನ್ನು ದಾಖಲಿಸುವ ಮೊದಲ ಹಂತದ ಸಮೀಕ್ಷಾ ಕಾರ್ಯ ಮುಗಿದಿದೆ. ಇದರ ಅನಂತರ ಮಿಡ್‌ಲೈನ್ ಪ್ರಾಸೆಸ್ ರಿವ್ಯಾಲ್ಯೂವೇಶನ್ ಮಾಡಲಾಗುತ್ತದೆ. ಬಳಿಕ 2022 ಮಾರ್ಚ್‌ನಲ್ಲಿ ಅಂತಿಮ ಸಮೀಕ್ಷೆ ನಡೆಸಿ ಅಧ್ಯಯನದ ಸಂಪೂರ್ಣ ದತ್ತಾಂಶವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಕುಲಪತಿ ವಿಷ್ಣುಕಾಂತ ಚಟಪಲ್ಲಿ ಅವರು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಸರ್ಕಾರ ನೀಡಿದ ಅಧ್ಯಯನದ ಜವಾಬ್ದಾರಿಯನ್ನು ಸಮರ್ಪಕ, ಸಮರ್ಥ ಹಾಗೂ ಬಹಳ ವಿಶ್ವಾಸದಿಂದ ವಿದ್ಯಾರ್ಥಿ ಅಧ್ಯಾಪಕರು ಮಾಡಿದ್ದಾರೆ.

ವಿಷ್ಣುಕಾಂತ ಚಟಪಲ್ಲಿ, ಕುಲಪತಿ

ಮೊದಲ ಹಂತದಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಮಾತ್ರವೇ ಮೊಟ್ಟೆ ನೀಡಲಾಗುತ್ತಿದೆ. ಗದಗನ್ನು ಕಂಟ್ರೋಲ್ ಜಿಲ್ಲೆಯನ್ನಾಗಿ ಆಯ್ದುಕೊಂಡು ಆರ್‌ಡಿಪಿಆರ್ ವಿಶ್ವವಿದ್ಯಾಲಯದ ವತಿಯಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಅದರಂತೆ, ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿವರೆಗಿನ ಒಟ್ಟು 1.43 ಲಕ್ಷ ಮಕ್ಕಳು ಬಿಸಿಯೂಟ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ.

ಮಂಗಳಾ ತಾಪಸ್ಕರ್, ಅಕ್ಷರ ದಾಸೋಹ

‘ಕೈ’ ಅಭ್ಯರ್ಥಿ ಪರ ಶಾಸಕ ಸಲೀಂ ಅಹ್ಮದ್ ಮತಯಾಚನೆ

0

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಯ ಅಂಗವಾಗಿ ವಾರ್ಡ್ ನಂ.20ರ ಕಾಂಗ್ರೆಸ್ ಅಭ್ಯರ್ಥಿ ಪರವೀನಬಾನು ಅಬ್ದುಲ್ ಮುನಾಫ್ ಮುಲ್ಲಾ ಅವರ ಪರವಾಗಿ ಕಾಂಗ್ರೆಸ್ ಕೈ ನಾಯಕರು ಭರ್ಜರಿ ಪ್ರಚಾರ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಶಾಸಕ ಎಚ್.ಕೆ.ಪಾಟೀಲ್, ಮಾಜಿ ಶಾಸಕರಾದ ಡಿ.ಆರ್.ಪಾಟೀಲ್, ರಾಮಕೃಷ್ಣ ದೊಡ್ಡಮನಿ, ಜಿ.ಎಸ್.ಪಾಟೀಲ್, ಮುಖಂಡರಾದ ವಾಸಣ್ಣ ಕುರುಡಗಿ, ಗುರಣ್ಣ ಬಳಗಾನೂರ, ಕೆ.ಎಂ.ಸೈಯದ್ ಸೇರಿ ಹಲವು ಪ್ರಮುಖ ನಾಯಕರು ಮತಯಾಚಿಸಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ದಾವಲ್ ಸಾಬ್ ಈಟಿ, ಖಾಜಸಾಬ್ ಕೊಪ್ಪಳ, ಸುರೇಶ್ ಕಲಬುರ್ಗಿ, ಹನುಮಂತಪ್ಪ ಮುಂಡರಗಿ, ಅಬ್ದುಲ್ ರೆಹಮಾನ್ ಹುಯಿಲಗೋಳ, ಯುಸೂಫ್ ಕೊಟ್ಟೂರ, ಆರಿಫ್ ಹುನಗುಂದ, ದಾವೂದ್ ಶಿರಹಟ್ಟಿ ಸೇರಿದಂತೆ 20ನೇ ವಾರ್ಡ್ ನ ಗುರು-ಹಿರಿಯರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಅಭ್ಯರ್ಥಿ ಪರ ಉಪನ್ಯಾಸಕರ ಪ್ರಚಾರ; ಕಣ್ಮಚ್ಚಿ ಕುಳಿತ ಅಧಿಕಾರಿಗಳು

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವಳಿ ನಗರದಾದ್ಯಂತ ವ್ಯಾಪಕ ಪ್ರಚಾರ ನಡೆದಿದೆ. ಆದರೆ, ಚುನಾವಣಾ ಕಾರ್ಯಕ್ಕೆ ಕಾಲೇಜು ಉಪನ್ಯಾಸಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ‌ ಬಂದಿದೆ.

ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಿದ್ದ ಶಿಕ್ಷಕರು ರಾಷ್ಟ್ರೀಯ ಪಕ್ಷದ ಕಾರ್ಯಕರ್ತರಂತೆ ಚುನಾವಣಾ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಅವಳಿ ನಗರದ 11ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ಶ್ವೇತಾ ರವಿ ದಂಡಿನ ಅವರ ಪರವಾಗಿ ಹಗಲು ರಾತ್ರಿ ಎನ್ನದೇ ಮುಖಂಡ ರವಿ ದಂಡಿನ‌ ಸೇರಿದಂತೆ ಬಿಜೆಪಿಯ ಮುಖಂಡರು, ಕಾರ್ಯಕರ್ತರ ಜೊತೆಗೆ ಪ್ರಚಾರದಲ್ಲಿ ತೊಡಗಿದ್ದಾರೆ.

ಕನಕದಾಸ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಕೆಲವು ಉಪನ್ಯಾಸಕರನ್ನು ಒತ್ತಡದ ಮೂಲಕ ಪ್ರತಿಯೊಂದು ಕಾರ್ಯ ಚಟುವಟಿಕೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಇವರೆಲ್ಲರೂ ನಾಮಪತ್ರ ಸಲ್ಲಿಸುವ ವೇಳೆಯೂ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಯುಜಿಸಿ ಸಂಬಳ ಪಡೆಯುತ್ತಿರುವ ಉಪನ್ಯಾಸಕರು ಕೂಡ ಬಿಜೆಪಿ ಕಾರ್ಯಕರ್ತರಂತೆ ಓಡಾಡೋದು ಪ್ರಜ್ಞಾವಂತರಲ್ಲಿ ಆಕ್ರೋಶ ತರಸಿದೆ. ಇಂತಹ
ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ‌.

ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ
ಮಾದರಿ ನೀತಿ ಸಂಹಿತೆ (ಎಂಸಿಸಿ) ತಂಡ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

error: Content is protected !!