ಜಿಲ್ಲೆಯ ಹೊಸಪೇಟೆಯಲ್ಲಿ ಮಹಾಮಾರಿಯಿಂದಾಗಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಒಂದೇ ದಿನದ ಅಂತರದಲ್ಲಿ ಅಕ್ಕ ಹಾಗೂ ತಮ್ಮನನ್ನು ಈ ಹೆಮ್ಮಾರಿ ಬಲಿ ಪಡೆದಿದೆ. ಕೋವಿಡ್ ನಿಂದ ಬಳಲುತ್ತಿದ್ದ ಅಕ್ಕ – ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಒಂದೇ ದಿನದ ಅಂತರದಲ್ಲಿ ಸಾವನ್ನಪ್ಪಿದ್ದಾರೆ.
ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಕ್ಯಾರೋಲಿನ್ ಲೂಸಿಯಾ ಸ್ಮಿತ್(45) ಹಾಗೂ ಅವರ ತಮ್ಮ ಸಾವಿಯೋ ಸ್ಮಿತ್(42) ಇಬ್ಬರು ಮಹಾಮಾರಿಗೆ ಬಲಿಯಾದ ದುರ್ದೈವಿಗಳು. ಇಬ್ಬರಲ್ಲಿಯೂ ಇತ್ತೀಚೆಗೆ ಸೋಂಕು ಇರುವುದು ದೃಢವಾಗಿತ್ತು. ಹೀಗಾಗಿ ಇಬ್ಬರೂ ಕಳೆದ 8 ದಿನಗಳಿಂದ ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಮ್ಮ ಸಾವಿಯೋ ಸ್ಮಿತ್ ನಿನ್ನೆ ನಿಧನರಾಗಿದ್ದರು. ತಮ್ಮನ ಹಿಂದೆಯೇ ಅಕ್ಕ ಹಾಗೂ ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಕ್ಯಾರೋಲಿನ್ ಲೂಸಿಯಾ ಸ್ಮಿತ್ ಅವರು ಕೂಡ ಇಂದು ಸಾವನ್ನಪ್ಪಿದ್ದಾರೆ. ಕ್ಯಾರೋಲಿನ್ ಲೂಸಿಯಾ ಸ್ಮಿತ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದರೊಂದಿಗೆ ಹೊಸಪೇಟೆಯ ಜನನಿ ಮಹಿಳಾ ಸಬಲೀಕರಣ ಸಂಘಟನೆಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದರು. ಹೊಸಪೇಟೆ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕೋವಿಡ್ ಸಮೀಕ್ಷೆ ಕಾರ್ಯದಲ್ಲಿ ಸ್ವಯಂ ಸೇವಕಿಯಾಗಿ ಕಾರ್ಯ ನಿರ್ವಹಿಸಿದ್ದರು.
ಅನಗತ್ಯವಾಗಿ ಸಂಚರಿಸುವ ವಾಹನಗಳ ಮೇಲೆ ನಿಗಾವಹಿಸಿ ಮಾರ್ಗಸೂಚಿ ಉಲ್ಲಂಘನೆ ಕಂಡು ಬಂದಲ್ಲಿ ಅಂತಹವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಹೇಳಿದ್ದಾರೆ.
ಅವರು, ಪಟ್ಟಣದ ವಿವಿಧೆಡೆ ಸಂಚರಿಸಿ ಪೊಲೀಸರಿಗೆ ಈ ಖಡಕ್ ಸೂಚನೆ ನೀಡಿದರು. ಸಿಬ್ಬಂದಿಗಳು ಕೂಡ ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಿ ಎಂದರು.
ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಾಗೂ ಸರಕಾರ ವಿಧಿಸಿರುವಂತಹ ಮಾರ್ಗಸೂಚಿಗಳನ್ನು ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಸಹ ಪಾಲಿಸಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಗಲಿರುಳು ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ಮಾಡುತ್ತಿದ್ದಾರೆ. ಇದನ್ನು ಅರಿತುಕೊಂಡು ಜನತೆಯು ಸಹ ಅನಾವಶ್ಯಕವಾಗಿ ಹೊರಗಡೆ ಸಂಚರಿಸದೆ ಮನೆಯಲ್ಲಿಯೇ ಇದ್ದು ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಕೋವಿಡ್ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕೆಂದು ಹೇಳಿದರು.
