ಜಿಲ್ಲೆಯಾದ್ಯಂತ ಜನವರಿ 3ರಿಂದ ಶಾಲಾ-ಕಾಲೇಜುಗಳಲ್ಲಿ ಹಾಗೂ ಕ್ಷೇತ್ರ ಮಟ್ಟದಲ್ಲಿ 15-18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗುವುದು. 01 ಜನವರಿ 2007ರ ಮುಂಚಿತವಾಗಿ ಜನಿಸಿದ ಮಕ್ಕಳಿಗೆ ಈ ಲಸಿಕೆ ಹಾಕಲಾಗುವುದು.
ಹೀಗಾಗಿ ಆಧಾರ ಕಾರ್ಡ್, ಸರ್ಕಾರ ನಿಗದಿಪಡಿಸಿದ ಗುರುತಿನ ಚೀಟಿ, 10ನೇ ತರಗತಿಯ ಅಂಕಪಟ್ಟಿ ಅಥವಾ ಶಾಲಾ ಮುಖ್ಯೋಪಾಧ್ಯಾಯರು ನೀಡಿದ ಗುರುತಿನ ಚೀಟಿ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಅದರಂತೆ, ಮೇಲ್ಕಾಣಿಸಿದ ವಯಸ್ಸಿನ ಎಲ್ಲಾ ಮಕ್ಕಳಿಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಿದ್ದು, ಮೊದಲ ಲಸಿಕೆ ಪಡೆದ ಒಂದು ತಿಂಗಳ ಬಳಿಕ ಎರಡನೇ ಡೋಸ್ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕಾ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಗದಗ-ಬೆಟಗೇರಿ ನಗರಸಭೆಗೆ ಸೋಮವಾರ ಮತದಾನ ನಡೆದಿದ್ದು, ಅವಳಿ ನಗರದ 35 ವಾರ್ಡ್ಗಳಲ್ಲಿ ಸ್ಪರ್ಧಿಸಿದ್ದ 146 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಸುಭದ್ರಗೊಂಡಿದೆ. ಡಿ.30ರಂದು ಅಭ್ಯರ್ಥಿಗಳ ಭವಿಷ್ಯ ಹೊರ ಬೀಳಲಿದ್ದು, ಈ ಬಾರಿ ಗದುಗಿನ ಗದ್ದುಗೆ ಯಾರ ಪಾಲಾಗಲಿದೆ ಎಂಬ ಚರ್ಚೆ ಈಗಾಗಲೇ ಶುರುವಾಗಿದೆ.
ನಗರಸಭೆ ಚುನಾವಣೆಯಲ್ಲಿ ನೆಕ್ ಟು ನೆಕ್ ಫೈಟ್ ನಡೆಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ನಾಯಕರು ತಮ್ಮದೇ ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ನಗರಸಭೆ ಸಿಂಹಾಸನಕ್ಕಾಗಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಹಪಹಪಿಸುತ್ತಿದ್ದಾರೆ. ಈ ಬೆನ್ನಲ್ಲೇ ಯಾರು ಗೆಲ್ಲಲಿದ್ದಾರೆ ಎಂಬ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವಳಿ ನಗರದ ಜನರಲ್ಲಿ ಭಾರೀ ಸಂಚಲನ ಮೂಡಿಸಿದೆ. ಅಲ್ಲದೇ, ಅಭ್ಯರ್ಥಿಗಳಲ್ಲಿ ಗೊಂದಲದ ಜೊತೆಗೆ ಆತಂಕ ಸೃಷ್ಟಿಸಿದೆ.
ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಗದಗ ಬೆಟಗೇರಿ ಅವಳಿ ನಗರದಲ್ಲಿ ಅತ್ಯಧಿಕ ಮತ ಪಡೆದಿರುವ ಬಿಜೆಪಿ ಗೆಲುವಿನ ವಿಶ್ವಾಸದಲ್ಲಿದ್ದು, ಖಾಸಗಿ ಏಜೆನ್ಸಿ ಒಂದು ನಡೆಸಿದೇ ಎನ್ನಲಾದ ಸಮೀಕ್ಷೆಯಲ್ಲೂ ಕಮಲ ಕಲಿಗಳು ಮೇಲುಗೈ ಸಾಧಿಸಿದ್ದಾರೆ. ಈ ಸಮೀಕ್ಷೆಯ ಪ್ರಕಾರ ನಗರಸಭೆ ಗದ್ದುಗೆ ಬಿಜೆಪಿ ಪಾಲಾಗಲಿದೆ ಎನ್ನಲಾಗಿದೆ. ಈ ಸಮೀಕ್ಷೆಯ ಪ್ರಕಾರ ಕಮಲ 18-20 ವಾರ್ಡ್ಗಳಲ್ಲಿ ಅರಳಲಿದೆ ಎಂದು ಹೇಳಲಾಗುತ್ತಿದೆ.
ಇತ್ತ, ಗದಗ-ಬೆಟಗೇರಿ ನಗರಸಭೆ ಸೇರಿದಂತೆ ಜಿಲ್ಲೆಯ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಸುದೀರ್ಘ ಅಧಿಕಾರ ಅನುಭವಿಸಿರುವ ಕಾಂಗ್ರೆಸ್ಗೆ ಹಿನ್ನಡೆಯಾಗಿದ್ದು, 10-13 ಸ್ಥಾನಗಳನ್ನಷ್ಟೇ ಗೆಲ್ಲಬಹುದು ಎಂಬುವುದು ಸಮೀಕ್ಷೆಯಲ್ಲಿ ಬಯಲಾಗಿದೆ. ಅದರಂತೆ, ಕೆಲ ವಾರ್ಡ್ಗಳಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಭರ್ಜರಿ ಸವಾಲೊಡ್ಡಿ ನಡುಕ ಹುಟ್ಟಿಸಿರುವ ಪಕ್ಷೇತರ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ 2-3 ವಾರ್ಡ್ಗಳಲ್ಲಿ ಗೆಲ್ಲಲಿದ್ದಾರೆ ಎಂಬುವುದು ಖಾಸಗಿ ಏಜೆನ್ಸಿ ನಡೆಸಿದ ಸಮೀಕ್ಷಾ ವರದಿಯಿಂದ ತಿಳಿದು ಬಂದಿದೆ.
ಬೆಟ್ಟಿಂಗ್ ಜೋರು!
ಗದಗ-ಬೆಟಗೇರಿ ನಗರಸಭೆಯ ಮತದಾನ ಅಂತ್ಯಗೊಳ್ಳುತ್ತಲೇ ಅವಳಿ ನಗರದಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿ ಕೇಳಿ ಬರುತ್ತಿದೆ. ಅವಳಿ ನಗರದ ವಾರ್ಡ್ ನಂ.2,8,9,10,12,16,17,19,22,28,34 ಹಾಗೂ 35ನೇ ವಾರ್ಡ್ಗಳಲ್ಲಿ ಹೆಚ್ಚು ಬೆಟ್ಟಿಂಗ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಈ ವಾರ್ಡ್ಗಳಲ್ಲಿ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ನಡೆದಿದ್ದು, ಯಾರು ಗೆಲ್ಲಬಹುದೆಂಬ ಕುತೂಹಲ ಹೆಚ್ಚಿಸಿದೆ. ಹೀಗಾಗಿ ಅವಳಿ ನಗರದ ಜನತೆ ಫಲಿತಾಂಶಕ್ಕೂ ಮುನ್ನವೇ ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್ಗೆ ಇಳಿದಿದ್ದಾರೆ ಎನ್ನಲಾಗುತ್ತಿದೆ.
ಗೆಲ್ಲುವ ಪಕ್ಷಕ್ಕೆ ಮಾರಕ?
ಮುಂಬರುವ ತಾಪಂ, ಜಿಪಂ ಹಾಗೂ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ತಮ್ಮ ಶಕ್ತಿ ಪ್ರದರ್ಶಿಸಲು ನಗರಸಭೆ ಚುನಾವಣೆ ವೇದಿಕೆಯಾಗಿ ಮಾರ್ಪಟ್ಟಿತ್ತು. ಹೀಗಾಗಿ ಮತದಾರರನ್ನು ಸೆಳೆಯಲು ಉಭಯ ಪಕ್ಷಗಳ ನಾಯಕರು, ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ, ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಮತದಾನ ಆಗಿದ್ದು, ಗೆಲ್ಲುವ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇನ್ನು ಕಡಿಮೆ ಮತದಾನಕ್ಕೆ ಕ್ಷೇತ್ರ ವಿಂಗಡಣೆಯೇ ಕಾರಣ ಎನ್ನಲಾಗುತ್ತಿದೆ. ವಾರ್ಡ್ಗಳ ವಿಂಗಡಣೆಯಿಂದಾಗಿ ಬಹುತೇಕ ಮತದಾರರರಿಗೆ ಮತ ಎಲ್ಲಿಗೆ, ಯಾವ ಮತಗಟ್ಟೆಗೆ ಹೋಗಿ ಹಾಕಬೇಕೆಂಬ ಗೊಂದಲ ಸೃಷ್ಟಿಯಾಗಿತ್ತು. ಇದರಿಂದ ಸರಿಯಾದ ಸಮಯಕ್ಕೆ ಮತದಾನ ಮಾಡಲಾಗದೇ ಮತದಾರರು ಮತದಾನದಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಹೊಟ್ಟೆಪಾಡಿಗಾಗಿ ಬಹುತೇಕ ಜನ ಅವಳಿ ನಗರದಿಂದ ಬೇರೆ ಜಿಲ್ಲೆ, ರಾಜ್ಯಗಳಿಗೆ ವಲಸೆ ಹೋಗಿದ್ದು, ಇದು ಕೂಡಾ ಕಡಿಮೆ ಮತದಾನ ಆಗಲು ಕಾರಣ ಎಂದು ಬಣ್ಣಿಸಲಾಗುತ್ತಿದೆ.
‘ದೇಶದಲ್ಲಿ ಓಮಿಕ್ರಾನ್ ರೂಪಾಂತರ ಪ್ರಕರಣಗಳಲ್ಲಿ ಸ್ಥಿತವಾದ ಏರಿಕೆ ಕಂಡು ಬಂದಿದ್ದು, ರಾಜ್ಯದಲ್ಲಿ ಪ್ರಸರಣದ ಸರಪಳಿ ಮುರಿಯುವ ಸಲುವಾಗಿ ರಾಜ್ಯ ಸರ್ಕಾರದ ಆದೇಶದನ್ವಯ ಇಂದಿನಿಂದ (ಡಿ.28) ಜ.7ರವರೆಗೆ ರಾತ್ರಿ 10 ರಿಂದ ಬೆ.5ರವರೆಗೆ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಆದೇಶಿಸಿದ್ದಾರೆ.
‘ಜಿಲ್ಲೆಯಾದ್ಯಂತ ಇಂದಿನಿಂದ(ಡಿ.28) ಜ.7ರವರೆಗೆ ರಾತ್ರಿ 10 ರಿಂದ ಬೆ.5ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಡಿ.30 ರಿಂದ ಜ.7ರವರೆಗೆ ಜಿಲ್ಲೆಯಲ್ಲಿರುವ ರೆಸ್ಟೋರೆಂಟ್, ಹೋಟೆಲ್, ಕ್ಲಬ್, ಪಬ್ಗಳಲ್ಲಿ ಆಸನ ಸಾಮರ್ಥ್ಯದ ಶೇ.50ರಷ್ಟು ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಕಾರ್ಯ ನಿರ್ವಹಿಸಬೇಕು. ಅಲ್ಲದೇ, ಇವುಗಳಲ್ಲಿ ಕೆಲಸ ನಿರ್ವಹಿಸತ್ತಿರುವ ಎಲ್ಲ ಸಿಬ್ಬಂದಿಗಳು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಹೊಂದಿದ್ದು, ಕೋವಿಡ್ನ ಎರಡೂ ಲಸಿಕೆ ಪಡೆದಿರಬೇಕು ಎಂದು ತಿಳಿಸಿದ್ದಾರೆ.