ಕೋವಿಡ್ -19 ಎರಡನೇ ಅಲೆ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿಗಳು ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಿ ಹೊರಡಿಸಿದ ಆದೇಶ ಜೂನ್ 1 ರಂದು ಬೆಳಿಗ್ಗೆ 6:00 ಗಂಟೆಗೆ ಮುಗಿಯಲಿದ್ದು, ನಂತರ ಜೂನ್ 7ರವರೆಗೆ ಬೆಳಿಗ್ಗೆ 6ರಿಂದ 10ರವರೆಗೆ ಅಗತ್ಯವಸ್ತುಗಳನ್ನು ಕೊಂಡುಕೊಳ್ಳುವುದಕ್ಕೆ ಸರಕಾರ ಅವಕಾಶವನ್ನು ಕಲ್ಪಿಸಿದೆ. ಆಗ ಮಾರುಕಟ್ಟೆಗಳಲ್ಲಿ ಹೆಚ್ಚು ಜನಸಂದಣಿ ಯಾಗದಂತೆ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸುವುದಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ವೃದ್ಧೆಗೆ ದಿನಸಿ ವಸ್ತು ನೀಡಿದರು.
ವಿಶೇಷವಾಗಿ ದೇವಸ್ಥಾನಗಳಲ್ಲಿ ಉಡಿತುಂಬುವ ಕಾರ್ಯಕ್ರಮಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ಕ್ರಮವಹಿಸಬೇಕು ಎಂದರು.
ಸಂಕಷ್ಟದಲ್ಲಿರೋರಿಗೆ ನೆರವಾಗಿ
ಕಠಿಣ ಕರ್ಫ್ಯೂ ನಿಂದ ಸಂಕಷ್ಟದಲ್ಲಿರುವಂತಹ ಜನರನ್ನು ಗುರುತಿಸಿ ದಾನಿಗಳಿಂದ ಅಗತ್ಯವಸ್ತುಗಳನ್ನು ಪಡೆದುಕೊಂಡು ಸಂಕಷ್ಟದಲ್ಲಿರುವಂತಹ ಜನತೆಗೆ ನೆರವು ಆಗುವಂತಹ ಕೆಲಸವನ್ನು ಮಾಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಆರೈಕೆ ಕೇಂದ್ರಕ್ಕೂ ಭೇಟಿ
ಶಿರಹಟ್ಟಿ ಹೊರವಲಯದಲ್ಲಿ ಇರುವ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಆರಂಭಗೊಂಡಿರುವ ಆರೈಕೆ ಕೇಂದ್ರಕ್ಕೂ ಸಹ ಎಸ್ಪಿ ಭೇಟಿ ನೀಡಿ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಿರಹಟ್ಟಿ ಸಿಪಿಐ ವಿಕಾಸ್ ಲಮಾಣಿ ಪಿಎಸ್ಐ ನವೀನ್ ಜಕ್ಕಲಿ ಉಪಸ್ಥಿತರಿದ್ದರು.
ಮನುಷ್ಯರ ಜೀವಕ್ಕೆ ತೊಂದರೆಯಾದರೂ ಹೊರಗೆ ಬಾರದ ಸ್ಥಿತಿಯಲ್ಲಿ ಇಂದು ಜನರಿದ್ದಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಕೋಳಿಗೆ ಬೇಧಿ ಹತ್ತಿದೆ ಎಂಬ ಕಾರಣಕ್ಕೆ ಮನೆಯಿಂದ ಹೊರಗೆ ಬಂದಿರುವ ಹಾಸ್ಯಾಸ್ಪದ ಘಟನೆ ನಗರದಲ್ಲಿ ನಡೆದಿದೆ.
ನಗರದ ಟಾಂಗಾಕೂಟ ವೃತ್ತದಲ್ಲಿ ಈ ಘಟನೆ ನಡೆದಿದೆ. ನಗರದ ಸರಾಫ್ ಬಜಾರ್ ನ ವ್ಯಕ್ತಿಯೇ ಈ ರೀತಿ ಕಾರಣ ಹೇಳಿರುವ ವ್ಯಕ್ತಿ. ಲಾಕ್ ಡೌನ್ ಸಂದರ್ಭದಲ್ಲಿ ಮನೆಯಿಂದ ಕೋಳಿ ಹಿಡಿದು ಬಂದ ಈ ವ್ಯಕ್ತಿ, ತನ್ನನ್ನು ತಡೆದ ಪೊಲೀಸರಿಗೆ ಕೋಳಿಯ ಬಗ್ಗೆ ಹೇಳಿದ್ದಾನೆ. ಬೆಳಿಗ್ಗೆಯಿಂದ ಎರಡು ಬಾರಿ ಬೇಧಿ ಆಗಿದೆ. ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದ್ದಾನೆ. ಈ ವ್ಯಕ್ತಿಯ ಕಾರಣ ಕೇಳಿ ಒಂದು ಕ್ಷಣ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಗದಗ ನಗರದಲ್ಲಿ ಐದು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. ಹೀಗಿದ್ದರೂ ಈ ವ್ಯಕ್ತಿ, ಕೋಳಿಯ ನೆಪ ಹೇಳಿಕೊಂಡು ಹೊರಗೆ ಬಂದಿದ್ದಾನೆ. ಕೋಳಿಯ ಬೇಧಿಯ ಕಾರಣ ಕೇಳಿ ಪೊಲೀಸರಿಗೆ ತಡೆಯಲಾರದಷ್ಟು ನಗು ಬಂದಿದೆ. ಈ ವ್ಯಕ್ತಿಯಿಂದಾಗಿ ಲಾಕ್ ಡೌನ್ ನ ಟೆನ್ಶನ್ ನಲ್ಲಿದ್ದ ಪೊಲೀಸರಿಗೆ ಮನರಂಜನೆ ಸಿಕ್ಕಂತಾಗಿದೆ.
ಈ ಕೋಳಿ ಸದಾಕಾಲ ನನ್ನೊಂದಿಗೆ ಇರುತ್ತಿತ್ತು. ಕುಂತರೆ, ನಿಂತರೂ ಇದು ನನ್ನ ಬಿಟ್ಟು ಅಗಲುತ್ತಿರಲಿಲ್ಲ. ಬೆಳಿಗ್ಗೆ ಎದ್ದ ಕೂಡಲೇ ಇದಕ್ಕೆ ಎರಡು ಬಾರಿ ಬೇಧಿ ಆಗಿದೆ. ಹೀಗಾಗಿ ಟೆನ್ಶನ್ ಆಗಿ, ಪಶು ಆಸ್ಪತ್ರೆಗೆ ಚಿಕಿತ್ಸೆಗೆ ಹೊರಟಿದ್ದೇನೆ ಎಂದು ಕೋಳಿಯ ಮಾಲೀಕ ಹೇಳಿದ್ದಾನೆ.
ಕೊರೊನಾ ಸೋಂಕಿತ ದಂಪತಿಯ ವಿರುದ್ಧ ಕೋವಿಡ್ ಉಲ್ಲಂಘನೆಯ ಪ್ರಕರಣ ದಾಖಲಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ದೇವದುರ್ಗ ತಾಲೂಕಿನ ವಿರಗೋಟ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕುರುಬರದೊಡ್ಡಿ ನಿವಾಸಿಯಾಗಿರುವ ದಂಪತಿಗಳ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಐಪಿಸಿ 269, 270 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೇ, ಈ ದಂಪತಿಯ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದರೊಂದಿಗೆ ಇವರ ಪಡಿತರ ಚೀಟಿಯನ್ನು ಕೂಡ ರದ್ದುಗೊಳಿಸಲಾಗಿದೆ.
ಇತ್ತೀಚೆಗಷ್ಟೇ ಈ ದಂಪತಿಗಳಿಗೆ ಕೊರೊನಾ ಸೋಂಕು ತಗುಲಿದ್ದು ದೃಢವಾಗಿತ್ತು. ಹೀಗಾಗಿ ದಂಪತಿಗಳನ್ನು ಹೋಂ ಕ್ವಾರಂಟೈನ್ ಮಾಡಲು ಆರೋಗ್ಯ ಸಿಬ್ಬಂದಿ ದೊಡ್ಡಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸ್ಪಂದಿಸದ ದಂಪತಿ, ಅವರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೇ, ಅಧಿಕಾರಿಗಳ ಕೈಗೆ ಸಿಗದೆ ಮನೆ, ಗುಡ್ಡದಲ್ಲಿ ಅಡಗಿ ಕುಳಿತಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಎಷ್ಟೇ ಮನವೊಲಿಸಿದರೂ ಈ ದಂಪತಿ ಮಾತ್ರ ಅವರ ಮಾತಿಗೆ ಸ್ಪಂದನೆ ನೀಡಿರಲಿಲ್ಲ. ಬದಲಾಗಿ ಅಧಿಕಾರಿಗಳನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಹೀಗಾಗಿಯೇ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಲಾಕ್ ಡೌನ್ ಇದ್ದರೂ ಜಿಲ್ಲೆಯ ಜನ ಬೇಕಾಬಿಟ್ಟಿಯಾಗಿ ತಿರುಗಾಡುವುದು ತಪ್ಪುತ್ತಿಲ್ಲ. ಪೊಲೀಸರು ಎಷ್ಟೇ ಕಠಿಣ ಕ್ರಮ ಜರುಗಿಸಿದರೂ ಜನರ ತಿರುಗಾಟ ಮಾತ್ರ ಇನ್ನೂ ನಡೆದಿದೆ. ಹೀಗಾಗಿ ಜಿಲ್ಲಾ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ಜಿಲ್ಲೆಯಲ್ಲಿ ರೌಂಡ್ ಹಾಕಿ, ಕಠಿಣ ನಿಯಮ ಜಾರಿಗೊಳಿಸುತ್ತಿದ್ದಾರೆ.
ಇಂದು ಬೆಳಂಬೆಳಿಗ್ಗೆ ಎಸ್ಪಿ ಯತೀಶ್ ಎನ್ ಅವರು ಫೀಲ್ಡ್ ಗೆ ಇಳಿದು, ಗದಗ- ಬೆಟಗೇರಿ ಅವಳಿ ನಗರ ರೌಂಡ್ ಹಾಕುತ್ತಿದ್ದಾರೆ. ಅಲ್ಲದೇ, ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದವರ ವಾಹನಗಳನ್ನು ಪರಿಶೀಲನೆ ನಡೆಸಿದ್ದಾರೆ.
ವಿನಾಕಾರಣ ರಸ್ತೆಗೆ ಇಳಿದ ವಾಹನ ಮಾಲೀಕರಿಗೆ ಇಂದು ಬೆಳಿಗ್ಗೆಯಿಂದ ಕೂಡ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಮೇ. 27 ರಿಂದ ಜೂ. 7ರ ವರೆಗೂ ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಿದ್ದರೂ ಜನ ಮಾತ್ರ ತಮ್ಮ ತಿರುಗಾಟ ಬಿಡುತ್ತಿಲ್ಲ. ಹೀಗಾಗಿ ಬೈಕ್ ಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಎಸ್ಪಿ ಸ್ವತಃ ರೋಡ್ ಗೆ ಇಳಿದು ಜನರಿಗೆ ಹಾಗೂ ವಾಹನ ಸವಾರರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಜಿಲ್ಲೆಯವರೇ ಆಗಿರುವ ಹಾಗೂ ತೆಲಂಗಾಣ ರಾಜ್ಯದ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿರುವ ವಿಶ್ವನಾಥ್ ಸಜ್ಜನರ್ ಅವರು ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಗತ್ಯವಾಗಿರುವ ಸುಮಾರು ರೂ. 40 ಲಕ್ಷ ಮೌಲ್ಯದ ವೈದ್ಯಕೀಯ ಔಷಧಿ ಸಾಮಾಗ್ರಿಗಳನ್ನು ಗದಗ ಜಿಲ್ಲಾಡಳಿತಕ್ಕೆ ಕಳುಹಿಸುವ ಮೂಲಕ ವೈದ್ಯಕೀಯ ನೆರವು ನೀಡಿ ಜಿಲ್ಲೆಯ ಜನರ ಮೆಚ್ಚುಗೆ ಗಳಿಸಿದ್ದಾರೆ.
ಸಜ್ಜನರ್ ಅವರು, 22 ಆಕ್ಸಿಜನ್ ಕಾನ್ಸನ್ ಟ್ರೇಟರ್, 84 ಆಕ್ಸಿಜನ್ ಸಿಲಿಂಡರ್, 2 ಸಾವಿರ ಕೋವಿಡ್ ಕಿಟ್, 20 ಸಾವಿರ ಮಾಸ್ಕ್, 200 ಲೀಟರ್ ಸ್ಯಾನಿಟೈಸರ್, 1 ಸಾವಿರ ಫೇಸ್ ಶೀಲ್ಡ್, 24 ಯುನಿಟ್ ರೆಮ್ ಡಿಸಿವಿರ್ ಸೇರಿದಂತೆ ಇನ್ನಿತರ ವೈದ್ಯಕೀಯ ಸಾಮಾಗ್ರಿಗಳನ್ನು ಕಳುಹಿಸಿದ್ದಾರೆ.
ವಿಶ್ವನಾಥ್ ಸಜ್ಜನರ್ ಅವರನ್ನು ಎನ್ ಕೌಂಟರ್ ಸ್ಪೇಷಲಿಸ್ಟ್ ಎಂದೇ ಕರೆಯುತ್ತಾರೆ. ಇವರು ಎಲ್ಲ ಐಪಿಎಸ್ ಅಧಿಕಾರಿಗಳಂತೆ ಕೇವಲ ತಾವು ಕರ್ತವ್ಯ ನಿರ್ವಹಿಸಿದ ಕ್ಷೇತ್ರಗಳಲ್ಲಿ ಮಾತ್ರ ಚಿರಪರಿಚತರಾಗಿದ್ದವರು ಅಲ್ಲ. ಇವರು ಭ್ರಷ್ಟರಿಗೆ, ಅನ್ಯಾಕೋರರಿಗೆ ಹಾಗೂ ಅತ್ಯಾಚಾರಿಗಳಿಗೆ ಸಿಂಹ ಸ್ವಪ್ನ, ಖಡಕ್ ಐಪಿಎಸ್ ಆಫೀಸರ್. ಹೀಗಾಗಿಯೇ ಇವರು ಇಡೀ ಭಾರತದ ಜನರಿಗೆ ಚಿರಪರಿಚಿತ.
ಸೇವೆಯಷ್ಟೇ ಮಾನವೀಯ ಮೌಲ್ಯ ಹೊಂದಿರುವ ಇವರು, ಸದ್ಯ ತಮ್ಮ ತಾಯ್ನಾಡಿನ ಜನರು ಕೊರೊನಾದಿಂದ ಸಂಕಷ್ಟ ಅನುಭವಿಸುತ್ತಿರುವುದಕ್ಕೆ ಮಮ್ಮಲ ಮರುಗಿ ಸಹಾಯ ಮಾಡಿದ್ದಾರೆ. ವಿಶ್ವನಾಥ್ ಸಜ್ಜನರ್ ಅವರು, ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸಿದ್ದ ತೆಲಂಗಾಣ ಪಶುವೈದ್ಯೆ ದಿಶಾ ಅತ್ಯಾಚಾರ ಪ್ರಕರಣವನ್ನು ಕೇವಲ 24 ಗಂಟೆಗಳಲ್ಲಿಯೇ ಬೇಧಿಸಿ, ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಇಡೀ ದೇಶದ ಜನರ ಮನಸ್ಸಿನಲ್ಲಿ ಇಂದಿಗೂ ಹೀರೋ ಆಗಿಯೇ ಉಳಿದುಕೊಂಡವರು.
ಆರೋಪಿಗಳು ಪಶು ವೈದ್ಯೆ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ಎಸಗಿದ್ದಲ್ಲದೆ, ಆ ಯುವತಿಯನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಇದಕ್ಕೆ ಇಡೀ ರಾಷ್ಟ್ರವೇ ಆಕ್ರೋಶ ವ್ಯಕ್ತಪಡಿಸಿತ್ತು. ಆಗ ಈ ಪ್ರಕರಣದ ತನಿಖೆಯ ಹೊಣೆಯನ್ನು ನಮ್ಮ ಹೆಮ್ಮೆಯ ಕನ್ನಡಿಗ ಹಾಗೂ ಗದಗ ಜಿಲ್ಲೆಯ ಮಣ್ಣಿನಲ್ಲಿ ಹುಟ್ಟಿದ ವಿಶ್ವನಾಥ್ ಸಜ್ಜನರ್ ಅವರಿಗೆ ವಹಿಸಲಾಗಿತ್ತು.
ಕೇವಲ 24 ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ, ಚೆರ್ಲಪಲ್ಲಿ ಜೈಲಿಗೆ ಕಳುಹಿಸಿದ್ದರು. ಆ ನಂತರ ಆರೋಪಿಗಳನ್ನು ದುಷ್ಕೃತ್ಯ ನಡೆಸಿದ್ದ ಸ್ಥಳಕ್ಕೆ ಮಹಜರು ಮಾಡಲು ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಆರೋಪಿಗಳು ಕಲ್ಲುಗಳನ್ನು ಪೊಲೀಸರತ್ತ ಎಸೆಯಲು ಪ್ರಾರಂಭಿಸಿದ್ದಲ್ಲದೆ, ಗಂಡು ಹಾರಿಸಲು ಪ್ರಾರಂಭಿಸಿದ್ದರು. ಆರೋಪಿಗಳಿಗೆ ಧೈರ್ಯದಿಂದ ಗುಂಡು ಹಾರಿಸಿ ಅತ್ಯಾಚಾರಿಗಳ ಸಂಹಾರ ಮಾಡಿದ್ದು, ಇವರೆ. ಈ ಪ್ರಕರಣದಿಂದಾಗಿ ಸಜ್ಜನರ್ ಅವರನ್ನು ಇಡೀ ರಾಷ್ಟ್ರದ ಮಹಿಳೆಯರು ಅಭಿನಂದಿಸಿ, ಆನಂದ ಭಾಷ್ಪ ಸುರಿಸಿದ್ದರು. ಸದ್ಯ ಈ ಖಡಕ್ ಆಫೀಸರ್, ತಾವು ಹುಟ್ಟಿ- ಬೆಳೆದ, ತಮ್ಮ ಜಿಲ್ಲೆಯ ಜನರ ಕಷ್ಟಕ್ಕೆ ಸ್ಪಂದಿಸುವ ಮಾನವೀಯ ಕಾರ್ಯ ಮಾಡಿದ್ದಾರೆ.
ಈ ವೈದ್ಯಕೀಯ ಸಾಮಾಗ್ರಿಗಳನ್ನು ಐಪಿಎಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಅವರ ಸಹೋದರ, ಹುಬ್ಬಳ್ಳಿಯ ಸಾಯಿ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ನ ಡಾ. ಎಂ.ಸಿ. ಸಜ್ಜನರ ಅವರು ಜಿಲ್ಲಾಡಳಿತದ ಭವನದ ಆವರಣದಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಪಂ ಸಿ.ಇ.ಓ ಭರತ್, ಡಿ.ಎಚ್.ಓ ಸತೀಶ್ ಬಸರಿಗಿಡದ್ ಸೇರಿದಂತೆ ಹಲವರು ಇದ್ದರು.
ಇಂದು ರಾಜ್ಯದಲ್ಲಿ 22,823 ಜನರಲ್ಲಿ ಸೋಂಕು ಕಾಣಿಸಿಕೊಡಿದೆ. ಅಲ್ಲದೇ, ಇಂದು 401 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಅಲ್ಲದೇ, ಇಂದು ರಾಜ್ಯದಲ್ಲಿ 52,253 ಜನ ವಿವಿಧ ಆಸ್ಪತ್ರೆಗಳಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ಕೊರೊನಾಗೆ 401 ಜನ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಇಲ್ಲಿಯವರೆಗೆ 27,806 ಜನ ಸಾವನ್ನಪ್ಪಿದಂತಾಗಿದೆ.
ಇಂದು ಬೆಂಗಳೂರಿನಲ್ಲಿ 5,763 ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೇ, ಇನ್ನೂ 2,80,697 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ ಇಂದು ಮಹಾಮಾರಿಗೆ 192 ಜನ ಬಲಿಯಾಗಿದ್ದಾರೆ. ಇಂದು ಬೆಂಗಳೂರು 5,736, ಬೆಳಗಾವಿ 1.147, ಹಾಸನ 1,505, ಮೈಸೂರು 2,240, ತುಮಕೂರಿನಲ್ಲಿ 1,219 ಪ್ರಕರಣಗಳು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.
ಮಹಾಮಾರಿ ಎರಡನೇ ಅಲೆ ತಡೆಯುವಲ್ಲಿ ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಜಿಲ್ಲೆಯ ಬಾದಾಮಿ ಪಟ್ಟಣಕ್ಕೆ ಆಗಮಿಸಿ ಕೊರೊನಾ ನಿಯಂತ್ರಣ ಕುರಿತಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2ನೇ ಅಲೆಯ ಬಗ್ಗೆ ಮಾಹಿತಿ ಇದ್ದರೂ ಸರ್ಕಾರ ಜಾಗೃತಿ ವಹಿಸಲಿಲ್ಲ. ಆಕ್ಸಿಜನ್, ರೆಮ್ ಡಿಸಿವರ್, ವೆಂಟಿಲೇಟರ್ ಬೆಡ್ಗಾಳ ಸಿದ್ದತೆ ನಡೆಸಲಿಲ್ಲ. ರೋಗಿಗಳಿಗೆ ಆಕ್ಸಿಜನ್, ರೆಮ್ ಡಿಸಿವರ್ ಇಂಜೆಕ್ಷನ್ ಪೂರೈಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಬದಲಾವಣೆ ಆಗಬಹುದು ಎಂಬ ಮಾಹಿತಿ ನನಗಿದೆ. ಆದರೆ, ಕೊರೊನಾದಿಂದಾಗಿ ಈ ವಿಷಯ ಮುಂದಕ್ಕೆ ಹೋಗಿರಬಹುದು. ನಾನೊಬ್ಬ ವಿರೋಧ ಪಕ್ಷದ ನಾಯಕ. ಶ್ಯಾಡೋ ಆಫ್ ಚೀಫ್ ಮಿನಿಸ್ಟರ್ ಇದ್ದಾಂಗೆ ನಾನು ಮಾಹಿತಿ ತಿಳಿದುಕೊಳ್ಳುವಂತಿಲ್ಲ ಎಂದರೆ ಇದು ಪ್ರಜಾಪ್ರಭುತ್ವದ ವ್ಯವಸ್ಥೆ ನಾ? ಎಂದು ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಅತಿಕ್ರಮವಾಗಿ ಪ್ರವೇಶಕ್ಕೆ ಪ್ರಯತ್ನ ಮಾಡಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದಕ್ಕೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರ ಪುತ್ರನ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಜಿಪಂ ಸದಸ್ಯ ಅಮಿತ್ ದೇವರಹಟ್ಟಿ ವಿರುದ್ದ ಎಫ್ ಐಆರ್ ದಾಖಲಾಗಿದೆ. ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಹಿನಕಲ್ ಬಳಿಯ ಖಾಲಿ ನಿವೇಶನಕ್ಕೆ ಅವರು ಅತಿಕ್ರಮವಾಗಿ ಪ್ರವೇಶ ಮಾಡಿದ್ದರು. ಅಲ್ಲದೇ, ಕಂಪೌಂಡ್ ನಿರ್ಮಾಣ ಮಾಡಲು ಮುಂದಾಗಿದ್ದರು.
ಇದನ್ನು ತಡೆಯಲು ಬಂದ ಮೂಲ ವಾರಸುದಾರ ಯೋಗೀಶ್ ಎಂಬುವವರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದರು. ಹೀಗಾಗಿ ನಿವೇಶನದ ಮೂಲ ಮಾಲೀಕ ಯೋಗೀಶ್ ನೀಡಿದ ದೂರಿನನಂತೆ ಪೊಲೀಸರು ಐಪಿಸಿ ಸೆಕ್ಷನ್ 504 , 506 ರ ಅಡಿ ಎಫ್ ಐಆರ್ ದಾಖಲಿಸಲಾಗಿದೆ. ಪಟೇಲ್ , ಅನೂಪ್, ವೈಕುಂಠಾಚಾರ್ ಸೇರಿದಂತೆ ಎಂಟು ಜನರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ವಿಶ್ವನಾಥ್ ಅವರ ಪುತ್ರ ಅಮಿತ್ ದೇವರಹಟ್ಟಿ ಮೂರನೇ ಆರೋಪಿಯಾಗಿದ್ದಾರೆ.