ಅದರಂತೆ, ‘ಡಿ.28ರಿಂದ ಎಲ್ಲ ಸಭೆಗಳು, ಮದುವೆಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ 300 ಜನರಿಗಷ್ಟೇ ಅವಕಾಶ ನೀಡಿದೆ. ಇಂತಹ ಸಮಾರಂಭಗಳಲ್ಲಿ ಕೋವಿಡ್ ಸೂಕ್ತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಲ್ಲದೇ, ಸಂಘಟಕರು ಕೋವಿಡ್ ನಿಯಮ ಉಲ್ಲಂಘನೆಯಾಗದಂತೆ ನಿಗಾವಹಿಸಬೇಕು. ಒಂದುವೇಳೆ ಕೋವಿಡ್ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ಅವರು ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ.
ಡಿ.28ರಿಂದ ಜಿಲ್ಲೆಯಾದ್ಯಂತ ರಾತ್ರಿ ಕರ್ಪ್ಯೂ ಜಾರಿಯಲ್ಲಿರಲಿದ್ದು, ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಅಲ್ಲದೇ, ಜಿಲ್ಲೆಯ ಜನರು ರಾತ್ರಿ ಕರ್ಪ್ಯೂ ಹಾಗೂ ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಬೇಕು
ತಾಲೂಕಿನ ಚಿಕ್ಕನರಗುಂದ ಗ್ರಾಮದ ಮಹಿಳಾ ವರ್ಕ್ ಶೆಡ್ ಪಕ್ಕದಲ್ಲಿ 11.82 ಲಕ್ಷ ರೂ ವೆಚ್ಚದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ಭೂಮಿ ಪೂಜೆಯನ್ನು ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ ನೆರವೇರಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಲಕ್ಷ್ಮಣ ಕಂಬಳಿ, ಶರಣಬಸಪ್ಪ ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಬಾಪು ಹಿರೇಗೌಡ್ರ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ನಿರ್ಮಲಾ ತಳವಾರ, ಶೋಭಾ ಕೋಣನ್ನವರ,ಶಂಕ್ರಮ್ಮ ಚಲವಾದಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕುಮಾರಿ ಶೈನಾಜ್ ಮುಜಾವರ್, ಸಿಬ್ಬಂದಿಗಳು ಭಾಗವಹಿಸಿದ್ದರು.
ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಅವಳಿ ನಗರದಲ್ಲಿ ಶಾಂತಿಯುತ ಮತದಾನ ನಡೆಯಿತು.ಅಭ್ಯರ್ಥಿಗಳು ಮತಗಟ್ಟೆ ಬಾಗಿಲಿಗೆ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದರು. ಎಂಟು ವರ್ಷಗಳ ಬಳಿಕ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ವೃದ್ಧರು, ಮಹಿಳೆಯರು, ಯುವಕರು, ವಯಸ್ಕರರು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸಿದರೆ, ಇನ್ನು ಕೆಲವರು ನಿರುತ್ಸಾಹ ತೋರಿದರು.
ಮಂಗಳವಾರದಿಂದ ರಾಜ್ಯದಲ್ಲಿ ರಾತ್ರಿ ಕರ್ಪ್ಯೂ ಜಾರಿಯಲ್ಲಿರಲಿದ್ದು, ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಇದನ್ನರಿತ ಅವಳಿ ನಗರದ ಬಹುತೇಕ ಜನರು ಸ್ಥಳೀಯ ಸಂಸ್ಥೆಯ ಚುನಾವಣೆ ಇದ್ದರೂ, ಡಿ. 25ರಿಂದ ಸಾಲು ಸಾಲು ಸರ್ಕಾರಿ ರಜೆ ಸಿಕ್ಕಿರುವ ಹಿನ್ನೆಲೆಯಲ್ಲಿ ವೀಕೆಂಡ್ ಟ್ರಿಪ್ ಹೋಗಿದ್ದಾರೆ ಎನ್ನಲಾಗುತ್ತಿದೆ.
ಅವಳಿ ನಗರದ ಒಟ್ಟು 1,41,542 ಮತದಾರರ ಪೈಕಿ 44,975(ಶೇ.64) ಪುರಷರು, 43,207(ಶೇ.60.26) ಜನ ಮಹಿಳಾ ಮತದಾರರು ಸೇರಿ ಒಟ್ಟು 88,182 ಮತದಾರರು ಮಾತ್ರ ಮತ ಚಲಾಯಿಸಿದ್ದಾರೆ. ಇದರಿಂದ ಅವಳಿ ನಗರದಲ್ಲಿ ಕೇವಲ ಶೇ.62.30%ರಷ್ಟು ಮತದಾನ ಆಗಿದ್ದು, 53,360 ಮತದಾರರು ಮತದಾನದಿಂದ ದೂರ ಉಳಿದರು.
ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಗೆಲುವಿಗಾಗಿ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಮತಗಿಟ್ಟಿಸಿಕೊಳ್ಳಲು ವಾಮಮಾರ್ಗದ ಜೊತೆಗೆ ಆಸೆ, ಆಮಿಷಗಳನ್ನೊಡ್ಡುತ್ತಿರುವುದು ದುರಂತ.
ಹೌದು, ಅವಳಿ ನಗರದ 30ನೇ ವಾರ್ಡಿನ ಸಾಮಾನ್ಯ ಮೀಸಲು ಕ್ಷೇತ್ರಕ್ಕೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ರೇಖಾ ಅಮರನಾಥ್ ಬೆಟಗೇರಿ ಅವರು ನಿನ್ನೆ ರಾತ್ರಿ ಮತದಾರರಿಗೆ ಬಿಜೆಪಿಗೆ ಓಟ್ ಹಾಕಲು ಟೋಕನ್ ಹಂಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಭಾನುವಾರ ರಾತ್ರಿ ‘ಶ್ರೀಗುರು ಪುಟ್ಟರಾಜ ಕೃಪೆ ಎಂದು ಹೆಸರಿರುವ ವಿಸಿಟಿಂಗ್ ಕಾರ್ಡ್ ಹಂಚಿದ್ದಾರೆ. ವಿಸಿಟಿಂಗ್ ಕಾರ್ಡ್ ಹಿಂದುಗಡೆ ತಮ್ಮ ಸೀರಿಯಲ್ ನಂಬರ್ ಇರುವ ಟೋಕನ್ನ್ನು ಮತದಾರರಿಗೆ ಹಂಚಿಕೆ ಮಾಡಿ ಆಮಿಷವೊಡ್ಡಿದ್ದಾರೆ ಎನ್ನಲಾಗುತ್ತಿದೆ.
ಅದರಂತೆ, 25ನೇ ವಾರ್ಡ್ ವ್ಯಾಪ್ತಿಯ ಹಾಳದಿಬ್ಬ ಓಣಿಯ 94ರ ಮತಗಟ್ಟೆಯಲ್ಲಿ ಚುನಾವಣಾ ಸಹಾಯಕರೊಬ್ಬರು ಮತ ಹಾಕಲು ಬಂದ ಮತದಾರರಿಗೆ ಬಿಜೆಪಿಗೆ ಮತ ಹಾಕುವಂತೆ ಹೇಳಿದ್ದು, ಅದೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮಂದಾಲಿ ಅಧಿಕಾರಿಯ ಈ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಬಿಜೆಪಿಗೆ ಮತ ಹಾಕುವಂತೆ ಹೇಳಿದ ಅಧಿಕಾರಿಯನ್ನು ಆ ಮತಗಟ್ಟೆಯಿಂದ ಎತ್ತಂಗಡಿ ಮಾಡಿದ ಪ್ರಸಂಗ ನಡೆದಿದೆ.
ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ 48 ಗಂಟೆ ಮುಂಚಿತವಾಗಿ ಅಂದರೆ, ಶನಿವಾರ(ಡಿ.25)ವೇ ಬಹಿರಂಗ ಪ್ರಚಾರ ಮುಕ್ತಾಯಗೊಂಡಿದೆ. ಆದರೆ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರು ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಕ್ಯಾಂಪೇನ್ ಮಾಡುತ್ತಿದ್ದಾರೆ.
ಹೌದು, ಅವಳಿ ನಗರದ 34ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ವಿದ್ಯಾವತಿ ಗಡಗಿ ಅವರ ಸಂಬಂಧಿಕರೂ ಎನ್ನಲಾಗುತ್ತಿರುವ ಶಾಸಕ ಯಾದವಾಡ ಅವರು ಕಳೆದ ಒಂದು ವಾರದಿಂದ ಗದಗ ನಗರದಲ್ಲೇ ಠಿಕಾಣಿ ಹೂಡಿದ್ದಾರೆ. ಅಲ್ಲದೇ, ಮುಳಗುಂದ ನಾಕಾದಲ್ಲಿರುವ ಖಾಸಗಿ ಹೋಟೆಲ್ ಒಂದರಲ್ಲಿ ವಾಸ್ತವ್ಯ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದರೂ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ದುರಂತ.
ರಾಜ್ಯ ಚುನಾವಣಾ ಆಯೋಗದ ಪ್ರಕಾರ ‘ ಬಹಿರಂಗ ಪ್ರಚಾರ ಅಂತ್ಯಗೊಂಡ ಬಳಿಕ ಮತದಾರರಲ್ಲದ ಬೆಂಬಲಿಗರು, ರಾಜಕೀಯ ಪಕ್ಷದ ಪದಾಧಿಕಾರಿಗಳು, ಮುಖಂಡರುಗಳು, ಪಕ್ಷದ ಕಾರ್ಯಕರ್ತರು, ಮೆರವಣಿಗೆ, ಪ್ರಚಾರ ಕಾರ್ಯ ನಿರ್ವಹಿಸುವವರು ಇನ್ನಿತರರು ಆ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಗಳ ವ್ಯಾಪ್ತಿಯಲ್ಲಿ ವಾಸ್ತವ್ಯ ಮಾಡುವ ಹಾಗಿಲ್ಲ.
ಆದರೆ, ಕಳೆದ ಒಂದು ವಾರದಿಂದಲೂ ಎಸ್.ಎಸ್.ಯಾದವಾಡ & ಕಂ ಎಂಬ ಭಾರತೀಯ ಜನತಾ ಪಕ್ಷದ ಚಿಹ್ನೆ ಇರುವ ಕಾರೊಂದು ಅವಳಿ ನಗರದಲ್ಲಿ ಓಡಾಡುತ್ತಿದೆ. ಅಷ್ಟೇ ಅಲ್ಲದೆ ಮತದಾನ ದಿನವೂ ಶಾಸಕರ ಬೆಂಬಲಿಗರು ಕಾರ ಸಮೇತ ಮತದಾನ ಕೇಂದ್ರದ ಬಳಿ ಮತದಾರರ ಮನವೊಲಿಸಿತ್ತಿದ್ದರೂ ಚುನಾವಣಾಧಿಕಾರಿಗಳು, ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಆರೋಪಿಸಿದ್ದಾರೆ.
‘ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆಯೊಳಗೆ ನಿಂತು ಮತದಾರರಿಗೆ ಆಮಿಷವೊಡ್ಡಿ ಮತ ಹಾಕುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ಆರೋಪಿಸಿ 10ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಮಾಧವ್ ಗಣಾಚಾರಿ ಆರೋಪಿಸಿದರು.
ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಟಗೇರಿಯ ಸೇಂಟ್ ಜಾನ್ ಶಾಲೆಯ ಮತಗಟ್ಟೆ ಸಂ.45ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಮ್ತಿಯಾಜ್ ಶಿರಹಟ್ಟಿ ಸೇರಿದಂತೆ ಅವರ ಕುಟಂಬದವರು ಮತದಾರರಿಗೆ ಹಣದ ಆಮಿಷವೊಡ್ಡಿ ಮತಯಾಚಿಸುತ್ತಿದ್ದಾರೆ. ಇದಕ್ಕೆ ಪೊಲೀಸರು ಸಾಥ್ ನೀಡುತ್ತಿದ್ದಾರೆ’ ಎಂದು ಗಂಭೀರವಾಗಿ ಆರೋಪಿಸಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.
ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಇಮ್ತಿಯಾಜ್ ಶಿರಹಟ್ಟಿ ಮಧ್ಯೆ ಪ್ರವೇಶಿಸಿ ‘ಸುಳ್ಳು ಹೇಳಬೇಡಿ ನಾವ್ಯಾರೂ ಮತಗಟ್ಟೆ ಆವರಣದಲ್ಲಿ ನಿಂತು ಮತಾಯಾಚಿಸಿಲ್ಲ’ ಎಂದು ಮಾಧವ್ ಗಣಾಚಾರಿ ಜೊತೆ ವಾಕ್ಸಮರ ನಡೆಸಿದರು. ಪರಿಸ್ಥಿತಿ ಕೈಮೀರುವ ಹಂತಕ್ಕೆತಲುಪಿದಾಗ ಪೊಲೀಸರು ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಮತಗಟ್ಟೆಯಿಂದ ಹೊರ ಹಾಕಿ ಪರಿಸ್ಥಿತಿ ತಿಳಿಗೊಳಿಸಿದರು.
ಗದಗ ಬೆಟಗೇರಿ ನಗರಸಭೆ ಚುನಾವಣೆ ಆರಂಭಗೊಂಡಿದೆ. ಅಭ್ಯರ್ಥಿಗಳು ಮತಗಟ್ಟೆಗೆ ಭರ್ಜರಿ ಪೂಜೆ ಸಲ್ಲಿಸಿ ಮತದಾನ ಮಾಡಿದರು. ಇನ್ನು ಹಲವೆಡೆ ಕದನ ಕಲಿಗಳು ಮತಗಟ್ಟೆ ಬಾಗಿಲಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗೆಲುವಿಗಾಗಿ ಪ್ರಾರ್ಥಿಸಿದರು.
ಅವಳಿ ನಗರದ 19ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ನೆಲವಡಿ ಕುಟುಂಬಸ್ಥರು ಮತಗಟ್ಟೆ ಬಾಗಿಲಿಗೆ ತೆಂಗಿನಕಾಯಿ ಒಡೆದು, ಹೂ, ಅಡಿಕೆ, ವಿಳ್ಯದೆಲೆ ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಪೂಜೆ ಸಲ್ಲಿಸಿದ ಮಹಿಳೆಗೆ ಮತಗಟ್ಟೆ ಅಂಗಳದಲ್ಲೇ ಹಣ ನೀಡಿದರು. ಇನ್ನು ಅಭ್ಯರ್ಥಿ ಕುಟುಂಬಸ್ಥರು ಪೂಜೆ ಮಾಡುವುದನ್ನು ತಡೆಯದ ಚುನಾವಣಾಧಿಕಾರಿಗಳು ಮೂಕ ಪ್ರೇಕ್ಷಕರಂತೆ ಕೈಕಟ್ಟಿ ಅಸಹಾಯಕರಂತೆ ನಿಂತಿದ್ದರು.
ಇನ್ನು ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ ಮತಯಂತ್ರ ಕೈಕೊಟ್ಟಿದ್ದರಿಂದ 15ನೇ ವಾರ್ಡಿನಲ್ಲಿ ಸುಮಾರು 45 ನಿಮಿಷ ತಡವಾಗಿ ಆರಂಭವಾಯಿತು. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ನಂ.6 ರಲ್ಲಿನ ಮತಗಟ್ಟೆ ನಂ.62 ರ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮತದಾನ ಮಾಡಲು ಬಂದ ಮತದಾರರು ಕಾಯುತ್ತಾ ನಿಂತಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಚುನಾವಣಾಧಿಕಾರಿಗಳು ವಿವಿ ಪ್ಯಾಟ್ ಬದಲಾಯಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿದರು.